Category Archives: ಪ್ರಶಾಂತ್ ಹುಲ್ಕೋಡು

ಕೇಜ್ರಿ ಕ್ರಾಂತಿ 2.0 : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ

ಆತ್ಮೀಯರೇ,

ಯುವ ಪತ್ರಕರ್ತ ಪ್ರಶಾಂತ್ ಹುಲ್ಕೋಡುprashant-hulkodu ನಮ್ಮ ವರ್ತಮಾನ.ಕಾಮ್ ಓದುಗರಿಗೆ ಪರಿಚಿತರು. ಈ ವರ್ಷದ ಅರಂಭದಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸುಮಾರು ಎರಡು ವಾರ ಇದ್ದ ಅವರು ನಿಯಮಿತವಾಗಿ ಆಗ ವರ್ತಮಾನ.ಕಾಮ್‌ಗೆ ಬರೆದರು. ಆ ಚುನಾವಣೆಯ ಬಗ್ಗೆ ನಮ್ಮ ಕನ್ನಡದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗದೇ ಇದ್ದ ಮಾಹಿತಿಗಳನ್ನು ಆ ಲೇಖನಗಳು ನಮ್ಮ ಓದುಗರಿಗೆ ಒದಗಿಸಿದವು. ಬಹಳ ಮೆಚ್ಚುಗೆ ಪಡೆದ ಲೇಖನಗಳವು.

ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ನಂತರ ಈ ಯುವ ಪತ್ರಕರ್ತ ಮಿತ್ರ “ಕೇಜ್ರಿ ಕ್ರಾಂತಿ 2.0” ಎಂಬ ಸಾಕಷ್ಟು ದೀರ್ಘವಾದ ಪುಸ್ತಕವನ್ನೇ ಬರೆದಿದ್ದಾರೆ. ಅಣ್ಣಾ ಹಜಾರೆ ಹೋರಾಟದಿಂದ ಆರಂಭವಾಗಿ, ಆಮ್ ಆದ್ಮಿ ಪಕ್ಷದ ಉದಯ, ಅದು ಎದುರಿಸಿದ ಮೂರು ಚುನಾವಣೆಗಳು, ಆಂತರಿಕ ಮತ್ತು ಬಾಹ್ಯ ಸವಾಲುಗಳು, ಇತ್ಯಾದಿಗಳನ್ನು ಇಟ್ಟುಕೊಂಡು ಇಲ್ಲಿಯವರೆಗೆ ಹೊರಗೆ ಎಲ್ಲೂ ದಾಖಲಾಗದ ಪಕ್ಷದ ಮತ್ತು ಅದರ ಮುಖಂಡರ ಅನೇಕ ಆಂತರಿಕ kejri-kranti-2.0-invitationವಿಚಾರಗಳು ಮತ್ತು ವಿವರಗಳನ್ನು ಈ ಪುಸ್ತಕದಲ್ಲಿ ಪ್ರಶಾಂತ್ ದಾಖಲಿಸಿದ್ದಾರೆ. ನಮ್ಮ “ಮೌಲ್ಯಾಗ್ರಹ ಪ್ರಕಾಶನ”ದಿಂದ ಇದು ಪ್ರಕವಾಗುತ್ತಿದೆ. ಕನ್ನಡಕ್ಕೆ ಬಹಳ ಅಪರೂಪದ ಪುಸ್ತಕ ಇದು ಎನ್ನುವ ಹೆಮ್ಮೆಯ ಭಾವನೆ ನನ್ನದು.

ಈ ಪುಸ್ತಕ ಅಧಿಕೃತವಾಗಿ ನಾಡಿದ್ದು ಶುಕ್ರವಾರ ಸಂಜೆ 5:30 ಕ್ಕೆ ಫ್ರೀಡಂ ಪಾರ್ಕಿನಲ್ಲಿರುವ ಓವಲ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ನಮ್ಮೆಲ್ಲಾ ವರ್ತಮಾನ ಬಳಗದ ಪರವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಕಾರ್ಯಕ್ರಮದ ವಿವರಗಳು ಇಲ್ಲಿ ಲಗತ್ತಿಸಿರುವ ಆಹ್ವಾನ ಪತ್ರಿಕೆಯಲ್ಲಿದೆ.

ನಿಮ್ಮ ಬರುವಿನ ನಿರೀಕ್ಷೆಯಲ್ಲಿ,
ರವಿ


kejri-kranti-2.0-coverpage

ದಿಲ್ಲಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಆಮ್ ಆದ್ಮಿ ಪಾರ್ಟಿ 2.0!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ಸರಿಯಾಗಿ ಒಂದು ವರ್ಷದ ನಂತರ, ಫೆ. 14ರಂದು ದಿಲ್ಲಿಯ ವಿಧಾನಸಭೆಗೆ ಆಡಳಿತ ಪಕ್ಷವಾಗಿ ಪ್ರವೇಶಿಸುತ್ತಿರುವ ಆಮ್‍ ಆದ್ಮಿ ಪಾರ್ಟಿಗೂ, 2013ರಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎಎಪಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿಯೇ, ಈ ಬಾರಿಯ ಚುನಾವಣೆ ಗೆದ್ದದ್ದು ಆಮ್‍ ಆದ್ಮಿ ಪಾರ್ಟಿanna_jantar-mantar-delhi 2.0 ಅನ್ನೋ ಮಾತು ದಿಲ್ಲಿಯ ರಾಜಕೀಯ ತಜ್ಞರ ವಲಯದಲ್ಲಿ ಚಾಲ್ತಿಗೆ ಬಂದಿದೆ. ದಿಲ್ಲಿ ವಿಧಾನಸಭೆಗೆ ನಡೆದ 2013ರ ಚುನಾವಣೆಯಲ್ಲಿ ಮುಖ್ಯವಾಹಿನಿಗೆ ಬಂದು, ಕಾಂಗ್ರೆಸ್‍ ಬೆಂಬಲ ಪಡೆದು, ಸರಕಾರವನ್ನು ರಚಿಸಿ, 49 ದಿನಗಳಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದ ಎಎಪಿ ಈಗ ಬದಲಾಗಿದೆ ಅಥವಾ ಸುಧಾರಣೆಗೊಂಡಿದೆ. ಪಕ್ಷದ ಗುಣಲಕ್ಷಣಗಳು, ತಿಳಿವಳಿಕೆ, ಮೆಚ್ಯುರಿಟಿ ಹಾಗೂ ನಡೆಯಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸಲಾಗುತ್ತಿದೆ.

2011 ರ ಏಪ್ರಿಲ್‍ನಲ್ಲಿ ಮಹಾರಾಷ್ಟ್ರದ ರಳೇಗಣ ಸಿದ್ಧಿಯಲ್ಲಿದ್ದ ಅಣ್ಣಾ ಹಜಾರೆಯವರನ್ನು ದಿಲ್ಲಿಯ ಜಂತರ್‍ ಮಂತರ್‍ಗೆ ಪರಿಚಯಿಸಲಾಯಿತು. ದೇಶಾದ್ಯಂತ ‘ಭ್ರಷ್ಟಚಾರ ವಿರೋಧಿ’ ಅಭಿಯಾನವನ್ನು ನಡೆಸಲಾಯಿತು. ಅದನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮೀಕರಿಸುವ ಪ್ರಯತ್ನವೂ ನಡೆಯಿತು. ಸಹಜವಾಗಿಯೇ ದೇಶ ಎಂದರೆ ಗಡಿ, ಧರ್ಮ ಮಾತ್ರವಲ್ಲ, ಇಲ್ಲಿ ಬದುಕುತ್ತಿರುವ ಬಡ ಜನರು ಮತ್ತವರ ಸಂಕಷ್ಟಗಳು ಎಂದು ನಂಬುವವರು ಈ ಅಭಿಯಾನವನ್ನು ಒಪ್ಪಿಕೊಳ್ಳಲಿಲ್ಲ. ಆದರೂ, ಜಂತರ್‍ ಮಂತರ್‍ ಯುವ ಜನರಿಂದ ತುಂಬಿ ತುಳುತ್ತಿದ್ದಾಗಲೇ, ಕೇಂದ್ರ ಸರಕಾರ ಜನಲೋಕಪಾಲವನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಿತು. ಅಣ್ಣಾ ತಮ್ಮ ಊರಿಗೆ ವಾಪಾಸಾದರು. ಆ ವರ್ಷದ ಆಗಸ್ಟ್ ನಲ್ಲಿ ಅಧಿವೇಶನಕ್ಕೆ ಸಿದ್ಧತೆ ಶುರುವಾಯಿತು. ಆದರೆ, ಜನಲೋಕಪಾಲದ ಚಕಾರ ಎತ್ತಲಿಲ್ಲ. ಹೀಗಾಗಿ, ಮತ್ತೆ ಅಣ್ಣಾ ನೇತೃತ್ವದಲ್ಲಿ ಅಭಿಯಾನ ಭಾಗ ಎರಡಕ್ಕೆ ಕಾಲ ಕೂಡಿಬಂತು. ಕೇಜ್ರಿವಾಲ್‍ ಹುಟ್ಟಿದ ದಿನ ಆಗಸ್ಟ್ 16ರಂದೇ ಜನಲೋಕಪಾಲಕ್ಕಾಗಿ ಎರಡನೇ ಹಂತದ ಹೋರಾಟ ಶುರುವಾಯಿತು. ಈ ಸಮಯದಲ್ಲಿ ಕೇಂದ್ರದ ಯುಪಿಎ ಸರಕಾರ ಅಣ್ಣಾ ಮತ್ತವರ ಜತೆಗಾರರನ್ನು ಬಂಧಿಸುವ ಮೂಲಕ ಅಭಿಯಾನಕ್ಕೊಂದು ಚಳವಳಿಯ ರೂಪ ನೀಡಿತು. ಆ ಸಮಯದಲ್ಲಿ ಸುಮಾರು ಹನ್ನೆರಡು ದಿನ ನಡೆದ ಹೋರಾಟಕ್ಕೆ ಡಿಸೆಂಬರ್‍ ಅಧಿವೇಶನದಲ್ಲಿ ಬಿಲ್‍ ಜಾರಿಗೆ ಬರುವ ಭರವಸೆ ಸಿಕ್ಕಿತು.

ಮುಂದೆ ಡಿಸೆಂಬರ್‍ ಸಮಯದಲ್ಲಿ ಮತ್ತೆ ಅಣ್ಣಾ ತಂಡ ಹೋರಾಟಕ್ಕೆ ಇಳಿತಾದರೂ ಹಿಂದಿನ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಸಮಯದಲ್ಲಿ ಜನಲೋಕಪಾಲದ ಜತೆಗೆ ಸಿಬಿಐಗೆ ಸ್ವಾಯತ್ತತೆ ನೀಡುವ ಇನ್ನಿತರೆ ಬೇಡಿಕೆಗಳು ಸೇರಿಕೊಂಡಿದ್ದವು. 2012ರಲ್ಲಿ ಮತ್ತೆ ಅಣ್ಣಾ ಉಪವಾಸ ಶುರುವಾಯಿತು. ಹೋರಾಟ ನಿಧಾನವಾಗಿ ಭ್ರಷ್ಟರನ್ನು ಗುರುತಿಸುವ ಗಟ್ಟಿತನ ಬೆಳೆಸಿಕೊಂಡಿತ್ತು. ಜನರಲ್‍ ಆಗಿರುವ ಬೇಡಿಕೆಗಳನ್ನು ಮೀರಿ, ನಿರ್ಧಿಷ್ಟವಾಗಿ ಇಂತವರಿಂದಲೇ ಜನಲೋಕಪಾಲಕ್ಕೆ ಅಡ್ಡಿಯಾಗುತ್ತಿದೆ ಎಂದು ಹೋರಾಟದ ಮುಂಚೂಣಿಯಲ್ಲಿದ್ದವರು ಆರೋಪಿಸಿದರು. ಜತೆಗೆ, ಕೇಜ್ರಿವಾಲ್‍ ಮತ್ತು ಕೆಲವರು ಕಾಂಗ್ರೆಸ್‍ ನೀಡಿದ ರಾಜಕೀಯ ಅಹ್ವಾನವನ್ನು ಸ್ವೀಕರಿಸಿದರು. ಈ ಮೂಲಕ ಇದು ಅಧಿಕಾರಕ್ಕೆ ಹಾತೊರೆಯಲು ಹೋಗಿ ಮು‍ಗ್ಗರಿಸಿದವರ ಮತ್ತೊಂದು ತಂಡವಾಗುತ್ತದೆ ಎಂಬ kejriwal-aap-launch-delhiಭಾವನೆ ಬೆಳೆಯಿತು. ನವೆಂಬರ್‍ನಲ್ಲಿ ಅಧಿಕೃತವಾಗಿ ‘ಅಮ್‍ ಆದ್ಮಿ ಪಕ್ಷ’ ಘೋಷಣೆಯಾಯಿತಾದರೂ ಅದನ್ನು ಗಂಭೀರವಾಗಿ ತೆಗೆದುಕೊಂಡವರ ಸಂಖ್ಯೆ ಕಡಿಮೆ ಇತ್ತು.

ಹೀಗಿರುವಾಗಲೇ, ಆ ವರ್ಷದ ಡಿಸೆಂಬರ್‍ ಬಂತು. ಅದೊಂದು ಕರಾಳ ರಾತ್ರಿ ‘ನಿರ್ಭಯಾ ಪ್ರಕರಣ’ ನಡೆದುಹೋಯಿತು. ದಿಲ್ಲಿಯ ಯುವ ಜನತೆ ಬೀದಿಗೆ ಇಳಿಯಿತು. ಮೇಲ್ನೋಟಕ್ಕೆ ತಣ್ಣಗಾದಂತೆ ಕಾಣಿಸುತ್ತಿದ್ದ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ನಿರ್ಭಯಾ ಪರವಾಗಿ ಹೋರಾಟ ಆರಂಭಿಸಿದರು. ಮುಂದೆ ಬೆಲೆ ಏರಿಕೆ ವಿಚಾರವನ್ನು ಇಟ್ಟುಕೊಂಡು ಜನಜಾಗೃತಿ ಕೈಗೊಂಡರು. ನಿಧಾನವಾಗಿ ತಮ್ಮ ಬೇಡಿಕೆ ಆಧಾರಿತ ಚಳವಳಿಗೆ ಸರಕಾರದ ವಿರೋಧಿ ಆಯಾಮ ಸಿಗುವಂತೆ ನೋಡಿಕೊಂಡರು. 2011ರಲ್ಲಿ ಮೊದಲ ಬಾರಿಗೆ ಭ್ರಷ್ಟಾಚಾರ ವಿರೋಧ ಅನ್ನೋ ಸಮಾನ ಆಶಯವನ್ನು ಇಟ್ಟುಕೊಂಡು ಹೋರಾಟದ ಭೂಮಿಕೆಗೆ ಹೊಸತಾಗಿ ಪರಿಚಯಗೊಂಡಿದ್ದ ವರ್ಗ, ಸಹಜವಾಗಿಯೇ ಶೀಲಾ ದೀಕ್ಷಿತ್‍ ನೇತೃತ್ವದ ಕಾಂಗ್ರೆಸ್‍ ಸರಕಾರದ ವಿರುದ್ಧ ತೊಡೆತಟ್ಟಿದ್ದ ಎಎಪಿ ಜತೆಯಾದರು. ಈ ಸಮಯದಲ್ಲಿ ಪಕ್ಷದೊಳಗೆ ಎಲ್ಲಾ ರೀತಿಯ ಆಲೋಚನೆಗಳನ್ನು ಇಟ್ಟುಕೊಂಡ ಜನ ಬಂದಿದ್ದರಿಂದ ಒಂದು ರೀತಿಯ ಅಸ್ಪಷ್ಟತೆ ಹೊರನೋಟಕ್ಕೆ ಭಾಸವಾಗುತ್ತಿತ್ತು. ಈ ಸಮಯದಲ್ಲಿ ಬಂದಿದ್ದು ದಿಲ್ಲಿ ವಿಧಾನಸಭಾ ಚುನಾವಣೆ- 2013.

ಹೊಸ ಪಕ್ಷ, ಅನನುಭವಿಗಳ ತಂಡ ಚುನಾವಣೆಗೆ ಇಳಿದಾಗ ಹೀಗಳೆದವರ ಸಂಖ್ಯೆಯೇ ದೊಡ್ಡದಿತ್ತು. ಆದರೆ, ಯಾವಾಗ 28 ಸ್ಥಾನಗಳನ್ನು ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಎಎಪಿ ಹೊರಹೊಮ್ಮಿತೋ, ಪರ್ಯಾಯದ ಆಲೋಚನೆ ಮಾಡುವವರಲ್ಲಿ ಒಂದಷ್ಟು ಭರವಸೆ, ಉಳಿದವರಲ್ಲಿ ಕುತೂಹಲ ಮೂಡಿತು. ಅಷ್ಟೆ, ಮುಂದೆ 49 ದಿನಗಳ ಅಧಿಕಾರ, ರಾಜೀನಾಮೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ, ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ಕಸರತ್ತುಗಳ ನಡುವೆ ಆಮ್‍ ಆದ್ಮಿshajiya-delhi-ilmi-2015 ಪಕ್ಷದ ಕತೆ ಮುಗಿದು ಹೋಯಿತು ಎಂದು ಎಲ್ಲರೂ ಅಂದುಕೊಂಡರು. ಆ ಸಮಯದಲ್ಲೇ ಪಕ್ಷದೊಳಗೆ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು. ಗೆಲುವಿನಲ್ಲಿ ಪಾಲು ಕೇಳುತ್ತಾರೆ, ಅದೇ ಸೋತರೆ ಕಲ್ಲು ಬೀಸಿ ಓಡುವವರ ಸಂಖ್ಯೆ ದೊಡ್ಡದಿರುತ್ತದೆ. ಎರಡು ವರ್ಷಗಳ ಹಸಗೂಸು ಎಎಪಿಯ ಆಂತರಾಳದ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಕಷ್ಟು ಜನ ಪಕ್ಷ ತೊರೆದರು. ಭಿನ್ನ ಆಲೋಚನೆ ಇಟ್ಟುಕೊಂಡವರು, ಇನ್ನೂ ರೂಪ ಪಡೆದುಕೊಳ್ಳುವ ಹಂತದಲ್ಲಿದ್ದ ಪಕ್ಷದ ಸಿದ್ಧಾಂತವನ್ನೇ ಖಂಡಿಸಿ ದೂರವಾದರು. ಕೊನೆಗೆ ಉಳಿದದ್ದು ಕೆಲವೇ ಗಟ್ಟಿಕಾಳುಗಳು ಮತ್ತು ಎದುರಿಗೆ ಇದ್ದದ್ದು ಒಂದೇ ದಿಲ್ಲಿಯ ವಿಧಾನ ಸಭೆ ಚುನಾವಣೆ. ಮಾಡು ಇಲ್ಲವೇ ಮಡಿ ಪಂದ್ಯ. ಈ ಸಮಯದಲ್ಲಿ ಉಳಿದೆಲ್ಲಾ ಟೀಕೆ ಟಿಪ್ಪಣಿಗಳನ್ನು ಬದಿಗೆ ಸರಿಸಿ, ಇದ್ದ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ, ‘ಎಎಪಿ 2.0’ ತಂಡ ಕಣಕ್ಕಿಳಿಯಿತು. ಮುಂದೇನಾಯಿತು ಎಂಬುದು ನಿಮ್ಮೆದುರಿಗೆ ಇದೆ.

ಬಿಜೆಪಿ ಮತಗಳೇ ನಿರ್ಣಾಯಕ

ಹೀಗಂತ ಚುನಾವಣೆ ಮತ್ತದರ ಫಲಿತಾಂಶವನ್ನು ಇಟ್ಟುಕೊಂಡು ನೋಡಿದರೆ ಇವತ್ತು ದಿಲ್ಲಿಯ ಮಟ್ಟಿಗೆ ಆಮ್‍ ಆದ್ಮಿ ಪಕ್ಷ ನಿಚ್ಚಳವಾಗಿ ಕಾಂಗ್ರೆಸ್‍ ಮತ್ತು delhi-election-vote-share-2015ಬಿಜೆಪಿಯ ಮತದಾರರನ್ನು ತನ್ನತ್ತ ಸೆಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 2008ರಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇ. 61. 4ರಷ್ಟು ಮತ ಗಳಿಕೆಯ ಮೂಲಕ 40 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಈ ಸಮಯದಲ್ಲಿ ಬಿಜೆಪಿ ಶೇ. 32. 4 (23 ಸೀಟುಗಳು) ಮತ್ತು ಬಿಎಸ್‍ಪಿ ಶೇ. 2.9 (2 ಸೀಟಿಗಳು)ರಷ್ಟು ಮತ ಗಳಿಸಿದ್ದವು. ಐದು ವರ್ಷಗಳ ಅಂತರದಲ್ಲಿ ನಡೆದ 2013ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಶೇಖಡವಾರು ಮತಗಳಿಗೆ 11. 4ಕ್ಕೆ ಇಳಿದಿತ್ತು. ಆದರೆ, ಬಿಜೆಪಿಯ ಮತಗಳಿಗೆ ಶೇ. 45. 7ರಷ್ಟು ಮತ ಗಳಿಸಿತ್ತು. ಹೊಸ ಪಕ್ಷ ಎಎಪಿಯ ಮತ ಗಳಿಗೆ ಶೇ. 40ರಷ್ಟಿತ್ತು. ಈ ಬಾರಿ ಅಂಕಿಅಂಶಗಳನ್ನು ಗಮನಿಸಿದರೆ ಎಎಪಿ ಪಡೆದುಕೊಂಡಿರುವ ಶೇ. 54. 3ರಷ್ಟು ಮತಗಳಲ್ಲಿ ಬಿಜೆಪಿಯ ಪಾಲೇ ದೊಡ್ಡದಿದೆ. ಕಾಂಗ್ರೆಸ್‍ನಿಂದ ಎಎಪಿ ಶೇ. 1.3ರಷ್ಟು ಮತಗಳನ್ನು ಕಿತ್ತುಕೊಂಡಿದ್ದರೆ, ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕಿನಿಂದ ಶೇ. 13. 5ರಷ್ಟು ಮತಗಳನ್ನು ಪಡೆದುಕೊಂಡಿದೆ. ಇದು ಬಹುತೇಕ ಕಡೆಗಳಲ್ಲಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ತಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಇನ್ನು, ಮುಸ್ಲಿಂ ಧರ್ಮಗುರುವಿನ ಬೆಂಬಲ ಮತ್ತು ಮುಸ್ಲಿಂ ಮತಗಳು ಎಎಪಿಗೆ ಬಂದಿವೆ ಎಂಬ ವಾದವೂ ಇದೆ. ಆದರೆ, ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಮುಸ್ತಫಾಬಾದ್‍ ಎಂಬ ಕ್ಷೇತ್ರದ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ಸುಮಾರು ಆರು ಸಾವಿರ ಮತಗಳಿಂದ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‍ ಇದೆ. ಇನ್ನು, ಜಾತ್ಯತೀತ ಶಕ್ತಿಗಳು ಆಪ್‍ ಬೆಂಬಲಕ್ಕೆನಿಂತವು ಎಂಬ ವಾದವೂ ಇದೆ. ಆದರೆ, ಕಳೆದ ಮೂರೂ ಚುನಾವಣೆಗಳ ಶೇಕಡವಾರು ಮತ ಗಳಿಕೆಯಲ್ಲಿ ಬಿಎಸ್‍ಪಿ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದೆ ಮತ್ತು ಅದು ಯಾವ ಕ್ಷೇತ್ರದಲ್ಲೂ ನಿರ್ಣಾಯಕ ಹಂತದಲ್ಲಿ ಇಲ್ಲ.

ಒಟ್ಟಾರೆ, ಇದು ಆಲೋಚನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತಂದುಕೊಂಡ ಎಎಪಿ 2.0 ತಂಡಕ್ಕೆ ಸಲ್ಲಬೇಕಾದ ಗೆಲುವು ಅಷ್ಟೆ. ಜನರ ಸಮಸ್ಯೆಗಳನ್ನು ಅವರ ಮಾತುಗಳಲ್ಲೇ ಅರ್ಥಮಾಡಿಕೊಂಡು, ಅದಕ್ಕೆ ಅವರು ಬಯಸುವ ಪರಿಹಾರವನ್ನು ನೀಡುವ ಭರವಸೆ ನೀಡಿದ್ದೇ ಟ್ರಂಪ್‍ಕಾರ್ಡ್‍. ಇದನ್ನು ಒಪ್ಪಿಕೊಳ್ಳದ ಒಂದು ವರ್ಗ ದಿಲ್ಲಿಯ ಆಪ್‍ ಗೆಲುವಿಗೆ ನಾನಾ ಅರ್ಥಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಅದರಲ್ಲಿ ಒಂದು, ದಿಲ್ಲಿಯಲ್ಲಿ ಯಾರೂ ಸೋಲಲಿಲ್ಲ ಎಂಬ ತಮಾಷೆ. ಇದೆಲ್ಲಾ ಏನೇ ಇರಲಿ, ದಿಲ್ಲಿಯ ಜನ ಪ್ರಜಾಪ್ರಭುತ್ವದ ಸಾಧ್ಯತೆಯೊಂದನ್ನು ಸೋಲಿಸಲಿಲ್ಲ ಅಷ್ಟೆ…

ದಿಲ್ಲಿ ಫಲಿತಾಂಶ: ಎಎಪಿ ಭರ್ಜರಿ ವಿಜಯದ ಹಿಂದಿರುವ 10 ಪ್ರಮುಖ ಕಾರಣಗಳು!

ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ]

ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, ಸಾಮಾನ್ಯ ಜನರ ಒತ್ತಾಸೆ ಏನಿತ್ತು ಎಂಬುದು ಗೊತ್ತಾಗಿದೆ. ಎಲ್ಲಾ ಪಕ್ಷಗಳ ಆಂತರಿಕ ಸಮೀಕ್ಷೆಗಳು, ಹೊರಗಿನ ಸರ್ವೆಗಳು ಹಾಗೂ ಚುನಾವಣಾ ಪೂರ್ವ ವಿಶ್ಲೇಷಣೆಗಳನ್ನು ತಲೆಕೆಳಗಾಗುವಂತಹ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಇರುವ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ರಲ್ಲಿ ಆಮ್‍ ಆದ್ಮಿ ಪಕ್ಷ ಜಯಗಳಿಸಿದೆ. ಬಿಜೆಪಿ ಮೂರು ಸ್ಥಾನಗಳಿಸಿದೆ. ಪುರಾತನ ಪಕ್ಷ ಕಾಂಗ್ರೆಸ್‍ಗೆ ಖಾತೆ ತೆರೆಯುವ ಅವಕಾಶವನ್ನೂ ನೀಡಿಲ್ಲ. ಖುದ್ದು ಆಮ್‍ ಆದ್ಮಿ ಪಕ್ಷದ ಒಳಗಿರುವವರಿಗೇ ಅಚ್ಚರಿ ಮೂಡಿವಂತಹ ಈ ಫಲಿತಾಂಶದ ಹಿಂದೆ ಇರುವ ಪ್ರಮುಖ ಕಾರಣಗಳನ್ನು ‘ವರ್ತಮಾನ’ ಇಲ್ಲಿ ಪಟ್ಟಿ ಮಾಡುತ್ತಿದೆ. ಈ ಚುನಾವಣೆಯ ಫಲಿತಾಂಶದ ಕುರಿತು ಇನ್ನಷ್ಟು ಆಳಕ್ಕಿಳಿದರೆ ಸಾಕಷ್ಟು ಅಚ್ಚರಿಯ ವಿಚಾರಗಳಿವೆ. ಆದರೆ, ಈ ಭಾಗದಲ್ಲಿ ನಾವು ಆಪ್‍ ವಿಜಯದ ಹಿಂದಿರುವ ಪ್ರಮುಖ ಕಾರಣಗಳನ್ನಷ್ಟೆ ಹುಡುಕಿದ್ದೇವೆ. ಕಳೆದ ಕೆಲವು ದಿನಗಳಿಂದ ದಿಲ್ಲಿಯ ಚುನಾವಣಾ ಕಣದಲ್ಲಿ ಕಂಡು ಬಂದ ಅಂಶಗಳಿವು. ಸಧ್ಯಕ್ಕೆ, ದಿಲ್ಲಿ ಚುನಾವಣೆ ಫಲಿತಾಂಶದ ಕುರಿತು ಅಚ್ಚರಿಗೊಂಡಿರುವವರಿಗೆ, ಹೇಗೀ ಫಲಿತಾಂಶ ಹೊರಬಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗಬಹುದು ಎಂಬುದು ನಮ್ಮ ಆಶಯ.

 

  1. ಕ್ರೀಯಾಶೀಲ ಸ್ವಯಂ ಸೇವಕರ ಪಡೆ: ದಿಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣಗಳ ಪೈಕಿ aap-buzz-team-delhiಮೊದಲನೆಯದು ಅದರ ಸ್ವಯಂ ಸೇವಕರ ಶ್ರಮ ಮತ್ತು ಅವರ ಕ್ರೀಯಾಶೀಲತೆ. ದೇಶದ ನಾನಾ ಭಾಗಗಳಿಂದ ಬಂದ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ವಂಯ ಸೇವಕರ ತಂಡಗಳು ದಿಲ್ಲಿಯ ಬೀದಿ ಬೀದಿ, ಗಲ್ಲಿ ಗಲ್ಲಿಗಳಲ್ಲಿ ನಡೆಸಿದ ಚುನಾವಣಾ ಪ್ರಚಾರ ಪಕ್ಷಕ್ಕೆ ನೆರವಾಯಿತು. ದಿಲ್ಲಿ ತುಂಬ ತೆಲೆಯ ಮೇಲೆ ಪಕ್ಷದ ಟೋಪಿ ಹಾಕಿಕೊಂಡು ಸಾವಿರಾರು ಜನ ಓಡಾಡುತ್ತಿದ್ದರೆ, ಜನ ಮನಸ್ಸಿನ ಮೇಲೆ ಬೀರಿರಬಹುದಾದ ಪರಿಣಾಮ ದೊಡ್ಡದಿತ್ತು.
  2. ವಿನೂತನ ಪ್ರಚಾರ ತಂತ್ರ: ಮತದಾನಕ್ಕೆ ತಿಂಗಳಿದೆ ಎನ್ನುವಾಗಲೇ ವಿನೂತನ ಪ್ರಚಾರಕ್ಕೆ ತಂಡಗಳನ್ನು ರಚಿಸಿತ್ತು ಆಪ್‍. ಅವರನ್ನು ‘ಬಝ್‍ ಸ್ವಯಂ ಸೇವಕರು ಎಂದು ಪಕ್ಷದ ಅಂತರಂಗದಲ್ಲಿ ಗುರುತಿಸಲಾಗುತ್ತಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಇವರು ದಿಲ್ಲಿಯ ಪ್ರಮುಖ ಸ್ಥಳಗಳಲ್ಲಿ ಪಕ್ಷದ ಉದ್ದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಹಿಡಿದು ನಿಂತಿರುತ್ತಿದ್ದರು. ಜನ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೂ ವಿನಮೃತೆಯಿಂದ ಕೈ ಮುಗಿದು ಕಳಿಸುತ್ತಿದ್ದ ಇವರು ಭಾರಿ ಗಮನ ಸೆಳೆದಿದ್ದರು. ಜತೆಗೆ ಪಕ್ಷದ ‘ಪಾಸಿಟಿವ್ ಅಜೆಂಡಾ’ವನ್ನು ದಿಲ್ಲಿ ಜನರಿಗೆ ತಲುಪಿಸಿದ್ದು ಕೂಡ ಪಕ್ಷಕ್ಕೆ ನೆರವಾಯಿತು.
  3. ಮಾತನಾಡು ದಿಲ್ಲಿ ಮಾತನಾಡು: ಇನ್ನು ಆಪ್‍ಗೆ ದಿಲ್ಲಿಯ ಜನರ ನಾಡಿ ಮಿಡಿತವನ್ನು ಅರ್ಥಮಾಡಿಸಿದ್ದು ಪಕ್ಷ ನಡೆಸಿದ ‘ದಿಲ್ಲಿ ಡೈಲಾಗ್‍’ ಎಂಬ ಅಭಿಯಾನ. ನಗರದ ಪ್ರತಿ ಗಲ್ಲಿಗಳಲ್ಲಿ ಸಮಸ್ಯೆಗಳ ಹಾಗೂ ಪರಿಹಾರಗಳ ಕುರಿತು ಸಭೆಗಳನ್ನು ನಡೆಸಲಾಯಿತು. ಅಲ್ಲಿ ಸಿಕ್ಕ ಅಂಶಗಳನ್ನೇ ಮುಂದೆ ಪಕ್ಷ ಪ್ರಣಾಳಿಕೆ ರೂಪದಲ್ಲಿ ಮುಂದಿಟ್ಟಿದ್ದು ಪಕ್ಷದ ಪ್ರಣಾಳಿಕೆ ಜನರಿಗೆ ಹತ್ತಿರಾಗುವಂತೆ ಮಾಡಿತು.
  4. ಸಾಮಾಜಿಕ ಜಾಲತಾಣಗಳಲ್ಲಿ ಉಪಸ್ಥಿತಿ: ಇವತ್ತಿನ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಆಪ್‍ ಸಾಕ್ಷಿಯಾಯಿತು. ಟ್ವಿಟರ್‍, ಫೇಸ್‍ಬುಕ್‍, ಇನ್ಟಾಗ್ರಾಮ್ ಮತ್ತಿತರ ತಾಣಗಳಲ್ಲಿ ತನ್ನನ್ನು ಸಕ್ರಿಯವಾಗಿಟ್ಟುಕೊಂಡಿತು. ಈ ಮೂಲಕ ಇಂಟರ್‍ನೆಟ್‍ ಬಳಸುವ ವರ್ಗದಲ್ಲಿ ತನ್ನ ಅಭಿಪ್ರಾಯವನ್ನು ಮೂಡಿಸುತ್ತ ಬಂತು.AAP manifesto release
  5. ಟಿಕೆಟ್‍ ಹಂಚಿಕೆಯಲ್ಲಿ ಜಾಣತನ: ಆಪ್‍ ಕುರಿತು ಮೊದಲು ಕೇಳಿಬಂದ ಟೀಕೆಗಳಲ್ಲಿ ಟಿಕೆಟ್ ಹಂಚಿಕೆಯೂ ಒಂದಾಗಿತ್ತು. ಆದರೆ, ಪಕ್ಷ ಕೆಲವರಿಗೆ ಟಿಕೆಟ್‍ ನೀಡುವಾಗ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಇದೀಗ ನೆರವಾದಂತೆ ಕಾಣಿಸುತ್ತಿದೆ.
  6. 49 ದಿನಗಳ ವರ್ಚುವಲ್ ಕ್ರಾಂತಿ: ದಿಲ್ಲಿಯ ಸಾಮಾನ್ಯ ವರ್ಗದಲ್ಲಿ ಪಕ್ಷದ ಕುರಿತು ಸದಾಭಿಪ್ರಾಯ ಮೂಡಲು ಕಾರಣ ಕೇಜ್ರಿವಾಲ್‍ ನೇತೃತ್ವದ 49 ದಿನಗಳ ಆಡಳಿತಾವಧಿ. ಈ ಸಮಯದಲ್ಲಿ ವಿದ್ಯುತ್‍ ದರ ಇಳಿಕೆ ಹಾಗೂ ಉಚಿತ ನೀರು ಸರಬರಾಜಿಗೆ ಕ್ರಮ ಕೈಗೊಂಡಿದ್ದು ದಿಲ್ಲಿಯ ಬಹುಸಂಖ್ಯಾತ ಕೆಳವರ್ಗವನ್ನು ಪಕ್ಷಕ್ಕೆ ನಿಷ್ಟರಾಗುವಂತೆ ನೋಡಿಕೊಂಡಿತು.
  7. ಬಿಜೆಪಿಯ ಅವಹೇಳನಕಾರಿ ಪ್ರಚಾರ: ಕೊಂಚ ಅಚ್ಚರಿ ಅನ್ನಿಸಿದರೂ ಇದು ಸತ್ಯ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಜನಸಭೆಗಳನ್ನು ನಡೆಸುತ್ತಿದ್ದ ಆಪ್‍ ಕುರಿತು ಕೊನೆಯ ಹಂತದಲ್ಲಿ ವೈಯುಕ್ತಿಕ ಟೀಕೆ ಹಾಗೂ ಅವಹೇಳನಕ್ಕೆ ಬಿಜೆಪಿ ಮುಂದಾಯಿತು. ಆದರೆ ಆಪ್‍ ನಾಯಕತ್ವ ಇವೆಲ್ಲಕ್ಕೂ ವಿನೀತರಾಗಿ ಉತ್ತರ ನೀಡುತ್ತಾ ಹೋದರು. ಸಹಜವಾಗಿಯೇ ಬಿಜೆಪಿಯ ಪ್ರಚಾರ ವೈಖರಿ ದುರಹಂಕಾರದ ನಡತೆಯಂತೆ ಜನರಿಗೆ ಭಾಸವಾಯಿತು. ಇದು ಕೊನೆಯ ಕ್ಷಣದಲ್ಲಿ ಆಪ್‍ ಪರ ಮಧ್ಯಮ ವರ್ಗ ಗಟ್ಟಿಯಾಗಿ ನಿಲ್ಲಲು ನೆರವಾಯಿತು.
  8. ಕಿರಣ್‍ ಬೇಡಿ ಟ್ರಂಪ್‍ ಕಾರ್ಡು: ಆಪ್‍ಗೆ ನೆರವಾದ ಮತ್ತೊಂದು ಪ್ರಮುಖ ಅಂಶ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‍ ಬೇಡಿ. ಬಿಜೆಪಿ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್‍ ಬೇಡಿಯನ್ನು ಮುಂದಿಟ್ಟಿತು. ಇದು ಬಿಜೆಪಿಯ ದಿಲ್ಲಿ ಕಮಿಟಿಯಲ್ಲಿ ಅಸಮಾಧಾನ ಮೂಡಿಸಿತು. ಅದೇ ವೇಳೆ ಕಿರಣ್‍ ಬೇಡಿ ಪ್ರತಿಕ್ರಿಯೆಗಳು ನಗೆಪಾಟಲಿಗೆ ಈಡಾದವು ಸಹಜವಾಗಿಯೇ ದಿಲ್ಲಿ ಜನರಿಗೆ ಆಪ್‍ ಮುಖ್ಯಮಂತ್ರಿ ಅಭ್ಯರ್ಥಿ ಕೇಜ್ರಿವಾಲ್‍ ಪರ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಯಿತು.KIRAN_BEDI_on-top
  9. ಸಿದ್ಧತೆಗೆ ಸಿಕ್ಕ ಸಮಯ: ಲೋಕಸಭೆ ಚುನಾವಣೆ ಸಮಯದಲ್ಲೇ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದರೆ ಆಪ್‍ ಈ ಪ್ರಮಾಣದ ಜಯ ಗಳಿಸುವುದು ಕಷ್ಟ ಇತ್ತು. ದಿಲ್ಲಿ ವಿಧಾನ ಸಭೆಗೆ ಅಂತಿಮವಾಗಿ ದಿನಾಂಕ ನಿಗಧಿಯಾದ ಸಮಯದಲ್ಲಿ ಆಪ್‍ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿಕೊಂಡು ಎದ್ದು ನಿಂತಿತ್ತು. ಇದನ್ನು ನಿರೀಕ್ಷಿಸದಿದ್ದ ಬಿಜೆಪಿ ತುಸು ಹೆಚ್ಚೇ ಭರವಸೆ ಹೊಂದಿತ್ತು.
  10. ಮಾಧ್ಯಮಗಳನ್ನು ನಿಭಾಯಿಸಿದ ಬಗೆ: ಒಂದು ಕಡೆ ಬಿಜೆಪಿ ಅಭ್ಯರ್ಥಿ ಕಿರಣ್‍ ಬೇಡಿ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾಡುತ್ತಿದ್ದರೆ, ಮತ್ತೊಂದಡೆ ಆಪ್‍ನ ನಾಯಕರು ಮಾಧ್ಯಮಗಳ ಎಲ್ಲಾ ಟೀಕೆಗಳಿಗೆ ಉತ್ತರ ರೆಡಿ ಮಾಡಿಟ್ಟುಕೊಂಡಿದ್ದರು. ಕೇಳುವ ಪ್ರತಿ ಪ್ರಶ್ನೆಗೆ ಒಂದೇ ರೀತಿಯ ಉತ್ತರ ಪಕ್ಷದ ಎಲ್ಲಾ ಸ್ಥರಗಳಿಂದ ಬರುವಂತೆ ನೋಡಿಕೊಳ್ಳಲಾಯಿತು. ಹೀಗಾಗಿ, ಬಿಜೆಪಿ ನಡೆಸಿದ ಅಷ್ಟೂ ಅಪಪ್ರಚಾರ ಆಪ್‍ಗೆ ಸಕಾರಾತ್ಮಕವಾಗಿ ಬದಲಾಯಿತು. ಒಂದು ಅರ್ಥದಲ್ಲಿ ಮೊದಲಿನಿಂದ ಕೊನೆಯವರೆಗೂ ಆಪ್‍ ಚುನಾವಣೆಯ ಅಜೆಂಡಾವನ್ನು ಸೆಟ್‍ಮಾಡಿತು ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲರೂ ಅದನ್ನು ಫಾಲೋ ಮಾಡುವಂತೆ ನೋಡಿಕೊಂಡಿತು.

ದಿಲ್ಲಿ ಮತದಾರ ಪ್ರಬುದ್ಧನಾದ ಬಗೆ ಹೇಗೆ ಗೊತ್ತಾ…?

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

“ಇಲ್ಲಿಯೂ ಕೂಡ ಜನ ಬುದ್ಧಿವಂತರಾಗಿರಲಿಲ್ಲ. ನಾನು ದಿಲ್ಲಿಗೆ ಬಂದು ಸುಮಾರು 26 ವರ್ಷ ಕಳೆಯಿತು. ಈ ರಾಜಕಾರಣಿಗಳ ಆಶ್ವಾಸನೆಗಳು, ಸುಳ್ಳು, ಮೋಸ ಮತ್ತು ದ್ರೋಹವನ್ನು ನೋಡುತ್ತಲೇ ಬಂದಿದ್ದೆವು. ಆದರೆ, 2013ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಜನ ಎಚ್ಚರಾದರು. ಇವತ್ತು ಅವರ ಓಟನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ,” ಎಂದರು ಗೋವಿಂದ್ ಬಿಲಾಲ್. ಉತ್ತರ ಪ್ರದೇಶದಿಂದ ವಲಸೆ ಬಂದ ಅವರು ಮೊದಲು ದಿಲ್ಲಿಯ ವಿದೇಶಾಂಗ ಕಚೇರಿಯಲ್ಲಿ ಹೊರಗುತ್ತಿಗೆ ನೌಕರಾಗಿ ದುಡಿಯಲು ಶುರುಮಾಡಿದರು. ನಂತರ ಅವರನ್ನು ಅಲ್ಲಿಂದ ಕಿತ್ತುಹಾಕಲಾಯಿತು. cyclerickshaw-delhiಮುಂದೆ ನಾನಾ ಉದ್ಯೋಗಗಳನ್ನು ನಿಭಾಯಿಸಿಕೊಂಡು ಇವತ್ತು ಮಾಲ್ವಿನಗರದ ಬ್ಯಾಂಕ್‍ವೊಂದರ ಮುಂದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ದಿಲ್ಲಿಯ ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸುವ ದಿನ. ಬೆಳಗ್ಗೆಯೇ ಎದ್ದ ಗೋವಿಂದ್ ಬಿಲಾಲ್‍ ಚಾಣಕ್ಯಪುರಿಯ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿ ಬಂದಿದ್ದರು. ರಸ್ತೆ ಬದಿಯಲ್ಲಿ ಜನರನ್ನು ಮಾತನಾಡಿಸುತ್ತಿದ್ದ ನನನ್ನು ಸ್ವಯಂಪೂರ್ವಕವಾಗಿ ಕರೆದು ಪಕ್ಕಕ್ಕೆ ಕೂರಿಸಿಕೊಂಡರು. ಬೆಂಗಳೂರಿನಿಂದ ಬಂದಿದ್ದೇನೆ ಎಂಬುದು ಗೊತ್ತಾದ ನಂತರ ಮನಸ್ಸು ಬಿಚ್ಚಿ ಮಾತನಾಡಲು ಶುರುಮಾಡಿದರು. “ನಾನು ಕಲ್ಯಾಣ್‍ ಸಿಂಗ್‍ ಕ್ಷೇತ್ರದಿಂದ ಬಂದವನು. ಯುವಕನಾಗಿದ್ದ ವೇಳೆ ಒಮ್ಮೆ ಕಲ್ಯಾಣ್‍ ಸಿಂಗ್‍ ಮನೆಗೆ ನಮ್ಮ ಹಳ್ಳಿಯ ಯುವಕನ್ನು ಕರೆದುಕೊಂಡು ಹೋಗಿದ್ದೆ. ಅವರಿಂದ ಒಂದು ಗುರುತಿನ ಪತ್ರವನ್ನು ಪಡೆದುಕೊಳ್ಳಬೇಕಾಗಿತ್ತು. ಅವತ್ತಷ್ಟೆ ನಮ್ಮನ್ನು ನೋಡಿದ ಅವರು ಕಳೆದ ಹತ್ತು ವರ್ಷಗಳಿಂದ ಇವರನ್ನು ಬಲ್ಲೆ ಎಂದು ಪತ್ರ ಬರೆದು ಸಹಿ ಮಾಡಿ ಕೊಟ್ಟಿದ್ದರು. ನನ್ನ ಜತೆಗೆ ಬಂದವನಿಗೆ ಪೊಲೀಸ್‍ ಕೆಲಸ ಗಿಟ್ಟಿಸಿಕೊಳ್ಳಲು ನೆರವಾಯಿತು. ಅವತ್ತಿಂದ ಮೊನ್ನೆ ಮೊನ್ನೆವರೆಗೂ ನಾನು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದೆ,” ಎಂದು ಅವರು ಗತಕಾಲದ ನೆನಪುಗಳನ್ನು ಹಂಚಿಕೊಂಡರು.

ದಿಲ್ಲಿ ಚುನಾವಣೆ, ರಾಷ್ಟ್ರೀಯ ಪಕ್ಷಗಳ ಚುನಾವಣೆ ತಂತ್ರಗಾರಿಕೆ, ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಹತ್ತಿರದಿಂದ ನೋಡುತ್ತಿರುವ ನನಗೆ ಒಂದಂತೂ ಸ್ಪಷ್ಟವಾಗುತ್ತಿದೆ. ‘ಜನ ಹಣಕ್ಕೆ, ಹೆಂಡಕ್ಕೆ ಓಟನ್ನು ಮಾರಿಕೊಳ್ಳುತ್ತಿದ್ದಾರೆ. ಅವರು ಬದಲಾಗದ ಹೊರತು,chanakya-exit-poll-delhi-2015 ಈ ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ದೇಶದ ರಾಜಕಾರಣವನ್ನು ಬದಲಾಯಿಸುವುದು ಕಷ್ಟ’ ಎಂಬ ಮಾತುಗಳು ಸಂಪೂರ್ಣ ಸತ್ಯವಲ್ಲ ಅಂತ ಅನ್ನಿಸುತ್ತದೆ. ಜನ ಸರಿಯಿಲ್ಲ ಅಥವಾ ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಮೇಲ್ನೋಟದ ಮಾತುಗಳು. ಆದರೆ ಆಳಕ್ಕಿಳಿದು, ಪ್ರಾಮಾಣಿಕವಾದ ಪರ್ಯಾಯವೊಂದನ್ನು ಅವರ ಮುಂದಿಟ್ಟರೆ, ದಿಲ್ಲಿಯ ಇವತ್ತಿನ ಮತದಾದರರು ಪ್ರದರ್ಶಿಸುತ್ತಿರುವ ಇಚ್ಚಾಶಕ್ತಿಯನ್ನು ದೇಶದ ಯಾವ ಭಾಗದಲ್ಲಾದರೂ ಖಂಡಿತಾ ನಿರೀಕ್ಷಿಸಬಹುದು. ಹೀಗಾಗಿಯೇ, ಈ ಬಾರಿಯ ದಿಲ್ಲಿ ಚುನಾವಣೆಯನ್ನು ಇತರೆ ಚುನಾವಣೆಗಳಂತೆ ಕೇವಲ ರಾಜಕೀಯ ಕದನಕ್ಕೆ ಸಮೀಕರಿಸಿ, ಸೋಲು-ಗೆಲವುಗಳ ಅಂತರದಿಂದ ಮಾತ್ರವೇ ಅಳೆಯುವ ಅಗತ್ಯವಿಲ್ಲ.

ಹಾಗಂತ ದಿಲ್ಲಿಯಲ್ಲಿ ನಡೆಯುತ್ತಿರುವ ಭಿನ್ನ ರಾಜಕೀಯ ಕದನಕ್ಕೆ ತನ್ನದೇ ಆದಂತಹ ಸಿದ್ಧತೆ ಇರುವುದು ಇಲ್ಲಿ ಕಂಡುಬರುತ್ತದೆ. anna-hazare-bhushans“ಅಣ್ಣಾ ಮುಂದಾಳತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಆರಂಭದ ದಿನಗಳಲ್ಲಿ ಆಕರ್ಷಿಸಿದ್ದು ಮದ್ಯಮ ವರ್ಗದ ಯುವ ಸಮುದಾಯವನ್ನು. ಯಾವುದೇ ಆಂದೋಲನ ಅಥವಾ ಚಳವಳಿಗೆ ತನ್ನದೇ ಆದ ಮಿತಿಗಳು ಇರುತ್ತವೆ. ಹೀಗಿರುವಾಗಲೇ ಇಡೀ ಆಂದೋಲದ ಮುಂದುವರಿದ ಭಾಗವಾಗಿ ಆಮ್‍ ಆದ್ಮಿ ಹುಟ್ಟಿಕೊಂಡಿತು. ಈ ಸಮಯದಲ್ಲೂ ಕೂಡ ರಾಜಕೀಯ ಸ್ಪಷ್ಟತೆಯ ಇರಲಿಲ್ಲ. ಉದಾಹರಣೆಗೆ ಮೀಸಲಾತಿ ವಿಚಾರದಲ್ಲಿ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿತ್ತು,” ಎಂದು ಆಮ್‍ ಆದ್ಮಿ ಪಕ್ಷದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದರು ಕಿರಣ್‍ ವಿಸ್ಸಾ. ಹಾಗೆ, ಅಸ್ಪಷ್ಟತೆಯೇ ನಡುವೆ ಚುನಾವಣೆಗೆ ಇಳಿದು, ಶೀಲಾ ದೀಕ್ಷಿತ್‍ರನ್ನು ಮಣಿಸಿದ್ದ ಆಪ್‍ಗೆ ಅಧಿಕಾರವೂ ಸಿಕ್ಕಿತ್ತು. ಬಹುಶಃ ಅವತ್ತಿಗಿದ್ದ ಮೆಚ್ಯುರಿಟಿಯನ್ನು ಇಟ್ಟುಕೊಂಡೇ ಆಪ್‍ ಸರಕಾರ 49 ದಿನಗಳಲ್ಲಿ ಸ್ಪಷ್ಟವಾಗಿ ಬಡಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು.kiran-kumar-vissa-aap “ಸಿಕ್ಕ 49 ದಿನಗಳಲ್ಲಿ ನಮ್ಮ ಮನೆಯ ಕರೆಂಟು ಬಿಲ್‍ ಕಡಿಮೆಯಾಯಿತು. ಏನೇ ಆಗಲಿ, ನಾವೇ ಕಟ್ಟಿದ ಟ್ಯಾಕ್ಸ್ ದುಡ್ಡಿನಲ್ಲಿ ನಮಗೆ ಅನುಕೂಲ ಮಾಡಿಕೊಡುವ ಮೊದಲ ಸರಕಾರವನ್ನು ನಾವು ನೋಡಿದ್ದೆವು. ಆದರೆ, ಅಧಿಕಾರ ಬಿಟ್ಟು ಕೆಳಗೆ ಇಳಿದಾಗ ಬೇಜಾಗಿತ್ತು,” ಎಂದರು ಗೋವಿಂದ್ ಬಿಲಾಲ್‍. ಇದು ದಿಲ್ಲಿಯಲ್ಲಿ ಆಪ್‍ ಪರವಾಗಿ ಮಾತನಾಡುವವರೂ ವ್ಯಕ್ತಪಡಿಸುವ ಸಾಮಾನ್ಯ ಭಿನ್ನಾಭಿಪ್ರಾಯ. ಆದರೆ, ಅವತ್ತಿಗಿನ್ನೂ ಮಧ್ಯಮ ವರ್ಗದ ಸ್ವಯಂ ಸೇವಕರು, ಕಾರ್ಯಕರ್ತರು ಮತ್ತು ಪಕ್ಷದ ಸ್ಥರದ ನಾಯಕತ್ವವನ್ನು ಹೊಂದಿದ್ದ ಆಪ್‍, ಸರಕಾರ ನಡೆಸುವ ವಿಚಾರ ಬಂದಾಗ ಹೇಗೆ ಸ್ಪಷ್ಟವಾಗಿ ಬಡ ಜನರ ಸಂಕಷ್ಟಗಳಿಗೆ ಸ್ಪಂದಿಸಿತು ಎಂಬುದೇ ಒಂದು ಸೋಜಿಗ.

ಅಲ್ಲಿಂದ ಮುಂದೆ ಆಮ್‍ ಆದ್ಮಿ ಪಕ್ಷದ ಒಡನಾಟ ನಿಜವಾದ ಜನ ಸಾಮಾನ್ಯ ಜನರ ಜತೆಗೆ ಹೆಚ್ಚಾಯಿತು. “ಒಂದು ಹಂತ ಕಳೆದ ನಂತರ, ವಿಶೇಷವಾಗಿ ಲೋಕಸಭಾ ಚುನಾವಣೆ ನಂತರ ನಾವು ಯಾರಿಗಾಗಿ ರಾಜಕೀಯ ಪಕ್ಷ ನಡೆಸಬೇಕು ಮತ್ತು ಅದರ ಉದ್ದೇಶಗಳು ಏನಿರಬೇಕು ಎಂಬುದು ಸ್ಪಷ್ಟವಾಯಿತು. ಆ ನಂತರ ಮತ್ತೆ ಮೀಸಲಾತಿ ವಿಚಾರದಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ,” ಎಂದು ಕಿರಣ್‍ ವಿಸ್ಸಾ ವಿವರಿಸಿದ್ದರು. ಇವತ್ತು ದಿಲ್ಲಿಯಲ್ಲಿ ಆಮ್‍ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮತ್ತು ಅದಕ್ಕೆ ಸಿಕ್ಕಿರುವ ಜನವರ್ಗದ ಬೆಂಬಲವನ್ನು ಗಮನಿಸಿದರೆ ಕಿರಣ್‍ ಅವರ ಮಾತುಗಳಲ್ಲಿನ ಸ್ಪಷ್ಟತೆ ಅರಿವಿಗೆ ಬರುತ್ತದೆ.

ಒಂದು ಕಡೆ ಆಪ್‍ನ ವೈಚಾರಿಕ ಸ್ಪಷ್ಟತೆ ರೂಪ ಪಡೆದುಕೊಳ್ಳುತ್ತಿರುವ ಹೊತ್ತಿಗೇ, ಚುನಾವಣೆ ರಾಜಕಾರಣದ ತಂತ್ರಗಳು ಪಕ್ಷದ ನಾಯಕತ್ವಕ್ಕೆ ಪಾಠ ಕಲಿಸುತ್ತ ಹೋದವು. ಅದರ ಕುರಿತು ಇನ್ನಷ್ಟು ಆಳವಾಗಿ ಮುಂದೆ ಯಾವಾಗಾದರೂ ಬರೆಯವುದು ಸೂಕ್ತ. ಇಲ್ಲೀಗ, ಮತದಾನದ ಭರಾಟೆ ಅಂತ್ಯವಾಗಿದೆ. ನಿನ್ನೆಯಷ್ಟೆ ಬೆಂಗಳೂರಿನಿಂದ ಕರೆ ಮಾಡಿದ್ದ ದೊಡ್ಡಿಪಾಳ್ಯ ನರಹಿಂಹಮೂರ್ತಿ, “ಬಿಜೆಪಿಯವರು ಕೊನೆಯ ಕ್ಷಣದಲ್ಲಿ ವೋಟಿಂಗ್‍ ಮಷೀನ್‍ಗಳನ್ನು ಬಿಜೆಪಿ ಪರವಾಗಿ ಬದಲಾಯಿಸಿದರೆ ಕತೆ ಏನು? ಪ್ರತಿ ಐದನೇ ಅಥವಾ ಆರನೇ ಮತ ಬಿಜೆಪಿಗೇ ಬೀಳುವಂತೆ ಮಾಡುವ ಸಾಧ್ಯತೆ ಇದೆಯಂತೆ,” aap-war-room-2015-delhiಎಂದು ಕಾಳಜಿ ಮತ್ತು ಆತಂಕವನ್ನು ವ್ಯಕ್ತಪಡಿಸಿದರು. ಬಹುಶಃ ಇವತ್ತು ಪರ್ಯಾಯದ ರಾಜಕಾರಣವನ್ನು ಮಾಡಬೇಕು ಎಂದರೆ, ಕೊನೆಯ ಹಂತದ ಇಂತಹ ಸಾಧ್ಯತೆಗಳ ಕುರಿತು ಗಮನಹರಿಸಬೇಕಿದೆ. ಹೀಗೊಂದು ಅಭಿಪ್ರಾಯವನ್ನು ಆಪ್‍ನ ಕಾರ್ಯಕರ್ತ ಚಂದನ್‍ ಮುಂದಿಟ್ಟರೆ, “ಈ ಬಗ್ಗೆ ನಮಗೂ ದೂರುಗಳು ಬಂದಿದ್ದವು. ಹೀಗಾಗಿ ಮತದಾನದ ದಿನ ಪಟೇಲ್‍ನಗರದ ಆಪ್‍ ಕಚೇರಿಯಲ್ಲಿ ‘ವಾರ್ ರೂಂ’ನ್ನು ಸ್ಥಾಪಿಸಿದ್ದೇವೆ. ದಿಲ್ಲಿಯ ಸೂಕ್ಷ್ಮ ಮತಗಟ್ಟೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ಅಮೆರಿಕಾ, ಲಂಡನ್‍, ಬೆಂಗಳೂರು ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಕುಳಿದ ಆಪ್‍ ಕಾರ್ಯಕರ್ತರು ವೀಕ್ಷಿಸುತ್ತಿದ್ದರು. ಅವರಿಂದ ಬರುವ ದೂರುಗಳನ್ನು ವರ್ಗೀಕರಿಸಿ ಎಲೆಕ್ಷನ್‍ ಕಮಿಷನ್‍ಗೆ ಕಳುಹಿಸಿದ್ದೇವೆ,” ಎಂದರು. ಏನೇ ಆಗಲಿ, ದಿಲ್ಲಿಯ ಮತದಾರರ ಮನಸ್ಸಿನಲ್ಲಿ ಏನಿದೆ ಎಂಬುದು ಫೆ. 10 ಬೆಳಗ್ಗೆ ಹನ್ನೊಂದರ ವೇಳೆಗೆ ಸ್ಪಷ್ಟವಾಗುತ್ತದೆ. ಅಲ್ಲೀವರೆಗೂ ಕಾಯದೆ ಬೇರೆ ವಿಧಿ ಇಲ್ಲ.

ದಿಲ್ಲಿಯ ಅಂತರಾಳದಲ್ಲಿ ಪರ್ಯಾಯ ರಾಜಕಾರಣದ ಹುಡುಕಾಟ

– ಪ್ರಶಾಂತ್ ಹುಲ್ಕೋಡು

[ದೆಹಲಿಯಿಂದ.]

ಬೆಂಗಳೂರಿನ ಜನಜಂಗುಳಿಯ ಚಿಕ್ಕಪೇಟೆಯಂತಹ ಬೀದಿ ಇದು; ಪಹಾರ್‍ಗಂಜ್. Pahar_Ganj_Streetಸಂಜೆಯಾಗುತ್ತಲೇ ಬೀದಿ ಬದಿಯ ವ್ಯಾಪಾರ ಇಲ್ಲಿ ರಂಗುಪಡೆದುಕೊಳ್ಳುತ್ತದೆ. ದೇಶ ವಿದೇಶಗಳ ಪ್ರವಾಸಿಗರು ತಮ್ಮ ದಿನದ ಸುತ್ತಾಟವನ್ನು ಮುಗಿಸಿ ವಾಪಾಸ್‍ ಬರುವ ಸಮಯವದು. ಮೊಟ್ಟೆ, ಕೋಳಿ, ಕುರಿ ಮಾಂಸದ ಅದ್ಭುತ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಬೇಯಿಸಿದ ಮೊಟ್ಟೆಗೂ ವಿಭಿನ್ನ ರುಚಿ ಇರುತ್ತದೆ ಎಂಬುದನ್ನು ಇಲ್ಲಿನ ವ್ಯಾಪಾರಿಗಳು ಪರಿಚಯಿಸುತ್ತಾರೆ. ಹಾಗೆ ಕೊಂಚ ಮುಂದೆ ಬಂದರೆ ರಸ್ತೆಯ ಬದಿಯಲ್ಲಿ ಕೊಂಚ ಆಳದ ತಳಹೊಂದಿರುವ, ದೊಡ್ಡ ದೋಸೆ ಕಾವಲಿಯಂತಹ ಪಾತ್ರೆಯಲ್ಲಿ ಕೆನೆಭರಿತ ಹಾಲು ಕುದಿಯುವುದು ಕಾಣಿಸುತ್ತದೆ. ಕಾಲು ಲೀಟರ್‍ ಗಟ್ಟಿ ಹಾಲಿಗೆ 20 ರೂಪಾಯಿ. ಎರಡು ಜಗ್ಗುಗಳಲ್ಲಿ ಆ ಕಡೆಯಿಂದ ಈ ಕಡೆಗೆ ಎತ್ತಿ ಸುರಿದು, ಅದಕ್ಕೆ ಸಕ್ಕರೆ ಬೆರೆಸಿ ಮತ್ತೊಂದು ಲೋಟಕ್ಕೆ ಸುರಿದು ನಿಮ್ಮ ಕೈಗಿಡುತ್ತಾರೆ. delhi-paharganj-milkಬಾಯಿಗಿಟ್ಟರೆ ಹಾಲಿಗೆ ಯಾಕೆ ಅಮೃತ ಎನ್ನುತ್ತಾರೆ ಎಂಬುದನ್ನು ನಾಲಿಗೆ ಸವಿಯೇ ಅರ್ಥಪಡಿಸುತ್ತದೆ. ದಿಲ್ಲಿಯ ಆಹಾರ ಉದ್ಯಮದ ಮನಸ್ಥಿತಿಗೆ ಪ್ರತಿಬಿಂಬಗಳು ಇವು.

ಒಂದು ಕಡೆ ಹೊಸದಿಲ್ಲಿಯಂತಹ ದುಬಾರಿ ಪ್ರದೇಶದಲ್ಲಿ ಪಂಚತಾರ ಹೋಟೆಲ್‍ಗಳು ಹೇರಳವಾಗಿ ಸಿಗುತ್ತವೆ. ಇಲ್ಲಿನ ವೆಚ್ಚವನ್ನು ಭರಿಸಲಾಗದವರಿಗೆ ಹಳೆಯ ದಿಲ್ಲಿಯ, ಪಹಾರ್‍ಗಂಜ್‍ನಂತಹ ಇಕ್ಕಟ್ಟಾದ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ರುಚಿಕಟ್ಟಾದ ತಿಂಡಿ ತಿನಿಸುಗಳು ಸಿಗುತ್ತವೆ. ಕೊಟ್ಟ ಹಣಕ್ಕೆ ಮೋಸವಿಲ್ಲದ ಗುಣಮಟ್ಟದ ಆಹಾರಗಳವು. ನಮ್ಮಲ್ಲಿ ಹದಿನೈದು ರೂಪಾಯಿಯ ಪಾನಿಪೂರಿ ನೀಡುವ ವ್ಯಾಪಾರಿ ಹಿಂಡಿ ಹಿಂಡಿ ಚಪ್ಪಟೆಯಾಗಿ ಹೋದ ಲಿಂಬೆಹಣ್ಣನ್ನೇ ಮತ್ತೊಮ್ಮೆ ಹಿಂಡಿ ಶಾಸ್ತ್ರ ಪೂರೈಸುತ್ತಾನೆ. ಆದರೆ ದಿಲ್ಲಿಯ ಬೀದಿ ಬದಿಯಲ್ಲಿ ಹತ್ತು ರೂಪಾಯಿ ಒಂದು ಗೆಣಸಿನ ಪೀಸನ್ನು ಕಟ್‍ ಮಾಡಿಕೊಡುವ ವ್ಯಾಪಾರಿ, ನಗುಮುಖದಿಂದಲೇ ಅರ್ಧ ಲಿಂಬೆ ಹಣ್ಣನ್ನು ಹಿಂಡಿ ಬಾಯಲ್ಲಿ ನೀರೂರಿಸುತ್ತಾರೆ. ಇಲ್ಲಿನ ದುಡಿಮೆಗೂ ಒಂದು ಉದ್ದೇಶ ಇರುವಂತೆ ಜನ ಬದುಕುತ್ತಾರೆ. ಪಡೆಯುವ ಹಣಕ್ಕೆ ತಕ್ಕ ಗುಣಮಟ್ಟವನ್ನು ನೀಡಬೇಕು ಎಂಬ ಕಾಮನ್‍ಸೆನ್ಸ್ ಇಲ್ಲಿನ ಅಂತರಾಳದಲ್ಲಿ ಹರಿಯುತ್ತಿರುವಂತೆ ಭಾಸವಾಗುತ್ತದೆ. ನಮ್ಮ ದರ್ಶಿನಿಗಳನ್ನು ನಡೆಸುತ್ತಿರುವ ವರ್ಗದವರನ್ನು ಇಲ್ಲಿನ ಬೀದಿ ವ್ಯಾಪಾರಿಗಳ ಜತೆ ಸಮೀಕರಿಸಿ ನೋಡಿದರೆ, ದಿಲ್ಲಿಯಲ್ಲಿ ಯಾಕೆ ಆಮ್‍ ಆದ್ಮಿಯಂತಹ delhi food stallಬದಲಾವಣೆ ಬಯಸುವ ಪಕ್ಷ ತನ್ನೆಲ್ಲಾ ಮಿತಿಗಳ ಆಚೆಗೂ ಅಧಿಕಾರ ಕೇಂದ್ರದ ಹತ್ತಿರಕ್ಕೆ ಬಂದು ನಿಂತಿದೆ ಎಂಬುದು ಅರ್ಥವಾಗುತ್ತದೆ.

ಮೊನ್ನೆ ವೈಶಾಲಿ ಮಾರ್ಗದ ಮೆಟ್ರೊದಲ್ಲಿ ಸಿಕ್ಕ ದಿಲ್ಲಿ ಯೂನಿವರ್ಸಿಟಿಯ ರಾಜಕೀಯ ಶಾಸ್ತ್ರದ ವಿದ್ಯಾರ್ಥಿ ಸಂಹಿತಾ ಸೇಟ್‍ ಜತೆ ಈ ಕುರಿತು ಅಭಿಪ್ರಾಯವನ್ನು ಹಂಚಿಕೊಂಡೆ. “ಹೌದಾ, ನಾವು ಈ ಬಗ್ಗೆ ಗಮನಿಸಿಯೇ ಇರಲಿಲ್ಲ ನೋಡಿ,’’ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, “ದಿಲ್ಲಿ ಎಂದರೆ ಖುಷವಂತ್‍ ಸಿಂಗ್‍ ಬರೆದ ದಿಲ್ಲಿ ಕಾದಂಬರಿ ಎನ್ನೋ ಕಲ್ಪನೆ ಕಳೆದ ದಶಕದಲ್ಲಿ ಗಟ್ಟಿಯಾಗಿ ಬೇರೂರಿತ್ತು. ಸುಮಾರು ದಿನನೈದು ವರ್ಷ ದಿಲ್ಲಿಯನ್ನು ಆಳಿದ ಕಾಂಗ್ರೆಸ್‍ ಕೂಡ ಅಭಿವೃದ್ಧಿ ಹೆಸರಿನಲ್ಲಿ ಹಳೆಯ ದಿಲ್ಲಿಯ ಜನರನ್ನು ಮರೆತೇ ಬಿಟ್ಟಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಇವರು ನೆನಪಾಗುತ್ತಿದ್ದರು. ಬಿಜೆಪಿ ಕೂಡ ಹಳೆಯ ದಿಲ್ಲಿಯ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸೋತಿತು ಅನ್ನಿಸುತ್ತದೆ. ಲೋಕಸಭೆ ಚುನಾವಣೆ ನಂತರ ಪೂರ್ವ ದಿಲ್ಲಿಯಲ್ಲಿ ಕೋಮುಸಂಘರ್ಷ ನಡೆಯಿತಾದರೂ, ಅದೂ ಕೂಡ ಚುನಾವಣೆಯ ಅಸ್ತ್ರವಾಗಲಿಲ್ಲ. ಯಾಕೆಂದರೆ ದಿಲ್ಲಿಯ ಕೆಳವರ್ಗದಲ್ಲಿ ಯೂನಿಕ್‍ ಆದ ಪ್ರಾಮಾಣಿಕತೆ ಮತ್ತು ರಾಜಕೀಯ ಅರಿವು ಇರುವುದು ಕಾರಣ ಅನ್ನಿಸುತ್ತದೆ,’’ ಎಂದರು. ಪೂರ್ವ ದಿಲ್ಲಿಯ ತ್ರಿಲೋಕ್‍ಪುರಿಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಕೋಮುಗಲಭೆ ನಡೆದಿತ್ತು. ಈ ಕುರಿತು ಆಟೋ ಚಾಲಕರೊಬ್ಬರು ಪ್ರಸ್ತಾಪಿಸಿದ ಕೆಲವು ಮಾತುಗಳು ಈ ಸಮಯದಲ್ಲಿ ನೆನಪಾಯಿತು. trilokpuri-clashesಅವರ ಹೆಸರು ಮರೆತುಹೋಗಿದೆ. “ನಾನು ಗಲಭೆ ನಡೆದ ಸಂದರ್ಭದಲ್ಲಿ ತ್ರಿಲೋಕ್‍ಪುರಿಯಲ್ಲೇ ಇದ್ದೆ. ಸುಖಾಸುಮ್ಮನೆ ಗಲಾಟೆ ಮಾಡಲಾಯಿತು. ಆದರೆ, ಅಲ್ಲಿರುವಷ್ಟು ಬಡತನ ಮತ್ತು ಸಮಸ್ಯೆಗಳು ಇಡೀ ದಿಲ್ಲಿಯಲ್ಲಿ ಇಲ್ಲ,’’ ಎಂದಿದ್ದರು. ಸ್ವಾತಂತ್ರ್ಯ ನಂತರ ಬಂಗಾಳದಲ್ಲಿ ನಡೆದ ಕೋಮು ಗಲಭೆಗಳನ್ನು ಪ್ರಸ್ತಾಪಿಸುತ್ತ, ‘ಕೋಮು ಸಂಘರ್ಷದ ಮೂಲ ಇರುವುದು ನಮ್ಮ ಆರ್ಥಿಕ ಸ್ಥರಗಳಲ್ಲಿನ ಭಿನ್ನತೆಯಲ್ಲಿ’ ಎಂದು ಜಯಪ್ರಕಾಶ್‍ ನಾರಾಯಣ್‍ ವ್ಯಾಖ್ಯಾನಿಸಿದ್ದರು ಎಂದು ಹಿರಿಯರೊಬ್ಬರು ಹೇಳಿದ ನೆನಪು. ಅದು ನಿಜವೇ ಆಗಿದ್ದರೆ ತ್ರಿಲೋಕ್‍ಪುರಿಯಲ್ಲಿ ಹತ್ತಿದ ಕಿಡಿ ಇಂದು ಇಡೀ ದಿಲ್ಲಿಯನ್ನೇ ವ್ಯಾಪಿಸಬೇಕಿತ್ತು. ಆದರೆ, ಇಲ್ಲಿ ಜಾತಿ ಮತ್ತು ಧರ್ಮದ ವಿಚಾರಗಳಿಗಿಂತ ಬಡತನ ಮತ್ತು ಶ್ರೀಮಂತಿಕೆ (ಬಡವ ಮತ್ತು ಶ್ರೀಮಂತ ಅಲ್ಲ)ಯಂತಹ ವರ್ಗ ತಾರತಮ್ಯದ ಅಂಶ ಚುನಾವಣೆಯ ಪ್ರಮುಖ ಅಸ್ತ್ರವಾಯಿತು. ತ್ರಿಲೋಕ್‍ಪುರಿಯಲ್ಲಿ ಕೋಮು ಗಲಭೆ ನಡೆಯುತ್ತಲೇ ಆಪ್‍ನ ಸಕಾಲಿಕ ಮಧ್ಯಪ್ರವೇಶ ಧರ್ಮಾಧಾರಿತ ರಾಜಕಾರಣದತ್ತ ಜನ ಹೋಗುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಿತು. ಗಲಭೆ ನಡೆದ ಮಾರನೇ ದಿನವೇ ನಡೆಸಿದ ಸೌಹಾರ್ಧ ನಡಿಗೆ ಮತ್ತು ಕೋಮು ಸಾಮರಸ್ಯ ಮೂಡಿಸಲು ನಡೆಸಿದ ವಿಶಿಷ್ಟ ಪ್ರಯತ್ನಕ್ಕೆ ಇಲ್ಲಿ ಬೆಲೆ ಸಿಕ್ಕಿದೆ.

ಇಲ್ಲೀಗ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಪೆ. 7ರ ಮುಂಜಾನೆಯಿಂದ ಸಂಜೆವರೆಗೆ ದಿಲ್ಲಿಯ ಸುಮಾರು 13 ಸಾವಿರ ಮತಗಟ್ಟೆಗಳಲ್ಲಿ ದಿಲ್ಲಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ‘ದಿಲ್ಲಿ ಕೆ ದಿಲ್‍ ಮೆ ಕ್ಯಾ ಹೇ?’ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ, dandi_yatra_delhiಅದು ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಎಂಬ ಎಚ್ಚರಿಕೆ ಎಲ್ಲರಲ್ಲೂ ಇದೆ. ಅದಕ್ಕಾಗಿ ರಾತ್ರಿ ಕಾರ್ಯಾಚರಣೆಗಳನ್ನು ತಡೆಯುವ ಕೊನೆಯ ಪ್ರಯತ್ನಗಳು ಜಾರಿಯಲ್ಲಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ, ನಮ್ಮೀ ಚುನಾವಣೆ ವ್ಯವಸ್ಥೆಯ ಮಿತಿಗಳ ಒಳಗಡೆಯೇ ಬದಲಾವಣೆ ಬಯಸುವ ಸಾಧ್ಯತೆಯೊಂದನ್ನು ಅನ್ವೇಷಣೆ ಮಾಡಿದಂತಾಗುತ್ತದೆ. ಹಾಗೂ ದೇಶದ ಇತರೆ ಕಡೆಗಳಲ್ಲಿ ಹೇಗೆ ರಾಜಕೀಯ ಪರ್ಯಾಯೊಂದನ್ನು ನಿರ್ಮಿಸಬಹುದು ಎಂಬುದಕ್ಕೆ ಈ ಕಾಲದ ಮಾದರಿಯೊಂದು ಸಿಕ್ಕಂತಾಗುತ್ತದೆ.