Category Archives: ದಲಿತ ರೈತ ಚಳವಳಿಗಳು

ದಲಿತ ರೈತ ಚಳವಳಿಗಳು

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಪ್ರಯೋಗಶಾಲೆಯಾಗಿತ್ತು. ರೈತಸಂಘ ಪಾಳೇಗಾರರಿಗೆ ‘ಥ್ರೆಟ್’ ನೀಡಬಲ್ಲ ಸಂಘಟನೆಯಾಗಿತ್ತು. ಅಷ್ಟೆಲ್ಲ ಆಗಿಯೂ ‘ಲಿಂಗಾಯಿತರು ರೈತಸಂಘ ಬಿಟ್ಟು ಹೋಗಿಬಿಡಬಹುದು’ ಎಂಬ ಹುಷಾರಿನ ಲೆಕ್ಕಾಚಾರವನ್ನು ಮೀರಲು ಸಂಘಟನೆಗೆ ಸಾಧ್ಯವಾಗಲಿಲ್ಲ. ಅಂದರೆ ರೈತಸಂಘ ತನ್ನ ಸುತ್ತ ತಾನೇ ಕಟ್ಟಿಕೊಂಡ ಜಾತಿಬೇಲಿಯಿಂದ ನಿರ್ಣಾಯಕವಾಗಿ  ಹೊರಬರಲು ಆಗಲೇ ಇಲ್ಲ! ಈ ನಿಟ್ಟಿನಲ್ಲಿ ಶಿವಪ್ರಸಾದ್ ಹೇಳಿದ್ದು ಮಾರ್ಮಿಕ ವಾಗಿದೆ:

ಪೆರಿಯಾರ್ ಮೂವ್ಮೆಂಟ್ ಥರದ ಕೆಲವು ಸಾಂಸ್ಕೃತಿಕ ಚಳವಳಿಯ ಪ್ರಯತ್ನವನ್ನು ನಾವು ರೈತಸಂಘ ಶುರುವಾಗೋದಿಕ್ಕೆ ಮುಂಚೆ ಮಾಡಿದ್ದೊ. ಆದ್ರೆ ರೈತಸಂಘ ಶುರುವಾದ ಮೇಲೆ ಆ ರೀತಿ ಮಾತಾಡಬೇಡಿ ಅಂತ್ಲೂ ನಮಗೆ ಆದೇಶಗಳು ಬಂದವು. ಏಕೆಂದರೆ it will affect the organisation, people wont join ಅಂತ. ನನಗೆ ಅನ್ಸೋದು cultural movement ಅಂದ್ರೆ ಪೆರಿಯಾರ್ ಥರದ ಚಳವಳಿ ಆಗ್ದೆ ಇದ್ರೆ ಈ caste barrier ನ ತೆಗೆಯೋದು ತುಂಬಾ ಕಷ್ಟ. ರೈತಸಂಘದ cultural wing ಅಂತಾನೆ ಮಾಡ್ಕೊಂಡು ಈ  problem tackle ಮಾಡಬಹುದು. ಆದರೆ ರೈತಸಂಘ ಈ ಬಗ್ಗೆ ಏನೇನೂ ಚಿಂತಿಸಿದಂತೆ ಕಾಣಲಿಲ್ಲ…

ಇದೆಲ್ಲ ಸರಿ. ಆದರೆ ಪ್ರೊಫೆಸರರು ಕೊಟ್ಟ ಒಂದು ಕರೆಗೆ ರೈತರು ಲಕ್ಷಾಂತರ ಸಮೂಹವಾಗಿ ಬಂದು ಕಬ್ಬನ್ ಪಾರ್ಕಿನಲ್ಲಿ ನೆರೆದಿದ್ದನ್ನು ಕಂಡಾಗ ನಿಜಕ್ಕೂ ಅದು ನಾಡು ಕಟ್ಟಬಲ್ಲ ಸಂಘಟನೆಯಾಗೇ ಕಂಡಿತ್ತು! ವಿಚಿತ್ರವೆಂದರೆ ಅಂದಿನ ಸಭೆಯಲ್ಲಿ ತೇಜಸ್ವಿ- ಒಂದು ವೇಳೆ ರೈತರ ಸರ್ಕಾರವೇ ಬಂದರೂ, ಆ ಸರ್ಕಾರದಲ್ಲಿ ‘ರೈತರೇ ಎದುರಿಸಬೇಕಾಗಬಹುದಾದ ಗಂಡಾಂತರಗಳ’ ಬಗ್ಗೆ ಮಾತಾಡಿ ಪ್ರೊಫೆಸರರ ಸಿಟ್ಟಿಗೆ ಗುರಿಯಾಗಿದ್ದರು…!

ಎಲ್ಲರಿಗೂ ಗೊತ್ತಿದ್ದಂತೆ, ಇವೆಲ್ಲಕ್ಕೆ ನಾಂದಿಯಾದದ್ದು ಸಮಾಜವಾದಿ ಯುವಜನ ಸಭಾ ಮತ್ತು ಜಾತಿವಿನಾಶ ಸಮ್ಮೇಳನ (1973). ಇಲ್ಲಿದ್ದವರೇ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ವಾಗಿ ಕವಲೊಡೆದು ಮತ್ತೆ ಜೇಪಿ ಚಳವಳಿಗೂ ನುಗ್ಗಿದರು. ಅಂದು ಯುವಜನ ಸಭಾದಲ್ಲಿ ಒಗ್ಗೂಡಿದವರೇ ಎರಡು ದಶಕಗಳ ಕಾಲ ಇಡೀ ನಾಡಿನ ಚಿಂತನ ಪರಿಸರವನ್ನು ರೂಪಿಸಿ ಆಳಿದ್ದನ್ನು ನೆನೆದರೆ ಆಗಿನ ಸಮಾಜ ಮೈ ಮುರಿದೆದ್ದ ರೀತಿಯ ಕಲ್ಪನೆ ಬರುತ್ತದೆ. ಮತ್ತು ಆ ಸಮೂಹದ ಸದಸ್ಯರ ಸಹಚರ್ಯ-ಮನಸ್ತಾಪಗಳ ಚರಿತ್ರೆಯೇ ನಾಡಿನ ಸಾಮಾಜಿಕ/ ಸಾಂಸ್ಕೃತಿಕ ಚರಿತ್ರೆಯೂ ಆಗಿ ಗೋಚರಿಸುತ್ತದೆ.

74ರ ಬರಹಗಾರರ ಒಕ್ಕೂಟ ಜನಿಸಿದ್ದೇ ಬ್ರಾಹ್ಮಣೇತರ ಆಂದೋಲನವಾಗಿ. ಹಾಗಾಗಿ ಸಮಾವೇಶಕ್ಕೆ ಯು.ಆರ್. ಅನಂತಮೂರ್ತಿ ಯವರನ್ನು ಕರೆಯದೆ ಹೊರಗಿಟ್ಟರು. ಹಾಗೆ ಮಾಡಿದ್ದಕ್ಕೆ ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ನಂಜುಂಡಸ್ವಾಮಿಯವರ ಬಗ್ಗೆ ಬರೆಯುವಾಗ (ಪ್ರೊಫೆಸರ್ ಎಂಡಿಎನ್- ನೆನಪಿನ ಸಂಪುಟ) ಆ ಘಟನೆಯನ್ನು ಅನಂತಮೂರ್ತಿ ಮೆಲುಕು ಹಾಕುವುದು ಹೀಗೆ:

ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು… ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ’…

ಹೀಗೆ ಒಬ್ಬಂಟಿಯಾದ ಅನಂತಮೂರ್ತಿಯವರು ಪ್ರವಾಹದ ವಿರುದ್ಧ ಈಜುತ್ತಲೇ ಕರ್ನಾಟಕದಲ್ಲಿ ಹಲವು ಮುಖ್ಯ ವಾಗ್ವಾದಗಳನ್ನು ಹುಟ್ಟು ಹಾಕಿದರು. ಅಸಂಖ್ಯ ಬಾರಿ ಜೊತೆಗಾರರಿಂದ ಗೇಲಿಗೊಳಗಾಗುತ್ತ, ಜಗಳವಾಡಿದರು. ಅಷ್ಟಾದರೂ ತಮ್ಮ ನಡೆಯ ಮೂಲ ದಿಕ್ಕಿನ ಬಗ್ಗೆ ಬಹುಕಾಲ ಗೊಂದಲಗೊಳ್ಳದೆ, ನಾಡಿನ ಸಾಕ್ಷಿಪ್ರಜ್ಞೆಯ ಭಾಗವೂ ಆದರು. ಅನಂತಮೂರ್ತಿಯವರ ಈ ‘ಹಾದಿ ತಪ್ಪದ’ ಎಚ್ಚರಕ್ಕೂ ಜೊತೆಗಾರರೊಂದಿಗಿನ ಜಗಳವೇ ಕಾರಣವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಅದಕ್ಕೇ ಆಗಿನ ದೊಡ್ಡ ಜಗಳಗಳು ಕೂಡ ಕಿರಿಯರಾದ ನಮ್ಮ ಪಾಲಿಗೆ ಒಂದೇ ಕುಟುಂಬದೊಳಗಿನ ಮುನಿಸುಗಳಂತೆ ಸುಖಕರವೂ, ಸಾರ್ಥಕವೂ ಆಗಿದ್ದವು.

ಹೇಳಲೇಬೇಕಾದ ಮಾತು: ಒಟ್ಟಾರೆ ಆ ದಶಕಗಳ ಸಮಗ್ರ ಎಚ್ಚರದ ಹಿಂದೆ ಕುವೆಂಪು ನೀಡಿದ್ದ ಒಳಗಣ್ಣಿತ್ತು; ಸೃಷ್ಟಿಸಿದ್ದ ‘ಆಧ್ಯಾತ್ಮಿಕ ವೈಚಾರಿಕತೆ’ಯಿತ್ತು; ಬಂಡುಕೋರತನವಿತ್ತು. ಜೊತೆಗೆ ಲೋಹಿಯಾ ಚಿಂತನೆಯ ತಾತ್ವಿಕ ಚೌಕಟ್ಟಿತ್ತು.

ಹಾಗೂ, ಆ ಪೀಳಿಗೆಯ ಚಿಕ್ಕ ತಮ್ಮಂದಿರಂತಿದ್ದ ನನ್ನ ತಲೆಮಾರು ಈ ಎಲ್ಲ ಚಾರಿತ್ರಿಕ ಮುಖಾಮುಖಿಗಳ ವಾರಸುದಾರನಾಗಿತ್ತು.

ಒಕ್ಕೂಟದ ಸಂದರ್ಭದಲ್ಲಿ ಲಂಕೇಶರ ಮಾತಿಗೆ ಉತ್ತರವಾಗಿ ಅನಂತಮೂರ್ತಿ ಹೇಳಿದ ಮಾತುಗಳು:

…ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ‘ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ’… ಸುಮಾರು 1967ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ ಐತಾಳ್ರಿಗೆ ಉತ್ತರವಾಗಿ ‘ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ….

ಹೀಗೆ ಬರೆದುಕೊಂಡ, ಹಾಗೇ ನಮ್ಮ ಸಮಾಜದ ಜಾತಿಯೇ ಮುಂತಾದ ಬಿಕ್ಕಟ್ಟುಗಳನ್ನು ಅಸೀಮ ಧೈರ್ಯದಿಂದ ಎದುರಿಸಿ ವಿಶ್ಲೇಷಿಸುತ್ತಲೇ ಸಾಗಿದ ಅನಂತಮೂರ್ತಿ ಕೂಡ ಆಗಾಗ ಜಾತಿಪದ್ಧತಿಯಲ್ಲೂ ‘ಸೃಜನಶೀಲತೆ’ ಕಾಣುತ್ತ  ನೀವೇ ಬ್ರಾಹ್ಮಣರ ಬಗ್ಗೆ ಕಟುವಾಗಿ ಮಾತಾಡಿ ಅದನ್ನು ನಂಜುಂಡಸ್ವಾಮಿಯವರು ಮಾತಾಡಿದರೆ ಅಸಹನೆಗೆ ಒಳಗಾಗುತ್ತೀರಿ. ಯಾಕೆ ಹೀಗೆ? ಎಂಬ- ದೇವನೂರ ಮಹಾದೇವರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಹಾಗೇ ಅವರು ಉಲ್ಲೇಖಿಸಿದ ‘ಬ್ರಾಹ್ಮಣ- ಶೂದ್ರ’ (ಲೋಹಿಯಾ ಚಿಂತನೆಯಿಂದ ಪ್ರೇರಣೆ ಪಡೆದ) ಲೇಖನ ಕೂಡ ಅನಂತ ಮೂರ್ತಿಯವರಿಗೇ ವಿಶಿಷ್ಟವಾದ ‘ದ್ವಂದ್ವ ಸಾಮರಸ್ಯ’ದ ನುಣುಪು ಶೈಲಿಯಲ್ಲಿದ್ದುದನ್ನೂ ಮರೆಯಬೇಕಿಲ್ಲ. ಜೊತೆಗೆ ಅವರು ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ಹಿರಿಯರಾಗಿ ಆಗಾಗ ಇಂಥ ತಪ್ಪುಗಳನ್ನು ಮಾಡುವುದನ್ನು ಈವತ್ತಿಗೂ ನಿಲ್ಲಿಸಿಲ್ಲ; ನಮ್ಮ ಗೌರವಪೂರ್ವಕ ಆಕ್ಷೇಪಣೆಗಳೂ ನಿಂತಿಲ್ಲ…!

ಇಲ್ಲಿ ಆ ಕಾಲದ ಪ್ರಮುಖ ತವಕ, ತಾಕಲಾಟ, ದುಗುಡಗಳನ್ನು ತಿಳಿಯಲೆತ್ನಿಸುತ್ತಿದ್ದೇನೆ. ಆಗಿನ ಬಹುದೊಡ್ಡ ಪ್ರೇರಕ ಘಟನೆಗಳಲ್ಲೊಂದು ಎಂದು ಗುರುತಿಸಿ ಹೇಳುವುದಿದ್ದರೆ ಅದು ಬಸವಲಿಂಗಪ್ಪನವರ ಬೂಸಾ ಪ್ರಕರಣ. 70ರ ದಶಕದ ಸಮಗ್ರ ವೈಚಾರಿಕ ಎಚ್ಚರಕ್ಕೆ ನಿಮಿತ್ತವಾಗಿ ನಮ್ಮ ಯುಗದ ಮುಖ್ಯ ಮುಖಾಮುಖಿಗಳನ್ನು ಮುನ್ನೆಲೆಗೆ ತಂದ ಘಟನೆಯಿದು. ಈ ಪ್ರಕರಣದ ಪ್ರತಿಧ್ವನಿಯಾಗಿ ಜನಿಸಿದ ದಲಿತ ಲೇಖಕ ಕಲಾವಿದರ ಯುವ ಸಂಘಟನೆ (ದಲೇಕಯುಸಂ)- ದಲಿತ ಪ್ರಜ್ಞೆಯ ಮೊಟ್ಟ ಮೊದಲ ವೇದಿಕೆ. ಈ ಸಂಘಟನೆ ಹುಟ್ಟಿದ್ದು ತುರ್ತುಸ್ಥಿತಿಯಲ್ಲಿ (1976). ಅನಂತ ಮೂರ್ತಿಯವರ ಪ್ರಕಾರವೇ, ಒಗ್ಗೂಡಲು ಅಥವಾ ಜಾತಿವಾದಿಯಾಗಲು ನೂರಕ್ಕೆ ನೂರು ಅರ್ಹತೆ ಪಡೆದ ದಲಿತ ಸಮೂಹ (ಶಿವಮೊಗ್ಗದ ಕಬ್ಬು ಬೆಳೆಗಾರರ ಸಂಘ, ಹಾಸನದ ಸಮತಾ ವೇದಿಕೆಯೊಂದಿಗೆ ಸೇರಿಕೊಂಡು ರೈತಸಂಘವಾದ ಹಾಗೆಯೇ) ಅನತಿ ಕಾಲದಲ್ಲೇ ತಾನು ಪ್ರೊ. ಬಿ. ಕೃಷ್ಣಪ್ಪನವರ ಭದ್ರಾವತಿ ಕಾರ್ಮಿಕ ಸಂಘಟನೆಯೊಂದಿಗೆ ವಿಲೀನಗೊಂಡು ದಲಿತ ಸಂಘರ್ಷ ಸಮಿತಿಯಾಯಿತು. ಹುಟ್ಟುತ್ತಲೇ ಲೇಖಕ ಕಲಾವಿದರ ಬಳಗವಾಗಿದ್ದ ಈ ಸಂಘಟನೆ, ಆ ಕಾರಣಕ್ಕೇ ದೊಡ್ಡ ದಲಿತೇತರ ಸಮೂಹದ ಸಕ್ರಿಯ ಸಹಾನುಭೂತಿಯನ್ನೂ ಪಡೆಯಿತು. ಮುಸ್ಲಿಮರ ಹೊರತು, ಬ್ರಾಹ್ಮಣರಾದಿಯಾಗಿ ಎಲ್ಲ ಸಮುದಾಯಗಳ ಪ್ರತಿನಿಧಿಗಳೂ ದಲಿತ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಮತ್ತು ಜಾತಿವಿನಾಶವನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದ್ದ ದಲಿತ ಚಳವಳಿಯಿಂದಾಗಿ, ದಲಿತ ಪ್ರಜ್ಞೆ ಎಂಬುದು ಒಟ್ಟು ಸಾಮೂಹಿಕ ಸಂವಾದದ ಕೇಂದ್ರ ಪ್ರಶ್ನೆಯಾಯಿತು; ದಲಿತ ಚಳವಳಿಯೆಂಬುದು ಸಮಷ್ಟಿ ನಡಿಗೆಯ ಪವಾಡವಾಯಿತು.

ಬರಹಗಾರರ ಒಕ್ಕೂಟ ತನ್ನ ಸಮಾವೇಶದ ಅಂಗವಾಗಿ, ಲಂಕೇಶರ ಸಂಪಾದಕತ್ವದಲ್ಲಿ ಹೊರತಂದ ಪಾಂಚಾಲಿ ದೀಪಾವಳಿ/ ರಾಜ್ಯೋತ್ಸವ ವಿಶೇಷಾಂಕವೇ, ಬೂಸಾ ಪ್ರಕರಣ ಹಾಗೂ ದಲಿತ ಚಿಂತನೆ ಆ ಕಾಲಘಟ್ಟವನ್ನು ಆವರಿಸಿಕೊಂಡ ರೀತಿಗೆ ಸಾಕ್ಷಿಯಾಗಿದೆ. (ಶ್ರೀಕೃಷ್ಣ ಆಲನಹಳ್ಳಿಯವರ ‘ಪರಸಂಗದ ಗೆಂಡೆತಿಮ್ಮ’ ಮೊದಲು ಅಚ್ಚಾಗಿದ್ದು ಈ ಸಂಚಿಕೆಯಲ್ಲೇ.) ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಲೇಖನ- ‘ಪಂಚಮರನ್ನು ಮರೆತ ಪಂಚವಾರ್ಷಿಕ ಯೋಜನೆ’. ಕವಿ ಸಿದ್ದಲಿಂಗಯ್ಯ ‘ಬೂಸಾ ಪ್ರಕರಣ- ನನ್ನ ಅನುಭವ’ ಬರೆದರೆ, ವಿಜಯ ಸಾಸನೂರರು ಬರೆದ ಕತೆ- ‘ಅಸ್ಪೃಶ್ಯ’! ಸ್ವತಃ ಲಂಕೇಶರು ಬರೆದ ಎರಡು ವ್ಯಕ್ತಿಚಿತ್ರಗಳು- ಜೇಪಿ ಮತ್ತು ಬಸವಲಿಂಗಪ್ಪ. ದೇವನೂರ ಮಹದೇವ ಮತ್ತು ಶ್ರೀಧರ ಕಲಿವೀರ- ಈ ಇಬ್ಬರು ಬರೆದ ಇಬ್ಬರು ‘ಹೊಲೆಯ’ರ ರಕ್ತಸಂವೇದನೆಯ ಮಾತುಗಳು; ಅಷ್ಟೇಕೆ, ಸಾಕ್ಷಾತ್ ಡಾ. ಎಂ. ಚಿದಾನಂದಮೂರ್ತಿ ಬರೆದಿದ್ದು- ‘ದೇವದಾಸಿಯೊಬ್ಬಳೊಡನೆ ಸಂಭಾಷಣೆ’…!

ಆಗಿನ ಎಲ್ಲ ಪ್ರಗತಿಪರ ಕದಲಿಕೆಗಳೂ ಹೇಗೆ ದಲಿತ ಪ್ರಜ್ಞೆಯ ಸುತ್ತಲೇ ಗಸ್ತು ತಿರುಗುತ್ತಿದ್ದವು ಎಂಬುದಕ್ಕೆ, ಕಮ್ಯೂನಿಸ್ಟ್ ತಾತ್ವಿಕತೆಯ ಸಾಂಸ್ಕೃತಿಕ ಸಂಘಟನೆ ‘ಸಮುದಾಯ’, ‘ಬಂಡಾಯ ಸಾಹಿತ್ಯ ಸಂಘಟನೆ’ಗಳ ಚಟುವಟಿಕೆಗಳನ್ನೂ ಗಮನಿಸಬಹುದು.

ಹೀಗೆಲ್ಲ ಇದ್ದರೂ, ಜಾತಿವಿನಾಶವೆಂಬುದು ರೈತಸಂಘದ ಪಾಲಿಗೆ ಕೇಂದ್ರ ಪ್ರಶ್ನೆಯಾಗದೆ ಹೋದದ್ದರಿಂದಲೇ, ಆ ಸಂಘಟನೆ-  ಆರಂಭದಲ್ಲೇ ಸೂಚಿಸಿದ ಹಾಗೆ, ಒಮ್ಮೆ ದಲಿತರ ಮಿತ್ರನಾಗಿ ಇನ್ನೊಮ್ಮೆ ಶತ್ರುವಾಗಿ ದ್ವಿಪಾತ್ರಾಭಿನಯ ಮಾಡುತ್ತ ಬಂತು!

ಇಲ್ಲಿ ನನಗೆ ಮುಖ್ಯವಾದದ್ದು- ದಲಿತ ಸಂಘರ್ಷ ಸಮಿತಿ, ಯಾವ ಮಾನದಂಡದಲ್ಲೂ ದಲಿತನಲ್ಲದ ನನ್ನಂಥವರನ್ನೂ ಸಂಘಟನೆಯ ಅಂತರಂಗಕ್ಕೆ ಬಿಟ್ಟುಕೊಂಡು ಪೊರೆದದ್ದು. ದೇವನೂರ ಮಹಾದೇವ, ಬಹುಕಾಲ ನಾನು ಮನಸಾ ಸ್ವೀಕರಿಸಿದ್ದ ನನ್ನ ನಾಯಕರಾಗಿದ್ದರು. ಜೊತೆಗೆ ನನ್ನ ತಿಳುವಳಿಕೆಯ ಬಹುಭಾಗ ನನಗೆ ದಕ್ಕಿದ್ದೇ ದಲಿತ ಸಂಘಟನೆಯ ಸಂಪರ್ಕದಲ್ಲಿ. ನಾನೊಬ್ಬನೇ ಅಲ್ಲ, ನನ್ನ ಥರದ ಇನ್ನೂ ಅನೇಕರನ್ನು ನಾನೇ ಬಲ್ಲೆ. ಇಂದಿಗೂ ದಲಿತ ಚಿಂತನೆಯೇ ನನ್ನ ತಾತ್ವಿಕ ತವರುಮನೆ ಎಂದು ಹೇಳಲು ನನಗೆ ಯಾವ ಅಳುಕೂ ಇಲ್ಲ. (ಆತ್ಮೀಯರೊಬ್ಬರು, ನನಗೆ ‘ದಲಿತ ಕಾಮಾಲೆ’ ಎಂದು ಛೇಡಿಸಿದ್ದೂ ಇದೆ!)

ಆ ಎರಡೂ ಸಂಘಟನೆಗಳ ವ್ಯತ್ಯಾಸ ಇನ್ನೂ ಸ್ಪಷ್ಟವಾಗಬೇಕಾದರೆ, ಅವೆರಡರ ನಿರ್ದಿಷ್ಟ ಕಾರ್ಯಕ್ರಮಗಳನ್ನೇ ನೋಡಬಹುದು.

ಎಲ್ಲರಿಗೂ ಗೊತ್ತು- ರೈತಸಂಘದ ಮುಖ್ಯ ಸಾಧನೆ ಅಧಿಕಾರಶಾಹಿಯನ್ನು ಮಣಿಸಿದ್ದು. ‘ಬ್ರಹ್ಮ ಬಂದರೂ ಬಗ್ಗದ’ ಪೊಲೀಸರೂ ಸೇರಿದಂತೆ ಎಲ್ಲ ಅಧಿಕಾರಿಗಳೂ, ವಿಶೇಷವಾಗಿ ರೈತ ಚಳವಳಿ ಪ್ರಬಲವಾಗಿದ್ದ ಜಿಲ್ಲೆಗಳಲ್ಲಿ, ಹಸಿರು ಶಾಲು ಕಂಡರೆ ತಗ್ಗಿ ಬಗ್ಗಿ ನಡೆಯುವ ಪರಿಸ್ಥಿತಿ ಉಂಟಾಗಿದ್ದು ಹುಡುಗಾಟದ ಮಾತಲ್ಲ. ರೈತ ಕಾರ್ಯಕರ್ತರು ಅಧಿಕಾರಿಯ ಕೊರಳಪಟ್ಟಿ ಹಿಡಿದು, ಅವನ ಜೋಬಿಗೆ ಕೈ ಹಾಕಿ, ತಿಂದ ಲಂಚ ವಾಪಸು ಕೊಡಿಸಿದ ನಿದರ್ಶನಗಳು ನನಗೇ ಗೊತ್ತು. ಇನ್ನೊಂದು ಮಹತ್ವದ ಕಾರ್ಯಕ್ರಮ- ಮರುಜಫ್ತಿ,- ಕೆ.ಟಿ. ಶಿವಪ್ರಸಾದ್ರ ಪರಿಕಲ್ಪನೆ. ಸಹಕಾರ ಸಂಘಗಳ ಅಧಿಕಾರಿಗಳು ಜಫ್ತಿ ಮಾಡಿಕೊಂಡು ಹೋದ ಮನೆ ಸಾಮಾನುಗಳನ್ನು ರೈತರೇ ಮರುಜಫ್ತಿ ಮಾಡಿ ವಾಪಸು ತರುವುದು! ಸಾಲ ವಸೂಲು ಮಾಡಲು ಬರುವ ಆ ಅಧಿಕಾರಿಗಳು ರೈತರ ಮನೆಯ ಪಾತ್ರೆ ಪಡಗಗಳನ್ನೂ ಬಿಡದೆ ಜಫ್ತಿ ಮಾಡಿ ಒಯ್ಯುವುದು ಅತ್ಯಾಚಾರಕ್ಕೆ ಸಮಾನವಾದ ದೌರ್ಜನ್ಯ. ಗುಂಡೂರಾಯರ ಕಾಂಗ್ರೆಸ್ ಸರ್ಕಾರದಲ್ಲಿ ಅವ್ಯಾಹತವಾಗಿ ನಡೆದ ಅತಿರೇಕವಿದು. ‘ನನ್ನ ಕಣ್ಣೆದುರೇ ನಮ್ಮ ಮನೆ ಜಫ್ತಿಯಾಗಿತ್ತು. ಅದು ತರುವ ವೇದನೆ ಅಪಾರ. ಅವಮಾನ, ಅಸಹಾಯಕತೆ, ಆಕ್ರಂದನ ಜೊತೆಯಾಗಿಯೇ ತರುವ, ಹಳ್ಳಿಗರ ವ್ಯಕ್ತಿತ್ವವನ್ನೇ ನಾಶಪಡಿಸುವ ಕಾರ್ಯಕ್ರಮವದು. ಈ ಮರುಜಫ್ತಿ ರೈತರಲ್ಲಿ ಆತ್ಮಸ್ಥೈರ್ಯವನ್ನು ಹುಟ್ಟುಹಾಕಿತು. ಅಧಿಕಾರಿಗಳನ್ನು ಕಂಡರೆ ಹೆದರುತ್ತಿದ್ದವರು ಕಪಾಳಕ್ಕೆ ಬಾರಿಸಲು ಹಿಂದೆಗೆಯದಂತೆ ಮಾಡಿಸಿತು…’ ಎಂದು ರೈತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕರಾಗಿದ್ದ ಪಾಂಡುರಂಗ ವಿಠಲ (ಕಲ್ಲರಳಿ ಹೂವ್ವಂತೆ ಕೃತಿಯಲ್ಲಿ) ನೆನೆಸಿಕೊಂಡಿದ್ದರು. (ಇದನ್ನು ಬರೆಯುತ್ತಿರುವ ಸಂದರ್ಭದಲ್ಲೇ ಕಡಿದಾಳು ಶಾಮಣ್ಣನವರ ಆ ದಶಕ ಎಂಬ ಅಪೂರ್ವ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಈ ಜಫ್ತಿ ಎಂಬ ಹೆಸರಿನ ಅತ್ಯಾಚಾರದ ಎದೆಯೊಡೆಯುವ ವಿವರಗಳಿವೆ…)

ಅದು ಹಾಗಿದ್ದರೂ, ಅಧಿಕಾರಿಗಳಿಗೆ ‘ಕಪಾಳಕ್ಕೆ ಬಾರಿಸುವುದು’; ಅಥವಾ ಪ್ರೊಫೆಸರ್ ಸ್ವತಃ ಒಮ್ಮೆ ರಾಮಕೃಷ್ಣ ಹೆಗಡೆಯವರನ್ನು ‘ಕಂಬಕ್ಕೆ ಕಟ್ಟಿ ಹಾಕಿ ಹೊಡೆಸುತ್ತೇವೆ’ ಅಂದಿದ್ದು, (ಆರಂಭದ ‘ಕರಿಮೀನು’ ಪ್ರಸಂಗ ಸಹ)- ಸೂಚಿಸುವುದು ಫ್ಯೂಡಲ್ ಮನೋಧರ್ಮವನ್ನೇ ಅಂದರೆ ಕೆಲವರಿಗೆ ಇರಿಸು ಮುರಿಸಾಗಬಹುದು. (ಫ್ಯೂಡಲ್ ಶಬ್ದದ ಸೀಮಿತ ಅರ್ಥವ್ಯಾಪ್ತಿ ತಿಳಿದೂ ಎಲ್ಲರ ಗ್ರಹಿಕೆಗೆ ಅನುವಾಗಲೆಂಬ ಒಂದೇ ಕಾರಣಕ್ಕೆ ಅದನ್ನು ಬಳಸುತ್ತಿದ್ದೇನೆ.)

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

-ಎನ್.ಎಸ್. ಶಂಕರ್

‘ರೈತಸಂಘ ರೈತರ ಸಮಸ್ಯೆಗಳನ್ನು ಇಡೀ ರಾಜ್ಯದ ಆರ್ಥಿಕ ಸಂದರ್ಭದಲ್ಲಿಟ್ಟು ಕೃಷಿ ಮತ್ತು ಕೈಗಾರಿಕೆ, ರೈತ ಮತ್ತು ಸರ್ಕಾರದ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ವಿಶ್ಲೇಷಿಸಿತು… ಆದರೆ ರೈತಸಂಘ ಪ್ರಬಲಗೊಂಡಂತೆಲ್ಲ ಅದರ ಪ್ರಾಬಲ್ಯವೇ ಕೆಲವು ರಾಜಕೀಯ ಪ್ರಶ್ನೆಗಳನ್ನು ಹುಟ್ಟು ಹಾಕಿತು… ರೈತರ ಹೋರಾಟ ಉಗ್ರವಾಗತೊಡಗಿದಷ್ಟೂ ಗ್ರಾಮದ ಇತರರ ತೊಳಲಾಟ ಹೆಚ್ಚಾಗಿದ್ದು ಈ ಹೋರಾಟದ ರಾಜಕೀಯ ಪ್ರತಿಧ್ವನಿಯಂತಿದೆ…’ ಎಂದು ಲಂಕೇಶ್ “ಟೀಕೆ ಟಿಪ್ಪಣಿ”ಯಲ್ಲಿ ಬರೆದರು (ರೈತರು: ಒಂದು ರಾಜಕೀಯ ಟಿಪ್ಪಣಿ). ಅವರು ಎತ್ತಿಕೊಂಡ ಉದಾಹರಣೆ- ಶಿವಮೊಗ್ಗದ ಕೆಲವು ಹಳ್ಳಿಗಳಲ್ಲಿ ರೈತರು ‘ಗ್ರಾಮಕ್ಕೆ ಅಧಿಕಾರಿಗಳ ಪ್ರವೇಶ ಸಂಜೆ 4ರಿಂದ 5’ ಎಂದು ಹಾಕಿದ ದಿಟ್ಟ ಬೋರ್ಡ್ ಗಳದ್ದು. ಅಂದರೆ ಗ್ರಾಮದ ಇತರ ಅಸಹಾಯಕರ ನರಕವನ್ನು ಈ ಬೋರ್ಡ್ ಇನ್ನೂ ಘೋರವಾಗಿಸಬಲ್ಲುದು ಎಂಬುದು ಲಂಕೇಶರ ಆತಂಕವಾಗಿತ್ತು. ಅವರ ಈ ವಾದವನ್ನು ಮೊದಲು ಪ್ರಶ್ನಿಸಿದ್ದು ತೇಜಸ್ವಿ.

‘ರೈತಸಂಘದಲ್ಲಿ ಎಲ್ಲ ಜಾತಿಗಳಿಗೆ ಪ್ರಾತಿನಿಧ್ಯ ಕಡಿಮೆ ಎಂದಿದ್ದೀರ. ಆದರೆ ರೈತಸಂಘ ಮೂಲಭೂತವಾಗಿ ಆರಂಭವಾದದ್ದು ಒಂದು ಕಸುಬಿನವರ ಅಂದರೆ ರೈತರ ಸಂಘಟನೆಯಾಗಿ ಅಲ್ಲವೆ? ಜಾತಿಗಳ ಪ್ರಕಾರ ಉದ್ಯೋಗ ಹಂಚಿರುವ ಈ ದೇಶದಲ್ಲಿ ಚಪ್ಪಲಿ ಮಾಡುವವರ ಸಂಘಟನೆ ಮಾಡಿದರೂ ಯಾವುದೋ ಒಂದು ಜಾತಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದಿಲ್ಲವೆ?

‘ರೈತಸಂಘ ಇತರರ ಮುಖವಾಣಿಯಾಗಲು ಯತ್ನಿಸಬೇಕೆಂದು ಹೇಳಿದ್ದೀರಿ. ಆದರೆ ನನ್ನ ದೃಷ್ಟಿಯಲ್ಲಿ ಇದು ಅನಗತ್ಯ. ಯಾವ ಸಂಘಟನೆಯಾದರೂ ತನಗೆ ಸಂಬಂಧಿಸಿಲ್ಲದ ಜನರ ಮುಖವಾಣಿಯಂತೆ ಯಾಕೆ ನಾಟಕವಾಡಬೇಕು?…  ಎಂದರೆ ಪ್ರತಿ ಸಂಘಟನೆಯೂ ಗ್ರಾಮದ ಇತರರ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗದಂತೆ ನಿಲುವನ್ನು ತಗೊಂಡರೆ ಸಾಕೆಂದು ನನ್ನ ಚಿಂತನೆ. ನೀವು ಕೊಟ್ಟ ಬೋರ್ಡ್ನ ಉದಾಹರಣೆಯೂ ಸರಿಯಾದುದೆಂದು ನನಗನ್ನಿಸುವುದಿಲ್ಲ. ನಮ್ಮ ಗ್ರಾಮಗಳಿಗೆ ಯಾರಾದರೂ ಸರ್ಕಾರಿ ಅಧಿಕಾರಿ ಯಾವುದೇ ಜಾತಿಯವನ ಅಥವಾ ಕಸುಬಿನವನ ಯೋಗಕ್ಷೇಮ ಕೇಳಲು ಬರುತ್ತಿದ್ದಾನೆಂದು ತಿಳಿದಿದ್ದೀರಾ? ರೈಡ್ ಮಾಡಲು, ಶರಾಬು ಕಾಯಿಸುವವರನ್ನು ಹಿಡಿಯಲು, ಸಾಲ ವಸೂಲಿ, ಮನೆ ಜಫ್ತಿ, ಇಂತಹುವಲ್ಲದೆ ಇನ್ಯಾವ ಕಾರಣಕ್ಕಾದರೂ ಯಾವನಾದರೂ ಸರ್ಕಾರಿ ಅಧಿಕಾರಿ ಗ್ರಾಮಗಳ ಪರಿಧಿಯೊಳಕ್ಕೆ ಕಾಲಿಟ್ಟ ಉದಾಹರಣೆ ಇದೆಯೆ?…

‘ರೈತಸಂಘ ರಚನಾತ್ಮಕ ಕಾರ್ಯಕ್ರಮಗಳ ಮೇಲೆ ತನ್ನ ಸಂಘಟನೆಯನ್ನು ಬೆಳೆಸಲಿಲ್ಲ ಎನ್ನುವ ನಿಮ್ಮ ವಾದದಲ್ಲಿ ತಿರುಳಿದೆ. ಆದರೆ ಇಡೀ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ಪರಿವರ್ತನೆಗೆ ಯತ್ನಿಸಬೇಕೆಂದು ನೀವು ಹೇಗೆ ಆಶಿಸುತ್ತೀರ? ಜೀವನದ ಎಲ್ಲ ರಂಗಗಳಲ್ಲೂ ಅವರು ರಣಕಹಳೆ ಊದಿ ಯುದ್ಧ ಆರಂಭಿಸಲು ಶಕ್ಯವೇ?…’ ಎಂದು ಕಿಚಾಯಿಸಿದರು ತೇಜಸ್ವಿ.

ಇದಕ್ಕೆ ಲಂಕೇಶ್ ನೀಡಿದ ಮಾರುತ್ತರವನ್ನೂ ನೋಡಬೇಕು. ‘ಅತ್ಯಂತ ವೈಜ್ಞಾನಿಕವಾದ’ ವೆಂಕಟಸ್ವಾಮಿ ವರದಿ ಪರವಾಗಿ ನಂಜುಂಡಸ್ವಾಮಿ ಮತ್ತು ರಾಮದಾಸ್ ಎಷ್ಟು ವಾದಿಸಿದರೂ (ತೇಜಸ್ವಿ ಬರೆದ ಪ್ರಕಾರ ‘ರೈತರೆದುರು ತಮ್ಮ ನಿಲುವನ್ನು ವಿವರಿಸಿ ಅವರಿಂದ ಬೈಸಿಕೊಂಡು ಬಂದರೂ’) ಬಹುಪಾಲು ರೈತಸಂಘ, ವರದಿಯ ವಿರುದ್ಧವೇ ಆರ್ಭಟಿಸಿ ಗದ್ದಲವೆಬ್ಬಿಸಿತ್ತು. (ಅಂದರೆ ವರದಿ ವಿಷಯದಲ್ಲಿ ದೇವೇಗೌಡರ ನಿಲುವಿಗೂ, ರೈತಸಂಘದ ನಿಲುವಿಗೂ ವ್ಯತ್ಯಾಸವಿರಲಿಲ್ಲ!) ಜೊತೆಗೆ, ಜಿಲ್ಲೆಯೊಂದರಲ್ಲಿ ರೈತಸಂಘದ ಪದಾಧಿಕಾರಿಗಳು ಮತ್ತು ದಲಿತರಿಗೆ ಮಾರಾಮಾರಿ ನಡೆದು ಹರಿಜನರ ಕೈ ಕಾಲು ಮುರಿದದ್ದು; ಇನ್ನೊಂದು ಜಿಲ್ಲೆಯಲ್ಲಿ ರೈತ ಮುಖಂಡರು ಹಣ ಎತ್ತುವ ಹಾಗೂ ಕಳ್ಳನಾಟಾ ಸಾಗಾಟದ ಆಪಾದನೆಗೆ ಒಳಗಾಗಿದ್ದು; ಮತ್ತು ನಿಂತಲ್ಲೆಲ್ಲ ಚುನಾವಣೆಯಲ್ಲಿ ಸೋತಿದ್ದು- ಈ ನಾಲ್ಕು ಅಂಶಗಳನ್ನು ಉಲ್ಲೇಖಿಸುವ ಲಂಕೇಶರು ‘ನಾವು ರೈತ ಚಳವಳಿಯ ಮೂಲೋದ್ದೇಶಗಳನ್ನು ಹೇಗೆ ಮರೆಯಬಾರದೋ, ಹಾಗೆಯೇ ಸರ್ಕಾರದ ಮೂಲೋದ್ದೇಶಗಳನ್ನೂ ಮರೆಯಬಾರದು. ಸರ್ಕಾರ ಇರಬೇಕಾದ್ದು ರೈತರಿಗೆ ನೆರವಾಗುವುದಕ್ಕೆ ಎಂಬುದು ನಿಜ. ಸರ್ಕಾರ ಇರಬೇಕಾದ್ದು ರಕ್ಷಣೆಯೇ ಇಲ್ಲದ ಜನಕ್ಕೆ, ನಿಲ್ಲಲು ನೆಲೆಯಿಲ್ಲದೆ ಹಳ್ಳಿಗಳಲ್ಲಿನ ಉಳ್ಳವರ ಗರ್ಜನೆಗೆ ನಡುಗುವ ಜನಕ್ಕೆ ರಕ್ಷಣೆ ನೀಡಲು ಕೂಡ ಎಂಬುದು ಅಷ್ಟೇ ನಿಜ’ ಎಂದು ನೆನಪಿಸಿದರು.

ಆಗ ನಮಗೂ ಬಿಸಿರಕ್ತದ ‘ಸಹಜ ಅವಿವೇಕದ’ ವಯಸ್ಸು. ಲಂಕೇಶ್ ಪತ್ರಿಕೆಯಲ್ಲಿ ಈ ವಾಗ್ವಾದವನ್ನು ಓದಿಕೊಂಡಾಗ ನಮ್ಮ ಕಣ್ಣಿಗೆ ಲಂಕೇಶರು ಪೂರ್ವಗ್ರಹ ಪೀಡಿತರಾಗಿಯೂ, ತೇಜಸ್ವಿ ಹೀರೋ ಆಗಿಯೂ ಕಂಡಿದ್ದರು. ಈಗ ಯೋಚಿಸಿದರೆ, ಲಂಕೇಶ್ ಚಿಂತನೆಯ ಹಿಂದಿನ ವಿವೇಕ ಮನ ತಟ್ಟುತ್ತದೆ. ಇದರ ಎದುರು ತೇಜಸ್ವಿ, ಯಾವ ಜ್ವಲಂತ ಪ್ರಶ್ನೆಗಳ ಗೋಜಿಗೂ ಹೋಗದೆ ರೈತಸಂಘದ ಸಮರ್ಥಕರಾಗಿ ಒಳಗಿನಿಂದ ವಾದ ಹೂಡಿದಂತೆ ತೋರುತ್ತದೆ. ತೇಜಸ್ವಿ ನಿಲುವನ್ನು ದೇವನೂರ ಮಹಾದೇವರ ‘…ರೈತಸಂಘವು ಅಸ್ಪೃಶ್ಯ ಕೂಲಿ ನಾಯಕತ್ವ ಪಡೆಯದೆ, ಹಾಗೇ ದಲಿತ ಸಂಘವು ಜಲಗಾರ ನಾಯಕತ್ವ ಪಡೆಯದೆ, ಅವು ಎಷ್ಟೇ ಬೊಬ್ಬೆ ಹಾಕಿದರೂ ಅಷ್ಟೊ ಇಷ್ಟೊ ದಕ್ಕಿಸಿಕೊಳ್ಳಬಹುದೇ ಹೊರತು, ಅಂದರೆ ಅರೆ ಹೊಟ್ಟೆಯ ರೈತಸಂಘ ಮುಕ್ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು, ಹಾಗೆ ಹೊಟ್ಟೆಗಿಲ್ಲದ ದಲಿತಸಂಘ ಕಾಲು ಹೊಟ್ಟೆ ತುಂಬಿಸಿಕೊಳ್ಳಬಹುದೇ ಹೊರತು ಈ ನಾಡ ಕಟ್ಟುವ ಸಂಘಟನೆಗಳಾಗವು’ ಎಂಬ ಆಶಯದ ಜತೆ ಇಟ್ಟು ನೋಡಿದರೆ, ತೇಜಸ್ವಿ ವಾದದ ಸಮೀಪದೃಷ್ಟಿದೋಷ ಮನವರಿಕೆಯಾಗುತ್ತದೆ…

ಬರೀ ಇಷ್ಟನ್ನೇ ಹೇಳಿದರೆ, ರೈತಚಳವಳಿಯ ‘ವಿರುದ್ಧ ದಡ’ದಲ್ಲಿ ನಿಂತು ಒಮ್ಮುಖ ವಾದ ಹೂಡಿದಂತಾಗಬಹುದು. ಬೇಡ, ಈ ಎರಡೂ ಸಂಘಟನೆಗಳ ಪ್ರಾಮಾಣಿಕ ಮನುಷ್ಯ ಪ್ರಯತ್ನಗಳನ್ನು ಪರಿಶೀಲಿಸೋಣ. ಯಾಕೆಂದರೆ ಆಗ ಏನು ಸಾಧ್ಯವಿತ್ತು, ಏನು ಸಾಧ್ಯವಾಯಿತು ಎಂಬುದನ್ನು ಗಮನಿಸಿ ಮಾತಾಡದಿದ್ದರೆ ಎಲ್ಲ ಆರಾಮಕುರ್ಚಿ  ಕಲಾಪವಾಗಬಹುದು.

ನಿದರ್ಶನವಾಗಿ ಇಲ್ಲಿ ಎರಡೂ ಸಂಘಟನೆಗಳ ನೈತಿಕ ಸ್ಥೈರ್ಯವನ್ನು ಒರೆಗೆ ಹಚ್ಚಿದ ಬಾಳ್ಳುಪೇಟೆ ಘಟನೆಯನ್ನು ನೋಡೋಣ. ರೈತಸಂಘದ ಮುಂದಾಳುಗಳಲ್ಲಿ ಒಬ್ಬರಾಗಿದ್ದು ನಂತರ ದಲಿತ ಸಂಘಟನೆ ಕಡೆ ವಾಲಿದ ಕಲಾವಿದ ಗೆಳೆಯ ಕೆ.ಟಿ. ಶಿವಪ್ರಸಾದ್ ಗೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯೇ ಕಾರ್ಯಕ್ಷೇತ್ರವಾಗಿತ್ತು. ಶಿವಪ್ರಸಾದ್ ಒಂದು ರೀತಿಯಲ್ಲಿ ಎರಡೂ ಸಂಘಟನೆಗಳ ಸಜೀವ ಕೊಂಡಿಯಾಗಿದ್ದವರು. ಮತ್ತು ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಹೋರಾಟಕ್ಕೆ ಉತ್ತಮ ಮಾದರಿಯೂ ಆಗಿತ್ತು. ಅಲ್ಲಿಗೆ ಹತ್ತಿರದ ರಾಜೇಂದ್ರಪುರ ಎಂಬ- ಕೇವಲ ದಲಿತರೇ ಇದ್ದ- ಊರಿನಲ್ಲಿ ಪಕ್ಕದ ಎಸ್ಟೇಟ್ ಮಾಲೀಕನೊಬ್ಬ ಇಬ್ಬರು ಹರಿಜನರ ಮನೆಗಳೂ ಸೇರಿ ಜನ ತಿರುಗಾಡುವ ದಾರಿಯೆಲ್ಲ ಸೇರಿಸಿಕೊಂಡು ಬೇಲಿ ಹಾಕಿಬಿಟ್ಟ. ಪರಿಣಾಮ ಅಲ್ಲಿನ ದಲಿತರಿಗೆ ನಾಗರಿಕ ಸಂಪರ್ಕವೇ ತಪ್ಪಿ ಹೋಗುವಂತಾಯಿತು. ಆಗ ಇದರ ವಿರುದ್ಧ ಹೋರಾಡಿದ್ದು ರೈತಸಂಘ. ಹೋರಾಡಿದ್ದಷ್ಟೇ ಅಲ್ಲ, ಗೆದ್ದು ಪ್ಲಾಂಟರ್ಗಳಿಗೆ ದಂಡ ಹಾಕಿದ್ದೂ ಆಯಿತು. ಶಿವಪ್ರಸಾದ್ ಹೇಳುವಂತೆ- ಇದು ಪಾಳೇಗಾರರಿಗೊಂದು ‘ಥ್ರೆಟ್’ ಆಯಿತು. ಇದು ಹಾಗೂ ಇಂಥವೇ ಘಟನೆಗಳನ್ನು ಜ್ಞಾಪಕದಲ್ಲಿಟ್ಟುಕೊಂಡು ಕಾಯುತ್ತಿದ್ದ ಪ್ಲಾಂಟರ್ಗಳಿಗೆ ಬಾಳ್ಳುಪೇಟೆಯಲ್ಲಿ ಅವಕಾಶ ಸಿಕ್ಕಿಬಿಟ್ಟಿತು.ಮುಂದಿನದನ್ನು ಶಿವಪ್ರಸಾದ್ ಬಾಯಲ್ಲೇ ಕೇಳಬಹುದು (ಪಂಚಮ ವಿಶೇಷಾಂಕ):

…ಏಕೋ ರೈತಸಂಘ ನಮ್ಮ ವಿರುದ್ಧವಾಗಿ ತಲೆ ಎತ್ತುತ್ತಾ ಇದೆ, ಇದ್ನ ಮಟ್ಟ ಹಾಕ್ಬೇಕು ಅಂತ ಯೋಚ್ನೆ ಮಾಡ್ಕಂಡು ಪ್ಲಾಂಟರ್ಗಳು ಕಾಯ್ತಾ ಇದ್ರು. ಬಾಳ್ಳುಪೇಟೆ ಹರಿಜನರೆಲ್ಲ ರೈತಸಂಘದಲ್ಲೇ ಇದ್ರು. ಇದೇ ಸಮಯಕ್ಕೆ ರೋಟರಿ ಕ್ಲಬ್ ನವರು, ಅಂದ್ರೆ ಈ ಪ್ಲಾಂಟರ್ಗಳೇ, ಹರಿಜನೋದ್ಧಾರದ ಹೆಸರ್ನಲ್ಲಿ ಹರಿಜನರಿಗೆ ಬಟ್ಟೆ ಹಂಚಿದರು. (1983 ಮಾರ್ಚ್ 5). ಹಳೆ ಬಟ್ಟೆ ಹಂಚಿದರು ಅಂತ ಹರಿಜನರ ಕಡೆಯಿಂದ ಸ್ವಲ್ಪ ಗೊಂದಲ ಆಯ್ತು. ಇದೆಲ್ಲ ಹಾಸನದ ಜನತಾ ಮಾಧ್ಯಮ ಪತ್ರಿಕೇಲಿ ದೊಡ್ಡದಾಗಿ ಬಂತು. ವಾತಾವರಣ ಸ್ವಲ್ಪ ಬಿಸಿಯಾಯ್ತು. ಇದರಿಂದ ಪ್ಲಾಂಟರ್ಗಳೆಲ್ಲ ತಮ್ಮದೇ ಒಂದು ಕಮಿಟಿ ಮಾಡ್ಕಂಡು, 83 ಮಾರ್ಚ್ ನಲ್ಲಿ, ಸುಮಾರು ನೂರೈವತ್ತು ಜನ ಇದ್ರು ಅಂತ ಕಾಣುತ್ತೆ, ‘ಹೊಲೆಯರಿಗೆ ಧಿಕ್ಕಾರ’ ಅಂತ ಕೂಗ್ಕೊಂಡು ನಾಯಿ ಅಟ್ಟಿಸ್ಕಂಡು ಹೋದಂಗೆ ಬೀದಿ ಬೀದಿಲೆಲ್ಲ ಹರಿಜನರಿಗೆ ಹೊಡೆದರು. ಮಾರನೆ ದಿನ ಪೊಲೀಸಿನವರು ಬಂದು, ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೀಬೇಕು ಅಂದ್ರು. ಅಷ್ಟೊತ್ತಿಗೆ ದಲಿತ ಸಂಘರ್ಷ ಸಮಿತಿಯ (ಚಂದ್ರ ಪ್ರಸಾದ್) ತ್ಯಾಗಿಯೂ ಅಲ್ಲಿಗೆ ಬಂದರು. ನಾನು ಮತ್ತು ತ್ಯಾಗಿ ಹೊಡೆದವರ ಮೇಲೆ ಏನೂ ಕೇಸಾಕದೆ ಶಾಂತಿ ಸಭೆ ಕರೆಯೋದು ತಪ್ಪು ಅಂದ್ವಿ. ರೈತಸಂಘದ (ಮಂಜುನಾಥ) ದತ್ತ ಅಲ್ಲೇ ಒಂದು ಭಾಷಣ ಮಾಡಿ ಪ್ಲಾಂಟರುಗಳೆಲ್ಲ ನನ್ನ ಬೂಟಿಗೆ ಸಮಾನ ಅಂದ. ಇದರಿಂದ ಶಾಂತಿ ಸಮಿತಿಯೂ ಆಗಲಿಲ್ಲ. ರೈತಸಂಘದ ನಾಯಕರುಗಳೂ ಅವರವರ ಮನೆಗಳಿಗೆ ಹೊರಟೋದರು. ಆದರೆ ಅಲ್ಲಿದ್ದ ನಾವು ಪರಿಣಾಮ ಎದುರಿಸಬೇಕಾಯಿತು. ‘ದೊಂಬಿ ಕೇಸು’ ಅಂತ ಮಾಡಿ ಹೊಡಸ್ಕಂಡ ಹರಿಜನರನ್ನೆ ಅರೆಸ್ಟು ಮಾಡಿ ಮೈಸೂರು ಜೈಲಿಗೆ ಹಾಕಿದರು. ಈ ಬಗ್ಗೆ ರೈತಸಂಘ ಏನೇನೂ ಮಾಡ್ಲಿಲ್ಲ. ಅಂತೂ ದಲಿತ ಸಂಘರ್ಷ ಸಮಿತಿ ಜೊತೆ ಸೇರ್ಕಂಡು ನಾವೇ ಇದನ್ನೆಲ್ಲ ಎದುರಿಸಿದ್ವಿ. ಒಂದಿನ ನಮ್ಮ ಸಕಲೇಶಪುರ ತಾಲ್ಲೂಕು ರೈತಸಂಘದ ಅಧ್ಯಕ್ಷ ವಿಶ್ವನಾಥನ್ನ ಯಾಕೆ ಎಲ್ಲ ಗೊತ್ತಿದ್ದೂ ನೀವು ಈ ಮೇಲ್ಜಾತಿಯವರ ದಬ್ಬಾಳಿಕೇನ ವಿರೋಧಿಸ್ತಾ ಇಲ್ಲ? ಒಂದು ಪತ್ರಿಕೆ ಹೇಳಿಕೆನಾದ್ರೂ ಕೊಡಿ ಅಂತ ಕೇಳಿದೆ. ಅದಕ್ಕೆ ವಿಶ್ವನಾಥ- ಇಲ್ಲಿ ಲಿಂಗಾಯಿತ್ರು ದೌರ್ಜನ್ಯ ಮಾಡಿರೋದ್ರಿಂದ ಇವರ ವಿರುದ್ಧ ಪೇಪರ್ ಸ್ಟೇಟ್ಮೆಂಟ್ ಕೊಟ್ರೆ ಲಿಂಗಾಯಿತ್ರೆಲ್ಲ ರೈತಸಂಘ ಬಿಟ್ಟುಹೋಗ್ತಾರೆ ಎಂದು ಹೇಳಿ ನನ್ನನ್ನು ದಂಗುಬಡಿಸಿದ…

ಇದು ಇಲ್ಲಿಗೆ ನಿಲ್ಲಲಿಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಅಂತಿಮವಾಗಿ ಶಿವಪ್ರಸಾದ್ರ ‘ಕಥೆಯನ್ನೇ ಮುಗಿಸುವ’ ಸಂಚು ರೂಪುಗೊಂಡು ಅವರು ಬಾಳ್ಳುಪೇಟೆಯನ್ನೇ ಬಿಡಬೇಕಾಯಿತು. ಶಾಂತಿಸಭೆ ಮುರಿದು ಬಿದ್ದ ಮೇಲೆ ಆ ಊರಿನಲ್ಲಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಾಯಿತು. ಮುಂದೆ:

…ಎರಡು ಪೊಲೀಸ್ ಜೀಪುಗಳು ಬಾಳ್ಳುಪೇಟೆಯಲ್ಲಿ ಮೊಕ್ಕಾಂ ಹೂಡಿದವು. ರಾತ್ರಿ ವೇಳೆ ದಲಿತರು ಹೊರಬರಲು ಹೆದರುತ್ತಿದ್ದರು. ಶ್ರೀಮಂತ ಪ್ಲಾಂಟರ್ಗಳು ಮತ್ತೆ ಹಲ್ಲೆಗೆ ಪ್ರಚೋದನೆ ನೀಡಬಹುದೆಂಬ ಸಂದೇಹವನ್ನು ಶಿವಪ್ರಸಾದ್ ವ್ಯಕ್ತಪಡಿಸಿದರು. ಇದನ್ನು ಹೇಗಾದರೂ ಮಾಡಿ ಸರಿಪಡಿಸಬೇಕೆಂದು ಹೆಣಗಿದರು. ದಲಿತ ಯುವಕರಿಗೆ ಸಂಯಮ ಬೋಧಿಸಿದರು. ಶಾಂತಿಯುತ ಹೋರಾಟದ ಮೂಲಕ ಘಟನೆಯ ಮುಖ್ಯ ಸೂತ್ರಧಾರಿಗಳನ್ನು ಬಂಧಿಸಲು ಒತ್ತಡ ಹೇರಲು ಹವಣಿಸಿದರು. ರಾಜ್ಯ ಡಿ.ಎಸ್.ಎಸ್. ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ದೇವಯ್ಯ ಹರವೆ ಬಂದು ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ರೈತನಾಯಕರನ್ನು ಕೋರಿದರು. ಶಿವಪ್ರಸಾದ್ ರೈತಸಂಘ ತೊರೆದಿದ್ದರಿಂದ ಹಾಗೂ ಅವರು ಘಟನೆಯ ಸ್ಥಳದಲ್ಲೇ ಇರುವುದರಿಂದ ರೈತಸಂಘದವರೂ ಹೆಚ್ಚಿನ ಆಸಕ್ತಿಯನ್ನು ತೋರಲಿಲ್ಲ. ಹಾಸನದಿಂದ ಮೈಸೂರಿಗೆ ಹೋದ ದೇವಯ್ಯ ಹರವೆ ಅಕಾಲ ಮರಣಕ್ಕೀಡಾದರು… ಈ ನಡುವೆ ದಲಿತರಿಗೆ ನೆರವು ನೀಡುತ್ತಿರುವ ಶಿವಪ್ರಸಾದ್ ಮೇಲೆ ಹಲ್ಲೆಯಾಗುವ ಸೂಚನೆಗಳು ಕಾಣತೊಡಗಿದವು. ಒಮ್ಮೆ ಗೆಳೆಯ ಮರ್ಕಲಿ ಶಿವಕುಮಾರ್ ಮತ್ತು ನಾನು ಹಾಸನದಿಂದ ಕಾರು ಮಾಡಿಕೊಂಡು ಹೋಗಿ ಅವರನ್ನು ರಹಸ್ಯವಾಗಿ ಹಾಸನಕ್ಕೆ ಕರೆ ತಂದೆವು… ಬಾಳ್ಳುಪೇಟೆಯಲ್ಲಿ ದಾಖಲೆ ಅರು ತಿಂಗಳು ನಿಷೇಧಾಜ್ಞೆ ಜಾರಿಯಲ್ಲಿತ್ತು. ಕಡೆಗೆ ಯಾವ ನಿರ್ದಿಷ್ಟ ಪರಿಹಾರವೂ ಇಲ್ಲದೆ, ಸಮಸ್ಯೆ ತಂತಾನೇ ಅಂತ್ಯವಾಯಿತು. (ಕೆ.ಟಿ. ಶಿವಪ್ರಸಾದ್ ಕುರಿತ ಸಂಚಿಕೆ ಕಲ್ಲರಳಿ ಹೂವ್ವಂತೆಯಲ್ಲಿ ಕೆ. ಪುಟ್ಟಸ್ವಾಮಿ)

ಇದು ನಮ್ಮ ಸಂಘಟನೆಗಳ ಒಟ್ಟು ಪ್ರಯಾಸಗಳನ್ನು (-ದಣಿವು ಎಂಬ ಅರ್ಥದಲ್ಲೂ ಪ್ರಯಾಸ) ಹಲವು ಬಣ್ಣಗಳಲ್ಲಿ ತೋರಿದ ಘಟನೆ. ಅಲ್ಲಿ ಏನೆಲ್ಲ ಇತ್ತು!

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1

-ಎನ್.ಎಸ್. ಶಂಕರ್

1982ರ ಮಾತು. ತಿಂಗಳು ಮರೆತಿದ್ದೇನೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ರೈತ ಚಳವಳಿ ಕುರಿತು ರಾಜ್ಯ ರೈತಸಂಘ ವಿಚಾರ ಸಂಕಿರಣ ಏರ್ಪಡಿಸಿತ್ತು. ಶಿವಮೊಗ್ಗ, ಹಾಸನ ಮತ್ತಿತರ ಕಡೆಗಳಿಂದ ಸಾಕಷ್ಟು ಮಂದಿ ರೈತಮಿತ್ರರು ಬಂದಿದ್ದರು. ಸಭೆಯಲ್ಲಿ ಮಾತಾಡಲು ಗೆಳೆಯರಾದ ಇಂದೂಧರ ಹೊನ್ನಾಪುರ ಹಾಗೂ ಕೋಟಿಗಾನಹಳ್ಳಿ ರಾಮಯ್ಯನವರನ್ನೂ ಕರೆದಿದ್ದರು.

ಪ್ರೊ. ಎಂ.ಡಿ. ನಂಜುಂಡಸ್ವಾಮಿ ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂಬ ಪೀಠಿಕೆಯ ಮೂಲಕ ಸಭೆಗೆ ಚಾಲನೆ ಕೊಟ್ಟರು. ಅಂದು ಸುಮಾರು ಜನ ಭಾಷಣಕಾರರಿದ್ದರೂ, ಈ ತಾತ್ವಿಕ ವಿವರಣೆಯನ್ನು, ಮೂರ್ತವಾದ ಸಂಶಯಗಳ ಮೂಲಕ ಎದುರಿಸಿ, ಕೆಲವು ಸ್ಪಷ್ಟನೆ ಪಡೆಯಲು ಮತ್ತು ನೀಡಲು ಯತ್ನಿಸಿದವರು ರಾಮಯ್ಯ ಮತ್ತು ಇಂದೂಧರ ಇಬ್ಬರೇ. ವೇದಿಕೆ ಮೇಲೆ ರಾಮಯ್ಯ ತುಸು ಅಳುಕಿನಿಂದ ಮತ್ತು ಇಂದೂಧರ ಇನ್ನಷ್ಟು ಗಟ್ಟಿ ದನಿಯಲ್ಲಿ ಹೇಳಿದ್ದಿಷ್ಟೇ:

“ರೈತ ಚಳವಳಿ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಟ್ರೇಡ್ ಯೂನಿಯನ್ ಹೋರಾಟಗಳ ಥರ ಆಗಬಾರದು. ತನ್ನ ಸದಸ್ಯರ ಆಂತರಿಕ ಶಿಸ್ತು ಮತ್ತು ಮನುಷ್ಯತ್ವದ ಬೆಳವಣಿಗೆಗೂ ಮಹತ್ವ ಕೊಡಬೇಕು. ಹಾಗಾಗದಿದ್ದರೆ, ಈಗಿನ ಸ್ಥಿತಿಯಲ್ಲೇ ಹಳ್ಳಿಗಳಿಗೆ ಹೆಚ್ಚಿನ ಅಧಿಕಾರ ಕೊಡುವುದೆಂದರೆ (ರೈತಸಂಘದ ಬೇಡಿಕೆಗಳಲ್ಲಿ ಇದೂ ಒಂದು) ಅದು ಮೇಲ್ವರ್ಗದ ಪಾಲಾಗಿ, ದಲಿತರು ಇನ್ನಷ್ಟು ತುಳಿತಕ್ಕೆ ಒಳಗಾಗುತ್ತಾರೆ…”- ಇದು ಅವರಿಬ್ಬರ ವಾದದ ಸಾರ.

ನಿಜಕ್ಕೂ ಸಭೆಯ ನಡಾವಳಿ ಕೌತುಕಮಯವಾದದ್ದು- ಈ ಮಾತುಗಳು ಹೊರಬಿದ್ದ ಮೇಲೆ. ಒಮ್ಮೆಲೇ ಹೆಚ್ಚೂಕಮ್ಮಿ ಇಡೀ ಸಭೆ ಎದ್ದು ನಿಂತು ‘ರೈತಚಳವಳಿಗೂ, ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಭಟಿಸತೊಡಗಿತು. ಅದೂ ವ್ಯವಸ್ಥಿತವಾದ, ತಾಳ್ಮೆ, ಸೌಜನ್ಯಗಳ ಗಡಿ ದಾಟದ ಸಹೃದಯ ಭಿನ್ನಾಭಿಪ್ರಾಯವೂ ಅಲ್ಲ. ಹೋ ಎಂಬ ಅರಚಾಟ; ಒಬ್ಬರ ಮಾತುಗಳು ಇನ್ನೊಬ್ಬರ ಕೂಗಿನೊಡನೆ ಕಲಸಿ ಬಿದ್ದಾಡುವ ಮಹಾ ಗೊಂದಲದ ಗದ್ದಲ. ಆ ಗದ್ದಲದಲ್ಲೇ ಸಭೆಯಿಂದ ಕೇಳಿ ಬಂದ ಮಾತು: ‘ಎರಡು ಕರಿಮೀನು ಬಂದವೆ. ಎಳಕಳ್ರೋ, ಹುರ್ಕೊಂಡು ತಿಂದುಬಿಡಣ…’! ಸ್ವಲ್ಪ ಹೊತ್ತಾದ ಮೇಲೆ ಇದೇ ಗಲಾಟೆಯ ಹಿನ್ನೆಲೆಯಲ್ಲಿ ಸಭಿಕರ “ಸಂದೇಹಗಳಿಗೆ” ಉತ್ತರ ಕೊಡಲು ಮತ್ತೆ ಕರೆದಾಗ ಆ ‘ಕರಿಮೀನು’ಗಳಲ್ಲೊಂದಾದ ಇಂದೂಧರ ಇಡೀ ದೃಶ್ಯವನ್ನು ವರ್ಣಿಸಿದ್ದು ಹೀಗೆ: “ನಮ್ಮೂರಲ್ಲಿ ನಮ್ಮಕ್ಕ ತಂಗಿಯರನ್ನು ಯಾರಾದರೂ `ದೊಡ್ಡವರು’ ಕೆಡಿಸಿದಾಗ ನಾವು ಪ್ರತಿಭಟನೆ ತೋರಿದರೆ, ನಮ್ಮ ಧ್ವನಿಯನ್ನು ಮುಚ್ಚಿಹಾಕಲು ಏಳುವ ಗದ್ದಲದ ಹಾಗಿದೆ ನಿಮ್ಮ ಕೂಗು. ಇದು ನಿಮ್ಮ ಶತಮಾನಗಳ ಕೊಬ್ಬು ಮತ್ತು ಅಹಂಕಾರದ ಫಲ…” ಆ ಮಾತಿನಲ್ಲಿ, ಬೇಕೆಂದೇ ಕೆಣಕುವ ಸವಾಲಿನ ದನಿ ಇದ್ದುದು ನಿಜ. ಆದರೆ ನೇರ ಮರ್ಮಕ್ಕೆ ನಾಟುವ ಇಂಥ ಮಾತು ಕೂಡ ಸಭೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ನಂಜುಂಡಸ್ವಾಮಿಯವರ ಕೆಲವು ಸಹಾನುಭೂತಿಯ ಹೇಳಿಕೆಗಳ ಹೊರತಾಗಿ ಇನ್ನಾರೂ ಇಂದೂಧರ, ರಾಮಯ್ಯನ ನಿಲುವು ಒಪ್ಪುವುದಿರಲಿ, ಅವರನ್ನು ಅರ್ಥ ಮಾಡಿಕೊಳ್ಳಲೂ ತಯಾರಿರಲಿಲ್ಲ.

ಸಭಾಂಗಣದಲ್ಲಿ ರಾಮಯ್ಯ, ಇಂದೂಧರನ ಮೇಲೆ ಹರಿಹಾಯ್ದವರು ಅವರಿಬ್ಬರನ್ನೂ ಚೆನ್ನಾಗಿ ಬಲ್ಲ ಗೆಳೆಯರೇ ಎಂಬುದೇನೂ ಅನಿರೀಕ್ಷಿತವಲ್ಲ. ಆ ಗೆಳೆಯರು ಸಭಿಕರಾಗಿದ್ದಾಗ- ಮಬ್ಬಾದ ಒಂದು ನಿರಾಕಾರ ಮಂದೆಯಾಗಿದ್ದಾಗ ಪ್ರತಿನಿಧಿಸುತ್ತಿದ್ದುದು ಗುಂಪಿನ ಸ್ವಭಾವವನ್ನು; ಅಂದರೆ ಜಾತಿ- ಒಂದು ಸಮೂಹದ ಮನೋಧರ್ಮವಾಗಿ ತಳೆಯುವ- ‘ನಿತ್ಯಸಹಜ’ ಎನ್ನಬಹುದಾದ- ನಿಷ್ಕರುಣೆಯನ್ನು. ಸಭೆ ಮುಗಿಯಿತು. ಎಲ್ಲ ಆಚೆ ಬಂದರು. ಸೆನೆಟ್ ಹಾಲ್ ಹೊರಗಿನ ಮಬ್ಬುಗತ್ತಲಲ್ಲಿ ಈ ಗೆಳೆಯರೇ ಇಂದೂಧರನ ಜೊತೆ ಮತ್ತೆ ವಾದ ಮುಂದುವರೆಸುವಾಗ ಅವರ ನೋಟ ಬದಲಾಗದಿದ್ದರೂ, ಧಾಟಿ ಬದಲಾಗಿತ್ತು! ಒಳಗೆ ಏರುದನಿಯಲ್ಲಿ ದಬಾಯಿಸುವ ಗತ್ತಿನಲ್ಲಿದ್ದವರೇ ಇಲ್ಲಿ ನಯವಾಗಿ ಒಪ್ಪಿಸುವ ಧಾಟಿಗಿಳಿದಿದ್ದರು! ಅಂದರೆ ಮಂದೆಯ ಮನೋವೃತ್ತಿ ಕರಗಿ ಅವರ ವ್ಯಕ್ತಿಗತ ಔದಾರ್ಯ ಮರುಕಳಿಸಿತ್ತು…

ಇದೊಂದು ಕ್ಷುಲ್ಲಕ ಪ್ರಕರಣವೆಂದು ನಾನು ಬಲ್ಲೆ. ರೈತ, ದಲಿತ ಚಳವಳಿಗಳನ್ನು ಕುರಿತು ಪಂಚಮ 1983ರಲ್ಲಿ ಹೊರತಂದ ವಿಶೇಷಾಂಕದಲ್ಲಿ ಇದೇ ಘಟನೆಯನ್ನು ಉಲ್ಲೇಖಿಸಿ ನಾನು ಆಗ ಟಿಪ್ಪಣಿಯೊಂದನ್ನು ಬರೆಯದೇ ಹೋಗಿದ್ದಿದ್ದರೆ ಪ್ರಾಯಶಃ ಈಗ ನನಗೂ ಮರೆತುಹೋಗಿರುತ್ತಿತ್ತು! ಆದರೆ ಇಷ್ಟು ವರ್ಷಗಳ ನಂತರ, ಇದೀಗ ಚಳವಳಿಗಳನ್ನು ಒಟ್ಟಾರೆಯಾಗಿ ವಿವೇಚಿಸಲು ಯತ್ನಿಸುವಾಗ ಈ ಜುಜುಬಿ ಪ್ರಸಂಗವೇ ಹಲವು ಇಂಗಿತಗಳನ್ನು ಧ್ವನಿಸಬಲ್ಲ ಘಟನೆಯಂತೆ ಕಾಣುತ್ತಿದೆ. ಯಾಕೆಂದರೆ ರೈತಸಂಘಟನೆ, ಆಗ ಸ್ವತಃ ಸಮಾನತೆಗಾಗಿ, ಅನ್ಯಾಯದ ವಿರುದ್ಧ ಹೊಡೆದಾಡುತ್ತಿದ್ದರೂ ಹಳ್ಳಿಗಾಡಿನ ಚೌಕಟ್ಟಿನಲ್ಲಿ ಯಜಮಾನ ಸಮೂಹವನ್ನು ಪ್ರತಿನಿಧಿಸುತ್ತಿತ್ತು. ಹಾಗಾಗಿ ರೈತಸಂಘಟನೆಯ ಆಂತರ್ಯದಲ್ಲೇ ಒಂದು ವಿರೋಧಾಭಾಸವಿತ್ತು. ಮಧ್ಯಮಜಾತಿಗಳ ರೈತಸಮೂಹ ಹಳ್ಳಿಯಲ್ಲಿ ದಲಿತನನ್ನು ತುಳಿಯುತ್ತ, ಪಟ್ಟಣಕ್ಕೆ ಬಂದಾಗ ಸಮಾನ ವೇದಿಕೆಗಾಗಿ ಕೈ ಚಾಚುತ್ತಿತ್ತು! ಮತ್ತು ಎಂದೂ ಈ ದ್ವಂದ್ವದಿಂದ ಮುಕ್ತಿ ಸಿಗಲೇ ಇಲ್ಲವಾದ್ದರಿಂದ ರೈತಸಂಘ ಉದ್ದಕ್ಕೂ, ದಲಿತ ಸಂಘಟನೆಯಿಂದ ಆತ್ಮಸಾಕ್ಷಿ ಕೆಣಕುವ, ಮುಜುಗರದ ಪ್ರಶ್ನೆಗಳನ್ನು ಎದುರಿಸುತ್ತಲೇ ಹೋಗಬೇಕಾಯಿತು.

ಅದೇ ಪಂಚಮ ವಿಶೇಷಾಂಕದಲ್ಲಿ ಪ್ರೊ. ನಂಜುಂಡಸ್ವಾಮಿಯವರನ್ನು ದೇವನೂರ ಮಹಾದೇವ ಕೇಳಿದರು:

ರೈತಸಂಘದಲ್ಲಿ ಲಿಂಗಾಯಿತ ಒಕ್ಕಲಿಗ ಜನತೆಯೇ ಹೆಚ್ಚಾಗಿದ್ದು ಈ ರೈತ ಜನಸ್ತೋಮವು ಅಸ್ಪೃಶ್ಯ ಜನಾಂಗವನ್ನು ಅವಮಾನಿಸುತ್ತ, ವಂಚಿಸುತ್ತ, ತುಳಿಯುತ್ತ, ಕೊಲ್ಲುತ್ತ ಬರುತ್ತಿರುವ ಜಟಿಲ ಪರಿಸ್ಥಿತಿಯನ್ನು ಮಾನವೀಯಗೊಳಿಸುವ ಕಡೆ ತಮ್ಮ ಚಿಂತನೆ, ಕಾರ್ಯಕ್ರಮಗಳೇನು?

 ಪ್ರೊ. ನಂಜುಂಡಸ್ವಾಮಿ: ನಮ್ಮ ಹಳ್ಳಿಯ ಆಸ್ತಿ ಸಂಬಂಧವನ್ನು ಬದಲಾವಣೆ ಮಾಡುವುದೇ ನಿಮ್ಮ ಮೇಲಿನ ಪ್ರಶ್ನೆಗೆ ಉತ್ತರ. ಸಾಮಾಜಿಕ ಅಸಮಾನತೆ ನಿವಾರಣೆಗೆ ಶೋಷಕ- ಶೋಷಿತ ಇಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ…

ಅಂದರೆ ಇಂಥ ಮುಜುಗರದ ಪ್ರಶ್ನೆಗೆ, ಪ್ರೊಫೆಸರ್ ತಕ್ಷಣಕ್ಕೇನು ಮಾಡಬಹುದು, ತಲೆ ಕೆಡಿಸಿಕೊಳ್ಳಲೇ ಇಲ್ಲ; ಬದಲಿಗೆ ಅಷ್ಟೇನೂ ವಾಸ್ತವಿಕವಲ್ಲದ ಉನ್ನತ ಆದರ್ಶದ ಉತ್ತರ ನೀಡಿ ನುಣುಚಿಕೊಂಡಂತಿಲ್ಲವೇ?! ಇದಷ್ಟೇ ಅಲ್ಲ, ಇಡೀ ಸಂದರ್ಶನವೇ ಆ ಧಾಟಿಯಲ್ಲಿದೆ! ಮಹಾದೇವ ಎತ್ತಿದ ಜಾತಿ ವೈಷಮ್ಯದ ಎಲ್ಲ ಪ್ರಶ್ನೆಗಳಿಗೂ ಪ್ರೊಫೆಸರ್ ತಾವು ಪಡೆದ ಸಮಾಜವಾದಿ ತರಬೇತಿಯ ‘ಕಲಿತ’ ಉತ್ತರಗಳ ಮೂಲಕವೇ ಸಂಭಾಳಿಸುವಂತೆ ಕಾಣುತ್ತಾರೆಯೇ ಹೊರತು, ಹಳ್ಳಿಗಾಡಿನ ಮೂಲ ಮಾರ್ಪಾಡುಗಳ ಬಗ್ಗೆ ಗಂಭೀರವಾಗಿ ಧ್ಯಾನಿಸಿ, ಪರದಾಡಿದವರಂತಲ್ಲ.

ಪ್ರಶ್ನೋತ್ತರದ ಇನ್ನೂ ಕೆಲವು ತುಣುಕುಗಳು:

…ದಲಿತನೇನಾದರೂ ಧ್ವನಿ ಎತ್ತರಿಸಿದರೆ ರೈತಸಂಘ ಬಯಸುವ ‘ಹಳ್ಳಿಯೇ ಒಂದು ಘಟಕ’ ನಡೆಯುವುದಿಲ್ಲವಲ್ಲ?

ನಿಜ, ದಲಿತ ಸಮಾನತೆಗೆ ನಿಂತಾಗ ಅಲ್ಲಿ ಸಾಮರಸ್ಯ ಹೋಗಿಬಿಡ್ತದೆ….

ಹಾಗಾದರೆ ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಆಚರಣೆಗೆ ತರುವ ತಾಕತ್ತು ರೈತಸಂಘಕ್ಕೆ ಇದೆಯೇ?

ಸಾವಿರಾರು ವರ್ಷದ ಜಡ್ಡನ್ನು ಒಂದೆರಡು ದಿನದಲ್ಲಿ ನಾಶ ಮಾಡುವ ಆಶಾವಾದವನ್ನೂ ನಾನು ಇಟ್ಟುಕೊಂಡಿಲ್ಲ. ಮೊದಲು ನಾನು ಉದಾಹರಣೆ ಆಗುವ ಮೂಲಕ…

ನೀವು ಬ್ಯಾಡ್ರಪ್ಪ. ಒಂದ್ಸಲ ಉಂಡಾದ ಮೇಲೆ ಸಾಕು. ನಾವು ಎಲ್ಲಿಂದ ತಂದಿಕ್ಕುವ? ನಾನು ಕೇಳ್ತಾ ಇರೋದು ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಆಚರಣೆಗೆ ಹೊರಟರೆ ರೈತಸಂಘಕ್ಕೆ ನುಂಗಲಾರದ ತುತ್ತಾಗುವುದಿಲ್ಲವೇ? ರೈತಸಂಘವೇ ಇಲ್ಲದಂತೂ ಆಗಬಹುದಲ್ಲವೇ?

ಆ ಮಟ್ಟಕ್ಕೆ ರೈತಸಂಘ ಹೋಗಿಲ್ಲ. ಇದು ನುಂಗಲಾರದ ತುತ್ತಾದರೂ ಮಾಡಲೇಬೇಕು. ಭಯಪಡಬೇಕಾಗಿಲ್ಲ…

ಕೆಲವು ಕಡೆ ರೈತಸಂಘದವರೇ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಿರುವುದಾಗಿ ಸುದ್ದಿ ಇದೆಯಲ್ಲ?

ಎಲ್ಲಿ? ವಿವರ ಕೊಡಿ. We are not allowing such things to happen. We will expel that village from ರೈತಸಂಘ. ಗೊತ್ತೇನು?…

ಅದೇ ಪ್ರೊಫೆಸರ್ ಶೈಲಿ! ನಾವೆಲ್ಲ ಮೆಚ್ಚಿದ ಶೈಲಿ…

ವಾಸ್ತವವೆಂದರೆ, ಈ ಜಾತಿ ಸಂಬಂಧಗಳ ಕಗ್ಗಂಟನ್ನು ರೈತಸಂಘಟನೆ ಎಂದೂ ಕ್ರಿಯಾಶೀಲವಾಗಿ ಎದುರುಗೊಳ್ಳಲೇ ಇಲ್ಲ. ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂದು ನಂಜುಂಡಸ್ವಾಮಿಯವರು ಘೋಷಿಸಿದರೂ, ಅದು ಕೇವಲ ಮಾತಿನ ಶೈಲಿಯಾಯಿತೇ ಹೊರತು ರೈತಸಂಘದ ಕಾರ್ಯಕ್ರಮವಲ್ಲ. ಚಳವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ ಸಂಘಟನೆ ಆಶ್ರಯದಲ್ಲಿ ಅನೇಕ ಅಂತರ್ಜಾತಿ ಮದುವೆಗಳು ನಡೆದಿದ್ದು ಹೌದು. ಅವನ್ನೇ ರೈತಸಂಘದ ಜಾತಿವಿನಾಶ ಕಾರ್ಯಕ್ರಮವಾಗಿ ಕಾಣುವವರೂ ಇದ್ದಾರೆ. ಆದರೆ ಒಂದು ಕಡೆ ಇದು, ರೈತ- ದಲಿತ ಚಳವಳಿಗಳೆರಡೂ ಪರಸ್ಪರ ಸೆಣೆಸುತ್ತ, ಬೆನ್ನುಜ್ಜಿಕೊಳ್ಳುತ್ತ, ಕೆರೆಯುತ್ತ ಒಂದರಿಂದೊಂದು ಕೊಟ್ಟು ಪಡೆದು ಮಾಡಿದ್ದರ ಪರಿಣಾಮವಾಗಿದ್ದಂತೆಯೇ ಮತ್ತೊಂದೆಡೆ ರೈತ ಮುಖಂಡರ ಸಮಾಜವಾದಿ ತಿಳುವಳಿಕೆಯೂ ಇದರ ಬೆನ್ನಿಗಿತ್ತು. ಆದರೆ ಅದರಾಚೆಗೆ ಜಾತಿ ತಾರತಮ್ಯದ ಪ್ರಶ್ನೆ ರೈತಸಂಘಟನೆಗೆ ಎಂದೂ ಜೀವನ್ಮರಣದ ಕಾಳಜಿ ಆಗಲೇ ಇಲ್ಲ. 1980ರಲ್ಲಿ ಲಂಕೇಶರು ರೈತಚಳವಳಿ ಬಗ್ಗೆ ಬರೆಯುವಾಗ ಚರ್ಚೆಗ ಎತ್ತಿಕೊಂಡ ಪ್ರಶ್ನೆಗಳಿಗೆ ಇದೇ ಹಿನ್ನೆಲೆಯಿತ್ತು.

(ಮುಂದುವರೆಯುವುದು)