Category Archives: ಶ್ರೀಪಾದ್ ಭಟ್

“ಗಲಿಯೋಕಿ ರಾಸಲೀಲ ರಾಮಲೀಲ” – ಅಚ್ಚರಿಗೊಳಿಸುವ ಫೆಮಿನಿಸಂ

– ಬಿ.ಶ್ರೀಪಾದ ಭಟ್

ಲೇಖಕಿ ಮತ್ತು ಫ್ಯಾಷನ್ ಕ್ವೀನ್ ಶೋಭಾ ಡೇ “ಗಲಿಯೋಕಿ ರಾಸಲೀಲ ರಾಮಲೀಲ” ಸಿನಿಮಾ ಕುರಿತು ಬರೆಯುತ್ತಾ ಅದರಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿತ್ತೆಂದು ಮತ್ತು ಎಷ್ಟೊಂದು ರೋಚಕವಾಗಿತ್ತಂದರೆ “Get a room guys! Go ahead and do it!” ಎನ್ನುವಂತಿದೆ ಎಂದೆಲ್ಲಾ ಬರೆದಿದ್ದಳು. 65 ರ ಹರೆಯದ ಶೋಭಾ ಡೇಯ ಈ ರೀತಿಯ ಬರವಣಿಗೆ ಆಕೆಯ ಟಿಪಿಕಲ್ sexes ತರಹವಷ್ಟೇ ಹಳಸಲು ಎಂದು ಗೆಳೆಯ ಮೂಗು ಮುರಿದಿದ್ದರೂram-leela ನನಗಂತೂ ಈ ಸಿನಿಮಾ ನೋಡಲೇಬೇಕೆನಿಸಿತು.

“ಗಲಿಯೋಂಕಿ ರಾಸಲೀಲ ರಾಮಲೀಲ” ಸಂಜಯ ಲೀಲಾ ಬನ್ಸಾಲಿಯ ಇತ್ತೀಚಿನ ಚಿತ್ರ. ತನ್ನ ಹಿಂದಿನ ಸಿನಿಮಾಗಳಾದ “ಸಾವರಿಯಾ”, “ಗುಜಾರಿಷ್”ನ ಸೋಲಿನಿಂದ ಹೊರಬಂದಿದ್ದೇನೆ, ಬೇಕಿದ್ದರೆ ಈ ರಾಮಲೀಲ ಸಿನಿಮಾ ನೋಡಿ ಎಂದು ಹೇಳಿಕೊಂಡಿದ್ದ. ಇದು ಶೇಕ್ಸಪಿಯರ್‌ನ ನಾಟಕ “ರೋಮಿಯೋ ಜ್ಯೂಲಿಯೆಟ್” ನಾಟಕದ ಎಳೆಯನ್ನು ಆಧರಿಸಿ ಇಂಡಿಯಾದ ಬಾಲಿವುಡ್ ವ್ಯಕ್ತಿತ್ವಕ್ಕೆ ಹೊಂದಿಸಿದ್ದೇನೆ ಎಂಬುದು ಬನ್ಸಾಲಿಯ ಮುನ್ನುಡಿ.

ಈ ಸಿನಿಮಾದ ಕಥೆ ಗುಜರಾತ್‌ನ ರಂಜಾರ್ ಎನ್ನುವ ಪಟ್ಟಣದ ರಜಾದಿ ಮತ್ತು ಸನೇರ ಕುಟುಂಬಗಳ ನಡುವಿನ ತಲೆಮಾರುಗಳ ವೈಮನಸ್ಸಿನ ನಡುವೆ, ಬುಲೆಟ್‌ಗಳ ಹಾರಾಟದ ನಡುವೆ ಪ್ರೇಮ ಕಥೆಯೊಂದನ್ನು ಕಟ್ಟಿಕೊಡುತ್ತದೆ. ಬನ್ಸಾಲಿ ತನ್ನ ಹಳೆಯ ಜನಪ್ರಿಯ ಶೈಲಿಗಳಾದ ಮೇಲೋಡ್ರಾಮ, ತೀವ್ರವಾದ ಪ್ರೇಮದ ವರಸೆಗಳು, ಅದ್ಭುತ ಕಲಾವಂತಿಕೆಯ ದೃಶ್ಯಗಳು, ದೀರ್ಘವಾದ ನೃತ್ಯರೂಪಕಗಳು, ಹೀಗೆ ಇವುಗಳನ್ನೆಲ್ಲ ಒಂದಕ್ಕೊಂದು ಕೊಲಾಜ್‌ನಂತೆ ರೂಪಿಸಲು ತನ್ನ ಅಪ್ಪಟ ಪರಿಣಿತ ನಿರ್ದೇಶಕನ ಕೈಚಳಕವನ್ನು ಬಳಸಿಕೊಂಡಿದ್ದಾನೆ. ಹಾಗೂ ಯಶಸ್ವಿಯೂ ಆಗಿದ್ದಾನೆ. ಈ ಮಿಶ್ರಣಕ್ಕೆ Romance and Lust ನ ರೋಚಕ ಕಾಂಬಿನೇಷನ್ ಅನ್ನು ಸಹ ಯಶಸ್ವಿಯಾಗಿ ಉಪಯೋಗಿಸಿಕೊಂಡಿದ್ದಾನೆ. ಅದೇ ಇಂದು ಪ್ರೇಕ್ಷಕರನ್ನು ಸಿನಿಮಾ ಮಂದಿರದೆಡೆಗೆ ಸೆಳೆಯುತ್ತಿದೆ. ಶೋಭಾ ಡೇಯಂತಹ 65 ರ ಹರೆಯದ ಲೇಖಕಿ ಮೇಲಿನಂತೆ ಉದ್ಗರಿಸುವಂತೆ ಮಾಡಿದ್ದು ಸಹ ಈ ram-leelaRomance and Lust ನ ರೋಚಕ ಕಾಂಬಿನೇಷನ್.

ಬನ್ಸಾಲಿಯ ಬಣ್ಣಬಣ್ಣದ ಈ ಕನಸುಗಳಿಗೆ ನಾಯಕಿ ದೀಪಿಕಾ ಪಡುಕೋಣೆ ಅದ್ಭುತವಾಗಿಯೇ ಸ್ಪಂದಿಸಿದ್ದಾಳೆ. ತನ್ನ ಕಣ್ಣುಗಳ ಮೂಲಕವೇ ಆ Lust ಅನ್ನು ಯಶಸ್ವಿಯಾಗಿ ವ್ಯಕ್ತಪಡಿಸುವ ದೀಪಿಕಾ ತನ್ನ ಬಿಲ್ಲಿನಂತಹ ದೇಹವನ್ನು ಬಳಸಿ ನಾಯಕ ರಣವೀರ್‌ನೊಂದಿಗೆ Romance ನಡೆಸುವುದರ ಮೂಲಕ ಪ್ರೇಕ್ಷಕರನ್ನು ಮುದಗೊಳಿಸುತ್ತಾಳೆ. ಆಕೆ ಈ ಬಗೆಯ ಪರಿಣಿತಿಯನ್ನು ತನ್ನ ನಟನೆಯಲ್ಲಿ ಸಾಧಿಸಿರುವುದು ಈ ಸಿನಿಮಾದ ಅಚ್ಚರಿಗಳಲ್ಲೊಂದು. ಅಲ್ಲದೆ ಟಿಕೇಟ್ ಕೊಟ್ಟು ಥೇಟರ್‌ನ ಒಳಗೆ ಕಾಲಿಡುತ್ತಲೇ ದೀಪಿಕಾ ಮತ್ತು ನಾಯಕ ರಣವೀರ್‌ನೊಂದಿಗಿನ ಚುಂಬನದ ದೃಶ್ಯಗಳಿಗಾಗಿ ಕಾತರಿಸುತ್ತಾನೆ ಪ್ರೇಕ್ಷಕ. ಮತ್ತು ಪ್ರೇಕ್ಷಕನ ಈ ಕಾತುರವನ್ನು ದೀಪಿಕಾ ಮತ್ತು ರಣವೀರ್ ನಿರಾಶೆಗೊಳಿಸುವುದಿಲ್ಲ. ಆದರೆ ಈ ಚುಂಬನದ ದೃಶ್ಯಗಳಲ್ಲಿಯೂ ಫೆಮಿನಿಸಂ ಮೇಲುಗೈ ಸಾಧಿಸುವುದು ಸಿನಿಮಾದ ಹೊಸ ಭಾಷ್ಯೆಯೇ ಸರಿ.

ನಿಮ್ಮ ಮನೆತನದ ವ್ಯಾಪಾರವೇನೆಂದು ಪ್ರಶ್ನಿಸಿದಾಗ “ಶೂಟಿಂಗ್, ಕಳ್ಳ ಸಾಗಾಣಿಕೆ, ಕೊಲ್ಲುವುದು” ಎಂದು ತಣ್ಣಗಿನ ಕ್ರೌರ್ಯದ ದನಿಯಲ್ಲಿ ಉತ್ತರಿಸುವ ಸುಪ್ರಿಯಾ ಪಾಠಕ್ ಅದ್ಭುತವಾಗಿ ನಟಿಸಿದ್ದಾಳೆ. ಇಲ್ಲಿಯೂ ಫೆಮಿನಿಸಂ ಮೇಲುಗೈ ಸಾಧಿಸುತ್ತದೆ.

ಕಡೆಗೆ ಅತಿಯಾದ ಮೆಲೋಡ್ರಾಮ, ಅತಿಯಾದ ಕ್ರೌರ್ಯ, ಅತಿಯಾದ Romance and Lust ನ ನೆರಳುಗಳು ಮತ್ತು ತೆಳುವಾದ ಕಥೆ, ಸಂಪೂರ್ಣವಾಗಿ ಗುರಿ ತಪ್ಪಿದ ದ್ವಿತೀಯಾರ್ಧ “ಗಲಿಯೋಕಿ ರಾಸಲೀಲ ರಾಮಲೀಲ” ಸಿನಿಮಾವನ್ನು ‘ಒಂದು Different Film ಮಾರಾಯ’ ಎಂದು ಉದ್ಗರಿಸಲು ಅವಕಾಶ ಕೊಡುವುದೇ ಇಲ್ಲ. ಅಷ್ಟರ ಮಟ್ಟಿಗೆ ಇದು ನಿರ್ದೇಶಕ ಬನ್ಸಾಲಿಯು ತನ್ನ ಮಿತಿಯನ್ನು ಮೀರದಂತೆ ತಡೆಯುತ್ತದೆ. ಕಡೆಗೆ ದೀಪಿಕಾ ಪಡುಕೋಣೆ ಮತ್ತು ಸುಪ್ರಿಯಾ ಪಾಠಕ್ ಇವರಿಬ್ಬರ ಫೆಮಿನಿಸಂ ಈ ನಿರ್ದೇಶಕನನ್ನು, ಸಿನಿಮಾವನ್ನು ರಕ್ಷಿಸುತ್ತವೆ. ಆದರೆ ಅದೃಷ್ಟದ ಈ ಯಶಸ್ಸನ್ನೇ ಬಂಡವಾಳ ಮಾಡಿಕೊಂಡು ಭವಿಷ್ಯದಲ್ಲಿಯೂ ಇದೇ ತಾನು ನಡೆಯುವ ದಾರಿ ಎಂದು ಬನ್ಸಾಲಿ ಮಹಾಶಯ ನಿರ್ಧರಿಸಿದರೆ ಶಿವಾಯನಮಃ!!

ಸ್ವಾತಂತ್ರಕ್ಕಾಗಿ ಜೀವನಪರ್ಯಂತ ನಡೆದ ಮಹಾಪುರುಷ ಇನ್ನಿಲ್ಲ

– ಬಿ.ಶ್ರೀಪಾದ ಭಟ್

“During my lifetime I have dedicated myself to this struggle of the African people. I have fought against white domination, and I have fought against black domination.” – Nelson Mandela

ಮಾನವತಾವಾದಿ, ದಕ್ಷಿಣ ಆಫ್ರಿಕಾದ ಬಾಪೂಜಿ ಎಂದೇ ಪ್ರಖ್ಯಾತರಾಗಿದ್ದ ನೆಲ್ಸನ್ ಮಂಡೇಲ ತಮ್ಮ 95 ರ ಇಳಿ Nelson_Mandelaವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಲ್ಸನ್ ಮಂಡೇಲ ಎಂದರೆ ಒಂದು Legacy, ಪರಂಪರೆ. ವರ್ಣಬೇಧ ನೀತಿಯ ವಿರುದ್ಧ ಮತ್ತು ಆ ಪ್ರಭುತ್ವದ ದೌರ್ಜನ್ಯದ ವಿರುದ್ಧ 1944 ರಿಂದಲೇ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ಪ್ರಭುತ್ವ ತೊಲಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಆರಂಭದಲ್ಲಿ ಗೆರಿಲ್ಲಾ ಮಾದರಿಯ ಸಶಸ್ತ್ರ ಹೋರಾಟಕ್ಕೆ ಒಲವು ತೋರಿಸಿದ ಮಂಡೇಲ ಬಲು ಬೇಗನೆ ಅಂಹಿಸಾ ಮಾರ್ಗಕ್ಕೆ ಹೊರಳಿಕೊಂಡರು. ಎಂಬತ್ತರ ದಶಕದ ವೇಳೆಗೆ ಗಾಂಧಿವಾದಿಯಾಗಿ ರೂಪುಗೊಂಡರು. 1993 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ನೆಲ್ಸನ್ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟ ಮೊದಲ ಸರ್ವ ಜನಾಂಗಗಳನ್ನೊಳಗೊಂಡಂತಹ ಪ್ರಜಾಪ್ರಭುತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಈ ಮಹಾನ್ ನಾಯಕ ಯಾವುದೇ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳದೆ 1999 ರಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದಿದರು. ದಕ್ಷಿಣ ಆಫ್ರಿಕಾದ ಪ್ರಶ್ನಾತೀತ ನಾಯಕನಾಗಿ ಕಡೆ ಉಸಿರಿರುವವರೆಗೂ ಅಧಿಕಾರ ಚಲಾಯಿಸುವ ಎಲ್ಲಾ ಪ್ರಲೋಭನೆಗಳನ್ನು ತಿರಸ್ಕರಿಸಿ ಕೇವಲ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ತುಂಬ ಘನತೆಯಿಂದ ತಮಗೆ ಸಹಜವಾದ ಆದರ್ಶವನ್ನು ನಿರೂಪಿಸಿ ತಮ್ಮ ರಾಜಕೀಯ ಅಧಿಕಾರವನ್ನು ಮೊಟಕುಗೊಳಿಸಿಕೊಂಡರು. ಇವರ ಈ ಸಂಯಮ ನಮ್ಮನ್ನು ಬೆರಗುಗೊಳಿಸುತ್ತದೆ. ಭಾರತೀಯರಿಗೆ ಮತ್ತು ತೃತೀಯ ಜಗತ್ತಿನ ಇತರೆ ಅನೇಕ ರಾಷ್ಟ್ರಗಳ ಸರ್ವಾಧಿಕಾರ ಮತ್ತು ಅಮರಣಾಂತ ಅಧಿಕಾರದ ಹುಚ್ಚಿನ ನಾಯಕರನ್ನು ಕಂಡ ದೇಶಗಳ ಜನತೆಗಂತೂ ಇದೂ ಹೀಗೂ ಉಂಟೆ ಎನ್ನುವ ವಿಸ್ಮಯ!!

“ಬಿಳಿಯರ ದೌರ್ಜನ್ಯದ ವಿರುದ್ಧ ಹೋರಾಡಿದ ನಾನು ಕಪ್ಪು ವರ್ಣೀಯರ ಪ್ರತೀಕಾರದ ದೌರ್ಜನ್ಯದ ವಿರುದ್ಧವೂ ಹೋರಾಡುತ್ತೇನೆ” ಎಂದು ಅಧಿಕಾರ ವಹಿಕೊಂಡಾಗ ಪಣ ತೊಟ್ಟ ಮಂಡೇಲ ಗಾಂಧಿವಾದದ ನಿಜ ನಾಯಕ. ನುಡಿದಂತೆ ನಡೆದ ಮಂಡೇಲ ಮಾದರಿಯಾಗಿ ಬದುಕಿದರು. 1962 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಜೈಲು ಸೇರಿದ ಮಂಡೇಲ ಜೈಲಿನಿಂದ ಬಿಡುಗಡೆಗೊಂಡಿದ್ದು 1990 ರಲ್ಲಿ. Long_Walk_to_Freedomಸುಮಾರು ಇಪ್ಪತ್ತೆಂಟು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ಮಂಡೇಲ ಎಲ್ಲಿಯೂ ನೈತಿಕವಾಗಿ ಕುಗ್ಗಲೇ ಇಲ್ಲ. ಯಾವುದೇ ಬಗೆಯ ಸಂಧಾನವನ್ನು ನಿರಾಕರಿಸಿದರು. ಹೋರಾಟದ ಮಾರ್ಗವನ್ನು ಅನುಸರಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ತನ್ನ ಎರಡನೇ ಪತ್ನಿ ವಿನ್ನಿ ಮಂಡೇಲ ಅವರೊಂದಿಗೆ 1996 ರಲ್ಲಿ ವಿಚ್ಛೇದನೆ ಪಡೆದುಕೊಂಡ ಮಂಡೇಲ ಬಿಳಿಯರ ಸರ್ಕಾರದ ಕಾಲಘಟ್ಟದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ, ಕೊಲೆಗಳ ತನಿಖೆ ನಡೆಸಲು ಡೆಸ್ಮಂಡ್ ಟುಟು ನಾಯಕತ್ವದಲ್ಲಿ “Truth and Reconciliation Commission” ಅನ್ನು ಸ್ಥಾಪಿಸಿದರು. ಇದರ ತನಿಖೆಯ ವ್ಯಾಪ್ತಿಗೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜರುಗಿದ ದೌರ್ಜನ್ಯಗಳ ವಿರುದ್ಧವೂ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು. ಒಂದು ವೇಳೆ ಮಂಡೇಲ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಂತಹ ಸಂದರ್ಭದಲ್ಲಿ ಈ ಬಗೆಯ ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋಗಿದ್ದಲ್ಲಿ ಶತಮಾನಗಳಿಂದ ಬಿಳಿಯರ ಕೈಯಲ್ಲಿ ಕ್ರೌರ್ಯಕ್ಕೆ ತುತ್ತಾಗಿದ್ದ ಬಹುಸಂಖ್ಯಾತ ಕಪ್ಪುವರ್ಣೀಯರ ಆಕ್ರೋಶಕ್ಕೆ ಅಲ್ಪಸಂಖ್ಯಾತ ಬಿಳಿಯರು ಗುರಿಯಾಗುತ್ತಿದ್ದರು. ಆದರೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ತನ್ನ ಸಮಯಪ್ರಜ್ಞೆ, ರಾಜಕೀಯ ಮುತ್ಸದ್ದಿತನ ಮತ್ತು ಸಮತಾವಾದದ ತತ್ವಕ್ಕೆ ಬದ್ಧರಾಗಿ ಜರುಗಬಹುದಾಗಿದ್ದ ಜನಾಂಗೀಯ ಘರ್ಷಣೆ ಮತ್ತು ಪ್ರತೀಕಾರದ ರಕ್ತಪಾತವನ್ನು ತಡೆದರು. ಇದು ಮಂಡೇಲಾ ಅವರ ಮಹಾನ್ ಸಾಧನೆಗಳಲ್ಲೊಂದು.

“ಮಡಿಬಾ” ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂಡೇಲ ಕುರಿತು ಅವರ ಸಹವರ್ತಿ ಡೆಸ್ಮಂಡ್ ಟುಟು ಕೆಲವು ಗಂಟೆಗಳ ಹಿಂದೆ ಹೇಳಿದ್ದು ಇದು: “He was not only an amazing gift to humankind, he made South Africans and Africans feel good about being who we are. He made us walk tall.”

ಇನ್ನು ಮುಂದಿನ ಕೆಲವು ದಿನಗಳ ಕಾಲ ಜಗತ್ತಿನಾದ್ಯಂತ ಈ “ಮಡಿಬಾ ಮ್ಯಾಜಿಕ್” ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ. ಇದು ಇಂದು ತುರ್ತಾಗಿ ಅವಶ್ಯಕವಿರುವ ಆಕ್ಸಿಜನ್.

ಕಂಚಿ ಸ್ವಾಮೀಜಿ ಮತ್ತು ಪ್ರಜಾಪ್ರಭುತ್ವ : ಒಂದು ನೈತಿಕ ಬಿಕ್ಕಟ್ಟು

– ಬಿ.ಶ್ರೀಪಾದ ಭಟ್

2004 ರಲ್ಲಿ ಕಂಚಿ ಕಾಮಕೋಟಿ ಪೀಠದ ಉದ್ಯೋಗಿಯಾಗಿದ್ದ ಶಂಕರರಾಮನ್ ಕೊಲೆಯಾಗಿದ್ದ. ನಂತರ ಅದೇ ಮಠದ ಪೀಠಾದಿಪತಿಯಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಯಿತು. kanchi-seer-arrestedಆಗ ಈ ದಿಟ್ಟ ನಿರ್ಣಯವನ್ನು ಕೈಗೊಂಡಿದ್ದು ಬ್ರಾಹ್ಮಣ ಮುಖ್ಯಮಂತ್ರಿ ಜಯಲಲಿತ. ಆಗ ಬ್ರಾಹ್ಮಣ್ಯದ ಜಾತೀವಾದವನ್ನು, ಶೋಷಣೆಯನ್ನು ವಿರೋಧಿಸುತ್ತಲೇ ಬಂದಿದ್ದ ಡಿಎಂಕೆ ಪಕ್ಷ ಈ ಬಂಧನವನ್ನು ರಾಜಕೀಯ ಕಾರಣಗಳಿಗಾಗಿ ಟೀಕಿಸಿದರೆ ಸಂಘ ಪರಿವಾರ ವರ್ಣಾಶ್ರಮದ ಬದ್ಧತೆಯ ಕಾರಣಗಳಿಗಾಗಿ ಈ ಬಂಧನವನ್ನು ತೀವ್ರವಾಗಿ ಖಂಡಿಸಿ ಸದರಿ ಸ್ವಾಮಿಯ ಬೆಂಬಲಕ್ಕೆ ನಿಂತಿತ್ತು. ಕಾಂಗ್ರೆಸ್ ಎಂದಿನಂತೆ ಮುಗುಮ್ಮಾಗಿತ್ತು. 2005 ರಲ್ಲಿ ಇದೇ ಸ್ವಾಮಿ ಜಾಮೀನಿನ ಮೇಲೆ ಹೊರಬಂದಿದ್ದಾಯಿತು. ನಂತರ ಇಡೀ ಪ್ರಕರಣದ ವಿಚಾರಣೆಯನ್ನು ನಿಷ್ಪಕ್ಷಪಾತದ ತನಿಖೆಗಾಗಿ ಪಾಂಡಿಚೆರಿಗೆ ವಗಾಯಿಸಲಾಯಿತು. ಒಟ್ಟು 181 ಸಾಕ್ಷಿಗಳ ಹೇಳಿಕೆ ಪಡೆಯಲಾಯಿತು. ಅದರಲ್ಲಿ 80 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿ ಇಡೀ ತನಿಖೆಯನ್ನು ಹಾದಿ ತಪ್ಪಿಸುವಲ್ಲಿ ಯಶಸ್ವಿಯಾದರು. ಏಳು ವರ್ಷಗಳ ಬಳಿಕ ಈಗ ಕೋರ್ಟ್ ತೀರ್ಪು ಪ್ರಕಟಗೊಂಡಿದೆ.

ಯಾವುದೇ ಸಾಕ್ಷಾಧಾರಗಳಿಲ್ಲದ ಕಾರಣ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಆರೋಪಮುಕ್ತಗೊಳಿಸಲಾಗಿದೆ. ಏಕೆಂದರೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳೆಲ್ಲವೂ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಪೋಲೀಸರಿಗೆ ತಿರುಗಿಬಿದ್ದವು. ಆಗಲೇ ಈ ಪ್ರಕರಣದ ಹಣೆಬರಹ ಗೊತ್ತಾಗಿತ್ತು. ಇಂದು ಬ್ರಾಹ್ಮಣರ ವಲಯದಲ್ಲಿ ಹರ್ಷೋಲ್ಲಾಸವು ತುಂಬಿ ತುಳುಕಾಡುತ್ತಿದ್ದರೆ ನಾವೆಲ್ಲ ಗೌರವಿಸುವ, ಪ್ರೀತಿಸುವ “ದ ಹಿಂದೂ” ದಿನಪತ್ರಿಕೆ ಇಂದಿನ (28/11/2013) ತನ್ನ ದಿನಪತ್ರಿಕೆಯಲ್ಲಿ ಈ ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿ ತನ್ನ ವಿಜಯವನ್ನು ಕೊಚ್ಚಿಕೊಂಡಿರುವ ಒಂದು ಪುಟದ ಜಾಹಿರಾತನ್ನು ಪ್ರಕಟಿಸಿದೆ. ಇದು ನಿಜಕ್ಕೂ ಖೇದಕರ.

ಈ ಶಂಕರರಾಮನ್ ಕೊಲೆಯ ಹಿಂದಿನ ಕೆಲವು ಸೂಕ್ಷ್ಮ ಸಂಗತಿಗಳು:

  • ಕಂಚಿ ಕಾಮಕೋಟಿ ಪೀಠದಲ್ಲಿ ಉದ್ಯೋಗಿಯಾಗಿದ್ದ ಈ ಶಂಕರರಾಮನ್ ಜಯೇಂದ್ರ kanchi-seer-acquittedಸರಸ್ವತಿ ಸ್ವಾಮಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ. ಅದರ ಹಿಂದಿನ ರಹಸ್ಯ ಆತನ ಕೊಲೆಯೊಂದಿಗೆ ಮುಚ್ಚಿಹೋಯಿತು. ಒಂದು ವೇಳೆ ಆತನ ಬ್ಲಾಕ್‌ಮೇಲ್ ಹಿಂದಿನ ರಹಸ್ಯವನ್ನು ಬೇಧಿಸಿದ್ದರೆ ಇಡೀ ಕೊಲೆ ಪ್ರಕರಣ ಮತ್ತೊಂದು ಆಯಾಮಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ ಈ ದಿಕ್ಕಿನಲ್ಲಿ ತನಿಖಾ ಸಂಸ್ಥೆಗಳು ಗಮನ ಹರಿಸಲಿಲ್ಲ.
  • 181 ಸಾಕ್ಷಿಗಳ ಪೈಕಿ ಸುಮಾರು 80 ಸಾಕ್ಷಿಗಳು ವಿಚಾರಣೆಯ ಸಂದರ್ಭದಲ್ಲಿ ಪೋಲೀಸರ ವರದಿಗಳಿಗೆ ವ್ಯತಿರಿಕ್ತ ಹೇಳಿಕೆಗಳನ್ನು ದಾಖಲಿಸಿ ಇಡೀ ಪ್ರಕರಣವೇ ದಾರಿತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರ ಹಿಂದಿನ ತಂತ್ರಗಳನ್ನು ತನಿಖೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಆಸಕ್ತಿ ತೋರಲಿಲ್ಲ.
  • ಶಂಕರರಾಮನ್ ಅವರ ಕುಟುಂಬ ಇಡೀ ಪ್ರಕರಣದ ಆರಂಭದಲ್ಲಿ ಜಯೇಂದ್ರ ಸ್ವಾಮಿಯನ್ನು ಕೊಲೆಯ ಆರೋಪಿಯೆಂದು ಹೇಳಿಕೆ ನೀಡಿ ಕೆಲವು ವರ್ಷಗಳ ನಂತರ ಇದೇ ಸ್ವಾಮಿ ನಿರ್ದೋಷಿಯೆಂದು ಹೇಳಿಕೆ ನೀಡಿ ತನಿಖೆಯನ್ನು ದಿಕ್ಕುತಪ್ಪಿಸಿದರು.
  • ಕೆಲವು ತಿಂಗಳುಗಳ ಹಿಂದೆ ಅಂದರೆ 21 ನೇ ಮಾರ್ಚ 2013 ರಂದು ಶಂಕರರಾಮನ್ ಹತ್ಯೆಯ ಆರೋಪಿಗಳಲ್ಲೊಬ್ಬನಾದ ಕಾಥೀವರನ್ನನ್ನು ಚೆನ್ನೈನಲ್ಲಿ ಮರ್ಡರ್ ಮಾಡಲಾಗುತ್ತದೆ.
  • ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿರುವ ಜಡ್ಜ್ ಅವರ ಮೊಬೈಲ್ ಫೋನ್‌ಗೆ ಬೆದರಿಕೆ ಕರೆಗಳು ಬಂದಿತ್ತು ಎಂದು ಸಹ ಆಗ ಸುದ್ದಿಯಾಗಿತ್ತು.

2004 ರಂದು (ಆದರ ಹಿಂದಿನ ಉದ್ದೇಶಗಳೇನೆ ಇರಲಿ) ಅಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತ ಈ ಜಯೇಂದ್ರ ಸರಸ್ವತಿ ಸ್ವಾಮಿಯಂತಹ ಪ್ರಭಾವಶಾಲಿಯನ್ನು ಬಂಧಿಸುವ ದಿಟ್ಟತನ ತೋರಿದ್ದರು. ಸರಿಯಾಗಿ ಒಂಬತ್ತು ವರ್ಷಗಳ ನಂತರ ಇಂದುjayalalitha ಜಯಲಲಿತ ಅವರು ಮತ್ತೆ ಮುಖ್ಯಮಂತ್ರಿಯಾಗಿರುವಂತಹ ಸಂದರ್ಭದಲ್ಲಿಯೇ ಈ ಕಂಚಿಪೀಠದ ಸ್ವಾಮಿಯನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಜಯಲಲಿತ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವರೇ?? ಆ ಮೂಲಕ 2004 ರ ತಮ್ಮ ನಿರ್ಣಯವನ್ನು ಎತ್ತಿ ಹಿಡಿಯುವರೇ?? ಈ ಪ್ರಶ್ನೆ ಇಂದು ಹೊರಳು ದಾರಿಯಲ್ಲಿ ನಿಂತಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ, ಜಯಲಲಿತ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡರೆ ಸದ್ಯಕ್ಕೆ ಈ ಕಂಚಿ ಸ್ವಾಮಿ ನಿಟ್ಟುಸಿರುಬಿಡಬಹುದು.

ಆದರೆ ಮಠಗಳು ಅದರ ಸ್ವಾಮಿಗಳು ಈ ರೀತಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತಗೊಂಡರೆ ಪ್ರಜಾಪ್ರಭುತ್ವದ ಆಶಯಗಳು ಭಗ್ನಗೊಳ್ಳುತ್ತವೆ. ಏಕೆಂದರೆ ಪವರ್ ಪಾಲಿಟಿಕ್ಸ್‌ನಲ್ಲಿ ಪಳಗಿದ ಈ ಜಯೇಂದ್ರ ಸರಸ್ವತಿ ಸ್ವಾಮೀಜಿ ಈ ತೀರ್ಪಿನಿಂದ ಮರಳಿ ಅಖಾಡಕ್ಕೆ ಇಳಿಯುವ ಸಾಧ್ಯತೆಗಳಿವೆ. ಆರೆಸಸ್ ಮತ್ತು ಬಿಜೆಪಿಗೆ ಹತ್ತಿರದಲ್ಲಿರುವ ಈ ಸ್ವಾಮಿ ಮುಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳು ಇವೆ. ಮಸಲ 2014 ರ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದ ಪಕ್ಷದಲ್ಲಿ ಈ ಜಯೇಂದ್ರ ಸರಸ್ವತಿ ಸಂಘಪರಿವಾರದ ಪರವಾಗಿ ಸಂಧಾನಕಾರನಾಗಿ ನಿಯೋಜಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ 1999 ರಿಂದ 2004 ರವರೆಗೆ ಈ karunanidhi_dynastyಸ್ವಾಮಿಯ ದೆಹಲಿಯ ಹಾರಾಟಗಳನ್ನು ಒಮ್ಮೆ ಅವಲೋಕಿಸಿದರೆ ಇದು ಸ್ಪಷ್ಟವಾಗುತ್ತದೆ. ಆಗ ವಾಜಪೇಯಿ ಮತ್ತು ಅಡ್ವಾನಿ ಮತ್ತು ಸುಷ್ಮಾ ಸ್ವರಾಜ್‌ರಂತಹ ಪ್ರಮುಖ ರಾಜಕಾರಣಿಗಳಿಗೆ ಹತ್ತಿರವಾಗಿದ್ದ ಈ ಸ್ವಾಮಿ ಆ ದಿನಗಳಲ್ಲಿ ಅನೇಕ ಬಗೆಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಕಡೆಗೆ ಧರ್ಮನಿರಪೇಕ್ಷಿತ, ಸೆಕ್ಯುಲರ್ ರಾಷ್ಟ್ರವಾದ ಇಂಡಿಯಾದಲ್ಲಿ ಈ ಬ್ರಾಹ್ಮಣ ಹಿಂದುತ್ವದ ಶಕ್ತಿಗಳು ಮರಳಿ ವ್ಯವಸ್ಥೆಯ ಕೇಂದ್ರಕ್ಕೆ ಬಂದು ತಲುಪುತ್ತಿವೆ. ಮತ್ತೊಂದು ಕಡೆ ಫ್ಯಾಸಿಸಂ ಹೂಂಕರಿಸುತ್ತಿದೆ. ಈ ಎರಡೂ ದುಷ್ಟ ಶಕ್ತಿಗಳು ಮೇಳೈಸುವ ದಾರಿಗಳು ಮಾತ್ರ ಇಂದಿಗೂ ತೊಡಕಿನದಾಗಿದ್ದು ಅಷ್ಟರ ಮಟ್ಟಿಗೆ ಈ ದೇಶ ಸೇಫ್.

[ಈ ಹಿನ್ನೆಲೆಯಲ್ಲಿ ಚಿಂತಕ ಕಂಚ ಐಲಯ್ಯನವರು 29 ನೇ ಜನವರಿ, 2005 ರಂದು ’ತೆಹೆಲ್ಕ’ ಪತ್ರಿಕೆಗೆ ಬರೆದ ಲೇಖನವನ್ನು ಇಂದಿಗೂ ಪ್ರಸ್ತುತವೆನ್ನುವ ಕಾರಣಕ್ಕಾಗಿ ಇಲ್ಲಿ ಅನುವಾದಿಸಿ ಕೊಡಲಾಗಿದೆ. ಇದು ಜಯೇಂದ್ರ ಸರಸ್ವತಿ ಸ್ವಾಮಿಯ ಬಂಧನದ ಹಿನ್ನೆಲೆಯಲ್ಲಿ ಬರೆದ ಲೇಖನ:]

– ಕಂಚ ಐಲಯ್ಯ

ಹಿಂದೂ ಬ್ರಾಹ್ಮಣತ್ವ ಇಂದು ಆಳವಾದ ನೈತಿಕ ಮತ್ತು ಆಧ್ಯಾತ್ಮಿಕ ಬಿಕ್ಕಟ್ಟಿನಲ್ಲಿದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ (1999-2004) ಕಂಚಿ ಪೀಠದ ಸ್ವಾಮಿ ಜಯೇಂದ್ರ ಸರಸ್ವತಿಗಳು ಬಿಜೆಪಿಯೊಂದಿಗಿನ ಪ್ರಭಾವಳಿಯನ್ನು ಬಳಸಿಕೊಂಡು ಸಾಮಾಜಿಕ-ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ನಡೆಸಿದರೆನ್ನಲಾದ ಅನೇಕ misdeeds ಇಂದು ಅವರ ಕೊರಳಿಗೇ ಗಂಟಾಗುತ್ತಿದೆ. ಆಗಿನ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಈ ಕಂಚಿ ಜಯೇಂದ್ರ ಸ್ವಾಮಿಗಳು ಪ್ರಧಾನ ಮಂತ್ರಿಗಳ ಕಛೇರಿಯೊಂದಿಗೆ ಮತ್ತು ಗೃಹ ಇಲಾಖೆಯೊಂದಿಗೆ ನೇರ ಸಂಪರ್ಕವಿರಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ದೆಹಲಿಯ power centre ಈ ಕಂಚಿ ಸ್ವಾಮಿಗಳಿಗೆ ಅತ್ಯಂತ ಅಪ್ತವಾಗಿತ್ತು. ಆಗಿನ ಸಂದರ್ಭದಲ್ಲಿ ಈ ಕಂಚಿ ಸ್ವಾಮಿಗಳು advani-kanchi-seerಹಿಂದುತ್ವ ಮತ್ತು ಮುಸ್ಲಿಂ ನಾಯಕರ ನಡುವೆ ಸಂಪರ್ಕ ಸೇತುವೆಯಾಗಿದ್ದರು ಮತ್ತು ಆ ಸಂಧಾನಕಾರನ ಅನಭಿಷಿಕ್ತ ಪಟ್ಟವನ್ನು ಸಂಪೂರ್ಣವಾಗಿ ಅನುಭವಿಸಿದ್ದರು. ಆದರೆ ಶಂಕರರಾಮನ್ ಕೊಲೆ ಆರೋಪದ ಮೇಲೆ ಈ ಕಂಚಿ ಸ್ವಾಮಿಗಳ ಬಂಧನ ಮತ್ತು ಸದರಿ ಸ್ವಾಮಿಗಳ ಅಧಿಕಾರದೊಂದಿಗೆ ಅಪವಿತ್ರ ಸಂಬಂಧಗಳು ಇಂದು ಹಿಂದೂ ಸ್ವಾಮಿಗಳು ಶತಮಾನಗಳಿಂದ ಕೊಚ್ಚಿಕೊಳ್ಳುತ್ತಿರುವ ಸೋ ಕಾಲ್ಡ್ ನೈತಿಕತೆಯನ್ನೇ ನಾಶಮಾಡಿದ್ದಲ್ಲದೆ ಈ ಹಿಂದೂ ಸ್ವಾಮಿಗಳನ್ನು ಬೆಂಬಲಿಸುತ್ತಿರುವ ಆರೆಸಸ್ / ಬಿಜೆಪಿ / ವಿಎಚ್‌ಪಿ ಪಕ್ಷಗಳ ನೈತಿಕತೆಯೂ ಅಧ%ಪತನಕ್ಕೀಡಾಗಿದೆ. ಇಂದು ಇವರ ಮಾತುಗಳನ್ನು ತಮಿಳುನಾಡಿನಲ್ಲಾಗಲೀ ಅಥವಾ ಇಂಡಿಯಾದಲ್ಲಿ ಯಾರೂ ನಂಬುತ್ತಿಲ್ಲ.

ಸತ್ಯ ಸಾಯಿಬಾಬ ಅಥವಾ ಮಾತಾ ಅಮೃತಾನಂದಮಯಿರಂತಹವರ ಆಶ್ರಮಗಳಲ್ಲಿ ಯಾವುದೇ ಬಗೆಯ ಬಿಕ್ಕಟ್ಟುಗಳು ತಲೆದೋರಿದರೂ ಅದು ಇಡೀ ಹಿಂದೂ ಧರ್ಮದ ಬಿಕ್ಕಟ್ಟೆಂದು ಪರಿಗಣಿಸುವುದಿಲ್ಲ. ಆದರೆ ಬ್ರಾಹ್ಮಣರ ಕಂಚಿ ಕಾಮಕೋಟಿ ಪೀಠದಲ್ಲಿ ತಲೆದೋರಿರುವ ಬಿಕ್ಕಟ್ಟುಗಳಿಂದ ಇಡೀ ಬ್ರಾಹ್ಮಣ ಹಿಂದುತ್ವಕ್ಕೆ ತೀವ್ರ ಹಿನ್ನಡೆಯುಂಟಾಗಿದೆ .ಇಲ್ಲಿ ಜಯೇಂದ್ರ ಸರಸ್ವತಿಗಳು ಲಕ್ಷಾಂತರ ಭಕ್ತರನ್ನು ನಿಯಂತ್ರಿಸುವ ಅತ್ಯಂತ ಪ್ರಭಾವಶಾಲಿ ಪೀಠವನ್ನು ಅಲಂಕರಿಸಿದ್ದಾರೆ. ಆದಿಶಂಕರರು ಸ್ಥಾಪಿಸಿದ ಐದು ಶಂಕರ ಪೀಠಗಳಲ್ಲಿ ಈ ಕಂಚಿ ಕಾಮಕೋಟಿ ಪೀಠವು ಅತ್ಯಂತ ಕನ್ಸರ್ವೇಟಿವ್ ಆಗಿದೆ. ಆದರೆ ಇಂದು ಈ ಪೀಠ ತೀವ್ರ ಬಿಕ್ಕಟ್ಟಿನಲ್ಲಿದೆ.

ಮತ್ತೊಂದು ಮುಖ್ಯವಾಗಿ ನಮ್ಮನ್ನು ಕಾಡುವುದೇನೆಂದರೆ ಪರಸ್ಪರ ಉತ್ತಮ ಭಾಂಧವ್ಯವನ್ನು ಹೊಂದಿದ್ದ ಈ ಕಂಚಿ ಸ್ವಾಮಿಗಳು ಮತ್ತು ಜಯಲಲಿತರ ನಡುವೆ ಭಿನ್ನಾಭಿಪ್ರಾಯವೇತಕೆ ತಲೆದೋರಿತು? ಆದರೆ ಇದಕ್ಕಿಂತಲೂ ಪ್ರಮುಖವಾದ ಸಮಸ್ಯೆಯೆಂದರೆ ಈ ಕಂಚಿ ಸ್ವಾಮಿಗಳು ಅಧಿಕಾರದ ಶಕ್ತಿಕೇಂದ್ರಗಳ ಬಳಿ, ಅಧಿಕಾರದಲ್ಲಿರುವ ರಾಜಕಾರಣಿಗಳ ಬಳಿ ಪದೇ ಪದೇ ಒಡನಾಡುವುದೇತಕ್ಕೆ? ಈ ದೇಶದ ದೇವಸ್ಥಾನಗಳು ಮತ್ತು ಮಠಗಳು ಇನ್ನೆಷ್ಟು ದಿನಗಳ ಕಾಲ ಈ ಬಗೆಯ ಕೈಮ್‌ಗಳಿಗೆ ಸಾಕ್ಷಿಯಾಗಬೇಕು?

ಈ ಕಂಚಿ ಕಾಮಕೋಟಿ ಪೀಠವನ್ನು ಹಿಂದುತ್ವದ ವ್ಯಾಟಿಕನ್ ಎಂದು ಹೇಳಲಾಗುತ್ತದೆ. ಕ್ರಿಶ್ಚಿಯನ್ನರಲ್ಲಿ ಇರುವಂತಹ ಕ್ಯಾಥೋಲಿಕ್ಸ್ ಮತ್ತು ಪ್ರೊಟೆಸ್ಟಂಟ್ ಪಂಗಡಗಳಂತೆಯೇ ಈ ಬ್ರಾಹ್ಮಣರಲ್ಲಿಯೂ ಶೈವರು ಮತ್ತು ವೈಷ್ಣವರು ಎನ್ನುವ ಎರಡು ವಿಭಿನ್ನ ಕುಲಗಳಿವೆ. ಈ ಕಂಚಿ ಸ್ವಾಮಿಗಳ ಬಂಧನವನ್ನು ಬಿಜೆಪಿ ಪಕ್ಷವು ರಾಜಕೀಯಗೊಳಿಸುತ್ತಿದೆ (2005 ರಲ್ಲಿ). kanchi-seer-jayalalithaಏಕೆಂದರೆ ಈ ಕಂಚಿ ಜಯೇಂದ್ರ ಸ್ವಾಮಿಗಳು ಹಿಂದುತ್ವ ಐಡಿಯಾಲಿಜಿಯ ಪ್ರತಿಪಾದಕರು. ಮೊನ್ನೆಯವರೆಗೂ ಜಯಲಲಿತರನ್ನು ಹಿಂದೂ ಧರ್ಮದ ರಕ್ಷಕಿ ಎಂದು ಹೊಗಳುತ್ತಿದ್ದ ಬಿಜೆಪಿ ಪಕ್ಷ ಇಂದು ಈ ಸ್ವಾಮಿಗಳನ್ನು ಬಂಧಿಸಿದ್ದಕ್ಕಾಗಿ ಅವರನ್ನು ಟೀಕಿಸುತ್ತಿದೆ. ಮನುವಾದವು ಬ್ರಾಹ್ಮಣನನ್ನು ಕಾನೂನಿಗಿಂತಲೂ ಮಿಗಿಲಾದ, ಕಾನೂನನ್ನು ಮೀರಿದ ದೈವಾಂಶವುಳ್ಳವನು ಎಂದು ಪ್ರತಿಪಾದಿಸತ್ತದೆ. ಇಂದು ಕಂಚಿ ಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಬೆಂಬಲಿಸುವುದರ ಮೂಲಕ ಬಿಜೆಪಿ ಪಕ್ಷವೂ ಸಹ ಈ ಮನುವಾದವನ್ನು ಅನುಮೋದಿಸುತ್ತದೆ. ಈ ಬಿಜೆಪಿಯಂತಹ ಪ್ರಮುಖ ರಾಜಕೀಯ ಪಕ್ಷವು ಬ್ರಾಹ್ಮಣತ್ವದ, ಮನುಧರ್ಮ ಪ್ರತಿಪಾದಿಸುವ ಪಕ್ಷವಾಗಿ ಹೊರಹೊಮ್ಮಿದರೆ ಇಂಡಿಯಾದ ಸಂವಿಧಾನದ ಹಿತಾಸಕ್ತಿಗಳೇ ನಾಶಗೊಳ್ಳುತ್ತವೆ.

ಐತಿಹಾಸಿಕವಾಗಿ ಹಿಂದೂ ಧರ್ಮದ ಶಂಕರ ಪೀಠಾದಿಪತಿಗಳು ತಮ್ಮನ್ನು ಆದರ್ಶಪುರುಷರೆಂದೇ ಬಿಂಬಿಸಿಕೊಳ್ಳುತ್ತಾರೆ. ಆದರೆ ಇಂದು ಕೊಲೆ ಆಪಾದನೆಗೊಳಗಾಗಿರುವ ಕಂಚಿ ಜಯೇಂದ್ರ ಸ್ವಾಮಿಗಳ ನಡತೆಗಳು ಬೇರೆಯದನ್ನೇ ಮನವರಿಕೆ ಮಾಡಿಕೊಡುತ್ತವೆ. ಅಷ್ಟೇಕೆ ಮನುವಾದವನ್ನು ಉಸಿರಾಡುತ್ತಿರುವ ಇಂಡಿಯಾದ ವ್ಯವಸ್ಥೆಯೂ ಸಹ ಈ ಶಂಕರಾಚಾರ್ಯರು ಮತ್ತು ಅವರ ಪೀಠಗಳು ಪ್ರಶ್ನಾತೀತರು ಎಂದೇ ಜನತೆಗೆ ಬೋಧಿಸುತ್ತಿದ್ದರು. ಹಾಗಿದ್ದಲ್ಲಿ ಇಂದು ಕೊಲೆ ಆರೋಪಕ್ಕೆ ಒಳಗಾಗಿರುವ ಸ್ವಾಮಿಗಳ ಪರವಾಗಿ ಮೃದು ಧೋರಣೆ ವ್ಯಕ್ತಪಡಿಸುತ್ತಿರುವ ಇಲ್ಲಿನ ವ್ಯವಸ್ಥೆ ಮುಂದಿನ ತಲೆಮಾರಿಗೆ ಯಾವ ಸಂದೇಶವನ್ನು ರವಾನಿಸುತ್ತಿದೆ?

ಉದಾಹರಣೆಗೆ ಈ ಮಠಗಳ ಸಾಂಸ್ಕೃತಿಕ ಪರಂಪರೆಯನ್ನೇ ಗಮನಿಸಿ. ಸಮುದ್ರವನ್ನು ದಾಟಬಾರದೆಂದು ಇವರ ಒಂದು ಕಟ್ಟುಪಾಡು. ಒಂದು ಶಾಸನ. ಆದರೆ 2001 ರಲ್ಲಿ ಪುರಿ ಪೀಠದ ಸ್ವಾಮಿಗಳು ಸಮುದ್ರವನ್ನು ದಾಟಿ ಅಮೇರಿಕಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಹಿಂದೂ ಧರ್ಮದ ಪರವಾಗಿ ಉಪನ್ಯಾಸಗಳನ್ನು ನೀಡಿದ್ದರು. ಇಂದು ಈ ಕಂಚಿ ಸ್ವಾಮಿಗಳು ಕೊಲೆ ಆರೋಪ ಎದುರಿಸುತ್ತಿದ್ದಾರೆ. ಆದರೆ ಸಮಾಜ ಮಾತ್ರ ಇಂದು ಇವರ ಬೆಂಬಲಕ್ಕಿದೆ!! ತಮಗೆ ಅನುಕೂಲವಾಗುವ ಹಾಗಿದ್ದಲ್ಲಿ ಧರ್ಮದ ಕಟ್ಟುಪಾಡುಗಳನ್ನು ಬದಲಾಯಿಸಬಲ್ಲ ಈ ವ್ಯವಸ್ಥೆ ಅಸ್ಪೃಶ್ಯತೆ ಮತ್ತು ಸ್ತ್ರೀ ವಿಮೋಚನೆ ಕುರಿತಾಗಿ ಮಾತ್ರ ಧರ್ಮಶಾಸ್ತ್ರದ ನೀತಿನಿಯಮಗಳನ್ನು ಬೋಧಿಸುತ್ತದೆ. ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಹಟ ಹಿಡಿಯುತ್ತದೆ. ಇದೆಂತಹ ವಿಪರ್ಯಾಸ!

ಪ್ರಜಾಪ್ರಭುತ್ವಕೆ ದಾರಿ ತೋರಿಸುವವರಾರು? ದಾರಿ ಯಾವುದಯ್ಯಾ?

– ಬಿ.ಶ್ರೀಪಾದ ಭಟ್

ಕಾಂಗ್ರೆಸ್ ಪಕ್ಷ 2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಯಾವ ಬಗೆಯ ಪೂರ್ವ ತಯಾರಿ ನಡೆಸಿದೆ? ಆ ಪಕ್ಷದ ಅಂತರಿಕ ಸಿದ್ಧತೆಗಳು, ಚಿಂತನೆಗಳು ಹಾಗೂ ಪಕ್ಷವೊಂದರ Internal Organisation Structure ಇಂದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಅದರ ಸಾಮರ್ಥ್ಯ ಯಾವ ಮಟ್ಟದಲ್ಲಿದೆ? 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನಂತಹ ಪ್ರಮುಖ ಪಕ್ಷವೊಂದು ಸತತವಾಗಿ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದಾಗ ಮೇಲಿನ ಈ ಅಂಶಗಳು ಬಹಳ ಮುಖ್ಯವಾಗುತ್ತವೆ.

ಇವೆಲ್ಲವನ್ನೂ ಕಾಂಗ್ರೆಸ್‌ನ ಇಂದಿನ ಸ್ಥಿತಿಯಲ್ಲಿ ಪರಸ್ಪರ ಹೋಲಿಕೆಯಲ್ಲಿಟ್ಟು ವಿಮರ್ಶಿಸಿದಾಗ ಕಂಡುಬರುವುದೇನೆಂದರೆ ಅಪಾರ ನಿರಾಶೆ. narender_modi_rssಏಕೆಂದರೆ ಫ್ಯಾಸಿಸ್ಟ್ ಗುಂಪು ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ರಾಜಕೀಯದ ಮುಂಚೂಣಿಗೆ ಧುಮುಕಿದ್ದು ದೇಶದ ಇಂದಿನ ಇಡೀ ರಾಜಕೀಯ ಚಟುವಟಿಕೆಗಳು ಮತ್ತು ಚುನಾವಣಾ ಪ್ರಚಾರವನ್ನು ಸಂಪೂರ್ಣ ಶಕ್ತಿ ಪ್ರದರ್ಶನ ವೇದಿಕೆಗಳಾಗಿ ಪರಿವರ್ತಿಸಿದ್ದಾರೆ. ಫ್ಯಾಸಿಸ್ಟರು ಅಧಿಕಾರಕ್ಕಾಗಿ ಎಲ್ಲಾ ಬಗೆಯ ತಂತ್ರ ಕುತಂತ್ರಗಳಲ್ಲಿ ನಿರತರಾಗಿದ್ದಾರೆ. ಮಾಧ್ಯಮಗಳು ಏಕಪಕ್ಷೀಯವಾಗಿ, ಕುರುಡಾಗಿ ಈ ಫ್ಯಾಸಿಸ್ಟರ ಪರವಾಗಿ ಪ್ರಚಾರ ಮಾಡುತ್ತಿವೆ. ಮತೀಯ, ಕೋಮುವಾದಿ ರಾಷ್ಟ್ರೀಯವಾದವು ಮುನ್ನುಗ್ಗುತ್ತಿರುವಂತಹ ಹೊರಳು ದಾರಿಗೆ ತಿರುಗಿರುವ ಇಂಡಿಯಾದ ಇಂದಿನ ಆತಂಕಭರಿತ ರಾಜಕೀಯ ಸ್ಥಿತಿಯಲ್ಲಿ ಅಪಾರ ಅನುಭವವುಳ್ಳ, ಅತ್ಯಂತ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಕಾಂಗ್ರೆಸ್ ಪಕ್ಷ ಹವ್ಯಾಸಿ ರಾಜಕೀಯ ಪಕ್ಷದಂತೆ ವರ್ತಿಸುತ್ತ ಈ ಬಿರುಗಾಳಿಗೆ ತತ್ತರಿಸುತ್ತಿದೆ. ಇಂದು ದೇಶದಲ್ಲಿ ಕಾಂಗ್ರೆಸ್‌ನಷ್ಟು ನೈತಿಕವಾಗಿ ದಿವಾಳಿಯೆದ್ದ ಪಕ್ಷ ಮತ್ತೊಂದಿಲ್ಲ.

ರಾಜಕೀಯ ಪಂಡಿತರ ಪ್ರಕಾರ ಅದರ ಬಹಿರಂಗ ಪ್ರಚಾರದ ವರದಿಗಳು ಮತ್ತು ನಾಯಕರ ಭಾಷಣಗಳನ್ನು ಹೊರತುಪಡೆಸಿದರೆ 2004 ಮತ್ತು 2009 ರ ಚುನಾವಣೆಗಳ ಸಂದರ್ಭಕ್ಕೆ ನಡೆಸಿದ ತಯಾರಿಗಳಿಗೆ ಹೋಲಿಸಿದರೆ 2014 ರ ಚುನಾವಣೆಗಾಗಿ ಕಾಂಗ್ರೆಸ್‌ನ ಪೂರ್ವ ತಯಾರಿ ಯೋಜನೆಗಳು ಸಂಪೂರ್ಣ ಭಿನ್ನವಾಗಿವೆ ಮತ್ತು ಸೂತ್ರ ಹರಿದ ಗಾಳಿಪಟದಂತಿದೆ. ಕಳೆದ ಹದಿನೈದು ವರ್ಷಗಳಲ್ಲಿ ಅಂದರೆ 1997 ರಿಂದ 2012 ರವರೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಸೋಲು ಮತ್ತು ಗೆಲವುಗಳು ಸೋನಿಯಾ ಗಾಂಧಿಯವರ ನಿರ್ಧಾರಗಳು, ಚಿಂತನೆಗಳು, ಮತ್ತು ಮೇಡಂರ ರಾಜಕೀಯ ಕಾರ್ಯದರ್ಶಿ sonia-ahmad-patelಅಹ್ಮದ್ ಪಟೇಲ್‌ರ ರಾಜಕೀಯ ಚಾಣಾಕ್ಷತೆ ಮತ್ತು ಸಮ್ಮಿಶ್ರ ಸರ್ಕಾರವೊಂದರ ಸಹಯೋಗಿ ಪಕ್ಷಗಳೊಂದಿಗೆ ನಿರಂತರವಾಗಿ ಕಾಯ್ದುಕೊಂಡುಬರುವ ಪರಸ್ಪರ ಸಹಕಾರದ ಮಟ್ಟ ಇವುಗಳನ್ನು ಅವಲಂಬಿಸಿತ್ತು. ಸೋನಿಯಾ ಗಾಂಧಿ ಅವರ ನಾಯಕತ್ವದ ದೂರದರ್ಶತ್ವ ಮತ್ತು ಮಿತಿಗಳು ಮತ್ತು ಅಹ್ಮದ್ ಪಟೇಲ್‌ರ ರಾಜಕೀಯ ಕಾರ್ಯದರ್ಶಿಯ ಕಾರ್ಯಕ್ಷಮತೆಯ ಫಲವಾಗಿ ಕಳೆದ ಹದಿನೈದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಅಂತರಿಕ ಚಟುವಟಿಕೆಗಳು ಮತ್ತು ನಿರ್ಧಾರಗಳು ಈ ಕೆಳಗಿನಂತಿತ್ತು:

  • ವೈಯುಕ್ತಿಕ ಮಟ್ಟದಲ್ಲಿನ ರಾಜಕೀಯ ಸಂಬಂಧಗಳನ್ನು ಮತ್ತು ಅವರ ಪ್ರಭಾವ ಮಟ್ಟವನ್ನು ಆಧರಿಸಿ ಯೋಜನೆಗಳನ್ನು ರೂಪಿಸುವುದು ಮತ್ತು ರಾಜಕೀಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು. ಅಂದರೆ ಅಹ್ಮದ್ ಪಟೇಲರ ಕೆಲಸವೇ ರಾಜಕೀಯ ಬಿಕ್ಕಟ್ಟುಗಳನ್ನು ಸರಿಪಡಿಸುವದಕ್ಕಿಂತಲೂ ಹೆಚ್ಚಾಗಿ “ನಿಭಾಯಿಸುವುದು” ಮುಖ್ಯವಾಗಿತ್ತು.
  • ಚರ್ಚೆಗಳು, ಸಂಧಾನಗಳು, ಮತ್ತು ಕಾದು ನೋಡುವ ತಂತ್ರ ಸೋನಿಯಾ ಗಾಂಧೀಯವರ ರಾಜಕೀಯ ಗುಣಲಕ್ಷಣಗಳು ಮತ್ತು ಪ್ರಧಾನ ಚೌಕಟ್ಟಾಗಿದ್ದರೆ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಇಳಿಸಿದ್ದು ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಈ ಅಹ್ಮದ್ ಪಟೇಲ್.
  • ಮೇಲ್ನೋಟಕ್ಕೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಜಾರಿಯಲ್ಲಿದೆ ಎಂದು ಕಂಡುಬರುತ್ತಿದ್ದರೂ ಆಳದಲ್ಲಿ ಕಾಂಗ್ರೆಸ್ ಪಕ್ಷವು ಮೈಗೂಡಿಸಿಕೊಂಡಿರುವುದು ರಾಜವಂಶದ ಆಡಳಿತ ಮಾದರಿಯನ್ನು. ಅಂದು ಇಂದಿರಾ ರಾಜಮಾತೆಯಾಗಿದ್ದರೆ ಇಂದು ಸೋನಿಯಾ ಗಾಂಧಿ. ಪಕ್ಷದ ಅಂತರಿಕ ಆಡಳಿತ ವ್ಯವಸ್ಥೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಜೀ ಹುಜೂರ್ ಶೈಲಿಗೆ ಮಾತ್ರ ಮಣೆ ದೊರಕುತ್ತದೆ.
  • ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಈ ಭೇಟಿಗಳನ್ನು ಆದಷ್ಟು ಪಕ್ಷದ “ಒಳಿತಿಗೆ” ಅನುಗುಣವಾಗುವಂತೆ ರೂಪಿಸುವುದು (ಅಹ್ಮದ್ ಪಟೇಲ್ ಇದರಲ್ಲಿ ಸಂಪೂರ್ಣ ಪಳಗಿದ ಕೈ). ಸೋನಿಯಾ ಗಾಂದಿಯವರ ರಾಜಕೀಯ ಕಾರ್ಯದರ್ಶಿಯಾಗಿ ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಹ್ಮದ್ ಪಟೇಲ್ ಮೇಡಂರವರ ನಿರ್ಧಾರಗಳಿಗೆ, ಚಿಂತನೆಗಳಿಗೆ ಪೂರಕವಾಗುವಂತೆ ಇಡೀ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳನ್ನು, ಕಾರ್ಯಕಾರಿ ಸಭೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದದ್ದು ಈ ಅಹ್ಮದ್ ಪಟೇಲ್‌ರ ಯಶೋಗಾಥೆಗಳಲ್ಲೊಂದು.
  • ಸೋನಿಯಾ ಗಾಂಧಿಯವರು ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಆ ಸಂದರ್ಭಕ್ಕೆ ಅನುಗುಣವಾಗಿ ಸಂಬಂಧಪಟ್ಟಂತಹ ಪಕ್ಷದ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ರಾಜ್ಯಗಳ ನಾಯಕರ, ಆಪ್ತರ ಸಾಮೂಹಿಕ ನಿರ್ಧಾರಗಳಿಗೆ, ಅಭಿಪ್ರಾಯಗಳ ಅಭಿವ್ಯಕ್ತಿಗೆ ಮಾನ್ಯತೆ ನೀಡುತ್ತಿದ್ದರು. ನಂತರ ಅಳೆದೂ ತೂಗಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದರು. ಅದರ ಪರಿಣಾಮಗಳು ಅನೇಕ ಬಾರಿ ಗೆಲುವು ನೀಡಿವೆ. ಹಲವಾರು ಬಾರಿ ಮರೆಯಲಾರದಂತಹ ಬಲವಾದ ಪೆಟ್ಟನ್ನು, ಕಂಡರಿಯದಂತಹ ಸೋಲನ್ನು ನೀಡಿವೆ. ಸೋನಿಯಾರ ಅಧ್ಯಕ್ಷತೆಯಲ್ಲಿ ಪಕ್ಷದ ನೇತಾರರನ್ನು ಆರಿಸುವಾಗ, ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವಾಗ ಆತನ ಪ್ರಾಮಾಣಿಕತೆ, ಪಕ್ಷನಿಷ್ಠತೆ, ವೈಯುಕ್ತಿಕ ಪರಿಶುದ್ಧತೆಯೇ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದೆಂದು ಬಹಿರಂಗವಾಗಿ, ಕಾರ್ಯಕಾರಿಣಿ ಸಭೆಗಳಲ್ಲಿ ಹೇಳಲಾಗುತ್ತಿದ್ದರೂ, ವಾಸ್ತವದಲ್ಲಿ ಮುಖ್ಯವಾಗಿ ಆತ ಗೆಲ್ಲುವ ಕುದುರೆಯಾಗುವ ಸಾಧ್ಯತೆಗಳನ್ನು ಆಧರಿಸಿಯೇ ರಾಜ್ಯಗಳ ನಾಯಕರಾಗಿ ಆರಿಸುತ್ತಿದ್ದರು. ಅಲ್ಲಿ ಭ್ರಷ್ಟತೆಯ, ಜಾತೀಯತೆಯ ಆರೋಪಗಳು ಹಿನ್ನೆಲೆಗೆ ಸರಿಯಲ್ಪಡುತ್ತಿದ್ದವು. ಗೆಲುವಿನ ಸಾಧ್ಯತೆ ಮಾತ್ರ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಕಡೆಗೆ ಭವಿಷ್ಯದ ಆಶೋತ್ತರಗಳು ಗೌಣಗೊಂಡು ಹಣಬಲ, ತೋಳ್ಬಲ ಮೇಲುಗೈ ಸಾಧಿಸುತ್ತಿತ್ತು. ಇದು ಇಂದಿರಾ ಗಾಂಧಿಯವರ ರಾಜಕೀಯ ಶೈಲಿ. ಇದನ್ನು ಸೋನಿಯಾ ಅವರೂ ಸಹ ಇದನ್ನು ಮುಂದುವರೆಸಿಕೊಂಡು ಹೋದರು. sonia-kharge-dksಅಂದಿನ ಮುಖ್ಯಮಂತ್ರಿ ಗುಂಡೂರಾಯರಿಂದ ಹಿಡಿದು ಇಂದಿನ ಡಿ.ಕೆ.ಶಿವಕುಮಾರ್‌ವರೆಗಿನ ರಾಜಕೀಯ ವಿದ್ಯಾಮಾನಗಳನ್ನು ಅವಲೋಕಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ಇಂದಿರಾ ಗಾಂಧಿಯವರ ಕಾಲಘಟ್ಟದ ರಾಜಕೀಯ ಚಿತ್ರಣಗಳ ಸ್ವರೂಪ ಮತ್ತು ಸೋನಿಯಾ ಗಾಂಧಿಯವರ ಕಾಲಘಟ್ಟದ ರಾಜಕೀಯ ನಿರ್ಧಾರಗಳ ಸ್ವರೂಪಕ್ಕೂ ಅಪಾರವಾದ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಸೋನಿಯಾ ಗಾಂಧಿಯವರ ಅನೇಕ ರಾಜಕೀಯ, ಸಾಮಾಜಿಕ ನಿರ್ಧಾರಗಳು ಇಂದಿರಾ ಅವರಂತೆ ಜನಪ್ರಿಯ ಶೈಲಿಯನ್ನೇ ಹೋಲುತ್ತಿದ್ದರೂ ಅನೇಕ ಸಂದರ್ಭಗಳಲ್ಲಿ ಸೋನಿಯಾ ಗಾಂಧಿಯವರು ತಮ್ಮ ಅತ್ತೆಗಿಂತಲೂ ಭಿನ್ನವಾಗಿ ವರ್ತಿಸಿದ್ದಾರೆ. ಅನೇಕ ಬಾರಿ ರಾಜಕೀಯವಾಗಿ ಮುಗ್ಗರಿಸಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಸೋನಿಯಾ ಗಾಂಧಿಯವರ ಜಾತ್ಯಾತೀತ, ಸೆಕ್ಯುಲರ್ ವ್ಯಕ್ತಿತ್ವ ನಿಜಕ್ಕೂ ಇಂದು ನಮಗೆಲ್ಲ ಮಾದರಿಯಾಗಿದೆ. ಸೋನಿಯಾ ಅವರು ಇಂಡಿಯಾದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿಯೇ, ಸಂವಿಧಾನಕ್ಕೆ ಬದ್ಧರಾಗಿಯೇ ತಮ್ಮ ಸೆಕ್ಯುಲರ್ ವ್ಯಕ್ತಿತ್ವವನ್ನು ರೂಪಿಕೊಂಡಿದ್ದು ಅಭೂತಪೂರ್ವವೆನಿಸುತ್ತದೆ. ಇದರಲ್ಲಿ ಇಂದಿರಾ ಗಾಂಧಿಯವರು ಸೋಲುತ್ತಾರೆ.

ಆದರೆ 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಪಕ್ಷದ ಉನ್ನತಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ಅಧ್ಯಕ್ಷೆಯಾಗಿ, Manmohan-Sonia-Rahulಯುಪಿಎ ಕೂಟದ ಛೇರ್ಮನ್ ಆಗಿ ಸೋನಿಯಾ ಗಾಂಧಿಯವರು ಯುಪಿಎ ತಂಡದ ರಾಜಕೀಯದ ಹೊಣೆಗಾರಿಕೆ ಹೊತ್ತರೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ಯುಪಿಎ ಸರ್ಕಾರವನ್ನು ಸಮತೋಲನವಾಗಿ ನಡೆಸುವ ಜವಾಬ್ದಾರಿ ಹೊತ್ತರು. ಆದರೆ ದುರಂತವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಆ ಮೂಲಕ ಯುಪಿಎ ತಂಡವನ್ನು ರಾಜಕೀಯವಾಗಿ ನಿಭಾಯಿಸಲು ಸಂಪೂರ್ಣವಾಗಿ ಸೋತಿದ್ದಾರೆ. ಒಂದು ವೇಳೆ ಯುಪಿಎ ಗುಂಪು 2014 ರ ಚುನಾವಣೆಯಲ್ಲಿ ದಯನೀಯವಾಗಿ ಸೋತರೆ (130 ರಿಂದ 140 ಸೀಟುಗಳನ್ನು ಗೆದ್ದರೆ) ಬಹುಶಃ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಹೊರತುಪಡಿಸಿ ಮತ್ತಾವ ಪಕ್ಷವು 2014 ರ ನಂತರ ಯುಪಿಎದೊಂದಿಗೆ ಉಳಿಯುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ವಿವಿಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾನ ತತ್ವಗಳ ಅಡಿಯಲ್ಲಿ ಸಾಮರಸ್ಯ ಸಾಧಿಸಲು ಸೋನಿಯಾ ಗಾಂಧಿಯವರ ಸೋಲು ಇಂದು ನಿಚ್ಛಳವಾಗಿ ಕಾಣುತ್ತಿದೆ.

ಮತ್ತೊಂದು ಕಡೆ ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಸೌಹಾರ್ದಯುತ ಸಂಬಂಧ ಸಂಪೂರ್ಣ ಹಳಸಿಹೋಗಿದ್ದು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರಷ್ಟೇ ಸಮನಾಗಿ ಸೋನಿಯಾ ಗಾಂಧಿಯವರೂ ಸಹ ಇದಕ್ಕೆ ಜವಾಬ್ದಾರರು. ಏಕೆಂದರೆ ಸದಾ ಒಳಸಂಚು ಮತ್ತು ಕಾಲೆಳೆಯುವ ಪ್ರವೃತ್ತಿಯೇ ಇಂಡಿಯಾ ರಾಜಕೀಯದ ಮುಖ್ಯಲಕ್ಷಣವಾಗಿರುವಂತಹ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ಇಮೇಜ್ ಮತ್ತು ತಮ್ಮ ಕುಟುಂಬದ ಸಾರ್ವಭೌಮತ್ವಕ್ಕೆ ಅಪಾರ ಮಹತ್ವ ನೀಡಿದರೇ ಹೊರತಾಗಿ ಸದಾ Sonia-UPAನಿರಂತರ ಜನಸಂಪರ್ಕ ಮತ್ತು ಜನತೆ ಮತ್ತು ಮಾಧ್ಯಮಗಳೊಂದಿಗೆ ಸಂವಾದವನ್ನು ನಡೆಸುವುದರ ಮೂಲಕವೇ ತಮ್ಮನ್ನು ಸದಾ ಸಾಮಾಜಿಕ ಸಂವೇದನಶೀಲ ವ್ಯಕ್ತಿತ್ವವುಳ್ಳವರಾಗಿ ರೂಪಿಸಿಕೊಳ್ಳುವ ಸಾಧ್ಯತೆಗಳನ್ನು, ಒಂದು ಸ್ಪೇಸ್ ಅನ್ನು ಹುಟ್ಟುಹಾಕದೇ ಹೋದರು ಸೋನಿಯಾ ಗಾಂಧಿ.

ಯುಪಿಎ ಸರ್ಕಾರದ ಛೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಗಾಂಧಿಯವರು ವಿರೋಧ ಪಕ್ಷಗಳೊಂದಿಗೆ ನೇರಾನೇರ ಮುಖಾಮುಖಿಯಾಗುವಂತಹ ರಾಜಕೀಯ ವಾಗ್ವಾದಗಳನ್ನು ನಡೆಸುತ್ತಲೇ ಪಕ್ಷಾಧಾರಿತ ರಾಜಕಾರಣವನ್ನು ನಡೆಸುತ್ತಲೇ, ಸಮಾನಾಂತರವಾಗಿ ರಾಜಕೀಯ ಮುತ್ಸದ್ದಿತನ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಾ ವಿರೋಧಪಕ್ಷಗಳೊಂದಿಗೆ ಸಾಮರಸ್ಯವನ್ನು ಸಾಧಿಸುವ ಅವಕಾಶಗಳನ್ನು ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕಿತ್ತು. ಆದರೆ ಇದನ್ನು ಸೋನಿಯಾ ಗಾಂದಿಯವರು ಸಾಧಿಸಲೇ ಇಲ್ಲ. ರಾಜಕೀಯ ಪಂಡಿತರ ಪ್ರಕಾರ ಒಂದು ವೇಳೆ ಸೋನಿಯಾ ಅವರು ಮೇಲ್ಕಾಣಿಸಿದ ರಾಜಕೀಯ ಮುತ್ಸದ್ದಿನವನ್ನು ಪ್ರದರ್ಶಿಸಿದ್ದರೆ ಈ ಕೋಲ್‌ಗೇಟ್, 2-ಜಿ ಸ್ಪೆಕ್ಟ್ರಮ್‌ದಂತಹ ಹಗರಣಗಳು ಇಂದಿನ ತೀವ್ರ ಸ್ವರೂಪಕ್ಕೆ ತಿರುಗುತ್ತಿರಲಿಲ್ಲ. ಕಾಂಗ್ರೆಸ್‌ನ ಕೊರಳಿಗೆ ಉರುಳಾಗುತ್ತಿರಲಿಲ್ಲ. ಇದು ಸೋನಿಯಾರ ಬಲು ದೊಡ್ಡ ರಾಜಕೀಯ ಸೋಲು.

ಕಾಂಗ್ರೆಸ್ ಪಕ್ಷದ ಇಂದಿನ ಬಿಕ್ಕಟ್ಟು ಸದರಿ ಪಕ್ಷವನ್ನು ಮರಳಿ 1997 ರ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಆಗ ಅಧ್ಯಕ್ಷರಾಗಿ ಸಂಪೂರ್ಣವಾಗಿ ಸೋತಿದ್ದ ಅವಸರದ ಮುದುಕ ಸೀತಾರಾಮ್ ಕೇಸರಿಯವರನ್ನು ಅಧಿಕಾರದಿಂದ ಕೆಳಗಿಳಿಸಿ ಪಕ್ಷದ ಪುನರುಜ್ಜೀವನದ ಕಾರ್ಯವನ್ನು ತಮ್ಮ ಕೈಗೆತ್ತಿಕೊಂಡ ಸೋನಿಯಾ ಗಾಂಧಿಯವರು ನಂತರ 2004 ರವರೆಗೂ ಏಳು ವರ್ಷಗಳ ಕಾಲ ನುರಿತ, ಅಪಾರ ಅನುಭವವುಳ್ಳ ರಾಜಕಾರಣಿಯಂತೆ ಇಡೀ ಪಕ್ಷವನ್ನು ನಿಭಾಯಿಸಿದರು. ಆ ಕಾಲಘಟ್ಟದಲ್ಲಿ ತಮ್ಮ ಹೆಗಲೇರಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ, ಘನತೆಯಿಂದ ನಿರ್ವಹಿಸಿದ ಸೋನಿಯಾ ಗಾಂಧಿ 2004 ರಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದರು. rahul-robert-priyankaಹದಿನೈದು ವರ್ಷಗಳ ನಂತರ ತಮ್ಮ ತಾಯಿಯವರು ಕೈಗೆತ್ತುಕೊಂಡ ಜವಾಬ್ದಾರಿಯನ್ನು ಇಂದು ತಮ್ಮ ಹೆಗಲಗೇರಿಸಿಕೊಂಡಿರುವ “ಯುವರಾಜ” ರಾಹುಲ್ ಗಾಂಧಿ ರಾಜಕೀಯವಾಗಿ ಯಾವ ಬಗೆಯ ಧೃವೀಕರಣಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ?? ಕಳೆದ ವರ್ಷಗಳ ಅವರ ನಡೆನುಡಿಗಳ ಮಾತು ಬಿಡಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷನ ಪದವಿಯನ್ನು ವಹಿಸಿಕೊಂಡ ನಂತರ ಇಂದಿನ ರಾಹುಲ್ ಗಾಂಧಿಯ ವರ್ತನೆ ಹೇಗಿದೆ? ಬೌದ್ಧಿಕವಾಗಿ ಅನೇಕ ವೇಳೆ ಭಾವುಕರಾಗಿ, ಕೋಮುವಾದಿ ರಾಷ್ಟ್ರೀಯತೆಗೆ ಪರ್ಯಾಯವೇನೋ ಎಂಬಂತೆ ಸದಾ ಒತ್ತಡದಲ್ಲಿ ಮಾತನಾಡುವ ರಾಹುಲ್ ವಾಸ್ತವದಲ್ಲಿ ದಿವಾಳಿಯೆದ್ದ ಇಡೀ ಪಕ್ಷವನ್ನು ಹೇಗೆ ನಿಭಾಯಿಸುತ್ತಿದ್ದಾರೆ?? ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವ ನುಡಿಕಟ್ಟು ಈ ಕಾಂಗ್ರೆಸ್ ಉಪಾಧ್ಯಕ್ಷನಿಗೆ ಯಾವ ಬಗೆಯಲ್ಲಿ ಅರ್ಥವಾಗಿದೆ?? ಸದಾ ಮ್ಯಾಜಿಕ್ ಅನ್ನು ಬಯಸುವ ಕಾಂಗ್ರೆಸ್‌ನ ಸೋಮಾರಿ, ನಿಸ್ತೇಜಗೊಂಡ, ಬೇಜವಬ್ದಾರಿ ನಾಯಕಮಣಿಗಳಗೆ ಈ ರಾಹುಲ್ ಯಾವ ಬಗೆಯ ಮ್ಯಾಜಿಕ್ ತರಬಲ್ಲರು??

ಅನೇಕ ಬಾರಿ ತನ್ನ ಬಳಿ ಅಂತಹ ಮಂತ್ರದಂಡವಿದೆಯೆಂಬಂತೆಯೇ ವರ್ತಿಸುತ್ತಿರುವ ಆಶಾವಾದದ ರಾಹುಲ್ ಮತ್ತೊಂದು ಕ್ಷಣದಲ್ಲಿಯೇ ತೀರಾ ಎಲ್ಲವನ್ನೂ ಕಳೆದಕೊಂಡ ತಬ್ಬಲಿಯಂತೆ, ಅಮೆಚೂರ್ ರಾಜಕಾರಣಿಯಂತೆ ವರ್ತಿಸುವುದರಲ್ಲಿ ನಿಸ್ಸೀಮ. ಉದಾಹರಣೆಗೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವುದು, ಕಾಂಗ್ರೆಸ್‌ಗೆ ಶಿಸ್ತುಬದ್ಧ ನಡುಳಿಕೆಯನ್ನು ಕಲಿಸುತ್ತೇನೆ, ಕೇಡರ್ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಮರಳಿ ಕಟ್ಟುತ್ತೇನೆ ಎಂದು ಮಹಾತ್ವಾಕಾಂಕ್ಷೆಯಿಂದ ನುಡಿಯುವ ರಾಹುಲ್ ತನ್ನ rahul_priyanka_soniaಆಶಯಗಳಿಗೆ ಅನುಗುಣವಾಗಿಯೇ ಯುವ ಕಾರ್ಯಕರ್ತರ ನೇಮಕಾತಿಗೆ ಚಾಲನೆ ನೀಡುತ್ತಾರೆ. ಅಪಾರ ಭರವಸೆಯೊಂದಿಗೆ ದೇಶಾದ್ಯಾಂತ ಈ ನೇಮಕಾತಿಗಳು ನಡೆಯುತ್ತವೆ.ಈ ನೇಮಕಾತಿ ಪ್ರಕ್ರಿಯೆಯು ಅಪ್ಪಟ ಕಾರ್ಪೋರೇಟ್ ಮಾದರಿಯಲ್ಲಿರುವಂತೆ ರೂಪಿಸಿದ್ದಾರೆ ರಾಹುಲ್. ಅಂದರೆ ಕಾಂಗ್ರೆಸ್ ಪಕ್ಷದ ಸದಸ್ಯರಾಗ ಬಯಸುವವರು ಮೊದಲು ತಮ್ಮ ಬಯೋಡಾಟವನ್ನು ಮಂಡಿಸಬೇಕು. ನಂತರ ರಾಹುಲ್ ಆಯ್ಕೆ ಮಾಡಿದ ಸಂದರ್ಶಕರ ಮುಂದೆ ಸಂದರ್ಶನಕ್ಕೆ ಹಾಜರಾಗಬೇಕು. ಒಮ್ಮೆ ಆಯ್ಕೆಗೊಂಡ ನಂತರ ದಿನನಿತ್ಯ ಪಕ್ಷದ ಕಛೇರಿಗೆ ಹಾಜರಾಗಬೇಕು. ಹೀಗೆ ಸೋಮಾರಿಗಳ, ಬೇಜವ್ದಾರಿಗಳ ಆಡೊಂಬಲವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಶಿಸ್ತುಬದ್ಧ ಒಂದು ಕಾರ್ಪೋರೇಟ್ ಸಂಸ್ಥೆಯ ರೂಪ ಕೊಡಲು ಶ್ರಮಿಸುತ್ತಿರುವ ರಾಹುಲ್ ಗಾಂಧಿಯ ಈ ಪ್ರಯತ್ನ ಮತ್ತು ಯೋಜನೆ ಶ್ಲಾಘನೀಯವೇ. ಅನುಮಾನವೇ ಇಲ್ಲ. ಮತೀಯವಾದದ ವಿರುದ್ಧ ಹೋರಾಡಲು, ಸರ್ವಾಧಿಕಾರದ ವಿರುದ್ಧ ಪ್ರತಿರೋಧ ತೋರಲು ಕಾಂಗ್ರೆಸ್ ಪಕ್ಷಕ್ಕೆ ಸೆಕ್ಯುಲರ್ ತತ್ವದ ಮಾನವೀಯ ಮುಖವನ್ನು, ಸಮತಾವಾದದ ನುಡಿಕಟ್ಟನ್ನು ತೊಡಿಸಲು ಶ್ರಮಿಸುತ್ತಿರುವ ರಾಹುಲ್ ಅವರ ಕಾರ್ಯಕ್ಷಮತೆಗೆ, ಆಶಯಗಳಿಗೆ ಭಾರತೀಯರೆಲ್ಲರಿಗೂ ಸಹಮತವಿದೆ. So far so good. ನಂತರ ಮುಂದೇನು?? ಮುನ್ನುಗ್ಗುವ ದಿನಗಳು ಮುಗಿದ ನಂತರ ತಮ್ಮನ್ನು ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಬೇಕಾದಂತಹ ಕಾಲಘಟ್ಟದಲ್ಲಿಯೇ ಈ ಯುವ ನಾಯಕ ಮುಗ್ಗರಿಸಲಾರಂಬಿಸುತ್ತಾರೆ. ಎಲ್ಲವೂ ಟೋಕನಿಸಂನ ಮಟ್ಟಕ್ಕೆ ತಂದು ಬಿಡುವ ರಾಹುಲ್ ಅನೇಕ ವೇಳೆ ನಗೆಪಾಟಲಗೀಡಾಗುತ್ತಾರೆ. ಇದ್ದಕ್ಕಿದ್ದಂತೆಯೇ ಬದಲಾಗುವ, ದಿನನಿತ್ಯ ಪಲ್ಲಟಗೊಳ್ಳುವ ರಾಜಕೀಯದ ವಿದ್ಯಾಮಾನಗಳಿಗೆ ಡೈನಮಿಕ್ ಆಗಿ ಉತ್ತರಿಸಬೇಕಾದ ರಾಹುಲ್ ತೀರಾ ತಣ್ಣಗೆ ಪ್ರತಿಕ್ರಿಯಿಸಲಾರಂಬಿಸುತ್ತಾರೆ. Rahul_Gandhi_Ajay_Makenಅನೇಕ ಬಾರಿ ದಿಗಿಲು ಬೀಳುವಂತಿರುತ್ತಾರೆ. ಅಸಹಾಯಕತೆ ಪ್ರದರ್ಶಿಸುತ್ತಾರೆ. ಇನ್ನು ನಮಗೆ ಅಧಿಕಾರ ಇಲ್ಲದಿದ್ದರೆ ಪರವಾಗಿಲ್ಲ, ನಾನು ಮುಂದಿನ ಹೊಸ ತಲೆಮಾರಿಗೆ ರಾಜಕೀಯ ಕಟ್ಟುತ್ತೇನೆ, ಎಂದು ಹಾಡುತ್ತಿದ್ದ “ಯುವರಾಜ” ಚುನಾವಣಾ ಪ್ರಕ್ರಿಯೆ ಶುರುವಾಗುತ್ತಿರುವಂತೆಯೇ ಮರಳಿ ಹಳೇ ಜಾಡಿಗೆ ಜಾರಿಬಿಡುತ್ತಾರೆ. ಮತ್ತದೇ ಹಳೇ ತಲೆಗಳು, ಅನುಭವಸ್ಥರು, ಗೆಲ್ಲುವ ಕುದುರೆಗಳು, ಸಧ್ಯಕ್ಕೆ ಬೇರಾವ ದಾರಿಯಿಲ್ಲ ಎನ್ನುವ ಅದೇ ಹಳೆ ರಾಗಗಳ, ಸವೆದ ನಿರ್ದಿಷ್ಟ ಬಗೆಯ ರಾಜಕೀಯ ಶೈಲಿಗೆ ಶರಣಾಗುವ ರಾಹುಲ್ ತಾವೇ ಉದ್ಘಾಟಿಸಿದ ಹೊಸ ಬಗೆಯ ಪ್ರಯೋಗಕ್ಕೆ ತಿಲಾಂಜಲಿ ನೀಡಲಾರಂಬಿಸುತ್ತಾರೆ. ಇನ್ನು ಅವರ ಆರಂಭಶೂರತ್ವವನ್ನು ನಂಬಿದವರ ಗತಿ?? ಸ್ವತಃ ಮನೆಮಂದಿಯೇ ಕಂಗಾಲಾಗುವಂತಹ ಗೊದಲದ ವಾತಾವರಣ ಸೃಷ್ಟಿಸುವುದರಲ್ಲಿ ರಾಹುಲ್ ನಿಸ್ಸೀಮರು. ನಾಯಕನೊಬ್ಬ ಗೊಂದಲಕ್ಕೆ ಈಡಾಗುವುದೆಂದರೆ ಕೊರಳಿಗೆ ಕಲ್ಲನ್ನು ಕಟ್ಟಿಕೊಂಡು ಬಾವಿಗೆ ಬಿದ್ದಂತೆ!! ಇಂತಹ ಗೋಜಲು ಸ್ಥಿತಿಯಲ್ಲಿ ಕಾಂಗ್ರಸ್ ಪಕ್ಷದ ಹಳೆ ತಲೆಗಳು ಸಂಪೂರ್ಣ ಗೊಂದಲದಲ್ಲಿದ್ದರೆ, ಹೊಸದನ್ನು ಸಾಧಿಸುವ ಬಯಕೆಯೊಂದಿಗೆ ಪಕ್ಷಕ್ಕೆ ಸೇರಿಕೊಂಡ ಹೊಸ ತಲೆಮಾರು ಕಂಗಾಲಾಗಿದ್ದಾರೆ.

ಯಾರ ಬಳಿಯೂ ಉತ್ತರವಿಲ್ಲ, ಸ್ವತಃ ಯುವರಾಜನ ಬಳಿಯೂ!! ಇದು ರಾಹುಲ್ ಗಾಂಧಿಯ ರಾಜಕೀಯ ಶೈಲಿ! ಅದೆಲ್ಲ ಹಾಳಾಗಿ ಹೋಗಲಿ, ಕನಿಷ್ಠ ಒಬ್ಬ ಸಂಸದೀಯಪಟುವಾಗಿ ರಾಹುಲ್ ಗಾಂಧಿಯ ಸಾಧನೆ ಏನು? ಶೂನ್ಯ ! ದೊಡ್ಡ ಶೂನ್ಯ! Rahul-Gandhiಈ ಯುವರಾಜರು ಸಂಸತ್ತಿಗೆ ಹಾಜರಾತಿ ಹಾಕಿದ್ದೇ ಕೇವಲ ಎರಡು ಅಥವಾ ಮೂರು ಬಾರಿ. ಅಲ್ಲಿ ಮಾತನಾಡಿದ್ದಕ್ಕೆ ದಾಖಲೆಯೂ ಇಲ್ಲ. ಪಾರ್ಲಿಮೆಂಟ್ ವ್ಯವಸ್ಥೆಯ ಕುರಿತಾಗಿ ಈ ಮಟ್ಟದ ನಿರ್ಲಕ್ಷ್ಯ ಪ್ರದರ್ಶಿಸುವ ರಾಹುಲ್ ಗಾಂಧಿ ತನ್ನ ಅನುಯಾಯಿಗಳಿಗೆ ಪ್ರಜಾಪ್ರಭುತ್ವದ ಆಶಯಗಳನ್ನು ಹೇಗೆ ವಿವರಿಸುತ್ತಾರೆ?

ಒಟ್ಟಿನಲ್ಲಿ ಈ ಹಾಲುಗೆನ್ನೆಯ, ಹಸುಕೂಸಿನಂತಿರುವ, ರಾಜಕಾರಣಿಯಾಗಿ ಇನ್ನೂ ಅಪ್ರೈಂಟಿಸ್ ಮಟ್ಟದಲ್ಲಿರುವ, ಅಪಕ್ವ ರಾಜಕಾರಣಿ ರಾಹುಲ್ ಗಾಂಧಿ ವಾತಾಪಿ ಜೀರ್ಣೋಭವಕ್ಕೆ ಹೆಸರುವಾಸಿಯಾದ ಭಾರತದ ರಾಜಕೀಯ ಒಡಲಿಗೆ ಬಲಿಯಾಗದಿರಲಿ.

ಕೋಮುವಾದಿ ರಾಷ್ಟ್ರೀಯವಾದವನ್ನು ಬೆಳಸುತ್ತಿರುವ ಆರೆಸಸ್ ಮತ್ತು ಮೋದಿ ಒಂದು ಕಡೆಗೆ ಕ್ರಿಯಾಶೀಲವಾಗುತ್ತಿದ್ದರೆ ಕನಿಷ್ಠ ಈ ಕೋಮುವಾದಿ ರಾಜಕಾರಣಕ್ಕಾದರೂ ಪ್ರತಿರೋಧವೇನೋ ಎಂಬಂತಿದ್ದ ಕಾಂಗ್ರೆಸ್‌ನ ಹಣೆಬರಹ ಹೆಚ್ಚೂ ಕಡಿಮೆ ಮೇಲಿನಂತೆ ನಿರ್ಧಾರವಾಗಿ ಹೋಗಿದೆ. ಇಂದಿನ ಭಾರತದ ರಾಜಕೀಯ ಅಪಾರ ನಾಟಕೀಯತೆಯೊಂದಿಗೆ ವರ್ತಿಸುತ್ತಿದೆ. ದಿನನಿತ್ಯ ಜಟಿಲತೆಯತ್ತ ವಾಲುತ್ತಿದೆ. ಮೇಲುನೋಟಕ್ಕೆ ಸರಳವಾಗಿ ಕಂಡರು ಆಳದಲ್ಲಿ ಸಂಕೀರ್ಣವಾಗಿದೆ. ಭವಿಷ್ಯದ ಕ್ರೌರ್ಯದ ಮುನ್ಸೂಚನೆಗಳಿಗೆ, ಮತೀಯವಾದಿ ಶಕ್ತಿಗಳು ಸೃಷ್ಟಿಸುವ ಹಿಂಸಾಚಾರಕ್ಕೆ ಎಚ್ಚರಿಕೆ ಅವಶ್ಯಕತೆಯೇ ಇಲ್ಲ. ವರ್ತಮಾನದಲ್ಲಿಯೇ ತಾಂಡವವಾಡುತ್ತಿದೆ.

ತುಮಕೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ಬಗ್ಗೆಯ ವಿಚಾರ ಸಂಕಿರಣ ಮತ್ತು ಸಂವಾದ

ಸ್ನೇಹಿತರೆ,

ಹಾಸನದಲ್ಲಿ 07-09-2013 ರಂದು ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮದ ಬಗ್ಗೆ ನಿಮಗೆಲ್ಲ ತಿಳಿದಿದೆ. ಈಗ ಅದರ ಮುಂದುವರೆದ ಭಾಗವಾಗಿ ಎರಡನೆಯ ವಿಚಾರ ಸಂಕಿರಣ ಮತ್ತು ಸಂವಾದವನ್ನು ಇದೇ ತಿಂಗಳ 24 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದೆ. ನಮ್ಮ ವರ್ತಮಾನ ಬಳಗದ ಶ್ರೀಪಾದ ಭಟ್ಟರು ಈ ಕಾರ್ಯಕ್ರಮವನ್ನು ಏರ್ಪಡಿಸಲು ಹಲವಾರು ದಿನಗಳಿಂದ ತೊಡಗಿಸಿಕೊಂಡಿದ್ದರು. ಈ ಸಾರಿ ನಮ್ಮ ಬಳಗದ ಜೊತೆಗೂಡಿರುವವರು ತುಮಕೂರಿನ “ಭೀಮರಾವ್ ಸಮಾಜ ಕಲ್ಯಾಣ ಸಂಸ್ಥೆ”ಯವರು. ಹೆಚ್ಚಿನ ವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ದಯವಿಟ್ಟು ಸಾಧ್ಯವಾದವರೆಲ್ಲ ಭಾಗವಹಿಸಬೇಕೆಂದು ಕೋರುತ್ತೇನೆ. ಹಾಗೆಯೇ, ಈ ವಿಷಯವನ್ನು ಇತರೆ ಸಮಾನಮನಸ್ಕರ ಜೊತೆ ಮತ್ತು ಇದರ ಉಪಯೋಗ ಪಡೆಯಬಹುದಾದವರ ಜೊತೆ ಹಂಚಿಕೊಳ್ಳಬೇಕೆಂದು ವಿನಂತಿಸುತ್ತೇನೆ.

(ಹಾಸನದಲ್ಲಿ ನಾವು ಮೊದಲ ಕಾರ್ಯಕ್ರಮ ಆಯೋಜಿಸಿದಾಗ ಈ ವಿಷಯದ ಬಗ್ಗೆ ನಾನು ಬರೆದಿದ್ದ ಒಂದು ಟಿಪ್ಪಣಿ ಇಲ್ಲಿದೆ.)

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
www.vartamaana.com

dalit-entrepreneurship-tumkur