Category Archives: ಸರಣಿ-ಲೇಖನಗಳು

ಅಲೆಯಲ್ಲಿ ತೇಲಿಬಂದ ಬಿದ್ಲಾನ್ ಮತ್ತು ಭುಗಿಲೆದ್ದ ಬಿಜೆಪಿಯ ಅಸಮಾಧಾನ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಆಕೆ ನಾಲ್ಕೂವರೆ ಅಡಿ ಎತ್ತರದ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಾಮಾನ್ಯ ಹೆಣ್ಣು ಮಗಳು. ಕೆಂಪು ಬಣ್ಣದ ಲೆಗ್ಗಿಂಗ್ಸ್, ಬಿಳಿ ಹೂಗಳ ಚಿತ್ತಾರ ಇದ್ದ ಹಸಿರು ಬಣ್ಣದ ಟಾಪ್ ಮತ್ತು ಅದರ ಮೇಲೆ ಖಾದಿಯ ಒಂದು ಕೋಟ್. ಇದು ದಿಲ್ಲಿ ಚುನಾವಣೆಯ ಎಪ್ಪತ್ತು ವಿಧಾನಸಭಾ ಕ್ಷೇತ್ರಗಳ Rakhi-Birlaಪೈಕಿ ಆಮ್ ಆದ್ಮಿ ಪಾರ್ಟಿ ಕಡೆಯಿಂದ ಮಂಗೋಲ್‌ಪುರಿಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಭ್ಯರ್ಥಿ ರಾಖಿ ಬಿದ್ಲಾನ್ ಅವರ ಔಟ್‌ಫಿಟ್. ಆಕೆ ಇನ್ನೂ 25ರ ಆಸುಪಾಸಿನಲ್ಲಿರುವ ಪದವೀಧರೆ. ಅಣ್ಣಾ ಹಜಾರೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಧರಣಿ ನಡೆಸುತ್ತಿದ್ದ ಸಮಯದಲ್ಲಿ ಈಕೆ ಸ್ಥಳೀಯ ನ್ಯೂಸ್ ಚಾನಲ್‌ನಲ್ಲಿ ವರದಿಗಾರ್ತಿ ಆಗಿದ್ದವರು. ಅದಕ್ಕೂ ಮುನ್ನ ದಿಲ್ಲಿಯ ಶಿವಾಜಿ ಕಾಲೇಜಿನಲ್ಲಿ ಪದವಿ ಮುಗಿಸಿ ಸಿಎನ್‌ಬಿಸಿಯಲ್ಲಿ ಕೆಲಕಾಲ ಇಂಟರ್ನ್ ಆಗಿ ಕೆಲಸ ಮಾಡಿದ್ದ ಅನುಭವ ಇತ್ತು ಅಷ್ಟೆ. ಹಾಗೆ ಒಂದು ದಿನ ಸ್ಥಳೀಯ ಚಾನಲ್‌ನ ಪ್ರತಿನಿಧಿಯಾಗಿ ಜಂತರ್‌ಮಂತರ್‌ಗೆ ಬಂದವರು ಮತ್ತೆ ಕೆಲಸಕ್ಕೆ ಹೋಗಲಿಲ್ಲ. ಮನೆಯಲ್ಲಿ ತಂದೆಯ ಜತೆ ಕೆಲಸ ಬಿಡುವ ಪ್ರಸ್ತಾಪ ಮಾಡಿದರು. ಮಿಲಿಟರಿಯಲ್ಲಿದ್ದ ತಂದೆಯ ಕೆಲವು ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದ ರಾಖಿ ತಂದೆ, ಮರು ಮಾತಿಲ್ಲದೆ ಓಕೆ ಎಂದರು. ಹಾಗೆ, ನಿನ್ನೆ ರಿಪೋರ್ಟರ್ ಬಿದ್ಲಾನ್ ಮಾರನೆ ದಿನ ಅಣ್ಣಾ ಹಜಾರೆ ನೇತೃತ್ವದ ಚಳುವಳಿಯ ಸಕ್ರಿಯ ಕಾರ್ಯಕರ್ತರಾದರು.

ಮುಂದೆ, ಅಣ್ಣಾ ಹಜಾರೆ ನೇತೃತ್ವದ ಚಳುವಳಿ ರಾಜಕೀಯ ಸ್ವರೂಪ ಪಡೆದುಕೊಂಡಿತು. 2013ರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮುಂದಾಳತ್ವದಲ್ಲಿ ಆಪ್ ಹೆಸರಿನಲ್ಲಿ ದಿಲ್ಲಿ ವಿಧಾನಸಭೆಗೆ ಸ್ಪರ್ಧಿಸಿತು. ಆ ಸಮಯದಲ್ಲಿ ಮಂಗೋಲ್‌ಪುರಿಗೆ ಅಭ್ಯರ್ಥಿಯಾದವರು ಇದೇ ರಾಖಿ ಬಿದ್ಲಾನ್. ಇಂಗ್ಲಿಷ್ ಮಾಧ್ಯಮಗಳ ಪಾಲಿಗೆ ಈಕೆ ರಾಖಿ ಬಿರ್ಲಾ. ಮೊಲದ ಬಾರಿಯ ಚುನಾವಣೆ ಗೆದ್ದು ಕೇಜ್ರಿವಾಲ್ ಸಂಪುಟದಲ್ಲಿ ಸಚಿವೆಯೂ ಆದರು. ಇದೀಗ ಮತ್ತದೇ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸುತ್ತಿದ್ದಾರೆ. ಆಕೆಯ ಪ್ರಬಲ ಎದುರಾಳಿ ಕಾಂಗ್ರೆಸ್‌ನ ರಾಜ್‌ಕುಮಾರ್ ಚೌಹಾನ್. 2013ಕ್ಕೂ ಮುನ್ನ ಸುಮಾರು ಎರಡು ದಶಕಗಳ ಕಾಲ ಮಂಗೋಲ್‌ಪುರಿಯ ಅನಭಿಷಕ್ತ ದೊರೆಯಂತೆ ಇದ್ದವರು. ಮಾಜಿ ಸಚಿವೆಯ ಮನೆ ಇರುವುದು ಇಲ್ಲಿ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ. ಇರುವ ಒಂದೇ ಕೋಣೆಯಲ್ಲಿ ಡಬಲ್ ಕಾಟ್, rakhi-bidlan-prashanth-nathuಪಕ್ಕದಲ್ಲೇ ಅಡುಗೆಯ ಸಿಲಿಂಡರ್ ಮತ್ತು ಬಂದವರಿಗೆ ಕೂರಲು ಒಂದೇ ಒಂದು ಕುರ್ಚಿ. “ನಾನು ರಾಜಕೀಯಕ್ಕೆ ಬಂದಿದ್ದು ಬದಲಾವಣೆ ಮಾಡಬೇಕು ಅನ್ನೋ ಹಂಬಲದಿಂದ. ಹೀಗಾಗಿ ನಾನು ಅಥವಾ ನನ್ನ ಮನೆ ಬದಲಾಗುವುದು ಮುಖ್ಯ ಅಂತ ಅನ್ನಿಸುವುದಿಲ್ಲ,” ಎಂದರು ರಾಖಿ. “ಹುಟ್ಟಿನಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೀನಿ. ಇನ್ನು ಮುಂದೆಯೂ ಹೋರಾಟವನ್ನು ಬಿಡೋಕೆ ಸಾಧ್ಯವಿಲ್ಲ,” ಎನ್ನುವ ಮೂಲಕ ತಮ್ಮ ವಯಸ್ಸಿನ ಸಹಜ ಆಲೋಚನೆಯನ್ನು ಪ್ರತಿನಿಧಿಸಿದರು.

ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬಗಳು ಎನ್ನುತ್ತಾರೆ. ಇಂತಹ ಹಬ್ಬಗಳು ರಾಖಿಯಂತಹ ಅಭ್ಯರ್ಥಿಗಳಿಂದಾಗಿ ಇನ್ನಷ್ಟು ಮೆರಗು ಪಡೆದುಕೊಳ್ಳುತ್ತವೆ. ಹೇಗೆ ಕಾಲ ಮತ್ತು ಬದಲಾವಣೆಯ ಅಲೆ ಬೀಸಲಾರಂಭಿಸಿದರೆ ಸಾಮಾನ್ಯರೂ ಕೂಡ ಪ್ರಜಾಪ್ರಭುತ್ವದ ಶಕ್ತಿಕೇಂದ್ರಗಳಿಗೆ ಅನಾಯಾಸವಾಗಿ ನಡೆದುಬರಬಲ್ಲರು ಎಂಬುದಕ್ಕೆ ರಾಖಿ ಸಾಕ್ಷಿ. ಹಾಗಂತ ಇಡೀ ಕ್ಷೇತ್ರದಲ್ಲಿ ಈ ಬಾರಿ ರಾಖಿ ಪರ ಅಲೆ ಇದೆ ಎನ್ನುವಂತಿಲ್ಲ ಮತ್ತು ಗೆಲುವು ಸುಲಭವಿಲ್ಲ. ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದು ಸುರ್ಜಿತ್ ಕುಮಾರ್ ಎಂಬ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಯುವಕ. ಇವರ ತಂದೆ ಗುತ್ತಿಗೆದಾರರು. “ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ನಾವು ಮನೆ ಮನೆ ಪ್ರಚಾರ ನಡೆಸಲು ಇಲ್ಲಿನ ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ. ಏನೇ ಆಗಲಿ, ನನ್ನ ಮಗಳನ್ನು ದೇಶಕ್ಕಾಗಿ ಕೊಟ್ಟಿದ್ದೇನೆ. ಅವಳು ಗೆಲ್ಲಲಿ ಸೋಲಲಿ ನನಗೆ ಮುಖ್ಯವಲ್ಲ,” ಎನ್ನುತ್ತಾರೆ ರಾಖಿಯ ತಂದೆ. ಇವರು ಇಡೀ ದಿನ ಮಂಗೋಲ್ಪುರಿಯಲ್ಲಿ ಮಗಳ ಚುನಾವಣಾ ಪಾಂಪ್ಲೆಟ್ ಹಿಡಿದುಕೊಂಡು ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದಾರೆ. ಮಗಳು ಗೆದ್ದು ಮತ್ತೊಮ್ಮೆ ಮಂತ್ರಿಯಾದರೂ ಮನೆ ಬದಲಾಯಿಸುವ ಮನಸ್ಸು ಇದ್ದಂತೆ ಕಂಡು ಬರುವುದಿಲ್ಲ.

ದಿಲ್ಲಿಯ ಚುನಾವಣೆ ವಿಶೇಷವೇ ಇಲ್ಲಿನ ವರ್ಗ ತಾರತಮ್ಯದ ಗಾಢವಾದ ಚಹರೆ. ಒಂದು ಕಡೆ ಅತ್ಯಂತ ಐಶಾರಾಮಿತನ delhi-swacch-bharath-mangolpuriಹೊಸದಿಲ್ಲಿಯಲ್ಲಿ ಕಂಡುಬಂದರೆ, ಅದಕ್ಕೆ ತದ್ವಿರುದ್ಧವಾದ ನೆಲೆಯ ಹಳೆ ದಿಲ್ಲಿಯ ಗಲ್ಲಿಗಳಲ್ಲಿ ಕಾಣಿಸುತ್ತದೆ. ಕಡು ಬಡತನ, ಸ್ವಚ್ಚ ಭಾರತ ಅಭಿಯಾನದ ಹೃದಯ ಭಾಗದಲ್ಲೇ ಗಲೀಜು ರಾಚುತ್ತದೆ. ಕೊಳೆಗೇರಿಗಳಲ್ಲಿ ಸಂಕಷ್ಟದ ಬದುಕು ಸಾಗಿಸುವ ಲಕ್ಷಾಂತರ ಜನ ದೇಶದ ರಾಜಧಾನಿಯ ಬಹುಸಂಖ್ಯಾತರು. ಒಂದು ಕೊಳೆಗೇರಿ ಎತ್ತಂಗಡಿ ಆಗುತ್ತಿದ್ದಂತೆ ಈ ಜನರಲ್ಲಿ ಬಹುತೇಕರು ಮತ್ತೊಂದು ನಗರಕ್ಕೆ ವಲಸೆ ಹೋಗುತ್ತಾರೆ. ಇದೀಗ ಜುಗ್ಗಿ ಜನರಿಗೆ ಮನೆ ಕಟ್ಟಿಸಿಕೊಡುವ ಆಶ್ವಾಸನೆ ಎಲ್ಲಾ ಪಕ್ಷಗಳೂ ನೀಡುತ್ತಿವೆ. “ನಮ್ಮ ಜುಗ್ಗಿಯನ್ನು ಯಾರು ಎತ್ತಂಗಡಿ ಮಾಡುವುದಿಲ್ಲವೋ ಅವರಿಗೆ ನಮ್ಮ ಮತ,” ಎಂದರು ಮೀನಾಕ್ಷಿ ಸಿನ್ಹಾ. ಇವರ ಕೈಲಿ ಆಗಷ್ಟೆ ಬಂದಿದ್ದ ವಿದ್ಯುತ್ನ ಬಿಲ್ ಇತ್ತು ಮತ್ತು ಅದು ಅಚ್ಚರಿ ಎನ್ನಿಸುವಷ್ಟು ದುಬಾರಿಯಾಗಿತ್ತು. ಕೆಲವೇ ಅಂಗುಲದ ಅವರ ಮನೆಯ ವಿದ್ಯುತ್ ಬಳಕೆ ಹಾಗೂ 1841 ರೂಪಾಯಿಗಳ ಅವರ ಬಿಲ್ಗೂ ಸಂಬಂಧ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿಸುತ್ತಿತ್ತು. ಈ ಬಾರಿಯ ಚುನಾವಣೆಯಲ್ಲಿ ವಿದ್ಯುತ್ ಸಮಸ್ಯೆ ಮೂರನೇ ಪ್ರಮುಖ ವಿಚಾರವಾಗಿದೆ. ಈಗಾಗಲೇ ಬಿಜೆಪಿಯ ದಿಲ್ಲಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ ವಿದ್ಯುತ್ ಮೀಟರ್ ತಯಾರಿಸುವ ಕಂಪನಿ ಜತೆ ವ್ಯವಹಾರಿಕಾ ಸಂಬಂಧ ಹೊಂದಿದ್ದಾರೆ ಎಂಬುದನ್ನು ಆಪ್ ಬಹಿರಂಗಪಡಿಸಿದೆ. ಹೀಗಾಗಿ, ಕೆಳವರ್ಗದ ಜನರಲ್ಲಿ ಬಿಜೆಪಿಗೆ ಇದು ಸಮಸ್ಯೆಯಾಗುವಂತೆ ಕಾಣಿಸುತ್ತಿದೆ.

ರಾಖಿಯಂತಹ ಸಾಮಾನ್ಯ ಕುಟುಂಬಗಳಿಂದ ಬಂದ ಅಭ್ಯರ್ಥಿಗಳನ್ನು ಮುಂದಿಟ್ಟುಕೊಂಡು ಕಾದಾಡುತ್ತಿರುವ ಆಪ್ ಕುರಿತು bjp-aap-minor-clash-at-rajiv-chowk-feb0115ಬಿಜೆಪಿ ಪಾಳೆಯದಲ್ಲಿ ಅಸಮಾಧಾನ ಬುಗಿಲೆದ್ದಂತೆ ಕಾಣಿಸುತ್ತಿದೆ. ಒಂದು ಕಡೆ ಮೋದಿಯಂತಹ ನಾಯಕರು ತಮ್ಮ ಭಾಷಣದಲ್ಲಿ ಆಪ್ ಕುರಿತು ಟೀಕೆಗಳ ಮಳೆಗರೆಯುತ್ತಿದ್ದಾರೆ. ಕೇಜ್ರಿವಾಲ್‌ರನ್ನು ವೈಯಕ್ತಿಕ ನಿಂದನೆಗೆ ಗುರಿಪಡಿಸುವಂತಹ ಜಾಹಿರಾತುಗಳನ್ನು ನೀಡುತ್ತಿದ್ದಾರೆ. ತಳಮಟ್ಟದಲ್ಲಿ ಆಪ್‌ನ ಬಹಿರಂಗ ಪ್ರಚಾರಗಳನ್ನು ತಡೆಯುವ ಪ್ರಯತ್ನಗಳನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಭಾನುವಾರ ಸಂಜೆ ಇಲ್ಲಿನ ಖನ್ನೋಟ್ ಪ್ಲೇಸ್ ಎಂಬ ಶಾಪಿಂಗ್ ಏರಿಯಾದಲ್ಲಿ ಆಪ್ ಹಮ್ಮಿಕೊಂಡಿದ್ದ ಬೀದಿ ನಾಟಕವನ್ನು, ಬಿಜೆಪಿಯ ಕೆಲವು ಯುವ ಕಾರ್ಯಕರ್ತರು ತಡೆಯುವ ವ್ಯರ್ಥ ಪ್ರಯತ್ನ ಮಾಡಿದರು. ದಿಲ್ಲಿಯ ವರ್ಗ ಸಂಘರ್ಷಗಳಂತೆ ಇಲ್ಲಿನ ಚುನಾವಣೆ ಕೂಡ ಎರಡು ಅಂಚಿನ ಕತ್ತಿನ ನಡೆಯ ಹಾದಿಯಲ್ಲಿದೆ. ಒಂದು ಕಡೆ ಗೆಲ್ಲುವ ಉತ್ಸಾಹ, ಮತ್ತೊಂದೆಡೆ ಬುಗಿಲೆದ್ದ ಅಸಮಾಧಾನಗಳ ನಡುವೆಯೇ ಕೌಂಟ್‌ಡೌನ್ ಹತ್ತಿರಾಗುತ್ತಿದೆ.

ದಿಲ್ಲಿ ಚುನಾವಣೆ ಕಾವು: ಸದ್ಯಕ್ಕೆ ಇಬ್ಬರದ್ದೂ ಸಮಪಾಲು!

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ದಿಲ್ಲಿಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಇಲ್ಲಿನ ವಾತಾವಣ ಅಕ್ಷರಶಃ ಬಿಸಿಯಾಗುತ್ತಿದೆ. ಕಳೆದ ವಾರವಿಡೀ ಬೀಸುತ್ತಿದ್ದ ತಣ್ಣನೆಯ ಗಾಳಿ ಮತ್ತು ಕೊರೆಯುವ ಚಳಿ ಶನಿವಾರದಿಂದ ಈಚೆಗೆ ಕಮ್ಮಿಯಾಗಿದೆ. ದೇಶದ ರಾಜಧಾನಿಯ ಶಕ್ತಿಪೀಠಕ್ಕಾಗಿ ವರ್ಷದ ಅಂತರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ ಕಣದಲ್ಲಿದೆ. ಆದರೆ, ಇದರ ಅಭ್ಯರ್ಥಿಗಳು modi-kejriwalಜನರ ಗಮನ ಸೆಳೆಯುವಲ್ಲಿ ಎಲ್ಲಾ ರೀತಿಯಿಂದಲೂ ವಿಫಲರಾಗಿದ್ದಾರೆ. ಸಾಮಾನ್ಯ ಜನರ ಪ್ರತಿನಿಧಿ ಎಂಬ ಬ್ರಾಂಡ್‍ ವ್ಯಾಲ್ಯೂವನ್ನು ಕಾಂಗ್ರೆಸ್‍ನಿಂದ ಕಿತ್ತುಕೊಂಡಿರುವ ಆಮ್ ಆದ್ಮಿ ಪಕ್ಷ ಹಾಗೂ ಮೋದಿ ಅಲೆಯ ಮೇಲೆ ಇಡೀ ದೇಶವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಭರವಸೆಯಲ್ಲಿರುವ ಬಿಜೆಪಿ ಪಕ್ಷಗಳು ದಿಲ್ಲಿಯ ‘ಸುಲ್ತಾನೇಟ್’ಗಾಗಿ ಅಂತಿಮ ಹಂತದ ಹಣಾಹಣಿ ನಡೆಸುತ್ತಿವೆ. ಇದು ಪುಟ್ಟ ರಾಜ್ಯವೊಂದರ ವಿಧಾನಸಭೆ ಚುನಾವಣೆ ಮಾತ್ರವೇ ಆಗಿದ್ದರೂ, ಇಲ್ಲಿ ಮೂಡುವ ಫಲಿತಾಂಶ ಇಡೀ ದೇಶದ ರಾಜಕೀಯ ಭವಿಷ್ಯದ ಮೇಲೆ ಮುಂದಿನ ದಿನಗಳಲ್ಲಿ ಭಾರಿ ಪ್ರಭಾವವನ್ನು ಬೀರಲಿದೆ. ಹೀಗಾಗಿಯೇ, ದೇಶಾದ್ಯಂತ ದಿಲ್ಲಿಯ ಈ ಚುನಾವಣೆ ಕುರಿತು ಭಾರಿ ಕುತೂಹಲವೊಂದು ಮೂಡಿದೆ. ಹೀಗಾಗಿಯೇ ಇದು ಕೇವಲ ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಚುನಾವಣೆ ಮಾತ್ರವಾಗಿ ಕಾಣುತ್ತಿಲ್ಲ. ಸಿದ್ಧಮಾದರಿಯ ಚುನಾವಣೆ ಸೂತ್ರಗಳನ್ನು ಪಕ್ಕಕ್ಕೆ ತಳ್ಳಿ, ಹೊಸ ತಲೆಮಾರಿ ಕದನಗಳಿಗೆ ಸಾಧ್ಯತೆಯೊಂದು ಇಲ್ಲಿ ಸದ್ದಿಲ್ಲದೆ ರೂಪುಗೊಳ್ಳುತ್ತಿದೆ.

ದಿಲ್ಲಿಯ ಜನ ನಿಜಕ್ಕೂ ಪ್ರಜ್ಞಾವಂತರು. ಇಲ್ಲಿನ ಸಾಮಾನ್ಯ ಜನರಲ್ಲಿ ಇರುವಷ್ಟು ರಾಜಕೀಯ ಪ್ರಜ್ಷೆ ಹಾಗೂ ಸುತ್ತಲಿನ ಬೆಳವಣಿಗೆಗಳ ಕುರಿತು ಆಸಕ್ತಿ ದೇಶದ ಇನ್ಯಾವುದೇ ಭಾಗಗಳಲ್ಲಿ ಕಾಣಸಿಗುವುದರ ಕುರಿತು ಅನುಮಾನಗಳಿವೆ. ಆಟೋ ಚಾಲಕರಿಂದ ಆರಂಭವಾಗಿ, ಬೀದಿ ಬದಿಯ ಕುರಕಲು ತಿಂಡಿಗಳನ್ನು ಮಾರುವ ವ್ಯಾಪಾರಿಗಳವರೆಗೆ ದಿಲ್ಲಿಯ ರಾಜಕೀಯದ ಕುರಿತು ಮಾಹಿತಿ ಇದೆ. ಇಲ್ಲಿನ ಬೆಳವಣಿಗೆಗಳ ಕುರಿತು ಅವರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ. ಅಷ್ಟೇಕೆ, ನಮ್ಮ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಹಾಗೂ ಸಿದ್ದರಾಮಯ್ಯ ಸರಕಾರದ ಯೋಜನೆಗಳ ಕುರಿತು ಇಲ್ಲಿನ ಆಟೋ ಚಾಲಕರೊಬ್ಬರು ತಿಳಿವಳಿಕೆಯಿಂದ ಮಾತನಾಡಿದ್ದು ಅಚ್ಚರಿ ಮೂಡಿಸುವಂತಿತ್ತು. “ನಿಮ್ಮಲ್ಲಿನ ಕಾಂಗ್ರೆಸ್‍ ದಿಲ್ಲಿಯ ಕಾಂಗ್ರೆಸ್‍ನಂತೆ ಅಲ್ಲ. ಅನ್ನಭಾಗ್ಯ ತರುವ ಮೂಲಕ ಬಡಜನರ ಹಸಿವಿನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಬಹುಶಃ ಅದನ್ನು ಇಲ್ಲಿ ಮಾಡಿದ್ದರೆ ದಿಲ್ಲಿ ಕಾಂಗ್ರೆಸ್‍ ಜುಗ್ಗಿ (ಕೊಳೆಗೇರಿ)ಗಳಿಂದ ಕಣ್ಮರೆಯಾಗುತ್ತಿರಲಿಲ್ಲ. arvind-kejriwal-delhi-electionsಇಲ್ಲಿನ ಕಾಂಗ್ರೆಸ್‍ಗೆ ಈ ಬಾರಿ ನಿಮ್ಮಿಂದಲೇ ಹಣ ಬಂದಿರಬಹುದು,’’ ಎಂದ ಆಟೋ ಚಾಲಕರೊಬ್ಬರ ಹೆಸರು ರಾಮ್‍ಜಿ. ಉತ್ತರ ಪ್ರದೇಶದ ಇವರು ದಿಲ್ಲಿಯ ಪಹಾಡ್‍ಗಂಜ್ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾರೆ. ಪತ್ನಿ ಮತ್ತು ಒಬ್ಬರು ಪುಟ್ಟ ಮಕ್ಕಳ ಚೊಕ್ಕ ಸಂಸಾರ ಅವರದ್ದು.

ರಾಮ್‍ಜಿ ಹಾಗೆಯೇ ಸುಮಾರು ಎರಡು ಲಕ್ಷ ಆಟೋ ಚಾಲಕರು ದಿಲ್ಲಿಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ಒಂದು ಕಾಲಕ್ಕೆ ಕಾಂಗ್ರೆಸ್‍ ಪಕ್ಷದ ಮತದಾರರಾಗಿದ್ದವರು. ಆಮ್‍ ಆದ್ಮಿ ಪಕ್ಷದ 49 ದಿನಗಳ ಆಡಳಿತದಲ್ಲಿ ವಿದ್ಯುತ್ ಹಾಗೂ ನೀರಿನ ಮಾಸಿಕ ಬಿಲ್‍ನಲ್ಲಿ ತಂದ ಬದಲಾವಣೆ ಇವರಲ್ಲಿ ಹೊಸ ಆಶಯದ ಅಲೆಯನ್ನು ಎಬ್ಬಿಸಿದೆ. ಜತೆಗೆ ಸಿಎನ್‍ಜಿ ಗ್ಯಾಸ್‍ನ ಬೆಲೆಯಲ್ಲಿ ಆದ ಇಳಿಕೆಯ ನೇರ ಫಲಾನುಭವಿಗಳು ಇವರು. ಹೀಗಾಗಿ, ಆಮ್‍ ಆದ್ಮಿ ಪಕ್ಷ ನಿರಾಯಾಸವಾಗಿ ಈ ವರ್ಗದಲ್ಲಿ ನೆಲೆಯೂರಿದೆ. ಇದರ ಪರಿಣಾಮ ಕಾಂಗ್ರೆಸ್‍ ಮತ್ತು ಬಿಜೆಪಿ ಈ ಬಾರಿಯ ತಮ್ಮ ಚುನಾವಣೆ ಪ್ರಣಾಳಿಕೆಗಳಲ್ಲಿ ಬಡಜನರನ್ನು ಆಕರ್ಷಿಸಲು ವಿದ್ಯುತ್‍ ಬಿಲ್‍ನಲ್ಲಿ ಇಳಿಕೆ, ಉಚಿತ ನೀರಿನ ಸೌಕರ್ಯದ ಭರವಸೆ ನೀಡಿವೆ. ವಿಶೇಷವಾಗಿ ಕಾಂಗ್ರೆಸ್‍ನ ಪ್ರಣಾಳಿಕೆ ಆಪ್‍ನ ಮಕ್ಕಿ ಕಾ ಮಕ್ಕಿ ಎಂಬ ಟೀಕೆಗಳು ವ್ಯಕ್ತವಾಗಿವೆ.

ಇನ್ನೊಂದು ಆಯಾಮದಲ್ಲಿ ದಿಲ್ಲಿ ಚುನಾವಣೆ ಇಬ್ಬರು ವ್ಯಕ್ತಿಗಳ ನಡುವಿನ ನೇರ ಕದನದಂತೆ ಬಿಂಬಿತವಾಗುತ್ತಿದೆ. ಶನಿವಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ ತಮ್ಮ ಭಾಷಣದ ಅವಧಿಯ ಬಹುತೇಕ ಭಾಗವನ್ನು ಮೀಸಲಿಟ್ಟಿದ್ದು ಆಮ್ ಆದ್ಮಿ ಪಕ್ಷದ ಟೀಕೆಗಾಗಿ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಟ್ಟಾರೆ ಪ್ರಚಾರದ ಶ್ರಮ ಆಪ್‍ನ ಟೀಕೆ ಮಾಡುವುದಕ್ಕೆ ವ್ಯರ್ಥವಾಗತ್ತಿರುವಂತೆ ಕಾಣಿಸುತ್ತಿದೆ. ಕೀರ್ತಿನಗರದ ಮೆಟ್ರೊ ರೈಲು ನಿಲ್ದಾಣದಲ್ಲಿ ಸಿಕ್ಕ ಮುಂಬೈ ಮೂಲದ ಖಾಸಗಿ ಚುನಾವಣಾ ಸಮೀಕ್ಷಕ ಅಭಿಷೇಕ್ ಭಟ್‍ ಎಂಬುವವರು ತಮ್ಮ ಅನುಭವಗಳನ್ನು ಹಂಚಿಕೊಂಡರು. “ನಾನು ಆರ್‍ಎಸ್‍ಎಸ್‍ನ ಪ್ರಾಂಥ್ಯ ಪ್ರಮುಖ್‍ ಒಬ್ಬರನ್ನು ಭೇಟಿ ಮಾಡಿದ್ದೆ. ಅವರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಂಪಿಗಳು ಹಾಗೂ ಕೆಲವು ಸಚಿವರ ನಡಳಿಕೆಯಲ್ಲಿ ಆದ ಬದಲಾವಣೆ ಕುರಿತು ಅಸಮಾಧಾನ ಇದೆ. ನೈತಿಕವಾಗಿ ಅವರು ಹಾಳಾಗಿ ಹೋಗಿದ್ದಾರೆ ಎಂದು ಅಸಮಾಧಾನ ಹಂಚಿಕೊಂಡರು,’’ ಎಂದರು. kejriwal_aap_pti_rallyಇದು ಬಿಜೆಪಿಯ ಕಾರ್ಯಕರ್ತರ ,ಮಟ್ಟದಲ್ಲೂ ಇದೆ. ಮಂಗೋಲ್‍ಪುರಿಯ ಗಲ್ಲಿಯೊಂದರಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಸೋನಾಲಿ ಮತ್ತವರ ತಂಡದವರ ಮಾತುಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು. “ನಮ್ಮವರನ್ನು ಗೆಲ್ಲಿಸಿ ಕಳುಹಿಸಿದರೂ ಅವರು ಕೆಲಸ ಮಾಡುವುದು ಇಷ್ಟರಲ್ಲೇ ಇದೆ. ಆದರೆ ಈ ಚುನಾವಣೆಯಲ್ಲಿ ನಾವು ಸೋತರೆ ಮೋದಿ ಅಂತಹ ನಾಯಕರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಅದಕ್ಕಾದರೂ ನಾವು ಕಷ್ಟಪಡಬೇಕಿದೆ,’’ ಎಂದರು ಸೋನಾಲಿ. ಅವರ ಪಕ್ಕದಲ್ಲಿದ್ದ ನಾತುರಾಮ್ ಠಾಕೂರ್‍ ಎಂಬ ಯುವಕ, “ಈ ಆಮ್ ಆದ್ಮಿಗಳು ಎಂದು ಹೇಳಿಕೊಳ್ಳುವವರೂ ಅಧಿಕಾರಕ್ಕೆ ಬಂದ ನಂತರ ಇನ್ನೋವಾದಲ್ಲಿ ಸುತ್ತುತ್ತಿದ್ದರು. ಬಹುಶಃ ಇನ್ನಷ್ಟು ಕಾಲ ಅಧಿಕಾರದಲ್ಲಿ ಇದ್ದಿದ್ದರೆ ಅವರೇನು ಎಂಬುದು ಜನರಿಗೆ ಗೊತ್ತಾಗುತ್ತಿತ್ತು. ಈಗ ಅವರ ಮುಖವಾಡ ಜನರ ಮುಂದೆ ಬಯಲು ಮಾಡುವುದು ಕಷ್ಟವಾಗುತ್ತಿದೆ,’’ ಎಂದ.

ಸದ್ಯ ಇಲ್ಲಿನ ತಳಮಟ್ಟದ ಪ್ರಚಾರ ವೈಖರಿಗಳು, ಜನರ ಅಭಿಪ್ರಾಯಗಳು ಹಾಗೂ ಮೇಲ್ನೋಟಕ್ಕೆ ಕಾಣಿಸುವ ಅಂಶಗಳನ್ನು ಮಾತ್ರವೇ ಇಟ್ಟುಕೊಂಡು ಹೇಳುವುದಾದರೆ, ದಿಲ್ಲಿ ಗದ್ದುಗೆ ಬಿಜೆಪಿ ಮತ್ತು ಆಪ್‍ಗೆ ಸಮಾನ ಅಂತರದಲ್ಲಿವೆ. ಒಂದು ಕಡೆ ಮೋದಿ ಮತ್ತೊಂದೆಡೆ ಕೇಜ್ರಿವಾಲ್‍ ತಮ್ಮ kejriwal-modiಕಾರ್ಯಕರ್ತರಿಂದ ಹಿಡಿದು ಜನರವರೆಗೆ ಪ್ರಭಾವ ಬೀರುತ್ತಿದ್ದಾರೆ. ಹೀಗಾಗಿ ಆಯಾ ಕ್ಷೇತ್ರದ ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ಇಬ್ಬರು ನಾಯಕರ ಚಿನ್ಹೆಗಳಿಗೆ ಮತಗಳು ಬೀಳಲಿವೆ. ಇನ್ನೂ ಒಂದು ವಾರದ ಬಹಿರಂಗ ಪ್ರಚಾರ ಬಾಕಿ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಆಗಬಹುದಾದ ಬದಲಾವಣೆಯೇ ಚುನಾವಣೆ ಫಲಿತಾಂಶವನ್ನು ನಿರ್ಧರಿಸಲಿದೆ. ಅಲ್ಲಿವರೆಗೂ ಇಲ್ಲಿ ನಡೆಯುವ ಪ್ರತಿ ಬೆಳವಣಿಗೆಗಳೂ ಒಂದೊಂದು ಕತೆಯನ್ನು ಹೇಳುತ್ತವೆ.

ಕದ್ದ ತಲೆಮಾರುಗಳನ್ನು ಹುಡುಕುತ್ತಾ… : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-2)


– ಶ್ರೀಧರ್ ಪ್ರಭು


 

“We are all visitors to this time, this place. We are just passing through. Our purpose here is to observe, to learn, to grow, to love… and then we return home.”

– ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಪ್ರಚಲಿತವಿರುವ ಒಂದು ನಾಣ್ಣುಡಿ

ಪ್ರಪಂಚದ ಮೊದಲ ಕಾಲಾಪಾನಿ

ಇಂಗ್ಲೆಂಡ್ ಮತ್ತು ಅಮೆರಿಕೆಯ ಔದ್ಯೋಗಿಕ ಕ್ರಾಂತಿ ಒಂದು ಕಡೆ ಪ್ರಗತಿ ಮತ್ತು ಶ್ರೀಮಂತಿಕೆ ತಂದರೆ ಇನ್ನೊಂದೆಡೆ ಅತ್ಯಂತ ಕ್ರೂರ ಅಸಮಾನತೆಯನ್ನೂ ತಂದೊಡ್ಡಿತು. ಕಾರ್ಮಿಕರ, ಅದರಲ್ಲೂ ಬಾಲ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆ ಮಿತಿ ಮೀರಿತ್ತು. ಬಹುತೇಕ ಜೈಲುಗಳು ತುಂಬಿ ತುಳುಕುತ್ತಿದ್ದವು. ಇಂತಹುದ್ದರಲ್ಲಿ, ಸಾಮ್ರಾಜ್ಯಶಾಹಿಗಳು ಕಂಡು ಕೊಂಡ ಸುಲಭ ಮಾರ್ಗವೆಂದರೆ ಕೈದಿಗಳನ್ನು ದೂರದ ದ್ವೀಪಗಳಿಗೆ ಸಾಗಿಸುವುದು. ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು ಅಂಡಮಾನಿನ ಕಾಲಾಪಾನಿ Australia-aborigines-artಶಿಕ್ಷೆ ಕಂಡುಕೊಂಡಂತೆ, ತಮ್ಮದೇ ದೇಶದಲ್ಲಿನ ದಂಗೆ, ಹೋರಾಟಗಳನ್ನು ಹತ್ತಿಕ್ಕಲು ಕೈದಿಗಳನ್ನು ಆಸ್ಟ್ರೇಲಿಯಾಗೆ ಸಾಗಿಸುವ ಮಾರ್ಗ ಕಂಡು ಹಿಡಿಯಲಾಯಿತು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ನಡುವಿನ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಸುಮಾರು 1,65,000 ಜನರನ್ನು ಆಸ್ಟ್ರೇಲಿಯಾಗೆ ಸಾಗಿಸಲಾಯಿತು.

ಮೂಲನಿವಾಸಿಗಳ ಮಾರಣ ಹೋಮ

ಹೀಗೆ ಕಾಲಿಟ್ಟ ಪಾಶ್ಚಿಮಾತ್ಯರು ಕೇಳಿ ಕಂಡರಿಯದ ರೋಗ ರುಜಿನಗಳನ್ನು ಮೂಲ ನಿವಾಸಿಗಳಿಗೆ ಅಂಟಿಸಿಬಿಟ್ಟರು. ನೆಗಡಿಯಿಂದ ಮೊದಲ್ಗೊಂಡು ಸೀತಾಳೆ ಸಿಡುಬು, ಕಾಲರ, ಕ್ಷಯ ರೋಗ, ಸಿಫಿಲಿಸ್ ನಂತಹ ಗುಪ್ತ ರೋಗಗಳು ಅಂಟಿಕೊಂಡು ಸಿಡ್ನಿ ಸುತ್ತಲಿನ ಅರ್ಧದಷ್ಟು ಮೂಲನಿವಾಸಿಗಳು ಸ್ವರ್ಗವಾಸಿಗಳಾದರು.

ನಲವತ್ತು ಸಾವಿರ ವರ್ಷಗಳಿಂದ ನೆಲವನ್ನು ತಬ್ಬಿ ಬದುಕಿದ ಪ್ರಾಚೀನ ಸಂಸ್ಕೃತಿಯೊಂದನ್ನು ಸಾಮ್ರಾಜ್ಯದಾಹದ ಬಿಳಿಯರು ಕೇವಲ (ಹತ್ತೊಂಬತ್ತನೇ ಶತಮಾನದ ಮೊದಲ) ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಗುರುತು ಸಿಗದಂತೆ ನಾಶಮಾಡಿಬಿಟ್ಟಿದ್ದರು.

ಬ್ರಿಟಿಷರ ಸಾಮ್ರಾಜ್ಯಶಾಹಿ ದಾಹದಲ್ಲಿ ಬೆಂದು 1901ರ ವರೆಗೂ ಒಂದು ವಸಾಹತುವಾಗಿಯೇ ಉಳಿದಿತ್ತು. ಅರ್ಥಿಕ ಅಸಮಾನತೆಯಲ್ಲಿ ಬೆಂದು ಬಂದ ಶೋಷಿತರು ಮತ್ತು ಸಾಮ್ರಾಜ್ಯ ಶಾಹಿಗಳು ಸೇರಿ ಮೂಲನಿವಾಸಿಗಳನ್ನು ಶೋಷಿಸಿದರು. ಇಂದು ಸಿಡ್ನಿ ರಾಜಧಾನಿಯಾಗಿರುವ ನ್ಯೂ ಸೌತ್ ವೇಲ್ಸ್ ನಿಂದ ಬೇರ್ಪಟ್ಟು ತಮ್ಮದೇ ಪ್ರಾಂತ್ಯ ನಿರ್ಮಿಸಿಕೊಳ್ಳಬೇಕು ಎಂಬ ಆಶಯದಿಂದ ಅಂದು ಕೇವಲ ಪೋರ್ಟ್ ಫಿಲ್ಲಿಪ್ ಒಂದು ಜಿಲ್ಲೆಯಾಗಿದ್ದ ವಿಕ್ಟೋರಿಯಾ ಪ್ರಾಂತ್ಯದ ಜನ ಹೋರಾಟ ನಡೆಸಿದರು. ಒಂದು ಪ್ರಾಂತ್ಯದ “ದೊಡ್ಡಣ್ಣನ” ವ್ಯವಹಾರ ಸಹಿಸದೆ ಹೋರಾಟಗಳು ನಡೆದವು.

ಯಾರಿಗೆ ಬಂತು ಎಲ್ಲಿಗೆ ಬಂತು?

ಆಸ್ಟ್ರೇಲಿಯಾ 1901 ರಲ್ಲಿ ಗಣರಾಜ್ಯವಾಗಿ ಉದಯಿಸಿತು. ಆದರೆ ಮೂಲನಿವಾಸಿಗಳ ಶೋಷಣೆ ಇನ್ನೂ ತೀವ್ರವಾಯಿತು. 1909 ರಿಂದ 1969 ರ ವರೆಗೆ ಸಾವಿರಾರು ಮಕ್ಕಳನ್ನು ತಮ್ಮ ತಂದೆ ತಾಯಿಯರಿಂದ ಕದ್ದು ಸರಕಾರ ಪ್ರಾಯೋಜಿಸಿದ ಹಾಸ್ಟೆಲ್ ಗಳಿಗೆ (ಒಂದು ರೀತಿಯಲ್ಲಿ ಮಕ್ಕಳ ಜೈಲುಗಳು) ಸಾಗಿಸಲಾಯಿತು. ಹೀಗಾಗಿ ಮೂಲನಿವಾಸಿಗಳನ್ನು Australia-family-aborigines“ಕದ್ದ ತಲೆಮಾರುಗಳು’ (ಸ್ಟೋಲನ್ ಜೆನರೇಶನ್ಸ್) ಎಂದು ಕೆರೆಯುವ ಪರಿಪಾಠವಿದೆ. ಇಂದಿಗೆ ಕೇವಲ ನಾಲ್ಕು ದಶಕಗಳ ಹಿಂದಿನವರೆಗೂ ಆಸ್ಟ್ರೇಲಿಯ ಸರಕಾರ ‘ಸುಸಂಸ್ಕೃತ’ ಗೊಳಿಸುವಸಲುವಾಗಿ ಕಾನೂನಿನನ್ವಯ ಮೂಲನಿವಾಸಿಗಳ ಮಕ್ಕಳನ್ನು ಅಪಹರಿಸುತ್ತಿತ್ತು.

ಹೆತ್ತವರಿಂದ ಬೇರ್ಪಟ್ಟ ಸಾವಿರಾರು ಜನರು ಕಳೆದೇ ಹೋದರು. ವ್ಯಕ್ತಿ ಗಳು ಮಾತ್ರವಲ್ಲ ಹಲವು ಜನಾಂಗಗಳೇ ಕಳೆದು ಹೋದವು

ರಕ್ತದ ಕಲೆ ತೊಳೆಯುತ್ತಾ…

ಆಸ್ಟ್ರೇಲಿಯಾಗೆ ಮೂಲನಿವಾಸಿಗಳ ರಕ್ತ ಅಂಟಿರುವುದು ಎಷ್ಟು ನಿಜವೋ ಅದನ್ನು ತೊಳೆಯಲು ನಡೆಯುತ್ತಿರುವ ಪ್ರಯತ್ನಗಳೂ ಅಷ್ಟೇ ನಿಜ. ತಾವು ಕ್ಷಮಿಸಲಾಗದ ಅಪರಾಧ ಮಾಡಿದ್ದೇವೆ ಎಂಬ ಅಪರಾಧಿ ಪ್ರಜ್ಞೆ ಬಹುತೇಕರಲ್ಲಿದೆ. ಕಳೆದ ದಶಕ ಒಂದರಲ್ಲೇ ಸರಕಾರ ಉತ್ತರ ಆಸ್ಟ್ರೇಲಿಯ ಪ್ರಾಂತದ 21% (ಹದಿಮೂರು ಲಕ್ಷ ಚದುರ ಮೀಟರ್ ನಷ್ಟು) ಭೂಮಿಯ ಒಡೆತನವನ್ನು ಮೂಲನಿವಾಸಿಗಳಿಗೆ ವಹಿಸಿ ಕೊಟ್ಟಿದೆ.

2008 ರಲ್ಲಿ ಅಂದಿನ ಪ್ರಧಾನಿ ಕೆವಿನ್ ರಡ್ ಮೂಲನಿವಾಸಿಗಳ ಬಹಿರಂಗ ಕ್ಷಮೆ ಕೇಳಿದರು. ಸರಕಾರ ಮೂಲನಿವಾಸಿಗಳ ಸಲುವಾಗಿ ಆಸ್ಟ್ರೇಲಿಯ ಸರಕಾರವೇ ಲಕ್ಷಗಟ್ಟಲೆ ಡಾಲರ್ ಖರ್ಚು ಮಾಡಿ ಮೂಲನಿವಾಸಿಗಳ ಆಶಯಗಳನ್ನು ಪ್ರತಿಪಾದಿಸುವ ಸಂವಾದ ಕಾರ್ಯಕ್ರಮಗಳನ್ನು ಸಂಯೋಜಿಸಿದೆ. ಇಂತಹ ಸಾಕಷ್ಟು ಕಾರ್ಯಕ್ರಮಗಳು ಆಸ್ಟ್ರೇಲಿಯ ದೇಶದ ಹೊರಗೂ ಜರುಗಿವೆ. ಅಂತಹ ಒಂದೆರಡು ಕಾರ್ಯಕ್ರಮಗಳು ಬೆಂಗಳೂರಿನಲ್ಲೂ ನಡೆದಿವೆ. ಸರಕಾರವೇ ಮುಂದೆ ನಿಂತು, ದುಡ್ಡು ಮತ್ತು ಅಂತರ ರಾಷ್ಟ್ರೀಯ ಮಟ್ಟದ ಪ್ರಚಾರ ಕೊಡಿಸಿ ತಾವೇ ಎಸಗಿದ ಅನ್ಯಾಯಗಳ ಖಂಡನೆ ಮಾಡುವ ಇಂತಹ ಉದಾಹರಣೆಗಳು ಅಪರೂಪ.

ನವೆಂಬರ್ 2014 ನಲ್ಲಿ ಜರುಗಿದ ಬೆಂಗಳೂರು Australia-aborigines-costumeಸಾಹಿತ್ಯ ಹಬ್ಬ (Bengaluru Literary Festival)ದಲ್ಲಿ ಕೂಡ ಅಂತಹ ಒಂದು ಸಂವಾದ ಜರುಗಿತ್ತು. ಕ್ಯಾತೀ ಕ್ರೇಗೀ, ಡೈಲನ್ ಕೋಲ್ಮನ್, ಅನೀಟ ಹೈಸ್, ಜೇರ್ಡ್ ಥಾಮಸ್, ಎಲೆನ್ ವಾನ್, ನೀರ್ವೆನ್ ಮತ್ತು ನಿಕೋಲ್ ವಾಟ್ಸನ್ ಮೊದಲಾದ ಆಸ್ಟ್ರೇಲಿಯಾದ ಜನಪರ ಲೇಖಕರು ಮತ್ತು ಹೋರಾಟಗಾರರೂ ಪಾಲ್ಗೊಂಡಿದ್ದರು. ಇಂತಹ ಆಸ್ಟ್ರೇಲಿಯದ ಅನೇಕ ಸಾಮಾಜಿಕ ಕಳಕಳಿಯ ಚಿಂತಕರು ಭಾರತದ ದಲಿತ-ಆದಿವಾಸಿ ಹೋರಾಟಗಳ ನಡುವೆ ಬಾಂಧವ್ಯ ಬೆಸೆಯುವ ಪ್ರಯತ್ನದಲ್ಲಿದ್ದಾರೆ.

ಇಂದು ಪ್ರಪಂಚದಾದ್ಯಂತ ಮೂಲನಿವಾಸಿಗಳು, ದಲಿತರು ಮತ್ತು ದಮನಿತರ ಪರ ನಡೆಯುತ್ತಿರುವ ಹೋರಾಟಗಳ ಆಶಯಗಳು ಬಹುತೇಕವಾಗಿ ಒಂದೇ. ಸಾಮ್ರ್ಯಾಜ್ಯಶಾಹಿಶೋಷಣೆಯ ವಿರುದ್ಧ ನಡೆದ ಸ್ವತಂತ್ರ ಹೋರಾಟದ ಮುಂದುವರಿದ ಭಾಗವಾಗಿ ದಲಿತ, ಶೋಷಿತ ಮತ್ತು ಮೂಲನಿವಾಸಿಗಳಿಗೆ ಸೇರಬೇಕಿರುವ ಹಕ್ಕುಗಳನ್ನು ಪಡೆಯುವ ಹೋರಾಟಗಳು ಒಂದಕ್ಕೊಂದು ಬೆಸೆದು ಒಗ್ಗಟ್ಟಿನ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.

ಶುಭ್ರತೆಯನ್ನು ಹಣತೆ ಮಾಡಿ ತೇಲಿ ಬಿಟ್ಟಂತೆ : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-1)

[ವಕೀಲರೂ ಮತ್ತು ನಮ್ಮ ವರ್ತಮಾನ ಬಳಗದ ಲೇಖಕರೂ ಆಗಿರುವ ಶ್ರೀಧರ್ ಪ್ರಭು ಇತ್ತೀಚೆಗೆ ತಾನೆ ಆಸ್ಟ್ರೇಲಿಯ ಪ್ರವಾಸ ಮಾಡಿಕೊಂಡು ಬಂದಿದ್ದಾರೆ. ಬಂದ ತಕ್ಷಣ ತಮ್ಮ ಪ್ರವಾಸ ಕಥನ ಬರೆಯಲು ಆರಂಭಿಸಿದ್ದಾರೆ. ಈಗಾಗಲೆ ನಮ್ಮಲ್ಲಿ ಪ್ರಕಟವಾಗಿರುವ ಶ್ರೀಧರರ ಲೇಖನಗಳಿಗೆ ಸಾಕಷ್ಟು ಮೆಚ್ಚಿಗೆಗಳು ಬಂದಿರುವುದಷ್ಟೇ ಅಲ್ಲದೆ ಅವರು ನಮ್ಮ ಬಳಗದ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಇಂದು ಅವರ ಪ್ರವಾಸ ಕಥನದ ಮೊದಲ ಕಂತು ಪ್ರಕಟಿಸುತ್ತಿದ್ದೇವೆ. ಇದು ಸುದೀರ್ಘವಾಗಿ, ಸವಿಸ್ತಾರವಾಗಿ ಮೂಡಿಬರಲಿ ಎಂದು ಆಶಿಸುತ್ತೇವೆ. ಅವರ ಬರಹಗಳು ನಮ್ಮೆಲ್ಲರಿಗೂ ಪ್ರಸ್ತುತವಾಗಿರುತ್ತವೆ ಎನ್ನುವುದು ಈ ಮೊದಲ ಕಂತಿನಲ್ಲೇ ರುಜುವಾತಾಗುತ್ತಿದೆ. -ರವಿ]


– ಶ್ರೀಧರ್ ಪ್ರಭು


ಹೆಸರು: ರಾಯ್ ಪಾಮರ್
ವಯಸ್ಸು: 75 ವರ್ಷ
ವಾಸ: ಸೀಫೋರ್ಡ್ ಉಪನಗರ, ಮೆಲ್ಬರ್ನ್, ಆಸ್ಟ್ರೇಲಿಯಾ
ಉದ್ಯೋಗ: ಬ್ಯಾಂಕ್‌ನಿಂದ ನಿವೃತ್ತಿ ಪಡೆದ ನಂತರದಲ್ಲಿ ದಕ್ಷಿಣ ಮೆಲ್ಬರ್ನ್‌ ನಲ್ಲಿ ಆಫೀಸು ಕಟ್ಟಡಗಳಲ್ಲಿನ ಶೌಚಾಲಯಗಳ ಸ್ವಚ್ಚತೆ
ಹವ್ಯಾಸ: ಸೈಕಲ್ ಸವಾರಿ, ಪರ್ವತಾರೋಹಣ ಮತ್ತು ಗಾಲ್ಫ್

ಬ್ಯಾಂಕ್‌ನಿಂದ ನಿವೃತ್ತನಾದ ಮೇಲೆ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎನಿಸಿದಾಗ ರಾಯ್ Australia-1ಒಂದು ಯೋಜನಾ ವರದಿ (project report) ತಯಾರಿಸಿ ಸಾಲಕ್ಕಾಗಿ ತನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದ. ತಕ್ಷಣದಲ್ಲೇ ಸಾಲ ಮಂಜೂರಾಯಿತು; ಅಷ್ಟೇ ಅಲ್ಲ, ತಾನೂ ಕೆಲಸ ಕೊಟ್ಟಿತಲ್ಲದೇ, ಬ್ಯಾಂಕ್ ತನ್ನ ಅನೇಕ ಔದ್ಯಮಿಕ ಗ್ರಾಹಕರಿಗೆ ರಾಯ್‌ನನ್ನು ಪರಿಚಯಿಸಿಕೊಟ್ಟಿತು. ಇಂದು ರಾಯ್ ತನ್ನ ಸ್ವಂತ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕುತೂಹಲದಿಂದ ಮಾತಿಗೆಳೆದಾಗ ರಾಯ್ ಹೇಳಿದ್ದು ಅಚ್ಚರಿ ಮೂಡಿಸಿತು. ರಾಯ್ ಹೇಳಿದ್ದಿಷ್ಟು: ಸುಮಾರು ಎರಡು ಗಂಟೆಗಳಷ್ಟು ಕೆಲಸ ಮಾಡಿದರೆ ಅರವತ್ತು ಡಾಲರ್ ಸಂಪಾದಿಸುವ ಕೆಲಸವೆಂದರೆ ಈ ಕಟ್ಟಡಗಳ ನೈರ್ಮಲ್ಯದ ಕೆಲಸ. ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯೊಳಗೆ ಕೆಲಸ ಮುಗಿಸಿ ಬಿಟ್ಟರೆ ನಂತರದ ಎಂಟು ಗಂಟೆಗಳ ಕಾಲ ತನ್ನ ಓದು, ಹವ್ಯಾಸಗಳಿಗೆ ಮೀಸಲಿಡಲು ಅವಕಾಶವಿದೆ.

ಬೆಳಿಗ್ಗೆ ಎಂಟು ಗಂಟೆಗೆಲ್ಲ ಕೆಲಸ ಮುಗಿಸಿ ಒಂಭತ್ತು ಗಂಟೆಗೆ ಮನೆ ಸೇರುವ ರಾಯ್ ತನ್ನ ಪ್ರೀತಿಯ ನಾಯಿ ಕೇಟಿ ಜತೆ ತಿರುಗಾಟಕ್ಕೆ ತೆರಳುತ್ತಾರೆ. ನಂತರ ಚಹಾ ಸಮಯ. ಹೆಂಡತಿ ಜೊತೆಗೂಡಿ ಉಭಯ ಕುಶಲೋಪರಿ ಮುಗಿಸಿ ಕಾರಿನ ಮೇಲೆ ಸೈಕಲ್ ಹೇರಿಕೊಂಡು ಆಲ್ಬರ್ಟ್ ಪಾರ್ಕ್ ನಲ್ಲಿ ಒಂದು ಗಂಟೆ ಸೈಕ್ಲಿಂಗ್ ಮುಗಿಸಿದ ನಂತರ ಕ್ರೀಡೆಯ ಬಗ್ಗೆ ಓದು. ನಂತರದಲ್ಲಿ ಮಧ್ಯಾಹ್ನದ ಊಟದ ತಯಾರಿ. ಮಧ್ಯಾಹ್ನ ಒಂದು ಗಂಟೆ ನಿದ್ರೆ. ಆರು ಗಂಟೆ ಸುಮಾರಿಗೆ ಸಣ್ಣ ಬಾಟಲಿ ಬಿಯರ್ ಜತೆ ಒಂದು ಗಂಟೆ ಕಾಲ ನಿಧಾನದ ಊಟ. ನಂತರ ಸಣ್ಣ ವಾಕಿಂಗ್ ಮತ್ತು ಕೊಂಚ ಓದು ಮುಗಿಸಿಕೊಂಡು ಎಂಟು ಗಂಟೆಗೆಲ್ಲ ಗೊರಕೆ ಶುರು. ಇನ್ನು ಹದಿನೈದು ದಿನಕ್ಕೊಮ್ಮೆ ಸಣ್ಣ ಬೆಟ್ಟಗಳಲ್ಲಿ ಬೋಟಿಂಗ್ ಮತ್ತು ಪರ್ವತಾರೋಹಣಕ್ಕೆಂದು ಹೋಗುವ ಪರಿಪಾಠ.

ನಮ್ಮ ಪೌರ ಕಾರ್ಮಿಕರ ದಿನಚರಿಯನ್ನೊಮ್ಮೆ ನೆನೆಸಿಕೊಳ್ಳಿ! ಸ್ವಚ್ಚತೆ ದೈವತ್ವಕ್ಕಿಂತ ಮೇಲು ಎಂದು ನಂಬಿರುವ ರಾಯ್ ತಾನು ಕೊನೆಯ ಬಾರಿ ಚರ್ಚ್‌ಗೆ ಯಾವಾಗ ಹೋಗಿರಬಹುದು ಎಂದು ನೆನಪೇ ಇಲ್ಲ. ತಾನು ಪ್ರೀತಿಸಿದ ಇಸ್ಲಾ ಳನ್ನು ಮದುವೆಯಾಗಿದ್ದು ಮೆಲ್ಬರ್ನ್ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ.

ನಮ್ಮ ದೇಶದಲ್ಲಿ ‘ಸ್ವಚ್ಚತೆ’ ಕಾಪಾಡಲು ಜಾತಿಯೊಂದನ್ನು ಸೃಷ್ಟಿಸಿಕೊಂಡು, ಮಲಹೊರುವ ಕಾಯಕದಲ್ಲಿ ಅವರಿಗೆ 100% ‘ಮೀಸಲಾತಿ’ ಕೊಟ್ಟಿದ್ದೇವೆ ಎಂದು ಹೇಳಬೇಕೆನಿಸಿದರೂ, ನಮ್ಮ ದೇಶದ ಮಾನ ಮತ್ತು ರಾಯ್ ಪಾಮರ್‌ನ ಪ್ರಾಣ (ಆಶ್ಚರ್ಯದಿಂದ) ಎರಡೂ ಹೋಗುವುದು ಬೇಡ ಎಂದೆನಿಸಿ ಸುಮ್ಮನಾದೆ.

ಆಸ್ಟ್ರೇಲಿಯಾದ ತುಂಬೆಲ್ಲ ನೈರ್ಮಲ್ಯದಲ್ಲೇ ಶ್ರೇಷ್ಠತೆ ಕಾಣುವ, ಕ್ರೀಡೆ ಹವ್ಯಾಸ ಮತ್ತು ಪ್ರವಾಸಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ರಾಯ್ ನಂಥವರೇ Australia-2ಬಹುಸಂಖ್ಯಾತರು. ನೈರ್ಮಲ್ಯದ ಕೆಲಸವನ್ನು ಯಾಕೆ ಹೇಸಿಗೆ ಎಂದುಕೊಳ್ಳಬೇಕು ಎಂಬುದೇ ಅರ್ಥವಾಗದ ಮೇಲೆ ಅದನ್ನು ಜಾತಿಯೊಂದಕ್ಕೆ ಅಂಟಿಸಿ ತುಚ್ಚವಾಗಿಸುವ ಪ್ರಕ್ರಿಯೆ ಅವರಿಗೆ ಹೇಗೆ ಗೊತ್ತಾಗಬೇಕು? ಇವರದ್ದು ಮೀಡಿಯಾ ಮುಂದೆ ಪೊರಕೆ ಹಿಡಿದ ಮುಸುಡಿ ತೋರಿಸುವಂಥ ಗಿಮಿಕ್ ಅಲ್ಲ; ಅವರ, ಮತ್ತವರ ಸಮಾಜದ ಭಾವಕೋಶದ ತುಂಬೆಲ್ಲ ಆವರಿಸಿರುವ ಒಂದು ಅವಿಭಾಜ್ಯತೆ.

ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಚ್ಚತೆ ಸಹಜವಾಗಿ ಇರುವಂಥದ್ದೇ. ಅದರಲ್ಲೂ ಇಲ್ಲಿನ ಒಂದು ವಿಶೇಷವೆಂದರೆ, ಕಸ ಗುಡಿಸುವುದು, ಕಕ್ಕಸು ತೊಳೆಯುವುದು, ಬಟ್ಟೆ ಬರೆ ಸ್ವಚ್ಛ ಗೊಳಿಸುವುದು ಇತ್ಯಾದಿ, ವಕೀಲಿ, ವೈದ್ಯಕೀಯ ಮುಂತಾದವುಗಳಷ್ಟೇ ಸಹಜವಾದ ಕೆಲಸ. ವಾರಕ್ಕೊಂದು ಬಾರಿ ಬರುವ ಪುರಸಭೆಯ ವಾಹನ ಮನೆಯಲ್ಲಿನ ಕಸದ ಬುಟ್ಟಿಗಳನ್ನು (ಆಹಾರ ಇತ್ಯಾದಿ ಕೇಸರಿ ಮುಚ್ಚಳದ ಬುಟ್ಟಿಯಲ್ಲಿ ಮತ್ತು ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ ಕೆಂಪು ಮುಚ್ಚಳದ ಬುಟ್ಟಿಯಲ್ಲಿ ತುಂಬಿಸಿ ಇಡಬೇಕು) ಸರದಿಯಂತೆ ಎತ್ತಿ ಅನಾಮತ್ತಾಗಿ ತನ್ನೊಳಗೆ ಸುರಿದುಕೊಳ್ಳುವ ವಾಹನ ಹತ್ತೇ ನಿಮಿಷದಲ್ಲಿ ಒಂದಿಡೀ ಬಡಾವಣೆಯ ಕಸವನ್ನು ಸಂಗ್ರಹಿಸುತ್ತದೆ.

ನಾವು ಅಸ್ಪೃಶ್ಯತೆ ಕಡಿಮೆಯಾಗಿದೆ ಎಂದು ಭಾವಿಸುವ ನಗರ ಪ್ರದೇಶಗಳಲ್ಲಿ ಕೂಡ ಪೌರ ಕಾರ್ಮಿಕರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಪರಿಪಾಠ ಇಲ್ಲ. ಅಳಿದುಳಿದ ಹಳಸಲನ್ನು ಐದು ಅಡಿ ಎತ್ತರದಿಂದ ಬಿಸಾಕಿ ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳುತ್ತೇವೆ. ಅಂತಹುದರಲ್ಲಿ ಮೊನ್ನೆ ಕ್ರಿಸ್ಮಸ್ ನ ಮುನ್ನಾ ದಿನ, ವಿಕ್ಟೋರಿಯಾ ರಾಜ್ಯದ ಫ್ರಾಂಕ್ಸ್ಟನ್ ಪುರಸಭೆಯ ಸಿಬ್ಬಂದಿ ಅಗ್ನಿಶಾಮಕದಳದ ವಾಹನದಲ್ಲಿ ಮನೆ ಮನೆಗೂ ಬಂದು ಮಕ್ಕಳಿಗೆಲ್ಲ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಮಿಠಾಯಿ ಹಂಚಿ ಹೋದದ್ದು ವಿಶೇಷ. ಮನೆಯಲ್ಲಿನ ಎಲ್ಲರೂ ಪೌರ ಸಿಬ್ಬಂದಿಯನ್ನು ಸಂತೋಷದಿಂದ ಬರಮಾಡಿಕೊಂಡು ಸಿಹಿಯ ಪೊಟ್ಟಣವನ್ನು ಲಗುಬಗೆಯಿಂದ ತೆರೆದು ಪ್ರಸಾದದಂತೆ ತಿಂದರು!

ಐತಿಹಾಸಿಕ ಸ್ಮಾರಕಗಳು, ಉದ್ಯಾನಗಳು, ಪ್ರಾಣಿ ಸಂಗ್ರಹಾಲಯಗಳು ಮುಂತಾದೆಡೆಗಳಲ್ಲಿ ಹುಲ್ಲುಹಾಸಿನ ಮೇಲೆ ಕುಳಿತು ಊಟ ಮಾಡಲು ಯಾವ ನಿರ್ಬಂದನೆಯೂ ಇಲ್ಲ. ಸಾರ್ವಜನಿಕರು ತಮ್ಮ ಪ್ಲಾಸ್ಟಿಕ್ ಪೊಟ್ಟಣಗಳು ಮಿಕ್ಕ ಆಹಾರ ಇತ್ಯಾದಿ ತಾವೇ ತುಂಬಿಸಿಕೊಂಡು ಹೋಗುತ್ತಾರೆ. ರೈಲು-ಬಸ್ ನಿಲ್ದಾಣ, ಉದ್ಯಾನವನ, ಜನಪ್ರಿಯ ಪ್ರವಾಸಿ ತಾಣ ಮತ್ತಿತರೇ ಹೆಚ್ಚು ಜನಸಂದಣಿಯ ಜಾಗಗಳಲ್ಲಿ ಕೂಡ ಶೌಚಾಲಯಗಳು ಅಸ್ಥವ್ಯಸ್ಥವಾಗಿಲ್ಲ.

ಹೆದ್ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಮತ್ತು ಊಟ ಮಾಡಲು ಕಲ್ಲಿನ ಮೇಜು-ಬೆಂಚುಗಳನ್ನೂ ನಿರ್ಮಿಸಿದ್ದಾರೆ. Australia-3ಯಾವ ನರಪಿಳ್ಳೆಯೂ ಸುಳಿಯದ ಅಂಥಹ ನಿರ್ಜನ ಪ್ರದೇಶಗಳಲ್ಲಿ ಕೂಡ ಸ್ವಚ್ಚತೆ ರಾರಾಜಿಸುತ್ತದೆ. ಇನ್ನೊಂದು ವಿಶೇಷವೆಂದರೆ ನೆಲಕ್ಕೇ ಜೋಡಿಸಿದ ಅನಿಲಚಾಲಿತ ಒಲೆಗಳನ್ನೂ ನಿರ್ಮಿಸಿ ಇಟ್ಟಿದ್ದಾರೆ. ಒಂದೆರಡು ಡಾಲರ್ ನಾಣ್ಯ ಹಾಕಿದರೆ ಉರಿಯುವ ಈ ಒಲೆ ಚಳಿಗಾಲದಲ್ಲಿ ಆಹಾರ ಬಿಸಿ ಮಾಡಿಕೊಳ್ಳಲು, ಎಣ್ಣೆ ಇಲ್ಲದೆ ಹುರಿಯಲು ಕೂಡ ತುಂಬಾ ಸಹಾಯಕಾರಿ. ಸಾವಿರಾರು ಮೈಲಿ ಸತತವಾಗಿ ಸಾಗುವ ವಾಹನ ಚಾಲಕರಿಗೆ ನಿದ್ದೆಯ ಜೋಂಪು ಬಂದಾಗ ವಿಶ್ರಮಿಸಲೆಂದೇ ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ತೀರ ನಿರ್ಜನವಾದ ಹೆದ್ದಾರಿಗಳ ಬದಿಯಲ್ಲಿ ಕೂಡ ರಸ್ತೆ ಬದಿಯಲ್ಲಿ ಮಲ ಮೂತ್ರ ಮಾಡಿದ್ದನ್ನು ನಾವು ನೋಡಲಿಲ್ಲ.

ಸಿಂಗಾಪುರ್ ನಂತೆ, ಗಲೀಜು ಮಾಡುವುದನ್ನು ಇಲ್ಲಿ ಅಪರಾಧೀಕರಣಗೊಳಿಸಿದಂತಿಲ್ಲ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬೆದರಿಸುವ ಇಲ್ಲವೇ ಭಾರೀ ದಂಡ ವಿಧಿಸುವ ಫಲಕಗಳೂ ಇಲ್ಲಿಲ್ಲ. ಆಸ್ಟ್ರೇಲಿಯಾನಲ್ಲಿ ಸಾರ್ವಜನಿಕ ಸ್ವಚ್ಚತೆ ಎಂಬುದು ತಮ್ಮ ತಮ್ಮ ಮನೆಗಳಲ್ಲಿ ತಾವಾಗಿಯೇ ವಹಿಸಿಕೊಂಡು ಸಂತೋಷದಿಂದ ಮಾಡುವ ರೀತಿಯದ್ದು; ಯಾವ ಒತ್ತಾಯ, ಬೆದರಿಕೆ, ಪ್ರಚಾರ ಅಥವಾ ಧಾರ್ಮಿಕ ಕಟ್ಟಳೆಗಳ ಸಲುವಾಗಿ ಹೇರಿಕೊಂಡ ಭಾರವಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 7 ರಂದು “ಆಸ್ಟ್ರೇಲಿಯಾ ಸ್ವಚ್ಚತಾ ದಿವಸ” ಆಚರಿಸಲಾಗುತ್ತದೆ. “ಕ್ಲೀನ್ ಅಪ್ ಆಸ್ಟ್ರೇಲಿಯಾ” ಎಂಬ ಜನಪ್ರಿಯ ಆಂದೋಲನ ದೇಶದಾದ್ಯಂತ ವ್ಯಾಪಿಸಿದೆ. ಆಸ್ಟ್ರೇಲಿಯಾದ ಪರಿಸರ ಇಲಾಖೆ “ನೈರ್ಮಲ್ಯ ನೀತಿ” ಯೊಂದನ್ನು ನಿರೂಪಿಸಿ, ತನ್ನ ಕಸವನ್ನು ರಸವಾಗಿಸುವ ತಂತ್ರ ನಿರೂಪಿಸಿದೆ. ಆದರೆ ನೈರ್ಮಲ್ಯ ಸರಕಾರೀ ಹೇರಿಕೆಯಿಂದ ಪ್ರೇರೇಪಿತವಲ್ಲ.

ಆಸ್ಟ್ರೇಲಿಯಾ ನಿರ್ಜನ ಪ್ರದೇಶವಾದ್ದರಿಂದ ಅಲ್ಲಿ ನೈರ್ಮಲ್ಯ ಉಳಿದಿದೆ ಎಂಬ ಭಾವನೆಯಿದೆ. ಇದು ಅರ್ಧ ಸತ್ಯ. ಇಂದು ಮೆಲ್ಬರ್ನ್‌ನ ಜನಸಂಖ್ಯೆ ನಲವತ್ತು ಲಕ್ಷ ದಾಟಿದೆ; ಸಿಡ್ನಿ ನಗರ ಅರ್ಧ ಕೋಟಿ ಅಂಚಿನಲ್ಲಿದೆ. ವಿಕ್ಟೋರಿಯಾ ರಾಜ್ಯ ಒಂದರಲ್ಲೇ ಸುಮಾರು ನಲವತ್ತು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಜನರಿದ್ದಾರೆ. ಪ್ರತಿ ವರ್ಷ ಸುಮಾರು ಅರವತ್ತು ಲಕ್ಷದಷ್ಟು ಪ್ರವಾಸಿಗರು ಆಸ್ಟ್ರೇಲಿಯಾಗೆ ಬಂದಿಳಿಯುತ್ತಾರೆ.

ನಮ್ಮ ಕೆಲಸವೇನಿದ್ದರೂ ಕಸ ಹಾಕುವುದು, ಅದನ್ನು ಬಳಿಯುವುದು ಕೀಳು ಜಾತಿಯೊಂದರ ಮೀಸಲು ವೃತ್ತಿ ಎಂಬುದೇ ನಮ್ಮ ಅಚಲ ನಂಬಿಕೆ. ಹೇಗೆ “ಮೇಲು” ಜಾತಿಗಳನ್ನು ಯುದ್ಧ ಮಾಡುವುದರಿಂದ ದೂರ ಮಾಡಿದ್ದರಿಂದ ನಮ್ಮ ದೇಶ ಗುಲಾಮಗಿರಿಯ ಸಂಕೋಲೆಗೆ ಸುತ್ತಿಕೊಂಡಿತೋ ಹಾಗೇ ನೈರ್ಮಲ್ಯವನ್ನು ಕಾಪಾಡುವ ಕರ್ತವ್ಯವನ್ನು “ಕೀಳು” ಜಾತಿಯ ಕೊರಳಿಗೆ ಕಟ್ಟಿ ಅದನ್ನು ಹೇಸಿಗೆಯ ದೃಷ್ಟಿಯಿಂದ ನೋಡಿದ್ದರಿಂದ ನಮ್ಮ ದೇಶ ದೊಡ್ಡದೊಂದು ತಿಪ್ಪೆ ಗುಂಡಿಯಾಗಿದೆ. ನಮ್ಮ ನದಿಗಳು ಹೆಣಗಳು ಮತ್ತು ರಾಸಾಯನಿಕಗಳನ್ನು ಮೆತ್ತಿದ ವಿಗ್ರಹಗಳನ್ನು ನುಂಗುವ ನುಂಗಬೇಕಾದ ಅನಿವಾರ್ಯತೆ ಇರುವ ವಿಷದ ಗುಂಡಿಗಳು.

ಅಲ್ಲಿನ ಜನ ಜೀವನ, ಆಹಾರ ಪದ್ಧತಿ ಮತ್ತು ಔದ್ಯೋಗಿಕ ಪ್ರಗತಿ ನೋಡಿದರೆ ಭಾರತದ ನೂರರಷ್ಟು ಪರಿಸರ ಹಾನಿಯಾಗಬೇಕಿತ್ತು. ಆದರೆ ಮೆಲ್ಬರ್ನ್ ನಗರ 2011 ರಿಂದಲೂ ಸತತವಾಗಿ ವಿಶ್ವದ ‘ಜೀವಿಸಲು ಅತ್ಯಂತ ಯೋಗ್ಯ’ ನಗರವೆಂದು ಘೋಷಿತವಾಗಿದ್ದರೆ, ಅಡಿಲೇಡ್ ವಿಶ್ವದ ಎರಡನೇ ಸ್ವಚ್ಛ ನಗರ ಎನಿಸಿದೆ.

ಆಸ್ಟ್ರೇಲಿಯಾನಲ್ಲಿ ಕ್ರಿಸ್ಮಸ್ ಸಂದರ್ಭದಲ್ಲೂ ಒಂದೇ ಒಂದು ಸಾರ್ವಜನಿಕ ಸ್ಥಳವನ್ನು ಒಂದಿನಿತೂ ಗಲೀಜು ಮಾಡಿದ್ದು ನಮ್ಮ ಕಣ್ಣಿಗೆ ಬೀಳಲಿಲ್ಲ. ಕ್ರಿಸ್ಮಸ್ ಆಚರಣೆ ಧಾರ್ಮಿಕ ಆಚರಣೆ ಎನಿಸುವಂತೆ ಇಲ್ಲವೇ ಇಲ್ಲ. ಹೆಚ್ಚೆಂದರೆ ಅದೊಂದು ದೊಡ್ಡ ಸಾಮಾಜಿಕ ಉತ್ಸವ. ಜನರೆಲ್ಲರೂ ಒಟ್ಟು ಸೇರಿ ನಮ್ಮ ತರಹದ ಜಾತ್ರೆ ಆಯೋಜಿಸುತ್ತಾರೆ. ಸುತ್ತಲಿನ ಮನೆಗಳ ಜನರು ಹತ್ತಿರದ ಮೈದಾನದಲ್ಲಿ ಎಲ್ಲರೂ ಸೇರಿ ಪಟಾಕಿ, ಬಾಣ-ಬಿರುಸು ಸಿಡಿಸಿ ಸಂಭ್ರಮಿಸುತ್ತಾರೆ. ಜನರ ಬದುಕಿನಲ್ಲಿ ಧರ್ಮದ ಪಾತ್ರ ನಗಣ್ಯ. ಹಾಗೆಂದೇ, ಧಾರ್ಮಿಕ ಕಾರಣಗಳಿಂದ ಸೇರಿಕೊಂಡು ಯಾವ ಕಾರಣಕ್ಕೂ ಯಾವುದೇ ಪರಿಸರ ಹಾನಿಯೂ ಕಾಣಸಿಗದು.

ಜಾತಿ-ಧರ್ಮದ ಸೊಂಕಿಲ್ಲದ ಸಮಾಜ ಮಾತ್ರ ನೈಜ ನೈರ್ಮಲ್ಯವನ್ನು ಸಾಧಿಸಬಲ್ಲದು ಎಂಬುದಕ್ಕೆ ಆಸ್ಟ್ರೇಲಿಯಾ ಜೀವಂತ ನಿದರ್ಶನ.

“ಬಿಳಿಸಾಹೇಬನ ಭಾರತ” ಪುಸ್ತಕವಾಗಿ ಬರುತ್ತಿದೆ. ಅಭಿನಂದನೆಗಳು

ಆತ್ಮೀಯರೇ,

ನಿಮಗೆಲ್ಲರಿಗೂ ತಿಳಿದಿರಬಹುದು; 2011ರ ಡಿಸೆಂಬರ್‌ನಿಂದ 2012 ರ ಜುಲೈ ತನಕ, 29 ವಾರಗಳ ಕಾಲ, ನಮ್ಮ ಪ್ರೀತಿಯ ಲೇಖಕ ಜಗದೀಶ ಕೊಪ್ಪ ವರ್ತಮಾನ.ಕಾಮ್‌ನಲ್ಲಿ “ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ)”ವನ್ನು ಬರೆದರು. ವರ್ತಮಾನ.ಕಾಮ್‌ನ ಆರಂಭದ ದಿನಗಳಲ್ಲಿ ಅನೇಕ ಸರಣಿ ಲೇಖನಗಳನ್ನಷ್ಟೇ ಅಲ್ಲದೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜಗದೀಶ ಕೊಪ್ಪರು ನಿರಂತರವಾಗಿ ಬರೆದು ನಮಗೆ ಬೆನ್ನೆಲುಬಾಗಿ ನಿಂತು, ವರ್ತಮಾನ.ಕಾಮ್ ಬೇರೂರಿ ನಿಲ್ಲಲು ನೆರವಾದವರು. ಬಿಳಿ ಸಾಹೇಬನ ಭಾರತ, ನಕ್ಸಲ್ ಕಥನ, ಜೀವನದಿಗಳ ಸಾವಿನ ಕಥನ; ಈ ಮೂರು ಸರಣಿ ಲೇಖನಗಳು ಅಪಾರ ಓದುಗರನ್ನು ಗಳಿಸಿದ್ದವು. ಇದರಲ್ಲಿ ಈಗಾಗಲೆ ’ಜೀವನದಿಗಳ ಸಾವಿನ ಕಥನ’ ಮತ್ತು “ನಕ್ಸಲ್ ಕಥನ”ಗಳು ಇನ್ನೊಂದಷ್ಟು ಲೇಖನ-ಮಾಹಿತಿಗಳ ಜೊತೆಗೆ “ಜೀವನದಿಗಳ ಸಾವಿನ ಕಥನ” ಮತ್ತು “ಎಂದೂ ಮುಗಿಯದ ಯುದ್ಧ”ಗಳಾಗಿ ಪುಸ್ತಕಗಳಾಗಿಯೂ ಹೊರಬಂದಿದೆ.

ಈಗ, “ಬಿಳಿ ಸಾಹೇಬನ ಭಾರತ”ವೂ ಪುಸ್ತಕವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಲೇಖಕ ಜಗದೀಶ ಕೊಪ್ಪರಿಗೆ koppa-Invitation-biLisahebaವರ್ತಮಾನ ಬಳಗದ ಪರವಾಗಿ ಧನ್ಯವಾದ, ಕೃತಜ್ಞತೆ, ಮತ್ತು ಅಭಿನಂದನೆಗಳನ್ನು ತಿಳಿಸುತ್ತೇವೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇದೇ ಶನಿವಾರ ಸಂಜೆ 4:30ಕ್ಕೆ ಬೆಂಗಳೂರಿನಲ್ಲಿದೆ. ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ಭಾಗವಹಿಸಿ.

ವಿಶ್ವಾಸದೊಂದಿಗೆ,
ರವಿ ಕೃಷ್ಣಾರೆಡ್ಡಿ
ವರ್ತಮಾನ ಬಳಗ



jeevanadigaLa-koppa


eMdU-mugiyada-yudda-koppa


biLisaheba-koppa