Category Archives: ಸರಣಿ-ಲೇಖನಗಳು

ದಿಲ್ಲಿ ಮತದಾರ ಪ್ರಬುದ್ಧನಾದ ಬಗೆ ಹೇಗೆ ಗೊತ್ತಾ…?

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಇಲ್ಲಿಯೂ ಕೂಡ ಜನ ಬುದ್ಧಿವಂತರಾಗಿರಲಿಲ್ಲ. ನಾನು ದಿಲ್ಲಿಗೆ ಬಂದು ಸುಮಾರು 26 ವರ್ಷ ಕಳೆಯಿತು. ಈ ರಾಜಕಾರಣಿಗಳ ಆಶ್ವಾಸನೆಗಳು, ಸುಳ್ಳು, ಮೋಸ ಮತ್ತು ದ್ರೋಹವನ್ನು ನೋಡುತ್ತಲೇ ಬಂದಿದ್ದೆವು. ಆದರೆ, 2013ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಜನ ಎಚ್ಚರಾದರು. ಇವತ್ತು ಅವರ ಓಟನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ,” ಎಂದರು ಗೋವಿಂದ್ ಬಿಲಾಲ್. ಉತ್ತರ ಪ್ರದೇಶದಿಂದ ವಲಸೆ ಬಂದ ಅವರು ಮೊದಲು ದಿಲ್ಲಿಯ ವಿದೇಶಾಂಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರಾಗಿ ದುಡಿಯಲು ಶುರುಮಾಡಿದರು. ನಂತರ ಅವರನ್ನು ಅಲ್ಲಿಂದ ಕಿತ್ತುಹಾಕಲಾಯಿತು. cyclerickshaw-delhiಮುಂದೆ ನಾನಾ ಉದ್ಯೋಗಗಳನ್ನು ನಿಭಾಯಿಸಿಕೊಂಡು ಇವತ್ತು ಮಾಲ್ವಿನಗರದ ಬ್ಯಾಂಕ್‍ವೊಂದರ ಮುಂದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ದಿಲ್ಲಿಯ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸುವ ದಿನ. ಬೆಳಗ್ಗೆಯೇ ಎದ್ದ ಗೋವಿಂದ್ ಬಿಲಾಲ್‍ ಚಾಣಕ್ಯಪುರಿಯ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿ ಬಂದಿದ್ದರು. ರಸ್ತೆ ಬದಿಯಲ್ಲಿ ಜನರನ್ನು ಮಾತನಾಡಿಸುತ್ತಿದ್ದ ನನನ್ನು ಸ್ವಯಂಪೂರ್ವಕವಾಗಿ ಕರೆದು ಪಕ್ಕಕ್ಕೆ ಕೂರಿಸಿಕೊಂಡರು. ಬೆಂಗಳೂರಿನಿಂದ ಬಂದಿದ್ದೇನೆ ಎಂಬುದು ಗೊತ್ತಾದ ನಂತರ ಮನಸ್ಸು ಬಿಚ್ಚಿ ಮಾತನಾಡಲು ಶುರುಮಾಡಿದರು. “ನಾನು ಕಲ್ಯಾಣ್‍ ಸಿಂಗ್‍ ಕ್ಷೇತ್ರದಿಂದ ಬಂದವನು. ಯುವಕನಾಗಿದ್ದ ವೇಳೆ ಒಮ್ಮೆ ಕಲ್ಯಾಣ್‍ ಸಿಂಗ್‍ ಮನೆಗೆ ನಮ್ಮ ಹಳ್ಳಿಯ ಯುವಕನ್ನು ಕರೆದುಕೊಂಡು ಹೋಗಿದ್ದೆ. ಅವರಿಂದ ಒಂದು ಗುರುತಿನ ಪತ್ರವನ್ನು ಪಡೆದುಕೊಳ್ಳಬೇಕಾಗಿತ್ತು. ಅವತ್ತಷ್ಟೆ ನಮ್ಮನ್ನು ನೋಡಿದ ಅವರು ಕಳೆದ ಹತ್ತು ವರ್ಷಗಳಿಂದ ಇವರನ್ನು ಬಲ್ಲೆ ಎಂದು ಪತ್ರ ಬರೆದು ಸಹಿ ಮಾಡಿ ಕೊಟ್ಟಿದ್ದರು. ನನ್ನ ಜತೆಗೆ ಬಂದವನಿಗೆ ಪೊಲೀಸ್‍ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು. ಅವತ್ತಿಂದ ಮೊನ್ನೆ ಮೊನ್ನೆವರೆಗೂ ನಾನು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದೆ,” ಎಂದು ಅವರು ಗತಕಾಲದ ನೆನಪುಗಳನ್ನು ಹಂಚಿಕೊಂಡರು.

ದಿಲ್ಲಿ ಚುನಾವಣೆ, ರಾಷ್ಟ್ರೀಯ ಪಕ್ಷಗಳ ಚುನಾವಣೆ ತಂತ್ರಗಾರಿಕೆ, ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಹತ್ತಿರದಿಂದ ನೋಡುತ್ತಿರುವ ನನಗೆ ಒಂದಂತೂ ಸ್ಪಷ್ಟವಾಗುತ್ತಿದೆ. ‘ಜನ ಹಣಕ್ಕೆ, ಹೆಂಡಕ್ಕೆ ಓಟನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಬದಲಾಗದ ಹೊರತು,chanakya-exit-poll-delhi-2015 ಈ ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ದೇಶದ ರಾಜಕಾರಣವನ್ನು ಬದಲಾಯಿಸುವುದು ಕಷ್ಟ’ ಎಂಬ ಮಾತುಗಳು ಸಂಪೂರ್ಣ ಸತ್ಯವಲ್ಲ ಅಂತ ಅನ್ನಿಸುತ್ತದೆ. ಜನ ಸರಿಯಿಲ್ಲ ಅಥವಾ ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಮೇಲ್ನೋಟದ ಮಾತುಗಳು. ಆದರೆ ಆಳಕ್ಕಿಳಿದು, ಪ್ರಾಮಾಣಿಕವಾದ ಪರ್ಯಾಯವೊಂದನ್ನು ಅವರ ಮುಂದಿಟ್ಟರೆ, ದಿಲ್ಲಿಯ ಇವತ್ತಿನ ಮತದಾದರರು ಪ್ರದರ್ಶಿಸುತ್ತಿರುವ ಇಚ್ಚಾಶಕ್ತಿಯನ್ನು ದೇಶದ ಯಾವ ಭಾಗದಲ್ಲಾದರೂ ಖಂಡಿತಾ ನಿರೀಕ್ಷಿಸಬಹುದು. ಹೀಗಾಗಿಯೇ, ಈ ಬಾರಿಯ ದಿಲ್ಲಿ ಚುನಾವಣೆಯನ್ನು ಇತರೆ ಚುನಾವಣೆಗಳಂತೆ ಕೇವಲ ರಾಜಕೀಯ ಕದನಕ್ಕೆ ಸಮೀಕರಿಸಿ, ಸೋಲು-ಗೆಲವುಗಳ ಅಂತರದಿಂದ ಮಾತ್ರವೇ ಅಳೆಯುವ ಅಗತ್ಯವಿಲ್ಲ.

ಹಾಗಂತ ದಿಲ್ಲಿಯಲ್ಲಿ ನಡೆಯುತ್ತಿರುವ ಭಿನ್ನ ರಾಜಕೀಯ ಕದನಕ್ಕೆ ತನ್ನದೇ ಆದಂತಹ ಸಿದ್ಧತೆ ಇರುವುದು ಇಲ್ಲಿ ಕಂಡುಬರುತ್ತದೆ. anna-hazare-bhushans“ಅಣ್ಣಾ ಮುಂದಾಳತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಆರಂಭದ ದಿನಗಳಲ್ಲಿ ಆಕರ್ಷಿಸಿದ್ದು ಮದ್ಯಮ ವರ್ಗದ ಯುವ ಸಮುದಾಯವನ್ನು. ಯಾವುದೇ ಆಂದೋಲನ ಅಥವಾ ಚಳವಳಿಗೆ ತನ್ನದೇ ಆದ ಮಿತಿಗಳು ಇರುತ್ತವೆ. ಹೀಗಿರುವಾಗಲೇ ಇಡೀ ಆಂದೋಲದ ಮುಂದುವರಿದ ಭಾಗವಾಗಿ ಆಮ್‍ ಆದ್ಮಿ ಹುಟ್ಟಿಕೊಂಡಿತು. ಈ ಸಮಯದಲ್ಲೂ ಕೂಡ ರಾಜಕೀಯ ಸ್ಪಷ್ಟತೆಯ ಇರಲಿಲ್ಲ. ಉದಾಹರಣೆಗೆ ಮೀಸಲಾತಿ ವಿಚಾರದಲ್ಲಿ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿತ್ತು,” ಎಂದು ಆಮ್‍ ಆದ್ಮಿ ಪಕ್ಷದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದರು ಕಿರಣ್‍ ವಿಸ್ಸಾ. ಹಾಗೆ, ಅಸ್ಪಷ್ಟತೆಯೇ ನಡುವೆ ಚುನಾವಣೆಗೆ ಇಳಿದು, ಶೀಲಾ ದೀಕ್ಷಿತ್‍ರನ್ನು ಮಣಿಸಿದ್ದ ಆಪ್‍ಗೆ ಅಧಿಕಾರವೂ ಸಿಕ್ಕಿತ್ತು. ಬಹುಶಃ ಅವತ್ತಿಗಿದ್ದ ಮೆಚ್ಯುರಿಟಿಯನ್ನು ಇಟ್ಟುಕೊಂಡೇ ಆಪ್‍ ಸರಕಾರ 49 ದಿನಗಳಲ್ಲಿ ಸ್ಪಷ್ಟವಾಗಿ ಬಡಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.kiran-kumar-vissa-aap “ಸಿಕ್ಕ 49 ದಿನಗಳಲ್ಲಿ ನಮ್ಮ ಮನೆಯ ಕರೆಂಟು ಬಿಲ್‍ ಕಡಿಮೆಯಾಯಿತು. ಏನೇ ಆಗಲಿ, ನಾವೇ ಕಟ್ಟಿದ ಟ್ಯಾಕ್ಸ್ ದುಡ್ಡಿನಲ್ಲಿ ನಮಗೆ ಅನುಕೂಲ ಮಾಡಿಕೊಡುವ ಮೊದಲ ಸರಕಾರವನ್ನು ನಾವು ನೋಡಿದ್ದೆವು. ಆದರೆ, ಅಧಿಕಾರ ಬಿಟ್ಟು ಕೆಳಗೆ ಇಳಿದಾಗ ಬೇಜಾಗಿತ್ತು,” ಎಂದರು ಗೋವಿಂದ್ ಬಿಲಾಲ್‍. ಇದು ದಿಲ್ಲಿಯಲ್ಲಿ ಆಪ್‍ ಪರವಾಗಿ ಮಾತನಾಡುವವರೂ ವ್ಯಕ್ತಪಡಿಸುವ ಸಾಮಾನ್ಯ ಭಿನ್ನಾಭಿಪ್ರಾಯ. ಆದರೆ, ಅವತ್ತಿಗಿನ್ನೂ ಮಧ್ಯಮ ವರ್ಗದ ಸ್ವಯಂ ಸೇವಕರು, ಕಾರ್ಯಕರ್ತರು ಮತ್ತು ಪಕ್ಷದ ಸ್ಥರದ ನಾಯಕತ್ವವನ್ನು ಹೊಂದಿದ್ದ ಆಪ್‍, ಸರಕಾರ ನಡೆಸುವ ವಿಚಾರ ಬಂದಾಗ ಹೇಗೆ ಸ್ಪಷ್ಟವಾಗಿ ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸಿತು ಎಂಬುದೇ ಒಂದು ಸೋಜಿಗ.

ಅಲ್ಲಿಂದ ಮುಂದೆ ಆಮ್‍ ಆದ್ಮಿ ಪಕ್ಷದ ಒಡನಾಟ ನಿಜವಾದ ಜನ ಸಾಮಾನ್ಯ ಜನರ ಜತೆಗೆ ಹೆಚ್ಚಾಯಿತು. “ಒಂದು ಹಂತ ಕಳೆದ ನಂತರ, ವಿಶೇಷವಾಗಿ ಲೋಕಸಭಾ ಚುನಾವಣೆ ನಂತರ ನಾವು ಯಾರಿಗಾಗಿ ರಾಜಕೀಯ ಪಕ್ಷ ನಡೆಸಬೇಕು ಮತ್ತು ಅದರ ಉದ್ದೇಶಗಳು ಏನಿರಬೇಕು ಎಂಬುದು ಸ್ಪಷ್ಟವಾಯಿತು. ಆ ನಂತರ ಮತ್ತೆ ಮೀಸಲಾತಿ ವಿಚಾರದಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ,” ಎಂದು ಕಿರಣ್‍ ವಿಸ್ಸಾ ವಿವರಿಸಿದ್ದರು. ಇವತ್ತು ದಿಲ್ಲಿಯಲ್ಲಿ ಆಮ್‍ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮತ್ತು ಅದಕ್ಕೆ ಸಿಕ್ಕಿರುವ ಜನವರ್ಗದ ಬೆಂಬಲವನ್ನು ಗಮನಿಸಿದರೆ ಕಿರಣ್‍ ಅವರ ಮಾತುಗಳಲ್ಲಿನ ಸ್ಪಷ್ಟತೆ ಅರಿವಿಗೆ ಬರುತ್ತದೆ.

ಒಂದು ಕಡೆ ಆಪ್‍ನ ವೈಚಾರಿಕ ಸ್ಪಷ್ಟತೆ ರೂಪ ಪಡೆದುಕೊಳ್ಳುತ್ತಿರುವ ಹೊತ್ತಿಗೇ, ಚುನಾವಣೆ ರಾಜಕಾರಣದ ತಂತ್ರಗಳು ಪಕ್ಷದ ನಾಯಕತ್ವಕ್ಕೆ ಪಾಠ ಕಲಿಸುತ್ತ ಹೋದವು. ಅದರ ಕುರಿತು ಇನ್ನಷ್ಟು ಆಳವಾಗಿ ಮುಂದೆ ಯಾವಾಗಾದರೂ ಬರೆಯವುದು ಸೂಕ್ತ. ಇಲ್ಲೀಗ, ಮತದಾನದ ಭರಾಟೆ ಅಂತ್ಯವಾಗಿದೆ. ನಿನ್ನೆಯಷ್ಟೆ ಬೆಂಗಳೂರಿನಿಂದ ಕರೆ ಮಾಡಿದ್ದ ದೊಡ್ಡಿಪಾಳ್ಯ ನರಹಿಂಹಮೂರ್ತಿ, “ಬಿಜೆಪಿಯವರು ಕೊನೆಯ ಕ್ಷಣದಲ್ಲಿ ವೋಟಿಂಗ್‍ ಮಷೀನ್‍ಗಳನ್ನು ಬಿಜೆಪಿ ಪರವಾಗಿ ಬದಲಾಯಿಸಿದರೆ ಕತೆ ಏನು? ಪ್ರತಿ ಐದನೇ ಅಥವಾ ಆರನೇ ಮತ ಬಿಜೆಪಿಗೇ ಬೀಳುವಂತೆ ಮಾಡುವ ಸಾಧ್ಯತೆ ಇದೆಯಂತೆ,” aap-war-room-2015-delhiಎಂದು ಕಾಳಜಿ ಮತ್ತು ಆತಂಕವನ್ನು ವ್ಯಕ್ತಪಡಿಸಿದರು. ಬಹುಶಃ ಇವತ್ತು ಪರ್ಯಾಯದ ರಾಜಕಾರಣವನ್ನು ಮಾಡಬೇಕು ಎಂದರೆ, ಕೊನೆಯ ಹಂತದ ಇಂತಹ ಸಾಧ್ಯತೆಗಳ ಕುರಿತು ಗಮನಹರಿಸಬೇಕಿದೆ. ಹೀಗೊಂದು ಅಭಿಪ್ರಾಯವನ್ನು ಆಪ್‍ನ ಕಾರ್ಯಕರ್ತ ಚಂದನ್‍ ಮುಂದಿಟ್ಟರೆ, “ಈ ಬಗ್ಗೆ ನಮಗೂ ದೂರುಗಳು ಬಂದಿದ್ದವು. ಹೀಗಾಗಿ ಮತದಾನದ ದಿನ ಪಟೇಲ್‍ನಗರದ ಆಪ್‍ ಕಚೇರಿಯಲ್ಲಿ ‘ವಾರ್ ರೂಂ’ನ್ನು ಸ್ಥಾಪಿಸಿದ್ದೇವೆ. ದಿಲ್ಲಿಯ ಸೂಕ್ಷ್ಮ ಮತಗಟ್ಟೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಅಮೆರಿಕಾ, ಲಂಡನ್‍, ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಕುಳಿದ ಆಪ್‍ ಕಾರ್ಯಕರ್ತರು ವೀಕ್ಷಿಸುತ್ತಿದ್ದರು. ಅವರಿಂದ ಬರುವ ದೂರುಗಳನ್ನು ವರ್ಗೀಕರಿಸಿ ಎಲೆಕ್ಷನ್‍ ಕಮಿಷನ್‍ಗೆ ಕಳುಹಿಸಿದ್ದೇವೆ,” ಎಂದರು. ಏನೇ ಆಗಲಿ, ದಿಲ್ಲಿಯ ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದು ಫೆ. 10 ಬೆಳಗ್ಗೆ ಹನ್ನೊಂದರ ವೇಳೆಗೆ ಸ್ಪಷ್ಟವಾಗುತ್ತದೆ. ಅಲ್ಲೀವರೆಗೂ ಕಾಯದೆ ಬೇರೆ ವಿಧಿ ಇಲ್ಲ.

ದಿಲ್ಲಿಯ ಅಂತರಾಳದಲ್ಲಿ ಪರ್ಯಾಯ ರಾಜಕಾರಣದ ಹುಡುಕಾಟ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಬೆಂಗಳೂರಿನ ಜನಜಂಗುಳಿಯ ಚಿಕ್ಕಪೇಟೆಯಂತಹ ಬೀದಿ ಇದು; ಪಹಾರ್‍ಗಂಜ್. Pahar_Ganj_Streetಸಂಜೆಯಾಗುತ್ತಲೇ ಬೀದಿ ಬದಿಯ ವ್ಯಾಪಾರ ಇಲ್ಲಿ ರಂಗುಪಡೆದುಕೊಳ್ಳುತ್ತದೆ. ದೇಶ ವಿದೇಶಗಳ ಪ್ರವಾಸಿಗರು ತಮ್ಮ ದಿನದ ಸುತ್ತಾಟವನ್ನು ಮುಗಿಸಿ ವಾಪಾಸ್‍ ಬರುವ ಸಮಯವದು. ಮೊಟ್ಟೆ, ಕೋಳಿ, ಕುರಿ ಮಾಂಸದ ಅದ್ಭುತ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಬೇಯಿಸಿದ ಮೊಟ್ಟೆಗೂ ವಿಭಿನ್ನ ರುಚಿ ಇರುತ್ತದೆ ಎಂಬುದನ್ನು ಇಲ್ಲಿನ ವ್ಯಾಪಾರಿಗಳು ಪರಿಚಯಿಸುತ್ತಾರೆ. ಹಾಗೆ ಕೊಂಚ ಮುಂದೆ ಬಂದರೆ ರಸ್ತೆಯ ಬದಿಯಲ್ಲಿ ಕೊಂಚ ಆಳದ ತಳಹೊಂದಿರುವ, ದೊಡ್ಡ ದೋಸೆ ಕಾವಲಿಯಂತಹ ಪಾತ್ರೆಯಲ್ಲಿ ಕೆನೆಭರಿತ ಹಾಲು ಕುದಿಯುವುದು ಕಾಣಿಸುತ್ತದೆ. ಕಾಲು ಲೀಟರ್‍ ಗಟ್ಟಿ ಹಾಲಿಗೆ 20 ರೂಪಾಯಿ. ಎರಡು ಜಗ್ಗುಗಳಲ್ಲಿ ಆ ಕಡೆಯಿಂದ ಈ ಕಡೆಗೆ ಎತ್ತಿ ಸುರಿದು, ಅದಕ್ಕೆ ಸಕ್ಕರೆ ಬೆರೆಸಿ ಮತ್ತೊಂದು ಲೋಟಕ್ಕೆ ಸುರಿದು ನಿಮ್ಮ ಕೈಗಿಡುತ್ತಾರೆ. delhi-paharganj-milkಬಾಯಿಗಿಟ್ಟರೆ ಹಾಲಿಗೆ ಯಾಕೆ ಅಮೃತ ಎನ್ನುತ್ತಾರೆ ಎಂಬುದನ್ನು ನಾಲಿಗೆ ಸವಿಯೇ ಅರ್ಥಪಡಿಸುತ್ತದೆ. ದಿಲ್ಲಿಯ ಆಹಾರ ಉದ್ಯಮದ ಮನಸ್ಥಿತಿಗೆ ಪ್ರತಿಬಿಂಬಗಳು ಇವು.

ಒಂದು ಕಡೆ ಹೊಸದಿಲ್ಲಿಯಂತಹ ದುಬಾರಿ ಪ್ರದೇಶದಲ್ಲಿ ಪಂಚತಾರ ಹೋಟೆಲ್‍ಗಳು ಹೇರಳವಾಗಿ ಸಿಗುತ್ತವೆ. ಇಲ್ಲಿನ ವೆಚ್ಚವನ್ನು ಭರಿಸಲಾಗದವರಿಗೆ ಹಳೆಯ ದಿಲ್ಲಿಯ, ಪಹಾರ್‍ಗಂಜ್‍ನಂತಹ ಇಕ್ಕಟ್ಟಾದ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ರುಚಿಕಟ್ಟಾದ ತಿಂಡಿ ತಿನಿಸುಗಳು ಸಿಗುತ್ತವೆ. ಕೊಟ್ಟ ಹಣಕ್ಕೆ ಮೋಸವಿಲ್ಲದ ಗುಣಮಟ್ಟದ ಆಹಾರಗಳವು. ನಮ್ಮಲ್ಲಿ ಹದಿನೈದು ರೂಪಾಯಿಯ ಪಾನಿಪೂರಿ ನೀಡುವ ವ್ಯಾಪಾರಿ ಹಿಂಡಿ ಹಿಂಡಿ ಚಪ್ಪಟೆಯಾಗಿ ಹೋದ ಲಿಂಬೆಹಣ್ಣನ್ನೇ ಮತ್ತೊಮ್ಮೆ ಹಿಂಡಿ ಶಾಸ್ತ್ರ ಪೂರೈಸುತ್ತಾನೆ. ಆದರೆ ದಿಲ್ಲಿಯ ಬೀದಿ ಬದಿಯಲ್ಲಿ ಹತ್ತು ರೂಪಾಯಿ ಒಂದು ಗೆಣಸಿನ ಪೀಸನ್ನು ಕಟ್‍ ಮಾಡಿಕೊಡುವ ವ್ಯಾಪಾರಿ, ನಗುಮುಖದಿಂದಲೇ ಅರ್ಧ ಲಿಂಬೆ ಹಣ್ಣನ್ನು ಹಿಂಡಿ ಬಾಯಲ್ಲಿ ನೀರೂರಿಸುತ್ತಾರೆ. ಇಲ್ಲಿನ ದುಡಿಮೆಗೂ ಒಂದು ಉದ್ದೇಶ ಇರುವಂತೆ ಜನ ಬದುಕುತ್ತಾರೆ. ಪಡೆಯುವ ಹಣಕ್ಕೆ ತಕ್ಕ ಗುಣಮಟ್ಟವನ್ನು ನೀಡಬೇಕು ಎಂಬ ಕಾಮನ್‍ಸೆನ್ಸ್ ಇಲ್ಲಿನ ಅಂತರಾಳದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ನಮ್ಮ ದರ್ಶಿನಿಗಳನ್ನು ನಡೆಸುತ್ತಿರುವ ವರ್ಗದವರನ್ನು ಇಲ್ಲಿನ ಬೀದಿ ವ್ಯಾಪಾರಿಗಳ ಜತೆ ಸಮೀಕರಿಸಿ ನೋಡಿದರೆ, ದಿಲ್ಲಿಯಲ್ಲಿ ಯಾಕೆ ಆಮ್‍ ಆದ್ಮಿಯಂತಹ delhi food stallಬದಲಾವಣೆ ಬಯಸುವ ಪಕ್ಷ ತನ್ನೆಲ್ಲಾ ಮಿತಿಗಳ ಆಚೆಗೂ ಅಧಿಕಾರ ಕೇಂದ್ರದ ಹತ್ತಿರಕ್ಕೆ ಬಂದು ನಿಂತಿದೆ ಎಂಬುದು ಅರ್ಥವಾಗುತ್ತದೆ.

ಮೊನ್ನೆ ವೈಶಾಲಿ ಮಾರ್ಗದ ಮೆಟ್ರೊದಲ್ಲಿ ಸಿಕ್ಕ ದಿಲ್ಲಿ ಯೂನಿವರ್ಸಿಟಿಯ ರಾಜಕೀಯ ಶಾಸ್ತ್ರದ ವಿದ್ಯಾರ್ಥಿ ಸಂಹಿತಾ ಸೇಟ್‍ ಜತೆ ಈ ಕುರಿತು ಅಭಿಪ್ರಾಯವನ್ನು ಹಂಚಿಕೊಂಡೆ. “ಹೌದಾ, ನಾವು ಈ ಬಗ್ಗೆ ಗಮನಿಸಿಯೇ ಇರಲಿಲ್ಲ ನೋಡಿ,’’ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, “ದಿಲ್ಲಿ ಎಂದರೆ ಖುಷವಂತ್‍ ಸಿಂಗ್‍ ಬರೆದ ದಿಲ್ಲಿ ಕಾದಂಬರಿ ಎನ್ನೋ ಕಲ್ಪನೆ ಕಳೆದ ದಶಕದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಸುಮಾರು ದಿನನೈದು ವರ್ಷ ದಿಲ್ಲಿಯನ್ನು ಆಳಿದ ಕಾಂಗ್ರೆಸ್‍ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಳೆಯ ದಿಲ್ಲಿಯ ಜನರನ್ನು ಮರೆತೇ ಬಿಟ್ಟಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಇವರು ನೆನಪಾಗುತ್ತಿದ್ದರು. ಬಿಜೆಪಿ ಕೂಡ ಹಳೆಯ ದಿಲ್ಲಿಯ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸೋತಿತು ಅನ್ನಿಸುತ್ತದೆ. ಲೋಕಸಭೆ ಚುನಾವಣೆ ನಂತರ ಪೂರ್ವ ದಿಲ್ಲಿಯಲ್ಲಿ ಕೋಮುಸಂಘರ್ಷ ನಡೆಯಿತಾದರೂ, ಅದೂ ಕೂಡ ಚುನಾವಣೆಯ ಅಸ್ತ್ರವಾಗಲಿಲ್ಲ. ಯಾಕೆಂದರೆ ದಿಲ್ಲಿಯ ಕೆಳವರ್ಗದಲ್ಲಿ ಯೂನಿಕ್‍ ಆದ ಪ್ರಾಮಾಣಿಕತೆ ಮತ್ತು ರಾಜಕೀಯ ಅರಿವು ಇರುವುದು ಕಾರಣ ಅನ್ನಿಸುತ್ತದೆ,’’ ಎಂದರು. ಪೂರ್ವ ದಿಲ್ಲಿಯ ತ್ರಿಲೋಕ್‍ಪುರಿಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಕೋಮುಗಲಭೆ ನಡೆದಿತ್ತು. ಈ ಕುರಿತು ಆಟೋ ಚಾಲಕರೊಬ್ಬರು ಪ್ರಸ್ತಾಪಿಸಿದ ಕೆಲವು ಮಾತುಗಳು ಈ ಸಮಯದಲ್ಲಿ ನೆನಪಾಯಿತು. trilokpuri-clashesಅವರ ಹೆಸರು ಮರೆತುಹೋಗಿದೆ. “ನಾನು ಗಲಭೆ ನಡೆದ ಸಂದರ್ಭದಲ್ಲಿ ತ್ರಿಲೋಕ್‍ಪುರಿಯಲ್ಲೇ ಇದ್ದೆ. ಸುಖಾಸುಮ್ಮನೆ ಗಲಾಟೆ ಮಾಡಲಾಯಿತು. ಆದರೆ, ಅಲ್ಲಿರುವಷ್ಟು ಬಡತನ ಮತ್ತು ಸಮಸ್ಯೆಗಳು ಇಡೀ ದಿಲ್ಲಿಯಲ್ಲಿ ಇಲ್ಲ,’’ ಎಂದಿದ್ದರು. ಸ್ವಾತಂತ್ರ್ಯ ನಂತರ ಬಂಗಾಳದಲ್ಲಿ ನಡೆದ ಕೋಮು ಗಲಭೆಗಳನ್ನು ಪ್ರಸ್ತಾಪಿಸುತ್ತ, ‘ಕೋಮು ಸಂಘರ್ಷದ ಮೂಲ ಇರುವುದು ನಮ್ಮ ಆರ್ಥಿಕ ಸ್ಥರಗಳಲ್ಲಿನ ಭಿನ್ನತೆಯಲ್ಲಿ’ ಎಂದು ಜಯಪ್ರಕಾಶ್‍ ನಾರಾಯಣ್‍ ವ್ಯಾಖ್ಯಾನಿಸಿದ್ದರು ಎಂದು ಹಿರಿಯರೊಬ್ಬರು ಹೇಳಿದ ನೆನಪು. ಅದು ನಿಜವೇ ಆಗಿದ್ದರೆ ತ್ರಿಲೋಕ್‍ಪುರಿಯಲ್ಲಿ ಹತ್ತಿದ ಕಿಡಿ ಇಂದು ಇಡೀ ದಿಲ್ಲಿಯನ್ನೇ ವ್ಯಾಪಿಸಬೇಕಿತ್ತು. ಆದರೆ, ಇಲ್ಲಿ ಜಾತಿ ಮತ್ತು ಧರ್ಮದ ವಿಚಾರಗಳಿಗಿಂತ ಬಡತನ ಮತ್ತು ಶ್ರೀಮಂತಿಕೆ (ಬಡವ ಮತ್ತು ಶ್ರೀಮಂತ ಅಲ್ಲ)ಯಂತಹ ವರ್ಗ ತಾರತಮ್ಯದ ಅಂಶ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ತ್ರಿಲೋಕ್‍ಪುರಿಯಲ್ಲಿ ಕೋಮು ಗಲಭೆ ನಡೆಯುತ್ತಲೇ ಆಪ್‍ನ ಸಕಾಲಿಕ ಮಧ್ಯಪ್ರವೇಶ ಧರ್ಮಾಧಾರಿತ ರಾಜಕಾರಣದತ್ತ ಜನ ಹೋಗುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಿತು. ಗಲಭೆ ನಡೆದ ಮಾರನೇ ದಿನವೇ ನಡೆಸಿದ ಸೌಹಾರ್ಧ ನಡಿಗೆ ಮತ್ತು ಕೋಮು ಸಾಮರಸ್ಯ ಮೂಡಿಸಲು ನಡೆಸಿದ ವಿಶಿಷ್ಟ ಪ್ರಯತ್ನಕ್ಕೆ ಇಲ್ಲಿ ಬೆಲೆ ಸಿಕ್ಕಿದೆ.

ಇಲ್ಲೀಗ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಪೆ. 7ರ ಮುಂಜಾನೆಯಿಂದ ಸಂಜೆವರೆಗೆ ದಿಲ್ಲಿಯ ಸುಮಾರು 13 ಸಾವಿರ ಮತಗಟ್ಟೆಗಳಲ್ಲಿ ದಿಲ್ಲಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ‘ದಿಲ್ಲಿ ಕೆ ದಿಲ್‍ ಮೆ ಕ್ಯಾ ಹೇ?’ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ, dandi_yatra_delhiಅದು ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಎಂಬ ಎಚ್ಚರಿಕೆ ಎಲ್ಲರಲ್ಲೂ ಇದೆ. ಅದಕ್ಕಾಗಿ ರಾತ್ರಿ ಕಾರ್ಯಾಚರಣೆಗಳನ್ನು ತಡೆಯುವ ಕೊನೆಯ ಪ್ರಯತ್ನಗಳು ಜಾರಿಯಲ್ಲಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ, ನಮ್ಮೀ ಚುನಾವಣೆ ವ್ಯವಸ್ಥೆಯ ಮಿತಿಗಳ ಒಳಗಡೆಯೇ ಬದಲಾವಣೆ ಬಯಸುವ ಸಾಧ್ಯತೆಯೊಂದನ್ನು ಅನ್ವೇಷಣೆ ಮಾಡಿದಂತಾಗುತ್ತದೆ. ಹಾಗೂ ದೇಶದ ಇತರೆ ಕಡೆಗಳಲ್ಲಿ ಹೇಗೆ ರಾಜಕೀಯ ಪರ್ಯಾಯೊಂದನ್ನು ನಿರ್ಮಿಸಬಹುದು ಎಂಬುದಕ್ಕೆ ಈ ಕಾಲದ ಮಾದರಿಯೊಂದು ಸಿಕ್ಕಂತಾಗುತ್ತದೆ.

ಶ್ರಮಕ್ಕೆ ತಕ್ಕ ದುಡಿಮೆ: ದಿಲ್ಲಿ ರಿಕ್ಷಾವಾಲಗಳಿಗೆ ಸಿಗಲಿ ಮನ್ನಣೆ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

‘ಹಿಂದಿನ ಸರಕಾರ ಮೆಟ್ರೊ ತಂದಿದೆ. ಹೀಗಾಗಿ ನನ್ನ ನಗರ ಅಭಿವೃದ್ಧಿಯಾಗಿದೆ. ಇದಕ್ಕಿಂತ ಹೆಚ್ಚಿನ ಅಭಿವೃದ್ಧಿಯನ್ನು ನೋಡಲು ನಾನು ಕಾಂಗ್ರೆಸ್‍ಗೆ ಮತ ನೀಡುತ್ತಿದ್ದೇನೆ’ ಎಂಬರ್ಥದ ಜಾಹೀರಾತನ್ನು ಕಾಂಗ್ರೆಸ್‍ ಪಕ್ಷ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ದಿಲ್ಲಿ ಮತ್ತು ಇಲ್ಲಿನ ವಾಹನ ಜಂಗುಳಿಯ ರಸ್ತೆಗಳನ್ನು ನೋಡುತ್ತಿದ್ದರೆ ಮೆಟ್ರೊ ಯೋಜನೆಯನ್ನುದೃಢ ನಿಲುವಿನೊಂದಿಗೆ ಕಾರ್ಯರೂಪಕ್ಕೆ ಇಳಿಸಿದ ಶೀಲಾ ದೀಕ್ಷಿತ್‍ ನೇತೃತ್ವದ ಮಾಜಿ congress_ad_20150126ಸರಕಾರವನ್ನು ಬೆಂಬಲಿಸುವುದರಲ್ಲಿ ಯಾವುದೇ ರಾಜಕೀಯ ಕಾಣಿಸುವುದಿಲ್ಲ. ಬೃಹತ್‍ ಪ್ರಮಾಣದಲ್ಲಿ ಬೆಳೆದು ನಿಂತಿರುವ ದಿಲ್ಲಿಯ ಸಂಚಾರ ವ್ಯವಸ್ಥೆಯನ್ನು ಇಂದು ಮೆಟ್ರೊ ರೈಲು ಹೊರತುಪಡಿಸಿ ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಷ್ಟರ ಮಟ್ಟಿಗೆ ಮೆಟ್ರೊ ರೈಲು ಇಲ್ಲಿನ ಜನರ ನಿತ್ಯ ಬದುಕಿನ ಭಾಗವಾಗಿ ಹೋಗಿದೆ. 2003ರಲ್ಲಿ ಯೋಜನೆ ತಯಾರಿಸಿ, 2006ರಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಿ, 2014 ಆದರೂ ಇನ್ನೂ ಬೆಂಗಳೂರು ಜನರಿಗೆ ಮೆಟ್ರೊ ರೈಲನ್ನು ನೀಡಲಾಗದ ನಮ್ಮ ಸರಕಾರಗಳಿಗೆ ಇಲ್ಲಿ ಸಾಕಷ್ಟು ಪಾಠಗಳು ಸಿಗುತ್ತವೆ. ಹಾಗಂತ ದಿಲ್ಲಿ ಕೇವಲ ಮೆಟ್ರೊ ರೈಲಿನ ಮೇಲೆ ಮಾತ್ರವೇ ಅವಲಂಬಿಸಿದ್ದರೆ ಇವತ್ತು ಶೀಲಾ ದೀಕ್ಷತ್‍ ಮತ್ತವರ ಕಾಂಗ್ರೆಸ್‍ ಪಕ್ಷವನ್ನು ಇಲ್ಲಿನ ಜನ ಇಷ್ಟರ ಮಟ್ಟಿಗೆ ದೂರ ಇಡಲು ಸಾಧ್ಯವೇ ಇರಲಿಲ್ಲ. “ಅವತ್ತಿಗೆ ಶೀಲಾ ದೀಕ್ಷಿತ್‍ ದಿಲ್ಲಿ ಮೆಟ್ರೊ ನಿಗಮಕ್ಕೆ ಭಾರಿ ಬೆಂಬಲ ನೀಡಿದರು. ಈ ಮೂಲಕ ಇಷ್ಟು ದೊಡ್ಡ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದರು, ಆದರೆ, ಮೆಟ್ರೊ ರೈಲಿನ ಆಚೆಗೂ ದಿಲ್ಲಿ ಜನರ ಸಂಚಾರ ಸಮಸ್ಯೆಗಳಿರುವುದನ್ನು ಅವರು ಗಮನಿಸದೇ ಹೋದರು,’’ ಎಂಬ ಅಭಿಪ್ರಾಯವನ್ನು ದಿಲ್ಲಿ ಮೆಟ್ರೊ ನಿಗಮದ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದರು.

ಹಳೆ ದಿಲ್ಲಿಯ ಇಕ್ಕಟ್ಟಾದ ರಸ್ತೆಗಳು, ಸಂಚಾರ ನಿಯಮಗಳನ್ನು ಗಮನಿಸಲೂ ಹೋಗದ ಸವಾರರ ಮನಸ್ಥಿತಿ, ಸಿಕ್ಕ ಸಿಕ್ಕಲ್ಲಿ ನಿಂತು ದಂಡ ಹಾಕುವ ಟ್ರಾಫಿಕ್‍ ಪೊಲೀಸರು ಮತ್ತು ರಿಕ್ಷಾ ತುಳಿಯುವ ಜನರ ಸಂಕಷ್ಟಗಳನ್ನು ನೋಡುತ್ತಿದ್ದರೆ ಮೆಟ್ರೊ ಅಧಿಕಾರಿಯವರ ಅಭಿಪ್ರಾಯ ವಾಸ್ತವಕ್ಕೆ cyclerickshaw-delhiಹತ್ತಿರವಾಗಿರುವಂತೆ ಕಾಣಿಸುತ್ತದೆ. ದಿಲ್ಲಿಯಲ್ಲಿ ಮೆಟ್ರೊ ರೈಲನ್ನು ಹೊರತುಪಡಿಸಿದರೆ, ಸಂಚಾರ ವ್ಯವಸ್ಥೆಗೆ ತಮ್ಮ ಬೆವರಿನ ಪಾಲವನ್ನು ನೀಡುತ್ತಿರುವವರು ಇಲ್ಲಿನ ರಿಕ್ಷಾ ಚಾಲಕರು. ಸಾಮಾನ್ಯ ಸೈಕಲ್‍ಗೆ ಹಿಂದೆ ಇಬ್ಬರು ಕೂರುವ ಆಸನ ವ್ಯವಸ್ಥೆ ಇರುವ ಈ ರಿಕ್ಷಾಗಳನ್ನು ತುಳಿಯುವುದನ್ನು ನೋಡುತ್ತಿದ್ದರೆ, ಹೊಸದಿಲ್ಲಿಯ ಒಡಲು ತುಂಬಿಕೊಂಡಿರುವ ಬಡತನ ಮತ್ತು ವರ್ಗ ತಾರತಮ್ಯವನ್ನು ನೆನಪಿಸುತ್ತವೆ. ಇಂತಹ ರಿಕ್ಷಾವಾಲಗಳಲ್ಲಿ ಬಹುತೇಕರು ಬಿಹಾರ ಮತ್ತು ಛತ್ತೀಸ್‍ಘಡದಂತಹ ರಾಜ್ಯದಿಂದ ಬಂದವರು. ಬಹುಶಃ ತಲೆಯ ಮೇಲೊಂದು ಸೂರಿಲ್ಲದ ದಿಲ್ಲಿಯ ಭಿಕ್ಷುಕರನ್ನು ಹೊರತು ಪಡಿಸಿದರೆ, ಬಡತನ ಕೃಪಾಂಕದ ನಂತರದ ಸ್ಥಾನದಲ್ಲಿ ಇರುವವರು ರಿಕ್ಷಾವಾಲಾಗಳು. ದಿನಕ್ಕೆ 50 ರಿಂದ 80 ರೂಪಾಯಿ ಬಾಡಿಗೆ ನೀಡಿ ರಿಕ್ಷಾವನ್ನು ಓಡಿಸುವ ಜನರ ಸಂಖ್ಯೆಯೇ ಸುಮಾರು 2 ಲಕ್ಷಕ್ಕೂ ಹೆಚ್ಚಿದೆ. “ದಿನಕ್ಕೆ ಮುನ್ನೂರರಿಂದ ಐನೂರು ರೂಪಾಯಿ ದುಡಿಮೆ ಆಗುತ್ತದೆ. ಇದರಲ್ಲಿ ರೂಮಿನ ಬಾಡಿಗೆ ಐನೂರು, ಊಟಕ್ಕೆ ಒಂದು ಸಾವಿರ ಕಳೆದರೆ ಉಳಿದ ಹಣವನ್ನು ನಮ್ಮ ಹಳ್ಳಿಗೆ ಕಳುಹಿಸಬೇಕು,” ಎಂದು ತಮ್ಮ ದುಡಿಮೆಯ ಲೆಕ್ಕಾಚಾರವನ್ನು ನೀಡಿದ್ದು ಯುವ ರಿಕ್ಷಾವಾಲ ಗೌರವ್‍ ಗುಪ್ತಾ. ಆತ ಕರೋಲ್‍ಭಾಗ್‍ನ ಗಲ್ಲಿಯೊಂದರ ಚಿಕ್ಕ ಕೋಟೆಯಲ್ಲಿ ವಾಸವಾಗಿದ್ದಾನೆ. ಒಟ್ಟು ಆರು ಜನರು ಹಂಚಿಕೊಂಡಿರುವ ಆ ಸೂರಿನ ಬಾಡಿಗೆ ಮೂರು ಸಾವಿರ ರೂಪಾಯಿ. “ತಿಂಗಳಿಗೆ ಒಂದರಿಂದ ಒಂದೂವರೆ ಸಾವಿರದವರೆಗೆ ವಿದ್ಯುತ್‍ ಬಿಲ್‍ ಬರುತ್ತಿತ್ತು. ನೀರಿಗಾಗಿ ಆರು ನೂರು ಖರ್ಚು ಮಾಡುತ್ತಿದ್ದೆವು. ಜಾಡೂವಾಲಾ ಪಕ್ಷ ಬಂದ ನಂತರ ನಮಗೆ ಸಾವಿರ ರೂಪಾಯಿ ಉಳಿತಾಯವಾಗುತ್ತಿತ್ತು. ಹೀಗಾಗಿ ಈ ಬಾರಿ ಜಾಡುಗೆ ನಮ್ಮ ಮತ,” ಎಂದರು. ಜತೆಗೆ ಅವರ ಕುತ್ತಿಗೆಗೆ ಸುತ್ತಿಕೊಂಡಿದ್ದ ಬಿಜೆಪಿಯ ಪ್ರಚಾರ ಸಾಮಾಗ್ರಿಯನ್ನು ಸುತ್ತಿ ತಮ್ಮ ಜೇಬಿಗೆ ಹಾಕಿಕೊಂಡು ನಕ್ಕರು.

ಇತ್ತೀಚೆಗೆ ತುಳಿಯುವ ರಿಕ್ಷಾಗಳ ಜಾಗದಲ್ಲಿ ಮೋಟರ್‍ ಜೋಡಿಸಿಕೊಂಡಿರುವ ಇ-ರಿಕ್ಷಾಗಳು ಬಂದಿವೆ. e-rickshaw-delhiಯುಪಿ ಗಡಿಭಾಗದ ಗ್ಯಾರೇಜುಗಳಲ್ಲಿ ಹಳೆಯದಾದ ಕೃಷಿಗೆ ಬಳಸುವ ಮೋಟರ್‍ಗಳನ್ನು ಜೋಡಿಸಿ ತಯಾರಿಸುವ ಇ- ರಿಕ್ಷಾಗಳನ್ನು ಇನ್ನೂ ಸಾರಿಗೆ ಇಲಾಖೆ ಕಾಯ್ದೆ ಅಡಿಗೆ ತಂದಿಲ್ಲ. ದಿನಕ್ಕೆ 400 ರೂಪಾಯಿ ಬಾಡಿಗೆಗೆ ಸಿಗುವ ಇ- ರಿಕ್ಷಾಗಳ ದುಬಾರಿ ಬಾಡಿಗೆಯಿಂದಾಗಿ ಲಾಭದಾಯಕ ಅಲ್ಲ ಎಂಬುದು ಕೆಲವು ರಿಕ್ಷಾವಾಲಾಗಳ ಅಭಿಪ್ರಾಯ. “ಇ- ರಿಕ್ಷಾಗಳ ಬಾಡಿಗೆ ದುಬಾರಿ. ಹೀಗಾಗಿ ಅದರ ಸಹವಾಸಕ್ಕೆ ನಾನು ಹೋಗಿಲ್ಲ. ಜತೆಗೆ, ಅವುಗಳಿಗೆ ಜೋಡಿಸಿದ ಮೋಟರ್‍ ಶಕ್ತಿ ಹೆಚ್ಚಿರುವುದರಿಂದ ಮೊದಲು ಪೊಲೀಸರು ಅವುಗಳ ಮೇಲೆ ಕೇಸು ಹಾಕುತ್ತಿದ್ದರು. ಆಪ್‍ ಸರಕಾರ ಬಂದ ನಂತರ ಅದು ನಿಂತಿಹೋಗಿತ್ತು,” ಎಂದರು ಭರತ್‍ ಶಾಹಿ. ಬಿಹಾರ ಮೂಲಕ ಇವರು ಕಳೆದ ಇಪ್ಪತ್ತು ವರ್ಷಗಳಿಂದ ದಿಲ್ಲಿಯಲ್ಲಿ ರಿಕ್ಷಾ ತುಳಿಯುತ್ತಿದ್ದಾರೆ. ಐವತ್ತರ ಆಸುಪಾಸಿನ, ಕೃಷ ಶರೀರದ ಅವರ ಮೈಕಟ್ಟು ಯಾವ ಜಿಮ್‍ಬಾಡಿಗೂ ಕಡಿಮೆ ಇದ್ದಂತೆ ಕಾಣುವುದಿಲ್ಲ. “ಬಹುಶಃ ನಮ್ಮದೇ ಸರಕಾರ ಬಂದರೂ ಇ- ರಿಕ್ಷಾಗಳಿಗೆ ಅನುಮತಿ ನೀಡುವ ಕುರಿತು ಮಧ್ಯದ ಹಾದಿಯನ್ನು ಅನುಸರಿಸಬೇಕಿದೆ,’’ ಎಂದರು ಆಪ್‍ನ ದಿಲ್ಲಿ ನಾಯಕರೊಬ್ಬರು.

ಅಚ್ಚರಿಯ ವಿಚಾರ ಏನೆಂದರೆ ಭಾರಿ ಸಂಖ್ಯೆಯಲ್ಲಿರುವ ದಿಲ್ಲಿಯ ನಿಜವಾದ ಸಾಮಾನ್ಯ ಪ್ರಜೆಗಳಾದ ರಿಕ್ಷಾವಾಲಾಗಳ ಕುರಿತು ಕಾಂಗ್ರೆಸ್‍ ಆಗಲಿ, ಬಿಜೆಪಿ ಆಗಲಿ ಗಮನ ಸೆಳೆಯುವಂತಹ ಮಾತುಗಳನ್ನು ಆಡುತ್ತಿಲ್ಲ. ಇವರಿಗೂ ಕೂಡ, ಎರಡೂ Kiran-Bedi-vs-Arvind-Kejriwal-rickshaw-ad-2015ಪ್ರಮುಖ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಪ್ಪುಗೆಯ ಭಾವವೂ ಇಲ್ಲ. ಕೇಜ್ರಿವಾಲ್‍ ನೇತೃತ್ವದ ಸರಕಾರ ಬಂದರೆ ತಮ್ಮ ಬದುಕು ಬದಲಾಗುತ್ತದೆ ಎಂಬ ಬಹುದೊಡ್ಡ ಆಶಯ ಇವರಲ್ಲಿ ಎದ್ದು ಕಾಣುತ್ತಿದೆ. ಚುನಾವಣೆ, ಅಧಿಕಾರದ ರಾಜಕಾರಣ, ಆರೋಪ-ಪ್ರತ್ಯಾರೋಪ ಮತ್ತು ಟಿವಿಗಳಲ್ಲಿನ ಚರ್ಚೆಗಳ ಅಬ್ಬರಗಳಿಂದ ಈ ರಿಕ್ಷಾವಾಲಗಳು ದೂರವೇ ಉಳಿದಿದ್ದಾರೆ. ದೇಶದ ರಾಜಧಾನಿಯ ತಣ್ಣನೆಯ ರಸ್ತೆಗಳಲ್ಲಿ ಅಕ್ಷರಶಃ ಬೆವರು ಸುರಿಸುವ ರಿಕ್ಷಾವಾಲಗಳ ಆಶಯವನ್ನು ಯಾವುದೇ ಭಾವಿ ಸರಕಾರ ಒಂದು ದಿನದಲ್ಲಿ ಪೂರೈಸುವುದು ಕಷ್ಟ ಕೂಡ. ಏನೇ ಆಗಲಿ, ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸುಂದರವಾಗಿಸಬೇಕು ಎಂದರೆ ಇಂಥ ರಿಕ್ಷಾವಾಲಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ನೋಡಿಕೊಳ್ಳುವುದು ದಿಲ್ಲಿಯನ್ನು ಆಳುವ ಸರಕಾರದ ಹೊಣೆಗಾರಿಕೆ. ಚುನಾವಣೆ ಭವಿಷ್ಯ ಏನೇ ಆಗಲಿ, ದಿಲ್ಲಿಯ ರಿಕ್ಷಾವಾಲಗಳ ಬದುಕು ಬದಲಾಗಲಿ ಎಂದು ಈ ಸಮಯದಲ್ಲಿ ನಾವು ತುಂಬು ಮನಸ್ಸಿನಿಂದ ಹಾರೈಸಬಹುದು ಅಷ್ಟೆ…

ದಿಲ್ಲಿ ಕಿ ದಿಲ್ ಮೇ ಕ್ಯಾ ಹೇ ಭಾಯ್ ಸಾಬ್?!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ದೇಶದ ರಾಜಧಾನಿಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತದಲ್ಲಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕೊನೆಯ ಹಂತದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ತಮ್ಮ ಸ್ವಕ್ಷೇತ್ರ ಕೃಷ್ಣಾ ನಗರದಲ್ಲಿ ಇಂದು ಬೆಳಗ್ಗೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ‘ಪ್ರಾಮಾಣಿಕ ರಾಜಕಾರಣಕ್ಕೆ ಹಾಗೂ ಪ್ರೀತಿಯ ಆಡಳಿತ’ಕ್ಕೆ ಜನ ಮನ್ನಣೆ ನೀಡಲಿದ್ದಾರೆ gulpanang-roadshow-krishnanagarಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಆಮ್‍ ಆದ್ಮಿ ಪಕ್ಷ ತನ್ನ ಮೇಲೆ ಬಿಜೆಪಿ ಹೊರೆಸಿರುವ ಮಹಿಳಾ ವಿರೋಧಿ ಕಳಂಕವನ್ನು ತೊಳೆದುಕೊಳ್ಳಲು ಮಹಿಳಾ ನಾಯಕಿಯರನ್ನು ಮುಂದಿಟ್ಟುಕೊಂಡು ಬೃಹತ್‍ ಸಭೆಯನ್ನು ಅದೇ ಕ್ಷೇತ್ರದಲ್ಲಿ ನಡೆಸಿದೆ. ಕಾಂಗ್ರೆಸ್‍ ಮಾತ್ರ ಎಂದಿನಂತೆ ತನ್ನ ಸಾಂಪ್ರದಾಯಿಕ ಚುನಾವಣೆ ಪ್ರಚಾರ ಶೈಲಿಗೆ ಮೊರೆಹೋಗಿದೆ. ಬೂತ್‍ ಮಟ್ಟದಲ್ಲಿ ಮೈಕ್‍ ಪ್ರಚಾರ, ರಾಹುಲ್‍ ಗಾಂಧಿ ಬಹಿರಂಗ ಪ್ರಚಾರ ಮತ್ತು ಟಿವಿ ಮಾಧ್ಯಮದಲ್ಲಿ ತನ್ನ ನಿಲುವುಗಳನ್ನು ಸಮರ್ಥಿಸಿಕೊಳ್ಳುವುದು ಬಿಟ್ಟರೆ, ಅನುಭವಿ ಪಕ್ಷದ ಬತ್ತಳಿಕೆ ಖಾಲಿಯಾದಂತೆ ಕಾಣಿಸುತ್ತಿದೆ. ಫೆ. 5ರ ಸಂಜೆಗೆ ದಿಲ್ಲಿಯಲ್ಲಿ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಮಯದಲ್ಲಿ ಹೊರಗಿನಿಂದ ಬಂದ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ದಿಲ್ಲಿ ತೊರೆಯುವಂತೆ ಈಗಾಗಲೇ ತಿಳಿಸಲಾಗಿದೆ. ಹೀಗಾಗಿ, ಕೊನೆಯ ಕೆಲವೇ ಗಂಟೆಗಳು ಬಾಕಿ ಇರುವ ಈ ಸಮಯದಲ್ಲಿ ಸಾಧ್ಯವಾದಷ್ಟು ಜನರನ್ನು ನೇರವಾಗಿ ತಲುಪುವ ಪ್ರಯತ್ನದಲ್ಲಿ ಬಿಜೆಪಿ ಮತ್ತು ಆಮ್‍ ಆದ್ಮಿ ಪಕ್ಷಗಳು ನಿರತರಾಗಿವೆ. ಇಂದು ಬೆಳಗ್ಗೆಯೇ ಆಪ್‍ನ ಸಿಎಂ ಅಭ್ಯರ್ಥಿ ಅರವಿಂದ್‍ ಕೇಜ್ರಿವಾಲ್‍ ಸ್ಪರ್ಧಿಸುತ್ತಿರುವ ನ್ಯೂ ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಬಹುತೇಕ ಸ್ವಯಂ ಸೇವಕರು ಮನೆ ಮನೆ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಪ್ರತಿ ಮನೆಗೆ ಪತ್ರ ಬರೆಯುವ ಕ್ರಿಯಾಶೀಲತೆ ತೋರಿಸಿದೆ. ಒಟ್ಟಾರೆ, ದಿಲ್ಲಿ ಚುನಾವಣಾ ಕಣ ಮುಖ್ಯವಾಹಿನಿಯ ಚರ್ಚೆಗಳನ್ನು ಮೀರಿ ರಂಗು ಪಡೆದುಕೊಳ್ಳುತ್ತಿದೆ.

ಈ ನಡುವೆ ಈಶಾನ್ಯ ದಿಲ್ಲಿಯ ರೊಹತಾಷ್ ನಗರ್‍ ವಿಧಾನಸಭಾ ಕ್ಷೇತ್ರದಲ್ಲಿ ಆಪ್‍ ಅಭ್ಯರ್ಥಿ ಕಾರಿನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. sarita-sing-rohtasnagar-aapಆಪ್‍ನಿಂದ ಸ್ಪರ್ಧಿಸುತ್ತಿರುವ ಸರಿತಾ ಸಿಂಗ್‍ ಅವರ ಪ್ರಚಾರ ವಾಹನವನ್ನು ಸೋಮವಾರ ರಾತ್ರಿ ಅಡ್ಡಗಟ್ಟಿದ ಸುಮಾರು ಹತ್ತಕ್ಕೂ ಹೆಚ್ಚಿದ್ದ ದುಷ್ಕರ್ಮಿಗಳ ತಂಡ ಗಾಜುಗಳನ್ನು ಒಡೆದು ಹಾಕಿತ್ತು. “ನಾನು ಈ ಕ್ಷೇತ್ರವನ್ನು ಹಿಂದಿನಿಂದ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ತೋಳ್ಬಲದ ರಾಜಕಾರಣ ಕಾಣಿಸುತ್ತಿದೆ,’’ ಎಂದರು ಆನಂದ್‍ ಸಿಂಗ್. ಇವರು ಆಪ್ ಅಭ್ಯರ್ಥಿ ಸರಿತಾ ಸಿಂಗ್‍ ಅವರ ಕಟ್ಟಾ ಬೆಂಬಲಿಗರು. ಮಂಗಳವಾರ ಸಂಜೆ ರೋಹತಾಷ್ ನಗರದಲ್ಲಿ ಆಯೋಜಿಸಿದ್ದ ಜನ ಸಭೆಗೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು. ಆಪ್‍ನ ಸ್ಟಾರ್‍ ಕ್ಯಾಂಪೇನರ್‍ ಕುಮಾರ್‍ ವಿಶ್ವಾಸ್‍ ಅವರ ಮಾತುಗಳ ಆಕರ್ಷಣೆಯೂ ಇದ್ದಕ್ಕೆ ಕಾರಣ ಇರಬಹುದು. ಈ ಸಮಯದಲ್ಲಿ ಮಾತನಾಡಿದ ಆಪ್‍ ನಾಯಕ ಕುಮಾರ್‍ ವಿಶ್ವಾಸ್, “ಆಪ್‍ ಪಕ್ಷದ ಚಂದಾ ವಿಚಾರವನ್ನು ಬಿಜೆಪಿ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ನಮಗೆ ಹಣ ನೀಡಿದವರ ಕಂಪನಿಗಳನ್ನು ಭಾರತ ಸರಕಾರ ಅನುಮೋದಿಸಿದೆ. ಅವರು ನೀಡಿದ ಹಣ ಬ್ಯಾಂಕ್‍ ಮೂಲಕ ಚಲಾವಣೆ ಆಗಿದೆ. ಹೀಗಿದ್ದೂ ಇದನ್ನು ಹವಾಲ ಎನ್ನುವುದಾದರೆ ದೇಶದ ಆರ್ಥಿಕ ಸಚಿವರು ರಾಜೀನಾಮೆ ನೀಡಬೇಕು,’’ ಎಂದರು. ಜತೆಗೆ “ಸರಿತಾ ಸಿಂಗ್‍ರನ್ನು ಗೆಲ್ಲಿಸಿ ಕಳುಹಿಸಿ, ಅವರನ್ನು ಮಂತ್ರಿ ಮಾಡಲು ನಾನು ಪ್ರಯತ್ನ ಮಾಡುತ್ತೇನೆ,’’ ಎಂದು ರೋಹತಾಷ್ ನಗರದ ಜನರ ಮೂಗಿಗೆ ತುಪ್ಪವನ್ನೂ ಹಚ್ಚಿದರು.

ಉತ್ತರ ಪ್ರದೇಶ ಹಾಗೂ ದಿಲ್ಲಿಯ ಗಡಿ ಭಾಗದಲ್ಲಿ ಬರುವ ರೋಹತಾಷ್ ನಗರ ಒಂದು ಕಾಲಕ್ಕೆ ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ದಿಲ್ಲಿ ಕಾಂಗ್ರೆಸ್‍ ಪ್ರದೇಶ್‍ ಸಮಿತಿಯ ಅಧ್ಯಕ್ಷರಾಗಿದ್ದ ರಾಮ್‍ ಬಾಬು ಶರ್ಮಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.kumar-vishwas-rohtas-nagar-jansabha-feb0315 “ರಾಮ್‍ ಬಾಬು ಬದುಕಿದ್ದಾಗ ಶೀಲಾ ದೀಕ್ಷಿತ್‍ ಕೂಡ ಅವರಿಗೆ ಹೆದರಿಕೊಳ್ಳುತ್ತಿದ್ದರು. ಅವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ,’’ ಎಂದರು ಲಕ್ಷಣ್‍ ಸೋನೆ. ಚಿಕ್ಕ ಬೇಕರಿ ಇಟ್ಟುಕೊಂಡಿರುವ ಇವರು ಉತ್ತರ ಪ್ರದೇಶ ಮೂಲದವರು. ಇವರಂತೆಯೇ ಯುಪಿ ಮತ್ತಿತರ ಕಡೆಗಳಿಂದ ವಲಸೆ ಬಂದವರ ಸಂಖ್ಯೆ ಈ ಕ್ಷೇತ್ರದಲ್ಲಿ ಹೆಚ್ಚಿದೆ. ಜತೆಗೆ ಬಡತನವೂ ಅಷ್ಟೇ ಪ್ರಮಾಣದಲ್ಲಿದೆ. ರಾಮ್‍ ಬಾಬು ಶರ್ಮಾ 2009ರಲ್ಲಿ ಮೃತಪಟ್ಟ ನಂತರ ನಡೆದ ಉಪಚುನಾವಣೆಯಲ್ಲಿ ಅವರ ಮಗ ವಿಪಿನ್‍ ಶರ್ಮಾರನ್ನು ಇಲ್ಲಿನ ಜನ ದಿಲ್ಲಿ ವಿಧಾನಸಭಾ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟರು, “ಏನೇ ಹೇಳಿ, ಹಿಂದಿನ ರಾಜಕಾರಣಿಗಳಂತಲ್ಲ ಇಂದಿನ ಯುವಕರು. ಅವರಿಗೆ ಅಧಿಕಾರ ಸಿಗುತ್ತಲೇ ಕ್ಷೇತ್ರ ಮರೆತು ಹೋಗುತ್ತಾರೆ,’’ ಎಂಬುದು ರಾಜೇಶ್‍ ಮಾಜಿ ಎಂಬ ರಿಕ್ಷಾ ಚಾಲಕರೊಬ್ಬರ ಅಭಿಪ್ರಾಯ. ಬಹುಶಃ ಹೀಗಾಗಿಯೇ 2013ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿಯ ಜಿತೇಂದರ್‍ ಮಹಾಜನ್‍ ಪಾಲಾಯಿತು. ಎರಡನೇ ಸ್ಥಾನದಲ್ಲಿ ಆಪ್‍ನ ಮುಕೇಶ್‍ ಹೂಡ 14 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೀಗ, ರೊಹತಾಷ್ ನಗರ್‍ ಎಂಬ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ ತನ್ನೆಲ್ಲಾ ನೆಲೆಗಳನ್ನು ಕಳೆದುಕೊಂಡಿದೆ. ಇಲ್ಲಿನ ಸ್ಥಳೀಯ ಕಾಂಗ್ರೆಸ್‍ ನಾಯಕರು ಆಪ್‍ನ ಯುವ ಅಭ್ಯರ್ಥಿಯ ಹಿಂದೆ ನಿಂತಿದ್ದಾರೆ. ಹೀಗಾಗಿ ಇಲ್ಲೇನಿದ್ದರು ಬಿಜೆಪಿ ಮತ್ತು ಆಪ್‍ ನಡುವಿನ ನೇರ ಕದನ.

ತಳಮಟ್ಟದಲ್ಲಿ ಆಪ್‍ ಮತ್ತು ಬಿಜೆಪಿ ಸೆಣಸಾಟ ನಡೆಯುತ್ತಿದ್ದರೆ, ಮುಖ್ಯವಾಹಿನಿಯಲ್ಲಿ ಚಂದಾ ಕುರಿತು ಕಳೆದ 36 ಗಂಟೆಗಳಿಂದ ನಿರಂತರವಾಗಿ ಸುದ್ದಿಗಳು ಭಿತ್ತರಗೊಳ್ಳುತ್ತಿವೆ. ಇದರ ನಡುವೆಯೇ ಹೊರಬಂದ ನಾಲ್ಕನೇ ಹಂತದ ಚುನಾವಣಾ ಸಮೀಕ್ಷೆಗಳು ಆಮ್‍ ಆದ್ಮಿ ಪಾರ್ಟಿಗೆ ಸುಮಾರು today-cicero-poll-feb1539- 46 ಸೀಟುಗಳು ಬರಬಹುದು ಎಂದು ಅಂದಾಜಿಸಿವೆ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದಿಲ್ಲಿಯ ವಿಧಾನ ಸಭೆಗೆ ಇದು ಸ್ಪಷ್ಟ ಬಹುಮತ. ಜತೆಗೆ, ಸಿಎಂ ಸೂಕ್ತ ಅಭ್ಯರ್ಥಿಗಳ ಸಮೀಕ್ಷೆಯಲ್ಲಿ ಕೇಜ್ರಿವಾಲ್‍ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಒಂದು ರೀತಿಯಲ್ಲಿ ಈ ಸಮೀಕ್ಷೆಗಳು ಆಪ್‍ ನೆಚ್ಚಿಕೊಂಡಿರುವ ಸುಮಾರು 2 ಲಕ್ಷ ಆಟೋ ಚಾಲಕರು, ಮೂರು ಲಕ್ಷದಷ್ಟಿರುವ ರಿಕ್ಷಾ ಚಾಲಕರು ಹಾಗೂ 5 ಲಕ್ಷಕ್ಕೂ ಹೆಚ್ಚಿರುವ ಕೊಳೆಗೇರಿ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವಂತೆ ಕಾಣಿಸುತ್ತಿಲ್ಲ. ಅಥವಾ ಇವರಿಗೆ ದಿಲ್ಲಿಗೆ ರಾಜ್ಯದ ಸ್ಥಾನಮಾನ ನೀಡುವ ವಿಚಾರ ಕೂಡ ಗಮನ ಸೆಳೆಯುತ್ತಿಲ್ಲ. ಈ ವರ್ಗದ ಜನರಲ್ಲಿ ಪೊಲೀಸರ ಭ್ರಷ್ಟಾಚಾರ ಮತ್ತು ವಿದ್ಯುತ್‍ ಬಿಲ್‍ ಇಳಿಕೆ ವಿಚಾರಗಳು ಮಾತ್ರವೇ ಸ್ಥಾನ ಪಡೆದುಕೊಂಡಿವೆ. ಮತ್ತೊಂದೆಡೆ ಬುಲೆಟ್‍ ರೈಲಿನ ಮಾತನಾಡುತ್ತಿರುವ ಬಿಜೆಪಿಗೆ ಕೊಂಚ ಮೇಲ್ವರ್ಗದ ಜನರಲ್ಲಿ ಸ್ಥಾನ ಸಿಕ್ಕಂತೆ ಕಾಣಿಸುತ್ತಿದೆ. ಒಟ್ಟಾರೆ, ವರ್ಗಗಳ ಆಧಾರದ ಮೇಲೆ ನಡೆಯುತ್ತಿರುವ ಈ ಚುನಾವಣೆ ದೇಶದ ರೋಚಕ ಚುನಾವಣೆಗಳ ಸಾಲಿನಲ್ಲಿ ಅನಾಯಾಸವಾಗಿ ಸ್ಥಾನ ಪಡೆದುಕೊಳ್ಳುತ್ತದೆ.

ಆಮ್‍ ಆದ್ಮಿಯ ಹವಾಲ ಚಂದಾ ಮತ್ತು ಮತಕ್ಕಿರುವ ಕಿಮ್ಮತ್ತು!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಯಾಕೆ ಬಹುತೇಕ ಮಾಧ‍್ಯಮಗಳು ಆಪ್‍ ವಿರುದ್ಧವೇ ಸುದ್ದಿಗಳನ್ನು ತಯಾರಿಸುತ್ತವೆ. ಮೋದಿ ಅಂದಾಕ್ಷಣ ಯಾವುದೇ ಅಂಕೆ ಇಲ್ಲದ ಮಾಹಿತಿ ನೀಡುತ್ತವೆ,’’ ಎಂದು ಪ್ರಶ್ನಿಸಿದರು ಕಿರಣ್‍ ವಿಸ್ಸಾ. ಆಮ್‍ ಆದ್ಮಿ ಪಾರ್ಟಿಯ ಪಟೇಲ್‍ ನಗರ ಕಚೇರಿಯಿಂದ ಕೊಂಚ ದೂರದ ಮನೆಯ modi-kiran-bedi-delhi-rallyಕೋಣೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದ ಅವರು ಕೊಂಚ ಭಾವನಾತ್ಮಕವಾಗಿಯೇ ಹೀಗಂತ ಕೇಳಿದರು. ಮೂಲತಃ ಆಂಧ್ರ ಮೂಲದ ಕಿರಣ್, ಕಳೆದ ಹದಿನೈದು ವರ್ಷಗಳಿಂದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ, ಅಮೆರಿಕಾದ ಕೆಲವು ಸಂಘ ಸಂಸ್ಥೆಗಳ ಮೂಲಕ ಭಾರತದ ಬಡ ಜನರ ಅಭಿವೃದ್ಧಿಗಾಗಿಯೂ ಕೆಲಸ ಮಾಡುತ್ತಿದ್ದಾರೆ. ಇತರೆ ಎನ್‍ಆರ್‍ಐಗಳಂತಲ್ಲದ ಅವರ ಆಲೋಚನೆಗಳು ಇಲ್ಲಿನ ತಳವರ್ಗದ ನಿಜಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ಕಾಣಿಸುತ್ತದೆ. ಹೀಗೆ ಮಾಧ್ಯಮಗಳ ಕುರಿತು ಅವರ ಕೇಳಿದ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ ಅಥವಾ ಆತ್ಮಾವಲೋಕನದ ವಿಚಾರ. ಆದರೆ ಅವರಲ್ಲಿ ಹೀಗೊಂದು ಪ್ರಶ್ನೆ ಏಕೆ ಹುಟ್ಟಿತು ಎಂಬುದಕ್ಕೆ ಇವತ್ತಿನ ಚುನಾವಣೆಯ ಬಿಸಿಯಲ್ಲಿ ಬೇಯುತ್ತಿರುವ ದಿಲ್ಲಿಯನ್ನೂ ಮತ್ತು ಇಲ್ಲಿನ ನ್ಯೂಸ್‍ ಚಾನಲ್‍ಗಳು ‘ಸನ್‍ಸನಿ’ಗಳನ್ನು ಭಿತ್ತರಿಸುವ ರೀತಿಯಲ್ಲಿ ಉತ್ತರ ಸಿಗುತ್ತದೆ. “ಕಳೆದ ಲೋಕಸಭೆ ಚುನಾವಣೆ ನಂತರ ಅರವಿಂದ್ ಕೇಜ್ರಿವಾಲ್‍ ದಿಲ್ಲಿಯ ಕನಿಷ್ಟchandan-adarsh-dasari-ravi-delhi-aap 70 ಕಡೆಗಳಲ್ಲಿ ಜನಸಭಾಗಳನ್ನು ಮಾಡಿರಬಹುದು. ತಾವು ನೀಡಿದ ರಾಜೀನಾಮೆಯ ಹಿನ್ನಲೆ ಮತ್ತು ಆದ ತಪ್ಪುಗಳ ಕುರಿತು ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಇವ್ಯಾವವೂ ಮುಖ್ಯವಾಹಿನಿಯ ಮೀಡಿಯಾಗಳಲ್ಲಿ ಬರಲಿಲ್ಲ. ಕೇಜ್ರಿವಾಲ್‍ ಸಭೆ ಸುದ್ದಿಯಾಗಬೇಕು ಎಂದರೆ ಮೊಟ್ಟೆಯನ್ನೋ, ಕಲ್ಲನ್ನೋ ಎಸೆಯಬೇಕಾಗುತ್ತದೆ. ಆದರೆ ಮೋದಿ ಚಿಕ್ಕ ಸಭೆ ನಡೆಸಿದರೂ ಗಂಟೆ ಗಟ್ಟಲೆ ನೇರ ಪ್ರಸಾರವನ್ನು ನೀಡುತ್ತಿದ್ದಾರೆ,’’ ಎಂದರು ಬೆಂಗಳೂರು ಮೂಲದ ಚಂದನ್‍. ಆಪ್‍ನ ಸಕ್ರಿಯ ಕಾರ್ಯಕರ್ತರಾಗಿರುವ ಅವರು ದಿಲ್ಲಿ ಚುನಾವಣೆಯ ಪ್ರಚಾರಕ್ಕಾಗಿಯೇ ಇಲ್ಲಿಗೆ ಬಂದು ತಿಂಗಳ ಮೇಲಾಗಿದೆ.

ಮತದಾನ ದಿನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಮಯದಲ್ಲೂ ಪ್ರಧಾನಿ ಮೋದಿ ಅವರು ನಡೆಸಿದ ಬಹಿರಂಗ ಸಭೆಯಲ್ಲಿ ದಿಲ್ಲಿಯ 70 ಬಿಜೆಪಿ ಅಭ್ಯರ್ಥಿಗಳು ಹಾಜರಿರುವ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. “ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಇದ್ದು ಮತಯಾಚನೆ ನಡೆಸುತ್ತಾರೆ. ಆದರೆ ಮೋದಿ ಅವರ ಜತೆ ಪಾಲ್ಗೊಂಡರೆ ಅವರನ್ನು ಸುತ್ತವರೆದಿರುವ ಮಾಧ್ಯಮಗಳ ಮೂಲಕ ಜನರನ್ನು ಸುಲಭವಾಗಿ ತಲುಪಬಹುದು ಎಂಬ ಲೆಕ್ಕಾಚಾರ ಇರಬಹುದು,’’ ಎಂಬುದು ಪಂಜಾಬ್‍ ಮೂಲದ ಚುನಾವಣಾ ಸಮೀಕ್ಷರೊಬ್ಬರ ಅಭಿಪ್ರಾಯ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಅವರು ಸಿ- ವೋಟರ್‍ಗಾಗಿ ಕಳೆದ ಕೆಲವು ತಿಂಗಳುಗಳಿಂದ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಂದೆಡೆ ಆಪ್‍ಗೆ ಬಂದ ಚಂದಾಹಣದ ಮೂಲದ ಕುರಿತು ಹುಯಿಲೆದ್ದಿದೆ. ಮತ್ತೊಂದೆಡೆ ಬಿಜೆಪಿ ವೈಯುಕ್ತಿಕ ಟೀಕೆಗಳನ್ನು ಮಾಡುತ್ತಿದೆ. ಮುಖ್ಯವಾಹಿನಿಯಲ್ಲಿ ಹೀಗೆ ದಿಲ್ಲಿ ಚುನಾವಣೆ ಬಿಂಬಿತವಾಗುತ್ತಿರುವ ಹೊತ್ತಿನಲ್ಲೇ ತಳಮಟ್ಟದಲ್ಲಿ ಸಾಕಷ್ಟು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿಯ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಕಿರಣ್‍ ಬೇಡಿ ಅವರ ಚುನಾವಣ ಕಣವೇ ಬಿಜೆಪಿ ಪಾಲಿಗೆ ಡೋಲಾಯಮಾನವಾಗಿದೆ. sk.bagga-krishnanagar-aap-candidateಆರಂಭದಲ್ಲಿ ಆಪ್‍ನ ‘ಜನರ ಸಿಎಂ’ ಎಂಬ ಪ್ರಚಾರದ ಅನಿವಾರ್ಯತೆಗಳಿಂದಾಗಿ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ಘೋಷಣೆಗೆ ಮುಂದಾಯಿತು. ಕಿರಣ್‍ ಬೇಡಿ ಆಯ್ಕೆ ಆರಂಭದಲ್ಲಿ ಸಕಾರಾತ್ಮಕ ವಾತಾರಣವನ್ನೂ ಸೃಷ್ಟಿಸಿತ್ತು. ಆದರೆ, ಸ್ವತಃ ಬೇಡಿಯವರ ತಡೆರಹಿತ, ಹಿಡಿತ ತಪ್ಪಿದ ಮಾತುಗಳಿಂದಾಗಿ ಒಟ್ಟಾರೆ ಬಿಜೆಪಿಯ ಚರಿಷ್ಮಾಕ್ಕೆ ಸಮಸ್ಯೆ ಸೃಷ್ಟಿಯಾದಂತೆ ಕಾಣಿಸುತ್ತಿದೆ. ಜತೆಗೆ ಕೃಷ್ಣಾ ನಗರದಲ್ಲಿ ಆಪ್‍ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್.ಕೆ. ಬಗ್ಗಾ ವಕೀಲರು. ಬೇಡಿ ವಿರುದ್ಧ ವಕೀಲರು ಬೀದಿಗೆ ಇಳಿದಿದ್ದಾರೆ. ಈಗಷ್ಟೆ ಅವರ ಪ್ರಚಾರದ ಕಚೇರಿ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಬಂದಿದೆ. ನಿಧಾನವಾಗಿ ಬೇಡಿ ಅವರ ಸಕಾರಾತ್ಮಕ ವ್ಯಕ್ತಿತ್ವದ ಅಂಶಗಳೇ ಅವರಿಗೆ ಮುಳ್ಳಾಗಿ ಕಾಡಲಾರಂಭಿಸಿದೆ.

“ಆಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾರ್‍ನ್ನು ರಸ್ತೆ ಬದಿಯಿಂದ ಎತ್ತಿಕೊಂಡು ಹೋದವರು ಎಂದು ಪ್ರಚಾರ ಮಾಡಿದ್ದರು. ಅದೀಗ ಸುಳ್ಳು ಎಂದು ಗೊತ್ತಾಗಿದೆ. ಹೀಗಿರುವಾಗ ಬಿಜೆಪಿಗೆ ಬೇರೆ ಅಸ್ತ್ರಗಳ ಮೊರೆ ಹೋಗುವುದು ಅನಿವಾರ್ಯ,’’ ಎಂದರು ಎನ್‍. ಕೆ. ಶರ್ಮಾ. ಇವರು ಕಿರಣ್‍ ಬೇಡಿ ಸ್ಪರ್ಧಿಸುತ್ತಿರುವ ಕೃಷ್ಣಾನಗರ ಕ್ಷೇತ್ರದಲ್ಲಿಯೇ ಮೆಕ್ಯಾನಿಕ್‍ ಆಗಿ ಕೆಲಸ ಮಾಡುತ್ತಿದ್ದಾರೆ. “ಇಲ್ಲಿ ಎರಡು ದಶಕಗಳ ಕಾಲ ಇದ್ದವರು ಹರ್ಷವರ್ಧನ್‍. ಈಗ ಕ್ಷೇತ್ರ ಬಿಟ್ಟು ಓಡಿ ಹೋಗಿದ್ದಾರೆ,’’ ಎಂದವರು ತಮ್ಮ ಬಿಜೆಪಿ ವಿರೋಧಿ ನಿಲುವನ್ನು ಗಟ್ಟಿಯಾಗಿ ಪ್ರತಿಪಾಧಿಸಿದರು. ಅವರು ದನಿಯನ್ನು ಕೇಳಿಸಿಕೊಂಡು ತಮ್ಮ ಅಂಗಡಿಯಿಂದ ಹೊರಬಂದ ಗುಜರಾತ್‍ ಮೂಲದ ಹಿರಿಯ ವ್ಯಾಪಾರಿ ದಿಯಾಲ್‍ಚಂದ್, “ಕಷ್ಟವೋ ಸುಖವೋ, ಲಾಭವೋ ನಷ್ಟವೋ ಕೇಜ್ರಿವಾಲ್‍ ಸಿಕ್ಕ ಅವಕಾಶವನ್ನು ಬಿಡಬಾರದಿತ್ತು. ನಾನು ಕಳೆದ ಐವತ್ತು ವರ್ಷಗಳಿಂದ ದಿಲ್ಲಿ ಚುನಾವಣೆಗಳನ್ನು hindustan-times-surveyನೋಡುತ್ತಾ ಬಂದಿದ್ದೇನೆ. ಈ ಬಾರಿ ಇಲ್ಲಿ ಬೇಡಿ ಗೆಲ್ಲುವುದು ಗ್ಯಾರೆಂಟಿ,’’ ಎಂದರು. ಹೀಗೆ, ಇಬ್ಬರ ನಡುವೆ ಒಂದಷ್ಟು ಹೊತ್ತು ವಾಗ್ಯುದ್ಧ ನಡೆದು ಕೊನೆಗೆ ಪರಸ್ಪರ ನಕ್ಕು ಬೀಳ್ಕೊಟ್ಟರು.

ದಿಲ್ಲಿಯ ಚುನಾವಣಾ ಕಣ ವಿಶೇಷ ಎಂದು ಅನ್ನಿಸುವುದು ಈ ಕಾರಣಕ್ಕಾಗಿಯೇ. ಇಲ್ಲಿನ ಸಾಮಾನ್ಯ ಜನರಿಂದ ಹಿಡಿದು ಸಮಾಜದ ಉತ್ತಮ ಸ್ಥರಗಳನ್ನು ತಲುಪಿಕೊಂಡವರ ವರೆಗೆ ರಾಜಕೀಯ ಪ್ರಜ್ಞೆ ಎಂಬುದು ಹಾಸುಹೊಕ್ಕಾದಂತೆ ಕಾಣಿಸುತ್ತದೆ. ಒಂದು ಕಡೆ ಚಿಕ್ಕ ಪ್ರಮಾಣದಲ್ಲಾದರೂ ಆಲೋಚನೆ ಮಾಡುವ ಜನವರ್ಗ, ಮತ್ತೊಂದೆಡೆ ನಾನಾ ಭಾಷೆ, ಪ್ರದೇಶ ಮತ್ತು ಸಂಸ್ಕೃತಿಗಳ ಸಂಕರದಿಂದ ಹುಟ್ಟಿಕೊಂಡಿರುವ ಕಾಸ್ಮೊಪಾಲಿಟನ್‍ ಚಹರೆಗಳ ಹಿನ್ನೆಲೆಯಿಂದಾಗಿ, ನಮ್ಮಲ್ಲಿ ನಡೆದಂತೆ ಜಾತಿ ಆಧಾರಿತ ಚುನಾವಣೆ ಲೆಕ್ಕಚಾರಗಳು ಇಲ್ಲಿ ನಡೆಯುವುದಿಲ್ಲ. ಹೀಗಿದ್ದೂ, ಸೋಮವಾರ ಬಿಜೆಪಿ ಬಿಡುಗಡೆ ಮಾಡಿದ ವೈಯುಕ್ತಿಕ ನಿಂದನೆಯ ಜಾಹೀರಾತಿನಿಂದಾಗಿ ಜಾತಿ ಆಧಾರಿತ ಹೇಳಿಕೆಗಳು ಆಪ್‍ ಕಡೆಯಿಂದ ಹೊರಬಿದ್ದಿದೆ. ಆದರೆ, ಇದು ಚುನಾವಣೆಯ ಕಣದಲ್ಲಿ ಹೆಚ್ಚು ಪ್ರಭಾವ ಬೀರಿದಂತಿಲ್ಲ.

ಇವುಗಳ ನಡುವೆಯೇ, ದಿಲ್ಲಿಯಲ್ಲಿ ಕಾಂಗ್ರೆಸ್‍ನ ಉಪಸ್ಥಿತಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವಂತೆ ಭಾಸವಾಗುತ್ತಿದೆ. ಈ ಕುರಿತು ಕನ್ನಡ ಸುದ್ದಿವಾಹಿನಿಯೊಂದರ ದಿಲ್ಲಿ ವರದಿಗಾರರೊಬ್ಬರು, “ದಿಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಹಾರ ಮತ್ತಿತರ ರಾಜ್ಯಗಳ ಚುನಾವಣೆ ಬರುತ್ತದೆ. ಒಂದುವೇಳೆ ದಿಲ್ಲಿಯಲ್ಲಿ ಆಪ್‍ ಗೆದ್ದರೆ ಬಿಜೆಪಿ ಮತ್ತು ಮೋದಿ ಹವಾಕ್ಕೆ ಬ್ರೇಕ್‍ ಹಾಕಿದಂತೆ ಆಗುತ್ತದೆ. ಹೀಗಾಗಿ ಕಾಂಗ್ರೆಸ್‍ ಅಂತರಾಳದಲ್ಲಿ ಆಪ್‍ನ ಗೆಲುವನ್ನು ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ,’’ ಎಂದರು. ಇದು ಮೇಲ್ನೋಟದ ಅಭಿಪ್ರಾಯ ಇದ್ದಿರಬಹುದಾದರೂ, abp-news-surveyದಿಲ್ಲಿ ಮತದಾನಕ್ಕೆ ಮೂರು ದಿನಗಳ ಬಾಕಿ ಇರುವ ಈ ಸಮಯದಲ್ಲಿ ಹೊರಬರುತ್ತಿರುವ ಸಮೀಕ್ಷೆಗಳು ಇದನ್ನೇ ಬಿಂಬಿಸುತ್ತಿವೆ. ದಿನದಿಂದ ದಿನಕ್ಕೆ ಕಾಂಗ್ರೆಸ್‍ನ ಮತಗಳಿಕೆಯ ಸರಾಸರಿ ಇಳಿಕೆಯಾಗುತ್ತಿದೆ.

ಹೀಗಿರುವಾಗಲೇ, ಕೊನೆಯ ಹಂತದ ಮಾಹಿತಿ ಯುದ್ಧಕ್ಕೆ ಪ್ರಮುಖ ಪಕ್ಷಗಳು ತಯಾರಾಗಿವೆ. “ನಾಳೆಯಿಂದ ಆಪ್‍ನ ಜಾಹೀರಾತುಗಳು ಟಿವಿ ಮತ್ತು ಎಫ್‍ಎಂನಲ್ಲಿ ಪ್ರಸಾರ ಆಗಲಿವೆ. ಇದಕ್ಕಾಗಿ ಆಪ್‍ ಎನ್‍ಆರ್‌ಐ ತಂಡ ಸುಮಾರು 5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ,’’ ಎಂಬ ಮಾಹಿತಿಯನ್ನು ಆಪ್‍ನ ಕಾರ್ಯಕರ್ತರೊಬ್ಬರು ನೀಡಿದರು. ಬಿಜೆಪಿ ಕೂಡ ಟಿವಿಗಳಲ್ಲಿ ಮೋದಿ ಭಾಷಣವನ್ನು ಬಿಂಬಿಸುವ ಜಾಹೀರಾತುಗಳ ಮೊರೆ ಹೋಗಿದೆ. ಮತದಾನಕ್ಕೆ ಕೇವಲ 90 ಗಂಟೆಗೂ ಕಡಿಮೆ ಅವಧಿ ಬಾಕಿ ಇರುವ ಈ ಸಮಯದಲ್ಲಿ  ಆಪ್‍ನ ಚಂದಾ ಕುರಿತು ಎದ್ದಿರುವ ವಿವಾದದ ಮರ್ಮವನ್ನು ದಿಲ್ಲಿಯ ಜನ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಹಾಗೂ ಆಮ್‍ ಆದ್ಮಿ ಪಕ್ಷಗಳು ಕೋರಿಕೊಳ್ಳುತ್ತಿವೆ. ಅವರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೆ ಇರಲಿ ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತಕ್ಕಿರುವ ಕಿಮ್ಮತ್ತಿಗೆ ಇದೊಂದು ತಾಜಾ ಉದಾಹರಣೆ ಅಷ್ಟೆ…