Category Archives: ಡಾ.ರಾಮಲಿಂಗಪ್ಪ ಟಿ. ಬೇಗೂರು

ವರ್ತಮಾನದ ಕಥೆಗಳು: ಪುಸ್ತಕ ಸಮೀಕ್ಷೆ

[ವರ್ತಮಾನ.ಕಾಮ್ ನಡೆಸಿದ “ಗಾಂಧಿ ಜಯಂತಿ ಕಥಾಸ್ಪರ್ಧೆ – 2013″ಕ್ಕೆ ಬಂದ ಹಲವು ಕತೆಗಳನ್ನು ಸೇರಿಸಿ “ವರ್ತಮಾನದ ಕಥೆಗಳು” ಸಂಕಲನವಾಗಿ ಪ್ರಕಟಿಸಿರುವುದು ತಮಗೆಲ್ಲ ತಿಳಿದಿದೆ. ಇದು ಅದೇ ಪುಸ್ತಕದ ಬಗೆಗಿನ ವಿಮರ್ಶೆ-ಸಮೀಕ್ಷೆ. ರವಿ]

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಆಧುನಿಕ ಕನ್ನಡ ಸಂದರ್ಭದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಲ್ಲಿ ಸಣ್ಣಕಥೆಯೂ ಒಂದು. ಈ ಮಾದರಿಯ ಕಥೆಗಳನ್ನು ಕನ್ನಡದಲ್ಲಿ ಯಾರು ಮೊದಲು ಬರೆದರು, ಕನ್ನಡದಲ್ಲಿ ಈ ಪ್ರಕಾರದಲ್ಲಿ ಸಶಕ್ತವಾಗಿ ಬರೆದವರು ಮತ್ತು ಬರೆಯುತ್ತಿರುವವರು ಯಾರು ಎನ್ನುವ ಖ್ಯಾತನಾಮರ ಚರ್ಚೆಗಳನ್ನು ಕನ್ನಡ ವಿಮರ್ಶಾಜಗತ್ತು ಸಾಕಷ್ಟು ಬಾರಿ ಚರ್ಚಿಸಿದೆ ಮತ್ತು ತನ್ನದೇ ಆದ ತೀರ್ಮಾನಗಳನ್ನೂ ದಾಖಲಿಸಿದೆ. ಆದರೆ ಈ ಸಿದ್ಧಪ್ರಸಿದ್ಧರು ಹಾಕಿಕೊಟ್ಟ ಸಣ್ಣಕಥೆ ಪ್ರಕಾರದ ಚೌಕಟ್ಟಿನ ಗಂಭೀರ ಅಭ್ಯಾಸದ ಅಗತ್ಯವಿಲ್ಲದೆಯೂ, ಕಥೆಹೇಳುವ ತುಡಿತದಿಂದಾಗಿ ಕvartamaanada-kathegalu-2013-coverನ್ನಡದಲ್ಲಿ ಮತ್ತೆ ಮತ್ತೆ ಕಥೆಗಳು ಹುಟ್ಟುತ್ತಲೇ ಇವೆ. ಹೀಗೆ ಹುಟ್ಟುತ್ತಿರುವ ಬಹುಮಟ್ಟಿನ ಕಥೆಗಳು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳದ ಹೊರವರ್ತುಲದಿಂದಲೂ ಬರುತ್ತಿವೆ. ಕಥೆ ಹೇಳುವ ತುರ್ತಿನಲ್ಲಿ ಹುಟ್ಟುತ್ತಿರುವ ಈ ಕಥೆಗಳು ಅನೇಕ ವೇಳೆ ಕಲೆಗಾರಿಕೆಗಿಂತ ಎಲ್ಲವನ್ನೂ ಹೇಳಿಬಿಡುವ ಹಪಾಹಪಿಯಲ್ಲಿ ವಾಚ್ಯವಾಗುವುದನ್ನು ತಪ್ಪಿಸಿಕೊಳ್ಳಲಾರದ ಸಂಕಟವನ್ನು ಅನುಭವಿಸುವುದಿದೆ. ಆದರೆ ಈ ಕಥೆಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಅವುಗಳಲ್ಲಿ ತಮ್ಮ ಕಾಲದ ಆಗುಹೋಗುಗಳ ಬಗೆಗೆ ತಮ್ಮದೇ ಆದ ತಾತ್ವಿಕ ಹಾಗೂ ವೈಚಾರಿಕ ಖಚಿತತೆಯನ್ನೂ ತೋರಬಲ್ಲ ಗುಣಗಳಿವೆ. ಗಾಂಧಿ ಕಥಾಸ್ಪರ್ಧೆಯ ನೆವದಲ್ಲಿ ಟಿ.ರಾಮಲಿಂಗಪ್ಪ ಬೇಗೂರು ಹಾಗೂ ರವಿ ಕೃಷ್ಣಾರೆಡ್ಡಿ ಸಂಪಾದಿಸಿ, ಕಣ್ವ ಪ್ರಕಾಶವು ಬಿಡುಗಡೆ ಮಾಡಿದ ವರ್ತಮಾನದ ಕಥೆಗಳು ಸಂಕಲನದಲ್ಲಿನ ಕಥೆಗಳು ಈ ಎಲ್ಲಾ ಮಾತುಗಳಿಗೆ ಸಾಕ್ಷಿಯಂತಿವೆ.

ಈ ಸಂಕಲನದಲ್ಲಿನ ಎಲ್ಲಾ ಕಥೆಗಳು ಸ್ಪರ್ಧೆಯ ನಿಮಿತ್ತವಾಗಿ ಬರೆದ ಕಥೆಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಥಿತಿಯ ಕಥೆಗಾರರ ಕಥೆಗಳೂ ಹೌದು. ಹಾಗೆಂದ ಮಾತ್ರಕ್ಕೆ ಅವೆಲ್ಲವೂ ಯಾಂತ್ರಿಕವಾದ ಸ್ಪರ್ಧಾಪೇಕ್ಷೆಯಿಂದಷ್ಟೇ ಹುಟ್ಟಿದವುಗಳೆಂದೇನೂ ಅಲ್ಲ. ಈ ಕಥಾಸಂಕಲವನ್ನು ಅಚ್ಚುಕಟಾಗಿ ಸಂಪಾದಿಸಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆಯುವ ಮೂಲಕ ರಾಮಲಿಂಗಪ್ಪ ಬೇಗೂರು ಅವರು ಈ ಕಥೆಗಳನ್ನು ಓದುವ ಓದುಗರಿಗೆ ಕಥೆಗಳ ಮಿತಿ ಮತ್ತು ಸಾಧ್ಯತೆಯನ್ನು ಕುರಿತ ಕೀಲಿಕೈಯೊಂದನ್ನೂ ಒದಗಿಸಿದ್ದಾರೆ. ಈ ನಡುವೆಯೂ ಈ ಸಂಕಲದ ಮೊದಲ ಓದಿಗೆ ದಕ್ಕಿದ ಕೆಲವು ಸಂಗತಿಗಳನ್ನು ಆಧರಿಸಿ ಒಟ್ಟು ಕಥೆಗಳನ್ನು ಕುರಿತು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದೆಂದುಕೊಳ್ಳುತ್ತೇನೆ.

ರಾಮಲಿಂಗಪ್ಪ ಅವರು ಸರಿಯಾಗಿಯೇ ಗುರುತಿಸಿದಂತೆ ಈ ಸಂಕಲನದ ಕಥೆಗಾರರು ಮುಖ್ಯವಾಹಿನಿಯಲ್ಲಿ ಉದ್ಧರಣ ಚಿಹ್ನೆಯೊಳಗಿಟ್ಟು ಗುರುತಿಸಲ್ಪಟ್ಟ ಕಥೆಗಾರರಲ್ಲ. ಪ್ರಭಾವಳಿಯ ರಕ್ಷಣಾಕವಚದಲ್ಲಿ ಸುಭದ್ರವಾಗಿರುವ ಕಥೆಗಾರರೂ ಅಲ್ಲ. ಆ ಪ್ರಭಾವಳಿ ಇಲ್ಲದಿರುವಿಕೆಯು ಈ ಕಥೆಗಳ ಬಗೆಗೆ ಓದುಗರಿಗೆ ಮುಜುಗರವಿಲ್ಲದೆ ಮಾತನಾಡುವ ಒಂದು ಸ್ವಾತಂತ್ರ್ಯವನ್ನೂ ಒದಗಿಸುವುದರಿಂದ ಕಥೆಗಳ ಕುರಿತಂತೆ ವಸ್ತುನಿಷ್ಠವಾದ ಪ್ರತಿಕ್ರಿಯೆಯನ್ನು ಖಂಡಿತಾ ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಅವರೇ ಗುರುತಿಸುವಂತೆ ಇಲ್ಲಿ ಬಹುಮಟ್ಟಿನ ಕಥೆಗಳು ವಿಷಯದ ವ್ಯತ್ಯಾಸವನ್ನು ಹೊರತುಪಡಿಸಿ ಭಾಷೆಯ ನೆಲೆಯಲ್ಲಿ ಒಬ್ಬನೇ ಕಥೆಗಾರನ ಸಂಕಲನದಂತೆ ಭಾಸವಾದರೂ ಆಶ್ಚರ್‍ಯವಿಲ್ಲ. ಆ ಮಟ್ಟಿಗೆ ಅವು ಉತ್ತರಕರ್ನಾಟಕದ ಭಾಷಾಬನಿಯನ್ನು ಹೊತ್ತುಕೊಂಡೇ ಬಂದಿವೆ. ಅದರ ಜೊತೆಗೆ ಈ ಕಥೆಗಳಲ್ಲಿ ನಗರ-ಗ್ರಾಮ, ಮಧ್ಯಮವರ್ಗ-ತಳವರ್ಗ, ಮೇಲ್ಜಾತಿ-ಕೆಳಜಾತಿ ಇಂತಹ ಅವಳಿ ವೈರುಧ್ಯಗಳ ಸರಳ ಮುಖಾಮುಖಿಯಿದ್ದರೂ ಅಲ್ಲೊಂದು ಸಮಾಜಮುಖೀ ಧೋರಣೆಯಿದೆ. ಈ ಸಮಾಜಮುಖೀ ಗುಣದಿಂದಾಗಿಯೇ ಅನೇಕ ಬಾರಿ ಇಲ್ಲಿನ ಕಥೆಗಳು ವೈಚಾರಿಕ ಬಾರದಲ್ಲಿ ವಾಚ್ಯವಾಗುತ್ತವೆ. ಇನ್ನು ವಸ್ತುವಿನ ನೆಲೆಯಲ್ಲಿ ಇಲ್ಲಿನ ಬಹುಪಾಲು ಕಥೆಗಳು ಮನುಷ್ಯನ ಮೂಲಭಾವವಾದ ಲೈಂಗಿಕತೆಯನ್ನು ಒಂದಿಲ್ಲೊಂದು ನೆಲೆಯಲ್ಲಿ ಸ್ಪರ್ಶಿಸುತ್ತವೆ. ಅದರ ಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿ, ಊಳಿಗಮಾನ್ಯತೆ, ಲಿಂಗತಾರತಮ್ಯ ಹಾಗೂ ಸಾಂಸ್ಥಿಕವಂಚನೆಗಳನ್ನು ಬೇರೆ ಬೇರೆ ನೆಲೆಯಲ್ಲಿ ಒಳಕೊಂಡು ಬರುವ ಈ ಎಲ್ಲಾ ಕಥೆಗಳು ಒಂದಿಲ್ಲೊಂದು ಬಗೆಯಲ್ಲಿ ವ್ಯವಸ್ಥೆಯ ಲೋಪದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹಾಗಾಗಿ ಇಲ್ಲೊಂದು ಅಸಹನೆ ಮತ್ತು ಸುಧಾರಣೆಯ ತುಡಿತವಿದೆ. ಈ ತುಡಿತವನ್ನು ಇಲ್ಲಿನ ಬಹುಪಾಲು ಕಥೆಗಳು ಘಟನಾಪ್ರಧಾನವಾದ ನೆಲೆಯಲ್ಲಿಯೇ ನಿರೂಪಿಸುತ್ತವೆ.

ಒಟ್ಟೂ ಕಥೆಗಳನ್ನು ಗಮನಿಸುವಲ್ಲಿ ಸಿನೀಮಿಯಾ ಮಾದರಿಯ ಬೆಳವಣಿಗೆ ಮತ್ತು ಅಂತ್ಯವಿರುವ ಕಥೆಗಳೇ ಹೆಚ್ಚಿವೆ. vartamaanada-kathegaluಕೆಲವು ಕಥೆಗಳಂತೂ ಮೊದಲೇ ನಿರ್ಧರಿಸಿಕೊಂಡ ಟೈಟಲ್‌ಗೆ ಜೋತುಬಿದ್ದಂತೆಯೂ ಕಾಣುತ್ತವೆ. ಹೀಗೆ ಶೀರ್ಷಿಕೆಯನ್ನು ನಿರ್ಧರಿಸಿಕೊಂಡು ಒಡಲು ತುಂಬಲುಹೋಗುವಲ್ಲಿ ಎದುರಾಗುವ ಸಂಕಟದಲ್ಲಿ ಇಲ್ಲಿಯ ಅನೇಕ ಕಥೆಗಳು ತೊಳಲುತ್ತವೆ. ಹೀಗಾಗಿ ಇಲ್ಲಿನ ಅನೇಕ ಕಥೆಗಳು ತಮ್ಮ ಸೊಗಸಾದ ಭಾಷೆ ಮತ್ತು ಕಥೆಹೇಳುವ ಗುಣಗಳ ನಡುವೆಯೂ ತಾವಾಗಿಯೇ ಬೆಳೆದ ಕಥೆ ಎನಿಸುವುದಿಲ್ಲ. ಸಿದ್ಧಚೌಕಟ್ಟಿನ ಕಥೆಯಾಗಿ ಗೆರೆಹಾಕಿಕೊಂಡಲ್ಲಿಯವರೆಗೆ ವಿಸ್ತರಿಸಿ ಕೊನೆಗೊಂಡಂತೆಯೇ ಭಾಸವಾಗುತ್ತವೆ. ಈ ನಡುವೆಯೂ ಈ ಸಂಕಲನದಲ್ಲಿ ನೆನಪಿನಲ್ಲುಳಿಯುವ ಕೆಲವು ಕಥೆಗಳಿವೆ. ಅದಕ್ಕೆ ಅವುಗಳ ಕಥನಗಾರಿಕೆಯ ಜೊತೆಗೆ ಸಾಮಾಜಿಕ ಕಾಳಜಿಯ ಕಾರಣವೂ ಇದೆ. ವ್ಯಕ್ತಿಕೇಂದ್ರಿತ ಹಾಗೂ ಸಮಾಜಿಮುಖೀ ಎರಡೂ ನೆಲೆಯ ಕಥೆಗಳನ್ನು ಹೊಂದಿರುವ ಈ ಸಂಕಲನದ ಬಹುಪಾಲು ಕಥೆಗಳಿಗೆ ವ್ಯಕ್ತಿತ್ವದ ಅಂತರಂಗವನ್ನು ಶೋಧಿಸಿಕೊಳ್ಳುವ ತೀವ್ರತೆಗಿಂತ ಲೋಕವನ್ನು ನೋಡಿ ಮಾತನಾಡುವ ಆಸಕ್ತಿಯೇ ಹೆಚ್ಚಿದೆ. ಹೀಗಾಗಿ ಇಲ್ಲಿ ಬಹಿರ್ಮುಖತೆಯ ಗುಣ ಹೆಚಿದೆ. ತಾವೇ ಆರೋಪಿಸಿಕೊಂಡ ವೈಚಾರಿಕ ಆಕೃತಿಯ ಅತಿಭಾರಕ್ಕೆ ಸಿಕ್ಕಿ ಅವು ಕಲಾತ್ಮಕತೆಯನ್ನು ಮರೆತು ಬಿಡುವುದೂ ಇದೆ.

ಈ ಸಂಕಲನದ ಮಹತ್ವದ ಕಥೆಗಳ್ಲೊಂದಾದ “ಮಹಾತ್ಮ”, ಗಾಂಧಿಯನ್ನು ಆವಾಹಿಸಿಕೊಳ್ಳುವ ಮಾದರಿಯ ಕಥೆ. ಸ್ವತಂತ್ರ ಭಾರತದ ಉದ್ದಕ್ಕೂ ದೇಶದ ಮನಸ್ಸುಗಳನ್ನು ಬೆಚ್ಚಗೆ ಕಾಡುವ ಗಾಂಧಿಯನ್ನು ಈ ಕಥೆಯೂ ತನ್ನೆದುರಿಗೆ ತಂದುಕೊಂಡು ಮುಖಾಮುಖಿ ಉಜ್ಜಿ ನೋಡಿಕೊಳ್ಳತ್ತದೆ. ಬೊಳುವಾರರ “ಪಾಪು ಗಾಂಧಿಯಾದ ಕಥೆ”ಯನ್ನು ಕಿಂಚಿತ್ ಹೋಲುವಂತೆ ಕಂಡರೂ ಇಲ್ಲಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಮನಸ್ಸಿಗೆ ಬೇರೆಯದೇ ಆದ ಒಂದು ಹಿನ್ನೆಲೆ ಇರುವಂತಿದೆ. ಅದು ಗಾಂಧಿಯ ಕುರಿತಾದ ಪೂರ್ವಗ್ರಹಗಳಿಂದ ಕೂಡಿದ ಮನಸ್ಸು. ವರ್ತಮಾನದ ರಾಜಕೀಯ ಆವರಣದಲ್ಲಿರುವ vartamaanada-kathegalu-authours1ಗಾಂಧಿ ಕುರಿತ ನಕಾರಾತ್ಮಕ ರಾಜಕೀಯ ಸಂಕಥನವನ್ನೇ ಉಸಿರಾಡಿಕೊಂಡ ಮನಸ್ಸು. ಹಾಗಾಗಿ ಸ್ಪಷ್ಟವಾಗಿ ಅದು ಸಾಂಪ್ರದಾಯಿಕ ಶಕ್ತಿಗಳು ನಿರೂಪಿಸುವ ಗಾಂಧಿಯ ಚಿತ್ರಣವನ್ನು ತುಂಬಿಕೊಂಡ ಮನಸಾಗಿಯೇ ತನ್ನನ್ನು ತೆರೆದುಕೊಳ್ಳುತ್ತದೆ. ಇಂತಹ ಮನಸೊಂದು ತಾನು ತುಂಬಿಕೊಂಡ ಗಾಂಧಿಯ ಅಚ್ಚನ್ನು ಕನಸಿನ ಗಾಂಧಿಯ ಜೊತೆಗೆ ಮುಖಾಮುಖಿ ಮಾಡಿ ಪರಿಶೀಲಿಸಿಕೊಳ್ಳುವಲ್ಲಿ ಕಥೆಯ ಬೆಳವಣಿಗೆ ಇದೆ. ಈ ಕಥೆಯಲ್ಲಿ ಕೇವಲ ಗಾಂಧಿಯಷ್ಟೇ ಪರಿಶೀಲನೆಗೊಳಗಾಗುವುದಲ್ಲ. ನೆಹರೂ, ಜಿನ್ನಾ, ಘೋಡ್ಸೆ ಹೀಗೆ ಚರಿತ್ರೆಯ ಅನೇಕರು ವರ್ತಮಾನಕ್ಕೆ ಬಂದು ತಮ್ಮ ಮುಖತೋರಿಸಿ ಹೋಗುತ್ತಾರೆ. ಗಾಂಧಿಯೂ ಎಲ್ಲ ಪ್ರಶ್ನೆಗಳಿಗೂ ತರ್ಕಬದ್ಧವಾಗಿ ಉತ್ತರಿಸುವಂತೆ ಕಟ್ಟಲ್ಪಡುತ್ತಾರೆ. ಈ ಮೂಲಕ ಚರಿತ್ರೆಯ ಹೂರಣದ ಸರಿತಪ್ಪುಗಳ ವಿವೇಚನೆಗೆ ನಿಂತು ಬಿಡುವ ನಿರೂಪಕ ಮನಸ್ಸು, ಘೋಡ್ಸೆ ಕುರಿತಂತೆ ಹೊಂದಿರುವ ಸಂಕಥನದಿಂದ ಕೊನೆಗೂ ಬಿಡುಗಡೆಗೊಂಡಂತೆ ಅನ್ನಿಸುವುದೇ ಇಲ್ಲ. ಇದು ನಿರೂಪಕನ ಸಮಸ್ಯೆ ಅಷ್ಟೇ ಅಲ್ಲ. ಸ್ವತಂತ್ರ ಭಾರತದ, ವರ್ತಮಾನ ಭಾರತದ ವಾಸ್ತವವೂ ಹೌದು. ಗಾಂಧಿಗೆ ಬಿಡುಗಡೆ ಸಿಕ್ಕಿದೆಯೋ ಇಲ್ಲವೋ? ಆದರೆ ಕನಸಿನಲ್ಲಿ ಗಾಂಧಿಯನ್ನು ಎದುರಾಗುವ ಮನಸ್ಸು ವಾಸ್ತವದಲ್ಲಿ ತಾನು ಈಗಾಗಲೇ ತುಂಬಿಕೊಂಡ ದೇಶಭಕ್ತ ಘೋಡ್ಸೆಯಿಂದ ಬಿಡುಗಡೆ ಕಾಣದೇ ಉಳಿಯುತ್ತದೆ. ಇದಕ್ಕೂ, ಗಾಂಧಿಯ ಭಾವಚಿತ್ರವು ಮಾರ್ಜಾಲದ ಆಕ್ರಮಣದಲ್ಲಿ ಒಡೆದು ಹೋಗುವದಕ್ಕೂ ಅರ್ಥಪೂರ್ಣ ಸಾಂಗತ್ಯವೊಂದು ಏರ್ಪಡುವಲ್ಲಿಯೇ ಕತೆಯ ಯಶಸ್ಸಿದೆ. ಗಾಂಧಿಯ ನಡುವೆ ಘೋಡ್ಸೆಯನ್ನಿಟ್ಟುಕೊಂಡು ಈ ದೇಶ ಮತ್ತು ಗಾಂಧಿ ಎರಡರ ಕುರಿತಾದ ಅಖಂಡ ಸಂಕಥನವೊಂದು ಅಸಾಧ್ಯವೆಂಬುದನ್ನೇ ಪರೋಕ್ಷವಾಗಿ ಕತೆ ಮನವರಿಕೆ ಮಾಡುವಂತಿದೆ. ಈ ಧ್ವನಿಯನ್ನೂ ಹೊರಡಿಸುವ ಮೂಲಕ ಆರ್‌ಎಸ್‌ಎಸ್ ಪ್ರಣೀತ ಮನಸ್ಸಿನ ಪರ ನಿರೂಪಕನನ್ನು ಬಿಡುಗಡೆಗೊಳಿಸದೆಯೂ ಅನೇಕ ಆಯಾಮದಲ್ಲಿ ಒಂದು ಗುಣಾತ್ಮಕ ಕಥೆಯೆನಿಸುತ್ತದೆ.

“ರಾಮಭಟ್ಟನ ಮದುವೆ ಪ್ರಸಂಗ” ತಾನು ಆಯ್ದುಕೊಳ್ಳುವ ವಸ್ತುವಿನ ನೆಲೆಯಿಂದ ಮುಖ್ಯವೆನಿಸಬಹುದಾದ ಕಥೆ. ಹೆಣ್ಣು ಸಿಕ್ಕದೆ ಇನ್ನೆಲ್ಲಿಂದಲೋ ಹೆಣ್ಣು ತರುವ ಔದಾರ್‍ಯವೂ ತನ್ನ ಮೂಲಛಾಯೆಯನ್ನು ಬಚ್ಚಿಟ್ಟುಕೊಳ್ಳಲಾರದೆ ಬೆತ್ತಲಾಗುವುದನ್ನು ಕಥೆ ಸೊಗಸಾಗಿಯೇ ಚಿತ್ರಿಸುತ್ತದೆ. ವೈದಿಕ ಸಮುದಾಯದೊಳಗಿನ ಜಳ್ಳ್ಳುತನವನ್ನು ನವುರಾದ ಹಾಸ್ಯದಲ್ಲಿಯೇ ಹೇಳಿಕೊಂಡು ಹೋಗುವ ಇಲ್ಲಿನ ಕಥನಗಾರಿಕೆಗೆ ಜೀವಂತಿಕೆಯಿದೆ. ರಾಮಭಟ್ಟನ ವಂಚನೆಯನ್ನು ಅರ್ಥಮಾಡಿಕೊಂಡ ಮೇಲೆ ಅದನ್ನು ಅಷ್ಟೇ ಸಮರ್ಥವಾಗಿ ಮೌನದಲ್ಲಿಯೇ ಮೊನಚಾಗಿ ಇದಿರಿಸುವ ಸರೋಜ ಮತ್ತು ಶಾಂತಿ ಕಥೆಯಲ್ಲಿ ಅಮುಖ್ಯರೆನಿಸಿಯೂ ಮುಖ್ಯವೆನಿಸಿಕೊಳ್ಳುತ್ತಾರೆ. ಮಿಕ್ಕ ಕಥೆಗಳಾದ “ಮುಗಿಲ ಮಾಯೆಯ ಕರುಣೆ” ಗ್ರಾಮ ಬದುಕನ್ನು ಆಚ್ಛಾದಿಸಿಕೊಂಡ ಜಾತಿ ವ್ಯವಸ್ಥೆಯ ಇನ್ನೊಂದು ಮುಖವನ್ನು ಹೇಳುತ್ತದೆ. ರಾಜಕಾರಣದಿಂದ ಒಡೆದು ಹೋದ ಹಳ್ಳಿಗಳು ಎಲ್ಲದರಲ್ಲೂ ಒಡೆದುಕೊಂಡು, ಜೀವಬಲಿಗಾಗಿ ಹಪಾಹಪಿಸುವುದನ್ನು ಕಥೆ ತನ್ನ ಮಿತಿಯೊಳಗೆ ಸೊಗಸಾಗಿ ಮುಟ್ಟಿಸುತ್ತದೆ. “ಗಲೀಜು” ಕಥೆ ಗ್ರಾಮಬದುಕಿನ ಗಲೀಜಿಗಿಂತ ಹೆಚ್ಚಾಗಿ ಲೈಂಗಿಕತೆಯ ನೆಲೆಯ ಮಾನುಷ ವಿಕೃತಿಯನ್ನೇ ಅತಿ ವಿಜೃಂಭಿಸಿ ಹೇಳುವ ಕಥೆ. ಹೀಗಾಗಿ ವಾಸ್ತವಕ್ಕಿಂತ ಕಿಂಚಿತ್ ದೂರವೇ ಎನಿಸಬಲ್ಲ ಕಥೆಯೂ ಹೌದು. ಮುಜುಗರವಿಲ್ಲದ ಅದರ ಭಾಷೆ ಗಲೀಜನ್ನು ಸಮರ್ಥವಾಗಿ ತೋರುತ್ತದೆಯಾದರೂ ಇಡಿಯ ಆವರಣ ಅತಿರಂಜಿತವೆನಿಸುತ್ತದೆ. “ಮಠದ ಹೋರಿ” ಕಥೆ ಗೋಸಂಕಥನದ ಬೇರೆ ಬೇರೆ ಮುಖಗಳನ್ನು ಪರಿಚಯಿಸುವ ಏಕೋದ್ದೇಶದಲ್ಲಿ ತನ್ನ ವೈಚಾರಿಕ ಹೊರೆಯಿಂದ ಬಿಡುಗಡೆ ಪಡೆಯುವುದೇ ಇಲ್ಲ. “ಪುಷ್ಪ” ಕಥೆಯೂ ಇದೇ ತೆರನಾದುದು. ಆದರೆ “ಹುಲಿ ಸಾಕಣೆ” ಮತ್ತು vartamaanada-kathegalu-authours2“ಗುಲಾಬಿ ಚೀಟಿ” ಕಥೆಗಳು ಆಧುನಿಕ ಸಂದರ್ಭದ ಅವತರಣಿಕೆಗಳಾದ ಎನ್‌ಜಿಓ ಹಾಗೂ ಎಮ್‌ಎನ್‌ಸಿಗಳ ಸೋಗಲಾಡಿತನ ಮತ್ತು ವಂಚನೆಯನ್ನು ಪರಿಚಯಿಸುತ್ತವೆ. ಇದನ್ನೂ ಮೀರಿ “ಗುಲಾಬಿ ಚೀಟಿ” ಕಥೆ, ಬದುಕು ಮತ್ತು ಕೃಷಿಗಳೆರಡರಲ್ಲೂ ವಿದೇಶದ ಆಕರ್ಷಣೆ ಮತ್ತು ಅಸಲಿ ಅನುಭವಗಳನ್ನು ತಾಳೆಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ. ಹೀಗೆ ವಿದೇಶಿ ಒಲವಿನ ನಕಾರಾತ್ಮಕ ಫಲಿತವನ್ನು ಚಿತ್ರಿಸುವ ಕಥೆ ಗಾಂಧಿ ಚಿಂತನೆಯಾದ ದೇಶೀಯತೆಯ ಪರನಿಲ್ಲುತ್ತದೆ. “ಹಳೇಟ್ರಂಕು” ಗ್ರಾಮ ಬದುಕಿನ ಅಮೂಲ್ಯ ಮುಗ್ದತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ನಗರೀಕರಣದ ವಾಣಿಜ್ಯೀಕೃತ ಅವಸ್ಥೆಯ ಕರಾಳತೆಯನ್ನೂ, “ಬೆಂದಕಾಳೂರು” ನಗರಗಳು ರೂಪಿಸುತ್ತಿರುವ ಮಾನವೀಯ ಸಂಬಂಧದ ಸಂದುಗಡಿದ ಸ್ಥಿತಿಯನ್ನೂ ಹೇಳುವ ಮೂಲಕ ನಗರ ವಿಮುಖತೆಯ ಪರನಿಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ “ಹೊತ್ತಿಗೊದಗಿದ ಮಾತು” ಕಥೆ ನಗರವನ್ನು ಬದುಕು ಕಟ್ಟಿಕೊಳ್ಳುವ ನೆಲೆಯಾಗಿಯೇ ಗುರುತಿಸುತ್ತದೆಯಾದರೂ, ಪುಟ್ಟ ಮಗುವಿನ ಒಂದು ಮಾತೇ ಬದುಕನ್ನು ಬದಲಾಯಿಸಿತು ಎಂಬುದನ್ನು ಹೇಳುವ ಕಾತರಕ್ಕೆ ಕುದಿದಂತೆ ಅಲ್ಲಿಗೇ ನಿಂತುಬಿಡುತ್ತದೆ. “ನಡುವೆ ಸುಳಿವಾತ್ಮ” ಹಾಗೂ “ಉಮಿಯೊಳಗಿನ ಬೆಂಕಿ” ಎರಡೂ ಆಸ್ತಿ ಅಂತಸ್ತಿಗೆ ಹಾತೊರೆಯುವ ಬದುಕುಗಳು ಕಡೆಗಣಿಸುವ ಮನುಷ್ಯ ಸಂಬಂಧದ ಮೇಲೆ ಬೆಳಕು ಚಲ್ಲುತ್ತವೆ. “ಅಂಬುಳೆ ಒಂದು ಕಥಾಂತರ” ತಲೆಮಾರುಗಳ ಅಂತರವನ್ನೂ, ಅವಿಭಕ್ತ ಕುಟುಂಬಗಳ ಯಜಮಾನಿಕೆಗಳು ಉಂಟುಮಾಡುವ ಪ್ರಮಾದಗಳನ್ನೂ ಹೇಳುವ ಮೂಲಕ ಕುಟುಂಬ ಪದ್ಧತಿಯ ಬಿರುಕುಗಳನ್ನು ಶೋಧಿಸುತ್ತದೆ.

ಈ ಸಂಕಲನದ ಕಥೆಗಳು ಹೊಸ ಕಥೆಗಾರರಿಂದ ಬರೆಯಲ್ಪಟ್ಟವಾಗಿದ್ದರೂ ಅವುಗಳಲ್ಲಿ ಕನ್ನಡದ ಮಹತ್ವದ ಕಥೆಗಾರರ ನೆರಳುಗಳು ಕಾಣಿಸಿದರೆ ಅಚ್ಚರಿಯಿಲ್ಲ. ಈ ನೆಲೆಯಲ್ಲಿ ‘ಹುಡುಕಾಟ’, ‘ಡಿಪ್ರೆಶನ್’ ಹಾಗೂ ‘ರಾಮಭಟ್ಟನ ಮದುವೆ ಪ್ರಸಂಗ’ಗಳೂ ವಿಭಿನ್ನ ಎಂದೆನಿಸುತ್ತವೆ. ‘ಹುಡುಕಾಟ ಕಥೆ’ ನವ್ಯದ ಕತೆಗಳನ್ನು ನೆನಪಿಸಿಬಿಡುವಂತಿದೆ. ಕಳೆದು ಹೋದ ತನ್ನಣ್ಣನನ್ನು ಜೀವಮಾನಪೂರ್ತಿ ಹುಡುಕುವ ವಾಸುದೇವ ಮಾಸ್ತರರ ಪತ್ತೇದಾರಿಕೆಯ ಮನಸ್ಸು ತನ್ನ ಗತ ಹಾಗೂ ವರ್ತಮಾನಗಳನ್ನು ಶೋಧನೆಗೊಡ್ಡುವ ಸ್ವರೂಪದಲ್ಲಿ ಈ ನವ್ಯತೆಯ ಗುಣವಿದೆ. ಡಿಪ್ರೆಶನ್ ಕಥೆ ವೈದೇಹಿ ಅವರ ಸೌಗಂಧಿಯ ಸ್ವಗತಕ್ಕೆ ಹತ್ತಿರವಾದಂತಿದೆ. ಲೈಂಗಿಕತೆಯನ್ನು ಹೆಣ್ಣ ಕಣ್ಣೋಟದಲ್ಲಿ ಕಾಣಲು ಯತ್ನಿಸುವ ಈ ಕಥೆ ಮನೋವ್ಯಾಪಾರದ ಶೋಧಕ್ಕಿಳಿಯುತ್ತದೆ. ರಾಮಭಟ್ಟನ ಮದುವೆ ಪ್ರಸಂಗವು ಆಂಶಿಕವಾಗಿ ಮಾಸ್ತಿಕಥೆಗಳನ್ನು ಹೋಲುವಂತೆಯೂ ಇದೆಯೆನಿಸುತ್ತದೆ. ಹೀಗೆ ಇಲ್ಲಿನ ಕಥೆಗಳು ಹಾಗೂ ಕಥೆಗಾರರನ್ನು ಹಿಂದಿನವರ ನೆರಳಾಗಿಯೇ ಗುರುತಿಸಬೇಕೆಂದೇನೂ ಇಲ್ಲ. ಬಹುಮಟ್ಟಿಗೆ ಇಲ್ಲಿನ ಬಹುಪಾಲು ಕಥೆಗಾರರು ಹೊಸಬರು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಭ್ಯಾಸ ಮಾಡದೆಯೂ ಕನ್ನಡಕ್ಕೆ ಅಗತ್ಯವಿರುವ ಬೇರೆ ಬೇರೆ ಕ್ಷೇತ್ರಗಳ ಸಂವೇದನೆಗಳನ್ನು ತುಂಬುತ್ತಿರುವವರು. ಈ ಹಿನ್ನೆಲೆಯಲ್ಲಿ ಈ ಕಥೆಗಳ ಮಿತಿಗಳ ಕುರಿತಾದ ಮಾತುಗಳಾಗಲೀ, ಹೋಲಿಕೆಗಳ ಕುರಿತಾದ ಮಾತುಗಳಾಗಲೀ ಕಥೆಗಾರರಿಗೆ ತಮ್ಮ ಮುಂದಿನ ಕಥೆಗಳನ್ನು ರೂಪಿಸಿಕೊಳ್ಳಲು ಪೂರಕವಾದ ಸಲಹೆಗಳೆಂದೇ ಭಾವಿಸಬಹುದು.

 

ವರ್ತಮಾನದ ಕಥೆಗಳು : ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013ರ ಆಯ್ದಕತೆಗಳ ಕಥಾಸಂಕಲನ

ಆತ್ಮೀಯರೇ,

ಕಳೆದ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮತ್ತು ಬಹುಮಾನಿತ ಕತೆಗಳ ಬಗ್ಗೆ ನಿಮಗೀಗಾಗಲೆ ತಿಳಿದಿದೆ. katha-sprade-2013(ಫಲಿತಾಂಶ, ತೀರ್ಪುಗಾರರ ಮಾತು, ಮೊದಲ ಬಹುಮಾನ ಪಡೆದ ಕತೆ, ಎರಡನೆಯ, ಮೂರನೆಯ, ಸಮಾಧಾನಕರ ಬಹುಮಾನ ಪಡೆದ ಕತೆ-೧, ಕತೆ-೨). ಆ ಸಂದರ್ಭದಲ್ಲಿ ಈ ಬಾರಿಯ ತೀರ್ಪುಗಾರರಾಗಿದ್ದ ಡಾ. ರಾಮಲಿಂಗಪ್ಪ ಟಿ. ಬೇಗೂರುರವರು ಆ ಸ್ಪರ್ಧೆಗೆ ಬಂದಿದ್ದ ಸುಮಾರು ಇಪ್ಪತ್ತು ಕತೆಗಳನ್ನು ಆಯ್ದು “ವರ್ತಮಾನದ ಕಥೆಗಳು” ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸುವ ಆಸಕ್ತಿ ತೋರಿಸಿ ಅದಕ್ಕೆ ಕೆಲವು ಪ್ರಕಾಶಕರನ್ನೂ ಸಂಪರ್ಕಿಸಿದ್ದರು. ಆ ಸಮಯದಲ್ಲಿ ನಾವು ಆಯ್ಕೆ ಮಾಡಿದ ಕತೆಗಳ ಕತೆಗಾರರಿಗೆಲ್ಲ ಇಮೇಲ್ ಬರೆದು ಇದರ ಬಗ್ಗೆ ತಿಳಿಸಿದ್ದೆವು. ಈಗ ಆ ಕಥಾಸಂಕಲನ ಪ್ರಕಟವಾಗಿದೆ ಮತ್ತು ಪ್ರಕಟಗೊಂಡಿರುವ ಕತೆಗಳ ಲೇಖಕರಿಗೆಲ್ಲ ಗೌರವ ಪ್ರತಿಗಳನ್ನು ತಲುಪಿಸಬೇಕಿದೆ. ದಯವಿಟ್ಟು ಈ ಪಟ್ಟಿಯಲ್ಲಿರುವ ಲೇಖಕರು ಡಾ. ರಾಮಲಿಂಗಪ್ಪ ಟಿ. ಬೇಗೂರುರವರನ್ನಾಗಲಿ (೯೪೪೯೨೭೧೧೫೬) ಅಥವ ನನ್ನನ್ನಾಗಲಿ (೯೬೮೬೦೮೦೦೦೫) ಸಂಪರ್ಕಿಸಿ ತಮ್ಮ ಗೌರವ ಪ್ರತಿಗಳನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇವೆ.

ಸಮಸ್ಯೆ ಏನೆಂದರೆ, ಹಲವರ ಫೋನ್ ನಂಬರ್ ಸಹ ನಮ್ಮಲ್ಲಿಲ್ಲ. ಮತ್ತೆ ಹಲವರು ಇಮೇಲ್ ಮೂಲಕ, ಅದೂ ಹಲವು ದಿನಗಳ ನಂತರ ಉತ್ತರಿಸುತ್ತಾರೆ. ಹಾಗಾಗಿ ನಮ್ಮ ಓದುಗರಿಗೆ ಈ ಪಟ್ಟಿಯಲ್ಲಿರುವ ಯಾರಾದರೂ ಲೇಖಕರು ಪರಿಚಿತರಿದ್ದಲ್ಲಿ ಅವರಿಗೆ ಈ ವಿಷಯದ ಬಗ್ಗೆ ಕರೆ ಮಾಡಿ ತಿಳಿಸಿದರೆ, ಅದೂ ಬಹಳ ಅನುಕೂಲವಾಗುತ್ತದೆ.

ಇದನ್ನೆಲ್ಲ ಸಾಧ್ಯವಾಗಿಸಿದ ಕತೆಗಾರರಿಗೆ, ಮತ್ತು ಡಾ. ರಾಮಲಿಂಗಪ್ಪ ಟಿ. ಬೇಗೂರುರವರಿಗೆ ವರ್ತಮಾನ.ಕಾಮ್ ಪರವಾಗಿ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

vartamaanada-kathegalu-cobverpage

vartamaanada-kathegalu-authours1

vartamaanada-kathegalu-authours2

ಜಿ.ಎಸ್.ಎಸ್. ನಮಗೆ ಏಕೆ ಮತ್ತು ಹೇಗೆ ಮಾದರಿ


– ಡಾ.ರಾಮಲಿಂಗಪ್ಪ. ಟಿ. ಬೇಗೂರು


 

ಜಿ.ಎಸ್.ಎಸ್. ಭೌತಿಕವಾಗಿ ಇನ್ನಿಲ್ಲ. ಆದರೆ ಅವರ ಕೃತಿಗಳಲ್ಲಿ ಮತ್ತು ಕೆಲಸಗಳಲ್ಲಿ ಅವರು ಸದಾ ಜೀವಂತ ಇರುತ್ತಾರೆ. ಪ್ರಜ್ಞೆಯ ನೆಲೆಯಲ್ಲಿ ಹೊಸ ಪೀಳಿಗೆಯ ಮಾನಸದಲ್ಲಿ ಅವರು ಸದಾ ಜೀವಿತರೆ.

ಯಾರಾದರೂ ಗಣ್ಯರು ತೀರಿಕೊಂಡಾಗ ಸಾಮಾನ್ಯವಾಗಿ ಇನ್ನು ಇಂಥವರು ಹುಟ್ಟುವುದಿಲ್ಲ, GSSಇವರ ಸಾವಿನಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳುವುದುಂಟು. ತುಂಬಲಾರದ ನಷ್ಟ ಎಂಬ ಮಾತು ಕ್ಲೀಶೆಯಾದರೂ ಜಿ.ಎಸ್.ಎಸ್. ವಿಷಯದಲ್ಲಿ ಇದು ವಾಸ್ತವ. ಅವರಂಥವರು ಯಾರೂ ಇಲ್ಲ ನಿಜ. ಆದರೆ ಅವರಂಥವರೆ ಯಾರಾದರೂ ಯಾಕೆ ಇರಬೇಕು?

ಯಾರನ್ನಾದರೂ ನೆನೆಸುವುದು ಅವರ ಒಳ್ಳೆಯ ಕೆಲಸಗಳಿಂದ. ಜಿ.ಎಸ್.ಎಸ್. ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರು ಕನ್ನಡ ಅಧ್ಯಯನ ಕೇಂದ್ರ ಕಟ್ಟಿದ ಕೆಲಸ, ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಟ್ಟಿದ ಕೆಲಸ, ಕನ್ನಡ ಕಾವ್ಯತತ್ವ ಮತ್ತು ಕಾವ್ಯಮೀಮಾಂಸೆ ಹಾಗೂ ವಿಮರ್ಶೆಯನ್ನು ಕಟ್ಟಿದ ಕೆಲಸ, ಕನ್ನಡದ ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ಹತ್ತು ಹಲವು ವಿಚಾರ ಸಂಕಿರಣಗಳ ಮೂಲಕ ಮರುಓದಿಗೆ ಗುರಿಪಡಿಸಿ ವರ್ತಮಾನಕ್ಕೆ ಪ್ರಸ್ತುತಗೊಳಿಸಿದ ಕೆಲಸ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಇ ನಿರ್ವಹಿಸಿದ ಕೆಲಸ, ಹೊಸ ಪೀಳಿಗೆಯನ್ನು ಕಟ್ಟಿದ ಕೆಲಸ ಹೀಗೆ ಹಲವಾರು ಕೆಲಸಗಳಿಂದ ಜಿ.ಎಸ್.ಎಸ್. ಸದಾ ನಮಗೆಲ್ಲ ಮಾರ್ಗದರ್ಶಿಯೆ, ಮಾದರಿಯೆ ಆಗಿದ್ದಾರೆ.

ಒಬ್ಬ ಮನುಷ್ಯ ಎಷ್ಟು ಕಾಲ ಬದುಕಲು ಸಾಧ್ಯ? 100? 105? 110? ಆನಂತರ ಸಾಯಲೇಬೇಕಲ್ಲವೆ? ಆದರೆ ಆತನಿಂದ ಸಮಾಜಕ್ಕೆ ಎಷ್ಟರಮಟ್ಟಿಗೆ ಒಳಿತು ಆಗಿದೆ ಎಂಬುದೆ ಮುಖ್ಯ. ಅಲ್ಲದೆ ಆತನ ವಿಶಿಷ್ಟ ವಿಚಾರಕ್ರಮ, ಕಾರ್‍ಯಶೀಲತೆಗಳು ನಂತರದ ಪೀಳಿಗೆಯಲ್ಲಿ ಮುಂದುವರಿಯಬೇಕು. ಇಲ್ಲದೆ ಇದ್ದರೆ ಯಾವ ಉನ್ನತ ಪರಂಪರೆಗಳಿಗು ಮಾನವ ಸಮಾಜದಲ್ಲಿ ಜಿವಂತ ಇರಲು ಆಗದು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಹಣತೆ ಹಚ್ಚಿ ಹಲವರ ಕೈಗೆ ಕೊಟ್ಟು ಹೋಗಿದ್ದಾರೆ. ಅವುಗಳು ಬೆಳಗುತ್ತಿವೆ ಮತ್ತು ಮುಂದಿನ ಪೀಳಿಗೆಗೆ ರವಾನೆ ಆಗಬಲ್ಲವು.

ಇಂದಿನ ಕಾಲದಲ್ಲಿ ರಾಮಣ್ಣನನ್ನು ಕಂಡರೆ ಭೀಮಣ್ಣನಿಗೆ ಆಗುವುದಿಲ್ಲ, ಭೀಮಣ್ಣನನ್ನು ಕಂಡರೆ ರಹೀಮಣ್ಣನಿಗೆ ಆಗುವುದಿಲ್ಲ. ಇದು ರಾಜಕಾರಣದಲ್ಲಿ ಮಾತ್ರ ಅಲ್ಲ; ಸಾಹಿತ್ಯದಲ್ಲು ನಿಜ. ಒಂದು ಬೌದ್ಧಿಕ ವಿಚಾರಧಾರೆಗೆ ಸೇರಿದವರು ಇನ್ನೊಂದು ವಿಚಾರಶಾಲೆಗೆ ಸೇರಿದವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ಆದರೆ ಜಿ.ಎಸ್.ಎಸ್. ಹಾಗಲ್ಲ. ಭಿನ್ನ ರೀತಿಯ ವಿಚಾರಧಾರೆಗಳಿಗೆ ಸೇರಿದವರನ್ನೂ ತಮ್ಮೊಂದಿಗೆ ಒಡನಾಡಲು ಬಿಟ್ಟವರು ಮತ್ತು ಬೆಳೆಸಿದವರು. ಬರಗೂರು, ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ, ಕೆ.ವಿ.ನಾರಾಯಣ. ಬಸವರಾಜ ಕಲ್ಗುಡಿ ಹೀಗೆ ಭಿನ್ನ ಆಲೋಚನಾ ಕ್ರಮದ ಜನರನ್ನೆಲ್ಲ ಒಟ್ಟಿಗೆ ಬೆಳೆಸಿದ ಮತ್ತು ಭಿನ್ನವಾಗಿ ಬೆಳೆಯಲು ಬಿಟ್ಟ ಚೈತನ್ಯ ಅವರು. ಅವರು ಕಾವ್ಯ ಮತ್ತು ಇತರ ಸಾಹಿತ್ಯವನ್ನು ಬರೆದದ್ದು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿದ್ದು ಎರಡೂ ಕೂಡ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಎರಡು ಭಿನ್ನ ಅನನ್ಯ ಕೊಡುಗೆಗಳು.

ಜಿ.ಎಸ್.ಎಸ್. ಅವರನ್ನು ಸಮನ್ವಯ ಕವಿ, ಭಾವಗೀತೆಯ ಕವಿ ಎಂದೇ ಬ್ರಾಂಡು ಮಾಡಲಾಗಿದೆ. ಹಾಗೆ ಮಾಡುವಾಗ ಬೇಂದ್ರೆ ಕಾವ್ಯ ಮಾದರಿ ಮತ್ತು ಅಡಿಗರ ಕಾವ್ಯಮಾದರಿಗಳನ್ನು ತನ್ನ ಮಾನದಂಡವನ್ನಾಗಿ ಇಟ್ಟುಕೊಂಡು ಕನ್ನಡ ವಿಮರ್ಶೆಯು ಇವರನ್ನು ಮತ್ತು ಇವರ ಪೂರ್ವಸೂರಿಗಳಾದಂತಹ ಕೆ.ಎಸ್.ನ., ಕಣವಿ, ಪು.ತಿ.ನ, ಮುಂತಾದವರನ್ನು ಕಡಿಮೆ ದರ್ಜೆಯ ಕವಿಗಳು ಎಂದೆ ಬಿಂಬಿಸಿದೆ. ಯಾಕೆ ಹೀಗೆ? ಖಂಡಿತಾ ನಮ್ಮಲ್ಲಿ ಕಾವ್ಯ ರಚನಾ ಕ್ರಮ ಮತ್ತು ಕಾವ್ಯ ರೂಪದ ಬಗೆಗಿನ ಮಿತಿಯುಳ್ಳ ತಿಳುವಳಿಕೆಯೆ ಇದಕ್ಕೆ ಕಾರಣವಾಗಿದೆ. ಏನನ್ನು ಕುರಿತು ಬರೆಯಬೇಕು ಮತ್ತು ಅದನ್ನು ಹೇಗೆ ಬರೆಯಬೇಕು ಎಂಬ ಬಗ್ಗೆ ನಮ್ಮ ಕನ್ನಡ ವಿಮರ್ಶಾ ವಾಜ್ಞಯವು ತನ್ನದೆ ಕೆಲವು ಕಲ್ಪನೆಗಳನ್ನು ಇಟ್ಟುಕೊಂಡಿದೆ. ಅಲ್ಲಿ ಜಿ.ಎಸ್.ಎಸ್. ಮಾದರಿ ಉನ್ನತ ಅಲ್ಲ! ಹಾಡುವ/ಗೇಯ ಕಾವ್ಯ ಉನ್ನತ ಅಲ್ಲ. ಸರಳ ಮತ್ತು ನೇರವಾದ ಕಾವ್ಯ ಉನ್ನತ ಅಲ್ಲ. ಜಿ.ಎಸ್.ಎಸ್. ಅವರನ್ನಷ್ಟೆ ಅಲ್ಲ ಆನಂತರದ ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರನ್ನೂ ಕೆಸೆಟ್ ಕವಿಗಳು ಎಂದೇ ಗೇಲಿ ಮಾಡುತ್ತ ಬರಲಾಗಿದೆ! ಭಿನ್ನ ಮಾದರಿಗಳನ್ನು ಗೌರವಿಸದ ಮತ್ತು ಎಲ್ಲವನ್ನೂ ಶ್ರೇಣೀಕರಣ ಮಾಡುವ ವಿದ್ಯಮಾನ ನಮ್ಮ ಕನ್ನಡ ವಿಮರ್ಶೆಯಲ್ಲಿ ಧಾರಾಳವಾಗಿ ನಡೆದಿದೆ. ಭಾವ ಕಡಿಮೆ ಬುದ್ಧಿ ಮೇಲು ಹೇಗೆ? ಅದಕ್ಕಿರುವ ರೀಚ್ ಅದಕ್ಕೆ, ಇದಕ್ಕಿರುವ ರೀಚ್ ಇದಕ್ಕೆ.

ನವ್ಯ ಸಂವೇದನೆಯ ಏರುಗಾಲದಲ್ಲಿ ರಾಮಚಂದ್ರ ಶರ್ಮ, ಅಡಿಗ ಮೊದಲಾದವರ ಕಾವ್ಯ ಮಾದರಿಯೆ ಉನ್ನತವಾದುದು ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿತ್ತು. ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಡಿಮೆ ದರ್ಜೆಯ ಕಾವ್ಯ ಎಂದೆ ಕಾಣಲಾಗುತ್ತಿತ್ತು. ಗಂಭೀರ ಸಾಹಿತ್ಯ ಮತ್ತು ಜನಪ್ರಿಯ ಸಾಹಿತ್ಯ ಎಂಬ ಸಾಹಿತ್ಯದ ಒಡಕು ಇಲ್ಲಿ ನವ್ಯ ಮತ್ತು ಸುಗಮ (ಭಾವಗೀತಾತ್ಮಕ) ಎಂದು ಒಡೆದಿತ್ತು. ಆದರೆ ಜಿ.ಎಸ್.ಎಸ್. ತಮ್ಮ ನಿರಂತರವಾದ ಭಾವಗೀತೆ, ನಿಯತ ಲಯ, ಗೇಯ ಕವನಗಳ ರಚನೆಯ ಮೂಲಕ ಕನ್ನಡ ಕಾವ್ಯದ ಭಿನ್ನ ಮಾದರಿಯನ್ನು ಸ್ಥಾಪಿಸಲು ಯತ್ನಿಸಿದರು. ಕಾವ್ಯ ಬಂಧ ಮತ್ತು ಆಕಾರದ ಬಗ್ಗೆ ಇದ್ದ ಸ್ಥಾಪಿತ ನಂಬಿಕೆಯನ್ನು ಒಡೆಯಲು ಯತ್ನಿಸಿದರು. ನವೋದಯದ ಆರಂಭದಲ್ಲಿ ಬಿ.ಎಂ.ಶ್ರೀ. ಯಾವ ಮಾದರಿಯನ್ನು ಮುಂದಿಡಲು ಯತ್ನಿಸಿದರೋ ಅಂಥಹ ಮಾದರಿಯನ್ನು ನವ್ಯದ ನಂತರ ಜಿ.ಎಸ್.ಎಸ್. ಕೂಡ ಮುಂದಿಡಲು ಯತ್ನಿಸಿದರು. ಇದರಿಂದ ಕನ್ನಡ ಕಾವ್ಯಕ್ಕೆ ನಷ್ಟವೇನೂ ಆಗಲಿಲ್ಲ. ಒಳಿತೇ ಆಯಿತು. ಸಾಮಾನ್ಯ ಮತ್ತು ಗಂಭೀರ ಎಂಬ ಕಾವ್ಯನೆಲೆಗಳ ನಡುವಣ ಬ್ರಿಜ್ ಒಂದು ತಾಯಾರಾಗಲು ಸಾಧ್ಯವಾಯಿತು. ಹೀಗಾಗಿ ಕಾವ್ಯ ಮತ್ತು ಗಾಯನಗಳು ಬೆರೆತ ಒಂದು ಮಾದರಿಯೆ ಇಂದು ಜೋರಾಗಿ ಸ್ಥಾಪಿತ ಆಗಿದೆ.

ಕನ್ನಡ ಸಾಹಿತ್ಯವನ್ನು ಬೋಧಿಸುವ ಪ್ರಾಧ್ಯಾಪಕರಾಗಿದ್ದ ಜಿ.ಎಸ್.ಎಸ್. ಸಾಹಿತ್ಯದ ಎಲ್ಲ ಕವಲುಗಳನ್ನೂ ಸಮಾನವಾಗಿ ಪ್ರೀತಿಸುತ್ತಿದ್ದವರು. ಹಾಗಾಗಿಯೆ ಅವರಿಗೆ ಎಲ್ಲ ಪ್ರಾಚೀನ ಸಾಹಿತ್ಯದ ಒಳ್ಳೆಯ ಭಾಗಗಳನ್ನು ಸಲಹುವ ಹಾಗೆಯೆ ಆಧುನಿಕ ಸಾಹಿತ್ಯದ ಎಲ್ಲ ಮಾದರಿಗಳ ಬಗೆಗೂ ಪ್ರೀತಿ ಇತ್ತು. ಇವರ ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಮಾತು ಸಾಹಿತ್ಯದ ಭಿನ್ನ ಮಾದರಿಗಳಿಗು ಅನ್ವಯಿಸುವಂಥದ್ದು. ಎಲ್ಲ ಮಾದರಿಗಳನ್ನೂ ಇವರು ಪ್ರೀತಿಯಿಂದ ಕಾಣುತ್ತಿದ್ದ ಕಾರಣಕ್ಕೆ ಇವರು ಭಿನ್ನ ಮಾದರಿಗಳನ್ನು ಬೆಳೆಸಲು ಸಾಧ್ಯ ಆಯಿತು. ಹಾಗಾಗಿಯೆ ಇವರ ಕಾವ್ಯ ಕೂಡ ಒಂದು ರೀತಿಯುಲ್ಲಿ ಪ್ರಯೋಗಶೀಲ ಆಯಿತು. ನವ್ಯ, ನವೋದಯ, ಬಂಡಾಯ ಎಲ್ಲ ರೀತಿಯ ಸಂವೇದನೆಗಳ ಕಾವ್ಯವನ್ನೂ ಇವರು ಪ್ರಯೋಗ ಮಾಡಿದ್ದಾರೆ.

ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ

ನೂರಾರು ಭಾವದ ಬಾವಿ: ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ.

ಎನ್ನುವ ಜಿ.ಎಸ್.ಎಸ್. ಕಾವ್ಯದ ಬಂಧ ಮತ್ತು ಆಕೃತಿಗಳ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ಈ ಬಗ್ಗೆ ಬಹುವಾಗಿ ತಲೆ ಕೆಡಿಸಿಕೊಂಡಿದ್ದ ನವ್ಯದ ರಾಚನಿಕ ಮೀಮಾಂಸೆಯ ವ್ಯಸನವನ್ನು ಇವರು ನವಿರಾಗಿಯೆ ನಿರಾಕರಿಸಿದವರು. ನಿರಂತರ ತಮ್ಮ ನವಿರು ಕಾವ್ಯದ, ಚೆಲುವು ಮತ್ತು ಒಲವುಗಳ ಕಾವ್ಯದ, ಮೆಲುದನಿಯ ವೈಚಾರಿಕ ಕಾವ್ಯದ ರಚನೆಯ ಮೂಲಕವೆ ಅಂಥ ವ್ಯಸನಕ್ಕೆ ತಕ್ಕ ಉತ್ತರವನ್ನು ಕೊಟ್ಟರು. ಈ ದೃಷ್ಟಿಯಿಂದ ನವ್ಯಕಾವ್ಯ ಮಾದರಿಯ ಬಗೆಗೆ ಪ್ರೀತಿ ಮತ್ತು ಗೌರವ ಇದ್ದೂ ಆ ಮಾದರಿಯು ನನ್ನ ನೆಚ್ಚಿನ ಮಾದರಿ ಅಲ್ಲ ಎಂಬ ನಿರಾಕರಣೆ ಇವರ ಕಾವ್ಯದಲ್ಲೆ ಅಂತರ್ಗತ ಆಗಿರುವುದನ್ನು ಕಾಣಬಹುದು. ಅಂತಹ ಮಾದರಿಯ ಕಾವ್ಯಕ್ಕೆ ತೋರಿದ ದೊಡ್ಡ ಪ್ರಮಾಣದ ಪ್ರತಿರೋಧ ಎಂಬಂತೆಯೂ ಅವರ ಕಾವ್ಯವನ್ನು ನಾವು ಅಭ್ಯಾಸ ಮಾಡಲು ಸಾಧ್ಯವಿದೆ.

ನವಿರಾದ ಭಾವ ಮತ್ತು ಪ್ರಸನ್ನತೆ ಮಾತ್ರವೆ ಜಿ.ಎಸ್.ಎಸ್. ಅವರಲ್ಲಿ ಇದೆ ಎಂದೂ ಅವರನ್ನು ವ್ಯಾಖ್ಯಾನಿಸಲಾಗಿದೆ. ಆದರೆ ಅವರಲ್ಲಿ ಭಾವದಷ್ಟೆ ತೀವ್ರವಾಗಿ (ನೇರವಾಗಿ ಮತ್ತು ಸರಳವಾಗಿ) ವೈಚಾರಿಕತೆಯೂ ಇದೆ. ಆದರೆ ನಮ್ಮ ಕನ್ನಡ ವಿಮರ್ಶೆ ಅದನ್ನು ಗಂಭೀರವಾಗಿ ಗುರ್ತಿಸಿಯೆ ಇಲ್ಲ! ಭಾವ ಮತ್ತು ಚೆಲುವಿನ ನಿರೂಪಣೆ ಹಾಗೂ ವೈಚಾರಿಕತೆಗಳು ಒಟ್ಟಿಗೇ ಇರಲಾರವು ಎಂಬ ವಿಮರ್ಶಾ ಮಿಥ್ ಒಂದು ನಮ್ಮಲ್ಲಿ ಸೃಷ್ಠಿ ಆಗಿದೆ. ಆದರೆ ಜಿ.ಎಸ್.ಎಸ್. ಈ ಮಿಥ್‌ಅನ್ನು ಒಡೆಯುವಂತೆ ಬರೆದಿದ್ದಾರೆ. ಭಾವ ಮಾತ್ರವೆ ನಮಗೆ ಏಕೆ ಎದ್ದು ಕಾಣುತ್ತದೆ ಎಂದರೆ ಅವರ ಕವಿತೆಗಳನ್ನು ಕಣ್ಣೋದಿಗೆ ಗುರಿ ಮಾಡಿರುವುದಕ್ಕಿಂತ ಕಿವಿಯ ಕೇಳಿಕೆಗೆ ಮಾತ್ರ ನಾವು ಹೆಚ್ಚು ಗುರಿಮಾಡಿದ್ದೇವೆ. ಸಂಗೀತ ಮತ್ತು ನಾದಗಳಲ್ಲಿ ಅರ್ಥ ಗೌಣ ಆಗುವುದು ಸಹಜ ತಾನೆ. ಹಾಡು ಕೇಳುವಾಗ ನಾವು ಭಾವದಲ್ಲಿ ತೇಲುತ್ತೇವೆ, ನಾದವನ್ನು ಗುನುಗುತ್ತೇವೆ, ನಿಯತಲಯವನ್ನು ಆನಂದಿಸುತ್ತೇವೆ. ಆದರೆ ಚಿಂತಿಸುವುದಿಲ್ಲ. ಹಾಡಿನ ಕೇಳಿಕೆಗೆ ಇರುವ ಸಾಧ್ಯತೆ ಇದು. ಇದನ್ನೆ ಮಾಡುತ್ತ ಜಿ.ಎಸ್.ಎಸ್. ಅವರಲ್ಲಿ ವೈಚಾರಿಕತೆ ಇಲ್ಲ. ಬರಿ ಭಾವುಕತೆ ಇದೆ ಎಂದರೆ ಹೇಗೆ? ಆನಂದಿಸಿದರೆ ವೈಚಾರಿಕತೆ ಕಾಣುವುದಿಲ್ಲ; ಚಿಂತಿಸಿದರೆ ಕಾಣುತ್ತದೆ.

ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ದುಖ, ತಲ್ಲಣ, ಸಮಸ್ಯೆ ಕಾಣುವುದೆ ಇಲ್ಲ; ಅವರಿಗೆ ಚೆಲುವು ಮಾತ್ರ ಕಾಣುತ್ತದೆ ಎಂಬಂತೆಯು ಅವರನ್ನು ವ್ಯಾಖ್ಯಾನಿಸಲಾಗಿದೆ. ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ಕಾಣುವುದಿಲ್ಲವೊ ಅಥವಾ ನಮಗೆ ಅವರ ಕಾವ್ಯದಲ್ಲಿ ಕಾಣುವುದಿಲ್ಲವೊ? ಜಿ.ಎಸ್.ಎಸ್. ನಿಜವಾದ ಅರ್ಥದಲ್ಲಿ ವೈಚಾರಿಕತೆ ಮತ್ತು ಚೆಲುವು-ಒಲವು ಒಟ್ಟಿಗೆ ಇರಬಲ್ಲುವು ಎಂದು ತೋರಿಸಿದವರು. ಅಷ್ಟೆ ಅಲ್ಲ ಪಾಂಡಿತ್ಯ ಮತ್ತು ಕವಿತ್ವ ಎರಡೂ ಒಟ್ಟಿಗೆ ಇರಬಲ್ಲುವು ಎಂದು ಬಾಳಿ ತೋರಿಕೊಟ್ಟವರು. ಬರೆದು ತೋರಿ ಕೊಟ್ಟವರು.

ರಾಷ್ಟ್ರಕವಿ, ರಾಷ್ಟ್ರಕವಿ ಎಂದು ಕರೆದು ಜಿ.ಎಸ್.ಎಸ್. ಅವರನ್ನು ಕೇವಲ ಕವಿ ಎಂಬಂತೆ ನಮ್ಮಲ್ಲಿ ಬಿಂಬಿಸಲಾಗಿದೆ. (ರಾಷ್ಟ್ರಕವಿ ಎಂಬುದು ಒಳ್ಳೆಯ ಲೇಖಕ ಎಂಬ ಒಂದು ಬಿರುದು ಅಷ್ಟೆ.) ಅಷ್ಟೆ ಅಲ್ಲ ಭಾವಗೀತೆಯ ಕವಿ, ಸುಗಮ ಗೀತೆಯ ಕವಿ ಎಂದೆ ಬಿಂಬಿಸಲಾಗಿದೆ. ಅವರು ಭಾವಗೀತೆಗಳನ್ನೂ/ಸುಗಮಗೀತೆಗಳನ್ನೂ ಬರೆದಿದ್ದಾರೆ. ಹಾಗೆಯೆ ಎಲ್ಲ ರೀತಿಯ ಆಧುನಿಕ ಸಂವೇದನೆಯ ಕವಿತೆಗಳನ್ನೂ ಪ್ರಯೋಗ ಮಾಡಿದ್ದಾರೆ. ಆದರೆ ಅವರು ಬರಿದೆ ಕವಿಯಲ್ಲ. ಕನ್ನಡ ವಿಮರ್ಶೆ ಮತ್ತು ಮೀಮಾಂಸೆಗೆ ಕೂಡ ಅವರು ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸೌಂದರ್‍ಯ ಮೀಮಾಂಸೆ, ವಿಮರ್ಶೆಯ ಪೂರ್‍ವ ಪಶ್ಚಿಮ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳು ಕನ್ನಡ ತತ್ವಶಾಸ್ತ್ರ, ಮೀಮಾಂಸೆ ಮತ್ತು ವಿಮರ್ಶೆಯನ್ನು ಸಂಸ್ಕೃತದ ನೆರಳಿನಿಂದ ಮತ್ತು ಇಂಗ್ಲಿಷಿನ ನೆರಳಿನಿಂದ ನೋಡುವ ಕೃತಿಗಳೆ ಆಗಿವೆ. ಆದರೆ ಅವರ ಕನ್ನಡ ಕಾವ್ಯತತ್ವ ಚಿಂತನೆ ಆ ರೀತಿಯ ಕೃತಿಯಲ್ಲ. ತೀ.ನಂ.ಶ್ರೀ. ಹಾಕಿಕೊಟ್ಟ ಭಾರತೀಯ ಕಾವ್ಯಮೀಮಾಂಸೆ ಎಂಬ ಸಂಸ್ಕೃತವನ್ನೆ ಭಾರತೀಯ ಎಂದು ಕರೆಯುವ ಚಿಂತನಾಕ್ರಮವನ್ನು ಮೀರಿದ ಕೃತಿಯಿದು. ಕನ್ನಡದ್ದೆ ಕವಿಗಳು ಕನ್ನಡದ್ದೆ ಕಾವ್ಯತತ್ವ ಮತ್ತು ಮೀಮಾಂಸೆಯನ್ನು ಹೇಗೆ ರಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಹುಡುಕಾಟದ ಕೃತಿಯಿದು. ಹೀಗಾಗಿ ಕನ್ನಡದಲ್ಲಿ ಕೆ.ಕೃಷ್ಣಮೂರ್ತಿ, ಎಂ.ವಿ.ಸೀತಾರಾಮಯ್ಯ ಮೊದಲಾದವರ ಪ್ರಯತ್ನಗಳನ್ನು ಮುಂದುವರಿಸಿ ಕನ್ನಡದ್ದೆ ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳುವಲ್ಲಿ ಮೊದಲು ಮಾಡಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು. ಕನ್ನಡಕ್ಕೆ ಇಂಗ್ಲಿಷ್ ಮತ್ತು ಸಂಸ್ಕೃತಗಳ ಹೊರತಾಗಿಯೂ ತನ್ನದೆ ಅನನ್ಯತೆ ಇದೆ ಎಂದು ಗುರ್ತಿಸಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು.

ಇವರು ಏರ್ಪಡಿಸಿದ ವಿಚಾರಸಂಕಿರಣಗಳು ಮತ್ತು (ಸಾಹಿತ್ಯ ವಾರ್ಷಿಕವನ್ನೂ ಒಳಗೊಂಡಂತೆ) ಇವರು ಮಾಡಿದ ಪ್ರಕಟಣೆಗಳು ಕನ್ನಡ ಸಾಹಿತ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟವು. ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ತಮ್ಮ ಗುರುಗಳಾದ ಕುವೆಂಪು, ತ.ಸು.ಶಾಮರಾಯ ಮೊದಲಾದವರು ಹೇಗೆ ತಮ್ಮ ಮುಂದಿನ ಪೀಳಿಗೆಗೆ ರವಾನಿಸಿದರೋ ಹಾಗೆ ಜಿ.ಎಸ್.ಎಸ್. ಕೂಡ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಮರುಮೌಲ್ಯಮಾಪನ ಮತ್ತು ಮರು ಓದುಗಳ ಮೂಲಕ ತಮ್ಮ ಮುಂದಿನ (ಶಿಷ್ಯ-ಪ್ರಶಿಷ್ಯ) ಪೀಳಿಗೆಗೂ ರವಾನಿಸಿದರು. ಪರಂಪರೆಯೊಂದಿಗೆ ಜಗಳ ಹೂಡುವ ಮತ್ತು ಅಲ್ಲಿನ ಉನ್ನತವಾದುದನ್ನು ಉಳಿಸಿಕೊಳ್ಳುವ ಪ್ರಜ್ಞೆಯನ್ನು ಇವರು ಸದಾ ತೋರಿದರು. ಸಾಮಾಜಿಕ ಮೌಲ್ಯ, ಅಲಕ್ಷಿತ ನೆಲೆ, ಅನ್ಯಜ್ಞಾನ ಶಿಸ್ತು ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯವನ್ನು ನೋಡುವ ಹಲವು ಹೊಸ ಓದುಗಳನ್ನು ನಡೆಸಿದರು. ಅಷ್ಟೆ ಅಲ್ಲ ವರ್ತಮಾನದ ಸಾಹಿತ್ಯದ ಸತ್ವವನ್ನು ಕೂಡ ಪರಿಶೀಲನೆಗೆ ಗುರಿಪಡಿಸಿದರು. ಇವರು ಸಾಹಿತ್ಯ ಅಕಾಡೆಮಿಯ ಅದ್ಯಕ್ಷರಾಗಿದ್ದಾಗ ಮಾಡಿದ ಸಾಲುದೀಪಗಳು ಪ್ರಕಟಣೆ ಮತ್ತು ಇತರ ವಿಚಾರಸಂಕಿರಣಗಳ ಪ್ರಕಟಣೆಗಳು ಕೂಡ ಇಲ್ಲಿ ಗಮನಾರ್ಹ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವ ಕೆಲಸವನ್ನು ಇವರು ಮಾಡುತ್ತಿದ್ದರೋ ಅದಕ್ಕೆ ಇಲ್ಲಿ ಇನ್ನಷ್ಟು ವಿಸ್ತರಣೆ ಸಿಕ್ಕಂತೆ ಆಯಿತು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಉಪಯುಕ್ತವಾದ ಸಾಹಿತ್ಯಕ ಬಾಳನ್ನು, ತುಂಬು ಬಾಳನ್ನು ಬಾಳಿದವರು.

ಕನ್ನಡ ವಿಮರ್ಶೆಯ ಲೋಕವೆ ಇತ್ತಂಡವಾಗಿ 60 ರ ದಶಕದಿಂದ 80 ರ ದಶಕದವರೆಗೆ ಕುವೆಂಪುವನ್ನು ಎರಡು ಅತಿಗಳಲ್ಲಿ ನೋಡುತ್ತಿತ್ತು. ಒಂದೊ ಕುವೆಂಪು ಋಷಿ ಇಲ್ಲವೆ ದೇವರು ಎಂದು ಒಂದು ತಂಡ ವಾದಿಸುತ್ತಿದ್ದರೆ ಇನ್ನೊಂದು ತಂಡkuvempu ಕುವೆಂಪು ಕವಿಯೇ ಅಲ್ಲ ಎಂದು ವಾದಿಸುತ್ತಿತ್ತು. ಆದರೆ ಜಿ.ಎಸ್.ಎಸ್. ಕುವೆಂಪು ತಮ್ಮ ಮೆಚ್ಚಿನ ಗುರು ಮತ್ತು ಮಾರ್ಗದರ್ಶಕರೆ ಆಗಿದ್ದರೂ ಅವರ ಸಾಹಿತ್ಯದ ನಿಜವಾದ ಸತ್ವ ಏನು ಎಂಬುದನ್ನು ಕನ್ನಡದ ಅಂದಿನ ಎಲ್ಲ ಧಾರೆಗಳಿಗೆ ಸೇರಿದ ಚಿಂತಕರಿಂದಲೂ ಪರಿಶೀಲನೆಗೆ ಒಳಪಡಿಸಿದ್ದರು. ಕುವೆಂಪು ಸಾಹಿತ್ಯದ ಮೇಲೆ ಬೆಂಗಳೂರಿನ ಸೆನೆಟ್ ಹಾಲಿನಲ್ಲಿ ವಿಚಾರಸಂಕಿರಣ ನಡೆಸಿ ತೇಜಸ್ವಿ, ಡಿ.ಆರ್.ನಾಗರಾಜ, ಬಿ.ಕೃಷ್ಣಪ್ಪ, ಮೊದಲಾದವರಿಂದ ಕುವೆಂಪು ಸಾಹಿತ್ಯವನ್ನು ವಸ್ತುನಿಷ್ಟವಾಗಿ ಪರಿಶೀಲಿಸಿದ್ದರು. ಆನಂತರ ಅಲ್ಲಿನ ಭಾಷಣಗಳನ್ನೆಲ್ಲ ಸಂಕಲಿಸಿ “ಶ್ರೀ ಕುವೆಂಪು” ಎಂಬ ಪುಸ್ತಕವನ್ನೂ ಪ್ರಕಟಿಸಿದರು. ಇಂತಹ ಅನೇಕ ವಿಚಾರ ಸಂಕಿರಣಗಳನ್ನು ನಡೆಸಿ ಜಿ.ಎಸ್.ಎಸ್. ಕನ್ನಡ ಸಾಹಿತ್ಯ ಪರಂಪರೆಯನ್ನು ಸೋಸಿ ಕಟ್ಟಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಚಿಂತಕರ ಒಂದು ದೊಡ್ಡ ದಂಡನ್ನೆ ತಯಾರು ಮಾಡಿದ್ದಾರೆ. ತಾವು ಕನ್ನಡ ಅಧ್ಯಯನ ಕೇಂದ್ರದಲ್ಲಿ ಇದ್ದಾಗ ಸಾಹಿತ್ಯ ವಾರ್ಷಿಕ ಎಂಬ ಯೋಜನೆಯನ್ನು ಹಾಕಿಕೊಂಡು ಆಯಾ ವರ್ಷ ಬಂದ ಎಲ್ಲ ಬಗೆಯ ಗ್ರಂಥಗಳನ್ನೂ ಪರಿಚಯಿಸುವ ಮತ್ತು ವಿಮರ್ಶಿಸುವ ಕೆಲಸವನ್ನೂ ಮಾಡಿದ್ದಾರೆ. ಇಂತಹ ಹತ್ತಾರು ಯೋಜನೆ ಮತ್ತು ಗೋಷ್ಠಿಗಳಿಂದ ಕನ್ನಡ ಸಾಹಿತ್ಯವನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ ಒಂದು ಬೃಹತ್ ಆಲದ ಮರದಂತೆ ಬೆಳೆಯವಲ್ಲಿ, ಒಂದು ಸಾಹಿತ್ಯಕ ಚಳುವಳಿ ಎಂಬಂತೆ ಬೆಳೆಯವಲ್ಲಿ ಇವರ ಕೊಡುಗೆ ಸಾಕಷ್ಟು ಇದೆ. ತಮ್ಮತನವನ್ನು ಬಿಟ್ಟುಕೊಡದೆ ಒಟ್ಟಿಗೆ ಇರಬಹುದಾದ ಕನ್ನಡದ ಹಲವಾರು ವಿಮರ್ಶಕರನ್ನು ಬೆಳೆಸಿದ್ದರಿಂದ 80 ರ ದಶಕದ ನಂತರ ಕನ್ನಡ ವಿಮರ್ಶೆಗೆ ಒಂದು ಹೊಸತನ ಕೂಡ ಸಾಧ್ಯವಾಗಿದೆ. ಈ ನೆಲೆಯಲ್ಲಿಯೂ ಜಿ.ಎಸ್.ಎಸ್. ಸಾಧನೆ ಗಮನಾರ್ಹ ಮತ್ತು ಅನುಕರಣೀಯ.

ಸಾಹಿತ್ಯವೆ ಆಗಲಿ, ಸಾಹಿತ್ಯ ಚಿಂತಕರ ಬಳಗವೆ ಆಗಲಿ, ಶಿಷ್ಯ ಬಳಗವೆ ಆಗಲಿ, ಸಮಾಜವೆ ಆಗಲಿ ಎಲ್ಲೆಡೆಯು ಜಾತ್ಯತೀತವಾದಿ ಮತ್ತು ಗುಣಗ್ರಾಹಿ ಆಗಿ ಜಿ.ಎಸ್.ಎಸ್. ವರ್ತಿಸಿದ್ದಾರೆ ಮತ್ತು ಅಂತಹ ಮೌಲ್ಯವನ್ನೆ ಬಾಳಿದ್ದಾರೆ. ಈ ದೃಷ್ಟಿಯಿಂದ ಅವರು ನಮಗೆಲ್ಲ ಮಾದರಿ. (ಎಲ್ಲ ಮನುಷ್ಯರಿಗು ಇರುವ ಹಲವು ದೌರ್ಬಲ್ಯಗಳು ಇವರಿಗು ಇದ್ದುವು ಎಂಬುದು ಕೂಡ ನಿಜ.) ಇವರೇನು ಸಂತರಲ್ಲ, ದೇವರಲ್ಲ, ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ. ಒಬ್ಬ ಸಾಮಾನ್ಯ ಶಾಲಾ ಮಾಸ್ತರರ ಮಗನಾಗಿ ಶಿಕಾರಿಪುರದಂತಹ ಒಂದು ಊರಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ಜಿ.ಎಸ್.ಎಸ್. ಇಷ್ಟೆಲ್ಲ ಸಾಧಿಸಿದ್ದಾರೆ. ಒಬ್ಬ ಮನುಷ್ಯನಿಂದ ಇನ್ನೆಷ್ಟನ್ನು ನಿರೀಕ್ಷಿಸಲು ಸಾಧ್ಯ?


ಪೂರಕ ಓದಿಗೆ ಜಿ.ಎಸ್‌. ಶಿವರುದ್ರಪ್ಪನವರ ಕೆಲವು ಕವಿತೆಗಳು:

ಗಾಂಧಿ ಜಯಂತಿ ಕಥಾ ಸ್ಪರ್ಧೆ -2013 : ತೀರ್ಪುಗಾರರ ಟಿಪ್ಪಣಿ


– ಡಾ.ರಾಮಲಿಂಗಪ್ಪ ಟಿ. ಬೇಗೂರು


 

ಸ್ಪರ್ಧೆಗೆ ಬಂದಿದ್ದ 50 ಕ್ಕು ಹೆಚ್ಚು ಕಥೆಗಳನ್ನು ಮೊದಲ ಸುತ್ತಿನಲ್ಲಿ ಕೇರಿ, ತೂರಿ ಅಂತಿಮವಾಗಿ 39 ಕಥೆಗಳನ್ನು ಪರಿಶೀಲನೆಗೆ ನೀಡಿದ್ದರು. ಇವುಗಳಲ್ಲಿ ಒಂದೆ ಓದಿನಲ್ಲೆ ಸಾಧಾರಣ ಎನಿಸಿದ್ದರಿಂದ 22 ಕಥೆಗಳನ್ನು ಪಕ್ಕಕ್ಕಿಡುವುದು ಸುಲಭವಾಯಿತು. ಆದರೆ ಉಳಿದ ಹದಿನೇಳು ಕಥೆಗಳು ಸರಿಸಮಾ ಪೈಪೋಟಿಯ ಕಥೆಗಳಾಗಿದ್ದವು. ಮಿತ್ರ ರವಿ ಕೃಷ್ಣಾರೆಡ್ಡಿ ನನ್ನ ಕೋರಿಕೆಯ ಮೇರೆಗೆ ಕಥೆಗಾರರ ಹೆಸರುಗಳನ್ನು ತೆಗೆದು ಬರಿ ಕಥೆಗಳನ್ನು ಮಾತ್ರ ನೀಡಿದ್ದರು. ಇದರಿಂದ ಮಿತ್ರರ ಕಥೆಗಳು ಇಲ್ಲವೆ ಪ್ರಖ್ಯಾತರ ಕಥೆಗಳು ಎಂಬ ಮುಲಾಜಿಲ್ಲದೆ ನಿರುಮ್ಮಳವಾಗಿ ಕಥೆಗಳನ್ನು ಓದಲು ಸಾಧ್ಯವಾಯಿತು. ಅಂತಿಮವಾಗಿ ಆಯ್ಕೆಯಾದ ೫ ಕಥೆಗಳನ್ನು ನಂತರ ಯಾರು ಬರೆದಿದ್ದಾರೆ ಎಂದು ನೋಡಿದಾಗ ಅವರೆಲ್ಲ ಹೊಸಬರೆ ಆಗಿದ್ದರು. ಬರೆದವರಿಗಿಂತ ಕಥೆಯೇ ಮುಖ್ಯ ಅಲ್ಲವೆ?

ಬಹುಮಾನ ಪಡೆಯದ ಕಥೆಗಳೆಲ್ಲ ಒಳ್ಳೆಯವಲ್ಲ ಎಂದಲ್ಲ. ಅಷ್ಟೆ ಅಲ್ಲ ಯಾರಾದರೂ ಒಟ್ಟಿಗೇ ಇಲ್ಲಿನ ಐದೂ ಕಥೆಗಳನ್ನು ಓದಿದರೆ ಅರೆ! katha-sprade-2013ಸಮಾಧಾನಕರ ಬಹುಮಾನ ಕೊಟ್ಟಿರುವ ಕಥೆಗೆ ಮೊದಲ ಬಹುಮಾನವನ್ನೆ ಕೊಡಬಹುದಿತ್ತಲ್ಲ, ಮೊದಲ ಬಹುಮಾನದ ಕಥೆಗೆ ಸಮಾಧಾನಿತ ಬಹುಮಾನ ನೀಡಿದ್ದರೆ ಸಾಕಿತ್ತಲ್ಲ ಅನ್ನಿಸಬಹುದು. ನಾವೇನೇ ವಸ್ತುನಿಷ್ಠವಾದ ಓದು ಎಂದು ಹೇಳಿದರೂ ನಮ್ಮ ಓದುಗಳೆಲ್ಲ ವ್ಯಕ್ತಿನಿಷ್ಠವಾದ ಓದುಗಳೇ ಅಲ್ಲವೆ? ಹಾಗಾಗಿ ಒಂದು ಓದಿಗೆ ಇಲ್ಲಿನ ಈ ಕಥೆಗಳು ಬಹುಮಾನ ಪಡೆದಿವೆ. ಇನ್ನೊಂದು ಓದಿಗೆ ಬೇರೆಯದೆ ಕಥೆಗಳು ಬಹುಮಾನಕ್ಕೆ ಅರ್ಹ ಎನ್ನಿಸಬಹುದು. ತೀರ್ಪುಗಾರರ ಸಂವೇದನೆ, ದೃಷ್ಟಿಕೋನಗಳೆ ಇಂಥ ಕಡೆ ಪ್ರಧಾನ ಎನ್ನುವುದು ನಮಗೆಲ್ಲ ತಿಳಿದ ಸಂಗತಿಯೆ ಅಲ್ಲವೆ?

ಮೊದಲು, ಎರಡನೆ, ಮೂರನೆ ಹೀಗೆ ಕಥೆಗಳನ್ನು ಶ್ರೇಣಿ ಮಾಡಿ ಬಹುಮಾನ ನೀಡುವುದನ್ನು ನಾವು ಒಪ್ಪಬೇಕಿಲ್ಲ; ಹತ್ತು ಒಳ್ಳೆಯ, ಸಶಕ್ತ ಕಥೆಗಳನ್ನು ಓದುವಾಗ ಅವುಗಳಲ್ಲಿ ಒಂದು ಕಥೆಯನ್ನು ಇದು ಶ್ರೇಷ್ಠ ಎಂದೂ ಮತ್ತೊಂದನ್ನು ಕಡಿಮೆ ಎಂದೂ ಶ್ರೇಣಿ ಮಾಡುವ ಸ್ಪರ್ಧಾ ಪರಿಯನ್ನು ನಾವು ಸರಿಯಾದದ್ದು ಎಂದೇನೂ ಭಾವಿಸಬೇಕಿಲ್ಲ. ಒಂದೊಂದು ಕಥೆಗಳೂ ತಮ್ಮ ವಸ್ತು ಸಾಮಗ್ರಿ, ನಿರೂಪಣಾ ಕ್ರಮ ಇತ್ಯಾದಿಗಳಿಂದಾಗಿ ಭಿನ್ನ ಆಗಿ ಇರುತ್ತವೆ. ಹಾಗಿರುವಾಗ ಶ್ರೇಣೀಕರಣ ಮಾಡಿ ಇದು ಮೊದಲ ಬಹುಮಾನಕ್ಕೆ ಅರ್ಹ, ಇದು ಎರಡನೆ ಬಹುಮಾನಕ್ಕೆ ತಕ್ಕುದು ಎಂದು ಸಾಹಿತ್ಯ ಕಥನವನ್ನು ಸ್ಥಾನೀಕರಣ ಮಾಡುವುದು ಅಷ್ಟು ಒಳ್ಳೆಯದೇನೂ ಅಲ್ಲ. ಇಂಥ ಸಮಸ್ಯೆ ಎಲ್ಲ ಸ್ಪರ್ಧೆಗಳಲ್ಲು ಎದುರಾಗುತ್ತದೆ. ಇಲ್ಲೂ ಎದುರಾಗಿತ್ತು. ಆದಾಗ್ಯೂ ಸ್ಪರ್ಧೆಯ ನಿಯಮಗಳನ್ನು ಪಾಲಿಸಿ ಇಲ್ಲಿ ಬಹುಮಾನ ನೀಡಲಾಗಿದೆ.

ಸ್ಪರ್ಧೆಗೆ ಬಂದಿದ್ದ ಮಹಾಂತೇಶ ನವಲಕಲ್ ಅವರ ಡಿಪ್ರೆಶನ್ ಕಥೆ, ಹನುಮಂತ ಹಾಲಿಗೇರಿ ಅವರ ಮಠದ ಹೋರಿ, ಎಸ್.ಬಿ.ಜೋಗುರ ಅವರ ಹೊತ್ತಿಗೊದಗಿದ ಮಾತು, ಕೆ.ಈಶ್ವರ್ ಭಟ್ ಅವರ ಪುಷ್ಪ ಕತೆ, ವೀರನ್ನಾರಾಯಣ ಅವರ ಗುಲಾಬಿ ಚೀಟಿ, ಆನಂದ ಕುಂಚನೂರ ಅವರ ಕೃಷ್ಣ ತುಳಸಿ, ಸೈಫ್ ಜಾನ್ಸ್ ಅವರ ಅಯ್ಯಕ್ಕ, ಬಸು ಬೇವಿನಗಿಡದ ಅವರ ಹಳೇ ಟ್ರಂಕು, ಶಿರೋಳ ಸೋಮಯಾಜಿ ಅವರ ಪದ್ದಕ್ಕನ ಅರಮನೆ, ಶ್ರೀನಾಥ ರಾಯಸಂ ಅವರ ಉಮಿಯೊಳಗಿನ ಬೆಂಕಿ, ಎಚ್.ಎನ್. ಅಪರ್ಣಾ ಅವರ ಹುಡುಕಾಟ ಈ ಎಲ್ಲ ಕಥೆಗಳೂ ತಮ್ಮದೆ ವಿಶಿಷ್ಟತೆ ಇರುವ ಕಥೆಗಳು. ಶಕ್ತ ಕಥೆಗಳು. ಇವುಗಳಲ್ಲಿ ಕೆಲವು ಕಥೆಗಳು ವಿಚಾರವೆ ಮುನ್ನೆಲೆಗೆ ಬಂದು ಕಥನ ಹಿನ್ನೆಲೆಗೆ ಸರಿದಿರುವುದರಿಂದ, ಕೆಲವೆಡೆ ಕಥನ ಲಂಬಿತ ಆಗಿದೆ ಎನ್ನಿಸುವುದರಿಂದ, ಕೆಲವು ಕಥೆಗಳು ಬಂಧ ಮತ್ತು ವಿಚಾರ ಹಾಗೂ ನಿರೂಪಣೆ ಮೂರೂ ನೆಲೆಗಳಲ್ಲಿ ಅಂತಹ ಹೊಸತೇನನ್ನೂ ಅಭಿವ್ಯಕ್ತಿಸುತ್ತಿಲ್ಲ ಎನ್ನಿಸುವುದರಿಂದ ಈ ಕಥೆಗಳಿಗೆ ಬಹುಮಾನ ಕೊಟ್ಟಿಲ್ಲ ಅಷ್ಟೆ. ಆದರೆ ಈ ಎಲ್ಲ ಕಥೆಗಳೂ ತಮ್ಮದೆ ರೀತಿಯಲ್ಲಿ ಕನ್ನಡ ಕಥನ ಪರಂಪರೆಯಲ್ಲಿ ಸಲ್ಲುತ್ತವೆ; ಆದ್ದರಿಂದ ಇವೆಲ್ಲವೂ ನನ್ನ ಪ್ರಕಾರ ಪುರಸ್ಕಾರಕ್ಕೆ ಅರ್ಹ ಕಥೆಗಳೇ. ರವಿ ಕೃಷ್ಣಾರೆಡ್ಡಿ ಅವರು ಈ ಕಥೆಗಳಿಗೆ ಬಹುಮಾನ ಬರದಿದ್ದರೂ ಇವುಗಳನ್ನು ಕ್ರಮವಾಗಿ ತಮ್ಮ “ವರ್ತಮಾನ”ದಲ್ಲಿ ಪ್ರಕಟಿಸಿದರೆ ಓದುಗರಿಗೆ ತೌಲನಿಕವಾಗಿ ತಮ್ಮದೇ ಓದುಗಳನ್ನು ಹೊಂದಲು ಸಾಧ್ಯವಾದೀತು.

ಕನ್ನಡ ಕಥನ ಲೋಕಕ್ಕೆ ಇದುವರೆಗೆ ಬಂದಿಲ್ಲದ ಲೋಕದ ಏನಾದರೂ ಹೊಸತನ್ನು ತಂದು ಹೇಳುವ ಗುಣ ಅಂದರೆ ನವೀನ ವಸ್ತು ಸಾಮಗ್ರಿಯ ಕಥನ, ನವೀನ ನಿರೂಪಣೆಯ ಕ್ರಮ, ನವೀನ ಭಾಷೆಯ ಬಳಕೆ, ಕಥನದಲ್ಲಿನ ಬಿಗಿತನ, ಬೋರಾಗದಂತೆ ಓದಿಸಿಕೊಂಡು ಹೋಗುವ ಗುಣ, ಓದುಗನ ಮೇಲೆ ಬೀರುವ ಪರಿಣಾಮ ಅಥವಾ ಓದಿದ ನಂತರ ಕಾಡುವ, ಡಿಸ್ಟರ್ಬ್ ಮಾಡುವ ಗುಣ, ಕಥನದ ವಿಚಾರ ಮತ್ತು ಭಾವತೀವ್ರತೆಯ ಗುಣಗಳು ಇವೆಲ್ಲವನ್ನೂ ಮುಖ್ಯವಾಗಿ ಪರಿಗಣಿಸಿ ಇಲ್ಲಿನ ಕಥೆಗಳನ್ನು ಓದಲಾಗಿದೆ.

ಬಹುಮಾನ ಪಡೆದಿರುವ ಇಲ್ಲಿನ ಐದೂ ಕಥೆಗಳೂ ಒಂದಕ್ಕೊಂದು ಭಿನ್ನ. ಮಹಾತ್ಮ ಕಥೆ ಮಹಾತ್ಮ ಗಾಂಧಿಯೊಂದಿಗೆ ಒಂದು ಮುಖಾಮುಖಿಯನ್ನು ನಡೆಸುತ್ತದೆ. ನಮ್ಮಲ್ಲಿ ಸದಾ ಮಹಾತ್ಮರಲ್ಲಿನ ಹುಳುಕುಗಳನ್ನು ಹೆಕ್ಕಿ ತೆಗೆಯುವುದು ಅಥವಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಿ ಮತ್ತೆ ಮತ್ತೆ ಅವರನ್ನು ಬದುಕಿಸಿ ಕರೆದು ತಮ್ಮದೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಪಾಟೀಸವಾಲು ಮಾಡುವುದು ಯಾವತ್ತಿನ ರೂಢಿ. ಮಹಾತ್ಮರೆಂದು ನಾವು ಕರೆದುಕೊಳ್ಳುವ ‘ಮಹಾತ್ಮ’ರನ್ನು ನಾವು ನಮ್ಮಂತೆಯೆ ಅವರೂ ಮನುಷ್ಯರಾಗಿದ್ದರು ಎಂದು ಭಾವಿಸುವುದೇ ಕಡಿಮೆ. ಇಂಥ ಒಂದು ಚಿಂತನೆಯನ್ನು ಮಹಾತ್ಮ ಕಥೆ ಒಳಗೊಂಡಿದೆ ಮತ್ತು ನಮ್ಮಲ್ಲು ಅದು ಹುಟ್ಟುವಂತೆ ಮಾಡುತ್ತದೆ.

ಬೆಂದಕಾಳೂರು ಕಥೆ ಬೆಂಗಳೂರೆಂಬ ಮಹಾನಗರದ ಮೂರು ಚಿತ್ರಗಳನ್ನು ನೀಡುತ್ತದೆ. ಇವೆಲ್ಲ ಒಂದೊಂದು ಸ್ವತಂತ್ರ ಕಥೆ ಆಗಬಲ್ಲ ಚಿತ್ರಗಳು. ಇಲ್ಲಿನ ಮೂರೂ ಚಿತ್ರಗಳೂ ಪರಸ್ಪರ ಸಿಂಕಾಗುವುದಿಲ್ಲ; ಪ್ರತ್ಯೇಕ ಆಗಿಯೆ ಉಳಿಯುತ್ತವೆ. ನಮ್ಮಲ್ಲಿ ನಗರವೆಂದರೆ ನರಕ; ಪಾಪಕೂಪ; ಎಲ್ಲ ಕೇಡುಗಳೂ ಸಂಭವಿಸುವುದು ಇಲ್ಲೆ ಎಂಬ ನಂಬುಗೆಯೊಂದು ಇದೆ. ಇಂತಹ ನಂಬುಗೆಯಿಂದಲೆ ಈ ಕಥೆ ಹುಟ್ಟಿದೆ. ಆದಾಗ್ಯೂ ಬೆಂದಕಾಳೂರು ಲೋಕದ ಎಲ್ಲ ಮಹಾನಗರಗಳ ರೂಪಕ ಆಗಬಲ್ಲ ಸಾಧ್ಯತೆ ಇರುವ ಕಥೆ. ದುಃಖ, ಬಿಕ್ಕಟ್ಟು, ಅವ್ಯವಸ್ಥೆಗಳನ್ನು ಸ್ಪೋಟಿಸುವುದೆ ಸಾಹಿತ್ಯದ ಕಾಳಜಿ ಆಗಬೇಕಲ್ಲವೆ? ನಮಗೆ ಮನರಂಜನೆ ನೀಡುವುದು ಅಥವಾ ಸಂತೋಷ ನೀಡುವುದಷ್ಟೆ ಸಾಹಿತ್ಯ ಕಥನದ ಜವಾಬ್ದಾರಿಯೊ?

ಬೆಂದಕಾಳೂರು ನಗರದ ಗಲೀಜನ್ನು ತೆರೆದು ತೋರಿದರೆ, ಗಲೀಜು ಕಥೆ ಗಾಮಗಳ ಗಲೀಜನ್ನು ತೆರೆದು ತೋರುತ್ತದೆ. ಗಲೀಜು ಕಥೆಯಲ್ಲಿನ ಶಣಿಯಾರ, ಕಜ್ಜಿ, ಚಿಕ್ಕವ್ವೋರು, ದೊಡ್ಡ ಯಜಮಾನ, ಪೂಜಾರಪ್ಪ, ಸಾವುತ್ರ ಹೀಗೆ ಎಲ್ಲ ಪಾತ್ರಗಳೂ ಒಂದಲ್ಲ ಒಂದು ರೀತಿ ದೌರ್ಬಲ್ಯಗಳ ಪ್ರತಿನಿಧೀಕರಣಗಳೇ. ಅಂಚಿನ ಜನತೆಯ ಪ್ರತಿನಿಧಿ ಆದ ಕಜ್ಜಿ ಅಂತಿಮವಾಗಿ ಇಲ್ಲಿ ದೌರ್ಜನ್ಯಕ್ಕೆ ಬಲಿಯಾಗುತ್ತಾನೆ. ಗ್ರಾಮೀಣ ಊಳಿಗಮಾನ್ಯ ವ್ಯವಸ್ಥೆಯಲ್ಲಿನ ಕ್ರೌರ್‍ಯಗಳು (ಜಾತಿ, ವರ್ಗ, ಜ್ಞಾನಗಳ) ಅಸಮಾನತೆಯಿಂದ ಮತ್ತಷ್ಟು ಉಗ್ರವಾಗಿ ಇಲ್ಲಿ ಪ್ರಕಟಗೊಂಡಿವೆ. ಜೈವಿಕ ಪ್ರವೃತ್ತಿಯಾದ ಲೈಂಗಿಕತೆಯನ್ನು ಮಾನವ ಮಾನಸಿಕ ವ್ಯಸನವನ್ನಾಗಿ ಮಾರ್ಪಡಿಸಿಕೊಂಡಾಗ ಮತ್ತು ಲೈಂಗಿಕತೆಯ ಸುತ್ತ ತನ್ನದೆ ವಿಧಿನಿಷೇಧಗಳನ್ನು ಹೇರಿಕೊಂಡಾಗ ಆಗುವ ಅಲವಾಟುಗಳು ಈ ಕಥೆಯಲ್ಲಿ ತೀವ್ರವಾಗಿ ಪ್ರಕಟವಾಗಿವೆ.

ಮುಗಿಲ ಮಾಯೆಯ ಕರುಣೆ ಮತ್ತು ಹುಲಿ ಸಾಕಣೆ ಕಥೆಗಳು ತಮ್ಮ ಪರಿಣಾಮಕ್ಕಿಂತಲೂ ಅವು ಮಂಡಿಸುವ ವಿಚಾರದ ಕಾರಣಕ್ಕೆ ಹೆಚ್ಚು ಆಪ್ತವಾಗುತ್ತವೆ. ಹಳ್ಳಿಯಲ್ಲಿನ ಮೌಢ್ಯ; ಅಲ್ಲಿನ ವೈರ-ದೋಪಾರ್ಟಿ ಸ್ಥಿತಿಗಳನ್ನು ಮುಗಿಲ ಮಾಯೆಯ ಕರುಣೆ ಚೆನ್ನಾಗಿ ಅಭಿವ್ಯಕ್ತಿಸಿದೆ. ಹೊಲೇರ ಶರಣನೊಬ್ಬ ಮಳೆ ತರಿಸುವ ಇಚ್ಛಾಶಕ್ತಿ ಪ್ರಕಟಿಸುವುದು ಈ ಕಥೆಯ ಶಕ್ತಿ. ಹುಲಿ ಸಾಕಣೆ ಎನ್.ಜಿ.ಒ.ಗಳ ದಗಲಬಾಜಿತನ ಮತ್ತು ಬೆಪ್ಪುತನ ಎರಡನ್ನೂ ಒಟ್ಟಿಗೇ ಪ್ರಕಟಿಸುತ್ತದೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ನಮ್ಮ ಬಂಡವಾಳಶಾಹಿ ಧೋರಣೆ, ಪರಿಸರವಾದ-ಕೃಷಿ ವಲಯಗಳನ್ನೂ ಪ್ರವೇಶಿಸಿರುವ ಕೈಗಾರಿಕೀಕರಣದ ದುಸ್ಥಿತಿಯನ್ನು ಹುಲಿಸಾಕಣೆ ಕತೆ ಹೇಳುತ್ತದೆ.

ಇಲ್ಲಿ ಬಹುಮಾನಕ್ಕೆ ಆರಿಸಿರುವ ಎಲ್ಲ ಕಥೆಗಳೂ ಒಂದಿಲ್ಲೊಂದು ಬಗೆಯಲ್ಲಿ ನಮ್ಮ ವ್ಯವಸ್ಥೆಯೊಳಗೆ ಇರಬಹುದಾದ ತಪ್ಪುನಡೆಗಳನ್ನು ವಂಗ್ಯ, katha-sprade-2013ವಿಶಾದ, ತಲ್ಲಣಗಳಿಂದ ಬಯಲು ಮಾಡುತ್ತವೆ. ನಮ್ಮ ಬದುಕನ್ನು ಹಸನುಗೊಳಿಸುವ ಕಾಳಜಿ ಇಲ್ಲಿನ ಎಲ್ಲ ಕಥೆಗಳಲ್ಲೂ ಅಂತಸ್ಥವಾಗಿದೆ. ಮಹಾತ್ಮ, ಬೆಂದಕಾಳೂರು ಮತ್ತು ಹುಲಿಸಾಕಣೆ ಮೂರೂ ಕಥೆಗಳು ವೈಚಾರಿಕತೆಯನ್ನೆ ಕಥೆಯನ್ನಾಗಿ ಮಾರ್‍ಪಡಿಸುವ ಭರದಲ್ಲಿ ಕಲಾತ್ಮಕತೆಯನ್ನು ಹಿನ್ನೆಲೆಗೆ ದೂಡುತ್ತವೆ. ಆದರೆ ಗಲೀಜು ಮತ್ತು ಮುಗಿಲ ಮಾಯೆಯ ಕರುಣೆ ಅಂಥವಲ್ಲ. ಇವುಗಳಲ್ಲಿ ವೈಚಾರಿಕ ಆಕೃತಿಗೆ ಒಗ್ಗಿಸಲು ಆಗದ ಕಥನಗಾರಿಕೆ ಇದೆ. ಇಲ್ಲಿ ಕಥನ ಮುನ್ನೆಲೆಗೆ ಬಂದು ವಿಚಾರ ಹಿನ್ನೆಲೆಗೆ ಸರಿದಿದೆ.

ವಿಶೇಷವೆಂದರೆ ಸ್ಪರ್ಧೆಗೆ ಬಂದ ಎಲ್ಲ ಕಥೆಗಳನ್ನು ಲೇಖಕರ ಹೆಸರುಗಳನ್ನು ತೆಗೆದು ಓದಿದಾಗ ಉತ್ತರ ಕನ್ನಡದ ಭಾಶೆ ಮತ್ತು ಶೈಕ್ಷಣಿಕ ಭಾಶೆ ಎಂಬ ವ್ಯಾತ್ಯಾಸಗಳನ್ನು ಬಿಟ್ಟರೆ ಮಿಕ್ಕಂತೆ ಒಬ್ಬರೇ ಬರೆದ ಕಥೆಗಳನ್ನು ಓದುತ್ತಿದ್ದೇವೇನೋ ಎಂಬ ಭಾವನೆ ಉಂಟಾಗುತ್ತದೆ. ಕೆಲವು ಕಥೆಗಳಂತು ತೀರಾ ಸಿನಿಮ್ಯಾಟಿಕ್ ಮತ್ತು ಇನ್ಸಿಡೆಂಟಲ್ ಆಗಿ ಇವೆ. ನಿಸರ್ಗದ ಮತ್ತು ಮನುಷ್ಯರ ಒಳ ಮನಸ್ಸಿನ ಅಗೆಯುವಿಕೆ ಬಹುಪಾಲು ಕಥೆಗಳಲ್ಲಿ ಕಡಿಮೆ. ಘಟನಾತ್ಮಕ ನಿರೂಪಣೆಯೆ ಹೆಚ್ಚು! ಏಕೆ ಹೀಗೆ? ಸಾಮಾಜಿಕ ಹೊಣೆಗಾರಿಕೆ, ಕಾಳಜಿಗಳಲ್ಲಿ ಸಾಮ್ಯತೆ ಇದ್ದರೆ ಅದು ಆರೋಗ್ಯದ ಲಕ್ಷಣ. ಆದರೆ ಅಭಿವ್ಯಕ್ತಿ ಕ್ರಮದಲ್ಲಿ ಏಕತಾನತೆ ಇದ್ದರೆ? ಈ ಸ್ಪರ್ಧೆಯ ಕಥೆಗಳನ್ನು ಓದುತ್ತಿದ್ದರೆ ಇಂದಿನ ಹೊಸ ಪೀಳಿಗೆಯಲ್ಲಿ ಕನ್ನಡ ಸಣ್ಣ ಕಥೆಯ ಬಂಧ-ಚೌಕಟ್ಟು-ರೂಪ ಮತ್ತು ಅದು ನಿರೂಪಿತ ಆಗುವ ಕ್ರಮಗಳು ಏಕತಾನತೆಗೆ ಗುರಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಭಾಷಿಕ ವೈವಿದ್ಯತೆ ಮಾತ್ರವೆ ಕಥನದ ಭಿನ್ನತೆಯ ಗುಣವಲ್ಲ. ಇನ್ನಾದರೂ ನಮ್ಮ ಹೊಸ ಪೀಳಿಗೆಯು ತನ್ನ ನಿರೂಪಣಾ ಕ್ರಮಗಳು, ಗಮ್ಯತೆ ಮತ್ತು ಸಣ್ಣ ಕಥೆಯ ಚೌಕಟ್ಟುಗಳನ್ನು ಕ್ರಾಂತಿಕಾರಕವಾಗಿ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆಯಲ್ಲವೆ?

ಸ್ಪರ್ಧೆಯ ಹೆಸರಲ್ಲಿ ಹೊಸ ಪೀಳಿಗೆಯವರು ಬರೆದ ಹಲವಾರು ಕಥೆಗಳನ್ನು ಒಮ್ಮೆಗೆ ಓದಲು ಮತ್ತು ಆ ಮೂಲಕ ಹೊಸಬರ ಸಂವೇದನೆಗಳನ್ನು ಅರಿಯಲು ಅನುವು ನೀಡಿದ್ದಕ್ಕಾಗಿ ಮಿತ್ರ ರವಿ ಕೃಷ್ಣಾರೆಡ್ಡಿ ಅವರಿಗೆ ಮತ್ತು ವರ್ತಮಾನ ಬಳಗಕ್ಕೆ ನನ್ನ ಧನ್ಯವಾದಗಳು.