Category Archives: ಜೀವಿ

ರೇಡಿಯೋ ಸ್ಟ್ಯಾಂಡ್ ಕೆಳಗೆ ಹೆರಿಗೆ

 – ಜೀವಿ

ಅದೊಂದು ದಿನ ಸಂಜೆ ದೋ ಎಂದು ಸುರಿಯುತ್ತಿದ್ದ ಮಳೆಯ ಮಧ್ಯೆ ಢಬ್, ಢಬ್ ಎಂಬ ಸದ್ದು ಕೂಡು ಜೋರಾಗಿತ್ತು. ಹೊತ್ತು ಮುಳುಗುವುದೇ ತಡ ದಲಿತ ಕೇರಿ ಮನೆಗಳ ಮೇಲೆ ಕಲ್ಲುಗಳು ಬೀಳುತ್ತಿದ್ದ ಸದ್ದು ಹೊಸದೇನು ಆಗಿರಲಿಲ್ಲ. ಮೇಲ್ಜಾತಿ ಕೇರಿ ಕಡೆಯಿಂದ ಬರುತ್ತಿದ್ದ ಕಲ್ಲುಗಳು ಸಿಕ್ಕವರ ತಲೆ ಸೀಳುತ್ತಿದ್ದವು. ಮನೆಗಳಲ್ಲಿದ್ದ ಮಡಿಕೆ, ಕುಡಿಕೆಗಳನ್ನು ಒಡೆದು stones-2ಹಾಕುತ್ತಿದ್ದವು, ಕುಡಿಯುವ ನೀರಿನ ಕೊಳಗದಲ್ಲೂ ಜಾಗ ಪಡೆಯುತ್ತಿದ್ದವು. ಆ ಕಲ್ಲಿನ ಹೊಡೆತದಿಂದ ತಪ್ಪಿಸಲು ಮಕ್ಕಳನ್ನು ಅಟ್ಟದ ಕೆಳಗೆ ಜಾಗ ಮಾಡಿ ಮಲಗಿಸುತ್ತಿದ್ದ ಹೆತ್ತವರು, ಎಷ್ಟೋ ದಿನ ನಿದ್ರೆ ಬಿಟ್ಟು ಗೋಡೆಗೊರಗಿ ಕುಳಿತಿದ್ದ ಉದಾಹರಣೆಗಳಿವೆ.

ಅದೊಂದು ಸಂಜೆ ಮಳೆಯ ನಡುವೆ ಕಲ್ಲುಗಳು ತೂರಿ ಬರುತ್ತಿದ್ದವು. ಇತ್ತ ತಾಯವ್ವನ ಹೆರಿಗೆ ನೋವು ಜಾಸ್ತಿಯಾಗಿತ್ತು. ಆಕೆಯ ಮನೆ ಮೇಲ್ಜಾತಿ ಕೇರಿಗೆ ಹತ್ತಿರದಲ್ಲಿದ್ದ ಕಾರಣಕ್ಕೆ ಅರ್ಧದಷ್ಟು ಕಲ್ಲುಗಳಿಗೆ ಆ ಮನೆಯೇ ಮೊದಲ ಗುರಿ. ತಾಯವ್ವನ ಗಂಡ ರಂಗ ಹೊರ ಹೋಗಿ ಬಾಣಸಗಿತ್ತಿಯನ್ನು ಕರೆ ತರುವುದು ಕೂಡ ಕಷ್ಟವಾಯಿತು. ಹೊರ ಹೋದರೆ ಗಂಡನ ಮೇಲೆ ಕಲ್ಲು ಬೀಳುವ ಆತಂಕದಿಂದ ಹೊರ ಹೋಗಲು ಅವಕಾಶ ಕೊಡದೆ ಗಂಡನ ಕೈ ಹಿಡಿದು ತಾಯವ್ವ ಕುಳಿತಿದ್ದಳು. ಸ್ವಲ್ಪ ಹೊತ್ತಿನಲ್ಲೆ ಮಳೆ ಕಡಿಮೆಯಾಯಿತು. ಆದರೆ ತೂರಿ ಬರುವ ಕಲ್ಲಿನ ಸಂಖ್ಯೆ ಹೆಚ್ಚಾಯಿತು. ಮಳೆ ನಿಂತಿದ್ದು ಕಲ್ಲು ಬೀಸುವವರಿಗೆ ಅನುಕೂಲಕರವಾಗಿತ್ತು.

ತಾಯವ್ವನ ನರಳಾಟ ಇಡೀ ಕೇರಿಗೆ ಕೇಳಿಸಿದರೂ ಹೊರ ಹೋದರೆ ಕಲ್ಲಿನ ಏಟು ಬೀಳುವ ಆತಂಕದಲ್ಲಿ ಎಲ್ಲರು ಜೀವ ಬಿಗಿ ಹಿಡಿದು ಕುಳಿತಿದ್ದರು. ಹೆಂಡತಿಯ ನೋವು ನೋಡಲಾರದ ರಂಗ ಬಾಗಿಲು ತೆರೆದು ಹೊರ ಹೋಗಿ ಬಾಣಸಗಿತ್ತಿ ಚಿಕ್ಕಮ್ಮಳಿಗೆ ವಿಷಯ ಮುಟ್ಟಿಸಿದ. ಜೀವಭಯದಲ್ಲೆ ಬೀದಿಗೆ ಬಂದ ಬಾಣಸಗಿತ್ತಿ ಹರಳೆಣ್ಣೆಯೊಂದಿಗೆ ತಾಯವ್ವನ ಮನೆ ಸೇರಿಕೊಂಡಳು. ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಎತ್ತಿನ ಗಾಡಿ ಇರುವವರ ಮನೆ ಕದ ತಟ್ಟಲು ರಂಗ ಓಡಿ ಹೋದ.

ಮೂರ್ನಾಲ್ಕು ಬಿದಿರು ಬೊಂಬಿನ ಅಟ್ಟದ ಮೇಲೆ ಮಣ್ಣಿನ ದೊಡ್ಡ ಮಡಿಕೆಗಳಲ್ಲಿ ಬೀಜದ ರಾಗಿಯನ್ನು ತಾಯವ್ವ ಶೇಖರಿಸಿಟ್ಟಿದ್ದಳು. ಅದರ ಕೆಳಗೆ ಗೋಡೆಗೊರಗಿ ಕುಳಿತಿದ್ದಳು. ಮೇಲ್ಜಾತಿ ಕೇರಿ ಕಡೆಯಿಂದ ಬಂದ ಕಲ್ಲೊಂದು ಹೆಂಚು ಸೀಳಿ ಅದೇ ಮಡಿಕೆಗೆ ಬಡಿಯಿತು. ಮಡಿಕೆಯಲ್ಲಿದ್ದ ರಾಗಿ ನೇರವಾಗಿ ತಾಯವ್ವ ಮತ್ತು ಬಾಣಸಗಿತ್ತಿಯ ನೆತ್ತಿ ಮತ್ತು ಮೈ ಮೇಲೆ ಸುರಿಯಿತು. ಮನೆತುಂಬ ರಾಗಿ ಕಾಳು ಹರಡಿದವು. ಅದರ ನಡುವೆ ಕುಳಿತಿದ್ದ ತಾಯವ್ವನನ್ನು ಬಾಣಸಗಿತ್ತಿ ಹೇಗೋ ಎತ್ತಿ ಇನ್ನೊಂದೊಡೆಗೆ ಕೂರಿಸುವ ಪ್ರಯತ್ನ ಮಾಡಿದಳು. ಇಡೀ ಮನೆಗೆ ಅಟ್ಟಣಿಗೆ ಜೋಡಿಸದ ಕಾರಣ ಸುರಕ್ಷಿತವಾದ ಬೇರೆ ಜಾಗ ಇಲ್ಲದಾಯಿತು. ರೇಡಿಯೋ ಇರಿಸಲು ಮಾಡಿಸಿದ್ದ ಸ್ಟ್ಯಾಂಡ್ ವೊಂದರ ಕಳೆಗೆ ತಾಯವ್ವನನ್ನು ಕೂರಿಸಿದಳು. ಅತ್ತ ಎತ್ತಿನ ಗಾಡಿ ತರಲು ಹೋದ ರಂಗ ಬೀದಿ ಬೀದಿ ಅಲೆಯುತ್ತಿದ್ದ.

ಹೆರಿಗೆ ನೋವು ಇನಷ್ಟು ಜಾಸ್ತಿಯಾಗಿ ತಾಯವ್ವನ ಕಿರುಚಾಟ ಹೆಚ್ಚಾಯಿತು. ಕೊನೆಗೂ ರೇಡಿಯೋ ಸ್ಟ್ಯಾಂಡ್ ಕೆಳಗೆ ಗಂಡು ಮಗುವಿಗೆ ತಾಯವ್ವ ಜನ್ಮ ನೀಡಿದಳು. ಹುಟ್ಟಿದ ಮಗು ಮಲಗಿಸಲು ಜಾಗವಿಲ್ಲದಂತಾಯಿತು. ತಾಯವ್ವನ ಕೈಯಲ್ಲಿ ಮಗು ಕೊಟ್ಟು ಅಟ್ಟದ ಕೆಳಗಿನ ರಾಗಿ ಗುಡಿಸಿ ಮಗು ಮಲಗಿಸಲು ಬಾಣಸಗಿತ್ತಿ ಜಾಗ ಮಾಡಿದಳು. ಮತ್ತೊಮ್ಮೆ ಕಲ್ಲು ಬಿದ್ದರೆ ಇನ್ನೊಂದು ಮಡಿಕೆಯಲ್ಲಿದ್ದ ರಾಗಿ ಕೂಡ ಮಗು ಮೇಲೆ ಬೀಳುವ ಆತಂಕ ಇತ್ತು. ಗೋಣಿ ಚೀಲ ಹೊದಿಸಿ ಮಗುವಿನ ಮೇಲೆ ರಾಗಿಕಾಳು ಬೀಳದಂತೆ ನೋಡಿಕೊಂಡ ತಾಯವ್ವ, ಹಾಗೇ ಗೋಡೆಗೊರಗಿ ಇಡೀ ರಾತ್ರಿ ಕಳೆದಳು. ಗಾಡಿ ಸಿಗದೆ ಬರಿಗೈಯಲ್ಲಿ ಬಂದ ರಂಗ ಕೂಡ ಕಣ್ಮುಚ್ಚದೆ ತಾಯವ್ವನೊಂದಿಗೆ ಕುಳಿತು ಕಣ್ಣೀರು ಸುರಿಸಿದ.

ಹರಿದ ಅರ್ಜಿ:stones
ದಲಿತರ ಮನೆಗಳ ಮೇಲೆ ಮಾತ್ರವಲ್ಲ ಅವರ ಜೀವನದ ಮೇಲೂ ಕಲ್ಲು ತೂರುವ ಕೆಲಸ ಮುಂದುವರಿಯಿತು. ದಲಿತರು ಹೊಲದಲ್ಲಿ ಬೆಳೆದಿದ್ದ ಬೆಳೆಗೆ ಮೇಲ್ಜಾತಿಯವರ ಕುರಿ ಮತ್ತು ದನಗಳನ್ನು ಬಿಟ್ಟು ಮೇಯಿಸಿದರೂ ಕೇಳುವಂತಿಲ್ಲ. ಕೆಳಜಾತಿಯವರ ಕುರಿಗಳನ್ನು ಕಣ್ಣೆದುರೇ ಕಡಿದು ಹಂಚಿಕೊಂಡರೂ ಪ್ರಶ್ನಿಸುವಂತಿಲ್ಲ. ಕೇಳುವ ಸಾಹಸ ಮಾಡಿದವರ ಜೀವ ಉಳಿಯುವುದು ಕೂಡ ಕಷ್ಟವಾಗಿತ್ತು.

ಉಳುವವರಿಗೆ ಭೂಮಿ, ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನ..ಹೀಗೆ ನಾನಾ ಕಾರಣಗಳಿಗಾಗಿ ಒಂದು ಪಕ್ಷಕ್ಕೆ ನಿಷ್ಠೆ ಮೀಸಲಿರಿಸಿಕೊಂಡು ಬಂದಿದ್ದ ದಲಿತರನ್ನು ಕಂಡರೆ ಇತರೆ ಪಕ್ಷದ ಮುಖಂಡರಿಗೆ ಹಾಗೂ ಹಳ್ಳಿಗಳಲ್ಲಿದ್ದ ಅವರ ಹಿಂಬಾಲಕರಿಗೆ ಇನ್ನಿಲ್ಲದ ಅಸಹನೆ. ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂಬ ಹಟ. ದಲಿತರು ಕಡಿಮೆ ಸಂಖ್ಯೆಯಲ್ಲಿದ್ದ ಊರುಗಳಲ್ಲಂತೂ, ಅವರ ಪಾಡು ಹೇಳ ತೀರದು. ಸಣ್ಣ ಸಣ್ಣ ಊರುಗಳಲ್ಲಿ ಇಂತಿಂತಹ ಮನೆಯವರೇ ನಮ್ಮ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಲೆಕ್ಕ ಹಾಕುವುದು ಸುಲಭ. ಅದರ ಪರಿಣಾಮ ಮುಂದಿನ ಚುನಾವಣೆ ತನಕ ಅನುಭವಿಸಬೇಕಿತ್ತು. ಒಂದು ಪಕ್ಷ ದಲಿತರ ವಿರೋಧದ ನಡುವೆಯೂ, ಅವರ ಕಡೆಯ ಅಭ್ಯರ್ಥಿ ಗೆದ್ದರಂತೂ, ಸರಕಾರದ ಯಾವ ಸವಲತ್ತೂ ಅವರಿಗೆ ತಲುಪದಂತೆ ನೋಡಿಕೊಳ್ಳುತ್ತಿದ್ದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಿದ್ದ ಸವಲತ್ತುಗಳು ಎಲ್ಲರನ್ನೂ ತಲುಪುತ್ತಿರಲಿಲ್ಲ. ಸವಲತ್ತು ಬೇಕಿದ್ದರೆ, ಅವರ ನಾಯಕರಲ್ಲಿ ನಿಷ್ಠೆಯನ್ನು ವ್ಯಕ್ತಪಡಿಸಬೇಕಿತ್ತು. ಶಾಸಕರ ಯಜಮಾನಿಕೆಯಲ್ಲಿಯೇ ಇರುವ ಸಂಸ್ಥೆಯ ಹುದ್ದೆಯೊಂದಕ್ಕೆ ದಲಿತರ ಹುಡುಗ ಅರ್ಜಿ ಹಾಕಿದ. ಮೀಸಲಿದ್ದ ಹುದ್ದೆಯನ್ನು ಪಡೆಯುವಲ್ಲಿ, ಆ ಶಾಸಕರ ಕೃಪೆ ಅನಿವಾರ್ಯವಾಗಿತ್ತು. ಏಕೆಂದರೆ, ಅಲ್ಲಿ ಸಂದರ್ಶನ, ನೇಮಕಾತಿ ಪ್ರಕ್ರಿಯೆ ಎಲ್ಲವೂ ನೆಪ ಮಾತ್ರ. ಅಭ್ಯರ್ಥಿಗಳ ಆಯ್ಕೆಯಾಗುತ್ತಿದ್ದುದ್ದು ಅವರ ಮೂಗಿನ ನೇರಕ್ಕೆ. ಆ ದಲಿತರ ಹುಡುಗ ತನಗೂ ಒಂದು ಒಳ್ಳೆ ಕೆಲಸ ಸಿಕ್ಕರೆ ಕಷ್ಟಗಳು ಕಡಿಮೆಯಾಗುತ್ತವೆ ಎಂದು, ಶಾಸಕರನ್ನು ಸಂಪರ್ಕಿಸಲು ಹರಸಾಹಸ ಪಟ್ಟ.

ನೀನು ನಿನ್ನ ಅಪ್ಪ-ಅಮ್ಮ ರನ್ನು ಕರೆದುಕೊಂಡು ಹೋಗಿ ಅವರ ಕಾಲಿಗೆ ನಮಸ್ಕಾರ ಮಾಡುವಂತೆ ಮಾಡು, ಅವರ ಮನdalit_panther ಕರಗಿ ನಿನಗೆ ಒಳ್ಳೆಯದಾಗುತ್ತೆ ಎಂದು ಶಾಸಕರ ಆಪ್ತರು ಸಲಹೆ ಕೊಟ್ಟರು. ಏನೂ ಅರಿಯದ ಅಮ್ಮ, ತನ್ನ ಮಗನಿಗೆ ಕೆಲಸ ಸಿಗುವುದಾದರೆ, ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವನಾದ ಶಾಸಕನ ಕಾಲಿಗೆ ಬಿದ್ದರು. ಆದರೆ ಮನಸ್ಸು ಕರಗಿದಂತೆ ಕಾಣಲಿಲ್ಲ. ಸಂದರ್ಶನ ಪತ್ರ ಹಾಗೂ ಅರ್ಜಿಯ ಪ್ರತಿಯೊಂದನ್ನು ಅವರ ಕೈಗೆ ಆ ಅಭ್ಯರ್ಥಿ ಕೊಟ್ಟರೆ, ಅವನ ಎದುರೇ, ಅದನ್ನು ಹರಿದು ತಾನು ಕೂತಿದ್ದ ಕುರ್ಚಿಯ ಹಿಂದಕ್ಕೆ ಬಿಸಾಕಿದರು. ಆ ಮೂಲಕ ಆ ಹುಡುಗನ ನೌಕರಿ ಕನಸು ಕಮರಿತು. ಹೀಗೆ ಜಾತಿ ಹಾಗೂ ರಾಜಕೀಯ ಕಾರಣಗಳಿಗೆ ಅವಕಾಶಗಳನ್ನು ಕಳೆದುಕೊಂಡವರು ನೂರಾರು ಮಂದಿ. ಇಂದಿಗೂ ಇಂತಹ ಘಟನೆಗಳು ನಡೆಯುತ್ತಲೇ ಇವೆ.

ಕೊಳ್ಳಿದೆವ್ವ ಮತ್ತು ವರಮಹಾಲಕ್ಷ್ಮೀ ಎಂಬ ಸಮೂಹ ಸನ್ನಿ…

                                                                                                                                                -ಜೀವಿ

ನನಗಾಗ ಹತ್ತು-ಹನ್ನೊಂದು ವರ್ಷ ವಯಸ್ಸು. ಶಾಲೆಗೆ ರಜೆ ಇದ್ದರೆ ದನಕರುಗಳೊಂದಿಗೆ ಬೆಟ್ಟ ಹತ್ತುವ ಕೆಲಸ ಕಾಯಂ. ವಾರವಿಡಿ ಶಾಲೆಯಲ್ಲಿ ಬೆರೆಯುತ್ತಿದ್ದ ಗೆಳೆಯರು ರಜೆ ದಿನ ಆಡು, ಕುರಿ, ದನ ಮತ್ತು ಎಮ್ಮೆಯೊಂದಿಗೆ ಬೆಟ್ಟ ಸೇರುತ್ತಿದ್ದೆವು. ತೋಳ, ಕಿರುಬನ ಕಾಟದ ನಡುವೆ ದನ-ಕರುಗKollidevvaಳನ್ನು ಜೋಪಾನ ಮಾಡುವ ಜತೆಗೆ ಆಡಿ-ನಲಿದು ತಲೆಗೊಂದು ಹೊರೆಯಷ್ಟು ಪುಳ್ಳೆ ಸೌದೆಯೊಂದಿಗೆ ಮನೆ ಸೇರುವುದು ರಜೆ ಕಾಲದ ದಿನಚರಿ.

ಅದೊಂದು ರಜೆ ದಿನದ ದಿನಚರಿ ಮುಗಿದು ಇಳಿಹೊತ್ತಿಗೆ ಬೆಟ್ಟ ಇಳಿದು ದನಕರುಗಳೊಂದಿಗೆ ಸೌದೆ ಹೊತ್ತು ಮನೆ ಮುಟ್ಟುವಷ್ಟರಲ್ಲಿ ನಸುಗತ್ತಲು ಆವರಿಸಿತ್ತು. ಮನೆ ಹಿಂದಿನ ಹಿತ್ತಲಿಗೆ ಸೌದೆ ಹಾಕಿ ಕೊಟ್ಟಿಗೆಗೆ ದನಕರುಗಳನ್ನು ಕಟ್ಟಿ ಮನೆಗೆ ಬಂದು ಕೈಕಾಲು ತೊಳೆದು ಬೆಳಗ್ಗೆ ಉಳಿದಿದ್ದ ರೊಟ್ಟಿ ಚೂರು ತಿಂದು ಬೀದಿಗೆ ಬಂದೆ.

ಅಷ್ಟರಲ್ಲಿ ಎಲ್ಲರು ಕೋಟೆ ಕಡೆಗೆ ಓಡುತ್ತಿದ್ದರು. ಕೋಟೆ ಎಂದರೆ ಚಿತ್ರದುರ್ಗದಂತ ದೊಡ್ಡ ಕೋಟೆ ಅಲ್ಲ. ಸುಮಾರು ಒಂದೂವರೆ ಗುಂಟೆಯಷ್ಟು ಜಾಗಕ್ಕೆ ಕಲ್ಲಿನಲ್ಲಿ ಕಟ್ಟಿದ ಕಾಂಪೌಡ್ನ ಒಳಭಾಗಕ್ಕೆ ಮಣ್ಣು ತುಂಬಿಸಿ ನಾಲ್ಕೈದು ಅಡಿ ಎತ್ತರ ಮಾಡಲಾಗಿದೆ. ಅದರ ಮೇಲೆ ಚಿಕ್ಕದೊಂದು ಗುಡಿ ಇದೆ. ಅದನ್ನೇ ಹಿಂದಿನಿಂದ ಕೋಟೆ ಎಂದು ಕರೆಯಲಾಗುತ್ತಿದೆ.

ಕೋಟೆ ಕಡೆಗೆ ಓಡುತ್ತಿದ್ದ ಊರಿನವರನ್ನು ನಾನೂ ಹಿಂಬಾಲಿಸಿದೆ. ಅದಾಗಲೇ ಸೇರಿದ್ದ ಜನ ಬೆಟ್ಟದ ಕಡೆಗೆ ಮುಖ ಮಾಡಿದ್ದರು. ಅವರ ಹಿಂಭಾಗ ಮಾತ್ರ ಕಾಣುತ್ತಿತ್ತು. ಮುಂದೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿಲ್ಲ. ನನ್ನೊಂದಿಗೆ ಮಹೇಶ, ರಾಜ, ಮಂಜ, ರವಿ, ಗೋವಿಂದ, ಪಾಪಕ್ಕ, ಮಂಜಿ, ಚಂದ್ರ, ಹೇಮಾ, ನಾಗ ಎಲ್ಲರು ಏನೂ ಕಾಣದೆ ನೋಡಲು ಎಗರುತ್ತಿದ್ದರು. ಜನರ ಮಧ್ಯ ನುಸುಳಿ ಯತ್ನಿಸಿದ ನನಗೆ ಜವರಣ್ಣ ತಲೆಗೆ ಬಾರಿಸಿ ಮಕ್ಕಳು ನೋಡಬಾರದು ಹೋಗು ಎಂದು ಗದರಿಸಿದ.

’ಕೊಳ್ಳಿ ದೆವ್ವ ಕುಣಿತೈತೆ ಮಕ್ಕಳೆಲ್ಲ ಮನೆಗೆ ಹೋಗಿ, ಬಂದ್ಬಿಟ್ರು ದೊಡ್ಡ ಮನುಷ್ಯರು’ ಎಂದು ಕರಿಯಣ್ಣ ಕೋಲು ಹಿಡಿದು ಅಬ್ಬರಿಸಿದ. ಚದುರಿದಂತೆ ಎದ್ದು ಬಿದ್ದು ಓಡಿದೆವು. ಕುತೂಹಲ ತಡೆಯಲಾಗದೆ ಮಕ್ಕಳ ಪೈಕಿ ನಾನು, ರಾಜ ಇಬ್ಬರು ಮತ್ತೊಮ್ಮೆ ಒಳ ನುಗ್ಗಲು ಯತ್ನಿಸಿದೆವು. ಹೇಗೋ ಕಷ್ಟಪಟ್ಟು ನಾನಂತೂ ಮುಂದೆ ನುಗ್ಗಿದೆ. ರಾಜನಿಂದ ಅದು ಸಾಧ್ಯವಾಗಲಿಲ್ಲ.
ಲಕ್ಕಜ್ಜನ ಹೆಂಡ್ತಿ ಪುಟ್ಟಕ್ಕೆ ಬೆಟ್ಟದ ಕಡೆಗೆ ಕೈ ತೋರಿಸಿ ಕೊಳ್ಳಿದೆವ್ವ ತೋರಿಸುತ್ತಿದ್ದಳು. ಕೆಲವರಿಗೆ ಇನ್ನೂ ಅದು ಕಂಡಿರಲಿಲ್ಲ, ನನ್ನ ಕೈ ನೇರದಲ್ಲಿ ನೋಡು ಎಂದು ಕಾಣದೆ ಪರದಾಡುತ್ತಿದ್ದವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ತೊರಿಸುತ್ತಿದ್ದಳು. ನಾನೇ ಮೊದಲು ನೋಡಿ ಎಲ್ಲರನ್ನು ಕರೆದು ತೋರಿಸಿದೆ ಎಂದು ಬೀಗುತ್ತಿದ್ದಳು. ದೂರಕ್ಕೆ ಕಾಣದಿದ್ದರೂ ಎಲ್ಲರೂ ನೆಟ್ಟಿದ್ದ ದೃಷ್ಟಿ ಗಮನಿಸಿ ನಾನು ದೃಷ್ಟಿ ನೆಟ್ಟೆ. ಬೆಟ್ಟದ ಒಂದು ಭಾಗದಲ್ಲಿ ದೀಪದಂತೆ ಬೆಂಕಿ ಉರಿಯುತ್ತಿತ್ತು. ಅದು ಅತ್ತಿತ್ತ ಕುಣಿದಂತೆ ಕಾಣಿಸುತ್ತಿತ್ತು.

ಆ ತನಕ ಕೊಳ್ಳಿ ದೆವ್ವದ ಕುಣಿತದ ಬಗ್ಗೆ ಕೇಳಿದ್ದ ನಾನೂ ಅದನ್ನು ಕಣ್ತುಂಬಿಕೊಂಡೆ. ಯಾಲಕ್ಕಿಗೌಡರ ಹೊಲದ ಬಳಿಯೇ ಕುಣಿತಾ ಇದೆ ನೋಡಿ, ಗೌಡನಿಗೆ ಏನೋ ರಾವು ಕಾದೈತೆ ಎಂದಳು ಪುಟ್ಟಕ್ಕ. ಆ ತನಕ ಕೊಳ್ಳಿದೆವ್ವವೇ ಎಂದು ನಂಬಿದ್ದ ನಾನು. ಯಾಲಕ್ಕಿಗೌಡನ ಹೊಲದಲ್ಲಿದೆಯೇ? ಎಂದು ಪುಟ್ಟಕ್ಕನನ್ನು ಕೇಳಿದೆ. ಆವರೆಗೆ ನಾನು ಮುಂದೆ ಬಂದು ಕೊಳ್ಳಿದೆವ್ವ ನೋಡುತ್ತಿದ್ದನ್ನು ದೊಡ್ಡವರ್ಯಾರೂ ಗಮನಿಸಿರಲಿಲ್ಲ. ನೀನ್ಯಾವಗ್ ಮುಂದೆ ಬಂದೆ ಎಂದ ಸಿಂಗಾಪುರದ ಚೌಡಿ, ಜುಟ್ಟು ಹಿಡಿದು ಹಿಂದಕ್ಕೆ ಎಳೆದು ತಲೆಗೊಮ್ಮೆ ಮೊಟಕಿ ಹೋಗಲೇ ಮನೆಗೆ ಎಂದು ಗದರಿಸಿ ಮತ್ತೆ ಮುಂದೆ ಹೋಗಿ ನಿಂತಳು.

ಅಯ್ಯೋ ಅದು ಕೊಳ್ಳಿದೆವ್ವ ಅಲ್ಲ, ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿಯವರು ಕ್ಯಾಂಪ್ ಹಾಕಿದ್ದಾರೆ. ಅವರೆKollidevva-1ಲ್ಲೋ ಬೆಂಕಿ ಹಾಕಿಕೊಂಡಿರಬೇಕು ಎಂದೆ. ಏಕೆಂದರೆ ಯಾಲಕ್ಕಿಗೌಡರ ಹೊಲದಲ್ಲಿ ಮಂದೆ ಕುರಿ ಬೀಡು ಬಿಟ್ಟಿರುವುದು ನನಗೆ ಖಾತ್ರಿ ಇತ್ತು.

ಅಂದು ಸಂಜೆ ಸೌದೆ ಹೊತ್ತು ನಾನು ಬೆಟ್ಟದಿಂದ ಇಳಿಮುಖವಾಗಿದ್ದರೆ, ಬೆಟ್ಟದ ಕಡೆಗೆ ಕುರಿಗಳ ಹಿಂಡು ಮೇಲ್ಮುಖವಾಗಿ ಹೊರಟಿತ್ತು. ಬರಿಗಾಲಲ್ಲಿ ನೆತ್ತಿ ಉರಿ ಬರುವಷ್ಟು ಹೊರೆಭಾರದ ಸೌದೆ ಹೊತ್ತಿದ್ದರೂ ನನಗೆ ಕುತೂಹಲ ಕಾಡಿತು. ಸಂಜೆ ಮನೆ ಕಡೆಗೆ ಹೊರಡುವ ಬದಲು ಬೆಟ್ಟದ ಕಡೆಗೆ ಮುಖ ಮಾಡಿರುವ ಕಾರಣ ತಿಳಿದುಕೊಳ್ಳಲು ಸೌದೆ ಹೊತ್ತುಕೊಂಡೆ ನಮ್ಮೂರಿನವರಲ್ಲದ ಕುರಿಗಳ ಮಾಲೀಕರನ್ನು ಮಾತನಾಡಿಸಿ ಸಮಾಚಾರ ವಿಚಾರಿಸಿದೆ.

ನಾವು ತುಮಕೂರಿನ ಕಡಿಯವರು ಮಂದೆ ಕುರಿಯೊಂದಿಗೆ ಬಂದಿದ್ದೇವೆ. ಬೆಟ್ಟದ ಮೇಲಿರುವ ಯಲಕ್ಕಿಗೌಡರ ಹೊಲದಲ್ಲಿ ಮಂದೆ ಬಿಡಲು ಹೊರಟಿದ್ದೇವೆ ಎಂದು ಹೇಳಿದರು. ಮಂದೆ ಕುರಿ ಎಂದರೆ ಇಡೀ ರಾತ್ರಿ ರೈತರ ಹೊಲದಲ್ಲಿ ಕುರಿಗಳನ್ನು ಕೂಡಿ ಹಾಕಿ ಹೊಲದ ಮಾಲೀಕರಿಂದ ಇಂತಿಷ್ಟು ಹಣ ಪಡೆಯುತ್ತಾರೆ. ಕುರಿಗೊಬ್ಬರ ಬಿದ್ದರೆ ಹೊಲದಲ್ಲಿ ಪೈರು ಕಚ್ಚಲಿದೆ ಎಂಬ ಕಾರಣಕ್ಕೆ ಬೇಸಿಗೆಯಲ್ಲಿ ರೈತರು ಹೊಲಗಳಲ್ಲಿ ಮಂದೆ ಕುರಿಗಳನ್ನು ಒಂದು ರಾತ್ರಿ ಕೂಡಿ ಹಾಕಿಸುವುದು ಸಾಮಾನ್ಯ. ಗೊಂದಲ ಪರಿಹರಿಸಿಕೊಂಡ ನಾನು ಮನೆ ಕಡಿ ಹೆಜ್ಜೆ ಹಾಕಿದ್ದೆ. ಹಾಗಾಗಿ ನನಗೆ ಕೊಳ್ಳಿದೆವ್ವ ಅಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು.

ಕುರಿಗಳನ್ನು ಮಧ್ಯಕ್ಕೆ ಕೂಡಿ ಹಾಕಿ ಎರಡು ಕಡೆ ಸಣ್ಣಗೆ ಬೆಂಕಿ ಹಾಕಿದ್ದರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಬೆಂಕಿ ಕಾಣಿಸಿಕೊಂಡು ಅತ್ತಿತ್ತ ಅಡ್ಡಾಡಿದಂತೆ ಕಾಣುತ್ತಿತ್ತು. ನಾನು ಏನು ಹೇಳಿದರೂ ಕೇಳಿಸಿಕೊಳ್ಳದ ಜನ ಕೊಳ್ಳಿದೆವ್ವವೇ ಎಂದು ವಾದಿಸಿದರು. ಸಮೂಹ ಸನ್ನಿಗೆ ಒಳಗಾಗಿದ್ದ ಜನ ನಾನು ಹೇಳಿದ ಸತ್ಯ ಕೇಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಏನಾದ್ರು ಮಾಡಿಕೊಳ್ಳಿ ಎಂದು ಮನೆ ಹಾದಿ ಹಿಡಿದೆ. ಇಡೀ ಊರಿಗೆ ಕೊಳ್ಳಿದೆವ್ವ ತೋರಿಸಿದ ಕೀರ್ತಿಗೆ ಪುಟ್ಟಕ್ಕ ಪಾತ್ರಳಾದಳು.

ಆದೇ ರೀತಿಯ ಸಮೂಹ ಸನ್ನಿ ಈಗ ವರಮಹಾಲಕ್ಷ್ಮಿ ಹಬ್ಬದ ಕಡೆಗೆ ತಿರುಗಿದೆ. ಕೇವಲ ಹತ್ತು ವರ್ಷದ ಹಿಂದೆ ಒಂದೆರಡು ಜಾತಿಗೆ ಸೀಮಿತವಾಗಿದ್ದ ಈ ಹಬ್ಬ ಇಂದು ಯಾವ ಕೇರಿಯನ್ನು ಬಿಟ್ಟಿಲ್ಲ. ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಕ್ಕೂ ವಿಸ್ತಾರಗೊಂಡಿದೆ. ಪೈಪೋಟಿಯ ನಡುವೆ ಲಕ್ಷ್ಮಿ ಎಂದುಕೊಂಡಿರು ಕಳಸವನ್ನು ಅಲಂಕರಿಸಿ ಆರಾಧಿಸುತ್ತಿದ್ದಾರೆ. ಹಬ್ಬ ಆಚರಿಸದಿದ್ದರೆ ಅವಮಾನ ಆಗಲಿದೆ ಎನ್ನುವಷ್ಟರ ಮಟ್ಟಿಗೆ ಫ್ಯಾಷನ್ ರೂಪ ಪಡೆದುKollidevva-2ಕೊಂಡಿದೆ.

ಕಲ್ಲು, ಮರ, ಕಂಚು, ತಾಮ್ರ, ಹಿತ್ತಾಳೆಯಲ್ಲಿ ಮಾಡಿದ ವಿಗ್ರಹವನ್ನು ದೇವರೆಂದು ನಂಬಿ ಪೂಜಿಸಿದ ಜನ ಈ ಹಬ್ಬದ ಮೂಲಕ ಕಾಗದದ ತುಂಡಿನ ನೋಟನ್ನೂ ದೇವರು ಎಂದು ಪೂಜಿಸಲು ಶುರು ಮಾಡಿದ್ದಾರೆ. ಹಣದ ಬಗ್ಗೆ ಇರುವ ಜನರ ಹಪಾಹಪಿ ಎಷ್ಟೆಂಬುದಕ್ಕೆ ಈ ಹಬ್ಬ ಕಣ್ಣೆದುರು ವಿಸ್ತರಣೆಗೊಂಡಿರುವುದೇ ಸಾಕ್ಷಿ. ಕೊಳ್ಳಿದೆವ್ವ ನೋಡಲು ನಮ್ಮೂರಿನ ಜನ ಮುಗಿಬಿದ್ದಂತೆ ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಎಲ್ಲರೂ ಮುಗಿಬಿದ್ದಿದ್ದಾರೆ. ಕಾಯಕ ಮಾಡಿಯೋ, ಮಾಡದೆಯೋ ಲಕ್ಷ್ಮಿಯ ವರದಿಂದ ಹಣ ಸಂಪಾದನೆ ಆದರೆ ಸಾಕು ಎಂಬ ಮನಸ್ಥಿತಿ ಹೆಚ್ಚುತ್ತಿದೆ. ಇದು ಅಪಾಯಕಾರಿ!.

ದಲಿತರು ಮದುವೆ ಮಾಡಿದರೆ, ಹೋಟೆಲಲ್ಲಿ ಊಟ ಹಾಕಬೇಕು!

 – ಜೀವಿ

ಅನ್ನದ ಮಡಿಕೆ ಹುಡುಕಾಡಿ ಮಡಿಕೆ ಎಂಬ ಅಡ್ಡ ಹೆಸರನ್ನೇ ಗಟ್ಟಿ ಮಾಡಿಕೊಂಡಿದ್ದ ಗೆಳೆಯ ಮಹೇಶನಿಗೆ ಹಸಿದವರಿಗೆ ಅನ್ನ ಕೊಡಿಸುವುದೆಂದರೆ ಇಷ್ಟದ ಕೆಲಸ. ಕಬ್ಬು ಕಡಿಯುವ ಕೆಲಸದ ಮೇಸ್ತ್ರಿಯಾಗಿದ್ದ ಆತನಿಗೆ ಜಾತಿ ರಹಿತವಾಗಿ ಸ್ನೇಹಿತರಿದ್ದರು. ಆತನ ಜೇಬು ಯಾವಾಗಲೂ ಗಟ್ಟಿಯಾಗಿರುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ಬಂದ ಆದಾಯದಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಸ್ನೇಹಿತರಿಗೆ ಕಳೆಯುತ್ತಿದ್ದ. ಒಂದು ವರ್ಷದ ಹಿಂದೆ ಅತ ಆಕಸ್ಮಿಕವಾಗಿ ಸಾವಪ್ಪಿದ.

33 ವರ್ಷ ವಯಸ್ಸಿನಲ್ಲೇ ಬಂದ ಸಾವು ಆತನನ್ನು ನಂಬಿದ್ದವರ ಬದುಕನ್ನು ಮಸುಕಾಗಿಸಿದೆ. ಮೇಲ್ಜಾತಿಯ ಹಲವರು ’ನಮಗೆ ಅದೆಷ್ಟು ದಿನ ಅನ್ನ ಹಾಕಿದ್ದ’ ಎಂದು ಸಾವಿನ ದಿನ ಕಣ್ಣೀರಿಟ್ಟರು. ಅಂತ್ಯಕ್ರಿಯೆ ಮುಗಿಸಿದ ನಂತರ ಊmealsರಿನವರು ಮತ್ತು ನೆಂಟರಿಷ್ಟರು ಸೇರಿ ತಿಥಿ ಕಾರ್ಯ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆಗಳು ಆರಂಭಿಸಿದರು. ಬದುಕಿದ್ದಾಗ ಎಲ್ಲರಿಗೂ ಅನ್ನ ಹಾಕಿದ್ದಾನೆ. ಅವನ ತಿಥಿ ದಿನ ಇಡೀ ಊರಿಗೆ ಅನ್ನ ಹಾಕಬೇಕು ಎಂದು ಅವನ ಅಪ್ಪ, ಇಬ್ಬರು ಸಹೋದರರು ಹಾಗೂ ನಾನೂ ಸೇರಿ ಹಲವರು ಬಯಸಿದೆವು. ದಲಿತ ಕೇರಿಯ ಯಾವುದೇ ಮದುವೆ-ತಿಥಿ ನಡೆದರೂ ಮೇಲ್ಜಾತಿಯವರಿಗೆ ಊಟ ಹಾಕಿರುವ ಉದಾಹರಣೆ ಇಲ್ಲ. ಆದರೆ ಇಡೀ ಊರಿಗೆ ಊಟ ಹಾಕಬೇಕು ಎಂಬ ಆಸೆ ಆತನ ಆಪ್ತ ಬಳಗಕ್ಕೆ ಇತ್ತು. ಅಲ್ಲೆ ಇದ್ದ ನಾಲ್ಕೈದು ಮಂದಿ ಮೇಲ್ಜಾತಿಯವರು ಆಗಬಹುದು ಎಂದು ತಲೆಯಾಡಿಸಿದರು. ಆದರೆ ಊಟದ ವ್ಯವಸ್ಥೆ ಪ್ರತ್ಯೇಕವಾಗಿರಬೇಕು ಎಂದು ಷರತ್ತು ಮುಂದಿಟ್ಟರು.

ಅಕ್ಕಿ, ರಾಗಿ, ಮಾಂಸ ಸೇರಿದಂತೆ ಊಟದ ಎಲೆಯ ಸಮೇತ ಎಲ್ಲವನ್ನೂ ಕೊಡಿಸಬೇಕು. ಪ್ರತ್ಯೇಕವಾಗಿ ಅಡುಗೆ ಮಾಡಿಸಿಕೊಂಡು ನಮ್ಮ ಕೇರಿಯಲ್ಲೇ ಊಟ ಮಾಡಿಕೊಳ್ಳುತ್ತೇವೆ. ಆ ಊಟಕ್ಕೆ ನೀವು ಬರಬೇಡಿ, ನೀವು ಮಾಡಿಕೊಳ್ಳುವ ಊಟಕ್ಕೆ ನಾವು ಬರುವುದಿಲ್ಲ. ಹಾಗಿದ್ದರೆ ಮಾತ್ರ ನಾವು ಊಟ ಮಾಡುತ್ತೇವೆ. ಇಲ್ಲದಿದ್ದರೆ ಬೇಡ ಎಂದರು. ಆ ತನಕ ಸುಮ್ಮನಿದ್ದ ನಾನು ನನ್ನ ಅಭಿಪ್ರಾಯ ಮುಂದಿಟ್ಟೆ. ಮಹೇಶ ಇರುವ ತನಕ ಎಲ್ಲರಿಗೂ ಊಟ ಹಾಕಿದ್ದಾನೆ. (ಹೋಟೆಲ್‌ಗಳಲ್ಲಿ ಮಾತ್ರ, ಎಷ್ಟೇ ಸ್ನೇಹಿತರಿದ್ದರೂ ಮೇಲ್ಜಾತಿಯವರು ಅವನ ಮನೆ ಊಟ ಮಾಡಿರಲಿಲ್ಲ.) ಅವನ ಸಾವು ಎಲ್ಲರಿಗೂ ನೋವು ತಂದಿದೆ. ಊಟ ಹಾಕುವುದೆಂದರೆ ಅವನಿಗೆ ಸಂತೋಷದ ವಿಷಯ. ಅದಕ್ಕಾಗಿ ಊಟ ಬೇಡ ಎನ್ನಬೇಡಿ. ಆದರೆ ನಿಮ್ಮ ಷರತ್ತು ಒಪ್ಪಿಕೊಳ್ಳಲು ನಾವು ಸಿದ್ದರಿಲ್ಲ. ಒಂದೇ ಕಾರ್ಯಕ್ಕೆ ಪ್ರತ್ಯೇಕ ಅಡುಗೆ ಮಾಡುವುದು ಬೇಡ. ಮೇಲ್ಜಾತಿ ಅಡುಗೆ ಭಟ್ಟರನ್ನೇ ಕರೆಸಿ ನಾವೇ ಮಾಡಿಸುತ್ತೇವೆ. ಇಡೀ ಊರಿನ ಜನ ಬಂದು ಊಟ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ಮೇಲ್ಜಾತಿ ಕೇರಿಯಲ್ಲೇ ನೀವೇ ನೇmeals-1ತೃತ್ವ ವಹಿಸಿಕೊಂಡು ಅಡುಗೆ ಮಾಡಿಸಿ ದಲಿತ ಕೇರಿಯ ಎಲ್ಲರೂ ನೆಂಟರಿಷ್ಟರೊಂದಿಗೆ ಅಲ್ಲೇ ಬಂದು ಊಟ ಮಾಡುತ್ತೇವೆ ಎಂದೆ. (ಇದು ಆಗದಿರುವ ಕೆಲಸ ಎಂಬುದು ಮೊದಲೇ ಗೊತ್ತಿದ್ದರೂ ನನ್ನ ಅಭಿಪ್ರಾಯವನ್ನು ಮಂಡಿಸಿದೆ.) ಯಾವುದೇ ಕಾರಣಕ್ಕೂ ಅದು ಆಗದಿರುವ ಕೆಲಸ. ನೀವು ಮಾಡಿಸುವ ಅಡುಗೆಯನ್ನು ನಾವು ಊಟ ಮಾಡಲು ಸಾಧ್ಯವಿಲ್ಲ. ನಾವು ಮಾಡಿಸಿದ ಜಾಗಕ್ಕೆ ನೀವೂ ಬರುವಂತಿಲ್ಲ ಎಂದು ಮೇಲ್ಜಾತಿವರು ಕಡಾ ಖಂಡಿತವಾಗಿ ಹೇಳಿದರು.

ದಲಿತರ ಮನೆಯ ಅಕ್ಕಿ, ರಾಗಿ, ಮಾಂಸ, ಮೆಣಸಿನ ಕಾಯಿ ಎಲ್ಲವನ್ನೂ ಪಡೆದು ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ಊಟ ಮಾಡಲು ಮೇಲ್ಜಾತಿವರು ಸಿದ್ದರಿದ್ದಾರೆ. ದಲಿತರು ಮಾಡಿದ ಅಥವಾ ಮೇಲ್ಜಾತಿ ಅಡುಗೆ ಭಟ್ಟರಿಂದ ಮಾಡಿಸಿದ ಊಟ ಮಾಡಲು ಸಿದ್ದರಿಲ್ಲ. ನೀವೇ ಮಾಡಿಸಿ ನಾವು ಬಂದು ಊಟ ಮಾಡುತ್ತೇವೆ ಎಂದರೂ ಒಪ್ಪುತ್ತಿಲ್ಲ. ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಅಲ್ಲಿದ್ದ ನಾಲ್ಕೈದು ಮಂದಿ ಮೇಲ್ಜಾತಿವರು ಹೋಗಿ ಊರ ಮುಂದೆ ವಿಷಯ ತಿಳಿಸಿದರು. ಕೆಲವರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಒಪ್ಪಲಿಲ್ಲ. ಕೊನೆಗೂ ಇಡೀ ಊರಿಗೆ ಊಟ ಹಾಕುವ ಮಹೇಶನ ಮನೆಯವರು ಮತ್ತು ಆಪ್ತರ ಆಸೆ ಈಡೇರಲಿಲ್ಲ.

ಇದೀಗ ಅದೇ ಮಹೇಶನ ತಮ್ಮನಿಗೊಂದು ಚಿಂತೆ ಎದುರಾಗಿದೆ. ಈ ವರ್ಷ ಮದುವೆ ಮಾಡಿಕೊಳ್ಳುವ ಸಿದ್ದತೆಯಲ್ಲಿದ್ದಾನೆ. ಈವರೆಗೆ ದಲಿತರ ಮನೆ ಮದುವೆಗಳಿಗೆ ಮೇಲ್ಜಾತಿಯವರು ಬಂದಿದ್ದರೆ, ಆದರೆ ಊಟ ಮಾತ್ರ ಮಾಡಿಲ್ಲ. ದಲಿತ ಕೇರಿಯಲ್ಲೇ ಮದುವೆ ನಡೆದರೆ ಅಲ್ಲಿ ಬಹುತೇಕ ದಲಿತರೇ ಅಡುಗೆ ಮಾಡಿರುತ್ತಾರೆ ಎಂಬ ಕಾರಣಕ್ಕೆ ಊಟ ಮಾಡುವುದಿಲ್ಲ. ಆದರೆ ಇತ್ತೀಚೆಗೆ ದಲಿತರ ಮನೆ ಮದುವೆಗಳು ಕೂಡ ನಗರ ಮತ್ತು ಪಟ್ಟಣದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿವೆ. ಅಲ್ಲಿ ಎಲ್ಲರಂತೆ ಊಟದ ಅಡುಗೆ ಗುತ್ತಿಗೆ ಪಡೆದವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಕ್ಲೀನಿಂಗ್ ಕೆಲಸದಲ್ಲಿ ಮಾತ್ರ ಕೆಳ ಜಾತಿಯವರಿಗೆ ಅವಕಾಶ ಸಿಗುತ್ತಿದೆ. ಅಡುಗೆ ಮಾಡುವ ಗುತ್ತಿಗೆದಾರರು ಬಹುತೇಕ ಮೇಲ್ವರ್ಗದವರೇ ಅಗಿರುತ್ತಾರೆ. ದಲಿತರ ಮದುವೆಗೆ ಬೇರೆ, ಮೇಲ್ಜಾತಿಯವರ ಮದುವೆಗೆ ಬೇರೆ ಅಡುಗೆ ಗುತ್ತಿಗೆದಾರರು ಇಲ್ಲ. ಆದರೂ ಕಲ್ಯಾಣ ಮಂಟಪದಲ್ಲಿ ನಡೆಯುವ ದಲಿತರ ಮನೆಯ ಮದುವೆ ಊಟವನ್ನು ಮೇಲ್ಜಾತಿವರು ಮಾಡಿಲ್ಲ. ಮದುವೆಗೆ ಬರುವ ಮೇಲ್ಜಾತಿವರಿಗೆ ಹೋಟೆಲ್‌ಗಳಲ್ಲಿ ಊಟ ಕೊಡಿಸುವುದು ಮMeals-2ದುವೆ ಮನೆಯವರ ಜವಾಬ್ದಾರಿ. ಮದುವೆ ಮನೆಯವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಮಾವಿನಕೆರೆ ಬೆಟ್ಟದಲ್ಲಿ ನನ್ನೂರಿನ ದಲಿತ ಯುವತಿ ಸವಿತಾಳ ಮದುವೆ ನಡೆಯಿತು. ಬೆಂಗಳೂರು ಮೂಲದ ಮೇಲ್ಜಾತಿ ಯುವಕನೊಂದಿಗೆ ಪ್ರೀತಿ ಬೆಳೆದಿತ್ತು. ಅಪ್ಪ-ಅಮ್ಮ ಇಲ್ಲದ ಯುವಕ ದಲಿತ ಯುವತಿಯೊಂದಿಗೆ ಮದುವೆಯಾಗಲು ಒಪ್ಪಿದ್ದ. ಸಂಬಂಧಿಕರು ಸೇರಿ ಮಾವಿನಕೆರೆ ಬೆಟ್ಟದಲ್ಲಿ ಮದುವೆ ಮಾಡಿದರು. ಸವಿತಾಳ ಅಣ್ಣ ಮಂಜ ಸಮೀಪದ ಪಟ್ಟಣದಲ್ಲಿ ಊಟದ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದ. ಮದುವೆ ಗಂಡಿನ ಸಂಬಂಧಿಕರು ಊಟ ಮಾಡಿದರು. ಈ ಮದುವೆಗೆ ಬಂದಿದ್ದ ನನ್ನೂರಿನ ಮೇಲ್ಜಾತಿಯ ಜನರಲ್ಲಿ ಒಬ್ಬರೂ ಊಟ ಮಾಡಲಿಲ್ಲ. ಊರಿನ ಮೇಲ್ಜಾತಿವರಿಗೆ ಹೋಟೆಲ್‌ನಲ್ಲಿ ಊಟ ಕೊಡಿಸುವುದಿಲ್ಲ ಎಂದು ಮಂಜ ಮೊದಲೇ ನಿರ್ಧಾರ ಮಾಡಿದ್ದ. ಅಡುಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಬ್ರಹ್ಮಾಣರಿಗೆ ಕೊಟ್ಟಿದ್ದೇನೆ. ಅಲ್ಲೂ ಊಟ ಮಾಡಲು ನಮ್ಮೂರಿನ ಮೇಲ್ಜಾತಿಯವರು ಹಿಂಜರಿದರೆ ನನ್ನದೇನು ತಪ್ಪಿಲ್ಲ ಎಂದ. ಊಟ ಆರಂಭವಾದ ಸಂದರ್ಭದಲ್ಲಿ ನನ್ನೆದುರಿಗೆ ಸಿಕ್ಕಿದ ಪಟೇಲರಿಗೆ ಊಟ ಮಾಡಿ ಎಂದೆ, ಸುಮ್ಮನೆ ನಕ್ಕು ಹೊರಟರು. ಯಾರೊಬ್ಬರೂ ಊಟ ಮಾಡಲಿಲ್ಲ.

ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡುವವರು ಯಾವ ಜಾತಿಯವರು ಎಂಬುದು ಯಾರಿಗೂ ಗೊತ್ತಿಲ್ಲ. ಅಡುಗೆಯವರ ಕಾರಣಕ್ಕೆ ಮೇಲ್ಜಾತಿವರು ಊಟ ಮಾಡಲು ನಿರಾಕರಿಸುತ್ತಿಲ್ಲ. ದಲಿತರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಲು ಮೇಲ್ಜಾತಿ ಮನಸ್ಸುಗಳು ಒಪ್ಪುತ್ತಿಲ್ಲ.

ಒಂದೇ ಊರಿನವರು ಎಂಬ ಕಾರಣಕ್ಕೆ ಮದುವೆಗೆ ಕರೆಯುತ್ತೇವೆ. ಅವರ ಮನೆ ಮದುವೆಯಲ್ಲಿ ನಾವು ಹಾಕಿರುವ ಮುಯ್ಯಿ (ಹಣದ ರೂಪದ ಗಿಫ್ಟ್) ತೀರಿಸುವ ಸಲುವಾಗಿಯಾದರೂ ಬಂದೇ ಬರುತ್ತಾರೆ. ಅವರಿಗೆ ಪ್ರತ್ಯೇಕವಾಗಿ ಹೋಟೆಲ್‌ನಲ್ಲಿ ಊಟ ಕೊಡಿಸಲು ನಾನು ಅವಕಾಶ ಕೊಡುವುದಿಲ್ಲ ಎಂದು ಮಹೇಶನ ತಮ್ಮ ನಾಗರಾಜ ಹೇಳುತ್ತಿದ್ದಾನೆ. ಕಲ್ಯಾಣ ಮಂಟಪದಲ್ಲಿ ಮಾಡಿರುವ ಊಟ ಮಾಡಿದರೆ ಮಾಡಲಿ ಇಲ್ಲದಿದ್ದರೆ, ಹಾಗೇ ಹೋಗಲಿ ಎನ್ನುತ್ತಿದ್ದಾನೆ. ಅವನ ನಿರ್ಧಾರವನ್ನು ನಾನೂ ಒಪ್ಪುತ್ತಿದ್ದೇನೆ. ಆದರೂ ನಾಗರಾಜನ ಅಪ್ಪ ನಮಗ್ಯಾರಿಗೂ ಗೊತ್ತಾಗದಂತೆ ಹೋಟೆಲ್‌ಗೆ ಕರೆದೊಯ್ಯಬಹುದು.

ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

ಕದಿಯದ ಭತ್ತಕ್ಕೆ ಹರಕೆ ಹೊತ್ತು ಬೆನ್ನು ಚುಚ್ಚಿಸಿಕೊಂಡವರು

ಶೋಷಿತರಿಗೆ ಮೊದಲು, ತಾವು ಶೋಷಣೆಗೆ ಒಳಗಾಗಿದ್ದೇವೆ ಅನ್ನೋದು ಅರ್ಥ ಆಗೋದು ಯಾವಾಗ..

– ಜೀವಿ

ಸುತ್ತ ಏಳು ಹಳ್ಳಿ ಜನ ಸೇರಿ ಆಚರಿಸುವ ಜಾತ್ರೆಯಲ್ಲಿ ಭಾಗವಹಿಸುವುದನ್ನು ಅವ್ವ ತನಗೆ ಬುದ್ದಿ ತಿಳಿದ ದಿನದಿಂದ ಒಮ್ಮೆಯೂ ತಪ್ಪಿಸಿಕೊಂಡಿಲ್ಲ. ತಾತ-ಮುತ್ತಾನ ಕಾಲದಿಂದ ನಡೆದಿರುವ ಉಡಸಲಮ್ಮ ಜಾತ್ರೆ ಎಂದರೆ ಎಲ್ಲಿಲ್ಲದ ಭಕ್ತಿ ಅವ್ವನಲ್ಲಿದೆ. ಈ ವರ್ಷ(2015) ಏಪ್ರಿಲ್ ಮೊದಲ ವಾರದಲ್ಲಿ ನಡೆದ ಜಾತ್ರೆಗೆ ಎಲ್ಲ ಸಿದ್ದತೆಗಳು ನಡೆದಿದ್ದವು. ಎಲ್ಲರೂ ಹೊಸ ಬಟ್ಟೆ ತೊಟ್ಟು ಅತ್ತಿತ್ತ ಅಡ್ಡಾಡುತ್ತಿದ್ದರು. ಆದರೆ ಅವ್ವ ಮಾತ್ರ ಈ ಬಾರಿ ನಾನು ಜಾತ್ರೆಗೆ ಹೋಗSidi-1ಲಾರೆ ಎಂದು ಹಠ ಹಿಡಿದು ಕುಳಿತಿದ್ದಳು. ಹೆಂಡತಿ ಮಕ್ಕಳೊಂದಿಗೆ ಆಗ ತಾನೆ ಮನೆಗೆ ಹೋಗಿದ್ದ ನನ್ನನ್ನು ಕೊಲೆಗಾರನಿಗಿಂತ ಅಪರಾಧಿ ಸ್ಥಾನದಲ್ಲಿ ಕಂಡು ಶಪಿಸಿದಳು. ಮನೆ ಮುರುಕ ಕೆಲಸ ಮಾಡಿದ ನಿನ್ನಂತವನಿಗೆ ಜನ್ಮ ಕೊಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ಕಣ್ಣೀರ ಧಾರೆ ಹರಿಸಿದಳು. ಹೆತ್ತ ಕರುಳಿಗೇ ಅಪರಾಧಿಯಂತೆ ಕಂಡ ನಾನು ಹಾಗೇ ಕಣ್ಣಂಚು ಒದ್ದೆ ಮಾಡಿಕೊಂಡು ಮೂಲೆಗೊರಗಿ ಕುಳಿತೆ. ಅವ್ವನ ಈ ದುಃಖಕ್ಕೆ ಬಲವಾದ ಕಾರಣವೂ ಇತ್ತು.

ಜಾತ್ರೆಯಲ್ಲಿ ಏಳು ಊರಿನ ತಲಾ ಒಂದೊಂದು ಬಂಡಿ ಮತ್ತು ಮೂರು ತೇರನ್ನು ಕೆಂಡದಲ್ಲಿ ಎಳೆದಾಡಿದ ನಂತರ ಅದರಲ್ಲಿ ಒಂದೂರಿನ ದಲಿತರನ್ನು ಸಿಡಿಗೇರಿಸುವ ಪದ್ದತಿ ಇದೆ. ಸಿಡಿಗೆ ಏರುವ ದಲಿತರು ಏಳು ದಿನದಿಂದ ಸಂಸಾರ ತೊರೆದು ಉಪವಾಸ ವ್ರತ ಮಾಡಬೇಕು. ಕೊನೆಯ ದಿನ ಅವರ ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಲಾಗುತ್ತದೆ. ಮಹಿಳೆಯರು ಬಾಯಿಗೆ ದಬ್ಬಳದಂತ ಸರಳನ್ನು ಚುಚ್ಚಿಕೊಳ್ಳುತ್ತಾರೆ. ಎಲ್ಲರೂ ಜಾತ್ರೆ ದಿನ ದೇವಸ್ಥಾನದ ಮುಂದೆ ಹಾಜರಾಗುತ್ತಾರೆ. ಪುರುಷರು ಸಿಡಿ ಏರಿ ಮೂರು ಸುತ್ತು ಸುತ್ತಿ ಶಿಕ್ಷೆ ರೂಪದಲ್ಲಿ ಹರಕೆ ತೀರಿಸುತ್ತಾರೆ. ತನ್ನ ಪೂರ್ವಜರು ಮಾಡಿರುವ ತಪ್ಪಿಗೆ ಶಿಕ್ಷೆ ಪಡೆಯುತ್ತಿದ್ದೇವೆ ಎಂಬ ಭಾವನೆ ದಲಿತರಲ್ಲಿದೆ.

ಹಿಂದೊಮ್ಮೆ ಹೊಟ್ಟೆಗೆ ಗತಿ ಇಲ್ಲದ ದಲಿತ ಕುಟುಂಬಗಳು ಕಣದಲ್ಲಿ ರಾಶಿ ಹಾಕಿದ್ದ ಭತ್ತವನ್ನು ಕದ್ದು ತಂದಿದ್ದರಂತೆ. ಅದರ ಮಾಲೀಕರು ಪೊಲೀಸರಿಗೆ ದೂರು ನೀಡಿ ಭತ್ತ ಉದುರಿರುವ ಜಾಡು ಹಿಡಿದು ದಲಿತ ಕೇರಿಗೆ ಬಂದಿದ್ದರಂತೆ. ಸಿಕ್ಕಿ ಬೀಳುವ ಆತಂಕದಲ್ಲಿ ಉಡಸಲಮ್ಮನನ್ನು ಮನದಲ್ಲೆ ನೆನದು ಸಂಕಷ್ಟದಿಂದ ಪಾರು ಮಾಡಿದರೆ ಜಾತ್ರೆಯಲ್ಲಿ ಎರಡು ವರ್ಷಕ್ಕೊಮ್ಮೆ ಸಿಡಿ ಏರುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರಂತೆ. ಕೂಡಲೇ ಮನೆಯಲ್ಲಿದ್ದ ಭತ್ತದ ಬಣ್ಣ ಬದಲಾಗಿ ಪೊಲೀಸರು ವಾಪಸ್ ಹೋದರಂತೆ. ಸೆರೆ ಬಿಡಿಸಿಕೊಂಡ ದೇವರಿಗೆ ಶಿಕ್ಷೆ ರೂಪದ ಹರಕೆ ತೀರಿಸುವುದು ನಮ್ಮ ಕರ್ತವ್ಯ ಎಂದು ಇಂದಿಗೂ ದಲಿತರು ನಂಬಿದ್ದಾರೆ. ಬಿಳಿ ಭತ್ತ ಕ್ಷಣಾರ್ಧದಲ್ಲಿ ಕೆಂಭತ್ತವಾಗಿ ಬಣ್ಣ ಬದಲಾಯಿತು. ಈ ಮಾಯ ಮಂತ್ರ ನಡೆಯುತ್ತಿದ್ದ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಇತ್ತು ಎಂಬುದನ್ನೂ ನಂಬಲಾಗುತ್ತಿದೆ. ಈ ಕತೆಯನ್ನು ನನಗೆ ಅವ್ವನೇ ಹತ್ತಾರು ಬಾರಿ ಹೇಳಿದ್ದಳು. ಅವ್ವನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಸಿಡಿ ಏರಿದವರು. ಈಗ ಅಣ್ಣಂದಿರು, ಅವರ ಮಕ್ಕಳು, ಅಕ್ಕನ ಮಕ್ಕಳು ಎಲ್ಲರೂ ಸಿಡಿ ಏರುತ್ತಿದ್ದಾರೆ. ಹಾಗಾಗಿ ಅವ್ವನಿಗೆ ಉಡಸಲಮ್ಮನ ಬಗ್ಗೆ ಅಪಾರ ಭಕ್ತಿ.

ದಲಿತರಿಗೇ ಅರಿವಿಲ್ಲದೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಹಲವು ದಿನಗಳಿಂದ ನನಗೆ ಬೇಸರವಿತ್ತು. ಜಾತ್ರೆ ಹಿಂದಿನ ದಿನ ಆಪ್ತರೊಂದಿಗೆ ನಾಳೆ ನಡೆಯಲಿರುವ ಸಿಡಿ ಹೆಸರಿನ ಶೋಷಣೆ ಬಗ್ಗೆ ವಿವರಿಸಿದ್ದೆ. ಹೇಗಾದರೂ ತಡೆಯಬೇಕಲ್ಲ ಎಂದುಕೊಂಡು ಪತ್ರಿಕೆಗಳಲ್ಲಿ ವರದಿ ಮಾಡಲು ನಿರ್ಧರಿಸಿದೆವು. ತಹಸೀಲ್ದಾರ್ ಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳಿದೆವು. ಅವರು ಈ ವಿಷಯ ನನ್ನ ಗಮನದಲ್ಲಿದ್ದು, ತಡೆಯುವ ಪ್ರಯತ್ನ ಮಾಡುತ್ತೇವೆ ಎಂದರು. ಅಮಾನವೀಯ ಸಿಡಿ ಪದ್ದತಿ ಜೀವಂತ ಇರುವುದು ಮತ್ತು ತಹಸೀಲ್ದಾರ್ ತಡೆಯುವ ಪ್ರಯತ್ನ ಮಾಡುವುದನ್ನು ಪತ್ರಿಕೆಗಳಲ್ಲಿ ವರದಿ ಮಾಡಿದೆವು. ಆಂಗ್ಲ ಪತ್ರಿಕೆ ಸೇರಿ ಮೂರು ಪತ್ರಿಕೆಗಳಲ್ಲಿ ಸುದ್ದಿ ಜಾತ್ರೆ ದಿನವೇ ಪ್ರಕಟವಾಯಿತು.

ತಹಸೀಲ್ದಾರ್ ಕೂಡ ಗ್ರಾಮಕ್ಕೆ ಹೋಗಿ ದಲಿತರಿಗೆ ಕೊಂಡಿ ಚುಚ್ಚುವುದು ಮತ್ತು ಅಮಾನವೀಯವಾಗಿ ಸಿಡಿ ಏರುವ ಪದ್ದತಿಗಳನ್ನು ಮಾಡಕೂಡದು ಎಂದು ತಾಕೀತು ಮಾಡಿ ಬಂದಿದ್ದರು. ಅದಾಗಲೇ ಕೊಂಡಿ ಚುಚ್ಚುವ ಕಾರ್ಯ ಮುಗಿದಿತ್ತು. ಹಾಗಾಗಿ ಈ ವರ್ಷ ಸಿಡಿ ಏರಿಕೊಳ್ಳಿ, ಮುಂದಿನ ದಿನಗಳಲ್ಲಿ ಇದು ನಡೆಯ ಕೂಡದು ಎಂದು ಹೇಳಿ ಹೋಗಿದ್ದರು. ಪೊಲೀಸರೊಂದಿಗೆ ತಹಸೀಲ್ದಾರ್ ಬಂದು ಹೋಗಿರುವುದು ಮತ್ತು ಮುಂದಿನ ದಿನಗಳಲ್ಲಿ ಜಾತ್ರೆ ನಿಲ್ಲಲಿದೆ ಎಂಬ ಗುಲ್ಲು ಸುತ್ತ ಏಳು ಹಳ್ಳಿಯಲ್ಲೂ ಹರಡಿತ್ತು. ಅದು ಅವ್ವನ ಕಿವಿಗೂ ಮುಟ್ಟಿತ್ತು. ಹಿಂದಿನ ದಿನ ವರದಿ ಮಾಡುವಾಗ ಜಾತ್ರೆಯಲ್ಲಿರುವ ಆಚರಣೆಗಳ ಬಗ್ಗೆ ಅವ್ವನ ಬಳಿಯೂ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದೆ. ಹಾಗಾಗಿ ಓದಲು ಬರದಿದ್ದರೂ ಅವ್ವನಿಗೆ ಇದು ನನ್ನ ಕೆಲಸವೇ ಎಂದು ಗೊತ್ತಾಗಿತ್ತು.

ರಚ್ಚೆ ಹಿಡಿದಂತೆ ಅವ್ವ ಅಳುತ್ತಿದ್ದಳು. ಸಿಡಿ ಏರುವುದನ್ನು ಅಧಿಕಾರಿಗಳು ತಡೆದರೆ ಮುಂದೆ ಉಡಸಲಮ್ಮನ ಶಾಪಕ್ಕೆ ತನ್ನ ತವರು ಮನೆ ಜನ ಹಾಗೂ ನಾನು ತುತ್ತಾಗುತ್ತೇವೆ ಎಂಬುದು ಅವ್ವನ ಆತಂಕ. ಸಿಡಿ ಏರಲಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ದೇವಿ ಬಲಿ ಪಡೆದರೆ ಅವರ ಕುಟುಂಬಕ್ಕೆ ನೀನು ಹೊಣೆಯಾಗುತ್ತೀಯಾ?, ಜಾತ್ರೆ ನಿಲ್ಲಲು ನೀನೂ ಕಾರಣವಾದೆ ಎಂಬ ಸಿಟ್ಟಿಗೆ ಆಕೆ ನಿನ್ನನ್ನೂ ಬಲಿ ಪಡೆದುಕೊಂಡರೆ ನಾವೇನು ಮಾಡಬೇಕು? ಎಂದು ಪ್ರಶ್ನೆಗಳ ಸುರಿಮಳೆಗೈದಳು. ಮನೆಯಲ್ಲಿದ್ದವರೆಲ್ಲ ಸೇರಿ ಸಮಾಧಾನ ಮಾಡಿದರೂ ಅವ್ವನ ದುಃಖ ಕಡಿಮೆಯಾಗಲಿಲ್ಲ. ಯಾವುದೇ ಕಾರಣಕ್ಕೂ ನಾನು ಜಾತ್ರೆಗೆ ಬರಲಾರೆ ಎಂದು ಪಟ್ಟು ಹಿಡಿದಳು. ಜಾತ್ರೆಯಲ್ಲಿ ಯಾರದರೂ ನಿನ್ನ ಮಗ ಈ ಕೆಲಸ ಮಾಡಿದ್ದಾನೆ, ಸರಿಯೇ? ಎಂದು ಪ್ರಶ್ನೆ ಮಾಡಿದರೆ ಏನು ಹೇಳಲಿ?. ತವರೂರಿನ ಜನರಿಗೆ ಹೇಗೆ ಮೂಖ ತೋರಲಿ? ಎಂದು ಕಣ್ಣೀರಿಟ್ಟಳು.

ಆ ಸಮಯಕ್ಕೆ ಜಾತ್ರೆಗೆಂದು ಬಂದ ಅಕ್ಕ, ಅವ್ವನನ್ನು ಸಮಾಧಾನ ಮಾಡಿದಳು. ಸಿಡಿ ಕಂಬಕ್ಕೆ ದಲಿತರೇ ಏಕೆ ಏರಬೇಕು?, ತಪ್ಪು ಅಥವಾ ಶೋಷಣೆ ಎಂದು ಈವರೆಗೆ ನಮಗೆ ಅನ್ನಿಸಿರಲಿಲ್ಲ. ಈಗ ಅವನು ಪತ್ರಿಕೆಯಲ್ಲಿ ಬರೆದ ನಂತರ ತಪ್ಪಲ್ಲವೇ ಎನ್ನಿಸುತ್ತಿದೆ. ಸಿಡಿಗಂಬದಿಂದ ಕೆಳಗಿರುವ ಕೆಂಡಕ್ಕೆ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡರೆ ಯಾರು ಹೊಣೆ? ದೇವರು ಬಂದು ಕಾಪಾಡಲು ಸಾಧ್ಯವೇ?, ಅವನ ಕೆಲಸ ಅವನು ಮಾಡಿದ್ದಾನೆ, ಅವನಿಗೇನು ತೊಂದರೆ ಆಗಲ್ಲ ಎಂದು ಅಕ್ಕ ಅವ್ವನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದಳು. ಕೊನೆಗೂ ಹೇಗೋ ಮನವೊಲಿಸಿ ಅವ್ವನನ್ನು ಅಕ್ಕ ಜಾತ್ರೆಗೆ ಕರೆದೊಯ್ದಳು. ಕಣ್ಣೀರಿಡುತ್ತಲೇ ಅವ್ವ ಜಾತ್ರೆಯತ್ತ ನಡೆದಳು. ನಾನು ಮಾತ್ರ ಜಾತ್ರೆ ಕಡೆ ತಲೆ ಹಾಕಬಾರದು ಎಂದು ಆಜ್ಞೆ ಮಾಡಿದಳು.Sidi-2

ಮಡದಿ-ಮಕ್ಕಳೆಲ್ಲ ಜಾತ್ರೆ ಕಳುಹಿಸಿ ಗೆಳೆಯ ರಾಜನೊಂದಿಗೆ ಮನೆಯಲ್ಲೆ ಉಳಿದುಕೊಂಡೆ. ಆಪ್ತಮಿತ್ರ ಮಡಿಕೆ ಸತ್ತ ನಂತರ ನಡೆಯುತ್ತಿದ್ದ ಮೊದಲ ಜಾತ್ರೆಯಾದ್ದರಿಂದ ಉತ್ಸಾಹ ಕೂಡ ಕುಂದಿ ಹೋಗಿತ್ತು. ರಾಜನೊಂದಿಗೆ ಮಹೇಶನ ಸಮಾಧಿ ಸ್ಥಳ ಹಾಗೂ ಅತ್ತಿತ್ತ ಸುತ್ತಾಡಿಕೊಂಡು ಕಾಲ ಕಳೆದೆ. ಜಾತ್ರೆ ಕಡೆಯಿಂದ ಓಡಿ ಬಂದ ಸತೀಶನ ಕೋಪ ನೆತ್ತಿಗೇರಿತ್ತು. ಉಡಸಲಮ್ಮ ಮೈಮೇಲೆ ಬಂದವಳಂತೆ ಕುಣಿಯುತ್ತಿದ್ದ. ನೀವೆಲ್ಲಾ ಎಲ್ಲಿ ಹೋಗಿದ್ದೀರಿ ನಮ್ಮ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಿಟ್ಟಿನಿಂದಲೇ ನನ್ನತ್ತ ಬಂದ. ಸಮಾಧಾನ ಮಾಡಿ ಏನಾಯಿತು ಎಂದು ಕೇಳಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ, ಜಾತ್ರೆಗೆಂದು ಬಂದಿದ್ದ. ನಮ್ಮೂರಿನಿಂದ ಹೋಗುವ ತೇರಿನೊಂದಿಗೆ ಜಾತ್ರೆ ಸೇರಿಕೊಂಡಿದ್ದ. ಕೆಂಡದಲ್ಲಿ ಕಾಲಾಡಿ ದೇವಸ್ಥಾನ ಸುತ್ತು ಹಾಕುವ ಸಂದರ್ಭದಲ್ಲಿ ತೇರು ಎಳೆಯಲು ಕೈಜೋಡಿಸಲು ಮುಂದಾಗಿದ್ದಾನೆ. ಎಲ್ಲರ ಜೊತೆ ತೇರು ಮುಟ್ಟಿ ಎಳೆಯಲು ಉತ್ಸಾಹದಲ್ಲಿ ನಿಂತಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಮೇಲ್ಜಾತಿಯವರು ಆತನನ್ನು ಹೊರ ಹೋಗುವಂತೆ ಸೂಚಿಸಿದ್ದಾರೆ. ನಿಮ್ಮವರು ತೇರು ಮುಟ್ಟುವಂತಿಲ್ಲ. ಆದರೂ ಕಳೆದ ವರ್ಷ ನೀವೆಲ್ಲ ತೇರು ಎಳೆದು ಮೈಲಿಗೆ ಮಾಡಿದ್ದೀರಿ. ಪರಿಣಾಮವಾಗಿ ಕಳಸವೇ ಬಿದ್ದು ಹೋಗಿತ್ತು. ಈ ವರ್ಷವೂ ಆ ರೀತಿ ಆಗುವುದು ಬೇಡ ಎಂದು ಉಪದೇಶ ಹೇಳಿದ್ದಾರೆ.

ಆದರೆ ಅದಕ್ಕೊಪ್ಪದ ಸತೀಶ ತೇರು ಎಳದೇ ತೀರುತ್ತೇನೆ, ಆಗಿದ್ದಾಗಲಿ ಎಂದು ನಿಂತಿದ್ದಾನೆ. ಅಷ್ಟರಲ್ಲಿ ಮೇಲ್ಜಾತಿ ಯುವಕರು ಮತ್ತು ಸತೀಶನ ನಡುವೆ ಮಾತಿಗೆ ಮಾತು ಬೆಳೆದಿದೆ. ಗುಂಪು ಸೇರಿಕೊಂಡ ಹಿನ್ನೆಲೆಯಲ್ಲಿ ಸತೀಶನ ತಮ್ಮ ಹರೀಶನೂ ಓಡಿ ಬಂದು ನಾವ್ಯಾಕೆ ತೇರು ಎಳೆಯಬಾರದು ಎಂದು ಕೇಳಿದ್ದಾನೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ಸತೀಶನ ಅಕ್ಕ ವಾಣಿ ಇಬ್ಬರನ್ನು ಸಮಾಧಾನ ಮಾಡಿ ಕರೆದೊಯ್ದಿದ್ದಾಳೆ. ಅವರು ಸಾಕಷ್ಟು ಮಂದಿ ಇದ್ದಾರೆ, ಏನಾದರೂ ಮಾಡಿ ಬಿಡುತ್ತಾರೆ. ತೇರು ಎಳೆದು ನಮಗೇನು ಆಗಬೇಕಿಲ್ಲ, ಬನ್ನಿ ಎಂದು ಎಳೆದೊಯ್ದಿದ್ದಾಳೆ. ಅದೇ ಸಿಟ್ಟಿನಿಲ್ಲಿ ಜಾತ್ರೆ ಬಿಟ್ಟು ಮನೆ ಕಡೆ ಬಂದ ಸತೀಶ ನನ್ನ ಬಳಿ ಸಿಟ್ಟು ತೋಡಿಕೊಂಡ. ನಾನು ಇದ್ದಿದ್ದರೂ ತೇರು ಎಳೆಯಲು ನಿನಗ ಅವಕಾಶ ಕೊಡಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಅಸ್ಪಶ್ಯತೆ ಆಚರಣೆ ವಿರುದ್ಧ ಸ್ಥಳದಲ್ಲೆ ಧರಣಿ ಮಾಡಬಹುದಿತ್ತು ಎಂದೆ. ಈಗಲೂ ಕಾಲ ಮಿಂಚಿಲ್ಲ, ತೇರು ಮುಟ್ಟಲು ಅವಕಾಶ ನೀಡಿದೆ ಅಸ್ಪಶ್ಯತೆ ಆಚರಣೆ ಮಾಡಿ, ಎಲ್ಲರೆದುರು ನಿನ್ನನ್ನು ಅವಮಾನ ಮಾಡಿದ್ದರೆ. ಅವರ ಹೆಸರು ಗೊತ್ತಿದ್ದರೆ ಹೇಳು, ಅಂತವರ ವಿರುದ್ಧ ಠಾಣೆಗೆ ಹೋಗಿ ಮೊಕದ್ದಮೆ ದಾಖಲಿಸೋಣ ಎಂದೆ. ಸ್ನೇಹಿತರು ಮತ್ತು ಕೆಲವು ಅಧಿಕಾರಿಗಳನ್ನು ಸಂಪರ್ಕ ಮಾಡಿ ಹೇಗೆ ಮುಂದುವರಿಯಬೇಕು ಎಂಬ ಸಲಹೆ ಪಡೆದುಕೊಂಡೆ.

ಅದಕ್ಕೂ ಮುನ್ನ ನಿಮ್ಮ ಅಪ್ಪ-ಅಮ್ಮನನ್ನು ಕೇಳಿಕೊಂಡು ಬಾ ಎಂದು ಕಳುಹಿಸಿಕೊಟ್ಟೆ. ಸತೀಶ-ಹರೀಶ ಇಬ್ಬರೂ ಹೋಗಿ ಅವರಪ್ಪನನ್ನು ಕರೆತಂದರು. ನಾವೇ ಠಾಣೆಗೆ ಹೋಗಿ ದೂರು ಕೊಟ್ಟರೆ ಊರಿನವರು ಬೇಸರ ಮಾಡಿಕೊಳ್ಳುತ್ತಾರೆ. ಹಾಗಾಗಿ ದಲಿತ ಕೇರಿಯ ಎಲ್ಲರನ್ನೂ ಒಂದು ಮಾತು ಕೇಳಿಬಿಡೋಣ ಎಂದರು ಅವರಪ್ಪ. ನಾನು ಕೂಡ ಸ್ವಲ್ಪ ತಾಳ್ಮೆ ಉಳಿಸಿಕೊಂಡೆ. ಏನೂ ಕಾಣದ ಮಕ್ಕಳನ್ನು ಕರೆದೊಯ್ದು ಪೊಲೀಸ್, ಕಂಪ್ಲೆಂಟ್, ಕೋರ್ಟ್ ಅಂತ ಅಲೆಸುತ್ತಿದ್ದಾನೆ ಎಂದು ಸತೀಶನ ಅಪ್ಪ-ಅಮ್ಮ ನನಗೆ ಶಾಪ ಹಾಕಬಾರದು ಎಂಬ ಕಾರಣಕ್ಕೆ ಸ್ವಲ್ಪ ಹೊತ್ತು ಕಾದು ನೋಡಿದೆ. ಜೊತೆಯಲ್ಲೆ ಇದ್ದ ರಾಜ ಹೇಳಿದ ’ಇದು ಆಗದೆ ಇರುವ ಕೆಲಸ, ನೀನು ಜಾತ್ರೆಗೆ ಬಂದಿದ್ದೀಯ ಸುಮ್ಮನೆ ಬಾಡೂಟ ಮುಗಿಸಿಕೊಂಡು ಹೋಗು’ ಎಂದು ಸಲಹೆ ನೀಡಿದ.

ಅವನ ಮಾತು ಕೇಳದ ನಾನು ಜಾತ್ರೆ ಮುಗಿಸಿಕೊಂಡು ಆಗಾಗ ಬರುತ್ತಿದ್ದವರನ್ನೆಲ್ಲ ತಡೆದು ಘಟನೆಯನ್ನು ವಿವರಿಸಿದೆ. ಯುವಕರು ಹೌದು ಈಗಲೂ ಅಸ್ಪಶ್ಯತೆ ಆಚರಿಸುತ್ತಿರುವವರಿಗೆ ಬುದ್ದಿ ಕೆಲಸಬೇಕು ಎಂದರು. ಆದರೆ ಹಿರಿಯರಲ್ಲಿ ಬಹುತೇಕರು ನಾವೆಂದೂ ತೇರು ಮುಟ್ಟಿಲ್ಲ. ಕೇರಿಯಲ್ಲಿ ತಮ್ಮಯ್ಯನ ಮಗಳು ಮೈನೆರಿದ್ದಾಳೆ, ಸೂತಕ ಇದ್ದರೂ ತೇರು ಮುಟ್ಟಿರುವುದು ನಿನ್ನದೇ ತಪ್ಪು’ ಎಂದು ಸತೀಶನನ್ನು ಆರೋಪಿ ಮಾಡಿದರು. ‘ನೀನೋ ಹಬ್ಬ-ಜಾತ್ರೆಯಲ್ಲಿ ಊರಿಗೆ ಬಂದು ಹೋಗುತ್ತೀಯ. ನಿನ್ನ ಮಾತು ಕೇಳಿ ಪೊಲೀಸ್ ಠಾಣೆಗೆ ಹೋದರೆ ಮುಂದಾಗುವ ಅನಾಹುತಗಳನ್ನು ನಿತ್ಯೆ ಇಲ್ಲೆ ಇರುವ ನಾವು ಅನುಭವಿಸಬೇಕು. ಮುಂದೆ ಎದುರಾಗುವ ಕಷ್ಟ-ಸುಖದಲ್ಲಿ ಹಣಕ್ಕೆ ಅವರ ಮುಂದೆಯೇ ಕೈ ಚಾಚಬೇಕು. ಆಗಿದ್ದು ಆಗಿ ಹೋಗಿದೆ. ಊರಿನಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡ’ ಎಂದು ನನಗೂ ಚುಚ್ಚಿದರು. ಮೊದಲೇ ಸೂಚನೆ ನೀಡಿದ್ದ ರಾಜ ನನ್ನತ್ತ ನೋಡಿ ‘ನಿನಗಿದು ಬೇಕಿತ್ತೇ, ನಾನು ಮೊದಲೇ ಹೇಳಲಿಲ್ಲವೇ?, ಹೋಗು ಹೆಂಡತಿ-ಮಕ್ಕಳು ಜಾತ್ರೆಯಿಂದ ಬಂದಿದ್ದರೆ ಊಟ ಮಾಡಿ ನಿನ್ನ ಕೆಲಸ ನೋಡಿಕೊ’ ಎಂದು ಗದರಿಸಿದ. ಬೇರೆ ದಾರಿಯಿಲ್ಲದೆ ದುಃಖ ನುಂಗಿಕೊಂಡು ಮನೆಗೆ ಬಂದೆ.