Category Archives: ಸರಣಿ-ಲೇಖನಗಳು

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 8)


– ಡಾ.ಎನ್.ಜಗದೀಶ್ ಕೊಪ್ಪ


 

If there is to be revolution, there must be a revolutionary party.  -Mao

ಆಂಧ್ರದ ಗೋದಾವರಿ ನದಿಯಾಚೆಗಿನ ಆ ನೆಲಕ್ಕೆ ಹಿಂಸೆ ಅಥವಾ ಬಲಿದಾನ ಹೊಸದೇನಲ್ಲ. ವಿಶಾಖಪಟ್ಟಣ, ರಾಜಮಂಡ್ರಿ, ಶ್ರೀಕಾಕುಳಂ, ವಾರಂಗಲ್ ಮತ್ತು ಅದಿಲಾಬಾದ್ ಹಾಗೂ ಬೊಬ್ಬಿಲಿ  ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೆ ಹೋದರೆ, ಅಲ್ಲಿನ ಪೂರ್ವಜರ ಕಣ್ಣೀರಿನ ಇತಿಹಾಸದ ಕಥೆಯೊಂದು ನಮ್ಮೆದುರು ತೆರೆದುಕೊಳ್ಳತ್ತದೆ. 250 ವರ್ಷಗಳ ಹಿಂದಿನ ಬಲಿದಾನದ ಕಥನವೊಂದನ್ನು, ಮೌಖಿಕ ಕಾವ್ಯದ ರೂಪದಲ್ಲಿ ಅಲ್ಲಿನ ಜನ ತಮ್ಮ ಎದೆಯಲ್ಲಿ ಕಾಪಿಟ್ಟುಕೊಂಡು ಹಾಡುತ್ತಾ ಬಂದಿದ್ದಾರೆ. ಆ ಮಹಾ ಕಥನ ಕಾವ್ಯವೇ, “ಬೊಬ್ಬಿಲಿ ಕಥಾ”.

ದುರಂತ ಕಥನದ ಸಂಕ್ಷಿಪ್ತ ಸಾರಾಂಶವಿದು, ಅದು 1750 ರ ಕಾಲಮಾನ. ದಕ್ಷಿಣದಲ್ಲಿ ಮೊಗಲರ ನೆರವಿನಿಂದ ಅವರಿಗೆ ಒಂದಿಷ್ಟು ಕಪ್ಪ ಕಾಣಿಕೆ ಕೊಟ್ಟು ಹೈದರಾಬಾದ್ ಪ್ರಾಂತ್ಯವನ್ನು ನಿಜಾಮ ಆಳುತ್ತಿದ್ದ ಸಮಯ. ಇದೇ ಕಾಲಘಟ್ಟದಲ್ಲಿ ಭಾರತದ ಪೂರ್ವ ಕರಾವಳಿ ತೀರದಲ್ಲಿ, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಈ ದೇಶದ ಮೇಲೆ ತಮ್ಮ ಅಸ್ತಿತ್ವ ಸಾಧಿಸಲು ಹೋರಾಟ ನಡೆಸುತ್ತಿದ್ದರು. ಇಂಗ್ಲಿಷರು, ಕೊಲ್ಕತ್ತ ಬಂದರು ನಗರವನ್ನು, ಫ್ರೆಂಚರು, ಪುದುಚೇರಿ,(ಪಾಡಿಚೇರಿ) ಮತ್ತು ಆಂಧ್ರದ ಮಚಲಿಪಟ್ಟಣ ಇವುಗಳನ್ನು ಡಚ್ಚರು ತಮಿಳುನಾಡಿನ ನಾಗಪಟ್ಟಣವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಸ್ಥಳೀಯ ಸಾಮಂತರಿಗೆ ಸೇನೆಯ ಸಹಾಯ ನೀಡುತ್ತಾ ಅವರಲ್ಲಿ ಕಲಹ ಹುಟ್ಟು ಹಾಕುತ್ತಾ, ಯುದ್ಧದ ನೆಪದಲ್ಲಿ ನಿಧಾನವಾಗಿ ಭಾರತದ ನೆಲದಲ್ಲಿ ಬೇರು ಬಿಡಲು ಹವಣಿಸಿದ್ದರು.

ಆಂಧ್ರಪ್ರದೇಶದ ಉತ್ತರ ಈಶಾನ್ಯ ಭಾಗದ ಬಂದರಾಗಿದ್ದ ಮಚಲಿಪಟ್ಟಣದಲ್ಲಿ ಫ್ರೆಂಚರ 12 ಸಾವಿರ ಯೋಧರಿದ್ದ ಸೇನಾ ಪಡೆಯು ಮಾರ್‌ಕ್ವಿಸ್‌ ದೆ ಬಸ್ಸಿ ಎಂಬ ದಂಡನಾಯಕನ ನೇತೃತ್ವದಲ್ಲಿ ಹೈದರಾಬಾದ್ ನಿಜಾಮನಿಗೆ ಸೇವೆ ಸಲ್ಲಿಸುತ್ತಿತ್ತು. 1756 ರಲ್ಲಿ ವಿಶಾಖಪಟ್ಟಣದ ಸಮೀಪದ ವಿಜಯನಗರಂ ಬಳಿ ಇರುವ ಬೊಬ್ಬಿಲಿ ಎಂಬ ಪುಟ್ಟ ಸಂಸ್ಥಾನದ ಸಾಮಂತ ವಿಜಯರಾಮರಾಜು ಎಂಬಾತ, ನಿಜಾಮ ಕೇಳಿದಷ್ಟು ವಾರ್ಷಿಕ ಕಂದಾಯ ನೀಡಲು ನಿರಾಕರಿಸಿದ. ಬೊಬ್ಬಿಲಿ ಕೋಟೆಯ ಮೇಲೆ ನಿಜಾಮನ ಪರವಾಗಿ, ಅವನ ಆದೇಶದಂತೆ ಫ್ರೆಂಚರ ಸೇನೆ ದಂಡೆತ್ತಿ ಬಂದಿತು. ಆ ಪುಟ್ಟ ಸಂಸ್ಥಾನದಲ್ಲಿ ಸಾಮಂತನ ಪರವಾಗಿ ಇದ್ದವರು ಇದೇ ಪ್ರಾಂತ್ಯದ ಬುಡಕಟ್ಟು ಜನಾಂಗ ಮಾತ್ರ. ಯಾವುದೇ ಅತ್ಯಾಧುನಿಕ ಶಸ್ರಾಸ್ತ್ರಗಳಿಲ್ಲದೆ, ಬಿಲ್ಲು ಬಾಣಗಳ ಮೂಲಕ ಇನ್ನೂರು ಮಂದಿ ಫ್ರೆಂಚ್ ಸೈನಿಕರನ್ನು ಕೊಂದು ಹಾಕಿದ ಈ ಅರಣ್ಯವಾಸಿಗಳ ಸಮುದಾಯ, ನಂತರ ಸೇನೆಯ ಪಿರಂಗಿ ದಾಳಿಗೆ ಕೋಟೆ ತುತ್ತಾದಾಗ ಅನಿವಾರ್ಯವಾಗಿ ಫ್ರೆಂಚರಿಗೆ ಶರಣಾಯಿತು. ಆನಂತರ ನಡೆದದ್ದು ಅಂದಿನ ಜಗತ್ತು ಕಂಡರಿಯದ ಭೀಕರ ನರಮೇಧ. ಕೋಟೆಯ ಒಳಗೆ ಪ್ರವೇಶ ಪಡೆದ ಫ್ರೆಂಚ್ ಸೈನಿಕರು ಎಲ್ಲಾ ಸ್ಥಳೀಯರನ್ನು ಹೊಸಕಿ ಹಾಕಿದರು. ಸುಮಾರು ಮೂರರಿಂದ ನಾಲ್ಕು ಸಾವಿರ ಬುಡಕಟ್ಟು ಜನಾಂಗದ ಯೋಧರು ಈ ಯುದ್ಧದಲ್ಲಿ ಬಲಿಯಾದರು. ಈಗ ಹಲವು ರೂಪಗಳಲ್ಲಿ ಹಾಡುವ ಈ ಕಾವ್ಯಕ್ಕೆ ಹಲವಾರು ಬುಡಕಟ್ಟು ಜನಾಂಗದ ನಾಯಕರಿದ್ದಾರೆ. ಅದೇ ರೀತಿ ನಾಯಕಿಯರೂ ಇದ್ದಾರೆ.

18 ನೇ ಶತಮಾನದ ಅಂತ್ಯದ ವೇಳೆ ಯಾರೋ ಒಬ್ಬ ಅನಾಮಿಕ ಮಹಾನುಭಾವ ಈ ಮೌಖಿಕ ಕಾವ್ಯವನ್ನು ದಾಖಲಿಸಿದ್ದ ಪರಿಣಾಮವಾಗಿ ಇದರ ಮೊದಲ ಹಸ್ತಪ್ರತಿ 1832 ರಲ್ಲಿ ಮದ್ರಾಸ್‌ನ ಒರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್ ಲೈಬ್ರರಿಯಲ್ಲಿ ಲಭ್ಯವಾಯಿತು. ಇವತ್ತಿಗೂ ಗೋದಾವರಿ ನದಿಯಾಚೆಗಿನ ನಾಡಿನಲ್ಲಿ ಇದೊಂದು ಅತ್ಯಂತ ಜನಪ್ರಿಯ ಕಥನಕಾವ್ಯ. ಇದನ್ನು ಹಾಡುವ ವೃತ್ತಿ ಗಾಯಕರಿದ್ದಾರೆ. (ಚಿತ್ರ ಗಮನಿಸಿ) ವಿಶೇಷ ವೇಷಭೂಷಣಗಳಿಂದ ಅಂಲಕೃತರಾಗಿ ಇಡೀ ರಾತ್ರಿ ಕಾವ್ಯವನ್ನು ಹಾಡುತ್ತಾರೆ. ಇಂತಹ ಬಲಿದಾನದ ಕಥನಕಾವ್ಯವನ್ನು ಚಿಕ್ಕಂದಿನಿಂದ ಆಲಿಸಿಕೊಂಡು ಬಂದಿದ್ದ, ಶಿಕ್ಷಕ ವೆಂಪಟಾಪು ಸತ್ಯನಾರಾಯಣನಿಗೆ ನಿಜಾಮನ ರೂಪದಲ್ಲಿ ತಲೆಯೆತ್ತಿರುವ ಈ ಜಮೀನ್ದಾರರ ಆರ್ಭಟವನ್ನು ಮಣಿಸದಿದ್ದರೆ, ಈ ನೆಲದ ಮಕ್ಕಳಿಗೆ ಉಳಿಗಾಲವಿಲ್ಲವೆಂದು ತೀರ್ಮಾನಿಸಿದನು. ಇದಕ್ಕಾಗಿ ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡು ಗಿರಿಜನರನ್ನು ಸಂಘಟಿಸತೊಡಗಿದನು. ಅನಕ್ಷರಸ್ತ, ಬುಡಕಟ್ಟು ಜನಾಂಗಕ್ಕೆ ಆಗಿರುವ ಅನ್ಯಾಯವವನ್ನು, ಅವರಿಗಾಗಿ ಇರುವ ಆಜನ್ಮಸಿದ್ಧ  ಹಕ್ಕುಗಳನ್ನು ವಿವರಿಸಲು, ಸತ್ಯನಾರಾಯಣ ಕೂಡ ಜನಪದ ಹಾಡುಗಳಿಗೆ ಮೊರೆಹೋದನು. ಆದಿವಾಸಿಗಳ ಅನ್ಯಾಯ ಕುರಿತು, ಜಮೀನ್ದಾರರ ಕ್ರೌರ್ಯ ಕುರಿತು ತಾನೇ ಹಾಡು ಬರೆದು, ಗಿರಿಜನರ ಪೋಡುಗಳಿಗೆ (ಹಳ್ಳಿ) ಹೋಗಿ ರಾತ್ರಿಯೆಲ್ಲಾ ಕುಳಿತು ಹಾಡತೊಡಗಿದನು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನಪದರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಲಾವಣಿಗಳನ್ನು ರಚಿಸಿ ಸಾಮಾನ್ಯ ಜನರೆದುರು, ದೇಶ ಪ್ರೇಮದ ಪ್ರಚೋದನೆಗಾಗಿ ಹಾಡಿದ್ದು ಬಿಟ್ಟರೆ, ದೇಶದಲ್ಲಿ ಪ್ರಪಥಮವಾಗಿ ತುಳಿತಕ್ಕೆ ಒಳಗಾದವರ, ಬಾಯಿಲ್ಲದವರ ಬಗ್ಗೆ ಕ್ರಾಂತಿಕಾರಿ ಹಾಡುಗಳನ್ನು ಬರೆದು ಹಾಡಿದವನು ವೆಂಪಟಾಪು ಸತ್ಯನಾರಾಯಣ. ಈತ, ಇವತ್ತಿಗೂ ತನ್ನ ಕ್ರಾಂತಿಕಾರಿ ಹಾಡುಗಳಿಂದ ಆಂಧ್ರಪ್ರದೇಶದ ಜನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಗಾಯಕ, ಕವಿ ಗದ್ದಾರ್ಗೂ ಸಹ ಪ್ರೇರಣೆಯಾದವನು. (ಗದ್ದಾರ್ನಿಂದ ನಮ್ಮ ಕರ್ನಾಟಕದ ದಲಿತ ಸಂಘಟನೆಗಳು ಪ್ರೇರಣೆಗೊಂಡು ಹಾಡು ರಚಿಸಿ ಹಾಡತೊಡಗಿದವು.) ಗಿರಿಜನ ಸಂಘಟನೆಯಿಂದ ಮೇಲ್ವರ್ಗದ ಸಮಾಜದ ಮತ್ತು ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಸತ್ಯನಾರಾಯಣ ಅಂತಿಮವಾಗಿ ಶಿಕ್ಷಕ ವೃತ್ತಿಯನ್ನು ತೊರೆದು, ಗಿರಿಜನರ ಪರವಾಗಿ ನಿಂತನು. ಅವರುಗಳ ವಿಶ್ವಾಸಗಳಿಸಿಕೊಳ್ಳುವ ನಿಟ್ಟಿನಲ್ಲಿ, ಜಟಪು ಮತ್ತು ಸವರ ಎಂಬ ಎರಡು ಆದಿವಾಸಿ ಪಂಗಡಗಳಿಂದ ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರ ಜೊತೆ ಬದುಕತೊಡಗಿದನು.

ಗಿರಿಜನರ ಸಂಘಟನೆಯಿಂದಾಗಿ ಸಾಹುಕಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಕೃಷಿಕಾರ್ಮಿಕರ ಕೂಲಿ ಒಂದು ರೂಪಾಯಿನಿಂದ ಎರಡು ರೂಪಾಯಿಗೆ ಹೆಚ್ಚಿತು. ಅದೇ ರೀತಿ. ಜಮೀನ್ದಾರ ಭೂಮಿಯಲ್ಲಿ ಗೇಣಿ ಆಧಾರದ ಮೇಲೆ ದುಡಿಯುತ್ತಿದ್ದ ರೈತರಿಗೆ ಈ ಮೊದಲು ಸಿಗುತ್ತಿದ್ದ ಐದು ಬುಟ್ಟಿ ಭತ್ತದ ಫಸಲಿಗೆ ಬದಲಾಗಿ ಇಪ್ಪತ್ತರಿಂದ, ಇಪ್ಪತ್ತೈದು ಬುಟ್ಟಿ ಭತ್ತ ಸಿಗತೊಡಗಿತು. (56 ಸೇರು ಭತ್ತದ ಪ್ರಮಾಣವನ್ನು ಒಂದು ಬುಟ್ಟಿ ಎಂದು ಕರೆಯುವ ವಾಡಿಕೆ ಆ ಪ್ರದೇಶದಲ್ಲಿ ಜಾರಿಯಲ್ಲಿತ್ತು) ಇವುಗಳ ಜೊತೆ ಜೊತೆಯಲ್ಲಿ ಗಿರಿಜನರೆಲ್ಲಾ ಸತ್ಯನಾರಾಯಣ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಘಟಿತರಾದ ಪರಿಣಾಮ, ಪೋಲಿಸರ, ಅರಣ್ಯಧಿಕಾರಿಗಳ ಕಿರುಕುಳ ತಪ್ಪಿತು. ಹೆಬ್ಬೆಟ್ಟಿನ ಸಹಿ ಮೂಲಕ ಅಕ್ರಮವಾಗಿ ಭೂಮಾಲಿಕರ ಪಾಲಾಗಿದ್ದ ಎರಡು ಸಾವಿರ ಎಕರೆ ಭೂಮಿಯನ್ನು ಅವರಿಂದ ಬಲವಂತವಾಗಿ ವಾಪಸ್ ಪಡೆಯುವಲ್ಲಿ ಆದಿವಾಸಿಗಳು ಯಶಸ್ವಿಯಾದರು.

ಪಾಳು ಬಿದ್ದಿದ್ದ ನಾಲ್ಕು ಸಾವಿರ ಸರ್ಕಾರಿ ಭೂಮಿಯನ್ನು ಭೂರಹಿತ ಆದಿವಾಸಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಹಂಚಲಾಯಿತು. ಶಿಕ್ಷಕನಾಗಿದ್ದ ಸತ್ಯನಾರಾಯಣ, ಯಾವುದೇ ಕಮ್ಯೂನಿಷ್ಟ್ ವಿಚಾರಧಾರೆಗಳ ಹಂಗಿಲ್ಲದೆ, ಸತತ ಐದು ವರ್ಷಗಳ ಅವಿರತ ಹೋರಾಟದಿಂದ, ಶ್ರೀಕಾಕುಳಂ ಪ್ರಾಂತ್ಯದ ಭೂಮಾಲಿಕರಿಗೆ ಸಿಂಹಸ್ವಪ್ನವಾದನು. ಬಡವರಿಗೆ, ಕೃಷಿಕಾರ್ಮಿಕರಿಗೆ ಗಿರಿಜನರ ಪಾಲಿಗೆ ಆಶಾಕಿರಣವಾದನು. ಇದು ಸಹಜವಾಗಿ ಆಂಧ್ರದ ಕಮ್ಯೂನಿಷ್ಟ್ ನಾಯಕರ ಗಮನ ಸೆಳೆಯಿತು. ತೆಲಂಗಾಣ ರೈತರ ಹೋರಾಟವೆಂದು, ಪ್ರಸಿದ್ಧಿಯಾಗಿದ್ದ ಈ ಹೋರಾಟ ನಂತರ ನಕ್ಸಲ್ ಹೋರಾಟವಾಗಿ ಪರಿವರ್ತನೆ ಹೊಂದಿತು. ಈ ವೇಳೆಗೆ ಪಂಚಡಿ ಕೃಷ್ಣಮೂರ್ತಿ, ಸಿ.ತೇಜೇಶ್ವರರಾವ್, ಎಂಬ ಮುಖಂಡರು, ಸತ್ಯನಾರಾಯಣರಿಗೆ ಕೈ ಜೋಡಿಸಿದರು. ನೆರೆಯ ಒರಿಯಾದ ಪ್ರಸಿದ್ಧ ಕವಿ ಸುಬ್ಬರಾವ್ ಪ್ರಾಣಿಗ್ರಹಿ ಎಂಬುವರು, ಒರಿಸ್ಸಾದಲ್ಲಿ ತಮ್ಮ ಜಮುಕಲಾ ಕಥಾ ಎಂಬ ಹೆಸರಿನಲ್ಲಿ, ಸ್ಥಳೀಯ ಗಿರಿಜನರ ಸಮಸ್ಯೆಗಳನ್ನು ಜನಪದ ಶೈಲಿಯಲ್ಲಿ ಹಾಡು ಕಟ್ಟಿ ಸಂಘಟನೆಗೆ ನೆರವಾಗಿದ್ದರು. ಅದೇ ಪ್ರಯೋಗವನ್ನು ಇಲ್ಲಿ ಮುಂದುವರಿಸಿದರು. ಇವರ ನಡುವೆ ಅಪ್ಪಲಸೂರಿ ಎಂಬ ಮತ್ತೊಬ್ಬ ಮುಖಂಡ ನಗರಗಳಿಗೆ ಹೋಗಿ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮನವೊಲಿಸಿ ನಕ್ಸಲ್ ಸಂಘಟನೆಗೆ ಕರೆತಂದು ಮತ್ತಷ್ಟು ಹುರುಪು ತುಂಬಿದನು.

ಇವೆಲ್ಲವುಗಳ ಪರಿಣಾಮ, ಶ್ರೀಕಾಕುಳಂ ಜಿಲ್ಲೆಯ ಗಿರಿಜನರ ಸಂಘಟನೆ ಬಲಿಷ್ಟವಾಯಿತು. 1967 ರ ಅಕ್ಟೋಬರ್ 31 ರಂದು ಸಂಭವಿಸಿದ ಒಂದು ಘಟನೆ ಸಂಘಟನೆಯ ಹೋರಾಟಕ್ಕೆ ಹೊಸತಿರುವು ನೀಡಿತು. ಕಮ್ಯೂನಿಷ್ಟ್ ಪಕ್ಷದ ಸಭೆಗೆ ಹೋಗುತ್ತಿದ್ದ 800 ಗಿರಿಜನರ ಸದಸ್ಯರಿದ್ದ ಗುಂಪಿನ ಮೇಲೆ ಲೆವೆಡಿ ಎಂಬ ಹಳ್ಳಿಯೊಂದರಲ್ಲಿ ಭೂಮಾಲಿಕರ ಗೂಂಡಾಪಡೆ ಗುಂಡು ಹಾರಿಸಿ, ಇಬ್ಬರನ್ನು ಬಲಿ ತೆಗೆದುಕೊಂಡಿತು. ಆದಿನ ಗಿರಿಜನರ ಗುಂಪು ಗುಂಡೇಟಿನಿಂದ ಸತ್ತವರ ಎದೆಯ ಮೇಲೆ ಕೈಯಿಟ್ಟು ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿತು. ಆ ಕ್ಷಣದಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟದ ಇತಿಹಾಸಕ್ಕೆ ರಕ್ತಸಿಕ್ತದ ಹೊಸ ಅಧ್ಯಾಯವೊಂದು ಸೇರ್ಪಡೆಯಾಯಿತು.

ವೆಂಪಟಾಪು ಸತ್ಯನಾರಾಯಣ, 800 ಗಿರಿಜನರ ಪಡೆಯೊಂದನ್ನು ಕಟ್ಟಿ, ಅದನ್ನು ತಲಾ ನೂರು ಜನರ 8 ದಳಗಳನ್ನು ವಿಭಜಿಸಿದ. ಅವರಿಗೆ ಹೋರಾಟದ ಕೆಚ್ಚನ್ನು ಮತ್ತು ಸ್ಥೈರ್ಯವನ್ನು ತುಂಬಿದ. ಇದರ ಪರಿಣಾಮ, 1968 ರ ಅಕ್ಟೋಬರ್ 23 ರಂದು ಸೊಂಪೇಟ ತಾಲ್ಲೋಕಿನ ಬೊದ್ದಪಡು ಎಂಬ ಗ್ರಾಮಕ್ಕೆ ನುಗ್ಗಿದ ಹೋರಾಟಗಾರರು, ಜಮೀನ್ದಾರರ ಮನೆಯಲ್ಲಿದ್ದ ಭತ್ತ, ಹಣವನ್ನು ಲೂಟಿ ಮಾಡಿದರು. ಮತ್ತೇ ಒಂದು ತಿಂಗಳಿನ ನಂತರ ತೆಕಳಿ ತಾಲೂಕಿನ ಗರುಡಬಾದ್ರ ಎಂಬ ಊರಿನ ಮೇಲೆ ದಾಳಿ ಮಾಡಿ, ಅಲ್ಲಿನ ಸಾಹುಕಾರರು, ಜಮೀನ್ದಾರರು, ಅವರ ಗೂಂಡಾಪಡೆಯನ್ನು ಥಳಿಸಿ, ಧವಸ, ಧಾನ್ಯ, ಹಣ, ಆಭರಣ, ಮತ್ತು ಬಂದೂಕಗಳನ್ನು ದೋಚಿದರು. ಪ್ರತಿಯೊಂದು ದಳಕ್ಕೂ ಸತ್ಯನಾರಾಯಣ, ಪಂಚಡಿ ಕೃಷ್ಣಮೂರ್ತಿ, ತಮ್ಮಡ ಗಣಪತಿ ಅಪ್ಪಾಲ್ ಸೂರಿ, ತೇಜೇಶ್ವರರಾವ್, ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ಒಂದು ವರ್ಷದ ಅವಧಿಯಲ್ಲಿ ನಡೆದ ನೂರಕ್ಕು ಹೆಚ್ಚು ದಾಳಿಗಳಿಂದ, ಭೂಮಾಲಿಕರು, ಹಣದ ಲೇವಾದೇವಿಗಾರರು, ಮತ್ತು ಅವರು ಸಾಕಿಕೊಂಡಿದ್ದ ಗೂಂಡಾ ಸದಸ್ಯರು, ಎಲ್ಲರೂ ತತ್ತರಿಸಿಹೋದರು. ದಾಳಿಯ ಜೊತೆಜೊತೆಯಲ್ಲಿ ಪೊಲೀಸರ ಜೊತೆ ನಡೆದ ಸಂಘರ್ಷದಲ್ಲಿ ಇಬ್ಬರು ಇನ್ಸಪೆಕ್ಟರ್‌ಗಳು ಸೇರಿದಂತೆ 31 ಮಂದಿ ಪೊಲೀಸರು ಹತರಾದರು.

ಶ್ರೀಕಾಕುಳಂ ಹೋರಾಟದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, 1969 ರ ಮಾರ್ಚ್ ತಿಂಗಳಿನಲ್ಲಿ ಶ್ರೀಕಾಕುಳಂ ಜಿಲ್ಲೆಗೆ ಭೇಟಿ ನೀಡಿದ ಚಾರು ಮುಜಂದಾರ್, ಹೋರಾಟಗಾರರಿಗೆ ಅಗತ್ಯವಾದ ಶಸ್ರಾಸ್ತ್ರಗಳನ್ನು ನೀಡಿದುದಲ್ಲದೆ, ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿಗೆ ವ್ಯವಸ್ಥೆ ಮಾಡಿದ. ಚಾರು ಮುಜಂದಾರ್ ಭೇಟಿಯಿಂದ ಶ್ರೀಕಾಕುಳಂ ಹೋರಾಟಕ್ಕೆ ಹೊಸ ತಿರುವು ಸಿಕ್ಕಿತು. ಎಣ್ಣೆಯಲ್ಲಿ ಅದ್ದಿದ್ದ ದೊಂದಿಗೆ (ಪಂಜು) ಕಿಡಿ ತಗುಲಿದಂತಾಯಿತು. ಹತ್ತಿ ಉರಿದ ಹೋರಾಟದ ಈ ದೊಂದಿ, ಅವರೆಗೆ ಕಗ್ಗತ್ತಲಲ್ಲಿದ್ದ ಅಮಾಯಕ ಗಿರಿಜನರ ಪಾಲಿಕೆ ಬೆಳಕಾದರೆ, ಶೋಷಣೆ ಮಾಡುತ್ತಿದ್ದ ಭೂಮಾಲಿಕರ ಪಾಲಿಗೆ ಮೈಸುಡುವ ಬೆಂಕಿಯಾಯಿತು. ಅಲ್ಪಾವಧಿಯಲ್ಲಿ ನಕ್ಸಲ್ ಹೋರಾಟ ಆಂಧ್ರದ ತೆಲಂಗಾಣ ಮತ್ತು ಶ್ರೀಕಾಕುಳಂ ಪ್ರಾಂತ್ಯದ ಮುನ್ನೂರು ಹಳ್ಳಿಗಳಿಗೆ ವ್ಯಾಪಿಸಿತು.

1969 ರ ಮಾರ್ಚ್ ತಿಂಗಳಿನಿಂದ ಡಿಸಂಬರ್‌‍ವರೆಗೆ ಭೂಮಾಲಿಕರ ಮನೆಯ ಮೇಲೆ 40 ದಾಳಿಗಳು ಮತ್ತು 29 ಭೂಮಾಲಿಕರ ಹಾಗೂ ಲೇವಾದೇವಿದಾರರ ಹತ್ಯೆಗಳು ಸಂಭವಿಸಿದವು. 1969 ರ ಮೇ 26 ರ ರಾತ್ರಿ ಲಹೋರಿಜೋಲ ಎಂಬ ಹಳ್ಳಿಯ ಮೇಲೆ ದಾಳಿ ಇಟ್ಟ 600 ಮಂದಿ  ಹೋರಾಟಗಾರರು, ಅಂಗಾರು ಇಂದುವದನ ನಾಯ್ಡು ಎಂಬ ಜಮೀನ್ದಾರನ ಮನೆಗೆ ನುಗ್ಗಿ ಆತನ ಪತ್ನಿ ಎದುರು ಕತ್ತು ಕೊಯ್ದು ಹತ್ಯೆ ಮಾಡಿದರು. (ಈತ ತನ್ನ ಗೂಂಡಾ ಪಡೆಯ ಮೂಲಕ ಗಿರಿಜನರ ಮೇಲೆ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದವನು) ಅಲ್ಲದೆ ಅವನ ನೆತ್ತರಿನಲ್ಲಿ ತಮ್ಮ ಹಸ್ತಗಳನ್ನು ಅದ್ದಿ ಮನೆಯ ಹೊರಭಾಗದ ಗೋಡೆಯ ಮೇಲೆ ಅವುಗಳ ಅಚ್ಚು ಮೂಡಿಸಿದರು. ಅವರ ಸಿಟ್ಟು ಮತ್ತು ಅಮಾನುಷವಾದ ಈ ಕೃತ್ಯದಲ್ಲಿ ಶತಶತಮಾನಗಳಿಂದ ಅವರು ಅನುಭವಿಸಿದ, ಶೋಷಣೆಯ ನೋವುಗಳಿದ್ದವು, ಅವರ ಹೆಂಡತಿಯರು ಮತ್ತು ಅಕ್ಕ ತಂಗಿಯರ ಅತ್ಯಾಚಾರದ ನೆನಪುಗಳಿದ್ದವು. ಮತ್ತೇ ಜೂನ್ ತಿಂಗಳಿನಲ್ಲಿ ಅಕ್ಕುಪಲ್ಲಿ ಎಂಬ ಊರಿನ ಬಡ್ಡಿ ವ್ಯಾಪಾರಿ ಭೂಚಂದ್ರರಾವ್ ಎಂಬಾತನ ಮನೆಗೆ ನುಗ್ಗಿದ ಮಹಿಳಾ ಸದಸ್ಯರನ್ನು ಒಳಗೊಂಡಿದ್ದ ತಂಡ, ಆತನನ್ನೂ ಸಹ ಪತ್ನಿಯ ಎದುರು ಹತ್ಯೆಗೈದು, ಗಿರವಿ ಇಟ್ಟುಕೊಂಡಿದ್ದ ಗಿರಿಜನ ಚಿನ್ನಾಭರಣಗಳನ್ನು ದೋಚಲಾಯಿತು. ಈ ದಾಳಿಯ ನೇತೃತ್ವವನ್ನು ಪಂಚಡಿ ನಿರ್ಮಲ ಎಂಬಾಕೆ ವಹಿಸಿಕೊಂಡಿದ್ದಳು. ಹೀಗೆ ನಿರಂತರ ನಡೆದ ದಾಳಿಯಿಂದ ಬೆಚ್ಚಿ ಬಿದ್ದ ಭೂಮಾಲಿಕರು, ಸಾಹುಕಾರರು, ಅವರಿಗೆ ಬೆಂಗಾವಲಿಗೆ ಇದ್ದ ಗೂಂಡಾಗಳು ತಮ್ಮ ಮನೆ, ಜಮೀನು, ಎಲ್ಲವನ್ನು ಬಿಟ್ಟು ರಾತ್ರೋರಾತ್ರಿ ಊರು ಖಾಲಿ ಮಾಡಿ, ಪಟ್ಟಣ ಮತ್ತು ನಗರಗಳನ್ನು ಸೇರಿಕೊಂಡರು. ಬಹುತೇಕ ಈ ಎಲ್ಲಾ ಘಟನೆಗಳು, ಶ್ರೀಕಾಕುಳಂ ಜಿಲ್ಲೆ ಪಾರ್ವತಿಪುರ, ಸೊಂಪೇಟ, ತಕಾಳಿ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಜರುಗಿದ್ದು ವಿಶೇಷ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 21)


– ಡಾ.ಎನ್.ಜಗದೀಶ್ ಕೊಪ್ಪ


ಪ್ರವಾಸಿ ಮಂದಿರದಲ್ಲಿ ತಂಗಿದ್ದ ಕಾರ್ಬೆಟ್ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ನರಭಕ್ಷಕ ಚಿರತೆ ರಾತ್ರಿ ಹಾರಿಸಿದ್ದ ಗುಂಡೇಟಿಗೆ ಬೆದರಿ ಅಲಕಾನಂದ ನದಿಯ ಸೇತುವೆ ದಾಟಿ ಹೋಗಿರಬಹುದೇ ಎಂದು ಸಂಶಯಿಸಿ, ಸೇತುವೆ ಬಳಿ ಬಂದು ಪರೀಕ್ಷಿಸಿದ. ಸೇತುವೆಯನ್ನು ಅವನ ಅಣತಿಯಂತೆ ಹಳ್ಳಿಗರು ಕಲ್ಲು ಮತ್ತು ಮುಳ್ಳಗಳಿಂದ ಮುಚ್ಚಿದ್ದ ಕಾರಣ ಅದು ಸೇತುವೆ ದಾಟಿ ಹೋಗಲು ಅಸಾಧ್ಯವಾಗಿತ್ತು. ಇನ್ನೊಂದು ಸೇತುವೆ ಸುಮಾರು 14 ಕಿಲೋಮೀಟರ್ ದೂರದ ಚಿಟ್ಪಾವಲ್ ಹಳ್ಳಿಯಲ್ಲಿ ಇದ್ದ ಕಾರಣ ಅಷ್ಟು ದೂರ ಹೋಗಿರಲಾರದು ಎಂದು ಕಾರ್ಬೆಟ್ ಊಹಿಸಿದ. ಸೇತುವೆ ಬಳಿ ಅದರ ಹೆಜ್ಜೆಯ ಗುರುತುಗಳು ಇರಲಿಲ್ಲವಾದರಿಂದ ಚಿರತೆ ಇಲ್ಲೇ ಕಾಡಿನಲ್ಲೆ ಅಡಗಿದೆ ಎಂಬ ತೀರ್ಮಾನಕ್ಕೆ ಬಂದ. ಏನೇ ಆಗಲಿ ಗುಂಡೇಟಿನಿಂದ ಗಾಬರಿಗೊಂಡಿರುವ ಚಿರತೆ ರಾತ್ರಿ ವೇಳೆ ಸೇತುವ ದಾಟುವ ಸಾಧ್ಯತೆ ಇದೆ ಎಂದುಕೊಂಡ ಕಾರ್ಬೆಟ್, ಅಲ್ಲಿ ಹಾಕಲಾಗಿದ್ದ ಕಲ್ಲು, ಮುಳ್ಳುಗಳನ್ನು ತೆಗೆಸಿ ರಾತ್ರಿ ವೇಳೆ ಕಾವಲು ಕಾಯಲು ಕುಳಿತ.

ಸೇತುವೆಯ ಒಂದು ಬದಿಯ ಗೋಪುರದಲ್ಲಿ ಸತತ 20 ದಿನಗಳ ರಾತ್ರಿ ಶೀತಗಾಳಿ, ತುಂತುರು ಮಳೆಯ ನಡುವೆ ಕಾರ್ಬೆಟ್ ಕಾದು ಕುಳಿತರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಬೆಳಗಿನ ಜಾವ ನರಿಯೊಂದು ಸೇತುವೆಯನ್ನು ದಾಟಿದ್ದನ್ನು ಅವನು ಮೂಕಪ್ರೇಕ್ಷಕನಾಗಿ ನೋಡಬೇಕಾಗಿಬಂತು. ಇದೇ ವೇಳೆಗೆ ಜಿಲ್ಲಾಧಿಕಾರಿ ಇಬ್ಸ್‌ಟನ್ ತನ್ನ ಪತ್ನಿಯೊಂದಿಗೆ ಘರ್‌ವಾಲ್‌ಗೆ ‌ಬಂದ. ನರಭಕ್ಷಕನ ಬೇಟೆಯಲ್ಲಿ ತೊಡಗಿರುವ ಕಾರ್ಬೆಟ್ ಜೊತೆ ಪಾಲ್ಗೊಳ್ಳವ ಉದ್ದೇಶದಿಂದ ಕೆಲಸದ ನಡುವೆಯೂ ವಿರಾಮ ಮಾಡಿಕೊಂಡು ಬಂದಿದ್ದ. ಕಾರ್ಬೆಟ್‌ಗೆ ಕಂಪನಿ ಕೊಟ್ಟು ಅವನ ಏಕಾಂಗಿತನ ಹೋಗಲಾಡಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿತ್ತು.

ಪ್ರವಾಸಿ ಮಂದಿರದಲ್ಲಿ ಕೇವಲ ಒಂದು ಕೊಠಡಿ ಇದ್ದ ಕಾರಣ ಕಾರ್ಬೆಟ್ ಅದನ್ನು ಇಬ್ಸ್‌ಟನ್ ದಂಪತಿಗಳಿಗೆ ಬಿಟ್ಟುಕೊಟ್ಟು ತನ್ನ ಸೇವಕರೊಡನೆ ಹೊರಗೆ ಟೆಂಟ್ ಹಾಕಿಕೊಂಡು ಮಲಗಲು ನಿರ್ಧರಿಸಿದ. ಅಂದು ಸಂಜೆ ತನ್ನ ಎಂಟು ಮಂದಿ ಸೇವಕರ ನೆರವಿನೊಂದಿಗೆ ಪ್ರವಾಸಿ ಮಂದಿರದ ಮುಂದೆ ಟೆಂಟ್ ಹಾಕಿಸಿ, ಸುತ್ತಲಿನ ಬೇಲಿಯನ್ನು ಭದ್ರಪಡಿಸಿದ. ಬೇಲಿಯ ನಡುವೆ ಒಂದು ಮರವಿದ್ದು ಅದರ ಕೊಂಬೆಗಳು ಒಳಕ್ಕೆ ಚಾಚಿದ್ದವು. ಅವುಗಳನ್ನು ಸಹ ಕಾರ್ಬೆಟ್ ಕಡಿಸಿಹಾಕಿದ. ಹಿಂದೊಂಮ್ಮೆ ನರಭಕ್ಷಕ ಕಾಡಿನಿಂದ ಪ್ರವಾಸಿ ಮಂದಿರದವರೆಗೂ ಕಾರ್ಬೆಟ್‌ನನ್ನು ಹಿಂಬಾಲಿಸಿ ಬಂದಿದ್ದರಿಂದ ಅವನು ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದ.

ಕಡೆಗೂ ಕಾರ್ಬೆಟ್‌ನ ನಿರೀಕ್ಷೆ ನಿಜವಾಯಿತು. ಆದಿನ ತಡ ರಾತ್ರಿ ನರಭಕ್ಷಕ ಮರಹತ್ತಿ ಬೇಲಿ ನೆಗೆಯಲು ಪ್ರಯತ್ನಿಸಿತು. ಮರದ ಸಣ್ಣ ಸಣ್ಣ ರಂಬೆಗಳು ಚಿರತೆಯ ಭಾರ ತಾಳಲಾರದೆ, ಲಟಲಟನೆ ಮುರಿಯತೊಡಗಿದಾಗ, ಟೆಂಟ್‌ನಲ್ಲಿ ಮಲಗಿದ್ದ ಕಾರ್ಬೆಟ್‌ಗೆ ಎಚ್ಚರವಾಯಿತು. ಕೂಡಲೇ ಅವನು ತನ್ನ ಮಗ್ಗುಲಲ್ಲೆ ಇರಿಸಿದ್ದ ಕೋವಿ ತೆಗೆದುಕೊಂಡು ಟಾರ್ಚ್‌ಎತ್ತಿಕೊಂಡು ಹೊರಬಂದ. ಇದಾವುದರ ಪರಿವಿಲ್ಲದೆ ಅವನ ಸೇವಕರು ಮರದಕೆಳಗಿನ ಗುಡಾರದಲ್ಲಿ ಆರಾಮವಾಗಿ ಮಲಗಿದ್ದರು, ಮಾಧೂಸಿಂಗ್ ದೊಡ್ಡಧ್ವನಿಯ ಗೊರಕೆಯಲ್ಲಿ ಮುಳುಗಿಹೋಗಿದ್ದ. ಕಾರ್ಬೆಟ್ ಹೊರಬರುವುದು ಕೆಲವೇ ಕ್ಷಣ ತಡವಾಗಿದ್ದರೆ, ಅದು ಮಾಧೂಸಿಂಗ್ ಮೇಲೆ ನೆಗೆದು ಅವನನ್ನು ಬಲಿತೆಗೆದುಕೊಳ್ಳುತ್ತಿತ್ತು. ಮರದ ತುದಿಯ ಕೊಂಬೆಯೊಂದು ಸೇವಕರಿಗೆ ಎಟುಕದ ಕಾರಣ ಕಡಿಯದೇ ಹಾಗೇ ಬಿಟ್ಟಿದ್ದರು. ಆ ಕೊಂಬೆಯ ಮೇಲಿಂದ ಚಿರತೆ ನರಬಲಿಗೆ ಹೊಂಚು ಹಾಕಿತ್ತು. ಕಾರ್ಬೆಟ್ ಬಿಟ್ಟ ಟಾರ್ಚ್ ಬೆಳಕಿಗೆ ಗಾಬರಿಗೊಂಡ ಅದು ಮರದಿಂದ ಜಿಗಿದು ಓಡಿ ಹೋಗಿ ಪಕ್ಕದ ಕಾಡು ಸೇರಿಕೊಂಡಿತ್ತು.

ಮಾರನೇ ದಿನ ಬೆಳಿಗ್ಗೆ ಕಾರ್ಬೆಟ್ ಎದ್ದವನೇ ಮರದ ಕೊಂಬೆಗಳನ್ನು ಸಂಪೂರ್ಣವಾಗಿ ಕಡಿಸಿ ಹಾಕಿದ. ಬೇಲಿಯನ್ನು ಮತ್ತಷ್ಟು ಭದ್ರಪಡಿಸಿದ ನರಭಕ್ಷಕ ಇಲ್ಲೆ ಆಸು ಪಾಸಿನ ಪ್ರದೇಶದಲ್ಲಿ ಇರುವುದು ರಾತ್ರಿಯ ಘಟನೆಯಿಂದ ಖಚಿತವಾಯಿತು. ಇಬ್ಸ್‌ಟನ್ ಕೂಡ ಬಂದಿದ್ದರಿಂದ ಆದಿನ ಬೆಳಿಗ್ಗೆ ಕಾರ್ಬೆಟ್ ಅವನನ್ನು ಕರೆದುಕೊಂಡು ಹೋಗಿ ಅಲಕನಂದಾ ನದಿಯಲ್ಲಿ ತನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಮೀನು ಶಿಕಾರಿಯಲ್ಲಿ ತೊಡಗಿದ. ಸಂಜೆವೇಳೆಗೆ ಇಬ್ಬರೂ ಹಿಡಿದಿದ್ದ ಮೀನುಗಳನ್ನು ತಂದು ಸೇವಕರಿಗೆ ಕೊಟ್ಟು, ರಾತ್ರಿ ಪ್ರವಾಸಿ ಮಂದಿರದಲ್ಲಿ ವಿಸ್ಕಿ ಹೀರುತ್ತಾ ನರಭಕ್ಷಕನ ಬೇಟೆಗೆ ಯೋಜನೆ ರೂಪಿಸತೊಡಗಿದರು. ಬೆಳಗಿನ ಜಾವದ ವೇಳೆಗೆ ಪಕ್ಕದ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಸುದ್ಧಿ ಕಾರ್ಬೆಟ್‌ಗೆ ತಲುಪಿತು. ಕೂಡಲೇ ಇಬ್ಸ್‌ಟನ್ ಜೊತೆ ಕಾರ್ಬೆಟ್ ಹಳ್ಳಿಗೆ ಹೊರಟ.

ಹಳ್ಳಿ ರೈತನ ಮನೆಗೆ ನುಗ್ಗಲು ವಿಫಲಯತ್ನ ನಡೆಸಿದ ಚಿರತೆ, ಮನೆಯ ಬಾಗಿಲನ್ನು ತನ್ನ ಉಗುರಿನಿಂದ ಕೆರೆದು ಮುರಿಯಲು ಪ್ರಯತ್ನಿಸಿತ್ತು. ಅದು ಸಾಧ್ಯವಾಗದೇ, ನಂತರ ಮನೆಯ ಹಿಂಭಾಗದ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಬಲಿ ತೆಗೆದುಕೊಂಡಿತ್ತು. ಕೊಂದ ಹಸುವನ್ನು ಕಚ್ಚಿ ಎಳೆದೊಯ್ಯಲು ಅದು ಪ್ರಯತ್ನಿಸಿತ್ತು ಆದರೆ, ಬಾಗಿಲು ಚಿಕ್ಕದಾಗಿದ್ದು, ಹಸುವಿನ ಕಳೇಬರ ಬಾಗಿಲಿಗೆ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಅದನ್ನು ಅಲ್ಲೇ ಇರಿಸಿ ಅರ್ಧ ಭಾಗವನ್ನು ತಿಂದು ಹೋಗಿತ್ತು. ಸ್ಥಳವನ್ನು ಅವಲೋಕಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ರಾತ್ರಿ ಕೊಟ್ಟಿಗೆಗೆ ಬಂದು ಕಾವಲು ಕೂರಲು ನಿರ್ಧರಿಸಿದರು. ಮತ್ತೇ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಚಿರತೆ ಬರುತ್ತದೆ ಎಂಬುದು ಇಬ್ಬರ ನಿರೀಕ್ಷೆಯಾಗಿತ್ತು. ರಾತ್ರಿ ಊಟವಾದ ನಂತರ ಒಂದಿಷ್ಟು ಸ್ಯಾಂಡ್ವಿಚ್ ಮತ್ತು ಚಹಾ ಮತ್ತು ಬಂದೂಕುಗಳೊಂದಿಗೆ ರೈತನ ಮನೆಯ ಕೊಟ್ಟಿಗೆಗೆ ಬಂದು ಕಾವಲು ಕುಳಿತರು. ಆದರೆ, ನರಭಕ್ಷ ಆ ರಾತ್ರಿ ಹಸುವಿನ ಕಳೇಬರದತ್ತ ಸುಳಿಯಲೇ ಇಲ್ಲ. ಇದಾದ ಎರಡು ದಿನಗಳ ನಂತರ ಮತ್ತೊಂದು ಹಳ್ಳಿಯಲ್ಲಿ ನರಭಕ್ಷಕ ಮತ್ತೇ ಕೊಟ್ಟಿಗೆಯಲ್ಲಿ ಇದ್ದ ಹಸುವೊಂದನ್ನು ಬಲಿತೆಗೆದುಕೊಂಡಿತ್ತು.

ಈ ಬಾರಿ ಹಸುವನ್ನು ಬಾಗಿಲಿನ ಹೊರಭಾಗದವರೆಗೆ ಎಳೆದು ತಂದಿತ್ತು ಆದರೆ ಭಾರಿ ಗಾತ್ರದ ಹಸುವಿನ ಶವವನ್ನು ಕೊಂಡೊಯ್ಯಲು ಸಾಧ್ಯವಾಗದೆ, ಅಲ್ಲೆ ಕೆಲವು ಭಾಗಗಳನ್ನು ತಿಂದುಹೋಗಿತ್ತು. ಕೊಟ್ಟಿಗೆಯ ಮುಂಭಾಗದಲ್ಲಿ ಚಪ್ಪರವೊಂದನ್ನು ನಿರ್ಮಿಸಿ ಅದರ ಮೇಲೆ ಜಾನುವಾರುಗಳಿಗೆ ರೈತ ಹುಲ್ಲನ್ನು ಸಂಗ್ರಹಿಸಿ ಇಟ್ಟಿದ್ದ. ಇದನ್ನು ನೋಡಿದ ಕಾರ್ಬೆಟ್ ಹುಲ್ಲನ್ನು ತನ್ನ ಸೇವಕರಿಂದ ತೆಗೆಸಿ , ಚಪ್ಪರದ ಮೇಲೆ ಗೂಡನ್ನು ನಿರ್ಮಿಸಿದ, ಮತ್ತೇ ಕೆಲವು ಬಿದಿರಿನ ಬೊಂಬುಗಳನ್ನು ನೆಡಸಿ, ತನ್ನ ಗೂಡಿನ ಮೇಲೆ ಇನ್ನೊಂದು ಅಂತಸ್ತಿನ ಗೂಡನ್ನ ಇಬ್ಸ್‌ಟನ್‌ಗಾಗಿ ನಿರ್ಮಿಸಿದ. ರಾತ್ರಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಲು ಮರದ ಹಲಗೆಗಳನ್ನು ಚಪ್ಪರದ ಮೇಲೆ ಹಾಸಿಸಿದ್ದ. ಮತ್ತೆ ಆ ರಾತ್ರಿ ಕೂಡ ಇಬ್ಬರು ಕಾವಲು ಕುಳಿತರು. ಇಬ್ಸ್‌ಟನ್ ಕಾರ್ಬೆಟ್‌ಗಿಂತ ಕುಳ್ಳಗಿದ್ದ ಕಾರಣ ಅವನು ಮೇಲಿನ ಅಂತಸ್ತಿನ ಚಪ್ಪರದಲ್ಲಿ ಕುಳಿತರೆ, ಕಾರ್ಬೆಟ್ ನೆಲದಿಂದ ಹತ್ತು ಅಡಿ ಎತ್ತರವಿದ್ದ ಕೆಳ ಹಂತಸ್ತಿನ ಗೂಡಿನಲ್ಲಿ ಕುಳಿತ. ಇವರ ಸೂಚನೆಯಂತೆ ರಾತ್ರಿ ಎಂಟು ಗಂಟೆ ವೇಳೆಗೆ ಹಳ್ಳಿ ಗ್ರಾಮಸ್ಥರು ಊಟ ಮುಗಿಸಿ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದರು.

ರಾತ್ರಿ ಹನ್ನೋಂದರ ವೇಳೆಗೆ ನರಭಕ್ಷಕ ಪರ್ವತದಿಂದ ಇಳಿದು ಹಳ್ಳಿಯತ್ತ ಬರುತ್ತಿರುವುದನನ್ನು ಕಾಡಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾರ್ಬೆಟ್‌ಗೆ ಸೂಚನೆ ನೀಡಿದವು. ಇಬ್ಬರೂ ಮಾತು ನಿಲ್ಲಿಸಿ ತಮ್ಮ ತಮ್ಮ ಬಂದೂಕುಗಳನ್ನು ಕೈಗೆ ತೆಗೆದುಕೊಂಡು ನರಭಕ್ಷಕನಿಗಾಗಿ ಕಾಯತೊಡಗಿದರು. ಈ ಬಾರಿ ಕಾರ್ಬೆಟ್‌ನ ನಿರೀಕ್ಷೆಯನ್ನು ಹುಸಿ ಮಾಡದೇ ನರಭಕ್ಷಕ  ಹಸುವಿನ ಕಳೇಬರವಿದ್ದ ಸ್ಥಳದತ್ತ ಬರತೊಡಗಿತು ಆದರೆ, ಅದಕ್ಕೆ ಹತ್ತಿರ ಬರುತ್ತಿದ್ದಂತೆ ನರಮನುಷ್ಯನ ವಾಸನೆ ಮೂಗಿಗೆ ಬಡಿದ ಕಾರಣ ನೇರವಾಗಿ ಹಸುವಿದ್ದ ಜಾಗಕ್ಕೆ ಹೋಗದೆ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಚಪ್ಪರದಕೆಳೆಕ್ಕೆ ಬಂದು ಸುತ್ತ ಮುತ್ತ ಎಚ್ಚರಿಕೆಯಿಂದ ಗಮನಿಸತೊಡಗಿತು ಅಲ್ಲದೆ ಚಪ್ಪರಕ್ಕೆ ನೆಡಲಾಗಿದ್ದ ಬೊಂಬುಗಳಿಗೆ ತನ್ನ ಮೈಯನ್ನು ಸವರತೊಡಗಿತು. ಉಸಿರು ಬಿಗಿ ಹಿಡಿದು ಕುಳಿತ ಕಾರ್ಬೆಟ್ ನರಭಕ್ಷಕ ಚಪ್ಪರದ ಕೆಳಭಾಗದಿಂದ ಹೊರಬಂದ ಕೂಡಲೇ ಗುಂಡು ಹಾರಿಸಿ ಕೊಲ್ಲಬೇಕೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದ ಅಷ್ಟರಲ್ಲಿ ಮೇಲಂತಸ್ತಿನ ಗೂಡಿನ ಮರದ ಹಲಗೆ ಲಟಾರನೆ ಮುರಿಯಿತು ಶಬ್ಧಕ್ಕೆ ಅಂಜಿದ ಚಿರತೆ ಮುಂಭಾಗದಲ್ಲಿ ಓಡಿ ಹೋಗದೆ, ಹಿಂಭಾಗದಿಂದ ಓಡಿಹೋಯಿತು. ಗೂಡಿನ ಸುತ್ತ ಹುಲ್ಲು ಹೊದಿಸಿದ್ದ ಕಾರಣ ಅದಕ್ಕೆ ಗುರಿಯಿಡಲು ಕಾರ್ಬೆಟ್‌ಗೆ ಸಾಧ್ಯವಾಗಲಿಲ್ಲ.

ಒಂದೇ ಸ್ಥಿತಿಯಲ್ಲಿ ಕುಳಿತ್ತಿದ್ದ ಇಬ್ಸ್‌ಟನ್ ಮೇಲಿನ ಗೂಡಿನಲ್ಲಿ ಮಗ್ಗುಲು ಬದಲಿಸುವಾಗ ಹಲಗೆ ಮುರಿದು ಶಬ್ಧಮಾಡುವುದರ ಮೂಲಕ ನರಭಕ್ಷಕನ ಪ್ರಾಣ ಉಳಿಸಿತ್ತು. ಇಬ್ಬರೂ ತಮ್ಮ ದುರಾದೃಷ್ಟವನ್ನು ಅಳಿದುಕೊಳ್ಳುತ್ತಾ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದರು. ಈ ಘಟನೆ ನಡೆದ ಎರಡು ದಿನಗಳ ನಂತರ ನರಭಕ್ಷಕ ರುದ್ರಪ್ರಯಾಗದ ಪಟ್ಟಣದಲ್ಲೇ ಮನೆಯೊಂದರ ಮುಂಭಾಗದ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹೊರಭಾಗದ ಬಯಲಲ್ಲಿ ತಿಂದು ಹೋಗಿತ್ತು. ನಿರಂತರ ಘಟನೆಗಳಿಂದ ಹತಾಶರಾಗಿದ್ದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಈ ಸಾರಿ ನರಭಕ್ಷಕನ ಬೇಟೆಗೆ ಹೊಸತಂತ್ರವನ್ನು ರೂಪಿಸಿದ್ದರು. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು ಎಂಬತ್ತು ಕೆ.ಜಿ. ಗಾತ್ರದ ಅಡಕತ್ತರಿಯೊಂದನ್ನು (ಜಿನ್ ಕತ್ತರಿ) ತರಿಸಿದ್ದರು ಇದನ್ನು ಮುರದಾಬಾದ್‌ನಲ್ಲಿ ವಿಶೇಷವಾಗಿ  ತಯಾರಿಸಲಾಗಿತ್ತು. ಅದರ ಎರಡು ಅಲಗುಗಳನ್ನು ಗರಗಸದ ಹಲ್ಲಿನಂತೆ ಮಾಡಲಾಗಿತ್ತು ಅದಕ್ಕೆ ಬಲವಾದ ಸ್ಪ್ರಿಂಗ್ ಜೋಡಿಸಿದ್ದ ಕಾರಣ ಇಬ್ಬರು ಅವುಗಳನ್ನು ಎಳೆದು ಅದರ ಬಾಯಿ ಬಿಡಿಸಬೇಕಾಗಿತ್ತು ಆ ಜಿನ್ ಕತ್ತರಿಯ ನಡುಭಾಗಕ್ಕೆ ಯಾವ ಪ್ರಾಣಿ ಕಾಲಿಟ್ಟ ತಕ್ಷಣ ಕತ್ತರಿಯ ಅಲುಗುಗಳು ಮುಚ್ಚಿಕೊಳ್ಳುತ್ತಿದ್ದವು. ಎಂತಹ ಪ್ರಾಣಿಯೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಸುವಿನ ಕಳೇಬರವಿದ್ದ ನೂರು ಅಡಿ ದೂರದಲ್ಲಿ ಒಂದು ಎತ್ತರದ ಬಲಿಷ್ಟವಾದ ಮರವಿತ್ತು ಅದರ ಮೇಲೆ ಇಬ್ಬರೂ ಕೂರಲು ನಿರ್ಧರಿಸಿದರು. ನರಭಕ್ಷಕ ಯಾವ ದಿಕ್ಕಿನಿಂದ ಕಾಡಿನತ್ತ ತೆರಳಿದೆ ಎಂಬುದನ್ನು ಅದರ ಹೆಜ್ಜೆ ಗುರುತುಗಳ ಮೂಲಕ ಗುರುತಿಸಿ ಆ ಹಾದಿಯಲ್ಲಿ ಅಡಕತ್ತರಿಯನ್ನು ಇರಿಸಿ, ಅದನ್ನು ತರಗೆಲೆಗಳಿಂದ ಮುಚ್ಚಿದರು. ನರಭಕ್ಷಕ ಸಿಕ್ಕಿಕೊಂಡಾಗ ಅದನ್ನು ಎಳೆದೊಯ್ಯಬಾರದು ಎಂದು ಅದಕ್ಕೆ ಸರಪಣಿ ಜೋಡಿಸಿ ಮರಕ್ಕೆ ಬಿಗಿಯಲಾಗಿತ್ತು. ಎಂದಿನಂತೆ ಆ ರಾತ್ರಿ ಕೂಡ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರ ಜೊತೆ ಮರದ ಬಳಿ ಬಂದು ಏಣಿ ಮುಖಾಂತರ ಮೇಲಕ್ಕೆ ಹತ್ತಿ ಕುಳಿತು, ಸೇವಕರನ್ನು ಪ್ರವಾಸಿ ಮಂದಿರಕ್ಕೆ ಕಳಿಸಿದರು. ಈ ಬಾರಿ ಅವರ ಬಳಿ ಸಕಾರ ಕಳಿಸಿದ್ದ ಭಾರೀ ಗಾತ್ರದ ಟಾರ್ಚ್ ಅವರ ಬಳಿ ಇದ್ದುದರಿಂದ ರಾತ್ರಿ ಶಿಕಾರಿಗೆ ಅನುಕೂಲವಾಗಿತ್ತು.

ರಾತ್ರಿ ಕತ್ತಲಾಗುತ್ತಿದ್ದಂತೆ ಒಂಬತ್ತರ ವೇಳೆಗೆ ಚಿರತೆಯ ಆರ್ಭಟ ಕೇಳತೊಗಿತು ಅದರ ಮುಂಗಾಲುಗಳರೆಡು ಅಡಕತ್ತರಿಗೆ ಸಿಲುಕಿಕೊಂಡು ಅದರಿಂದ ಬಿಡಿಸಿಕೊಲ್ಳಲು ಹೋರಾಡುತ್ತಾ ಭೀಕರವಾಗಿ ಸದ್ದುಮಾಡುತ್ತಿತ್ತು. ಕಾರ್ಬೆಟ್ ಟಾರ್ಚ್ ಮುಖಾಂತರ ಅದರತ್ತ ಬೆಳಕು ಹಾಯಿಸಿದಾಗ ಚಿರತೆ ಅಡಕತ್ತರಿಯನ್ನು ಎಳೆಯುತ್ತಾ ರೋಷಾವೇಷದಿಂದ ಘರ್ಜಿಸುತ್ತಿತ್ತು. ಇದೇ ಸುಸಮಯ ಎಂದುಕೊಂಡ ಕಾರ್ಬೆಟ್ ಅದರತ್ತ ಗುಂಡು ಹಾರಿಸಿದ ಆದರೆ, ಗುಂಡು ಚಿರತೆಗೆ ತಾಗುವ ಬದಲು ಸರಪಣಿಗೆ ತಗುಲಿ ಅದು ತುಂಡಾಯಿತು. ಕೂಡಲೇ ಇಬ್ಸ್‌ಟನ್ ಕೂಡ ಗುಂಡು ಹಾರಿಸದ ಆದರೆ, ಕತ್ತಲಿನಲ್ಲಿ ಎಲ್ಲವೂ ಗುರಿತಪ್ಪಿದ್ದವು ಇದರಿಂದಾಗಿ ತಪ್ಪಿಸಿಕೊಂಡ ಚಿರತೆ ಕತ್ತರಿಯನ್ನು ಎಳೆದುಕೊಂಡು ಮರಗಿಡಗಳ ನಡುವೆ ಕೆಳಗಿನ ಹಳ್ಳವೊಂದರಲ್ಲಿ ಮರೆಯಾಯಿತು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-7)


– ಡಾ.ಎನ್.ಜಗದೀಶ್ ಕೊಪ್ಪ


 

Dignitaries fell Wrapped in their togas of worm-eaten mud, nameless people shouldered spears, tumbled the walls, nailed the tyrant to his golden door.  – Pablo Neruda

“ಶ್ರೀಕಾಕುಳಂ” ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ ಸಮೃದ್ಧ ಹಸಿರು, ಅರಣ್ಯ, ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ, ಪೂರ್ವ ಕರಾವಳಿಯ ಒಂದು ಜಿಲ್ಲೆ. ಶೇ. 60ಕ್ಕೂ ಹೆಚ್ಚು ಮಂದಿ ಅರಣ್ಯವಾಸಿಗಳಾದ (ಜಟಪು ಜನಾಂಗ) ಗಿರಿಜನರಿಂದ ಕೂಡಿರುವ ಈ ನೆಲ ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲಾ ವಿಧವಾದ ಅಭಿವೃದ್ಧಿ ಮತ್ತು ಸವಲತ್ತುಗಳಿಂದ ವಂಚಿತವಾಗಿರುವ ನತದೃಷ್ಟರನಾಡು. ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಿಂದ 650 ಕಿಲೋಮೀಟರ್ ದೂರದಲ್ಲಿರುವ ಈ ಜಿಲ್ಲೆ, ತನ್ನ ಉತ್ತರಭಾಗದ ಈಶಾನ್ಯಕ್ಕೆ ಒರಿಸ್ಸಾ, ವಾಯುವ್ಯ ಭಾಗಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ, ಪಶ್ಚಿಮಕ್ಕೆ ಮಹರಾಷ್ಟ್ರ, ಪೂರ್ವಕ್ಕೆ ಕರಾವಳಿ ಪ್ರದೇಶವನ್ನು ಹೊಂದಿದ್ದು, ತನ್ನ ಒಡಲೊಳಗೆ ಸಮೃದ್ಧವಾದ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಹೊಂದಿರುವಂತೆ, ತನ್ನ ಚರಿತ್ರೆಯ ಪುಟಗಳಲ್ಲಿ ರಕ್ತಸಿಕ್ತ ಅಧ್ಯಾಯಗಳನ್ನು ಸಹ ಹೊಂದಿದೆ.

“ಶ್ರೀಕಾಕುಳಂ” ಎಂದರೆ, ಚರಿತ್ರೆಯಲ್ಲಿ ಒಂದು ಅಳಿಸಲಾರದ ಹೆಸರು, ಭಾರತದ ಭವಿಷ್ಯದ ಚರಿತ್ರೆಯ ಸಂಪುಟ, ಕ್ರಾಂತಿಕಾರಿಗಳ ಉಕ್ಕಿನ ಕೋಟೆ ಎಂದೆಲ್ಲಾ ನಕ್ಸಲ್ ಚಳವಳಿಯ ಸಂಸ್ಥಾಪಕ ಚಾರು ಮುಜಂದಾರ್‌ನಿಂದ ಹೊಗಳಿಸಿಕೊಂಡ ಈ ಜಿಲ್ಲೆಯ ನೆಲದ ಇತಿಹಾಸ ತಿಳಿಯದೇ ಹೋದರೆ, ಅಲ್ಲಿನ ಹಿಂಸೆ ಮತ್ತು ಹೋರಾಟದ  ಐತಿಹಾಸಿಕ ಕಥನ ಅರ್ಥವಾಗುವುದು ಕಷ್ಟ. ವಿಶಾಖಪಟ್ಟಣದದಿಂದ 50 ಕಿ.ಮಿ. ದೂರದಲ್ಲಿರುವ ವಿಜಯನಗರಂ ಎಂಬ ರೈಲು ನಿಲ್ದಾಣದಿಂದ ಬೆಳಗಿನ ಜಾವ ರಾಜಮಂಡ್ರಿ ಗೆಳೆಯರಿಗೆ ವಿದಾಯ ಹೇಳಿ, ಶ್ರೀಕಾಕುಳಂ ಜಿಲ್ಲೆಯತ್ತ ನಾನು ಪ್ರಯಾಣ ಹೊರಟಾಗ ನನ್ನ ತಲೆಯಲ್ಲಿ ಕಲ್ಪನೆ ಇದ್ದದ್ದು, ಅದೊಂದು ನಮ್ಮ ರಾಜ್ಯದಲ್ಲಿ ವಂಚಿತವಾಗಿರುವ ಉತ್ತರ ಕರ್ನಾಟಕದ ಕಪ್ಪುಭೂಮಿ ಹಾಗೂ ಜಾಲಿ ಮರಗಳ ಒಣ ಪ್ರದೇಶದ ನೀರಿನಿಂದ ವಂಚಿತವಾಗಿರುವ ಜಿಲ್ಲೆಯಂತೆ ಇರಬಹುದಾದ ಜಿಲ್ಲೆ ಎಂದು ಅಲ್ಲಿಗೆ ಕಾಲಿಟ್ಟ ಕ್ಷಣ ನನಗೆ ಆಶ್ಚರ್ಯವಾಯಿತು. ನನ್ನ ನೆಲವಾದ ಅಲ್ಲಿಂದ ಒಂದೂವರೆ ಸಾವಿರ ಕಿ.ಮಿ. ದೂರದ ಮಂಡ್ಯದ ನೆಲದಲ್ಲೇ ನಾನು ಇದ್ದೀನಿ ಎಂಬ ಭಾವನೆ ಮೂಡತೊಡಗಿತು.

ಎಲ್ಲೆಲ್ಲೂ ಭತ್ತದ ಗದ್ದೆಗಳು, ತುಂಬಿ ಹರಿಯುವ ಕಾಲುವೆಗಳು, ಆಲೆಮನೆ ಮತ್ತು ಸಕ್ಕರೆ ಕಾರ್ಖಾನೆ ಸಾಗುತ್ತಿದ್ದ ಕಬ್ಬು ತುಂಬಿದ ಜೊಡೆತ್ತಿನ ಗಾಡಿಗಳು, ಬತ್ತದ ಗದ್ದೆಯಲ್ಲಿ ನಡುಬಗ್ಗಿಸಿ ಕಳೆ ಕೀಳುತ್ತಿದ್ದ, ನನ್ನಕ್ಕ ತಂಗಿಯರಂತಹ ಬಡ ಹೆಣ್ಣು ಮಕ್ಕಳು, ಅಲ್ಲಲ್ಲಿ ಹಸಿರು ಗುಡ್ಡ, ಚಿಕ್ಕದಾದರೂ, ಚೊಕ್ಕವಾದ ಬಾಳೆ ಮತ್ತು ತೆಂಗಿನ ಗಿಡಗಳಿಂದ ಕೂಡಿದ ತೋಟಗಳು ಇವೆಲ್ಲವೂ ನಾನು ಈ ನೆಲಕ್ಕೆ ಪರಕೀಯ ಎಂಬ ಭಾವನೆಯನ್ನು ಅಳಿಸಿ ಹಾಕಿದವು. ಆದರೆ, ಹಳ್ಳಗಳಿಗೆ ಕಾಲಿಟ್ಟ ತಕ್ಷಣ ಆಂಧ್ರ ಸಂಸ್ಕೃತಿ ಮತ್ತು ಅಲ್ಲಿನ ಗುಡ್ಡಗಾಡು ಜನರ ಜನರ ಸಂಸ್ಕೃತಿ ಎದ್ದು ಕಾಣುತ್ತದೆ. ಪ್ರತಿ ಊರಿನಲ್ಲೂ ನೆಲಬಾವಿಗಳು, ಅವುಗಳ ಸುತ್ತಾ ಕೆತ್ತಿದ ಕಲ್ಲಿನಲ್ಲಿ ಕಟ್ಟಿರುವ ಸುಂದರ ತಡೆಗೋಡೆಗಳು, ಜೊತೆಗೆ ನೆಲಕ್ಕೆ ಹಾಸಿರುವ ಕಲ್ಲು ಚಪ್ಪಡಿಯ ಹಾಸುಗೆಗಳು, ಅಲ್ಲಿಯೇ ಕುಳಿತು. ಬಾವಿಯಲ್ಲಿ ನೀರು ಸೇದಿಕೊಂಡು ಯಾವ ಸಂಕೋಚವಿಲ್ಲದೆ, ಸ್ನಾನ ಮಾಡುವ ಹೆಂಗಸರು, ಪ್ರತಿ ಊರಿನಲ್ಲಿ ಎದುರಾಗುವ ಆಂಜನೇಯನ ಗುಡಿಗಳು, ಅವುಗಳ ಮೇಲೆ ಆಳೆತ್ತರಕ್ಕೆ ಎದೆ ಸೀಳುತ್ತಾ ನಿಂತಿರುವ, ಸೀಮೆಂಟ್‌ನಿಂದ ತಯಾರಾದ ಆಂಜನೇಯನ ಮೂರ್ತಿಗಳು, ಅವುಗಳಿಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಳಿದಿರುವ ಕಡುಬಣ್ಣ ಇವುಗಳು ಮಾತ್ರ ಪಕ್ಕಾ ಆಂಧ್ರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಅಂಶಗಳು.

ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶವನ್ನು ಅಲ್ಲಿನ  ಜನ ಹೆಮ್ಮೆಯಿಂದ ವಿಶಾಲಾಂಧ್ರವೆಂದು ಕರೆಯುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿ ಅಸ್ತಿತ್ವದಲ್ಲಿರುವುದು ಮೂರು ಆಂಧ್ರಗಳು. ಒಂದು, ಕಡಪ, ಅನಂತಪುರ, ನೆಲ್ಲೂರು, ಚಿತ್ತೂರು ಜಿಲ್ಲೆಗಳನ್ನು ಒಳಗೊಂಡ ರಾಯಲಸೀಮೆ, ಇದು ರೆಡ್ಡಿ ಜನಾಂಗದ ಪ್ರದೇಶ. ಎರಡನೇಯದು ತೆಲಂಗಾಣವೆಂದು ಕರೆಸಿಕೊಳ್ಳುವ ಮಧ್ಯಭಾಗದ ಆಂಧ್ರಪ್ರದೇಶವಾದ ಕಮ್ಮ ಜನಾಂಗ ಪ್ರಭಾವವಿರುವ, ಮೇಡಕ್, ಸಂಗರೆಡ್ಡಿ, ಕಮ್ಮಮಂ, ಕರೀಂನಗರ, ವಾರಂಗಲ್, ನಲ್ಗೊಂಡ, ಮುಂತಾದ ಜಿಲ್ಲೆಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಕೃಷ್ಣಾ ನದಿ ಮತ್ತು ಗೋದಾವರಿ ನದಿ ತೀರದ ಜಿಲ್ಲೆಗಳಾದ ವಿಜಯವಾಡ, ರಾಜಮಂಡ್ರಿ, ಅದಿಲಾಬಾದ್, ಇವುಗಳು ಕೂಡ ತೆಲಂಗಾಣ ಪ್ರಾಂತ್ಯಕ್ಕೆ ಸೇರುತ್ತವೆ. ಸಾಂಸ್ಕೃತಿಕವಾಗಿ ಮತ್ತು ರಾಜಕೀಯ ಹಾಗೂ ಸಾಮಾಜಿಕವಾಗಿ ಭಿನ್ನತೆ ಇರುವುದು, ಗೋದಾವರಿ ನದಿಯಾಚೆಗಿನ ಜಿಲ್ಲೆಗಳಲ್ಲಿ. ಅಂದರೆ, ವಿಶಾಖಪಟ್ಟಣ, ಪೂರ್ವಗೋದಾವರಿ ಜಿಲ್ಲೆ, ಶ್ರೀಕಾಕುಳಂ ಜಿಲ್ಲೆಗಳಲ್ಲಿ.

ಈ ಪ್ರದೇಶಗಳ ಗುಡ್ಡಗಾಡುಗಳಲ್ಲಿ ಅತ್ಯಧಿಕ ಮಂದಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಈ ನೆಲದ ಸಂಸ್ಕೃತಿಯನ್ನು ಇವತ್ತಿಗೂ ಜೀವಂತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇವರಲ್ಲಿ ಪ್ರಮುಖ ಜನಾಂಗಗಳೆಂದರೆ, ಗೊಂಡ, ಕೊಂಡರೆಡ್ಡಿ, ಚೆಂಚು, ಮರಿಯ, ಜಟಪು, ಸವರ, ತೋಲಂ, ಕೋಯ ಮುಖ್ಯವಾದವುಗಳು. ಇವರನ್ನು ಗುರುತಿಸಿ ಹೊರಜಗತ್ತಿಗೆ ಪರಿಚಯಿಸಿದ  ಕೀರ್ತಿ ಪ್ರಖ್ಯಾತ ಸಮಾಜಶಾಸ್ತ್ರಜ್ಙ ವೇರಿಯನ್‌ ಎಲ್ವಿನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಮಳೆಯನ್ನು ಆಶ್ರಯಿಸಿಕೊಂಡು, ಒಣ ಭೂಮಿಯಾಗಿದ್ದ ಈ ನೆಲಕ್ಕೆ ನೀರುಣಿಸಿ, ಇಲ್ಲಿನ ಭೂಮಿಯನ್ನು ಹಸನುಗೊಳಿಸಿದವನು, ಬ್ರಿಟಿಷ್ ಸರ್ಕಾರದಲ್ಲಿ ಮುಖ್ಯಇಂಜೀಯರ್ ಆಗಿ ಮದ್ರಾಸ್ ಪ್ರಾಂತ್ಯಕ್ಕೆ ನೆರೆಯ ಬರ್ಮಾದಿಂದ 1821 ರಲ್ಲಿ ಬಂದ ಸರ್ ಅರ್ಥರ್‌ ಕಾಟನ್. ಅನಾವಶ್ಯಕವಾಗಿ ಕೃಷ್ಣ ಮತ್ತು ಗೋದಾವರಿ ನದಿಯ ನೀರು ಸಮುದ್ರ ಸೇರುತ್ತಿರುವುದನ್ನು ಗಮನಿಸಿ, ಈ ಎರಡು ನದಿಗಳಿಗೆ ಅಣೆಕಟ್ಟು ನಿರ್ಮಿಸಿದ ಮಹಾನುಭಾವ ಈತ. 1851 ರಿಂದ 1855 ರ ನಡುವೆ ಸ್ವತಃ ಹಲವಾರು ಬಾರಿ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ರಾಣಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮನವೊಲಿಸಿ, 12 ಸಾವಿರ ಪೌಂಡ್ ಹಣವನ್ನು ತಂದು, ನೀರಾವರಿ ಯೋಜನೆಗಳ ನೀಲನಕ್ಷೆ ತಯಾರಿಸಿ, ತಾನೇ ಸ್ವತಃ ನಿಂತು ಕೃಷ್ಣಾನದಿಗೆ ಮತ್ತು ಗೋದಾವರಿ ನದಿಗೆ ತಲಾ ಒಂದೊಂದು ಅಣೆಕಟ್ಟನ್ನು ನಿರ್ಮಿಸಿದ.

1860 ರಲ್ಲಿ ನಿವೃತ್ತಿಯ ನಂತರ ಕಾಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ಹೋದರೂ, ಇಲ್ಲಿ ಜನತೆ ಆತನನ್ನು ಮತ್ತು ಅವನ ಋಣವನ್ನು ಮರೆಯಲಿಲ್ಲ. 1900 ರಲ್ಲಿ ರಾಜಮಂಡ್ರಿ ಪಟ್ಟಣದ ಸಮೀಪ ಹರಿಯುವ ಗೋದಾವರಿ ನದಿಗೆ ನಿರ್ಮಿಸಲಾದ ಒಂದೂವರೆ ಕಿ.ಮಿ.ಉದ್ದದ ರೈಲ್ವೆ ಸೇತುವೆಗೆ ಅರ್ಥರ್‌ ಕಾಟನ್‌ನ ಹೆಸರನ್ನು ನಾಮಕರಣ ಮಾಡಿದರು. ಅದು ಶಿಥಿಲಗೊಂಡ ನಂತರ 1987 ರಲ್ಲಿ ಮತ್ತೊಂದು ಹೊಸ ಸೇತುವೆಯನ್ನು ಸಹ (ಕಮಾನು ಸೇತುವೆ) ನಿರ್ಮಿಸಲಾಗಿದೆ. ಇಲ್ಲಿನ ಜನತೆ ಅರ್ಥರ್‌ ಕಾಟನ್ ದೂರದೃಷ್ಟಿ ಯೋಜನೆಗಳಿಂದ ತಮ್ಮ ಭೂಮಿಗೆ ನೀರನ್ನು ಕಂಡರೂ ಸಹ ಹೈದರಾಬಾದ್‌ನ ನಿಜಾಮ ಮತ್ತು ಸ್ಥಳೀಯ ಪಾಳೇಗಾರರು, ಜಮೀನ್ದಾರರು ಇವರುಗಳ ಕಿರುಕುಳದ ಕಾರಣದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಲ್ಲಲು ಸಾಧ್ಯವಾಗಲೇ ಇಲ್ಲ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ  ಜಗತ್ತಿನ ಅತೀ ಶ್ರೀಮಂತರುಗಳ ಪೈಕಿ ಒಬ್ಬನಾಗಿದ್ದ ಹೈದರಾಬಾದಿನ ಏಳನೇ ನಿಜಾಮ ವಾರ್ಷಿಕವಾಗಿ 25 ಲಕ್ಷರೂಪಾಯಿಗಳನ್ನು ಪಾಳೇಗಾರರು ಮತ್ತು ಜಮೀನ್ದಾರರಿಂದ ಭೂಮಿಯ ಕಂದಾಯ ರೂಪದಲ್ಲಿ ಆದಾಯ ಪಡೆಯುತ್ತಿದ್ದ. ಬಿಟಿಷ್ ಸರ್ಕಾರ ವೇರಿಯರ್ ಎಲ್ವಿನ್ ನೀಡಿದ್ದ ವರದಿಗೆ ಸ್ಪಂದಿಸಿ, ಆದಿವಾಸಿಗಳಿಗೆ, ಅರಣ್ಯ ಭೂಮಿಯ ಹಕ್ಕನ್ನು ದಯಪಾಲಿಸಿತ್ತು. ಆದರೆ, ಅಕ್ಷರ ಲೋಕದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗಕ್ಕೆ ಭೂಮಿಯ ದಾಖಲೆ ಅಂದರೆ, ಏನು, ಹಕ್ಕು ಎಂದರೆ ಏನು ಎಂಬುದು ಅರ್ಥವಾಗುವುದರೊಳಗೆ  ಅವೆಲ್ಲವೂ ಪಟ್ಟಭದ್ರ ಹಿತಾಶಕ್ತಿಗಳ ಪಾಲಾಗಿದ್ದವು. ಅತ್ಯಂತ ಸ್ವಾರ್ಥ ಮತ್ತು ಕ್ರೂರಿಯಾಗಿದ್ದ ಈ ನಿಜಾಮ ಎಂದೂ ಸಹ ತನ್ನ ಅರಮನೆಗೆ ಯಾವುದೇ ಅತಿಥಿಗಳನ್ನು ಆಹ್ವಾನಿಸದ ವಿಚಿತ್ರ ವ್ಯಕ್ತಿತ್ವ ಹೊಂದಿದವನಾಗಿದ್ದ. ಅವನ ವೈಭೋಗದ ಬದುಕಿಗೆ ಈಗ ಹೈದರಾಬಾದ್ ನಗರದಲ್ಲಿರುವ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರೆ, ಸಾಕು. ಜಗತ್ತಿನ ಎಲ್ಲಾ ವಿಧವಾದ ಶ್ರೇಷ್ಠ ಕೃತಿಗಳು, ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸಂಗ್ರಹವಾಗಿರುವ ಇವುಗಳನ್ನು ವೀಕ್ಷಿಸಲು ಕನಿಷ್ಟ ಒಂದು ದಿನವಾದರೂ ಬೇಕು.

ಇವತ್ತಿಗೂ ಭಾರತದಲ್ಲಿ ನಕ್ಸಲ್ ಚಳವಳಿ ಆರಂಭವಾದದ್ದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಹಳ್ಳಿಯ ಮೂಲಕ ಎಂದು ಪ್ರತಿಬಿಂಬಿಸಿಕೊಂಡು ಬರಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಇರುವುದು ಆಂಧ್ರದ “ಶ್ರೀಕಾಕುಳಂ” ಜಿಲ್ಲೆಯಲ್ಲಿ. ಅದರಲ್ಲೂ ಪಾರ್ವತಿಪುರ ಎಂಬ ತಾಲೂಕು ಕೇಂದ್ರದಲ್ಲಿ. ಇದು ಪ್ರಪಥಮ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967 ರಲ್ಲಿ ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನ ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ರ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬಿದ.

ಶ್ರೀಕಾಕುಳಂ ನೆಲದ ಕಪ್ಪು ಇತಿಹಾಸದಲ್ಲಿ ಹಲವಾರು ನೆತ್ತರಿನ ಅಧ್ಯಾಯಗಳಿವೆ. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತದ ಕೋಡಿಯನ್ನು ಹರಿಸಿ, ನಂತರ ಹಿಂಸೆಯನ್ನು ತ್ಯಜಿಸಿ, ಆನಂತರ ಅಹಿಂಸೆಯ ಮಾರ್ಗ ಹಿಡಿದು ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಘಟನೆಗೆ ಈ ನೆಲ ಸಾಕ್ಷಿಯಾಗಿತ್ತು. ಆಂಧ್ರದ ಗೋದಾವರಿ ನದಿಯಾಚೆಗಿನ ಪ್ರದೇಶ ಅಶೋಕನ ಅಧೀಪತ್ಯಕ್ಕೆ ಒಳಪಟ್ಟಿದ್ದರೆ, ಮಧ್ಯಭಾಗದ ಆಂಧ್ರದ ವಾರಂಗಲ್‌ನ ಕಾಕತೀಯ ಅರಸರ ವಂಶಸ್ಥರ ಆಳ್ವಿಕೆ ಒಳಪಟ್ಟಿತ್ತು. ಹೈದರಾಬಾದ್ ಪ್ರಾಂತ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ ನೇರವಾಗಿ ಮೊಗಲರಿಂದ ನಿಜಾಮರ ಕೈ ಸೇರಿತ್ತು. ಇನ್ನು ದಕ್ಷಿಣ ಆಂದ್ರದ ಜಿಲ್ಲೆಗಳ ಪ್ರದೇಶ ವಿಜಯನಗರದ ಅರಸರ ಆಳ್ವಿಕೆ ಒಳಪಟ್ಟಿದ್ದ ಕಾರಣ ಈ ಪ್ರದೇಶವನ್ನು ರಾಯಲಸೀಮ (ಕೃಷ್ಣದೇವರಾಯ ಆಳಿದ ನಾಡು) ಎಂದು ಕರೆಯಲಾಗುತ್ತದೆ.

ಶ್ರೀಕಾಕುಳಂ ನಕ್ಸಲ್ ಇತಿಹಾಸ ಈವರೆಗೆ ಬೆಳಕಿಗೆ ಬಾರದೇ ಇತಿಹಾಸದ ಮಣ್ಣಲ್ಲಿ ಹುದುಗಿ ಹೋಗಿದೆ. ಇಲ್ಲಿನ ಬುಡಕಟ್ಟು ಜನಾಂಗ ಅನುಭವಿಸಿದ ಯಾತನೆಗಳು ಶಬ್ಧ ಮತ್ತು ಅಕ್ಷರಕ್ಕೆ ನಿಲುಕಲಾರದವು. ನಿತ್ಯಹರಿಧ್ವರ್ಣದ ಅರಣ್ಯ, ಅಪಾರ ಖನಿಜ ಸಂಪತ್ತಿನ ಒಡೆಯರಾಗಿದ್ದ ಈ ಜನರಿಗೆ, ಇವರ ಸಂಸ್ಕೃತಿಗೆ ಮತ್ತು ಬದುಕಿಗೆ ಭಂಗವನ್ನುಂಟು ಮಾಡಬಾರದೆಂದು ಅರಣ್ಯ ಭೂಮಿಯ ಹಕ್ಕನ್ನು ಬ್ರಿಟಿಷ್ ಸರ್ಕಾರ ದಯಪಾಲಿಸಿತ್ತು ಅಲ್ಲದೆ, ಇವರ ಭೂಮಿಯನ್ನು ಬುಡಕಟ್ಟು ಜನಾಂಗ ಹೊರತುಪಡಿಸಿ ಇತರರು ಕೊಳ್ಳದಂತೆ ಕಾಯ್ದೆಯನ್ನು ರೂಪಿಸಿಲಾಗಿತ್ತು. 1951 ರಲ್ಲಿ ಭಾರತ ಸರ್ಕಾರ ಕೂಡ ಈ ಕಾಯ್ದೆಗೆ ಹಲವು ತಿದ್ದುಪಡಿ ಮಾಡಿ (ಅರಣ್ಯ ಭೂಮಿಯಲ್ಲಿರುವ ಮರ ಮತ್ತು ಖನಿಜ ಸಂಪತ್ತು ಸರ್ಕಾರದ ಸ್ವತ್ತು) ಅನುಷ್ಠಾನಗೊಳಿಸಿತ್ತು. ಆಂಧ್ರದ ಪೂರ್ವ ಕರಾವಳಿಯ ಗುಡ್ಡಗಾಡಿನ ಬಹುತೇಕ ಅರಣ್ಯವಾಸಿಗಳು, ಪೋಡು ಎಂಬ ಪುಟ್ಟ ಗ್ರಾಮಗಳಲ್ಲಿ ವಾಸಿಸುತ್ತಾ, ಹೈನುಗಾರಿಕೆ, ಬೇಸಾಯ, ಅರಣ್ಯದ ಕಿರುಉತ್ಪನ್ನವನ್ನು ನಂಬಿ ಬದುಕಿದ್ದರು.

1950 ದಶಕದಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಸಿರ್ಪುರ್ ಪೇಪರ್‌ಮಿಲ್ (ಈಗಿನ ಆಂಧ್ರ ಪೇಪರ್ಸ್ ಮಿಲ್ ಲಿಮಿಟೆಡ್) ಹಾಗೂ ಕೇಂದ್ರ ಸರ್ಕಾರದ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಇವರ ನೈಜ ಸಾಂಸ್ಕೃತಿಕ ಬದುಕನ್ನು ಪಲ್ಲಟಗೊಳಿಸಿತು. ಪೇಪರ್ ಮಿಲ್‌ಗೆ ಬಿದಿರಿನ ಬೊಂಬುಗಳನ್ನು ಸರಬರಾಜು ಮಾಡಲು ಬಂದ ದಳ್ಳಾಳಿಗಳು ಕೆ.ಜಿ. ಗೆ 7 ಪೈಸೆಯಂತೆ ಕೊಳ್ಳಲು ಸಿದ್ದರಿದ್ದೇವೆ ಎಂದು ಅರಣ್ಯವಾಸಿಗಳಿಗೆ ಆಮಿಷ ಒಡ್ಡಿದರು. ಅದೇ ರೀತಿ ಅತ್ಯಂತ ಕಷ್ಟವಾದ ಕಲ್ಲಿದ್ದಲು ಗಣಿಗಾರಿಕೆಗೆ ತಿಂಗಳಿಗೆ 120 ರೂಪಾಯಿ ಸಂಬಳದ ಆಧಾರದ ಮೇಲೆ ಗುತ್ತಿಗೆದಾರರು ಇವರನ್ನು ನೇಮಕ ಮಾಡಿಕೊಳ್ಳತೊಡಗಿದರು. ಇವರ ಜೊತೆ ಕೇರಳದ ಮಾಪಿಳ್ಳೆಗಳು ಮರ ಕಡಿಯುವ ಗುತ್ತಿಗೆದಾರರಾಗಿ, ದಕ್ಷಿಣ ಆಂಧ್ರ ಕೊಮಟಿಗರು ಬಟ್ಟೆ ಮತ್ತು ದಿನಸಿ ವ್ಯಾಪಾರಿಗಳಾಗಿ ಈ ಪ್ರದೇಶಕ್ಕೆ ಕಾಲಿಟ್ಟರು. ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಯ ಲೋಕವೇ ಗೊತ್ತಿಲ್ಲದ ಮುಗ್ಧ ಜನರಿಗೆ ಸಾಲ ನೀಡಿ ಅದಕ್ಕೆ ಪ್ರತಿಯಾಗಿ ಖಾಲಿ ಬಿಳಿಯ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುವ ಮೂಲಕ ಅರಣ್ಯವಾಸಿಗಳ ಜಮೀನುಗಳನ್ನು ಕಬಳಿಸಿದರು. ಇವರ ಈ ದುಷ್ಕೃತ್ಯಕ್ಕೆ ನೆರವಾದವರು, ಪಕ್ಕದ ಮಹಾರಾಷ್ಟ್ರದಿಂದ ವಲಸೆ ಬಂದ ಪಟ್ವಾರಿಗಳು. ಇವರು ಭೂದಾಖಲೆಗಳನ್ನು ನಿರ್ವಹಿಸುವುದನ್ನೇ ಕುಲ ಕಸುಬು ಮಾಡಿಕೊಂಡವರು. ಇಂತ ವೃತ್ತಿಯಲ್ಲಿದ್ದವರನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಗಳೆಂದು, ದಕ್ಷಿಣ ಕರ್ನಾಟಕದಲ್ಲಿ ಶ್ಯಾನುಬೋಗರೆಂದು ಕರೆಯುತ್ತಿದ್ದರು.

ಈ ವಂಚನೆಯ ತಂಡ ಅರಣ್ಯವಾಸಿಗಳ ಭೂಮಿಯನ್ನು ಕಬಳಿಸಿ ನಂತರ ಇವುಗಳನ್ನು ಶ್ರೀಮಂತ ಜಮೀನ್ದಾರರಿಗೆ ಅಧಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರು. ತಮಗೆ ಅರಿವಿಲ್ಲದಂತೆ ಇಂತಹ ವಂಚನೆಯ ಜಾಲದಲ್ಲಿ ಸಿಲುಕಿದ ಅಮಾಯಕ ಗಿರಿಜನ, ಜಮೀನ್ದಾರರ ಗೂಂಡಾ ಪಡೆಗಳಿಗೆ ಹೆದರಿ, ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಫಸಲನ್ನು ಭೂಮಾಲೀಕನಿಗೆ ನೀಡಿ ಇದಕ್ಕೆ ಪ್ರಫಲವಾಗಿ ಅವನು ಭಿಕ್ಷೆಯಂತೆ ಕೊಟ್ಟ ಅಲ್ಪ ಪ್ರಮಾಣದ ಫಸಲನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ನಾಗರೀಕ ಜಗತ್ತಿನ ವ್ಯವಹಾರದ ಅರಿವಿಲ್ಲದ ಈ ಜನ ಸಾಲ ಅಥವಾ ಬಡ್ಡಿ ಎಂದರೆ, ಏನು?, ಭೂ ದಾಖಲೆಗಳು ಎಂದರೆ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ವರ್ಷಗಳೇ ಕಳೆದು ಹೋದವು. ಇವೆಲ್ಲಕ್ಕಿಂತ ಕ್ರೂರವಾದ ಅಮಾನುಷ ಕೃತ್ಯಗಳಿಗೆ ಇವರು ಬಲಿಯಾದರು. ಅರಣ್ಯದಲ್ಲಿ ಕಿರು ಉತ್ಪನ್ನ, ಇಲ್ಲವೆ ಸೌದೆ ಆರಿಸಲು ಹೋದ ಮಹಿಳೆಯರು, ನದಿಯಲ್ಲಿ ಸ್ನಾನಕ್ಕೆ ಹೋದ ಆದಿವಾಸಿ ಮಹಿಳೆಯರು ಈ ಹೃದಯಹೀನ ಜನರ ಅತ್ಯಾಚಾರಕ್ಕೆ ಒಳಗಾದರು. ಅಲ್ಲದೆ, ಕಪ್ಪು ವರ್ಣದ ಸುಂದರ ಮೈಕಟ್ಟಿನ ಆದಿವಾಸಿ ಜನಾಂಗದ ಹೆಂಗಸರು, ಹದಿ ಹರೆಯದ ಹುಡುಗಿಯರು, ತಮ್ಮ ಗಂಡಂದಿರ, ಅಪ್ಪಂದಿರ ಎದುರು ಜಮೀನ್ದಾರರ ಮನೆಗೆ ಅವರ ಕಾಮತೃಷೆ ನೀಗಿಸಲು ಪ್ರಾಣಿಗಳಂತೆ ಸಾಗಿಸಲ್ಪಟ್ಟರು. ಬಾಯಿಲ್ಲದ ಈ ಮೂಕ ಜನರಿಗೆ ನ್ಯಾಯ ದೊರಕಿಸಿಕೊಡಲು, ಅವರ ಹೋರಾಡಲು ಒಬ್ಬ ಅಪ್ಪಟ ಮನುಷ್ಯನಿಗಾಗಿ ಅಸಹಾಯಕ ಮತ್ತು ಅಮಾಯಕ ಗಿರಿಜನರ ಜಗತ್ತು ಎದುರು ನೋಡುತ್ತಿತ್ತು.

ಇಂತಹ ಸಮಯದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತ ಹೃದಯವಂತ ವ್ಯಕ್ತಿ, ವೆಂಪಟಾಪು ಸತ್ಯನಾರಾಯಣ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ, ಬುಡಕಟ್ಟು ಜನಾಂಗದ ಮೇಲಿನ ಅನ್ಯಾಯ, ಅತ್ಯಾಚಾರವನ್ನು ಸಹಿಸಲಾಗದೆ, ತನ್ನ ವೃತ್ತಿಗೆ ತಿಲಾಂಜಲಿ ನೀಡಿ, ಗಿರಿಜನರನ್ನು ಸಂಘಟಿಸುವುದರ ಜೊತೆಗೆ ಭೂಮಾಲೀಕರ ಜೊತೆ ಸಂಘರ್ಷಕ್ಕೆ ನಾಂದಿ ಹಾಡಿದ. ಒಂದು ಅರ್ಥದಲ್ಲಿ ನಿಜವಾದ ನಕ್ಸಲ್ ಚಳವಳಿಯ ಪಿತಾಮಾಹನೆಂದರೆ, ಈ ಸತ್ಯನಾರಯಣ. ಆದರೆ, ಭಾರತದ ಎಡಪಂಥಿಯ ವಿಚಾರಧಾರೆಗಳ ಅಬ್ಬರದ ಪ್ರಚಾರದಲ್ಲಿ ಈ ಹುತಾತ್ಮ ಇವತ್ತಿಗೂ ಬೆಳಕಿಗೆ ಬಾರದೇ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದಾನೆ.

 (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 20)


– ಡಾ.ಎನ್.ಜಗದೀಶ್ ಕೊಪ್ಪ


 

ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲೇ ತಂಗಿದ್ದ ಕಾರ್ಬೆಟ್ ಆ ದಿನ ರಾತ್ರಿ ನರಭಕ್ಷಕ ಮತ್ತೇ ಸುಳಿಯಬಹುದೆಂದು ಕಿಟಕಿಯ ಬಳಿ ಕಾದುಕುಳಿತರೂ ಏನು ಪ್ರಯೋಜನವಾಗಲಿಲ್ಲ, ನರಭಕ್ಷಕ ಚಿರತೆ ತನ್ನ ಮಾರ್ಗ ಬದಲಿಸಿ ಪಕ್ಕದ ಹಳ್ಳಿಯಲ್ಲಿ ಗರ್ಭಿಣಿ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ರಾತ್ರಿ ಊಟವಾದ ನಂತರ ಮನೆಯ ಹಿಂಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ಹೆಂಗಸಿನ ಮೇಲೆ ನರಭಕ್ಷಕ ದಾಳಿ ಮಾಡಿತು. ಆಕೆ ಕಿರುಚಿಕೊಳ್ಳುತ್ತಿದ್ದಂತೆ ಕುತ್ತಿಗೆಯನ್ನು ಬಾಯಲ್ಲಿ ಹಿಡಿದು ಆಕೆಯನ್ನು ಊರಿನ ಕಿರಿದಾದ ಓಣಿಯ ನಡುವೆ ಎಳೆದೊಯ್ದು ಹೊರವಲಯದ ಕಣಿವೆಯಲ್ಲಿ ಅರ್ಧ ತಿಂದು ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ಹೋಗಿತ್ತು.

ಚಿರತೆಯ ಈ ಅನಿರೀಕ್ಷಿತ ದಾಳಿಗೆ ಬೆಚ್ಚಿದ ಗ್ರಾಮಸ್ಥರು ತಮ್ಮ ಮನೆಯ ಕಿಟಕಿ, ಬಾಗಿಲು ಮುಚ್ಚಿ ಹೊರಬರಲು ಹಿಂದೇಟು ಹಾಕಿದರು. ಮನೆಯೊಳಗೆ ಚುಟ್ಟಾ ಸೇದುತ್ತಾ ಕುಳಿತ್ತಿದ್ದ ಆಕೆಯ ಯಜಮಾನನಿಗೆ ನರಭಕ್ಷಕ ಚಿರತೆಯ ಆಕ್ರಮಣದ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಪಾತ್ರೆ ತೊಳೆಯುತ್ತಿದ್ದ ಹೆಂಡತಿ ಕಿರುಚಿಕೊಂಡರೂ ಸಹ ಒಳಕ್ಕೆ ಬಾರದಿರುವುದರಿಂದ ಅನುಮಾನಗೊಂಡ ಅವನು ಮನೆಯ ಹಿಂಭಾಗಕ್ಕೆ ಬಂದಾಗ ನರಭಕ್ಷಕ ಆಕೆಯನ್ನು ಎಳೆದೊಯ್ಯುತ್ತಿರುವುದನ್ನು ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾಯಿತು. ಮಾರನೇ ದಿನ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ, ಪ್ರವಾಸಿ ಮಂದಿರದಿಂದ ಸುಮಾರು ನಾಲ್ಕು ಮೈಲಿ ದೂರದ ಪರ್ವತದ ಮೇಲಿದ್ದ ಹಳ್ಳಿಯ ಆಕೆಯ ಮನೆಗೆ ಬಂದ ಕಾರ್ಬೆಟ್ ಆಕೆಯ ರಕ್ತದ ಕಲೆಗಳ ಜಾಡು ಹಿಡಿದು ಚಿರತೆ ಸಾಗಿರುವ ದಾರಿಯನ್ನು ಹಿಂಬಾಲಿಸಿದ. ಅದು ಹೆಂಗಸಿನ ಶವದ ಜೊತೆ ನಾಲ್ಕು ಅಡಿ ಎತ್ತರದ ಗೋಡೆ ಹಾರಿ ಹೋಗಿರುವುದು ಅವನ ಗಮನಕ್ಕೆ ಬಂತು. ಇದು ಬಲಿಷ್ಟ ದೇಹದ ವಯಸ್ಸಾದ ನರಭಕ್ಷಕ ಎಂದು ಆ ಕೂಡಲೇ ಕಾರ್ಬೆಟ್ ನಿರ್ಧರಿಸಿದ.

ಊರಾಚೆಗಿನ ಕಣಿವೆಯೊಂದರ ಬಳಿ ಆ ಹೆಂಗಸಿನ ಶವವನ್ನು ಇಟ್ಟುಕೊಂಡು ಮುಕ್ಕಾಲು ಭಾಗ ತಿಂದು ಮುಗಿಸಿದ ನರಭಕ್ಷಕ ಉಳಿದ ಭಾಗವನ್ನು ಅಲ್ಲಿಯೇ ಉಳಿಸಿ ಹೋಗಿತ್ತು. ಮಹಿಳೆಯ ಶವವಿದ್ದ ಸುತ್ತ ಮುತ್ತಲಿನ ಜಾಗವನ್ನೊಮ್ಮೆ ಕಾರ್ಬೆಟ್ ಅವಲೋಕಿಸಿದ. ಶವವಿದ್ದ ಜಾಗದಿಂದ 40 ಅಡಿ ದೂರದಲ್ಲಿ ಇಳಿಜಾರಿನಲ್ಲಿ ಒಂದು ಮರವಿತ್ತು ಜೊತೆಗೆ ಮರದ ಸುತ್ತ ಕಟ್ಟೆಯಾಕಾರದಲ್ಲಿ ಎತ್ತರದಷ್ಟು ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಸುಮಾರು ಆರು ಅಡಿ ಉದ್ದ-ಅಗಲದ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ದನಕರು ಮೇಕೆ ಕಾಯುವ ಹಳ್ಳಿಗರು ಮರದ ನೆರಳಿನಲ್ಲಿ ಕೂರುವುದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದರು.ರಾತ್ರಿ ಮರದ ಮೇಲೆ ಕುಳಿತು ನರಭಕ್ಷಕ ಚಿರತೆಯನ್ನು ಬೇಟೆಯಾಡಲು ಇದು ಸೂಕ್ತವಾದ ಜಾಗ ಎಂದು ಕಾರ್ಬೆಟ್ ನಿರ್ಧರಿಸಿದ.

ಸಂಜೆಯಾಗುತ್ತಿದ್ದಂತೆ ತನ್ನ ಸೇವಕರು, ಗ್ರಾಮಸ್ಥರ ಜೊತೆ ಅಲ್ಲಿಗೆ ಬಂದ ಕಾರ್ಬೆಟ್ ಇದೇ ಮೊದಲ ಬಾರಿಗೆ ಚಿರತೆಯನ್ನು ಬೇಟೆಯಾಡಲು ವಿನೂತನ ಪ್ರಯೋಗಕ್ಕೆ ಮುಂದಾದ. ಬೆಳಿಗ್ಗೆ ಶವ ವೀಕ್ಷಣೆಗೆ ಬಂದಿದ್ದಾಗ ಚಿರತೆ ಶವವನ್ನು ತಿಂದು ಕಣಿವೆಯಲ್ಲಿದ್ದ ಕಾಲುದಾರಿಯಲ್ಲಿ ತೆರಳಿತ್ತು. ಮತ್ತೇ ಇದೇ ದಾರಿಯಲ್ಲಿ ಬರಬಹುದೆಂದು ಊಹಿಸಿದ ಕಾರ್ಬೆಟ್, ಗ್ರಾಮಸ್ಥರು ತಂದಿದ್ದ ಎರಡು ಬಿದರಿನ ಬೊಂಬುಗಳನ್ನು ಆ ಕಾಲುದಾರಿಯ ಎರಡು ಬದಿಗಳಲ್ಲಿ ನೆಡಸಿದ. ತಾನು ತಂದಿದ್ದ ಮೂರು ಬಂದೂಕಗಳ ಪೈಕಿ ಒಂದನ್ನು ಬೊಂಬಿಗೆ ಕಟ್ಟಿ ದಾರಿಗೆ ಅಡ್ಡಲಾಗಿ ಮೀನು ಶಿಕಾರಿಗೆ ಬಳಸುವ ಪ್ಲಾಸ್ಟಿಕ್ ದಾರವನ್ನು ಕಟ್ಟಿದ. ದಾರದ ಇನ್ನೊಂದು ತುದಿಯನ್ನು ಬಂದೂಕದ ಒತ್ತುಗುಂಡಿಗೆ ಕಟ್ಟಿದ. ನರಭಕ್ಷಕ ಕಾಲುದಾರಿಯಲ್ಲಿ ಬಂದು ದಾರವನ್ನು ಸೋಕಿಸಿದರೆ ಸಾಕು ಬಂದೂಕಿನಿಂದ ಗುಂಡು ಸಿಡಿಯುವಂತೆ ವ್ಯವಸ್ಥೆ ಮಾಡಿದ. ಇಂತಹದ್ದೇ ಇನ್ನೊಂದು ವ್ಯವಸ್ಥೆಯನ್ನು ಶವವಿದ್ದ ಹಿಂಬದಿಯ ಭಾಗದಲ್ಲೂ ನಿರ್ಮಿಸಿದ. ನರಭಕ್ಷಕ ಒಂದು ದಾರಿಯಲ್ಲಿ ತಪ್ಪಿಸಿಕೊಂಡರೆ, ಅದು ಇನ್ನೋಂದು ದಾರಿಯಲ್ಲಾದರೂ ಗುಂಡಿಗೆ ಬಲಿಯಾಗಬೇಕು ಇದು ಕಾರ್ಬೆಟ್‌ನ ಆಲೋಚನೆಯಾಗಿತ್ತು.

ಸ್ಥಳದಲ್ಲಿ ಕತ್ತಲು ಆವರಿಸುತ್ತಿದ್ದಂತೆ ಎಲ್ಲರನ್ನು ವಾಪಸ್ ಹಳ್ಳಿಗೆ ಕಳಿಸಿದ ಕಾರ್ಬೆಟ್, ತನ್ನ ಸಹಾಯಕರನ್ನು ಆ ರಾತ್ರಿ ಹಳ್ಳಿಯ ಮುಖಂಡನ ಮನೆಯಲ್ಲಿ ಮಲಗಲು ಹೇಳಿದ. ರಾತ್ರಿಯ ಶಿಕಾರಿಗಾಗಿ ತಾನು ತಂದಿದ್ದ, ಬಿಸ್ಕೇಟ್, ನೀರು, ಸಿಗರೇಟು, ಬಂದೂಕ, ಒಂದು ಪಿಸ್ತೂಲ್, ಚಾಕು, ಎಲ್ಲವನ್ನು ತೆಗೆದುಕೊಂಡು ಮರವೇರಿ ಕುಳಿತ. ಕತ್ತಲು ಆವರಿಸುವ ಸಮಯದಲ್ಲಿ ನಿರ್ಮಲವಾಗಿದ್ದ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುತ್ತಿದ್ದವು. ಕ್ರಮೇಣ ಮೋಡಗಳು ಆವರಿಸಿಕೊಂಡು ಕತ್ತಲು ಹೆಪ್ಪುಗಟ್ಟಿತು. ಮುಂಜ್ರಾಗತಾ ಕ್ರಮವಾಗಿ ಕಾರ್ಬೆಟ್ ಮಹಿಳೆಯ ಶವದ ಬಳಿ ಬಿಳಿಯ ಬಣ್ಣದ ಒಂದು ಬೆಣಚು ಕಲ್ಲನ್ನು ಇರಿಸಿದ್ದ. ಚಿರತೆ ಶವದ ಬಳಿ ಬಂದರೆ, ಕತ್ತಲೆಯಲ್ಲಿ ಗುರಿ ಇಡಲು ಬಿಳಿಯ ಬಣ್ಣದ ಕಲ್ಲು ಇರಲಿ ಎಂಬುದು ಅವನ ಮುಂದಾಲೋಚನೆಯಾಗಿತ್ತು. ರಾತ್ರಿ ಒಂಬತ್ತರ ಸಮಯಕ್ಕೆ ಸರಿಯಾಗಿ ಹಿಮ ಪರ್ವತದಿಂದ ಶೀತಗಾಳಿ ಬೀಸಲು ಪ್ರಾರಂಭಿಸುತ್ತಿದ್ದಂತೆ ಆಗಸದಿಂದ ದಪ್ಪನೆಯ ಮಳೆ ಹನಿ ಸಹ ಬೀಳತೊಡಗಿತು.

ಇದೇ ಸಮಯಕ್ಕೆ ಸರಿಯಾಗಿ ಕಣಿವೆಯ ಮೇಲ್ಭಾಗದಿಂದ ಕಲ್ಲುಗಳು ಕೆಳಕ್ಕೆ ಉರುಳತೊಡಗಿ ನರಭಕ್ಷಕನ ಆಗಮನದ ಸೂಚನೆ ನೀಡತೊಡಗಿದವು. ದೂರದಲ್ಲಿ ಜಿಂಕೆಗಳ ಚೀತ್ಕಾರ, ಮಂಗಗಳ ಕಿರುಚುವಿಕೆ, ಪಕ್ಷಿಗಳ ಅಸಹಜವಾದ ಧ್ವನಿ ಇವೆಲ್ಲವೂ ಚಿರತೆಯ ಆಗಮನವನ್ನು ಕಾರ್ಬೆಟ್‌ಗೆ ಧೃಡಪಡಿಸಿದವು. ಬಿರುಸಿನ ಮಳೆಯ ಶಬ್ಧದಿಂದಾಗಿ ಏನೂ ಕಾಣುವಂತಿರಲಿಲ್ಲ, ಕೇಳುವಂತಿರಲಿಲ್ಲ. ಮಳೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆ ಕಾರ್ಬೆಟ್ ಕುಳಿತ್ತಿದ್ದ ಮರದ ಕೆಳಗಿನ ಚಪ್ಪರದ ಅಡಿಯಲ್ಲಿ ಶಬ್ದವಾದ ಹಾಗೆ ಭಾಸವಾಯ್ತು. ಕುತೂಹಲದಿಂದ ಗಮನಿಸಿದಾಗ, ಆ ನರಭಕ್ಷಕ ಚಿರತೆ ಮಳೆಯಿಂದ ತಪ್ಪಿಸಿಕೊಳ್ಳಲು ಚಪ್ಪರವನ್ನೇ ಆಶ್ರಯಿಸಿತ್ತು. ಚಪ್ಪರದ ಮೇಲೆ ಹುಲ್ಲನ್ನು ದಟ್ಟವಾಗಿ ಹಾಸಿದ್ದ ಪರಿಣಾಮ ಅದು ಅವನಿಗೆ ಕಾಣುವಂತೆ ಇರಲಿಲ್ಲ. ಹತ್ತಿರದಿಂದ ಹೊಡೆದು ಉರುಳಿಸುವ ಅವಕಾಶ ತಪ್ಪಿಹೋದುದಕ್ಕೆ ಕಾರ್ಬೆಟ್ ಕೈ ಕೈ ಹಿಸುಕಿಕೊಳ್ಳುವಂತಾಯಿತು. ಮಳೆ ನಿಂತ ನಂತರ agave ನಿಧಾನವಾಗಿ ಹೆಂಗಸಿನ ಶವವಿದ್ದ ಜಾಗದ ಕಡೆ ನಡೆದು ಹೋಗುತ್ತಿರುವುದು ನೆಲದಲ್ಲಿ ಹರಿಯುತ್ತಿದ್ದ ಮಳೆಯ ನೀರಿನಲ್ಲಿ ಅದರ ಹೆಜ್ಜೆಯ ಶಬ್ದದಿಂದ ಖಚಿತಪಡಿಸಿಕೊಂಡ. ತಾನು ಶವದ ಬಳಿ ಇಟ್ಟಿದ್ದ ಬಿಳಿಯ ಕಲ್ಲು ಕಾರ್ಬೆಟ್‌ಗೆ ಕಾಣದಾಯ್ತು. ಹೆಂಗಸಿನ ಶವದ ಕೆಳಗೆ ಮಳೆಯ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ಚಿರತೆ ಶವವನ್ನು ಸ್ವಲ್ಪ ದೂರಕ್ಕೆ ಎಳೆದಿತ್ತು. ಇದರಿಂದಾಗಿ, ಕಲ್ಲು ಶವದ ಕೆಳಕ್ಕೆ ಸೇರಿಹೋದ ಕಾರಣ, ಕಾರ್ಬೆಟ್ ನರಭಕ್ಷಕನಿಗೆ ಗುರಿ ಇಡುವುದು ಕಷ್ಟವಾಯ್ತು.

ಆ ಕಗ್ಗತ್ತಲಿನಲ್ಲಿ ಅಂದಾಜಿನ ಮೇಲೆ ಚಿರತೆ ಶವದ ಮೂಳೆ ಅಗಿಯುವ ಶಬ್ಧವನ್ನು ಆಲಿಸುತ್ತಾ ದಿಕ್ಕನ್ನು ಗುರುತಿಸತೊಡಗಿದ. ಮತ್ತೇ ಮಳೆ ಹನಿ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಶವವನ್ನು ತಿನ್ನುವುದನ್ನು ನಿಲ್ಲಿಸಿ, ಪೊದೆಯಲ್ಲಿ ಅಡಗಿಕೊಂಡಿತು. ಹೀಗೆ ಸತತ ನಾಲ್ಕು ಗಂಟೆಗಳ ಕಾಲ, ಮಳೆಯ ಕಾರಣ, ಚಿರತೆ ಬರುವುದು, ಹೋಗುವುದು ಮಾಡುತ್ತಲೇ ಇತ್ತು. ಕಾರ್ಬೆಟ್ ಮರಕ್ಕೆ ಕಟ್ಟಿದ್ದ ಕೋವಿಯ ದಾರವನ್ನು ಸಹ ಅದು ತುಳಿಯಲೇ ಇಲ್ಲ. ಮಳೆ ನಿಂತ ಬಳಿಕ ಆಕಾಶ ಸ್ವಲ್ಪ ಮಟ್ಟಿಗೆ ಶುಭ್ರವಾಯಿತು. ಹೆಂಗಸಿನ ಶವದ ಬಳಿ ಇರಿಸಿದ್ದ ಕಲ್ಲು ಕಾರ್ಬೆಟ್ ಕಣ್ಣಿಗೆ ಅಸೃಷ್ಟವಾಗಿ ಗೋಚರಿಸತೊಡಗಿತು. ಮತ್ತೆ ನರಭಕ್ಷಕ ಶವದ ಬಳಿ ಆಗಮಿಸುತ್ತಿರುದನ್ನು ಗಮನಿಸಿದ ಅವನು ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎನಿಸಿ ಕಲ್ಲನ್ನು ಗುರಿಯಾಗಿರಿಸಿಕೊಂಡು ಗುಂಡು ಹಾರಿಸಿಬಿಟ್ಟ. ಅದರ ಪರಿಣಾಮವನ್ನು ತಿಳಿಯಬೇಕಾದರೆ, ಅವನು ಬೆಳಕು ಹರಿಯುವವರೆಗೆ ಕಾಯಲೇಬೇಕಿತ್ತು.

ಬೆಳಗಿನ ಜಾವ ಕಾರ್ಬೆಟ್ ಮರದಿಂದ ಕೆಳಕ್ಕೆ ಇಳಿದು ನೋಡಿದಾಗ ಅವನಿಗೆ ತೀವ್ರ ನಿರಾಶೆಯಾಯಿತು. ಕೂದಲೆಳೆಯ ಅಂತರದಲ್ಲಿ ನರಭಕ್ಷಕ ಗುಂಡಿನಿಂದ ತಪ್ಪಿಸಿಕೊಂಡಿತ್ತು. ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿದ್ದ ಗುಂಡು ನೆಲಕ್ಕೆ ಬಡಿದಿತ್ತು. ಚಿರತೆಯ ಕುತ್ತಿಗೆ ಭಾಗದ ಕೂದಲುಗಳು ನೆಲದ ಮೇಲೆ ಹರಡಿದ್ದವು. ಕಾರ್ಬೆಟ್ ತೀವ್ರ ನಿರಾಶನಾಗಿ ಮರಕ್ಕೆ ಕಟ್ಟಿದ್ದ ಕೋವಿಗಳನ್ನು ಬಿಚ್ಚಿಕೊಂಡು ಪ್ರವಾಸಿ ಮಂದಿರದತ್ತ ಹೆಜ್ಜೆ ಹಾಕಿದನು. ಚಿರತೆಗೆ ಬಲಿಯಾದ ಹೆಂಗಸಿನ ಪತಿ ಆಕೆಯ ಅಳಿದುಳಿದ ಶವದ ಭಾಗಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಆಯ್ದುಕೊಂಡನು. ಆ ಹಳ್ಳಿಯ ಜನಕ್ಕೆ ನಿರಾಶೆಯಾದರೂ ಕಾರ್ಬೆಟ್ ಬಗ್ಗೆ ಅಗಾಧ ಭರವಸೆ ಇತ್ತು. ಒಂದಲ್ಲ ಒಂದು ದಿನ ಈ ಬಿಳಿಯ ಸಾಹೇಬ ನರಭಕ್ಷಕನಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ಅವರು ನಂಬಿದ್ದರು. ರಾತ್ರಿಯಲ್ಲಿ ಒಂಟಿಯಾಗಿ ಬಂದೂಕ ಹಿಡಿದು ತಿರುಗುವ ಕಾರ್ಬೆಟ್‌ಗೆ ಅಗೋಚರವಾದ ದೈವಿಶಕ್ತಿ ಇದೆ ಎಂದು ಅವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಘರ್ವಾಲ್ ಪ್ರಾಂತ್ಯದ ಯಾವುದೇ ಹಳ್ಳಿಗೆ ಕಾರ್ಬೆಟ್ ಹೋದರೂ ಸಹ ಅವನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಗೌರವಿಸುತ್ತಿದ್ದರು. ಅಮಾಯಕ. ಮುಗ್ಧ ಹಳ್ಳಿಗರ ಪ್ರೀತಿಗೆ ಕಾರ್ಬೆಟ್ ಮನಸೋತ್ತಿದ್ದ. ಇವರ ಪ್ರೀತಿಗೆ ಕಾಣಿಕೆಯಾಗಿ, ನರಭಕ್ಷಕನನ್ನು ಬೇಟೆಯಾಡಲೇ ಬೇಕು ಎಂಬ ದೃಢ ನಿರ್ಧಾರವೊಂದು ಅವನ ಮನದಲ್ಲಿ ಮನೆ ಮಾಡಿತು.

 ( ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-6)


– ಡಾ.ಎನ್. ಜಗದೀಶ್ ಕೊಪ್ಪ  


 

ಪ್ರಯೋಗ ಮತ್ತು ಸಿದ್ಧಾಂತ ಹಾಗೂ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಜೊತೆ ಜೊತೆಗೆ ಸ್ವಯಂ ವಿಮರ್ಶೆಯನ್ನು ಗುರಿಯಾಗಿಟ್ಟುಕೊಂಡು ರಚಿತವಾದ ನೂತನ ಪಕ್ಷವನ್ನು ಪಕ್ಷದ ಫೈರ್ ಬ್ರಾಂಡ್ ನಾಯಕನೆಂದೇ ಹೆಸರಾಗಿದ್ದ ಕನುಸನ್ಯಾಲ್ ನೇತೃತ್ವದಲ್ಲಿ ಘೋಷಿಸಲಾಯಿತು. ಪಕ್ಷದ ಕಾರ್ಯಕರ್ತರ ಮೊದಲ ರ್‍ಯಾಲಿಯನ್ನು 1969 ರ ಮೇ ಒಂದನೇ ತಾರೀಖು ಕೊಲ್ಕತ್ತ ನಗರದಲ್ಲಿ ಆಯೋಜಿಸಲಾಗಿತ್ತು. ಮಾವೋತ್ಸೆ ತುಂಗನ ವಿಚಾರಧಾರೆಗಳಿಂದ ಪ್ರಣೀತವಾಗಿದ್ದ ನೂತನ ಕಮ್ಯೂನಿಷ್ಟ್ ಪಕ್ಷ, ಇನ್ನು ಮುಂದೆ ಭಾರತದಲ್ಲಿ ಹೊಸ ಸೂರ್ಯ ಮತ್ತು ಚಂದ್ರ ಉದಯಿಸಲಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿತ್ತು. ದುರಂತವೆಂದರೆ, ಪಕ್ಷದ ಮೊದಲ ರ್‍ಯಾಲಿ ಗಲಭೆಯಲ್ಲಿ ಆರಂಭಗೊಂಡು, ಹಿಂಸಾಚಾರದ ನಡುವೆ ಮುಕ್ತಾಯಗೊಂಡಿತು. ಪಕ್ಷದ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷಗಳಾದ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಕಾರ್ಯಕರ್ತರು ರ್‍ಯಾಲಿಯ ಮೇಲೆ ಕಲ್ಲು ಇಟ್ಟಿಗೆ ಮತ್ತು ಪೆಟ್ರೊಲ್ ಬಾಂಬ್ ತೂರುವುದರ ಮೂಲಕ ಹೊಸ ಪಕ್ಷದ ರ್‍ಯಾಲಿಯನ್ನು ವಿಘ್ನಗೊಳಿಸಿದರು. ಗಲಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇವರಲ್ಲಿ ಐವತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾದವು.

ಹೀಗೆ ಹಿಂಸೆಯಲ್ಲಿ ಆರಂಭಗೊಂಡ ನೂತನ ಕಮ್ಯೂನಿಷ್ಟ್ ಪಕ್ಷದ ನಾಯಕರ ನಡುವೆಯೂ ಹಲವು ಬಗೆಯ ಭಿನ್ನಾಭಿಪ್ರಾಯಗಳು ಆರಂಭದಿಂದಲೂ ಇದ್ದವು. ಇವೆಲ್ಲವೂ ಈ ಸಂದರ್ಭದಲ್ಲಿ ಸ್ಪೋಟಗೊಂಡವು. ಹಲವು ಟ್ರೇಡ್ ಯೂನಿಯನ್ ಸಂಘಟನೆಗಳ ನಾಯಕನಾಗಿದ್ದ ಪರಿಮಳ್‌ದಾಸ್ ಗುಪ್ತಾರವರನ್ನು ಯಾವೊಂದು ಸಂದರ್ಭದಲ್ಲೂ ಪಕ್ಷ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಗೆರಿಲ್ಲಾ ಯುದ್ದ ತಂತ್ರಕ್ಕೆ ದಾಸ್ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಚೆಗೇವಾರನ ಈ ಗೆರಿಲ್ಲಾ ಯುದ್ಧ ತಂತ್ರ ಎಲ್ಲಾ ರಾಷ್ಡ್ರಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಗುಪ್ತಾರವರ ನಿಲುವಾಗಿತ್ತು.  ಭಾರತದಂತಹ ಸಂದರ್ಭದಲ್ಲಿ ಗುಡ್ಡಗಾಡು ಇರುವ ಪ್ರದೇಶಗಳನ್ನು ಹೊರತು ಪಡಿಸಿದರೆ, ಬೇರೆಲ್ಲೂ ಇದು ಯಶಸ್ವಿಯಾಗುವುದಿಲ್ಲ ಎಂಬುದು ಹಲವು ನಾಯಕರ ನಂಬಿಕೆಯಾಗಿತ್ತು.

ಕೊಲ್ಕತ್ತ ನಗರದಲ್ಲಿ ನಡೆದ ರ್‍ಯಾಲಿಯ ಅಧ್ಯಕ್ಷತೆವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಸಿತ್‌ಸೇನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಟ್ಟಿತು ಎಂದು ಆರೋಪಿಸಿದರು. ಹೀಗೆ ಹಲವು ಭಿನ್ನಾಭಿಪ್ರಾಯಗಳ ನಡುವೆ ತೀವ್ರಗಾಮಿ ಧೋರಣೆಗಳನ್ನು ಹೊಂದಿದ ನೂತನ ಪಕ್ಷ ಕೊನೆಗೂ ಅಸ್ತಿತ್ವ ತಾಳಿತು.

ಚಾರುಮುಜಂದಾರ್‌ನ ಬೆಂಕಿಯುಂಡೆಯಂತಹ ಮಾತುಗಳು ಪಕ್ಷಕ್ಕೆ ಹಲವಾರು ಬಿಸಿರಕ್ತದ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 1971 ರ ವೇಳೆಗೆ ಈಶಾನ್ಯ ಭಾರತದ ರಾಜ್ಯಗಳು, ಗೋವಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ನೆಲೆಯೂರಿತು. ವರ್ಗ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನಧಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದದೆ ಇರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹ ಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು.

ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ  ಕೃಷಿಕರನ್ನು ಮತ್ತು ಕೂಲಿಗಾರರನ್ನು ಶೋಷಿಸಿಕೊಂಡು ಬಂದಿದ್ದ ಜಮೀನ್ದಾರರು, ಮಾವೋವಾದಿ ಕಮ್ಯೂನಿಷ್ಟರ ಹಿಂಸೆ ಮತ್ತು ಭಯಕ್ಕೆ ಹೆದರಿ ಇರುವ ಆಸ್ತಿಯನ್ನು ಬಿಟ್ಟು ನಗರಗಳಿಗೆ ಪಲಾಯನಗೈದರು. ಅವರ ಗೂಂಡಾಪಡೆ ಹೇಳಹೆಸರಿಲ್ಲದಂತೆ ನಾಶವಾಯಿತು. ಮಾವೋವಾದಿಗಳು ಶಾಖೆ ತೆರದ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಇದ್ದಕ್ಕಿದ್ದಂತೆ ಕರಗತೊಡಗಿತು. ಶತಮಾನಗಳ ಕಾಲ ವ್ಯವಸ್ಥೆಯ ಕಪಿಮುಷ್ಟಿಯ ಕೈಯಲ್ಲಿ ನಲುಗಿ ಹೋಗಿದ್ದ ಬಡವರು, ಶ್ರಮಿಕರು, ನೆಮ್ಮದಿಯ ಬದುಕು ಕಟ್ಟಿಕೊಂಡು ಬದುಕಲು ಸಾಧ್ಯವಾಯಿತು. ಇಂತಹ ವಾತಾವರಣ ಪರೋಕ್ಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಾವೋವಾದಿಗಳ ಬಗ್ಗೆ  ರೈತರು, ಕೂಲಿಕಾರ್ಮಿಕರು, ಆದಿವಾಸಿಗಳು, ಅನುಕಂಪ. ಪ್ರೀತಿ ಹುಟ್ಟಲು ಕಾರಣವಾಯಿತು.

ಹಳ್ಳಿಗಳಲ್ಲಿ ಅಧಿಕ ಬಡ್ಡಿಗೆ ಹಣ ನೀಡಿ, ಬಡವರನ್ನು ಶೋಷಿಸುತ್ತಿದ್ದ ಲೇವಾದೇವಿಗಾರರು, ಪೊಲೀಸ್ ಮಾಹಿತಿದಾರರನ್ನು  ಹಿಡಿದು ಗಲ್ಲಿಗೇರಿಸುವ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಮಾವೋವಾದಿಗಳು ನಿರ್ಮಿಸಿದರು. ಘೋಷಿತ ಯದ್ಧದಲ್ಲಿ ಶಾಸ್ತಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶಃ ಪ್ರಯೋಗಕ್ಕೆ ಇಳಿಸಿದರು. ಅಲ್ಲದೆ, ಬಿಲ್ಲು, ಬಾಣ, ಭರ್ಜಿ ಮುಂತಾದ ಸಾಂಪ್ರದಾಯಿಕ ಆಯುಧಗಳನ್ನು ತೈಜಿಸಿ, ಬಂದೂಕುಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಭಾರತ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಇವರು ಹೊಸ ಸವಾಲೊಂದನ್ನು ಒಡ್ಡಿದರು.

ಚಾರು ಮುಜಂದಾರ್ ನೇತೃತ್ವದ ಹೋರಾಟವನ್ನು ಚೀನಾದ ಕಮ್ಯುನಿಷ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ “ದ ಲಿಬರೇಷನ್” ಪತ್ರಿಕೆ ಮುಕ್ತ ಕಂಠದಿಂದ ಹೊಗಳುವುವುದರ ಮತ್ತಷ್ಟು ಹುರಿದುಂಬಿಸಿತು. ಚಾರು ಮುಜಂದಾರ್ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗೆರಿಲ್ಲಾ ಯುದ್ಧತಂತ್ರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದನು. ಭೂರಹಿತ ಬಡ ಗೇಣಿದಾರರು, ಕೃಷಿಕೂಲಿ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಸಂಘಟನೆಗೆ ಚಾರು ಮತ್ತು ಅವನ ಸಂಗಡಿಗರು ಮುಂದಾದರು.

ಭೂಮಾಲೀಕರ ದಬ್ಬಾಳಿಕೆ ಅತಿಯಾಗಿದ್ದ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ನಿರೀಕ್ಷೆ ಮೀರಿ ಒಲವು ವ್ಯಕ್ತವಾಯಿತು. ಇದಕ್ಕಾಗಿ ನಾಲ್ಕು ಅಂಶದ ಕಾರ್ಯಕ್ರಮವನ್ನು ರೂಪಿಸಲಾಯಿತು. ಅವುಗಳೆಂದರೆ.

  1. ಭೂಮಾಲೀಕರ ಒಡೆತನ ಮತ್ತು ದಬ್ಬಾಳಿಕೆ ಇರುವ ಪ್ರದೇಶಗಳನ್ನು ಮುಕ್ತಗೊಳಿಸಿ, ಅವುಗಳನ್ನು ಸಣ್ಣ ಹಿಡುವಳಿದಾರರ ಸುಪರ್ದಿಗೆವಹಿಸುವುದು.
  2. ಕೆಂಪು ಭಯೋತ್ಪಾದನೆ ಮೂಲಕ (ಹಿಂಸೆ) ಜಮೀನ್ದಾರರನ್ನು ಮಣಿಸಿ, ನೆಮ್ಮದಿಯ ವಾತಾವರಣ ಸೃಷ್ಟಿ ಮಾಡುವುದು.
  3. ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಚಳವಳಿಯ ನಾಯಕತ್ವವನ್ನು ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನಾಯಕರಿಂದ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವರ್ಗಾಯಿಸುವುದು.
  4. ಜನಸಾಮಾನ್ಯನನ್ನು, ಜಮೀನ್ದಾರರು, ಬಡ್ಡಿ ವ್ಯಾಪಾರದ ಲೇವಾದೇವಿದಾರರು ಇವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಭಯದಿಂದ ಮುಕ್ತರಾಗಿ ಬದುಕುವಂತೆ ಪ್ರೇರೇಪಿಸುವುದು.

ಚಾರು ಮತ್ತು ಸಂಗಡಿಗರ ಈ ಕಾರ್ಯಚರಣೆ ಕೆಲವು ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಾದರೂ, ಅದೊಂದು ಸಾಮಾಜಿಕ ಚಳವಳಿಯಾಗಿ ಎಲ್ಲ ವರ್ಗವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ಒಂದು ವರ್ಷದ ನಂತರ ಸ್ವತಃ ಚಾರು ಮುಜಂದಾರ್ ಇದನ್ನು ಒಪ್ಪಿಕೊಂಡನು. ಮಾವೋತ್ಸೆ ತುಂಗನ ವಿಚಾರಗಳನ್ನು ಅನಕ್ಷರಸ್ತ ಕೂಲಿಕಾರ್ಮಿಕರಿಗೆ ಆದಿವಾಸಿಗಳಿಗೆ ತಲುಪಿಸುವಲ್ಲಿ ಪಕ್ಷ ಸೋತಿದೆ ಎಂದು ಸ್ವಷ್ಟೀಕರಣ ನೀಡಿದನು. 1970 ರ ಮೇ ತಿಂಗಳಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಸರ್ಕಾರದ ನೀತಿ ಹಾಗೂ ಧೋರಣೆಗಳನ್ನು ಖಂಡಿಸಿ, ಭಾರತವು ಗಳಿಸಿರುವುದು ನಾಚಿಕೆಗೇಡಿನ ಸ್ವಾತಂತ್ರ್ಯಎಂದು ಬಣ್ಣಿಸಿ. ಹೊಸ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊಸದಾಗಿ ಕೆಲವು ರಾಜಕೀಯ ಗುರಿಗಳನ್ನು ಸೇರಿಸಲಾಯಿತು. ಇದಕ್ಕಾಗಿ ಪ್ರಜಾಸಮರ (peoples War) ಯುದ್ಧ ಘೋಷಿಸಲಾಯಿತು. ಪಕ್ಷದ ಈ ತೀರ್ಮಾನ ಹಲವು ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಇವರುಗಳನ್ನು ಹಲವು ಗೊಡ್ಡು ವಿಚಾರಗಳಿಗೆ ಜೋತುಬಿದ್ದ ಕೇಂದ್ರೀಕೃತ ವ್ಯಕ್ತಿಗಳು ಎಂದು ಟೀಕಿಸಿದ ಚಾರು ಮುಜಂದಾರ್, ಸಮಾಜದಲ್ಲಿ ತಾಂಡವವಾಡುತ್ತಿರುವ ವರ್ಗವ್ಯವಸ್ಥೆಯ ವಿರುದ್ಧ ಹೋರಾಟವನ್ನು ಎಲ್ಲಾ ನೆಲೆಗಳಿಗೆ ವಿಸ್ತರಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದ. ಅವನ ಸಂದೇಶ, ಮುಂದಿನ ದಿನಗಳಲ್ಲಿ  ಆಂಧ್ರ, ಶ್ರೀಕಾಕುಳಂ, ಪಶ್ಚಿಮ ಬಂಗಾಳದ, ದೇಬ್ರ ಮತ್ತು ಗೋಪಿಬಲ್ಲಬಪುರ ಜಿಲ್ಲೆ, ಬಿಹಾರದ ಮುರ್ಶರಾಯ್ ಜಿಲ್ಲೆ, ಉತ್ತರಪ್ರದೇಶದ ಲಕ್ಷ್ಮೀಪುರ ಜಿಲ್ಲೆಯ ಪುಲಿಯ ಎಂಬಲ್ಲಿ ಅಗ್ನಿಪರ್ವತದಂತೆ ಸ್ಪೋಟಗೊಂಡಿತು.

(ಮುಂದುವರೆಯುವುದು)