-ರವಿ ಕೃಷ್ಣಾರೆಡ್ಡಿ
ನಮ್ಮಲ್ಲಿ ಒಂದು ವರ್ಗವಿದೆ. ಅವರನ್ನು ನೀವು ಕೆಲವೊಂದು ವಿಷಯಗಳನ್ನು ಮಾತನಾಡದಂತೆ ನಿರ್ಬಂಧಿಸಿಬಿಡಿ. ಬದುಕುವುದಕ್ಕಾಗಿ ಅನ್ನ ದುಡಿಯಲಾರದೆ ಸಾಯುತ್ತವೆ ಅವು. ದೇಶ, ಮತ, ದೇವರು, ಇಂತಹುಗಳನ್ನು ಅನ್ನ ದುಡಿಯುವುದಕ್ಕಾಗಿಯೇ ಬಳಸಿಕೊಳ್ಳುವ ಈ ಮೂಲಭೂತವಾದಿಗಳು ನಿಮಗೆ ಎಲ್ಲಾ ದೇಶಗಳಲ್ಲಿ, ಮತಗಳಲ್ಲಿ ಸಿಗುತ್ತಾರೆ.
ಈಗ ಅಂತಹುದೇ ಪರಾವಲಂಬಿ ಜೀವಿಗಳಿಗೆ, ಹಿಂದು ಮತದವರೆಂದು ಹೇಳಿಕೊಳ್ಳುವ ಈ ಕಷ್ಟಪಟ್ಟು ದುಡಿಯಲಾರದ ಕರ್ನಾಟಕದ ಒಂದು ವರ್ಗಕ್ಕೆ ಸೋಮವಾರ ದಿನೇಶ ಅಮಿನ್ಮಟ್ಟುರವರ ಲೇಖನ ಓದಿದಂದಿನಿಂದ ತಮ್ಮ ಜೀವನನಿರ್ವಹಣೆಯ ಅವಕಾಶವನ್ನೇ ಕಿತ್ತುಕೊಂಡಂತಹ ಭಯ ಆವರಿಸಿದೆ. ಹಾಗಾಗಿ ಪ್ರತಿಭಟನೆಯನ್ನು ಮಾಡಿಸುತ್ತಿದ್ದಾರೆ, ಮಾಡುತ್ತಿದ್ದಾರೆ.
ನನ್ನಂತಹವನಿಗೆ, ಹಾಗೂ ನನ್ನ ಅನೇಕ ಸಮಾನಮನಸ್ಕರಿಗೆ ಆ ಲೇಖನದಲ್ಲಿ ಆಕ್ಷೇಪಿಸುವಂತಹುದು ಏನೂ ಇರಲಿಲ್ಲ. ಆದರೆ ಇದನ್ನು ಕೋಮುವಾದಿಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನನಗನ್ನಿಸುವ ಪ್ರಕಾರ ಇದೇ ಲೇಖನವನ್ನು ಚಾಚೂ ಬದಲಾಯಿಸದೆ ಒಬ್ಬ ಅಪ್ರಬುದ್ಧ ಹಿಂದುತ್ವವಾದಿ ಲೇಖಕನೊಬ್ಬನ ಹೆಸರಿನಲ್ಲಿ ಪ್ರಕಟಿಸಿದ್ದರೆ, ನಿಜಕ್ಕೂ ಆತನ ವಿರುದ್ಧ ಒಂದೇ ಒಂದು ಮಾತನ್ನು ಈ ಬಳಗ ಆಡುತ್ತಿರಲಿಲ್ಲ. ಬದಲಿಗೆ ಕೊಂಡಾಡುತ್ತಿದ್ದರು. ಸಮಾಜ ಸುಧಾರಣೆಯ ಕೆಲಸ ಎನ್ನುತ್ತಿದ್ದರು. ಮತ್ತು ಅದು ಅಲ್ಲಿಗೇ ಕೊನೆಯಾಗುತ್ತಿತ್ತು. ಹಾಗಾಗಿ ನನಗನ್ನಿಸುವುದು ಇದು ವಿಚಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಬದಲಿಗೆ ಯಾರು ಹೇಳುತ್ತಿದ್ದಾರೆ ಎನ್ನುವುದು. ಯಾಕೆಂದರೆ, ದಿನೇಶರ ಬದಲಿಗೆ ಬೇರೊಬ್ಬರು, ಕನ್ನಡದ ಬೇರೆ ಯಾವುದೇ ದಿನಪತ್ರಿಕೆಯಲ್ಲಿ ಹೇಳಿದ್ದರೆ, ಅದು ಅನಪಾಯಕಾರಿಯೂ, ಸ್ವಹಿತಾಸಕ್ತಿಗೆ ಪೂರಕವೂ ಆಗಿರುತ್ತಿತ್ತು. ಆದರೆ ಪ್ರಸ್ತುತ ಲೇಖಕ, ಲೇಖನ, ಮತ್ತು ಅದು ಪ್ರಕಟವಾಗಿರುವ ಪ್ರಜಾವಾಣಿ ಪತ್ರಿಕೆ, ಈ ಕಾಂಬಿನೇಶನ್ ದೀರ್ಘಕಾಲೀನವಾದ ಮತ್ತು ಶಾಶ್ವತವಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯನ್ನು ಕಂಡು ಮೇಲಿನ ಪರಾವಲಂಬಿ ಜೀವಿಗಳು ಗಾಬರಿ ಬಿದ್ದಿರುವುದು.
ಎಷ್ಟೆಲ್ಲ ಓದಿದರೂ ಈ ಭೂಮಿ, ಸೂರ್ಯ, ಜೀವ, ಜೀವವಿಕಾಸ, ಮಾನವ ವಿಕಾಸ, ಇವುಗಳೆಲ್ಲ ಅರ್ಥವೇ ಆಗಿರದ ಅಥವ ಓದಿಯೇ ಇಲ್ಲದ ಜನರೇ ನಮ್ಮ ಮಧ್ಯೆ ಇದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸುವುದು ವೈಜ್ಞಾನಿಕ ತಿಳಿವಿನ ಮೂಲಕ ಅಲ್ಲ. ಬದಲಿಗೆ ಪುರಾಣಗಳ, ವೇದಾಂತ ಪ್ರವಚನಗಳ, ವೈರಾಗ್ಯ ಬೋಧಕರ, ಜ್ಯೋತಿಷಿಗಳ, ಮುಠ್ಠಾಳರ ಮೂಲಕ. ಗಿಣಿಶಾಸ್ತ್ರ ಹೇಳುವವರಿಗೆ, ಕವಡೆ-ನಾಡಿ ಶಾಸ್ತ್ರದವರಿಗೆ, ಭಯ ಹುಟ್ಟಿಸುವ ಜ್ಯೋತಿಷಿಗಳಿಗೆ, ದೇವಾಲಯದ ಪೂಜಾರಿಗಳಿಗೆ, ಯಾಗ ಮಾಡುವವರಿಗೆ, ಇದು ಸುಭಿಕ್ಷ ಕಾಲ.
ಈ ವರ್ಗದ ಮುಂದುವರೆದ ಅವತಾರಗಳೇ ವಿವೇಕಾನಂದರನ್ನು ಮತ್ತು ಭಾರತಮಾತೆಯನ್ನು ತಮ್ಮ ಜೀವನ ನಿರ್ವಹಣೆಗೆ ಮಾರ್ಗ ಮಾಡಿಕೊಂಡಿರುವ ಪರಾವಲಂಬಿ ಜೀವಿಗಳು. ಇವರಿಗೆ ಭಾರತದ ಜನತೆಯ ಮೇಲಿರುವ ಪ್ರೀತಿಗಿಂತ ನೂರ್ಮಡಿ ಹೆಚ್ಚಿನ ಪ್ರೀತಿ ಅಖಂಡ ಭಾರತದ ಭೂಪಟದ ಮೇಲಿದೆ. ದೇಶ ಎಂದರೆ ಅಲ್ಲಿರುವ ಜನಗಳು ಮತ್ತು ಅವರ ಯೋಗ್ಯತೆ ಚಾರಿತ್ರ್ಯ ಎನ್ನುವುದಕ್ಕಿಂತ ಅದರ ಭೌಗೋಳಿಕ ರೂಪ ಎನ್ನುವುದೇ ಇವರ ಭಾವನೆ. ಈಡಿಯಟ್ಸ್.
ನೆನ್ನೆ ಬೆಂಗಳೂರಿನ ಪ್ರಜಾವಾಣಿ ಕಚೇರಿಯ ಮುಂದೆ ನೆರೆದಿದ್ದ, ಸ್ವಯಂಪ್ರೇರಣೆಯಿಂದ ಬಂದವರೇ ಹೆಚ್ಚು ಇದ್ದ, ಹಿರಿಯರು, ಹೆಂಗಸರು, ಕುಂಕುಮಧಾರಿ ಯುವಕರು. ಪ್ರವಚನಕಾರರು, ರಜೆ ಹಾಕಿ ಬಂದಿದ್ದ ವೃತ್ತಿಪರರು, ಬೇರೆಬೇರೆ ಊರುಗಳಿಂದ ಬಂದಿದ್ದ ಜನರನ್ನೆಲ್ಲ ನೋಡಿ ನನಗೆ ಈ ದೇಶದ ಭವಿಷ್ಯದ ಬಗೆಗಿನ ಆಶಾಭಾವನೆ ಒಂದಷ್ಟು ಮುರುಟಿತು. ಅಸಹನೆ, ಕುರುಡುಭಕ್ತಿ, ಮೌಢ್ಯತೆ, ಕೋಮುವಾದ, ಅವೈಜ್ಞಾನಿಕತೆ, ಅವೈಚಾರಿಕತೆ, ಎದೆಯಿಂದ ಎದೆಗೆ ಹರಿಯುತ್ತಿದೆ, ಸತತ. ಒಂದು ಲೇಖನದ ಆಶಯವನ್ನು ಗ್ರಹಿಸಲಾರದ ವಿದ್ಯಾವಂತರು, ವೈಚಾರಿಕತೆಯನ್ನು ಸಾಧಿಸಲಾಗದ ನಮ್ಮ ಶಿಕ್ಷಣ ಪದ್ದತಿ, ದಾರಿತಪ್ಪಿಸಲು ಬೀದಿಗೊಬ್ಬರಂತೆ ಎದ್ದು ನಿಂತಿರುವ ಜನ; ಇವೆಲ್ಲ ನಮ್ಮನ್ನು ಎತ್ತ ಒಯ್ಯಲಿದೆಯೊ?
ಇವುಗಳಿಗೆ ಸಾಮಾಜಿಕ-ರಾಜಕೀಯ ಪರ್ಯಾಯವೊಂದನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಳ್ಳಲಾಗದೆ ಹೋದರೆ…