Category Archives: ಶ್ರೀಧರ್ ಪ್ರಭು

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1


– ಶ್ರೀಧರ್ ಪ್ರಭು


ಪುಣ್ಯನಗರಿಯಲ್ಲೊಂದು ಒಪ್ಪಂದ

ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ.

ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು.

ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು.

ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು.

ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು!

ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, mayawati_kashiramಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು!

ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು!

ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ kanshiramಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು!

ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು.

ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು.

ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. kanshiram-mayawatiಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ.

ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ.

ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ Young_Ambedkarಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ.

ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.

(ಮುಂದುವರೆಯುವುದು…)

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 3


– ಶ್ರೀಧರ್ ಪ್ರಭು


ತಳಸಮುದಾಯ ಮತ್ತು ಮಹಿಳಾ ಶಿಕ್ಷಣದಿಂದ ರಾಷ್ಟ್ರೀಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಟಿಳಕರು ಬಲವಾಗಿ ನಂಬಿದ್ದರು. ಆದ್ದರಿಂದಲೇ ಅವರು ಫುಲೆ-ಅಂಬೇಡ್ಕರರ ಶೂದ್ರ-ದಲಿತ ಮತ್ತು ಮಹಿಳಾ ಪರ ಹೋರಾಟಗಳು ರಾಷ್ಟ್ರ ವಿರೋಧಿ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದರು. ಒಂದಷ್ಟು ವರ್ಷಗಳ ಕಾಲ ರಾಜಕೀಯ ಅಧಿಕಾರ ಕಳೆದುಕೊಂಡ ವೈದಿಕ ವರ್ಗಗಳು ಮದ್ದು ಗುಂಡು ಸಹಿತ ಹೋರಾಟ ಮಾಡಿದ್ದನ್ನು ಸಮರ್ಥಿಸಿಕೊಂಡ ಟಿಳಕರಿಗೆ ಸಾವಿರಾರು ವರ್ಷಗಳಿಂದ ಪಶುಗಳಿಗಿಂತ ತುಚ್ಚ ಜೀವನ ನಡೆಸಿದ ಶೂದ್ರ-ದಲಿತರ ಸಾತ್ವಿಕ ಅಕ್ರೋಶದಲ್ಲಿ ಸತ್ವ ಕಾಣಿಸಲಿಲ್ಲ.

ಹೇಗೆ ಟಿಳಕರು ಸಾಮಾಜಿಕ ಕ್ರಾಂತಿಯನ್ನು ವಿರೋಧಿಸಿದರೋ ಹಾಗೆಯೇ ಕಾರ್ಮಿಕ ಚಳುವಳಿಗಳನ್ನೂ ವಿರೋಧಿಸಿದರು. ೧೯೦೮ ರ ಮುಂಬೈ ಗಿರಣಿ ಕಾರ್ಮಿಕರ ಹೋರಾಟ ಬಿಟ್ಟರೆ ೧೯೨೦ ರ ವರೆಗೂ ಯಾವ ಕಾರ್ಮಿಕ ಹೋರಾಟಗಳನ್ನೂ ಟಿಳಕರು ಸಂಘಟಿಸಲಿಲ್ಲ. ೧೯೦೯ ರಿಂದ ೧೯೨೦ ರ ವರೆಗೆ ಕಲ್ಲು ಎಸೆದರೆ ಹೋಗಿ ಬೀಳುವಷ್ಟು ದೂರದಲ್ಲಿದ್ದ ಮುಂಬೈಗೆ ಒಂದೆರಡು ಬಾರಿ ಮಾತ್ರ ಹೋಗಿದ್ದು ಬಿಟ್ಟರೆ, bal-gangadhar-tilakಕಾರ್ಮಿಕ ಸಂಘರ್ಷಗಳ ಕುಲುಮೆಯಾಗಿದ್ದ ಮುಂಬೈ ಕಾರ್ಖಾನೆಗಳು, ಕಾರ್ಮಿಕ ಬಸ್ತಿಗಳಿಗೆ ಟಿಳಕರು ಹೋಗಲೇ ಇಲ್ಲ. ನವೆಂಬರ್ ೧೯೧೯ ನವೆಂಬರ್ ನಲ್ಲಿ ಒಮ್ಮೆ ತೀರ ಮುಲಾಜಿಗೆ ಬಿದ್ದು ಮುಂಬೈ ಗಿರಣಿ ಕಾರ್ಮಿಕರ ಪ್ರತಿಭಟನಾ ಸಭೆಗೆ ಹೋದ ಟಿಳಕರು ಕಾರ್ಮಿಕರಿಗೆ ಉಪದೇಶ ನೀಡಿದ್ದೇನು ಗೊತ್ತೇ: ‘ಭಾರತದ ಬಂಡವಾಳಶಾಹಿಗಳ ಮೇಲೆ ಮುಷ್ಕರ ಮಾಡಬೇಡಿ. ಭಾರತದಲ್ಲಿ ಎಲ್ಲರೂ ಕಾರ್ಮಿಕರೆ, ಬ್ರಿಟಿಷರು ಮಾತ್ರ ಮಾಲೀಕರು’. ಹೀಗೆ ಕಾರ್ಮಿಕ ಚಳುವಳಿಗಳನ್ನು ಎಂದೂ ಅರ್ಥಿಕ ಸಮತೆಯ ಸಾಧನೆಗೆ ಟಿಳಕರು ಬಳಸಲೇ ಇಲ್ಲ.

ಇನ್ನು ಸ್ವತಃ ಲೆನಿನ್ ತಿಳಕರನ್ನು ಹೊಗಳಿದ್ದು ನೋಡಿದ್ದೇವೆ, ಆದರೆ ಟಿಳಕರು ೧೯೨೦ ರಲ್ಲಿ ಲೆನಿನ್ ಬಗ್ಗೆ ‘ ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಹೆದರಿಕೆ’ ಎಂಬ ಅಗ್ರ ಭಾಷಣದಲ್ಲಿ ಏನು ಹೇಳಿದರು ಎಂಬುದನ್ನೂ (ಅವರ ಜೀವನ ಚರಿತ್ರೆ ಬರೆದ ಧನಂಜಯ ಕೀರ್ ಪುಸ್ತಕದಲ್ಲಿ ದಾಖಲಾದಂತೆ) ಕೇಳೋಣ:
“ರಷ್ಯದ ಬೊಲ್ಶೆವಿಕ್ ಕ್ರಾಂತಿಯ ಬಗ್ಗೆ ಭಾರತವೇನೂ ಹೆದರಬೇಕಿಲ್ಲ. ರಷ್ಯಾದ ಕ್ರಾಂತಿ ಸಮಾನತೆಗಾಗಿ ನಡೆದ ಸಮರ. ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಸಮಾನತೆ ನೆಲೆಸಿದೆ. ನಮ್ಮ ವೇದಾಂತದ ಪ್ರಕಾರ ಎಲ್ಲರೂ ಆತ್ಮ ಸ್ವರೂಪಿಗಳು. ಹಾಗಾಗಿ ನಮ್ಮ ದೇಶಕ್ಕೆ ಬೇಕಿರುವುದು ರಷ್ಯನ್ ಕ್ರಾಂತಿ ಸ್ಥಾಪಿಸುವ ಅರ್ಥಿಕ ಸಮಾನತೆಯಲ್ಲ ಅಧ್ಯಾತ್ಮಿಕ ಸಮಾನತೆ – ಅದು ನಮ್ಮ ವೇದಾಂತದಲ್ಲೇ ಇದೆ”

ತಿಳಕರ ಸಮಕಾಲೀನ ಆದರೆ ಅವರ ಪಟ್ಟ ಶಿಷ್ಯ ಜೋಸೆಫ್ ಬ್ಯಾಪ್ಟಿಸ್ಟ ಎಂಬ ಗೋವಾ ಮೂಲದ ಮುಂಬೈನ ಪ್ರಖ್ಯಾತ ವಕೀಲರು ಆಗ ಕೆಲಕಾಲ ಕಾರ್ಮಿಕರ ಅಗ್ರ ಸಂಘಟನೆಯ AITUC ನ ಆಗ್ರ ಮುಖಂಡರಾಗಿದ್ದರು. ಇವರ ಸಹಾಯದಿಂದ ಟಿಳಕರು ಭಾರತದ ಪ್ರತಿನಿಧಿಯಾಗಿ ಲಂಡನ್ ನ ಲೇಬರ್ ಪಾರ್ಟಿಗೆ ಭೇಟಿ ಇತ್ತು ತಾವೊಬ್ಬ ಮಹಾನ್ ಕಾರ್ಮಿಕ ಸಂಘಟಕ ಎಂದು ವಿದೇಶಗಳಲ್ಲಿ ಬಿಂಬಿಸಿಕೊಂಡ ಟಿಳಕರು ಸ್ವದೇಶದಲ್ಲಿ ಮಾತ್ರ ಕಾರ್ಮಿಕರಿಗೆ ಭಾರತದ ಬಂಡವಾಳಶಾಹಿಗಳ ವಿರುದ್ದ ಹೋರಾಟ ಮಾಡಬೇಡಿ ಎಂಬ ಹಿತವಚನ ನೀಡುತ್ತಾರೆ. ಇಷ್ಟಾದರೂ ನಮ್ಮ ದೇಶದ ಕಮ್ಯುನಿಸ್ಟ್ ಚಳುವಳಿಗಳು ತಿಲಕರನ್ನು ಒಬ್ಬ ಕ್ರಾಂತಿಕಾರಿ ಎಂದು ಬಿಂಬಿಸುತ್ತವೆ. ಇದೇ ನೈಜ ದುರಂತ.

ಇಲ್ಲೊಂದು ಮಾತು ಹೇಳಲೇ ಬೇಕು. ಬಾಬಾಸಾಹೇಬ್ ರನ್ನು ಕಮ್ಯುನಿಸ್ಟರು ಮತ್ತು ತಿಳಕರಂಥ ತಥಾಕಥಿತ ಕ್ರಾಂತಿಕಾರಿಗಳು lokmanya-tilakಸಮಾನವಾಗಿ ವಿರೋಧಿಸುತ್ತಿದ್ದರು. ಆದರೆ ಇವೆರಡೂ ವಿರೋಧಗಳಲ್ಲಿ ಒಂದು ಗಮನಾರ್ಹ ವ್ಯತ್ಯಾಸವಿದೆ. ಕಮ್ಯುನಿಸ್ಟರು ಸಮಗ್ರ ಪರಿವರ್ತನೆ ಬರಲು ಅರ್ಥಿಕ ಪರಿವರ್ತನೆ ಆಗಲೇ ಬೇಕು ಎಂದು ನಂಬಿ ಬೇರೆಲ್ಲ ಹೋರಾಟಗಳನ್ನು ವಿರೋಧಿಸಿದರು. ಇದು ಶೂದ್ರ ಅಥವಾ ದಲಿತರ ಮೇಲಿನ ದ್ವೇಷದಿಂದಲ್ಲ; ಬದಲಿಗೆ ಭಾರತದಲ್ಲಿ ಜಾತಿಯೇ ವರ್ಗ ಎಂದು ಗ್ರಹಿಸದೇ ಹೋದ ಬಹುದೊಡ್ಡ ಐತಿಹಾಸಿಕ ತಪ್ಪಿನಿಂದಾಗಿ. ಭಾರತದ ಮಟ್ಟಿಗೆ ದಲಿತರೇ ಸರ್ವಹರಾ (proletariat) ಎಂದು ಕಮ್ಯುನಿಸಂ ಒಪ್ಪಲಿಲ್ಲ.ಇದು ಅಧುನಿಕ ಭಾರತದ ದೊಡ್ಡ ದುರಂತ. ಆದರೆ ಮಾರ್ಕ್ಸ್ ವಾದಿ ಚಳುವಳಿಯಿಂದಾಗಿಯೇ ದಲಿತ ಶೂದ್ರರು ನಗರ ಪ್ರದೇಶಗಳಲ್ಲಿ ಅಷ್ಟಿಷ್ಟು ಅರ್ಥಿಕ ಸ್ವಾವಲಂಬನೆ ಸಾಧಿಸಿದರು ಮತ್ತು ಹಳ್ಳಿಗಳಲ್ಲಿ ಭೂಸುಧಾರಣೆಗಳಾದವು. ಆದರೆ ತಿಳಕರಂಥವರು ಅತ್ತ ಅರ್ಥಿಕ ಸಮಾನತೆಗೂ ವಿರೋಧಿ ಇತ್ತ ಸಾಮಾಜಿಕ ಸಮಾನತೆಗೂ ವೈರಿ. ಅತ್ತ ವೈದಿಕಶಾಹಿಗಳನ್ನೂ ಸಂಘಟಿಸಿದರು; ಇತ್ತ ಸ್ವದೇಶಿ ಚಾಕುವಿನಿಂದ ಘಾಸಿಗೊಂಡ ಕಾರ್ಮಿಕರನ್ನು ವೇದಾಂತದ ಕಾಲ್ಪನಿಕ ಮುಲಾಮು ಹಚ್ಚಿ ಮೆತ್ತಗೆ ಮಾಡಿದರು.

ಇನ್ನು ಈ ದೇಶದಲ್ಲಿ ದೇಶಭಕ್ತಿಯನ್ನು ಮೂರ್ತಿ ಪೂಜೆಗೆ ಸಮೀಕರಿಸಿ ಕಡೆಗೆ ಭಕ್ತಿಯ ಹೆಸರಿನಲ್ಲಿ ಕೋಮು ಉನ್ಮಾದಕ್ಕೇರಿಸಿದ ಖ್ಯಾತಿ ಸೇರಬೇಕಿರುವುದು ತಿಳಕರಿಗೆ. ಇದನ್ನು ನಂತರದಲ್ಲಿ ಗಾಂಧಿ ಮತ್ತು ಇನ್ನೂ ವಿಕೃತ ಸ್ವರೂಪದಲ್ಲಿ ಹಿಂದೂ ಕೋಮುವಾದಿಗಳು ಬಳಸಿಕೊಂಡರು. MKGandhiಸಾರ್ವಜನಿಕ ಮೂರ್ತಿಪೂಜೆ ದೇಶವೆಂದರೆ ಒಂದು ಧರ್ಮದ ಜಹಗೀರು ಎಂದು ಜನರ ತಲೆಯಲ್ಲಿ ಬಿತ್ತಿದ್ದು ಟಿಳಕರ ಸಾಧನೆ. ಇವರ ಸಾರ್ವಜನಿಕ ದೇಶಭಕ್ತಿಯನ್ನು ಒಂದು ಇಂದ ಮೂರ್ತಿಪೂಜೆಯನ್ನಾಗಿ ಪರಿವರ್ತಿಸಿದ್ದರಿಂದ ಇಡೀ ದೇಶದಲ್ಲಿ ಯೋಚಿಸಿ ರಾಜಕಾರಣ ಮಾಡುವ ಸಂಸ್ಕೃತಿಯೇ ನಾಶವಾಯಿತು. ಒಂದು ಕಡೆ ಪುರೋಹಿತ ಶಾಹಿಗಳಿಂದ ಇನ್ನೊಂದೆಡೆ ಬ್ರಿಟೀಷರಿಂದ ಬೆಂದು ಬಳಲಿದ್ದ ನಗರ ಪ್ರದೇಶಗಳ ಶೂದ್ರ-ದಲಿತ ಕಾರ್ಮಿಕರಿಗೆ ಸಮಗ್ರ ಕ್ರಾಂತಿಯ ಬದಲು ತಿಳಕರ ಮೂರ್ತಿಪೂಜೆಯ ಭ್ರಾಂತಿಯೇ ಹೆಚ್ಚು ರುಚಿಸಿತು. ಫುಲೆ-ಅಂಬೇಡ್ಕರ್, ಮಾರ್ಕ್ಸ್ – ಲೆನಿನ್ ರನ್ನು ಅನುಸರಿಸಬೇಕಾದರೆ ಅವರ ಚಿಂತನೆಯ ಅಧ್ಯಯನ ಅತ್ಯಗತ್ಯ. ಆದರೆ ಮೂರ್ತಿ ಪೂಜೆಗೆ ಇದೇನೂ ಬೇಡ; ಬರಿಯ ಉನ್ಮಾದವೇ ಸಾಕು. ಹೀಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸುವ ಕಲೆಯನ್ನು ಟಿಳಕರು ಕಲಿಸಿಕೊಟ್ಟರು.

ಶೂದ್ರ-ದಲಿತ-ರೈತ-ಕಾರ್ಮಿಕರ ಹೋರಾಟಗಳ ಹಾದಿ ತಪ್ಪಿಸಿದ ಟಿಳಕರು ಕಾಂಗ್ರೆಸ್ ನಲ್ಲಿ ಸಂಪೂರ್ಣ ಅರಿಶಿಣ ಕುಂಕುಮದ ಸಂಸ್ಕೃತಿ ಹರಡಿ ಬಿಟ್ಟರು.

ಕೊನೆಯದಾಗಿ ತಿಳಕರ ಸಂಪೂರ್ಣ ವ್ಯಕ್ತಿತ್ವವನ್ನು ಬಿಚ್ಚಿಡುವ ಇದೊಂದು ಘಟನೆಯನ್ನು ಹೇಳಲೇ ಬೇಕು. ೧೯೮೧ ರಲ್ಲಿ ಟಿಳಕರು ಒಂದು ಅತ್ಯಂತ ಘನಂದಾರಿ ಹೋರಾಟವನ್ನು ಸಂಘಟಿಸಿದರು. ಆ ವರ್ಷ ಬ್ರಿಟಿಷ್ ಸರಕಾರ ‘Age of Consent Act ಎಂಬ ಒಂದು ಕಾನೂನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ ಹನ್ನೆರಡು ವರ್ಷಕ್ಕೆ ಕಡಿಮೆಯಿರುವ ಯಾವ ಮಗುವಿನ ಮೇಲೆ ಜೊತೆ ಲೈಂಗಿಕ ಸಂಪರ್ಕ ಮಾಡಿದರೂ ಅದು ಬಲಾತ್ಕಾರಕ್ಕೆ ಸಮ ಮತ್ತು ಶಿಕ್ಷಾರ್ಹ ಅಪರಾದ ಎಂಬ ಕಾನೂನು ಜಾರಿಗೆ ತಂದಿತು.

ಈ ಕಾನೂನು ಬರಲು ಒಂದು ಬಲವಾದ ಕಾರಣವಿತ್ತು ೧೮೮೯ ರಲ್ಲಿ ಫುಲ್ ಮಣಿ ಎಂಬ ಹನ್ನೊಂದು ವರ್ಷದ ಹಸುಳೆಯ ಮೇಲೆ child-rapeಹರಿ ಮೋಹನ ಮೈತಿ ಎಂಬ ೩೫ ವರ್ಷದ ವ್ಯಕ್ತಿ ಲೈಂಗಿಕ ಸಂಪರ್ಕ ಮಾಡಿದ ಪರಿಣಾಮ ರಕ್ತಪಾತವಾಗಿ ಆ ಹೆಣ್ಣು ಮಗು ಸತ್ತು ಹೋಯಿತು. ಈ ಹರಿ ಮೋಹನನಿಗೆ ಅತ್ಯಾಚಾರ ಶಿಕ್ಷೆ ಆಗಲೇ ಇಲ್ಲ; ಏಕೆಂದರೆ ಈ ಮಗು ಅವನ ಪತ್ನಿ!

ಇದನ್ನು ಕಂಡ ವಿದೇಶಿ ಸರಕಾರ ಹೆಣ್ಣು ಮಗುವಿನ ಪ್ರಾಣ ರಕ್ಷಣೆ ಮಾಡುವ ಈ ಕಾನೂನು ತಂದರೆ ನಮ್ಮ ಸ್ವದೇಶೀ ಟಿಳಕರು ಇದರ ವಿರುದ್ಧ ಅತ್ಯಂತ ಭಯಂಕರ ಹೋರಾಟ ಸಂಘಟಿಸಿಬಿಟ್ಟರು. ಇದು ನಮ್ಮ ಹಿಂದೂ ಧಾರ್ಮಿಕ ವಿಚಾರಗಳಲ್ಲಿ ಮೂಗು ತೋರಿಸುವ ಪ್ರಯತ್ನ ಎಂದು ತಮ್ಮ ಪತ್ರಿಕೆಗಳಲ್ಲಿ ಗುಡುಗಿ ಸಂಪಾದಕೀಯ ಬರೆದದ್ದಲ್ಲದೇ, ಸಮಾನ ಮನಸ್ಕ ಧರ್ಮಭೀರುಗಳ ಜೊತೆ ದೇಶವ್ಯಾಪಿ ಬೀದಿ ಹೋರಾಟವನ್ನು ಸಂಘಟಿಸಿದರು.

ಹನ್ನೊಂದು ವರ್ಷದ ಹಸುಳೆಯ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿ ಹೋರಾಟ ಮಾಡಿದ ಟಿಳಕರು ಒಬ್ಬ ಲೋಕಮಾನ್ಯ; ಆದರೆ ಮಹಿಳೆಯರ ಅಸ್ತಿ ಹಕ್ಕನ್ನು ಕಾಪಾಡಬೇಕು ಎಂದು ಸಂಪುಟಕ್ಕೆ ರಾಜಿನಾಮೆ ಇತ್ತ ಬಾಬಾಸಾಹೇಬ್ ಒಬ್ಬ ಬ್ರಿಟಿಷ್ ಏಜೆಂಟ್!

ಮೇರಾ ಭಾರತ್ ಮಹಾನ್!

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book

ಭಾರತದ ಕುಲತಿಲಕರ ಪರಾಮರ್ಶೆ : ಭಾಗ 2


– ಶ್ರೀಧರ್ ಪ್ರಭು


 

‘ಸ್ವರಾಜ್ಯ’ ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’

೧೮೯೪ ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು. ೧೯೦೧ ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಾರೆ. ಹಾಗೆ ಕೊಲ್ಹಾಪುರದ ಆಸ್ಥಾನ ಪುರೋಹಿತ ನಾರಾಯಣ ರಾಜ್ಯೋಪಧ್ಯಾಯನಿಗೆ ಬುಲಾವು ಹೋಯಿತು. ಆ ಹೊತ್ತಿಗೆ ಈ ವೈದಿಕ ಮಹಾಶಯರು ತಮ್ಮ ವೇಶ್ಯೆಯ ಮನೆಯಲ್ಲಿದ್ದರಂತೆ. ಹಾಗಾಗಿ ಸ್ನಾನ ಸಂಧ್ಯಾವಂದನೆ ಏನೂ ಆಗಿರಲಿಲ್ಲ. ಅದರೂ ಈ ರಾಜ ಪುರೋಹಿತರು ಸೀದಾ ನದೀ ತೀರಕ್ಕೆ ಬಂದು ಮಂತ್ರೋಚ್ಚಾರಣೆ ಶುರು ಮಾಡಿದರು. ಅಷ್ಟು ಹೊತ್ತಿಗೆ ಅಲ್ಲಿದ್ದ ಇನ್ನೊಬ್ಬ ಪುರೋಹಿತ ರಾಜಾರಾಮ ಶಾಸ್ತ್ತ್ರಿ ಪುರೋಹಿತರು ಈ ಮಂತ್ರೋಚ್ಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದರು. bal-gangadhar-tilakಆಗ ಈ ನಾರಾಯಣ ರಾಜ್ಯೋಪಾಧ್ಯಾಯ ಯಾವುದೇ ಅಂಜಿಕೆ ಅಳುಕಿಲ್ಲದೇ:

‘ನೋಡಿ ಸ್ವಾಮಿ, ನಿಮ್ಮ ಈ ಮಹಾರಾಜರು ಶೂದ್ರ ವರ್ಣಕ್ಕೆ ಸೇರಿದ ಕುಣಬಿ ಜಾತಿಯವರು. ಇಂತಹ ಕೀಳು ಜಾತಿಯ ಜನರ ಸಮ್ಮುಖದಲ್ಲಿ ಸ್ನಾನವನ್ನು ಮಾಡಿ ಹೇಳುವ ವೇದೋಕ್ತ ಮಂತ್ರಗಳನ್ನು ಪಠಿಸಬೇಕಿಲ್ಲ. ನಾನು ಪುರಾಣೊಕ್ತ ಮಂತ್ರಗಳನ್ನಷ್ಟೇ ಹೇಳಲು ಸಾಧ್ಯ. ನೀವು ಏನಾದರೂ ಮಾಡಿಕೊಳ್ಳಿ’ ಎಂದು ಮಹಾರಾಜರ ಸಮ್ಮುಖದಲ್ಲೇ ಧಮಕಿ ಹಾಕಿದ.

ಸಹಜವಾಗಿ ಮಹಾರಾಜರು ರಾಜನಿಂದೆಯ ಆರೋಪದ ಮೇಲೆ ಇವನನ್ನು ಗಲ್ಲಿಗೆರಿಸಬಹುದಿತ್ತು. ಆದರೆ ಶಾಹು ಮಹಾರಾಜರದ್ದು ರಾಜರ್ಷಿ ಸ್ವರೂಪದ ವ್ಯಕ್ತಿತ್ವ. ವಿಶೇಷವೆಂದರೆ ಮಹಾರಾಜರು ತಮ್ಮರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಸಂಘ ಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ್ದರಲ್ಲದೇ, ಅತ್ಯಂತ ಪ್ರಗತಿಪರ ಕಾರ್ಮಿಕ ಕಾನೂನುಗಳನ್ನೂ ಸಹ ಜಾರಿಮಾಡಿ ದ್ದರು. ಮಹಾರಾಜರಲ್ಲಿನ ಅಪಾರ ಅನುಕಂಪ ಜಾಗೃತವಾಗಿ, ಈ ‘ಪೊಂಗ’ ಪಂಡಿತನಿಗೆ ಮೂರು ತಿಂಗಳ ಸಮಯಾವಕಾಶ ನೀಡಿ ವೇದೋಕ್ತ ಮಂತ್ರೋಚ್ಚಾರಣೆ ಮಾಡುವ ರಾಜಾಜ್ಞೆ ಹೊರಡಿಸಿದರು. ಮೂರು ತಿಂಗಳು ಎಂದು ರಾಜಾಜ್ಞೆ ಇದ್ದರೂ ಮೂರು ತಿಂಗಳ ನಂತರವೂ ಮಹಾರಾಜರು ಈ ‘ಪಂಡಿತ’ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೆಲಸದಿಂದ ವಜಾ ಕೂಡ ಮಾಡಲಿಲ್ಲ. ಒಂಭತ್ತು ತಿಂಗಳು ಕಳೆದವು, ಈ ಪುರೋಹಿತ ಬಗ್ಗಲಿಲ್ಲವೆಂದರೆ ಅವನ ದುರಹಂಕಾರ ಯಾವ ಮಟ್ಟದಲ್ಲಿತ್ತು ಗಮನಿಸಿ!

೭ ನವೆಂಬೆರ್, ೧೯೦೧, ೮ ನವೆಂಬರ್, ೧೯೦೧ ಮತ್ತು ಕೊನೆಯದಾಗಿ ೧ ಮೇ, ೨೦೦೨ ಹೀಗೆ ಮೂರು ಕಾರಣ ಕೇಳಿ ನೋಟಿಸು ಜಾರಿ ಮಾದಲಾದವು. ಈ ಪಂಡಿತ ಅವ್ಯಾವ ನೋಟಿಸುಗಳಿಗೂ ಜಗ್ಗಲಿಲ್ಲ. ಕೊನೆಗೆ ಕಾಟಾಚಾರಕ್ಕೆಂದು ಒಂದು ಉತ್ತರ ರವಾನಿಸಿದ “ನೀವು ಕ್ಷತ್ರಿಯರೇ ಅಲ್ಲ; ಆದ್ದರಿಂದ ನಿಮ್ಮ ಸಮ್ಮುಖದಲ್ಲಿ ನಾನು ವೇದಮಂತ್ರ ಗಳನ್ನ ಪಠಿಸಲಾರೆ.”

ಸಹಜವಾಗಿಯೇ ಎಲ್ಲ ಸ್ವಾಭಾವಿಕ ನ್ಯಾಯದ (natural justice) ನ ಪ್ರಕಾರ ಸುಧಾರಣೆಗೆ ಸಾಕಷ್ಟು ಅವಕಾಶ ಕೊಟ್ಟಿದ್ದರೂ ಸುಧಾರಿಸದೆ ಮತ್ತು ರಾಜರನ್ನೇ ಜಾತಿಯ ಹೆಸರಿನಲ್ಲಿ ಅಪಮಾನಿಸಿದ ಪಂಡಿತನಿಗೆ ಕೆಲಸದಿಂದ ವಜಾ ಆಯಿತು. ಲೆಕ್ಕಕ್ಕೆ ಸೆರೆಮನೆಗೆ ಕಳುಹಿಸಬೇಕಿತ್ತು. ಆದರೆ ಮಹಾರಾಜರು ತಮ್ಮ ಅಪಾರ ಅನುಕಂಪದ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಿಲ್ಲ.

ಬ್ರಹ್ಮಾಂಡ ಅಸಂತುಷ್ಟಿಯ ಜನಕ

ಆಗ ಶುರುವಾಯಿತು ನೋಡಿ ಬ್ರಾಹ್ಮಣರ ಮುಕ್ತ ವಿದ್ರೋಹ!

ಈ ಮುಕ್ತ ವಿದ್ರೋಹಕ್ಕೆ ಕಿಚ್ಚು ಹಚ್ಚಿದ್ದು ತಿಲಕರು ಕೇಸರಿಯಲ್ಲಿ ೨೬ ನೇ ಅಕ್ಟೋಬರ್ ೧೯೦೨ ಮತ್ತು ೩೦ ನೆ ಅಕ್ಟೋಬರ್ ೧೯೦೨ ರಲ್ಲಿ ಬರೆದ ‘ವೇದೋಕ್ತ ಮತ್ತು ಮರಾಠಿಗರ ಕರ್ಮ’ ವೆಂಬ ಒಕ್ಕಣೆಯ ಸರಣಿ ಸಂಪಾದಕೀಯ ಲೇಖನಗಳು. ಈ ಸಂಪಾದಕೀಯಗಳಲ್ಲಿ ಟಿಳಕರು ಹೇಳುತ್ತಾರೆ: ‘ಅಂಗ್ಲ ಶಿಕ್ಷಣದಿಂದ ಪ್ರಭಾವದಿಂದ ಈ ಮರಾಠರ ತಲೆಗಳೆಲ್ಲ ಕೆಟ್ಟು ಹೋಗಿವೆ. ಈ ವೇದೋಕ್ತ ಮಂತ್ರಗಳು ಅಬ್ರಾಹ್ಮಣರ ಸಮಕ್ಷಮದಲ್ಲಿ ಉಚ್ಚರಿಸುವುದು ಅಕ್ಷಮ್ಯ ಅಪರಾಧ. lokmanya-tilakಈ ಶಿವಾಜಿ ಮಹಾರಾಜ ಗೋ-ಬ್ರಾಹ್ಮಣರ ಸೇವೆ ಮಾಡಿದಕ್ಕೋಸ್ಕರ ರಿಯಾಯತಿ ತೋರಿಸಿ ಬ್ರಾಹ್ಮಣರು ಮಂತ್ರೋಚ್ಚಾರ ಮಾಡಿದ್ದ ಮಾತ್ರಕ್ಕೆ ಇವರ ಜಾತಿ ಹೋಗುತ್ತದೆಯೇ? ಇನ್ನು ಬ್ರಾಹ್ಮಣರು ಶಿವಾಜಿಗೆ ಮಾಡಿದ ಉಪಕಾರವೇನು ಕಡಿಮೆಯೇ? ಶುದ್ರನಾದ ಶಿವಾಜಿಗೆ ಬ್ರಾಹ್ಮಣರು ಛತ್ರಪತಿ ಎಂದು ಪಟ್ಟ ಕಟ್ಟಿ ಕ್ಷತ್ರಿಯ ಪದವಿ ಕೊಡಿಸಿದರು. ಆದರೆ ಈಗಿನ ತಲೆ ತಿರುಗಿದ ಮರಾಠರು ಈ ಉಪಕಾರಕ್ಕೆಲ್ಲ ಅಪಾತ್ರರು’.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ತಿಲಕರು ಈ ಲೇಖನ ಬರೆದಾಗ ರಾಜ್ಯೋಪಾಧ್ಯಾಯ ವಜಾ ಆಗಿರಲಿಲ್ಲ (ಮೇಲಿನ ದಿನಾಂಕ ಗಳನ್ನು ಗಮನಿಸಿ). ಕೇವಲ ನೋಟಿಸು ಕೊಡಲಾಗಿತ್ತು. ಹೀಗಿದ್ದೂ ತಿಲಕರು ಶಿವಾಜಿಯ ವಂಶದವರನ್ನು ಮತ್ತು ಮಹಾರಾಜರನ್ನು ತಲೆ ಕೆಟ್ಟವರು ಎಂದು ಸಂಪಾದಕೀಯ ಬರೆದರು ಸಮಾಜದಲ್ಲಿ ಒಡಕು ಮೂಡಿಸಿದರು. ಈಗ ಹೇಳಿ ಯಾರು ಭಾರತದಲ್ಲಿ ಜಾತಿವಾದದ ಬೀಜ ನೆಟ್ಟಿದ್ದು?

ನೀವು ನಂಬಲಿಕ್ಕಿಲ್ಲ, ಈ ಪ್ರತಿಭಟನೆಯ ಕಾವು ಇಲ್ಲಿವರೆಗೂ ಇತ್ತೆಂದರೆ, ಶಾಹು ಮಹಾರಾಜರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು!

ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಬ್ರಿಟಿಷರ ಚಾಡಿ ಸೇವೆ

ಟಿಳಕರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್ ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ) ದ ಬಗ್ಗೆ ಚಾಡಿ ಚುಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್ ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನುಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್ ವರೆಗೂ ಹೊಗಿತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ ೧೯ ಫೆಬ್ರವರಿ ೧೯೦೩ ರಂದು ಅರ್ಜಿ ತಿರಸ್ಕರಿಸುತ್ತಾರೆ.

ಅದರೂ ಸ್ವರಾಜ್ಯ ಸಾಧನೆಯ ದೇಶಭಕ್ತರ ಸಿಟ್ಟು ತಣಿಯಲಿಲ್ಲ!

೧೯೦೫ ರಲ್ಲಿ ಒಟ್ಟು ಮೂರು ಅರ್ಜಿಗಳನ್ನು ಬ್ರಿಟಿಷ್ ಪ್ರಭುತ್ವದ ಪರಮೋಚ್ಛ ಅಧಿಕಾರಿ ಲಾರ್ಡ್ ಕರ್ಜನ್ ಗೆ ಕಳುಹಿಸುತ್ತಾರೆ. ಅಲ್ಲೂ ೫ ಜನವರಿ ೧೯೦೫ ರಲ್ಲಿ ಕ.ಬು. ಸೇವೆ ಯಾದ ಮೇಲೆ ತಿಲಕರಿಗೆ ಅಭಾವ ವೈರಾಗ್ಯ ಬಂದು ಕೊನೆಗೆ ಟಿಳಕರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರವೇ ಬ್ರಾಹ್ಮಣರು ಬೇರೆ ಗತ್ಯಂತರವಿಲ್ಲದೆ ಮಹಾರಾಜರ ಪಟ್ಟಾಭಿಷೇಕ ಮಾಡಲು ೧೯೦೫ ರಲ್ಲಿ ಅಣಿಯಾದರು. ಮಹಾರಾಜರು ಎಲ್ಲವನ್ನೂ ಕ್ಷಮಿಸಿ ಹೊಸ ಅಧ್ಯಾಯ ಬರೆಯಲು ತಯಾರಾದರು.

ಇಂದು ಇಂದಿಗೆ ನಾಳೆ ನಾಳೆಗೆ – ತ್ರಿಕಾಲ ಜ್ಞಾನಿ ತಿಲಕರು

ಆಗ ಮಹಾರಾಜರ ಆಸ್ಥಾನದಲ್ಲಿ ಒಬ್ಬ ಚತುರ ಅಧಿಕಾರಿ ಮತ್ತು ಸತ್ಯಶೋಧಕ ಸಮಾಜದ ನೇತಾರ ಭಾಸ್ಕರ ಜಾಧವರು ಈ ದೇಶದ ಶೂದ್ರ ಮತ್ತು ದಲಿತರ ಪರವಾಗಿ ಬ್ರಾಹ್ಮಣರ ಪರ ಕ್ರಾಂತಿಯ ಕಹಳೆ ಊದುತ್ತಿದ್ದ ರೂವಾರಿ ತಿಲಕರಿಗೆ ಒಂದು ಪ್ರಶ್ನೆ ಕೇಳಿದರು:

“ದೇಶದ ಅಂತಿಮ ಅಧಿಕಾರಿಯ ತೀರ್ಪು ಬಂದ ಮೇಲೆ ಮಹಾರಾಜರನ್ನು ಕ್ಷತ್ರಿಯರು ಎಂದು ಒಪ್ಪಿಕೊಳ್ಳುವುದರಲ್ಲಿ ಯಾರಿಗೂ ತಕರಾರು ಇರಲು ಸಾಧ್ಯವೇ ಇಲ್ಲ. ಶಾಹು ಮಹಾರಾಜರು ಕ್ಷತ್ರಿಯರು ಎಂದ ಮೇಲೆ ಮಹಾರಾಜರ ಸಹೋದರ ಬಾಪುಸಾಹೇಬ್ ಮಹಾರಾಜರನ್ನು ಕ್ಷತ್ರಿಯ ಎಂದು ನೀವು ಪರಿಗಣಿಸುತ್ತೀರಿ ತಾನೆ?’ ಎಂದು.

ಆಗ ಕೇಸರಿ ಪತ್ರಿಕೆಯ ತಮ್ಮ ಅಗ್ರ ಲೇಖನದಲ್ಲಿ ಮತ್ತೊಮ್ಮೆ ಬ್ರಹ್ಮ ಸಿಂಹ ತಿಲಕರು ಗುಡಿಗಿದರು: “ಮಹಾರಾಜರ ಸಹೋದರ ಬಾಪುಸಾಹೇಬ್ ಎಂದಿಗೂ ಶೂದ್ರನೆ! ಮಹಾರಾಜರನ್ನು ನಾವು ಕ್ಷತ್ರಿಯ ಎಂದು ಒಪ್ಪಿಕೊಂಡಿರುವುದು ಸಧ್ಯ ಅವರ ಪಟ್ಟಾಭಿಷೇಕ ನಡೆಯುತ್ತಿರುವ ಕಾರಣಕ್ಕಾಗಿ”

ಆಗ ಜಾಧವ್ ಒಂದು ಸರಳ ಪ್ರಶ್ನೆ ಕೇಳಿದರು ‘ ಸ್ವಾಮಿ ಲೊಕಮಾನ್ಯರೇ, ದೇಶ ಅಳುವವನು ಕ್ಷತ್ರಿಯ ಎಂದಾದರೆ, ನೂರಾರು ವರ್ಷ ನಮ್ಮ ದೇಶವನ್ನಾಳಿದ ಮುಸಲ್ಮಾನರು ಕ್ಷತ್ರಿಯರು ಎಂದು ನೀವು ಒಪ್ಪಿಕೊಳ್ಳುತ್ತೀರಾ? ಹಾಗೆಯೇ ಮುಂದೆ ಒಂದು ದಿನ ಒಬ್ಬ ಮುಸಲ್ಮಾನನಿಗೆ ಪಟ್ಟಾಭಿಷೇಕ ವಾದರೆ ಅವನೂ ನಿಮ್ಮ ಪ್ರಕಾರ ಕ್ಷತ್ರಿಯನೇ. ಆದರೆ ಬಾಪು ಸಾಹೇಬ್ ಮಹಾರಾಜ ಮಾತ್ರ ಕ್ಷತ್ರಿಯರಲ್ಲ, ಅಲ್ಲವೇ?”

ಆಗ ತ್ರಿಕಾಲ ಜ್ಞಾನಿ ತಿಲಕರು ಹೇಳುತ್ತಾರೆ: ‘ಹಿಂದಿನದು ಮುಗಿದ ಕಥೆ. ಅದನ್ನು ನೀವು ಅಂದು ಇದ್ದ ಬ್ರಾಹ್ಮಣರನ್ನು ಕೇಳಿ. ಮುಂದೆ ಎಂದಾದರು ಅಂಥಹ ಸಂದರ್ಭ ಬಂದರೆ ಆಗಿನ ಬ್ರಾಹ್ಮಣರು ಆಗ ಉತ್ತರ ನೀಡುತ್ತಾರೆ. ನಾವು ಇಂದಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದೇವೆ’

ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಎಂದಿಗೂ ಅಸ್ಪ್ರುಶ್ಯತೆ ಬಗ್ಗೆ ಚರ್ಚಿಸಲು ತಿಲಕರು ಅವಕಾಶ ಮಾಡಿಕೊಡಲಿಲ್ಲ. ಸಾಮಾಜಿಕ ಪರಿವರ್ತನೆ ಪ್ರಶ್ನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ತ್ಯಾಗ ಮಾಡಿದ ಶ್ರೇಯ ತಿಳಕರಿಗೆ ಸಲ್ಲಬೇಕು. ಇಂಥಹ ಮಹಾಪುರುಷರ ಸಾರಥ್ಯದ ಕಾಂಗ್ರೆಸ್ ಒಂದು ಪಕ್ಕಾ ಅಗ್ರಹಾರವಾಗಿತ್ತು. ತಿಳಕರ ಕಲ್ಪನೆಯ ಸ್ವರಾಜ್ಯ ಕೇವಲ ಸವರ್ಣೀಯ ಹಿಂದೂಗಳ, ಅದರಲ್ಲೂ ವೈದಿಕರ ಸ್ವರಾಜ್ಯವಾಗಿತ್ತು. ಅದರಲ್ಲಿ ದಲಿತ ಶೂದ್ರರಿಗೆ ಸವರ್ಣೀಯರ ಸೇವೆಯೇ ಮುಕ್ತಿಯಾಗಿತ್ತು.

ತಂದೆಗೆ ‘ತಕ್ಕನಲ್ಲದ’ ಮಗ

ಒಂದು ಕೊನೆಯ ಮಾತು. ತಿಳಕರ ಮಗ ಶ್ರೀಧರ ತಿಲಕ್ ತಮ್ಮ ತಂದೆಯ ಹಾದಿ ಹಿಡಿಯಲಿಲ್ಲ. ಅವರು ಬಾಬಾ ಸಾಹೇಬರನ್ನು ತಮ್ಮ ಸ್ವಂತ ಸೋದರನಂತೆ ಕಂಡರು. ಬಾಬಾ ಸಾಹೇಬರನ್ನು ದಲಿತರೇ ಸಂಪೂರ್ಣವಾಗಿ ಒಪ್ಪಿಕೊಂಡು ಸಾಮಾಜಿಕ ಚಳುವಳಿಗೆ ಬರದಿದ್ದ ದಿನಗಳಲ್ಲಿ ಪುಣೆಯ ಸಂಪ್ರದಾಯಸ್ಥರ ವಿರೋಧ ಕಟ್ಟಿಕೊಂಡು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆ ಗುರುತಿಸಿ ಕೊಂಡರು.

ಶ್ರೀಧರ ತಿಲಕ ಒಬ್ಬ ಅಪ್ಪಟ ಸಾಮಾಜಿಕ ಸಮಾನತೆಯ ಕಾಳಜಿ ಇದ್ದ ವ್ಯಕ್ತಿ ಯಾಗಿದ್ದರು. ಬಾಬಾ ಸಾಹೇಬರು ಸಮತಾ ಸೈನಿಕ ದಳ ವನ್ನು ಪ್ರಾರಂಭಿಸಲು ತಮ್ಮ ಸ್ವಂತ ಮನೆ ತಿಳಕ ವಾಡಾ ವನ್ನು ಈ ಶ್ರೀಧರ ತಿಲಕರು ಧಾರೆ ಎರೆದು ಅಂಬೇಡ್ಕರ್ ರಿಗೆ ಕೊಟ್ಟರು.

ವಯಕ್ತಿಕ ಕಾರಣಗಳಿಂದ ಶ್ರೀಧರ ತಿಲಕ್ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಯ ಚೀಟಿಯ ಒಂದು ಪ್ರತಿಯನ್ನು ಪುಣೆಯ ಜಿಲ್ಲಾಧಿಕಾರಿಗೆ ಕಳಿಸಿದ್ದರೆ ಇನ್ನೊಂದು ಪ್ರತಿಯನ್ನು ಶ್ರೀಧರ ತಿಲಕರು ಬಾಬಾ ಸಾಹೇಬರಿಗೆ ಕಳುಹಿಸಿ ಕೊಡುತ್ತಾರೆ. ತಿಳಕರ ಸಂಕುಚಿತತೆ ಮತ್ತು ಅವರ ಮಗನ ಉದಾತ್ತತೆ – ಎರಡನ್ನೂ ಇಂದು ಚರಿತ್ರೆ ಮರೆತು ಬಿಟ್ಟಿದೆ.

ಚಿತ್ರಾವತಿಗೆ ಮುನ್ನ

ಶಾಹು ಮಹಾರಾಜರನ್ನೇ ಕೋರ್ಟ್ ಕಚೇರಿಗೆ ಅಲೆಯಿಸಿದ ಬ್ರಹ್ಮ ಶಕ್ತಿ ಮತ್ತು ದೇಶ ಭಕ್ತಿ ಶಕ್ತಿ ಎಷ್ಟಿದ್ದೀತು ಲೆಕ್ಕ ಹಾಕಿ. ತಿಲಕರ ಬ್ರಿಟಿಷ್ ವಿರೋಧಕ್ಕೆ ಪ್ರಮುಖ ಕಾರಣ ಬ್ರಿಟಿಷರು ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟಿದ್ದೂ ಆಗಿತ್ತು.

ಅಂಬೇಡ್ಕರ್ ರನ್ನು ಬ್ರಿಟಿಷರ ಏಜೆಂಟ್ ಎಂದು ನಿಂದಿಸುವ ಶೌರಿ ತಿಲಕರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಂಕಟವಾಗುವುದು ಇತರ ತಥಾಕಥಿತ ಎಡ ಮತ್ತು ಪ್ರಗತಿಪರ ಇತಿಹಾಸಕಾರರೂ ತಿಳಕರ ಇನ್ನೊಂದು ಮುಖದ ಬಗ್ಗೆ ಮಾತನಾಡುವುದಿಲ್ಲ. ತಿಳಕರ ಮಹಿಳಾ ವಿರೋಧಿ ನಿಲುವುಗಳ ಬಗ್ಗೆ ಸ್ವತಹ ಒಬ್ಬ ಮಹಿಳೆ ಮತ್ತು ಅಭೂತಪೂರ್ವ ಇತಿಹಾಸಜ್ಞೆ ರೋಮಿಲ ಥಾಪರ್ ಬರೆಯಬೇಕಿತ್ತು. ತಾಯಿ ಸಾವಿತ್ರಿಯನ್ನೇ ಮರೆತ ನಾವು ತಿಳಕರ ಪೂಜೆ ಮಾಡುವುದರಲ್ಲಿ ವಿಶೇಷವೆನಿಲ್ಲ. ಆದರೆ ಡಾ.ಪರಿಮಳಾ ರಾವ್ ಎಂಬ ಯುವ ಚಿಂತಕಿ ‘Tilak`s Approach to Women`s Education and Emancipation’ ಎಂಬ ಅದ್ಭುತ ಪುಸ್ತಕ ಬರೆದು ತಿಳಕರ ನೈಜ ‘ಸಾಮಾಜಿಕ’ ನಿಲುಮೆಗಳನ್ನು ಸಾಕ್ಷಿ ಸಮೇತ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ದಲಿತ ಬಹುಜನರ ತಟ್ಟೆಯಲ್ಲಿ ನೊಣ ಹಾಕಿ ಅನ್ನ ಕಸಿಯುವ ಶೌರಿಗಳು (ತಾವು ಚಿತ್ರಾವತಿ ಬಿಡುವ ಮುನ್ನ), ತಮ್ಮ ತಟ್ಟೆಯಲ್ಲಿ ದೊಡ್ಡದೇನೋ ಬಿದ್ದಿರುವದನ್ನು ನೋಡಿಕೊಂಡು ಎತ್ತಿ ಪಕ್ಕಕ್ಕಿಟ್ಟರೆ ದೇಶಕ್ಕೆ ಮಹದುಪಕಾರವಾದೀತು.

(ಮುಂದುವರೆಯುತ್ತದೆ…)

ಭಾರತದ ಕುಲ ತಿಲಕರ ಪರಾಮರ್ಶೆ : ಭಾಗ 1


– ಶ್ರೀಧರ್ ಪ್ರಭು


 

“In spite of the verdict of the Jury, I maintain that I am innocent. There are higher powers that rule the destiny of men and nations and it may be the will of providence that the cause which I represent may prosper more by my suffering than my remaining free.”

(“ಜೂರಿಗಳ ತೀರ್ಮಾನವೇನೆ ಇರಲಿ, ನನ್ನ ಪ್ರಕಾರ ನಾನೊಬ್ಬ ನಿರಪರಾಧಿ. ಮಾನವರ ಮತ್ತು ದೇಶಗಳ ಭವಿಷ್ಯವನ್ನು ತೀರ್ಮಾನಿಸುವದು ಮಹಾನ್ ಶಕ್ತಿಗಳು. ನಾನು ನಂಬಿದ ಅದರ್ಶಗಳನ್ನು ಸಿದ್ದಿಸಲು, ನಾನು ಮುಕ್ತವಾಗಿ ಬದುಕುವುದಕ್ಕಿಂತ ಸಂಘರ್ಷ ಪಟ್ಟು ಬಂಧನದಲ್ಲಿರರುವುದರಿಂದಲೇ ಹೆಚ್ಚು ಸೂಕ್ತವೆಂದು ಆ ವಿಧಿಯೇ ತೀರ್ಮಾನಿಸಿರಬೇಕು.” )

ಬಾಂಬೆ ಹೈ ಕೋರ್ಟ್‌ನ ಹೃದಯ ಭಾಗದಲ್ಲಿರುವ ನ್ಯಾಯಂಗಣ ಕೊಠಡಿಯ ೪೬ ರ ಹೊರ ಪಾರ್ಶ್ವದಲ್ಲಿರುವ ಒಂದು ಆಕರ್ಷಕ ಫಲಕದ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಒಂದು ನ್ಯಾಯಾಲಯದಲ್ಲಿ ಒಬ್ಬ ಆರೋಪಿ ನೀಡಿದ ಹೇಳಿಕೆಗಳನ್ನು lokmanya-tilakಅದೇ ನ್ಯಾಯಾಲಯದ ಆವರಣದಲ್ಲಿ ಕೆತ್ತಿದ ಉದಾಹರಣೆ ಪ್ರಾಯಶಃ ಇಡೀ ವಿಶ್ವದಲ್ಲೇ ಇರಲಿಕ್ಕಿಲ್ಲ.

ಈ ವಾಕ್ಯಗಳನ್ನು ಹೇಳಿದ ರಾಷ್ಟ್ರೀಯ ಅಸಂತುಷ್ಟಿಯ ಜನಕ (Father of the Indian unrest), ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ, ಸ್ವರಾಜ್ಯವೇ ತನ್ನ ಜನ್ಮ ಸಿದ್ಧ ಹಕ್ಕೆಂದು ಸಾರಿದ ಲೋಕಮಾನ್ಯ ಬಾಳ ಗಂಗಾಧರ ತಿಲಕರು ಸರ್ವತ್ರ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾದವರು. ಅವರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತಾದ್ಯಂತ ಆಚರಿಸಲಾಗುತ್ತಿದೆ.

ಬಹುಷಃ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬಹು ಮುಖ್ಯವಾಗಿ ಸಂಘ ಪರಿವಾರದವರು ಮನ:ಪೂರ್ವಕವಾಗಿ ಮತ್ತು ಸಮಾನವಾಗಿ ಗೌರವಿಸುವ ಕೆಲವೇ ರಾಷ್ಟ್ರೀಯ ನಾಯಕರಲ್ಲಿ ತಿಲಕರೊಬ್ಬರು. ಕಾಂಗ್ರೆಸ್ ಮತ್ತು ಸಂಘ ಪರಿವಾರ ಅವರನ್ನು ಒಬ್ಬ ಅಪ್ಪಟ ರಾಷ್ಟ್ರವಾದಿಯಾಗಿ ಗೌರವಿಸಿದರೆ, ಕ್ರಾಂತಿಕಾರಿ ಮಾರ್ಗವನ್ನು ಬೆಂಬಲಿಸಿ, ೧೯೧೭ ರ ಸೊವಿಯಟ್ ಕ್ರಾಂತಿಯನ್ನು ಮತ್ತು ಅದರ ರೂವಾರಿ ಲೆನಿನ್ ರನ್ನು ಹಾರ್ದಿಕವಾಗಿ ಹಾಡಿ ಹೊಗಳಿದ ತಿಲಕರ ಬಗ್ಗೆ ಕಮ್ಯುನಿಸ್ಟರಿಗೆ ಅತೀವ ಅಭಿಮಾನವಿದೆ. ಸ್ವತಹ ಲೆನಿನ್ ಒಂದು ಕಡೆ ತಿಲಕರ ಬಗ್ಗೆ ‘ಅತ್ಯಂತ ಸುಸ್ಥಿರ ಮತ್ತು ಪುರೋಗಾಮಿ ನಾಯಕ…” (“…the most consistent and forward-looking leader”) ಎಂದಿದ್ದಾರೆ. ತಿಲಕರ ಮೇಲೆ ದೇಶದ್ರೋಹದ ಮೊಕದ್ದಮೆ ನಡೆದಾಗ ತಿಲಕರ ಪರ ವಕಾಲತ್ತು ನಡೆಸಿದ್ದು ಸ್ವತಹ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮತ್ತು ತಿಲಕರ ಸ್ನೇಹ ಮತ್ತು ಸಾಂಗತ್ಯ (comradeship) ಬಗ್ಗೆ ಪ್ರಸಿದ್ದ ಲೇಖಕ ಎ. ಜಿ. ನೂರಾನಿ “Tilak and Jinna – Comrades in Freedom Struggle” ಎಂಬ ಬಹು ಚರ್ಚಿತ ಪುಸ್ತಕವನ್ನೇ ಬರೆದಿದ್ದಾರೆ. ಮುಸ್ಲಿಂ ಸಮುದಾಯವೂ ತಿಲಕರನ್ನು ತೀಕ್ಷ್ಣವಾಗಿ ವಿರೋಧಿಸಿದ ನಿದರ್ಶನಗಳಿಲ್ಲ. ಹೀಗೆ ಸಾರ್ವತ್ರಿಕ ಮನ್ನಣೆಯಿರುವ ತಿಲಕರನ್ನು ವಿಮರ್ಶೆಗೊಳಪಡಿಸುವುದು ಹಿಂದೆಯೂ ಮತ್ತು ಇಂದಿಗೂ ಸಾಕಷ್ಟು ‘ರಾಷ್ಟ್ರೀಯ ಅಸಂತುಷ್ಟಿ’ ಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ತಿಲಕರನ್ನು ಮೊಟ್ಟ ಮೊದಲ ಬಾರಿ ವಿಮರ್ಶೆ ಮಾಡಿದ್ದು ಮಹಾತ್ಮಾ ಫುಲೆ. ತಮ್ಮ ಕೇಸರಿ ಪತ್ರಿಕೆ ಪ್ರಾರಂಭಿಸಲು Jyotirao Phuleನಿಧಿ ಸಂಗ್ರಹ ಮಾಡಲೋಸುಗ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಮೊಟ್ಟ ಮೊದಲ ಬಾರಿಗೆ ಫುಲೆ ತಿಲಕರ ಐತಿಹಾಸಿಕ ಆಕರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.

ಹಂಟರ್ ಆಯೋಗದ ಮುಂದೆ ಫುಲೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಇದು ತಿಲಕರೂ ಸೇರಿದಂತೆ ಅನೇಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.

ತಿಲಕರು “ಮರಾಠ” ಎಂಬ ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದು ಶೂದ್ರ ಮತ್ತು ದಲಿತ ವಿದ್ಯಾರ್ಥಿಗಳು ಅಧುನಿಕ ಶಿಕ್ಷಣ ಪಡೆಯುವುದನ್ನು ಉಗ್ರವಾಗಿ ವಿರೋಧಿಸಿ ಲೇಖನ ಬರೆದರು. ಇದರ ಸಾರಾಂಶವೆಂದರೆ: ಕುಂಬಾರ, ಕುಣಬಿ, ಚಮ್ಮಾರ ಇತ್ಯಾದಿ ಜನಾಂಗಗಳ ತಮ್ಮ ವೃತ್ತಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಶೂದ್ರರ ಮಕ್ಕಳು ಅಧುನಿಕ ಶಿಕ್ಷಣ ಪಡೆದರೆ ಅವರು ತಮ್ಮ ತಂದೆ ತಾಯಿಯರನ್ನೇ ತುಚ್ಚವಾಗಿ ಕಂಡು ಅಧುನಿಕತೆಯನ್ನೇ ಆರಾಧಿಸ ತೊಡಗುತ್ತಾರೆ. ಇತಿಹಾಸ, ಗಣಿತ, ಭೂಗೋಳ ಇತ್ಯಾದಿ ವಿಷಯಗಳನ್ನು ಓದಿದರೆ ಈ ಕೆಳಜಾತಿಯ ಜನಕ್ಕೆ ಪ್ರಯೋಜನವಾದರೂ ಏನು? ಇನ್ನು ಇಂಥವರ ಮಕ್ಕಳೆಲ್ಲ ಓದಿ ವಿದ್ಯಾವಂತರಾದರೆ ಹೊಲಗಳಲ್ಲಿ ದುಡಿಯುವವರು ಯಾರು? ತೆರಿಗೆದಾರರ ಸಾವಿರಗಟ್ಟಲೆ ಹಣವನ್ನು ಈ ರೀತಿ ಅಪಾತ್ರರ ಮೇಲೆ ಖರ್ಚು ಮಾಡಲು ಸರಕಾರಕ್ಕೆ ನಾಚಿಗೆಯಾಗಬೇಕು ತಮ್ಮ ತಮ್ಮ ಕುಲ ಕಸುಬಿನಲ್ಲೇ ಶೂದ್ರ ಮತ್ತು ದಲಿತರ ಅವರ ಮುಕ್ತಿ ಇರುವುದು.

ಹಾಗೆಯೇ, ತಿಲಕರು ಇಂತಹುದೇ ಕಾರಣಗಳಿಗಾಗಿ ಮಹಿಳೆಯರು ವಿದ್ಯಾವಂತರಾಗುವುದನ್ನು ಕೂಡ ವಿರೋಧಿಸಿದರು. ಮಹಿಳೆ ಅಧುನಿಕ ಶಿಕ್ಷಣ ಪಡೆದರೆ ತನ್ನ ತಂದೆ ತಾಯಿ ಮತ್ತು ಗಂಡಂದಿರಿಗೆ ವಿಧೇಯಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತ ಶೂದ್ರರ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಓದುವುದನ್ನೂ ಕೂಡ ತಿಲಕರು ಉಗ್ರವಾಗಿ ಟೀಕಿಸಿದರು. ಸ್ವತಃ ದಲಿತ ಶೂದ್ರರೇ ತಮ್ಮ ಮಕ್ಕಳನ್ನು ಸವರ್ಣೀಯರ ಜತೆ ವ್ಯಾಸಂಗ ಮಾಡಲು ಕಳುಹಿಸುತ್ತಿಲ್ಲ ಅಂಥದ್ದರಲ್ಲಿ ಕೆಲವು ಮೂರ್ಖ ಬ್ರಿಟಿಷ್ ಅಧಿಕಾರಿಗಳು ನಮ್ಮವರೇ ಆದ ಕೆಲ ನಿಷ್ಪ್ರಯೋಜಕ ಸಮಾಜ ಸುಧಾರಕರ ಮಾತು ಕಟ್ಟಿಕೊಂಡು ಈ ತರಹದ ‘ಅಪ್ರಯೋಜಕ ಮತ್ತು ಕಾರ್ಯಸಾಧುವಲ್ಲದ’ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಬ್ರಿಟಿಷರ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಸಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಲೇ ಫುಲೆ ಮತ್ತವರ ಸಂಗಡಿಗರ ಮೇಲೆ ಚಾಡಿ ಚುಚ್ಚಲು ತಿಲಕರಿಗೆ ಯಾವ ದೇಶಪ್ರೇಮವೂ ಅಡ್ಡಿ ಬರಲಿಲ್ಲ.

ತಿಲಕರು ಇಷ್ಟೆಲ್ಲಾ ದ್ವೇಷ ಸಾಧಿಸಿದರೂ ಮಹಾತ್ಮಾ ಫುಲೆ ತಿಲಕರನ್ನು ಹೇಗೆ ನಡೆಸಿಕೊಂಡರು ಎಂಬುದು ಬಹು ಮುಖ್ಯ.

೧೮೮೨ ರಲ್ಲಿ, ಶಿವಾಜಿ ಮಹಾರಾಜರ ವಂಶದವರಿಗೆ ಬ್ರಿಟಿಷ್ ಸರಕಾರ ಅನ್ಯಾಯವೆಸಗಿದೆ ಎಂದು (ತಿಲಕರು ಶಾಹು ಮಹಾರಾಜರಿಗೆ ಅಪಮಾನ ಮಾಡಿದಷ್ಟೇನೂ ಬ್ರಿಟಿಷರು ಮಾಡಿರಲಿಕ್ಕಿಲ್ಲ), ತಿಲಕರು ಮತ್ತು ಅಗರ್ಕರ್ ಎಂಬ ಇನ್ನೊಬ್ಬ ಮುಖಂಡರ ಜೊತೆ ಸೇರಿಕೊಂಡು ಒಂದು ಚಳುವಳಿ ಸಂಘಟಿಸಿದರು. ಇದರಿಂದ ಕಾನೂನು ಭಂಗವಾಯಿತೆಂಬ ಆರೋಪ ಹೊರಿಸಿ ಬ್ರಿಟಿಷರು ಇವರಿಬ್ಬರನ್ನೂ ಮುಂಬೈನಲ್ಲಿನ ಡೊಂಗ್ರಿಯಲ್ಲಿ ಬಂಧಿಸಿದರು. ಆಗ ನ್ಯಾಯಾಲಯದಲ್ಲಿ ೧೦೦೦೦ ರೂಪಾಯಿಗಳ ಜಾಮೀನು ಕೊಡಬೇಕೆಂಬ ಶರತ್ತನ್ನು ವಿಧಿಸಲಾಯಿತು. ಅಷ್ಟು ಆಗುವಾಗ ತಿಲಕರ ಹಿಂದೆ ಓಡಾಡಿಕೊಂಡಿದ್ದ ಸುಧಾರಕರೆಲ್ಲ ದಿಕ್ಕಾ ಪಾಲಾಗಿ ಓಡಿದ್ದರು. ಮಹಾತ್ಮಾ ಫುಲೆ ತಾವೇ ಸ್ವಯಂ ಪ್ರೇರಣೆಯಿಂದ ಸತ್ಯಶೋಧಕ ಸಮಾಜದ ವತಿಯಿಂದ ಹಳ್ಳಿ ಹಳ್ಳಿಗೆ ತಿರುಗಿ ವಂತಿಗೆ ಸಂಗ್ರಹ ಮಾಡಿ ತಿಲಕ ಮತ್ತು ಅವರ ಸಂಗಡಿಗರನ್ನು ಬೇಲ್ ಹಣ ಕೊಟ್ಟು ಬಿಡಿಸಿದರು.ನಂತರ ನಡೆದ ತಿಲಕರ ಮೇಲೆ ಹೂಡಲಾದ ಮೊಕದ್ದಮೆಯಲ್ಲಿ ತಿಲಕರಿಗೆ ಮೂರು ತಿಂಗಳ ಕಾರಾವಾಸ ಶಿಕ್ಷೆಯಾಯಿತು. ತಿಲಕರ ಬಿಡುಗಡೆಗೆ ಒತ್ತಾಯಿಸಿ ನಂತರದಲ್ಲಿ ತಿಲಕರ ಬಂಧನವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ ಮಹಾತ್ಮಾ ಫುಲೆ ಒಂದು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಿಂದಾಗಿಯೇ ಮುಂಬೈ ಪ್ರಾಂತ್ಯದಲ್ಲೆಲ್ಲ ತಿಲಕರು ಪ್ರಸಿದ್ದಿಗೆ ಬಂದರು.

ಇದಾದ ನಂತರ, ತಿಲಕರು ಫುಲೆ ಮಹಾತ್ಮರಿಗೆ ‘ನಿಮ್ಮ ಈ ಮಹದುಪಕಾರ ಹೇಗೆ ತೀರಿಸಲಿ’ ಎಂದು ಕೇಳಿದಾಗ bal-gangadhar-tilakಮಹಾತ್ಮರು ಒಂದೇ ಒಂದು ಮಾತು ಹೇಳಿದರು ” ತಿಲಕ್, ನೀವು ಒಬ್ಬ ಮಹಾನ್ ನಾಯಕನಾಗಿ ಬೆಳೆದು ನಿಲ್ಲುವ ಸರ್ವ ಸಾಧ್ಯತೆಗಳನ್ನೂ ನಾನು ನೋಡಬಲ್ಲೆ. ನಿಮ್ಮಲ್ಲಿ ಒಂದೇ ಒಂದು ದೋಷವಿದೆ; ಕೇವಲ ಬ್ರಾಹ್ಮಣರನ್ನು ಸಂಘಟಿಸುವುದನ್ನು ಬಿಟ್ಟುಬಿಡಿ. ಸಮಾಜದ ಎಲ್ಲ ವರ್ಗಗಳಿಗೂ ನೇತೃತ್ವ ಕೊಡಿ. ಇಷ್ಟೇ ನಿಮ್ಮಲ್ಲಿ ನಾನು ಕೇಳಿಕೊಳ್ಳುವುದು”.

ದುರ್ದೈವವೆಂದರೆ, ಹೀಗೆ ತಮ್ಮನ್ನು ಸಲುಹಿದ ಮಹಾತ್ಮಾ ಫುಲೆ ಹುತಾತ್ಮರಾದಾಗ ತಮ್ಮ ದೈನಿಕದಲ್ಲಿ ಮಹಾತ್ಮರ ನಿಧನದ ಕುರಿತು ಒಂದೇ ಒಂದು ಚಿಕ್ಕ ಸಾಲನ್ನು ಸುದ್ದಿಯ ರೂಪದಲ್ಲಿ ಕೂಡ ಕೂಡ ಬರೆಯಲಿಲ್ಲ! ಇನ್ನು ತಿಲಕರ ಸಂಗಡಿಗ ಅಗರ್ಕರ್ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪತ್ರಿಕೆ “ಸುಧಾರಕ” (!?) ದಲ್ಲಿ ಮಹಾತ್ಮರ ನಿಧನದ ಬಗ್ಗೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಇದೇ ತಿಲಕರು ಮಹಾತ್ಮರಿಗೆ ಸಲ್ಲಿಸಿದ ಕಾಣಿಕೆ!

ಇನ್ನು ತಿಲಕರು ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಇನ್ನೂ ಆಸಕ್ತಿಕರವಾಗಿದೆ.

(ಮುಂದುವರೆಯುತ್ತದೆ…)