Category Archives: ಸರಣಿ-ಲೇಖನಗಳು

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೆ ಹೆಚ್ಚಾಗಿವೆ.

2010 ರಲ್ಲಿ ಅಜಾದ್ ಅಲಿಯಾಸ್ ಚುರುಮುರಿ ರಾಜ್ ಕುಮಾರ್, 2011 ನವಂಬರ್ ತಿಂಗಳಿನಲ್ಲಿ ಕಿಶನ್ ಜಿ ಇವರ ಹತ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಬೇಕಾದ ನಕ್ಸಲ್ ಹೋರಾಟಕ್ಕೆ 2012 ರಲ್ಲಿ ಆರ್.ಕೆ. ಎಂದು ಜನಪ್ರಿಯವಾಗಿದ್ದ ರಾಮಕೃಷ್ಣ ಅವರ ಬಂಧನದಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತು. ಮಾವೋವಾದಿ ನಕ್ಸಲ್ ಚಳುವಳಿಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದramakrishna-naxal-india ರಾಮಕೃಷ್ಣರನ್ನು ಕೊಲ್ಕತ್ತ ಪೊಲೀಸರು, ಆಂಧ್ರ ಪೊಲೀಸರ ನೆರವಿನಿಂದ ಕೊಲ್ಕತ್ತ ನಗರದಲ್ಲಿ ರಾಕೆಟ್ ಲಾಂಚರ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ವರ್ಕ್‌ಶಾಪ್ ಒಂದರಲ್ಲಿ ತಯಾರಿಸುತ್ತಿದ್ದ ವೇಳೆ ಬಂಧಿಸುವಲ್ಲಿ ಯಶಸ್ವಿಯಾದರು.

ಆಂಧ್ರದ ಕರೀಂನಗರ ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ರಾಮಕೃಷ್ಣರು 1976 ರಲ್ಲಿ ವಾರಂಗಲ್‌ನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದು 1978 ರಲ್ಲಿ ಭೂಗತರಾಗುವ ಮೂಲಕ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು, ಕೊಲ್ಕತ್ತ. ಚೆನ್ನೈ ನಗರಗಳಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ಸಣ್ಣ ಕೈಗಾರಿಕೆಗಳಿಗೆ ಆದೇಶ ನೀಡಿ ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳುತ್ತಿದ್ದರು. ಹೀಗೆ ಬಿಡಿಭಾಗ ಸಂಗ್ರಹಿಸಲು ಕೊಲ್ಕತ್ತ ನಗರಕ್ಕೆ ತೆರಳಿದಾಗ, ಪೊಲೀಸರಿಂದ ಬಂಧಿತರಾದರು. ಈಗ ಗಣಪತಿಯವರನ್ನು ಹೊರತು ಪಡಿಸಿದರೆ ಸೈದ್ಧಾಂತಿಕ ಹಿನ್ನೆಲೆಯುಳ್ಳ ಒಬ್ಬ ಹಿರಿಯ ನಾಯಕನನ್ನು ನಕ್ಸಲ್ ಹೋರಾಟದಲ್ಲಿ ಹುಡುಕುವುದು ಕಷ್ಟವಾಗಿದೆ.

ಕಳೆದ ಒಂದು ದಶಕದಿಂದ ನಗರಗಳಿಂದ ಹೋರಾಟಗಳತ್ತ ಆಕರ್ಷಿತರಾಗಿ ಬರುತ್ತಿದ್ದ ವಿದ್ಯಾವಂತರ ಸಂಖ್ಯೆ ಸಂಪೂರ್ಣ ಸ್ಥಗಿತಗೊಡಿದೆ. ವ್ಯವಸ್ಥೆಯಯ ವಿರುದ್ದದ ಹೋರಾಟಕ್ಕೆ ಅರಣ್ಯಕ್ಕೆ ಹೋಗಿ ಬಂದೂಕ ಹಿಡಿಯಬೇಕೆಂಬುದು ಈಗಿನ ಯುವಜನತೆಗೆ ಸವಕಲು ಮಾದರಿಯಾಗಿದೆ. ಇದೆ ವೇಳೆಗೆ 2010 ರ ಮಾರ್ಚ್ 23 ರಂದು ನಕ್ಸಲ್ ಚಳುವಳಿಯ ಸಂಸ್ಥಾಪಕ ಹಾಗೂ ಚಾರು ಮುಜುಂದಾರ್ ಸಂಗಾತಿ ಕನು ಸನ್ಯಾಲ್ ತಮ್ಮ ವೃದ್ಧಾಪ್ಯದಲ್ಲಿ ತೀವ್ರ ಬಡತನ ಮತ್ತು ಹದಗೆಟ್ಟ ಆರೋಗ್ಯಕ್ಕೆ ಔಷಧಕೊಳ್ಳಲು ಹಣವಿಲ್ಲದ ಸ್ಥಿತಿಯಲ್ಲಿ ತಮ್ಮ ಮಗಳ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗಿನ ತಲೆಮಾರಿಗೆ ಹೋರಾಟ ಕುರಿತು ಮರುಚಿಂತನೆಗೆ ಪ್ರೇರೇಪಿಸಿದೆ. 1980 ಮತ್ತು 1990 ರ ದಶಕದಲ್ಲಿ ನಕ್ಸಲ್ ಹೋರಾಟಕ್ಕೆ ಸೇರ್ಪಡೆಯಾದ ಅನಕ್ಷರಸ್ತ ಆದಿವಾಸಿ ಯುವಕರು ಈಗ ಚಳುವಳಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಮಾವೋವಾಗಲಿ, ಲೆನಿನ್ ಆಗಲಿ ಅಥವಾ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತಗಳ ಗಂಧ ಗಾಳಿ ತಿಳಿದಿಲ್ಲ. ಇಂತಹ ಕಾರಣಗಳಿಂದಾಗಿಯೆ ಸತ್ತು ಹೋಗಿರುವ ಯೋಧನ ಹೊಟ್ಟೆಯೊಳಗೆ ಸಿಡಿಮದ್ದನ್ನು ತುಂಬಿಸಿ ಇಡುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಇಳಿಮುಖವಾಗುತ್ತಿದೆ. ಜಾರ್ಖಂಡ್ ಮತ್ತು ಛತ್ತೀಸ್‌ ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. pwg-naxalನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ ನಲ್ಲಿ 160 ಸಾವು (2011 ರಲ್ಲಿ 182 ) ಛತ್ತೀಸ್‌ಗಡದಲ್ಲಿ 107 (2011 ರಲ್ಲಿ 204) ಬಿಹಾರದಲ್ಲಿ 43 ಸಾವು (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು (2011 ರಲ್ಲಿ 45), ಹೀಗೆ ಭಾರತದಲ್ಲಿ 2011 ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲಿಯರು ಮೃತಪಟ್ಟಿದ್ದರೆ, 2012 ರ ವೇಳೆಗೆ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲಿಯರು ಮೃತಪಟ್ಟಿದ್ದಾರೆ. ಒಟ್ಟಾರೆ ಸಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.

ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ, ಇಲ್ಲವೆ ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದುಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆ ಮುಕ್ತ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸ ಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋಷಣೆ, ದಲಿತರು, ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನೈತಿಕ ಹೊಣೆ ಅಕ್ಷರ ಮತ್ತು ವಿದ್ಯೆಯನ್ನು ಬಲ್ಲ ನಮ್ಮೆಲ್ಲರ ಮೇಲಿದೆ. ವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ.

ಭಾರತದ ನಕ್ಸಲ್ ಹೋರಾಟದ ಇತಿಹಾಸವಾಗಲಿ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವೊತ್ತಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು, ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲ. ಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಹಸನಾಗಿದೆಯಾ? ಅದೂ ಇಲ್ಲ.

ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ 2011 ರ ಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ naxalite24fo4ಟೈಮ್ಸ್ ಪತ್ರಿಕೆಗೆ “ಟ್ರೈಬಲ್ ಟ್ರ್ಯಾಜಿಡಿಸ್” ( ಆದಿವಾಸಿಗಳ ದುರಂತ) ಎಂಬ ವಿಶೇಷ ಲೇಖನ ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ರಾಜಕಾರಣಿಗಳ ಕಪಟ ನಾಟಕವನ್ನೂ ಸಹ ಅನಾವರಣಗೊಳಿಸಿದ್ದಾರೆ. 2010 ರ ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇನ್ನುಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ, ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ ರಾಮಚಂದ್ರ ಗುಹಾ ಗುರುತಿಸಿದ್ದಾರೆ:

  1. ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕೃತಿಯ ನೆರಳಿನಲ್ಲಿ ಮತ್ತು ಸಮೃದ್ಧಿಯಾದ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆಧುನಿಕ ಅಭಿವೃದ್ಧಿ ಯೋಜನೆಗಳು ಅತಂತ್ರರನ್ನಾಗಿ ಮಾಡಿವೆ.
  2. ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಅಂಬೇಡ್ಕರ್ ಜನ್ಮತಾಳಿದ ಹಾಗೆ ಆದಿವಾಸಿಗಳಿಗೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಈ ಶೋಚನೀಯ ಬದುಕಿಗೆ ಕಾರಣವಾಗಿದೆ.
  3. ಭಾರತದಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಆದಿವಾಸಿಗಳು ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್‌ಗಳಾಗಿ ಕಾಣಲಿಲ್ಲ.
  4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.
  5. ಆದಿವಾಸಿಗಳ ಪ್ರತಿನಿಧಿಯಂತೆ ಉನ್ನತ ಹುದ್ದೆಯಲ್ಲಿ ಮೇಲ್ಮಟ್ಟದ ಅದಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದು, ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.
  6. ಆದಿವಾಸಿಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ, ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.
  7. ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಆದಿವಾಸಿಗಳ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಈ ಕಾರಣದಿಂದಾಗಿ ಆದಿವಾಸಿ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ 66 ವರ್ಷಗಳಾದರೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಇಲ್ಲವೆ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದರೆ ಈ ನತದೃಷ್ಟರು ಸಮಾಜದ ಮುಖ್ಯವಾಹಿನಿ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ ನಕ್ಸಲರ ಹಾವಳಿಯನ್ನು tribal-schools-educationತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲಿನ್ಲ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆ ಇವುಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಗ್ರಹಿಸಿತು. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನಕ್ಸಲ್ ಚಳುವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದನ್ನು ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರ ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ “ಜಲ್, ಜಂಗಲ್, ಜಮೀನ್” ಎಂಬ ಬೇಡಿಕೆಗಳು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸೃಷ್ಟನಿದರ್ಶನ ನೀಡಿದೆ.) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನು ತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಿಗಳಲ್ಲಿ ಕುಡಿಯುವ ಶುದ್ದ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಚಿವುಟಿ ಹಾಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಪಾತ್ರವಿದೆ. communist-photoಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುದ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ ಸಿಂಗ್, ಸುಂದರಯ್ಯ, ಜ್ಯೋತಿ ಬಸು ಇಂತಹ ನಾಯಕರು ಬೇಕಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವೈಪಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ದದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರ ಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯುನಿಸ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸಿತಾರಾಮ್ ಯಚೂರಿ, ಬೃಂದಾ ಕಾರಟ್ ಮುಂತಾದ ಬದ್ಧತೆಯುಳ್ಳ ನಾಯಕರಿದ್ದರೂ ಸಹ ಕಮ್ಯುನಿಸ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿದ್ದಾರೆ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಅವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಂಡಿರುವ ಮನಸ್ಸುಗಳು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡು ಕಡೆಯಿಂದ ಸಿದ್ಧವಾಗಿರುವ ಮುಕ್ತ ಮನಸ್ಸುಗಳು ಮಾತ್ರ. ಇಂತಹ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ದವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಅಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನವಾಗಿ ಸಾಕ್ಷಿಗಳಾಗಬೇಕಾಗುತ್ತದೆ. ಅಂತಿಮವಾಗಿ ಇದು ಮಾನವೀಯತೆಗಾಗಿ ತುಡಿಯುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯ ಜಗತ್ತು.


[ಕೊನೆಯ ಮಾತು :- ಪ್ರಿಯ ಓದುಗರೆ, ವರ್ತಮಾನ ಅಂತರ್ಜಾಲ ಪತ್ರಿಕೆಯಲ್ಲಿ ನಕ್ಸಲ್ ಕಥನದ ಸರಣಿ ಬರೆಯಲು ಅವಕಾಶ ಮಾಡಿಕೊಟ್ಟ ಪ್ರ್ರಿಯ ಮಿತ್ರ ರವಿ ಕೃಷ್ಣಾರೆಡ್ಡಿಯವರಿಗೆ ನನ್ನ ಧನ್ಯವಾದಗಳು. ಈ ಕಥನಕ್ಕೆ ಓದುಗ ಮಿತ್ರರು ತೋರಿದ ಪ್ರೀತಿ, ಪ್ರತಿಕ್ರಿಯೆ ಮತ್ತು ಆಸಕ್ತಿಯಿಂದಾಗಿ ನಾನು ಗಂಭೀರವಾಗಿ ಇಂತಹ ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು ಕಳೆದ ಮುವ್ವತ್ತು ವರ್ಷಗಳಿಂದ ಹಲವು ಪ್ರಗತಿಪರ ಸಂಟನೆಗಳ ಜೊತೆ ಗುರುತಿಸಿಕೊಂಡಿದ್ದರೂ, ನಕ್ಸಲ್ ಚಳುವಳಿಯಿಂದ ಬಂದವನಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಒರ್ವ ಪತ್ರಕರ್ತನಾಗಿ, ಸಂಶೋಧಕನಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಮಾಜಿ ಹೋರಾಟಗಾರರ ಜೊತೆ ನಡೆಸಿದ ಚರ್ಚೆ ಮತ್ತು ಮಾತುಕತೆ, ಹಾಗೂ ಅವರು ನೀಡಿದ ಮಾಹಿತಿ ಮತ್ತು ಇತಿಹಾಸದ ದಾಖಲೆಗಳಿಂದ ಇಂತಹದ್ದೊಂದು ಸರಣಿ ಸಾಧ್ಯವಾಯಿತು. ನನ್ನ ಈ ಸರಣಿ ಕಥನದಲ್ಲಿ ಏನಾದರೂ ಕೊರತೆಯಿದ್ದರೆ, ಅಥವಾ ತಪ್ಪು ಮಾಹಿತಿಗಳಿದ್ದರೆ ನನ್ನ ಗಮನಕ್ಕೆ ತರಬೇಕಾಗಿ ವಿನಂತಿಸಿಕೊಳ್ಳತ್ತೇನೆ. ನನ್ನ ಇ-ಮೈಲ್ ವಿಳಾಸ : jagadishkoppa@gmail.com.

ಮುಂದಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ “ಎಂದೂ ಮುಗಿಯದ ಯುದ್ದ” (ಭಾರತದ ನಕ್ಸಲ್ ಇತಿಹಾಸದ ಕಥನ) ಎಂಬ ಹೆಸರಿನಲ್ಲಿ ಪ್ರಕಟವಾಗುವ ಈ ಲೇಖನಗಳ ಸರಣಿಯ ಕೃತಿಯಲ್ಲಿ 1967 ರಿಂದ 1980 ರ ವರೆಗೆ ಜರುಗಿದ ಹೋರಾಟದ ಕಥನ ಮೊದಲ ಭಾಗದಲ್ಲಿ, ನಂತರ 1980 ರಿಂದ 2012 ರವರೆಗೆ ನಡೆದ ಹೋರಾಟ ಎರಡನೆ ಭಾಗದಲ್ಲಿ ಅಡಕವಾಗಿರುತ್ತದೆ. ಕೃತಿಯ ಕೊನೆಯ ಪುಟಗಳ ಅನುಬಂಧದ ವಿಭಾಗದಲ್ಲಿ ಈವರೆಗೆ ನಕ್ಸಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ನಕ್ಸಲ್ ಹುತಾತ್ಮ ನಾಯಕರ ವಿವರ ಮತ್ತು 1967 ರಿಂದ 2012 ರವರೆಗೆ ನಡೆದ ಪ್ರಮುಖ ಹಿಂಸಾಚಾರ ಘಟನೆಗಳು ಹಾಗೂ ನಕ್ಸಲ್ ಹೋರಾಟಕ್ಕಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ಹುಟ್ಟಿಕೊಂಡ ಸಂಘಟನೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸಕ್ತರು ಗಮನಿಸ ಬಹುದು. ಎಲ್ಲರಿಗೂ ನಮಸ್ಕಾರ. – ಡಾ. ಎನ್. ಜಗದೀಶ್ ಕೊಪ್ಪ]

(ಮುಗಿಯಿತು)

ಪ್ರಜಾ ಸಮರ – 18 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕಕ್ಕೆ ನಕ್ಸಲ್ ಚಳುವಳಿ ಕಾಲಿಟ್ಟು ಒಂದು ದಶಕ ಕಳೆಯಿತು. ಹಲವು ಕನಸು ಮತ್ತು ಆದರ್ಶಗಳನ್ನು ನಕ್ಸಲ್ ಚಳುವಳಿಯ ಜೊತೆ ಹೊತ್ತು ತಂದ ಸಾಕೇತ್ ರಾಜನ್ ಈಗ ನಮ್ಮ ನಡುವೆ ಇಲ್ಲ. ಸಾಕೇತ್ ನಂತರ ತಂಡವನ್ನು ಮುನ್ನೆಡೆಸುತ್ತಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೂಡ ಈಗ ಹೋರಾಟವನ್ನು ತೊರೆದು ಹೊರ ಬಂದಿದ್ದಾರೆ, ಅಲ್ಲದೇ ತಮ್ಮ 25 ವರ್ಷಗಳ ನಕ್ಸಲ್ ಹೋರಾಟದ ಹಿನ್ನೆಲೆಯಲ್ಲಿ “ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ” ಎಂಬ ಕೃತಿಯನ್ನು ಹೊರತಂದಿದ್ದು, ಈ ಕೃತಿಯಲ್ಲಿ ಭಾರತದ ನಕ್ಸಲ್ ಹೋರಾಟವನ್ನು ವಿಮರ್ಶೆಗೆ ಒಡ್ಡಿದ್ದಾರೆ. ಆನಂತರ ನಾಯಕತ್ವ ವಹಿಸಿದ್ದ ಕೃಷ್ಣಮೂರ್ತಿ ಅನಾರೋಗ್ಯಕ್ಕೆ ತುತ್ತಾದರೆ, ನಂತರ ವ್ಯಕ್ತಿ ವಿಕ್ರಮ್ ಗೌಡ ಪೊಲೀಸರಿಗೆ ಬಲಿಯಾಗಿದ್ದಾನೆ.

ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಪೊಲೀಸರು ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ 25 ಕ್ಕೂ ಹೆಚ್ಚು ಮಂದಿಯಷ್ಟು ಹತ್ಯೆಯಾಗಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ಮಾಹಿತಿದಾರರು (ಶೇಷಯ್ಯ ಮತ್ತು ಸುಧಾಕರಗೌಡ ?) ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ನಕ್ಸಲರಿಂದ ಹತ್ಯೆಯಾಗಿದ್ದಾರೆ. ಇಬ್ಬರು ಗಿರಿಜನ ದಂಪತಿಗಳು (ರಾಮೇಗೌಡ ಮತ್ತು ಕಾವೇರಮ್ಮ) ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ಬಲಿಯಾದ ಅಮಾಯಕರು. ಸಾಕೇತ್ ರಾಜನ್, ಶಿವಲಿಂಗು, ಸುಂದರೇಶ್, ವಿಕ್ರಮ್ ಗೌಡ, ವಸಂತ್ ಗೌಡ, ನಾರವಿ ದಿವಾಕರ್, ಅಜಿತ್ ಕುಸುಬಿ, ಉಮೇಶ್, ಹಾಜಿಮಾ, ಪಾರ್ವತಿ, ಗೌತಮ್ ಪರಮೇಶ್ವರ್, ಎಲ್ಲಪ್ಪ, ಸೇರಿದಂತೆ ಒಟ್ಟು ಹದಿನೈದು ಮಂದಿ ಶಂಕಿತ ನಕ್ಸಲರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ನಕ್ಸಲರ ಗುಂಡಿಗೆ ಅಸಿಸ್ಟೆಂಟ್ ಪೊಲೀಸ್‌ ಇನ್ಸ್‌ಪ್ಪೆಕ್ಟರ್ ವೆಂಕಟೇಶ್ ಮತ್ತು ಪೇದೆ ಗುರುಪ್ರಸಾದ್ ಹಾಗೂ ಗುಂಡಿನ ಚಕಮಕಿ ವೇಳೆ ಪೊಲೀಸರ ಗುಂಡು ತಗುಲಿದ ಮಹಾದೇವ ಮಾನೆ ಎಂಬ ಪೇದೆಯೂ ಸೇರಿದಂತೆ (ಪಶ್ಚಿಮಘಟ್ಟದ ಅರಣ್ಯದಲ್ಲಿ) ಒಂಬತ್ತು ಮಂದಿ ಪೊಲೀಸರು ಹತರಾಗಿದ್ದಾರೆ. ಇವರಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಆರು ಪೊಲೀಸರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯಲ್ಲಿ ಹತರಾದರು. ಇವರ ಜೊತೆ ಓರ್ವ ಬಸ್ ಕ್ಲೀನರ್ ಕೂಡ ನಕ್ಸಲರ ಗುಂಡಿಗೆ ಬಲಿಯಾದ.

ಹತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ರಕ್ಷಣೆ ಮತ್ತು ಕುದುರೆ ಮುಖ ಅಭಯಾರಣ್ಯ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿರುವ ಸ್ಥಳೀಯ ಬುಡಕಟ್ಟು western ghatsಜನರಿಗೆ ನ್ಯಾಯ ಕೊಡಿಸಲು ಪಶ್ಚಿಮ ಘಟ್ಟದ ಅರಣ್ಯಕ್ಕೆ ನಕ್ಸಲರು ಕಾಲಿಟ್ಟ ನಂತರ ಅಭಿವೃದ್ಧಿಗಿಂತ ಅನಾಹುತಕ್ಕೆ ದಾರಿಯಾಯಿತೆಂದು ಹೇಳಬಹುದು. ಹೆಚ್ಚು ಮಾವೋವಾದಿಗಳು ಪಶ್ಚಿಮಘಟ್ಟಕ್ಕೆ ಕಾಲಿಡುವ ಮುನ್ನವೇ ಅನೇಕ ಜನಪರ ಸಂಘಟನೆಗಳು ಮತ್ತು ಪರಿಸರವಾದಿಗಳು ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ಹೋರಾಡುತ್ತಿದ್ದರು. ಇವರಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮುಖ್ಯರಾದವರು. ನಕ್ಸಲರು ಈ ಪ್ರದೇಶಕ್ಕೆ ಬಂದ ನಂತರ ಎಲ್ಲರನ್ನೂ ನಕ್ಸಲರಂತೆ ಭಾವಿಸುವ, ಕಾಣುವ ಮನೋಭಾವವನ್ನು ಕರ್ನಾಟಕ ಪೊಲೀಸರು ಬೆಳಸಿಕೊಂಡರು. ಇದರಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಹೋರಾಟ ನಡೆಸುತ್ತಿದ್ದ ಹೋರಾಟಗಾರರಿಗೆ ತೀವ್ರ ಹಿನ್ನಡೆಯಾಯಿತು.

ಅರಣ್ಯದ ಆದಿವಾಸಿಗಳ ಹಿತ ಕಾಪಾಡಲು ಬಂದ ನಕ್ಸಲರು ಇಂದು ಅರಣ್ಯವಾಸಿಗಳ ಹಿತ ಕಾಪಾಡುವುದಿರಲಿ, ತಮ್ಮ ಹಿತ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಇವರು ನಿರೀಕ್ಷೆ ಮಾಡಿದಷ್ಟು ಪ್ರೋತ್ಸಾಹ ಸ್ಥಳಿಯರಿಂದ ಸಿಗಲು ಸಾಧ್ಯವಾಗದೇ ಅಕ್ಷರಶಃ ಅತಂತ್ರರಾಗಿದ್ದಾರೆ. ಇದರ ಜೊತೆಯಲ್ಲೇ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯದಂಚಿನಲ್ಲಿ ಬದುಕುತ್ತಿರುವ ಬಡಜನತೆಯನ್ನು ಆತಂಕದ ಮಡುವಿಗೆ ನೂಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬ ಸಾಮಾನ್ಯ ಬಡವ ಸ್ಥಳಿಯ ದಿನಸಿ ಅಂಗಡಿಗೆ ಹೋಗಿ ಐದು ಕೆ.ಜಿ. ಅಕ್ಕಿ ಅಥವಾ ಒಂದು ಕೆ.ಜಿ. ಸಕ್ಕರೆ ಕೊಂಡರೆ, ಇಲ್ಲವೇ ಅರ್ಧ ಕೆ.ಜಿ. ಚಹಾ ಪುಡಿ ಖರೀದಿ ಮಾಡಿದರೆ, ತನ್ನ ಮನೆಗೆ ಹಿಂತಿರುಗುವ ದಾರಿಯಲ್ಲಿ ಅಥವಾ ಬಸ್‌ನಲ್ಲಿ ಎದುರಾಗುವ ಗುಪ್ತ ದಳದ ಪೊಲೀಸರಿಂದ ನೂರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಸಮರ್ಪಕ ಉತ್ತರ ನೀಡದಿದ್ದರೆ ನಕ್ಸಲರ ಬೆಂಬಲಿಗ ಎಂಬ ಆರೋಪದಡಿ ಪೊಲೀಸರ ಕಿರುಕುಳ ಅನುಭವಿಸಬೇಕಾಗಿದೆ.‍

ಕರ್ನಾಟಕದ ಅರಣ್ಯದಲ್ಲಿ ಹೋರಾಡುತ್ತಿರುವ ಅಥವಾ ಇರಬಹುದಾದ ಇಪ್ಪತ್ತು ಮಂದಿ ನಕ್ಸಲರಲ್ಲಿ ವಿಚಾರಧಾರೆ ಹಿನ್ನೆಲೆ ಇರುವ ವ್ಯಕ್ತಿಗಳು ತೀರಾ ಕಡಿಮೆ. ಸಾಕೇತ್ ರಾಜನ್ ದಾಳಿಯ ಸಂದರ್ಭದಲ್ಲಿ ಕಾಲಿಗೆ ಗುಂಡು ತಗುಲಿ ಅಪಾಯದಿಂದ ಪಾರಾಗಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೆಲವು ಸದಸ್ಯರ ಜೊತೆ ಹೋರಾಟ ತೊರೆದು ಹೊರಬಂದ ನಂತರ ಈಗನ ಹೋರಾಟಗಾರರಲ್ಲಿ ಸೈದ್ಧಾಂತಿಕ ನಿಲುವುಗಳು ಇದ್ದಂತಿಲ್ಲ. ಸಾಕೇತ್ ನಿಧನದ ನಂತರ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಚುರುಕುರಿ ರಾಜ್‌ಕುಮಾರ್ ನೇತೃತ್ವದಲ್ಲಿ 2007 ರಲ್ಲಿ ನಡೆದ ಗುಪ್ತ ಸಭೆಯಲ್ಲಿ ಹೋರಾಟ ಮುನ್ನೆಡೆಸುವ ಕಾರ್ಯ ವಿಧಾನದ ಬಗ್ಗೆ ತೀವ್ರ ಚರ್ಚೆಯಾಯಿತು. ಕರ್ನಾಟಕದಲ್ಲಿ ಮೂರು ತಂಡಗಳಾಗಿ (ನೇತ್ರಾವತಿ, ಶರಾವತಿ ಮತ್ತು ತುಂಗಭದಾ) ಕ್ರಿಯಾಶೀಲವಾಗಿದ್ದ ಕೆಲವರು ಸಮಾಜದ ಅನುಕಂಪವಿಲ್ಲದೆ ಯಾವುದೇ ಹೋರಾಟ ವ್ಯರ್ಥ ಎಂಬ ವಾದವನ್ನು ಮುಂದಿಟ್ಟು ನಗರ ಪ್ರದೇಶಗಳಲ್ಲಿದ್ದು ಯುವ ವಿದ್ಯಾವಂತ ಯುವಕರನ್ನು ಚಳುವಳಿಗೆ ಸೆಳೆಯಬೇಕು ಎಂಬ ತಮ್ಮ ಯೋಜನೆಯನ್ನು ಮುಂದಿಟ್ಟರು. ಆದರೆ ಕೆಲವರು ಇದನ್ನು ವಿರೋಧಿಸಿ ಗೆರಿಲ್ಲಾ ತಂತ್ರದ ಯುದ್ದ ಮಾದರಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹಠ ಹಿಡಿದಾಗ ಅನಿವಾರ್ಯವಾಗಿ ಕೆಲವು ಸುಧಾರಣಾವಾದಿಗಳು 2007 ರಲ್ಲಿ ಹೋರಾಟ ತೊರೆದು ಹೊರಬಂದರು. 1980 ರಿಂದಲೂ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಅಜಾದ್ ಅಲಿಯಾಸ್ ಚುರುಕುರಿ ರಾಜ್‌ಕುಮಾರ್ 2010 ರವರೆಗೆ ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ಗುಪ್ತವಾಗಿ ಬೇಟಿ ನೀಡಿ ನಕ್ಸಲರಿಗೆ ಮಾರ್ಗದರ್ಶನದ ಜೊತೆಗೆ ಆರ್ಥಿಕ ನೆರವು ನೀಡಿ ಹೋಗುತ್ತಿದ್ದರು.

ಅಜಾದ್ ಅಲಿಯಾಸ್ ಚುರುಕುರಿ ರಾಜಕುಮಾರ್ 1952 ರಲ್ಲಿ ಹುಟ್ಟಿದ್ದು, ಆಂಧ್ರದ ಕೃಷ್ಣ ಜಿಲ್ಲೆಯಿಂದ ಬಂದವರು. ಭಾರತದ ಮಾವೋವಾದಿ ನಕ್ಸಲ್ ಚಳುವಳಿಯಲ್ಲಿ ಮುಖ್ಯನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡು, ಕೇಂದ್ರ ಪಾಲಿಟ್‌ಬ್ಯೂರೊ ಸದಸ್ಯರಾಗಿ ಮತ್ತು ಸಂಘಟನೆಯ ವಕ್ತಾರರಾಗಿ ನಿರ್ವಹಿಸುತ್ತಿದ್ದರು. ಆಂದ್ರದ ಜಿಲ್ಲಾ ಕೇಂದ್ರವಾದ ವಾರಂಗಲ್ ಪಟ್ಟಣದ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಎಂಬ ಪ್ರತಿಷ್ಟಿತ ಕಾಲೇಜಿನಿಂದ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿ ಪಡೆದು ಪೀಪಲ್ಸ್ ವಾರ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. 1975 ಮತ್ತು 1978 ರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ತಲೆತಪ್ಪಿಸಿಕೊಂಡಿದ್ದರು. ಆಂಧ್ರ ಸರ್ಕಾರ ಅಜಾದ್ ಸುಳಿವೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಕರ್ನಾಟಕದ ಸಾಕೇತ್ ರಾಜನ್ ಮತ್ತು ಸಿರಿಮನೆ ನಾಗರಾಜ್ ಹಾಗೂ ರಾಯಚೂರು ಜಿಲ್ಲೆ ಕಾರ್ಯಕತರು ನಕ್ಸಲ್ ಸಂಘಟನೆಗೆ ಸೇರುವಲ್ಲಿ ಅಜಾದ್ ಪ್ರಭಾವವಿತ್ತು. ಅಂತಿಮವಾಗಿ 2010 ರ ಜೂನ್ ಒಂದರಂದು ನೆರೆಯ ಮಹಾರಾಷ್ಟ್ರದಲ್ಲಿ ಅಜಾದ್ ಮತ್ತು ಜೊತೆಗಿದ್ದ ಹೇಮಚಂದ್ರ ಪಾಂಡೆ ಎಂಬ ಯುವ ಪತ್ರಕರ್ತನನ್ನು ಬಂಧಿಸಿದ ಆಂಧ್ರ ಪೊಲೀಸರು ಮಾರನೇ ದಿನ ನಸುಕಿನ ಜಾವ ಅಂದ್ರದ ಗಡಿ ಜಿಲ್ಲೆಯಾದ ಅದಿಲಾಬಾದ್ ಅರಣ್ಯಕ್ಕೆ ಕರೆತಂದು ಇಬ್ಬರನ್ನು ಗುಂಡಿಟ್ಟು ಕೊಂದರು. (ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಆಂಧ್ರ ಪೊಲೀಸರ ವಿರುದ್ದ ದೂರು ದಾಖಲಾಗಿದೆ.) ಅಜಾದ್ ನಿಧನಾ ನಂತರ ಕರ್ನಾಟಕದ ನಕ್ಸಲ್ ಚಳುವಳಿ ದಿಕ್ಕು ದಿಸೆಯಿಲ್ಲದೆ, ಸೈದ್ಧಾಂತಿಕ ತಳಹದಿಯಿಲ್ಲದೆ ಸಾಗುತ್ತಿದೆ.

ಕರ್ನಾಟಕ ಪೊಲೀಸರು ತಮ್ಮ ಗುಪ್ತದಳ ಇಲಾಖೆಯಿಂದ ಸಕ್ರಿಯವಾಗಿರುವ ನಕ್ಸಲರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅವರಲ್ಲಿ ಉಡುಪಿಯ ಹೆಬ್ರಿ ಸಮೀಪದ ವಿಕ್ರಂ ಗೌಡ (2006 ರ ಡಿಸಂಬರ್ 26 ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ), ಬೆಳ್ತಂಗಡಿಯ ಸುಂದರಿ, ಶೃಂಗೇರಿಯ ಬಿ.ಜಿ ಕೃಷ್ಣಮೂರ್ತಿ, ತೀರ್ಥಹಳ್ಳಿ ಸಮೀಪದ ಹೊಸಗದ್ದೆಯ ಪ್ರಭಾ, ಕೊಪ್ಪ ತಾಲ್ಲೂಕಿನ ನಿಲುಗುಳಿ ಪದ್ಮನಾಭ, ಶೃಂಗೇರಿ ಸಮೀಪದ ಮುಂಡಗಾರು ಲತಾ, ಮೂಡಿಗೆರೆಯ ಕನ್ಯಾಕುಮಾರಿ ಮತ್ತು ಎ.ಎಸ್. ಸುರೇಶ, ಬೆಂಗಳೂರಿನ ರಮೇಶ್ ಅಲಿಯಾಸ್ ಶ್ರೀನಿವಾಸ್ ಮತ್ತು ಈಶ್ವರ್, ಕಳಸದ ಸಾವಿತ್ರಿ, ವನಜಾ ಅಲಿಯಾಸ್ ಜಲಜಾಕ್ಷಿ, ಭಾರತಿ, ಮನೋಜ್, ರಾಯಚೂರು ಜಿಲ್ಲೆಯ ಕಲ್ಪನಾ, ಜಾನ್ ಅಲಿಯಾಸ್ ಜಯಮ್ಮ, ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದ ರವೀಂದ್ರ, ಚಿತ್ರದುರ್ಗ ಮೂಲದ ಇಂಜಿನಿಯರಿಂಗ್ ಪದವಿ ತೊರೆದು ಬಂದ ನೂರ್ ಜುಲ್ಫಿಕರ್, ತಮಿಳುನಾಡಿನ ಮಧುರೈನ ವೀರಮಣಿ ಅಲಿಯಾಸ್ ಮುರುಗನ್ (ಈತ ಗಂಗಾಧರ್ ಹೆಸರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುತ್ತಾನೆ), ಕೇರಳದ ನಂದಕುಮಾರ್, ಆತನ ಸಂಗಾತಿ ಶಿವಮೊಗ್ಗ ಮೂಲದ ಸಿಖ್ ಜನಾಂಗದ ಆಶಾ, ತಮಿಳುನಾಡಿನ ಧರ್ಮಪುರಿಯ ಕುಪ್ಪಸ್ವಾಮಿ, ಮುಖ್ಯರಾದವರು. (ಇವರಲ್ಲಿ ಈದು ಎನ್‌ಕೌಂಟರ್ ನಲ್ಲಿ ಗಾಯಗೊಂಡಿದ್ದ ಸೊರಬದ ವಿಷ್ಣು ಅಲಿಯಾಸ್ ದೇವೆಂದ್ರಪ್ಪ ಜೀವಂತ ವಿರುವ ಬಗ್ಗೆ ಗೊಂದಲವಿದೆ.)

ಇವರುಗಳಲ್ಲಿ ಕರ್ನಾಟಕ ಪೊಲೀಸರು ವಿಕ್ರಮ್ ಗೌಡ, ಬಿ.ಜಿ,ಕೃಷ್ನಮೂರ್ತಿ, ಹೊಸಗದ್ದೆ ಪ್ರಭಾ, ನಿಲುಗುಳಿ ಪದ್ಮನಾಭ, ಮುಂಡಗಾರು ಲತಾ, ಕನ್ಯಾಕುಮಾರಿ ಮತ್ತು ಸುರೇಶ ಇವರುಗಳ ಸುಳಿವಿಗೆ 5 ಲಕ್ಸ ರೂಪಾಯಿ ಬಹುಮಾನ ಮತ್ತು ಬೆಂಗಳೂರಿನ ರಮೇಶ್, ಈಶ್ವರ್ ಇವರಿಗೆ 3 ಲಕ್ಷ ರೂ, ಸಿರಿಮನೆ ನಾಗರಾಜು, ನೂರ್ ಜುಲ್ಫಿಕರ್, ಸುಂದರಿ, ಸಾವಿತ್ರಿ, ವನಜ, ಭಾರತಿ, ಮನೋಜ್ ಕಲ್ಪನಾ, ರವೀಂದ್ರ ಇವರುಗಳ ಸುಳಿವಿಗಾಗಿ ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಇತ್ತೀಚೆಗಿನ ದಿನಗಳ ಕರ್ನಾಟಕ ನಕ್ಸಲಿಯರ ನಡೆಯನ್ನು ಆತ್ಮಾಹುತಿಯ ಮಾರ್ಗದತ್ತ ಮುನ್ನೆಡೆಯುತ್ತಿರುವ ಮೂರ್ಖರ ಪಡೆಯೆಂದು ಘಂಟಾಘೋಷವಾಗಿ ಹೇಳಬಹುದು.

ಇಡೀ ಭಾರತದ ನಕ್ಸಲ್ ಚಳುವಳಿಯನ್ನು ಅವಲೋಕಿಸದಾಗ ನಕ್ಸಲಿಯರ ಬಗ್ಗೆ ಸಂಯಮ ಮತ್ತು ಮಾನವೀಯ ಅನುಕಂಪದ ನೆಲೆಯಲ್ಲಿ Western_Ghat_forestನಡೆದುಕೊಂಡ ಪೊಲೀಸರೆಂದರೇ, ಅವರು ಕರ್ನಾಟಕದ ಪೊಲೀಸರು ಮಾತ್ರ ಎಂದು ನಿಸ್ಸಂಕೋಚವಾಗಿ ಹೇಳಬಹುದು. ನಕ್ಸಲ್ ಚರಿತ್ರೆಯಲ್ಲಿ ಆಂಧ್ರ ಪೊಲೀಸರ ಬರ್ಭರತೆ ಮತ್ತು ರಾಕ್ಷಸಿ ಗುಣ ಹಾಗೂ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಡದ ಪೊಲೀಸರ ಅನಾಗರೀಕ ವರ್ತನೆಯನ್ನು ಭಾರತದ ಇತಿಹಾಸದಲ್ಲಿ ಯಾವೊಬ್ಬ ನಾಗರೀಕ ಕ್ಷಮಿಸಲಾರ. ದೇಶದಲ್ಲಿ ಪ್ರಪಥಮ ಬಾರಿಗೆ ನಕ್ಸಲರ ಶರಣಗಾತಿಗೆ ಅವಕಾಶ ಕಲ್ಪಿಸಿಕೊಟ್ಟ ಮತ್ತು ಶರಣಾದ ನಕ್ಸಲಿಗರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಸರ್ಕಾರ, ಈ ಅವಕಾಶವನ್ನು 2008 ಮತ್ತು 2009 ರಲ್ಲಿ ಸಮರ್ಥವಾಗಿ ಬಳಸಿಕೊಂಡ ಹಾಗಲಗಂಚಿ ವೆಂಕಟೇಶ, ಹೊರಳೆ ಜಯ, ಮಲ್ಲಿಕಾ ಮತ್ತು ಕೋಮಲಾ ಈದಿನ ನಮ್ಮಗಳ ನಡುವೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಇಂತಹ ಮಾನವೀಯ ನೆಲೆಯ ನಿರ್ಧಾರದ ಹಿಂದೆ, ಕರ್ನಾಟಕ ಕಂಡ ಅಪರೂಪದ ದಕ್ಷ ಹಾಗೂ ಮಾತೃ ಹೃದಯದ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರ ಶ್ರಮವಿದೆ. ತಾವು ಸೇವೆಯಿಂದ ನಿವೃತ್ತರಾಗುವ ಕೆಲವೇ ದಿನಗಳ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ನಮ್ಮ ಯುವಕರು ಮಾವೋವಾದಿ ನಕ್ಸಲರಾಗಿ ಪೊಲೀಸರ ಗುಂಡಿಗೆ ಬಲಿಯಾಗುವುದು ವೈಯಕ್ತಿವಾಗಿ ನನಗೆ ನೋವು ತರುವ ವಿಚಾರ ಎಂದು ಹೇಳಿಕೊಂಡಿದ್ದರು. ಹೋರಾಟ, ಕ್ರಾಂತಿ ನೆಪದಲ್ಲಿ ದಾರಿ ತಪ್ಪಿರುವ ಯುವಕರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಬಿದರಿಯವರಿಗೆ ಇತ್ತು. ನಿವೃತ್ತಿಯ ನಂತರವೂ ಅವರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.

ಕಳೆದ ನವಂಬರ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶ್ವರ ಬಳಿಯ ಬಿಸಿಲೆ ಘಾಟ್ ಬಳಿ ಪೊಲೀಸರು ಸೃಷ್ಟಿಸಿದ ಚಕ್ರವ್ಯೂಹಕ್ಕೆ ಸಿಲುಕಿ ಸಾಯುವ ಸಂದರ್ಭದಲ್ಲಿ ಶರಣಾಗತಿಯ ನಾಟಕವಾಡಿ ತಪ್ಪಿಸಿಕೊಂಡ ನಕ್ಸಲರ ಬಗ್ಗೆ ಯಾವೊಬ್ಬ ಪ್ರಜ್ಙಾವಂತ ನಾಗರೀಕ ಅನುಕಂಪ ಅಥವಾ ಗೌರವ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಒಂದು ವಾರ ಕಾಲ ನಕ್ಸಲರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಕ್ಕೆ ಶಂಕರ್ ಬಿದರಿಯವರ ಕಳಕಳಿಯ ಮನವಿ ಕಾರಣವಾಗಿತ್ತು. ಕರ್ತವ್ಯ ಮತ್ತು ಕಾನೂನು ವಿಷಯದಲ್ಲಿ ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತಿದ್ದ ಶಂಕರ್ ಬಿದರಿಯವರು ಸಹಾಯ ಅಥವಾ ಮಾನವೀಯತೆಯ ವಿಷಯದಲ್ಲಿ ಒಬ್ಬ ಅಪ್ಪಟ ಹೃದಯವಂತ ತಂದೆಯಂತೆ ವರ್ತಿಸುತ್ತಿದ್ದರು. ಕನ್ನಡದ ಹಿರಿಯ ಅನುಭಾವ ಕವಿ ಮತ್ತು ಬೇಂದ್ರೆಯವರ ಆತ್ಮ ಸಂಗಾತಿಯಂತಿದ್ದ ಮಧುರ ಚೆನ್ನ ಇವರ ಪುತ್ರಿಯನ್ನು ವಿವಾಹವಾಗಿರುವ ಶಂಕರ್ ಬಿದರಿ ವೀರಪ್ಪನ್ ಕಾರ್ಯಾಚರಣೆಯ ಸಂದರ್ಭದಲ್ಲಿ ತಮಗೆ ಬಹುಮಾನವಾಗಿ ಬಂದ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳಲ್ಲಿ ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಉಳಿದ ಹಣವನ್ನು ಪೊಲೀಸರ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ ಅಪರೂಪದ ವ್ಯಕ್ತಿ. (ತಾವು ಇಟ್ಟುಕೊಂಡಿದ್ದ ಹಣವನ್ನು ಸಹ ತಮ್ಮ ಮಡದಿಗೆ ಕೊಡುಗೆಯಾಗಿ ನೀಡಿದ್ದಾರೆ.) ಇಂತಹ ಮಾನವೀಯ ಮುಖವುಳ್ಳ ಅಧಿಕಾರಿಯ ಮಾರ್ಗದರ್ಶನದಲ್ಲಿ ಶರಣಾಗುವ ಅವಕಾಶವನ್ನು ತೊರೆದು ಬಂದೂಕಿನ ಜೊತೆಯಲ್ಲಿ ಗುರಿ ತಲುಪುತ್ತೇವೆ ಎಂದು ನಂಬಿ ಹೊರಟವರನ್ನು ಸಮಾಜ ನಂಬಲಾರದು. ಈ ಬಗ್ಗೆ ಮಾವೋವಾದಿ ನಕ್ಸಲರು ಮತ್ತು ಇವರಿಗೆ ಬೆಂಬಲವಾಗಿ ನಿಂತವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

ಭಾರತದಲ್ಲಿ ಪಶ್ಚಿಮ ಬಂಗಾಳಕ್ಕೆ ಮುನ್ನವೇ ನಕ್ಸಲ್ ಚಳುವಳಿಯನ್ನು ಹುಟ್ಟಿಹಾಕಿದ ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಈ ಹೋರಾಟNaxal-india ವಿಜೃಂಭಿಸಿದ ರೀತಿಯಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಏಕೆ ಯಶಸ್ವಿಯಾಗಲಿಲ್ಲ ಎಂಬುದನ್ನು ಅರಿಯಲು ನಾವು ಒಮ್ಮೆ ಇತಿಹಾಸದತ್ತ ತಿರುಗಿನೋಡಬೇಕಿದೆ. ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಜಮೀನ್ದಾರಿ ಪದ್ದತಿಯಾಗಲಿ, ಹೆಚ್ಚಿನ ಸಂಖ್ಯೆಯ ಆದಿವಾಸಿ ಜನಾಂಗವಾಗಲಿ ದಕ್ಷಿಣದ ಇತರೆ ರಾಜ್ಯಗಳಲ್ಲಿ ಇರಲಿಲ್ಲ. ತಮಿಳುನಾಡಿನಲ್ಲಿ ನಕ್ಸಲ್ ಚಳುವಳಿ ಹುಟ್ಟುವ ಮುನ್ನವೇ ಪೆರಿಯಾರ್ ರಾಮಸ್ವಾಮಿಯಂತಹವರು ಮತ್ತು ಕೇರಳದಲ್ಲಿ ನಾರಾಯಣ ಗುರು ಅಂತಹ ಮಹಾನುಭಾವರು ಸಮಾಜದ ಅಸಮಾನತೆಯ ವಿರುದ್ದ ಸಮರ ಸಾರಿ ಸಾಮಾಜಿಕ ಸುಧಾರಣೆಯಲ್ಲಿ ಯಶಸ್ವಿಯಾಗಿದ್ದರು. 1980 ರ ದಶಕದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಹುಟ್ಟು ಹಾಕುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಅಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿರುವುದರಿಂದ ನಕ್ಸಲ್ ಹೋರಾಟಗಾರರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಜನರ ಸಮಸ್ಯೆಗಳ ಬಗ್ಗೆ ಹೋರಾಡುವ ಗುಣಗಳನ್ನು ಮೈಗೂಡಿಸಿಕೊಂಡಿವೆ. ಇನ್ನು ಕೇರಳ ರಾಜ್ಯದಲ್ಲಿ 1968 ರಲ್ಲೇ ಇಂತಹ ಪ್ರಯತ್ನ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇ.ಎಂ.ಎಸ್. ನಂಬೂದರಿಪಾಡ್‌ರಂತಹ ಕಮ್ಯುನಿಸ್ಟ್ ನಾಯಕರ ನೇತೃತ್ವದಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಕೇರಳದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಗೇಣಿದಾರರ ಸಮಸ್ಯೆಯನ್ನು ಕಮ್ಯೂನಿಷ್ಟ್ ಸರ್ಕಾರ ಬಗೆಹರಿಸಿತು. ಚಾರು ಮುಜಂದಾರ್‌ರ ಅನುಯಾಯಿಗಳು ಹಾಗೂ ಹಿರಿಯ ಮಾವೋವಾದಿ ನಾಯಕರಾದ ವೇಣು ಮತ್ತು ಕೆ. ಅಜಿತಾ ಎಂಬುವರು ( ಅಜಿತಾ 9 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಹಿರಿಯ ನಾಯಕಿ) ಕೇರಳದಲ್ಲಿ ನಕ್ಸಲ್ ಚಳುವಳಿ ವಿಫಲವಾದುದರ ಕುರಿತು ಬಣ್ಣಿಸುವುದು ಹೀಗೆ: “ಕೇರಳದ ಉತ್ತರದ ಜಿಲ್ಲೆಗಳಲಿ ಆದಿವಾಸಿಗಳ ಮತ್ತು ಗೇಣಿದಾರರ ಸಮಸ್ಯೆ ಇತ್ತು ನಿಜ. ಆದರೆ ಅಧಿಕಾರದಲ್ಲಿ ಎಡಪಕ್ಷವಿದ್ದುದರಿಂದ ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗೆ ಮತ್ತು ಹೋರಾಟಕ್ಕೆ ಬಹಿರಂಗವಾಗಿ ಅವಕಾಶವಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಅರಣ್ಯದಲ್ಲಿ ಮರೆಯಾಗಿ ಹಿಂಸಾತ್ಮಕ ಹೋರಾಟ ನಡೆಸುವ ಅವಶ್ಯಕತೆ ನಮಗೆ ಕಾಣಲಿಲ್ಲ.”

ಇಂತಹ ಸತ್ಯದ ಅನುಭವದ ಮಾತುಗಳನ್ನು ಕರ್ನಾಟಕದಲ್ಲಿ ಹೋರಾಡುತ್ತಿರುವ ಮಾವೋವಾದಿಗಳು ಮನಗಾಣಬೇಕಿದೆ. ಕರ್ನಾಟಕ ರಾಜ್ಯಕ್ಕೆ ನಕ್ಸಲ್ ಹೊರಾಟ ಕಾಲಿಡುವ ಮುನ್ನವೆ ಈ ನೆಲದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಇದ್ದವು. ಪರಿಸರದ ಉಳಿವಿಗಾಗಿ, ದಲಿತರು ಹಕ್ಕು ಮತ್ತು ರಕ್ಷಣೆಗಾಗಿ, ಕೃಷಿ ಕೂಲಿಕಾರ್ಮಿಕರ ಸೂಕ್ತ ವೇತನಕ್ಕಾಗಿ, ಮತ್ತು ತಾನು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದೆ ಪರದಾಡುತ್ತಿದ್ದ ರೈತರು, ಗೇಣಿದಾರರ ಸಮಸ್ಯೆ, ಆರಣ್ಯದಿಂದ ಒಕ್ಕಲೆಬ್ಬಿಸಲಾದ ಅರಣ್ಯವಾಸಿಗಳ ಸಮಸ್ಯೆ, ಎಲ್ಲವೂ ಇದ್ದವು. ಅವುಗಳಿಗೆ ಯಾರೂ ಬಂದೂಕಿನಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಿಲ್ಲ. ಅವುಗಳಿಗೆ ಪ್ರಜಾಪ್ರಭುತ್ವ ನೀಡಿರುವ ಸಂವಿಧಾನ ಬದ್ದ ಹಕ್ಕುಗಳ ಅಡಿಯಲ್ಲಿ ಸೂಕ್ತವಾದ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅನೇಕ ಹೋರಾಟದ ವೇದಿಕೆಗಳು ಅಸ್ತಿತ್ವದಲ್ಲಿ ಇದ್ದವು. ಈಗಲೂ ಇವೆ ಎಂಬ ಸತ್ಯವನ್ನು ಕನಾಟಕದ ಮಾವೋವಾದಿಗಳು ಅರಿಯಬೇಕಿದೆ.

ಸುಮಾರು ಮುವತ್ತು ವರ್ಷಗಳಿಂದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಉನ್ನತಿಗಾಗಿ ಶ್ರಮಿಸುತ್ತಿರುವ ಡಾ.ಸುದರ್ಶನ್ ಮತ್ತು ಹೆಗ್ಗಡದೇವನಕೋಟೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗಾಗಿ ಗೆಳಯರ ತಂಡ ಕಟ್ಟಿಕೊಂಡು ಸ್ವಯಂ ಸೇವಾ ಸಂಸ್ಥೆ ಮೂಲಕ ದುಡಿಯುತ್ತಿರುವ ಡಾ.ಬಾಲಸುಬ್ರಮಣ್ಯಂ ಇವರುಗಳ ಬದುಕು, ತ್ಯಾಗ ಮನೋಭಾವ ಇವೆಲ್ಲವನ್ನು ಮಾವೋವಾದಿಗಳು ತಮ್ಮ ಚಿಂತನಾ ಧಾರೆಯಲ್ಲಿ ಅಳವಡಿಸಿಕೊಳ್ಳುವುದು ಒಳಿತು. ಚಾಮರಾಜನಗರದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಪ್ರೊ.ಜಯದೇವ ಇವರು ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಬುಡಕಟ್ಟು ಜನಾಂಗಗಳ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಯದೇವರವರು, ಈ ಮಕ್ಕಳಿಗಾಗಿ ವಿವಾಹವಾಗದೆ ಅವಿವಾಹಿತರಾಗಿ ಉಳಿದು ಚಾಮರಾಜನಗರದಲ್ಲಿ ಎಲೆಮರೆ ಕಾಯಿಯಂತೆ ವಾಸಿಸುತ್ತಾ ಐವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದಾರೆ. ಈ ಮೂವರು ಮಹನೀಯರು ಗಿರಿಜನ ಅಭಿವೃದ್ಧಿಗಾಗಿ ಮೂರು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ಎಂದೂ ವ್ಯವಸ್ಥೆಯ ವಿರುದ್ಧ ಕೈಗೆ ಬಂದೂಕ ತೆಗೆದುಕೊಳ್ಳಲಿಲ್ಲ. ಏಕೆಂದರೇ, ಉರಿಯುವ ಬೆಂಕಿಯಂತೆ ತಣ್ಣನೆಯ ಮಂಜುಗೆಡ್ಡೆ ಕೂಡ ಶಕ್ತಿಶಾಲಿ ಎಂಬುದನ್ನು ಬಲ್ಲ ಪ್ರಜ್ಞಾವಂತರಿವರು.

ಹೋರಾಟಗಳ ಬಗ್ಗೆ ಪ್ರವಾದಿಯೊಬ್ಬನ ಪ್ರವಚನದ ಹಾಗೆ ಅಥವಾ ನಮ್ಮ ಧಾರವಾಡದ ಎಮ್ಮೆಗಳು ಒಂದೂವರೆ ಕಿಲೋಮೀಟರ್ ಉದ್ದ ಸಗಣಿ ಹಾಕುವ ರೀತಿ ಮಾತನಾಡುವುದು ಅತಿಸುಲಭ. ಕ್ರಾಂತಿಯ ಕುರಿತು ಇಂತಹ ಮಾತುಗಳನ್ನಾಡುವ ಮುನ್ನ ಈವರೆಗೆ ಕರ್ನಾಟಕದಲ್ಲಿ naxals-indiaನಕ್ಸಲರ ಗುಂಡಿಗೆ ಬಲಿಯಾದ ರಾಯಚೂರು ಜಿಲ್ಲೆ ಮತ್ತು ಮಂಗಳೂರು, ಉಡುಪಿ ಜಿಲ್ಲೆಗಳ ಯುವಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಯಾರಾದರೂ ಹೋಗಿ ನೋಡಿದ ಉದಾಹರಣೆಗಳು ಇವೆಯಾ? ಗುಂಡಿಗೆ ಬಲಿಯಾದ ಯುವಕರ ಅಮಾಯಕ ಕುಟುಂಬಗಳು ಪೊಲೀಸರಿಗೆ ಹೆದರಿ ತಮ್ಮ ಮಕ್ಕಳ ಶವಗಳನ್ನು ತಮ್ಮ ಸುಪರ್ದಿಗೆ ಪಡೆಯಲು ಹಿಂಜರಿದ ಬಗ್ಗೆ ಎಲ್ಲಿಯೂ ವರದಿಯಾಗಲಿಲ್ಲ. ಕಳೆದ ನವಂಬರ್‌ನಲ್ಲಿ ಉಡುಪಿ ಜಿಲ್ಲೆಯ ಸುಬ್ರಮಣ್ಯದ ಬಳಿ ಗುಂಡಿಗೆ ಬಲಿಯಾದ ರಾಯಚೂರಿನ ಯುವಕ ಎಲ್ಲಪ್ಪನ ಶವವನ್ನು ತನ್ನೂರಿಗೆ ಕೊಂಡೊಯ್ಯಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಅವನ ಸಹೋದರ ತಾಯಪ್ಪ ಎಂಬಾತ ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಾ ನಿಂತಿದ್ದಾಗ, ನಕ್ಸಲ್ ಚಳುವಳಿ ಕುರಿತ ಅಥವಾ ಕ್ರಾಂತಿ ಕುರಿತಾದ ಯಾವ ಭಾಷಣಗಳು, ಹೇಳಿಕೆಗಳು ಆತನ ನೆರವಿಗೆ ಬರಲಿಲ್ಲ. ಕೆಲವರ ತೆವಲಿಗೆ ಮತ್ತು ಅಪ್ರಬುದ್ಧ ಪ್ರಯೋಗಗಳಿಗೆ ಬಡವರ ಕುಟುಂಬಗಳ ಮುಗ್ಧ ಹುಡುಗರು ಬಲಿ ಕೊಡುತ್ತಿರುವ ಇಂತಹ ಹೋರಾಟ ಮತ್ತು ಚಳುವಳಿಗಳಿಗೆ ಯಾವ ಅರ್ಥವಿದೆ? ಇದರಿಂದ ಭವಿಷ್ಯದಲ್ಲಿ ಪ್ರಯೋಜನವಿದೆಯಾ? ಯಾವುದೋ ಒಂದು ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದ ಹೋರಾಟ ಮತ್ತು ಚಿಂತನೆಗಳನ್ನು ಆಯಾ ಕಾಲಕ್ಕೆ ಅನುಗುಣವಾಗಿ ಪರಿಷ್ಕರಿಸದೆ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋದರೆ, ಅಲ್ಲಿ ಸಫಲತೆಗಿಂತ ವಿಫಲತೆಯನ್ನು ನಾವು ಕಾಣಬೇಕಾಗುತ್ತದೆ. ಪ್ರತಿಯೊಂದು ದಶಕದಲ್ಲಿ ಈ ನೆಲಕ್ಕೆ ಹೊಸ ತಲೆಮಾರು ಸಮಾಜಕ್ಕೆ ಸೇರ್ಪಡೆಯಾಗುತ್ತಿದ್ದು ಅದರ ಚಿಂತನಾಕ್ರಮ ನಮ್ಮ ಹಳೆಯ ಆಲೋಚನಾ ಕ್ರಮಗಳಿಗಿಂತ ಭಿನ್ನವಾಗಿದೆ. ಈಗಿನ ಯುವ ಶಕ್ತಿಗೆ ಸರ್ಕಾರವನ್ನು ಅಥವಾ ಸಮಾಜವನ್ನು ಮಣಿಸಲು ಯಾವುದೇ ಆಯುಧ ಬೇಕಾಗಿಲ್ಲ ಎಂಬ ಸತ್ಯವನ್ನು ನಾವು ಅರಿಯದಿದ್ದರೇ ವರ್ತಮಾನದ ನಾಗರೀಕ ಸಮಾಜದಲ್ಲಿ ಬದುಕಲು ನಾವು ಅಯೋಗ್ಯರು ಎಂದರ್ಥ.

ದಶಕಗಳಿಂದ ಮಹಿಳಾ ಮೀಸಲಾತಿ ಕುರಿತ ಮಸೂದೆಯೊಂದು ಎಲ್ಲಾ ರಾಜಕೀಯ ಪಕ್ಷಗಳ ಅಗೋಚರ ಅಪವಿತ್ರ ಮೈತ್ರಿಯಿಂದಾಗಿ ಸಂಸತ್ತಿನಲ್ಲಿ ಕೊಳೆಯುತ್ತಾ ಬಿದ್ದಿದೆ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರದಿಂದ ಸಿಡಿದೆದ್ದ ದೇಶದ ಯುವಜನತೆ, ಕೇವಲ ಸರ್ಕಾರಗಳನ್ನು ಮಾತ್ರವಲ್ಲ, ನ್ಯಾಯಲಯಗಳು, ಸಮಾಜ ಎಲ್ಲವೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಇಡೀ ದೇಶಾದ್ಯಂತ ಬೀದಿಗಿಳಿದು ಹೋರಾಡಿದ ಯುವಕ ಮತ್ತು ಯುವತಿಯರ ಕೈಗಳಲ್ಲಿ ಆಯುಧ ಅಥವಾ ಬಂದೂಕಗಳಿರಲಿಲ್ಲ, ಬದಲಾಗಿ ಭಿತ್ತಿ ಪತ್ರ ಮತ್ತು ಉರಿಯುವ ಮೇಣದ ಬತ್ತಿಗಳಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ವ್ಯವಸ್ಥೆಯನ್ನು ಮಣಿಸಬೇಕೆಂಬ ಸಾತ್ವಿಕ ಸಿಟ್ಟಿತ್ತು. ಕಣ್ಣೆದುರುಗಿನ ಇಂತಹ ವಾಸ್ತವ ಸತ್ಯಗಳನ್ನು ಗ್ರಹಿಸದೆ ಕ್ರಾಂತಿಯ ಬಗ್ಗೆ, ಹೋರಾಟಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು, ಇಲ್ಲವೇ ಬರೆಯುವುದೆಂದರೆ, ಅದು ಗಾಳಿಯಲ್ಲಿ ಕತ್ತಿ ತಿರುಗಿಸುವ ಕೆಲಸವಾಗಬಲ್ಲದು ಅಷ್ಟೇ.

(ಮುಂದಿನ ವಾರ ಅಂತಿಮ ಅಧ್ಯಾಯ)

ಪ್ರಜಾ ಸಮರ – 17 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

2005 ರ ಪೆಬ್ರವರಿ 5 ಮತ್ತು 6 ರ ನಡುರಾತ್ರಿ ಚಿಕ್ಕಮಗಳೂರು ಅರಣ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಸಾಕೇತ್ ರಾಜ್‌ರ ಶವವನ್ನು ತಕ್ಷಣಕ್ಕೆ ಪೊಲೀಸರಿಗೆ ಗುರುತಿಸಲು ಸಾಧ್ಯವಾಗಲಿಲ್ಲ. SakethRajanಏಕೆಂದರೆ, ಸಾಕೇತ್ “ಪ್ರೇಮ್” ಎಂಬ ಹೆಸರಿನಲ್ಲಿ ತಂಡದೊಂದಿಗೆ ಅಲ್ಲಿ ಬೀಡು ಬಿಟ್ಟಿದ್ದರು. ಸಾಯುವ ಕೆಲ ದಿನಗಳ ಹಿಂದೆ ತಾವಿದ್ದ ಅಡಗುತಾಣಕ್ಕೆ ಕರೆಸಿಕೊಂಡಿದ್ದ ಆಯ್ದ ಪತ್ರಕರ್ತರಿಗೂ ಸಹ ತಾನು ಪ್ರೇಮ್ ಎಂದು ಪರಿಚಯಿಸಿಕೊಂಡಿದ್ದರು. ಪತ್ರಕರ್ತರ ತಂಡದಲ್ಲಿದ್ದ ಗೌರಿ ಲಂಕೇಶ್ ಮಾತ್ರ ನಿಜಸಂಗತಿ ಗೊತ್ತಿತ್ತು. ಆ ದಿನ ಸತತ ಐದು ಗಂಟೆಗಳ ಕಾಲ ಪತ್ರಕರ್ತರ ಜೊತೆ ಮಾತನಾಡಿದ್ದ ಸಾಕೇತ್, “ನನಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನಂಬಿಕೆ ಇದೆ, ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಉಳ್ಳವರ ಮತ್ತು ಸುಲಿಯುವವರ ಆಯುಧವಾಗಿದೆ,” ಎಂದು ತಮ್ಮ ಅತೃಪ್ತಿಯನ್ನು ಹೊರ ಹಾಕಿದ್ದರು. ಪತ್ರಕರ್ತರಿಗೆ ತಮ್ಮ ಭಾವಚಿತ್ರ ತೆಗೆಯದಂತೆ ಸಾಕೇತ್ ವಿನಂತಿಕೊಂಡಿದ್ದರು. ಆದರೆ ತಮ್ಮ ಸಹಪಾಠಿ ಗೌರಿ ಲಂಕೇಶ್‌ಗೆ ಮಾತ್ರ ಇತರರಿಗೆ ತಿಳಿಯದಂತೆ ಎರಡು ಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದ್ದರು. ಕೊನೆಗೆ ಸಾಕೇತ್ ನೆನಪಾಗಿ ಅವರ ಗೆಳೆಯರಿಗೆ ಉಳಿದದ್ದು ಇಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳು ಮಾತ್ರ.saketh-jnu

ಸಾಕೇತ್ ರಾಜ್ ನಕ್ಸಲ್ ಚಳುವಳಿಯಲ್ಲಿ ಗುರುತಿಸಿಕೊಳ್ಳುವ ಮುನ್ನ ಮೈಸೂರಿನಲ್ಲಿ ತಮ್ಮ ತಂದೆಗೆ ಮಿಲಿಟರಿ ಅಧಿಕಾರಿ ಕೋಟಾದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಪೆಟ್ರೋಲ್ ಬಂಕ್‌ನಲ್ಲಿ ಬರುತ್ತಿದ್ದ ಆದಾಯದ ಹಣವನ್ನು ತಮ್ಮ ದಿನ ನಿತ್ಯದ ಖರ್ಚಿಗೆ ಬಳಸುತಿದ್ದರು. ಆದರೆ ಅವರು ಕೈಗೆ ಬಂದೂಕ ಹಿಡಿದ ನಂತರ ತಾಯಿಗಾಗಲಿ, ಸಹೋದರನಿಗಾಗಲಿ ಅಥವಾ ಪೆಟ್ರೋಲ್ ಬಂಕ್ ಸಿಬ್ಬಂದಿಗಾಗಲಿ ಒಂದು ಪತ್ರ ಬರೆಯಲಿಲ್ಲ, ಅಥವಾ ಹಣದ ಸಹಾಯ ಕೇಳಲಿಲ್ಲ ಜೊತೆಗೆ ತಾನು ಎಲ್ಲಿದ್ದೀನಿ ಎಂಬುದರ ಕುರಿತು ಒಂದು ಸಣ್ಣ ಸುಳಿವನ್ನೂ ಸಹ ನೀಡಿರಲಿಲ್ಲ.

ಸಾಕೇತ್ ನಿಧನರಾದ ಸುಮಾರು 12 ಗಂಟೆಗಳ ನಂತರ ಪೊಲೀಸರಿಗೆ ಅವರ ಗುರುತು ಸಿಕ್ಕಿತು. ಕರ್ನಾಟಕದ ಹಿರಿಯ ಐ.ಪಿ.ಎಸ್. ಪೊಲೀಸ್ ಅಧಿಕಾರಿಯೊಬ್ಬರು ಮೈಸೂರಿನ ಕಾಲೇಜು ದಿನಗಳಲ್ಲಿ ಸಾಕೇತ್‌ಗೆ ಸಹಪಾಠಿಯಾಗಿದ್ದರು. ಸಾಕೇತ್ ಶವದ ಭಾವ ಚಿತ್ರ ನೋಡಿ ಗುರುತಿಸಿದವರಲ್ಲಿ ಅವರು ಕೂಡ ಒಬ್ಬರು. ಇನ್ನೊಬ್ಬ ಸಹಪಾಠಿ ಹೊರ ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕೇತ್ ಸಾವಿನಿಂದ ಮನನೊಂದ ಐ.ಎ.ಎಸ್. ಅಧಿಕಾರಿ, ತಮ್ಮ ಬ್ಲಾಗ್‌ನಲ್ಲಿ ತಾನು ಮತ್ತು ಪೊಲೀಸ್ ಅಧಿಕಾರಿ ಇಬ್ಬರೂ ಸಾಕೇತ್ ರಾಜ್‌ಗೆ ಹೇಗೆ ಮಿತ್ರರಾದೆವು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತನ್ನ ಅಸ್ಖಲಿತ ಇಂಗ್ಲೀಷ್ ಭಾಷೆಯ ಮೂಲಕ ಎಲ್ಲಾ ಚರ್ಚಾ ಸ್ಪರ್ಧೆಗಳಲ್ಲಿ ಸಾಕೇತ್ ಜಯ ಗಳಿಸುತ್ತಿದ್ದುದನ್ನು ಹಾಗೂ ದೇಶದ ಸಮಸ್ಯೆಗಳನ್ನು ಅರಿತು ಆಳವಾಗಿ, ಗಂಭೀರವಾಗಿ ವಿಮರ್ಶೆ ಮಾಡುತ್ತಿದ್ದ ಬಗೆಯನ್ನು ಅವರು ವಿವರಿಸಿದ್ದಾರೆ.

ಪೆಬ್ರವರಿ ಎಂಟರಂದು ಸಾಕೇತ್ ಶವವನ್ನು ಮರೋಣತ್ತರ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ತರಲಾಗಿತ್ತು. ಅಷ್ಟರ ವೇಳೆಗೆ ಮೈಸೂರಿನಿಂದ ಅವರ ತಾಯಿಯವರು ಶವವನ್ನು ಪೊಲೀಸರು ಅಂತ್ಯಕ್ರಿಯೆ ಮಾಡಬಹುದೆಂದು ಸರ್ಕಾರಕ್ಕೆ ಪತ್ರ ಬರೆದು ಫ್ಯಾಕ್ಸ್ ಮಾಡಿದ್ದರು.

ಅಷ್ಟರ ವೇಳೆಗೆ ಹೈದರಾಬಾದಿನಿಂದ ನಕ್ಸಲ್ ಚಳುವಳಿ ಪರ ಸಹಾನುಭೂತಿಯುಳ್ಳ ಕವಿ ವರವರರಾವ್ ಮತ್ತು ಗಾಯಕ ಗದ್ದಾರ್ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಹಲವು ಸಮಾನ ಮನಸ್ಕರು ಒಡಗೂಡಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ರನ್ನು ಭೇಟಿ ಮಾಡಿ, ಅಂತ್ಯಕ್ರಿಯೆಗಾಗಿ ಸಾಕೇತ್ ಅವರ ಶವವನ್ನು ತಮಗೆ ಒಪ್ಪಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ಸರ್ಕಾರ್ ಮನವಿಯನ್ನು ತಿರಸ್ಕರಿಸಿತು. Saket_gaddarಕೊನೆಗೆ ವರವರರಾವ್ ಮತ್ತು ಗದ್ದಾರ್ ಸೇರಿದಂತೆ ಗೌರಿ ಲಂಕೇಶ್ ಎಲ್ಲರೂ ಸಾಕೇತ್ ಅವರ ಮೃತ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು. ಮುಖ್ಯಮಂತ್ರಿ ಧರ್ಮಸಿಂಗ್ ಇದಕ್ಕೆ ಸಮ್ಮತಿ ಸೂಚಿಸಿದರು. ಆದರೆ, ಇತ್ತ ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಮರೋಣತ್ತರ ಪರೀಕ್ಷೆ ಮುಗಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಪೊಲೀಸರು, ಗೌರಿ ಲಂಕೇಶ್ ಮತ್ತು ಇತರರು ಆಸ್ಪತ್ರೆಗೆ ಬರುತ್ತಿರುವ ಸುದ್ಧಿ ತಿಳಿದು, ತರಾತುರಿಯಲ್ಲಿ ಫ್ರೇಜರ್ ಟೌನ್‌ನಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಸಾಕೇತ್ ಶವವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟರು.

ಕರ್ನಾಟಕ ಪೊಲೀಸರ ಈ ಸಣ್ಣತನದ ಬಗ್ಗೆ ಸಿಟ್ಟಿಗೆದ್ದ ಸಾಕೇತ್ ರಾಜನ್ ಅವರ ಅಭಿಮಾನಿಗಳು ಮತ್ತು ಗೆಳೆಯರು ಪೊಲೀಸರ ಕಾರಿಗೆ ಅಡ್ಡ ಕುಳಿತು ದಿನವಿಡಿ ಪ್ರತಿಭಟನೆ ನಡೆಸಿದರು. ಗದ್ದಾರ್ ಗತಿಸಿ ಹೋದ ಗೆಳೆಯನ ಕುರಿತು ಪ್ರತಿಭಟನೆಯಲ್ಲಿ ಕುಳಿತಿದ್ದವರ ಕಣ್ನು ಒದ್ದೆಯಾಗುವಂತೆ ತೆಲುಗು ಭಾಷೆಯಲ್ಲಿ ಹುತಾತ್ಮ ಗೀತೆಗಳನ್ನು ಹಾಡುತ್ತಾ, ನರ್ತಿಸುತ್ತಾ ಸಾಕೇತ್‌ಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಸಾಕೇತ್‌ರ ನೆನಪಿಗಾಗಿ ಚಿತಾಗಾರದಿಂದ saaket_ashesಚಿತಾ ಭಸ್ಮವನ್ನು ಪಡೆಯಲಾಯಿತು.

ಸಾಕೇತ್‌ ರಾಜ್‌ರ ಸಾವು ರಾಷ್ಟ್ರದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳಲ್ಲಿ ಸುದ್ದಿಯಾಗುವುದರ ಜೊತೆಗೆ ಚರ್ಚೆಯಾಯಿತು. ದೆಹಲಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸಾಕೇತ್ ಬಗ್ಗೆ ಲೇಖನ ಬರೆದು ಶ್ರದ್ಧಾಂಜಲಿ ಸಲ್ಲಿಸಿತು. ಇವೊತ್ತಿಗೂ ಮೈಸೂರಿನ ಕುಕ್ಕರಹಳಿ ಕೆರೆ ಬಳಿ ಹೋದಾಗ ಗೆಳೆಯರಿಗೆ ತಕ್ಷಣ ನೆನಪಿಗೆ ಬರುವುದು ಕುವೆಂಪು ಮತ್ತು ಸಾಕೇತ್. ಏಕೆಂದರೆ ಈ ಇಬ್ಬರೂ ಆ ಕೆರೆಯನ್ನು ಅಪಾರವಾಗಿ ಪ್ರೀತಿಸುತಿದ್ದರು. ಅದೇ ರೀತಿ ಅವರ ಪೆಟ್ರೋಲ್ ಬಂಕ್ ಮುಂದೆ ಹಾಯ್ದು ಹೋಗುವಾಗ ಗೆಳೆಯರ ಜೊತೆ ಚಹಾ ಕುಡಿಯುತ್ತಾ ಹರಟುತ್ತಾ ಕುಳಿತಿರುತಿದ್ದ ಸಾಕಿಯ ಚಿತ್ರಗಳು ನೆನಪಿಗೆ ಬರುತ್ತವೆ.

ಕರ್ನಾಟಕದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಸಾಕಿಯ ರೀತಿಯಲ್ಲಿ ಕಳೆದು ಹೋದ ಮತ್ತೊಬ್ಬ ಗೆಳೆಯನ ಹೆಸರು ಸಿರಿಮನೆ ನಾಗರಾಜ್. ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಆತ್ಮೀಯ ಮಿತ್ರರ ಬಳಗದಲ್ಲಿ ನಾಗರಾಜ್ ಕೂಡ ಒಬ್ಬರು. ನಾಗರಾಜ್ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕೊಪ್ಪ ಪಟ್ಟಣದಲ್ಲಿ ಮುಂಜಾವು ಎಂಬ ವಾರಪತ್ರಿಕೆಯನ್ನು ಹೊರತರುತಿದ್ದರು. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ, ಬಾಳೇಹೊನ್ನೂರು, ಹರಿಹರಪುರ, ಕಳಸ ಮುಂತಾದ ಪ್ರದೇಶಗಳಲ್ಲಿ ಪತ್ರಿಕೆ ಹೆಸರುವಾಸಿಯಾಗಿತ್ತು. ಸಿರಿಮನೆ ಎಂಬ ಗ್ರಾಮದ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ನಾಗರಾಜ್ ಜಾತಿ ಧರ್ಮಗಳ ಹಂಗು ತೊರೆದು ತನ್ನ ಯೌವನದ ದಿನಗಳಿಂದಲೆ ಸಮಾಜದ ಅಸಮಾನತೆಗಳ ವಿರುದ್ದ ಹೋರಾಡುತ್ತಾ ಬಂದವರು. ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಪರ ಹೋರಾಡುವುದರ ಮೂಲಕ ಕಾಫಿ ಪ್ಲಾಂಟರ್‌ಗಳಲ್ಲಿ ಭಯ ಮತ್ತು ನಡುಕ ಹುಟ್ಟಿಸಿದವರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 1980 ರ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೋರಾಟದ ಮೂಲಕ ಪ್ರಬಲವಾಗಿ ಬೇರೂರಿತ್ತು. ಸುಂದರೇಶ್ ಎಂಬ ಅಪ್ರತಿಮ ಪ್ರತಿಭಾವಂತ ಯುವ ನಾಯಕ ಇಡೀ ಜಿಲ್ಲೆಯಲ್ಲಿ ಕಾಫಿ ತೋಟದ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ರಾಜಕೀಯ ಪಕ್ಷಗಳಿಗೆ, ಸಿರಿವಂತ ಜಮೀನ್ದಾರರು ಮತ್ತು ಕಾಫಿ ಬೆಳೆಗಾರರಿಗೆ ಸಿಂಹ ಸ್ವಪ್ನವಾಗಿದ್ದ. ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಮಾತೃಹೃದಯ ಸುಂದರೇಶ್‌ಗೆ ಇತ್ತು. ಬಹುಶಃ 1985 ಅಥವಾ 86 ರಲ್ಲಿ ಇರಬೇಕು, ಸುಂದರೇಶ್ ದೆಹಲಿಗೆ ಹೋಗಿ ವಾಪಸ್ ಬರುತ್ತಿದ್ದ ಸಮಯದಲ್ಲಿ ಬೆಂಗಳೂರಿನ ಯಲಹಂಕ ಬಳಿ ಹಳಿ ತಪ್ಪಿದ ಕರ್ನಾಟಕ ಎಕ್ಸ್‌ಪ್ರಸ್ ರೈಲು ಅಪಘಾತಕ್ಕೀಡಾಯಿತು. ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಲ್ಲಿ ಸುಂದರೇಶ್ ಕೂಡ ಒಬ್ಬರು. ಸುಂದರೇಶ್‌ಗೆ ಇದ್ದ ಸಂಘಟನಾ ಚಾತುರ್ಯ ನಾಗರಾಜ್ ಮೇಲೆ ಪ್ರಭಾವ ಬೀರಿತ್ತು. ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ ಕೂಡ ಮೌಡ್ಯವನ್ನು ಕಂದಾಚಾರವನ್ನು ವಿರೋಧಿಸುತ್ತಾ ಎಲ್ಲ ಮಠ ಮಾನ್ಯ ಪೀಠಾಧಿಪತಿಗಳೆಂಬ ಆಧುನಿಕ ಸರ್ವಾಧಿಕಾರಿಗಳನ್ನು ಸಿರಿಮನೆ ನಾಗರಾಜ್ ಎದುರು ಹಾಕಿಕೊಂಡಿದ್ದರು. ಪರಿಚಯವಿಲ್ಲದಿದ್ದರೂ ಸಹ ಕಷ್ಟಕ್ಕೆ ಒಳಗಾಗುವವರ ನೆರವಿಗೆ ಓಡಿ ಹೋಗುವ ಧಾವಂತಕ್ಕೆ ಸದಾ ತುಡಿಯುತ್ತಿದ್ದರು.

1984 ರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, 17 ಮಂದಿ ಶಿಷ್ಯರ ಕೈಯಲ್ಲೂ ರಾಜಿನಾಮೆ ಕೊಡಿಸಿ ಮಂಗಳೂರಿಗೆ ಹೋಗಿ ಸಹಕಾರ ತತ್ವದ ಅಡಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, “ಮುಂಗಾರು” ದಿನಪತ್ರಿಕೆಯನ್ನು ಆರಂಭಿಸಿದರು. vaddarse_mungaruಅಲ್ಲಿಯವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ’ಊರಿಗೊಬ್ಬಳೇ ಪದ್ಮಾವತಿ’ ಎಂಬಂತೆ ಮಣಿಪಾಲದ ಪೈ ಕುಟುಂಬದ ಉದಯವಾಣಿ ದಿನಪತ್ರಿಕೆ ಅಲ್ಲಿನ ಜನರ ಜೀವನಾಡಿಯಾಗಿತ್ತು. ಮುಂಗಾರು ಆರಂಭಗೊಂಡ ಕೆಲದಿನಗಳಲ್ಲೇ ತನ್ನ ಪ್ರಗತಿಪರ ಚಿಂತನೆ, ಆಲೋಚನೆ ಹಾಗೂ ಎಲ್ಲಾ ವರ್ಗಕ್ಕೂ ಸಲ್ಲುವ ಸುದ್ದಿಗಳಿಂದ ಹೆಸರುವಾಸಿಯಾಯಿತು. ಇದರಿಂದ ಗಾಬರಿಗೊಂಡ ಪೈ ಕುಟುಂಬ ಅಲ್ಲಿನ ಮಠಾಧೀಶರು ಮತ್ತು ಧರ್ಮಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಮುಂಗಾರು ಪತ್ರಿಕೆಯ ಬಂಡಲುಗಳನ್ನು ಸಾಗಿಸದಂತೆ ಬಸ್ ಮಾಲೀಕರಿಗೆ ತಾಕೀತು ಮಾಡಿಸಿದರು. ಅಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳುರು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳದೇ ದರ್ಬಾರ್ ಆಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲಕರು ಮತ್ತು ಕಂಡಕ್ಟರ್ ಹಾಗೂ ಇತರೆ ಜನಸಾಮಾನ್ಯರು ಸೇರಿ ಸ್ಥಾಪಿಸಿದ ಸಹಕಾರಿ ಸಾರಿಗೆ ಬಸ್‌ಗಳು ಜನಪ್ರಿಯವಾಗಿದ್ದವು. (ಇವುಗಳಿಗೆ ಶಂಕರ್ ಸಹಕಾರಿ ಸಾರಿಗೆ ಎಂಬ ಹೆಸರಿದ್ದ ನೆನಪು.) ಮುಂಗಾರು ಪತ್ರಿಕೆಯ ಬಂಡಲುಗಳನ್ನು ತಡೆ ಹಿಡಿಯಲಾಗುತ್ತಿದೆ ಎಂಬ ಸುದ್ದಿ ತಿಳಿದ ನಾಗರಾಜ್ ನಮ್ಮ ಊರುಗಳಿಗೆ ಮುಂಗಾರು ಪತ್ರಿಕೆ ತರದಿದ್ದ ಮೇಲೆ ನಿಮ್ಮ ಬಸ್ ಸೇವೆ ನಮಗೆ ಬೇಡ ಎಂಬ ಮುಷ್ಕರ ಆರಂಭಿಸಿ ಎಲ್ಲಾ ಬಲಿಷ್ಟ ಶಕ್ತಿಗಳನ್ನು ಮಣಿಸಿದ್ದರು. ಮುಂಗಾರು ದಿನಪತ್ರಿಕೆ ಆರಂಭದ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗಿಂತ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಓದುಗರನ್ನು ಸಂಪಾದಿಸಿತ್ತು.

ಕೊಪ್ಪ ಹಾಗೂ ಸುತ್ತ ಮುತ್ತಲಿನ ನಾಲ್ಕು ತಾಲ್ಲೂಕುಗಳಲ್ಲಿ ಜನಪ್ರಿಯರಾಗಿದ್ದ ಸಿರಿಮನೆ ನಾಗರಾಜ್ 1986 ರಲ್ಲಿ ನನಗೆ ಹತ್ತಿರವಾಗಲು ಒಂದು ಕಾರಣವಿತ್ತು. ಪ್ರಜಾವಾಣಿ ತೊರೆದು ಮುಂಗಾರು ಸೇರಿದ್ದ ನನ್ನ ಮಿತ್ರರು ಕೇವಲ ಆರು ತಿಂಗಳ ಅವಧಿಯಲ್ಲಿ ತಾತ್ವಿಕ ಭಿನ್ನಾಭಿಪ್ರಾಯದಿಂದ ಪತ್ರಿಕೆಯಿಂದ ಹೊರಬಂದರು. ನಂತರ ಹಿರಿಯ ಮಿತ್ರ ದೇವನೂರು ಮಹಾದೇವರ ಸಲಹೆ ಮೇರೆಗೆ ಒಂದಷ್ಟು ಸಮಾನ ಮನಸ್ಕರು ಸೇರಿ ಬೆಂಗಳೂರಿನ ವಿಜಯನಗರದಲ್ಲಿ ’ಪೃಥ್ವಿ ಪ್ರಕಾಶನ ಲಿಮಿಟೆಡ್’ ಎಂಬ ಸಂಸ್ಥೆ ಯನ್ನು ಸ್ಥಾಪಿಸಿದರು. ಬೆಂಗಳೂರಿನಿಂದ ಸುದ್ದಿಸಂಗಾತಿ ವಾರಪತ್ರಿಕೆ ಆರಂಭಿಸಿದಾಗ ತಾವಾಗಿಯೇ ಮುಂದೆ ಬಂದು ಆ ಕಾಲದಲ್ಲಿ ನಲವತ್ತು ಸಾವಿರ ರೂಪಾಯಿ ಶೇರು ಬಂಡವಾಳವನ್ನು ಸಂಗ್ರಹಿಸಿಕೊಟ್ಟಿದ್ದ ಸಹೃದಯ ನಾಗರಾಜ್‌ರದು. ಸುದ್ದಿಸಂಗಾತಿಯಲ್ಲಿದ್ದ ನಾನು ನಾಲ್ಕು ದಿನಗಳ ಕಾಲ ಅವರ ಮನೆಯಲ್ಲಿದ್ದುಕೊಂಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಿರುಗಾಡುತ್ತಾ ಅವರಿಗಿದ್ದ ಪ್ರಭಾವ, ನಿಷ್ಟರುತೆ, ನೈತಿಕತೆ ಇವುಗಳಿಗೆ ಸಾಕ್ಷಿಯಾಗಿದ್ದೆ. ಸಿರಿಮನೆ ನಾಗರಾಜ್‌ರವರ ಅತಿದೊಡ್ಡ ದೌರ್ಬಲ್ಯವೆಂದರೆ, ಅನಾವಶ್ಯಕವಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಹೋರಾಡುವುದು. ಇಂತಹ ಹುಚ್ಚು ಪ್ರವೃತ್ತಿ ಅಂತಿಮವಾಗಿ ಅವರನ್ನು ನಕ್ಸಲ್ ಹೋರಾಟಕ್ಕೆ ಎಳೆದೊಯ್ದು ಬದುಕನ್ನು ಮೂರಾಬಟ್ಟೆಯಾಗಿಸಿತು.

ನಾಗರಾಜ್ ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದರ ಹಿಂದೆ ಒಂದು ಸಣ್ಣ ಇತಿಹಾಸ ಅಡಗಿದೆ. ಚಿತ್ರದುರ್ಗದ ಮೂಲದ ನನ್ನ ಇನ್ನೊಬ್ಬ ಕಿರಿಯ ಆತ್ಮೀಯ ಮಿತ್ರ Banjagere-Jayaprakashಡಾ. ಬಂಜಗೆರೆ ಜಯಪ್ರಕಾಶ್ ಮೈಸೂರಿನಲ್ಲಿ ಓದುತ್ತಿದ್ದಾಗಲೆ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ತನ್ನ ಪ್ರಖರ ವೈಚಾರಿಕತೆಯಿಂದ ಮುಂಚೂಣಿಗೆ ಬಂದ ಯುವಕ. ವಿದ್ಯಾಭ್ಯಾಸದ ನಂತರ ಅಸಮಾನತೆ, ಜಾತಿ ಸಂಘರ್ಷ, ಸಮಾಜದ ವೈರುದ್ಧ್ಯಗಳ ಕುರಿತಂತೆ ಯುಜನತೆಯಲ್ಲಿ ಪ್ರಜ್ಞೆ ಹುಟ್ಟುಹಾಕಬೇಕೆಂಬ ಕನಸು ಹೊತ್ತಿದ್ದ ಬಂಜಗೆರೆ 1987 ರ ಸಮಯದಲ್ಲಿ “ಕರ್ನಾಟಕ ವಿಮೋಚನಾ ರಂಗ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅದಕ್ಕೆ ರಾಜ್ಯ ಮಟ್ಟದ ಸ್ವರೂಪ ನೀಡಿದ್ದರು. ಈ ಸಂಘಟನೆಗೆ ಸಿರಿಮನೆ ನಾಗರಾಜ್ ಉಪಾಧ್ಯಕ್ಷರಾಗಿ ಸೇರ್ಪಡೆಯಾದರು. ಮಲೆನಾಡಿನಲ್ಲಿ ನಡೆಯುತ್ತಿದ್ದ ಪರಿಸರ ಉಳಿಸಿ ಚಳುವಳಿಗೆ ಕೆ.ವಿ.ಆರ್. ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ವಿಮೋಚನಾ ರಂಗ ಕೈಜೋಡಿಸಿತ್ತು.

ಇದೇ ವೇಳೆಗೆ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ನಗರದ ಹೊರಭಾಗದಲ್ಲಿರುವ ಕೊಲಾರ ಎಂಬ ಗ್ರಾಮದ ಬಳಿ ರಾಜ್ಯ ಸರ್ಕಾರ ಸ್ಥಾಪಿಸಿದ್ದ ಕೈಗಾರಿಕಾ ಬಡಾವಣೆಯಲ್ಲಿ ಆಂಧ್ರದ ಉದ್ಯಮಿಗಳು ತಳ ಊರಿ ಸಗಟು ಔಷಧ ತಯಾರಿಕೆಯ ಘಟಕಗಳನ್ನು ಸ್ಥಾಪಿಸಿದ್ದರು. ಈ ಕೈಗಾರಿಕೆಗಳಿಂದ ಹೊರಬೀಳುತಿದ್ದ ವಿಷಯುಕ್ತ ತ್ಯಾಜ್ಯದ ನೀರು ಸುತ್ತ ಮುತ್ತಲಿನ ಕೃಷಿ ಭೂಮಿಯನ್ನು ಕಲುಷಿತಗೊಳಿಸಿ, ಹಲವಾರು ಜಾನುವಾರುಗಳ ಸಾವಿಗೆ ಕಾರಣವಾಗಿದ್ದವು. ಅಲ್ಲಿನ ಜನರ ಮುಗ್ದತೆಯನ್ನು ಮತ್ತು ಅನಕ್ಷರತೆ ಹಾಗೂ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದ ಕೈಗಾರಿಕೋದ್ಯಮಿಗಳು ಇನ್ನಿಲ್ಲದಂತೆ ಕೊಬ್ಬಿಹೋಗಿದ್ದರು.

ಚಿಕ್ಕಮಗಳೂರಿನಿಂದ ದೂರದ ಬೀದರ್ ಜಿಲ್ಲೆಗೆ ತೆರಳಿದ ಸಿರಿಮನೆ ನಾಗರಾಜು ಕರ್ನಾಟಕ ವಿಮೋಚನಾ ರಂಗದ ಮೂಲಕ ಅಲ್ಲಿನ ಜನರನ್ನು ಸಂಘಟಿಸಿ ಹೋರಾಟ ನಡೆಸುವುದರ ಮೂಲಕ ಕೈಗಾರಿಕೆಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಸಹಜವಾಗಿ ಈ ಹೋರಾಟ ನೆರೆಯ ಗಢಿಭಾಗದ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಮಾವೋವಾದಿ ನಕ್ಸಲರ ಸಂಘಟನೆಯ ಗಮನ ಸೆಳೆದಿತ್ತು. ಹೋರಾಟದ ಜೊತೆಗೆ ಹುಂಬತನವನ್ನು ಮೈಗೂಡಿಸಿಕೊಂಡಿದ್ದ ಸಿರಿಮನೆ ನಾಗರಾಜ್, ಈ ಘಟನೆಯಿಂದಾಗಿ ಆಂಧ್ರ ನಕ್ಸಲರ ಸಂಪರ್ಕಕ್ಕೆ ಬಂದರು.

ಯಾವ ಕಾರಣಕ್ಕೂ ಅಹಿಂಸೆಯನ್ನು ಒಪ್ಪದ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಕನಸು ಕಂಡಿದ್ದ ಬಂಜಗೆರೆಗೆ ಸಿರಿಮನೆ ನಾಗರಾಜುವಿನ ನಿರ್ಧಾರ ದೊಡ್ಡ ಶಾಕ್ ನೀಡಿತು. ಅಂತಿಮವಾಗಿ ಕರ್ನಾಟಕ ವಿಮೋಚನಾ ವೇದಿಕೆಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಂಜಗೆರೆ ಜಯಪ್ರಕಾಶ್, ಹೋರಾಟದ ಹಾದಿಯನ್ನು ತೊರೆದು ಬೆಂಗಳೂರಿನ ಹೊರ ವಲಯದ ಕನಕಪುರ ರಸ್ತೆಯ ಹಾರೋಹಳ್ಳಿಗೆ ಬಂದು ನೆಲೆಸಿ ಓದು ಬರಹ ಇವುಗಳತ್ತ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಯಿತು. ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವುದೇ ಸಂಘಟನೆಯೊಂದಿಗೆ ನೇರವಾಗಿ ಗುರುತಿಸಿಕೊಳ್ಳದ ಬಂಜಗೆರೆ ಜಯಪ್ರಕಾಶ್, ಸೈದ್ಧಾಂತಿಕ ವಿಚಾರಗಳ ತಳಹದಿಯಿಲ್ಲದ ಸಂಘಟನೆಗಳು ಅಪಾಯಕಾರಿ ಎಂದು ನಂಬಿದ ವ್ಯಕ್ತಿ.

ಹೀಗೆ 1988-89 ರ ಸಮಯದಲ್ಲಿ ಕಾಣೆಯಾಗುವುದರ ಮೂಲಕ ನಕ್ಸಲ್ ಚಳುವಳಿಯಲ್ಲಿ ಇದ್ದಾರೆ ಎಂದು ಹೇಳಲ್ಪಡುವ ಸಿರಿಮನೆ ನಾಗರಾಜ್ ಈವರೆಗೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಈಗ ಆಸುಪಾಸು 58 ಅಥವಾ 59 ವರ್ಷವಾಗಿರುವ ಈ ನನ್ನ ಗೆಳೆಯ ಮಲೆನಾಡ ಅರಣ್ಯದಲ್ಲಿ ಇದ್ದಾರೆ ಎಂದರೆ, ನಾನು ನಂಬಲು ಸಿದ್ಧನಿಲ್ಲ. ಏಕೆಂದರೇ ಪಶ್ಚಿಮ ಘಟ್ಟದ ಮಳೆಯ ಕಾಡುಗಳಲ್ಲಿ ಜೀವಿಸುವಷ್ಟು ದೈಹಿಕ ಶಕ್ತಿ ಸಿರಿಮನೆಗೆ ಇಲ್ಲ. ಈಗ ಕರ್ನಾಟಕದ ಪೋಲಿಸರು ಅವರ ಸುಳಿವಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕಳೆದ ನವಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್ ಪ್ಯಾಕೇಜ್ ಯೋಜನೆಯಡಿ ಸಿರಿಮನೆ ಶರಣಾಗುತ್ತಾರೆ ಎಂದು ನಂಬಿದ್ದವರ ಪೈಕಿ ನಾನೂ ಒಬ್ಬನಾಗಿದ್ದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಅವರ ಪತ್ನಿ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ಅನಾಮಿಕರಂತೆ ವಾಸಿಸುತ್ತಿದ್ದಾರೆ. ಒಂದು ಸುಂದರ ಹೂವಿನ ಹೆಸರುಳ್ಳ ಮಗಳನ್ನು ಐದಾರು ವರ್ಷವಿರುವಾಗ ತೊರೆದು ಹೋದ ನಾಗರಾಜ್ ಈವರೆಗೆ ತಿರುಗಿ ನೋಡಿಲ್ಲ. ಬುದ್ಧಿವಂತ ಪದವೀಧರೆಯಾದ ಆಕೆ ತಂದೆಯ ಕೃತ್ಯದಿಂದಾಗಿ ಸರ್ಕಾರಿ ಉಗ್ಯೋಗಗಳಿಂದ ವಂಚಿತಳಾಗಿ, ಹೆಣ್ಣು ಮಕ್ಕಳ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಯಲ್ಲಿ ದುಡಿಯುತ್ತಿದ್ದಾಳೆ. ಆಕೆಯನ್ನು ನೋಡಿದಾಗಲೆಲ್ಲಾ ಮನಸ್ಸಿಗೆ ಬೇಸರ ಮತ್ತು ಸಂಕಟವಾಗುತ್ತದೆ.

ತನ್ನ ಮನೆಯನ್ನು ಉದ್ಧಾರ ಮಾಡಲಾಗದ ವ್ಯಕ್ತಿಯೊಬ್ಬ ಸಮಾಜವನ್ನು ಉದ್ಧಾರ ಮಾಡುತ್ತೇನೆ ಎಂದು ಹಿಂಸೆಯ ಹಾದಿ ತುಳಿದರೆ ಆತನನ್ನು ಹೇಗೆ ಅರ್ಥೈಸೋಣ? ತನ್ನ ಮನೆಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗಲು ಹೊರಟ ವ್ಯಕ್ತಿಯನ್ನು ಉದಾರಿ ಎಂದು ಕರೆಯಲು ಸಾಧ್ಯವೇ? ಬದಲಾಗಿ ಅಜ್ಞಾನಿ ಅಥವಾ ಮೂರ್ಖ ಎಂದು ಕರೆಯಲಾಗುತ್ತದೆ. ನನ್ನ ಮಿತ್ರ ಸಿರಿಮನೆ ನಾಗರಾಜು ಸ್ಥಿತಿ ಕೂಡ ಅದೇ ಆಗಿದೆ.

(ಮುಂದುವರಿಯುವುದು)

ಪ್ರಜಾ ಸಮರ – 16 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದಲ್ಲಿ ಅಧಿಕೃತವಾಗಿ ನಕ್ಸಲ್ ಚಟುವಟಿಕೆ ದಾಖಲಾದದ್ದು 2002 ರಲ್ಲಿ. ಚಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯ ಬಳಿಯ ಕಾಡಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಮೊದಲ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಮಹಿಳೆಯೊಬ್ಬಳ ಕಾಲಿಗೆ ಗುಂಡು ತಗಲುವುದರ ಮೂಲಕ ನಕ್ಸಲರು ಕರ್ನಾಟಕದ ಮಲೆನಾಡಿಗೆ ಕಾಲಿಟ್ಟಿದ್ದಾರೆ ಎಂಬುದನ್ನು ಧೃಡಪಡಿಸಿತು. ನಂತರ 2003 ರ ನವಂಬರ್ ತಿಂಗಳಿನಲ್ಲಿ ಈದು ಎಂಬ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರು ಜಿಲ್ಲೆಯ ಪಾರ್ವತಿ ಮತ್ತು ಹಾಜಿಮ ಎಂಬ ಯುವತಿಯರು ಬಲಿಯಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲ್ ರಕ್ತ ಚರಿತ್ರೆಗೆ ಮೊದಲ ಅಧ್ಯಾಯ ಬರೆದರು.

ಕರ್ನಾಟಕಕಕ್ಕೆ ನಕ್ಷಲ್ ಚಳುವಳಿಯನ್ನು ವಿಸ್ತರಿಬೇಕೆಂಬುದು ಆಂಧ್ರ ಪೀಪಲ್ಸ್ ವಾರ್ ಗ್ರೂಪ್ 1982 ರಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಸಂಘಟನೆಯನ್ನು ರೂಪಿಸುವ ಜವಬ್ದಾರಿಯನ್ನು ಚುರುಕುರಿ ರಾಜ್‌ಕುಮಾರ್ ಅಲಿಯಾಸ್ ಅಜಾದ್ ಎಂಬಾತನಿಗೆ ವಹಿಸಲಾಗಿತ್ತು. 1982 ರಿಂದ ಕರ್ನಾಟಕದ ಉಸ್ತುವಾರಿ ಹೊಣೆ ಹೊತ್ತಿದ್ದ ಅಜಾದ್ ರಾಯಚೂರು, ಬೀದರ್, ಗುಲ್ಬರ್ಗಾ ಮತ್ತು ಮಧುಗಿರಿ, ಪಾವಗಡ ಮಂತಾದ ಸ್ಥಳಗಳಲ್ಲಿ ಸಂಚರಿಸುತ್ತಾ ಯುವಕರನ್ನು ಸೆಳೆಯುವಲ್ಲಿ ನಿರತನಾಗಿದ್ದ. ವಾರಂಗಲ್ ಪಟ್ಟಣದ ಇಂಜಿನಿಯರಿಂಗ್ ಕಾಲೇಜಿನಿಂದ ಎಂ.ಟೆಕ್ ಪದವಿ ಪಡೆದು ನಕ್ಸಲ್ ಚಳುವಳಿಗೆ ಸೇರ್ಪಡೆಯಾಗಿದ್ದ ಅಜಾದ್ ತನ್ನ ವಿದ್ಯೆ ಮತ್ತು ಸಂಘಟನಾ ಚಾತುರ್ಯದಿಂದಾಗಿ ಸಿ.ಪಿ.ಐ.(ಎಂ.ಎಲ್.) ನ ಪಾಲಿಟ್ ಬ್ಯೂರೊ ನ ಸದಸ್ಯನಾಗಿ ಕೂಡ ಕಾರ್ಯ ನಿರ್ವಹಿಸಿದ್ದ. ಈತನನ್ನು 2010 ರಲ್ಲಿ ಆಂಧ್ರ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿ ಜೊತೆಗಿದ್ದ ಹೇಮಂತ್ ಕುಮಾರ್ ಪಾಂಡೆ ಎಂಬ ಪತ್ರಕರ್ತನನ್ನು ಸಹ ಕರೆದೊಯ್ದು ಆಂಧ್ರ ಗಡಿಭಾಗದ ಅರಣ್ಯದಲ್ಲಿ ಎನ್ ಕೌಂಟರ್ ಮಾಡಿ ಮುಗಿಸಿದರು. 1982 ರ ನಂತರ ಮಾವೋವಾದಿ ನಕ್ಸಲ್ ಸಂಘಟನೆಗೆ ಕರ್ನಾಟಕದಿಂದ ಸಿರಿಮನೆ ನಾಗರಾಜ್ SakethRajanಮತ್ತು ಸಾಕೇತ್ ರಾಜನ್ ಇವರ ಬೆಂಬಲ ದೊರೆತ ನಂತರ ರಾಯಚೂರು ಜಿಲ್ಲೆಯ ಕಮ್ಯೂನಿಷ್ಟ್ ಪಕ್ಷದ ಅನೇಕ ಯುವ ಕಾರ್ಯಕರ್ತರು ಕೈ ಜೋಡಿಸಿದರು. ಆನಂತರ ಅದಕ್ಕೊಂದು ಸ್ವತಂತ್ರ ಅಸ್ತಿತ್ವ ಬಂತು.

ಹಾಗೇ ನೋಡಿದರೇ 1975-76 ರ ಸಮಯದಲ್ಲಿ ಕರ್ನಾಟಕಕ್ಕೆ ಕೇರಳದ ಕಣ್ಣೂರು ಮತ್ತು ಕಾಸರಗೂಡು ಮೂಲಕ ನಕ್ಸಲ್ ಚಟುವಟಿಕೆ ವಿಸ್ತರಿಸುವ ಪ್ರಯತ್ನಗಳು ನಡೆದು ವಿಫಲವಾಗಿದ್ದವು. ಕೇರಳದಲ್ಲಿ 1968 ರಲ್ಲಿ ಅಂಬಾಡಿ ಶಂಕರನ್ ಕುಟ್ಟಿ ಮತ್ತು ಕುನ್ನಿಕಲ್ ನಾರಾಯಣನ್ ಹಾಗೂ ಅವರ ಪುತ್ರಿ ಕೆ.ಅಜಿತಾ ಇವರ ನೇತೃತ್ವದಲ್ಲಿ ಆರಂಭವಾದ ಚಟುವಟಿಕೆ 1976 ರವರೆಗೆ ತಲಚೇರಿ, ಕಣ್ಣೂರು, ಕೊಟ್ಟಾಯಂ, ತಿರುವನಂತಪುರಂ, ವೈನಾಡು,ಕಾಸರಗೂಡು, ಕೊಲ್ಲಂ ಜಿಲ್ಲೆಗಳಿಗೆ ವಿಸ್ತರಿಸಿ ನಂತರ ಸ್ಥಗಿತಗೊಂಡಿತು. 1976 ರ ನಂತರ ಸಿ.ಪಿ.ಐ (ಎಂ.ಎಲ್) ರೆಡ್ ಪ್ಲಾಗ್ (ಕೆಂಬಾವುಟ) ಹೆಸರಿನಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸುತ್ತಾ, ಕಾರ್ಮಿಕರ ಪರವಾಗಿ ಹೋರಾಟ ನಡೆಸಲು ಆರಂಭಿಸಿತು.

ಕರ್ನಾಟಕದ ನಕ್ಸಲ್ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟು ಹೋರಾಟದ ಮುಂಚೂಣಿಯಲ್ಲಿ ನಿಂತು ಗುಂಡಿಗೆ ಬಲಿಯಾದ ಮೈಸೂರಿನ ಸಾಕೇತ್ ರಾಜನ್ ಬದುಕು ನಿಜಕ್ಕೂ ದುರಂತ ಕಥನವೇ ಸರಿ. ಕರ್ನಾಟಕದ ಜನತೆಗೆ ಸಾಕೇತ್‌ ರಾಜನ್ ಜೀವನಚಿತ್ರ ಪೊಲೀಸರ ಗುಂಡಿಗೆ ಬಲಿಯಾದ ನಂತರವಷ್ಟೇ ಪರಿಚಿತವಾಯಿತು, ಆದರೆ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ 80 ರ ದಶಕದಲ್ಲೇ ಎಲ್ಲಾ ಪ್ರಗತಿಪರರಿಗೆ, ಯುವ ಬರಹಗಾರರಿಗೆ ತೀರಾ ಹತ್ತಿರದ ವ್ಯಕ್ತಿಯಾಗಿದ್ದರು. ಈ ದಿನ ನಮ್ಮ ನಡುವಿನ ಬರಹಗಾರರಾದ ಡಾ.ಮೊಗಳ್ಳಿ ಗಣೇಶ, ಡಾ. ಬಂಜಗೆರೆ ಜಯಪ್ರಕಾಶ್, ಅಬ್ದುಲ್ ರಶೀದ್, ಪತ್ರಕರ್ತ ಬಿ.ಎಸ್. ಸತ್ಯನಾರಾಯಣ, ಬಡಗಲಪುರ ನಾಗೇಂದ್ರ, ಕೇಶವ ಶರ್ಮ, ರೈತ ವಿದ್ಯಾರ್ಥಿ ಒಕ್ಕೂಟದ ಡಿ. ಹೊಸಳ್ಳಿ ಶಿವು, ಬರಹಗಾರ ಕೆ.ಶಿವಸುಂದರ್, ಪತ್ರಕರ್ತೆ ಗೌರಿ ಲಂಕೇಶ್, ಮೈಸೂರು ಮಿತ್ರ ಸಂಪಾದಕ ಕೆ.ಬಿ.ಗಣಪತಿ, ಪ್ರೊ. ಲಿಂಗರಾಜ್ ಗಾಂಧಿ ಸೇರಿದಂತೆ ಹಲವರ ಜೊತೆ ಸಾಕೇತ್ ರಾಜನ್‌ಗೆ ಒಡನಾಟವಿತ್ತು.

ಅಯ್ಯಂಗಾರ್ ಕುಟುಂಬಕ್ಕೆ ಸೇರಿದ ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಪುತ್ರನಾಗಿ ಜನಿಸಿದ ಸಾಕೇತ್ ರಾಜನ್ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ನಂತರ ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಗೆ ಸೇರಿದ ಪ್ರತಿಷ್ಟಿತ ಇಂಡಿಯನ್ ಇನ್ಸಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆಯಲ್ಲಿ ಪತ್ರಿಕೋದ್ಯಮದ ಸ್ನಾತ್ತಕೋತ್ತರ ಪದವಿಗೆ ಸೇರ್ಪಡೆಯಾಗಿದ್ದರು. ಮೈಸೂರಿನಲ್ಲಿದ್ದಾಲೇ ಇಂಗ್ಲೀಷ್ ಭಾಷೆಯಲ್ಲಿ ಪಾಂಡಿತ್ಯ ಮತ್ತು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಸಾಕೇತ್ ದೆಹಲಿಯಲ್ಲಿದ್ದಾಗ ಮಾವೋವಾದಿ ನಕ್ಸಲರ ಸಂಪರ್ಕಕ್ಕೆ ಬಂದಿದ್ದರು. Frantz_Fanon_The_Wretched_of_the_Earthಆ ವೇಳೆಗೆ ಅವರು ಓದಿಕೊಂಡಿದ್ದ ಫ್ರ್ಯಾನ್ಜ್ ಫಾನನ್ ಎಂಬಾತನ “Wretched of the Earth” (ಭೂಮಿ ಮೇಲಿನ ತಿರಸ್ಕೃತರು) ಎಂಬ ಕೃತಿ ಅವರ ಮನಸ್ಸನ್ನು ಸಂಪೂರ್ಣವಾಗಿ ಕ್ರಾಂತಿಯತ್ತ ತಿರುಗಿಸಿತ್ತು. ಪತ್ರಿಕೋದ್ಯಮದಲ್ಲಿ ನಾಲ್ಕು ಚಿನ್ನದ ಪದಕದೊಂದಿಗೆ ಪದವಿ ಪಡೆದು, ದೆಹಲಿಯ ಜವಹರಲಾಲ್ ನೆಹರೂ ವಿ.ವಿ.ಯ ಘಟಿಕೋತ್ಸವದಲ್ಲಿ ಅಂದಿನ ಕೇಂದ್ರ ಶಿಕ್ಷಣ ಸಚಿವ ವಿ.ಸಿ. ಶುಕ್ಲಾ ರವರಿಂದ ಪದವಿ ಪತ್ರ ಸ್ವೀಕರಿಸಿದ ಕೂಡಲೇ ವೇದಿಕೆಯ ಮೇಲೆ ಅದನ್ನು ಹರಿದು ಹಾಕಿ ವ್ಯವಸ್ಥೆಯ ಬಗ್ಗೆ ಧಿಕ್ಕಾರ ಕೂಗಿದ ಮೊದಲ ಕ್ರಾಂತಿಕಾರಿ ವಿದ್ಯಾರ್ಥಿ ಸಾಕೇತ್ ರಾಜನ್. (ಸಾಕೇತ್ ರಾಜನ್ ಬೆಂಗಳೂರಿನ ವಿ.ವಿ.ಯಲ್ಲಿ ಕೂಡ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದಿದ್ದರು. ಗೌರಿ ಲಂಕೇಶ್ ಅವರ ಸಹಪಾಠಿಗಳಲ್ಲಿ ಒಬ್ಬರು.) ದೆಹಲಿಯಲ್ಲಿದ್ದಾಗಲೇ ಎಡಪಂಥೀಯ ವಿಚಾರಧಾರೆಗಳಿಂದ ಪ್ರೆರೇಪಿತರಾಗಿದ್ದ ರಾಜನ್ ಅಂತಹದೊಂದು ಪಡೆಯನ್ನು ಕಟ್ಟಬೇಕೆಂದು ಕನಸು ಕಾಣುತ್ತಾ 1982 ರಲ್ಲಿ ಮೈಸೂರಿಗೆ ಬಂದರು.

ಮೈಸೂರಿನ ಪ್ರತಿಷ್ಟಿತ ಬಡಾವಣೆ ಜಯಲಕ್ಷ್ಮಿಪುರಂ ಬಡಾವಣೆಯಲ್ಲಿ ಬಂಗಲೆ ಇದ್ದರೂ ಕೂಡ ಮನೆಗಿಂತ ಹೆಚ್ಚಾಗಿ ಸ್ನೇಹಿತರ ಹಾಸ್ಟಲ್ ರೂಮುಗಳಲ್ಲಿ ಕಾಲ ಕಳೆಯುತಿದ್ದ ಸಾಕೇತ್ ರಾಜನ್, ಮೈಸೂರು ವಿ.ವಿ. ಮುಂಭಾಗದ ಕುಕ್ಕರಳ್ಳಿ ಕೆರೆ ಏರಿಯನ್ನು ಹಗಲಿನ ವೇಳೆಯಲ್ಲಿ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಕುಕ್ಕರಹಳ್ಳಿ ಕೆರೆಗೆ ಮೈಸೂರು ನಗರದ ಬಡಾವಣೆಗಳಿಂದ ಕೊಳಚೆ ನೀರು ಬಂದು ಸಂಗ್ರಹವಾಗುವುದನ್ನು ಪ್ರತಿಭಟಿಸಿ ಮೈಸೂರಿನ “ಸ್ಟಾರ್ ಆಪ್ ಮೈಸೂರು” ಇಂಗ್ಲೀಷ್ ಪತ್ರಿಕೆಯಲ್ಲಿ ನಿರಂತರ ಲೇಖನಗಳನ್ನು ಬರೆದು ನಾಗರೀಕರಲ್ಲಿ ಜಾಗೃತಿ ಮೂಡಿಸಿದರು. ಆ ವೇಳೆಗೆ ಕರ್ನಾಟಕದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಚಳುವಳಿ ಆರಂಭವಾಗಿತ್ತು. ಅಹಿಂಸೆಯ ಮಾದರಿಯಲ್ಲಿ ನಡೆಯುತಿದ್ದ ರೈತ ಚಳುವಳಿಗೆ ಒಲವು ತೋರಿಸದ ಸಾಕೇತ್ ರಾಜನ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗುತಿದ್ದರು.

“ಮೇಕಿಂಗ್ ಹಿಸ್ಟರಿ” ಎಂಬ ಎರಡು ಸಂಪುಟಗಳಲ್ಲಿ ಬಂದಿರುವ ಸಾಕೇತ್ ರಾಜನ್ ಕೃತಿಗಳು ಅವರ ವಿದ್ವತ್ ಮತ್ತು ಪ್ರತಿಭೆಗೆ ಸಾಕ್ಷಿಯಾಗಿವೆ. ಮೊದಲನೆ ಸಂಪುಟದಲ್ಲಿ ಕರ್ನಾಟಕ ಇತಿಹಾಸವನ್ನು ಟಿಪ್ಪು ಸುಲ್ತಾನ್ ಬ್ರಿಟಿಷರೊಂದಿಗೆ ಕಾದಾಡಿ 1799 ರ ನಾಲ್ಕನೆ ಮೈಸೂರು ಯುದ್ದದಲ್ಲಿ ಮಡಿಯುವವರೆಗೆ ಕಟ್ಟಿಕೊಟ್ಟಿರುವ ಸಾಕೇತ್, ಎರಡನೇ ಸಂಪುಟದಲ್ಲಿ 1799 ರಿಂದ 1857 ರ ಸಿಪಾಯಿ ದಂಗೆಯವರೆಗೆ ದಾಖಲಿಸಿದ್ದಾರೆ. 1995 ಮತ್ತು 1997 ರಲ್ಲಿ ಈ ಕೃತಿಗಳು ಪ್ರಕಟಣೆಗೊಂಡವು. 1857 ರಿಂದ 1947 ರ ವರೆಗಿನ ಇತಿಹಾಸ ಮೂರನೇ ಸಂಪುಟದಲ್ಲಿ ಬರಬೇಕಾಗಿತ್ತು. ಅಷ್ಟರಲ್ಲಿ ಸಾಕೇತ್ ಮೈಸೂರನ್ನು ತೊರೆದು ಆಂಧ್ರದತ್ತ ವಲಸೆ ಹೋದ ಕಾರಣ ಬೆಳಕು ಕಾಣಲಿಲ್ಲ. ದುರಂತವೆಂದರೆ, 2005 ರ ಪೆಬ್ರವರಿ 6 ರಂದು ಸಾಕೇತ್ ರಾಜನ್ ನಕ್ಸಲಿಯರ ನಾಯಕನೆಂಬ ಹಣೆಪಟ್ಟಿಯೊಂದಿಗೆ ಪೊಲೀಸರ ಗುಂಡಿಗೆ ಬಲಿಯಾಗಿ ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದ ಸಂದರ್ಭದಲ್ಲಿ ಅವರ ಕೃತಿಗಳ ಹಲವಾರು ಪ್ರಬಂಧಗಳು ದೇಶದ ಹಲವಾರು ವಿ.ವಿ.ಗಳಲ್ಲಿ ಇತಿಹಾಸದ ಪಠ್ಯಗಳಾಗಿ ವಿದ್ಯಾರ್ಥಿಗಳಿಗೆ ಬೋಧಿಸಲ್ಪಡುತಿದ್ದವು. ಭಾರತದ ಇತಿಹಾಸವನ್ನು ವೈಜ್ಞಾನಿಕವಾಗಿ ಮತ್ತು ಎಡಪಂಥೀಯ ಚಿಂತನೆಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ ಎಂ.ಡಿ. ಕೊಸಾಂಬಿ ನಂತರ ನಮ್ಮ ನಡುವೆ ಇರುವ ರೊಮಿಲಾ ಥಾಪರ್ ಮತ್ತು ಇರ್ಪಾನ್‌ ಹಬೀಬ್ ಎಂಬ ಇತಿಹಾಸ ತಜ್ಞರಿಗೆ ಸಮನಾಗಿ ನಿಲ್ಲುವ ಪ್ರತಿಭೆ ಸಾಕೇತ್ ರಾಜನ್‌ಗೆ ಇತ್ತು.

ಸಾಕೇತ್ ರಾಜನ್‌ರವರ ಈ ಎರಡು ಕೃತಿಗಳ ರಚನೆ ಮತ್ತು ಹೋರಾಟದ ಹಿಂದೆ ಇದ್ದ ಅವರ ಸಂಗಾತಿ ರಾಜೇಶ್ವರಿಯರ ಶ್ರಮ ಮತ್ತು ತ್ಯಾಗ ಮನೋಭಾವವನ್ನು ಅಲ್ಲಗೆಳಯಲಾಗದು. ಮೈಸೂರಿನ ಬಡಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ಅಲಿಯಾಸ್ ಅನಿತಾ ಎಂದು ಕರೆಸಿಕೊಳ್ಳುತಿದ್ದ ಈ ಹೆಣ್ಣು ಮಗಳು ಪದವಿ ಶಿಕ್ಷಣ ಮುಗಿಸುವ ವೇಳೆಗೆ ಲೊಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದ ಅವರ ತಂದೆ ಅಕಾಲ ಮರಣಹೊಂದಿದರು. com-rajeshwariರಾಜೇಶ್ವರಿ ಕುಟುಂಬದ ಹಿರಿಯ ಮಗಳಾದ್ದರಿಂದ ಕುಟುಂಬದ ಹೊಣೆ ಹೊರುವ ಸಲುವಾಗಿ ಸರ್ಕಾರ ನೀಡುವ ಅನುಕಂಪ ಆಧಾರಿತ ಉದ್ಯೋಗದ ಯೋಜನೆಯಡಿ ಲೋಕೊಪಯೋಗಿ ಇಲಾಖೆಯಲ್ಲಿ ಗುಮಾಸ್ತೆಯಾಗಿ ದುಡಿದರು. ಸತತ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಸಹೋದರ-ಸಹೋದರಿಯರು ನೆಲೆ ನಿಂತ ನಂತರ ಉದ್ಯೋಗಕ್ಕೆ ರಾಜಿನಾಮೆ ನೀಡಿ ಎಡಪಂಥೀಯ ಚಿಂತ ಮತ್ತು ಹೋರಾಟಗಳೊಂದಿಗೆ ಗುರುತಿಸಿಕೊಂಡರು. ಉದ್ಯೋಗದಲ್ಲಿದ್ದಾಗಲೇ ಅನೇಕ ಪ್ರಗತಿ ಪರ ಸಂಘಟನೆಗಳೊಂದಿಗೆ ಸಂಬಂಧವಿರಿಸಿಕೊಂಡಿದ್ದ ರಾಜೇಶ್ವರಿ ಸಹಜವಾಗಿ ಸಾಕೇತ್‌ ರಾಜನ್ ಜೊತೆ ಗುರುತಿಸಿಕೊಂಡರು. ಸಾಕೇತ್ ಬರೆದ ಎರಡು ಸಂಪುಟಗಳಿಗೆ ತಾವೇ ನಿಂತು ಡಿ.ಟಿ.ಪಿ. ಟೈಪಿಂಗ್ ಮಾಡಿದರು. ಆಗ ತಾನೇ ಆರಂಭಗೊಂಡಿದ್ದ ಡಿ.ಟಿ.ಪಿ.ಯನ್ನು ಕಲಿಯಲು ಮೂರು ತಿಂಗಳ ಡಿಪ್ಲೊಮ ಕೋರ್ಸ್‌ಗೆ ರಾಜೇಶ್ವರಿ ಸೇರ್ಪಡೆಯಾಗಿದ್ದರು.

ಕರ್ನಾಟಕದ ಪರಿಸರ ಸಂರಕ್ಷಣ ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂಬುದು ಸಾಕೇತ್ ಅವರ ಕನಸಾಗಿತ್ತು. ಕಾರವಾರದ ಬಳಿ ಸ್ಥಾಪಿಸಲಾದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬೇಕಾದ ಯುರೇನಿಯಂ ಅದಿರನ್ನು ಸಂಸ್ಕರಿಸಲು ಮೈಸೂರಿನ ರಟ್ಟೆಹಳ್ಳಿ ಬಳಿ ಸಂಸ್ಕರಣಾ ಘಟಕ ಆರಂಭಿಸಿದಾಗ ಇದರ ಬಗ್ಗೆ ಪ್ರತಿಭಟಿಸಿ ರಾಜ್ಯದ ಗಮನ ಸೆಳೆದಿದ್ದರು. ಇತ್ತ ಮಲೆನಾಡಿನಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮತ್ತು ಅನೇಕ ಸ್ನೇಹಿತರು ತುಂಗಾ ಉಳಿಸಿ ಎಂಬ ಆಂಧೋಲನ ಆರಂಭಿಸಿದ್ದರು. ಕುದುರೆ ಮುಖ ಗಣಿಗಾರಿಕೆಯಂದ ಆಗುವ ಪರಿಸರ ನಾಶದ ಬಗ್ಗೆ ಪರಿಸರವಾದಿಗಳು ಹೋರಾಟ ಆರಂಭಿಸಿದಾಗ ಹೋರಾಟಕ್ಕೆ ಬೆಂಬಲ ಸೂಚಿಸಿ ಲೇಖನಗಳನ್ನು ಬರೆದು ಅದನ್ನು ರಾಜ್ಯವ್ಯಾಪಿ ಚಳವಳಿಯಾಗಿ ರೂಪಿಸಬೇಕೆಂದು ಬಯಸಿದ್ದರು. ಇದೇ ವೇಳೆಗೆ ಕುದುರೆಮುಖ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಅಭಯಾರಣ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಅರಣ್ಯದಲ್ಲಿದ್ದ ಅನೇಕ ನಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ದೂಡಲ್ಪಟ್ಟರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಬಲಿಷ್ಟ ನಕ್ಸಲ್ ಚಳುವಳಿಯನ್ನು ಕಟ್ಟಬೇಕೆಂಬುದು ಸಾಕೇತ್ ರಾಜನ್‌ವರ ಯೋಜನೆಯಾಗಿತ್ತು. ಆ ವೇಳೆಗಾಗಲೇ ಅವರು ತಮ್ಮ ವಿದ್ವತ್ ಮತ್ತು ಪ್ರತಿಭೆಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸಿ.ಪಿ.ಐ.( ಎಂ.ಎಲ್) ಕಮ್ಯುನಿಸ್ಟ್ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದರು. ಕರ್ನಾಟಕದಲ್ಲಿ ಯಾವುದೇ ಹಿಂಸಾತ್ಮಕ ಹೋರಾಟ ನಡೆಯದೇ ಇದ್ದ ಕಾರಣ ಈ ಬೆಳವಣಿಗೆಯನ್ನು ಕರ್ನಾಟಕ ಪೊಲೀಸರು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇವರ ಒಡನಾಟ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್( ಸಿ.ಪಿ.ಐ.(ಎಂ.ಎಲ್.) ಜೊತೆ ಇದೆ ಎಂಬುವುದನ್ನು ಅರಿತಿದ್ದ ಪೊಲೀಸರು ಮೈಸೂರಿನಲ್ಲಿ ಸಾಕೇತ್‌ರ ಎಲ್ಲಾ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದರು. ರಾಜೇಶ್ವರಿಯ ಸಂಪಾದಕತ್ವದಲ್ಲಿ ಹೊರ ಬರುತಿದ್ದ “ವನಿತಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನ ಬರೆಯುತಿದ್ದರು. ಜೊತೆಗೆ “ಪ್ರಜಾ ವಿಮುಕ್ತಿ” ಎಂಬ ಪತ್ರಿಕೆಯಲ್ಲಿ ಆಂಧ್ರದ ನಕ್ಸಲ್ ಚಳುವಳಿ ಮತ್ತು ಅಲ್ಲಿನ ನಾಯಕರ ಸಂದರ್ಶನಗಳು ಪ್ರಕಟವಾಗುತಿದ್ದವು. ಸ್ವತಃ ರಾಜೇಶ್ವರಿ ಆಂಧ್ರಕ್ಕೆ ಪ್ರಯಾಣ ಬೆಳಸಿ ಅಲ್ಲಿ ನಡೆಯುತಿದ್ದ ದೌರ್ಜನ್ಯಗಳನ್ನು ದಾಖಲಿಸಿಕೊಂಡು ಬಂದು ಪತ್ರಿಕೆಯಲ್ಲಿ ಬರೆಯುತಿದ್ದರು. ಅವರ ಇಂತಹ ಪ್ರಯತ್ನ ಅಂತಿಮವಾಗಿ ದುರಂತದಲ್ಲಿ ಅಂತ್ಯಗೊಂಡಿತು.

2001 ರ ಮಾರ್ಚ್ 20 ರಂದು ಆಂಧ್ರದ ಉತ್ತರ ಭಾಗದ ಪೂರ್ವ ಗೋದಾವರಿ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಬಳಿ ಕೊತ್ತಪಲ್ಲಿ ಎಂಬ ಅರಣ್ಯದಲ್ಲಿ “ಪೀಪಲ್ಸ್ ವಾರ್ ಗ್ರೂಪ್”‌ಗೆ ಸೇರಿದ ಇಬ್ಬರು ದಳಂ ನಾಯಕರನ್ನು ಬೇಟಿ ಮಾಡಿ ಸಂದರ್ಶಿಸುತಿದ್ದಾಗ ರಾಜೇಶ್ವರಿ ಆಂಧ್ರ ಪೊಲೀಸರಿಂದ ಬಂಧಿಸಲ್ಪಟ್ಟರು. ಆ ಕ್ಷಣದಲ್ಲಿ ರಾಜೇಶ್ವರಿ ಬಳಿ ಇದ್ದುದ್ದು ಒಂದು ನೋಟ್ ಬುಕ್, ಪೆನ್ ಮತ್ತು ಕ್ಯಾಮರಾ ಮಾತ್ರ. ತಾನೊಬ್ಬ ಕರ್ನಾಟಕ ಮೂಲದ ಪತ್ರಕರ್ತೆ ಎಂದು ರಾಜೇಶ್ವರಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಆಂಧ್ರ ಪೊಲೀಸರು ಕರುಣೆ ತೋರಲಿಲ್ಲ. ಆಂಧ್ರದ ಇಬ್ಬರು ದಳಂ ನಾಯಕರನ್ನು ಬೆಳಿಗ್ಗೆ 11 ಗಂಟೆಗೆ ಎನ್‌ಕೌಂಟರ್ ಮೂಲಕ ಮುಗಿಸಿದ ಪೊಲೀಸರು ರಾಜೇಶ್ವರಿಯನ್ನು ಅರಣ್ಯದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಂಜೆ ನಾಲ್ಕು ಗಂಟೆಯವರೆಗೆ ನಕ್ಸಲರ ಕುರಿತ ಮಾಹಿತಿಗಾಗಿ ಇನ್ನಿಲ್ಲದಂತೆ ಚಿತ್ರ ಹಿಂಸೆ ನೀಡಿದ್ದರು. ಅಂತಿಮವಾಗಿ ಸಂಜೆ 4 ಗಂಟೆಗೆ ಅವರನ್ನು ಸಹ ಗುಂಡಿಟ್ಟು ಕೊಂದು, ಪೊಲೀಸರು ಮತ್ತು ನಕ್ಸಲರ ಗುಂಡಿನ ಚಕಮಕಿಯಲ್ಲಿ ಆದಿವಾಸಿ ಮಹಿಳೆಯ ಸಾವು ಎಂಬ ಸುದ್ದಿಯನ್ನು ಪ್ರಕಟಿಸಿದರು. ಆದರೆ ಈ ಎಲ್ಲಾ ಘಟನೆಗಳನ್ನು ಪೊದೆಯ ಹಿಂದೆ ಅಡಗಿ ಕುಳಿತು ವೀಕ್ಷಿಸಿದ್ದ ಅಲ್ಲಿನ ಆದಿವಾಸಿಗಳು ಹೊರ ಜಗತ್ತಿಗೆ ನಿಜವಾದ ಸುದ್ದಿಯನ್ನು ತಲುಪಿಸಿದ್ದರು. ರಾಜೇಶ್ವರಿಯರ ದೇಹದ ಮೇಲೆ ಪೊಲೀಸರು ಸಿಗರೇಟಿನಿಂದ ಸುಟ್ಟಿದ್ದ ಗಾಯದ ಕಲೆಗಳಿದ್ದವು. ತಾರತಮ್ಯವಿಲ್ಲದ ಸುಂದರ ಸಮಾಜದ ಕನಸು ಕಂಡಿದ್ದ ಈ ಮೈಸೂರಿನ ಹೆಣ್ಣು ಮಗಳು ಕೇವಲ ತನ್ನ 37 ನೇ ವಯಸ್ಸಿಗೆ ಆಂಧ್ರದ ಅರಣ್ಯದಲ್ಲಿ ಅನಾಥ ಹೆಣವಾಗಿಬಿಟ್ಟಳು. ರಾಜೇಶ್ವರಿಯ ಹತ್ಯೆಯ ಬಗ್ಗೆ ಕರ್ನಾಟಕದಲ್ಲಾಗಲಿ, ಅಥವ ರಾಷ್ಟ್ರಮಟ್ಟದಲ್ಲಾಗಲಿ, ಯಾವೊಂದು ಮಾದ್ಯಮವೂ ಧ್ವನಿ ಎತ್ತಲಿಲ್ಲ. ಬರಹಗಾರ ಮಿತ್ರ ಕೆ.ಶಿವಸುಂದರ್ ಮಾತ್ರ ಈ ಹತ್ಯೆಯ ಬಗ್ಗೆ ಬೆಂಗಳೂರಿನಲ್ಲಿ ದೊಡ್ಡದಾಗಿ ದ್ವನಿಯೆತ್ತಿ ದೇಶದ ಗಮನ ಸೆಳೆದರು.

ಸಂಗಾತಿ ರಾಜೇಶ್ವರಿಯ ಸಾವು ಸಾಕೇತ್ ರಾಜನ್ ಅವರನ್ನು ತೀವ್ರ ಹತಾಶರನ್ನಾಗಿ ಮಾಡಿತು. ಜೊತೆಗೆ ಅವರು ಯಾವಾಗಲೂ ರೂಪಕದ ಭಾಷೆಯಲ್ಲಿ ಬಳಸುತಿದ್ದ “ಪೆನ್ ಅಂಡ್ ಗನ್”, ಅಂದರೆ ಲೇಖನಿ ಮತ್ತು ಬಂದೂಕ ಎರಡು ಹೋರಾಟ ಒಟ್ಟಿಗೆ ಸಾಗಬೇಕು ಎಂಬ ಅವರ ಆಲೋಚನೆಗೆ ಮೈಸೂರಿನ ಯಾವೊಬ್ಬ ಮಿತ್ರನಿಂದ ಬೆಂಬಲ ದೊರೆಯದಿದ್ದದು ನಿರಾಶೆ ಮೂಡಿಸಿತ್ತು. ಅಂತಿಮವಾಗಿ 2001 ರ ಕೊನೆಯ ದಿನಗಳಲ್ಲಿ ಯಾರೊಬ್ಬರಿಗೂ ಒಂದು ಸಣ್ಣ ಸುಳಿವು ನೀಡದೇ ಒಬ್ಬಂಟಿಯಾಗಿ ಆಂಧ್ರದತ್ತ ನಡೆದು ಕೈಗೆ ಎ.ಕೆ. 47 ಬಂದೂಕ ಕೈಗೆತ್ತಿಕೊಳ್ಳುವುದರ ಮೂಲಕ ಒಂದು ತಂಡದೊಂದಿಗೆ 2002 ರಲ್ಲಿ ಮಲೆನಾಡು ಅರಣ್ಯ ಪ್ರವೇಶ ಮಾಡಿ ನಕ್ಸಲ್ ಹೋರಾಟಕ್ಕೆ ಮುನ್ನುಡಿ ಬರೆದರು.

2003 ರ ನವೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯ ಈದು ಗ್ರಾಮದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹಾಜಿಮಾ ಮತ್ತು ಪಾರ್ವತಿಯ ಸಾವು ಮತ್ತು ಇದಕ್ಕೆ ಪ್ರತಿಯಾಗಿ ಶೃಂಗೇರಿ ತಾಲ್ಲೂಕಿನ ನೆಮ್ಮೂರು ಬಳಿಯ ಅರಣ್ಯ ಇಲಾಖೆಯ ಅತಿಥಿ ಗೃಹದ ಧ್ವಂಸ ಹಾಗೂ 2004 ರಲ್ಲಿ ಶೃಂಗೇರಿ ತಾಲ್ಲೂಕು ಕಿಗ್ಗಾ ಗ್ರಾಮದ ಮಗ್ಗೆಬಯಲು ಚಂದ್ರಶೇಖರ ಇವರ ರಕ್ಷಣೆಗೆ ನೇಮಿಸಿದ್ದ ಪೊಲೀಸ್ ಪೇದೆ ಮುದ್ದಪ್ಪ ಅಪಹರಣ, ನಂತರ ಬಂದೂಕ ಕಸಿದುಕೊಂಡು ಬಿಡುಗಡೆ, ಈ ಎಲ್ಲಾ ಘಟನೆಗಳ ಹಿಂದೆ ಸಾಕೇತ್ ರಾಜನ್ ಇದ್ದರು. ಅವರ ಒಂದು ಮರೆಯಲಾರದ ಶ್ರೇಷ್ಟ ಗುಣವೊಂದನ್ನು ನಾವು ಮೆಚ್ಚಲೇಬೇಕು. ಕರ್ನಾಟಕದಲ್ಲಿ ಮೂರು ವರ್ಷಗಳ ಕಾಲ ನಕ್ಸಲ್ ಚಟುವಟಿಕೆ ನಡೆಸಿದರೂ ಸಹ ಅದರ ಒಂದು ಸಣ್ಣ ಸುಳಿವನ್ನು ಸಾಕೇತ್ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಏಕೆಂದರೆ, ಅವರ ಈ ನಿರ್ಧಾರ ಹಿಂದೆ ತಮ್ಮ ಹಳೆಯ ಮಿತ್ರರ ಬದುಕನ್ನು ಸಂರಕ್ಷಿಸುವ ಆಶಯವಿತ್ತು. ಸಾಕೇತ್ ಇತ್ತ ಅರಣ್ಯದಲ್ಲಿ ಏಕಾಂಗಿಯಾಗಿ ಬಂದೂಕು ಹಿಡಿದಿದ್ದರೇ ಅತ್ತ ಸಮಾಜದಲ್ಲಿ ಅವರ ಗೆಳೆಯರೆಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕರಾಗಿ, ಕೆಲವರು ಪತ್ರಕರ್ತರಾಗಿ ಬದುಕು ಕಟ್ಟಿಕೊಂಡಿದ್ದರು. ಕರ್ನಾಟಕದ ನಕ್ಸಲ್ ಹೋರಾಟದ ಹಿಂದೆ ಸಾಕೇತ್ ರಾಜನ್ ಇದ್ದಾರೆ ಎಂಬ ಸಣ್ಣ ಸುಳಿಹು ಪೊಲೀಸರಿಗೆ ಸಿಕ್ಕಿದ್ದರೆ ಬಹುತೇಕ ಅವರ ಹಳೆಯ ಮಿತ್ರರೆಲ್ಲಾ ಮಾಹಿತಿ ನೆಪದಿಂದ ಪೊಲೀಸರಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಈ ಕಾರಣಕ್ಕಾಗಿ ತಮ್ಮ ಚಟುವಟಿಕೆಯನ್ನು ಬಚ್ಚಿಟ್ಟಿದ್ದರು.

ಪೊಲೀಸ್ ಅಪಹರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಉಜ್ಜನಿಗೌಡ ಬಂಧನವಾದ ಕೆಲವೇ ದಿನಗಳಲ್ಲಿ ಅಂದರೇ 2005 ರ ಫೆಬ್ರವರಿ 5 ರಂದು ಚಿಕ್ಕಮಗಳೂರು ಡಿವೈಎಸ್ಪಿ ಶಿವಕುಮಾರ್ ನೇತೃತ್ವದ 80 ಜನರ ಪೊಲೀಸರ ತಂಡ ನಾಲ್ಕು ತಂಡಗಳಾಗಿ ಸಾಕೇತ್ ರಾಜನ್ ಇದ್ದ ಅರಣ್ಯ ಪ್ರದೇಶವನ್ನು ಸುತ್ತುವರಿಯಿತು. ಮೆಣಸಿನ ಹಾಡ್ಯ ಗ್ರಾಮದ ಶೇಷಯ್ಯ ಎಂಬಾತ ಸಾಕೇತ್ ರಾಜನ್ ಮತ್ತು ಸಂಗಡಿಗರು ಇದ್ದ ಸ್ಥಳದ ಬಗ್ಗೆ ಪೊಲೀಸರಿಗೆ ನಿಖರವಾದ ಮಾಹಿತಿ ರವಾನಿಸಿದ್ದ. ಬೆಳಗಿನ ಜಾವ ಒಂದು ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ saketh_rajan_head_blown_offಸಾಕೇತ್ ರಾಜನ್ ಮತ್ತು ಅವರ ಅಂಗ ರಕ್ಷಕನಾಗಿದ್ದ ಶಿವಲಿಂಗು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

ಈ ದುರ್ಘಟನೆ ನಡೆಯುವ ಒಂದು ತಿಂಗಳ ಮುಂಚೆಯಷ್ಟೆ ಸಾಕೇತ್ ರಾಜನ್ ಪ್ರಥಮ ಬಾರಿಗೆ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕರ್ನಾಟಕದ ಕೆಲವು ಆಯ್ದ ಪತ್ರಕರ್ತರನ್ನು ಬೇಟಿಯಾಗಿದ್ದರು. ಇವರಲ್ಲಿ ಅವರ ಮಾಜಿ ಸಹಪಾಠಿ ಗೌರಿ ಲಂಕೇಶ್ ಕೂಡ ಒಬ್ಬರು. ಸಾಕೇತ್ ರಾಜನ್ ಹತ್ಯೆಯಿಂದ ಕೆರಳಿದ ಆಂಧ್ರದ ಅನಂತಪುರ ಜಿಲ್ಲೆಯ ಪೀಪಲ್ಸ್ ವಾರ್ ಗ್ರೂಪ್ ಕಾರ್ಯಕರ್ತರು 2005 ರ ಮಾರ್ಚ್ ತಿಂಗಳಿನಲ್ಲಿ ಮಧುಗಿರಿ ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕರ್ನಾಟಕ ಪೊಲೀಸರ ಮೇಲೆ ದಾಳಿ ನಡೆಸಿ ಏಳು ಪೊಲೀಸರನ್ನು ಹತ್ಯೆಗೈಯ್ದುರು. ಸಾಕೇತ್ ಸಾವಿನ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಕ್ಸಲರು ಮೇ ತಿಂಗಳಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮೆಣಸಿನಹಾಡ್ಯದ ಶೇಷಯ್ಯನನ್ನು ಮನೆಯಿಂದ ಹೊರಗೆ ಎಳೆತಂದು ಗುಂಡಿಕ್ಕಿ ಕೊಲ್ಲುವುದರ ಮೂಲಕ ಸಾಕೇತ್ ಸಾವಿಗೆ ಸೇಡು ತೀರಿಸಿಕೊಂಡರು.

ಸಾಕೇತ್ ಪೊಲೀಸರ ಗುಂಡಿಗೆ ಬಲಿಯಾದ ಸಂದರ್ಭದಲ್ಲಿ, rajalakshmi saketh rajan motherಮೈಸೂರು ನಗರದಲ್ಲಿ ಯಾವೊಬ್ಬ ಮಾಧ್ಯಮ ಪ್ರತಿನಿಧಿಗೂ ಸಂದರ್ಶನ ನೀಡದೇ ಮನೆಯ ಬಾಗಿಲು ಹಾಕಿಕೊಂಡಿದ್ದ ಅವರ ತಾಯಿ ಪೊಲೀಸರ ಅಧಿಕಾರಿಗಳ ಜೊತೆ ಮಾತನಾಡುವಾಗ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಸಮರ್ಥಿಸಿಕೊಂಡರು. ಬಾಲ್ಯದಿಂದಲೂ ಬಡವರ ಕುರಿತು ಅವನಿಗಿದ್ದ ಕಾಳಜಿಯನ್ನು ಪೊಲೀಸರಿಗೆ ವಿವರಿಸಿದರು. ಆದರೆ, ಅವನ ಶವವನ್ನು ನೋಡುವ ಧೈರ್ಯ ತನಗಿಲ್ಲವೆಂದು ಹೇಳಿ ಶವ ಪಡೆಯಲು ನಿರಾಕರಿಸಿದರು.

ಹಿಂಸೆಯ ಹಾದಿಯನ್ನು ತುಳಿಯದಿದ್ದರೆ, ಈ ನಾಡಿನ ಒಬ್ಬ ಧೀಮಂತ ಪತ್ರಕರ್ತ ಇಲ್ಲವೇ ಲೇಖಕನಾಗಬಹುದಾಗಿದ್ದ ಎಲ್ಲಾ ಗುಣಗಳನ್ನು ಹೊಂದಿದ್ದ ಸಾಕೇತ್ ರಾಜನ್ ಬಡವರ ಮೇಲಿನ ಕಾಳಜಿಯಿಂದಾಗಿ ತನ್ನ ಶ್ರೀಮಂತಿಕೆಯ ಬದುಕು ತೊರೆದು ಅರಣ್ಯದಲ್ಲಿ ಅನಾಥ ಶವವಾಗಿ ಮಲಗಿದ್ದು, ಕರ್ನಾಟಕ ಹೋರಾಟದ ಇತಿಹಾಸದ ಪುಟಗಳಲ್ಲಿ ಒಂದು ದುರಂತ ಅಧ್ಯಾಯ.

(ಮುಂದುವರಿಯುವುದು)

ಪ್ರಜಾ ಸಮರ – 15 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಬಡತನ, ಹಸಿವು, ನಿರುದ್ಯೋಗ, ಜಾತೀಯತೆ ಮತ್ತು ಭ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ ಇವೆಲ್ಲವುಗಳ ಒಟ್ಟು ಮೊತ್ತವೇ ಭಾರತದ ಬಿಹಾರ ರಾಜ್ಯ ಎನ್ನಲು ಯಾವುದೇ ಅಡ್ಡಿಯಿಲ್ಲ. ಕಳೆದ ಏಳು ವರ್ಷಗಳಿಂದ ನಿತೀಶ್ ಕುಮಾರ್ ಎಂಬ ಸಜ್ಜನ ಮತ್ತು ಭ್ರ್ರಷ್ಟಾಚಾರ ಮುಕ್ತ ರಾಜಕಾರಣಿಯ ಕೈಗೆ ಬಿಹಾರದ ಆಡಳಿತ ಸಿಕ್ಕ ಫಲವಾಗಿ ಇತ್ತೀಚೆಗೆ ಆ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಈ ಮೊದಲು ಬಿಹಾರದ ರಾಜ್ಯವನ್ನು ಅದೊಂದು ಸ್ಮಶಾನ ಎಂದು ಆರ್ಥಿಕ ಮತ್ತು ರಾಜಕೀಯ ಮತ್ತು ಸಾಮಾಜಿಕ ತಜ್ಞರು ವ್ಯಾಖ್ಯಾನಿಸಿದ್ದರು.

ಇಂದಿನ ವರ್ತಮಾನದ ಭಾರತದಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಬಿಹಾರ್ ಮತ್ತು ಅದರಿಂದ ಬೇರ್ಪಟ್ಟು 2000 ದಲ್ಲಿ ನೂತನ ರಾಜ್ಯವಾಗಿ ಉದ್ಭವಿಸಿದ ಜಾರ್ಖಡ್ ರಾಜ್ಯಗಳು ಸಹ ಮುಂಚೂಣಿಯಲ್ಲಿವೆ.

ಬಿಹಾರ್ ರಾಜ್ಯಕ್ಕೆ ನಕ್ಸಲ್ ಚಳುವಳಿ ಹೊಸತೇನಲ್ಲ. ಪಶ್ಚಿಮ ಬಂಗಾಳದಲ್ಲಿ 1967 ರಲ್ಲಿ ಆರಂಭವಾದ ದಿನಗಳಲ್ಲೇ ಪಶ್ಚಿಮ ಬಂಗಾಳದ ಕೆಲವು ನಾಯಕರು ತಮ್ಮ ಹೋರಾಟವನ್ನು ಬಿಹಾರ ರಾಜ್ಯಕ್ಕೆ ವಿಸ್ತರಿಸಿದ್ದರು. ಈ ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ದಲಿತರು ಮತ್ತು ಇತರೆ ಹಿಂದುಳಿದ ಜಾತಿಯ ಸಮುದಾಯಗಳಿಗೆ ನಕ್ಸಲಿಯರ ಹೋರಾಟ ಇವೊತ್ತಿಗೂ ಆಸರೆಯಾಗಿ ಮತ್ತು ರಕ್ಷಣೆಯಾಗಿ ನಿಂತಿದೆ. 1982 ರಲ್ಲಿ ಬಿಹಾರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ವರದಿಯ ಪ್ರಕಾರ 14 ಜಿಲ್ಲೆಗಳ 857 ವಲಯಗಳು ನಕ್ಸಲ್ ಚಟುವಟಿಕೆಯ ಕೇಂದ್ರಗಳಾಗಿದ್ದವು. ಇತ್ತೀಚೆಗೆ ನಕ್ಸಲ್ ಚಟುವಟಿಕೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿದೆ.

ಮೂಲ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ ಪಕ್ಷದಿಂದ ಸಿಡಿದು ಮಾವೋ-ಲೆನಿನ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಸಿ.ಪಿ.ಐ. (ಎಂ.ಎಲ್.) ಚಾರು ಮುಜುಂದಾರ್ ನೇತೃತ್ವದಲ್ಲಿ ರಚಿಸಿಕೊಂಡ ಸಂದರ್ಭದಲ್ಲಿ ಬಿಹಾರದಲ್ಲಿ ಕಾರ್ಯನಿರ್ವಹಿಸುತಿದ್ದ ನಕ್ಸಲಿಯರ ಬಳಗವನ್ನು ದಕ್ಷಿಣ್ ದೇಶ್ ತಂಡವೆಂದು ಕರೆಯಲಾಗುತ್ತಿತ್ತು. ಅಮೂಲ್ಯಸೇನ್ ಮತ್ತು ಕನಯ್ ಚಟರ್ಜಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಜಂಗಲ್ ಮಹಲ್ ಎಂಬ ಅರಣ್ಯ ಪ್ರದೇಶದಲ್ಲಿದ್ದುಕೊಂಡು ಬಿಹಾರದ ಚಟುವಟಿಕೆಗಳನ್ನು ನಿಯಂತ್ರಿಸುತಿದ್ದರು. ಕನಾಯ್ ಚಟರ್ಜಿ ಬಿಹಾರದ ಔರಂಗಬಾದ್ ಮತ್ತು ಗಯಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ “ಬೆಂಗಾಲ್-ಬಿಹಾರ್ ಸ್ಪೆಷಲ್ ಏರಿಯಾ ಕಮಿಟಿ” ಎಂಬ ತಂಡವನ್ನು ಸ್ಥಾಪಿಸಿದನು. ನಂತರದ ದಿನಗಳಲ್ಲಿ ಈ ತಂಡ ತನ್ನ ಹೆಸರನ್ನು ಮಾವೋವಾದಿ ಕಮ್ಯೂನಿಷ್ಟ್ ಸೆಂಟರ್ (ಎಂ.ಸಿ.ಸಿ.) ಎಂದು ಬದಲಾಯಿಸಿಕೊಂಡಿತು. ಕನಾಯ್ ಚಟರ್ಜಿ ನಿಧನಾನಂತರ 1980 ರ ದಶಕದ ವೇಳೆಗೆ ಬಿಹಾರದ ನಾಯಕರಾಗಿ ಹೊರಹೊಮ್ಮಿದ್ದ ಶಿವಂಜಿ ಮತ್ತು ರಾಮಧರ್ ಸಿಂಗ್ ಇವರುಗಳ ನಡುವಿನ ಭಿನ್ನಾಭಿಪ್ರಾಯದಿಂದ ಸಂಘಟನೆಯಿಂದ ಹೊರಬಂದ ರಾಮಧರ್‌ಸಿಂಗ್ ಕನುಸನ್ಯಾಲ್ ನೇತೃತ್ವದ ಸಂಘಟನೆಗೆ ಸೇರ್ಪಡೆಯಾದ.

1980 ರ ದಿನಗಳಲ್ಲಿ ಬಿಹಾರದಲ್ಲಿ ಪ್ರಮೋದ್ ಮಿಶ್ರ ಮತ್ತು ಸಂಜಯ್ ದುಸದ್ ಎಂಬ ಇಬ್ಬರು ranvir-sena-violenceಉಗ್ರ ಸ್ವರೂಪದ ನಾಯಕರು ಮುಂಚೂಣಿಗೆ ಬಂದ ನಂತರ ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಐದು ಸಾವಿರ ಮಂದಿ ಪೂರ್ಣಾವಧಿ ಕಾರ್ಯಕರ್ತರು ಮತ್ತು ಹತ್ತು ಸಾವಿರ ಮಂದಿ ಬೆಂಬಲಿಗರು ನಕ್ಸಲ್ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದರು. ಇದೆ ವೇಳೆಗೆ ಬಿಹಾರದಲ್ಲಿ ಜಾತಿ ಕಲಹವೂ ಸಹ ಭುಗಿಲೆದ್ದಿತ್ತು. ರಜಪೂತರು ಮತ್ತು ಯಾದವರ ಸಮುದಾಯದ ನಡುವೆ ನಡೆದ ಜಾತಿ ಸಂಘರ್ಷ ಸಾಮೂಹಿಕ ಕಗ್ಗೊಲೆಯಲ್ಲಿ ಅಂತ್ಯಗೊಂಡಿತು. ಇದೇ ರೀತಿ ಕುಮ್ರಿ ಮತ್ತು ಭುಮಿಯಾರ್‌ಗಳು ದಲಿತ ಮತ್ತು ಹಿಂದುಳಿದ ಜಾತಿಗಳ ಮೇಲೆ ನಡೆಸಿದ ಅತ್ಯಾಚಾರ, ಕೊಲೆ ಇವೆಲ್ಲವೂ ಇಡೀ ಭಾರತ ಮಾತ್ರವಲ್ಲ, ಮನುಕುಲವೇ ನಾಚಿಕೆ ಪಡುವಂತಿತ್ತು. ಇಂತಹ ದ್ವೇಷದ ದಿನಗಳಲ್ಲಿ ದಲಿತರನ್ನು ಅಂತ್ಯಗೊಳಿಸುವುದೇ ನಮ್ಮ ಮುಖ್ಯ ಗುರಿ ಎಂದು ಬಹಿರಂಗವಾಗಿ ಘೋಷಿಸುವುದರ ಮೂಲಕ ಹುಟ್ಟಿಕೊಂಡ ರಣವೀರ ಸೇನೆ ಎಂಬ ಮೇಲ್ಜಾತಿ ವರ್ಗದ (ಭೂಮಿಯಾರ್ ಬ್ರಾಹ್ಮಣರ ಸಮುದಾಯದ) ದುಷ್ಟರ ಕೂಟ ಬಿಹಾರದಲ್ಲಿ ನಡೆಸಿದ ನರಮೇಧಗಳನ್ನು ಲೆಕ್ಕವಿಟ್ಟವರಿಲ್ಲ. ಇಂತಹ ವೇಳೆಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬಿಹಾರದ ದಲಿತ ಮತ್ತು ಹಿಂದುಳಿದ ಜಾತಿಯ ಸಮುದಾಯಗಳ ಪಾಲಿಗೆ ಮಾವೋವಾದಿ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರು ರಕ್ಷಣೆಯಾಗಿ ನಿಂತರು.

ಬೇಲಾ ಭಾಟಿಯ ಎಂಬ ಸಮಾಜ ಶಾಸ್ತ್ರಜ್ಞೆ ಬಿಹಾರದ ಹಿಂಸೆ ಮತ್ತು ಅಲ್ಲಿನ ಜಾತಿ ಸಂಘರ್ಷ ಹಾಗೂ ನಕ್ಸಲ್ ಚಳುವಳಿ ಕುರಿತಂತೆ ನಡೆಸಿದ ಸಂಶೋಧನಾ ಪ್ರಬಂಧ “The Naxal Movement in Bihar” ಏಪ್ರಿಲ್ 5 ರ “Economic & political Weekly” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಡಿವಾಳ ಜಾತಿಗೆ ಸೇರಿದ ಯುವಕನೊಬ್ಬ ಪ್ರಥಮಬಾರಿಗೆ ಪದವಿ ಪಡೆದ ನಂತರ ಮೇಲ್ಜಾತಿ ಜನರಿಂದ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ಎಂ.ಎ. ಪದವಿ ಪಡೆದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಆತನಿಗೆ ಬರುತಿದ್ದ ಕೆಲಸದ ಆದೇಶಗಳು ತಲುಪದ ಹಾಗೆ ಅಂಚೆ ಕಛೇರಿಯಲ್ಲಿ ಸಂಚು ನಡೆಸಿ ಆತನ ಬದಕು ಮತ್ತು ಅನ್ನವನ್ನು ಕಸಿದ ಸಮಾಜದ ಕ್ರೌರ್ಯ ಎಲ್ಲವೂ ಇಲ್ಲಿ ದಾಖಲಾಗಿದೆ. ಅಂತಿಮವಾಗಿ ರಾಮ್ ಪ್ರವೇಶ್ ಬೈತ ಎಂಬ ಹೆಸರಿನ ಈ ಯುವಕ ನಕ್ಸಲ್ ಚಳುವಳಿ ಜೊತೆ ಗುರುತಿಸಿಕೊಂಡು ನಾಯಕನಾಗಿ ಬೆಳೆದನು. 2008 ರಲ್ಲಿ ಬಿಹಾರ ಪೊಲೀಸರಿಂದ ಬಂಧಿತನಾಗಿ ಈಗ ಜೈಲಿನಲ್ಲಿದ್ದಾನೆ. ಇದೇ ರೀತಿ ಜಗದೀಶ್ ಮಾತೊ ಎಂಬ ಯುವಕನೊರ್ವ ಜಮೀನ್ದಾರರ ಗೂಂಡಾ ಪಡೆಯ ವಿರುದ್ದ ಸಿಡಿದೆದ್ದು, ಮಾಜಿ ಡಕಾಯಿತ ರಾಮೇಶ್ವರ್ ಐಹಿರ್ ಎಂಬಾತನ ಜೊತೆಗೂಡಿ ನಕ್ಸಲ್ ಪಡೆ ಕಟ್ಟಿಕೊಂಡು ಭೋಜ್ ಪುರ್ ಜಿಲ್ಲೆಯಲ್ಲಿ ಹೋರಾಡುತಿದ್ದ ಸಂದರ್ಭದಲ್ಲಿ ಕ್ರಮವಾಗಿ 1972 ಮತ್ತು 1975 ರಲ್ಲಿ ಇಬ್ಬರೂ ಪೊಲೀಸರ ಗುಂಡಿಗೆ ಬಲಿಯಾದರು.

ಬಿಹಾರದಲ್ಲಿ ನಕ್ಸಲ್ ಚಳುವಳಿ 1970 ರ ದಶಕದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತು. ಕಲ್ಯಾಣ್ ರಾಯ್ ಎಂಬಾತ ಹುಟ್ಟುಹಾಕಿದ ಎಂ.ಎಂ.ಜಿ. (ಮ್ಯಾನ್. ಮನಿ. ಗನ್.) ಸಂಘಟನೆ ಸಿಂಗಭೂಮಿ ಜಿಲ್ಲೆ ಮತ್ತು ಜೆಮ್‌ಶೆಡ್‌ಪುರ ಸಮೀಪದ ಅರಣ್ಯ ವಲಯದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಸಂಘಟನೆಯ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರ ಬಂಧನಕ್ಕೆ ಒಳಗಾದಾಗ ಅವರ ಜೊತೆ ಓರ್ವ ಬ್ರಿಟನ್ ಯುವತಿ ಸಹ ಸಿಕ್ಕಿ ಬಿದ್ದಿದ್ದಳು. ಶಿಕ್ಷಕಿಯಾಗಿದ್ದ ಆಕೆ ಕೊಲ್ಕತ್ತ ನಗರದಲ್ಲಿದ್ದಾಗ ತಾನು ಪ್ರೀತಿಸಿದ ಯುವಕ ಅಮಲೇಂದ್ರ ಸೇನ್ ಜೊತೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದಳು. ಹಜಾರಿಬಾಗ್ ಸೆರೆಮನೆಯಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ ನಂತರ ಆಕೆಯನ್ನು ಬಿಹಾರ ಸರ್ಕಾರ ಆಕೆಯ ತಾಯ್ನಾಡಿಗೆ ಗಡಿಪಾರು ಮಾಡಿತು. 1980 ರಲ್ಲಿ ಆಕೆ ಇಂಗ್ಲೆಂಡ್ ತಲುಪಿದ ನಂತರ ಬರೆದ “My years in an Indian prison” ಕೃತಿಯಲ್ಲಿ ಭಾರತದ ಸೆರೆಮನೆಗಳ ಸ್ಥಿತಿ ಗತಿ ಮತ್ತು ಅಲ್ಲಿನ ಖೈದಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಬಗ್ಗೆ ವಿವರವಾಗಿ ದಾಖಲಿಸಿದ್ದಾಳೆ.

ಜಾತಿ ಮತ್ತು ಸಮಾಜದ ವೈರುದ್ಧಗಳ ಹಿನ್ನೆಯಲ್ಲಿ ಹುಟ್ಟಿಕೊಂಡ ನಕ್ಸಲ್ ಹೋರಾಟ ಬಿಹಾರದಲ್ಲಿ ಇವೊತ್ತಿಗೂ ಅದು ಜಾತಿಯ ಸಂಘರ್ಷವಾಗಿಯೇ ಮುಂದುವರಿದಿದೆ. 1980 ರ ದಶಕದಲ್ಲಿ ಚಾರು ಮುಜಂದಾರ್‌ನಿಂದ ಪ್ರೇರಿತನಾಗಿ ನಕ್ಸಲ್ ಪಡೆ ಸೇರಿದ್ದ ವಿನೋದ್ ಮಿಶ್ರಾ ಎಂಬ ದುರ್ಗಾಪುರದ ಇಂಜಿನಿಯರಿಂಗ್ ಕಾಲೇಜು ಪದವೀಧರ ಕಟ್ಟಿದ್ದ ಲಿಬರೇಶನ್ ಗ್ರೂಪ್ ಅಥವಾ ಎಂ.ಸಿ.ಸಿ. ನಕ್ಸಲ್ ಪಡೆ ಒಂದು ದಶಕದ ಕಾಲ ಬಿಹಾರದಲ್ಲಿ ಅಟ್ಟ ಹಾಸದಿಂದ ಮೆರೆಯುತಿದ್ದ ಜಮೀನ್ದಾರರು ಮತ್ತು ಮೇಲ್ಜಾತಿಯ ಜನರ ರಕ್ತದ ಹೊಳೆಯನ್ನೇ ಹರಿಸಿತು. ಇದಕ್ಕೆ ಪರೋಕ್ಷವಾಗಿ ಅಲ್ಲಿನ ಭುಮಿಯಾರ್ ಎಂಬ ಮೇಲ್ಜಾತಿಯ ಜನ ರಚಿಸಿಕೊಂಡ “ರಣಧೀರ್ ಸೇನಾ” ಎಂಬ ಪಡೆ ಕಾರಣವಾಗಿತ್ತು. ದಲಿತರನ್ನು ಕೊಂದು ಹಾಕುವುದೇ ನಮ್ಮ ಮುಖ್ಯ ಗುರಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದ ರಣಧೀರ್ ಸೇನೆ ನಕ್ಸಲರನ್ನು ಹಿಂಸೆಗೆ ಪ್ರಚೋದಿಸಿತ್ತು. ಡಾ. ಬಿಂದೇಶ್ವರ್ ಸಿಂಗ್ ಎಂಬುವರು ಬರೆದಿರುವ “Rural violence in Bihar” (1987) ಎಂಬ ಕೃತಿ ಜಾತಿಯ ನೆಪದಲ್ಲಿ ಬಿಹಾರದ ನೆಲದಲ್ಲಿ ಹರಿದ ನೆತ್ತರಿನ ಇತಿಹಾಸದ ಚಿತ್ರಣವನ್ನು ನೀಡುತ್ತದೆ.

1986 ರ ಸೆಂಪ್ಟಂಬರ್ ನಲ್ಲಿ ಔರಂಗಾಬಾದ್ ಜಿಲ್ಲೆಯಲ್ಲಿ 11 ಮಂದಿ ರಜಪೂತರು, 87 ರ ಮೇ 11 ರಂದು ಅದೇ ಔರಂಗಾಬಾದ್ ಜಿಲ್ಲೆಯಲ್ಲಿ 42 ರಜಪೂತರು, 1991 ರ ಜನವರಿ ತಿಂಗಳಿನಲ್ಲಿ ಗಯಾ ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ಮತ್ತು ಅದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಐವರು ಮುಸ್ಲಿಮರು (ಗಯಾ ಜಿಲ್ಲೆ) ಮತ್ತು ಮೇ ತಿಂಗಳಿನಲ್ಲಿ ಗಯಾ ಜಿಲ್ಲೆಯ ಬಿ.ಜೆ.ಪಿ. ಪಕ್ಷದ ಸಂಸದ ಹಾಗೂ ಡಿಸಂಬರ್ ತಿಂಗಳಿನಲ್ಲಿ ಮೂವರು ಭೂಮಿಯಾರ್ ಬ್ರಾಹ್ಮಣರು, ಮತ್ತೆ 1992 ರ ಪೆಬ್ರವರಿ ತಿಂಗಳಿನಲ್ಲಿ 37 ಮಂದಿ ಭೂಮಿಯಾರ್ ಬ್ರಾಹ್ಮಣರು ನಕ್ಸಲರ ಹಿಂಸೆಯಲ್ಲಿ ಹತರಾದರು. 1990 ರ ವರ್ಷವೊಂದರಲ್ಲೇ ಬಿಹಾರದಲ್ಲಿ 167 ಹಿಂಸಾತ್ಮಕ ಘಟನೆಗಳು ನಡೆದು 57 ಮಂದಿ ಪ್ರಾಣ ತೆತ್ತಿದ್ದಾರೆ.

ನಕ್ಸಲರ ಹಿಂಸೆಗೆ ಪ್ರತಿಯಾಗಿ ಮೇಲ್ಜಾತಿ ಸಮುದಾಯವಾದ ಭೂಮಿಯಾರ್ ಬ್ರಾಹ್ಮಣರು 1994 ರಲ್ಲಿ ಭೋಜ್ ಪುರ್ Brameshvar singಜಿಲ್ಲೆಯಲ್ಲಿ ಶಿವಸೇನೆಯ ಬಾಳ್‌ಥಾಕರೆ ಪ್ರತಿರೂಪದಂತಿದ್ದ ಬ್ರಹ್ಮೇಶ್ವರ್ ಸಿಂಗ್ ಎಂಬಾತನ ನೇತೃತ್ವದಲ್ಲಿ ಸ್ಥಾಪಿಸಿದ “ರಣವೀರ ಸೇನೆ” ನಿರಂತರವಾಗಿ ಐದು ವರ್ಷಗಳ ಕಾಲ ದಲಿತರನ್ನು ಕೊಲ್ಲುತ್ತಾ ಬಂದಿತು. 1995 ರಲ್ಲಿ ನಡೆದ ಬಿಹಾರದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಐವತ್ತು ಮಂದಿ ಹಿಂದುಳಿದ ವರ್ಗದ ಜನ ಹತ್ಯೆಯಾದರು. 1996 ರಲ್ಲಿ ಭೋಜ್ ಪುರ್ ಜಿಲ್ಲೆಯ ಬತನಿತೂಲ ಎಂಬ ಹಳ್ಳಿಯಲ್ಲಿ ಹದಿನಾರು ಮಂದಿ ದಲಿತ ಮಹಿಳೆಯರು, ಆರು ಜನ ಮಕ್ಕಳು ಮತ್ತು ಮೂರು ಹಸುಗೂಸುಗಳು ರಣವೀರ ಸೇನೆಯ ಕಿಚ್ಚಿಗೆ ಬಲಿಯಾದರು. 1997 ರ ಡಿಸಂಬರ್ ತಿಂಗಳಿನಲ್ಲಿ ಮತ್ತೇ ನಡೆದ ನರಮೇಧದಲ್ಲಿ 61 ಮಂದಿ ದಲಿತರು ಬಲಿಯಾದರು. bathanitola_protestಇವರಲ್ಲಿ ಹದಿನಾರು ಮಂದಿ ಮಕ್ಕಳು, ಇಪ್ಪತ್ತೇಳು ಮಹಿಳೆಯರು, ಹದಿನೆಂಟು ಮಂದಿ ಪುರುಷರು, ಹಾಗೂ ಐದು ಮಂದಿ ಅಪ್ರಾಪ್ತ ಬಾಲಕಿಯರು ಸೇರಿದ್ದರು. 1999 ರ ಜನವರಿಯಲ್ಲಿ ಜಹನಾಬಾದ್ ಜಿಲ್ಲೆಯಲ್ಲಿ ಮತ್ತೇ 22 ಮಂದಿ ದಲಿತರ ಮಾರಣಹೋಮ ಜರುಗಿತು. ಬಿಹಾರ ಸರ್ಕಾರ ರಣವೀರ ಸೇನೆ ಸಂಘಟನೆಯ ಮೇಲೆ ನಿಷೇಧ ಹೇರಿದ ನಂತರವೂ ಸಹ ದಲಿತರ ಸಾಮೂಹಿಕ ಕಗ್ಗೊಲೆ ನಿಲ್ಲಲೇ ಇಲ್ಲ. ಅಂತಿಮವಾಗಿ ರಣವೀರ ಸೇನೆಯ ಸಂಸ್ಥಾಪಕ ಬ್ರಹ್ಮೇಶ್ವರಸಿಂಗ್‌ನನ್ನು ನಕ್ಸಲ್ ಬೆಂಬಲಿತ ದಲಿತರು ಇದೇ 2012 ರ ಜೂನ್ ಒಂದರಂದು ಭೋಜ್‌ಪುರ ಪಟ್ಟಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡುವುದರ ಮೂಲಕ ದಲಿತರ ಸಾವಿಗೆ ಸೇಡು ತೀರಿಸಿಕೊಂಡರು. ಇಂತಹ ಹಿಂಸೆಯ ಚಟುವಟಿಕೆಯ ನಡುವೆ ವಿನೋದ್ ಮಿಶ್ರ ನಾಯಕತ್ವದ ಎಂ.ಸಿ.ಸಿ. ನಕ್ಸಲ್ ಪಡೆ ಬಿಹಾರದಲ್ಲಿ 3200 ಹೆಕ್ಟೇರ್ ಭೂಮಿಯನ್ನು ಜಮೀನ್ದಾರರಿಂದ ವಶಪಡಿಸಿಕೊಂಡು ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಿತ್ತು.

ಬಿಹಾರದ ಗಯಾ, ಸಿಂಗಭೂಮಿ, ಭೋಜ್‌ಪುರ, ನಳಂದ, ಜಹನಾಬಾದ್ ಔರಂಗಬಾದ್ ಜೆಮ್‌ಶೆಡ್‌ಪುರ ಜಿಲ್ಲೆ ಸೇರಿದಂತೆ ಕೇಂದ್ರ ಹಾಗೂ ದಕ್ಷಿಣ ಬಿಹಾರದಲ್ಲಿ ಏ.ಕೆ.47 ಬಂದೂಕ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 15000 ನಕ್ಸಲರನ್ನು ಹೊಂದಿತ್ತು. ಬಿಹಾರದ ನಕ್ಷಲ್ ಹೋರಾಟಕ್ಕೆ ಗಡಿಯಾಚೆಗಿನ ನೆರೆಯ ನೇಪಾಳದ ಮಾವೋವಾದಿ ನಕ್ಸಲ್ ಸಂಘಟನೆ ಉಚಿತವಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು.

ಬಿಹಾರದ ಹಿಂದುಳಿದ ಮತ್ತು ದಲಿತರ ವಿಶ್ವಾಸ ಗಳಿಸಿದ್ದ ಎಂ.ಸಿ.ಸಿ. ನಕ್ಸಲ್ ಸಂಘಟನೆ ದಂಡಕಾರಣ್ಯದ ಮಾದರಿಯಲ್ಲಿ “ಕ್ರಾಂತಿಕಾರಿ ಕಿಸಾನ್ ಸಂಘಟನೆ”, “ಜನ್ ಸುರಕ್ಷಾ ಸಂಘಷ್ ಮಂರ್ಚ್”. “ಬುದ್ಧಿಜೀವಿ ಸಂಘ್”, ಮತ್ತು “ಕ್ರಾಂತಿಕಾರಿ ಚಾತ್ರ ಲೀಗ್” ಹಾಗೂ ಸಶಸ್ತ್ರ ಪಡೆಯಾದ “ಲಾಲ್ ರಕ್ಷಕ್ ದಳ್” ಎಂಬ ಅಂಗ ಘಟಕಗಳನ್ನು ಹೊಂದಿತ್ತು.

ಇದರ ಜೊತೆಗೆ 1982 ರಲ್ಲೇ ಚಾರು ಮುಜುಂದಾರ್‌ನ ಸಂಗಾತಿಗಳಲ್ಲಿ ಒಬ್ಬನಾಗಿದ್ದ ನಾಗಭೂಷಣ್ ಪಟ್ನಾಯಕ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಇಂಡಿಯನ್ ಪೀಪಲ್ಸ್ ಫ್ರಂಟ್ ಎಂಬ ರಾಜಕೀಯ ಘಟಕವನ್ನು ಪುನಶ್ಚೇತನಗೊಳಿಸಿ ಬಿಹಾರದಲ್ಲಿ 1985 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತಾದರೂ ಯಶಸ್ಸು ಕಾಣಲಿಲ್ಲ. ಆದre 1989 ರ ಚುನಾವಣೆಯಲ್ಲಿ ಇಂಡಿಯನ್ ಪೀಪಲ್ಸ್ ಫ್ರಂಟ್‌ನ ವತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಏಳು ಮಂದಿ ಶಾಸಕರು ಮತ್ತು ಓರ್ವ ಸಂಸದನನ್ನು ಬಿಹಾರದ ಜನತೆ ಆಯ್ಕೆ ಮಾಡಿದ್ದರು. ನಂತರದ ದಿನಗಳಲ್ಲಿ ಎಂ.ಸಿ.ಸಿ. ಸಂಘಟನೆ ಜೊತೆ ಆಂಧ್ರ ಮೂಲದ ಅಪ್ಪಾಳಸೂರಿ ಮತ್ತು ಪಶ್ಚಿಮ ಬಂಗಾಳದ ಬೊವನಿರಾಯ್ ನೇತೃತ್ವದ ಸಿ.ಪಿ.ಐ. ( ಎಂ.ಎಲ್.) ಅಂದರೆ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗಳು ಸೇರ್ಪಡೆಯಾದ ನಂತರ ಕೆಲವು ನಾಯಕರು ರಾಜಕೀಯ ಚಟುವಟಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವದನ್ನು ಸ್ಥಗಿತಗೊಳಿಸಲಾಯಿತು. ಬಿಹಾರದಲ್ಲಿ ಮಾವೋ ಮತ್ತು ಲೆನಿನ್ ಪ್ರೇರಿತ ನಕ್ಸಲ್ ಚಟುವಟಿಕೆಯ ಜೊತೆ ಜೊತೆಯಲ್ಲಿ ಇದೇ ಮಾದರಿಯಲ್ಲಿ “ಮಜ್ದೂರ್ ಕಿಸಾನ್ ಸಂಗ್ರಾಮ್ ಸಮಿತಿ” ಎಂಬ ಸಂಘಟನೆ ದಲಿತ ಮತ್ತು ಭೂಹೀನರ ಪರವಾಗಿ ಹೋರಾಟ ನಡೆಸಿದ್ದು ಉಲ್ಲೇಖನಿಯವಾದದ್ದು.

ಜಯಪ್ರಕಾಶ್ ನಾರಾಯಣರ ಪಕ್ಕಾ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಡಾ.ವಿನಯ್ ಎಂಬುವರು 1979 ರಲ್ಲಿ ಜನತಾ ಪಕ್ಷದಿಂದ ಹೊರಬಂದು 1982 ರಲ್ಲಿ ಎಂ.ಕೆ.ಎಸ್.ಎಸ್. ಎಂಬ ಈ ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟು ಹಾಕಿದ್ದರು. ನಕ್ಸಲಿಯರಿಗಿಂತ ಭಿನ್ನವಾದ ಹಾದಿಯಲ್ಲಿ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಟ ನಡೆಸುವುದು ಡಾ. ವಿನಯ್ ಅವರ ಕನಸಾಗಿತ್ತು. ಕೃಷಿ ಕಾರ್ಮಿಕರಿಗೆ ಕನಿಷ್ಟ ಕೂಲಿ, ಮತ್ತು ಜಮೀನ್ದಾರರ ಶೋಷಣೆಯನ್ನು ತಪ್ಪಿಸುವುದು ಹಾಗೂ ದಲಿತರ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡಿತ್ತು. ಆದರೆ 1986 ರಲ್ಲಿ ಒಂಬತ್ತು ಹಿಂದುಳಿದ ಕುಟುಂಬಗಳ ನಡುವಿನ ವೈಷಮ್ಯ ಪರಸ್ಪರ ಕುಟುಂಬಗಳ ಸದಸ್ಯರ ಹತ್ಯೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ 26 ಮಂದಿ ಎಂ.ಕೆ.ಎಸ್.ಎಸ್. ಕಾರ್ಯಕರ್ತರು ಪೊಲೀಸರ ಗುಂಡಿಗೆ ಬಲಿಯಾದರು. ಜೊತೆಗೆ ಸರ್ಕಾರ ಕೂಡ ಈ ಸಂಘಟನೆಯ ಮೇಲೆ ನಿಷೇಧ ಹೇರಿತು. ಇಂತಹ ಹಿನ್ನಡೆಯ ನಡುವೆ ಅಂತಿಮವಾಗಿ ವಿಧಿಯಿಲ್ಲದೆ ನಕ್ಸಲಿಯರ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರುವ ಈ ಸಂಘಟನೆ ಸಧ್ಯ ಬಿಹಾರದಲ್ಲಿ 25 ಶಸ್ತ್ರ ಸಜ್ಜಿತ ಪಡೆಗಳು ಮತ್ತು ೩೦ಸಾವಿರ ಕಾರ್ಯಕರ್ತರನ್ನು ಹೊಂದಿದೆ. ಎಂ.ಕೆ.ಎಸ್.ಎಸ್. ಸಂಘಟನೆಯಲ್ಲೂ ಸಹ ಅತ್ಯಾಧುನಿಕ ಮಿಷಿನ್ ಗನ್, ಸ್ಟನ್ ಗನ್ ಮತ್ತು ಏ.ಕೆ.47 ಮತ್ತು ಏ.ಕೆ.56 ಬಂದೂಕಗಳಿರುವುದು ವಿಶೇಷವಾಗಿದೆ.

ಭಾರತದಲ್ಲಿ ಮಧ್ಯಭಾರತದ ದಂಡಕಾರಣ್ಯ ಹೊರತು ಪಡಿಸಿದರೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ dalit_hostel_burntನಕ್ಸಲರ ಚಟುವಟಿಕೆ ತೀವ್ರಗೊಂಡಿದೆ. ಹಾಗಾಗಿ ಆಧುನಿಕ ಬಿಹಾರದ ಚರಿತ್ರೆ ಎಂದರೇ ಅದು ರಕ್ತ ಚರಿತ್ರೆ ಎಂಬಂತಾಗಿದೆ. ಲಂಡನ್ ನಗರದಲ್ಲಿರುವ ಗೋಲ್ಡ್‌ಸ್ಮಿತ್ ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರಜ್ಞೆ ಅಲ್ಪ ಶಾ (Alpa Shah) ಎಂಬಾಕೆ ಕಳೆದ ಇಪ್ಪತ್ತು ವರ್ಷಗಳಿಂದ ನೇಪಾಳ ಮತ್ತು ಬಿಹಾರದ ನಕ್ಸಲ್ ಚಟುವಟಿಕೆ ಕುರಿತು ಅಧ್ಯನ ನಡೆಸುತಿದ್ದಾರೆ. ಈಕೆ ಸಂಪಾದಿಸಿರುವ “Windows in to a Revolution” ಎಂಬ ಕೃತಿಯಲ್ಲಿ ಬಿಹಾರ ರಾಜ್ಯದ ಪ್ರತಿಯೊಂದು ದಲಿತ ಕುಟುಂಬದ ದುರಂತದ ಚಿತ್ರಣವಿದೆ. ಅಲ್ಲಿನ ಪ್ರತಿ ಕ್ಷಣದ ನಕ್ಸಲ್ ಚಟುವಟಿಕೆಗಳು ಮತ್ತು ಮೇಲ್ಜಾತಿಯ ಹಿಂಸೆ ಇವುಗಳಿಗೆ ಸಾಕ್ಷಿಯಾಗಿದ್ದ ಈ ತಜ್ಞೆ ದಾಖಲಿಸಿರುವ ಅಂಶಗಳು ನಕ್ಸಲಿಯರು ಮತ್ತು ಅವರ ಹಿಂಸೆ ಕುರಿತಂತೆ ನಮ್ಮ ಮರುಚಿಂತನೆಗೆ ದಿಕ್ಸೂಚಿಯಾಗಬಲ್ಲವು.

(ಮುಂದುವರಿಯುವುದು)