Category Archives: ನಮ್ಮ ಲೇಖಕರು

ಜೈಲು ತುಂಬುತ್ತಿರುವ ಅನುಮಾನಾಸ್ಪದ ಮುಸ್ಲೀಮರು ಮತ್ತು ಅವಮಾನಿತ ಸಮುದಾಯದ ಪ್ರಜ್ಞಾವಂತ ಯುವ ಜನತೆಯ ಸಮಾವೇಶ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ಮೇ 14 ಮತ್ತು 15 ರಂದು ಅನುಮಾನಿತರು ಮತ್ತುpic-logo ಅವಮಾನಿತರ ಸಮುದಾಯದ ಯುವ ಸಮಾವೇಶ ನಡೆಯುತ್ತಿದೆ. ಇದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ನಾನು ಸಂಘಪರಿವಾರದ  ನೈತಿಕ ಪೊಲೀಸ್ ಗಿರಿ ವಿರುದ್ಧ ಸುದ್ದಿ ಮಾಡಿದ್ದ ಕಾರಣಕ್ಕಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಾಲ್ಕುವರೆ ತಿಂಗಳು ಜೈಲಿನಲ್ಲಿ ಇರಬೇಕಾದ ಸಂಧರ್ಭದಲ್ಲಿ ನೂರಾರು ಅನುಮಾನಿತ ಮತ್ತು ಅವಮಾನಿತರ ಜೊತೆ ಸಮಯ ಕಳೆಯುವ ಅವಕಾಶ ದೊರಕಿತ್ತು. ಮಂಗಳೂರು ಜೈಲಿನಲ್ಲಿ ಎರಡು ವಿಭಾಗಗಳಿವೆ. ಎ ವಿಭಾಗ ಮತ್ತು ಬಿ ವಿಭಾಗ. ಮುಸ್ಲಿಂ ವಿಚಾರಣಾಧೀನ ಕೈದಿಗಳನ್ನು ಎ ವಿಭಾಗದಲ್ಲೂ, ಹಿಂದೂ ವಿಚಾರಣಾಧೀನ ಕೈದಿಗಳನ್ನು ಬಿ ವಿಭಾಗದಲ್ಲೂ ಹಾಕುತ್ತಾರೆ. ನನ್ನ ಹೆಸರು ಹಿಂದೂ ಹೆಸರಾಗಿದ್ದರೂ ಜೈಲು ಅಧಿಕಾರಿಗಳು ಮತ್ತು ಪೊಲೀಸರು ಸಮಾಲೋಚನೆ ನಡೆಸಿ, ಭದ್ರತೆಯ ದೃಷ್ಟಿಯಿಂದ ಮುಸ್ಲಿಂ ಕೈದಿಗಳಿರುವ ಎ ವಿಭಾಗದಲ್ಲಿ ನನ್ನನ್ನು ಇಡಲಾಗಿತ್ತು. ಬೇರೆ ಬೇರೆ ಕಾರಣಕ್ಕಾಗಿ ಕೈದಿಗಳಾಗಿದ್ದ ನಾಲ್ಕು ನೂರಕ್ಕೂ ಅಧಿಕ ಕೈದಿಗಳ ಜೊತೆ ಈ ಸಂಧರ್ಭದಲ್ಲಿ ಚರ್ಚೆ ನಡೆಸಿದ್ದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಗೆ ಜೈಲು ಸೇರುವ ಒಂದೊಂದು ಮುಸ್ಲೀಮನ ಕತೆಯೂ ಧಂಗು ಬಡಿಸುವಂತಿದೆ.

ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರೆಹಮಾನ್. 85 ವರ್ಷದ ಈ ಅಜ್ಜ ಉರೂಸ್ ಗಳಿಗೆ ತೆರಳಿ ಅಲ್ಲಿ ಹಾಡು ಹಾಡಿ ಸಂಪಾದನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಲವಾರು ಬಾರಿ ಓಡಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು, ಮಡಿಕೇರಿಗಳಲ್ಲಿ ಉರೂಸು ಬಹಳಾನೇ ನಡೆಯುತ್ತಿರುವುದರಿಂದ ಈ ಪ್ರದೇಶಗಳು ರೆಹಮಾನ್ ಗೆ ಅಚ್ಚುಮೆಚ್ಚು ಮಾತ್ರವಲ್ಲ ಸಲೀಸು ಕೂಡಾ. ಅಂದೂ ಕೂಡಾ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಉರೂಸಿಗಾಗಿ ರೆಹಮಾನ್ ರತ್ನಗಿರಿಯಿಂದ ಬಂದಿದ್ದರು. 85 ವರ್ಷ ಪ್ರಾಯದ ಅವರಿಗೆ ವಯೋ ಸಹಜ ಖಾಯಿಲೆಗಳೂ ಇದ್ದಿದ್ದರಿಂದ ಯಾರದ್ದೋ ಸಲಹೆಯ ಮೇರೆಗೆ ಯನಪೊಯ ಆಸ್ಪತ್ರೆಯ ಉಚಿತ ಚಿಕಿತ್ಸೆಯ ”ಆಫರ್ ” ಲಾಭ ಪಡೆದುಕೊಳ್ಳಲು ಮಂಗಳೂರಿಗೆ ಬಂದಿದ್ದರು. ಮಂಗಳೂರು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿದ ರೆಹಮಾನ್ ಹಳೆ ಬಂದರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುತ್ತಿದ್ದರು. ಅಷ್ಟರಲ್ಲಿ ಮುಬ್ಬು ಕತ್ತಲೆಯಾಗಿತ್ತು. ಹಳೆ ಬಂದರಿನ ಪೊಲೀಸ್ ಠಾಣೆಯ ಎದುರು ನಡೆದುಕೊಂಡು ಬರುತ್ತಿದ್ದಾಗ ಪೊಲೀಸನೊಬ್ಬ ರೆಹಮಾನ್ ರನ್ನು ಠಾಣೆಯ ಕಂಪೌಂಡ್ ಒಳಗೆ ಕರೆದ. ಕರೆದಿರುವುದು ಪೊಲೀಸ್ ಮತ್ತು ಅದು ಪೊಲೀಸ್ ಠಾಣೆ ಎಂದು ಅರಿವಾದ ರೆಹಮಾನ್ ಕಾಳೆದುಕೊಳ್ಳುತ್ತಾ ಪೊಲೀಸ್ ಠಾಣೆ ಹೊಕ್ಕಿದರು. ಪೊಲೀಸ್ ಸಿಬ್ಬಂದಿ “ನಿನ್ನ ಹೆಸರೇನು ?” ಎಂದು ಪ್ರಶ್ನಿಸಿದ. “ರೆಹಮಾನ್” ಎಂದು ಹಿಂದಿಯಲ್ಲಿ ಮರಳಿ ಉತ್ತರ ಬಂದಿತ್ತು. “ತುಮ್ ಕಂಹಾ ಸೇ ಆಯೀ ಹೋ  ?” ಮರಳಿ ಪ್ರಶ್ನೆ ಪೊಲೀಸನಿಂದ. “ಮಹಾರಾಷ್ಟ್ರಕೆ ರತ್ನಗಿರಿ ಸೆ” ಎಂದರು ರೆಹಮಾನ್. ಅಷ್ಟೆ. ನಂತರ ಈ 85 ವರ್ಷದ ಅಜ್ಜ ರೆಹಮಾನ್ ರನ್ನು ಥೇಟ್ ಭಯೋತ್ಪಾದಕರನ್ನು ವಿಚಾರಣೆಗೊಳಪಡಿಸುವ ರೀತಿಯಲ್ಲಿ ವಿಚಾರಣೆ ನಡೆಸಲಾಯಿತು.

ರೆಹಮಾನ್ ಗೆ ಪೊಲೀಸರ ಪ್ರಶ್ನೆಗಳು ಸರಳವಾಗಿದ್ದವು. “ಮಹಾರಾಷ್ಟ್ರದ ಮುಸ್ಲೀಮನಿಗೆ ಮಂಗಳೂರಿನಲ್ಲಿ ಏನು ಕೆಲಸ ? ಮಹಾರಾಷ್ಟ್ರದಲ್ಲಿpic- rehman ಮಸೀದಿ ಇಲ್ಲವೇ ? ಅಲ್ಲಿ ಉರೂಸು ನಡೆಯುವುದಿಲ್ಲವೇ? ನೀನು ರತ್ನಗಿರಿಯ ಮಸೀದಿ ಎದುರುಗಡೆ ನಿಂತು ಹಾಡಿದರೆ ಅಲ್ಲಿನ ಮುಸ್ಲೀಮರಿಗೆ ಕಿವಿ ಕೇಳುವುದಿಲ್ಲವೇ ? ನಿನಗೆ ಭಟ್ಕಳದಲ್ಲಿ ಯಾರ್ಯಾರು ಗೊತ್ತು ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ರೆಹಮಾನ್ ಉತ್ತರ ನೀಡಿದ್ದಾರೆ. ಮಧ್ಯೆ ಮಧ್ಯೆ ಅತ್ತಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಅನುಮಾನಗಳು ಮುಗಿದಿಲ್ಲ. ರೆಹಮಾನ್ ಮೊಬೈಲನ್ನು ವಶಪಡಿಸಿಕೊಂಡ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಅನ್ನು ಸಂಪೂರ್ಣ ಪರಿಶೀಲಿಸಿದರು. ರೆಹಮಾನ್ ವಿಳಾಸದ ದಾಖಲೆಗಳನ್ನು ಸಂಪೂರ್ಣ ದೃಡೀಕರಿಸಿದರು. 85 ವರ್ಷದ ಮುದುಕನೊಬ್ಬನನ್ನು ಈ ರೀತಿ ವಿಚಾರಣೆಗೆ ಒಳಪಡಿಸುವುದು ಅಮಾನವೀಯ ಎಂದೆಣಿಸಿದ್ದರೂ ಖಾಕಿ ತೊಟ್ಟುಕೊಂಡ ನಂತರ ಅವರಿಗಿದೆಲ್ಲಾ ಅನ್ವಯಿಸೋದಿಲ್ಲ ಎಂದುಕೊಳ್ಳೋಣಾ. ತನಿಖೆ ಎಲ್ಲಾ ಮುಗಿದ ನಂತರ ಬಿಟ್ಟು ಬಿಡುತ್ತಾರೆ ಎಂದು ರೆಹಮಾನ್ ಅಂದುಕೊಂಡಿದ್ದರಂತೆ. ಪೊಲೀಸ್ ಇನ್ಸ್ ಸ್ಪೆಕ್ಟರ್ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದು ರೆಹಮಾನ್ ಗೆ ಪೊಲೀಸ್ ಸಿಬ್ಬಂದಿಯೊಬ್ಬ ಹೇಳಿದ್ದ. ಗಂಟೆ ರಾತ್ರಿ 11 ಆದರೂ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಗೆ ಬರಲೇ ಇಲ್ಲ. ಅಷ್ಟರಲ್ಲಿ ಬಂದ ಸಿಬ್ಬಂದಿಯೊಬ್ಬ ರೆಹಮಾನ್ ರನ್ನು ಲಾಕಪ್ಪಿನಲ್ಲಿ ಕೂರಲು ಹೇಳಿದ. ಸ್ನಾನವೂ ಇಲ್ಲ. ನಮಾಜೂ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಲ್ಲಿದ್ದ ಅಷ್ಟೂ ಪೊಲೀಸ್ ಸಿಬ್ಬಂದಿಗಳ ಅಪ್ಪನ ಪ್ರಾಯದವರಾಗಿದ್ದ ರೆಹಮಾನ್ ರನ್ನು ಅಂಗಿ, ಪ್ಯಾಂಟು ಕಳಚಿ ಒಳ ಉಡುಪನ್ನು ಮಾತ್ರ ಧರಿಸಿ ಮಲಗುವಂತೆ ಹೇಳಲಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಿನ ! ನಾಲ್ಕನೇ ದಿನ ರೆಹಮಾನ್ ಮೇಲೆ “ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ” ಎಂಬ ಆರೋಪ ಹೊರಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ರೆಹಮನ್ ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದರು. ರೆಹಮಾನ್ ರನ್ನು ಮಂಗಳೂರು ಸಬ್ ಜೈಲಿಗೆ ಹಾಕಲಾಯಿತು.

ಪೊಲೀಸರು ರೆಹಮಾನ್ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ ವ್ಯಕ್ತಿ” ಎಂದು ಕೇಸು ದಾಖಲಿಸಿದ್ದರು. ಈ ರೀತಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆತನ ಪರವಾಗಿ ವಾದಿಸಲು ವಕೀಲರಿದ್ದರೆ ಅಥವಾ ಜಾಮೀನು ನೀಡಲು ವ್ಯಕ್ತಿಗಳು ಸಿದ್ದರಿದ್ದರೆ ತಕ್ಷಣ ಜಾಮೀನು ದೊರೆಯುತ್ತದೆ. ಅಥವಾ ದಂಡ ಕಟ್ಟಿಯೂ ಬಿಡುಗಡೆ ಹೊಂದಬಹುದು. ಆದರೆ ಇವೆರಡೂ ರೆಹಮಾನ್ ಬಳಿ ತಕ್ಷಣಕ್ಕೆ ಲಭ್ಯ ಇರಲಿಲ್ಲ. ಜೈಲಿನಲ್ಲಿ ಕರಾವಳಿಯ ಊಟ ಸೇರದೆ, ಮತ್ತೊಂದೆಡೆ ವಯೋ ಸಹಜ ಕಾಯಿಲೆಗಳಿಂದ ನಿತ್ಯ ನರಳಾಡುತ್ತಿದ್ದ ರೆಹಮಾನ್ ಕತೆಯನ್ನು ನನ್ನನ್ನು ನಿತ್ಯ ಭೇಟಿಯಾಗುತ್ತಿದ್ದ ಡಿವೈಎಫ್ ಐ ಅಂದಿನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಹೇಳಿದಾಗ, ಆತ ತಕ್ಷಣ ಕಾರ್ಯಪ್ರವೃತ್ತನಾಗಿ ರೆಹಮಾನ್ ಬಿಡುಗಡೆಗೆ ಪಯತ್ನ ನಡೆಸಿ ಯಶಸ್ವಿಯಾದ್ರು. 2013 ಫೆಬ್ರವರಿ 23 ರಂದು ಅಮಾಯಕ ರೆಹಮಾನ್ ಮಂಗಳೂರು ಜೈಲಿನಿಂದ ಬಿಡುಗಡೆಯಾದ್ರು.

ಇದಾಗಿ ಕೆಲವು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗೆದ್ದು ನೋಡುವಾಗ ಚಿಕ್ಕ ಹುಡುಗನೊಬ್ಬ ಜೈಲಿನಲ್ಲಿ ಬಟ್ಟೆ ಒಗೆಯುತ್ತಿದ್ದಾನೆ. ಇದ್ಯಾರ ಬಟ್ಟೆ ಎಂದು ಕೇಳಿದ್ರೆ, ಅವರದ್ದು ಎಂದು ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಕಡೆ ಕೈ ತೋರಿಸಿದ್ದ. ನಾನಿದ್ದ ಬ್ಲಾಕ್ ನಲ್ಲೇ ಭೂಗತ ಪಾತಕಿ ಎಂಬ ಆರೋಪ ಹೊತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಇದ್ದರು. ನನ್ನನ್ನು ಬಹಳವಾಗಿ ಗೌರವಿಸುತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿಯ ಕೆಲಸದಿಂದ ಈ ಹುಡುಗನನ್ನು ಬೇರ್ಪಡಿಸುವುದು ನನಗೆ ಕಷ್ಟವಾಗಲಿಲ್ಲ. ಈ ಚಿಕ್ಕ ಹುಡುಗ ಇಬ್ರಾಹಿಂ ಜೈಲಿಗೆ ಯಾಕೆ ಬಂದಿದ್ದಾನೆ ಎಂಬುದು ಆತನಿಗೇ ಗೊತ್ತಿಲ್ಲ.

ಆತನ ಹೆಸರು ಇಬ್ರಾಹಿಂ. ನೋಡಲು ಹತ್ತು ವರ್ಷದವನಂತೆ ಕಾಣುವpic-mangalore jail ಆತನ ವಯಸ್ಸು 15.  ಬೆಳ್ತಂಗಡಿ ನಿವಾಸಿಯಾದ ಇಬ್ರಾಹಿಂನ ತಂದೆ ಖಾಯಿಲೆ ಬಿದ್ದು ಕಳೆದ ಎರಡು ವರ್ಷದಿಂದ ಹಾಸಿಗೆ ಪಾಲಾಗಿದ್ದಾರೆ. ತಾಯಿ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ರಾಹಿಂಗೊಬ್ಬಳು ಸಣ್ಣ ತಂಗಿ ಇದ್ದಾಳೆ. ತಂಗಿ ಮತ್ತು ತಂದೆಯ ಜೊತೆಗೆ ನನ್ನನ್ನೂ ತಾಯಿ ಸಾಕಬೇಕು ಎಂಬುದು ಕಷ್ಟಕರ ಸಂಗತಿ ಎಂದು ತಿಳಿದುಕೊಂಡ ಇಬ್ರಾಹಿಂ ಶಾಲೆ ಬಿಟ್ಟು ಮಂಗಳೂರಿನ ಮೂಡುಶೆಡ್ಡೆ ಬಳಿ ಇರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ಅಂದೂ ಶನಿವಾರ ಸಂಜೆ ಮನೆಗೆ ಬಂದು ರವಿವಾರ ರಾತ್ರಿ ಮನೆಯಿಂದ ವಾಪಸ್ಸು ಹೊರಟಿದ್ದ. ರಾತ್ರಿ 11 ಗಂಟೆಯಾಗಿದೆ. ನಾಳೆ ಬೆಳಿಗ್ಗೆ ಬೇಗನೆ ಫ್ಯಾಕ್ಟರಿಯಲ್ಲಿರಬೇಕಾದ್ದರಿಂದ ತಡ ರಾತ್ರಿ ಬರುವ ಸರಕಾರಿ ಬಸ್ಸೋ, ಟ್ಯಾಂಕರೋ ಹತ್ತಿ ಮಂಗಳೂರು ತಲುಪಬೇಕು ಎಂಬ ನಿರೀಕ್ಷೆಯಲ್ಲಿದ್ದ ಇಬ್ರಾಹಿಂ. ಅಷ್ಟರಲ್ಲಿ ಒರ್ವ ಪೊಲೀಸ್ ಬಂದು ಇಬ್ರಾಹಿಂ ನಲ್ಲಿ ಮಾತನಾಡಿದ್ದಾನೆ. ಹೆಸರು, ವಿಳಾಸ, ಬಸ್ ನಿಲ್ದಾಣದಲ್ಲಿ ನಿಂತಿರೋದಕ್ಕೆ ಕಾರಣ ಕೇಳಿದ್ದಾನೆ. ಎಲ್ಲದಕ್ಕೂ ಇಬ್ರಾಹಿಂ ಉತ್ತರಿಸಿದ್ದರೂ ಇಬ್ರಾಹಿಂನನ್ನು ಪೊಲೀಸ್ ಪೇದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದ.

ಬೆಳ್ತಂಗಡಿ ಠಾಣೆಯಲ್ಲಿ ರಾತ್ರಿ ಪೂರ್ತಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ತನ್ನ ಮನೆಯ ಎಲ್ಲಾ ಪರಿಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದರೂ, ನಾಳೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿಕೊಂಡರೂ ಇಬ್ರಾಹಿಂ ನನ್ನು ಪೊಲೀಸರು ಬಿಡುಗಡೆ ಮಾಡಲಿಲ್ಲ. ಅಂಗಿ ಕಳಚಿ ಲಾಕಪ್ಪಿನಲ್ಲಿ ಕೂರುವಂತೆ ಹೇಳಲಾಯಿತು. ರಾತ್ರಿ ಒಬ್ಬೊಬ್ಬರಾಗಿ ಬರೋ ಪೊಲೀಸ್ ಪೇದೆಗಳು ಪ್ರತ್ಯೇಕವಾಗಿ ಹೊಡೆದು ವಿಚಾರಣೆ ಮಾಡುತ್ತಿದ್ದರು. ರಾತ್ರಿ ಮೂರು ಗಂಟೆಯ ನಂತರ ಪೊಲೀಸರು ಇಬ್ರಾಹಿಂಗೆ ಮಲಗಲು ಹೇಳಿದ್ರು.  ಸೊಳ್ಳೆ ಕಚ್ಚಿಸಿಕೊಂಡು ಬೆಳಗ್ಗಿನವರೆಗೆ ನಿದ್ದೆ ಮಾಡದೆ ಕುಳಿತುಕೊಂಡೇ ಇದ್ದ ಇಬ್ರಾಹಿಂನನ್ನು ಮದ್ಯಾಹ್ನದ ವೇಳೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಇಬ್ರಾಹಿಂ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ” ಕೇಸು ದಾಖಲಿಸಿದ್ದರು. ನ್ಯಾಯಾಧೀಶರು ಕನಿಷ್ಠ ಈತನ ಮುಖ ನೋಡಿ ವಯಸ್ಸನ್ನೂ ಕೇಳದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 18 ವರ್ಷ ತುಂಬದ ಮಕ್ಕಳನ್ನು ಹಿಂದೆ ರಿಮಾಂಡ್ ಹೋಂ ಎಂದು ಕರೆಯಲ್ಪಡುತ್ತಿದ್ದ “ಮಕ್ಕಳ ಪರಿವೀಕ್ಷಣಾಲಯ”ದಲ್ಲಿ ಇರಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ನ್ಯಾಯಾಧೀಶರಿಗೆ ಇರಲಿಲ್ಲವೇ ಎಂಬುದು ಆಶ್ಚರ್ಯಕರ ವಿಷಯ.

ಅಂತೂ ಪೊಲೀಸರಿಗೆ 15 ರ ಹುಡುಗ, ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಾಸ್ಪದವಾಗಿ ಕಂಡು ಜೈಲು ಸೇರಿದ. ಪೊಲೀಸರಿಗೆ ಕ್ಲೀಯರ್ ಮಾಡಿಕೊಳ್ಳಲಾಗದ ಅನುಮಾನ ಈ ಹುಡುಗನಲ್ಲಿ ಏನು ಬಂತೋ ಗೊತ್ತಿಲ್ಲ. ನಾಲ್ಕೋ, ಐದೋ ಮರ್ಡರ್ ಮಾಡಿದ ವೃತ್ತಿಪರ ರೌಡಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರಿಗೆ ಡೌಟ್ ಬಂದು ವಿಚಾರಣೆ ನಡೆಸಿದಾಗಲೂ ಆತ ಬಾಯ್ಬಿಡದ ರೌಡಿಯಾಗಿದ್ದರೆ, “ಕೆಪಿ ಆ್ಯಕ್ಟ್ 96 ಪ್ರಕಾರ ಅನುಮಾನಾಸ್ಪದ ಕೇಸು” ದಾಖಲಿಸಿ ಜೈಲಿಗಟ್ಟುವುದು ಸರಿಯಾದ ಕ್ರಮ. ಈ ಬಾಲಕನ ಮೇಲೆ ಈ ಮೊದಲು ಯಾವ ಪ್ರಕರಣಗಳೂ ಇಲ್ಲ. ಈತನಿಗೆ ಪೊಲೀಸ್ ಠಾಣೆ, ಜೈಲು ಎಲ್ಲವೂ ಹೊಸತು. ವಕೀಲ ಯಾರು, ಜಡ್ಜ್ ಯಾರು ಎಂದೂ ತಿಳಿಯದೆ ಕರಿ ಕೋಟು ಹಾಕಿದ್ದವರನ್ನೆಲ್ಲಾ ಜಡ್ಜುಗಳು ಎಂದು ತಿಳಿದಿದ್ದ. ಅಂತದ್ದರಲ್ಲಿ ಈ ಹುಡುಗನ ಮೇಲೆ ಅನುಮಾನಗಳೇನಾದರೂ ಬಂದಿದ್ದರೆ ಆತನ ತಂದೆ ತಾಯಿಯನ್ನು ಕರೆಸಿ ವಿಚಾರಣೆ ಮಾಡಬಹುದಿತ್ತು. ಹುಡುಗನನ್ನು ಆತನ ಮನೆಗೆ ಕರೆದೊಯ್ದು ವಿಚಾರಣೆಯನ್ನು ಮಾಡಬಹುದಿತ್ತು. ಇಷ್ಟಕ್ಕೂ ತೃಪ್ತಿಯಾಗದಿದ್ದರೆ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿ ಪೊಲೀಸರ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಬಹುದಿತ್ತು. ಎಂತೆಂಥ ಭಯೋತ್ಪಾಧಕರನ್ನು ಲಾಠಿಯಿಂದ ಬಾಯಿ ಬಿಡಿಸುವ ಪೊಲೀಸರಿಗೆ ಯಕಶ್ಚಿತ್ ಹುಡುಗನೊಬ್ಬನಿಗೆ ರಾತ್ರಿ ಪೂರ್ತಿ ಹೊಡೆದರೂ ಬಾಯಿ ಬಿಡಿಸಲಾಗಲಿಲ್ಲ ಮತ್ತು ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಲಾಗಿಲ್ಲ ಎಂದರೆ ಅರ್ಥ ಏನು ? ಮತ್ತೆ ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ದಂಡ ಕಟ್ಟಿ ಜೈಲಿನಿಂದ ಬಿಡುಗಡೆಯಾಗುವಂತೆ ಮಾಡಲಾಯ್ಮಾತು.  ನಂತರ ಇವರೆಡೂ ಪ್ರಕರಣಗಳನ್ನು ಇಟ್ಟುಕೊಂಡು ಅನುಮಾನಸ್ಪದ ಪ್ರಕರಣದ ಅಡಿಯಲ್ಲಿ ಅಮಾಯಕ ಮುಸ್ಲೀಮರನ್ನು ಬಂಧನ ಮಾಡುವ ಪೊಲೀಸರ ಬಗ್ಗೆ ಡಿವೈಎಫ್ ಐ ಪ್ರತಿಭಟನೆ ನಡೆಸಿತು. ಪೊಲೀಸ್ ಆಯುಕ್ತರ ಬಳಿ ನಿಯೋಗ ಕೊಂಡೊಯ್ದು ಎಚ್ಚರಿಕೆಯನ್ನು ನೀಡಿದ ಬಳಿಕ ಸ್ವಲ್ಪ ಸಮಯ ಕೆಪಿ ಅ್ಯಕ್ಟ್ 96 ಅಡಿಯಲ್ಲಿ ಅಮಾಯಕ ಮುಸ್ಲೀಮರು ಮಂಗಳೂರು ಜೈಲು ಸೇರುವುದು ಕಡಿಮೆಯಾಗಿತ್ತು.

ಭಯೋತ್ಪಾಧಕರಿಗೆ ಹವಾಲ ಹಣ ಹಂಚಿಕೆ ಮಾಡುತ್ತಿದ್ದಾಳೆ ಎಂದು ಮಹಿಳೆ ಮತ್ತು ಪುಟ್ಟ ಮಗುವನ್ನು ಪೊಲೀಸರು ಬಂಧಿಸಿದ್ದರು. ಕೇವಲ ಹಣಕಾಸಿನ ಅಪರಾಧವನ್ನು ಮುಸ್ಲಿಂ ಹೆಸರಿನ ಮಹಿಳೆ ಎಂಬ ಕಾರಣಕ್ಕಾಗಿ ಭಯೋತ್ಪಾಧನೆಯನ್ನು ತಳಕು ಹಾಕಲಾಗಿತ್ತು. ಆಕೆ ಭಯೋತ್ಪಾಧಕಿ ಅಲ್ಲ ಎಂದು ಮಂಗಳೂರಿನಂತಹ ಪ್ರದೇಶದಲ್ಲಿ ಸಾರುವಷ್ಟರ ಹೊತ್ತಿಗೆ ಡಿವೈಎಫ್ ಐ ಹೈರಾಣಾಗಿತ್ತು. ಇಂತಹ ನೂರಾರು ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ನೂರಾರು ಅಮಾಯಕ ಕೈದಿಗಳು ಜೈಲು ಸೇರಿದ್ದಾರೆ, ಇನ್ನೂ ಸೇರಲಿದ್ದಾರೆ.

ಪ್ರಶ್ನೆಯಿರುವುದು ಮಂಗಳೂರು ಪೊಲೀಸರು ಯಾಕೆ ಮುಸ್ಲೀಮರ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದರ ಬಗ್ಗೆ. ಯಾವ ಪ್ರಕರಣಗಳೂ ದಾಖಲಾಗದ ವೃದ್ದ ಮುಸ್ಲೀಮರನ್ನೋ, ಮುಸ್ಲೀಮ್ ಬಾಲಕರನ್ನೋ ಯಾಕೆ ಎತ್ತಾಕಿಕೊಂಡು ಬರುತ್ತಾರೆ ? ಮುಸ್ಲೀಮರನ್ನು ಕಂಡಾಗ ಪೊಲೀಸರಿಗೆ ಯಾಕೆ ಅನುಮಾನಗಳು ಬರುತ್ತದೆ ಎಂಬ ಹಿನ್ನಲೆಯನ್ನು ಇಟ್ಟುಕೊಂಡು, ಅಧ್ಯಯನ ನಡೆಸಿ, ಕೆಪಿ ಆ್ಯಕ್ಟ್ 96 ಬಳಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರವನ್ನು ಆಗ್ರಹಿಸಬೇಕಾಗಿದೆ. ದೇಶ ಕಟ್ಟಿದ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣಗಳೇನು ಎಂಬುದರ ಬಗ್ಗೆ ಅನುಮಾನಿತ ಮತ್ತು ಅವಮಾನಿತ ಸಮುದಾಯಗಳ ವಿದ್ಯಾವಂತ, ಪ್ರಜ್ಞಾವಂತ ಪ್ರತಿನಿಧಿಗಳು ಮುಸ್ಲಿಂ ಯುವ ಸಮಾವೇಶದಲ್ಲಿ ಭಾಗಿಯಾಗಿ ಚರ್ಚಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರದ್ದೂ.

ಮುಸ್ಲೀಮ್ ಯುವ ಸಮಾವೇಶ ಇಂದಿನ ತುರ್ತು ಅಗತ್ಯ

Naveen Soorinje


ನವೀನ್ ಸೂರಿಂಜೆ


 

ಕೋಮುವಾದದಿಂದ ಜರ್ಜರಿತವಾಗಿರುವ ಮಂಗಳೂರಿನಲ್ಲಿ ಡಿವೈಎಫ್ ಐ ಎಡ ಯುವ ಸಂಘಟನೆ ಮುಸ್ಲಿಂ ಯುವ ಸಮಾವೇಶdyfi-1 ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಹಿರಿಯ ಚಿಂತಕರು ಪತ್ರಕರ್ತರು ಸೇರಿದಂತೆ ಹಲವರು ಪ್ರತಿಯಿಸಿದ್ದಾರೆ. ”ಕಮ್ಯೂನಿಷ್ಟರು ಮುಸ್ಲಿಂ ಸಮಾವೇಶ ಮಾಡುವುದು ಕುತೂಹಲಕರ. ಆದರೆ ಮುಂದೆ ಹಿಂದೂ ಸಮಾವೇಶ, ಕ್ರಿಶ್ಚಿಯನ್ ಸಮಾವೇಶಗಳನ್ನೂ ಮಾಡುವರೇ ಎನ್ನುವುದು ಪ್ರಶ್ನೆ. ಹಾಗೆ ಮಾಡುವುದಿದ್ದರೆ, ಅದರ ಬದಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ವಿರಾಟ್ ಸಮಾವೇಶ ಮಾಡುವುದು ಒಳ್ಳೆಯದಲ್ಲವೇ ?” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಗಳು ಮತ್ತು ಗುಂಪುಗಳು ತಳ, ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಸಂಘಟಿಸುವುದು ಆಯಾ ಸಮುದಾಯಗಳ ಸಬಲೀಕರಣ ಮತ್ತು ಅವರನ್ನು ಶೋಷಕ ಶಕ್ತಿಗಳ ಪಿತೂರಿಯಿಂದ ರಕ್ಷಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಸಂಘಟನೆಗೆ ಎರಡು ಬಗೆಯ ಆಯಾಮಗಳಿವೆ. ಮೊದಲನೆಯದ್ದು ಅಂತಹ ವರ್ಗಗಳನ್ನು ಅವರು ಜೀವಿಸುತ್ತಿರುವ ಪ್ರತಿಕೂಲ ವಾತವರಣದಲ್ಲಿ ಯಜಮಾನ್ಯ ಮತ್ತು ಶೋಷಕ ಶಕ್ತಿಗಳ ದಾಳಿಯಿಂದ ರಕ್ಷಿಸುವುದು. ಎರಡನೆಯದ್ದು ಆಯಾ ಸಮುದಾಯದೊಳಗೇ ಇರತಕ್ಕಂತಹ ಅನಾಚಾರಗಳನ್ನು, ಅಸಮತೆಗಳನ್ನು ತೊಡೆದು ಹಾಕುವಂತಹ ಸುಧಾರಣಾವಾದಿ ಚಳುವಳಿಯನ್ನು ಮುನ್ನಡೆಸುವುದು.

ನಮ್ಮ ದೇಶ ಬಹುಸಂಖ್ಯಾತ ಪ್ರಭಾವಿ ಸಮಾಜೋ ರಾಜಕೀಯ ಚೌಕಟ್ಟನ್ನು ಹೊಂದಿದೆ. ಇಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕೂಡಾ ಬಹುಸಂಖ್ಯಾಕ ಹಿಂದೂ ಕಟ್ಟಳೆಗಳು,RSS ಪರಂಪರೆಗಳು ಸಹಜವೆಂಬತೆ ಆಚರಿಸಲ್ಪಡುತ್ತವೆ. ರಾಜ್ಯದ ಪ್ರಾಯೋಜಕತ್ವದಲ್ಲೇ ಹಿಂದೂ ಹಬ್ಬ-ಮೇಳಗಳು ಇಲ್ಲಿಯ ನೆಲದ ಪರಂಪರೆ ಎಂಬ ನೆಪದಲ್ಲಿ ನಡೆಯುತ್ತವೆ. ಇವೆಲ್ಲದರ ಜೊತೆಗೆ ದೇಶದಲ್ಲಿ ಪ್ರತಿಗಾಮಿ ಹಿಂದೂ ಸಾಂಸ್ಕೃತಿಕ ಯಾಜಮಾನ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ; ಜೀವನದ ಪ್ರತೀ ಕ್ಷೇತ್ರವನ್ನೂ ವ್ಯಾಪಿಸುತ್ತಿದೆ. ಸಾರ್ವಜನಿಕ ಬದುಕನ್ನು ಪೂರ್ತಿಯಾಗಿ ಹಿಂದೂವನ್ನಾಗಿಸುವ ಪ್ರಯತ್ನದಲ್ಲಿ ಅದು ನಿರತವಾಗಿದೆ. ಆಹಾರದಂತಹ ತೀರಾ ಖಾಸಾಗಿ ವಿಷಯದಲ್ಲೂ ತನ್ನ ನಿಯಂತ್ರಣವನ್ನು ಸಾಧಿಸಲು ಹೊರಟಿದೆ.

ಇಂತಹ ಬಹುಸಂಖ್ಯಾತ ನಿಷ್ಠ ವಾತಾವರಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಹಲವು ಆತಂಕಗಳು ಎದುರಾಗುತ್ತವೆ. ಭಾರತದ ಪ್ರಧಾನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅಂತಹ ಹತ್ತು ಹಲವು ಆತಂಕಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿದ್ದಾರೆ. ಸದ್ಯದ ಹಿಂದುತ್ವವಾದಿ ಶಕ್ತಿಗಳ ಆಡಳಿತದಲ್ಲಿ ಅವರ ಅಸ್ತಿತ್ವವೇ ಪ್ರಶ್ನೆಯಲ್ಲಿದೆ. ಮುಸ್ಲೀಮ್ ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ, ಮೊಟುಕುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ವಿಷಮ ಸನ್ನಿವೇಶದಲ್ಲಿ ಮುಸ್ಲೀಮ್ ಸಮುದಾಯವನ್ನು ಸಂಘಟಿಸುವುದು ಅವರನ್ನು ಹಿಂದುತ್ವವಾದಿ ಶಕ್ತಿಗಳ ದಾಳಿಯಿಂದ ಕಾಪಾಡುವ ಹಾಗೂ ಅವರ ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ ಅತ್ಯಗತ್ಯ. ಸಂಘಟನೆಯು ಶೋಷಿತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಂತಹ ಸಂಘಟನಾತ್ಮಕ ಹೋರಾಟಗಳು ಪ್ರತಿಕೂಲ ಪರಿಸರದಲ್ಲೂ ಘನತೆಯಿಂದ ಬದುಕುವ ಹಕ್ಕನ್ನು ಅವರಿಗೆ ದಕ್ಕಿಸಿಕೊಡುತ್ತವೆ.

ಇಲ್ಲಿ ಇನ್ನೊಂದು ವಿಚಾರ ಬಹಳ ಮುಖ್ಯ. ಮುಸ್ಲೀಮರ ಪರವಾದ ಹೋರಾಟ ಮತ್ತು ಮುಸ್ಲೀಮರನ್ನು ಒಳಗೊಳ್ಳುವುದು ಎಂದರೆ ಮುಸ್ಲಿಂ ಮೂಲಭೂತವಾದಿmuslims460 ಮತ್ತು ಕೋಮುವಾದಿ ಸಂಘಟನೆಗಳನ್ನು ತಮ್ಮ ಹೋರಾಟದ ಸಹಭಾಗಿಯನ್ನಾಗಿಸುವುದಲ್ಲ. ಅಂತಹ ತಪ್ಪನ್ನು ನಮ್ಮ ಹಲವು ಪ್ರಗತಿಪರ ಸಂಘಟನೆಗಳು ಮಾಡುತ್ತಿವೆ. ಮೂಲಭೂತವಾದೀ ಸಂಘಟನೆಗಳ ಸಾಹಚರ್ಯ ಆಯಾ ಸಮುದಾಯದೊಳಗೇ ಸುಧಾರಣೆಗಳನ್ನು ತರುವ ಪ್ರಯತ್ನಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಿಂದೂಗಳೆಂದರೆ ಭಜರಂಗದಳ, ವಿ.ಎಚ್.ಪಿ, ಆರ್.ಎಸ್.ಎಸ್ ಹೇಗೆ ಅಲ್ಲವೋ, ಮುಸ್ಲೀಮರೆಂದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳಲ್ಲ ಎಂಬುದು ಇನ್ನೂ ಕೂಡಾ ಕೆಲ ಎಡ ಚಿಂತಕರಿಗೆ ಮನದಟ್ಟಾಗಿಲ್ಲ. ಒಂದೆಡೆ ಹಿಂದೂ ಕೋಮುವಾದದ ಭೀಕರತೆ, ಮತ್ತೊಂದೆಡೆ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಂ ಕೋಮುವಾದ ತಂದೊಡ್ಡಿರುವ ಆತಂಕಗಳು; ಇವೆರಡರ ಮಧ್ಯೆ ಹಿಂದೂ ಕೋಮುವಾದದ ಅತಿರೇಕವನ್ನು ಮುಸ್ಲಿಂ ಮೂಲಭೂತವಾದಿ-ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಖಂಡಿಸಿ ಮಾತನಾಡುವ ಎಡಚಿಂತಕರು. ಇಂತಹ ವಿಪರ್ಯಾಸಗಳ ಮಧ್ಯೆ ಮಂಗಳೂರಿನಲ್ಲಿ ಡಿವೈಎಫ್ಐ ”ಮುಸ್ಲಿಂ ಯುವ ಸಮಾವೇಶ” ಹಮ್ಮಿಕೊಂಡಿರುವಂತದ್ದು ಸರಿಯಾದ ನಡೆಯೇ ಆಗಿದೆ.

ಹಿಂದೂ ಸಂಘಟನೆಗಳ ಕೋಮುವಾದದ ಅತಿರೇಕಗಳನ್ನು ಮುಸ್ಲಿಂ ಯುವ ಜನರ ಮುಂದಿಟ್ಟು ಮುಸ್ಲಿಂ ಮತಾಂಧ ಸಂಘಟನೆಗಳನ್ನು ಬೆಳೆಸಲಾಗುತ್ತಿದೆ. ಈ ಮತಾಂಧ ಸಂಘಟನೆಗಳಲ್ಲಿ ಇರುವ ಕೆಲ ಯುವಕರ ಕುಕೃತ್ಯದಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಈ ಅನುಮಾನದ ಭಾಗವಾಗಿಯೇ ಪೊಲೀಸ್ ದೌರ್ಜನ್ಯಗಳು, ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದೆ. ಈ ರೀತಿ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಮುಸ್ಲಿಂ ಯುವ ಸಮುದಾಯದ ಹೋರಾಟದ ದಾರಿ ಯಾವುದಿರಬೇಕು ಎಂದು ಚಿಂತಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶಗಳ ಅಗತ್ಯ ಇದೆ.

ಮುಸ್ಲಿಂ ಸಮಾವೇಶ ಮಾತ್ರವಲ್ಲದೆ ಹಿಂದೂ ಸಮಾವೇಶವನ್ನು ಎಡಪಂಥೀಯರು ಆಯೋಜಿಸುತ್ತಾರೆಯೇ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಪ್ರಶ್ನಿಸುತ್ತಾರೆ. narayana-guruಹಿಂದೂ ಎಂಬುದು ಶೋಷಿತರನ್ನು, ದಲಿತರನ್ನು ಪ್ರತಿನಿಧಿಸುವುದಿಲ್ಲ. ಹಿಂದೂ ಸಾಮಾಜಿಕ ಸಂರಚನೆಯಲ್ಲಿ, ಚಲನೆಯಲ್ಲಿ ಹಿಂದುಳಿದ ವರ್ಗಗಳು ಬಳಕೆಯಾಗುತ್ತಿರುವುದು ಕೇವಲ ಮೇಲ್ವರ್ಗದ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಪಿತೂರಿಯಲ್ಲಿ ಕಾಲಾಳುಗಳಾಗಿಯಷ್ಟೇ. ಕರಾವಳಿಯ ಸಂದರ್ಭದಲ್ಲಿ ಹೇಳುವುದಾದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ತಳವರ್ಗಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜೀವಪರ ಪ್ರಗತಿಪರ ಸಮುದಾಯಗಳು ದಲಿತರು, ಬಿಲ್ಲವರು, ಮೊಗವೀರರು, ಕುಲಾಲರು, ಕೊರಗರು, ಆದಿವಾಸಿಗಳ ಪ್ರತ್ಯೇಕ ಪ್ರತ್ಯೇಕ ಸಮಾವೇಶಗಳನ್ನು ಮಾಡಬೇಕಿದೆ. ನಾರಾಯಣ ಗುರು, ಕೋಡ್ದಬ್ಬು, ತನ್ನಿಮಾನಿಗ, ಸಿರಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಸ್ಥಾನಮಾನ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಹಿಂದುಳಿದ ಸಮುದಾಯಗಳ ಯುವಕರು ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರಿಗೆ ತಿಳಿ ಹೇಳಬೇಕಾಗಿದೆ. ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಸಂಘಟಿಸಲು ಹೊರಟ ಎಡಪಂಥೀಯರು, ಅವಿಭಜಿತ ಜಿಲ್ಲೆಯಲ್ಲಿ ಅದರಷ್ಟೇ ಅನಿವಾರ್ಯತೆ ಇರುವ, ಹಿಂದುಳಿದ ಜಾತಿಗಳನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದುತ್ವಕ್ಕೆ ನಾರಾಯಣ ಗುರುಗಳ ಸುಧಾರಣಾವಾದಿ ಚಳುವಳಿಗಿಂತ ಬೇರೆ ಉತ್ತರವೇ ಬೇಕಿಲ್ಲ. ನಾರಾಯಣ ಗುರುಗಳ ಐಡಿಯಾಲಜಿಯ ಆಧಾರದಲ್ಲಿ ಬಿಲ್ಲವರು ಮತ್ತು ಇತರೆ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿದಲ್ಲಿ ಕರಾವಳಿಯ ಕೋಮುವಾದಿ ವಾತಾವರಣದಲ್ಲೂ ಹಲವು ಪೂರಕ ಬೆಳವಣಿಗೆಗಳು ಕಂಡುಬರುತ್ತವೆ. ಯಾಕೆಂದರೆ ಆರ್.ಎಸ್.ಎಸ್.ನ ಹಿಂದುತ್ವವಾದಿ ವ್ಯವಸ್ಥೆಯ ಅನುಷ್ಠಾನಕ್ಕೆ ಕಾಲಾಳುಗಳಾಗಿ ಬಳಕೆಯಾಗುತ್ತಿರುವುದು ಇದೇ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಬಡ ಯುವಕರು. ಅವರನ್ನು ಸಂಘಟಿಸುವ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವನ್ನು ಎಡಪಕ್ಷಗಳು ಮಾಡಬೇಕಾಗಿದೆ. ಮತ್ತೊಂದೆಡೆ ಆರ್.ಎಸ್.ಎಸ್ ಗೆ ಆರ್.ಎಸ್.ಎಸ್ ಮಾದರಿಯಲ್ಲೇ ಪ್ರತಿಕ್ರೀಯೆ ನೀಡುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಅನಕ್ಷರಸ್ಥ ಬಡ ಮುಸ್ಲೀಮರು ಕಾಲಾಳುಗಳಾಗುವುದನ್ನು ತಪ್ಪಿಸಿದಲ್ಲಿ ಮುಸ್ಲಿಂ ಯುವಕರು ಜೈಲು ಸೇರುವುದನ್ನೂ, ಸಾಯುವುದನ್ನೂ ತಪ್ಪಿಸಬಹುದಾಗಿದೆ. ಆರ್.ಎಸ್.ಎಸ್ ಕೋಮುವಾದಕ್ಕೆ ಇಸ್ಲಾಂ ಕೋಮುವಾದದ ಮೂಲಕ ಉತ್ತರ ಕೊಡದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರೀಯೆ ನೀಡುವ ನಿಟ್ಟಿನಲ್ಲಿ ಮುಸ್ಲಿಂ ಯುವ ಸಮಾವೇಶಗಳನ್ನು ಆಯೋಜಿಸಲು ಎಡ ಯುವ ಸಂಘಟನೆಗಳು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

 

 

ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?


-ಶ್ರೀಧರ ಪ್ರಭು


 

ಮೊದಲೇ ವಿಚಾರವೆಂದರೆ, ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ. ಇವರೆಲ್ಲರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ೫೫% ರಷ್ಟಿದೆ.

ಇಂದು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಬಹುಸಂಖ್ಯಾತ ಒಬಿಸಿಗಳಿಗಾದ ಅನ್ಯಾಯವೆಂಬಂತೆ ಬಿಂಬಿಸಲಾಗುತ್ತಿದೆ. ೧೮% ಬಡ್ತಿ ಮೀಸಲಾತಿ ಪಡೆದ ಪರಿಶಿಷ್ಟರು ೮೨ ಜನ ಅಲ್ಪಸಂಖ್ಯಾತ ಮತ್ತು ಒಬಿಸಿಗಳ ವಿರುದ್ಧವಾಗಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಬಂದಿರುವ ತೀರ್ಪಿನಿಂದಾಗಿ ಈ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಅನೇಕರು ಪ್ರಚಾರಮಾಡುತ್ತಿದ್ದಾರೆ.

ನಿಜವಾಗಿ ನೋಡಿದರೆ, ಒಬಿಸಿಗಳಿಗೆ ಅನ್ಯಾಯವಾಗಿದ್ದು ನಿಜ. ಆದರೆ, ಈ ಅನ್ಯಾಯಕ್ಕೆ ಪರಿಶಿಷ್ಟರು ಕಾರಣವಲ್ಲ. ನ್ಯಾಯಾಲಯದ ತೀರ್ಪಿನ ಅಂಶಗಳನ್ನು, ಅದರಲ್ಲೂ ಇಂದ್ರ ಸಹನಿ ತೀರ್ಪಿನ ಅಂಶಗಳನ್ನು ಸರಿಪಡಿಸದೇ ೧೯೯೨ ರಿಂದಲೂ ಈ ದೇಶವನ್ನಾಳಿದ ಸರ್ಕಾರಗಳು ಒಬಿಸಿಗಳಿಗೆ ಮೋಸ ಮಾಡಿವೆ.

೧೬ ನವೆಂಬರ್ ೧೯೯೨ ರಲ್ಲಿ ಬಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇಂದ್ರಾ ಸಹನಿ ತೀರ್ಪಿನಲ್ಲಿ ಮಂಡಲ್ ವರದಿ ಜಾರಿಗೊಳಿಸಿದ್ದನ್ನು ಎತ್ತಿಹಿಡಿಯಲಾಯಿತಾದರೂ, ಪರಿಶಿಷ್ಟರಿಗೆ ಯಾವುದೇ ಕಾರಣಕ್ಕೂ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ತೀರ್ಮಾನಿಸಲಾಯಿತು. ಹಾಗೆಯೇ, ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಕೆನೆಪದರನ್ನು ಅನ್ವಯಿಸಬೇಕು ಮತ್ತು ಬಡ್ತಿಯಲ್ಲಿ ಮೀಸಲಾತಿ ಕೊಡಲೇಬಾರದು ಎಂದೂ ತೀರ್ಮಾನಿಸಲಾಯಿತು. ದುರದೃಷ್ಟವಶಾತ್ ಇಂದ್ರಾ ಸಾಹ್ನಿ ತೀರ್ಪನ್ನು ಒಬಿಸಿಗಳು ಸರಿಯಾಗ ಅರ್ಥೈಸಲೇಯಿಲ್ಲ. ಈ ಜಾಗೃತಿ ಮೂಡದಿರುವ ಕಾರಣದಿಂದ ಅಳುವ ಮನುವಾದಿ ಸರ್ಕಾರಗಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.

ಈ ತೀರ್ಪಿನಲ್ಲಾದ ಅನ್ಯಾಯವನ್ನು ಪರಿಶಿಷ್ಟರ ಮಟ್ಟಿಗೆ ಸರಿಪಡಿಸಲು ೨೦೧೧ ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೬ (೪) (ಎ) ಪರಿಚ್ಛೇದವನ್ನು ಸೇರಿಸಲಾಯಿತು. ಈ ಪರಿಚ್ಛೇದದ ಪ್ರಕಾರ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅನುವುಮಾಡಿಕೊಡಲಾಯಿತು. ಆದರೆ, ಹಿಂದುಳಿದ ವರ್ಗಗಳಿಗಾದ ಅನ್ಯಾಯವನ್ನು ಸರಿಪಡಿಸಲಲಿಲ್ಲ. ಕೆನೆಪದರು ನಿಯಮ ಹಾಗೆಯೇ ಉಳಿಯಿತು. ಬಡ್ತಿಯಲ್ಲಿ ಮೀಸಲಾತಿ ಸಹ ಸಿಗಲಿಲ್ಲ. ಈ ಹಂತದಲ್ಲಿ ಎಲ್ಲಾ ಪಕ್ಷಗಳು ಒಬಿಸಿಗಳಿಗೆ ನ್ಯಾಯ ಒದಗಿಸಬೇಕಿತ್ತು. ದುರದೃಷ್ಟವಶಾತ್ ಹೀಗಾಗಲಿಲ್ಲ. ಇನ್ನು ಒಬಿಸಿಗಳಂತೂ ತಮ್ಮದೇ ಪರವಾಗಿದ್ದ ಮಂಡಲ್ ವರದಿಯ ವಿರುದ್ಧ ಬಸ್ಸುಗಳಿಗೆ ಕಲ್ಲು ತೂರುವುದರಲ್ಲಿ, ಮಸೀದಿ ಬೀಳಿಸುವುದರಲ್ಲಿ ಖುಷಿ ಕಂಡುಕೊಂಡಿದ್ದರು. ಈ ಕಲ್ಲುಗಳು ತಮ್ಮ ಭವಿಷ್ಯದ ಸೌಧಕ್ಕೆ ಬೀಳುತ್ತಿವೆ ಎಂದು ಒಬಿಸಿಗಳು ಅಂದಿಗೂ, ಬಹಳಷ್ಟು ಮಟ್ಟಿಗೆ ಇಂದಿಗೂ ಗ್ರಹಿಸಲಾಗಿಲ್ಲ.

ಪರಿಶಿಷ್ಟರು ಎಚ್ಚೆತ್ತುಕೊಂಡ ಕಾರಣದಿಂದ, ಸಂವಿಧಾನಕ್ಕೆ ಮೇಲ್ಕಂಡ ತಿದ್ದುಪಡಿ ತಂದಿದ್ದು ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ, ೨೦೦೨ ರಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಕಾಯಿದೆಗಳನ್ನೂ ಆಯಾ ರಾಜ್ಯಗಳಲ್ಲಿ ಜಾರಿಮಾಡಲಾಯಿತು. ಈಗ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳ ಕಾಯಿದೆಗಳನ್ನು ಅಸಿಂಧುವೆಂದು ಘೋಷಿಸಿದೆ. ಆದರೆ, ಕಾಯಿದೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿದರೆ, ಹಾಗೆಯೇ. ಪ್ರಮುಖವಾಗಿ ಹಿಂದೆ ರಾಜ್ಯಸಭೆಯಲ್ಲಿ ಪಾಸಾಗಿ ಈಗ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ೧೧೭ ನೇ ತಿದ್ದುಪಡಿ ವಿಧೇಯಕವನ್ನು ಪಾಸುಮಾಡಿಸಿದರೆ ಪರಿಶಿಷ್ಟರ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಒಬಿಸಿಗಳ ಸಮಸ್ಯೆ ಹಾಗೆಯೇ ಉಳಿಯುತ್ತದೆ.

ಒಬಿಸಿಗಳಿಗೆ ಎರಡು ರೀತಿಗಳಲ್ಲಿ ಅನ್ಯಾಯವಾಗಿದೆ. ಮೊದಲೇ ಅನ್ಯಾಯವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸದೇ ಆರ್ಥಿಕ ಮಾನದಂಡಗಳನ್ನು ಮುಂದೆ ಮಾಡಿ ಕೆನೆಪದರನ್ನು ತಂದದ್ದು. ಎರಡನೇ ಅನ್ಯಾಯ, ಪ್ರಾತಿನಿಧ್ಯವನ್ನು ಬಡ್ತಿಗೆ ವಿಸ್ತರಿಸದೇ ಮೊಟಕುಗೊಳಿಸಿದ್ದು. ಇವೆರಡೂ ಅಂಶಗಳು ಈಗಲೂ ಜಾರಿಯಲ್ಲಿರುವುದಕ್ಕೆ ಕಾರಣವೆಂದರೆ ಮನುವಾದಿ ಸರ್ಕಾರಗಳು ಇಂದ್ರ ಸಹನಿ ತೀರ್ಪನ್ನು ಸರಿಪಡಿಸದೇ ಹೋಗಿದ್ದು. ಒಬಿಸಿಗಳನ್ನು ಸೇರಿಸಿ ಪಡೆಕಟ್ಟಿ ರಾಜಕೀಯಕ್ಕೆ ಬಳಸಿಕೊಂಡ ಸಂಘ ಪರಿವಾರ ಇಂದು ಒಬಿಸಿ ಗಳಿಗಾದ ಈ ಅನ್ಯಾಯವನ್ನು ಏಕೆ ಸರಿಪಡಿಸಬಾರದು? ಕಾಂಗ್ರೆಸ್ ಸರ್ಕಾರ ಒಬಿಸಿಗಳಿಗೆ ಮೋಸ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಒಬಿಸಿಗಳಿಗೆ ಏನು ಮಾಡಿದೆ? ಮಂಡಲ್ ವರದಿಯನ್ನು ವಿರೋಧಿಸಿದ ಬಿಜೆಪಿ ಒಬಿಸಿಗಳ ಮೊದಲ ಶತ್ರು. ಮಂಡಲ್ ವರದಿ ಜಾರಿ ಮಾಡಿದ ನರಸಿಂಹ ರಾವ್ ಸರ್ಕಾರ ಸಹ ಇಂದ್ರಾ ಸಹನಿ ತೀರ್ಪಿನ ಲೋಪದೋಷಗಳನ್ನು ಸರಿಪಡಿಸಲಿಲ್ಲ. ಹೋಗಲಿ, ವಾಜಪೇಯಿ ಸರ್ಕಾರ ಏನು ಮಾಡಿದೆ? ಇಂದಿನ ಮೋದಿ ಸರ್ಕಾರ ಏಕೆ ಸುಮ್ಮನಿದೆ?

ಈಗ ಒಬಿಸಿಗಳು ಏನು ಮಾಡಬೇಕು?

ಮೊದಲನೇದ್ದಾಗಿ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗುತ್ತಿರುವ ಮೀಸಲಾತಿಯ ಪ್ರಮಾಣ ೧೮% ಮಾತ್ರ. ಒಬಿಸಿಗಳ ಜನಸಂಖ್ಯಾ ಅನುಪಾತದಲ್ಲಿ ಉಳಿದ ಹುದ್ದೆಗಳಿಗೆ ತಮಗೂ ಪ್ರಾತಿನಿಧ್ಯ ಸಿಗಬೇಕೆಂದು ಒಬಿಸಿಗಳು ಆಗ್ರಹಿಸಬೇಕಿದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ೧೧೭ ನೇ ವಿಧೇಯಕದ ಮಾದರಿಯಲ್ಲೇ ಒಬಿಸಿಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ವಿಧೇಯಕವನ್ನು ಜಾರಿ ಮಾಡಲು ಒಬಿಸಿಗಳು ಒತ್ತಾಯಿಸಬೇಕಿದೆ. ಇದರಲ್ಲಿ ರಾಜ್ಯಸರ್ಕಾರದ್ದೇನೂ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಇಂದ್ರಾ ಸಹನಿ ತೀರ್ಪಿನಲ್ಲಾದ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾದರೆ, ಒಬಿಸಿಗಳು ಸಂವಿಧಾನ ತಿದ್ದುಪಡಿ ಮಾಡಿ ತಮಗೂ ಬಡ್ತಿ ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಬೇಕಿದೆ. ಹೀಗೆ ಮಾಡಿದರೆ, ಸಹಜವಾಗಿ ಪರಿಶಿಷ್ಟರ ಬೆಂಬಲವೂ ಒಬಿಸಿಗಳಿಗೆ ದೊರೆಯುತ್ತದೆ. ನಿಜವಾಗಿ ನೋಡಿದರೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಅವರ ಜನಸಂಖ್ಯಾ ಪ್ರಮಾಣದಷ್ಟಿಲ್ಲ. ಅದನ್ನು ಆಗ್ರಹಿಸುವುದು ಬಿಟ್ಟು ಸಾಮಾನ್ಯ ವರ್ಗದವರೊಂದಿಗೆ ಸೇರಿಕೊಂಡರೆ, ಒಬಿಸಿಗಳಿಗೆ ಏನೂ ಪ್ರಯೋಜನವಿಲ್ಲ. ಬಹುಜನರ ಒಗ್ಗಟ್ಟು ಮುರಿದುಹೋದರೆ ಎಲ್ಲರ ಪ್ರತಿನಿಧ್ಯವೂ ಒಟ್ಟಿಗೇ ಕೊನೆಗೊಳ್ಳುತ್ತದೆ.

ಈಗ ಬಂದಿರುವ ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮಾಣವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ, ಪ್ರಾತಿನಿಧ್ಯ ಕಲ್ಪಿಸುವುದರಿಂದ ಕಾರ್ಯದಕ್ಷತೆಗೆ ಹಾನಿ ಎನ್ನಲಾಗಿದೆ. ಪ್ರಾತಿನಿಧ್ಯ ಕಲ್ಪಿಸಿದರೆ ಕಾರ್ಯದಕ್ಷತೆಯೇ ಪ್ರಧಾನ ಎಂಬ ಸಂವಿಧಾನದ ೩೩೫ ನೇ ಪರಿಚ್ಛೇದಕ್ಕೆ ಅಪಚಾರವಾಗುತ್ತದೆ ಎನ್ನಲಾಗಿದೆ.

ಈ ಅಂಶವನ್ನು ಸರಿಪಡಿಸಲೆಂದೇ, ೧೧೭ ನೇ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಈ ವಿಧೇಯಕದಲ್ಲಿ, ಸಂವಿಧಾನದ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಲೇಬೇಕು ಮತ್ತು ಇದರಿಂದ ೩೩೫ ನೇ ಪರಿಚ್ಛೇದಕ್ಕೆ ಏನೂ ಹಾನಿಯಿಲ್ಲ ಎಂದು ಹೇಳಲಾಗಿದೆ. ಇದೇ ರೀತಿಯ ಕಾನೂನನ್ನು ಒಬಿಸಿಗಳಿಗೂ ಜಾರಿಮಾಡದಿದ್ದರೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೆ ಯಾವುದೇ ಮೀಸಲಾತಿ ಸಿಗದೇ ಹೋಗಬಹುದು.

ಆದ ಕಾರಣ, ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ಬೆಂಬಲಿಸಬೇಕು; ಹಾಗೆಯೇ, ತಮಗೂ ತಮ್ಮ ಜನಸಂಖ್ಯೆಯಷ್ಟು ಪ್ರಾತಿನಿಧ್ಯ ಸಿಗಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪರಿಶಿಷ್ಟರ ಜನಸಂಖ್ಯೆ ಖಂಡಿತವಾಗಲೂ ೧೮% ಗಿಂತ ಜಾಸ್ತಿಯಿದೆ. ಹಾಗಿದ್ದರೂ, ಪರಿಶಿಷ್ಟರು ೧೮% ಪ್ರಾತಿನಿಧ್ಯಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ. ಇಷ್ಟು ಹಕ್ಕು ಅವರಿಗೆ ಸಂವಿಧಾನಬದ್ಧವಾಗಿಯೇ ಸಿಕ್ಕಿದೆ. ಆದರೆ. ಒಬಿಸಿಗಳಿಗೆ ತಮ್ಮ ಜನಸಂಖ್ಯೆಯಷ್ಟು ಹೋಗಲಿ.. ಏನೊಂದು ಪ್ರತಿನಿಧ್ಯವೂ ಸಿಕ್ಕಿಲ್ಲ. ಇದನ್ನು ಒಬಿಸಿಗಳು ಮನಗಂಡೇಯಿಲ್ಲ.

ಒಬಿಸಿಗಳ ಈ ಹೋರಾಟಕ್ಕೆ ಖಂಡಿತವಾಗಲೂ ಪರಿಶಿಷ್ಠರ ಬೆಂಬಲ ದೊರಕುತ್ತದೆ. ಒಂದು ವೇಳೆ ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ವಿರೋಧಿಸಿದರೆ, ಏನೂ ಸಾಧಿಸಿದಂತಾಗುವುದಿಲ್ಲ. ಕೊನೆಗೆ ಒಬಿಸಿ ಗಳಿಗೂ ಸೇರಿದಂತೆ ಯಾರಿಗೂ ಪ್ರಾತಿನಿಧ್ಯ ಸಿಗುವುದಿಲ್ಲ. ಆದ್ದರಿಂದ ಒಬಿಸಿ ಗಳು ೧೮% ಪ್ರಾತಿನಿಧ್ಯ ವಿರೋಧಿ ಹೋರಾಟವನ್ನು ಕೈಬಿಟ್ಟು, ತಮ್ಮ ಜನಸಂಖ್ಯಾ ಪ್ರಮಾಣದಷ್ಟು ಪ್ರಾತಿನಿಧ್ಯಕ್ಕಾಗಿ, ಪರಿಶಿಷ್ಟರೊಡನೆ ಕೈಜೋಡಿಸಿ ಐಕ್ಯ ಹೋರಾಟ ಕಟ್ಟಬೇಕಿದೆ.

ದೇಶದ ೮೫% ರಷ್ಟು ಬಹುಜನರ ಭವಿಷ್ಯ ೮೫% ರಷ್ಟು ಬಹುಜನರ ಒಗ್ಗಟ್ಟಿನಲ್ಲಿದೆ. ಈ ಒಗ್ಗಟ್ಟನ್ನು ಮುರಿದರೆ, ೮೫% ಜನರು ಒಟ್ಟಿಗೇ ಮುಳುಗುತ್ತಾರೆ. ಒಗ್ಗಟ್ಟಿದ್ದರೆ ಎಲ್ಲರೂ ಒಟ್ಟಿಗೇ ದಡಸೇರುತ್ತಾರೆ.

ಬಹುಜನರ ಐಕ್ಯತೆ ಚಿರಾಯುವಾಗಲಿ!

ಹೌದು, ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ


-ಇರ್ಷಾದ್ ಉಪ್ಪಿನಂಗಡಿ


 

ಜನನುಡಿ ಸಾಹಿತ್ಯ ಸಮಾವೇಶದಲ್ಲಿ ಮುಸ್ಲಿಮ್-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ: ಸವಾಲುಗಳ ಸಾಧ್ಯತೆ ವಿಚಾರಗೋಷ್ಠಿಯಲ್ಲಿrahamath-tarikere ಹಿರಿಯ ಚಿಂತಕ ಪ್ರೊ.ರೆಹಮತ್ ತರೀಕೆರೆ ಮಾತನಾಡುತ್ತಾ ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಅಗತ್ಯವಿದೆ ಎಂದಿದ್ದಾರೆ. ಖಂಡಿತವಾಗಿಯೂ ದಾರಿತಪ್ಪುತ್ತಿರುವ ಮುಸ್ಲಿಮ್ ಸಮುದಾಯಕ್ಕೆ ಸರಿದಾರಿತೋರಿಸಲು ಒಬ್ಬ ಅಂಬೇಡ್ಕರ್ ಮುಸ್ಲಿಮ್ ಸಮುದಾಯದಿಂದಲೇ ಹುಟ್ಟಿಬರಬೇಕಿದೆ. ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರ ಚರ್ಚೆಗೊಳಪಡಿಸುವುದರ ಮೊದಲು ಮುಸ್ಲಿಮ್ ಸಮುದಾಯದ ಕುರಿತಾಗಿ ಡಾ. ಅಂಬೇಡ್ಕರ್ ಅವರಿದ್ದ ದೃಷ್ಟಿಕೋನ ಏನಾಗಿತ್ತು ಎಂಬುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು. ಅದನ್ನು ತಣಿಸಿದ್ದು ಆನಂದ್ ತೇಲ್ತುಂಬ್ಡೆ ಅವರ ಅಂಬೇಡ್ಕರ್ ಮತ್ತು ಮುಸ್ಲಿಮರು ಪುಸ್ತಕ. (ಕನ್ನಡಕ್ಕೆ: ಬಿ ಗಂಗಾಧರ್ ಮೂರ್ತಿ) ಮುಸ್ಲಿಮರ ವಿರುದ್ಧ ಭಾರತೀಯ ಸಮಾಜವನ್ನು ಎತ್ತಿಕಟ್ಟುವ ಸಂಘಪರಿವಾರದ ಹುನ್ನಾರವನ್ನು ಡಾ.ಬಿ ಆರ್ ಅಂಬೇಡ್ಕರ್ ವಿರೋಧಿಸುವುದರ ಜೊತೆಗೆ ಮುಸ್ಲಿಮ್ ಸಮುದಾಯದಲ್ಲಿರುವ ಅತಿಧಾರ್ಮಿಕತೆ ಹಾಗೂ ಮಹಿಳಾ ಶೋಷಣೆಯನ್ನು ಖಂಡಿಸಿದ್ದರು. ಭಾರತೀಯ ಮುಸ್ಲಿಮ್ ಸಮುದಾಯದ ಸಾಮಾಜಿಕ ಜೀವನದ ಜೊತೆಗೆ ರಾಜಕೀಯ ಜೀವನವೂ ಚಲನಶೀಲತೆಯನ್ನು ಕಳೆದುಕೊಂಡಿದೆ. ಮುಸ್ಲಿಮ್ ಸಮುದಾಯದ ಜನರ ಪ್ರಧಾನ ಆಸಕ್ತಿ ಧರ್ಮವೇ ಹೊರತು ರಾಜಕಾರಣವಲ್ಲ. ಮುಸ್ಲಿಮ್ ಸಮಾಜದಲ್ಲಿರುವ ಪಿಡುಗುಗಳನ್ನು ತೊಡೆದು ಹಾಕಲು ಯಾವ ಪ್ರಮಾಣದಲ್ಲಿ ಸುಧಾರಣಾ ಚಳುವಳಿಗಳು ನಡೆಯಬೇಕಿತ್ತೂ ಆ ಪ್ರಮಾಣದಲ್ಲಿ ಆಗಿಲ್ಲ ಎಂಬುವುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

ಇನ್ನು ಮುಸ್ಲಿಮ್ ಸಮುದಾಯಕ್ಕೊಬ್ಬ ಅಂಬೇಡ್ಕರ್ ಯಾಕೆ ಬೇಕು ಎಂಬ ವಿಚಾರಕ್ಕೆ ಬರೋಣ. 1984 ರಲ್ಲಿ ತನ್ನ ಪತಿಯಿಂದ ತಲಾಕ್Young_Ambedkar ನೀಡಲ್ಪಟ್ಟ ಒಂಟಿ ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಸಂದರ್ಭದಲ್ಲಿ ಭಾರತೀಯ ಮುಸ್ಲಿಮ್ ಸಮಾಜದ ಧಾರ್ಮಿಕ ಸಂಘಟನೆಗಳು ಶರೀಯತ್ ಮೇಲೆ ದಾಳಿ ನಡೆಯುತ್ತಿದೆ ಎಂದು ಬೊಬ್ಬಿಟ್ಟು ಕೋಲಾಹಲ ಎಬ್ಬಿಸಿ ಕೊನೆಗೂ ಗೆದ್ದು ಎದೆಯುಬ್ಬಿಸಿದಾಗ ಧರ್ಮ, ಶಾಸ್ತ್ರೀಯ ಗ್ರಂಥದ ನ್ಯಾಯ ಕಟ್ಟಲೆಗಿಂತ ಮಹಿಳೆಯೊಬ್ಬಳ ಬದುಕು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಅಬ್ಬರಿಸಿದ ಸಮಾಜಕ್ಕೆ ತಿಳಿಹೇಳಲೊಬ್ಬರು ಅಂಬೇಡ್ಕರ್ ಬೇಕಿತ್ತು. ಒಂದೇ ಉಸಿರಿಗೆ ಮೂರು ತಲಾಕ್ ಹೇಳುವ ಪದ್ದತಿ ಸ್ವತಃ ಇಸ್ಲಾಮ್ ಧರ್ಮದಲ್ಲಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ತ್ರಿತಲಾಕ್ ನಿಷೇಧದ ಮಾತೆತ್ತಿದಾಗ ಧಾರ್ಮಿಕ ಹಕ್ಕಿನ ಮೇಲಿನ ದಾಳಿ ಎಂದು ಸಾಲು ಸಾಲು ಸಮಾವೇಶ ನಡೆಯುತ್ತದೆ. ಮುಸ್ಲಿಮ್ ಸಮಾಜದ ಮುಖ್ಯವಾಹಿನಿಯಿಂದ ಮಹಿಳೆಯರನ್ನು ಸಂಪೂರ್ಣವಾಗಿ ದೂರವಿಡಲಾಗಿದೆ. ಧಾರ್ಮಿಕ ಸ್ಥಾನಮಾನದಿಂದ ಸಂಪೂರ್ಣ ವಂಚಿತರಾಗಿರುವುದು ಒಂದು ಕಡೆಯಾದರೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಮುಸ್ಲಿಮ್ ಮಹಿಳೆಯರನ್ನು ವೇದಿಕೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ನಿಡುವುದು ಸರಿಯೋ ತಪ್ಪೋ ಎಂಬುವುದು ಸಮುದಾಯದಲ್ಲಿ ಬಹುಚರ್ಚಿತ ವಿಷಯಗಳಲ್ಲೊಂದು. ಹೆಣ್ಣುಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು ಎಂಬ ಚಿಂತನೆ ಮುಸ್ಲಿಮ್ ಸಮುದಾಯಕ್ಕೆ ಬಂದಿದ್ದು ಇತ್ತೀಚೆಗೆ. ಆದರೆ ವಿದ್ಯಾಭ್ಯಾಸ ಪಡೆದ ಹೆಣ್ಣುಮಕ್ಕಳು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ  ಮುಸ್ಲಿಮ್ ಮಹಿಳಾ ಸಮಾತನೆಯ ಬಗ್ಗೆ ಅರಿವು ಮೂಡಿಸಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

ಮುಸ್ಲಿಮ್ ಸಮಾಜದ ಆರ್ಥಿಕ ಸಾಮಾಜಿಕ ಶೋಚನೀಯ ಪರಿಸ್ಥಿತಿಯ ಕುರಿತಾಗಿ ಜಸ್ಟೀಸ್ ಸಾಚಾರ್ ವಿಸ್ಕೃತ ವರದಿಯೊಂದನ್ನು ಸಲ್ಲಿಸಿದ್ದಾರೆ. ಈ ವರದಿಯನ್ನು ಜಾರಿಯಾದಲ್ಲಿ ಮುಸ್ಲಿಮ್ ಸಮಾಜದ ಸಾಮಾಜಿಕ ಪರಿಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆಗಳು ಖಂಡಿತಾ ಸಾಧ್ಯ. ಆದರೆ ಮುಸ್ಲಿಮ್ ಸಮುದಾಯದ ಬಹುಸಂಖ್ಯಾತ ವರ್ಗ ಇದರ ಕುರಿತಾಗಿ ತಲೆಕೆಡಿಸಿಕೊಂಡೇ ಇಲ್ಲ. ಅದೇ ಸಂದರ್ಭದಲ್ಲಿ ತ್ರಿ ತಲಾಕ್ ಹಾಗೂ  ಶರೀಯತ್ ಸಂರಕ್ಷಣೆಯ ವಿಚಾರ ಮುಸ್ಲಿಮ್ ಸಮಾಜದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಾಲು ಸಾಲು ಪ್ರತಿಭಟನೆಗಳೂ ನಡೆಯುತ್ತವೆ.

ಯುವಸಮುದಾಯದಲ್ಲಿ ಅತಿಧಾರ್ಮಿಕತೆ ಹೆಚ್ಚಾಗುತ್ತಿದೆ. ಕ್ರಿಕೆಟಿಗ ಮೊಹಮ್ಮದ್ ಶಫಿ  ಬುರ್ಖಾ ಧರಿಸದ ತನ್ನ ಪತ್ನಿಯೊಂದಿಗಿದ್ದ ಪೋಟೋ ಸಾಮಾಜಿಕ burkaಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗುತ್ತದೆ. ಇನ್ನೂ ಕುತೂಹಲಕಾರಿಯಾಗಿ ಕಂಡುಬಂದಿದ್ದು ಕರಾವಳಿಯ ಸಚಿವರೊಬ್ಬರ ಇಸ್ಲಾಮ್ ಧಾರ್ಮಿಕ ಗ್ರಂಥ ಕುರಾನ್ ಕಂಠಪಾಠ ಮಾಡಿದ ಮಗಳನ್ನು ತಂದೆ ( ವುಜೂ) ಅಂಗಶುದ್ದಿ ಮಾಡದೇ ಮುಟ್ಟಬಹುದಾ ಎಂಬ ಚರ್ಚೆ. ಮುಸ್ಲಿಮ್ ಸಮಾಜದಲ್ಲಿ ಯಾವುದು ಪ್ರಾಮುಖ್ಯತೆ ಪಡೆಯಬೇಕಾಗಿರುವ ವಿಚಾರವಾಗಿದೆಯೋ ಅದು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಕೆಲಸಕ್ಕೆ ಬಾರದ ವಿಚಾರಗಳೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿವೆ. ಯುವ ಸಮಾಜ ಅದರಲ್ಲೂ ಸುಶಿಕ್ಷಿತ ಯುವ ಸಮೂಹವೂ ಸ್ವರ್ಗ ನರಕ ಹಾಗೂ ಪರಲೋಕದ ಬಗ್ಗೆಯೇ ಹೆಚ್ಚೆಚ್ಚು ಚಿಂತಿಸುವಷ್ಟರ ಮಟ್ಟಿಗೆ ತಲುಪಿದೆ ಮುಸ್ಲಿಮರ ಸ್ಥಿತಿ. ಇವೆಲ್ಲದರ ಬಗ್ಗೆ ತಿಳುವಳಿಕೆ ಮೂಡಿಸಿ ವೈಚಾರಿಕತೆಯ ಅರಿವನ್ನು ಸಮಾಜಕ್ಕೆ ಮೂಡಿಸುವ ನಿಟ್ಟಿನಲ್ಲಿ ಅಂಬೇಡ್ಕರೊಬ್ಬರು ಮುಸ್ಲಿಮ್ ಸಮುದಾಯಕ್ಕೆ ಬೇಕಾಗಿದ್ದಾರೆ.

ರಾಜಕೀಯ ಸುಧಾರಣೆಯಂತಹ ವಿಷಯದಲ್ಲಿ ಮುಸ್ಲಿಮ್ ನಾಯಕತ್ವವು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ತೋರಿಸುವ ಅವೈಚಾರಿಕ ಪ್ರತಿಕ್ರಿಯೆಯಿಂದಾಗಿ ಭಾರತೀಯ ಮುಸ್ಲಿಮ್ ಸಮುದಾಯದಲ್ಲಿ ರಾಜಕೀಯ ಜಡತ್ವ ಕಾಣಿಸಿಕೊಂಡಿದೆ. ಮುಸ್ಲಿಮ್ muslims460ರಾಜಕಾರಣಿಕರು ತಮ್ಮ ರಾಜಕಾರಣಕ್ಕೆ ಧಾರ್ಮಿಕೇತರ ಸಂಗತಿಗಳನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂಬುವುದು ಅಂಬೆಡ್ಕರ್ ಅಭಿಪ್ರಾಯವಾಗಿತ್ತು. ಇದು ಸತ್ಯ ಎಂದು ಪದೇ ಪದೇ ಸಾಬೀತಾಗುತ್ತಿದೆ. ಮುಸ್ಲಿಮ್ ಸಮುದಾಯದ ನಾಯಕತ್ವ ಧಾರ್ಮಿಕೇತರ ಸಂಗತಿಗಿಂತ ಧಾರ್ಮಿಕ ಸಂಗತಿಯನ್ನೇ ಪ್ರಮುಖವಾಗಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕೀಯ ನಡೆಸುತ್ತಿವೆ. ಧಾರ್ಮಿಕ ಮೂಲಭೂತವಾದಿಗಳ ಕೈಯಲ್ಲೋ ಅಥವಾ ಮುಸ್ಲಿಮ್ ಕಾರ್ಡ್ ಬಳಸಿಕೊಂಡು ಸ್ವಹಿತ ಕಾಪಾಡಿಕೊಳ್ಳುವ ರಾಜಕಾರಣಿಗಳ ಕೈಯಲ್ಲಿ ಮುಸ್ಲಿಮ್ ಸಮುದಾಯದ ನಾಯಕತ್ವವಿದೆ. ಇದರ ಪರಿಣಾಮವಾಗಿಯೇ ಸಾಚಾರ್ ವರದಿ ಜಾರಿಗಿಂತ ಶರೀಯತ್ ಸಂರಕ್ಷಣೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡುವುದಾದರೆ ಮುಸ್ಲಿಮ್ ಸಮುದಾಯಕ್ಕೆ ವೈಚಾರಿಕತೆಯನ್ನು ಬಿತ್ತುವ ಉದಾರವಾದಿ ನಾಯಕತ್ವದ ಅಗತ್ಯತೆ ತೀರಾ ಇದೆ. ಸಂಘಪರಿವಾರದ ಕುತಂತ್ರಕ್ಕೆ ಉತ್ತರ ಕೊಡಲು ಹೋಗಿ ಉಗ್ರವಾದದತ್ತ ಮುಖಮಾಡುತ್ತಿರುವ ಯುವಕರನ್ನು ಸರಿದಾರಿಗೆ ತಂದು ಸಾಂವಿಧಾನಿಕ ಮಾರ್ಗದಲ್ಲಿ ಹೋರಾಟ ನಡೆಸಲು ಸಮುದಾಯದ ನಾಯಕತ್ವ  ವಹಿಸಿಕೊಳ್ಳಲೊಬ್ಬ ಅಂಬೇಡ್ಕರ್ ಬೇಕಾಗಿದ್ದಾರೆ.

ತ್ರಿತಲಾಕ್ ನಿಷೇಧ, ಇಸ್ಲಾಮ್ ಹಾಗೂ ಸುಧಾರಣೆ


-ಇರ್ಷಾದ್ ಉಪ್ಪಿನಂಗಡಿ


 

1984ರಲ್ಲಿ ನಡೆದ ಶಾಬಾನು ಪ್ರಕರಣ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ತನ್ನ 60 ವರ್ಷದ ಇಳಿ ವಯಸ್ಸಿನಲ್ಲಿ ಪತಿಯಿಂದ ತಲಾಕ್ ನೀಡಲ್ಪಟ್ಟ ಒಂಟಿinidan-muslim-woman ಮಹಿಳೆಯೊಬ್ಬಳು ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಪ್ರಕರಣವಿದು. ಇಂದೋರಿನ ಶಾಬಾನುವಿಗೆ ಆಕೆಯ ಪತಿ ಅಹಮ್ಮದ್ ಖಾನ್ ತಲಾಕ್ ಕೊಟ್ಟಿದ್ದ. ಅಹಮ್ಮದ್ ಖಾನ್ ತಲಾಕ್ ನೀಡಿ ಮತ್ತೊಂದು ಮದುವೆಯಾಗಿ ಬದುಕುಕಟ್ಟಿಕೊಂಡಿದ್ದ. ಆದರೆ ಪತಿಯ ನಿರ್ಧಾರದಿಂದ ಶಾಬಾನು ದಿಕ್ಕುತೋಚದೆ ಕಂಗಾಲಾದ್ದರು. ಶಾಬಾನು ಕ್ರಿಮಿನಲ್ ಪ್ರೊಸೀಜರ್ ಕೋಡ್ 125ನೇ ವಿಧಿಯಂತೆ ಜೀವನಾಂಶಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆರಂಭದಲ್ಲಿ ಕೆಳ ನ್ಯಾಯಾಲ 85 ರೂಪಾಯಿ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತ್ತು. ಜೀವನಾಂಶದಲ್ಲಿ ಹೆಚ್ಚಳ ಕೋರಿ ಮೇಲಿನ ನ್ಯಾಯಾಲಯಕ್ಕೆ ಅಪೀಲು ಮಾಡಿದ ಶಾಬಾನುಗೆ 185 ರೂಪಾಯಿ ಜೀವನಾಂಶ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗತೊಡಗಿತ್ತು. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇಸ್ಲಾಮಿಕ್ ನಿಯಮಗಳ ಪ್ರಕಾರ ಜೀವನಾಂಶಕ್ಕೆ ಅವಕಾಶ ಇಲ್ಲದ ಕಾರಣ ಶಾಬಾನುಗೆ ಜೀವನಾಂಶ ನೀಡಬಾರದೆಂದು ಪತಿ ಅಹಮ್ಮದ್ ಖಾನ್ ಬೆಂಬಲಕ್ಕೆ ನಿಂತಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ಶಾಬಾನೂ ವಿರುದ್ಧನೂ ಇದು ಮುಂದುವರಿಯಿತು. ಈ ನಡುವೆ ಮುಸ್ಲಿಮ್ ಮಹಿಳೆಯರ ಜೀವನಾಂಶವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರ ಗಡಿಯಾರದ ಮುಳ್ಳುಗಳನ್ನು ಹಿಂದಕ್ಕೆ ತಿರುಗಿಸಿದಂತೆ ಎಂಬ ಪ್ರಗತಿಪರ ಚಿಂತಕರ ಅಭಿಪ್ರಾಯಗಳ ನಡುವೆಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜೀವನಾಂಶವನ್ನು ರದ್ದುಗೊಳಿಸುವಲ್ಲಿ ಮುಸ್ಲಿಮ್ ಸಂಘಟನೆಗಳು ಯಶಸ್ವಿಯಾದವು. ಇಂದಿಗೂ ಶಾಬಾನು ಪ್ರಕರಣ ಮುಸ್ಲಿಮ್ ಸಮಾಜದಲ್ಲಿ ಮಹಿಳೆಯರ ಅಸಹಾಯಕತೆ ಹಾಗೂ ಪುರುಷ ಪ್ರಾಬಲ್ಯದ ಸಂಕೇತವಾಗಿ ನಮ್ಮ ಮುಂದಿದೆ.

ಇದೀಗ ಮತ್ತೊಮ್ಮೆ ತ್ರಿವಳಿ ತಲಾಕ್ ವಿಚಾರ ಚರ್ಚೆಗೆ ಬಂದಿದೆ. “ತ್ರಿತಲಾಕ್” ನಿಷೇಧ ಸಂಬಂಧ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ಅಫಿದವಿತ್ ದೇಶಾದ್ಯಂತ ಪರ ವಿರೋಧ ವಾದ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಮ್ ಸಮಾಜದ ಧಾರ್ಮಿಕ ಮುಖಂಡರು, ಕೇಂದ್ರ ಸರ್ಕಾರ ಮುಸ್ಲಿಮರ ಧಾರ್ಮಿಕ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎಂದು ಗುಲ್ಲೆಬ್ಬಿಸಲು ಆರಂಭಿಸಿದ್ದಾರೆ. ಈ ಕುರಿತಾಗಿ ಮಾಧ್ಯಮಗಳಲ್ಲೂ ಚರ್ಚೆ ನಡೆದಾಗ ಮಾಧ್ಯಮ ಪೂರ್ವಾಗ್ರಹಪೀಡಿತವಾಗಿ ನಡೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೂ ಮಾತಿನ ದಾಳಿ ನಡೆಸುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ “ತ್ರಿತಲಾಕ್”  ಹಾಗೂ ಸಮಾನ ನಾಗರಿಕ ಸಂಹಿತೆಯನ್ನ ಜಾರಿಗೆ ತರುವ ನೈತಿಕತೆ ಇದೆಯೋ ಇಲ್ಲವೋ ಎಂಬುವುದು ಮತ್ತೊಂದು ಚರ್ಚಾವಿಚಾರ. ಅವುಗಳೇನೇ ಇದ್ದರೂ ಇಲ್ಲಿ ನಾವು ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಚಾರ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧವಾಗಿ ನಡೆಯಬೇಕಾದ ಸುಧಾರಣಾ ಕ್ರಾಂತಿಯ ಕುರಿತಾಗಿ.

ತ್ರಿತಲಾಕ್ ಕುರಿತಾಗಿ ಕುರಾನ್ ಏನು ಹೇಳುತ್ತದೆ?

ಇಸ್ಲಾಮ್ ಧರ್ಮದಲ್ಲಿ ಏಕಕಾಲಕ್ಕೆ ತ್ರಿತಲಾಕ್ ಅವಕಾಶ ಇದೆಯಾ ಎಂಬುವುದು ನಾವು ಗಮನಿಸಬೇಕಾದ ಪ್ರಮುಖ ಅಂಶ. ಇಸ್ಲಾಮ್ ಪ್ರಕಾರMuslim-women-mosque, ವಿವಾಹ ವಿಚ್ಚೇದನ ಆಗಬೇಕಾದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಬೇಕು. ಅಂದರೆ ಪ್ರತಿ ತಲಾಕ್ ನಡುವೆ ನಿರ್ದಿಷ್ಟ ಕಾಲವಕಾಶವಿದೆ. ಈ ಕಾಲಾವಕಾಶದಲ್ಲಿ ಪತಿ-ಪತ್ನಿ ದೈಹಿಕವಾಗಿ ಕೂಡಿದ ಪಕ್ಷದಲ್ಲಿ ತಲಾಕ್ ಅನೂರ್ಜಿತಗೊಳ್ಳುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಕ್  ಹೇಳುವ ಪದ್ಧತಿ, ತ್ರಿತಲಾಕ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ತಲಾಖ್ ಕುರಿತಾಗಿ ಕುರಾನ್ ನಲ್ಲಿ ಈ ರೀತಿ ಹೇಳಲಾಗಿದೆ. “ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಇದ್ದತ್ ಗಾಗಿ ತಲಾಕ್ ಕೊಡಿರಿ. ಇದ್ದತ್ತಿನ ಕಾಲಾವಧಿಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನ ಬಗ್ಗೆ ಭಯ ಇರಲಿ. ಇದ್ದತ್ತಿನ ಕಾಲಾವಧಿಯಲ್ಲಿ ಅವರು ಯಾವುದೇ ಅಶ್ಲೀಲ ಕಾರ್ಯವೆಸಗದೇ ಇದ್ದಲ್ಲಿ ನೀವು ಅವರನ್ನು ಅವರ ಮನೆಯಿಂದ ಹೊರಹಾಕಬಾರದು ಮತ್ತು ಅಂಥವರು ತಾವಾಗಿಯೇ ಹೊರಟು ಹೋಗಬಾರದು. ಅಲ್ಲಾಹನು ನಿಶ್ವಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ಮೀರಿದವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು ಯಾವುದಾರದೂ ದಾರಿಯನ್ನು ಉಂಟುಮಾಡಲೂಬಹುದು. ನಿಮಗೆ ಅರಿಯದು” – ಕುರಾನ್, ಸೂರಾ 65 (ಅತ್ತಕಾಲ್) ಆಯತ್ 1. ಇನ್ನು ಕುರಾನ್ ಸೂರಾ 4 “ಅನ್ನಿಸಾದ” ಆಯತ್ 35 ರಲ್ಲಿ ತಲಾಕ್ ಕುರಿತಾದ ಉಲ್ಲೇಖ ಹೀಗಿದೆ. “ಪತಿ ಪತ್ನಿಯರ ಸಂಬಂಧ ಕೆಡುವುದೆಂದು ನಿಮಗೆ ಆತಂಕವಾದಲ್ಲಿ ಒಬ್ಬ ಮಧ್ಯಸ್ಥನನ್ನು ಪುರುಷನ ಕಡೆಯಿಂದಲೂ, ಒಬ್ಬನನ್ನು ಸ್ತ್ರೀಯ ಕಡೆಯಿಂದಲೂ ನಿಯುಕ್ತಿಗೊಳಿಸಿರಿ. ಅವರಿಬ್ಬರೂ ಸುಧಾರಿಸಲು ಬಯಸಿದರೆ ಅಲ್ಲಾಹ್ ಅವರ ನಡುವೆ ಸಾಮರಸ್ಯದ ಹಾದಿಯನ್ನು ತೆರೆಯುವನು. ನಿಶ್ವಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ”.

ಪತಿ ಪತ್ನಿ ಸಂಬಂಧ ನಡುವೆ ಬಿರುಕು ಉಂಟಾದಲ್ಲಿ ವಿಚ್ಚೇದನ ಪಡೆಯಲು ಯಾರ ವಿರೋಧವೂ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ವಿಚ್ಚೇದನtalaq-whatsapp ಅಗತ್ಯ ಕೂಡಾ. ಆದರೆ ವಿಚ್ಚೇದನಕ್ಕೆ ನೀತಿ ನಿಯಮಗಳು ಬೇಕು. ಯಾವುದೇ ಒಂದು ಕಾಲದಲ್ಲಿ ಜಾರಿಗೆ ಬಂದ ನಿಯಮಗಳು ಇವತ್ತಿಗೂ ಅನ್ವಯವಾಗಬೇಕು ಎಂಬ ವಾದ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ. ಕುರಾನ್ ನಲ್ಲಿ ಒಂದೇ ಬಾರಿಗೆ ಮೂರು ತಲಾಕ್ ನೀಡುವ ಉಲ್ಲೇಖಗಳಿಲ್ಲದಿದ್ದರೂ ಅದೆಷ್ಟೋ ತಲಾಕ್‍ಗಳು ಇದೇ ರೀತಿಯಲ್ಲಿ ನಡೆಯುತ್ತಿವೆ. ಸಿಟ್ಟಿನ ಭರದಲ್ಲೂ ಒಂದೇ ಬಾರಿಗೆ ಮೂರು ತಲಾಕ್ ನೀಡಿರುವ ಪ್ರಕರಣಗಳಿವೆ. ಇಂದಿನ ಆಧುನಿಕ ಸವಲತ್ತುಗಳನ್ನು ಬಳಸಿಕೊಂಡು ವಾಟ್ಸ್ಯಾಪ್, ಇಮೇಲ್‍ಗಳ ಮೂಲಕವೂ ತಲಾಕ್ ನೀಡಲಾಗುತ್ತಿದೆ. ಇಸ್ಲಾಮ್ ಧರ್ಮದಲ್ಲಿ ಈ ರೀತಿಯ ತಲಾಕ್ ಪದ್ದತಿಗೆ ಅವಕಾಶ ಇಲ್ಲ ಎಂದಾದಲ್ಲಿ ಈ ಪದ್ದತಿ ಮತ್ಯಾಕೆ ಜಾರಿಯಲ್ಲಿದೆ. “ತ್ರಿತಲಾಕ್” ನಿಷೇಧ ಧಾರ್ಮಿಕ ಹಕ್ಕುಗಳ ಮೇಲಿನ ದಾಳಿ ಎನ್ನುವವರು ತಲಾಕ್ ಒಳಗಾದ ಮಹಿಳೆಯರ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೇಕೆ? ಇಂದು ತಲಾಕ್ ಪ್ರಕರಣಗಳು ನ್ಯಾಯಪಂಚಾಯತಿಕೆ ನಡೆಸುವ ಮೂಲಕವೂ ನಡೆಯುತ್ತಿವೆ. ಸ್ಥಳೀಯ ಗೂಂಡಾಗಳೂ ತಲಾಕ್ ಪ್ರಕರಣದ ಪಂಚಾಯತಿಕೆ ನಡೆಸುತ್ತಾರೆ. ಇಲ್ಲಿ ಅನೇಕರಿಗೆ ಅತ್ತ ಧಾರ್ಮಿಕ ಕಾನೂನಿನ ಮಾಹಿತಿಯೂ ಇರುವುದಿಲ್ಲ ಇತ್ತ ದೇಶದ ಸಂವಿಧಾನ, ಕಾನೂನು ಕಟ್ಟಲೆಗಳ ಕುರಿತಾಗಿಯೂ ತಿಳುವಳಿಕೆಯೂ ಇರುವುದಿಲ್ಲ. ಇಲ್ಲಿ ಹಣ ಹಾಗೂ ತೋಳ್ಬಲ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಹೀಗಿರುವಾಗ ಮುಸ್ಲಿಮರ ವಿವಾಹ ವಿಚ್ಚೇದನ ಯಾಕೆ ಭಾರತೀಯ ಸಂವಿಧಾನದ ಕಾನೂನಿನಡಿಯಲ್ಲಿ ನಡೆಯಬಾರದು?

ಇಲ್ಲಿ ಕೇವಲ ಒಂದೇ ಬಾರಿಗೆ ಮೂರು ತಲಾಕ್ ಹೇಳುವ ತ್ರಿವಳಿ ತಲಾಕ್ ಒಂದೇ ವಿಚಾರ ಅಲ್ಲ. ತಲಾಕ್‍ಗೆ ಒಳಗಾದ ಪತ್ನಿಯburka ಮುಂದಿನ ಜೀವನ ನಿರ್ವಹಣೆಯ ಕುರಿತಾಗಿ ಚಿಂತಿಸಬೇಕಲ್ಲವೇ? ಸುನ್ನಿ ಹಾಗೂ ಶಿಯಾ ಪಂಗಡಗಳಲ್ಲಿ ತಲಾಕ್ ನೀಡಿದ ನಂತರ ಹೆಂಡತಿಯ ಖರ್ಚಿಗೆ ಗಂಡ ಜವಾಬ್ದಾರನಾಗಿರುವುದಿಲ್ಲ. ತಾಯಿಯ ಎದೆಹಾಲು ಬಿಡಿಸುವವರೆಗೆ ಮಕ್ಕಳನ್ನು ನೋಡಿಕೊಳ್ಳುವ ವೆಚ್ಚವನ್ನು ಗಂಡ ಭರಿಸಬೇಕಾಗುತ್ತದೆ. ಹೀಗಾದಲ್ಲಿ ವಿಚ್ಚೇದಿತ ಮಹಿಳೆಯ  ಮುಂದಿನ ಜೀವನದ ಗತಿಯೇನು? ಬಹುತೇಕ ಗ್ರಾಮೀಣ ಹಾಗೂ ನಗರ ಭಾಗಗಳಲ್ಲೂ ಮುಸ್ಲಿಮ್ ಮಹಿಳೆಯರಿಗೆ ಇಂದಿಗೂ ಉದ್ಯೋಗಕ್ಕೆ ಹೋಗಲು ಅವಕಾಶವಿಲ್ಲ. ಆರ್ಥಿಕವಾಗಿ ಪತಿಯನ್ನೋ ಅಥವಾ ತಂದೆಯನ್ನೂ ಆಕೆ ಅವಲಂಬಿಸಿರುತ್ತಾಳೆ. ಇಂತಹಾ ಸಂದರ್ಭದಲ್ಲಿ ವಿಚ್ಚೇದಿತಳಾದ ಮಹಿಳೆಗೆ ಸ್ವತಂತ್ರ ಜೀವನ ನಿರ್ವಹಣೆ ಹೇಗೆ ಸಾಧ್ಯ.

ಇದು ಒಂದು ಕಡೆಯಾದರೆ ಮುಸ್ಲಿಮ್ ಮಹಿಳೆಗೆ ಗಂಡನಿಂದ ವಿಚ್ಚೇದನ ಪಡೆಯಲು ಅವಕಾಶವಿರುವ ಖುಲಾ ಹಕ್ಕು ವಿಚಾರಕ್ಕೆ ಬರೋಣ. ಇಲ್ಲಿ ಪತಿ ಪತ್ನಿಗೆ ತಲಾಕ್ ಕೊಡುವಷ್ಟು ಸುಲಭವಾಗಿ ಪತ್ನಿ ಪತಿಗೆ ಖುಲಾ ಕೊಡಲು ಸಾಧ್ಯವಿಲ್ಲ ಎಂಬುವುದು ಗಮನಾರ್ಹ. ಇಲ್ಲಿ ಖುಲಾವನ್ನು ಹೆಣ್ಣು ಗಂಡನಿಂದ ಖರೀದಿಸಬೇಕಿದೆ. ಮದುವೆಯ ಸಂದರ್ಭದಲ್ಲಿ ಪತಿ ಕೊಟ್ಟ ಮಹರ್ ಮೊತ್ತವನ್ನು ಹಿಂತಿರುಗಿಸಬೇಕಿದೆ. ಹೀಗಾದಲ್ಲಿ ಮಾತ್ರ ಖುಲಾ ಸಿಗುತ್ತದೆ. ಇಲ್ಲಿ ಮಹಿಳೆ ತನ್ನ ಪತಿಯಿಂದ ಬಿಡುಗಡೆಗಾಗಿ ಆತನಿಂದ ಕಾಡಿ ಬೇಡಿ ಖುಲಾ ಪಡೆಯಬೇಕು. ಕೊನೆಗೂ ಖುಲಾ ಪಡೆಯಬೇಕಾದಲ್ಲಿ ಪತಿಯೇ ತಲಾಕ್ ನೀಡಬೇಕು ಹೊರತು ಪತ್ನಿ ಪತಿಗೆ ತಲಾಕ್ ನೀಡುವ ಅಧಿಕಾರ ಇಲ್ಲ. ಇಲ್ಲಿ ಪತಿಗೆ ಪತ್ನಿ ಬೇಡವಾದಲ್ಲಿ ತಲಾಕ್ ನೀಡುವ ಪದ್ದತಿ ಸರಳವಾಗಿದ್ದರೆ ಪತ್ನಿಗೆ ಪತಿ ಬೇಡವಾದಲ್ಲಿ ಖುಲಾ ನೀಡುವ ಪದ್ದತಿಯನ್ನು ಜಟಿಲಗೊಳಿಸಲಾಗಿದೆ. ಇದನ್ನು ಮಹಿಳಾ ಶೋಷಣೆ ಎಂದು ಕರೆಯದೆ ಮತ್ತೇನನ್ನಲು ಸಾಧ್ಯವೇ?

ಇಸ್ಲಾಮ್ ಮತ್ತು ಸುಧಾರಣೆ

ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿ ಅರಬ್ ದೇಶದಲ್ಲಿ ಗುಲಾಮ ವ್ಯಾಪಾರಕ್ಕೆ ಅನುಮತಿ ಇತ್ತು. ಕುರಾನ್ ಕೂಡಾ ಅನುಮತಿ ನೀಡಿತ್ತುburkha sielence. ಇಂದು ಗುಲಾಮಗಿರಿ ಪದ್ದತಿ ದೊಡ್ಡ ಪಾತಕ. ಧರ್ಮದಲ್ಲಿ ಅನುಮತಿ ಇದೆ ಎಂದು ಮತ್ತೆ ಗುಲಾಮಗಿರಿ ಪದ್ದತಿಯನ್ನು ಆಚರಿಸಲು ಸಾಧ್ಯಾವೇ? ಅಂತಹ ಅನಾಗರಿಕ ಪದ್ದತಿಯನ್ನು ಒಪ್ಪಿಕೊಳ್ಳಲು ಖಂಡಿತಾ ಅಸಾಧ್ಯ. ಮನುಷ್ಯ ಘನತೆ ಎತ್ತಿಹಿಡಿಯುವ ಚಿಂತನೆಗಳು ಮೊಳಕೆಯೊಡೆಯುತ್ತಿದ್ದಂತೆ ಗುಲಾಮಗಿರಿಯಂತಹ ಅಮಾನವೀಯ ಪದ್ದತಿಗಳು ನಾಶವಾದವು. ಹೀಗೆ ಸುಧಾರಣೆಗಳು ಬದಲಾವಣೆಗೆ ಅವಕಾಶ ಕಲ್ಪಿಸುತ್ತವೆ. ಇಸ್ಲಾಮ್ ಧರ್ಮ ಎಂದರೆ ಸುಧಾರಣೆಗೆ ಅವಕಾಶ ಇಲ್ಲದ ಧರ್ಮ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಮುಸ್ಲಿಮ್ ಧಾರ್ಮಿಕ ಮುಖಂಡರು ಹಾಗೂ “ಧರ್ಮದ ಗುತ್ತಿಗೆ” ಪಡೆದುಕೊಂಡ ಮೂಲಭೂತವಾದಿಗಳು ವರ್ತಿಸುತ್ತಿದ್ದಾರೆ. ಅರಬ್ ದೇಶದಲ್ಲಿ ಇಸ್ಲಾಮ್ ಧರ್ಮದ ಆರಂಭವೇ ಸುಧಾರಣೆಯಿಂದಾಯಿತು. ಆ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರು ಸಾಕಷ್ಟು ಸುಧಾರಣೆಗಳಿಗೆ ನಾಂದಿಹಾಡಿದರು. ಇಂತಹಾ ಸುಧಾರಣೆಗಳು ನಿಂತ ನೀರಾಗಬಾರದು ಅದು ಸದಾ ಹರಿಯುತ್ತಲೇ ಇರಬೇಕು. ವಿಪರ್ಯಾಸವೆಂದರೆ ಮುಸ್ಲಿಮ್ ಧಾರ್ಮಿಕ ಪಂಡಿತರು ಇಸ್ಲಾಮ್ ಧರ್ಮವನ್ನು ನಿಂತ ನೀರಾಗಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಧರ್ಮದೊಳಗೆ ಸುಧಾರಣೆಯ ಚಿಂತನೆಗಳು ಮೊಳಕೆಯೊಡೆದಲ್ಲಿ ಅದನ್ನು ಧರ್ಮವಿರೋಧಿ ಎಂದು ಚಿವುಟಿ ಹಾಕುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಸ್ಲಾಮ್ ಪವಿತ್ರ ಗ್ರಂಥ ಕುರಾನ್‍ನಲ್ಲಿ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಿದ್ದರೂ ಮುಸ್ಲಿಮ್ ಮಹಿಳೆಯ ಪಾಲಿಗೆ ಅದು ದೂರದ ಮಾತಾಗಿತ್ತು. ಮಹಿಳೆ ಶಾಲೆಯ ಮೆಟ್ಟಿಲನ್ನೇರಲು ಸಾಕಷ್ಟು ಶ್ರಮಪಡಬೇಕಾಯಿತು. ಕೇವಲ ಮುಸ್ಲಿಮ್ ಸಮಾಜ ಮಾತ್ರವಲ್ಲ, ಇತರ ಧರ್ಮಗಳ ಪುರುಷ ಪ್ರಧಾನ ವ್ಯವಸ್ಥೆಯೂ ಸ್ತ್ರೀಯರನ್ನು ನಿಕೃಷ್ಟವಾಗಿ ನೋಡಿಕೊಂಡಿವೆ. ಅಲ್ಲೂ ಮಹಿಳಾ ವಿರೋಧಿಯಾದ, ಮನುಷ್ಯ ಘನತೆಗೆ ವಿರುದ್ಧವಾದ ಸಾಕಷ್ಟು ಆಚರಣೆ ಪದ್ದತಿಗಳು ಚಾಲ್ತಿಯಲ್ಲಿವೆ. ಆದರೆ ಸುಧಾರಣೆಗಳಿಗೆ ಓಗೊಡುವ ಮನಸ್ಸುಗಳ ಸಂಖ್ಯೆ ವೃದ್ದಿಗೊಳ್ಳುತ್ತಿರುವುದರಿಂದ ಸ್ಥಿತಿಗತಿ ಬದಲಾಗುತ್ತಿದೆ. ಸತಿಸಹಗಮನ ಪದ್ದತಿಯನ್ನು ಮನುವಾದಿಗಳು ಸಂಸ್ಕೃತಿ ಎಂದು ಕೊಂಡಾಡಿದಾಗ ಅದು ಅಮಾನವೀಯತೆ ಎಂದು ಸಾರುವ ಮೂಲಕ ಸತಿ ಪದ್ದತಿಯ ವಿರುದ್ಧದ ಆಂದೋಲನಕ್ಕೆ ರಾಜಾರಾಮ್ ಮೋಹನ್ ರಾಯ್ ನಾಂದಿಹಾಡಿದರು. ಅದೇ ರೀತಿ ಅಂಡೇಡ್ಕರ್, ಫುಲೆ ದಂಪತಿ, ನಾರಾಯಣ ಗುರು ಹೀಗೆ ಹತ್ತು ಹಲವಾರು ಸುಧಾರಕರು ಈ ಮಣ್ಣಿನಲ್ಲಿ ಸುಧಾರಣೆಯ ಬೀಜ ಬಿತ್ತಿದರು. ಅವರೆಲ್ಲರನ್ನೂ ಮನುವಾದಿಗಳು ಇಂದಿಗೂ ದ್ವೇಷ ಅಸೂಹೆಯಿಂದ ಕಂಡರೂ ಸುಧಾರಣೆಯ ಗಾಳಿಗೆ ಬೇಲಿ ಹಾಕಲು ಮನುವಾದಿಗಳಿಂದ ಸಾಧ್ಯವಾಗಿಲ್ಲ.

ಆದರೆ ಮುಸ್ಲಿಮ್ ಸಮಾಜದಲ್ಲಿ ಚಿಂತಕರು, ಸುಧಾರಣಾವಾಧಿಗಳು ಸುಧಾರಣೆಯ ಮಾತುಗಳನ್ನಾಡಿದಲ್ಲಿ, ಇಸ್ಲಾಮ್ ಧರ್ಮದ ರೀತಿ ನೀತಿ ಕಾನೂನುSupreme Court ಕಟ್ಟಲೆಗಳು ಅಂದಿಗೂ ಇಂದಿಗೂ ಎಂದಿಗೂ ಅನ್ವಯವಾಗುವಂತಹದ್ದು, ಈ ನಿಟ್ಟಿನಲ್ಲಿ ಸುಧಾರಣೆ ಅನಗತ್ಯ ಎಂಬ ವಾದಗಳು ಪ್ರತಿಪಾದನೆಯಾಗುತ್ತವೆ. ಈ ವಾದಗಳ ಮೊದಲ ಬಲಿಪಶು ಮಹಿಳೆಯೇ ಆಗಿರುತ್ತಾಳೆ. ಮುಸ್ಲಿಮ್ ಸಮಾಜದಲ್ಲಿ ಹಲಾಲ ಪದ್ದತಿಯೊಂದಿದೆ. ಹಲಾಲಾ ಎಂದರೆ ಪತ್ನಿಗೆ ತಲಾಕ್ ನೀಡಿದ ಪತಿಗೆ ಮತ್ತೆ ಆಕೆಯನ್ನೇ ಮರುಮದುವೆಯಾಗಬೇಕೆಂದು ಅನ್ನಿಸಿದ್ದಲ್ಲಿ ಪತ್ನಿಯ ಒಪ್ಪಿಗೆ ಇದ್ದರೆ ಮರುಮದುವೆಗೆ ಅವಕಾಶವಿದೆ. ಆದರೆ ಇಲ್ಲಿ ವಿಚ್ಚೇದನಗೊಂಡ ಪತಿ ಪತ್ನಿ ಮತ್ತೆ ಮರುಮದುವೆಯಾಗಬೇಕಾದರೆ ಒಂದು ನಿಯಮವಿದೆ; ಅದೇ ಹಲಾಲ. ಅಂದರೆ ಮರುಮದುವೆಗೆ ಮುನ್ನ ಆಕೆಗೆ ಒಂದು ದಿನದ ಮಟ್ಟಿಗೆ ಮತ್ತೊಬ್ಬನ ಜೊತೆ ಮದುವೆ ಮಾಡಿಕೊಳ್ಳಬೇಕು. ನಂತರ ಆತನಿಂದ ತಲಾಕ್ ಪಡೆದು ಇದ್ದತ್ ಅವಧಿಯನ್ನು ಪೂರ್ಣಗೊಳಿಸಬೇಕು. ಬಳಿಕ ಆಕೆಯನ್ನು ಮರುಮದುವೆಮಾಡಿಕೊಳ್ಳುವ ಅವಕಾಶ ಇದೆ. ಇಲ್ಲಿ ಪತಿ ತನ್ನ ಪತ್ನಿಗೆ ತಲಾಕ್ ಕೊಟ್ಟು ಬಳಿಕ ತಪ್ಪಿನ ಅರಿವಾಗಿ ಮತ್ತೆ ಮರುಮದುವೆಯಾಗಬೇಕಾದಲ್ಲಿ ಶಿಕ್ಷೆ ಅನುಭವಿಸಬೇಕಾಗಿ ಬರುವುದು ಮಹಿಳೆಗೆ. ಒಂದು ದಿನದ ಮಟ್ಟಿಗೆ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದಾದರೆ ಅದು ಆ ಮಹಿಳೆಯ ಮನಸ್ಸಿನ ಮೇಲೆ ಎಷ್ಟೊಂದು ಗಾಢವಾದ ಪರಿಣಾಮ ಬೀರಬಹುದು ಎಂದು ಕನಿಷ್ಠ ಆಲೋಚನೆ ಮುಸ್ಲಿಮ್ ಸಮಾಜದ ಧಾರ್ಮಿಕ ಪಂಡಿತರು ಮಾಡಿದಲ್ಲಿ ಈ ಆಚರಣೆ ಜಾರಿಯಲ್ಲಿರುತಿತ್ತೇ? ಇಂದಿಗೂ ಕೆಲವೆಡೆ ಈ ಹಲಾಲಾ ಪದ್ದತಿ ಜಾರಿಯಲ್ಲಿದೆ. ಅಸಲಿಗೆ ಈ ರೀತಿಯ ಹಲಾಲಾ ಪದ್ದತಿ ಇಸ್ಲಾಮ್ ಧರ್ಮದಲ್ಲಿ ಜಾರಿಯಲ್ಲಿರಲಿಲ್ಲ. ಆದರೂ ಮುಸ್ಲಿಮರಲ್ಲಿ ಆಚರಣೆಯಲ್ಲಿತ್ತು. ಈ ಕುರಿತಾಗಿ ಮುಸ್ಲಿಮ್ ಧರ್ಮದ ಚಿಂತಕರು ಧ್ವನಿ ಎತ್ತಿದಾಗ ಮತ್ತದೇ ಧರ್ಮವಿರೋಧಿಗಳ ಪಟ್ಟ. ಇಲ್ಲಿ ತ್ರಿತಲಾಕ್ ಇರಬಹುದು, ಹಲಾಲ ಪದ್ದತಿಯಿರಬಹುದು, ಬಹುಪತ್ನಿತ್ವ ಇರಬಹುದು, ಒಂದು ಕಾಲದಲ್ಲಿ ಆಚರಣೆಯಲ್ಲಿತ್ತು ಎಂಬ ಸಬೂಬು ನೀಡಿ ಇಂದಿಗೂ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವುದು ಸರಿಯಲ್ಲ. ಸಮಾಜ, ಚಿಂತನೆಗಳು ಕಾಲಕ್ಕೆ ತಕ್ಕಹಾಗೆ ಬದಲಾಗುತ್ತವೆ. ಇದರ ಜೊತೆಜೊತೆಯಲ್ಲೇ ಮನುಷ್ಯ ಘನತೆಗೆ ಕುಂದು ತರುವಂತಹ, ಒಂದು ವರ್ಗವನ್ನು ಶೋಷಣೆ ಮಾಡುವಂತಹ, ಜೀವ ವಿರೋಧಿ, ಪ್ರಗತಿ ವಿರೋಧಿ ಆಚರಣೆಗಳು, ಕಾನೂನುಗಳು, ಚಿಂತನೆಗಳು ಬದಲಾಗಬೇಕಿದೆ. ಬದಲಾವಣೆ ಸಾಧ್ಯವಾಗದೇ ಇದ್ದಲ್ಲಿ ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದರ ಮೂಲಕ ಬದಲಾವಣೆಯನ್ನು ಚಲಾವಣೆಗೆ ತರಬೇಕಿದೆ. ಈಗಾಗಲೇ ಮುಸ್ಲಿಮ್ ಮಹಿಳೆಯರು ತ್ರಿತಲಾಕ್ ಕುರಿತಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ವಾದವನ್ನು ಪ್ರತಿಭಟಿಸುತ್ತಿದ್ದಾರೆ. ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಇಂತಹ ಪದ್ದತಿಯ ವಿರುದ್ಧದ ಹೋರಾಟಕ್ಕೆ ಎಲ್ಲಾ ಸಮುದಾಯಗಳ ಪ್ರಗತಿಪರ, ಸುಧಾರಣಾವಾದಿ ಚಿಂತಕರು ಹಾಗೂ ಸ್ತ್ರೀವಾದಿಗಳು ಜೊತೆಸೇರಬೇಕಿದೆ. ಕೊನೆಯದಾಗಿ ಒಂದು ವಿಚಾರ. ಇಸ್ಲಾಮ್‍ನಲ್ಲಿ ಬದಲಾವಣೆ ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಮುಸ್ಲಿಮರು “ವಾಸ್ತವದಲ್ಲಿ  ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ”, ಕುರಾನ್  ನಲ್ಲಿರುವ ಈ ಶ್ಲೋಕವನ್ನು ಮೊದಲು ಅರ್ಥೈಸಿಕೊಳ್ಳಬೇಕಿದೆ.