Category Archives: ರವಿ ಕೃಷ್ಣಾರೆಡ್ಡಿ

ವರ್ತಮಾನದ ಕಥೆಗಳು: ಪುಸ್ತಕ ಸಮೀಕ್ಷೆ

[ವರ್ತಮಾನ.ಕಾಮ್ ನಡೆಸಿದ “ಗಾಂಧಿ ಜಯಂತಿ ಕಥಾಸ್ಪರ್ಧೆ – 2013″ಕ್ಕೆ ಬಂದ ಹಲವು ಕತೆಗಳನ್ನು ಸೇರಿಸಿ “ವರ್ತಮಾನದ ಕಥೆಗಳು” ಸಂಕಲನವಾಗಿ ಪ್ರಕಟಿಸಿರುವುದು ತಮಗೆಲ್ಲ ತಿಳಿದಿದೆ. ಇದು ಅದೇ ಪುಸ್ತಕದ ಬಗೆಗಿನ ವಿಮರ್ಶೆ-ಸಮೀಕ್ಷೆ. ರವಿ]

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಆಧುನಿಕ ಕನ್ನಡ ಸಂದರ್ಭದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಲ್ಲಿ ಸಣ್ಣಕಥೆಯೂ ಒಂದು. ಈ ಮಾದರಿಯ ಕಥೆಗಳನ್ನು ಕನ್ನಡದಲ್ಲಿ ಯಾರು ಮೊದಲು ಬರೆದರು, ಕನ್ನಡದಲ್ಲಿ ಈ ಪ್ರಕಾರದಲ್ಲಿ ಸಶಕ್ತವಾಗಿ ಬರೆದವರು ಮತ್ತು ಬರೆಯುತ್ತಿರುವವರು ಯಾರು ಎನ್ನುವ ಖ್ಯಾತನಾಮರ ಚರ್ಚೆಗಳನ್ನು ಕನ್ನಡ ವಿಮರ್ಶಾಜಗತ್ತು ಸಾಕಷ್ಟು ಬಾರಿ ಚರ್ಚಿಸಿದೆ ಮತ್ತು ತನ್ನದೇ ಆದ ತೀರ್ಮಾನಗಳನ್ನೂ ದಾಖಲಿಸಿದೆ. ಆದರೆ ಈ ಸಿದ್ಧಪ್ರಸಿದ್ಧರು ಹಾಕಿಕೊಟ್ಟ ಸಣ್ಣಕಥೆ ಪ್ರಕಾರದ ಚೌಕಟ್ಟಿನ ಗಂಭೀರ ಅಭ್ಯಾಸದ ಅಗತ್ಯವಿಲ್ಲದೆಯೂ, ಕಥೆಹೇಳುವ ತುಡಿತದಿಂದಾಗಿ ಕvartamaanada-kathegalu-2013-coverನ್ನಡದಲ್ಲಿ ಮತ್ತೆ ಮತ್ತೆ ಕಥೆಗಳು ಹುಟ್ಟುತ್ತಲೇ ಇವೆ. ಹೀಗೆ ಹುಟ್ಟುತ್ತಿರುವ ಬಹುಮಟ್ಟಿನ ಕಥೆಗಳು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳದ ಹೊರವರ್ತುಲದಿಂದಲೂ ಬರುತ್ತಿವೆ. ಕಥೆ ಹೇಳುವ ತುರ್ತಿನಲ್ಲಿ ಹುಟ್ಟುತ್ತಿರುವ ಈ ಕಥೆಗಳು ಅನೇಕ ವೇಳೆ ಕಲೆಗಾರಿಕೆಗಿಂತ ಎಲ್ಲವನ್ನೂ ಹೇಳಿಬಿಡುವ ಹಪಾಹಪಿಯಲ್ಲಿ ವಾಚ್ಯವಾಗುವುದನ್ನು ತಪ್ಪಿಸಿಕೊಳ್ಳಲಾರದ ಸಂಕಟವನ್ನು ಅನುಭವಿಸುವುದಿದೆ. ಆದರೆ ಈ ಕಥೆಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಅವುಗಳಲ್ಲಿ ತಮ್ಮ ಕಾಲದ ಆಗುಹೋಗುಗಳ ಬಗೆಗೆ ತಮ್ಮದೇ ಆದ ತಾತ್ವಿಕ ಹಾಗೂ ವೈಚಾರಿಕ ಖಚಿತತೆಯನ್ನೂ ತೋರಬಲ್ಲ ಗುಣಗಳಿವೆ. ಗಾಂಧಿ ಕಥಾಸ್ಪರ್ಧೆಯ ನೆವದಲ್ಲಿ ಟಿ.ರಾಮಲಿಂಗಪ್ಪ ಬೇಗೂರು ಹಾಗೂ ರವಿ ಕೃಷ್ಣಾರೆಡ್ಡಿ ಸಂಪಾದಿಸಿ, ಕಣ್ವ ಪ್ರಕಾಶವು ಬಿಡುಗಡೆ ಮಾಡಿದ ವರ್ತಮಾನದ ಕಥೆಗಳು ಸಂಕಲನದಲ್ಲಿನ ಕಥೆಗಳು ಈ ಎಲ್ಲಾ ಮಾತುಗಳಿಗೆ ಸಾಕ್ಷಿಯಂತಿವೆ.

ಈ ಸಂಕಲನದಲ್ಲಿನ ಎಲ್ಲಾ ಕಥೆಗಳು ಸ್ಪರ್ಧೆಯ ನಿಮಿತ್ತವಾಗಿ ಬರೆದ ಕಥೆಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಥಿತಿಯ ಕಥೆಗಾರರ ಕಥೆಗಳೂ ಹೌದು. ಹಾಗೆಂದ ಮಾತ್ರಕ್ಕೆ ಅವೆಲ್ಲವೂ ಯಾಂತ್ರಿಕವಾದ ಸ್ಪರ್ಧಾಪೇಕ್ಷೆಯಿಂದಷ್ಟೇ ಹುಟ್ಟಿದವುಗಳೆಂದೇನೂ ಅಲ್ಲ. ಈ ಕಥಾಸಂಕಲವನ್ನು ಅಚ್ಚುಕಟಾಗಿ ಸಂಪಾದಿಸಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆಯುವ ಮೂಲಕ ರಾಮಲಿಂಗಪ್ಪ ಬೇಗೂರು ಅವರು ಈ ಕಥೆಗಳನ್ನು ಓದುವ ಓದುಗರಿಗೆ ಕಥೆಗಳ ಮಿತಿ ಮತ್ತು ಸಾಧ್ಯತೆಯನ್ನು ಕುರಿತ ಕೀಲಿಕೈಯೊಂದನ್ನೂ ಒದಗಿಸಿದ್ದಾರೆ. ಈ ನಡುವೆಯೂ ಈ ಸಂಕಲದ ಮೊದಲ ಓದಿಗೆ ದಕ್ಕಿದ ಕೆಲವು ಸಂಗತಿಗಳನ್ನು ಆಧರಿಸಿ ಒಟ್ಟು ಕಥೆಗಳನ್ನು ಕುರಿತು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದೆಂದುಕೊಳ್ಳುತ್ತೇನೆ.

ರಾಮಲಿಂಗಪ್ಪ ಅವರು ಸರಿಯಾಗಿಯೇ ಗುರುತಿಸಿದಂತೆ ಈ ಸಂಕಲನದ ಕಥೆಗಾರರು ಮುಖ್ಯವಾಹಿನಿಯಲ್ಲಿ ಉದ್ಧರಣ ಚಿಹ್ನೆಯೊಳಗಿಟ್ಟು ಗುರುತಿಸಲ್ಪಟ್ಟ ಕಥೆಗಾರರಲ್ಲ. ಪ್ರಭಾವಳಿಯ ರಕ್ಷಣಾಕವಚದಲ್ಲಿ ಸುಭದ್ರವಾಗಿರುವ ಕಥೆಗಾರರೂ ಅಲ್ಲ. ಆ ಪ್ರಭಾವಳಿ ಇಲ್ಲದಿರುವಿಕೆಯು ಈ ಕಥೆಗಳ ಬಗೆಗೆ ಓದುಗರಿಗೆ ಮುಜುಗರವಿಲ್ಲದೆ ಮಾತನಾಡುವ ಒಂದು ಸ್ವಾತಂತ್ರ್ಯವನ್ನೂ ಒದಗಿಸುವುದರಿಂದ ಕಥೆಗಳ ಕುರಿತಂತೆ ವಸ್ತುನಿಷ್ಠವಾದ ಪ್ರತಿಕ್ರಿಯೆಯನ್ನು ಖಂಡಿತಾ ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಅವರೇ ಗುರುತಿಸುವಂತೆ ಇಲ್ಲಿ ಬಹುಮಟ್ಟಿನ ಕಥೆಗಳು ವಿಷಯದ ವ್ಯತ್ಯಾಸವನ್ನು ಹೊರತುಪಡಿಸಿ ಭಾಷೆಯ ನೆಲೆಯಲ್ಲಿ ಒಬ್ಬನೇ ಕಥೆಗಾರನ ಸಂಕಲನದಂತೆ ಭಾಸವಾದರೂ ಆಶ್ಚರ್‍ಯವಿಲ್ಲ. ಆ ಮಟ್ಟಿಗೆ ಅವು ಉತ್ತರಕರ್ನಾಟಕದ ಭಾಷಾಬನಿಯನ್ನು ಹೊತ್ತುಕೊಂಡೇ ಬಂದಿವೆ. ಅದರ ಜೊತೆಗೆ ಈ ಕಥೆಗಳಲ್ಲಿ ನಗರ-ಗ್ರಾಮ, ಮಧ್ಯಮವರ್ಗ-ತಳವರ್ಗ, ಮೇಲ್ಜಾತಿ-ಕೆಳಜಾತಿ ಇಂತಹ ಅವಳಿ ವೈರುಧ್ಯಗಳ ಸರಳ ಮುಖಾಮುಖಿಯಿದ್ದರೂ ಅಲ್ಲೊಂದು ಸಮಾಜಮುಖೀ ಧೋರಣೆಯಿದೆ. ಈ ಸಮಾಜಮುಖೀ ಗುಣದಿಂದಾಗಿಯೇ ಅನೇಕ ಬಾರಿ ಇಲ್ಲಿನ ಕಥೆಗಳು ವೈಚಾರಿಕ ಬಾರದಲ್ಲಿ ವಾಚ್ಯವಾಗುತ್ತವೆ. ಇನ್ನು ವಸ್ತುವಿನ ನೆಲೆಯಲ್ಲಿ ಇಲ್ಲಿನ ಬಹುಪಾಲು ಕಥೆಗಳು ಮನುಷ್ಯನ ಮೂಲಭಾವವಾದ ಲೈಂಗಿಕತೆಯನ್ನು ಒಂದಿಲ್ಲೊಂದು ನೆಲೆಯಲ್ಲಿ ಸ್ಪರ್ಶಿಸುತ್ತವೆ. ಅದರ ಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿ, ಊಳಿಗಮಾನ್ಯತೆ, ಲಿಂಗತಾರತಮ್ಯ ಹಾಗೂ ಸಾಂಸ್ಥಿಕವಂಚನೆಗಳನ್ನು ಬೇರೆ ಬೇರೆ ನೆಲೆಯಲ್ಲಿ ಒಳಕೊಂಡು ಬರುವ ಈ ಎಲ್ಲಾ ಕಥೆಗಳು ಒಂದಿಲ್ಲೊಂದು ಬಗೆಯಲ್ಲಿ ವ್ಯವಸ್ಥೆಯ ಲೋಪದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹಾಗಾಗಿ ಇಲ್ಲೊಂದು ಅಸಹನೆ ಮತ್ತು ಸುಧಾರಣೆಯ ತುಡಿತವಿದೆ. ಈ ತುಡಿತವನ್ನು ಇಲ್ಲಿನ ಬಹುಪಾಲು ಕಥೆಗಳು ಘಟನಾಪ್ರಧಾನವಾದ ನೆಲೆಯಲ್ಲಿಯೇ ನಿರೂಪಿಸುತ್ತವೆ.

ಒಟ್ಟೂ ಕಥೆಗಳನ್ನು ಗಮನಿಸುವಲ್ಲಿ ಸಿನೀಮಿಯಾ ಮಾದರಿಯ ಬೆಳವಣಿಗೆ ಮತ್ತು ಅಂತ್ಯವಿರುವ ಕಥೆಗಳೇ ಹೆಚ್ಚಿವೆ. vartamaanada-kathegaluಕೆಲವು ಕಥೆಗಳಂತೂ ಮೊದಲೇ ನಿರ್ಧರಿಸಿಕೊಂಡ ಟೈಟಲ್‌ಗೆ ಜೋತುಬಿದ್ದಂತೆಯೂ ಕಾಣುತ್ತವೆ. ಹೀಗೆ ಶೀರ್ಷಿಕೆಯನ್ನು ನಿರ್ಧರಿಸಿಕೊಂಡು ಒಡಲು ತುಂಬಲುಹೋಗುವಲ್ಲಿ ಎದುರಾಗುವ ಸಂಕಟದಲ್ಲಿ ಇಲ್ಲಿಯ ಅನೇಕ ಕಥೆಗಳು ತೊಳಲುತ್ತವೆ. ಹೀಗಾಗಿ ಇಲ್ಲಿನ ಅನೇಕ ಕಥೆಗಳು ತಮ್ಮ ಸೊಗಸಾದ ಭಾಷೆ ಮತ್ತು ಕಥೆಹೇಳುವ ಗುಣಗಳ ನಡುವೆಯೂ ತಾವಾಗಿಯೇ ಬೆಳೆದ ಕಥೆ ಎನಿಸುವುದಿಲ್ಲ. ಸಿದ್ಧಚೌಕಟ್ಟಿನ ಕಥೆಯಾಗಿ ಗೆರೆಹಾಕಿಕೊಂಡಲ್ಲಿಯವರೆಗೆ ವಿಸ್ತರಿಸಿ ಕೊನೆಗೊಂಡಂತೆಯೇ ಭಾಸವಾಗುತ್ತವೆ. ಈ ನಡುವೆಯೂ ಈ ಸಂಕಲನದಲ್ಲಿ ನೆನಪಿನಲ್ಲುಳಿಯುವ ಕೆಲವು ಕಥೆಗಳಿವೆ. ಅದಕ್ಕೆ ಅವುಗಳ ಕಥನಗಾರಿಕೆಯ ಜೊತೆಗೆ ಸಾಮಾಜಿಕ ಕಾಳಜಿಯ ಕಾರಣವೂ ಇದೆ. ವ್ಯಕ್ತಿಕೇಂದ್ರಿತ ಹಾಗೂ ಸಮಾಜಿಮುಖೀ ಎರಡೂ ನೆಲೆಯ ಕಥೆಗಳನ್ನು ಹೊಂದಿರುವ ಈ ಸಂಕಲನದ ಬಹುಪಾಲು ಕಥೆಗಳಿಗೆ ವ್ಯಕ್ತಿತ್ವದ ಅಂತರಂಗವನ್ನು ಶೋಧಿಸಿಕೊಳ್ಳುವ ತೀವ್ರತೆಗಿಂತ ಲೋಕವನ್ನು ನೋಡಿ ಮಾತನಾಡುವ ಆಸಕ್ತಿಯೇ ಹೆಚ್ಚಿದೆ. ಹೀಗಾಗಿ ಇಲ್ಲಿ ಬಹಿರ್ಮುಖತೆಯ ಗುಣ ಹೆಚಿದೆ. ತಾವೇ ಆರೋಪಿಸಿಕೊಂಡ ವೈಚಾರಿಕ ಆಕೃತಿಯ ಅತಿಭಾರಕ್ಕೆ ಸಿಕ್ಕಿ ಅವು ಕಲಾತ್ಮಕತೆಯನ್ನು ಮರೆತು ಬಿಡುವುದೂ ಇದೆ.

ಈ ಸಂಕಲನದ ಮಹತ್ವದ ಕಥೆಗಳ್ಲೊಂದಾದ “ಮಹಾತ್ಮ”, ಗಾಂಧಿಯನ್ನು ಆವಾಹಿಸಿಕೊಳ್ಳುವ ಮಾದರಿಯ ಕಥೆ. ಸ್ವತಂತ್ರ ಭಾರತದ ಉದ್ದಕ್ಕೂ ದೇಶದ ಮನಸ್ಸುಗಳನ್ನು ಬೆಚ್ಚಗೆ ಕಾಡುವ ಗಾಂಧಿಯನ್ನು ಈ ಕಥೆಯೂ ತನ್ನೆದುರಿಗೆ ತಂದುಕೊಂಡು ಮುಖಾಮುಖಿ ಉಜ್ಜಿ ನೋಡಿಕೊಳ್ಳತ್ತದೆ. ಬೊಳುವಾರರ “ಪಾಪು ಗಾಂಧಿಯಾದ ಕಥೆ”ಯನ್ನು ಕಿಂಚಿತ್ ಹೋಲುವಂತೆ ಕಂಡರೂ ಇಲ್ಲಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಮನಸ್ಸಿಗೆ ಬೇರೆಯದೇ ಆದ ಒಂದು ಹಿನ್ನೆಲೆ ಇರುವಂತಿದೆ. ಅದು ಗಾಂಧಿಯ ಕುರಿತಾದ ಪೂರ್ವಗ್ರಹಗಳಿಂದ ಕೂಡಿದ ಮನಸ್ಸು. ವರ್ತಮಾನದ ರಾಜಕೀಯ ಆವರಣದಲ್ಲಿರುವ vartamaanada-kathegalu-authours1ಗಾಂಧಿ ಕುರಿತ ನಕಾರಾತ್ಮಕ ರಾಜಕೀಯ ಸಂಕಥನವನ್ನೇ ಉಸಿರಾಡಿಕೊಂಡ ಮನಸ್ಸು. ಹಾಗಾಗಿ ಸ್ಪಷ್ಟವಾಗಿ ಅದು ಸಾಂಪ್ರದಾಯಿಕ ಶಕ್ತಿಗಳು ನಿರೂಪಿಸುವ ಗಾಂಧಿಯ ಚಿತ್ರಣವನ್ನು ತುಂಬಿಕೊಂಡ ಮನಸಾಗಿಯೇ ತನ್ನನ್ನು ತೆರೆದುಕೊಳ್ಳುತ್ತದೆ. ಇಂತಹ ಮನಸೊಂದು ತಾನು ತುಂಬಿಕೊಂಡ ಗಾಂಧಿಯ ಅಚ್ಚನ್ನು ಕನಸಿನ ಗಾಂಧಿಯ ಜೊತೆಗೆ ಮುಖಾಮುಖಿ ಮಾಡಿ ಪರಿಶೀಲಿಸಿಕೊಳ್ಳುವಲ್ಲಿ ಕಥೆಯ ಬೆಳವಣಿಗೆ ಇದೆ. ಈ ಕಥೆಯಲ್ಲಿ ಕೇವಲ ಗಾಂಧಿಯಷ್ಟೇ ಪರಿಶೀಲನೆಗೊಳಗಾಗುವುದಲ್ಲ. ನೆಹರೂ, ಜಿನ್ನಾ, ಘೋಡ್ಸೆ ಹೀಗೆ ಚರಿತ್ರೆಯ ಅನೇಕರು ವರ್ತಮಾನಕ್ಕೆ ಬಂದು ತಮ್ಮ ಮುಖತೋರಿಸಿ ಹೋಗುತ್ತಾರೆ. ಗಾಂಧಿಯೂ ಎಲ್ಲ ಪ್ರಶ್ನೆಗಳಿಗೂ ತರ್ಕಬದ್ಧವಾಗಿ ಉತ್ತರಿಸುವಂತೆ ಕಟ್ಟಲ್ಪಡುತ್ತಾರೆ. ಈ ಮೂಲಕ ಚರಿತ್ರೆಯ ಹೂರಣದ ಸರಿತಪ್ಪುಗಳ ವಿವೇಚನೆಗೆ ನಿಂತು ಬಿಡುವ ನಿರೂಪಕ ಮನಸ್ಸು, ಘೋಡ್ಸೆ ಕುರಿತಂತೆ ಹೊಂದಿರುವ ಸಂಕಥನದಿಂದ ಕೊನೆಗೂ ಬಿಡುಗಡೆಗೊಂಡಂತೆ ಅನ್ನಿಸುವುದೇ ಇಲ್ಲ. ಇದು ನಿರೂಪಕನ ಸಮಸ್ಯೆ ಅಷ್ಟೇ ಅಲ್ಲ. ಸ್ವತಂತ್ರ ಭಾರತದ, ವರ್ತಮಾನ ಭಾರತದ ವಾಸ್ತವವೂ ಹೌದು. ಗಾಂಧಿಗೆ ಬಿಡುಗಡೆ ಸಿಕ್ಕಿದೆಯೋ ಇಲ್ಲವೋ? ಆದರೆ ಕನಸಿನಲ್ಲಿ ಗಾಂಧಿಯನ್ನು ಎದುರಾಗುವ ಮನಸ್ಸು ವಾಸ್ತವದಲ್ಲಿ ತಾನು ಈಗಾಗಲೇ ತುಂಬಿಕೊಂಡ ದೇಶಭಕ್ತ ಘೋಡ್ಸೆಯಿಂದ ಬಿಡುಗಡೆ ಕಾಣದೇ ಉಳಿಯುತ್ತದೆ. ಇದಕ್ಕೂ, ಗಾಂಧಿಯ ಭಾವಚಿತ್ರವು ಮಾರ್ಜಾಲದ ಆಕ್ರಮಣದಲ್ಲಿ ಒಡೆದು ಹೋಗುವದಕ್ಕೂ ಅರ್ಥಪೂರ್ಣ ಸಾಂಗತ್ಯವೊಂದು ಏರ್ಪಡುವಲ್ಲಿಯೇ ಕತೆಯ ಯಶಸ್ಸಿದೆ. ಗಾಂಧಿಯ ನಡುವೆ ಘೋಡ್ಸೆಯನ್ನಿಟ್ಟುಕೊಂಡು ಈ ದೇಶ ಮತ್ತು ಗಾಂಧಿ ಎರಡರ ಕುರಿತಾದ ಅಖಂಡ ಸಂಕಥನವೊಂದು ಅಸಾಧ್ಯವೆಂಬುದನ್ನೇ ಪರೋಕ್ಷವಾಗಿ ಕತೆ ಮನವರಿಕೆ ಮಾಡುವಂತಿದೆ. ಈ ಧ್ವನಿಯನ್ನೂ ಹೊರಡಿಸುವ ಮೂಲಕ ಆರ್‌ಎಸ್‌ಎಸ್ ಪ್ರಣೀತ ಮನಸ್ಸಿನ ಪರ ನಿರೂಪಕನನ್ನು ಬಿಡುಗಡೆಗೊಳಿಸದೆಯೂ ಅನೇಕ ಆಯಾಮದಲ್ಲಿ ಒಂದು ಗುಣಾತ್ಮಕ ಕಥೆಯೆನಿಸುತ್ತದೆ.

“ರಾಮಭಟ್ಟನ ಮದುವೆ ಪ್ರಸಂಗ” ತಾನು ಆಯ್ದುಕೊಳ್ಳುವ ವಸ್ತುವಿನ ನೆಲೆಯಿಂದ ಮುಖ್ಯವೆನಿಸಬಹುದಾದ ಕಥೆ. ಹೆಣ್ಣು ಸಿಕ್ಕದೆ ಇನ್ನೆಲ್ಲಿಂದಲೋ ಹೆಣ್ಣು ತರುವ ಔದಾರ್‍ಯವೂ ತನ್ನ ಮೂಲಛಾಯೆಯನ್ನು ಬಚ್ಚಿಟ್ಟುಕೊಳ್ಳಲಾರದೆ ಬೆತ್ತಲಾಗುವುದನ್ನು ಕಥೆ ಸೊಗಸಾಗಿಯೇ ಚಿತ್ರಿಸುತ್ತದೆ. ವೈದಿಕ ಸಮುದಾಯದೊಳಗಿನ ಜಳ್ಳ್ಳುತನವನ್ನು ನವುರಾದ ಹಾಸ್ಯದಲ್ಲಿಯೇ ಹೇಳಿಕೊಂಡು ಹೋಗುವ ಇಲ್ಲಿನ ಕಥನಗಾರಿಕೆಗೆ ಜೀವಂತಿಕೆಯಿದೆ. ರಾಮಭಟ್ಟನ ವಂಚನೆಯನ್ನು ಅರ್ಥಮಾಡಿಕೊಂಡ ಮೇಲೆ ಅದನ್ನು ಅಷ್ಟೇ ಸಮರ್ಥವಾಗಿ ಮೌನದಲ್ಲಿಯೇ ಮೊನಚಾಗಿ ಇದಿರಿಸುವ ಸರೋಜ ಮತ್ತು ಶಾಂತಿ ಕಥೆಯಲ್ಲಿ ಅಮುಖ್ಯರೆನಿಸಿಯೂ ಮುಖ್ಯವೆನಿಸಿಕೊಳ್ಳುತ್ತಾರೆ. ಮಿಕ್ಕ ಕಥೆಗಳಾದ “ಮುಗಿಲ ಮಾಯೆಯ ಕರುಣೆ” ಗ್ರಾಮ ಬದುಕನ್ನು ಆಚ್ಛಾದಿಸಿಕೊಂಡ ಜಾತಿ ವ್ಯವಸ್ಥೆಯ ಇನ್ನೊಂದು ಮುಖವನ್ನು ಹೇಳುತ್ತದೆ. ರಾಜಕಾರಣದಿಂದ ಒಡೆದು ಹೋದ ಹಳ್ಳಿಗಳು ಎಲ್ಲದರಲ್ಲೂ ಒಡೆದುಕೊಂಡು, ಜೀವಬಲಿಗಾಗಿ ಹಪಾಹಪಿಸುವುದನ್ನು ಕಥೆ ತನ್ನ ಮಿತಿಯೊಳಗೆ ಸೊಗಸಾಗಿ ಮುಟ್ಟಿಸುತ್ತದೆ. “ಗಲೀಜು” ಕಥೆ ಗ್ರಾಮಬದುಕಿನ ಗಲೀಜಿಗಿಂತ ಹೆಚ್ಚಾಗಿ ಲೈಂಗಿಕತೆಯ ನೆಲೆಯ ಮಾನುಷ ವಿಕೃತಿಯನ್ನೇ ಅತಿ ವಿಜೃಂಭಿಸಿ ಹೇಳುವ ಕಥೆ. ಹೀಗಾಗಿ ವಾಸ್ತವಕ್ಕಿಂತ ಕಿಂಚಿತ್ ದೂರವೇ ಎನಿಸಬಲ್ಲ ಕಥೆಯೂ ಹೌದು. ಮುಜುಗರವಿಲ್ಲದ ಅದರ ಭಾಷೆ ಗಲೀಜನ್ನು ಸಮರ್ಥವಾಗಿ ತೋರುತ್ತದೆಯಾದರೂ ಇಡಿಯ ಆವರಣ ಅತಿರಂಜಿತವೆನಿಸುತ್ತದೆ. “ಮಠದ ಹೋರಿ” ಕಥೆ ಗೋಸಂಕಥನದ ಬೇರೆ ಬೇರೆ ಮುಖಗಳನ್ನು ಪರಿಚಯಿಸುವ ಏಕೋದ್ದೇಶದಲ್ಲಿ ತನ್ನ ವೈಚಾರಿಕ ಹೊರೆಯಿಂದ ಬಿಡುಗಡೆ ಪಡೆಯುವುದೇ ಇಲ್ಲ. “ಪುಷ್ಪ” ಕಥೆಯೂ ಇದೇ ತೆರನಾದುದು. ಆದರೆ “ಹುಲಿ ಸಾಕಣೆ” ಮತ್ತು vartamaanada-kathegalu-authours2“ಗುಲಾಬಿ ಚೀಟಿ” ಕಥೆಗಳು ಆಧುನಿಕ ಸಂದರ್ಭದ ಅವತರಣಿಕೆಗಳಾದ ಎನ್‌ಜಿಓ ಹಾಗೂ ಎಮ್‌ಎನ್‌ಸಿಗಳ ಸೋಗಲಾಡಿತನ ಮತ್ತು ವಂಚನೆಯನ್ನು ಪರಿಚಯಿಸುತ್ತವೆ. ಇದನ್ನೂ ಮೀರಿ “ಗುಲಾಬಿ ಚೀಟಿ” ಕಥೆ, ಬದುಕು ಮತ್ತು ಕೃಷಿಗಳೆರಡರಲ್ಲೂ ವಿದೇಶದ ಆಕರ್ಷಣೆ ಮತ್ತು ಅಸಲಿ ಅನುಭವಗಳನ್ನು ತಾಳೆಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ. ಹೀಗೆ ವಿದೇಶಿ ಒಲವಿನ ನಕಾರಾತ್ಮಕ ಫಲಿತವನ್ನು ಚಿತ್ರಿಸುವ ಕಥೆ ಗಾಂಧಿ ಚಿಂತನೆಯಾದ ದೇಶೀಯತೆಯ ಪರನಿಲ್ಲುತ್ತದೆ. “ಹಳೇಟ್ರಂಕು” ಗ್ರಾಮ ಬದುಕಿನ ಅಮೂಲ್ಯ ಮುಗ್ದತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ನಗರೀಕರಣದ ವಾಣಿಜ್ಯೀಕೃತ ಅವಸ್ಥೆಯ ಕರಾಳತೆಯನ್ನೂ, “ಬೆಂದಕಾಳೂರು” ನಗರಗಳು ರೂಪಿಸುತ್ತಿರುವ ಮಾನವೀಯ ಸಂಬಂಧದ ಸಂದುಗಡಿದ ಸ್ಥಿತಿಯನ್ನೂ ಹೇಳುವ ಮೂಲಕ ನಗರ ವಿಮುಖತೆಯ ಪರನಿಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ “ಹೊತ್ತಿಗೊದಗಿದ ಮಾತು” ಕಥೆ ನಗರವನ್ನು ಬದುಕು ಕಟ್ಟಿಕೊಳ್ಳುವ ನೆಲೆಯಾಗಿಯೇ ಗುರುತಿಸುತ್ತದೆಯಾದರೂ, ಪುಟ್ಟ ಮಗುವಿನ ಒಂದು ಮಾತೇ ಬದುಕನ್ನು ಬದಲಾಯಿಸಿತು ಎಂಬುದನ್ನು ಹೇಳುವ ಕಾತರಕ್ಕೆ ಕುದಿದಂತೆ ಅಲ್ಲಿಗೇ ನಿಂತುಬಿಡುತ್ತದೆ. “ನಡುವೆ ಸುಳಿವಾತ್ಮ” ಹಾಗೂ “ಉಮಿಯೊಳಗಿನ ಬೆಂಕಿ” ಎರಡೂ ಆಸ್ತಿ ಅಂತಸ್ತಿಗೆ ಹಾತೊರೆಯುವ ಬದುಕುಗಳು ಕಡೆಗಣಿಸುವ ಮನುಷ್ಯ ಸಂಬಂಧದ ಮೇಲೆ ಬೆಳಕು ಚಲ್ಲುತ್ತವೆ. “ಅಂಬುಳೆ ಒಂದು ಕಥಾಂತರ” ತಲೆಮಾರುಗಳ ಅಂತರವನ್ನೂ, ಅವಿಭಕ್ತ ಕುಟುಂಬಗಳ ಯಜಮಾನಿಕೆಗಳು ಉಂಟುಮಾಡುವ ಪ್ರಮಾದಗಳನ್ನೂ ಹೇಳುವ ಮೂಲಕ ಕುಟುಂಬ ಪದ್ಧತಿಯ ಬಿರುಕುಗಳನ್ನು ಶೋಧಿಸುತ್ತದೆ.

ಈ ಸಂಕಲನದ ಕಥೆಗಳು ಹೊಸ ಕಥೆಗಾರರಿಂದ ಬರೆಯಲ್ಪಟ್ಟವಾಗಿದ್ದರೂ ಅವುಗಳಲ್ಲಿ ಕನ್ನಡದ ಮಹತ್ವದ ಕಥೆಗಾರರ ನೆರಳುಗಳು ಕಾಣಿಸಿದರೆ ಅಚ್ಚರಿಯಿಲ್ಲ. ಈ ನೆಲೆಯಲ್ಲಿ ‘ಹುಡುಕಾಟ’, ‘ಡಿಪ್ರೆಶನ್’ ಹಾಗೂ ‘ರಾಮಭಟ್ಟನ ಮದುವೆ ಪ್ರಸಂಗ’ಗಳೂ ವಿಭಿನ್ನ ಎಂದೆನಿಸುತ್ತವೆ. ‘ಹುಡುಕಾಟ ಕಥೆ’ ನವ್ಯದ ಕತೆಗಳನ್ನು ನೆನಪಿಸಿಬಿಡುವಂತಿದೆ. ಕಳೆದು ಹೋದ ತನ್ನಣ್ಣನನ್ನು ಜೀವಮಾನಪೂರ್ತಿ ಹುಡುಕುವ ವಾಸುದೇವ ಮಾಸ್ತರರ ಪತ್ತೇದಾರಿಕೆಯ ಮನಸ್ಸು ತನ್ನ ಗತ ಹಾಗೂ ವರ್ತಮಾನಗಳನ್ನು ಶೋಧನೆಗೊಡ್ಡುವ ಸ್ವರೂಪದಲ್ಲಿ ಈ ನವ್ಯತೆಯ ಗುಣವಿದೆ. ಡಿಪ್ರೆಶನ್ ಕಥೆ ವೈದೇಹಿ ಅವರ ಸೌಗಂಧಿಯ ಸ್ವಗತಕ್ಕೆ ಹತ್ತಿರವಾದಂತಿದೆ. ಲೈಂಗಿಕತೆಯನ್ನು ಹೆಣ್ಣ ಕಣ್ಣೋಟದಲ್ಲಿ ಕಾಣಲು ಯತ್ನಿಸುವ ಈ ಕಥೆ ಮನೋವ್ಯಾಪಾರದ ಶೋಧಕ್ಕಿಳಿಯುತ್ತದೆ. ರಾಮಭಟ್ಟನ ಮದುವೆ ಪ್ರಸಂಗವು ಆಂಶಿಕವಾಗಿ ಮಾಸ್ತಿಕಥೆಗಳನ್ನು ಹೋಲುವಂತೆಯೂ ಇದೆಯೆನಿಸುತ್ತದೆ. ಹೀಗೆ ಇಲ್ಲಿನ ಕಥೆಗಳು ಹಾಗೂ ಕಥೆಗಾರರನ್ನು ಹಿಂದಿನವರ ನೆರಳಾಗಿಯೇ ಗುರುತಿಸಬೇಕೆಂದೇನೂ ಇಲ್ಲ. ಬಹುಮಟ್ಟಿಗೆ ಇಲ್ಲಿನ ಬಹುಪಾಲು ಕಥೆಗಾರರು ಹೊಸಬರು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಭ್ಯಾಸ ಮಾಡದೆಯೂ ಕನ್ನಡಕ್ಕೆ ಅಗತ್ಯವಿರುವ ಬೇರೆ ಬೇರೆ ಕ್ಷೇತ್ರಗಳ ಸಂವೇದನೆಗಳನ್ನು ತುಂಬುತ್ತಿರುವವರು. ಈ ಹಿನ್ನೆಲೆಯಲ್ಲಿ ಈ ಕಥೆಗಳ ಮಿತಿಗಳ ಕುರಿತಾದ ಮಾತುಗಳಾಗಲೀ, ಹೋಲಿಕೆಗಳ ಕುರಿತಾದ ಮಾತುಗಳಾಗಲೀ ಕಥೆಗಾರರಿಗೆ ತಮ್ಮ ಮುಂದಿನ ಕಥೆಗಳನ್ನು ರೂಪಿಸಿಕೊಳ್ಳಲು ಪೂರಕವಾದ ಸಲಹೆಗಳೆಂದೇ ಭಾವಿಸಬಹುದು.

 

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

1998, 1999, 2004 ರ ಕೆಪಿಎಸ್‌ಸಿ ಕರ್ಮಕಾಂಡ : ಸಂಪೂರ್ಣ ವಿವರಗಳು


– ರವಿ ಕೃಷ್ಣಾರೆಡ್ಡಿ


[ನೆನ್ನೆ (22-05-2014) ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ರಾಜ್ಯದ ಆಡಳಿತದಲ್ಲಿಯ ಸ್ವಚ್ಛಂದ ಭ್ರಷ್ಟಾಚಾರಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳು. ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ದಿನನಿತ್ಯದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು “ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು, ಕೆಳಗಿನ ಅಧಿಕಾರಿ-ಸಿಬ್ಬಂದಿಯಿಂದ ಮಾಮೂಲು ಪಡೆಯಲೇಬೇಕು”ಎನ್ನುವ ಸ್ಥಿತಿಗೆ ತಾವು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಲೋಕಸೇವಾ ಆಯೋಗ ಮತ್ತು ರಾಜ್ಯ ಸರ್ಕಾರವೇ.

1998, 1999, 2004ರ ಕೆಎಎಸ್​ ಮತ್ತಿತರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ, ಅವ್ಯವಹಾರ ಮತ್ತು kpsc-scandalಅಕ್ರಮಗಳು ಜರುಗಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ಆದರೆ ಸರ್ಕಾರ, ಅಂದರೆ ನಮ್ಮ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಮಂತ್ರಿಗಳು, ಹಾಗೂ ಅಧಿಕಾರಿ ವರ್ಗ, ಸಂವಿಧಾನಬದ್ಧವಾಗಿ ತಾವು ನಿರ್ವಹಿಸಬೇಕಾಗಿದ್ದ ಕರ್ತವ್ಯವನ್ನು ಮಾಡದೇ, ಈಗಲೂ ಸಹ ಭ್ರಷ್ಟ ಮಾರ್ಗದಿಂದ ನೇಮಕಗೊಂಡ ಅಧಿಕಾರಿಗಳನ್ನು ಮತ್ತು ಆಯ್ಕೆ ಮಾಡಿದ ಭ್ರಷ್ಟರನ್ನು ರಕ್ಷಿಸುತ್ತಿದೆ, ಮತ್ತು ಇವರೆಲ್ಲರ ಪಿತೂರಿಯಿಂದಾಗಿ ಅನ್ಯಾಯಕ್ಕೊಳಗಾದ ಅರ್ಹ, ಪ್ರಾಮಾಣಿಕ, ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಮುಂದುವರೆಸುತ್ತಿದೆ. ಆ ಮೂಲಕ ರಾಜ್ಯದ ಜನತೆಯ ಮೇಲೆ ಭ್ರಷ್ಟರನ್ನು ಹೇರಿ, ಭ್ರಷ್ಟಾಚಾರದ, ಅನೈತಿಕತೆಯ ಆಡಳಿತ ನೀಡುತ್ತಿದೆ.

ಈಗಾಗಲೆ ಸತ್ಯಶೋಧನಾ ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಇಡೀ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಹಂತಗಳಲ್ಲಿ ಅಕ್ರಮಗಳಾಗಿರುವುದು ಸಾಬೀತಾಗಿದೆ. ಅರ್ಜಿಯ ಸ್ವೀಕಾರದ ಹಂತದಿಂದ ಹಿಡಿದು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ, ಹಾಗೂ ವ್ಯಕ್ತಿತ್ವ ಪರೀಕ್ಷೆ / ಸಂದರ್ಶನ ಒಳಗೊಂಡಂತೆ ಅಂತಿಮ ಪಟ್ಟಿಯ ಬಿಡುಗಡೆಯವರೆಗೂ ಕಾನೂನು ಮತ್ತು ನಿಯಮ ಬಾಹಿರ ಕೃತ್ಯಗಳು ನಡೆದಿರುವುದನ್ನು ಸತ್ಯಶೋಧನಾ ಸಮಿತಿ ವರದಿ ಮಾಡಿದೆ. ಹಣ, ಸ್ವಜನಪಕ್ಷಪಾತ ಮತ್ತು ಪ್ರಭಾವದ ಕಾರಣಕ್ಕಾಗಿಯೇ ಈ ಅವ್ಯವಹಾರಗಳು ನಡೆದಿವೆಯೇ ಹೊರತು ಬೇರೆ ಯಾವುದೇ ತಾಂತ್ರಿಕ ದೋಷದಿಂದಾಗಲಿ ಅಲ್ಲ. ಮತ್ತು ಈ ಎಲ್ಲಾ ಅಪಕೃತ್ಯಗಳನ್ನೂ ಭಾಗಿಯಾದವರೆಲ್ಲಾ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಎಸಗಿದ್ದಾರೆ.

ಎಸ್,ಎಮ್.ಕೃಷ್ಣ, ಧರಮ್ ಸಿಂಗ್, ಮತ್ತು ಎಚ್.ಡಿ. ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಈ ಎಲ್ಲಾ ಕೃತ್ಯಗಳು ನಡೆದಿರುವುದು ಕಂಡುಬಂದಿದ್ದು, ಈಗಲೂ ಸರ್ಕಾರದ ಆಯಕಟ್ಟಿನ ಸ್ಥಳದಲ್ಲಿರುವ ಪ್ರಭಾವಿ ವ್ಯಕ್ತಿಗಳು ಆಗ ಕೆಪಿಎಸ್‌ಸಿ ಆಯೋಗದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದದ್ದನ್ನು ನಾವು ನೋಡಬಹುದಾಗಿದೆ. ಅನೇಕ ವರ್ಷಗಳಿಂದ ಆಯೋಗದ ಸದಸ್ಯರಾಗಿದ್ದ ಮತ್ತು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಈ ಎಲ್ಲಾ ಹಗರಣಗಳ ರೂವಾರಿಯಾಗಿದ್ದರು ಮತ್ತು ಅವರು ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರಿಗೆ ಪರಮಾಪ್ತರೂ ಆಗಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾರ್ಯದರ್ಶಿಗಳಾಗಿರುವ ಹಿರಿಯ ಐಎಎಸ್​ ಅಧಿಕಾರಿ ಕೆ.ಆರ್.ಶ್ರೀನಿವಾಸ್​ ಫೆಬ್ರವರಿ 2001ರಿಂದ ಸೆಪ್ಟಂಬರ್​ 12, 2002ರವರೆಗೆ ಕೆಪಿಎಸ್‍ಸಿ ಆಯೋಗದಲ್ಲಿ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು. ಇವರ ನಂತರದ ಅವಧಿಯಲ್ಲಿ ಕಾಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದವರು ಈಗ ನಿವೃತ್ತರಾಗಿರುವ ಮಾಜಿ ಐಎಎಸ್ ಅಧಿಕಾರಿ ಹರೀಶ್ ಗೌಡ. ಇವರ ನಂತರ, ಅಂದರೆ, ಆಗಸ್ಟ್​​ 5, 2004ರಿಂದ ಫೆಬ್ರುವರಿ 2, 2007ರವರೆಗೆ ಕೆಪಿಎಸ್‌ಸಿ ಕಾರ್ಯದರ್ಶಿಗಳಾಗಿದ್ದ ರಾಮಪ್ರಸಾದ್​ ಈಗ ರಾಜ್ಯಪಾಲರಿಗೆ ಕಾರ್ಯದರ್ಶಿ. ಹೈಕೋರ್ಟ್​ ರಚಿಸಿದ್ದ ಸತ್ಯಶೋಧನೆ ಸಮಿತಿಯ ವರದಿಯಲ್ಲಿ ಈ ನಾಲ್ವರ ಅಧಿಕಾರವಧಿಯಲ್ಲಿ ಜರುಗಿದ ಲೋಪ ಮತ್ತು ಅಕ್ರಮಗಳ ಬಗ್ಗೆ ವಿಸ್ತೃತವಾಗಿ ದಾಖಲಾಗಿದೆ.

ಹಾಗೆಯೇ, ಈ ಮೂರೂ ಪಟ್ಟಿಯಲ್ಲಿ ಅಕ್ರಮವಾಗಿ ಆಯ್ಕೆಯಾಗಿರುವ ಅನೇಕ ಅಧಿಕಾರಿಗಳು ಇಂದು ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿದ್ದಾರೆ ಮತ್ತು ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ನಾಯಕರೊಂದಿಗೆ ಮತ್ತು ಮಾಜಿ ಮಂತ್ರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇದು ಕೇವಲ ಕಾರ್ಯನಿರ್ವಹಣೆಯ ಕಾರಣಕ್ಕಾಗಿಯಷ್ಟೇ ಅಲ್ಲದೆ ತಾವು ಆಯ್ಕೆಯಾದ ಅಕ್ರಮ ಮಾರ್ಗಗಳನ್ನು ಮುಚ್ಚಿಹಾಕುವುದಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಸಹ ಹೈಕೋರ್ಟಿಗೆ ತಾವು ಇಡೀ ಪ್ರಕ್ರಿಯೆಯಲ್ಲಾಗಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಲಾಗದಿರುವುದಕ್ಕೆ ಈ ಹಿನ್ನೆಲೆಯೆಲ್ಲ ಕಾರಣವಾಗಿದೆ. ಹಾಗೆಯೇ, ಇಂದು ನ್ಯಾಯ ಜರುಗಿಸಬೇಕಾದ ಸ್ಥಳದಲ್ಲಿ ಕುಳಿತು ಅನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಹೀಗೆ ಅಕ್ರಮವಾಗಿ ಆಯ್ಕೆಯಾದವರೇ ಮಾಡಬೇಕಾದ ವಿಚಿತ್ರ ಮತ್ತು ದೌರ್ಭಾಗ್ಯದ ಪರಿಸ್ಥಿತಿ ಸೃಷ್ಟಿಯಾಗಿದೆ. ಉದಾಹರಣೆಗೆ, ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಉತ್ತರಪತ್ರಿಕೆಯ ಅಂಕಗಳನ್ನು ಹಾಗೂ ಕಂಪ್ಯೂಟರ್‌ನಲ್ಲಿ ಅದರ ಸರಾಸರಿಯನ್ನು ತಿದ್ದಿ, 40.5 ರಷ್ಟು ಹೆಚ್ಚುವರಿಯಾಗಿ ಸುಳ್ಳು ಅಂಕಗಳನ್ನು ಪಡೆದು, ಆ ಮೂಲಕ ನೌಕರಿ ಪಡೆದುಕೊಂಡ ಅಕ್ರಮ ಫಲಾನುಭವಿ ಡಾ. ಜಿ.ಎಸ್. ಮಂಗಳ (ಸತ್ಯಶೋಧನಾಸಮಿತಿ ವರದಿ -ಪುಟ 255) ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿದ್ಡಾರೆ. ಅನ್ಯಾಯಕ್ಕೊಳಗಾದ ಅರ್ಜಿದಾರರು ಸಿಐಡಿ ವರದಿಯ ಆಧಾರದ ಮೇಲೆ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಕೊಟ್ಟ ಮನವಿಗೆ “ತಮ್ಮ ಮನವಿಯನ್ನು ಪುರಸ್ಕರಿಸಲು ಆಸ್ಪದವಿರುವುದಿಲ್ಲ” ಎಂದು ಉತ್ತರ ಕೊಟ್ಟವರು ಇದೇ ಅಧಿಕಾರಿಯಾಗಿರುತ್ತಾರೆ.

ಪಿ.ಎಸ್.ಮಂಜುನಾಥ್​ ಎನ್ನುವವರು (ಸತ್ಯಶೋಧನಾಸಮಿತಿ ವರದಿ -ಪುಟ 255) ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಕೋರಿದ್ದ ಮೀಸಲಾತಿ ಪ್ರವರ್ಗ 3-ಬಿ. ಆದರೆ ಪ್ರವರ್ಗ 3-ಬಿ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲರಾಗಿ ಸಾಮಾನ್ಯ ವರ್ಗ ಕೋಟಾದಲ್ಲಿ ಸಂದರ್ಶನಕ್ಕೆ ಹಾಜರಾಗಿ ಮೀಸಲಾತಿಯನ್ನು ಬಹಳ ಕೆಟ್ಟ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿರುತ್ತಾರೆ. ಸಾಮಾನ್ಯ ವರ್ಗದಲ್ಲಿರಬೇಕಾಗಿದ್ದ ಇವರು, ಲಿಖಿತ ಪರೀಕ್ಷೆಯ ಸಂದರ್ಭದಲ್ಲೆಲ್ಲಾ ತಮಗೆ ಅರ್ಹತೆ ಇಲ್ಲದಿದ್ದರೂ ಮಿಸಲಾತಿ ಪಡೆದುಕೊಂಡು ಸಂದರ್ಶನದ ಸಮಯದಲ್ಲಿ ಪ್ರಭಾವ ಬಳಸಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿ, ಇತರೆ ಸಾಮಾನ್ಯ ವರ್ಗದ ಪ್ರತಿಭಾವಂತರ ಅವಕಾಶಕ್ಕೆ ಮೋಸ ಮಾಡಿರುತ್ತಾರೆ. ಇಡೀ ಪ್ರಕರಣದಲ್ಲಿ ಕೆಪಿಎಸ್‌ಸಿಯ ಅಧಿಕಾರಿ ಮತ್ತು ಆಯೋಗದ ಸದಸ್ಯರ ಕೃಪಾಕಟಾಕ್ಷಗಳಿಲ್ಲದೆ ಈ ಮಟ್ಟದ ನಿಯಮಾವಳಿಗಳ ದುರುಪಯೋಗ ಸಾಧ್ಯವಿಲ್ಲ. ಹೀಗೆ ಅಕ್ರಮವಾಗಿ ಆಯ್ಕೆಯಾದ ಮಂಜುನಾಥ್‌ರ ಹೆಸರು, ಅಕ್ರಮ ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ಕೊಟ್ಟಿರುವ ವರದಿಯಲ್ಲಿ ಸದ್ಯ ಜೈಲಿನಲ್ಲಿರುವ ಖಾರದಪುಡಿ ಮಹೇಶ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಲಂಚ ಕೊಟ್ಟಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈಗ ಅವರು ಸಹಾಯಕ ಆಯುಕ್ತರಾಗಿ ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಇನ್ನೊಂದು ಪ್ರಕರಣ ಮಂಜುನಾಥ ಬಳ್ಳಾರಿ (ಸತ್ಯಶೋಧನಾಸಮಿತಿ ವರದಿ -ಪುಟ 135) ಎನ್ನುವವರದು. ಅಂಕಗಳ ವ್ಯತ್ಯಾಸದಿಂದಾಗಿ ಅಧಿಕಾರಿಯಾಗಿ ಆಯ್ಕೆಯಾದ ಇವರೂ ಸಹ ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.

ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ನೌಕರಿಗೆ ಸೇರಿದ್ದು 2006 ರಲ್ಲಿ. ಈ ಹಗರಣದಲ್ಲಿ ಆಗಿರುವ ಅಕ್ರಮಗಳ ಬಗ್ಗೆ 2000 ಇಸವಿಯಿಂದಲೇ ಕಾನೂನು ಹೋರಾಟ ಆರಂಭವಾಗಿತ್ತು. ಇಷ್ಟಿದ್ದರೂ ಸಹ, ಇವೆಲ್ಲಾ ವಿಚಾರಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಅಕ್ರಮವಾಗಿ ಆಯ್ಕೆಯಾದವರಿಗೆ ಪ್ರಮುಖ ಹುದ್ದೆ ಕೊಡುವುದಷ್ಟೇ ಅಲ್ಲದೆ ಬಡ್ತಿಯನ್ನೂ ನೀಡುತ್ತ ಬಂದಿದೆ. ಇಡೀ ಹಗರಣದಲ್ಲಿ ಆಗಿರುವ ಪ್ರತಿಯೊಂದು ಅಕ್ರಮದ ಬಗ್ಗೆ ವಿಸ್ತೃತ ತನಿಖೆ ನಡೆಸಿದ ಸಿಐಡಿ, 2012 ಏಪ್ರಿಲ್‌ನಲ್ಲಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಮತ್ತು ಸರ್ಕಾರಕ್ಕೆ ಸಲ್ಲಿಸುತ್ತದೆ. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳು ಯಾರು ಎಂಬ ಬಗ್ಗೆ ಮಾಹಿತಿ ಸಿಐಡಿ ವರದಿಯಲ್ಲಿದರೂ ಸಹ ಆ ಆಧಿಕಾರಿಗಳಿಗೆ ಬಡ್ತಿ ಮತ್ತಿತರ ಅನುಕೂಲಗಳು ಮುಂದುವರೆಯುತ್ತಲೇ ಹೋದವು ಮತ್ತು ಸರ್ಕಾರ ಭ್ರಷ್ಟರನ್ನು ರಕ್ಷಿಸುವತ್ತಲೇ ತನ್ನ ಆಸಕ್ತಿ ತೋರಿಸುತ್ತಿತ್ತು.

ಇದಾದ ನಂತರ, ಹೈಕೋರ್ಟಿನಲ್ಲಿದ್ದ ಪ್ರಕರಣಕ್ಕೆ ನ್ಯಾಯಾಲಯ ಸತ್ಯಶೋಧನಾ ಸಮಿತಿಯನ್ನು ನೇಮಿಸಿತು. ಆ ಸಮಿತಿ ಮತ್ತಷ್ಟು ವಿಸ್ತೃತ ವರದಿಯನ್ನು 31, ಜನವರಿ 2014 ರಂದು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತು. ಸ್ವತಃ ಸರ್ಕಾರದ ಪರ ವಾದಿಸುತ್ತಿರುವ ವಕೀಲರಾದ ದೇವದಾಸ್‌ರವರು ಆ ವರದಿಯಲ್ಲಿ ಇರುವ ಎಲ್ಲಾ ಮಾಹಿತಿಯನ್ನೂ ಮತ್ತು ಅನೇಕರು ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಕೋರ್ಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿರುತ್ತಾರೆ. ಆದರೆ ಈವರೆಗೂ ಸರ್ಕಾರ ಭ್ರಷ್ಟರ ವಿರುದ್ಧ ಕ್ರಮವನ್ನಾಗಲಿ, ಅಥವ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಕಂಡುಬಂದ ಅಧಿಕಾರಿಗಳಿಗೆ ಕನಿಷ್ಟ ನೋಟಿಸ್ ಸಹ ಕಳುಹಿಸುವ ಧೈರ್ಯ ಮಾಡಿರುವುದಿಲ್ಲ.

ಈಗ ಅರ್ಜಿದಾರರು 26-04-2014ರಂದು ಹೈಕೋರ್ಟಿಗೆ ಕೂಲಂಕುಷವಾಗಿ ಎಲ್ಲಾ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದಾರೆ. ಆದರ ಪ್ರತಿಯನ್ನು ಸರ್ಕಾರಕ್ಕೆ ಮತ್ತು ಕೆಪಿಎಸ್‍ಸಿಗೂ ಸಲ್ಲಿಸಲಾಗಿದೆ. 1998ರ ರಲ್ಲಿ ಆಯ್ಕೆಯಾದ 386 ಅಭ್ಯರ್ಥಿಗಳ ಪೈಕಿ 292 ಅಭ್ಯರ್ಥಿಗಳು ಅಕ್ರಮ ಫಲಾನುಭವಿಗಳೆಂದು ಗುರುತಿಸಲಾಗಿದೆ. ಇದು ಶೇ. 76 ರಷ್ಟಿದೆ. 1999 ರಲ್ಲಿ ಆಯ್ಕೆಯಾದ 191 ಅಭ್ಯರ್ಥಿಗಳ ಪೈಕಿ 95 ಜನ ಅಕ್ರಮ ಫಲಾನುಭವಿಗಳೆಂದು (50%), ಮತ್ತು 2004 ರ ಪಟ್ಟಿಯಲ್ಲಿ ಆಯ್ಕೆಯಾದ 152 ಅಭ್ಯರ್ಥಿಗಳ ಪೈಕಿ 97 ಅಭ್ಯರ್ಥಿಗಳು (64%) ಅಕ್ರಮ ಫಲಾನುಭಾವಿಗಳೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಒಟ್ಟಾರೆ 729 ಅಧಿಕಾರಿಗಳಲ್ಲಿ 484 ಜನ, ಅಂದರೆ ಶೇ.66 (484/729 = 66%) ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಹೀಗೆ ಅಕ್ರಮವಾಗಿ ಸರ್ಕಾರಿ ಹುದ್ದೆಗೆ ಸೇರಿದ ಅನೇಕ ಅಧಿಕಾರಿಗಳು ಅನೇಕ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವರ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಮತ್ತು ಕೆಲವರು ವಿಚಾರಾಣಾಧೀನ ಕೈದಿಗಳಾಗಿ ಜೈಲಿನಲ್ಲಿಯೂ ಇದ್ದಾರೆ (ರಾಜಮ್ಮ ಚೌಡರೆಡ್ಡಿ – ಬಿಡಿಎ, ಶಿವರಾಮ್ – ಮಂಡ್ಯ ಹಗರಣದ ರೂವಾರಿ, ಮಂಜುನಾಥ್ ಮತ್ತು ಮಂಜುನಾಥ್ ಬಳ್ಳಾರಿ -ಗಣಿ ಹಗರಣದಲ್ಲಿ ಮಾಮೂಲು ಪಡೆದಿರುವುದು, ಎಮ್.ಆರ್.ರವಿ – ಉಪನ್ಯಾಸಕರಿಂದ ಲಂಚ ಪಡೆದ ಹಗರಣ, ದೇವರಾಜ್ ಡಿ. -ರಿಪ್ಪನ್ ಮಲ್ಹೋತ್ರ ಅತ್ಮಹತ್ಯೆ ಪ್ರಕರಣ, ರಾಜು ಸಿ – ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆರೋಪಿ).

ಯಾವುದೇ ನೇಮಕದಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಹಾಗಾಗಿ ಈ ಮೂರೂ ವರ್ಷಗಳ ನೇಮಕಾತಿ ರದ್ದಾಗುವುದು ನಿಶ್ಚಿತವಾಗಿದ್ದು, ಸರ್ಕಾರ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ ಮತ್ತು ತನ್ನ ಸಂವಿಧಾನಬದ್ದ ಕರ್ತವ್ಯ ನಿರ್ವಹಿಸುವಲ್ಲಿ ಪದೇಪದೇ ವಿಫಲವಾಗುತ್ತಿದೆ. ಕ್ರಮ ಕೈಗೊಳ್ಳಬೇಕಿದ್ದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರಗಳು ಈ ರೀತಿಯಲ್ಲಿ ಭ್ರಷ್ಟರನ್ನು ರಕ್ಷಿಸುತ್ತಾ ಬಂದಿವೆ.

ಅಕ್ರಮವಾಗಿ ಆಯ್ಕೆಯಾದ ಭ್ರಷ್ಟ ಅಧಿಕಾರಿಗಳನ್ನು ಹೊರಹಾಕಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕಟಿಬದ್ದವಾಗಬೇಕಾದ ಸರ್ಕಾರ, ಅದರ ಬದಲಿಗೆ ಅಂತಹವರನ್ನು ಉನ್ನತ ಹುದ್ದೆಗಳಿಗೆ ನೇಮಿಸುತ್ತ, ಭಡ್ತಿ ನೀಡುತ್ತ ಬರುತ್ತಿದೆ. ಕೆಳಗೆ ಇಂತಹ ಕೆಲವು ವ್ಯಕ್ತಿಗಳ ಉದಾಹರಣೆಗಳನ್ನು ಕೊಡಲಾಗಿದೆ:

1998 ರ ಸಾಲಿನಲ್ಲಿ :

  • ಮೀಸಲಾತಿ ದುರುಪಯೋಗ ಮತ್ತು ಅಂಕಗಳ ಏರುಪೇರಿನ ಮೂಲಕ ಅಕ್ರಮವಾಗಿ ಆಯ್ಕೆಯಾಗಿರುವ ಶಿವಶಂಕರ್ ಎನ್ (ಸತ್ಯಶೋಧನಾ ಸಮಿತಿ ವರದಿ -ಪುಟ 115, ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್‌ರವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.
  • ಸಂದರ್ಶನದ ಅಂಕಗಳನ್ನು ಅಕ್ರಮವಾಗಿ ತಿದ್ದುವುದರ ಮೂಲಕ ಹೆಚ್ಚುವರಿ ಅಂಕ ಪಡೆದು ಆಯ್ಕೆಯಾಗಿರುವ ಸಂಗಾಪುರ್ ಎಮ್.ಎಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಸಂಖ್ಯೆ 242) ಈಗ ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿರುವ ಬಾಬುರಾವ್ ಚಿಂಚನಸೂರುರಿಗೆ ಆಪ್ತ ಕಾರ್ಯದರ್ಶಿಯಾಗಿದ್ದಾರೆ,
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಶ್ರೀಧರ್ ನಾಯಕ್ ಕೆ.ಜೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 23) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿ ಎಲಿಷಾ ಆಂಡ್ರ್ಯೂಸ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 71) ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ವಿರೂಪಾಕ್ಷ ಕೆ.ಸಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 10) ಈಗ ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್‌ರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದಾರೆ.
  • ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಆಗಿರುವ ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಲಾಭ ಪಡೆದಿರುವ ಜ್ಯೋತಿ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ರಾಜ್ಯದ ಖಜಾನೆ ಇಲಾಖೆಯ ನಿರ್ದೇಶಕರಾಗಿ ಪ್ರಭಾವಿ ಹುದ್ದೆಯಲ್ಲಿದ್ದಾರೆ.
  • ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಅಕ್ರಮ್ ಪಾಷಾ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 3) ಈಗ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ.
  • ಅಕ್ರಮ ಮಾಡರೇಷನ್ ಸ್ಕೇಲಿಂಗ್ ಮೂಲಕ ಅಧಿಕ ಅಂಕಗಳ ಲಾಭ ಪಡೆದಿರುವ ಕರೀಗೌಡ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 4) ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಕುಮಾರಸ್ವಾಮಿಯವರ ಅಪ್ತ ಕಾರ್ಯದರ್ಶಿಯಾಗಿದ್ದು ಈಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದಾರೆ.
  • ಇದೇ ರೀತಿ ಮೀಸಲಾತಿಯನ್ನು ದುರುಪಯೋಗ ಮಾಡಿಕೊಂಡು ಆಯ್ಕೆಯಾಗಿರುವ ಸಿಲ್ಲಿ-ಲಿಲ್ಲಿ ಟಿವಿ ಧಾರಾವಾಹಿ ಖ್ಯಾತಿಯ ಸಂಗಪ್ಪ ಉಪಾಸೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 6) ಇತ್ತೀಚೆಗೆ ಭಡ್ತಿ ಪಡೆದು ಈಗ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉಪನಿಯಂತ್ರಕರಾಗಿದ್ದಾರೆ.
  • ಲಿಂಗಣ್ಣ ಕುಚಬಾಳ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 11) ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿದ್ದಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಎಚ್.ಎನ್.ಗೋಪಾಲಕೃಷ್ಣ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 2) ಈಗ ಹಾಸನದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ.

1999 ರ ಸಾಲಿನಲ್ಲಿ :

  • ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್.ಎನ್.ಕೃಷ್ಣರಿಂದ ಸಂದರ್ಶನದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು (194/200) ಅಕ್ರಮವಾಗಿ ಆಯ್ಕೆಯಾಗಿರುವ ರಾಜೇಂದ್ರ ಕೆ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಅಧಿಕಾರಿಯಾಗಿದ್ದಾರೆ.
  • ಒಟ್ಟು ಆರು ಸಂದರ್ಶಕರ ಗುಂಪಿನಲ್ಲಿ ಕೇವಲ ಇಬ್ಬರು ಸಂದರ್ಶಕರ ಅಂಕಗಳನ್ನು ಪರಿಗಣಿಸಿ ಮತ್ತು ಅರ್ಜಿ ಸಲ್ಲಿಸುವ ವೇಳೆ ಪದವಿ ಪ್ರಮಾಣಪತ್ರಗಳು ಇಲ್ಲದಿದ್ದರೂ ಅಕ್ರಮವಾಗಿ ಆಯ್ಕೆ ಮಾಡಲಾಗಿರುವ ರಾಜೇಶ ಗೌಡ ಎಮ್.ಬಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 48) (ಮಾಜಿ ಶಾಸಕರೊಬ್ಬರ ಅಳಿಯ) ಇತ್ತೀಚೆಗೆ ಭಡ್ತಿ ಪಡೆದು ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ದೇವರಾಜ್ ಡಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ಗುಲ್ಬರ್ಗದ ಸೂಪರಿಡೆಂಟ್ ಆಫ್ ಪೋಲಿಸ್ ಆಗಿದ್ದಾರೆ.
  • ಅಕ್ರಮ ಅಂಕ ತಿದ್ದುವಿಕೆಯ ಫಲಾನುಭವಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿಯೊಬ್ಬರ ಮಗಳು ಸಿರಿಗೌರಿ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 49) ವರ್ಷದ ಹಿಂದೆಯೇ ಭಡ್ತಿ ಪಡೆದು ಎಸ್.ಪಿ.ಯಾಗಿದ್ದಾರೆ.

2004 ರ ಸಾಲಿನಲ್ಲಿ :

  • ಉತ್ತರಪತ್ರಿಕೆಯಲ್ಲಿ ಮತ್ತು ಕಂಪ್ಯೂಟರ್‌ನಲ್ಲಿ ಅಕ್ರಮವಾಗಿ ಅಂಕಗಳ ತಿದ್ದುಪಡಿಯಾಗಿ ಆಯ್ಕೆಯಾಗಿರುವ ವಿಜಯಮಹಾಂತೇಶ್ ದಾನಮ್ಮನವರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) ಈಗ ಕಾರವಾರದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ಡಾರೆ.
  • ಅಕ್ರಮ ಅಂಕಗಳ ಫಲಾನುಭಾವಿಯಾಗಿರುವ ಗಂಗಾಧರ ಸ್ವಾಮಿ ಜಿ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಮಾಜಿ ನ್ಯಾಯಾಧೀಶರೊಬ್ಬರ ಅಳಿಯ) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (BMRDA) ಜಂಟಿ ಅಯುಕ್ತರಾಗಿದ್ದಾರೆ.
  • ಮಿಸಲಾತಿ ದುರುಪಯೋಗ ಮತ್ತು ಸಂದರ್ಶನದಲ್ಲಿ ಅಸಮರ್ಥನೀಯ ಅಂಕಗಳನ್ನು ಪಡೆದು ಆಯ್ಕೆಯಾಗಿರುವ ಯೋಗೀಶ್ ಎ.ಎಮ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 60) (ಹಾಲಿ ಶಾಸಕ ಮತ್ತು ಮಾಜಿ ಸಚಿವರ ಷಡ್ಡಕ) ಕಾಡಾ ಪ್ರಾಧಿಕಾರ (CADA), ಮೈಸೂರಿನಲ್ಲಿ  ಉನ್ನತ ಅಧಿಕಾರಿಯಾಗಿದ್ದಾರೆ.
  • ಅನುಪಾತ ನಿಯಮದ ದುರುಪಯೋಗವಾಗಿ ಆಯ್ಕೆಯಾಗಿರುವ ಪೂರ್ಣಿಮ.ಬಿ.ಆರ್ (ಅಕ್ರಮ ಫಲಾನುಭವಿಗಳ ಪಟ್ಟಿ -ಪುಟ 61) ಈಗ ಮಂಡ್ಯ ಜಿಲ್ಲಾಪರಿಷತ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ಹೀಗೆ ಇಷ್ಟೆಲ್ಲಾ ಮಾಹಿತಿಯನ್ನು ಸತ್ಯಶೋಧನಾ ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ ಮತ್ತು ಸರ್ಕಾರದ ವಕಿಲರೇ ಆ ಸಮಿತಿಯಲ್ಲೂ ಇದ್ದು ಅದಕ್ಕೆ ಸಹಮತ ಸೂಚಿಸಿ ಸಹಿ ಮಾಡಿದ್ದರೂ, ಈಗಲೂ ಸಿದ್ಧರಾಮಯ್ಯನವರ ಸರ್ಕಾರ ಅಕ್ರಮ ಫಲಾನುಭವಿ ಅಧಿಕಾರಿಗಳ ಪಟ್ಟಿ ನಮ್ಮಲ್ಲಿಲ್ಲ, ಅಥವ ನಮಗೆ ಗೊತ್ತಾಗುತ್ತಿಲ್ಲ ಎಂದು ಕೋರ್ಟಿಗೆ ಉತ್ತರ ಹೇಳುವ ಮೂಲಕ ಪ್ರತಿಯೊಬ್ಬ ಅಕ್ರಮ ಫಲಾನುಭವಿ ಅಧಿಕಾರಿಯನ್ನು ರಕ್ಷಿಸಲು ಹೊರಟಿದೆ. ಇದು ಸಿದ್ಧರಾಮಯ್ಯನವರಿಗಾಗಲಿ ಅಥವ ಅವರ ಸರ್ಕಾರಕ್ಕಾಗಲಿ ಶೋಭೆ ತರುವಂತಹುದ್ದಲ್ಲ ಮತ್ತು ಜನರು ಅವರ ಬಗ್ಗೆ ಇಟ್ಟುಕೊಂಡಿರುವ ವಿಶ್ವಾಸಕ್ಕೆ ಧಕ್ಕೆ ತರುವಂತಹುದ್ದಾಗಿದೆ. ನ್ಯಾಯಾಲಯ ಅನೇಕ ಬಾರಿ ಈ ವಿಚಾರದ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಪದೇಪದೇ ಕೇಳಿದರೂ ಸರ್ಕಾರ ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ. ಮಾರ್ಗದರ್ಶನಕ್ಕಾಗಿ ನ್ಯಾಯಾಲಯವನ್ನೇ ಕೇಳುತ್ತಿದೆ. “ಅಕ್ರಮ ಫಲಾನುಭವಿಗಳು ಇಂತಹವರು ಎಂದು ಗೊತ್ತಿದ್ದರೂ, ನೀವೇ ಉದ್ಯೋಗದಾತರಗಿದ್ದೀರಿ, ಹಾಗೂ ನಿಮ್ಮ ನೌಕರರಾಗಿರುವವರ ಮೇಲೆ ಕ್ರಮ ಜರುಗಿಸುವ ಅಧಿಕಾರವನ್ನು ನೀವೇ ಹೊಂದಿರುತ್ತೀರಿ, ಹೀಗಿರುವಾಗ ನೀವು ಯಾವ ಕಾರಣದಿಂದ ನ್ಯಾಯಾಲಯ ನಿಮಗೆ ಆದೇಶ ನೀಡಬೇಕೆಂದು ಬಯಸುತ್ತೀರಿ, ನಿಮಗೆ ಹಾಗೆ ಮಾಡಲು ತಾಕತ್ತು (Guts) ಇಲ್ಲವೆ?” ಎಂದು ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಇಷ್ಟು ಹೇಳಿಸಿಕೊಂಡರೂ ಸರ್ಕಾರ ಈಗಲೂ ಅದೇ ಧೋರಣೆ ಮುಂದುವರೆಸಿ, ಅಕ್ರಮವಾಗಿ ಆಯ್ಕೆಯಾದ ಅಧಿಕಾರಿಗಳಿಗೆ ಭಡ್ತಿ ನೀಡಿ, ಜವಾಬ್ದಾರಿಯುತವಾದ ಹುದ್ದೆಗಳಿಗೆ ನೇಮಿಸಿ, ಅವರ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಪೋಷಿಸುತ್ತಾ, ಶಿಕ್ಷಿಸಬೇಕಾದ ಸಂದರ್ಭದಲ್ಲಿ ರಕ್ಷಿಸುತ್ತ, ಅನ್ಯಾಯ-ಅಕ್ರಮ-ಭ್ರಷ್ಟಾಚಾರ-ಸ್ವಜನಪಕ್ಷಪಾತಗಳನ್ನು ಗೌರವಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಈ ಕೂಡಲೇ ಸರ್ಕಾರ ನ್ಯಾಯಾಲಯವೇ ಮಾರ್ಗದರ್ಶನ ನೀಡಬೇಕು ಎನ್ನುವ ಕರ್ತವ್ಯದಿಂದ ನುಣುಚಿಕೊಳ್ಳುವ ಜಾಣ ಕುರುಡುತನದ ಕಳ್ಳಮಾರ್ಗ ಅನುಸರಿಸದೇ, ಈ ಮೂರೂ ವರ್ಷಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ.20ಕ್ಕಿಂತ ಹೆಚ್ಚು ಅಕ್ರಮ ನಡೆದಿದ್ದಲ್ಲಿ ಅಂತಹ ಅಧಿಸೂಚನೆಯನ್ನು ರದ್ದುಪಡಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಆದೇಶ ನೀಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಮೂರೂ ನೇಮಕಾತಿ ಅಧಿಸೂಚನೆಗಳನ್ನು (1998, 1999, 2004) ರದ್ದುಪಡಿಸಿ, ತಪ್ಪು ಎಸಗಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕೆಪಿಎಸ್‍‍ಸಿಯನ್ನು ಕೇಂದ್ರದ ಯುಪಿಎಸ್‌ಸಿ ಮಾದರಿಯಲ್ಲಿ ಅಮೂಲಾಗ್ರ ಸುಧಾರಣೆ ಮಾಡುವ ತನಕ ಆಯೋಗಕ್ಕೆ ಯಾವುದೇ ನೇಮಕಾತಿ ಜವಾಬ್ದಾರಿಗಳನ್ನು ವಹಿಸಬಾರದು. ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ಯಾವುದೇ ನ್ಯಾಯ ದೊರಕದೇ ಇದ್ದರೂ, ಭ್ರಷ್ಟಾಚಾರ-ಮುಕ್ತ ಆಡಳಿತದತ್ತ ರಾಜ್ಯ ನಡೆಯುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತದೆ.

ದಾಖಲೆಗಳು:
ಅಕ್ರಮ ಫಲಾನುಭವಿಗಳ ಪಟ್ಟಿ : http://www.kpscfraudselections.cu.cc/beneficiary-list-2/
ಸತ್ಯಶೋಧನಾ ಸಮಿತಿಯ ವರದಿ: http://www.kpscfraudselections.cu.cc/fact-finding-committee-report/

ವರ್ತಮಾನದ ಕಥೆಗಳು : ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013ರ ಆಯ್ದಕತೆಗಳ ಕಥಾಸಂಕಲನ

ಆತ್ಮೀಯರೇ,

ಕಳೆದ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮತ್ತು ಬಹುಮಾನಿತ ಕತೆಗಳ ಬಗ್ಗೆ ನಿಮಗೀಗಾಗಲೆ ತಿಳಿದಿದೆ. katha-sprade-2013(ಫಲಿತಾಂಶ, ತೀರ್ಪುಗಾರರ ಮಾತು, ಮೊದಲ ಬಹುಮಾನ ಪಡೆದ ಕತೆ, ಎರಡನೆಯ, ಮೂರನೆಯ, ಸಮಾಧಾನಕರ ಬಹುಮಾನ ಪಡೆದ ಕತೆ-೧, ಕತೆ-೨). ಆ ಸಂದರ್ಭದಲ್ಲಿ ಈ ಬಾರಿಯ ತೀರ್ಪುಗಾರರಾಗಿದ್ದ ಡಾ. ರಾಮಲಿಂಗಪ್ಪ ಟಿ. ಬೇಗೂರುರವರು ಆ ಸ್ಪರ್ಧೆಗೆ ಬಂದಿದ್ದ ಸುಮಾರು ಇಪ್ಪತ್ತು ಕತೆಗಳನ್ನು ಆಯ್ದು “ವರ್ತಮಾನದ ಕಥೆಗಳು” ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸುವ ಆಸಕ್ತಿ ತೋರಿಸಿ ಅದಕ್ಕೆ ಕೆಲವು ಪ್ರಕಾಶಕರನ್ನೂ ಸಂಪರ್ಕಿಸಿದ್ದರು. ಆ ಸಮಯದಲ್ಲಿ ನಾವು ಆಯ್ಕೆ ಮಾಡಿದ ಕತೆಗಳ ಕತೆಗಾರರಿಗೆಲ್ಲ ಇಮೇಲ್ ಬರೆದು ಇದರ ಬಗ್ಗೆ ತಿಳಿಸಿದ್ದೆವು. ಈಗ ಆ ಕಥಾಸಂಕಲನ ಪ್ರಕಟವಾಗಿದೆ ಮತ್ತು ಪ್ರಕಟಗೊಂಡಿರುವ ಕತೆಗಳ ಲೇಖಕರಿಗೆಲ್ಲ ಗೌರವ ಪ್ರತಿಗಳನ್ನು ತಲುಪಿಸಬೇಕಿದೆ. ದಯವಿಟ್ಟು ಈ ಪಟ್ಟಿಯಲ್ಲಿರುವ ಲೇಖಕರು ಡಾ. ರಾಮಲಿಂಗಪ್ಪ ಟಿ. ಬೇಗೂರುರವರನ್ನಾಗಲಿ (೯೪೪೯೨೭೧೧೫೬) ಅಥವ ನನ್ನನ್ನಾಗಲಿ (೯೬೮೬೦೮೦೦೦೫) ಸಂಪರ್ಕಿಸಿ ತಮ್ಮ ಗೌರವ ಪ್ರತಿಗಳನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇವೆ.

ಸಮಸ್ಯೆ ಏನೆಂದರೆ, ಹಲವರ ಫೋನ್ ನಂಬರ್ ಸಹ ನಮ್ಮಲ್ಲಿಲ್ಲ. ಮತ್ತೆ ಹಲವರು ಇಮೇಲ್ ಮೂಲಕ, ಅದೂ ಹಲವು ದಿನಗಳ ನಂತರ ಉತ್ತರಿಸುತ್ತಾರೆ. ಹಾಗಾಗಿ ನಮ್ಮ ಓದುಗರಿಗೆ ಈ ಪಟ್ಟಿಯಲ್ಲಿರುವ ಯಾರಾದರೂ ಲೇಖಕರು ಪರಿಚಿತರಿದ್ದಲ್ಲಿ ಅವರಿಗೆ ಈ ವಿಷಯದ ಬಗ್ಗೆ ಕರೆ ಮಾಡಿ ತಿಳಿಸಿದರೆ, ಅದೂ ಬಹಳ ಅನುಕೂಲವಾಗುತ್ತದೆ.

ಇದನ್ನೆಲ್ಲ ಸಾಧ್ಯವಾಗಿಸಿದ ಕತೆಗಾರರಿಗೆ, ಮತ್ತು ಡಾ. ರಾಮಲಿಂಗಪ್ಪ ಟಿ. ಬೇಗೂರುರವರಿಗೆ ವರ್ತಮಾನ.ಕಾಮ್ ಪರವಾಗಿ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

vartamaanada-kathegalu-cobverpage

vartamaanada-kathegalu-authours1

vartamaanada-kathegalu-authours2

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ

ವರ್ತಮಾನ.ಕಾಮ್‌ನ ಓದುಗರೇ ಮತ್ತು ಸ್ನೇಹಿತರೇ,

ಆಮ್ ಆದ್ಮಿ ಪಕ್ಷವು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು AAP-BLR-Rural-MP-candidateತಮಗೆಲ್ಲಾ ತಿಳಿದಿರಬಹುದು. ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳು ಕುಂಠಿತವಾಗಬಹುದು ಎಂಬ ಸಂಶಯಗಳಿದ್ದವು. ಆದರೆ, ಹಲವು ಸ್ನೇಹಿತರು ಈ ಸಂದರ್ಭದಲ್ಲಿ ಇದರ ಕೆಲಸಗಳನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಹಾಗಾಗಿ, ಎಂದಿನಂತೆ ನಮಗೆ ಲೇಖನಗಳು ಬಂದ 1-3 ದಿನಗಳಲ್ಲಿಯೇ ಅವನ್ನು ಪ್ರಕಟಿಸುವ ಕೆಲಸಗಳು ನಡೆಯುತ್ತವೆ.

ಇನ್ನು ಈ ಚುನಾವಣೆಗಳ ಬಗ್ಗೆ ಹೇಳುವುದಾದರೆ, ನನ್ನ ವೈಯಕ್ತಿಕ ಜವಾಬ್ದಾರಿ ಈಗ ಹಲವು ಪಟ್ಟು ಹೆಚ್ಚಿದೆ. ಸಾದ್ಯವಾದಲ್ಲಿ ನಿಮ್ಮೆಲ್ಲರ ಸಲಹೆ-ಸಹಕಾರ-ಬೆಂಬಲವೂ ಬೇಕಿದೆ. ಏನೇ ಆಗಲಿ, ಈ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಗಂಭೀರವಾದ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ. ಯಾವುದನ್ನು ಈವತ್ತಿನ ಸಂದರ್ಭದಲ್ಲಿ ಅವಾಸ್ತವ ಎನ್ನುತ್ತಿದ್ದರೊ ಅದನ್ನು ಈ ಬಾರಿ ಆಮ್ ಜನತೆ ನಿಜ ಮಾಡಲಿದ್ದಾರೆ ಎನ್ನುವ ವಿಶ್ವಾಸ ನನ್ನದು. ಕಳೆದ ಹಲವಾರು ದಶಕಗಳಿಂದ ಭ್ರಷ್ಟಾಚಾರ, ಅಕ್ರಮ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣದಿಂದ ನಲುಗಿದ್ದ ನಮ್ಮ ಈ ನಾಡು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಗಲಿದೆ. ಆ ನಿಟ್ಟಿನಲ್ಲಿ ಆಶಾವಾದಿಗಳಾಗಿರುವ ಬಹುತೇಕ ಜನ ಕ್ರಿಯಾಶೀಲರಾಗಿ ದುಡಿಯುತ್ತಿರುವುದನ್ನು ನಾನು ಪ್ರತಿದಿನ ನೋಡುತ್ತಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಹುಶಃ ರಾಜ್ಯದಲ್ಲಿಯೇ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ, ದೊಡ್ಡ ಕ್ಷೇತ್ರ. Bangalore-Rural-MP-Constituencyರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಮತ್ತು ಕುಣಿಗಲ್ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮತು ಆನೇಕಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮತ್ತು ಮಾಗಡಿ ಕ್ಷೇತ್ರಗಳು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ; ಕುಣಿಗಲ್ ಕ್ಷೇತ್ರ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಈ ಕ್ಷೇತ್ರಗಳ ಮತದಾರರಾಗಿದ್ದಲ್ಲಿ ಅಥವ ತಿಳಿದವರು ಗೊತ್ತಿದ್ದಲ್ಲಿ ದಯವಿಟ್ಟು ಅಂತಹವರು ನಮ್ಮ ಚುನಾವಣಾ ಪ್ರಚಾರಕ್ಕೆ ನೆರವಾದರೆ ಬಹಳ ಅನುಕೂಲವಾಗುತ್ತದೆ. ಈಗಾಗಲೆ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು, ಕೆಲವರು ತಮ್ಮ ನೌಕರಿಗಳಿಗೆ ರಾಜೀನಾಮೆ ನೀಡಿ, ಮತ್ತೆ ಕೆಲವರು ರಜೆ ತೆಗೆದುಕೊಂಡು, ಪ್ರಚಾರ ಕಾರ್ಯದಲ್ಲಿ, ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಚಳವಳಿ ಮತ್ತು ರಕ್ತರಹಿತ ಕ್ರಾಂತಿಯಲ್ಲಿ ಭಾಗೀದಾರನಾಗಿರುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ, ಹೆಮ್ಮೆಯಾಗುತ್ತಿದೆ. ನಮ್ಮ ಮುಂದಿನ ದಿನಗಳ ಬಗ್ಗೆ ಆಶಾವಾದ ಹೆಚ್ಚುತ್ತಿರುವ ಸಮಯ ಇದು.

ಅಂದ ಹಾಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಇತಿಹಾಸ ಮತ್ತು ವರ್ತಮಾನ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.

ಈ ಸಂದರ್ಭದಲ್ಲಿ ನಿಮ್ಮ ಕ್ರಿಯಾಶೀಲತೆ, ಬೆಂಬಲ, ನೆರವನ್ನು ಆಶಿಸುತ್ತಾ,.. ಈ ಹೋರಾಟದಲ್ಲಿ ನಿಮ್ಮ ಸಾಹಚರ್ಯವನ್ನು ಬಯಸುತ್ತೇನೆ.

ನಮಸ್ಕಾರ,
ರವಿ…