Category Archives: ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್ ರೈಲ್ವೆ ಇಲಾಖೆಯಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೂ ಸಹ ಅವನಲ್ಲಿ ತನ್ನ ತಾಯಿನಾಡಾದ ಬ್ರಿಟೀಷರ ಪರವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಬಹುದಿನಗಳಿಂದ ಮನೆ ಮಾಡಿತ್ತು.

1902 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸ್ಥಳೀಯ ಬಿಳಿಯರು ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡೆದ್ದಾಗ (ಬೋರ್ ‌ಯುದ್ಧ) ಸೇನೆಯಲ್ಲಿ ಸೇವೆ ಸಲ್ಲಿಸಲು ಕಾರ್ಬೆಟ್ ಅರ್ಜಿ ಸಲ್ಲಿಸಿದ್ದ. ಆದರೆ ಸರ್ಕಾರ ಅವನ ಅರ್ಜಿಯನ್ನು ತಿರಸ್ಕರಿಸಿತು. ಕಾರ್ಬೆಟ್‍ನನ್ನು ಸೇನೆಗೆ ನಿಯೋಜಿಸಿದರೆ, ಭಾರತದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಮೊಕಮೆಘಾಟ್ ಮತ್ತು ಸಮಾರಿಯಘಾಟ್ ನಿಲ್ದಾಣಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಅಡ್ಡಿಯಾಗುತ್ತದೆ ಎಂಬುದು ಸರ್ಕಾರದ ನಿಲುವಾಗಿತ್ತು. ಕಾರ್ಬೆಟ್ ಸೇನೆಗೆ ಸೇರುವ ವಿಷಯದಲ್ಲಿ ಆತನ ತಾಯಿಗೂ ಇಷ್ಟವಿರಲಿಲ್ಲ. ಮಗನಿಗೆ ಮದುವೆ ಮಾಡಬೇಕೆಂಬ ಚಿಂತೆ ಮಾತ್ರ ಅವಳನ್ನು ಸದಾ ಕಾಡುತಿತ್ತು. ಒಮ್ಮೆ ಕಾರ್ಬೆಟ್ ರಜೆಯ ಮೇಲೆ ನೈನಿತಾಲ್‍ಗೆ ಬಂದಿದ್ದಾಗ, ಇಂಗ್ಲೆಂಡ್‍ನಿಂದ  ಸಂಬಂಧಿಕರ ಮನೆಗೆ ಬಂದಿದ್ದ ಒರ್ವ ತರುಣಿಯ ಜೊತೆ ಸ್ನೇಹ ಉಂಟಾಗಿ, ಅದು ಮದುವೆ ಹಂತದವರೆಗೆ ಬೆಳದು ಆನಂತರ  ಅನಿರೀಕ್ಷಿತವಾಗಿ ನಿಂತು ಹೋಯಿತು. ಸದಾ ಜನಜಂಗುಳಿಯಿಂದ ದೂರ ಉಳಿದು ಏಕಾಂಗಿಯಾಗಿ ಇರ ಬಯಸುತಿದ್ದ ಕಾರ್ಬೆಟ್, ಪ್ರಾಣಿ ಮತ್ತು ಪರಿಸರದ ಮೇಲಿನ ಅನನ್ಯ ಪ್ರೀತಿಯಿಂದ ನಂತರದ ದಿನಗಳಲ್ಲಿ  ಮದುವೆ ವಿಷಯಕ್ಕೆ ತಿಲಾಂಜಲಿ ನೀಡಿದ.

ಮೊಕಮೆಘಾಟ್‍ನಲ್ಲಿ ಸೇವೆ ಸಲ್ಲಿಸುತಿದ್ದಾಗಲೇ ಕಾರ್ಬೆಟ್‍ಗೆ ಸೇನೆಗೆ ಸೇರುವ ಅವಕಾಶ ಅನಿರೀಕ್ಷಿತವಾಗಿ ಒದಗಿ ಬಂತು. 1914 ರ ಜುಲೈ ತಿಂಗಳಲ್ಲಿ ಪ್ರಾರಂಭವಾದ ಮೊದಲ ವಿಶ್ವ ಮಹಾಯುದ್ಧದ ಪರಿಣಾಮ ಬ್ರಿಟಿಷ್ ಸೇನೆಯಲ್ಲಿ ಸೈನಿಕರ ಕೊರತೆ ಎದ್ದು ಕಾಣುತಿತ್ತು. ಇಂಗ್ಲೆಂಡ್ ತನ್ನ ವಸಾಹತು ಪ್ರದೇಶಗಳಲೆಲ್ಲಾ ಸೇನೆಯನ್ನು ನಿಯೋಜಿಸಿದ್ದರಿಂದ ಅದನ್ನು ವಾಪಸ್ ಕರೆಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಭಾರತದಿಂದ ಹೊಸದಾಗಿ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಬ್ರಿಟಿಷ್ ಸರ್ಕಾರ ಆಸಕ್ತಿ ತಾಳಿತ್ತು. ತನ್ನ ಅನುಪಸ್ಥಿತಿಯಲ್ಲಿ ಕೂಡ ಕಾರ್ಮಿಕರು ಕೆಲಸ ಮಾಡುತ್ತಾರೆ ಎಂಬ ಭರವಸೆಯನ್ನು ಕಾರ್ಬೆಟ್ ಸರ್ಕಾರಕ್ಕೆ ನೀಡಿದ ಮೇಲೆ ಆತನನ್ನು ಸೇನೆಗೆ ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಆ ವೇಳೆಗಾಗಲೇ ಕಾರ್ಬೆಟ್‍ಗೆ ನಲವತ್ತು ವರ್ಷ ಮೀರಿದ್ದರಿಂದ ಆತನನ್ನು ಯುದ್ಧಭೂಮಿಗೆ ಬದಲಾಗಿ ಸೈನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ವಹಿಸಲಾಯಿತು. ಕಾರ್ಬೆಟ್‍ಗೆ ಮೊದಲಿಗೆ ಈ ವಿಷಯದಲ್ಲಿ ನಿರಾಸೆಯಾದರೂ, ಸೇನೆಗೆ, ಅದಕ್ಕಿಂತ ಹೆಚ್ಚಾಗಿ  ತನ್ನ ತಾಯ್ನಾಡಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದುದ್ದಕ್ಕಾಗಿ ತೃಪ್ತಿಪಟ್ಟುಕೊಂಡ.

ಯುದ್ಧಭೂಮಿಯಲ್ಲಿ ಸೈನಿಕರಿಗೆ ತಾತ್ಕಾಲಿ ಶೆಡ್ ನಿರ್ಮಾಣ ಮಾಡುವುದು, ರಸ್ತೆ, ಸೇತುವೆ ನಿರ್ಮಿಸುವುದು, ಅವರಿಗೆ ಆಹಾರ, ಇನ್ನಿತರೆ ವಸ್ತುಗಳನ್ನು ರೈಲು ಇಲ್ಲವೆ ವಾಹನಗಳ ಮೂಲಕ ಸರಬರಾಜು ಮಾಡುವ ಜವಬ್ದಾರಿ ಇವೆಲ್ಲವನ್ನು ಕಾರ್ಬೆಟ್ ನಿರ್ವಹಿಸಬೇಕಾದ್ದರಿಂದ ಅವನಿಗೆ ಬೇಕಾದ 500 ಜನರ ತಂಡವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ‍ವನ್ನು ಅವನಿಗೆ ನೀಡಲಾಯಿತು. ಹಾಗಾಗಿ ನೈನಿತಾಲ್ ಪಟ್ಟಣಕ್ಕೆ ಬಂದ ಕಾರ್ಬೆಟ್ ಸುತ್ತಮುತ್ತಲಿನ ಹಳ್ಳಿಗಳ ಧೃಡಕಾಯದ ಯುವಕನ್ನು ಸೇನೆಯ ಸೇವೆಗಾಗಿ ಆಯ್ಕೆಮಾಡಿಕೊಂಡ. ಬ್ರಿಟಿಷ್ ಸರ್ಕಾರ ಕಾರ್ಬೆಟ್‍ನ ತಂಡಕ್ಕೆ ಕುಮಾವನ್-70 ಎಂದು ನಾಮಕರಣ ಮಾಡಿತು.

ಕಾರ್ಬೆಟ್ ಮೊಕಮೆಘಾಟ್‍ಗೆ ಹೋಗಿ ಸ್ಟೇಶನ್ ಮಾಸ್ಟರ್ ಸೇರಿದಂತೆ, ಎಲ್ಲರಿಗೂ ಕೆಲಸದ ಜವಬ್ದಾರಿ ವಹಿಸಿ, ಅವರ ಪ್ರಾರ್ಥನೆ, ಹಾರೈಕೆಗಳೊಂದಿಗೆ ಮರಳಿ ನೈನಿತಾಲ್‍ಗೆ ಬಂದು ತನ್ನ ತಂಡದೊಂದಿಗೆ ಬಾಂಬೆಗೆ ತೆರಳಿದ. 1917 ರ ಜೂನ್ ತಿಂಗಳಿನಲ್ಲಿ ಅವನ ತಂಡ ಹಡಗಿನಲ್ಲಿ ಇಂಗ್ಲೆಂಡ್‍ನತ್ತ ಪ್ರಯಾಣ ಬೆಳಸಿತು. 500 ಜನರಿದ್ದ ಅವನ ತಂಡದಲ್ಲಿ ಹಲವು ಜಾತಿಯ ಹಾಗೂ ಹಲವು ಧರ್ಮದ ಜನರಿದ್ದುದು ವಿಶೇಷ. ಅವರೆಲ್ಲಾ ಸಮುದ್ರದ ಮೂಲಕ ಭಾರತ ಬಿಟ್ಟು ತೆರಳುತಿದ್ದಂತೆ ತಮ್ಮ ಜಾತಿ, ಧರ್ಮದ ನೆಲೆಗಳನ್ನು ಮರೆತು, ಭಾರತೀಯರು ಎಂಬ ಭಾವನೆ ಅವರುಗಳ ಎದೆಯಲ್ಲಿ ಚಿಗುರೊಡೆದಿತ್ತು. ಕಾರ್ಬೆಟ್‍ಗೂ ಕೂಡ ಇದು ಅವನ ಪಾಲಿಗೆ ಮೊದಲ ವಿದೇಶ ಪ್ರವಾಸವಾಗಿತ್ತು. ತನ್ನ ಕುಟುಂಬ, ವೃದ್ಧ ತಾಯಿ, ಸಹೋದರಿ ಇವರೆಲ್ಲರನ್ನು ಅಗಲಿ ಹೋಗುವ ಸಂದರ್ಭದಲ್ಲಿ ಅವನೂ ಕೂಡ ಭಾವುಕನಾಗಿದ್ದ. ಅದರೆ ಅವನಲ್ಲಿ ತನ್ನ ಮೂಲ ನೆಲೆಯಾದ ಇಂಗ್ಲೆಂಡ್, ಅದರಲ್ಲೂ ವಿಶೇಷವಾಗಿ ಐತಿಹಾಸಿಕ  ಲಂಡನ್ ‍ನಗರ ನೋಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು.

ಅವನ ತಂಡ ಸುಮಾರು 30 ದಿನಗಳ ಪ್ರಯಾಣದ ನಂತರ ಇಂಗ್ಲೆಂಡಿನ ಸೌತ್ ಹ್ಯಾಂಪ್ಟೆನ್ ನಗರವನ್ನು ತಲುಪಿತು. ಒಂದು ವಾರ ಕಾಲ ಬಂದರಿನಲ್ಲಿ ಬೀಡು ಬಿಟ್ಟಿದ್ದ ಕಾರ್ಬೆಟ್ ನೇತೃತ್ವದ ಕುಮಾವನ್-70 ತಂಡವನ್ನು ಅಂತಿಮವಾಗಿ ಫ್ರಾನ್ಸ್ ನ ಯುದ್ದ ಭೂಮಿಗೆ ಕಳಿಸಿಕೊಡಲಾಯಿತು. ಅಲ್ಲಿನ ವಾತಾವರಣ, ಚಳಿ, ವಿವಿಧ ಬಗೆಯ ಸೊಳ್ಳೆಗಳು, ಅನಿರೀಕ್ಷಿತವಾಗಿ ಬಂದೆರಗುವ ಸಾಂಕ್ರಾಮಿಕ ರೋಗಗಳು ಇವೆಲ್ಲವೂ ಕಾರ್ಬೆಟ್ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವೆಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಮಸ್ಯೆ ಎದುರಾಯಿತು. ಸೇನೆಯಲ್ಲಿ ಯಥೇಚ್ಚವಾಗಿ ಸರಬರಾಜು ಮಾಡುತಿದ್ದ ದನದ ಮತ್ತು ಹಂದಿಯ ಮಾಂಸ ಹಾಗೂ ವಿಸ್ಕಿ, ರಮ್ ‍ಅನ್ನು ತಿನ್ನುವ ಅಥವಾ ಕುಡಿಯುವ ಅಭ್ಯಾಸ ಯಾರಿಗೂ ಇರಲಿಲ್ಲ. ಆದರೆ ತಂಬಾಕನ್ನು ಬಳಸುವ ಅಭ್ಯಾಸವಿತ್ತು. ಕಾರ್ಬೆಟ್‍ನ ಮನವಿ ಮೇರೆಗೆ ಮಾಂಸದ ಬದಲು ಆಲೂಗೆಡ್ಡೆ, ಬಟಾಣಿ ಮುಂತಾದ ಹಸಿರು ತರಕಾರಿಗಳು, ಮತ್ತು ಅಕ್ಕಿ ಹಾಗೂ ಗೋಧಿಹಿಟ್ಟನ್ನು ತಂಡಕ್ಕೆ ಸರಬರಾಜು ಮಾಡಲಾಯಿತು. ಇದಕ್ಕೆ ಕಾರಣ ಬಹುತೇಕ ಸದಸ್ಯರು ಸಸ್ಯಹಾರಿಗಳಾಗಿದ್ದದ್ದು.

ಯುದ್ಧಭೂಮಿಯಲ್ಲಿ ತೂರಿ ಬರುವ ಗುಂಡು ಹಾಗೂ  ಫಿರಂಗಿಯ ಶೆಲ್‍ಗಳ ನಡುವೆ, ಸೈನಿಕರಿಗೆ ಕಂದಕ ತೋಡುವುದು, ಅವರಿಗೆ ಬಂಕರ್ ನಿರ್ಮಿಸಿ ಕೊಡುವುದು ಇಲ್ಲವೆ ಕೇಬಲ್ ತಂತಿಯ ಜಾಲ ನಿರ್ಮಿಸಿ ಕೊಡುವ ಕೆಲಸವನ್ನು ಕಾರ್ಬೆಟ್ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಎಷ್ಟೋಬಾರಿ ತುರ್ತು ವೇಳೆಯಲ್ಲಿ ಹಗಲು ಇರುಳು ಎಂಬ ಪರಿವಿಲ್ಲದೆ ಸೇತುವೆ ಮತ್ತು ರೈಲ್ವೆ ಮಾರ್ಗವನ್ನು ಸಹ ಈ ತಂಡ ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಬೆಟ್ ತನ್ನ ತಂಡದ ಸದಸ್ಯರ ಪಾಲಿಗೆ ಕೇವಲ ನಾಯಕನಾಗಿರದೆ, ಸಂತನಂತೆ, ಸಹೋದ್ಯೋಗಿಯಂತೆ ವರ್ತಿಸುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಕೆಲಸ ಮಾಡುವ ರೀತಿ ಅಲ್ಲಿನ ಇತರೆ ಸೈನ್ಯದ ಅಧಿಕಾರಿಗಳಿಗೆ ವಿಸ್ಮಯವನ್ನುಂಟು ಮಾಡಿತ್ತು. ಸೈನಿಕರೆಲ್ಲಾ ಚಳಿ ತಡೆಯಲು ರಮ್‍ನಂತಹ ಮಾದಕ ದ್ರವ್ಯಕ್ಕೆ ಮೊರೆ ಹೋದರೆ, ಭಾರತದ ಕಾರ್ಬೆಟ್ ತಂಡದ ಸದಸ್ಯರು ತಮ್ಮ ಎರಡು ಅಂಗೈಗಳನ್ನು ಉಜ್ಜಿಕೊಳ್ಳುತ್ತಾ, ಚಳಿಯನ್ನು ನಿಯಂತ್ರಿಸುವ ಬಗೆ ಅವರಲ್ಲಿ ಅಚ್ಚರಿ ಉಂಟು ಮಾಡಿತ್ತು.

ನೈನಿತಾಲ್ ಮತ್ತು ಕುಮಾವನ್ ಪರ್ವತ ಗಿರಿ ಶ್ರೇಣಿಗಳಲ್ಲಿ ಬೆಳೆದು ಬಂದಿದ್ದ ಕಾರ್ಬೆಟ್ ತಂಡದ ಸದಸ್ಯರಿಗೆ ಚಳಿಯ ವಾತಾವರಣದ ನಡುವೆ ಬದುಕುವ ಕಲೆ ಕರಗತವಾಗಿತ್ತು. ಹಾಲಿಲ್ಲದ ಕಪ್ಪು ಚಹಾ ಮತ್ತು ಚುಟ್ಟಾ,  ಈ ಎರಡು ವಸ್ತುಗಳಿದ್ದರೆ ಆಹಾರವಿಲ್ಲದೆ ದುಡಿಯುವ ಶಕ್ತಿ ಅವರಲ್ಲಿತ್ತು. 1918 ರ ಜನವರಿ ತಿಂಗಳಿನಲ್ಲಿ ಒಮ್ಮೆ ಇವರ ಬಿಡಾರಕ್ಕೆ ಆಗಮಿಸಿ, ಇವರ ಕಾರ್ಯ ಚಟುವಟಿಕೆ, ಆಹಾರ ಸಂಸ್ಕೃತಿ ಎಲ್ಲವನ್ನು ಕೂಲಂಕುಶವಾಗಿ ವೀಕ್ಷಿಸಿದ, ಬ್ರಿಟೀಷ್ ಸರ್ಕಾರದಲ್ಲಿ ವಿದೇಶಿ ಸೈನ್ಯ ಪಡೆಗಳ ಉಸ್ತುವಾರಿ ಹೊತ್ತಿದ್ದ ಲಾರ್ಡ್ ಅಂಪ್ತಿಲ್ ಸರ್ಕಾರಕ್ಕೆ ಪತ್ರ ಬರೆದು ಕಾರ್ಬೆಟ್ ತಂಡದ ಶ್ರಮವನ್ನು ಪ್ರಶಂಸಿಸಿದ. ಅಲ್ಲದೆ ನಂತರದ ದಿನಗಳಲ್ಲಿ ಕಾರ್ಬೆಟ್‍ನನ್ನು ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. (ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಹೋರಾಟ ನಡೆಸುತಿದ್ದಾಗ, ಗಾಂಧಿಯ ಮೇಲೆ ಶಿಸ್ತು ಕ್ರಮ ಕೈಗೊಂಡ ಅಧಿಕಾರಿಗಳಲ್ಲಿ ಲಾರ್ಡ್ ಅಂಪ್ತಿಲ್ ಕೂಡ ಒಬ್ಬ.)

ಗಂಗಾನದಿಯ ತಟದ ಮೊಕಮೆಘಾಟ್‍ನಲ್ಲಿ ಉರಿವ ಬಿಸಿಲು, ಕೊರೆವ ಚಳಿ, ಅಥವಾ ಸುರಿವ ಮಳೆಯೆನ್ನದೆ ಕಾರ್ಮಿಕರನ್ನು ಹುರಿದುಂಬಿಸುತ್ತಾ ವರ್ಷಾನುಗಟ್ಟಲೆ ಕಠಿಣ ಕೆಲಸ ಮಾಡಿದ್ದ ಅನುಭವಗಳು ಕಾರ್ಬೆಟ್ ಪಾಲಿಗೆ ಯುದ್ಧಭೂಮಿಯ ಮೂಲಭೂತ ಸೌಕರ್ಯಗಳ ರಚಾನಾತ್ಮಕ ಕೆಲಸಗಳಿಗೆ ವರವಾಗಿ ಪರಿಣಮಿಸಿದವು. 1918 ರಲ್ಲಿ ವಿಶ್ವದ ಮೊದಲ ಮಹಾಯುದ್ಧ ಮುಗಿದಾಗ ಲಂಡನ್ ನಗರಕ್ಕೆ ಕಾರ್ಬೆಟ್ ತಂಡವನ್ನು ಕರೆಸಿಕೊಂಡ ಬ್ರಿಟಿಷ್ ಸರ್ಕಾರ ಪ್ರತಿಯೊಬ್ಬ ಸದಸ್ಯನಿಗೂ ಶೌರ್ಯ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಿತು. ಜಿಮ್ ಕಾರ್ಬೆಟ್‍ನ ಹುದ್ದೆಯನ್ನು ಕ್ಯಾಪ್ಟನ್ ದರ್ಜೆಯಿಂದ ಮೇಜರ್ ದರ್ಜೆಗೆ ಏರಿಸಿ ವಿಶೇಷವಾಗಿ ಸನ್ಮಾನಿಸಿತು.

ಭಾರತಕ್ಕೆ ಹಿಂತಿರುಗುವ ಮುನ್ನ ಕಾರ್ಬೆಟ್ ಲಂಡನ್ ನಗರದಲ್ಲಿ ಉಳಿದು, ತನ್ನ ಕನಸಿನ ಲಂಡನ್ ಗೋಪುರ, ಬಂಕಿಂಗ್ ಹ್ಯಾಮ್ ಅರಮನೆ, ಪಾರ್ಲಿಮೆಂಟ್ ಭವನ ಮುತಾಂದ ಸ್ಥಳಗಳನ್ನು ನೋಡಿ ಕಣ್ತುಂಬಿಕೊಂಡ. ಥೇಮ್ಸ್ ನದಿಯ ದಡದಲ್ಲಿ ಏಕಾಂಗಿ ಮನೊಸೋಇಚ್ಛೆ ನಡೆದಾಡಿದ. ನೈನಿತಾಲ್ ಅರಣ್ಯ ಪ್ರದೇಶದಲ್ಲಿ ಮೈಲಿಗಟ್ಟಲೆ ಒಡಾಡಿದ ಅನುಭವ ಇದ್ದ ಕಾರ್ಬೆಟ್ ಲಂಡನ್ ನಗರವನ್ನು ಕಾಲ್ನಡಿಗೆಯಲ್ಲೇ ವೀಕ್ಷಣೆ ಮಾಡಿದ. ತನ್ನ ಕುಮಾವನ್-70 ತಂಡದೊಂದಿಗೆ ಹಡಗಿನಲ್ಲಿ ವಾಪಾಸಾಗುತಿದ್ದಾಗ, ಈಜಿಪ್ಟನಲ್ಲಿ ಹಡಗು ಎರಡು ದಿನ ಲಂಗರು ಹಾಕಿದ ಪ್ರಯುಕ್ತ ಕಾರ್ಬೆಟ್ ತನ್ನ ಸದಸ್ಯರೊಂದಿಗೆ ಕೈರೊ ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ. ಪಿರಮಿಡ್‍ಗಳನ್ನು ನೋಡಿ ಅವುಗಳ ರಚನೆ ಮತ್ತು ಅಗಾಧತೆಗೆ ಕಾರ್ಬೆಟ್ ಬೆರಗಾದ. ತನ್ನ ಸಹೋದರಿ ಮ್ಯಾಗಿ ಮತ್ತು ತಾಯಿಗೆ ಒಂದಿಷ್ಟು ಹತ್ತಿಯ ಬಟ್ಟೆಗಳನ್ನು ಖರೀದಿಸಿ ಬಾಂಬೆಯತ್ತ ಪ್ರಯಾಣ ಬೆಳಸಿದ. ತಾನು ಕರೆದುಕೊಂಡು ಹೋಗಿದ್ದ 500 ಮಂದಿ ಸದಸ್ಯರಲ್ಲಿ ಒರ್ವ ವ್ಯಕ್ತಿ ಮಾತ್ರ ಭಾರತಕ್ಕೆ ಹಿಂತಿರುಗುತಿದ್ದ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಡಗಿನಲ್ಲೇ ಮೃತಪಟ್ಟ. ಉಳಿದವರೆಲ್ಲರೂ ಕಾರ್ಬೆಟ್ ಜೊತೆ ಸುರಕ್ಷಿತವಾಗಿ ಬಾಂಬೆ ನಗರದ ಮೂಲಕ ತಮ್ಮ ಊರುಗಳಿಗೆ ಹಿಂರುಗಿದರು.

ಕಾರ್ಬೆಟ್ ಎರಡು ತಿಂಗಳ ಕಾಲ ರಜೆ ಹಾಕಿ ತನ್ನ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ. ಆ ವೇಳೆಗೆ 43 ವರ್ಷ ದಾಟಿದ್ದ ಕಾರ್ಬೆಟ್ ತನ್ನ ಎಲ್ಲ ಉದ್ಯೋಗಗಳಿಗೆ ತಿಲಾಂಜಲಿ ಇತ್ತು ತನ್ನ ವೃದ್ಧ ತಾಯಿ ಮತ್ತು ಅವಿವಾಹಿತೆ ಅಕ್ಕನೊಂದಿಗೆ ಇದ್ದು ಬಿಡಬೇಕೆಂದು ಯೋಚಿಸಲಾರಂಭಿಸಿದ್ದ. ರಜೆಯ ಅವಧಿ ಮುಗಿಯುವ ಮುನ್ನವೇ ಕಾರ್ಬೆಟ್ ಮತ್ತೆ ತನ್ನ ತಂಡದೊಂದಿಗೆ ಆಫ್ಪಾನಿಸ್ಥಾನಕ್ಕೆ ತೆರಳಬೇಕೆಂದು ಸರ್ಕಾರದಿಂದ ಆದೇಶ ಬಂದಿತು. ಆಗಿನ ಅವಿಭಜಿತ ಭಾರತ (ಪಾಕ್ ಮತ್ತು ಭಾರತ,) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತಾದರೂ, ನೈರುತ್ಯ ಭಾಗದ ಆಫ್ಫಾನಿಸ್ಥಾನ, ಬಲೂಚಿಸ್ತಾನ ಸ್ವತಂತ್ರ್ಯವಾಗಿದ್ದು ಹಲವು ಬುಡಕಟ್ಟು ನಾಯಕರ ಆಳ್ವಿಕೆಗೆ ಒಳಪಟ್ಟಿದ್ದವು. ಬುಡಕಟ್ಟು ನಾಯಕರ ಆಂತರಿಕ ಹೋರಾಟದ ಲಾಭವನ್ನು ಪಡೆಯಲು ಬಯಸಿದ ಬ್ರಿಟಿಷ್ ಸರ್ಕಾರ ಇಡೀ ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ  ಹಲವು ನಾಯಕರಿಗೆ ಪರೋಕ್ಷ ಬೆಂಬಲ ಸೂಚಿಸಿತ್ತು. ಅಲ್ಲದೆ ಸೈನ್ಯದ ಸಹಾಯವನ್ನೂ ನೀಡಿತ್ತು.

ಆಫ್ಫಾನಿಸ್ತಾನ ಕಾಬೂಲ್, ತಾಲ್, ವಜೀರಿಸ್ತಾನ್ ಮುಂತಾದ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳು ಕಾರ್ಯ ನಿರ್ವಹಿಸಿದ ಕಾರ್ಬೆಟ್, ತನ್ನ ತಂಡದ ಸದಸ್ಯರು  ಹಾಗೂ ಪಂಜಾಬ್ ಬೆಟಾಲಿಯನ್ ತಂಡದ ಜೊತೆಗೂಡಿ ಪಾಕಿಸ್ತಾನದ ಗಡಿ ಭಾಗದಲ್ಲಿ ಸಮಾರು 50 ಕಿ.ಮಿ ಉದ್ದದ ರೈಲ್ವೆ ಮಾರ್ಗ ನಿರ್ಮಿಸಿ ಮಿಲಿಟರಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟ.  1918 ರ ನವಂಬರ್ ವೇಳೆಗೆ ವಾಪಸ್ ನೈನಿತಾಲ್‍ಗೆ ಬಂದ ಕಾರ್ಬೆಟ್ ಮುಂದಿನ ದಿನಗಳನ್ನು ನಿವೃತ್ತಿಯ ದಿನಗಳಾಗಿ ಕಳೆಯಬೇಕೆಂದು ನಿರ್ಧರಿಸಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ. ನೈನಿತಾಲ್‍ನಿಂದ ನೇರವಾಗಿ ಮೊಕಮೆಘಾಟ್‍ಗೆ ತೆರಳಿ ಸರಕು ಸಾಗಾಣಿಕೆ ಕಾರ್ಯಗಳನ್ನು ತನ್ನ ಬಳಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ ವಹಿಸಿ, ಶಾಲೆಯ ಜವಬ್ದಾರಿಯನ್ನು ಸ್ಟೇಶನ್ ಮಾಸ್ಟರ್ ರಾಮ್‍ಶರಣ್‍ಗೆ ವಹಿಸಿ, ತನ್ನ ಎರಡು ದಶಕದ ಗಂಗಾನದಿಯ ತಟದ ಏಕಾಂಗಿ ಬದುಕಿಗೆ ವಿದಾಯ ಹೇಳಿ, ಬಾಲ್ಯದಿಂದಲೂ ತನಗೆ ಪ್ರಿಯವಾದ ನೈನಿತಾಲ್ ಪರಿಸರದ ಕಾಡಿನತ್ತ ತೆರಳಲು ಸಿದ್ಧನಾದ.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 9)


– ಡಾ.ಎನ್.ಜಗದೀಶ್ ಕೊಪ್ಪ   


ಜಿಮ್ ಕಾರ್ಬೆಟ್ ಮೊಕಮೆಘಾಟ್ ನಿಲ್ದಾಣಕ್ಕೆ ಬಂದ ಐದನೇ ವರ್ಷಕ್ಕೆ ಸರಿಯಾಗಿ ಅವನ ಮೇಲಧಿಕಾರಿ ಸ್ಟೋರರ್‌ಗೆ ಬಡ್ತಿಯಾದ ಪ್ರಯುಕ್ತ ಬೇರೆಡೆ ವರ್ಗಾವಣೆಯಾಯಿತು. ಖಾಲಿಯಾದ ಆ ಸ್ಥಾನಕ್ಕೆ ರೈಲ್ವೆ ಇಲಾಖೆ ಕಾರ್ಬೆಟ್‌ನನ್ನು ನೇಮಿಸಿತು. ಸ್ಟೋರರ್ ವಾಸವಾಗಿದ್ದ ಬಂಗಲೆಯನ್ನು ಇಲಾಖೆಯಿಂದ ಖರೀದಿಸಿದ ಕಾರ್ಬೆಟ್  ಮೂವರು ಸೇವಕರನ್ನು ನೇಮಿಸಿಕೊಂಡು ಹೊಸ ಮನೆಯಲ್ಲಿ ವಾಸಿಸತೊಡಗಿದ. ಮೂವರು ಸೇವಕರಲ್ಲಿ ಒಬ್ಬ ಅಡುಗೆ ಮಾಡಲು, ಮತ್ತೊಬ್ಬ ಮನೆಗೆ ನೀರು ತರುವುದು, ಕಸಗುಡಿಸುವುದು ಇತ್ಯಾದಿ ಕೆಲಸಗಳಿಗೆ, ಇನ್ನೊಬ್ಬನನ್ನು ವಿದ್ಯುತ್ ಮತ್ತು ಫ್ಯಾನ್ ಇಲ್ಲದ ಆ ಕಾಲದಲ್ಲಿ ಕಾರ್ಬೆಟ್ ಗೆ ಗಾಳಿ ಬೀಸುವುದಕ್ಕೆ ನೇಮಕ ಮಾಡಲಾಗಿತ್ತು. ಪಂಖ ಎಂದು ಕರೆಯುತ್ತಿದ್ದ, ಬೀಸಣಿಗೆ ಆಕಾರದ ಬೃಹತ್ ಪರದೆಯೊಂದನ್ನು ಮಲುಗುವ ಮಂಚದ ಮೇಲೆ ತೂಗುಹಾಕಿ ಅದರ ಹಗ್ಗವನ್ನು ಮನೆಯ ಹೊರಗಡೆ ಇಳಿಬಿಡಲಾಗುತ್ತಿತ್ತು. ಮಾಲಿಕ ಮಲಗಿದಾಗ ಸೇವಕ ಹಗ್ಗವನ್ನು ಜಗ್ಗುತ್ತಿರಬೇಕು. ಈ ವ್ಯವಸ್ಥೆ ಆ ಕಾಲದಲ್ಲಿ ಉತ್ತರ ಭಾರತದ ಶ್ರೀಮಂತರು, ಬ್ರಿಟಿಷ್ ಅಧಿಕಾರಿಗಳು, ಸಂಸ್ಥಾನದ ದೊರೆಗಳ ಅರಮನೆಗಳಲ್ಲಿ ಚಾಲ್ತಿಯಲ್ಲಿತ್ತು.

ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ, ನಂತರ ಕಛೇರಿಯಲ್ಲಿ ಕುಳಿತು ಲೆಕ್ಕ ಪತ್ರ ನೋಡುವುದು, ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ, ಒಂದು ಗಂಟೆ ನಿದ್ರೆ ಮಾಡಿ ಮತ್ತೇ ಕೆಲಸದ ಸ್ಥಳಕ್ಕೆ ಹೊರಡುವುದು, ನಂತರ ಆ ದಿನದ ವಿವರಗಳನ್ನು ಕೇಂದ್ರ ಕಛೇರಿಗೆ ಟೆಲಿಗ್ರಾಮ್ ಮೂಲಕ ಕಳಿಸಿ ಬರುವುದು, ಇವೆಲ್ಲವೂ ಕಾರ್ಬೆಟ್‌ನ ದಿನಚರಿಯಾಗಿತ್ತು. ಮನೆಗೆ ಬಂದ ನಂತರ ಸ್ನಾನ ಮಾಡಿ, ರಾತ್ರಿ ಊಟದ ನಂತರ ಪುಸ್ತಕ ಓದಿ ಮಲಗುವುದು ಕಾರ್ಬೆಟ್‌ಗೆ ರೂಢಿಯಾಗಿತ್ತು. ಬೆಳದಿಂಗಳ ದಿನಗಳಲ್ಲಿ ಗಂಗಾ ನದಿಯಲ್ಲಿ ಮೀನು ಶಿಕಾರಿಗೆ ಸಹ ಹೋಗುತ್ತಿದ್ದನು. ಮೊಕಮೆಘಾಟ್‌ಗೆ ಬಂದ ನಂತರ ಕಾರ್ಬೆಟ್ ಬದುಕಿನಲ್ಲಿ  ಮತ್ತೊಂದು ಬದಲಾವಣೆಯಾಯಿತು., ಗಂಗಾನದಿಯ ತೀರಕ್ಕೆ ಬರುತಿದ್ದ ಬಗೆ ಬಗೆಯ ಪಕ್ಷಿಗಳು ಮತ್ತು ಪತಂಗಗಳ ಬಗ್ಗೆ ಕಾರ್ಬೆಟ್ ಅಪಾರ ಆಸಕ್ತಿ ಬೆಳಸಿಕೊಂಡ. ಅವುಗಳ ಜೀವನ ಕುರಿತು ಅಧ್ಯಯನ ಮಾಡತೊಡಗಿದ.

ಮೊಕಮೆಘಾಟ್ ಪ್ರಮುಖ ರೈಲ್ವೆ ಜಂಕ್ಷನ್ ಆದ ಪರಿಣಾಮ ಸದಾ ವಿವಿಧ ಬಗೆಯ ಸಂಸ್ಕೃತಿ, ಭಾಷೆಯ ಜನರಿಂದ ತುಂಬಿ ತುಳುಕುತ್ತಿತ್ತು. ಅವೆರೆಲ್ಲರ ಆಚಾರ, ವಿಚಾರ, ಆಹಾರ, ಉಡುಪು, ಇವೆಲ್ಲವನ್ನು ಕಾರ್ಬೆಟ್ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಬ್ರಿಟಿಷ್ ಸರ್ಕಾರ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಇಂಗ್ಲೆಂಡ್‌ನಲ್ಲಿ ಯುವಕರನ್ನು ನೇಮಕ ಮಾಡಿ ಅವರುಗಳನ್ನು ತರಬೇತಿಗಾಗಿ ದೊಡ್ಡ ದೊಡ್ಡ ನಿಲ್ದಾಣಗಳಿಗೆ ಕಳಿಸುತ್ತಿದ್ದರು. ಮೊಕಮೆಘಾಟ್ ನಿಲ್ದಾಣದಲ್ಲಿ ಸರಕು ಸಾಗಾಣಿಕೆ ನಿರ್ವಹಣೆ ಕುರಿತಂತೆ ಕಾರ್ಬೆಟ್ ಬಳಿ ತರಬೇತಿ ಪಡೆಯಲು ಪ್ರತಿ ವರ್ಷ 30 ಮಂದಿ ಯುವಕರು ಬರುತ್ತಿದ್ದರು. ಕಾರ್ಬೆಟ್ ಅವರಿಗೆ ವ್ಯವಹಾರದ ಜೊತೆಗೆ  ಭಾರತೀಯ ಜನರು, ಅವರ ವಿಭಿನ್ನ ಸಂಸ್ಕೃತಿ, ಭಾಷೆ, ಇಲ್ಲಿನ ಭೌಗೋಳಿಕ ಪರಿಸರ ಎಲ್ಲವನ್ನು ಪರಿಚಯಿಸುತ್ತಿದ್ದ. ಧರ್ಮ, ಜಾತಿ ಇವುಗಳ ಸೂಕ್ಷ್ಮತೆಯನ್ನು ವಿವರಿಸಿ ಇಲ್ಲಿನ ಜನತೆಯೊಂದಿಗೆ ಹೇಗೆ ವರ್ತಿಸಬೇಕು ಮತ್ತು ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಹೇಳಿಕೊಡುತ್ತಿದ್ದ.

ಕಾರ್ಬೆಟ್‌ನ ಬದುಕು ನೆಮ್ಮದಿಯತ್ತ ಸಾಗತೊಡಗಿದಂತೆ, ಅವನ ತಾಯಿ ಮತ್ತು ಸಹೋದರಿ ಮ್ಯಾಗಿ ಇಬ್ಬರೂ ಮೊಕಮೆಘಾಟ್‌ಗೆ ಬಂದು ಅವನ ಮನೆಯಲ್ಲಿ ತಿಂಗಳುಗಳ ಕಾಲ ಇದ್ದು ಹೋಗುತ್ತಿದ್ದರು. ಕಾರ್ಬೆಟ್ ತಾನು ಉಳಿಸಿದ ಹಣವನ್ನು ತಾಯಿಗೆ ರವಾನಿಸುತಿದ್ದ. ಆಕೆ ಈ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸುತ್ತಿದ್ದಳು. ಕಾರ್ಬೆಟ್ ಜೀವನದುದ್ದಕ್ಕೂ ವಿವಾಹವಾಗದೇ ಬ್ರಹ್ಮಚಾರಿಯಾಗಿ ಏಕೆ ಉಳಿದ ಎಂಬುದಕ್ಕೆ ಅವನ ಜೀವನದಲ್ಲಿ ಯಾವ ಸುಳಿವೂ ಸಿಗುವುದಿಲ್ಲ. ಒಮ್ಮೆ ಮಾತ್ರ ನೈನಿತಾಲ್ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಒಬ್ಬ ಆಂಗ್ಲ ಯುವತಿಯತ್ತ ಆಸಕ್ತಿ ತೋರಿದ್ದು ಬಿಟ್ಟರೆ, ಪ್ರೇಮ ವಿಫಲತೆಯ ಸುಳಿವು ಸಹ ಅವನ ಬದುಕಿನಲ್ಲಿ ಸಿಗುವುದಿಲ್ಲ. ಅಕ್ಕ ಮ್ಯಾಗಿ ಅವಿವಾಹಿತಳಾಗಿ ಉಳಿದದ್ದು ಕಾರ್ಬೆಟ್ ಸಹ ಬ್ರಹ್ಮಚಾರಿಯಾಗಿ ಉಳಿಯಲು ಕಾರಣವಿರಬೇಕೆಂದು ಊಹಿಸಲಾಗಿದೆ.

ಒಬ್ಬ ಅನನುಭವಿ ಯುವಕನಾಗಿ ಮೊಕಮೆಘಾಟ್‌ಗೆ ಬಂದ ಕಾರ್ಬೆಟ್ ಅಧಿಕಾರಿಯಾಗಿ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದ. ಅವನಿಗೆ ಸಿಕ್ಕ ಕೆಲಸಗಾರರು ಅವನ ಜವಬ್ದಾರಿಯನ್ನು ಹಗುರಗೊಳಿಸಿದ್ದರು. ಚಮರಿ ಎಂಬ ಮಧ್ಯ ವಯಸ್ಸಿನ ಮೇಸ್ತ್ರಿ ಕಾರ್ಮಿಕರ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಕಾರ್ಬೆಟ್ ನ ಜೀವನ  ಆರಾಮವಾಗಿರುವಂತೆ ನೋಡಿಕೊಂಡಿದ್ದ. ಚಮರಿ ಎಂಬ ಅತ್ಯಂತ ಕೆಳಜಾತಿಯ ಸಹೃದಯದ ವ್ಯಕ್ತಿ ಕಾರ್ಬೆಟ್‌ಗೆ ಮೇಸ್ತ್ರಿಯಾಗಿ ಸಿಕ್ಕಿದ್ದು ಕೂಡ ಆಕಸ್ಮಿಕ. ಪ್ರಾರಂಭದ ದಿನಗಳಲ್ಲಿ ಒಂದು ದಿನ ಮಾಸಿದ ಹರಕಲು ಬಟ್ಟೆಯ, ಕುರುಚಲು ಗಡ್ಡದ ಈ ವ್ಯಕ್ತಿ ತನ್ನ ಪತ್ನಿಯೊಂದಿಗೆ ಬಂದು ಕಾರ್ಬೆಟ್‌ನಲ್ಲಿ ಕೂಲಿ ಕೆಲಸ ಕೇಳಿದ. ಕಾರ್ಬೆಟ್ ಇಬ್ಬರಿಗೂ ಗುದ್ದಲಿ ಮತ್ತು ಬುಟ್ಟಿಯನ್ನು ಕೊಟ್ಟು ರೈಲ್ವೆ ವ್ಯಾಗನ್ ಗಳಿಗೆ ಕಲ್ಲಿದ್ದಲು ತುಂಬುವಂತೆ ಹೇಳಿ ಇಡೀ ದಿನ ಅವರಿಬ್ಬರ ಕಾರ್ಯವನ್ನು ಗಮನಿಸತೊಡಗಿದ. ಮಧ್ಯಾಹ್ನದ ವೇಳೆಗೆ ಅಂಗೈಯಲ್ಲಿ ಬೊಕ್ಕೆ ಬಂದರೂ ಕೂಡ, ತನ್ನ ಬಾಯಿಂದ ಗಾಳಿ ಬೀಸಿಕೊಂಡು ಚಮರಿ ಕಲ್ಲಿದ್ದಲು ತಂಬುವುದನ್ನು ಕಾರ್ಬೆಟ್ ಗಮನಿಸಿದ್ದ.

ಮಾರನೇ ದಿನ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಕಾಯುತ್ತಿರುವಾಗ, ಚಮರಿ ಗಾಯವಾಗಿರುವ ತನ್ನ ಎರಡು ಅಂಗೈಗಳಿಗೆ ಹೊಲಸು ಬಟ್ಟೆಯ ಚೂರನ್ನು ಸುತ್ತಿಕೊಂಡು ತನ್ನ ಪತ್ನಿಯೊಂದಿಗೆ ಅಂದಿನ ಕೂಲಿಗಾಗಿ ಕಾಯುತಿದ್ದ. ಸ್ಥಳಕ್ಕೆ ಬಂದು ಎಲ್ಲರಿಗೂ ಕೆಲಸ ಹಂಚಿದ ಕಾರ್ಬೆಟ್, ಚಮರಿಯನ್ನು ಕಚೇರಿಗೆ ಬಂದು ಕಾಣುವಂತೆ ಹೇಳಿ ಕಚೇರಿಯತ್ತ ತೆರಳಿದ.

ಬಹುಶಃ ನಾನು ಈ ಕೆಲಸಕ್ಕೆ ಅನರ್ಹ ಎಂದು ಸಾಹೇಬರಿಗೆ ಅನಿಸಿರಬೇಕು, ನಿನ್ನೆಯ ಕೂಲಿ ಹಣಕೊಟ್ಟು ಕಳಿಸುತ್ತಾರೆ ಎಂದುಕೊಳ್ಳುತ್ತಾ ಕಚೇರಿಗೆ ಹೋದ ಚಮರಿಯನ್ನು ಹತ್ತಿರ ಕರೆದು ಏನು ಓದಿದ್ದೀಯಾ ಎಂದು ಕಾರ್ಬೆಟ್ ಕೇಳಿದ. ನಾಲ್ಕನೇ ತರಗತಿ ಓದಿದ್ದೇನೆ ಎಂದು ಚಮರಿ ತಿಳಿಸುತ್ತಿದ್ದಂತೆ, ಇಂದಿನಿಂದ ನೀನು ಕಲ್ಲಿದ್ದಲು ತುಂಬುವ ಬದಲು ಯಾವ ತಂಡ ಎಷ್ಟು ಕೆಲಸ ನಿರ್ವಹಿಸಿದೆ ಎಂಬುದನ್ನು ಬರೆದುಕೊ ಎಂದು ತಿಳಿಸಿದ ಕಾರ್ಬೆಟ್ ಗಾಯಗೊಂಡಿದ್ದ ಅವನ ಅಂಗೈಗಳಿಗೆ ಮುಲಾಮು ಹಚ್ಚಿ, ಒಂದು ಪೆನ್ಸಿಲ್ ಹಾಗೂ ಪುಸ್ತಕ ಕೊಟ್ಟು ಕೂಲಿಗಾರರ ಕೆಲಸದ ಬಗ್ಗೆ ಹೇಗೆ ಲೆಕ್ಕ ಬರೆದುಕೊಳ್ಳಬೇಕೆಂದು ವಿವರಿಸಿದ. ಅನಿರೀಕ್ಷಿತವಾಗಿ ಸಿಕ್ಕ ಈ ಭಾಗ್ಯಕ್ಕೆ ಬೆರಗಾದ ಚಮರಿ ಪೆನ್ಸಿಲ್ ಅನ್ನು ತನ್ನ ಕಿವಿಗೆ ಸಿಕ್ಕಿಸಿ, ಪುಸ್ತಕವನ್ನು ಕಂಕುಳಲ್ಲಿ ಇರಿಸಿಕೊಂಡು, ಕಾರ್ಬೆಟ್‌ಗೆ ಒಂದು ದೀರ್ಘದಂಡ ನಮಸ್ಕಾರ ಹಾಕಿ ಮೇಲೆದ್ದಾಗ ಅವನ ಕಣ್ಣಾಲಿಗಳು ನೀರಾಗಿದ್ದವು. ಮುಂದಿನ ದಿನಗಳಲ್ಲಿ ಚಮರಿ ಎಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುತಿದ್ದನೆಂದರೆ, ಕಾರ್ಬೆಟ್ ಅವನ ಪ್ರಾಮಾಣಿಕತೆ, ಬದ್ಧತೆ ಇವೆಲ್ಲವನ್ನು ಗಮನಿಸಿ, ಒಂದೇ ವರ್ಷದಲ್ಲಿ ಅವನ ಸಂಬಳವನ್ನು 15 ರೂಪಾಯಿಂದ 40 ರೂಪಾಯಿಗೆ ಹೆಚ್ಚಿಸಿದ.

ಚಮರಿ ಜಾತಿಯಿಂದ ಅಸ್ಪೃಶ್ಯನಾಗಿದ್ದು, ಅವನ ಕೈ ಕೆಳಗೆ ಅನೇಕ ಮೇಲ್ಜಾತಿಯ ಕಾರ್ಮಿಕರು ದುಡಿಯುತ್ತಿದ್ದರು. ಎಲ್ಲರನ್ನು ಗೌರವದಿಂದ ಕಾಣುವುದು ಅವನ ವಿಶಿಷ್ಟ ಗುಣವಾಗಿತ್ತು. ತನಗೆ ಬರುತ್ತಿದ್ದ ನಲವತ್ತು ರೂಪಾಯಿ ಸಂಬಳದಲ್ಲಿ ಕೇವಲ ಹದಿನೈದು ರೂಪಾಯಿಗಳನ್ನು ತಾನು ಮತ್ತು ತನ್ನ ಪತ್ನಿಯ ಜೀವನ ನಿರ್ವಹಣೆಗೆ ಇಟ್ಟುಕೊಂಡು ಉಳಿದ ಹಣವನ್ನು ಬಡವರಿಗೆ ಪ್ರತಿ ನಿತ್ಯ ಊಟಹಾಕುವುದು, ಬಡ ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಭರಿಸುವುದು ಹೀಗೆ ಖರ್ಚು ಮಾಡುತ್ತಿದ್ದ. ಇದನ್ನು ಗಮನಿಸಿದ ಕಾರ್ಬೆಟ್ ಒಮ್ಮೆ ಚಮರಿಯನ್ನು ಪ್ರಶ್ನಿಸಿ ಒಂದಿಷ್ಟು ಹಣ ಉಳಿಸುವಂತೆ ಹೇಳಿ, ಒಳ್ಳೆಯ ಬಟ್ಟೆ ಧರಿಸುವಂತೆ ಸಲಹೆ ನೀಡಿದ. ಇದಕ್ಕೆ ಉತ್ತರಿಸಿದ ಚಮರಿ, “ಮಹಾರಾಜ್, ಮಕ್ಕಳಿಲ್ಲದ ನನ್ನ ಕುಟುಂಬಕ್ಕೆ ಹದಿನೈದು ರೂ ಸಾಕು, ಉಳಿತಾಯ ಮಾಡಿ ಏನು ಮಾಡಲಿ? ನಿಮ್ಮ ದಯೆಯಿಂದ ನಾಲ್ಕಾರು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪುಣ್ಯ ಎಂದು ಭಾವಿಸಿದ್ದೇನೆ. ನೀವೆ ಇಲ್ಲಿ ನಮ್ಮ ನಡುವೆ ಸಾಮಾನ್ಯ ಧಿರಿಸು ತೊಟ್ಟು ಕೆಲಸ ಮಾಡುವಾಗ ನಾನು ಹೇಗೆ ಒಳ್ಳೆಯ ಬಟ್ಟೆ ಧರಿಸಲಿ?” ಎಂದ.

ಚಮರಿಯ ಈ ಮನೋಭಾವಕ್ಕೆ  ಮನಸೋತ ಕಾರ್ಬೆಟ್ ಅವನನ್ನು ಆತ್ಮೀಯ ಸೇವಕನನ್ನಾಗಿ ಮಾಡಿಕೊಂಡಿದ್ದ. ಚಮರಿಯ ಬಗ್ಗೆ ಕಾರ್ಬೆಟ್‌ಗೆ ಅಗಾಧ ನಂಬಿಕೆಯಿತ್ತು. ನಾಲ್ಕು ವರ್ಷಗಳ ಕಾಲ ಇಡೀ ಜವಬ್ದಾರಿಯನ್ನ ಚಮರಿಗೆ ವಹಿಸಿ ಕಾರ್ಬೆಟ್ ಯುದ್ಧಭೂಮಿಗೂ ಸಹ  ತೆರಳಿದ್ದ. ಬೇಸಿಗೆಯ ಆ ದಿನಗಳಲ್ಲಿ ವಾಂತಿ, ಭೇಧಿ, ಕಾಲಾರಾದಂತಹ ಸಾಂಕ್ರಾಮಿಕ ರೋಗ ಹರಡುವುದು ಸಾಮಾನ್ಯವಾಗಿತ್ತು. ಅಂತಹ ದಿನಗಳಲ್ಲಿ ಚಮರಿ ಹಗಲು ರಾತ್ರಿ ಕಾರ್ಬೆಟ್ ಜೊತೆ ನಿಂತು ಕಾಯಿಲೆಗೆ ತುತ್ತಾದ ಕಾರ್ಮಿಕರನ್ನು ಶುಶ್ರೂಶೆ ಮಾಡುತಿದ್ದ. ಆತ ಎಂತಹ ದುರ್ದೈವಿಯೆಂದರೆ, ಕಾರ್ಬೆಟ್ ಬಳಿ 20 ವರ್ಷ ಕೂಲಿ ಕೆಲಸ ಮಾಡಿದ ಮೂರು ಮಕ್ಕಳ ತಾಯಿಯಾಗಿದ್ದ ವಿಧವೆ ಪ್ರಭಾವತಿಯನ್ನು ಕಾಲರಾ ರೋಗದಿಂದ ಉಳಿಸಲು ಹೋಗಿ ತಾನೇ ಆ ಸಾಂಕ್ರಮಿಕ ರೋಗಕ್ಕೆ ತುತ್ತಾದ. ಕೊನೆಗೆ ಸಾವು ಬದುಕಿನ ನಡುವೆ ಹೋರಾಡಿ, ಅಂತಿಮವಾಗಿ ಚಮರಿ ಕಾರ್ಬೆಟ್ ತೊಡೆಯ ಮೇಲೆ ಶುಶ್ರೂಷೆ ಮಾಡುತಿದ್ದಾಗಲೇ ಅಸುನೀಗಿದ.

ಚಮರಿ ಕಾರ್ಬೆಟ್‌ನ ಸಹಾಯಕನಾಗಿ ಮೊಕಮೆಘಾಟ್ ಪಟ್ಟಣದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ. ಅವನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಇಡೀ ಪಟ್ಟಣದಲ್ಲಿ ಬಂದ್ ಆಚರಿಸಲಾಯಿತು. ಕಾರ್ಬೆಟ್ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಎಲ್ಲಾ ವರ್ಗದ ಜನ ಪಾಲ್ಗೊಂಡು ಚಮರಿಗೆ ಅಂತಿಮ ನಮನ ಸಲ್ಲಿಸಿದರು. ಕಾರ್ಬೆಟ್ ತನ್ನ ಆತ್ಮ ಚರಿತ್ರೆಯಂತಿರುವ “ಮೈ ಇಂಡಿಯ” ಕೃತಿಯಲ್ಲಿ ಚಮರಿಯ ಬಗ್ಗೆ ಆದ್ರ ಹೃದಯದಿಂದ ಬರೆದುಕೊಂಡಿದ್ದಾನೆ.

ಇಂತಹದ್ದೇ ಇನ್ನೊಂದು ಹೃದಯಸ್ಪರ್ಶಿ ಘಟನೆಯನ್ನು ಕಾರ್ಬೆಟ್ ದಾಖಲಿಸಿದ್ದಾನೆ. ಅದು ವ್ಯಾಪಾರಿಯೊಬ್ಬನ ನೋವಿನ ಕಥನ.

ಅದು ಬಿರು ಬೇಸಿಗೆಯ ಒಂದು ಸಂಜೆ ಸಮಯ. ಗಯಾ ಮಾರ್ಗವಾಗಿ ಮುಜಾಪುರ್ ನಗರದಿಂದ ಬಂದ ರೈಲು ಸಮಾರಿಯ ಘಾಟ್ ತಲುಪಿದ ತಕ್ಷಣ ಪ್ರಯಾಣಿಕರು ತಮ್ಮ ಸಾಮಾನುಗಳೊಂದಿಗೆ ದೋಣಿಯನ್ನೇರಿ ಮೊಕಮೆಘಾಟ್‌ನತ್ತ ಪ್ರಯಾಣ ಬೆಳಸಿದರು. ಕಾರ್ಬೆಟ್ ಗಂಗಾ ನದಿಯ ತಟದಲ್ಲಿ ಎಲ್ಲರ ಚಲನ ವಲನ ವೀಕ್ಷಿಸುತ್ತಾ ನಿಂತಿದ್ದ. ಒಬ್ಬ ವ್ಯಕ್ತಿ ಮಾತ್ರ ಯಾವ ಕಡೆಗೂ ಪ್ರಯಾಣ ಬೆಳಸದೇ, ಮುಸ್ಸಂಜೆಯಲ್ಲಿ ಬಟ್ಟೆಯ ಗಂಟಿನೊಂದಿಗೆ ನದಿಯ ತಟದಲ್ಲಿ ಏಕಾಂಗಿಯಾಗಿ ಕುಳಿತಿರುವುದು ಕಾರ್ಬೆಟ್  ಗಮನಕ್ಕೆ ಬಂತು. ಕಾರ್ಬೆಟ್ ಅವನ ಹತ್ತಿರ ತೆರಳಿದಾಗ ಅವನು ಯಾವುದೋ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೆಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಪ್ರಯಾಣ ಮಾಡದೇ ಏಕೆ ಇಲ್ಲಿ ಕುಳಿತಿದ್ದೀಯಾ? ಎಲ್ಲಾ ರೈಲುಗಳು ಹೊರಟು ಹೋದವು ಎಂದು ಕಾರ್ಬೆಟ್ ಪ್ರಶ್ನಿಸುತ್ತಿದ್ದಂತೆ ಆ ರೋಗಿ ತನ್ನ ಬದುಕಿನ ವೃತ್ತಾಂತವನ್ನೆಲ್ಲಾ ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲು ಕುಳಿತಿರುವುದಾಗಿ ತಿಳಿಸಿದ.

ಗಯಾ ಪಟ್ಟಣದಲ್ಲಿ ಬೇಳೆಕಾಳುಗಳ ಪ್ರಸಿದ್ಧ ವ್ಯಾಪಾರಿಯಾಗಿದ್ದ ಲಾಲಾಜಿ ಎಂಬ ಹೆಸರಿನ ಆತ ತನ್ನ ಗೆಳೆಯನೊಬ್ಬನನ್ನು ವ್ಯಾಪಾರಕ್ಕೆ ಪಾಲುದಾರನನ್ನಾಗಿ ಮಾಡಿಕೊಂಡಿದ್ದ. ಒಮ್ಮೆ ತೀರ್ಥಯಾತ್ರೆ ಹೋಗುವ ಸಲುವಾಗಿ ಗೆಳೆಯನಿಗೆ ವ್ಯಾಪಾರದ ಜವಾಬ್ದಾರಿ ವಹಿಸಿ, ತೀರ್ಥಯಾತ್ರೆ ಮುಗಿಸಿ ಬರುವದರೊಳಗೆ ಅವನ ಗೆಳೆಯ ಅಂಗಡಿಯ ದಾಸ್ತಾನು ಖಾಲಿ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ. ಅಂಗಡಿ ಹಾಗೂ ಅದರಲ್ಲಿ ಇದ್ದ ಅಲ್ಪ ಸ್ವಲ್ಪ ಸಾಮಾನುಗಳನ್ನು ಮಾರಿ ಹಾಕಿ ಎಲ್ಲಾ ಸಾಲ ತೀರಿಸಿ, ತಾನು ವ್ಯವಹಾರ ನಡೆಸುತ್ತಿದ್ದ ಸಗಟು ವ್ಯಾಪಾರದ ಅಂಗಡಿಯಲ್ಲಿ ತಿಂಗಳಿಗೆ ಏಳು ರೂಪಾಯಿ ಸಂಬಳಕ್ಕೆ ಲಾಲಾಜಿ ದುಡಿಯತೊಡಗಿದ. ಇದೇ ಸಂದರ್ಭದಲ್ಲಿ ಅವನ ಪತ್ನಿ ಕೂಡ ತೀರಿ ಹೋದಳು. ಇರುವ ಏಕೈಕ ಮಗನೊಂದಿಗೆ ವಾಸಿಸುತ್ತಿದ್ದ ಲಾಲಾಜಿ ಕಾಲಾರಾ ರೋಗದ ಸೋಂಕಿಗೆ. ಬಲಿಯಾದ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ಆತ, ತಾನು ಸತ್ತರೆ ಮಗನಿಗೆ ನನ್ನ ಅಂತ್ಯ ಸಂಸ್ಕಾರ ಹೊರೆಯಾಗುತ್ತದೆ ಎಂದು ಭಾವಿಸಿ ಮಗನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಗಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಸಿ ಬಂದು ಕುಳಿತಿದ್ದ.

ನಡೆಯಲು ನಿಶ್ಯಕ್ತನಾಗಿದ್ದ ಅವನನ್ನು ಎಬ್ಬಿಸಿ ನಿಧಾನವಾಗಿ ನಡೆಸಿಕೊಂಡು ತನ್ನ ಮನೆಗೆ ಕರೆದೊಯ್ದ ಕಾರ್ಬೆಟ್ ಆ ರಾತ್ರಿ ಅವನಿಗೆ ಚಿಕಿತ್ಸೆ ನೀಡಿದ. ಆ ವೇಳೆಗಾಗಲೇ ಕಾರ್ಬೆಟ್ ಬಳಿ ಮೂವರು ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಲಾಲಾಜಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಯಿತು. ಅಂತಿಮವಾಗಿ ತನ್ನ ಮನೆಯ ಹೊರ ಆವರಣದಲ್ಲಿದ್ದ ಕೊಠಡಿಯಲ್ಲಿ ಅವಕಾಶ ಕಲ್ಪಿಸಿದ. ಮೊದಲ ಎರಡು ಮೂರು ದಿನ ಲಾಲಾಜಿ ಬದುಕುತ್ತಾನೆ ಎಂಬ ಯಾವ ನಂಬಿಕೆಯೂ ಕಾರ್ಬೆಟ್‌ಗೆ ಇರಲಿಲ್ಲ. ಒಂದು ವಾರದ ನಂತರ ನಿಧಾನವಾಗಿ ಚೇತರಿಸಿಕೊಂಡ ಲಾಲಾಜಿಯನ್ನು ಮನೆಯ ಮುಂದಿನ ಆವರಣದಲ್ಲಿ ಕೂರಿಸಿಕೊಂಡು ಆತ್ಮ ವಿಶ್ವಾಸ ತುಂಬಿದ ಕಾರ್ಬೆಟ್, ನೀನೇಕೆ ಮತ್ತೇ ವ್ಯಾಪಾರ ಆರಂಭಿಸಬಾರದು ಎಂದು ಕೇಳಿದ.

ನನಗೆ ವ್ಯಾಪಾರ ಮಾಡಲು 500 ರೂಪಾಯಿ ಬಂಡವಾಳ ಬೇಕು. ಭದ್ರತೆಯಿಲ್ಲದೆ ಯಾರೂ ಸಾಲ ಕೊಡುವುದಿಲ್ಲ, ಜೊತೆಗೆ ನನ್ನ ಬಳಿ ಮೈ ಮೇಲಿನ ಈ ಬಟ್ಟೆಗಳನ್ನು ಹೊರತುಪಡಿಸಿದರೆ, ಬೇರೇನೂ ಆಸ್ತಿ ಇಲ್ಲ. ಹಾಗಾಗಿ ಮತ್ತೆ ಗಯಾ ಪಟ್ಟಣಕ್ಕೆ ಹೋಗಿ ಅಂಗಡಿಯಲ್ಲಿ ದುಡಿಯುತ್ತೀನಿ, ಎಂದು ಲಾಲಾಜಿ ನುಡಿದಾಗ ತಕ್ಷಣಕ್ಕೆ ಕಾರ್ಬೆಟ್ ಯಾವ ಪ್ರತಿಕ್ರಿಯೆ ನೀಡಲಿಲ್ಲ.

ಒಂದು ತಿಂಗಳ ನಂತರ ಒಂದು ದಿನ ಲಾಲಾಜಿ ತನ್ನ ಬಟ್ಟೆಗಳನ್ನು ಸ್ವಚ್ಛಗೊಳಿಸುಕೊಂಡು ತನ್ನೂರಿಗೆ ಹೊರಡಲು ಸಿದ್ಧನಾಗಿ ಕುಳಿತಿದ್ದ. ಸಂಜೆ ಮನೆಗೆ ಬಂದ ಕಾರ್ಬೆಟ್ ಲಾಲಾಜಿಗೆ ಗಯಾಕ್ಕೆ ತೆರಳಲು ರೈಲ್ವೆ ಟಿಕೇಟು, ಒಂದಿಷ್ಟು ಹಣ್ಣು ಹಂಪಲುಗಳನ್ನು ನೀಡಿದ. ನಂತರ ಬೇರೆ ಲಕೋಟೆಯಲ್ಲಿ ಇಟ್ಟಿದ್ದ ನೂರು ರೂಪಾಯಿಗಳ 5 ನೋಟುಗಳನ್ನು ನೀಡಿ, ನಿನ್ನ ಮೇಲೆ ವಿಶ್ವಾಸವಿದೆ, ಹೋಗಿ ವ್ಯಾಪಾರ ಮುಂದುವರಿಸು ಎಂದು ಹೆಗಲ ಮೇಲೆ ಕೈಯಿಟ್ಟು ಹೇಳಿದ. ಆ ಕ್ಷಣದಲ್ಲಿ ಲಾಲಾಜಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ. ಆ ಕಾಲದಲ್ಲಿ 500 ರೂಪಾಯಿ ಎಂದರೆ ಸಾಮಾನ್ಯ ಮೊತ್ತವಾಗಿರಲಿಲ್ಲ. ಲಾಲಾಜಿ ಕಾರ್ಬೆಟ್ ನ ಕಾಲುಮುಟ್ಟಿ ನಮಸ್ಕರಿಸಿ, ಅವನೆದುರು ಕೈ ಮುಗಿಯುತ್ತಾ ಶಿಲೆಯಂತೆ ನಿಂತುಬಿಟ್ಟ.. ಕಾರ್ಬೆಟ್ ಅವನನ್ನು ಸಮಾಧಾನ ಪಡಿಸಿ ತಾನೇ ನಿಲ್ದಾಣವರೆಗೆ ಹೋಗಿ ರೈಲು ಹತ್ತಿಸಿ ಬಂದ. ತನ್ನ ಉಳಿತಾಯದ ಹಣವನ್ನು ಲಾಲಾಜಿಗೆ ನೀಡುವಾಗ ಕಾರ್ಬೆಟ್‌ಗೆ ಏನೂ ಅನಿಸಲಿಲ್ಲ. ಭಾರತದ ಬಡಜನತೆಯ ಜೊತೆ ಹಲವಾರು ವರ್ಷ ಒಡನಾಡಿದ ಅನುಭವವಿತ್ತು. ತನ್ನಿಂದ ಸಹಾಯ ಪಡೆದ ಈ ಜನತೆ ಎಂದೂ ಮೋಸ ಮಾಡುವುದಿಲ್ಲ ಎಂಬ ವಿಶ್ವಾಸ, ನಂಬಿಕೆ ಅವನ ಮನದಲ್ಲಿ ಬಲವಾಗಿ ಬೇರೂರಿತ್ತು.

ಅವನ ನಂಬಿಕೆ ಹುಸಿಯಾಗಲಿಲ್ಲ. ಹನ್ನೊಂದು ತಿಂಗಳ ನಂತರ ಒಂದು ಸಂಜೆ ದಿನದ ಕಾರ್ಯವನ್ನೆಲ್ಲಾ ಮುಗಿಸಿ, ಸ್ನಾನ ಮಾಡಿ ಮನೆಯ ಮುಂದೆ ಕಾರ್ಬೆಟ್ ಕುಳಿತಿದ್ದಾಗ, ಕೋಟು, ಟೋಪಿ, ಕಚ್ಚೆ ಹಾಕಿದ್ದ ಒಬ್ಬ ವ್ಯಕ್ತಿ ಹಣ್ಣಿನ ಬುಟ್ಟಿ ಹಿಡಿದು ಮುಂದೆ ಬಂದು ನಿಂತಾಗ ಕಾರ್ಬೆಟ್‌ಗೆ ತಕ್ಷಣ ಗುರುತು ಹಿಡಿಯಲಾಗಲಿಲ್ಲ. ಸಾಹೇಬ್ ನಾನು ಲಾಲಾಜಿ ಎನ್ನುತ್ತಾ ಕಾರ್ಬೆಟ್ ಕಾಲಿಗೆ ನಮಸ್ಕರಿಸಿದ ಅವನು ಕಾಲು ಬಳಿ ಕುಳಿತಾಗ ಕಾರ್ಬೆಟ್‌ಗೆ ಲಾಲಾಜಿ ಬಗ್ಗೆ ನಿಜಕ್ಕೂ ಅಚ್ಚರಿಯಾಯಿತು.

ಗಯಾ ಪಟ್ಟಣದಲ್ಲಿ ಪುನಃ ಬೇಳೆ ಕಾಳು ವ್ಯಾಪಾರದಲ್ಲಿ ಯಶಸ್ವಿಯಾಗಿರುವ ಕಥೆಯನ್ನು ಹೇಳುತ್ತಾ ಕಾರ್ಬೆಟ್ ನೀಡಿದ್ದ 500 ರೂಪಾಯಿಗಳ ಜೊತೆಗೆ 125 ರೂಪಾಯಿ ಬಡ್ಡಿ ಸೇರಿಸಿ ತಂದಿದ್ದ ಹಣವನ್ನು ಲಾಲಾಜಿ, ಕಾರ್ಬೆಟ್ ಗೆ ನೀಡಿದ. ಕಾರ್ಬೆಟ್ ಬಡ್ಡಿ ಹಣ ನಿರಾಕರಿಸಿ, ಕೇವಲ ತಾನು ನೀಡಿದ್ದ 500 ರೂಗಳನ್ನು ಮಾತ್ರ ಅವನಿಂದ ಪಡೆದುಕೊಂಡ.

ಕಾರ್ಬೆಟ್ ನೀಡಿದ ಬಂಡವಾಳದಿಂದ ಗಯಾ ಪಟ್ಟಣದಲ್ಲಿ ದೊಡ್ಡ ವ್ಯಾಪಾರಿಯಾಗಿ ಮರುಜನ್ಮ ಪಡೆದ ಲಾಲಾಜಿ, ಮುಂದೆ ಮೊಕಮೆಘಾಟ್‌ನಲ್ಲಿ ಕಾರ್ಬೆಟ್ ಸೇವೆ ಸಲ್ಲಿಸಿದ ಹನ್ನೆರೆಡು ವರ್ಷಗಳ ಕಾಲ ತಪ್ಪದೇ ಬೇಸಿಗೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಹೊತ್ತು ತರುತ್ತಿದ್ದ. ಕೆಲವೊಮ್ಮೆ ರೈಲಿನಲ್ಲಿ ಪಾರ್ಸಲ್ ಕಳಿಸುವುದರ ಮೂಲಕ ಕಾರ್ಬೆಟ್‌ನ ಋಣವನ್ನು ಸಂದಾಯ ಮಾಡುತಿದ್ದ.

ಬುದ್ದು, ಚಮರಿ, ಲಾಲಾಜಿಯಂತಹ ವ್ಯಕ್ತಿಗಳು ಕಾರ್ಬೆಟ್ ಬದುಕಿನಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವಗಳೊಂದಿಗೆ ಅಳಿಸಲಾರದ ನೆನಪಾಗಿ ಉಳಿದುಹೋದರು. ಅಲ್ಲದೆ ಬಡವರ ಬಗ್ಗೆ ಕಾರ್ಬೆಟ್ ಗೆ ಇದ್ದ ಮನೋಧರ್ಮವನ್ನು ಮತ್ತಷ್ಟು ಸಧೃಡಗೊಳಿಸಿದರು. ಈ ಕಾರಣದಿಂದಲೇ ಅವನು ಮುಂದಿನ ದಿನಗಳಲ್ಲಿ ಕಲಾದೊಂಗಿ ಬಳಿಯ ಚೋಟಾಹಲ್ದಾನಿ ಹಳ್ಳಿಯಲ್ಲಿ ತಾನು ಖರೀದಿಸಿದ್ದ ಸಾವಿರಾರು ಎಕರೆ ಭೂಮಿಯನ್ನು ಬಡ ರೈತರಿಗೆ ಉಚಿತವಾಗಿ ಹಂಚಲು ಸಾಧ್ಯವಾಯಿತು.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-8)


– ಡಾ.ಎನ್.ಜಗದೀಶ ಕೊಪ್ಪ  


ಜಿಮ್ ಕಾರ್ಬೆಟ್ ಮೊಕಮೆಘಾಟ್‌ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆ ವಿಷಯದಲ್ಲಿ ಶಿಸ್ತು ಕಾಣಬರತೊಡಗಿತು. ಪ್ರಾರಂಭದಲ್ಲಿ ಕಾರ್ಬೆಟ್‌ಗೆ ಇದ್ದ ಒತ್ತಡಗಳು ಮರೆಯಾದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನಲ್ಲಿ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್‌ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ. ತನ್ನ ಕುಟುಂಬದಲ್ಲಿ ಆಚರಿಸುತ್ತಿದ್ದ ಕ್ರಿಸ್‌ಮಸ್ ಹಬ್ಬ ಹೊರತುಪಡಿಸಿದರೆ, ಉಳಿದ ಹಿಂದೂ ಧರ್ಮದ ಹಬ್ಬಗಳಾದ ಹೋಳಿ, ಗಣೇಶಚತುರ್ಥಿ, ದೀಪಾವಳಿಯನ್ನು ಮೊಕಮೆಘಾಟ್‌ನಲ್ಲಿ ಕಾರ್ಮಿಕರ ಜೊತೆ ಆಚರಿಸುತ್ತಿದ್ದ. ಹಬ್ಬದ ದಿನಗಳಲ್ಲಿ ಕಾರ್ಮಿಕರು ಕಾಡಿನಿಂದ ಬಗೆಬಗೆಯ ಹೂ ಮತ್ತು ಎಲೆಗಳನ್ನು ತಂದು ಕಾರ್ಬೆಟ್‌ನ ಮನೆಯನ್ನು ಸಿಂಗರಿಸಿದರೆ, ಮಹಿಳೆಯರು ಮನೆಯ ಮುಂದೆ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದರು. ಕಾರ್ಮಿಕರ ಮಕ್ಕಳ ಬಗ್ಗೆ ಅಪಾರ ಪ್ರೀತಿ, ಕರುಣೆ ಹೊಂದಿದ್ದ ಕಾರ್ಬೆಟ್ ಸಾವಿರಾರು ರೂಪಾಯಿ ಖರ್ಚು ಮಾಡಿ ಸಿಹಿತಿಂಡಿಗಳ ಪೊಟ್ಟಣಗಳನ್ನು ಪೇಟೆಯಿಂದ ಕೊಂಡುತಂದು ಪ್ರತಿ ಮನೆಗೂ ಹಂಚುತ್ತಿದ್ದ. ಜಾತಿ, ಅಂತಸ್ತು ಎಂಬ ತಾರತಮ್ಯವಿಲ್ಲದೆ ಅವರು ನೀಡಿದ ಆಹಾರವನ್ನು ಹಬ್ಬದ ದಿನಗಳಲ್ಲಿ ಸೇವಿಸುತ್ತಿದ್ದ.

ತನಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಹೆಸರು ಬರಲು ಕಾರ್ಮಿಕರ ಶ್ರಮವೇ ಕಾರಣ ಎಂಬ ಅರಿವು ಕಾರ್ಬೆಟ್‌ನನ್ನು ಸದಾ ಎಚ್ಚರಿಸುತ್ತಿತ್ತು. ಹಾಗಾಗಿ ಪ್ರತಿಯೊಬ್ಬ ಕಾರ್ಮಿಕನ ಕುಟುಂಬವನ್ನು ತನ್ನ ಕುಟುಂಬದಂತೆ ಪ್ರೀತಿಸುತ್ತಿದ್ದ. ಅವನು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ 26 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಘಟನೆಯಾಗಲಿ, ಅಥವಾ ಅವಿಧೇಯನಾಗಿ ನಡೆದುಕೊಂಡ ಸಂಗತಿಯಾಗಲಿ ಜರುಗಲಿಲ್ಲ. ಒಮ್ಮೆ ಮಾತ್ರ ಕಾರ್ಮಿಕರ ಸಂಬಳ ತಲುಪುವುದು ತಡವಾದ ಕಾರಣ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಸಿದ್ದ.

ಮೊಕಮೆಘಾಟ್‌ನಲ್ಲಿ ಕೆಲಸ ಪ್ರಾರಂಭಿಸಿದ ನಾಲ್ಕನೇ ವರ್ಷದಲ್ಲಿ ಕೇಂದ್ರ ಕಚೇರಿಯಿಂದ ಕೂಲಿಕಾರ್ಮಿಕರ ಸಂಬಳ ಬರುವುದು ತಡವಾಯಿತು. ಪ್ರತಿವಾರ ಹಣ ಪಾವತಿಸುತ್ತಿದ್ದ ಕಾರ್ಬೆಟ್ ತಾನು ಉಳಿಸಿದ್ದ ಸಂಬಳ ಮತ್ತು ಬೋನಸ್ ಹಣವನ್ನು ಕಾರ್ಮಿಕರಿಗೆ ಪಾವತಿಸುತ್ತಾ ಕೆಲಸ ಮುಂದುವರಿಸಿದ್ದ. ಹೀಗೆ ಆರು ವಾರ ಕಳೆದರೂ ಹಣ ಬರಲಿಲ್ಲ. ತನ್ನಲ್ಲಿದ್ದ ಹಣವೆಲ್ಲಾ ಖರ್ಚಾದ ನಂತರ ಏಳನೇ ವಾರ ಹಣ ಪಾವತಿಸಿರಲಿಲ್ಲ. ಆದರೂ ಎಲ್ಲಾ ಕಾರ್ಮಿಕರು ಕೆಲಸ ಮುಂದುವರಿಸಿದ್ದರು.

ಕಲ್ಲಿದ್ದಲು ತುಂಬುವ ಕಾರ್ಮಿಕನಾಗಿ ಕೆಲಸ ಮಾಡುತಿದ್ದ ಒಬ್ಬ ಮುಸ್ಲಿಂ ವೃದ್ದನೊಬ್ಬ ನಾಲ್ಕನೇ ದಿನದ ರಾತ್ರಿ ಒಂದಿಷ್ಟು ಹಣ ಕೇಳಲು ಕಾರ್ಬೆಟ್ ನಿವಾಸಕ್ಕೆ ಬಂದ. ಅದು ಊಟದ ಸಮಯವಾದ್ದರಿಂದ ಸಾಹೇಬರು ಊಟ ಮಾಡಲಿ ಎಂದು ಹೊರಗೆ ಕಾಯುತ್ತಿದ್ದ. ಸೇವಕ ಕಾರ್ಬೆಟ್ ಗೆ ಬಡಿಸುತಿದ್ದ ಊಟವನ್ನು ಗಮನಿಸಿದ ಆ ಮುಸ್ಲಿಂ ವೃದ್ದ ಸೇವಕನನ್ನು ಪ್ರಶ್ನಿಸಿದ, ಏಕೆ ಸಾಹೇಬರು ಒಂದೇ ಚಪಾತಿಯನ್ನು ಮಾತ್ರ ತಿನ್ನುತ್ತಿದ್ದಾರೆ? ಆಗ ನಿಜ ಸಂಗತಿಯನ್ನ ಬಿಚ್ಚಿಟ್ಟ ಸೇವಕ, ಸಾಹೇಬರು  ಕಳೆದ ಆರುವಾರಗಳಿಂದ ತಮ್ಮಲ್ಲಿದ್ದ ಹಣವನ್ನು ಕೂಲಿ ರೂಪದಲ್ಲಿ ನಿಮಗೆಲ್ಲಾ ಪಾವತಿಸಿಬಿಟ್ಟಿದ್ದಾರೆ. ಕಛೇರಿಯಿಂದ ಕಳೆದ ಒಂದೂವರೆ ತಿಂಗಳಿಂದ ಹಣ ಬಂದಿಲ್ಲ. ಮನೆಗೆ ದಿನಸಿ ಸಾಮಾನು ತರಲು ಅವರ ಬಳಿ ಹಣವಿಲ್ಲ. ಹಾಗಾಗಿ ಬೆಳಿಗ್ಗೆ, ರಾತ್ರಿ ಒಂದೊಂದೇ ಚಪಾತಿ ಸೇವಿಸುತ್ತಿದ್ದಾರೆ ಎಂದು ಎಲ್ಲವನ್ನೂ ವಿವರಿಸಿದ. ಕೂಲಿ ಹಣ ಕೇಳಲು ಬಂದಿದ್ದವ ಏನೂ ಮಾತಾಡದೇ ಮನೆಗೆ ಹಿಂತಿರುಗಿದ.

ಊಟ ಮಾಡಿ ಮನೆಯ ಹೊರಗೆ ಆರಾಮ ಕುರ್ಚಿಯಲ್ಲಿ ಸಿಗರೇಟು ಸೇದುತ್ತಾ ಕುಳಿತಿದ್ದ ಕಾರ್ಬೆಟ್ ಎದುರು ಆ ವೃದ್ದ ಮತ್ತೆ ಪ್ರತ್ಯಕ್ಷನಾದ. ಅವನ ಕೈಯಲ್ಲಿ ಕರವಸ್ತ್ರದಿಂದ ಮುಚ್ಚಿದ್ದ ಕೆಲವು ವಸ್ತುಗಳಿದ್ದವು. ಕಾರ್ಬೆಟ್ ಎದುರು ಕೈಜೋಡಿಸಿ ನಿಂತ ಆ ಮುಸ್ಲಿಂ ವೃದ್ದ, “ಮಹಾರಾಜ್ ನಿಮ್ಮ ಸೇವಕನಿಂದ ಎಲ್ಲಾ ವಿಷಯ ತಿಳಿಯಿತು. ಸಾಹೇಬ್, ನಾವು ಹಸಿವಿನಲ್ಲಿ ಹುಟ್ಟಿದವರು, ಹಸಿವಿನಲ್ಲಿ ಬದುಕಿದವರು, ಹಸಿವಿನಲ್ಲೆ ಸಾಯುವ ಮಂದಿ. ಇದು ನಮಗೆ ಹೊಸದಲ್ಲ. ಆದರೆ, ನೀವು ಈ ರೀತಿ ಇರುವುದನ್ನ ಸಹಿಸಲು ಸಾದ್ಯವಾಗುತ್ತಿಲ್ಲ. ತೆಗೆದುಕೊಳ್ಳಿ ಇದರಲ್ಲಿ ನನ್ನ ಹೆಂಡತಿಯ ಒಡವೆಗಳಿವೆ. ಇವುಗಳನ್ನ ಮಾರಿ ಹಾಕಿ ಮನೆಗೆ ಸಾಮಾನು ತಂದು ಊಟ ಮಾಡಿ ನೆಮ್ಮದಿಯಿಂದ ಇರಿ,” ಎನ್ನುತ್ತಾ ಕಾರ್ಬೆಟ್‌ನ ಕಾಲು ಬಳಿ ಕಣ್ಣೀರಿಡುತ್ತಾ ಕುಳಿತು ಬಿಟ್ಟ.. ಆ ಬಡ ಕೂಲಿ ಕಾರ್ಮಿಕನ ಮಾತು ಕೇಳಿದ ಕಾರ್ಬೆಟ್ ಕಣ್ಣಲ್ಲೂ ಸಹ ನೀರು ಹರಿಯತೊಡಗಿತು. ಕಾರ್ಮಿಕನನ್ನು ಹಿಡಿದೆತ್ತಿ ನಿಲ್ಲಿಸುತ್ತಾ ಇನ್ನೆರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಹೋಗು ಎಂದು ಸಮಾಧಾನ ಹೇಳಿ ಕಳಿಸಿದ. ಕಾರ್ಬೆಟ್ ಆ ಕ್ಷಣದಲ್ಲಿ ಟೆಲಿಗ್ರಾಫ್ ಕಚೇರಿಗೆ ತೆರಳಿ,  ಉಳಿದ ಎಲ್ಲಾ ಲೈನ್ ಗಳನ್ನು ತೆರವುಗೊಳಿಸಿ ಈ ಸಂದೇಶವನ್ನು ಗೋರಖ್‌ಪುರಕ್ಕೆ ತ್ವರಿತವಾಗಿ ರವಾನಿಸಿ ಎಂದು ಸಿಬ್ಬಂದಿಗೆ ಸೂಚನೆ ಕೊಟ್ಟ. ಮುಂದಿನ 48 ಗಂಟೆಗಳ ಒಳಗಾಗಿ ಕಾರ್ಮಿಕರ ವೇತನ ಪಾವತಿಸದಿದ್ದರೆ, ಕೆಲಸ ಸ್ಥಗಿತಗೊಳಿಸಲಾಗುವುದು ಅಲ್ಲದೆ ಕೆಲಸಕ್ಕೆ ರಾಜಿನಾಮೆ ನೀಡಲಾಗುವುದು ಎಂಬ ಎಚ್ಚರಿಕೆಯ ಸಂದೇಶ ಕಳಿಸಿ ಮನೆಗೆ ಬಂದು ಮಲಗಿದ. ಮಧ್ಯ ರಾತ್ರಿಯ ವೇಳೆಗೆ ರೈಲ್ವೆ ನಿಲ್ದಾಣದ ಸಿಬ್ಬಂದಿಯ ಮೂಲಕ ನಾಳೆಯೇ ಹಣ ರವಾನಿಸಲಾಗುತ್ತದೆ ಎಂಬ ಮರು ಸಂದೇಶ ಕೂಡ ಕಾರ್ಬೆಟ್‌ಗೆ ಬಂದು ತಲುಪಿತು. ನಿರಿಕ್ಷೆಯಂತೆ ಮಾರನೇ ದಿನ ಸಂಜೆ ವೇಳೆಗೆ ಇಬ್ಬರು ಬಂದೂಕುದಾರಿ ಪೋಲಿಸರ ರಕ್ಷಣೆಯೊಂದಿಗೆ ಗೋರಖ್‌ಪುರದಿಂದ ಬಂದಿದ್ದ ಹಣದ ಪೆಟ್ಟಿಗೆಯನ್ನು ರೈಲ್ವೆ ಸಿಬ್ಬಂದಿ ಹೊತ್ತು ತಂದು ಕಾರ್ಬೆಟ್ ಗೆ ತಲುಪಿಸಿದರು.

ದಿನ ನಿತ್ಯ ಬಡಕೂಲಿ ಕಾರ್ಮಿಕರ ಬವಣೆಗಳನ್ನ ನೋಡುತ್ತಾ, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಾ ಬದುಕಿದ್ದ ಕಾರ್ಬೆಟ್ ಗೆ ಕಾರ್ಮಿಕರ ಪರವಾಗಿ ತಾನು ಸೇವೆ ಸಲ್ಲಿಸುತ್ತಿದ್ದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ಮಾಡದೇ ವಿಧಿ ಇರಲಿಲ್ಲ. ಇದೊಂದು ಘಟನೆಯಿಂದ ಎಚ್ಚೆತ್ತ ಇಲಾಖೆ ಮುಂದಿನ 18 ವರ್ಷಗಳಲ್ಲಿ ಹಣ ಪಾವತಿಸಲು ಎಂದೂ ವಿಳಂಬ ಮಾಡಲಿಲ್ಲ.

ತನ್ನಲ್ಲಿ ಕೂಲಿ ಕೆಲಸ ಕೇಳಿಕೊಂಡು ಯಾರೇ ಬರಲಿ, ಅವರ ಹಿನ್ನೆಲೆಯನ್ನು ವಿಚಾರಿಸಿ, ಕೆಲಸ ಕೊಡುವುದು, ಕಷ್ಟದಲ್ಲಿದ್ದರೆ ಸಹಾಯ ಮಾಡುವುದು ಇವೆಲ್ಲಾ ಕಾರ್ಬೆಟ್‌ನ ದಿನಚರಿ ಮತ್ತು ಹವ್ಯಾಸಗಳಾಗಿದ್ದವು. ಅವನು ಕಾರ್ಮಿಕರ ಹಿತಾಸಕ್ತಿಗೆ ಎಷ್ಟೊಂದು ಗಮನ ನೀಡುತ್ತಿದ್ದ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮೂರು ವರ್ಷಗಳಿಂದ ಅವನಲ್ಲಿ ಬುದ್ದು ಎಂಭಾತ ಕಲ್ಲಿದ್ದಲು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದ ಅವನಿಗೆ ಕೂಲಿ ಕೆಲಸದಲ್ಲಿ ಪತ್ನಿ ಕೂಡ ಸಹಕರಿಸುತ್ತಿದ್ದಳು. ಅವನು ಸದಾ ಮೌನಿಯಾಗಿ ಚಿಂತೆಯಲ್ಲಿ ಇರುವಂತೆ ಕಾಣುತ್ತಿದ್ದ. ಅವನು ಎಂದೂ ನಕ್ಕಿದ್ದನ್ನು ಕಾರ್ಬೆಟ್ ನೋಡಿರಲೇ ಇಲ್ಲ. ಪ್ರತಿ ವರ್ಷ ನವೆಂಬರ್ ತಿಂಗಳಿನಿಂದ ಜನವರಿವರೆಗೆ ಊರಿಗೆ ಹೋಗುತ್ತಿದ್ದ. ಈ ಬಗ್ಗೆ ಕಾರ್ಬೆಟ್‌ಗೆ ಕುತೂಹಲ ಮೂಡಿ ಮೇಸ್ತ್ರಿಯನ್ನು ವಿಚಾರಿಸಿದಾಗ ಊರಿನಿಂದ ಅಂಚೆಪತ್ರ ಬಂದ ತಕ್ಷಣ ಬುದ್ದು ಹೊರಟುಬಿಡುತ್ತಾನೆ ಎಂಬ ಮಾಹಿತಿ ಮಾತ್ರ ದೊರೆಯಿತು. ಮತ್ತೇ ಜನವರಿ ತಿಂಗಳಿನಲ್ಲಿ ಬುದ್ದು ಕೆಲಸಕ್ಕೆ ಹಾಜರಾದಾಗ ಕಾರ್ಬೆಟ್ ಅವನನ್ನು ಕರೆದು ವಿಚಾರಿಸಿದ.

ನನ್ನ ಊರಿನಲ್ಲಿ ಶ್ರೀಮಂತ ಜಮೀನುದಾರನೊಬ್ಬನಿಂದ ಅಜ್ಜ ಪಡೆದಿದ್ದ ಎರಡು ರೂಪಾಯಿ ಸಾಲಕ್ಕೆ  ಅಜ್ಜ ಮತ್ತು ನನ್ನಪ್ಪ ಜೀವನ ಪೂರ್ತಿ ಜೀತದಾಳಾಗಿ ದುಡಿದರೂ ಇನ್ನೂ ಬಡ್ಡಿ ಸೇರಿ 125 ರೂಪಾಯಿ ಬಾಕಿ ಉಳಿದಿದೆ. ನಾನು ಇಲ್ಲಿ ದುಡಿದ ಹಣದಲ್ಲಿ ಪ್ರತಿವರ್ಷ 25 ರೂ ಪಾವತಿಸುತ್ತಿದ್ದೇನೆ. ಜೊತೆಗೆ ಅವನ ಜಮೀನಿನಲ್ಲಿ ಫಸಲು ಕೊಯ್ಲಿಗೆ ಬಂದಾಗ  ನಾನು ಹೋಗಿ ಒಕ್ಕಣೆ ಮಾಡಿಕೊಟ್ಟು ಬರಬೇಕು. ಇದಕ್ಕಾಗಿ ಪ್ರತಿ ವರ್ಷ ನನ್ನಿಂದ ಕೆಲವು ಪತ್ರಕ್ಕೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆ ಎಂದು ಬುದ್ದು ತನ್ನ ಬದುಕಿನ ವೃತ್ತಾಂತವನ್ನು ವಿವರಿಸಿದ,

ಮುಂದಿನ ಬಾರಿ ಪತ್ರ ಬಂದಾಗ ನನಗೆ ತಂದು ತೋರಿಸು ನೀನು ಊರಿಗೆ ಹೋಗುವ ಅವಶ್ಯಕತೆಯಿಲ್ಲ, ಹಣವನ್ನು ನಾನು ಚುಕ್ತಾ ಮಾಡುತ್ತೇನೆ ಎಂದು ಕಾರ್ಬೆಟ್ ತಿಳಿಸಿದ. ಒಂಬತ್ತು ತಿಂಗಳು ಕಳೆದ ನಂತರ ಎಂದಿನಂತೆ ಅವನ ಊರಿನಿಂದ ಪತ್ರ ಬಂತು. ಕಾರ್ಬೆಟ್ ಪತ್ರದಲ್ಲಿದ್ದ ಶ್ರೀಮಂತ ಜಮೀನುದಾರನ ವಿಳಾಸ ಪತ್ತೆ ಹಚ್ಚಿ ಅವನಿಗೆ ವಕೀಲನ ಮೂಲಕ ನೋಟೀಸ್ ಜಾರಿ ಮಾಡಿದ. ಆ ಶ್ರೀಮಂತ ಜಮೀನುದಾರ ಕಾರ್ಬೆಟ್‌ನನ್ನು ಎದುರಿಸಲಾರದೆ, ನೋಟೀಸ್ ನೀಡಿದ ವಕೀಲನ ಮನೆಗೆ ಹೋಗಿ ಅವನನ್ನು ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ. ಜೊತೆಗೆ ಹಣ ಬಾಕಿ ಇರುವುದರ ಬಗ್ಗೆ ಬುದ್ದು ಪ್ರತಿವರ್ಷ ಬರೆದು ಕೊಟ್ಟಿದ್ದ ಕಾಗದ ಪತ್ರಗಳನ್ನು ತೋರಿಸಿದ.

ಕಾರ್ಬೆಟ್ ಬಳಿ ಬಂದ ವಕೀಲ ಎಲ್ಲವನ್ನು ವಿವರಿಸಿದಾಗ ಅವನ ಬಾಕಿ ಹಣ 125 ರೂಪಾಯಿ, ಅದಕ್ಕೆ ಬಡ್ಡಿ 50 ರೂಪಾಯಿ ಮತ್ತು ವಕೀಲನ ಸೇವಾಶುಲ್ಕ 50 ರೂಪಾಯಿ ಎಲ್ಲವನ್ನು ಪಾವತಿಸಿ, ಬುದ್ದುವಿನ ಕಾಗದ ಪತ್ರವನ್ನು ಪಡೆಯುವಂತೆ ಸೂಚಿಸಿದ. ಜಮಿನುದಾರ ಎಲ್ಲಾ ಪತ್ರಗಳನ್ನು ಹಿಂತಿರುಗಿಸಿದ. ಆದರೆ, ಪ್ರತಿವರ್ಷ ಮೂರು ತಿಂಗಳು ಪುಕ್ಕಟೆ ದುಡಿಯುವ ಕುರಿತಂತೆ ಬರೆದುಕೊಟ್ಟಿದ್ದ ಕರಾರು ಪತ್ರವನ್ನು ಮಾತ್ರ ತನ್ನಲ್ಲೆ ಉಳಿಸಿಕೊಂಡ. ಇದರಿಂದ ಸಿಟ್ಟಿಗೆದ್ದ ಕಾರ್ಬೆಟ್ ಅವನ ಮೇಲೆ ಸ್ಥಳೀಯ ನ್ಯಾಯಾಲಯದಲ್ಲಿ ಮೊಕೊದ್ದಮೆ ದಾಖಲಿಸಿದ. ಈ ಘಟನೆಯಿಂದ ಬೆಚ್ಚಿಬಿದ್ದ ಆ ಶ್ರೀಮಂತ ತಾನೇ ಖುದ್ದು ಕಾರ್ಬೆಟ್ ಬಳಿ ಬಂದು ಪತ್ರ ಒಪ್ಪಿಸಿಹೋದ.

ಆ ದಿನ ಸಂಜೆ ಕಾರ್ಬೆಟ್ ಬುದ್ದು ಮತ್ತು ಅವನ ಪತ್ನಿಯನ್ನು ಮನೆಗೆ ಕರೆಸಿ ಇನ್ನು ಮುಂದೆ ನೀವು ಸ್ವತಂತ್ರರಾಗಿದ್ದೀರಿ. ನೆಮ್ಮದಿಯಿಂದ ಬಾಳಿ ಎನ್ನುತ್ತಾ ಅವರ ಎದುರು ಸಾಲಪತ್ರಗಳನ್ನು ಸುಡಲು ಆರಂಭಿಸಿದ. ಕಾರ್ಬೆಟ್‌ನ ಪ್ರಯತ್ನಕ್ಕೆ ತಡೆಯೊಡ್ಡಿದ ಬುದ್ದು, “ಬೇಡ ಮಹರಾಜ್ ಅವುಗಳನ್ನು ಸುಡಬೇಡಿ ನಮ್ಮ ಸಾಲ ತೀರುವ ತನಕ ಅವುಗಳು ನಿಮ್ಮಲ್ಲಿರಲಿ, ಇನ್ನು ಮುಂದೆ ನಾವು ನಿಮ್ಮ ಜೀತದಾಳುಗಳು,” ಎನ್ನುತ್ತಾ ಒದ್ದೆ ಕಣ್ಣುಗಳಲ್ಲಿ ಕೈ ಮುಗಿದು ನಿಂತ. ಕಾರ್ಬೆಟ್ ಅವನ ಹೆಗಲ ಮೇಲೆ ಕೈ ಇರಿಸಿ, “ಬುದ್ದು, ನೀನು ನನ್ನ ಹಣವನ್ನು ತೀರಿಸುವುದು ಬೇಕಾಗಿಲ್ಲ. ನಿನ್ನ ಮುಖದಲ್ಲಿ ನಗು ಕಂಡರೆ ಸಾಕು, ನನ್ನ ಸಾಲ ತೀರಿದಂತೆ,” ಎಂದು ನುಡಿಯುತ್ತಿದ್ದಂತೆ  ಕಲ್ಲಿದ್ದಲು ಮಸಿಯಿಂದ ಕಪ್ಪಾಗಿದ್ದ ಬುದ್ದುವಿನ ಮುಖವನ್ನು ಅವನ ಕಣ್ಣೀರು ತೋಯಿಸಿಬಿಟ್ಟಿತು.

ಕಾಲಿಗೆ ನಮಸ್ಕಾರ ಮಾಡಿ ಮನೆಯತ್ತ ತೆರಳುತ್ತಿದ್ದ ಬುದ್ದು ಹಾಗೂ ಅವನ ಪತ್ನಿಯನ್ನು ನೋಡುತ್ತಾ ಕುಳಿತ ಕಾರ್ಬೆಟ್, ಈ ನನ್ನ ಭಾರತದಲ್ಲಿ ಬಡತನವಿದೆ, ಆದರೆ, ಬಡವರಲ್ಲಿ ಹೃದಯ ಶೀಮಂತಿಕೆಯೂ ಇದೆ ಇದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತು ಪಡಿಸಲಿ? ಎನ್ನುವ ಪ್ರಶ್ನೆಯನ್ನು ಮನಸ್ಸಿಗೆ ಹಾಕಿಕೊಳ್ಳುತ್ತಾ ತುಟಿಗೆ ಸಿಗರೇಟು ಇಟ್ಟು ಬೆಂಕಿ ಹಚ್ಚಿದ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ -7)


– ಡಾ.ಎನ್.ಜಗದೀಶ ಕೊಪ್ಪ


ಸಮಷ್ಟೀಪುರದ ರೈಲ್ವೆ ನಿಲ್ದಾಣದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತಿನ ಅನುಭವಗಳನ್ನು ದಕ್ಕಿಸಿಕೊಂಡ ಜಿಮ್ ಕಾರ್ಬೆಟ್‌ ಕೆಲ ಕಾಲ ಸರಕು ಸಾಗಾಣಿಕೆಯ ರೈಲಿನಲ್ಲಿ ಗಾರ್ಡ್ ಆಗಿ ಕತಿಹಾರ್ ಮತ್ತು ನೇಪಾಳದ ಗಡಿಭಾಗದ ಮೋತಿಹಾರಿ ನಡುವೆ ಸಂಚರಿಸಿ ಹೊಸ ಅನುಭವವನ್ನು ಪಡೆದನು.

ಮಧೈ ಬಿಡುವಾದಾಗ ರೈಲ್ವೆ ಕೇಂದ್ರ ಕಚೇರಿ ಇರುವ ಗೋರಖ್‌ಪುರಕ್ಕೆ ಬೇಟಿ ನೀಡುತಿದ್ದ. ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇಂಜಿನ್‌ಗಳ ದುರಸ್ತಿ, ಇಂಧನ ಕ್ಷಮತೆ ಮತ್ತು ಉಳಿತಾಯ ಮಾಡುವ ಬಗೆ ಇವುಗಳ ಬಗ್ಗೆ ಅಪಾರ ಆಸಕ್ತಿಯನ್ನೂ ಕೂಡ ತಾಳಿದ್ದ. ಜಿಮ್ ಕಾರ್ಬೆಟ್‌ನ ಕೆಲಸದ ಬಗೆಗಿನ ಬಧ್ಧತೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕಾರ್ಬೆಟ್‌ ಎಂತಹ ಸವಾಲಿನ ಕೆಲಸವನ್ನೂ ಸಹ ನಿಭಾಯಿಸಬಲ್ಲ ಎಂಬ ನಂಬಿಕೆ ಅಧಿಕಾರಿಗಳಿಗಿತ್ತು. ಇಂತಹ ನಂಬಿಕೆ ಕಾರ್ಬೆಟ್‌ಗೆ ರೈಲ್ವೆ ಇಲಾಖೆಯಲ್ಲಿ ಹೊಸ ಹಾದಿಗೆ ಕಾರಣವಾಯಿತು.

ಸಮಷ್ಟೀಪುರದಿಂದ ಸಮಾರು 40 ಕಿಲೋಮೀಟರ್ ದೂರದಲ್ಲಿ ಹರಿಯುತಿದ್ದ ಗಂಗಾನದಿಗೆ ಆಕಾಲದಲ್ಲಿ ಯಾವುದೇ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಸುಮಾರು ಐದು ಕಿಲೋಮೀಟರ್ ವಿಸ್ತೀರ್ಣ ಅಗಲ ಹರಿಯುತಿದ್ದ ನದಿಗೆ ರೈಲ್ವೆ ಮಾರ್ಗಕ್ಕಾಗಿ ಸೇತುವೆ ನಿರ್ಮಿಸುವುದು ದುಬಾರಿ ವೆಚ್ಚದ ಕೆಲಸ ಎಂದು ಬ್ರಿಟೀಷರು ತೀರ್ಮಾನಿಸಿದ್ದರು. ಹಾಗಾಗಿ ನದಿಯ ಎರಡು ದಂಡೆಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಿ ಪ್ರಯಾಣಿಕರನ್ನು ಹಾಗೂ ಸರಕು, ಕಲ್ಲಿದ್ದಲು, ಮರದ ದಿಮ್ಮಿ ಇತರೆ ವಸ್ತುಗಳನ್ನು ಮಧ್ಯಮ ಗಾತ್ರದ ಹಡಗುಗಳಲ್ಲಿ ಸಾಗಿಸುತಿದ್ದರು. ಇದರಿಂದಾಗಿ ಉತ್ತರ ಭಾರತದ ವಿಶೇಷವಾಗಿ ನೇಪಾಳ ಗಡಿಭಾಗದ ಜನತೆಗೆ ಕೊಲ್ಕತ್ತ ಸೇರಿದಂತೆ ದಕ್ಷಿಣ ಭಾಗಕ್ಕೆ ಸಂಚರಿಸಲು ಅನುಕೂವಾಗಿತ್ತು.

ಈಗಿನ ಬಿಹಾರ ರಾಜ್ಯಕ್ಕೆ ಹೊಂದಿಕೊಂಡಂತಿರುವ ಗಂಗಾ ನದಿಯ ದಕ್ಷಿಣ ಭಾಗದ ನಿಲ್ದಾಣಕ್ಕೆ ಮೊಕಮೆಘಾಟ್ ಎಂತಲೂ, ಉತ್ತರ ಭಾಗದ ನಿಲ್ದಾಣಕ್ಕೆ ಸಮಾರಿಯಾ ಘಾಟ್ ಎಂದು ಹೆಸರಿಡಲಾಗಿತ್ತು. ನದಿಯಲ್ಲಿ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸುವ ಜವಬ್ದಾರಿಯನ್ನು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ದಕಿಣ ಭಾಗದ ಮೊಕಮೆಘಾಟ್ ನಿಲ್ದಾಣದಲ್ಲಿ ಕಾರ್ಮಿಕರ ಸಮಸ್ಯೆಯಿಂದ ಸರಕುಗಳು ಮತ್ತು ಪ್ರಯಾಣಿಕರು ನಿಗದಿತ ಅವಧಿಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. 24 ಗಂಟೆಯೊಳಗೆ ಖಾಲಿಯಾಗಬೇಕಿದ್ದ ಸರಕುಗಳು ತಿಂಗಳುಗಟ್ಟಳೆ ನಿಲ್ದಾಣದಲ್ಲಿ ಕೊಳೆಯತೊಡಗಿದವು. ಕೊನೆಗೆ ಉಸ್ತುವಾರಿ ಹೊತ್ತಿದ್ದ ಕಂಪನಿ ಈ ಕೆಲಸ ತನ್ನಿಂದ ಸಾಧ್ಯವಿಲ್ಲವೆಂದು ಹೇಳಿ ಕೈಚೆಲ್ಲಿತು. ಆಂಧ್ರದ ಸಿಂಗರೇಣಿ ಮತ್ತು ಪಶ್ಚಿಮ ಬಂಗಾಳದ ಧನಬಾದ್‌ನಿಂದ ಉತ್ತರ ಭಾಗದ ರೈಲುಇಂಜಿನುಗಳಿಗೆ ಪೂರೈಕೆಯಾಗುತಿದ್ದ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡ ಕಾರಣ ರೈಲುಗಳ ಓಡಾಟದಲ್ಲಿ ವೆತ್ಯಯ ಉಂಟಾಯಿತು. ಇದರಿಂದ ಬೇಸತ್ತ ಅಧಿಕಾರಿಗಳು ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಯ ಕೆಲಸವನ್ನು ಗುತ್ತಿಗೆ ನೀಡುವ ಬದಲು ಕಾರ್ಬೆಟ್‌ಗೆ ವಹಿಸಲು ನಿರ್ಧರಿಸಿದರು.

ಯುವಕ ಕಾರ್ಬೆಟ್‌ಗೆ ಮತ್ತೆ 50 ರುಪಾಯಿ ಸಂಬಳ ಹೆಚ್ಚಿಸಿ, ಪ್ರಯಾಣಕರು ಮತ್ತು ಸರಕುಗಳ ಸಾಗಾಣಿಕೆಯ ಉಸ್ತುವಾರಿ ವಹಿಸಿ ಅವನನ್ನು ಮೊಕಮೆಘಾಟ್ ರೈಲ್ವೆ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಯಿತು. ಸಂಬಳದ ಜೊತೆಗೆ ಕೂಲಿ ಕಾರ್ಮಿಕರಿಗೆ ನೀಡುವ ಹಣದಲ್ಲಿ ಶೇ.2ರಷ್ಟು ಕಮಿಷನ್ ಮತ್ತು ನಿಗದಿತ ಅವಧಿಯೊಳಗೆ ಸರಕುಗಳನ್ನು ಮತ್ತು ಕಲ್ಲಿದ್ದಲನ್ನು ಕ್ರಮಬದ್ಧವಾಗಿ ಸಾಗಾಣಿಕೆ ಮಾಡಿದರೆ, ಹೆಚ್ಚುವರಿ ಬೋನಸ್ ನೀಡುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿತು. ಈ ಹೊಸ ಸವಾಲಿನ ಕೆಲಸವನ್ನು ಜಿಮ್ ಕಾರ್ಬೆಟ್‌ ಸಂತೋಷದಿಂದಲೇ ಸ್ವೀಕರಿಸಿದ.

ಬಿರು ಬೇಸಿಗೆ ಆದಿನಗಳಲ್ಲಿ ತನ್ನ ಹೊಸ ಹುದ್ದೆಯ ನೇಮಕಾತಿ ಪತ್ರ ಹಿಡಿದು ಬಂದ 22ವರ್ಷದ ಯುವಕ ಕಾರ್ಬೆಟ್‌ನನ್ನು ನೋಡಿದ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿ ಸ್ಟೋರರ್ ಇವರಿಗೆ ಅಚ್ಚರಿಯಾಯಿತು. ಆ ವೇಳೆಗಾಗಲೇ ಮೊಕಮೆಘಾಟ್‌ನ ರೈಲ್ವೆ ನಿಲ್ದಾಣದಲ್ಲಿ ಅನೇಕ ಬ್ರಿಟಿಷ್ ವ್ಯಕ್ತಿಗಳು ಸೇವೆ ಸಲ್ಲಿಸುತಿದ್ದರು. ನಿಲ್ದಾಣಕ್ಕೆ ಸ್ಟೇಶನ್ ಮಾಸ್ಟರ್ ಆಗಿ ರಾಮ್ ಶರಣ್ ಎಂಬ ವ್ಯಕ್ತಿ, ಹಾಗೂ ಚಟರ್ಜಿ ಎಂಬ ಬಂಗಾಳಿ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತಿದ್ದರು. ಇವರಿಬ್ಬರೂ ಕಾರ್ಬೆಟ್‌ಗಿಂತ 20 ವರ್ಷ ಹಿರಿಯವರಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಈ ಹುದ್ದೆಗಳಿಗೆ ಬಡ್ತಿ ಪಡೆದಿದ್ದರು. ಕಾರ್ಬೆಟ್‌ ಈ ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸ್ಥಿತಿ ಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ. ಕಂಪನಿಯಲ್ಲಿ ಕೆಲಸ ಮಾಡುತಿದ್ದ ಕೂಲಿ ಕಾರ್ಮಿಕರನ್ನು ಕರೆಸಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆಯಲ್ಲಿ ಆಗುತಿದ್ದ ಲೋಪಗಳನ್ನು ಗುರುತಿಸಿದ.

ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಂಡು. ಪ್ರತಿ ಕಾರ್ಮಿಕನ ಬೌದ್ಧಿಕ ಮತ್ತು ದೈಹಿಕ ಶಕ್ತಿ ಆಧಾರದ ಮೇಲೆ ವಿಂಗಡನೆ ಮಾಡಿದ. ಹತ್ತು ಕಾರ್ಮಿಕರನ್ನು ಒಲಗೊಂಡ ತಂಡವನ್ನು ಮಾಡಿ ಪ್ರತಿ ತಂಡಕ್ಕೆ ಒಬ್ಬ ಮೇಸ್ತ್ರಿಯನ್ನು ನೇಮಕ ಮಾಡಿದ. ಆರು  ತಂಡಗಳನ್ನು ಕಲ್ಲಿದ್ದಲು ಸಾಗಾಣಿಕೆಗೆ  ಮತ್ತು ಕೆಲವು ತಂಡಗಳಿಗೆ ಸರಕು ಸಾಗಾಣಿಕೆ, ಉಳಿದ ತಂಡಗಳಿಗೆ ಪ್ರಯಾಣಿಕರನ್ನು ಸಾಗಿಸುವ ಹೊಣೆಗಾರಿಕೆ ವಹಿಸಿಕೊಟ್ಟ. ತಾನು ಅವರ ಜೊತೆ ನಿಂತು  ಒಡನಾಡುತ್ತಾ ಅವರನ್ನು ಹುರಿದುಂಬಿಸುತ್ತಾ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೊಕಮೆಘಾಟ್ ನಿಲ್ದಾಣದ ಅವ್ಯವಸ್ತೆಯನ್ನ ಹತೋಟಿಗೆ ತಂದು ಕಾರ್ಬೆಟ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಅವನ ಈ ಯಶಸ್ವಿನ ಹಿಂದಿನ ಸೂತ್ರವೇನೆಂದರೆ, ತಾನೊಬ್ಬ ವಿದೇಶಿ ಮೂಲದ ವ್ಯಕ್ತಿ ಎಂಬುದನ್ನು ಮರೆತು, ತನ್ನ ಬಣ್ಣ, ಹಾಗೂ ಜಾತಿ, ಧರ್ಮ, ಹಿರಿಯ, ಕಿರಿಯ, ಬಡವ, ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಬೆರೆಯುವ ವ್ಯಕ್ತಿತ್ವ ಅದ್ಭುತವಾಗಿ ಕೆಲಸ ಮಾಡಿತ್ತು. ಭಕ್ತಿಯಾರ್‌ಪುರದಲ್ಲಿ ಅರಣ್ಯದ ನಡುವೆ ಮರ ಕಡಿಯುವ ಬಡ ಕಾರ್ಮಿಕರ ನಡುವೆ ಅವನು ಒಡನಾಡಿದ್ದ ಅನುಭವ  ಇಲ್ಲಿ ಉಪಯೋಗಕ್ಕೆ ಬಂತು. ಕಾರ್ಬೆಟ್‌ ನ ಪ್ರೀತಿ ವಿಶ್ವಾಸಕ್ಕೆ ಮನಸೋತ ಕಾರ್ಮಿಕರು, ಭಾನುವಾರದ ರಜಾದಿನ, ಹಬ್ಬವೆನ್ನದೆ ವಾರದ ಏಳು ದಿನವೂ ಕೆಲಸ ಮಾಡತೊಡಗಿದರು. ತಾವು ಹಿಂದೆ ಕೆಲಸ ಮಾಡುತಿದ್ದ ಕಂಪನಿಯಲ್ಲಿ ಪಡೆಯುತಿದ್ದ ಹಣಕ್ಕಿಂತ ಹೆಚ್ಚಿನ ಕೂಲಿಯನ್ನು ಪಡೆಯತೊಡಗಿದರು. ನಿಗದಿತ ಅವಧಿಯಲ್ಲಿ ಸರಕುಗಳು, ಮತ್ತು ಕಲ್ಲಿದ್ದಲು ರವಾನೆಯಾದ ಪ್ರಯುಕ್ತ ನೀಡುತಿದ್ದ ಬೋನಸ್ ಹಣದಲ್ಲಿ ಕೇವಲ ಶೇ. 20 ರಷ್ಟನ್ನು ತಾನು ಇಟ್ಟಕೊಂಡು ಉಳಿದ 80ರಷ್ಟು ಭಾಗವನ್ನು  ಕಾರ್ಬೆಟ್‌ ಕಾರ್ಮಿಕರಿಗೆ ಹಂಚಿಬಿಡುತಿದ್ದ.

ರೈಲ್ವೆ ನಿಲ್ಧಾಣದ ಪಕ್ಕದಲ್ಲಿ ಕಾಮಿಕರಿಗೆ ವಸತಿ ಕಾಲೋನಿ ನಿರ್ಮಿಸಿ ಎಲ್ಲರೂ ಒಂದೆಡೆ ವಾಸಿಸುವಂತೆ ಮಾಡಿ ತಾನೂ ಕೂಡ ಕಾರ್ಮಿಕರ ಮನೆಗಳಿಗೆ ಹತ್ತಿರವಾಗಿರುವ ರೈಲ್ವೆ ಸಿಬ್ಬಂದಿಗಾಗಿ ನಿರ್ಮಿಸಿದ್ದ ಒಂದು ಮನೆಯೊಂದನ್ನು ಪಡೆದು ಅದರಲ್ಲಿ ವಾಸಿಸತೊಡಗಿದ.. ಕಾರ್ಬೆಟ್‌ಗೆ ನಿಲ್ದಾಣದ ಉಗ್ರಾಣದ ಉಸ್ತುವಾರಿ ಅಧಿಕಾರಿಯಾದ ಸ್ಟೋರರ್ ಬಂಗಲೆಯಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲದೆ, ನಿಲ್ದಾಣದಲ್ಲಿ ಕೆಲಸ ಮಾಡುವ ಬ್ರಿಟೀಷರಿಗೆ ಪ್ರತ್ಯೇಕ ಕ್ಯಾಂಟಿನ್ ವ್ಯವಸ್ತೆ ಇತ್ತು. ಆದರೆ, ಅಪ್ಪಟ ಭಾರತೀಯನಂತೆ ಬದುಕಿದ್ದ ಜಿಮ್ ಕಾರ್ಬೆಟ್‌ ಇವೆಲ್ಲವನ್ನು ನಿರಾಕರಿಸಿ ಬಡ ಕೂಲಿಕಾರ್ಮಿಕರ ನಡುವೆ ಬದುಕುತ್ತಾ ಅದರಲ್ಲೇ ನೆಮ್ಮದಿ ಕಾಣುತಿದ್ದ. ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಓಡಾಟ ಎಲ್ಲವೂ ಒಂದು ಸುವ್ಯವಸ್ತೆಗೆ ತಲುಪಿದ ಮೇಲೆ ಪ್ರತಿಭಾನುವಾರ ಕಾರ್ಮಿಕರಿಗೆ ಅರ್ಧ ದಿನ ರಜೆ ಘೋಷಿಸಿದ. ವಾರದ  ಸಂಬಳವನ್ನು ತಾನೇ ತನ್ನ ಮನೆಯ ಅಂಗಳದಲ್ಲಿ ಎಲ್ಲರನ್ನೂ ಕೂರಿಸಿಕೊಂಡು ಕೈಯ್ಯಾರೆ ನೀಡುತಿದ್ದ. ಪ್ರತಿಯೊಬ್ಬ ಕಾರ್ಮಿಕನ ಕುಟುಂಬದ ಬಗ್ಗೆ ವಿಚಾರಿಸುತಿದ್ದ. ಅವರು ಕಾಯಿಲೆ ಬಿದ್ದರೆ, ತಾನೇ ಉಪಚರಿಸುತಿದ್ದ. ಜಿಮ್ ಕಾರ್ಬೆಟ್‌ನ ಈ ಪ್ರೀತಿ, ಅವನ ನಡುವಳಿಕೆ ಕಾರ್ಮಿಕರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದವು.

ದಿನವಿಡಿ ದುಡಿಯುತಿದ್ದ ಕಾರ್ಮಿಕರ ಮಕ್ಕಳ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಮಾಡಬೇಕೆಂದು ಕಾರ್ಬೆಟ್‌ನ ಒಳಮನಸ್ಸು ತುಡಿಯುತಿತ್ತು. ಆದರೆ ಅದು ಒಬ್ಬ ವ್ಯಕ್ತಿ ಏಕಾಂಗಿಯಾಗಿ ಮಾಡುವ ಕೆಲಸವಾಗಿರಲಿಲ್ಲ. ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೇ ಇಡೀ ದಿನ ತಮ್ಮ ಶೆಡ್ಡುಗಳ ಹತ್ತಿರ ಆಟವಾಡುತ್ತಾ ಕಾಲ ಕಳೆಯುತಿದ್ದರು. ಒಮ್ಮೆ ಈ ಕುರಿತಂತೆ ಕಾರ್ಬೆಟ್‌ ತನಗಿಂತ ಹಿರಿಯವನಾಗಿದ್ದ, ರೈಲ್ವೆ ಸ್ಟೇಶನ್ ಮಾಸ್ಟರ್ ರಾಮ್ ಶರಣ್ ಜೊತೆ ಮಾತನಾಡುತ್ತಾ ಕಾರ್ಮಿಕರ ಮಕ್ಕಳಿಗೆ ಶಾಲೆ ಪ್ರಾರಂಭಿಸಿದರೆ ಹೇಗೆ? ಎಂಬ ಪ್ರಶ್ನೆ ಹಾಕಿದ. ತನ್ನ ಸೇವೆಯುದ್ದಕ್ಕೂ ಬ್ರಿಟೀಷರು ಭಾರತೀಯರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತಿದ್ದುದನ್ನು ಮನಗಂಡಿದ್ದ ರಾಮ್ ಶರಣ್, ಕಾರ್ಬೆಟ್‌ ನಲ್ಲಿ ಇಂತಹ ಅಂಶವನ್ನು ಕಂಡಿರಲಿಲ್ಲ. ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡುತಿದ್ದ ಕಾರ್ಬೆಟ್‌ ಬಗ್ಗೆ ಅವನಲ್ಲಿ ಅಪಾರ ಗೌರವ ಇತ್ತು ಹಾಗಾಗಿ ಕೂಡಲೇ ಕಾರ್ಬೆಟ್‌ ನ ಕನಸಿನ ಯೋಜನೆಗೆ ರಾಮ್ ಶರಣ್ ಕೈಜೋಡಿಸಿದ.

ಇಬ್ಬರೂ ಸೇರಿ ನಿಲ್ದಾಣದ ಬಳಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿ ಒಬ್ಬ ಶಿಕ್ಷಕನನ್ನು ನೇಮಕ ಮಾಡಿ ಶಾಲೆಯನ್ನು ಪ್ರಾರಂಭಿಸಿದರು. ಮುವತ್ತು ಮಕ್ಕಳು ಮತ್ತು ಒಬ್ಬ ಶಿಕ್ಷಕನಿಂದ ಪ್ರಾರಂಭವಾದ ಈ ಶಾಲೆ ಕೇವಲ ಎರಡು ವರ್ಷದಲ್ಲಿ 270 ಮಕ್ಕಳು ಮತ್ತು 7 ಮಂದಿ ಶಿಕ್ಷಕರನ್ನು ಒಳಗೊಂಡಿತು. ಕಾರ್ಬೆಟ್‌ ತನ್ನ ಸ್ವಂತ ಖರ್ಚಿನಲ್ಲಿ ಮತ್ತಷ್ಟು ಕೊಠಡಿಗಳನ್ನ ನಿರ್ಮಿಸಿಕೊಟ್ಟ.. ಪಾಠದ ಜೊತೆ ಆಟಕ್ಕೂ ಪ್ರಾಶಸ್ತ್ಯ ನೀಡಿದ ಜಿಮ್ ಕಾರ್ಬೆಟ್‌ ಸಮಾರಿಯಾ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಆಗಿದ್ದ ಟಾಮ್ ಕೆಲ್ಲಿ ಜೊತೆಗೂಡಿ ಶಾಲೆಯ ಮಕ್ಕಳಿಗೆ ಹಾಕಿ ಮತ್ತು ಪುಟ್ಬಾಲ್ ಕ್ರೀಡೆಗಳನ್ನು ಪರಿಚಯಿಸಿದ. ಆಟಕ್ಕೆ ಬೇಕಾದ ಕ್ರೀಡಾ ಸಾಮಾಗ್ರಿಗಳನ್ನು ಕಾರ್ಬೆಟ್‌ ಮತ್ತು ಟಾಮ್ ಕೆಲ್ಲಿ ಇಬ್ಬರೂ ಕೂಡಿ  ತಮ್ಮ ಸ್ವಂತ ಹಣದಿಂದ ಖರೀದಿಸಿ ಶಾಲೆಗೆ ಧಾನವಾಗಿ ನೀಡಿದರು. ಅಲ್ಲದೆ, ತಮಗೆ ಬಿಡುವು ದೊರೆತಾಗ  ಮಕ್ಕಳ ಜೊತೆ ಹಾಕಿ, ಪುಟ್ಬಾಲ್ ಪಂದ್ಯಗಳಲ್ಲಿ  ಪಾಲ್ಗೊಂಡು ಆಟವಾಡುತಿದ್ದರು. ಮುಂದೆ ಈ ಶಾಲೆಯನ್ನು ಸರ್ಕಾರ ವಹಿಸಿಕೊಂಡಿತು. ಇದೀಗ ಈ ಶಾಲೆ ಮೊಕಮೆಘಾಟ್ ರೈಲ್ವೆ ನಿಲ್ದಾಣದ ಸಮೀಪ ಕೇಂದ್ರೀಯ ವಿದ್ಯಾಲಯವಾಗಿ ಹೆಮ್ಮರದಂತೆ ಬೆಳೆದು ನಿಂತಿದೆ ಅಲ್ಲದೆ  ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರುತಿದೆ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 6)


– ಡಾ.ಎನ್.ಜಗದೀಶ ಕೊಪ್ಪ   


ಕಾರ್ಬೆಟ್‌ ಉದ್ಯೋಗಕ್ಕೆ ಹೊರಟು ನಿಂತಾಗ ಆತನಿಗೆ ಕೇವಲ ಹದಿನೇಳೂವರೆ ವರ್ಷ ವಯಸ್ಸು. 19 ನೇ ಶತಮಾನದ ಅಂತ್ಯದಲ್ಲಿ ಭಾರತದ ರೈಲ್ವೆ ವ್ಯವಸ್ಥೆಗೆ ಬ್ರಿಟೀಷರು ಹೆಚ್ಚಿನ ಆಧ್ಯತೆ ನೀಡಿದ್ದರು. ಇದರಲ್ಲಿ ಅವರ ಸ್ವಾರ್ಥವು ಇತ್ತು. ಬಹುಭಾಷೆ, ಬಹುಮುಖಿ ಸಂಸ್ಕೃತಿಯ ಈ ನೆಲದಲ್ಲಿ ಅವರು ಏಕ ಕಾಲಕ್ಕೆ ಹಲವಾರು ಸಂಸ್ಥಾನಗಳ ಜೊತೆ ಒಡನಾಡಬೇಕಿತ್ತು. ಹಾಗೆಯೆ ಹೋರಾಟ ನಡೆಸಬೇಕಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಬೆಳೆಯುತಿದ್ದ ಹತ್ತಿ, ಎಣ್ಣೆಕಾಳು ಮುಂತಾದುವುಗಳನ್ನು ಬಂದರು ಪಟ್ಟಣಗಳಿಗೆ  ಸಾಗಿಸಿ ಆ ಮೂಲಕ ಇಂಗ್ಲೇಂಡ್‌ಗೆ ರವಾನಿಸಬೇಕಿತ್ತು. ಆಗಿನ ಭಾರತದ ಕಚ್ಛಾ ರಸ್ತೆಗಳು ಪ್ರಯಾಣಕ್ಕೆ, ಸರಕು ಸಾಗಾಣಿಕೆಗೆ ಯೋಗ್ಯವಾಗಿರಲಿಲ್ಲ. ಈ ಎಲ್ಲಾ ದೃಷ್ಟಿಯಿಂದ ಬ್ರಿಟೀಷರು ರೈಲು ಮಾರ್ಗಕ್ಕೆ ಒತ್ತು ನೀಡಿದ್ದರು.

ಆಗಿನ ಕಾಲದ ರೈಲು ಇಂಜಿನ್‌ಗಳು ಬಿಸಿನೀರಿನ ಒತ್ತಡದಿಂದ ಉಂಟಾಗುವ ಹಬೆಯಿಂದ ಚಲಿಸುತಿದ್ದವು. ಕಲ್ಲಿದ್ದಲು ಬಳಕೆಗೆ ಮುನ್ನ ಉಗಿಬಂಡಿಗಳಲ್ಲಿ ನೀರು ಕುದಿಸಲು ಕಟ್ಟಿಗೆಗಳನ್ನು ಬಳಸಲಾಗುತಿತ್ತು. ಆನಂತರದ ದಿನಗಳಲ್ಲಿ ಕಲ್ಲಿದ್ದಲು ಬಳಕೆಗೆ ಬಂತು. ಭಾರತದಲ್ಲಿ ಯಥೇಚ್ಛವಾಗಿ ಬೆಳೆದಿದ್ದ ಅರಣ್ಯದ ಮರಗಳು 20ನೇ ಶತಮಾನದ ಆದಿಭಾಗದಿಂದ ಹಿಡಿದು ಅಂತ್ಯದವರೆಗೆ ರೈಲ್ವೆ ಹಳಿ ಮಾರ್ಗಕ್ಕೆ ಬಳಕೆಯಾಗಿವೆ. ಇತ್ತೀಚೆಗೆ ಹಳಿಗಳ ಕೆಳಗೆ ಸಿಮೆಂಟ್‌ನಿಂದ ತಯಾರಿಸಲಾದ ದಿಮ್ಮಿಗಳನ್ನು ಬಳಸಲಾಗುತಿದ್ದು, ಭಾರತದ ಅರಣ್ಯ ಸ್ವಲ್ಪ ಮಟ್ಟಿಗೆ ಶೋಷಣೆಯಿಂದ ಪಾರಾಗಿದೆ.

ಜಿಮ್ ಕಾರ್ಬೆಟ್‌ ರೈಲ್ವೆ ಉದ್ಯೋಗವನ್ನು ಬಯಸಿ ಪಡೆಯಲಿಲ್ಲ. ಅದು ಅವನಿಗೆ ಅನಿರಿಕ್ಷೀತವಾಗಿ ದೊರೆಯಿತು. ಇದಕ್ಕೂ ಮುನ್ನ ಅವನು ಹಲವಾರು ಸಂದರ್ಶನಗಳನ್ನು ಎದುರಿಸಿದ್ದ. ಸಣ್ಣ  ವಯಸ್ಸಿನ ಕಾರಣ ಉದ್ಯೋಗದಿಂದ ವಂಚಿತನಾಗಿದ್ದ. ರೈಲ್ವೆ ಸಂದರ್ಶನಕ್ಕೆ ಬಂದಾಗ ವಯಸ್ಸು ಸಾಲದು ಎಂದಾಗ, ಕಾರ್ಬೆಟ್‌ ಅಧಿಕಾರಿಗಳಿಗೆ ದಿಟ್ಟ ಉತ್ತರ ಕೊಟ್ಟ: “ಈ ವರ್ಷ ಬಂದಾಗ ವಯಸ್ಸು ಸಾಲದು ಅನ್ನುತ್ತೀರಿ, ಮುಂದಿನ ವರ್ಷ ಬಂದರೆ ವಯಸ್ಸು ಮೀರಿ ಹೋಗಿದೆ ಎನ್ನುತ್ತೀರಿ. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ವ್ಯಕ್ತಿಗೆ ವಯಸ್ಸಿನ ನೆಪದಲ್ಲಿ ಅಡ್ಡಿ ಮಾಡಬಾರದು.” ಕಾರ್ಬೆಟ್‌ನ ಈ ಮಾತುಗಳು ಅಧಿಕಾರಿಗಳಿಗೆ ಮೆಚ್ಚುಗೆಯಾಗಿ ಆ ಕ್ಷಣದಲ್ಲೆ ಅವನಿಗೆ ಉದ್ಯೋಗ ಪತ್ರ ನೀಡಿದರು.

ಕಾರ್ಬೆಟ್‌ನ ಮೊದಲ ಉದ್ಯೋಗ ಪರ್ವ ಪ್ರಾರಂಭವಾದದ್ದು ಬಿಹಾರ್ ರಾಜ್ಯದ ಭಕ್ತಿಯಾರ್‌ಪುರ ಎಂಬ ಆರಣ್ಯ ಪ್ರದೇಶದಲ್ಲಿ. ರೈಲು ಇಂಜಿನ್‌ಗಳಿಗಾಗಿ ಮರಗಳನ್ನು ಕಡಿದು ಅವುಗಳನ್ನು ಮೂರು ಅಡಿ ಉದ್ದಕ್ಕೆ ಕತ್ತರಿಸಿ ಸಂಗ್ರಹಿಸುವ ಕಾರ್ಯದ ಉಸ್ತುವಾರಿಯನ್ನು ಅವನು ನೋಡಿಕೊಳ್ಳಬೇಕಾಗಿತ್ತು. ನೈನಿತಾಲ್, ಕಲದೊಂಗಿ, ಹಾಗೂ ಸುತ್ತಮುತ್ತ ಹಳ್ಳಿಗಳನ್ನ ಹೊರತು ಪಡಿಸಿದರೆ, ಎಂದೂ ಹೊರಗೆ ಹೋಗದ ಕಾರ್ಬೆಟ್‌ ಮೊದಲ ಬಾರಿಗೆ ತನ್ನ ಕುಟುಂಬವನ್ನು ತೊರೆದು 750ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಬಿಹಾರಕ್ಕೆ ರಸ್ತೆ, ರೈಲು ಪ್ರಯಾಣದ ಮೂಲಕ ಐದು ದಿನ ಪ್ರಯಾಣಿಸಿ ಭಕ್ತಿಯಾರ್‌ಪುರ್ ರೈಲ್ವೆ ಕಚೇರಿಯಲ್ಲಿ ನೇಮಕಾತಿ ಪತ್ರ ಸಲ್ಲಿಸಿ ಉದ್ಯೋಗಕ್ಕೆ ಸೇರ್ಪಡೆಗೊಂಡ.

ಬೆಂಗಾಲ್ ಅಂಡ್ ನಾರ್ತ್ ವೆಸ್ಷ್ರನ್ ರೈಲ್ವೆ ಉದಯೋಗಿಯಾದ ನಂತರ ಭಕ್ತಿಯಾರ್‌ಪುರದಿಂದ 16 ಕಿಲೊಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ಕಾರ್ಬೆಟ್‌ ತೆರಳಿದಾಗ ನಿಜಕ್ಕೂ ಮೊದಲು ಆತ ಅಂಜಿದ. ತಣ್ಣನೆಯ ಗಿರಿಧಾಮದಲ್ಲಿ ಹುಟ್ಟಿ ಬೆಳೆದು ಬಂದಿದ್ದ ಕಾರ್ಬೆಟ್‌ಗೆ ಬಿಹಾರದ ಬಿಸಿಲು, ದೂಳು, ಅರಣ್ಯದ ಸೊಳ್ಳೆಗಳು, ಎಡಬಿಡದೆ ಕಾಡುವ ಸಾಂಕ್ರಮಿಕ ರೋಗಗಳು, ಮಳೆ ಈ ಎಲ್ಲವೂ ಸವಾಲಾಗಿ ನಿಂತವು. ಆದರೆ, ಅರಣ್ಯ ಯಾವಾಗಲೂ ಅವನ ಅಚ್ಚು ಮೆಚ್ಚಿನ ತಾಣವಾಗಿದ್ದರಿಂದ, ಮರ ಕಡಿಯುವ ಕಾರ್ಮಿಕರ ಜೊತೆ ತಾನು ಒಂದು ಗುಡಾರ ಹಾಕಿಕೊಂಡು ಅಲ್ಲೆ ನೆಲೆ ನಿಲ್ಲಲು ನಿರ್ಧರಿಸಿದ.

ಒಬ್ಬ ಆಂಗ್ಲ ಯುವ ಅಧಿಕಾರಿ ತಮ್ಮ ಜೊತೆ ವಾಸಿಸಲು ನಿರ್ಧರಿಸಿದ್ದು, ಸ್ಥಳೀಯ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡುವುದು, ಬಡ ಕೂಲಿಕಾರ್ಮಿಕರನ್ನು ಪ್ರೀತಿಯಿಂದ ಕಾಣುವುದು, ಇವೆಲ್ಲವೂ ಮರ ಕಡಿಯಲು ಬಂದ ಕೂಲಿಕಾರ್ಮಿಕರ ಪಾಲಿಗೆ ಸೋಜಿಗದ ಸಂಗತಿಗಳಾದವು. ಜಿಮ್ ಕಾರ್ಬೆಟ್‌ ದಿನನಿತ್ಯ ಅವರೊಡನೆ ಒಡನಾಡುತ್ತಾ, ಕೆಲಸ ಮಾಡತೊಡಗಿದ. ಕಾರ್ಮಿಕರು ಅಸ್ವಸ್ತರಾದರೆ ಅವರಿಗೆ ಚಿಕಿತ್ಸೆ ನೀಡುವುದು, ಜ್ವರ ಅಥವಾ ಇನ್ನಿತರೆ ಖಾಯಿಲೆಗಳಿಗೆ ಒಳಗಾದರೆ, ತಾನು ತಂದಿದ್ದ ಔಷಧಿಗಳನ್ನು ನೀಡಿ ಉಪಚರಿಸುವುದು, ಹೀಗೆ ಅವರ ಪಾಲಿಗೆ ಅಧಿಕಾರಿಯಾಗಿ, ಒಡನಾಡಿಯಾಗಿ, ಹಿತಚಿಂತಕನಾಗಿ, ವೈದ್ಯನಾಗಿ ಕಾರ್ಬೆಟ್‌ ಅವರ ಪಾಲಿಗೆ ನಡೆದಾಡುವ ದೇವರಾದ.

ಮರದ ಕಟ್ಟಿಗೆಗಳನ್ನು ಎತ್ತಿನ ಗಾಡಿಗಳ ಮೂಲಕ ಭಕ್ತಿಯಾರ್‌ಪುರ ರೈಲ್ವೆ ನಿಲ್ದಾಣಕ್ಕೆ ಸಾಗಿಸಲಾಗುತಿತ್ತು. ವಾರಕ್ಕೊಮ್ಮೆ ರೈಲ್ವೆ ನಿಲ್ದಾಣದಿಂದ ಹಣ ತೆಗೆದುಕೊಂಡು ಹೋಗಿ ಕಾರ್ಮಿಕರಿಗೆ ಬಟವಾಡೆ ಮಾಡುತಿದ್ದ. ಮನೆಬಿಟ್ಟು ಹೊರಜಗತ್ತಿಗೆ ಕಾರ್ಬೆಟ್‌ ತೆರೆದುಕೊಳ್ಳುತಿದ್ದಂತೆ ತನ್ನ ಸಂಸ್ಕೃತಿಗೆ ವಿಭಿನ್ನವಾದ ಭಾರತೀಯ ಸಂಸ್ಕೃತಿ, ಭಾಷೆ, ಜನರ ಬಡತನ, ಅವರ ಪ್ರಾಮಾಣಿಕತನ, ಒಂದು ತುತ್ತು ಅನ್ನಕ್ಕಾಗಿ ಅವರು ಬಿಸಿಲು ಮಳೆಯೆನ್ನದೆ ದುಡಿಯುವ ವೈಖರಿ ಇವೆಲ್ಲವೂ ಅವನನ್ನು ಹೊಸ ಮನುಷ್ಯನನ್ನಾಗಿ ಪರಿವರ್ತಿಸಿಬಿಟ್ಟವು.

ಕೇವಲ ಎರಡು ವರ್ಷಗಳ ಅವಧಿಯಲ್ಲಿ ಜಿಮ್ ಕಾರ್ಬೆಟ್‌ ನಿಜ ಭಾರತವೆಂದರೇನು ಎಂಬುದನ್ನು ಅರಿತುಕೊಂಡ. ಅಲ್ಲದೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನೂ ತನ್ನದಾಗಿಸಿಕೊಂಡ. ಒಬ್ಬ ವಿದೇಶಿ ಮೂಲದ ವ್ಯಕ್ತಿಯೊಬ್ಬ ಬಿಸಿಲು, ಮಳೆ, ಧೂಳೆನ್ನದೆ ತಮ್ಮ ಜೊತೆ ಒಡನಾಡಿದ್ದು ಅಲ್ಲಿನ ಕೂಲಿಕಾರ್ಮಿಕರಿಗೆ ಆಶ್ಚರ್ಯವಾಗಿತ್ತು. ಆ ಕಾಲದಲ್ಲಿ ಸಾಮಾನ್ಯವಾಗಿ ಒಂಟಿಯಾಗಿರುತಿದ್ದ ಬ್ರಿಟೀಷ್ ಅಧಿಕಾರಿಗಳು ಕುಡಿತಕ್ಕೆ ದಾಸರಾಗಿ ಇಲ್ಲವೆ ಸ್ಥಳೀಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಯುವುದು ವಾಡಿಕೆಯಾಗಿತ್ತು. ಇದಕ್ಕೆ ಭಿನ್ನವಾಗಿ ಕಾರ್ಬೆಟ್‌ ಅಪ್ಪಟ ಭಾರತೀಯನಂತೆ ಬದುಕಿದ. ತನ್ನ ಬಾಲ್ಯದಲ್ಲಿ ಕಲದೊಂಗಿ, ಚೋಟಾ ಹಲ್ದಾನಿ ಹಾಗೂ ಸುತ್ತಮುತ್ತಲಿನ ಹಳ್ಳಿಗರ ಜೊತೆ ಅವನು ಸಂಪಾದಿಸಿದ್ದ ಸ್ನೇಹ ಇಲ್ಲಿ ಉಪಯೋಗಕ್ಕೆ ಬಂತು. ಅವನು ಅಲ್ಲಿನ ಕಾಡಿನೊಳಗೆ ಬಿಸಿಲು ಮಳೆಯೆನ್ನದೆ ತಿರುಗಾಟ ನಡೆಸಿದ್ದು ಮಲೇರಿಯಾ, ಅಥವಾ ಇನ್ನಿತರೆ ಜ್ವರಕ್ಕೆ ಬಲಿಯಾಗದಂತೆ ಕಾರ್ಬೆಟ್‌ನ ಶರೀರ ಪ್ರತಿರೋಧದ ಶಕ್ತಿಯನ್ನು ವೃದ್ಧಿಸಿಕೊಂಡಿತ್ತು.

ಕಾರ್ಬೆಟ್‌ ಬಿಹಾರಿನ ಈ ಸ್ಥಳಕ್ಕೆ ಬಂದ ಮೇಲೆ ಅವನು ಕಳೆದುಕೊಂಡ ಒಂದು ಅವಕಾಶವೆಂದರೆ, ಅವನ ಶಿಖಾರಿ ಹವ್ಯಾಸ. ಬರುವಾಗಲೇ ಒಂದು ರೈಫಲ್, ಮೀನು ಹಿಡಿಯುವ ಗಾಳಗಳು, ಔಷಧಿಗಳು ಎಲ್ಲವನ್ನು ತಂದಿದ್ದ. ಪ್ರತಿನಿತ್ಯ ನಿಗದಿತ ಗುರಿಯ ಪ್ರಮಾಣದಷ್ಟು ಮರಗಳನ್ನು ಕಡಿದು ಅವುಗಳನ್ನು ತುಂಡರಿಸಬೇಕಿತ್ತು. ಈ ವಿಷಯದಲ್ಲಿ ಕಾರ್ಬೆಟ್‌ ಮೇಲಿನ ಪ್ರೀತಿ ಮತ್ತು ಗೌರವದಿಂದ ಕಾರ್ಮಿಕರು ಗುರಿಯನ್ನು ಮೀರಿ ಮರಗಳನ್ನು ಕಡಿದದ್ದು ಉಂಟು. ಇಡೀ ದಿನದ ಕೆಲಸ ಮುಗಿಸಿ ತನ್ನ ಗುಡಾರಕ್ಕೆ ಬರುವ ವೇಳೆಗೆ ಕತ್ತಲು ಕವಿಯುತಿತ್ತು. ಹಾಗಾಗಿ ಕಾಡಿನ ಶಿಖಾರಿ ಸಾಧ್ಯವಾಗುತ್ತಿರಲಿಲ್ಲ. ಅಪರೂಪಕ್ಕೆ ನದಿ ತಿರಕ್ಕೆ ಹೋಗಿ ಬೆಳದಿಂಗಳಲ್ಲಿ ಮೀನು ಹಿಡಿದು ತರುತಿದ್ದ. ಮಾಂಸಹಾರಿಯಾಗಿದ್ದ ಕಾರ್ಬೆಟ್‌ ಭಕ್ತಿಯಾರ್‌ಪುರ ಆರಣ್ಯಕ್ಕೆ ಬಂದ ನಂತರ ರೋಟಿ, ದಾಲ್ (ಬೇಳೆಯ ಗಟ್ಟಿಯಾದ ಸಾಂಬಾರ್) ಹಾಗೂ ಮೊಸರನ್ನಕ್ಕೆ ಒಗ್ಗಿ ಹೋಗಿದ್ದ. ಮರ ಕಡಿಯುವ ಸಂದರ್ಭದಲ್ಲಿ ಅಪರೂಪಕ್ಕೆ ಕಾಡುಕೋಳಿಗಳು ಸಿಕ್ಕರೆ ಮಾತ್ರ ಟಿಕ್ಕ ಮಾಡಿ ಉಪಯೋಗಿಸುತಿದ್ದ.( ಟಿಕ್ಕ ಎಂದರೆ, ಮಸಾಲೆ, ಉಪ್ಪು, ಮೆಣಸು ಬೆರತ ಕೋಳಿ ಮಾಂಸವನ್ನು ಬೆಂಕಿಯ ಕೆಂಡದಲ್ಲಿ ಬೇಯಿಸುವುದು.)

ಜಿಮ್ ಕಾರ್ಬೆಟ್‌ ಎಂದೂ ಪರಿಸರ ರಕ್ಷಣೆಯ ಬಗ್ಗೆಯಾಗಲಿ, ಜೀವ ಜಾಲದ ಎಲ್ಲಾ ಸಂತತಿಗಳ ಬಗ್ಗೆ ಗಂಭೀರವಾಗಿ ಯೋಚಿಸಿದವನಲ್ಲ. ಅರಣ್ಯವಿರುವುದು, ಪ್ರಾಣಿ, ಪಕ್ಷಿಗಳು ಇರುವುದು ಮನುಷ್ಯನ ಮೋಜಿನ ಬೇಟೆಗಾಗಿ ಎಂದೂ ಅವನೂ ನಂಬಿದ್ದ. ಆ ಕಾಲದ ಸಮಾಜದ ನಂಬಿಕೆಗಳು ಸಹ ಹಾಗೇ ಇದ್ದವು. ಕಡಿಮೆ ಜನಸಂಖ್ಯೆಯ ಕಾರಣ ಅರಣ್ಯ ನಾಶವಾಗಲಿ, ಪ್ರಾಣಿಗಳ ಸಂತತಿಯ ನಾಶವಾಗಲಿ ತಕ್ಷಣಕ್ಕೆ ಗೋಚರಿಸುತ್ತಿರಲಿಲ್ಲ. ಪ್ರತಿನಿತ್ಯ ಎರಡೂವರೆ ಎಕರೆ ಪ್ರದೇಶದ ಮರಗಳು ಕಾರ್ಬೆಟ್‌ ಕಣ್ಣೆದುರು ನೆಲಕ್ಕೆ ಉರುಳುತಿದ್ದಾಗ ಅವನೊಳಗೆ ಅರಿವಿಲ್ಲದಂತೆ ಪ್ರಜ್ಞೆಯೊಂದು ಜಾಗೃತವಾಯಿತು. ಇದಕ್ಕೆ ಕಾರಣವೂ ಇತ್ತು. ಮರವನ್ನು ಕಡಿದು ಉರುಳಿಸಿದಾಗ ಅದರಲ್ಲಿದ್ದ ಪಕ್ಷಿಯ ಗೂಡುಗಳು ಚಲ್ಲಾಪಿಲ್ಲಿಯಾಗಿ ತಾಯಿಲ್ಲದ ಮರಿಹಕ್ಕಿಗಳು ಕಣ್ಣೆದುರೇ ಪ್ರಾಣಬಿಡುವುದಕ್ಕೆ ಅವನು ಸಾಕ್ಷಿಯಾಗುತಿದ್ದ. ಆಹಾರ ಅರಸಿಹೋಗಿದ್ದ ತಾಯಿ ಹಕ್ಕಿಗಳು ಗೂಡು ಕಾಣದೆ, ತಮ್ಮ ಮರಿಗಳನ್ನು ಕಾಣದೆ ಆಕಾಶದಲ್ಲಿ ದಿಕ್ಕೆಟ್ಟು ಹಾರಾಡುವಾಗ ಅವನ ಮನ ಕಲಕುತಿತ್ತು.

ಮರಗಳು ಉರುಳಿ ಬೀಳುವ ರಭಸಕ್ಕೆ ಪೊದೆಯಲ್ಲಿದ್ದ ಎಷ್ಟೋ ಪ್ರಾಣಿಗಳ ಮರಿಗಳು ಸಾವನ್ನಪ್ಪುತಿದ್ದವು. ಮರಗಳು ಉರುಳುತಿದ್ದಂತೆ ಮಂಗಗಳು, ಅವುಗಳ ಮರಿಗಳು ಛೀರಿಡುತಿದ್ದವು. ಒಮ್ಮೆ ಪುಟ್ಟ ಸಾರಂಗದ ಮರಿಯೊಂದು ಕಾಲು ಮುರಿದ ಸ್ಥಿತಿಯಲ್ಲಿ ಕಾರ್ಬೆಟ್‌ಗೆ ಸಿಕ್ಕಿತು. ಅದನ್ನು ತನ್ನ ಗುಡಾರಕ್ಕೆ ತಂದು ಹಾಲುಣಿಸಿ ಸಾಕತೊಡಗಿದ. ಅದ ಕುಂಟುತ್ತಾ ಒಡಾಡುವುದನ್ನು ನೋಡಲಾಗದೆ,  ಪಕ್ಕದ ಹಳ್ಳಿಯಿಂದ ಜಾನುವಾರುಗಳ ಕಾಲಿನ ಮೂಳೆ ಮುರಿದಾಗ, ಸರಿ ಪಡಿಸುವ ನಾಟಿ ವೈದ್ಯನನ್ನು ಕರೆಸಿ ಅದರ ಕಾಲಿಗೆ ಬಿದಿರಿನ ದಬ್ಬೆಯ ಕಟ್ಟು ಹಾಕಿಸಿ,ವೈದ್ಯ ನೀಡಿದ. ಯಾವುದೋ ವನಸ್ಪತಿ ತೈಲ, ಸೊಪ್ಪಿನ ರಸಗಳಗಳನ್ನು ಲೇಪಿಸಿ ಹಾರೈಕೆ ಮಾಡಿದ.

ಸಾರಂಗದ ಮರಿ ಚೇತರಿಸಿಕೊಂಡ ನಂತರ ಕಾಡಿಗೆ ಬಿಡಬೇಕು ಎಂದು ಜಿಮ್ ಕಾರ್ಬೆಟ್‌ ಆಲೋಚಿಸಿದ್ದ.  ಆದರೇ, ಅದು ಒಂದು ಕ್ಷಣವೂ ಅವನನ್ನು ಬಿಟ್ಟು ಇರುತ್ತಿರಲಿಲ್ಲ. ಕಾರ್ಬೆಟ್‌ ಕಾರ್ಮಿಕರು ಮರ ಕಡಿಯುತಿದ್ದ ಸ್ಥಳಕ್ಕೆ ಹೋದರೆ ಅದು ಅವನನ್ನು ಹಿಂಬಾಲಿಸುತಿತ್ತು. ಅವನು ಆರಣ್ಯದಲ್ಲಿ ಗುಡಾರ ಬದಲಾಯಿಸಿದಾಗ ಕೂಡ ಅವನ ಹಿಂದೆ ಸಾಗುತಿತ್ತು. ಈ ಮೂಕ ಪ್ರಾಣಿಯ ಪ್ರೀತಿ ಮತ್ತು ನಡುವಳಿಕೆಗಳು  ಕಾರ್ಬೆಟ್‌ನ ಚಿಂತನೆಗಳನ್ನ ಅಲುಗಾಡಿಸಿ ಸಂಪೂರ್ಣ ಬದಲಿಸಿಬಿಟ್ಟವು. ಇದೇ ವೇಳೆಗೆ ರೈಲ್ವೆ ಇಲಾಖೆ ಉಗಿಬಂಡಿಗಳಿಗೆ ಉರುವಲಾಗಿ ಮರದಕಟ್ಟಿಗೆಗಳನ್ನು ಬಳಸುವುದು ದುಬಾರಿ ಎನಿಸಿದ್ದರಿಂದ ಕಲ್ಲಿದ್ದಲು ಬಳಕೆಗೆ ನಿರ್ಧರಿಸಿ ಸುಧಾರಿತ ಇಂಜಿನ್‌ಗಳನ್ನು ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡಿತು.

ಭಕ್ತಿಯಾರ್‌ಪುರ್ ಅರಣ್ಯ ಪ್ರದೇಶದಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ ಕಾರ್ಬೆಟ್‌ ಸಮಷ್ಟೀಪುರದ ರೈಲ್ವೆ ಕಚೇರಿಗೆ ಹೋಗಿ ಸಂಪೂರ್ಣ ಲೆಕ್ಕಪತ್ರವನ್ನು ಒಪ್ಪಿಸಿದ. ಈ ಸಂದರ್ಭದ ಒಂದು ಘಟನೆ ರೈಲ್ವೆ ಅಧಿಕಾರಿಗಳನ್ನ ಚಕಿತಗೊಳಿಸಿತು. ಮರದ ಕಟ್ಟಿಗೆಗಳನ್ನು ಎತ್ತಿ ಗಾಡಿಯಲ್ಲಿ ಸಾಗಿಸುತಿದ್ದ ಒಬ್ಬ ವ್ಯಕ್ತಿ 200 ರೂಪಾಯಿಗಳನ್ನು ಯಾವುದೋ ಕಾರಣಕ್ಕಾಗಿ ಪಡೆದಿರಲಿಲ್ಲ. ಆತನ ಹಳ್ಳಿಗೆ ಹೋಗಿ ಹುಡುಕಿ ಹಣ ತಲುಪಿಸುವ ಪ್ರಯತ್ನವನ್ನು ಸಹ ಕಾರ್ಬೆಟ್‌ ಮಾಡಿದ್ದ. ಆದರೆ, ಆ ವ್ಯಕ್ತಿ ಬೇರೆ ಗುತ್ತಿಗೆ ಪಡೆದು ದೂರದ ಊರಿಗೆ ಹೊರಟು ಹೋಗಿದ್ದ. ಆ ಹಣವನ್ನು ಕಛೇರಿಗೆ ತಲುಪಿಸಿ ಕಾರ್ಬೆಟ್‌ ಆ ವ್ಯಕ್ತಿ ಎಂದಾದರೂ ಬಂದರೆ, ಇದನ್ನು ತಲುಪಿಸಿ ಎಂದು ಅಧಿಕಾರಿಗಳನ್ನು ವಿನಂತಿಸಿಕೊಂಡ. ಇಂಗ್ಲಿಷ್ ಬಾರದ, ಸಮಷ್ಟೀಪುರದಲ್ಲಿ ಕಛೇರಿ ಇದೆ ಎಂದು ತಿಳಿಯದ ಆ ರೈತ ಹಣಕ್ಕಾಗಿ ಬರುವ ಸಾಧ್ಯತೆ ಇರಲಿಲ್ಲ. ಆ ವೇಳೆ 150 ರೂಪಾಯಿ ಸಂಬಳ ಪಡೆಯುತಿದ್ದ ಕಾರ್ಬೆಟ್‌ ಅನಾಯಾಸವಾಗಿ 200ರೂ.ಗಳನ್ನು ಜೇಬಿಗೆ ಇಳಿಸಬಹುದಿತ್ತು. ಆದರೆ, ಅವನ ಕುಟುಂಬ, ವಿಶೇಷವಾಗಿ ತಾಯಿ ಮೇರಿ ಕಲಿಸಿದ ಪ್ರಾಮಾಣಿಕತೆ ಪಾಠ ಅವನಿಗೆ ಅದಕ್ಕೆ ಆಸ್ಪದ ನೀಡಲಿಲ್ಲ.

ಮರಗಳ ಕಡಿತ ಮತ್ತು ಸಾಗಾಣಿಕೆಗಾಗಿ ಇತರೆ ಪ್ರದೇಶಕ್ಕೆ ಕಲಿಸಿದ್ದ ಇತರೆ ಅಧಿಕಾರಿಗಳು ನಿಗದಿತ ಗುರಿ ತಲುಪದೆ, ಇಲಾಖೆಗೆ ನಷ್ಟ ಉಂಟು ಮಾಡಿದ್ದರೆ, ಕಾರ್ಬೆಟ್‌ ಲಾಭ ತೋರಿಸಿದ್ದ. ಕಾರ್ಬೆಟ್‌ನ ವ್ಯಕ್ತಿತ್ವ, ಕೆಲಸದ ಬಗ್ಗೆ ಇದ್ದ ಬದ್ಧತೆ, ಪ್ರಾಮಾಣಿಕತೆ ಇವುಗಳಿಂದ ಪ್ರಭಾವಿತರಾದ ರೈಲ್ವೆ ಅಧಿಕಾರಿಗಳು ಆತನಿಗೆ 50 ರೂ ಸಂಬಳ ಹೆಚ್ಚಿಸಿ ಸಮಷ್ಟಿಪುರ ರೈಲ್ವೆ ನಿಲ್ದಾಣಕ್ಕೆ ಸಹಾಯಕ ಮಾಸ್ಟರ್ ಆಗಿ ನೇಮಕ ಮಾಡಿದರು.

ಸುಮಾರು ಎರಡು ವರ್ಷ ಕಾಲ ಕಾರ್ಬೆಟ್‌ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್, ಸ್ಟೋರ್‌ಕೀಪರ್, ಗೂಡ್ಸ್ ರೈಲುಗಳ ಗಾರ್ಡ್ ಆಗಿ ಸೇವೆ ಸಲ್ಲಿಸಿ ಉತ್ತರ ಭಾರತವನ್ನು ವಿಶೇಷವಾಗಿ ನೇಪಾಳದ ಗಡಿಭಾಗವನ್ನು ಪರಿಚಯಿಸಿಕೊಂಡ. ಕಾಡಿನ ನಡುವೆ ಇದ್ದ ಕಾರ್ಬೆಟ್‌ಗೆ ಹಲವು ಬಗೆಯ ಜನ, ಅವರ ಭಾಷೆ, ಸಂಸ್ಕೃತಿ ಈ ಅವಧಿಯಲ್ಲಿ ಪರಿಚಯವಾಯಿತು. ಅವನ ಅನುಭವ ಮತ್ತಷ್ಟು ವೃದ್ಧಿಸಿತು.

(ಮುಂದುವರೆಯುವುದು)