Category Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 20)


– ಡಾ.ಎನ್.ಜಗದೀಶ್ ಕೊಪ್ಪ


 

ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೇ ತಂಗಿದ್ದ ಕಾರ್ಬೆಟ್ ಆ ದಿನ ರಾತ್ರಿ ನರಭಕ್ಷಕ ಮತ್ತೇ ಸುಳಿಯಬಹುದೆಂದು ಕಿಟಕಿಯ ಬಳಿ ಕಾದುಕುಳಿತರೂ ಏನು ಪ್ರಯೋಜನವಾಗಲಿಲ್ಲ, ನರಭಕ್ಷಕ ಚಿರತೆ ತನ್ನ ಮಾರ್ಗ ಬದಲಿಸಿ ಪಕ್ಕದ ಹಳ್ಳಿಯಲ್ಲಿ ಗರ್ಭಿಣಿ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ರಾತ್ರಿ ಊಟವಾದ ನಂತರ ಮನೆಯ ಹಿಂಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ಹೆಂಗಸಿನ ಮೇಲೆ ನರಭಕ್ಷಕ ದಾಳಿ ಮಾಡಿತು. ಆಕೆ ಕಿರುಚಿಕೊಳ್ಳುತ್ತಿದ್ದಂತೆ ಕುತ್ತಿಗೆಯನ್ನು ಬಾಯಲ್ಲಿ ಹಿಡಿದು ಆಕೆಯನ್ನು ಊರಿನ ಕಿರಿದಾದ ಓಣಿಯ ನಡುವೆ ಎಳೆದೊಯ್ದು ಹೊರವಲಯದ ಕಣಿವೆಯಲ್ಲಿ ಅರ್ಧ ತಿಂದು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು.

ಚಿರತೆಯ ಈ ಅನಿರೀಕ್ಷಿತ ದಾಳಿಗೆ ಬೆಚ್ಚಿದ ಗ್ರಾಮಸ್ಥರು ತಮ್ಮ ಮನೆಯ ಕಿಟಕಿ, ಬಾಗಿಲು ಮುಚ್ಚಿ ಹೊರಬರಲು ಹಿಂದೇಟು ಹಾಕಿದರು. ಮನೆಯೊಳಗೆ ಚುಟ್ಟಾ ಸೇದುತ್ತಾ ಕುಳಿತ್ತಿದ್ದ ಆಕೆಯ ಯಜಮಾನನಿಗೆ ನರಭಕ್ಷಕ ಚಿರತೆಯ ಆಕ್ರಮಣದ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹೆಂಡತಿ ಕಿರುಚಿಕೊಂಡರೂ ಸಹ ಒಳಕ್ಕೆ ಬಾರದಿರುವುದರಿಂದ ಅನುಮಾನಗೊಂಡ ಅವನು ಮನೆಯ ಹಿಂಭಾಗಕ್ಕೆ ಬಂದಾಗ ನರಭಕ್ಷಕ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾಯಿತು. ಮಾರನೇ ದಿನ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ, ಪ್ರವಾಸಿ ಮಂದಿರದಿಂದ ಸುಮಾರು ನಾಲ್ಕು ಮೈಲಿ ದೂರದ ಪರ್ವತದ ಮೇಲಿದ್ದ ಹಳ್ಳಿಯ ಆಕೆಯ ಮನೆಗೆ ಬಂದ ಕಾರ್ಬೆಟ್ ಆಕೆಯ ರಕ್ತದ ಕಲೆಗಳ ಜಾಡು ಹಿಡಿದು ಚಿರತೆ ಸಾಗಿರುವ ದಾರಿಯನ್ನು ಹಿಂಬಾಲಿಸಿದ. ಅದು ಹೆಂಗಸಿನ ಶವದ ಜೊತೆ ನಾಲ್ಕು ಅಡಿ ಎತ್ತರದ ಗೋಡೆ ಹಾರಿ ಹೋಗಿರುವುದು ಅವನ ಗಮನಕ್ಕೆ ಬಂತು. ಇದು ಬಲಿಷ್ಟ ದೇಹದ ವಯಸ್ಸಾದ ನರಭಕ್ಷಕ ಎಂದು ಆ ಕೂಡಲೇ ಕಾರ್ಬೆಟ್ ನಿರ್ಧರಿಸಿದ.

ಊರಾಚೆಗಿನ ಕಣಿವೆಯೊಂದರ ಬಳಿ ಆ ಹೆಂಗಸಿನ ಶವವನ್ನು ಇಟ್ಟುಕೊಂಡು ಮುಕ್ಕಾಲು ಭಾಗ ತಿಂದು ಮುಗಿಸಿದ ನರಭಕ್ಷಕ ಉಳಿದ ಭಾಗವನ್ನು ಅಲ್ಲಿಯೇ ಉಳಿಸಿ ಹೋಗಿತ್ತು. ಮಹಿಳೆಯ ಶವವಿದ್ದ ಸುತ್ತ ಮುತ್ತಲಿನ ಜಾಗವನ್ನೊಮ್ಮೆ ಕಾರ್ಬೆಟ್ ಅವಲೋಕಿಸಿದ. ಶವವಿದ್ದ ಜಾಗದಿಂದ 40 ಅಡಿ ದೂರದಲ್ಲಿ ಇಳಿಜಾರಿನಲ್ಲಿ ಒಂದು ಮರವಿತ್ತು ಜೊತೆಗೆ ಮರದ ಸುತ್ತ ಕಟ್ಟೆಯಾಕಾರದಲ್ಲಿ ಎತ್ತರದಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸುಮಾರು ಆರು ಅಡಿ ಉದ್ದ-ಅಗಲದ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ದನಕರು ಮೇಕೆ ಕಾಯುವ ಹಳ್ಳಿಗರು ಮರದ ನೆರಳಿನಲ್ಲಿ ಕೂರುವುದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು.ರಾತ್ರಿ ಮರದ ಮೇಲೆ ಕುಳಿತು ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಇದು ಸೂಕ್ತವಾದ ಜಾಗ ಎಂದು ಕಾರ್ಬೆಟ್ ನಿರ್ಧರಿಸಿದ.

ಸಂಜೆಯಾಗುತ್ತಿದ್ದಂತೆ ತನ್ನ ಸೇವಕರು, ಗ್ರಾಮಸ್ಥರ ಜೊತೆ ಅಲ್ಲಿಗೆ ಬಂದ ಕಾರ್ಬೆಟ್ ಇದೇ ಮೊದಲ ಬಾರಿಗೆ ಚಿರತೆಯನ್ನು ಬೇಟೆಯಾಡಲು ವಿನೂತನ ಪ್ರಯೋಗಕ್ಕೆ ಮುಂದಾದ. ಬೆಳಿಗ್ಗೆ ಶವ ವೀಕ್ಷಣೆಗೆ ಬಂದಿದ್ದಾಗ ಚಿರತೆ ಶವವನ್ನು ತಿಂದು ಕಣಿವೆಯಲ್ಲಿದ್ದ ಕಾಲುದಾರಿಯಲ್ಲಿ ತೆರಳಿತ್ತು. ಮತ್ತೇ ಇದೇ ದಾರಿಯಲ್ಲಿ ಬರಬಹುದೆಂದು ಊಹಿಸಿದ ಕಾರ್ಬೆಟ್, ಗ್ರಾಮಸ್ಥರು ತಂದಿದ್ದ ಎರಡು ಬಿದರಿನ ಬೊಂಬುಗಳನ್ನು ಆ ಕಾಲುದಾರಿಯ ಎರಡು ಬದಿಗಳಲ್ಲಿ ನೆಡಸಿದ. ತಾನು ತಂದಿದ್ದ ಮೂರು ಬಂದೂಕಗಳ ಪೈಕಿ ಒಂದನ್ನು ಬೊಂಬಿಗೆ ಕಟ್ಟಿ ದಾರಿಗೆ ಅಡ್ಡಲಾಗಿ ಮೀನು ಶಿಕಾರಿಗೆ ಬಳಸುವ ಪ್ಲಾಸ್ಟಿಕ್ ದಾರವನ್ನು ಕಟ್ಟಿದ. ದಾರದ ಇನ್ನೊಂದು ತುದಿಯನ್ನು ಬಂದೂಕದ ಒತ್ತುಗುಂಡಿಗೆ ಕಟ್ಟಿದ. ನರಭಕ್ಷಕ ಕಾಲುದಾರಿಯಲ್ಲಿ ಬಂದು ದಾರವನ್ನು ಸೋಕಿಸಿದರೆ ಸಾಕು ಬಂದೂಕಿನಿಂದ ಗುಂಡು ಸಿಡಿಯುವಂತೆ ವ್ಯವಸ್ಥೆ ಮಾಡಿದ. ಇಂತಹದ್ದೇ ಇನ್ನೊಂದು ವ್ಯವಸ್ಥೆಯನ್ನು ಶವವಿದ್ದ ಹಿಂಬದಿಯ ಭಾಗದಲ್ಲೂ ನಿರ್ಮಿಸಿದ. ನರಭಕ್ಷಕ ಒಂದು ದಾರಿಯಲ್ಲಿ ತಪ್ಪಿಸಿಕೊಂಡರೆ, ಅದು ಇನ್ನೋಂದು ದಾರಿಯಲ್ಲಾದರೂ ಗುಂಡಿಗೆ ಬಲಿಯಾಗಬೇಕು ಇದು ಕಾರ್ಬೆಟ್‌ನ ಆಲೋಚನೆಯಾಗಿತ್ತು.

ಸ್ಥಳದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಎಲ್ಲರನ್ನು ವಾಪಸ್ ಹಳ್ಳಿಗೆ ಕಳಿಸಿದ ಕಾರ್ಬೆಟ್, ತನ್ನ ಸಹಾಯಕರನ್ನು ಆ ರಾತ್ರಿ ಹಳ್ಳಿಯ ಮುಖಂಡನ ಮನೆಯಲ್ಲಿ ಮಲಗಲು ಹೇಳಿದ. ರಾತ್ರಿಯ ಶಿಕಾರಿಗಾಗಿ ತಾನು ತಂದಿದ್ದ, ಬಿಸ್ಕೇಟ್, ನೀರು, ಸಿಗರೇಟು, ಬಂದೂಕ, ಒಂದು ಪಿಸ್ತೂಲ್, ಚಾಕು, ಎಲ್ಲವನ್ನು ತೆಗೆದುಕೊಂಡು ಮರವೇರಿ ಕುಳಿತ. ಕತ್ತಲು ಆವರಿಸುವ ಸಮಯದಲ್ಲಿ ನಿರ್ಮಲವಾಗಿದ್ದ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತಿದ್ದವು. ಕ್ರಮೇಣ ಮೋಡಗಳು ಆವರಿಸಿಕೊಂಡು ಕತ್ತಲು ಹೆಪ್ಪುಗಟ್ಟಿತು. ಮುಂಜ್ರಾಗತಾ ಕ್ರಮವಾಗಿ ಕಾರ್ಬೆಟ್ ಮಹಿಳೆಯ ಶವದ ಬಳಿ ಬಿಳಿಯ ಬಣ್ಣದ ಒಂದು ಬೆಣಚು ಕಲ್ಲನ್ನು ಇರಿಸಿದ್ದ. ಚಿರತೆ ಶವದ ಬಳಿ ಬಂದರೆ, ಕತ್ತಲೆಯಲ್ಲಿ ಗುರಿ ಇಡಲು ಬಿಳಿಯ ಬಣ್ಣದ ಕಲ್ಲು ಇರಲಿ ಎಂಬುದು ಅವನ ಮುಂದಾಲೋಚನೆಯಾಗಿತ್ತು. ರಾತ್ರಿ ಒಂಬತ್ತರ ಸಮಯಕ್ಕೆ ಸರಿಯಾಗಿ ಹಿಮ ಪರ್ವತದಿಂದ ಶೀತಗಾಳಿ ಬೀಸಲು ಪ್ರಾರಂಭಿಸುತ್ತಿದ್ದಂತೆ ಆಗಸದಿಂದ ದಪ್ಪನೆಯ ಮಳೆ ಹನಿ ಸಹ ಬೀಳತೊಡಗಿತು.

ಇದೇ ಸಮಯಕ್ಕೆ ಸರಿಯಾಗಿ ಕಣಿವೆಯ ಮೇಲ್ಭಾಗದಿಂದ ಕಲ್ಲುಗಳು ಕೆಳಕ್ಕೆ ಉರುಳತೊಡಗಿ ನರಭಕ್ಷಕನ ಆಗಮನದ ಸೂಚನೆ ನೀಡತೊಡಗಿದವು. ದೂರದಲ್ಲಿ ಜಿಂಕೆಗಳ ಚೀತ್ಕಾರ, ಮಂಗಗಳ ಕಿರುಚುವಿಕೆ, ಪಕ್ಷಿಗಳ ಅಸಹಜವಾದ ಧ್ವನಿ ಇವೆಲ್ಲವೂ ಚಿರತೆಯ ಆಗಮನವನ್ನು ಕಾರ್ಬೆಟ್‌ಗೆ ಧೃಡಪಡಿಸಿದವು. ಬಿರುಸಿನ ಮಳೆಯ ಶಬ್ಧದಿಂದಾಗಿ ಏನೂ ಕಾಣುವಂತಿರಲಿಲ್ಲ, ಕೇಳುವಂತಿರಲಿಲ್ಲ. ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಕಾರ್ಬೆಟ್ ಕುಳಿತ್ತಿದ್ದ ಮರದ ಕೆಳಗಿನ ಚಪ್ಪರದ ಅಡಿಯಲ್ಲಿ ಶಬ್ದವಾದ ಹಾಗೆ ಭಾಸವಾಯ್ತು. ಕುತೂಹಲದಿಂದ ಗಮನಿಸಿದಾಗ, ಆ ನರಭಕ್ಷಕ ಚಿರತೆ ಮಳೆಯಿಂದ ತಪ್ಪಿಸಿಕೊಳ್ಳಲು ಚಪ್ಪರವನ್ನೇ ಆಶ್ರಯಿಸಿತ್ತು. ಚಪ್ಪರದ ಮೇಲೆ ಹುಲ್ಲನ್ನು ದಟ್ಟವಾಗಿ ಹಾಸಿದ್ದ ಪರಿಣಾಮ ಅದು ಅವನಿಗೆ ಕಾಣುವಂತೆ ಇರಲಿಲ್ಲ. ಹತ್ತಿರದಿಂದ ಹೊಡೆದು ಉರುಳಿಸುವ ಅವಕಾಶ ತಪ್ಪಿಹೋದುದಕ್ಕೆ ಕಾರ್ಬೆಟ್ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಮಳೆ ನಿಂತ ನಂತರ agave ನಿಧಾನವಾಗಿ ಹೆಂಗಸಿನ ಶವವಿದ್ದ ಜಾಗದ ಕಡೆ ನಡೆದು ಹೋಗುತ್ತಿರುವುದು ನೆಲದಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಅದರ ಹೆಜ್ಜೆಯ ಶಬ್ದದಿಂದ ಖಚಿತಪಡಿಸಿಕೊಂಡ. ತಾನು ಶವದ ಬಳಿ ಇಟ್ಟಿದ್ದ ಬಿಳಿಯ ಕಲ್ಲು ಕಾರ್ಬೆಟ್‌ಗೆ ಕಾಣದಾಯ್ತು. ಹೆಂಗಸಿನ ಶವದ ಕೆಳಗೆ ಮಳೆಯ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಚಿರತೆ ಶವವನ್ನು ಸ್ವಲ್ಪ ದೂರಕ್ಕೆ ಎಳೆದಿತ್ತು. ಇದರಿಂದಾಗಿ, ಕಲ್ಲು ಶವದ ಕೆಳಕ್ಕೆ ಸೇರಿಹೋದ ಕಾರಣ, ಕಾರ್ಬೆಟ್ ನರಭಕ್ಷಕನಿಗೆ ಗುರಿ ಇಡುವುದು ಕಷ್ಟವಾಯ್ತು.

ಆ ಕಗ್ಗತ್ತಲಿನಲ್ಲಿ ಅಂದಾಜಿನ ಮೇಲೆ ಚಿರತೆ ಶವದ ಮೂಳೆ ಅಗಿಯುವ ಶಬ್ಧವನ್ನು ಆಲಿಸುತ್ತಾ ದಿಕ್ಕನ್ನು ಗುರುತಿಸತೊಡಗಿದ. ಮತ್ತೇ ಮಳೆ ಹನಿ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಶವವನ್ನು ತಿನ್ನುವುದನ್ನು ನಿಲ್ಲಿಸಿ, ಪೊದೆಯಲ್ಲಿ ಅಡಗಿಕೊಂಡಿತು. ಹೀಗೆ ಸತತ ನಾಲ್ಕು ಗಂಟೆಗಳ ಕಾಲ, ಮಳೆಯ ಕಾರಣ, ಚಿರತೆ ಬರುವುದು, ಹೋಗುವುದು ಮಾಡುತ್ತಲೇ ಇತ್ತು. ಕಾರ್ಬೆಟ್ ಮರಕ್ಕೆ ಕಟ್ಟಿದ್ದ ಕೋವಿಯ ದಾರವನ್ನು ಸಹ ಅದು ತುಳಿಯಲೇ ಇಲ್ಲ. ಮಳೆ ನಿಂತ ಬಳಿಕ ಆಕಾಶ ಸ್ವಲ್ಪ ಮಟ್ಟಿಗೆ ಶುಭ್ರವಾಯಿತು. ಹೆಂಗಸಿನ ಶವದ ಬಳಿ ಇರಿಸಿದ್ದ ಕಲ್ಲು ಕಾರ್ಬೆಟ್ ಕಣ್ಣಿಗೆ ಅಸೃಷ್ಟವಾಗಿ ಗೋಚರಿಸತೊಡಗಿತು. ಮತ್ತೆ ನರಭಕ್ಷಕ ಶವದ ಬಳಿ ಆಗಮಿಸುತ್ತಿರುದನ್ನು ಗಮನಿಸಿದ ಅವನು ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕಲ್ಲನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿಬಿಟ್ಟ. ಅದರ ಪರಿಣಾಮವನ್ನು ತಿಳಿಯಬೇಕಾದರೆ, ಅವನು ಬೆಳಕು ಹರಿಯುವವರೆಗೆ ಕಾಯಲೇಬೇಕಿತ್ತು.

ಬೆಳಗಿನ ಜಾವ ಕಾರ್ಬೆಟ್ ಮರದಿಂದ ಕೆಳಕ್ಕೆ ಇಳಿದು ನೋಡಿದಾಗ ಅವನಿಗೆ ತೀವ್ರ ನಿರಾಶೆಯಾಯಿತು. ಕೂದಲೆಳೆಯ ಅಂತರದಲ್ಲಿ ನರಭಕ್ಷಕ ಗುಂಡಿನಿಂದ ತಪ್ಪಿಸಿಕೊಂಡಿತ್ತು. ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿದ್ದ ಗುಂಡು ನೆಲಕ್ಕೆ ಬಡಿದಿತ್ತು. ಚಿರತೆಯ ಕುತ್ತಿಗೆ ಭಾಗದ ಕೂದಲುಗಳು ನೆಲದ ಮೇಲೆ ಹರಡಿದ್ದವು. ಕಾರ್ಬೆಟ್ ತೀವ್ರ ನಿರಾಶನಾಗಿ ಮರಕ್ಕೆ ಕಟ್ಟಿದ್ದ ಕೋವಿಗಳನ್ನು ಬಿಚ್ಚಿಕೊಂಡು ಪ್ರವಾಸಿ ಮಂದಿರದತ್ತ ಹೆಜ್ಜೆ ಹಾಕಿದನು. ಚಿರತೆಗೆ ಬಲಿಯಾದ ಹೆಂಗಸಿನ ಪತಿ ಆಕೆಯ ಅಳಿದುಳಿದ ಶವದ ಭಾಗಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಆಯ್ದುಕೊಂಡನು. ಆ ಹಳ್ಳಿಯ ಜನಕ್ಕೆ ನಿರಾಶೆಯಾದರೂ ಕಾರ್ಬೆಟ್ ಬಗ್ಗೆ ಅಗಾಧ ಭರವಸೆ ಇತ್ತು. ಒಂದಲ್ಲ ಒಂದು ದಿನ ಈ ಬಿಳಿಯ ಸಾಹೇಬ ನರಭಕ್ಷಕನಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ಅವರು ನಂಬಿದ್ದರು. ರಾತ್ರಿಯಲ್ಲಿ ಒಂಟಿಯಾಗಿ ಬಂದೂಕ ಹಿಡಿದು ತಿರುಗುವ ಕಾರ್ಬೆಟ್‌ಗೆ ಅಗೋಚರವಾದ ದೈವಿಶಕ್ತಿ ಇದೆ ಎಂದು ಅವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಘರ್ವಾಲ್ ಪ್ರಾಂತ್ಯದ ಯಾವುದೇ ಹಳ್ಳಿಗೆ ಕಾರ್ಬೆಟ್ ಹೋದರೂ ಸಹ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಗೌರವಿಸುತ್ತಿದ್ದರು. ಅಮಾಯಕ. ಮುಗ್ಧ ಹಳ್ಳಿಗರ ಪ್ರೀತಿಗೆ ಕಾರ್ಬೆಟ್ ಮನಸೋತ್ತಿದ್ದ. ಇವರ ಪ್ರೀತಿಗೆ ಕಾಣಿಕೆಯಾಗಿ, ನರಭಕ್ಷಕನನ್ನು ಬೇಟೆಯಾಡಲೇ ಬೇಕು ಎಂಬ ದೃಢ ನಿರ್ಧಾರವೊಂದು ಅವನ ಮನದಲ್ಲಿ ಮನೆ ಮಾಡಿತು.

 ( ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 19)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿ ಕೊಲ್ಲಬೇಕು ಎಂದು ಅನಿಸಿದರೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಕಾರಣ ಅವನು ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆ ವೇಳೆಗಾಗಲೇ ಐವತ್ತು ವರ್ಷವನ್ನು ದಾಟಿದ್ದ ಕಾರ್ಬೆಟ್ ಮೊದಲಿನಂತೆ, ನರಭಕ್ಷಕ ಹುಲಿ ಅಥವಾ ಚಿರತೆಗಳನ್ನು ಬೆನ್ನಟ್ಟಿ ವಾರಗಟ್ಟಲೇ ಸರಿಯಾದ ಊಟ ತಿಂಡಿಯಿಲ್ಲದೆ, ರಾತ್ರಿಗಳನ್ನು ಮರದ ಮೇಲೆ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಸರ್ಕಾರದ ಪರವಾಗಿ ರುದ್ರಪ್ರಯಾಗದ ಚಿರತೆಯನ್ನು ಬೇಟೆಯಾಡಲು ಮನವಿ ಪತ್ರ ಬರೆದ, ಜಿಲ್ಲಾಧಿಕಾರಿ ವಿಲಿಯಮ್ ಇಬ್ಸ್‌ಟನ್ ಕಾರ್ಬೆಟ್‌ನ ಆತ್ಮೀಯ ಗೆಳೆಯನಾಗಿದ್ದ.

ಇಬ್ಸ್‌ಟನ್ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ತನ್ನ ಪತ್ನಿ ಸಮೇತನಾಗಿ ಅಲ್ಲಿಗೆ ಬಂದಿದ್ದ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಕಾಲೇಜಿನ ಪದವೀಧರನಾದ ಆತ 1909 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ, ಭಾರತಕ್ಕೆ ಬಂದಿದ್ದ. ವಯಸ್ಸಿನಲ್ಲಿ ಕಾರ್ಬೆಟ್‌‍ಗಿಂತ ಹತ್ತುವರ್ಷ ಚಿಕ್ಕವನಾದರೂ ಆತನಿಗಿದ್ದ, ಮೀನು ಶಿಕಾರಿ, ಕುದುರೆ ಸವಾರಿ, ಮತ್ತು ಬಿಡುವಾದಾಗ ಕಾಡು ಅಲೆಯುವ ಹವ್ಯಾಸ ಇವುಗಳಿಂದ ಕಾರ್ಬೆಟ್‌ಗೆ ತೀರಾ ಹತ್ತಿರದ ಸ್ನೇಹಿತನಾಗಿದ್ದ. ಅಧಿಕಾರಿಗಳಲ್ಲಿ ವಿಂಧಮ್‌ನನ್ನು ಹೊರತುಪಡಿಸಿ, ಇಬ್ಸ್‌ಟನ್‌ನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಾರ್ಬೆಟ್ ಅವನನ್ನು ಪ್ರೀತಿಯಿಂದ ಇಬ್ಬಿ ಎಂದು ಕರೆಯುತ್ತಿದ್ದ. ಈತ ಕೂಡ, ವಿಂದಮ್ ರೀತಿಯಲ್ಲಿ ಭಾರತೀಯರನ್ನು ತುಂಬು ಹೃದಯದಿಂದ ಕಾಣುತ್ತಿದ್ದುದ್ದು ಕಾರ್ಬೆಟ್‌ಗೆ ಆತನ ಬಗ್ಗೆ  ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು.

ಇಂತಹ ಸನ್ನೀವೇಶದಲ್ಲಿ ಇಬ್ಸ್‌ಟನ್ ಮನವಿಯನ್ನು ನಿರಾಕರಿಸಲಾರದೆ, ಚಿರತೆಯ ಬೇಟೆಗೆ ಹೊರಡಲು ಕಾರ್ಬೆಟ್ ನಿರ್ಧರಿಸಿದ. ಈ ಬಾರಿ ವಯಸ್ಸಿನ ಕಾರಣದಿಂದಾಗಿ ಬೇಟೆಗೆ ಹೋಗಲು ಅವನ ಸಹೋದರಿ ಮ್ಯಾಗಿ ಕೂಡ ಆಕ್ಷೇಪ ವ್ಯಕ್ತಪಡಿಸಿದಳು. ಅವಳನ್ನು ಸಮಾದಾನ ಪಡಿಸಿ. ಆರು ಮಂದಿ ಘರವಾಲ್ ಜನಾಂಗದ ಸೇವಕರು, ಹಾಗೂ ಬೇಟೆಯ ಸಂದರ್ಭದಲ್ಲಿ ತನ್ನ ಜೊತೆಯಿರಲು ನೆಚ್ಚಿನ ಭಂಟ ಮಾಧೂಸಿಂಗ್ ಜೊತೆ ಕಾರ್ಬೆಟ್ ಘರ್‍ವಾಲ್‌ನತ್ತ ಹೊರಟ. ಈ ಬಾರಿ ಜಿಲ್ಲಾಧಿಕಾರಿ ಇಬ್ಸ್‌‌‌ಟನ್ ಪ್ರಯಾಣಕ್ಕಾಗಿ ಕುದುರೆ ವ್ಯವಸ್ಥೆ ಮಾಡಿದ್ದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರ ಪ್ರಯಾಣ ತ್ರಾಸದಾಯಕವೆನಿಸಲಿಲ್ಲ.

ಕಾರ್ಬೆಟ್ ತನ್ನ ಸೇವಕರ ಜೊತೆ ಕುದುರೆ ಮತ್ತು ಕಾಲ್ನಡಿಗೆ ಮೂಲಕ ರಾಣಿಖೇತ್, ಅದ್‌ಬಾದ್ರಿ ಮತ್ತು ಕರ್ಣಪ್ರಯಾಗದ ಮೂಲಕ ರುದ್ರಪ್ರಯಾಗವನ್ನು ತಲುಪುವುದಕ್ಕೆ ಹತ್ತುದಿನಗಳು ಹಿಡಿಯಿತು. ಆ ವೇಳೆಗಾಗಲೇ ನರಭಕ್ಷಕ ಚಿರತೆ ಮತ್ತೊಬ್ಬನನ್ನು ಬಲಿತೆಗೆದುಕೊಂಡಿತ್ತು. ಕಮೇರ ಎಂಬ ಹಳ್ಳಿಯಲ್ಲಿ ಬದರಿನಾಥ್ ಯಾತ್ರಿಕರಿಗಾಗಿ ಹೊಟೇಲ್ ನಡೆಸುತ್ತಿದ್ದ ಪಂಡಿತನೊಬ್ಬನ ಮನೆಯಿಂದ ರಾತ್ರಿ ವೇಳೆ ಮಲಗಿದ್ದ ಓರ್ವ ಸಾಧುವನ್ನು ನರಭಕ್ಷಕ ಎಳೆದೊಯ್ದು ಕೊಂದುಹಾಕಿತ್ತು. ಆದಿನ ಸಂಜೆ ಇಪ್ಪತ್ತುಕ್ಕೂ ಹೆಚ್ಚು ಮಂದಿ ಇದ್ದ ಯಾತ್ರಿಕರು ಮಳೆಯ ಕಾರಣ ಪ್ರಯಾಣ ಮುಂದುವರಿಸಲಾರದೆ, ಪಂಡಿತನಲ್ಲಿ ವಸತಿ ವ್ಯವಸ್ಥೆಗೆ ಆಶ್ರಯ ಕೋರಿದ್ದರು. ಗುಡ್ಡಗಳ ಒರಟು ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಸುಮಾರು ಸುತ್ತಲೂ ಎಂಟು ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಿ ತಗಡಿನ ಶೀಟ್ ಹೊದಿಸಿದ್ದ ಅವನ ಹೊಟೇಲ್ ಹಿಂಭಾಗದ ಕೋಣೆಯನ್ನು ಪಂಡಿತ ಆ ರಾತ್ರಿ ಯಾತ್ರಿಕರಿಗೆ ತಂಗಲು ನೀಡಿದ್ದ. ಕಿಟಕಿ ಬಾಗಿಲುಗಳಿಲ್ಲದ ಆ ಕೋಣೆಗೆ ಹಲವೆಡೆ ಬೆಳಕು ಬರಲು ಗೋಡೆಯಲ್ಲಿ ದೊಡ್ಡ ಮಟ್ಟದ ರಂಧ್ರಗಳನ್ನು ಹಾಗೇ ಬಿಡಲಾಗಿತ್ತು. ಬಾಗಿಲಿಗೆ ತಗಡಿನ ಒಂದು ಹೊದಿಕೆಯನ್ನು ಮುಚ್ಚಿ ಅದು ಗಾಳಿಗೆ ಬೀಳದಂತೆ ಕಲ್ಲನ್ನು ಅದಕ್ಕೆ ಒರಗಿಸಿ ಇಡಲಾಗಿತ್ತು. ನರಭಕ್ಷಕ ಆ ರಾತ್ರಿ ಯಾವ ಸುಳಿವು ಸಿಗದಂತೆ ಬಾಗಿಲಿನ ಕಲ್ಲನ್ನು ಪಕ್ಕಕ್ಕೆ ಸರಿಸಿ, ಒಳಗೆ ಪ್ರವೇಶ ಮಾಡಿ, ಕೋಣೆಯೊಳಗೆ ಮಲಗಿದ್ದ ಇಪ್ಪತ್ತು ಜನರ ಪೈಕಿ ಸಾಧುವಿನ ಕುತ್ತಿಗೆಗೆ ಬಾಯಿ ಹಾಕಿ ಅವನಿಂದ ಯಾವುದೇ ಶಬ್ಧ ಬರದಂತೆ ಮಾಡಿ ಎತ್ತೊಯ್ದಿತ್ತು. ಹೋಟೇಲ್‌ನ ಅನತೀ ದೂರದಲ್ಲಿ ಹರಿಯುತ್ತಿದ್ದ ನದಿ ತೀರದ ಬಳಿ ಆತನ ದೇಹವನ್ನು ಅರೆ ಬರೆ ತಿಂದು ಬಿಸಾಡಿ ಹೋಗಿತ್ತು.

ಈ ಘಟನೆಯಿಂದ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿ ಇಬ್ಸ್‌ಟನ್ ಚಿರತೆ ಇಲ್ಲೆ ಕಾಡಿನಲ್ಲಿರಬಹುದೆಂದು ಊಹಿಸಿ ಆದಿನ ತೂಗು ಸೇತುವೆಯನ್ನು ಬಂದ್ ಮಾಡಿಸಿ ಎರಡು ಸಾವಿರ ಜನರೊಂದಿಗೆ ಸುತ್ತಮುತ್ತಲಿನ ಕಾಡನ್ನು ಜಾಲಾಡಿದ. ಸ್ವತಃ ನುರಿತ ಶಿಕಾರಿಕಾರನಾದ ಇಬ್ಸ್‌ಟನ್ ನರಭಕ್ಷಕ ಸೇತುವೆ ದಾಟಿ ಆಚೆಕಡೆಗಿನ ಕಾಡು ಸೇರಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ. ಆದರೆ, ಅವನು ಒಂದು ವಿಷಯದಲ್ಲಿ ಎಡವಿದ್ದ. ಅದೆನೇಂದರೆ,ಸಾಮಾನ್ಯವಾಗಿ ಹಸಿವಾದಾಗ ಬೇಟೆಯಾಡುವ ನರಭಕ್ಷಕ ಚಿರತೆ ಅಥವಾ ಹುಲಿಗಳು ತಮ್ಮ ಬೇಟೆಯನ್ನು ದೂರದ ಕಾಡಿಗೆ ಒಯ್ದು ಗುಪ್ತ ಸ್ಥಳವೊಂದರಲ್ಲಿ ಇಟ್ಟು ಎರಡರಿಂದ ಮೂರು ದಿನ ತಿನ್ನುವುದು ವಾಡಿಕೆ ಅವುಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲೆ ತಿಂದು ಬಿಸಾಡಿ ಹೋಗಿದ್ದರೆ, ಅವುಗಳು ಆ ಸ್ಥಳಕ್ಕೆ ಮತ್ತೇ ವಾಪಸ್ ಬರುವುದಿಲ್ಲ ಎಂದೇ ಅರ್ಥ. ಇಲ್ಲಿ ಕೂಡ ಚಿರತೆ ಆ ರಾತ್ರಿಯೇ ಸಾಧುವಿನ ಕಳೆಬರವನ್ನು ಅರ್ಧತಿಂದು, ತೂಗುಸೇತುವೆಯನ್ನು ದಾಟಿ ಬಹು ದೂರದವರೆಗೆ ಸಾಗಿಬಿಟ್ಟಿತ್ತು.

ಕಾರ್ಬೆಟ್ ರುದ್ರಪ್ರಯಾಗದ ತಲುಪಿದ ನಂತರ ಅವನಿಗೆ ನರಭಕ್ಷಕ ಬೇಟೆಯಾಡುತ್ತಿರುವ ಪ್ರದೇಶಗಳ ನಕ್ಷೆಯ ಹೊರತಾಗಿ ಬೇರೆ ಯಾವುದೇ ಮಾಹಿತಿ ದೊರಕಲಿಲ್ಲ. ನಕ್ಷೆಯನ್ನು ಮುಂದೆ ಹರಡಿಕೊಂಡು ಜನವಸತಿ ಪ್ರದೇಶಗಳನ್ನು ಕಾರ್ಬೆಟ್ ಗುರುತು ಮಾಡತೊಡಗಿದ. ಅಲಕಾನದಿಗೆ ಎರಡು ತೂಗು ಸೇತುವೆಗಳಿದ್ದದನ್ನು ಅವನು ಗಮನಿಸಿದ. ನದಿಯ ಒಂದು ಬದಿಯಲ್ಲಿ ಯಾವುದೇ ಹಳ್ಳಿಗಳು ಇಲ್ಲದ ಕಾರಣ ಚಿರತೆ ತನ್ನ ಬೇಟೆಗಾಗಿ ಸೇತುವೆ ದಾಟಿ ಜನರಿರುವ ವಸತಿ ಪ್ರದೇಶಕ್ಕೆ ಬರುತ್ತಿದೆ ಎಂದು ಊಹಿಸಿದ. ಅವನ ಈ ಊಹೆಗೆ ಚಿಟ್ಪಾವಲ್ ಹಳ್ಳಿ ಸಮೀಪದ ತೂಗು ಸೇತುವೆಯ ಸಮೀಪದ ಪಂಡಿತನ ಮನೆಯಲ್ಲಿ ಸಾಧು ನರಭಕ್ಷನಿಗೆ ಬಲಿಯಾದದ್ದು ಬಲವಾದ ಕಾರಣ ವಾಗಿತ್ತು. ಈ ಕಾರಣಕ್ಕಾಗಿ ಚಿರತೆ ಜನವಸತಿ ಪ್ರದೇಶದ ಅಂಚಿನ ಕಾಡಿನಲ್ಲೇ ಇರಬೇಕೆಂದು ಅಂದಾಜಿಸಿದ. ಇದಕ್ಕಾ ಗೋಲಬಾರಿ ಎಂಬ ಹಳ್ಳಿ ಸಮೀಪದ ಹೊರವಲಯದ ಕಾಡಿನ ನಡುವೆ ಇದ್ದ ಪ್ರವಾಸಿ ಬಂಗಲೆಯಲ್ಲಿ ತನ್ನ ಸೇವಕರೊಡನೆ ಉಳಿಯಲು ನಿರ್ಧರಿಸಿದ.

ಚಿರತೆಯ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಮೇಕೆಗಳನ್ನು ಕೊಂಡು ತಂದು ಅವುಗಳಲ್ಲಿ ಒಂದನ್ನು ದಟ್ಟ ಕಾಡಿನ ನಡುವೆ, ಮತ್ತೊಂದನ್ನು ಗೋಲಬಾರಿ ಹಳ್ಳಿಗೆ ಕಾಡಿನಿಂದ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಮರಗಳಿಗೆ ಕಟ್ಟಿ ಹಾಕಿ ಬಂದ. ಮಾರನೇ ದಿನ ಮೇಕೆ ಕಟ್ಟಿ ಹಾಕಿದ ಸ್ಥಳಗಳಿಗೆ ಹೋಗಿ ನೋಡಿದಾಗ. ಕಾಡಿನಲ್ಲಿ ಕಟ್ಟಿ ಹಾಕಿದ್ದ ಮೇಕೆ ಚಿರತೆಗೆ ಬಲಿಯಾಗಿತ್ತು. ಆದರೆ, ಅದನ್ನು ತಿನ್ನದೇ ಹಾಗೆಯೇ ಉಳಿಸಿ ಹೋಗಿರುವುದು ಕಾರ್ಬೆಟ್‌ನ ಜಿಜ್ಙಾಸೆಗೆ ಕಾರಣವಾಯಿತು. ಬೇರೆ ಯಾವುದಾದರೂ ಪ್ರಾಣಿ ದಾಳಿ ಮಾಡಿರಬಹುದೆ? ಎಂಬ ಪ್ರಶ್ನೆಯೂ ಒಮ್ಮೆ ಅವನ ತಲೆಯಲ್ಲಿ ಸುಳಿದು ಹೋಯಿತು. ಆದರೂ ಪರೀಕ್ಷಿಸಿ ಬಿಡೋಣ ಎಂಬಂತೆ ಮೇಕೆಯ ಕಳೇಬರದ ಸ್ಥಳದಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಮಧ್ಯಾಹದಿಂದ ಸಂಜೆ ಮಬ್ಬು ಕತ್ತಲೆ ಕವಿಯುವವರೆಗೂ ಬಂದೂಕ ಹಿಡಿದು ಕಾದು ಕುಳಿತ. ಆದರೆ, ಮೇಕೆಯ ಕಳೇಬರದ ಹತ್ತಿರಕ್ಕೆಯಾವ ಪ್ರಾಣಿಯೂ ಸುಳಿಯಲಿಲ್ಲ. ಕತ್ತಲು ಆವರಿಸುತಿದ್ದಂತೆ ಇಲ್ಲಿರುವುದು ಅಪಾಯ ಎಂದು ಭಾವಿಸಿದ ಕಾರ್ಬೆಟ್, ಪ್ರವಾಸಿ ಬಂಗಲೆಯತ್ತ ಹಿಂತಿರುಗಿದ. ಕಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಅಪಾಯಕಾರಿ ಪ್ರಾಣಿಗಳು ಇರುವ ಪ್ರದೇಶದಲ್ಲಿ ಎಡಬಲದ ಪ್ರದೇಶಗಳನ್ನು ಗಮನಿಸದೇ ನೇರವಾಗಿ ನಡೆಯುದು ಅಪಾಯಕಾರಿ ಎಂಬುದನ್ನು ಕಾರ್ಬೆಟ್ ಅರಿತ್ತಿದ್ದ. ಸಾಮಾನ್ಯವಾಗಿ ಹುಲಿ, ಚಿರತೆಗಳು ಹಿಂಬದಿಯಿಂದ ಆಕ್ರಮಣ ಮಾಡುವುದನ್ನು ಅರಿತ್ತಿದ್ದ ಅವನು ಪ್ರತಿ ಎರಡು ಮೂರು ಹೆಜ್ಜೆಗೊಮ್ಮೇ ನಿಂತು ಹಿಂತಿರುಗಿ ನೋಡುತ್ತಿದ್ದ. ನಡೆಯುವಾಗ ಕೂಡ ಎಡ ಬಲ ಗಮನ ಹರಿಸಿ ತನ್ನ ಇಡೀ ಶರೀರವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಳ್ಳುತ್ತಿದ್ದ. ಅದೃಷ್ಟವೆಂದರೆ, ಅವನ ಈ ಎಚ್ಚರಿಕೆಯೇ ಅಂದು ಅವನನ್ನು ನರಭಕ್ಷಕ ಚಿರತೆಯ ದಾಳಿಯಿಂದ ಪಾರು ಮಾಡಿತ್ತು. ಆದಿನ ರಾತ್ರಿ ಪ್ರವಾಸಿ ಬಂಗಲೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡುವಾಗ, ಚಿರತೆ, ದಾರಿಯುದ್ದಕ್ಕೂ ಕಾರ್ಬೆಟ್‌‍ನನ್ನು ಹಿಂಬಾಲಿಸಿಕೊಂಡು ಪ್ರವಾಸಿ ಮಂದಿರದವರೆಗೂ ಬಂದು ಇಡೀ ಕಟ್ಟಡವನ್ನು ಎರಡು ಮೂರು ಬಾರಿ ಸುತ್ತು ಹಾಕಿ ವಾಪಸ್ ಹೋಗಿರುವುದನ್ನು ಅದರ ಹೆಜ್ಜೆ ಗುರುತುಗಳು ಹೇಳುತ್ತಿದ್ದವು. ಚಿರತೆಯ ಹೆಜ್ಜೆ ಗುರುತು ಗಮನಿಸಿದ ಕಾರ್ಬೆಟ್ ಇದೊಂದು ಯವ್ವನ ದಾಟಿದ ವಯಸ್ಸಾದ ನರಭಕ್ಷಕ ಚಿರತೆ ಎಂಬುದನ್ನು ಖಚಿತಪಡಿಸಿಕೊಂಡ.

  (ಮುಂದುವರಿಯುವುದು)

 

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-18)


– ಡಾ.ಎನ್.ಜಗದೀಶ್ ಕೊಪ್ಪ


ನರಭಕ್ಷಕ ಹುಲಿಗಳ ಬೇಟೆಯಿಂದಾಗಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದ ಜಿಮ್ ಕಾರ್ಬೆಟ್ ಮಾನಸಿಕವಾಗಿ ಪ್ರಾಣಿ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ತನ್ನ ಕಣ್ಣ ಮುಂದೆ ಅರಣ್ಯ ನಶಿಸಿ ಹೋಗುತ್ತಿರುವುದು ಮತ್ತು ಕಾಡಿನ ಪ್ರಾಣಿಗಳು ಶಿಕಾರಿಗಾರರ ತೆವಲಿಗೆ ಬಲಿಯಾಗುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ನೊಂದುಕೊಂಡಿದ್ದ. ಈ ಕಾರಣಕ್ಕಾಗಿ ನರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದನ್ನು ಅವನು ನಿಲ್ಲಿಸಿದ್ದ.

ಜಿಮ್ ಕಾರ್ಬೆಟ್ ಬದುಕಿನಲ್ಲಿ, ಹಾಗೂ ಅವನ ಶಿಕಾರಿಯ ಅನುಭವದಲ್ಲಿ ಅತಿ ದೊಡ್ಡ ಸವಾಲು ಎದುರಾದದ್ದು, ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲುವ ಸಂದರ್ಭದಲ್ಲಿ ಮಾತ್ರ. ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸುಮಾರು 800 ಚದುರ ಕಿ. ಮಿ. ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ನರಮನುಷ್ಯರನ್ನು ಬೇಟೆಯಾಡುತ್ತಾ, ಸರ್ಕಾರವನ್ನು, ಸ್ಥಳೀಯ ಜನತೆಯನ್ನು ಆತಂಕದ ಮಡುವಿಗೆ ನೂಕಿದ್ದ ಈ ಚಿರತೆಯನ್ನು ಕೊಲ್ಲಲು ಜಿಮ್ ಕಾರ್ಬೆಟ್ ನಡೆಸಿದ ಸಾಹಸ, ಪಟ್ಟ ಪಾಡು ಒಂದು ಮಹಾ ಕಾವ್ಯದಂತೆ ರೋಮಾಂಚಕಾರಿಯಾದ ಕಥನ. ಈ ನರಭಕ್ಷಕನ ಬೇಟೆಗಾಗಿ ಅಂದಿನ ದಿನಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿತ್ತು ಏಕೆಂದರೆ, ಪ್ರತಿದಿನ 50 ರಿಂದ 100 ಕಿ.ಮಿ. ದೂರ ಸಂಚರಿಸುತ್ತಾ ಇದ್ದ ಈ ಚಿರತೆಯ ಪ್ರತಿ ನರಬೇಟೆಯೂ ಜಗತ್ತಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌‌‍ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದ ಬದಲಿಗೆ, ಈ ನರಭಕ್ಷಕ ಚಿರತೆಯ ಬಗ್ಗೆ ತೀವ್ರತರವಾದ ಚರ್ಚೆಗಳು ನಡೆಯುತ್ತಿದ್ದವು.

ಕಾಡಿನ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆ ಸಾಮಾನ್ಯವಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಬಹುತೇಕ ಕಡಿಮೆ. ಸಿಂಹ ಅಥವಾ ಹುಲಿ ಬೇಟೆಯಾಡಿ ತಿಂದು ಮುಗಿಸಿದ ಪ್ರಾಣಿಗಳ ಅವಶೇಷ ಅಥವಾ ವಯಸ್ಸಾಗಿ ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ತಿನ್ನುವುದು ಚಿರತೆಗಳ ಪವೃತ್ತಿ. ಆದರೆ, ರುದ್ರಪ್ರಯಾಗದ ಈ ನರಭಕ್ಷಕ ಚಿರತೆ ಆಕಸ್ಮಾತ್ತಾಗಿ ನರಭಕ್ಷಕ ಪ್ರಾಣಿಯಾಗಿ ಪರಿವರ್ತನೆ ಹೊಂದಿತ್ತು. ಇದಕ್ಕೆ ಸ್ಥಳೀಯ ಜನರ ಸಾಂಸ್ಕೃತಿಕ ಆಚರಣೆಗಳು ಕೂಡ ಪರೋಕ್ಷವಾಗಿ ಕಾರಣವಾಗಿದ್ದವು. ರುದ್ರಪ್ರಯಾಗ ಹಿಮಾಲಯದ ಪವಿತ್ರ ಕ್ಷೇತ್ರಗಳ ನಡುವಿನ ಸಂಗಮ ಕ್ಷೇತ್ರಗಳಲ್ಲಿ ಒಂದು. ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುವ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ರುದ್ರಪ್ರಯಾಗದಲ್ಲಿ ಒಂದುಗೂಡಿ, ಮುಂದೆ ಗಂಗಾನದಿಯಾಗಿ ಹರಿದು, ಮುಂದೆ ಹೃಷಿಕೇಶ ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ಕ್ಷೇತ್ರಗಳ ತಟದಲ್ಲಿ ಹರಿದು ಕೊಲ್ಕತ್ತಾ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಬಂಗಾಳ ಕೊಲ್ಲಿ ಸೇರುತ್ತದೆ.

ಭಾರತದ ಹಿಂದೂ ಸಮುದಾಯದ ಪಾಲಿಗೆ ಗಂಗಾ ನದಿ ಪುಣ್ಯನದಿ. ಇದು ಇಲ್ಲಿ ಜನಗಳ ಧಾರ್ಮಿಕ ಮನೋಭೂಮಿಯಲ್ಲಿ ಒಂದು ಅಚ್ಚಳಿಯದ ಹೆಸರು. ಹಿಂದು ಭಕ್ತರ ಪಾಲಿಗೆ ಚಾರ್‌ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಬದರಿನಾಥ್ ಹಾಗೂ ಕೇದಾರನಾಥ ಇವುಗಳನ್ನು ಸಂದರ್ಶಿಸುವುದು ಅವರ ಜೀವಮಾನದ ಕನಸು ಮತ್ತು ಹೆಬ್ಬಯಕೆ. ಹಾಗಾಗಿ ಈ ಸ್ಥಳಗಳು ವರ್ಷಪೂರ್ತಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತರಿಂದ ತುಂಬಿ ತುಳುಕುತ್ತವೆ. ಹೃಷಿಕೇಶದಿಂದ ಹೊರಟ ಭಕ್ತರು ರುದ್ರಪ್ರಯಾಗದ ಬಳಿ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಬೇರೆ ಬೇರೆ ದಾರಿ ಹಿಡಿದು ಸಾಗಬೇಕು. ಆ ಕಾಲದಲ್ಲಿ ಬಹುತೇಕ ಪ್ರಯಾಣವನ್ನು ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು ಇಂತಹ ಸಂದರ್ಭದಲ್ಲಿ ವಯಸ್ಸಾದ ಭಕ್ತರು ನಡುದಾರಿಯಲ್ಲಿ ಅಸುನೀಗಿದರೆ, ಅವರುಗಳ ಶವವನ್ನು ನದಿಯ ಕೊರಕಲು ಪ್ರದೇಶಕ್ಕೆ ನೂಕಿ ಮುಂದುವರಿಯುವುದು ಅನಿವಾರ್ಯವಾಗಿತ್ತು. ಜೊತೆಗೆ ಹಿಮಾಲಯದ ತಪ್ಪಲಿನ ಬಹುತೇಕ ಹಳ್ಳಿಗಳು ಪರ್ವತದ ಮೇಲಿದ್ದ ಕಾರಣ ಅಲ್ಲಿ ಜನರೂ ಸಹ ಸತ್ತವರ ಬಾಯಿಗೆ ಒಂದಿಷ್ಟು ಬೆಂಕಿಯ ಕೆಂಡವನ್ನು ಹಾಕಿ ಪರ್ವತದ ಮೇಲಿಂದ ಶವವನ್ನು ಹಳ್ಳಕ್ಕೆ ತಳ್ಳುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇಂತಹ ಒಂದು ಸಂದರ್ಭದಲ್ಲಿ ಸತ್ತ ಪ್ರಾಣಿಗಳ ಆಹಾರವನ್ನು ಅರಸುತ್ತಿದ್ದ ಚಿರತೆ ಮನುಷ್ಯರ ಶವಗಳನ್ನು ತಿನ್ನುವುದರ ಮೂಲಕ ನರಭಕ್ಷಕ ಪ್ರಾಣಿಯಾಗಿ ಅಲ್ಲಿನ ಜನರನ್ನು ಕಾಡತೊಡಗಿತ್ತು.

ಜಿಮ್ ಕಾರ್ಬೆಟ್ ನೈನಿತಾಲ್‌ನಲ್ಲಿ ಇರುವಾಗಲೇ ರುದ್ರಪ್ರಯಾಗದ ನರಭಕ್ಷಕ ಚಿರತೆಯು ಮನುಷ್ಯರನ್ನು ಬೇಟೆಯಾಡುತ್ತಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದಿದ್ದ, ಬ್ರಿಟಿಷ್ ಸರ್ಕಾರ ಕೂಡ ಇದನ್ನು ಕೊಂದು ಹಾಕಲು ಹವ್ಯಾಸಿ ಬೇಟೆಗಾರರಿಗೆ ಆಹ್ವಾನ ನೀಡಿ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು, ಜೊತೆಗೆ ಆ ಪ್ರದೇಶದ ಜನರಿಗೆ ಮುಕ್ತವಾಗಿ ಬಂದೂಕಿನ ಪರವಾನಗಿ ನೀಡಿತ್ತು. ಹಿಮಾಲಯದ ಪರ್ವತದ ಪ್ರದೇಶಗಳಿಂದ ಬಂದ ಸೈನಿಕರಿಗೆ ರಜೆಯ ಮೇಲೆ ಊರಿಗೆ ತೆರಳುವಾಗ ಬಂದೂಕವನ್ನು ತೆಗೆದುಕೊಂಡು ಹೋಗಲು ಅನುಮತಿಯನ್ನು ಸಹ ನೀಡಿತು ನರಭಕ್ಷಕ ಚಿರತೆಯನ್ನು ಕೊಲ್ಲಲು ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆ ಮಾಡಿರುವಾಗ ನಾನು ಮಾಡುವುದಾದರೂ ಏನು? ಎಂಬುದು ಕಾರ್ಬೆಟ್‌ನ ನಿಲುವಾಗಿತ್ತು. ಕಾರ್ಬೆಟ್‌ಗೆ ಈ ನರಭಕ್ಷಕಕನ ಬಗ್ಗೆ ಪ್ರಥಮಬಾರಿಗೆ ಸುದ್ಧಿ ತಿಳಿದಾಗ ಅವನು ನೈನಿತಾಲ್ ಸಿನಿಮಾ ಮಂದಿರದಲ್ಲಿ ಇಂಗ್ಲಿಷ್ ಸಿನಿಮಾವೊಂದನ್ನು ನೋಡುತ್ತಾ ಕುಳಿತಿದ್ದ. ಆರು ವರ್ಷಗಳ ನಂತರವೂ ಯಾರ ಕೈಗೂ ಸಿಗದೆ, ಸೆರೆ ಹಿಡಿಯಬಹುದಾದ ಎಲ್ಲಾ ವಿಧವಾದ ಉಪಾಯಗಳಿಗೂ ಜಗ್ಗದೆ ಚಿರತೆ ತನ್ನ ದಾಳಿಯನ್ನು ಮುಂದುವರಿಸಿತ್ತು. ಎರಡು ಬಾರಿ ಅದೃಷ್ಟವಶಾತ್ ಸಾವಿನ ಕುಣಿಕೆಯಿಂದ ಅದು ಪಾರಾಗಿತ್ತು.

ಒಮ್ಮೆ ರುದ್ರಪ್ರಯಾಗದ ಸಮೀಪದ ಹಳ್ಳಿಯ ಬಯಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಚಿರತೆ ಅವನನ್ನು ಕೊಂದು ಸಮೀಪದ ಹಳ್ಳವೊಂದಕ್ಕೆ ಕೊಂಡೊಯ್ದು ತಿನ್ನುತ್ತಿರುವಾಗ ಇದನ್ನು ಕಂಡ ಕೆಲವು ಗ್ರಾಮಸ್ಥರು ದೊಣ್ಣೆ, ಮಚ್ಚು, ಕೊಡಲಿಗಳಿಂದ, ನರಭಕ್ಷಕನನ್ನು ಬೆನ್ನಟ್ಟಿದ್ದರು. ಅದು ಭಯದಿಂದ ಮನುಷ್ಯನ ಶವದೊಂದಿಗೆ ಓಡಿ ಹೋಗಿ ಸಮೀಪದ ಗುಹೆಯನ್ನು ಹೊಕ್ಕಿತು. ಕೂಡಲೇ ಗ್ರಾಮಸ್ಥರು ಗುಹೆಯ ಬಾಗಿಲಿಗೆ ಮುಳ್ಳು ಕಂಟಿ, ಮರದಬೊಡ್ಡೆ ಹಾಗೂ ಕಲ್ಲುಗಳನ್ನು ಅಡ್ಡ ಇಟ್ಟು ಚಿರತೆ ಹೊರಬಾರದಂತೆ ಭದ್ರಪಡಿಸಿದರು. ಸತತ ಐದು ದಿನಗಳ ಕಾಲ ಗುಹೆಯ ಬಾಗಿಲಲ್ಲಿ ಅವರೆಲ್ಲಾ ಕಾದು ಕುಳಿತರೂ ಸಹ ಗುಹೆಯ ಒಳಗಿನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಸಂಶಯಗೊಂಡ ಒಬ್ಬಾತ ಗುಹೆಬಾಗಿಲಿಗೆ ಅಡ್ಡಲಾಗಿರಿಸಿದ್ದ ಮುಳ್ಳು ಮತ್ತು ಕಲ್ಲುಗಳನ್ನು ತೆಗೆಯುತಿದ್ದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕ್ಷಣಾರ್ಧದಲ್ಲಿ ಹೊರಕ್ಕೆ ನೆಗೆದ ನರಭಕ್ಷಕ ಚಿರತೆ ಜನರ ನಡುವೆ ಓಡಿ ಹೋಗಿ ಕಾಡು ಹೊಕ್ಕಿತು. ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದ ಭಯ ಭೀತರಾದ ಅಷ್ಟೂ ಜನ ಗುಂಡಿನ ಶಬ್ಧಕ್ಕೆ ಬೆದರಿ ಮರದಿಂದ ಹಾರುವ ಹಕ್ಕಿಗಳಂತೆ ಚಲ್ಲಾಪಿಲ್ಲಿಯಾಗಿದ್ದರು.

ಇನ್ನೊಮ್ಮೆ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಗುಂಡಿನ ದಾಳಿಯಿಂದ ಇದೇ ನರಭಕ್ಷಕ ಚಿರತೆ ಕ್ಷಣ ಮಾತ್ರದಲ್ಲಿ ಪಾರಾಗಿತ್ತು. ರುದ್ರಪ್ರಯಾಗ ಪಟ್ಟಣದಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮಿ. ದೂರದಲ್ಲಿ ಕರ್ಣಪ್ರಯಾಗ ಎಂಬ ಜನವಸತಿ ಪ್ರದೇಶವಿದ್ದು ಈ ಎರಡು ಊರುಗಳ ನಡುವೆ ಅಲಕಾನಂದಾ ನದಿ ರಭಸದಿಂದ ಹರಿಯುತ್ತದೆ. ಪ್ರಯಾಣಿಕರು ನದಿ ದಾಟಲು ಅಡ್ಡಲಾಗಿ ತೂಗು ಸೇತುವೆಯೊಂದನ್ನು ಕಟ್ಟಲಾಗಿದೆ. ನರಭಕ್ಷಕ ರುದ್ರಪ್ರಯಾಗಕ್ಕೆ ಬರಬೇಕಾದರೆ, ಈ ಸೇತುವೆ ದಾಟಿ ಬರಬೇಕಿತ್ತು. ಏಕೆಂದರೆ, ಅತ್ಯಂತ ವೇಗವಾಗಿ ರಭಸದಲ್ಲಿ ಹರಿಯುವ ಅಲಕನಂದಾ ನದಿಯನ್ನು ಅದು ಈಜುವುದು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಅಧಿಕಾರಿಗಳು ಸೇತುವೆಯ ಎರಡು ಬದಿಯಿದ್ದ ಗೋಪುರಗಳ ಮೇಲೆ ನಿರಂತರ 60 ದಿನಗಳ ರಾತ್ರಿ ಕಾವಲು ಕುಳಿತರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಒಂದು ದಿನ ತಡರಾತ್ರಿಯ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಸೇತುವೆ ಮೇಲೆ ನರಭಕ್ಷಕ ನಡೆದು ಬಂತು. ಸೇತುವೆಯ ಮಧ್ಯದವರೆಗೆ ಬರುವುದನ್ನೇ ಕಾಯುತ್ತಿದ್ದ ಅವರಲ್ಲಿ, ರುದ್ರಪ್ರಯಾಗದ ದಿಕ್ಕಿನ ಗೋಪುರದಲ್ಲಿ ಕುಳಿತಿದ್ದ ಅಧಿಕಾರಿ ತಡಮಾಡದೇ, ನರಭಕ್ಷಕನತ್ತ ಗುರಿಯಿಟ್ಟು ಗುಂಡುಹಾರಿಸಿದ. ಬಂದೂಕಿನಿಂದ ಸಿಡಿದ ಗುಂಡು ಚಿರತೆಗೆ ಬಡಿಯುವ ಬದಲು, ಅದರ ಮುಂಗಾಲಿನ ಸಮೀಪ ಸೇತುವೆಗೆ ಬಿಗಿಯಲಾಗಿದ್ದ ಮರದ ಹಲಗೆಗೆ ತಾಗಿತು. ಆದರೂ ಕೂಡ ಗುಂಡಿನಿಂದ ಸಿಡಿದ ಚೂರೊಂದು ಅದರ ಕಾಲನ್ನು  ಘಾಸಿಗೊಳಿಸಿತ್ತು. ಗುಂಡಿನ  ಶಬ್ಧಕ್ಕೆ ಬೆದರಿದ ಚಿರತೆ ತಾನು ಬಂದ ದಾರಿಯತ್ತ ಹಿಂತಿರುಗಿ ಶರವೇಗದಿಂದ ಓಡುತ್ತಿರುವಾಗ, ಅತ್ತ ಕರ್ಣಪ್ರಯಾಗದ ದಿಕ್ಕಿನ ಗೋಪುರದಲ್ಲಿದ್ದ ಅಧಿಕಾರಿ ತನ್ನ ಪಿಸ್ತೂಲಿಂದ ಆರು ಗುಂಡುಗಳನ್ನು ಹಾರಿಸಿದ ಆದರೆ, ಎಲ್ಲವೂ ಗುರಿತಪ್ಪಿ ನರಭಕ್ಷಕ ಸಾವಿನ ಬಾಯಿಂದ ಪಾರಾಗಿತ್ತು. ನಂತರ ಗೋಪುರದಿಂದ ಕೆಳಗಿಳಿದು ಬಂದ ಇಬ್ಬರೂ ಸ್ಥಳವನ್ನು ಅವಲೋಕಿಸಿ. ಗುಂಡಿನ ದಾಳಿಯಿಂದ ಚಿರತೆ ಗಂಭೀರವಾಗಿ ಗಾಯಗೊಂಡು ಸತ್ತಿರಬಹುದೆಂದು ನದಿಯ ಇಕ್ಕೆಲಗಳಲ್ಲಿ ಬೆಳಕರಿದ ಮೇಲ ಎಲ್ಲೆಡೆ ಜಾಲಾಡಿದರು. ಆದರೆ, ಚಿರತೆಯ ಯಾವ ಸುಳಿವು ಸಿಗಲಿಲ್ಲ. ಈ ಘಟನೆ ಸಂಭವಿಸಿದ ಐದು ತಿಂಗಳವರೆಗೆ ಎಲ್ಲಿಯೂ ನರಭಕ್ಷಕನ ದಾಳಿ ನಡೆಯಲಿಲ್ಲವಾದ್ದರಿಂದ ಎಲ್ಲರೂ ಅದು ಗುಂಡೇಟಿನಿಂದ ಅಸುನೀಗಿದೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು, ಆದರೆ, ಐದು ತಿಂಗಳ ತರುವಾಯ ನರಬಲಿಯ ಬೇಟೆಯೊಂದಿಗೆ ನರಭಕ್ಷಕ ಚಿರತೆ ತಾನು ಇನ್ನೂ ಸತ್ತಿಲ್ಲವೆಂದು ಅಪಾಯದ ಸೂಚನೆಯನ್ನು ರುದ್ರಪ್ರಯಾಗದ ಪ್ರಾಂತ್ಯದ ಜನತೆಗೆ ರವಾನಿಸಿ, ಮತ್ತೆ ಎಲ್ಲರನ್ನು ಆತಂಕದ ಮಡುವಿಗೆ ನೂಕಿತು.

ಒಂದು ಸಂಜೆ ನೈನಿತಾಲ್‌ನ ಕ್ಲಬ್‌ನಲ್ಲಿ ಗೆಳೆಯರೊಂದಿಗೆ ವಿಸ್ಕಿ ಕುಡಿಯುತ್ತಾ ಕುಳಿತ್ತಿದ್ದ ಕಾರ್ಬೆಟ್, ನರಭಕ್ಷಕ ಚಿರತೆಯ ಬಗ್ಗೆ ಎಲ್ಲರೂ ಮಾತನಾಡುವುದನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಕುಳಿತ್ತಿದ್ದ. ಶಿಕಾರಿ ಹವ್ಯಾಸವಿದ್ದ ಹಲವಾರು ಯೂರೋಪಿಯನ್ನರು ಅಲ್ಲಿದ್ದರು. ಸರ್ಕಾರ ನರಭಕ್ಷಕ ಬೇಟೆಗೆ ಸರ್ಕಾರ ಆಹ್ವಾನವಿತ್ತಿದ್ದರೂ ಯಾರೊಬ್ಬರೂ ಹೋಗಲು ಅಂಜುತ್ತಿದ್ದರು. ಚಿರತೆಯನ್ನು ಕೊಲ್ಲಲು ಸರ್ಕಾರ ಅಂತಿಮವಾಗಿ ಅದು ಬೇಟೆಯಾಡುತ್ತಿದ್ದ ಪ್ರಾಣಿಗಳು ಅಥವಾ ಮನುಷ್ಯರ ಶವಕ್ಕೆ ಸೈನೈಡ್ ಮತ್ತು ಇತರೆ ವಿಷಗಳನ್ನು ಹಾಕಿ ಕೊಲ್ಲಲು ಪ್ರಯತ್ನಿದರೂ ಇದರಿಂದ ಯಾವ ಪ್ರಯೋಜನವಾಗಲಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಈ ನರಭಕ್ಷಕ ಚಿರತೆಗೆ ದೈವಿಶಕ್ತಿ ಇದೆ ಎಂಬ ಪುಕಾರು ಎಲ್ಲೆಡೆ ಹಬ್ಬಿದ ಪರಿಣಾಮ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಯಿತು. ಅಂದು ರಾತ್ರಿ ಕಾರ್ಬೆಟ್ ಕ್ಲಬ್‌ನಿಂದ ಮನೆಗೆ ಬರುವುದರೊಳಗೆ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿ ಇಬ್ಸೋಟನ್‌ನಿಂದ ಕಾಗದದ ಲಕೋಟೆಯೊಂದು ಬಂದಿತ್ತು. ಸರ್ಕಾರದ ಪರವಾಗಿ ಇಬ್ಸೋಟನ್ ನರಭಕ್ಷ ಚಿರತೆಯನ್ನು ಬೇಟೆಯಾಡಲು ಜಿಮ್ ಕಾರ್ಬೆಟ್‌ನನ್ನು ವಿನಂತಿಸಿಕೊಂಡಿದ್ದ. ಈ ಪತ್ರ ಕಾರ್ಬೆಟ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

                                                (ಮುಂದುವರಿಯುವುದು)

 

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-17)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಾಹ್ನದವರೆಗೆ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಂಡ ಕಾರ್ಬೆಟ್‌, ಭೋಜನದ ನಂತರ ಬದ್ರಿಯನ್ನು ಕರೆದುಕೊಂಡು ಮತ್ತೇ ಹೋರಿಯ ಕಳೇಬರವಿದ್ದ ಸ್ಥಳಕ್ಕೆ ಧಾವಿಸಿದ. ಕಳೆದ ರಾತ್ರಿ ಮಳೆ ಬಿದ್ದ ಪರಿಣಾಮ ಹುಲಿಯ ಹೆಜ್ಜೆಗುರುತುಗಳು ಒದ್ದೆ ನೆಲದ ಮೇಲೆ ಮೂಡಿದ್ದವು. ಈ ನರಭಕ್ಷಕ ಕೂಡ ವಯಸ್ಸಾದ ಹುಲಿ ಎಂಬುದನ್ನ ಕಾರ್ಬೆಟ್‌ ಹೆಜ್ಜೆ ಗುರುತಿನ ಮೂಲಕ ಖಚಿತಪಡಿಸಿಕೊಂಡ. ಕಳೆದ ರಾತ್ರಿ ತನ್ನ ಮೇಲೆ ಎರಗಲು ಪ್ರಯತ್ನಿಸಿದ್ದ ಸ್ಥಳದಿಂದ ಅನತಿ ದೂರದ ಪೊದೆಯೊಂದಕ್ಕೆ ನಡೆದು ಹೋಗಿರುವ ಗುರುತು ಪತ್ತೆ ಹಚ್ಚಿದ ಕಾರ್ಬೆಟ್‌ಗೆ ನರಭಕ್ಷಕ ಹತ್ತಿರದಲ್ಲೇ ವಿಶ್ರಾಂತಿ ಪಡೆಯುತ್ತಿದೆ ಎಂಬುದು  ಖಾತರಿಯಾಯಿತು. ಇದನ್ನು ಕೂಡ ಚಂಪಾವತ್ ನರಭಕ್ಷಕನನ್ನು ಕೊಂದ ರೀತಿಯಲ್ಲೇ ಗ್ರಾಮಸ್ಥರ ಸಹಾಯದಿಂದ ಬೇಟೆಯಾಡಬೇಕು ಎಂದು ನಿರ್ಧರಿಸಿದ ಅವನು, ಬದ್ರಿಯ ಜೊತೆ ವಾಪಸ್ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದ

ಸಂಜೆ ಕತ್ತಲಾಗುವ ಮುನ್ನವೇ ನರಭಕ್ಷಕನನ್ನು ಬೇಟೆಯಾಡಬೇಕು ಎಂದು ನಿರ್ಧಾರವಾದ ಕೂಡಲೇ ಹುಲಿಯನ್ನು ಬೆದರಿಸಲು ಒಂದಷ್ಟು ಜನರನ್ನು ಕಲೆ ಹಾಕಲು ನಿರ್ಧರಿಸಿದ ಕಾರ್ಬೆಟ್‌ ಮುಕ್ತೇಶ್ವರದ ಅಂಚೆಕಛೇರಿ ಬಳಿ ಬಂದು ಜನರಿಗೆ ಪರಿಸ್ಥಿತಿಯನ್ನು ವಿವರಿಸಿದ. ನಂತರ  ಬದ್ರಿಯ ನೆರವಿನೊಂದಿಗೆ ಮುವತ್ತು ಜನರನ್ನು ಕರೆದುಕೊಂಡು ತನ್ನ ಸಹಾಯಕರೊಡನೆ ನರಭಕ್ಷಕ ಮಲಗಿದ್ದ ಪೊದೆಯತ್ತ ಹೆಜ್ಜೆ ಹಾಕತೊಡಗಿದ..ಕಳೆದ ರಾತ್ರಿಯ ಭೀಕರ ಅನುಭವ ಅವನಲ್ಲಿ ನರಭಕ್ಷಕ ಹುಲಿಯನ್ನು ಕೂಡಲೇ ಬೇಟೆಯಾಡಬೇಕೆಂಬ ಆಕ್ರೋಶವನ್ನು ಹೆಚ್ಚಿಸಿತ್ತು.

ಹೋರಿಯ ಕಳೇಬರವಿದ್ದ ಸುಮಾರು 100 ಅಡಿ ದೂರದಲ್ಲಿ ದಟ್ಟವಾದ ಪೊದೆಯೊಳಗೆ ನರಭಕ್ಷಕ ಆಶ್ರಯ ಪಡೆದಿತ್ತು. ಸಮತಟ್ಟಾದ ನೆಲದಿಂದ ದೂರದಲ್ಲಿ ಸ್ವಲ್ಪ ಇಳಿಜಾರಿನಿಂದ ಕೂಡಿದ್ದ ಆ ಸ್ಥಳದಿಂದ ಯಾವುದೇ ಕಾರಣಕ್ಕೂ ಹುಲಿ ನುಸುಳಿ ಮತ್ತೆ ಬಯಲು ಪ್ರದೇಶಕ್ಕೆ ಹೋಗಬಾರದೆಂದು ಗ್ರಾಮಸ್ಥರಿಗೆ ಎಚ್ಚರಿಸಿ ಎಲ್ಲರನ್ನೂ ಆ ತಗ್ಗು ಪ್ರದೇಶದ ಮೇಲ್ಭಾಗದಲ್ಲಿ ರಕ್ಷಣೆಗಾಗಿ ನಿಲ್ಲಿಸಿದ. ಅದೇ ವೇಳೆ ತನ್ನ ಸಹಾಯಕ ಗೋವಿಂದಸಿಂಗ್ ಎಂಬಾತನಿಗೆ ಕಾರ್ಬೆಟ್‌ ಸೂಚನೆ ನೀಡುತಿದ್ದಾಗ, ಕಾರ್ಬೆಟ್‌ ನಿಂತಿದ್ದ ಸ್ಥಳದ ಹಿಂಬದಿಯಲ್ಲಿ 400 ಅಡಿಯ ದೂರದಲ್ಲಿ ನರಭಕ್ಷಕ ಮೇಲಿನ ಸಮತಟ್ಟಾದ ಪ್ರದೇಶದಲ್ಲಿದ್ದ ಕುರುಚಲು ಗಿಡಗಳ ನಡುವೆಯಿಂದ ಮತ್ತೆ ತನ್ನ ಬೇಟೆಯ ಆಹಾರವಿದ್ದ ಸ್ಥಳದತ್ತ ತೆರಳುತ್ತಿರುವುದನ್ನು ಗಮನಿಸಿದ ಗೋವಿಂದಸಿಂಗ್,  ಈ ಬಗ್ಗೆ ಏನೂ  ಮಾತನಾಡದೆ ಬರೀ ಕಣ್ಣಿನಲ್ಲೇ ಕಾರ್ಬೆಟ್‌ಗೆ ಸೂಚನೆ ನೀಡಿದ. ಆಶ್ಚರ್ಯ ಮತ್ತು ಕುತೂಹಲದಿಂದ ಹಿಂತಿರುಗಿ ನೋಡಿದ ಕಾರ್ಬೆಟ್‌ಗೆ  ಗಿಡಗಳ ನಡುವೆ ನಿಧಾನವಾಗಿ ತೆವಳುತ್ತಾ , ಪೊದೆಯತ್ತ ಸಾಗುತಿದ್ದ ನರಭಕ್ಷಕನ ದರ್ಶನವಾಯಿತು.  ಕೂಡಲೇ ಯಾರೊಬ್ಬರೂ ಗದ್ದಲ ಮಾಡಬಾರದೆಂದು ಎಲ್ಲರಿಗೂ ತುಟಿಯ ಮೇಲೆ ಬೆರಳಿಟ್ಟು ಮೌನವಾಗಿ ಎಚ್ಚರಿಸಿ. ತನ್ನ ಜೋಡು ನಳಿಕೆಯ ಬಂದೂಕದೊಂದಿಗೆ ಕಾರ್ಬೆಟ್‌ ಪೊದೆಯತ್ತ ಮೆಲ್ಲ ಮೆಲ್ಲನೆ ಹೆಜ್ಜೆ ಇರಿಸುತ್ತಾ ನಡೆದ.
 
ನರಭಕ್ಷಕ ವಿಶ್ರಾಂತಿ ಪಡೆಯುತಿದ್ದ ಜಾಗದ ಸುತ್ತಮುತ್ತ ಲಂಟಾನದ ಗಿಡಗಳು ದಟ್ಟವಾಗಿ ಬೆಳೆದುನಿಂತ ಕಾರಣ ಕಾರ್ಬೆಟ್‌ ಗಿಡಗಳ ಕೆಳಗೆ ತೂರಿ ಸುರಂಗ ಮಾರ್ಗದಲ್ಲಿ ಚಲಿಸುವಂತೆ ತೆವುಳುತ್ತಾ ಸಾಗತೊಡಗಿದ. ಅತ್ಯಂತ ಕಡಿದಾಗಿದ್ದ ಆ ಜಾಗದಲ್ಲಿ ಒಮ್ಮೆ ಅವನ ಹಿಡಿತಕ್ಕೆ ಯಾವ ಗಿಡದ ಆಸರೆಯೂ ಸಿಗದೆ ಕೆಳಕ್ಕೆ ಜಾರಿದಾಗ ಅವನು ಧರಿಸಿದ್ದ ಹ್ಯಾಟ್ ಗಿಡಗಳ ನಡುವೆ ಸಿಕ್ಕಿ ಹಾಕಿಕೊಂಡಿತು. ಕೊನೆಗೆ ಒಂಡು ಗಿಡದ ಬೇರನ್ನು ಬಲವಾಗಿ ಹಿಡಿದುಕೊಂಡು ಕಾರ್ಬೆಟ್‌ ಸಾವರಿಸಿಕೊಳ್ಳತಿದ್ದಂತೆ, ಪಕ್ಕೆದ ಪೊದೆಯಲ್ಲಿ ಕೇವಲ 40 ಅಡಿ ದೂರದಲ್ಲಿ ನರಭಕ್ಷಕ ಮೂಳೆ ಜಗಿಯುತ್ತಿರುವ ಸದ್ದು ಕೇಳ ಬರತೊಡಗಿತು. ಶಬ್ದ ಬರುತಿದ್ದ ದಿಕ್ಕಿನತ್ತ ನೋಡುತ್ತಾ, ಬಂದೂಕವನ್ನು ಎದಗೇರಿಸಿದ ಕಾರ್ಬೆಟ್‌ ನರಭಕ್ಷಕ ಕುಳಿತಿರುವ ಸುಳಿವನ್ನು ಪತ್ತೆ ಹಚ್ಚುವ ಸಲುವಾಗಿ ಮೆಲ್ಲ ಮೆಲ್ಲನೆ ಕುಳಿತ ಸ್ಥಿತಿಯಲ್ಲಿ ಕದಲತೊಡಗಿದ. ಅದೇ ವೇಳೆಗೆ ಹಿಂಬದಿಯಲ್ಲಿ ಸಹಾಯಕ  ಗೋವಿಂದಸಿಂಗ್ ಗಿಡದಲ್ಲಿ ಸಿಲುಕಿದ್ದ  ಕಾರ್ಬೆಟ್‌ನ ಹ್ಯಾಟ್‌ನೊಂದಿಗೆ ಅಲ್ಲಿಗೆ ಹಾಜರಾದ. ಅವನನ್ನು ಹಿಂದಕ್ಕೆ ತಳ್ಳಿದ ಕಾರ್ಬೆಟ್‌ ಮಾತನಾಡುವುದಿರಲಿ, ಉಸಿರು ಕೂಡ ಬಿಡದಂತೆ ಸನ್ನೆ ಮೂಲಕ ಅವನಿಗೆ ಎಚ್ಚರಿಸಿದ.

ನರಭಕ್ಷಕ ಕುಳಿತಿದ್ದ ಜಾಗಕ್ಕೆ ಇಪ್ಪತ್ತು ಅಡಿ ಅಂತರವಿರುವಷ್ಟು ಸನಿಹಕ್ಕೆ ಬಂದ ಕಾರ್ಬೆಟ್‌ ಒಂದು ಅಂದಾಜಿನ ಮೇಲೆ ಮೂಳೆಯ ಜಗಿಯುವಿಕೆ ಶಬ್ದವನ್ನೇ ಗುರಿಯಾಗಿಸಿಕೊಂಡು ಬಂದೂಕದಿಂದ ಗುಂಡು ಹಾರಿಸಿದ. ದುರದೃಷ್ಟವಶಾತ್ ಅದು ನರಭಕ್ಷನಿಂದ ಕೇವಲ ಅರ್ಧ ಅಡಿ ದೂರದಲ್ಲಿ ಹಾಯ್ದು ಹೋಗಿ ಮರವೊಂದಕ್ಕೆ ಬಡಿಯಿತು. ಗುಂಡಿನ ಶಬ್ದಕ್ಕೆ ಬೆಚ್ಚುವ ಬದಲು ಕೆರಳಿ ನಿಂತ ನರಭಕ್ಷಕ ಘರ್ಜಿಸುತ್ತಾ ಸುತ್ತೆಲ್ಲಾ ನೋಡತೊಡಗಿತು.

ನರಭಕ್ಷಕ ಮನುಷ್ಯ ವಾಸನೆಯನ್ನು ಗ್ರಹಿಸಿ ತನ್ನತ್ತಾ ಬರುತ್ತಿರುವುದನ್ನು ಗಮನಿಸಿದ ಕಾರ್ಬೆಟ್‌ ನಿಧಾನವಾಗಿ ಹಿಂದಕ್ಕೆ ಚಲಿಸಿ ಕಲ್ಲು ಬಂಡೆಯೊಂದನ್ನು ತನ್ನ ಬೆನ್ನಿಗೆ ಆಸರೆಯಾಗ್ಟ್ಟುಕೊಂಡು ಕಾಯತೊಡಗಿದ. ಕೆಲವೇ ಕ್ಷಣಗಳಲ್ಲಿ ಅವನ ಎದರು ನರಭಕ್ಷಕ ಪ್ರತ್ಯಕ್ಷವಾಗಿಬಿಟ್ಟಿತು.  ಕೇವಲ ಆರು ಅಡಿಯಷ್ಟು ಹತ್ತಿರ ಬಂದು ಮುಖಾಮುಖಿಯಾದ ಇದನ್ನು ಹೊಡೆಯಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ಕಾರ್ಬೆಟ್‌ ಎದೆಗುಂದದೆ ತಕ್ಷಣವೇ ಗುಂಡು ಹಾರಿಸಿದ. ಗುಂಡು ನೇರವಾಗಿ ನರಭಕ್ಷಕ ಕುತ್ತಿಗೆಯ ಹಿಂಭಾಗಕ್ಕೆ ತಗುಲಿತು. ಅತಿ ಸನಿಹದಿಂದ ಗುಂಡು ಹಾರಿಸಿದ ಪರಿಣಾಮ ಒಂದೇ ಗುಂಡಿಗೆ ಅದು ನರಳಾಟ ಅಥವಾ ಯಾವುದೇ ಚೀತ್ಕಾರವಿಲ್ಲದೆ ದೊಪ್ಪನೆ ನೆಲಕ್ಕೆ ಉರುಳಿಬಿತ್ತು. ಗುಂಡು ನರಭಕ್ಷಕನ ದೇಹವನ್ನು ಸೀಳಿ ಹೊರಗೆ ಹಾರಿ ಹೋಗಿತ್ತು. ಕಾರ್ಬೆಟ್‌ ತನ್ನ ಸಹಾಯಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನರಭಕ್ಷನನ್ನು ಪರಿಶೀಲಿಸಿದಾಗ ಅದು ಒಂಟಿ ಕಣ್ಣಿನ ಮುದಿಯಾದ ಹೆಣ್ಣು ಹುಲಿಯಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಈ ಹೆಣ್ಣು ಹುಲಿ ಪೊದೆಯಲ್ಲಿ ಕುಳಿತು ಕಾಡುಕೋಳಿಗಳನ್ನು ಬೇಟೆಯಾಡುತಿತ್ತು ಇಂತಹದ್ದೇ ಒಂದು ಸಂದರ್ಭದಲ್ಲಿ ಪೊದೆಯ ಬಳಿ ಕಟ್ಟಿಗೆ ಅರಸಲು ಬಂದ ಮಹಿಳೆಯನ್ನು ಬಲಿ ತೆಗೆದುಕೊಂಡು.ನಂತರ ಇದು ತನ್ನ ಬೇಟೆಗಾಗಿ ಮನುಷ್ಯರನ್ನು ಬೆನ್ನಟ್ಟಿ ನಾಲ್ವರನ್ನು  ಬಲಿ ತೆಗೆದುಕೊಂಡಿತ್ತು.

ಈ ನರಭಕ್ಷಕನ ಶಿಕಾರಿಯ ನಂತರ ಪನಾರ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಚಿರತೆ ಕಾಣಿಸಿಕೊಂಡು ಮನುಷ್ಯರನ್ನು ಬೇಟೆಯಾಡುತ್ತಿರುವ ಸುದ್ಧಿ ಮತ್ತೆ ಕಾರ್ಬೆಟ್‌ಗೆ ತಲುಪಿತು . ಹಲವಾರು ವೈಯಕ್ತಿಕ ಕೆಲಸಗಳ ಒತ್ತಡದ ನಡುವಯೂ ಕೂಡೆ ಪನಾರ್ ಎಂಬ ಸಣ್ಣ ಹಳ್ಳಿಗೆ ಬೇಟಿ ನೀಡಿದ ಕಾರ್ಬೆಟ್‌ ಪಕ್ಕದ ಡೊಲ್ ಎಂಬ ಹಳ್ಳಿಯಲ್ಲಿದ್ದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡ.

ಪನಾರ್ ಹಳ್ಳಿಯ ಹತ್ತಿರದ ಗುಡ್ಡವೊಂದನ್ನು ತನ್ನ ನೆಲೆಯಾಗಿಸಿಕೊಂಡಿದ್ದ ಚಿರತೆ ರಾತ್ರಿಯ ವೇಳೆ ಮನುಷ್ಯರನ್ನು ಬೇಟೆಯಾಡುತಿತ್ತು. ಕಾರ್ಬೆಟ್‌ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ದಿನವೇ ಚಿರತೆ ಮಹಿಳೆಯೊಬ್ಬಳನ್ನು ಕೊಂದು ಗುಡ್ಡಕ್ಕೆ ಹೊತ್ತೊಯ್ದು ತಿಂದು ಹಾಕಿತ್ತು. ಪನಾರ್ ಹಳ್ಳಿಯ ಯುವ ರೈತನೊಬ್ಬ ರಾತ್ರಿ ತನ್ನ ಮನೆಯ ಬಾಗಿಲು ತೆರದು ಮಲಗಿದ್ದಾಗ ಆತನ ಹದಿನೆಂಟು ವರ್ಷದ ಹೆಂಡತಿಯನ್ನ ನರಭಕ್ಷಕ ಚಿರತೆ ಬಲಿತೆಗೆದುಕೊಂಡಿತ್ತು. ಮರುದಿನ ಮನೆಗೆ ಬೇಟಿ ನೀಡಿದ ಕಾರ್ಬೆಟ್‌ ರಾತ್ರಿ ಆ ಮನೆಯಲ್ಲಿ ಉಳಿದುಕೊಂಡು ಚಿರತೆಯ ಬೇಟೆಗಾಗಿ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಎರಡು ದಿನ ಹಳ್ಳಿಯಲ್ಲಿದ್ದು ಬೇಟೆಯಾಡದೇ ಬರಿಗೈಲಿ ವಾಪಸ್ ನೈನಿತಾಲ್‌ಗೆ ಬಂದ ಕಾರ್ಬೆಟ್‌ ಮರುದಿನ ಮೊಕಮೆಘಾಟ್‌ಗೆ ತೆರಳಿದ.

ಆದರೆ, ಡಿಸಂಬರ್ ತಿಂಗಳಿನ ಕ್ರಿಸ್‌ಮಸ್ ರಜೆಗೆ ನೈನಿತಾಲ್‌ನ ತನ್ನ ಮನೆಗೆ ಬಂದ ಸಂದರ್ಭದಲ್ಲಿ ಸೊನೌಲಿ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡ ನರಭಕ್ಷಕ ಚಿರತೆಯೊಂದನ್ನು ಬೇಟೆಯಾಡಿ ಹಳ್ಳಿಯ ಜನರನ್ನು ಪ್ರಾಣಾಪಾಯದಿಂದ ಕಾಪಾಡಿದ. ಚಿರತೆ ಹಳ್ಳಿಗೆ ಬರುತಿದ್ದ ದಾರಿಯಲ್ಲಿ ರಾತ್ರಿ ವೇಳೆ ಮೇಕೆಯೊಂದನ್ನು ಕಟ್ಟಿ ಅದರ ಮೂಲಕ ಚಿರತೆಯನ್ನ ಆಕರ್ಷಿಸಿ ಒಂದೇ ರಾತ್ರಿಯಲ್ಲಿ ನರಭಕ್ಷಕನನ್ನು ಕಾರ್ಬೆಟ್‌ ಬೇಟೆಯಾಡಿದ. ಈ ಎಲ್ಲಾ ಘಟನೆಗಳಿಂದ 1907 ರಿಂದ 1910ರವರೆಗೆ ಉತ್ತರ ಹಿಮಾಲಯದಲ್ಲಿ ಜನಸಾಮಾನ್ಯರ ಪಾಲಿಗೆ ದುಸ್ವಪ್ನವಾಗಿದ್ದ  ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಬೇಟೆಯಾಡಿದ ಕೀರ್ತಿ ಕಾರ್ಬೆಟ್‌ಗೆ ಸಲ್ಲಿತು. ಜಿಮ್ ಕಾರ್ಬೆಟ್‌ನ ಈ ಮಾನವೀಯ ಗುಣದ ಸೇವೆಯಿಂದಾಗಿ ಅಂದು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಅವನನ್ನು ವಿಶೇಷ ಗಣ್ಯ ವ್ಯಕ್ತಿ ಎಂದು ಪರಿಗಣಿಸಿ ಗೌರವಿಸತೊಡಗಿತು. ಈ ಕಾರಣಕ್ಕಾಗಿ ಬೇಸಿಗೆಯ ದಿನಗಳಲ್ಲಿ ಮಸ್ಸೂರಿ ಅಥವಾ ನೈನಿತಾಲ್‌ಗೆ ಭೇಟಿ ನೀಡುತಿದ್ದ ವೈಸ್ರಾಯ್ ಮತ್ತು ಅವರ ಕುಟುಂಬ ಕಾರ್ಬೆಟ್‌‌ನ ಅತಿಥಿಗಳಾಗಿ ಅವನ ಮನೆಯಲ್ಲಿ ಉಳಿದುಕೊಳ್ಳುತಿದ್ದರು.

ಸೋಜಿಗದ ಸಂಗತಿಯೆಂದರೆ, ಇವತ್ತಿಗೂ ನೈನಿತಾಲ್ ಗಿರಿಧಾಮದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ. ಅಲ್ಲಿ ಕಾಡುದಾರಿಯಲ್ಲಿ ಪುಟ್ಟದಾದ ಹನುಮಾನ್ ದೇವಾಲಯಗಳಿವೆ. ಜೊತೆಗೆ ಕೆಲವು ದೇವಸ್ಥಾನಗಳಲ್ಲಿ ಜಿಮ್ ಕಾರ್ಬೆಟ್‌ನ ಕಪ್ಪು ಬಿಳುಪಿನ ಫೋಟೊಗಳಿವೆ. ಕಾಡುಪ್ರಾಣಿಗಳಿಂದ ಹನುಮಾನ್  ಮತ್ತು ಕಾರ್ಪೆಟ್ (ಕಾರ್ಬೆಟ್‌) ಸಾಹೇಬ್ ನಮ್ಮನ್ನು ರಕ್ಷಿಸಿಸುತಿದ್ದಾರೆ ಎಂದು ಅಲ್ಲಿನ ಜನ ನಂಬಿಕೊಂಡಿರುವುದನ್ನು ಈಗಲೂ ನಾವು ಕಾಣಬಹುದು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -16)


– ಡಾ.ಎನ್.ಜಗದೀಶ್ ಕೊಪ್ಪ


 

ನರಭಕ್ಷಕ ಹುಲಿ ಸತ್ತು ಬಿದ್ದಿದ್ದ ಸ್ಥಳದ ಸುತ್ತ ಆವರಿಸಿಕೊಂಡ ಹಳ್ಳಿಯ ಜನ ಕುಣಿದು ಕುಪ್ಪಳಿಸಿ ಕೇಕೆ ಹಾಕಿ, ಒಬ್ಬರಿಗೊಬ್ಬರು ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡರು. ಕಾರ್ಬೆಟ್ ತನ್ನ ಸೇವಕರಿಗೆ ಹುಲಿಯನ್ನು ಪ್ರವಾಸಿ ಮಂದಿರಕ್ಕೆ ಹೊತ್ತೊಯ್ದು ಚರ್ಮ ಸುಲಿಯುವಂತೆ ಆದೇಶಿದ. ಕೂಡಲೇ ಹಳ್ಳಿಯ ಜನರೆಲ್ಲಾ ತಾವು ಈ ನರಭಕ್ಷಕನನ್ನು ಸುತ್ತ ಮುತ್ತಲಿನ ಹಳ್ಳಿಯಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಬೇಕೆಂದು ಬೇಡಿಕೊಂಡಾಗ ಕಾರ್ಬೆಟ್‍ಗೆ ಬೇಡವೆನ್ನಲು ಮನಸ್ಸಾಗದೆ ಸಮ್ಮತಿಸಿದ.

ಚಂಪಾವತ್ ಹಳ್ಳಿಯ ಜನ ಬಿದಿರಿನ ಬೊಂಬುಗಳಲ್ಲಿ ನಿರ್ಮಿಸಿದ ತಡಿಕೆಯಲ್ಲಿ ನರಭಕ್ಷಕ ಹುಲಿಯ ಶವವನ್ನು ಹೊತ್ತು ತಮಟೆ, ನಗಾರಿಗಳ ಜೊತೆ ಹಳ್ಳಿಗಳಲ್ಲಿ ಮೆರವಣಿಗೆ ಮಾಡಿದರು. ನರಭಕ್ಷಕನಿಗೆ ಬಲಿಯಾದ ವ್ಯಕ್ತಿಗಳ ಮನೆ ಮುಂದೆ ನಿಲ್ಲಿಸಿ, ಕುಟುಂಬದ ಸದಸ್ಯರಿಗೆ ಅದನ್ನು ತೋರಿಸಿ ಮುಂದುವರಿಯುತ್ತಿದ್ದರು. ರಾತ್ರಿ ದೀಪದ ಬೆಳಕಿನಲ್ಲಿ ನರಭಕ್ಷಕ ಹುಲಿಯ ಚರ್ಮವನ್ನು ಸೀಳಿ, ಹೊಟ್ಟೆಯನ್ನು ಬಗೆದಾಗ, ಅದು ಕಡೆಯ ಬಾರಿ ಬಲಿ ತೆಗೆದುಕೊಂಡಿದ್ದ ಯುವತಿಯ ಬಳೆಗಳು ದೊರೆತವು. ಯುವತಿಯ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಅವುಗಳನ್ನು ಪಡೆದು, ಬೇಟೆಯ ಸಂದರ್ಭದಲ್ಲಿ ದೊರೆತ್ತಿದ್ದ ಆಕೆಯ ತಲೆ ಬುರುಡೆಯ ಜೊತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದರು.

ಈ ಘಟನೆ ನಡೆದ ಒಂದು ತಿಂಗಳಿನಲ್ಲಿ ಬ್ರಿಟಿಷ್ ಸರ್ಕಾರದ ಪರವಾಗಿ ತಹಸಿಲ್ದಾರ್ ತನ್ನ ಕಚೇರಿ ಸಿಬ್ಬಂದಿಯೊಂದಿಗೆ ನೈನಿತಾಲ್‍ಗೆ ಬಂದು ಪಟ್ಟಣದಲ್ಲಿ ಕಾರ್ಬೆಟ್‍ನನ್ನು ಸಾರ್ವಜನಿಕವಾಗಿ ಸನ್ಮಾನಿಸಿದ. ಕಾರ್ಬೆಟ್ ಸರ್ಕಾರದಿಂದ ಹಣ ತೆಗೆದುಕೊಳ್ಳಲು ಮೊದಲೇ ನಿರಾಕರಿಸಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರದ ಲೆಪ್ಟಿನೆಂಟ್ ಜನರಲ್ ಸರ್ ಜೆ.ಪಿ.ಹೆವಿಟ್ ಕೊಡುಗೆಯಾಗಿ ನೀಡಿದ ಆತ್ಯಾಧುನಿಕ ಹಾಗೂ ಇಂಗ್ಲೆಂಡ್‍ನಲ್ಲಿ ತಯಾರಾದ ಬಂದೂಕವನ್ನು ಕಾರ್ಬೆಟ್‍ಗೆ ಕಾಣಿಕೆಯಾಗಿ ಅರ್ಪಿಸಲಾಯಿತು.

ಈ ನರಭಕ್ಷಕನ ಬೇಟೆಯ ನಂತರ ಜಿಮ್ ಕಾರ್ಬೆಟ್ ತಾನು ಕೆಲಸ ಮಾಡುತ್ತಿದ್ದ ಮೊಕಮೆಘಾಟ್‍ಗೆ ಹೋಗಿ ಮತ್ತೇ ನೈನಿತಾಲ್‍ಗೆ ಹಿಂತಿರುಗಿ ಬರುವುದರೊಳಗೆ, ನೈನಿತಾಲ್ ಮತ್ತು ಅಲ್ಮೋರಾ ಪಟ್ಟಣಗಳ ನಡುವೆ ಇರುವ ಮುಕ್ತೇಶ್ವರ ಎಂಬ ಹಳ್ಳಿಯಲ್ಲಿ ಮತ್ತೊಂದು ನರಭಕ್ಷಕ ಹುಲಿ ಕಾಣಿಸಿಕೊಂಡು ಮೂವರನ್ನು ಬಲಿತೆಗೆದುಕೊಂಡಿತು. ಉತ್ತರ ಭಾರತದ ಹಿಮಾಲಯ ಪ್ರಾಂತ್ಯದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿಗೆ ಅಮಾಯಕ ಜೀವಗಳು ಬಲಿಯಾಗುತ್ತಿರುವ ಬಗ್ಗೆ ಬ್ರಿಟನ್ನಿನ ಪಾರ್ಲಿಮೆಂಟ್‍ನಲ್ಲೂ ಕೂಡ ಚರ್ಚೆಯಾಗಿ, ಭಾರತದಲ್ಲಿನ ಸರ್ಕಾರದ ವೈಫಲ್ಯವನ್ನು ಖಂಡಿಸಲಾಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಭಾರತದ ವೈಸ್‍ರಾಯ್, ಮತ್ತು ಬ್ರಿಟಿಷ್ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿ ಸರ್. ಬರ್ಥ್‍ಹುಡ್ ಮೂಲಕ ಕಾರ್ಬೆಟ್‍ಗೆ ನರಭಕ್ಷಕನನ್ನು ಕೊಲ್ಲಲು ಮನವಿ ಮಾಡಿಕೊಂಡಿತು. ಆದರೆ ನೈನಿತಾಲ್‍ನಲ್ಲಿದ್ದ ತನ್ನ ರಿಯಲ್‍ಎಸ್ಟೇಟ್ ವ್ಯವಹಾರ ಹಾಗೂ ಮೊಕಮೆಘಾಟ್‍ಗೆ ರೈಲ್ವೆ ಇಲಾಖೆಯ ಕೆಲಸದಿಂದಾಗಿ ತಕ್ಷಣ ಬೇಟೆಗೆ ಹೊರಡಲು ಕಾರ್ಬೆಟ್ ನಿರಾಕರಿಸಿದ.

15 ದಿನಗಳ ನಂತರ ಸರ್ಕಾರದ ಮನವಿಗೆ ಸ್ಪಂದಿಸಿ ಕಾರ್ಬೆಟ್ ಮತ್ತೆ ತನ್ನ ಬಂದೂಕಗಳನ್ನು ಹೆಗಲಿಗೇರಿಸಿ, ಸಹಾಯಕರೊಡನೆ ಮುಕ್ತೇಶ್ವರಕ್ಕೆ ಹೊರಟು ನಿಂತ. ಆದರೆ ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಭೇಟಿ ನೀಡುವುದರೊಳಗೆ ನರಭಕ್ಷಕ ಹುಲಿ 24 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಪ್ರಾರಂಭದಲ್ಲಿ ಕಾಡಿನಲ್ಲಿ ಸೌದೆ ಅರಸುತ್ತಿದ್ದ ಹೆಂಗಸಿನ ಮೇಲೆ ಎರಗಿ ಬಲಿತೆಗೆದು ಕೊಂಡಿದ್ದ ಈ ಹುಲಿ, ತನ್ನ ಎರಡನೇ ಬಲಿಯನ್ನು ಸಹ ಅದೇ ರೀತಿ, ತಾನು ವಿಶ್ರಮಿಸುತ್ತಿದ್ದ ಪೊದೆಯ ಬಳಿ ಅರಿಯದೇ ಬಂದ ಮತ್ತೊಬ್ಬ ಹೆಂಗಸನ್ನು ದಾಳಿ ನಡೆಸಿ ಕೊಂದುಹಾಕಿತ್ತು. ಈ ಎರಡು ದಾಳಿಗಳ ನಂತರ ಮನುಷ್ಯನ ರಕ್ತದ ರುಚಿ ಹುಲಿಯನ್ನು ನರಭಕ್ಷಕನನ್ನಾಗಿ ಪರಿವರ್ತಿಸಿತ್ತು. ಮೊದಲು ತನ್ನ ಬಳಿ ಸುಳಿದವರನ್ನು ಬೇಟೆಯಾಡುತ್ತಿದ್ದ ಈ ಹುಲಿ ನಂತರದ ದಿನಗಳಲ್ಲಿ ಮನುಷ್ಯರನ್ನೇ ಅರಸುತ್ತಾ ಅಲೆಯತೊಡಗಿತು.

ಕಾರ್ಬೆಟ್ ಮುಕ್ತೇಶ್ವರ ಹಳ್ಳಿಗೆ ಬರುವ ಹಿಂದಿನ ದಿನದ ಸಂಜೆ ಎರಡು ಹೋರಿಗಳನ್ನು ಮೇಯಿಸಲು ಹೋಗಿದ್ದ ಪುತ್ಲಿ ಎಂಬ ಬಾಲಕಿಯ ಮೇಲೆ ಎರಗಲು ಪ್ರಯತ್ನಿಸಿ ವಿಫಲವಾಗಿ ಅಂತಿಮವಾಗಿ ಹೋರಿಯೊಂದನ್ನು ಕೊಂದು ಹಾಕಿತ್ತು. ಕಾರ್ಬೆಟ್ ಆ ಬಾಲಕಿಯನ್ನು ಕರೆದುಕೊಂಡು ದಾಳಿ ನಡೆದ ಸ್ಥಳಕ್ಕೆ ಹೋದಾಗ ಬಿಳಿ ಬಣ್ಣದ ಹೋರಿಯ ಶವ ಅಲ್ಲೇ ಇತ್ತು. ನರಭಕ್ಷಕ ಹುಲಿ ಹೋರಿಯ ತೊಡೆಯ ಭಾಗವನ್ನು ಮಾತ್ರ ತಿಂದುಹೋಗಿತ್ತು ಈ ದಿನ ರಾತ್ರಿ ನರಭಕ್ಷಕ ಮತ್ತೇ ಬರುವುದು ಖಚಿತ ಎಂಬ ನಿರ್ಧಾರಕ್ಕೆ ಬಂದ ಕಾರ್ಬೆಟ್ ಮರದ ಮೇಲೆ ಕುಳಿತು ಬೇಟೆಯಾಡಲು ನಿರ್ಧರಿಸಿದ. ಆದರೆ, ಹೋರಿಯ ಶವವಿದ್ದ ಜಾಗದಲ್ಲಿ ಮಚ್ಚಾನು ಕಟ್ಟಿ ಕುಳಿತುಕೊಳ್ಳಲು ಯಾವುದೇ ಮರವಿರಲಿಲ್ಲ. ಕೇವಲ ಎಂಟು ಅಡಿಯಿದ್ದ ಕಾಡು ಹೂಗಳ ಪುಟ್ಟ ಮರವೊಂದಿತ್ತು. ಮಚ್ಚಾನು ಕಟ್ಟುವ ಬದಲು ಅದರಮೇಲೆ ಕುಳಿತಿಕೊಳ್ಳಲು ನಿರ್ಧರಿಸಿ, ಅ ಹಳ್ಳಿಯಲ್ಲಿ ಪರಿಚಿತನಾಗಿದ್ದ ಬದ್ರಿ ಎಂಬಾತನ ನೆರವಿನಿಂದ ಟೊಂಗೆಯ ಮೇಲೆ ಹಸಿರು ಎಲೆಗಳನ್ನು ಹೊದಿಸಿ ಗೂಡನ್ನು ನಿರ್ಮಿಸಿಕೊಂಡ. ವಾಪಸ್ ಮುಕ್ತೇಶ್ವರ ಹಳ್ಳಿಗೆ ಬಂದ ಕಾರ್ಬೆಟ್, ಬೇಟೆಗೆ ಬೇಕಾದ ಜೋಡು ನಳಿಕೆಯ ಬಂದೂಕ, ಚಾಕು, ಟಾರ್ಚ್, ಬೆಂಕಿಪೊಟ್ಟಣ, ಸಿಗರೇಟ್, ಒಂದಿಷ್ಟು ಬ್ರೆಡ್ ಮತ್ತು ಬಿಸ್ಕೇಟ್ ಹಾಗೂ ನೀರಿನೊಂದಿಗೆ ಮರದ ಬಳಿ ಬಂದ ಕಾರ್ಬೆಟ್, ಅತ್ತ ಬಾನಿನಲ್ಲಿ  ಸೂರ್ಯ ಮುಳುಗುತ್ತಿದ್ದಂತೆ ಕತ್ತಲಾಗುವ ಮುನ್ನವೇ ಮರವೇರಿ ಕುಳಿತ.

ಅರಣ್ಯದ ಸುತ್ತೆಲ್ಲಾ ಕತ್ತಲು ಆವರಿಸಕೊಳ್ಳುತ್ತಿದ್ದಂತೆ, ಎಲ್ಲೆಡೆ ಮೌನ ಮನೆ ಮಾಡತೊಡಗಿತು. ಸುಮಾರು ಏಳುಗಂಟೆ ಸಮಯಕ್ಕೆ ಸರಿಯಾಗಿ ಕಾರ್ಬೆಟ್ ಕುಳಿತ್ತಿದ್ದ ಜಾಗದಿಂದ ಸುಮಾರು 200 ಅಡಿ ದೂರದಲ್ಲಿ ಜಿಂಕೆಗಳ ಓಟ, ಮರದ ಮೇಲಿದ್ದ ಮಂಗಗಳ ಕಿರುಚಾಟ ಕೇಳಿಬರತೊಡಗಿತು. ಇದು ನರಭಕ್ಷಕ ಬರುವ ಸೂಚನೆ ಎಂಬುದನ್ನು ಅರಿತ ಕಾರ್ಬೆಟ್ ಬಂದೂಕ ಸಿದ್ಧಪಡಿಸಿಕೊಂಡು ಜಾಗರೂಕನಾದ. ಆಕಾಶದಲ್ಲಿ ದಟ್ಟ ಮೋಡಗಳು ಕವಿದ ಪರಿಣಾಮ ಅವನ ಕಣ್ಣಿಗೆ ನರಭಕ್ಷಕ ಗೋಚರವಾಗುತ್ತಿರಲಿಲ್ಲ. ಓಣಗಿದ ತರಗೆಲೆಗಳ ಮೇಲೆ ಅದು ನಡೆದು ಬರುತ್ತಿರುವ ಸದ್ದನ್ನು ಆಲಿಸತೊಡಗಿದ.

ಕಾರ್ಬೆಟ್ ಕುಳಿತ್ತಿದ್ದ ಜಾಗದ ಸುಳಿವು ಸಿಗದ ಕಾರಣ ನರಭಕ್ಷಕ ನೇರವಾಗಿ ಮರದ ಬಳಿ ಬಂದು ಕಾರ್ಬೆಟ್ ಕುಳಿತ ಜಾಗದಿಂದ ಕೇವಲ ಹತ್ತು ಅಡಿ ದೂರದಲ್ಲಿ ಬಂದು ವಿಶ್ರಮಿಸಿತು. ಅಪರಿಮಿತ ಕತ್ತಲಿನಲ್ಲಿ ಬಿಳಿಯ ಬಣ್ಣದ ಹೋರಿಯ ಕಳೇಬರ ಕೂಡ ಅವನ ಕಣ್ಣಿಗೆ ಕಾಣದಾಗಿತ್ತು. ನರಭಕ್ಷಕ ತಾನು ಕುಳಿತ ಜಾಗದಿಂದ ಎದ್ದು ನಡೆದು ಹೋರಿಯ ಕಳೇಬರದತ್ತ ತೆರಳಿ ಅದನ್ನು ತಿನ್ನಲು ಶುರು ಮಾಡಿತು. ಇಡೀ ಅದರ ಚಲನವನ್ನು ತರಗೆಲೆಗಳ ಮೇಲಿನ ಶಬ್ಧದಿಂದ ಗ್ರಹಿಸಿದ ಕಾರ್ಬೆಟ್ ಇಪ್ಪತ್ತು ಅಡಿ ದೂರದಲ್ಲಿದ್ದ ನರಭಕ್ಷನಿಗೆ ಅಂದಾಜಿನ ಮೇಲೆ ಗುಂಡು ಹಾರಿಸಿದ. ಎರಡು ನಿಮಿಷಗಳ ಕಾಲ ಗುಂಡಿನ ಸದ್ದು ಪ್ರತಿಧ್ವನಿಸಿದ್ದರಿಂದ ಏನೂ ಕಾಣದಾಯಿತು ಹಾಗೂ ಕೇಳದಾಯ್ತು. ಆನಂತರ ನರಭಕ್ಷಕ ಹುಲಿ ಘರ್ಜನೆ ಮತ್ತು ಆರ್ಭಟ ಅವನು ಕುಳಿತ ಮರದ ಸುತ್ತಾ ಮುಂದುವರಿಯಿತು. ಇದರಿಂದ ತಾನು ಗುಂಡು ಗುರಿತಪ್ಪಿದ್ದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡ. ಅವನು ಕುಳಿತ ಮರಕೂಡ ಚಿಕ್ಕದಾಗಿದ್ದ ಕಾರಣ ಕಾರ್ಬೆಟ್ ಕುಳಿತ್ತಿದ್ದ ಮರದ ಟೊಂಗೆಗಳು ಅವನ ಭಾರಕ್ಕೆ ನೆಲದತ್ತ ಬಾಗತೊಡಗಿದವು. ಒಮ್ಮೆಯಂತು ನರಭಕ್ಷಕ ಮರದ ಕೆಳಕ್ಕೆ ಬಂದು ಅವನ್ನು ಹಿಡಿಯಲು ಪ್ರಯತ್ನಿಸಿತು. ಕೂಡಲೇ ಮತ್ತೊಂದು ಟೊಂಗೆಗೆ ನೆಗೆದ ಅವನು ಅದರ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ.

ಅತ್ಯಂತ ಒತ್ತಡಕ್ಕೆ ಸಿಲುಕಿದ ಕಾರ್ಬೆಟ್ ಜೇಬಿನಿಂದ ಸಿಗರೇಟು ತೆಗೆದು ಬಾಯಿಗಿಟ್ಟು ಬೆಂಕಿಕಡ್ಡಿ ಗೀಚಿದಾಗ ತಕ್ಷಣ ಹೊತ್ತಿಕೊಂಡ ಬೆಂಕಿಯ ಬೆಳಕಿಗೆ ಹೆದರಿದ ನರಭಕ್ಷಕ ದೂರ ಸರಿಯಿತು. ರಾತ್ರಿ ಹತ್ತು ಗಂಟೆಯವರೆಗೆ ನಿರಂತರ ಐದು ಸಿಗರೇಟು ಸೇದಿದ ನಂತರ ಅವನ ಮನಸ್ಸು ಸ್ವಲ್ಪ ಮಟ್ಟಿಗೆ ತಹಬದಿಗೆ ಬಂದಿತು . ಆದರೆ, ಬೆಳಗಿನ ಜಾವ ಆರು ಗಂಟೆಯವರೆಗೆ ಮರದ ಮೇಲೆ ಜೀವಭಯದಲ್ಲಿ ಒಂದೇ ಸ್ಥಿತಿಯಲ್ಲಿ ಕೂರಬೇಕಾದ ದುಸ್ಥಿತಿ ಕಾರ್ಬೆಟ್‍ಗೆ ಒದಗಿಬಂತು. ಅದೇ ವೇಳೆಗೆ ಸಣ್ಣಗೆ ಶುರವಾದ ಮಳೆ, ನಂತರ ಆಕಾಶವೇ ಹರಿದು ಹೋದಂತೆ ರಾತ್ರಿಯಿಂದ ಬೆಳಗಿನ ಜಾವ ನಾಲ್ಕು ಗಂಟೆಯವರೆಗೆ ಎಡ ಬಿಡದೆ ಜೋರಾಗಿ ಸುರಿಯಿತು. ಕಾರ್ಬೆಟ್‍ನ ಬಲಿಗಾಗಿ ಕಾದು ಕುಳಿತ್ತಿದ್ದ ನರಭಕ್ಷಕ ಕೂಡ ಮಳೆಯ ಆರ್ಭಟಕ್ಕೆ ಹೆದರಿ ರಕ್ಷಣೆಗಾಗಿ ಪೊದೆಗಳ ಮೊರೆ ಹೋಯಿತು.

ಬೆಳಗಿನ ಜಾವ ಆರು ಗಂಟೆ ಸಮಯಕ್ಕೆ ಸಹಾಯಕ ಬದ್ರಿ ಕಾರ್ಬೆಟ್‍ಗೆ ಚಹಾ ತೆಗೆದುಕೊಂಡು ಬಂದಾಗ, ಮಳೆ ಮತ್ತು ಚಳಿ ಹಾಗೂ ಒಂದೇ ಸ್ಥಿತಿಯಲ್ಲಿ ಮರದ ಮೇಲೆ ಕುಳಿತ ಕಾರ್ಬೆಟ್ ಅಕ್ಷರಶಃ ಜೀವಂತ ಶವವಾಗಿ ಹೋಗಿದ್ದ. ಅವನ ಕೈ ಕಾಲುಗಳು ಮರಗಟ್ಟುಕೊಂಡು ಸೆಟೆದು ಬಿಗಿದುಕೊಂಡಿದ್ದವು, ಬದ್ರಿ ಕಾರ್ಬೆಟ್‍ನನ್ನು ಮರದಿಂದ ಜೋಪಾನವಾಗಿ ಕೆಳಕ್ಕೆ ಇಳಿಸಿ ಹೆಗಲ ಮೇಲೆ ಹೊತ್ತುಕೊಂಡು ಪ್ರವಾಸಿ ಮಂದಿರಕ್ಕೆ ತಂದು ಕೈಕಾಲುಗಳಿಗೆ ಎಣ್ಣೆಯಿಂದ ಮಸಾಜು ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿಸಿದ. ಕಾರ್ಬೆಟ್‍ನ ಶಿಕಾರಿ ಅನುಭವದಲ್ಲಿ ಆ ರಾತ್ರಿ ಮರೆಯಲಾಗದ ಕರಾಳ ಅನುಭವವಾಯಿತು.

(ಮುಂದುವರಿಯುವುದು)