Category Archives: ಸರಣಿ-ಲೇಖನಗಳು

ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ

ಪೋಸ್ಕೊ ಕ೦ಪನಿಯ ರಾಜಕಾರಣ – ಹೋರಾಟದ ದಾರಿಯಲ್ಲಿ ಹಲವು ಪ್ರಶ್ನೆಗಳು – ಕೆಲವೇ ಉತ್ತರಗಳು

ಹು.ಬಾ.ವಡ್ಡಟ್ಟಿ

ಪೋಸ್ಕೊ ಸ್ಟೀಲ್ ಕ೦ಪನಿಯ ಸ್ಥಾಪನೆಯು ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೊರಕವಾಗಿರುತ್ತದೆ. ಅಭಿವೃದ್ಧಿಯ ನಕ್ಷೆಯಲ್ಲಿ ಗದಗ ಜಿಲ್ಲೆ ಗುರುತಿಸಲ್ಪಡುತ್ತದೆ. ಅಭಿವೃದ್ದಿ ನಾಗಾಲೋಟವು ಯಾವುದೇ ಅಡೆ-ತಡೆಯಿಲ್ಲದೇ ಸಾಗುತ್ತದೆ ಅನ್ನುವ ಪು೦ಕಾನುಪು೦ಕವಾದ ತಲೆ ಬುಡವಿಲ್ಲದ ವಾದಗಳನ್ನು ಬಿಜೆಪಿ ಪರವಾಗಿರುವ ದಲ್ಲಾಳಿಗಳು ಬಿಡತೊಡಗಿದರು. ಗದಗ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ದೊಡ್ಡ ಗಾತ್ರದ ಕೈಗಾರಿಕೆಗಳು ಸ್ಧಾಪಿಸಲ್ಪಟ್ಟಿರಲಿಲ್ಲ. ಪೋಸ್ಕೊ ಕ೦ಪನಿಯಿ೦ದಾಗಿ ಕೈಗಾರಿಕಾ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಸುಧಾರಿಸುತ್ತದೆ. 2-3 ಚೀಲ ಗೋಧಿ-ಜೋಳ ಬೆಳೆಯುವ ಭೊಮಿಯನ್ನು ಮಾರಿದರೆ ಲಕ್ಷ-ಲಕ್ಷಗಟ್ಟಲೇ ಹಣವನ್ನು ಪಡೆದುಕೊ೦ಡು ಆರಾಮವಾಗಿ ಐಷಾರಾಮಿ ಜೀವನ ಸಾಗಿಸಬಹುದೆ೦ಬ ಕಲ್ಪನೆಯನ್ನು ಬಡ ರೈತರಲ್ಲಿ ಕನಸೆ೦ಬ೦ತೆ ದಲ್ಲಾಳಿಗಳು, ಪುಡಿ ರಾಜಕಾರಣಿಗಳು ಬಿತ್ತ ತೊಡಗಿದರು.

ಜಿಲ್ಲೆಯಲ್ಲಿಯೇ ದೊಡ್ಡ ಕೈಗಾರಿಕೆಗಳು ಎ೦ದರೆ ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್, ಲಕ್ಷ್ಮೇಶ್ವರದ ನೂಲಿನ ಗಿರಣಿ, ಮತ್ತು ಮು೦ಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್‍ಸ ಸಕ್ಕರೆ ಕಾರ್ಖಾನೆ. ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್ ಮತ್ತು ಲಕ್ಷ್ಮೇಶ್ವರದ ನೂಲಿನ ಗಿರಣಿ ಸಹಕಾರಿ ಸ೦ಘದ್ದು ಆಗಿದ್ದರೆ, ವಿಜಯನಗರ ಶುಗರ್‍ಸ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಪೋಸ್ಕೊ ಸ್ಟೀಲ ಉತ್ಪಾದನಾ ಕ೦ಪನಿಯು ದೊಡ್ಡ ಸ೦ಚಲನವನ್ನು ಉ೦ಟು ಮಾಡುತ್ತದೆ ಅನ್ನುವ ಭ್ರಮೆಗಳು ಯುವ ರೈತರಲ್ಲಿ ಪುಟಿಯ ತೊಡಗಿದವು.

ಆದರೆ ವಾಸ್ತವಾ೦ಶಗಳೇ ಬೇರೆಯಾಗಿರುವದನ್ನು ಕಾಣಬಹುದಾಗಿದೆ . 50 ವರ್ಷಗಳಲ್ಲಿ ಮಾಡದಿರುವ ಅಭಿವೃದ್ದಿಯನ್ನು ಸರಕಾರ ಈಗಲೆ ಕೈಗೆತ್ತಿಕೊ೦ಡಿದ್ದು ಏಕೆ? ಎಂಬ ಸಹಜ ಪ್ರಶ್ನೆಯು ತಾನಾಗಿಯೇ ಬರುತ್ತದೆ. ಹಾಗಾದರೇ, ಅದರ ಹಿನ್ನೆಲೆಯ ಕುರಿತಾಗಿ ನೋಡಬೇಕಿದೆ.

ಮು೦ಡರಗಿ ತಾಲ್ಲೂಕಿನ ಹಳ್ಳಿಗುಡಿ, ಜ೦ತ್ಲಿ-ಶಿರೊರು, ಹರ್ಲಾಪುರ ಗ್ರಾಮಗಳು ಮಳೆಯಾಧಾರಿತ ಫಲವತ್ತಾದ ಕೃಷಿ ಭೂಮಿಯನ್ನು ಹೊ೦ದಿದೆ. ಕಪ್ಪು ಮಣ್ಣಿನ ಫಲವತ್ತಾದ ಈ ನೆಲವು ರೈತರ ಬದುಕಿಗೆ ಸಾವಿರಾರು ವರ್ಷಗಳಿ೦ದ ಅನ್ನ ನೀಡಿ ಸಲಹುತ್ತಾ ಬ೦ದಿದೆ. ಇಲ್ಲಿಯೇ ಪೋಸ್ಕೊ ಸ್ಧಾಪಿಸಲು ಸರಕಾರ ಹೊರಟ್ಟಿದ್ದು ಏಕೆ? ಈ ಪ್ರದೇಶದ ಹಳ್ಳಿಗುಡಿಯನ್ನು ಹೊರತುಪಡಿಸಿದರೆ ಜ೦ತ್ಲಿ-ಶಿರೊರು, ಹರ್ಲಾಪುರ ಪೇಠಾಲೊರು ಮತ್ತು ಮೇವು೦ಡಿ ಶಿ೦ಗಟಾಲೊರು ಏತ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಏತ ನೀರಾವರಿಯ ಕಾಮಗಾರಿಯು ತೀವ್ರಗತಿಯಲ್ಲಿ ಇರುವದರಿ೦ದ ನೀರಾವರಿಗೆ ಪೈಪಲೈನ ಮೂಲಕ ತರುತ್ತಿರುವ ನೀರನ್ನು ಪೋಸ್ಕೊ ಕ೦ಪನಿಗೆ.ಯಾವದೇ ಅಡೆ-ತಡೆಯಿಲ್ಲದೆ ಕೊಡಬಹುದು. ಇದು ನೀರಾವರಿ ಹೆಸರಲ್ಲಿ ಕ೦ಪನಿಗೆ ನೀರು ಕೊಟ್ಟರೆ ಯಾರೂ ಗಮನಿಸುವದಿಲ್ಲಾ, ಹೇಗೊ ನಡೆಯುತ್ತದೆ, ಅನ್ನುವ ಹುನ್ನಾರ ಸರಕಾರದ ಮನ:ಪಟಲದಲ್ಲಿ ಇತ್ತು ಅನಿಸುತ್ತದೆ.

ಅಲ್ಲದೇ. ನೀರಾವರಿಯ ಕಾಮಗಾರಿಯ ತೀವ್ರತೆಯು ರೈತರಿಗೆ ನೀರು ಕೊಡುವ ಕಡೆಗಿ೦ತಲು ಕ೦ಪನಿಗೆ.ನೀರು ನೀಡುವ ಹುನ್ನಾರವನ್ನು ಸರಕಾರವು ನಡೆಸಿತ್ತೆ? ಎಂಬ ಸ೦ಶಯವೂ ಈ ಸಂದರ್ಭದಲ್ಲಿ ಕಾಡದೇ ಇರದು?

ಬರಿ ನೀರಿನ ಪ್ರಶ್ನೆಯೋ? ರೈತನ ಬದುಕಿನ ಪ್ರಶ್ನೆಯೋ?
ಶಿ೦ಗಟಾಲೊರು ಎತ ನೀರಾವರಿಯ ಬ್ಯಾರೇಜನಲ್ಲಿ ನೀರಿನ ಸ೦ಗ್ರಹಣಾ ಸಾಮರ್ಥ್ಯವು 18.5 ಟಿಎ೦ಸಿಯುಷ್ಟು ಇದ್ದು, ಇದರಲ್ಲಿ 2 ಟಿಎ೦ಸಿ ಕುಡಿಯುವ ನೀರಿನ ಬಳಕೆಗೆ ಎ೦ದು ಅ೦ದಾಜು ಮಾಡಲಾಗಿದೆ. ಉಳಿದ 7.5 ಟಿಎ೦ಸಿ ನೀರಿನಲ್ಲಿ ಹೊವಿನಹಡಗಲಿ, ಮು೦ಡರಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿಯ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಮಾಡಲು ಬಳಸಬಹುದಾಗಿದೆ. ಇದರಿ೦ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಗದಗ ಜಿಲ್ಲೆಯ ಮು೦ಡರಗಿ ತಾಲ್ಲೂಕು, ಮತ್ತು ಕೊಪ್ಪಳ ಜಿಲ್ಲೆಯ ರೈತರ ಹೊಲಗಳಿಗೆ 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತದೆ.

ಪೋಸ್ಕೊ ಕ೦ಪನಿಯ ಸ್ಥಾಪನೆ ಆಗುವ ಸಾಧ್ಯತೆಯಿದ್ದರೆ ಕನಿಷ್ಠ 2 ರಿ೦ದ 3 ಟಿಎ೦ಸಿ ನೀರನ್ನು ಪೋಸ್ಕೊ ಕ೦ಪನಿಯು ಬಳಸುತ್ತಿತ್ತು. ರೈತರ ಭೂಮಿಯ ನೀರಾವರಿ ಸಲುವಾಗಿ ಇರುವ 7.5 ಟಿಎ೦ಸಿ ನೀರಿನಲ್ಲಿ 2 ರಿ೦ದ 3 ಟಿಎ೦ಸಿ ನೀರಿಗೆ ಕನ್ನ ಬಿದ್ದಿದ್ದರೆ ರೈತರ ಭೂಮಿ ನೀರಾವರಿ ಮಾಡಲು ಬರೀ 4.5 ಟಿಎ೦ಸಿಯಷ್ಟೇ ನೀರು ಉಳಿಯುತ್ತಿತ್ತು. ಅಭಿವೃದ್ದಿಯ ಕುರಿತು ಮಾತನಾಡುವವರು ಒ೦ದೆಡೆ ರೈತರ ಸಾವಿರಾರು ಎಕರೆ ಭೂಮಿಯುನ್ನು ಕಸಿದುಕೊಳ್ಳುತ್ತಿದ್ದರೆ ಅದರ ಜೊತೆ-ಜೊತೆಯಲ್ಲಿಯೇ ರೈತರ ಭೂಮಿಗೆ ಬೇಕಿರುವ ನೀರನ್ನೂ ಕಸಿದುಕೊ೦ಡಿದ್ದರೆ ರೈತರ ಬದುಕಿಗೆ ಕ೦ಬ ಮತ್ತು ಕೈಯ ಹೊಡೆತಗಳು ಏಕಕಾಲಕ್ಕೆ ಬೀಳುತ್ತಿತು. ರೈತರ ಬದುಕು ಮತ್ತಷ್ಟು ಹೈರಾಣ ಆಗುವ ದು:ಸ್ಧಿತಿಗೆ ತ೦ದೊಡ್ಡುತ್ತಿತ್ತು. ಇದು ರೈತರನ್ನು ದ್ವಿಮುಖವಾಗಿ ಕೊಳ್ಳೆ ಹೊಡೆಯುವ ತ೦ತ್ರವಾಗಿ ಸರಕಾರವು ಯೋಚಿಸುತ್ತಿರಬಹುದೇ ಅನಿಸದೇ ಇರಲಾರದು. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು “ಪೋಸ್ಕೊಗೆ ನೀರು ಕೊಡುವದಿಲ್ಲ” ಎನ್ನುವ ಹೇಳಿಕೆ, “ಆಲಮಟ್ಟಿ ನೀರು ಕೋಡುತ್ತೇವೆ” ಎಂಬ ಮರುಹೇಳಿಕೆ, “ನೀರೇ ಕೊಡುವದಿಲ್ಲ” ಎನ್ನುವ ಮರುಮರುಹೇಳಿಕೆ ಕ೦ಪನಿಯು ಮಳೆಯನ್ನು ಆಶ್ರಯಿಸಿ ಅ೦ತರ್ಜಲವನ್ನು ಬಳಸಿಕೊಳ್ಳಲಿ ಅನ್ನುವದು ಸರಕಾರದ ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತದೆ.

ಎರಿ ಇದ್ದವ ದೊರೆ.
ಎಷ್ಟೆಲ್ಲಾ ತಾಪಪ್ರಯ, ಮಳೆಯಿಲ್ಲದೆ ಬ೦ದ ಬೆಳೆಯಲ್ಲಿಯೇ ಸ೦ತೃಪ್ತಿ ಕಾಣುವ ರೈತರ ಬದುಕು, ಸಮೃದ್ಧಿಯಿಲ್ಲದೇ ಇದ್ದರೂ ಸಮಾಧಾನದ ಬದುಕು ಸಾಗಿಸಲು ಅಡ್ಡಿಯಿಲ್ಲಾ ಎಂಬ ಭಾವದಲ್ಲಿ ಬದುಕು ಸಾಗಿಸುತ್ತಾರೆ. ಕಪ್ಪು ನೆಲದ ಎರಿ ಮಣ್ಣು ಫಲವತ್ತತ್ತೆಯನ್ನು ಹೊ೦ದಿದ್ದು, ಇದು ಭಾರತದಲ್ಲಿ ಫಲವತ್ತಾದ ಮಣ್ಣು ಎ೦ದು ಕೃಷಿ ತಜ್ಞರು ಗುರುತಿಸುತ್ತಾರೆ. ಜನಪದಗಾರರು ಹಳ್ಳಿಗಾಡಿನ ಸೊಗಡಿನಲ್ಲಿ “ಎರಿ ಇದ್ದಾ೦ದ ದೊರಿ” ಅನ್ನುವ ನುಡಿಗಟ್ಟು ಕಪ್ಪುಮಣ್ಣು ಸುಖ-ಸಮೃದ್ಧಿ ಫಸಲನ್ನು ತರುತ್ತದೆ, ಇದರಿ೦ದ ರಾಜಮಹಾರಾಜರ೦ತೆ ಬಾಳಬಹುದು ಎಂದು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಅದು ನಿಜ ಕೂಡಾ ಆಗಿದೆ.

ಇ೦ತಹ ಸಮೃದ್ದಿಯಾಗಿ ಬೆಳೆ ಬೆಳೆಯಲು ಯೋಗ್ಯವಾದ ಭೂಮಿಗೆ ಕೈಗಾರಿಕಾ ಸಚಿವ ನಿರಾಣಿಯವರ ಹಳ್ಳಿಗುಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡಲಿರುವ ಭೂಮಿಯು ಬ೦ಜರು ಆಗಿದೆ ಎಂಬ ಹೇಳಿಕೆಯು ಅವರ ಕೃಷಿ ಭೂಮಿಯ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಅದು  ಹಾಸ್ಯಾಸ್ಪದ ಕೂಡಾ ಆಗಿದೆ. ಅದಕ್ಕೆ ಉತ್ತರವೆ೦ಬ೦ತೆ ಜಗದ್ಗುರು ಡಾ|| ತೊ೦ಟದ ಸಿದ್ದಲಿ೦ಗ ಮಹಾಸ್ವಾಮಿಗಳು, ಪೋಸ್ಕೊ ಕ೦ಪನಿಯ ಭೂಸ್ವಾಧೀನಕ್ಕೆ ವಶಪಡಿಸಿಕೊಳ್ಳಲಿದ್ದ ಹಳ್ಳಿಗುಡಿ ಭೂಮಿಯಲ್ಲಿ ಅಡ್ಡಾಡಿ, “ಈ ಭೂಮಿ ಬ೦ಜರು ಅಲ್ಲ, ಫಲವತ್ತಾದ ಭೂಮಿಯನ್ನು ಹೊ೦ದಿದೆ, ಸಮೃದ್ಧ ಬೆಳೆ ಬರುತ್ತದೆ,” ಎನ್ನುವದನ್ನು ಮಾಧ್ಯಮದವರ ಎದುರು ತೋರಿಸಿಕೊಟ್ಟರು,

ಆನ೦ತರವೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಭೂಮಿಯ ಬಗೆಗಿನ ಅಜ್ಞಾನದ ಅರಿವು ಉ೦ಟಾಗಿ “ಇಲ್ಲಾ, ಇಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿ೦ದ ಬ೦ಜರು ಎಂಬ ಪದ ಬಳಕೆ ಮಾಡಿದ್ದೇನೆ. ಅದರ ಬದಲು ಅದು ನೀರಾವರಿ ಭೂಮಿ ಅಲ್ಲ,” ಎಂದು ಒತ್ತಿ ಹೇಳ ತೊಡಗಿದರು.

(ಮುಂದುವರೆಯುವುದು…)

ಚಿತ್ರಗಳು : ಲೇಖಕರವು

ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

ಜೀವನದಿಗಳ ಸಾವಿನ ಕಥನ – 1

ಡಾ.ಎನ್. ಜಗದೀಶ್ ಕೊಪ್ಪ

ಇದು ಜೀವನದಿಗಳ ಸಾವಿನ ಕಥನವಷ್ಟೇ ಅಲ್ಲ, ಮನುಕುಲದ ಅವಸಾನದ ಕಥನ ಕೂಡ ಹೌದು. ಒಬ್ಬನ ಹಿತಕ್ಕಾಗಿ ಹಲವರ ಬದುಕನ್ನು ಬಲಿಕೊಡುವ ವಿಕೃತ ದುರಂತಗಾಥೆ. ಯಾವ ಜಾಗದಲ್ಲಿ ಮನುಕುಲದ ನಾಗರೀಕತೆ ಜನ್ಮತಾಳಿತೋ, ಅದೇ ಜಾಗದಲ್ಲಿ ಸಂಸ್ಕೃತಿ ಅವಸಾನಗೊಳ್ಳುತ್ತಿರುವ ನೋವಿನ ಕಥೆ.

ಹರಿಯುವ ನೀರಿಗೆಲ್ಲಾ ಗಂಗೆಯೆಂದು ಹೆಸರಿಟ್ಟು ಪೂಜಿಸಿದ ಈ ನೆಲದಲ್ಲಿ ಮಾತೃ ಸ್ವರೂಪದ ನದಿ ಎಂಬಾಕೆಯ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಹಂತ-ಹಂತವಾಗಿ ನಡೆಯುತ್ತಿರುವ ಅತ್ಯಾಚಾರ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪೃಥ್ವಿಯ ಎಲ್ಲೆಡೆ ಇತಿಹಾಸದುದ್ದಕ್ಕೂ ನಿರಂತರವಾಗಿ ಅಡೆ ತಡೆಯಿಲ್ಲದೆ ಸಾಗಿದ ಅವಿರತ ಅನಾಚಾರ.

ಮನುಷ್ಯನ ಜ್ಞಾನ ವಿಕಾಸವಾದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಪ್ರಯೋಗಗಳು ಯಶಸ್ವಿಯಾದಂತೆ, ಆಧುನಿಕ ಜಗತ್ತಿನ ಮಾನವನಲ್ಲಿ ಪ್ರಕೃತಿಯನ್ನು ಮಣಿಸಬೇಕೆಂಬ ಅಹಂಕಾರ ತಲೆ ಎತ್ತಿದೆ. ಇದರ ಫಲವಾಗಿ ನಿಸರ್ಗದ ಕೊಡುಗೆಗಳ ಜೊತೆಜೊತೆಯಲ್ಲಿ ಪ್ರಕೃತಿ ವಿಕೋಪಗಳನ್ನೂ ಅವನು ಅನುಭವಿಸಬೇಕಾಗಿದೆ.

ನಾವು ಈ ಭೂಮಿಯ ಒಡೆಯರಲ್ಲ, ಕೇವಲ ವಾರಸುದಾರರು ಮಾತ್ರ. ಅದನ್ನು ರಕ್ಷಿಸಿ ಮುಂದಿನ ತಲೆಮಾರಿಗೂ ಉಳಿಸಬೇಕಾದದ್ದು ನಮ್ಮ ಹೊಣೆ ಎಂಬ ಪ್ರಜ್ಞೆ ವಿಸ್ಮೃತಿಗೆ ಜಾರಿರುವುದೇ ಪರಿಸರದ ದುರಂತಕ್ಕೆ ಮೂಲ ಕಾರಣವಾಗಿದೆ.

ನಾಗರೀಕ ಸಮಾಜದಲ್ಲಿ ಹೆಚ್ಚಿದ ಅನುಭೋಗ ಪ್ರವೃತ್ತಿ ಪರಿಸರದ ಮೇಲಿನ ಪೈಶಾಚಿಕ ದಾಳಿಗೆ ಮೂಲವಾಗಿದ್ದು,  ಕಳೆದ 20 ಲಕ್ಷ ವರ್ಷಗಳಲ್ಲಿ ನಡೆದ ಪರಿಸರದ ಮೇಲಿನ ದಾಳಿಯಿಂದ ಆಗಿದ್ದ ನಷ್ಟದಷ್ಟು ಪ್ರಮಾಣ ಈಗ ಕೇವಲ 50 ವರ್ಷಗಳಲ್ಲಿ ಜರುಗಿದೆ.

ಮನುಷ್ಯ ಕಾಲಿಟ್ಟ ಜಾಗ ಅದು ಅರಣ್ಯವಿರಲಿ, ಪರ್ವತವಿರಲಿ, ನದಿಯಿರಲಿ ಸುರಕ್ಷಿತವಾಗಿಲ್ಲ. ಮನುಕುಲದ ವಾರಸುದಾರರೆಂದು ಹೇಳಿಕೊಳ್ಳುವ ನಾವು ಕಾಲಿಟ್ಟ ಸ್ಥಳಗಳಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎಂಬ ವಾಸ್ತವಿಕ ಕಟು ಸತ್ಯವನ್ನು ನೆನಪಿಗೆ ತಂದುಕೊಳ್ಳಲಾಗದಷ್ಟು ಅಹಂಕಾರದ ಅಟ್ಟಕ್ಕೆ ದೂಡಲ್ಪಟ್ಟಿದ್ದೇವೆ.

ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು, ಬದುಕುವ ಪರಿಸರ ಎಲ್ಲವನ್ನೂ ವಿಷಮಯಗೊಳಿಸಿ, ಭೂಮಿಯನ್ನು ಸುಡುಗಾಡನ್ನಾಗಿ ಮಾಡಿ ನಾಗರೀಕತೆಯ ಸೋಗಿನಲ್ಲಿ ಅನಾಗರೀಕತೆಯ ಬದುಕು ನಡೆಸುತ್ತಿದ್ದೇವೆ.

ಈ ಭೂಮಿಯ ಮೇಲೆ ಪ್ರಾಣಿಗಳ ಜೊತೆ ಜೊತೆಯಲ್ಲಿ ಮನುಷ್ಯ ಜೀವಿ ಅಸ್ತಿತ್ವಕ್ಕೆ ಬಂದಿದ್ದು 20 ಸಾವಿರ ವರ್ಷಗಳ ಹಿಂದೆ. ಪ್ರಾರಂಭಿಕ ದಿನಗಳಲ್ಲಿ ಪ್ರಾಣಿಯಂತೆ ಬದುಕಿದ್ದ ಆತನ ಮೆದುಳೊಳಗೆ ವಿವೇಚನೆ ಮೂಡಿ, ಪ್ರಕೃತಿಯ ಎಲ್ಲಾ ವಿದ್ಯಮಾನಗಳನ್ನು ಅವಲೋಕಿಸುವ ಬುದ್ಧಿ ಮೊಳೆತದ್ದು ಕೇವಲ 10 ಸಾವಿರವರ್ಷಗಳ ಹಿಂದೆ. ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿ, ಗುಡುಗು-ಸಿಡಿಲು, ಮಳೆ-ಗಾಳಿಗೆ ಅಂಜಿ ಗುಹೆಗಳಲ್ಲಿ ವಾಸವಾಗಿದ್ದ ಅವನ ಕೈಗೆ ಕಬ್ಬಿಣದ ಲೋಹ ಯಾವಾಗ ಆಯುಧವಾಗಿ ದೊರೆಯಿತೊ, ಅಂದೇ ನಾಗರೀಕತೆಯ ಅಧ್ಯಾಯ  ಕೂಡ ಪ್ರಾರಂಭವಾಯಿತು.

ಶಿಲಾಯುಗದಿಂದ ಲೋಹಯುಗಕ್ಕೆ ಸ್ಥಿತ್ಯಂತರಗೊಂಡ ಮಾನವನ ಬದುಕಿನಲ್ಲಿ ನಾಗರೀಕತೆಯ ಬೀಜ ಮೊಳಕೆಯೊಡೆದದ್ದೇ ತಡ, ತನ್ನ ಜೊತೆಯಲ್ಲಿ ಬದುಕಿದ್ದ ಸಾಧು ಪ್ರಾಣಿಗಳನ್ನು ಪಳಗಿಸಿ, ಗೆಡ್ಡೆ-ಗೆಣಸುಗಳನ್ನು ಆರಿಸುವ ಬದುಕಿಗೆ ವಿದಾಯ ಹೇಳಿ, ತಾನಿದ್ದ ಜಾಗದಲ್ಲೇ ಉತ್ತಿ, ಬಿತ್ತಿ ಬೆಳೆಯಬಾರದೇಕೆ ಎಂಬ ಪ್ರಶ್ನೆಯ ಮಿಂಚು ಅವನ ತಲೆಯೊಳಗೆ ಸುಳಿದಾಗ ಪ್ರಕೃತಿಯ ಮೇಲಿನ ದಾಳಿಯ ಮೊದಲ ಅಧ್ಯಾಯಕ್ಕೆ ನಾಂದಿಯಾಯಿತು.

ಜಗತ್ತಿನ ಯಾವುದೇ ನಾಗರೀಕತೆಯ ಹುಟ್ಟು ಮತ್ತು ಅವಸಾನಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲವೂ ನದಿ ತೀರದಲ್ಲಿಯೇ ಜನಿಸಿ, ಅಲ್ಲೇ ಅವಸಾನಗೊಂಡಿವೆ. ಹಾಗಾಗಿ ನದಿಗಳೆಂದರೆ ಕೇವಲ ನೀರಿನ ಮೂಲವಲ್ಲ, ಅವು ಮನುಕುಲದ ಹುಟ್ಟು-ಸಾವಿನ ತೊಟ್ಟಿಲುಗಳು ಕೂಡ ಹೌದು.

ಐದು ಸಾವಿರ ವರ್ಷಗಳ ಹಿಂದೆ ಟೈಗ್ರಿಸ್ ಮತ್ತು ಯೂಪ್ರಟೀಸ್ ನದಿಗಳ ತೀರದಲ್ಲಿ ಹುಟ್ಟಿದ ಮೆಸಪೊಟೋಮಿಯಾ ನಾಗರೀಕತೆ, ಈಜಿಪ್ಟ್‌ನ ನೈಲ್ ನದಿ ಬಳಿ ಜನಿಸಿದ ಈಜಿಪ್ಟ್ ನಾಗರೀಕತೆ, ದಕ್ಷಿಣ ಅಮೆರಿಕದ ಇಂಕಾ ಮತ್ತು ಮಾಯಾ ನಾಗರೀಕತೆ, ಗ್ರೀಕ್‌ನ ರೋಮ್ ನಾಗರೀಕತೆ, ಭಾರತದ ಸಿಂಧೂ ನದಿ ತೀರದ ಹರಪ್ಪ, ಮೆಹಂಜೋದಾರೊ ನಾಗರೀಕತೆ ಇವುಗಳ ಮೂಲ ಬೇರುಗಳು ಜಗತ್ತಿನ ಹಲವಾರು ನದಿಗಳಲ್ಲಿ ಅಡಕವಾಗಿದೆ. ಮನುಷ್ಯ ಸಂಸ್ಕೃತಿಯ ಜನನಕ್ಕೆ ಕಾರಣವಾದ ಇದೇ ಜೀವ ನದಿಗಳು ಅವನ ಸಂಸ್ಕೃತಿ ಮತ್ತು ನಾಗರೀಕತೆಯ ಅವಸಾನಕ್ಕೂ ಕಾರಣವಾಗಿವೆ. ಈ ಸಂದರ್ಭದಲ್ಲಿ ಲೆವಿಸ್ ಮಮ್‌ಪೆಡ್ ಎಂಬ ಲೇಖಕ ತನ್ನ “ಟೆಕ್ನಿಕ್ ಅಂಡ್ ಸಿವಿಲೈಜೇಷನ್” ಕೃತಿಯಲ್ಲಿ “ಕಬ್ಬಿಣ ಮತ್ತು ಕಲ್ಲಿದ್ದಲಿನ ಆವಿಷ್ಕಾರ ನಾಗರೀಕತೆ ವಿಕಾಸ ಮತ್ತು ವಿನಾಶಕ್ಕೆ ಕಾರಣಮಯ” ಎನ್ನುವ ಮಾತು ಇಲ್ಲಿ ಪ್ರಸ್ತುತ.

ಹುಟ್ಟು, ವಿನಾಶ, ಮರುಹುಟ್ಟುಗಳ ಹೋರಾಟದಲ್ಲಿ ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲಿನ ಅವಲಂಬನೆ ಮತ್ತು ಅದರ ದುರ್ಬಳಕೆ ಕೂಡ ಹೆಚ್ಚಾಯಿತು. ಪ್ರಕೃತಿಯ ಒಂದು ಭಾಗವಾಗಿಯೇ ಬದುಕಿದ ನಮ್ಮ ಮೂಲನಿವಾಸಿಗಳು, ಪರಿಸರಕ್ಕೆ ಧಕ್ಕೆಯಾಗದ ರೀತಿ ಬದುಕಿದ್ದರು. ಇಂದಿಗೂ ಕೂಡ ಅರಣ್ಯವಾಸಿಗಳಲ್ಲಿ ಇಂತಹ ಸಂಸ್ಕೃತಿಯನ್ನು ನಾವು ನೋಡಬಹುದು. ಅವರು ಒಂದು ಮರ ಕಡಿಯುವ ಮುನ್ನ ಅದಕ್ಕೆ ಪ್ರತಿಯಾಗಿ ಎರಡು ಸಸಿ ನೆಡುವ ಸಂಸ್ಕೃತಿ ಹಾಗೂ ಬೇಸಾಯ ಮಾಡಿದ ಭೂಮಿಯನ್ನು ಹಲವಾರು ವರ್ಷ ತೊರೆದು ಬೇರೆಡೆ ಬೇಸಾಯ ಮಾಡುವ ಕ್ರಮವನ್ನು ನಾವು ಆದಿವಾಸಿಗಳ ಬದುಕಿನಲ್ಲಿ ಇಂದೂ ಸಹ ಕಾಣಬಹುದಾಗಿದೆ. ಪ್ರಕೃತಿಯ ಕುರಿತಾದ ಈ ಜ್ಞಾನ ಪರಂಪರೆಯನ್ನು ಅವರಿಗೆ ಯಾರೂ ಧಾರೆ ಎರೆಯಲಿಲ್ಲ. ಪರಿಸರದ ಮಕ್ಕಳಂತೆ ಬದುಕಿದ ಅವರ ಎದೆಯೊಳಗೆ ಈ ಜ್ಞಾನ ತಾನಾಗಿಯೇ ಮೊಳೆತದ್ದು. ಈ ನೆಲದ ನಿಜ ಮಕ್ಕಳನ್ನು ನಾಗರೀಕ ಸೋಗಿನ ನಾವು “ಅನಾಗರೀಕರೆಂದು” ಕರೆಯುವ ಪ್ರವೃತ್ತಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ “ಪ್ರಕೃತಿ ಜೀವ ಸಂಕುಲಗಳನ್ನು ಪೋಷಿಸಿಕೊಂಡು ಬಂದಿರುವುದು ಮಾನವನ ಒಳಿತಿಗಾಗಿ ಇದರ ದುರುಪಯೋಗ ಸಲ್ಲದು” ಎಂದಿದ್ದ.

ಎಲ್ಲವೂ ತನ್ನ ಕಾಲಡಿಯಲ್ಲಿರಬೇಕು ಎಂಬ ಭ್ರಮೆಯನ್ನು ಬೆನ್ನತ್ತಿರುವ ಮನುಕುಲ ತಾನು ಸವೆಸಿದ ಹಾದಿಯನ್ನು, ನಡೆದ ಹೆಜ್ಜೆ ಗುರುತುಗಳನ್ನು ಹಿಂತಿರುಗಿ ನೋಡಲಾರದ ಸೊಕ್ಕನ್ನು ಬೆಳೆಸಿಕೊಂಡಿದೆ.

ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ “ಹ್ಯೂಮನಿಟಿ ಅಂಡ್ ನೇಚರ್” ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬಾತ “ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ” ಎಂದು ವಾದಿಸಿದ್ದಾನೆ.

ಇಂತಹ ಅಪಕ್ವ ಪಾಶ್ಚಿಮಾತ್ಯ ಚಿಂತನೆಯ ಧಾರೆಗಳನ್ನು ನಿರಾಕರಿಸಿದ್ದ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ “ಯೂರೋಪಿಯನ್ನರು ಯಾವ ನೆಲವನ್ನು ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾನೆ.

ಮನುಕುಲದ ಇಂತಹ ನಿರಂತರ ದಾಳಿಯ ಚರಿತ್ರೆಯನ್ನು ಅವಲೋಕಿಸಿರುವ ಇತಿಹಾಸ ತಜ್ಞ ಎಲಿಂಗ್‌ಟನ್ ಮನುಕುಲದ ಐದು ಶತಮಾನಗಳನ್ನು “ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ ಯುಗ” ಎಂದು ವಿಂಗಡಿಸಿದ್ದು, ಈಗ ಮನುಕುಲ ಹಾಗೂ ಪರಿಸರದ ಉಳಿವಿಗಾಗಿ ಪರಿಸರಶಾಹಿ ಯುಗ ರೂಪುಗೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾನೆ.

ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಇದೀಗ ಮನುಕುಲವನ್ನು ಭೋಗದ ಹುಚ್ಚುಕುದುರಯನ್ನೇರುವಂತೆ ಮಾಡಿವೆ. ಎಲ್ಲವನ್ನೂ ವ್ಯಾಪಾರದ ಸರಕುಗಳಂತೆ ನೋಡುವ ನಮ್ಮ ಆರ್ಥಿಕ ತಪ್ಪು ಪರಿಕಲ್ಪನೆಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಸುತ್ತಿರುವ ಪ್ರಕೃತಿ ಮೇಲಿನ ಪೈಶಾಚಿಕ ದಾಳಿ ವರ್ತಮಾನದ ಜಗತ್ತನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದೆ.

(ಮುಂದುವರಿಯುವುದು)

ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಸ್ನೇಹಿತರೆ,

ಹೇಳಬೇಕಾದ ಎಲ್ಲವನ್ನೂ ಈ ಕೆಳಗಿರುವ ಡಾ. ಜಗದೀಶ್ ಕೊಪ್ಪರವರ ಮುನ್ನುಡಿಯೇ ಹೇಳುತ್ತಿದೆ. ಈ ಲೇಖನ ಸರಣಿ ಇನ್ನು ಮುಂದೆ ಪ್ರತಿ ಭಾನುವಾರ “ವರ್ತಮಾನ”ದಲ್ಲಿ ಪ್ರಕಟವಾಗಲಿದೆ. ನಾಳೆ ಮೊದಲ ಕಂತು. ಜಗದೀಶ್‌ರವರು “ವರ್ತಮಾನ”ದ ಪ್ರಯತ್ನಕ್ಕೆ ಕೊಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತ, ಈ ಲೇಖನ ಸರಣಿ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ ಎಂದು ಆಶಿಸುತ್ತೇನೆ.

ರವಿ ಕೃಷ್ಣಾ ರೆಡ್ಡಿ


ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಹರಿಯುವ ನೀರಿಗೆ ಗಂಗೆಯೆಂದು ಕೈಯೆತ್ತಿ ಮುಗಿದವರ ನೆಲದ ಸಂಸ್ಕೃತಿಯಿಂದ ಬಂದ ನನ್ನಂತಹವನಿಗೆ ಇಂದಿನ ಅಭಿವೃದ್ಧಿಯ ಅಂಧಯುಗದಲ್ಲಿ ಇಲ್ಲಿನ ಗಾಳಿ, ನೀರು ಮಾರಾಟದ ಸರಕಾಗಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ.

ಜಗತ್ತಿನ ಜೀವನದಿಗಳನ್ನು ಅಣೆಕಟ್ಟುಗಳ ಹೆಸರಿನಲ್ಲಿ ಕೊಂದು ಹಾಕುತ್ತಿರುವ ಕಥನವೇ ಈ ” ಜೀವನದಿಗಳ ಸಾವಿನ ಕಥನ”. ಎಂಟು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಮಾಡುತಿದ್ದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ನಿಮ್ಮೆದುರು ಅನಾವರಣಗೊಳಿಸುತಿದ್ದೇನೆ.

ಈ ಸಂದರ್ಭದಲ್ಲಿ ಪೆಟ್ರಿಕ್ ಮೆಕ್ಕಲಿಯವರ “ಸೈಲೆನ್ಸ್‌ಡ್ ರಿವರ್‍ಸ್” (ಸ್ಥಬ್ದವಾದ ನದಿಗಳು) ಹಾಗೂ ಮೌಡೆ ಬಾರ್‍ಲೋ ಅವರ “ಬ್ಲೂ ಕವನೆಂಟ್” (ನೀಲಿ ಒಂಪ್ಪಂಧ) ಮತ್ತು “ಬ್ಲೂ ಗೋಲ್ಡ್” (ನೀಲಿ ಚಿನ್ನ) ಕೃತಿಗಳಿಂದ ಪ್ರೇರಣೆ ಪಡೆದು ಈ ಲೇಖನ ಮಾಲೆ ರಚಿಸಿದ್ದೇನೆ.

ಈ ಲೇಖನ ಮಾಲೆಯ ಬಗ್ಗೆ ನಿಮ್ಮ ತಕರಾರುಗಳು ಏನೇ ಇರಲಿ, ನದಿಗಳ ಬಗ್ಗೆ, ನೀರಿನ ಬಗ್ಗೆ ನಿಮ್ಮ ಆಲೋಚನಾ ಕ್ರಮ ಬದಲಾದರೆ, ನನ್ನ ಶ್ರಮ ಸಾರ್ಥಕ.

ಡಾ.ಎನ್.ಜಗದೀಶ ಕೊಪ್ಪ
ಧಾರವಾಡ