Category Archives: ಡಾ. ಶ್ರೀಪಾದ ಭಟ್

ಮಾಧ್ಯಮ : ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


ಡಾ. ಶ್ರೀಪಾದ ಭಟ್


 

ನಮ್ಮ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಗಂಭೀರವಾಗಿ ಓದುವ, ನೋಡುವ ಯಾರನ್ನೇ ಕೇಳಿ. ಅವರು ಹೇಳುವುದು ಒಂದೇ ಮಾತು: ಲೋಕದ ಡೊಂಕು ತಿದ್ದುವ ಮಾಧ್ಯಮ ತನ್ನ ಡೊಂಕನ್ನು ಮಾತ್ರ ತಿದ್ದಿಕೊಳ್ಳುವುದಿಲ್ಲ. ಕರೆ ಮಾಡಿದ್ದ ಐವತ್ತಕ್ಕೂ ಹೆಚ್ಚು ಜನರಲ್ಲಿ ಯಾರೊಬ್ಬರೂ ಮಾಧ್ಯಮಗಳನ್ನು ಶಂಕಿಸದೇ ಬಿಟ್ಟಿಲ್ಲ! ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ನಮ್ಮಲ್ಲಿ ನಡೆಯಬೇಕಾದ ಜರೂರಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೀಗಾದಾಗ ಮಾಧ್ಯಮಗಳ ನಿಜ ಸ್ವರೂಪ ಬಯಲಾಗುತ್ತದೆ. ಹೀಗಲ್ಲದೇ ಪತ್ರಿಕೆಯ ಹೆಸರಿನೊಂದಿಗೆ ತಾವು ಅತ್ಯಂತ ವಿಶ್ವಾಸಾರ್ಹ ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ ಯಾರು ಬೇಕಾದರೂ tv-mediaಹೇಳಿಕೊಳ್ಳಬಹುದು. ಅದಕ್ಕೆ ಮಾನದಂಡ? ನಮ್ಮಲ್ಲಿನ್ನೂ ಇಲ್ಲ.

ಮಾಧ್ಯಮಗಳ ಒಳ ಸತ್ಯವನ್ನು ಗಮನಿಸುವ ಯಾರು ಬೇಕಾದರೂ ಅವುಗಳನ್ನು ಕುರಿತು ನಿಷ್ಠುರ ಲೇಖನಗಳನ್ನು ಬರೆಯಬಹುದು. ಆದರೆ ಅಂಥ ಲೇಖನ ಕೂಡ ಯಾವುದಾದರೂ ಒಂದು ಮಾಧ್ಯಮದಲ್ಲೇ ಪ್ರಕಟವಾಗಬೇಕಲ್ಲ? ತನ್ನನ್ನು ತಾನು ನೋಡಿಕೊಳ್ಳಲು ಸಿದ್ಧವಿರುವ, ಅಂಥ ಲೇಖನಗಳಿಗೆ ಜಾಗ ನೀಡುವ ಮಾಧ್ಯಮ ನಿಜಕ್ಕೂ ಅಪರೂಪದ್ದು. ಸಾಮಾನ್ಯವಾಗಿ ನಿಷ್ಠುರ, ಜನಪ್ರಿಯ ಧಾಟಿ ಇಲ್ಲದ ವಸ್ತು, ವಿಷಯಗಳ ಲೇಖನಗಳನ್ನು ಅದೆಷ್ಟೇ ಪೂರಕ ದಾಖಲೆಗಳಿದ್ದರೂ ಮಾಧ್ಯಮಗಳು ಪ್ರಕಟಿಸಲು ಮುಂದಾಗುವುದಿಲ್ಲ. ಮಾಧ್ಯಮಗಳ ಇಂಥ ತೀರ್ಮಾನವನ್ನೇ ಸ್ವಯಂ ನಿರ್ಬಂಧನೆ (ಸೆಲ್ಫ್ ಸೆನ್ಸರ್‌ಶಿಪ್) ಎಂದು ಕರೆಯುವುದು. ಒಂದೊಂದು ಪತ್ರಿಕೆ, ಚಾನೆಲ್ಲುಗಳಿಗೂ ಇದು ಬದಲಾಗುತ್ತದೆ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳೆರಡರಲ್ಲೂ ಇಂಥ ನಿರ್ಬಂಧಗಳಿರುತ್ತವೆ. ವೈಯಕ್ತಿಕ ಹಿತಾಸಕ್ತಿ ಇದ್ದಲ್ಲಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವಂತಿದ್ದಲ್ಲಿ ಅಂಥ ಸುದ್ದಿ ಅಥವಾ ಲೇಖನಗಳು ಖಂಡಿತ ತಿರಸ್ಕಾರ ಯೋಗ್ಯ. ಮಾಧ್ಯಮಗಳು ಮೊದಲು ಗಮನಿಸುವುದು ಇದನ್ನು. ಇದಲ್ಲದೆಯೂ ಮಾಧ್ಯಮಗಳು ಸುದ್ದಿ, ಲೇಖನಗಳ ಜಾಣ ಆಯ್ಕೆ ಮಾಡುವುದುಂಟು. ಈ ಜಾಣತನ ಓದುಗ ಅಥವಾ ವೀಕ್ಷಕರಿಗೆ ಸುಲಭವಾಗಿ ಅರ್ಥವಾಗುವಂಥದ್ದಲ್ಲ. ಮಾಧ್ಯಮಗಳ ಈ ಪ್ರವೃತ್ತಿಯನ್ನೇ ಚಿಂತಕರಾದ ಎಡ್ವರ್ಡ್ ಹರ್ಮನ್ ಮತ್ತು ನೋಮ್ ಚಾಮ್‌ಸ್ಕಿ ಸಮ್ಮತಿಯ ಸೃಷ್ಟಿ noam-chomsky(ಮ್ಯಾನ್ಯುಫಾಕ್ಚರಿಂಗ್ ಕನ್ಸೆಂಟ್) ಎಂದು ಕರೆದಿರುವುದು.

ಇವರ ಚಿಂತನೆ ಹೀಗಿದೆ: ಉದ್ಯಮಿ ಮಾಲೀಕತ್ವದ ಮಾಧ್ಯಮಗಳು ಮಾರುಕಟ್ಟೆಯ ಸೆಳೆತಕ್ಕೆ ಒಳಗಾಗಿ ವ್ಯವಸ್ಥಿತ ಸ್ವಯಂ ನಿರ್ಬಂಧನೆಯನ್ನು ಉತ್ತೇಜಿಸುತ್ತವೆ. ತಾವು ತುಂಬ ಮುಕ್ತ, ವಿಶ್ವಾಸಾರ್ಹ ಎಂದು ಕರೆದುಕೊಳ್ಳುವ ಮಾಧ್ಯಮಗಳು ಕೂಡ ಸ್ವಯಂ ನಿರ್ಬಂಧನೆಯ ಹೆಸರಲ್ಲಿ ಸುದ್ದಿ, ಲೇಖನಗಳ ಆಯ್ಕೆ, ತಿರಸ್ಕಾರದಲ್ಲಿ ಪಕ್ಷಪಾತ ತೋರಿಸುತ್ತವೆ. ತಮ್ಮ ನಿಲುವಿಗೆ ಸರಿ ಹೊಂದುವ ಸುದ್ದಿ ಮತ್ತು ಲೇಖನಗಳನ್ನು ಮಾತ್ರ ಅವು ಪ್ರಕಟಿಸುತ್ತವೆ. ದೀರ್ಘ ಅಧ್ಯಯನದ ನಂತರ ಹೇಳಿದ ಈ ಚಿಂತಕರ ಮಾತು ಸುಳ್ಳೆಂದು ಮಾಧ್ಯಮದ ಯಾರೊಬ್ಬರೂ ಹೇಳಲಾರರು!

ಮಾಧ್ಯಮಗಳು ವರದಿ ನೀಡುತ್ತವೆಯೇ, ಮಾಹಿತಿ ಕೊಡುತ್ತವೆಯೇ ಅಥವಾ ಜ್ಞಾನ ಒದಗಿಸುತ್ತವೆಯೇ? ವಸ್ತು ನಿಷ್ಠ ವರದಿಯನ್ನು ಮಾತ್ರ ನೀಡಬೇಕಿದ್ದ ಮಾಧ್ಯಮಗಳು ಅದನ್ನೊಂದನ್ನು ಬಿಟ್ಟು ತಮ್ಮಿಷ್ಟದಂತೆ ಸುದ್ದಿಯ ವಿಶ್ಲೇಷಣೆಗೆ ತೊಡಗುತ್ತವೆ. ತಮ್ಮ ಓದುಗ ಅಥವಾ ವೀಕ್ಷಕ ವರ್ಗದಲ್ಲಿ ಮುಕ್ತ ಚಿಂತನೆ ಬೆಳೆಯುವಂತೆ ಮಾಡುವ ಬದಲು ತಮ್ಮ ಚಿಂತನೆಯನ್ನೇ ಅವರು ಪ್ರತಿಪಾದಿಸುವಂತೆ ಪರೋಕ್ಷ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಪತ್ರಿಕೆಗಳ ಸಂಪಾದಕೀಯ ಲೇಖನಗಳು ಇಂಥ ವಶೀಲಿಯನ್ನು ನಿರಂತರ ಮಾಡುತ್ತವೆ. ಅದಕ್ಕೆ ಒಮ್ಮೆ ಒಗ್ಗಿದ ಓದುಗನ ಅಭಿಪ್ರಾಯ ಕ್ರಮೇಣ ಆತ ಓದುವ ಪತ್ರಿಕೆಯ ಅಭಿಪ್ರಾಯವೇ ಆಗಿಬಿಡುತ್ತದೆ! ಇದು ಆ ಓದುಗನಿಗೆ ಅರ್ಥವೇ ಆಗುವುದಿಲ್ಲ. ಪತ್ರಿಕೆಗಿಂತ ಹೆಚ್ಚು ಪ್ರಭಾವಶಾಲಿಯಾದ ಟಿವಿ ಮಾಧ್ಯಮ ಈ ಕೆಲಸವನ್ನು ಇನ್ನಷ್ಟು ವ್ಯವಸ್ಥಿತವಾಗಿ ಚರ್ಚೆ (ಪ್ಯಾನೆಲ್ ಡಿಸ್ಕಶನ್) ರೂಪದಲ್ಲಿ ಮಾಡುತ್ತದೆ.

ನಮ್ಮ ಮಾಧ್ಯಮಗಳನ್ನೇ ಗಮನಿಸೋಣ. kannada-news-channelsಸಂವಿಧಾನ ಎಲ್ಲರಿಗೂ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು (ವಿಧಿ 19 ರಿಂದ 22) ಮಾತ್ರ ಮಾಧ್ಯಮಗಳಿಗೂ ಇರುವುದು. ಮಾಧ್ಯಮಕ್ಕೇನೂ ವಿಶೇಷ ಹಕ್ಕಿಲ್ಲ. ಸಂವಿಧಾನದ ನಾಲ್ಕನೆಯ ಸ್ತಂಭ ತಾವೆಂದು ಅವು ಎಷ್ಟೇ ಹೇಳಿಕೊಂಡರೂ ಅದು ನೀವೇ ಯಾಕೆ? ಮುಂದಿನ ಪೀಳಿಗೆ ರೂಪಿಸುವ ಶಿಕ್ಷಕರು ಯಾಕಲ್ಲ? ದೇಶದ ಆರೋಗ್ಯ ಕಾಪಾಡುವ ವೈದ್ಯರು ಯಾಕಲ್ಲ? ದೇಶದ ಬೆನ್ನೆಲುಬು ಎನ್ನಲಾಗುವ ರೈತ ವರ್ಗ ಯಾಕಲ್ಲ? ಎಂಬ ಪ್ರಶ್ನೆಗೆ ಅವರಲ್ಲೂ ಉತ್ತರವಿಲ್ಲ! ಅದಿರಲಿ.

ಸಮಾಜದ ಇನ್ನಿತರ ಸ್ತರಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಸ್ವಾಯತ್ತೆಯ ಬಗ್ಗೆ ಮಾತನಾಡುವ ಮಾಧ್ಯಮಗಳು ತಮ್ಮ ವಲಯದಲ್ಲಿ ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತವೆ? ಉತ್ತರ ನಿರಾಶಾದಾಯಕ. ಪ್ರತಿ ವರ್ಷ ಪ್ರಪಂಚದ 180 ದೇಶಗಳ ಮಾಧ್ಯಮ ವಲಯದಲ್ಲಿ ಖಚಿತ ಸಮೀಕ್ಷೆ ನಡೆಸಿ ವರದಿ ಮಾಡುವ ಫ್ರಾನ್ಸಿನ ರಿಪೋರ್‍ಟರ್ಸ್ ವಿತೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆ 2012-13 ರಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯದ ಸ್ಥಾನ 140 ಎಂದು ಹೇಳಿದೆ. ಕಳೆದ ವರ್ಷ ಇದು 131 ಕ್ಕಿತ್ತು. 2002 ರಲ್ಲಿ 80 ನೆಯ ಸ್ಥಾನದಲ್ಲಿದ್ದ ಭಾರತ ಬರಬರುತ್ತ 140 ಕ್ಕೆ ಜಾರಿದೆ. ಇದು ಮೇಲೇಳುವ ಲಕ್ಷಣವಿಲ್ಲ. ಮಾಧ್ಯಮ ಪಡೆಯುತ್ತಿರುವ ಈ ಸ್ಥಾನಗಳಿಗೆ ಸ್ವತಃ ಮಾಧ್ಯಮ ಮತ್ತು ಅವುಗಳ ಮಾಲೀಕರು ಕಾರಣವೇ ವಿನಾ ಸರ್ಕಾರವಾಗಲಿ, ಜನರಾಗಲೀ ಅಲ್ಲ. ವರ್ಷವಿಡೀ ನಡೆಯುವ ಈ ಸಮೀಕ್ಷೆಯಲ್ಲಿ ಆಯಾ ದೇಶದ ವಕೀಲರು, ಶಿಕ್ಷಣವೇತ್ತರು, ಪತ್ರಕರ್ತರು, ಮಾನವಹಕ್ಕು ಕಾರ್ಯಕರ್ತರು ಮೊದಲಾದ ಎಲ್ಲ ವರ್ಗದ ಜನ ನೀಡುವ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಹಳ ಮುಖ್ಯವಾಗಿ ಮಾಧ್ಯಮಗಳ ಒಳ ವ್ಯವಸ್ಥೆಯಲ್ಲಿನ ಪರಿಸರ, ಪಾರದರ್ಶಕತೆ, ಸ್ವಯಂ ನಿರ್ಬಂಧ, ಮೂಲಸೌಕರ್ಯ, KannadaPapersCollageವರದಿಗಾರ ನೀಡುವ ಸುದ್ದಿ ಯಥಾವತ್ ಪ್ರಕಟವಾಗುವ ಸಾಧ್ಯತೆ, ಪತ್ರಕರ್ತರ ಆಂತರಿಕ ಸ್ವಾತಂತ್ರ್ಯ ಮೊದಲಾದ ಸಂಗತಿಗಳನ್ನು ಗಮನಿಸಲಾಗುತ್ತದೆ. ಮತ್ತೆ ಮತ್ತೆ ಪರಿಶೀಲಿಸಿ ಸ್ಥಾನ ನಿರ್ಧರಿಸಲಾಗುತ್ತದೆ. ಬಹಳ ಜವಾಬ್ದಾರಿಯಿಂದ ಆ ಸಂಸ್ಥೆ ಈ ಕೆಲಸ ನಿರ್ವಹಿಸುವುದರಿಂದ ಪ್ರಪಂಚಾದ್ಯಂತ ಅದು ನೀಡುವ ವರದಿಗೆ ಮಹತ್ವವಿದೆ. ಮಾಧ್ಯಮಗಳು ಸ್ವಹಿತಾಸಕ್ತಿ ಕಾಪಾಡಿಕೊಳ್ಳುವ ಸ್ವಯಂ ನಿರ್ಬಂಧವೇ ನಮ್ಮ ಮಾಧ್ಯಮ ಸ್ವಾತಂತ್ರ್ಯಕ್ಕೆ ಇರುವ ಬಹುದೊಡ್ಡ ಅಡ್ಡಿ.

ನಮ್ಮ ಮಾಧ್ಯಮಗಳಲ್ಲಿ ವರದಿಗಾರರ ನೇಮಕಾತಿಯಲ್ಲೂ ಆಯಾ ಮಾಧ್ಯಮಗಳ ಹಿತಾಸಕ್ತಿ ಕೆಲಸಮಾಡುತ್ತದೆ. ನಿಷ್ಠುರ ವರದಿಗಾರನಿಗೆ ದೊಡ್ಡ ಮಾಧ್ಯಮಗಳಲ್ಲಿ ಕೆಲಸ ದೊರೆಯುವುದು ದುರ್ಲಭ. ನಮ್ಮ ಬಹುತೇಕ ದೊಡ್ಡ ಪತ್ರಿಕೆಗಳು, ಚಾನೆಲ್ಲುಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಕೃಪೆಯಲ್ಲಿರುವವೇ ಆಗಿವೆ. ಕೆಲವು ನೇರವಾಗಿ ಗೋಚರವಾದರೆ ಇನ್ನು ಬಹಳಷ್ಟು ಮಾಧ್ಯಮಗಳದ್ದು ಗೌಪ್ಯ ಸಂಬಂಧ. ಇದನ್ನೇ ಹಿಡನ್ ಅಜೆಂಡಾ ಎನ್ನುವುದು. ನಮ್ಮ ದೇಶದಲ್ಲಿ ಪಂಚಾಯ್ತಿ ಮಟ್ಟದಿಂದ ಲೋಕಸಭೆಯವರೆಗೆ ಒಂದಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಅವುಗಳ ನಿಲುವು, ವರದಿಗಾರರ ಸಾಚಾತನ ಮೊದಲಾದವು ಗೋಚರವಾಗುವುದುಂಟು. ಒಂದೇ ಸುದ್ದಿಯನ್ನು ಬೇರೆ ಬೇರೆ ಮಾಧ್ಯಮಗಳು ಬೇರೆ ಬೇರೆ ರೀತಿ ಓದಿಕೊಳ್ಳುವಂತೆ ಪ್ರಸ್ತುತಪಡಿಸುತ್ತವೆ! ಪರಿಸ್ಥಿತಿ ಹೀಗಿರುವಾಗ ಅವುಗಳಿಗೆ ಮುಕ್ತ ವಾತಾವರಣ ಎಲ್ಲಿಂದ ಬರಬೇಕು? tv-mediaಕೆಲವೊಮ್ಮೆ ಮಾಧ್ಯಮಗಳ ಮಾಲೀಕರು ತಮಗಾಗದ ವ್ಯಕ್ತಿ, ಸಂಸ್ಥೆಗಳ ವಿರುದ್ಧವೋ ಬೇಕಾದ ವ್ಯಕ್ತಿ, ಸಂಸ್ಥೆಗಳ ಪರವೋ ವರದಿ ತಯಾರಿಸಿಕೊಡುವಂತೆ ವರದಿಗಾರರ ಮೇಲೆ ನೇರ ಒತ್ತಡ ಹೇರುವುದೂ ಇದೆ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಲವಂತದ ಮಾಘಸ್ನಾನ ಮಾಡುವ ಪತ್ರಕರ್ತರಿಗೆ ಕೊರತೆಯೇನೂ ಇಲ್ಲ.

ಮಾಧ್ಯಮದ ಜನ ಕೂಡ ಮನುಷ್ಯರೇ ಆದ್ದರಿಂದ ಅವರಿಗೂ ಮಾನವ ಸಹಜ ದೌರ್ಬಲ್ಯ, ಶಕ್ತಿಗಳೆಲ್ಲವೂ ಇರುತ್ತವೆ. ಅಧಿಕಾರ, ಹಣ, ಪ್ರಶಸ್ತಿ-ಕೀರ್ತಿ ಮೊದಲಾದವುಗಳ ಆಮಿಷ ಅವರ ವೃತ್ತಿ ನಿಷ್ಠೆಯನ್ನು ಬಲಿಪಡೆದರೂ ಅಚ್ಚರಿ ಇಲ್ಲ. ಅಲ್ಲದೇ ನಮ್ಮ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರತಿನಿಧಿಸುವವರಿಗೆ ಆಯಾ ಮಾಧ್ಯಮಗಳೇ ರಕ್ಷಾಕವಚವಾಗುವುದರಿಂದ ಹಾಗೂ ಜನರ ಜವಾಬಿಗೆ ಉತ್ತರ ಕೊಡಲೇಬೇಕು ಎಂಬ ಜರೂರು ಇಲ್ಲದ ಕಾರಣದಿಂದ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಗೆರೆ ಎಳೆದುಕೊಳ್ಳುವುದನ್ನು ಮರೆಯಲೂಬಹುದು. ಆದರೆ ಅದರ ಪರಿಣಾಮ ಮಾಧ್ಯಮಗಳ ಸ್ಥಾನ ತೋರಿಸುವ ವರದಿಗಳಲ್ಲಿ ಹೀಗೆ ಬಯಲಾಗುತ್ತದೆ. ಸಾಮಾನ್ಯ ಜನತೆಗೆ ಮಾಧ್ಯಮದ ಮೇಲೆ ಏನೇ ಸಿಟ್ಟಿರಲಿ, ಸರ್ಕಾರಕ್ಕೆ ಎಷ್ಟೇ ಅಸಮಾಧಾನವಿರಲಿ, ಇವರೇನೂ ಮಾಡಲಾಗದು. ಯಾಕೆಂದರೆ ಇದು ಬೆಕ್ಕಿಗೆ ಗಂಟೆ ಕಟ್ಟುವ ಪ್ರಶ್ನೆ!

ತನ್ನ ಹುಳುಕು ನೋಡಿಕೊಳ್ಳದ ಮಾಧ್ಯಮ


ಡಾ. ಶ್ರೀಪಾದ ಭಟ್


 

ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೆಯ ಸ್ತಂಭ ಎಂದವನು ಎಡ್ಮಂಡ್ ಬರ್ಕ್ ಅದ್ಯಾವ ಗಳಿಗೆಯಲ್ಲಿ ಹಾಗೆಂದಿದ್ದನೋ, ಇವು ಇನ್ನೂ ಮುಂದೆ ಹೋಗಿ ತಾವೇ ಪ್ರಧಾನ ಸ್ತಂಭ ಎಂಬಂತೆ ವರ್ತಿಸುತ್ತಿವೆ.

ಸಮಾಜದ ಎಲ್ಲ ವಿಷಯ, ಸ್ತರಗಳ ಬಗ್ಗೆ ಮಾತನಾಡುವ, ಬುದ್ಧಿ ಹೇಳುವ ಮತ್ತು ಕಲಿಸುವ ಮಾಧ್ಯಮಗಳು ತನ್ನೊಳಗಿನ ಹುಳುಕಿಗೆ ಔಷಧ ಹುಡುಕುವುದಿರಲಿ, ನೋಡಿಕೊಳ್ಳಲೂ ತಯಾರಿಲ್ಲ. ಸದ್ಯದ ವಿದ್ಯಮಾನಗಳು ಮಾಧ್ಯಮಗಳ ಹುಳುಕನ್ನು ಎತ್ತಿ ತೋರಿಸುತ್ತವೆ. tv-mediaಸುತ್ತಲಿನ ಸುದ್ದಿಯನ್ನು ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳು ಎಂದೂ ಸುದ್ದಿಮನೆಯ ಸುದ್ದಿ ಹೊರಗೆ ಹೋಗದಂತೆ ನೋಡಿಕೊಳ್ಳುತ್ತವೆ. ಬೆರಳೆಣಿಕೆಯ ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿದ್ದಾಗ ಅವುಗಳ ಸಾರ್ವಭೌಮತ್ವ ನಡೆಯುತ್ತಿತ್ತು. ಆದರೇನು ಮಾಡುವುದು? ಈಗ ಬಗೆ ಬಗೆಯ ಮಾಧ್ಯಮಗಳು ಕಾಲಿಟ್ಟಿವೆ. ಮೊಬೈಲು, ಬ್ಲಾಗು, ಫೇಸ್‌ಬುಕ್, ಟ್ವೀಟ್ ಹೀಗೆ ಅನೇಕಾನೇಕ ಸಾಮಾಜಿಕ ತಾಣಗಳು ಮಾಧ್ಯಮ ಸತ್ಯವನ್ನು ಹೊರಗೆಳೆಯುತ್ತವೆ. ಜನ ಈಗ ಒಂದಕ್ಕಿಂತ ಹೆಚ್ಚು ಮಾಧ್ಯಮ ನೋಡುತ್ತಾರೆ ಅಥವಾ ಓದುತ್ತಾರೆ. ಹೀಗಾಗಿ ತಾವು ಕೊಟ್ಟಿದ್ದೇ ಸರಿ ಎಂದು ಯಾವ ಮಾಧ್ಯಮವೂ ಭಾವಿಸುವಂತಿಲ್ಲ.

ಭಾರತದಲ್ಲಿ ಇಂದು ಸುಮಾರು 70,000 ಸುದ್ದಿಪತ್ರಿಕೆಗಳೂ 690 ಸ್ಯಾಟಿಲೈಟ್ ಚಾನೆಲ್ಲುಗಳೂ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ರಾಷ್ಟ್ರ, ರಾಜ್ಯ, ಪ್ರಾಂತ ಮಟ್ಟದ ಪತ್ರಿಕೆಗಳು ಸೇರಿವೆ. ಚಾನೆಲ್ಲುಗಳಲ್ಲಿ ಸ್ಥಳೀಯ ಕೇಬಲ್ ನೆಟ್‌ವರ್ಕ್ ಜಾಗ ಪಡೆದಿಲ್ಲ. ಇವುಗಳಲ್ಲಿ ಸುಮಾರು 80 ಚಾನೆಲ್ಲುಗಳು ಇಪ್ಪತ್ತನಾಲ್ಕು ಗಂಟೆ ಸುದ್ದಿ ಬಿತ್ತರಿಸಲೆಂದೇ ಇವೆ. ಭಾರತದಲ್ಲಿ ನಿತ್ಯ ಈ ಎಲ್ಲ ಪತ್ರಿಕೆಗಳು ಸುಮಾರು 100 ದಶಲಕ್ಷ ಪ್ರತಿಗಳನ್ನು ಓದುಗರಿಗೆ ತಲುಪಿಸುತ್ತವೆ. ಇಷ್ಟಾದರೂ ನಮ್ಮ ಜನಕ್ಕೆ ಸುದ್ದಿ ದಾಹ ತೀರುವುದಿಲ್ಲ!

2011 ರಲ್ಲಿ ಹೊರಬಂದ 15 ನೆಯ ಜನಗಣತಿಯಂತೆ ನಮ್ಮ ಸಾಕ್ಷರತೆ ಶೇ.74.04. ಇವರಲ್ಲಿ ಹೆಚ್ಚು ಜನರನ್ನು ಸೆಳೆಯುವುದಷ್ಟೇ ಮಾಧ್ಯಮಗಳ ಕೆಲಸ. ಈ ಪೈಪೋಟಿಯಲ್ಲಿ ಜನ ಮತ್ತು ಒಟ್ಟಾರೆ ಸಮಾಜದ ಮೇಲೆ ತಾವು ಬಿತ್ತರಿಸುವ ಸುದ್ದಿ ಯಾವ ಪ್ರಭಾವ ಬೀರಬಹುದು ಎಂಬುದನ್ನು tv-mediaಅವು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಯಾರಾದರೂ ಅಪಘಾತದಲ್ಲಿ ಸಿಕ್ಕು ನೆರವಿಗೆ ಅಂಗಲಾಚುತ್ತಿದ್ದರೆ ಅದನ್ನು ಹಾಗೆಯೇ ಬಿತ್ತರಿಸಿ ನೋಡಿ ನಮ್ಮ ಸಮಾಜ ಎಷ್ಟು ಕ್ರೂರವಾಗಿದೆ ಎಂದು ಹೇಳುವುದಷ್ಟೇ ಒಬ್ಬ ನಿಜವಾದ ಪತ್ರಕರ್ತನ ಕೆಲಸ, ಬದಲಿಗೆ ತಾನೇ ನೆರವಿಗೆ ಧಾವಿಸುವುದಲ್ಲ. ಇದು ಮಾಧ್ಯಮಗಳ ವೃತ್ತಿಪರತೆ!

ಸಮಾನತೆ, ನೈತಿಕತೆ, ಬಂಡವಾಳಶಾಹಿ ವಿರೋಧ, ಸಮಾಜವಾದ ಇತ್ಯಾದಿ ಮುಖವಾಡ ಹಾಕಿಕೊಳ್ಳುವ ಮಾಧ್ಯಮಗಳ ಒಳಸತ್ಯಗಳೇ ಬೇರೆ. ದಲಿತರ, ಹಿಂದುಳಿದವರ ಕುರಿತು ಸರ್ಕಾರದ ನಿಲುವುಗಳನ್ನು ಮತ್ತೆ ಮತ್ತೆ ಪ್ರಶ್ನಿಸುವ ನಮ್ಮ ಮಾಧ್ಯಮಗಳಲ್ಲಿ 1991 ರವರೆಗೆ ಒಬ್ಬನೇ ಒಬ್ಬ ದಲಿತ ಪತ್ರಿಕೋದ್ಯಮಿ ಇರಲಿಲ್ಲ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಅದಿರಲಿ, ಇಂದಿಗೂ ದೇಶದ, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ತೀರ್ಮಾನ ಕೈಗೊಳ್ಳುವ ಹಂತದಲ್ಲಿ ಒಬ್ಬ ದಲಿತನೂ ಇಲ್ಲ ಎನ್ನುತ್ತದೆ ಈಚಿನ ಒಂದು ಸಮೀಕ್ಷೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಧೀರ ಮಾಧ್ಯಮಗಳಿಗೆ ಇದು ಎಂದೂ ಮುಖ್ಯ ಎನಿಸಿಲ್ಲ. ದೇಶವಿರಲಿ, ರಾಜ್ಯದ ಅತ್ಯಂತ ವಿಶ್ವಾಸಾರ್ಹ ಎಂದುಕೊಳ್ಳುವ ಪತ್ರಿಕೆಗಳ, ಉತ್ತಮ ಸಮಾಜಕ್ಕಾಗಿರುವ, ನಿರ್ಭೀತ, ನೇರ-ದಿಟ್ಟ ಚಾನೆಲ್ಲುಗಳ ಕತೆಯೂ ಇದೇ.

ಸಂಪಾದಕೀಯದಲ್ಲಿ, ವರದಿಗಳಲ್ಲಿ ಕಟ್ಟಾ ಸಮಾಜವಾದವನ್ನು ಪ್ರತಿಪಾದಿಸುವ, ಕುಟುಂಬ ರಾಜಕಾರಣವನ್ನು dalitsinmediaವಿರೋಧಿಸುವ ದೇಶದ ಪ್ರಮುಖ ಇಂಗ್ಲಿಷ್ ದೈನಿಕವೊಂದನ್ನು ನೂರಾರು ವರ್ಷಗಳಿಂದ ಒಂದೇ ಕುಟುಂಬ ನಿರ್ವಹಿಸುತ್ತಿದೆ. ಅದರ ಟ್ರಸ್ಟಿಗಳು, ಸಂಪಾದಕರೆಲ್ಲ ಆ ಕುಟುಂಬ ವರ್ಗದವರೇ. ಕೆಲ ತಿಂಗಳ ಹಿಂದೆ ಅದೇ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಅದರ ಸಂಪಾದಕರಾದರು. ಮೂರ್ನಾಲ್ಕು ತಿಂಗಳಲ್ಲಿ ಅವರನ್ನು ಇಳಿಸಿ ಮತ್ತೆ ಆ ಕುಟುಂಬದವರೇ ಸಂಪಾದಕರಾದರು! ಆ ಪತ್ರಕರ್ತರು ರಾಜೀನಾಮೆ ನೀಡಿ ಹೊರಬಂದರು. ಕನ್ನಡದಲ್ಲೂ ಕುಟುಂಬದ, ಉದ್ಯಮಿಗಳ ಕೃಪೆಯಲ್ಲೇ ಬಹುತೇಕ ಮಾಧ್ಯಮಗಳಿರುವುದು. ಜನರಿಗೆ ಸತ್ಯ ತಲುಪಿಸುವ ಇವುಗಳ ಒಳಗಿನ ರಾಜಕಾರಣ ಬಲ್ಲವರೇ ಬಲ್ಲರು!

ಈಚೆಗೆ ನಡೆದ ಇನ್ನೊಂದು ಘಟನೆ. ಇದು ಇಂಗ್ಲಿಷ್ ವಾರಪತ್ರಿಕೆಯೊಂದರ ಸಂಪಾದಕನ ಕಥೆ. ಆ ಪತ್ರಿಕೆಯ ಉದ್ಯಮಿ ಮಾಲೀಕನಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ರಾಜಕೀಯ ಪಕ್ಷದ ಹತ್ತಿರದ ನಂಟು. ಸಂಪಾದಕ ಎಲ್ಲ ಸುದ್ದಿಗಳನ್ನು ಪ್ರಕಟಿಸುವಂತೆಯೇ ಆ ದೊಡ್ಡ ಪಕ್ಷದ ಅಡ್ಡ ಸುದ್ದಿಗಳನ್ನೂ ಒಂದೆರಡು ಬಾರಿ ಪ್ರಕಟಿಸಿದ್ದ. ಮಾಲೀಕನ ಮೇಲೆ ಒತ್ತಡ ಬಂತು, ಮರುವಾರದಿಂದ ಆ ಸಂಪಾದಕ ಕೆಲಸ ಕಳೆದುಕೊಂಡ. ಅನಂತರ ತಾನೇಕೆ ಕೆಲಸ ಕಳೆದುಕೊಂಡೆ ಎಂಬುದನ್ನು ಆತ ತಿಳಿದುಕೊಂಡ. ಬೇರೆ ಬೇರೆ ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಇವುಗಳ ಕಥೆ ಹರಿದಾಡುತ್ತಿದೆ.

ಕುಟುಕು ಕಾರ್ಯಾಚರಣೆ ಮೂಲಕ ಭ್ರಷ್ಟಾಚಾರ ಬಯಲಿಗೆಳೆದು ಸಮಾಜ ಉದ್ಧರಿಸುವ ಪಣ ತೊಟ್ಟ ಮಾಧ್ಯಮಗಳು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿಬೀಳುವುದುಂಟು. ಅರ್ಧಕ್ಕರ್ಧ ಬ್ಲಾಕ್‌ಮೇಲ್ ಮಾಡಿ ಹಣ ಸುಲಿಯಲೆಂದೇ ನಡೆಯುವ ಕುಟುಕು ಕಾರ್ಯಾಚರಣೆ ನಿಗದಿತ ಹಣ ಬಾರದಿದ್ದಾಗ ಪ್ರಸಾರ ಕಾಣುವುದೂ ಇದೆ. ಇಂಥ ಯತ್ನ ಮಾಡಿದ್ದ ಝೀ ಸುದ್ದಿ ವಾಹಿನಿಯ ಇಬ್ಬರು ಹಿರಿಯ ಪತ್ರಕರ್ತರು ಈ ಸಂಬಂಧ ಜೈಲಿಗೂ ಹೋದರು. ಮಾಧ್ಯಮಗಳನ್ನೇ ಹೀಗೆ ಹಿಡಿದು ಪ್ರಶ್ನಿಸುವ ಪ್ರಕರಣಗಳು ಸಾಕಷ್ಟು ದಾಖಲಾಗಿವೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ದಾಖಲಾಗುತ್ತಿರುವ ಕೇಸುಗಳು, Corruption-in-News-Mediaಅದು ಮಾಧ್ಯಮಗಳಿಗೆ ನೀಡಿದ ಶಿಕ್ಷೆಗಳು ಸಣ್ಣವೇನೂ ಅಲ್ಲ.

ಇವು ದೇಶದ ದೊಡ್ಡ ಪತ್ರಿಕೆ, ಚಾನೆಲ್ಲುಗಳ ಕತೆಯಾದರೆ ನಮ್ಮ ರಾಜ್ಯದೊಳಗಿನವೇನೂ ಕಡಿಮೆ ಇಲ್ಲ. ಈ ವಾರ ಕನ್ನಡದ ಉತ್ತಮ ಸಮಾಜಕ್ಕಾಗಿರುವ ಚಾನೆಲ್ಲೊಂದು ರಾಜ್ಯ ಸರ್ಕಾರದ ಅನ್ನ ಭಾಗ್ಯಕ್ಕೆ ಕನ್ನ ಹಾಕುವ ಕುಟುಕು ಕಾರ್ಯಾಚರಣೆ ವರದಿ ಪ್ರಸಾರ ಮಾಡುವುದಾಗಿ ಪ್ರಚಾರ ಮಾಡಿಕೊಂಡಿತು. ಪ್ರಸಾರಕ್ಕೆ ಸಾಕಷ್ಟು ಸಮಯಾವಕಾಶವೂ ಇದ್ದುದರಿಂದ ಇನ್ನೇನೇನು ಒಳ ವ್ಯವಹಾರಗಳು ನಡೆದವೋ ಗೊತ್ತಿಲ್ಲ. ಕಾರ್ಯಕ್ರಮ ಪ್ರಸಾರವಾದಾಗ ಅದರಲ್ಲಿ ಮಾಮೂಲಿ ಭ್ರಷ್ಟ ಅಧಿಕಾರಿಯೊಬ್ಬನ ಪ್ರಸಂಗ ಬಿಟ್ಟರೆ ಹೇಳಿಕೊಳ್ಳುವ ಯಾವ ಅವ್ಯವಹಾರವೂ ಇರಲಿಲ್ಲ. ಆದರೆ ಹಾಲಿ ಸಚಿವರೊಬ್ಬರ ಮಗನ ಹೆಸರು ಎಳೆದು ಅವರು ಮಹಾ ಅಕ್ರಮ ಎಸಗಿದ್ದಾರೆ kannada-news-channelsಎಂಬಂತೆ ಅಸಂಬದ್ಧ ಚಿತ್ರ ತೋರಿಸಿ, ಇದಕ್ಕೂ ಅವರ ಅವ್ಯವಹಾರಕ್ಕೂ ಏನು ಸಂಬಂಧ ಎಂದು ಬ್ರೇಕ್‌ನ ನಂತರ ಹೇಳುತ್ತೇವೆ ಎಂದವರು ಕಾರ್ಯಕ್ರಮ ಮುಗಿದ ಮೇಲೂ ಅಂಥ ಸಂಬಂಧ ಏನು ಎಂಬುದನ್ನು ಹೇಳಲಿಲ್ಲ, ತೋರಿಸಲೂ ಇಲ್ಲ! ಆದರೆ ಸಚಿವರು, ಅವರ ಉದ್ಯಮಿ ಮಗನ ಹೆಸರನ್ನು ಜಾಹೀರುಮಾಡಿದ್ದರು! ಇಂಥ ಮಹಾ ಕಾರ್ಯಾಚರಣೆಗಳ ಉದ್ದೇಶ ಏನಿರಬಹುದು ಎಂಬುದು ಜನತೆಗೆ ಅರ್ಥವಾಗದೆ?

ಚಾನೆಲ್ಲುಗಳಿರಲಿ, ಪತ್ರಿಕೆಗಳಿರಲಿ, ಅದಕ್ಕೆ ಬಂಡವಾಳ ಅಗತ್ಯ. ಭಾರೀ ಉದ್ಯಮಿಗಳೋ ಹಣವಿದ್ದು ರಾಜಕಾರಣಕ್ಕೆ ಹೋದವರೋ ರಾಜಕೀಯಕ್ಕೆ ಹೋಗಿ ಅಪಾರ ಹಣ ಮಾಡಿದವರೋ ದೊಡ್ಡ ಪ್ರಮಾಣದಲ್ಲಿ ಚಾನೆಲ್ ಅಥವಾ ಪತ್ರಿಕೆ ಆರಂಭಿಸಲು ಸಾಧ್ಯ. ಪರಿಸ್ಥಿತಿ ಹೀಗಿರುವಾಗ ಪತ್ರಿಕಾ ಉದ್ಯಮದಿಂದ ಮತ್ತಷ್ಟು ಹಣ, ಹೆಸರು ಮಾಡಲು ಅವರು ಬಯಸುತ್ತಾರೆ. ಇದು ತಮ್ಮದೇ ವಲಯ ಕಟ್ಟಿಕೊಳ್ಳಲು ದಾರಿ ಮಾಡುತ್ತದೆ. ಆಯಾ ಮಾಧ್ಯಮಗಳು ತಮ್ಮ ತಮ್ಮ ವಲಯದ ಹಿತಾಸಕ್ತಿಯನ್ನು ಕಾಪಾಡುತ್ತವೆಯೇ ವಿನಾ ಒಟ್ಟು ಸಮಾಜ ಅದಕ್ಕೆ ಮುಖ್ಯವಾಗುವುದಿಲ್ಲ. ಹೀಗಾಗಿಯೇ ಸಾರ್ವಜನಿಕ ಜೀವನದಲ್ಲಿ KannadaPapersCollageವೃತ್ತಿ ಕಟ್ಟಿಕೊಳ್ಳುವ ಮಾಧ್ಯಮಕ್ಕೆ ಸಾರ್ವಜನಿಕ ಹೊಣೆಗಾರಿಕೆ ತರಬಲ್ಲ ಆರ್‌ಟಿಐ ನಂಥ ಕಾನೂನು ಬೇಕಿಲ್ಲ. ಸಾರ್ವಜನಿಕ ಹಣಕಾಸಿಗೆ ಮತ್ತು ವ್ಯವಹಾರಕ್ಕೆ ಕೇವಲ ಸರ್ಕಾರಿ ಸಂಸ್ಥೆಗಳು ಮಾತ್ರ ಜವಾಬ್ದಾರಿಯೇ? ಹಾಗೆ ನೋಡಿದರೆ ಸಾರ್ವಜನಿಕ ಕೆಲಸ ಮಾಡುವ ಎಲ್ಲ ವೃತ್ತಿಗಳೂ ಆರ್‌ಟಿಐ ಅಡಿ ಬರಬೇಕು. ಆರ್‌ಟಿಐ ಕಾನೂನಿನಿಂದ ಹೊರಗುಳಿದ ಮಾಧ್ಯಮಗಳು, ರಾಜಕೀಯ ಪಕ್ಷಗಳು, ಎನ್‌ಜಿಒ ಇತ್ಯಾದಿಗಳಿಗೆ ಸಾರ್ವಜನಿಕ ಬಾಧ್ಯತೆಯೇ ಇಲ್ಲವೇ? ಇದೆ, ಆದರೆ ಇಂಥ ಹೊಣೆಗಾರಿಕೆಗೆ ಕಾನೂನಿನಲ್ಲಿ ಸದ್ಯ ಅವಕಾಶವಿಲ್ಲ! ಅಂಥ ಕಾನೂನು ಜಾರಿಯಾಗಲು ಇವು ಬಿಡುವುದೂ ಇಲ್ಲ.

ತೀರ್ಪು ನೀಡುವ ಮಾಧ್ಯಮಗಳು!


ಡಾ. ಶ್ರೀಪಾದ ಭಟ್


 

ಇತ್ತೀಚಿನ ವಿದ್ಯಮಾನಗಳನ್ನು ಮಾಧ್ಯಮಗಳಲ್ಲಿ ವೀಕ್ಷಿಸುವವರಿಗೆ, ಪತ್ರಿಕೆ ಓದುವವರಿಗೆ ಈ ಶೀರ್ಷಿಕೆ ಅರ್ಥವಾಗುತ್ತದೆ. ಹೇಳಿ ಕೇಳಿ ಉದ್ಯಮವಾದ ಮಾಧ್ಯಮ ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದನ್ನು ಗಮನಿಸಿದರೆ ಬೇಸರವಾಗುತ್ತದೆ. ಸಂವಿಧಾನದ ನಾಲ್ಕನೆಯ ಸ್ತಂಭ ಎನ್ನಲಾಗುವ (ಹಾಗೆ ಕರೆದಿದ್ದು ಎಡ್ಮಂಡ್ ಬರ್ಕ್‌ನೇ ವಿನಾ ಸಂವಿಧಾನವಲ್ಲ) ಮಾಧ್ಯಮಗಳು ಉಳಿದ ಮೂರು ಸ್ತಂಭಗಳನ್ನು ಅಲ್ಲಾಡಿಸುತ್ತಿವೆ. ಸಾಮಾನ್ಯವಾಗಿ ಮಾಧ್ಯಮದವರು ತಾವು ಸಮಾಜದ ಅಂಗ ಎಂಬುದನ್ನು ಮರೆತಿರುತ್ತಾರೆ. ಸಮಾಜಕ್ಕೆ ದಾರಿ ತೋರಿಸುವವರು ತಾವು ಎಂಬ ಗ್ರಹಿಕೆ ಅವರಲ್ಲಿ ಮನೆ ಮಾಡಿರುವುದುಂಟು. ಅದೇನೋ ಸರಿ, ಆದರೆ ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕಲ್ಲ? tv-mediaಶಾಲೆ-ಕಾಲೇಜುಗಳು ನಮ್ಮ ಕಾಲದಲ್ಲಿದ್ದಂತಿಲ್ಲ ಎಂದು ಹೇಳುವುದನ್ನು ಕೇಳುವಂತೆಯೇ ಮಾಧ್ಯಮಗಳೂ ಈ ಹಿಂದಿನಂತೆ ಇಲ್ಲ ಎಂಬುದು ಕಿವಿಗೆ ಬೀಳುವುದೂ ಅಪರೂಪವಲ್ಲ. ಮಾಧ್ಯಮ ಒಂದು ಉದ್ಯಮದ ಸ್ವರೂಪ ಪಡೆದ ಮೇಲೆ ಹೀಗಾಗಿರಲೂ ಸಾಕು.

ವಿದ್ಯುನ್ಮಾನ ಮಾಧ್ಯಮಗಳಂತೂ ಮೊದಲು ಸುದ್ದಿ ಬಿತ್ತರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸುದ್ದಿಯ ಹಿಂದು ಮುಂದು ಪರಿಶೀಲಿಸದೇ ಪರದೆಯ ಮೇಲೆ ತಮ್ಮ ಚಾನಲ್ಲಿನ ಛಾಪು ಒತ್ತಿ ಮತ್ತೆ ಮತ್ತೆ ಪ್ರಸಾರ ಮಾಡುತ್ತವೆ. ಬಹಳಷ್ಟು ಬಾರಿ ಒಂದೇ ಸಾಲಿನ ಸುದ್ದಿ, ಒಂದೇ ಚಿತ್ರವನ್ನು ದಿನವಿಡೀ ಮತ್ತೆ ಮತ್ತೆ ಪ್ರಸಾರ ಮಾಡುತ್ತಲೇ ಇರುತ್ತವೆ. ಅವು ಹೀಗೆ ಬಿತ್ತರಿಸುವ ಸುದ್ದಿ ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಹಣ ಪಡೆಯುತ್ತಿರುವ ಸನ್ನಿವೇಶವೋ, ಮಹಿಳೆಯೊಬ್ಬಳು ವ್ಯಕ್ತಿಗೆ ಥಳಿಸುವ ಸನ್ನಿವೇಶವೋ ಆಗಿರುತ್ತದೆ. ವರದಿಗಾರ ನೀಡುವ ಧಾವಂತದ ವಿವರಣೆಯೇ ಆಯಾ ಸನ್ನಿವೇಶದ ಸತ್ಯವಾಗಿರುತ್ತದೆ! ಕೆಲವೊಮ್ಮೆ ಸಂಘಟನೆಗಳ ಕಾರ್ಯಕರ್ತರೆಂದು ಕರೆದುಕೊಳ್ಳುವವರು ಇಂಥ ಸನ್ನಿವೇಶಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ಹೊಡೆಯುವವರು, ಹೊಡೆಸಿಕೊಳ್ಳುವವರು, ಸುದ್ದಿ ತಿಳಿದು ನೆರೆದ ಅಕ್ಕಪಕ್ಕದ ಒಂದಿಷ್ಟು ಜನರ ಗುಂಪನ್ನು ಬಿಟ್ಟರೆ ಅಲ್ಲಿರುವುದು ಚಾನೆಲ್ಲಿನ ಛಾಯಾಗ್ರಾಹಕ ಮತ್ತು ವರದಿಗಾರರು ಮಾತ್ರ! ಇವರಿಬ್ಬರೂ ಇಂಥ ಪ್ರಸಂಗದ ಆರಂಭದ ಬಿಂದುವಿನಿಂದಲೂ ಪ್ರಸಾರ ಕೈಗೊಂಡಿರುತ್ತಾರೆ. ಅನೇಕ ಬಾರಿ ಇಂಥ ಸಂದರ್ಭಗಳು ಚಾನೆಲ್‌ಗಳಲ್ಲಿ ಪ್ರಸಾರವಾಗಿವೆ, ಆಗಾಗ ಆಗುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ? ಇಂಥಲ್ಲಿ, ಇಂಥ ಪ್ರಸಂಗ ನಡೆಯಲಿದೆ ಎಂದು ವರದಿಗಾರನಿಗೂ ಛಾಯಾಗ್ರಾಕನಿಗೂ ತಿಳಿಯುವುದಾದರೂ ಹೇಗೆ? tv-mediaಘಟನೆ ನಡೆಯತೊಡಗಿದ ಮೇಲೆ ವರದಿಗಾರರು ಬಂದರೆ ಯಾರೋ ತಿಳಿಸಿದ ಮೇಲೆ ಬಂದಿದ್ದಾರೆ ಎಂದು ಭಾವಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಈಚೆಗೆ ಬೆಂಗಳೂರಿನಲ್ಲಿ ಹೆಣ್ಣೊಬ್ಬಳು ತಾನು ಕೆಲಸ ಬಿಟ್ಟ ಕಚೇರಿಯೊಂದರ ಮಾಲೀಕನ ಮೇಲೆ ಹಲ್ಲೆ ನಡೆಸಿದಳು. ಅವಳು ಆ ಕಚೇರಿಯೊಳಗೆ ಹೋಗುವುದು, ಅವಳೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ನುಗ್ಗುವುದು, ಮಾಲೀಕನನ್ನು ಎಳೆದು ಥಳಿಸುವುದು, ಕೊನೆಗೆ ಹೆಣ್ಣು ಮಗಳು ಚಪ್ಪಲಿಯಲ್ಲಿ ಆತನಿಗೆ ಬಾರಿಸುವುದು ಎಲ್ಲವನ್ನೂ ಆಮೂಲಾಗ್ರವಾಗಿ (ಸಿಸಿ ಕ್ಯಾಮರ ಸೆರೆ ಹಿಡಿದ ಚಿತ್ರವಲ್ಲ) ಚಾನೆಲ್ಲು ಬಿತ್ತರಿಸಿತು. ಮೂರ್ನಾಲ್ಕು ಜನರನ್ನು ಸ್ಟುಡಿಯೋಗೆ ಕರೆಸಿ ಭಾರೀ ಚರ್ಚೆ ನಡೆಸಿತು. ಮಾಲೀಕನೂ ಬಂದ. ಆತ ದೌರ್ಜನ್ಯ ಎಸಗಿದ್ದಾನೆ, ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ, ಇತ್ಯಾದಿ ಆರೋಪಗಳನ್ನು ಆಕೆ ಮಾಡಿದರೆ, ಆತ ಇವೆಲ್ಲ ಸುಳ್ಳು, ಆಕೆ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ, ವೃಥಾ ಹಣ ಕೀಳುವ ಆಕೆಯ ಪ್ಲಾನ್ ಇದು ಎಂದು ಹೇಳುತ್ತಿದ್ದ.

ಇಷ್ಟಾದ ಮೇಲೆ ಕೇಸು ದಾಖಲಾಗಿ ತನಿಖೆ ನಡೆದು ತಿಂಗಳುಗಳ ನಂತರ ಆತನ ತಪ್ಪು ಏನೂ ಇಲ್ಲ ಎಂದು ಸಾಬೀತಾಯಿತು. ಅಲ್ಲದೇ ಆ ಹೆಣ್ಣು ಮಗಳೇ ತಪ್ಪೊಪ್ಪಿಕೊಂಡಳು! ಮಾಲೀಕ ಸತ್ಯವಂತನೇ ಇರಬಹುದು. ಆದರೆ ಆಕೆ ಆರೋಪಿಸುವಾಗ, ಸಂಘಟನೆಯವರು ನುಗ್ಗಿ ದಾಂಧಲೆ ಮಾಡುವಾಗ, ಈತನ ಅಸಹಾಯಕತೆಯನ್ನು ಏಕಪಕ್ಷೀಯವಾಗಿ ಜಗತ್ತಿಗೆ ಬಿತ್ತರಿಸಿ ಅವನ ವ್ಯಕ್ತಿತ್ವಕ್ಕೆ ಹಾನಿ ಮಾಡುವಾಗ ಆ ಮಾಧ್ಯಮದ ಜನರ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿತ್ತು? ಇವರ ತಪ್ಪಿಗೆ ತಪ್ಪು ಮಾಡದ ಜನ ತೆರಬೇಕಾದ ಬೆಲೆ ಏನು?

ಇಂಥ ಸನ್ನಿವೇಶ ವೀಕ್ಷಿಸುವ ಜನ ಕೂಡ ಆ ಕ್ಷಣದ ಪ್ರತಿಕ್ರಿಯೆಗೆ ಪಕ್ಕಾಗಿ ವ್ಯಕ್ತಿ ಕೈಗೆ ಸಿಕ್ಕರೇ ತಾವೂ ನಾಲ್ಕು ಬಾರಿಸುವ ನಿರ್ಧಾರಕ್ಕೆ ಬಂದಿರುತ್ತಾರೆ! ಅಲ್ಲದೇ ಗಂಡು-ಹೆಣ್ಣುಗಳ ಸಂಬಂಧ ಕುರಿತ ಗ್ರಹಿಕೆ ಸೂಕ್ಷ್ಮವಾಗಿರುವ ನಮ್ಮ ಸಮಾಜದಲ್ಲಿ ಗಾಳಿ ಸುದ್ದಿಗಳೇ ವ್ಯಕ್ತಿತ್ವ ನಾಶಕ್ಕೆ ಸಾಕು. ಅಂಥದ್ದರಲ್ಲಿ ಸಚಿತ್ರ ವಿವರ ನೋಡಿದರೆ ಜನ ಸುಮ್ಮನಿದ್ದಾರೆಯೇ? ಯಾರೋ ಒಬ್ಬಳು ಯಾರನ್ನೋ ನಂಬಿ ಮೋಸ ಹೋದಳಂತೆ ಎಂಬುದು ನಮ್ಮ ವೈಯಕ್ತಿಕ ಜೀವನವನ್ನು ಯಾವ ರೀತಿಯಲ್ಲೂ ಸುಧಾರಿಸುವ ಸಂಗತಿಯಲ್ಲ. ಆದರೆ ಆತ ಹೇಗೆ ಮೋಸ ಮಾಡಿದ ಅಥವಾ ಈಕೆ ಹೇಗೆ ನಂಬಿ ಕೆಟ್ಟಳು Corruption-in-News-Mediaಎಂಬುದನ್ನು ಕೆದಕಿ, ಬೆದಕಿ ಆಡಿಯೋ ವಿಡಿಯೋ (ಅಸಲಿಯೋ ನಕಲಿಯೋ ತಿಳಿಯುವುದು ಆಮೇಲೆ) ಇತ್ಯಾದಿ ಸಿಕ್ಕಿದ ದಾಖಲೆಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವ, ತಮ್ಮ ನೂರು ಸಮಸ್ಯೆಗಳನ್ನು ಬದಿಗಿಟ್ಟು ಅದರ ಬಗ್ಗೆ ಹರಟುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ಚಾನೆಲ್ಲಿಗೆ ಬೇಕಾದುದು ಇಂಥವರೇ. ಇಂಥವರ ಸಂಖ್ಯೆ ಹೆಚ್ಚಿದಷ್ಟೂ ಅದರ ಟಿಆರ್‌ಪಿ ಹೆಚ್ಚುತ್ತದೆ! ಈ ಬಗೆಯ ಸಂಗತಿಗಳಲ್ಲಿ ಬಹುಪಾಲು ಜನರಿಗೆ ಇರುವ ಕೆಟ್ಟ ಕುತೂಹಲವನ್ನು ಚಾನೆಲ್ಲುಗಳು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತವೆ.

ಗಂಡ-ಹೆಂಡತಿಯ, ಪ್ರಿಯಕರ-ಪ್ರೇಯಸಿಯ, ಅಪ್ಪ-ಮಕ್ಕಳ ಒಟ್ಟಿನಲ್ಲಿ ನಾಲ್ಕು ಗೋಡೆ ನಡುವೆ ಇರಲೆಂದು ಸಮಾಜ ಬಯಸುವ ಸಂಗತಿಗಳನ್ನು ನ್ಯಾಯದ ಹೆಸರಿನಲ್ಲಿ ಮಾಧ್ಯಮಗಳು ಬಯಲಿಗೆ ಎಳೆಯುತ್ತವೆ. ಇಂಥ ವಿಷಯಗಳ ಸರಿ ತಪ್ಪುಗಳನ್ನು ಪರಿಶೀಲಿಸಲು ನಮ್ಮಲ್ಲಿ ಕಾನೂನು ವ್ಯವಸ್ಥೆ ಇದೆ ಎಂಬುದನ್ನು ಅವು ಮರೆಯುತ್ತವೆ.

ಈ ಬಗೆಯ ವರದಿಗಾರಿಕೆಯಲ್ಲಿ ಮುದ್ರಣ ಮಾಧ್ಯಮಗಳೂ ಕಡಿಮೆ ಏನಿಲ್ಲ. ಇಂಥ ಸುದ್ದಿಗಳನ್ನೇ ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು ಸಹಜ ಸುದ್ದಿ, ವಿಶ್ಲೇಷಣೆ ಹೊತ್ತು ತರುವ ಪತ್ರಿಕೆಗಳಿಗಳಿಗಿಂತ ಹೆಚ್ಚು ಪ್ರಸಾರ ಕಾಣುತ್ತವೆ!

ಕೆಲವು ಪತ್ರಿಕೆಗಳು ಒಮ್ಮೆ ಎಬಿಸಿ ವರದಿಯಲ್ಲಿ ಮೇಲಿನ ಸ್ಥಾನ ಪಡೆದರೆ ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತವೆ. ಅನೇಕ ಒಳ ವ್ಯವಹಾರಗಳು, ಬ್ಲಾಕ್‌ಮೇಲ್, ಗುಂಪುಗಾರಿಕೆ ಏನೆಲ್ಲ ಅಲ್ಲಿ ಶುರುವಾಗುತ್ತದೆ. ಸುದ್ದಿ ಯಾವುದು, ಜಾಹೀರಾತು ಯಾವುದು ಎಂಬುದು ಜಾಣ ಓದುಗರಿಗೂ ತಿಳಿಯದಂತೆ ಕೊಡಬಲ್ಲ ಅತಿ ಜಾಣತನ ಅವುಗಳಿಗೆ ಕರಗತವಾಗಿರುತ್ತದೆ. ಪತ್ರಿಕೆಯ ಪ್ರಭಾವದ ಮೂಲಕ ಬೇಳೆ ಬೇಯಿಸಿಕೊಳ್ಳುವುದು, ಸ್ವಾರ್ಥಕ್ಕೆ ನೆರವಾದವರನ್ನು ಸಂದರ್ಭ ಸೃಷ್ಟಿಸಿಕೊಂಡು ಹೊಗಳುವುದು, ಅಡ್ಡಿಯಾದವರನ್ನು ಮಟ್ಟ ಹಾಕಲು ಸಂದರ್ಭ ಸಿಕ್ಕಾಗ ಅಥವಾ ಸೃಷ್ಟಿಸಿಕೊಂಡು ಯತ್ನಿಸುವುದು ಇತ್ಯಾದಿ, ಇತ್ಯಾದಿ ನಡೆದೇ ಇರುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಡೆ ನುಡಿ ತೋರಿಸಿಕೊಳ್ಳುವ ಜಾಣ್ಮೆ ಇದ್ದರೆ ಜಾಣ ಓದುಗರನ್ನು TV-Reporterಮರಳು ಮಾಡುವುದು ಕಷ್ಟವೇನೂ ಅಲ್ಲ. ಆದರೆ ಇವೆಲ್ಲ ಸದಾ ಕಾಲ ನಡೆಯುವುದಿಲ್ಲ. ಪತ್ರಿಕೆ ಓದುವವರು ಅಥವಾ ಟಿವಿ ವೀಕ್ಷಕರು ಓದು ಬರಹ ಗೊತ್ತಿರುವವರೇ. ಆದರೆ ಇವೆಲ್ಲ ಓದುಗರ ಗಮನಕ್ಕೆ ಬರುವಷ್ಟರಲ್ಲಿ ಸ್ವಾರ್ಥಿಗಳ ಬೇಳೆ ಬೆಂದಿರುತ್ತದೆ.

ಈ ಕಾರಣಕ್ಕಾಗಿಯೇ ಮಾಧ್ಯಮಗಳ ವಿಶ್ವಾಸಾರ್ಹತೆಯ ಸಮೀಕ್ಷೆ ಆಗಾಗ ನಡೆಯಬೇಕು. ಪಶ್ಚಿಮ ದೇಶಗಳಲ್ಲಿ ಕೆಲವು ಸಂಸ್ಥೆಗಳು ನಿಯತವಾಗಿ ಇಂಥ ಕೆಲಸವನ್ನು ವೃತ್ತಿಯಾಗಿಯೇ ಮಾಡುತ್ತವೆ. ಫ್ಯೂ ರಿಸರ್ಚ್ ಸೆಂಟರ್ ಫಾರ್ ಪೀಪಲ್ ಆಂಡ್ ಪ್ರೆಸ್ ಸಂಸ್ಥೆ ಅಮೆರಿಕದಲ್ಲಿ ಈಚೆಗೆ ಇಂಥ ಒಂದು ಸಮೀಕ್ಷೆ ನಡೆಸಿದೆ. ಅದರ ಪ್ರಕಾರ ಮೂರರಲ್ಲಿ ಎರಡು ಭಾಗ ಜನರಿಗೆ ತಾವು ಓದುವ, ಕೇಳುವ ಅಥವಾ ವೀಕ್ಷಿಸುವ ಸುದ್ದಿಯ ಖಚಿತತೆಯ ಬಗ್ಗೆ ಶಂಕೆ ಇದ್ದರೆ ಶೇ.53 ಜನರಿಗೆ ಸುದ್ದಿಯ ಬಗ್ಗೆ ವಿಶ್ವಾಸವೇ ಇಲ್ಲವಂತೆ.

ಆಂಧ್ರಪ್ರದೇಶದ ಸೆಂಟರ್ ಫಾರ್ ಮೀಡಿಯಾ ಸ್ಟಡಿ ನಡೆಸಿದ ಇಂಥ ಒಂದು ಸಮೀಕ್ಷೆಯಲ್ಲಿ ವಿದ್ಯುನ್ಮಾನ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಸುದ್ದಿ ಹೆಚ್ಚು ವಿಶ್ವಾಸಾರ್ಹ ಎಂದು ಬಹುತೇಕ ಜನ ಹೇಳಿದ್ದಾರೆ. ಸ್ಕೂಪ್, ಬ್ರೇಕಿಂಗ್ ನ್ಯೂಸ್ ಕೊಟ್ಟು ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಮತ್ತು ಹೆಚ್ಚು ಜನರನ್ನು ತಲುಪುವ ಪೈಪೋಟಿಯಲ್ಲಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಮೂಲಭೂತ ಸಂಗತಿಯನ್ನೇ ಮರೆಯುತ್ತಿವೆ. ಏನೇನೋ ಸ್ವಾರ್ಥ ಉದ್ದೇಶದಿಂದ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೇ ಸಮಾಜವನ್ನು ಅಡ್ಡಾದಿಡ್ಡಿ ಎಳೆದು ದಿಕ್ಕು ತಪ್ಪಿಸಲು ತೊಡಗಿದರೆ ಅದೇ ಸಮಾಜದ ಒಂದು ಭಾಗವಾದ ಮಾಧ್ಯಮಗಳು ಸುರಕ್ಷಿತವಾಗಿ ಇರಬಲ್ಲವೇ, ಕುಳಿತ ಟೊಂಗೆಯ ಬುಡವನ್ನೇ ಕಡಿಯುವ ಮೂರ್ಖತನ ಇದಾಗದೇ ಎಂಬುದೇ ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ.