Category Archives: ಶ್ರೀಧರ್ ಪ್ರಭು

ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?


-ಶ್ರೀಧರ ಪ್ರಭು


 

ಮೊದಲೇ ವಿಚಾರವೆಂದರೆ, ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ. ಇವರೆಲ್ಲರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ೫೫% ರಷ್ಟಿದೆ.

ಇಂದು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಬಹುಸಂಖ್ಯಾತ ಒಬಿಸಿಗಳಿಗಾದ ಅನ್ಯಾಯವೆಂಬಂತೆ ಬಿಂಬಿಸಲಾಗುತ್ತಿದೆ. ೧೮% ಬಡ್ತಿ ಮೀಸಲಾತಿ ಪಡೆದ ಪರಿಶಿಷ್ಟರು ೮೨ ಜನ ಅಲ್ಪಸಂಖ್ಯಾತ ಮತ್ತು ಒಬಿಸಿಗಳ ವಿರುದ್ಧವಾಗಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಬಂದಿರುವ ತೀರ್ಪಿನಿಂದಾಗಿ ಈ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಅನೇಕರು ಪ್ರಚಾರಮಾಡುತ್ತಿದ್ದಾರೆ.

ನಿಜವಾಗಿ ನೋಡಿದರೆ, ಒಬಿಸಿಗಳಿಗೆ ಅನ್ಯಾಯವಾಗಿದ್ದು ನಿಜ. ಆದರೆ, ಈ ಅನ್ಯಾಯಕ್ಕೆ ಪರಿಶಿಷ್ಟರು ಕಾರಣವಲ್ಲ. ನ್ಯಾಯಾಲಯದ ತೀರ್ಪಿನ ಅಂಶಗಳನ್ನು, ಅದರಲ್ಲೂ ಇಂದ್ರ ಸಹನಿ ತೀರ್ಪಿನ ಅಂಶಗಳನ್ನು ಸರಿಪಡಿಸದೇ ೧೯೯೨ ರಿಂದಲೂ ಈ ದೇಶವನ್ನಾಳಿದ ಸರ್ಕಾರಗಳು ಒಬಿಸಿಗಳಿಗೆ ಮೋಸ ಮಾಡಿವೆ.

೧೬ ನವೆಂಬರ್ ೧೯೯೨ ರಲ್ಲಿ ಬಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇಂದ್ರಾ ಸಹನಿ ತೀರ್ಪಿನಲ್ಲಿ ಮಂಡಲ್ ವರದಿ ಜಾರಿಗೊಳಿಸಿದ್ದನ್ನು ಎತ್ತಿಹಿಡಿಯಲಾಯಿತಾದರೂ, ಪರಿಶಿಷ್ಟರಿಗೆ ಯಾವುದೇ ಕಾರಣಕ್ಕೂ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ತೀರ್ಮಾನಿಸಲಾಯಿತು. ಹಾಗೆಯೇ, ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಕೆನೆಪದರನ್ನು ಅನ್ವಯಿಸಬೇಕು ಮತ್ತು ಬಡ್ತಿಯಲ್ಲಿ ಮೀಸಲಾತಿ ಕೊಡಲೇಬಾರದು ಎಂದೂ ತೀರ್ಮಾನಿಸಲಾಯಿತು. ದುರದೃಷ್ಟವಶಾತ್ ಇಂದ್ರಾ ಸಾಹ್ನಿ ತೀರ್ಪನ್ನು ಒಬಿಸಿಗಳು ಸರಿಯಾಗ ಅರ್ಥೈಸಲೇಯಿಲ್ಲ. ಈ ಜಾಗೃತಿ ಮೂಡದಿರುವ ಕಾರಣದಿಂದ ಅಳುವ ಮನುವಾದಿ ಸರ್ಕಾರಗಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.

ಈ ತೀರ್ಪಿನಲ್ಲಾದ ಅನ್ಯಾಯವನ್ನು ಪರಿಶಿಷ್ಟರ ಮಟ್ಟಿಗೆ ಸರಿಪಡಿಸಲು ೨೦೧೧ ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೬ (೪) (ಎ) ಪರಿಚ್ಛೇದವನ್ನು ಸೇರಿಸಲಾಯಿತು. ಈ ಪರಿಚ್ಛೇದದ ಪ್ರಕಾರ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅನುವುಮಾಡಿಕೊಡಲಾಯಿತು. ಆದರೆ, ಹಿಂದುಳಿದ ವರ್ಗಗಳಿಗಾದ ಅನ್ಯಾಯವನ್ನು ಸರಿಪಡಿಸಲಲಿಲ್ಲ. ಕೆನೆಪದರು ನಿಯಮ ಹಾಗೆಯೇ ಉಳಿಯಿತು. ಬಡ್ತಿಯಲ್ಲಿ ಮೀಸಲಾತಿ ಸಹ ಸಿಗಲಿಲ್ಲ. ಈ ಹಂತದಲ್ಲಿ ಎಲ್ಲಾ ಪಕ್ಷಗಳು ಒಬಿಸಿಗಳಿಗೆ ನ್ಯಾಯ ಒದಗಿಸಬೇಕಿತ್ತು. ದುರದೃಷ್ಟವಶಾತ್ ಹೀಗಾಗಲಿಲ್ಲ. ಇನ್ನು ಒಬಿಸಿಗಳಂತೂ ತಮ್ಮದೇ ಪರವಾಗಿದ್ದ ಮಂಡಲ್ ವರದಿಯ ವಿರುದ್ಧ ಬಸ್ಸುಗಳಿಗೆ ಕಲ್ಲು ತೂರುವುದರಲ್ಲಿ, ಮಸೀದಿ ಬೀಳಿಸುವುದರಲ್ಲಿ ಖುಷಿ ಕಂಡುಕೊಂಡಿದ್ದರು. ಈ ಕಲ್ಲುಗಳು ತಮ್ಮ ಭವಿಷ್ಯದ ಸೌಧಕ್ಕೆ ಬೀಳುತ್ತಿವೆ ಎಂದು ಒಬಿಸಿಗಳು ಅಂದಿಗೂ, ಬಹಳಷ್ಟು ಮಟ್ಟಿಗೆ ಇಂದಿಗೂ ಗ್ರಹಿಸಲಾಗಿಲ್ಲ.

ಪರಿಶಿಷ್ಟರು ಎಚ್ಚೆತ್ತುಕೊಂಡ ಕಾರಣದಿಂದ, ಸಂವಿಧಾನಕ್ಕೆ ಮೇಲ್ಕಂಡ ತಿದ್ದುಪಡಿ ತಂದಿದ್ದು ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ, ೨೦೦೨ ರಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಕಾಯಿದೆಗಳನ್ನೂ ಆಯಾ ರಾಜ್ಯಗಳಲ್ಲಿ ಜಾರಿಮಾಡಲಾಯಿತು. ಈಗ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳ ಕಾಯಿದೆಗಳನ್ನು ಅಸಿಂಧುವೆಂದು ಘೋಷಿಸಿದೆ. ಆದರೆ, ಕಾಯಿದೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿದರೆ, ಹಾಗೆಯೇ. ಪ್ರಮುಖವಾಗಿ ಹಿಂದೆ ರಾಜ್ಯಸಭೆಯಲ್ಲಿ ಪಾಸಾಗಿ ಈಗ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ೧೧೭ ನೇ ತಿದ್ದುಪಡಿ ವಿಧೇಯಕವನ್ನು ಪಾಸುಮಾಡಿಸಿದರೆ ಪರಿಶಿಷ್ಟರ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಒಬಿಸಿಗಳ ಸಮಸ್ಯೆ ಹಾಗೆಯೇ ಉಳಿಯುತ್ತದೆ.

ಒಬಿಸಿಗಳಿಗೆ ಎರಡು ರೀತಿಗಳಲ್ಲಿ ಅನ್ಯಾಯವಾಗಿದೆ. ಮೊದಲೇ ಅನ್ಯಾಯವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸದೇ ಆರ್ಥಿಕ ಮಾನದಂಡಗಳನ್ನು ಮುಂದೆ ಮಾಡಿ ಕೆನೆಪದರನ್ನು ತಂದದ್ದು. ಎರಡನೇ ಅನ್ಯಾಯ, ಪ್ರಾತಿನಿಧ್ಯವನ್ನು ಬಡ್ತಿಗೆ ವಿಸ್ತರಿಸದೇ ಮೊಟಕುಗೊಳಿಸಿದ್ದು. ಇವೆರಡೂ ಅಂಶಗಳು ಈಗಲೂ ಜಾರಿಯಲ್ಲಿರುವುದಕ್ಕೆ ಕಾರಣವೆಂದರೆ ಮನುವಾದಿ ಸರ್ಕಾರಗಳು ಇಂದ್ರ ಸಹನಿ ತೀರ್ಪನ್ನು ಸರಿಪಡಿಸದೇ ಹೋಗಿದ್ದು. ಒಬಿಸಿಗಳನ್ನು ಸೇರಿಸಿ ಪಡೆಕಟ್ಟಿ ರಾಜಕೀಯಕ್ಕೆ ಬಳಸಿಕೊಂಡ ಸಂಘ ಪರಿವಾರ ಇಂದು ಒಬಿಸಿ ಗಳಿಗಾದ ಈ ಅನ್ಯಾಯವನ್ನು ಏಕೆ ಸರಿಪಡಿಸಬಾರದು? ಕಾಂಗ್ರೆಸ್ ಸರ್ಕಾರ ಒಬಿಸಿಗಳಿಗೆ ಮೋಸ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಒಬಿಸಿಗಳಿಗೆ ಏನು ಮಾಡಿದೆ? ಮಂಡಲ್ ವರದಿಯನ್ನು ವಿರೋಧಿಸಿದ ಬಿಜೆಪಿ ಒಬಿಸಿಗಳ ಮೊದಲ ಶತ್ರು. ಮಂಡಲ್ ವರದಿ ಜಾರಿ ಮಾಡಿದ ನರಸಿಂಹ ರಾವ್ ಸರ್ಕಾರ ಸಹ ಇಂದ್ರಾ ಸಹನಿ ತೀರ್ಪಿನ ಲೋಪದೋಷಗಳನ್ನು ಸರಿಪಡಿಸಲಿಲ್ಲ. ಹೋಗಲಿ, ವಾಜಪೇಯಿ ಸರ್ಕಾರ ಏನು ಮಾಡಿದೆ? ಇಂದಿನ ಮೋದಿ ಸರ್ಕಾರ ಏಕೆ ಸುಮ್ಮನಿದೆ?

ಈಗ ಒಬಿಸಿಗಳು ಏನು ಮಾಡಬೇಕು?

ಮೊದಲನೇದ್ದಾಗಿ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗುತ್ತಿರುವ ಮೀಸಲಾತಿಯ ಪ್ರಮಾಣ ೧೮% ಮಾತ್ರ. ಒಬಿಸಿಗಳ ಜನಸಂಖ್ಯಾ ಅನುಪಾತದಲ್ಲಿ ಉಳಿದ ಹುದ್ದೆಗಳಿಗೆ ತಮಗೂ ಪ್ರಾತಿನಿಧ್ಯ ಸಿಗಬೇಕೆಂದು ಒಬಿಸಿಗಳು ಆಗ್ರಹಿಸಬೇಕಿದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ೧೧೭ ನೇ ವಿಧೇಯಕದ ಮಾದರಿಯಲ್ಲೇ ಒಬಿಸಿಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ವಿಧೇಯಕವನ್ನು ಜಾರಿ ಮಾಡಲು ಒಬಿಸಿಗಳು ಒತ್ತಾಯಿಸಬೇಕಿದೆ. ಇದರಲ್ಲಿ ರಾಜ್ಯಸರ್ಕಾರದ್ದೇನೂ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಇಂದ್ರಾ ಸಹನಿ ತೀರ್ಪಿನಲ್ಲಾದ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾದರೆ, ಒಬಿಸಿಗಳು ಸಂವಿಧಾನ ತಿದ್ದುಪಡಿ ಮಾಡಿ ತಮಗೂ ಬಡ್ತಿ ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಬೇಕಿದೆ. ಹೀಗೆ ಮಾಡಿದರೆ, ಸಹಜವಾಗಿ ಪರಿಶಿಷ್ಟರ ಬೆಂಬಲವೂ ಒಬಿಸಿಗಳಿಗೆ ದೊರೆಯುತ್ತದೆ. ನಿಜವಾಗಿ ನೋಡಿದರೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಅವರ ಜನಸಂಖ್ಯಾ ಪ್ರಮಾಣದಷ್ಟಿಲ್ಲ. ಅದನ್ನು ಆಗ್ರಹಿಸುವುದು ಬಿಟ್ಟು ಸಾಮಾನ್ಯ ವರ್ಗದವರೊಂದಿಗೆ ಸೇರಿಕೊಂಡರೆ, ಒಬಿಸಿಗಳಿಗೆ ಏನೂ ಪ್ರಯೋಜನವಿಲ್ಲ. ಬಹುಜನರ ಒಗ್ಗಟ್ಟು ಮುರಿದುಹೋದರೆ ಎಲ್ಲರ ಪ್ರತಿನಿಧ್ಯವೂ ಒಟ್ಟಿಗೇ ಕೊನೆಗೊಳ್ಳುತ್ತದೆ.

ಈಗ ಬಂದಿರುವ ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮಾಣವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ, ಪ್ರಾತಿನಿಧ್ಯ ಕಲ್ಪಿಸುವುದರಿಂದ ಕಾರ್ಯದಕ್ಷತೆಗೆ ಹಾನಿ ಎನ್ನಲಾಗಿದೆ. ಪ್ರಾತಿನಿಧ್ಯ ಕಲ್ಪಿಸಿದರೆ ಕಾರ್ಯದಕ್ಷತೆಯೇ ಪ್ರಧಾನ ಎಂಬ ಸಂವಿಧಾನದ ೩೩೫ ನೇ ಪರಿಚ್ಛೇದಕ್ಕೆ ಅಪಚಾರವಾಗುತ್ತದೆ ಎನ್ನಲಾಗಿದೆ.

ಈ ಅಂಶವನ್ನು ಸರಿಪಡಿಸಲೆಂದೇ, ೧೧೭ ನೇ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಈ ವಿಧೇಯಕದಲ್ಲಿ, ಸಂವಿಧಾನದ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಲೇಬೇಕು ಮತ್ತು ಇದರಿಂದ ೩೩೫ ನೇ ಪರಿಚ್ಛೇದಕ್ಕೆ ಏನೂ ಹಾನಿಯಿಲ್ಲ ಎಂದು ಹೇಳಲಾಗಿದೆ. ಇದೇ ರೀತಿಯ ಕಾನೂನನ್ನು ಒಬಿಸಿಗಳಿಗೂ ಜಾರಿಮಾಡದಿದ್ದರೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೆ ಯಾವುದೇ ಮೀಸಲಾತಿ ಸಿಗದೇ ಹೋಗಬಹುದು.

ಆದ ಕಾರಣ, ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ಬೆಂಬಲಿಸಬೇಕು; ಹಾಗೆಯೇ, ತಮಗೂ ತಮ್ಮ ಜನಸಂಖ್ಯೆಯಷ್ಟು ಪ್ರಾತಿನಿಧ್ಯ ಸಿಗಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪರಿಶಿಷ್ಟರ ಜನಸಂಖ್ಯೆ ಖಂಡಿತವಾಗಲೂ ೧೮% ಗಿಂತ ಜಾಸ್ತಿಯಿದೆ. ಹಾಗಿದ್ದರೂ, ಪರಿಶಿಷ್ಟರು ೧೮% ಪ್ರಾತಿನಿಧ್ಯಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ. ಇಷ್ಟು ಹಕ್ಕು ಅವರಿಗೆ ಸಂವಿಧಾನಬದ್ಧವಾಗಿಯೇ ಸಿಕ್ಕಿದೆ. ಆದರೆ. ಒಬಿಸಿಗಳಿಗೆ ತಮ್ಮ ಜನಸಂಖ್ಯೆಯಷ್ಟು ಹೋಗಲಿ.. ಏನೊಂದು ಪ್ರತಿನಿಧ್ಯವೂ ಸಿಕ್ಕಿಲ್ಲ. ಇದನ್ನು ಒಬಿಸಿಗಳು ಮನಗಂಡೇಯಿಲ್ಲ.

ಒಬಿಸಿಗಳ ಈ ಹೋರಾಟಕ್ಕೆ ಖಂಡಿತವಾಗಲೂ ಪರಿಶಿಷ್ಠರ ಬೆಂಬಲ ದೊರಕುತ್ತದೆ. ಒಂದು ವೇಳೆ ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ವಿರೋಧಿಸಿದರೆ, ಏನೂ ಸಾಧಿಸಿದಂತಾಗುವುದಿಲ್ಲ. ಕೊನೆಗೆ ಒಬಿಸಿ ಗಳಿಗೂ ಸೇರಿದಂತೆ ಯಾರಿಗೂ ಪ್ರಾತಿನಿಧ್ಯ ಸಿಗುವುದಿಲ್ಲ. ಆದ್ದರಿಂದ ಒಬಿಸಿ ಗಳು ೧೮% ಪ್ರಾತಿನಿಧ್ಯ ವಿರೋಧಿ ಹೋರಾಟವನ್ನು ಕೈಬಿಟ್ಟು, ತಮ್ಮ ಜನಸಂಖ್ಯಾ ಪ್ರಮಾಣದಷ್ಟು ಪ್ರಾತಿನಿಧ್ಯಕ್ಕಾಗಿ, ಪರಿಶಿಷ್ಟರೊಡನೆ ಕೈಜೋಡಿಸಿ ಐಕ್ಯ ಹೋರಾಟ ಕಟ್ಟಬೇಕಿದೆ.

ದೇಶದ ೮೫% ರಷ್ಟು ಬಹುಜನರ ಭವಿಷ್ಯ ೮೫% ರಷ್ಟು ಬಹುಜನರ ಒಗ್ಗಟ್ಟಿನಲ್ಲಿದೆ. ಈ ಒಗ್ಗಟ್ಟನ್ನು ಮುರಿದರೆ, ೮೫% ಜನರು ಒಟ್ಟಿಗೇ ಮುಳುಗುತ್ತಾರೆ. ಒಗ್ಗಟ್ಟಿದ್ದರೆ ಎಲ್ಲರೂ ಒಟ್ಟಿಗೇ ದಡಸೇರುತ್ತಾರೆ.

ಬಹುಜನರ ಐಕ್ಯತೆ ಚಿರಾಯುವಾಗಲಿ!

ಪ್ರಭುತ್ವ, ಪೋಲಿಸ್ ವ್ಯವಸ್ಥೆ ಮತ್ತು ಪ್ರತಿಭಟನೆ


– ಶ್ರೀಧರ್ ಪ್ರಭು


ಪತ್ರಕರ್ತ ನವೀನ ಸೂರಿಂಜೆ ಅವರು ವರ್ತಮಾನದಲ್ಲಿ ಬರೆದ ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ ಲೇಖನದಲ್ಲಿ ಪೋಲಿಸ್ ಪ್ರತಿಭಟನೆಯ ವಿಚಾರವನ್ನು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿ ಬರೆದಿದ್ದಾರೆ. ಅವರೆಲ್ಲಾ ವಿಚಾರಗಳಿಗೂ ಸಂಪೂರ್ಣ ಸಹಮತಿ ಸೂಚಿಸುತ್ತಾ, ನನ್ನ ಕೆಲವು ಮಾತುಗಳನ್ನು ಸೇರಿಸುತ್ತಿದ್ದೇನೆ.

೧೯೧೭ ರಲ್ಲಿ ‘ಪ್ರಭುತ್ವ ಮತ್ತು ಕ್ರಾಂತಿ’ ಎಂಬ ತಮ್ಮ ಅಗ್ರ ಲೇಖದಲ್ಲಿ ಲೆನಿನ್ ಹೇಳುತ್ತಾರೆ: “A standing army and police are the chief instruments of state power.” ಪೋಲಿಸ್ ವ್ಯವಸ್ಥೆ ಪ್ರಭುತ್ವದ ಪ್ರಮುಖ ಅಸ್ತ್ರ. ಪೋಲೀಸರ ಪರವಾಗಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಜೊತೆಗೂಡಿ ಸೇನೆಯ ಅಥವಾ ಪೋಲೀಸರ ‘ಮುಕ್ತಿಗೆ’ ನಿಲ್ಲುವುದು ಅತ್ಯಂತ ದೊಡ್ಡ ಅಭಾಸ. ಪೇದೆಗಳು, ಕೆಳಹಂತ, ಮೇಲು ಹಂತ ಎಂದೆಲ್ಲಾ ಕೂದಲು ಸೀಳಿ ವಿಂಗಡಣೆ ಮಾಡುವುದು ಪ್ರಭುತ್ವದ ಒಂದು ಸಮಷ್ಟಿಪೂರ್ಣ ಸ್ವರೂಪವನ್ನು ಕೈ, ಕಾಲು, ತಲೆ ಎಂದೆಲ್ಲಾ ವಿಂಗಡಣೆ ಮಾಡುವ ರೀತಿ ಅನರ್ಥಪೂರ್ಣವಾದದ್ದು.

ನವೀನ್ ಸೂರಿಂಜೆ ಅವರು ಹೇಳುವ ಹಾಗೆ ಇಂದು ಧರ್ಮ ಮತ್ತು ಜಾತಿಯನ್ನು ಬಳಸಿ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ‘ಸಾಮಾಜಿಕ ಪೋಲಿಸ’ ರೊಂದಿಗೆ ಪ್ರಭುತ್ವದ ಪೊಲೀಸರು ಒಟ್ಟು ಸೇರಿದ್ದಾರೆ. ಹೀಗಾಗಿ, ಪೋಲೀಸರ ಬಗೆಗಿನ ಸಹಾನುಭೂತಿ ಪ್ರಭುತ್ವದ ಕುರಿತ ಸಹಾನುಭೂತಿಯೇ.

ಸಮಾಜದ ಎಲ್ಲ ವರ್ಗ ವಿಭಾಗಗಳಿಗೂ ಸಂಘಟನೆಯ ಹಕ್ಕಿದೆ. ನಿಜ. Police Forces (Restriction of Rights) Act, 1966 ಎಂಬ ಕಾಯಿದೆಯcaste-riot-police ಪ್ರಕಾರ ಪೊಲೀಸರು ಯಾವುದೇ ರಾಜಕೀಯ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರಾಗಲು ಕೇಂದ್ರ ಸರಕಾರದ ಅನುಮತಿ ಅವಶ್ಯಕ. ಕಾನೂನಿನಲ್ಲಿ ಇವರು ಸಂಘಟನೆಗಳನ್ನು ಸ್ಥಾಪಿಸಬಹುದು. ಆದರೆ ಈ ಸಂಘಟನೆಗೆ ಇಲಾಖೆ ಮಾನ್ಯತೆ ಕೊಟ್ಟಿರಬೇಕು. ಇಷ್ಟು ಬಿಟ್ಟರೆ ಪೊಲೀಸರಿಗೆ ಮುಷ್ಕರ, ಪ್ರತಿಭಟನೆ ಇತ್ಯಾದಿ ನಡೆಸುವ ಹಕ್ಕಿಲ್ಲ. ಈ ಕಾಯಿದೆ ಇಂದು ಎಡಪಂಥೀಯ ಆಡಳಿತವಿದ್ದ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಇದನ್ನು ಬದಲಾಯಿಸಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ. ಎಡ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪೋಲಿಸ್ ವ್ಯವಸ್ಥೆಯನ್ನು ಮಾನವೀಯವಾಗಿಸಲು ತಮ್ಮ ಸರಕಾರದ ಹಂತದಲ್ಲಿ ಏನೇನು ಕ್ರಮ ಕೈಗೊಂಡಿದ್ದಾರೆ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ರೀತಿ ಪೋಲಿಸರ ಪ್ರತಿಭಟನೆ ಎಡ ಪಕ್ಷಗಳು ಆಡಳಿತವಿರುವ ಕೇರಳದಲ್ಲಿ ನಡೆದರೆ ಇವರ ನಿಲುವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು.

ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪೋಲಿಸ್ ವ್ಯವಸ್ಥೆ ಕೇವಲ ಒಂದು ನಿರ್ಜೀವ ಯಂತ್ರವಲ್ಲ. ಈ ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಅಂತರಿಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪೋಲಿಸ್ ವ್ಯವಸ್ಥೆ ಪ್ರಯತ್ನಪೂರ್ವಕವಾಗಿ ಗಟ್ಟಿಗೊಳಿಸುತ್ತಿದೆ. ಇಂತಹ ಪ್ರಭುತ್ವವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಮತ್ತು ಪೋಷಿಸುವ ಪೋಲೀಸರನ್ನು ಬೆಂಬಲಿಸಲು ಹೊರಟರೆ ಪ್ರಭುತ್ವವಾದಿ ಶಕ್ತಿಗಳಿಗೆ ಬಲಬರುವುದು.

ಪೋಲಿಸ್ ವ್ಯವಸ್ಥೆಯನ್ನು ‘ಮಾನವೀಯಗೊಳಿಸಲು’ ಒಂದು ಪಕ್ಷ ಮತ್ತು ರಾಜಕೀಯ ಪ್ರೇರಿತ ಸಂಘಟನೆಗಳ ರಾಜಕೀಯ ಪ್ರತಿಭಟನೆಗಳು ಹೇಗೆ ಸಹಕಾರಿಯಾದಾವು ಎಂಬ ಬಗೆಗೆ ಗಂಭೀರ ಭಿನ್ನಾಭಿಪ್ರಾಯಗಳಿವೆ. ಪೋಲಿಸ್ ವ್ಯವಸ್ಥೆಯ ನಡುವೆಯೇ ಮನುವಾದಿ ಮತ್ತು ಪ್ರಭುತ್ವದ ಪರ ರಾಜಕೀಯ ಮತ್ತಷ್ಟು ಬೇರೂರಲು ಇದು ಕಾರಣವಾಗುತ್ತದೆ.

ಇಂದು ಕರ್ನಾಟಕದಲ್ಲಿ ಪೋಲಿಸ್ ಮುಷ್ಕರಕ್ಕೆ ನೇತೃತ್ವ ಕೊಡಲು ಹೊರಟಿರುವ ಹಿಂದಿನ ಶಕ್ತಿಗಳ ಬಗೆಗೆ ಅನೇಕ ಅನುಮಾನಗಳಿವೆ. indian-policeಇವರೊಂದಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಕೈಜೋಡಿಸುವ ಔಚಿತ್ಯವನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುತ್ತಿರುವ ಶಕ್ತಿಗಳ ಜೊತೆಗೆ ಎಡ ಮತ್ತು ಅವರ ಸಾಮೂಹಿಕ ಸಂಘಟನೆಗಳ ರಾಜಕೀಯ ಅಥವಾ ತಾತ್ವಿಕ ಸಹಮತಿಯಿದೆಯೇ? ಇದು ಬಹು ಮುಖ್ಯ ಪ್ರಶ್ನೆ.

ಪೊಲೀಸರು ಮುಷ್ಕರಕ್ಕೆ ಇಳಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ದುಡುಕಿ ನಿರ್ಧರಿಸುವ ಮುನ್ನ ಇದಕ್ಕೆ ಪರ್ಯಾಯಗಳನ್ನು ಹುಡುಕದೇ ಇರಕೂಡದು.

ನವೀನ ಸೂರಿಂಜೆ ಅವರು ಅಭಿಪ್ರಾಯ ಪಡುವಂತೆ  “ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.”

ಸರ್ಕಾರೇತರ ವಲಯಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ


– ಶ್ರೀಧರ್ ಪ್ರಭು


 

ಸುಮಾರು ವರ್ಷಗಳಿಂದ ಜನಪರ ಕಾಳಜಿಯ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಲೇಖನಗಳಲ್ಲಿ ನಮ್ಮ ದೇಶದ ಸರಕಾರಗಳು ಬೃಹತ್ ಉದ್ದಿಮೆಗಳಿಗೆ ನೀಡಿರುವ ಸಬ್ಸಿಡಿ ಹಣದ ಬಗ್ಗೆ ಬರೆಯುತ್ತಿದ್ದಾರೆ. ಜುಲೈ ೨೮, ೨೦೧೪ ರಲ್ಲಿ ಔಟ್ಲುಕ್ ಪತ್ರಿಕೆಗೆ ಬರೆದ ‘How Much Can We Forgo To India Inc?’ ಎಂಬ ತಮ್ಮ ಲೇಖನದಲ್ಲಿ ಒಂದು ಆಸಕ್ತಿಕರ ವಿಚಾರವನ್ನು ಸಾಯಿನಾಥ್ ಬರೆದರು:

ನಮ್ಮ ದೇಶದ ಉದ್ಯೋಗಪತಿಗಳಿಗೆ ಸರಕಾರ ಕೊಟ್ಟ ಸಬ್ಸಿಡಿ ಹಣ ಸರಾಸರಿ ಪ್ರತಿ ಒಂದು ಗಂಟೆಗೆ ಏಳು ಕೋಟಿ ರೂಪಾಯಿಗಳು, ಪ್ರತಿ ದಿನಕ್ಕೆ ೧೬೮ ರೂಪಾಯಿಗಳು ಹಾಗೆ ಒಟ್ಟಾರೆ ೨೦೧೩-೨೦೧೪ ರ ಅರ್ಥಿಕ ವರ್ಷದಲ್ಲಿ ನಮ್ಮ ದೇಶದ ಸರಕಾರ ಬಂಡವಾಳಶಾಹಿಗಳಿಗೆ ಒಟ್ಟಾರೆಯಾಗಿ ಕೊಟ್ಟ ನೇರ ಸಬ್ಸಿಡಿ ಮೊತ್ತ ರೂ.೫.೩೨ ಲಕ್ಷ ಕೋಟಿಗಳು (ರೂ. ೫,೩೨,೦೦೦,೦೦೦೦೦೦೦). ಈ ಮೊತ್ತವು ೨೦೧೦-೨೦೧೧ ರ ಅರ್ಥಿಕ ವರ್ಷದಲ್ಲಿ ರೂ. ೩.೭೩ ಲಕ್ಷ ಕೋಟಿ ರೂಪಾಯಿ (ರೂ. ೫,೩೨,೦೦೦,೦೦೦೦೦೦೦) ಆಗಿದ್ದಿತು. ಯು ಪಿ ಎ ಸರಕಾರ ಆಡಳಿತದಲ್ಲಿದ್ದ 2005-06 ರಿಂದ 2013-14 ವರೆಗಿನ ಅರ್ಥಿಕ ವರ್ಷಗಳಲ್ಲಿ ಒಟ್ಟಾರೆಯಾಗಿ ೩೬.೫ ಲಕ್ಷ ಕೋಟಿ ಗಳಷ್ಟು ಔದ್ಯಮಿಕ ಸಾಲ ಮನ್ನಾ ಮಾಡಲಾಗಿದೆ.

ನಮ್ಮ ದೇಶದಲ್ಲಿ ಔದ್ಯೋಗಿಕ ಪ್ರಗತಿ, ನಿರುದ್ಯೋಗ ನಿವಾರಣೆ ಇತ್ಯಾದಿ ಸಾಧ್ಯವಾಗಿದ್ದರೆ outlookindia-how-much-can-we-forgo-to-india-inc-psainathಉದ್ದಿಮೆಗಳಿಗೆ ಸಬ್ಸಿಡಿ ಕೊಡುವುದನ್ನು ಸಮರ್ಥಸಿಕೊಳ್ಳಲು ಸಾಧ್ಯವಿದೆ. ಆದರೆ ಇವ್ಯಾವೂ ಸಾಧ್ಯವಾಗಿಲ್ಲ. ೨೦೧೧-೧೪ ವರೆಗಿನ ಮೂರು ಅರ್ಥಿಕ ವರ್ಷಗಳಲ್ಲಿ ಸುಮಾರು ೧.೬೭ ಲಕ್ಷ ಕೋಟಿಗಳಷ್ಟು ಹಣವನ್ನು ಬಂಗಾರ ಬೆಳ್ಳಿಗಳ ಮೇಲಿನ ಕಸ್ಟಮ್ ಸುಂಕ ಮನ್ನಾ ರೂಪದಲ್ಲಿ ಕೊಡಲಾಗಿದೆ. ಬೆಳ್ಳಿ ಬಂಗಾರ ಕೊಳ್ಳಲು ಸಬ್ಸಿಡಿ ಕೊಟ್ಟರೆ ಉದ್ಯೋಗಗಳು ಹುಟ್ಟಿಕೊಳ್ಳುವುದಿಲ್ಲ. ಇದರಿಂದ ಬಂಡವಾಳಶಾಹಿಗಳ ಹೊಟ್ಟೆ ಮಾತ್ರ ತುಂಬುತ್ತದೆ.

ತಳ ಸಮುದಾಯಗಳ ಜಮೀನು ಮತ್ತು ಬದುಕು ಕಿತ್ತುಕೊಂಡು ಜನರು ದುಡಿದ ಹಣವನ್ನು ಅವ್ಯಾಹತವಾಗಿ ಭಿಕ್ಷೆರೂಪದಲ್ಲಿ ಸ್ವೀಕರಿಸುತ್ತಿರುವ ಕಾರ್ಪೊರೇಟ್ ವರ್ಗಕ್ಕೆ ಜನರಿಗೆ ಈವರೆಗೆ ಯಾವುದೇ ಪಾಪ ಪ್ರಜ್ಞೆ ಕಾಡಿಲ್ಲ. ಕಾರ್ಪೊರೇಟ್ ವಲಯಗಳಲ್ಲಿ ತಳ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಈವರೆಗೆ ಯಾವ ಸರಕಾರಗಳಿಗೂ ಎನ್ನಿಸಿಲ್ಲ. ಜನರ ಹಣವನ್ನು ಉದ್ದಿಮೆದಾರರಿಗೆ ಸಬ್ಸಿಡಿ ರೂಪದಲ್ಲಿ ಕೊಡುವಾಗ ಯಾವ ಹಂತದಲ್ಲಾದರೂ ಸರಿ ದುಡಿಯುವ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಯಾವ ಸರಕಾರಗಳಿಗೂ ಎನ್ನಿಸಲಿಲ್ಲ.

ಒಂದು ಉದ್ದಿಮೆಯ ಒಡೆತನ ಹೇಗೆ ನಿರ್ಧರಿತವಾಗುತ್ತದೆ? ಆ ಉದ್ದಿಮೆಯಲ್ಲಿ ಯಾರ ಹಣ ಹೆಚ್ಚು ಹೂಡಿಕೆಯಾಗಿದೆಯೋ ಅವರೇ ಅದರ ಮಾಲೀಕರು. ಯಾವ ರೀತಿಯಲ್ಲಿ ನೋಡಿದರೂ ನಮ್ಮ ಉದ್ದಿಮೆಗಳಲ್ಲಿ ಸರಕಾರದ ಮತ್ತು ಸರಕಾರಿ ವಲಯದ ಬ್ಯಾಂಕುಗಳ ಹಣವೇ ಹೂಡಿಕೆಯಾಗಿದೆ. ನಮ್ಮ ಮನೆಗಳಿಗೆ ಹಾಕಿಸಿಕೊಳ್ಳುವ ಸೌರ ವಿದ್ಯುತ್ ಯಂತ್ರಗಳನ್ನು ಅಳವಡಿಸಲು Industrial_Mangaloreಹತ್ತು ಸಾವಿರ ಸಾಲ ಕೊಡುವಾಗ ಕೂಡ ಈ ಬ್ಯಾಂಕುಗಳು ನೂರಾರು ಪುಟಗಳಷ್ಟು ಕಾಗದದ ಮೇಲೆ ಏನೇನೂ ಬರೆಸಿದುಕೊಂಡು ನಮ್ಮ ಸಹಿ ಹಾಕಿಸುತ್ತವೆ. ಕಣ್ಣ ಮುಚ್ಚಿ ಸಹಿ ಹಾಕುವುದು ಬಿಟ್ಟರೆ ನಮ್ಮ ಬಳಿ ಯಾವುದೇ ಅನ್ಯ ಮಾರ್ಗವಿರುವುದಿಲ್ಲ. ಉದ್ದಿಮೆದಾರರಿಗೆ ಇಷ್ಟೊಂದು ಷರತ್ತು ಕರಾರುಗಳನ್ನು ವಿಧಿಸುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಈ ಉದ್ದಿಮೆಗಳಲ್ಲಿ ತಳಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಒಂದೇ ಒಂದು ಕರಾರು ವಿಧಿಸಿಲ್ಲ. ಪ್ರತಿ ಸಾಲ ಪತ್ರದಲ್ಲಿ ಒಂದೇ ಒಂದು ಇಂಥಹ ಕರಾರು ವಿಧಿಸಿದರೆ ಯಾವ ಸಾಲಗಾರ ಉದ್ದಿಮೆದಾರ ಅದನ್ನು ನಿರಾಕರಿಸಲು ಸಾಧ್ಯ? ಅದು ಹೋಗಲಿ ಪ್ರಾತಿನಿಧ್ಯ ಕಲ್ಪಿಸಿದರೆ ಬಡ್ಡಿ ದರದಲ್ಲಿ ವಿನಾಯತಿ ನೀಡುವ ಪ್ರಸ್ತಾವನೆ ಇದ್ದರೆ ಯಾವ ಉದ್ದಿಮೆದಾರ ಇಂದು ಪ್ರಾತಿನಿಧ್ಯ ಕಲ್ಪಿಸುವುದಿಲ್ಲ. ಒಬ್ಬ ಅಥವಾ ಕೆಲವೇ ದಲಿತ-ಹಿಂದುಳಿದ ಉದ್ದಿಮೆದಾರರಿಗೆ ನೇರ ಸಬ್ಸಿಡಿ ಕೊಡುವ ಬದಲು ಒಬ್ಬ ಉದ್ದಿಮೆದಾರ ಎಷ್ಟು ದಲಿತ- ಹಿಂದುಳಿದ ವರ್ಗದ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾನೆ/ಳೆ ಎಂಬುದರ ಮೇಲೆ ಸಬ್ಸಿಡಿ ನಿರ್ಧಾರಿತವಾದರೆ ಹೆಚ್ಚು ಸೂಕ್ತ.

ಒಟ್ಟಿನಲ್ಲಿ ಸರಕಾರ ಮನಸ್ಸು ಮಾಡಿದರೆ ಯಾವುದೇ ಕಾನೂನು ಸರ್ಜರಿ ಅಗತ್ಯವಿಲ್ಲದೇ ಸೂಕ್ತ ಪ್ರಾತಿನಿಧ್ಯ ಸುಲಭ ಸಾಧ್ಯ. ಇದ್ದ ಕಾನೂನಿಗೆ ಸಣ್ಣ ಪುಟ್ಟ ಬದಲಾವಣೆ ಮಾಡಿದರೆ ಹೆಚ್ಚಿನದನ್ನು ಕೆಲವೇ ವರ್ಷಗಳಲ್ಲಿ ಸಾಧಿಸಬಹುದು. ಪ್ರಾತಿನಿಧಿಕವಾಗಿ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸೋಣ:

  • ಒಂದು ಕಂಪನಿ ಮತ್ತು ಒಂದು ಸಹಕಾರ ಸಂಘಕ್ಕೆ ಅತ್ಯಂತ ಹತ್ತಿರದ ‘ಸಂಬಂದಿ’ ಎಂದು ಹೇಳಬಹುದು. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಾತಿನಿಧ್ಯದ ಸೂತ್ರವನ್ನು ಹೊಸದಾಗಿ ಹುಡುಕಿಕೊಳ್ಳುವ ಅಗತ್ಯವಿಲ್ಲ. ಸಹಕಾರ ಸಂಘಗಳಲ್ಲಿ ಕಲ್ಪಿಸಿದ ಮಹಿಳಾ ಮತ್ತು ದಲಿತ ಪ್ರಾತಿನಿಧ್ಯದ ಸೂತ್ರವನ್ನೇ ಕಂಪನಿಗಳಿಗೆ ವಿಸ್ತರಿಸಬಹುದು. ಸಹಕಾರ ಸಂಘಗಳಿಗೆ ಸಂಬಂದಿಸಿದ ಹೊಸ ಕಾನೂನನ್ನು ತಂದ ಸಂದರ್ಭದಲ್ಲಿ ಸಂವಿಧಾನದಲ್ಲಿ ಸೂಕ್ತ ಪರಿಷ್ಕರಣೆ ಮಾಡಲಾಯಿತು. ಇದೇ ಮಾದರಿಯನ್ನು ಕಂಪನಿವಲಯಕ್ಕೆ ವಿಸ್ತರಿಸುವುದು ಸುಲಭ ಸಾಧ್ಯ. ಹಾಗೆ ನೋಡಿದರೆ ಕಂಪನಿಗಳಿಗೆ ಹೋಲಿಸಿದರೆ ಸಾಮಾಜಿಕ ಮೇಲ್ವರ್ಗಗಳ ಹಿಡಿತದಲ್ಲಿರುವ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದೇ ಅತ್ಯಂತ ಕಷ್ಟಕರವಾಗಿತ್ತು. ಇದು ಸಾಧ್ಯವಾದ ಮೇಲೆ ಕಂಪನಿಗಳಲ್ಲಿ ಪ್ರಾತಿನಿಧ್ಯ ಸುಲಬವಾಗಿ ಸಾಧಿಸಬಹುದು.
  • ೨೦೧೩ ರಲ್ಲಿ ಬಂದ ಹೊಸ ಕಂಪನಿ ಕಾಯಿದೆಯ ಪ್ರಕಾರ ಐನೂರು ಕೋಟಿಗಳಷ್ಟು ನಿವ್ವಳ ಸಂಪತ್ತಿರುವ (net worth) ಅಥವಾ ಒಂದು ಸಾವಿರ ಕೋಟಿಗಳಷ್ಟು ವಾರ್ಷಿಕ ವಹಿವಾಟಿರುವ (turnover) ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ನಿವ್ವಳ ಆದಾಯದ ೨% ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಖರ್ಚು ಮಾಡಲೇಬೇಕು. ಇದೇ ಕಾನೂನಿನಡಿಯಲ್ಲಿ ತಮ್ಮ ಕಂಪನಿಗಳಲ್ಲಿ ಎಲ್ಲ ಹಂತದಲ್ಲೂ, ಅದರಲ್ಲೂ ಉನ್ನತ ಹುದ್ದೆಗಳಲ್ಲಿ ಸೂಕ್ತ ಸಾಮಾಜಿಕ ಪ್ರಾತಿನಿಧ್ಯ ಕಲ್ಪಿಸಿದ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿಯಿಂದ ಸೂಕ್ತ ವಿನಾಯತಿ ಕಲ್ಪಿಸಿದರೆ ಅನೇಕ ಕಂಪನಿಗಳು ತಾವೇ ಮುಂದೆ ಬಂದು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬಹುದು.
  • ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ನಡೆಯುವದು ರಿಸರ್ವ್ ಬ್ಯಾಂಕ್ ನೀಡುವ ಪರವಾನಗಿಯ ಮೇಲೆ. ಹೀಗಾಗಿ ಬ್ಯಾಂಕುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕುಗಳು ಎಂದು ವಿಂಗಡಣೆ ಮಾಡುವುದು ಅಸಮಂಜಸ. ೧೬-೧೨-೨೦೧೫ ರಲ್ಲಿ ಬಂದ ರಿಸರ್ವ್ ಬ್ಯಾಂಕ್ ಮತ್ತು ಜಯಂತಿಲಾಲ್ ಮಿಸ್ತ್ರಿ ಪ್ರಕರಣದಲ್ಲಿ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳೂ ಸಾರ್ವಜನಿಕ ಪ್ರಾಧಿಕಾರಗಳಾಗಿದ್ದು (Public Authority) ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಇರುವ ಯಾವುದೇ ಮಾಹಿತಿಯನ್ನು ಕೊಡಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಎಲ್ಲ ಬ್ಯಾಂಕುಗಳನ್ನೂ ಸಮಾನವಾಗಿ ನೋಡಬೇಕಿದೆ.
  • ವಿದ್ಯುತ್ ಉತ್ಪಾದನೆ, ನೀರಾವರಿ, ವಿಮಾನ ನಿಲ್ದಾಣ ನಿರ್ಮಾಣ, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಯೋಗದ (Private Public Partnership – PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ನಿಜಕ್ಕೂ ನೋಡಿದರೆ ಖಾಸಗಿ ಸಹಭಾಗಿತ್ವ ಇಲ್ಲಿ ನಗಣ್ಯ. ಯೋಜನೆಗಳಿಗೆ ಬೇಕಾದ ಭೂಮಿಯನ್ನು ಸರಕಾರವೇ ಕೊಡಮಾಡುತ್ತದೆ. ಈ ಯೋಜನೆಗಳಲ್ಲಿ ಭೂಮಿಯೇ ೨೦%-೩೦% ಮೂಲ ಬಂಡವಾಳವೆಂದು ತೋರಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕು ಮತ್ತು ಹಣಕಾಸು ಸಂಸ್ಥೆ ಗಳಿಂದ ೭೦%-೮೦% ರಷ್ಟು ಸಾಲ ಪಡೆಯಲಾಗುತ್ತದೆ. ಅದರೊಂದಿಗೆ ಈ ಯೋಜನೆಗಳಿಗೆ ಕಡಿಮೆ ಬಡ್ಡಿ ದರದ ಸಾಲ, ತೆರಿಗೆ ವಿನಾಯತಿ ರೂಪದಲ್ಲಿ ಪರೋಕ್ಷ ಮತ್ತು ಪ್ರತ್ಯಕ್ಷ ರೂಪದಲ್ಲಿ ಸಾಕಷ್ಟು ಹಣಕಾಸಿನ ನೆರವು ನೀಡುತ್ತದೆ. ಅನೇಕ ಬಾರಿ ಈ ಯೋಜನೆಗಳಿಗೆ ಸರಕಾರವೇ ಮುಖ್ಯ ಗ್ರಾಹಕನಾಗಿ ಹೆಚ್ಚಿನ ಬೆಂಬಲ ಬೆಲೆ ಕೊಟ್ಟು ಸಿದ್ಧ ವಸ್ತುಗಳನ್ನು ಖರೀದಿ ಮಾಡುತ್ತದೆ. ಉದಾಹರಣೆಗೆ ನವೀಕೃತ ಮೂಲಗಳ ವಿದ್ಯುತ್ ಉತ್ಪಾದನೆ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಸರಕಾರವೇ ತನ್ನ ಒಡೆತನದ ಕಂಪನಿಗಳ ಮೂಲಕ ಹೆಚ್ಚಿನ ಬೆಲೆಗೆ ಖರೀದಿಸುತ್ತದೆ, ಪವನ ವಿದ್ಯುತ್ ಮತ್ತು ಸೌರ ಶಕ್ತಿ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿಗೆ ಸಾಮಾನ್ಯವಾಗಿ ೩೦-೩೦% ಹೆಚ್ಚಿನ ದರ ನಿಗದಿಯಾಗಿರುತ್ತದೆ. ಇದನ್ನು ಸರಕಾರವೇ ತನ್ನ ಕಂಪನಿಗಳ ಮುಖೇನ ಖರೀದಿಸಿ ಯೋಜನೆಗಳಿಗೆ ೩೦ ವರ್ಷಗಳವರೆಗೆ ದರ ಖಾತರಿ ನೀಡುತ್ತದೆ. ಸರಕಾರಿ ಒಡೆತನದ ಸಂಸ್ಥೆಗಳೇ ಈ ಯೋಜನೆಗಳಿಗೆ ಬೇಕಾಗುವ ನಾನಾ ಪರವಾನಗಿಗಳನ್ನು ತೆಗೆಸಿಕೊಡುತ್ತವೆ. ಕಂದಾಯ ಇಲಾಖೆಯ ಸರಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನು ಉಪಯೋಗಿಸಿಕೊಂಡು ಇಷ್ಟೆಲ್ಲಾ ಸವಲತ್ತುಗಳನ್ನೂ ಪಡೆಯುವ ಈ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಿ ಉದ್ಯೋಗ ಮತ್ತು ಒಡೆತನಗಳಲ್ಲಿ ತಳ ಸಮುದಾಯಗಳು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ ಉದಾಹರಣೆಗಳೇ ಇಲ್ಲ.
  • ಸರಕಾರಿ ಮಾನ್ಯತೆ ಮತ್ತು ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ಶಿಕ್ಷಣವನ್ನು ಜಾರಿಗೊಳಿಸಿದ ಸರಕಾರ (ಕನಿಷ್ಟ ಕಾಗದದಲ್ಲಾದರೂ ಸರಿ) ಪ್ರಾತಿನಿಧ್ಯವನ್ನು ಜಾರಿಗೊಳಿಸದಿರುವುದಕ್ಕೆ ಯಾವ ಸಕಾರಣಗಳೂ ಇಲ್ಲ. ಪ್ರಾಥಮಿಕ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದಾದರೆ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ವಿದ್ಯಾ ಸಂಸ್ಥೆಗಳು ಸರಕಾರದ ಕೆಲಸವನ್ನೇ ಮಾಡುತ್ತಿವೆ. ಅದಕ್ಕಾಗಿ ಸರಕಾರ ಅನುದಾನವನ್ನೂ ಕೊಡುತ್ತಿದೆ ಎಂದಾದರೆ ಅವು ಸರಕಾರದ ನಿಯಂತ್ರಣಕ್ಕೆ ಒಳಪಡಲೇಬೇಕಲ್ಲವೇ?
  • ನಮ್ಮ ದೇಶದ ಮೂರು ಔದ್ಯೋಗಿಕ ಸಂಘಟನೆಗಳಾದ ಸಿಐಐ, ಫಿಕ್ಕಿ ಮತ್ತು ಅಸ್ಹೊಚೆಮ್ ಗಳು ಪ್ರಾತಿನಿಧ್ಯದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸುತ್ತಲೇ ತಾವೇ ಸ್ವಯಂ ಪ್ರೇರಿತವಾಗಿ ದಲಿತ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮುಂದೆ ಬಂದಿವೆ. ಪ್ರಾತಿನಿಧ್ಯವನ್ನು ಕಲ್ಪಿಸಲು ತಾವೇ ಸ್ವಯಂ ಪ್ರೇರಿತ ನಿಯಮಗಳನ್ನು (Voluntary Code of Conduct) ಮಾಡಿಕೊಂಡಿರುವುದಾಗಿ ಘೋಷಿಸಿ ೨೦೧೪ ಡಿಸೆಂಬರನಲ್ಲಿ ಅವುಗಳೇ ಕೆಲವು ಅಂಕಿ ಅಂಶಗಳ ಪ್ರಕಟಿಸಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿವೆ. ಅವರೇ ಘೋಶಿಸಿಕೊಂಡಂತೆ ದೇಶದ ಮೂರೂ ಬೃಹತ್ ಸಂಘಟನೆಗಳು ಸೇರಿ ದೇಶದ ಎಂಟು ಜಿಲ್ಲೆಗಳನ್ನು ದತ್ತು ಪಡೆದಿವೆ. ೬೭೬ ಜಿಲ್ಲೆಗಳಿರುವ ಈ ಬೃಹತ್ ದೇಶದಲ್ಲಿ ಏಳೆಂಟು ಜಿಲ್ಲೆಗಳಲ್ಲಿ ಕೆಲಸ ಮಾಡಿದರೆ ಸಾಕೇ? ಇನ್ನು ಉದ್ದಿಮೆಗಳಿಗೆ ಸ್ವಯಂ ನಿಯಂತ್ರಣ ಸಾಧ್ಯವಾಗಿರುತ್ತಿದ್ದರೆ ನಮ್ಮ ದೇಶದಲ್ಲಿ ಕಾನೂನು ಕಟ್ಟಳೆಗಳು ಬೇಕಿತ್ತೇ? ಉದ್ದಿಮೆಗಳು ಸ್ವಯಂ ಪ್ರೇರಣೆಯಿಂದ ಸರಿಯಾದ ಸಮಯದಲ್ಲಿ ಕಾನೂನು ರೀತ್ಯಾ ತೆರಿಗೆ, ಸಾಲಪಾವತಿ ಮತ್ತು ವಿದ್ಯುತ್ ದರ ಕಟ್ಟಿದ್ದರೆ ನಮ್ಮ ದೇಶ ಇಂದು ಅಮೇರಿಕಾವನ್ನೂ ಮೀರಿಸುತ್ತಿತ್ತು. ಹೀಗಾಗಿ ಪ್ರಾತಿನಿಧ್ಯದ ವಿಚಾರದಲ್ಲಿ ಸ್ವಯಂ ನಿಯಂತ್ರಣದಿಂದ ಸಾರ್ವಜನಿಕ ನಿಯಂತ್ರಣಕ್ಕೆ ನಾವು ಸಾಗಬೇಕಿದೆ.
  • ಮಠಮಾನ್ಯಗಳಿಗೆ ಸಾಕಷ್ಟು ಸರಕಾರಿ ಅನುದಾನ ಸಂದಿದೆ. ಧರ್ಮಬೇದವಿಲ್ಲದೆ ಸರಕಾರದ ಹಣ / ಅನುದಾನ ಪಡೆಯುತ್ತಿರುವ ಎಲ್ಲ ಜಾತಿ ಧರ್ಮಗಳ ಮಠ- ಮದರಸ- ಇಗರ್ಜಿಗಳಲ್ಲಿ ಮತ್ತು ಮುಖ್ಯವಾಗಿ ಅವರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸಬೇಕಿದೆ. ಮಠಗಳನ್ನು ನಡೆಸುವುದು ಧಾರ್ಮಿಕ ಕಾರ್ಯ ಅದರಲ್ಲಿ ಸರಕಾರದ ಹಸ್ತಕ್ಷೇಪವಿರಬಾರದು ಎಂಬುದು ದಿಟ. ಆದರೆ ಮಠಮಾನ್ಯಗಳು ಲಾಭಕ್ಕಾಗಿ ನಡೆಸುವ ಸಂಸ್ಥೆಗಳನ್ನು ಇತರ ವಾಣಿಜ್ಯ ಸಂಸ್ಥೆಗಳ ಜೊತೆಯಲ್ಲಿಯೇ ಪರಿಗಣಿಸಬೇಕಾಗುತ್ತದೆ. ತಮ್ಮ ಧರ್ಮದ ಮೂಲ ಆಶಯ ಸಮಾನತೆ ಎಂದು ಸಾರುವ ಧಾರ್ಮಿಕ ಮುಖಂಡರು ಧಾರ್ಮಿಕ ಸಂಸ್ಥೆಗಳು ನಡೆಸುವ ವಾಣಿಜ್ಯ ಚಟುವಟಿಕೆಗಳಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದನ್ನು ಸ್ವಾಗತಿಸಬೇಕಿದೆ. ಸಾಚಾರ್ ಆಯೋಗದ ಶಿಫಾರಸ್ಸನ್ನು ಮೊದಲ್ಗೊಂಡು ಮುಸ್ಲಿಂ ಸಮುದಾಯದ ಸಂಸ್ಥೆಗಳಲ್ಲಿ ವರದಿಯಲ್ಲಿ ತಿಳಿಸಿರುವ ಅಶ್ರಫ್, ಅಜ್ಲಫ಼್ ಮತ್ತು ಅರ್ಜಲ್ ಸಮುದಾಯಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಮಾಡಿರುವ ಪ್ರಸ್ತಾವನೆಗಳನ್ನು ಮುಸ್ಲಿಂ ಸಮುದಾಯದ ನಡೆಸುತ್ತಿರುವ ಸಂಸ್ಥೆಗಳಲ್ಲೇ ಮೊದಲಿಗೆ ಜಾರಿಗೆ ತರಬೇಕಿದೆ. ಹಾಗೆಯೇ ದಲಿತ ಕ್ರೈಸ್ತರ ವಿಚಾರದಲ್ಲಿ ಕ್ರೈಸ್ತ ಧರ್ಮದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಬೇಕಿದೆ.
  • ಇಂದು ಎಲ್ಲ ಕ್ಷೇತ್ರಗಳಿಗಿಂತ ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರ ಸಂಬಂಧವಾಗಿ ಇದೇ ಲೇಖಕ ಬರೆದ “ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ” ಎಂಬ ಲೇಖನದ ಕೆಲ ಅಂಶಗಳನ್ನು ಇಲ್ಲಿ ಗಮನಿಸಬಹುದು:

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ Supreme Courtಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ?

ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. ಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು. ೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ. ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ: ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ? ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್,ಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ. ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ. ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ.

ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು ಅಂಬೇಡ್ಕರ್ ಪಟವಿದೆ! ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ. ೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?”

*******

ವಿಷಯದ ವ್ಯಾಪ್ತಿ ಅಗಾಧವಾಗಿರುವ ಕಾರಣ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಚರ್ಚಿಸಲಾಗಿದೆ. ಇದು ಕೇವಲ ಚರ್ಚೆಗೆ ಅನುವಾಗುವ ರೀತಿಯಲ್ಲಿನ ಒಂದು ಪ್ರಾಥಮಿಕ ಪ್ರಯತ್ನ ಮಾತ್ರ. ಇಲ್ಲಿರುವ ಸಲಹೆಗಳು ಕಾರ್ಯಸಾಧುವೇ ಅಲ್ಲವೇ ಎಂಬುದು ವಿಸ್ತ್ರತ ಚರ್ಚೆಗೆ ಒಳಪಡಬೇಕಾದ ವಿಚಾರ.

ಸಾಮಾಜಿಕ ಪ್ರಾತಿನಿಧ್ಯದ ಜೊತೆಯಲ್ಲೇ ಚರ್ಚೆಗೆ ಒಳಪಡಬೇಕಾದ ವಿಚಾರ ಅನುಷ್ಥಾನದ್ದು. ಇಂದು ಸರಕಾರಿ ವಲಯದಲ್ಲೇ ಬ್ಯಾಕ್ ಲಾಗ್ ಸಮಸ್ಯೆ ಬೃಹತ್ತಾಗಿ ಬೆಳೆದು ನಿಂತಿರುವಾಗ ಸರ್ಕಾರೇತರ ವಲಯಗಳಲ್ಲಿ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಅನುಷ್ಥಾನಗೊಳಿಸಬಹುದೇ? ಸಮಸ್ಯೆಗಳು ಮತ್ತು ಸವಾಲುಗಳು ಸಾಕಷ್ಟಿವೆ. ಸರಕಾರೇತರ ವಲಯದಲ್ಲಿ ಅರ್ಥಿಕ ಹಿಂಜರಿತ, ಲಾಭ ಹೆಚ್ಚಿಸುವ ಒತ್ತಡಗಳು, ಉದ್ಯೋಗ ಕಳೆದುಕೊಳ್ಳುವ ಭಯ, ಅಸಂಘಟಿತ ಕಾರ್ಮಿಕರ ಶೋಷಣೆ ಅತ್ಯಂತ ಹೆಚ್ಚಾಗಿದೆ. ವಿಶೇಷ ವಿತ್ತ ವಲಯಗಳಿಗೆ ಮತ್ತು ಸಾಫ್ಟ್ವೇರ್ ಕಂಪನಿಗಳಿಗೆ ಕಾರ್ಮಿಕ ಕಾನೂನುಗಳೂ ಸೇರಿದಂತೆ ದೇಶದ ಕಲ್ಯಾಣದ ಸದುದ್ದೇಶವುಳ್ಳ ಅನೇಕ ಕಾನೂನುಗಳು (Welfare Legislation) ಅನ್ವಯಿಸುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲವರ್ಗಗಳಿಗೆ ಸೇರಿದವರಿಗೆ ಸಹ ಇನ್ನೂ ನ್ಯಾಯ ದೊರೆತಿಲ್ಲ. ಅದರಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವನ್ನು ಅರಗಿಸಿಕೊಳ್ಳುವಷ್ಟು ನಮ್ಮ ಸಮಾಜ ಇನ್ನೂ ಬೆಳೆದಿಲ್ಲ ಎನ್ನುವುದು ಸತ್ಯವೇ.

ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಒಂದು ಆಯೋಗ ರಚಿಸುವ ಸರಕಾರಗಳು ಸರಕಾರೇತರ ವಲಯಗಳ ಪ್ರಾತಿನಿಧ್ಯದ ವಿಶ್ಲೇಷಣೆಗೆ ಯಾವುದೇ ಒಂದು ಆಯೋಗವನ್ನು ರಚಿಸದಿರುವುದು ವಿಷಾದನೀಯ. ರಾಜ್ಯ ಮತ್ತು ರಾಷ್ಟ್ರದ ಕಾನೂನು ಅಯೋಗಗಳೂ (Law Commissions) ಕೂಡ ಈ ಬಗ್ಗೆ ಕಣ್ಣು ಹರಿಸಿಲ್ಲ. ಸಧ್ಯದ ಸಂವಿಧಾನದ ಮತ್ತು ಕಾನೂನುಗಳ ಚೌಕಟ್ಟಿನಲ್ಲೇ ಅಥವಾ ಅವುಗಳನ್ನು ವಿಸ್ತರಿಸಿ ಪ್ರಾತಿನಿಧ್ಯವನ್ನು ಕಲ್ಪಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಸಾಗಬೇಕಿದೆ.

ಇಂಥಹ ಒಂದು ಪ್ರಾಮಾಣಿಕ ಪ್ರಯತ್ನ ನಮ್ಮ ರಾಜ್ಯದ ‘ಅಹಿಂದ’ ಸರಕಾರದಿಂದಲೇ ಪ್ರಾರಂಭವಾದರೆ ತುಂಬಾ ಸಂತೋಷ.

ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ


– ಶ್ರೀಧರ್ ಪ್ರಭು


ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾGautama-Buddhaಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ.  ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ.

ಬಿಹಾರ್ ರಾಜಕಾರಣದ ಹಿನ್ನೋಟ

ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು.

ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯjp-jayaprakash-narayan ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ.

ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ  ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ  ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ.

ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. devegowda-vpsingh-chandrashekar-gujralತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ  ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ.

ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ  ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ.

ಲಾಲೂ ಎಂಬ ಮಾಂತ್ರಿಕ

ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ lalu-sharad-biharಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು  ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ  ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು.

ನಿತೀಶ್ ಎಂಬ ಮೌನ ಸಾಧಕ

ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ lalu_nitishಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ  ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು.

ಕೇಂದ್ರದ ಕುರಿತ ಹತಾಶೆ    

ಮೂರನೆಯ ಕಾರಣ,  ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ bihar-modi-nitishಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು.

ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು.

ಕೋಮು ಭಾವನೆಗಳ ತಿರಸ್ಕಾರ

ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ bjp-bihar-election-amitshahಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ.

ಶರದ್ ಯಾದವ್ ಎಂಬ ಮುತ್ಸದ್ದಿ

ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು.

ಮಮತೆಯ ಕರೆಯೋಲೆ

ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ swabhimaan-rally_sonia-nitish-laluಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ  ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು.

ಕಾಂಗ್ರೆಸ್ ಪುನರುಜ್ಜೀವನ

ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ.

ಪ್ಯಾಕೇಜ್ ಮರೆಯದಿರಲಿ

ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ modi-in-biharಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ?

ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ.

ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು.

ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು.

ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ!

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-2


– ಶ್ರೀಧರ್ ಪ್ರಭು


ಕಾನ್ಶಿರಾಂ ಹುಟ್ಟಿದ್ದು ೧೫ ಮಾರ್ಚ್ ೧೯೩೪ ರಲ್ಲಿ ಪಂಜಾಬಿನ ರೂಪನಗರ ಜಿಲ್ಲೆಯ ಖವಾಸ್ಪುರ್ ಹೋಬಳಿಯ ಪಿಥಿಪುರ ಬಂಗ ಎಂಬ ಹಳ್ಳಿಯಲ್ಲಿ.

ಬಾಬು ಮಂಗು ರಾಮ ಚೌಧರಿ (೧೮೮೬-೧೯೮೦) ಎಂಬ ದಲಿತ ನಾಯಕ ೧೯೨೦ ರ ದಶಕದಲ್ಲಿ ಪಂಜಾಬಿನಲ್ಲಿ ’ಆದಿ-ಧರ್ಮ’ವೆಂಬ ಸಮಾನತೆಯ ಆಶಯವುಳ್ಳ ಚಳುವಳಿಯನ್ನು ಹುಟ್ಟುಹಾಕಿದರು. ಇಂದು ಹದಿನೈದನೆ ಶತಮಾನದ ಭಕ್ತಿ ಚಳುವಳಿಯ ಸಂತ ರಾಮದಾಸರ ಬೋಧನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಂಡು ವೈದಿಕ ಧರ್ಮದಲ್ಲಿನ ಕೊಳಕುಗಳನ್ನು ತೊಳೆಯುವ ಪ್ರಯತ್ನವಾಗಿತ್ತು. ಕಾನ್ಶಿರಾಂ ಅವರ ಕುಟುಂಬ ರವಿದಾಸರ ಪಂಥಕ್ಕೆ ಸೇರಿದ್ದು ನಂತರದಲ್ಲಿ ಆದಿ-ಧರ್ಮದ ಚಳವಳಿಗೆ ಸೇರಿಕೊಂಡಿತ್ತು.

೧೯೩೦ ರ ದಶಕ – ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಅವಧಿ
೧೯೩೦ ರ ದಶಕದ ಪಂಜಾಬಿನ ಸನ್ನಿವೇಶವನ್ನು ಗಮನಿಸಿ. ಇಂದಿನ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿರುವ ಪ್ರಾಂತ್ಯಗಳೆಲ್ಲವೂ ಸೇರಿದ – ಪಂಜಾಬ್ – ಇತಿಹಾಸದುದ್ದಕ್ಕೂ undivided-punjabಅನೇಕ ಸಾಮಾಜಿಕ ರಾಜಕೀಯ ಕ್ರಾಂತಿಗಳು, ಸಂಘರ್ಷಗಳು, ಆಕ್ರಮಣಗಳಿಗೆ ಸಾಕ್ಷಿಯಾದ ನಾಡು. ಇಲ್ಲಿ ಹರಿದ ಐದು ನದಿಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆ, ವೈದಿಕ ಧರ್ಮ, ಬೌದ್ಧ ಧರ್ಮ, ನಂತರದಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳಿಗೆ ತೊಟ್ಟಿಲಾಗಿದ್ದವು. ಫಲವತ್ತಾದ ಐದು ನದಿಗಳು ಹುಟ್ಟಿ ಹರಿಯುವ ಪಂಜಾಬಿನ ಉತ್ತರದಲ್ಲಿ ಹಿಮಾಲಯವಿದ್ದರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿ ಬರಡು ಮರುಭೂಮಿಯಿದೆ. ಹೀಗೆಯೇ ಒಂದು ಕಡೆ ಅತ್ಯಂತ ಕ್ರಾಂತಿಕಾರಿ ನಿಲುವಿನ ಭಕ್ತಿ ಪಂಥ, ಸಿಖ್ ಧರ್ಮ, (ಪಂಜಾಬಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ) ಆರ್ಯ ಸಮಾಜಗಳು ಹೇಗೆ ಪಂಜಾಬಿನಲ್ಲಿ ಹುಟ್ಟಿದವೋ ಅತ್ಯಂತ ವಿಷಮಪೂರಿತ ಧಾರ್ಮಿಕ ಮೂಲಭೂತವಾದವೂ ಇದೇ ನಾಡಿನಲ್ಲಿ ಬೆಳೆಯಿತು.ಎಲ್ಲ ರೀತಿಯ ಧಾರ್ಮಿಕ ಮತ್ತು ಜಾತಿ ವಿಷಮತೆಗಳ ಕುಲುಮೆಯಲ್ಲಿ ಬೆಂದ ಪಂಜಾಬಿಗೆ ಹಲವು ಕಾಲಮಾನಗಳಲ್ಲಿ ಹಲವು ಬಗೆಯ ನಂಜು ತಗುಲಿದೆ.

ಅವಿಭಜಿತ ಪಂಜಾಬಿನಲ್ಲಿ ೧೯೩೦ ರ ದಶಕದಲ್ಲಿ ಒಂದು ಕಡೆ ಉಗ್ರ ಮುಸ್ಲಿಂ ಮೂಲಭೂತವಾದ ದೈತ್ಯಾಕಾರವಾಗಿ ಬೆಳೆಯುತ್ತಿತ್ತು. ಒಂದು ಕಾಲದ ದೇಶಭಕ್ತ ಮಹಾಕವಿ ಅಲ್ಲಮಾ ಇಕ಼್ಬಾಲ್ ಇದೇ ದಶಕದಲ್ಲಿ ದೇಶ ವಿಭಜನೆಯ ಕೂಗು ಹಾಕಿದರು. ಅದರ ಮುಂದುವರಿಕೆಯ ಭಾಗವಾಗಿ ಜಿನ್ನಾ ಅತ್ಯಂತ ಪ್ರಗತಿಪರ ನಿಲುಮೆಯನ್ನು ತೊರೆದು ಒಬ್ಬ ಕೋಮುವಾದಿಯಾಗಿ ಬೆಳೆದದ್ದು ಪಂಜಾಬಿನಲ್ಲೇ. First_edition_of_Annihilation_of_Casteಇನ್ನೊಂದೆಡೆ ಪಂಜಾಬಿನ ಯುವ ಜನತೆ ಅತ್ಯುಗ್ರ ಹಿಂದೂ ಮೂಲಭೂತವಾದದ ಕಡೆ ಹೆಜ್ಜೆ ಹಾಕತೊಡಗಿದ್ದರು. ಹಿಂದೂ ಧರ್ಮದ ಐಕ್ಯತೆಯ ಉದ್ದೇಶ ದಿಂದ ಸ್ಥಾಪಿತವಾದ ಆರ್ಯ ಸಮಾಜ ಒಂದು ಉಗ್ರ ಧಾರ್ಮಿಕ ಸಂಘಟನೆಯ ಸ್ವರೂಪ ಪಡೆದಿತ್ತು. ಈ ಆರ್ಯ ಸಮಾಜದ ಭಾಗವಾಗಿದ್ದ ‘ಜಾತ್ – ಪಾತ್ ತೊಡಕ್ ಮಂಡಲ’ ದ ಯುವಕರು ಸಂಘಟಿಸಿದ್ದ ಸಭೆಯೊಂದರಲ್ಲಿ ಬಾಬಾ ಸಾಹೇಬರನ್ನು ಆಹ್ವಾನಿಸಿದ್ದು ನಂತರದಲ್ಲಿ ವಾಚನವಾಗದ ಅವರ ಭಾಷಣ “ಜಾತಿವಿನಾಶ” (Annihilation of Caste) ಪ್ರಬಂಧದ ಸ್ವರೂಪದಲ್ಲಿ ಹೊರಬಂದದ್ದು, ಪೂನ ಒಪ್ಪಂದವಾದದ್ದು ಈ ದಶಕದಲ್ಲಿಯೇ. ಹಾಗೆಯೇ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ನೇಣುಗಂಬವೆರಿದ್ದೂ ಇದೇ ದಶಕದಲ್ಲಿ. ಒಟ್ಟಿನಲ್ಲಿ ಕಾನ್ಶಿರಾಂ ಹುಟ್ಟಿದ ಕಳೆದ ಶತಮಾನದ ಮೂವತ್ತರ ದಶಕ ಭಾರತವು ನಾನಾ ರೀತಿಯ ಕ್ರಾಂತಿ ಕುಲುಮೆಯಲ್ಲಿ ಕುದ್ದ ಅವಧಿ.

ಅಗಲಿದ ಯುಗ ಪ್ರವರ್ತಕ
೧೯೩೬ ರಲ್ಲಿ ಬಾಬಾ ಸಾಹೇಬ್ ‘ಸ್ವತಂತ್ರ ಕಾರ್ಮಿಕರ ಪಕ್ಷ’ (Indepedent Labour Party) ಎಂಬ ಪಕ್ಷವನ್ನು ಹುಟ್ಟು ಹಾಕಿದರೂ ಅದು ಯಶಸ್ಸು ಕಂಡಿರಲಿಲ್ಲ. ಚೆನ್ನೈ ನಲ್ಲಿ ೧೯೪೪ ರ ಸೆಪ್ಟೆಂಬರ್ ೨೪ ರಂದು ಬಾಬಾಸಾಹೇಬ್ ಒಂದು ಐತಿಹಾಸಿಕ ಕರೆ ನೀಡಿ “ನಮ್ಮ ಅಂತಿಮ ಗುರಿ ಈ ದೇಶವನ್ನು ಅಳುವುದು” ಎಂದು ಘೋಷಿಸಿದ್ದರು. ರಾಜಕೀಯ ಸ್ವಾತಂತ್ರ್ಯ ಬಂದ ನಲವತ್ತರ ದಶಕವು ಸಂದು ಐವತ್ತರ ದಶದ ಅಂಚಿಗೆ ಭಾರತವು ಬಂದು ನಿಂತಾಗ ಬಾಬಾ ಸಾಹೇಬ್ ದೇಶದ ಮೊದಲ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಗಳಾದರು. ನಂತರದಲ್ಲಿ ಸೆಪ್ಟೆಂಬರ್ ೨೯, ೧೯೫೧ರಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಚಾರದಲ್ಲಿ ತಮ್ಮದೇ ಮಂತ್ರಿಮಂಡಲದ ಸಹೋದ್ಯೋಗಿಗಳು ಅಸಹಕಾರ ತೋರಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಇತ್ತರು. Young_Ambedkar೧೯೫೬ ರ ಅಂಚಿಗೆ ಬಾಬಾ ಸಾಹೇಬರನ್ನು ಕಳೆದುಕೊಂಡ ದಲಿತ ಚಳುವಳಿ ಬಹುತೇಕವಾಗಿ ಅನಾಥವಾಗಿತ್ತು.

೩ ಅಕ್ಟೋಬರ್ ೧೯೫೭ ರಲ್ಲಿ ಬಾಬಾ ಸಾಹೇಬರ ಆಶಯಗಳನ್ನು ಹೊತ್ತ ರಿಪಬ್ಲಿಕನ್ ಪಾರ್ಟಿ ಸ್ಥಾಪನೆಯಾಯಿತು. ಒಂದೇ ವರ್ಷದಲ್ಲಿ ಒಟ್ಟಾರೆ ತಳಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಬೇಕಿದ್ದ ಈ ಪಕ್ಷ ಕೇವಲ ಮಹಾರಾಷ್ಟ್ರದ ಮಹರ್ ಸಮುದಾಯದ ಒಂದು ಪಕ್ಷವಾಗಿ ಪರಿವರ್ತನೆಯಾಯಿತು.

ಹೊಸ ಯುಗ ಪ್ರವರ್ತಕನೊಬ್ಬನ ಜನನ:
ಕಾನ್ಶಿರಾಂರ ತಂದೆಯ ತಂದೆ ತಾತ ಮೊದಲನೇ ಮಹಾ ಯುದ್ಧದಲ್ಲಿ ಸೇನಾ ಸೇವೆ ಸಲ್ಲಿಸಿದ್ದರು. ಅವರ ಪರಿವಾರದಲ್ಲಿ ಅವರ ತಂದೆಯವರನ್ನು ಬಿಟ್ಟು ಬಹುತೇಕ ಹಿರಿಯರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಇನ್ನು ಅವರ ಪರಿವಾರ ಬಹು ಹಿಂದೆ ಸಿಖ್ ಧರ್ಮಕ್ಕೆ ಸೇರಿದ್ದ ಕಾರಣ ಬಹುತೇಕ ದಲಿತ ಕುಟುಂಬಗಳ ಮೇಲೆ ಜರುಗುವಷ್ಟು ಪ್ರಮಾಣದ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಕ್ರೌರ್ಯ ಅವರನ್ನು ತಟ್ಟಿರಲಿಲ್ಲ.

ರೂಪನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಕಾನ್ಶಿರಾಂ ೧೯೫೫ ರಲ್ಲಿ ಇಂದಿನ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನನಲ್ಲಿನ ಸರ್ವೇ ಆಫ್ ಇಂಡಿಯಾ ಸೇರಿಕೊಂಡರು. ಯೌವನದಲ್ಲಿ ಕಾನ್ಶಿರಾಂರನ್ನು ದೇಹದಾಢ್ಯದಲ್ಲಿ ಮೀರಿಸಿದವರೇ ಇರಲಿಲ್ಲ. ಡೆಹ್ರಾಡೂನ್ ನಲ್ಲಿ ನಡೆಯುತ್ತಿದ್ದ ಅನೇಕ ಸೈಕಲ್ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಡೆಹ್ರಾಡೂನ್ ಸುತ್ತಮುತ್ತಲಿನ ಕೆಮ್ಟಿ ಜಲಪಾತ, ಮಸ್ಸೂರಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮುಖಾಂತರವೇ ಸಂಚರಿಸಿದ್ದರು. ಡೆಹ್ರಾಡೂನ್ನಲ್ಲಿ ಶುರುವಾದ ಅವರ ಸೈಕಲ್ ಯಾತ್ರೆ ಅವರ ಜೀವನದಾದ್ಯಂತ ಮುಂದುವರೆದಿತ್ತು.

೧೯೫೬ ರ ಡಿಸೆಂಬರ್ ೭ ರಂದು ಶುಕ್ರವಾರ ಕಾನ್ಶಿರಾಂ ಎಂದಿನಂತೆ ತಮ್ಮ ಕಚೇರಿಗೆ ಹೋದರು. ಅಲ್ಲಿ ತಮ್ಮ ಒಬ್ಬ ಸಹೋದ್ಯೋಗಿ ಪರಶುರಾಮ್ ಅಂದು ಊಟ ತಂದಿರಲಿಲ್ಲ. ತಮ್ಮ ಊಟವನ್ನು ಹಂಚಿಕೊಳ್ಳಲು ಕಾನ್ಶಿರಾಂ ಅವರನ್ನು ಕೇಳಿಕೊಂಡರು. ತುಂಬಾ ದುಃಖ ಮತ್ತು ಬೇಸರದಲ್ಲಿದ್ದ ಈ ಸಹೋದ್ಯೋಗಿ ಅಂದು ತಾವು ಉಪವಾಸವಿರುವುದಾಗಿ ತಿಳಿಸಿದರು. ಅದಕ್ಕೆ ಕಾರಣ ವಿಚಾರಿಸಿದಾಗ ಪರಶುರಾಮ್ ‘ನೆನ್ನೆ ದಿನ ಬಾಬಾಸಾಹೇಬ್ ಮಹಾ ಪರಿನಿಬ್ಬಾಣ ಹೊಂದಿದ್ದಕ್ಕೆ ನಾನು ಶೋಕಾಚರಣೆಯಲ್ಲಿದ್ದೇನೆ’ ಎಂದು ತಿಳಿಸಿದರು.

ಅದೇ ಮೊದಲ ಬಾರಿ ಕಾನ್ಶಿರಾಂ ಬಾಬಾಸಾಹೇಬ ಮತ್ತವರ ಮಹತಿಯನ್ನು ಕುರಿತು ಅರಿತದ್ದು. ತಕ್ಷಣವೇ ಕಾನ್ಶಿರಾಂ ಪರಶುರಾಮರಿಂದ ಬಾಬಾಸಾಹೇಬರ ಪಟವೊಂದನ್ನು ಪಡೆದು ತಮ್ಮ ಕೋಣೆಯಲ್ಲಿ ಹಾಕಿಕೊಳ್ಳುತ್ತಾರೆ. ಹಾಗೆಯೇ ತುಂಬಾ ಅಂದಿನ ದಿನಗಳಲ್ಲಿ ದುರ್ಲಭವಾಗಿದ್ದ ಬಾಬಾಸಾಹೇಬರ ಬರಹಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಅಂದಿನಿಂದಲೇ ಶುರುವಾದ ದಮನಿತರ ಕುರಿತ ಕಾಳಜಿ ಮತ್ತು ತಮ್ಮ ಗುರಿಯನ್ನು ತಲುಪಲು ಬೇಕಿರುವ ಶ್ರದ್ಧೆಯನ್ನು ಕಾನ್ಶಿರಾಂ ತಮ್ಮ ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬಂದರು.

ಕಾನ್ಶಿರಾಂ ಪುಣೆಯಲ್ಲಿರುವಾಗ ಬಾಬಾಸಾಹೇಬರ ಬಹುತೇಕ ಪ್ರಬಂಧ ಮತ್ತು ಲೇಖನಗಳನ್ನು ಓದಿಕೊಂಡರು. ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಬಾಬಾಸಾಹೇಬರ ‘ಅನಿಹಿಲೇಶನ್ ಆಫ್ ಕಾಸ್ಟ (“Annihilation of Caste”). ಈ ಪ್ರೌಢ ಪ್ರಬಂಧವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ಓದಿಕೊಂಡರು. ಹೀಗಿರುವಾಗ ೧೯೬೫ ರ ಆರಂಭದಲ್ಲಿ ಕೇಂದ್ರ ಸರಕಾರ ತನ್ನ ರಜಾ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಣೆ ಹೊರಡಿಸಿತು. ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ರದ್ದುಗೊಳಿಸಿ ತಿಲಕ ಜಯಂತಿಗೆ ರಜಾ ಘೋಷಿಸಿ ದೀಪಾವಳಿಗೆ ಒಂದು ದಿನ ಜಾಸ್ತಿ ರಜೆ ಕೊಡಲಾಗಿತ್ತು. kanshiramಇದನ್ನು ಪ್ರತಿಭಟಿಸಿ ರಾಜಸ್ಥಾನದ ದಲಿತ ಉದ್ಯೋಗಿ ದೀನಾ ಭಾನ ಎಂಬುವವರು ಅಂದಿನ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಿದರು. ದೀನಾರನ್ನು ಕೇಂದ್ರ ಸರಕಾರದ ಸೇವೆಯಿಂದ ಸಸ್ಪೆಂಡ್ ಮಾಡಲಾಯಿತು.

ಇದನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಚಳುವಳಿಯನ್ನು ಸಂಘಟಿಸಿದ ಕಾನ್ಶಿರಾಂ ದೀನಾ ಭಾನರಿಗೆ ಕಾನೂನು ನೆರವನ್ನೂ ಒದಗಿಸಿ ಕೊಡುತ್ತಾರೆ. ರಾಷ್ಟ್ರವ್ಯಾಪಿ ಚಳವಳಿಗೆ ಮಂಡಿಯೂರಿದ ಸರಕಾರ ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ಮರುಸ್ಥಾಪನೆ ಮಾಡಿತು; ಹಾಗೆಯೇ ದೀನಾ ಭಾನರನ್ನೂ ಕೆಲಸಕ್ಕೆ ಸೇರಿಸಿಕೊಂಡಿತು. ಈ ಸಂಘಟಿತ ಹೋರಾಟದಿಂದ ಪ್ರೇರಣೆಗೊಂಡ ಮನ್ಯವರರು ೧೯೬೫ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಸಾರ್ವಜನಿಕ ಜೀವನಕ್ಕೆ ಧುಮುಕುತ್ತಾರೆ.

ಅಂದು ಆವರು ತೊಟ್ಟ ಪ್ರತಿಜ್ಞೆ: “I will never get married, I will never acquire any property, I will never visit my home, I will devote and dedicate the rest of my life to achieve the goals of Phule-Ambedkar movement.” (“ನಾನೆಂದೂ ಮದುವೆಯಾಗುವುದಿಲ್ಲ, ನಾನೆಂದಿಗೂ ಅಸ್ತಿಯನ್ನು ಸಂಪಾದಿಸುವುದಿಲ್ಲ, ನನ್ನ ಮನೆಗೆ ಎಂದಿಗೂ ಹೋಗುವುದಿಲ್ಲ, ನನ್ನ ಸಂಪೂರ್ಣ ಜೀವನವನ್ನು ಫುಲೆ-ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಡುತ್ತೇನೆ.”)

(ಮುಂದುವರೆಯುತ್ತದೆ…)