– ಸುಧಾಂಶು ಕಾರ್ಕಳ
ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಧರ್ಮಸ್ಥಳ ಪುಣ್ಯಕ್ಷೇತ್ರ. ವರ್ಷಕ್ಕೊಮ್ಮೆ ಮಕ್ಕಳು-ಮರಿ ಕಟ್ಟಿಕೊಂಡು, ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹಿಂಸೆ ಅನುಭವಿಸಿಯಾದರೂ, ಅಲ್ಲಿಗೆ ಹೋಗದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಷ್ಟೇ ಏಕೆ, ಈ ಭಾಗದ ಸಾವಿರಾರು ಮಂದಿ ಬಾಲ್ಯದಲ್ಲಿ ಕೂದಲು ಕೊಡುವ ಶಾಸ್ತ್ರ ಮಾಡಿಸಿಕೊಂಡಿದ್ದು ಇಲ್ಲಿಯೇ. ಬಡ ಬಗ್ಗರ ಮನೆಗಳಲ್ಲಿ ಸರಳ ವಿವಾಹದ ಮಾತು ಬಂದರೆ, ಅವರಿಗೆ ನೆನಪಾಗುವುದು ಧರ್ಮಸ್ಥಳ.
ಪ್ರತಿ ಭಾನುವಾರ ರಾತ್ರಿ ಈ ಭಾಗಗಳ ಕಡೆಯಿಂದ ಧರ್ಮಸ್ಥಳಕ್ಕೆ ಹೊರಡುವ ಎಲ್ಲಾ ಬಸ್ ಗಳು ಭರ್ತಿಯಾಗುವುದಕ್ಕೆ ಇದೇ ‘ಭಕ್ತಿ’ ಕಾರಣ. ಊರಲ್ಲಿ ಯಾರದರು ಒಬ್ಬರು ಧರ್ಮಸ್ಥಳಕ್ಕೆ ಹೋಗುತ್ತಾರೆಂದರೆ ಮನೆಗೊಬ್ಬರು ಮಂಜುನಾಥನಿಗೆ ತಮ್ಮದೂ ಕಾಣಿಕೆ ಇರಲಿ ಎಂದು ತಮ್ಮ ಕೈಲಾದಷ್ಟು ಹಣ ಕೊಟ್ಟು ಕಳುಹಿಸುವುದುಂಟು. ವೀರೇಂದ್ರ ಹೆಗ್ಗಡೆಯವರು ಜನೋಪಕಾರಿ ಕೆಲಸ ಮಾಡಿ ಸಜ್ಜನ, ಸಂಭಾವಿತ, ಮಾತನಾಡುವ ಮಂಜುನಾಥ ಎಂಬೆಲ್ಲಾ ಬಿರುದುಗಳನ್ನು ಗಳಿಸುವುದು ಸಾಧ್ಯವಾಗಿದ್ದು ಇಂತಹ ಲಕ್ಷಾಂತರ ಭಕ್ತರ ಸಾವಿರಾರು ಕೋಟಿಗಳ ದಾನದಿಂದ.
ಇದೇ ಭಾನುವಾರ (ಅ.13) ರಂದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಧರ್ಮಸ್ಥಳಕ್ಕೆ ಧಾವಿಸಿ ಹೆಗ್ಗಡೆಯವರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬ ಸುದ್ದಿ ಟಿವಿಯಲ್ಲಿ ನೋಡಿದಾಗ ಇಂತಹದೊಂದು ಸನ್ನಿವೇಶ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲಿರಬೇಕಲ್ಲವೇ ಎನಿಸಿತು. ಖಾವಂದರಿಗೆ ಬಿಸಿ ಮುಟ್ಟಿದೆ. ಮಾತನಾಡುವ ಮಂಜುನಾಥನ ಬಗ್ಗೆ ನೇರಾ ನೇರಾ ಮಾತನಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿದ್ದು ಆಶಾದಾಯಕ ಬೆಳವಣಿಗೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದು ವರ್ಷದಿಂದ ಸತತವಾಗಿ ಅಬ್ಬರವಿಲ್ಲದೆ ಪ್ರತಿಭಟನೆ ನಡೆಯುತ್ತಲೇ ಇತ್ತು. ಫೇಸ್ಬುಕ್ ನಲ್ಲಿ ಈ ಪ್ರತಿಭಟನೆಗೆ ಅನೇಕರು ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಬೆಳ್ತಂಗಡಿ, ಮಂಗಳೂರು ಭಾಗಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಕರಣ ಆಗಿ ಒಂದು ವರ್ಷದ ನಂತರ ಟಿ.ವಿ9 ಸ್ಟುಡಿಯೋದಲ್ಲಿ ಸೌಜನ್ಯ ಪೋಷಕರು ಏನನ್ನು ಇದುವರೆಗೆ ಮುಚ್ಚಿಡಲಾಗಿತ್ತೋ..ಅದನ್ನು ಹೊರಹಾಕಿದರು.
ಆ ಮೂಲಕ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ಬಾರಿ ಪ್ರಕರಣದ ತನಿಖೆಯಾದರೂ, ನಿಜ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿಲ್ಲ. ಮಾನಸಿಕ ಅಸ್ವಸ್ಥನೊಬ್ಬನ ತಲೆಗೆ ಈ ಪ್ರಕರಣವನ್ನು ಕಟ್ಟಿ ತನಿಖೆಯ ಶಾಸ್ತ್ರವನ್ನು ಮುಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಆರೋಪ. ಇನ್ನೂ ಗಂಭೀರವಾದ ವಿಚಾರವೆಂದರೆ ಇಂತಹ ಅದೆಷ್ಟೊ ಪ್ರಕರಣಗಳು ಧರ್ಮಸ್ಥಳ ಸುತ್ತ-ಮುತ್ತ ಆಗಿಹೋಗಿವೆ ಎಂಬ ಸುದ್ದಿ. ಸೌಜನ್ಯಳ ತಾಯಿ ಟಿ.ವಿ ಸ್ಟುಡಿಯೋದಲ್ಲಿ ಕೇಳಿದರು.. ನೇತ್ರಾವತಿ ನದಿಯಲ್ಲಿ ಆಗಾಗ ತೇಲಿ ಬರುತ್ತಿದ್ದ ಅನಾಥ ಹೆಣಗಳು ಸೌಜನ್ಯ ಪ್ರಕರಣದ ನಂತರ ನಿಂತಿದ್ದಾದರೂ ಹೇಗೆ?
ಹಾಗಾದರೆ ಈ ಮೊದಲು ನೇತ್ರಾವತಿ ನದಿಯಲ್ಲಿ ಹೇರಳವಾಗಿ ಹೆಣಗಳು ತೇಲಿಬರುತ್ತಿದ್ದವೆ? ಇದುವರೆಗೆ ಯಾಕೆ ಸುದ್ದಿಯಾಗಲಿಲ್ಲ? ಆಯುರ್ವೇದ, ಯೋಗ, ಸ್ವ ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ – ಹೀಗೆ ನಾನಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ದೊಡ್ಡ ಸಾಮ್ರಾಜ್ಯದ ಮೇಲೆ ಈಗ ಅನೇಕ ಪ್ರಶ್ನೆಗಳಿವೆ.
ಸೌಜನ್ಯ ಹತ್ಯೆ ಅಷ್ಟೇ ಅಲ್ಲ..ಇದುವರೆಗೆ ಆಗಿ ಹೋಗಿರುವ ನಾನಾ ಪ್ರಕರಣಗಳ ಬಗ್ಗೆಯೂ ತಕ್ಕ ತನಿಖೆ ನಡೆಯಬೇಕು. ಪಾಪಕ್ಷೇತ್ರ, ಪುಣ್ಯಕ್ಷೇತ್ರ ಎಂದು ಯಾವ ಸ್ಥಳವೂ ಇರುವುದಿಲ್ಲ. ಆದರೆ ಅಲ್ಲಿ ನೆಲೆಸಿರುವವರು ಆ ಸ್ಥಳಕ್ಕೆ ಒಂದು ಘನತೆ ತರಲು ಸಾಧ್ಯ. ತಮ್ಮ ಮಗಳ ಹತ್ಯೆಗೆ ಸೂಕ್ತ ತನಿಖೆ ಕೋರಲು ಪ್ರತಿಭಟನೆ ನಡೆಸುವುದನ್ನೂ ಬೇಡ ಎಂದು ಫರ್ಮಾನು ಹೊರಡಿಸುವವರಿಂದ ಯಾವ ಕ್ಷೇತ್ರಕ್ಕಾಗಲಿ ಯಾವ ಘನತೆ ದಕ್ಕೀತು? ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲರೂ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಅವರ ದೇಣಿಗೆ ಹಣ ವಿನಿಯೋಗ ಆಗುತ್ತಿರುವುದು ಹೇಗೆ ಎನ್ನುವುದನನ್ನು ಕೇಳಲೇಬೇಕಲ್ಲವೆ.
ಸರಕಾರ ಸೂಕ್ತ ತನಿಖೆ ಆದೇಶಿಸುವ ಮೂಲಕ ಮುಚ್ಚಿ ಹೋಗಿರಬಹುದಾದ ಸತ್ಯಗಳನ್ನು ಹೊರತರಲೇಬೇಕು. ಅವ್ಯವಹಾರ, ಅನಾಚಾರಗಳು ಬಯಲಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನವನ್ನು ತನ್ನ ವಶಕ್ಕೆ ಅಂದರೆ ಜನತೆಯ ಆಡಳಿತಕ್ಕೆ ತೆಗೆದುಕೊಳ್ಳಬೇಕು.