Category Archives: ರವಿ ಕೃಷ್ಣಾರೆಡ್ಡಿ

ನಾಡೋಜ ಅನಂತಮೂರ್ತಿಯವರಿಗೆ ವಿದಾಯದ ನಮನಗಳು…


– ರವಿ


ಅನಂತಮೂರ್ತಿಯವರೊಡನೆ ನನಗೆ ಹೆಚ್ಚು ಒಡನಾಟವಿರಲಿಲ್ಲ. ಎರಡು ಸಲವೊ ಮೂರು ಸಲವೊ ನೋಡಿದ ನೆನಪು. ಆದರೆ ಅವರೆಂದೂ ದೂರವಿದ್ದವರಾಗಲಿ ಅಪರಿಚಿತರಾಗಲಿ ಆಗಿರಲಿಲ್ಲ.  (ಅವರನ್ನು ಭೇಟಿಯಾಗುವ ನಾಲ್ಕೈದು ವರ್ಷಗಳ ಮೊದಲೆ ಒಮ್ಮೆ ಅವರ ನಡವಳಿಕೆಯೊಂದನ್ನು ತೀವ್ರವಾಗಿ ವಿಮರ್ಶಿಸಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಲೇಖನ ಬರೆದಿದ್ದೆ. ಅದನ್ನವರು ಆಗ ಓದಿರುವ ಸಾಧ್ಯತೆ ಬಹುಶಃ ಇಲ್ಲವೇನೊ.)

ನಾನವರನ್ನು ಮೊದಲ ಸಲ ಭೇಟಿಯಾಗಿದ್ದು 2009 ರ ಏಪ್ರಿಲ್‌ನಲ್ಲಿ, ಯವನಿಕ ಸಭಾಂಗಣದಲ್ಲಿ. ಆಗ ’ದೇಸಿಮಾತು’ ಬ್ಲಾಗ್ ಬರೆಯುತ್ತಿದ್ದ ದಿನೇಶ್‌ಕುಮಾರ್, ಡೆಕ್ಕನ್ ಹೆರಾಲ್ದ್‌ನಲ್ಲಿ ಪತ್ರಕರ್ತರಾಗಿದ್ದ ಸತೀಶ್ ಶಿಲೆ, ಕನ್ನಡಪ್ರಭದಲ್ಲಿದ್ದ ಮಂಜುನಾಥ ಸ್ವಾಮಿ ಮತ್ತು ಎಸ್.ಕುಮಾರ್ ಮತ್ತವರ ಸಮಾನಮನಸ್ಕ ಗೆಳೆಯರು ಸಂವಹನ ವೇದಿಕೆಯಡಿ “ಸಮಾನ ಶಿಕ್ಷಣ”ದ ವಿಷಯವಾಗಿ ದಿನಪೂರ್ತಿ ಸೆಮಿನಾರ್ ಏರ್ಪಡಿಸಿದ್ದರು. ಅಮೆರಿಕದಿಂದ ತಿಂಗಳು ಕಾಲ ರಜೆಯಲ್ಲಿ ಬಂದಿದ್ದ ನಾನೂ ಸಹ ಆ ಸಭೆಗೆ ಹೋಗಿದ್ದೆ, ಪ್ರೇಕ್ಷಕನಾಗಿ, ಭಾಷಣಕಾರನಾಗಿ.

ಅದಕ್ಕೆ ಸರಿಯಾಗಿ ಹಿಂದಿನ ವರ್ಷ (2008) ನಾನು ರಾಜ್ಯದ ಸಮಕಾಲೀನ ರಾಜಕೀಯ ಪರಿಸ್ಥಿತಿಯನ್ನು ವಿರೋಧಿಸಿ ಸಾಂಕೇತಿಕವಾಗಿ ಚುನಾವಣೆಗೆ ನಿಂತಿದ್ದೆ. ಆಗ ನಾನು ವಿಕ್ರಾಂತ ಕರ್ನಾಟಕದಲ್ಲಿ ಬರೆಯುತ್ತಿದ್ದಿದ್ದರಿಂದ ಕನ್ನಡದ ಕೆಲವು ಪ್ರಗತಿಪರ ಮನಸ್ಸುಗಳಿಗೆ ನನ್ನ ಬರವಣಿಗೆಯ ಮೂಲಕ ಪರಿಚಯ ಆಗಿದ್ದೆ, ಹಾಗಾಗಿ ನಾನು ಚುನಾವಣೆಗೆ ನಿಲ್ಲುತ್ತಿರುವ ವಿಚಾರಗಳನ್ನು ಪ್ರಸ್ತಾಪಿಸಿ ಕನ್ನಡದ ಅನೇಕ ಪ್ರಗತಿಪರ ಸಾಹಿತಿ-ಲೇಖಕರಿಗೆ ಪತ್ರ, ಇಮೇಲ್ ಬರೆದಿದ್ದೆ. ಆಶ್ಚರ್ಯವೆಂಬಂತೆ ಅನಂತಮೂರ್ತಿಯವರಿಂದ ಉತ್ತರವೂ ಬಂತು. ಅವರೂ ನನ್ನ ಲೇಖನಗಳನ್ನು ಓದಿದ್ದಿರಬೇಕು.

“Dear Ravi Reddy,
I ADMIRE YOUR COURAGE AND COMMITMENT. I feel sad I am not there. I had to come to Oxford as planned a year earlier. Otherwise I would have campaigned for you. Let your work be meaningful for some at least who matter in the end.

Warm regards and admiration
ananthamurthy”

ಅದೇ ಸಂದರ್ಭದಲ್ಲಿ ’ನಾನು ಶಾಸಕನಾಗಿ ಆಯ್ಕೆಯಾಗಿದ್ದೇ ಅದಲ್ಲಿ ನನ್ನ ಅವಧಿಯ ಸಮಯದಲ್ಲಿ ನಾನು ಯಾವುದೇ ಆಸ್ತಿ ಮಾಡುವುದಿಲ್ಲ’ ಎಂದು ಘೋಷಣೆ ಮಾಡಿದ್ದೆ. ಅದನ್ನು ಹಲವರಿಗೆ ಇಮೇಲ್ ಮಾಡಿದ್ದೆ. ಸಹಜವಾಗಿ ಅನಂತಮೂರ್ತಿಯವರಿಗೂ ಹೋಗಿತ್ತು. ಅದಕ್ಕವರು,

“Dear Ravi Reddy
How sad I am in Oxford and not Bangalore! I feel moved by your press statement. I am sorry I cant canvass for you personally.

In admiration
ananthamurthy”

ಚುನಾವಣೆ ಆಯಿತು. ಚುನಾವಣಾ ಆಯೋಗ ಹೇಳುವ ಚುನಾವಣಾ ವೆಚ್ಚದ ಮಿತಿ ಮತ್ತು ಚುನಾವಣೆಗಳು ನಿಜಕ್ಕೂ ಆಗುವ ಬಗ್ಗೆ ಮತ್ತು ಆ ಚುನಾವಣೆಯಲ್ಲಿ ಆಯೋಗ ನನ್ನ ವಿಚಾರಕ್ಕೆ ಎಸಗಿದ ಪ್ರಮಾದದ ಬಗ್ಗೆ ಆಯೋಗಕ್ಕೆ ಪತ್ರವೊಂದನ್ನು ಬರೆದು ಅದನ್ನು ಒಂದಷ್ಟು ಜನರೊಡನೆ ಹಂಚಿಕೊಂಡಿದ್ದೆ. ಅದಕ್ಕೂ ಅನಂತಮೂರ್ತಿಯವರು ಉತ್ತರ ಬರೆದಿದ್ದರು:

“Dear Sri Ravi Reddy
You are fighting this battle or all of us; this is a meaningful letter and deserves to be nationally known. All of us should stand by you. I am returning after May 27. Tell me what can I do from here– I am in London now.

with warm regards
ur ananthamurthy”

ಇವೆಲ್ಲವೂ ಆದ ಮರುವರ್ಷ ನಾನವರನ್ನು ಭೇಟಿಯಾಗಿದ್ದು, “ಯವನಿಕ”ದ ಸಭಾಂಗಣದಲ್ಲಿ, ಮೊದಲ ಬಾರಿ. ಆಗಲೆ ದೈಹಿಕವಾಗಿ ಕುಂದಿದ್ದರು. samvahanaಆರೋಗ್ಯ ಚೆನ್ನಾಗಿಲ್ಲದಿದ್ದರೂ ಕಾರ್ಯಕ್ರಮಕ್ಕೆ ಬಂದಿದ್ದರು. ಹೋಗಿ ಪರಿಚಯ ಮಾಡಿಕೊಂಡೆ. ಪ್ರೀತಿಯಿಂದ ಕೈ ಹಿಡಿದುಕೊಂಡು ಭಾಷಣಗಳ ಗದ್ದಲದಲ್ಲಿ ಆಪ್ತವಾಗಿ ಮಾತನಾಡಿಸಿದರು. ಏನು ಮಾತನಾಡಿದೆವೊ ನನಗೆ ನೆನಪಿಲ್ಲ.

ಇನ್ನೂ ಒಂದು ಪ್ರಸಂಗ ನೆನಪಾಗುತ್ತಿದೆ. ಅದೇ ವರ್ಷದ ಆರಂಭದಲ್ಲಿ (2009) ಇನ್ನೊಂದು ಘಟನೆ ಆಗಿತ್ತು. ಮಲೆನಾಡಿನಲ್ಲಿಯೋ ಅಥವ ಕರಾವಳಿಯಲ್ಲಿಯೋ ನಕ್ಸಲರು ಕೇಶವ ಯಡಿಯಾಳ ಎನ್ನುವವರನ್ನು ಸಾಯಿಸಿ ಆ ವಿಚಾರವಾಗಿ “ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ” ಎಂದು “ಆತ್ಮೀಯ ರೈತ-ಕೂಲಿಕಾರ್ಮಿಕರೇ, ಮಹಿಳೆಯರಿಗೆ” ಪತ್ರ ಬರೆದು ಅದನ್ನು ಒಂದಷ್ಟು ಲೇಖಕರಿಗೆ ಮತ್ತು ಮಾಧ್ಯಮದವರಿಗೆ ಇಮೇಲ್ ಮಾಡಿದ್ದರು. ಆ ಇಮೇಲ್ ಬಂದವರ ಪಟ್ಟಿಯಲ್ಲಿ ನಾನೂ ಇದ್ದೆ. ಆ ನಕ್ಸಲರ ಹಿಂಸಾವಿಧಾನವನ್ನು ವಿರೋಧಿಸಿ ಆ ಪಟ್ಟಿಯಲ್ಲಿದ್ದ ಎಲ್ಲರಿಗೂ ರಿಪ್ಲೈ ಮಾಡಿ ನಾನೊಂದು ಪತ್ರ ಬರೆದೆ. ಅದು ಇಮೇಲ್ ಪಟ್ಟಿಯಲ್ಲಿದ್ದ ಅನಂತಮೂರ್ತಿಯವರಿಗೂ ಹೋಗಿತ್ತು. ಅದನ್ನೂ ಓದಿದ್ದ ಅವರು ಉತ್ತರಿಸಿದ್ದರು:

“I am very moved by your email dear Ravi Reddy
ur ananthamurthy”

(ನಾನು ಬರೆದಿದ್ದ ಪತ್ರಕ್ಕೆ ನಕ್ಸಲ್ ಎಂದು ಹೇಳಿಕೊಳ್ಳುವವರಿಂದ ಪ್ರತ್ಯುತ್ತರ ಬಂದಿತ್ತು. ಅದು ಇಲ್ಲಿಯ ಲೇಖನದಲ್ಲಿದೆ.)

ಇದೆಲ್ಲವೂ ಅನಂತಮೂರ್ತಿಯವರು ನನ್ನಂತಹ ಅಪರಿಚಿತನೊಂದಿಗೂ, ಕಿರಿಯ ತಲೆಮಾರಿನವರೊಂದಿಗೂ, ಮತ್ತು ವರ್ತಮಾನದ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ವಿದ್ಯಮಾನಗಳೊಂದಿಗೆ ಹೇಗೆ ಸ್ಪಂದಿಸುತ್ತಿದ್ದರು ಮತ್ತು ಪ್ರಸ್ತುತತೆ ಉಳಿಸಿಕೊಂಡಿದ್ದರು ಎನ್ನುವುದನ್ನು ಸ್ಥೂಲವಾಗಿ ಹೇಳುತ್ತದೆ ಎಂದು ಭಾವಿಸುತ್ತೇನೆ.

ಬಹುಶ: ನಾನು ಭಾರತಕ್ಕೆ ಪೂರ್ತಿಯಾಗಿ ಮರಳಿದ 2010 ರ ಸಂದರ್ಭದಲ್ಲಿ ಬೇರೆ ಯಾವುದೋ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಅವರನ್ನು ಭೇಟಿಯಾದ ಮತ್ತು ಅಲ್ಲಿಯೂ ಅವರು ಪ್ರೀತಿಯಿಂದ ಮಾತನಾಡಿಸಿದ ಅಸ್ಪಷ್ಟ ನೆನಪಿದೆ. ಇದಕ್ಕೆ ಹೊರತಾಗಿ ನಾನು ಅವರನ್ನೆಂದೂ ಭೇಟಿಯಾಗಲಿಲ್ಲ. ಪತ್ರ ವ್ಯವಹಾರವೂ ಆಗಲಿಲ್ಲ. ಅವರ ಆರೋಗ್ಯ ಸರಿಯಿಲ್ಲ ಎನ್ನುವ ವಿಷಯಗಳೇ ಕೇಳಿಬರುತ್ತಿದ್ದರಿಂದ ಅವರನ್ನು ಭೇಟಿಯಾಗಲು ಮನಸ್ಸು ಬರುತ್ತಿರಲಿಲ್ಲ. ಒಮ್ಮೆ ಅವರನ್ನು ಭೇಟಿಯಾಗಲು ಬಂದ ಗೆಳೆಯ ಪೃಥ್ವಿಯ ಜೊತೆ card navu nammalliಅವರ ಮನೆ ತನಕ ಹೋಗಿ, ಬಹುಶಃ ಅವರಿಗೆ ಡಯಾಲಿಸಿಸ್ ನಡೆಯುತ್ತಿದ್ದರಿಂದಲೊ ಏನೊ, ಒಳಗೆ ಹೋಗದೆ ವಾಪಸು ಬಂದಿದ್ದೆವು.

ಆದರೆ, ಅನಂತಮೂರ್ತಿಯವರ ಜೊತೆ ನಾವೆಲ್ಲ ವೈಯಕ್ತಿಕವಾಗಿ ಮಾತನಾಡದೇ ಇದ್ದರೂ ನಮ್ಮಂತಹವರೊಡನೆ ಅವರು ವಿಚಾರ-ಬರವಣಿಗೆ-ಭಾಷಣ-ಹೇಳಿಕೆಗಳ ಮೂಲಕ ಸಂವಾದ ಮಾಡುತ್ತಲೇ ಇದ್ದರು. ಸಾಹಿತಿಯಾಗಿ ಅನಂತಮೂರ್ತಿ ಚಿರಕಾಲ ಉಳಿಯುವುದು ಈಗಾಗಲೆ ನಿರ್ಧಾರವಾಗಿರುವ ವಿಷಯ. ಆದರೆ ಬೀದಿಗಿಳಿಯದೇ, ತಮ್ಮ ದೈಹಿಕ ಅನಾರೋಗ್ಯದ ನಡುವೆಯೂ ಅವರು ಪ್ರಭುತ್ವಕ್ಕೆ ಮತ್ತು ಅಸಮಾನತೆ ಮತ್ತು ಶೋಷಣೆಗಳಿಗೆ ಸವಾಲು ಹಾಕುತ್ತ ಚಳವಳಿಗಳಷ್ಟೇ ಸಶಕ್ತವಾಗಿ ಮತ್ತು ಪರ್ಯಾಯವಾಗಿ ಸಂವಾದಗಳನ್ನು ಹುಟ್ಟುಹಾಕುತ್ತಿದ್ದರು. ಕಳೆದ ಐದಾರು ವರ್ಷಗಳಲ್ಲಿ ನಾಡಿನ ಹಿತದೃಷ್ಟಿಯಿಂದ ಅವರು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದ ವಿಚಾರಗಳು ಕಠೋರ ಸತ್ಯವಾಗಿರುತ್ತಿದ್ದವು. ಬಹುಶಃ ಈ ಅವಧಿಯಲ್ಲಿ ಅವರಷ್ಟು ಸ್ಪಷ್ಟವಾಗಿ, ನೇರವಾಗಿ, ಖಂಡಿತವಾಗಿ ಮಾತನಾಡಿದ ಇನ್ನೊಬ್ಬ ಸಾರ್ವಜನಿಕ ವ್ಯಕ್ತಿ ರಾಜ್ಯದಲ್ಲಿರುವ ಉದಾಹರಣೆಗಳಿಲ್ಲ. ಮತ್ತು ಅನಂತಮೂರ್ತಿಯವರು ಯಾವ ವಿಚಾರಗಳನ್ನು ವಿರೋಧಿಸುತ್ತಿದ್ದರೊ, ಅದೇ ವಿಚಾರಗಳ ಪ್ರತಿಪಾದಕರಾಗಿದ್ದವರಿಗೆ ಇವರಿಗಿಂತ ಬೇರೊಬ್ಬ ಶತ್ರುವೂ ಇರಲಿಲ್ಲ.

ಹಾಗಾಗಿಯೇ ಆ ವ್ಯಕ್ತಿಗಳೆಲ್ಲ ಅನಂತಮೂರ್ತಿಯವರು ಎತ್ತಿದ ವಿಚಾರಗಳ ಚರ್ಚೆಗಿಂತ ಪ್ರತಿಸಲವೂ ಅನಂತಮೂರ್ತಿಯವರ ಚಾರಿತ್ರ್ಯವನ್ನು ಪ್ರಶ್ನೆ ಮಾಡುವ ಮೂಲಕ ವಿಷಯ ಹಿನ್ನೆಲೆಗೆ ಹೋಗುವಂತೆ ನೋಡಿಕೊಳ್ಳುತ್ತಿದ್ದರು. ಅನಂತಮೂರ್ತಿ ಸಂತರಾಗಿರಲಿಲ್ಲ. ಹಾಗಾಗಿ ಅವರ ವ್ಯಕ್ತಿತ್ವ ಮತ್ತು ನಡವಳಿಕೆಯಲ್ಲಿ ಇದ್ದಿರಬಹುದಾದ ತಪ್ಪುಗಳನ್ನು ಅಪರಾಧಗಳನ್ನಾಗಿಸಿ ನಮ್ಮ ಕಾಲದ ಬಹುಮುಖ್ಯ ಪ್ರಶ್ನೆಗಳನ್ನು ಆ ಗುಂಪು ನೆಲಕ್ಕೆ ತುಳಿಯುತ್ತಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ಮಾನಸಿಕ ಹಿಂಸೆಯನ್ನೂ ನೀಡುತ್ತಿತ್ತು.  ಅದೊಂದು ಪರಮನೀಚ ಮತ್ತು ದುಷ್ಟ ನಡವಳಿಕೆ ಆಗಿತ್ತು. ಇವತ್ತಿಗೂ ಹಾಗೆ ನಡೆದುಕೊಂಡವರಿಗೆ ಮತ್ತು ಅಂತಹ ಮನಸ್ಥಿತಿ ಇರುವವರಿಗೆ ಪಾಪಪ್ರಜ್ಞೆ ಮೂಡಿಲ್ಲ, ಮೂಡುವ ಸಾಧ್ಯತೆಗಳೂ ಇಲ್ಲ. ರಕ್ತಪಿಪಾಸು ಸರ್ವಾಧಿಕಾರಿಯೊಬ್ಬನು ಸತ್ತಾಗ ಬಿಡುಗಡೆ ಬಯಸಿದ್ದ ಮುಗ್ಢರು ಸಂಭ್ರಮಿಸುವ ಹಾಗೆ UR Ananthamurthyಅನಂತಮೂರ್ತಿಯವರ ಸಾವನ್ನು ಕೆಲವರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ ಎಂದರೆ, ನಮ್ಮ ಸಮಾಜದಲ್ಲಿ ಎಷ್ಟೊಂದು ಪಾಪ ಮತ್ತು ವಿಷ ತುಂಬಿದೆ ಮತ್ತು ಅದು ಎಷ್ಟು ದೀರ್ಘಕಾಲ ಸಮಾಜದಲ್ಲಿ ಹರಿಯಲಿದೆ ಎನ್ನುವುದು ತಿಳಿಯುತ್ತದೆ. ಆದರೆ, ಅನಂತಮೂರ್ತಿಯವರ ಸಾವಿನ ನಂತರ ಹರಿದುಬರುತ್ತಿರುವ ಸಂತಾಪ ಮತ್ತು ಪ್ರೀತಿ ಆ ನಂಜನ್ನು ನುಂಗುವ ನಂಜುಂಡಶಕ್ತಿ ಈ ನಾಡಿನ ಮಣ್ಣಿನಲ್ಲಿದೆ ಎನ್ನುವುದನ್ನೂ ಹೇಳುತ್ತಿದೆ.

ಅನಂತಮೂರ್ತಿ ಅಕ್ಷರಶಃ ನಾಡೋಜ -ನಾಡಿಗೆ ಗುರು- ಆಗಿದ್ದರು. ತುಂಬುಜೀವನ ನಡೆಸಿದ ಆ ನಾಡೋಜನ ಮೃತದೇಹವನ್ನು ಇಂದು (ಶನಿವಾರ, 23-08-2014) ಬಹುಶಃ ಅಗ್ನಿ ದಹಿಸುತ್ತದೆ. ಆದರೆ ಅವರು ಹೊತ್ತಿಸಿದ ಕಿಡಿಗಳು ಕೈಗಂಬದ ದೀಪಗಳಾಗಿ ನಾಡಿನ ಜನತೆಗೆ ದಾರಿ ತೋರಿಸುತ್ತಿರುತ್ತವೆ. ಆತ್ಮದ ಬಗ್ಗೆ ಗೀತೆಯಲ್ಲಿ ಕೃಷ್ಣ ಹೇಳುವಂತೆ, ಅವರ ವಿಚಾರಗಳನ್ನು ಅಗ್ನಿ ದಹಿಸಲಾರದು, ನೀರು ತೋಯಿಸಲಾರದು, ಗಾಳಿ ಒಣಗಿಸಲಾರದು, ಕತ್ತಿ ತುಂಡರಿಸಲಾರದು.

ಮತ್ತು, ನನ್ನಂತೆಯೇ ಗುರುವನ್ನೇ ಪ್ರಶ್ನೆ ಮಾಡುವ, ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಗೌರವಿಸುವ ಸಹಸ್ರಾರು ಶಿಷ್ಯರು ಈ ರಾಜ್ಯದಲ್ಲಿರುವ ತನಕ ಅನಂತಮೂರ್ತಿಯವರು ತಮ್ಮ ಕೊನೆಗಾಲದಲ್ಲಿ ಯಾವ ಕೇಡು ಮತ್ತು ರಾಕ್ಷಸಗುಣಗಳ ಬಗ್ಗೆ ಮಾತನಾಡಿದರೊ ಅದರ ಬಗ್ಗೆ ರಾಜ್ಯದ ಜನತೆಯಲ್ಲಿ ಎಚ್ಚರ ಇರುವಂತೆ ನೋಡಿಕೊಳ್ಳಲಾಗುತ್ತದೆ. ಇದೇ ನಾವು ಅವರಿಗೆ ನೀಡಬಹುದಾದ ವಿದಾಯದ ವಾಗ್ದಾನ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕೇವಲ ಹತ್ತೇ ದಿನ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಕವಿಗೆ ಅಹಂಕಾರ ಇರಬೇಕು…


– ರವಿ


ಇತ್ತೀಚಿನ ವರ್ಷಗಳ ಕನ್ನಡ ಸಾಹಿತ್ಯವನ್ನು ಓದುವಾಗ ನನಗೆ ಎದ್ದು ಕಾಣಿಸುವ ದೊಡ್ಡ ಕೊರತೆ ಕವಿ-ಸಾಹಿತಿಗಳಲ್ಲಿ ಎದ್ದು ಕಾಣಿಸದ ಮಹತ್ವಾಕಾಂಕ್ಷೆ ಮತ್ತು ಇಲ್ಲದಿರುವ ಅಹಂಕಾರ. ಸಾಹಿತಿಗೆ ತನ್ನ ಪ್ರತಿಭೆಯ ಬಗ್ಗೆ, ತಾನು ಅದನ್ನು ಸಾಧಿಸಲು ಹಾಕಿದ ಶ್ರಮ, ಅಧ್ಯಯನ, ಜೀವನಾನುಭವ, ಅಪರಿಮಿತ ಆತ್ಮವಿಶ್ವಾಸ, ನಿರಂಕುಶಮತಿತ್ವ, ಇವೆಲ್ಲವುಗಳಿಂದ ಕೂಡಿ ತಾನು ಸಾಧಿಸಿರುವ ಪ್ರತಿಭೆಯ ಬಗ್ಗೆ ಅಹಂಕಾರ ಇರಬೇಕು. ಈ ಅಹಂಕಾರ ಕೀಳರಿಮೆಯಿಂದ ಬರುವ ಅಹಂಕಾರಕ್ಕಿಂತ ಬಹಳ ಭಿನ್ನವಾದದ್ದು. ಇದು ಕಾಣಿಸುವುದು ವ್ಯಕ್ತಿತ್ವದಲ್ಲ, ಸಾಹಿತಿಯ ಬರವಣಿಗೆಯಲ್ಲಿ. ನಮ್ಮಲ್ಲಿರುವ ಬಹುತೇಕ ಸಾಹಿತಿಗಳಲ್ಲಿ ಕಾಣದ ಈ ಅಹಂಕಾರ ಮತ್ತು ಮಹತ್ವಾಕಾಂಕ್ಷೆಯ ಬಗ್ಗೆ ನಾನು ಕೆಲವು ವರ್ಷಗಳಿಂದ ಯುವಮಿತ್ರರಲ್ಲೂ ಮಾತನಾಡುತ್ತ ಬಂದಿದ್ದೇನೆ. ಆಗೆಲ್ಲ ನನಗೆ ನೆನಪಾಗುವ ಒಂದೇ ಉದಾಹರಣೆ, ಕುವೆಂಪು.

ದೀಪ ಮತ್ತು ಗಿರೀಶ್ ಹಂದಲಗೆರೆ ನನ್ನ ಫೇಸ್‌ಬುಕ್ ಸ್ನೇಹಿತರ ಪಟ್ಟಿಯಲ್ಲಿದ್ದಾರೆ. ಆದರೂ ಇತ್ತೀಚಿನವರೆಗೆ ಅವರು ಯಾರು ಎಂದು ತಿಳಿದಿರಲಿಲ್ಲ. ದೀಪರನ್ನು ಮೊದಲು ನೋಡಿದ್ದು ಅವರು ಎರಡು ವಾರಗಳ ಹಿಂದೆ ಟೌನ್‌ಹಾಲ್ ಬಳಿಯ ಪ್ರತಿಭಟನೆಗೆ ಬಂದಾಗ. ವಿ.ಆರ್.ಭಟ್ ಎನ್ನುವವರು ಪ್ರಭಾ ಬೆಳವಂಗಲರಿಗೆ ಫೇಸ್‌ಬುಕ್‌ನಲ್ಲಿ ’ನಿಮ್ಮಂತಹವರಿಗೆ ಅತ್ಯಾಚಾರಿಗಳು ಜುಟ್ಟು ಹಿಡಿದು ಅತ್ಯಾಚಾರ ಮಾಡಬೇಕು’ ಎಂದು ಕಮೆಂಟ್ ಹಾಕಿದ್ದನ್ನು ವಿರೋಧಿಸಿ ಲೇಖಕಿಯರ ಸಂಘ ಮತ್ತಿತರರು ಆಯೋಜಿಸಿದ್ದ ಆ ಪ್ರತಿಭಟನೆಗೆ ತುಂಬುಬಸುರಿ ದೀಪಾರವರೂ ಬಂದು ಬೆಂಬಲಿಸಿದ್ದರು. ಅದೇ ಸಮಯದಲ್ಲಿ ದೀಪಾರವರ ಪತಿ ಗಿರೀಶ್ ಹಂದಲಗೆರೆಯವರ ಕವನ-ಸಂಕಲನ ಬಿಡುಗಡೆಯ ಕಾರ್ಯಕ್ರಮದ ಆಹ್ವಾನ ಫೇಸ್‌ಬುಕ್‌ನಲ್ಲಿ ಬಂದಿತ್ತು. ಅಧ್ಯಕ್ಷತೆ ನಮ್ಮೆಲ್ಲರ ಪ್ರೀತಿಯ ಕಡಿದಾಳು ಶಾಮಣ್ಣನವರದು. ಇದೊಂದೆ ಕಾರಣಕ್ಕೆ ಕುತೂಹಲಿತನಾಗಿ ಹೋಗೋಣ ಎಂದುಕೊಂಡಿದ್ದೆ. ಅದೇ ಸಮಯದಲ್ಲಿ ಹಂದಲಗೆರೆ ದಂಪತಿಯರ ಬಗ್ಗೆ ಕವಿಮಿತ್ರರೊಬ್ಬರಲ್ಲಿ ವಿಚಾರಿಸಿದೆ. ಅವರು ಅದಕ್ಕೆ ’ದೀಪ ಮತ್ತು ಗಿರೀಶ್ ಚಳವಳಿ ಮತ್ತು ಬೀದಿನಾಟಕಗಳಲ್ಲಿ ಸಕ್ರಿಯರಾಗಿದ್ದವರು. ಗಿರೀಶ್ ಪದ್ಯಗಳನ್ನೂ ಬರೆಯುತ್ತಾರೆ’ ಎಂದಿದ್ದರು. ಕಳೆದ ಭಾನುವಾರ (10-08-2014) ಆ ಕಾರ್ಯಕ್ರಮ. ಬೆಳಗ್ಗೆ ಕೋಲಾರದ ಆದಿಮಕ್ಕೆ ಹೋಗುವ ಕಾರ್ಯಕ್ರಮವನ್ನು ಮಧ್ಯಾಹ್ನಕ್ಕೆ ಹಾಕಿಕೊಂಡು, ಶಾಮಣ್ಣನವರನ್ನೂ ಮಾತನಾಡಿಸಿದ ಹಾಗೆ ಆಗುತ್ತದೆ ಎಂದುಕೊಂಡು ಹಂದಲಗೆರೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ.

ಪುಸ್ತಕ ಬಿಡುಗಡೆ ಮಾಡಿ ಆರಂಭದಲ್ಲಿ ಮಾತನಾಡಿದವರು ನಾವೆಲ್ಲ ಕವಿಯಾಗಿ ಈಗಲೂ ಇಷ್ಟಪಡುವ, ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ girish-book-releaseಗೌರವಿಸದ ಸಿದ್ಧಲಿಂಗಯ್ಯ. ಪುಸ್ತಕದ ಬಗ್ಗೆ ಮತ್ತು ಗಿರೀಶರ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ನಂತರ ಮಾತನಾಡಿದವರು ಅಧ್ಯಾಪಕ ಮತ್ತು ಸಾಹಿತಿ ಕೆ.ವೈ.ನಾರಾಯಣಸ್ವಾಮಿ. ಕೆವೈಎನ್‌ರು ’ಕವಿಗೆ ಅಹಂಕಾರ ಇರಬೇಕು, ಆದರೆ ಗಿರೀಶರಲ್ಲಿ ವಿನಯ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಕವಿಯಾಗುತ್ತಾರೆ, ಹೆಚ್ಚು ಅಧ್ಯಯನ ಮತ್ತು ನಿರಂಕುಶಮತಿಯಾಗುವ ಮೂಲಕ ಅದು ಸಾಧ್ಯ’ ಎಂದು ಬಹಳ ಚೆನ್ನಾಗಿ ಸಾಹಿತ್ಯದ ಪಾಠ ಮಾಡಿದರು. ಅವರ ಭಾಷಣದ ಮಧ್ಯೆ ಕೆಲವು ತೆಗೆದುಕೊಳ್ಳಲೇಬೇಕಾಗಿದ್ದ ಫೋನ್‌ಗಳು ಬಂದಿದ್ದರಿಂದ ಇಡಿಯಾಗಿ ಕೇಳಲಾಗಲಿಲ್ಲ. ಆದರೆ ಕೇಳಿದ್ದನ್ನು ಬಹಳ ಮೆಚ್ಚಿಕೊಂಡೆ. ಒಂದು ಒಳ್ಳೆಯ ಸಾಹಿತ್ಯದ ಪಾಠ ಅದು. ಅಲ್ಲಿ ಅನೇಕ ಯುವಸಾಹಿತಿಗಳು ಮತ್ತು ಕವಿಗಳು ಇದ್ದರು. ಬಹಳ ಜನ ಹೊರಗೇ ಇದ್ದರು. ಅವರೆಲ್ಲರೂ ನಾಲ್ಕಾರು ಸಲ ಕೇಳಿಸಿಕೊಳ್ಳಬೇಕಾದ ಪಾಠ ಅದು. ಆದರೆ, ಬಹುತೇಕರು ಕೇಳಿಸಿಕೊಂಡಂತೆ ಕಾಣಲಿಲ್ಲ.

ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಬಗ್ಗೆ ಗಿರೀಶ್ “ಮನುಕುಲದ ಅಸ್ಮಿತೆ” ಕವನದಲ್ಲಿ ಹೀಗೆ ಹೇಳುತ್ತಾರೆ:

ತಾಲಿಬಾನಿಗಳು ಪ್ರತಿಮೆಗೆ
ಸಿಡಿಮದ್ಧು ಇಟ್ಟಾಗ
ಪುಡಿಪುಡಿಯಾದದ್ದು
ಬುದ್ಧನಲ್ಲ,
ಬೆಳಕು.

ಇದನ್ನು ಸಿದ್ಧಲಿಂಗಯ್ಯನವರು ’ಇದು ಉತ್ತಮ ಕವಿತೆ ಮತ್ತು ಕಾಣ್ಕೆ’ ಎಂದು ವಿವರಿಸಿದಾಗ, ಹೌದೆನ್ನಿಸಿತು. ತಾಲಿಬಾನಿಗಳ ಕೃತ್ಯದ ಬಗ್ಗೆ, ಕಾಂದಹಾರದಲ್ಲಿ ಆರಿದ ಬೆಳಕಿನ ಬಗ್ಗೆ ವಿಷಾದವಾಗುತ್ತಿತ್ತು. ಆದರೆ, ಇದೇ ಕವನವನ್ನು ಕೆವೈಎನ್ ವ್ಯಾಖ್ಯಾನಿಸುತ್ತ, ’ಕವಿ ಎಚ್ಚರಿಕೆಯಿಂದ ಬರೆಯಬೇಕು, ಆರುವ ಬೆಳಕು ಅದೆಂತಹ ಬೆಳಕು? ಪ್ರತಿಮೆ ಒಡೆದ ಮಾತ್ರಕ್ಕೆ ಬುದ್ಧ ಆರಿಹೋಗುವಂತಹ ಬೆಳಕಲ್ಲ. ಹಾಗಾಗಿ ಕವಿಗೆ ಅಹಂಕಾರ ಇರಬೇಕು’ ಎಂದಾಗ ಅದೂ ಸರಿಯೆನ್ನಿಸಿತು.

“ನೀರ ಮೇಗಲ ಸಹಿ” ಎಂಬ ಕಿರುಪದ್ಯಗಳ ಸಂಕಲನದಲ್ಲಿ ಒಂದು ಕಿರುಪದ್ಯ ಹೀಗಿದೆ:

ಪ್ರೀತಿಸಲು ಬಾರದ ನಪುಂಸಕರು
ಹೆಣ್ಣನ್ನು
ಮಾಯೆ ಎಂದು
ಜರಿದುಬಿಟ್ಟರು.

ಇದನ್ನು ಸಹ ಸಿದ್ಧಲಿಂಗಯ್ಯನವರು ಒಳ್ಳೆಯ ಪದ್ಯ ಎಂದು ಉಲ್ಲೇಖಿಸಿದಾಗ ಸರಿ ಎನ್ನಿಸಿತ್ತು. ಆದರೆ, ’”ನಪುಂಸಕ” ಎನ್ನುವ ಪದವನ್ನು girish-negilagereತರುವ ಮೂಲಕ “ಹೆಣ್ಣು” ಇಲ್ಲಿ ಉಪಭೋಗದ ವಸ್ತುವಾಗಿದ್ದಾಳೆ. ಗಿರೀಶ್‌ಗೆ ಅ ರೀತಿಯ ಮನಸ್ಥಿತಿ ಇಲ್ಲದಿರಬಹುದು. ಇಲ್ಲ. ಆದರೆ ಈ ಕವನದಲ್ಲಿ ಆ ನಿಟ್ಟಿನಿಂದ ನೋಡಿದಾಗ ಆಘಾತವಾಗುತ್ತದೆ’ ಎಂದು ಕೆವೈಎನ್ ಹೇಳಿದಾಗ, ಇಬ್ಬರು ಕನ್ನಡದ ಅಧ್ಯಾಪಕರು ಒಂದೇ ಪದ್ಯವನ್ನು ವಿವರಿಸಿ, ಮೆಚ್ಚಿ, ತುಂಡರಿಸಿ, ಮನಸ್ಸುಗಳನ್ನು ಎಚ್ಚರಿಸಿ-ವಿಸ್ತರಿಸುವ ಕೆಲಸ ಮಾಡಿದಾಗ ಆಶ್ಚರ್ಯ ಮತ್ತು ಆಘಾತವಾಗಿದ್ದು ನನ್ನಂತಹ ಸಾಹಿತ್ಯದ ವಿದ್ಯಾರ್ಥಿ ಅಲ್ಲದವರಿಗೆ. ಗಿರೀಶರಿಗೆ ಲಭಿಸಿರುವ ಸಾಧ್ಯತೆಗಳ ಪಟ್ಟಿ ಮಾಡುತ್ತಲೇ ಕೆವೈಎನ್ ಸಾಹಿತ್ಯದ ಸೂಕ್ಷ್ಮತೆಗಳನ್ನು ಪಾಠ ಮಾಡಿದರು. ಅವರಿಗೆ ಈ ಕವಿಯ ಮೇಲೆ ಪ್ರೀತಿ ಇಲ್ಲದಿದ್ದರೆ ಈ ರೀತಿಯ ಮಾತು ಸಾಧ್ಯವೇ ಇಲ್ಲ ಎನ್ನುವಂತಿತ್ತು ಅಂದಿನ ಭಾಷಣ. ಕವಿಗೆ ನೋವಾದರೂ ಕೇಳಿಸಿಕೊಳ್ಳಬೇಕಾದ ಮತ್ತು ಅಧ್ಯಯನ ಮಾಡಬೇಕಾದ ಭಾಷಣ ಅದು. ಆತನ ಗೆಲುವಿಗೆ, ಉತ್ತಮ ಸಾಹಿತ್ಯ ರಚನೆಗೆ.

ಅಂದು ಟಿಎನ್ ಸೀತಾರಾಮ್ ಸಹ ಮಾತನಾಡುತ್ತ, ’ಒಳ್ಳೆಯ ಕಾವ್ಯ ರಚಿಸಲು ಬೇಕಾದ ಸಂದರ್ಭ ಈಗಿಲ್ಲ, ಅದಕ್ಕೆ ಬೇಕಾದ ಪರಿಸರ ಅಲ್ಲ ಇದು’ ಎಂದರು. ತಮ್ಮ ಸೃಜನಶೀಲತೆಯ ಅಭಿವ್ಯಕ್ತಿಯ ಮೇಲೆ ಬಂದ ಒತ್ತಡಗಳು, ಅದರಲ್ಲೂ ಮಾರ್ಕೆಟ್ ಒತ್ತಡಗಳ ಬಗ್ಗೆ ಮಾತನಾಡಿದರು. ಅದೂ ಸಹ ಗಮನಿಸಬೇಕಾದ ಅಂಶವೇ. ಆದರೆ, ಸಾಹಿತಿ ಮಹತ್ವಾಕಾಂಕ್ಷಿಯಾದಾಗ ಇದೆಲ್ಲವೂ ನಗಣ್ಯವಾಗುತ್ತದೆ, ಇಡೀ ಪ್ರಪಂಚವೇ ಇಂದು ಕುದಿಯುತ್ತಿದೆ, ಕರಗುತ್ತಿದೆ. ಸಾಹಿತ್ಯಕ್ಕೆ ಯಾವ ಒಳ್ಳೆಯ ಸಂದರ್ಭದಷ್ಟೇ ಇದೂ ಒಳ್ಳೆಯ ಸಂದರ್ಭವೇ ಎನ್ನುತ್ತೇನೆ ನಾನು.

ಆದರೆ ಒಂದು ಸಮಸ್ಯೆ ಇದೆ. ಇಂದು ಸಾಹಿತ್ಯಕ್ಕೆ ಬರುತ್ತಿರುವ ಬಹುತೇಕರು ಹಿಂದಿನವರಂತೆ ಅಧ್ಯಯನಶೀಲರೂ, ತರಗತಿಗೆ ಮೊದಲಿರುವ ಶ್ರಮಜೀವಿಗಳೂ ಅಲ್ಲ. ಯಾವುದೋ ಒಂದು ಹಂತದಿಂದ ಸಾಹಿತ್ಯಕ್ಕೆ ಹೊರಳಿಕೊಂಡವರು. ಹಾಗಾಗಿಯೆ ಪ್ರತಿಭೆ ಬೇಡುವ ಅಧ್ಯಯನ ಮತ್ತು ಶ್ರಮದ ಕೊರತೆ ಇರುವವರು. ಆದರೆ, ಸಾಹಿತ್ಯಕೃಷಿಯನ್ನು ಜೀವನೋಪಾಯಕ್ಕೆ ಮಾಡುವ ಸಂದರ್ಭದಲ್ಲಿ ಇಲ್ಲ ಇವರು. ಹಾಗಾಗಿಯೆ ಇವರಿಗೆ ಅಹಂಕಾರಿಗಳಾಗುವ, ಸ್ಥಾಪಿತ ಶಕ್ತಿಗಳನ್ನು ಮತ್ತು ನಂಬಿಕೆಗಳನ್ನು ಪ್ರಶ್ನಿಸುವ, ಗತಕಾಲದ ಸತ್ಯವನ್ನು ಅರಗಿಸಿಕೊಂಡು ಸುಳ್ಳನ್ನು ಎತ್ತಿಒಗೆಯುವ, ಇಂದಿನ ಸತ್ಯವನ್ನು ನೇರವಾಗಿ ಹೇಳುವ ಸ್ವಾತಂತ್ರ್ಯ ಹಿಂದಿನವರಿಗಿಂತ ಹೆಚ್ಚಿದೆ. ಬಸವಣ್ಣ ಮತ್ತು ಕುವೆಂಪುರವರಿಗಿಂತ ಬೇರೆ ಆದರ್ಶ ಇವರಿಗೆ ಬೇಕಿಲ್ಲ. ’ಎನಗಿಂತ ಕಿರಿಯರಿಲ್ಲ’ ಎನ್ನುತ್ತಲೆ,

“ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!”

ಎನ್ನುತ್ತಾ ಇಡೀ ಪರಂಪರೆಯನ್ನು ಎತ್ತಿ ಒಗೆದವನು ಬಸವಣ್ಣ. ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆಕೊಟ್ಟು ಅಂತೆಯೇ ಬರೆದದ್ದು ಕುವೆಂಪು. ಕಾವ್ಯವನ್ನು ಸಾಧಿಸಿಕೊಳ್ಳಲು ಕುವೆಂಪು ಯಾವರೀತಿ ತಪಸ್ಸು ಮಾಡಿದರು, ತಮ್ಮ ಇಪ್ಪತ್ತರ ವಯಸ್ಸಿನ ಅಸುಪಾಸಿನಲ್ಲಿ ಎಷ್ಟೆಲ್ಲ ಕವಿತೆಗಳನ್ನು ಬರೆದು-ಹರಿದು-ಬರೆದರು ಎನ್ನುವುದನ್ನು ಅವರ “ನೆನಪಿನ ದೋಣಿ” ಓದಿದರೆ ತಿಳಿಯುತ್ತದೆ.

ಇಂದು ಸಾಹಿತಿ ಅಂತರ್ಜಾಲದ ಮೂಲಕ ನೇರಪ್ರವೇಶ ಪಡೆಯುತ್ತಿದ್ದಾನೆ ಮತ್ತು ಪುಸ್ತಕಗಳನ್ನೂ ಪ್ರಕಟಿಸುತ್ತಿದ್ದಾನೆ. ಕೊರತೆ ಇರುವುದು ಸ್ವವಿಮರ್ಶೆಯಲ್ಲಿ, ತನಗೇ ಸವಾಲು ಹಾಕಿಕೊಳ್ಳುವುದರಲ್ಲಿ.

ನನಗೆ ಕವನ-ಕಾವ್ಯ ಅಷ್ಟು ಅರ್ಥವಾಗುವುದಿಲ್ಲ. ಹಾಡಿದರೆ ಮನದಟ್ಟಾಗುತ್ತದೆ. ಹಾಗಾಗಿ ಗಿರೀಶರ ಕವನಗಳು “ಕಾವ್ಯ ಗುಣ”ದ ಕಾರಣಕ್ಕಾಗಿ ಎಷ್ಟು girish-neeramegalasahiಶ್ರೇಷ್ಟ ಎಂದು ಹೇಳಲಾರೆ. ಆದರೆ ಗಿರೀಶ್ ನಮ್ಮೆಲ್ಲರಂತೆ ಬುದ್ಧ, ಗಾಂಧಿ, ಕುವೆಂಪುರನ್ನು ಮೆಚ್ಚಿಕೊಳ್ಳುವ ಮಾನವತಾವಾದಿ. ಅವರೇ ಹೇಳಿಕೊಂಡಿರುವಂತೆ ಕುವೆಂಪುರವರ “ವಿಶ್ವಮಾನವ ಸಂದೇಶ”ವನ್ನು ಸಾರಲು 1999 ರಲ್ಲಿ ಸೈಕಲ್ ಏರಿ ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಕೇಂದ್ರಗಳನ್ನು ಸುತ್ತಿದವರು. 2004 ರಲ್ಲಿ ದೀಪಾ ಮತ್ತು ಗಿರೀಶ ಇದೇ ಕೆಲಸದ ಮೇಲೆ ಶಿವಮೊಗ್ಗದ ಕಡೆ ಹೋದಾಗ ಕಡಿದಾಳು ಶಾಮಣ್ಣನವರು ಇವರಿಗೆ ಜೊತೆಯಾಗಿ ಹಲವು ಬೀದಿನಾಟಕಗಳಲ್ಲಿ ತಮ್ಮ ತಬಲ ಸಾಥ್ ನೀಡಿದ್ದಾರೆ. ಒಳ್ಳೆಯ ಮನಸ್ಸಿದೆ. ತಪಸ್ಸು ಇವರನ್ನು ಮತ್ತವರ ಸಂಗಾತಿಗಳನ್ನು ಎತ್ತರಕ್ಕೆ ಒಯ್ಯಲಿ.

ಕಾರ್ಯಕ್ರಮ ನಡೆದ ದಿನವೇ ಇದನ್ನೆಲ್ಲ ಬರೆಯಬೇಕು ಎಂದುಕೊಂಡೆ. ಆದರೆ, ಕೆಪಿಎಸ್‌ಸಿ ವಿಚಾರವಾಗಿ ಮೂರ್ನಾಲ್ಕು ದಿನಗಳಿಂದ ನನ್ನ ಸಮಯ ನನ್ನ ಹತೋಟಿಯಲ್ಲಿ ಇಲ್ಲದ ಕಾರಣ ಆಗಿರಲಿಲ್ಲ. ನನ್ನ ಯುವಮಿತ್ರರೊಂದಿಗೆ ಇದನ್ನು ಹಂಚಿಕೊಳ್ಳುವ ತುರ್ತಿದೆ ಎಂಬ ಭಾವನೆಯಲ್ಲಿ ಇದನ್ನು ಆತುರದಲ್ಲಿ ಬರೆದಿದ್ದೇನೆ. ಎಂದಿನ ಆಶಾವಾದದಲ್ಲಿ.


ಗಿರೀಶರ ಕವನಗಳಲ್ಲಿಯ ಕೆಲವು ಗಮನಾರ್ಹ ಸಾಲುಗಳು:

ಬೀದಿಬಿದಿ ತಿರುಗಿ
ಮಂಕರಿ ಸಗಣಿ
ಹೊತ್ತುತಂದು
ಬೆವರ ಬೆರಸಿ
ಅವ್ವ ಬರೆಯುತ್ತಾಳೆ ಕವಿತೆ
ಗೋಡೆ ತುಂಬಾ ಚಿತ್ತಾರದಂತೆ

ತನ್ನ ಕವಿತೆಗಳ ತಾನೇ
ಮುರಿದು ಕಟ್ಟುತ್ತಾ
ಕವಿತೆಯಾಗೇ ಬಾಳುತ್ತಾಳೆ!

– “ಅವ್ವ”

***

ಮುರಿದು ಕಟ್ಟಬೇಕು
ಸ್ಥಾವರಗಳೇ ಚಲಿಸುವಂತೆ
ಜಿಗಿಯಬೇಕು ಭೂಮಿ
ಕಾಲದೇಶ
ಹುಟ್ಟುಸಾವು
ಶೂನ್ಯದಾಚೆಯ
ನಂಬಿಕೆಯಾಚೆಗೆ…

– “ಶೂನ್ಯದಾಚೆಗೆ”

***

ಭೂಮಿಯ ಮೇಲಿನ ಕಟ್ಟಕಡೆಯ
ಭಯದ ಮನುಷ್ಯನಿರುವವರೆಗೆ
ದೇವರಿಗೆ ಸಾವಿನ ಭಯವಿಲ್ಲ
ವಿಜ್ಞಾನದ ಸೂಕತದ ಮನೆಯಲ್ಲಿ
ದೇವರು ದಿನವೂ
ಸತ್ತುಹುಟ್ಟುತ್ತಲೇ ಇದ್ಡಾನೆ

– “ದೇವರೆಂಬ ಬೆದರುಬೊಂಬೆ”

***

ಮದ್ದುಗುಂಡುಗಳ ಕಾರ್ಖಾನೆ
ದುಖಾನು ತೆರೆದು ಅಸ್ತ್ರಗಳ ಮಾರಿ
ಅನ್ನು ಉಣ್ಣುವ ದೊಡ್ಡಣ್ಣರಿರುವಾಗ
ಯುದ್ಧಕ್ಕೆ ಕಾರಣಗಳೇ ಬೇಕಿಲ್ಲ
ಅನ್ನ ನೀರು ಇಂಧನ
ಧರ್ಮ ಶಾಂತಿಗಾಗಿಯೂ
ಸಿಡಿಯುತ್ತವೆ ಮದ್ದುಗುಂಡು
ಗಡಿಗಳಲ್ಲಿ ಈಗ
ದಿನವೂ ದೀಪಾವಳಿ

– “ಬ್ರಹ್ಮಾಸ್ತ್ರಗಳ ಸಂತೆ”

***


ಪುಸ್ತಕಗಳು:
– “ನೇಗಿಲ ಗೆರೆ” – ಪದ್ಯಗಳು
– “ನೀರ ಮೇಗಲ ಸಹಿ” – ಕಿರು ಪದ್ಯಗಳು
ಲೇಖಕ: ಗಿರೀಶ್ ಹಂದಲಗೆರೆ
ಬೆಲೆ. ತಲಾ ರೂ.80
ಪ್ರಕಾಶಕರು: ಉಪಾಸನ

3ನೇ ವಾರ್ಷಿಕದಂದು ವರ್ತಮಾನ.ಕಾಮ್‌ನ ಪ್ರಸ್ತುತತೆ ..

ಸ್ನೇಹಿತರೇ,

ವರ್ತಮಾನ.ಕಾಮ್ ಕಾರ್ಯಾರಂಭಿಸಿ ಮೂರು ವರ್ಷಗಳು ತುಂಬಿದವು. (ಮೊದಲನೆಯ ಮತ್ತು ಎರಡನೆಯ ವಾರ್ಷಿಕದಂದು ಬರೆದಿದ್ದ ಟಿಪ್ಪಣಿಗಳು ಇಲ್ಲಿ ಮತ್ತು ಇಲ್ಲಿ ಇವೆ. ಗಮನಿಸಿ.)

ಮೂರನೆಯ ವರ್ಷದಲ್ಲಿ ವರ್ತಮಾನ.ಕಾಮ್ ಎಲ್ಲಾ ತರಹದ ಏರಿಳಿತಗಳನ್ನು ಕಂಡಿತು. 2013  ರ ಅಕ್ಟೋಬರ್, ನವೆಂಬರ್ ಮತ್ತು vartamaana-32014ರ ಮಾರ್ಚ್‌ ತಿಂಗಳುಗಳು ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ಓದನ್ನು ಪಡೆದುಕೊಂಡ ತಿಂಗಳುಗಳಾದರೆ 2014 ರ ಜೂನ್ ತಿಂಗಳು ಕಳೆದ ಎರಡು ವರ್ಷಗಳಲ್ಲಿಯೇ ಕಡಿಮೆ ಓದು ಪಡೆದುಕೊಂಡ ತಿಂಗಳು. ಈ ನಿಟ್ಟಿನಲ್ಲಿ ಇದು ವರ್ತಮಾನ.ಕಾಮ್‌ನ ಯಶಸ್ವಿ ವರ್ಷವೂ ಹೌದು. ಹಾಗೆಯೇ, ಇದರ ಪ್ರಸ್ತುತತೆ ಮತ್ತು ಮುಂದುವರೆಸುವುದರ ಬಗ್ಗೆ ಯೋಚನೆ ಮಾಡಬೇಕಾದ ದಿನಗಳೂ ಹೌದು.

ಈ ಮೊದಲೆ ನಾನು ಅಲ್ಲಲ್ಲಿ ಪ್ರಸ್ತಾಪಿಸಿದಂತೆ, ವರ್ತಮಾನ.ಕಾಮ್‌ಗೆ ಬರೆಯುವವರೆಲ್ಲರೂ ಇಲ್ಲಿಗೆ ಬರೆಯಬೇಕು ಎಂಬ ಆಸಕ್ತಿಯಿಂದ ಬರೆಯುವವರು ಮತ್ತು ಯಾರಿಗೂ ಗೌರವಧನವಾಗಲಿ ಇನ್ನೊಂದಾಗಲಿ ಇಲ್ಲ. ಇದರ ಇಲ್ಲಿಯ ತನಕ ಯಶಸ್ಸು ಮತ್ತು ಪ್ರಸ್ತುತತೆಯಲ್ಲಿ ನಮಗೆ ಒಂದೇ ಒಂದು ಲೇಖನ ಬರೆದವರಿಂದ ಹಿಡಿದು ನಿಯಮಿತವಾಗಿ ಬರೆಯುತ್ತ ಬಂದವರೆಲ್ಲರದು. ಹಾಗೆಯೇ, ಆರಂಭದ ದಿನಗಳಲ್ಲಿ ಕೆಲವೊಬ್ಬರಿಗೆ ದಯವಿಟ್ಟು ಬರೆಯಿರಿ ಎಂದು ಕೇಳಿಕೊಂಡಿದ್ದನ್ನು ಬಿಟ್ಟರೆ ಬರೆಯಿರಿ ಎಂದು ಅತಿಯಾದ ಒತ್ತಾಯವನ್ನು ನಮ್ಮ ಬಳಗದ ಯಾರೊಬ್ಬರೂ ಯಾರಿಗೂ ಮಾಡಿಲ್ಲ. ಆದರೆ ಕೆಲವೊಮ್ಮೆ ಕೆಲವು ಗಂಭೀರ ಸಮಕಾಲೀನ ವಿಷಯದ ಬಗ್ಗೆ ಇಂತಹವರು ಬರೆಯಬಹುದು ಎನ್ನಿಸಿದಾಗ ಅಂತಹವರಿಗೆ ಕೋರಿದ್ದೇವೆ, ಅದೂ ಅಪರೂಪಕ್ಕೆ. ಈ ರೀತಿಯಾಗಿ ಇದು ತನಗೆ ತಾನೆ ಉಳಿಯುತ್ತ, ಕುಗ್ಗುತ್ತ, ಬೆಳೆಯುತ್ತ, ಒಂದು ರೀತಿಯಲ್ಲಿ ಸ್ವಾವಲಂಬಿಯಾಗಿ ಬರುತ್ತಿದೆ.

ಹಾಗೆಯೇ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಅನೇಕ ಲೇಖನಗಳು ರಾಜ್ಯದ ಅನೇಕ ಇತರೆ ವೇದಿಕೆಗಳಲ್ಲಿ ಪ್ರಕಟವಾಗುತ್ತಿರುವುದೂ ಸಹ ಮುಂದುವರೆದಿದೆ. ಅಂತಹ ಸಂದರ್ಭಗಳಲ್ಲಿ ಲೇಖಕರನ್ನು ಮತ್ತು ವರ್ತಮಾನ.ಕಾಮ್ ಅನ್ನು ಹೆಸರಿಸುವ ಎಲ್ಲರೂ ನಮ್ಮ ಪ್ರಶಂಸೆಗೆ ಅರ್ಹರು.

ನಿಮಗೆ ಗೊತ್ತಿರುವ ಹಾಗೆ, ನಮಗೆ ಬರುವ ಒಂದು ಲೇಖನವನ್ನು ಯೂನಿಕೋಡ್‌ಗೆ ಪರಿವರ್ತಿಸಿ, ಇರಬಹುದಾದ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ತಿದ್ದಿ, ನಂತರ ಅದನ್ನು ವೆಬ್‌ಸೈಟಿನಲ್ಲಿ ಸರಿಯಾಗಿ ಪೇಜ್ ಕೂರಿಸಿ, ಸೂಕ್ತ ಚಿತ್ರಗಳನ್ನು ಹಾಕಿ, ಅಂತಿಮವಾಗಿ ಪ್ರಕಟಿಸಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಈ ಕೆಲಸವನ್ನು ನಮ್ಮ ಬಳಗದಲ್ಲಿ ನಾನೂ ಸೇರಿದಂತೆ ಮೂವರು ಮಾಡುತ್ತೇವೆ, ಮತ್ತು ಬಹುತೇಕ ಸಂದರ್ಭಗಳಲ್ಲಿ ಆ ಕೆಲಸ ನಾನೇ ಮಾಡುತ್ತಿದ್ದೆ. ನಾನು ಊರಿನಲ್ಲಿಲ್ಲದಾಗ, ಅಥವ ಬೇರೆ ಕೆಲಸದಲ್ಲಿ ವ್ಯಸ್ತನಾಗಿ ಒಂದೆರಡು ದಿನ ಇತ್ತ ಗಮನ ಕೊಡಲು ಆಗುವುದಿಲ್ಲ ಎಂತಾದಾಗ, ನಮ್ಮ ಬಳಗದ ಸ್ನೇಹಿತರು ಅದನ್ನು ಮಾಡುತ್ತಾರೆ. ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಂತ ಕಾರಣದಿಂದಾಗಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಈಚೆಗೆ ಬಳಗದ ಮಿತ್ರರೇ ಹೆಚ್ಚಿಗೆ ಮಾಡಿದ್ದಾರೆ. ಅವರೂ ಸಹ ಉದ್ಯೋಗಗಳಲ್ಲಿರುವುದರಿಂದ, ಮತ್ತು ಅವರು ನೌಕರಿ ಮುಗಿಸಿಕೊಂಡು ಮನೆಗೆ ಬಂದನಂತರವೇ ಅದನ್ನು ಮಾಡಬೇಕಾಗಿರುವುದರಿಂದ ಒಮ್ಮೊಮ್ಮೆ ನಮಗೆ ಬಂದ ಲೇಖನಗಳು ಎರಡು-ಮೂರು ದಿನವಾದರೂ ಪ್ರಕಟವಾಗಿರುವುದಿಲ್ಲ. ಇತ್ತೀಚೆಗೆ ಮತ್ತೆ ನನ್ನ ಜೀವನ ಸ್ವಲ್ಪ ನಿಯಮಿತತೆಗೆ ಹೊರಳಿರುವುದರಿಂದ ವರ್ತಮಾನ.ಕಾಮ್ ಸಹ ನಿಯಮಿತವಾಗುತ್ತಿದೆ. ಮುಂದಕ್ಕೆ ನೋಡೋಣ, ಏನಾಗುತ್ತದೊ!

ಅಂದ ಹಾಗೆ, ತನ್ನ ಮೂರನೆ ವರ್ಷದಲ್ಲಿ ವರ್ತಮಾನ.ಕಾಮ್ ರಾಜ್ಯದ ಹಲವು ಕಡೆಗಳಲ್ಲಿ ಸ್ಥಳಿಯ ಸಂಘಸಂಸ್ಥೆ ಮತ್ತು ಸಮಾನಸಾಕ್ತರ ಸಹಕಾರದೊಂದಿಗೆ “ದಲಿತರು ಮತ್ತು ಉದ್ಯಮಶೀಲತೆ” ಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಮತ್ತು ಶಿಬಿರಗಳನ್ನು ನಡೆಸಿಕೊಟ್ಟಿತು. ನಮ್ಮ ಬಳಗದ ಬಿ. ಶ್ರೀಪಾದ ಭಟ್ಟರು ಇದರ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ಅದನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸಿದರು.

dalit-entrepreneurship-4ಹಾಸನ, ತುಮಕೂರು ಮತ್ತು ಮೈಸೂರಿನಲ್ಲಿ ಈ ಕಾರ್ಯಕ್ರಮಗಳಾದವು. ಚಿತ್ರದುರ್ಗ ಅಥವ ಬಳ್ಳಾರಿಯಲ್ಲಿ ನಡೆಸಬೇಕು ಎಂದುಕೊಂಡ ಕಾರ್ಯಕ್ರಮ ನಾನಾ ಕಾರಣಗಳಿಗಾಗಿ ಇನ್ನೂ ಆಗಿಲ್ಲ. ಇನ್ನು ಮುಂದಕ್ಕೆ ನಡೆಸುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ನಮಗೆಲ್ಲ ತುಂಬ ತೃಪ್ತಿ ಕೊಟ್ಟ ಕೆಲಸ ಅದು. ಇದರ ಬಹುತೇಕ ಖರ್ಚುಗಳನ್ನೆಲ್ಲ ಶ್ರೀಪಾದ ಭಟ್ಟರು ವಹಿಸಿಕೊಂಡಿದ್ದರು. ಮೈಸೂರಿನ ಕಾರ್ಯಕ್ರಮಕ್ಕೆ ನಾವಂದುಕೊಂಡದ್ದಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ನಾವೂ ಸಹ ಒಂದಷ್ಟು ಪಾಠ ಕಲಿತೆವು. ಹಿರಿಯ ಮಿತ್ರರಾದ ಜಿ.ವಿ.ಸುಂದರ್‌ರವರು ಆ ಕಾರ್ಯಕ್ರಮದ ಬಹುತೇಕ ಖರ್ಚನ್ನು ವಹಿಸಿಕೊಂಡು ಬಹಳ ಬೆಂಬಲ ಕೊಟ್ಟರು. ಸ್ಥಳೀಯರ ಸಹಕಾರ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ ಮತ್ತು ನಾವಂದುಕೊಂಡಂತೆ ಎಲ್ಲರೂ ಅಕಡೆಮಿಕ್ ಆಗಿಯೋ ಅಥವ ನಿಸ್ವಾರ್ಥವಾಗಿಯೋ ಚಿಂತಿಸಿ ನಡೆದುಕೊಳ್ಳುತ್ತಾರೆ ಎಂದು ಖಾತರಿ ಇಲ್ಲ. ಅಂದ ಹಾಗೆ, ಕವಿ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಎಲ್. ಹನುಮಂತಯ್ಯನವರು ಎರಡು ಕಡೆಯ ಕಾರ್ಯಕ್ರಮಗಳಿಗೆ ಬಂದು ನಮಗೆ ಒಳ್ಳೆಯ ಬೆಂಬಲ, ಸಹಕಾರ, ಮತ್ತು ಪ್ರೋತ್ಸಾಹ ಕೊಟ್ಟರು. ಅವರಿಗೆ ಮತ್ತು ಸಿ.ಜಿ.ಶ್ರೀನಿವಾಸನ್‌ರವರಿಗೂ ನಾವು ಕೃತಜ್ಞರು.

2012 ರ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದಿದ್ದ ಒಂದಷ್ಟು ಕತೆಗಳನ್ನು ಪುಸ್ತಕವಾಗಿ ತರೋಣ ಎಂದು ಶ್ರೀಪಾದ ಭಟ್ಟರು ಹೇಳುತ್ತಲೇ ಇದ್ದರು. katha sprade 2014ಆದರೆ ನನಗೆ ಹುಮ್ಮಸ್ಸಿರದ ಕಾರಣ ಅದು ಆಗಲಿಲ್ಲ. ಆದರೆ ನಮಗೆಲ್ಲ ಸಂತೋಷವಾಗುವಂತೆ 2013 ರ ಕಥಾಸ್ಪರ್ಧೆಯ ಸುಮಾರು ಇಪ್ಪತ್ತು ಕತೆಗಳು “ವರ್ತಮಾನದ ಕಥೆಗಳು” ಕಥಾಸಂಕಲನ ಪುಸ್ತಕವಾಗಿ ಹೊರಬಂದಿದೆ. ಇದಕ್ಕೆ ಕಾರಣರಾಗಿದು ರಾಮಲಿಂಗಪ್ಪ ಟಿ. ಬೇಗೂರರು. ಅವರಿಗೆ ಮತ್ತು ಪ್ರಕಾಶಕರಾದ “ಕಣ್ವ ಪ್ರಕಾಶನ”ದವರಿಗೆ ವರ್ತಮಾನ.ಕಾಮ್ ಬಳಗದ ಪರವಾಗಿ ಧನ್ಯವಾದಗಳು. ಈ ವರ್ಷ ಬರುವ ಕಥೆಗಳೂ ಪುಸ್ತಕವಾಗಿ ಬರುತ್ತದೆ ಎನ್ನುವ ನಂಬಿಕೆ ಈಗ ನಮ್ಮೆಲ್ಲರದು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು.

ಇನ್ನು, ಖರ್ಚಿನ ವಿಷಯ. ಸುಮಾರು ಆರೇಳು ಸಾವಿರ ರೂಪಾಯಿ ವರ್ತಮಾನ.ಕಾಮ್‌ನ ಡೊಮೈನ್ ಮತ್ತು ಹೋಸ್ಟಿಂಗ್‌ಗೆ ಖರ್ಚಾಗಿರಬಹುದು. ನನ್ನ ಇತರ ಹಲವು ವೆಬ್‍‌ಸೈಟುಗಳನ್ನು ಒಂದೇ ಹೋಸ್ಟಿಂಗ್‍ ಖಾತೆಗೆ ಸೇರಿಸಿದರೆ ನನಗೆ ತಿಂಗಳಿಗೆ ಕನಿಷ್ಟ ಎಂದರೂ ಸಾವಿರ ರೂಪಾಯಿ ಉಳಿಯುತ್ತದೆ. ಆದರೆ ಹಾಗೆ ಪೋರ್ಟ್ ಮಾಡಬೇಕಾದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಭಯ ಮತ್ತು ನನ್ನ ಸೋಮಾರಿತನದಿಂದಾಗಿ ಅದಿನ್ನೂ ಆಗಿಲ್ಲ. ಇದು ಬಿಟ್ಟರೆ, “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮಗಳಿಗೆ ಆಗಿರಬಹುದಾದ ವೆಚ್ಚಗಳು. ಆಗಲೆ ಹೇಳಿದಂತೆ ಅದರಲ್ಲಿ ಬಹುಪಾಲನ್ನು ಶ್ರೀಪಾದ ಭಟ್ಟರು ಮತ್ತು ಸುಂದರ್‌ರವರು ಭರಿಸಿದ್ದಾರೆ. ಮಿಕ್ಕಂತೆ ಏನು ಖರ್ಚಾಗಿದೆ ಎಂದು ನೆನಪಿಗೆ ಬರುತ್ತಿಲ್ಲ.

ಈಗ ಮುಖ್ಯ ವಿಷಯ: ವರ್ತಮಾನ.ಕಾಮ್ ಮುಂದುವರೆಯಬೇಕೇ, ಹೌದಾದಲ್ಲಿ ಹೇಗೆ? ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ನನ್ನ ರಾಜಕೀಯ ಚಟುವಟಿಕೆಗಳ ಕಾರಣವಾಗಿ ನಾನು ಇದಕ್ಕೆ ಕೊಡಬೇಕಾದಷ್ಟು ಸಮಯ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಬಳಗದ ಮಿತ್ರರು ಒಮ್ಮೆ ಸೇರಿ ಮಾತನಾಡೋಣ ಎಂದು ಕಳೆದ ಒಂದೆರಡು ತಿಂಗಳಿನಿಂದ ಸೂಕ್ತ ದಿನಕ್ಕೆ ಕಾಯುತ್ತಿದ್ದೇವೆ, ಅದು ಇನ್ನೂ ಆಗಿಲ್ಲ. ಅಂದ ಹಾಗೆ, ವರ್ತಮಾನ.ಕಾಮ್‌ನ ಯೋಚನೆ ಮತ್ತು ಯೋಜನೆ ನನಗೆ ಹೊಳೆದದ್ದೇ “ನಾವು ನಮ್ಮಲ್ಲಿ” ಬಳಗ 2011ರಲ್ಲಿ ಚಿತ್ರದುರ್ಗದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನಾನು ಮಾತನಾಡಬೇಕಾಗಿ ಬಂದ ಸಂದರ್ಭದಲ್ಲಿ. ಈ ವರ್ಷದ “ನಾವು ನಮ್ಮಲ್ಲಿ” ಕಾರ್ಯಕ್ರಮ ಇದೇ ತಿಂಗಳ 30 ಮತ್ತು 31 ರಂದು ಕೊಟ್ಟೂರಿನಲ್ಲಿ ಇದೆ ಎಂಬ ಮಾಹಿತಿ ಇದೆ. ಬಹುಶಃ ನಾವು ಅಲ್ಲಿಯೇ ಸೇರಿ ತಿರ್ಮಾನಿಸಬೇಕಿದೆ ಎನ್ನಿಸುತ್ತದೆ.

ಅಂದ ಹಾಗೆ, ನಿಮಗೇನನ್ನಿಸುತ್ತದೆ? ನಮ್ಮ ಓದುಗರಲ್ಲಿ ಮತ್ತು ಬೆಂಬಲಿಗರಲ್ಲಿ ಬಹುಪಾಲು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಶಾಂತ ಮತ್ತು ನಿಧಾನ ಸ್ವಭಾವದವರು ಎಂದು ಗೊತ್ತು! ಅದರೂ ಆಗಾಗ ಒಮ್ಮೊಮ್ಮೆ ಕೆಲವು ಅಭಿಪ್ರಾಯಗಳನ್ನೊ, ಅನಿಸಿಕೆಗಳನ್ನೊ, ಯೋಜನೆಗಳನ್ನೊ, ಹಂಚಿಕೊಂಡರೆ ಮುಂದಕ್ಕೆ ಹೇಗಿರಬೇಕು ಎಂದು ತೀರ್ಮಾನಿಸಲು ನಮಗೂ ಒಂದಷ್ಟು ಸಹಾಯ ಮಾಡಬಹುದು.

ಹಾಗೆ ಮಾಡುತ್ತೀರಿ ಎನ್ನುವ ನಿರೀಕ್ಷೆಯಲ್ಲಿ,

ನಮಸ್ಕಾರ ಮತ್ತು ಧನ್ಯವಾದಗಳು,
ರವಿ


ಕೆಪಿಎಸ್‍ಸಿ 2011 ರ ನೋಟಿಫಿಕೇಷನ್ ವಿಚಾರಕ್ಕೆ ಕಡೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ಸರ್ಕಾರ – ಒಂದು ಅವಲೋಕನ

– ರವಿ

ಕೆಪಿಎಸ್‌ಸಿ ವಿಚಾರಕ್ಕೆ ಕಡೆಗೂ ಸರ್ಕಾರ ಒಂದು ನಿರ್ಧಾರ ಕೈಗೊಂಡಿದೆ ಮತ್ತು ಅದು ಬಹಳ ದಿಟ್ಟ ನಿರ್ಧಾರವೂ ಆಗಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗಿರಲಿಲ್ಲ. ಹೊರಗೆ ಮತ್ತು ಒಳಗೆ ವಿಪರೀತ ಒತ್ತಡವಿತ್ತು. ಸಿದ್ಧರಾಮಯ್ಯನವರು ಮತ್ತವರ ಸಂಪುಟದ ಸಹೋದ್ಯೋಗಿಗಳು ಈ ವಿಚಾರದಲ್ಲಿ ಭ್ರಷ್ಟಾಚಾರವಿರೋಧಿ ನಿಲುವು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರೋ, ಅಥವ ಈ ನಿರ್ಧಾರ ತೆಗೆದುಕೊಳ್ಳದೆ ಬೇರೆ ವಿಧಿ ಇರಲಿಲ್ಲವೋ. ಅಂತೂ ಒಂದು ನಿರ್ಧಾರ ಬಂದಾಗಿದೆ ಮತ್ತು ಅದು ಕೆಪಿಎಸ್‌ಸಿಯಲ್ಲಿ ಕಳೆದ ಎರಡು-ಮೂರು ದಶಕಗಳಿಂದ ನಡೆದುಕೊಂಡು ಬಂದಿದ್ದ ಅವ್ಯಾಹತ ಅಕ್ರಮಗಳಿಗೆ ಸದ್ಯದ ಮಟ್ಟಿಗಾದರೂ ಕಡಿವಾಣ ಹಾಕಿದೆ.

ಇದೆಲ್ಲವೂ ಆರಂಭವಾಗಿದ್ದು ಮಂಗಳಾ ಶ್ರೀಧರ್ ಎನ್ನುವ ಆಗಿನ ಕೆಪಿಎಸ್‌ಸಿ ಸದಸ್ಯೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲಿ kpscಒಬ್ಬರಾಗಿದ್ದ ಮತ್ತು ಆ ಗುಂಪಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ. ಮೈತ್ರಿ ಎನ್ನುವವರ ಬಳಿ 75 ಲಕ್ಷ ರೂಪಾಯಿಯ ಲಂಚ ಕೇಳಿ, ಅವರು ಅದನ್ನು ಕೊಡದೆ ಇದ್ದದ್ದಕ್ಕೆ ಸಂದರ್ಶನದಲ್ಲಿ ಡಾ. ಮೈತ್ರಿಗೆ ಕೇವಲ 75 ಅಂಕಗಳನ್ನು ಕೊಟ್ಟು, ಎರಡನೆ ಸ್ಥಾನದಲ್ಲಿದ್ದ ಅಭ್ಯರ್ಥಿಗೆ 150 ಅಂಕಗಳನ್ನು ಕೊಟ್ಟ ಸಂದರ್ಭದಿಂದ. ಇದರಿಂದಾಗಿ ಡಾ. ಮೈತ್ರಿಯವರಿಗೆ ಮೊದಲ ದರ್ಜೆಯ ಹುದ್ದೆ ದೊರಕದೆ ಎರಡನೆಯ ದರ್ಜೆ ಹುದ್ದೆ ದೊರಕಿತು. ಅಂದ ಹಾಗೆ, ಲಿಖಿತ ಪರೀಕ್ಷೆಯಲ್ಲಿ ಮೈತ್ರಿ ಮತ್ತು ಅವರ ನಂತರದ ಅಭ್ಯರ್ಥಿಗೆ ಇದ್ದ ಅಂಕಗಳ ವ್ಯತ್ಯಾಸ 72 ಅಂಕಗಳು. ಅಂದರೆ ಡಾ. ಮೈತ್ರಿಯವರಿಗೆ ಸಂದರ್ಶನದಲ್ಲಿ 75 ರ ಬದಲಿಗೆ 79 ಅಂಕಗಳು ಬಂದಿದ್ದರೆ,  ಅಥವ ಅವರಿಗೆ ಎಪ್ಪತ್ತೈದೇ ಬಂದು 150 ಅಂಕ ಪಡೆದ ಎರಡನೇ ಅಭ್ಯರ್ಥಿಗೆ 146 ಅಂಕಗಳು ಬಂದಿದ್ದರೂ ಡಾ.ಮೈತ್ರಿಗೆ ಪ್ರಥಮ ದರ್ಜೆ ಹುದ್ದೆ ಖಾತರಿ ಆಗುತ್ತಿತ್ತು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಡಾ. ಮೈತ್ರಿ ಎಮ್‌ಬಿಬಿಎಸ್ ಮತ್ತು ಎಮ್‍ಡಿ ಮಾಡಿರುವಂತಹವರು, ಚೆನ್ನಾಗಿ ಮಾತನಾಡಬಲ್ಲಂತಹವರು, ನನಗೆ ನೆನ್ನೆ ಗೊತ್ತಾದ ಪ್ರಕಾರ ಸರ್ಕಾರಿ ಸೇವೆಯಲ್ಲಿ, ಅದರಲ್ಲೂ ತಹಶೀಲ್ದಾರ್/ಎಸಿಯಂತಹ ಒಳ್ಳೆಯ ಹುದ್ದೆಯಲ್ಲಿರುವಂತಹವರ ಮಗಳು. (ಅವರ ತಂದೆಯ ಮೇಲೆ ಮೂರು ಸಲ ಲೋಕಾಯುಕ್ತ ದಾಳಿ ಆಗಿದೆ, ಅವರೊಬ್ಬ ಭ್ರಷ್ಟ ಅಧಿಕಾರಿ ಎಂಬ ಮಾತುಗಳು ನೆನ್ನೆ ಮಾಧ್ಯಮದಲ್ಲಿ ಕೇಳಿಬಂದವು. ಅದನ್ನೂ ಇಲ್ಲಿ ದಾಖಲಿಸುತ್ತಿದ್ದೇನೆ.) ಹಾಗಾಗಿ ಡಾ. ಮೈತ್ರಿಗೆ 75 ಅಂಕಗಳನ್ನು ಕೊಟ್ಟು ಎರಡನೆಯ ಅಭ್ಯರ್ಥಿಗೆ 150 ಅಂಕಗಳನ್ನು, ಅದೂ ಎಲ್ಲಾ ಸಂದರ್ಶಕರೂ ಒಂದೇ ಅಂಕಗಳನ್ನು ಕೊಡುವುದರ ಹಿಂದೆ ಅಕ್ರಮ ಮತ್ತು ಭ್ರಷ್ಟಾಚಾರ ಇಲ್ಲದೇ ಇರಲು ಸಾಧ್ಯವೇ ಇಲ್ಲ.

(ಮತ್ತು ಅಕ್ರಮಗಳು ಸಂದರ್ಶನದ ಹಂತದಲ್ಲಿಯಷ್ಟೇ ಆಗಿಲ್ಲ. ಲಿಖಿತ ಪರೀಕ್ಷೆಗಳಲ್ಲೂ ಆಗಿದೆ. ಬಹುಶಃ ಲಿಖಿತ ಪರಿಕ್ಷೆಯ ಮೌಲ್ಯಮಾಪನ ಸಂದರ್ಬದಲ್ಲಿಯೇ ಯಾರನ್ನು ಆಯ್ಕೆ ಮಾಡಬೇಕು ಮತ್ತು ಅದಾಗಬೇಕಾದರೆ ಯಾರಿಗೆ ಎಷ್ಟು ಅಂಕಗಳನ್ನು ಕೊಡಬೇಕು ಎಂದು ತೀರ್ಮಾನವಾಗಿದೆ. ಇದಕ್ಕೆ ವರ್ತಮಾನ.ಕಾಮ್‌ನಲ್ಲಿ ಲಭ್ಯವಿರುವ ಈ ವರದಿಯನ್ನು ಗಮನಿಸಬಹುದು.)

ಆಗ ಡಾ.ಮೈತ್ರಿ ಇದನ್ನು ಮಾಧ್ಯಮಗಳ ಗಮನಕ್ಕೆ ತಂದರು, ನಂತರ ಸರ್ಕಾರದ ಗಮನಕ್ಕೂ ತಂದರು. ಆಗ ತಾನೆ ಪರಮಭ್ರಷ್ಟ ಬಿಜೆಪಿಯನ್ನು ಆಡಳಿತದಿಂದ ಹೊರಗಟ್ಟಿ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿತ್ತು. KPSC-CID-Reportಒತ್ತಡ ಹೆಚ್ಚಾಗಿ ಮುಖ್ಯಮಂತ್ರಿಗಳು 2013ರ ಜೂನ್‌ನಲ್ಲಿ ಸಿಐಡಿ ತನಿಖೆಗೆ ಆದೇಶ ಕೊಟ್ಟರು.

ರಾಜಕೀಯ ಮತ್ತು ಹಣದ ಪ್ರಭಾವ ಇರುವ ಬಹುತೇಕ ಹಗರಣಗಳಲ್ಲಿ ಸಿಐಡಿ ತನಿಖೆ ಎನ್ನುವುದು ನಾಮಕಾವಸ್ತೆ ತನಿಖೆ. ಅನೇಕ ವರದಿಗಳು ಕಸದ ಬುಟ್ಟಿ ಸೇರಿವೆ. ಬಹುಶಃ ಸಿಬಿಐ ತನಿಖೆಗಳದೂ ಇದೇ ಗತಿ ಇರಬಹುದು. ನಮ್ಮ ರಾಜ್ಯದಲ್ಲಿಯಂತೂ ಬಹುತೇಕ ಸಿಐಡಿ ತನಿಖೆಗಳಲ್ಲಿ ತನಿಖೆ ಆರಂಭಿಸುವುದಕ್ಕೆ ಮೊದಲು ತಮಗೆ ಬೇಕಾದ ಹಾಗೆ ವರದಿಯನ್ನು ಸಿದ್ದಪಡಿಸಿಕೊಂಡು ನಂತರ ಆ ವರದಿಗೆ ಹೊಂದುವಂತೆ ತನಿಖೆಯ ನಾಟಕ ಆಡಲಾಗುತ್ತದೆ. ಆದರೆ ಅಪರೂಪಕ್ಕೆಂಬಂತೆ ಈ ವಿಷಯದಲ್ಲಿ ಸಿಐಡಿ ಇಲಾಖೆ ಅತ್ಯುತ್ತಮ ಎನ್ನಬಹುದಾದ ಮಧ್ಯಂತರ ವರದಿ ನೀಡುತ್ತದೆ. ಅದರಲ್ಲಿ ಬೆಚ್ಚಿಬೀಳಿಸುವ ಸಂಗತಿಗಳನ್ನು ಸಾಕ್ಷ್ಯಗಳ ಸಮೇತ ಹೊರಹಾಕಲಾಗುತ್ತದೆ. ಆದರೆ, ಆ ವರದಿ ಬಹಿರಂಗವಾಗುವುದಿಲ್ಲ.

ಬಹಿರಂಗವಾಗಬೇಕಿದ್ದ, ಸಾರ್ವಜನಿಕರ ಗಮನಕ್ಕೆ ಬರಬೇಕಾಗಿದ್ದ ವರದಿಯನ್ನು ಸರ್ಕಾರ ಮುಚ್ಚಿಡುತ್ತದೆ. ಅದು ಹೇಗೋ ಆ ವರದಿ ಪ್ರಜಾವಾಣಿ ಪತ್ರಿಕೆಯವರಿಗೆ ಸಿಗುತ್ತದೆ. ಸರ್ಕಾರದಲ್ಲಿದ್ದರೂ ಅಲ್ಲಿಯ ಅನ್ಯಾಯಗಳನ್ನು ಸಹಿಸದ ವಿಸಲ್ ಬ್ಲೋವರ್ಸ್ ಮೊದಲಿನಿಂದಲು ಇದ್ದಾರೆ. ಈ ವಿಷಯದಲ್ಲೂ ಹಾಗೆಯೇ ಆಗುತ್ತದೆ. ಪ್ರಜಾವಾಣಿಯ ಪತ್ರಕರ್ತ ರವೀಂದ್ರ ಭಟ್ಟರು ಇದರ ಬಗ್ಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ (?) ಸರಣಿ ಲೇಖನಗಳನ್ನೇ ಬರೆಯುತ್ತಾರೆ. ಆಗ ಇಡೀ ರಾಜ್ಯವೇ ಬೆಚ್ಚಿಬೀಳುತ್ತದೆ.

ಆ ಸಮಯದಲ್ಲಿ ನಾನು ಲೋಕಸತ್ತಾ ಪಕ್ಷದಲ್ಲಿದ್ದೆ. ಆ ಸರಣಿ ಲೇಖನಗಳನ್ನು ಓದಿ ನಾನು ಮತ್ತು ನನ್ನ ಆಗಿನ kpsc-loksatta-pressmeet-26122013ಸಹೋದ್ಯೋಗಿಗಳು ಸಹ ಬೆಚ್ಚಿಬಿದ್ದಿದ್ದೆವು. ಈ ವಿಚಾರವಾಗಿ ಏನಾದರೂ ಮಾಡಬೇಕು ಎಂದು ಚರ್ಚಿಸಿ ಒಂದು ಪತ್ರಿಕಾಗೋಷ್ಟಿ ಕರೆದು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆವು. ಅದಾದ ನಂತರ ಆ ಮಧ್ಯಂತರ ವರದಿ ನಮ್ಮ ಕೈಗೂ ಸಿಕ್ಕಿತು. ಅದರ ಪ್ರಮುಖ ಭಾಗಗಳನ್ನು ಆಯ್ದು, ಅಷ್ಟನ್ನೇ ಬಿಡುಗಡೆ ಮಾಡಿ, ಸರ್ಕಾರ ಸಿಐಡಿ ವರದಿಯನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದಲ್ಲಿ ನಾವೇ ಬಿಡುಗಡೆ ಮಾಡುತ್ತೇವೆ ಎಂದು ಮತ್ತೊಂದು ಪತ್ರಿಕಾಗೋಷ್ಟಿ ಮಾಡಿದೆವು. ಸರ್ಕಾರ ಏನೂ ಮಾಡಲಿಲ್ಲ. ನಾಲ್ಕು ದಿನಗಳ ನಂತರ ಮತ್ತೊಂದು ಪತ್ರಿಕಾಗೋಷ್ಟಿ ಮಾಡಿ ಇಡೀ ವರದಿಯನ್ನೇ ಬಿಡುಗಡೆ ಮಾಡಿ, ಮತ್ತು ಅದನ್ನು ವೆಬ್‌ಸೈಟ್‌ನಲ್ಲೂ ಹಾಕಿ, ಪತ್ರಿಕಾಗೊಷ್ಟಿಯ ನಂತರ ಲೋಕಸತ್ತಾ ಪಕ್ಷದ ಸುಮಾರು ಇಪ್ಪತ್ತು ಕಾರ್ಯಕರ್ತರ ಜೊತೆ ವಿಧಾನಸೌಧದ ಪಕ್ಕದಲ್ಲಿಯೇ ಇರುವ ಕೆಪಿಎಸ್‍‌ಸಿ ಕಟ್ಟಡಕ್ಕೆ ಹೋಗಿ, ಅದರ ಗೇಟ್ ಹಾಕಿ, ಅದಕ್ಕೆ ಮಪ್ಲರ್ ಸುತ್ತಿ, ಅದರ ಮುಂದೆಯೇ ಧರಣಿ ಕುಳಿತೆವು. ಇಂತಹ ಪ್ರತಿಭಟನೆ ಮತ್ತು ಧರಣಿಗಳಿಗೆ ವಿಧಾನಸೌಧದ ಸುತ್ತಮುತ್ತ ಆಸ್ಪದ ಇಲ್ಲ. KPSC-bribe-ratesಕೂಡಲೆ ಪೋಲಿಸರು ಮತ್ತು ಮಾಧ್ಯಮದವರು ಬಂದರು. ಸ್ವಲ್ಪ ಮಾತು-ಕತೆ-ಘೋಷಣೆ-ವಿನಂತಿಯ ನಂತರ ಧರಣಿ ಕೈಬಿಟ್ಟೆವು. ಅಂದು ಮೊದಲ ಬಾರಿಗೆ ಈ ಅಕ್ರಮಗಳಿಂದಾಗಿ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ನಮ್ಮ ಜೊತೆ ಬಂದಿದ್ದರು.

ಅದರ ಮುಂದಿನ ವಾರ ಲೋಕಸತ್ತಾ ಪಕ್ಷ ಪ್ರತಿಭಟನೆಯನ್ನು ತೀವ್ರವಾಗಿಸಿತು. ಈ ಹಗರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವನ್ನು ವಿರೋಧಿಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಆಯೋಜಿಸಿದೆವು. ಶಿವಾನಂದ ಸರ್ಕಲ್‌ ಬಳಿ ಹತ್ತೂವರೆಗೆ ಸಭೆ ಸೇರಿ ಮುಖ್ಯಮಂತ್ರಿಯ ಮನೆಗೆ ಜಾಥಾ ಹೊರಡುವುದು ಎಂದು ತೀರ್ಮಾನಿಸಲಾಯಿತು. ಮಾಧ್ಯಮದವರಿಗೆಲ್ಲ ಹನ್ನೊಂದು ಗಂಟೆಗೆ ಎಂದು ತಿಳಿಸಿದ್ದೆವು. ನಾವೊಂದಷ್ಟು ಜನ ಹತ್ತಕ್ಕೆಲ್ಲ ಶಿವಾನಂದ ಸರ್ಕಲ್‌ನ ಪಕ್ಕದ ರಸ್ತೆಯಲ್ಲಿ ಬ್ಯಾನರ್, ಘೋಷಣಾ ಪತ್ರ ಇತ್ಯಾದಿಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದೆವು. ಹತ್ತೂವರೆ ಸುಮಾರಿಗೆ ಹತ್ತಿಪ್ಪತ್ತು ಜನ ಶಿವಾನಂದ ಸರ್ಕಲ್‌ಗೆ ಬಂದರು. ಆಗ ಎಲ್ಲಿದ್ದರೋ ನೂರಾರು ಪೋಲಿಸರು ಬಂದು ಅಲ್ಲಿ ಶಾಂತಿಯುತವಾಗಿ ನಿಂತಿದ್ದ ಎಲ್ಲರನ್ನೂ ಬಲವಂತವಾಗಿ ಪೋಲಿಸ್ ವ್ಯಾನಿಗೆ ತಳ್ಳಿದರು. ನಾನು ನನ್ನ ಮಕ್ಕಳಿಬ್ಬರ ಜೊತೆ ಅಲ್ಲಿದ್ದೆ. ಮಕ್ಕಳೂ ನನ್ನ ಜೊತೆ ಪೋಲಿಸ್ ವ್ಯಾನ್ ಹತ್ತಿದರು. ಸುಮಾರು ಮೂರು ವಾಹನಗಳಲ್ಲಿ 60-70 ಜನರನ್ನು ಬಂಧಿಸಿ ಆಡುಗೋಡಿಯ ಪೋಲಿಸ್ ಶೆಡ್ ಒಂದಕ್ಕೆ ಕರೆದುಕೊಂಡು ಬಂದರು. ಪೋಲಿಸರೇ ಮಧ್ಯಾಹ್ನದ ಚಿತ್ರಾನ್ನ ಕೊಟ್ಟರು. ಅಂದು ಬಂಧನಕ್ಕೊಳಗಾದವರಲ್ಲಿ ಲೋಕಸತ್ತಾ ಪಕ್ಷ ಕಾರ್ಯಕರ್ತರು ಮತ್ತು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಸಮಸಂಖ್ಯೆಯಲ್ಲಿದ್ದರು. ನಮಗೆ ಪಾಠ ಕಲಿಸುವ ತೀರ್ಮಾನ ಮಾಡಿದ್ದ ಪೋಲಿಸರು ಸಂಜೆ ಆರು ಗಂಟೆ ಆದರೂ ಬಿಡಲಿಲ್ಲ. ಆದಷ್ಟು ಬೇಗ ನಮ್ಮನ್ನು ಬಿಡುಗಡೆ ಮಾಡಲಿಲ್ಲವಾದರೆ ನಾವು ಇಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಮತ್ತು ಇಲ್ಲಿಂದ ಕದಲುವುದಿಲ್ಲ ಎಂದು ಕಠಿಣನಿರ್ಧಾರದ ಮಾತುಗಳನ್ನು ಹೇಳಿದಾಗ ಕೂಡಲೆ ಪೋಲಿಸರು ಶಿವಾನಂದ ಸರ್ಕಲ್‌ಗೆ ವಾಪಸು ಕರೆತಂದು ಬಿಟ್ಟರು.

ಆಗಲೂ ಸರ್ಕಾರದ ಯಾವೊಂದು ಅಂಗವೂ ಕದಲಿದ ಲಕ್ಷಣ ಕಾಣಲಿಲ್ಲ.

ನಂತರದ ಹೋರಾಟದ ಮಾರ್ಗವಾಗಿ ಲೋಕಸತ್ತಾ ಪಕ್ಷ ಮೂರು ದಿನಗಳ ಕಾಲದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ಆಯೋಜಿಸಿತು. kpsc-hunger-strike-hiremathಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಯ ಬಳಿ ಡಿಸೆಂಬರ್ 28, 2013 ರ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನನ್ನನ್ನೂ ಒಳಗೊಂಡಂತೆ ಆರೇಳು ಜನ ಉಪವಾಸ ಕುಳಿತೆವು. ರಾಜ್ಯದ ಅನೇಕ ಕಡೆಗಳಿಂದ ಜನ ಬಂದರು. ಎರಡು ರಾತ್ರಿ, ಮೂರು ದಿನಗಳ, ಅಹೋರಾತ್ರಿ ಉಪವಾಸ ಸತ್ಯಾಗ್ರಹ ಅದು. ರಾತ್ರಿ ಹೊತ್ತು ಮರಗಟ್ಟಿಸುವ ಚಳಿಗಾಲ ಅದು. ಸತ್ಯಾಗ್ರಹಿಗಳಲ್ಲಿ ಬಹುತೇಕರಿಗೆ ಅದು ಮೊದಲ ಸತ್ಯಾಗ್ರಹ. ಎರಡನೆ ದಿನದ ಅಂತ್ಯಕ್ಕೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಪೋಲಿಸರು ಹೇಳಿದರು. ಆದರೆ ಅದೊಂದು ದೊಡ್ಡ ಅಧಿಕಪ್ರಸಂಗ ಮತ್ತು ನಿರರ್ಥಕ ಕಲಾಪವಾಯಿತು. ಮೂರನೆಯ ದಿನದ ಅಂತ್ಯಕ್ಕೆ ಎಸ್.ಆರ್.ಹಿರೇಮಠರು ಆಗಮಿಸಿ ಹಲವು ತಾಸುಗಳನ್ನು ನಿರಶನದಾರರೊಂದಿಗೆ ಕಳೆದು, ಉಪವಾಸ ಮಾಡುತ್ತಿದ್ದವರಿಗೆ ಹಣ್ಣಿನ ರಸ ಕುಡಿಸಿ, ಸತ್ಯಾಗ್ರಹ ಅಂತ್ಯಗೊಳಿಸಲು ಹೇಳಿದರು. ಅಂದು ರಾತ್ರಿ ಕೆಲವು ಚಾನಲ್‌ಗಳಲ್ಲಿ ಒಳ್ಳೆಯ ಚರ್ಚೆಗಳಾದವು. ಎಸ್.ಆರ್.ಹಿರೇಮಠರು ಮತ್ತು ಎಚ್.ಎಸ್.ದೊರೆಸ್ವಾಮಿಯವರು ಈ ಹೋರಾಟವನ್ನು ಬೆಂಬಲಿಸಿದರು.

ಲೋಕಸತ್ತಾ ಪಕ್ಷದ ಕಾರಣದಿಂದಾಗಿ ಈ ವಿಚಾರ ರಾಜ್ಯದ ಬಹುತೇಕ ಕಡೆ ಮತ್ತೊಮ್ಮೆ, ಮಗದೊಮ್ಮೆ ಚರ್ಚೆಯಾಯಿತು. KPSC-loksatta-met-governorಒಮ್ಮೆ ಧಾರವಾಡಕ್ಕೂ ಹೋಗಿ ಅಲ್ಲಿ ಜಿಲ್ಲಾಧಿಕಾರಿಯ ಕಛೇರಿ ಮುಂದೆ ಧರಣಿ ಕುಳಿತು, ಹೋರಾಟವನ್ನು ಅಲ್ಲಿಗೂ ವಿಸ್ತರಿಸುವ ಪ್ರಯತ್ನ ಆಯಿತು. ನಿಯೋಗವೊಂದು ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿತು. ಗೋನಾಳ್ ಭೀಮಪ್ಪರ ಮನೆಯ ತನಕ ಬೈಕ್ ರ್ಯಾಲಿ ಮಾಡಿ, ಧರಣಿ ಮಾಡಿ, ಘೋಷಣೆ ಕೂಗಿ ಬಂದೆವು. ಮಾಧ್ಯಮಗಳು ಇವೆಲ್ಲವನ್ನೂ ವರದಿ ಮಾಡುತ್ತ ಬಂದವು.

ಈ ಮಧ್ಯೆ ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಿತು. ಅವರ ಅಭಿಪ್ರಾಯದ ಆಧಾರದ ಮೇಲೆ ಮರುಮೌಲ್ಯಮಾಪನ ಮತ್ತು ಮರುಸಂದರ್ಶನ ಮಾಡುವಂತೆ ಸರ್ಕಾರ ಕೆಪಿಎಸ್‍ಸಿಗೆ ಪತ್ರ ಬರೆಯಿತು. ಕೆಪಿಎಸ್‍ಸಿಯ ಸದಸ್ಯರು ಆ ಮನವಿಯನ್ನು ಕಸದ ಬುಟ್ಟಿಗೆ ಎಸೆದರು.

ಅದಾದ ಕೆಲವು ವಾರಗಳ ನಂತರ ನಾನು ಆಮ್ ಆದ್ಮಿ ಪಕ್ಷ ಸೇರಿದೆ. ಈ ಮಧ್ಯೆ ಸಂತ್ರಸ್ತ ಅಭ್ಯರ್ಥಿಗಳು ಹೋರಾಟ ಮಾಡುತ್ತಲೇ ಇದ್ದರು. ಮಂತ್ರಿಗಳನ್ನು ಕಾಣುವುದು, ಅಧಿಕಾರಿಗಳನ್ನು ಭೇಟಿ ಮಾಡುವುದು, ಸಭೆಗಳನ್ನು ಏರ್ಪಡಿಸುವುದು, ಇತ್ಯಾದಿ. ವಿಜಯನಗರದಲ್ಲಿ ನಡೆದ ಒಂದು ಸಬೆಯಲ್ಲಿ ಇಡೀ ಆಡಿಟೋರಿಯಮ್ ತುಂಬಿತ್ತು. ದೊರೆಸ್ವಾಮಿ, ಹಿರೇಮಠ್, ರವೀಂದ್ರ ಭಟ್ಟ, ಲೋಕಸತ್ತಾದ ದೀಪಕ್, ನಾನು, ಮತ್ತಿತರರು ಅಲ್ಲಿ ಮಾತನಾಡಿ ಅಕ್ರಮದ ವಿರುದ್ಧ ಗಟ್ಟಿ ಧನಿ ಎತ್ತಿದರು.

ಈ ಮಧ್ಯೆ, ಸಿಐಡಿಯ ಮೇಲೆ ಅಂತಿಮ ವರದಿ ಸಲ್ಲಿಸದಂತೆ ಮತ್ತು ನಿಧಾನಗೊಳಿಸುವಂತೆ ಒತ್ತಡಗಳಿವೆ ಎಂದು ನಮಗೆ ಗೊತ್ತಾಯಿತು. ಆಮ್ ಆದ್ಮಿ ಪಕ್ಷದಿಂದ ಪತ್ರಿಕಾಗೋಷ್ಟಿ ಕರೆದು ನಾವು ಅದನ್ನು ಖಂಡಿಸಿದೆವು. ಕೆಪಿಎಸ್‍‌ಸಿಯಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆಯೂ ನಾವೊಂದಷ್ಟು ಜನ ಧ್ವನಿಯೆತ್ತುತ್ತಲೇ ಬಂದಿದ್ದೆವು. ಹಲವು ಪತ್ರಿಕಾಗೋಷ್ಟಿಗಳಾದವು. ಆಗಾಗ ಹಳಬರು ಹೊಸಬರು ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು. ಆಮ್ ಆದ್ಮಿ ಪಕ್ಷದಿಂದ ಸಾಧ್ಯವಾದಾಗಲೆಲ್ಲ ನಾವೂ ಜೊತೆಯಾಗಿ ಧ್ವನಿಗೂಡಿಸುತ್ತಿದ್ದೆವು. ಲೋಕಸತ್ತಾ ಪಕ್ಷದ ಕಾರ್ಯದರ್ಶಿ ದೀಪಕ್ ನಾಗರಾಜರೂ ದಿಟ್ಟವಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳನ್ನು ಬೆಂಬಲಿಸುತ್ತ, ಅವರ ಹೋರಾಟದಲ್ಲಿ ಎಂದಿಗೂ ಜೊತೆಯಾಗಿಯೇ ಇದ್ದರು. ಅಂತಿಮವಾಗಿ ಸಿಐಡಿ ಸಹ 10500 ಪುಟಗಳ ಚಾರ್ಚ್‌ಶೀಟ್ ಸಹ ಹಾಕಿತು. ಮಂಗಳಾ ಶ್ರೀಧರ್ ವಜಾ ಆದರು. ಕೆಪಿಎಸ್‍‌ಸಿ ತನ್ನೆಲ್ಲ ಅಹಂಕಾರವನ್ನು ಒಟ್ಟುಗೂಡಿಸಿಕೊಂಡು ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆಗ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳು ಇನ್ನಷ್ಟು ಚುರುಕಾದರು. ಆ ಅಭ್ಯರ್ಥಿಗಳೂ ಉಪವಾಸ, ಧರಣಿ ಕೈಗೊಂಡು ಅವರೂ ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದರು. ಸರ್ಕಾರದ ಕೆಲವು ಪ್ರಭಾವಿ ಮಂತ್ರಿಗಳೂ ಅವರ ಪರ ಇದ್ದರು. ಧರಣಿ ಸ್ಥಳಕ್ಕೂ ಬಂದು ಬೆಂಬಲ ಕೊಟ್ಟು ಹೋದರು.  ಪಕ್ಷಾತೀತವಾಗಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನ ಹತ್ತುಹಲವು ಭ್ರಷ್ಟ ರಾಜಕಾರಣಿಗಳು ಅವರ ಬಳಿ ಹೋಗಿ ಕಳೆದ ಇಪ್ಪತ್ತು ದಿನಗಳಿಂದ ಅವರಿಗೆ ಬೆಂಬಲ ಕೊಡುತ್ತಾ ಬಂದರು.

ಪಟ್ಟಿಯನ್ನು ಒಪ್ಪಿಕೊಳ್ಳಬೇಕೊ, ತಿರಸ್ಕರಿಸಬೇಕೊ ಎನ್ನುವ ವಿಷಯಕ್ಕೆ ಸಚಿವಸಂಪುಟದ ಏಳೆಂಟು ಸಭೆಗಳಲ್ಲಿ ಚರ್ಚೆ ಆಗಿರಬಹುದು. kpsc-scandalಒಂದು ತೀರ್ಮಾನಕ್ಕೆ ಬರಲು ಸರ್ಕಾರಕ್ಕೆ ಆಗಲಿಲ್ಲ. ಈ ಮಧ್ಯೆ ಕೇಸು ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಅಂತಿಮವಾಗಿ ನೆನ್ನೆ ಸರ್ಕಾರ ತೀರ್ಮಾನ ಮಾಡಿತು.

ಲಂಚ ಕೊಡದೆ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಸೇರಿಕೊಂಡ ಜನರೇ ಕೋಟಿಶತಕೋಟಿ ಭ್ರಷ್ಟಾಚಾರ ಮಾಡುವಾಗ, ಇನ್ನು ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಲಂಚ ಕೊಟ್ಟು ಕೆಲಸಕ್ಕೆ ಸೇರಿಕೊಳ್ಳುವವರು ಭ್ರಷ್ಟಾಚಾರ ಎಸಗದೆ ಪ್ರಾಮಾಣಿಕರಾಗಿರುತ್ತಾರೆ ಎಂದುಕೊಳ್ಳುವುದು ದಡ್ಡತನ. ಈ ಚಾರಿತ್ರಿಕ ನಿರ್ಧಾರದ ಮೂಲಕ ಸರ್ಕಾರ ಒಂದು precedent ಹಾಕಿಕೊಟ್ಟಿದೆ. ಇದೇ ರೀತಿಯಲ್ಲಿ ಎಲ್ಲಾ ಹಗರಣಗಳಲ್ಲೂ ಭ್ರಷ್ಟಾಚಾರ ವಿರೋಧಿ ನಿಲುವನ್ನು ಈ ಸರ್ಕಾರ ತೆಗೆದುಕೊಂಡು ಈ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲಿ ಎಂದು ಆಶಿಸುತ್ತೇನೆ, ಮತ್ತು ನೆನ್ನೆಯ ತೀರ್ಮಾನಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಹಾಗೆಯೇ, ಇಂತಹ ಬಹುದೊಡ್ದ ಹಗರಣವನ್ನು ಬಯಲಿಗೆಳೆಯಲು ಮತ್ತು ಕ್ರಮ ಕೈಗೊಳ್ಳಲು ಪ್ರಮುಖ ಕಾರಣರಾದ ಡಾ.ಮೈತ್ರಿ, ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ, ಅತ್ಯುತ್ತಮವಾದ ಪ್ರಾಮಾಣಿಕ ವರದಿ ಕೊಟ್ಟ ಸಿಐಡಿ ಇಲಾಖೆ, ಅದನ್ನು ಜನರ ಮುಂದೆ ಅನಾವರಣ ಮಾಡಿದ ಪ್ರಜಾವಾಣಿ ಮತ್ತು ರವೀಂದ್ರ ಭಟ್ಟ, ಹೋರಾಟ ಮಾಡಿದ ಅಭ್ಯರ್ಥಿಗಳು, ಬಿ.ಕೆ.ಚಂದ್ರಶೇಖರ್, ಲೋಕಸತ್ತಾ ಪಕ್ಷ, ಆಮ್ ಆದ್ಮಿ ಪಕ್ಷ, ಹಾಗೂ ಅಂತಿಮವಾಗಿ ಅನ್ಯಾಯದ ವಿರುದ್ಧ ನಿಲ್ಲಲು ಧೈರ್ಯ ಮಾಡಿದ ಸಿದ್ಧರಾಮಯ್ಯ ಮತ್ತವರ ಸಚಿವಸಂಪುಟಕ್ಕೆ ಅಭಿನಂದನೆಗಳು ಸಲ್ಲುತ್ತವೆ.