Category Archives: ಸೂರ್ಯ ಮುಕುಂದರಾಜ್

ಕೀಳರಿಮೆಯಿಂದ ಕನ್ನಡದ ಕಡೆಗಣನೆ ಸಲ್ಲ – ಕ್ಷಮೆ ಕೇಳಬೇಕಿಲ್ಲ…

– ಸೂರ್ಯ ಮುಕುಂದರಾಜ್
ವಕೀಲ, ಬೆಂಗಳೂರು

ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಗನಿಗೆ ಕ್ಷಮಿಸು ಎಂದು (ಪ್ರಜಾವಾಣಿಯ ಸಂಗತದಲ್ಲಿ ಪ್ರಕಟವಾಗಿರುವ ಲೇಖನ) ಕೇಳುತ್ತಿರುವ ಸಹನಾ ಕಾಂತಬೈಲು ಅವರಂತಹ ತಾಯಂದಿರ ಪರಿಸ್ಥಿತಿ ಮತ್ತು ನಮ್ಮಲ್ಲಿರುವ ಭಾಷಾ ಕೀಳರಿಮೆ ಅರ್ಥವಾಗುವಂತಹುದೆ. ಆದರೆ ಭಾಷೆ ಒಂದು ಅಭಿವ್ಯಕ್ತಿ. ಹಾಗಾಗಿ ಸಂವಹನಕ್ಕೆ ಮಾತೇ ಬೇಕಂತಿಲ್ಲ. ಈ ಕಂಪ್ಯೂಟರ್ ಯುಗದಲ್ಲೂ ಕೂಡ ಎಷ್ಟೋ ಜನ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಎಂಟನೇ ತರಗತಿ ಓದಿರುವ ಯಲಹಂಕದ ವಿ.ಆರ್.ಕಾರ್ಪೆಂಟರ್ ಎಂಬ ಕವಿಯವರೆಗೆ ಕಂಪ್ಯೂಟರ್‌ನಲ್ಲೂ ಕನ್ನಡವನ್ನು ಪಸರಿಸುತ್ತಿದ್ದಾರೆ. ಅಷ್ಟೇ ಯಾಕೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಅಲ್ಲಿನ ಉಸಿರು ಕಟ್ಟುವ ವಾತಾವರಣದಿಂದ ಮುಕ್ತಿ ದೊರಕಿದ್ದು ನನ್ನನ್ನು govt-school-kidsನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದ ಮೇಲೆಯೇ. ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ. ಕನ್ನಡದ ಕವಿಯಾಗಿದ್ದ ನನ್ನ ತಂದೆ ಬೆಂಗಳೂರಿನಲ್ಲಿದ್ದುಕೊಂಡು ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದಾಗ ಅವರಿಗೆ ಎಲ್ಲರೂ ’ನಿಮ್ಮ ಮಗನ ಭವಿಷ್ಯವನ್ನ ಹಾಳು ಮಾಡುತ್ತಿದ್ದೀರಿ, ಮೊದಲು ಯಾವುದಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿ’ ಎಂದು ಸಲಹೆ ಕೊಟ್ಟವರೇ ಹೆಚ್ಚು. ಬೆಂಗಳೂರಿನಂತಹ ಹೈಟೆಕ್ ಯುಗಕ್ಕೆ ಕಾಲಿಡುತ್ತಿದ್ದ ಅಂದಿನ ಸಂದರ್ಭದಲ್ಲಿ ಮೇಷ್ಟ್ರ ಮಗನಾಗಿ ಸರ್ಕಾರಿ ಶಾಲೆಗೆ ಹೋಗುವವನೆಂದು ನನ್ನ ಸುತ್ತಲಿನವರು ನನ್ನನ್ನು ಯಾರೋ ಅನ್ಯಗ್ರಹದ ಜೀವಿಯೇನೋ ಎಂದು ನೋಡುತ್ತಿದ್ದರು.

ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣ ಸರ್ಕಾರಿ ಶಾಲೆ. ಸಹನಾ ಕಾಂತಬೈಲುರಂತಹ ತಿಳಿದವರು ಯಾವುದೋ ಮಾಲ್‌ನಲ್ಲಿ ಎಸ್.ಎಸ್.ಎಲ್.ಸಿ ಫೇಲಾದ ಇಂಗ್ಲಿಷ್ ಕಲಿತು ಅಂಗಡಿಯಲ್ಲಿ ಸಂಬಳಕ್ಕಿರುವವನೊಂದಿಗೆ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದಿರುವ ಬಗ್ಗೆ ಪೇಚಾಡುತ್ತಿದ್ದಾರೆಂದರೆ ಕಾರಣ ಕೀಳರಿಮೆ. ನಾನು ಇಂದಿಗೂ ಕೂಡ ಯಾವುದೇ ಮಾಲ್‌ಗೆ ಹೋದರೂ ಕನ್ನಡದಲ್ಲೇ ವ್ಯವಹರಿಸುತ್ತೇನೆ, ಹಣ ಕೊಡುವ ಗ್ರಾಹಕನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಮಾಲ್‌ನ ಅಂಗಡಿಗಳ ಮಾಲೀಕರಿಗಿದೆ ಹೊರತು ಇಂಗ್ಲಿಷ್ ಕಲಿತು ಸಾಮಾನು ಕೊಳ್ಳುವ ದರ್ದು ನಮಗಿರಬೇಕಿಲ್ಲ.

ಠಸ್ ಪುಸ್ ಎಂದು ಇಂಗ್ಲಿಷ್ ಮಾತನಾಡುವವರು ಮಾತ್ರ ಬದುಕಲು ಸಾಧ್ಯ ಇಲ್ಲದಿದ್ದೆರೇ ಇಲ್ಲಿ ಜೀವನ ಮಾಡುವುದೇ ದುಸ್ತರ surya-with-govindegowdaಎಂಬ ಸನ್ನಿವೇಶವನ್ನು ನಿಮ್ಮಂತವರು ಏಕೆ ಸೃಷ್ಟಿಸುತ್ತಿದ್ದೀರ ಅನ್ನುವುದು ಅರ್ಥವಾಗುತ್ತಿಲ್ಲ. ಸಣ್ಣ ಪುಟ್ಟ ಮೊಬೈಲ್ ಸಂದೇಶ ಕಳುಹಿಸಲು ನೀವು ಶಬ್ಧಕೋಶದ ಮೊರೆ ಹೋಗುತ್ತೀರೆಂದರೆ ನಿಜಕ್ಕೂ ಅದು ನಿಮ್ಮ ಕಲಿಕೆಯ ಕೊರತೆಯಷ್ಟೇ ಹೊರತು ಕಿರು ಸಂದೇಶಕ್ಕೆ ಶಬ್ದಕೋಶದ ಅವಶ್ಯಕತೆಯಿಲ್ಲ. ಇಂಗ್ಲಿಷ್‌ನಲ್ಲಿ ಬರುವ ಕಿರು ಸಂದೇಶಗಳು ಇಂಗ್ಲಿಷ್ ಶಬ್ಧಗಳನ್ನು ತುಂಡರಿಸಿ ಕಳುಹಿಸುವುದರಿಂದ ನಿಮಗೆ ಹಾಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಇಂದು ಗೂಗಲ್‌ನಂತಹ ಸಂಸ್ಥೆಗಳು, ನೋಕಿಯಾ, ಸಾಮ್‌ಸ್ಯಾಂಗ್‌ನಂತಹ ದೈತ್ಯ ಮೊಬೈಲ್ ಕಂಪೆನಿಗಳೂ ಕೂಡ ಸ್ಥಳೀಯ ಬಾಷೆಯನ್ನು ಗ್ರಾಹಕರಿಗೆ ದೊರುಕವಂತೆ ಮಾಡಿದ್ದಾರೆ ಎಂಬ ಅರಿವು ತಮಗಿಲ್ಲವೆನ್ನಿಸುತ್ತದೆ.

ನಿಮ್ಮ ಬರಹದಲ್ಲೇ ನೀವು ಸುತ್ತಲಿನ ಮಕ್ಕಳು ಮಾತನಾಡುವ ಇಂಗ್ಲಿಷ್ ನಿಮ್ಮ ಮಗನಿಗೆ ಬರುವುದಿಲ್ಲವೆಂಬ ಕೀಳರಿಮೆ ವ್ಯಕ್ತಪಡಿಸಿದ್ದೀರಿ. 7ನೇ ತರಗತಿವರೆಗೆ ಕನ್ನಡ ಶಾಲೆಯಲ್ಲಿ ಓದಿ 8ನೇ ತರಗತಿಗೆ ಮನೆ ಹತ್ತಿರದಲ್ಲಿ ಯಾವುದೇ ಸರ್ಕಾರಿ ಪ್ರೌಢ ಶಾಲೆಯಿಲ್ಲದೆ ಇದ್ದ ಕಾರಣ ನಾನು ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಈ ಶಾಲೆಯಲ್ಲಿ ಪ್ರಾರಂಭದಲ್ಲಿ ನನಗೆ ಅನುಕೂಲವಾಗಲಿಯೆಂದು ಇಂಗ್ಲಿಷ್ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಬಿಟ್ಟಿದ್ದರು. ಎರಡೇ ತಿಂಗಳಲ್ಲಿ ನಾನು ಇಂಗ್ಲಿಷ್‌ನಲ್ಲಿ ವಾಕ್ಯ ರಚನೆ ಮಾಡುವುದನ್ನು ಕಲಿತೆ. ಎಲ್.ಕೆ.ಜಿಯಿಂದ ಇಂಗ್ಲಿಷ್ ಮೀಡಿಯಂನಲ್ಲಿ ಓದಿಕೊಂಡು ಬಂದಿದ್ದ ಎಷ್ಟೋ ಜನ ಸಹಪಾಠಿಗಳು ಇಂಗ್ಲಿಷ್‌ನಲ್ಲಿ ಬರೆಯಲು ಸ್ಪೆಲ್ಲಿಂಗ್ ಗೊತ್ತಾಗದೆ ನನ್ನ ಹತ್ತಿರ ಕಾಪಿ ಹೊಡೆಯುತ್ತಿದ್ದರು. ನಾನು ಕೀಳರಿಮೆಯಿಂದ ಬಳಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ನನ್ನ ಜೊತೆ ಓದಿದ ಕನ್ನಡ ಶಾಲೆಯ ಬಡ ಕುಟುಂಬದ ಮಕ್ಕಳಿಂದ ನಾನು ಒಬ್ಬ ಕಟ್ಟಕಡೆಯ ಮನುಷ್ಯನ ಜೀವನ ಹೇಗಿರುತ್ತದೆಯೆಂದು ಕಂಡೆ. ಬೆಳಿಗ್ಗೆ ಎದ್ದು ಪೇಪರ್ ಹಾಕಿ, ಮನೆ ಕೆಲಸ ಮಾಡಿ, ಸಂಜೆಯಾದರೆ ತಳ್ಳೋಗಾಡಿ ಹೋಟೆಲ್, ಬಾರ್‌ಗಳಲ್ಲಿ ದುಡುದು ಓದುತ್ತಿದ್ದ ಈ ಹುಡುಗರಿಂದ ಕಲಿತ್ತದ್ದು ಅಪಾರ. ಅದೇ ಇಂಗ್ಲಿಷ್ ಮೀಡಿಯಂನ ಈ ಸೊಫಿಸ್ಟಿಕೇಟೆಡ್ ಕುಟುಂಬಗಳಿಂದ ಬಂದು ಕೇವಲ ಮಾತನಾಡುವುದಕ್ಕೆ ಇಂಗ್ಲಿಷ್ ಕಲಿಯಲು ಲಕ್ಷಾಂತರ ಹಣ ಚೆಲ್ಲುವ ತಂದೆ ತಾಯಿರ ದುಡ್ಡಿನಿಂದ ಮಜಾ ಉಡಾಯಿಸುತ್ತಿದ್ದ ಎಷ್ಟೋ ಜನ ಸಹಪಾಠಿಗಳು ಬದುಕಿನಲ್ಲಿ ಸೋತಿರುವುದನ್ನೂ ಕಂಡಿದ್ದೇನೆ. ಕನ್ನಡ ಶಾಲೆಯಲ್ಲಿ ಓದಿ ಕಾನೂನು ಪದವಿಗೆ ಸೇರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪದವಿ ಪಡೆದು ವಕೀಲನಾಗಿದ್ದೇನೆ. ನನ್ನ ಕನ್ನಡದ ಮೇಲಿನ ಹಿಡಿತವೇ ಇಂದು ಇಂಗ್ಲಿಷ್ ಅನ್ನು ಅರಗಿಸಿಕೊಳ್ಳಲು ಶಕ್ತಿ ಕೊಟ್ಟಿರುವುದು. ಇಂದು ಕರ್ನಾಟಕದ chhanumantarayaಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ಬಳಿ ಕಿರಿಯ ಸಹೋದ್ಯೋಗಿಯಾಗಿರುವ ನನಗೆ ಅವರ ಅನುಭವಗಳೆ ಆಗಾಗ ಹೆಚ್ಚಿನ ಸಾಧನೆ ಮಾಡುವಂತೆ ಹುರಿದುಂಬಿಸುತ್ತಿರುತ್ತದೆ. ಹಳ್ಳಿಯಲ್ಲಿ ಕನ್ನಡ ಕಲಿತು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಪಿ.ಯು.ಸಿಗೆ ಸೇರಿದಾಗ ಅದು ಅವರ ಕಲ್ಪನೆಯ ಇಂಗ್ಲೆಂಡ್‌ನಂತೆ ಎನ್ನಿಸುತ್ತದೆ. ಸೇಂಟ್ ಜೋಸೆಫ್ ಕಾಲೇಜು ಪ್ರಿನ್ಸಿಪಾಲ್‌ರು ಹನುಮಂತರಾಯರನ್ನು ಕೇಳುತ್ತಾರೆ ’ವಾಟ್ ಈಸ್ ಯುವರ್ ಫಾದರ್?’ ಆ ಪ್ರಶ್ನೆಗೆ ಕೂಡಲೇ ಏನು ಹೇಳಬೇಕೆಂದು ತೋಚದೆ ಅವರು ’ಮೈ ಫಾದರ್ ಈಸ್ ಮ್ಯಾನ್’ ಎಂದು ಬಿಡುತ್ತಾರೆ. ಅವರ ಅನುಭವ ಕೇಳಿದಾಗ ಈ ಕೀಳರಿಮೆ ಸರ್ವಕಾಲಿಕ, ಆದರೆ ಅದನ್ನು ಮೆಟ್ಟಿನಿಲ್ಲಬೇಕೆಂಬ ಛಲ ನಮ್ಮಲಿರಬೇಕು ಅಷ್ಟೆ ಎನ್ನಿಸುತ್ತದೆ. ಇಂದು ಅವರ ಕನ್ನಡದ ಮೇಲಿನ ಹಿಡಿತ ಕಮ್ಮಿಯಿಲ್ಲ/ ಹಾಗೆಯೇ ಅವರ ಇಂಗ್ಲಿಷ್‌ನ ಮಾತುಗಳನ್ನು ಕೇಳಿದರೆ ಆ ಭಾಷಾ ಪ್ರೌಡಿಮೆಗೆ ಗೌರವವೂ ಉಂಟಾಗುತ್ತದೆ. ಅದಕ್ಕಿರುವ ಕಾರಣ ಇಂದಿಗೂ ಅವರು ಗಂಟೆಗಟ್ಟಲೇ ಪ್ರಪಂಚವೇ ಮರೆತವರಂತೆ ಡಿಕ್ಷನರಿಯಲ್ಲಿ ಮುಳಿಗಿರುವುದು.

ಮೊದ ಮೊದಲು ನನಗೂ ನನ್ನ ಕಡಿಮೆ ದರ್ಜೆಯ ಇಂಗ್ಲಿಷ್‌ನಿಂದ ನಾನೆಲ್ಲೋ ಕಳೆದು ಹೋಗುತ್ತಿದ್ದೀನಾ ಎಂದೆನಿಸುತ್ತಿತ್ತು. ಆದರೆ, ನನ್ನ ಕನ್ನಡ ಯಾವತ್ತೂ ಕೈ ಕೊಡಲಿಲ್ಲ. ಕನ್ನಡ ಚೆನ್ನಾಗಿ ತಿಳಿದಿದ್ದರಿಂದ ಇಂಗ್ಲಿಷ್ ಕಲಿಯುವುದು ನನಗೆ ಕಷ್ಟವಾಗಲಿಲ್ಲ. ಸರ್ಕಾರಿ ಶಾಲೆಗೆ ನಿಮ್ಮ ಮಗನನ್ನು ಸೇರಿಸಿ ನಿಜಕ್ಕೂ ನೀವು ನಿಮ್ಮ ಮಗನಿಗೆ ಒತ್ತಡವಿಲ್ಲದ ಬಾಲ್ಯ ಕೊಟ್ಟಿದ್ದೀರಾ. ನೀವು ಕ್ಷಮೆಕೋರುವ ಬದಲು ಅವನಿಗೆ ಇಂಗ್ಲಿಷ್ ಅನ್ನು ಓದುವ ಬರೆಯುವ ಮೂಲಕ ಅಭ್ಯಾಸ ಮಾಡಿದರೆ ಖಾಸಗಿ ಶಾಲೆಯವರನ್ನೂ ಮೀರುವ ಜ್ಞಾನ ಸಂಪಾದಿಸುವುದರಲ್ಲಿ ಸಂಶಯವಿಲ್ಲ. ದಿನ ನಿತ್ಯದ ಬದುಕಿನಲ್ಲಿ ವ್ಯವಹರಿಸಲು ಇಂಗ್ಲಿಷ್ ತಿಳಿಯದಿದ್ದರೆ ಬದುಕುವುದು ದುಸ್ತರ ಎಂಬ ಸನ್ನಿಗೆ ಒಳಗಾಗದೆ ಮೊದಲು ಕನ್ನಡದ ಮೇಲೆ ಹಿಡಿತ ಸಾಧಿಸಿಕೊಳ್ಳವುದು ಅವಶ್ಯ ಕನ್ನಡ ಕಲಿತರೆ ಜಗತ್ತಿನ ಯಾವುದೇ ಬಾಷೆಯನ್ನು ಸುಲಭವಾಗಿ ಕಲಿಯಬಹುದು. ನನ್ನ ಓರಗೆಯ ಎಷ್ಟೋ ಜನ ಗೆಳೆಯರಿಗೆ ಕನ್ನಡದ ಪದಗಳ ಅರ್ಥ ತಿಳಿಯದೆ ಪೇಚಾಡುವುದನ್ನು ನೋಡಿದಾಗ ನನ್ನ ಕನ್ನಡ ಜ್ಞಾನದ ಬಗ್ಗೆ ಹೆಮ್ಮೆಯಾಗುತ್ತದೆ.

ಡಿನೋಟಿಫೈ ಮಾಡಿದ ಶೆಟ್ಟರ್ ಪ್ರಾಮಾಣಿಕರೇ?

– ಸೂರ್ಯ ಮುಕುಂದರಾಜ್

ಯಡಿಯೂರಪ್ಪನವರ ಬೆಂಬಲ ಪಡೆದು ಮುಖ್ಯಮಂತ್ರಿ ಗಾದಿಗೇರುತ್ತಿರುವ ಜಗದೀಶ್ ಶೆಟ್ಟರ್ ಮಾಡಿರುವ ಈ ಡಿನೋಟಿಫಿಕೇಷನ್ ಪ್ರಕರಣ ಅವರನ್ನು ಯಡಿಯೂರಪ್ಪನವರ ಸಾಲಿಗೆ ಸೇರಿಸುವುದಷ್ಟೇ ಅಲ್ಲದೆ, ಎಕರೆಗಳ ಲೆಕ್ಕದಲ್ಲಿ ತೆಗೆದುಕೊಂಡರೆ ಯಡಿಯೂರಪ್ಪನವರು ಮಾಡಿದ್ದನ್ನೂ ಮೀರಿಸುತ್ತದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದಲ್ಲಿ ರೈತರಿಗೆ ಮಾರುಕಟ್ಟೆ ಮಾಡಿಕೊಡುವ ಒಂದು ಉತ್ತಮ ಯೋಜನೆಯನ್ನು ಮಣ್ಣು ಪಾಲು ಮಾಡಿದ ಶೆಟ್ಟರ್ ಅವರ ಮಹತ್ಕಾರ್ಯವನ್ನು ಇಲ್ಲಿ ವಿವರವಾಗಿ ದಾಖಲೆಗಳ ಸಮೇತ ಮುಂದಿಡಲಾಗಿದೆ. ಈ ದಾಖಲೆಗಳನ್ನು ಕಳೆದ 8 ತಿಂಗಳಿಂದ ಶೋಧಿಸುತ್ತಿದ್ದು ಇನ್ನೂ ಅನೇಕ ದಾಖಲೆಗಳು ಸಿಗಬೇಕಿದೆ. ಆದರೆ ಇನ್ನು ಒಂದೆರಡು ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಮತ್ತು ಸ್ವಚ್ಛ ವ್ಯಕ್ತಿತ್ವದ  ಪ್ರಾಮಾಣಿಕ ಎಂದು ಮಾಧ್ಯಮಗಳಲ್ಲಿ ಹೊಗಳಿಸಿಕೊಳ್ಳುತ್ತಿರುವ  ಶೆಟ್ಟರ ಇನ್ನೊಂದು ಮುಖವನ್ನು ಜನತೆಯ ಮುಂದೆ ಬಹಿರಂಗ ಮಾಡುವ ಆರಂಭಿಕ ಪ್ರಯತ್ನ ಇದು.

ರಾಜ್ಯದ ರೈತರಿಗೆ ಅನುಕೂಲವಾಗಲು 1998-99ನೇ ವರ್ಷದಲ್ಲಿ ಬೃಹತ್ ಕೃಷಿ ಮಾರುಕಟ್ಟೆಯೊಂದನ್ನು ಒಂದೇ ಜಾಗದಲ್ಲಿ ತೆರೆಯಲು ರಾಜ್ಯ ಸರ್ಕಾರ ಮುಂದಾಗಿತ್ತು. ಇಲ್ಲಿ ಗೋಡೌನ್‌ಗಳು, ಹರಾಜುಕಟ್ಟೆ, ರೈತರು-ವ್ಯಾಪಾರಿಗಳಿಗೆ ಸಾಂದರ್ಭಿಕ ವಸತಿ ಅನುಕೂಲ, ಸೂಕ್ತ ರಸ್ತೆ ಮಾರ್ಗ ಇತ್ಯಾದಿ ಆಧುನಿಕ ಸೌಲಭ್ಯಗಳಿಂದ ಕೂಡಿದ ಏಕಸೂರಿನ ಅಡಿಯ , ಮುಂದುವರೆದ ದೇಶಗಳಲ್ಲಿ ಇರುವಂತಹ ರೀತಿಯ ಮೇಗಾ ಮಾರುಕಟ್ಟೆ ಇರಬೇಕೆಂಬ ಇರಾದೆ ಕೃಷಿ ಉತ್ಪನ್ನಗಳ ಮಾರಾಟ ಇಲಾಖೆಗೆ (ಎ.ಪಿ.ಎಂ.ಸಿ.) ಇತ್ತು. ಇಲ್ಲಿ ಆಲುಗಡ್ಡೆ, ಈರುಳ್ಳಿ, ದಿನಸಿ, ತರಕಾರಿ… ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಇದಾಗಬೇಕು ಎಂಬ ಪ್ರಸ್ತಾವನೆ ಅದಾಗಿತ್ತು.

ಇದಕ್ಕಾಗಿ ಕರ್ನಾಟಕ ಸರ್ಕಾರ ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನ (ಯಶವಂತಪುರಕ್ಕೆ ಹೊಂದಿಕೆಯಂತೆ ಇರುವ) ಹೊನ್ನಸಂದ್ರ, ಪಿಳ್ಳದಳ್ಳಿ, ವಡೇರಹಳ್ಳಿ, ಮತ್ತಹಳ್ಳಿ, ಶೇಷಗಿರಿಪಾಳ್ಯದಲ್ಲಿ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಬೆಂಗಳೂರು ನಗರ ಭೂಸ್ವಾಧೀನ ಅಧಿಕಾರಿಗಳಿಂದ ವಿಶೇಷ ಜಿಲ್ಲಾಧಿಕಾರಿಗಳು ಮಾಡಿದ್ದರು. ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356.36 1/2 ಎಕರೆಗೆ ನೋಟಿಫಿಕೇಷನ್ ಹೊರಬಿದ್ದ ನಂತರ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ತಕ್ಷಣವೇ ವಶಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ 13,01,47,091 ರೂಗಳನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಹಣವಾಗಿ ಪಾವತಿಸಿತ್ತು. ಕೃಷಿ ಮಾರುಕಟ್ಟೆಗಾಗಿ ಸ್ವಾಧೀನ ಮಾಡಿಕೊಂಡಿದ್ದ ಒಟ್ಟು  356.36 ಎಕರೆ ಸದರಿ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾಗಿತ್ತು. ಉಳಿಕೆ 188.9 1/2  ಎಕರೆ ಭೂಮಿ ಖಾಸಗಿಯವರದ್ದಾಗಿತ್ತು. ಈ ಖಾಸಗಿ ಭೂಮಿಗೆ ಪರಿಹಾರ ಕೊಡಲು ಸುಮಾರು 13 ಕೋಟಿಗಳ ಹಣವನ್ನು ಎ.ಪಿ.ಎಂ.ಸಿ. ಇಲಾಖೆ ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಇಟ್ಟಿದ್ದು, ಕೊನೆಗೆ ಕಂದಾಯ ಇಲಾಖೆ ದಿನಾಂಕ 04.03.2006ರಲ್ಲಿ ಇಡೀ ಖಾಸಗಿಯವರ ಭೂಮಿಯನ್ನು ಸ್ವಾಧೀನ ಅಸಿಂಧು ಎಂಬ ನೆಪದ ಅಡಿ ಭೂಸ್ವಾಧೀನದಿಂದ ಬಿಡುಗಡೆ ( ಡಿನೋಟಿಫಿಕೇಷನ್) ಮಾಡಿದೆ. ಇದಾದ ನಂತರ ಅದೇ ಕಂದಾಯ ಇಲಾಖೆಯ ಅಧಿಕಾರಿಗಳು ಸದರಿ ಮೊತ್ತದಲ್ಲಿ 4(1) ಹಾಗು 6(1) ಅಧಿಸೂಚನಾ ಪ್ರಕಟಣೆ ಹಾಗೂ ಪ್ರಚಾರದ ವೆಚ್ಚವಾಗಿ 1,64,772 ರೂಗಳನ್ನು ಮುರಿದುಕೊಂಡು ಉಳಿಕೆ ಹಣವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸಲು ಪತ್ರ ಬರೆದಿದೆ.

ಈ ಅಸಿಂಧು ಪ್ರಕ್ರಿಯೆ 2004ರಲ್ಲೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಸಲು ಅಂದಿನ ಎಸ್.ಎಂ. ಕೃಷ್ಣ ಸರ್ಕಾರದ ಕೆಲವು ಮಂತ್ರಿಗಳು ಪ್ರಯತ್ನಿಸಿದ್ದರು. ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಖಾಸಗಿ ಜಮೀನನ್ನು 4(1), 6(1) ನಿಂದ ಬಿಡಿಸಿ ತಮ್ಮ ಬಡಾವಣೆಗಳನ್ನು ನಿರ್ಮಿಸಲು ಇದರ ಹಿಂದೆ ಬಿದ್ದಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಆಳುವ ಮಂತ್ರಿಗಳ ಹಾಗು ರಿಯಲ್ ಎಸ್ಟೇಟ್ ಕುಳಗಳ ಪ್ರಭಾವಕ್ಕೆ ಮಣಿದು ಕೃಷಿ ಮೇಗಾ ಮಾರುಕಟ್ಟೆಗೆ ವಶಪಡಿಸಿಕೊಂಡಿದ್ದ  356.36 1/2 ಎಕರೆ ಭೂಮಿಯಲ್ಲಿ ಖಾಸಗಿಯವರ 188.9 1/2 ಗುಂಟೆಯನ್ನು ಭೂಸ್ವಾಧೀನ ಅಸಿಂಧು ಮಾಡಲು ‘ವಿಳಂಬ ಕಾಲ’ ಎಂಬ ಗ್ರೌಂಡನ್ನು ಸೃಷ್ಠಿ ಮಾಡಿದ್ದರು. ಆದರೆ ಅವರ ಆಸೆ ಆಗ ಇಡೇರಲಿಲ್ಲ. ಇದಕ್ಕೆ ಕಾರಣ ಒಮ್ಮೆ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು 4(1) ಹಾಗು 6(1) ಆದರೆ ಅಸಿಂಧು ಹೆಸರಿನ ಡಿನೋಟಿಫಿಕೇಷನ್ ಆಗಲಿ, ಇತರ ಯಾವುದೇ ಬಗೆಯ ಡಿನೋಟಿಫಿಕೇಷನನ್ನಾಗಲಿ ಅಂದಿನ ಸಚಿವ ಸಂಪುಟಕ್ಕೆ ಮಾತ್ರ ಕೈಬಿಡಲು ಅಧಿಕಾರವಿದೆ. ಅಂದು ಈ ನಿರ್ಣಯ ಸಚಿವ ಸಂಪುಟದ ಮುಂದೆ ಬಂದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಸಿಂಧು ಪರಿಣಾಮ ಉಂಟುಮಾಡಿದ ಕಂದಾಯ ಅಧಿಕಾರಿಗಳಿಗೆ ಛೀಮಾರಿ ಹಾಕಿ ಭೂಸ್ವಾಧೀನದ ಮರು ಪ್ರಕ್ರಿಯೆ ನಡೆಸುವಂತೆ ಸೂಚಿಸಿ ಸ್ವಾಧೀನ ಕೈಬಿಡುವುದನ್ನು ತಿರಸ್ಕರಿಸಿದ್ದರು. ಸಚಿವ ಸಂಪುಟದ ಮುಂದೆ ಈ ಸಂಗತಿ ಬಂದಾಗ ತಿರಸ್ಕೃತಗೊಳ್ಳುವಂತೆ ಮಾಡಿದ್ದರಲ್ಲಿ ಕೃಷಿ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ ಶ್ರಮವೂ ಇತ್ತು. ಅಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯಾದರ್ಶಿಗಳಾಗಿದ್ದ ಜಿ. ಶರತ್‌ಚಂದ್ರ  ರಾನಡೆ, ಆಡಳಿತಾಧಿಕಾರಿ ಜಿ.ವಿ.ಕೊಂಗವಾಡರು ನಿರ್ದೇಶಕರಿಗೆ (ಕೃಷಿ ಮಾರಾಟ ಇಲಾಖೆ) ಪತ್ರ ಬರೆದು ತಮ್ಮ ಇಲಾಖೆ ಯೋಜಿಸುತ್ತಿರುವ ಮೆಗಾ ಮಾರುಕಟ್ಟೆ ಕಟ್ಟಲು ಈ ಇಡೀ ಭೂಮಿ ಬೇಕೆಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಗಳನ್ನು ಸಿಎಂ, ಸ್ವಾಧೀನಾಧಿಕಾರಿ, ಕಂದಾಯ ಕಾರ್ಯದರ್ಶಿ ಎಲ್ಲರಿಗೂ ರವಾನಿಸಿದ್ದರು.

“ಭೂಸ್ವಾಧೀನದ ಮರು ಪ್ರಕ್ರಿಯೆಯಾದರೂ ಸರಿ, ಈಗಾಗಲೇ ನಡೆದಿರುವ ಪ್ರಕ್ರಿಯೆಯನ್ನು ಸರಿ ಮಾಡಿದರಾದರೂ ಸರಿ ಉದ್ದೇಶಿತ ಯೋಜನೆಗೆ ಭೂಮಿ ನೀಡಿ” ಎಂದು 18.06.2004ರಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು.

ದುರಂತವೆಂದರೆ. ಸ್ವಾಧೀನವಾದ ಈ ಭೂಮಿ ಹೈಪವರ್ ಕಮಿಟಿಯ ವರದಿಯನ್ನು ಗಾಳಿಗೆ ತೂರಿ ದಿನಾಂಕ 04.03.2006ರಲ್ಲಿ (ಕುಮಾರಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ) ಡಿನೋಟಿಫಿಕೇಷನ್ ಆಯ್ತು. ಇನ್ನೂ ವಿಚಿತ್ರವೆಂದರೆ ಭೂಸ್ವಾಧೀನ ಕಾಯ್ದೆ ಕಲಂ 4(1) ಹಾಗು 6(1) ರ ಪ್ರಕಾರ ಸ್ವಾಧೀನಗೊಂಡ ಭೂಮಿಯ ನಿರ್ಧಾರವನ್ನು ಸಚಿವ ಸಂಪುಟ ಮಾತ್ರ ಮಾಡಬೇಕು ಎಂದಿದ್ದರೂ ಕೇವಲ ಕಿಲ್ಲಾ ಕಂದಾಯ ಅಧಿಕಾರಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲೇ ಇದನ್ನು ಮಾಡಿಸಲಾಯ್ತು.

ರಾಜ್ಯದಲ್ಲಿ ಮೆಗಾ ಮಾರುಕಟ್ಟೆಗಳ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹೈಪವರ್ ಕಮಿಟಿ (ಉನ್ನತ ಮಟ್ಟದ ಸಮಿತಿ)ಯನ್ನು ಮಾಡಿತ್ತು. ಇದರ ಸಭೆಯಲ್ಲಿ ವಿಷಯ ಮೂರು ಆಗಿ ಚರ್ಚೆಗೊಂಡು, “ಸರ್ಕಾರಿ ಜಮೀನನ್ನು ಮಾತ್ರ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕ್ರಮ ಜರುಗಿಸಿ, ಖಾಸಗಿ ಜಮೀನಿನಲ್ಲಿ ಸರ್ಕಾರಿ ಜಮೀನಿಗೆ ಹೊಂದಿಕೊಂಡಿದ್ದನ್ನು ಮಾತ್ರ ವಶಪಡಿಸಿಕೊಳ್ಳುವುದು ಸೂಕ್ತ” ಎಂಬ ಸಚಿವರ ಅಭಿಪ್ರಾಯ ನಡಾವಳಿ ಪತ್ರದಲ್ಲಿ ದಾಖಲಾಗಿದೆ. ಇದನ್ನೆ ಅಂಗೀಕರಿಸಿ ಖಾಸಗಿಯವರ ಕೇವಲ ಎರಡು ಎಕರೆಗಳನ್ನು ಮಾತ್ರ ಭೂಸ್ವಾಧೀನ ಮಾಡಿಕೊಂಡು ಉಳಿಕೆ 186.9 1/2 ಎಕರೆಗಳನ್ನು ಸನ್ಮಾನ್ಯ ಸಚಿವರು ಅಧಿಸೂಚನೆ ಅಸಿಂಧುವೆಂದು ಮತ್ತು ಕೇವಲ ಸರ್ಕಾರಿ ಭೂಮಿಯನ್ನು ಸಂಪೂರ್ಣ ವಶಪಡಿಸಿಕೊಳ್ಳಲು ಸಚಿವ ಸಂಪುಟದ ಸಭೆ ಮುಂದೆ ತಂದು ಒಪ್ಪಿಗೆ ಪಡೆಯಲು ಕಂದಾಯ ಇಲಾಖೆಯ ಭೂಮಾಪನಾ ಉಪ ಕಾರ್ಯದರ್ಶಿಗೆ ಸೂಚಿಸುತ್ತಾರೆ.

ಆದರೆ ಖಾಸಗಿಯವರ 186.9 1/2 ಎಕರೆಗಳನ್ನು ಕೈಬಿಡುವ ವಿಚಾರವನ್ನು ಸಂಪುಟದ ಮುಂದೆ ತರುವುದಿಲ್ಲ. ಅಸಿಂಧು ಕಾರಣವೇ ಪ್ರಧಾನ ಎಂದಾಗಿದ್ದರೆ ಖಾಸಗಿಯವರ 188.9 1/2 ಎಕರೆಯಲ್ಲಿ 186.9 1/2 ಯನ್ನು ಕೈಬಿಟ್ಟು ಕೇವಲ ಎರಡು ಎಕರೆಗಳನ್ನು ಸ್ವಾಧೀನ ಮಾಡಿಕೊಳ್ಳುವುದು ಕೂಡಾ ಕಾನೂನಿನ ತೊಡಕೇ ಆಗಿತ್ತಲ್ಲವೆ?. ರೈತರ, ಜನರ, ಇಲಾಖೆಯ ಕೆಲಸವೇ ಮುಖ್ಯವಾಗಿದ್ದರೆ ಆ ಎರಡು ಎಕರೆಗೆ ಕಾಯ್ದೆಯ (ಅಧಿಸೂಚನೆ ಅಸಿಂಧು) ತೊಡಕು ಬಗೆಹರಿಸಿದಂತೆ ಉಳಿಕೆ 186.9 1/2 ಎಕರೆ ಖಾಸಗಿ ಜಾಗಕ್ಕೂ ಬಗೆಹರಿಸಿ ಉನ್ನತ ಮಟ್ಟದ ಮೆಗಾ ಮಾರುಕಟ್ಟೆ ತಲೆ ಎತ್ತುವಂತೆ

ವಿಪರ್ಯಾಸವೆಂದರೆ ಇದೆಲ್ಲದರ ಹಿಂದೆ ಇರುವವರು ಈಗಿನ ನಮ್ಮ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರು; ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದವರು. ಇವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಂಡಿದ್ದು. ಇದಾದ ನಂತರ ದಿನಾಂಕ: 04.03.2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ ಕೈ ಬಿಟ್ಟಿದ್ದು. ಈಗ ಆ ಜಾಗದಲ್ಲಿ ಭವ್ಯವಾದ, ಐಷಾರಾಮಿ ಖಾಸಗಿ ಲೇಔಟ್‌ಗಳು ತಲೆ ಎತ್ತಿವೆ!

ಅರ್ಧ ಎಕರೆ, ಒಂದು ಎಕರೆ ಜಾಗದ ಡಿನೋಟಿಫಿಕೇಷನ್ ವಿಚಾರಗಳಲ್ಲೆಲ್ಲಾ ಮಂತ್ರಿ, ಮುಖ್ಯಮಂತ್ರಿಗಳು ಜೈಲಿಗೆ ಹೋಗುವ ಪರಿಸ್ಥಿತಿ ನ್ಯಾಯಾಂಗದ ಕೃಪೆಯಿಂದ ಇಂದು ಇದೆ. ಇದು ನಡೆಯುತ್ತಿರುವ ವಾಸ್ತವ. ಆದರೆ 186.9 1/2 ಎಕರೆಯನ್ನು ಕನಿಷ್ಠ ಸಚಿವ ಸಂಪುಟದ ಗಮನಕ್ಕೂ ತರದೆ, ಕೇವಲ ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಹಂತದಲ್ಲೆ ಕೈಬಿಟ್ಟಿರುವುದು ಅಕ್ರಮ ಎನ್ನದಿರಲು ಸಾಧ್ಯವೇ? ಎಸ್.ಎಂ. ಕೃಷ್ಣರ ಸರ್ಕಾರ ಮಾಡಲು ಹಿಂಜರಿದ ಡಿನೋಟಿಫಿಕೇಷನ್ ಶೆಟ್ಟರ್ ಕಂದಾಯ ಮಂತ್ರಿಯಾದಾಗ ಮಾಡಲು ಇದ್ದ ಒತ್ತಡಗಳಾದರೂ ಏನು? ಭ್ರಷ್ಟಾಚಾರದ ಕಾರಣ ಇಲ್ಲದೆ ಬೇರೆ ಇರಲು ಸಾಧ್ಯವೇ? ಪ್ರಾಮಾಣಿಕ ಮತ್ತು ಕೈಶುದ್ಧ ಎನ್ನಿಸಿಕೊಳ್ಳುತ್ತಿರುವ ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ಜನರ ಮುಂದೆ ಸ್ವಚ್ಚವಾಗಿ ಬರುವ ಸಮಯ ಇದಾಗಿದೆ.

ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ


-ಸೂರ್ಯ ಮುಕುಂದರಾಜ್


 

ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.

ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.

ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.

ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.

ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.

ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.

ಸನ್‌ಫಿಲಮ್ ಮತ್ತು ಅಪರಾಧ ತಡೆ


-ಸೂರ್ಯ ಮುಕುಂದರಾಜ್  


 

ಬಹುಶಃ ಪೆಟ್ರೋಲ್ ಬೆಲೆ ಏರಿಕೆಯ ಭಾರಕ್ಕಿಂತ ಸುಪ್ರೀಂಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದೇಶದ ಅಸಂಖ್ಯಾತ ಕಾರು ಮಾಲೀಕರನ್ನು ಚಿಂತೆಗೀಡು ಮಾಡಿದೆ. ತಮ್ಮ ಕಾರುಗಳ ಕಿಟಕಿಗಳಿಗೆ ಹಾಕಿರುವ ಸನ್‌ಫಿಲಮ್‌ಗಳನ್ನು ಸಾರಿಗೆ ಕಾನೂನು ಪ್ರಕಾರ ಇಲ್ಲವಾದರೆ ತೆಗೆದುಹಾಕಬೇಕೆಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ತಮ್ಮ ಖಾಸಗಿತನವೇ ಬಟಾಬಯಲು ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಆರ್.ಟಿ.ಒ. ಕಾನೂನು ಕಾರುಗಳ ಸನ್‌ಫಿಲಮ್‌ಗಳು ಮುಂಭಾಗ, ಹಿಂಭಾಗ 70 ರಷ್ಟು ಮತ್ತು ಪಕ್ಕದ ಗಾಜುಗಳು 50 ರಷ್ಟು ಕಾಣುವಂತಿರಬೇಕೆಂದು ಹೇಳುತ್ತದೆ. ಕಾರಣ ಅಪಘಾತಗಳು ಸಂಭವಿಸುತ್ತವೆ, ಕಾರಿನಲ್ಲೇ ಅತ್ಯಾಚಾರವೆಸಗುತ್ತಾರೆ, ಅಪರಾಧಿಗಳ ಇರುವಿಕೆ ತಿಳಿಯುವುದಿಲ್ಲ ಇತ್ಯಾದಿ ಕಾರಣಗಳು. ಇಲ್ಲಿಯವರೆಗೂ ಎಷ್ಟು ಅಪಘಾತಗಳು ಸನ್‌ಫಿಲಮ್‌ಗಳ ಕಾರಣದಿಂದ ಆಗಿವೆಯೆಂದು ಅಂಕಿಅಂಶಗಳಿವೆಯೇ?. ಕಾರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆಯೆಂದು ವಾದಮುಂದಿಡುವ ಅರ್ಜಿದಾರರ ಪ್ರಕಾರ ದೇಶದ ಎಲ್ಲಾ ಟಿಂಟೆಡ್ ಗಾಜುಗಳ ಕಾರುಗಳ ಮಾಲೀಕರು ಅತ್ಯಾಚಾರಿಗಳೇ?. ದೊಡ್ಡ ದೊಡ್ಡ ಕಾರುಗಳಲ್ಲಿ ಅತ್ಯಾಚಾರ ನಡೆಯುತ್ತದೆ ಎಂಬುದನ್ನು ನಂಬಬಹುದು, ಮಾರುತಿ 800, ನ್ಯಾನೋದಂತಹ ಸಣ್ಣಕಾರುಗಳಲ್ಲೂ ರೇಪ್ ಕಿಡ್ನಾಪ್‌ಗಳಾಗಲು ಸಾಧ್ಯವೇ?. ನಮ್ಮ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಾಗರಿಕರ ಖಾಸಗಿತನದ ವಿಚಾರದಲ್ಲಿ ಸುಪ್ರೀಂಕೋರ್ಟ್ ಎಲ್ಲೋ ನಡೆದ ಒಂದೆರಡು ಘಟನೆಗಳನ್ನು ಮುಂದುಮಾಡಿಕೊಂಡು ಏಕಪಕ್ಷೀಯ ನಿರ್ಧಾರ ಪ್ರಕಟಿಸಿರುವುದು ಸರಿಯಾದ ಕ್ರಮವಲ್ಲ.

ಕೆಲವೇ ಕೆಲವು ಕಹಿಘಟನೆಗಳನ್ನು ನೆಪಮಾಡಿಕೊಂಡು ಹಲವು ರೀತಿಯ ಅನೂಕೂಲಗಳಿಗೆ ಬರೆಯೆಳೆಯುವುದು ನ್ಯಾಯಸಮ್ಮತವಲ್ಲ. ಹೆಣ್ಣುಮಕ್ಕಳ ರಕ್ಷಣೆಯನ್ನೇ ಮುಖ್ಯವಾಗಿಟ್ಟು ಅರ್ಜಿದಾರರ ವಾದವನ್ನು ಪರಿಗಣಿಸುವ ನ್ಯಾಯಾಲಯ ಒಂಟಿಯಾಗಿ ಕಾರುಗಳಲ್ಲಿ ಸಂಚರಿಸುವ ಹೆಣ್ಣುಮಕ್ಕಳ ರಕ್ಷಣೆ ಮುಖ್ಯವೆನಿಸುವುದಿಲ್ಲವೇ?. ಯಾವುದೇ ಪ್ರೇರಿತ ಹಿತಾಸಕ್ತಿಗಳನ್ನು ಮನದಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿಯ ಅಭಿಪ್ರಾಯವೇ ಸರ್ವಸಮ್ಮತವೆಂದು ಭಾವಿಸಿಕೊಳ್ಳುವುದು ನ್ಯಾಯದಾನದಲ್ಲಿ ಅಸಮತೋಲನ. ಎಷ್ಟೋ ಜನ ಪುರುಷರು ಕೂಡ ತಮ್ಮ ಕಛೇರಿಗಳ ರಾತ್ರಿ ಪಾಳಿಗಳಿಗೆ ಹೋಗುವಾಗ ದುಷ್ಕರ್ಮಿಗಳ ಕಣ್ಣಿಗೆ ಬೀಳುವ ಮಿಕಗಳಾಗುತ್ತಾರೆ.

ಕಾರುಗಳಲ್ಲಿನ ಬೆಲೆಬಾಳುವ ಸ್ಟೀರಿಯೋಗಳು ಕಳ್ಳರ ಪಾಲಾಗುತ್ತದೆ. ಬೆಲೆಬಾಳುವ ಲ್ಯಾಪ್‌ಟಾಪ್‌ಗಳು, ಕ್ಯಾಮೆರಗಳು ಕೂಡ ಕಾರಿನಿಂದ ಮಾಯಾವಾಗುತ್ತದೆ. ಒಂದು ಕ್ಷಣ ಕಾರಿಗಳ ಸನ್‌ಫಿಲಮ್‌ಗಳ ಮರೆಯಿಂದ ಅಪರಾಧಗಳು ಘಟಿಸುತ್ತವೆಯೆಂದಾದರೆ ನಾಳೆ ಇನ್ನೊಬ್ಬ ನಾಲ್ಕು ಗೋಡೆಗಳ ಮರೆಯಲ್ಲಿ ಲಂಚ ಸ್ವೀಕರಿಸುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಹೆಂಡತಿಯರ ಮೇಲೆ ಸೀಮೆಯೆಣ್ಣೆ ಸುರಿದು ಬೆಂಕಿಯಿಡುತ್ತಾರೆ, ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿಕೊಳ್ಳುತ್ತಾರೆ, ರಾಜಕಾರಣಿ, ಅಧಿಕಾರಿಗಳು ಹಣ ಪೇರಿಸಿಕೊಳ್ಳುತ್ತಾರೆ ಆದ್ದರಿಂದ ಮನೆಗಳಿಗೆ ಕಿಟಕಿ ಬಾಗಿಲು ಗೋಡೆಗಳೇ ಇರಬಾರದೆಂದು ಅರ್ಜಿ ಸಲ್ಲಿಸಿದರೇ ಆತನ ವಾದಕ್ಕೆ ಬೆಲೆಕೊಟ್ಟು ನಡೆದುಕೊಂಡುಬಿಟ್ಟರೇ ದೇಶದ ಪ್ರಜೆಗಳ ಖಾಸಗಿತನದ ಹಕ್ಕು ಬಟಾಬಯಲಾಗುತ್ತದೆ. ಕೋಣೆಗಳು ಪಾರದರ್ಶಕವಾಗಿರಬೇಕೆಂದು ಹೇಳುವುದು ಅಸಮಂಜಸವೋ ಹಾಗೆಯೇ ಕಾರುಗಳ ಸನ್‌ಫಿಲಮ್ ತೆಗೆಯಬೇಕೆಂದು ನಿರ್ದೇಶಿಸುವುದು ಅಸಮಂಜಸ.

ಏಕಪಕ್ಷೀಯವಾಗಿ ದೂಷಿಸುವ ಮೂಲಕ ಸನ್‌ಫಿಲಮ್‌ಗಳಿಂದಾಗುವ ಅನುಕೂಲತೆಗಳನ್ನು ಮರೆಯಬಾರದು. ಬಿಸಿಲಿನ ಪ್ರಭಾವನ್ನು ಕಡಿಮೆಮಾಡುವ ಮೂಲಕ ಹೆಚ್ಚು ಏಸಿ ಬಳಕೆಯನ್ನು ತಡೆಯುತ್ತದೆ. ಜೊತೆಗೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸಿ ಚರ್ಮರೋಗಕ್ಕೀಡಾಗುವುದು ತಪ್ಪುತ್ತದೆ. ಇತ್ತೀಚಿನ ಕೆಲವು ಅಪರಾಧ ಸುದ್ಧಿಗಳ ಕಡೆಗೆ ಕಣ್ಣಾಯಿಸಿದರೆ ಹಣ ಸಾಗಿಸುವ ವಾಹನಗಳ ಲೂಟಿ ಮಾಡುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನ್ಯಾಯಾಲಯದ ಆಜ್ಞೇಯ ಮೇರೆಗೆ ಸನ್‌ಫಿಲಮ್‌ಗಳನ್ನು ತೆಗೆದು ನಿಮ್ಮ ಕಾರ್‌ಗಳಲ್ಲಿ ಹಣ ಕೊಂಡೊಯ್ಯುವ ಧೈರ್ಯ ಬರುತ್ತದೆಯೇ? ಇಲ್ಲಿ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆಯೆಳೆದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಕಾರ್‌ಗಳು ಇಂದು ಕೇವಲ ಸಂಚಾರ ವ್ಯವಸ್ಥೆಯ ಭಾಗವಾಗಿ ಉಳಿದಿಲ್ಲ. ಸಾವಿರಾರು ಜನರ ಸಂಚಾರಿ ಕಛೇರಿಗಳಾಗಿ, ತಮ್ಮ ಪರ್ಯಾಯ ಮನೆಗಳಾಗಿ ಬದುಕಿನ ಮುಖ್ಯ ಅಂಗಗಳಾಗಿವೆ. ತಮ್ಮ ಮುಖ್ಯವಾದ ದಾಖಲೆಗಳು, ಕಡತಗಳನ್ನು ಕಾರ್‌ಗಳಲ್ಲಿಟ್ಟು ಕೊಂಡಿರುತ್ತಾರೆ. ಕೇವಲ ವಿ.ಐ.ಪಿ. ಗಳಲ್ಲದೇ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಪೊಲೀಸ್ ಅಧಿಕಾರಿಗಳ, ವ್ಯಾಪಾರಿಗಳ, ವಕೀಲರು, ಮಾಧ್ಯಮದವರ ಜೀವಕ್ಕೆ ಅಲ್ಪಮಟ್ಟಿಗೆ ರಕ್ಷಣೆಯಿರುವುದು ಟಿಂಟೆಡ್ ಗ್ಲಾಸ್‌ಗಳಿಂದ. ಸನ್‌ಫಿಲಮ್ ತಯಾರಿಸುವ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ, ಮಾರಾಟಮಾಡುವ ಫಿಲಮ್‌ಗಳನ್ನು ಹಾಕುವ ಸಾವಿರಾರು ದುಡಿಯುವ ಕೈಗಳನ್ನು ಕತ್ತರಿಸುವ ತೀರ್ಪು ಇದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸನ್‌ಫಿಲಮ್‌ಗಳ ವಿಲೇವಾರಿಯ ಬಗ್ಗೆ ಯೋಚಿಸಿದರೆ ಸಾಕು ದೇಶಕ್ಕೆ ಆಗುವ ನಷ್ಟದ ಪ್ರಮಾಣದ ಕಲ್ಪನೆಯೇ ಭೀಕರ. ಕಾರ್‌ಗಳ ಮಾಲೀಕರು ಟಿಂಟೆಡ್‌ಗಳನ್ನು ತೆಗೆಸುವು ನಷ್ಟವನ್ನು ಪರಿಗಣಿಸಿದರೆ ಅವರಿಗೆ ಪೆಟ್ರೋಲ್ ಬೆಲೆ ಏರಿಕೆ ಬಾಧೆಯುಂಟುಮಾಡುವುದಿಲ್ಲ. ಸುಪ್ರೀಂಕೋರ್ಟ್ ಏಕಪಕ್ಷೀಯವಾಗಿ ಯೋಚನೆ ಮಾಡದೆ ಈ ದೇಶದ ಖಾಸಗಿ ಹಕ್ಕನ್ನು ಕಿತ್ತುಕೊಳ್ಳುವ ತೀರ್ಪಿನ ಬಗ್ಗೆ ಪುನರಾವಲೋಕನೆ ಮಾಡಬೇಕಿದೆ. ಸಮಾಜದ ಹಿತಕ್ಕಾಗಿ ಸ್ವಯಂಪ್ರೇರಿತರಾಗಿ ಕಾರ್‌ಗಳ ಮಾಲೀಕರು, ವಕೀಲರು ಸುಪ್ರೀಂಕೋರ್ಟ್‌ಗೆ ಪುನರ್ಪರಿಶೀಲನಾ ಅರ್ಜಿಸಲ್ಲಿಸುವ ಹೆಜ್ಜೆಯಿಡಬೇಕು. ಭವಿಷ್ಯದಲ್ಲಿ ಸುಪ್ರೀರಂಕೋರ್ಟ್ ಕೆಟ್ಟ ಉದಾಹರಣೆಗಳನ್ನೇ ಮುಂದಿಟ್ಟುಕೊಂಡು ದೇಶದ ನಾಗರಿಕರಿಗೆ ಹೊರೆಯಾಗುವಂತಹ ತೀರ್ಪು ನೀಡದಿರಲಿ.

ಬಹಿರಂಗವಾದ “ಲಂಚಾವತಾರಿ”ಯ ಜಾತಿ ಪ್ರೇಮ


– ಸೂರ್ಯ ಮುಕುಂದರಾಜ್


 

ತುಂಬಾ ದಿನಗಳಿಂದ ಲೋಕದ ಡೊಂಕನ್ನು ಅಪಹಾಸ್ಯ ಮಾಡುವ ಮೂಲಕ ಹಣ ಮಾಡಿಕೊಂಡಿದ್ದ ವ್ಯುಕ್ತಿಯೊಬ್ಬನ ನಿಜ ಮುಖದ ದರ್ಶನ ತಡವಾದರೂ ಬಹಿರಂಗವಾಗಿದೆ. ಮೇ 14 ನೇ ಸೋಮವಾರದ ಪ್ರಜಾವಾಣಿ ಪತ್ರಿಕೆಯ ವರದಿಯೊಂದರ ತಲೆ ಬರಹ ‘ಬ್ರಾಹ್ಮಣ ಸಾಹಿತಿಗಳ ಕಡೆಗಣನೆ’ ನೋಡಿದಾಗ ಪೇಜಾವರ ಸ್ವಾಮಿಯೋ, ಇಲ್ಲವೇ ಕೇಸರಿಕರಣದ ಪ್ರಭಾವದಿಂದ ಹೊಸದಾಗಿ ಉದಯಿಸಿದ ಬ್ರಾಹ್ಮಣ ಸಾಹಿತಿಯೊಬ್ಬನ ಗೋಳಿನ ನುಡಿಯಿರಬಹುದೆಂದುಕೊಂಡೆ. ವರದಿ ಓದುತ್ತಿದ್ದಂತೆ, ‘ಓ ನಮ್ಮ ಲಂಚಾವತರ, ಪಬ್ಲಿಕ್ ರೇಡರ್ ಮಾಸ್ಟರ್ ಹಿರಣ್ಣಯ್ಯ ಕೊಟ್ಟಿರೋ ಹೊಸಾ ಥಿಯರಿ,’ ಅಂತ ಗೊತ್ತಾಯಿತು. ಹಲವಾರು ವರ್ಷಗಳಿಂದ ವೃತ್ತಿರಂಗಭೂಮಿಯಲ್ಲಿ ದುಡಿದು ಕುಡುಕಾವತಾರ ತಳೆದು ಲಂಚಾವತಾರದ ಮೂಲಕ ಅಬ್ರಾಹ್ಮಣ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ವೇದಿಕೆ ಮೇಲೆ ಛೀ ಥೂ ಎನ್ನುವ ಮೂಲಕ ಬಹುಸಂಖ್ಯಾತ ಅಬ್ರಾಹ್ಮಣ ಪ್ರೇಕ್ಷಕರ ಹಣದಿಂದಲೇ ಹೆಸರು ಆಸ್ತಿ ಸಂಪಾದಿಸಿದ ಮಾಸ್ಟರ್ ಹಿರಣ್ಣಯ್ಯ ಇಂದು ಅವರಲ್ಲಡಗಿದ್ದ ಜಾತಿಭ್ರಷ್ಟನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ತಮ್ಮ ಭಾಷಣದಲ್ಲಿ ಲಂಚಾವತಾರಿ ಕುವೆಂಪು ಅವರಿಗೆ ನೀಡಿರುವಷ್ಟು ಪ್ರಾಶಸ್ತ್ಯವನ್ನು ಪುತಿನ, ಅನಕೃ, ಡಿವಿಜಿ ಅವರಿಗೆ ನೀಡದೇ ಬ್ರಾಹ್ಮಣ ಸಮುದಾಯವನ್ನು ಕಡೆಗಾಣಿಸಲಾಗಿದೆಯೆಂದು ಬೇಸರಪಟ್ಟುಕೊಂಡಿದ್ದಾರೆ. ಪಾಪ, ಹಿರಣ್ಣಯ್ಯನವರ ಜೀವಮಾನದಲ್ಲಿ ಅವರು ಆಡಿದ ನಾಟಕಕ್ಕೆ ಸ್ಕ್ರಿಪ್ಟ್ ಬರೆದವರೇ ಆಲ್ಲ, ಇನ್ನು ಕುವೆಂಪು ಸಾಹಿತ್ಯ ಓದಿರಲು ಹೇಗೆ ಸಾಧ್ಯ? ಹಾಗೇನಾದರೂ ಅವರು ಕುವೆಂಪು ಸಾಹಿತ್ಯವನ್ನು ಓದಿದ್ದರೆ ಬಹುಶಃ ಮಾಸ್ಟರ್ ಈ ರೀತಿ ಹೇಳುತ್ತಿರಲಿಲ್ಲವೇನೋ. ಹಾಗೆಯೇ ಅವರ ನಾಟಕದ ಕ್ವಾಲಿಟಿಯೂ ಆ ಕಾಲದಲ್ಲೇ ಸುಧಾರಿಸಿರುತ್ತಿತ್ತು.

ಬಸವಣ್ಣನ ನಂತರ ಆಧುನಿಕ ಕಾಲಘಟ್ಟದಲ್ಲಿ ಜಾತಿ-ಮತಗಳ ಎಲ್ಲೆ ಮೀರಿ ದೇಶವೇ ದೇವರೆಂದ ಕವಿ ಕುವೆಂಪು. ಪುರೋಹಿತ ಶಾಹಿಯ ಕರ್ಮಠತೆಯನ್ನು ಕತ್ತರಿಸಿ ಹಾಕಲು ಶೂದ್ರರಿಗೆ ಶಕ್ತಿ ತುಂಬಿದ್ದು ಕುವೆಂಪು ಅವರ ಸಾಹಿತ್ಯ. ತನ್ನ ಜಾತಿಯೊಳಗಿನ ಮೌಢ್ಯವನ್ನೇ ಖಂಡಿಸಿ ಅದ್ದೂರಿ ವಿವಾಹಗಳಿಗೆ ಬದಲಾಗಿ ಸರಳವಿವಾಹವನ್ನು ಜನಪ್ರಿಯಗೊಳಿಸಿದ ಕೀರ್ತಿ ಕುವೆಂಪು ಅವರದು. ಬಹುಜನರಿಗೆ ಅರ್ಥವಾಗದ ಮಂತ್ರಗಳನ್ನು ಹೇಳಿ ಮೌಢ್ಯಕ್ಕ ತಳ್ಳಿದ್ದ ಪುರೋಹಿತಶಾಹಿಗಳ ಆಟ ನಿಲ್ಲಲು ಮಂತ್ರಮಾಂಗಲ್ಯವನ್ನು ಪರಿಚಿಯಿಸಿದರು. ರೈತ, ದರಿದ್ರನಾರಾಯಣನಿಂದ ಹಿಡಿದು ಆರಕ್ಕೇರದ ಮೂರಕ್ಕಿಳಿಯದ ಮಧ್ಯಮವರ್ಗದ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಕುವೆಂಪು. ಕುವೆಂಪು ಕೇವಲ ಸಾಹಿತಿಯಷ್ಟೇ ಆಗಿರಲಿಲ್ಲ ಎನ್ನುವುದು ಕನ್ನಡದ ಜನತೆಗೆ ತಿಳಿದ ವಿಚಾರ. ಮತ್ತು ಕನ್ನಡದ ಜನತೆ ಅವರನ್ನೆಂದೂ ಜಾತಿಗೆ ಸೀಮಿತಗೊಳಿಸಿಲ್ಲ. ಒಕ್ಕಲಿಗರಲ್ಲಿರುವ ಕೆಲವು ಜಾತಿವಾದಿಗಳು ಮತ್ತು ಹಿರಣ್ಣಯ್ಯನವರಂತಹ ಒಕ್ಕಲಿಗೇತರ ಜಾತಿವಾದಿಗಳು ಮಾತ್ರ ಕುವೆಂಪುರವರನ್ನು ಜಾತಿಯ ದೃಷ್ಟಿಯಿಂದ ನೋಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆಯೇ, ಹಿರಣ್ಣಯ್ಯನವರು ಕನ್ನಡಿಗರು ನಾನಾ ಕಾರಣಗಳಿಗೆ ಮೆಚ್ಚಿಕೊಂಡ, ಓದಿಕೊಂಡ ಪುತಿನ, ಅನಕೃ, ಡಿವಿಜಿಯವರನ್ನು ತಮ್ಮ ರೀತಿಯೇ ಜಾತಿಯ ಕಾಮಾಲೆ ಕಣ್ಣಿನಿಂದ ನೋಡುವಂತೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಈ ಹಿರಿಯರ ಬಗ್ಗೆ ಹಿರಣ್ಣಯ್ಯನವರಿಗೆ ಗೌರವ ಇದ್ದಿದ್ದೇ ಆದರೆ ಈ ರೀತಿ ಅವರನ್ನು ಜಾತಿ-ಮತಗಳ ಕ್ಷುದ್ರ ಪರಿಧಿಗೆ ಎಳೆಯುತ್ತಿರಲಿಲ್ಲ.

ಹಿರಣ್ಣಯ್ಯ ಮುಂದುವರೆದು ತಮ್ಮ ಹರಿತ ನಾಲಗೆಯಿಂದ, “ದೇವರ ಕೆಲಸಕ್ಕೆ ಹುಟ್ಟಿದ ನಮಗೆ ಯಾರೋ ಒಬ್ಬರು ತಪ್ಪು ಮಾಡಿದರು ಎಂದು ಇಡೀ ಸಮುದಾಯವನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ,” ಎಂದು ಪ್ರಶ್ನಿಸುತ್ತಾರೆ. ಒಬ್ಬ ಪ್ರಬುದ್ಧ ರಂಗನಟನಾಗಿದ್ದರೆ ಈ ರೀತಿ ಕಂದಾಚಾರಿಯಂತೆ ಮಾತನಾಡುತ್ತಿರಲಿಲ್ಲವೇನೋ. ಹಿರಣ್ಣಯ್ಯ ಇನ್ನೂ ತನ್ನ ಸಮಾಜದ ಬಾಂಧವರು ದೇವರ ಕೆಲಸಕ್ಕೆ ಹುಟ್ಟಿದವರೆಂದು ಕರೆದುಕೊಳ್ಳುವುದೇ ಅಸಹ್ಯ ಅನ್ನಿಸದಿರುವುದು ಖೇದಕರ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಅನಂತಮೂರ್ತಿ ತಮ್ಮ ಜಾತಿಯೊಳಗಿನ ಕರ್ಮಠತೆಯನ್ನು ಟೀಕಿಸುವ ಮೂಲಕ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರೊ.ಕಿ.ರಂ.ನಾಗರಾಜ ತಮ್ಮ ಬದುಕಿನ ಕಡೆಗಾಲದವರೆಗೂ ಕೂಡ ಬ್ರಾಹ್ಮಣರಂತೆ ಬಾಳಲಿಲ್ಲ. ನೂರಾರು ಶಿಷ್ಯರನ್ನು ಸಲುಹಿದ ಕಿ.ರಂ. ಎಂದಿಗೂ ತಮ್ಮ ಶಿಷ್ಯರ ಬೆನ್ನು ತಡವಿ ಜನಿವಾರವಿದೆಯೇ ಎಂದು ಪರೀಕ್ಷಿಸಿದವರಲ್ಲ. ಇವರೆಲ್ಲ ಬ್ರಾಹ್ಮಣ್ಯದ ಕರ್ಮಠತೆಯಿಂದ ಹೊರಗೆ ಬಂದವರು. ಆದರೆ ಹಿರಣ್ಣಯ್ಯ? ಜಗತ್ತಿಗೇ ಬುದ್ಧಿ ಹೇಳುವವರಂತೆ ನಟಿಸುವ ವ್ಯಕ್ತಿ ಈ ರೀತಿ ಒಬ್ಬ ಕಂದಾಚಾರಿಯಂತೆ “ದೇವರ ಸೇವೆಗೆ ಹುಟ್ಟಿದವರು ನಾವು” ಎಂದು ಹೇಳಿಕೊಳ್ಳಲು ಹಿಂಜರಿಯದಿರುವುದು ಅವರಲ್ಲಿನ ಜಾತಿಪ್ರೇಮ ಜೀವಂತವಾಗಿರುವುದರ ಪ್ರತೀಕ. ಕುವೆಂಪು ಜಗತ್ತಿಗೆ ವಿಶ್ವಮಾನವಧರ್ಮ ಸಾರಿದವರು. “ಮನುಷ್ಯ ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ,” ಎಂದೇಳಿದ್ದರು. ಹಾಗೇ ನೋಡಿದಾಗ ಹಿರಣ್ಣಯ್ಯ ಜಾತಿವಾದಿಯಾಗುವ ಮೂಲಕ ಅಲ್ಪಮಾನವನಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ?