Category Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -15)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಆದಿನ ಇಡೀ ರಾತ್ರಿ ನರಭಕ್ಷಕ ಹುಲಿಗಾಗಿ ಕಾದಿದ್ದು ಏನೂ ಪ್ರಯೋಜನವಾಗಲಿಲ್ಲ. ನರಭಕ್ಷಕ ತನ್ನ ಅಡಗುತಾಣವನ್ನು ಬದಲಾಯಿಸಿರಬಹುದು ಎಂಬ ಸಂಶಯ ಕಾರ್ಬೆಟ್‍ಗೆ ಕಾಡತೊಡಗಿತು. ಬೆಳಿಗ್ಗೆ ಸ್ನಾನ ಮಾಡಿದ ಅವನು ಏನಾದರೂ ಸುಳಿವು ಸಿಗಬಹುದೇ ಎಂಬ ನಿರೀಕ್ಷೆಯಿಂದ ನರಭಕ್ಷಕ ದಾಳಿ ಮಾಡಿದ್ದ ಮನೆಯೊಂದಕ್ಕೆ ಭೇಟಿ ನೀಡಿದ. ಕೇವಲ ಒಂದು ವಾರದ ಹಿಂದೆ ಮನೆಯ ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬಳನ್ನು ನರಭಕ್ಷಕ ಹುಲಿ ಕೊಂಡೊಯ್ದಿತ್ತು. ಮನೆಯ ಸುತ್ತಾ ಅದರ ಹೆಜ್ಜೆ ಗುರುತಿಗಾಗಿ ಕಾರ್ಬೆಟ್ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ.

ಜಿಮ್ ಕಾರ್ಬೆಟ್‍ಗೆ ಹುಲಿಗಳ ಹೆಜ್ಜೆ ಗುರುತಿನ ಮೇಲೆ ಅವುಗಳ ವಯಸ್ಸನ್ನು ಅಂದಾಜಿಸಬಲ್ಲ ಶಕ್ತಿಯಿತ್ತು. ಅಷ್ಟೇ ಅಲ್ಲ ಸಾಮಾನ್ಯವಾಗಿ ಹುಲಿಗಳು ನಡೆಯುವಾಗ ಅವುಗಳ ಹಿಂದಿನ ಕಾಲುಗಳ ಹೆಜ್ಜೆ ಗುರುತುಗಳು ನೆಲದ ಮೇಲೆ ಮೂಡತ್ತವೆ ಎಂಬುದನ್ನು ಅವನು ಅರಿತ್ತಿದ್ದ. ಹುಲಿಗಳು ಪ್ರಾಣ ಭಯ ಅಥವಾ ಇನ್ನಿತರೆ ಕಾರಣಗಳಿಂದ ವೇಗವಾಗಿ ಓಡುವಾಗ ಮಾತ್ರ ಅವುಗಳ ಮುಂದಿನ ಕಾಲುಗಳ ಬಲವಾದ ಹೆಜ್ಜೆಯ ಗುರುತು ಮೂಡುತ್ತವೆ ಎಂಬುದು ಅವನ ಶಿಕಾರಿ ಅನುಭವದಲ್ಲಿ ಮನದಟ್ಟಾಗಿತ್ತು.

ಪಾಲಿಹಳ್ಳಿಯಲ್ಲಿ ಎರಡು ಹಗಲು, ಎರಡು ರಾತ್ರಿ ಕಳೆದರೂ ನರಭಕ್ಷಕನ ಸುಳಿವು ಸಿಗದ ಕಾರಣ, ಅದು ತನ್ನ ವಾಸ್ತವ್ಯ ಬದಲಾಯಿಸಿದೆ ಎಂಬ ತೀರ್ಮಾನಕ್ಕೆ ಬಂದ ಕಾರ್ಬೆಟ್ ತನ್ನ ಸೇವಕರೊಡನೆ ನೈನಿತಾಲ್‍ಗೆ ಹಿಂತಿರುಗಲು ಸಿದ್ಧನಾದ. ಆ ದಿನಗಳಲ್ಲಿ ನರಭಕ್ಷಕ ಆ ಪ್ರಾಂತ್ಯದಲ್ಲೇ ಸುಳಿದಾಡುತ್ತಿದ್ದರಿಂದ ಹಗಲಿನ ವೇಳೆಯಲ್ಲಿ ದಾರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಾಗಿತ್ತು. ಕಾರ್ಬೆಟ್ ಬೆಟ್ಟ ಗುಡ್ಡ ಹತ್ತಿ, ಇಳಿದು. ನೈನಿತಾಲ್‍ಗೆ ಸಾಗುತ್ತಿದ್ದ ವೇಳೆ ಪಾಲಿಹಳ್ಳಿಯಿಂದ 20 ಕಿಲೋ ಮೀಟರ್ ದೂರದ ಚಂಪಾವತ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ದಿ ಕಾರ್ಬೆಟ್ ತಂಡಕ್ಕೆ ತಲುಪಿತು. ವಿಷಯ ತಿಳಿಯುತ್ತಿದ್ದಂತೆ ಕಾರ್ಬೆಟ್ ನೈನಿತಾಲ್ ಮಾರ್ಗವನ್ನು ತೊರೆದು ಚಂಪಾವತ್ ಹಳ್ಳಿಯತ್ತ ಹೊರಟ.

ಆ ಹಳ್ಳಿಯಲ್ಲಿ ಡಾಕ್ ಬಂಗ್ಲೆ ಎಂದು ಆ ಕಾಲದಲ್ಲಿ ಕರೆಯುತ್ತಿದ್ದ ಪ್ರವಾಸಿ ಮಂದಿರವಿದ್ದುದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರಿಗೆ ವಸತಿ ವ್ಯವಸ್ಥೆಗೆ ಯಾವುದೇ ತೊಂದರೆಯಾಗಲಿಲ್ಲ. ಚಂಪಾವತ್ ಹಳ್ಳಿಯ ಹೊರಭಾಗದಲ್ಲಿದ್ದ ಆ ಪ್ರವಾಸಿ ಮಂದಿರಕ್ಕೆ ಆಗಾಗ್ಗೆ ಸರ್ಕಾರದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡುತ್ತಿದ್ದರಿಂದ ಅಲ್ಲಿ ಒಬ್ಬ ಸೇವಕನನ್ನು ಸರ್ಕಾರ ನೇಮಕ ಮಾಡಿತ್ತು ಆತ ಅಲ್ಲಿಗೆ ಬರುವ ಅತಿಥಿಗಳ ಊಟೋಪಚಾರ, ವಸತಿ ವ್ಯವಸ್ಥೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದ. ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದ ಕಾರ್ಬೆಟ್ ಚಹಾ ಕುಡಿದು, ಸ್ನಾನ ಮುಗಿಸುವಷ್ಟರಲ್ಲಿ ಆ ಪ್ರದೇಶದ ತಹಸಿಲ್ದಾರ್  ಅಲ್ಲಿಗೆ ಬಂದು ಕಾರ್ಬೆಟ್‍ನನ್ನು ಪರಿಚಯಿಸಿಕೊಂಡ. ಇಬ್ಬರೂ ಉಪಹಾರ ಸೇವಿಸುತ್ತಾ ನರಭಕ್ಷಕ ಹುಲಿಯ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ ಹಳ್ಳಿಯಿಂದ ಯುವಕನೊಬ್ಬ ಓಡೋಡಿ ಬರುತ್ತಲೇ ಹುಲಿ ಯುವತಿಯೊಬ್ಬಳನ್ನು ಆಹುತಿ ತೆಗೆದುಕೊಂಡು ಕಾಡಿನತ್ತ ಕೊಂಡೊಯ್ದ ಸುದ್ದಿಯನ್ನು ಮುಟ್ಟಿಸಿದ. ತಮ್ಮ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿದ ಇಬ್ಬರೂ ಬಂದೂಕಿನೊಂದಿಗೆ ಹಳ್ಳಿಯತ್ತ ತೆರಳಿದರು.

ಕಾರ್ಬೆಟ್ ಮತ್ತು ತಹಸಿಲ್ದಾರ್ ಚಂಪಾವತ್ ಗ್ರಾಮದ ಮಧ್ಯ ಇದ್ದ ದೇವಸ್ಥಾನದ ಬಳಿ ಬರುವುದರೊಳಗೆ ಹಳ್ಳಿ ಜನರೆಲ್ಲಾ ಆತಂಕ ಮತ್ತು ಭಯದೊಂದಿಗೆ ಗುಂಪುಗೂಡಿ ಚರ್ಚಿಸುತ್ತಾ ನಿಂತಿದ್ದರು. ಅವರಿಂದ ವಿವರಗಳನ್ನು ಪಡೆದ ಕಾರ್ಬೆಟ್, ಜನರೊಂದಿಗೆ ನರಭಕ್ಷಕ ಹುಲಿ ದಾಳಿ ನಡೆಸಿದ ಸ್ಥಳದತ್ತ ತೆರಳಿದ. ಇಲ್ಲಿಯೂ ಕೂಡ ನರಭಕ್ಷಕ ಹುಲಿ ಬಯಲಿನಲ್ಲಿ ಹಲವಾರು ಮಹಿಳೆಯರ ಜೊತೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಎರಗಿ ದಾಳಿ ನಡೆಸಿತ್ತು. ದಾಳಿ ನಡೆದ ಸ್ಥಳದಲ್ಲಿ ರಕ್ತದ ಕೋಡಿ ಹರಿದು ಹೆಪ್ಪುಗಟ್ಟಿದ್ದರಿಂದ, ಹುಲಿ ನೇರವಾಗಿ ಯುವತಿಯ ಕುತ್ತಿಗೆಗೆ ಬಾಯಿ ಹಾಕಿ ಸ್ಥಳದಲ್ಲೇ ಕೊಂದಿದೆ ಎಂದು ಕಾರ್ಬೆಟ್ ಊಹಿಸಿದ.

ಹುಲಿ ಯುವತಿಯನ್ನು ಹೊತ್ತೊಯ್ದ ಜಾಡು ಹಿಡಿದು ಸಾಗಿದಾಗ, ದಾರಿಯುದ್ದಕ್ಕೂ ಯುವತಿಯ ತಲೆ ನೆಲಕ್ಕೆ ತಾಗಿದ ಪರಿಣಾಮ ಆಕೆಯ ತಲೆ ಬುರುಡೆ ಒಡೆದು ಹೋಗಿ, ಅಲ್ಲಲ್ಲಿ ನೆಲದ ಮೇಲೆ, ಗಿಡಗಳ ಮೇಲೆ ರಕ್ತದ ಕಲೆಗಳು ಕಾಣಿಸಿದವು. ನರಭಕ್ಷ ಹುಲಿ ಯುವತಿಯ ಶವವನ್ನು ದಾಳಿ ನಡೆಸಿದ ಸ್ಥಳದಿಂದ ಸುಮಾರು ಒಂದೂವರೆ ಕಿಲೊಮೀಟರ್ ದೂರದ ಕಾಡಿನೊಳಗೆ 300 ಅಡಿಯಷ್ಟು ಆಳವಿದ್ದ ತಗ್ಗಿನ ಪ್ರದೇಶದ ಪೊದೆಗೆ ಕೊಂಡೊಯ್ದಿತ್ತು.

ಜಿಮ್ ಕಾರ್ಬೆಟ್ ತನ್ನೊಂದಿಗೆ ಬಂದಿದ್ದ ಜನರನ್ನು ಅಲ್ಲೇ ತಡೆದು, ತನ್ನ ಮೂವರು ಸೇವಕರ ಜೊತೆ, 300 ಅಡಿ ಆಳದ ಕಣಿವೆಗೆ ಇಳಿಯತೊಡಗಿದ. ದಾಳಿ ಅನಿರೀಕ್ಷಿತವಾಗಿ ನಡೆದಿದ್ದರಿಂದ ಶಿಕಾರಿಗೆ ಅವಶ್ಯವಿದ್ದ ಉಡುಪುಗಳನ್ನಾಗಲಿ, ಬೂಟುಗಳನ್ನಾಗಲಿ ಕಾರ್ಬೆಟ್ ಧರಿಸಿರಲಿಲ್ಲ. ಮಂಡಿಯುದ್ದಕ್ಕೂ ಧರಿಸುತ್ತಿದ್ದ ಕಾಲುಚೀಲ ಮತ್ತು ಕ್ಯಾನವಾಸ್ ಬೂಟುಗಳನ್ನು ಮಾತ್ರ ತೊಟ್ಟಿದ್ದ. ಅವುಗಳಲ್ಲೇ ಅತ್ಯಂತ ಜಾಗರೂಕತೆಯಿಂದ ಹಳ್ಳಕ್ಕೆ ಇಳಿಯತೊಡಗಿದ್ದ.

ಹಳ್ಳದಲ್ಲಿ ಒಂದು ಸರೋವರವಿದ್ದುದರಿಂದ ನರಭಕ್ಷಕ ಯುವತಿಯ ಕಳೇಬರವನ್ನು ಸರೋವರದ ಮಧ್ಯೆ ಮಂಡಿಯುದ್ದದ ನೀರಿನಲ್ಲಿ ಎಳೆದೊಯ್ದು ಆಚೆಗಿನ ಪೊದೆಯಲ್ಲಿ ಬೀಡು ಬಿಟ್ಟಿತ್ತು ಸರೋವರದ ನೀರು ರಕ್ತ ಮತ್ತು ಕೆಸರಿನಿಂದ ರಾಡಿಯಾಗಿತ್ತು, ಕಾರ್ಬೆಟ್ ತನ್ನ ಇಬ್ಬರು ಸೇವಕರನ್ನು ಹತ್ತಿರದಲ್ಲಿ ಇದ್ದ ಕಲ್ಲು ಬಂಡೆಯ ಮೇಲೆ ಕೂರಿಸಿ, ಸರೋವರದ ಬಳಿ ತೆರಳುತ್ತಿದ್ದಂತೆ, ಮನುಷ್ಯ ವಾಸನೆಯನ್ನು ಗ್ರಹಿಸಿದ ನರಭಕ್ಷಕ ಪೊದೆಯಿಂದಲೇ ಘರ್ಜಿಸತೊಡಗಿತು.

ಜಿಮ್ ಕಾರ್ಬೆಟ್ ಕ್ಯಾನ್ವಾಸ್ ಬೂಟುಗಳನ್ನು ಧರಿಸಿದ್ದರಿಂದ ನೀರಿಗೆ ಇಳಿಯಲು ಸಾದ್ಯವಾಗಲಿಲ್ಲ. ಒದ್ದೆಯಾದ ನೆಲದ ಮೇಲೆ ಮೂಡಿದ್ದ ನರಭಕ್ಷಕನ ಹೆಜ್ಜೆಯ ಗುರುತುಗಳನ್ನು ಪರಿಶೀಲಿಸಿ ಇದೊಂದು ವಯಸ್ಸಾದ ಹುಲಿ ಎಂಬ ತೀರ್ಮಾನಕ್ಕೆ ಬಂದ. ಸರೋವರದ ದಕ್ಷಿಣದ ತುದಿಯಲ್ಲಿ ನಿಂತು, ಅತ್ತ, ಇತ್ತ ತಿರುಗಾಡುತ್ತಾ ಆ ಬದಿಯಲ್ಲಿದ್ದ ನರಭಕ್ಷಕನ್ನು ಪ್ರಚೋದಿಸಲು ಪ್ರಯತ್ನಿಸಿದ. ಪೊದೆಯಿಂದ ಹೊರಬಂದು ಮುಖಮುಖಿಯಾದರೆ, ಗುಂಡಿಟ್ಟು ಕೊಲ್ಲಲು ಕಾರ್ಬೆಟ್ ಹವಣಿಸಿದ್ದ. ಆದರೆ, ನಿರಂತರ ನಾಲ್ಕು ಗಂಟೆಗಳು ಕಾರ್ಬೆಟ್ ಪ್ರಯತ್ನ ಪಟ್ಟರೂ, ಪೊದೆಯಿಂದ ನರಭಕ್ಷಕ ಹುಲಿಯ ಘರ್ಜನೆ ಸದ್ದು ಮಾತ್ರ ಹೊರಬರುತ್ತಿತ್ತು.

ಕೊನೆಗೆ ಕಾರ್ಬೆಟ್‍ನ ಧೈರ್ಯಕ್ಕೆ ಹೆದರಿದಂತೆ ಕಂಡ ನರಭಕ್ಷಕ ಯುವತಿಯ ಕಳೇಬರವನ್ನು ಅಲ್ಲೇ ಬಿಟ್ಟು ಕಣಿವೆಯ ಮೇಲ್ಭಾಗಕ್ಕೆ ಚಲಿಸತೊಡಗಿತು. ಅದು ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂಬುದು ಗಿಡಗೆಂಟೆಗಳ ಅಲುಗಾಡುವಿಕೆಯಿಂದ ತಿಳಿದು ಬರುತಿತ್ತು. ಅಂತಿಮವಾಗಿ ಕಣಿವೆಯಿಂದ ಮೇಲಕ್ಕೆ ಬಂದ ನರಭಕ್ಷಕ ಸಣ್ಣ ಸಣ್ಣ ಬಂಡೆಗಳು ಮತ್ತು ಕುರಚಲು ಗಿಡ ಮತ್ತು ಹುಲ್ಲುಗಾವಲು ಇದ್ದ ಬಯಲಿನಲ್ಲಿ ಅಡಗಿಕೊಂಡಿತು. ಅದನ್ನು ಅಲ್ಲಿಯೆ ಬಿಟ್ಟು ಸಂಗಡಿಗರೊಂದಿಗೆ ವಾಪಸ್ ಹಳ್ಳಿಗೆ ಬಂದ ಕಾರ್ಬೆಟ್ ಹೊಸ ಯೋಜನೆಯೊಂದನ್ನು ರೂಪಿಸಿದ.

ಸಾಮಾನ್ಯವಾಗಿ ಹುಲಿಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಒಂದು ಸ್ಥಳದಲ್ಲಿರಿಸಿಕೊಂಡು ಎರಡು ಅಥವಾ ಮೂರು ದಿನ ಆಹಾರವಾಗಿ ಬಳಸುವುದನ್ನು ಅರಿತಿದ್ದ ಜಿಮ್ ಕಾರ್ಬೆಟ್ ನರಭಕ್ಷಕ ಹುಲಿ ಯುವತಿಯ ಕಳೇಬರವನ್ನು ತಿಂದು ಮುಗಿಸದೇ ಬೇರೆ ದಾಳಿಗೆ ಇಳಿಯುವುದಿಲ್ಲ ಎಂದು ಅಂದಾಜಿಸಿದ. ಮಾರನೇ ದಿನ ಹಳ್ಳಿಯ ಜನರ ಜೊತೆಗೂಡಿ ಅದನ್ನು ಬಯಲು ಪ್ರದೇಶದಿಂದ ಮತ್ತೇ ಕಣಿವೆಗೆ ಇಳಿಯುವಂತೆ ಮಾಡುವುದು, ಕಣಿವೆಯ ದಾರಿಯಲ್ಲಿ ಅಡಗಿ ಕುಳಿತು ನರಭಕ್ಷಕ ಹುಲಿಯನ್ನು ಕೊಲ್ಲುವುದು ಎಂಬ ತನ್ನ ಯೋಜನೆಯನ್ನು ತಹಸಿಲ್ದಾರ್ ಮುಂದಿಟ್ಟ, ಕೂಡಲೆ ಒಪ್ಪಿಗೆ ಸೂಚಿಸಿದ ತಹಸಿಲ್ದಾರ್ ಮರುದಿನ, ನಡು ಮಧ್ಯಾಹ್ನದ ಹೊತ್ತಿಗೆ 298 ಗ್ರಾಮಸ್ತರನ್ನು ಹುಲಿ ಬೆದರಿಸುವುದಕ್ಕಾಗಿ ಸಜ್ಜುಗೊಳಿಸಿದ.

ಮಚ್ಚು, ಕೊಡಲಿ, ದೊಣ್ಣೆ ಹಾಗೂ ತಮ್ಮ ತಮ್ಮ ಮನೆಗಳಲ್ಲಿ ಇದ್ದ ನಾಡ ಬಂದೂಕಗಳೊಂದಿಗೆ ಹಾಜರಾದ ಹಳ್ಳಿಯ ಜನರನ್ನು ಕರೆದುಕೊಂಡು ಬಯಲು ಪ್ರದೇಶಕ್ಕೆ ಬಂದ ಕಾರ್ಬೆಟ್, ನರಭಕ್ಷಕ ಅಡಗಿದ್ದ ಬಯಲು ಪ್ರದೇಶದಲ್ಲಿ ಕಣಿವೆಗೆ ತೆರಳಲು ಇದ್ದ ಮಾರ್ಗವನ್ನು ಹೊರತುಪಡಿಸಿ, ಉಳಿದ ಜಾಗದಲ್ಲಿ ಎಲ್ಲರನ್ನು ಇಂಗ್ಲಿಷ್ ಯು ಅಕ್ಷರದ ಆಕಾರದಲ್ಲಿ ನಿಲ್ಲಿಸಿ, ನಾನು ಸೂಚನೆ ನೀಡಿದಾಗ ಜೋರಾಗಿ ಗದ್ದಲವೆಬ್ಬಿಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಕಣಿವೆಯ ದಾರಿಯತ್ತಾ ಬರಬೇಕೆಂದು ಸೂಚಿಸಿದ. ಬಯಲು ಪ್ರದೇಶದ ಕಾಡಿನಂಚಿನಿಂದ ಕಣಿವೆಗೆ ಇಳಿಯುವ ದಾರಿಯಲಿ ತಗ್ಗಿನ ಪ್ರದೇಶದಲ್ಲಿ ಕಾರ್ಬೆಟ್ ಅಡಗಿ ಕುಳಿತ. ಅಲ್ಲದೇ . ತಾನು ಕುಳಿತ ಸ್ಥಳದಿಂದ 100 ಅಡಿ ಎತ್ತರದ ಬಲಭಾಗದಲ್ಲಿ ತಹಸಿಲ್ದಾರ್  ಕೈಗೆ ಪಿಸ್ತೂಲ್ ಕೊಟ್ಟು ಬಂಡೆಯೊಂದರ ಮೇಲೆ ಹುಲಿ ಬರುವ ಬಗ್ಗೆ ಸುಳಿವು ಕೊಡುವ ಉದ್ದೇಶದಿಂದ ಅವನನ್ನು ಕೂರಿಸಿದ.

ಕಾರ್ಬೆಟ್ ಸೂಚನೆ ನೀಡಿದ ಕೂಡಲೆ ಗ್ರಾಮಸ್ಥರು ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ, ಗಾಳಿಯಲ್ಲಿ ಗುಂಡು ಹಾರಿಸುತ್ತ ಜೋರಾಗಿ ಗದ್ದಲವೆಬ್ಬೆಸಿ ಬರತೊಡಗಿದರು. ಕಾರ್ಬೆಟ್‍ನ ನಿರೀಕ್ಷೆ ಸುಳ್ಳಾಗಲಿಲ್ಲ. ಬಯಲು ಪ್ರದೇಶದ ಹುಲ್ಲಿನೊಳಗೆ ಅಡಗಿ ಕುಳಿತಿದ್ದ ನರಭಕ್ಷಕ ಜನರ ಸದ್ದಿನ ಭಯದಿಂದ ಕಣಿವೆಗೆ ಇಳಿಯಲು ವೇಗವಾಗಿ ಧಾವಿಸುತ್ತಿತ್ತು. ಎರಡರಿಂದ ಮೂರು ಅಡಿ ಎತ್ತರಕ್ಕೆ ಹುಲ್ಲು ಬೆಳದಿದ್ದರಿಂದ ಕಾರ್ಬೆಟ್ ಕಣ್ಣಿಗೆ ಹುಲಿ ಕಾಣುತ್ತಿರಲಿಲ್ಲ. ಅದರೆ, ಹುಲ್ಲಿನ ಬಾಗುವಿಕೆಯಿಂದ ನರಭಕ್ಷಕ ಯಾವ ದಿಕ್ಕಿನಲಿ, ಬರುತ್ತಿದೆ ಎಂಬುದು ಕಾರ್ಬೆಟ್‍ಗೆ ಗೋಚರವಾಗುತ್ತಿತ್ತು. ತಾನು ಕುಳಿತ ಸ್ಥಳಕ್ಕೆ 50 ಅಡಿ ಹತ್ತಿರಕ್ಕೆ ಬರುತಿದ್ದಂತೆ ಕಾರ್ಬೆಟ್ ಹುಲ್ಲು ಅಲುಗಾಡುವಿಕೆಯನ್ನು ಗುರಿಯಾಗಿರಿಸಿಕೊಂಡು ಎರಡು ಗುಂಡು ಹಾರಿಸಿದ. ಆ ಕ್ಷಣಕ್ಕೆ ಅವುಗಳು ನರಭಕ್ಷಕನಿಗೆ ತಾಗಿದ ಬಗ್ಗೆ ಯಾವ ಸೂಚನೆ ಕಾಣಲಿಲ್ಲ. ಸ್ವಲ್ಪ ಹೊತ್ತು ಎಲ್ಲೆಡೆ ಮೌನ ಆವರಿಸಿತು. ನರಭಕ್ಷಕ ಗದ್ದಲವೆಬ್ಬಿಸುತ್ತಿರುವ ಗ್ರಾಮಸ್ತರ ಮೇಲೆ ಎರಗಲು ವಾಪಸ್ ಬಯಲಿನತ್ತ ತೆರಳುತ್ತಿರಬೇಕು ಎಂದು ಕಾರ್ಬೆಟ್ ಊಹಿಸಿದ್ದ.

ಆದರೆ, ಅದು ಅವನ ಸನಿಹಕ್ಕೆ ಕೇವಲ 30ನ ಅಡಿ ಹತ್ತಿರಕ್ಕೆ ಬಂದು ಒಮ್ಮೆ ಹುಲ್ಲಿನಿಂದ ತಲೆಯನ್ನು ಹೊರಚಾಚಿ ಕಾರ್ಬೆಟ್‍ನನ್ನು ನೋಡಿ ಗರ್ಜಿಸಿತು. ಕಾರ್ಬೆಟ್‍ಗೆ ಅಷ್ಟು ಸಾಕಾಗಿತ್ತು ಅವನು ಸಿಡಿಸಿದ ಮೂರನೇ ಗುಂಡು ನೇರವಾಗಿ ನರಭಕ್ಷನ ಎದೆಯ ಬಲಭಾಗಕ್ಕೆ ತಗುಲಿತು. ಆದರೂ ಕಾರ್ಬೆಟ್‍ಗೆ  ನಂಬಿಕೆ ಬಾರದೆ, ತಹಸಿಲ್ದಾರ್ ಬಳಿ ಓಡಿ ಹೋಗಿ ಅವನ ಬಳಿ ಇದ್ದ ಪಿಸ್ತೂಲ್ ಅನ್ನು ಕಸಿದು ತಂದು ಅದರಿಂದ ನರಭಕ್ಷಕ ಕಾಣಿಸಿಕೊಂಡ ಜಾಗದತ್ತ ಗುಂಡಿನ ಮಳೆಗರೆದ. ಸುಮಾರು ಒಂದು ಗಂಟೆಯವರೆಗೂ ನರಭಕ್ಷಕ ಹುಲಿಯ ನರಳುವಿಕೆಯಾಗಲಿ, ಘರ್ಜನೆಯಾಗಲಿ, ಕೇಳಬರದಿದ್ದರಿಂದ ಅತ್ಯಂತ ಜಾಗರೂಕತೆಯಿಂದ ತನ್ನ ಸಹಚರರ ಜೊತೆ ನಿಧಾನವಾಗಿ ಗುಂಡು ಹಾರಿಸಿದ ಸ್ಥಳಕ್ಕೆ ಬಂದ ಕಾರ್ಬೆಟ್ ನೋಡಿದ ದೃಶ್ಯ, ಸ್ವತಃ ಅವನಿಗೇ ಅಚ್ಚರಿ ಮೂಡಿಸಿತು. ಏಕೆಂದರೆ, ನೇಪಾಳದಲ್ಲಿ 200  ಹಾಗೂ ಭಾರತದಲ್ಲಿ 206 ಮಂದಿಯನ್ನು ಬಲಿತೆಗೆದುಕೊಂಡಿದ್ದ ವಯಸ್ಸಾದ ನರಭಕ್ಷಕ ಹೆಣ್ಣು ಹುಲಿ ಅಲ್ಲಿ ತಣ್ಣಗೆ ನೆಲಕ್ಕೊರಗಿ ಮಲಗಿತ್ತು.

    ( ಮುಂದುವರಿಯುವುದು) 

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-14)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ನರಭಕ್ಷಕ ಹುಲಿಯೊಂದನ್ನು ಪ್ರಥಮ ಬಾರಿಗೆ ಬೇಟೆಯಾಡಿದ್ದು 1907 ರಲ್ಲಿ. ಸುಮಾರು ಇನ್ನೂರು ಜನರನ್ನು ತಿಂದುಹಾಕಿದ್ದ ಈ ಹೆಣ್ಣು ಹುಲಿ ನೆರೆಯ ನೇಪಾಳದಿಂದ ಭಾರತಕ್ಕೆ ವಲಸೆ ಬಂದಿತ್ತು. ನೇಪಾಳದ ಬುಡಕಟ್ಟು ಜನ ಈ ನರಭಕ್ಷಕನ ಉಪಟಳ ತಾಳಲಾರದೆ, ಬಲೆ ಹಾಕಿ ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಅವರಿಂದ ತಪ್ಪಿಸಿಕೊಂಡು 1903 ರಲ್ಲಿ ನೈನಿತಾಲ್‍ನ ಪೂರ್ವಕ್ಕೆ ಇರುವ ಲೋಹಘಾಟ್ ನದಿ ಕಣಿವೆ ಮುಖಾಂತರ 65 ಕಿಲೋಮೀಟರ್ ದೂರದ ಅಲ್ಮೋರ ಹಾಗೂ ಲೋಹಾರ್‍‌ಘಾಟ್ ಕಣಿವೆಗೆ ಬಂದ ಈ ಹುಲಿ ಇಡೀ ಪ್ರದೇಶವನ್ನು ತನ್ನ ಸಾಮ್ರಾಜ್ಯವನ್ನಾಗಿ ಮಾಡಿಕೊಂಡಿತು.

ಇಲ್ಲಿಗೆ ಬಂದ ನಂತರವೂ ಮನುಷ್ಯರ ಬೇಟೆಯನ್ನು ಮುಂದುವರಿಸಿದ ನರಭಕ್ಷಕ 1903 ರಿಂದ 1907 ರವರೆಗೆ ಮತ್ತೇ ಇನ್ನೂರು ಜನರನ್ನು ಬಲಿತೆಗೆದುಕೊಂಡಿತು. ಸರಾಸರಿ ಪ್ರತಿ ಮೂರುದಿನಕ್ಕೆ ಒಬ್ಬರಂತೆ ಬೇಟೆಯಾಡಿದ್ದ ಈ ಹೆಣ್ಣು ಹುಲಿಯನ್ನು ಸೇನೆಯ ಗೂರ್ಖ ರೆಜಿಮೆಂಟ್ ತಂಡ ಮತ್ತು ಹವ್ಯಾಸಿ ಶಿಕಾರಿಕಾರರು ಹಾಗೂ ಸರ್ಕಾರದ ಅಧಿಕಾರಿಗಳು ಹಿಡಿಯುವಲ್ಲಿ ಅಥವಾ ಕೊಲ್ಲುವಲ್ಲಿ ಪ್ರಯತ್ನಿಸಿ ವಿಫಲರಾದರು.

ಅಂತಿಮವಾಗಿ ಸರ್ಕಾರ ನೈನಿತಾಲ್‍ನ ಜಿಲ್ಲಾಧಿಕಾರಿಯ ಮೂಲಕ ಹುಲಿಗಳ ಚಲನವಲನದ ಬಗ್ಗೆ ನಿಷ್ಣಾತನಾಗಿದ್ದ ಜಿಮ್ ಕಾರ್ಬೆಟ್‍ನ ಮೊರೆ ಹೋಯಿತು. ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಒಮ್ಮೆ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದ ಕಾರ್ಬೆಟ್ ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ. ಆದರೆ, ಸರ್ಕಾರದ ಮುಂದೆ ಎರಡು ಷರತ್ತುಗಳನ್ನು ವಿಧಿಸಿದ. ಈ ನರಭಕ್ಷಕ ಹುಲಿಯನ್ನು ಬೇಟೆಯಾಡಿದರೆ ಸರ್ಕಾರ ಯಾವುದೇ ಬಹುಮಾನ ಘೋಷಿಸಬಾರದು ಹಾಗೂ ಈ ನರಭಕ್ಷಕ ಹುಲಿಯನ್ನು ತಾನು ಕೊಲ್ಲುವವರೆಗೂ ಇತರರು ಈ ಪ್ರದೇಶದಲ್ಲಿ ಬೇರೆ ಯಾವುದೇ ಹುಲಿಯ ಶಿಕಾರಿಗೆ ಇಳಿಯಬಾರದು ಎಂಬುದು ಕಾರ್ಬೆಟ್‍ನ ಬೇಡಿಕೆಯಾಗಿತ್ತು.  ಒಂದು ರೀತಿಯಲ್ಲಿ ಅವನ ಬೇಡಿಕೆ ಅರ್ಥಪೂರ್ಣವಾಗಿತ್ತು. ಮುಂದಿನ ದಿನಗಳಲ್ಲಿ ಬಹುಮಾನದ ಆಸೆಗಾಗಿ ಬೇಟೆಗಾರರು ನರಭಕ್ಷಕವಲ್ಲದ ಹುಲಿಗಳನ್ನು ಕೊಂದುಹಾಕುತ್ತಾರೆ ಎಂಬ ಆತಂಕ ಹಾಗೂ ಹುಲಿಗಳನ್ನು ಗಾಯಗೊಳಿಸಿ ಅವುಗಳನ್ನು ಜೀವಂತ ಬಿಟ್ಟರೆ ಅವುಗಳು ಸೇಡು ತೀರಿಸಿಕೊಳ್ಳುವ ಸಲುವಾಗಿ ನರಭಕ್ಷಕ ಹುಲಿಗಳಾಗಿ ಪರಿವರ್ತನೆ ಹೊಂದುತ್ತವೆ ಎಂಬ ಕಾರ್ಬೆಟ್‍ನ ನಿಲುವು ಸರ್ಕಾರದ ಮುಂದೆ ಈ ಷರತ್ತುಗಳನ್ನು ವಿಧಿಸಲು ಕಾರಣವಾಗಿತ್ತು. ಜೊತಗೆ ಕಾರ್ಬೆಟ್ ತನ್ನ ಸುಧೀರ್ಘ ಕಾಡಿನ ಅನುಭವದಲ್ಲಿ ಹುಲಿಗಳ ಮನೋಭಾವವನ್ನು ಚೆನ್ನಾಗಿ ಅರಿತವನಾಗಿದ್ದ.

ಸಾಮಾನ್ಯವಾಗಿ ವಯಸ್ಸಾದ ಹುಲಿಗಳು ವೇಗವಾಗಿ ಚಲಿಸಿ ಜಿಂಕೆ, ಸಾರಂಗ, ಕಾಡೆಮ್ಮೆ ಮುಂತಾದ ಪ್ರಾಣಿಗಳನ್ನು ಹಿಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ಹಸಿವು ತಾಳಲಾರದೆ ಮನುಷ್ಯನ ಕಡೆ ತಿರುಗುತ್ತವೆ ಎಂಬುದನ್ನು ಕಾರ್ಬೆಟ್ ಅನುಭವದಿಂದ ಗ್ರಹಿಸಿದ್ದ. ಅಲ್ಲದೇ, ಒಮ್ಮೆ ಮನುಷ್ಯನ ರಕ್ತದ ರುಚಿ ನೋಡಿದ ಹುಲಿಗಳು ಮತ್ತೇ ಬೇರೆಡೆ ಆಹಾರಕ್ಕಾಗಿ ಅಲೆದಾಡುವುದು ತೀರಾ ಕಮ್ಮಿ ಎಂಬುದನ್ನು ಸಹ ಕಾರ್ಬೆಟ್ ಅರಿತಿದ್ದ. ನರಭಕ್ಷಕ ಹುಲಿಗಳನ್ನು ಶಿಕಾರಿ ಮಾಡುವುದು ಅತ್ಯಂತ ಕ್ಲಿಷ್ಟಕರ ಕೆಲಸವಾಗಿತ್ತು. ನರಮನುಷ್ಯರ ಹಿಂದೆ ಬಿದ್ದ ಹುಲಿಗಳು ಅತ್ಯಂತ ಜಾಗರೂಕತೆಯಿಂದ ದಾಳಿ ಮಾಡುತ್ತವೆ ಇದಕ್ಕಾಗಿ ಅವುಗಳು ಗಂಟೆಗಟ್ಟಲೆ, ದಿನಗಟ್ಟಲೆ ಕಾಯ್ದು ಕುಳಿತು ಹೊಂಚು ಹಾಕಿ ಮನುಷ್ಯರನ್ನು ಬಲಿ ತೆಗೆದುಕೊಳ್ಳುವುದನ್ನು ಕಾರ್ಬೆಟ್ ಗಮನಿಸಿದ್ದ.

ಸರ್ಕಾರ ಜಿಮ್ ಕಾರ್ಬೆಟ್‍ನ ಬೇಡಿಕೆಗಳಿಗೆ ಸಮ್ಮತಿ ಸೂಚಿಸಿತು. ನರಭಕ್ಷಕ ಹುಲಿಯನ್ನು ಬೇಟೆಯಾಡುವ ತನಕ ಯಾರೂ ಕುಮಾವನ್ ಮತ್ತು ಅಲ್ಮೋರ ಪ್ರಾಂತ್ಯದಲ್ಲಿ ಹುಲಿ ಬೇಟೆಯಾಡಬಾರದು ಎಂಬ ಆದೇಶವನ್ನು ಹೊರಡಿಸಿತು. ಈ ಆದೇಶ ಕಾರ್ಬೆಟ್‍ನ ಕೈಗೆ ತಲುಪುವುದರೊಳಗೆ ನೈನಿತಾಲ್‍ನಿಂದ 48 ಕಿ.ಮಿ. ದೂರದ ಪಾಲಿ ಎಂಬ ಹಳ್ಳಿಯಲ್ಲಿ ನರಭಕ್ಷಕ ಹುಲಿ ಮನುಷ್ಯ ಜೀವವೊಂದನ್ನು ಆಹುತಿ ತೆಗೆದುಕೊಂಡಿತು.

ತಕ್ಷಣವೇ ಜಿಮ್ ಕಾರ್ಬೆಟ್ ತನ್ನ ಆರು ಮಂದಿ ಸೇವಕರು ಮತ್ತು ಸಹಾಯಕರೊಡನೆ ಪಾಲಿ ಹಳ್ಳಿಯತ್ತ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ. ಸಾಮಾನ್ಯವಾಗಿ ನರಭಕ್ಷಕ ಪ್ರಾಣಿಗಳ ಬೇಟೆಗೆ ಹೊರಡುವಾಗ ಕಾರ್ಬೆಟ್ ಸೇವಕರನ್ನು ಕರೆದೊಯ್ಯುತ್ತಿದ್ದ. ಅಡುಗೆ ಮಾಡಲು, ಗುಡಾರ ಹಾಕಲು, ಕತ್ತಲೆಯಲ್ಲಿ ಲಾಂಟಿನ್ ಇಲ್ಲವೆ ಪಂಜು ಹಿಡಿಯಲು ಮೂವರು ಸೇವಕರು ಹಾಗೂ ಬೇಟೆಯ ವೇಳೆ ಮರದ ಮೇಲೆ ಮಚ್ಚಾನು ಕಟ್ಟಲು, ಜೊತೆಯಲ್ಲಿರಲು ಶಿಕಾರಿ ಅನುಭವ ಇರುವ ಮೂವರು ಸಹಾಯಕರನ್ನು ದಿನಗೂಲಿ ಆಧಾರದ ಮೇಲೆ ಕರೆದೊಯ್ಯುತ್ತಿದ್ದ. ನರಭಕ್ಷಕ ಪ್ರಾಣಿಗಳ ಬೇಟೆಯ ಸಮಯದಲ್ಲಿ ಕಾರ್ಬೆಟ್‍ನ ಖರ್ಚುವೆಚ್ಚಗಳನ್ನು ಸರ್ಕಾರ ಭರಿಸುತಿತ್ತು.

ಅಂದಿನ ದಿನಗಳಲ್ಲಿ ಕುಮಾವನ್ ಪ್ರಾಂತ್ಯದ 3500 ಅಡಿ ಎತ್ತರದ ಬೆಟ್ಟ ಗುಡ್ಡಗಳನ್ನ ಹತ್ತಿ ಇಳಿದು ಸಾಗುವ ದಾರಿ ದುರ್ಗಮವಾಗಿತ್ತು. ಆದರೆ ಜಿಮ್ ಕಾರ್ಬೆಟ್‍ಗೆ ಆ ಪ್ರದೇಶದ ಕಚ್ಛಾ ರಸ್ತೆಗಳು, ಅರಣ್ಯ ಪ್ರದೇಶ ಪರಿಚಿತವಾಗಿದ್ದ ಕಾರಣ ಪ್ರತಿ ದಿನ 20 ರಿಂದ 25 ಕಿಲೋಮೀಟರ್ ನಡೆಯುವ ಶಕ್ತಿಯನ್ನು ಕಾರ್ಬೆಟ್ ಮೈಗೂಡಿಸಿಕೊಂಡಿದ್ದ. ಸತತ ಎರಡು ದಿನಗಳ ಪ್ರಯಾಣದ ನಂತರ ಮೂರನೇ ದಿನ ಬೆಳಗಿನ ಜಾವ ನಾಲ್ಕು ಗಂಟೆ ಸಮಯಕ್ಕೆ ಕಾರ್ಬೆಟ್ ಪಾಲಿಹಳ್ಳಿಯನ್ನು ತಲುಪಿದಾಗ ಆ ಪುಟ್ಟ ಹಳ್ಳಿಯ ಜನ ಇನ್ನೂ ನಿದ್ರಿಸುತ್ತಿದ್ದರು.

ಊರ ಮುಂದಿನ ಬಯಲಿನಲ್ಲಿ ಬಿಡಾರ ಹೂಡಿದ ಕಾರ್ಬೆಟ್ ತನ್ನ ಸೇವಕರಿಗೆ ಚಹಾ ಮಾಡಲು ತಿಳಿಸಿ, ಹಾಗೆ ಹಳ್ಳಿಯನ್ನು ಒಂದು ಸುತ್ತು ಹಾಕಿ ವೀಕ್ಷಿಸಿದ. ಕೇವಲ 50 ರಷ್ಟು ಜನಸಂಖ್ಯೆ ಇದ್ದ ಪಾಲಿಯೆಂಬ ಆ ಹಳ್ಳಿ , ಸಣ್ಣ ಪ್ರಮಾಣದ ರೈತರು ಹಾಗೂ ಅರಣ್ಯದ ಕಿರು ಉತ್ಪನ್ನ ಮತ್ತು ಕೂಲಿಯನ್ನು ನಂಬಿ ಬದುಕುತ್ತಿರುವ ಕೂಲಿಕಾರ್ಮಿಕರಿಂದ ಕೂಡಿತ್ತು. ಇಡೀ ಊರಿನ ಜನ ನರಭಕ್ಷಕ ಹುಲಿಯ ಭಯದಿಂದ ತಮ್ಮ ಮನೆಯ ಬಾಗಿಲುಗಳನ್ನು ಭದ್ರ ಪಡಿಸಿ, ಕಿಟಕಿ, ಬಾಗಿಲು, ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಮುಳ್ಳಿನ ಕಂತೆಗಳನ್ನು ಇರಿಸಿ ಹುಲಿಯಿಂದ ರಕ್ಷಣೆ ಪಡೆದುಕೊಂಡಿದ್ದರು. ಹಗಲಿನ ವೇಳೆ ತಮ್ಮ ತಮ್ಮ ಜಮೀನುಗಳಿಗೆ ಅಥವಾ ಕಾಡಿಗೆ ಗುಂಪಾಗಿ ಹೋಗಿ ಬರುತ್ತಿದ್ದರು. ಅದೇ ರೀತಿ ಹೆಂಗಸರು ಸಹ ನೀರು ತರಲು, ಬಟ್ಟೆ ತೊಳೆಯಲು, ಅಥವಾ ಕಾಡಿನ ಅಂಚಿನ ಪ್ರದೇಶದಿಂದ ಉರುವಲು ಕಟ್ಟಿಗೆ ತರಲು ಆಯುಧಗಳನ್ನು ಹಿಡಿದ ಪುರುಷರ ರಕ್ಷಣೆ ಪಡೆಯುತ್ತಿದ್ದರು.

ಬೆಳಕರಿದ ತಕ್ಷಣ ಊರಿಗೆ ಬಂದ ಅಪರಿಚಿತ ವ್ಯಕ್ತಿಗಳನ್ನು ನೋಡಿ, ಒಬ್ಬೊಬ್ಬರಂತೆ ಕಾರ್ಬೆಟ್ ಬಿಡಾರದತ್ತ ಸುಳಿದರು. ಊರಿನ ಕೆಲವು ಹಿರಿಯರಿಗೆ ಕಾರ್ಬೆಟ್ ಪರಿಚಯವಿದ್ದುದ್ದರಿಂದ ಅವನ ಮುಂದೆ ಕುಳಿತು ನರಭಕ್ಷಕ ಹುಲಿಯ ಹಾವಳಿ ಬಗ್ಗೆ ಮತ್ತು ಪ್ರತಿದಿನ ಪಕ್ಕದ ಕಾಡಿನಿಂದ ಅದು ಘರ್ಜಿಸುವ ಬಗ್ಗೆ ವಿವರಿಸಿದರು.

ಕಾರ್ಬೆಟ್ ಚಹಾ ಕುಡಿದು ನರಭಕ್ಷಕ ಹುಲಿ ಮೂರು ದಿನದ ಹಿಂದೆ ಪಾಲಿಹಳ್ಳಿಯ ಹೆಣ್ಣು ಮಗಳನ್ನು ಹಿಡಿದು ಕೊಂದು ಹಾಕಿದ್ದ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ವೀಕ್ಷಣೆಗಾಗಿ ಹೊರಟ. ಊರ ಹೊರಗಿನ ಬಯಲಿನಲ್ಲಿ ಹಲವಾರು ಹೆಣ್ಣು ಮಕ್ಕಳೊಂದಿಗೆ ಕಟ್ಟಿಗೆ ಸಂಗ್ರಹಿಸುತ್ತಿದ್ದ ಗೃಹಿಣಿಯೊಬ್ಬಳು ಓಕ್ ಮರದ ಕೊಂಬೆಯನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿ ಕುಳಿತ್ತಿದ್ದ ನರಭಕ್ಷಕ ಹಿಂದಿನಿಂದ ದಾಳಿ ನಡೆಸಿತ್ತು. ಸಂಗಾತಿಗಳ ಕೂಗಾಟ ಮತ್ತು ಚೀರಾಟಗಳ ನಡುವೆಯೂ ಗೃಹಿಣಿಯ ಕುತ್ತಿಗೆಯನ್ನು ಬಲವಾಗಿ ಬಾಯಲ್ಲಿ ಹಿಡಿದು ಎತ್ತೊಯ್ದಿತ್ತು. ಹೆಣ್ಣು ಮಕ್ಕಳ ಚೀರಾಟದ ಶಬ್ಧ ಕೇಳಿ ಗ್ರಾಮಸ್ಥನೊಬ್ಬ ಬಂದೂಕ ಹಿಡಿದು ಸ್ಥಳಕ್ಕೆ ಬರುವಷ್ಟರಲ್ಲಿ ನರಭಕ್ಷಕ ಗೃಹಿಣಿಯ ಶವದೊಂದಿಗೆ ಕಾಡು ಸೇರಿತ್ತು. ಆತ ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ನರಭಕ್ಷಕನ ಘರ್ಜನೆ ಕೇಳಿಬಂದಿದ್ದರಿಂದ ಎಲ್ಲರೂ ಹೆದರಿ ವಾಪಸ್ ಹಳ್ಳಿಗೆ ಬಂದರು.

ಜಿಮ್ ಕಾರ್ಬೆಟ್ ಗ್ರಾಮಸ್ಥರ ನೆರವಿನಿಂದ ನರಭಕ್ಷಕ ಹುಲಿ ಮಹಿಳೆಯನ್ನು ಎಳೆದೊಯ್ದಿದ್ದ ಜಾಡು ಹಿಡಿದು ಹೋಗಿ ಸ್ಥಳ ಪರಿಕ್ಷೀಸಿದಾಗ ಆಕೆಯ ಬಟ್ಟೆ ಮತ್ತು ಮೂಳೆಗಳು ಮಾತ್ರ ಅಲ್ಲಿ ಉಳಿದಿದ್ದವು. ನರಭಕ್ಷಕ ಹುಲಿ ಪಾಲಿ ಗ್ರಾಮದ ಜನರನ್ನು ಗುರಿಯಾಗಿಟ್ಟುಕೊಂಡು ಇಲ್ಲೆ ಬೀಡು ಬಿಟ್ಟಿದೆ ಎಂಬುದನ್ನು ಕಾರ್ಬೆಟ್ ಖಾತರಿಪಡಿಸಿಕೊಂಡು ವಾಪಸ್ಸಾದ. ಹುಲಿಗೆ ಬಲಿಯಾದ ಗೃಹಿಣಿಯ ಮನೆಯವರು ಆಕೆಯ ಶವ ಸಂಸ್ಕಾರದ ವಿಧಿ ವಿಧಾನದ ಪೂಜೆಗಾಗಿ ಆಕೆಯ ಮೂಳೆಗಳನ್ನು ಸಂಗ್ರಹಿಸಿಕೊಂಡು ಬಂದರು.

ಆದಿನ ಬೆಳಗಿನ ಜಾವವೇ ಕಾರ್ಬೆಟ್ ಪಾಲಿ ಎಂಬ ಪುಟ್ಟ ಹಳ್ಳಿಗೆ ಬಂದಿದ್ದರಿಂದ ಗ್ರಾಮಸ್ಥರಿಗೆ ತುಸು ಧೈರ್ಯ ಬಂದಂತಾಯಿತು. ಕಾರ್ಬೆಟ್ ಬಂದೂಕಿನ ರಕ್ಷಣೆಯಡಿ ರೈತರು ಬೇಸಾಯದ ಕೆಲಸಗಳನ್ನು ನಿರ್ವಹಿಸಿದರೆ ಹಳ್ಳಿಯ ಹೆಂಗಸರು ತಮ್ಮ ಮನೆಗಳಿಂದ ಹೊರ ಬಂದು ಬಾವಿಯಲ್ಲಿ ನೀರು ಸೇದುವುದು, ಬಟ್ಟೆ ಒಗೆಯುವುದು, ಕಟ್ಟಿಗೆ ಸಂಗ್ರಹಿಸುವ ಕೆಲಸವನ್ನು ನಿರಾಳವಾಗಿ ಮಾಡಿದರು.

ಆ ರಾತ್ರಿ ಊರಿನ ಮುಖಂಡ ಕಾರ್ಬೆಟ್ ಮತ್ತು ಅವನ ಸೇವಕರಿಗೆ ವಸತಿ ವ್ಯವಸ್ಥೆಗಾಗಿ ಒಂದು ಕೊಠಡಿಯಿದ್ದ ಮನೆಯೊಂದನ್ನು ನೀಡಿದ. ಕಾರ್ಬೆಟ್ ಸೇವಕರನ್ನು ಮನೆಯೊಳಗೇ ಮಲಗಿಸಿ, ಮನೆಯ ಮುಂಭಾಗದಲ್ಲಿ ಒಂದು ಕಡೆ ಗೋಡೆ ಮತ್ತೊಂದು ಕಡೆ ಮರವನ್ನು ರಕ್ಷಣೆ ಮಾಡಿಕೊಂಡು ನರಭಕ್ಷಕ ಹುಲಿಗಾಗಿ ರಾತ್ರಿಯೆಲ್ಲಾ ಕಾದು ಕುಳಿತ. ಕಾಡಿನಿಂದ ಈ ಹಳ್ಳಿಗೆ ಬರಲು ಇದ್ದ  ಏಕೈಕ ರಸ್ತೆಯಲ್ಲೇ ನರಭಕ್ಷಕ ಹುಲಿ ಸಹ ಊರಿನೊಳಕ್ಕೆ ಪ್ರವೇಶಿಸಬೇಕಾಗಿತ್ತು. ಗೃಹಿಣಿಯನ್ನು ಕೊಂದು ಮೂರು ದಿನವಾದ್ದರಿಂದ, ಮತ್ತೇ ಆಹಾರಕ್ಕಾಗಿ ನರಭಕ್ಷಕ ದಾಳಿ ಮಾಡುತ್ತದೆ ಎಂಬುದು ಕಾರ್ಬೆಟ್‍ನ ನಿರೀಕ್ಷೆಯಾಗಿತ್ತು.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -13)


– ಡಾ.ಎನ್.ಜಗದೀಶ್ ಕೊಪ್ಪ


 

ಅಭಿರುಚಿ ಮತ್ತು ಸಾಹಸಕ್ಕೆ ಇನ್ನೊಂದು ಹೆಸರೇ ಬ್ರಿಟಿಷರು. ಇದು ಅತಿಶಯೋಕ್ತಿಯ ಮಾತೆನಲ್ಲ. ಇಡೀ ಭಾರತದ ಗಿರಿಧಾಮಗಳ, ಚಹಾ ಮತ್ತು ಕಾಫಿ ತೋಟಗಳ ಇತಿಹಾಸ ಗಮನಿಸಿದರೇ, ಇವುಗಳ ಹಿಂದೆ ಬ್ರಿಟಿಷರು ತಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ಹೋಗಿರುವುದನ್ನು ನಾವು ಗಮನಿಸಬಹುದು. ಇಂದು ಭಾರತದಲ್ಲಿ ಪ್ರಸಿದ್ಧಿಯಾಗಿರುವ, ಸಿಮ್ಲಾ, ಮಸ್ಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು-ಮನಾಲಿ, ನೀಲಗಿರಿ, ಕೊಡೈಕೆನಾಲ್, ಸೇಲಂ ಬಳಿಯ ಏರ್ಕಾಡ್ ಇವೆಲ್ಲಾ ಗಿರಿಧಾಮಗಳು ಬ್ರಿಟಿಷರ ಅನ್ವೇಷಣೆ ಮತ್ತು ಕೊಡುಗೆಗಳಾಗಿವೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿ ತನ್ನ ನಿವೃತ್ತಿಯ ದಿನಗಳನ್ನು ಅರಣ್ಯದ ನಡುವೆ ಇಲ್ಲವೇ, ಗಿರಿಧಾಮಗಳ ನಡುವೆ ಬೃಹತ್ ಕಾಫಿ ಇಲ್ಲವೆ ಚಹಾ ತೋಟಗಳನ್ನು ಮಾಡಿಕೊಂಡು ಬದುಕಿದ್ದನ್ನು ನಾವು ಇತಿಹಾಸದಲ್ಲಿ ಕಂಡಿದ್ದೇವೆ. ಇಂತಹ ಸಾಹಸ ಪ್ರವೃತ್ತಿ ಅವರಲ್ಲಿ ರಕ್ತಗತವಾಗಿ ಬಂದಿದೆ. ಇಂತಹದ್ದೇ ಗುಣವನ್ನು ನಾವು ಜಿಮ್ ಕಾರ್ಬೆಟ್‍ನಲ್ಲಿ ಕಾಣಬಹುದು. ಜಿಮ್ ಕಾರ್ಬೆಟ್ ಕೀನ್ಯಾ ಮತ್ತು ತಾಂಜೇನಿಯಾದಲ್ಲಿ ಭೂಮಿಯ ಮೇಲೆ ಬಂಡವಾಳ ತೊಡಗಿಸಿದ ಮೂಲ ಉದ್ದೇಶ ತನ್ನ ಸಂಸ್ಥೆಯಾದ ಮ್ಯಾಥ್ಯು ಅಂಡ್ ಕೊ ಹಾಗೂ ಕುಟುಂಬದ ಹಿತದೃಷ್ಟಿ ಮಾತ್ರ ಮುಖ್ಯವಾಗಿತ್ತು. ತನ್ನ ಭವಿಷ್ಯದ ಹಿತಾಸಕ್ತಿಯ ನಡುವೆಯೂ ತನ್ನ ಸುತ್ತ ಮುತ್ತ ವಾಸಿಸುತ್ತಿದ್ದ ಬಡ ಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ, ಭಾರತದ  ಏಕೈಕ ಹೃದಯವಂತ ಬ್ರಿಟಿಷ್ (ಐರೀಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ. ಇದು ಅವನ ಮೃದು ವೈಶಾಲ್ಯತೆಗೆ ಸಾಕ್ಷಿಯಾಗಿದೆ.

ಆ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಉನ್ನತ ಹುದ್ದೆಯಲ್ಲಿ ಅಥವಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದ ಅಧಿಕಾರಿಗಳಿಗೆ ಸರ್ಕಾರ ಅವರು ಕೇಳಿದ ಜಾಗದಲ್ಲಿ ಎಕರೆಗೆ ತಲಾ ಎರಡು ರೂಪಾಯಿನಿಂದ ಹಿಡಿದು ಇಪ್ಪತ್ತು ರೂಪಾಯಿ ಬೆಲೆಯಲ್ಲಿ ಭೂಮಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾರ್ಬೆಟ್, ಬೇಸಿಗೆಯ ದಿನಗಳಲ್ಲಿ ತನ್ನ ಕುಟುಂಬ ಕಾಲ ಕಳೆಯುತ್ತಿದ್ದ ಕಲದೊಂಗಿ ಸಮೀಪದ ಚೋಟಾಹಲ್ದಾನಿ ಎಂಬ ಇಡೀ ಹಳ್ಳಿಯನ್ನು ಖರೀದಿಸಿದ.

ಅರಣ್ಯದಿಂದ ಆವೃತ್ತವಾಗಿ ಸುಮಾರು ಎರಡು ಸಾವಿರ ಎಕರೆಗೂ ಅಧಿಕ ವಿಸ್ತೀರ್ಣವಿದ್ದ ಈ ಹಳ್ಳಿಯಲ್ಲಿ, ಜನಸಂಖ್ಯೆ ತೀರಾ ಕಡಿಮೆಯಿತ್ತು. ವ್ಯವಸಾಯವನ್ನು ನಂಬಿಕೊಂಡಿದ್ದ ಕೆಲವು ಕುಟುಂಬಗಳು ಮಾತ್ರ ವಾಸವಾಗಿದ್ದವು. ಬಹುತೇಕ ಮಂದಿ ಉದ್ಯೋಗ ಹರಸಿ ಬೇರೆಡೆ ವಲಸೆ ಹೋಗಿದ್ದರು. ಇಡೀ ಪ್ರದೇಶ ನೀರಿನಿಂದ ಕೂಡಿದ್ದ ಜೌಗು ಪ್ರದೇಶವಾಗಿತ್ತು ಅಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಅಲ್ಲಿ ವ್ಯವಸಾಯ ಮಾಡುವುದು ಕೂಡ ಕಷ್ಟಕರವಾಗಿತ್ತು.

ಕಾರ್ಬೆಟ್ ಚೋಟಾಹಲ್ದಾನಿ ಹಳ್ಳಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, ಬಸಿ ಕಾಲುವೆಗಳನ್ನು ನಿರ್ಮಿಸಿ ನೀರು ಹರಿದು ಹೋಗುವಂತೆ ಮಾಡಿದ. ಮೊಕಮೆಘಾಟ್‍ನಲ್ಲಿ ಕೆಲಸ ಮಾಡಿದ್ದ ಕೆಲವು ಕೂಲಿ ಕೆಲಸಗಾರರನ್ನು ಕರೆಸಿ ಅವರಿಂದ ಗಿಡಗೆಂಟೆಗಳನ್ನು ತೆರವುಗೊಳಿಸಿ, ವ್ಯವಸಾಯಕ್ಕೆ ಅನೂಕೂಲವಾಗುವಂತೆ ಭೂಮಿಯನ್ನು ಸಿದ್ದಪಡಿಸಿ, ಅವರಿಗೆಲ್ಲಾ ತಲಾ ಎರಡರಿಂದ ಐದು ಎಕರೆ ಭೂಮಿಯನ್ನು ಹಂಚಿದ. ಈ ಮೊದಲು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದವರಿಗೆ ಮತ್ತಷ್ಟು ಭೂಮಿ ನೀಡುವುದರ ಜೊತೆಗೆ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರಿಗೆ ವ್ಯವಸ್ಥಿತ ರೀತಿಯಲ್ಲಿ ಮನೆ ನಿರ್ಮಿಸಿ ಕೊಟ್ಟ. ಇಡೀ ಹಳ್ಳಿಗೆ ರಸ್ತೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಕೃಷಿಗೆ ಅನೂಕೂಲವಾಗುವಂತೆ ರೈತರಿಗೆ ಸಿಮೆಂಟ್ ಕಾಲುವೆಗಳನ್ನು ನಿರ್ಮಿಸಿದ.

ಜಿಮ್ ಕಾರ್ಬೆಟ್‍ನ ಈ ಸೇವೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹರಡುತ್ತಿದ್ದಂತೆ ಊರು ಬಿಟ್ಟು ಹೋಗಿದ್ದ ಎಲ್ಲರೂ ಮತ್ತೆ ಹಳ್ಳಿಗೆ ಬಂದು ವಾಸಿಸತೊಡಗಿದರು. ತನ್ನ ಬಾಲ್ಯದಲ್ಲಿ, ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಅರಣ್ಯದಲ್ಲಿ ಅಲೆಯಲು ಹೋಗುತ್ತಿದ್ದ ಬಾಲಕ ಕಾರ್ಬೆಟ್‍ಗೆ ಈ ಹಳ್ಳಿಯ ಜನ ತೋರಿದ್ದ ಪ್ರೀತಿಗೆ ಪ್ರತಿಫಲವಾಗಿ ಅವನು ಚೋಟಾಹಲ್ದಾನಿ ಗ್ರಾಮವನ್ನೇ ಅವರಿಗೆ ಸಮರ್ಪಿಸಿದ. ಅಲ್ಲಿಯವರೆಗೆ ಸ್ಥಳೀಯ ಜನರ ಬಾಯಲ್ಲಿ ಕೇವಲ ಕಾರ್ಪೆಟ್ ಸಾಹೇಬ್ ಎಂದು ಕರೆಸಿಕೊಳ್ಳುತ್ತಿದ್ದ ಕಾರ್ಬೆಟ್, ನಂತರ ಜಮಿನ್ದಾರ್ ಕಾರ್ಪೆಟ್ ಸಾಹೇಬನಾದ.

ಈ ಹಳ್ಳಿಯಲ್ಲಿ ಜನತೆಗೆ ಬೇಸಾಯ ಮಾಡಲು ಕಾಡುಹಂದಿಗಳ ಕಾಟ ಅತಿ ದೊಡ್ಡ ತೊಡಕಾಗಿತ್ತು. ಇದನ್ನು ಶಾಶ್ವತವಾಗಿ ತಡೆಗಟ್ಟಲು ನಿರ್ಧರಿಸಿದ ಕಾರ್ಬೆಟ್ ಎಲ್ಲರೂ ಅಚ್ಚರಿ ಪಡುವಂತೆ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪ ಮತ್ತು ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸಿ, (ಒಂದೂವರೆ ಚದುರ ಕಿ.ಮೀ. ಸುತ್ತಳತೆ) ಹಳ್ಳಿಯ ನಾಲ್ಕು ದಿಕ್ಕಿನಲ್ಲಿ ಬಾಗಿಲುಗಳನ್ನು ನಿರ್ಮಿಸಿದ. ಹಳ್ಳಿಯ ಜನತೆ ಇವುಗಳನ್ನು ತಮ್ಮ ಜಾನುವಾರುಗಳ ಜೊತೆ ಅರಣ್ಯಕ್ಕೆ ಹೋಗುವುದು, ಉರುವಲು ಕಟ್ಟಿಗೆ ತರುವುದು ಮುಂತಾದ ಕ್ರಿಯೆಗಳಿಗೆ ಬಳಸತೊಡಗಿದರು.

ಕೇವಲ 180 ಮಂದಿ ಜನಸಂಖ್ಯೆ ಇದ್ದ ಚೋಟಾಹಲ್ದಾನಿ ಹಳ್ಳಿ, ಕಾರ್ಬೆಟ್ ಅಭಿವೃದ್ಧಿ ಪಡಿಸಿದ ನಂತರ ಎರಡು ಸಾವಿರ ಜನಸಂಖೆಯನ್ನು ಒಳಗೊಂಡಿತು. ಇವರಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮರು ಇದ್ದುದು ವಿಶೇಷ. ಈ ಹಳ್ಳಿಗರ ಜೊತೆ ಒಡನಾಟ ಇರಿಸಿಕೊಳ್ಳುವ ಸಲುವಾಗಿ ಕಾರ್ಬೆಟ್ ಅಲ್ಲಿಯೇ ತನಗಾಗಿ ಅರ್ಧ ಎಕರೆ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಿಕೊಂಡ. ಮನೆಯ ಸುತ್ತ ಹಲವು ಬಗೆಯ ಹಣ್ಣಿನ ಗಿಡಗಳು ನೆಡುವುದರ ಮೂಲಕ ಹಳ್ಳಿಗರಿಗೂ ಹಣ್ಣುಗಳ ಬಗ್ಗೆ ಅಭಿರುಚಿ ಬೆಳೆಯಲು ಕಾರಣ ಕರ್ತನಾದ (ಭಾರತ ಸರ್ಕಾರದಿಂದ ಈಗ ಮ್ಯೂಸಿಯಂ ಆಗಿರುವ ಕಾರ್ಬೆಟ್ ಮನೆಯ ಆವರಣದಲ್ಲಿ ಅವನು ನೆಟ್ಟಿದ್ದ ಮಾವಿನ ಗಿಡ ಈಗ ಹೆಮ್ಮರವಾಗಿ ಬೆಳೆದು ಅವನ ನೆನಪನ್ನು ಜೀವಂತವಾಗಿರಿಸಿದೆ.)

ಭಾರತದ ಬಡಜನತೆ ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದುದನ್ನು ಕಣ್ಣಾರೆ ಕಂಡಿದ್ದ ಕಾರ್ಬೆಟ್ ತನ್ನ ಹಳ್ಳಿಯ ಜನಕ್ಕೆ ವಿವಿಧ ಬಗೆಯ ತರಕಾರಿ, ಹಣ್ಣುಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿದ. ಇದಕ್ಕಾಗಿ ಅವನು ಕೀನ್ಯಾ ಮತ್ತು ತಾಂಜೇನಿಯಾ ದೇಶಗಳೀಂದ ಹಲವು ಬಗೆಯ ಮುಸುಕಿನ ಜೋಳ, ಬಾಳೆಯ ಗಿಡ ಮತ್ತು ಗೆಣಸುಗಳ ತಳಿಯನ್ನು ತಂದು ಪರಿಚಯಿಸಿದ. ದ್ರಾಕ್ಷಿ ಮತ್ತು ಕಾಫಿ ಬೆಳಯ ಪ್ರಯೋಗಗಳನ್ನು ಸಹ ಮಾಡಿದ. ಆದರೆ ಅಲ್ಲಿನ ವಾತಾವರಣಕ್ಕೆ ಕಾಫಿ ಮತ್ತು ದ್ರಾಕ್ಷಿ ಹೊಂದಿಕೊಳ್ಳಲಾರದೆ ವಿಫಲವಾದವು.

ಕಾರ್ಬೆಟ್ ತನ್ನ ಭೂಮಿಯನ್ನು ವ್ಯವಸಾಯಕ್ಕಾಗಿ ಉಚಿತವಾಗಿ ಹಂಚುವುದರ ಜೊತೆಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ನೈನಿತಾಲ್ ಪಟ್ಟಣದಲ್ಲಿ ಮಾರುಕಟ್ಟೆ ಸೃಷ್ಟಿಸಿದ. ಇದರಿಂದಾಗಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತರಕಾರಿ, ಆಹಾರದ ಬೆಳೆಗಳು ಸಿಗುವಂತಾಯಿತು. ಮಧ್ಯವರ್ತಿಗಳ ಕಾಟವಿಲ್ಲದೆ, ತಾವು ಬೆಳೆದ ಬೆಳೆಗಳಿಗೆ ರೈತರು ಯೋಗ್ಯ ಬೆಲೆ ಪಡೆಯುವಂತಾಯಿತು.

ಜಿಮ್ ಕಾರ್ಬೆಟ್ ಚೋಟಾಹಲ್ದಾನಿಯ ಮನೆಯಲ್ಲಿ ಇದ್ದಾಗಲೆಲ್ಲಾ ಮನೆಯ ವರಾಂಡದಲ್ಲಿ ಕುಳಿತು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ವ್ಯಕ್ತಿ ವ್ಯಕ್ತಿಗಳ ನಡುವೆ, ಅಥವಾ ಕುಟುಂಬಗಳ ವೈಮನಸ್ಸು ಅಥವಾ ಜಗಳ ಕಂಡು ಬಂದರೆ, ತಾನೆ ಮುಂದಾಗಿ ಬಗೆಹರಿಸುತ್ತಿದ್ದ. ಕಾರ್ಬೆಟ್ ಮನುಷ್ಯರನ್ನು ಜಾತಿ, ಧರ್ಮದ ಆಧಾರದಲ್ಲಿ ವಿಂಗಡಿಸಿ ನೋಡಬಾರದು ಎಂದು ಯಾವಾಗಲೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುತ್ತಿದ್ದ. ಇದಕ್ಕೆ ಅವನ ಬದುಕು, ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಡೇ ಅಲ್ಲದೆ, ಕಾರ್ಬೆಟ್‍ನ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಪಾಲಿಸುತ್ತಿದ್ದರು.

ಜಿಮ್ ಕಾರ್ಬೆಟ್ ಪ್ರತಿ ವರ್ಷ ತನ್ನ ಸಹೋದರಿ ಮ್ಯಾಗಿ ಜೊತೆಗೂಡಿ ಮನೆಯ ಆವರಣದಲ್ಲಿ ಗ್ರಾಮಸ್ಥರ ಜೊತೆ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ. ಅದೇ ರೀತಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ನೈನಿತಾಲ್ ಪಟ್ಟಣದಿಂದ ಸಿಹಿ ತಿಂಡಿಯ ಪೊಟ್ಟಣಗಳನ್ನು ತಂದು ಪ್ರತಿ ಮನೆಗೂ ಹಂಚುವ ಪದ್ಧತಿಯನ್ನು ಇಟ್ಟುಕೊಂಡಿದ್ದ. ಮುಸ್ಲಿಮರ ರಂಜಾನ್ ಹಬ್ಬಕ್ಕೆ ಪ್ರತಿ ಮನೆಗೆ ಎರಡು ಕೆ.ಜಿ. ಕುರಿ ಇಲ್ಲವೆ ಮೇಕೆ ಮಾಂಸವನ್ನು ಉಚಿತವಾಗಿ ವಿತರಿಸುತ್ತಿದ್ದ. ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದ್ದ ಕ್ರಿಸ್‍ಮಸ್ ಹಬ್ಬಕ್ಕೆ ಅಂದಿನ ಭಾರತದ ವೈಸ್‍ರಾಯ್‍ಗಳು, ಉನ್ನತ ಮಟ್ಟದ ಅಧಿಕಾರಿಗಳು ಕಾರ್ಬೆಟ್‍ನ ವಿಶೇಷ ಅತಿಥಿಗಳಾಗಿ ಚೋಟಾಹಲ್ದಾನಿ ಹಳ್ಳಿಗೆ ಆಗಮಿಸುತ್ತಿದ್ದರು. ಇಡಿ ಹಳ್ಳಿಯ ಗ್ರಾಮಸ್ಥರನ್ನು ಕರೆಸಿ ಅವರ ಭಾಷೆ, ಸಂಸ್ಕೃತಿಯನ್ನು ಬ್ರಿಟಿಷ್ ಅಧಿಕಾರಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದ. ಜೊತೆಗೆ ಅವರ ಜೊತೆಗೆ ಚಹಾ ಕೂಟವನ್ನು ಏರ್ಪಡಿಸುತ್ತಿದ್ದ. ಕ್ರಿಸ್‍ಮಸ್ ಆಚರಣೆಯ ಸಂದರ್ಭದಲ್ಲಿ ಒಂದು ವಾರ ಅವನ ಮನೆ ಹಳ್ಳಿಯ ಜನರಿಂದ, ಅತಿಥಿಗಳಿಂದ ತುಂಬಿರುತ್ತಿತ್ತು. ಇವತ್ತಿಗೂ ಆ ಹಳ್ಳಿಯ ಹಲವಾರು ಮನೆಗಳಲ್ಲಿ ಕ್ರಿಸ್‍ಮಸ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಟ್ಟಾಗಿ ತೆಗೆಸಿಕೊಂಡ ಕಪ್ಪು ಬಿಳುಪಿನ ಚಿತ್ರಗಳಿವೆ.

ನಾನು ಕಾರ್ಬೆಟ್ ಮನೆಯಲ್ಲಿ ಕುಳಿತು ಅಲ್ಲಿನ ಹಿರಿಯ ಜೀವಗಳ ಜೊತೆ ಮಾತನಾಡುತ್ತಾ ಮಾಹಿತಿ ಕಲೆಹಾಕುತ್ತಾ ಇರುವ ವೇಳೆಯಲ್ಲಿ  ನನ್ನ ಮಗಳ ವಯಸ್ಸಿನ ಒಬ್ಬ ಮುಸ್ಲಿಂ ಯುವತಿ ತನ್ನ ಮನೆಗೆ ಬರುವಂತೆ ನನ್ನನ್ನು ಆಹ್ವಾನಿಸಿದಳು. ಗೆಳೆಯ ಬಸು ಯಂಕಚಿ ಜೊತೆ ಆಕೆಯ ಮನೆಗೆ ಹೋದಾಗ ಆ ಯುವತಿ ತನ್ನ ಕುಟುಂಬದ ಸದಸ್ಯರನ್ನು ಪರಿಚಯಿಸಿ, ತನ್ನ ತಾತನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಮಾಹಿತಿ ಒದಗಿಸಿದಳು. ಬಹದ್ದೂರ್ ಖಾನ್ ಎಂಬ ಹೆಸರಿನ ಅವಳ ತಾತ 30 ವರ್ಷಗಳ ಕಾಲ ಕಾರ್ಬೆಟ್‍ಗೆ ಆ ಹಳ್ಳಿಯಲ್ಲಿ ನೆಚ್ಚಿನ ಭಂಟನಾಗಿದ್ದ. ಕಾರ್ಬೆಟ್ ಅರಣ್ಯಕ್ಕೆ ತೆರಳುತಿದ್ದಾಗಲೆಲ್ಲಾ ಅವನ ರಕ್ಷಣೆಗಾಗಿ ತೆರಳುತ್ತಿದ್ದ. ವೈಸ್‍ರಾಯ್ ಮತ್ತು ಕಾರ್ಬೆಟ್ ಜೊತೆ ತೆಗೆಸಿಕೊಂಡಿರುವ ಅನೇಕ ಪೋಟೊಗಳನ್ನು ಆಕೆಯ ಕುಟುಂಬ ಇಂದಿಗೂ ಅಮೂಲ್ಯ ಆಸ್ತಿಯಂತೆ ಕಾಪಾಡಿಕೊಂಡು ಬಂದಿದೆ.

ಈಗ ಚೋಟಾಹಲ್ದಾನಿ ಹಳ್ಳಿಯಲ್ಲಿ ಸ್ಥಳೀಯ ಯುವಕರು ಒಗ್ಗೂಡಿ ಎಕೋ ಟೂರಿಸಂ ಹೆಸರಿನಲ್ಲಿ ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಬೆಟ್ ಹೆಸರಿನಲ್ಲಿ ರೆಸಾರ್ಟ್ ಸ್ಥಾಪಿಸಿದ್ದಾರೆ. ದೇಶಿ ಶೈಲಿಯ ಆಹಾರ, ವಸತಿ ವ್ಯವಸ್ಥೆ, ಕುದುರೆ ಸವಾರಿ, ಅರಣ್ಯದ ಅಂಚಿನಲ್ಲಿ ತಿರುಗಾಟ ಎಲ್ಲ ಸೌಕರ್ಯಗಳನ್ನು ಇಲ್ಲಿ ಕಲ್ಪಿಸಿಕೊಡಲಾಗಿದೆ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -12)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ಮತ್ತು ವಿಂದಮ್ ಆತ್ಮೀಯ ಗೆಳೆಯರಾದ ನಂತರ  ಪ್ರತಿದಿನ ಸಂಜೆ ನೈನಿತಾಲ್ ಪಟ್ಟಣದಲ್ಲಿದ್ದ ಯುರೋಪಿಯನ್ನರ ಕ್ಲಬ್‍ನಲ್ಲಿ ಸೇರುವುದು ವಾಡಿಕೆಯಾಗಿತ್ತು. ಸೇವೆಯಿಂದ ನಿವೃತ್ತಿಯಾಗುವ ದಿನಗಳು ಹತ್ತಿರವಾಗುತ್ತಿದ್ದಂತೆ  ಜಿಲ್ಲಾಧಿಕಾರಿಯಾಗಿದ್ದ  ವಿಂದಮ್, ಒಂದು ದಿನ ತನ್ನ ಭವಿಷ್ಯದ ಯೋಜನೆಗಳನ್ನು ಮಿತ್ರ ಕಾರ್ಬೆಟ್ ಜೊತೆ ವಿನಿಮಯ ಮಾಡಿಕೊಂಡ.  ಇಂಗ್ಲೆಂಡ್‍ನಲ್ಲಿ ಪಿತ್ರಾರ್ಜಿತವಾಗಿ ಆಸ್ತಿ ಇದ್ದರೂ ಕೂಡ ವಿಂದಮ್‍ಗೆ ಮತ್ತೇ ತನ್ನ ತಾಯ್ನಾಡಿಗೆ ತೆರಳುವ ಆಸಕ್ತಿ ಇರಲಿಲ್ಲ. ಆದರೆ 200 ವರ್ಷಗಳ ಕಾಲ ಆಳಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿ ಇದ್ದ ಭಾರತದಲ್ಲೂ ಕೂಡ  ನೆಲೆಸುವ ಇಚ್ಛೆ ಇರಲಿಲ್ಲ. ತನ್ನ ಭವಿಷ್ಯದ ನಿವೃತ್ತಿಯ ದಿನಗಳಿಗಾಗಿ ವಿಂದಮ್ ಪೂರ್ವ ಆಫ್ರಿಕಾದ ತಾಂಜೇನಿಯವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದ.

ವಿಶ್ವದ ಮೊದಲ ಮಹಾಯುದ್ಧದ ನಂತರ ತಾಂಜೇನಿಯ ದೇಶ, ಜರ್ಮನರ ಕೈಯಿಂದ ಬ್ರಿಟಿಷರಿಗೆ ವರ್ಗಾವಣೆಯಾಗಿತ್ತು. ಹೊರ ಜಗತ್ತಿಗೆ ಪೂರ್ಣ ಪ್ರಮಾಣದಲ್ಲಿ ತೆರದು ಕೊಳ್ಳದ ಈ ನಾಡಿನಲ್ಲಿ ಹೇರಳವಾದ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳು, ಬೇಸಾಯಕ್ಕೆ ಅನುಕೂಲವಾಗುವಂತಹ ಫಲವತ್ತಾದ ಭೂಮಿ, ಹಾಗೂ ಅತ್ಯಂತ ಕಡಿಮೆ ಕೂಲಿದರಕ್ಕೆ ಸಿಗುವ ಸ್ಥಳೀಯ ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರು ಇವೆಲ್ಲವೂ ವಿಂದಮ್‍ನ ಆಲೋಚನೆಗೆ ಕಾರಣವಾಗಿದ್ದವು. ತಾಂಜೇನಿಯಾದಲ್ಲಿದ್ದ ತನ್ನ ಮಿತ್ರರಾದ ಕೆಲವು ಬ್ರಿಟಿಷ್ ಅಧಿಕಾರಿಗಳ ನೆರವಿನೊಂದಿಗೆ ಅಲ್ಲಿಗೆ ಭೇಟಿ ನೀಡಿದ ವಿಂದಮ್, ಅಲ್ಲಿನ ತಾಂಜೇನಿಕ ಎಂಬ ಕೀನ್ಯಾದ ಗಡಿಭಾಗದ ಪ್ರಾಂತ್ಯದಲ್ಲಿ 1450 ಎಕರೆ ಪ್ರದೇಶದ ಎಸ್ಟೇಟ್ ಒಂದನ್ನು ವೀಕ್ಷಿಸಿ ಬಂದಿದ್ದ.

ಪೂರ್ವ ಆಫ್ರಿಕಾದ ಅತ್ಯಂತ ಎತ್ತರದ ಪ್ರದೇಶವಾಗಿದ್ದು ಸದಾ ತಂಪು ಹವಾಗುಣವಿರುವ ಹಾಗೂ ಜಗತ್ ಪ್ರಸಿದ್ಧವಾದ ಮತ್ತು ಮಂಜಿನಿಂದ ಆವೃತ್ತವಾಗಿರುವ ಕಿಲಿಮಾಂಜರೊ ಕಣಿವೆ ಪ್ರದೇಶದಲ್ಲಿ ಕಿಕಾಪು ಎಂಬ ಹೆಸರಿನ ಈ ತೋಟವನ್ನು  ಒಬ್ಬ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದ. ಆದರೆ ತಾಂಜೇನಿಯ ದೇಶ ಬ್ರಿಟಿಷರ ತೆಕ್ಕೆಗೆ ಬರುತ್ತಿದ್ದಂತೆ ಅವನು ಇದನ್ನು ಒಬ್ಬ ಬ್ರಿಟಿಷ್ ಅಧಿಕಾರಿಗೆ ಮಾರಿ ತನ್ನ ಸ್ವದೇಶಕ್ಕೆ ಹಿಂತಿರುಗಿದ್ದ. ಕಿಕಾಪು ಎಂಬ ಹೆಸರಿನ ಈ ಎಸ್ಟೇಟ್ ಕೊಳ್ಳುವಷ್ಟು ಹಣ ವಿಂದಮ್ ಬಳಿ ಇರಲಿಲ್ಲವಾದ್ದರಿಂದ ಇಬ್ಬರೂ ಕೂಡಿ ಕೊಳ್ಳುವ ಯೋಜನೆಯನ್ನು ವಿಂದಮ್ ತನ್ನ ಗೆಳೆಯ ಕಾರ್ಬೆಟ್ ಮುಂದಿಟ್ಟ. ಆ ವೇಳೆಗಾಗಲೇ ಕಾರ್ಬೆಟ್ ನಿವೇಶನಗಳ ಬದಲಿಗೆ ಕೃಷಿ ಭೂಮಿಗಳ ಮೇಲೂ ತನ್ನ ಆದಾಯದ ಹಣವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದ. ಒಮ್ಮೆ ಅನಿರಿಕ್ಷೀತವಾಗಿ ಚಹಾ ತೋಟವೊಂದಕ್ಕೆ ಪಾಲುದಾರನಾಗುವ ಅವಕಾಶ ಕಾರ್ಬೆಟ್‍ಗೆ ಒದಗಿ ಬಂದಿತು.

ಕಾರ್ಬೆಟ್ ವಿಶ್ವದ ಮೊದಲ ಮಹಾ ಯುದ್ದದ ಸಂದರ್ಭದಲ್ಲಿ ಫ್ರಾನ್ಸ್‌ನ ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾಗ, ಬ್ರಿಟಿಷ್ ಸೇನೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬ ಯುವ ಅಧಿಕಾರಿ ರಾಬರ್ಟ್ ಬೆಲ್ಲೆಯರ್‍ಸ್ ಎಂಬಾತ ನೈನಿತಾಲ್ ಪಟ್ಟಣದ ಸಮೀಪದ ಅಲ್ಮೋರ ಎಂಬ ಗಿರಿಧಾಮದದಿಂದ ಬಂದವನಾಗಿದ್ದುದರಿಂದ ಇಬ್ಬರ ನಡುವೆ ಪರಿಚಯವಾಗಿ ನಂತರ ಅದು ಗಾಢ ಸ್ನೇಹಕ್ಕೆ ತಿರುಗಿತ್ತು.

ಮೊದಲನೇ ಮಹಾಯುದ್ಧ ಮುಗಿದ ನಂತರ ಬೆಲ್ಲೆಯರ್‍ಸ್ ಕೂಡ ವಾಪಸ್ ಭಾರತಕ್ಕೆ ಬಂದು ಕುಮಾವನ್ ಪ್ರಾಂತ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆತನಿಗೆ ಅರಣ್ಯದಲ್ಲಿನ ಶಿಕಾರಿಗಿಂತ ನದಿಯಲ್ಲಿ ಮೀನು ಶಿಕಾರಿ ಮಾಡುವ ಹವ್ಯಾಸವಿತ್ತು. ರಜೆ ಅಥವಾ ಬಿಡುವಿನ ದಿನಗಳಲ್ಲಿ ಕಾರ್ಬೆಟ್ ಮತ್ತು ಬೆಲ್ಲೆಯರ್‍ಸ್  ಜೊತೆಗೂಡಿ ನದಿಗಳಲ್ಲಿ ಮೀನು ಶಿಕಾರಿ ಮಾಡುತಿದ್ದರು.

ಒಂದು ದಿನ ಬೆಲ್ಲೆಯರ್‍ಸ್ ಕಾರ್ಬೆಟ್ ಜೊತೆ ತನ್ನ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜೊತೆಗೆ ಅವನಿಂದ ಸಹಾಯಕ್ಕಾಗಿ ವಿನಂತಿಸಿಕೊಂಡ. ಬೆಲ್ಲೆಯರ್‍ಸ್ ತಂದೆ ಸ್ವೀವನ್‍ಸನ್ ಅಲ್ಮೋರ ಬಳಿ 10 ಸಾವಿರ ಎಕರೆ ಚಹಾ ತೋಟವನ್ನು ಹೊಂದಿದ್ದ. ಕುಟುಂಬದ ನಿರ್ವಹಣೆಗಾಗಿ ಅದರಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶವನ್ನು ಅವನು ಮೊದಲೇ ಮಾರಿಹಾಕಿದ್ದ. ಉಳಿದ ನಾಲ್ಕು ಸಾವಿರ ಎಕರೆ ಚಹಾ ತೋಟ ನಿರ್ವಹಣೆಯಿಲ್ಲದೆ ಪಾಳುಬಿದ್ದಿತ್ತು. ಸ್ಟೀವನ್‌ಸನ್ ನಿಧನದ ನಂತರ ಅದನ್ನು ನಿರ್ವಹಿಸಲು ಬೆಲ್ಲೆಯರ್‍ಸ್ ವಿಫಲನಾಗಿದ್ದ. ಅಲ್ಲದೆ ಬ್ರಿಟಿಷ್ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವನು ಹೊರಟು ಹೋದ ನಂತರ ಅದನ್ನು ನೋಡಿಕೊಳ್ಳುವವರೇ ಇರಲಿಲ್ಲ. ಚಹಾ ತೋಟದ ಅಭಿವೃದ್ಧಿಗಾಗಿ ಅಲಹಬಾದ್ ಬ್ಯಾಂಕ್‍ನಿಂದ ಪಡೆದಿದ್ದ ಒಂದು ಲಕ್ಷ ರೂಪಾಯಿ ಸಾಲ ಹಲವು ವರ್ಷಗಳ ನಂತರ ಬಡ್ಡಿ ಸೇರಿ ಎರಡು ಲಕ್ಷ ರೂಪಾಯಿ ದಾಟಿತ್ತು. ಈ ಕಾರಣಕ್ಕಾಗಿ ಬ್ಯಾಂಕ್ ಇಡೀ ತೋಟವನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ತೊಡಗಿತ್ತು.

ಬೆಲ್ಲೆಯರ್‍ಸ್ ವಿನಂತಿ ಮೇರೆಗೆ ಕಾರ್ಬೆಟ್ ಬ್ಯಾಂಕ್ ಸಾಲ ತೀರಿಸಲು ಮುಂದಾದ. ಬ್ಯಾಂಕ್ ಸಾಲ ತೀರಿದ ನಂತರ ಕಾರ್ಬೆಟ್ ನಾಲ್ಕು ಸಾವಿರ ಎಕರೆಯ ಚಹಾ ತೋಟಕ್ಕೆ ಜಂಟಿ ಪಾಲುದಾರನಾಗುವುದು,  ತೋಟದಿಂದ ಬರುವ ಆದಾಯವನ್ನು ಕಾರ್ಬೆಟ್ ತೆಗೆದುಕೊಂಡು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯನ್ನು ಬೆಲ್ಲೆಯರ್‍ಸ್‌‌ಗೆ ನೀಡುವುದು ಎಂಬ ಕರಾರಿನ ಮೇ‍ಲೆ ಕಾ‍ರ್ಬೆಟ್ ತನ್ನ ಮ್ಯಾಥ್ಯು ಕಂಪನಿಯ ಪರವಾಗಿ ಬ್ಯಾಂಕ್ ಸಾಲವನ್ನು ತೀರಿಸಿದ.

ಅಲ್ಮೋರ ಸಮೀಪದ ಚೌಕುರಿ ಎಂಬ ಪ್ರದೇಶದಲ್ಲಿದ್ದ ಈ ಚಹಾ ತೋಟ ಸಂಪೂರ್ಣ ಪಾಳು ಬಿದ್ದಿತ್ತು. ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಷ್ಠಾವಂತ ಕೆಲವು ಕಾರ್ಮಿಕರನ್ನು ಅಲ್ಲಿಗೆ ಕರೆಸಿಕೊಂಡು ಒಂದೇ ವರ್ಷದಲ್ಲಿ ಅದನ್ನು ಸಹಜ ಸ್ಥಿತಿಗೆ ತಂದ. ನಂತರ ಅದನ್ನು ಕೇದಾರ್‌ನಾಥ್ ಎಂಬಾತನಿಗೆ ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿ ತನ್ನ ಪಾಲಿನ ಹಣ ನಾಲ್ಕು ಲಕ್ಷ ರೂಗಳನ್ನು ಕಳೆದು, ಉಳಿದ ಹಣವನ್ನು ಬೆಲ್ಲೆಯರ್‍ಸಗೆ ನೀಡಿದ. ಕೇವಲ ಒಂದು ವರ್ಷದ ಅವಧಿಯಲ್ಲಿ ತನ್ನ ಕಂಪನಿ ಪರವಾಗಿ ಎರಡು ಲಕ್ಷ ಹಣ ವಿನಿಯೋಗಿಸಿದ್ದ ಕಾರ್ಬೆಟ್, ಅದರಲ್ಲಿ ಎರಡು ಲಕ್ಷ ರೂ ಆದಾಯವನ್ನು ಪಡೆದ. ತನ್ನ ವ್ಯವಹಾರದ ಜಾಣ್ಮೆಯ ಜೊತೆಗೆ ಗೆಳೆಯನ್ನು ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಅವನದಾಗಿತ್ತು.

ಚಹಾ ತೋಟದ ವ್ಯವಹಾರದಿಂದ ಗಳಿಸಿದ ಆದಾಯವನ್ನು ಗೆಳೆಯ ವಿಂದಮ್ ಜೊತೆ ತಾಂಜೇನಿದಲ್ಲಿ ಭೂಮಿಗೆ ತೊಡಗಿಸಲು ನಿರ್ಧರಿಸಿದ ಕಾರ್ಬೆಟ್ ಈ ವ್ಯವಹಾರಕ್ಕಾಗಿ ಬೆಲ್ಲೆಯರ್‍ಸ್‌ನನ್ನು ಸಹ ಪಾಲುದಾರನಾಗಿ ಮಾಡಿದ. 1924 ರಲ್ಲಿ ವಿಂದಮ್, ಕಾರ್ಬೆಟ್, ಬೆಲ್ಲೆಯರ್‍ಸ್ ಮೂವರು ಸೇರಿ ಸ್ಟಾಕ್ ಕಂಪನಿಯೊಂದನ್ನು ಆರಂಭಿಸಿ, ಕಂಪನಿಯ ಹೆಸರಿನಲ್ಲಿ ತಾಂಜೇನಿಯಾದ 1450 ಎಕರೆ ಕಿಕಾಪು ಎಸ್ಟೇಟ್ ಅನ್ನು  ಖರೀದಿಸಿದರು. ವಿಂದಮ್, ಎಸ್ಟೇಟ್ ಖರೀದಿಸಿದ ವೇಳೆಗೆ ಇನ್ನು ನಿವೃತ್ತಿಯಾಗದ ಕಾರಣ ಕಾರ್ಬೆಟ್ ಮೇಲೆ ಅದನ್ನು ಅಭಿವೃದ್ಧಿ ಪಡಿಸುವ ಜವಬ್ದಾರಿ ಬಿದ್ದಿತು. ಆ ಕಾರಣಕ್ಕಾಗಿ ಪ್ರತಿ ಮೂರು ತಿಂಗಳಿಗೆ ತಾಂಜೇನಿಯಾಕ್ಕೆ ಅವನು ಪ್ರವಾಸ ಹೋಗುವುದು ಅನಿವಾರ್ಯವಾಯಿತು.

ಕಿಕಾಪು ಎಸ್ಟೇಟ್ ವ್ಯವಸಾಯಕ್ಕೆ ಯೋಗ್ಯವಾಗುವ ರೀತಿಯಲ್ಲಿ ಜರ್ಮನ್ ಪ್ರಜೆ ಅಭಿವೃದ್ಧಿ ಪಡಿಸಿದ್ದರಿಂದ ಜಿಮ್ ಕಾರ್ಬೆಟ್ ಸ್ಥಳಿಯ ಕೂಲಿ ಕಾರ್ಮಿಕರ ನೆರವಿನಿಂದ ಅಲ್ಲಿ ಬಾಳೆ, ಮುಸುಕಿನ ಜೋಳ, ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲು ಪ್ರಾರಂಭಿಸಿದ. ಎಸ್ವೇಟ್‍ನಲ್ಲಿ ಕಾರ್ಮಿಕರು, ಹಾಗೂ ಮೆನೇಜರ್ ಉಳಿದುಕೊಳ್ಳಲು ಮಣ್ಣಿನ ಗೋಡೆಗಳಿಂದ ಕಟ್ಟಿದ ತಾಂಜೇನಿಯ ಶೈಲಿಯ ಮನೆಗಳು ಮಾತ್ರ ಇದ್ದವು. ಹಾಗಾಗಿ ವಿಂದಮ್ ಭಾರತದಿಂದ ಅಲ್ಲಿಗೆ ತೆರಳುವ ವೇಳೆಗೆ, ಕಾರ್ಬೆಟ್ ಬಂಗಲೆಯೊಂದನ್ನು ನಿರ್ಮಿಸಿದ. ಮೂವರು ಪಾಲುದಾರರ ಆಸಕ್ತಿಯ ಫಲವಾಗಿ ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಒಳ್ಳೆಯ ಆದಾಯ ಎಸ್ಟೇಟ್‍ನಿಂದ ಬರತೊಡಗಿತು. ವಿಂದಮ್‍ಗೆ ಕಿಕಾಪು ಎಸ್ಟೇಟ್ ತನ್ನ ನಿವೃತ್ತಿಯ ದಿನ ಕಳೆಯಲು ಆಧಾರವಾದರೆ, ಬೆಲ್ಲಿಯರ್‍ಸ ಅದೇ ಜೀವನಾಧಾರವಾಗಿತ್ತು. ಜಿಮ್ ಕಾರ್ಬೆಟ್‍ಗೆ ತಾನು ಹಾಕಿದ ಬಂಡವಾಳಕ್ಕೆ ಸರಿಯಾದ ಪ್ರತಿಫಲ ಪಡೆಯುವುದು ಮುಖ್ಯವಾಗಿತ್ತು.

ಸುಮಾರು ಇಪ್ಪತ್ತು ವರ್ಷಗಳ ಕಾಲ ಮೂವರು ಜಂಟಿಯಾಗಿ ಎಸ್ಟೇಟ್‍ ಅನ್ನು ನಿರ್ವಹಿಸಿದ ನಂತರ ಅದನ್ನು ಮಾರಿ ಹಾಕಿದರು. ವಿಂದಮ್, ತಾಂಜೇನಿಯಾ ಪಕ್ಕದ ಕೀನ್ಯಾದಲ್ಲಿ ಮತ್ತೋಂದು ಚಹಾ ಎಸ್ಟೇಟ್ ಖರೀದಿಸಿದರೆ, ಬೆಲ್ಲಿಯರ್‍ಸ್ ರುಢಿಸಿಯಾಕ್ಕೆ ತೆರಳಿ ನಿವೃತ್ತಿಯ ಜೀವನ ಆರಂಭಿಸಿದ. ಜಿಮ್ ಕಾರ್ಬೆಟ್ ಕೂಡ ಕೀನ್ಯಾದಲ್ಲಿ 30 ಎಕರೆ ಪ್ರದೇಶದ ಒಂದು ಚಿಕ್ಕ ಚಹಾ ಎಸ್ಟೇಟ್‍ವೊಂದನ್ನು ಖರೀದಿಸಿದ. ಕೀನ್ಯಾದ ಅರಣ್ಯ ಪ್ರದೇಶದಲ್ಲಿ ವಿಂದಮ್ ಮತ್ತು ಕಾರ್ಬೆಟ್ ಬಿಡುವಾದಾಗಲೆಲ್ಲಾ ಜೋಡಿಯಾಗಿ ಶಿಕಾರಿ ಮಾಡುತ್ತಾ ಅಲೆಯುವ ಅಭ್ಯಾಸವನ್ನು ಮುಂದುವರಿಸಿದ್ದರು. ಇದಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ವ್ಯವಹಾರವನ್ನು ತನ್ನ ಸಹೋದರಿ ಮ್ಯಾಗಿಗೆ ವಹಿಸಿ, ವರ್ಷದಲ್ಲಿ  ಕನಿಷ್ಠ  ಆರು ತಿಂಗಳು ಕೀನ್ಯಾದಲ್ಲಿ ವಾಸಿಸುತ್ತಿದ್ದ.

    (ಮುಂದುವರಿಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -11)


– ಡಾ.ಎನ್.ಜಗದೀಶ್ ಕೊಪ್ಪ


 

ಹತ್ತೊಂಬತ್ತನೇ ಶತಮಾನದ ಅಂತ್ಯ ಮತ್ತು ಇಪ್ಪತ್ತನೇ ಶತಮಾನದ ಆದಿಯಲ್ಲಿ ನೈನಿತಾಲ್ ಎಂಬ ಪ್ರಸಿದ್ದ ಗಿರಿಧಾಮವಾದ ಪಟ್ಟಣದಲ್ಲಿ ಫ್ರೆಡರಿಕ್ ಮ್ಯಾಥ್ಯು ಎಂಬುದು ಅತ್ಯಂತ ಪ್ರಸಿದ್ದವಾದ ಹೆಸರು. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಕಬ್ಬಿಣ ಮತ್ತು ದಿನಸಿ ಅಂಗಡಿಯ ವ್ಯಾಪಾರದ ಮೂಲಕ ಸ್ಥಳೀಯರಿಗೆ ಮತ್ತು ಯುರೋಪಿಯನ್ನರಿಗೆ ಅತ್ಯಂತ ಪ್ರೀತಿ ಪಾತ್ರನಾಗಿದ್ದ. ಆ ಕಾಲಕ್ಕೆ ಅವನ ಅಂಗಡಿಯಲ್ಲಿ ಸಿಗದೇ ಇರುವ ವಸ್ತುಗಳು ಇರಲಿಲ್ಲ. ಮ್ಯಾಥ್ಯು, ಜಿಮ್ ಕಾರ್ಬೆಟ್‍ನ ತಾಯಿ ಮೇರಿ ಕಾರ್ಬೆಟ್‍ಳ ವ್ಯವಹಾರಕ್ಕೆ ನೆರವಾಗುವುದರ ಮೂಲಕ ಆಕೆಗೆ ನಿವೇಶನ ಕೊಡಿಸುವುದು, ಮಾರಾಟ ಮಾಡುವುದು ಇವುಗಳಲ್ಲಿ ಭಾಗಿಯಾಗುತಿದ್ದ.

ಮಕ್ಕಳಿಲ್ಲದ ಮ್ಯಾಥ್ಯು ತನಗೆ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯಾಪಾರದಲ್ಲಿ ಬರುವ ಬಹುತೇಕ ಲಾಭವನ್ನು ಧರ್ಮ ಜಾತಿ ಎಂಬ ಭೇಧ ಭಾವವಿಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ  ಆರೋಗ್ಯಕ್ಕೆ ವಿನಿಯೋಗಿಸುತಿದ್ದ. ಈ ಕಾರಣಕ್ಕಾಗಿ  ಅವನನ್ನು ನೈನಿತಾಲ್ ಪುರಸಭೆಗೆ ಅವಿರೋಧವಾಗಿ ಆಯ್ಕೆ ಮಾಡುತಿದ್ದರು. ವಯಸ್ಸಾದಂತೆ ತನ್ನ ವ್ಯವಹಾರಕ್ಕೆ ಯಾರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಯೋಚನೆ ಸದಾ ಮ್ಯಾಥ್ಯುವನ್ನು ಕಾಡುತಿತ್ತು. ಇಂತಹ ಸಂದರ್ಭದಲ್ಲಿ ಅವನ ಮನಸ್ಸಿಗೆ ಬಂದವನು ಜಿಮ್ ಕಾರ್ಬೆಟ್. ಮ್ಯಾಥ್ಯು ಬಾಲ್ಯದಿಂದಲೂ ಕಾರ್ಬೆಟ್‍ನನ್ನು ಗಮನಿಸುತಿದ್ದ. ಮೊಕಮೆಘಾಟ್‍ನಲ್ಲಿ ದುಡಿಯುತ್ತಿದ್ದ ವೇಳೆಯಲ್ಲಿ ಹಣವನ್ನು ದುಂದು ವೆಚ್ಚ ಮಾಡದೇ ತನ್ನ ತಾಯಿಯ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂಡವಾಳವಾಗಿ ವಿನಯೋಗಿಸುತ್ತಿದ್ದುದ್ದನ್ನು ಗಮನಿಸುತ್ತಾ ಬಂದಿದ್ದ ಮ್ಯಾಥ್ಯು, ಕಾರ್ಬೆಟ್‍ನನ್ನು ತನ್ನ ವ್ಯವಹಾರಕ್ಕೆ ಪಾಲುದಾರನನ್ನಾಗಿ 1905 ರಲ್ಲಿ ನೇಮಕ ಮಾಡಿಕೊಂಡ.

ಕಾರ್ಬೆಟ್ ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದ ಸಂದರ್ಭದಲ್ಲೇ  ಈ ಎಲ್ಲಾ ಘಟನೆಗಳು ಜರುಗಿದವು. 1905 ರಲ್ಲಿ ಕಾರ್ಬೆಟ್, ಮ್ಯಾಥ್ಯು ಒಡೆತನದ ಎಫ್.ಮ್ಯಾಥ್ಯು ಅಂಡ್ ಕಂಪನಿಯ ವ್ಯವಹಾರಕ್ಕೆ ಪಾಲುದಾರನಾದ. ಇದಾದ ಎರಡೇ ವರ್ಷಗಳಲ್ಲಿ ಅಂದರೆ, 1907 ರಲ್ಲಿ ಮ್ಯಾಥ್ಯು ಮರಣ ಹೊಂದಿದ. ಆ ವೇಳೆಗಾಗಲೆ ಅವನ ರಿಯಲ್ ಎಸ್ಟೇಟ್ ಕಂಪನಿಯ ಮೇಲೆ ಅಲಹಬಾದ್ ಬ್ಯಾಂಕಿನಲ್ಲಿ ಸ್ವಲ್ಪ ಮಟ್ಟಿನ ಸಾಲವೂ ಇತ್ತು.

ಮ್ಯಾಥ್ಯು ತಾನು ಸಾಯುವ ಮುನ್ನವೇ ಉಯಿಲು ಬರೆದಿಟ್ಟು ತನ್ನ ಈ ಸಮಗ್ರ ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಅಂಗಡಿಯ ವ್ಯವಹಾರಕ್ಕೆ ಕಾರ್ಬೆಟ್ ಉತ್ತರಾಧಿಕಾರಿ ಎಂಬುದಾಗಿ ನಮೂದಿಸಿದ್ದ. ಅಂಗಡಿಯಲ್ಲಿ ಸುಮಾರು 10 ಸಾವಿರ ಬೆಲೆ ಬಾಳುವ ವಸ್ತುಗಳಿದ್ದವು. ಬ್ಯಾಂಕಿನ ಸಾಲ 60 ಸಾವಿರದಷ್ಟಿತ್ತು. ಇದರ ಪರಿಹಾರಕ್ಕಾಗಿ ಕಾರ್ಬೆಟ್ ನೈನಿತಾಲ್ ಪಟ್ಟಣದ ಸುತ್ತಮುತ್ತ ಕಂಪನಿಯ ಹೆಸರಿನಲ್ಲಿದ್ದ 14 ಎಕರೆ ಪ್ರದೇಶವನ್ನು ಮಾರುವುದರ ಜೊತೆಗೆ, ತನ್ನ ಉಳಿತಾಯದ ಹಣವನ್ನು ಸೇರಿಸಿ ಬ್ಯಾಂಕ್ ಸಾಲ ತೀರಿಸಿದ. ಮ್ಯಾಥ್ಯುವಿನ ವಯಸ್ಸಾದ ಪತ್ನಿಗೆ ಕಂಪನಿಯಲ್ಲಿ ಶೇರು ನೀಡಿ ಆಕೆಗೆ ತಿಂಗಳಿಗೆ ಸುಮಾರು ಒಂದೂವರೆ ಸಾವಿರ ರೂಪಾಯಿ ಆದಾಯ ಬರುವಂತೆ ಮಾಡಿ ಜೀವನೋಪಾಯಕ್ಕೆ ದಾರಿ ಮಾಡಿದ್ದ. ಇಡೀ ವ್ಯವಹಾರವೆಲ್ಲಾ ಜಿಮ್ ಕಾರ್ಬೆಟ್ ಒಡೆತನಕ್ಕೆ ಸೇರಿದ ನಂತರವೂ ಕಂಪನಿಯ ಹೆಸರು ಬದಲಾಯಿಸದೆ, ಮ್ಯಾಥ್ಯು ಅಂಡ್ ಕಂಪನಿ ಹೆಸರಿನಲ್ಲಿ ವ್ಯವಹಾರ ಮುಂದುವರಿಯಿತು. ಅವನ ಸಹೋದರಿ ಮ್ಯಾಗಿ ವ್ಯವಹಾರದ ಉಸ್ತುವಾರಿ ಹೊತ್ತಿದ್ದಳು. ಹೀಗೆ ಕುಟುಂಬ ನಿರ್ವಹಣೆ ಮತ್ತು ತನ್ನ ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನೆ ಹಾಕಿಕೊಂಡಿದ್ದ ಕಾರ್ಬೆಟ್ ರೈಲ್ವೆ ಇಲಾಖೆಯ ಉದ್ಯೋಗಕ್ಕೆ ತಿಲಾಂಜಲಿ ನೀಡಿದಾಗ ಅವನ ನೆಮ್ಮದಿಯ ಜೀವನಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

ನೈನಿತಾಲ್ ಪಟ್ಟಣಕ್ಕೆ ವಾಪಸ್ ಬಂದ ಜಿಮ್ ಕಾರ್ಬೆಟ್ ತನ್ನ ಮೆಚ್ಚಿನ ಹವ್ಯಾಸವಾಗಿದ್ದ  ಶಿಕಾರಿಯೊಂದಿಗೆ ವ್ಯವಹಾರವನ್ನು ಅಭಿವೃದ್ಧಿಪಡಿಸಿದ. ಜೊತೆಗೆ 1924 ರಿದ 1928 ರ ಅವಧಿವರೆಗೆ ಅಲ್ಲಿನ ಪುರಸಭೆಯ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿ ಇಡೀ ಪಟ್ಟಣವನ್ನು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ. ಮನೆಗಳಿಂದ ಹೊರಬೀಳುವ ತ್ಯಾಜ್ಯ ನೀರು ನೈನಿ ಸರೋವರ ಸೇರದಂತೆ, ನೀಲನಕ್ಷೆ ತಯಾರಿಸಿ ಪ್ರಥಮ ಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಿಸಿಕೊಟ್ಟ. (ವರ್ತಮಾನದ ದುರಂತವೆಂದರೆ, ಈಗ ನೈನಿತಾಲ್ ಪುರಸಭೆಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಲ್ಲಿನ ಸಿಬ್ಬಂದಿಗೆ ಜಿಮ್ ಕಾರ್ಬೆಟ್ ಎಂದರೆ ಯಾರೂ ಎಂಬುದು ಸಹ ತಿಳಿದಿಲ್ಲ.)

ಇದೇ ವೇಳೆಗೆ ವಿಂದಮ್ ಎಂಬ ಬ್ರಿಟಿಷ್ ಅಧಿಕಾರಿ ಕುಮಾವನ್ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದ. 1886 ರಲ್ಲಿ ಇಂಗ್ಲೆಂಡಿನ  ಆಕ್ಸ್‌ಫರ್ಡ್ ಕಾಲೇಜಿನ ಪದವೀಧರನಾದ ಈತ 1889 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ ಭಾರತಕ್ಕೆ ಬಂದವನು. ಪ್ರಾರಂಭದಲ್ಲಿ ಪಾಕ್ ಮತ್ತು ಆಪ್ಘನಿಸ್ಥಾನದ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸಿ, ನಂತರ ಔದ್ ಪ್ರಾಂತ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ, ಬನಾರಸ್ ಸಂಸ್ಥಾನದ ಉಸ್ತುವಾರಿ ಅಧಿಕಾರಿಯಾಗಿ, ಕಂದಾಯ ಆಯುಕ್ತನಾಗಿ,  ಹೀಗೆ ಭಾರತದ ವಿವಿಧೆಡೆ ಸೇವೆ ಸಲ್ಲಸಿ, ಇಲ್ಲಿನ ಬಹುಮುಖಿ ಸಂಸ್ಕೃತಿ ಮತ್ತು ವಿವಿಧ ಭಾಷೆಗಳನ್ನು ಅರಿತವನಾಗಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ಸೇರಿದಂತೆ ಹಲವಾರು ಸ್ಥಳೀಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವ ಪ್ರತಿಭೆಯನ್ನು ಹೊಂದಿದ್ದ.

ಜಿಮ್ ಕಾರ್ಬೆಟ್‍ನಂತೆ ಈತ ಕೂಡ  ಅವಿವಾಹಿತನಾಗಿದ್ದ. ತನ್ನೆಲ್ಲಾ ಕೆಲಸ ಕಾರ್ಯಗಳಿಗೆ ಒಬ್ಬ ಸಂಸ್ಥಾನದ ಮಾಂಡಲೀಕನಂತೆ ಹಲವಾರು ನೌಕರರನ್ನು ನೇಮಕ ಮಾಡಿಕೊಂಡಿದ್ದ. ಅತ್ಯಂತ ಮುಂಗೋಪಿಯಾಗಿದ್ದ ವಿಂದಮ್ ಸಣ್ಣ ಪುಟ್ಟ ವಿಷಯಗಳಿಗೆ ಎಲ್ಲರೆದುರು ಸಿಡಿದೇಳುತಿದ್ದ. ಆದರೆ, ಮರು ಕ್ಷಣವೇ ಶಾಂತನಾಗುತಿದ್ದ. ತನ್ನ ಬಳಿ ಕೆಲಸ ಮಾಡುವ ನೌಕರರ ಕಷ್ಟ ಸುಖಗಳಿಗೆ ಧಾರಳವಾಗಿ ನೆರವು ನೀಡುತಿದ್ದ. ಸಿಟ್ಟಿನ ನಡುವೆಯೂ ಅವನು ಎಂತಹ ಹೃದಯವಂತನೆಂದರೆ, ತನ್ನ ಕೈಕೆಳಗಿನ ಅಧಿಕಾರಿಗಳು ಅಥವಾ ನೌಕರರು ಭ್ರಷ್ಟಾಚಾರ ಇಲ್ಲವೆ ಕೆಲಸದಲ್ಲಿ ನಿರ್ಲಕ್ಷ್ಯತನ ತೋರಿದರೆ, ಉಳಿದ ಬ್ರಿಟಿಷ್ ಅಧಿಕಾರಿಗಳಂತೆ ಅವರನ್ನು ಕೆಲಸದಿಂದ ತೆಗೆಯುತ್ತಿರಲಿಲ್ಲ, ಬದಲಾಗಿ ಅವರಿಗೆ ಹಿಂಬಡ್ತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುತಿದ್ದ. ಈ ಕುರಿತಂತೆ ಪ್ರತಿಕ್ರಿಯಿಸುತ್ತಾ  ಅವರ ಕುಟುಂಬದ ಅನ್ನವನ್ನು ಕಸಿಯಬಾರದು ಎಂದು ವಿಂದಮ್ ಮಾರ್ಮಿಕವಾಗಿ ನುಡಿಯುತಿದ್ದ. ತನ್ನ ನಿಷ್ಠುರ ಹಾಗೂ ಮಾನವೀತೆಯ ಮುಖವುಳ್ಳ ವ್ಯಕ್ತಿತ್ವದ ನಡುವೆಯೂ ವಿಂದಮ್‍ಗೆ ಶಿಕಾರಿಯ ಬಗ್ಗೆ ಹುಚ್ಚಿತ್ತು.

ಅದರಲ್ಲೂ ಹುಲಿ ಬೇಟೆಯೆಂದರೆ, ವಾರಗಟ್ಟಲೆ ಅರಣ್ಯಗಳಲ್ಲಿ ತನ್ನ ಸಿಬ್ಬಂದಿ ಕೊತೆ ಗುಡಾರದಲ್ಲಿ ಬೀಡು ಬಿಡುತಿದ್ದ. ಈತನಿಗೂ ಕಾರ್ಬೆಟ್‍ಗೂ ಹುಲಿ ಬೇಟೆಯಲ್ಲಿ ಇದ್ದ ಪ್ರಮುಖ ವ್ಯತ್ಯಾಸವೆಂದರೆ, ಕಾರ್ಬೆಟ್ ಕೇವಲ ನರಭಕ್ಷಕ ಹುಲಿಗಳನ್ನು ಮರದ ಮೇಲೆ ಕುಳಿತು, ಅವುಗಳು ಬೇಟೆಯಾಡಿದ ಮಾನವರ ಕಳೇಬರಗಳನ್ನು ತಿನ್ನಲು ಬಂದಾಗ ಮಾತ್ರ ಕೊಲ್ಲುತಿದ್ದ. ಆದರೆ, ವಿಂದಮ್ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮಸ್ಥರನ್ನು  ಅರಣ್ಯಕ್ಕೆ ಕಳಿಸಿ ಹುಲಿ ಇರುವ ಜಾಗ ಪತ್ತೆ ಮಾಡಿಸಿ ಆನೆ ಮೇಲೆ ಸವಾರಿ ಮಾಡುತ್ತಾ ಗ್ರಾಮಸ್ಥರು ಮತ್ತು ತನ್ನ ಸೇವಕರ ನೆರವಿನಿಂದ ಬೇಟೆಯಾಡುತಿದ್ದ. ಈ ಶಿಕಾರಿ ಹವ್ಯಾಸ ಮುಂದಿನ ದಿನಗಳಲ್ಲಿ ಈ ಇಬ್ಬರನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿತು.

ವಿಂದಮ್ ನೈನಿತಾಲ್ ಪ್ರಾಂತ್ಯಕ್ಕೆ ಬಂದೊಡನೆ ಆ ಪ್ರದೇಶದ  ಸುತ್ತಮುತ್ತ ದಂತಕಥೆಯಾಗಿ ಹೋಗಿದ್ದ ಜಿಮ್ ಕಾರ್ಬೆಟ್ ಬಗ್ಗೆ ತಿಳಿದು ತಾನೇ ಮುಂದಾಗಿ ಸ್ನೇಹ ಹಸ್ತ ಚಾಚುವುದರ ಮೂಲಕ ಕಾರ್ಬೆಟ್‍ನನ್ನು ಗೆಳೆಯನನ್ನಾಗಿ ಮಾಡಿಕೊಂಡ. ಕಾರ್ಬೆಟ್ ಮೊಕಮೆಘಾಟ್‍ನಿಂದ ರಜೆಗೆ ಊರಿಗೆ ಬಂದಾಗಲೆಲ್ಲಾ ವಿಂದಮ್‍ನನ್ನು ಭೇಟಿಯಾಗುತಿದ್ದ ಇಬ್ಬರೂ ಕೂಡಿ ಶಿಕಾರಿ ಬಗ್ಗೆ ಚರ್ಚಿಸುವುದು ಇಲ್ಲವೇ ಅರಣ್ಯಕ್ಕೆ ತೆರಳಿ ಶಿಕಾರಿ ಮಾಡುವುದು ನಿರಂತರವಾಗಿ ನಡೆದಿತ್ತು.

ಕಾರ್ಬೆಟ್ ನಿವೃತ್ತಿ ಪಡೆದ ನಂತರ ಈ ಜೋಡಿ ವಾರಗಟ್ಟಲೆ ಕಾಡಿನಲ್ಲಿ ಬಿಡಾರ ಹೂಡಿ ಅಲೆಯುತಿದ್ದರು. ಶಿಕಾರಿ ಕುರಿತಂತೆ ಇಬ್ಬರ ಅನುಭವ ಭಿನ್ನವಾಗಿತ್ತು. ಕಾರ್ಬೆಟ್ ಬಳಿ ಜೋಡಿ ನಳಿಕೆಯ ಹಾಗೂ ಸಿಂಗಲ್ ಬ್ಯಾರಲ್ ಬಂದೂಕಗಳಿದ್ದವು. ಆದರೆ, ವಿಂದಮ್ ಬಳಿ ಆತ್ಯಾಧುನಿಕ ಬಂದೂಕಗಳಿದ್ದವು. ಅವುಗಳಲ್ಲಿ ಆನೆ ಮೇಲೆ ಕುಳಿತು ಹುಲಿ ಅಥವಾ ಚಿರತೆಗಳನ್ನು ಬೇಟೆಯಾಡಲು ಬಳಸುವ, ಬಂದೂಕದ ಮುಂಭಾಗದ ನಳಿಕೆಗಳು ಬಾಗಿರುವಂತಹ ವಿಶೇಷ ಬಂದೂಕಗಳಿದ್ದವು.

ಕಾರ್ಬೆಟ್, ವಿಂದಮ್‍ಗೆ ನೆಲದಲ್ಲಿ ನಿಂತು ಬೇಟೆಯಾಡುವ ಕಲೆ ಹಾಗೂ ಅಪಾಯಕಾರಿ ಪ್ರಾಣಿಗಳ ಕುರಿತಂತೆ ತೆಗೆದುಕೊಳ್ಳಬೇಕಾದ ಎಚ್ಚರಕೆ ಇವುಗಳನ್ನು ವಿವರಿಸುತಿದ್ದ. ಹುಲಿಗಳು ಮನುಷ್ಯನ ಇರುವನ್ನು ವಾಸನೆ ಮೂಲಕ ಕಂಡು ಹಿಡಿದು, ಸುಳಿವು ಸಿಗದಂತೆ ಸನಿಹಕ್ಕೆ ಬಂದು ಮನುಷ್ಯರ ಮೇಲೆ ಎರಗುವ ಬಗ್ಗೆ ರೋಚಕವಾಗಿ ಮನಮುಟ್ಟುವಂತೆ ಹೇಳುತಿದ್ದ. ಅದೇ ರೀತಿ ವಿಂದಮ್ ಸಹ  ಆನೆಯ ಮೇಲೆ ಕುಳಿತು ಬೇಟೆಯಾಡುವಾಗ ಬರುವ ತೊಂದರೆಗಳು, ಆನೆಯ ಮಾವುತನ ಧೈರ್ಯ ಮತ್ತು ವಿವೇಚನೆಗಳ ಮೇಲೆ ನಿರ್ಧಾರವಾಗುತಿದ್ದ ಶಿಕಾರಿ ಇಂತಹ ಅನುಭವಗಳನ್ನು ಕಾರ್ಬೆಟ್  ಜೊತೆ  ಹಂಚಿಕೊಳ್ಳುತ್ತಿದ್ದ.

(ಮುಂದುವರಿಯುತ್ತದೆ.)