Category Archives: ಸರಣಿ-ಲೇಖನಗಳು

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು

ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ಒಂದು ಹಳೆಯ ಪಾಳು ಬಂಗಲೆ.  ನಿರ್ಜನ ಪ್ರದೇಶ. ಹಗಲಲ್ಲೇ  ಹೋಗಲು ಭಯ. ಇನ್ನು ರಾತ್ರಿ ಹೋದರಂತೂ ಮುಗಿದೇ ಹೋಯಿತು. ಅಲ್ಲಿರುವ ದೆವ್ವ ನಮ್ಮನ್ನು ಮೈ ಸೇರಿಕೊಳ್ಳದೇ ಇರುವುದಿಲ್ಲ. ಅಥವಾ ನಮ್ಮನ್ನು ಹೆದರಿಸದೆ ಸುಮ್ಮನಂತೂ ಇರುವುದಿಲ್ಲ. ಇದು ಎಷ್ಟೋ ದೆವ್ವದ ಸಿನಿಮಾಗಳಲ್ಲಿ ನಾವು ಕಾಣುವ ಕಥೆ. ಅಂತಹ ಪಾಳು ಬಂಗಲೆಗಳು ಎಲ್ಲಿಯೂ ಇರಬಹುದು. ನೆನ್ನೆ ದೆವ್ವ ನೋಡ್ದೆ ಸಾರ್ ! ನಾನು ನಿಮ್ಗೆಯಾಕ್ ಸುಳ್ಳು ಹೇಳಲಿ ? ಸುಳ್ಳೇಳಿ ನನ್ಗೇನ್ ಆಗ್ಬೇಕ್?

ಆಸ್ಪತ್ರೆಯ ಶವಾಗಾರದಲ್ಲಿ ನಿನ್ನೆ ದೆವ್ವ ಕಾಣಿಸಿತು ತೋಟವೊಂದರ ಪಾಳು ಬಾವಿಯಲ್ಲಿ ಬಿದ್ದ ಆ ಹೆಂಗಸು ದೆವ್ವವಾಗಿದ್ದಾಳೆ. ಶಾಲೆಯ ಮುಂದಿನ ಮರಕ್ಕೆ ನೇಣು ಹಾಕಿಕೊಂಡ ವ್ಯಕ್ತಿ ದೆವ್ವ ಆಗಿದ್ದಾನೆ. ಅದರ ಚೇಷ್ಟೆಯಿಂದ ಮಕ್ಕಳು ಹೆದರಿ ಶಾಲೆಗೇ ಹೋಗಲ್ಲ ಎನ್ನುತ್ತಾರೆ. ನಮ್ಮ ಹಿಂದಿನ ಓಣಿಯಲ್ಲಿ ದೆವ್ವ ಇರೋದ್ರಿಂದ ಅಲ್ಲಿ ಜನಹೋಗಲು ಭಯಪಡುತ್ತಾರೆ. ದೆವ್ವ ಬಂದೋರು 10 ಕೆಜಿ ಮೆಣಸಿನಕಾಯಿ ತಿನ್ನುತ್ತಾರೆ. ಹೆಂಗಸಿನ ಮೇಲೆ ಬಂದ ದೆವ್ವ ನೂರಾರು ಜನ ಹಿಡಿದ್ರೂ ಬಿಡಿಸಿಕೊಳ್ಳೋಕೆ ಆಗಲ್ಲ. ದೆವ್ವ ಬಂದೋರು ಎಲ್ಲಾ ಭಾಷೆಯಲ್ಲಿ ಮಾತಾಡುತ್ತಾರೆ. ಪಕ್ಕದಮನೆ ಗಂಗೆಗೆ ದೆವ್ವ ಬಂದು ಕೊಟ್ಟದ್ದೆಲ್ಲಾ ತಿನ್ನುತ್ತಾಳೆ. ಆ ಹುಡುಗ, ಹುಡುಗಿ ಲವ್ ಮಾಡ್ತಿದ್ರಂತೆ ಹುಡುಗ ಕೈಕೊಟ್ಟ ಮೇಲೆ ಹುಡುಗಿ ಸತ್ತು ದೆವ್ವವಾಗಿ ಆತನ ಮೇಲೆ ಹಿಡಿದುಕೊಂಡಿದ್ದಾಳೆ.. ಆ ಸಾಬ್ರು ಸಾವಿರಾರು ದೆವ್ವ ಬಿಡ್ಸೆವ್ರಂತೆ ? ನಮ್ಮೂ ವಾಮಾಚಾರಿ ಎಲ್ಲಾ ದೆವ್ವಗಳ್ನ ಸೀಸೆಯಲ್ಲಿ ಹಾಕಿ ಬಂದ್ ಮಾಡವ್ನೆ ? ನಮ್ಮ ದೆವ್ರು ಅದೆಷ್ಟೋ ದೆವ್ವಗಳ ತನ್ನ ಕಾಲಕೆಳಗೆ ಹಾಕ್ಕೊಂಡಿದೆ ಗೊತ್ತಾ ನಿಮ್ಗೆ? .ದಿನ ಬೆಳಗಾದರೆ ಇಂತಹ ಎಷ್ಟೋ ಹೇಳಿಕೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ದೆವ್ವಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ? 
ಇದು ಇಂದಿನ ಪ್ರಶ್ನೆಯಲ್ಲ. ಶತ ಶತಮಾನಗಳದ್ದು. ನಮ್ಮ ಮನಸ್ಸಿನಲ್ಲಿ ಭಯ ಎನ್ನುವ ಒಂದು ಭಾವನೆ ಎಷ್ಟು ತೀವ್ರವಾಗಿರುತ್ತದೋ ಅಷ್ಟೇ ತೀವ್ರವಾಗಿ ಈ ನಂಬಿಕೆಯೂ ಬೇರೂರಿರುತ್ತದೆ. ದೆವ್ವಗಳ ನಂಬಿಕೆ ಅತ್ಯಂತ ಹಳೆಯದಾದರೂ ಅವುಗಳನ್ನು ವಿಜ್ಞಾನದ ನಿಕಷಕ್ಕೆ ಒಡ್ಡಿ ಅವುಗಳನ್ನು ಅರ್ಥೈಸಿಕೊಳ್ಳುವ ಜ್ಞಾನ ಈ ಸಂದರ್ಭದಲ್ಲಿದೆ. ಅದರ ಹಿನ್ನೆಲೆಯಲ್ಲೇ ನಾವು ದೆವ್ವಗಳನ್ನು ನೋಡಬೇಕು.

ಕಾನೂನು ಏನು ಹೇಳುತ್ತದೆ? 
ಕಾನೂನು ಅಂಧಶ್ರದ್ಧೆಗಳನ್ನು ಎಂದಿಗೂ ಉತ್ತೇಜಿಸುವುದಿಲ್ಲ. ದೆವ್ವ ಇದೆ ಎಂದು ಹೇಳುವುದು ಅಥವಾ ಅದನ್ನು ಬಿಡಿಸುತ್ತೇವೆ ಎಂದು ಬಹಿರಂಗವಾಗಿ ಹೇಳುವುದು ಮಹಾಅಪರಾಧ ಎಂದು ಸರ್ವೋಚ್ಛ ನ್ಯಾಯಾಲಯವೇ ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ.  ದೆವ್ವಗಳ ಅಸ್ತಿತ್ವದ ಬಗ್ಗೆ ನಮ್ಮ ಯಾವುದೇ ಶಾಸನಾಂಗ, ಕಾರ್ಯಾಂಗ ಅಥವಾ ನ್ಯಾಯಾಂಗಗಳು ದೃಢಪಡಿಸಿಲ್ಲ. ಅಂದರೆ ಅದು ವಾಸ್ತವಕ್ಕೆ ವಿರೋಧವಾದುದು ಎಂದು ಸುಸ್ಪಷ್ಟ. ವಾಸ್ತವ ಮೀರಿದ ಜನರ ಮನದಲ್ಲಿ ಅಂತರ್ಗತವಾದ ಭಯವನ್ನೇ ದುರ್ಬಳಕೆ ಮಾಡಿಕೊಂಡು ಜನರನ್ನು ಏಮಾರಿಸುತ್ತಿರುವವರ ವರ್ಗ ಕಾನೂನು ಪ್ರಕಾರ ಅಪರಾಧಿಗಳು. ಯಾರೇ ದೆವ್ವಗಳ ಅಸ್ತಿತ್ವವನ್ನು ಯಾವ ರೀತಿಯಲ್ಲಾದರೂ ದೃಢಪಡಿಸಿ ಅದರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿಗೆ ಒಪ್ಪಿಸಿ.

ದೆವ್ವದ ಕಲ್ಪನೆ ಹೇಗೆ ಬಂದಿತು? 
ದೆವ್ವಗಳಿವೆ ಎಂದು ಯಾರು ಎಷ್ಟೇ ಹೇಳಿಕೊಳ್ಳಲಿ, ವೈಜ್ಞಾನಿಕ ಶ್ರದ್ಧೆಯಿಂದ ಪರೀಕ್ಷಿಸಿದರೆ ಎಲ್ಲಿಯೂ ಚಲನಚಿತ್ರಗಳಲ್ಲಿ ಕಾಣಿಸಿದಂತೆ ದೆವ್ವಗಳು ಕಾಣುವುದಿಲ್ಲ. ಅವುಗಳ ಅಸ್ತಿತ್ವ ಸಾಬೀತಾಗುವುದೂ ಇಲ್ಲ. ನಾನು ಎಷ್ಟೋ ದೆವ್ವದ ಪ್ರಕರಣಗಳನ್ನು ಬಿಡಿಸಿದ್ದೇನೆ. ಪ್ರಾರಂಭದಲ್ಲಿ ದೆವ್ವವೇ ಎಂದು ಎಲ್ಲರೂ ದೃಢವಾಗಿ ನಂಬಿದ್ದರೂ ಪ್ರಕರಣ ಬಿಡಿಸಿದಾಗ ಅಲ್ಲಿ ಮನುಷ್ಯರ ಕೈವಾಡ ಸ್ಪಷ್ಟವಾಗಿ ಕಾಣುತ್ತದೆ. ಹಳೆಯ ಬಂಗಲೆಗಳಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ನಡೆಸುವವರು, ಕತ್ತಲ ಕಾಡುಗಳಲ್ಲಿ ಅನೈತಿಕ ಸಂಗತಿಗಳಲ್ಲಿ ತೊಡಗಿರುವವರು ಈ ದೆವ್ವಗಳನ್ನು ಮುಂದೆ ಮಾಡಿ ತಮ್ಮ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ತನ್ನ ಪ್ರಾಮುಖ್ಯತೆಯನ್ನು ಸಾಬೀತುಪಡಿಸಲು ದೆವ್ವದ ವೇಷ ಧರಿಸುವುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ. ಎಷ್ಟೋ ಹೆಂಗಸರು ತಮ್ಮಲ್ಲಿನ ಆಂತರಿಕ ಬಯಕೆಗಳನ್ನು ತಣಿಸಿಕೊಳ್ಳಲು ಅಥವಾ ತಾವು ಮಾಡುತ್ತಿರುವ ಅನೈತಿಕ ಸಂಗತಿಗಳು ಬಯಲಿಗೆ ಬಾರದಂತಿರಲು ಈ ರೀತಿ ಆಟ ಹೂಡುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಮನಸ್ಸಿನ ನೋವು, ಯಾತನೆ ತೋರಿಸಲು ಆಗದೇ ಇದ್ದಾಗ ಆಗುವ ಉನ್ಮಾದವೂ ದೆವ್ವವೇ.

ದೆವ್ವಗಳು ಸಿನಿಮಾಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ರೂಪ ಧರಿಸುತ್ತವೆ. ಆ ರೀತಿ ದೆವ್ವ ನಿಜವಾಗಿಯೂ ಮನುಷ್ಯನ ರೂಪ ಪಡೆಯಲು ಸಾಧ್ಯವಿಲ್ಲ. ಮನುಷ್ಯನ ದೇಹದ ನಾಲ್ಕನೇ ಮೂರು ಭಾಗ ಅಮೈನೋ ಆಸಿಡ್ನಿಂದ ತುಂಬಿಕೊಂಡಿದೆ. ಅದಿಲ್ಲದೆ ಯಾವ ಜೀವವೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮಾನವನ ಆತ್ಮ ಅತ್ಯಂತ ಶಕ್ತಿಯತವಾಗಿದ್ದು ಅದು ದೆವ್ವವಾಗುತ್ತದೆ. ಅದೇ ಪುನರ್ ಜನ್ಮ ಕಾಣುತ್ತದೆ ಎಂದು ವಾದಿಸುವವರಿದ್ದಾರೆ. ಈ ಆತ್ಮ ಸ್ವಯಂ ಯೋಚಿಸಬಲ್ಲುದು. ಸ್ವಯಂ ಚಲಿಸಬಲ್ಲುದು. ಸ್ವಯಂ ತೀರ್ಮಾನಗಳನ್ನು ಕೈಗೊಳ್ಳಬಹುದು. ತನ್ನ ಜೀವ ಇದ್ದಾಗ ಇದ್ದ ರಾಗ ದ್ವೇಷಗಳನ್ನೂ ಮರೆಯದೆ ಜೀವಿಸಬಹುದು. ಈ ಆತ್ಮಕ್ಕೆ ಅಗಣಿತ ಶಕ್ತಿ ಇದೆ ಎಂದು ದೆವ್ವಗಳ ಅಸ್ತಿತ್ವದ ಬಗ್ಗೆ ಒಂದು ದೃಢ ವಿಶ್ವಾಸ.

ಇಂತಹ ಅಗಣಿತ ಶಕ್ತಿಯ ಆತ್ಮ ಇರುವ ಮನುಷ್ಯ ಯಕಃಶ್ಚಿತ್ ಮನುಷ್ಯನಿಗಿಂತ ಕೊಂಚವೂ ಹೆಚ್ಚು ಶಕ್ತಿಯನ್ನು ಬದುಕಿನ ಅವಧಿಯಲ್ಲಿ ತೋರಿಸಲು ಸಾಧ್ಯವಿಲ್ಲ ಏಕೆ? ಸಾಯುವ ಮುನ್ನ ದೇಹ ಇರುವಾಗಲೇ  ಈ ಆತ್ಮ ತನ್ನ ಶಕ್ತಿಯನ್ನೇಕೆ ಪ್ರದರ್ಶಿಸುವುದಿಲ್ಲ?

ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ನಮ್ಮ ಭಾವನೆಗಳ ಏರುಪೇರಿಗೆ ಕಾರಣ. ಅದಿಲ್ಲದೆಯೂ ದೆವ್ವಗಳಿಗೆ ಭಾವನೆಗಳು ಹೇಗೆ ಉಂಟಾಗುತ್ತವೆ? ಅಷ್ಟೇ ಅಲ್ಲ, ದೆವ್ವಗಳು ಒಳ್ಳೆಯವೇನೂ ಅಲ್ಲ. ಅವೆಲ್ಲವೂ ಡಿಸ್ಟ್ರಕ್ಟಿವ್. ಅಂದರೆ ಮನುಷ್ಯನನ್ನು ನಾಶ ಮಾಡಲು ಜನ್ಮ(?) ಪಡೆದಿರುತ್ತವೆ ಎಂಬ ನಂಬಿಕೆ. ಮೆದುಳಿಲ್ಲದೆ ಇಲ್ಲದೆಯೂ ಆತ್ಮ ಕೆಲಸ ಮಾಡಲು ಸಾಧ್ಯವೇ? ಇದು ಗೋಡೆಗಳನ್ನು ದಾಟಿ ಬರಲು ಸಾಧ್ಯವಿದ್ದರೆ ಮತ್ತೇಕೆ ಬದುಕಿರುವಾಗ ಆತ್ಮ ಹೊತ್ತ ದೇಹಕ್ಕೆ ಆ ಶಕ್ತಿ ಇರುವುದಿಲ್ಲ?

ಮನುಷ್ಯ ಮಾತನಾಡುವುದು ಶಬ್ದದ ಅಲೆಗಳ ಮೂಲಕ ಕಿವಿಗೆ ಕೇಳುತ್ತದೆ. ಆತ್ಮ ಅಥವಾ ದೆವ್ವ ಮನುಷ್ಯರೊಂದಿಗೆ ಸಂವಹನ ಮಾಡಲು ಸಾಧ್ಯ ಎಂದಾದರೆ ಅದು ಮನುಷ್ಯನ ಯಾವುದೋ ಒಂದು ಅಳತೆಗೆ ನಿಲುಕಲೇಬೇಕು. ಅದಾವುದು?

ವಿಜ್ಞಾನ ಮುಂದುವರೆದು ನಾವು ಬದುಕಿನ ಎಲ್ಲ ಬಗೆಯ ಒತ್ತಡಗಳನ್ನು ಸೆನ್ಸರ್, ಕಾಂತ, ವಿದ್ಯುತ್, ಎಕ್ಸ್ ರೇ, ಆಡಿಯೋ ಥರ್ಮಲ್ ಇತ್ಯಾದಿ ಮಾಪಕಗಳಿಂದ ಅಳೆಯಲು ಕಲಿತಿದ್ದೇವೆ. ಈ ವಿದ್ಯೆಗೂ ನಿಲುಕದ ಶಕ್ತಿ ಹೇಗೆ ನಮ್ಮ ಸುತ್ತಲೂ ಅಸ್ತಿತ್ವದಲ್ಲಿರಲು ಸಾಧ್ಯ? ಆತ್ಮ ಎನ್ನುವುದು ನಿಜಕ್ಕೂ ಎಲ್ಲಿರುತ್ತದೆ? ಹೃದಯದಲ್ಲೇ? ಹಾಗಿದ್ದರೆ ಹೃದಯ ಬದಲಿಸುವಾಗ ಅದು ಎಲ್ಲಿ ಹೋಗುತ್ತದೆ? ಹೃದಯ ಶಸ್ತ್ರಚಿಕಿತ್ಸೆ ನಡೆಸುವಾಗ ಏನು ಮಾಡುತ್ತದೆ? ಆತ್ಮ ಮೆದುಳಿನಲ್ಲಿರುತ್ತದೆಯೇ? ಆದರೆ ಮೆದುಳು ಸತ್ತ ಜನರು ವೈದ್ಯಕೀಯ ಭಾಷೆಯಲ್ಲಿ ಜೀವಂತವಾಗೇ ಇರುತ್ತಾರೆ. ಪ್ರಾಣಿಗಳಿಗೂ ಆತ್ಮ ಇರುತ್ತದೆಯೇ? ಗಿಡ ಮರಗಳಲ್ಲೂ ಆತ್ಮ ಇರುತ್ತದೆಯೇ? ದೆವ್ವಗಳಿಗೆ ವಿಶೇಷ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಅವುಗಳು ಎಷ್ಟು ತೂಕವನ್ನಾದರೂ ಎತ್ತಬಲ್ಲವು. ಎಲ್ಲಿಗೆ ಬೇಕಾದರೂ ಹಾರಬಲ್ಲವು. ಅವುಗಳಿಗೆ ಸಾವು ಇಲ್ಲ. ಅವು ಸುಲಭವಾಗಿ ಅತಿಮಾನವ ಶಕ್ತಿಗಳು ಮಾಡುವ ಕೆಲಸವನ್ನು ಮಾಡಬಲ್ಲವು ಎಂದು ನಂಬಲಾಗುತ್ತದೆ. ಮನುಷ್ಯರನ್ನು ನೋಡಿದರೆ ಜಗತ್ತಿನ ಎಲ್ಲ ಮನುಷ್ಯರಿಗೂ ಸರ್ವೇ ಸಾಧಾರಣವಾಗಿರುವ ಶಕ್ತಿಗಳಿವೆಯೇ ಹೊರತು ಯಾರಿಗೂ ಅತಿಮಾನವ ಶಕ್ತಿಗಳಿಲ್ಲ. ದೆವ್ವಗಳು ಮಾತ್ರ ಹೇಗೆ ಕಾರುಗಳನ್ನು ಎತ್ತಿ ಎಸೆಯಲು ಸಾಧ್ಯ? ಅಥವಾ ಮನೆಯೊಳಕ್ಕೆ ಪ್ರವೇಶ ಪಡೆಯಲು ಸಾಧ್ಯ? ಎಷ್ಟೋ ದೆವ್ವಗಳು ಕೆಲವು ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಮನೆಗಳು ಮಾನವ ನಿರ್ಮಿತ ತಾತ್ಕಾಲಿಕ ರಚನೆಗಳಷ್ಟೇ. ದೆವ್ವಗಳ ಅಪಾರ ಶಕ್ತಿ ಏಕೆ ಒಂದು ಮನೆಗೆ ಮಾತ್ರ ಮೀಸಲಾಗುತ್ತದೆ? ದೆವ್ವದ ಮನೆಯನ್ನು ಕೆಡವಿದರೆ ಏನಾಗುತ್ತದೆ? ಕೆಲವು ದೆವ್ವಗಳು ರಾತ್ರಿಯಲ್ಲಿ ಬರುತ್ತವೆ? ಎಲ್ಲಿಂದ ಬರುತ್ತವೆ? ಅವುಗಳು ಜೀವಿಸುವ ಗುಟ್ಟಿನ ತಾಣಗಳಿವೆಯೇ?  ಅವು ನಮ್ಮೊಂದಿಗೆ ಸಂವಹನ ನಡೆಸಬಲ್ಲ ಶಕ್ತಿ ಹೊಂದಿದ್ದರೆ ಅವುಗಳಿಗೆ ಏಕೆ ಒಂದು ಸ್ಥಾನಮಾನ ನೀಡಬಾರದು?  ಸಾಮಾನ್ಯವಾಗಿ ದೆವ್ವಗಳು ಅಸಂತೃಪ್ತಿಯಿಂದ ಸತ್ತವರದಾಗಿರುತ್ತವೆ. ಆತ್ಮಕ್ಕೆ ಏಕೆ ಕೋಪ ಬರುತ್ತದೆ? ಅವುಗಳಿಗೆ ದೇಹವಿಲ್ಲ, ನಿದ್ದೆಯಿಲ್ಲ, ವಿಶ್ರಾಂತಿ ಅಗತ್ಯವಿಲ್ಲ. ಎಲ್ಲಿ ಬೇಕೆಂದರೂ ಅಲೆದಾಡಬಲ್ಲ ಶಕ್ತಿಯುಳ್ಳ, ಕೆಲಸ ಮಾಡಬೇಕಾದ ಅಗತ್ಯವಿಲ್ಲದ ದೆವ್ವಗಳಿಗೇಕೆ ಕೋಪ ಬರಬೇಕು? ದೆವ್ವಗಳು ಎಲ್ಲ ಭಾಷೆಗಳನ್ನೂ ಹೇಗೆ ಅರ್ಥೈಕೊಳ್ಳಬಲ್ಲವು? ಶತ ಶತಮಾನಗಳಿಂದ ಎಷ್ಟೋ ಕೋಟಿ ಮಂದಿ ಸತ್ತಿದ್ದಾರೆ. ಅವರೆಲ್ಲ ಎಷ್ಟು ಕೋಟಿದೆವ್ವಗಳಾಗಿರಬಹುದು? ಎಲ್ಲಿವೆ? ದೆವ್ವಗಳಿರುವ ತಾಣ. ಹಳೆಯ ಬಂಗಲೆ, ಸ್ಮಶಾನ ಅಥವಾ ಒಂದು ದುರಂತ  ನಡೆದ ಯಾವುದೋ ಒಂಟು ಕಟ್ಟಡ. ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತದೆ. ಪ್ರತಿ ಆಸ್ಪತ್ರೆಯಲ್ಲೂ ನೂರಾರು ಮಂದಿ ಸಾಯುತ್ತಾರೆ. ಇವರೇಕೆ ದೆವ್ವವಾಗಿ ಪರಿವರ್ತನೆಯಾಗುವುದಿಲ್ಲ?

ಪ್ಯಾರಾಸೈಕಾಲಜಿ ಏನು ಹೇಳುತ್ತದೆ? 

ದೆವ್ವ ಎನ್ನುವುದು ನಮ್ಮ ಅತಿಮಾನವ ಅನುಭವದ ಒಂದು ಭಾವನೆ. ಇದು ದೈಹಿಕವಲ್ಲ. ಮೆಂಟಲ್ ಡ್ರಮಟೈಸೇಷನ್ ಎಂದರೆ ಮನಸ್ಸಿನಲ್ಲೇ ಒಂದು ನಾಟಕದ ರೂಪ ಪಡೆಯುವ ಒಂದು ಅನುಭವ.

ದೆವ್ವದ ಅನುಭವ: ಕೆಲವರಿಗೆ ಮನೆಯಲ್ಲಿ ಯಾರೋ ಓಡಾಡಿದ ಅನುಭವವಾಗುತ್ತದೆ. ಕಿವಿಗೆ ಅಸಹಜ ಶಬ್ದ ಕೇಳುತ್ತದೆ. ಅದನ್ನು ದೆವ್ವ ಎಂದು ತೀರ್ಮಾನಿಸುತ್ತಾರೆ.

ಒಂದು ವೈದ್ಯಕೀಯ ಪ್ರಯೋಗಾಲಯದಲ್ಲಿ ಒಬ್ಬಾಕೆ ಅಸಹಜ ಅನುಭವ ಉಂಟಾಗುತ್ತಿದೆ ಎಂದು ಕೆಲಸ ಬಿಟ್ಟಳು. ಅಲ್ಲಿ ದೆವ್ವವಿದೆ ಎನ್ನುವುದು ಆಕೆಯ ದೂರು. ರ್ಯಾಂಡಿ ಎಂಬಾತ ಅದರ ಪ್ರಯೋಗಕ್ಕೆ ಇಳಿದ. ಒಂದು ತೆಳುವಾದ ಕತ್ತಿಯನ್ನು ಒಂದು ಕ್ಲಿಪ್ಗೆ ಸಿಕ್ಕಿಸಿಕೊಂಡು ಇಡೀ ಕೋಣೆಯಲ್ಲಿ ನಡೆದಾಡಿದ. ಆ ಕೋಣೆಯ ಮಧ್ಯಭಾಗಕ್ಕೆ ಬಂದ ಕೂಡಲೇ ಅದು ಯಾರೋ ಒತ್ತಿ ಹಿಡಿದಂತೆ ಪಕ್ಕಕ್ಕೆ ಬಾಗುತ್ತಿತ್ತು. ಗೋಡೆಯ ಪಕ್ಕ ನಡೆದಾಗ ಅದು ನೇರವಾಗಿರುತ್ತಿತ್ತು. ಅದು ಕೊನೆಯ ಮಧ್ಯಭಾಗದಲ್ಲಿ ಹೀಗೆ ಬಾಗುತ್ತಿರಲು ಆತ ಕಂಡು ಹಿಡಿದ ಕಾರಣ ಎಲ್ಲ ದೆವ್ವದ ಅನುಭವಗಳಿಗೂ ಉತ್ತರ ನೀಡುತ್ತದೆ-ಅದು ಇನ್ಫ್ರಾಸೌಂಡ್. 20 ಹರ್ಟ್ಸ್ ಗಿಂತ ಲೂ ಕಡಿಮೆ ಪ್ರಮಾಣದ ಶಬ್ದದ ಅಲೆಗಳು ಮನುಷ್ಯರ ಗ್ರಹಿಕೆಗೆ ಸಿಗುವುದಿಲ್ಲ. ಆದರೆ ಅದರ ಪರಿಣಾಮ ಮಾತ್ರ ಅನುಭವಕ್ಕೆ ಬರುತ್ತದೆ(ಕತ್ತಿ ಬಾಗಿದಂತೆ). ಆದರೆ ಈ ಕಡಿಮೆ ಪ್ರಮಾಣದ ಶಬ್ದದ ಅಲೆಗಳನ್ನೂ ಗ್ರಹಿಸುವ ಸೂಕ್ಷ್ಮ ಮತಿಗಳಿರುತ್ತಾರೆ(ಕೆಲವರಿಗೆ ಮಾತ್ರ ದೆವ್ವಗಳು ಕಾಣುತ್ತವೆ ಅಥವಾ ಅನುಭವಕ್ಕೆ ಬರುವಂತೆ). ಇದೇ ಹಿನ್ನೆಲೆಯಲ್ಲಿ ಆತ ಹಲವಾರು ದೆವ್ವದ ಪ್ರಕರಣಗಳು ಇನ್ಫ್ರಾಸೌಂಡ್ನ ಪ್ರಭಾವವೇ ಎಂದು ಸಾಬೀತುಪಡಿಸಿದ.

ದೆವ್ವದ ಅನುಭವಕ್ಕೆ ಬಂದವರು ಯಾವುದಾದರೊಂದು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಆದ್ದರಿಂದ ಅಂತಹವರನ್ನು ನಾವು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ತಕ್ಕಂತಹ ವಾತಾವರಣ ನಿರ್ಮಿಸಬೇಕು. ಅವರಿಗೆ ಕುಟುಂಬದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು. ದೆವ್ವ ಹಿಡಿದವರು ಅಥವಾ ಅದರ ಅನುಭವ ಹೊಂದುತ್ತಿರುವವರಿಗೆ ಯಾವ ಬಗೆಯ ಸಂಕಷ್ಟ ಇದೆ ಎಂದು ಗಮನಿಸಿ ಅದನ್ನು ಪರಿಹರಿಸಲು ಪ್ರಯತ್ನಪಡಬೇಕು. ಕೆಲವೊಮ್ಮೆ ಅವರಿಗೆ ಹತ್ತಿರದವರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆಗಳಿರುತ್ತವೆ. ಅದಕ್ಕೆ ಮನೋವೈದ್ಯರ ಸಲಹೆ ಪಡೆಯುವುದು ಉತ್ತಮ.

ಸಾಂಪ್ರದಾಯಿಕವಾಗಿ ದೆವ್ವ ಬಿಡಿಸುವ ವಸ್ತು ಅಥವಾ ವ್ಯಕ್ತಿಗಳನ್ನು ನೋಡಿದರೆ ಅವರೂ ಭಯ ಹುಟ್ಟಿಸುವಂತಿರುತ್ತಾರೆ. ಇದು ದೆವ್ವ ಹಿಡಿದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇದು ಕೇವಲ ಮಾನಸಿಕವಾದ ಸಂಗತಿ ಎನ್ನುವುದಕ್ಕೆ ಇದಕ್ಕಿಂತ ಪುರಾವೆಗಳಿರುವುದಿಲ್ಲ. ದೆವ್ವ ಹಿಡಿದವರನ್ನು ಸಾಮಾನ್ಯವಾಗಿ ಅವರ ದೇಹಕ್ಕೆ ಹೊಡೆಯುವ ಅಥವಾ ಹಿಂಸೆ ನೀಡುವ ಮೂಲಕ ದೆವ್ವ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತಾರೆ. ಇದರ ಅರ್ಥ ಆ ವ್ಯಕ್ತಿಗೆ ಹಿಂಸೆಯೇ ಹೊರತು ಅವರಲ್ಲಿರುವ ಯಾವ ಅಂಶಕ್ಕೂ ಅಲ್ಲ ಎನ್ನುವುದನ್ನು ತಿಳಿಯಬೇಕು.

(ದೆವ್ವಗಳಿವೆ ಎಂದು ಸಾಬೀತು ಪಡಿಸುವವರು ಹಾಗೂ ದೆವ್ವಗಳನ್ನು ಬಿಡಿಸುವವರಿಗೆ  ನಾನು ಈ ಮೂಲಕ ಬಹಿರಂಗ ಪಡಿಸುವುದೇನೆಂದರೆ ದೆವ್ವಗಳ ಅಸ್ತಿತ್ವವನ್ನು ವೈಜ್ಞಾನಿಕವಾಗಿ ಪ್ರದರ್ಶಿಸಿದರೆ ಒಂದು ಲಕ್ಷ ರೂ ನೀಡಲು ಸಿದ್ದನಿದ್ದೇನೆ.  ಇಲ್ಲದಿದ್ದರೆ  ಇಲ್ಲದ ದೆವ್ವಗಳ ಹೆಸರನ್ನು ಮುಂದಿಟ್ಟುಕೊಂಡು ಮುಗ್ದಜನರನ್ನು ಮಾನಸಿಕವಾಗಿ ಕೊಲ್ಲುವ ಕಾರ್ಯಕ್ಕೆ ತಿಲಾಂಜಲಿ ನೀಡಲಿ.  ಸಾರ್ವಜನಿಕರಲ್ಲಿ ನನ್ನದೊಂದು ಮನವಿ: ನಿಮ್ಮ ಊರಿನಲ್ಲಿ ಇಂತಹ ಘಟನೆಗಳು ಅಥವಾ ವ್ಯಕ್ತಿಗಳು ಇದ್ದರೆ ನಮಗೆ ತಿಳಿಸಲು ಕೋರಿದೆ.)

– ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
]ಮೊ:9481776616
miraclebuster_nataraj@yahoo.com