Category Archives: ಸರಣಿ-ಲೇಖನಗಳು

ಭಾರತದ ಕುಲ ತಿಲಕರ ಪರಾಮರ್ಶೆ : ಭಾಗ 1


– ಶ್ರೀಧರ್ ಪ್ರಭು


 

“In spite of the verdict of the Jury, I maintain that I am innocent. There are higher powers that rule the destiny of men and nations and it may be the will of providence that the cause which I represent may prosper more by my suffering than my remaining free.”

(“ಜೂರಿಗಳ ತೀರ್ಮಾನವೇನೆ ಇರಲಿ, ನನ್ನ ಪ್ರಕಾರ ನಾನೊಬ್ಬ ನಿರಪರಾಧಿ. ಮಾನವರ ಮತ್ತು ದೇಶಗಳ ಭವಿಷ್ಯವನ್ನು ತೀರ್ಮಾನಿಸುವದು ಮಹಾನ್ ಶಕ್ತಿಗಳು. ನಾನು ನಂಬಿದ ಅದರ್ಶಗಳನ್ನು ಸಿದ್ದಿಸಲು, ನಾನು ಮುಕ್ತವಾಗಿ ಬದುಕುವುದಕ್ಕಿಂತ ಸಂಘರ್ಷ ಪಟ್ಟು ಬಂಧನದಲ್ಲಿರರುವುದರಿಂದಲೇ ಹೆಚ್ಚು ಸೂಕ್ತವೆಂದು ಆ ವಿಧಿಯೇ ತೀರ್ಮಾನಿಸಿರಬೇಕು.” )

ಬಾಂಬೆ ಹೈ ಕೋರ್ಟ್‌ನ ಹೃದಯ ಭಾಗದಲ್ಲಿರುವ ನ್ಯಾಯಂಗಣ ಕೊಠಡಿಯ ೪೬ ರ ಹೊರ ಪಾರ್ಶ್ವದಲ್ಲಿರುವ ಒಂದು ಆಕರ್ಷಕ ಫಲಕದ ಮೇಲೆ ಈ ವಾಕ್ಯಗಳನ್ನು ಕೆತ್ತಲಾಗಿದೆ. ಒಂದು ನ್ಯಾಯಾಲಯದಲ್ಲಿ ಒಬ್ಬ ಆರೋಪಿ ನೀಡಿದ ಹೇಳಿಕೆಗಳನ್ನು lokmanya-tilakಅದೇ ನ್ಯಾಯಾಲಯದ ಆವರಣದಲ್ಲಿ ಕೆತ್ತಿದ ಉದಾಹರಣೆ ಪ್ರಾಯಶಃ ಇಡೀ ವಿಶ್ವದಲ್ಲೇ ಇರಲಿಕ್ಕಿಲ್ಲ.

ಈ ವಾಕ್ಯಗಳನ್ನು ಹೇಳಿದ ರಾಷ್ಟ್ರೀಯ ಅಸಂತುಷ್ಟಿಯ ಜನಕ (Father of the Indian unrest), ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹ, ಸ್ವರಾಜ್ಯವೇ ತನ್ನ ಜನ್ಮ ಸಿದ್ಧ ಹಕ್ಕೆಂದು ಸಾರಿದ ಲೋಕಮಾನ್ಯ ಬಾಳ ಗಂಗಾಧರ ತಿಲಕರು ಸರ್ವತ್ರ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾದವರು. ಅವರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತಾದ್ಯಂತ ಆಚರಿಸಲಾಗುತ್ತಿದೆ.

ಬಹುಷಃ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತು ಬಹು ಮುಖ್ಯವಾಗಿ ಸಂಘ ಪರಿವಾರದವರು ಮನ:ಪೂರ್ವಕವಾಗಿ ಮತ್ತು ಸಮಾನವಾಗಿ ಗೌರವಿಸುವ ಕೆಲವೇ ರಾಷ್ಟ್ರೀಯ ನಾಯಕರಲ್ಲಿ ತಿಲಕರೊಬ್ಬರು. ಕಾಂಗ್ರೆಸ್ ಮತ್ತು ಸಂಘ ಪರಿವಾರ ಅವರನ್ನು ಒಬ್ಬ ಅಪ್ಪಟ ರಾಷ್ಟ್ರವಾದಿಯಾಗಿ ಗೌರವಿಸಿದರೆ, ಕ್ರಾಂತಿಕಾರಿ ಮಾರ್ಗವನ್ನು ಬೆಂಬಲಿಸಿ, ೧೯೧೭ ರ ಸೊವಿಯಟ್ ಕ್ರಾಂತಿಯನ್ನು ಮತ್ತು ಅದರ ರೂವಾರಿ ಲೆನಿನ್ ರನ್ನು ಹಾರ್ದಿಕವಾಗಿ ಹಾಡಿ ಹೊಗಳಿದ ತಿಲಕರ ಬಗ್ಗೆ ಕಮ್ಯುನಿಸ್ಟರಿಗೆ ಅತೀವ ಅಭಿಮಾನವಿದೆ. ಸ್ವತಹ ಲೆನಿನ್ ಒಂದು ಕಡೆ ತಿಲಕರ ಬಗ್ಗೆ ‘ಅತ್ಯಂತ ಸುಸ್ಥಿರ ಮತ್ತು ಪುರೋಗಾಮಿ ನಾಯಕ…” (“…the most consistent and forward-looking leader”) ಎಂದಿದ್ದಾರೆ. ತಿಲಕರ ಮೇಲೆ ದೇಶದ್ರೋಹದ ಮೊಕದ್ದಮೆ ನಡೆದಾಗ ತಿಲಕರ ಪರ ವಕಾಲತ್ತು ನಡೆಸಿದ್ದು ಸ್ವತಹ ಮೊಹಮ್ಮದ್ ಅಲಿ ಜಿನ್ನಾ. ಜಿನ್ನಾ ಮತ್ತು ತಿಲಕರ ಸ್ನೇಹ ಮತ್ತು ಸಾಂಗತ್ಯ (comradeship) ಬಗ್ಗೆ ಪ್ರಸಿದ್ದ ಲೇಖಕ ಎ. ಜಿ. ನೂರಾನಿ “Tilak and Jinna – Comrades in Freedom Struggle” ಎಂಬ ಬಹು ಚರ್ಚಿತ ಪುಸ್ತಕವನ್ನೇ ಬರೆದಿದ್ದಾರೆ. ಮುಸ್ಲಿಂ ಸಮುದಾಯವೂ ತಿಲಕರನ್ನು ತೀಕ್ಷ್ಣವಾಗಿ ವಿರೋಧಿಸಿದ ನಿದರ್ಶನಗಳಿಲ್ಲ. ಹೀಗೆ ಸಾರ್ವತ್ರಿಕ ಮನ್ನಣೆಯಿರುವ ತಿಲಕರನ್ನು ವಿಮರ್ಶೆಗೊಳಪಡಿಸುವುದು ಹಿಂದೆಯೂ ಮತ್ತು ಇಂದಿಗೂ ಸಾಕಷ್ಟು ‘ರಾಷ್ಟ್ರೀಯ ಅಸಂತುಷ್ಟಿ’ ಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ತಿಲಕರನ್ನು ಮೊಟ್ಟ ಮೊದಲ ಬಾರಿ ವಿಮರ್ಶೆ ಮಾಡಿದ್ದು ಮಹಾತ್ಮಾ ಫುಲೆ. ತಮ್ಮ ಕೇಸರಿ ಪತ್ರಿಕೆ ಪ್ರಾರಂಭಿಸಲು Jyotirao Phuleನಿಧಿ ಸಂಗ್ರಹ ಮಾಡಲೋಸುಗ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಮೊಟ್ಟ ಮೊದಲ ಬಾರಿಗೆ ಫುಲೆ ತಿಲಕರ ಐತಿಹಾಸಿಕ ಆಕರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದರು.

ಹಂಟರ್ ಆಯೋಗದ ಮುಂದೆ ಫುಲೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಇದು ತಿಲಕರೂ ಸೇರಿದಂತೆ ಅನೇಕ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು.

ತಿಲಕರು “ಮರಾಠ” ಎಂಬ ತಮ್ಮ ಇಂಗ್ಲಿಷ್ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಮತ್ತು ಸಂಪಾದಕೀಯಗಳನ್ನು ಬರೆದು ಶೂದ್ರ ಮತ್ತು ದಲಿತ ವಿದ್ಯಾರ್ಥಿಗಳು ಅಧುನಿಕ ಶಿಕ್ಷಣ ಪಡೆಯುವುದನ್ನು ಉಗ್ರವಾಗಿ ವಿರೋಧಿಸಿ ಲೇಖನ ಬರೆದರು. ಇದರ ಸಾರಾಂಶವೆಂದರೆ: ಕುಂಬಾರ, ಕುಣಬಿ, ಚಮ್ಮಾರ ಇತ್ಯಾದಿ ಜನಾಂಗಗಳ ತಮ್ಮ ವೃತ್ತಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಶೂದ್ರರ ಮಕ್ಕಳು ಅಧುನಿಕ ಶಿಕ್ಷಣ ಪಡೆದರೆ ಅವರು ತಮ್ಮ ತಂದೆ ತಾಯಿಯರನ್ನೇ ತುಚ್ಚವಾಗಿ ಕಂಡು ಅಧುನಿಕತೆಯನ್ನೇ ಆರಾಧಿಸ ತೊಡಗುತ್ತಾರೆ. ಇತಿಹಾಸ, ಗಣಿತ, ಭೂಗೋಳ ಇತ್ಯಾದಿ ವಿಷಯಗಳನ್ನು ಓದಿದರೆ ಈ ಕೆಳಜಾತಿಯ ಜನಕ್ಕೆ ಪ್ರಯೋಜನವಾದರೂ ಏನು? ಇನ್ನು ಇಂಥವರ ಮಕ್ಕಳೆಲ್ಲ ಓದಿ ವಿದ್ಯಾವಂತರಾದರೆ ಹೊಲಗಳಲ್ಲಿ ದುಡಿಯುವವರು ಯಾರು? ತೆರಿಗೆದಾರರ ಸಾವಿರಗಟ್ಟಲೆ ಹಣವನ್ನು ಈ ರೀತಿ ಅಪಾತ್ರರ ಮೇಲೆ ಖರ್ಚು ಮಾಡಲು ಸರಕಾರಕ್ಕೆ ನಾಚಿಗೆಯಾಗಬೇಕು ತಮ್ಮ ತಮ್ಮ ಕುಲ ಕಸುಬಿನಲ್ಲೇ ಶೂದ್ರ ಮತ್ತು ದಲಿತರ ಅವರ ಮುಕ್ತಿ ಇರುವುದು.

ಹಾಗೆಯೇ, ತಿಲಕರು ಇಂತಹುದೇ ಕಾರಣಗಳಿಗಾಗಿ ಮಹಿಳೆಯರು ವಿದ್ಯಾವಂತರಾಗುವುದನ್ನು ಕೂಡ ವಿರೋಧಿಸಿದರು. ಮಹಿಳೆ ಅಧುನಿಕ ಶಿಕ್ಷಣ ಪಡೆದರೆ ತನ್ನ ತಂದೆ ತಾಯಿ ಮತ್ತು ಗಂಡಂದಿರಿಗೆ ವಿಧೇಯಳಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತ ಶೂದ್ರರ ಮಕ್ಕಳು ಸವರ್ಣೀಯ ಮಕ್ಕಳ ಜೊತೆ ಓದುವುದನ್ನೂ ಕೂಡ ತಿಲಕರು ಉಗ್ರವಾಗಿ ಟೀಕಿಸಿದರು. ಸ್ವತಃ ದಲಿತ ಶೂದ್ರರೇ ತಮ್ಮ ಮಕ್ಕಳನ್ನು ಸವರ್ಣೀಯರ ಜತೆ ವ್ಯಾಸಂಗ ಮಾಡಲು ಕಳುಹಿಸುತ್ತಿಲ್ಲ ಅಂಥದ್ದರಲ್ಲಿ ಕೆಲವು ಮೂರ್ಖ ಬ್ರಿಟಿಷ್ ಅಧಿಕಾರಿಗಳು ನಮ್ಮವರೇ ಆದ ಕೆಲ ನಿಷ್ಪ್ರಯೋಜಕ ಸಮಾಜ ಸುಧಾರಕರ ಮಾತು ಕಟ್ಟಿಕೊಂಡು ಈ ತರಹದ ‘ಅಪ್ರಯೋಜಕ ಮತ್ತು ಕಾರ್ಯಸಾಧುವಲ್ಲದ’ ಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಬ್ರಿಟಿಷರ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಸಿದರು. ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಲೇ ಫುಲೆ ಮತ್ತವರ ಸಂಗಡಿಗರ ಮೇಲೆ ಚಾಡಿ ಚುಚ್ಚಲು ತಿಲಕರಿಗೆ ಯಾವ ದೇಶಪ್ರೇಮವೂ ಅಡ್ಡಿ ಬರಲಿಲ್ಲ.

ತಿಲಕರು ಇಷ್ಟೆಲ್ಲಾ ದ್ವೇಷ ಸಾಧಿಸಿದರೂ ಮಹಾತ್ಮಾ ಫುಲೆ ತಿಲಕರನ್ನು ಹೇಗೆ ನಡೆಸಿಕೊಂಡರು ಎಂಬುದು ಬಹು ಮುಖ್ಯ.

೧೮೮೨ ರಲ್ಲಿ, ಶಿವಾಜಿ ಮಹಾರಾಜರ ವಂಶದವರಿಗೆ ಬ್ರಿಟಿಷ್ ಸರಕಾರ ಅನ್ಯಾಯವೆಸಗಿದೆ ಎಂದು (ತಿಲಕರು ಶಾಹು ಮಹಾರಾಜರಿಗೆ ಅಪಮಾನ ಮಾಡಿದಷ್ಟೇನೂ ಬ್ರಿಟಿಷರು ಮಾಡಿರಲಿಕ್ಕಿಲ್ಲ), ತಿಲಕರು ಮತ್ತು ಅಗರ್ಕರ್ ಎಂಬ ಇನ್ನೊಬ್ಬ ಮುಖಂಡರ ಜೊತೆ ಸೇರಿಕೊಂಡು ಒಂದು ಚಳುವಳಿ ಸಂಘಟಿಸಿದರು. ಇದರಿಂದ ಕಾನೂನು ಭಂಗವಾಯಿತೆಂಬ ಆರೋಪ ಹೊರಿಸಿ ಬ್ರಿಟಿಷರು ಇವರಿಬ್ಬರನ್ನೂ ಮುಂಬೈನಲ್ಲಿನ ಡೊಂಗ್ರಿಯಲ್ಲಿ ಬಂಧಿಸಿದರು. ಆಗ ನ್ಯಾಯಾಲಯದಲ್ಲಿ ೧೦೦೦೦ ರೂಪಾಯಿಗಳ ಜಾಮೀನು ಕೊಡಬೇಕೆಂಬ ಶರತ್ತನ್ನು ವಿಧಿಸಲಾಯಿತು. ಅಷ್ಟು ಆಗುವಾಗ ತಿಲಕರ ಹಿಂದೆ ಓಡಾಡಿಕೊಂಡಿದ್ದ ಸುಧಾರಕರೆಲ್ಲ ದಿಕ್ಕಾ ಪಾಲಾಗಿ ಓಡಿದ್ದರು. ಮಹಾತ್ಮಾ ಫುಲೆ ತಾವೇ ಸ್ವಯಂ ಪ್ರೇರಣೆಯಿಂದ ಸತ್ಯಶೋಧಕ ಸಮಾಜದ ವತಿಯಿಂದ ಹಳ್ಳಿ ಹಳ್ಳಿಗೆ ತಿರುಗಿ ವಂತಿಗೆ ಸಂಗ್ರಹ ಮಾಡಿ ತಿಲಕ ಮತ್ತು ಅವರ ಸಂಗಡಿಗರನ್ನು ಬೇಲ್ ಹಣ ಕೊಟ್ಟು ಬಿಡಿಸಿದರು.ನಂತರ ನಡೆದ ತಿಲಕರ ಮೇಲೆ ಹೂಡಲಾದ ಮೊಕದ್ದಮೆಯಲ್ಲಿ ತಿಲಕರಿಗೆ ಮೂರು ತಿಂಗಳ ಕಾರಾವಾಸ ಶಿಕ್ಷೆಯಾಯಿತು. ತಿಲಕರ ಬಿಡುಗಡೆಗೆ ಒತ್ತಾಯಿಸಿ ನಂತರದಲ್ಲಿ ತಿಲಕರ ಬಂಧನವನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ ಮಹಾತ್ಮಾ ಫುಲೆ ಒಂದು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಿಂದಾಗಿಯೇ ಮುಂಬೈ ಪ್ರಾಂತ್ಯದಲ್ಲೆಲ್ಲ ತಿಲಕರು ಪ್ರಸಿದ್ದಿಗೆ ಬಂದರು.

ಇದಾದ ನಂತರ, ತಿಲಕರು ಫುಲೆ ಮಹಾತ್ಮರಿಗೆ ‘ನಿಮ್ಮ ಈ ಮಹದುಪಕಾರ ಹೇಗೆ ತೀರಿಸಲಿ’ ಎಂದು ಕೇಳಿದಾಗ bal-gangadhar-tilakಮಹಾತ್ಮರು ಒಂದೇ ಒಂದು ಮಾತು ಹೇಳಿದರು ” ತಿಲಕ್, ನೀವು ಒಬ್ಬ ಮಹಾನ್ ನಾಯಕನಾಗಿ ಬೆಳೆದು ನಿಲ್ಲುವ ಸರ್ವ ಸಾಧ್ಯತೆಗಳನ್ನೂ ನಾನು ನೋಡಬಲ್ಲೆ. ನಿಮ್ಮಲ್ಲಿ ಒಂದೇ ಒಂದು ದೋಷವಿದೆ; ಕೇವಲ ಬ್ರಾಹ್ಮಣರನ್ನು ಸಂಘಟಿಸುವುದನ್ನು ಬಿಟ್ಟುಬಿಡಿ. ಸಮಾಜದ ಎಲ್ಲ ವರ್ಗಗಳಿಗೂ ನೇತೃತ್ವ ಕೊಡಿ. ಇಷ್ಟೇ ನಿಮ್ಮಲ್ಲಿ ನಾನು ಕೇಳಿಕೊಳ್ಳುವುದು”.

ದುರ್ದೈವವೆಂದರೆ, ಹೀಗೆ ತಮ್ಮನ್ನು ಸಲುಹಿದ ಮಹಾತ್ಮಾ ಫುಲೆ ಹುತಾತ್ಮರಾದಾಗ ತಮ್ಮ ದೈನಿಕದಲ್ಲಿ ಮಹಾತ್ಮರ ನಿಧನದ ಕುರಿತು ಒಂದೇ ಒಂದು ಚಿಕ್ಕ ಸಾಲನ್ನು ಸುದ್ದಿಯ ರೂಪದಲ್ಲಿ ಕೂಡ ಕೂಡ ಬರೆಯಲಿಲ್ಲ! ಇನ್ನು ತಿಲಕರ ಸಂಗಡಿಗ ಅಗರ್ಕರ್ ಕೂಡ ಈ ವಿಷಯದಲ್ಲಿ ಹಿಂದೆ ಬೀಳಲಿಲ್ಲ. ತಮ್ಮ ಪತ್ರಿಕೆ “ಸುಧಾರಕ” (!?) ದಲ್ಲಿ ಮಹಾತ್ಮರ ನಿಧನದ ಬಗ್ಗೆ ಒಂದು ಅಕ್ಷರವನ್ನೂ ಬರೆಯಲಿಲ್ಲ. ಇದೇ ತಿಲಕರು ಮಹಾತ್ಮರಿಗೆ ಸಲ್ಲಿಸಿದ ಕಾಣಿಕೆ!

ಇನ್ನು ತಿಲಕರು ಶಾಹು ಮಹಾರಾಜ್ ಮತ್ತು ಬಾಬಾ ಸಾಹೇಬರನ್ನು ನಡೆಸಿಕೊಂಡ ರೀತಿ ಇನ್ನೂ ಆಸಕ್ತಿಕರವಾಗಿದೆ.

(ಮುಂದುವರೆಯುತ್ತದೆ…)

ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

ಸಂಭ್ರಮದ ಬದಲಿಗೆ, ಅವಮಾನ ಕರುಣಿಸುವ ಜಾತ್ರೆಗಳು

 – ಜೀವಿ
ನಾನಾಗ ಹೈಸ್ಕೂಲ್ ವಿದ್ಯಾರ್ಥಿ, ಹಬ್ಬ-ಜಾತ್ರೆಯಲ್ಲಿ ಅನ್ನ ಮತ್ತು ದೋಸೆ ಕಾಣುತ್ತಿದ್ದ ಕಾರಣ ಊರಿನಲ್ಲಿ ಸಾವಾದರೂ ಮನಸಲ್ಲೆ ಸಂಭ್ರಮಿಸಿ ೧೧ ದಿನ ಏಣಿಸಿದ್ದುಂಟು. ಯಾಕೆಂದರೆ ೧೧ ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಏರ್ಪಡಿಸುವ ಗ್ಯಾರಂಟಿ ಇತ್ತು. ಅಂದಾದರೂ ಅನ್ನ ಕಾಣಬಹುದು ಎಂಬುದು ನನ್ನ ಲೆಕ್ಕಾಚಾರ. ಮಳೆ ಮುಗಿಲು ಸೇರಿದ್ದ ಕಾರಣಕ್ಕೆ ಆ ವರ್ಷ ರಾಗಿ ಬೆಳೆ ಕೂಡ ಕೈಗೂಡಿರtimthumbಲಿಲ್ಲ. ಹಾಗಾಗಿ ಅರೆಹೊಟ್ಟೆಯಲ್ಲೆ ಜೀವನ ಮುಂದುವರಿದಿತ್ತು. ‘ಕಾಲಾಡಿ ಹೊರಟರೆ ಕನ್ನೆ ಸೊಪ್ಪಿಗೆ ಬರವೇ?’ ಎಂಬುದು ಅವ್ವ ಆಗಾಗ ಹೇಳುತ್ತಿದ್ದ ಮಾತು. ದಿನವಿಡೀ ಸುತ್ತಾಡಿ ಕನ್ನೆ ಸೊಪ್ಪು ಸೆರಗು ತುಂಬಿಸಿಕೊಂಡು ಬಂದು ಬೇಸಿದರೆ ಬೊಗಸೆ ಸೊಪ್ಪು ಹಿಡಿಯಷ್ಟಾಗುತ್ತಿತ್ತು. ಅದನ್ನೆ ತಿಂದು ನೀರು ಕುಡಿದು ಶಾಲೆಗೆ ಹೋಗುತ್ತಿದ್ದೆ.

ಮಾರ್ಚ್ಗೆ ಮುನ್ನವೇ ಬಿದ್ದ ಮಳೆಯಿಂದ ಅಣ್ಣ ಮತ್ತೊಂದು ಹೊಸ ಕನಸು ಹೊತ್ತು ನೇಗಿಲು ಹಿಡಿದು ಹೊಲಕ್ಕೆ ಹೋಗಿದ್ದ. ಶಾಲೆಗೆ ಹೋಗುವ ದಾರಿಯಲ್ಲಿ ಅವ್ವ ಬೇಸಿಕೊಟ್ಟ ಕನ್ನೆಸೊಪ್ಪಿನಲ್ಲಿ ನನ್ನ ಪಾಲು ಅಲ್ಲೆ ತಿಂದು ಅಣ್ಣನಿಗೆ ತಲುಪಿಸಿ ಹೋಗುತ್ತಿದ್ದೆ. ಮುಂದಿನ ವರ್ಷ ನಾನು ಕಾಲೇಜು ಮೆಟ್ಟಿಲು ಹತ್ತೇ ತೀರುತ್ತೇನೆ ಎಂಬ ಅಚಲ ನಂಬಿಕೆ ಅಣ್ಣನಿಗಿತ್ತು. ಹಾಗಾಗಿ ನನ್ನ ಮೇಲೆ ಇನ್ನಿಲ್ಲದ ಕಾಳಜಿ. ಊರಿನ ಹೊಲಗೇರಿಯಲ್ಲಿ ಕಾಲೇಜು ಮೆಟ್ಟಿಲೇರುವ ಮೊದಲ ವ್ಯಕ್ತಿ ನಾನಾಗಿದ್ದೆ. ಅವ್ವ ಕೊಟ್ಟ ಸೊಪ್ಪಿನಲ್ಲಿ ಒಂದೆರಡು ತುತ್ತು ಮಾತ್ರ ಎತ್ತಿಕೊಳ್ಳುತ್ತಿದ್ದ ಅಣ್ಣ, ಉಳಿದಿದ್ದನ್ನು ನನಗೇ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದ. ಹೊಟ್ಟೆ ಹಸಿವಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ನೀನು ಕಾಲೇಜು ಮೆಟ್ಟಿಲೇರಿ ಸರ್ಕಾರಿ ನೌಕರಿ ಹಿಡಿದರೆ ಮುಂದೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ಅಣ್ಣನ ವಾದ. ಹಾಗೆ ದಿನ ಕಳೆದು ಕಾಲೇಜಿಗೆ ಹೋಗುವ ಕನಸೂ ಕೈಗೂಡಿತು.

ಊರಿನಲ್ಲಿ ಕುಳುವಾಡಿಕೆ ಜೀವಂತವಾಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಊರಿನ ಕೆಲಸ ಮಾಡಲೇಬೇಕಿತ್ತು. ಮೇಲ್ವರ್ಗದ ಆಣತಿ ಮೀರುವಂತಿರಲಿಲ್ಲ. ಹಬ್ಬ-ಜಾತ್ರೆ ನೆನದು ತಿಂಗಳಿಗೆ ಮೊದಲೇ ಸಂಭ್ರಮಿಸುತ್ತಿದ್ದ ನನಗೆ ಆ ವರ್ಷದ ಜಾತ್ರೆ ಅಸಹ್ಯ ಎನಿಸಿತು. ಏಳು ಹಳ್ಳಿ ಸೇರಿ ಮಾಡುವ ಜಾತ್ರೆಗೆ ನನ್ನೂರಿನಿಂದ ಸಿಂಗರಿಸಿದ ಬಂಡಿಯೊಂದಿಗೆ ಹೋಗಿ ಉಡಸಲಮ್ಮನ ಗುಡಿ ಮುಂದಿನ ಕೆಂಡದ ರಾಶಿಯಲ್ಲಿ ಕಾಲಾಡಿ ಬರುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆ. ಹೊರಡುವ ಮುನ್ನ ಊರ ಮುಂದಿನ ಗುಡಿಯ ಎದುರು ಬಂಡಿಗೆ ಪೂಜೆ-ಪುನಸ್ಕಾರ ಮಾಡಿ ಹೊರಡಲಾಗುತ್ತದೆ. ಆ ಸಂದರ್ಭದಲ್ಲಿ ಬಂಡಿಗೆ ಹೋತವನ್ನು ಬಲಿಕೊಡುವುದು ಸಂಪ್ರದಾಯ. ಪೂಜೆ-ಪುನಸ್ಕಾರವೆಲ್ಲ ಮೇಲ್ವರ್ಗಕ್ಕೆ ಬಿಟ್ಟದ್ದು. ಹೋತವನ್ನು ಕಡಿಯುವ ಕೆಲಸ ದಲಿತದ್ದು. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ತೇಲಿದ್ದರು. ಹೋತ ಬಲಿಯಾಗುವುದನ್ನು ನೋಡಲು ಎಲ್ಲರೂ ಸೇರಿದ್ದರು. ಒಂದೇ ಹೊಡೆತಕ್ಕೆ ಹೋತನ ರುಂಡ-ಮುಂಡ ಬೇರೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಮೇಲ್ವರ್ಗದವರ ಕಾಲು ನನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ಎದೆಗೆ ಜಾಡಿಸುತ್ತಿದ್ದವು. ಹಾಗಾಗಿ ಹೋತನ ಕಡಿಯಲು ಎಲ್ಲರಿಗೂ ಹಿಂಜರಿಕೆ ಇತ್ತು. ಆದರೆ ಯಾರದರೊಬ್ಬರು ಕಡಿಯಲೇ ಬೇಕಿತ್ತು. ಎಲ್ಲರೂ ಸೇರಿ ಮೇಲ್ನೋಟಕ್ಕೆ ಬಲಶಾಲಿಯಂತೆ ಕಂಡ ಕರಿಯನಿಗೆ ಆ ಕೆಲಸ ನಿಯೋಜಿಸಿದರು. ಒಲ್ಲದ ಮನಸ್ಸಿನಲ್ಲೆ ಕರಿಯ ಒಪ್ಪಿಕೊಂಡ.

ಪೂಜೆ ಪುನಸ್ಕಾರವೆಲ್ಲ ಮುಗಿದು ಹೋತನನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದರು. ಅಲ್ಲೆ ಇದ್ದ ಕಲ್ಲೊಂದಕ್ಕೆ ಕತ್ತಿ ಮಸೆದು ತಂದ ಕರಿಯ, ಹೋತನ ಮುಂದೆ ಬಂದು ನಿಂತ. ಮಾಂಸಹಾರಿಗಳಲ್ಲದ ಮೇಲ್ವರ್ಗದವರು ಪಂಚೆ ಮೇಲೆತ್ತಿ ಕಟ್ಟಿ ನಿಂತರು. ಕರಿಯನ ಬಲದ ಮೇಲೆ ನಂಬಿಕೆ ಇದ್ದರೂ ಕತ್ತಿಯ ಮೊಣಚು ಸರಿಯಾಗಿ ಕುತ್ತಿಗೆ ತುಂಡು ಮಾಡದಿದ್ದರೆ ಅವನಿಗೆ ಆಗಲಿರುವ ಶಾಸ್ತಿಯನ್ನು ಮನದಲ್ಲೆ ನೆನಪಿಸಿಕೊಂಡ ದಲಿತರು ಜೀವ ಬಿಗಿ ಹಿಡಿದು ನಿಂತಿದ್ದರು. ಮನಸಲ್ಲೇ ಹತ್ತಾರು ದೇವರು ನೆನದ ಕರಿಯ ತನ್ನ ಬಲವನ್ನೆಲ್ಲ ಒಂದು ಮಾಡಿಕೊಂಡು ಹೋತದ ಕುತ್ತಿಗೆಯ ಮೇಲೆ ಏಟು ಕೊಟ್ಟೇಬಿಟ್ಟ. ಮುಂದಿನ ಸಾಲಿನಲ್ಲೆ ನಿಂತಿದ್ದ ನಾನು ಕೂಡ ಒಂದೇ ಏಟಿಗೆ ಕುತ್ತಿಗೆ ತುಂಡಾಗಲಿ ಎಂದು ದೇವರಿಗೆ ಕೈಮುಗಿದು ಕಣ್ಮುಚ್ಚಿಕೊಂಡೆ. ಕಣ್ಬಿಟ್ಟು ನೋಡಿದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಒಂದೇ ಏಟಿಗೆ ಹೋತದ ರುಂಡ-ಮುಂಡ ಬೇರೆಯಾಗಲಿಲ್ಲ. ಅದಕ್ಕೆಂದೆ ಕಾದು ನಿಂತಿದ್ದ ಮೇಲ್ವರ್ಗದ ನಾಲ್ಕೈದು ಮಂದಿ ಕರಿಯನ ಎದೆ ಮತ್ತು ಕುಂಡಿಗೆ ಜಾಡಿಸಿ ಒದೆಯುತ್ತಿದ್ದರು. ಒದೆತಕ್ಕೆ ಸಿಲುಕಿ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಕರಿಯ, ಹೋತದ ರಕ್ತದೊಂದಿಗೆ ಬೆರೆತು ಹೋಗಿದ್ದ. ನಾಲ್ಕೈದು ಮಂದಿ ಒದೆಯುತ್ತಿದ್ದರೂ ತುಂಡಾಗದೆ ಉಳಿದಿದ್ದ ಭಾಗವನ್ನು ಬೇರ್ಪಡಿಸಲು ಹರಸಾಹಸ ಮುಂದುವರಿಸಿದ್ದ. ‘ನನ್ನ ಮಕ್ಳಾ, ಮಂಕ್ರಿ ಬಾಡ್ ತಿಂತೀರಿ ಒಂದೇ ಏಟಿbeaten-to-deathಗೆ ಹೋತನ್ ಕತ್ತು ಕತ್ರಸಕ್ಕೆ ಆಗಲ್ವಾ? ಒದಿರ್ಲಾ.. ಹಾಕ್ಲಾ ಹೊಲಿ ನನ್ ಮಗಂಗೆ’ ಎಂದು ಸುತ್ತ ನಿಂತಿದ್ದ ಮೇಲ್ವರ್ಗದವರು ಒದೆಯುತ್ತಿದ್ದವರಿಗೆ ಪ್ರಚೋದನೆ ನೀಡಿದರು. ಹೇಗೋ ಹೋತನ ತಲೆ ಮತ್ತು ದೇಹ ಬೇರಾದವು. ನಂತರ ಒದೆಯುವುದು ನಿಂತಿತು. ಮೇಲೆದ್ದ ಕರಿಯನ ಮುಖದಲ್ಲಿ ರಕ್ತ ಅಂಟಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಕರಿಯ ಪಕ್ಕದೂರಿನ ಹೆಣ್ಣು ತಂದು ಮದುವೆಯಾಗಿದ್ದ. ಆಕೆ ಸೇರಿದಂತೆ ಅವರ ಸಂಬಂಧಿಕರು ಅಲ್ಲೆ ಇದ್ದರು. ತನ್ನ ಗಂಡನಿಗೆ ಆದ ಅವಮಾನ ತಡೆಯಲಾರದೆ ಅಕೆ ಕಣ್ಣೀರಿಟ್ಟು ಮನೆಯತ್ತ ಓಡಿದಳು. ಎಲ್ಲರೂ ಸಂಭ್ರದಿಂದ ಜಾತ್ರೆಯತ್ತ ಹೆಜ್ಜೆ ಹಾಕಿದರೆ, ಕರಿಯ ಅವಮಾನ ಸಹಿಸಲು ಸಾಧ್ಯವಾಗದೆ ಜಾತ್ರೆ ಕಡೆ ಮುಖ ಮಾಡಲಿಲ್ಲ.

ಈ ರೀತಿ ಅವಮಾನ ನನ್ನವರಿಗೆ ಮಾಮೂಲಾಗಿತ್ತು. ಆದರೆ ಅದೇಕೋ ಕರಿಯನ ಎದೆ ಮೇಲೆ ಕಾಲಿಟ್ಟ ಮೇಲ್ವರ್ಗದ ದಾಷ್ಟ್ಯ ನನ್ನ ಮನಸ್ಸನ್ನೂ ತೀವ್ರವಾಗಿ ಘಾಸಿಗೊಳಿಸಿತು. ಮುಂದಿನ ವರ್ಷ ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದೆ. ದಿನ ಕಳೆದು ಜಾತ್ರೆ ದಿನ ಮತ್ತೊಮ್ಮೆ ಬಂದೆ ಬಿಟ್ಟಿತು. ಆ ದಿನ ಹೋತವನ್ನು ಕಡಿಯಲು ಕರಿಯ ಒಪ್ಪಲಿಲ್ಲ. ದಲಿತರಲ್ಲಿ ಹಿರಿಯರೆಲ್ಲ ಸೇರಿ ಒಬ್ಬರನ್ನು ಆ ಕೆಲಸಕ್ಕೆ ನೇಮಿಸಬೇಕಿತ್ತು. ಮನಸಲ್ಲೆ ಒಂದು ನಿರ್ಣಯ ಕೈಗೊಂಡ ನಾನು, ಕತ್ತಿ ಎತ್ತಿಕೊಂಡೆ. ಆದರೆ ಅದಕ್ಕೆ ಅವ್ವ-ಅಪ್ಪ ಸೇರಿ ಯಾರೊಬ್ಬರೂ ಒಪ್ಪಲಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮೇಲ್ವರ್ಗದವರು ಒದೆಯುವುದನ್ನು ನಾವು ನೋಡಲಾರೆವು ಎಂದರು. ಆದರೆ ಇಲ್ಲ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ. ಆಗಲಿ ಎಂದು ಎಲ್ಲರೂ ಒಪ್ಪಿಕೊಂಡರು.

ಕತ್ತಿ ಮಸೆದು ಹೋತನ ಮುಂದೆ ನಿಂತು ಯಾವ ದೇವರನ್ನು ಬೇಡದೆ ಮನದಲ್ಲೆ ಒಂದು ನಿರ್ಧಾರ ಮಾಡಿಕೊಂಡೆ. ಮೇಲ್ವರ್ಗದವರು ನನ್ನ ಪಕ್ಕಕ್ಕೆ ಬಂದು ನಿಂತು ಪಂಚೆ ಮೇಲೆತ್ತಿ ಕಟ್ಟಿಕೊಂಡರು. ಒಂದೇ ಏಟಿಗೆ ಹೋತ ಬಲಿಯಾಗದಿದ್ದರೆ ಕತ್ತಿಯನ್ನು ನನ್ನ ಮೇಲೆ ಕಾಲೆತ್ತಿದವರತ್ತ ತಿರಿಗಿಸಲು ಮನಸನ್ನು ಸಜ್ಜು ಮಾಡಿಕೊಂಡೆ. ನಂತರ ಆಗುವ ಪರಿಣಾಮ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕತ್ತಿಯನ್ನು ಮೇಲಿತ್ತಿ ಹೋತನ ಕುತ್ತಿಗೆಗೆ ಕೊಟ್ಟೆ. ಅದ್ಯಾವ ದುರಾದೃಷ್ಟವೋ ಒಂದೇ ಏಟಿಗೆ ರುಂಡ-ಮುಂಡ ಬೇರಾತು. ನಾನು ಮನದಲ್ಲಿ ಮಾಡಿಕೊಂಡಿದ್ದ ನಿರ್ಣಯವನ್ನು ನಂತರ ಪ್ರಕಟಿಸಿದೆ. ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ. ಈಗಲೂ ಹೋತವನ್ನು ಕಡಿದು ಬಂಡಿ ಮುನ್ನಡೆಸುವ ಪದ್ದತಿ ಇದೆ. ಆದರೆ ಅಂದಿನಿಂದ ನನ್ನವರ ಮೇಲೆ ಕಾಲೆತ್ತುವ ದುಸ್ಸಾಹಸ ಮಾಡಿಲ್ಲ.

ದಿಲ್ಲಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಆಮ್ ಆದ್ಮಿ ಪಾರ್ಟಿ 2.0!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ಸರಿಯಾಗಿ ಒಂದು ವರ್ಷದ ನಂತರ, ಫೆ. 14ರಂದು ದಿಲ್ಲಿಯ ವಿಧಾನಸಭೆಗೆ ಆಡಳಿತ ಪಕ್ಷವಾಗಿ ಪ್ರವೇಶಿಸುತ್ತಿರುವ ಆಮ್‍ ಆದ್ಮಿ ಪಾರ್ಟಿಗೂ, 2013ರಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎಎಪಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿಯೇ, ಈ ಬಾರಿಯ ಚುನಾವಣೆ ಗೆದ್ದದ್ದು ಆಮ್‍ ಆದ್ಮಿ ಪಾರ್ಟಿanna_jantar-mantar-delhi 2.0 ಅನ್ನೋ ಮಾತು ದಿಲ್ಲಿಯ ರಾಜಕೀಯ ತಜ್ಞರ ವಲಯದಲ್ಲಿ ಚಾಲ್ತಿಗೆ ಬಂದಿದೆ. ದಿಲ್ಲಿ ವಿಧಾನಸಭೆಗೆ ನಡೆದ 2013ರ ಚುನಾವಣೆಯಲ್ಲಿ ಮುಖ್ಯವಾಹಿನಿಗೆ ಬಂದು, ಕಾಂಗ್ರೆಸ್‍ ಬೆಂಬಲ ಪಡೆದು, ಸರಕಾರವನ್ನು ರಚಿಸಿ, 49 ದಿನಗಳಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದ ಎಎಪಿ ಈಗ ಬದಲಾಗಿದೆ ಅಥವಾ ಸುಧಾರಣೆಗೊಂಡಿದೆ. ಪಕ್ಷದ ಗುಣಲಕ್ಷಣಗಳು, ತಿಳಿವಳಿಕೆ, ಮೆಚ್ಯುರಿಟಿ ಹಾಗೂ ನಡೆಯಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸಲಾಗುತ್ತಿದೆ.

2011 ರ ಏಪ್ರಿಲ್‍ನಲ್ಲಿ ಮಹಾರಾಷ್ಟ್ರದ ರಳೇಗಣ ಸಿದ್ಧಿಯಲ್ಲಿದ್ದ ಅಣ್ಣಾ ಹಜಾರೆಯವರನ್ನು ದಿಲ್ಲಿಯ ಜಂತರ್‍ ಮಂತರ್‍ಗೆ ಪರಿಚಯಿಸಲಾಯಿತು. ದೇಶಾದ್ಯಂತ ‘ಭ್ರಷ್ಟಚಾರ ವಿರೋಧಿ’ ಅಭಿಯಾನವನ್ನು ನಡೆಸಲಾಯಿತು. ಅದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮೀಕರಿಸುವ ಪ್ರಯತ್ನವೂ ನಡೆಯಿತು. ಸಹಜವಾಗಿಯೇ ದೇಶ ಎಂದರೆ ಗಡಿ, ಧರ್ಮ ಮಾತ್ರವಲ್ಲ, ಇಲ್ಲಿ ಬದುಕುತ್ತಿರುವ ಬಡ ಜನರು ಮತ್ತವರ ಸಂಕಷ್ಟಗಳು ಎಂದು ನಂಬುವವರು ಈ ಅಭಿಯಾನವನ್ನು ಒಪ್ಪಿಕೊಳ್ಳಲಿಲ್ಲ. ಆದರೂ, ಜಂತರ್‍ ಮಂತರ್‍ ಯುವ ಜನರಿಂದ ತುಂಬಿ ತುಳುತ್ತಿದ್ದಾಗಲೇ, ಕೇಂದ್ರ ಸರಕಾರ ಜನಲೋಕಪಾಲವನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಿತು. ಅಣ್ಣಾ ತಮ್ಮ ಊರಿಗೆ ವಾಪಾಸಾದರು. ಆ ವರ್ಷದ ಆಗಸ್ಟ್ ನಲ್ಲಿ ಅಧಿವೇಶನಕ್ಕೆ ಸಿದ್ಧತೆ ಶುರುವಾಯಿತು. ಆದರೆ, ಜನಲೋಕಪಾಲದ ಚಕಾರ ಎತ್ತಲಿಲ್ಲ. ಹೀಗಾಗಿ, ಮತ್ತೆ ಅಣ್ಣಾ ನೇತೃತ್ವದಲ್ಲಿ ಅಭಿಯಾನ ಭಾಗ ಎರಡಕ್ಕೆ ಕಾಲ ಕೂಡಿಬಂತು. ಕೇಜ್ರಿವಾಲ್‍ ಹುಟ್ಟಿದ ದಿನ ಆಗಸ್ಟ್ 16ರಂದೇ ಜನಲೋಕಪಾಲಕ್ಕಾಗಿ ಎರಡನೇ ಹಂತದ ಹೋರಾಟ ಶುರುವಾಯಿತು. ಈ ಸಮಯದಲ್ಲಿ ಕೇಂದ್ರದ ಯುಪಿಎ ಸರಕಾರ ಅಣ್ಣಾ ಮತ್ತವರ ಜತೆಗಾರರನ್ನು ಬಂಧಿಸುವ ಮೂಲಕ ಅಭಿಯಾನಕ್ಕೊಂದು ಚಳವಳಿಯ ರೂಪ ನೀಡಿತು. ಆ ಸಮಯದಲ್ಲಿ ಸುಮಾರು ಹನ್ನೆರಡು ದಿನ ನಡೆದ ಹೋರಾಟಕ್ಕೆ ಡಿಸೆಂಬರ್‍ ಅಧಿವೇಶನದಲ್ಲಿ ಬಿಲ್‍ ಜಾರಿಗೆ ಬರುವ ಭರವಸೆ ಸಿಕ್ಕಿತು.

ಮುಂದೆ ಡಿಸೆಂಬರ್‍ ಸಮಯದಲ್ಲಿ ಮತ್ತೆ ಅಣ್ಣಾ ತಂಡ ಹೋರಾಟಕ್ಕೆ ಇಳಿತಾದರೂ ಹಿಂದಿನ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಸಮಯದಲ್ಲಿ ಜನಲೋಕಪಾಲದ ಜತೆಗೆ ಸಿಬಿಐಗೆ ಸ್ವಾಯತ್ತತೆ ನೀಡುವ ಇನ್ನಿತರೆ ಬೇಡಿಕೆಗಳು ಸೇರಿಕೊಂಡಿದ್ದವು. 2012ರಲ್ಲಿ ಮತ್ತೆ ಅಣ್ಣಾ ಉಪವಾಸ ಶುರುವಾಯಿತು. ಹೋರಾಟ ನಿಧಾನವಾಗಿ ಭ್ರಷ್ಟರನ್ನು ಗುರುತಿಸುವ ಗಟ್ಟಿತನ ಬೆಳೆಸಿಕೊಂಡಿತ್ತು. ಜನರಲ್‍ ಆಗಿರುವ ಬೇಡಿಕೆಗಳನ್ನು ಮೀರಿ, ನಿರ್ಧಿಷ್ಟವಾಗಿ ಇಂತವರಿಂದಲೇ ಜನಲೋಕಪಾಲಕ್ಕೆ ಅಡ್ಡಿಯಾಗುತ್ತಿದೆ ಎಂದು ಹೋರಾಟದ ಮುಂಚೂಣಿಯಲ್ಲಿದ್ದವರು ಆರೋಪಿಸಿದರು. ಜತೆಗೆ, ಕೇಜ್ರಿವಾಲ್‍ ಮತ್ತು ಕೆಲವರು ಕಾಂಗ್ರೆಸ್‍ ನೀಡಿದ ರಾಜಕೀಯ ಅಹ್ವಾನವನ್ನು ಸ್ವೀಕರಿಸಿದರು. ಈ ಮೂಲಕ ಇದು ಅಧಿಕಾರಕ್ಕೆ ಹಾತೊರೆಯಲು ಹೋಗಿ ಮು‍ಗ್ಗರಿಸಿದವರ ಮತ್ತೊಂದು ತಂಡವಾಗುತ್ತದೆ ಎಂಬ kejriwal-aap-launch-delhiಭಾವನೆ ಬೆಳೆಯಿತು. ನವೆಂಬರ್‍ನಲ್ಲಿ ಅಧಿಕೃತವಾಗಿ ‘ಅಮ್‍ ಆದ್ಮಿ ಪಕ್ಷ’ ಘೋಷಣೆಯಾಯಿತಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡವರ ಸಂಖ್ಯೆ ಕಡಿಮೆ ಇತ್ತು.

ಹೀಗಿರುವಾಗಲೇ, ಆ ವರ್ಷದ ಡಿಸೆಂಬರ್‍ ಬಂತು. ಅದೊಂದು ಕರಾಳ ರಾತ್ರಿ ‘ನಿರ್ಭಯಾ ಪ್ರಕರಣ’ ನಡೆದುಹೋಯಿತು. ದಿಲ್ಲಿಯ ಯುವ ಜನತೆ ಬೀದಿಗೆ ಇಳಿಯಿತು. ಮೇಲ್ನೋಟಕ್ಕೆ ತಣ್ಣಗಾದಂತೆ ಕಾಣಿಸುತ್ತಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ನಿರ್ಭಯಾ ಪರವಾಗಿ ಹೋರಾಟ ಆರಂಭಿಸಿದರು. ಮುಂದೆ ಬೆಲೆ ಏರಿಕೆ ವಿಚಾರವನ್ನು ಇಟ್ಟುಕೊಂಡು ಜನಜಾಗೃತಿ ಕೈಗೊಂಡರು. ನಿಧಾನವಾಗಿ ತಮ್ಮ ಬೇಡಿಕೆ ಆಧಾರಿತ ಚಳವಳಿಗೆ ಸರಕಾರದ ವಿರೋಧಿ ಆಯಾಮ ಸಿಗುವಂತೆ ನೋಡಿಕೊಂಡರು. 2011ರಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ವಿರೋಧ ಅನ್ನೋ ಸಮಾನ ಆಶಯವನ್ನು ಇಟ್ಟುಕೊಂಡು ಹೋರಾಟದ ಭೂಮಿಕೆಗೆ ಹೊಸತಾಗಿ ಪರಿಚಯಗೊಂಡಿದ್ದ ವರ್ಗ, ಸಹಜವಾಗಿಯೇ ಶೀಲಾ ದೀಕ್ಷಿತ್‍ ನೇತೃತ್ವದ ಕಾಂಗ್ರೆಸ್‍ ಸರಕಾರದ ವಿರುದ್ಧ ತೊಡೆತಟ್ಟಿದ್ದ ಎಎಪಿ ಜತೆಯಾದರು. ಈ ಸಮಯದಲ್ಲಿ ಪಕ್ಷದೊಳಗೆ ಎಲ್ಲಾ ರೀತಿಯ ಆಲೋಚನೆಗಳನ್ನು ಇಟ್ಟುಕೊಂಡ ಜನ ಬಂದಿದ್ದರಿಂದ ಒಂದು ರೀತಿಯ ಅಸ್ಪಷ್ಟತೆ ಹೊರನೋಟಕ್ಕೆ ಭಾಸವಾಗುತ್ತಿತ್ತು. ಈ ಸಮಯದಲ್ಲಿ ಬಂದಿದ್ದು ದಿಲ್ಲಿ ವಿಧಾನಸಭಾ ಚುನಾವಣೆ- 2013.

ಹೊಸ ಪಕ್ಷ, ಅನನುಭವಿಗಳ ತಂಡ ಚುನಾವಣೆಗೆ ಇಳಿದಾಗ ಹೀಗಳೆದವರ ಸಂಖ್ಯೆಯೇ ದೊಡ್ಡದಿತ್ತು. ಆದರೆ, ಯಾವಾಗ 28 ಸ್ಥಾನಗಳನ್ನು ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಎಎಪಿ ಹೊರಹೊಮ್ಮಿತೋ, ಪರ್ಯಾಯದ ಆಲೋಚನೆ ಮಾಡುವವರಲ್ಲಿ ಒಂದಷ್ಟು ಭರವಸೆ, ಉಳಿದವರಲ್ಲಿ ಕುತೂಹಲ ಮೂಡಿತು. ಅಷ್ಟೆ, ಮುಂದೆ 49 ದಿನಗಳ ಅಧಿಕಾರ, ರಾಜೀನಾಮೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ, ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ಕಸರತ್ತುಗಳ ನಡುವೆ ಆಮ್‍ ಆದ್ಮಿshajiya-delhi-ilmi-2015 ಪಕ್ಷದ ಕತೆ ಮುಗಿದು ಹೋಯಿತು ಎಂದು ಎಲ್ಲರೂ ಅಂದುಕೊಂಡರು. ಆ ಸಮಯದಲ್ಲೇ ಪಕ್ಷದೊಳಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು. ಗೆಲುವಿನಲ್ಲಿ ಪಾಲು ಕೇಳುತ್ತಾರೆ, ಅದೇ ಸೋತರೆ ಕಲ್ಲು ಬೀಸಿ ಓಡುವವರ ಸಂಖ್ಯೆ ದೊಡ್ಡದಿರುತ್ತದೆ. ಎರಡು ವರ್ಷಗಳ ಹಸಗೂಸು ಎಎಪಿಯ ಆಂತರಾಳದ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಕಷ್ಟು ಜನ ಪಕ್ಷ ತೊರೆದರು. ಭಿನ್ನ ಆಲೋಚನೆ ಇಟ್ಟುಕೊಂಡವರು, ಇನ್ನೂ ರೂಪ ಪಡೆದುಕೊಳ್ಳುವ ಹಂತದಲ್ಲಿದ್ದ ಪಕ್ಷದ ಸಿದ್ಧಾಂತವನ್ನೇ ಖಂಡಿಸಿ ದೂರವಾದರು. ಕೊನೆಗೆ ಉಳಿದದ್ದು ಕೆಲವೇ ಗಟ್ಟಿಕಾಳುಗಳು ಮತ್ತು ಎದುರಿಗೆ ಇದ್ದದ್ದು ಒಂದೇ ದಿಲ್ಲಿಯ ವಿಧಾನ ಸಭೆ ಚುನಾವಣೆ. ಮಾಡು ಇಲ್ಲವೇ ಮಡಿ ಪಂದ್ಯ. ಈ ಸಮಯದಲ್ಲಿ ಉಳಿದೆಲ್ಲಾ ಟೀಕೆ ಟಿಪ್ಪಣಿಗಳನ್ನು ಬದಿಗೆ ಸರಿಸಿ, ಇದ್ದ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ, ‘ಎಎಪಿ 2.0’ ತಂಡ ಕಣಕ್ಕಿಳಿಯಿತು. ಮುಂದೇನಾಯಿತು ಎಂಬುದು ನಿಮ್ಮೆದುರಿಗೆ ಇದೆ.

ಬಿಜೆಪಿ ಮತಗಳೇ ನಿರ್ಣಾಯಕ

ಹೀಗಂತ ಚುನಾವಣೆ ಮತ್ತದರ ಫಲಿತಾಂಶವನ್ನು ಇಟ್ಟುಕೊಂಡು ನೋಡಿದರೆ ಇವತ್ತು ದಿಲ್ಲಿಯ ಮಟ್ಟಿಗೆ ಆಮ್‍ ಆದ್ಮಿ ಪಕ್ಷ ನಿಚ್ಚಳವಾಗಿ ಕಾಂಗ್ರೆಸ್‍ ಮತ್ತು delhi-election-vote-share-2015ಬಿಜೆಪಿಯ ಮತದಾರರನ್ನು ತನ್ನತ್ತ ಸೆಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 2008ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇ. 61. 4ರಷ್ಟು ಮತ ಗಳಿಕೆಯ ಮೂಲಕ 40 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಈ ಸಮಯದಲ್ಲಿ ಬಿಜೆಪಿ ಶೇ. 32. 4 (23 ಸೀಟುಗಳು) ಮತ್ತು ಬಿಎಸ್‍ಪಿ ಶೇ. 2.9 (2 ಸೀಟಿಗಳು)ರಷ್ಟು ಮತ ಗಳಿಸಿದ್ದವು. ಐದು ವರ್ಷಗಳ ಅಂತರದಲ್ಲಿ ನಡೆದ 2013ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇಖಡವಾರು ಮತಗಳಿಗೆ 11. 4ಕ್ಕೆ ಇಳಿದಿತ್ತು. ಆದರೆ, ಬಿಜೆಪಿಯ ಮತಗಳಿಗೆ ಶೇ. 45. 7ರಷ್ಟು ಮತ ಗಳಿಸಿತ್ತು. ಹೊಸ ಪಕ್ಷ ಎಎಪಿಯ ಮತ ಗಳಿಗೆ ಶೇ. 40ರಷ್ಟಿತ್ತು. ಈ ಬಾರಿ ಅಂಕಿಅಂಶಗಳನ್ನು ಗಮನಿಸಿದರೆ ಎಎಪಿ ಪಡೆದುಕೊಂಡಿರುವ ಶೇ. 54. 3ರಷ್ಟು ಮತಗಳಲ್ಲಿ ಬಿಜೆಪಿಯ ಪಾಲೇ ದೊಡ್ಡದಿದೆ. ಕಾಂಗ್ರೆಸ್‍ನಿಂದ ಎಎಪಿ ಶೇ. 1.3ರಷ್ಟು ಮತಗಳನ್ನು ಕಿತ್ತುಕೊಂಡಿದ್ದರೆ, ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕಿನಿಂದ ಶೇ. 13. 5ರಷ್ಟು ಮತಗಳನ್ನು ಪಡೆದುಕೊಂಡಿದೆ. ಇದು ಬಹುತೇಕ ಕಡೆಗಳಲ್ಲಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಇನ್ನು, ಮುಸ್ಲಿಂ ಧರ್ಮಗುರುವಿನ ಬೆಂಬಲ ಮತ್ತು ಮುಸ್ಲಿಂ ಮತಗಳು ಎಎಪಿಗೆ ಬಂದಿವೆ ಎಂಬ ವಾದವೂ ಇದೆ. ಆದರೆ, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಮುಸ್ತಫಾಬಾದ್‍ ಎಂಬ ಕ್ಷೇತ್ರದ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ಸುಮಾರು ಆರು ಸಾವಿರ ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‍ ಇದೆ. ಇನ್ನು, ಜಾತ್ಯತೀತ ಶಕ್ತಿಗಳು ಆಪ್‍ ಬೆಂಬಲಕ್ಕೆನಿಂತವು ಎಂಬ ವಾದವೂ ಇದೆ. ಆದರೆ, ಕಳೆದ ಮೂರೂ ಚುನಾವಣೆಗಳ ಶೇಕಡವಾರು ಮತ ಗಳಿಕೆಯಲ್ಲಿ ಬಿಎಸ್‍ಪಿ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದೆ ಮತ್ತು ಅದು ಯಾವ ಕ್ಷೇತ್ರದಲ್ಲೂ ನಿರ್ಣಾಯಕ ಹಂತದಲ್ಲಿ ಇಲ್ಲ.

ಒಟ್ಟಾರೆ, ಇದು ಆಲೋಚನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದುಕೊಂಡ ಎಎಪಿ 2.0 ತಂಡಕ್ಕೆ ಸಲ್ಲಬೇಕಾದ ಗೆಲುವು ಅಷ್ಟೆ. ಜನರ ಸಮಸ್ಯೆಗಳನ್ನು ಅವರ ಮಾತುಗಳಲ್ಲೇ ಅರ್ಥಮಾಡಿಕೊಂಡು, ಅದಕ್ಕೆ ಅವರು ಬಯಸುವ ಪರಿಹಾರವನ್ನು ನೀಡುವ ಭರವಸೆ ನೀಡಿದ್ದೇ ಟ್ರಂಪ್‍ಕಾರ್ಡ್‍. ಇದನ್ನು ಒಪ್ಪಿಕೊಳ್ಳದ ಒಂದು ವರ್ಗ ದಿಲ್ಲಿಯ ಆಪ್‍ ಗೆಲುವಿಗೆ ನಾನಾ ಅರ್ಥಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಅದರಲ್ಲಿ ಒಂದು, ದಿಲ್ಲಿಯಲ್ಲಿ ಯಾರೂ ಸೋಲಲಿಲ್ಲ ಎಂಬ ತಮಾಷೆ. ಇದೆಲ್ಲಾ ಏನೇ ಇರಲಿ, ದಿಲ್ಲಿಯ ಜನ ಪ್ರಜಾಪ್ರಭುತ್ವದ ಸಾಧ್ಯತೆಯೊಂದನ್ನು ಸೋಲಿಸಲಿಲ್ಲ ಅಷ್ಟೆ…

ದಿಲ್ಲಿ ಫಲಿತಾಂಶ: ಎಎಪಿ ಭರ್ಜರಿ ವಿಜಯದ ಹಿಂದಿರುವ 10 ಪ್ರಮುಖ ಕಾರಣಗಳು!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸಾಮಾನ್ಯ ಜನರ ಒತ್ತಾಸೆ ಏನಿತ್ತು ಎಂಬುದು ಗೊತ್ತಾಗಿದೆ. ಎಲ್ಲಾ ಪಕ್ಷಗಳ ಆಂತರಿಕ ಸಮೀಕ್ಷೆಗಳು, ಹೊರಗಿನ ಸರ್ವೆಗಳು ಹಾಗೂ ಚುನಾವಣಾ ಪೂರ್ವ ವಿಶ್ಲೇಷಣೆಗಳನ್ನು ತಲೆಕೆಳಗಾಗುವಂತಹ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಇರುವ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ರಲ್ಲಿ ಆಮ್‍ ಆದ್ಮಿ ಪಕ್ಷ ಜಯಗಳಿಸಿದೆ. ಬಿಜೆಪಿ ಮೂರು ಸ್ಥಾನಗಳಿಸಿದೆ. ಪುರಾತನ ಪಕ್ಷ ಕಾಂಗ್ರೆಸ್‍ಗೆ ಖಾತೆ ತೆರೆಯುವ ಅವಕಾಶವನ್ನೂ ನೀಡಿಲ್ಲ. ಖುದ್ದು ಆಮ್‍ ಆದ್ಮಿ ಪಕ್ಷದ ಒಳಗಿರುವವರಿಗೇ ಅಚ್ಚರಿ ಮೂಡಿವಂತಹ ಈ ಫಲಿತಾಂಶದ ಹಿಂದೆ ಇರುವ ಪ್ರಮುಖ ಕಾರಣಗಳನ್ನು ‘ವರ್ತಮಾನ’ ಇಲ್ಲಿ ಪಟ್ಟಿ ಮಾಡುತ್ತಿದೆ. ಈ ಚುನಾವಣೆಯ ಫಲಿತಾಂಶದ ಕುರಿತು ಇನ್ನಷ್ಟು ಆಳಕ್ಕಿಳಿದರೆ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಆದರೆ, ಈ ಭಾಗದಲ್ಲಿ ನಾವು ಆಪ್‍ ವಿಜಯದ ಹಿಂದಿರುವ ಪ್ರಮುಖ ಕಾರಣಗಳನ್ನಷ್ಟೆ ಹುಡುಕಿದ್ದೇವೆ. ಕಳೆದ ಕೆಲವು ದಿನಗಳಿಂದ ದಿಲ್ಲಿಯ ಚುನಾವಣಾ ಕಣದಲ್ಲಿ ಕಂಡು ಬಂದ ಅಂಶಗಳಿವು. ಸಧ್ಯಕ್ಕೆ, ದಿಲ್ಲಿ ಚುನಾವಣೆ ಫಲಿತಾಂಶದ ಕುರಿತು ಅಚ್ಚರಿಗೊಂಡಿರುವವರಿಗೆ, ಹೇಗೀ ಫಲಿತಾಂಶ ಹೊರಬಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗಬಹುದು ಎಂಬುದು ನಮ್ಮ ಆಶಯ.

 

  1. ಕ್ರೀಯಾಶೀಲ ಸ್ವಯಂ ಸೇವಕರ ಪಡೆ: ದಿಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣಗಳ ಪೈಕಿ aap-buzz-team-delhiಮೊದಲನೆಯದು ಅದರ ಸ್ವಯಂ ಸೇವಕರ ಶ್ರಮ ಮತ್ತು ಅವರ ಕ್ರೀಯಾಶೀಲತೆ. ದೇಶದ ನಾನಾ ಭಾಗಗಳಿಂದ ಬಂದ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ವಂಯ ಸೇವಕರ ತಂಡಗಳು ದಿಲ್ಲಿಯ ಬೀದಿ ಬೀದಿ, ಗಲ್ಲಿ ಗಲ್ಲಿಗಳಲ್ಲಿ ನಡೆಸಿದ ಚುನಾವಣಾ ಪ್ರಚಾರ ಪಕ್ಷಕ್ಕೆ ನೆರವಾಯಿತು. ದಿಲ್ಲಿ ತುಂಬ ತೆಲೆಯ ಮೇಲೆ ಪಕ್ಷದ ಟೋಪಿ ಹಾಕಿಕೊಂಡು ಸಾವಿರಾರು ಜನ ಓಡಾಡುತ್ತಿದ್ದರೆ, ಜನ ಮನಸ್ಸಿನ ಮೇಲೆ ಬೀರಿರಬಹುದಾದ ಪರಿಣಾಮ ದೊಡ್ಡದಿತ್ತು.
  2. ವಿನೂತನ ಪ್ರಚಾರ ತಂತ್ರ: ಮತದಾನಕ್ಕೆ ತಿಂಗಳಿದೆ ಎನ್ನುವಾಗಲೇ ವಿನೂತನ ಪ್ರಚಾರಕ್ಕೆ ತಂಡಗಳನ್ನು ರಚಿಸಿತ್ತು ಆಪ್‍. ಅವರನ್ನು ‘ಬಝ್‍ ಸ್ವಯಂ ಸೇವಕರು ಎಂದು ಪಕ್ಷದ ಅಂತರಂಗದಲ್ಲಿ ಗುರುತಿಸಲಾಗುತ್ತಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಇವರು ದಿಲ್ಲಿಯ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಉದ್ದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಹಿಡಿದು ನಿಂತಿರುತ್ತಿದ್ದರು. ಜನ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೂ ವಿನಮೃತೆಯಿಂದ ಕೈ ಮುಗಿದು ಕಳಿಸುತ್ತಿದ್ದ ಇವರು ಭಾರಿ ಗಮನ ಸೆಳೆದಿದ್ದರು. ಜತೆಗೆ ಪಕ್ಷದ ‘ಪಾಸಿಟಿವ್ ಅಜೆಂಡಾ’ವನ್ನು ದಿಲ್ಲಿ ಜನರಿಗೆ ತಲುಪಿಸಿದ್ದು ಕೂಡ ಪಕ್ಷಕ್ಕೆ ನೆರವಾಯಿತು.
  3. ಮಾತನಾಡು ದಿಲ್ಲಿ ಮಾತನಾಡು: ಇನ್ನು ಆಪ್‍ಗೆ ದಿಲ್ಲಿಯ ಜನರ ನಾಡಿ ಮಿಡಿತವನ್ನು ಅರ್ಥಮಾಡಿಸಿದ್ದು ಪಕ್ಷ ನಡೆಸಿದ ‘ದಿಲ್ಲಿ ಡೈಲಾಗ್‍’ ಎಂಬ ಅಭಿಯಾನ. ನಗರದ ಪ್ರತಿ ಗಲ್ಲಿಗಳಲ್ಲಿ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಸಭೆಗಳನ್ನು ನಡೆಸಲಾಯಿತು. ಅಲ್ಲಿ ಸಿಕ್ಕ ಅಂಶಗಳನ್ನೇ ಮುಂದೆ ಪಕ್ಷ ಪ್ರಣಾಳಿಕೆ ರೂಪದಲ್ಲಿ ಮುಂದಿಟ್ಟಿದ್ದು ಪಕ್ಷದ ಪ್ರಣಾಳಿಕೆ ಜನರಿಗೆ ಹತ್ತಿರಾಗುವಂತೆ ಮಾಡಿತು.
  4. ಸಾಮಾಜಿಕ ಜಾಲತಾಣಗಳಲ್ಲಿ ಉಪಸ್ಥಿತಿ: ಇವತ್ತಿನ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಆಪ್‍ ಸಾಕ್ಷಿಯಾಯಿತು. ಟ್ವಿಟರ್‍, ಫೇಸ್‍ಬುಕ್‍, ಇನ್ಟಾಗ್ರಾಮ್ ಮತ್ತಿತರ ತಾಣಗಳಲ್ಲಿ ತನ್ನನ್ನು ಸಕ್ರಿಯವಾಗಿಟ್ಟುಕೊಂಡಿತು. ಈ ಮೂಲಕ ಇಂಟರ್‍ನೆಟ್‍ ಬಳಸುವ ವರ್ಗದಲ್ಲಿ ತನ್ನ ಅಭಿಪ್ರಾಯವನ್ನು ಮೂಡಿಸುತ್ತ ಬಂತು.AAP manifesto release
  5. ಟಿಕೆಟ್‍ ಹಂಚಿಕೆಯಲ್ಲಿ ಜಾಣತನ: ಆಪ್‍ ಕುರಿತು ಮೊದಲು ಕೇಳಿಬಂದ ಟೀಕೆಗಳಲ್ಲಿ ಟಿಕೆಟ್ ಹಂಚಿಕೆಯೂ ಒಂದಾಗಿತ್ತು. ಆದರೆ, ಪಕ್ಷ ಕೆಲವರಿಗೆ ಟಿಕೆಟ್‍ ನೀಡುವಾಗ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇದೀಗ ನೆರವಾದಂತೆ ಕಾಣಿಸುತ್ತಿದೆ.
  6. 49 ದಿನಗಳ ವರ್ಚುವಲ್ ಕ್ರಾಂತಿ: ದಿಲ್ಲಿಯ ಸಾಮಾನ್ಯ ವರ್ಗದಲ್ಲಿ ಪಕ್ಷದ ಕುರಿತು ಸದಾಭಿಪ್ರಾಯ ಮೂಡಲು ಕಾರಣ ಕೇಜ್ರಿವಾಲ್‍ ನೇತೃತ್ವದ 49 ದಿನಗಳ ಆಡಳಿತಾವಧಿ. ಈ ಸಮಯದಲ್ಲಿ ವಿದ್ಯುತ್‍ ದರ ಇಳಿಕೆ ಹಾಗೂ ಉಚಿತ ನೀರು ಸರಬರಾಜಿಗೆ ಕ್ರಮ ಕೈಗೊಂಡಿದ್ದು ದಿಲ್ಲಿಯ ಬಹುಸಂಖ್ಯಾತ ಕೆಳವರ್ಗವನ್ನು ಪಕ್ಷಕ್ಕೆ ನಿಷ್ಟರಾಗುವಂತೆ ನೋಡಿಕೊಂಡಿತು.
  7. ಬಿಜೆಪಿಯ ಅವಹೇಳನಕಾರಿ ಪ್ರಚಾರ: ಕೊಂಚ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜನಸಭೆಗಳನ್ನು ನಡೆಸುತ್ತಿದ್ದ ಆಪ್‍ ಕುರಿತು ಕೊನೆಯ ಹಂತದಲ್ಲಿ ವೈಯುಕ್ತಿಕ ಟೀಕೆ ಹಾಗೂ ಅವಹೇಳನಕ್ಕೆ ಬಿಜೆಪಿ ಮುಂದಾಯಿತು. ಆದರೆ ಆಪ್‍ ನಾಯಕತ್ವ ಇವೆಲ್ಲಕ್ಕೂ ವಿನೀತರಾಗಿ ಉತ್ತರ ನೀಡುತ್ತಾ ಹೋದರು. ಸಹಜವಾಗಿಯೇ ಬಿಜೆಪಿಯ ಪ್ರಚಾರ ವೈಖರಿ ದುರಹಂಕಾರದ ನಡತೆಯಂತೆ ಜನರಿಗೆ ಭಾಸವಾಯಿತು. ಇದು ಕೊನೆಯ ಕ್ಷಣದಲ್ಲಿ ಆಪ್‍ ಪರ ಮಧ್ಯಮ ವರ್ಗ ಗಟ್ಟಿಯಾಗಿ ನಿಲ್ಲಲು ನೆರವಾಯಿತು.
  8. ಕಿರಣ್‍ ಬೇಡಿ ಟ್ರಂಪ್‍ ಕಾರ್ಡು: ಆಪ್‍ಗೆ ನೆರವಾದ ಮತ್ತೊಂದು ಪ್ರಮುಖ ಅಂಶ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‍ ಬೇಡಿ. ಬಿಜೆಪಿ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್‍ ಬೇಡಿಯನ್ನು ಮುಂದಿಟ್ಟಿತು. ಇದು ಬಿಜೆಪಿಯ ದಿಲ್ಲಿ ಕಮಿಟಿಯಲ್ಲಿ ಅಸಮಾಧಾನ ಮೂಡಿಸಿತು. ಅದೇ ವೇಳೆ ಕಿರಣ್‍ ಬೇಡಿ ಪ್ರತಿಕ್ರಿಯೆಗಳು ನಗೆಪಾಟಲಿಗೆ ಈಡಾದವು ಸಹಜವಾಗಿಯೇ ದಿಲ್ಲಿ ಜನರಿಗೆ ಆಪ್‍ ಮುಖ್ಯಮಂತ್ರಿ ಅಭ್ಯರ್ಥಿ ಕೇಜ್ರಿವಾಲ್‍ ಪರ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಯಿತು.KIRAN_BEDI_on-top
  9. ಸಿದ್ಧತೆಗೆ ಸಿಕ್ಕ ಸಮಯ: ಲೋಕಸಭೆ ಚುನಾವಣೆ ಸಮಯದಲ್ಲೇ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದರೆ ಆಪ್‍ ಈ ಪ್ರಮಾಣದ ಜಯ ಗಳಿಸುವುದು ಕಷ್ಟ ಇತ್ತು. ದಿಲ್ಲಿ ವಿಧಾನ ಸಭೆಗೆ ಅಂತಿಮವಾಗಿ ದಿನಾಂಕ ನಿಗಧಿಯಾದ ಸಮಯದಲ್ಲಿ ಆಪ್‍ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಎದ್ದು ನಿಂತಿತ್ತು. ಇದನ್ನು ನಿರೀಕ್ಷಿಸದಿದ್ದ ಬಿಜೆಪಿ ತುಸು ಹೆಚ್ಚೇ ಭರವಸೆ ಹೊಂದಿತ್ತು.
  10. ಮಾಧ್ಯಮಗಳನ್ನು ನಿಭಾಯಿಸಿದ ಬಗೆ: ಒಂದು ಕಡೆ ಬಿಜೆಪಿ ಅಭ್ಯರ್ಥಿ ಕಿರಣ್‍ ಬೇಡಿ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾಡುತ್ತಿದ್ದರೆ, ಮತ್ತೊಂದಡೆ ಆಪ್‍ನ ನಾಯಕರು ಮಾಧ್ಯಮಗಳ ಎಲ್ಲಾ ಟೀಕೆಗಳಿಗೆ ಉತ್ತರ ರೆಡಿ ಮಾಡಿಟ್ಟುಕೊಂಡಿದ್ದರು. ಕೇಳುವ ಪ್ರತಿ ಪ್ರಶ್ನೆಗೆ ಒಂದೇ ರೀತಿಯ ಉತ್ತರ ಪಕ್ಷದ ಎಲ್ಲಾ ಸ್ಥರಗಳಿಂದ ಬರುವಂತೆ ನೋಡಿಕೊಳ್ಳಲಾಯಿತು. ಹೀಗಾಗಿ, ಬಿಜೆಪಿ ನಡೆಸಿದ ಅಷ್ಟೂ ಅಪಪ್ರಚಾರ ಆಪ್‍ಗೆ ಸಕಾರಾತ್ಮಕವಾಗಿ ಬದಲಾಯಿತು. ಒಂದು ಅರ್ಥದಲ್ಲಿ ಮೊದಲಿನಿಂದ ಕೊನೆಯವರೆಗೂ ಆಪ್‍ ಚುನಾವಣೆಯ ಅಜೆಂಡಾವನ್ನು ಸೆಟ್‍ಮಾಡಿತು ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲರೂ ಅದನ್ನು ಫಾಲೋ ಮಾಡುವಂತೆ ನೋಡಿಕೊಂಡಿತು.