Category Archives: ಸರಣಿ-ಲೇಖನಗಳು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ
ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ… : ಅಂತಿಮ ಭಾಗ (10)

ದೇವಲೋಕದ ಅಮೃತ ಫಲವೆಂಬಂತೆ ನಂಬುವ ತೆಂಗಿನಮರದಿಂದ ಎಳನೀರು, ತೆಂಗಿನಕಾಯಿಗಳನ್ನು ಕೊಯ್ಯುವುದಲ್ಲದೆ ಸೇಂದಿ (ಮೂರ್ತೆ) ಇಳಿಸಲೂ ಬಳಸುತ್ತಾರೆ. ತೆಂಗಿನ ಸುಳಿಕೊರಕ (ಗೊಬ್ಬರದ ಕಪ್ಪುಹುಳ) ಹುಳುಗಳನ್ನು ಕೊಂದರೆ ಹತ್ತು ದೇವಸ್ಥಾನ ಕಟ್ಟಿದಷ್ಟು ಪುಣ್ಯ ಎಂದೆನ್ನುತ್ತಲೇ, ಸತ್ತ/ಜೀವಂತವಿದ್ದ ಅದೇ ತೆಂಗಿನಮರವನ್ನು ಕತ್ತರಿಸಿ ಮನೆಯ ಪಕಾಸೆ, ಜಂತಿಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ತೆಂಗಿನ ಕಾಯಿ ತಲೆಮೇಲೆ ಬಿದ್ದು ಸತ್ತರೆ ಪುಣ್ಯ ಎಂಬ ನಂಬಿಕೆಯ ನಡುವೆಯೇ ಮೂತ್ರ ವಿಸರ್ಜನೆಯನ್ನು ತೆಂಗಿನ ಬುಡದಲ್ಲಿಯೇ ಮಾಡಿದರೆ ಪ್ರಶಸ್ತವೆಂದೂ ನಂಬುತ್ತಾರೆ!. ಅದನ್ನು ಕಲ್ಪವೃಕ್ಷ ಎನ್ನುತ್ತಲೇ Indian-Cow-calfಈ ಮಾದರಿಯ ಸಂಬಂಧಗಳನ್ನು ಜನ ತಮ್ಮ ದೈನಿಕದ ಬದುಕಿನಲ್ಲಿ ಕಟಿಕೊಳ್ಳಬಲ್ಲರು. ನೇಗಿಲನ್ನು ದೇವರೆಂದೇ ಆರಾಧಿಸಿಯೂ ಹಳತಾಗಿ ಉಳಲು ಅಸಾಧ್ಯವಾದಾಗ ದೀಪಾವಳಿಯ ಎಣ್ಣೆನೀರಸ್ನಾನದ ಒಲೆಗೆ ಉರುವಲಿನಂತೆ ಬಳಸಿಕೊಳ್ಳಬಲ್ಲರು. ಉಳುಮೆ ಮಾಡುವ ಜಾನುವಾರಿಗೆ ಬಾಸುಂಡೆ ಬರುವಂತೆ ಬಾರಿಸಿಯೂ ಅರ್‍ಹೂಡಿ ಬರುವಾಗ ಅದರ ಸಿರಿಪಾದವನ್ನು ತೊಳೆಯಬಲ್ಲರು ಮತ್ತು ಮಳೆಗಾಲದ ನೇಜಿಯ ಕೊನೆಗೆ ತಮ್ಮಂತೆಯೇ ಅದಕ್ಕೂ ಬರ್ಜರಿಯಾದ ಮರದತೊಗಟೆಯ ಚಗರು ಬೆರೆಸಿದ ಗಂಜಿ ಹಾಕಿ ರಜಾ ನೀಡಬಲ್ಲರು. ಬೆಳೆದು ನಿಂತ ಕದಿರನ್ನು ಉತ್ಸವದಂತೆ ಹೊತ್ತು ತರುವ ಅದೇ ಜನ ಭತ್ತದ ಒಡ್ಡು ಮಾಡುವಲ್ಲಿ ಅದನ್ನು ಕಾಲಡಿಯೇ ಮೆಟ್ಟಿತುಳಿಯಬಲ್ಲರು. ಪಂಪನ ಆದಿಪುರಾಣದ ಕೊನೆಯಲ್ಲಿ ಈ ಧಾನ್ಯ ಸಂಗತಿಗೆ ಸಂಬಂಧಿಸಿದ ವಿವೇಕಿಗಳನ್ನು,ಸಂಸ್ಕಾರವಂತರನ್ನು ಭರತ ಕಂಡುಕೊಂಡನೆಂಬ ಸಂದರ್ಭವೊಂದಿದೆ ಎನ್ನಲಾಗಿದೆ. ಅಲ್ಲಿ ಮೊಳಕೆಯೊಡೆದ ಧಾನ್ಯಗಳನ್ನು ಮೆಟ್ಟಿಕೊಂಡು ಬರಲಾರದ ಕೆಲವು ವಿವೇಕಿಗಳು ಭರತನಲ್ಲಿಗೆ ಬರಲಾಗದೆ ದೂರವೇ ನಿಂತರಂತೆ! ಈ ವಿವೇಕಿಗಳು ಖಂಡಿತ ಧಾನ್ಯದ ಒಡನಾಟವಿದ್ದವರು ಖಂಡಿತಾ ಆಗಿರಲಾರರು. ಯಾಕೆಂದರೆ ಕೃಷಿಕನೊಬ್ಬ ಈ ಮೊಳಕೆಯನ್ನು ಸದಾಕಾಲವೂ ಪೂಜಿಸುತ್ತಲೇ ಕೂರಲಾರ. ಈ ವಿವೇಕದ ಜೊತೆಗೆ ಆತನಲ್ಲಿ ಇನ್ನೂ ಒಂದು ವಿವೇಕವಿರುತ್ತದೆ. ಅದು ಮೆಟ್ಟಬೇಕಾದಾಗ, ಮುಟ್ಟಬೇಕಾದಾಗ ಎಲ್ಲವನ್ನೂ ದಾಟಿ ಮುಂದುವರೆಯುವಂತೆ ಪ್ರಚೋದಿಸಬಲ್ಲದು. ಅದು ಆತನ ಹೊಟ್ಟೆಯ ಹಸಿವು ಕಲಿಸಿದ ವಿವೇಕ! ಈ ವಿವೇಕವೇ ಆತನ ದಾರಿದೀಪ. ಅದು ಗದ್ದೆಯನ್ನು ಪೂಜಿಸುತ್ತದೆ, ಅದೇ ಗದ್ದೆಯ ಒಡಲು ಸೀಳಿ ಬೆತ್ತಲುಗೊಳಿಸಿ ಬಿತ್ತುತ್ತದೆ. ಉಪಯೋಗದ ನೆಲೆಯ ಭೌತಿಕ ಜಗತ್ತನ್ನು ಸರಿಯಾಗಿಯೇ ವಿವರಿಸಿಕೊಂಡ ಜನಸಾಮಾನ್ಯರ ವಿವೇಕದ ಬೆಳಕಿಗಷ್ಟೇ ಸಾಧವಾಗುವ ಆಹ್ವಾನ-ವಿಸರ್ಜನದ ತಾತ್ವಿಕಭಿತ್ತಿಯೂ ಇದರೊಳಗಿದೆ ಎಂಬುದನ್ನು ಮರೆಯಬಾರದು.

ತಾವು ಬಳಸುವ ವಸ್ತುವನ್ನು ಯಾವಾಗ ಪೂಜಿಸಬೇಕು, ಹೇಗೆ ಬಳಸಬೇಕು ಎಂಬ ವ್ಯಾವಹಾರಿಕ ಸಂವಿಧಾನ ಹೊಂದಿರುವ ಕೃಷಿಕರಿಗೆ indian-cowತಾವು ಸಾಕುತ್ತಿರುವ ಗೋವೊಂದನ್ನು ಲಾಭದಾಯಕವಾಗಿ ಎಷ್ಟು ಕಾಲ ಇರಿಸಿಕೊಳ್ಳಬಹುದೆಂಬುದರ ಲೆಕ್ಕಾಚಾರವಿರುತ್ತದೆ. ಅದೇ ರೀತಿ ಅವುಗಳನ್ನು ಮಾರಲೇಬೇಕಾದ ಲೌಖಿಕ ಒತ್ತಡದ ನಡುವೆ ಯಾವ ವಯೋಮಾನದ, ಯಾವ ಗುಣಮಟ್ಟದ ಹಸುವನ್ನು ಯಾರು ಖರೀದಿಸಬಲ್ಲರು ಎಂಬ ಅರಿವೂ ಇರುತ್ತದೆ. ತಾನು ಮಾರುವುದು ಯಾಕೆ ಎಂಬುದು ಅರ್ಥವಾಗುವವನಿಗೆ ಇನ್ನೊಬ್ಬ ಕೊಂಡುಕೊಳ್ಳುತ್ತಾನೆಂದರೆ ತನಗೆ ಅನುಪಯುಕ್ತವಾದುದು ಆತನಿಗೆ ಉಪಯುಕ್ತವಾಗುವ ದಾರಿಯು ಎಂತಹುದು ಎಂಬುದೂ ಗೊತ್ತಿರುತ್ತದೆ. ಆದರೆ ಕೃಷಿಕರ ಜಗತ್ತಿನಲ್ಲಿ ಉಳಿದ ಕುರಿ, ಕೋಳಿಗಳ ಸಾಕಣೆಯ ಜತೆಗಿರದ ವಿಲಕ್ಷಣ ಸಂಬಂಧವೊಂದು ಈ ಜಾನುವಾರುಗಳ ಜತೆಗಿರುತ್ತದೆ. ಸಾಕುತ್ತಲೇ ಮೈಸವರುತ್ತಲೇ ಕುರಿ, ಕೋಳಿಗಳನ್ನು ಕಣ್ಣೆದುರಿಗೆ, ಕೊಂದು ತಿನ್ನುವುದು ಅವರಿಗೆ ಜೀವ-ಕರುಣೆ ಇಂತಹ ಯಾವ ಸಂಗತಿಯನ್ನು ಉದ್ದೀಪಿಸಬೇಕಾಗಿಲ್ಲ. ಆದರೆ ಹಸು-ಎಮ್ಮೆಗಳ ಜೊತೆಗಿನ ಸಂಬಂಧದ ಸ್ವರೂಪವನ್ನು ಹೀಗೆ ಸರಳವಾಗಿ ಅವರು ತೂಗಿಕೊಳ್ಳಲಾರರು. ಈ ಜಾನುವಾರುಲೋಕದ ಜೊತೆಗೆ ಅವರೊಳಗೆ ರೂಢಿಪ್ರಜ್ಞೆಯ ಮೂಲಕ ಭಾವನೆಯ ಆಳಕ್ಕೆ ಬೇರು ಬಿಟ್ಟ ಸಂಬಂಧದ ತಂತು ಒಂದಿರುತ್ತದೆ. ಅದರ ಪ್ರಭಾವದಿಂದಾಗಿ ತಾವು ಸಾಕಿ, ತಾವೇ ತಿನ್ನದ ಗೋವಿಗೆ ಸಂಬಂಧಿಸಿದಂತೆ ಸಾಗಹಾಕುವ ವೇಳೆ ಒಂದು ಸಣ್ಣ ಪಾಪಪ್ರಜ್ಞೆಯೂ ಕಾಡುವಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಅವರಿರುತ್ತಾರೆ ಎಂಬುದೂ ದಿಟ. ಜಾನುವಾರನ್ನು ಯಾರಿಗೇ ಮಾರುವುದಿರಲಿ, ತನ್ನ ಹಟ್ಟಿಯಿಂದ ಹೊರಹೊಡಿಸುವಾಗ ಹಣಕ್ಕಾಗಿ ತನ್ನ ಮಕ್ಕಳಂತಿರುವ ಬಂಧುತ್ವವೊಂದನ್ನು ಕಳೆದುಕೊಳ್ಳುವ ಸಂಕಟ ಅನುಭವಿಸದ ಕೃಷಿಕ ಪ್ರಾಯಶಃ ಇರಲಾರ. ತಾವೇ ಹೆರಿಗೆ ಮಾಡಿ, ತಾವೇ ಕೈತುತ್ತು ಹಾಕಿ, ತಾವೇ ಮೈತೊಳೆದು ಮಕ್ಕಳಂತೆ(?) ಸಾಕಿದವುಗಳೆನ್ನುವ ಭಾವನಾತ್ಮಕ ಸಂಬಂಧಗಳ ಕಾರಣದ ಸಂಕಟ ಅದು. ಪರಂಪರೆಯಿಂದ ಬಂದ ಕಥನಗಳು ಮತ್ತು drought-dead-cowತಾನೇ ಸಾಕಿದ್ದರ ಜೊತೆಗಿನ ಒಡನಾಟದ ಮೂಲಕ ಕಟ್ಟಿಕೊಂಡ ನಿಶ್ಚಿತ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮಾರಿ ಕೈತೊಳೆದುಕೊಳ್ಳುವ ಸಣ್ಣತನ ತನ್ನದೆನ್ನುವುದರಿಂದ ಹುಟ್ಟುವ ಪಾಪಪ್ರಜ್ಞೆಯದು. ಭೌತಿಕ ವ್ಯಾವಹಾರಿಕ ಸತ್ಯದ ನಡುವೆ ನುಸುಳಿಕೊಳ್ಳುವ ಈ ವಿಲಕ್ಷಣ ಸಂಬಂಧದ ಪರಿಣಾಮವಾಗಿ ಜಾನುವಾರುಗಳ ವಿಕ್ರಯವು ಸಾಕಿದಾತನಲ್ಲಿ ಒಂದು ಬಗೆಯ ಕೊಲೆಗಡುಕತನದ ಪಾಪಪ್ರಜ್ಞೆಯ ಭಾವವನ್ನೂ ಉದ್ದೀಪಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈ ಪಾಪಾತ್ಮಸ್ಥಿತಿಯನ್ನು ಬಹುವಾಗಿ ಅನುಭವಿಸುವವನು ಕೃಷಿಕನಾಗಿರುವ ಜೊತೆಗೆ ಮಧ್ಯಮ ಇಲ್ಲವೇ ಕೆಳಮಧ್ಯಮವರ್ಗಕ್ಕೆ ಸೇರಿದವನೂ ಆಗಿರುತ್ತಾನೆ. ಅಷ್ಟೇ ಅಲ್ಲದೆ ಆತ ಈ ದೇಶದ ಸಾಮಾನ್ಯ ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿರುವ ಕರ್ಮಸಿದ್ಧಾಂತದ ಹಿಡಿತ, ಪ್ರಭಾವಗಳಿಗೆ ಪಕ್ಕಾದವನೂ ಆಗಿರುತ್ತಾನೆ. ವರ್ತಮಾನದ ದುಸ್ಥಿತಿಯನ್ನು ತನ್ನ ಪೂರ್ವದ ಕರ್ಮಫಲವೆಂದು ನಂಬುತ್ತಾ, ತದನಂತರದ ಬದುಕಿನ ಪಾಪಗಳ ಕುರಿತು ಸದಾ ಆತಂಕದಲ್ಲಿಯೇ ಇರುವ ಮಧ್ಯಮವರ್ಗದ ಎಲ್ಲಾ ಗುಣದೋಷಗಳೂ ಈತನಲ್ಲಿರುತ್ತವೆ. ಆಯ್ಕೆಯಲ್ಲದ ಕೃಷಿಬದುಕಿನ ಹುಟ್ಟು ಮತ್ತು ವರ್ತಮಾನದಲ್ಲಿ ಅನುಭವಿಸುತ್ತಿರುವ ಭೌತಿಕ ದುರವಸ್ಥೆಯನ್ನು ಪುರಾಕೃತಕರ್ಮದ ಬಳುವಳಿಯಾಗಿಯೂ, ಆ ಕರ್ಮ ನಿಮಿತ್ತವಾದ ಈ ಬಾಳಿನ ಹೊಣೆಗಾರ ತಾನೇ ಎನ್ನುವಂತೆಯೂ ಆತ್ಮನಿಂದೆಯಲ್ಲಿ ನಿಂತುಬಿಡುವ, ಆತ್ಮದ ಆಚೆಗೆ ಪಾಪದ ಹೊಣೆಯನ್ನು ಗುರುತಿಸಲಾರದ ವರ್ಗಕ್ಕೆ ಸೇರಿದವನೀತ. ವರ್ತಮಾನದ ಸ್ಥಿತಿಗಾಗಿ ಹೀಗೆ ಗತದ ಹೊಣೆಹೊತ್ತುಕೊಳ್ಳಬೇಕಾದ ಅನಿವಾರ್‍ಯತೆಯಿಂದ ಪಾರಾಗಲಾರದ ಸಂಕಟದ ನಡುವೆಯೂ, ಸಾಕಿದ ಜೀವವನ್ನು ಕನಿಕರವಿಲ್ಲದೆ ಮಾರಬೇಕಾದ ವರ್ತಮಾನದ ಸ್ಥಿತಿಯಿಂದಾಗಿ ಮುಂದಿನ ಬಾಳಿನ ಪಾಪದ ಬುತ್ತಿಯನ್ನು ಬಲಿದುಕೊಳ್ಳುತ್ತಿದ್ದೇನೆ ಎಂಬ ತೊಳಲಾಟಕ್ಕೆ ಗುರಿಯಾಗುವವನಿವನು. ಹೀಗೆ ವ್ಯಕ್ತಿಗತ ನೆಲೆಯಲ್ಲಿ ಪಾಪದ ಹೊಣೆಹೊತ್ತು ಕೊರಗಿನಲ್ಲಿರುವವನೀತ. ಅಷ್ಟೇ ಅಲ್ಲದೆ ಈ ಕೊರಗಿನಿಂದ ಪಾರಾಗುವ ನಿರೀಕ್ಷೆ ಹೊಂದಿದವನೂ ಆಗಿ, ಪಾಪಚಕ್ರದಿಂದ ಪಾರುಗಾಣುವ ದಾರಿಕಾಣದೆ ಹತಾಶೆಯ ಮನಸ್ಥಿತಿಯಲ್ಲಿರುವವನೂ ಹೌದು.

ಕರ್ಮಚಕ್ರದ ಈ ಬದಲಾಗದ ನಿರಂತರತೆಗೆ ಸಿಕ್ಕಿ ಘಾಸಿಗೊಳಗಾಗುವ ಸಮುದಾಯದೊಳಗಿನ ಪಾಪಪ್ರಜ್ಞೆಯ ತೊಳಲಾಟ ಮತ್ತು ಅದರಿಂದ ಪಾರಾಗುವ ದಾರಿಕಾಣದೆ ಉಂಟಾಗುವ ಹತಾಶೆಗಳು ಸಮುದಾಯವನ್ನು ದಿಕ್ಕುತಪ್ಪಿಸುವ ಬಾಹ್ಯಶಕ್ತಿಯೊಂದರ ಉದ್ದೇಶಿತ ಕಾರ್‍ಯಯೋಜನೆಗೆ ಹಾಳತವಾಗಿ ಒದಗಿ ಬರುತ್ತವೆ. ಪಾಪಪ್ರಜ್ಞೆಯ ಹೊಣೆಗಾರಿಕೆಯಲ್ಲಿ ಸಣ್ಣಗೆ ನರಳುವ ಸಾಮಾನ್ಯರು ಕೊಡಮಾಡಿದ ಈ ಸಣ್ಣ ಜಾಗವನ್ನೇ ತನ್ನ ಶಕ್ತಿ ರಾಜಕಾರಣದ ಅಂಗಣವನ್ನಾಗಿ ಸ್ಥಾಪಿತ ಯಜಮಾನ್ಯವು ಬಳಸಿಕೊಳ್ಳುತ್ತದೆ. ರೈತನ ದುಸ್ಥಿತಿಗೆ ಇಡಿಯ ಸಾಮಾಜಿಕ ವ್ಯವಸ್ಥೆಯಲ್ಲಿನ ಆರ್ಥಿಕ ಅಸಮತೋಲನದ ಜೊತೆಗಿನ ಇತರ ಕಾರಣಗಳನ್ನು ಶೋಧಿಸಿ ತೋರುವ ವಾಸ್ತವಿಕ ಮಾರ್ಗಕ್ಕೆ ಬದಲಾಗಿ ಅದು ಬೇರೊಂದು ದಾರಿಯನ್ನು ಹಿಡಿಯುತ್ತದೆ. ರೈತನ ಅಸಹಾಯಕತೆಯ ಕ್ಷಣವು ಅವನ ಪಾಪೋತ್ಪಾದನೆಯ ಕ್ಷಣವಾಗಿ ಮಾರ್ಪಡುವ ಮೂಲ ಕಾರಣ ಆರ್ಥಿಕ ಆಮಿಷವೆಂದೂ, ಹಸುವನ್ನು ಸಾಕಿ ಹಸುವಿನಂತಾದ ಮುಗ್ದನನ್ನು ವಂಚನೆಯ ಬಲೆಯಲ್ಲಿ ಕೆಡವಿಹಾಕಲಾಗಿದೆಯಂತಲೂ ಅದು ವಾದಿಸುತ್ತದೆ. ತನಗೆ ನಿಜವಾಗಿಯೂ ಇಲ್ಲದ ನೆಲೆಯನ್ನು ಇರುವಂತೆ ನೋಡಿಕೊಳ್ಳುವ ಸಲುವಾಗಿಯೇ ಹೀಗೆ ಖರೀದಿದಾರರನ್ನು ಅದು ಅಪರಾಧೀಕರಣಕ್ಕಿಳಿಸಿ ರಾಕ್ಷಸೀಕರಣ ಮಾಡುತ್ತದೆ. ಪಾಪಾತ್ಮನಲ್ಲದವನಲ್ಲಿ ಪಾಪಾತ್ಮದ ಕುರಿತಾದ ಪಶ್ಚಾತ್ತಾಪ ಹುಟ್ಟಿಸುವ ಈ ಆರ್ಥಿಕ ಆಮಿಷದ ನಿವಾರಣೆಗೆ ತಾನು ಪೂರ್ಣ ನಾಯಕತ್ವವನ್ನು ವಹಿಸುವುದಾಗಿ ಹೇಳುತ್ತದೆ. ಹೀಗೆ ಸಾಮಾನ್ಯರ ದೈನಿಕದ ಬದುಕಿನ ಸಂದರ್ಭದಲ್ಲಿ ಸಿಗುವ ಇಂತಹ ಚಿಕ್ಕ ಚಿಕ್ಕ ಅವಕಾಶಗಳನ್ನೇ ತಮ್ಮ ಬೆಚ್ಚನೆಯ ಗೂಡನ್ನಾಗಿ ಸ್ಥಾಪಿತ ಯಜಮಾನಿಕೆ ಮಾರ್ಪಡಿಸಿಕೊಳ್ಳುತ್ತದೆ. brahma-cow-indiaಇಂತಹ ಸೂಕ್ಷ್ಮವಾದ ನೆಯ್ಗೆಯಲ್ಲಿರುವ ಮೂಕಪ್ರಾಣಿಯ ಕುರಿತಾದ ಕರುಣೆಯ ಪುಟ್ಟನೆಲೆಯಲ್ಲಿಯೇ ತನ್ನ ಯಶಸ್ಸಿನ ಬೀಜವನ್ನು ನೆಟ್ಟು ಹೆಮ್ಮರವಾಗಿಸಿದ ಸ್ಥಾಪಿತ ಯಜಮಾನಿಕೆ ಕೊಲೆಯ ಕಾರಣನಾದೆ ಎಂಬ ಕೃಷಿಕನ ಸ್ವ ಕರ್ಮದ ಹೊಣೆಗಾರಿಕೆಯನ್ನು ಅನ್ಯ ಮೂಲದಲ್ಲಿ ತೋರಿಸಿ, ರೈತನಿಗೆ ಪಾಪ ಮುಕ್ತಿಯ ನಿರುಮ್ಮಳತೆಯನ್ನು ನೀಡುತ್ತದೆ. ರೈತಾಪಿ ವರ್ಗ ಹಸುವನ್ನು ಯಂತ್ರವಾಗಿ ಬಳಸಿಯೂ, ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಅದು ಮಾಡಬೇಕಾದ ಕೆಲಸವನ್ನು ಅದರ ಪರವಾಗಿಯೇ ತಾನು ಮಾಡುತ್ತಿರುವಂತೆ ನಂಬಿಸುತ್ತದೆ. ಹಸುವನ್ನು ವಿಕ್ರಯಿಸುವವನು ಸಾಕುವವನ ಬಡತನವನ್ನು ಬಳಸಿಕೊಂಡು ಅವನ ಭಾವನೆಗಳನ್ನು ಅತಿ ವ್ಯವಸ್ಥಿತವಾಗಿ ಧಮನಿಸುತ್ತಿದ್ದಾನೆ ಎಂಬ ವಿಚಾರವನ್ನು ವೈಚಾರಿಕ ಆಕೃತಿಯಾಗಿ ಗಟ್ಟಿಗೊಳಿಸುತ್ತಾ ಹೋಗುತ್ತದೆ. ಹೀಗೆ ಅಶಿಕ್ಷಿತ ಮತ್ತು ಅರೆಶಿಕ್ಷಿತ ಸಮುದಾಯಕ್ಕೆ ತಮ್ಮ ಪಾಪದ ಹೊಣೆಗಾರಿಕೆಯಿಂದ ಪರಿಹಾರ ನೀಡಿದ ಭ್ರಮೆಯನ್ನು ಉಂಟುಮಾಡುವ ಮುಲಕ ಈ ಸಾಂಸ್ಥಿಕ ಶಕ್ತಿಕೇಂದ್ರ ಮತ್ತಷ್ಟು ಸಾಮೀಪ್ಯವನ್ನು ಸಾಧಿಸುತ್ತದೆ.

ಈ ತಂತ್ರಯೋಜನೆ ಹಸುವಿನ ಉಳಿದೆಲ್ಲಾ ಆಯಾಮದ ಚರ್ಚೆಯನ್ನು ನಿವಾರಿಸಿ ಅದನ್ನು ಆಹಾರವಾಗಿ ಬಳಸುವ ಸಮಸ್ಯೆಯನ್ನು ಮಾತ್ರ ಮುನ್ನೆಲೆಗೆ ತರುತ್ತದೆ. ಇದು ವಾಸ್ತವಿಕವಾಗಿ ಜೀವಾತ್ಮ-ಹತ್ಯೆ-ವಧೆ-ಪಾಪಗಳೆಂಬ ಪರಿಭಾಷೆಗಳ ಚಕ್ರದಲ್ಲಿ ನಿರ್ದಿಷ್ಟವಾದ ಆಹಾರಕ್ರಮವೊಂದನ್ನು ಆಹಾರದ ಬದಲಾಗಿ ಆಕ್ರಮಣವೆಂಬ ಸಂಕಥನದಲ್ಲಿ ಬಂಧಿಸುವ ರಾಜಕಾರಣ. ಹಸಿವು ಆಹಾರಗಳ ಈ ರಾಜಕಾರಣದ ಪರಿಭಾಷೆಯು ಇಲ್ಲಿಗೆ ನಿಲ್ಲಲಾರದು. ಇದು ಮುಂದುವರೆದು ಸೂಕ್ಷ್ಮವಾಗಿ ಸಸ್ಯೇತರ ಮೂಲವನ್ನು ಆಹಾರ ಮಾದರಿಯ ಆಕರವಾಗಿ ಬಳಸುವ ಒಂದು ವಿಶಾಲ ಸಮುದಾಯವನ್ನೇ ರಾಕ್ಷಸೀಕರಣದ ಆವರಣದಲ್ಲಿ ಕಟ್ಟುವ ಕೆಲಸವನ್ನು ಚುರುಕುಗೊಳಿಸುತ್ತದೆ. ಇದರ ತಾಜಾ ಉದಾಹರಣೆಯಾಗಿಯೇ ಆಹಾರ ಸಂಸ್ಕೃತಿಯ ಬಹಿಷ್ಕೃತ ಮಾದರಿಯೆಂದು EGGS 2ವಾದಿಸಿ ಸರ್ಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳ ಅನ್ನದ ತಟ್ಟೆಗೆ ಬೀಳಬಹುದಾಗಿದ್ದ ಮೊಟ್ಟೆಯಂತಹ ಪೌಷ್ಟಿಕ ಆಹಾರವನ್ನು ಅಪಹರಿಸಿದ್ದ ಬಗೆಯನ್ನು ನೆನೆದುಕೊಳ್ಳಬಹುದು. ಹೀಗೆ ಈ ಸಂಕಥನದ ವಿಸ್ತರಣೆಯಿಂದ ಅನ್ನವೊಂದು ಆಹಾರವಾಗುವ ಬದಲು ಅನ್ಯಗೊಂಡು ಸಾಂಸ್ಕೃತಿಕವಾಗಿ ಬಹಿಷ್ಕೃತ ಮಾದರಿಯಾಗುತ್ತದೆ. ಬಹಿಷ್ಕೃತವಾದುದನ್ನು ತಿಂದವರನ್ನು ಪಾರಂಪರಿಕ ಸಮಾಜ ಹೇಗೆ ಅಂಚಿಗೆ ಸರಿಸಿದೆಯೋ, ಅಂತೆಯೇ ಹೊಸಕಾಲದ ರಾಜಕೀಯ ಅಧಿಕಾರ ಕೇಂದ್ರದಿಂದಲೂ ಇವರನ್ನು ಅಂಚಿಗೆ ಸರಿಸುವುದೇ ಈ ಸ್ಥಾಪಿತಶಕ್ತಿಯ ಆತ್ಯಂತಿಕ ಗುರಿ. ಅದೆಲ್ಲವನೂ ಸಾಧಿಸಲು ಈ ಹಸು-ಎಮ್ಮೆಗಳ ಜಗತ್ತಿನ ಕಾರ್‍ಯಯೋಜನೆಗಳು ಪೂರಕವಾಗಿ ಒದಗಿ ಬರುತ್ತವೆ ಎಂಬುದನ್ನು ಗಮನಿಸಬೇಕು.

ಈಗಾಗಲೇ ಮೇಲೆ ಹೇಳಿದಂತೆ ಜಾನುವಾರುಗಳ ಕುರಿತ ಇಡಿಯ ರಾಜಕೀಯ ಸಂಕಥನಕ್ಕೆ ಜಾನುವಾರು ಜಗತ್ತಿನ ಇತರ ಸಮಸ್ಯೆಗಳು ಆದ್ಯತೆಯ ಪ್ರಶ್ನೆಗಳಲ್ಲ. ಹಾಗೊಂದು ವೇಳೆ ಅವುಗಳನ್ನು ಮುನ್ನೆಲೆಗೆ ತಂದು ಸಂಪನ್ಮೂಲವನ್ನು ಉಳಿಸುವುದೇ ಅದರ ಆದ್ಯತೆಗಳಾಗಿದ್ದ ಪಕ್ಷದಲ್ಲಿ, ಹಸು-ಎಮ್ಮೆಗಳ ಈ ಜಾನುವಾರು ಜಗತ್ತು ದೊಡ್ಡ ಸಂಖ್ಯೆಯಲ್ಲಿ ಕರಗುತ್ತಿರುವ ಈ ಹೊತ್ತಿನಲ್ಲಿ ಅಮೃತಸದೃಶವಾದ ಒಂದು ಲೀಟರ್ ಹಾಲು ತೆಗೆಯಲು ರೈತನಿಗೆ ಬೀಳುತ್ತಿರುವ ಖರ್ಚೆಷ್ಟು? ಆದರೆ ಆತ ನಿಜಕ್ಕೂ ಪಡೆಯುತ್ತಿರುವುದೆಷ್ಟು? ನಮ್ಮದೇ ನೆಲದೊಡಲಿನಿಂದ ತೆಗೆಯಲು ಅನುಮತಿಸಿದ ಒಂದು ಲೀಟರ್ ಖನಿಜಯುಕ್ತವೆನ್ನಲಾಗುವ ನೀರಿಗೆ ಎಷ್ಟು ಬೆಲೆಪಡೆಯಲು ಅನುಮತಿಸಲಾಗಿದೆ? ನಮ್ಮದೇ ಕಡಲಿನ ಉಪ್ಪನ್ನು ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ, ಅದರ ಮೇಲೆ ತೆರಿಗೆ ಸಲ್ಲದೆಂದು ಉಪವಾಸ ಕುಳಿತ ಗಾಂಧೀಜಿಯವರ ಹೋರಾಟದಿಂದ ಸ್ವಾತಂತ್ರ್ಯ ಪಡೆದ ಇದೇ ದೇಶ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಇಂದು ಒಂದು ಕೆ.ಜಿ ಉಪ್ಪನ್ನು ಎಷ್ಟು ದರದಲ್ಲಿ ಮಾರಲು ಅನುಮತಿ ನೀಡಿದೆ? ಇದೆಲ್ಲದರ ಜೊತೆಗೆ ನಮ್ಮದೇ ನಿಸರ್ಗ ಸಂಪತ್ತನ್ನು ಬಳಸುವ ದೇಶದ ಕುಭೇರರಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೊಡುತ್ತಿರುವ ತೆರಿಗೆ ರಿಯಾಯಿತಿಗಳೆಷ್ಟು? ಎಂಬ ಪ್ರಶ್ನೆಗಳು ಮುಖ್ಯವಾಗುತ್ತಿದ್ದವು. ಇವುಗಳ ಬಗೆಗೆ ಚಕಾರವೆತ್ತದೆ ರೈತನ ದುಡಿಮೆಯ ಫಲವನ್ನು ಅಡ್ಡಾದಿಡ್ಡಿ ದರಕ್ಕೆ ಕಸಿದುಕೊಂಡು, ಆತನಿಂದ ಹೊಣೆಗಾರಿಕೆಯನ್ನು ನಿರೀಕ್ಷಿಸುವ ನಾಗರಿಕ ಸಮಾಜಕ್ಕೆ ರೈತನ ಸಮಸ್ಯೆಯ ನಿಜವಾದ ಅರಿವಾಗಲೀ, ಸಹಾನುಭೂತಿಯಾಗಲೀ ಇದೆಯೇ? ರೈತನಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ವಿಮೆಯ ಸೌಲಭ್ಯದ ವ್ಯಾಪ್ತಿಗೆ ಎಷ್ಟೊಂದು ಹಸುಗಳು ಒಳಪಟ್ಟಿವೆ? ಇದಕ್ಕೆಲ್ಲಾ ರೈತರ ಅಜ್ಞಾನವಷ್ಟೇ ಕಾರಣವೇ? cows-killed-by-droughtಬರಗಾಲದ ಹೊತ್ತಿನಲ್ಲಿ ಕುಡಿಯಲು ನೀರನ್ನೂ ಪಡೆಯದೆ ಸಾಯುವ ಜಾನುವಾರುಗಳು ಎಷ್ಟಿವೆ? ಅತ್ಯಂತ ಸಂಪದ್ಪರಿತವಾದ ನಾಟಿತಳಿ ಹಸುಗಳನ್ನು ದಾನವಾಗಿಯೂ ಸ್ವೀಕರಿಸದಿರುವಾಗ ಅದನ್ನು ಸಾಕಬೇಕಾದವರು ಯಾರು? ಹಸುವೆಂದರೆ ಬರಿಯ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾದುದೇ? ಅದನ್ನು ಕೇಂದ್ರವಾಗಿರಿಸಿದ ಇನ್ನಿತರ ಉದ್ಯಮಗಳನ್ನು ಹೇಗೆ ವಿವರಿಸಿಕೊಳ್ಳಬೇಕು? ಆದಾಯ ಮತ್ತು ಯಜಮಾನಿಕೆಗಳ ಮಾಧ್ಯಮವಾಗಿ ದುಡಿಸಲ್ಪಟ್ಟಿರುವ ಜಾನುವಾರುಗಳ ಜಗತ್ತನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಯಾರ ಮೇಲಿದೆ? ಈ ಹೊಣೆಗಾರಿಕೆಯನ್ನು ಯಾರಿಂದ ನಿರೀಕ್ಷಿಸಲಾಗುತ್ತಿದೆ? ಯಾರ ಮೇಲೆ ಹೊರಿಸಲಾಗುತ್ತಿದೆ? ಚಲನೆ ಕಳೆದುಕೊಂಡು ಅಪ್ರಸ್ತುತಗೊಳ್ಳುತ್ತಾ ಕಣ್ಣೆದುರಿನಿಂದ ಮಾಯವಾಗುತ್ತಿದ್ದರೂ, ಭಾವನೆಯಲ್ಲಿ ಲಂಗರು ಹಾಕಿ ನಿಲ್ಲುವುದರಿಂದ ಹಸು ಮತ್ತು ಅದರ ಜೊತೆಗಿನ ಪಾರಂಪರಿಕವಾದ ಜ್ಞಾನ-ಮೌಲ್ಯಗಳನ್ನೊಳಗೊಂಡ ಸಾಂಸ್ಕೃತಿಕ ಜಗತ್ತು ಉಳಿಯುತ್ತದೆಯೇ? ಒಂದು ಸಾಂಸ್ಕೃತಿಕ ಸಂದರ್ಭವು ಜಡತ್ವಕ್ಕೆ ತಳ್ಳಲ್ಪಡುವುದರಿಂದ ಸಮಾಜದ ಮನಸ್ಥಿತಿಯ ಮೇಲೆ ಉಂಟಾಗುವ ಪರಿಣಾಮವೆಂತಹದು? ಇಂತಹ ಸಾಲು ಸಾಲು ಪ್ರಶ್ನೆಗಳನ್ನು ಅವರ ಎದುರಿಗಿಡಬೇಕಾಗಿದೆ.

ಈ ಎಲ್ಲಾ ಹುನ್ನಾರಗಳನ್ನು ನಿರಸನಗೊಳಿಸಿ ಹಸುಸಾಕುವವರಿಗೆ ಗೌರವದ ಬದುಕಿನ ಜೊತೆಗೆ ನಮಗೆ ನಿಜಕ್ಕೂ ಬೇಕಾದ ತಳಿಗಳು ಉಳಿಯಬೇಕಾದರೆ ಅದನ್ನು ಸಾಕುವವರು ಪ್ರಜ್ಞಾವಂತರಾಗಬೇಕು. ದನ ಮೇಯಿಸುವುದು ಯಾತಕ್ಕೂ ಬೇಡದ ಉದ್ಯೋಗವೆಂಬ ಹಣೆಪಟ್ಟಿ ತೊಲಗಿ ಅದೊಂದು ಗೌರವ ತರುವ ಕಾಯಕವೆನಿಸುವ ವಾತಾವರಣ ಮೂಡಬೇಕು. ಭಾವನೆ ಮತ್ತು ಅಸಹಾಯಕತೆಯ ಮೇಲೆ ಯಜಮಾನಿಕೆ ಚಲಾಯಿಸಬಹುದಾದ ಅವಕಾಶ ಇಲ್ಲವಾಗಬೇಕು. cow-decorated-festivalವಾಸ್ತವವನ್ನು ಇರುವಂತೆಯೇ ವಿವರಿಸಿಕೊಳ್ಳಬಹುದಾದ ಸಾಂಸ್ಕೃತಿಕ ವಾತಾವರಣ ಸಿದ್ಧಗೊಳ್ಳಬೇಕು. ಆದರೆ ಜನರನ್ನು ಶಿಕ್ಷಣದ ಆವರಣಕ್ಕೆ ತಾರದೆಯೇ ಹುನ್ನಾರಗಳನ್ನು ಅರ್ಥೈಸಿಕೊಳ್ಳುವ ಅರಿವಿನ ಜಗತ್ತು ಅಸಾಧ್ಯವಾಗುತ್ತದೆ. ಈ ಅರಿವಿನ ಜಗತ್ತು ಸಾಧ್ಯವಾದಾಗ ಅವರೇ ತಮ್ಮದೆಂದು ಭಾವಿಸಿಕೊಂಡ ಪಾಪದ ನೆಲೆಗಳಾಗಲೀ, ಕಾರಣರೆಂದು ಭ್ರಮಿಸಿದ ‘ಅನ್ಯ’ತ್ಪದ ಕಲ್ಪನೆಯಾಗಲೀ ನಿರಸನಗೊಂಡು ತಾವು ತಮ್ಮ ಮೇಲೆ ಹೇರಿಕೊಂಡ ನಾಯಕತ್ವವನ್ನು ತಾವೇ ನಿರಾಕರಿಸುವಂತಾಗುತ್ತದೆ. ಹಾಗಾದಾಗ ಮಾತ್ರ ಹುನ್ನಾರಗಳಿಗೆ ಸಮ್ಮತಿಯ ಮುದ್ರೆಯೊತ್ತಿದ ಜನಸಾಮಾನ್ಯರೇ ಪ್ರತಿರಾಜಕಾರಣದ ನಿಜದ ನಾಯಕರಾಗಿ ಸ್ಥಾಪಿತ ಯಜಮಾನ್ಯವನ್ನು ನಿರಾಕರಿಸಿ ದೈನಿಕವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಂತಹ ಸ್ಥಿತಿಯೊಂದು ಸಾಧ್ಯವಾಗದೇ ಇರುವಲ್ಲಿಯವರೆಗೆ, ಹಿಂದಣೆ-ಮುಂದಣೆಗಳೆಂಬ ಹಟ್ಟಿಯ ಅವಯವಗಳಲ್ಲಿ ಹಿಂದಣೆ-ಮುಂದಣೆಗಳು ತುಂಬುವ-ಖಾಲಿಯಾಗುವ ಈ ನಿರಂತರತೆಯ ಕೊಂಡಿ ಸರಿದುಹೋಗಿ ಕೆಂಪಿ, ಬುಡ್ಡಿ, ಕಾಳಿ, ಬೆಳ್ಳು, ಕೆಂಪಣ್ಣರ ಉಪಸ್ಥಿತಿ ನಾಪತ್ತೆಯಾಗುತ್ತಾ ಸಾಗುತ್ತದೆ. ಅಚ್ಚು ಹಾಕಿಕೊಟ್ಟ ಧರಣಿಮಂಡಲ, ಕಾಳಿಂಗ, ಕೊಳಲು, ಗಂಗೆ, ತುಂಗೆಯರ ಜಪವಷ್ಟೇ ನಮ್ಮದಾಗಿ, ಲೋಹದ ರೂಪದ ಮೋಹದ ಗೋವು ಉಚ್ಚೆಹಾರಿಸುವ, ಜೀವ ತುಂಬಿದ ಹಸುಗಳನ್ನು ಕೊಂದು ಮುಗಿಸುತ್ತದೆ.

ಜಾನುವಾರು ಜಾನಪದ ಮತ್ತು ಐಬುಗಳು : ಗಂಗೆ, ಗೌರಿ,.. ಭಾಗ–9

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು
ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಭಾಗ–9 : ಜಾನುವಾರು ಜಾನಪದ ಮತ್ತು ಐಬುಗಳು

ಹಟ್ಟಿಯಲ್ಲಿಯೇ ಹುಟ್ಟಿದವುಗಳು ಹಣೆಬರಹ. ಆದರೆ ತಂದು ಕಟ್ಟಿಕೊಳ್ಳುವವುಗಳು ಹೀಗೆ ಹಣೆಬರಹದಂತೆ ಬಂದು ತಗುಲಿಕೊಳ್ಳದಂತೆ ಜಾಗರೂಕತೆ ವಹಿಸುವುದಲ್ಲವೇ? ಅಂದಮೇಲೆ ಅದಕ್ಕಾಗಿ ಗ್ರಹಗತಿಗಳ ಲೆಕ್ಕಾಚಾರ, ಗುಣ ನಡತೆಯ ವಿಶ್ಲೇಷಣೆ ಎಲ್ಲವೂ ಇರಬೇಕು. ಹೀಗೆ ದನ ಎಮ್ಮೆಗಳನ್ನು ಸಾಕುವುದೆಂದರೆ ಅಲ್ಲೊಂದು ಒಳಿತು ಕೆಡುಕುಗಳ ಲೆಕ್ಕಾಚಾರವಿರುವ ಲಕ್ಷಣ ಶಾಸ್ತ್ರದ ಜಾನಪದ ಜಗತ್ತೂ ಇರುತ್ತದೆ. ಹಸುಕೊಳ್ಳುವಾಗ ಅದರ ನಾಲ್ಕುಕಾಲು, ಒಂದು ಬಾಲ, ಎರಡುಕಣ್ಣು, ಕಿವಿಗಳಷ್ಟೇ ಗಣಿಸಲ್ಪಡುವುದಲ್ಲ. handicapped-cowನಾಲ್ಕು ಕಾಲಿನ ಎರಡು ಕಿವಿಯ ಎಲ್ಲಾ ಜಾನುವಾರುಗಳು ವಿಕ್ರಯಯೋಗ್ಯ, ಪಾಲನಾಯೋಗ್ಯವೆಂಬ ಸ್ಥಿತಿಯಿಲ್ಲ. ಹೇಗೆ ಮದುವೆ ಮುಂಜಿಗಳಲ್ಲಿ ಗುಣಕೂಟ, ಯೋನಿಕೂಟ, ಅಂಗಾರಕ ಇನ್ನೂ ಏನೇನನ್ನೋ ನೋಡುವ ಕ್ರಮವಿರುವಂತೆ ಜಾನುವಾರಗಳ ವಿಲೇವಾರಿಯಲ್ಲಿಯೂ ಅವುಗಳ ದೇಹರಚನೆ, ಚಾಳಿ, ಆರೋಗ್ಯಾದಿಗಳನ್ನಾಧರಿಸಿದ ಒಂದು ಜಾನಪದ ಪಶುಮೀಮಾಂಸೆಯಿದೆ. ಈ ವಿವೇಚನಾಶಾಸ್ತ್ರ ಒಪ್ಪುವ ಮತ್ತು ನಿರಾಕರಿಸುವ ಸಂಗತಿಗಳನ್ನಾಧರಿಸಿ ಹಸುಗಳ ವಿಕ್ರಯನಡೆಸಲಾಗುತ್ತದೆ. ಈ ಪಶುಮೀಮಾಂಸೆಯ ಮೂಲಕ ಐಬುಗಳೆಂಬಂತೆ ನಿರೂಪಿತವಾದ ಸಂಗತಿಗಳೊಂದಿಗೆ ತುಳುಕು ಹಾಕಿಕೊಂಡ ಹಸುಗಳನ್ನು ಹಟ್ಟಿಯಲ್ಲಿ ಕಟ್ಟಿಕೊಳ್ಳುವುದೇ ಅನಿಷ್ಟದಾಯಕವೆಂಬಂತೆಯೂ ನಂಬಿಕೊಂಡಿರುವ ಜಾನಪದರಿಗೆ ಅವರ ಬದುಕು ಹಸುನುಮಾಡುವ ಸಲ್ಲಕ್ಷಣದ ಹಸುವಷ್ಟೇ ಬೇಕು ವಿನಹಾ ಹಸುವೆಂಬ ರೂಹುವಲ್ಲ.

ನನಗೆ ತಿಳಿದಿರುವ ಅಲ್ಪಮಾಹಿತಿಯನ್ನಾದರಿಸಿ ಹೇಳುವುದಿದ್ದರೆ ದೇಹ ರಚನೆಗೆ ಸಂಬಂಧಿಸಿ ಬಳಕೆಯಲ್ಲಿರುವ ಕುಂಟುಮೂಳೆ, ಚೋಂಕುಬಾಲ, ಕಂಟ್‌ಬಾಲ, ಇಳ್‌ಗೋಡು, ದಾಸ್‌ಹುಂಡ್, ಕತ್ರಿಸುಳಿ, ನೇತ್ರ್‌ಬೆಳು, ಚಕ್ರ್‌ಕೋಡ್, ಕಳ್ಕ್‌ಬಾಯಿ ಇತ್ಯಾದಿಗಳು ಒಳ್ಳೆಯ ಚಹರೆಗಳಲ್ಲ. ದೈಹಿಕ ಅಸಾಮರ್ಥ್ಯತೆಯ ಭಾಗವಾಗಿ ಜೀನಬಾವು ಸೆಡಿಗಾಲು ಇತ್ಯಾದಿಗಳು ಅನುಕೂಲಕರವಲ್ಲ. ನಡತೆ/ಚಾಳಿಯ ಭಾಗವಾಗಿ ಕಳಿಹಾಕುವುದು, ನೊಗಮುರದ್ದ್, ನೇಲ್‌ನೊಗದ ಜೊತೆಗೆ ಹಟ್ಟಿಗ್ ಹೊಗ್ಗದ್, ಹಾರ್‍ಸ್ಕಹೋಪ್ದ್, ಹೆಜ್‌ಮಣ್‌ತೆಗುದ್ ಇತ್ಯಾದಿಗಳು ಒಳ್ಳೆಯ ಚಾಳಿಯಲ್ಲ. ಇವೆಲ್ಲವನ್ನೂ ಐಬುಗಳೆಂದೇ ಜಾನುವಾರು ಜಾನಪದದಲ್ಲಿ ಗುರುತಿಸಲಾಗುತ್ತದೆ. ಈ ಪರಿಭಾಷೆಗಳ ಮೂಲಕವಾಗಿ ಜಾನುವಾರುಗಳ ಕಾರ್ಯಕ್ಷಮತೆಯ ಜತೆಗೆ ಇಷ್ಟಾನಿಷ್ಟ ಪ್ರಯೋಜನಗಳನ್ನು ವಿವರಿಸುವ ಈ ‘ಜಾನುವಾರು ಜಾನಪದ ಸಂವಿಧಾನ’ ಹಸುವಿನ ವಯಸ್ಸು ಮತ್ತು ದುಡಿಯುವ ಶಕ್ತಿಯನ್ನು ಮೀರಿಯೂ ಅದನ್ನು ಇಟ್ಟ್ಟುಕೊಳ್ಳಬೇಕಾದುದೋ, deformed-cowಇಲ್ಲ ಹಟ್ಟಿಯಿಂದ ಹೊರಗಿಡಬೇಕಾದದೋ ಎಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಹಸುವೊಂದನ್ನು ಕೊಡಲೇಬೇಕಾದ ಸಂದರ್ಭವನ್ನು ಕೇವಲ ಅದರ ವಯಸ್ಸು, ಗೊಡ್ಡುತನಗಳಷ್ಟೇ ನಿರ್ಧರಿಸುವುದಲ್ಲ. ಅದೊಂದು ಅನುಪಯುಕ್ತವಲ್ಲದ ಹಂತದಲ್ಲಿಯೂ ತನ್ನ ಐಬಿನ ಕಾರಣದಿಂದಾಗಿ ಸಾಕಿದವನ ಪಾಲಿಗೆ ಅಪಾಯಕಾರಿ ಸರಕಾಗಿ ಭಾವಿತವಾಗಲೂಬಹುದು. ಹಟ್ಟಿಯಲ್ಲಿ ಹಸುವಿರಬೇಕೆಂದು ಹಂಬಲಿಸುವ ಜನ ಈ ಐಬಿರುವ ಹಸು ಹಟ್ಟಿಯ ಹೊದ್ದುಹೋಕಿನಲ್ಲಿಯೇ ಇರಬಾರದೆಂಬ ಗಾಢವಾದ ನಂಬುಗೆಯನ್ನು ಹೊಂದಿರುವುದರಿಂದ ಹಸುವಿನ ಕೊಳ್ಳುವಿಕೆ ಕೊಡುವಿಕೆಗಳಲ್ಲಿ ಐಬುಗಳಿಗೆ ಪ್ರಮುಖ ಜಾಗವಿದೆ.

ಜಾನುವಾರುಗಳನ್ನು ಕೊಳ್ಳುವಾಗ ದೇಹರಚನೆ, ಬಣ್ಣ ಕೋಡುಗಳ ಸ್ವರೂಪ, ಮೈಮೇಲಿನ ರೊಮಗಳ ಸುಳಿ(ಸುರುಳಿ)ಗಳ ಸ್ವರೂಪಗಳನ್ನು ಅನುಭವಸ್ಥರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೆಲವೊಮ್ಮೆ ಕೊಂಡುಕೊಳ್ಳುವವನಿಗೆ ಇದರ ಅರಿವಿಲ್ಲದೆ ಹೋದರೆ ಅವನು ಕೊಂಡುಕೊಂಡು ಬೆಪ್ಪಾದ ಮೇಲೆ ಅವುಗಳನ್ನು ಯಾರಿಗಾದರೂ ಸಾಗಹಾಕಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಯಾಕೆಂದರೆ ಐಬುಗಳು ಅಷ್ಟೊಂದು ಪರಿಣಾಮಕಾರಿಯಾದ ನೆಲೆಯಲ್ಲಿ ಪ್ರಭಾವಬೀರಬಲ್ಲ ರೀತಿಯಲ್ಲಿ ನಂಬುಗೆಯ ಭಾಗವಾಗಿವೆ. ತಲೆಯ ಮೇಲಿನ ಉದ್ದನೆಯ ಬಿಳಿನಾಮ (ದಾಸ್‌ಹುಂಡು) ಕೊಂಡವನಗಂಟಿಗೆ ಪಂಗನಾಮವೆಂದೂ, ನೆತ್ರಬೆಳು (ರಕ್ತಕೆಂಪಿನ ಮಿಶ್ರಣದ ಬಿಳುಪು) ಯಜಮಾನನ ನೀರುಬಾರದ ಕಣ್ಣಲ್ಲಿ ನೆತ್ತರು ತರಿಸುತ್ತದೆ ಎಂದೂ ನಂಬುತ್ತಾರೆ. ಮೂರು ಹುರಿ ಮೂಳೆಗಳು ಕೂಡುವ ಜಾಗದಲ್ಲಿನ ಕುಂಟುಮೂಳೆ(ಕಿರುಗಾತ್ರದ ಮೂಳೆ), ಚಕ್ರಕೋಡು/ವೃತ್ತ್ತಾಕರದ ಕೋಡು, ಚೋಂಕ್ಬಾಲಗಳು ಹಸುವಿನ ಮೌಲ್ಯಕ್ಕೆ ಬಹುದೊಡ್ಡ ಹೊಡೆತ ಕೊಡುತ್ತವೆ. ಇನ್ನು ಚಾಳಿಗೆ ಸಂಬಂಧಿಸಿದಂತೆ ಉಳುವ ವೇಳೆಯಲ್ಲಿ ನೇಗಿಲು-ನೊಗಸಮೇತ ಪೇರಿಕೀಳುವ ಜಾನುವಾರುಗಳು ಹಾಗೆ ಓಡುವಾಗ ನೊಗಮುರಿದರೆ, ಇಲ್ಲವೇ ಅವುಗಳು ಹಾಗೆಯೇ ಹಟ್ಟಿಗೆ ಪ್ರವೇಶ ಮಾಡಿದ್ದರೆ ಹಟ್ಟಿಯನ್ನೇ ಉಳುವುದಕ್ಕಾಗಿ, ಎತ್ತುಬೀಜವನ್ನು ನಾಶಮಾಡಲಿಕ್ಕಾಗಿ ಬಂದವುಗಳೆಂಬಂತೆ ಭಾವಿಸುವುದರಿಂದ ಇಂತಹವುಗಳನ್ನು ಕಟ್ಟಿಕೊಳ್ಳಲೇಬಾರದೆಂಬ ದೃಢವಾದ ನಂಬುಗೆಯಿದೆ. ಹಾಗೆಯೇ ಜೇನುಬಾವು, ಸೆಡಿಕಾಲು(ಚಳಿಗಾಲದಲ್ಲಿ ನಡೆಯಲು ಎಳೆದಂತಾಗುವ ಕಾಲಿನ ರೋಗ) ಇತ್ಯಾದಿಗಳು ಋಣಾತ್ಮಕ ಐಬುಗಳೇ ಆಗಿವೆ.

ಇವುಗಳಲ್ಲಿ ಕೆಲವು ಐಬುಗಳು ಹಸುವಿನ ಮೌಲ್ಯಕ್ಕೆ ಪೆಟ್ಟುಕೊಟ್ಟು ಸಾಕಿದವನಿಗೆ ಮೂರುಕಾಸಿನ ಬೆಲೆಸಿಗದಂತೆ ಮಡಿದರೆ, ಇನ್ನು ಕೆಲವು ಐಬುಗಳು ಆ ಇಡಿಯ ಜೋಡಿಯನ್ನೋ, ಒಂಟಿ ಹಸುವನ್ನೋ ಸಂಪೂರ್ಣ ನಿರಾಕೃತ ಸರಕಾಗಿಸುತ್ತವೆ. ಒಂದುವೇಳೆ ಬುದ್ಧಿವಂತ ದಲ್ಲಾಳಿಗಳ ಮೂಲಕ ಉಳುವ ಇನ್ನಾರಿಗಾದರೂ ವಿಕ್ರಯ ಮಾಡಿದರೆ ಕೊಂಡವರು ಐಬಿನ ಸಮಾಚಾರ ತಿಳಿದ ಮೇಲೆ ಅದನ್ನೊಂದು (ತನಗೆ ಕೊಟ್ಟವರ) ಘೋರ ಅಪರಾಧ/ವಂಚನೆಯಾಗಿಯೇ ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ಲಕ್ಷಣಮೀಮಾಂಸೆಯ ಕಿಂಚಿತ್ ಪರಿಚಯವಿರುವವರು ಈ ತೆರನಾದ ಹಸುಗಳನ್ನು ಧರ್ಮಕ್ಕೆ ಕೊಟ್ಟರೂ ಬೇಡವೆಂಬಂತೆ disabled-cowಸಾರುವಂತಾಗುವುದರಿಂದ ಅವುಗಳು ಯಾರ ಹಟ್ಟಿಯಲ್ಲಿರುತ್ತವೋ ಆ ಹಟ್ಟಿಯವನು ಕೊಡುವ ದಾರಿಕಾಣದೆ, ಉಳಿಸಿಕೊಳ್ಳಲಾರದೆ ಅತೀವ ಸಂಕಟ ಅನುಭವಿಸಿದ ಉದಾಹರಣೆಗಳಿವೆ. ಬಹುಶಃ ಪಶುವೊಂದನ್ನು ಉಪಯುಕ್ತ ಮತ್ತು ಅನುಪಯುಕ್ತವೆಂಬ ತೀರ್ಪಿಗೆ ಒಳಪಡಿಸುವ ಮುನ್ನವೇ ಇಂತಹ ಸಂದಿಗ್ದಗಳಿರುವುದರಿಂದ ಹಸುವೆಂಬುದನ್ನು ಏಕರೂಪಿ ಮಾದರಿಯಲ್ಲಿ, ಪವಿತ್ರತೆ, ಉಪಯುಕ್ತ, ಮುಗ್ಧ, ದೇವತೆಗಳ ಆವಾಸ ಎಂದೆಲ್ಲಾ ಪರಿಭಾವಿಸಲಾಗದು. ಹಾಗಾಗಿ ಸಹಜವಾಗಿಯೇ ಐಬಿರುವ ಹಸುಗಳನ್ನು ಈ ಜಾನಪದಮೀಮಾಂಸಾ ಆವರಣದಿಂದ ಹೊರಗಿರುವವರು, ಇಲ್ಲವೇ ಈ ಕಲ್ಪನೆಗಳ ಇರುವಿಕೆಯನ್ನೇ ನಿರಾಕರಿಸಿದವರು ಅಥವಾ ಮಾಂಸವಾಗಿ ಪರಿವರ್ತಿಸಿಕೊಳ್ಳಬಲ್ಲವರು ಮಾತ್ರ ಖರೀದಿಸಲು ಸಾಧ್ಯ.

ಬಹುಶ ರೈತನೊಬ್ಬ ತನ್ನ ಹಸುವನ್ನು ಇನ್ನೊಬ್ಬನಿಗೆ ಮಾರುವಾಗಲೆಲ್ಲಾ ಆತನ ಕಣ್ಣೆದುರಿರುವುದು ತನ್ನ ಜೀವಿತಕ್ಕೆ ನೆಲೆಯಾಗಬಲ್ಲ ಮೂಲಧನ. ಕೆಲವು ಐಬುಗಳ ಮೂಲಕ ಹತ್ತು ಸಾವಿರ ಬೆಲೆಬಾಳುವ ಜೋಡನ್ನು ಐದು ಸಾವಿರಕ್ಕೂ ಕೇಳುವವರಿಲ್ಲದಾದಾಗ, ತಾನೇ ಸ್ವಯಂ ಕಟ್ಟಿಕೊಂಡು ಸಾಕಲಾಗದಾದಾಗ ಐದಕ್ಕಿಂತ ಹೆಚ್ಚಿನ ದರ ಸಿಕ್ಕುತ್ತದೆ ಅಂತನಿಸಿದ ಗಿರಾಕಿಗೆ ಕೊಡಲಾರದ ಸಂದರ್ಭದಲ್ಲಿ ನಿಶ್ಚಿತವಾಗಿಯೂ ಅವನ ಹಟ್ಟಿ ,ಕೈ, ಮೆದುಳು ಎಲ್ಲವೂ ಬರಿದಾಗುತ್ತದೆ. ಬಾಲದಲ್ಲಿ ಬಿಳಿಯ ಉಂಗುರಾಕಾರದ ರಚನೆಯಿರುವ ಕರುವೊಂದು ಹಟ್ಟಿಯಲ್ಲಿರುವಷ್ಟು ದಿನವೂ ‘ಒಡು’ (ಉಡ) ವಂತಹ ಅನಿಷ್ಟ ಸಂಗತಿಯೊಂದು ತನಗೆ ತಗುಲಿಹಾಕಿಕೊಂಡಿದೆ ಎಂಬಲ್ಲಿ ನೆಮ್ಮದಿ ಹೇಗೆ ಸಾಧ್ಯ? ಮುದಿ ಹಾಗೂ ಒಳ್ಳೆಯ ಲಕ್ಷಣವಿಲ್ಲದ ಕೆಟ್ಟ ಐಬಿನ ಹಸುಗಳನ್ನೆಲ್ಲಾ ರೈತನ ತಲೆಗೆ ಕಟ್ಟಿ ನೀನು ಇವುಗಳನ್ನೆಲ್ಲಾ ಸಾಕಲೇಬೇಕು ಎಂಬ ಫರ್ಮಾನು ಏನಾದರೂ ಹೊರಟಲ್ಲಿ ಇಡಿಯ ಕೃಷಿ ಬದುಕಿನ ಜೀವನಕ್ರಮವೇ ಒಂದು ವಿರುದ್ಧ ದಿಕ್ಕಿನ ಬೆಳವಣಿಗೆಗೆ ಕಾರಣವಾಗಲಿದೆ. ಮನುಷ್ಯರ ಜಾತಕ ಹಿಡಿದು ಅವರ ಯೋಗಾಯೋಗ ಫಲ ಹೇಳಿ ನಂಬಿಸುವವರು, ಅಮೇರಿಕಾದ ಅಣ್ಣನ ವಿಶ್ವವ್ಯಾಪಾರ ಕಟ್ಟಡದ ಪುನರ್‌ನಿರ್ಮಾಣಕ್ಕೂ ವಾಸ್ತುವಿನ ಜ್ಞಾನ, deformed-calfನಂಬುಗೆ ಹರಿಸುವವರು, ರೈತರ/ಜಾನಪದರ ನಂಬುಗೆಯ ‘ಜಾನುವಾರು ಜಾನಪದ’ವನ್ನು ಅವೈಜ್ಞಾನಿಕ ಎನ್ನಲಾದೀತೇ? ಜ್ಯೋತಿಷ್ಯವನ್ನು ವಿಜ್ಞಾನವೆಂದು ಪಂಚಕಜ್ಜಾಯದ ತರಹ ಹಂಚಲಾಗುತ್ತಿರುವ ಕಾಲದಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ಜಾನಪದಲಕ್ಷಣ ಮೀಮಾಂಸೆಯನ್ನು ಹೇಗೆ ನಿರಾಕರಿಸಲಾಗುತ್ತದೆ? ಹಸುಕಟ್ಟಿಕೊಂಡವರು ಕಟ್ಟಿದ ಈ ಲಕ್ಷಣಮೀಮಾಂಸೆಗೆ ಜೀವನಾನುಭವದ ಹಿನ್ನೆಲೆಯೂ ಇದ್ದಿರಲೇಬೇಕಲ್ಲವೇ? ಜೀವನಾನುಭವಗಳ ಹಿನ್ನೆಲೆಯಲ್ಲಿ ಬೆಳೆದುಬಂದ ಈ ನಂಬಿಕೆಯ ಜೀವನಕ್ರಮವನ್ನು ಸ್ವಲ್ಪ ಆಪ್ತತೆಯಿಂದ ನೋಡಿದಲ್ಲಿ ಪವಿತ್ರಗೋವೊಂದು ಯಾವ ಹಟ್ಟಿಗಳಲ್ಲಿ ಯಾವ್ಯಾವ ಕಾರಣಕ್ಕಾಗಿ ಅಪವಿತ್ರವಾಗುತ್ತದೆ ಎಂಬ ಅರಿವು ಖಂಡಿತಾ ದಕ್ಕುತ್ತದೆ. ಯಾಕೆಂದರೆ ಅದು ಒಂದೇ ಏಟಿಗೆ ಆರಾಧನೆ ಮಾಡಿಯೋ, ಉಪಯೋಗ ಮಾಡಿಯೋ ಬಿಡಬಹುದಾದ ಸಂಗತಿಯಲ್ಲ. ಅದೊಂದು ಸಂಕೀರ್ಣವಾದ ಪ್ರತ್ಯೇಕಲೋಕ. ಏಕರೂಪಿಯಲ್ಲದ ಈ ಜಗತ್ತಿನಲ್ಲಿ ಅವರವರ ಗೋವು ಅವರವರೇ ಕಟ್ಟಿಕೊಳ್ಳತಕ್ಕಂತಹ ನೆಲೆಯಲ್ಲಿರುತ್ತದೆ.ಸಾರ್ವತ್ರಿಕವಾದ ಗೋಸಂಕಥನದ ಮೂಲಕ ಪವಿತ್ರೀಕರಿಸಲ್ಪಟ್ಟ ಅದರ ಅಂತರಿಕಜಗತ್ತು ಛಿದ್ರೀಕರಣಕ್ಕೆ ಒಳಗಾದುದೆಂಬುದನ್ನು ಸಾವಧಾನವಾಗಿ ಗಮನಿಸಬೇಕಾಗುತ್ತದೆ.

ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ : ಗಂಗೆ, ಗೌರಿ,.. ಭಾಗ–8

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಶಾಲೆಯಿಲ್ಲದ ದಿನಗಳಲ್ಲಿ ದಿನಪೂರ್ತಿ ಬಯಲಲ್ಲಿರುತ್ತಿದ್ದ ನಮ್ಮ ನಿತ್ಯದ ನಿಗಧಿತ ಕಾಯಕವೆಂದರೆ ದನಮೇಯಿಸುವುದೇ ಆಗಿತ್ತು. ಬೆಳಗಿನ ಕಾಯಕದಲ್ಲಿ ಏರುಪೇರಾದರೂ ಇಳಿಹೊತ್ತಿನಲ್ಲಿಯ ಈ ಅವಕಾಶವನ್ನು ನಾವುಗಳು ಮಿಸ್‌ಮಾಡಿಕೊಳ್ತಿರಲಿಲ್ಲ. ಯಾಕೆಂದರೆ ತೆರೆದ ವಿಶಾಲವಾದ ಬಯಲಿನಲ್ಲಿರುವ ಗದ್ದೆಗಳೇ ಲಗೋರಿ ಮತ್ತಿತರ ಆಟಗಳ ಅಂಗಣವಾಗಿ ಆಕ್ಷೇಪಣಾರಹಿತವಾಗಿ ಒದಗಿಬರುತ್ತಿದ್ದ ಘಳಿಗೆಯದು.ಹೊತ್ತುಮುಳುಗಲು ಇನ್ನೇನು ಘಳಿಗೆ ಹೊತ್ತಿದೆ ಎನ್ನುತ್ತಿರುವಂತೆ ಅಥವಾ ಬಯಲಿನಲ್ಲಿ ಆಟವಾಡುತ್ತಾ ಮೈಮರೆಯುತ್ತಿದ್ದ ನಮ್ಮ ಆಟಗಳಿಗೆ ಬ್ರೇಕ್‌ಬೀಳುವ ಹೊತ್ತು ಕರೆಯುವ ಹಸುಗಳಿಗಾಗಿ ತಾಯಂದಿರುಗಳು ಹಸಿಹುಲ್ಲನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ದೃಶ್ಯ ಅಂದು ಸಾಮಾನ್ಯವಾಗಿತ್ತು. ಅಮ್ಮಂದಿರ ಸೊಂಟದಲ್ಲಿನ ಹುಲ್ಲಬುಟ್ಟಿಗಳನ್ನು Cows-pastureನೋಡುತ್ತಿದ್ದಂತೆಯೇ ಕರೆಯುವ ಹಸುಗಳು ಅಥವಾ ಮುದ್ದಿನ ಎಳೆಗರುಗಳು ಚಂಗುಹಾರಿಕೊಳ್ಳುತ್ತಾ ಬೆನ್ನಟ್ಟುತ್ತಿದ್ದುವು. ಅಮ್ಮಂದಿರಿಗೂ ಇದು ಬೇಸರದ ಸಂಗತಿಯಲ್ಲ. ಅವರುಗಳು ಸಂಭ್ರಮವನ್ನೇ ಅನುಭವಿಸುತ್ತಿದ್ದರು. ನಮ್ಮಮ್ಮನೂ ಹರ್ಲಿಹುಲ್ಲನ್ನೋ, ನೆಲಗೊಣ್ಣೆಯನ್ನೋ ಮಟ್ಟ್ಹುಲ್ಲನ್ನೋ ಕಿತ್ತು ಹೊಳೆಯಲ್ಲಿ ತೊಳೆದು ಕುಕ್ಕೆಯಲ್ಲಿಹಾಕಿ, ಸೊಂಟದ ಮೇಲೇರಿಸಿಕೊಂಡು ಬರುತ್ತಿದ್ದ ಆ ದಿನಗಳಲ್ಲಿ ಶಾಲೆಯಿಲ್ಲದ ಹೊತ್ತು ಬಯಲಲ್ಲಿ ದನ ಮೇಯಿಸಿಕೊಂಡು ಲಗೋರಿ ಆಡುತ್ತಿದ್ದ ಸರದಿ ನನ್ನದಾಗಿರುತ್ತಿತ್ತು. ನಮ್ಮ ಅಮ್ಮನ ಹುಲ್ಲಹೆಡಿಗೆ ನೋಡುತ್ತಿದ್ದಂತೆಯೇ ಕೊಂಗಾಟದ ಕುಣಿತ ಕುಣಿದು ಸೊಂಟದೆತ್ತರದಲ್ಲಿಯೇ ಬಾಯಿಗೆ ಸಿಕ್ಕುತ್ತಿದ್ದ ಕುಕ್ಕೆಯ ಹುಲ್ಲನ್ನು ಮುಕ್ಕಲು ನಮ್ಮ ಹಸುಗಳಾಗಿದ್ದ ಕೆಂಪಿ, ಬುಡ್ಡಿಯರುಗಳು ಓಡುತ್ತಿದ್ದವು. ಈ ದನಗಳು ಓಡಿಬರುತ್ತಿದ್ದಂತೆಯೇ ನನ್ನಮ್ಮ ಅವುಗಳಿಗೆ ಕೈತುತ್ತು ತಿನಿಸುವಂತೆ ಅವುಗಳ ಬಾಯಿಗೆ ನಾಲ್ಕೆಳೆ ಹುಲ್ಲು ಇರಿಸಿ, ಕೆಚ್ಚಲಿಂದ ಹಾಲೆಳೆಯುವ ಹೊತ್ತು ಅವುಗಳೆದುರು ಕ್ಯಾಡಬರಿ ಚಾಕಲೇಟು ಇಡುವಂತೆ ಇಡಲೇಬೇಕಾಗಿದ್ದ ಹುಲ್ಲನ್ನು ಜೋಪಾನವಾಗಿ ಉಳಿಸಿಕೊಂಡು ಬಯಲಿನಿಂದ ದಾಟಿಹೋಗಲು ಹರಸಾಹಸಪಡುತ್ತಿದ್ದಳು. ನಮ್ಮ ಹಾಗೂ ಅಮ್ಮನ ಅಕ್ಕರೆಯಲ್ಲಿ ಮಿಂದ ಇವುಗಳನ್ನು ಕೆಲವೊಮ್ಮೆ ಹೀಗೆ ಓಡಿಬಂದಾಗ ಹತ್ತಿರಬರುವುದಕ್ಕೇ ಅವಳು ಬಿಡುತ್ತಿದ್ದುದಿಲ್ಲ. ಕೊಂಗಾಟದ ಬೈಗುಳ ಬೈಯ್ದು ಮೂಗು ಮುಚ್ಚಿಕೊಳ್ಳುತ್ತಾ, ದೂರವೇ ಉಳಿಯುವಂತೆ ಸಣ್ಣ ಕೋಲು ಹಿಡಿದು ಗದರುತ್ತಾ ದೂರದಿಂದಲೇ ನಾಲ್ಕೆಳೆ ಹುಲ್ಲನ್ನು ನಾಯಿಗೆ ಎಸೆಯುವಂತೆ ಎಸೆದು ಪಾರಾಗುತ್ತಿದ್ದಳು. ಯಾಕೆಂದರೆ ಅವು ಅವಳಿಗೂ, ನಮಗೂ ಗೊತ್ತಿರುವಂತೆ ಹುಲ್ಲನ್ನಷ್ಟೇ ತಿನ್ನುವವುಗಳಾಗಿರಲಿಲ್ಲ.ಅವುಗಳ ಅಹಾರ ಬಹುಮಾದರಿಯದಾಗಿತ್ತು. ಯಾರ್‍ಯಾರೋ ತಿನ್ನುವ ಏನೇನೋ ಆಹಾರಗಳು, ಆಹಾರಗಳೇ ಆಗಿದ್ದರೂ ಕೇಳುವ ಕಿವಿ, ಅನುಭವಿಸುವ ಮೈ ಒಲ್ಲೆಯೆನ್ನುವುದು ಉಂಟಲ್ಲವೇ? ಒಲ್ಲೆಯೆಂದರೂ ನಿಜವನ್ನೂ ಒಪ್ಪಿಕೊಳ್ಳಬೇಕಲ್ಲವೇ?ಅವು ನಮ್ಮ ಹಸುಗಳಲ್ಲವೇ?

ಹುಲ್ಲು ತಿನ್ನುವ ಸಂಗತಿಯೊಂದಿಗೆ ತಗಲು ಹಾಕಿಕೊಂಡ ಹಸು ಹುಲ್ಲನ್ನು ಮಾತ್ರ ತಿನ್ನುತ್ತದೆಯೆ ಎಂದು ಕೇಳಿದರೆ ಉತ್ತರ ಏನೆನ್ನಬೇಕು? cows-garbageಪವಿತ್ರವಾದ ಗೋವು ಪವಿತ್ರವೂ, ಶುದ್ಧವೂ ಆದ ಹುಲ್ಲನ್ನು ಮಾತ್ರ ತಿನ್ನುತ್ತದೆ ಎಂದು ಹೇಳುವವರಿದ್ದರೆ ಒಂದೋ ಅವರ ಉದ್ದೇಶವನ್ನು ಅನುಮಾನಿಸಬೇಕು ಇಲ್ಲವೇ ಅವರ ಲೋಕಾನುಭವಕ್ಕೆ ಕನಿಕರಪಡಬೇಕು. ಯಾಕೆಂದರೆ ಹಸುವನ್ನು ಶುದ್ಧ ಸಸ್ಯಾಹಾರಿ ಎಂದು ವರ್ಗೀಕರಿಸುವುದೂ ಪೂರ್ಣ ಪ್ರಮಾಣದಲ್ಲಿ ಸರಿಯೆನಿಸಲಾರದು. ಯಾವೊಂದು ಪ್ರಾಣಿ ಸಮುದಾಯವೂ ಮುಖ್ಯಾಹಾರದಲ್ಲಿ ಸಮಾನತೆ ತೋರಬಹುದಲ್ಲದೆ, ಇಡಿಯ ಆ ಜೀವಸಮುದಾಯವೇ ಆಹಾರದಲ್ಲಿ ಏಕರೂಪಿಯಾಗಿ ವರ್ತಿಸುತ್ತದೆ ಎಂಬ ತರ್ಕ ತಳಬುಡವಿಲ್ಲದ ತರ್ಕವೇ ಸರಿ. ಎಲ್ಲವೂ ಹುಲ್ಲು ತಿನ್ನುತ್ತವೆ ಎಂಬಲ್ಲಿ ಅನುಮಾನವಿಲ್ಲ. ಆದರೆ ತರಾವರಿ ಆಹಾರಾಸಕ್ತಿಯಿರುವ ಹಸುಗಳು ಒಂದು ತಿನ್ನುವುದನ್ನೇ ಮತ್ತೊಂದು ತಿಂದೇ ತಿನ್ನುತ್ತದೆ ಎಂದು ಪ್ರಮೇಯ ಕಟ್ಟಲು ಸಾಧ್ಯವಿಲ್ಲ. ನಾಡಾಡಿ ಹೋರೆಮ್ಮೆ, ಹಸು ಕರುವಿನ ಆಹಾರ ಲೋಕವು ಮನುಷ್ಯರ ಹೇಲಿನಿಂದ ತೊಡಗಿ, ಕರುಹಾಕುವ ವೇಳೆಯ ಮಾಸು (ಕಸ),ಅವುಗಳದ್ದೇ ಕರುಗಳ ವಿಸರ್ಜನೆಯಾದ ಕಂದಿ, ಒಣಗಿದ ಮೂಳೆ, ಮಣ್ಣು, ಬಟ್ಟೆ, ಕಂಬಳಿ, ಪ್ಲಾಸ್ಟಿಕ್‌ಡಬ್ಬ, ಹೊಗೆಸೊಪ್ಪು, ಕಾಸರಕನ (ಕಾಯೆರ್) ಬೀಜ, ಗೊಬ್ಬರಗಳ ತನಕವೂ ವಿಸ್ತರಿತವಾಗಿದೆ ಎಂದರೆ ಅನೇಕರು ಹುಬ್ಬೇರಿಸಬಹುದು, ಕೆಲವರಿಗೆ ಅಸಹ್ಯ ಅನಿಸಬಹುದು. ಇನ್ನು ಕೆಲವರು ಸುತರಾಂ ಒಪ್ಪದೆಯೂ ಇರಬಹುದು. ಯಾಕೆಂದರೆ ಶುದ್ಧವಾದ (?) ಹಾಲುಕೊಡುವ ಹಸು, ಪವಿತ್ರವಾದ ಭಾವನೆಯ ಹೂರಣವಾಗಿರುವ ಹಸು ಚಿ ಕೊಳಕನ್ನೆಲ್ಲಾ ತಿನ್ನುತ್ತದೆ ಎಂಬುದು ಕಣ್ಣೆದುರು ಕಾಣಬಾರದ ಸತ್ಯ. ಆದರೂ ಅವು ಅದನ್ನು ಹಿಂದಿನಿಂದ ತಿನ್ನುತ್ತಿದ್ದವು ಮತ್ತು ಈಗಲೂ ತಿನ್ನುತ್ತಿವೆ. ಪದವಿ ಮುಗಿಸುವತನಕ ಮತ್ತು ಆ ಮೇಲೂ ಕೂಡ ಇಂತಹ ಹಸುಗಳನ್ನು ಹಟ್ಟಿಯಲ್ಲಿ ಕಟ್ಟುವವೇಳೆ ಅವುಗಳ ಮೂತಿ ತಗುಲಿದಾಗ ಮೈಯೆಲ್ಲಾ ಹೇಸಿಕೊಂಡು ಸ್ನಾನದ ಮೇಲೆ ಮತ್ತೆ ಸ್ನಾನಮಾಡಿದ ಅನುಭವ ನನಗಿದೆ.

ಮನುಷ್ಯರ ಸೆಗಣಿ ಹೋರೆಮ್ಮೆ, ಹಸು, ಎತ್ತುಗಳೆಲ್ಲವುದರ ಬಹಳ ಪ್ರಿಯವಾದ ಆಹಾರಗಳಲ್ಲೊಂದು. ಆದರೆ ಎಲ್ಲವೂ ಶತಸಿದ್ಧವಾಗಿ cows-garbage-paperಇದನ್ನು ತಿಂದೇ ತೀರುತ್ತವೆ ಎನ್ನುವುದು ಅಪಚಾರವಷ್ಟೇ ಅಲ್ಲ ಸುಳ್ಳು ಕೂಡಾ ಆಗುತ್ತದೆ. ನಮ್ಮ ಹಟ್ಟಿಯಲ್ಲಿ ನಾನು ಕಂಡಂತೆ ಶೇ.80 ರಷ್ಟು ಜಾನುವಾರುಗಳು ಹೇಲುಬಾಕಗಳು. ಕೆಲವಂತೂ ಇದನ್ನು ತಿನ್ನುವುದಕ್ಕಾಗಿಯೇ ವಿಶೇಷ ತಂತ್ರ ಮಾಡುತ್ತಿದ್ದವು. ನಮ್ಮ ಮನೆಯಲ್ಲಿ ಕೆಂಪಿ ಅಂತ ಒಂದು ದನ ಬಹಳ ವರ್ಷಗಳವರೆಗೂ ಇತ್ತು. ಹತ್ತಿಂಚು ಉದ್ದದ ಮುಂದಕ್ಕೆ ಬಾಗಿದ ಎರಡು ಕೋಡುಗಳಿಂದ ಇದು ಕೆಲವೊಮ್ಮೆ ನಮಗೆ ಆತಂಕವನ್ನೂ ಉಂಟುಮಾಡುತ್ತಿತ್ತು. ಇದರ ಮೈಬಣ್ಣ ಅತ್ಯಂತ ಸೊಗಸು. ಜಾಜಿಕೆಂಪು ಬಣ್ಣದ ಈ ಹಸುವಿನ ಬೆಳ್ಳನೆಯ ಮುಸುಡಿಯ ಮೇಲೆ ಕಪ್ಪುಮಚ್ಚೆಗಳಿದ್ದವು. ಹೆಚ್ಚು ಹರಾಮಿಯೂ ಅಲ್ಲದ, ತೊಂಡು ಮೇಯುವ ಕೆಟ್ಟಸ್ವಭಾವದ್ದೂ ಅಲ್ಲದ ಈ ಹಸುವಿಗೆ ಇದೊಂದು ಕೆಟ್ಟಚಾಳಿಯಿತ್ತು. ಇದಕ್ಕೆಂದೇ ಮೇವಿಗೆ ಬಿಡುವುದಕ್ಕಾಗಿ ಕೊರಳುಬಳ್ಳಿ ತಪ್ಪಿಸಿ ಹಟ್ಟಿಯಿಂದ ಹೊರಗೆ ಎಬ್ಬುವಾಗಲೇ ಉಳಿದವುಗಳಿಗಿಂತ ಮುಂದೆ ಹೊರಟು, ತನ್ನ ಇಷ್ಟದ ಒಣಕುತಿಂಡಿ ಸಿಕ್ಕುವ ಪರಿಚಿತ ಜಾಗಕ್ಕೆ ನುಗ್ಗಿ ಬಿಡುತ್ತಿತ್ತು. ಸಾರ್ವತ್ರಿಕವಾಗಿ ಶೌಚಾಲಯರಹಿತ ಹಳ್ಳಿಯಾಗಿದ್ದ, ಆಂಶಿಕವಾಗಿ ಈಗಲೂ ಹಾಗೆಯೇ ಇರುವ ನಮ್ಮೂರಿನಲ್ಲಿ ಇದಕ್ಕೇನೂ ಬರಗಾಲವೂ ಇರಲಿಲ್ಲ. ಈ ಜಾಗಗಳಲ್ಲಿ ಕಾಲು ಹಾಕಲು ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದ್ದ ನಮಗೆ ಆ ಪ್ರಕ್ರಿಯೆಯನ್ನು ತಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಇದೇ ತೆರನಾದ ವರ್ತನೆಯನ್ನು ಹಟ್ಟಿಗೆ ಎಬ್ಬುವಾಗಲೂ ಪುನರಾವರ್ತಿಸುತ್ತಿದ್ದ ಚಂದದ ಮೈಬಣ್ಣದ ಈ ಹಸು ಗೋಧೂಳಿಯಲ್ಲಿ ಉಳಿದವುಗಳಂತೆ ಹಟ್ಟಿಗೆ ಬಾರದೇ ಗ್ವಾಯ್‌ಒಳಾಲ್(ಗೇರುತೋಟ)ಗೆ ನುಗ್ಗಿ ತನ್ನ ಕೆಲಸ ನಿರ್ವಹಿಸುತ್ತಿತ್ತು. ಕೆಂಪಿಯೂ ಸೇರಿದಂತೆ ಅನೇಕ ಜಾನುವಾರುಗಳು ಶೌಚಾಲಯವೇ ಇಲ್ಲದೇ ಎಲ್ಲೆಂದರಲ್ಲಿ ಅವತರಿಸುತ್ತಿದ್ದ ಈ ಮಲಿನದ ಕುರುಹೂ ಸಿಕ್ಕದಂತೆ ನೆಕ್ಕಿ ಬಿಡುತ್ತಿದ್ದವು. ಕಣ್ತಪ್ಪಿ ಉಳಿದುದನ್ನು ಒಣಕಲು ತಿಂಡಿ ತಿನ್ನುವಂತೆ ತಿನ್ನುತ್ತಿದ್ದವು. ಇದೇ ಸ್ಥಿತಿ ಬೇಸಿಗೆಯ ಕಾಲದಲ್ಲಿ ಹೊಳೆಗೆ ಮತ್ತು ಹೊಳೆಯಿಂದ ಹೋರೆಮ್ಮೆಗಳನ್ನು ಎಬ್ಬಿಕೊಂಡು ಬರುತ್ತಿದ್ದ ತೋಡಿನಲ್ಲಿಯೂ ಎದುರಾಗುತ್ತಿತ್ತು. ಲೋಕಕ್ಕೆ ತೋರದಂತೆ ಮರೆಯಿರುವ ಈ ಜಾಗ ಮಬ್ಬು ಹೊತ್ತಿನಲ್ಲಿ ಆಪ್ಯಾಯಮಾನವಾದ ಶೌಚಕ್ರಿಯೆಯ ತಾಣವಾಗುತ್ತಿದ್ದುದರಿಂದ ಜಾನುವಾರುಗಳನ್ನು ಈ ಜಾಗೆಯ ಮೂಲಕ ಎಬ್ಬಿಕೊಂಡು ಬರುವಾಗ ನಾವು ಯಾರೂ ಅವುಗಳ ಹಿಂದೆ ಬರುತ್ತಿರಲಿಲ್ಲ. ಹಾಗಾಗಿ ದೂರನಿಂತು ಹೈ, ಹೋ . . ಎಂದು ಬೊಬ್ಬಿಡುವ ನಮ್ಮ ಕೂಗಿಗೆ ಅವು ಕ್ಯಾರೆ ಅನ್ನದೆ ಅವುಗಳ ಪಾಡಿಗೆ ಓಣಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗುತ್ತಿದ್ದವು. ಹಾಗಾಗಿ ಹಟ್ಟಿಯಲ್ಲಿ ಇವುಗಳನ್ನು ಕಟ್ಟುವವೇಳೆ ಮೈ ಕೈ ತಾಗದಂತೆ ಸರ್ಕಸ್ ಮಾಡುವ ಜತೆಗೂ ಉಸಿರನ್ನು ಬಿಗಿಹಿಡಿದುಕೊಂಡು ಬೈಯ್ದುಕೊಳ್ಳುತ್ತಾ ಅವುಗಳ ಕೊರಳಿಗೆ ದಾಂಬು (ಹಗ್ಗ) ಸಿಕ್ಕಿಸುತ್ತಿದ್ದೆವು.

ಇನ್ನು ಕೆಲವು ಜಾನುವಾರುಗಳ ಆಹಾರದ ಆಯ್ಕೆ ಮತ್ತು ಬಯಕೆಯೇ ವಿಚಿತ್ರ ತೆರನಾಗಿದೆ. ನಮ್ಮ ಮನೆಯಲ್ಲಿದ್ದ ಬುಡ್ಡಿ ಎಂಬ ಹೆಸರಿನ ಹಸು ಕಾಸರಕದಕಾಯಿ ಆಗುವ ವೇಳೆ ಅದರ ಹಣ್ಣು ಮತ್ತು ಬೀಜ ತಿನ್ನಲು ಹುಡುಕಾಡುತ್ತಿತ್ತು. ಇದರ ಪರಿಣಾಮವಾಗಿ ಹೀಗೆ ತಿಂದಾಗಲೆಲ್ಲಾ ಅದು ಕೊಡುತ್ತಿದ್ದ ಹಾಲು ಕಾಸರಕನ ಬೀಜದ ಕಹಿಯಂಶ ತೋರಿಸುತ್ತಿತ್ತು. ಅದು ಕಾಸಾನ್(ಕಾಯೆರ್) ಹಣ್ಣುಬೀಜ ತಿಂದುದನ್ನು ಕಾಣದೆಯೂ ಅದರ ಹಾಲಿನ ಮೂಲಕ ಅದು ನಿನ್ನೆ ಏನನ್ನು ತಿಂದಿತ್ತು ಎಂಬುದನ್ನು ಗುರುತಿಸುತ್ತಿದ್ದೆವು. ಹಾಗೆಯೇ ಶೇ. 90ಕ್ಕೂ ಮಿಕ್ಕಿದ ಹಸು-ಎಮ್ಮೆಗಳು ಕರುಹಾಕುವಾಗ ಬೀಳುವ ತಮ್ಮದೇ ದೇಹದ ಮಾಸು (ಕಸ) ತಿನ್ನಲು ಹಪಹಪಿಸುತ್ತವೆ. cows-garbageಹೀಗೆ ತಿಂದರೆ ಹಾಲು ಖೋತಾ ಆಗುತ್ತದೆ ಎಂಬ ನಂಬುಗೆಯ ಮೇರೆಗೆ ಅವು ಅದನ್ನು ತಿನ್ನದಂತೆ ಕಾಯುತ್ತಾರೆ. ರಾತ್ರಿವೇಳೆ ಕರುಹಾಕಿದರೆ ತಿನ್ನದಿರಲಿ ಎಂದು ಎಚ್ಚರಿಕೆವಹಿಸಿ ಎರಡೆರಡು ಕಡೆಯಿಂದ ಹಗ್ಗ ಕಟ್ಟಿದರೂ ಕೆಲವು ಹಸುಗಳು ಏನಾದರೂ ಸರ್ಕಸ್ ಮಾಡಿ ತಿಂದುಬಿಡುತ್ತವೆ. ಅಷ್ಟೇ ಅಲ್ಲದೆ ಕರುಹಾಕಿದಾಗ ಕರುವಿನ ಮೈಮೇಲಿನ ಪೊರೆಯನ್ನು ಕೆಲವು ಹಸುಗಳು ನೇರವಾಗಿಯೇ ನೆಕ್ಕಿ ಸಾಫು ಮಾಡುತ್ತವೆ. ಇನ್ನು ಕೆಲವು ಹಸುಗಳಿಗೆ ಹಾಗೆ ನೆಕ್ಕಲಿ ಎಂದು ಕರುವಿನ ಮೈಮೇಲೆ ಭತ್ತದ ತೌಡುಹಾಕಬೇಕಾಗುತ್ತದೆ. ತಮ್ಮದೇ ಕರುಗಳ ಕಂದಿಯನ್ನು ಸಹಜವಾಗಿಯೇ ತಾಯಿಹಸು ಮತ್ತು ಎಮ್ಮೆಗಳು ತಿನ್ನತ್ತವೆ. ಕರುಹಾಕಿದ ವೇಳೆಯಲ್ಲಿ ಕರುಗಳ ಕಾಲಿನ ಎಳೆಗೊರಸುಗಳ ಮೇಲ್ಪದರವನ್ನು ಉಗುರಿನಿಂದಲೋ, ಹಲ್ಲುಕತ್ತಿಯಿಂದಲೋ ಚಿವುಟಿತೆಗೆದು ಅದನ್ನು ತಾಯಿಹಸು/ಎಮ್ಮೆಗೇ ಕೊಡುತ್ತಾರೆ. ಹಾಗೆಯೇ ಕರುಗಳು ಮಣ್ಣು ತಿನ್ನುವುದು ಸಾಮಾನ್ಯ. ಕೆಲವೊಮ್ಮೆ ಈ ಚಾಳಿ ದೊಡ್ಡವಾದ ಮೇಲೂ ಮುಂದುವರೆಯಬಹುದು.

ಈ ಮೇಲಣ ವಿಲಕ್ಷಣ ಆದರೆ ಸಹಜ ಆಹಾರಾಸಕ್ತಿಗಳಲ್ಲದೆ ಇನ್ನು ಕೆಲವೊಂದು ಕಡೆ ಉಳುವ ಜಾನುವಾರುಗಳಿಗೆ ಚೆನ್ನಾಗಿ ಮೈಬರಲಿ ಎಂಬ ಉದ್ದೇಶದಿಂದ ಅವುಗಳು ಬಾಯರು ಕುಡಿಯುವ ಬಾಣೆಗೆ ರಾತ್ರಿ ಉಚ್ಚೆ ಹೊಯ್ದು ಅವು ಕುಡಿಯುವಂತೆ ಮಾಡುವುದುಂಟು. ಈ ರೂಢಿ ಅಧಿಕವಾಗಿ ಕಾಣುವುದು ಕೋಣಗಳಿಗೆ ಸಂಬಂಧಿಸಿದಂತೆ. ಉಳುವ ವೇಳೆ ಉಳುವಾತನೇ ಉಳುಮೆ ನಿಲ್ಲಿಸಿ ಅವುಗಳ ಬಾಯಿಗೆ ಉಚ್ಚೆ ಹೊಯ್ಯುವ ರೂಢಿಯನ್ನು ನಾನೂ ಸಾಮಾನ್ಯವಾಗಿ ಕಂಡಿದ್ದೇನೆ. ಹೀಗೆ ಮೂತ್ರ ಕುಡಿದ ಜಾನುವಾರುಗಳು ಆ ರೂಢಿಯಿಲ್ಲದವರ cattle-feedಮನೆಗೆ ಹೋದಾಗ ಮೈತೆಗೆಯುತ್ತವೆಯೆಂದೂ ಹೇಳಲಾಗುತ್ತದೆ. ಆ ಕಾರಣಕ್ಕಾಗಿ ಈ ಮೂತ್ರ ಕುಡಿಸುವ ರೂಢಿಯನ್ನು ಯಾರೂ ಮುಕ್ತವಾಗಿ ಹೇಳಿಕೊಳ್ಳೋದಿಲ್ಲವಂತೆ. ಉಳುವ ಜಾನುವಾರುಗಳ ಖರೀದಿಯಲ್ಲಿ ಅವುಗಳ ಮೈಗೆ (ದಪ್ಪಕ್ಕೆ) ಪ್ರಾಶಸ್ತ್ಯ ನೀಡುವುದರಿಂದ ಇದೊಂದು ಗೌಪ್ಯತಂತ್ರ. ಆಹಾರಕ್ಕೆ ಸಂಬಂಧಿಸಿದಂತೆ ಈ ವಾಸ್ತವದ ಅರಿವಿನ ನಡುವೆಯೂ ಮೀನು ತಿಂದು ತೊಳೆದ ಪಾತ್ರೆಯ ನೀರನ್ನಾಗಲೀ, ಮೀನು ಕುದಿಸಿದ ಪಾತ್ರೆಯ ನೀರನ್ನಾಗಲೀ ಜಾನುವಾರುಗಳ ಬಾಯರಿಗೆ ಸೇರಿಸುವುದಿಲ್ಲ. ಅವು ಮೂಳೆಯನ್ನು ಕಡಿಯುವುದು, ಮಾಸು ತಿನ್ನುವುದರ ಅರಿವಿದ್ದೂ, ತಾವು ತಿನ್ನುವ ಮಾಂಸದ ಸಾರಿನ ಉಳಿಕೆಯನ್ನು ಅವುಗಳು ತಿನ್ನುವ ಆಹಾರದೊಂದಿಗೆ ಸೇರಿಸುವುದಿಲ್ಲ. ಆದರೆ ತರಕಾರಿ ಸಾರು, ಅಕ್ಕಿ, ಅನ್ನದ ನೀರನ್ನು ಧಾರಾಳವಾಗಿ ಸೇರಿಸಿ ನೀಡುತ್ತಾರೆ. ತಾವು ತಿನ್ನಲು ಕೊಡದೆಯೂ ಕೊಳಕನ್ನು ತಿನ್ನುವ ಹಸುಗಳ ಬಾಯಿಯನ್ನು ಶಾಸ್ತ್ರಗ್ರಂಥಗಳೇ ಅಪವಿತ್ರ ಎಂಬ ಅರ್ಥದಲ್ಲಿ ಹೇಳಿದ ಉಲ್ಲೇಖಗಳು ಸ್ಮೃತಿ, ಪುರಾಣದ ಓದುಗರಿಗೆ ಬರವಣಿಗೆಯ ಮೂಲಕ ಪರಿಚಿತವಾದದು. ಆದರೆ ಜನಸಾಮಾನ್ಯರಿಗೆ ಜೀವನಾನುಭವದ ಮೂಲಕವೇ ಆ ಹೇಳಿಕೆಗಳ ನಿಖರವಾದ ಕಾರಣಗಳು ದಕ್ಕಿವೆ. ಈ ತರಾವರಿ ಆಹಾರಾಸಕ್ತಿಯನ್ನು ಕಣ್ಣಾರೆ ಕಂಡೂ ಅವರಿಗೆ ಹಸುಗಳನ್ನು ಹೇಸದೆಯೇ ಪ್ರೀತಿಸುವುದು ಹೇಗೆಂದು ಗೊತ್ತಿದೆ. ಹಾಗೆ ಯಾಕೆ ಪ್ರೀತಿಸುತ್ತೇವೆ ಎಂಬುದೂ ಗೊತ್ತಿದೆ. ಅದು ಹಾಕುವ ಸೆಗಣಿ, ಎಳೆಯುವ ನೇಗಿಲು, ಕೊಡುವ ಹಾಲು ಎಲ್ಲವೂ ಅವರ ಅನ್ನವೇ ಅಲ್ಲವೇ?

(ಮುಂದುವರೆಯುವುದು…)

ದಾನದ ಪಾತ್ರೆ ಪಂಚೆ ಹಾಗೆಯೆ ಗೋವು : ಗಂಗೆ, ಗೌರಿ,.. ಭಾಗ–7

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್

ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಹೆಗ್ಗುರುತುಗಳೆಂಬಂತೆ ಆಳುವವರ ಚರಿತ್ರೆ ಬರೆಯುವ ಊಳಿಗದ ವಿದ್ವಾಂಸರುಗಳ ಪಾಲಿಗೆ ಇಂದಿಗೂ ಶಾಸನಗಳೆಂದರೆ ಇತಿಹಾಸದ ಅಧಿಕೃತ ಆಕರಗಳು. ಕರ್ನಾಟಕದಲ್ಲಿ ದೊರೆಯುವ ಈ ಪ್ರಭುಕಥನದ ಪರಂಪರೆಯ ಶಾಸನಗಳ ಒಂದು ದೊಡ್ಡ ಭಾಗ ದಾನ ಶಾಸನಗಳದ್ದು! ಹಾಗೆಯೇ ನಮ್ಮ ಪಂಡಿತ ಮಹಾಶಯರುಗಳ ಕಾವ್ಯಗಳಲ್ಲಿಯೂ ದಾನಕ್ಕೆ ಒಂದು ವಿಶೇಷವಾದ ಸ್ಥಾನ. ಒಟ್ಟಿನಲ್ಲಿ ಈ ಎಲ್ಲಾ ನಿರೂಪಣೆಗಳ ಮೂಲಕ ದಾನ ಒಂದು ಮೌಲ್ಯ. “ದಾನ ಕೊಡುವವನು ಸ್ವರ್ಗಕ್ಕೂ, ದಾನವನ್ನು ಪರಿಪಾಲಿಸಿಕೊಂಡು ಬರುವವನು ಅಚ್ಯುತಕಲ್ಪಕ್ಕೂ ಹೋಗುತ್ತಾ”ನೆಂಬ ರೂಢಿ ಪ್ರಜ್ಞೆಯನ್ನು ತಿದ್ದಿತೀಡಿ ಮುಂದುವರೆಸಿಕೊಂಡು ಬಂದ ಸಾಂಸ್ಕೃತಿಕ ಸಂದರ್ಭದಲ್ಲಿ ದಾನದ ಇರುವಿಕೆಯನ್ನು ಅಲ್ಲಗಳೆಯಲಾಗದು. go-pujaಕೊಡುವುದನ್ನು ಮರಳಿಕೊಡಬಾರದಾದಾಗ, ಕೊಡಬೇಕಿಲ್ಲವಾದಾಗ ಅದೆಲ್ಲವೂ ದಾನವಾಗುತ್ತದೆ. ಇಂತಹ ರೀತಿಯಲ್ಲಿ ಮರಳಿ ಕೊಡಬೇಕಿಲ್ಲದಿರುವುದು ನಮ್ಮ ವ್ಯವಸ್ಥೆಯಲ್ಲಿ ಹುಟ್ಟಿನಿಂದಲೇ ಅಂತಹ ಅರ್ಹತೆಯನ್ನು ಪಡೆದಿರತಕ್ಕಂತಹವರೇ ವಿನಹಾ ನಿರ್ಗತಿಕರೋ,ನಿರಾಶ್ರಿತರೋ ಅಲ್ಲ! ಅದು ಸರ್ಕಾರ ತನ್ನ ಜನಪ್ರಿಯ ಯೋಜನೆಗಳ ಭಾಗವಾಗಿ ಆಗಾಗ ಘೋಷಿಸಿಬಿಡುವ ಸಾಲಮನ್ನಾ ಯೋಜನೆಯಂತಲ್ಲ. ಇದೊಂದು ನಿರಂತರ ಮುಂದುವರೆಯುವ ‘ಸಾಂಸ್ಕೃತಿಕ ಫಂಡು’. ಇದಕ್ಕೆ ಮಾನದಂಡ ಹುಟ್ಟು. ಆ ಮೂಲಕ ದಕ್ಕುವ ಪಡೆಯುವ ಹಕ್ಕು/ಪ್ರತಿಗ್ರಹದ ಹಕ್ಕಿದು! ಇಲ್ಲಿಯ ಬಹುಮಟ್ಟಿನ ದಾನಗಳಿಗೂ ಧಾರ್ಮಿಕ ವಿಧಿಗಳಿಗೂ ನಂಟಿದೆ. ಮತ್ತು ಅವುಗಳೂ ಇಚ್ಚಿಸಿ ಕೊಡುವ ದಾನಗಳಾಗಿರದೆ ನಿರ್ದೇಶಿತ ಕಡ್ಡಾಯಾನುಸರಣೆಯ ಸಂವಿಧಾನಗಳು.ಹಾಗಾಗಿ ಇವುಗಳು ಕೊಡುವವನ ಆಯ್ಕೆಗಿಂತ ಪಡೆಯುವವನ ಆಯ್ಕೆ, ಆತನ ನಿರೀಕ್ಷೆಯನ್ನಾಧರಿಸಿದ ನಿರ್ದೇಶನದ ರೂಪಗಳು.

ದಾನ ಎಂದಾಗ ಹಸ್ತಾಂತರವಾಗುವ ವಸ್ತುವಿನ ಹೆಸರಿನಲ್ಲಿಯೇ ದಾನದ ಹೆಸರಿರುವುದರಿಂದ ಅದನ್ನು ಹಾಗೇಯೇ ಕರೆಯುತ್ತಾರೆ. ಉದಾ: – ಕನ್ಯಾದಾನ, ಅನ್ನದಾನ, ಭೂದಾನ, ಗೋದಾನ ಹೀಗೆ ವಸ್ತುರೂಪದಲ್ಲಿ ಕೊಡಲಾಗುವ ಕೆಲವು ದಾನಗಳು ಅದೇ ರೂಪದಲ್ಲಿ ಕರೆಯಲ್ಪಡುತ್ತವೆ. ಅದಲ್ಲದೆ ಈ ವಸ್ತುರೂಪದ ದಾನವಾಗುವ ವಸ್ತುಗಳು ಒಮ್ಮೆಗೆ ಮಾತ್ರ ದಾನವಾಗಿ ಬಳಕೆಯಾಗುತ್ತವೆ ಎಂದೂ ನಂಬಲಾಗುತ್ತದೆ. ಉದಾ:- ಕನ್ಯಾದಾನವು ಪಡೆಯುವವನ ಆಯ್ಕೆ ಅನುಸಾರ ನಡೆದರೂ ಅದು ಬದಲಿವಸ್ತುವಿನ ಮೂಲಕ ದಾನದ ಅಭಿನಯದ ರೂಪದಲ್ಲಿ ನಡೆಯುವುದಿಲ್ಲ. ಆದರೆ ಬಹುಜನರು ಈಗಾಗಲೇ ಸಮ್ಮತಿಸಿ ಆಚರಿಸಿಕೊಂಡು ಬರುತ್ತಿರುವಂತೆ ಕೆಲವು ದಾನಗಳು ಅಭಿನಯರೂಪದಲ್ಲಿ ನಡೆದು ದಾನ ಪಡೆದವನ ತಿಜೋರಿಯ ನಗದಾಗಿ ಪರಿವರ್ತಿಸಲ್ಪಡುತ್ತಿವೆ. ವಿಧಿ ರೂಪದಲ್ಲಿ ಪರಿಹಾರಕ್ಕಾಗಿಯೋ, ಅಭಿವೃದ್ಧಿಗಾಗಿಯೋ ನಡೆಸುವ ಹೋಮ-ಧೂಮಗಳು ‘ಅಡುಗೆಯ ಗುತ್ತಿಗೆಯ’ ತರಹ ಗುತ್ತಿಗೆ ನೀಡಲ್ಪಟ್ಟು, ದಾನದ ಪ್ರಕ್ರಿಯೆಗೆ ಬೇಕಾದ ಸಲಕರಣೆಯನ್ನೆಲ್ಲಾ (ಪುರೋಹಿತರು)ತಾವೇ ತರುವ ತೆರದಲ್ಲಿರುತ್ತವೆ. ಪಾತ್ರೆ, ಪಂಚೆ ಇತ್ಯಾದಿ ವಸ್ತು ರೂಪದ ದಾನಗಳಿಗೆ ಪ್ರತಿಯಾಗಿ ಇಂತಿಷ್ಟು ಹೋಮದ ಖರ್ಚು ಎಂಬಂತೆ ಒಟ್ಟಿಗೆ ‘ಕ್ಯಾಶು ಕಕ್ಕಿಸುವ’ ಈ ಪ್ರತಿಗೃಹಪ್ರವೀಣರು ಹಳೆಯಪಂಚೆ,ಪಾತ್ರೆಗಳನ್ನೇ ಕಾರ್ಯಕ್ರಮದ ಸಂದರ್ಭದಲ್ಲಿ(ಹೊಸಹೋಮಕ್ಕೆ ಹಳೆಸಲಕರಣೆಯನ್ನೆ) ತಂದು ದಾನದ ಅಭಿನಯನಡೆಸಿ, ಮರಳಿ ತಾವೇ ಪಡೆಯುತ್ತಾರೆ.ಇವುಗಳಷ್ಟೇ ಅಲ್ಲದೇ ನಾಗಬನದ ಹೆಸರಲ್ಲಿ ಚಿಕ್ಕ ಪುಟ್ಟ ಸಂಗತಿಗೆಲ್ಲಾ ಬ್ರಾಹ್ಮಣಸಂತರ್ಪಣೆಯ ಕಂಡೀಶನ್ ಹಾಕುವುದು ಸಾಮಾನ್ಯ. ಈ ಊಟದ ಬಾಬ್ತು ಎಡೆಲೆಕ್ಕದಲ್ಲಿ ಹಣವನ್ನು ಪಡೆದು ದಾನವನ್ನು ದಕ್ಕಿತೆನ್ನಿಸುವುದಿದೆ. ಬಹುಶಃ ಈ ನಗದಿನ ಜಗತ್ತಲ್ಲದಿದ್ದರೆ ಅದೇ ಹಳೆಯ ಪಂಚೆ ಪಾತ್ರೆಯನ್ನು ಅವರು ಕೂಡಿಡಬೇಕಾದರೂ ಎಲ್ಲಿ? ಮತ್ತ್ತೆ ಬಟ್ಟೆ ಮಳಿಗೆಗೆ ಮಾರಲಾದೀತೇ? ಪಾತ್ರೆಯಂಗಡಿಗೆ ಹೊತ್ತೊಯ್ಯಲಾದೀತೇ? ಹಾಗೇಯೇ ಊಟವೂ ಹಣದ ರೂಪಕ್ಕೆ ಬಂದರೆ ಅಡುಗೆ,ಊಟ ಎಲ್ಲಾ ಆಯ್ತು ಎಂದು ತಿಳಿದುಕೊಳ್ಳಬಹುದು, ಅದಲ್ಲದೆ ಹಸಿಯದೆ ಉಣಬೇಕಾದರೂ ಹೇಗೆ? ಊಟವನ್ನೇ ಮಾಡಬೇಕೆಂದರೆ ಎಷ್ಟು ಬಾರಿ ಉಣ್ಣಲಾದೀತು?

ದಾನದ ಈ ಮೇಲಿನ ಪ್ರಕಾರಗಳು ಗುತ್ತಿಗೆಯ ಜಗತ್ತಿಗೆ ಸೇರಿ ಕಡಿಮೆ ಗುತ್ತಿಗೆಗೆ ಹರಾಜು ಪಡೆಯುವ ಪೈಪೋಟಿಯ ನಡುವೆ ಸುಲಭವಾಗಿ ಕಾರ್ಯಕ್ರಮವನ್ನು ನಿರ್ವಹಿಸಿಕೊಡುವ ಕಾಂಪಿಟೀಶನ್ ವಾತಾವರಣವೂ ಉಂಟು.ಅದಲ್ಲದೆ ಚೌಕಾಶಿಗೆ ಅವಕಾಶವಿಲ್ಲದಂತೆ ನಿಗಧಿತಬೆಲೆಯಲ್ಲಿ ತಣ್ಣಗೆ ಸ್ವರ್ಗದ ಬಾಗಿಲಿನ ಬೆಳಕನ್ನು ತೋರಿಸಿಬಿಡುವ ದುಬಾರಿವೇದಮೂರ್ತಿಗಳೂ ಇದ್ದಾರೆ!. ಇಂತಹವರ ಜಗತ್ತಿನಲ್ಲಿಯೂ ಕನ್ಯಾದಾನಂತೆಯೇ, ಭೂದಾನ, ಗೋದಾನಗೆಳೆಂಬ ಊಳಿಗಮಾನ್ಯ ದಾನಗಳೆರಡೂ ಇತ್ತೀಚೆಗಿನವರೆಗೂ ವಸ್ತುರೂಪದಲ್ಲಿಯೇ ನಡೆಯುತ್ತಿದ್ದವು. ಭೂಮಿಕೊಡುವವರು ಈ ರಿಯಲ್‌ಎಸ್ಟೇಟ್‌ದಂದೆಯ ಯುಗದಲ್ಲಿ ಕಷ್ಟವಾಗಿರುವ ಕಾರಣಕ್ಕಾಗಿಯೋ, ಕೃಷಿಭೂಮಿ ಪ್ರತಿಗ್ರಹಿಗಳ ಪಾಲಿಗೆ ಆಕರ್ಷಣೀಯವಲ್ಲದ ಕಾರಣಕ್ಕಾಗಿಯೋ ಭೂದಾನಗಳು ಹೆಚ್ಚು ಕೇಳಿಬರುತ್ತಿಲ್ಲ. ಆದರೆ ಗೋದಾನವಂತೂ ಬಹುವಿಧದಲ್ಲಿ ಯಥೇಚ್ಚವಾಗಿ ನಡೆಯುತ್ತಿದೆ. ಬಹುಮುಖ್ಯವಾಗಿ ಈ ದಾನ ನಡೆಯುತ್ತಿರುವುದು ನಾನು ಕಂಡಂತೆ ಸಾವಿನ ಆಚರಣೆಯ 11ನೇ ದಿನದಂದು. ಆಶ್ಚರ್ಯವೆಂದರೆ ಈ ಗೋದಾನವೂ ಈಗ ಗುತ್ತಿಗೆಪದ್ಧತಿಗೆ ಒಳಪಡುತ್ತಿದೆ. cow-donationದನವನ್ನೇ ಕೊಡುವ ಕ್ರಮದ ನಡುವೆ ದನದಿಂದ ಅಭಿನಯ, ದನದ ಹೆಸರಿನಲ್ಲಿ ಅಕ್ಕಿ ತೆಂಗಿನಕಾಯಿಯನ್ನೇ ಇರಿಸಿ ದನದ ಮೌಲು ಪಡೆಯುವ ಕ್ರಮಗಳಷ್ಟೇ ಅಲ್ಲದೆ ಕೊಡುವವರ ಕಿಸೆಯ ಗಾತ್ರಾನುಸಾರವಾಗಿ ಚಿನ್ನ, ಬೆಳ್ಳಿಯ ಹಸು-ಕರುಗಳ ವಿಗ್ರಹಗಳನ್ನೂ ಪಡೆಯುವ ರೂಪದಲ್ಲೂ ನಡೆಯುತ್ತಿದೆ.

ಸಾಮಾನ್ಯವಾಗಿ ಸಾವಿನ ಹನ್ನೊಂದನೇ ದಿನ ಸ್ವಲ್ಪ ಅನುಕೂಲಸ್ಥರು ಮಾತ್ರವೇ ಬ್ರಾಹ್ಮಣನಿಗೆ ಗೋದಾನ ಕೊಡುವ ಈ ಕ್ರಮದಲ್ಲಿ ಕರುವಿರುವ, ಹಾಲು ಕರೆವ ಹಸುವನ್ನು ಕೊಡಬೇಕೆಂಬುದು ವಾಡಿಕೆ. ಈ ವಾಡಿಕೆಯ ಮೇರೆಗೆ ಕೊಡುತ್ತಿದ್ದದು ಮನೆಯಲ್ಲಿಯೇ ಇರುವ, ಇಲ್ಲವೇ ಕೊಂಡುತರುತ್ತಿದ್ದ ದೇಸಿ ತಳಿಯ ಹಸುಗಳನ್ನು. ಅಲ್ಪಮೊತ್ತದ ಹಾಲುಕೊಡುವ, ಕೃತಕಗರ್ಭದಾರಣೆಗೆ ಒಗ್ಗದ ಕಿರುಗಾತ್ರದ ಕರು ಹಾಕುವ, ಅದರಲ್ಲಿಯೂ ಬಿಟ್ಟು ಮೇಯಿಸಬೇಕಾದ ಇವುಗಳು ಯಾರಪಾಲಿಗೂ ಆರ್ಥಿಕತೆಯ ದೃಷ್ಟಿಯಿಂದ ಲಾಭದಾಯಕವಲ್ಲ. ದಾನದ ಹೆಸರಲ್ಲಿ ಅಪರೂಪಕ್ಕೊಮ್ಮೆ ಯಾರೋ ಒಬ್ಬಿಬ್ಬರು ಬಲಾಢ್ಯರಷ್ಟೇ ದಾನಕೊಡುತ್ತಿದ್ದ ಹಿಂದಿನ ಕಾಲದಲ್ಲಿ ಇವುಗಳನ್ನು ಪಡೆಯುವುದು,ಸಾಕುವುದು, ಮೇವು ಹೊಂದಿಸುವುದು ಹೇಗೋ ನಡೆಯುತಿತ್ತು. ಆದರೆ ಯಾವ್ಯಾವುದೋ ಮೂಲದಿಂದ ಹಣಮಾಡಿ, ಸತ್ತವರನ್ನು ಸತ್ತನಂತರ ನೇರವಾಗಿ ಸ್ವರ್ಗಕ್ಕೆ ಕಳುಹಿಸುವ ಪಣ್ಯಾರೋಹಣದ ಮನಸ್ಸು ಹೆಚ್ಚು ಬಲಗೊಳ್ಳುತ್ತಿರುವ ಈ ಕಾಲದಲ್ಲಿ ಗೋದಾನವಾಗಿ ಬರುವ ಈ ‘ಸೊಲಗಿಮಹಾಲಕ್ಷ್ಮೀ’ಯರನ್ನು ಮನೆಗೆ ಕೊಡೊಯ್ದು ತಲೆಮೇಲೆ ಭಾರವನ್ನು ಯಾವ ಬುದ್ಧಿಯಿರುವ ಪುರೋಹಿತ ಹೊತ್ತುಕೊಂಡಾನು? ilayaraja-cow-donationಈ ಸಂಬಂಧವಾಗಿ ಪುರೋಹಿತರು ಹೊಸದಾರಿ ಕಂಡುಕೊಂಡು ನಾಲ್ಕು ಕಾಲಿನ ಹಸುವಿನ ಬದಲು ರಿಸರ್ವ್‌ಬ್ಯಾಂಕಿನ ಮೇಲೆ ಹೆಚ್ಚು ವಿಶ್ವಾಸವಿಡುತ್ತಿದ್ದಾರೆ.

ನನ್ನೂರಿನಲ್ಲಿ ನಡೆದ ಅನೇಕ ದಾನಗಳನ್ನು ಕಂಡು ಅಭ್ಯಾಸವಿದ್ದರೂ ನನ್ನ ಮನೆಯಲ್ಲಿಯೇ ನಡೆದ ಇಂತಹದ್ದೊಂದು ದಾನದ ಪ್ರಸ್ತಾವನೆ, ಪ್ರದರ್ಶನ, ಪ್ರಹಸನವನ್ನು ಹೇಳಿದಲ್ಲಿ ಇದು ಮತ್ತಷ್ಟು ಸ್ಪಷ್ಟವಾಗಬಹುದು. 2008 ರ ಬೇಸಿಗೆಯಲ್ಲಿ ನಡೆದ ಈ ಘಟನೆಗೆ ಪೂರ್ವಬಾವಿಯಾಗಿ ಅಂತಹದ್ದೇ ಪ್ರಹಸನಗಳು ನನ್ನೂರು ಹಾಗೂ ಆಚೀಚೆಗಿನ ಊರುಗಳಲ್ಲಿ ಸಾಕಷ್ಟು ನಡೆದಿವೆ. ಅವುಗಳನ್ನು ನಾನು ಕೇಳಿದ್ದೇನೆ. ನೋಡಿದ್ದೇನೆ. ಆದರೆ ಇದು ನೇರವಾಗಿ ಭಾಗವಹಿಸಿದ ಸುಂದರವಾದ ಅನುಭವ!

ನಮ್ಮ ಮಾವನಾಗಬೇಕಾದ (ಸಂಬಂಧದಲ್ಲಿ ನನ್ನ ಅಮ್ಮನಿಗೆ ದಾಯಾದಿಅಣ್ಣ)ವರೊಬ್ಬರು 2008 ರ ಬೇಸಿಗೆಯಲ್ಲಿ ಸಹಜವಾಗಿಯೇ ಸತ್ತರು. ಎಪ್ಪತ್ತಕ್ಕೂ ಮಿಕ್ಕಿದ ವಯಸ್ಸಿನಲ್ಲಿ ಸತ್ತ ಅವರ ಮಕ್ಕಳು ಆರ್ಥಿಕವಾಗಿ ಸ್ವಲ್ಪ ಅನುಕೂಲಸ್ಥರೇ ಆಗಿದ್ದರು. ಸಹಜವಾಗಿಯೇ ತಂದೆಯ ಉತ್ತರಕ್ರಿಯೆಯನ್ನು ಸ್ವಲ್ಪ ಚೆನ್ನಾಗಿಯೇ ಮಾಡಬೇಕೆಂಬ ಮನಸ್ಸು ಮತ್ತು ತಾಕತ್ತು ಎರಡೂ ಇತ್ತು ಅವರಲ್ಲಿ. ಅಳಿಯಕಟ್ಟಿನ ಕೂಡುಕುಟುಂಬದ ಪದ್ಧತಿಯಂತೆ ಈ ಕ್ರಿಯಾಚರಣೆಗಳು ನಮ್ಮ ಮನೆಯಲ್ಲಿಯೇ ಜರುಗಿದವು. ಹಾಗಾಗಿ ಅದರಲ್ಲಿ ಪಾಲ್ಗೊಳ್ಳುವ ಪೂರ್ಣ ಹೊಣೆಗಾರಿಕೆ ಮತ್ತು ಅವಕಾಶ ನನಗಿದ್ದವು. ಯಥಾಪ್ರಕಾರ ಸುಟ್ಟ ಐದನೇ ದಿನಕ್ಕೆ ಅಲ್ಲಿಂದ (ಅವರ ಹೆಂಡತಿ ಮನೆಯಿಂದ) ಸೊಡ್ಲಿ ಗುಡಿಯ ಬೂದಿ ಒಟ್ಟು ಮಾಡಿಕೊಂಡು ಬೆಳಕಾಗುವ ಮುನ್ನವೇ ತಂದು ಅವರು (ಮೃತರು) ಹುಟ್ಟಿದೂರಿನಲ್ಲಿ ಚಿತೆಯ ಮರು ಆವೃತ್ತಿಯನ್ನು ನಿರ್ಮಿಸಿ ಅದಕ್ಕೆ ಮೋಡ (ತಾರೀಮರದಿಂದ ಮಾಡಿದ ಮಾಡಿನಂತಹ/ಗುಡಿಯಂತಹ ರಚನೆ) ಹಾಕಿ, ಕಾಗೆಗೆ ಕೂಳುಹಾಕುವ ಕೆಲಸಗಳೆಲ್ಲವೂ ಹತ್ತು ದಿನಗಳ ತನಕ ನಡೆದು, ಶುದ್ಧವೂ ನಡೆಯಿತು. ನಮ್ಮಲ್ಲಿ ಬೊಜ್ಜದ ಆಚರಣೆ ಇರುವುದು ಈ ಶುದ್ಧ ಕಳೆದ ಮರುದಿನ ಅಂದರೆ ಹನ್ನೊಂದನೆ ದಿನ. ಸಾವಿನ ಸೂತಕ ಕಳೆದುಕೊಂಡ ಮೇಲೆ ಮಾಡುವ ಅಧಿಕೃತವಾದ ಪಾರಂಪರಿಕ ಕ್ರಮದನ್ವಯದ ಕೊನೆಯ ಊಟವಿದು. ಈ ಊಟಕ್ಕೆ ಮೊದಲು ಸ್ವಚ್ಛಗೊಂಡ ಮನೆಗೆ ಬ್ರಾಹ್ಮಣರನ್ನು ಕರೆಸಿ ಸತ್ತವನ ಸದ್ಗತಿಗಾಗಿ ದಾನಕೊಡುವ ಸಂಪ್ರದಾಯವನ್ನು ಎಂದಿನಿಂದಲೋ ಏನೋ ನಮ್ಮವರು ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ದಾನದ ಕ್ರಿಯೆಗಳು ಅವರವರ ಅಂತಸ್ತಿನ ದ್ಯೋತಕವೂ ಹೌದು. ಬ್ರಾಹ್ಮಣರು ಮನೆಗೆ ಬಂದ ಮೇಲೆ ಕನಿಷ್ಠ ಒಂದಾದರೂ ಹೋಮವಿದ್ದೇ ಇರುತ್ತದೆ. ಇನ್ನು ಸತ್ತವೇಳೆಯಲ್ಲಿ ದೋಷವಿದೆ ಎಂಬ ತಕರಾರುಗಳಿದ್ದಲ್ಲಿ ವಿಶೇಷತೆರನಾದ ದುಬಾರಿ ಹೋಮಗಳೂ ಇದೇ ಸಂದರ್ಭಲ್ಲಿ ನಡೆಯುತ್ತವೆ. ಹಾಗೆಯೇ 11 ನೇ ದಿನದ ಕಾರ್ಯಕ್ರಮವನ್ನು ನಡೆಸುವ ಸಲುವಾಗಿ ಭಟ್ಟರ ಜತೆಗೆ ಮುಂಚಿತವಾಗಿಯೇ ಮಾತಾಡಿ ಬರಲೆಂದು ಸತ್ತವರ ಮಕ್ಕಳಿಬ್ಬರು, ನಾನು ಹಾಗೂ ನನ್ನೊಬ್ಬ ದಾಯಾದಿ ಮಾವ ಹೀಗೆ ನಾಲ್ಕು ಮಂದಿ ಹೋದೆವು.

ಸುಡಲೇಬೇಕಾದ ಹೋಮ, ಮಾಡಲೇಬೇಕದ ದಾನ ಎಂಬ ಸಾಮಾನ್ಯ ವಿಭಾಗದಡಿ ಬರುವ ಹನ್ನೊಂದರ ಕಾರ್ಯಕ್ರಮದ ಪುರೋಹಿತ ಕರ್ಮದ ಕುರಿತು ಮೊದಲು ಮಾತಿಗೆ ಕುಳಿತೆವು. ಈ ಮಾತುಕತೆ ಶುದ್ಧ ಚೌಕಾಶಿಯದೇ ಆಗಿತ್ತು. ಮತ್ತು ಈಗಾಗಲೇ ಮೇಲೆ ಹೇಳಿದಂತೆ ಗುತ್ತಿಗೆಯ ಮಾದರಿಯದಾಗಿತ್ತು. ಒಂದು ಹೋಮ ಸುಟ್ಟು ದೀಪದ ದಾನ ಮುಂತಾದ ಪರಿಕರಗಳನ್ನು ಅವರೇ ತರುವುದಕ್ಕೆ ಸಂಬಂಧಿಸಿದಂತೆ ಐದು ಸಾವಿರ ರೂಪಾಯಿಗಳ ಮಾತಾಯಿತು. ಈ ಮಾತುಗಳು ಮುಗಿದ ಮೇಲೆ ಭಟ್ಟರು ಗೋದಾನ ಮಾಡಿದರೆ ಒಳ್ಳೆಯದು, ಏನು ಮಾಡುತ್ತೀರಿ? ಎಂದರು. ನಮ್ಮ ಜತೆಯಲ್ಲಿದ್ದ ಸತ್ತವರ ಮಕ್ಕಳಿಬ್ಬರು ‘ಅಪ್ಪಯ್ಯನಿಗೆ ಒಳ್ಳೆಯದಲ್ದ? ಮಾಡುವಾ’ಎಂದರು. ಇಲ್ಲಿಂದ ಮುಂದೆ ನಿರೂಪಣೆಗೊಂಡದ್ದು ಭಟ್ಟರ ಗೋದಾನದ ಕಂಡೀಶನ್‌ಗಳು. ಆ ಇಡಿಯ ಮಾತುಗಳ ಸಾರಾಂಶವೇನೆಂದರೆ- “ಊರದನಗಳು ಬೇಡ, ಹಟ್ಟಿಯಲ್ಲಿ ಅವುಗಳನ್ನು ಕಟ್ಟಿಕೊಳ್ಳಲು ಜಾಗ ಇಲ್ಲ, ಊರೆಲ್ಲಾ ಹುಡುಕಿ ತರುವುದು ನಿಮಗೆ ಸದ್ಯ ಸ್ವಲ್ಪ ಕಷ್ಟವೇ. ಹಾಗಾಗಿ ತಮ್ಮ ಹಟ್ಟಿಯಲ್ಲಿಯೇ ಇರುವ ಹಸುವಿಗೆ ಅದರ ಮೌಲ್ಯ ಕೊಟ್ಟು, ದಾನವಾಗಿ ಕೊಡಬಹುದು. ಸಮಸ್ಯೆಯೆಂದರೆ ಅದನ್ನು ಬೇರೆಯವರು ಹೊಡೆದುಕೊಂಡು ಬರಲು ಕಷ್ಟ. ತಮ್ಮ ಮನೆಯಾಳಿಗೆ ಕೆಲಸ ಇದೆ. ಹಾಗಾಗಿ ದಾನವನ್ನೂ ಇಲ್ಲಿಯೇ ತಮ್ಮ ಮನೆಯೆದುರಲ್ಲಿಯೇ ನಡೆಸಿ ಬಿಡುವ, ಭಟ್ಟರ ಮನೆಗೆ ಬಂದು ದಾನ ನೀಡಿದರೆ ಒಳ್ಳೆಯದೆ. ತೊಂದರೆ ಏನೂ ಇಲ್ಲ.” ಈ ಪ್ರಸ್ತಾವನೆಯಲ್ಲಿ ಮೌಲಿನ ನಿಖರತೆ ಇರಲಿಲ್ಲ. ಮತ್ತು ಹಸುವನ್ನು ಬೊಜ್ಜದ ಮನೆಗೆ ತಾರದೆಯೇ ಭಟ್ಟರ ಮನೆಯಲ್ಲಿಯೇ ನೀಡಬಹುದು ಎಂಬ ಅದ್ಬುತ ಪ್ರಸ್ತಾಪವಿತ್ತು! ಮೌಲ್ಯಕ್ಕೆ ಸಂಬಂಧಿಸಿ 6-8 ಸಾವಿರದ ಬೆಲೆಬಾಳುವ ಆ ಹಸುವಿನ ಬೆಲೆಯನ್ನು ಚರ್ಚೆಗೆ ತಾರದೇ ಒಂದು ಮೌಲ್ಯದ ನಿಖರತೆಯನ್ನು ನೀವೇ ಹೇಳಿಬಿಡಿ ಎಂದು ನಾವು ಚೌಕಾಶಿಗಿಳಿದೆವು. ನಮ್ಮ ಮಾತಿನ ಒಳಾರ್ಥ ಮಾಡಿಕೊಂಡ ಭಟ್ಟರು ಮಾರುಕಟ್ಟೆಯ ಧಾರಣೆಬಿಟ್ಟು ಮೂರುಸಾವಿರ ಕೊಡಿ ಎಂದೂ ಕೊನೆಗೆ ತಾವೇ ಕೇಳಬೇಕಾಯಿತು. ಆದರೆ ಹಸುವನ್ನು ಸಾವಿನ ಮನೆಗೆ ತಾರದೆ ದಾನಮಾಡುವ ಯೋಜನೆಗೆ ನಮ್ಮ ಸಮ್ಮತಿ ಇರಲಿಲ್ಲ. “ಹಸುವಿನ ಮೈಮೇಲೆ 33 ಕೋಟಿದೇವತೆಗಳು ಖಾಯಂ ನೆಲೆಗೊಂಡು, ಅದು ಪಾದ ಊರಿದ ಜಾಗ ಪುನೀತವಾಗುತ್ತದೆ, ಎಷ್ಟೆಷ್ಟೋ ಪುಣ್ಯಗಳೆಲ್ಲವೂ ಸಂದಾಯವಾಗುತ್ತವೆ” ಎಂದು ದಾನ ಪಡೆಯುವ ವೇಳೆ ಅವರೇ ಹೊಡೆಯುತ್ತಿದ್ದ ಡೈಲಾಗ್‌ಗಳ ಸಾರಾಂಶವನ್ನು ನೆನೆದು ಹಸುವನ್ನು ನಿಮ್ಮ ಆಳಿನ ಮೂಲಕ ನಮ್ಮ ಮನೆಗೆ ತಂದೇ ತೆಗೆದುಕೊಂಡು ಹೋಗಿ ಎಂಬ ನಿರ್ಧಾರಕ್ಕೆ ಒಪ್ಪಿಸಿದೆವು. ಕೊನೆಗೂ ನಮ್ಮ ಮಾತಿನಂತೆಯೇ ದಾನದ ನಟನೆಗಾಗಿ ಅವರ ಮನೆಯ ಹಟ್ಟಿಯಲ್ಲಿದ್ದ ಸಂಕರತಳಿಯ (ಕ್ರಾಸ್‌ಬ್ರೀಡ್) ಹಸುವನ್ನು cow-donation-2ದಲಿತಸಮುದಾಯಕ್ಕೆ ಸೇರಿದ ಮನೆಯ ಆಳುಮಗನೊಬ್ಬ್ಟನ ಮೂಲಕ ಬೊಜ್ಜದ ಮನೆಗೆ ಹೊಡೆದುತರುವ ಕುರಿತು ಒಪ್ಪಿದರು.

ದನ ನಾಲ್ಕು ಫರ್ಲಾಂಗು ದೂರಕ್ಕೆ ಆಳುಮಗನ ಜತೆಯಲ್ಲಿ ನಡೆದು ಬಂದು ಮನೆಯೆದುರಿಗಿನ ಅತ್ತಿ ಮರಕ್ಕೆ ಬಿಗಿಯಲ್ಪಡುತ್ತಿದ್ದಂತೆಯೇ ಮೂರ್‍ನಾಲ್ಕು ಮಂದಿ ಭಟ್ಟರುಗಳನ್ನು ಹೇರಿಕೊಂಡು ಅವರ ಓಮಿನಿವ್ಯಾನು ಬೊಜ್ಜದ ಮನೆಯ ವಿಧಿಗಾಗಿ ಬಂದು ತಲುಪಿತು. ಮನೆಯೊಳಗೆ ನಡೆಯಬೇಕಾದ(?) ಹೋಮಸುಟ್ಟು ಆ ಬೆಂಕಿಯೆದುರಿಗೆ ಎಳ್ಳುಕಾಳು, ದೀಪ, ಪಾತ್ರೆ, ಚಾಪೆ, ಬಟ್ಟೆ ಫಲ, ಸಸಿ, ಮೆಟ್ಟು ……… ಹೀಗೆ ಏನೇನೋ ದಾನ ನಡೆದು ಅದರೊಂದಿಗೆ ದಕ್ಷಿಣಿಯೂ ಹರಿದ ಮೇಲೆ ಕೊನೆಯ ದಾನದ ವಿಧಿಗಾಗಿ ಮನೆಯೆದುರಿಗೆ ಕರುಸಮೇತವಾಗಿ ದನವನ್ನು ತಂದು ನಿಲ್ಲಿಸಲಾಯಿತು. ಅಸ್ಪ್ರಶ್ಯ ದಲಿತ ಸಮುದಾಯಕ್ಕೆ ಸೇರಿದ ಆಳುಮಗ ದನವನ್ನು ಅಂಗಣದವರೆಗೆ ತಂದನಾದರೂ, ದಾನ ಕೊಡುವವೇಳೆ ಅಂಗಣದಲ್ಲಿ ಹಸುವಿನ ಬಳ್ಳಿ ಹಿಡಿದುದು ಆತನಾಗಿರಲಿಲ್ಲ!

ಗೋದಾನ ಕೊಡುವ ವೇಳೆ ದಾನಿಗಳಾದ ಸತ್ತವನ ಹೆಂಡತಿ, ಮಕ್ಕಳನ್ನು ಗೋವಿನ ಸುತ್ತ ಪ್ರದಕ್ಷಿಣೆ ಬರುವಂತೆ ಹೇಳಿ, “ಗೋವಿನ ಉಪಸ್ಥಿತಿ, ಗೋಪಾದ ಸ್ಪರ್ಶದ ಫಲಿತ, ಗೋದಾನದಿಂದ ಸತ್ತವನ ಆತ್ಮಕ್ಕೆ ಆಗುವ ಸದ್ಗತಿ ಇತ್ಯಾದಿ”ಗಳನ್ನು ನಿರ್ವಿಕಾರವಾಗಿ ಹೇಳುತ್ತಿರುವ ಭಟ್ಟರನ್ನು ಕಂಡರೆ ತಮ್ಮ ಮನೆಯೆದುರಲ್ಲಿಯೇ ದಾನಕೊಟ್ಟು ಮುಗಿಸಿ ಅಂದವರು ಇವರೇನಾ? ಎಂಬ ಅನುಮಾನ ಬರಬೇಕು! ಅಷ್ಟು ನಿರರ್ಗಳವಾಗಿ ಗೋವಿನ ಪುಣ್ಯಕಥನವಾದಮೇಲೆ, ದಾನದ ಹಸುವಿನ ಬಾಲದಿಂದ ಹಿಡಿದು ಕಾಲು,ತಲೆ,ಕಿವಿ,ಕಣ್ಣು ಹೀಗೆ ಅಂಗಭಾಗಗಳೆಂದು ಗುರುತಿಸಲಾಗುವವುಗಳಲ್ಲಿ ಯಾವುದನ್ನೂ ಬಿಡದೆ ಅವುಗಳನ್ನೆಲ್ಲಾ ಮುಟ್ಟಿಸಿ ದಕ್ಷಿಣೆಯ ರೂಪದಲ್ಲಿ ನೋಟುಗಳನ್ನು ಹಾಕಲು ನಿರ್ದೇಶನ ನೀಡಿದರು. ಕೊನೆಗೆ ಕರು-ಹಸುಗಳನ್ನು ತನಗೆ ಹಸ್ತಾಂತರಿಸುವ ಅಭಿನಯ ನಡೆಸಲು ಹೇಳಿ ಅದಕ್ಕೆ ಸಂಬಂಧಿಸಿದ್ದೆಂಬಂತೆ ಮಂತ್ರೋಚಾರಣೆ ಮಾಡಿದರು. ಪುನಃ ಇಡಿಯಾದ ಗೋವನ್ನು (ಮೊದಲಿನದು ಬಿಡಿಬಿಡಿ ದಕ್ಷಿಣೆ) ಕೊಡುವಾಗ ದಾನದ ಜತೆಗೆ ದಕ್ಷಿಣೆಯಾಗಿ 101 ರೂಪಾಯಿಗಳನ್ನು ಕೊಡುವಂತೆ ಆದೇಶಿಸಿ ಅದರಂತೆಯೇ ಪಡೆದುಕೊಂಡರು. ಇಷ್ಟೆಲ್ಲಾ ಮುಗಿದ ಮೇಲೆ ಅಂಗಣದಿಂದ ಮೇಲಕ್ಕ್ಕೆಬ್ಬಿದ ಹಸುವನ್ನು ಹೊಡೆದುತಂದ ಮನೆಯಾಳು ಭಟ್ಟರ ಮನೆಗೆ ಹೊಡೆದುಕೊಂಡು ಹೋದ. ಹೊಸದಾದ ಮೊದಲ ಗೋದಾನದಂತೆ ಅದ್ಭುತ ಅಭಿನಯಕ್ಕೆ ಮಾಧ್ಯಮವಾದ ಈ ಹಸು ಅದಾಗಲೇ 4-5 ಬಾರಿ ಅಂತಹದೇ ಅಭಿನಯವನ್ನು ಯಶಸ್ವಿಯಾಗಿ ಅದೇ ವರ್ಷ ಮುಗಿಸಿಯಾಗಿತ್ತು. ಪಾಪ ಪಶುವೇನ ಬಲ್ಲುದು?. ತಾನು ದಾನದ ಸರಕಾದುದಾಗಲೀ, ಪರ್‍ಯಾಯದ ದಾರಿಯಾದುದಾಗಲೀ ಆ ಮೂಕ ಪ್ರಾಣಿಗೆ ಏನು ಗೊತ್ತು? ಪುಣ್ಯ ಹೊತ್ತು ತಂದಿದ್ದೇನೆಂದು ತನ್ನೆದುರಲ್ಲಿಯೇ ಬಡಬಡಾಯಿಸುತ್ತಾ ತನ್ನನ್ನು ಎಂಟು ಫರ್ಲಾಂಗು ನಡೆಸಿ, ಮರದಡಿಯಲ್ಲಿ ಕಟ್ಟಿಸಿದ ಪುರೋಹಿತರಿಗೆ ದುಡ್ಡು ದುಡಿಯುವ ಹಳೆಯ ಪಾಣಿ ಪಂಚೆ,ಪಾತ್ರೆಯತೆಯೇ ತನಗರಿವಿಲ್ಲದೇ ಅದು ಪರಿವರ್ತತವಾಗಿತ್ತು. ಒಂದೇ ಹಸು ಒಬ್ಬನೇ ಬ್ರಾಹ್ಮಣನಿಗೆ ಒಂದೇ ವರ್ಷದಲ್ಲಿ ನಾಲ್ಕಾರು ಬಾರಿ ದಾನವಾಗುವ ಮೂಲಕ, ನಾಲ್ಕಾರು ಪುಣ್ಯಾತ್ಮರ ಸ್ವರ್ಗಾರೋಹಣ ದಾರಿಯಲ್ಲಿನ ವೈತರಣಿ ಎಂಬ ಭೀಕರ ನದಿಯನ್ನು ದಾಟಿಸುವ ಸೇತುವೆಯಾಗಿ ಅದು ಮಾರ್ಪಟ್ಟಿತ್ತು! ಅಂತೂ ದಾನ ಮುಗಿಸಿ ಹಸು ಮರಳಿತು.

ಇತ್ತ ಬೊಜ್ಜದ ಬಾಬ್ತು ತಾನು ಮಾಡಿಕೊಂಡ ಗುತ್ತಿಗೆಯಂತೆ ಐದುಸಾವಿರವನ್ನು, ಹಸುವಿನ ಮೌಲಾಗಿ ಮೂರುಸಾವಿರವನ್ನು ನಗದಾಗಿ ಅದೇ ಕ್ಷಣದಲ್ಲಿ ಪಡೆದುದಲ್ಲದೆ ದಾನ್ಯದಾನ, ಫಲದಾನ, ತಂಡುಲದಾನ, ತೈಲದಾನ, ಸಸಿದಾನ ಇನ್ನೂ ಏನೇನೋ ದಾನವೆಂಬ ವಿಪರೀತ ಮಾರ್ಗಗಳಲ್ಲಿ ಸಂಗ್ರಹಿಸಿದ ಅಕ್ಕಿ, ತೆಂಗಿನಕಾಯಿ ಮುಂತಾದುವುಗಳನ್ನು ಗಂಟುಕಟ್ಟಿ ತಾವು ಬಂದ ಮಾರುತಿ ವ್ಯಾನಿಗೆ ತುಂಬಿದರು. ಅದರ ಜತೆಗೆ ಮತ್ತೊಂದು ಬೊಜ್ಜ/ನಾಮಕರಣ/ಶಾಂತಿ ಅಥವಾ ಯಾವುದಾದರೂ ಹೋಮದ ದಾನದ ಸಂಕೇತವಾಗಿ ಕ್ಯಾಶುಪಡೆಯವ ಸರಕುಗಳಾಗಬಹುದಾದ ತಾವೇ ತಂದ ಪಂಚೆ, ಪಾತ್ರೆಗಳನ್ನು ಚೀಲದೊಳಗಡೆ ತುಂಬಿದರು. ಇಷ್ಟೆಲ್ಲವನ್ನು ಧಾರ್ಮಿಕ ವಿಧಿಯ ಹೆಸರಿನಲ್ಲಿ ಸಂಗ್ರಹಿಸಿಕೊಂಡು ಅವರು ವ್ಯಾನುಹತ್ತಿ ಹಾದಿ ಹಿಡಿಯುತ್ತಿದ್ದಂತೆಯೇ ಮಡಿವಾಳ ಅರಿಷ್ಟವೆಲ್ಲವೂ ಹೊರಟುಹೋದುವು/ಹೋಗಲಿ ಎಂಬ ಸಂಕೇತ ತೋರುವಂತೆಯೋ ಏನೋ ಹಾನದ ನೀರನ್ನು ಅವರು ಹೋದದಾರಿಗೆ ಎಸೆದ. brahma-cow-indiaಮನೆ-ಮನಗಳು ಖಾಲಿಯಾದರೂ ಕೊನೆಗೂ ಮುಗಿಯಿತಲ್ಲ ಎಂದು ನಿರುಮ್ಮಳವಾಗಿ ದಾನದ ವಿಮರ್ಶೆಯಲ್ಲಿ ತೊಡಗಿರುವ ಹೊತ್ತಿನಲ್ಲಿಯೇ, ಭಟ್ಟರ ಮನೆಯಿಂದ ದೂರವಾಣಿ ಕರೆಯೊಂದು ಬಂದೇ ಬಿಟ್ಟಿತು! ಈ ಗಡಿಬಿಡಿಯ ನಡುವೆ ತಮ್ಮ ಭಾಗದ ದಾನದಕ್ಷಿಣೆ ಆದೇಶ ನೀಡಿ, ಪಡೆದುದೆಲ್ಲವನ್ನು ಚೀಲಕ್ಕೆ ತುಂಬುವ ಬರದಲ್ಲಿ ದನವನ್ನು ಹೊಡೆದುಕೊಂಡು ಬಂದವನಿಗೆ ಕೊಡಬೇಕಾದುದನ್ನು ಅವರು ಹೇಳಲು ಮರೆತಿದ್ದರಂತೆ! ಹಾಗಾಗಿ ಆ ಬಾಬ್ತು ಅವನಿಗೆ ನೂರುರೂಪಾಯಿ ಕೊಡಬೇಕೆಂದೂ, ಅದನ್ನು ತಮ್ಮ ಮನೆಗೆ ಮುಟ್ಟಿಸಬೇಕೆಂದು ದೈವಾದೇಶ ಮಾಡಿದರು. ಕೊನೆಗೆ ನಾಗ ಮತ್ತು ಬ್ರಾಹ್ಮಣ ವಾಕ್‌ಪಾಶವನ್ನು ನಿರಾಕರಿಸದವರು ಅವನ್ನೂ ನಿರ್ವಹಿಸಿದರು.

ಈ ಗೋದಾನಕ್ಕೆ ಸಂಬಂಧಿಸಿದಂತೆ ಈ ಲೇಖನ ಸಿದ್ಧವಾಗುತ್ತಿದ್ದ ಹೊತ್ತಿಗೆ (ಎರಡು ದಿನಗಳ ಅವಧಿಯಲ್ಲಿ) ಸಂಭವಿಸಿದ ಎರಡು ಪ್ರತ್ಯೇಕ ಸಂದರ್ಭಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಮೊದಲನೆಯ ಸಂದರ್ಭ ನನ್ನ ಹೆಂಡತಿಯ ಹತ್ತಿರದ ಸಂಬಂಧಿಯ ಗಂಡನ ತಂದೆಯವರಿಗೆ ಸಂಬಂಧಿಸಿದುದು. ಮತ್ತು ಎರಡನೆಯ ಘಟನೆ ತೀರಿಹೋದ ನನ್ನ ತಂದೆಗೆ ಸಂಬಂಧಿಸಿ ಹಳನಾಡಿನಲ್ಲಿ ನಡೆದುದು. ಈ ಎರಡೂ ಸಾವುಗಳು 2010 ರ ಜೂನ್ 12 ರಂದೇ ಘಟಿಸಿದವಾದರೂ, ತಡರಾತ್ರಿಯಲ್ಲಿ ತೀರಿಹೋದ ನನ್ನ ತಂದೆಯ ದಹನಕ್ರಿಯೆ ಮರುದಿನ ನಡೆಸಬೇಕಾಗಿ ಬಂದುದರಿಂದ ಸೂತಕದ ದಿನಗಳು ಹಿಂದುಮುಂದಾಗಿ ಈ ದಾನದ ಘಟನೆಗಳು ಎರಡು ಪ್ರತ್ಯೇಕ ದಿನಗಳಲ್ಲಿ ನಡೆಯುವಂತಾಯಿತು.

ಚಾಲ್ತಿಯಂತೆ ಪುರೋಹಿತರಿಂದ ಮುಂಗಡವಾಗಿ ದಾನದ ಪರಿಕರಗಳ ಬೇಡಿಕೆ ಪಟ್ಟಿಯನ್ನು ಪಡೆದ ನನ್ನ ಅತ್ತಿಗೆಯ ಗಂಡನ ಮನೆಯವರು ಅದರಲ್ಲಿ ನಮೂದಿತವಾದ ಗೋದಾನಕ್ಕೆಂದು ಗೋವನ್ನೇ ಕೊಡುವುದೆಂದು ‘ಪ್ರಾಮಾಣಿಕವಾಗಿ’ ನಂಬಿದರು ಮತ್ತು ಅದಕ್ಕೆಂದೇ ಊರೆಲ್ಲಾ ಹುಡುಕಿ ಊರ ತಳಿಯ ಚಿಕ್ಕ ಹಸುವೊಂದನ್ನು ರೂಪಾಯಿ ಮೂರುಸಾವಿರ ಕೊಟ್ಟು ಖರೀದಿಸಿದರು. ದಾನದ ದಿನ ಉಳಿದೆಲ್ಲಾ ದಾನಗಳು ಮುಗಿದ ಮೇಲೆ, ಗೋದಾನದ ತಾಲೀಮು ನಡೆಯಿತು. ಹಸುವೆಂದರೇನು? ದಾನದ ಮಹತ್ವವೇನು? ಬ್ರಾಹ್ಮಣನು ಅದನ್ನು ಪಡೆದು ತೃಪ್ತನಾಗುವುದರಿಂದ ಮೃತ ಆತ್ಮ ಅನುಭವಿಸುವ ಸದ್ಗತಿಗೆ ಸನ್ಮಾರ್ಗ ಲಭ್ಯವಾಗುವ ರೀತಿ ಹೇಗೆ? ಇತ್ಯಾದಿಗಳನ್ನೆಲ್ಲ ನಿರೂಪಿಸಿ ಅದರ ಕೋಡು-ಕಾಲು-ಬಾಲ ಹೀಗೆ ಅಂಗಾಂಗಗಳಿಗೂ ದಕ್ಷಿಣೆ ಪಡೆದದ್ದಲ್ಲದೇ, ಇಡಿಯ ಗೋವಿನ ಪರವಾಗಿ ಮತ್ತೆ ದಕ್ಷಿಣೆ ಪಡೆದು ವಿಪ್ರರು ಗೋವನ್ನೂ ಸ್ವೀಕರಿಸಿದರು. ದಾನದ ಪುಣ್ಯವನ್ನು ಬಯಸಿ ನೀಡುವವರಿಗೆ ಭ್ರಮನಿರಸನ ಆಗದಿರಲಿ ಎಂದೋ ಅಥವಾ ಮುಂಚಿತವಾಗಿ ಹೇಳಿದ್ದಲ್ಲಿ ಸಮಸ್ಯೆಯಾಗುವುದು ಬೇಡ ಎಂದೋ ದಾನವೆಲ್ಲಾ ಮುಗಿಯುವ ತನಕ ಸುಮ್ಮನಿದ್ದು, ಗೋದಾನವನ್ನೂ ಸ್ವೀಕರಿಸಿದಂತೆ ಮಾಡಿದ ಪುರೋಹಿತರು ದನವನ್ನು ತಮ್ಮ ಹಟ್ಟಿಗೆ ಒಯ್ಯಲು ಸುತಾರಾಂ ಒಪ್ಪಲಿಲ್ಲ. “ಇದನ್ನೆಲ್ಲ ಸಾಕುವುದುಂಟೇ? ಒಟ್ಟಾರೆ ಧರ್ಮ ತಪ್ಪಬಾರದೆಂದು ದಾನ ಹಿಡಿದೆ. ಅದಿರಲಿ ಈ ದನದ ಮೌಲು ಕೊಡಿ, ದನ ನಿಮ್ಮ ಮನೆಯಲ್ಲಿಯೇ ಇರಲಿ” ಎಂದು ರಾಗ ತೆಗೆದರು. ಇದನ್ನು ನಿರೀಕ್ಷಿಸಿರದ ಮತ್ತು ದಾನಕ್ಕೆಂದೇ ಊರೆಲ್ಲಾ ಹುಡುಕಿ ಚೌಕಾಶಿ ಮಾಡಿ ಒಂದು ಸಾಮಾನ್ಯ ದನವನ್ನು ತಂದ, ಊರಿನಲ್ಲಿರುವ ತಮ್ಮ ಹೊಲಮನೆಯನ್ನೇ ನಿಂತುನೋಡುವಷ್ಟೂ ವ್ಯವದಾನವಿರದ ಮನೆಯವರಿಗೆ ಇದು ಹೊಸ ಸಮಸ್ಯೆಯಾಯಿತು. ಮನೆಯ ಹಟ್ಟಿಯನ್ನೇ ಖಾಲಿಮಾಡಿಕೊಳ್ಳುತ್ತಿರುವ ಈ ಗಳಿಗೆಯಲ್ಲಿ ಪುಣ್ಯದ ಸಂಪಾದನೆಗೆಂದು ತಂದ ಈ ನಾಟಿ ಹಸುವನ್ನು ಕಟ್ಟಿಕೊಂಡು ಏಗಬೇಕಾದ ಹೊರೆ ಹೊರಿಸಿದ್ದಲ್ಲದೇ, ಅದರ ಮೌಲು ಕೇಳುವ ಮೂಲಕ ಉಭಯ ಪರಿಯಲ್ಲಿ ಬರೆಯೆಳೆಯುವ ಕೆಲಸ ಮಾಡಿದ ಪುರೋಹಿತರ ನಡೆ ಅವರಿಗೆ ಹಿತವೆನಿಸಲಿಲ್ಲ. ಹಾಗಿದ್ದೂ ಊರಮನೆಯ ನಾಗ, ಬೊಬ್ಬರ್ಯ, ದೈವಭೂತಗಳಿಗೆ ಕಾಯಿ ಒಡೆಯಲು ಬೇಕಾದ ಪುರೋಹಿತರನ್ನು ಕಳೆದುಕೊಳ್ಳಲಾರದೇ ಮತ್ತು ಬರುವಹೊರೆಯನ್ನು ಸ್ವಲ್ಪವಾದರೂ ಕಡಿಮೆಮಾಡಿಕೊಳ್ಳೋಣವೆಂದು ಅಂದಾಜು ಬೆಲೆಯಲ್ಲದ, ಗೋದಾನವೆಂಬ ವಿಧಿಯ ಪರವಾದ ಒಂದು ಮೊತ್ತವನ್ನು ಹೇಳುವಂತೆ ಅವರನ್ನೇ ಕೇಳಿ ಆದೇಶಕ್ಕಾಗಿ ಕಾದರು. ಸಂಕಟಕ್ಕೆ ಬಿದ್ದ ಪುರೋಹಿತರು ದನವನ್ನು ಬೇಡ ಎಂದು ಹೇಳಿದಷ್ಟೇ ಸುಲಭದಲ್ಲಿ ಮೌಲ್ಯವನ್ನು ಹೇಳದಾದರು. ಅದಕ್ಕೆ ಕೊಟ್ಟ ಬೆಲೆಯನ್ನೇ ಕೊಡಿ ಎಂದರೆ ನೀವೇ ಮಾರಿಕೊಳ್ಳಿ ಎಂಬ ಉತ್ತರ ಬಂದೀತೆಂದು ಮುನ್ನೆಚ್ಚರಿಕೆವಹಿಸಿ ಸ್ವಲ್ಪ ದಾಕ್ಷಣ್ಯಪರರಾದ (ಈಗಾಗಲೆ ದಾನವಾಗಿ ಸಾಕಷ್ಟು ಕೊಂಡುದರಿಂದ)ಅವರು ಲೋಕಜ್ಞಾನವನ್ನಾಶ್ರಯಿಸಿ ಅಳೆದೂ ಸುರಿದು 600 ರೂಪಾಯಿ ಕೊಡುವಂತೆ ಆದೇಶ ನೀಡಿದರು. ಪುರೋಹಿತರ ಮಾತಿಗೆ ಎದುರಾಡದೇ, ಆ ಮೊತ್ತವನ್ನು ಕೊಡುತ್ತಲೇ, ದನವನ್ನು ಮುಟ್ಟಿ “ಇದನ್ನು ನಾನು ಪಡೆದಿದ್ದೇನೆ, ದಾನ ಸಂದಾಯವಾಗಿದೆ” ಎಂದು ಅಪ್ಪಣೆ ಕೊಡಿಸಿದರು. ಭಟ್ಟರಿಗಾಗಿ ತಂದ ದನ ಆರುನೂರರ ಅಗ್ಗದಸರಕಾಗಿ ಶೆಟ್ಟರ ಮನೆಯಲ್ಲಿಯೇ ಉಳಿದು ಹೋಯಿತು!

ನನ್ನ ತಂದೆಯ ಬೊಜ್ಜ (11ನೇ ದಿನ)ದ ದಿನದ ಕಥೆ ಇನ್ನೂ ಕುತೂಹಲಕರ.ದಾನಕ್ಕೆಂದು ಪೂರ್ವಭಾವಿಯಾಗಿ ನಮಗೂ ಕೂಡಾ ನನ್ನ ತಂದೆಯಮನೆಯ ಊರಿನ ಪುರೋಹಿತರು ನಾವು ಕೇಳದೆಯೇ ದೀರ್ಘವಾದ ಪಟ್ಟಿಯನ್ನೇ ಕೊಟ್ಟುಬಿಟ್ಟಿದ್ದರು. ಇದು ಪರಿಕರಗಳನ್ನು ತಂದು ಹಣಕೇಳುವ ಬದಲಿಗೆ ಬೇಕಾದುದನ್ನು ನಮ್ಮಿಂದಲೇ ತರುವಂತೆ ನೀಡಲಾದ ಪಟ್ಟಿ. ಆ ದಾನದ ಇಂಡೆಂಟ್ ಹೇಗಿತ್ತೆಂದರೆ ಅದರಲ್ಲಿ ಚಿನ್ನ,ಬೆಳ್ಳಿ,ಕಾಳು,ಕೋಲು,ಚಪ್ಪಲಿ ಇವೆಲ್ಲವುಗಳ ಹೆಸರುಗಳು ಸಂಸ್ಕೃತ-ಕನ್ನಡಗಳೆರಡರಲ್ಲಿಯೂ ಬರೆಯಲ್ಪಟ್ಟಿದ್ದವು. ಬಹುಶಃ ಸಂಸ್ಕೃತ ಅವರಿಗೆ, ಕನ್ನಡ ನಮಗೆ ಎಂಬ ಕಾರಣಕ್ಕಾಗಿರಬಹುದು!? ಈ ಪಟ್ಟಿಯಲ್ಲಿ ‘ಗೋದಾನ ಮತ್ತು ಭೂದಾನದ ಬಾಬ್ತು ದುಡ್ಡು’ ಎಂಬ ಒಂದು ಸಾಲಿನ ಅರ್ಥವಾಗದ ಕನ್ನಡವೂ ಇತ್ತು. ಅಚ್ಚರಿಯೆಂಬಂತೆ ಕಬ್ಬಿಣವನ್ನೂ ದಾನದ ಐಟಂ ಆಗಿ ನಮೂದಿಸಲಾಗಿತ್ತು! ಅವರು ಕೊಟ್ಟ ಪಟ್ಟಿಯಂತೆ ಚಿನ್ನ ಬೆಳ್ಳಿಗಳನ್ನು ಹೊರತಾಗಿಸಿ ಉಳಿದ ಪಾತ್ರೆ, ಪರಡಿ, ಮೆಟ್ಟು, ಕೊಡೆ ಇತ್ಯಾದಿಗಳೆಲ್ಲವನ್ನೂ ಖರೀದಿಸುವುದಾದರೆ ಅವುಗಳ ಬೆಲೆ ಐದು ಸಾವಿರಕ್ಕೂ ಮೀರುತ್ತಿತ್ತು. ಚಿನ್ನ,ಬೆಳ್ಳಿಯನ್ನು ಹೆಸರಿಗೆ ಎಂಬಂತೆ ಖರೀದಿಸಿ, ಪಟ್ಟಿಯಲ್ಲಿ ಸಾಕಷ್ಟು ಖೋತ ಮಾಡಿ ಒಟ್ಟು ಮೂರುಸಾವಿರ ರೂಪಾಯಿಗಳ ದಾನದ ಸರಕನ್ನು ತಂದೆವು. ದಾನ ನೀಡಬೇಕಾದ ದಿನ ಇರುವ ಪರಿಕರಗಳಿಗೆ ಅಕ್ಕಿ-ಕಾಯಿ, ಅದೂ, ಇದು, ಹಾಕಿ ಪುರೋಹಿತರು ಆದೇಶಿಸಿದಂತೆ ನೀಡಿ ಕೃತಾರ್ಥರಾಗುತ್ತಿದ್ದ ನನ್ನ ಬಂಧುಗಳ ಕೈಗೆ ದಾನದ ತರವಾಯದ ದಕ್ಷಿಣೆಗಾಗಿ ಚಿಲ್ಲರೆ ಕಾಸು ಇಕ್ಕುವ ಹೊಣೆಗಾರಿಕೆ ನನ್ನದಾಗಿತ್ತು. ದಾನದ ಪಟ್ಟಿಯಲ್ಲಿನ ಖೋತಾ, ದಕ್ಷಿಣೆಯ ಚಿಲ್ಲರೆ ಕಾಸುಗಳನ್ನು ನೋಡಿಯೇ ಪುರೋಹಿತರ ಆದೇಶಗಳು ಉರುಬು/ತೂಕ ಕಳೆದುಕೊಂಡಿದ್ದವು!

ಸಾಕಷ್ಟು ಗೋದಾನಗಳ ನಾಟಕ ಕಂಡಿದ್ದ ನನಗೆ ಆ ದಾನದ ಬಗ್ಗೆ ಇಂದಿಗೂ ಗೌರವವಿಲ್ಲ. ಅದರ ಜೊತೆಗೆ ದಾನ ಕೊಡುವವನ ಇಷ್ಟಕ್ಕೆ ಬಿಡದೆ ಆದೇಶಿಸಿ ಕಸಿಯುವ ಈ ಕ್ರಮ ಸಾವಿನ ಮನೆಯ ಸಾವಿನ ದುಃಖವನ್ನು ಮರೆಸುವಷ್ಟು ಹಿಂಸೆಯೇ ಸರಿ ಎಂದು ನಂಬಿದವನು ನಾನು. ಈ ಕಾರಣದಿಂದ ಗೋದಾನಕ್ಕಾಗಿ ನಾವು ಗೋವನ್ನೂ ತಂದಿರಲಿಲ್ಲ ಮತ್ತು ಆ ಸಂಬಂಧವಾಗಿ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಹಾಗಾಗಿ ಗೋದಾನ ಬರ್ಖಾಸ್ತುಗೊಂಡಂತೆಯೇ ಎಂದು ನಾನು ಭಾವಿಸಿದ್ದೆ. decorated-bullಆದರೆ ಆಶ್ಚರ್ಯವೆನ್ನುವಂತೆ ದಾನ ಪ್ರಕ್ರಿಯೆ ಇನ್ನೇನು ಮುಗಿಯಿತು ಎನ್ನುವಾಗ, ಅಚ್ಚೇರು (1/2 ಸೇರು) ಬಿಳಿಯಕ್ಕಿ ಹಾಕಿ, ಅದರ ಮೇಲೆ ತೆಂಗಿನಕಾಯಿಯೊಂದನ್ನು ಇರಿಸುವಂತೆ ಹೇಳಿ, ‘ಗೋದಾನದ ಬಾಬ್ತು ಮೌಲು ಹಾಕಿ’ ಎಂದು ಆದೇಶಿಸಿದರು. ನಾಟಕದ ದನವೂ ಇಲ್ಲದೇ, ಗರಿಕೆತೂರಿದ ಸಗಣಿಯನ್ನೇ ಗಣೇಶನೆನ್ನುವಂತೆ ತೆಂಗಿನಕಾಯಿಯಿರಿಸಿದ ಅಚ್ಚೇರುಅಕ್ಕಿ ಇರುವ ಹರಿವಾಣವನ್ನೇ ಗೋದಾನವಾಗಿ ಹೆಸರಿಸಿ, ಮೌಲನ್ನೇ ಮಾಲನ್ನಾಗಿ (ಸರಕನ್ನಾಗಿ) ಪರಿಭಾವಿಸಿ ಪ್ರತಿಗ್ರಹಿಸುವ ಅವರ ಜಾಣ್ಮೆ, ಸರಳತೆ ನನಗೆ ಕೌತುಕ ಮೆಚ್ಚುಗೆಗಳನ್ನು ಉಂಟುಮಾಡಿತು. ಆದರೂ, ‘ರಿಸರ್ವ್ ಬ್ಯಾಂಕ್ ನೋಟಿನ ಮೇಲಿನ ಅವರ ಮಮಕಾರ’ಕ್ಕೆ ಸ್ವಲ್ಪ ಕಡಿವಾಣ ಇರಲಿ ಎಂದು ಕೇವಲ ಐವತ್ತು ರೂಪಾಯಿ ನೋಟನ್ನು ಮಾತ್ರ ಇರಿಸಿದೆ. ಆಚೀಚೆಯವರು ನನ್ನ ಮುಖವನ್ನೊಮ್ಮೆ ನೋಡಿದರು. ನಾನು ಕಸಿವಿಸಿಗೊಳ್ಳಲಿಲ್ಲ. ಜೀವಮಾನದುದ್ದಕ್ಕೂ ಹಸುಕರು ಕಸಗೊಬ್ಬರದ ಜೊತೆಗೆ ಜೀವತೇದ, ಹಸುಕರುಗಳನ್ನು ಚೆನ್ನಾಗಿ ನೋಡಿಕೊಂಡ ಹಾಗೂ ಪ್ರೀತಿಸಿದ ಉಳುಮೆಗಾರನಾದ ನನ್ನಪ್ಪನನ್ನು ಸ್ವರ್ಗಕ್ಕೆ ಕಳುಹಿಸಲು ಈ ಪಾತ್ರೆ ಪರಡಿ ಮತ್ತು ನೋಟುಗಳಿಂದ ಖಂಡಿತಾ ಸಾಧ್ಯವಿಲ್ಲ ಎಂಬ ದೃಢನಿಶ್ಚಯದೊಂದಿಗೆ ಮತ್ತು ಮಣ್ಣಿನಲ್ಲಿ ಹಣ್ಣಾದ ನನ್ನಪ್ಪನಿಗೆ ಮಣ್ಣಿಲ್ಲದ ಸ್ವರ್ಗವೂ ಬೇಡ ಎಂಬ ನಿಲುವಿನೊಂದಿಗೆ ಕೇವಲ ಹುಸಿನಗೆಯೊಂದನ್ನೇ ನಕ್ಕು ಸುಮ್ಮನಾದೆ. ಪುರೋಹಿತರಿಗೆ ಏನು ಅರ್ಥವಾಯಿತೋ? ಗೋದಾನದ ಮೌಲ್ಯವಾಗಿ ಇರಿಸಿದ ಹಣ ಅವರಿಗೆ ನೆಮ್ಮದಿ ನೀಡಿದಂತೆ ಕಾಣದಿದ್ದರೂ, ಅದನ್ನೆತ್ತಿ ಪಂಚೆಗಂಟಿಗೆ ಸಿಕ್ಕಿಸಲು ಅವರು ಮರೆಯಲಿಲ್ಲ. ಅಂತೂ ತೆಂಗಿನಕಾಯಿ, ಅಕ್ಕಿ, ಹಣ ಇರಿಸಿದ ಹರಿವಾಣ ಎತ್ತಿಕೊಡುವಂತೆ ಹೇಳಿ ನನ್ನ ಅಪ್ಪನ ಬೊಜ್ಜದಲ್ಲೂ ಪುರೋಹಿತರು ಗೋದಾನದ ಹೆಸರುಳಿಸಿದರು. ಗೋದಾನವನ್ನು ಒಲ್ಲೆನೆನ್ನುತ್ತಿದ್ದ ನಾನು ನನ್ನವರ ಮೂಲಕ ಐವತ್ತು ರೂಪಾಯಿಯನ್ನು ಹಸ್ತಾಂತರಿಸಿ ಆ ಭಾಷಿಕ ರಚನೆಯನ್ನು ನಿಜಗೊಳಿಸುವಂತಾಯಿತು.

ಕುಟುಂಬಗಳು ಕಿರಿದುಗೊಳ್ಳುತ್ತಾ ಕೃಷಿ ಚಟುವಟಿಕೆಗಳು ಅಂಚಿಗೆ ಸರಿದು ಹಸು ಸಾಕಣೆಯೇ ಕ್ಷೀಣಗೊಳ್ಳುತ್ತಿರುವ ಗಳಿಗೆಯಲ್ಲಿ ವಿಕ್ರಯ ಮತ್ತು ಪಾಲನೆಯ ಬಾಗಿಲುಗಳು ಮುಚ್ಚುತ್ತಾ ಬರುತ್ತಿವೆ. ಈ ನಡುವೆ ಧಾರ್ಮಿಕ ಕಾರಣಕ್ಕಾಗಿ ಇರುವ ಅವಕಾಶದಲ್ಲಿಯೂ ವಿಕ್ರಯಶೂನ್ಯತೆ ಮತ್ತು ತತ್ಪರಿಣಾಮದ ಉತ್ಪಾದನಾ ಶೂನ್ಯತೆಗೆ ಕೊಡುಗೆ ನೀಡುವಂತೆ ಪರಿಕರವನ್ನು ಅಪ್ರಸ್ತುತಗೊಳಿಸಿ ಪದವನ್ನಷ್ಟೇ ಬಳಸುವ ರೂಢಿ ಜಾರಿಗೆ ಬರುತ್ತಿದೆ. ಈ ರೂಢಿಯನ್ನು ವಿಸ್ತರಿಸುತ್ತಾ ತಾಂತ್ರಿಕ ಅನಿವಾರ್ಯವೆನಿಸುವಂತಹ ಸ್ಥಿತಿಯೂ ಸ್ಥಾಯೀಗೊಳ್ಳುತ್ತಿದೆ. ಈ ತಾಂತ್ರಿಕ ಅನಿವಾರ್ಯತೆಯ ನಿರ್ಮಿತಿ ಮತ್ತು ವಿಸ್ತರಣೆಯಲ್ಲಿ ಶ್ರಮವಿಲ್ಲದ ನಿರಂತರ ಆದಾಯದ ಒಳಹರಿವು ಮತ್ತು ಸಂಗೋಪನೆಯ ಹೊಣೆಗಾರಿಕೆಯ ಮುಕ್ತಿಗಳೆರಡೂ ಸಾಧ್ಯವಾಗುತ್ತಿದೆ. ಇದರ ನಿರಂತರತೆಗಾಗಿ ಪರಿಕರಗಳನ್ನು ಅಪ್ರಸ್ತುತಗೊಳಿಸಿಯೂ ಪದವನ್ನು ಬಳಕೆಯಲ್ಲಿ ಇರಿಸುವ ಸಾಂಸ್ಕೃತಿಕ ಹುನ್ನಾರಗಳು ಬೇರೆ ಬೇರೆ ಮಾದರಿಯ ಅಭಿಯಾನಗಳ ಮೂಲಕ ಚಾಲ್ತಿಗೆ ಬರುತ್ತಿವೆ. ಬುದ್ಧ ಕಿಸಾಗೋತಮಿಯಲ್ಲಿ ತರಲು ಹೇಳಿದ ‘ಸಾವಿರದ ಮನೆಯ ಸಾಸಿವೆಯನ್ನು’ ಈ ಯೋಜನೆಯ ಮೂಲಕ ಗುಡ್ಡೆಹಾಕಿಕೊಂಡಂತಿದೆ. ಇಲ್ಲಿಯ ಹಸು ಹುಟ್ಟುವುದಿಲ್ಲ-ಸಾಕಬೇಕಾಗಿಲ್ಲ-ಸಾವಂತೂ ಇಲ್ಲವೇ ಇಲ್ಲ! ಭಾಷೆ ಅಜರಾಮರ ಅಲ್ಲವೇ!?

ಹಸುವಿನ ದಾನ ದಾನದ ಅಭಿನಯವಷ್ಟೇ ಎಂದು ತಿಳಿದೂ ಅದು ತಮ್ಮ ಮನೆಯಲ್ಲಿಯೇ ನಡೆಯಬೇಕೆಂದು ಬಯಸುವ ಆಸ್ತಿಕತೆ, holy-cowಕೊಟ್ಟದ್ದನ್ನು ಪಡೆಯುವ ಬದಲು ಇಂತಹದನ್ನೇ ದಾನವಾಗಿ ಕೊಡಬೇಕೆಂಬ ಆದೇಶ ನೀಡಿ ಕಸಿಯುವುದನ್ನು ದಾನವೆಂದು ಒಪ್ಪಿಸಿರುವುದು, ದಾನ ಕೊಡುವಾಗಲೂ ಮೌಲ್ಯದ ಕುರಿತಾಗಿ ನಡೆಸುವ ಚೌಕಾಶಿಯ ಜಗತ್ತಿನಲ್ಲಿಯ ಆಯ-ವ್ಯಯದ ಪ್ರಶ್ನೆ, ಹಸುವೂ ಕೂಡ ನಿರ್ಜೀವವಾದ ಪಾತ್ರೆ, ಪಂಚೆಯಂತೆ ಸರಕಾಗಿ ಬಳಸಿಯೂ ಭಾವನಾವಲಯವನ್ನು ಆಳುವಂತೆ ನಡೆಸುವ ಅದ್ಭುತ ಕಥನ ಮತ್ತು ನಟನೆ ಇವೆಲ್ಲವೂ ಈ ದಾನದ ಜತೆಗೇ ನಡೆಯುತ್ತಿರುತ್ತವೆ. ಕೊಡುವವರಿಗೂ ಗೊತ್ತಿದೆ ಇದು ನಿರರ್ಥಕವೆಂದು. ಹಾಗೆಯೇ ಪಡೆಯುವವರಿಗೆ ಬಹಳ ಸ್ಪಷ್ಟವಾಗಿ ಗೊತ್ತಿಗೆ ಅವಕಾಶ ಸಿಕ್ಕಾಗ ಬಾಚಿಕೊಳ್ಳಬೇಕು ಎಂದು. ಕೊಡುವ-ಪಡೆಯುವ ಇಬ್ಬರಿಗೂ ಪೂರ್ಣನಂಬಿಕೆಯಿಲ್ಲದೆಯೂ ನಂಬಿಕೆಯ ಜಗತ್ತೊಂದನ್ನು ಆಳುವ ಸರಕಾಗಿ ನಿರೂಪಿತವಾದ ಹಸು ಕಾಲಕಾಲಕ್ಕೆ ತನ್ನ ಚಹರೆಗಳಲ್ಲಿಯೂ ಅನುಕೂಲ ಸಿಂಧುವಾದ ಬದಲಾವಣೆಗಳನ್ನು ಕಂಡಿದೆ. ಒಂದು ಕಡೆಯಿಂದ ದೇಸೀ ತಳಿಯನ್ನು ಉಳಿಸಬೇಕೆಂದು ಹಗಲಿರುಳು ದನಕಾಯುವ ಕಾಯಕದಲ್ಲಿ ಈ ದೇಶದ ಮೇಲಿನ ಭಕ್ತಿ ಸಾಬೀತುಗೊಳ್ಳಬಲ್ಲುದು ಎಂದು ಬೊಬ್ಬೆ ಹಾಕುವವರೇ ದಾನದ ಸರಕಾಗಿ ಹೈಬ್ರೀಡ್‌ಸಂತತಿ (ಸಂಕರ ಸಂತತಿ)ಯ ಮಿಶ್ರತಳಿವನ್ನು ಬಯಸುತ್ತಾ ಊರಹಸುಗಳು ಬೇಡ ಎನ್ನುತ್ತಿದ್ದಾರೆ! ಹಸುವನ್ನು ದಾನಮಾಡಿ ಪುಣ್ಯ ಕಟ್ಟಿಕೊಳ್ಳಬಯಸುವವರೂ ಅದರ ರೇಟಿಗೆ ಸಂಬಂಧಿಸಿ ವ್ಯಾವಹಾರಿಕವಾಗಿಯೇ ಚರ್ಚೆ ನಡೆಸಬಲ್ಲವರು.ಹಾಗೆಯೇ ತಮ್ಮ ಹಟ್ಟಿಗೆ ದಾನದರೂಪದಲ್ಲಿ ಸಾಕಣೆಯ ಹೊರೆ ಬರದಂತೆ (ಊರದನದ ಸಾಕಣೆಯ ಹೊರೆಬೀಳದಂತೆ) ಜಾಗರೂಕತೆವಹಿಸಿ ಬಂಡವಾಳವನ್ನು ಪೀಕಿಕೊಳ್ಳುವಷ್ಟು ಪುರೋಹಿತರೂ ಗಟ್ಟಿಗರೇ.ಇಬ್ಬರಿಗೂ ಗೋವಿನ ಸಾಕುವ ಭಾರಕ್ಕಿಂತ ಅಭಿನಯವೇ ಹೆಚ್ಚು ಅನುಕೂಲಕರ.

ಹಸುವಿನ ಈ ತೆರನಾದ ಅಭಿನಯ ಗೃಹ ಪ್ರವೇಶವೆಂದೇ ಪರಿಚಿತವಾದ ಮನೆಯೊಕ್ಕಲ ವೇಳೆಯಲ್ಲಿಯೂ ನಡೆಯುತ್ತದೆ. ನಗರಕ್ಕೆ ಹೊಂದಿಕೊಂಡ ಹೊಸ ಬಡಾವಣೆಗಳಲ್ಲಿ ಮನೆ ಕಟ್ಟುವವರು ಸಹಜವಾಗಿಯೇ ಪ್ಯಾಕೇಟು ಹಾಲು ನೋಡುವವರು. ಆದರೆ ಅಪಾರವಾದ ಗೋ-ಭಕ್ತರಾದ ಇವರುಗಳಿಗೆ ಮನೆಯ ಸಕಲೈಶ್ವರ್ಯವನ್ನು ಒಳಬರುವಂತೆ ಮಾಡುವ ಹಸುವನ್ನು ಮನೆಪ್ರವೇಶಮಾಡಿಸಿ ಒಂದಿಷ್ಟು ಉಚ್ಚೆ, ಒಂದಿಟ್ಟು ಸೆಗಣಿ ಹಾಕಿಸಿದರೇನೆ ತೃಪ್ತಿ. ಈ ತೃಪ್ತಿಗಾಗಿ ಜೀವಮಾನದುದ್ದಕ್ಕೂ ಖಂಡಿತಾ ಅವರು ಶ್ರಮವಹಿಸಲಾರರು. ಹಾಗಾಗಿಯೇ ಒಂದು ಗಂಟೆಯ ಮಟ್ಟಿಗೆ ಇಲ್ಲಿ ಹಸು ಬಾಡಿಗೆ ಹಸುವಾಗಿ ಮನೆಯೊಕ್ಕಲ ಗೋಪ್ರವೇಶದ ನಾಟಕವಾಡುತ್ತದೆ! ಪಾಪ ಅದೇನು ಆಡೀತು? ನಾವು ಆಡಿಸುತ್ತೇವೆ. ಹೊಸಮಾದರಿಯ ತರಾವರಿ ನೆಲದ ಮೇಲೆ ಕಾಲಿಡುವ ಸಂಕಟದ ಜೊತೆಗೆ ಒಂದು ಕ್ಷಣದಮಟ್ಟಿಗೆ ಏನೇನೋ ತಿನ್ನಿಸಿ ಗೋಭಕ್ತಿ ಮೆರೆಯುವ ಮನೆಯ ವಾರೀಸುದಾರರು,ಹಸುವಿನ ಬಗೆಬಗೆಯ ಬಂಗಿಯನ್ನು ಕ್ಲಿಕ್ಕಿಸುವ ಫೋಟೋಗ್ರಾಫರ್, ವೇದೋಕ್ತವೆನ್ನುವ ಆದರೆ ಹಸುವಿಗೆ ಅರ್ಥವಾಗದ ಮಂತ್ರಪಠಿಸಿ ಆರತಿ ಎತ್ತುವ ಪುರೋಹಿತರುಗಳ ಕರಾಮತ್ತಿಗೆ ಹೆದರಿ ಅದು ಉಚ್ಛೆ-ಸಗಣಿ ಎರಡೂ ಮಾಡಿಕೊಳ್ಳುತ್ತದೆ. ಹಸುವಿನ ಆಕ್ಷಣದ ಭಯವನ್ನೇ ಏನೇನೋ ಆಗಿ ಅರ್ಥೈಸಿ ವಿವರಿಸಿಕೊಳ್ಳಲೆಂದು ಇರಿಸಿಕೊಳ್ಳುವ ಭಾವಚಿತ್ರದ ಹೊರತಾಗಿ ಇವರ್‍ಯಾರೂ ಹಸುಸಾಕಿ ಸೆಗಣಿಮುಟ್ಟಿ ಸುಖಪಡುವವರಲ್ಲ. ಹಸು ಹೊಡೆದುಕೊಂಡು ಬಂದವನಿಗೆ ಆರೋ-ಮೂರೋ ಕಾಸನ್ನು ಭಿಕ್ಷೆಯ ತರಹ ಕೊಟ್ಟುಬೀಗುವ ದೊಡ್ಡವರಿವರು. ನಗರಗಳು ಬೆಳೆದಂತೆ ಇಂತಹ ಗೋವಿನ ನಾಟಕ, ಗೋವಿನ ಮೇಲಿನ ನಾಟಕದ ಪ್ರೀತಿ, ಅಭಿಮಾನ/ದುರಭಿಮಾನ ಎಲ್ಲವೂ ಬೆಳೆಯುತ್ತಿದೆ. ಗೋವಿನ ಸಂಖ್ಯೆ ಮಾತ್ರ ಕರುಗುತ್ತಿದೆ. ಕ್ಷೀರಕ್ಷಾಮವೆಂದರೆ ಇದೇ ಅಲ್ಲವೇ.

(ಮುಂದುವರೆಯುವುದು…)

ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್ : ಗಂಗೆ, ಗೌರಿ,.. ಭಾಗ–6

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್

ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್

ಹಸುವಿನ ಬಗೆಗೆ ಮಾತಾಡುವುದು ಸುಲಭ, ಆದರೆ ಸಾಕುವುದು ಖಂಡಿತಾ ಸುಲಭದ ಕೆಲಸವಲ್ಲ. ಕಂಡವರ ಬೈಗುಳ ತಿನ್ನದೆ, ಆದಾಯ ಮತ್ತು ಬಂಡವಾಳಕ್ಕೆ ಖೋತಾ ಬಾರದಹಾಗೆ ನಿಭಾಯಿಸಿಕೊಂಡುಹೋಗುವಲ್ಲಿ ಸಾಕಷ್ಟು ಕಸರತ್ತು ನಡಸಬೇಕಾಗುತ್ತೆ. ಅಮತಹ ಕಸರತ್ತುಗಳಲ್ಲಿ ಕೋಣ/ಎತ್ತುಗಳ ಬೀಜ ಒಡೆಯುವುದೂ ಒಂದು. ಕೊಬ್ಬಿದ ಕೋಣ,ಎತ್ತುಗಳನ್ನು ಸಕಾಲದಲ್ಲಿ ಬೀಜ ಒಡೆಯದೆ ಹೋದರೆ ಅಪಾಯದ ಜತೆಗೆ ಅವು ನಿರುಪಯುಕ್ತವೂ ಆಗುತ್ತವೆ. ಶೀಲ ಮಾಡುವುದು ಅಥವಾ ಬೀಜ ಒಡೆಯುವುದೆಂದರೆ ಒಂದು ಹೆರಿಗೆ ಮಾಡಿಸಿ ಬಾಣಂತಿ ಸಾಕಿದಷ್ಟು ಸಂಕಟದ ಕೆಲಸ. bulls-castrationಕೈಕಾಲುಕಟ್ಟಿ ಕೆಡೆದು ಇಕ್ಕುಳಗೋಲಿಗೆ ಅವುಗಳ ಕಾಳಿ/ಬೀಜ ಸಿಕ್ಕಿಸಿಕೊಂಡು ನಯವಾದ ಮತ್ತೊಂದು ಕೋಲಿನಿಂದ ನಯವಾಗಿಯೇ ಹೊಡೆದು ಹುಡಿಮಾಡುವ ಮೂಲಕ ನಡೆಸುವ ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಅವುಗಳ ಒದ್ದಾಟ ಕೇಳಬಾರದು. ಈ ಸಂದರ್ಭದಲ್ಲಿ ತರಡಿ(ವೃಷಣ)ನಲ್ಲಿ ಆಗುವ ಗಾಯ,ಆ ಗಾಯದ ಮೇಲೆ ಕೂರುವ ನೊಣ ಮತ್ತು ತಾಗುವ ಸಗಣಿಯಿಂದಾಗಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಹುಳ-ನೆತ್ತರು-ಕಾಗೆಯಕಾಟ-ಕೋಣದ ಸಂಕಟ ಇವುಗಳಿಂದ ಸಾಕಿದವರ ಪಜೀತಿ ಹೇಳತೀರದು. ಹಾಗೆಯೇ ಬೀಜ ಒಡೆಯುವಾಗಲೇ ಅವುಗಳ ಕೊಬ್ಬು ಕರಗಿಸುವ ಸಲುವಾಗಿ ಕಾದ ಕಬ್ಬಿಣದ ಸಲಾಕೆಯಿಂದ ಹಿಂಬಾಗಕ್ಕೆ ಎಳೆಯುವ ಬರೆ/ಚಾಟು ಯಿಂದಲೂ ಅವು ನರಕಯಾತನೆ ಅನುಭವಿಸುತ್ತವೆ. ಹಟ್ಟಿಯಲ್ಲಿ ಕುಳಿತು ಕಾಗೆ ಬಾರದ ಹಾಗೆ ಸ್ವಲ್ಪ ಜಾಗ್ರತೆ ಮಾಡದೇ ಹೋದರೆ ಶೀಲ ಮಾಡಿಸಿದವರು ಶೀಲವಾಗುವ ಸಾಧ್ಯತೆಗಳು ಇರುತ್ತವೆ. ಇಷ್ಟೆಲ್ಲಾ ಸರ್ಕಸ್ಸುಗಳನ್ನು ಮಾಡದೇ ಹೋದರೆ ನೇಗಿಲನ್ನು ಮದರ್ ಇಂಡಿಯಾ ಸಿನೆಮಾದಂತೆ ಅಪ್ಪ-ಅಮ್ಮನ ಹೆಗಲಿಗೋ,ಮಕ್ಕಳ ಹೆಗಲಿಗೋ ಇಡಬೇಕಾಗುತ್ತದೆ.

ಹಸುಗಳನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಂತೆ ಅವು ಸಾಧು ಪ್ರಾಣಿಗಳು. ಈ ಸಾಧು ಎಂಬ ಪದಕ್ಕೆ ಅಂತಹ ಅರ್ಥ ಸಾಧ್ಯತೆಯ ಶಕ್ತಿಯಿದೆಯೋ ಎನೋ ಗೊತ್ತಿಲ್ಲ? ಸಾಕುವವರ ಪಾಲಿಗೆ ಎಲ್ಲಾ ಹಸುಗಳಿಗೂ ಈ ಏಕರೂಪಿಯಾದ ಸಾಧು ಎನ್ನುವ ಮುಗ್ದ,ನಿರುಪದ್ರವಿ ಎಂಬಿತ್ಯಾದಿ ಅರ್ಥ ಬರುವ ಪದ ಸಾರಾಸಗಟಾಗಿ ಅನ್ವಯಿಸುವುದು ಕಷ್ಟ. ಒಂದುವೇಳೆ ಅನ್ವಯವಾಗುತ್ತದೆ ಎಂದು ಅವರು ಬಾಯಲ್ಲಿ ಹೇಳಿದರೂ ಕಾರ್ಯರೂಪದಲ್ಲಿ ಹಾಗಿಲ್ಲವೆಂಬುದು ಸತ್ಯ. ಅದಲ್ಲವಾದರೆ ಅವುಗಳ ಮೇಲೆ ಬಯಲಿನಲ್ಲಿಯೇ ಬಂದೀಖಾನೆಯಲ್ಲಿಟ್ಟಂತೆ ಆಡ್ಬಳ್ಳಿ, ಕುಂಟೆ, ಕಾಲು-ಕುತ್ತಿಗೆಗೆ ಬಳ್ಳಿ ಇತ್ಯಾದಿ ನಿರ್ಬಂಧದ ಪ್ರಯೋಗಗಳನ್ನು ಮಾಡುತ್ತಿರಲಿಲ್ಲ. ವಿಶೇಷವೆಂದರೆ ಈ ಬಹುಮಟ್ಟಿನ ನಿರ್ಬಂಧಗಳು ಹೆಣ್ಣು ಜಾತಿಯ ಹಸುಗಳಿಗೇ ಲಗಾವಾಗುತ್ತಿರುವುದು. ‘ಕಟ್ಬಳ್ಳಿಕುಟ್ದೊಣ್ಣಿ’ ಎಂಬ ನುಡಿಕಟ್ಟೊಂದು ನಮ್ಮಲ್ಲಿ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವುದು. ಎತ್ತಲೂ ಹೋಗದ ಹಾಗೆ ಹಗ್ಗಹಾಕಿ ಮೇವಿಗೆ ಕಟ್ಟುವ ಇಲ್ಲವೇ ಕಟ್ಟಿದಲ್ಲಿಯೇ ಹಿಡಿಹುಲ್ಲು ಹಾಕಿ ಅಲ್ಲಿಯೇ ನಿರ್ಬಂಧಕ್ಕೊಳಪಡಿಸುವ ಕ್ರಮವಿದೆ. ಇದು ಸರಳವಾದ ಶಿಕ್ಷೆ. ಆದರೆ ಇದಕ್ಕಿಂತ ಉಗ್ರವಾದದು ಕೊರಳಿಗೆ ಕುಂಟೆಕಟ್ಟುವುದು (ನಮ್ಮ ನಡುವೆ ಬಹಳ ಉಡಾಫೆ ಮಾಡುವವನಿಗೆ ಮದುವೆ ಮಾಡುವುದನ್ನು ಹೀಗೆ ಕರೆಯುತ್ತಾರೆ). ಹಸುವಿನ ಉಡಾಫೆಯ ತೀವ್ರತೆಯನ್ನು ಆಧರಿಸಿ, tied-cowಅದರ ಸ್ವಭಾವಾನುಸಾರ ಹೀಗೆ ಕಟ್ಟಲಾಗುವ ಕೊರಡಿನ ಗಾತ್ರದಲ್ಲಿ ವೈವಿಧ್ಯವಿರುತ್ತದೆ. ಈ ಕುಂಟೆ ಕಟ್ಟಿದ ಮೇಲೆಯೂ ಹಾರಾಡುವ ಹಸುಗಳು ಕಾಲಿಗೆ ಏಟು ಮಾಡಿಕೊಳ್ಳುವ, ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸ್ಥಿತಿಯೂ ಉಂಟು. ಸಾಮಾನ್ಯವಾಗಿ ಕುಂಟೆ ಕಟ್ಟಲಾಗುವ ಹಸು ಸಾಧುವಾಗಿರುವುದಿಲ್ಲ. ಈ ಹರಾಮಿಗಳು ಯಾರ್‍ಯಾರದೋ ಗದ್ದೆಗೆ ನುಗ್ಗಲು ಬೇಲಿ ತೂರಿಕೊಂಡು ಹೋಗುವಾಗ, ದರೆ ಹಾರುವಾಗಲೆಲ್ಲಾ ಈ ಕುಂಟೆಯಿಂದಾಗಿಯೇ ಅವಗಡಕ್ಕೆ ತುತ್ತಾದುದೂ ಇದೆ. ಯಾಕೆಂದರೆ ಬೆಳೆಗೆ ನುಗ್ಗಿದ ಹಸುವನ್ನು ಪಿಶಾಚಿಯನ್ನು ಅಟ್ಟಿಸಿಕೊಂಡು ಬಂದಂತೆ ಬರುವವರೇ ಹೆಚ್ಚು ವಿನಹಾ, ಯಾರೊಬ್ಬರೂ ‘ಅಮ್ಮಾ ತಾಯಿ ಗೋಮಾತೆ ನಮ್ಮನ್ನು ಕಾಪಾಡು’ ಎಂದು ಕೈ ಮುಗಿದು ಸತ್ಕರಿಸಿ ಕಳುಹಿಸಿದ ಉದಾಹರಣೆಯಿಲ್ಲ. ಹೊಟ್ಟೆಗೆ ಬೀಳುವ ಪೆಟ್ಟಿಗೆ ಮನೆಯ ಹಸುವನ್ನೇ ದಂಡಿಸುವವರು, ಮಿಕ್ಕವರ ಹಸುವನ್ನು ಬಿಟ್ಟಾರೆ.? ಪಶುವೇನ ಬಲ್ಲುದು ಹಸುರೆಂದಳಸುವುದು ಎಂದು ಬಸವಣ್ಣನೇ ಹೇಳಿ ಮುಗಿಸಿದ್ದಾರೆ. ಎಳಸುವ ಹಸುವನ್ನು ಅಯ್ಯೊ ಪಾಪ ಆಸೆಪಟ್ಟಿತು, ಮೂಕಪ್ರಾಣಿಯೆಂಬ ಕರುಣೆಯೊಂದಿಗೆ ಕಾಣಬೇಕೆಂಬ ಬೋಧನೆಯನ್ನೇನೋ ಕೊಡಬಹುದು. ಆದರೆ ಅದು ಪ್ರಾಯೋಗಿಕವೇ? ಹಸುವೆಂದ ತಕ್ಷಣ ಸಾಕುವವರ ಪಾಲಿಗೆ ನಮ್ಮ ಮನೆಯಹಸು ತಾವುಬೆಳೆದಬೆಳೆ ಎಂಬ ಸಹಜ ಭಾವವಿದೆಯೇ ವಿನಹಾ ಸಾರ್ವತ್ರಿಕವಾದ ಒಂದು ಪಡಿಯಚ್ಚು ಇಲ. ಬೆಳೆದ ಬೆಳೆ, ಸಾಕುವ ಹಸುವೆಲ್ಲ ದೇವೆರೆನ್ನಲು ಸಾಧ್ಯವಾಗುವುದು ಬೆಲೆಬೆಳೆಯದ ಮತ್ತು ಒಂದೂ ಹಸುಸಾಕದವರಿಗಿರಬಹುದೋ ಏನೋ?

ಕುಂಟೆ ಕಟ್ಟುವುದರಿಂದಲೂ ನಿಯಂತ್ರಿಸಲಾರದಷ್ಟು ಹರಾಮಿಗಳಾದ ಹಸುಗಳಿಗೆ (ಹೆಚ್ಚಾಗಿ ಎಮ್ಮೆಗಳಿಗೆ) ಮುಂದಿನ ಕಾಲು ಕುತ್ತಿಗೆಗೆ ಸೇರಿಸಿ ಹಗ್ಗ ಕಟ್ಟಿ ತಲೆಎತ್ತಿ ನಡೆಯುವುದಿರಲಿ, ಮೂರೆ ಕಾಲಿನ ನಡಿಗೆಯ ಸರ್ಕಸ್ ಆಗುವಂತೆ ಮಾಡುವ ವಿಶೇಷಶಿಕ್ಷಾ ಕ್ರಮವೊಂದಿದೆ. ಹೀಗೆ ಬಳ್ಳಿ ಹಾಕಿದಾಗಲೂ ಬಿಟ್ಟು ಮೇಯಿಸುವ ವೇಳೆ ಕುಂಟಿಕೊಳ್ಳುತ್ತಲೇ ಬೆಳೆಗೆ ಬಾಯಿಟ್ಟು ಬೆನ್ನಿಗೆ ಬೀಳುವ ಏಟು ತಿಂದುಕೊಂಡು ಅವುಗಳು ಕುಂಟುತ್ತಾ ಓಡುವಾಗ ಅನುಭವಿಸುವ ಸಂಕಟವನ್ನು ನೋಡಬೇಕು. ಇದು ನೋಡುಗರಿಗೆ, ಸಾಕದವರಿಗೆ ಹಿಂಸೆಯೆನಿಸುತ್ತದೆ. ಆದರೆ ಈ ಹಿಂಸೆಯಿಲ್ಲದೆ ಅವುಗಳನ್ನು ಸಾಕುವುದೇ ದುಸ್ತರವೆಂಬುವುದೂ ಅಷ್ಟೇ ನಿಜ. ಮೂಗುದಾರ ಮತ್ತು ಅದಕ್ಕೆ ಹಾಕುವ ಹಗ್ಗ ಸಾಮಾನ್ಯವಾಗಿ ಕಾಣುವ ಶಿಕ್ಷೆ. ಇನ್ನು ಪಕ್ಕದ ಗದ್ದೆಯಲ್ಲಿ ಬೆಳೆಯಿದ್ದು ಉಳುಮೆ ಮಾಡಬೇಕಾದ ಸಂದರ್ಭದಲ್ಲಿ ಮತ್ತು ಬೆಳೆಗದ್ದೆಯ ಅಂಚನ್ನು ಹಾದು ಉಳುವ ಜಾನುವಾರುಗಳನ್ನು ಕೊಂಡೊಯ್ಯಬೇಕಾದ ಸಂದರ್ಭದಲ್ಲಿ ಅವುಗಳು ಬೆಳೆಗೆ ಬಾಯಿ ಹಾಕದಂತೆ ಕುಕ್ಕೆ ಕಟ್ಟುವ ಅಥವಾ ಬಾಯಿತೆರೆಯದಂತೆ ಹಗ್ಗ ಕಟ್ಟುವ ಪದ್ಧತಿಯಿದೆ. ಸಾದುಪ್ರಾಣಿಗೆ ಈ ಮಾದರಿಯ ಶಿಕ್ಷೆಗಳ ಅಗತ್ಯವಿದೆಯೇ?

ಕಲ್ಲಿನದೇವರೂ ಬೇಡುವ ಹಾಲು ‘ಅಮೃತಸದೃಶ’! ಅಂತಹ ಹಾಲನ್ನು ಕೊಡುವ ಹಸು ದೇವಲೋಕದ ಕಾಮಧೇನು ಎಂದೆಲ್ಲಾ ಅಂಬೋಣಗಳಿವೆಯಾದರೂ ಯಾವ ಹಸುವೂ ನನಗೆ ತಿಳಿದ ಮಟ್ಟಿಗೆ ತಂಬಿಗೆ ತೆಗೆದುಕೊಂಡು ಹೋದ ತಕ್ಷಣ ಜರ್ರನೆ ಹಾಲು ಸುರಿಸಿಬಿಡುವುದಿಲ್ಲ. ಹುತ್ತಕ್ಕೆ ಹಾಲೆರೆದಂತೆ ಹಸುವಿಗೆ ಲಗತ್ತುಗೊಂಡ ಜನಪದ ಐತಿಹ್ಯಗಳು ಹೇರಳವಾಗಿ ಸಿಗುತ್ತವೆಯಾದರೂ ಅದು ಹಾಲು ಸೂಸುವ ಸಹಜ ಪ್ರವೃತ್ತಿ ತೋರುವುದು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಎಳೆಯ ಕರುವಿಗೆ ಮಾತ್ರ. ಹಟ್ಟಿಗೆ ಕರೆಯಲು ಹೋಗುವ ಮುನ್ನ ಅದರ ಎದುರಿಗಿಷ್ಟು ಹಸಿಹುಲ್ಲು ಹರವಿಕೊಂಡು, ಕೆಚ್ಚಲು ತೊಳೆದು, ಬೆನ್ನು ಚಪ್ಪರಿಸಿ ಒಂದಿಷ್ಟು ಹೊತ್ತು ಎಳೆದ ಮೇಲೆಯೇ ಅದು ಹಾಲಿಳಿಸುವುದು.ಅದೂ ಸೀದ ಸಾದಾ ಹಸುವಾದರೆ ಮತ್ತು ಅದರ ಮನಸ್ಸಿಗೆ ನೆಮ್ಮದಿಯೆನಿಸಿದರೆ. ಅದರ ಮನಸ್ಸಿಗೆ ನೆಮ್ಮದಿ ಎನಿಸದಿದ್ದರೆ ಎಷ್ಟೇ ಎಳೆದರೂ ಹಾಲಿಳಿಸದೇ ಹೋಗಬಹುದು. brahma-cow-indiaಇಂತಹ ವಿಫಲಯತ್ನವನ್ನು ಬೆನ್ನು ಬೆನ್ನಿಗೆ ಮಾಡಿ ಸೋತಮೇಲೆ ಹಾಲುಕೊಡದ ತಪ್ಪಿಗೆ ಅದರ ಬೆನ್ನಿಗೆ ಎರ್ರಾಬಿರ್ರಿ ಹೊಡೆದು ಭಯಕ್ಕೊಳಪಡಿಸಿ ಹಾಲು ಕಸಿದು ತರುತ್ತಿದ್ದುದನ್ನು ನಾನೇ ಕಂಡಿದ್ದೇನೆ. ಮಾತ್ರವಲ್ಲ ಹಾಲು ಕೊಡದ ಹಸುವಿನ ಎದುರು ದೊಣ್ಣೆಹಿಡಿದು ಕುಳಿತು ಹೆದರಿಸಿ ಹಾಲು ಕರೆಯಲು ಸಹಕರಿಸಿದ್ದೇನೆ. ಕರುಸತ್ತ ದಿನವೂ ಸತ್ತ ಕರುವನ್ನು ಹಸುವಿನ ಎದುರಿಗಿಟ್ಟು ತೋರಿಸಿ ಅಂತಿಮ ದರ್ಶನಕ್ಕೆ ದಾರಿಮಾಡಿಕೊಟ್ಟು ಹಾಡಿಗೆ ಎಳೆದುಹಾಕಿ ಬಂದ ಬೆನ್ನಿಗೆ, ಅದರ ಕೆಚ್ಚಲು ತೂಕ ಇಳಿಸುವುದನ್ನು ಮರೆಯುವುದಿಲ್ಲ. “ಕರುಸತ್ತ ಬೇಗೆಯಲಿ ನಾ ಬೇಯುತ್ತಿದ್ದರೆ, ಮರುಕವಿಲ್ಲದೆ ಸತ್ತ ಕರುವ ತಂದು, ತಿರುತಿರುಗಿ ಮುಂದಿಟ್ಟು ಹಾಲು ಕರೆವೆ ನೀನು-ನೀನಾರಿಗಾದೆಯೋ?” ಎಂದು ಹಾಡಿದ ಡಿ.ಎಲ್.ಎನ್. ಅವರ ಕಾವ್ಯದ ಸಾಲುಗಳನ್ನು ವಾಸ್ತವವೆನ್ನದೆ ಬೇರೆ ದಾರಿಯಿದೆಯೇ? ಹಾಗಾಗಿ ಹಸು ಕಾಳಿಂಗನ ಸಿಪಾಯಿಶಿಸ್ತಿನ ಹಸುಗಳ ಹಾಗೆ ಕರೆದಾಕ್ಷಣ ಬಂದು ಬಿಂದಿಗೆ ತುಂಬುವಂತೆ ಹಾಲು ಸೂಸುವುದಲ್ಲ. ಬದಲಾಗಿ ಬಿಳಿಯ ದ್ರವವಾಗಿ ಪರಿವರ್ತಿತವಾದ ಅದರ ಕರುವಿಗಾಗಿರುವ ತ್ಯಾಜ್ಯವನ್ನು ನಾವು ಕಸಿಯುವುದು. ಬಹುಶ: ಈ ಕಸಿಯುವಿಕೆ ಬದುಕಿಗೆ ಅನಿವಾರ್‍ಯವೂ ಹೌದೇನೋ? ಈ ಅನಿವಾರ್‍ಯದ ಕಸಿಯುವಿಕೆ ಹಸಿವಿನ ಕೆಚ್ಚಲ ಮೇಲೆ ಪೂರ್ಣ ಸ್ವಾಮ್ಯವನ್ನು ಸ್ಥಾಪಿಸಿ ಅದರ ಕರುವಿನ ಆಹಾರದ ಹಕ್ಕು, ಹಸುವಿನಿಂದ ಅದು ನಿರೀಕ್ಷಿಸುವ ಪ್ರೀತಿಯನ್ನೂ ಕಸಿಯುತ್ತದೆ.

ನಮ್ಮ ಸ್ವತ್ತನ್ನು ಇನ್ನೊಬ್ಬರು ಅಪಹರಿಸುವುದು ಕಳವು. ಆದರೆ ಕಳವಿನ ಕುರಿತಾದ ನಿರ್ವಚನ ಇಷ್ಟನ್ನೇ ಹೇಳುವುದಿಲ್ಲ. ಕಳವು ಎನ್ನುವುದಕ್ಕೆ ಒಂದೊಂದು ಕಾಲದೇಶ ಪರಿಸರದಲ್ಲಿ ಒಂದೊಂದು ಅರ್ಥವಿರುತ್ತದೆ. ಕೆಲವೊಮ್ಮೆ ನಮ್ಮದನ್ನೇ ನಮಗೆ ಬೇಕಾದವರಿಗೆ ನಾವೇ ಕೊಡುವುದು ಕಳವಿನ ಅಪರಾಧಕ್ಕೆ ಸಮನಾಗುತ್ತದೆ. ಹಸುವು ತನ್ನ ಕರುವಿಗೆ ತನ್ನ ಕೆಚ್ಚಲಹಾಲನ್ನೇ ನಮ್ಮ ಅನುಮತಿ ವಿನಹಾ ಕುಡಿಯಗೊಟ್ಟು ಮುಕ್ತಸ್ವಾತಂತ್ರ್ಯವನ್ನನುಭವಿಸುವುದೂ ಕಳವುಅಪರಾಧವಾಗುವುದು ಈ ನಿರ್ವಚನದ ಮೇರೆಗೇ ಇರಬೇಕು!? ನ್ಯಾಯ,ನೀತಿ, ಅಪರಾಧ ಇವೆಲ್ಲವೂ ಯಜಮಾನಿಕೆಯ ಭಾಷಾರೂಪಗಳೇ ಅಲ್ಲವೇ? ಹಾಗಾಗಿ ಹಸುವಿನ ಚಟುವಟಿಕೆಯೂ ಮಾನವಲೋಕದ ನಿಯಮದ ಮೆರೆಗೆ ಕಳ್ಳತನದ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದಾಯಿತು. ಯಾವಾಗ ಹಸು ತನ್ನಿಂದ ಕಸಿಯುವ ಹಾಲನ್ನು ಪೂರ್ತಿಯಾಗಿ ಸಾಕಿದವರಿಗೆ ದಕ್ಕಲು ಬಿಡದೆ, ಒಂದಿಷ್ಟು ಕೆಚ್ಚಲಲ್ಲಿಯೇ ಉಳಿಸಿಕೊಂಡು ತಮ್ಮ ಮುದ್ದುಕರುಗಳಿಗೆ ಕದ್ದು ಕುಡಿಸುತ್ತದೆಯೋ ಆಗ ಅದು ಕಳ್ಳದನವಾಗುತ್ತದೆ. ಅದರ ವರ್ತನೆ ನಿಯಮಬಾಹಿರವೆನಿಸುತ್ತದೆ. ಇದನ್ನು ತಡೆಯುವ ಸಲುವಾಗಿಯೇ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಹೀಗೆ ಕಳ್ಳಟವಾಡುವ ಹಸುವಿನ ಕೈಗೆ ಕರುಗಳು ಸಿಕ್ಕದ ಹಾಗೆ ತಮ್ಮ ಸುಪರ್ದಿಯಲ್ಲಿಯೇ ಕರುಗಳನ್ನು ಕಣ್ಗಾವಲಿನಲ್ಲಿಯಿಟ್ಟುಕೊಳ್ಳುವುದು ಸಾಮಾನ್ಯ ಕ್ರಮ. ಸ್ವಲ್ಪ ಬೆಳೆದು ದೊಡ್ಡದಾದ ಕರುಗಳನ್ನು ಹುಲ್ಲು ತಿನ್ನಲು ಹೊರಗೆ ಬಿಡಬೇಕಾಗಿ ಬಂದಾಗ ಅಲ್ಲಿ ತಾಯಿಯೊಂದಿಗೆ ‘ಕಳ್ಳಸಂಬಂಧ’?ಹೊಂದದ ಹಾಗೆ ಅದರ ಮೂತಿಗೆ ಚುಳ್ಳಿ ಕಟ್ಟುವ ಕ್ರಮವೊಂದಿದೆ. ಚೂಪಾದ ತುದಿಗಳುಳ್ಳ ಕೋಲನ್ನು ತ್ರಿಕೋನಾಕಾರದಲ್ಲಿ ಸೇರುವಂತೆ ಕಟ್ಟಿ ಅದನ್ನು ಕರುವಿನ ಮೂಗಿನ ನೇರಕ್ಕೆ ಹೊರಸೂಸುವಂತೆ ಕಟ್ಟುವ ಮೂಲಕ ಕೆಚ್ಚಲಿಗೆ ಬಾಯಿಕ್ಕುವ ಮೊದಲೇ ಚುಳ್ಳಿಯಿಂದ ಕೆಚ್ಚಲು ಚುಚ್ಚುವಂತಾಗಿ ಕುಡಿಸಲು ಬಂದ ಹಸುವೇ ಜಾಡಿಸುವಂತೆ ಮಾಡುವ ವಿಶಿಷ್ಠ ಪ್ರಯೋಗವಿದು.ತನ್ನ ಹಕ್ಕನ್ನು ಪಡೆಯಲು ಬರುವ ಕರುವಿಗೆ ಕೊಡಲೆಂದು ನಿಂತ ಹಸುವೇ ಕೊಡಲಾಗದ ಸಂಕಟವನ್ನು ಅನುಭವಿಸುವಂತೆ ಮಾಡುವ ವಿಶಿಷ್ಟಶಿಕ್ಷಾಕ್ರಮವಿದು!

ಇಷ್ಟೆಲ್ಲಾ ಶಿಕ್ಷೆ ಕೊಡುವವರನ್ನು ಕಟುಕರೆನ್ನಬೇಕೆ? ಅವರಿಗೆ ತಾವು ಸಾಕುವ ಗೋವಿನ ಬಗೆಗೆ ಭಾವನೆಗಳೇ ಇಲ್ಲವೇ? ಖಂಡಿತಾ ಇಲ್ಲ. ಆದರೆ ಕರುವಿನ ಬಾಲ್ಯದ ಆಹಾರವನ್ನೇ ನಿಸರ್ಗಕ್ಕೆ ವಿರುದ್ಧವಾಗಿ ಕಸಿಯುವ ಅಪರಾಧವನ್ನು ಮಾಡಿ ಅರಿವಿರುವ ರೈತರು ಎಂದೂ ಗೋವಿನ ಬಗೆಗೆ ಉಪನ್ಯಾಸ ನೀಡುವುದಿಲ್ಲ. ಅವರ ಬಾವನೆಗಳು ವ್ಯಾವಹಾರಿಕ ಸತ್ಯವನ್ನೂ ಅರಗಿಸಿಕೊಂಡಿವೆ ಅಷ್ಟೆ. ಹಾಗಾಗಿಯೇ ಉಪಯೋಗದ ಚಕ್ರಕ್ಕಿಂತ ಆಚೆಗಿರುವ ಹಸು ಕರುವನ್ನು ವಿಕ್ರಯಿಸುವುದಾಗಲೀ, ಒಂದು ಹಸುವಿನ ಬದಲಿಗೆ ಮತ್ತೊಂದು ಹಸುವನ್ನು ತರುವುದಾಗಲೀ ಅವರಿಗೆ ವ್ಯಾವಹಾರಿಕ ಸತ್ಯ. ಅಲ್ಲಿ ಭಾವನೆಯೇ ಇಲ್ಲವೆಂದೇನೊ ಅಲ್ಲ. ಖಂಡಿತವಾಗಿಯೂ ಅವರೊಂದಿಗೆ ಭಾವನೆಯ ಬಹುದೊಡ್ಡ ಕೋಶವೇ ಇರುತ್ತದೆ. ಅನೇಕಬಾರಿ ಕರೆಯುವ ಇಲ್ಲವೇ ಉಳುವ ಹಸುವನ್ನು ಕೊಟ್ಟು ಊಟವನ್ನೇ ಮಾಡಲಾಗದ ಸಂಕಟವನ್ನು ಅನುಭವಿಸುವುದಿದೆ. ಹಟ್ಟಿಯಲ್ಲಿ ಖಾಲಿಯಾದ ಹಸು-ಕೋಣಗಳು ಮನೆಯನ್ನೂ ಖಾಲಿಯೆನ್ನುವ ಶೂನ್ಯಭಾವಕ್ಕೆ ತಳ್ಳುವುದುಂಟು. Cows-pastureಅಲ್ಲಿ ಮೆಚ್ಚಿನ ಪ್ರತೀಹಸುವನ್ನೂ ಮನೆಮಕ್ಕಳಂತೆ ಸಾಕಿ ಹಗ್ಗಹಾಕಿ ಕೊಡುವ ವೇಳೆ ಅತ್ತು ಮೈಸವರುವ ಭಾವನೆಯ ಒತ್ತಡವಿರುತ್ತದೆ. ಈ ಭಾವನಾತ್ಮಕ ಸಂಬಂಧ ಬರಿಯ ಹಸುಗಳ ಮೇಲಷ್ಟೇ ಅಲ್ಲ. ಜೀವಗಳನ್ನು ಪ್ರೀತಿಸುತ್ತಾ, ಜೀವಗಳನ್ನೇ ನಂಬಿಕೊಂಡ ಗೆಯ್ಮೆಯ ಬದುಕಿಗೆ ಸಾಕುವ ನಾಯಿ,ಬೆಕ್ಕುಗಳ ಮೇಲೆಯೂ ಅಷ್ಟೇ ಪ್ರಮಾಣದ ಭಾವನಾತ್ಮಕ ಸಂಬಂಧವಿರುತ್ತದೆ. ಉದಾಹರಣೆಗೆ ಕೋಳಿಅಂಕಕ್ಕಾಗಿ ಕೋಳಿಸಾಕುವವರು ಎಷ್ಟೋ ಮಂದಿ ತಾವು ಸಾಕಿದ ಕೋಳಿಯನ್ನು ಕೊಂದು ತಿನ್ನುವುದಿಲ್ಲ. ಅದೇ ಮಂದಿ ಕೋಳಿ ಅಂಕವಾಡುತ್ತಾರೆ. ಕೋಳಿಅಂಕದ ಕೋಳಿಯ ರುಚಿಯ ಬಗೆಗೆ ಉಪನ್ಯಾಸವನ್ನೇ ನೀಡಬಲ್ಲಷ್ಟು ರುಚಿಸಂಸ್ಕಾರವುಳ್ಳವರಾಗಿರುತ್ತಾರೆ. ಆದರೆ ಅವರು ಸಾಕಿದ ಕೋಳಿ ಅವರಿಗೆ ತಿನಿಸಾಗಿ ಕಾಣಿಸುವುದಿಲ್ಲ. ಆದರೆ ಈ ನಿಯಮವನ್ನು ಅವರು ಎಲ್ಲಾ ಕೋಳಿಗಳ ಮೇಲಾಗಲೀ, ಎಲ್ಲಾ ಮನುಷ್ಯರ ಮೇಲಾಗಲೀ ಹೇರಲಾರರು ಮತ್ತು ಹೇರಲಾಗದು. ಹಾಗಾಗಿ ಭಾವನೆಯ ಜತೆಗೆ ಅಲ್ಲಿ ಬದುಕಿನ ಸವಾಲು ಇದೆ. ‘ಹಾಲೂ….’ ಎಂದು ಹಸಿದು ಕೂಗುವ ಮಕ್ಕಳ ಕೂಗು ಇದೆ. ಕೆಚ್ಚಲ ಹಾಲೆಲ್ಲವನ್ನೂ ಹಸುವು ತನ್ನ ಕರುವಿಗೆ ಕುಡಿಸುವುದಾದರೆ ಸಾಕಬೇಕಾದರೂ ಯಾಕೆ? ಅದೇನು ಧರ್ಮಛತ್ರವೇ? ಹಸುವನ್ನು ಸಾಕುವುದೇ ಹಾಲಿಗೆ ಮತ್ತು ನೇಲಿಗೆ(ನೇಗಿಲಿಗೆ) ಎಂಬುದನ್ನು ಎಷ್ಟು ಅಲ್ಲಗಳೆದರೂ ವಾಸ್ತವ ಅಲ್ಲವೇ?

ಪ್ಯಾಕೇಟ್ ಹಾಲು ಕುಡಿದು, ಮೈತುಂಬಾ ಬಟ್ಟೆಹೊದ್ದು, ದೂಳು ಕಾಣದೆ ಬದುಕುವ ಜನ ಯೋಚಿಸುವ ಹಾಗೆ ಯೊಚಿಸಿದರೆ ಈ ಶಿಕ್ಷೆ, ನಿರ್ಬಂದ ಇವೆಲ್ಲದರಲ್ಲಿ ಅನಾಗರಿಕ/ಅಮಾನವೀಯವಾದ ಜಗತ್ತೊಂದು ಕಾಣಿಸಬಹುದು. ಆದರೆ ಈ ಅನಾಗರಿಕರಿಗೆ ಪ್ರಕೃತಿ-ಬದುಕು-ಸಂಘರ್ಷ-ಸಂಕಟಗಳ ಅರಿವಿದೆ.ಅವರೆಂದೂ ಅನುತ್ಪಾದಕವಾದುದನ್ನು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆಂದಾಗಲೀ, ಹೊತ್ತುಕೊಳ್ಳಿ ಎಂದಾಗಲೀ ಹೇಳಲಾರರು. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೌಷ್ಟಿಕವಾದ ಆಹಾರ ಒದಗಿಸಲಾರದ ಈ ಜನ ಹಸುಕರುಗಳ ಮೂಲಕ ಬದುಕಿನ ಏಣಿಯನ್ನು ಕಾಣಬಲ್ಲ್ಲರೇ ವಿನಹಾ ಗರ್ಭಗುಡಿಯ ದೇವರನ್ನೊಂದೇ ಅಲ್ಲ. ಹಾಗಾಗಿ ಅವರಿಗೆ ಮೇವಿಕ್ಕುತ್ತಾ ಕೋಳಿಯ ಕಾಲಿಗೆ ಕೈಹಾಕಿ ಸಾರಿನ ಸರಕು ಮಾಡುವುದು ರೂಢಿಯಿದೆ. ಹಾಲು ಕೊಡದ ಹಸುವಿನ ಬೆನ್ನಿಗೆ ಬಾರಿಸಿ ಹಾಲು ಕಸಿಯಲೂ ಗೊತ್ತಿದೆ. ಅದೇ ಸಂದರ್ಭದಲ್ಲಿ ಅವರಲ್ಲಿ ಈ ವಾಸ್ತವಗಳ ಅರಿವಿನ ಜೊತೆಗೆ ಪ್ರೀತಿಯಿಂದ ಅವುಗಳ ಮೈದಡವಿ ಬದುಕಿನ ಸಮೃದ್ಧಿಯನ್ನು ಕಾಣುವ ಗುಣವೂ ಇದೆ. ಇಂದಿಗೂ ಮನೆಗೆ ಹೋದಾಗಲೆಲ್ಲಾ ಹಾಲಿನ ಯಂತ್ರವೇ ಆಗಿದ್ದರೂ ಆ ಮೂಕಪ್ರಾಣಿಗಳ ಮೈಸವರಿದಾಗ ಒಂದು ಸಂತೋಷವಿದೆ. ಅವುಗಳ ಮೂತಿಯ ಎದುರು ಹುಲ್ಲು ಹಿಡಿದು ತಿನ್ನಲು ಕೊಡುವಾಗ ಆಗುವ ಮಾತಿಗೆ ನಿಲುಕಲಾರದ ಸಂತೃಪ್ತಿಯಿದೆ. ಕೃಷಿಜೀವನವಂತೂ ತನ್ನ ದೈವವನ್ನು ಕಟ್ಟಿಕೊಳ್ಳುವುದೇ ಆಹ್ವಾನ-ವಿಸರ್ಜನದ ಈ ದಾರಿಯಲ್ಲಿ. ಬೇಕಾದಾಗ ದೇವರಾಗಿಸಿಕೊಂಡು ಪೂಜಿಸಿ ಮರುಕ್ಷಣದಲ್ಲಿ ಲೋಕಸತ್ಯದ ಅಗತ್ಯಾನುಸಾರವಾಗಿ ವ್ಯವಹರಿಸಲು ಏನುಮಾಡಬೇಕೋ ಅದನ್ನು ಮಾಡಲು ಅನುವು ಮಾಡಿಕೊಳ್ಳುವ ದಾರಿಯದು. ಬದುಕಿನ ಹೋರಾಟದಲ್ಲದು ಅವರಿಗೆ ಅನಿವಾರ್‍ಯವೂ ಹೌದು.

(ಮುಂದುವರೆಯುವುದು…)