Category Archives: ಶ್ರೀಪಾದ್ ಭಟ್

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ಕೋಮುವಾದ : ಚರಿತ್ರೆಯ ಗಾಯಗಳು, ವರ್ತಮಾನದ ಸ್ವರೂಪ ಮತ್ತು ಭವಿಷ್ಯದ ಸವಾಲು

-ಬಿ.ಶ್ರೀಪಾದ ಭಟ್

ಹಿಂಸೆಯ ಮೂಲಕ ಸಾಧಿಸಿದ ಪ್ರತಿಯೊಂದು ಸುಧಾರಣೆಯು ಖಂಡನೆಗೆ,ತಿರಸ್ಕಾರಕ್ಕೆ ಅರ್ಹವಾಗಿರುತ್ತದೆ.ಏಕೆಂದರೆ ಈ ಸುಧಾರಣೆಯು ದುಷ್ಟಶಕ್ತಿಗಳನ್ನು ನಿಗ್ರಹಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಒಳಗೊಂಡಿರುವುದಿಲ್ಲ ಮತ್ತು ಮನುಷ್ಯರು ಯಥಾಸ್ಥಿತಿಯ ಜೀವನಕ್ರಮಕ್ಕೆ ಶರಣಾಗಿರುತ್ತಾರೆ.

– ಟಾಲ್ ಸ್ಟಾಯ್

ಅಬ್ದುಲ್ ಅಹಮದ್ ಅವರು ಕೋಮುವಾದವು ಎರಡು ವಿಭಿನ್ನ ಧರ್ಮಗಳಿಂದ ಗುಣಾರೋಪಣೆಗೊಳಗೊಂಡ ಸಾಮಾಜಿಕ ಘಟನೆ ಮತ್ತು ಈ ಘಟನೆಗಳು ಗಲಭೆಗಳಿಗೆ, ತಲ್ಲಣಗಳಿಗೆ, ಆತಂಕಗಳಿಗೆ, ಉಗ್ರತೆಗೆ ಕಾರಣವಾಗುತ್ತವೆ ಎಂದು ಹೇಳಿದರೆ, ಫರಾ ನಕ್ವಿ ಅವರು ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ ಎಂದು ಹೇಳುತ್ತಾರೆ.

ಪ್ರಭಾ ದೀಕ್ಷಿತ್ ಅವರು ಕೋಮುವಾದವು ರಾಜಕೀಯ ಪ್ರೇರಿತ ಧರ್ಮತತ್ವವಾಗಿದ್ದು ಇದು ಧರ್ಮ ಮತ್ತು ಸಾಂಸ್ಕೃತಿಕ ವಿಭಿನ್ನತೆಗಳನ್ನು ದುರುಪಯೋಗಪಡಿಸಿಕೊಂಡು ತನ್ನ ರಾಜಕೀಯ ಉದ್ದೇಶಗಳನ್ನು ಸಾಧಿಸುತ್ತದೆ ಎಂದು ಹೇಳುತ್ತಾರೆ. ಅಸ್ಗರ್ ಅಲಿ ಇಂಜಿನಿಯರ್, ಮೊಯಿನ್ ಶಕೀರ್ ಮತ್ತು ಅಬ್ದುಲ್ ಅಹಮದ್ ಅವರು “ಇದು ಮೇಲ್ವರ್ಗಗಳ ಕೈಯಲ್ಲಿರುವ ಒಂದು ಆಯುಧ; ಇದನ್ನು ಬಳಸಿಕೊಂಡು ಜನರ ನಡುವೆ ಒಡಕುಂಟು ಮಾಡುತ್ತ ಆ ಮೂಲಕ ಅಧಿಕಾರವನ್ನು ತಮ್ಮ ಬಳಿ ಕೇಂದ್ರೀಕರಿಸಿಕೊಳ್ಳುತ್ತಾರೆ” ಎಂದು ವಿವರಿಸುತ್ತಾರೆ.

ಫ್ರೊ. ಸತೀಶ್ ದೇಶಪಾಂಡೆ ಅವರು “ಇಂಗ್ಲೀಷ್ ಮಾತನಾಡುವ ಪಶ್ಚಿಮ ರಾಷ್ಟ್ರಗಳು ಬಳಸುವ ಕೋಮುವಾದದ ಅರ್ಥವು ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿದೆ. ಪಶ್ಚಿಮ ರಾಷ್ಟ್ರಗಳಲ್ಲಿ ಕೋಮುವಾದವನ್ನು ‘ಎಲ್ಲಾ ಸಮುದಾಯಗಳ ನಡುವೆ ಸಮಾನ ಹಂಚಿಕೆ’ ಅಥವಾ ‘ಸಾಮಾನ್ಯ ಮಾಲೀಕತ್ವ’ ಎನ್ನುವ ಅರ್ಥದಲ್ಲಿ ಮಾತನಾಡಿದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ವಿವಿಧ ಧರ್ಮದ ಸಮುದಾಯಗಳ ನಡುವಿನ ದ್ವೇಷ ಮತ್ತು ಪ್ರತ್ಯೇಕತೆಯೆಂದು ವಿವರಿಸಲಾಗುತ್ತದೆ” ಎಂದು ಹೇಳುತ್ತಾರೆ.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಈ ರಾಷ್ಟ್ರೀಯತೆ ಮತ್ತು ಕೋಮುವಾದ ಇವೆರಡೂ ಈ ದೇಶದ ಆರ್ಥಿಕ ಅಭಿವೃದ್ಧಿ, bajrang_dalರಾಜಕೀಯ ಮತ್ತು ಕಾರ್ಯಾಂಗದ ಚಟುವಟಿಕೆಗಳನ್ನೊಳಗೊಂಡ ಸದೃಶ್ಯವಾದ ಆಧುನಿಕ ಕಾರ್ಯವಿಧಾನಗಳು. ರಾಷ್ಟ್ರೀಯವಾದಿಗಳು ಮತ್ತು ಕೋಮುವಾದಿಗಳು ಚರಿತ್ರೆಯನ್ನು ಸದಾ ಉಲ್ಲೇಖಿಸುತ್ತಿರುತ್ತಾರೆ, ಸಂಭೋದಿಸುತ್ತಿರುತ್ತಾರೆ. ಚರಿತ್ರೆಯ ಐಡಿಯಾಜಿಗಳು, ಚಳುವಳಿಗಳು ಮತ್ತು ಇತಿಹಾಸವನ್ನು ವರ್ತಮಾನದೊಂದಿಗೆ ತಳಕು ಹಾಕಲು ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ. ಆದರೆ ಈ ರಾಷ್ಟ್ರೀಯತೆ ಮತ್ತು ಕೋಮುವಾದಗಳು ಪ್ರಾಚೀನ ಮತ್ತು ಮಧ್ಯಯುಗೀನ ಭಾರತದಲ್ಲಿ ಆಸ್ತಿತ್ವದಲ್ಲಿ ಇರಲಿಲ್ಲ. ಇದನ್ನು ಆ ಕಾಲದ ರಾಷ್ಟ್ರೀಯವಾದಿಗಳಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಬಾಲಗಂಗಾಧರ ಟಿಲಕ ಅವರು ಸರಿಯಾಗಿಯೇ ಗುರುತಿಸುತ್ತಾರೆ. ಇವರು ಇಂಡಿಯಾ ದೇಶವನ್ನು 19ನೇ ಶತಮಾನದ ಕಡೆಯ ದಶಕ ಮತ್ತು 20ನೇ ಶತಮಾನದ ಆರಂಭದ ದಶಕದಲ್ಲಿ ನಿರ್ಮಿಸಲ್ಪಡುತ್ತಿರುವ ದೇಶವೆಂದು ವ್ಯಾಖ್ಯಾನಿಸುತ್ತಾರೆ. ರಾಷ್ಟ್ರೀಯವಾದದ ದೋಷಪೂರಿತ ಚಿಂತನೆಗಳು, ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಆಧುನಿಕ ಸ್ವರೂಪ ಮತ್ತು ಆಳವಾದ ಅಧ್ಯಯನದ ಕೊರತೆಯಿಂದಾಗಿ ಈ ಕೋಮುವಾದವು ಜನ್ಮ ತಳೆಯುತ್ತದೆ. ಇತಿಹಾಸದ ಪ್ರಕ್ರಿಯೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಅಸತ್ಯದ, ಠಕ್ಕಿನ ಪ್ರಜ್ಞೆಯಿಂದಾಗಿ ಕಳೆದ 100 ವರ್ಷಗಳಿಂದ ಈ ಕೋಮುವಾದವು ಚಾಲ್ತಿಯಲ್ಲಿದೆ” ಎಂದು ಹೇಳುತ್ತಾರೆ.

ಆರಂಭದ ಟಿಪ್ಪಣಿಗಳು

ಇಂಡಿಯಾ ದೇಶವು ರಕ್ತಪಾತದ ಮೇಲೆ, ಪ್ರಾಣಹಾನಿಯ ಮೇಲೆ ಸ್ವಾತಂತ್ರವನ್ನು ಗಳಿಸಿಕೊಂಡಿದೆ. ಜಗತ್ತಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶವೆಂದು ಕರೆಯಲ್ಪಡುವ ಇಂಡಿಯಾದ ಮನಸ್ಥಿತಿ ‘ಹಿಂದೂ ದೇಶ’ದ ಫೋಬಿಯಾವನ್ನು ಒಳಗೊಂಡಿದೆ. ಗಾಂಧಿಯ ‘ಅಹಿಂಸೆ’ ತತ್ವವನ್ನು ಗೇಲಿ ಮಾಡುತ್ತಿದ್ದ ಸಂಘ ಪರಿವಾರ ಕಳೆದ ಎಂಬತ್ತು ವರ್ಷಗಳಲ್ಲಿ ಕೋಮು ಗಲಭೆಗಳ ಮೂಲಕ ಹಿಂಸಾಚಾರ, ದ್ವೇಷ, ಹತ್ಯೆಗಳನ್ನು ನಡೆಸಿದೆ ಎನ್ನುವ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದೆ ಮತ್ತು ಈ ಅಪಾದನೆಗಳಿಗೆ ಸಾವಿರಾರು ಸಾಕ್ಷಿಗಳಿವೆ. ಘಟನೆಗಳಿವೆ. ನಿರಾಶ್ರಿತರಿದ್ದಾರೆ. ಅವರ ತಲೆಮಾರುಗಳಿವೆ.

ಕೋಮುವಾದವೆಂದರೆ ಅದು ಒಂದು ಐಡೆಂಟಿಟಿ ರಾಜಕೀಯ. ದ್ವೇಷದ, ಹಗೆತನದ ರಾಜಕೀಯ. ಇಲ್ಲಿ ಈ ಐಡೆಂಟಿಟಿಯು ಸ್ಪಷ್ಟವಾಗಿ ಧಾರ್ಮಿಕ ನೆಲೆಯನ್ನು ಅವಲಂಬಿಸುತ್ತದೆ. ಈ ಕೋಮುವಾದವು ‘ನಾವು’ ಮತ್ತು ‘ಅವರು’ ಎಂದು ಎರಡು ಧರ್ಮಗಳ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುತ್ತದೆ. ಕೋಮುವಾದ ಶಕ್ತಿಗಳು ಬಲಿಷ್ಠಗೊಂಡಂತೆ ಈ ಗೆರೆಯು ಒಂದು ಗೋಡೆಯಾಗಿ ಬೆಳೆಯುತ್ತ ಹೋಗುತ್ತದೆ, ಈ ಕೋಮುವಾದವು ತನ್ನ ಧಾರ್ಮಿಕ ಶ್ರೇಷ್ಠತೆಯನ್ನು ವೈಭವೀಕರಿಸುತ್ತಲೇ ಅನ್ಯ ಧರ್ಮ ಮತ್ತು ಅನ್ಯ ಧರ್ಮೀಯರನ್ನು ದ್ವೇಷಿಸುತ್ತಾ ಬಹುಸಂಖ್ಯಾತ ತತ್ವವನ್ನು ಸಾರ್ವಜನಿಕವಾಗಿ ಬಿತ್ತುತ್ತಿರುತ್ತದೆ. ಚಿಂತಕರು ಇಂಡಿಯಾದಲ್ಲಿ ಹಿಂದೂ ಕೋಮುವಾದವನ್ನು ಫ್ಯಾಸಿಸ್ಟ್ ನ ಮತ್ತೊಂದು ಮುಖವೆಂದೇ ಬಣ್ಣಿಸುತ್ತಾರೆ. ತನ್ನ ಧರ್ಮವನ್ನು ಶ್ರೇಷ್ಠವೆಂದು ಪರಿಗಣಿಸುವ ಈ ಧಾರ್ಮಿಕ ಐಡೆಂಟಿಟಿಯನ್ನು ಒಂದು ಫ್ಯಾಸಿಸ್ಟ್ ಶಕ್ತಿಯಾಗಿ ಕ್ರೋಢೀಕರಿಸಿದ್ದು ಸಾವರ್ಕರ್. ಸಾವರ್ಕರ್ ರ ಹಿಂದುತ್ವದ ಕೋಮುವಾದವನ್ನೊಳಗೊಂಡ ಫ್ಯಾಸಿಸ್ಟ್ ಚಿಂತನೆಗಳನ್ನು ತನ್ನ ಸೀಕ್ರೆಟ್ ಕಾರ್ಯಸೂಚಿಯನ್ನಾಗಿಸಿಕೊಂಡ ಆರೆಸ್ಸಸ್ ದಶಕಗಳ ಕಾಲ ಸಾರ್ವಜನಿಕವಾಗಿ ಕೇವಲ ಹಿಂದುತ್ವವನ್ನು ಪ್ರಚಾರ ಮಾಡಿತು. ಇಂದು ಕೇಂದ್ರದಲ್ಲಿ ಅಧಿಕಾರ ಗಳಿಸಿದ ನಂತರ ತನ್ನೊಳಗೆ ಮಡುಗಟ್ಟಿಕೊಂಡ ಫ್ಯಾಸಿಸಂನ ಮುಖಗಳನ್ನು ಸಹ ಬಹಿರಂಗಗೊಳಿಸತೊಡಗಿದೆ.

ಶ್ರೇಣೀಕೃತ, ಅಸಮಾನತೆಯ ಜಾತಿ ಸಮಾಜವನ್ನು ಸಾಂಸ್ಥೀಕರಣಗೊಳಿಸಿದ ಹಿಂದೂಯಿಸಂ ಧಾರ್ಮಿಕ ಭೇಧಭಾವದ ಒಡಕನ್ನು ಸೃಷ್ಟಿಸಿತು. RSS_meeting_1939ಇತ್ತ ತಮ್ಮ ಐಡೆಂಟಿಟಿ, ಜೀವನ ಕ್ರಮ, ಸಂಸ್ಕೃತಿಗಳನ್ನು ಇಸ್ಲಾಂ ಎನ್ನುವ ಧರ್ಮದ ಮೂಲಕ, ಕುರಾನ್ ನ ಮೂಲಕ ಕಂಡುಕೊಳ್ಳಲು ಬಯಸುವ ಮುಸ್ಲಿಂ ಸಮುದಾಯ ಇಂಡಿಯಾದಲ್ಲಿ ಹಿಂದೂಯಿಸಂನ ಬಹುಸಂಖ್ಯಾತ ತತ್ವದ ಮತೀಯವಾದದೊಂದಿಗೆ ಸದಾಕಾಲ ಮುಖಾಮುಖಿಯಾಗುವಂತಹ ಅನಿವಾರ್ಯತೆ ಉಂಟಾಗಿತ್ತು. ಜಿನ್ನಾ ಅವರ ಎರಡು ದೇಶದ ಸಿದ್ಧಾಂತವನ್ನು (ಧರ್ಮದ ನೆಲೆಯಲ್ಲಿ) ಆರೆಸ್ಸಸ್ ನ ಸಾವರ್ಕರ್ ಸಹ ಪರೋಕ್ಷವಾಗಿ ಬೆಂಬಲಿಸಿದ್ದರು. ಕಡೆಗೆ 1947ರಲ್ಲಿ ನಡೆದ ದೇಶ ವಿಭಜನೆಯ ಸಂದರ್ಭದಲ್ಲಿ ಸುಮಾರು 1946-1948ರ ಕಾಲಘಟ್ಟದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಅತ್ಯಾಚಾರ, ಕೋಮು ಗಲಭೆಗಳಲ್ಲಿ ಅಪಾರ ಸಾವುನೋವು, ಲೂಟಿ, ದಂಗೆಗಳು ಉಂಟಾದವು. 1925ರಿಂದಲೇ ಸಂಘ ಪರಿವಾರದ ಮತೀಯ ಮೂಲಭೂತವಾದಿಗಳು ಆಕ್ರಮಣಕಾರಿ ಮುಸ್ಲಿಂರು, ರಕ್ಷಣೆಯಲ್ಲಿರುವ ಹಿಂದೂಗಳು, ಮುಸ್ಲಿಂ ಫೆನಟಿಸಂ, ಹಿಂದೂ ಸಹನಶೀಲತೆ ಎನ್ನುವ ಮಿಥ್ ಅನ್ನು ದೇಶಾದ್ಯಾಂತ ಪ್ರಚಾರ ಮಾಡಿದ್ದರು. ಜನರ ಮನದಲ್ಲಿ ಅಭದ್ರತೆಯ ಸ್ಥಿತಿಯನ್ನು ಬಿತ್ತಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಇದರ ಕರಾಳತೆ ಬಿಚ್ಚಿಕೊಂಡಿತು. ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಬೋಧಿಸುತ್ತ ಮುಸ್ಲಿಂರ ದೇಶ ಇದಲ್ಲ ಎಂದು ಮತೀಯವಾದಿ ನುಡಿಕಟ್ಟಿನಲ್ಲಿ ಮಾತನಾಡುವುದು, ಮುಸ್ಲಿಂರ ಏಜೆಂಟ್ ಎಂದು ಗಾಂಧೀಜಿಯನ್ನು ಹತ್ಯೆಗೈಯುವುದರ ಮೂಲಕ ಕೋಮುವಾದ, ಫ್ಯಾಸಿಸಂ ಅನ್ನು ಒಂದಕ್ಕೊಂದು ಬೆರೆಸಲಾಯಿತು.

ಇತಿಹಾಸಕಾರ ಬಿಪಿನ್ ಚಂದ್ರ ಅವರು “ಭಾರತದಲ್ಲಿ 19ನೇ ಶತಮಾನದ ಕಡೆಯ ದಶಕಗಳಲ್ಲಿ ಕೋಮುವಾದದ ಘಟನೆಗಳು ಸಂಭವಿಸತೊಡಗಿದವು. ಗ್ರಾಮ ಪ್ರದೇಶಗಳು ಹೆಚ್ಚೂ ಕಡಿಮೆ ಕೋಮುಗಲಭೆಗಳಿಂದ ಮುಕ್ತವಾಗಿದ್ದವು. 1937-1939ರವೆರಗೂ ಕೋಮುವಾದವು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಂಡಿರಲಿಲ್ಲ, 1946ರಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆಗಳಿಗೂ ಮತ್ತು ರಾಜಕೀಯಕ್ಕೂ ನೇರ ಸಂಬಂಧಗಳು ಕೂಡಿಕೊಳ್ಳತೊಡಗಿದವು. ಆದರೆ ಕೋಮುವಾದವು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ಸ್ವ ಸಂಕೀರ್ಣ. ಉದಾಹರಣೆಗೆ ಕಲೋನಿಯಲ್ ಭಾರತದಲ್ಲಿ ಮುಸ್ಲಿಂರು ಅವರು ಮುಸ್ಲಿಮರಾಗಿದ್ದಕ್ಕೆ ಶೋಷಣೆಗೆ ಒಳಗಾಗಿರಲಿಲ್ಲ, ಬದಲಾಗಿ ಅವರು ರೈತರು, ಕೂಲಿ ಕಾರ್ಮಿಕರು, ಜೀತದಾಳುಗಳಾಗಿದ್ದರು. ಹಾಗೆಯೇ ಹಿಂದೂಗಳೂ ಸಹ. ಅಥವಾ ಈ ಕೋಮುವಾದವು ಕಲೋನಿಯಲ್ ಸಾಮ್ರಾಜ್ಯದ ಉಪ ಉತ್ಪನ್ನ ಎಂದೂ ಸಹ ಹೇಳಬಹುದು. ಏಕೆಂದರೆ ಕಲೋನಿಯಲ್ ಆಡಳಿತವು ಕೋಮುವಾದಕ್ಕೆ ಪೂರಕವಾಗುವಂತಹ ಸಾಮಾಜಿಕ ವಾತಾವರಣವನ್ನು ನಿರ್ಮಿಸುತ್ತದೆ. ಮುಂದೆ ಇಂಡಿಯಾದ ಮಧ್ಯಮವರ್ಗವು ತನ್ನ ವೈಯುಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಕೋಮುವಾದವನ್ನು ಉಪಯೋಗಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಕೋಮುವಾದವು ಫ್ಯೂಡಲ್ಲಿಸಂ ಅನ್ನು, ಕಲೋನಿಯಲಿಸಂ ಅನ್ನು, ಅಧಿಕಾರಶಾಹಿಯನ್ನು ಸಹ ಪೋಷಿಸಿತು” ಎಂದು ಬರೆಯುತ್ತಾರೆ. ಇಂಡಿಯಾದ ನಗರಗಳಲ್ಲಿನ ಹಳೇ ಪ್ರದೇಶಗಳನ್ನು ಸದಾ ಕೋಮು ಗಲಭೆಗಳ ಪ್ರದೇಶಗಳನ್ನಾಗಿ ಮಾರ್ಪಡಿಸಿದ ಕೀರ್ತಿ ಸಂಘ ಪರಿವಾರಕ್ಕೆ ಸಲ್ಲಬೇಕು.

Violette Graff and Juliette Galonnier ಅವರು “1950ರ ದಶಕದ ಪೂರ್ತಿ ಇಂಡಿಯಾದ ಅಲ್ಪಸಂಖ್ಯಾತರು ನೆಹರೂ ಮತ್ತು ಅವರ ಸುತ್ತುವರೆದಿದ್ದ ಮೌಲಾನ ಕಲಾಂ ಅಜಾದ್, ರಫಿ ಅಹ್ಮದ್ ಕಿದ್ವಾಯಿಯಂತಹ ಸೆಕ್ಯುಲರ್ ರಾಜಕಾರಣಿಗಳಿರುವ ಕಾಂಗ್ರೆಸ್ ಪಕ್ಷದ ಕಾರಣಕ್ಕಾಗಿ ಭದ್ರತೆಯ ಮತ್ತು ಸುರಕ್ಷತೆಯ ವಾತಾವರಣದಲ್ಲಿದ್ದೇವೆ ಎಂದೇ ನಂಬಿಕೊಂಡಿದ್ದರು. ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952 ರಿಂದ ಮೂರನೇ ಸಾರ್ವತ್ರಿಕ ಚುನಾವಣೆ ನಡೆದ 1962ರವರೆಗೆ ಕಾಂಗ್ರೆಸ್ ಶೇಕಡಾ ನೂರರಷ್ಟು ಮುಸ್ಲಿಂ ಅಲ್ಪಸಂಖ್ಯಾತರ ಮತಗಳನ್ನು ಗಳಿಸುತ್ತಿತ್ತು. ಆದರೆ 1961ರಲ್ಲಿ ಮಧ್ಯಪ್ರದೇಶದ ಜಬ್ಬಲ್ಪುರದಲ್ಲಿ ನಡೆದ ಕೋಮುಗಲಭೆ ದೇಶದ ಒಂದು ಮಾದರಿಯ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿತು” ಎಂದು ಹೇಳುತ್ತಾರೆ.

1961- 1971 ರ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸೆಕ್ಯುಲರ್ ಇಮೇಜ್ ತನ್ನ ಹೊಳಪನ್ನು ಕಳೆದುಕೊಳ್ಳತೊಡಗಿತ್ತು. ಒಂದು ದಶಕದಲ್ಲಿGujarat ಎರಡು ಯುದ್ಧಗಳು (ಚೀನಾ ಮತ್ತು ಪಾಕಿಸ್ತಾನ) ಜರುಗಿದವು. ಕಾಂಗ್ರೆಸ್ ಇಬ್ಭಾಗವಾಗಿ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ದೇಶವು ಭೀಕರ ಕ್ಷಾಮದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. 1967ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಸೋಲನ್ನು ಅನುಭವಿಸಿ ವಿರೋಧ ಪಕ್ಷಗಳಿಗೆ ಅಧಿಕಾರವನ್ನು ಬಿಟ್ಟುಕೊಡಬೇಕಾಯಿತು. ಆರೆಸ್ಸಸ್ ಗೋಳ್ವಲ್ಕರ್ ಅವರ ನೇತೃತ್ವದಲ್ಲಿ ಹಿಂದೂ ಮತೀಯವಾದವನ್ನು ರಾಜಕೀಯದಲ್ಲಿ ಭಾರತೀಯ ಜನಸಂಘದ ಮೂಲಕ ಪ್ರಯೋಗಿಸಿ ಅಲ್ಪಮಟ್ಟದ ಯಶಸ್ಸನ್ನು ಸಹ ಗಳಿಸಿತ್ತು. ದೇಶದ ರಾಜಕೀಯ-ಸಾಮಾಜಿಕ ವಲಯಗಳಲ್ಲಿ ಒಂದು ಬಗೆಯ ಆತಂಕ, ಭ್ರಮನಿರಸನ, ತಲ್ಲಣಗಳು ಕಾಡುತ್ತಿದ್ದವು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೆಸ್ಸಸ್ ‘ವಿಶ್ವ ಹಿಂದೂ ಪರಿಷತ್’ ಎನ್ನುವ ಹಿಂದೂ ಸಂಘಟನೆಯನ್ನು ಸ್ಥಾಪಿಸಿತು. ಈ ವಿ ಎಚ್ ಪಿ ನೇರವಾಗಿಯೇ ಕೋಮು ಗಲಭೆಯ ಅಖಾಡಕ್ಕೆ ಧುಮುಕಿತು. Violette Graff and Juliette Galonnier ಅವರು “1961ರ ನಂತರದ ದಶಕಗಳಲ್ಲಿ ಅಲ್ಪಸಂಖ್ಯಾತರನ್ನು (ಅದರಲ್ಲೂ ಪ್ರಮುಖವಾಗಿ ಮುಸ್ಲಿಂರು) ತಂಟೆಕೋರರು ಎಂದು ಬಣ್ಣಿಸುವುದು, ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸುವುದು, ಕರ್ಕಶವಾಗಿ ಧ್ವನಿವರ್ಧಕಗಳನ್ನು ಬಳಸುವುದು, ಧಾರ್ಮಿಕ ಗುರು ಪ್ರಾಫೆಟ್ ಗೆ ಅಪಮಾನ ಮಾಡುವುದು, ಈದ್, ಮೊಹರಂ, ಹೋಳಿ, ಗಣೇಶ ಹಬ್ಬಗಳನ್ನು ಒಂದೇ ಸಮಯದಲ್ಲಿ ಪರಸ್ಪರ ತಿಕ್ಕಾಟವಾಗುವಂತೆ ಯೋಜಿಸುವುದು, ಗೋಹತ್ಯೆಯ ವಿವಾದದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಮಸೀದಿಯಲ್ಲಿ ಹಂದಿಯನ್ನು ಬಿಸಾಡುವುದು, ಮಹಿಳೆಯರನ್ನು ಚುಡಾಯಿಸುವುದು ಹೀಗೆ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳೊಂದಿಗೆ ಕೋಮುಗಲಭೆಗಳಿಗೆ ಸಂಬಂಧಗಳಿವೆ. ಆಸ್ತಿ ವಿವಾದಗಳು, ಮುಸ್ಲಿಂ ವ್ಯಾಪಾರಿಗಳು, ಮುಸ್ಲಿಂರ ಭೂಮಿ ಒಡೆತನ, ಮುಸ್ಲಿಂ ಲೇವಾದೇವಿಗಾರರುಗಳೊಂದಿಗೂ ಸಂಬಂಧಗಳಿವೆ. ಆರ್ಥಿಕ, ಶೈಕ್ಷಣಿಕ ಅಸಮಾನತೆಗಳೊಂದಿಗೂ ಸಂಬಂಧಗಳಿವೆ. ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆಗಳೊಂದಿಗೂ ಕೋಮುಗಲಭೆಗಳಗೆ ಸಂಬಂಧಗಳಿವೆ” ಎಂದು ಹೇಳುತ್ತಾರೆ. ಮೇಲ್ಕಾಣಿಸಿದ ಎಲ್ಲಾ ಮಾದರಿಯ ಆಯಾಮಗಳನ್ನು ಬಳಸಿಕೊಂಡು ಸಂಘ ಪರಿವಾರವು ನೇರವಾಗಿ ಕೋಮು ಗಲಭೆೆಗಳಿಗೆ ಪ್ರಚೋದನೆ ಮತ್ತು ಕುಮ್ಮುಕ್ಕು ಕೊಡತೊಡಗಿತ್ತು. ಈ 1961-1979 ರ ಕಾಲಘಟ್ಟವು ಸಂಘ ಪರಿವಾರದ ಧಾರ್ಮಿಕ ಮತೀಯವಾದದ ಪ್ರಯೋಗಗಳ ಕಾಲಘಟ್ಟವೆಂದೇ ಕರೆಯಲಾಗುತ್ತದೆ.

1979-1989 ಕಾಲಘಟ್ಟವು ಮೊರದಾಬಾದ್-ಮೀನಾಕ್ಷಿಪುರಂ-ಶಾಬಾನು-ರಾಮಜನ್ಮ ಭೂಮಿಯಂತಹ ಧಾರ್ಮಿಕ ವಿವಾದಗಳ ಮೂಲಕ ಕೋಮುವಾದದ ಘೋರತೆಗೆ ನೇರವಾಗಿ ಮತ್ತು ಬಹಿರಂಗವಾಗಿ ರಾಜಕೀಯ-ಧಾರ್ಮಿಕ ಆಯಾಮಗಳನ್ನು ತಂದು ಕೊಟ್ಟಿತು. 1979ರಲ್ಲಿ ಜಾಗತಿಕ ಮಟ್ಟದಲ್ಲಿ ಇರಾನಿನಲ್ಲಿ ಖೊಮೇನಿಯ ಮೂಲಕ ನಡೆದ ಪ್ರತಿಕ್ರಾಂತಿ, ಅಫ್ಘಾನಿಸ್ತಾನದಲ್ಲಿ ಸೋವಿಯತ್ ಯೂನಿಯನ್ನ ಆಕ್ರಮಣಗಳಂತಹ ಸಂಗತಿಗಳು ಮುಸ್ಲಿಂ ಜಗತ್ತಿನಲ್ಲಿ ತಲ್ಲಣಗಳನ್ನುಂಟು ಮಾಡಿದ್ದವು. ಇಂಡಿಯಾದಲ್ಲಿ ಭಾರತೀಯ ಜನಸಂಘ ವಿಸರ್ಜನೆಗೊಂಡು ಭಾರತೀಯ ಜನತಾ ಪಕ್ಷ ಆಸ್ತಿತ್ವಕ್ಕೆ ಬಂದಿತ್ತು. ಸಂಘ ಪರಿವಾರಕ್ಕೆ 50 ವರ್ಷಗಳ ಧಾರ್ಮಿಕ-ಸಾಮಾಜಿಕ ಮೂಲಭೂತವಾದದ ಮತ್ತು 25 ವರ್ಷಗಳ ರಾಜಕೀಯದ ಅನುಭವಗಳು ಭವಿಷ್ಯದ ದಿನಗಳಿಗೆ ಅನುಕೂಲಕರವಾದ ದಾರಿಗಳನ್ನು ನಿರ್ಮಿಸಿತ್ತು. ಕೋಮುಗಲಭೆಗಳಿಗೆ ಕಾರಣವಾಗುವಂತಹ ಧಾರ್ಮಿಕ ವಿವಾದಗಳನ್ನು ನೇರವಾಗಿ ಪ್ರಚೋದಿಸಲು ವಿ ಎಚ್ ಪಿ ಸದಾ ಸನ್ನದ್ಧವಾಗಿರುತ್ತಿತ್ತು. ಏಕಾತ್ಮ ಯಗ್ಞ ಯಾತ್ರ, ಗಂಗಾ ಯಾತ್ರಾ, ಹಿಂದೂ ಧರ್ಮ ಸಮ್ಮೇಳನಗಳ ಮೂಲಕ ವಿ ಎಚ್ ಪಿ ನಿರಂತರವಾಗಿ ಧಾರ್ಮಿಕ ಮತೀಯವಾದವನ್ನು ಚಾಲನೆಯಲ್ಲಿಟ್ಟಿತ್ತು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಪಕ್ಷವನ್ನು ಅಖಾಡದಲ್ಲಿ ತೇಲಿಬಿಟ್ಟು ಆರೆಸ್ಸಸ್ ನೇಪಥ್ಯದಲ್ಲಿ ಕಾಯುತ್ತಿತ್ತು. ಇದಕ್ಕೆ 1980ರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದ ಕೋಮು ಗಲಭೆಗಳು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಆಗ ಕಾಂಗ್ರೆಸ್ ನ ವಿ.ಪಿ.ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಮತ್ತು ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಪೋಲೀಸ್ ವ್ಯವಸ್ಥೆ ಪರೋಕ್ಷವಾಗಿ ಬಹುಸಂಖ್ಯಾತರ ಲುಂಪೆನ್ ಗುಂಪಿನ ಪರವಾಗಿ ಸಕ್ರಿಯವಾಗಿ ವರ್ತಿಸಿದ್ದು ಆರೆಸ್ಸಸ್ ನ ಮತೀಯವಾದಕ್ಕೆ ದೊಡ್ಡ ಶಕ್ತಿಯನ್ನು ನೀಡಿತ್ತು. 1981ರಲ್ಲಿ ತಮಿಳು ನಾಡಿನ ಮೀನಾಕ್ಷಿಪುರಂನಲ್ಲಿ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಬೇಸತ್ತ ತಳಸಮುದಾಯಗಳು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಈ ಘಟನೆಯನ್ನು ಆರೆಸ್ಸಸ್ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಸಂಪೂರ್ಣವಾಗಿ ಬಳಸಿಕೊಂಡಿತು.

ಆಗ ರಾಜೀವ್ ಗಾಂಧಿಯವರು ತೆಗೆದುಕೊಂಡ ಎರಡು ರಾಜಕೀಯ ಅಪ್ರಬುದ್ಧ, ತಪ್ಪಾದ ಮತ್ತು ಅಪಾಯಕಾರಿ ನಿಲುವುಗಳು ಇಡೀ ದೇಶದ ಸೆಕ್ಯುಲರ್ ಸ್ವರೂಪವನ್ನೇ ಬದಲಾಯಿಸಿಬಿಟ್ಟಿತು. 1985ರಲ್ಲಿ ಶಾ ಬಾನು ಪ್ರಕರಣದಲ್ಲಿ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಮುಸ್ಲಿಂ ಮೂಲಭೂತವಾದಿಗಳ ಪರವಾಗಿ ವರ್ತಿಸಿದ್ದು ಸಂಘ ಪರಿವಾರಕ್ಕೆ ಬಲು ದೊಡ್ಡ ರಾಜಕೀಯ ವೇದಿಕೆಯನ್ನು ಕಲ್ಪಿಸಿತು. ಈ ಪ್ರಕರಣದಿಂದ ಬಿಜೆಪಿ ರಾಜಕೀಯ ಲಾಭ ಪಡೆಯುವುದನ್ನು ತಡೆಯಲಿಕ್ಕಾಗಿ ಮತ್ತು ಹಿಂದೂ ಧರ್ಮದ ಮುಖಂಡರ ಒತ್ತಡ ತಂತ್ರಕ್ಕೆ ಮಣಿದು 1986ರಲ್ಲಿ ವಿವಾದಿತ ಬಾಬರಿ ಮಸೀದಿಯ ಬೀಗಗಳನ್ನು ತೆರೆಸಿ ರಾಮನ ಮೂರ್ತಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟರು. ಇಸ್ಲಾಂ ಮತ್ತು ಹಿಂದೂ ಮೂಲಭೂತವಾದಿಗಳನ್ನು ಓಲೈಸಲು ಹೊರಟ ರಾಜೀವ್ ಗಾಂಧಿ ಬಿಜೆಪಿ ಪಕ್ಷಕ್ಕೆ ವಿಶಾಲವಾದ ರಾಜಕೀಯ ವೇದಿಕೆಯನ್ನು ಕಲ್ಪಿಸಿಕೊಟ್ಟರು. ಇದರ ಫಲವಾಗಿ 1980-1989ರ ಕಾಲಘಟ್ಟದಲ್ಲಿ ಧರ್ಮಗಳ ಧೃವೀಕರಣ ಮತ್ತು ಜಾತಿಗಳ ಧೃವೀಕರಣದ ರಾಜಕೀಯ-ಸಾಮಾಜಿಕ ಭೂಮಿಕೆಗಳು ರೂಪುಗೊಂಡಿತ್ತು. ಇದರ ಸಂಪೂರ್ಣ ಜವಬ್ದಾರಿಯನ್ನು ಸಂಘ ಪರಿವಾರದೊಂದಿಗೆ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಹಂಚಿಕೊಳ್ಳಬೇಕಾಗುತ್ತದೆ. ಈ ಕಾಲದಲ್ಲಿ ಪ್ರತಿ 10 ಮಿಲಿಯನ್ ಗೆ ಸರಾಸರಿಯಾಗಿ 13 ಜನ ಸಾವನ್ನಪ್ಪಿದ್ದಾರೆ.

ನಂತರದ 1990-2002 ರ ಕಾಲಘಟ್ಟದಲ್ಲಿ ಸಂಘ ಪರಿವಾರ ತಾನು ಕಲಿತ ಎಲ್ಲಾ ಪಟ್ಟುಗಳನ್ನು ಬಳಸಿಕೊಂಡು ಧರ್ಮrajiv_gandhi ಮತ್ತು ಜಾತಿ ಸಂಪೂರ್ಣವಾಗಿ ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಯಿತು. ಇದೆಲ್ಲದರ ತಾರ್ಕಿಕ ಅಂತ್ಯವೆನ್ನುವಂತೆ ಹಿಂಸಾತ್ಮಕವಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಇಡೀ ದೇಶವು ಬಹುಸಂಖ್ಯಾತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಎನ್ನುವ ಇಬ್ಭಾಗಕ್ಕೆ ಬಲಿಯಾಗಬೇಕಾಯಿತು. ಅಲ್ಲಿಯವರೆಗೆ ಈ ಕೋಮುವಾದವನ್ನು ಕೇವಲ ಎರಡು ವಿಭಿನ್ನ ಧರ್ಮಗಳ ಲುಂಪೆನ್ ಗುಂಪುಗಳ ನಡುವಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಲಹವೆಂದು ಅರ್ಥೈಸಲಾಗುತ್ತಿತ್ತು. ಆದರೆ ಬಾಬರಿ ಮಸೀದಿಯ ದ್ವಂಸದ ನಂತರ ಬಹುಸಂಖ್ಯಾತರೆಲ್ಲರೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಧೃವೀಕರಣಗೊಂಡಿದ್ದು ಸಂಘ ಪರಿವಾರದ ಲುಂಪೆನ್ ಗುಂಪುಗಳಿಗೆ ಬಲವನ್ನು ಒದಗಿಸಿತು. 2002ರಲ್ಲಿ ಗುಜರಾತ್ ನ ಗೋಧ್ರಾ ದುರಂತದ ನಂತರ ನಡೆದ ಮುಸ್ಲಿಂ ಸಮುದಾಯದ ಹತ್ಯಾಕಾಂಡದಲ್ಲಿ, ಹೆಣ್ಣುಮಕ್ಕಳು, ಮಕ್ಕಳನ್ನು ಇರಿದು ಹಲ್ಲೆ ಮಾಡಿ, ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದನ್ನು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಸಮಾನವಾಗಿರುತ್ತವೆ ಎಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಫ್ಯಾಸಿಸಂನ ಮುಖವನ್ನು ಬಹಿರಂಗೊಳಿಸುತ್ತದೆ. ಪ್ರತಿ ಕೋಮು ಗಲಭೆಗಳು ನಡೆದಾಗಲೆಲ್ಲ ಇದು ಮತ್ತೆ ಮರುಕಳಿಸುತ್ತದೆಯೇ ಎನ್ನುವ ಪ್ರಶ್ನೆಗಳು ಇಲ್ಲವೆಂದು ಹೇಳಲಿಕ್ಕಾಗದು ಎನ್ನುವ ಉತ್ತರ ದೊರಕುತ್ತಿತ್ತು. ಆದರೆ ಇಂದು ಇಡೀ ಚಿತ್ರಣವೇ ಬದಲಾಗಿದೆ. 2002ರ ಗುಜರಾತ್ ಹತ್ಯಾಕಾಂಡದ ನಂತರ ಸಂಘ ಪರಿವಾರ ಅಂಗ ಸಂಸ್ಥೆಗಳಾದ ವಿ ಎಚ್ ಪಿ ಮತ್ತು ಬಜರಂಗದಳಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಠ ಮಾದರಿಯಲ್ಲಿ ಕೋಮು ಗಲಭೆಗಳನ್ನು ಹುಟ್ಟುಹಾಕುತ್ತಿದೆ. ಚುನಾವಣೆಗೆ ಕೆಲವು ತಿಂಗಳುಗಳ ಮುಂಚೆ ಹಿಂಸಾಚಾರವನ್ನು ಸೃಷ್ಟಿಸಲಾಗುತ್ತದೆ. ಅದರ ಮೂಲಕ ಧರ್ಮ ಮತ್ತು ಜಾತಿಗಳ ಧೃವೀಕರಣ ಸಾಧಿಸುತ್ತದೆ. ಒಮ್ಮೆ ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಕೆಲವು ವರ್ಷಗಳ ಕಾಲ ಕೋಮು ಗಲಭೆಗಳು ಸಂಭವಿಸುವುದೇ ಇಲ್ಲ. 2002ರಿಂದ ಇಲ್ಲಿಯವರೆಗೂ ಗುಜರಾತ್ ನಲ್ಲಿ ಕೋಮು ಗಲಭೆಗಳು ಸಂಭವಿಸಿಲ್ಲ. ಇದು ಒಂದು ಉದಾಹರಣೆ ಮಾತ್ರ.

( ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ‘ಹಿಂದುತ್ವದ ರಾಜಕಾರಣ’ ಪುಸ್ತಕದ ಆಯ್ದ ಭಾಗ)

56 ಇಂಚಿನ ಎದೆಯ ಪರಿಣಾಮ : ವಿಷಗಾಳಿಯ ಭಾರತ

-ಬಿ.ಶ್ರೀಪಾದ ಭಟ್

ಒಂದು, ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಪ್ರಯುಕ್ತ 2, ಎಪ್ರಿಲ್ 2014 ರಂದು ಬಿಹಾರ್ ನ ನವಾಡ ದಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣದ ಸಾರಾಂಶ “ನಾನು ದ್ವಾರಕಾ ನಗರದಿಂದ ಬಂದಿದ್ದೇನೆ ಮತ್ತು ದ್ವಾರಕೆಯೊಂದಿಗೆ ಯದುವಂಶಿಗಳಿಗೆ (ಬಿಹಾರದ ಯಾದವ ಸಮುದಾಯವನ್ನು ಉದ್ದೇಶಿಸಿ) modi_bjp_conclaveನೇರವಾದ ಸಂಪರ್ಕವಿದೆ. ಈ ಸಂಬಂಧದಿಂದಾಗಿ ನಾನು ಇಂದು ನನ್ನ ಮನೆಯಲ್ಲಿದ್ದೇನೆ ಎನ್ನುವ ಭಾವನೆ ಉಂಟಾಗುತ್ತಿದೆ. ಆದರೆ ಶ್ರೀ ಕ್ರಿಷ್ಣನನ್ನು ಪೂಜಿಸುವ, ಗೋವನ್ನು ತಮ್ಮ ದಿನಬಳಕೆಗೆ ಬಳಸುವ, ಪೂಜಿಸುವ ಇದೇ ಯಾದವರ ನಾಯಕರು ಈ ಪ್ರಾಣಿಗಳನ್ನು ಹೆಮ್ಮೆಯಿಂದ ನಾಶಪಡಿಸುವ ಜನರೊಂದಿಗೆ ಸೌಹಾರ್ದಯುತವಾಗಿ ವ್ಯವಹಾರ ಮಾಡುತ್ತಿದ್ದಾರೆ. ನಾವು ‘ಹಸಿರು ಕ್ರಾಂತಿ’ (ಗ್ರೀನ್ ರೆವಲ್ಯೂಶನ್)ಯ ಕುರಿತಾಗಿ ಕೇಳಿದ್ದೇವೆ, ನಾವು ಬಿಳಿ ಕ್ರಾಂತಿ (ವೈಟ್ ರೆವಲ್ಯೂಶನ್) ಕುರಿತಾಗಿ ಕೇಳಿದ್ದೇವೆ. ಆದರೆ ದೆಹಲಿ ಸರ್ಕಾರಕ್ಕೆ (ಯುಪಿಎ2) ಈ ಕ್ರಾಂತಿಗಳು ಬೇಕಾಗಿಲ್ಲ. ಅವರು ಇಂದು ಪಿಂಕ್ ರೆವಲ್ಯೂಶನ್ ಕುರಿತಾಗಿ ಸಮರ್ಥನೆಗೆ ತೊಡಗಿದ್ದಾರೆ. ಇದೇನೆಂದು ನಿಮಗೆ ಗೊತ್ತೆ (ಜನರನ್ನು ಉದ್ದೇಶಿಸಿ). ಅದು ಅವರ ಆಟ. ಅವರು ದೇಶವನ್ನು ಕತ್ತಲೆಯಲ್ಲಿಟ್ಟಿದ್ದಾರೆ. ನೀವು ಪ್ರಾಣಿಯೊಂದನ್ನು ವಧೆ ಮಾಡಿದಾಗ ಆಗ ಆ ಮಾಂಸದ ಬಣ್ಣವು ಪಿಂಕ್ ಆಗಿರುತ್ತದೆ. ಇದನ್ನೇ ‘ಪಿಂಕ್ ರೆವಲ್ಯೂಶನ್’ ಎಂದು ಕರೆಯುತ್ತಾರೆ. ಕೇಂದ್ರ ಸರ್ಕಾರವು ಈ ಮಾಂಸದ ರಫ್ತಿನಿಂದ ಅತ್ಯಧಿಕ ಆದಾಯ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಮ್ಮ ದಿನಬಳಕೆಯ ವಸ್ತುಗಳನ್ನು ಕದ್ದು ಬಾಂಗ್ಲಾ ದೇಶಕ್ಕೆ ಸಾಗಿಸಲಾಗುತ್ತಿದೆ. ದೇಶದಾದ್ಯಾಂತ ಈ ವಧಾಖಾನೆಗಳು ಕ್ರಿಯಾಶೀಲವಾಗಿವೆ. ಅಷ್ಟೇ ಅಲ್ಲ ದೆಹಲಿ ಸರ್ಕಾರವು ರೈತರಿಗೆ, ಯಾದವರಿಗೆ ಗೋವುಗಳನ್ನು ಪಾಲನೆ ಮಾಡಲು ಸಬ್ಸಿಡಿಯನ್ನು ಕೊಡುವುದಿಲ್ಲ, ಆದರೆ ಈ ಗೋವುಗಳನ್ನು ವಧೆ ಮಾಡುವ ವಧಾಖಾನೆಗಳಿಗೆ, ಹಾಲಿನ ನದಿಗಳನ್ನು ನಾಶಮಾಡುವವರಿಗೆ ಸಬ್ಸಿಡಿಯನ್ನು ಕೊಡುತ್ತದೆ. 2012ರಲ್ಲಿ ಹಿಂದೂ ರಾಜನೆಂದು ಖ್ಯಾತಿ ಗಳಿಸಿದ ಮಹಾರಾಣಾ ಪ್ರತಾಪ್ ಜನ್ಮ ದಿನದ ಸಮಾರಂಭದಲ್ಲಿ ಮಾತನಾಡುತ್ತಾ ನರೇಂದ್ರ ಮೋದಿಯವರು ರಾಣಾ ಪ್ರತಾಪ್ ಗೋರಕ್ಷಣೆಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಆದರೆ ಇಂದು ಏನಾಗುತ್ತಿದೆ? ಸುಪ್ರೀಂ ಕೋರ್ಟ ಸಹ ಇಂದು ರಾಷ್ಟ್ರೀಯ ಗೋವು ಸಂರಕ್ಷಣ ಮಸೂದೆಯ ಅವಶ್ಯಕತೆ ಇದೆ ಎಂದು ಹೇಳುತ್ತಿದೆ. ಆದರೆ ವೋಟ್ ಬ್ಯಾಂಕ್ ರಾಜಕಾರಕ್ಕಾಗಿ ಕೇಂದ್ರ ಸರ್ಕಾರವು ಈ ಮಸೂದೆಯನ್ನು ತರಲು ತಿರಸ್ಕರಿಸುತ್ತಿದೆ. ಹಣವನ್ನು ಗಳಿಸಲು ಗೋ ಮಾತೆಯನ್ನು ವಧೆ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ. (ಕೃಪೆ ; ಶೋಯೆಬ್ ಡೇನಿಯಲ್).

28, ಸೆಪ್ಟೆಂಬರ್, 2015ರಂದು ಪಶ್ಚಿಮ ಉತ್ತರ ಪ್ರದೇಶದ ದಾದ್ರಿ ಗ್ರಾಮದಲ್ಲಿ ಕಮ್ಮಾರ ವೃತ್ತಿಯನ್ನು ಮಾಡುತ್ತಿದ್ದ 51 ವರ್ಷದmohamad-ikhlaq-or-akhlaq-dadri ‘ಮೊಹಮ್ಮದ್ ಅಕ್ಲೇಖ್ ಅವರನ್ನು ತಮ್ಮ ಮನೆಯಲ್ಲಿ ದನದ ಮಾಂಸವನ್ನು ಬಚ್ಚಿಟ್ಟಿದ್ದಾರೆ ಎಂದು ಆಪಾದಿಸಿ ಹಿಂದೂ ಮತಾಂಧ ಯುವಕರು ಹತ್ಯೆ ಮಾಡಿದರು. ಆದರೆ ಅಕ್ಲೇಖ್ ಒಬ್ಬ ಸರಳ ಮುಸ್ಲಿಂ ನಾಗರಿಕರಾಗಿದ್ದರು. ಅವರ ಹಿರಿಯ ಮಗ ಸರ್ತಾಜ್ ಅವರು ಬಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಕಿರಿಯ ಮಗ ದಾನೀಶ್ ಈ ಮತಾಂಧರ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವ ಮರಣದ ನಡುವೆ ಹೋರಾಡುತ್ತಿದ್ದಾರೆ..

ಈ ಹತ್ಯೆಯನ್ನು ಖಂಡಿಸುತ್ತಾ ಶಿವ ವಿಶ್ವನಾಥನ್ ಅವರು ಹಿಂಸೆಯು ಮನಸ್ಸಿನ ಭಾವನೆಗಳ ಅಭಿವ್ಯಕ್ತಿ. ಈ ಹಿಂಸೆಯು ವರ್ಗೀಕರಣದ ತರ್ಕವನ್ನು ಅನುಸರಿಸುತ್ತದೆ ಮತ್ತು ಐಡಿಯಾಲಜಿಯು ಇದನ್ನು ಛಲದಿಂದ ಸಮರ್ಥಿಸಿಕೊಳ್ಳುತ್ತದೆ, ಇದು ನನ್ನನ್ನು ಭಯಗೊಳಿಸುತ್ತದೆ. ಒಬ್ಬ ವ್ಯಕ್ತಿ ಸತ್ತಿದ್ದಾನೆ ಇಲ್ಲಿ ನಾವು ಬೀಫ್ ಕುರಿತಾಗಿ ಒಂದು ಬಗೆಯ ದೇಶಪ್ರೇಮವನ್ನು ಮುಖ್ಯವಾಗಿಟ್ಟುಕೊಂಡು ಚರ್ಚೆಯಲ್ಲಿ ತೊಡಗಿದ್ದೇವೆ. 50 ವರ್ಷದ ಮೊಹಮ್ಮದ್ ಅವರು ಕೊಲೆಗೀಡಾಗಿದ್ದಾರೆ. ಆದರೆ ಈ ಘಟನೆಯನ್ನು ಬಳಸಿಕೊಳ್ಳುತ್ತಿರುವ ಬಗೆಯು ಈ ದುಷ್ಕೃತ್ಯಕ್ಕೆ ಒಂದು ಬಗೆಯ ಕೇಡಿನ ಕವಚವನ್ನು ತೊಡಿಸಿದೆ. ಆಹಾರದ ತರ್ಕವು ಕೊಲೆಯ ತರ್ಕವಾಗಿ ವಿಶದಪಡಿಸಿದೆ.

ಒಂದು ಪವಿತ್ರವಾದ ಗೋವನ್ನು ರಕ್ಷಿಸಲು ನೀವು ಮನುಷ್ಯನ ಪವಿತ್ರತೆಯನ್ನು ನಿರಾಕರಿಸಬಹುದು ಮತ್ತು ಕೇವಲ ಅನುಮಾನದ ಅಂಶಗಳಿಂದಲೇ ಅವನನ್ನು ಕೊಲೆ ಮಾಡಬಹುದು. ಬಿಜೆಪಿ ರಾಜಕಾರಣಿಗಳು ಬಹಿರಂಗವಾಗಿ ರಂಗಕ್ಕೆ ಧುಮುಕಿ ಈ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿಯವರು ಮಾತ್ರ ಮೌನದಿಂದಿದ್ದಾರೆ. ಈ ಪೂರ್ವಸಂಕಲ್ಪದ ಮೌನವು ಈ ಚಿಂತಾದಾಯಕ ಪರಿಸ್ಥಿತಿಗೆ ಕೇಡಿನ ಸ್ಪರ್ಶವನ್ನು ನೀಡಿದೆ. ನರೇಂದ್ರ ಮೋದಿಯವರ ಮೌನವು ವಿಶ್ಲೇಷಣೆಗೆ ಯೋಗ್ಯವಾಗಿದೆ. ಈ ವ್ಯಕ್ತಿಯು ಹಿಂದೊಮ್ಮೆ ಮನಮೋಹನ್ ಸಿಂಗ್ ಅವರ ದೌರ್ಬಲ್ಯವನ್ನು ಗೇಲಿ ಮಾಡಿದ್ದರು. ಆದರೆ ಇಂದು ಸ್ವತಃ ತಾವೇ ಒಬ್ಬ ದೌರ್ಬಲ್ಯ ರಾಜಕಾರಣಿಯಾಗಿದ್ದಾರೆ. ಮೋದಿಯವರ ಈ ಮೌನವು ದುಖತಪ್ತವಾದ ಶೋಕದ ಮೌನವಲ್ಲ. ಭಂಡತನದಿಂದ ಕೂಡಿದ ಈ ಮೌನವು ಬಲಿಪಶುವಿಗೆ ಘನತೆಯನ್ನು ನಿರಾಕರಿಸುತ್ತದೆ. ಇಂಡಿಯಾದ ನಾಗರಿಕರಿಗಿಂತಲು ನೀವು ಹೆಚ್ಚಿನ ಭಾರತೀಯರು ಎಂದು ಅನಿವಾಸಿ ಭಾರತೀಯರಿಗೆ ಹೇಳುವ ಪ್ರಧಾನ ಮಂತ್ರಿಯು ಭಾರತದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವವನ ತಂದೆ ಕೊಲೆಯಾದಾಗ ಅದು ನಡೆದೇ ಇಲ್ಲವೆಂಬಂತೆ ಹಗಲುವೇಷದಿಂದ ವರ್ತಿಸುತ್ತಾರೆ. ಮೋದಿಯವರ ಈ ವರ್ತನೆಯು ದಾದ್ರಿ ಗ್ರಾಮದ ಈ ಘಟನೆಯು ಮುಝಫರ್ ನಗರದಷ್ಟೇ ಭಯಹುಟ್ಟಿಸುತ್ತದೆ ಎಂದು ಹೇಳುತ್ತಾರೆ.

ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಮೌನವು ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ, ತಾನು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎನ್ನುವ ಠೇಂಕಾರದಿಂದ ಕೂಡಿದೆ. ಈ ದೇಶಕ್ಕೂ ತಾನೂ ಏನನ್ನೂ ಉತ್ತರಿಸುವ ಅಗತ್ಯವಿಲ್ಲ ಎನ್ನುವಂತಿದೆ ಈ ವಿಶ್ವಾಸದ್ರೋಹದ ಮೌನ. ಆದರೆ ಮೋದಿಯವರ ಈ ಮರೆಮೋಸದ ಮೌನವನ್ನು ಅಣಕಿಸುವಂತೆ ಬಿಜೆಪಿ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಮೋದಿ ಸರ್ಕಾರದ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಅವರು “ಈ ಕೊಲೆಯು ಒಂದು ಆಕಸ್ಮಿಕ ಘಟನೆ, ಮನೆಯಲ್ಲಿ ಮಟನ್ ಅನ್ನು ಗೋಮಾಂಸವೆಂದು ತಪ್ಪಾಗಿ ಭಾವಿಸಿದೆ ಅಷ್ಟೇ. ಅಷ್ಟಕ್ಕೂ ಈ ಗುಂಪು ಸುದೈವಕ್ಕೆ ಅಕ್ಲೇಖ್ ಅವರನ್ನು ಮಾತ್ರ ಕೊಲೆ ಮಾಡಿದೆ, ಇದು ಕಮ್ಯುನಲ್ ಹತ್ಯೆ ಅಲ್ಲ, ಏಕೆಂದರೆ ಈ ಹತ್ಯೆ ಮಾಡಿದ ಗುಂಪು ಮನೆಯಲ್ಲಿದ್ದ 17 ವಯಸ್ಸಿನ ಮಗಳನ್ನು ಅತ್ಯಾಚಾರ ಮಾಡಲಿಲ್ಲ” ಎಂದು ವ್ಯಾಖ್ಯಾನಿಸಿದ್ದಾರೆ.

ಉ.ಪ್ರ.ದ ಪಶ್ಚಿಮ ಘಟಕದ ಬಿಜೆಪಿ ಉಪಾಧ್ಯಕ್ಷ ಶ್ರೀಚಂದ್ ಶರ್ಮ ಅವರು “ಬಲಿಪಶುವಾದ ಕುಟುಂಬವನ್ನು ಗೋಹತ್ಯೆDadri-lynching ನಿಷೇಧದ ಕಾನೂನಿನ ಅಡಿಯಲ್ಲಿ ಕೇಸು ದಾಖಲಿಸಬೇಕು” ಎಂದು ಹೇಳಿದ್ದಾರೆ. ಮುಜಫರ್ ನಗರದ ಕೋಮು ಗಲಭೆಯ ಆರೋಪಿ ಬಿಜೆಪಿ ಸಂಸದ ಸಂಗೀತ್ ಸೋಮ್ ಅವರು “ಒಂದು ಧರ್ಮದವರನ್ನು ಓಲೈಸಲು ಅಕ್ಲೇಖ್ ಅವರ ಕೊಲೆಯ ಹಿನ್ನಲೆಯಲ್ಲಿ ಅಮಾಯಕರನ್ನು ಬಂಧಿಸಿದರೆ ತಕ್ಕ ಉತ್ತರವನ್ನು ಕೊಡುತ್ತೇವೆ” ಎಂದು ಎಚ್ಚರಿಸಿದ್ದಾರೆ. ಆರೆಸೆಸ್ ಸಂಚಾಲಕ, ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಅವರು “ಮೊಹ್ಮದ್ ಅಕ್ಲೇಖ್ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದಾರೆ” ಎಂದು ಬರೆದಿದ್ದಾರೆ. ಈ ಮತೀಯವಾದಿ ಸಂಘ ಪರಿವಾರದ ನಾಯಕರು ಅಕ್ಲೇಖ್ ಅವರ ಕುಟುಂಬ ಬೀಫ್ ತಿಂದಿದ್ದಾರೆ ಎನ್ನುವ ಅನುಮಾನದ ಮೇಲೆ ಅವರ ಕೊಲೆಯಾಗಿದೆ. ಆದರೆ ಅವರ ಮನೆಯಲ್ಲಿ ಇದ್ದದ್ದು ಮಟನ್ ಎಂದು ಸಾಬೀತಾಗಿರುವುದರಿಂದ ಅಕ್ಲೇಖ್ ಅವರ ಕುಟುಂಬ ನಿರಪರಾಧಿಗಳು. ಆದರೆ ಇದು ಒಂದು ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕುತ್ತಿದ್ದಾರೆ.

ಇಲ್ಲಿ ಸಂಘ ಪರಿವಾರದ ಕ್ರೌರ್ಯ ಯಾವ ಮಟ್ಟದಲ್ಲಿದೆಯೆಂದರೆ “ಒಂದು ವೇಳೆ ಅಕ್ಲೇಖ್ ಅವರ ಮನೆಯಲ್ಲಿರುವುದು ಬೀಫ್ ಎಂದು ಸಾಬೀತಾಗಿದ್ದರೆ ಈ ಕೊಲೆ ಸಮರ್ಥನೀಯವಾಗಿರುತ್ತಿತ್ತು” ಎನ್ನುವಂತಿದೆ. ಈ ಬೀಫ್ ತಿನ್ನುವದರ ವಿರುದ್ಧದ ಪ್ರತಿಭಟನೆಗಳನ್ನು 19ನೇ ಶತಮಾನದಲ್ಲಿ ಆರ್ಯ ಸಮಾಜದ ದಯಾನಂದ ಸರಸ್ವತಿ ಅವರು ಉದ್ಘಾಟಿಸಿದರು. ಇದು ಇಂದು ದಾದ್ರಿಯ ಅಕ್ಲೇಖ್ ಅವರ ಕೊಲೆಯವರೆಗೆ ಬಂದು ತಲುಪಿದೆ. ಈ ಮಧ್ಯದ ದಶಕಗಳಲ್ಲಿ ಅನೇಕ ಬಗೆಯ ಗೋಹತ್ಯ ನಿಷೇಧದ ಉದ್ರೇಕಕಾರಿ ಭಾಷಣಗಳು, ಬೀಫ್ ತಿನ್ನುವವರ ಮೇಲೆ ಹಲ್ಲೆ, ಕೊಲೆಗಳು ನಡೆದುಹೋಗಿವೆ. ರಾಷ್ಟ್ರೀಯವಾದದ ಫ್ರೇಮಿನಲ್ಲಿ ಮತೀಯವಾದ, ಬಹುಸಂಖ್ಯಾತ ತತ್ವ, ಪುರೋಹಿತಶಾಹಿಗಳೂ ಬೆರೆತು ಹೋಗಿವೆ.

ಈ ಸಂಘ ಪರಿವಾರದ ಮೂಲಭೂತವಾದದ ವರ್ತನೆಗಳು ಮತ್ತು ಕೋಮುವಾದದ ಫೆನಟಿಸಂ ಸಮಾಜದಲ್ಲಿ ಒಂದು ಬಗೆಯ ಕ್ರೌರ್ಯ ಮತ್ತು ಹಿಂಸೆಯನ್ನು ಹುಟ್ಟುಹಾಕಿದ್ದರೆ ಮತ್ತೊಂದೆಡೆ 2014ರಲ್ಲಿ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ಸ್ಲೋಗನ್ನೊಂದಿಗೆ ಯುವ ಜನತೆ ಮತ್ತು ಮಧ್ಯಮವರ್ಗವನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದ ಮೋದಿಯವರ ಒಂದು ವರ್ಷದ ಆಡಳಿತ ಸಂಪೂರ್ಣವಾಗಿ ಹತೋಟಿ ಕಳೆದುಕೊಂಡಿದೆ. ಆರಂಭದಿಂದಲೂ ಈ ಬಕಾಸುರ ಬಂಡವಾಳಶಾಹಿಯ ಆರಾಧಕ ಮೋದಿಯವರ ಅನುಸಾರ ಅಭಿವೃದ್ಧಿಯೆಂದರೆ ಉಪಭೋಗ ಸಂಸ್ಕೃತಿಯ ವೈಭವೀಕರಣ, ಸರಕನ್ನು ಕೊಳ್ಳಲು ಹಣದ ಗಳಿಕೆ ಮತ್ತು ಡಿಜಿಟಲ್ ಇಂಡಿಯಾ ಎನ್ನುವ ಪಾಶ್ಚಿಮಾತ್ಯ ತಂತ್ರಜ್ಞಾನದ ಆಮದು ಹೀಗೆ ಗೊತ್ತುಗುರಿಯಿಲ್ಲದೆ ಸಾಗುತ್ತದೆ. ಆರಂಭದಲ್ಲಿ ಅಬ್ಬರ ಪ್ರಚಾರದೊಂದಿಗೆ ಶುರುವಾದ ಜನಧನ ಯೋಜನೆಯಡಿಯಲ್ಲಿ ಬಹುಪಾಲು ಬ್ಯಾಂಕುಗಳಲ್ಲಿ ಶೂನ್ಯ ಖಾತೆಗಳಿದ್ದರೆ, ಒಂದು ವರ್ಷದ ನಂತರವೂ ಸ್ವಚ್ಛ ಭಾರತ ಯೋಜನೆಯು ಇನ್ನೂ ಪ್ರಾರಂಭದ ಹಂತದಲ್ಲೇ ಮಲಗಿದೆ ಮತ್ತು ಇದರಲ್ಲಿ ಭಾಗವಹಿಸಿದ ರಾಜಕಾರಣಿಗಳ ಬಂಡವಾಳವೂ ಬಯಲಾಗಿದೆ.

ಅತ್ಯಂತ ಅಬ್ಬರದ ಮಾರ್ಕೆಟಿಂಗ್ ನಿಂದ ಪ್ರಚಾರಗೊಳ್ಳುತ್ತಿರುವ ‘ಡಿಜಿಟಲ್ ಇಂಡಿಯಾ’ ಎನ್ನುವ ಇ ಆಡಳಿತದ ಆಶಯಗಳು ಫೇಸ್ಬುಕ್ ನ ಇಂಟನರನೆಟ್.ಆರ್ಗ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ಅಪಾದನೆಗಳ ಜೊತೆಗೆ ಇಲ್ಲಿನ ಬಳಕೆದಾರರಿಗೆ ಅನೇಕ ಬಗೆಯಲ್ಲಿ ನಿರ್ಬಂಧನೆಗಳನ್ನು ಒಡ್ಡುತ್ತದೆ ಮತ್ತು ಅವರ ವೈಯುಕ್ತಿಕ ಸ್ವಾತಂತ್ರವನ್ನು ಮೊಟಕುಗೊಳಿಸುತ್ತದೆ. ಅಂಗುಶ್ಕಾಂತ ಅವರು “ದುಖತಪ್ತ ಮೊಹಮ್ಮದ್ ಅಕ್ಲೇಖ್ ಕುಟುಂಬಕ್ಕೆ ಈ ಡಿಜಿಟಲ್ ಇಂಡಿಯಾ ಯಾವ ಉಪಕಾರವನ್ನು ಮಾಡಿದೆ? ವಾಟ್ಸ್ಅಪ್, ಫೇಸ್ ಬುಕ್, ಟಿಟ್ಟರ್ ನಂಹ ಸಾಮಾಜಿಕ ಜಾಲತಾಣಗಳು ಯಾವ ಬಗೆಯಲ್ಲಿ ಸರ್ತಾಜ್ ಅವರನ್ನು ಡಿಜಿಟಲ್ ಇಂಡಿಯಾದ ಮೂಲಕ ನ್ಯಾಯವನ್ನು ಒದಗಿಸಬಲ್ಲವು? ಯುವ ಮಹಿಳೆಯು ತನ್ನ ಕೆಲಸದ ಜಾಗದಲ್ಲಿ ದಿನನಿತ್ಯ ಅನುಭವಿಸುವ ತಾರತಮ್ಯ ಮತ್ತು ಶೋಷಣೆಗೆ ಈ ಅಭಿವೃದ್ಧಿ ಈ ಮೇಲಿನ ಬಗೆಯದಾಗಿ ಸ್ಪಂದಿಸುತ್ತದೆ ಎನ್ನುವ ಸತ್ಯಸಂಗತಿಯು ಕೊಲೆಯಾದ ಅಕ್ಲೇಖ್ ನ ಪಾಲಿಗೂ ಸಹ ಸತ್ಯವಾಗಿರುತ್ತದೆ’ ಎಂದು ಹೇಳುತ್ತಾರೆ.

ಸಂಘ ಪರಿವಾರದ ಬ್ರಾಹ್ಮಿನಿಸಂ ಮತ್ತು ಮೋದಿಯವರ ಕ್ಯಾಪಿಟಲಿಸಂ ಎರಡೂ ಸಸ್ಯಾಹಾರ ಮತ್ತುgujarat_violence_1 ಮಾಂಸಾಹಾರವನ್ನು ದೇಶಪ್ರೇಮ ಆಧಾರದಲ್ಲಿ ವರ್ಗೀಕರಿಸಿದೆ. ಮಾಂಸಹಾರಿಯು ದೇಶದ್ರೋಹಿ ಎನ್ನುವ ತಾರ್ಕಿಕ ಅಂತ್ಯಕ್ಕೆ ಮುಟ್ಟಲು ತನ್ನ ಫ್ಯಾಸಿಸಂ ಚಟುವಟಕೆಗಳ ಮೂಲಕ ಸಂಘ ಪರಿವಾರವು ಪ್ರಜಾಪ್ರಭುತ್ವದ ಬುನಾದಿಯನ್ನು ಭಗ್ನಗೊಳಿಸುತ್ತಿದೆ. ಇಂದು ಅಹಾರವನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು, ದಲಿತರನ್ನು ಕೊಲೆಯ ತರ್ಕದಲ್ಲಿ ಅಂತ್ಯಗೊಳಿಸುವುದನ್ನು ದಾದ್ರಿ ಗ್ರಾಮದ ಹಿಂಸೆಯ ಮೂಲಕ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಇಲ್ಲಿ ಬಾಬರಿ ಮಸೀದಿಯ ಧ್ವಂಸ ಮತ್ತು ಆ ಮೂಲಕ ನಡೆದ ಹತ್ಯೆಗಳು, 2002ರ ಗುಜರಾತ್ ಗಲಭೆ ಮತ್ತು ಹತ್ಯಾಕಾಂಡದ ನಂತರ ಇಂದು ದಾದ್ರಿ ಕೊಲೆಯು ಆಹಾರವೂ ಒಂದು ಸಂಕೇತವಾಗಿಯೂ ಆ ಮೂಲಕ ಅಲ್ಪಸಂಖ್ಯಾತರು ಮತ್ತು ತಳಸಮುದಾಯಗಳ ವಿರುದ್ಧ ಬುಹುಸಂಖ್ಯಾತ ಧರ್ಮದ ಹಿಂಸೆಗೆ ಯಾವುದೇ ಪ್ರತಿಬಂಧವಿಲ್ಲ ಮತ್ತು ನ್ಯಾಯಾಂಗದ ಹಂಗೂ ಇಲ್ಲವೆಂದು ಸಾಬೀತುಪಡಿಸುತ್ತದೆ. ಏಕೆಂದರೆ 2002ರಲ್ಲಿ ಹರ್ಯಾಣದ ಜಾಜ್ಜರ್ ಗ್ರಾಮದಲ್ಲಿ ದನವನ್ನು ಕೊಂದು ಮಾಂಸವನ್ನು ಸುಲಿಯುತ್ತಿದ್ದಾರೆ ಎನ್ನುವ ಅನುಮಾನದ ಮೇಲೆ 5 ದಲಿತರನ್ನು ಸಜೀವವಾಗಿ ಹತ್ಯೆ ಮಾಡಿದ್ದರು. ದಲಿತ ಯುವಕನೊಬ್ಬ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದಾಗ ಅವನನ್ನು ಜೀವಂತವಾಗಿ ಬೆಂಕಿ ಹಚ್ಚಿ ಸಾಯಿಸಿದರು. ಇದು ನಿಜಕ್ಕೂ ಘೋರವಾದ ದಿನಗಳು. ಇಲ್ಲಿನ ‘ಅನುಮಾನಿತರು’ ಮತ್ತು ‘ಅವಮಾನಿತರ’ ಬದುಕು ಬಹುಸಂಖ್ಯಾತ ಹಿಂದೂಗಳ ಹಂಗಿನಲ್ಲಿದೆ ಎನ್ನುವ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಸಂಘ ಪರಿವಾರ ತಮ್ಮ ಪುರೋಹಿತಶಾಹಿ ತತ್ವಗಳನ್ನು ಉಲ್ಲಂಘಿಸಿದವರನ್ನು ಸದೆಬಡೆಯಲು ತನ್ನ ಯುವಪಡೆಗೆ ಹತ್ಯಾರಗಳನ್ನು ಕೊಟ್ಟು ಹಲ್ಲೆ, ಕೊಲೆ, ಅತ್ಯಾಚಾರಕ್ಕೆ ಪ್ರಚೋದಿಸುತ್ತಿದೆ. ಮತ್ತೊಂದು ದೊಡ್ಡ ವ್ಯಂಗವೆಂದರೆ ಇದನ್ನು ಖಂಡಿಸುತ್ತಿರುವ ಕೆಲವೇ ಬಿಜೆಪಿ ನಾಯಕರು ಈ ಕೊಲೆಯಿಂದ ಮೋದಿಯವರ ಅಭಿವೃದ್ಧಿ ಯೋಜನೆಗಳಿಗೆ ಧಕ್ಕೆ ಉಂಟಾಗುತ್ತದೆ, ವಿದೇಶಗಳಲ್ಲಿ ಭಾರತದ ಮಾನ ಹರಾಜಾಗುತ್ತದೆ ಎಂದು ಗೋಳಿಡುತ್ತಿದ್ದಾರೆ.

ಆದರೆ ದುರಂತವೆಂದರೆ ಕಳೆದ 10 ವರ್ಷಗಳಲ್ಲಿ ಬಂಡವಾಳಶಾಹಿಗಳ ಅಭಿವೃದ್ಧಿಯನ್ನು ಸಾಧಿಸಿದ ಗುಜರಾತ್ ನಲ್ಲಿ ಕೋಮುವಾದಿ ಶಕ್ತಿಗಳು ಇಂದಿಗೂ ಬಲಶಾಲಿಯಾಗಿವೆ. ಧರ್ಮಗಳು ಸಂಪೂರ್ಣವಾಗಿ ಧೃವೀಕರಣಗೊಂಡು ಬಹುಸಂಖ್ಯಾತ ತತ್ವದ ಫೆನಟಿಸಂ ಮೇಲುಗೈ ಸಾಧಿಸಿದೆ. ಇದು ಮೋದಿ ಮಾದರಿಯ ಅಭಿವೃದ್ಧಿಗೆ ಜೀವಂತ ಸಾಕ್ಷಿ. ಏಕೆಂದರೆ ಈ ಮೋದಿ ಮಾದರಿಯ ಅಭಿವೃದ್ಧಿಯ ಪ್ರಭುತ್ವದಲ್ಲಿ ಫ್ಯಾಸಿಸಂ ಮತ್ತು ಮತೀಯವಾದ ಪ್ರಜಾಪ್ರಭುತ್ವದಲ್ಲಿ ಕರಗಿ ಹೋಗುವುದಿಲ್ಲ. ಇವು ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಧಾರ್ಮಿಕ ಮೂಲಭೂತವಾದದ ಅರಾಜಕತೆ ತುಂಬಿಕೊಳ್ಳುತ್ತದೆ. ಏಕೆಂದರೆ ಮೋದಿ ಮತ್ತವರ ಸಚಿವರು ಇದೇ ಆರೆಸೆಸ್ ನ ನೀರು ಕುಡಿದು ಬೆಳೆದವರು. ಅದರ ಎಲ್ಲಾ ಮತೀಯವಾದಿ ಚಿಂತನೆಗಳನ್ನು ಅರಗಿಸಿಕೊಂಡ ಸ್ವಯಂಸೇವಕರು. ಇವರೆಲ್ಲಾ ತಂತ್ರಜ್ಞಾನದ ಅಭಿವೃದ್ಧಿ, ಡಿಜಿಟಲ್ ಇಂಡಿಯಾ ಎಂದು ಮಾತನಾಡತೊಡಗಿದಾಗ ಅದು ಕೋಮುವಾದಿ ಪ್ರಚೋದನೆಗಳನ್ನು, ಉದ್ರೇಕಕಾರಿ ಭಾಷಣಗಳನ್ನು, ಧಾರ್ಮಿಕ ಫೆನಟಿಸಂ ಅನ್ನು ಪ್ರಚಾರ ಮಾಡುವ ತಂತ್ರಜ್ಞಾನವಾಗಿರುತ್ತದೆ. ಮೋದಿ ಅಭಿವೃದ್ಧಿ ತರಲು ಬಯಸಿರುವ ವಾಟ್ಸ್ ಅಪ್, ಟ್ವಟ್ಟರ್, ಫೇಸ್ಬುಕ್ ತಂತ್ರಜ್ಞಾನದಲ್ಲಿ ಬೀಫ್ ತಿನ್ನುವವರ, ಮಾಂಸಹಾರಿಗಳ ವಿರುದ್ಧ ಪ್ರಚೋದನಕಾರಿ ಬೋಧನೆಗಳು, ಇಸ್ಲಾಂ ಧರ್ಮದ ವಿರುದ್ಧ ನಿರಂತರ ವಾಗ್ದಾಳಿಗಳು ಮುಂತಾದ ಹಿಂದು ರಾಷ್ಟ್ರೀಯತೆಯ ಕೂಗುಮಾರಿತನವು ನಿರಂತರವಾಗಿ ಪ್ರಸಾರವಾಗುತ್ತಿರುತ್ತವೆ.

ಈ 56 ಇಂಚಿನ ಎದೆಯ ಪ್ರಧಾನ ಮಂತ್ರಿಯವರ ಆಡಳಿತದಲ್ಲಿ ಪ್ರಜಾಪ್ರಭುತ್ವ, ಮಾನವೀಯತೆ, ಮಾನವತವಾದDadri_Lynching_Sartaz ಮಣ್ಣುಗೂಡುತ್ತವೆ ಮತ್ತು ಇಂದು ಆಗುತ್ತಿರುವುದೂ ಇದೇ. ಈ ಮೋದಿ ಮತ್ತು ಅವರ ಸಂಘ ಪರಿವಾರ ಹಿಂಸೆಗೆ ಹೊಸ ಹೊಸ ಭಾಷ್ಯೆಗಳನ್ನು ಬರೆಯುತ್ತಿದ್ದಾರೆ. ಶಿವ ವಿಶ್ವನಾಥನ್ ಅವರು “ಮೋದಿ ಕೋಮುವಾದದ ತಿಳುವಳಿಕೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಆದರೆ ಮೋದಿಯವರು ಹಿಂಸೆಯ ಭಾಷೆಗಳಿಗೆ ಕೊಡುಗೆಯನ್ನು ನೀಡಿದ್ದಾರೆ” ಎಂದು ಹೇಳಿದ್ದಾರೆ. ಆದರೆ ಈ ಕೊಲೆಗಡುಕರ ಗುಂಪಿಗೆ ಮತ್ತು ಈ ಹಿಂದೂ ರಾಷ್ಟ್ರೀಯವಾದಿಗಳಿಗೆ ಅಕ್ಲೇಖ್ ಅವರ ಮಗ ಪ್ರತಿಕ್ರಯಿಸುತ್ತಾ “ಕೆಲ ದುಷ್ಟಶಕ್ತಿಗಳು ತಮ್ಮ ತಂದೆಯನ್ನು ಹತ್ಯೆ ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು, ಸಾರೇ ಜಹಾ ಸೆ ಅಚ್ಛಾ ಹಿಂದುಸ್ತಾನ್ ಹಮಾರಾ” ಎಂದು ಅತ್ಯಂತ ಘನತೆಯಿಂದ ನುಡಿದ. ಅಕ್ಲೇಖ್ ಅವರ ಕುಟುಂಬ ಅತ್ಯಂತ ಮಾನವೀಯತೆ, ಬುದ್ಧನ ಕರುಣೆಯಿಂದ ತಮ್ಮ ಘನತೆಯನ್ನು, ಜೀವಪರ ಗುಣಗಳ ಮೂಲಕ ಈ ಕೊಲೆಗಡುಕರಿಗೆ ಉತ್ತರಿಸಿದ್ದಾರೆ. ಆದರೆ ನಾವು ???

ಆರೆಸ್ಸಸ್ : ಫ್ಯಾಸಿಸಂ ಪರವಾದ ಒಲವು ಮತ್ತು ಸಮರ್ಥನೆ

-ಬಿ.ಶ್ರೀಪಾದ ಭಟ್

ಈ ಆರೆಸ್ಸಸ್ ನ ಹುಟ್ಟೇ ಅತ್ಯಂತ ಕುತೂಹಲಕರ. ಇದಕ್ಕೆ ಬ್ರಾಹ್ಮಣ್ಯದ ಹಿನ್ನೆಲೆ ಇದೆ, ಹಿಂದೂ ರಾಷ್ಟ್ರೀಯತೆಯ ಹಿನ್ನಲೆ ಇದೆ, ರಾಜಕೀಯ ಹಿನ್ನಲೆ ಇದೆ, ಆರ್ಥಿಕ ಹಿನ್ನಲೆ ಇದೆ, ಧಾರ್ಮಿಕ  ಹಿನ್ನೆಲೆ ಇದೆ. 1930ರ ದಶಕದಲ್ಲಿ ತನ್ನದು ಒಂದು ಹಿಂದೂ ಸಾಂಸ್ಕೃತಿಕ ಪಕ್ಷ ಎಂದು ಬಣ್ಣಿಸಿಕೊಂಡಿದ್ದ ಆರೆಸ್ಸಸ್ ರಾಜಕೀಯಕ್ಕೂ ತನಗೂ ಸಂಬಂಧವಿಲ್ಲ ಎಂದು 1948ರ ದಶಕದಲ್ಲಿ ಆಗಿನ ಗೃಹ ಮಂತ್ರಿ ವಲ್ಲಭಾಯಿ ಪಟೇಲ್ ಅವರಿಗೆ ವಾಗ್ದಾನ ನೀಡಿತ್ತು. ಆದರೆ 2014ರ ಚುನಾವಣೆಯ ವೇಳೆಗೆ ಈ ವಾಗ್ದಾನವನ್ನು ಮುರಿದು ಸಕ್ರಿಯವಾಗಿ ಚುನಾವಣಾ ರಾಜಕೀಯದಲ್ಲಿ ಬಿಜೆಪಿ ಪರವಾಗಿ ಪಾಲ್ಗೊಂಡಿತ್ತು

ಈ ಮಧ್ಯದ ಸುಮಾರು 80 ವರ್ಷಗಳ ಕಾಲಘಟ್ಟದ ವಿಶ್ಲೇಷಣೆ ಮಾಡಿದಾಗ 1925-1952ರವರೆಗೆ ಸುಮಾರು ಎರಡೂವರೆ ದಶಕಗಳ ಕಾಲ ಆರೆಸ್ಸಸ್ ನ ಹಿಂದುತ್ವದ ಧಾರ್ಮಿಕ ಮತೀಯವಾದವನ್ನು ಬಿತ್ತನೆಯ ಕಾಲವೆಂದೇ ಪರಿಗಣಿಸಲಾಗುತ್ತದೆ. ಈ ಕಾಲಘಟ್ಟದಲ್ಲಿ ಹಿಂದೂ ಮಹಾಸಭಾ ಎನ್ನುವ ಮತ್ತೊಂದು ಮೂಲಭೂತವಾದಿ ಸಂಘಟನೆಯೊಂದಿಗೆ ಕೈ ಜೋಡಿಸಿದ್ದ ಆರೆಸ್ಸಸ್ ‘ಹಿಂದೂ; ಹಿಂದೂಯಿಸಂ, ಹಿಂದುತ್ವ’ ಎನ್ನುವ ತತ್ವವನ್ನು ಹೆಡ್ಗೇವಾರ್, ಗೋಳ್ವಲ್ಕರ್, ಸಾವರ್ಕರ್ ಎನ್ನುವ ಹಿಂದುತ್ವವಾದಿಗಳ ಮೂಲಕ ಸಮಾಜದಲ್ಲಿ ಬಿತ್ತನೆ ಮಾಡಿತು

1952 – 1979ರ ಕಾಲಘಟ್ಟದಲ್ಲಿ ರಾಜಕೀಯರಂಗದಲ್ಲಿ ತನ್ನ ಬಲವನ್ನು, ಪ್ರಭಾವವನ್ನು ಪರೀಕ್ಷೆ ಮಾಡಲು ಆರೆಸ್ಸಸ್RSS-mohanbhagwat ‘ಭಾರತೀಯ ಜನಸಂಘ’ ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆ ಮೂಲಕ 6 ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿತು. ಕಳೆದ 25 ವರ್ಷಗಳ ತಾನು ಬಿತ್ತಿದ ಧಾರ್ಮಿಕ ಮತೀಯವಾದದ, ಹಿಂದುತ್ವ ಫೆನಟಿಸಂನ ಬೀಜಗಳನ್ನು ಈ ಕಾಲಘಟ್ಟದ ರಾಜಕೀಯದ ಉಳುಮೆಯಲ್ಲಿ ಪ್ರಯೋಗಗಳನ್ನು ನಡೆಸಿತು. 1967ರಲ್ಲಿ ವಿವಿಧ ಪಕ್ಷಗಳೊಂದಿಗೆ ಕೈಜೋಡಿಸಿ ಉತ್ತರ ಪ್ರದೇಶದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡಿತ್ತು. ಉಗ್ರ ದಾರ್ಮಿಕ ಮತಾಂಧತೆಯ ಮೂಲಕ ಅನೇಕ ಕೋಮು ಗಲಭೆಗಳಿಗೆ ಪ್ರಚೋದನೆ ನೀಡಿತ್ತು ಮತ್ತು ಸಂಯೋಜಿಸಿತ್ತು.

1980ರಲ್ಲಿ ಭಾರತೀಯ ಜನಸಂಘವನ್ನು ವಿಸರ್ಜಿಸಿ ‘ಭಾರತೀಯ ಜನತಾ ಪಕ್ಷ'(ಬಿಜೆಪಿ) ಎನ್ನುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿತು. ಆರಂಭದಲ್ಲಿ 1984ರಲ್ಲಿ ಕೇವಲ 2 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಪಕ್ಷಕ್ಕೆ 1989ರ ನಂತರದ ದಶಕಗಳು ಫಸಲಿನ ಕಾಲಘಟ್ಟವಾಗಿತ್ತು. ಧಾರ್ಮಿಕ ಮೂಲಭೂತವಾದ, ಹಿಂದುತ್ವದ ಫೆನಟಿಸಂ ಅನ್ನು ಸಮಾಜದಲ್ಲಿ ಬಿತ್ತಿ ಉಳುಮೆ ಮಾಡಿದ ಆರೆಸ್ಸಸ್ 70 ವರ್ಷಗಳ ನಂತರ ಅದರ ಫಸಲನ್ನು ಅನುಭವಿಸತೊಡಗಿತು. ಇದರ ಫಲವಾಗಿ 80 ವರ್ಷಗಳ ನಂತರ ಕೇಂದ್ರದಲ್ಲಿ ಸರಳ ಬಹುಮತದೊಂದಿಗೆ ಅಧಿಕಾರವನ್ನು ಪಡೆದುಕೊಂಡಿತು.

ಭಾರತದ ರಾಜಕೀಯದ ಕುರಿತಾಗಿ ಸಂಶೋಧನೆ ನಡೆಸಿದ ಇಟಾಲಿಯನ್ ಸಂಶೋಧಕಿ ‘ಮಾಜರಿಯಾ ಕೆಸೋಲರಿ’ ಅವರು  “ಇಟಾಲಿಯನ್ ಫ್ಯಾಸಿಸ್ಟ್ ಪ್ರತಿನಿಧಿಗಳು (ಮಸಲೋನಿ ಮತ್ತಿತರರು) ಮತ್ತು ಹಿಂದೂ ರಾಷ್ಟ್ರೀಯವಾದಿಗಳ ನಡುವಿನ ನೇರ ಸಂಪರ್ಕಗಳನ್ನು ವಿವರವಾಗಿ ಪರಿಶೀಲಿಸಿದಾಗ ಇದು ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂನ ಕುರಿತಾಗಿ ಕೇವಲ ಮೇಲ್ಮಟ್ಟದ ಕುತೂಹಲದಿಂದ ಅಥವಾ  ಕೆಲವು ವ್ಯಕ್ತಿಗಳ ಆ ಕ್ಷಣದ ಕೌತುಕದಿಂದ ಆಸಕ್ತಿ ಬೆಳಸಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂ ಅನ್ನು ಒಂದು ಸಂಪ್ರದಾಯವಾದಿ ನೆಲೆಯ ಕ್ರಾಂತಿ ಎಂದು ನಂಬುತ್ತಾರೆ ಮತ್ತು ಇಟಾಲಿಯನ್ ಮಾದರಿಯ ಸರ್ವಾಧಿಕಾರಿ ಆಡಳಿತದ ಕುರಿತಾಗಿ ಅಧ್ಯಯನ ನಡೆಸಿದ್ದಾರೆ” ಎಂದು ಹೇಳುತ್ತಾರೆ.

ಆರೆಸ್ಸಸ್ ಸ್ಥಾಪಕರಲ್ಲಿ ಒಬ್ಬರಾದ ಮೂಂಜೆ ಅವರು 19 ಮಾರ್ಚ್ 1931ರಂದು ಇಟಾಲಿಯನ್ ಸರ್ವಾದಿಕಾರಿ ಮಸಲೋನಿಯವರನ್ನು ವ್ಯಕ್ತಿಗತವಾಗಿ ಭೇಟಿಯಾಗುತ್ತಾರೆ. ಅದನ್ನು ಮೂಂಜೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಒಂದು ಸಾರಾಂಶ ಹೀಗಿದ, “ನಾನು ಅವರ( ಮಸಲೋನಿ) ಕೈ ಕುಲುಕಿದೆ ಮತ್ತು ನಾನು ಡಾ.ಮೂಂಜೆ ಎಂದು ಪರಿಚಯಿಸಿಕೊಂಡೆ. ಅವರಿಗೆ ನನ್ನ ಕುರಿತಾಗಿ ತಿಳುವಳಿಕೆ ಇತ್ತು ಮತ್ತು ಇಂಡಿಯಾದ ಸ್ವಾತಂತ್ರ ಹೋರಾಟವನ್ನು ಹತ್ತಿರದಿಂದ ಗಮನಿಸುತ್ತಿದ್ದರು. ನಾನು ನಮ್ಮ ಸ್ವಯಂಸೇವಕರಿಗೆ ಮಿಲಿಟರಿ ತರಬೇತಿಯ ಅವಶ್ಯಕತೆ ಇದೆ ಮತ್ತು ನಮ್ಮ ಹುಡುಗರು ಇಂಗ್ಲೆಂಡ್, ಪ್ರಾನ್ಸ್, ಜರ್ಮನಿಯ ಮಿಲಿಟರಿ ಶಾಲೆಗಳಗೆ ಭೇಟಿ ಕೊಡುತ್ತಿದ್ದಾರೆ. ನಾನು ಈಗ ಇದೇ ಉದ್ದೇಶಕ್ಕಾಗಿ ಇಟಲಿಗೆ ಬಂದಿದ್ದೇನೆ ಮತ್ತು ನನ್ನ ಮಿಲಿಟಿರಿ ಶಾಲೆಯ ಭೇಟಿಯನ್ನು ನಿಮ್ಮ ಅಧಿಕಾರಿಗಳು ಸುಗುಮವಾಗಿಸಿದ್ದಾರೆ. ನಾನು ಈ ಮುಂಜಾನೆ ಮತ್ತು ಮಧ್ಯಾಹ್ನ ಫ್ಯಾಸಿಸ್ಟ್ ಸಂಸ್ಥೆಗಳನ್ನು ನೋಡಿದೆ ಮತ್ತು ಅದರಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಇಟಲಿಗೆ ಈ ಮಾದರಿಯ ಫ್ಯಾಸಿಸ್ಟ್ ಸಂಘಟನೆಗಳ ಅವಶ್ಯಕತೆ ಇದೆ. ಈ ಫ್ಯಾಸಿಸಂ ಸಂಘಟನೆಗಳಲ್ಲಿ ನನಗೆ ಅಂತಹ ವಿವಾದ ಎನ್ನುವಂತಹ ಅಂಶಗಳೇನು ಕಾಣಿಸಲಿಲ್ಲ. ನನ್ನ ಮಾತುಗಳಿಂದ ಮಸಲೋನಿ ಖುಷಿಯಾಗಿದ್ದರು” ಎಂದು ಬರೆದಿದ್ದಾರೆ.

1940ರಲ್ಲಿ ಮದುರಾದಲ್ಲಿ ಹಿಂದೂ ಮಹಾಸಭಾದ 22ನೇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಾವರ್ಕರ್, “ಕೇವಲ ನಾಜಿ ಎನ್ನುವ ಕಾರಣಕ್ಕೆ ಹಿಟ್ಲರ್ ನನ್ನು ಒಬ್ಬ ರಾಕ್ಷಸ ಎಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ನಾಜಿಯಿಸಂ ಜರ್ಮನಿಯನ್ನು ಕಾಪಾಡಿದೆ.” ಎಂದು ಭಾಷಣ ಮಾಡುತ್ತಾ ಮುಂದುವರೆದು ನೆಹರೂ ಅವರನ್ನು ಹೀಗೆಳೆಯುತ್ತ  “ಜರ್ಮನಿ, ಜಪಾನ್, ರಷ್ಯಾ ರಾಷ್ಟ್ರಗಳಿಗೆ ಒಂದು ನಿರ್ದಿಷ್ಟ ಮಾದರಿಯ ವ್ಯವಸ್ಥೆಯನ್ನು ಆರಿಸಿಕೊಳ್ಳಬೇಕೆಂದು ಹೇಳಲು ನಾವ್ಯಾರು? ಜರ್ಮನಿಗೆ ಏನು ಬೇಕೆಂದು ನೆಹರೂವಿಗಿಂತಲೂ ಹಿಟ್ಲರ್ ಗೆ ಚೆನ್ನಾಗಿ ಗೊತ್ತು. ಅದರಲ್ಲಿಯೂ ಈ ನಾಜಿಸಂನ ಸ್ಪರ್ಶದಿಂದ ಜರ್ಮನಿ, ಇಟಲಿ ರಾಷ್ಟ್ರಗಳು ಇಂದು ಶಕ್ತಿಶಾಲಿಯಾಗಿ ಬೆಳೆದಿವೆ, ಪುನವೃದ್ಧಿಯಾಗಿವೆ” ಎಂದು ಹೇಳಿದ್ದಾರೆ. 2014ರ ಚುನಾವಣೆಯ ಸಂದರ್ಭದಿಂದ ಇಡೀ ಸಂಘ ಪರಿವಾರದ ನಾಯಕರು ಬಳಸಿದ ಫೆನಟಿಸಂನ, ಹಿಂಸಾಚಾರದ ಭಾಷೆಗಳು ಹಿಟ್ಲರ್ ನ ನಾಜಿ ಪಾರ್ಟಿಯ ಫ್ಯಾಸಿಸಂ ಅನ್ನು ಹೋಲುತ್ತವೆ. ರಾಷ್ಟ್ರ ಮತ್ತು ಅದರ ಪ್ರಜಾಪ್ರಭುತ್ವ ಮಾದರಿಯ ಗಣರಾಜ್ಯ ವ್ಯವಸ್ಥೆಯ ಕುರಿತಾಗಿ ಅಸಹನೆಯಿಂದಿರುವ ಆರೆಸ್ಸಸ್ ಅದಕ್ಕೆ ಪರ್ಯಾಯವಾಗಿ ಹಿಂದೂರಾಷ್ಟ್ರವೆಂದು ಹೇಳುತ್ತಿದೆಯಾದರೂ ಅದರ ಸ್ವರೂಪದ ಕುರಿತಾಗಿ ಅವರಲ್ಲಿ ಯಾವುದೇ ಗೊಂದಲಗಳಿಲ್ಲ.

ಇದು ಆರೆಸ್ಸಸ್ ಗೆ ಫ್ಯಾಸಿಸಂ ಕುರಿತು ಇರುವ ಒಲವನ್ನು ಸಾಬೀತುಪಡಿಸುತ್ತದೆ

1920ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ ಎಂದು ಚಿಂತಕ ಪಾರ್ಥ ಬ್ಯಾನರ್ಜಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ವಿವರಿಸುತ್ತಾರೆ. ಉದಾಹರಣೆಗೆ ಫ್ಯಾಸಿಸಂನ ಪ್ರಮುಖ ಲಕ್ಷಣಗಳೆಂದರೆ

  1. ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  2. ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾವನ್ನು ಕಟ್ಟಬೇಕೆಂಬ ಸಿದ್ಧಾಂತ
  3. ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  4. ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  5. ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸಿವುದು

ಹಾಗಾದರೆ ಆರೆಸ್ಸಸ್ ಮತ್ತು ಅದರ ಅಂಗ ಪಕ್ಷಗಳಾದ ಬಿಜೆಪಿ, ವಿಎಚ್ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ?? ಉತ್ತರ ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ

ಆರೆಸ್ಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ  ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರrss-2 ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ, ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್ಗಳಲ್ಲಿ, ಮಿಲಿಟರಿ ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು ಪ್ರಾಚೀನ ಕಾಲದ ಭರತವರ್ಷವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ ಈ ಆರೆಸ್ಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್ ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಮೇಲೆ ಹೇಳಿದ ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ.

ಆರೆಸ್ಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸ್ಸಸ್ ಮುಖ್ಯಸ್ಥನನ್ನು ಸರಸಂಚಾಲಕ ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸ್ಸಸ್ ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಡಾ.ಕೆ.ಬಿ.ಹೆಡ್ಗೇವಾರ್, ಸಾವರ್ಕರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಈ ಮೂವರನ್ನು ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ

ಮತ್ತೊಂದು ಕಡೆ ಆರೆಸ್ಸಸ್ ರಾಜಕೀಯ ಪಕ್ಷವಾದ ಬಿಜೆಪಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವನ್ನು ಕೊಡುವುದಿಲ್ಲ. ಆರೆಸ್ಸಸ್ ಬಯಸುವುದು ತನ್ನ ಐಡಿಯಾಜಿಯನ್ನು ರಾಜಕೀಯ ನೆಲೆಯಲ್ಲಿ ವಿಸ್ತರಿಸುವುದಕ್ಕಾಗಿ ಬಿಜೆಪಿ ಪಕ್ಷ ಕಾನೂನುಗಳನ್ನು ರೂಪಿಸಬೇಕು. ತಾನು ಸ್ವತಃ ರಾಜಕೀಯವನ್ನು ಪ್ರವೇಶಿಸಲು ನಿರಾಕರಿಸುವ ಆರೆಸ್ಸಸ್ ‘ನಮ್ಮ ಸಾಂಸ್ಕೃತಿಕ ನೀತಿಗಳೇ ನಮ್ಮ ರಾಜಕೀಯ’ ಎಂದು ಹೇಳುತ್ತದೆ. ತನ್ನ ಐಡಿಯಾಲಜಿಯನ್ನು ಪ್ರಶ್ನಿಸುವುದಿರಲಿ, ಚರ್ಚೆಗೆ ಎಳೆದುತಂದವರನ್ನು ನಿರ್ದಾಕ್ಷೀಣ್ಯವಾಗಿ ಹೊರ ತಳ್ಳುತ್ತದೆ ಆರೆಸ್ಸಸ್. ಉದಾಹರಣೆಗೆ ಜನಸಂಘ ರಾಜಕೀಯ ಪಕ್ಷವಾಗಿದ್ದ ಎಪ್ಪತ್ತರ ದಶಕದಲ್ಲಿ ಆಗಿನ ಅಧ್ಯಕ್ಷ  ಬಲರಾಜ್ ಮಾಧೋಕ್ ಅವರು ಜನಸಂಘದ ಪಧಾದಿಕಾರಿಗಳನ್ನು ಆರೆಸ್ಸಸ್ ಸಂಘಟನೆಯಿಂದ ಹೇರುವುದನ್ನು ನಿಲ್ಲಿಸಿ ಜನಸಂಘದ ಒಳಗಡೆಯಿಂದಲೇ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದರು. ಆ ಕೂಡಲೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಪಾಕಿಸ್ತಾನಕ್ಕೆ ಭೇRSSಟಿ ಕೊಟ್ಟ ಸಂದರ್ಭದಲ್ಲಿ ಅಡ್ವಾನಿ ಜಿನ್ನಾ ಅವರನ್ನು ಪ್ರಶಂಸಿದ ಕಾರಣಕ್ಕೆ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ಪದಚ್ಯುತಿಗೊಳಿಸಲಾಯಿತು. ತೀರಾ ಇತ್ತೀಚೆಗೆ ಆರೆಸ್ಸಸ್ ವಿರುದ್ಧ ಭಿನ್ನ ರಾಗ ಹಾಡಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಲಾಯಿತು. ಇತಿಹಾಸಕಾರ ಡಿ.ಆರ್.ಗೋಯಲ್ ಅವರು “ಒಂದು ಕಾಲದ ಜನಸಂಘ ಅಥವಾ ಇಂದಿನ ಬಿಜೆಪಿ ಅದು ಬೆಳವಣಿಗೆ ಕಂಡುಕೊಳ್ಳುವುದು ರಾಜಕೀಯವಾಗಿ ಅಲ್ಲ, ಆರೆಸ್ಸಸ್ ಸಂಘಟನೆಯಲ್ಲಿ ಮಾತ್ರ. ಏಕೆಂದರೆ ಆರೆಸ್ಸಸ್ ಅದಕ್ಕೆ ಜನ್ಮ ನೀಡಿದ್ದು, ಹೀಗಾಗಿ ಆರೆಸ್ಸಸ್ ಗೆ ಶರಣಾಗಲೇಬೇಕು. ಬಿಜೆಪಿ ಪಕ್ಷವು ನಾವು ವಿಭಿನ್ನ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದು ಹೇಳಿದರೂ ವಾಸ್ತವದಲ್ಲಿ ಆರೆಸ್ಸಸ್ ಅನ್ಯ ಸಂಸ್ಕೃತಿಯನ್ನು ಮಾನ್ಯ ಮಾಡಿರುವುದೇ ಇಲ್ಲ. ಸಾರ್ವಜನಿಕ ಹೇಳಿಕೆಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗುತ್ತದೆ, ಆಚರಣೆಗೆ ಆಲ್ಲ. ಉದಾಹರಣೆಗೆ ಗುಜರಾತ್ ಹತ್ಯಾಕಾಂಡ ನಡೆದ 2002ರ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಾರ್ವಜನಿಕವಾಗಿ ರಾಜಧರ್ಮ ಪಾಲಿಸುವಂತೆ ಹೇಳಿಕೆ ಇತ್ತರು. ಆದರೆ ಆಚರಣೆಯಲ್ಲಿ ಮೋದಿ ಸರ್ಕಾರವನ್ನು ಪದಚ್ಯುತಗೊಳಿಸಲಿಲ್ಲ. ತನ್ನ ಐಡಿಯಾಲಜಿಯನ್ನು ಸಹಿಸಿಕೊಳ್ಳುವ ನಾಯಕ ಇರುವವರೆಗೂ ಆರೆಸ್ಸಸ್ ಸಂತುಷ್ಟದಿಂದಿರುತ್ತದೆ” ಎಂದು ಹೇಳುತ್ತಾರೆ. ಇದು ನಿಜ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ‘ನಮ್ಮ ಸರ್ಕಾರವು ಯಾವುದೇ ಬಗೆಯ ಅಸಹನೆ, ಹಲ್ಲೆಗಳನ್ನು ಸಹಿಸುವುದಿಲ್ಲ.ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ’ ಎಂದು ಹೇಳಿಕೆ ಇತ್ತರು. ಆರೆಸ್ಸಸ್ ಅದನ್ನು ಹೇಳಿಕೆ ಮಟ್ಟದಲ್ಲಿಯೇ ಇರಲು ಬಯಸುತ್ತದೆ. ಆಚರಣೆಯಲ್ಲಿ ಅಲ್ಲ. ಇದು 56 ಇಂಚಿನ ಎದೆಯ ಮೋದಿಗೂ ಸಹ ಗೊತ್ತು. ಇದು ಮೂಲಭೂತವಾದದ ಮನಸ್ಥಿತಿ,  ಚಹರೆ, ಸ್ವರೂಪ

ಕಳೆದ ಎಂಬತ್ತು ವರ್ಷಗಳಲ್ಲಿ ಮೊದಲ ಎಪ್ಪತ್ತು ವರ್ಷಗಳು ಕೇವಲ ಬ್ರಾಹ್ಮಣರ, ಮಾರ್ವಾಡಿಗಳ ಮತ್ತು ಬನಿಯಾಗಳ ಪಕ್ಷವೆಂದು ಗೇಲಿಗೊಳಗಾಗುತ್ತಿದ್ದ ಸಂಘ ಪರಿವಾರಕ್ಕೆ ಇಂದು ಹಿಂದುಳಿದವರು, ದಲಿತರು, ಆದಿವಾಸಿಗಳು, ಕಾರ್ಮಿಕರನ್ನು ಒಳಗೊಂಡಂತಹ ಒಂದು ವ್ಯಾಪಕವಾದ ನೆಲೆಗಟ್ಟು ಗಟ್ಟಿಗೊಳ್ಳತೊಡಗಿದೆ. ವರ್ಣಾಶ್ರಮದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಊರ ಹೊರಗೆ ಅಸ್ಪೃಶ್ಯರಾಗಿ ಬದುಕುವ ತಳ ಸಮುದಾಯಗಳು ಇಂದು ನೀವು ಬಹುಸಂಖ್ಯಾತರು ಎನ್ನುವ ಆರೆಸ್ಸಸ್ ನ ಪ್ರಚೋದನೆಯ ಮೋಡಿಗೆ ಒಳಗಾಗಿ ಇಂದು ಹಿಂದೂ ವರ್ಸಸ್ ಮುಸ್ಲಿಂರು ಎಂದರೆ ತಳಸಮುದಾಯಗಳು ವರ್ಸಸ್ ಮುಸ್ಲಿಂ ಸಮುದಾಯಗಳು ಎನ್ನುವ ಅಖಾಡ ರೂಪುಗೊಂಡು ತಳಸಮುದಾಯಗಳು ಬಾಣದಂತೆ ಬಳಕೆಗೊಳ್ಳತೊಡಗಿದ್ದಾರೆ

(‘ಚಿಂತನ ಪ್ರಕಾಶನ’ದಿಂದ ಪ್ರಕಟಣೆಗೆ ಸಿದ್ಧವಾಗಿರುವ ಹಿಂದುತ್ವದ ರಾಜಕಾರಣ ಪುಸ್ತಕದಿಂದ ಆಯ್ದ ಭಾಗ)

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book