Category Archives: ಬಿಳಿ ಸಾಹೇಬನ ಭಾರತ

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

[ಸ್ನೇಹಿತರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಹುಟ್ಟಿ, ಇಲ್ಲಿಯೇ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದು, ವಿಶ್ವಮಾನವನಾಗಿ ಬೆಳೆದ  ಜಿಮ್ ಕಾರ್ಬೆಟ್‌ ಎಂಬ ಅಸಾಮಾನ್ಯ ಮನುಷ್ಯನ ಕುರಿತು ಜಗದೀಶ್ ಕೊಪ್ಪರವರು ಕಳೆದ 29 ವಾರಗಳಿಂದ ನಮಗೆ ಬಹಳ ಆಪ್ತವಾಗಿ ಮತ್ತು ವಸ್ತುನಿಷ್ಟವಾಗಿ ಹೇಳುತ್ತ ಬಂದ ಲೇಖನ ಸರಣಿಯ ಕೊನೆಯ ಕಂತು ಇದು. ಕನ್ನಡದಲ್ಲಿ ಜಿಮ್ ಕಾರ್ಬೆಟ್ ಬಗ್ಗೆ ಇಷ್ಟು ವಿಷದವಾಗಿ  ಬರೆದಿರುವ ಇನ್ನೊಂದು ಕೃತಿ ಇಲ್ಲ. ಹಾಗಾಗಿಯೇ ಇದು ಸಹಜವಾಗಿ ವಿಶಿಷ್ಟವಾದದ್ದು. ಆದಷ್ಟು ಬೇಗ ಇದು ಪುಸ್ತಕವಾಗಿ “ವರ್ತಮಾನ.ಕಾಮ್” ಮತ್ತು ಕನ್ನಡದ ಅಂತರ್ಜಾಲದ ಹೊರಗಿರುವ ಕನ್ನಡ ಓದುಗರಿಗೂ ತಲುಪಲಿ ಎಂದು ಬಯಸುತ್ತೇನೆ. ಇದನ್ನು ವರ್ತಮಾನ.ಕಾಮ್‌ನಲ್ಲಿ ಸರಣಿ ರೂಪದಲ್ಲಿ ಬರೆದಿದ್ದಕ್ಕೆ ಮತ್ತು ವರ್ತಮಾನ.ಕಾಮ್‌ನ ಆರಂಭದ ದಿನಗಳಿಂದಲೂ ನಮ್ಮ ಜೊತೆಗಿದ್ದು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತ ಇರುವ ಶ್ರೀ ಕೊಪ್ಪರವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳನ್ನು ಈ ಮೂಲಕ ಸಲ್ಲಿಸಬಯಸುತ್ತೇನೆ. -ರವಿ ಕೃಷ್ಣಾರೆಡ್ಡಿ]

ಕೀನ್ಯಾದ ನೈರಿ ಪಟ್ಟಣದ ಸಮೀಪ ಪರ್ವತದ ತಪ್ಪಲಿನಲ್ಲಿ ಇದ್ದ ಔಟ್ ಸ್ಪಾನ್ ಹೆಸರಿನ ಹೊಟೇಲ್‌ನ ವಿಶೇಷ ಕಾಟೇಜ್‌ನಲ್ಲಿ ಉಳಿದುಕೊಂಡ ಬಳಿಕ, ಕಾರ್ಬೆಟ್ ಮತ್ತು ಸಹೋದರಿ ಮ್ಯಾಗಿಯ ಅಲೆದಾಟದ ಬದುಕಿಗೆ ಅಂತಿಮ ತೆರೆಬಿದ್ದಿತು. ಸುಂದರ ಹೂದೋಟ ಮತ್ತು ಹಿಮ ಪರ್ವತದ ಹಿನ್ನಲೆಯಿದ್ದ ಈ ಹೋಟೆಲ್ ಇಬ್ಬರ ಮನಸಿಗೆ ಹಿಡಿಸಿತು. ನೈನಿತಾಲ್ ಗಿರಿಧಾಮದ ವಾತಾವರಣವನ್ನು ಅವರು ಅಲ್ಲಿ ಕಂಡುಕೊಂಡರು.

ಭಾರತದಿಂದ ಕೀನ್ಯಾಕ್ಕೆ ಬಂದ ಮೇಲೆ ವೃದ್ಧಾಪ್ಯದ ವಯಸ್ಸಿನ ಕಾರಣದಿಂದ ಕಾರ್ಬೆಟ್ ಆರೋಗ್ಯದಲ್ಲಿ ಏರು ಪೇರು ಕಾಣತೊಡಗಿತು. ಮಲೇರಿಯಾ ರೋಗದಿಂದ ಚೇತರಿಸಿಕೊಂಡ ನಂತರವೂ ಕಾರ್ಬೆಟ್‌ನ ಎದೆಯಲ್ಲಿ ಕಫ ಕಟ್ಟಿಕೊಂಡು ತೊಂದರೆ ಕೊಡತೊಡಗಿತು. ಆತನ ನಡಿಗೆಯಲ್ಲಿ ಮೊದಲಿನ ವೇಗ ಇರಲಿಲ್ಲ. ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ. ಬೇಸರವಾದಾಗ ಅರಣ್ಯಕ್ಕೆ ಹೋಗಿ ಬಗೆ ಬಗೆಯ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿದ್ದ. ಉಳಿದ ವೇಳೆ ಅಕ್ಕ ತಮ್ಮ ಇಬ್ಬರೂ ತಮ್ಮ ಕಾಟೇಜ್ ವರಾಂಡದಲ್ಲಿ ಕೂರುತ್ತಿದ್ದರು, ಇಲ್ಲವೇ ಸಣ್ಣ ವಾಕ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ  ಕಾರ್ಬೆಟ್ ಒಬ್ಬನೇ ಕೀನ್ಯಾದ ಉತ್ತರ ಭಾಗದಲ್ಲಿದ್ದ ಕಡಲತೀರಕ್ಕೆ ಹೋಗಿ ಅಲ್ಲಿ ಮಲಿಂಡಿ ಎಂಬ ನಗರದ ಹೊಟೇಲ್‌ನಲ್ಲಿ ಉಳಿದುಕೊಂಡು ಮೀನು ಶಿಕಾರಿ ಮಾಡುತ್ತಿದ್ದ. ಇಷ್ಟೆಲ್ಲಾ ಹವ್ಯಾಸಗಳ ನಡುವೆ ಅವನಿಗೆ ಭಾರತದಲ್ಲಿದ್ದಂತೆ ಸಾಮಾಜಿಕ ಬದುಕನ್ನು ಅಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ಕೊರತೆ ಸದಾ ಕಾರ್ಬೆಟ್‌ನನ್ನು ಕಾಡುತಿತ್ತು.

ಕೀನ್ಯಾದ ಅರಣ್ಯಕ್ಕೆ ಭೇಟಿ ನೀಡಲು ವಿಶ್ವಾದ್ಯಂತ ಪ್ರವಾಸಿಗರು ಬರುತ್ತಿದ್ದದನ್ನು ಗಮನಿಸಿದ ಜಿಮ್ ಕಾರ್ಬೆಟ್ ತನ್ನ ಗೆಳೆಯ ಇಬ್ಬೊಟ್‌ಸನ್  ಹಾಗೂ ಮತ್ತೊಬ್ಬ ಗೆಳೆಯನ ಜೊತೆಗೂಡಿ ಅರಣ್ಯ ಸಫಾರಿಗಾಗಿ ಪ್ರವಾಸಿ ಸಂಸ್ಥೆಯನ್ನು 1948 ರಲ್ಲಿ ಹುಟ್ಟು ಹಾಕಿದ. ಪ್ರವಾಸಿಗರು ನೇರವಾಗಿ ಅರಣ್ಯಕ್ಕೆ ನುಸುಳಿ ಅಲ್ಲಿನ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡುವುದರ ಜೊತೆಗೆ ಕೆಲವೊಮ್ಮೆ ತಾವೇ ಅಪಾಯದ ಸ್ಥಿತಿಗೆ ಸಿಲುಕಿಕೊಳ್ಳತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿದ ಪ್ರವಾಸಿ ಸಂಸ್ಥೆ “ಸಫಾರಿ ಲ್ಯಾಂಡ್” ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿತು. ಇದರಿಂದ ಬಂದ ಲಾಭದಿಂದ ಕಾರ್ಬೆಟ್ ಒಂದು ಐಷಾರಾಮಿ ಕಾರು ಖರೀದಿಸಿದ. ಅವನ ಓಡಾಟದ ಖರ್ಚಿಗೆ ತಾನು ಬರೆದಿದ್ದ ಕೃತಿಗಳಿಂದ ಆ ಕಾಲಕ್ಕೆ ಲಕ್ಷ ರೂಪಾಯಿಗೂ ಮೀರಿ ಬರುತ್ತಿದ್ದ ಲೇಖಕನ ಸಂಭಾವನೆ ಹಣವನ್ನು ವಿನಿಯೋಗಿಸುತ್ತಿದ್ದ.

1950 ರ ವೇಳೆಗೆ ಕೀನ್ಯಾದಲ್ಲೂ ಕೂಡ ಬ್ರಿಟಿಷರಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದಿಂದ ಹಿಂಸಾತ್ಮಕ ಹೋರಾಟಗಳು ಆರಂಭಗೊಂಡವು. ಕೀನ್ಯಾದಲ್ಲಿ ಇದ್ದ ಯುರೋಪಿಯನ್ನರ ಕೃಷಿ ತೋಟಗಳು, ಕಾಫಿ, ಚಹಾ ಎಸ್ಟೇಟ್‌ಗಳು ದಾಳಿಗೆ ತುತ್ತಾದವು. ಬ್ರಿಟಿಷರ ಬಳಿ ಕೆಲಸ ಮಾಡುತ್ತಿದ್ದ ಆಫ್ರಿಕನ್ನರು ಹಿಂಸೆಯ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಕಾರ್ಬೆಟ್ ಮತ್ತು ಮ್ಯಾಗಿ ಇವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. ಎರಡೂ ವೃದ್ಧ ಜೀವಗಳು ಸಾವಿನ ಭಯದಿಂದ ತತ್ತರಿಸಿ ಹೋದವು. ಕಿಕಿಯೂ ಎಂಬ ಬುಡಕಟ್ಟು ಜನಾಂಗ ಪ್ರಾರಂಭಿಸಿದ ಈ ಹೋರಾಟಕ್ಕೆ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಪ್ರೇರಣೆಯಾಗಿತ್ತು. ಕಾರ್ಬೆಟ್ ಮತ್ತು ಮ್ಯಾಗಿ ಇಬ್ಬರೂ ಸ್ವಲ್ಪ ಕಾಲ ಕೀನ್ಯಾ ತೊರೆದು ಇಂಗ್ಲೆಂಡ್‌ಗೆ ಬಂದು ವಾಸವಾಗಿದ್ದರು. ಭಾರತದಲ್ಲಿ ಪರಿಚಯವಾಗಿ ಇಂಗ್ಲೆಂಡ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವನ ಅನೇಕ ಅಧಿಕಾರಿ ಮಿತ್ರರು ನೆರವಾದರು.

1951 ರಿಂದ 1953ರ ನಡುವೆ ಕೀನ್ಯಾದಲ್ಲಿ ಹೋರಾಟ ತೀವ್ರವಾದಾಗಲೆಲ್ಲಾ ಇಂಗ್ಲೆಂಡ್‌ಗೆ ಬಂದು ಅಕ್ಕ ತಮ್ಮ ವಾಸಿಸುತ್ತಿದ್ದರು. ಈ ನಡುವೆ ಕಾರ್ಬೆಟ್‌ಗೆ ಭಾರತದ ನೆನಪು ಕಾಡತೊಡಗಿತು. ಅವನ ಸೇವಕರು, ಅವನ ಹಳ್ಳಿಯ ಜನ, ಕುಮಾವನ್ ಪ್ರಾಂತ್ಯದ ಘರ್ವಾಲ್ ಬುಡಕಟ್ಟು ಜನಾಂಗದ ಅನೇಕ ಹಳ್ಳಿಯ ರೈತರು ಅವನ ಸ್ಮೃತಿಯಲ್ಲಿ ಬರತೊಡಗಿದರು. ಇದರ ಪ್ರಭಾವದಿಂದ ಅವನು 1952 ರಲ್ಲಿ “ಮೈ ಇಂಡಿಯ” ಎಂಬ ಕೃತಿಯನ್ನು ಬರೆಯಲು ಸಾಧ್ಯವಾಯಿತು. ಇದನ್ನೂ ಕೂಡ ಆಕ್ಸಫರ್ಡ್ ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಈ ಕೃತಿಯಲ್ಲಿ ಜಿಮ್ ಕಾರ್ಬೆಟ್ ಭಾರತದ ಬಗ್ಗೆ, ಇಲ್ಲಿನ ಜನರ ಔದಾರ್ಯದ ಬಗ್ಗೆ, ಶ್ರೀಮಂತ ಜಮೀನ್ದಾರರು, ಮತ್ತು ಹಣದ ಲೇವಾದೇವಿದಾರರ ಕೌರ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಹಳ್ಳಿಗಳ ಸಾಮಾನ್ಯ ಜನ ಕಾರ್ಬೆಟ್‌ನ ಈ ಕೃತಿಯಲ್ಲಿ ನಾಯಕರಂತೆ ವಿಜೃಂಭಿಸಿದ್ದಾರೆ. ಈ ಕೃತಿ ಕೂಡ ವಿಶ್ವ ಪ್ರಸಿದ್ಧಿ ಪಡೆಯಿತು. “ಮೈ ಇಂಡಿಯ” ಕೃತಿಯ ಮೂಲಕ  ಕಾರ್ಬೆಟ್, ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯರ ಬಗ್ಗೆ ಇದ್ದ ಕೆಟ್ಟ ಭಾವನೆಗಳನ್ನು ಹೋಗಲಾಡಿಸಿದ. ಅಷ್ಟೇ ಅಲ್ಲ, ಭಾರತದ ಬಹು ಸಂಸ್ಕೃತಿಯ ನಡುವೆ ಇಲ್ಲಿ ಮುಗ್ಧ ಜನ ಸರಳವಾಗಿ ಬದುಕುವ ಕಲೆಯನ್ನ, ಅವರ ಔದಾರ್ಯವನ್ನು ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಕಾರ್ಬೆಟ್ ಕಟ್ಟಿಕೊಟ್ಟಿರುವುದು ವಿಶೇಷ. ಇದು ಅವನ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಈ ಕೃತಿಯ ನಂತರ ಕಾರ್ಬೆಟ್ ನೈನಿತಾಲ್ ಮತ್ತು ಕಲಾದೊಂಗಿ, ಚೋಟಿಹಲ್ದಾನಿ ಹಳ್ಳಿಗಳಲ್ಲಿ ಕಳೆದ ತನ್ನ ಬಾಲ್ಯವನ್ನು ಮತ್ತು ಅರಣ್ಯ ಮತ್ತು ಪರಿಸರಕ್ಕೆ ತನಗೆ ಪ್ರೇರಣೆಯಾದ ಬಗೆಯನ್ನು ವಿವರಿಸುವ “ಜಂಗಲ್ ಲೋರ್” ಕೃತಿಯನ್ನು ಬರೆದ. ಕಾರ್ಬೆಟ್‌ನ ಕೃತಿಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ತನ್ನ ಶಿಕಾರಿಯ ಅನುಭವಗಳನ್ನೆಲ್ಲ ದಾಖಲಿಸಿದ. ಇಂತಹ ಕೃತಿಗಳಲ್ಲಿ “ಟೆಂಪಲ್ ಟೈಗರ್” ಪ್ರಮುಖವಾದುದು.

ಜಿಮ್ ಕಾರ್ಬೆಟ್ ಬರೆದ ಕೊನೆಯ ಪುಸ್ತಕವೆಂದರೆ, “ಟ್ರೀ ಟಾಪ್” ಎನ್ನುವ ಪುಟ್ಟ ಕೃತಿ. ಈಗಿನ ಇಂಗ್ಲೆಂಡಿನ ಎಲಿಜಬತ್ ರಾಣಿ (ಕಳೆದ ಜೂನ್‌ನಲ್ಲಿ ಈ ರಾಣಿಯ ಪಟ್ಟಾಭಿಷೇಕದ 60 ನೇ ವರ್ಷದ ಆಚರಣೆಯನ್ನು ಇಂಗ್ಲೆಂಡ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು) ಈಕೆ ತನ್ನ 22 ನೇ ವಯಸ್ಸಿನಲ್ಲಿ ತನ್ನ ಪತಿ ರಾಜಕುಮಾರ ಪಿಲಿಪ್ ಜೊತೆ 1952ರಲ್ಲಿ ಕೀನ್ಯಾ ಪ್ರವಾಸ ಕೈಗೊಂಡಿದ್ದಾಗ ಒಂದು ರಾತ್ರಿ ಮರದ ಮೇಲೆ ನಿರ್ಮಿಸುವ ಮಚ್ಚಾನಿನ ಮೇಲೆ ಕುಳಿತು ವನ್ಯ ಮೃಗಗಳನ್ನು ವೀಕ್ಷಿಸಬೇಕು ಎಂದು ಅಪೇಕ್ಷೆಪಟ್ಟಳು. ಅವಳ ಆಸೆಯಂತೆ ಕೀನ್ಯಾದ ಅರಣ್ಯದ ನಡುವೆ ಮರಗಳ ಮೇಲೆ 50 ಅಡಿ ಉದ್ದ ಮತ್ತು 20 ಅಡಿ ಅಗಲದ ವಿಶಾಲವಾದ ವೇದಿಕೆ ನಿರ್ಮಿಸಿ, ರಾಣಿ ಮತ್ತು ಅವಳ ಪರಿವಾರದ ನಲವತ್ತು ಸದಸ್ಯರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಲಾಗಿತ್ತು. ರಾಣಿ ಕುಟುಂಬದ ಸುರಕ್ಷತೆ ಮತ್ತು ಉಸ್ತುವಾರಿಯನ್ನು ಕಾರ್ಬೆಟ್ ಹೊತ್ತಿದ್ದ. ಇಡೀ ರಾತ್ರಿ ರಾಣಿ ಕುಟುಂಬಕ್ಕೆ ಪ್ರಾಣಿಗಳ ಚಲನ ವಲನ, ಅವುಗಳ ಜೀವನ ವೈಖರಿ ಎಲ್ಲವನ್ನು ವಿವರಿಸಿದ. ನೀರಿನ ಹೊಂಡವಿದ್ದ ಸಮೀಪ ವೇದಿಕೆ ನಿರ್ಮಿಸಿದ್ದರಿಂದ ರಾತ್ರಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ನೋಡುವ ಅವಕಾಶ ರಾಣಿಗೆ ದೊರೆಯಿತು. ಇದು ಆಕೆಯ ಪಾಲಿಗೆ ಅತ್ಯಂತ ಸ್ಮರಣೀಯವಾದ ದಿನ. ಈ ಅನುಭವಗಳನ್ನು ಕುರಿತು. ಸುಮಾರು ನಲವತ್ತು ಪುಟಗಳಿರುವ ಕೃತಿ ಕಾರ್ಬೆಟ್ ಪಾಲಿಗೆ ಕೊನೆಯ ಕೃತಿಯಾಯಿತು.

1953ರ ವೇಳೆಗೆ ಸತತ ಅನಾರೋಗ್ಯದಿಂದ ಬಳಲಿದ ಕಾರ್ಬೆಟ್ ಕ್ಷಯ ರೋಗಕ್ಕೆ ಬಲಿಯಾಗಿ ನರಳತೊಡಗಿದ. ಅಂತಿಮವಾಗಿ 1955ರ ಏಪ್ರಿಲ್ 18 ರಂದು ಹೃದಯಾಘಾತಕ್ಕೆ ತುತ್ತಾಗಿ ಮರು ದಿನ 19ರಂದು ನೈರಿ ಆಸ್ಪತ್ರೆಯಲ್ಲಿ ತನ್ನ ಅಕ್ಕ ಮ್ಯಾಗಿಯ ತೊಡೆಯ ಮೇಲೆ ತಲೆ ಇಟ್ಟು ತನ್ನ 79 ವರ್ಷದ ವರ್ಣರಂಜಿತ ಬದುಕಿಗೆ ವಿದಾಯ ಹೇಳಿದ. ಸಾಯುವ ಮುನ್ನ ಕಾರ್ಬೆಟ್ ತನ್ನ ಅಕ್ಕನಿಗೆ ಹೇಳಿದ ಕೊನೆಯ ಮಾತುಗಳಿವು: “ಧೈರ್ಯವಾಗಿರು, ಇತರರು ಸುಖದಿಂದ ಬಾಳುವೆ ಮಾಡಲು, ಜಗತ್ತು ಸದಾ ಸಂತೋಷದಿಂದ ಇರುವಂತೆ ನೋಡಿಕೊ.” ಯುರೋಪ್ ಮೂಲದ ಕುಟುಂಬದಿಂದ ಭಾರತದಲ್ಲಿ ಹುಟ್ಟಿ, ನಂತರ ಆಫ್ರಿಕಾ ಖಂಡದಲ್ಲಿ ಸಾವನ್ನಪ್ಪಿದ ಕಾರ್ಬೆಟ್, ಒಂದರ್ಥದಲ್ಲಿ ಯುರೋಪ್, ಏಷ್ಯಾ, ಮತ್ತು ಆಫ್ರಿಕಾ ಖಂಡಗಳನ್ನು ತನ್ನ ಬದುಕಿನ ಮೂಲಕ ಬೆಸೆದು, ವಿಶ್ವಮಾನವನಾಗಿ, ಜಗತ್ತಿನಲ್ಲಿ ಚಿರಸ್ಥಾಯಿಯಾದ. ಜಿಮ್ ಕಾರ್ಬೆಟ್‌ನ ಶವವನ್ನು ನೃತಿ ಪಟ್ಟಣದ ಚರ್ಚ್‌ಗೆ ತಂದು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿ ಕ್ರೈಸ್ತರ ರುಧ್ರಭೂಮಿಯಲ್ಲಿ ಹೂಳಲಾಯಿತು.

ಜಿಮ್ ಕಾರ್ಬೆಟ್‌ನ ಸಾವಿನ ಸುದ್ಧಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು ಸುದ್ದಿ ಮಾಡಿ, ಶ್ರದ್ಧಾಂಜಲಿಯ ಲೇಖನ ಬರೆದವು. ಟೈಮ್ಸ್ ನಿಯತಕಾಲಿಕೆ ತನ್ನ ಮೇ ತಿಂಗಳ ಸಂಚಿಕೆಯನ್ನು ಕಾರ್ಬೆಟ್‌ಗಾಗಿ ಮೀಸಲಿಟ್ಟು, ಅವನ ಒಡನಾಡಿಗಳಿಂದ ಲೇಖನಗಳನ್ನು ಬರೆಸಿ ಅವನನ್ನು ಹಾಡಿ ಹೊಗಳಿತು. ಕಾರ್ಬೆಟ್ ನಿಧನದ ನಂತರ ಅವನ ಆಸೆಯಂತೆ ಸಹೋದರಿ ಮ್ಯಾಗಿ ಭಾರತದ ಚೋಟಿ ಹಲ್ದಾನಿಯ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತಾ ಬಂದಳು. 1957ರಲ್ಲಿ ಆಕೆಯ ನಿಧನಾನಂತರ ಭಾರತ ಸರ್ಕಾರ, ಅಲ್ಲಿನ ಭೂಮಿ ಮತ್ತು ನಿವೇಶನವನ್ನು ಕಾರ್ಬೆಟ್‌ನ ಕೊನೆಯ ಆಸೆಯಂತೆ ರೈತರ ಹೆಸರಿಗೆ ವರ್ಗಾಯಿಸಿತು. ಅವನು ವಾಸವಾಗಿದ್ದ ಚೋಟಿ ಹಲ್ದಾನಿಯ ಬಂಗಲೆಯನ್ನು ಸ್ಮಾರಕವನ್ನಾಗಿ ಮಾಡಿ, ಹಳ್ಳಿಯ ಜನರ ಉಸ್ತುವಾರಿಗೆ ವಹಿಸಿತು. ಇದಲ್ಲದೆ, ಹಿಂದೊಮ್ಮೆ ಜಿಮ್ ಕಾರ್ಬೆಟ್ ಆಸಕ್ತಿ ವಹಿಸಿ ಅಭಯಾರಣ್ಯ ಮಾಡಿದ್ದ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ ಅಧಿಕೃತವಾಗಿ “ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್” ಎಂದು ಘೋಷಿಸಿ ಕಾರ್ಬೆಟ್‌ಗೆ ಗೌರವ ಸೂಚಿಸಿತು.

ಇಂದು ಕೂಡ ಕಲದೊಂಗಿ ಮತ್ತು ಚೋಟಹಲ್ದಾನಿ ಹಳ್ಳಿಗಳ ಜನರ ಪಾಲಿಗೆ ದಂತ ಕಥೆಯಾಗಿರುವ, ತಮ್ಮ ಬದುಕಿಗೆ ಭೂಮಿ ಮತ್ತು ಮನೆ ನಿರ್ಮಿಸಿಕೊಟ್ಟು ದೈವವಾಗಿರುವ ಕಾರ್ಬೆಟ್ ಬಗ್ಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಈ ತಲೆಮಾರು ಕಾರ್ಬೆಟ್‌ನನ್ನು ನೋಡದಿದ್ದರೂ, ಬಾಯಿಂದ ಬಾಯಿಗೆ, ಎದೆಯಿಂದ ಎದೆಗೆ ಹರಿದು ಬಂದ ಅವನ ಗುಣವನ್ನು ಕಾಪಿಟ್ಟುಕೊಂಡು ಬಂದಿದೆ. ಹಾಗಾಗಿ ರಾಮನಗರ್, ಕಲದೊಂಗಿ, ಚೋಟಿ ಹಲ್ದಾನಿ ಹಳ್ಳಿಗಳಲ್ಲಿ, ಕಾರ್ಬೆಟ್ ಹೆಸರಿನ ಟೈಲರಿಂಗ್ ಶಾಪ್, ಸೇವಿಂಗ್ ಶಾಪ್, ಹೊಟೇಲ್, ಮೊಬೈಲ್ ಶಾಪ್ ಮತ್ತು ಬಡಾವಣೆಗಳನ್ನು ಕಾಣಬಹುದು. ಆದರೆ. ನೈನಿತಾಲ್ ಗಿರಿಧಾಮದಲ್ಲಿ ಜಿಮ್ ಕಾರ್ಬೆಟ್ ಹೆಸರು ಹೇಳಿದರೆ, ಹಾಗಂದರೇನು ಎಂದು ಪ್ರಶ್ನಿಸುವ ಜನರಿದ್ದಾರೆ. ಸ್ವತಃ ಕಾರ್ಬೆಟ್‌ನ ತಂದೆ ಕ್ರಿಸ್ಟೊಪರ್ ಹಾಗೂ ಕಾರ್ಬೆಟ್ ನಾಲ್ಕು ದಶಕಗಳ ಕಾಲ ಅಲ್ಲಿನ ಪುರಸಭೆಯ ಪ್ರತಿನಿಧಿಗಳಾಗಿ, ಉಪಾಧ್ಯಕ್ಷರಾಗಿ ದುಡಿದಿದ್ದರೂ ಕೂಡ ಈ ಕುರಿತು ಒಂದು ಸಣ್ಣ ದಾಖಲೆಯಿಲ್ಲ. ಇವತ್ತಿಗೂ ಉತ್ತರ ಭಾರತದ ಜನ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಆದರೆ, ನೈನಿತಾಲ್ ಜನಕ್ಕೆ ಈ ಬಗ್ಗೆ  ಇತಿಹಾಸದ ಪ್ರಜ್ಞೆಯೇ ಇಲ್ಲ. ಇದು ನಿಜಕ್ಕೂ ನೋವಿನ ಸಂಗತಿ.

(ಮುಗಿಯಿತು.)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-28)


– ಡಾ.ಎನ್.ಜಗದೀಶ್ ಕೊಪ್ಪ


ಜಿಮ್ ಕಾರ್ಬೆಟ್ ಭಾರತ ತೊರೆಯುವ ಮುನ್ನ ಕೊನೆಯ ದಿನಗಳಲ್ಲಿ ಬರೆದ ಎರಡು ಕೃತಿಗಳಿಂದ ವಿಶ್ವ ಪ್ರಸಿದ್ಧನಾದ. ಆತನ ಮೊದಲ ಕೃತಿಯನ್ನು (ಜಂಗಲ್ ಸ್ಟೊರೀಸ್) ಇಂಗ್ಲೆಂಡ್ ಮೂಲದ ‘ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್’ ಪ್ರಕಟಿಸಲು ಮುಂದೆ ಬಂದಿತು. ಭಾರತದ ಓದುಗರಿಗಾಗಿ ಮದ್ರಾಸ್ ಶಾಖೆಯ ಮುಖಾಂತರ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆ ನಂತರ ಅದನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಪ್ರಕಟಿಸಿತು. ಜಿಮ್ ಕಾರ್ಬೆಟ್‌ನ “ಜಂಗಲ್ ಸ್ಟೊರೀಸ್” ಕೃತಿ ನಿರೀಕ್ಷೆಗೂ ಮೀರಿ ಆತನಿಗೆ ಮತ್ತು ಪ್ರಕಟಿಸಿದ “ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್” ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿತು. ಕೇವಲ ಒಂದು ವರ್ಷದಲ್ಲಿ ಐದು ಲಕ್ಷ ಪ್ರತಿಗಳು ಮಾರಾಟವಾದವು. ಇಂಗ್ಲೆಂಡಿನಲ್ಲಿ ಪರಿಸರ ಕ್ಲಬ್ ರಚಿಸಿಕೊಂಡಿದ್ದ ಕೆಲವರು, ಈ ಕೃತಿಯನ್ನು ಕೊಂಡು ಸದಸ್ಯರಿಗೆ ಉಚಿತವಾಗಿ ಹಂಚಿದರು.

ಮತ್ತೇ ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆ, ಶಿಕಾರಿಯ ಅನುಭವನ್ನು ಬರೆದುಕೊಡುವಂತೆ  ಜಿಮ್ ಕಾರ್ಬೆಟ್‌ಗೆ ಮನವಿ ಮಾಡಿತು. ಇದರ ಫಲವಾಗಿ  ಕಾರ್ಬೆಟ್‌ನಿಂದ “ಮ್ಯಾನ್ ಈಟರ್ ಆಪ್ ಕುಮಾವನ್” ಎಂಬ ಕೃತಿ ಹೊರಬಂದಿತು. ಅವನ ಮೊದಲ ಕೃತಿ “ಜಂಗಲ್ ಸ್ಟೊರೀಸ್”, ಕಾಡಿನ ಅನುಭವಗಳ ಲೇಖನಗಳ ಸಂಕಲನವಾಗಿದ್ದರೆ, ಎರಡನೇ ಕೃತಿ ತಾನು ಬೇಟೆಯಾಡಿದ ನರಭಕ್ಷಕ ಚಿರತೆಯ ಒಂದು ಸುಧೀರ್ಘ ರೋಚಕ ಕಥನವಾಗಿತ್ತು. ಒಂದು ರೊಮಾಂಚಕಾರಿ ಪತ್ತೆದಾರಿ ಮಾದರಿಯಲ್ಲಿ ತಾನು ಬೇಟೆಯಾಡಿದ ನರಭಕ್ಷಕ ಹುಲಿಯ ಬಗ್ಗೆ ಪ್ರತಿ ಪುಟದಲ್ಲೂ ಓದುಗರಿಗೆ ಕುತೂಹಲವಿರುವಂತೆ ರೋಚಕತೆಯ ಅಂಶವನ್ನು ಕಾಪಾಡಿಕೊಂಡು ಬರೆದದ್ದು ಕಾರ್ಬೆಟ್‌ನ ವಿಶೇಷವಾಗಿತ್ತು.

ಈ ಕೃತಿ ಕೂಡ ಅಭೂತ ಪೂರ್ವ ಯಶಸ್ಸನ್ನು ಕಂಡಿತು. ಇದರಿಂದ ಪ್ರೇರಿತನಾದ ಕಾರ್ಬೆಟ್ ಮುಂದೆ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿದ ಅನುಭವವನ್ನು  “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಎಂಬ ಹೆಸರಿನಲ್ಲಿ ಪ್ರಕಟಿಸಿದ. ಈ ಕೃತಿ ಇಂದಿಗೂ ಕೂಡ ಜಗತ್ತಿನ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿದೆ. ಎರಡು ಸಾವಿರದ ಇಸವಿಯ ಅಂತ್ಯದ ವೇಳೆಗೆ ಈ ಕೃತಿ  ಜಗತ್ತಿನಾದ್ಯಂತ 56 ಲಕ್ಷ ಪ್ರತಿ ಮಾರಾಟವಾಗಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದ ಹಾಗೆ ಸ್ಥಳಿಯ ಭಾಷೆಗಳಲ್ಲಿ ಪ್ರಕಟವಾಗಿದೆ, (ಕನ್ನಡದಲ್ಲಿ ತೇಜಸ್ವಿ ಅನುವಾದ ಮಾಡಿರುವ ಈ ಕೃತಿ ಹದಿನಾಲ್ಕಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ)

1946ರ ಮಾರ್ಚ್‌ನಲ್ಲಿ ಅಮೇರಿಕಾದ “ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ” ಜಿಮ್ ಕಾರ್ಬೆಟ್‌ನಿಂದ ಹಕ್ಕು ಪಡೆದು, “ಮ್ಯಾನ್ ಈಟರ್ ಆಪ್ ಕುಮಾವನ್” ಚಿತ್ರವನ್ನು ನಿರ್ಮಿಸಿತು. ಭಾರತದ ಮೂಲದ ನಟ ಸಾಬು ನಾಯಕನಾಗಿದ್ದ ಈ ಚಿತ್ರಕ್ಕೆ ಭಾರತ ಸರ್ಕಾರ ಭಾರತದ ಅರಣ್ಯದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಲಿಲ್ಲ. ಹಾಗಾಗಿ ಹಾಲಿವುಡ್‌ನಲ್ಲಿ  ಸೆಟ್ ನಿರ್ಮಿಸಿ ಈ ಚಿತ್ರವನ್ನು ತಯಾರಿಸಲಾಯಿತು. ಹೀಗೆ ಭಾರತ ತೊರೆಯುವ ಮುನ್ನ ಅಪ್ಪಟ ಪರಿಸರ ಪ್ರೇಮಿಯಾಗಿದ್ದ ಕಾರ್ಬೆಟ್‌ಗೆ ಸಂಧಿಗ್ದ ಸ್ಥಿತಿಯೊಂದು ಎದುರಾಯಿತು. ತನ್ನ ಶಿಕಾರಿಯ ಅನುಭವಗಳನ್ನು ದಾಖಲಿಸುತ್ತಾ ಜಗತ್ ಪ್ರಸಿದ್ಧ ಲೇಖಕನಾಗಿ ಹೊರಹೊಮ್ಮಿದ ಕಾರ್ಬೆಟ್ ಅನಿರೀಕ್ಷಿತವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದ. ಅದೃಷ್ಟವಶಾತ್ ಆ ವೇಳೆಗೆ ಅವಿಷ್ಕಾರಗೊಂಡಿದ್ದ ಪೆನ್ಸಿಲಿನ್ ಔಷಧದಿಂದಾಗಿ ಚೇತರಿಸಿಕೊಂಡ. ಆದರೆ, ಅವನಿಗೆ ಗಂಟಲು ಬೇನೆ ಕಾರ್ಬೆಟ್‌ಗೆ ಕಾಣಿಸತೊಡಗಿತು. ತಮ್ಮನ ಅನಾರೋಗ್ಯವನ್ನು ನೋಡಿ, ಹೆದರಿದ ಅಕ್ಕ ಮ್ಯಾಗಿ ಭಾರತ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಳು. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಮ್ಮ ಆಸ್ತಿಗಳನ್ನು ಭಾರತ ಮುಟ್ಟುಗೋಲು ಹಾಕಿಕೊಂಡರೆ, ಏನು ಮಾಡುವುದು ಎಂಬ ಅವನ ಪ್ರಶ್ನೆಗೆ ಮ್ಯಾಗಿ ಬಳಿ ಉತ್ತರವಿರಲಿಲ್ಲ. ಆಕೆಗಂತೂ ನೈನಿತಾಲ್ ತೊರೆದು ಹೋಗುವುದು ಸಂಕಟದ ವಿಷಯವಾಗಿತ್ತು.

ಗಾರ್ನಿ ಹೌಸ್ ಬಂಗಲೆಯನ್ನು ಮಾರಿದ ನಂತರ ಒಂದು ವಾರ ಆ ಮನೆಯಲ್ಲಿದ್ದು. ಮನೆ ತೊರೆದು ಬರುವಾಗ, ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕೈಮುಗಿಯುತ್ತಾ ಗೇಟಿನ ಮುಂದೆ ತಲೆತಗ್ಗಿಸಿ ನಿಂತಿದ್ದರು. ಅವರ ಕೆನ್ನೆಗಳು ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಕಾರ್ಬೆಟ್ ಮತ್ತು ಮ್ಯಾಗಿ ಅವರನ್ನು ಸಂತೈಸುವ ಶಕ್ತಿ ಕಳೆದುಕೊಂಡು, ಕಣ್ಣೀರು ಹಾಕುತ್ತಾ ನೈನಿತಾಲ್ ಪರ್ವತವನ್ನು ಇಳಿದು, ಕಲದೊಂಗಿಯ ಮನೆ ಸೇರಿಕೊಂಡಿದ್ದರು. ಬರುವಾಗ ಆ ಎರಡು ವೃದ್ಧ ಜೀವಗಳು ಪರಸ್ಪರ ಕೈ ಹಿಡಿದುಕೊಂಡು ಹಸ್ತವನ್ನು ಅದುಮುವುದರ ಮೂಲಕ ಒಬ್ಬರಿಗೊಬ್ಬರು ಸಂತೈಸಿಕೊಳ್ಳತ್ತಿದ್ದರು. ನೈನಿತಾಲ್, ಮ್ಯಾಗಿ ಮತ್ತು ಕಾರ್ಬೆಟ್‌ಗೆ ಕೇವಲ ಗಿರಿಧಾಮ ಮಾತ್ರವಲ್ಲ, ತಾಯಿ ನೆಲವಾಗಿತ್ತು. ಅಲ್ಲಿಯೇ ಹುಟ್ಟಿ, ಆ ನೆಲದ ಜೊತೆ ಸುಧೀರ್ಘ ಒಡನಾಡಿದ ಆ ಹಿರಿಯ ಜೀವಗಳ ಬಾಲ್ಯದ ನೆನಪುಗಳು ಅಲ್ಲಿನ ಕಲ್ಲು, ಮಣ್ಣು, ಗಿಡ, ಮರ, ಪಕ್ಷಿ, ನೀರು, ಗಾಳಿ ಎಲ್ಲವುಗಳ ಜೊತೆ ತಳಕು ಹಾಕಿಕೊಂಡಿದ್ದವು. ಇನ್ನೆಂದೂ ತಿರುಗಿ ಈ ನೆಲಕ್ಕೆ ನಾವು ಬಾರೆವು ಎಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸಿತು. ಕೀನ್ಯಾಕ್ಕೆ ತೆರಳುವ ಮುನ್ನ ಕಾರ್ಬೆಟ್ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಅಕ್ಕ ಮ್ಯಾಗಿಯ ಜೊತೆ ಸಿಷೆಲ್ಸ್ ದ್ವೀಪಕ್ಕೆ ಹೋಗಿ ಮೂರು ತಿಂಗಳು ವಿಶ್ರಾಂತಿ ಪಡೆದು ಮರಳಿ ಭಾರತಕ್ಕೆ ಬಂದ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಲಾರ್ಡ್‌ ಮೌಂಟ್‌ಬ್ಯಾಟನ್‌ನನ್ನು ವೈಸ್‌ರಾಯ್ ಆಗಿ ನೇಮಕ ಮಾಡಿತು. ಆಗಸ್ಟ್ 15 ಕ್ಕೆ ಮುಂಚಿತವಾಗಿ ಬ್ರಿಟಿಷ್ ಸರ್ಕಾರ ಭಾರತದ ಸರ್ಕಾರದ ಮುಂದೆ ಹಲವಾರು ನಿಬಂಧನೆಗಳನ್ನು ವಿಧಿಸಿತ್ತು. ಅವುಗಳಲ್ಲಿ ಭಾರತದಲ್ಲಿರುವ ಬ್ರಿಟಿಷರ ಆಸ್ತಿ ಮತ್ತು ಅವರ ಜೀವಗಳಿಗೆ ಧಕ್ಕೆಯಾಗಬಾರದು ಎಂಬುದು ಒಂದಾಗಿತ್ತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಸೇನೆ ಭಾರತದಲ್ಲಿ ಇರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು. ಸ್ವಾತಂತ್ರ್ಯದ ದಿನಗಳು ಹತ್ತಿರವಾದಂತೆ ದೇಶಾದ್ಯಂತ ನೆಲೆಸಿದ್ದ ಬ್ರಿಟಿಷರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲವನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಕಾರ್ಬೆಟ್ ಮತ್ತು ಮ್ಯಾಗಿಗೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಉತ್ತರಭಾರತದಲ್ಲಿ, ವಿಶೇಷವಾಗಿ ಪಂಜಾಬ್ ಲಾಹೋರ್ ನಗರಗಳಲ್ಲಿ ಸಂಭವಿಸಿದ ಗಲಭೆಯಿಂದ ಆತಂಕಕ್ಕೆ ಒಳಗಾದರು. ಹಿಂಸೆಯಿಂದ ಭಯಭೀತರಾದ ಇಬ್ಬರೂ ಕೂಡಲೇ ಭಾರತ ತೊರೆಯಲು ನಿರ್ಧರಿಸಿದರು.

ಕೀನ್ಯಾದಲ್ಲಿ ಕಾರ್ಬೆಟ್‌ನ ಹಿರಿಯ ಸಹೋದರ ಟಾಮ್ ಕಾರ್ಬೆಟ್ ಮತ್ತು ಸಹೋದರಿಯ ಮಗ ನೆಸ್ಟರ್ ಇದ್ದುದರಿಂದ ಇವರಿಬ್ಬರ ವಾಸಕ್ಕೆ ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆ ವೇಳೆಗೆ ತಾಂಜೇನಿಯಾದಲ್ಲಿದ್ದ ಕೃಷಿತೋಟವನ್ನು, ಪಾಲುದಾರ ಮತ್ತು ಕುಮಾವನ್ ಪ್ರಾಂತ್ಯದ ಮಾಜಿ ಜಿಲ್ಲಾಧಿಕಾರಿ ವಿಂದಮ್ ವಾಪಸ್ ಇಂಗ್ಲೆಂಡಿಗೆ ತೆರಳಿದ ಕಾರಣ ಮಾರಾಟ ಮಾಡಲಾಗಿತ್ತು. ಕಾರ್ಬೆಟ್ ತನ್ನ ಪಾಲಿನ ಹಣವನ್ನು ಅಕ್ಕನ ಮಗ ನೆಸ್ಟರ್‌ಗೆ ನೀಡಿ ಕೀನ್ಯಾದಲ್ಲಿ ತೋಟ ಮತ್ತು ಮನೆ ಸಿದ್ಧಪಡಿಸಲು ಕೇಳಿಕೊಂಡಿದ್ದನು. ತಾವು ಭಾರತ ತೊರೆಯುತ್ತಿರುವ ವಿಷಯವನ್ನು ಚೋಟಿ ಹಲ್ದಾನಿ ಹಳ್ಳಿಯ ಜನಕ್ಕೆ ತಿಳಿಸಲಾಗದೆ, ಅಣ್ಣನ ಮನೆಗೆ ಹೋಗಿ ಬರುತ್ತೀವಿ ಎಂದು ತಿಳಿಸಿ, ಅವರಿಗೆ ನಂಬಿಕೆ ಬರುವ ಹಾಗೆ ಮನೆಯ ಬೀಗದ ಕೀಲಿಯನ್ನು ಅವರಿಗೆ ಒಪ್ಪಿಸಿ, ಲಕ್ನೊ ಮಾರ್ಗವಾಗಿ ಬಾಂಬೆಗೆ ರೈಲಿನಲ್ಲಿ ತೆರಳಿದರು.

ಕಾರ್ಬೆಟ್ ಮತ್ತು ಮ್ಯಾಗಿ ಭಾರತ ತೊರೆಯುತ್ತಿರುವುದು ಅವರ ಆಪ್ತ ಸೇವಕ ರಾಮ್‌ಸಿಂಗ್‌ಗೆ ಮಾತ್ರ ತಿಳಿದಿತ್ತು ಅವನಿಗೆ ಚೋಟಿ ಹಲ್ದಾನಿ ಹಳ್ಳಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಪ್ರತಿ ತಿಂಗಳು ತಿಂಗಳಿಗೆ 10 ರೂ. ಮಾಸಾಶನ ಸಿಗುವಂತೆ ಕಾರ್ಬೆಟ್ ವ್ಯವಸ್ಥೆ ಮಾಡಿದ್ದ. ಲಕ್ನೊ ರೈಲು ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಬಂದಿದ್ದ ರಾಮ್‌ಸಿಂಗ್‌ ರೈಲು ಹೊರಡುತ್ತಿದ್ದಂತೆ ಪ್ಲಾಟ್ ಫಾರಂ ಮೇಲೆ ಕುಕ್ಕರುಗಾಲಿನಲ್ಲಿ ಬಿಕ್ಕಳಿಸಿ ಅತ್ತುಬಿಟ್ಟ. ಅವನಿಗೆ ವಿದಾಯ ಹೇಳಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಕಾರ್ಬೆಟ್ ಮತ್ತು ಮ್ಯಾಗಿಯ ಕಣ್ಣುಗಳು ತೇವವಾದವು.

ಬಾಂಬೆ ತಲುಪಿದ ಕಾರ್ಬೆಟ್ ಮತ್ತು ಅವನ ಸಹೋದರಿ, 1947ರ ಡಿಸಂಬರ್ 15ರಂದು ಹಡಗಿನ ಮೂಲಕ ಮೊಂಬಸ ಪಟ್ಟಣ ತಲುಪಿದರು. ಅಲ್ಲಿಂದ ರೈಲಿನಲ್ಲಿ ರಾಜಧಾನಿ ನೈರೋಬಿ ನಗರಕ್ಕೆ ಬಂದಿಳಿದರು. ಆ ವೇಳೆಗಾಗಲೇ  ಜಿಮ್ ಕಾರ್ಬೆಟ್‌ನ ಜೀವದ ಗೆಳೆಯ ಹಾಗೂ ರುದ್ರ ಪ್ರಯಾಗದ ಜಿಲ್ಲಾಧಿಕಾರಿಯಾಗಿದ್ದ ಇಬ್ಬೊಟ್ ಸನ್ ಸೇವೆಯಿಂದ ನಿವೃತ್ತನಾಗಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಪಡೆದು ತನ್ನ ಪತ್ನಿ ಜೀನ್ ಜೊತೆ ನೈರೋಬಿಯಲ್ಲಿ ವಾಸವಾಗಿದ್ದ. ಒಂದು ವಾರ ಅಕ್ಕ ತಮ್ಮ ಇಬ್ಬರೂ ಇಬ್ಬೊಟ್ ಸನ್ ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದರು. ಇಬ್ಬೊಟ್ ಸನ್ ಮತ್ತು ಕಾರ್ಬೆಟ್ ಇಬ್ಬರೂ ಕುಳಿತು ಭಾರತದಲ್ಲಿದ್ದ ಸಂದರ್ಭದಲ್ಲಿ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲಲು ತಾವುಗಳು  ಅನುಭವಿಸಿದ ಬವಣೆಗಳನ್ನು ಮೆಲುಕು ಹಾಕಿದರು.

ಇತ್ತ ಕಾಬೆಟ್‌ನ ಅಕ್ಕನ ಮಗ ನೆಸ್ಟರ್ ತನ್ನ ಸೋದರ ಮಾವ ಕಾರ್ಬೆಟ್ ಮತ್ತು ಚಿಕ್ಕಮ್ಮ ಮ್ಯಾಗಿ ಇವರುಗಳ ವಿಶ್ರಾಂತಿ ಜೀವನಕ್ಕಾಗಿ ಕೀನ್ಯಾದ ಕಿಪ್ ಕರೆನ್ ಎಂಬಲ್ಲಿ 650 ಎಕರೆ ಕಾಫಿ ತೋಟ ಖರೀದಿಸಿ, ಅವರಿಗಾಗಿ ಒಂದು ಸುಂದರ ಹಾಗೂ ಚಿಕ್ಕದಾದ ಕಾಟೇಜ್ ನಿರ್ಮಾಣ ಮಾಡಿದ್ದ. ಈ ಪ್ರದೇಶ ಮತ್ತು ಪರಿಸರ ಕಾರ್ಬೆಟ್‌ಗೆ ಇಷ್ಟವಾದರೂ ಅಕ್ಕ ಮ್ಯಾಗಿಗೆ ಇಷ್ಟವಾಗಲಿಲ್ಲ. ನಗರ ಮತ್ತು ಪಟ್ಟಣಗಳಿಂದ ಬಹು ದೂರದಲ್ಲಿದ್ದ ಈ ತೋಟದಲ್ಲಿ ಇರುವುದು ಕಷ್ಟ ಎಂಬ ಭಾವನೆ ಮ್ಯಾಗಿಗೆ ಕಾಡತೊಡಗಿತು. ಇಬ್ಬರೂ ಎಪ್ಪತ್ತು ದಾಟಿದ್ದ ವಯೋವೃದ್ಧರಾದ್ದರಿಂದ ಅನಾರೋಗ್ಯಕ್ಕೆ ತುತ್ತಾದರೆ, ವೈದ್ಯರಾಗಲಿ, ಆಸ್ಪತ್ರೆಗಳಾಗಲಿ ಹತ್ತಿರದಲ್ಲಿ ಇರದಿರುವುದು ಮ್ಯಾಗಿಯ ಬೇಸರಕ್ಕೆ ಕಾರಣವಾಗಿತ್ತು. ಸಹೋದರಿಯ ಮಾತಿಗೆ ಎದುರಾಡದ ಕಾರ್ಬೆಟ್ ಗೊಂದಲಕ್ಕೆ ಸಿಲುಕಿದ. ನಂತರ ಅವಳ ಇಚ್ಛೆಯಂತೆ ಆ ಮನೆ ಮತ್ತು ಕಾಫಿ ತೋಟವನ್ನು ತೊರೆದು ಅವನ ಹಿರಿಯಣ್ಣ ಟಾಮ್ ಕಾರ್ಬೆಟ್‌ನ ಎಸ್ಟೇಟ್‌ಗೆ ತನ್ನ ವಾಸ್ತವ್ಯವನ್ನು ಬದಲಿಸಿದ.

ಭಾರತವನ್ನು, ವಿಶೇಷವಾಗಿ ನೈನಿತಾಲ್ ತೊರೆದು ಬಂದಿರುವುದು ಮ್ಯಾಗಿಯ ಮಾನಸಿಕ ಕ್ಲೇಶಕ್ಕೆ ಕಾರಣವಾಗಿದೆ ಎಂದು ಊಹಿಸಿದ ಕಾರ್ಬೆಟ್ ಹಿರಿಯಣ್ಣನ ಸನೀಹದಲ್ಲಿ ನೈನಿತಾಲ್ ಗಿರಿಧಾಮದ ಬಾಲ್ಯದ ನೆನಪುಗಳ ಜೊತೆ ಅಕ್ಕ ಮ್ಯಾಗಿ ನೆಮ್ಮದಿಯಿಂದ ಇರುತ್ತಾಳೆ ಎಂದು ನಂಬಿದ್ದ. ಆದರೆ, ಇಲ್ಲಿಯೂ ಬಹಳ ಕಾಲ ಇರಲು ಮ್ಯಾಗಿ ತಕರಾರು ತೆಗೆದಳು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ ತಣ್ಣನೆಯ ವಾತಾವರಣ, ಸ್ವಚ್ಛಂಧ ಪರಿಸರದ ಬದುಕಿನಲ್ಲಿ ಹುಟ್ಟಿ ಬೆಳೆದು, ಜೀವನ ಬಹುತೇಕ ಭಾಗವನ್ನು ಕಳೆದಿದ್ದ ಮ್ಯಾಗಿಗೆ ಕೀನ್ಯಾದ ಗ್ರಾಮಾಂತರ ಪ್ರದೇಶ, ಮತ್ತು ಪುಟ್ಟ ಮನೆಯ ವಾಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಅಂತಿಮವಾಗಿ ಕೀನ್ಯಾದ ಹಿಮ ಪರ್ವತದ ತಪ್ಪಲಿನಲ್ಲಿ ಇದ್ದ ಹೊಟೇಲ್ ಒಂದರಲ್ಲಿ ವಿಶಾಲವಾದ ಕಾಟೇಜ್ ಅನ್ನು ಬಾಡಿಗೆ ಪಡೆದು ಕಾರ್ಬೆಟ್ ಮ್ಯಾಗಿ ಇಬ್ಬರೂ ವಾಸಿಸತೊಡಗಿದರು. ಪರ್ವತದ ಇಳಿಜಾರಿನಲ್ಲಿ ಇದ್ದ ಹೊಟೇಲ್‌ನ ಕೊಠಡಿಯಿಂದ ಕಾಣುತ್ತಿದ್ದ ಹಿಮ ಪರ್ವತ ಅರಣ್ಯ ಇವೆಲ್ಲವೂ ಮ್ಯಾಗಿಯ ಪಾಲಿಗೆ ನೈನಿತಾಲ್ ಗಿರಿಧಾಮದ ವಾತಾವರಣದಂತೆ ಕಂಡು ಬಂದವು. ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಯಸಿ, ತಂಗಿದ್ದ ಕೊಠಡಿಯನ್ನು ದೀರ್ಘಾವಧಿಗೆ ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡರು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-27)


– ಡಾ.ಎನ್.ಜಗದೀಶ್ ಕೊಪ್ಪ


1939 ರಲ್ಲಿ ಭಾರತಕ್ಕೆ ವೈಸ್‌ರಾಯ್ ಹುದ್ದೆಗೆ ನೇಮಕವಾಗಿ ದೆಹಲಿಗೆ ಬಂದ ಲಿನ್‌ಲಿಥ್‌ಗೌ, ಜಿಮ್ ಕಾರ್ಬೆಟ್‌ನ ಲೇಖನಗಳನ್ನು ಓದಿ ಅವುಗಳಿಂದ ಪ್ರಭಾವಿತನಾಗಿ, ಕಾರ್ಬೆಟ್‌ನನ್ನು ದೆಹಲಿಗೆ ಕರೆಸಿ ಅವನನ್ನು ಪರಿಚಯಿಸಿಕೊಂಡು ತನ್ನ ಕುಟುಂಬ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. ಲಿನ್‌ಲಿಥ್‌ಗೌ ವೃತ್ತಿಯಲ್ಲಿ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಿರ್ಜನ ಅರಣ್ಯ ಪ್ರದೇಶದಲ್ಲಿ ಅಲೆಯುವುದು, ರಾತ್ರಿ ಟೆಂಟ್ ಹಾಕಿ ಅಲ್ಲಿಯೇ ತಂಗುವುದು, ಮೀನು ಶಿಕಾರಿ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದ. ಹಾಗಾಗಿಯೇ ಲಿನ್‌ಲಿಥ್‌ಗೌ‌ಗೆ ಕಾರ್ಬೆಟ್‌ನ ಅಭಿರುಚಿಗಳು ಇಷ್ಟವಾದವು. ಆನಂತರ ಇಬ್ಬರೂ ಸಮಾನ ಮನಸ್ಕ ಗೆಳೆಯರಾಗಿ ಉತ್ತರ ಭಾರತದ ಕಾಡುಗಳಲ್ಲಿ ವಾರಾಂತ್ಯ ಕಳೆಯುತ್ತಿದ್ದರು.

ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತಪ್ಪದೇ ನೈನಿತಾಲ್ ಹಾಗೂ ಕಲದೊಂಗಿ ಮತ್ತು ಚೋಟಿಹಲ್ದಾನಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ವೈಸ್‌ರಾಯ್ ಕುಟುಂಬ ಜಿಮ್ ಕಾರ್ಬೆಟ್ ಮತ್ತು ಅವನ ಸಹೋದರಿ ಮ್ಯಾಗಿ ಜೊತೆ ವಾರಗಟ್ಟಲೆ ಕಾಲ ಕಳೆಯುತ್ತಿತ್ತು. ಕಲದೊಂಗಿಯಲ್ಲಿದ್ದ ಮನೆಗೆ ವೈಸ್‌ರಾಯ್ ಬಂದಾಗ ಕಾರ್ಬೆಟ್ ಕಲದೊಂಗಿ ಮತ್ತು ಚೋಟಿ ಹಲ್ದಾನಿಯ ರೈತರು, ಕಾರ್ಮಿಕರು ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ತನ್ನ ಮನೆಗೆ ಕರೆಸಿ ದೇಶದ ಪ್ರಥಮ ಪ್ರಜೆಯಂತಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌಗೆ ಪರಿಚಯ ಮಾಡಿಕೊಡುತ್ತಿದ್ದ. ಮನೆಯಲ್ಲಿ ಚಹಾ ಕೂಟ ಏರ್ಪಡಿಸಿ ಭಾರತದ ಬಡತನ ಮತ್ತು ಇಲ್ಲಿನ ಜನರ ಮುಗ್ಧತೆ, ಅಜ್ಙಾನ, ಇವುಗಳನ್ನು ವಿವರಿಸುತ್ತಾ, ಬಡತನದ ನಡುವೆಯೂ ಬಹು ಸಂಸ್ಕೃತಿ, ಭಾಷೆ ಮತ್ತು ಧರ್ಮ ಇವುಗಳ ನಡುವೆ ಇರುವ ಸಾಮರಸ್ಯವನ್ನು, ಇಲ್ಲಿನ ಜನರ ಪ್ರಾಮಾಣಿಕತೆಯನ್ನು ಬಲು ಅರ್ಥಗರ್ಭಿತವಾಗಿ ವೈಸ್‌ರಾಯ್ ಕುಟುಂಬಕ್ಕೆ ಮತ್ತು ಅವನ ಜೊತೆ ಬರುತ್ತಿದ್ದ ಅಧಿಕಾರಿಗಳಿಗೆ ಕಾರ್ಬೆಟ್ ಮನವರಿಕೆ ಮಾಡಿಕೊಡುತ್ತಿದ್ದ.

ದೆಹಲಿಯ ಔತಣಕೂಟವೊಂದರಲ್ಲಿ ಅನುಭವಗಳನ್ನು ಕೃತಿಗೆ ಇಳಿಸುವಂತೆ ಒತ್ತಾಯಿಸಿದ್ದ ಅಧಿಕಾರಿಯ ಪತ್ನಿ ಲೇಡಿ ವೈಲೆಟ್‌ಹೇಗ್ ಮಾತಿನಿಂದ ಉತ್ತೇಜಿತನಾಗಿ ಪತ್ರಿಕೆಗಳಲ್ಲಿ ಲೇಖನ ಬರೆಯಲು ಆರಂಭಿಸಿದ ಕಾರ್ಬೆಟ್ ಇವುಗಳನ್ನು ಪುಸ್ತಕದ ರೂಪದಲ್ಲಿ ತರುವ ಬಗ್ಗೆ ವೈಸರಾಯ್ ಲಿನ್‌ಲಿಥ್‌ಗೌನ ಸಲಹೆ ಕೇಳಿದ. ಜಿಮ್ ಕಾರ್ಬೆಟ್‌ನ ನರಭಕ್ಷಕ ಹುಲಿ ಮತ್ತು ಚಿರತೆಗಳ ಅನುಭವಗಳನ್ನು ಸ್ವತಃ ಕೇಳಿ, ಲೇಖನಗಳ ಮೂಲಕ ಓದಿ ಪುಳಕಿತನಾಗಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌ ಪುಸ್ತಕ ಪ್ರಕಟನೆಗೆ ಉತ್ತೇಜನ ನೀಡಿದ.

ಕಾರ್ಬೆಟ್ ಅದುವರೆಗೆ ಇಂಡಿಯನ್ ವೈಲ್ಡ್ ‌ಲೈಪ್ ಪತ್ರಿಕೆಗೆ ಬರೆದಿದ್ದ ’ದ ಲಾಸ್ಟ್ ಪ್ಯಾರಡೈಸ್’ ಮತ್ತು “ವೈಲ್ಡ್ ಲೈಪ್ ಇನ್ ದ ವಿಲೇಜ್”, “ದ ಟೆರರ್ ದಟ್ ವಾಕ್ಸ್ ಇನ್ ದ ನೈಟ್”,  “ದ ಫಿಶ್ ಆಪ್ ಮೈ ಡ್ರೀಮ್ಸ್” ಹಾಗೂ “ಪೂರ್ಣಗಿರಿ ಅಂಡ್ ಇಟ್ಸ್ ಮಿಸ್ಟೀರಿಯಸ್ ಲೈಟ್ಸ್”, ಈ ಲೇಖನಗಳ ಸಂಗ್ರಹವನ್ನು ಜಂಗಲ್ ಸ್ಟೋರಿಸ್ ಎಂಬ ಹೆಸರಿನಲ್ಲಿ  104 ಪುಟಗಳ ಮೊದಲ ಕೃತಿಯನ್ನಾಗಿ ಹೊರತಂದ. ಪುಸ್ತಕ ನೈನಿತಾಲ್ ಪಟ್ಟಣದಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಯಿತು. ನೂರು ಪ್ರತಿಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. ಅದರ ಕರಡಚ್ಚು ತಿದ್ದುವುದರಿಂದ ಹಿಡಿದು, ಪ್ರಸ್ತಾವನೆ ಬರೆಯುವ ಹೊಣೆಯನ್ನು ವೈಸ್‌ರಾಯ್ ಲಿನ್‌ಲಿಥ್‌ಗೌ ಹೊತ್ತಿದ್ದು ವಿಶೇಷವಾಗಿತ್ತು.

ಪುಸ್ತಕ ಪ್ರಕಟಣೆ ಮೂಲಕ ಲೇಖಕನೂ ಆದ ಕಾರ್ಬೆಟ್‌ನ ಜೀವನ ನೈನಿತಾಲ್ ಗಿರಿಧಾಮದಲ್ಲಿ ಒಂದು ರೀತಿ ಆರಾಮದಾಯಕ ನಿವೃತ್ತಿ ಜೀವನವಾಗಿತ್ತು. ಬೆಳಿಗ್ಗೆ ಸಂಜೆ ಸಹೋದರಿ ಮ್ಯಾಗಿ ಜೊತೆ ಪರ್ವತದ ಕಿರುದಾರಿಗಳಲ್ಲಿ ವಾಕ್ ಮಾಡುತ್ತಿದ್ದ. ಹಗಲಿನಲ್ಲಿ ತನ್ನ ಮೆಚ್ಚಿನ ನಾಯಿಯ ಜೊತೆ ನೈನಿ ಮತ್ತು ಬೀಮ್ ಸರೋವರಕ್ಕಿಂತ ಚಿಕ್ಕದಾಗಿದ್ದ, ಊರಾಚೆಗಿನ ಅರಣ್ಯದ ನಡುವೆ ಇದ್ದ ಸರೋವರದಲ್ಲಿ ಮೀನು ಶಿಕಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಮೀನಿಗೆ ಗಾಳ ಹಾಕಿ ಧ್ಯಾನಸ್ತ ಮನುಷ್ಯನಂತೆ ಕುಳಿತಿರುತ್ತಿದ್ದ ಕಾರ್ಬೆಟ್‌ನ ಹೃದಯದೊಳಗೆ ಆ ಕ್ಷಣಗಳಲ್ಲಿ ಭವಿಷ್ಯದ ಬದುಕಿನ ಬಗ್ಗೆ ಜಿಜ್ಞಾಸೆಗಳು ಮೂಡುತ್ತಿದ್ದವು. ಅವನ ಎದೆಯೊಳಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಸಿಸಬೇಕೆ? ಬೇಡವೆ? ಎಂಬ ಪ್ರಶ್ನೆಗಳ ಬಿರುಗಾಳಿ ಏಳುತ್ತಿತ್ತು.

1930 ರಲ್ಲಿ ಭಾರತದಾದ್ಯಂತ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ತೀರಾ ಹತ್ತಿರದಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು, ಬ್ರಿಟಿಷರ ಕುರಿತಾದ ಅವರ ಅಸಹನೆಯನ್ನು ಕಂಡಿದ್ದ ಕಾರ್ಬೆಟ್‌ಗೆ ಮುಂದಿನ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಂಗ್ಲೆಂಡ್ ಮೂಲದ ಪ್ರಜೆಯಾಗಿ ಇಲ್ಲಿ ಬದುಕುವುದು ದುಸ್ತರ ಎಂಬ ಅಭದ್ರತೆಯ ಭಾವನೆ ಮೂಡತೊಡಗಿತು. ಭಾರತದಲ್ಲಿ ಹುಟ್ಟಿ, ಅಪ್ಪಟ ಭಾರತೀಯನಂತೆ ಬದುಕಿದ ಜಿಮ್ ಕಾರ್ಬೆಟ್ ತನ್ನ ಕೊನೆಯ ದಿನಗಳಲ್ಲಿ ಏಕೆ ಭಾರತವನ್ನು ತೊರೆದು ಹೋಗಿ, ಕೀನ್ಯಾದಲ್ಲಿ ಅನಾಮಿಕನಂತೆ ಅಸುನೀಗಿದ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಮೂಲವನ್ನು ಹುಡುಕಿದರೆ, ಇದಕ್ಕೆ ಮೂಲ ಕಾರಣ ಅವನ ತಾಯಿ ಮೇರಿ ಕಾರ್ಬೆಟ್ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಆಕೆ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಸೈನಿಕರು ಉತ್ತರ ಭಾರತದ ನಗರಗಳಲ್ಲಿ ಆಂಗ್ಲರನ್ನು ಹೆಂಗಸರು, ಮಕ್ಕಳೆನ್ನದೆ ನಡುಬೀದಿಯಲ್ಲಿ ತರಿದು ಹಾಕಿದ್ದನ್ನು ಕಣ್ಣಾರೆ ಕಂಡವಳು. ಜೊತೆಗೆ ತನ್ನ ಮೊದಲ ಪತಿ ಭಾರತೀಯರ ದಾಳಿಗೆ ತುತ್ತಾದಾಗ ಅದಕ್ಕೆ ಸಾಕ್ಷಿಯಾದವಳು. ಈ ಎಲ್ಲಾ ಕಥೆಗಳನ್ನ ಚಿಕ್ಕಿಂದಿನಲ್ಲೇ ಕಾರ್ಬೆಟ್‌ಗೆ ವಿವರಿಸುತ್ತಾ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬ್ರಿಟಿಷರಿಗೆ, ಅವರ ಆಸ್ತಿ ಪಾಸ್ತಿಗಳಿಗೆ ಉಳಿಗಾಲವಿಲ್ಲ ಎಂಬ ಭಯದ ಬೀಜವನ್ನು ಬಿತ್ತಿದ್ದಳು. ಅದು ಮುಂದಿನ ದಿನಗಳಲ್ಲಿ, ಅಂದರೆ ಕಾರ್ಬೆಟ್‌ನ ಕೊನೆಯ ದಿನಗಳಲ್ಲಿ ಅವನ ಎದೆಯೊಳಗೆ ಹೆಮ್ಮರವಾಗಿ ಬೆಳೆದು ನಿಂತಿತು.

ಭಾರತ ತೊರೆಯುವ ನಿರ್ಧಾರವನ್ನು ಬಹಿರಂಗವಾಗಿ ಎಲ್ಲಿಯೂ ಪ್ರಕಟಿಸದೆ ತನ್ನ ಸಹೋದರಿ ಮ್ಯಾಗಿ ಜೊತೆ ಸುದೀರ್ಘವಾಗಿ ಚರ್ಚಿಸಿ ನಂತರ ಭಾರತ ತೊರೆಯಲು ನಿರ್ಧರಿಸಿದ ಕಾರ್ಬೆಟ್ ನೈನಿತಾಲ್ ಗಿರಿಧಾಮದಲ್ಲಿದ್ದ ಅವನ ಕುಟುಂಬದ ಎಲ್ಲಾ ಮನೆಗಳು (ಎಂಟು ಅತಿಥಿ ನಿವಾಸಗಳು) ಮತ್ತು ನಿವೇಶನಗಳು, ಹಾಗೂ ಅಂತಿಮವಾಗಿ ತಾವು ವಾಸಿಸುತ್ತಿದ್ದ ಗಾರ್ನಿಹೌಸ್ ಎಂಬ ಬೃಹತ್‌ಬಂಗಲೆಯನ್ನು ಮಾರಾಟ ಮಾಡಿದನು. ಈ ಬಂಗಲೆಯನ್ನು ಖರೀದಿಸಿದ ಸಕ್ಕರೆ ವ್ಯಾಪಾರಿ, ಶರ್ಮ ಎಂಬಾತ ಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿ ಎಂದು ತನ್ನ ಬಂಧು ಮಿತ್ರರ ಜೊತೆ ತನ್ನ ಸಂತಸ ಹಂಚಿಕೊಂಡ. ಆಸ್ತಿ ಮಾರಾಟ ಮತ್ತು ಅಂಗಡಿ (ಮ್ಯಾಥ್ಯು ಅಂಡ್ ಕೊ) ಮಾರಾಟದಿಂದ ಬಂದ ಹಣದಲ್ಲಿ ಅರ್ಧ ಭಾಗವನ್ನು ತನ್ನ ಮತ್ತು ಸಹೋದರಿ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ತೊಡಗಿಸಿದ. ಉಳಿದರ್ಧ ಹಣವನ್ನು ಜೊತೆಯಲ್ಲಿ ಇಟ್ಟಕೊಂಡು, ನಂಬಿಕಸ್ಥರಿಗೆ ಸಾಲವಾಗಿ ನೀಡತೊಡಗಿದ.

ಕಾರ್ಬೆಟ್ ಬಳಿ ಜೈಪುರದ ಮಹಾರಾಜ ಕೂಡ ವಾರ್ಷಿಕ ಬಡ್ಡಿಗೆ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ನೈನಿತಾಲ್‌ನ ಎಲ್ಲಾ ಆಸ್ತಿ ಮಾರಿದ ಜಿಮ್ ಕಾರ್ಬೆಟ್ ತನ್ನ ಬಳಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂಬಿಕಸ್ತ ಸೇವಕರನ್ನ ಕಾರ್ಬೆಟ್ ಮರೆಯಲಿಲ್ಲ. ಅವರಿಗೆ ಮನೆ ಕಟ್ಟಿಸಿಕೊಟ್ಟು, ತನ್ನ ಮನೆಗಳಲ್ಲಿ ಇದ್ದ  ಮಂಚ, ಮೇಜು, ಕುರ್ಚಿ ಮುಂತಾದ ಸಾಮಾನುಗಳನ್ನು ಉಚಿತವಾಗಿ ಹಂಚಿದ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಿದ. ಅವನ ಶಿಕಾರಿ ಸಾಹಸಗಳಿಂದ ಹಿಡಿದು, ಮೊಕಮೆಘಾಟ್ ರೈಲ್ವೆ ನಿಲ್ದಾಣ ಮತ್ತು ನೈನಿತಾಲ್‌ನ ನಿವೃತ್ತಿಯ ಬದುಕಿನ ವರೆಗೂ ಸೇವೆ ಸಲ್ಲಿಸಿದ ಮಾದೂಸಿಂಗ್ ಮೋತಿಸಿಂಗ್, ಅವನ ಮಗ ಬಲ್ವ, ಹಾಗೂ ರಾಮ್ ಸಿಂಗ್ ಬಲಸಿಂಗ್ ಇವರೆಲ್ಲರೂ ಶಾಶ್ವತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳುವಂತೆ ಮಾಡಿದ. ಇವರ ಜೊತೆಗೆ ಚಳಿಗಾಲದ ತನ್ನ ಹಳ್ಳಿಯಾದ ಚೊಟಿಹಲ್ದಾನಿಯ ಮುಸ್ಲಿಮ್ ಗೆಳೆಯ ಬಹುದ್ದೂರ್ ಖಾನ್ ಮತ್ತು ಬಾಲ್ಯದಲ್ಲಿ ಶಿಕಾರಿ ಕಲಿಸಿದ ಕುನ್ವರ್ ಸಿಂಗ್ ಇವರಿಗೂ ಕೂಡ ಆರ್ಥಿಕ ನೆರವು ನೀಡಿದ. ಆದರೆ, ನಾನು ಭಾರತ ತೊರೆಯುತ್ತಿದ್ದೇನೆ ಎಂಬ ಸುಳಿವನ್ನು ಎಲ್ಲಿಯೂ ಕಲದೊಂಗಿ ಮತ್ತು ಚೋಟಿ ಹಲ್ದಾನಿ ಹಳ್ಳಿಗಳ ಜನರಿಗೆ ಕಾಬೆಟ್ ಬಿಟ್ಟುಕೊಡಲಿಲ್ಲ. ಅವರ ಮನಸನ್ನು ನೋಯಿಸಲು ಇಚ್ಚಿಸದೇ ಕಲದೊಂಗಿಯಲ್ಲಿದ್ದ ಅವನ ಬಂಗಲೆಯನ್ನು ಮಾರಾಟ ಮಾಡದೇ ಹಾಗೆಯೇ ಉಳಿಸಿಕೊಂಡ.

ಜಿಮ್ ಕಾರ್ಬೆಟ್‌ನ ಈ ನೋವಿನ ವಿದಾಯದ ಸಂದರ್ಭವನ್ನು ವಿವೇಚಿಸಿದರೆ, ಇದು ಆ ಕಾಲಘಟ್ಟದಲ್ಲಿ  ಕಾರ್ಬೆಟ್ ಒಬ್ಬ ಮಾತ್ರ ಅನುಭವಿಸಿದ ಸಂಕಟ ಮತ್ತು ತಳಮಳಗಲ್ಲ. ಭಾರತದಲ್ಲಿದ್ದ ಎಲ್ಲಾ ಬ್ರಿಟಿಷರ ತಲ್ಲಣ ಮತ್ತು ತಳಮಳವೂ ಹೌದು ಎನಿಸುತ್ತದೆ. ಭಾರತದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ, ಇಲ್ಲಿನ ಚಿಕ್ಕಮಗಳೂರು, ನೀಲಗಿರಿ, ಕೇರಳ, ಡಾರ್ಜಲಿಂಗ್ ಅಸ್ಸಾಂ ಮುಂತಾದ ಕಡೆ ಕಾಫಿ ಮತ್ತು ಚಹಾ ತೋಟಗಳನ್ನು ಮಾಡಿಕೊಂಡಿದ್ದ ಬ್ರಿಟಿಷ್ ಅಧಿಕಾರಿಗಳು 1947ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಬಂದಾಗ ತಮ್ಮ ಆಸ್ತಿಗಳನ್ನು ಮಾರಿ, ಜೀವ ಭಯದಿಂದ ತಾಯ್ನಾಡಿಗೆ ಮರಳಿದರು. ಆದರೆ, ಆರೋಗ್ಯ, ಮತ್ತು ಶಿಕ್ಷಣದ ಸೇವೆಯ ಉದ್ದೇಶಕ್ಕಾಗಿ ಭಾರತಕ್ಕೆ ಬಂದಿದ್ದ ಮಿಷನರಿ ಸಂಸ್ಥೆಗಳು, ಅದರ ಕಾರ್ಯಕರ್ತರು ಮಾತ್ರ ಧೈರ್ಯದಿಂದ ಇಲ್ಲೆ ಉಳಿದು ನೆಲೆ ಕಂಡುಕೊಂಡರು.

ಜಿಮ್ ಕಾರ್ಬೆಟ್ ಭಾರತ ತೊರೆಯಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಎರಡನೇ ಮಹಾಯುದ್ಧ ಆರಂಭಗೊಂಡಿತು. ಬ್ರಿಟಿಷರ ಪರ ಭಾರತೀಯ ಸೇನೆ ಹೋರಾಟ ನಡಸಬೇಕೆ ಬೇಡವೇ ಎಂಬುದರ ಬಗ್ಗೆ ಗಾಂಧೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಜಿಜ್ಙಾಸೆ ಉಂಟಾಯಿತು. ಯುದ್ಧ ಮುಗಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ನಿರ್ಣಯವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಅಂಗೀಕರಿಸಿದ ಮೇಲೆ ಇಲ್ಲಿನ ನಾಯಕರು ಭಾರತೀಯ ಸೈನಿಕರು ಬ್ರಿಟಿಷ್ ಸೇನೆಯ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದರು.

ಆ ವೇಳೆಗಾಗಲೇ ಮಿತ್ರ ರಾಷ್ಟ್ರಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಾ ಮುನ್ನುಗ್ಗುತ್ತಿದ್ದ ಜಪಾನ್ ಸೇನೆ ಭಾರತದ ನೆರೆಯ ರಾಷ್ಟ್ರ ಬರ್ಮಾದವರೆಗೆ ಬಂದು ನಿಂತಿತ್ತು. ಭಾರತದಲ್ಲಿದ್ದ ಬ್ರಿಟಿಷ್ ಸೇನೆಯ ಜೊತೆಗೆ ಭಾರತೀಯ ಸೇನೆಯನ್ನು ಬರ್ಮಾ ಗಡಿಭಾಗಕ್ಕೆ ಕಳಿಸಿಕೊಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಆದರೆ, ಬರ್ಮಾದ ಮಳೆಕಾಡುಗಳಲ್ಲಿ, ಮತ್ತು ಅಲ್ಲಿನ ಶೀತ ಪ್ರದೇಶದಲ್ಲಿ ಅನುಭವವಿರದ ನಮ್ಮ ಸೈನಿಕರು ಹೋರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹಾಗಾಗಿ ಸರ್ಕಾರ ಜಿಮ್ ಕಾರ್ಬೆಟ್‌ನ ಮೊರೆ ಹೋಗಿ, ಅರಣ್ಯದಲ್ಲಿ ಸೈನಿಕರು ಯುದ್ಧ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡುವಂತೆ ಕೇಳಿಕೊಂಡಿತು. ಇದಕ್ಕಾಗಿ  ಭಾರತದ ಬ್ರಿಟಿಷ್ ಸರ್ಕಾರ 1944ರ ಫೆಬ್ರವರಿಯಲ್ಲಿ ಮಧ್ಯ ಪ್ರದೇಶದ ದಂಡಕಾರಣ್ಯದಲ್ಲಿ ಅಲ್ಪಾವಧಿಯ ತರಬೇತಿ ಶಿಬಿರಗಳನ್ನು, ಕಾರ್ಬೆಟ್ ನೃತೃತ್ವದಲ್ಲಿ ಆಯೋಜಿಸಿತು.

ವಿಶ್ವದ ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಪರ ಫ್ರಾನ್ಸ್ ರಣಭೂಮಿಯಲ್ಲಿ ಹೋರಾಟ ನಡೆಸಿ ಅನುಭವ ಹೊಂದಿದ್ದ, ಕಾರ್ಬೆಟ್, ಸೈನಿಕರಿಗೆ, ಅರಣ್ಯ, ಅಲ್ಲಿನ ಜೀವಜಾಲ, ಅವುಗಳ ವೈಶಿಷ್ಟ್ಯತೆ ಮತ್ತು ವರ್ತನೆ ಇವುಗಳೆಲ್ಲವನ್ನು ಪರಿಚಯ ಮಾಡಿಕೊಟ್ಟ. ಅಪಾಯಕಾರಿ ಪ್ರಾಣಿಗಳು ಹತ್ತಿರ ಸುಳಿಯುವ ಸಂದರ್ಭದಲ್ಲಿ ಯಾವ ಪಕ್ಷಿ ಮತ್ತು ಪ್ರಾಣಿಗಳು ಹೇಗೆ ಸೂಚನೆ ನೀಡುತ್ತವೆ, ಅವುಗಳ ಧ್ವನಿ ಹೇಗಿರುತ್ತದೆ ಎಂಬುದನ್ನ ಅನುಕರಣೆ ಮಾಡಿ ತೋರಿಸಿಕೊಟ್ಟ. ಕಾಡಿನಲ್ಲಿ ದಿಕ್ಕು ತಪ್ಪಿದಾಗ ಅನುಸರಿಸಬೇಕಾದ ಕ್ರಮ, ಸೊಳ್ಳೆ, ಜೇನು ನೊಣ ಮುಂತಾದ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಗಿಡದ ಸೊಪ್ಪಿನ ರಸವನ್ನು ಶರೀರಕ್ಕೆ ಲೇಪಿಸಬೇಕೆಂಬುದನ್ನು ಸಹ ಕಾರ್ಬೆಟ್ ಸೈನಿಕರಿಗೆ ಮನವರಿಕೆ ಮಾಡಿಕೊಟ್ಟ. ಹಸಿವು, ನೀರಡಿಕೆ ಇವುಗಳನ್ನು ನೀಗಿಸುವ ಸಹಕಾರಿಯಾಗುವ ಕಾಡಿನಲ್ಲಿ ದೊರೆಯಬಹುದಾದ ಹಣ್ಣು ಹಂಪಲಗಳ ಬಗ್ಗೆ ಮಾಹಿತಿ ನೀಡಿದ. ಮಳೆಕಾಡುಗಳಲ್ಲಿ  ಮನುಷ್ಯರಿಗೆ ಎದುರಾಗುವ ಅತಿದೊಡ್ಡ ಸಮಸ್ಯೆಯೆಂದರೆ, ಜಿಗಣೆಗಳ ಕಾಟ. ಇವುಗಳ ನಿವಾರಣೆಗೆ ಪ್ರತಿಯೊಬ್ಬ ಸೈನಿಕ ತನ್ನ ಬಳಿ ತಂಬಾಕು ಮತ್ತು ಸುಣ್ಣವನ್ನು  ಇಟ್ಟುಕೊಳ್ಳುವಂತೆ ಸೂಚಿಸಿದ.

ಜೊತೆಗೆ ಸರ್ಕಾರದ ಮನವೊಲಿಸಿ ಪ್ರತಿಯೊಬ್ಬ ಸೈನಿಕನು ತನ್ನ ಕಾಲುಗಳ ಮಂಡಿಯವರೆಗೂ ಸುತ್ತಿಕೊಳ್ಳಲು ನುಣುಪಾದ ರೇಷ್ಮೆಯ ಬಟ್ಟೆಯನ್ನು ಒದಗಿಸಿಕೊಟ್ಟ. ಜಿಗಣೆಗಳಿಗೆ ಹಿಡಿತ ಸಿಗಲಾರದೆ ಕಾಲಿಗೆ ಹತ್ತಿಕೊಳ್ಳಲಾರವು ಎಂಬುದು ಕಾರ್ಬೆಟ್ ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವಾಗಿತ್ತು. ಹೀಗೆ ಬ್ರಿಟಿಷ್ ಮತ್ತು ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ, ಬರ್ಮಾದ ಯುದ್ದ ಭೂಮಿಗೆ ಕಳಿಸಿಕೊಟ್ಟ ಜಿಮ್ ಕಾರ್ಬೆಟ್, ಆ ಬೇಸಿಗೆಯ ದಿನಗಳಲ್ಲಿ ತನ್ನ ವೃದ್ಧಾಪ್ಯವನ್ನು ಲೆಕ್ಕಿಸದೆ ಬರ್ಮಾಕ್ಕೆ ತೆರಳಿ ಸೈನಿಕರ ಆಹಾರ ಸರಬರಾಜು ವ್ಯವಸ್ಥೆಯ ಉಸ್ತುವಾರಿಗೆ ನಿಂತ. ಆ ವೇಳೆಗೆ ಅವನ ವಯಸ್ಸು ಎಪ್ಪತ್ತು ವರುಷಗಳು. 1945ರಲ್ಲಿ ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳ ಸೋಲಿನಿಂದ ಎರಡನೇ ಮಹಾಯುದ್ಧ ಕೊನೆಗೊಂಡಾಗ, ಭಾರತದ ಬ್ರಿಟಿಷ್ ಸರ್ಕಾರ ಜಿಮ್ ಕಾರ್ಬೆಟ್‌ನ ಸೇವೆಯನ್ನು ಮನ್ನಿಸಿ ಆತನಿಗೆ ’ಕಂಪಾನಿಯನ್ ಆಫ್ ದ ಇಂಡಿಯನ್ ಎಂಪೈರ್’ ಎಂಬ ಭಾರತದ ಅತ್ಯನ್ನುತ ಮಿಲಿಟರಿ ಗೌರವ ನೀಡಿ ಸನ್ಮಾನಿಸಿತು.

                                                                                       (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -26)


– ಡಾ.ಎನ್.ಜಗದೀಶ್ ಕೊಪ್ಪ 


 

ಉತ್ತರ ಭಾರತದ ಅರಣ್ಯ ಮತ್ತು ಅದರೊಳಗಿನ ಜೀವಸಂಕುಲಗಳ ರಕ್ಷಣೆಗಾಗಿ ಜಿಮ್ ಕಾರ್ಬೆಟ್ ಕೈಗೊಂಡ ಅಭಿಯಾನ ಅವನಿಗೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದು ಕೊಟ್ಟಿತು. ಭಾರತದ ಬ್ರಿಟಿಷ್ ಸರ್ಕಾರ, ಅರಣ್ಯ ಕುರಿತಂತೆ ಅರಣ್ಯಾಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ನೀಡಲು ಕಾರ್ಬೆಟ್‌ನನ್ನು ನಿಯೋಜಿಸಿತು. 1930ರ ದಶಕದಲ್ಲಿ ಭಾರತದಲ್ಲಿ ಸಾಮಾನ್ಯ ಹುದ್ದೆಗಳನ್ನು ಹೊರತು ಪಡಿಸಿದರೆ, ಮುಖ್ಯವಾದ ಹುದ್ದೆಗಳು ಬ್ರಿಟಿಷರ ಅಧೀನದಲ್ಲಿದ್ದವು. ಇಲ್ಲಿ ಅರಣ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಭಾರತದ ಅರಣ್ಯವೆಂದರೆ, ಬೆಚ್ಚಿಬೀಳುತ್ತಿದ್ದರು. ಶೀತಪ್ರದೇಶವಾದ ಇಂಗ್ಲೆಂಡ್‌ನಿಂದ ಬಂದ ಅವರು, ಭಾರತದ ಉಷ್ಣವಲಯದ ಕಾಡುಗಳ ಸಸ್ಯ ವೈವಿಧ್ಯ, ತರಾವರಿ ಹಾವುಗಳು, ವಿಷಜಂತುಗಳು, ಅಪಾಯಕಾರಿ ಪ್ರಾಣಿಗಳು ಇವುಗಳಿಂದ ಭಯ ಭೀತರಾಗುತ್ತಿದ್ದರು.

ಹೀಗೆ ಅರಣ್ಯ ಮತ್ತು ತನ್ನ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಗೆ ಪಣತೊಟ್ಟು ದುಡಿಯುತ್ತಿದ್ದಂತೆ ಕಾರ್ಬೆಟ್ ಅರವತ್ತನೇ ವರ್ಷಕ್ಕೆ ಕಾಲಿಟ್ಟ. ಇದೇ ವೇಳೆಗೆ 85 ವರ್ಷ ದಾಟಿದ ಅವನ ಹಿರಿಯ ಮಲಸಹೋದರಿ ಡೊಯಲ್ ವೃದ್ಧಾಪ್ಯದ ಕಾರಣದಿಂದ ಮಾನಸಿಕ ಸಮತೋಲನ ಕಳೆದುಕೊಂಡಳು. ಅವಳನ್ನು ನಿಯಂತ್ರಿಸುವುದು ಕಾರ್ಬೆಟ್ ಮತ್ತು ಅವನ ಅಕ್ಕ ಮ್ಯಾಗಿಗೆ ಕಷ್ಟವಾಯಿತು. ಡೊಯಲ್ ಕೆಲವೊಮ್ಮೆ ತೊಟ್ಟಿದ್ದ ಬಟ್ಟೆಯನ್ನು ಕಳಚಿ ಮನೆಯ ಗೇಟ್ ದಾಟಿಬಿಡುತ್ತಿದ್ದಳು. ಇದು ಕಾರ್ಬೆಟ್‌ಗೆ ತೀರಾ ಮುಜುಗರವನ್ನುಂಟು ಮಾಡುತ್ತಿತ್ತು. ಅವಳನ್ನು ನಿಯಂತ್ರಿಸಲು. ಭಾರತೀಯ ಮೂಲದ ನಾಲ್ಕು ಸೇವಕಿಯರನ್ನು ನೇಮಕಮಾಡಿಕೊಂಡಿದ್ದ.  ಡೊಯಲ್ ಒಂದು ವರ್ಷ ಕಾಯಿಲೆಯಿಂದ ಬಳಲಿ ನಂತರ ಅಸುನೀಗಿದಾಗ, ಅಕ್ಕ ತಮ್ಮ ಇಬ್ಬರೂ, ಅವಳ ಸಾವಿನ ಸಂಕಟದ ನಡುವೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಡೊಯಲ್ ಸಾವಿನೊಂದಿಗೆ 1857ರ ಸಿಪಾಯಿ ದಂಗೆಗೆ ಸಾಕ್ಷಿಯಾಗಿದ್ದ ಕಡೆಯ ಜೀವವೊಂದು ಕಳಚಿಬಿದ್ದಂತಾಯಿತು. ಕಾರ್ಬೆಟ್‌ನ ತಾಯಿ ಮೇರಿ ಮೊದಲ ಪತಿಯಿಂದ ಪಡೆದಿದ್ದ ಮೂವರು ಮಕ್ಕಳಲ್ಲಿ ಡೊಯಲ್ ಕೂಡ ಒಬ್ಬಳಾಗಿದ್ದಳು. ಮೇರಿಯ ಮೊದಲ ಪತಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಗ್ರಾದಲ್ಲಿ ನಡೆದ 1857ರ ಸಿಪಾಯಿ ದಂಗೆ  ಹೋರಾಟದಲ್ಲಿ ಭಾರತೀಯ ಸಿಪಾಯಿಗಳ ಕೈಯಲ್ಲಿ ಹತ್ಯೆಯಾದಾಗ, ಬಾಲಕಿಯಾಗಿದ್ದ ಡೊಯಲ್ ತಾಯಿಯ ಜೊತೆ ನೈನಿತಾಲ್ ಗಿರಿಧಾಮ ಸೇರಿಕೊಂಡಿದ್ದಳು. ಕಾರ್ಬೆಟ್‌ನ ಪಾಲಿಗೆ ಹಿರಿಯಕ್ಕನಂತೆ ಇದ್ದ ಈಕೆ ಜೀವನ ಪೂರ್ತಿ ಅವಿವಾಹಿತಳಾಗಿ ಉಳಿದಳು.

ಡೊಯಲ್‌ನ ಸಾವಿನ ನಂತರ ಕಾರ್ಬೆಟ್ ಕುಟುಂಬದಲ್ಲಿ ಮ್ಯಾಗಿ ಮತ್ತು ಕಾರ್ಬೆಟ್ ಮಾತ್ರ ಉಳಿದುಕೊಂಡರು. ಉಳಿದ ಸಹೋದರ ಸಹೋದರಿಯರು ಉದ್ಯೋಗ ನಿಮಿತ್ತ ಇಂಗ್ಲೆಂಡ್, ಆಫ್ರಿಕಾ, ಕೀನ್ಯಾ ಮುಂತಾದ ಕಡೆ ವಲಸೆ ಹೊರಟು ಅಂತಿಮವಾಗಿ ಅಲ್ಲಿಯೇ ನೆಲೆ ನಿಂತರು. ಕಾರ್ಬೆಟ್‌ನಂತೆ ಮ್ಯಾಗಿ ಕೂಡ ಸರಳ ಜೀವನ ಮೈಗೂಡಿಸಿಕೊಂಡಿದ್ದಳು. ಸರಳವಾದ ಉಡುಪುಗಳನ್ನು ಧರಿಸುತ್ತಿದ್ದಳು. ವಿಶೇಷ ಕಾರ್ಯಕ್ರಮಗಳು ಇಲ್ಲವೇ ಔತಣಕೂಟಗಳಿಗೆ ಮಾತ್ರ ಒಳ್ಳೆಯ ಉಡುಪು ಧರಿಸುತ್ತಿದ್ದಳು. ಮನೆಯಲ್ಲಿ ಸೇವಕ, ಸೇವಕಿಯರು ಇದ್ದ ಕಾರಣ ಆಕೆಗೆ ಮನೆಗೆಲಸದ ಒತ್ತಡಗಳು ಇರಲಿಲ್ಲ. ಮ್ಯಾಗಿ ಕೂಡ ಕಾರ್ಬೆಟ್ ನಂತೆ ಹಿಂದಿ ಸೇರಿದಂತೆ ಸ್ಥಳಿಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವುದನ್ನ ಕಲಿತಿದ್ದಳು. ಇದು ಆಕೆಗೆ ಸ್ಥಳೀಯ ಸೇವಕರೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಮ್ಯಾಗಿಯ ಬದುಕು ತಮ್ಮನ ಹಾಗೆ ಸರಳತೆಯಿಂದ ಕೂಡಿದ್ದರೂ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮತ್ತು ಶುದ್ಧವಾದ ಗಾಳಿ ಬೆಳಕು ಸದಾ ಮನೆಯೊಳಗೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಅದರಂತೆ ಮನೆಯನ್ನು ಆಕೆ ಸದಾ ಸುಸ್ಥಿತಿಯಲ್ಲಿ ಇಟ್ಟಿದ್ದ ಕಾರಣ. ಅವಳು ಮತ್ತು ಕಾರ್ಬೆಟ್ ವಾಸಿಸುತ್ತಿದ್ದ ಗಾರ್ನಿಹೌಸ್ ಬಂಗಲೆ ನೈನಿತಾಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿತ್ತು.

ಆ ವೇಳೆಗಾಗಲೇ ನೈನಿತಾಲ್ ಪಟ್ಟಣಕ್ಕೆ ವಿದ್ಯುತ್ ಬಂದಿದ್ದರೂ ಕೂಡ ಯಾವುದೇ ಆಡಂಬರದ ಬದುಕು ಅವರದಾಗಿರಲಿಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ, ಆನೆ, ಕುದುರೆ, ನಾಯಿ, ಬಗೆಬಗೆಯ ಪಕ್ಷಿಗಳು ಇವುಗಳ ಮೇಲ್ವಿಚಾರಣೆಗೆ ಸೇವಕರು, ಅವರ ಕುಟುಂಬಗಳು. ಎಲ್ಲರೂ ಸೇರಿ ಕಾರ್ಬೆಟ್ ಕುಟುಂಬ ಒಂದು ಮಿನಿ ಭಾರತವಿದ್ದಂತೆ ಇತ್ತು. ಸೇವಕರ ಮಕ್ಕಳ ಶಾಲಾ ಶುಲ್ಕ, ಅವರ ಬಟ್ಟೆ, ಪುಸ್ತಕ ಇವುಗಳ ಖರ್ಚನ್ನು ಸ್ವತಃ ಕಾರ್ಬೆಟ್ ಭರಿಸುತ್ತಿದ್ದ. ಮಳೆಗಾಲ ಮತ್ತು ಚಳಿಗಾಲದಲ್ಲಿ ಯಾರಾದರೂ ಕಾಯಿಲೆ ಬಿದ್ದರೆ, ಮನೆಯಲ್ಲಿ ಇರುತ್ತಿದ್ದ ಔಷಧಿಗಳ ಜೊತೆ, ರೋಗಿಗಳನ್ನು ತಾಯಿಯಂತೆ ಉಪಚರಿಸುವ ಗುಣವನ್ನು ಸಹೋದರಿ ಮ್ಯಾಗಿ ಮೈಗೂಡಿಸಿಕೊಂಡಿದ್ದಳು.

ಕಾರ್ಬೆಟ್ ರೂಢಿಸಿಕೊಂಡಿದ್ದ ಪರಿಸರ ರಕ್ಷಣೆಯ ಗುಣದಿಂದಾಗಿ ಅವನಿಗೆ ದೂರದ ದೆಹಲಿಯ ವೈಸ್‌ರಾಯ್ ಕುಟುಂಬವೂ ಸೇರಿದಂತೆ, ಹಲವು ಉನ್ನತ ಅಧಿಕಾರಿಗಳ ಕುಟುಂಬದಿಂದ ಔತಣ ಕೂಟಕ್ಕೆ ಆಹ್ವಾನ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ತನ್ನ ಅಕ್ಕ ಮ್ಯಾಗಿಯನ್ನು ಕಾರ್ಬೆಟ್ ಜೊತೆಯಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ. ಔತಣಕೂಟ ತಡರಾತ್ರಿವರೆಗೂ ನಡೆಯುತ್ತಿತ್ತು. ಜಿಮ್ ಕಾರ್ಬೆಟ್ ಅಲ್ಲಿ ಶಿಕಾರಿ ಕಥೆಗಳನ್ನು, ಹಾಗೂ ಅವನು ಬೇಟೆಯಾಡಿದ ನರಹಂತಕ ಚಿರತೆಗಳ ಕಥೆಯನ್ನು ರೋಮಾಂಚಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ಅವನ ಸಾಹಸದ ಕಥೆಗಳನ್ನು ಇಡೀ ಶರೀರವನ್ನು ಕಿವಿಯಾಗಿಸಿಕೊಂಡು ಅಧಿಕಾರಿಗಳ ಕುಟುಂಬದ ಸದಸ್ಯರು ಆಲಿಸುತ್ತಿದ್ದರು. ಇಂತಹ ಅದ್ಬುತ ರೋಮಾಂಚಕಾರಿ ಕಥನಗಳನ್ನು ನೀವು ಏಕೆ ಬರೆದು ದಾಖಲಿಸಬಾರದು? ಎಂಬ ಪ್ರಶ್ನೆ ಅಧಿಕಾರಿಯೋರ್ವನ ಪತ್ನಿಯಿಂದ ಬಂದಾಗ, ಆಕ್ಷಣಕ್ಕೆ  ಕಾರ್ಬೆಟ್‌ಗೆ ಹೌದೆನಿಸಿತು. ಹೌದು ಬರೆಯಲೇ ಬೇಕು. ಬರೆಯುತ್ತೀನಿ ಎಂದು ಆಕೆ ಆಶ್ವಾಸನೆ ನೀಡಿದ. ಹಾಗಾಗಿ ಕಾರ್ಬೆಟ್ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಅನುಭವಗಳನ್ನು ದಾಖಲಿಸಲು ನಿರ್ಧರಿಸಿದ.

1931ರ “ದ ಹಂಟರ್ ಆನ್ಯುಯಲ್” ಎಂಬ ಪತ್ರಿಕೆಯಲ್ಲಿ ಕಾರ್ಬೆಟ್ ’ಪಿಪಾಲ್ ಪಾನಿ ಟೈಗರ್’ ಎಂಬ ಹುಲಿಯೊಂದನ್ನು ಬೇಟೆಯಾಡಿದ ಪ್ರಸಂಗವನ್ನು ಪ್ರಥಮವಾಗಿ ಬರೆದು ಪ್ರಕಟಿಸಿದ. ಈ ರೋಚಕ ಅನುಭವಕ್ಕೆ ಪೂರಕವಾಗಿ ಪತ್ರಿಕೆಯ ಸಂಪಾದಕ ಶಿಕಾರಿ ಕುರಿತಂತೆ ಅರ್ಥಪೂರ್ಣ ಲೇಖನವೊಂದನ್ನು ಸಹ ಬರೆದಿದ್ದ. ಇದರಿಂದಾಗಿ ಕಾರ್ಬೆಟ್‌ನ ಮೊದಲ ಬರಹಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜೊತೆಗೆ ಅವನಿಗ ಬರವಣಿಗೆ ಕುರಿತಾಗಿ ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ನೈನಿತಾಲ್ ಗಿರಿಧಾಮದಲ್ಲಿ ಪ್ರಕಟವಾಗುತ್ತಿದ್ದ “ನೈನಿತಾಲ್ ರಿವ್ಯೂ ಆಪ್ ದ ವೀಕ್ಲಿ” ಪತ್ರಿಕೆಗೆ ಪರಿಸರ ರಕ್ಷಣೆ ಮತ್ತು ಕುಮಾವನ್ ಪ್ರಾಂತ್ಯದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ. ಈ ಪತ್ರಿಕೆ ನೈನಿತಾಲ್ ಗಿರಿಧಾಮದ ಆಂಗ್ಲ ಸಮುದಾಯದಲ್ಲಿ ಜನಪ್ರಯತೆ ಪಡೆದಿತ್ತು. ಅಲ್ಲದೆ, ಬೇಸಿಗೆಯಲ್ಲಿ ನೈನಿತಾಲ್‌ಗೆ ಬರುತ್ತಿದ್ದ ದೆಹಲಿಯ ಬ್ರಿಟಿಷ್ ಅಧಿಕಾರಿಗಳು ಈ ಪತ್ರಿಕಗೆ ಚಂದದಾರರಾಗಿದ್ದರು. ಕಾರ್ಬೆಟ್ ಪತ್ರಿಕೆಯಲ್ಲಿ ಏನೇ ಬರೆದರೂ ಅದು ದೂರದ ದೆಹಲಿಗೆ ತಲುಪುತಿತ್ತು.

ಈ ವೇಳೆಯಲ್ಲಿ ಭಾರತ ಉಪಖಂಡದ ಗೌರ್ನರ್ ಆಗಿದ್ದ ಸರ್ ಮಾಲ್ಕಮ್‌ ಹೈಲಿ ಎಂಬಾತ ಭಾರತದ ಅರಣ್ಯಗಳನ್ನು ಸಂರಕ್ಷಿಸುವ ಕುರಿತಂತೆ ಗಂಭೀರವಾಗಿ ಆಲೋಚನೆ ಮಾಡಿ, ಜಿಮ್ ಕಾರ್ಬೆಟ್ ಮತ್ತು ಆರ್ಕ್ಷ್‌ಪರ್ಡ್ ವಿ.ವಿ.ಯ ಕಾನೂನು ಪದವೀಧರ ಹಸನ್ ಅಬಿದ್ ಜಪ್ರಿ ಇವರನ್ನು ಭಾರತೀಯ ವನ್ಯ ಮೃಗ ರಕ್ಷಣೆ ಕುರಿತ ಇಲಾಖೆಗೆ ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ. ಅಬಿದ್ ಜಪ್ರಿ ಕಾನೂನು ಪದವೀಧರನಾಗಿದ್ದ. ಕಾರ್ಬೆಟ್ ಅರಣ್ಯ ಮತ್ತು ವನ್ಯ ಜೀವಿಗಳ ತಜ್ಞನಾದುದರ ಫಲವಾಗಿ ಈ ಇಬ್ಬರೂ ತಜ್ಞರು ವನ್ಯ ಮೃಗ ರಕ್ಷಣೆಗೆ  ಕಾನೂನು ಸೇರಿದಂತೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದರು.

‘ಇಂಡಿಯನ್ ವೈಲ್ಡ್ ಲೈಪ್’ ಹೆಸರಿನ ಪತ್ರಿಕೆಯೊಂದನ್ನು ರೂಪಿಸಿ, ಅಬಿದ್ ಜಪ್ರಿ ಸಂಪಾದಕತ್ವದಲ್ಲಿ ಪ್ರಕಟಿಸಲು ಆರಂಭಿಸಿದರು. ಈ ಪತ್ರಿಕೆಯಲ್ಲಿ ಭಾರತದ ಉಷ್ಣವಲಯದ ಅರಣ್ಯ ಮತ್ತು ಅವುಗಳ ವೈಶಿಷ್ಟ್ಯ, ಅಲ್ಲಿ ವಾಸಿಸುವ ಪ್ರಾಣಿಗಳ ವೈವಿಧ್ಯತೆ ಮತ್ತು ಅವುಗಳ ಜೀವನ ಚಕ್ರ ಹೀಗೆ ಎಲ್ಲಾ ಮಾಹಿತಿಗಳು ಇರುತ್ತಿದ್ದವು. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಪಾಲಿಗೆ ಮಾರ್ಗದರ್ಶಿಯಂತಿತ್ತು.
ಗೌರ್ನರ್ ಸರ್ ಮಾಲ್ಕಮ್ ಹೈಲಿ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳವನಾಗಿದ್ದ. ಇದರ ಸದುಪಯೋಗ ಪಡಿಸಿಕೊಂಡ ಕಾರ್ಬೆಟ್, ಕಲದೊಂಗಿ ಮತ್ತು ಚೋಟಿ ಹಲ್ದಾನಿಗೆ ಸನೀಹದಲ್ಲಿ ಇದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಅಭಯಾರಣ್ಯವಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಗೌರ್ನರ್ ಮುಂದಿಟ್ಟ. ಭಾರತದಂತಹ ಸೀಮಿತ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರ್ಬೆಟ್ ಇಂತಹ ಕೃತ್ಯಗಳಿಂದ ಅರಣ್ಯದಲ್ಲಿ ವನ್ಯಮೃಗಗಳ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ ಎಂಬ ವಿಷಯವನ್ನು ಮಾಲ್ಕಮ್ ಹೈಲಿ ಮನವರಿಕೆ ಮಾಡಿಕೊಟ್ಟ. ಉತ್ತರ ಭಾರತದ ಅರಣ್ಯಗಳಲ್ಲಿ ಮೋಜಿಗಾಗಿ ಹಲವಾರು ಸಂಸ್ಥಾನಗಳ ಮಹಾರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳು ಬೇಟೆಯಾಡುತ್ತಿರುವುದನ್ನು ಕಂಡು ಸ್ವತಃ ಅರಣ್ಯಾಧಿಕಾರಿಗಳ ಜಗಳವಾಡಿ ಮನಸ್ತಾಪ ಕಟ್ಟಿಕೊಂಡಿದ್ದ ಜಿಮ್ ಕಾರ್ಬೆಟ್‌ಗೆ, ಭಾರತದಲ್ಲಿ ಆಯ್ದ ಕೆಲವು ಅರಣ್ಯ ಪ್ರದೇಶಗಳನ್ನು ಕನಿಷ್ಟ ಐದು ವರ್ಷಗಳ “ಕಾಲ ಅಭಯಾರಣ್ಯೆ” ಎಂದು ಘೋಷಿಸಿ ಪ್ರಾಣಿಗಳ ಬೇಟೆಯನ್ನು ನಿಷೇಧಿಸಬೇಕು ಎಂಬುದು ಅವನ  ಮಹದಾಸೆಯಿತ್ತು.

ಆಫ್ರಿಕಾದ ಅರಣ್ಯಗಳಲ್ಲಿ ಬೇಟೆಯಾಡಿ ಅನುಭವವಿದ್ದ ಕಾರ್ಬೆಟ್‌ಗೆ ಅಲ್ಲಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದ ವಿಸ್ತೀರ್ಣದ ಬಗ್ಗೆ ಮತ್ತು ಭಾರತದ ಸೀಮಿತ ಅರಣ್ಯ ಪ್ರದೇಶದ ವೈವಿಧ್ಯಮಯ ಸಸ್ಯ ಸಂಪತ್ತು, ವನ್ಯ ಜೀವಿಗಳ ಕುರಿತು ಮಾಹಿತಿ ಇತ್ತು. ಇದನ್ನು ಗೌರ್ನರ್‌ಗೆ ಮನವರಿಕೆ ಮಾಡಿಕೊಟ್ಟ. ಇದರ ಫಲವಾಗಿ ಕಲದೊಂಗಿ ಸಮೀಪದ ಮುನ್ನೂರು ಚದುರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ 1934ರಲ್ಲಿ ಅಭಯಾರಣ್ಯ ಎಂದು ಅಧಿಕೃತವಾಗಿ ಘೋಷಿಸಿತು. ಈ ಅರಣ್ಯದ ನಡುವೆ ರಾಮಗಂಗಾ ನದಿ ಹರಿಯುತ್ತಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಊರಿಗೆ ರಾಮ್‌ನಗರ್ ಎಂಬ ಹೆಸರು ಬಂದಿದೆ. ಈಗ ಪಟ್ಟಣವಾಗಿ ಬೆಳೆದಿರುವ ರಾಮ್‌ನಗರ್‌ನಲ್ಲಿ ಅಭಯಾರಣ್ಯದ ಉಸ್ತುವಾರಿ ನೋಡಿಕೊಳ್ಳಲು ಅರಣ್ಯ ಕಚೇರಿಯನ್ನು ತೆರೆಯಲಾಗಿದೆ.

1974ರಲ್ಲಿ ರಾಮಗಂಗಾ ನದಿಗೆ ಅಣೆಕಟ್ಟು ನಿರ್ಮಿಸಿದರ ಫಲವಾಗಿ 54 ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನಿರಿನಲ್ಲಿ ಮುಳುಗಡೆಯಾಯಿತು. ಈ ನಷ್ಟವನ್ನು ಸರಿದೂಗಿಸಲು ಭಾರತ ಸರ್ಕಾರ ಮತ್ತೇ ಇನ್ನೂರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿತು. 1955ರಲ್ಲಿ ಜಿಮ್ ಕಾರ್ಬೆಟ್ ನಿಧನ ಹೊಂದಿದ ನಂತರ 1957ರಲ್ಲಿ ಹುಲಿಗಳ ರಕ್ಷಿತ ತಾಣವಾಗಿದ್ದ ಈ ಪ್ರದೇಶವನ್ನು ಜಿಮ್ ಕಾರ್ಬೆಟ್ ಅಭಯಾರಣ್ಯ ಎಂದು ಭಾರತ ಸರ್ಕಾರ ನಾಮಕರಣ ಮಾಡಿದೆ. ವಾಸ್ತವವಾಗಿ ಜಿಮ್ ಕಾರ್ಬೆಟ್‌ಗಿಂತ ಮೊದಲು ಈ ಪ್ರಾಂತ್ಯದಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಇ.ಆರ್.ಸ್ಟೀವನ್ ಮತ್ತು ಇ.ಎ.ಸ್ಮಿತೀಸ್ ಎಂಬುವರು ಈ ಅರಣ್ಯ ಪ್ರದೇಶವನ್ನು ಆಭಯಾರಣ್ಯ ಎಂದು ಘೋಷಿಸಲು ಸರ್ಕಾರಕ್ಕೆ 1924 ಮತ್ತು 1927ರಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ, ಕಾರ್ಬೆಟ್‌ನ ಆತ್ಮೀಯ ಗೆಳೆಯ ಹಾಗೂ ತಾಂಜೇನಿಯಾದ ಕೃಷಿ ತೋಟದ ಪಾಲುದಾರ, ವಿಂದಮ್ ಕುಮಾವನ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇವರ ಶಿಫಾರಸ್ಸುಗಳನ್ನ ತಿರಸ್ಕರಿಸಿದ್ದನು. ಏಕೆಂದರೆ, ಸ್ವತಃ ಬೇಟೆಗಾರನಾಗಿದ್ದ ವಿಂದಮ್‌ಗೆ ವನ್ಯಮೃಗಗಳ ಶಿಕಾರಿ ಎಂಬುದು ಹವ್ಯಾಸವಾಗಿರದೆ ವ್ಯಸನವಾಗಿತ್ತು. ಅಂತಿಮವಾಗಿ ಆ ಇಬ್ಬರು ಅಧಿಕಾರಿಗಳ ಕನಸು ಕಾರ್ಬೆಟ್ ಮೂಲಕ ನೆನಸಾಯಿತು.

ಈಗ ಉತ್ತರಾಂಚಲ ರಾಜ್ಯಕ್ಕೆ ಸೇರಿರುವ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಾಮ್‌ನಗರ್ ಪಟ್ಟಣದಲ್ಲಿರುವ ಅರಣ್ಯ ಕಚೇರಿಯಲ್ಲಿ ಅನುಮತಿ ಪಡೆದು ಇಲಾಖೆ ನೀಡುವ ವಾಹನವನ್ನು ಬಾಡಿಗೆ ಪಡೆದು ಅರಣ್ಯವನ್ನು ವೀಕ್ಷಣೆ ಮಾಡಬಹುದು. ಅರಣ್ಯ ಸಫಾರಿಗೆ ನಮ್ಮ ಜೊತೆಯಲ್ಲಿ ಒಬ್ಬ ಅರಣ್ಯ ರಕ್ಷಕನನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಐದು ಜನರ ವಾಹನ ಶುಲ್ಕ 1,200 ರೂಪಾಯಿ, ಅರಣ್ಯ ರಕ್ಷಕನ ಶುಲ್ಕ 300 ರೂ. ಮತ್ತು ಅರಣ್ಯ ಭೇಟಿ ಶುಲ್ಕ 250 ರೂ.ಗಳನ್ನು ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿದೆ. ಯಾವುದೇ ಆಹಾರ, ಬೆಂಕಿಪೊಟ್ಟಣ, ಸಿಗರೇಟ್  ಮುಂತಾದವುಗಳಿಗೆ ನಿಷೇಧ ಹೇರಲಾಗಿದೆ. ಅಲ್ಲಿನ ಅರಣ್ಯ ಇಲಾಖೆ ಪ್ರವಾಸಿಗರಿಂದ ಅಪಾರ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದರೂ ಕೂಡ, ಅಭಯಾರಣ್ಯ ಪ್ರದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಲ್ಲಿ ಸೋತಿದೆ. ಅಲ್ಲಿನ ಅಧಿಕಾರಿಗಳು, ಸಫಾರಿಗೆ ಬಳಸುವ ಖಾಸಾಗಿ ವಾಹನಗಳ ಮಾಲೀಕರ ಜೊತೆ ಕೈ ಜೋಡಿಸಿ, ಪ್ರವಾಸಿಗರಿಂದ ಹಣ ಸುಲಿಯುವುದರಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಇದು ಜಿಮ್ ಕಾರ್ಬೆಟ್‌ನಂತಹ ಅಪ್ರತಿಮ ವ್ಯಕ್ತಿಗೆ ಅಲ್ಲಿನ ಸರ್ಕಾರ ಮಾಡುತ್ತಿರುವ ಅಪಮಾನವಲ್ಲದೆ, ಬೇರೇನೂ ಅಲ್ಲ.

                                                                              (ಮುಂದುವರಿಯುವುದು)