Category Archives: ಜೀವನದಿಗಳ ಸಾವಿನ ಕಥನ

Three Gorges Dam

ಜೀವನದಿಗಳ ಸಾವಿನ ಕಥನ – 15

-ಡಾ.ಎನ್.ಜಗದೀಶ್ ಕೊಪ್ಪ

ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು, ತೃತೀಯ ಜಗತ್ತಿನ ರಾಷ್ಟಗಳ ಮೂಗಿಗೆ ತುಪ್ಪ ಸವರತೊಡಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೀವ ನದಿಗಳ ನೈಜ ಹರಿವಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದನೆ ನೆಪದಲ್ಲಿ ಈ ಕಂಪನಿಗಳು ಸರಕಾರಗಳನ್ನು ದಿಕ್ಕು ತಪ್ಪಿಸಿ ಸಾಲದ ಸುಳಿಗೆ ಸಿಲುಕಿಸಿ ಕಾಲು ಕೀಳುತ್ತಿವೆ. ಇದರ ಅಂತಿಮ ಪರಿಣಾಮ ಜೀವ ನದಿಗಳ ಮಾರಣ ಹೋಮ.

ಎಷ್ಟೋ ಬಾರಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಿದ ಅಣೆಕಟ್ಟುಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿ ಸೋತ ರಾಷ್ಟ್ರಗಳ ಉದಾಹರಣೆ ಜಗತ್ತಿನ ಎಲ್ಲೆಡೆ ದೊರೆಯುತ್ತವೆ. ಇದಕ್ಕೆ ಚೀನಾ ರಾಷ್ಟ್ರದ ಯಾಂಗ್ಟೇಜ್ ನದಿಗೆ ಕಟ್ಟಿದ ತ್ರೀ ಗಾರ್ಜಸ್ಎಂಬ ಅಣೆಕಟ್ಟು ಸಾಕ್ಷಿಯಾಗಿದೆ. ಚೀನಾ ಸರಕಾರ ಮೊದಲು ಪ್ರವಾಹ ನಿಯಂತ್ರಣಕ್ಕಾಗಿ ಯೋಜನೆ ರೂಪಿಸಿ ನಂತರ ಇಡೀ ಯೋಜನೆಯನ್ನು

Three Gorges Dam

Three Gorges Dam

ಜಲ ವಿದ್ಯುತ್‌ಗಾಗಿ ಬದಲಿಸಿತು. ಈ ಕಾರಣಕ್ಕಗಿಯೇ ವಿಶ್ವ ಬಾಂಕ್ ತನ್ನ ವರದಿಯಲ್ಲಿ ಆಯಾ ರಾಷ್ಟ್ರಗಳ ಅಥವಾ ಸರಕಾರಗಳ ಮನಸ್ಥಿತಿಗೆ ತಕ್ಕಂತೆ ಅಣೆಕಟ್ಟುಗಳು ಅಥವಾ ಜಲಾಶಗಳು ಬದಲಾಗುತ್ತಿವೆ ಎಂದು ತಿಳಿಸಿದೆ.

ವೆನಿಜುವೇಲ ಗುರಿ ಎಂಬ ನದಿಗೆ ಕಟ್ಟಲಾದ ಇಟ್ಯವು ಅಣೆಕಟ್ಟು, ಸೈಬೀರಿಯಾದ ಗ್ರಾಂಡ್ ಕೌಲಿ ಅಣೆಕಟ್ಟು ಇವುಗಳಲ್ಲಿ ಕ್ರಮವಾಗಿ 12.600 ಮತ್ತು 10.300 ಮೆಗಾವ್ಯಾಟ್ ವಿದ್ಯುತ್ ಗುರಿ ಇರಿಸಿಕೊಳ್ಳಲಾಗಿತ್ತು. ಇದಕ್ಕಾಗಿ ಸಾವಿರಾರು ಕೋಟಿ ಡಾಲರ್ ಹಣ ವಿನಿಯೋಗವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗಲಿಲ್ಲ. ಇದರಲ್ಲಿ ಲಾಭವಾದದ್ದು ಬಹು ರಾಷ್ಟ್ರೀಯ ಕಂಪನಿಗಳಿಗೆ ಮತ್ತು ವಿಶ್ವ ಬ್ಯಾಂಕಿಗೆ ಮಾತ್ರ.

20 ನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕವಾಗಿ ಶೇ.22 ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದ ಉತ್ಪಾದಿಸಲಾಗುತ್ತಿತ್ತು. ಇದರಲ್ಲಿ ಶೇ,18 ಏಷ್ಯಾ ಖಂಡದಲ್ಲಿ, ಶೆ.60 ರಷ್ಟು ಮಧ್ಯ ಅಮೇರಿಕಾದಲ್ಲಿ ಉತ್ಪಾದಿಸಲಾಗುತ್ತಿತ್ತು. ಏಷ್ಯಾದ ನೇಪಾಳ, ಶ್ರೀಲಂಕಾ, ಸೇರಿದಂತೆ ಜಗತ್ತಿನ ಇತರೆಡೆಯ ನಾರ್ವೆ, ಅಲ್ಬೇನಿಯಾ, ಬ್ರೆಜಿಲ್, ಗ್ವಾಟೆಮಾಲ, ಘಾನ ಮುಂತಾದ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.90 ರಷ್ಟು ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ.

1980ರ ದಶಕದಿಂದೀಚೆಗೆ ಜಾಗತಿಕವಾಗಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶಗಳಲ್ಲಿ ಬೇಡಿಕೆ ದ್ವಿಗುಣಗೊಂಡಿದೆ. ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಿರುವ ಕಾರಣಕ್ಕಾಗಿ ಅಮೆರಿಕಾ, ಕೆನಡಾ ರಾಷ್ಟ್ರಗಳು ಸಹ ಶೇ.70ರಷ್ಟು ವಿದ್ಯುತ್ ಅನ್ನು ಜಲಮೂಲಗಳಿಂದಲೇ ಉತ್ಪಾದಿಸುತ್ತಿವೆ.

ನದಿಗಳಿಗೆ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ಇರುವ ಬಹುದೊಡ್ಡ ತೊಡಕೆಂದರೆ, ನದಿಯ ನೀರಿನ ಪ್ರಮಾಣ ಹಾಗೂ ವಿದ್ಯುತ್ ಬೇಡಿಕೆ ಕುರಿತಂತೆ ತಪ್ಪು ಅಂದಾಜು ವರದಿ ಸಿದ್ಧಗೊಳ್ಳುತ್ತಿದ್ದು, ಇದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.

ಯಾವ ಯಾವ ಋತುಮಾನಗಳಲ್ಲಿ ಎಷ್ಟು ಪ್ರಮಾಣದ ನೀರು ನದಿಗಳಲ್ಲಿ ಹರಿಯುತ್ತದೆ ಎಂಬ ನಿಖರ ಮಾಹಿತಿಯನ್ನು ಯಾವ ಅಣೆಕಟ್ಟು ತಜ್ಞರೂ ಸುಸಂಬದ್ಧವಾಗಿ ಬಳಸಿಕೊಂಡಿಲ್ಲ. ಜೊತೆಗೆ ವಿದ್ಯುತ್‌ನ ಬೇಡಿಕೆಯ ಪ್ರಮಾಣವೆಷ್ಟು ಎಂಬುದನ್ನು ಕೂಡ ಯಾವ ರಾಷ್ಟ್ರಗಳು, ಸರಕಾರಗಳೂ ನಿಖರವಾಗಿ ತಿಳಿದುಕೊಂಡಿಲ್ಲ.

ಇದಕ್ಕೆ ಉದಾಹರಣೆಯೆಂದರೆ ಅರ್ಜೆಂಟೈನಾ ಸರಕಾರದ ಸ್ಥಿತಿ. ತನ್ನ ದೇಶದ ವಿದ್ಯುತ್ ಬೇಡಿಕೆ ಮುಂದಿನ 7 ವರ್ಷಗಳ ನಂತರ ಶೇ.7 ರಿಂದ 8ರವರೆಗೆ ಇರುತ್ತದೆ ಎಂದು ಅಂದಾಜಿಸಿತ್ತು. 1994ರಲ್ಲಿ 3,100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಯಾಕ್ರಿಯೇಟಾ ಎಂಬ ಅಣೆಕಟ್ಟನ್ನು ನಿರ್ಮಿಸಿತು. ಇದಕ್ಕೆ ತಗುಲಿದ ವೆಚ್ಚ 11.5 ಶತಕೋಟಿ ಡಾಲರ್. ಅಣೆಕಟ್ಟು ನಿರ್ಮಾಣವಾದ ನಂತರ ಅಲ್ಲಿನ ವಿದ್ಯುತ್ ಬೇಡಿಕೆ ಶೇ. 2ರಷ್ಟು ಮಾತ್ರ.ಹೆಚ್ಚಾಗಿತ್ತು. ತಾನು ಸಾಲವಾಗಿ ಪಡೆದ ಹಣಕ್ಕೆ ನೀಡುತ್ತಿರುವ ಬಡ್ಡಿಯ ಪ್ರಮಾಣವನ್ನು ಲೆಕ್ಕ ಹಾಕಿದಾಗ, ವಿದ್ಯುತ್ ಉತ್ಪಾದನಾ ವೆಚ್ಚ ಶೇ. 30ರಷ್ಟು ದುಬಾರಿಯಾಯಿತು. ಇಂತಹದ್ದೇ ಸ್ಥಿತಿ ಜಗತ್ತಿನಾದ್ಯಂತ 12 ಅತಿ ದೊಡ್ಡ ಅಣೆಕಟ್ಟುಗಳೂ ಸೇರಿದಂತೆ 380 ಅಣೆಕಟ್ಟುಗಳದ್ದಾಗಿದೆ.

ಕೊಲಂಬಿಯಾ ರಾಷ್ಟ್ರ ಹಾಕಿಕೊಂಡ ಅನೇಕ ಜಲವಿದ್ಯುತ್ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗದೆ, ಆ ರಾಷ್ಟ್ರವನ್ನು ಆರ್ಥಿಕ ದುಸ್ಥಿತಿಗೆ ದೂಡಿವೆ. ಅಲ್ಲಿನ ಸರಕಾರದ ವಾರ್ಷಿಕ ಆಯ-ವ್ಯಯದಲ್ಲಿನ ಶೇ.60ರಷ್ಟು ಹಣ ಅಣೆಕಟ್ಟು ಯೋಜನೆಗಳಿಗಾಗಿ ತಂದ ಸಾಲದ ಮರು ಪಾವತಿ ಹಾಗೂ ಅದರ ಬಡ್ಡಿಗಾಗಿ ವಿನಿಯೋಗವಾಗುತ್ತಿದೆ.

ಮಧ್ಯ ಅಮೆರಿಕಾದ ಗ್ವಾಟೆಮಾಲದ ಚಿಕ್ಷೊಯ್ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗದೆ, ಯೋಜನೆ ವಿಪಲಗೊಂಡಿದ್ದರೆ, ಹಂಡೊರಾಸ್ ದೇಶದಲ್ಲಿ ಮಳೆಯೇ ಇಲ್ಲದೆ ನಿರಂತರ ಬರಗಾಲದಿಂದ ಎಲ್ಲಾ ನದಿಗಳು ಬತ್ತಿಹೋದ ಕಾರಣ ವಿದ್ಯುತ್ ಉತ್ಪಾದನಾ ಪ್ರಮಾಣ ಶೇ.30ಕ್ಕೆ ಕುಸಿದಿದೆ.

ಈ ಕೆಳಗಿನ ರಾಷ್ಟ್ರಗಳ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಗಮನಿಸಿದರೆ, ಇವರು ಅಣೆಕಟ್ಟು ಅಥವಾ ಜಲಾಶಯಗಳ ಮೂಲಕ ಜೀವ ನದಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಮಾಡಿದ ಯೋಜನೆಗಳೆನೊ? ಎಂಬ ಸಂಶಯ ಮೂಡುತ್ತದೆ.

  1. 250 ಮೆಗಾವ್ಯಾಟ್ ವಿದ್ಯುತ್ ಗೆ ಬ್ರೆಜಿಲ್ ನಲ್ಲಿ ನಿರ್ಮಾಣವಾದ ಬಲ್ಬಿನಾ ಅಣೆಕಟ್ಟು ಸ್ಥಾವರದಲ್ಲಿ ಉತ್ಪಾದನೆಯಾದ ಪ್ರಮಾಣ ಕೇವಲ ಶೇ.44 ರಷ್ಟು.
  2. 150 ಮೆಗಾವ್ಯಾಟ್ ಯೋಜನೆಯ ಪನಾಮದ ಬಯಾನೊ ಅಣೆಕಟ್ಟಿನಿಂದ ಉತ್ಪಾದನೆಯಾದ ವಿದ್ಯುತ್ ಶೇ.40 ರಷ್ಟು.
  3. ಥಾಯ್ಲೆಂಡಿನ ಬೂಮಿ ಬೊಲ್ ಅಣೆಕಟ್ಟಿನ ಮೂಲ ಉದ್ದೇಶ ಇದ್ದದ್ದು, 540 ಮೆಗಾವ್ಯಾಟ್, ಆದರೆ ಉತ್ಪಾದನೆಯಾದದ್ದು,150 ಮೆಗಾವ್ಯಾಟ್.
  4. ಭಾರತದ ಸರದಾರ್ ಸರೋವರದ ಅಣಕಟ್ಟಿನಲ್ಲಿ ಉದ್ದೇಶಿತ ಗುರಿ 1.450 ಮೆಗಾವ್ಯಾಟ್ ವಿದ್ಯುತ್, ಉತ್ಪಾದನೆಯಾದದ್ದು ಶೇ. 28 ರಷ್ಟು ಮಾತ್ರ.
  5. ಶ್ರೀಲಂಕಾದ ವಿಕ್ಟೋರಿಯಾ ಅಣೆಕಟ್ಟುವಿನಿಂದ 210 ಮೆಗಾವ್ಯಾಟ್ ವಿದ್ಯುತ್‌ಗಾಗಿ ಗುರಿ ಹೊಂದಲಾಗಿತ್ತು. ಅಲ್ಲಿ ಉತ್ಪಾದನೆಯಾದದ್ದು ಶೇ.32 ರಷ್ಟು ಮಾತ್ರ.

ಹೀಗೆ ಜಗತ್ತಿನಾದ್ಯಂತ ನೂರಾರು ಅಣೆಕಟ್ಟುಗಳ ಇತಿಹಾಸದ ಪಟ್ಟಿಯನ್ನು ಗಮನಿಸಿದರೆ, ಇವರುಗಳ ಮೂಲ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ.

ಜಲವಿದ್ಯುತ್ ಯೋಜನೆಗಾಗಿ ರೂಪಿಸಿದ ಅಣೆಕಟ್ಟುಗಳಲ್ಲಿ ಜನಸಾಮಾನ್ಯರ ಅರಿವಿಗೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರಕ್ಕೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಪರಿಸರ ತಜ್ಙರು ಗುರುತಿಸಿದ್ದಾರೆ. ಈವರಗೆ ವಿದ್ಯುತ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಘಟಕ, ಅನಿಲ ಆಧಾರಿತ ಘಟಕಗಳಿಂದ ಮಾತ್ರ ಪರಿಸರಕ್ಕೆ ಹಾನಿ ಎಂದು ನಂಬಲಾಗಿತ್ತು. ಈಗ ಜಲ ವಿದ್ಯುತ್ ಯೋಜನೆಯ ಜಲಾಶಗಳಿಂದಲೂ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದೆ.

ಜಲವಿದ್ಯುತ್ ಯೋಜನೆಗಳು ಪರಿಸರ ರಕ್ಷಣೆಗೆ ಪೂರಕವಾಗಿದ್ದು ಇವುಗಳಿಗೆ ಕೈಗಾರಿಕಾ ರಾಷ್ಟಗಳು ಉದಾರವಾಗಿ  ನೆರವು ನೀಡಬೇಕೆಂದು ಅಂತರಾಷ್ಟೀಯ ದೊಡ್ಡ ಅಣೆಕಟ್ಟುಗಳ ಸಮಿತಿ ಆಗ್ರಹಿಸಿತ್ತು.

20 ಮತ್ತು 21 ನೇ ಶತಮಾನದಲ್ಲಿ ಜಗತ್ತು ಎದುರಿಸುತ್ತಿವ ಅಪಾಯಕಾರಿ ಸ್ಥಿತಿಯೆಂದರೆ, ದಿನೇ ದಿನೇ ಏರುತ್ತಿರುವ ಜಾಗತಿಕ ತಾಪಮಾನ. ಇದು ಮನು ಕುಲಕ್ಕೆ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ನೂತನವಾಗಿ ಅವಿಷ್ಕಾರಗೊಳ್ಳುವ ಯಾವುದೇ ತಂತ್ರಜ್ಙಾನವಿರಲಿ, ಅದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಎಲ್ಲರ ನಿಲುವಾಗಿದೆ. ಈ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಙಾನಗಳಿಂದ ಕೂಡಿದ ಜಲವಿದ್ಯುತ್ ಘಟಕದಿಂದ ಯಾವುದೇ ಹಾನಿಯಾಗದಿದ್ದರೂ, ಜಲಾಶಗಳಲ್ಲಿ ಸಂಗ್ರಹವಾಗುತ್ತಿರುವ ನೀರಿನಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶ, ಅಲ್ಲಿನ ಗಿಡ ಮರಗಳು, ಪ್ರಾಣಿಗಳು ಇವುಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗುತ್ತಿರುವ ಮಿಥೇನ್ ಅನಿಲ ಮತ್ತು ಕಾರ್ಬನ್ ಡೈ ಆಕ್ಸೈಡ್ (ಇಂಗಾಲಾಮ್ಲ) ಇವುಗಳಿಂದ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದನ್ನು ಪರಿಸರ ವಿಜ್ಷಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಬ್ರೆಜಿಲ್‌ನ ರಾಷ್ಟೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಫಿಲಿಪ್ ಪೆರ್ನಸೈಡ್ ಎಂಬುವರು  ಆ ದೇಶದ ಎರಡು ಜಲಾಶಯಗಳಲ್ಲಿ ನಿರಂತರ ಇಪ್ಪತ್ತು ವರ್ಷ ಸಂಶೋಧನೆ ನಡೆಸಿ ವಿಷಯವನ್ನು ಧೃಡಪಡಿಸಿದ್ದಾರೆ.

ಜಲಾಶಯಗಳ ನೀರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಅನಿಲಗಳ ಪ್ರಮಾಣ ಪ್ರಾದೇಶಿಕ ಹಾಗೂ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದಿರುವ ಫಿಲಿಪ್, ಉಷ್ಣವಲಯದ ಆರಣ್ಯ ಪ್ರದೇಶದಲಿರುವ ಜಲಾಶಯಗಳು ಪರಿಸರಕ್ಕೆ ಹೆಚ್ಚು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾನ್ಯವಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಆಮ್ಲಜನಕ ಬಿಡುಗಡೆಗೊಂಡು ಮಿಥೇನ್ ಅನಿಲದಿಂದ ಉತ್ಪತ್ತಿಯಾಗವ ಕೊಳೆಯುವಿಕೆಯ ಬ್ಯಾಕ್ಟೀರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಆದರೆ, ಪ್ರವಾಹ ಸಂದರ್ಭದಲ್ಲಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದರಿಂದ, ಜೊತೆಗೆ ಹೂಳು, ಕಲ್ಮಶಗಳು ಶೇಖರವಾಗುವುದರಿಂದ ಈ ನಿಯಂತ್ರಣ ಏರು ಪೇರಾಗುತ್ತದೆ ಎಂದು ವಿಜ್ಙಾನಿಗಳು ವಿವರಿಸಿದ್ದಾರೆ

ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಹಸಿರು ಮನೆ ಅನಿಲಗಳೆಂದು ಕರೆಯುತ್ತಿರುವ ಇಂಗಾಲಾಮ್ಲ, ಮಿಥೇನ್, ಮತ್ತು ಕಾರ್ಬನ್ ಮೊನಾಕ್ಷೈಡ್ ಇವುಗಳ ಪರಿಣಮದ ಬಗ್ಗೆ ವಿಜ್ಙಾನಿಗಳಲ್ಲಿ ಗೊಂದಲವಿರುವುದು ನಿಜ. ಆದರೆ, ಪಿಲಿಪ್ ಪೆರ್ನಸೈಡ್ ಬ್ರೆಜಿಲ್ನ ಎರಡು ಅಣೆಕಟ್ಟುಗಳ ಅಧ್ಯಯನದಿಂದ, ಜಲಾಯಗಳು ಕಲ್ಲಿದ್ದಲು ವಿದ್ಯುತ್ ಘಟಕದ ಶೇ.50ರಷ್ಟು ಹಾಗೂ ಅನಿಲ ಆಧಾರಿತ ಘಟಕದ ಶೇ.26 ರಷ್ಡು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ನದಿಗೆ ಅಣೆಕಟ್ಟು ನಿರ್ಮಿಸುವ ಮುನ್ನ ಸ್ಥಳದ ಪರಿಶೀಲನೆ, ಅಣೆಕಟ್ಟಿನ ವಿನ್ಯಾಸ, ನದಿ ನೀರಿನ ಹರಿಯುವಿಕೆ ಪ್ರಮಾಣ, ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಭೂಮಿಯ ಲಕ್ಷಣ ಇವೆಲ್ಲವನ್ನು ಪರಿಗಣಿಸುವುದು ವಾಡಿಕೆ. ಇದಕ್ಕಿಂತ ಹೆಚ್ಚಾಗಿ ಪ್ರವಾಹದ ಸಂದರ್ಭದಲ್ಲಿ ನದಿಯ ನೀರಿನ ಜೊತೆ ಜಲಾಶಯ ಸೇರುವ ಹೂಳಿನ ಪ್ರಮಾಣ ಮತ್ತು ಅದನ್ನು ತೂಬುಗಳ (ಗೇಟ್) ಮೂಲಕ ಹೊರ ಹಾಕುವ ಬಗ್ಗೆ ಗಣನೆಗೆ ತೆಗೆದುಕೊಳ್ಳಲಾಗುವುದು. ಇತ್ತೀಚಿಗಿನ ದಿನಗಳಲ್ಲಿ ಅಣೆಕಟ್ಟು ನಿರ್ಮಣವೇ ಒಂದು ಅಂತರಾಷ್ಟೀಯ ದಂಧೆಯಾಗಿರುವಾಗ ಯಾವ ಅಂಶಗಳನ್ನು ಗಮನಿಸುವ ತಾಳ್ಮೆ ಯಾರಿಗೂ ಇಲ್ಲ.

ಕಳೆದ ಎರಡು ದಶಕದಿಂದ ಜಗತ್ತಿನ ನದಿಗಳು, ಅಣೆಕಟ್ಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ವಿಜ್ಙಾನಿಗಳು ವಾತಾವರಣದಲ್ಲಾಗುವ ಸಣ್ಣ ಬದಲಾವಣೆಗಳು ಅನೇಕ ಅವಘಡಗಳಿಗೆ ಕಾರಣವಾಗಬಲ್ಲವು ಎಂದು ಎಚ್ಚರಿಸಿದ್ದಾರೆ. ಆಲಾಶಯಗಳಲ್ಲಿ ಹೂಳಿನ ಪ್ರಮಾಣ ನಿರಿಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟಾಗಿದ್ದು ಈಗಾಗಲೇ ಅಂದಾಜಿಸಿದ್ದ ಜಲಾಶಯಗಳ ಆಯಸ್ಸು ಅರ್ಧದಷ್ಟು ಕಡಿಮೆಯಾಗಿದೆ ಎಂದು ಅವುಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 14

-ಡಾ. ಎನ್ ಜಗದೀಶ್ ಕೊಪ್ಪ

ಜಗತ್ತಿನಲ್ಲಿ ಮನುಷ್ಯ ನಿರ್ಮಿತ ವಸ್ತುಗಳಲ್ಲಿ ಅಣುಬಾಂಬ್ ಹೊರತುಪಡಿಸಿದರೆ, ಮನುಕುಲವನ್ನು ನಾಶಪಡಿಸುವ ಶಕ್ತಿ ಇರುವುದು ಅಣೆಕಟ್ಟುಗಳಿಗೆ ಮಾತ್ರ. ಇಂತಹ ಅರ್ಥಗರ್ಭಿತ ಮಾತನ್ನು ಆಡಿದವರು ಕವಿಯಲ್ಲ ಅಥವಾ ಜನಸಾಮಾನ್ಯ ಅಲ್ಲ. ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ವಿಶ್ವಬ್ಯಾಂಕ್ ನೇಮಿಸಿದ್ದ ಸಮಿತಿಯ ನಿರ್ದೇಶಕ ಹಾಗೂ ಪೆನಿಸೊಲಿಯಾದ ನೀರಾವರಿ ತಜ್ಞ ಜೋಸೆಫ್ ಎಲ್ಲಮ್. ಈ ತಜ್ಞನ ಮಾತುಗಳಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂಬುದು ಜಾಗತಿಕ ಮಟ್ಟದಲ್ಲಿ ಸಂಭವಿಸಿರುವ ಅಣೆಕಟ್ಟುಗಳ ಅನಾಹುತಗಳನ್ನು ಗಮನಿಸಿದಾಗ ನಮಗೆ ಮನದಟ್ಟಾಗುತ್ತದೆ.

ಕಮ್ಯೂನಿಸ್ಟ್ ಆಡಳಿತವಿರುವ ಚೀನಾದಲ್ಲಿ ಸಂಭವಿಸುವ ಯಾವುದೇ ದುರಂತಗಳು ಹೊರ ಜಗತ್ತಿಗೆ ತಿಳಿಯದಂತೆ ಅಲ್ಲಿನ ಸರಕಾರ ಕಟ್ಟೆಚ್ಚರ ವಹಿಸಿದೆ. 1975ರಲ್ಲಿ ಸಂಭವಿಸಿದ ಅಣೆಕಟ್ಟು ದುರಂತದಲ್ಲಿ 2 ಲಕ್ಷದ 30 ಸಾವಿರ ಮಂದಿ ಸಾವನ್ನಪ್ಪಿದ ಘಟನೆ ಹೊರಜಗತ್ತಿಗೆ ತಲುಪಲು 12 ವರ್ಷ ಬೇಕಾಯಿತು. ಅಮೆರಿಕಾ ಮೂಲದ ಮಾನವ ಹಕ್ಕುಗಳ ಸಂಸ್ಥೆಯೊಂದು 1987ರಲ್ಲಿ ಚೀನಾದ ಕೆಲವು ನಾಗರೀಕರ ಸಂಪರ್ಕ ಸಾಧಿಸಿ, ಈ ಸ್ಪೋಟಕ ಮಾಹಿತಿಯನ್ನು ಜಗತ್ತಿಗೆ ಬಹಿರಂಗಪಡಿಸಿತು.

ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಡೆದ ಈ ಭೀಕರ ದುರಂತ ಕುರಿತಂತೆ, ಅಮೆರಿಕಾದ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ 1995ರಲ್ಲಿ ಸವಿವರವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಆಧುನಿಕ ಯುಗದ ಮಾನವ ನೂತನ ತಾಂತ್ರಿಕತೆ, ಕುಶಲತೆ ಬುದ್ಧಿಮತ್ತೆ ಇವೆಲ್ಲವನ್ನು ಉಪಯೋಗಿಸಿಕೊಂಡು ಪ್ರಕೃತಿಯನ್ನು ಮಣಿಸಲು ಹೊರಟು, ಪ್ರಕೃತಿಯೆದುರು ಸೋತು ಸುಣ್ಣವಾದ ದುರಂತಗಾಥೆ ಚೀನಾದೇಶದ ಅಣೆಕಟ್ಟಿನ ಈ ಅವಘಡ.

ಯಾಂಗ್ವೇಜ್ ನದಿಯ ಕೆಳಭಾಗದಲ್ಲಿ ಹರಿಯುವ ಹುವಾಯ್ ನದಿಗೆ ಚೀನಾ ಸರಕಾರ, ಬಾರಿಕ್ವಿಯಾ ಮತ್ತು ಶಿಮಾಂಟಾನ್ ಎಂಬ ಅಣೆಕಟ್ಟುಗಳನ್ನು ವಿಶೇಷ ತಂತ್ರಜ್ಞಾನದಿಂದ ತಯಾರಿಸಿದ ಉಕ್ಕು ಮತ್ತು ಸಿಮೆಂಟ್ ಬಳಸಿ, 1950ರ ದಶಕದಲ್ಲೇ ನಿರ್ಮಿಸಿತು. ಇವುಗಳ ಆಯುಷ್ಯ ಕನಿಷ್ಠ 1 ಸಾವಿರ ವರ್ಷಗಳು ಎಂದು ಸರಕಾರ ಅಂದಾಜಿಸಿತ್ತು.

1975ರ ಆಗಸ್ಟ್ 7ರಿಂದ 9ರವರೆಗೆ ಮೂರು ದಿನಗಳ ಅವಧಿಯಲ್ಲಿ ನದಿಯ ಪ್ರವಾಹದ ಒತ್ತಡವನ್ನು ತಡೆಯಲಾರದೆ ಮೊದಲನೇ ಅಣೆಕಟ್ಟು ಬಾರಿಕ್ವಿಯಾ ಒಡೆದು ಹೋಯಿತು. ಇದರ ಪರಿಣಾಮ ಎರಡನೇ ಅಣೆಕಟ್ಟು ಶಿಮಾಂಟಾನ್ ಮೇಲೆ ಉಂಟಾಗಿ ಅದು ಕೊಚ್ಚಿಹೋಯಿತು. ಒಮ್ಮೆಲೇ ಗಂಟೆಗೆ 80 ಕಿ.ಮೀ. ವೇಗದಲ್ಲಿ ಹರಿದ 500 ದಶಲಕ್ಷ ಕ್ಯೂಬಿಕ್ ನೀರು, ಕೆಳಭಾಗದಲ್ಲಿ ನಿರ್ಮಿಸಿದ್ದ 62 ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ನಿರ್ನಾಮಗೊಳಿಸಿ, ನೂರಾರು ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಆಕ್ರಮಿಸಿ ಅಸಂಖ್ಯಾತ ಹಳ್ಳಿಗಳನ್ನು, ಪಟ್ಟಣಗಳನ್ನು ನೀರಿನಲ್ಲಿ ಮುಳುಗಿಸಿತು. ಈ ಅವಘಡದಲ್ಲಿ 20 ಲಕ್ಷ ನಾಗರೀಕರು ತಮ್ಮ ಆಸಿ – ಪಾಸ್ತಿ ಕಳೆದುಕೊಂಡು ನಿರಾಶ್ರಿತರಾದರು. ಇದರಲ್ಲಿ 85 ಸಾವಿರ ಮಂದಿ ನೀರಿನಲ್ಲಿ ಮುಳುಗಿ ಸತ್ತರೆ, 1 ಲಕ್ಷದ 45 ಸಾವಿರ ಮಂದಿ ಪ್ರವಾಹದಿಂದ ಹರಡಿದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾದರು. ಆದರೆ ಚೀನಾ ಸರಕಾರ ತನ್ನ ಅಧಿಕೃತ ದಾಖಲೆಗಳಲ್ಲಿ ಈ ಅಣೆಕಟ್ಟು ದುರಂತದಿಂದ ಮಡಿದವರ ಸಂಖ್ಯೆ ಕೇವಲ 13 ಸಾವಿರದ 500 ಮಂದಿ ಎಂದು ದಾಖಲಿಸಿತು.

ಜಾಗತಿಕ ಸಮೀಕ್ಷೆಯ ಪ್ರಕಾರ 1900 ರಿಂದ 1980ರವರೆಗೆ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ಅಣೆಕಟ್ಟುಗಳಲ್ಲಿ ಇಂತಹ ಅವಘಡಗಳು ಸಂಭವಿಸಿವೆ. ಚೀನಾ ದೇಶವೊಂದರಲ್ಲೇ ಸಣ್ಣ ಅಣೆಕಟ್ಟುಗಳು ಸೇರಿದಂತೆ 80 ಸಾವಿರ ಅಣೆಕಟ್ಟುಗಳಿದ್ದು, 1950ರಿಂದ ಇತ್ತೀಚಿನವರೆಗೆ 200ಕ್ಕೂ ಹೆಚ್ಚು ಅಣೆಕಟ್ಟುಗಳು ನಾಶವಾಗಿವೆ.

1987ರಲ್ಲಿ ಅಂತರಾಷ್ಟ್ರೀಯ ಅಣೆಕಟ್ಟುಗಳ ಪರಾಮರ್ಶೆ ಸಮಿತಿ, ಅಣೆಕಟ್ಟುಗಳ ಸುರಕ್ಷತೆ, ಅವುಗಳ ನಿರ್ಮಾಣ ಕುರಿತಂತೆ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ರಚಿಸಿದ್ದರೂ ಕೂಡ, ದುಬಾರಿ ವೆಚ್ಚದ ನೆಪವೊಡ್ಡಿ ಎಲ್ಲಾ ರಾಷ್ಟ್ರಗಳು, ಸರಕಾರಗಳು ಈ ಮಾರ್ಗದರ್ಶಿ ಸೂತ್ರವನ್ನು ಕಡೆಗಣಿಸಿವೆ.

ಬಹುತೇಕ ಅಣೆಕಟ್ಟುಗಳು ವಿಫಲವಾಗಿರುವುದು ಎರಡು ಪ್ರಮುಖ ಕಾರಣಗಳಿಂದ. ಶೇ.40 ರಷ್ಟು ಅಣೆಕಟ್ಟುಗಳು ಅನಾವಶ್ಯಕ ಎತ್ತರದಿಂದ ಒಡೆದಿದ್ದರೆ, ಶೆ. 30 ರಷ್ಟು ಅಣೆಕಟ್ಟುಗಳು ವಿಫಲವಾಗಿರುವುದು ಭದ್ರ ಹಾಗೂ ವಿಶಾಲವಾದ ತಳಹದಿಯ ಕೊರತೆಯ ಕಾರಣಕ್ಕಾಗಿ. ಇದರಿಂದಾಗಿಯೇ ಅಣೆಕಟ್ಟು ತಜ್ಞ ರಾಬರ್ಟ್ ಜಾನ್ಸನ್ ಯಾವುದೇ ಅಣೆಕಟ್ಟು ಅಥವಾ ಜಲಾಶಯ ನಿರ್ಮಿಸುವಾಗ ರಕ್ಷಣಾತ್ಮಕವಾದ ತಾಂತ್ರಿಕ ಜ್ಞಾನ ಬಳಸಬೇಕು ಎಂದು ಅಭಿಪ್ರಾಯಪಟ್ಟಿದ್ದಾನೆ. ಅಂದರೆ, ನದಿಯ ನೀರಿನ ರಭಸ, ನೀರಿನಲ್ಲಿ ಮಿಳಿತವಾಗುವ ಹೂಳಿನ ಪ್ರಮಾಣ, ಅಣೆಕಟ್ಟು ನಿರ್ಮಿಸಲು ಆಯ್ಕೆ ಮಾಡಿರುವ ಸ್ಥಳದ ಇತಿಹಾಸ, ಭೂಗರ್ಭ ದಾಖಲೆಗಳು, ಅವುಗಳ ಪದರ, ಆ ಪ್ರದೇಶದ ಭೂಕಂಪದ ಸಾಧ್ಯತೆಗಳು, ಜಲಾಶಯದಲ್ಲಿ ಶೇಖರವಾಗುವ ಒಟ್ಟು ನೀರಿನ ಪ್ರಮಾಣ, ಈ ತೂಕವನ್ನು ತಡೆದುಕೊಳ್ಳುವ ಭೂಮಿಯ ಶಕ್ತಿ  ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕೆಂಬುದೇ ರಾಬರ್ಟ್ ಜಾನ್ಸನ್‌ನ ಅಭಿಮತ.

ಈ ಕುರಿತಂತೆ ವಿಶ್ವಬ್ಯಾಂಕ್ ಕೂಡ ಅಣೆಕಟ್ಟುಗಳ ದುರಂತದ ಬಗ್ಗೆ ಪರಾಮರ್ಶೆ ನಡೆಸಿ, ಬಹುತೇಕ ರಾಷ್ಟ್ರಗಳು ಇಲ್ಲವೇ ಸರಕಾರಗಳು ನೀರಾವರಿ ಅಥವಾ ಜಲ ವಿದ್ಯುತ್ ಉತ್ಪಾದನೆಗೆ ಲಕ್ಷ್ಯ ವಹಿಸುತ್ತವೆಯೇ ಹೊರತು, ಹಣ ಖರ್ಚಾಗುವ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಕಾಮಗಾರಿ ಮತ್ತು ಅಣೆಕಟ್ಟಿನ ಸುರಕ್ಷತೆಯತ್ತ ಗಮನ ಹರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಮೆರಿಕಾದಂತಹ ಮುಂದುವರಿದ ರಾಷ್ಟ್ರದಲ್ಲಿ ನಿರ್ಮಿಸಿರುವ ಬೃಹತ್ ಅಣೆಕಟ್ಟುಗಳಿಂದಾಗಿ, ಆ ಪ್ರದೇಶದಲ್ಲಿ ಪದೇ-ಪದೇ ಭೂಕಂಪನವಾಗುತ್ತಿರುವುದನ್ನು ಭೂಗರ್ಭ ಶಾಸ್ತ್ರಜ್ಞರು ಇತ್ತೀಚೆಗೆ ಗುರುತಿಸಿದ್ದಾರೆ. ಇಂತಹದ್ದೇ ಸಮಸ್ಯೆಗಳನ್ನು ಆಸ್ಟ್ರೇಲಿಯಾ, ಕೆನಡಾ ರಾಷ್ಟ್ರಗಳು ಸಹ ಎದುರಿಸುತ್ತಿವೆ.

ಮುಂದುವರಿದ ರಾಷ್ಟ್ರಗಳಲ್ಲಿ ಖಾಸಗಿ ಅಣೆಕಟ್ಟುಗಳು ನಿರ್ಮಾಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಸರಕಾರಗಳೇ ಪೂರ್ಣಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿವೆ. ಆದರೆ ರಷ್ಯಾ, ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಪ್ರಾನ್ಸ್, ಇಂಗ್ಲೆಂಡ್, ಜರ್ಮನಿಯಂತಹ ರಾಷ್ಟ್ರಗಳಲ್ಲಿ ಜಲವಿದ್ಯುತ್ ಉತ್ಪಾದನೆಗೆ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಿರುವ ಕಾರಣ, ಸರಕಾರ ನಿರ್ಮಿಸಿರುವ ಅಣೆಕಟ್ಟುಗಳಿಗಿಂತ ಖಾಸಗಿ ಅಣೆಕಟ್ಟುಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಹೀಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿ.ವಿ. ತಯಾರಿಸಿರುವ ಮುನ್ನೆಚ್ಚರಿಕೆ ಕ್ರಮದ ಮಾರ್ಗದರ್ಶನವನ್ನು ಈ ಎಲ್ಲಾ ರಾಷ್ಟ್ರಗಳು ಕಟ್ಟುನಿಟ್ಟಾಗಿ ಜಾರಿಗೆ ತಂದಿವೆ. ಅಂದರೆ ಅಪಾಯಕಾರಿ ಅಂಶಗಳನ್ನು ಗುರುತಿಸುವುದು (ಭೂಕಂಪನ ಇತ್ಯಾದಿ), ಅಣೆಕಟ್ಟಿನ ಗೋಡೆಗಳ ಬಿರುಕುಗಳ ಬಗ್ಗೆ ಪ್ರವಾಹ ಸಂದರ್ಭದಲ್ಲಿ ತೀವ್ರ ನಿಗಾ ವಹಿಸುವುದು, ಜೊತೆಗೆ ಪ್ರತಿ ವರ್ಷ ಶೇಖರವಾಗುವ ಹೂಳಿನ ಪ್ರಮಾಣವನ್ನು ಅಂದಾಜಿಸುವುದು. ಇವೆಲ್ಲಕ್ಕಿಂತ ಹೆಚ್ಚಾಗಿ 50 ವರ್ಷಕ್ಕಿಂತ ಹೆಚ್ಚು ಹಳೆಯದಾದ ಅಣೆಕಟ್ಟುಗಳನ್ನು ಒಡೆದು ಹೂಳು ಹಾಗು ನದಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಮುಂದುವರಿದ ರಾಷ್ಟ್ರಗಳು ಜಾಗರೂಕವಾಗಿವೆ.

ಆದರೆ ಸರಕಾರಿ ಸ್ವಾಮ್ಯದಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ದುರಂತ ಸರಮಾಲೆ ಹಾಗೆ ಮುಂದುವರಿದಿದೆ. ಏಕೆಂದರೆ ಇಲ್ಲಿ ಹಣ ಮತ್ತು ಅಧಿಕಾರ ಮುಖ್ಯವಾಗಿದೆಯೇ ಹೊರತು ಮಾನವ ಜೀವಗಳಲ್ಲ. ಇದಕ್ಕೆ ಸಾಕ್ಷಿಯಾಗಿ ನಮ್ಮ ನೆರೆಯ ಪಾಕಿಸ್ತಾನದಲ್ಲಿ ನಡೆದ ಟರ್ಬೆಲಾ ಅಣೆಕಟ್ಟಿನ ದುರಂತ ನಮ್ಮ ಮುಂದಿದೆ.

1975ರಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಪಾಕಿಸ್ತಾನ ನಿರ್ಮಿಸಿದ ಟರ್ಬೆಲಾ ಅಣೆಕಟ್ಟು ಪ್ರವಾಹದ ಒತ್ತಡ ತಡೆಯಲಾರದೆ 1979ರಲ್ಲಿ ಹಲವೆಡೆ ಬಿರುಕು ಬಿಟ್ಟಾಗ, ಮತ್ತೆ ಅಣೆಕಟ್ಟು ವಿನ್ಯಾಸ ಬದಲಿಸಿ ದುರಸ್ತಿ ಮಾಡಲಾಯಿತು. ಇದರ ಪರಿಣಾಮ 1968ರಲ್ಲಿ ಅಂದಾಜಿಸಿದ್ದ 800 ಮಿಲಿಯನ್ ಡಾಲರ್ ಹಣದ ವೆಚ್ಚ 1986ರ ವೇಳೆಗೆ ಶತಕೋಟಿ ಡಾಲರ್‌ಗೆ ಏರಿ ಪಾಕಿಸ್ತಾನ ಸರಕಾರವನ್ನು ಸಾಲದ ಸುಳಿಗೆ ಸಿಲುಕಿಸಿತು. ಇಷ್ಟಾದರೂ ಜಲಾಶಯದಲ್ಲಿ ಶೇಖರವಾದ ನೀರಿನ ಒತ್ತಡಕ್ಕೆ ಭೂಗರ್ಭದ ಶಿಲೆಗಳ ಪದರುಗಳಲ್ಲಿ ಚಲನೆಯುಂಟಾಗಿ ಹಲವೆಡೆ ಭಾರಿ ಭೂಕಂಪ ಸೃಷ್ಟಿಯಾದ್ದರಿಂದ ನೀರಿನ ಸೋರಿಕೆಯಾಗಿ ಅಣೆಕಟ್ಟು ವಿಫಲವಾಯಿತು.

ಇಂತಹ ಘಟನೆ ಕೊಲರಾಡೊ ನದಿಗೆ ಕಟ್ಟಿದ ಗ್ಲೇನ್ ಕ್ಯಾನಲ್ ಅಣೆಕಟ್ಟಿನಲ್ಲೂ ಸಂಭವಿಸಿತು. ಅಣೆಕಟ್ಟು ನಿರ್ಮಿತ ಸ್ಥಳ ಸಮುದ್ರತೀರದಿಂದ ಎಷ್ಟು ಮೀಟರ್ ಎತ್ತರದಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಇಂಜಿನಿಯರ್‌ಗಳು ವಿಫಲರಾದದ್ದೇ ಈ ಅಣೆಕಟ್ಟು ಬಿರುಕು ಬಿಡಲು ಕಾರಣವಾಯ್ತು.

ಈ ಎಲ್ಲಾ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಬಹುತೇಕ ಮುಂದುವರಿದ ರಾಷ್ಟ್ರಗಳ ಸರಕಾರಗಳು, ಖಾಸಗಿ ಅಣೆಕಟ್ಟುಗಳ ಅವಧಿ ಮತ್ತು ನಿರ್ಧರಿಸಿದ್ದ ಅವುಗಳ ಆಯಸ್ಸು ಮುಗಿದ ನಂತರ ಕಾರ್ಯಾಚರಣೆ ವಿಸ್ತರಣೆಗೆ ಅನುಮತಿ ನಿರಾಕರಿಸಿವೆ. ಇದರ ಹಿಂದೆ ಪರಿಸರವಾದಿಗಳ ಹೋರಾಟ ಮತ್ತು ನಿರಂತರವಾಗಿ ಸಂಭವಿಸುತ್ತಿರುವ ಅವಘಡಗಳೂ ಸಹ ಪರೋಕ್ಷವಾಗಿ ಕಾರಣವಾಗಿವೆ.

ಈಗಾಗಲೇ ಅಮೆರಿಕಾ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ 4 ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಅವುಗಳ ಆಯಸ್ಸು ಮುಗಿದ ನಂತರ ಒಡೆದುಹಾಕಿರುವುದರಿಂದ ಸಾಲ್ಮನ್ ಜಾತಿಯ ಮೀನುಗಳು ಸಮುದ್ರದ ಉಪ್ಪು ನೀರಿನಿಂದ ಹೊರಬಂದು, ಸಿಹಿ ನೀರಿನ ನದಿಗಳಲ್ಲಿ ಸಾವಿರಾರು ಕಿಲೋಮೀಟರ್ ಚಲಿಸಿ ತಮ್ಮ ಸಂತಾನಾಭಿವೃದ್ಧಿಗೆ ತೊಡಗಿವೆ. ಇದರಿಂದಾಗಿ ಮೀನುಗಾರಿಕೆಯನ್ನೇ ನಂಬಿ ಬದುಕಿದ್ದ ನದಿತೀರದ ಅರಣ್ಯವಾಸಿಗಳ ಜೀವನದಲ್ಲಿ ಮತ್ತೆ ಆಶಾಕಿರಣ ಮೂಡಿದೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಅರಣ್ಯ ಪ್ರದೇಶದಲ್ಲಿ ಮತ್ತೆ ಗಿಡ ಮರಗಳು ತಲೆಎತ್ತಿದ್ದು, ಹಕ್ಕಿಗಳ ಕಲರವ, ಪ್ರಾಣಿಗಳ ಚಲನವಲನ ಪ್ರಕೃತಿ ಪ್ರಿಯರಲ್ಲಿ ಹರ್ಷವನ್ನುಂಟುಮಾಡಿದೆ.

(ಮುಂದುವರಿಯುವುದು)

(ಚಿತ್ರಕೃಪೆ: ವಿಕಿಪೀಡಿಯ)

ಜೀವನದಿಗಳ ಸಾವಿನ ಕಥನ – 13

– ಜಗದೀಶ್ ಕೊಪ್ಪ

ಹರಿಯುವ ಎಲ್ಲಾ ನದಿಗಳೂ ಸ್ವಚ್ಛವಾದ ತಿಳಿನೀರನ್ನು ಒಳಗೊಂಡಿರುವುದಿಲ್ಲ. ಜಗತ್ತಿನ ಎಲ್ಲಾ ನದಿಗಳೂ ನೀರಿನ ಜೊತೆ ಹೂಳನ್ನು ಹೊತ್ತು ಹರಿಯುವುದು ಸಹಜ. ಅದರಲ್ಲೂ ಬಹುತೇಕ ನದಿಗಳ ನೀರು ಕಲ್ಮಶ ಹಾಗೂ ಮಣ್ಣಿನಿಂದ ಕೂಡಿದ್ದು, ಇವುಗಳಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳು ನೀರು ಸಂಗ್ರಹದ ಜಲಾಶಯಗಳಾಗುವ ಬದಲು ಹೂಳು ಸಂಗ್ರಹ ಗುಂಡಿಗಳಾಗಿವೆ. ಹಾಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗುವ ಹೂಳು ಎಲ್ಲಾ ಸರಕಾರಗಳಿಗೆ, ತಂತ್ರಜ್ಞರಿಗೆ ಇಂದಿಗೂ ದೊಡ್ಡ ಸವಾಲಾಗಿದೆ.

ಅಮೆರಿಕಾದ ಜಾರ್ಜ್  ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಖಲೀದ್ ಮಹಮದ್ ಅವರ ಪ್ರಕಾರ, ಪ್ರತಿ ವರ್ಷ ಐವತ್ತು ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದೆ. 1990 ರಲ್ಲೇ ಜಗತ್ತಿನಾದ್ಯಂತ 1,300 ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಲಾಶಯಗಳಲ್ಲಿ ತುಂಬಿಹೋಗಿತ್ತು. ಇದೀಗ ಎರಡು ದಶಕಗಳ ನಂತರ ದುಪ್ಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಬಹಳಷ್ಟು ಜಲಾಶಯಗಳ ಆಯುಷ್ಯ ಅವುಗಳ ಗಾತ್ರ, ನೀರು ಶೇಖರಿಸುವ ಸಾಮಥ್ರ್ಯಗಳಿಂದ ನಿರ್ಧಾರವಾಗುತ್ತದೆ. ಸಣ್ಣ ಜಲಾಶಯಗಳು ಎರಡು ಮೂರು ದಶಕಗಳಲ್ಲೇ ಹೂಳಿನಿಂದ ತುಂಬಿಹೋಗಿರುವ ಉದಾಹರಣೆಗಳು ಹಲವಾರಿವೆ.

ಚೀನಾದ ಹಳದಿ ನದಿ

ಸಾಮಾನ್ಯವಾಗಿ ಹರಿಯುವ ನದಿಗಳ ನೀರಿನಲ್ಲಿರುವ ಹೂಳಿನ ಪ್ರಮಾಣ ಶೇ.0.2ರಿಂದ 0.5ರವರೆಗೆ ಇದ್ದು, ಚೀನಾದ ನದಿಗಳಲ್ಲಿ ಮಾತ್ರ ಈ ಪ್ರಮಾಣ 2.3ರಷ್ಟಿದೆ. ಜಲಾಶಯದ ಹೂಳು ಮತ್ತು ನದಿನೀರಿನ ಕಲ್ಮಶ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿದೆ. ಬಹುತೇಕ ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸುವ ಕೊಳವೆಗಳು, ಟರ್ಬನ್ ಇಂಜಿನ್ ಬ್ಲೇಡುಗಳು ಕೆಸರಿನಿಂದ ಕಲ್ಮಶವಾದ ನೀರಿನಿಂದಾಗಿ ತುಕ್ಕು ಹಿಡಿಯುತ್ತಿದ್ದು, ಇವುಗಳ ದುರಸ್ತಿ ವೆಚ್ಚ ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.

ಜಗತ್ತಿನ ಅತ್ಯಂತ ಕಲ್ಮಷಯುಕ್ತ ನದಿಯೆಂದೇ ಪರಿಗಣಿಸಿರುವ ಚೀನಾದ ಹಳದಿ ನದಿ ಉತ್ತರ ಚೀನಾದಿಂದ ಹರಿದು ಬರುವಾಗ ನೀರಿಗಿಂತ ಹೆಚ್ಚಾಗಿ ಕೆಸರನ್ನೇ ತನ್ನೊಡಲೊಳಗೆ ಸಾಗಿಸುತ್ತದೆ. ಇದರ ಪ್ರಮಾಣ ಗತ್ತಿನ ಇತರೆ ನದಿಗಳಿಗಿಂತ ಶೇ.9ರಷ್ಟು ಹೆಚ್ಚಾಗಿದೆ. 1957ರಲ್ಲಿ ಅಂದಿನ ಸೋವಿಯತ್ ಸರಕಾರದ ತಾಂತ್ರಿಕ ನೆರವಿನಿಂದ ಹಳದಿನದಿಯ ಕೆಳ ಪಾತ್ರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಮೂರು ಗೇಟಿನ ಜಾರ್ಜ್  ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪರಿಸರ ತಜ್ಞರು, ಅತಿ ಶೀಘ್ರದಲ್ಲೇ ಹೂಳು ತುಂಬುವ ಸಂಭವ ಇದೆ ಎಂದು ಎಚ್ಚರಿಸಿದರೂ, ಸರಕಾರ ಇವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 1960ರಲ್ಲಿ ಅಣೆಕಟ್ಟು ಮುಕ್ತಾಯಗೊಂಡು, 1962ರ ವೇಳೆಗೆ 50 ಮಿಲಿಯನ್ ಟನ್ ಹೂಳು ಶೇಖರವಾಗಿತ್ತು. ಹೂಳು ತುಂಬಿದ ಕಾರಣ ಜಲಾಶಯದ ಹಿನ್ನೀರಿನ ವಿಸ್ತೀರ್ಣವೂ ಹೆಚ್ಚಾಯಿತು. ಆಗ ಎಚ್ಚೆತ್ತುಗೊಂಡ ಚೀನಾ ಸರಕಾರ 1962ರಿಂದ 1973ರವರೆಗೆ ಸತತವಾಗಿ, ಅಣೆಕಟ್ಟಿನ ವಿನ್ಯಾಸವನ್ನು ಬದಲಿಸಿ, ಶೇಖರವಾಗುವ ಹೂಳು ಪ್ರವಾಹ ಸಂದರ್ಭದಲ್ಲಿ ಹೊರಹೋಗುವಂತೆ ಕಾಮಗಾರಿಯನ್ನು ಮಾಡಿತು. ಪ್ರವಾಹ ನಿಯಂತ್ರಣದ ಜೊತೆಗೆ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ ಹೂಳಿನ ಪರಿಣಾಮದಿಂದ ಕೇವಲ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಯಿತು.

ಇಂತಹದ್ದೇ ಘಟನೆ ಚೀನಾದ ಯಂಗೊಕ್ಷಿಯಾ ಎಂಬ ನದಿಗೆ 57 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸುವಾಗ  ಮತ್ತೆ ಮರುಕಳಿಸಿತು. 1967ರಲ್ಲಿ ನಿರ್ಮಿಸಲಾಗದ ಈ ಜಲಾಶಯ ಹೂಳಿನಿಂದ ತುಂಬಿಹೋಗಿ, ನೀರಿನ ಶೇಖರಣೆಗಿಂತ ಹೂಳಿನ ಶೇಖರಣೆಯೇ ಈ ಜಲಾಶಯದ ಗುರಿಯೇನೊ ಎಂಬಂತಾಗಿದೆ. ಹೂಳು ಮಿಶ್ರಿತ ನೀರು ಹರಿಯುವ ನದಿಗಳ ಸಂಗತಿ ಹೊಸದೇನಲ್ಲ. ಆದರೆ ನಮ್ಮ ಅಣೆಕಟ್ಟು ತಜ್ಞರು, ಜಗತ್ತಿನ ಎಲ್ಲಾ ನದಿಗಳೂ ಸ್ವಚ್ಛ ತಿಳಿನೀರಿನ ನದಿಗಳೆಂದೇ ಭಾವಿಸಿ ಅಣೆಕಟ್ಟು ನಿರ್ಮಾಣಕ್ಕೆ  ಮುಂದಾಗಿರುವುದೇ ಅಣೆಕಟ್ಟುಗಳ ದುರಂತಕ್ಕೆ ಕಾರಣವಾಗಿದೆ.

ಆಯಾ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣ, ಸವಕಲು ಮಣ್ಣಿನ ನದಿಯ ಇಕ್ಕೆಲಗಳು ನದಿಗಳು ಹೂಳು ತುಂಬಿ ಹರಿಯಲು ಕಾರಣವಾಗಿವೆ. ಹಾಗಾಗಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮುನ್ನ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಅವಶ್ಯಕ. ಜೊತೆಗೆ ಈಗಾಗಲೇ ನಿಮರ್ಿಸಿರುವ ಅಣೆಕಟ್ಟಿನಲ್ಲಿ ಶೇಖರವಾಗಿರುವ ಹೂಳಿನ ಪ್ರಮಾಣವದ ಪರಿಶೀಲಿನೆ ಅಗತ್ಯ. ಕೆಲವು ನದಿಗಳು ಮಳೆಗಾಲದ ಪ್ರವಾಹದಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ಹೂಳು ತುಂಬಿದ ನೀರಿನೊಡನೆ ಹರಿದರೆ, ಹಲವು ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹೂಳಿನಿಂದ ಕೂಡಿದ ನೀರಿನಿಂದಲೇ ಹರಿಯುತ್ತವೆ.

ನದಿಗಳು ಹೂಳು ತುಂಬಿದ ನೀರಿನೊಡನೆ ಹರಿಯಲು ಕಾರಣವೆಂದರೆ, ಅಗ್ನಿಜ್ವಾಲೆ ಮತ್ತು ಪರ್ವತದ ತಪ್ಪಲಿನಲ್ಲಿ ಭೂಕಂಪನದಿಂದಾಗಿ ಉಂಟಾಗುವ ಮಣ್ಣಿನ ಕುಸಿತ. ಅಮೆರಿಕಾ, ಏಷ್ಯಾದ ಭಾರತ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ ನದಿಗಳು ಹೂಳು ತುಂಬಿ ಹರಿದರೆ, ಚೀನಾದ ಬಹುತೇಕ ನದಿಗಳು ವರ್ಷದ ಎಲ್ಲಾ ಋತುಗಳಲ್ಲೂ ಹೂಳಿನೊಡನೆ ಹರಿಯುತ್ತವೆ. ಇಂತಹ ಯಾವುದೇ ಅಂಕಿ ಅಂಶಗಳನ್ನು ಪರಿಗಣಿಸದೇ ಜಗತ್ತಿನ ಶೇ.80ಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗಿವೆ, ಆಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, 1981ರಲ್ಲಿ ನೇಪಾಳದಲ್ಲಿ ನಿರ್ಮಾಣ ವಾದ ಕುಲೇಖಾನಿ ಎಂಬ ಅಣೆಕಟ್ಟು. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಲು ಕನಿಷ್ಠ 75ರಿಂದ 100 ವರ್ಷಗಳು ಬೇಕಾಗಬಹುದೆಂದು ಅಣೆಕಟ್ಟು ತಜ್ಞರು ಊಹಿಸಿದ್ದರು. ಆದರೆ 1993ರಲ್ಲಿ ಅಣೆಕಟ್ಟಿನ ಮೇಲ್ಭಾಗದ ನದಿ ಪಾತ್ರದಲ್ಲಿ ಉಂಟಾದ ಭೂ ಕುಸಿತದಿಂದ ಕೇವಲ 30 ಗಂಟೆಗಳ ಅವಧಿಯಲ್ಲಿ ಜಲಾಶಯದ ಸಾಮರ್ಥ್ಯದ 10ನೇ ಒಂದು ಭಾಗದಷ್ಟು ಹೂಳು ತುಂಬಿತು. ಆ ನಂತರ 19 ವರ್ಷಗಳ ಅವಧಿಯಲ್ಲಿ ಅಂದರೆ 2000 ಇಸವಿಗೆ 114 ಅಡಿ ಎತ್ತರದ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಿ, ಯಾವ ಪ್ರಯೋಜನಕ್ಕೂ ಬಾರದಾಯಿತು.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದ  ಅಣೆಕಟ್ಟು ಯೋಜನೆಯಿಂದ ನೇಪಾಳ ಸರಕಾರ ವಿಶ್ವಬ್ಯಾಂಕ್ ಸಾಲದ ಸುಳಿಗೆ ಸಿಲುಕುವಂತಾಯಿತು. ಇದೇ ರೀತಿ ಜಗತ್ತಿನಾದ್ಯಂತ ವಿಶ್ವಬ್ಯಾಂಕ್ ಹಾಗೂ ಅಮೆರಿಕಾದ ಇಂಟರ್ ಅಮೇರಿಕನ್ ಬ್ಯಾಂಕಿನಿಂದ ಸಾಲಪಡೆದ ದಕ್ಷಿಣ ಅಮೆರಿಕಾದ ರಾಷ್ಟ್ರಗಳು, ಗ್ವಾಟೆಮಾಲಾ, ಹಂಡುರಾಸ್, ಕಾಸ್ಪರಿಕಾ ಮುಂತಾದ ದೇಶಗಳಲ್ಲಿ ನಿರ್ಮಾಣವಾಗಿರುವ ಅಣೆಕಟ್ಟುಗಳು ನಿಷ್ಪ್ರಯೋಜಕವಾಗಿವೆ. 1993ರಲ್ಲಿ ಅಮೆರಿಕಾದ ಆರ್ಮ್  ಕಾರ್ಪ್ಸ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಯಿಂದ ಎಲ್ಸೆಲ್ಫಡಾರ್ನಲ್ಲಿ 135 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣವಾದ   ಸೆರ್ರೆನ್ ಗ್ಯ್ರಾಂಡ್ ಎಂಬ ಅಣೆಕಟ್ಟು ಕೇವಲ 30 ವರ್ಷಗಳಲ್ಲಿ ಹೂಳು ತುಂಬಿ ಕೆಲಸಕ್ಕೆ ಬಾರದಂತಾಯಿತು. ಈ ಜಲಾಶಯದಲ್ಲಿ ಹೂಳು ತುಂಬಲು 350 ವರ್ಷಗಳು ಬೇಕು ಎಂದು ಅಮೆರಿಕ ಸಂಸ್ಥೆ ಯೋಜನಾ ವರದಿಯಲ್ಲಿ ತಿಳಿಸಿತ್ತು. ಭಾರತದ ಪರಿಸ್ಥಿತಿ ಕೂಡ ಮೇಲಿನ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ.

ಭಾರದ 11 ಜಲಾಶಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ಶೇಖರವಾಗುತ್ತಿದೆ. ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟು ಜಲಾಶಯದಿಂದ ಹಿಡಿದು ದಕ್ಷಿಣದ ಆಂಧ್ರದ ನಿಜಾಂಸಾಗಸ್ ಜಲಾಶಯದವರೆಗೆ ಶೇ.135ರಿಂದ ಶೇ.1650 ಪಟ್ಟು ವೇಗದಲ್ಲಿ ಹೂಳು ಶೇಖರವಾಗುತ್ತಿದೆ. ಕೇವಲ ಅಣೆಕಟ್ಟು ನಿಮರ್ಾಣವನ್ನೇ ತಮ್ಮ ಲಾಭದಾಯಕ ದಂಧೆಯನ್ನಾಗಿ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅಣೆಕಟ್ಟುಗಳ ದುರಂತದ ಬಗ್ಗೆಯಾಗಲಿ, ಭವಿಷ್ಯದ ಬಗ್ಗೆಯಾಗಲಿ ಉತ್ತರದಾಯಕತ್ವ ಇಲ್ಲದಿರುವುದು ಕೂಡ ಗಮನಾರ್ಹ ಸಂಗತಿ. ಯಾವುದೇ ನದಿಗೆ ಅಣೆಕಟ್ಟು ನಿಮರ್ಿಸುವ ಮುನ್ನ ನದಿಯ ನೀರಿನ ಹರಿವಿನ ಪ್ರಮಾಣವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅಣೆಕಟ್ಟು ನಿರ್ಮಾಣವಾಗುವ ಸ್ಥಳದ ಮೇಲ್ಭಾಗದ ನದಿಯ ಪಾತ್ರ ಹಾಗೂ ಇಕ್ಕೆಗಳ ಭೂಮಿ, ಅಲ್ಲಿನ ಮಣ್ಣಿನ ಗುಣ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಮಣ್ಣು ಮರಳು ಮಿಶ್ರಿತವಾಗಿದ್ದು ಸವಕಳು ಗುಣ ಹೊಂದಿದ್ದರೆ ನದಿಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದರ ಜೊತೆಗೆ ಅಲ್ಲಲ್ಲಿ ಸಣ್ಣ-ಸಣ್ಣ ಬ್ಯಾರೇಜ್ಗಳನ್ನು ನಿರ್ಮಿಸಿ, ನೀರಿನಲ್ಲಿ ಹರಿಯುವ ಹೂಳನ್ನು ತಡೆಯುವ ಯೋಜನೆಗಳನ್ನು ರೂಪಿಸಬೇಕು.

ಆದರೆ ನದಿಗಳ ಸಹಜ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದೊಂದನ್ನೇ ಗುರಿಯಾಗಿರಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸಾಲ ನೀಡುವ ಏಜನ್ಸಿಗಳಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ. ಏಕೆಂದರೆ ಭವಿಷ್ಯದಲ್ಲಿ ಜಲಾಶಯ ಹೂಳಿನಿಂದ ತುಂಬಿದರೆ ಈ ಸಂಸ್ಥೆಗಳಿಗೆ ಲಾಭ. ಹೂಳು ತೆಗೆಯುವ ಕಾಮಗಾರಿಯನ್ನೂ ಇವರೇ ಪಡೆಯಬಹುದು. ಸಾಮಾನ್ಯವಾಗಿ ಜಲಾಶಯಗಳಲ್ಲಿ ಶೇಖರವಾಗುವ ನೀರಿನ ಪ್ರಮಾಣವನ್ನು ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಜೀವ ಶೇಖರಣೆ(Live storege) ಇನ್ನೊಂದು ನಿರ್ಜೀವ  ಶೇಖರಣೆ(Dead storage) ಅಂದರೆ ಮೊದಲ ಹಂತದಲ್ಲಿ ಶೇಖರವಾಗುವ ನೀರನ್ನು ನೀರಾವರಿ ಇಲ್ಲವೆ ಜಲವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಎರಡನೇ ಹಂತದಲ್ಲಿ ಶೇಖರವಾಗುವ ನೀರು, ಅಣೆಕಟ್ಟಿನ ತೂಬು ಅಥವಾ ನೀರು ಹೊರ ಹೋಗುವ ಗೇಟ್ಗಳ ಕೆಳಹಂತದ ಮಟ್ಟದಲ್ಲಿ ಶೇಖರವಾಗುವ ನೀರು. ಇದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಶೇಖರಣೆಯಾಗಿರುತ್ತದೆ. ಬಹುತೇಕ ಎಲ್ಲಾ ಹಂತಗಳಲ್ಲಿ ಹೂಳು ಈ ನಿಜರ್ೀವ ಶೇಖರಣೆ ಎನ್ನುವ ಜಲಾಶಯದ ತಳಮಟ್ಟದಲ್ಲಿ ಸಂಗ್ರಹವಾಗುವುದರಿಂದ, ಪ್ರವಾಹದಂತಹ ಸಂದರ್ಭದಲ್ಲೂ ಗೇಟ್ ಮೂಲಕ ಹರಿಸುವ ನೀರಿನ ಜೊತೆ ಹೂಳು ಹೊರಹೋಗುವುದಿಲ್ಲ. ನದಿಯ ಕೆಳ ಪಾತ್ರದ ಭೂಮಿಯ ವಿನ್ಯಾಸ ಕೂಡ ಈ ಸಂದರ್ಭದಲ್ಲಿ ಮುಖ್ಯ. ತೀರ ಇಳಿಜಾರಾಗಿದ್ದರೆ, ಜಲಾಶಯದ ಹೂಳು ನೀರಿನ ಜೊತೆ ಹರಿದು ಹೋಗಲು ಸಾಧ್ಯ. ಭೂಮಿ ಸಮತಟ್ಟಾಗಿದ್ದರೆ ಹೂಳು ಹರಿಯುವ ಸಾಧ್ಯತೆ ಬಹಳ ಕಡಿಮೆ.

ಇಂತಹ ಸ್ಥಿತಿಯಲ್ಲಿ  ಹೂಳೂ ತೆಗೆಯುವ ಯಂತ್ರಗಳ ಸಹಾಯದಿಂದ ತೆಗೆಸಬೇಕಾಗುತ್ತದೆ. ನೀರು ಮಿಶ್ರಿತ ಹೂಳನ್ನು ದೊಡ್ಡ ಮಟ್ಟದ ಪಂಪ್ಗಳಿಂದ ಪೈಪ್ ಮೂಲಕ ಹೊರಕ್ಕೆ ಸಾಗಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಕೆಲಸ. ನಮ್ಮನ್ನಾಳುವ ಸರಕಾರಗಳು ಯಾವುದೇ ಒಂದು ಯೋಜನೆ ಆರಂಭಿಸುವ ಮುನ್ನ ಅದರ ಆಳ – ಅಗಲ, ಸಿಗಬಹುದಾದ ಪ್ರತಿಫಲ ಅಥವಾ ಆಗಬಹುದಾದ ನಷ್ಟ ಇವೆಲ್ಲವನ್ನೂ ಎಲ್ಲಾ ಕೋನಗಳಿಂದ ಗ್ರಹಿಸಿ ವಿಶ್ಲೇಷಿಸಬೇಕು. ಜೊತೆಗೆ ನೈಸಗರ್ಿಕವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಉಂಟಾಗುವ ಪರಿಣಾಮಗಳನ್ನೂ ಗ್ರಹಿಸಬೇಕು. ಇವುಗಳ ವಿವೇಚನೆ ಇಲ್ಲದೆ ಜಾಗತಿಕವಾಗಿ ಕೈಗೊಳ್ಳುವ ಅನೇಕ ಬೃಹತ್ ಯೋಜನೆಗಳು ಅಭಿವೃದ್ಧಿ ಹೆಸರಿನ ಅವಘಡಗಳಾಗುತ್ತವೆ ಅಷ್ಟೆ.

( ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ -12

– ಜಗದೀಶ್ ಕೊಪ್ಪ

ಅಣೆಕಟ್ಟುಗಳ ನಿರ್ಮಾಣದ ವಿಷಯದಲ್ಲಿ, ಜಗತ್ತಿನ ಬಹುತೇಕ ಸರಕಾರಗಳು, ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ವಾಸ್ತವಿಕ ಅಂಕಿ ಅಂಶಗಳನ್ನು ಮರೆಮಾಚುತ್ತಿರುವುದು ಕೂಡ ಹಲವಾರು ಅನಾಹುತಗಳಿಗೆ ಕಾರಣವಾಗಿದೆ. ವಾಸ್ತವವಾಗಿ ಕಾಮಗಾರಿ ವೆಚ್ಚ, ನಿರ್ಮಾಣದ ಅವಧಿ, ವಾಸ್ತವವಾಗಿ ಸಂಗ್ರಹವಾಗುವ ನೀರಿನ ಪ್ರಮಾಣ, ಕಾಮಗಾರಿ ಸ್ಥಳದ ಭೂಮಿಯ ಲಭ್ಯತೆ ಹಾಗೂ ಕಾಮಗಾರಿಗೆ ಈ ಭೂಮಿ ಸೂಕ್ತವೆ ಎಂಬ ಅಂಶ ಇವೆಲ್ಲವುಗಳಲ್ಲಿ ಸತ್ಯಕ್ಕಿಂತ ಸುಳ್ಳಿನ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಜಗತ್ತಿನ ಯಾವೊಂದು ಅಣೆಕಟ್ಟು ತನ್ನ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಇತಿಹಾಸವಿಲ್ಲ. ಅಷ್ಟೇ ಏಕೆ ಪೂರ್ವ ನಿಗತ ವೆಚ್ಚದೊಳಗೆ ಮುಗಿದ ಉದಾಹರಣೆಗಳಿಲ್ಲ. ಅಣೆಕಟ್ಟು ನಿರ್ಮಾಣಕ್ಕಿಂತ  ಮಿಗಿಲಾಗಿ, ಅಣೆಕಟ್ಟು ಸ್ಥಳ ಹಾಗೂ ಹಿನ್ನೀರಿನಲ್ಲಿ ಮುಳುಗುವ ಪ್ರದೇಶಗಳಿಂದ ಸಂತ್ರಸ್ತರಾಗುವ ಜನತೆಯ ಬಗ್ಗೆ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಾ ಬಂದಿರುವುದು, ಜಾಗತಿಕವಾಗಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈಗಾಗಲೇ ಆಯಾ ದೇಶಗಳಲ್ಲಿ ತಾಂಡವವಾಡುತ್ತಿರುವ ಬಡತನ ನಿವಾರಣೆ ಅಲ್ಲಿನ ಸರಕಾರಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಮತ್ತೊಂದು ತೊಡಕಾಗಿದೆ.

ಅಣೆಕಟ್ಟು ವಿಷಯದಲ್ಲಿ ಕೇವಲ ಲಾಭವನ್ನೇ ಗುರಿಯಾಗಿರಿಸಿಕೊಂಡ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳಿಗೆ ಉತ್ತರದಾಯಕತ್ವದ ಪ್ರಶ್ನೆಯೇ ಎದುರಾಗುವ ಸಂಭವವಿಲ್ಲದೆ ಇರುವುದರಿಂದ, ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಕಳಪೆ ಇದ್ದರೂ ಕೂಡ, ಮುಂದೆ ಸಂಭವಿಸುವ ಅವಘಡಗಳಿಗೆ ಇವು ಹೊಣೆಹೊರುವ, ಹೊತ್ತಿರುವ ಸಂಧರ್ಭ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಯಾವುದೇ ಸ್ಥಳದಲ್ಲಿ ಅಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದರೂ, ಪ್ರತಿಯೊಂದು ಅಣೆಕಟ್ಟಿನ ಸ್ಥಳಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ. ಕೆಲವೊಂದು ಸ್ಥಳಗಳು ಅಣೆಕಟ್ಟು ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಲ್ಲಿನ ಭೂಮಿಯ ಗುಣಮಟ್ಟ, ಮಣ್ಣಿನ ಗುಣ, ಸಂಗ್ರಹವಾಗುವ ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಯಾವೊಂದು ಸರಕಾರ ಮತ್ತು ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಜ್ವಲಂತ ಉದಾಹರಣೆಗಳೆಂದರೆ, 1990ರಲ್ಲಿ ವಿಶ್ವಬ್ಯಾಂಕ್ ತಾನು ಆರ್ಥಿಕ  ನೆರವು ನೀಡಿದ್ದ 49 ಅಣೆಕಟ್ಟುಗಳ ಸಮೀಕ್ಷೆ ನಡೆಸಿದಾಗ ಇವುಗಳಲ್ಲಿ 36 ಅಣೆಕಟ್ಟುಗಳು ಪ್ರಶಸ್ತವಾದ ಸ್ಥಳಗಳಲ್ಲಿ ನಿರ್ಮಾಣ ವಾಗಿರಲಿಲ್ಲ. ಅಮೇರಿಕಾದೇಶದ ಟೆಟಾನ್ ನದಿಗೆ ದಕ್ಷಿಣ ಪ್ರಾಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಗೆ ಕಾಮಗಾರಿ ಆರಂಭಿಸಿದಾಗ ಭೂಗರ್ಭ ಶಾಸ್ತ್ರಜ್ಞರು, ಈ ಸ್ಥಳ ಅಣೆಕಟ್ಟು ಕಾಮಗಾರಿಗೆ ಯೋಗ್ಯವಲ್ಲ ಎಂದು ನೀಡಿದ್ಥೆಚ್ಚರಿಕೆಯನ್ನು ನಿರ್ಲಕ್ಷಿಸಿ, 1970ರಲ್ಲಿ 270 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ  ಕಾರ್ಯ ಪ್ರಾರಂಭವಾಯಿತು.

1970ರಲ್ಲಿ ಆರಂಭವಾದ ಕಾಮಗಾರಿ 1976ರಲ್ಲಿ ಮುಕ್ತಾಯವಾಗಿ, ಅದೇ ಜೂನ್ ತಿಂಗಳಿನಲ್ಲಿ ಚಾಲನೆ ನೀಡಿದಾಗ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಒತ್ತಡದಿಂದ ಅಣೆಕಟ್ಟಿನ ಬಲಭಾಗದ ಭೂಮಿಯಲ್ಲಿ ದೊಡ್ಡ ಬಾವಿಯಾಕಾರದ ರಂಧ್ರವೊಂದು ನಿರ್ಮಾಣವಾಗಿ  ಜಲಾಶಯದ ನೀರು ಅದರೊಳಗೆ ಹರಿಯತೊಡಗಿತು. ಮರುದಿನ ಅಣೆಕಟ್ಟಿನ 270 ಅಡಿ ಎತ್ತರದ ತಡೆಗೋಡೆ ಹೊರತುಪಡಿಸಿ ಅದಕ್ಕೆ ಹೊಂದಿಕೊಂಡಿದ್ದ ಭೂಮಿ ಕೊಚ್ಚಿಹೋದ ಪರಿಣಾಮ ಸುಮಾರು 20 ಅಡಿ ಎತ್ತರದ ಅಣೆಕಟ್ಟಿನ ಗೋಡೆ ಮಗುಚಿಬಿತ್ತು.

ಇದರಿಂದ ನಾಲ್ಕುಸಾವಿರ ಮನೆಗಳು, ಮೂರು ಪಟ್ಟಣಗಳು ಈ ದುರಂತದಲ್ಲಿ ನಿರ್ನಾಮವಾದವು. ಅಪಾತವನ್ನು ಅರಿತ ಅಲ್ಲಿನ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವ ಸಾವು ನೋವೂ ಸಂಭವಿಸಲಿಲ್ಲ. ಆದರೆ ನೂರು ಕೋಟಿ ಡಾಲರ್ ಹಣ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲದ ಹೊರೆ ಹೊರಬೇಕಾಯ್ತು. ಇಂತಹದ್ದೇ ಇನ್ನೊಂದು ಘಟನೆ ಸಂಭವಿಸಿದ್ದು ಗ್ವಾಟೆಮಾಲಾದಲ್ಲಿ. ಭೂಕಂಪ ಪೀಡಿತ ಈ ರಾಷ್ಟ್ರದಲ್ಲಿ 1974ರಲ್ಲಿ ಜರ್ಮನ್ ಹಾಗೂ ಸ್ವಿಟ್ಜರ್ಲ್ಯಾಂಡ್ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಕೈಗೆತ್ತಿಕೊಂಡ ಚಿಕ್ಸೊಯ್ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿಗೆ ಗ್ವಾಟೆಮಾಲಾ ಸರಕಾರ, ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ 105 ಮಿಲಿಯನ್ ಡಾಲರ್ ಸಾಲ ಪಡೆದು ಕಾಮಗಾರಿ ಪ್ರಾರಂಭಿಸಿತು.

1976ರಲ್ಲಿ ಜಲಾಶಯದಿಂದ 26 ಕಿ.ಮೀ. ದೂರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸಲು ನಿರ್ಮಿಸಿದ  ಸುರಂಗ ಕಾಲುವೆಗಳು ಭೂಕಂಪದ ಪರಿಣಾಮ ಮಣ್ಣು ಕುಸಿತದಲ್ಲಿ ಮುಚ್ಚಿಹೋದವು. ಮತ್ತೆ ಇವನ್ನು ದುರಸ್ತಿಗೊಳಿಸಿ, ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಾಗ, ಗ್ವಾಟೆಮಾಲ ಸರಕಾರ ಅಂದಾಜಿಸಿದ್ದ ನಿರ್ಮಾಣ  ವೆಚ್ಚಕ್ಕಿಂತ 375 ಪಟ್ಟು ಹಣ ಹೆಚ್ಚು ಖರ್ಚಾಯಿತ. ಆ ನಂತರವೂ ಸಂಭವಿಸಿದ ವಿವಿಧ ಅವಘಡಗಳಿಂದ 270 ಕೋಟಿ ಡಾಲರ್ ವೆಚ್ಚದಲ್ಲಿ ಮುಗಿಯಬೇಕಿದ್ದ ಅಣೆಕಟ್ಟು ನಿರ್ಮಾಣ , 1988ರಲ್ಲಿ ಅಂತಿಮಗೊಂಡಾಗ 944 ಕೋಟಿ ಡಾಲರ್ ಹಣವನ್ನು ನುಂಗಿಹಾಕಿ, ಗ್ವಾಟೆಮಾಲ ರಾಷ್ಟ್ರವನ್ನು ಅಮೆರಿಕಾದ ಶಾಶ್ವತ ಸಾಲಗಾರನನ್ನಾಗಿ ಮಾಡಿತು.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮತ್ತೊಂದು ಹಗಲು ದರೋಡೆಯೆಂದರೆ, ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿ ಸಲಾಗುವ ಅಣೆಕಟ್ಟಿಗೆ ಮುನ್ನ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ನೀಡುವ ತಪ್ಪು ಮಾಹಿತಿ. ಯಾವುದೇ ಬಹುರಾಷ್ಟ್ರೀಯ ನಿರ್ಮಾಣ  ಸಂಸ್ಥೆಗಳು, ನದಿಯ ಪಾತ್ರದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣವನ್ನು ಹಿಂದಿನ 20-30 ವರ್ಷಗಳಿಂದ ಹಿಡಿದು ಮುಂದಿನ 50 ವರ್ಷಗಳವರೆಗೂ ಲೆಕ್ಕಾಚಾರ ಹಾಕಿ, ನಂತರ ನದಿಯ ನೀರಿನ ಪ್ರಮಾಣವನ್ನು ಅಂದಾಜು ಮಾಡಬೇಕು.ಆದರೆ ಯಾವುದೋ ಒಂದು ವರ್ಷದ ಮಳೆಯ ಪ್ರಮಾಣವನ್ನು ಹಾಗೂ ನದಿ ನೀರಿನ ಹರಿಯುವಿಕೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಣೆಕಟ್ಟು ನಿರ್ಮಿಸಲು ಸರಕಾರಗಳನ್ನು ಪುಸಲಾಯಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಜಗತ್ತಿನ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗುತ್ತಿಲ್ಲ.

ಜೊತೆಗೆ ವಿುದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಿಲ್ಲ. ಸ್ಪೇನ್ ದೇಶದಲ್ಲಿ ಗೌಡಿಯಾಲ ಮತ್ತು ಟ್ಯಾಗೂಸ್ ನದಿಗೆ 1950ರ ದಶಕದಲ್ಲಿ ಜನರಲ್ ಫ್ರಾಂಕೋಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಎರಡು ಅಣೆಕಟ್ಟುಗಳ ಜಲಾಶಯಗಳು 2000ದ ಇಸವಿಯವರೆಗೆ ತಮ್ಮ ಸಾಮಥ್ರ್ಯದ ಶೇ.17ರಷ್ಟು ನೀರನ್ನು ಮಾತ್ರ ಸಂಗ್ರಹಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವ ಬ್ಯಾಂಕ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2000ದ ಅಂತ್ಯದ ವೇಳೆಗೆ ತಾನು ಸಾಲ ನೀಡಿದ 25 ಬೃಹತ್ ಜಲಾಶಯಗಳು ಕೇವಲ ಅರ್ಧದಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿರುವುದಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಥಾಯ್ಲೆಂಡ್ ದೇಶದ 7 ಅಣೆಕಟ್ಟುಗಳು, ಭಾರತದ ನರ್ಮದಾ ಸರೋವರದ ಅಣೆಕಟ್ಟು, ಅಮೆರಿಕಾದ ಕೊಲರಾಡೊ ನದಿಗೆ ನಿಮರ್ಿಸಲಾದ ಹೂವರ್ ಅಣೆಕಟ್ಟು ಸೇರಿರುವುದು ಗಮನಾರ್ಹ ಸಂಗತಿ.

(ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 11

– ಡಾ.ಎನ್. ಜಗದೀಶ್ ಕೊಪ್ಪ

ಅಣೆಕಟ್ಟು ಅಥವಾ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಆಯಾ ಸರ್ಕಾರಗಳು ನೀಡುತ್ತಿರುವ ಪರಿಹಾರವೆಂಬುದು ಕಪಟ ನಾಟಕ ಎನ್ನುವುದು ಜಗತ್ತಿನೆಲ್ಲೆಡೆ ಸ್ಥಳಪರೀಕ್ಷೆಯಿಂದ ಧೃಡಪಟ್ಟಿದೆ. ವಿಸ್ಮಯವೆಂತೆ  ಈ ಅಣೆಕಟ್ಟುಗಳ ತಾಯಿ ಎನಿಸಿದ ವಿಶ್ವ ಬಾಂಕ್ ಕೂಡ ಹಲವಾರು ಬಾರಿ ತನ್ನ ವಾರ್ಷಿಕ ವರದಿಯಲ್ಲಿ ಸತ್ಯಾಂಶವನ್ನು ಮರೆಮಾಚದೆ ಬಿಚ್ಚಿಟ್ಟಿದೆ.

1986ರಿಂದ 1996ರವರೆಗೆ ತಾನು ಸಾಲ ನೀಡಿರುವ ರಾಷ್ಟ್ರಗಳ ಅಣೆಕಟ್ಟು ಕಾಮಗಾರಿ ಮತ್ತು ಪರಿಹಾರ ಯೋಜನೆಗಳನ್ನು ಪರಾಮರ್ಶಿಸಲು ನೇಮಕಮಾಡಿರುವ ಆಯೋಗದ ವರದಿಯನ್ನು ಆಧರಿಸಿ, ವಿಶ್ವಬಾಂಕ್ ತನ್ನ ವೈಫಲ್ಯತೆಯನ್ನು ತಾನೇ ಎತ್ತಿ ತೋರಿಸಿದ್ದು, ಅದು ಹೀಗಿದೆ:
“ವಿಶ್ವಬ್ಯಾಂಕ್‌ನ ಮೂಲಭೂತ ಗುರಿಗಳಲ್ಲಿ ಅಣೆಕಟ್ಟುಗಳಿಂದ ಸಂತ್ರಸ್ತರಾಗುವ ಜನತೆಯ ಬದುಕನ್ನು ಉನ್ನತಿಗೊಳಿಸಬೇಕೆಂಬುದು ಬ್ಯಾಂಕ್‌ನ ಗುರಿಯಾಗಿತ್ತು. ಆದರೆ ದೊರೆತಿರುವ ಅಂಕಿ ಅಂಶಗಳಿಂದ ಬ್ಯಾಂಕ್ ಈ ದಿಶೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಲು ವಿಷಾಧವಾಗುತ್ತಿದೆ.”

ಬಹುತೇಕ ಕಡೆ ಸಂತ್ರಸ್ತರಾದವರ ಬಡತನ ಮತ್ತೆ ಶೇ.40ರ ಪ್ರಮಾಣದಷ್ಟು ಹೆಚ್ಚಿರುವುದನ್ನು ಬ್ಯಾಂಕ್ ತನ್ನ ಸಮೀಕ್ಷೆಯಲ್ಲಿ ಧೃಡಪಡಿಸಿದೆ.

1994ರವರೆಗೆ ಜಗತ್ತಿನಾದ್ಯಂತ ಬ್ಯಾಂಕ್ ನೆರವು ನೀಡಿದ್ದ 192 ಅಣೆಕಟ್ಟು ಯೋಜನೆಗಳಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ಕೇವಲ ಹಣದ ರೂಪದಲ್ಲಿ ನೀಡಲಾಗಿದೆಯೆ ಹೊರತು ಅವರಿಗೆ ಪರ್ಯಾಯವಾದ ಭೂಮಿ ಅಥವಾ ನಿವೇಶನವನ್ನು ನೀಡದಿರುವುದು ಕಂಡುಬಂದಿದೆ. ಶೇ.70 ಮಂದಿಗೆ ಪರಿಹಾರ ರೂಪದಲ್ಲಿ ಹಣ, ಶೇ.15 ಮಂದಿಗೆ ಭೂಮಿ ನೀಡಿದ್ದರೆ, ಉಳಿದ ಶೆ. 15ರಷ್ಟು ನಿರಾಶ್ರಿತರಿಗೆ ದಾಖಲೆಗಳ ಕೊರತೆಯಿಂದ ಏನನ್ನೂ ನೀಡಲಾಗಿಲ್ಲ ಎಂಬುದನ್ನು ಪರಿಶೀಲನಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಪರಿಹಾರಕ್ಕಿಂತ ಮತ್ತೊಂದು ದೊಡ್ಡ ವಂಚನೆ ನಡೆದಿರುವುದು ಅಣೆಕಟ್ಟು ಯೋಜನೆಗೆ ಮುನ್ನ. ನಿರಾಶ್ರಿತರಾಗುವವರ ಕುರಿತು ತಯಾರಿಸಿದ ವರದಿಯಲ್ಲಿ. 192 ಅಣೆಕಟ್ಟುಗಳಿಂದ ಸಂತ್ರಸ್ತರಾಗುವವರ ಸಂಖ್ಯೆ 1 ಕೋಟಿ 34 ಲಕ್ಷ ಎಂದು ತಿಳಿಸಲಾಗಿದೆ. ಆದರೆ ನೈಜವಾಗಿ ಸಂತ್ರಸ್ತರಾದವರ ಸಂಖ್ಯೆ 1 ಕೋಟಿ 96 ಲಕ್ಷದ 50 ಸಾವಿರ. ಇದು ಕೇವಲ ವಿಶ್ವಬ್ಯಾಂಕ್‌ನಿಂದ ಸಾಲದ ನೆರವು ಪಡೆದ ಯೋಜನೆಗಳ ಸಂತ್ರಸ್ತರ ಅಂಕಿ ಅಂಶ. ಆದರೆ ವಿಶ್ವಬ್ಯಾಂಕ್ ಹೊರತುಪಡಿಸಿ, ಇನ್ನಿತರೆ ಹಣಕಾಸು ಸಂಸ್ಥೆ ಹಾಗೂ ಕೆಲವು ಸರಕಾರಗಳು ಸ್ವತಃ ಬಂಡವಾಳ ಹೂಡಿ ನಡೆಸಿದ ಅಣೆಕಟ್ಟು ಯೋಜನೆಗಳಿಂದ ಸ್ಥಳಾಂತರಗೊಂಡವರು ಜಗತ್ತಿನಾದ್ಯಂತ 6 ಕೋಟಿ 25 ಲಕ್ಷ.

ಇಂತಹ ಸುಳ್ಳು ಅಂಕಿ ಅಂಶಗಳನ್ನು ನೀಡುವ ಹಿಂದೆ ಸರಕಾರಗಳ ದೊಡ್ಡ ಹುನ್ನಾರವೇ ಅಡಗಿದೆ. ಅಣೆಕಟ್ಟು ಯೋಜನೆಗಳಿಂದ ಆಗಬಹುದಾದ ಪರಿಣಾಮಗಳು ಅತ್ಯಲ್ಪ ಹಾಗೂ ಯೋಜನೆಗಳಿಂದ ಉಂಟಾಗುವ ಲಾಭವೇ ಅಪಾರ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಉದ್ದೇಶಗಳಿಂದಲೇ ಇಂತಹ ಪೊಳ್ಳು ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ ಜನತೆಯ ಸ್ಥಳಾಂತರಕ್ಕಿಂತ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತದೆ.

1984 ರಲ್ಲಿ ಆಫ್ರಿಕಾದ ರುವಾಂಡ ದೇಶದಲ್ಲಿ ನಿರ್ಮಿಸಿದ ರುಜಿಜಿ ಎಂಬ ಅಣೆಕಟ್ಟು ನಿರ್ಮಾಣದಿಂದ ಸಂತ್ರಸ್ತರಾಗುವವರು ಕೇವಲ 137 ಮಂದಿ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ವಾಸ್ತವವಾಗಿ ಸಂತ್ರಸ್ತರಾದವರ ಸಂಖ್ಯೆ 15 ಸಾವಿರ ಮಂದಿ. ಅದೇ ರೀತಿ ಕೀನ್ಯಾದಲ್ಲಿ ಟಾನಾ ನದಿಗೆ ಕಟ್ಟಿದ ಅಣೆಕಟ್ಟಿನಿಂದ 1 ಸಾವಿರ ಮಂದಿ ನಿರ್ವಸತಿಗರಾಗುತ್ತಾರೆ ಎಂದು ಸರಕಾರ ತನ್ನ ವರದಿಯಲ್ಲಿ ತಿಳಿಸಿತ್ತು. ವಿಶ್ವಬ್ಯಾಂಕ್ ಪರಿಶಿಲನೆ ಮಾಡಿದಾಗ 7 ಸಾವಿರ ಜನ  ಸ್ಥಳಾಂತರಗೊಂಡಿದ್ದರು.

ಭಾರತದ ಯೋಜನೆಗಳನ್ನು ಅವಲೋಕಿಸಿದಾಗ, ವರದಿಯಲ್ಲಿ ಅಂದಾಜಿಸಿದ್ದ ಸಂಖ್ಯೆಗಿಂತ ಹೆಚ್ಚು ಮಂದಿ ಸ್ಥಳಾಂತರಗೊಂಡಿರುವುದನ್ನು ನಾವು ಕಾಣಬಹುದು.

ಅಂದಾಜು ಸಂಖ್ಯೆ  ಸ್ಥಳಾಂತರಗೊಂಡವರು
ಆಲಮಟ್ಟಿ ಜಲಾಶಯ – ಕರ್ನಾಟಕ 20,000 2,40,000
ಸರ್ದಾರ್ ಸರೋವರ –
ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್
33,000 3,20,000
ಶ್ರೀಶೈಲಂ ನೀರಾವರಿ ಯೋಜನೆ 63,000 1,50,000
ಮಧ್ಯಪ್ರದೇಶ ನೀರಾವರಿ ಯೋಜನೆ 8,000 19,000
ಗುಜರಾತ್ ನೀರಾವರಿ ಯೋಜನೆ 63,600 1,40,370
ಮಹಾರಾಷ್ಟ್ರ ನೀರಾವರಿ ಯೋಜನೆ 8,031 16,080

ವಾಸ್ತವ ಸಂಗತಿಗಳನ್ನು ಹೇಗೆ ಮರೆಮಾಚಬಲ್ಲರು ಎಂಬುದಕ್ಕೆ ಈ ಕೋಷ್ಟಕ ಸಾಕ್ಷಿಯಾಗಿದೆ.

ಅಣೆಕಟ್ಟುಗಳ ನಿರ್ಮಾಣದಿಂದ ಉದ್ಭವಿಸುವ ಸಮಸ್ಯೆ ಕೇವಲ ಪರಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಜಲಾಶಯಗಳು ಸೃಷ್ಟಿಸುತ್ತಿರುವ ಹಲವಾರು ಮಾರಕ ರೋಗಗಳು ಸಂತ್ರಸ್ತರು ಹಾಗೂ ಜಲಾಶಯದ ಸುತ್ತ ಮುತ್ತಲಿನ ಜನಗಳ ಪಾಲಿಗೆ ನರಕ ಸದೃಶವಾಗಿದೆ. ಹಾಗಾಗಿ ಅಣೆಕಟ್ಟುಗಳನ್ನು ಹಾಗೂ ಜಲಾಯಗಳನ್ನು ರೋಗ ರುಜಿನಗಳ ತೊಟ್ಟಿಲು ಎಂದು ಕರೆದರೂ ಅತಿಶಯೋಕ್ತಿಯಾಗಲಾರದು.

Three Gorges Dam

Three Gorges Dam

ಜನತೆಯ ಆರೋಗ್ಯಕ್ಕೆ ಮಾರಕವಾಗಿರುವ ರೋಗವೆಂದರೆ ಕಳೆದ 3 ದಶಕಗಳಿಂದ ಮನುಕುಲವನ್ನು ಬಾಧಿಸುತ್ತಿರುವ ಏಡ್ಸ್ ಮಹಾಮಾರಿ. ಅಣೆಕಟ್ಟುಗಳ ನಿರ್ಮಾಣದ ಜೊತೆಜೊತೆಗೆ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಲ್ಲಿ ಏಡ್ಸ್ ಖಾಯಿಲೆಗೆ ಅಗ್ರ ಸ್ಥಾನ. ಸಾಮಾನ್ಯವಾಗಿ ಅಣೆಕಟ್ಟು ಕಾಮಗಾರಿ ಕೆಲಸಗಳಲ್ಲಿ ಶೇ.80ರಷ್ಟು ಮಂದಿ ಯಾವುದೇ ಕುಶಲ ಕಲೆಯಿಲ್ಲದೆ ದುಡಿಯುವ ಶ್ರಮ ಜೀವಿಗಳು. ಇವರು ದಿನಗೂಲಿ ಆಧಾರದ ಮೇಲೆ ದೇಶದ ವಿವಿಧ ಸ್ಥಳಗಳಿಂದ ಅಣೆಕಟ್ಟು ಸ್ಥಳಕ್ಕೆ ಬಂದು ಕಾರ್ಮಿಕರಾಗಿ ದುಡಿಯುತ್ತಾ ಒಟ್ಟಾಗಿ ವಸತಿ ಕಾಲೋನಿಗಳಲ್ಲಿ ವಾಸಿಸುವುದು ವಾಡಿಕೆ. ಇವರುಗಳು ವಿವಿಧ ವಾತಾವರಣದ ಪ್ರದೇಶಗಳಿಂದ ಬರುವ ಕಾರಣ ಯಾವ ವ್ಯಕ್ತಿ ಯಾವ ರೋಗವನ್ನು ಹೊತ್ತು ತಂದಿರುತ್ತಾನೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಸಾಮಾನ್ಯವಾಗಿ ಒಂದೆಡೆ ವಾಸಿಸುವ ಕಾರ್ಮಿಕರಲ್ಲಿ ಕಾಣ ಬರುವ ಖಾಯಿಲೆಗಳೆಂದರೆ, ಸಿಫಿಲಿಸ್(ಲೈಂಗಿಕ ರೋಗ), ಕ್ಷಯ, ಸಿಡುಬು, ಜ್ವರ ಮತ್ತು ಏಡ್ಸ್ ಖಾಯಿಲೆಗಳು ಪ್ರಮುಖವಾದವು.

ಅಣೆಕಟ್ಟು ಕಾಮಗಾರಿ ವರ್ಷಾನುಗಟ್ಟಲೆ ಜರುಗುವುದರಿಂದ ಈ ಕಾರ್ಮಿಕರು ಸ್ಥಳೀಯ ಜನರ ಜೊತೆ ಒಡನಾಟವಿರಿಸಿಕೊಳ್ಳುವುದು ಸಹಜ. ಇದರಿಂದಾಗಿ ಸ್ಥಳೀಯ ನಿವಾಸಿಗಳೂ ಕೂಡ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ 1978 ರಲ್ಲಿ ಬ್ರೆಜಿಲ್ – ಪೆರುಗ್ವೆ ಗಡಿಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟೊಂದರ ಕಾರ್ಮಿಕರ ಬಗ್ಗೆ ಸಮೀಕ್ಷೆ ಮಾಡಿ ವರದಿಯೊಂದನ್ನು ಸಿದ್ಧಪಡಿಸಿತ್ತು. ಕಾಮಗಾರಿ ಸ್ಥಳದಲ್ಲಿ 38 ಸಾವಿರ ಮಂದಿ ದುಡಿಯುತ್ತಿದ್ದು ಪ್ರತಿದಿನ 2 ಸಾವಿರದಷ್ಟು ಕಾರ್ಮಿಕರು ಒಳಹೋಗುವುದು ಅಥವಾ ಹೊರಬರುವುದನ್ನು ಸಮೀಕ್ಷಾ ವರದಿ ಧೃಡಪಡಿಸಿದೆ. ಜೊತೆಗೆ ಇವರೆಲ್ಲಾ ಕಿಕ್ಕಿರಿದ ಕೊಳಚೆಗೇರಿಗಳಂತಹ ಕಾಲೋನಿಗಳಲ್ಲಿ ವಾಸಿಸುತ್ತಿರುವುದನ್ನು ವರದಿ ಉಲ್ಲೇಖಿಸಿತ್ತು. ಇಂತಹ ಸ್ಥಳಗಳಲ್ಲಿ ದುಡಿಮೆಗಾಗಿ ತನ್ನ ಸಂಸಾರವನ್ನು ತೊರೆದು ಹಲವಾರು ತಿಂಗಳುಗಳ ಕಾಲ ಏಕಾಂಗಿಯಾಗಿ ಜೀವಿಸುತ್ತಾ ದುಡಿಯುವ ಕಾರ್ಮಿಕರು ಅತಿ ವೇಗದಲ್ಲಿ ಕುಡಿತ ಮತ್ತು ವೇಶ್ಯಾವಾಟಿಕೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಏಡ್ಸ್ ರೋಗದ ತವರಾದ ಆಫ್ರಿಕಾ ಖಂಡದ ಹಲವಾರು ರಾಷ್ಟ್ರಗಳಲ್ಲಿ 1990ರ ದಶಕದಲ್ಲಿ ನಿರ್ಮಾಣ ಪ್ರಗತಿಯಲ್ಲಿದ್ದ ಅಣೆಕಟ್ಟು ಕಾರ್ಮಿಕರಲ್ಲಿ ಶೇ.30ರಷ್ಟು ಮಂದಿ ಏಡ್ಸ್ ಖಾಯಿಲೆಗೆ ತುತ್ತಾಗಿದ್ದರು. ಇದಲ್ಲದೆ ಕಾಮಗಾರಿ ಸ್ಥಳಗಳಲ್ಲಿ ನಡೆಯುವ ಅವಘಡಗಳಿಂದಾಗಿ ಅನೇಕ ಕಾರ್ಮಿಕರು ಮೃತಪಡುತ್ತಿದ್ದಾರೆ. ಇಂತಹ ದುರಂತಗಳು ಹೊರಲೋಕಕ್ಕೆ ಸುದ್ದಿಯಾಗುವ ಸಾಧ್ಯತೆ ಬಹುತೇಕ ಕಡಿಮೆ. ಇವರಿಗೆ ಸಿಗುವ ಪರಿಹಾರ ಕೂಡ ಶೂನ್ಯ. ಭಾರತದ ನಾಗಾರ್ಜುನಸಾಗರ ಜಲಾಶಯ ನಿರ್ಮಾಣದಲ್ಲಿ 154 ಮಂದಿ, 1983ರಲ್ಲಿ ಕೊಲಂಬಿಯಾದ ಅಣೆಕಟ್ಟಿನ ಮಣ್ಣಿನ ಕುಸಿತದಿಂದಾಗಿ 300 ಕಾರ್ಮಿಕರು, ಹೀಗೆ ವಾರ್ಷಿಕವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅಣೆಕಟ್ಟುಗಳ ನಿರ್ಮಾಣದಲ್ಲಿ ತಮ್ಮ ಜೀವವನ್ನು ಬಲಿಕೊಡುತ್ತಿದ್ದಾರೆ. ದೊಡ್ಡ ಅಣೆಕಟ್ಟುಗಳ ಕುರಿತಂತೆ ಅಧ್ಯಯನ ನಡೆಸಿರುವ ಫ್ರಾನ್ಸ್ ಸಂಸ್ಥೆಯೊಂದರ ಪ್ರಕಾರ ಈವರೆಗೆ 2 ಲಕ್ಷ ಮಂದಿ  ಕಾರ್ಮಿಕರು ಅಣೆಕಟ್ಟು ನಿರ್ಮಾಣದಲ್ಲಿ ಅಸುನೀಗಿದ್ದಾರೆ.

ಅಣೆಕಟ್ಟುಗಳಲ್ಲಾಗುವ ಅವಘಡಗಳ ಸಾವಿಗಿಂತ ಭೀಕರವಾದ ಮತ್ತೊಂದು ಸಂಗತಿಯೆಂದರೆ, ಜಲಾಶಯಗಳಲ್ಲಿ ಸಂಗ್ರಹವಾದ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಕ್ರಿಮಿ ಹಾಗೂ ಜಂತುಗಳು ತಂದು ಹರಡುತ್ತಿರುವ ಸಾಂಕ್ರಾಮಿಕ ಖಾಯಿಲೆಗಳು ಜಾಗತಿಕ ಮಟ್ಟದಲ್ಲಿ ಮನುಕುಲದ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

1977ರಿಂದ ವಿಶ್ವ ಆರೋಗ್ಯ ಸಂಘಟನೆ ನೀರಿನಿಂದ ಹರಡುವ ಖಾಯಿಲೆಗಳ ನಿಯಂತ್ರಣಕ್ಕೆ ಹಲವಾರು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ವಿಶ್ವಸಂಸ್ಥೆ ಕೂಡ ಧನಸಹಾಯ ನೀಡುತ್ತಲೇ ಬಂದಿದೆ.

ನೀರಿನಲ್ಲಿ ಕೊಳೆತ ಪ್ರಾಣಿ, ಮರಗಳು ಮತ್ತು ಇನ್ನಿತರ ವಸ್ತುಗಳಿಂದ ಸೃಷ್ಟಿಯಾಗುವ ಹಲವಾರು ಜಂತುಗಳು ನೀರಿನಲ್ಲಿರುವ ಕಳೆ ಸಸ್ಯಗಳಲ್ಲಿ ಆಶ್ರಯ ಪಡೆದು, ನೀರಿನ ಮೂಲಕ ಮನುಷ್ಯನ ದೇಹಕ್ಕೆ ಪ್ರವೇಶ ಪಡೆಯುತ್ತವೆ. ಇವುಗಳಲ್ಲಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ಪ್ರದೇಶದ ಜಲಾಶಯದಲ್ಲಿ ಕಂಡುಬಂದಿರುವ ಸ್ಕಿಸ್ಟೊಸೇಮ ಹೆಮೆಟೋಬಿಯಮ್ ಹಾಗೂ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕಾಣಿಸಿಕೊಂಡಿರುವ ಎಸ್.ಮನ್ಸೋನಿ ಎಂಬ ಬ್ಯಾಕ್ಟೀರಿಯಾಗಳು ಪ್ರಮುಖವಾದವು. ಈ ಹುಳುಗಳು ಮನುಷ್ಯನ ಜಠರ ಸೇರಿ ಅಲ್ಲಿ ಪ್ರೌಢವಸ್ಥೆಗೆ ಬಂದು ನಂತರ ದಿನವೊಂದಕ್ಕೆ 3 ಸಾವಿರ ಮೊಟ್ಟೆ ಇಡುವ ಶಕ್ತಿ ಹೊಂದಿವೆ. ಇದೇ ಜಂತು ಮನುಷ್ಯನ ಎಲ್ಲಾ ಅಂಗಾಂಗಳಿಗೆ ಪ್ರವೇಶ ಮಾಡುವುದರ ಜೊತೆಗೆ ಮತ್ತೆ ಆತ ವಿಸರ್ಜಿಸುವ ಮಲದ ಮೂಲಕ ಹೊರಬಂದು ನೀರಿನಲ್ಲಿ ಆಶ್ರಯ ಪಡೆದು, ಮತ್ತೆ ಬೇರೊಬ್ಬ ವ್ಯಕ್ತಿಯ ದೇಹ ಪ್ರವೇಶಿಸುತ್ತವೆ. ಇವುಗಳಿಂದ ಮನುಷ್ಯನ ಮೇಲೆ ಆಗುವ ನೇರ ಪರಿಣಾಮಗಳೆಂದರೆ ವಿವಿಧ ರೀತಿಯ ಅಲರ್ಜಿ, ಜ್ವರ, ಕೆಮ್ಮು, ಚರ್ಮದಖಾಯಿಲೆ, ಕಿಡ್ನಿ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು. ಈಗಾಗಲೇ ಜಗತ್ತಿನಾದ್ಯಂತ 37 ಕೋಟಿ ಜನರು ನೀರಿನಲ್ಲಿರುವ ಈ ರೀತಿಯ ಬ್ಯಾಕ್ಟೀರಿಯಾಗಳಿಂದ ಹಲವು ಬಗೆಯ ರೋಗಕ್ಕೆ ತುತ್ತಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಂತಹ ಉಷ್ಣ ಪ್ರದೇಶದಲ್ಲಿ ಈ ಖಾಯಿಲೆಗಳು ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿಲ್ಲ. ಆದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸಮಾಡುವ ಕಾರ್ಮಿಕರಿಂದಾಗಿ ಈ ರೋಗಗಳು ಸಣ್ಣ ಪ್ರಮಾಣದಲ್ಲಿ ಭಾರತದಲ್ಲೂ ಹರಡಿವೆ. ಭಾರತದಂತಹ ರಾಷ್ಟ್ರಗಳಿಗೆ ಅಣೆಕಟ್ಟಿನ ಪ್ರಭಾವದಿಂದ ಹರಡಿರುವ ಮಲೇರಿಯಾ ದೊಡ್ಡ ಸವಾಲಾಗಿದೆ.

ಜಾಗತಿಕ ಮಟ್ಟದಲ್ಲಿ ಮಲೇರಿಯಾ ರೋಗವನ್ನು ಹೋಗಲಾಡಿಸಲು, ವಿಶ್ವ ಆರೋಗ್ಯ ಸಂಘಟನೆ ಸಮರೋಪಾದಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ, ಈ ಪಿಡುಗು ಹಲವು ರೂಪದಲ್ಲಿ ಜಗತ್ತಿನಾದ್ಯಂತ ಜನರನ್ನು ಕಾಡುತ್ತಲೇ ಇದೆ. 1990ರ ದಶಕದಲ್ಲಿ 30ಕೋಟಿ ಜನ ಮಲೇರಿಯಾಕ್ಕೆ ತುತ್ತಾಗಿ, ಇದರಲ್ಲಿ 10 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇಂದಿಗೂ ಕೂಡ ಈ ಮಲೇರಿಯಾ ಖಾಯಿಲೆ ಜಗತ್ತಿನ ಒಂದು ದೊಡ್ಡ ಪಿಡುಗು ಎಂದು ವಿಶ್ವ ಆರೋಗ್ಯ ಸಂಘಟನೆಯ ತಜ್ಞ ಡಾ.ಹಿರೋಷಿವಕಜಿಮ ಅಭಿಪ್ರಾಯ ಪಡುತ್ತಾರೆ.

ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಯಿಂದ ಹರಡುವ ಈ ರೋಗದ ಲಕ್ಷಣಗಳು 1970ರಲ್ಲಿ ಮೊದಲಬಾರಿಗೆ ಕೀನ್ಯಾದಲ್ಲಿ ಕಾಣಿಸಿಕೊಂಡಿತು. ಕೀನ್ಯಾದ ನೈರುತ್ಯ ಭಾಗದಲ್ಲಿ ನಿರ್ಮಿಸಿರುವ ಅಣೆಕಟ್ಟುಗಳ ನೀರಾವರಿ ಪ್ರದೇಶಗಳಲ್ಲಿ ಸೊಳ್ಳೆಗಳ ಪ್ರಮಾಣ 4 ಪಟ್ಟು ಹೆಚ್ಚಿರುವುದು ತನಿಖೆಯಿಂದ ಧೃಡಪಟ್ಟಿದೆ.

ಅನಾಫಿಲಿಸ್ ಜಾತಿಗೆ ಸೇರಿದ ಸೊಳ್ಳೆಗಳಲ್ಲಿ 4 ವಿಧಗಳಿದ್ದು, ಇವುಗಳಲ್ಲಿ ಗ್ಯಾಂಬಿಯಾ ಎಂಬ ಸೊಳ್ಲೆ ಆಫ್ರಿಕಾದಲ್ಲಿ, ಅರಣ್ಯನಾಶದ ಫಲವಾಗಿ ಇಮ್ಮಡಿಗೊಂಡು ಹಲವಾರು ರಾಷ್ಟ್ರಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಸೂಡಾನ್ ಮೂಲಕ ಈಜಿಪ್ಟಿಗೂ ವ್ಯಾಪಿಸಿದ ಮಲೇರಿಯಾ 1 ಲಕ್ಷದ 30 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿದೆ.

ಗ್ಯಾಂಬಿಯಾ ಹೆಸರಿನ ಈ ಸೊಳ್ಳೆ ಸಾಮಾನ್ಯವಾಗಿ ಆಶ್ರಯ ಪಡೆಯುತ್ತಿದ್ದುದು ಅರಣ್ಯಗಳಲ್ಲಿ. ಇದು ಜಾನುವಾರು ಹಾಗು ಕಾಡಿನ ಪ್ರಾಣಿಗಳ ಶರೀರದಲ್ಲಿ ಆಶ್ರಯ ಪಡೆದು ಜೀವಿಸುತ್ತಿತ್ತು. ಯಾವಾಗ ಅರಣ್ಯಪ್ರದೇಶಗಳ ನಡುವೆ ಹರಿಯುತ್ತಿದ್ದ ನದಿಗಳಿಗೆ ಅಣೆಕಟ್ಟುಗಳು ನಿರ್ಮಾಣವಾದವೋ ಆಗ ಹಿನ್ನೀರಿನ ಪ್ರದೇಶದಲ್ಲಿ ಮುಳುಗಿಹೋದ ಅರಣ್ಯ ಮತ್ತು ಜನವಸತಿ, ರಸ್ತೆ, ಕಾಲುವೆಗಳಿಗಾಗಿ ನೆಲಸಮವಾದ ಅರಣ್ಯ ಪ್ರದೇಶ, ಹೀಗೆ ಅರಣ್ಯ ನಾಶದಿಂದಾಗಿ ಅಂತಿಮವಾಗಿ ಈ ಸೊಳ್ಳೆ ಮಾನವನ ರಕ್ತವನ್ನು ಆಶ್ರಯಿಸಿತು. ಕೀನ್ಯಾ ಮತ್ತು ಶ್ರೀಲಂಕಾದಲ್ಲಿ ನಿರ್ಮಿಸಿದ ಅಣೆಕಟ್ಟುಗಳಿಂದಾಗಿ ವಿವಿಧ ಜಾತಿಯ ಸೊಳ್ಳೆಗಳಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಅವುಗಳು ಹಳದಿ ಜ್ವರ, ಡೆಂಗ್ಯೂ ಜ್ವರ ಮುಂತಾದ ರೂಪವನ್ನು ತಾಳುತ್ತಿದೆ. ಸೊಳ್ಳೆಗಳ ನಿರ್ಮೂಲನಕ್ಕೆ ಡಿ.ಡಿ.ಟಿ. ಪೌಡರ್ ಸಿಂಪಡಿಸುವ ಪ್ರಕ್ರಿಯೆ ಈಗ ವಿಫಲವಾಗಿದ್ದು, ಈ ಕೀಟನಾಶಕ ಪುಡಿಯನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಸೊಳ್ಳೆಗಳು ವೃದ್ಧಿಸಿಕೊಂಡಿವೆ.

ಇವುಗಳ ಜೊತೆ ನದಿ ಹಾಗೂ ಕಡಲ ತೀರದಲ್ಲಿನ ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗ ಜಗತ್ತಿಗೆ ಸವಾಲಾಗಿದೆ. ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಜನತೆ ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ.

ನೀರಿನಲ್ಲಿ ವಾಸಿಸುತ್ತಿರುವ ಬ್ಲಾಕ್ ಪೈ ಎಂಬ ಜಾತಿಯ ಸೊಳ್ಳೆಯಿಂದಾಗಿ ಕುರುಡುತನ ಆವರಿಸಿಕೊಳ್ಳುವ ಖಾಯಿಲೆಯೊಂದು ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿದೆ. ಅಲ್ಲಿನ 26 ರಾಷ್ಟ್ರಗಳಲ್ಲಿ 3 ಕೋಟಿ ಜನ ಈ ಖಾಯಿಲೆಗೆ ತುತ್ತಾಗಿದ್ದು, 16 ಲಕ್ಷ ಮಂದಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ.

ಇದಕ್ಕಿಂತ ಭಿನ್ನವಾದ ಮತ್ತೊಂದು ಸಾಮಾನ್ಯ ಖಾಯಿಲೆಯೆಂದರೆ ಜಲಾಶಯದಲ್ಲಿ ಕೊಳೆತ ಪ್ರಾಣಿಗಳು ಹಾಗೂ ಮರಗಳಿಂದ ಕಲುಷಿತವಾದ ನೀರು ರಾಸಾಯನಿಕ ಸಿಂಪಡಿಸಿದ ಕೃಷಿ ಪ್ರದೇಶಗಳಲ್ಲಿ ಕಾಲುವೆ ಮೂಲಕ ಹಲವಾರು ನಗರಗಳಿಗೆ ಕುಡಿಯಲು ಬಳಕೆಯಾಗುತ್ತಿದ್ದು ಅನೇಕ ಮಂದಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ. ರಾಜಸ್ಥಾನದ ಒಣ ಪ್ರದೇಶದಲ್ಲಿ ಹರಿಯುತ್ತಿರುವ ಇಂದಿರಾಗಾಂಧಿ ಕಾಲುವೆಯ ನೀರು ಕುಡಿದ ಅಲ್ಲಿನ ಮಕ್ಕಳು ಕರುಳು ಬೇನೆಯಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ವಿಸ್ತೃತ ಅಧ್ಯಯನ ನಡೆಸಿದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯ ನೀರಿನಲ್ಲಿರುವ ಕಲ್ಮಶ ಹಾಗೂ ಮನುಷ್ಯನ ಮಲ ಮೂತ್ರಗಳು ಇದಕ್ಕೆ ಕಾರಣ ಎಂದು ತಿಳಿಸಿದೆ. ಇದೀಗ ನಿರ್ಮಾಣವಾಗುತ್ತಿರುವ ಸರದಾರ್ ಸರೋವರದ ಕುಡಿಯುವ ನೀರಿನ ಯೋಜನೆಗೆ ಇಂತಹದ್ದೇ ಭೀತಿ ಎದುರಾಗಿದೆ. ಒಟ್ಟಾರೆ ಜಲಾಶಯ ಮತ್ತು ಕಾಲುವೆಗಳೆಂದರೆ ಸಾಂಕ್ರಾಮಿಕ ರೋಗಗಳ ವಾಹಕಗಳು ಎಂಬಂತಾಗಿದೆ.

(ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ