Category Archives: ಶಿವರಾಮ್ ಕೆಳಗೋಟೆ

ಸೂರಿಲ್ಲದವರ ಊರಲ್ಲಿ ಹೊಸ ಕಾನೂನು – ನಿವೇಶನ ಶಾಸಕರ ಹಕ್ಕು!!

– ಶಿವರಾಮ್ ಕೆಳಗೋಟೆ

ಕಾನೂನು ಸಚಿವ ಸುರೇಶ ಕುಮಾರ್ ಅಕ್ರಮವಾಗಿ ಬಿಡಿಎ ನಿವೇಶನ ಪಡೆದ ಸುದ್ದಿ ಬಹಿರಂಗವಾದ ನಂತರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ವಿ ಸದಾನಂದಗೌಡರು ‘ಇದೇನು ಅಂತಹ ಮಹಾಪರಾಧವಲ್ಲ, ಬಿಡಿಎ ನಿವೇಶನ ಶಾಸಕರ ಹಕ್ಕು’ ಎಂದು ರಾಜೀನಾಮೆ ಒಪ್ಪಲು ನಿರಾಕರಿಸಿದ್ದಾರೆ. ರಾಜೀನಾಮೆ ಕೊಡುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು. ಅಂತೆಯೆ ರಾಜೀನಾಮೆ ಸ್ವೀಕರಿಸುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟದ್ದು. ಈ ಪ್ರಕರಣದ ಮೂಲಕ ‘ಪ್ರಾಮಾಣಿಕ’ ಸಚಿವರ ಮುಖವಾಡದ ಜೊತೆಗೆ ಕೆಲವು ದೃಶ್ಯ ಮಾಧ್ಯಮ ಸಂಸ್ಥೆಗಳಲ್ಲಿನ ಪತ್ರಕರ್ತರ ‘ಸಾಚಾತನ’ವೂ ಬಯಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದಡಿ ಭಾಸ್ಕರನ್ ಎಂಬುವವರು ಮಾಹಿತಿ ಪಡೆದು ವಿಷಯ ಬಹಿರಂಗ ಮಾಡಿದ್ದಾರೆ. ಭಾಸ್ಕರನ್ ಅವರ ಹಿನ್ನೆಲೆ, ಉದ್ದೇಶ ಏನೇ ಇರಲಿ, ಅವರ ಬಳಿ ಇರುವ ಮಾಹಿತಿ ಎಷ್ಟರಮಟ್ಟಿಗೆ ಅಧಿಕೃತ ಎನ್ನುವುದಷ್ಟೆ ಮುಖ್ಯ. ಬಿಡಿಎ ಕಾನೂನು ಪ್ರಕಾರ ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಕೃಷಿ ಅಥವಾ ವಾಣಿಜ್ಯ ಭೂಮಿ ಹೊಂದಿದ ಯಾರಿಗೂ ಬಿಡಿಎ ನಿವೇಶನ ಪಡೆಯಲು ಅರ್ಹತೆ ಇಲ್ಲ. ಅರ್ಜಿದಾರರು ಬೆಂಗಳೂರು ಮೆಟ್ರೋಪಾಲಿಟನ್ ವ್ಯಾಪ್ತಿಯಲ್ಲಿ ಭೂಮಿ ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಲೇಬೇಕು.

ಅನೇಕರಿಗೆ ಗೊತ್ತಿರಬಹುದು, ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಇದೇ ವಿಚಾರವಾಗಿ ಬಿಡಿಎ ಸೈಟ್ ಬೇಡ ಎಂದರು. ಮುಖ್ಯಮಂತ್ರಿ ಆದೇಶದ ಮೇರೆಗೆ ಅವರಿಗೆ ನಿವೇಶನ ಮಂಜೂರಾಗಿತ್ತು. ಬಿಡಿಎ ಆಯುಕ್ತರು ಖಾನ್ ಅವರನ್ನು ಸಂಪರ್ಕಿಸಿ ಅಫಿಡವಿಟ್ ಕೊಡಿ ಎಂದರು. ಆಗ ಖಾನ್ ಅವರು ತಾನು ಹಾಗೆ ಅಫಿಡವಿಟ್ ಸಲ್ಲಿಸಲಾರೆ, ಏಕೆಂದರೆ ನಾನು ಈಗಾಗಲೇ ಬೆಂಗಳೂರಿನಲ್ಲಿ ಒಂದು ಮನೆಯ ಒಡೆಯನಾಗಿದ್ದೇನೆ ಎಂದು ಪತ್ರ ಬರೆದು ಸುಮ್ಮನಾದರು.

ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುತ್ತೇನೆ ಅಥವಾ ಅಂತಹದೊಂದು ಇಮೇಜು ಇಟ್ಟುಕೊಂಡವರಿಗೆ ಮುಮ್ತಾಜ್ ಅಲಿ ಖಾನ್ ಉದಾಹರಣೆ ಏಕೆ ನೆನಪಾಗಲಿಲ್ಲ? ಅಮ್ಮನ ಹೆಸರಿನಲ್ಲಿದ್ದ, ಮಗಳ ಹೆಸರಿನಲ್ಲಿದ್ದ ಮನೆ/ನಿವೇಶನ ಮಾರಾಟ ಮಾಡಿ ಬಿಡಿಎ ನಿವೇಶನ ಮಂಜೂರಾದದ್ದನ್ನು ಸರಿ ಎಂದು ಸಮರ್ಥಿಸುವ ಅಗತ್ಯವೇನಿತ್ತು? ಮುಖ್ಯಮಂತ್ರಿಯಂತೂ ಈ ಪ್ರಕರಣದಲ್ಲಿ ಒಂದು ಹೆಜ್ಚೆ ಮುಂದೆ ಹೋಗಿ ‘ಬಿಡಿಎ ನಿವೇಶನ ಶಾಸಕರ ಹಕ್ಕು’ಎಂದಿದ್ದಾರೆ. ಬಿಡಿಎ ಕಾನೂನು ಅವರಿಗೆ ಗೊತ್ತಾ? ಕಾನೂನಿನ ಯಾವ ಮೂಲೆಯಲ್ಲಾದರೂ ‘ಶಾಸಕರ ಹಕ್ಕು’ಅಂತ ಇದೆಯಾ?

ನಾಡಿನ ಅನೇಕ ಸಂಸದರು, ಶಾಸಕರು ಹೀಗೆ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ಬೆಂಗಳೂರಿನ ಅನೇಕ ಶಾಸಕರು ವೈಯಕ್ತಿಕವಾಗಿ ಬೃಹತ್ ಬಂಗಲೆಗಳನ್ನು ಹೊಂದಿದ್ದಾಗ್ಯೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಹಾಕಿ ಪಡೆದಿದ್ದಾರೆ. ಚಿತ್ರದುರ್ಗದ ಸಂಸದ ಜನಾರ್ದನ ಸ್ವಾಮಿ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಮೂರು ನಿವೇಶನಗಳನ್ನು (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನ ಪ್ರಕಾರ) ಇಟ್ಟುಕೊಂಡಿದ್ದರೂ ಮತ್ತೊಂದು ನಿವೇಶನವನ್ನು ಬಿಡಿಎ ಮೂಲಕ ಪಡೆದರು. ನಿಮಗೆ ನೆನಪಿರಲಿ, ಇವರ ನಿವೇಶನಗಳೆಲ್ಲವೂ ಮೂರರಿಂದ ನಾಲ್ಕು ಕೋಟಿ ರೂ ಬೆಲೆಬಾಳುವಂತಹವು, ಆದರೆ ಇವರು ಕಟ್ಟಿದ್ದು ಕೇವಲ ಎಂಟರಿಂದ ಹತ್ತು ಲಕ್ಷ ರೂ ಮಾತ್ರ! ಇಂತಹ ಕೃತ್ಯಗಳನ್ನು ಸಮರ್ಥಿಸಬೇಕೆ? ಬೆಂಗಳೂರಿನಲ್ಲಿ ಒಂದು ನಿವೇಶನ ಬೇಕು ಎಂದು ಹತ್ತಾರು ವರ್ಷಗಳಿಂದ ಅರ್ಜಿ ಹಿಡಿದು ಕಾಯುತ್ತಿರುವವರ ಪಾಡು ಕೇಳುವವರ್ಯಾರು?

ಕೆಲ ಟಿವಿ ಚಾನೆಲ್ ಆಂಕರ್‌ಗಳು ಏಕಾಏಕಿ ಸುರೇಶ್ ಕುಮಾರ್ ಸಮರ್ಥನೆಗೆ ನಿಂತಿದ್ದಂತೂ ವಿಶೇಷವಾಗಿತ್ತು. ಆರೋಪ ಬಂದಾಕ್ಷಣ ಅವರು ರಾಜೀನಾಮೆ ಕೊಟ್ಟು ಇತರರಿಗಿಂತ ಭಿನ್ನವಾಗಿದ್ದಾರೆ ಎಂದು ಅವರು ಹೊಗಳಿದರು. ಅಲ್ಲಾರೀ, ಬಿಡಿಎ ಸೈಟ್ ಪ್ರಕರಣ ಮಾಧ್ಯಮ ಮೂಲಕ ಬಹಿರಂಗ ಆಗಿದ್ದು ಅವರಿಗೆ ಬೇಸರ ಆಗಿ ರಾಜೀನಾಮೆ ಕೊಟ್ಟರಾ, ಅಥವಾ ತಮ್ಮಿಂದ ತಪ್ಪಾಗಿದೆ ಅಂತ ಅವರಿಗೆ ಮನವರಿಕೆ ಆಗಿ ರಾಜಿನಾಮೆ ನಿರ್ಧಾರ ತೆಗೆದುಕೊಂಡರಾ? ಇನ್ನೂ ಸ್ಪಷ್ಟವಾಗಿಲ್ಲ. ವಿಚಿತ್ರ ಅಂದರೆ, ಇತರ ಪಕ್ಷಗಳ ನಾಯಕರೂ ಇವರ ಬೆಂಬಲಕ್ಕೆ ನಿಂತಿದ್ದಾರೆ. ಕಾರಣ ಅವರಲ್ಲಿ ಕೆಲವರು ಇಂತಹದೇ ಮಾರ್ಗದಿಂದ ನಿವೇಶನ ಪಡೆದವರಲ್ಲವೆ?

ಕೆಲ ಆಂಕರ್‌ಗಳು ಆರ್.ಟಿ.ಐ. ಅರ್ಜಿದಾರನಿಗೆ ಕೇಳಿದ ಪ್ರಶ್ನೆಗಳು ಹೀಗಿದ್ದವು.

  • ನಿಮ್ಮ ಹಿನ್ನೆಲೆ ಏನು? ನಿಮಗೆ ಏನಾದ್ರೂ ರಾಜಕೀಯ ಉದ್ದೇಶ ಇದೆಯಾ?
  • ಎಲ್ಲಾ ಬಿಟ್ಟು ಸುರೇಶ ಕುಮಾರ್ ಬಗ್ಗೆನೇ ಯಾಕೆ ಆರೋಪ ಮಾಡ್ತೀರಿ?
  • ಮುಂದಿನ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವ ಹುನ್ನಾರವೆ?
  • ಈಗ ಸೈಟ್ ವಾಪಸ್ ಕೊಡ್ತೀನಿ ಅಂತ ಸುರೇಶ ಕುಮಾರ್ ಹೇಳಿದ್ದಾರಲ್ಲ, ಮತ್ತೇನು ನಿಮ್ಮದು?
  • ಹಿಂದೆ ಸಚಿವರು ಆರೋಪ ಬಂದರೆ ಸಮರ್ಥನೆ ಮಾಡಿಕೊಳ್ಳತಾ ಇದ್ರು. ಆದರೆ ಇವರು ತಕ್ಷಣ ರಾಜೀನಾಮೆ ಕೊಟ್ಟಿದ್ದಾರಲ್ಲ?

ಈ ಪ್ರಶ್ನೆಗಳೇ ಸೂಚಿಸುತ್ತಿದ್ದವು, ಅವರು ಯಾರ ಪರ ಇದ್ದರು ಎನ್ನುವುದನ್ನು.

ಭ್ರಷ್ಟಾಚಾರ ಅನ್ನೋದು ಒಪ್ಪಿತವೇ ಈ ಸಮಾಜದಲ್ಲಿ?

ಮಹಾಂತೇಶ್ ಕೊಲೆ ತನಿಖೆ: ಮೊದಲು ಮಾನ ಹತ್ಯೆ, ಈಗ ಸತ್ಯದ ಮೇಲೆ ಹಲ್ಲೆ!

– ಶಿವರಾಂ ಕೆಳಗೋಟೆ

ದಿವಂಗತ ಕೆ.ಎ.ಎಸ್ ಅಧಿಕಾರಿ ಎಸ್. ಪಿ. ಮಹಾಂತೇಶ್‌ರ ತಾಯಿ ಪಬ್ಲಿಕ್ ಟಿವಿ ಸಂದರ್ಶನವೊಂದರಲ್ಲಿ ನಿನ್ನೆ ಮಾತನಾಡುತ್ತಾ ‘ನನ್ನ ಮೊಮ್ಮಗಳು ನನ್ಹತ್ರ ಬಂದು ‘ನಿಮ್ಮಪ್ಪನ ಬಗ್ಗೆ ನಂಗೆಲ್ಲಾ ಗೊತ್ತು’ ಅಂತ ಕೊಂಕು ಮಾತಿನಲ್ಲಿ ನನ್ನ ಫ್ರೆಂಡ್ ಒಬ್ಬಳು ಹೇಳಿದ್ಲು ಅಂತ ಬೇಸರ ಮಾಡಿಕೊಂಡ್ಲು. ನಾನು ಅವಳಿಗೆ ಸಮಾಧಾನ ಮಾಡಬೇಕಾಯ್ತು’ ಅಂದ್ರು. ಮಹಾಂತೇಶ್‌ರ ಚಿಕ್ಕ ವಯಸ್ಸಿನ ಮಗಳಿಗೆ ಶಾಲೆಯಲ್ಲಿ ಗೆಳತಿಯರು ಮಾತನಾಡುತ್ತಿದ್ದ ರೀತಿ ಕೇಳಿ ಎಂಥ ಬೇಸರ ಆಗಿರಬಹುದು ಎನ್ನುವುದನ್ನು ಯಾರೇ ಆಗಲಿ ಊಹಿಸಬಹುದು.

ಆದರೆ ಅದರ ತೀವ್ರತೆ ಅರ್ಥ ಆಗಬೇಕಿರುವುದು, ಹೀಗೆ ಅವರಿಗೆ ಹೆಣ್ಣಿನೊಂದಿಗೆ ಸಂಬಂಧ ಇತ್ತು ಎಂದು ಮಾಧ್ಯಮದ ಪ್ರತಿನಿಧಿಗಳಿಗೆ ಹೇಳಿದ ಪೊಲೀಸ್ ಮಹಾಶಯರಿಗೆ ಮತ್ತು ‘ಇದು ಸಕ್ಕತ್ ಟಿಅರ್‌ಪಿ ಐಟಮ್’ ಅಂತ ಪದೇ ಪದೇ ಪ್ಯಾಕೇಜ್‌ಗಳನ್ನು ಮಾಡಿ ಪ್ರಸಾರ ಮಾಡಿದೆ ಪತ್ರಕರ್ತರಿಗೆ!

ಬೆಂಗಳೂರಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ನಿನ್ನೆ (ಜೂ 7, 2012) ಪತ್ರಿಕಾ-ಗೋಷ್ಟಿಯಲ್ಲಿ ಆ ತರಹದ ಯಾವುದೇ ವರದಿಗಳು ನಮ್ಮಿಂದ ಬಂದಿಲ್ಲ ಎಂದರು. ಆದರೆ ಇದೇ ಅಧಿಕಾರಿ ಮತ್ತು ಗೃಹ ಮಂತ್ರಿ ಪದೇ ಪದೇ ಹೇಳಿದ್ದ ಒಂದು ಮಾತು ‘ನಾವು ಎಲ್ಲಾ ಆಂಗಲ್‌ಗಳಿಂದ ತನಿಖೆ ನಡೆಸುತ್ತಿದ್ದೇವೆ. ವೈಯಕ್ತಿಯ ಕಾರಣ, ವೃತ್ತಿ ಕಾರಣ.. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ’. ಹೀಗೆ ಪದೇ ಪದೇ ಈ ಮಾತನ್ನು ಹೇಳಿ ಮಾಧ್ಯಮ ಹರಿ ಬಿಡುತ್ತಿದ್ದ ಗಾಳಿಮಾತಿಗೆ ಬೆಲೆ ಕಟ್ಟಿದವರು ಇವರೇ ಅಲ್ಲವೆ?

ಯಾವುದೇ ತನಿಖಾಧಿಕಾರಿ ಅಥವಾ ತನಿಖಾ ತಂಡದ ಸದಸ್ಯ ನೇರವಾಗಿ ಮಾಧ್ಯಮದ ಎದುರು ತನಿಖೆಯ ಪ್ರಗತಿಯನ್ನು ಹಂಚಿಕೊಳ್ಳುವುದಿಲ್ಲ. ಹಾಗೆ ಹಂಚಿಕೊಂಡಾಗ ಅದನ್ನು ‘ಆಫ್ ದಿ ರೆಕಾರ್ಡ್’ ಎಂದು ಸ್ಪಷ್ಟಪಡಿಸಿರುತ್ತಾರೆ. ಅಥವಾ ಮಾಧ್ಯಮ ವರದಿಗಾರರೇ ‘ಸರ್, ಇದು ಆಫ್ ದಿ ರೆಕಾರ್ಡ್, ನಿಮ್ಮ ಹೆಸರು ಎಲ್ಲಿಯೂ ಬರೋಲ್ಲ’ ಎಂದು ಪುಸಲಾಯಿಸುತ್ತಾರೆ. ಪತ್ರಿಕೋದ್ಯಮಕ್ಕೆ ಮಣ್ಣು, ಕಬ್ಬಿಣದ ಅದಿರು, ಹೊನ್ನು, ಹೊತ್ತ ಎಲ್ಲರಿಗೂ ಈ ಸತ್ಯ ಗೊತ್ತಿದೆ.

ಆದರೆ ಮಿರ್ಜಿಯವರು ಮಾತ್ರ ’ಆ ಅಧಿಕಾರಿಯ ಹೆಸರು ಹೇಳಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಪತ್ರಕರ್ತರೆದುರು ಹೂಂಕರಿಸುತ್ತಾರೆ. ಆ ಅಧಿಕಾರಿ ಯಾರು ಎಂದು ಅವರಿಗೆ ಗೊತ್ತಿಲ್ಲವೆ? ಯಾವುದೋ ಒಂದು ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿದ್ದರೆ ಹೋಗಲಿ ಎನ್ನಬಹುದಿತ್ತು. ಎಲ್ಲದರಲ್ಲೂ ಅದೇ ಸುದ್ದಿ. ಹಾಗಾದರೆ, ಎಲ್ಲಾ ವರದಿಗಾರರು ಒಬ್ಬ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದರು, ಅವರಿಂದಲೇ ಇಂತಹ ಮಾಹಿತಿ ಹೋಗಿದೆ ಎನ್ನುವುದು ಗೊತ್ತಾಗದಷ್ಟು ದಡ್ಡರೇ ಈ ಕಮಿಷನರ್. ಅಲ್ಲ, ಅದು ಜಾಣ ದಡ್ಡತನ, ಜಾಣ ಕಿವುಡುತನದ ಹಾಗೆ!

ಇನ್ನು ತನಿಖೆ:

ಮಿರ್ಜಿ ಸಾಹೇಬರು ತಮ್ಮ ಪತ್ರಿಕಾ-ಗೋಷ್ಟಿಯಲ್ಲಿ ಕೊಲೆ ಆರೋಪಿಗಳನ್ನು ಹೆಸರಿಸಿದರು. ಕೊಲೆಗೆ ಮೂಲ ವ್ಯಕ್ತಿ ಕಿರಣ್ ಕುಮಾರ್ ಎಂಬ 23 ವರ್ಷದ ಯುವಕ. ಅವನು ಸಹಕಾರನಗರ ಪತ್ತಿನ ಸಹಕಾರ ಸಂಘದಲ್ಲಿ ಕ್ಯಾಷಿಯರ್  ಆಗಿದ್ದು ಒಂದಿಷ್ಟು ದುಡ್ಡನ್ನು ಮೋಜಿಗೆ ಖರ್ಚು ಮಾಡಿದ್ದನಂತೆ. ಆಗಲೇ ಮಹಾಂತೇಶ್ ತನಿಖೆಗೆ ಬರುತ್ತೇನೆ ಎಂದು ನೋಟಿಸ್ ನೀಡಿದರಂತೆ. ನೋಟಿಸ್ ಬಂದ ತಕ್ಷಣ ಅವರನ್ನು ಹತ್ಯೆ ಮಾಡಲು ಸಂಚು ಹೂಡಿದನಂತೆ. ಅವರು ಕಚೇರಿಗೆ ಬಂದಾಗ, ತನ್ನ ಸ್ನೇಹಿತರನ್ನು ಕರೆಸಿ ಅವರ ವಾಹನ ತೋರಿಸಿದನಂತೆ. ಆತನ ಸ್ನೇಹಿತರು ಮಹಾಂತೇಶರು ಮನೆಗೆ ಹಿಂತಿರುಗುವಾಗ ದಾಳಿ ಮಾಡಿದರಂತೆ.

ಸಹಕಾರ ಸಂಘದ ಕ್ಯಾಷಿಯರ್ ಒಬ್ಬ ಅಧಿಕಾರಿ ನೋಟಿಸ್ ಕೊಟ್ಟ ತಕ್ಷಣ ಕೊಲೆ ಮಾಡಬೇಕು ಅಂತ ನಿರ್ಧಾರ ಮಾಡ್ತಾನೆ ಅಂದ್ರೆ ಅವನು ನೊಟೋರಿಯಸ್ ಇರಬೇಕು, ಇಲ್ಲಾ ವೃತ್ತಿಪರ ಕೊಲೆಗಡುಕನಿರಬೇಕು. ಈ ಹತ್ಯೆಯ ಮೊದಲು ಮತ್ತು ತದನಂತರದ ವಿದ್ಯಮಾನಗಳನ್ನು ಗಮನಿಸಿದವರಿಗೆ ಪೊಲೀಸರು ಬಂಧಿತರ ಬಗ್ಗೆ ಹೇಳುತ್ತಿರುವ ವಿಚಾರ ಕೇವಲ ಕತೆ ಎಂದು ಅನುಮಾನ ಬರುತ್ತೆ. ಪೊಲೀಸರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಮೊದಲ ಬಾರಿಗೆ ನಾಲ್ವರ ಬಂಧನದ ಸುದ್ದಿ ಮಾಧ್ಯಮಗಳಿಗೆ ಬಂದಾಗ ಹಿರಿಯ ಅಧಿಕಾರಿಯೊಬ್ಬರು ಇವರ ಹಿಂದೆ ಇದ್ದಾರೆ ಎಂಬ ಸುದ್ದಿ ಇತ್ತು. ಆದರೆ ಆ ಅಧಿಕಾರಿ ಯಾರು? ಸುದ್ದಿಗೋಷ್ಟಿಯಲ್ಲಿ ಮಿರ್ಜಿ ಅವರ ಬಗ್ಗೆ ಹೇಳಲಿಲ್ಲ, ಆ ಮೂಲಕ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು.

ತನಿಖೆ ಪೂರ್ಣಗೊಂಡಿಲ್ಲ ಎನ್ನುವುದು ಮಾತ್ರ ಸತ್ಯ. ಅಂತೆಯೇ ನಿಜ ಆರೋಪಿಗಳು ಬಯಲಿಗೆ ಬಂದಿದ್ಡಾರೆಯೆ ಎನ್ನುವ ಸಂಶಯ ಇನ್ನೂ ಇದೆ.

ಮಹಂತೇಶ್ ಸಾವು: ಸತ್ಯ ಪ್ರತಿಪಾದಕರಿಗಿದು ಸಂದೇಶವೆ?

– ಶಿವರಾಮ್ ಕೆಳಗೋಟೆ

ಕರ್ನಾಟಕ ಸರಕಾರದ ಲೆಕ್ಕ ಪರಿಶೋಧನಾ ಅಧಿಕಾರಿ ಮಹಂತೇಶ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರ ಮೇಲೆ ಬೆಂಗಳೂರಿನ ಏಟ್ರಿಯಾ ಹೊಟೇಲ್ ಬಳಿ ದಾಳಿಯಾಗಿ ಐದು ದಿನಗಳಾಗಿವೆ. ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಅದರರ್ಥ ಪೊಲೀಸ್ ವ್ಯವಸ್ಥೆ ಬೆಂಗಳೂರಿನಲ್ಲಿ ನಿಷ್ಕ್ರಿಯವಾಗಿದೆ. ಮಹಂತೇಶ್ ಅವರ ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಪೊಲೀಸರು ಪ್ರಕರಣವನ್ನು ಒಂದು ಅಪಘಾತ ಎಂದು ತಿಪ್ಪೆಸಾರಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಕಾರಣವಿದೆ. ಮಹಂತೇಶ್ ಪ್ರಮುಖ ಹುದ್ದೆಯಲ್ಲಿದ್ದರು. ಸಹಕಾರಿ ಸಂಘಗಳ ವ್ಯವಹಾರವನ್ನು ಆಡಿಟ್ ಜವಾಬ್ದಾರಿ ಅವರದು. ಇತ್ತೀಚಿನ ದಿನಗಳಲ್ಲಿ ಕೆಲ ಗೃಹನಿರ್ಮಾಣ ಸಹಕಾರ ಸಂಘಗಳ ಭಾನಗಡಿಗಳು ಹೊರಬಂದವು. ಕೆಲ ಉನ್ನತ ಸ್ಥಾನದಲ್ಲಿದ್ದವರು ತಪ್ಪು ದಾಖಲೆಗಳನ್ನು ಸಲ್ಲಿಸಿ ದುಬಾರಿ ಬೆಲೆಯ ನಿವೇಶನಗಳನ್ನು ಪಡೆದುಕೊಂಡದ್ದು ಮಾಧ್ಯಮಗಳ ಮೂಲಕ ಬಹಿರಂಗವಾಯ್ತು.

ಅಧಿಕಾರಿಯ ಆರೋಗ್ಯ ಸ್ಥಿತಿ ತಿಳಿದುಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜಕಾರಣಿ ಮಹಿಮಾ ಪಟೇಲ್ ಮಾಧ್ಯಮದವರೊಂದಿಗೆ ಮಾತನಾಡಿ, ಇತ್ತೀಚೆಗೆ ಕೆಲ ಗೃಹನಿರ್ಮಾಣ ಸಹಕಾರ ಸಂಘಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಮಾಹಿತಿ ಪಡೆಯಲು ಮಹಂತೇಶ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದೆ ಎಂದಿದ್ದಾರೆ. ಪಟೇಲ್ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿನ ಅವ್ಯವಹಾರ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಲು ಮುಂದಾಗಿದ್ದಾರೆ.

ಹೀಗೆ ಸಂಘಗಳ ಅನಾಚಾರಗಳು ಬಯಲಿಗೆ ಬರಲು ಇದೇ ಅಧಿಕಾರಿ ಕಾರಣ ಇರಬಹುದೆಂದು ‘ಆರೋಪಿಗಳು’ ತೀರ್ಮಾನಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಇದೇ ಉದ್ದೇಶಕ್ಕಾಗಿ ಇಂತಹದೊಂದು ಹಲ್ಲೆ ನಡೆದು ಸಾವಿಗೆ ಕಾರಣವಾಯಿತೇ ಎಂಬುದನ್ನು ತನಿಖೆ ಮಾಡುವ ಹೊಣೆ ಸರಕಾರದ ಮೇಲಿದೆ. ಇಲ್ಲವಾದರೆ ಸತ್ಯ, ಪ್ರಾಮಾಣಿಕತೆ ಎಂದು ಹೋರಾಡುವವರೆಲ್ಲ ಇಂಥದೇ ಅಂತ್ಯ ಕಾಣುತ್ತಾರೆ ಎಂದು ಸರಕಾರವೇ ಹೇಳಿದಂತಾಗುತ್ತದೆ.

ಡಿಸಿಪಿ ರವಿಕಾಂತೇಗೌಡ ಮಾಧ್ಯಮಗಳಿಗೆ ಮಾತನಾಡಿ ಹೈಗ್ರೌಂಡ್ಸ್ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಅವರ ಸಾವಿನ ನಂತರ ಕೊಲೆ ಪ್ರಕರಣ ದಾಖಲಾಗಿದೆ. ತನಿಖೆಗಾಗಿ ನಾಲ್ಕು ತಂಡಗಳನ್ನು ನೇಮಿಸಲಾಗಿದೆ. ತನಿಖೆ ತ್ವರಿತ ಗತಿಯಲ್ಲಿ ಸಾಗುತ್ತಿದೆ. ನಮಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ.

ಐದು ದಿನಗಳ ನಂತರವೂ ಯಾರೊಬ್ಬರನ್ನು ವಶಕ್ಕೆ ತೆಗೆದುಕೊಳ್ಳದಿದ್ದರೂ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ನಂಬಬೇಕೆ? ಇತ್ತೀಚಿನ ವರ್ಷಗಳಲ್ಲಿ ಪೊಲೀಸರು ತನಿಖೆಗೆ ಬಳಸುವ ಕ್ರಮ ಮತ್ತು ಸಾಧನಗಳ ಪರಿಚಯ ಇರುವ ಯಾರಿಗೇ ಆದರೂ ಇಷ್ಟು ತಡವಾಗಿಯಾದರೂ ಯಾರನ್ನೂ ಬಂಧಿಸದೇ ಇರುವುದು ಸಂಶಯದ ಸಂಗತಿ.

ಇದುವರೆಗೂ ಗೃಹಮಂತ್ರಿ ಎನಿಸಿಕೊಂಡಿರುವ ಆರ್. ಅಶೋಕ್ ಈ ಬಗ್ಗೆ ಮಾತನಾಡಿಲ್ಲ. ಅವರ ಮೌನ ಕೂಡಾ ಅನುಮಾನಾಸ್ಪದ. ರಾಜಧಾನಿಯ ಮಧ್ಯಭಾಗದಲ್ಲಿ ಮಾರಣಾಂತಿಕ ಹಲ್ಲೆ ನಡೆದು ಐದು ದಿನಗಳ ನಂತರವೂ ಆರೋಪಿಗಳ ಬಂಧನ ಆಗುವುದಿಲ್ಲ ಎಂದರೆ ಈ ರಾಜ್ಯಕ್ಕೆ ಒಬ್ಬ ಗೃಹ ಮಂತ್ರಿ ಇದ್ದಾರೆ ಎಂದು ನಂಬಬೇಕೆ? ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಸಂಪ್ರದಾಯ ಮಾಡಿದ್ದಾರೆ. ಆದರೆ ಅಷ್ಟೇ ಸಾಕೆ?

‘ರಕ್ಷಣೆ’ಗಾಗಿ ಸಹಾಯ ಹಸ್ತ ಬಯಸಿ…

– ಶಿವರಾಂ ಕೆಳಗೋಟೆ

ಹುಣ್ಣಿಮೆಯಂದು ಸಮುದ್ರದ ಅಲೆಗಳು ಉಕ್ಕೇರುವಂತೆ, ರಾಜ್ಯಕ್ಕೆ ಬರ ಅಥವಾ ನೆರೆ ಬಂದಾಗ ಬಿಜೆಪಿಯಲ್ಲಿನ ಭಿನ್ನಮತ ಉಲ್ಬಣಗೊಳ್ಳುತ್ತದೆ. ಈ ಬಾರಿ ಭಿನ್ನಮತದ ಅಲೆಗಳು ತಣ್ಣಗಾಗುವ ಲಕ್ಷಣಗಳಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮುಂದಿನ ನಿರ್ಧಾರ ಅವರ ರಾಜಕೀಯ ವೃತ್ತಿ ಜೀವನದ ಪ್ರಮುಖ ಘಟ್ಟವಾಗಲಿದೆ. ಇಂದು (ಸೋಮವಾರ) ಬೆಳಗ್ಗೆ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪ ತನ್ನ ಮುಂದಿನ ನಿರ್ಧಾರವನ್ನು ಸಂಜೆ ಹೊತ್ತಿಗೆ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯೇನಿಲ್ಲ.

ಹೊರನಡೆದರೆ ತನ್ನೊಂದಿಗೆ ಬರುವವರ ಸಂಖ್ಯೆ ಎಷ್ಟು ಎನ್ನುವುದಷ್ಟೇ ಅವರ ಮತ್ತು ಅವರ ಕಟ್ಟಾ ಬೆಂಬಲಿಗರ ಪ್ರಮುಖ ಪ್ರಶ್ನೆ. ಈಗಾಗಲೇ ಏಳೆಂಟು ಸಚಿವರು ತಮ್ಮ ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಯಡಿಯೂರಪ್ಪನವರಿಗೆ ಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ಕೆಲ ಶಾಸಕರೂ ಇದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಒಂದು ವರ್ಷವಷ್ಟೇ ಬಾಕಿ ಇರುವಾಗ ರಾಜೀನಾಮೆ ಕೊಡಬೇಕೆ, ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಹಲವರು ಇರಬಹುದು. ಮತ್ತೊಂದು ಅವಧಿಗೆ ಆಯ್ಕೆಯಾಗುವ ವಿಶ್ವಾಸ ಎಲ್ಲರಲ್ಲೂ (ಎಷ್ಟೇ ದೊಡ್ಡ ನಾಯಕರಾದರೂ) ಇಲ್ಲ. ಜನರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಈಗಲೇ ಊಹಿಸುವ ತಂತ್ರಜ್ಞಾನ ಸದ್ಯಕ್ಕಂತೂ ಚಾಲ್ತಿಯಲ್ಲಿಲ್ಲವಲ್ಲ. ಕೆಲವು ಶಾಸಕರು ರಾಜಿನಾಮೆ ಕೊಟ್ಟಾರು. ಆದರೆ ಸಂಸಂದರು! ಅವರಿಗಿನ್ನೂ 2014ರ ವರೆಗೆ ಕಾಲಾವಕಾಶ ಇದೆ. ಈಗ ರಾಜೀನಾಮೆ ಕೊಟ್ಟರೆ ಗತಿ ಏನು? ತಾಂತ್ರಿಕವಾಗಿ ಬಿಜೆಪಿ ಜೊತೆ ಇದ್ದು ಮಾನಸಿಕವಾಗಿ ಯಡಿಯೂರಪ್ಪನವರ ಜೊತೆ ಇರಲು ಸಾಧ್ಯವೆ?

ಈಗಾಗಲೇ ಯಡಿಯೂರಪ್ಪನ ಬೆಂಬಲಿಗರು ಅಲ್ಲಲ್ಲಿ ಸೂಚನೆ ನೀಡಿರುವಂತೆ ಪಕ್ಷದಿಂದ ಹೊರನಡೆದು ಹೊಸ ಪಕ್ಷ ಕಟ್ಟುವ ಯೋಚನೆ ಅವರಲ್ಲಿದೆ. ಹಾಗೆ ಮಾಡಿದರೆ ‘ದೇಶದ ಒಳಿತಿಗೆ ರಾಷ್ಟ್ರೀಯ ಪಕ್ಷಗಳು ಮಾತ್ರ ಇರಬೇಕು’ ಎಂದು ಪದೇ ಪದೇ ಜೆಡಿಎಸ್ ಪಕ್ಷವನ್ನು ತಿವಿಯುತ್ತಿದ್ದ ಯಡಿಯೂರಪ್ಪನವರೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ‘ದೇಶದ ಒಳಿತಿಗೆ’ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ. ಪ್ರಜಾವಾಣಿಯಲ್ಲಿ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ಅಂಕಣದಲ್ಲಿ (ದಿನಾಂಕ ಮೇ.14 ರ ಅನಾವರಣ) ಬರೆದಿರುವಂತೆ ಸಿಬಿಐ ತೂಗುಗತ್ತಿಯ ಅಡಿ ಜೀವಿಸುವವರಿಗೆ ರಾಷ್ಟ್ರೀಯ ಪಕ್ಷಗಳು ಮಣೆ ಹಾಕುವುದು ದುಸ್ತರ ಎನ್ನುವುದನ್ನು ಮನಗಂಡು ಪ್ರಾದೇಶಿಕ ಪಕ್ಷದ ಕನಸು ಕಾಣುತ್ತಿರಬಹುದು. ಪ್ರಾದೇಶಿಕ ಪಕ್ಷ ಆದರೆ, ಅವರದೇ ಆಡಳಿತ. ಆಗ ರಾಜಕೀಯ ನೈಪುಣ್ಯ, ಜನಪ್ರಿಯತೆ ಯಾವುದರಲ್ಲೂ ಸರಿಸಮ ಅಲ್ಲದಿರುವ ನಿತಿನ್ ಗಡ್ಕರಿಯಂತಹವರ ಎದುರು ಕೈ ಕಟ್ಟಿ ಕುಳಿತುಕೊಳ್ಳುವುದಾಗಲಿ, ಆಗಾಗ ಕಪ್ಪ ಕೊಡುವ ಪ್ರಮೇಯ ಇರುವುದಿಲ್ಲ ನೋಡಿ.

ಆದರೆ ಅಂತಹದೊಂದು ಪ್ರಯತ್ನದ ಉದ್ದೇಶವೇನು? ಎಂತಹ ರಾಜಕೀಯ ಅನಕ್ಷರಸ್ಥನಿಗೂ ಅರ್ಥವಾಗುವ ಸತ್ಯವೆಂದರೆ ಜೆಡಿಎಸ್ ಸೇರಿದಂತೆ ರಾಜ್ಯದ ಯಾವುದೇ ಪ್ರಾದೇಶಿಕ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಇದು ಯಡಿಯೂರಪ್ಪ ಮತ್ತು ಅವರ ಹಿಂಬಾಲಕರಿಗೆ ಸ್ಪಷ್ಟವಾಗಿ ಗೊತ್ತು. ಆದರೆ ಬಿಜೆಪಿ ಅಭ್ಯರ್ಥಿಗಳು ಬಹುಭಾಗದಲ್ಲಿ ಸೋಲಿಸುವಲ್ಲಿ ಪ್ರಾದೇಶಿಕ ಪಕ್ಷ ಯಶಸ್ವಿಯಾಗಬಹುದು. ಲಿಂಗಾಯುತರ ಪ್ರಾಬಲ್ಯ ಇರುವ ಉತ್ತರ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿ ಅಧಿಕಾರದ ಗದ್ದುಗೆಯಿಂದ ಬಹುದೂರ ಉಳಿಯಬಹುದು.

ಆದರೆ, ಯಡಿಯೂರಪ್ಪನವರ ಉದ್ದೇಶ ಅಷ್ಟಕ್ಕೇ ಸೀಮಿತವಾದಂತಿಲ್ಲ. ಬಿಜೆಪಿಯನ್ನು ಸೋಲಿಸುವುರ ಜೊತೆಗೆ ತಾನು ಮತ್ತು ತನ್ನನ್ನು ನಂಬಿ ಬಂದವರಿಗೆ ಅಧಿಕಾರ ಬೇಕಲ್ಲ. ಆ ಕಾರಣಕ್ಕಾಗಿಯೇ ಅವರು ಸೋನಿಯಾ ಗಾಂಧಿಯತ್ತ ಮುಖ ಮಾಡಿದ್ದಾರೆ. ನಿನ್ನೆಯ ಭಾಷಣದಲ್ಲಿ ಅವರು ಮಾತನಾಡುತ್ತ ಸೋನಿಯಾ ಗಾಂಧಿಯವರನ್ನು ‘ಆರೋಪ ರೂಪದ ಹೊಗಳಿಕೆ’ ಮಾಡಿದ್ದು ಇದೇ ಕಾರಣಕ್ಕೆ. ಯಡಿಯೂರಪ್ಪ ಹೇಳಿದ್ದು ‘ತಮ್ಮ ಪಕ್ಷದ ಯಾರ ಮೇಲಾದರೂ ಆರೋಪ ಬಂದರೆ, ಸೋನಿಯಾ ಗಾಂಧಿ ಮೊದಲು ಅವರ ರಕ್ಷಣೆ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗಲ್ಲ’. ಯಡಿಯೂರಪ್ಪನವರಿಂದ ಈ ಮಾತು ಕೇಳಿ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ ಕೂಡಾ ‘ಸದ್ಯ ಈಗಲಾದರೂ ಯಡಿಯೂರಪ್ಪನವರಿಗೆ ನಮ್ಮ ಪಕ್ಷದ ಮಹತ್ವ ಅರ್ಥವಾಯಿತಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಆರೋಪಿಗಳನ್ನು ರಕ್ಷಣೆ ಮಾಡುವುದು ಸ್ತುತ್ಯಾರ್ಹವೇ? ಪರಮೇಶ್ವರರು ಯಡಿಯೂರಪ್ಪನ ಮಾತನ್ನು ಒಪ್ಪಿಕೊಳ್ಳುತ್ತಾರೆಂದರೆ ಅವರ ಪಕ್ಷ ‘ಆರೋಪಿಗಳನ್ನು ರಕ್ಷಿಸುತ್ತದೆ’ ಎಂದು ಒಪ್ಪಿಕೊಂಡಂತೆ.

ಯಡಿಯೂರಪ್ಪನವರ ಈ ಮಾತಿನ ಹಿಂದೆ ಎರಡು ಉದ್ದೇಶಗಳಿರಬಹುದು. ಒಂದು: ಸೋನಿಯಾ ಗಾಂಧಿಯನ್ನು ಹೊಗಳುವ ಮೂಲಕ ತಾನೂ ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂದು ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಕೊಡುವುದು. ಎರಡನೆಯದು: ತನಗೆ ಸದ್ಯ ಬೇಕಿರುವುದು ರಕ್ಷಣೆ. ಅದು ಸೋನಿಯಾ ಗಾಂಧಿ ಪಕ್ಷದಲ್ಲಿ ದೊರಕುವುದೇ ಎಂದು ಕಾಂಗ್ರೆಸ್ ನೇತಾರರನ್ನು ಕೇಳುವುದು. ಮುಂದಿನ ದಿನಗಳಲ್ಲಿ ಈ ಸಂದೇಶಗಳು ಮತ್ತಷ್ಟು ಸ್ಪಷ್ಟವಾಗಲಿವೆ.

ಕಾಂಗ್ರೆಸ್ ಗೆ ಸದ್ಯ ಹಿಂದುಳಿದ ಮತ್ತು ದಲಿತರ ಬೆಂಬಲವಿದೆ. ಮುಂದುವರಿದ ಜಾತಿಗಳಲ್ಲಿ ಒಂದಾದ ಲಿಂಗಾಯುತರು ಕಾಂಗ್ರೆಸ್ ನಿಂದ ದೂರವಿದ್ದಾರೆ ಎನ್ನುವುದನ್ನು ಇತ್ತೀಚಿನ ಚುನಾವಣೆಗಳು ನಿರೂಪಿಸಿವೆ. ಈ ಕಾರಣ ಕಾಂಗ್ರೆಸ್ ಗೆ ಲಿಂಗಾಯುತ ಮತಗಳು ಯಡಿಯೂರಪ್ಪನ ಮೂಲಕ ಬಂದರೂ ಸರಿಯೆ. ಹಾಗಂತ ಅವರು ಈಗಲೇ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಪಕ್ಷದ ಒಳಗೆ ಕರೆತಂದು ಗೊಂದಲ ಸೃಷ್ಟಿಸುವುದಿಲ್ಲ. ಬದಲಿಗೆ, ಅವರ ಪಾಡಿಗೆ ಅವರು ಒಂದು ಪ್ರಾದೇಶಿಕ ಪಕ್ಷ ಕಟ್ಟಿ ತಮ್ಮ ಸಾಮರ್ಥ್ಯ ನಿರೂಪಿಸುವವರೆಗೂ ಕಾಯಬಹುದು. ಮುಂದೆ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಒಂದಷ್ಟು ಸೀಟುಗಳ ಅಗತ್ಯ ಬಿದ್ದಾಗ ನೆರವಿಗೆ ಇರಲಿ ಎನ್ನುವುದೂ ಅವರ ದೂರಾಲೋಚನೆ ಇರಬಹುದಲ್ಲವೇ?

ಒಂದಂತೂ ಸತ್ಯ ರಾಜ್ಯದಲ್ಲಿ ಬರ ಇರಲಿ ನೆರೆ ಇರಲಿ ವ್ಯಥೆಪಡಬೇಕಾದವನು ಮತದಾರ ಮಾತ್ರ.

ಫೋಟೋ: indiavision.com

ದಲಿತ ಸಂಚಿಕೆ: ಓದುಗರ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಳ್ಳುವ ಪ್ರಯತ್ನ

– ಶಿವರಾಮ್ ಕೆಳಗೋಟೆ

ಕಳೆದ ಎರಡು ವಾರಗಳಿಂದ ವಿಶೇಷ ದಲಿತ ಸಂಚಿಕೆಗೆ ವ್ಯಕ್ತವಾದ ಪ್ರತಿಕ್ರಿಯೆಯಿಂದ ಪ್ರಜಾವಾಣಿ ಸಂಪಾದಕರು ಮತ್ತು ಹಿರಿಯ ಸಿಬ್ಬಂದಿ ವರ್ಗ ಸಹಜವಾಗಿಯೇ ಬೀಗುತ್ತಿದ್ದಾರೆ. ಅಂತಹದೊಂದು ಪ್ರಯತ್ನ ಇದುರವರೆಗೂ ಯಾರಿಂದಲೂ ಆಗದ ಕಾರಣ  ಆ ಸಂಚಿಕೆ ಮತ್ತು ಅದನ್ನು ಹೊರತರುವಲ್ಲಿ ದುಡಿದ ಮನಸ್ಸುಗಳು ಮೆಚ್ಚುಗೆಗೆ ಅರ್ಹ. ಫೇಸ್‌ಬುಕ್ ಭಾಷೆಯಲ್ಲಿ ಹೇಳುವುದಾದರೆ ಅವರ ಶ್ರಮ ಸಾವಿರಾರು ಲೈಕುಗಳಿಗೆ ಅರ್ಹ. (ಸಂಚಿಕೆ ಹೊಸ ಆಲೋಚನೆಗಳಿಗೆ ಮತ್ತಷ್ಟು ವೈವಿಧ್ಯತೆಗೆ ವೇದಿಕೆ ಆಗಬಹುದಿತ್ತು ಎನ್ನುವುದರ ಹೊರತಾಗಿಯೂ…)

ಆ ಮೂಲಕ ಪ್ರಜಾವಾಣಿ ಪತ್ರಿಕೆ ಇತ್ತೀಚೆಗಿನ ತನ್ನ ಕೆಲ ಧೋರಣೆಗಳಿಂದ ಓದುಗ ಸಮುದಾಯದ ಒಂದು ವರ್ಗದಿಂದ ಕಳೆದುಕೊಂಡಿದ್ದ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಂಡಿದೆ. ದಲಿತ ಸಂಚಿಕೆ ಹೊರತರುವ ಮೂಲಕ ಮೆಚ್ಚುಗೆ ಗಳಿಸಿದೆ ಪ್ರಜಾವಾಣಿ, ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನ ಸಂದರ್ಶನವನ್ನು ಬರೋಬ್ಬರಿ ಒಂದೂವರೆ ಪುಟ (ಮುಖಪುಟ ಸೇರಿದಂತೆ) ಪ್ರಕಟಿಸಿ ಸಂಪಾದಿಸಿದ್ದು ಟೀಕೆಗಳನ್ನು, ಮೂದಲಿಕೆಗಳನ್ನು ಎನ್ನುವುದನ್ನು ಮರೆಯಬಾರದು. ಆ ಸಂದರ್ಶನವನ್ನು ಓದಿ/ನೋಡಿ ಕೆಲ ಓದುಗರಾದರೂ ಪತ್ರಿಕೆ ಸಂಪಾದಕರ ಹಾಗೂ ಸಂದರ್ಶಕರ ವೈಯಕ್ತಿಕ ನಿಷ್ಠೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರು ಎನ್ನುವುದು ಸುಳ್ಳಲ್ಲ. ಪತ್ರಿಕೆ ಸಿಬ್ಬಂದಿ ಪ್ರಜ್ಞಾವಂತ ಓದುಗರಿಗೆ ಫೋನ್ ಮಾಡಿ (ದಲಿತ ಸಂಚಿಕೆ ರೂಪುಗೊಂಡಾಗ ಮಾಡಿದಂತೆ) ಪ್ರತಿಕ್ರಿಯೆ ಕೇಳಿದ್ದರೆ ಅದು ವಿವರವಾಗಿ ಗೊತ್ತಾಗುತ್ತಿತ್ತು.

ಅಥವಾ ದಿನೇಶ ಅಮಿನ್ ಮಟ್ಟು ಅವರು ಆ ಸಂದರ್ಶನ ಸ್ವೀಕರಿಸಿದ ಪ್ರತಿಕ್ರಿಯೆಗಳನ್ನು ಮತ್ತು ಸಂದರ್ಶನದ ಹಿಂದೆ ಸಂಪಾದಕರಿಗಿದ್ದ ಉದ್ದೇಶಗಳನ್ನು ಸ್ಪಷ್ಟಪಡಿಸುವಂತಹ ಅಂಕಣವನ್ನು (ದಲಿತ ಸಂಚಿಕೆ ಕುರಿತು ಬರೆದಂತೆ) ಬರೆದಿದ್ದರೆ ಅನುಮಾನಗಳು ಪರಿಹಾರ ಆಗುತ್ತಿದ್ದವು. ಆದರೆ ಅವರು ಹಾಗೆ ಮಾಡಲಿಲ್ಲ. (ಬಹುಶಃ ಯಡಿಯೂರಪ್ಪನ ಸಂದರ್ಶನದಲ್ಲಿ ಅವರ ಪಾತ್ರ ಇರಲಿಲ್ಲವೇನೋ. ಅಥವಾ, ‘ಪತ್ರಿಕೆಯೊಂದಿಗಿನ ಜನರ ವಿಶ್ವಾಸವನ್ನು’ ಕಾಯ್ದುಕೊಂಡು ಬರುವಂತಹ ಕೆಲಸಗಳಲ್ಲಿ ಮಾತ್ರ ಅವರ ಪಾಲ್ಗೊಳ್ಳುವಿಕೆ ಇರುತ್ತದೇನೋ?)

ಇರುವ ನಾಲ್ಕೈದು ಪತ್ರಿಕೆಗಳಲ್ಲಿ  ಹೆಚ್ಚು ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯೇ, ಅನುಮಾನ ಬೇಡ. ಆದರೆ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೇ ಜನರ ವಿಶ್ವಾಸಕ್ಕೆ ಧಕ್ಕೆ ತಂದಾಗ? ಪ್ರಜಾವಾಣಿ ಯಡಿಯೂರಪ್ಪನವರ ಡಿ-ನೋಟಿಫಿಕೇಶನ್ ಕೃತ್ಯಗಳನ್ನು ವರದಿ ಮಾಡದೆ ವೃತ್ತಿ ಧರ್ಮ ಮರೆಯಿತು. ಪ್ರಜಾವಾಣಿ ಸಂಪಾದಕರು ಮತ್ತವರ ಸಿಬ್ಬಂದಿ ಡಿನೋಟಿಫಿಕೇಶನ್ ಪ್ರಕರಣಗಳನ್ನು ವರದಿ ಮಾಡುವಾಗ ಆ ಪತ್ರಿಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿತೆಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವೇ? ಡಿನೋಟಿಫಿಕೇಶನ್ ಪ್ರಕರಣ ಕುರಿತ ದಾಖಲೆಗಳು ಮೊದಲ ಬಾರಿಗೆ ತಲುಪಿದ ಕೆಲವೇ ಕೆಲವು ಪತ್ರಿಕಾ ಕಚೇರಿಗಳಲ್ಲಿ ಪ್ರಜಾವಾಣಿಯೂ ಒಂದು ಎಂದು ಇದೇ ವೃತ್ರಿಯಲ್ಲಿರುವ ಬಹುತೇಕರಿಗೆ ಗೊತ್ತು. ಬಹುಶಃ ಈ ಸಂಗತಿ ಪ್ರಜಾವಾಣಿ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿಯುತ್ತದೆ.

ದಲಿತರ ಸಂಖ್ಯೆ:

ದಲಿತ ಸಂಚಿಕೆ ಹೊರತಂದ ನಂತರ ಪ್ರಜಾವಾಣಿ ಜವಾಬ್ದಾರಿ ಹೆಚ್ಚಿದೆ. ಇನ್ನು ಮುಂದೆ ಪತ್ರಿಕೆಯ ನಡವಳಿಕೆಯನ್ನು ಓದುಗರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಸಂಪಾದಕ ಕೆ.ಎನ್. ಶಾಂತಕುಮಾರ್ ತಮ್ಮ ಬರಹದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಅವರ ಕಾಳಜಿಗೆ ಸಹಜವಾಗಿಯೇ ಮೆಚ್ಚುಗೆ ಇದೆ. ಅವರಾದರೂ ಪ್ರಜಾವಾಣಿಯಲ್ಲಿ ದಲಿತರ ಸಂಖ್ಯೆ ಎಷ್ಟಿದೆ ಎಂದು ಗುರುತಿಸಿ ಅವರ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಮಾಡಬೇಕು. ಪತ್ರಿಕೋದ್ಯಮ ಕಾಲೇಜುಗಳಲ್ಲಿ ಕಲಿಯುತ್ತಿರುವ ದಲಿತ ಹುಡುಗ-ಹುಡುಗಿಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ, ಅವರು ಕೂಡಾ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಪತ್ರಿಕಾಲಯಗಳಲ್ಲಿ ಸೇರಿಸಿಕೊಳ್ಳಬೇಕು. ಪ್ರಜಾವಾಣಿ ಈ ನಿಟ್ಟಿನಲ್ಲಿ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಬೇಕು.