Category Archives: ಜೀವನದಿಗಳ ಸಾವಿನ ಕಥನ

Almatti-Dam

ಜೀವನದಿಗಳ ಸಾವಿನ ಕಥನ – 20

ಡಾ. ಎನ್. ಜಗದೀಶ್ ಕೊಪ್ಪ

“ಹಸಿರು ಕ್ರಾಂತಿ ಯೋಜನೆಯಡಿ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಂಡಿರುವ ಕೃಷಿ ಚಟುವಟಿಕೆಗಳಾಗಲಿ, ಅಥವಾ ನೀರಾವರಿ ಯೋಜನೆಗಳಾಗಲಿ ತಮ್ಮ ಮೂಲಭೂತ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಹಸಿವು ಇಂದಿಗೂ ತಾಂಡವವಾಡುತ್ತಿದೆ.” ಇವು ಎರಡು ದಶಕದ ಹಿಂದೆ ನೈಸರ್ಗಿಕ ಕೃಷಿ ಆಂದೋಲನದಲ್ಲಿ ಕೇಳಿ ಬಂದ ಮಾತುಗಳು. ದುರಂತವೆಂದರೆ, ಹಸಿವು ಕುರಿತಂತೆ ಜಗತ್ತಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

ಜಗತ್ತಿನ ಹಿರಿಯಣ್ಣನೆಂದು ತೊಡೆ ತಟ್ಟಿ ನಿಂತಿರುವ ಅಮೇರಿಕಾದಲ್ಲೂ ಕೂಡ ಜನತೆ ಹಸಿವಿನಿಂದ ಮುಕ್ತರಾಗಿಲ್ಲ. ಕ್ಯಾಲಿಫೋರ್ನಿಯದಂತಹ ಸಮೃದ್ಧ ನೀರಾವರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯ ಬೆಳೆಯುತಿದ್ದರೂ ಕೂಡ ಅಮೇರಿಕಾದ ಪ್ರತಿ ಆರು ಜನರಲ್ಲಿ ಒಬ್ಬ ವ್ಯಕ್ತಿ ಹಸಿವಿನಿಂದ ಬಳಲುತಿದ್ದಾನೆ. ಇದು ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ಸಂಶೋಧಕರು ಬಹಿರಂಗ ಪಡಿಸಿರುವ ಸತ್ಯ.

ಇವತ್ತಿಗೂ ತೃತೀಯ ಜಗತ್ತಿನ ರಾಷ್ಟಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಂಗ್ಲಾದೇಶ ಮುಂತಾದ ದೇಶಗಳಲ್ಲಿ ಪ್ರತಿದಿನ ಕೋಟ್ಯಾಂತರ ಜನ ಹಸಿವಿನಿಂದ ನರಳುತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಧೀಶರ ಸಂಖ್ಯೆ ಹೆಚ್ಚಾಗುತ್ತಿರುವುದು ನಮ್ಮ ಮಾಧ್ಯಗಳಿಗೆ ಹೆಮ್ಮೆಯ ಸುದ್ಧಿಯೇ ಹೊರತು, ನಮ್ಮ ಜನಪ್ರತಿನಿಧಿಗಳ, ಯೋಜನೆಗಳ ನಿರ್ಮಾಪಕರ ಕೆನ್ನೆಗೆ ಹೊಡೆದಂತೆ ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಆದಿವಾಸಿ ಮತ್ತು ಬುಡಕಟ್ಟು ಜನಾಂಗ ಹಸಿವಿನಿಂದ ಸಾಯುತ್ತಿರುವುದು ಸುದ್ಧಿಯಲ್ಲ. ಇದು ಸುದ್ಧಿ ಮಾಧ್ಯಮಗಳ ಅಜ್ಙಾನವೊ, ಅಥವಾ ಅಸಡ್ಡೆತನವೋ ತಿಳಿಯಲಾಗದು.

ಭಾರತ ಈಗ ಆಹಾರದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದ್ದು, ದೇಶದ ಗೋದಾಮುಗಳಲ್ಲಿ ಬಡವರಿಗೆ ವಿತರಣೆಯಾಗದೆ 30 ಲಕ್ಷ ಟನ್ ಆಹಾರ ಕೊಳೆಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಎಲ್ಲರೂ ಬಲ್ಲ ಸಂಗತಿ. ನ್ಯಾಯಾಲಯ ಕಪಾಳಕ್ಕೆ ಬಾರಿಸಿದ ನಂತರವೂ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಎಚ್ಚೆತ್ತುಕೊಂಡಿಲ್ಲ.

ತೃತೀಯ ಜಗತ್ತಿನ ಹಸಿವಿನ ಕುರಿತು ವಾಖ್ಯಾನಿಸಿರುವ ಕೃಷಿತಜ್ಙ ರಾಬರ್ಟ್ ಛೇಂಬರ್ಸ್, ದಕ್ಷಿಣ ಏಷ್ಯಾದಲ್ಲಿ ಮೂಲಭೂತವಾಗಿ ಹಸಿವು ಒಂದು ಸಮಸ್ಯೆಯಲ್ಲ, ಅಲ್ಲಿನ ಜನರು ಪಾರಂಪರಿಕವಾಗಿ ಅನೇಕ ಕಿರು ಧಾನ್ಯಗಳನ್ನು ಬೆಳೆದು ಹಸಿವಿನಿಂದ ಮುಕ್ತರಾಗುತಿದ್ದರು. ಆದರೆ, ಆಧುನಿಕ ಸರ್ಕಾರಗಳ ಒತ್ತಡದಿಂದ ರೈತರು ಎಣ್ಣೆಕಾಳು, ಕಬ್ಬು ಹತ್ತಿ ಮುಂತಾದ ವಾಣಿಜ್ಯ ಬೆಳೆಗಳಿಗೆ ಶರಣು ಹೋದದ್ದರಿಂದ ಅವರು ತಮಗೆ ಅರಿವಿಲ್ಲದಂತೆ ಹಸಿವಿನ ಬಲೆಯೊಳಗೆ ಸಿಲುಕಿಬಿಟ್ಟಿದ್ದಾರೆ ಎಂದಿದ್ದಾನೆ.

1960 ರಿಂದ 1985 ರವರೆಗಿನ 25 ವರ್ಷಗಳಲ್ಲಿ ಭಾರತದಲ್ಲಿ ಜರುಗಿದ ಹಸಿರು ಕ್ರಾಂತಿಯ ಫಲವಾಗಿ ಭತ್ತ ಮತ್ತು ಗೋಧಿಯ ಫಸಲು ನೀರಾವರಿ ಪ್ರದೇಶಗಳಲ್ಲಿ ಮೂರು ಪಟ್ಟು ಹೆಚ್ಚಾಯಿತು. ಇವುಗಳ ಜೊತೆಗೆ ಎಣ್ಣೆಕಾಳು ಬೆಳೆಗಳು ಸಹ ದ್ವಿಗುಣಗೊಂಡವು. ಆದರೆ, ಪೌಷ್ಟಿಕ ಅಂಶಗಳನ್ನು ಒಳಗೊಂಡಿದ್ದ ಸಾಂಪ್ರದಾಯಕ ಬೆಳೆಗಳಾದ ಜೋಳ, ಸಜ್ಜೆ, ನವಣೆ, ಮುಂತಾದ ಕಿರುಧಾನ್ಯಗಳು ಕುಂಠಿತಗೊಂಡವು. ಭಾರತ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನೀರಾವರಿ ಯೋಜನೆಗಳಿಗೆ ವಿನಿಯೋಗಿಸಿದ್ದು ಕೇವಲ ಭತ್ತ ಮತ್ತು ಗೋಧಿ ಮುಂತಾದ ಬೆಳೆಗಳಿಗೆ ಹೊರತು, ಸಾಂಪ್ರದಾಯಕ ಬೆಳೆಗಳಿಗಲ್ಲ. ಕಿರುಧಾನ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ರಾಜಸ್ತಾನದ ಥಾರ್ ಮರುಭೂಮಿಯಲ್ಲಿ 1970 ರ ದಶಕದಲ್ಲಿ ಅಲ್ಲಿಗೆ ಇಂದಿರಾಗಾಂಧಿ ಬೃಹತ್ ನೀರಾವರಿ ನಾಲುವೆ ಯೋಜನೆ ಬರುವ ಮುನ್ನ ಅಲ್ಲಿನ ಜನತೆ ದೇಶಿ ತಂತ್ರಜ್ಙಾನ ಬಳಸಿ ಮಳೆನೀರನ್ನು ಶೇಖರಿಸಿಟ್ಟುಕೊಂಡು ಹಲವಾರು ರೀತಿಯ ಸಾಂಪ್ರದಾಯಿಕ ಬೆಳೆ ತೆಗೆಯುತಿದ್ದರು. ಇವುಗಳಲ್ಲಿ ಜೋಳ, ಸಜ್ಜೆ, ಸಾಸಿವೆ, ಮೆಣಸಿನಕಾಯಿ, ಎಳ್ಳು ಮುಂತಾದ ಬೆಳೆಗಳಿದ್ದವು. ಹೀಗೆ ತಮ್ಮ ಅವಶ್ಯಕತೆಗೆ ತಕ್ಕಂತೆ, ಹವಾಮಾನಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದರು.

1990 ರಲ್ಲಿ ನಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ನೀರಾವರಿಗೆ ಒಳಪಟ್ಟ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 13 ಸಾವಿರ ಹೆಕ್ಟೇರ್ ನಲ್ಲಿ ಗೋಧಿ, ಉಳಿದ 2 ಸಾವಿರ ಹೆಕ್ಟೇರ್ ಪ್ರದೇಶ್ಲ ಎಣ್ಣೆಕಾಳು, ಭತ್ತ, ಬೆಳೆಗಳಿಗೆ ಸೀಮಿತವಾಯಿತು. ಅಲ್ಲಿನ ರೈತರು ಅನೇಕ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದರೂ ಸಹ, ದಲ್ಲಾಳಿಗಳು, ಮಧ್ಯವರ್ತಿಗಳ ಮುಂತಾದವರ ಕಪಿಮುಷ್ಟಿಗೆ ಸಿಲುಕಿ ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವಲ್ಲಿ ವಿಪಲರಾದರು. ಕೃಷಿಗಾಗಿ ತಾವು ಬ್ಯಾಂಕಿನಿಂದ ಪಡೆದ ಸಾಲ ತೀರಿಸಲಾರದೆ ಅತಂತ್ರರಾದರು. ಆತಂಕದ ಸಂಗತಿಯೆಂದರ, ನೀರಾವರಿ ಪ್ರದೇಶದ ಜನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿತು. ರಾಜಸ್ತಾನದ ಬರಪೀಡಿತ ಜಿಲ್ಲೆಗಳ ಜನತೆಗಿಂತ ಕಡಿಮೆಯ ಕ್ಯಾಲೊರಿ ಆಹಾರವನ್ನು ಇವರು ಸೇವಿಸುತಿದ್ದರು. ದೀಪದ ಕೆಳೆಗೆ ಕತ್ತಲು ಎಂಬಂತೆ ಮಕ್ಕಳೂ ಸಹ ಅಪೌಷ್ಟಿಕತೆಯಿಂದ ಸಾಯುತ್ತಿರುವುದು ಬೆಳಕಿಗೆ ಬಂತು.

ಇದು ಭಾರತದ ಸಂಕಟದ ಕಥೆಯಾದರೆ, ಆಫ್ರಿಕಾದ ಸೂಡಾನಿನ ಗೆರ್ಣಜೇರಿಯಾ ಪ್ರಾಂತ್ಯದ 84 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಗೋಳಿನ ಕತೆಯು ಇಂತಹದ್ದೇ ಆಗಿದೆ. ಅಲ್ಲಿನ ಬ್ಲೂನೈಲ್ ನದಿಯ ನೀರನ್ನು ಬಳಸಿಕೊಂಡು 1920ರ ದಶಕದಲ್ಲೇ ಬ್ರಿಟೀಷರು ಹತ್ತಿ ಬೆಳೆಯಲು ಪ್ರಾರಂಭಿಸಿದ್ದರು. ನಂತರದ ದಿನಗಳಲ್ಲಿ ಸೂಡಾನ್ ಸರ್ಕಾರ ಈ ನದಿಗೆ ಸೆನ್ನಾರ್ ಮತ್ತು ರೂಸಿಯರ್ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ಮತ್ತೆ ಹತ್ತಿ ಮತ್ತು ಕಬ್ಬು ಬೆಳೆಯಲು ಆದೇಶ ಹೊರಡಿಸಿತು. ಇದರಿಂದಾಗಿ ಇಲ್ಲಿನ ರೈತರು ಜೋಳ, ಮೆಕ್ಕೆಜೋಳ, ಗೆಣಸು ಮುಂತಾದ ಸಾಂಪ್ರದಾಯಕ ಬೆಳೆಗಳು ಹಾಗೂ ಪಶುಪಾಲನೆ, ಮೀನುಗಾರಿಕೆ, ಕೋಳಿಸಾಕಾಣಿಯಂತಹ ಕಸುಬುಗಳಿಂದ ವಂಚಿತರಾದರು.

ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಿದ ಕಾಲುವೆಗಳ ನಿಮಾರ್ಣದ ವಿಷಯವೇ ಈಗ ಜಗತ್ತಿನಾದ್ಯಂತ ವಿವಾದಕ್ಕೆ ಗುರಿಯಾಗಿದೆ. ಇದೊಂದು ವ್ಯಾಪಕ ಭ್ರಷ್ಟಾಚಾರಕ್ಕಾಗಿ ನಮ್ಮನ್ನಾಳುವ ಸರ್ಕಾರಗಳು, ಜನಪ್ರತಿನಿಧಿಗಳು ರೂಪಿಸಿಕೊಂಡ ವ್ಯವಸ್ಥೆ ಎಂಬ ಆರೋಪವಿದೆ. 1986ರಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಭಾರತದ ನೀರಾವರಿ ಯೋಜನೆಗಳ ಕುರಿತಂತೆ ಹೀಗೆ ಹತಾಶರಾಗಿ ನುಡಿದಿದ್ದರು. ಭಾರತದಲ್ಲಿ 1951 ರಿಂದ 246 ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಗೊಂಡಿದ್ದರೂ ಈವರೆಗೆ 65 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 180 ಯೋಜನೆಗಳು ಇವತ್ತಿಗೂ ಮುಗಿದಿಲ್ಲ. ನಾವು ಹೆಮ್ಮೆಯಿಂದ ಎದೆಯುಬ್ಬಿಸಿ ಇಂತಹ ಯೋಜನೆಗಳ ಬಗ್ಗೆ ಮಾತನಾಡಬಲ್ಲೆವು ಅಷ್ಟೇ. ರೈತರ ಪಾಲಿಗೆ ಕಾಲುವೆಯೂ ಇಲ್ಲ, ನೀರೂ ಇಲ್ಲ. ರೈತರ ಕೃಷಿ ಬದುಕಿನ ಬಗ್ಗೆ ಇಂತಹ ಸ್ಥಿತಿಯಲ್ಲಿ ಮಾತನಾಡುವುದು ಎಂದರೆ, ಅದೊಂದು ಆತ್ಮವಂಚನೆಯ ಸಂಗತಿ; ರಾಜೀವ್ ಗಾಂಧಿಯವರ ಮಾತು ಮೇಲ್ನೋಟಕ್ಕೆ ಆತ್ಮವಿಮರ್ಶೆ ಮಾತುಗಳಂತೆ ಕಂಡುಬಂದರೂ ಸಹ ವಾಸ್ತವಿಕವಾಗಿ ಭಾರತದ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಭಾರತದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಕೂಡ ರಾಜೀವ್ ಗಾಂಧಿಯವರ ಮಾತನ್ನು ಪುಷ್ಟೀಕರಿಸುತ್ತದೆ.

Almatti-Dam

Almatti Dam

ಭಾರತದಲ್ಲಿ ಸ್ವಾತಂತ್ರ ನಂತರ ಈವರೆಗೂ ಒಂದೇ ಒಂದು ಬೃಹತ್ ನೀರಾವರಿ ಯೋಜನೆ ನಿಗದಿತ ಅವಧಿಯೊಳಗೆ, ನಿಗದಿತ ಅಂದಾಜು ವೆಚ್ಚದೊಳಗೆ ಪೂರ್ಣಗೊಂಡಿಲ್ಲ ಎಂದು ವರದಿ ತಿಳಿಸಿದೆ. ಅಷ್ಟೇ ಏಕೆ? ಕರ್ನಾಟಕದ ಆಲಮಟ್ಟಿ ಜಲಾಶಯ ಲಾಲ್ ಬಹದ್ದೂರ್ ಶಾಸ್ರಿಯವರಿಂದ ಶಂಕುಸ್ಥಾಪನೆಗೊಂಡ 35 ವರ್ಷಗಳ ನಂತರ ಹೆಚ್.ಡಿ. ದೇವೆಗೌಡರಿಂದ ಉದ್ಘಾಟನೆಯಾದದ್ದು ಕನ್ನಡಿಗರೆಲ್ಲಾ ಬಲ್ಲ ಸಂಗತಿ. ಭಾರತವಷ್ಟೇ ಅಲ್ಲ ಜಗತ್ತಿನ ನೂರಾರು ಯೋಜನೆಗಳು ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿವೆ. ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಇಂತಹ ಪ್ರಮಾದಗಳು ಹೆಚ್ಚಾಗಿ ಜರುಗಿವೆ.

ನೈಜೀರಿಯ ಸರ್ಕಾರ 1970 ರ ದಶಕದಲ್ಲಿ 3ಲಕ್ಷ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆಯನ್ನು ರೂಪಿಸಿ ಇದಕ್ಕಾಗಿ ಅಂತರಾಷ್ಟೀಯ ಮಟ್ಟದಲ್ಲಿ ಕೋಟ್ಯಾಂತರ ಡಾಲರ್ ಹಣವನ್ನು ಸಾಲ ತಂದು ವ್ಯಯ ಮಾಡಿತು. 30 ವರ್ಷಗಳ ಕಾಲ ನಡೆದ ಕಾಮಗಾರಿ 2000 ದಲ್ಲಿ ಮುಕ್ತಾಯಗೊಂಡಾಗ ನೀರುಣಿಸಲು ಸಾಧ್ಯವಾದದ್ದು ಕೇವಲ 31 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ. ಯಾವುದೇ ಒಂದು ಯೋಜನೆ ರೂಪಿಸುವಾಗ ಕಾಲುವೆಗಳ ಆಳ, ಅಗಲ, ಉದ್ದ, ವಿನ್ಯಾಸ ಇವುಗಳ ಜೊತೆಗೆ ಜಲಾಶಯದಲ್ಲಿ ಸಿಗುವ ನೀರಿನ ಪ್ರಮಾಣ ಇಂತಹ ವಿಚಾರಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಸದಿದ್ದರೆ ಇಂತಹ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಾಲುವೆಗಳಲ್ಲಿ ಸೋರಿ ಹೋಗುವ ನೀರಿನ ಪ್ರಮಾಣವನ್ನು ಯಾವೊಂದು ಸರ್ಕಾರಗಳು ಈವರೆಗೆ ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಕಾಲುವೆಯ ಮೊದಲ ಭಾಗದ ರೈತರಿಗೆ ಸಿಗುವಷ್ಟು ನೀರು ಕೊನೆಯ ಭಾಗದ ರೈತರಿಗೆ ದೊರಕುವುದಿಲ್ಲ.

ನೀರಾವರಿ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ನೀರು ಬೇಡುವ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ರೈತರು ಮುಂದಾಗುತ್ತಾರೆ ಅವರುಗಳಿಗೆ ಪರೋಕ್ಷವಾಗಿ ಸಕ್ಕರೆ ಕಂಪನಿಗಳು, ಅಕ್ಕಿ ಗಿರಣಿಗಳು ಬೆಂಬಲಕ್ಕೆ ಇರುತ್ತವೆ. ಇವೆಲ್ಲವೂ ಬಲಿಷ್ಠ ರಾಜಕಾರಣಿಗಳು ಇಲ್ಲವೆ, ಬೃಹತ್ ಕಾರ್ಪೊರೇಟ್ ಕಂಪನಿಗಳ ಒಡೆತನದಲ್ಲಿರುತ್ತವೆ. ಇದರ ಲಾಭಿ ಸರ್ಕಾರಗಳನ್ನು ಮಣಿಸುವಷ್ಟು ಶಕ್ತಿಯುತವಾಗಿರುತ್ತದೆ. ಮಹರಾಷ್ಟದ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದ್ಲ ಶೇ.70 ರಷ್ಟು ಭಾಗದಲ್ಲಿ ರೈತರು ಕಬ್ಬು ಬೆಳೆಯುತಿದ್ದಾರೆ. ಅಲ್ಲಿನ ಸಕ್ಕರೆ ಕಾರ್ಖಾನೆಗಳ ಲಾಭಿಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವ ವಹಿಸಿರುವುದು ಎಲ್ಲರೂ ತಿಳಿದ ವಿಷಯ.

ಗುಜರಾತ್‌ನ ಕಛ್ ಮತ್ತು ಸೌರಾಷ್ಟದ ಮರುಭೂಮಿಗೆ ನೀರು ಒದಗಿಸುವ ಯೋಜನೆಯೆಂದು ಪ್ರಾರಂಭವಾದ ನರ್ಮದಾ ನದಿಯ ಸರ್ದಾರ್ ಸರೋವರ್ ಜಲಾಶಯದ ನೀರು ಈವರೆಗೆ ನಾಲುವೆ ಕೊನೆಯ ಭಾಗದ ರೈತರಿಗೆ ಸಿಕ್ಕಿಲ್ಲ. ನಾಲುವೆ ಪ್ರಾರಂಭದ ಅಚ್ಚುಕಟ್ಟು ಪ್ರದೇಶದಲ್ಲಿ 10 ಬೃಹತ್ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿದ್ದು, ರೈತರಿಗೆ ಕಬ್ಬು ಬೆಳೆಯಲು ಪ್ರೊತ್ಸಾಹಿಸಿವೆ. ಇದರಿಂದ ನಾಲುವೆ ಕೊನೆ ಭಾಗದ ರೈತರು ನರ್ಮದಾ ನೀರಿನಿಂದ ವಂಚಿತರಾದರು. ನದಿಗಳಲ್ಲಿ ವಾಸ್ತವವಾಗಿ ನೀರು ದೊರಕುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾಲುವೆಗಳ ಮೂಲಕ ನೀರು ಹರಿಸಲಾಗುವುದೆಂದು ಸರ್ಕಾರಗಳು ಸುಳ್ಳು ಹೇಳುವುದರ ಮೂಲಕ ರೈತರನ್ನು ವಂಚಿಸುತ್ತಿವೆ. ಅಣೆಕಟ್ಟು ನಾಲುವೆ ಮುಂತಾದವುಗಳ ವೆಚ್ಚ ಮಿತಿ ಮೀರಿದಾಗ ಜನಸಾಮಾನ್ಯರ ಕಣ್ಣೊರೆಸಲು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಇಂತಹ ಸುಳ್ಳಿಗೆ ಮುಂದಾಗುತ್ತವೆ.

ಜಗತ್ತಿ ನೀರಾವರಿ ಯೋಜನೆಗಳ ಸಾದಕ ಬಾಧಕಗಳ ಕುರಿತಂತೆ ವಿಶ್ವಬ್ಯಾಂಕ್ ತನ್ನ ತಜ್ಞರ ತಂಡದ ಮೂಲಕ ನಡೆಸಿದ ಅಧ್ಯಯನ ಎಂತಹವರನ್ನೂ ಬೆಚ್ಚಿ ಬೇಳಿಸುತ್ತದೆ. ಸಾಮಾನ್ಯವಾಗಿ ಒಂದು ಅಣೆಕಟ್ಟು ಯೋಜನೆ ರೂಪಿಸುವಾಗ ಅದಕ್ಕೆ ತಗಲುವ ವೆಚ್ಚ, ನೀರಾವರಿ ಯೋಜನೆಗಳಿಂದ ಸಿಗುವ ಪ್ರತಿಫಲ, ಇವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶ್ವಬ್ಯಾಂಕ್ ಲೆಕ್ಕಾಚಾರದ ಪ್ರಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಬಾರತದಲ್ಲಿ 15ರಿಂದ 25ಸಾವಿರ, ಬ್ರೆಜಿಲ್ ನಲ್ಲಿ 30ಸಾವಿರ, ಮೆಕ್ಸಿಕೊನಲ್ಲಿ 50ಸಾವಿರ, ಆಫ್ರಿಕಾ ಖಂಡದ ದೇಶಗಳಲ್ಲಿ 60ಸಾವಿರದಿಂದ 1ಲಕ್ಷದವರೆಗೆ ಖರ್ಚು ಬರುತ್ತಿದೆ. (ಈ ವೆಚ್ಚದಲ್ಲಿ ಭೂ ಪರಿಹಾರ, ಪುನರ್ವಸತಿ ಎಲ್ಲವೂ ಸೇರಿದೆ.) ಇವುಗಳ ಪ್ರತಿಫಲ ಈ ರೀತಿ ಇದೆ. ನೀರಾವರಿ ಯೋಜನೆಗಳಲ್ಲಿ ಭಾರತ ಶೇ. 60ರಷ್ಟು ಸಾಧನೆ ಸಾಧಿಸಿದ್ದು, ಸಮರ್ಪಕವಾಗಿ ನೀರನ್ನು ಬಳಸಿಕೊಂಡ ಯೋಜನೆಗಳ ಕಾರ್ಯಕ್ಷಮತೆ ಕೇವಲ ಶೆ. 25ರಿಂದ 35ರಷ್ಟು ಮಾತ್ರ. ಜಾಗತಿಕವಾಗಿ ನೀರಾವರಿ ಯೋಜನೆಗಳು ಯಶಸ್ವಿಯಾಗಿರುವುದು ಶೇ.40 ರಷ್ಟು ಮಾತ್ರ.

ಭಾರತದ ನೀರಾವರಿ ಯೋಜನೆ ಕುರಿತಂತೆ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಇಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿವೆ. ಭಾರತದ ನಾಲುವೆಗಳಾಗಲಿ, ಒಳಚರಂಡಿಗಳಾಗಲಿ ಇವುಗಳ ಕಾಮಗಾರಿಯ ಗುಣಮಟ್ಟ ತೀರ ಕಳಪೆಯದ್ದಾಗಿವೆ ರೈತರ ಬಗ್ಗೆ. ನಿಜವಾಗಿ ಇರಬೇಕಾದ ಕಾಳಜಿ ಇಲ್ಲವಾಗಿದ್ದು, ಕೆಲವೆಡೆ ರಾಜಕೀಯ ಹಿತಾಸಕ್ತಿಗಾಗಿ ಯೋಜನೆಗಳ ವಿನ್ಯಾಸಗಳನ್ನೇ ಬದಲಿಸಲಾಗಿದೆ. ನಿಜಕ್ಕೂ ಇದು ಅಘಾತಕರ ಸಂಗತಿ. ಈ ವ್ಯಾಖ್ಯಾನವನ್ನು ಅವಲೋಕಿಸಿದಾಗ ನಮ್ಮ ನೀರಾವರಿಗಳ ನಿಜವಾದ ಗುರಿ ಏನು? ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಯೋಜನೆಗಳಿಗೆ ಬದ್ಧತೆ, ಪ್ರಾಮಾಣಿಕತೆ, ನಿಖರತೆ ಇಲ್ಲದಿದ್ದರೆ, ಇವುಗಳ ದುರಂತದ ಹೊಣೆಯನ್ನು ಜನಸಾಮಾನ್ಯರು ಹೊರಬೇಕಾಗುತ್ತದೆ. ಶ್ರೀಲಂಕಾದಲ್ಲಿ 16 ಸಾವಿರ ರೈತ ಕುಟುಂಬಗಳಿಗೆ ನೀರುಣಿಸುವ ಗುರಿಯಿಟ್ಟುಕೊಂಡು 200 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಹಾವೇಲಿ ನದಿಗೆ ವಿಕ್ಟೋರಿಯಾ ಅಣೆಕಟ್ಟು ನಿರ್ಮಿಸಲಾಯಿತು. 1982ರಲ್ಲಿ ಆರಂಭವಾಗಿ 1990ರಲ್ಲಿ ಮುಗಿದ ಈ ಯೋಜನೆಯಲ್ಲಿ ಈವರೆಗೆ ನೀರಿನ ಕರ ರೂಪದಲ್ಲಿ ವಾಪಸ್ ಬಂದಿರುವ ಬಂಡವಾಳ ಶೇ.5 ರಷ್ಟು ಮಾತ್ರ. ಇಂತಹದ್ದೇ ಕಥೆ ನೇಪಾಳ. ಥ್ಯಾಲೆಂಡ್, ದಕ್ಷಿಣಕೊರಿಯಾ ದೇಶಗಳದ್ದು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ 

ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ ಎಂಬ ಸಂಸ್ಥೆ ಅಡಿಯಲ್ಲಿ ಗೋಧಿ ಮತ್ತು ಹಾಲಿನ ಪುಡಿಯನ್ನು ಪೂರೈಕೆ ಮಾಡುತಿತ್ತು. ಇದನ್ನು ಶಾಲಾ ಮಕ್ಕಳಿಗೆ ಮಧ್ಯಾದ ಉಪಹಾರವಾಗಿ ಉಪ್ಪಿಟ್ಟು ಹಾಗು ಹಾಲನ್ನು ವಿತರಿಸಲಾಗುತಿತ್ತು. (1966 ರಿಂದ 1969 ರವರೆಗೆ 5, 6, ಮತ್ತು 7ನೇ ತರಗತಿಯಲ್ಲಿ ಓದುತಿದ್ದ ಈ ಲೇಖಕ ಕೂಡ ಇದರ ಫಲಾನುಭವಿಗಳಲ್ಲಿ ಒಬ್ಬ.)

ಆವತ್ತಿನ ಸಂಕಷ್ಟದ ದಿನಗಳಲ್ಲಿ ಭಾರತದ ಹಸಿದ ಹೊಟ್ಟೆಗಳ ಹಾಹಾಕಾರಕ್ಕೆ ಆಸರೆಯಾಗಿ ಬಂದದ್ದು ಹಸಿರು ಕ್ರಾಂತಿಯೋಜನೆ. ಅದೇ ತಾನೆ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದ ನೂತನ ಗೋಧಿ ತಳಿ ಮತ್ತು  ಪಿಲಿಪೈನ್ಸ್ ನಲ್ಲಿ ಬಿಡುಗಡೆಯಾಗಿದ್ದ ಅಧಿಕ ಇಳುವರಿ ಕೊಡುವ ಭತ್ತದ ತಳಿ ಭಾರತದ ಪಾಲಿಗೆ ಅಕ್ಷಯ ಪಾತ್ರೆಯಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.

ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಅವಿಷ್ಕಾರ ರೈತರ ಬದುಕಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು ನಿಜ, ಆದರೆ ಈ ಉಲ್ಲಾಸ ಬಹಳ ದಿನ ಉಳಿಯಲಿಲ್ಲ. ಉತ್ತರಭಾರತದಲ್ಲಿ ನಿರ್ಮಾಣವಾದ ಬೃಹತ್ ಅಣೆಕಟ್ಟುಗಳ ಮೂಲಕ ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು. ಪಾಕಿಸ್ತಾನದಲ್ಲೂ ಕೂಡ ಇಂತಹದ್ದೇ ಕ್ರಾಂತಿ ಜರುಗಿತು. ಕಾಲುವೆ ಮುಖಾಂತರ ರೈತರ ಭೂಮಿಗೆ ಹರಿಸಿದ ನೀರು ಅವರ ಬದುಕಿನ ಅಧ್ಯಾಯವನ್ನು ಬದಲಿಸಿತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ ಏಕೆಂದರೆ, ಹೈಬ್ರಿಡ್ ತಳಿಗಳು ಬೇಡುವ ಅಧಿಕ ಮಟ್ಟದ ನೀರು, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತಗೊಂಡಿತು. ಆಧುನಿಕ ತಳಿಗಳ ಬೇಸಾಯ ರೈತರನ್ನು ಬಸವಳಿಯುವಂತೆ ಮಾಡಿತು.

ಹೈಬ್ರಿಡ್ ತಳಿಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇದ್ದರೂ ಕೂಡ ರೈತರು ಅವುಗಳನ್ನೇ ಆಶ್ರಯಿಸಿದ್ದಾರೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ನಾಟಿ ಬಿತ್ತನೆ ತಳಿಗಳು ಹೈಬ್ರಿಡ್ ತಳಿಗಳ ಸಂಕರದಿಂದಾಗಿ ನಾಶವಾಗತೊಡಗಿವೆ. ಪ್ರಾರಂಭದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಟನ್ ಭತ್ತದ ಇಳುವರಿ ನೀಡುತಿದ್ದ ಹೈಬ್ರಿಡ್ ಬೀಜಗಳಿಂದ ಈಗ ಏಷ್ಯಾ ಖಂಡದ ದೇಶಗಳಲ್ಲಿ ಕೇವಲ 2.6 ರಿಂದ 3.7 ಟನ್ ಇಳುವರಿ ಸಾಧ್ಯವಾಗಿದೆ. ಈ ಕುರಿತು ಸೃಷ್ಟೀಕರಣ ನೀಡಿರುವ ಪಿಲಿಪೈನ್ಸ್ ದೇಶದ ಮನಿಲಾದ ಭತ್ತದ ಸಂಶೋಧನಾ ಸಂಸ್ಥೆಯ ವಿಜ್ಙಾನಿಗಳು, ವರ್ಷವೊಂದಕ್ಕೆ ಒಂದು ಬೆಳೆ ತೆಗೆಯುತಿದ್ದ ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆ ತೆಗೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗತೊಡಗಿದ್ದು ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣ ಎಂದಿದ್ದಾರೆ. ಇಂತಹ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಹೇಗೆ ಸಾಮಾಜಿಕ ಪರಿಣಾಮಗಳನ್ನು ಬೀರಬಲ್ಲವು ಎಂಬುದಕ್ಕೆ ಸಣ್ಣ ಉದಾಹರಣೆ ಮಾತ್ರ.

ಆಧುನಿಕ ನೀರಾವರಿ ಪದ್ಧತಿಯಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಸಂಭವಿಸಿದ್ದು  ಈ ಕುರಿತಂತೆ ಸಮಾಜಶಾಸ್ತ್ರಜ್ಙರು ಜಗತ್ತಿನಾದ್ಯಂತ ಅಧ್ಯಯನ ನಡೆಸುತಿದ್ದಾರೆ. ಈಗಾಗಲೆ ಕೆಲವು ಅಂಶಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಆಧುನಿಕ ನೀರಾವರಿ ಪದ್ಧತಿ ಬಳಕೆಗೆ ಬಂದ ನಂತರ ಕೃಷಿ ಕುರಿತಂತೆ ರೈತರಿಗೆ ಇದ್ದ ಅನೇಕ ಹಕ್ಕುಗಳು ಮತ್ತು ಚಿಂತನೆಗಳು ನಾಶವಾದವು. ಈ ಮೊದಲು ರೈತ ತನ್ನ ಭೂಮಿಯಲ್ಲಿ ಯಾವ ಬೆಳೆಯನ್ನು ಯಾವ ಕಾಲದಲ್ಲಿ ಬೆಳೆಯ ಬೇಕು ಎಂದು ನಿರ್ಧರಿಸುತಿದ್ದ. ಈಗ ಇವುಗಳನ್ನು ನೀರಾವರಿ ಇಲಾಖೆ ಇಲ್ಲವೆ ಸರಕಾರಗಳು ನಿರ್ಧರಿಸುತ್ತಿವೆ.

ನಮ್ಮ ಪ್ರಾಚೀನ ಭಾರತದ ದೇಶಿ ಕೃಷಿ ಪದ್ಧತಿಯ ನೀರಾವರಿ ಚಟುವತಿಕೆಗಳನ್ನು ಆಯಾ ರೈತ ಸಮುದಾಯ ನಿರ್ಧರಿಸುತಿತ್ತು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ  ನೀರು ಹಂಚಿಕೆ ಕುರಿತು ಇದ್ದ ಪದ್ಧತಿಯನ್ನು ಕಂಡು ಬ್ರಿಟೀಷರು ಬೆರಗಾಗಿದ್ದರು. ಆಯಾ ಕೆರೆಗಳಿಂದ ಹಿಡಿದು ಕಾಲುವೆಗಳ ದುರಸ್ತಿ, ನಿರ್ವಹಣೆ ಎಲ್ಲವನ್ನು ರೈತರೇ ನಿರ್ವಹಿಸುತಿದ್ದರು. ಇದು ಚೋಳರ, ಪಾಂಡ್ಯರ ಆಡಳಿತ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಇಂತಹದೆ ಪದ್ಧತಿ ಏಷ್ಯಾದ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಇಂಡೊನೇಷಿಯಾದ ಬಾಲಿ ದ್ವೀಪದ ರೈತರು ಸುಬಕ್ ಎಂಬ ವ್ಯವಸ್ಥೆಯ ಹೆಸರಿನಡಿ ಭತ್ತದ ಬೆಳೆಗೆ ನೀರನ್ನು ಹಂಚಿಕೊಳ್ಳುವ ಪದ್ಧತಿಯನ್ನು ನಾವು ಇಂದಿಗೂ ಕಾಣಬಹುದು.

ಜಲಾಶಯದ ನೆಪದಲ್ಲಿ ಆಧುನಿಕ ನೀರಾವರಿ ಯೋಜನೆಗಳು ಜಾರಿಗೆ ಬಂದ ನಂತರ ರೈತರ ಹಕ್ಕುಗಳು ಮತ್ತು ಪರಿಸರಕ್ಕೆ ಪೂರಕವಾಗಿದ್ದ ದೇಶಿ ತಂತ್ರಜ್ಞಾನಗಳು ಮರೆಯಾಗಿ ರೈತರೆಲ್ಲರೂ ಸರಕಾರಗಳ ಗುಲಾಮರಂತೆ ಬದುಕಬೇಕಾಗಿದೆ. ಇದಕ್ಕೆ ಸೂಡಾನ್ ದೇಶದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸೂಡಾನ್ ನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೊಳ, ಗೆಣಸು, ಅನೇಕ ಬಗೆಯ ಕಿರುಧಾನ್ಯಗಳನ್ನು ಬೆಳೆಯುತಿದ್ದ ರೈತರನ್ನು, ಅಲ್ಲಿ ಹೊಸದಾಗಿ ಜಾರಿಗೆ ಬಂದ ಹಾಲ್ಪ ಎಂಬ ಸರಕಾರದ ನೀತಿಯಿಂದಾಗಿ ರೈತರು ಬಲವಂತವಾಗಿ ಹತ್ತಿ ಬೆಳೆಯುವಂತಾಯಿತು. ತುಟ್ಟಿಯಾದ ಬಿತ್ತನೆ ಬೀಜದ ಬೆಲೆ, ಗೊಬ್ಬರ, ಕೀಟನಾಶಕ ಇವುಗಳಿಂದ ತತ್ತರಿಸಿ ಹೋದ ರೈತರು ಲಾಭ ಕಾಣದೆ ಕಂಗಾಲಾದರು. ಇಂತಹದ್ದೇ ಸ್ಥಿತಿ ಅಂದಿನ ಸೋವಿಯತ್ ಒಕ್ಕೂಟದಲ್ಲೂ ಸಹ ಜಾರಿಯಲ್ಲಿತ್ತು. ಕಮ್ಯೂನಿಷ್ಟ್ ಸರಕಾರದ ಈ ನಿರ್ಧಾರಗಳನ್ನು ಆಗ ಕಜಕಿಸ್ಥಾನದ ಇಬ್ಬರು ಪಕ್ಷದ ಪದಾಧಿಕಾರಿಗಳು ಬಲವಾಗಿ ಖಂಡಿಸಿ ಇದು ರೈತರ ಹಕ್ಕುಗಳನ್ನು ಧಮನ ಮಾಡುವ ಸರ್ವಾಧಿಕಾರದ ನೀತಿ ಎಂದು ಪ್ರತಿಭಟಿಸಿದ್ದರು.

ನೀರಾವರಿ ಯೋಜನೆಗಳಲ್ಲಿ ಸರಕಾರಗಳು ನೇರವಾಗಿ ಹಸ್ತಕ್ಷೇಪ ಮಾಡುವುದರಿಂದ ಹಲವಾರು ಬಾರಿ ಯೋಜನೆಗಳು ತಮ್ಮ ಮೂಲ ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿರುವುದುಂಟು. 1970 ರ ದಶಕದಲ್ಲಿ ಇರಾನಿನ ಅತ್ಯಂತ ಎತ್ತರದ ಅಣೆಕಟ್ಟು ಡೆಜ್ ಜಲಾಶಯದಿಂದ 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾನದಲ್ಲಿ ಸಣ್ಣ ಹಿಡುವಳಿದಾರರಿದ್ದರು. ಆದರೆ, ಆಗಿನ ದೊರೆಯಾಗಿದ್ದ ಷಾ ಇಡೀ ಯೋಜನೆಯ ರೂಪು ರೇಷೆಗಳನ್ನು ಬದಲಿಸಿ ಅಮೇರಿಕಾದ ಬಹುರಾಷ್ಟೀಯ ಕಂಪನಿಗಳ ಬೃಹತ್ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಿದರು. ಇದರ ಲಾಭ ಪಡೆದ ಕಂಪನಿಗಳೆಂದರೆ, ಶೆಲ್ , ಡೆಲ್ ಅಂಡ್ ಕೊ, ಮತ್ತು ಟ್ರಾನ್ಸ್‌ವರ್ಲ್ಡ್  ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಇತ್ಯಾದಿ ಕಂಪನಿಗಳು. ಇಂತಹದ್ದೇ ಕಥನಗಳು ಜಗತ್ತಿನ ಹಲವಾರು ದೇಶಗಳಲ್ಲಿ ಜರುಗಿವೆ.

ಇದು 70 ದಶಕದಲ್ಲಿ ಭಾರತದಲ್ಲಿ ನಡೆದ ಘಟನೆ. ರಾಜಸ್ಥಾನದಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಬೃಹತ್ ನಾಲುವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ರೈತ ಕುಟಂಬಗಳೂ ಸೇರಿ ಹಲವಾರು ಭೂಹೀನ ರೈತರಿಗೆ ತಲಾ 2 ರಿಂದ 5 ಹೆಕ್ಟೇರ್ ಜಮೀನು ನೀಡಿ, ಅವರ ಭೂಮಿಗೆ ಉಚಿತವಾಗಿ ನೀರು, ಸಬ್ಸಿಡಿ ರೂಪದಲ್ಲಿ ಬೀಜ ಗೊಬ್ಬರ ಒದಗಿಸಲಾಗುವುದೆಂದು ಆಶ್ವಾಸನೆ ನೀಡಲಾಗಿತ್ತು. ಅದರಂತೆ ಈ ಪ್ರದೇಶಕ್ಕೆ ನೀರೂ ಹರಿಯಿತು. ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಭೂಮಿಯೆಲ್ಲಾ  ಪ್ರಭಾವಿ ರಾಜಕಾಣಿಗಳ, ಶ್ರೀಮಂತರ, ದಲ್ಲಾಳಿಗಳ ಪಾಲಾಗಿ ಅಲ್ಲಿನ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುವಿನಂತೆ ದುಡಿಯುತಿದ್ದರು. 1989 ರಲ್ಲಿ ಸಮೀಕ್ಷೆ ನಡೆಸಿದಾಗ ಕೇವಲ ಶೇ.30 ರಷ್ಟು ರೈತರು ಮಾತ್ರ ಭೂಮಿ ಉಳಿಸಿಕೊಂಡಿದ್ದರು.

ಉತ್ತರ ಪ್ರದೇಶದ ಸದರ್ಲಾರ್ ಸಹಾಯಕ್ ಕಾಲುವೆಯ ಫಲಾನುಭವಿಗಳು ಕೂಡ ಅತಿ ದೊಡ್ಡ ಶ್ರೀಮಂತ ಜಮೀನಿದಾರರಾಗಿದ್ದಾರೆ. ಇವರೆಲ್ಲಾ ನೀರು ಉಪಯೋಗಿಸಿದ ನಂತರ ಉಳಿದ ನೀರನ್ನು ಕಾಲುವೆ ಕೊನೆ ಭಾಗದ ಸಣ್ಣ ಹಿಡುವಳಿದಾರರು ಬಳಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ಕರ್ನಾಟಕದ ತುಂಗಭದ್ರಾ, ಕಾವೇರಿ, ತಮಿಳುನಾಡಿನ ಮೆಟ್ಟೂರು ಜಲಾಶಯಗಳ ಕೃಷಿ ಚಟುವಟಿಕೆ ಕುರಿತು ಅಧ್ಯಯನ ನಡೆಸಿರುವ ನ್ಯೂಯಾರ್ಕ್ ನಗರದ ಸಿರಾಕಸ್ ವಿ.ವಿ.ಯ ಪ್ರೀತಿ ರಾಮಚಂದ್ರನ್ ಎಂಬಾಕೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದ ಮಹಿಳೆ ಬೇಸಾಯದಿಂದ ವಿಮುಖವಾಗಿರುವುದನ್ನು ಗುರುತಿಸಿದ್ದಾರೆ.

ಅಮೇರಿಕಾದ ಬಹುತೇಕ ಕೃಷಿ ಚಟುವಟಿಕೆ ಬೃಹತ್ ಕಂಪನಿಗಳ ಇಲ್ಲವೆ ಶ್ರೀಮಂತರ ಪಾಲಾಗಿದೆ. ಅಲ್ಲಿನ ಫೆಡರಲ್ ಸರ್ಕಾರದ ನೀರಾವರಿ ಯೋಜನೆ ಕುರಿತಂತೆ ಮಸೂದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ 160 ಎಕರೆ ಮಿತಿಯೊಳಗೆ ಇರುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀರು ಒದಗಿಸಲಾಗುತಿತ್ತು. ನಂತರ   ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಸಕಾðರ ಭೂಮಿತಿಯನ್ನು 900 ಎಕರೆಗೆ ವಿಸ್ತರಿಸಿತು. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂತಹ ಅವಕಾಶಗಳನ್ನು  ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬೃಹತ್ ಕಂಪನಿಗಳು ಸಮರ್ಥವಾಗಿ ಬಳಸಿಕೊಂಡವು.

ನಮ್ಮನ್ನು ಆಳುವ ಸರ್ಕಾರಗಳ ಇಂತಹ ದ್ವಂದ್ವ ನಿಲುವಿನಿಂದಾಗಿ ಹಲವೆಡೆ ಹಿಂಸೆ ಸಾವಿನ ಘಟನೆಗಳು ಜರುಗಿವೆ. ಪಶ್ಚಿಮ ಆಫ್ರಿಕಾದ ಸೆನಗಲ್ ಮತ್ತು ಮಾರಿಷೇನಿಯಾ ನಡುವೆ ಹರಿಯುವ ನದಿಗೆ ಮಿನಂಟಾಲಿ ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಮೊದಲು ನದಿಯು ತಂದು ಹಾಕುತಿದ್ದ ಮೆಕ್ಕಲು ಮಣ್ಣಿನ ಕಣಜ ಭೂಮಿಯಲ್ಲಿ ಸೆನಗಲ್ ದೇಶದ ಕರಿಯ ವರ್ಣದ ರೈತರು ಬೇಸಾಯ ಮಾಡುತಿದ್ದರು. ಜಲಾಶಯ ನಿರ್ಮಾಣವಾದ ನಂತರ ಮಾರಿಷೇನಿಯದ ಬಿಳಿಯ ಬಣ್ಣದ ಅರಬ್ಬರು ಬೃಹತ್ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ತೊಡಗಿಕೊಂಡದ್ದರಿಂದ ನೀರಿಲ್ಲದೆ  ನದಿ ಕೆಳಗಿನ ಪ್ರಾಂತ್ಯದ ಸೆನಗಲ್ ರೈತರು ದಂಗೆಯೆದ್ದ ಪರಿಣಾಮ 250 ಮಂದಿ ಅರಬ್ಬರು ಅಸುನೀಗಿದರು. ಮಾರಿಷೇನಿಯಾದಲ್ಲಿದ್ದ ಸಾವಿರಾರು ಸೆನಗಲ್ ದೇಶದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ನಂತರ ಉಭಯ ದೇಶಗಳು ಜಂಟಿಯಾಗಿ ನಡೆಸಿದ ವಿಚಾರಣೆಯಲ್ಲಿ 600 ಮಂದಿ ರೈತರನ್ನು ನೇಣು ಹಾಕಲಾಯಿತು. ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಸಮಿತಿಯ ವರದಿಯ ಪ್ರಕಾರ, ಇಂದು ಸೆನಗಲ್ ದೇಶದ ಲಕ್ಷಾಂತರ ಹೆಕ್ಟೇರ್ ರೈತರ ಭೂಮಿ ಅಮೇರಿಕಾದ ಬೃಹತ್ ಕಂಪನಿಗಳ ಪಾಲಾಗಿದೆ. ಇವುಗಳ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರು ಅತಂತ್ರರಾಗಿ ಕಡಿಮೆ ಕೂಲಿ ದರಕ್ಕೆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯುತಿದ್ದಾರೆ.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 18

ಡಾ.ಎನ್.ಜಗದೀಶ್ ಕೊಪ್ಪ

ಜಗತ್ತಿನಲ್ಲಿ ನಿರ್ಮಾಣಣವಾಗಿರುವ ಬಹುತೇಕ ಅಣೆಕಟ್ಟುಗಳು ನೀರಾವರಿ ಯೋಜನೆಗಳಿಗಾಗಿ ರೂಪುಗೊಂಡಿವೆ. ಜಲಾಶಯಗಳಲ್ಲಿ ಬಳಸಲಾಗುತ್ತಿರುವ ಮೂರನೇ ಎರಡು ಪ್ರಮಾಣದಷ್ಟು ನೀರನ್ನು ಕೃಷಿಗಾಗಿ ಬಳಕೆ ಮಾಡಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಶೇ.80 ರಷ್ಟನ್ನು ಕೃಷಿಗೆ ಬಳಸುತಿದ್ದರೆ, ಭಾರತದಲ್ಲಿ ಶೇ.90 ರಷ್ಟು ನೀರನ್ನು ಕೃಷಿಗೆ ವಿನಿಯೋಗಿಸಲಾಗುತ್ತಿದೆ. ಜಗತ್ತಿನಾದ್ಯಂತ ಕೃಷಿ ಉತ್ಪಾದನೆ ಪೈಕಿ ಶೇ.60 ರಷ್ಟು ಭಾಗ ನೀರಾವರಿ ಪ್ರದೇಶದಿಂದ ಬರುತ್ತಿದೆ.

19ನೇ ಶತಮಾನದ ಪ್ರಾರಂಭದಿಂದ ದೇಶಿ ತಂತ್ರಜ್ಞಾನದ ಜೊತೆಗೆ ಅವಿಷ್ಕಾರಗೊಂಡ ನೂತನ ತಂತ್ರಜ್ಞಾನಗಳೊಂದಿಗೆ ಜಲಾಶಯದ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಆರಂಭಿಸಲಾಯಿತು. ಭಾರತದ ಸಿಂಧೂ ಮತ್ತು ಗಂಗಾ ನದಿಯ ಪಾತ್ರದಲ್ಲಿ, ಈಜಿಪ್ಟ್‌ನ ನೈಲ್ ನದಿಯ ಪ್ರಾಂತ್ಯ, ಪಶ್ಚಿಮದ ಅಮೇರಿಕಾ, ಆಸ್ಷೇಲಿಯಾ ಮುಂತಾದ ದೇಶಗಳಲ್ಲಿ 1800 ರಿಂದ 1900 ರ ವೇಳೆಗೆ 44 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿತ್ತು. ಮುಂದಿನ 50 ವರ್ಷಗಳಲ್ಲಿ ಅತಿ ದೊಡ್ಡ ಅಣೆಕಟ್ಟುಗಳು ನಿರ್ಮಾಣವಾದ ನಂತರ ನೀರಾವರಿ ಪ್ರದೇಶ ದ್ವಿಗುಣಗೊಂಡಿತು. ಇದರ ಜೊತೆಗೆ 1960 ರಲ್ಲಿ ಅವಿಷ್ಕಾರಗೊಂಡ ನೂತನ ತಳಿಗಳು, ವಿಶೇಷವಾಗಿ ಭತ್ತ ಮತ್ತು ಗೋಧಿಯ ತಳಿಗಳಿಂದಾಗಿ ಜಗತ್ತಿನೆಲ್ಲೆಡೆ ಹಸಿರುಕ್ರಾಂತಿಗೆ ಕಾರಣವಾಯ್ತು.

1970 ರ ನಂತರ ನೀರಾವರಿ ಪ್ರದೇಶದ ವಿಸ್ತೀರ್ಣದ ವೇಗ ನಾಟಕೀಯವಾಗಿ ಬೆಳೆಯತೊಡಗಿತು.ಅಂತರರಾಷ್ಟೀಯ ನೀರಾವರಿ ಮತ್ತು ಒಳಚರಂಡಿ ಸಮಿತಿಯ ಅಧ್ಯಯನದ ಪ್ರಕಾರ 1985 ರಲ್ಲಿ 310 ಮಿಲಿಯನ್ ಹೆಕ್ಟೇರ್ ನೀರಾವರಿ ಪ್ರದೇಶವಿದ್ದದ್ದು 2000 ದ ಅಂತ್ಯದ ವೇಳೆಗೆ 420 ಮಿಲಿಯನ್ ಹೆಟ್ಕೇರ್ ಪ್ರದೇಶಕ್ಕೆ ವಿಸ್ತೀರ್ಣಗೊಂಡಿತ್ತು. ನಂತರ ಈ ಬೆಳವಣಿಗೆ ಕುಂಠಿತಗೊಂಡಿತು. ಫಲವತ್ತಾದ ಭೂಮಿಯ ಕೊರತೆ, ನೀರಾವರಿಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಜಲಾಶಯಗಳ ನಿರ್ಮಾಣಣ, ಮುಂತಾದ ಅಂಶಗಳು ಇದಕ್ಕೆ ಕಾರಣವಾದವು.
ಹಸಿರು ಕ್ರಾಂತಿಯ ಫಲವಾಗಿ ಪ್ರಾರಂಭದಲ್ಲಿ ಅತ್ಯಧಿಕ ಇಳುವರಿ ಸಿಕ್ಕಿತಾದರೂ, ಹೈಬ್ರಿಡ್ ತಳಿಗಳು ಬೇಡುವ ಅತ್ಯಧಿಕ ನೀರು, ರಸಾನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಕೇವಲ ಹತ್ತು ವರ್ಷಗಳಲ್ಲಿ ಫಲವತ್ತಾದ ಭೂಮಿ ಬಂಜರು  ಭೂಮಿಯಾಗಿ ಮಾರ್ಪಟ್ಟಿತು. ಈ ಕುರಿತಂತೆ  ಜಗತ್ತಿನ ಕೃಷಿತಜ್ಞರ ನಡುವೆ ಮರುಚಿಂತನೆ ಆರಂಭವಾಯಿತು.

ಭೂಮಿಗೆ ನೀರುಣಿಸುವ ನೀರಾವರಿ ಯೋಜನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಕೃತಿಯ ಕೊಡುಗೆಯಾದ ಮಳೆ ನೀರನ್ನು ಆಶ್ರಯಿಸಿ ಬೇಸಾಯ ಮಾಡುತಿದ್ದ ನಮ್ಮ ಪೂರ್ವಿಕರು ತಮ್ಮ ಜಮೀನುಗಳ ಸಮೀಪ ಕೆರೆ, ಕಟ್ಟೆಗಳನ್ನು ನಿರ್ಮಿಸಿಕೊಂಡು ಕಿರು ಕಾಲುವೆಗಳ ಮುಖಾಂತರ ನೀರುಣಿಸಿ ಬೆಳೆ ಬೆಳೆಯುತಿದ್ದರು. ಇದಲ್ಲದೆ ಮಳೆಯಾಶ್ರಿತ ಬೆಳೆಗಳಿಗಾಗಿ ದೇಶಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತಿದ್ದರು. ಮಳೆಗಾಲ ಮುಗಿದ ನಂತರ, ಭೂಮಿಯ ತೇವಾಂಶ ಮತ್ತು ಚಳಿಗಾಲದ ಇಬ್ಬನಿಯಿಂದ ಕೂಡಿದ ಕಪ್ಪು ಎರೆಮಣ್ಣಿನಲ್ಲಿ ಮೆಣಸಿನಕಾಯಿ, ಹತ್ತಿ ಬೇಳೆಯುತಿದ್ದರು. ಈ ಪದ್ಧತಿಯನ್ನು ಈಗಲೂ ನಾವು ಉತ್ತರ ಕರ್ನಾಟಕದಲ್ಲಿ ಕಾಣಬಹುದು.

ಮಳೆಗಾಲದಲ್ಲಿ ಹರಿದು ಬರುತಿದ್ದ ನೀರನ್ನು ಕಟ್ಟೆಗಳಲ್ಲಿ ಸಂಗ್ರಹಿಸಿ, ಕಟ್ಟೆಯ ಕೆಳಭಾಗದ ಅಚ್ಚು ಕಟ್ಟು ಪ್ರದೇಶದಲ್ಲಿ ದೀರ್ಘಾವಧಿ ಬೆಳೆ ತೆಗೆಯುವುದರ ಜೊತೆಗೆ ತಮ್ಮ ಜಾನುವಾರುಗಳಿಗೂ ಇದೇ ನೀರನ್ನು ಬಳಕೆ ಮಾಡುತಿದ್ದರು. ಇದು ಜಗತ್ತಿನೆಲ್ಲೆಡೆ, ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ಒಂದು ದೇಶೀಯ ಜ್ಞಾನಶಿಸ್ತು.

ಆಧುನಿಕ ತಂತ್ರಜ್ಞಾನದ ನೀರಾವರಿಯಲ್ಲಿ ಎರಡು ವಿಧಾನಗಳಿವೆ. ಒಂದು ಏತ ನೀರಾವರಿ ಪದ್ಧತಿ, ಇನ್ನೊಂದು ಕಾಲುವೆಗಳ ಮೂಲಕ ಭೂಮಿಗೆ ನೀರುಣಿಸುವ ಪದ್ಧತಿ. ಏತ ನೀರಾವರಿಯಲ್ಲಿ ಬಾವಿ, ಕಟ್ಟೆ ಅಥವಾ ಕೆರೆಗಳಿಂದ ನೀರನ್ನು ಮೇಲಕ್ಕೆ ಎತ್ತಿ ಭೂಮಿಗೆ ಹರಿಸುವ ಕ್ರಮವಿದ್ದರೆ, ಜಲಾಶಯಗಳಿಂದ ನಾಲುವೆ ಮೂಲಕ ನೀರುಣಿಸುವ ಕ್ರಮ ಈಗ ಜನಪ್ರಿಯ ಪದ್ಧತಿಯಾಗಿದೆ.

ಆಫ್ರಿಕಾ ಖಂಡದ ಅನೇಕ  ಹಿಂದುಳಿದ ರಾಷ್ಟಗಳಲ್ಲಿ ಜಲಾಶಯಗಳ ಹಂಗಿಲ್ಲದೆ, ಮಳೆ ನೀರನ್ನು ಶೇಖರಿಸಿಟ್ಟುಕೊಂಡು ಅಲ್ಲಿ ರೈತರು ಬೇಸಾಯ ಮಾಡುವುದನ್ನು ವಿಶ್ವ ಕೃಷಿ ಮತ್ತು ಆಹಾರ ಸಂಘಟನೆ ಗುರುತಿಸಿದೆ. 1987 ರವರೆಗೆ ಅಲ್ಲಿ ರೈತರು ಕೃಷಿ ಬೂಮಿಯ ಶೇ.37ರಷ್ಟು ಅಂದರೆ, 50 ಲಕ್ಷ ಹೆಕ್ಟೇರ್ ಭೂಮಿಯನ್ನು ದೇಶಿ ತಂತ್ರಜ್ಞಾನದ ಬೇಸಾಯಕ್ಕೆ ಅಳವಡಿಸಿದ್ದರು.

ಇಂತಹದ್ದೇ ಮಾದರಿಯ ಕೃಷಿ ಪದ್ಧತಿ ಬಾರತ, ಈಜಿಪ್ಟ್, ಇಂಡೊನೇಷಿಯ ಮತ್ತು ಅಮೇರಿಕಾ ದೇಶಗಳಲ್ಲಿ ಜಾರಿಯಲ್ಲಿತ್ತು. ಅಮೇರಿಕಾದ ಮೂಲನಿವಾಸಿಗಳು ಮಳೆನೀರನ್ನು ಬಳಸಿ 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, ಮೆಕ್ಕೆಜೋಳ ಬೆಳೆಯುತಿದ್ದದನ್ನು ವಿಜ್ಙಾನಿಗಳು ಗುರುತಿಸಿದ್ದಾರೆ.

ಭಾರತದಲ್ಲೂ ಸಹ ಅತ್ಯಧಿಕ ಸಣ್ಣ ಹಿಡುವಳಿದಾರರಿದ್ದು ಅವರೂ ಕೂಡ ದೇಶಿ ತಂತ್ರಜ್ಞಾನ ಬಳಸಿ ಬೇಸಾಯ ಮಾಡುತಿದ್ದಾರೆ. ಅವರುಗಳು ಗ್ರಾಮಾಂತರ ಪ್ರದೇಶದಲ್ಲಿ ಕೆರೆ, ಬಾವಿ ಉಪಯೋಗಿಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಭೂಮಿಯ ಪ್ರಮಾಣ, ಜಲಾಶಯ ಮತ್ತು ಕಾಲುವೆಗಳ ಮೂಲಕ ನೀರು ಹರಿಸಿ ಮಾಡುತ್ತಿರುವ ಕೃಷಿ ಭೂಮಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಕೃಷಿ ಉತ್ಪನ್ನ ಕುರಿತ ಇಂದಿನ ಅಂಕಿ ಅಂಶಗಳು ಜಲಾಶಯದ ಮೂಲಕ ಕೃಷಿ ಮಾಡುತ್ತಿರುವ ಭೂಮಿಯಲ್ಲಿ ಅಧಿಕ ಇಳುವರಿ ನೀಡಿರುವುದನ್ನು ಧೃಡಪಡಿಸಿವೆ ನಿಜ. ಇದಕ್ಕೆ ಕಾರಣವಾದ ಅಂಶಗಳೆಂದರೆ, ಹೈಬ್ರಿಡ್ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಸಮರ್ಪಕ ನೀರು ಪೂರೈಕೆ. ವರ್ಷಕ್ಕೆ ಒಂದೇ ಬೆಳೆ ಬೆಳೆಯುತಿದ್ದ ಭೂಮಿಯಲ್ಲಿ ಈಗ ಅಲ್ಪಾವಧಿ ಕಾಲದ ತಳಿಗಳನ್ನು ಸೃಷ್ಟಿಸಿ ಎರಡು ಅಥವಾ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರ ನೇರ ಪರಿಣಾಮ ಭೂಮಿಯ ಮೇಲಾಗಿದೆ. ಫಲವತ್ತಾದ ಭೂಮಿಯಲ್ಲಿ ಸುಧೀರ್ಘ ಕಾಲ ಅತ್ಯಧಿಕ ಫಸಲನ್ನು ತೆಗೆಯಲು ಸಾದ್ಯವಾಗುವುದಿಲ್ಲ. ಏಕೆಂದರೆ, ನಿರಂತರವಾಗಿ ಬಳಸುವ ರಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ಭೂಮಿಯಲ್ಲಿ ಕ್ಷಾರಕ ಅಂಶಗಳೂ ಹೆಚ್ಚಾಗಿ ಚೌಳು ಪ್ರದೇಶವಾಗಿ ಪರಿವರ್ತನೆ ಹೊಂದುತ್ತಿದೆ.

ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಟ್ಟದಲ್ಲಿ ಫಲವತ್ತಾದ ಭೂಮಿ ಕಾಲುವೆ ಹಾಗೂ ನೀರು ಬಸಿದು ಹೋಗುವ ಚರಂಡಿಗಳಿಗೆ ಬಳಕೆಯಾಗುತಿದ್ದು ಇದರಿಂದಾಗಿ ನೀರಾವರಿ ಯೋಜನೆಗಳ ಮೂಲ ಉದ್ದೇಶಗಳಿಗೆ ಧಕ್ಕೆಯುಂಟಾಗಿದೆ. ಕೆಲವೆಡೆ ಯಾವ ಕಾರಣಕ್ಕಾಗಿ ಜಲಾಶಯ ನಿರ್ಮಾಣವಾಯಿತೊ, ಅದರ ಉದ್ದೇಶಕ್ಕೆ ಅನುಗುಣವಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಸಾದ್ಯವಾಗಿಲ್ಲ. ಇನ್ನೂ ಹಲವೆಡೆ ಉದ್ದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಒತ್ತಡಗಳಿಂದಾಗಿ ಭೂಮಿಯನ್ನು ನೀರಾವರಿಗೆ ಒಳಪಡಿಸಿ ನೀರುಣಿಸಲು ಸಾಧ್ಯವಾಗಿಲ್ಲ. ಜಗತ್ತಿನ ಹಲವಾರು ಅಣೆಕಟ್ಟುಗಳ ನಿರ್ಮಾಣದಿಂದ, ನೀರಾವರಿ ಕೃಷಿಗೆ ಒಳಪಟ್ಟ ಭೂಮಿಗಿಂತ ಎರಡು ಪಟ್ಟು ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾದ ಉದಾಹರಣೆಗಳಿವೆ.

ನೈಜೀರಿಯಾ ಸರ್ಕಾರ ತಾನು ನಿರ್ಮಿಸಿದ ಬಾಕಲೋರಿ ಅಣೆಕಟ್ಟಿನಿಂದ 44 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ಹೊಂದಿತ್ತು. ಜಲಾಶಯ ನಿರ್ಮಾಣದ ನಂತರ 12 ಸಾವಿರ ಹೆಕ್ಟೇರ್ ಪ್ರದೇಶ ಹಿನ್ನೀರಿನಲ್ಲಿ ಮುಳುಗಿದರೆ, ನದಿಯ ಕೆಳಗಿನ ಪಾತ್ರದ 11 ಸಾವಿರ ಹೆಕ್ಟೇರ್ ಪ್ರದೇಶ ನೀರಿಲ್ಲದೆ ಬಂಜರು ಭೂಮಿಯಾಯಿತು. ಇದೇ ನೈಜೀರಿಯಾದ ಉತ್ತರ ಭಾಗದಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ನಿರ್ಮಿಸಿದ ಡಾಡಿನ್ಕೋವಾ ಅಣೆಕಟ್ಟಿನಿಂದಾಗಿ 35 ಸಾವಿರ ಹೆಕ್ಟೇರ್ ಫಲವತ್ತಾದ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಯಿತು.

ವಿಶ್ವಬ್ಯಾಂಕ್‌ನ ಸಮೀಕ್ಷೆಯ ಪ್ರಕಾರ ಭಾರತದಲ್ಲೂ ಕೂಡ ಶೇ.5ರಿಂದ ಶೇ.13ರಷ್ಟು ಪ್ರಮಾಣದ ಫಲವತ್ತಾದ ಭೂಮಿ ಕಾಲುವೆಗಳ ನಿರ್ಮಾಣಕ್ಕಾಗಿ ಬಳಕೆಯಾಗಿದೆ. ಸೋಜಿಗದ ಸಂಗತಿಯೆಂದರೆ ಭಾರತದಲ್ಲಿ ಜಲಾಶಯಗಳ ಮೂಲಕ ನೀರಾವರಿಗೆ ಒಳಪಟ್ಟ ಪ್ರದೇಶದ ಬಗ್ಗೆ ನಿಖರವಾದ ಅಂಕಿ ಅಂಶಗಳೇ ಇಲ್ಲ. ಕೆಲವೆಡೆ ಜಲಾಶಯದಲ್ಲಿ ದೊರೆಯುವ ನೀರಿನ ಪ್ರಮಾಣಕ್ಕಿಂತ ಹೆಚ್ಚಾಗಿ ಒಣಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಪ್ರಯತ್ನಗಳು ನಡೆದು ವಿಫಲವಾಗಿರುವುದು ಕಂಡುಬಂದಿದೆ.

ನರ್ಮದಾ ನದಿಗೆ ನಿರ್ಮಿಸಲಾದ ಬಾಗ್ರಿ ಅಣೆಕಟ್ಟಿನಿಂದ 81 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುವುದೆಂದು ಸರ್ಕಾರ ಪ್ರಕಟಿಸಿತ್ತು. ಈ ಅಣೆಕಟ್ಟಿನಿಂದಾಗಿ 4 ಲಕ್ಷದ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 1986ರಲ್ಲಿ ಅಣೆಕಟ್ಟು ನಿರ್ಮಾಣವಾದ ನಂತರ ನೀರಾವರಿಗೆ ಒಳಪಟ್ಟ ಪ್ರದೇಶ ಕೇವಲ 12 ಸಾವಿರ ಹೆಕ್ಟೇರ್ ಮಾತ್ರ.

ಈಜಿಪ್ಟ್ ದೇಶದ ನೈಲ್ ನದಿಗೆ ನಿರ್ಮಿಸಲಾದ ಅಸ್ವಾನ್ ಅಣೆಕಟ್ಟಿನ ಮೂಲ ಗುರಿ 6 ಲಕ್ಷದ 80 ಸಾವಿರ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಿ ಹತ್ತಿ, ಕಬ್ಬು, ಗೋಧಿ ಬೆಳೆಯುವ ಯೋಜನೆಯಾಗಿ ರೂಪಿಸಲಾಗಿತ್ತು. ಈ ಜಲಾಶಯದಿಂದ ನೀರುಣಿಸಲು ಸಾಧ್ಯವಾಗಿದ್ದು ಕೇವಲ 2 ಲಕ್ಷದ 60 ಸಾವಿರ ಹೆಕ್ಟೇರ್ ಭೂಮಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿರುವ ಅಣೆಕಟ್ಟುಗಳ ನಿರ್ಮಾಣಣದ ವೆಚ್ಚವನ್ನು ಮರೆಮಾಚಲು ಹಲವಾರು ಸರಕಾರಗಳು ಸುಳ್ಳು ಅಂಕಿ ಅಂಶಗಳನ್ನು ಪ್ರಕಟಿಸುತ್ತಾ ಜನಸಾಮಾನ್ಯರನ್ನು ವಂಚಿಸುವುದು ವಾಡಿಕೆಯಾಗಿದೆ.

ಜಲಾಶಯದಲ್ಲಿ ಸಂಗ್ರಹವಾದ ನೀರಿನಿಂದ ಕೃಷಿ ಚಟುವಟಿಕೆಗೆ ಪರೋಕ್ಷವಾಗಿ ಧಕ್ಕೆಯಾಗುತ್ತಿರುವುದನ್ನು ಕೃಷಿ ವಿಜ್ಞಾನಿಗಳು ಇತ್ತೀಚೆಗಿನ ಅಧ್ಯಯನದಿಂದ ಧೃಡಪಡಿಸಿದ್ದಾರೆ. ನೀರಿನಲ್ಲಿರುವ ಲವಣ ಮತ್ತು ಕ್ಷಾರಕ ಅಂಶಗಳು ಭೂಮಿಯ ಫಲವತ್ತತೆಯನ್ನು ತಿಂದು ಹಾಕುತ್ತಿವೆ ಎಂದಿದ್ದಾರೆ. ಸೂರ್ಯನ ತಾಪದಿಂದ ಜಲಾಶಯದಲ್ಲಿನ ನೀರು ಆವಿಯಾಗುವುದರ ಜೊತೆಗೆ ನೀರಿನಲ್ಲಿ ಹೆಚ್ಚಿನ ಲವಣಾಂಶಗಳು ಉತ್ಪಾದನೆಯಾಗುತ್ತಿವೆ ಎಂದು ವಿಜ್ಙಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾದ ನ್ಯಾಷನಲ್ ಯೂನಿವರ್ಸಿಟಿಯ ಸೆಂಟರ್ ಫಾರ್ ರೀಸೋರ್ಸ್ ಅಂಡ್ ಎನ್ವಿರಾನ್ಮೆಂಟ್ ಸ್ಟಡೀಸ್ ಅಧ್ಯಯನ ಕೇಂದ್ರ ನಡೆಸಿರುವ ಅಧ್ಯಯನದಲ್ಲಿ ಜಗತ್ತಿನ 4 ಕೋಟಿ 54 ಲಕ್ಷ ಹೆಕ್ಟೇರ್ ಪ್ರದೇಶ ಲವಣಾಂಶಗಳಿಂದ ಕೂಡಿದ್ದು, ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ ಎಂದಿದೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ 20ರಿಂದ 30 ಲಕ್ಷ ಹೆಕ್ಟೇರ್ ಪ್ರದೇಶ ಕ್ಷಾರಕ ಅಂಶಗಳಿಂದಾಗಿ ಚೌಳು ಭೂಮಿಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ವಿಶ್ವಬ್ಯಾಂಕ್ ತಜ್ಞರ ತಂಡ ಕೂಡ ಅಭಿಪ್ರಾಯ ಪಟ್ಟಿದೆ.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 17

ಡಾ.ಎನ್. ಜಗದೀಶ್ ಕೊಪ್ಪ

ಕುಡಿಯುವ ನೀರಿನ ಯೋಜನೆಯಡಿ ಗುಜರಾತ್ ರಾಜ್ಯದ ಜನತೆಯನ್ನು ವಂಚಿಸಿದ ಕರ್ಮಕಾಂಡ ಸರದಾರ್ ಸರೋವರ ಅಣೆಕಟ್ಟಿನ ಇತಿಹಾಸದಲ್ಲಿ ತಳಕು ಹಾಕಿಕೊಂಡಿದೆ. ಗುಜರಾತ್, ರಾಜಸ್ತಾನ,ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಿಯುವ ಈ ನದಿಯಿಂದ 1989 ರಲ್ಲಿ 3 ಕೋಟಿ 20 ಲಕ್ಷ ಜನತೆಗೆ ಕುಡಿಯುವ ನೀರು ಒದಗಿಸಲಾಗುವುದೆಂದು ಹೇಳಲಾಗಿತ್ತು. ನಂತರ 1992 ರಲ್ಲಿ 4 ಕೋಟಿ ಜನಕ್ಕೆ ಎಂದು ತಿಳಿಸಿ, ಮತ್ತೆ 1998ರಲ್ಲಿ 3 ಕೋಟಿ ಜನತೆಗೆ ಮಾತ್ರ ನೀರು ಒದಗಿಸಲಾಗುವುದೆಂದು ಹೇಳುವುದರ ಮೂಲಕ ಸುಳ್ಳುಗಳನ್ನು ಪುಖಾನುಪುಂಖವಾಗಿ ಹರಿಯಬಿಡಲಾಯಿತು. ಈ ನದಿಯ ನೀರಿನ ಯೋಜನೆ ಎಷ್ಟು ಗೊಂದಲದ ಗೂಡಾಗಿದೆಯೆಂದರೆ, 1992ರಲ್ಲಿ ಒಟ್ಟು 8236 ನಗರ, ಪಟ್ಟಣ, ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ಹೇಳಲಾದ ಪಟ್ಟಿಯಲ್ಲಿ 236 ಹಳ್ಳಿಗಳಲ್ಲಿ ಜನರೇ ವಾಸಿಸುತ್ತಿಲ್ಲ. ಈವತ್ತಿಗೂ ಈ ಯೋಜನೆಯ ಮೂಲ ಉದ್ದೇಶ ಏನೂ?, ಎಷ್ಟು ಹಣ ಖರ್ಚಾಗುತ್ತಿದೆ, ನೀರಾವರಿಗೆ ಒಳಪಡುವ ಪ್ರದೇಶದ ವ್ಯಾಪ್ತಿ ಎಷ್ಟೆಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

2000 ದ ಇಸವಿ ವೇಳೆಗೆ ಜಗತ್ತಿನಾದ್ಯಂತ ಸಮೀಕ್ಷೆ ಪ್ರಕಾರ ಜಲಾಶಯಗಳಿಂದ ಬಳಕೆಯಾಗುತ್ತಿರುವ ನೀರಿನಲ್ಲಿ ಶೇ.70ರಷ್ಟು ಕುಡಿಯುವ ನೀರಿಗಾಗಿ, ಶೇ.24ರಷ್ಟು ಕೈಗಾರಿಕೆಗಳಿಗಾಗಿ ಬಳಕೆಯಾಗುತಿದ್ದು, ಶೇ.4ರಷ್ಟು ಆವಿಯಾಗತ್ತಿದೆ. ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಬಳಕೆಯಾಗುತ್ತಿರುವ ಶೇ65ರಷ್ಟು ಭಾಗದ ನೀರು ತೆರದ ಹಾಗೂ ಕೊಳವೆ ಬಾವಿಗಳ ಮೂಲದ್ದು.

ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ ಫಲವಾಗಿ ಜಗತ್ತಿನ ಹಲವೆಡೆ ಅಸ್ತಿತ್ವದಲ್ಲಿ ಇದ್ದ ಜಲಸಾರಿಗೆಗೆ ದೊಡ್ಡಪೆಟ್ಟು ಬಿದ್ದಿತು. ಹಲವಾರು ದೇಶಗಳಲ್ಲಿ ಆಳವಾದ ಮತ್ತು ನಿಧಾನವಾಗಿ ಹರಿಯುವ ನದಿಗಳನ್ನು ಜಲಸಾರಿಗೆಗೆ ಬಳಸಲಾಗುತಿತ್ತು. ತೈಲ, ಕಲ್ಲಿದ್ದಲು, ಅದಿರು, ಮರದ ದಿಮ್ಮಿಗಳನ್ನು, ತೆರದ ಮಧ್ಯಮಗಾತ್ರದ (ಬಾರ್ಜ್) ಹಡಗುಗಳಲ್ಲಿ ಸಮುದ್ರ ತೀರದ ಬಂದರುಗಳಿಗೆ ಸಾಗಿಸುವುದು ರಸ್ತೆ ಸಾರಿಗೆಗಿಂತ ಕಡಿಮೆ ಖರ್ಚಿನದಾಗಿತ್ತು. ಜೊತೆಗೆ ಪ್ರಯಾಣಿಕರ ಅನೂಕೂಲಕ್ಕೆ ದೋಣಿಗಳು ಇದ್ದವು. ಈಗ ಜಲಸಾರಿಗೆ ಕೆಲವೆಡೆ ಮಾತ್ರ ಇನ್ನೂ ಅಸ್ತಿತ್ವದಲ್ಲಿದೆ.

ಇತ್ತೀಚಿಗೆ ಮತ್ತೆ ಜಲಸಾರಿಗೆಯನ್ನು ಪುನಶ್ಚೇತನಗೊಳಿಸಲು ಹಲವಾರು ದೇಶಗಳು ಶ್ರಮಿಸುತ್ತಿವೆ. ಅಣೆಕಟ್ಟು ಇರವ ಸ್ಥಳದಲ್ಲಿ ದೊಡ್ಡ ಲಿಪ್ಟ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹಡಗು ಮತ್ತು ದೋಣಿಗಳನ್ನು ಜಲಾಶಯದಿಂದ ಕೆಳಗಿನ ನದಿಗೆ ಬಿಡುವುದು, ಇಲ್ಲವೇ ಕೆಳಗಿನ ನದಿಯಿಂದ ಸಾಗಿಬಂದ ಹಡಗು, ದೋಣಿಗಳನ್ನು ಜಲಾಶಯದ ಮೇಲ್ಬಾಗದ ನದಿಗೆ ಎತ್ತಿ ಬಿಡುವ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಇದು ನಿರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ‍. ನೈಜೀರಿಯದಲ್ಲಿ ಜಗತ್ತಿನ ಅತಿದೊಡ್ಡ ಅಂದರೆ, 10 ಸಾವಿರ ಟನ್ ಸಾಮರ್ಥದ ಲಿಪ್ಟ್ ಅಳವಡಿಸಲಾಯಿತು ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಚೀನಾದ ತ್ರೀ ಗಾರ್ಜಸ್ ಅಣೆಕಟ್ಟಿನ ಬಳಿ ಸಹ ಇಂತಹದೇ ಮಾದರಿ ಲಿಪ್ಟ್ ಅಳವಡಿಸಲಾಗಿದೆ. ಇಂತಹ ಜಲಸಾರಿಗೆಯ ಪರ್ಯಾಯ ಭವಿಷ್ಯದಲ್ಲಿ ಯಶಸ್ವಿಯಾಗದು ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯದ ಹಿನ್ನೀರಿನ ನದಿಯಲ್ಲಿ ಹೂಳು ಶೇಖರವಾಗುವುದರಿಂದ ಹಡಗು ಮತ್ತು ದೋಣಿಗಳ ಚಲನೆಗೆ ಅಡ್ಡಿಯಾಗುತ್ತದೆ ಎಂಬುದು ತಜ್ಙರ ನಿಲುವು.

ವಿಶ್ವಬ್ಯಾಂಕ್ ಸಮೀಕ್ಷೆಯಂತೆ 1960 ರಲ್ಲಿ ಜಗತ್ತಿನಾದ್ಯಂತ 1 ಲಕ್ಷ 70 ಸಾವಿರ ಕಿಲೋಮೀಟರ್ ಜಲಸಾರಿಗೆಯಿದ್ದದ್ದ್ದು, 2000 ದ ವೇಳೆಗೆ ಅದು ಕೇವಲ 79 ಸಾವಿರ ಕಿ.ಮೀ.ಗೆ ಕುಸಿದಿತ್ತು.

ಉತ್ತರ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಇಂದಿಗೂ ಜಲಸಾರಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೇರಿಕಾದ ಆರ್ಮಿ ಕೋರ್ಸ್ ಆಫ್ ಇಂಜಿನಿಯರ್ಸ್ ಸಂಸ್ಥೆ ಮಿಸಿಸಿಪ್ಪಿ ನದಿಯ ಮೇಲ್ಭಾಗದಲ್ಲಿ 1914 ರಿಮದ 1950 ರವರೆಗೆ ಅಣೆಕಟ್ಟುಗಳಿಗೆ 29 ಲಿಪ್ಟ್ ಅಳವಡಿಸಿ 800 ಕಿಲೋಮೀಟರ್ ಜಲಸಾರಿಗೆಯನ್ನು ಅಭಿವೃದ್ಧಿ ಪಡಿಸಿತ್ತು. 1990 ರಲ್ಲಿ ಅಮೇರಿಕಾ ಸರ್ಕಾರ ಜಲಸಾರಿಗೆ ನಿರ್ವಹಣೆಗಾಗಿ 12 ಶತಕೋಟಿ ಡಾಲರ್ ಹಣ ಖರ್ಚು ಮಾಡಿತ್ತು. ಅಲ್ಲಿ 12 ಬೃಹತ್ ವ್ಯಾಪಾರ ಸಂಸ್ಥೆಗಳು ಹಡಗುಗಳ ಮೂಲಕ ಅದಿರು, ತೈಲ, ಕಲ್ಲಿದ್ದಲು ಹಾಗು ಸರಕುಗಳನ್ನು ಸಾಗಿಸುತಿದ್ದು ಇದಕ್ಕಾಗಿ ಸರ್ಕಾರದಿಂದ ಹಲವಾರು ರಿಯಾಯತಿಗಳನ್ನು ಪಡೆದಿವೆ. ಆದರೆ ಲಿಪ್ಟ್ ಗಳ ದುರಸ್ತಿ ಮತ್ತು ನಿರ್ವಹಣೆ ಸಕಾರಕ್ಕೆ ಹೊರೆಯಾಗಿದೆ. ಇಲಿನಾಯ್ಸ್ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಲಿಪ್ಟ್ ಒಂದರ ಬದಲಾವಣೆಗಾಗಿ ಸರ್ಕಾರ 100 ಕೋಟಿ ಡಾಲರ್ ವ್ಯಯ ಮಾಡಿತು.

ಅಣೆಕಟ್ಟುಗಳ ನಿರ್ಮಾಪಕರು ಜಲಾಶಯಗಳಲ್ಲಿ ನಡೆಸಬಹುದಾದ ಮೀನುಗಾರಿಕೆ ಕೂಡ ಒಂದು ಲಾಭದಾಯಕ ಉಧ್ಯಮ ಎಂದು ಬಣ್ಣ ಬಣ್ಣದ ಕರಪತ್ರಗಳಲ್ಲಿ ಮುದ್ರಿಸಿ ಪ್ರಸಾರ ಮಾಡುತ್ತಿದೆ. ಆದರೆ, ಪರಿಸರ ತಜ್ಙರು ಲಾಭದಾಯಕವಲ್ಲ ಎಂದು ವಾದಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದರಿಂದ ನೀರಿನಲ್ಲಿರುವ, ಮೀನಿಗೆ ಬೇಕಾದ ಪೋಷಕಾಂಶಗಳು ಹರಿದು ಹೋಗುವುದನ್ನು  ತಜ್ಙರು ಗುರುತಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ನೀರು ಬಳಕೆಯಾಗುವುದನ್ನು ಗುರಿ ಮಾಡಿ ಇಂತಹ ಸ್ಥಿತಿಯಲ್ಲಿ ಮೀನು ಸಾಕಾಣಿಕೆ ಲಾಭ ತರುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಆಫ್ರಿಕಾದ ಕೈಂಜಿ ಅಣೆಕಟ್ಟಿನ ಜಲಾಶಯದಲ್ಲಿ 10 ಸಾವಿರ ಟನ್ ಮೀನು ಸಿಗಬಹುದೆಂದು ಅಂದಾಜಿಸಲಾಗಿತ್ತು 1970 ರಲ್ಲಿ ಎಲ್ಲರ ನಿರೀಕ್ಷೆ ಮೀರಿ 28 ಸಾವಿರ ಮೀನು ದೊರೆಯಿತು. ನಂತರದ ನಾಲ್ಕು ವರ್ಷಗಳಲ್ಲಿ ಅಂದರೆ, 1974 ರಲ್ಲಿ ಮೀನಿನ ಇಳುವರಿ ಕೇವಲ 4ಸಾವಿರದ 500 ಟನ್ಗೆ ಕುಸಿದಿತ್ತು.

ಜಗತ್ತಿನ ಅತಿ ದೊಡ್ಡ ವಿಶಾಲವಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಘಾನದ ವೊಲ್ಟಾ ನದಿಗೆ ಕಟ್ಟಿರುವ ಅಕೊಸೊಂಬೊ ಜಲಾಶಯದಿಂದ ಉಂಟಾಗಿರುವ ವೊಲ್ಟಾ ಸರೋವರದಲ್ಲಿ 60 ಸಾವಿರ ಟನ್ ಮೀನು ಉತ್ಪಾದನೆಯಾಗಿ 20 ಸಾವಿರ ಮೀನುಗಾರರಿಗೆ ಉದ್ಯೋಗ ದೊರಕಿಸಿತ್ತು. ಆದರೆ ಜಲಾಶಯ ನಿರ್ಮಾಣದಿಂದ ನೆಲೆ ಕಳೆದುಕೊಂಡ 80 ಸಾವಿರ ಮೀನುಗಾರರ ಪೈಕಿ ಉಳಿದ 60 ಸಾವಿರ ಮೀನುಗಾರರು ಅರಣ್ಯಗಳಲ್ಲಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ತಿನ್ನುತ್ತಾ ಬದುಕು ದೂಡುವಂತಾಯಿತು.

ಉರುಗ್ವೆ ದೇಶದ ಮಿಲಿಟರಿ ಸರ್ಕಾರ ತಾನು ನಿರ್ಮಿಸಿದ್ದ ಸಾಲ್ವೋ ಗ್ರಾಂಡ್ ಜಲಾಶಯದಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಬಳಸಿ ಮೀನುಗಾರಿಕೆಗೆ ಯೋಜನೆ ರೂಪಿಸಿತ್ತು. ಆದರೆ ಜರ್ಮನಿ ದೇಶದಿಂದ ಬರಬೇಕಾದ ಆರ್ಥಿಕ ನೆರವು ಬಾರದೆ ಇಡೀ ಯೋಜನೆ ವಿಫಲವಾಯಿತು.

ಇವತ್ತಿಗೂ ವಿಶ್ವ ಬ್ಯಾಂಕ್ ಅಣೆಕಟ್ಟುಗಳ ಮೂಲಕ ನಿರ್ಮಾಣವಾಗಿರುವ ಜಲಾಶಯಗಳಲ್ಲಿ ಮೀನು ಮತ್ತು ಸೀಗಡಿ ಸಾಕಾಣಿಕೆ ಒಂದು ಲಾಭದಾಯಕ ಉದ್ಯಮ ಎಂದು ನಂಬಿದೆ. ಅದರಂತೆ ಹಲವು ದೇಶಗಳಿಗೆ ಈ ಉದ್ಯಮಕ್ಕಾಗಿ ನೆರವು ನೀಡಿದೆ. ಚೀನಾ, ಇಂಡೊನೇಷಿಯಾ, ಜಾವ ದೇಶಗಳಲ್ಲಿ ಇದು ಯಶಸ್ವಿಯಾಗಿದೆ. ಆದರೆ ಅಧುನಿಕ ಹಾಗೂ ವೇಗವಾಗಿ ಬೆಳೆಯುವ ಮೀನಿನ ಸಂತತಿಯನ್ನು ಪರಿಚಯಿಸಿದ ಫಲವಾಗಿ ದೇಶೀಯ ತಳಿಗಳು ನಾಶವಾಗುತ್ತಿವೆ. ಈ ಸಂತತಿ ರೋಗವನ್ನು ತಾಳಿಕೊಳ್ಳು ಶಕ್ತಿ ಪಡೆದಿದ್ದವು.

ಇದನ್ನು ಅಭಿವೃದ್ಧಿಯ ವ್ಯಂಗ್ಯ ಎನ್ನಬೇಕೊ ಅಥವಾ ಶಾಪವೆನ್ನಬೇಕೊ ತಿಳಿಯುತ್ತಿಲ್ಲ. ಬಹುಉಪಯೋಗಿ ಅಣೆಕಟ್ಟು ಯೋಜನೆಗಳಲ್ಲಿ ಮನರಂಜನೆ ಒಂದು ಭಾಗವಾಗಿದ್ದು ಇದೀಗ ಅದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಡಿದೆ.

ಅಮೇರಿಕಾದ ಹೂವರ್ ಅಣೆಕಟ್ಟಿನ ಜಲಾಶಯ ಇದೀಗ ಜಲಕ್ರೀಡೆ, ಸಾಹಸ ಕ್ರೀಡೆ, ದೋಣಿ ವಿಹಾರಕ್ಕೆ, ಮತ್ತು ಹವ್ಯಾಸಿ ಮೀನುಗಾರರಿಗೆ ಆಕರ್ಷಣೀಯ ಕೇಂದ್ರವಾಗಿದೆ. ಇದರ ಸಮೀಪದಲ್ಲೇ ಇರುವ ಜಗತ್ ಪ್ರಸಿದ್ಧ ಮೋಜಿನ ನಗರ ಹಾಗೂ ಜೂಜು ಮತ್ತು ವಿಲಾಸಕ್ಕೆ ಹೆಸರಾದ ಲಾಸ್ ವೆಗಾಸ್ ನಗರವಿದ್ದು ವಾರಾಂತ್ಯದಲ್ಲಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತಿದ್ದಾರೆ. ಇದೇ ನದಿಗೆ ಕಟ್ಟಲಾಗಿರುವ ಪೊವೆಲ್ ಮತ್ತು ಮೀಡ್ ಜಲಾಶಯಗಳು ಕೂಡ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ. ಈ ಪ್ರದೇಶಗಳ ಸುತ್ತ ಮುತ್ತ ಐಷಾರಾಮಿ ರೆಸಾರ್ಟ್‌ಗಳು, ಹೊಟೇಲ್‌ಗಳು, ಶ್ರೀಮಂತರ ವಿಶ್ರಾಂತಿಧಾಮಗಳು, ತಲೆಯೆತ್ತಿ ನಿಂತಿವೆ. ಈಗಾಗಲೇ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾಗಿದ್ದ ಮೂಲನಿವಾಸಿಗಳು ಮತ್ತೊಮ್ಮೆ ಉಳ್ಳವರ ವಿಲಾಸದ ಬದುಕಿಗೆ ತಾವು ವಾಸಿಸುತಿದ್ದ ಜಾಗಗಳನ್ನು ಬಿಟ್ಟುಕೊಟ್ಟು ಕಾಡು ಸೇರುತಿದ್ದಾರೆ.

ನಾವು ರೂಢಿಸಿಕೊಂಡ ಆಧುನಿಕತೆ ಎಲ್ಲರನ್ನೂ ಭ್ರಮೆಯ ಜಗತ್ತಿಗೆ ದೂಡಿದೆ. ಮಲೇಷಿಯಾದ ಜಲಾಶಯದ ಬಳಿ ಪ್ರಾರಂಭವಾದ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ್ದ ಅಂದಿನ ಪ್ರಧಾನಿ ಡಾ. ಮಹತೀರ್ ಇದೊಂದು ಪರಿಸರ ಸ್ನೇಹಿ ಯೋಜನೆ ಎಂದು ಕರೆದಿದ್ದರು. ಆದರೆ ಇಂತಹ ಯೋಜನೆಗಳಿಗೆ ತಮ್ಮ ಆಸ್ತಿ ಹಾಗೂ ಬದುಕನ್ನು ಬಲಿ ಕೊಟ್ಟು ಮೂರಾ ಬಟ್ಟೆಯಾದ 10 ಸಾವಿರ ಸ್ಥಳೀಯ ನಿವಾಸಿಗಳ ಧಾರುಣ ಬದುಕು ಅವರ ನೆನಪಿಗೆ ಬಾರಲೇಇಲ್ಲ.

ಕೊಲಂಬಿಯಾದಲ್ಲಿ ಜಲಕ್ರೀಡೆಗಾಗಿ ನಿರ್ಮಾಣವಾದ ಕೊಲಿಮಾ ಐ ಡ್ಯಾಮ್ ಎಂಬ ಜಲಾಶಯಕ್ಕಾಗಿ 8 ಸಾವಿರ ಎಂಬೇರಾ ಮತ್ತು ಚಾಮಿ ಬುಡಕಟ್ಟು ನಿವಾಸಿಗಳು ಅತಂತ್ರರಾದರು.

ಇದೀಗ ಭಾರತದಲ್ಲಿ ಕೂಡ ಈ ಸಂಸ್ಕೃತಿ ಹರಡುತಿದ್ದು ಪಶ್ಚಿಮ ಘಟ್ಟದ ಕಾಳಿನದಿ, ಶರಾವತಿಯ ಹಿನ್ನೀರಿನ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ರೆಸಾರ್ಟ್‌ಗಳಲ್ಲಿ ಮೋಜು ಮತ್ತು ಉನ್ಮಾದದ ಪ್ರಪಂಚವೇ ಈಕೊ ಟೂರಿಸಂ ಹೆಸರಿನಲ್ಲಿ ತೆರೆದುಕೊಂಡಿದೆ.

(ಮುಂದುವರಿಯುವುದು)

Three Gorges Dam

ಜೀವನದಿಗಳ ಸಾವಿನ ಕಥನ – 16

-ಡಾ. ಎನ್. ಜಗದೀಶ್ ಕೊಪ್ಪ

ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳ ಪ್ರವಾಹ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟಗಳು ಎದುರುಸುತ್ತಿರುವ ಅತಿ ದೊಡ್ಡ ನೈಸರ್ಗಿಕ ವಿಕೋಪ. ಇದಕ್ಕಾಗಿ ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ವ್ಯಯವಾಗುತ್ತಿದೆ.

ಭಾರತದ ಪೂರ್ವ ಭಾಗದ ಅಸ್ಸಾಂ, ಮೇಘಾಲಯ, ನಾಗಲ್ಯಾಂಡ್, ತ್ರಿಪುರ, ಮಿಜೋರಾಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ರಹ್ಮಪುತ್ರ ಮತ್ತು ಗಂಗಾ ನದಿಗಳ ಪ್ರವಾಹದಿಂದ ಪ್ರತಿ ವರ್ಷ ಹಲವಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗುತ್ತಿದೆ.

ಇಂತಹ ದಯನೀಯ ಸ್ಥಿತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನ ಎಲ್ಲೆಡೆ ನಿಯಮಿತವಾಗಿ ನಡೆಯುತ್ತಿರವ ನೈಸರ್ಗಿಕ ದುರಂತವಿದು.

ಅಮೇರಿಕಾ ದೇಶವೊಂದೇ ತನ್ನ ಆರ್ಮಿ ಕೋರ್‍ಸ್ ಇಂಜಿನಿಯರ್ಸ್ ಸಂಸ್ಥೆ ಮೂಲಕ ತನ್ನ ದೇಶದ 500 ಅಣೆಕಟ್ಟುಗಳನ್ನು ಪ್ರವಾಹದಿಂದ ಸಂರಕ್ಷಿಸಲು ಪ್ರತಿ ವರ್ಷ 25 ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತಿದೆ. 1937 ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ವಿಶೇಷ ಮಸೂದೆಯನ್ನು ಜಾರಿಗೆ ತಂದ ಅಮೇರಿಕಾ ಸರ್ಕಾರ ಪ್ರತಿ ವರ್ಷ ತನ್ನ ವಾರ್ಷಿಕ ಬಜೆಟ್ಟಿನ್ನಲ್ಲಿ ಹಣವನ್ನು ಮೀಸಲಾಗಿಡುತ್ತಿದೆ. ಈ ವೆಚ್ಚ ಇತ್ತೀಚೆಗಿನ ವರ್ಷಗಳಲ್ಲಿ ದ್ವಿಗುಣಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭಾರತ ಸರ್ಕಾರ ಕೂಡ 1953 ರಿಂದ 1980 ರವರೆಗೆ 40 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದು, ಆನಂತರ ಕಳೆದ 25 ವರ್ಷಗಳಲ್ಲಿ ಈ ವೆಚ್ಚ ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ನದಿಗಳ ಪ್ರವಾಹಕ್ಕೆ ಮಳೆಯಷ್ಟೇ ಕಾರಣ ಎಂದು ನಾವು ನಂಬಿದ್ದೇವೆ, ಅದೇ ರೀತಿ ಸರ್ಕಾರಗಳೂ ಕೂಡ ನಮ್ಮನ್ನು ನಂಬಿಸಿಕೊಂಡು ಬಂದಿವೆ. ಜಾಗತಿಕ ತಾಪಮಾನದಿಂದ ಏರುತ್ತಿರುವ ಉಷ್ಣತೆ, ಇದರಿಂದಾಗಿ ಹಿಮಗೆಡ್ಡೆಗಳು ಕರಗುತ್ತಿರುವುದು, ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಹೀರುತಿದ್ದ ಹಳ್ಳ ಕೊಳ್ಳಗಳ ನಾಶ, ನಗರೀಕರಣದಿಂದ ಕಣ್ಮರೆಯಾಗುತ್ತಿರುವ ಅರಣ್ಯ, ಕೆರೆಗಳು ಇಂತಹ ಅಂಶಗಳು ನಮ್ಮ ಗಣನೆಗೆ ಬರುವುದೇ ಇಲ್ಲ. ಜೊತೆಗೆ, ಮಳೆಗಾಲದಲ್ಲಿ ನದಿಯ ಇಕ್ಕೆಲಗಳು ನೀರಿನಲ್ಲಿ ಕೊಚ್ಚಿ ಹೋಗುವ ಪರಿಣಾಮ ನದಿಗಳಲ್ಲಿ ಹೂಳು ಶೇಖರವಾಗತ್ತಾ ಹೋಗಿ ನದಿಯ ಆಳ ಕಡಿಮೆಯಾದಂತೆ ಪ್ರವಾಹದ ನೀರು ಸುತ್ತ ಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ.

ಅಣೆಕಟ್ಟುಗಳ ಮೂಲಕ ಮತ್ತು ನದಿಯ ದಿಬ್ಬಗಳನ್ನು ಎತ್ತರಿಸುವುದರ ಮೂಲಕ ಪ್ರವಾಹ ನಿಯಂತ್ರಣಕ್ಕೆ ಪ್ರಯತ್ನ ನಡೆದಿದ್ದರೂ ಕೂಡ ಕೆಲೆವೆಡೆ ಈ ಕಾರ್ಯ ಅವೈಜ್ಙಾನಿಕವಾಗಿದ್ದು ನದಿ ತೀರದ ಜನವಸತಿ ಪ್ರದೇಶದ ನಾಗರೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಜಗತ್ತಿನೆಲ್ಲೆಡೆ ನಿರ್ಮಿಸಲಾಗಿರುವ ಅಣೆಕಟ್ಟುಗಳು ಕುಡಿಯುವ ನೀರಿಗಾಗಿ ಇಲ್ಲವೇ ನೀರಾವರಿ ಯೋಜನೆಗಾಗಿ ನಿರ್ಮಿಸಿರುವುದರಿಂದ, ಪ್ರವಾಹ ನಿಯಂತ್ರಣಕ್ಕಾಗಿ ನಿರ್ಮಿಸಿದ ಅಣೆಕಟ್ಟುಗಳು ಬಹುತೇಕ ಕಡಿಮೆ ಎಂದು ಹೇಳಬಹುದು. ಕುಡಿಯುವ ನೀರು ಇಲ್ಲವೆ, ನೀರಾವರಿ ಅಥವಾ ಜಲವಿದ್ಯುತ್‌ಗಾಗಿ ಜಲಾಶಯಗಳಲ್ಲಿ ಯಾವಾಗಲೂ ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದರಿಂದ ಪ್ರವಾಹದಲ್ಲಿ ಹರಿದು ಬಂದ ನೀರನ್ನು ಹಾಗೆಯೇ ಹೊರಬಿಡಲಾಗುತ್ತದೆ. ಇದರ ಪರಿಣಾಮವಾಗಿ ನದಿ ಕೆಳ ಪಾತ್ರದ ಜನಕ್ಕೆ ನದಿಗಳ ಪ್ರವಾಹವೆಂಬುದು ಶಾಪವಾಗಿದೆ.

ಒರಿಸ್ಸಾದ ಮಹಾನದಿಯ ಪ್ರವಾಹ ನಿಯಂತ್ರಣಕ್ಕಾಗಿ ಭಾರತದಲ್ಲಿ ಪ್ರಥಮವಾಗಿ ಹಿರಾಕುಡ್ ಅಣೆಕಟ್ಟನ್ನು ನಿರ್ಮಿಸಲಾಯಿತು ಆದರೆ, 1980 ರ ಪ್ರವಾಹವನ್ನು ನಿಯಂತ್ರಿಸಲಾಗದೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಇಂತಹದ್ದೇ ಇನ್ನೊಂದು ದುರಂತ 1978 ರಲ್ಲಿ ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟಿನಲ್ಲೂ ಸಂಭವಿಸಿ 65 ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು.

1986 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯದ ರಾಜಧಾನಿ ಸಾಕ್ರೊಮೆಂಟೊ ನಗರದ 5 ಲಕ್ಷ ಜನತೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಮಳೆಯಿಂದಾಗಿ ಅಲ್ಲಿನ ಪಾಲ್ ಸೋಮ್ ಜಲಾಶಯ ಇಂಜಿನೀಯರಗಳ ನಿರೀಕ್ಷೆಯನ್ನು ಮೀರಿ ವಾರಕ್ಕೆ ಬದಲಾಗಿ ಕೇವಲ 36 ಗಂಟೆಯ ಅವಧಿಯಲ್ಲಿ ತುಂಬಿ ಹೋಗಿತ್ತು.

ಚೀನಾ ದೇಶದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ರೂಪುಗೊಂಡ ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾದ ತ್ರೀ ಗಾರ್ಜಸ್ ಜಲಾಶಯದ ಸ್ಥಿತಿ ಕೂಡ ಇವುಗಳಿಗಿಂತ ಬೇರೆಯಾಗಿಲ್ಲ. ಪ್ರವಾಹದ ಸಂದರ್ಭದಲ್ಲಿ ಮತ್ತು ಜಲಾಶಯದ ಹಿನ್ನೀರಿನಿಂದಾಗಿ ಸುಮಾರು 10 ಲಕ್ಷ ಮಂದಿ ನಿರ್ವಸತಿಗರಾಗಿದ್ದಾರೆ. ಯಾಂಗ್ಟೇಜ್ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟಿನ ಕೆಳಭಾಗದ 5 ಲಕ್ಷ ಮಂದಿ ರೈತರು ಪ್ರವಾಹದ ಸಮಯದಲ್ಲಿ ತಮ್ಮ ಆಸ್ತಿ, ಮನೆಗಳನ್ನು ಕಳೆದುಕೊಂಡ ಪರಿಣಾಮ ಅವರ ಬದುಕು ಮೂರಾಬಟ್ಟೆಯಾಗಿದೆ.

ನಮ್ಮ ಅಭಿವೃದ್ಧಿಯ ವಾಖ್ಯಾನಗಳನ್ನು, ಚಿಂತನೆಗಳನ್ನು ಮರುಚಿಂತನೆಗೆ ಒಳಪಡಿಸಬೇಕಾದ ಅವಶ್ಯಕತೆ ಇದ್ದು, ನಮ್ಮ ನದಿಗಳ ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗಿದೆ. ನದಿಯ ಮೊದಲ ಪ್ರವಾಹದ ಮೂಲ ಹಿಡಿದು ಸಾಗಿದರೆ, ಸ್ವಚ್ಛಂದ ನದಿಯ ಹರಿಯುವಿಕೆಗೆ ನಮ್ಮ ಅಭಿವೃದ್ಧಿಯ ಕೆಲಸಗಳು ಎಲ್ಲೆಲ್ಲಿ ಅಡ್ಡಿಯಾಗಿವೆ ಎಂಬುದು ನಮ್ಮ ಅರಿವಿಗೆ ಬರುವ ಸಾಧ್ಯತೆಗಳಿವೆ. ಅದು ಅರಣ್ಯ ನಾಶವಿರಬಹುದು, ಕೆರೆ, ಹಳ್ಳ-ಕೊಳ್ಳಗಳ ನಾಶವಿರಬಹುದು ಅಥವಾ ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪ್ರಮಾಣವಿರಬಹುದು, ಇವುಗಳನ್ನು ನೋಡುವ, ತಿಳಿಯುವ ಮನಸ್ಸುಗಳು ಬೇಕಷ್ಟೆ.

’ಕುಡಿಯುವ ನೀರಿಗಾಗಿ ಅಣೆಕಟ್ಟುಗಳ” ಎಂಬ ಯೋಜನೆಗಳು ಎಂಬುದು ಜಾಗತಿಕ ಮಟ್ಟದ ಅತಿ ದೊಡ್ಡ ಪ್ರಹಸನವೆಂದರೆ ತಪ್ಪಾಗಲಾರದು. ಚೀನಾದಲ್ಲಿ ವಿಶೇಷವಾಗಿ ಜನಪದರಲ್ಲಿ ಒಂದು ಗಾದೆ ಪ್ರಚಲಿತದಲ್ಲಿದೆ, ’ನೀರು ಕುಡಿಯುವಾಗ ಋತುಮಾನಗಳನ್ನು ನೆನಪಿಡು,’ಎಂದು . ಪ್ರಕೃತಿಯ ಕೊಡುಗೆಯಾದ ನೀರಿನ ಬಗ್ಗೆ ಇರುವ ಕಾಳಜಿ ಇದರಲ್ಲಿ ಎದ್ದು ಕಾಣುತ್ತದೆ. ನೀರು ಮಾರಾಟದ ಸರಕಾಗಿರುವಾಗ ಇಂತಹ ಆಲೋಚನೆಗಳು ಈಗ ಅಪ್ರಸ್ತುತವಾಗಿವೆ.

ದಶಕ ಹಿಂದೆ ಜಗತ್ತಿನಲ್ಲಿ ಇದ್ದ ದೊಡ್ಡ ಅಣೆಕಟ್ಟುಗಳು ಅಂದರೆ, 100 ಅಡಿ ಎತ್ತರದ 3602 ಅಣೆಕಟ್ಟುಗಳಲ್ಲಿ ಅಮೇರಿಕವನ್ನು ಹೊರತು ಪಡಿಸಿದರೆ, ಉಳಿದ ಅಣೆಕಟ್ಟುಗಳು ಕುಡಿಯುವ ನೀರಿಗಿಂತ ನೀರಾವರಿ ಯೋಜನೆಗಾಗಿ, ಮತ್ತು ಜಲವಿದ್ಯುತ್‌ಗಾಗಿ ರೂಪುಗೊಂಡಂತಹವು. ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ಭಾರತ, ಚೀನಾ, ಜಪಾನ್, ಅಮೇರಿಕ ದೇಶಗಳಲ್ಲಿ ಅಣೆಕಟ್ಟುಗಳು ಯಾವ ಉದ್ದೇಶಕ್ಕೆ ಬಳಕೆಯಾಗಿವೆ ಎಂಬ ವಿವರ ಈ ಕೆಳಗಿನಂತಿದೆ:

  1. ಭಾರತದಲ್ಲಿ 20 ನೇ ಶತಮಾನದ ಅಂತ್ಯಕ್ಕೆ ಇದ್ದ 324 ದೊಡ್ಡ ಅಣೆಕಟ್ಟುಗಳ ಪೈಕಿ ನೀರಾವರಿಗೆ 44, ಜಲವಿದ್ಯುತ್ಗಾಗಿ 22, ಪ್ರವಾಹ ನಿಯಂತ್ರಣಕ್ಕೆ 1, ಕುಡಿಯುವ ನೀರಿಗಾಗಿ 4 ಅಣೆಕಟ್ಟುಗಳಿದ್ದವು.
  2. ಚೀನಾದಲ್ಲಿರುವ 1336 ಅಣೆಕಟ್ಟುಗಳಲ್ಲಿ ನೀರಾವರಿಗೆ 84, ವಿದ್ಯುತ್ ಉತ್ಪಾದನೆಗೆ 44, ಪ್ರವಾಹ ನಿಯಂತ್ರಣಕ್ಕೆ 29, ಹಾಗೂ ಕುಡಿಯುವ ನೀರಿಗಾಗಿ 1 ಅಣೆಕಟ್ಟು ಬಳಕೆಯಾಗಿದೆ.
  3. ಜಪಾನ್ ದೇಶದಲ್ಲಿ ಇರುವ 800 ಅಣೆಕಟ್ಟುಗಳಲ್ಲಿ 43 ನೀರಾವರಿಗೆ, 45 ವಿದ್ಯುತ್ ಉತ್ಪಾದನೆಗೆ, 43 ಪ್ರವಾಹ ನಿಯಂತ್ರಣಕ್ಕೆ, ಮತ್ತು 25 ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ.
  4. ಅಮೇರಿಕಾದಲ್ಲಿರುವ 1146 ಅಣೆಕಟ್ಟುಗಳಲ್ಲಿ ನೀರಾವರಿಗೆ 29, ವಿದ್ಯುತ್ ಉತ್ಪಾದನೆಗೆ 31, ಕುಡಿಯುವ ನೀರಿಗಾಗಿ 44 ಮತ್ತು ಮನರಂಜನೆ ಹಾಗೂ ಜಲಕ್ರೀಡೆಗಾಗಿ 4 ಅಣೆಕಟ್ಟುಗಳು ಬಳಕೆಯಾಗುತ್ತಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ 230 ಕೋಟಿಗೂ ಅಧಿಕ ಮಂದಿ ಕುಡಿಯುವ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ. ಇವರಲ್ಲಿ 170 ಕೋಟಿ ಜನ ಗ್ರಾಮಾಂತರ ಪ್ರದೇಶದ ವಾಸಿಗಳಾಗಿದ್ದಾರೆ. ಇವರುಗಳಿಗೆ ಕುಡಿಯುವ ನೀರು ಕೊಡಲು ಜಗತ್ತಿನಾದ್ಯಂತ ಸರ್ಕಾರಗಳು ಇಂದಿಗೂ ಹೆಣಗಾಡುತ್ತಿವೆ.

ಅಸಹಜವಾಗಿ ಬೆಳೆಯುತ್ತಿರುವ ನಗರಗಳಿಂದಾಗಿ ಕುಡಿಯುವ ನೀರಿನ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಕೊಲ್ಕತ್ತಾ ನಗರದ ಜನಕ್ಕೆ ನೀರು ಒದಗಿಸಲು ಗಂಗಾ ನದಿಯ ನೀರನ್ನು ಫರಕ್ಕಾ ಜಲಾಶಯಕ್ಕೆ ತಿರುಗಿಸಿದ ಫಲವಾಗಿ ನದಿಯ ಕೆಳ ಪಾತ್ರದ ಬಂಗ್ಲಾದೇಶದ 80 ಲಕ್ಷ ಜನತೆ ಕುಡಿಯುವ ನೀರಿನಿಂದ ವಂಚಿತರಾದರು.

ಅಣೆಕಟ್ಟು ನಿರ್ಮಾಣವಾದ ನಂತರ ಕೆಳಗಿನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಅಂತರ್ಜಲ ಮಟ್ಟ ಕೂಡ ಕುಸಿಯುತ್ತದೆ ಇದರಿಂದಾಗಿ ಎಲ್ಲರೂ ನದಿಯ ನೀರನ್ನೇ ಆಶ್ರಯಿಸಬೇಕು. ನದಿ ನೀರನ್ನು ಸಂಸ್ಕರಿಸದೆ ಬಳಸಲಾಗದು.  ನೀರನ್ನು ನೇರವಾಗಿ ಜನತೆಗೆ ಸರಬರಾಜು ಮಾಡಿದ ಪರಿಣಾಮ ಬ್ರೆಜಿಲ್ ದೇಶದ ಸಾವೊ ಪ್ರಾನ್ಸಿಸ್ಕೊ ಜಲಾಶಯದ ಸಮೀಪದ ಪಟ್ಟಣಗಳಲ್ಲಿ ಮತ್ತು ಈಜಿಪ್ತ್ ನ ಅಸ್ವಾನ್ ಜಲಾಶಯದ ನೀರು ಕುಡಿದ ಸಾವಿರಾರು ಮಂದಿ ವಾಂತಿ- ಬೇಧಿಯಿಂದ ಮೃತಪಟ್ಟ ದಾಖಲೆಗಳು ಇತಿಹಾಸದಲ್ಲಿ ದಾಖಲಾಗಿವೆ.

(ಮುಂದುವರಿಯುವುದು)