Category Archives: ಮುನೀರ್ ಕಾಟಿಪಳ್ಳ

ಗಂಗೂರಿನ ಭಾಗ್ಯಮ್ಮ ಮತ್ತು ಸಮಾನತೆ…

– ಮುನೀರ್ ಕಾಟಿಪಳ್ಳ

ಇತ್ತೀಚೆಗೆ ಡಿವೈಎಫ್ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನ ಜಿಲ್ಲೆಗೆ ಹೋಗಿದ್ದೆ. ಸಮ್ಮೇಳನದ ಉದ್ಘಾಟನೆಗೆ ಭಾಗ್ಯಮ್ಮ ಎಂಬ ಯುವದಲಿತ ಮಹಿಳೆಯನ್ನು ಅಲ್ಲಿನ ಸಂಗಾತಿಗಳು ಆಹ್ವಾನಿಸಿದ್ದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾರೀಕೆ ಭಾಗ್ಯಮ್ಮ, ಹೆಸರೇ ಕೇಳಿರದ ಸಾಮಾನ್ಯ ಮಹಿಳೆಯನ್ನು ಉದ್ಘಾಟಕರಾಗಿ ಯಾಕೆ ಕರೆದಿದ್ದಾರೆ. ಸಾಹಿತಿಗಳೋ, ಬುದ್ಧಿಜೀವಿಗಳೋ, ಹಿರಿಯ ನಾಯಕರೋ ಮಾಡಬೇಕಿದ್ದ ಉದ್ಘಾಟನೆಗೆ ಈಕೆಯನ್ನೇ ಯಾಕೆ ಆಹ್ವಾನಿಸಿದ್ದಾರೆ? ಎಂಬ ಕುತೂಹಲ ನನ್ನೊಳಗೆ ಮೂಡಿತು. ಅಲ್ಲಿನ ಸ್ಥಳೀಯ ಸಂಗಾತಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಭಾಗ್ಯಮ್ಮ ಬಗ್ಗೆ ನನಗೆ ಹೆಮ್ಮೆ ಅನಿಸಿತು, ಆಕೆಯ ಭಾಷಣದ ನಾಲ್ಕೇ ನಾಲ್ಕು ಮಾತು ಆಕೆಯ ಬಗ್ಗೆ ಅಪಾರ ಗೌರವವನ್ನು ನನ್ನೊಳಗೆ ಮೂಡಿಸಿತು. ಹಾಗೆಯೇ ಹಾಸನ ಸಹಿತ ನಮ್ಮ ಕನ್ನಡ ನಾಡಿನಲ್ಲಿ ಹಸಿಹಸಿಯಾಗಿ ಜೀವಂತವಾಗಿರುವ ಫ್ಯೂಡಲ್ ವ್ಯವಸ್ಥೆ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ಕರಾಳ ಮುಖವನ್ನು ಅನಾವರಣಗೊಳಿಸಿತು. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಗಂಗೂರು ಪ್ರಕರಣ ಮತ್ತು ಭಾಗ್ಯಮ್ಮ ಕುಟುಂಬದ ನೋವಿನ ಕಥೆಯನ್ನು ಇಲ್ಲಿನ ಮಾಧ್ಯಮಗಳು ಸೇರಿದಂತೆ ಒಟ್ಟು ವ್ಯವಸ್ಥೆ ಹೇಗೆ ಮುಚ್ಚಿ ಹಾಕಿತು. ದಿಕ್ಕು ತಪ್ಪಿಸಿತು, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಟ ಮಾಡಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೇಗೆ ಊರು ಬಿಡಿಸಿತು ಎಂಬ ಕಥೆಯನ್ನು ತೆರೆದಿಟ್ಟಿತು.

ಗಂಗೂರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಒಂದು ಗ್ರಾಮ. ಏಳೆಂಟು ನೂರು ಮನೆಗಳಲ್ಲಿ ನಲ್ವತ್ತರಷ್ಟು ಮನೆಗಳು ದಲಿತರಿಗೆ ಸೇರಿದ್ದು. ಇಲ್ಲಿನ ದಲಿತರು ತೀರಾ ಬಡತನದಲ್ಲಿರುವ ಭೂಹೀನರೇನಲ್ಲ. ಒಂದಿಷ್ಟು ಜಮೀನು ಹೊಂದಿರುವ ಇವರು ತಮ್ಮ ಜಮೀನಿನ ಕೆಲಸಗಳು ಮುಗಿದ ಮೇಲೆ ಊರಿನ ಮೇಲ್ಜಾತಿಗಳ ಮನೆ, ಜಮೀನಿನಲ್ಲಿ ದುಡಿಯುತ್ತಾರೆ. ಆರ್ಥಿಕವಾಗಿ ಇವರು ಮೇಲ್ಜಾತಿಗಳಿಗೆ ತೀರಾ ಅವಲಂಭಿತರಾಗಿಲ್ಲದಿದ್ದರೂ ತಮ್ಮ ಕೀಳು ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳು ಹೇರಿದ ಎಲ್ಲಾ ಕಟ್ಟುಪಾಡುಗಳಿಗೆ ಒಳಗಾದವರು. ಹೊಟೇಲ್‌ಗಳಲ್ಲಿ ಎರಡು ಲೋಟ ಪದ್ಧತಿ, Gangoor-1ಊರಿನ ಕ್ಷೌರಿಕನ ಅಂಗಡಿಯಲ್ಲಿ ಕೂದಲು ಕಟ್ಟಿಂಗ್ ಮಾಡಿಸಲು ಅವಕಾಶ ಇಲ್ಲದಿರುವುದು, ಮೇಲ್ಜಾತಿಗಳ ಮನೆಗಳಲ್ಲಿ ಕೆಲಸಕ್ಕೆ ಹೋದಾಗ ತಾವೇ ತಟ್ಟೆ ಹಿಡಿದುಕೊಂಡು ಹೋಗಬೇಕು, ಮೇಲ್ಜಾತಿಗಳ ಮನೆಯಲ್ಲಿ ಮದುವೆ ಮುಂಜಿಗಳು ನಡೆದಾಗ ಕೇರಿಯ ಬಾಗಿಲಲ್ಲಿ ನಿಂತು ತಮಟೆ ಬಾರಿಸುವವ ನೀಡುವ ಆಹ್ವಾನವನ್ನೇ ಸ್ವೀಕರಿಸಿ ಶುಭಕಾರ್ಯಗಳಿಗೆ ಹೋಗಬೇಕು, ಪ್ರತ್ಯೇಕ ಕೂತು ಊಟ ಮಾಡಬೇಕು, ದಲಿತ ಹುಡುಗರು, ಯುವತಿಯರು ಒಳ್ಳೆಯ ಬಟ್ಟೆ ಧರಿಸಿ ಮೇಲ್ಜಾತಿಕೇರಿಗಳಲ್ಲಿ ಅಡ್ಡಾಡಬಾರದು. ಹೀಗೆ ಶತಮಾನಗಳ ಹಿಂದಿನ ಎಲ್ಲಾ ಪಾಳೇಗಾರಿ ಆಚರಣೆಗಳು ಗಂಗೂರಿನಲ್ಲಿ ಈಗಲೂ ಹಸಿಹಸಿಯಾಗಿ ಜೀವಂತವಾಗಿದೆ. ಇದೆಲ್ಲವನ್ನೂ ಯಾವುದೇ ತಕರಾರಿಲ್ಲದೆ ಒಪ್ಪಿ ಪಾಲಿಸಿಕೊಂಡು ಬಂದದ್ದಕ್ಕೆ ಗಂಗೂರಿನ ದಲಿತರು ಇಷ್ಟರವರೆಗೆ ಊರಿನಲ್ಲಿ ‘ನೆಮ್ಮದಿ’ಯಾಗಿ ಬದುಕಿದ್ದರು. ಅವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಹಾಸನದ ಆಲೂರು ತಾಲೂಕು ಕೇಂದ್ರದಲ್ಲಿ ಹುಟ್ಟಿ ಅಲ್ಲೇ ಎಸ್.ಎಸ್.ಎಲ್.ಸಿ.ವರೆಗೆ ಓದಿರುವ ಭಾಗ್ಯಮ್ಮ ಎಂಬ ದಲಿತ ಯುವತಿ ಯಾವಾಗ ಗಂಗೂರಿನ ಹುಡುಗನನ್ನು ಮದುವೆಯಾಗಿ ದಲಿತಕೇರಿಗೆ ಕಾಲಿಟ್ಟಳೋ ಆಕೆಗೆ ಇದೆಲ್ಲವನ್ನು ಸಹಿಸಲಾಗಲಿಲ್ಲ. ಅಂಬೇಡ್ಕರ್, ಸಂವಿಧಾನ, ಹೋರಾಟ, ಚಳುವಳಿ, ಸಮಾನತೆ, ದೇವಸ್ಥಾನ ಪ್ರವೇಶ ಹೀಗೆ ಒಂದಿಷ್ಟು ತಿಳಿದುಕೊಂಡಿದ್ದ ಭಾಗ್ಯಮ್ಮ ಈ ರೀತಿಯ ಶೋಷಣೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಭಾಗ್ಯಮ್ಮ ಇದನ್ನೆಲ್ಲ ಪ್ರಶ್ನಿಸಬೇಕು ಎಂದುಕೊಳ್ಳುತ್ತಿದ್ದರೂ ಊರಿನ ಇತರ ದಲಿತರು ಬೆಂಬಲ ಕೊಡಬೇಕಲ್ಲ. ನಾವು ಇರಬೇಕಾದದ್ದೇ ಹೀಗೆ ಎಂಬ ಗುಲಾಮಿ ಮನೋಭಾವಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದ ಗಂಗೂರಿನ ದಲಿತರು ಭಾಗ್ಯಮ್ಮಳ ಜೊತೆ ಕೈಜೋಡಿಸಲು ತಯಾರಿರಲಿಲ್ಲ. Gangoor-2ಈ ನಡುವೆ ಊರಿನ ರಂಗನಾಥ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ನಡೆಯಿತು. ಒಂದೊಂದು ಕುಟುಂಬಕ್ಕೂ (ಕುಟುಂಬ ಅಂದರೆ ಗಂಡ-ಹೆಂಡತಿ) ತಲಾ ಐದೈದು ಸಾವಿರ ವಂತಿಗೆ ನಿಗದಿ ಮಾಡಲಾಯಿತು. ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧವಾಗಿದ್ದರೂ ವಂತಿಗೆಯಿಂದೇನೋ ದಲಿತರಿಗೆ ವಿನಾಯಿತಿ ಸಿಗಲಿಲ್ಲ. ಪ್ರತಿಯೊಂದು ದಲಿತ ಕುಟುಂಬವೂ ತಮಗೆ ನಿಗದಿಪಡಿಸಿದ ವಂತಿಗೆಯನ್ನು ತಕರಾರಿಲ್ಲದೆ ಪಾವತಿಸಿತು. ಭಾಗ್ಯಮ್ಮ ಮನೆಯಲ್ಲಿ ಆಕೆಯ ಇಬ್ಬರು ಮೈದುನರದ್ದೂ ಸೇರಿಸಿದರೆ ಒಟ್ಟು ಮೂರು ಕುಟುಂಬ ಆಗುತ್ತದೆ. ಮೈದುನರದ್ದೂ ಸೇರಿಸಿ ಒಟ್ಟು ಹದಿನೈದು ಸಾವಿರ ರೂಪಾಯಿಗಳನ್ನು ಭಾಗ್ಯಮ್ಮ ಅವರ ಒಂದು ಮನೆಯಿಂದಲೇ ದೇವಸ್ಥಾನಕ್ಕೆ ಚಂದಾ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನ, ಗರ್ಭಗುಡಿಯ ಬಾಗಿಲುಗಳ ನಿರ್ಮಾಣಕ್ಕೆ ಭಾಗ್ಯಮ್ಮಳ ದಲಿತ ಕುಟುಂಬವೇ ಉತ್ತಮ ತಳಿಯ ಮರಮಟ್ಟು ನೀಡಿದೆ. ಇಷ್ಟೆಲ್ಲಾ ಕೊಡುಗೆಗಳನ್ನು ಮೇಲ್ಜಾತಿ ಕುಟುಂಬಗಳಿಗೆ ಕಡಿಮೆ ಇಲ್ಲದಂತೆ ಊರ ದೇವಸ್ಥಾನಕ್ಕೆ ನೀಡಿದ್ದರೂ, ದಲಿತರಿಗೆ ಮಾತ್ರ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಅವರು ಏನಿದ್ದರೂ ಹೊರಗಡೆ ದೂರದಲ್ಲಿ ನಿಂತು ಕೈ ಮುಗಿಯಬೇಕು. ಯಾವ ಸ್ವಾಭಿಮಾನಿ ತಾನೇ ಇದನ್ನೆಲ್ಲ ಸಹಿಸಲು ಸಾಧ್ಯ? ಸಹಜವಾಗಿ ಭಾಗ್ಯಮ್ಮ ಸಿಡಿದು ನಿಂತಿದ್ದಾಳೆ. ಊರಿನಲ್ಲಿ ಸ್ಥಾಪನೆಗೊಂಡಿದ್ದ ಅಂಬೇಡ್ಕರ್ ಸಂಘದ ಯುವಕರನ್ನು ಜೊತೆ ಸೇರಿಸಿದ್ದಾಳೆ. ಊರ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾಳೆ. ಭಾಗ್ಯಮ್ಮಳ ನಿರಂತರ ಪ್ರಯತ್ನದಿಂದ ಒಂದಿಷ್ಟು ಜನ ದಲಿತರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲಲು ತಯಾರಾಗಿದ್ದಾರೆ. ಹೀಗೆ ಗಂಗೂರಿನಲ್ಲಿ ನಿಧಾನಕ್ಕೆ ಬಂಡಾಯಕ್ಕೆ ವೇದಿಕೆ ಸಜ್ಜಾಗಿದೆ.

ಭಾಗ್ಯಮ್ಮ ಮತ್ತು ಆಕೆಯ ಸಂಗಾತಿಗಳಿಗೆ ಹಾಸನದ ಕೆಲ ದಲಿತ ಚಳುವಳಿಯ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಹೀಗೆ ಅಸಮಾನತೆಯ ವಿರುದ್ಧ ಸಮರ ಸಾರಲು ನಿರಂತರ ಪ್ರಯತ್ನಿಸಿ ಸಮಯ ಕಾಯುತ್ತಿದ್ದ ಭಾಗ್ಯಮ್ಮ ಒಂದು ದಿನ ಒಂದಿಷ್ಟು ಮಹಿಳೆಯರ ಸಹಿತ ಧೈರ್ಯದಿಂದ ದೇವಸ್ಥಾನ ಪ್ರವೇಶಿಸಿದ್ದಾಳೆ. ಇದು ಗಂಗೂರಿನ ಮಟ್ಟಿಗೆ ಅನಿರೀಕ್ಷಿತ, ಅಲ್ಲಿನ ಮೇಲ್ಜಾತಿ ಮನಸ್ಸುಗಳು ಕ್ರೋಧಗೊಂಡಿದೆ. ದಲಿತರ ‘ಅಹಂಕಾರ’ ಕಂಡು ಕೆರಳಿ ನಿಂತಿವೆ. ಪ್ರಕರಣ ಇಡೀ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹಾಸನದಂತ ಫ್ಯೂಡಲ್ ಮನಸ್ಥಿತಿಯ ನಾಡಿನಲ್ಲಿ ಇದು ಆ ವ್ಯವಸ್ಥೆಗೆ ಬಿದ್ದ ಕೊಡಲಿ ಪೆಟ್ಟಿನಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಭಾಗ್ಯಮ್ಮ ಮತ್ತವರ ಸಂಗಾತಿಗಳನ್ನು ಮಟ್ಟ ಹಾಕಲೇ ಬೇಕು ಎಂದು ಜಿಲ್ಲೆಯ ಒಟ್ಟು ಆಳುವ ವ್ಯವಸ್ಥೆಯೇ ಟೊಂಕ ಕಟ್ಟಿ ನಿಂತಿದೆ. ಮೀಸಲಾತಿ ನೀತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಎಂಬ ದಲಿತ ಮಹಿಳೆಯನ್ನು ಒಂದು ಬಾರಿಯೂ ಕುರ್ಚಿಯಲ್ಲಿ ಕೂರಿಸದೆ ಕೇವಲ ಕಡತಗಳಿಗೆ ಸಹಿ ಹಾಕಲಷ್ಟೇ ಬಳಸಿದ್ದ ಗಂಗೂರಿನಂತಹ ಊರು ಭಾಗ್ಯಮ್ಮಳನ್ನು ಸಹಿಸಲು ಸಾಧ್ಯವೇ? ಹೀಗೆ ಉದ್ವಿಗ್ನಗೊಂಡ ಊರು ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆ. ಅಪವಿತ್ರಗೊಂಡ ರಂಗನಾಥ ಸ್ವಾಮಿ ದೇವಸ್ಥಾನ ಕೆಡವಿ ಪುನರ್ ನಿರ್ಮಿಸಬೇಕು ಎಂದು ತೀರ್ಮಾನಿಸಿದೆ. ಹೀಗೆ ಸೇಡಿಗಾಗಿ ಅವಕಾಶ ಕಾಯುತ್ತಿದ್ದ ಊರಿನ ಫ್ಯೂಡಲ್ ಮನಸ್ಸುಗಳಿಗೆ ಒಂದು ಅವಕಾಶ ಒದಗಿಬಂದಿದೆ. Gangoor-3ಬೆಂಗಳೂರಿನ ಕ್ಷೌರಿಕ ಸಮಾಜದ ಮುಖಂಡರೊಬ್ಬರು ಅಸ್ಪೃಶ್ಯತೆಗಾಗಿ ಸುದ್ಧಿ ಮಾಡಿದ ಗಂಗೂರಿಗೆ ಬಂದಿಳಿದಿದ್ದಾರೆ. ನೇರ ಊರಿನ ಶಾಲೆಗೆ ತೆರಳಿ ಎಲ್ಲಾ ಜಾತಿಯ ಮಕ್ಕಳಿಗೆ ಒಟ್ಟಾಗಿ ಕೂದಲು ಕಟ್ಟಿಂಗ್ ಮಾಡಿದ್ದಾರೆ. ಇಷ್ಟಕ್ಕೇ ನೆಪಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಗಳು ಉರಿದು ಬಿದ್ದಿದ್ದಾರೆ. ತಮ್ಮ ಅನುಮತಿ ಇಲ್ಲದೆ ನಮ್ಮ ಮಕ್ಕಳಿಗೆ ಹೇಗೆ ಕಟ್ಟಿಂಗ್ ಮಾಡಿಸಿದ್ರಿ ಎಂದು ಗಲಾಟೆ ಶುರು ಮಾಡಿದ್ದಾರೆ. ಇದನ್ನು ಮಾಡಿಸಿದ್ದು ಭಾಗ್ಯಮ್ಮಳೇ ಎಂದು ರೇಗಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೇಲ್ಜಾತಿಗಳ ಆಕ್ರೋಶಕ್ಕೆ ಬೆದರಿ ಭಾಗ್ಯಮ್ಮ ಸೇರಿದಂತೆ ಅವರು ದೂರು ಕೊಟ್ಟವರ ಮೇಲೆ ಕಠಿಣ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬಿಸಿಬಿಸಿಯಾಗಿ ಇರುವಾಗಲೇ ಮರುದಿವಸ ಊರಿನಲ್ಲಿ ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ. ಹಿಂದಿನಿಂದಲೂ ಮೇಲ್ಜಾತಿಗಳು ವಿಧಿಸಿದ ಕಟ್ಟುಪಾಡುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದ ಊರಿನ ದಲಿತರು ಭಯಗೊಂಡಿದ್ದಾರೆ. ಬೆರಳೆಣಿಕೆಯ ದಲಿತ ಕುಟುಂಬಗಳನ್ನು ಬಿಟ್ಟರೆ ಉಳಿದ ಕುಟುಂಬಗಳು ಹಿಂದಿನಂತೆಯೇ ಪದ್ಧತಿಗಳು ಮುಂದುವರಿಯಲಿ ಎಂದು ಮೇಲ್ಜಾತಿಗಳಿಗೆ ಶರಣಾಗಿವೆ. ಮರುದಿವಸ ಶಾಂತಿ ಸಭೆಯಲ್ಲಿ ಇದು ನಿಚ್ಚಳವಾಗಿ ವ್ಯಕ್ತವಾಗಿದೆ. ಶಾಂತಿ ಸಭೆಯಲ್ಲಿ ಐನೂರಕ್ಕೂ ಹೆಚ್ಚು ಜನ ಮೇಲ್ಜಾತಿಯವರು ಸೇರಿದ್ದರು. ಹೆಚ್ಚಿನ ದಲಿತರು ಭಯದಿಂದ ಮೇಲ್ಜಾತಿಗಳ ಜೊತೆ ನಿಂತರು. ತಮ್ಮ ಸಂಕಷ್ಟಗಳಿಗೆ ಭಾಗ್ಯಮ್ಮ ಕಾರಣ ಎಂದು ಹೇಳತೊಡಗಿದರು. ಶಾಂತಿ ಸಭೆಯಲ್ಲಿ ಸಾರ್ವಜನಿಕವಾಗಿ ಭಾಗ್ಯಮ್ಮ ಮೇಲೆ ಮೇಲ್ಜಾತಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದವು, ಭಯಗೊಂಡಿದ್ದ ಕೆಳ ದಲಿತರನ್ನು ಬಲವಂತವಾಗಿ ಹಲ್ಲೆಯಲ್ಲಿ ಭಾಗವಹಿಸುವಂತೆ ಮಾಡಿದವು. ಬಹಿರಂಗವಾಗಿ ಪೊಲೀಸ್, ಜಿಲ್ಲಾಡಳಿತ ಅಧಿಕಾರಿಗಳು, ಮಾಧ್ಯಮದ ಜನರೆದುರು ಹಲ್ಲೊಗೊಳಗಾಗ ಭಾಗ್ಯಮ್ಮ ಮತ್ತು ಇನ್ನೂ ಒಂದಿಬ್ಬರು ಮಹಿಳೆಯರು ಗಾಯಗೊಂಡು ಆಸ್ಪತ್ರೆ ಸೇರಿದರು.

ಈಗ ಗಂಗೂರು ಶಾಂತ. ಊರಿನಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ. ಗಂಗೂರಿನಲ್ಲಿ ಗಲಾಟೆ ಮಾಡಿಸಿದ್ದು ಹೊರಗಿನಿಂದ ಬಂದವರು ಮೇಲ್ಜಾತಿಗಳ ತಪ್ಪಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬೆರಳೆಣಿಕೆಯ ಕೆಲ ಮನೆಗಳನ್ನು ಬಿಟ್ಟರೆ ಮಿಕ್ಕೆಲ್ಲ ದಲಿತರು ನಾವು ಹಿಂದಿನಂತೆ ಮೇಲ್ಜಾತಿಗಳ ಜೊತೆಗೆ ಅನೋನ್ಯತೆಯಿಂದ ಬಾಳುತ್ತೇವೆ. ದೇವಸ್ಥಾನ ಪ್ರವೇಶವೂ ಬೇಡ, Gangoor-5ಒಂದೇ ಲೋಟವೂ ಬೇಡ, ಊರಿನ ಸೆಲೂನಿನಲ್ಲಿ ಕೂದಲು ಕಟ್ಟಿಂಗೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಮಾನತೆ ಕೇಳಿದ್ದಕ್ಕೆ ಕೆಲ ದಲಿತರು ಜೈಲಿಗೆ ಹೋಗಿದ್ದಾರೆ. ಭಾಗ್ಯಮ್ಮ ಆಸ್ಪತ್ರೆಯಿಂದ ಚೇತರಿಸಿ, ಜಾಮೀನು ಪಡೆದು ತನ್ನ ತವರೂರು ಆಲೂರು ಸೇರಿಕೊಂಡಿದ್ದಾಳೆ. ಘಟನೆ ನಡೆದು ತಿಂಗಳು ತುಂಬುತ್ತಿದ್ದರೂ ಈಕೆಗೆ ಗಂಗೂರಿಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಹೋದರೆ ಭಾಗ್ಯಮ್ಮಳಿಗೆ ಅಪಾಯ ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಿಲ್ಲಾಡಳಿತ, ಪೊಲೀಸರು, ಬಂಡವಾಳ ಶಾಹಿ ಪಕ್ಷಗಳನ್ನು ನಿಯಂತ್ರಿಸುವ ಮೇಲ್ಜಾತಿ ರಾಜಕಾರಣಿಗಳು, ಮಾಧ್ಯಮದ ಮೇಲ್ಜಾತಿ ಮನಸ್ಸುಗಳು ಒಟ್ಟು ಸೇರಿ ಭಾಗ್ಯಮ್ಮ ಮತ್ತು ಸಂಗಾತಿಗಳದ್ದೇ ತಪ್ಪು ಎಂಬಂತೆ ಬಿಂಬಿಸಿಬಿಟ್ಟಿವೆ. ಒಂದು ಮಹತ್ವದ ಹೋರಾಟವನ್ನು ಮುರಿದು ಹಾಕಿದೆ. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಘಟನೆಯನ್ನು ಅಲ್ಲಿಗೆ ತಣ್ಣಗಾಗಿಸಲಾಗಿದೆ. ಊರಿನಿಂದ ಬಲವಂತವಾಗಿ ಹೊರಗಾಕಿಸಿಕೊಂಡ ಬಹಿಷ್ಕೃತೆ ಭಾಗ್ಯಮ್ಮ ದೊಡ್ಡ ಸುದ್ಧಿಯಾಗುವುದು ಯಾರಿಗೂ ಬೇಕಿಲ್ಲ.

ಅಂತಹ ಭಾಗ್ಯಮ್ಮಳನ್ನು ಡಿವೈಎಫ್ಐ ವೇದಿಕೆಯಲ್ಲಿ ನೋಡುವಾಗ ನನಗಂತೂ ಹೆಮ್ಮೆಯಾಯಿತು. ಇಂದು ಹಾಸನ ಸೇರಿದಂತೆ ರಾಜ್ಯದ ಎಲ್ಲ ಪ್ರಜಾಸತ್ತಾತ್ಮಕ ಚಳುವಳಿಗಳು ಭಾಗ್ಯಮ್ಮ ಜೊತೆಗೆ ನಿಲ್ಲಬೇಕಿದೆ. ಭಾಗ್ಯಮ್ಮ ನಿಜಕ್ಕೂ ಅಸಮಾನತೆಯ ವಿರುದ್ಧದ ಹೋರಾಟದ ಸಂಕೇತ, ತಳಮಟ್ಟದಲ್ಲಿ ಹುಟ್ಟಿ ಬಂದ ನಿಜ ನಾಯಕಿ. ಆಕೆ ಆಙಈ ಸಮ್ಮೇಳನದಲ್ಲಿ ಆಡಿದ ಒಂದು ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ದೇವಸ್ಥಾನ ನಾವು ವಂತಿಗೆ ಕೊಟ್ಟಾಗ, ಗರ್ಭಗುಡಿಯ ಕಲ್ಲು ಕಟ್ಟಿದಾಗ, ದೇವಸ್ಥಾನದ ಒಳಾಂಗಣಕ್ಕೆ ಸುಣ್ಣ ಹೊಡೆದಾಗ ದೇವರು ಯಾಕೆ ಮಲಿನಗೊಳ್ಳಲಿಲ್ಲ, ಆಗ ಯಾಕೆ ದೇವಸ್ಥಾನವನ್ನು ಇವರು ಕೆಡವಿ ಹೊಸದಾಗಿ ಕಟ್ಟಲಿಲ್ಲ. ಗಂಗೂರಿನ ಮೇಲ್ಜಾತಿಗಳ ಮನೆಯಲ್ಲಿ ನಾವು ಹೋಗಿ ಕರೆದು ಕೊಟ್ಟ ಹಾಲನ್ನು ಅವರು ಸೇವಿಸುತ್ತಾರೆ. ನಾವು ಅವರ ಜಮೀನಿನಲ್ಲಿ ಬಿತ್ತಿದ ಕಾಳಿನಿಂದ ಬೆಳೆದ ಅಕ್ಕಿ, ರಾಗಿಯನ್ನು ಮೇಲ್ಜಾತಿಗಳು ಉಣ್ಣುತ್ತಾರೆ. ಆಗ ಯಾಕೆ ಅವರ ಹೊಟ್ಟೆ, ಕರುಳು ಅಶುದ್ಧ ಆಗಲಿಲ್ಲ. ಅಶುದ್ಧಗೊಂಡ ತಮ್ಮ ಕರುಳನ್ನು ಬಗೆದು ಯಾಕೆ ಅವರು ಕಿತ್ತು ಹಾಕಲಿಲ್ಲ. ಇದು ಭಾಗ್ಯಮ್ಮಳ ಪ್ರಶ್ನೆ ಮಾತ್ರವಲ್ಲ ನಾಡಿನ ಎಲ್ಲಾ ಅಸ್ಪೃಶ್ಯತೆಗೆ ಒಳಗಾದ ಕೆಳ ಜಾತಿಗಳದ್ದು. ಈ ಪ್ರಶ್ನೆಗಳಿಗೆ ಉತ್ತರ ಸಿಗಲೇ ಬೇಕಿದೆ. ಉತ್ತರಿಸಬೇಕಾದವರು ಊರು ಬಿಡಿಸಿದ್ದಾರೆ, ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ.

ಈದ್ ಮಿಲಾದ್, ಕ್ರಿಕೆಟ್ ಮ್ಯಾಚ್, ಧರ್ಮ ರಕ್ಷಣೆ

– ಮುನೀರ್ ಕಾಟಿಪಳ್ಳ

ಕುಳಾಯಿ ಮಂಗಳೂರು ನಗರ ಹೊರವಲಯದ ಗ್ರಾಮ. ಮಂಗಳೂರಿನ ಎಲ್ಲಾ ಊರುಗಳಂತೆ ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ವಾಸವಾಗಿದ್ದಾರೆ. 1990 ನೇ ಇಸವಿಯ ವರೆಗೆ ಇಲ್ಲಿ ಎಲ್ಲಾ ಧರ್ಮದವರು ಜೊತೆಯಾಗಿ ಅನೋನ್ಯತೆಯಿಂದ ಬದುಕುತ್ತಿದ್ದರು. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ನರು ಜೊತೆಯಾಗಿ ತಂಡ ಕಟ್ಟಿಕೊಂಡು ಅಂಡರ್ ಆರ್ಮ್ ಕ್ರಿಕೆಟ್ ಆಡುತ್ತಿದ್ದರು. ಕುಳಾಯಿ ಗ್ರಾಮ ಒಂದರಲ್ಲೇ ಎಂಟು-ಹತ್ತು ಇಂತಹ ಕ್ರಿಕೆಟ್ ತಂಡಗಳಿದ್ದವು. rural-cricket-indiaನ್ಯೂ ಸ್ಟಾರ್, ಅಜೇಯ, ಸೂಪರ್ ಸ್ಟಾರ್, ಫ್ರೆಂಡ್ ಸರ್ಕಲ್, ತರುಣ ವೃಂದ ಹೀಗೆ ಧರ್ಮದ ಸೋಂಕಿಲ್ಲದ ಹೆಸರುಗಳನ್ನು ಇಂತಹ ಕ್ರಿಕೆಟ್ ತಂಡಗಳು ಹೊಂದಿದ್ದವು. 90 ರ ದಶಕದ ಆರಂಭದ ನಂತರ ದ.ಕ. ಜಿಲ್ಲೆಯ ಎಲ್ಲೆಡೆ ಆದ ಬದಲಾವಣೆಗಳು ಕುಳಾಯಿಯಲ್ಲೂ ನಡೆಯಿತು. ಹಿಂದೂ, ಮುಸ್ಲಿಂ ಪ್ರಜ್ಞೆಗಳು ಜಾಗೃತವಾಯಿತು. ಒಂದೆರಡು ಸುತ್ತಿನ ಧರ್ಮ ಯುದ್ಧಗಳೂ ನಡೆದುಹೋದವು. ಒಂದಿಬ್ಬರು ಅಮಾಯಕರು ಧರ್ಮ ಯುದ್ಧದಲ್ಲಿ ಹುತಾತ್ಮರಾದರು. ಇದೆಲ್ಲದರ ಮಧ್ಯೆ ಕ್ರಿಕೆಟ್ ಆಟ, ಪ್ರತೀ ಭಾನುವಾರದ ಟೂರ್ನ್‌ಮೆಂಟ್ ತನ್ನದೇ ಹುಮ್ಮಸ್ಸಿನಲ್ಲಿ ಮುಂದುವರಿದಿತ್ತು. ಧರ್ಮ ಯುದ್ಧದ ನೆರಳು ಕ್ರಿಕೆಟ್ ತಂಡಕ್ಕೂ ಸೋಂಕತೊಡಗಿತು. ಧರ್ಮವನ್ನು ಪ್ರತಿನಿಧಿಸುವ ಹೆಸರಿನ ಕ್ರಿಕೆಟ್ ತಂಡಗಳೂ ರಚನೆಗೊಂಡವು. ಹಿಂದೂಗಳಷ್ಟೇ ಸದಸ್ಯರಾಗಿರುವ, ಮುಸ್ಲಿಮಷ್ಟೇ ಆಟ ಆಡುವ ಪರಿಶುದ್ಧ ತಂಡಗಳಾಗಿ ಕುಳಾಯಿಯ ತಂಡಗಳು ಪರಿವರ್ತನೆಗೊಂಡವು. ಭಾನುವಾರದ ಪಂದ್ಯಾಟಗಳಲ್ಲಿ ಹಿಂದೂ, ಮುಸ್ಲಿಂ ತಂಡಗಳು ಮುಖಾಮುಖಿಯಾದಾಗ, ಕ್ರಿಕೆಟ್ ಅಭಿಮಾನಿಗಳಲ್ಲಿ ಧರ್ಮ ಯುದ್ಧದ ಉದ್ವೇಗ. ಸಿಕ್ಸ್, ಫೋರ್ ಹೊಡೆದಾಗ, ವಿಕೆಟ್‌ಗಳು ಬಿದ್ದಾಗ ತಮ್ಮ ಧರ್ಮದ ತಂಡದ ಪರವಾಗಿ ಜಯ ಜಯಕಾರ.

ಇಂತಹ ಊರಿನಲ್ಲಿ ಎರಡು ತಂಡಗಳು ಬೆಟ್ ಕಟ್ಟಿ ಆಡಿದ ಕ್ರಿಕೆಟ್ ಆಟ ಈದ್ ಮಿಲಾದ್ ಹಬ್ಬ, ಅದರ ಮೆರವಣಿಗೆಯನ್ನು ಧರ್ಮಯುದ್ಧದ ಸಮೀಪಕ್ಕೆ ತಂದು ನಿಲ್ಲಿಸಿತು. ಒಂದು ತಂಡದ ಹೆಸರು ಓಂಶಕ್ತಿ. ಹೆಸರೇ ಸೂಚಿಸುವಂತೆ ಹಿಂದೂಗಳದ್ದು. ಮತ್ತೊಂದು ಗ್ರೀನ್ (ಹಸಿರು) ಸ್ಟಾರ್, ಹಸಿರು ಕೇಸರಿಗೆ ಎದುರಾಳಿಯಾಗಿ ಮುಸ್ಲಿಂ ಮೆರವಣಿಗೆಗಳಲ್ಲಿ ಬಳಕೆಯಾಗುವುದರಿಂದ ಗ್ರೀನ್ ಸ್ಟಾರ್ ಮುಸ್ಲಿಂ ಹದಿಹರೆಯದ ಕ್ರಿಕೆಟ್ ಆಟಗಾರರದ್ದು. ಈ ತಂಡಗಳ ಬೆಟ್ಟಿಂಗ್ ಕ್ರಿಕೆಟ್ ಆಟದಲ್ಲಿ ಗ್ರೀನ್ ಸ್ಟಾರ್ rural_cricketನಿರಂತರವಾಗಿ ಸೋತು ಕೆಲವು ಸಾವಿರ ಹಣ ಕಳೆದುಕೊಂಡಿತ್ತು. ಅರ್ಧ ದುಡ್ಡು ಪಾವತಿಸಿ ಇನ್ನು ಎರಡು, ಮೂರು ಸಾವಿರಕ್ಕೆ ಕೈ ಎತ್ತಿತ್ತು. ಹಣ ಪಾವತಿಗೆ ಸಂಬಂಧಿಸಿ ಹುಡುಗರ ಮಧ್ಯೆ ಸರಣಿ ಮಾತುಕತೆಗಳು ನಡೆದವು. ಇದೇ ಸಂದರ್ಭದಲ್ಲಿ ಕುಳಾಯಿಯಲ್ಲಿ ಈದ್ ಮಿಲಾದ್ ಆಚರಣೆಯ ಸಂಭ್ರಮ. ಎಲ್ಲಾ ಊರುಗಳಂತೆ ಒಂದು ವಾರ ರಾತ್ರಿ ಹೊತ್ತು ವಿವಿಧ ಕಾರ್ಯಕ್ರಮ, ಮಕ್ಕಳ ಹಾಡು, ಭಾಷಣ, ಕೊನೆಯ ದಿನ ಮಕ್ಕಳಿಂದ ಈದ್ ಮಿಲಾದ್ ಮೆರವಣಿಗೆ. ಈ ಬಾರಿಯ ಈದ್ ಮಿಲಾದ್ ಆಚರಣೆಗೆ ಪ್ರಭಾಕರ ಭಟ್‌ರ ಅಮೋಘ ಭಾಷಣದ ಸ್ಫೂರ್ತಿಯು ಇದ್ದುದರಿಂದ ತಯಾರಿ ಭರ್ಜರಿಯಾಗಿ ನಡೆದಿತ್ತು. ಎಲ್ಲೆಡೆ ಹಸಿರು ಬಾವುಟ, ತೋರಣಗಳು. ಈದ್ ಮಿಲಾದ್ ಮೆರವಣಿಗೆಯ ಹಿಂದಿನ ದಿನ ರಾತ್ರಿ ಗ್ರೀನ್ ಸ್ಟಾರ್, ಓಂಶಕ್ತಿ ತಂಡಗಳ ಕ್ರಿಕೆಟ್ ಬೆಟ್ಟಿಂಗ್ ಬಾಕಿ ಹಣದ ಮಾತುಕತೆ ಮುಂದುವರಿದಿದೆ. ಪಂಚಾತಿಕೆ ವಿಫಲವಾಗಿ ಗ್ರೀನ್ ಸ್ಟಾರ್‌ನ ಮುಸ್ಲಿಂ ಹುಡುಗನಿಗೆ ಓಂ ಶಕ್ತಿಯ ಹಿಂದೂ ಹುಡುಗರು ವಿಕೆಟ್‌ನಿಂದ ಬಡಿದು ತಲೆ ಒಡೆದಿದ್ದಾರೆ. ಪೆಟ್ಟು ತಿಂದವ ಆಸ್ಪತ್ರೆ ಸೇರಿದರೆ, ಸುದ್ದಿ ಮಸೀದಿ ತಲುಪಿದೆ. ಅಲ್ಲಿ ಮಕ್ಕಳ ಹಾಡಿನ ಸ್ಪರ್ಧೆಯಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರಲ್ಲಿ ಭಯ ಮೂಡಿದರೆ, ಯುವಕರಲ್ಲಿ ಆಕ್ರೋಶ. ತಮ್ಮವರಿಗೆ ಬಡಿದವರನ್ನು ಬಿಡಬಾರದು ಎಂಬ ಧರ್ಮರಕ್ಷಣೆಯ ಕಿಚ್ಚು. ಹಿರಿಯರ ಮಾತುಕೇಳದ ಗ್ರೀನ್ ಸ್ಟಾರ್‌ನ ಕೆಲ ಹುಡುಗರು ಹಸಿರು ತೋರಣ ಬಾವುಟಗಳ ಮಧ್ಯೆಯೇ ತಮ್ಮವನಿಗೆ ಹೊಡೆದವರನ್ನು ಹುಡುಕಾಡಲು ಹೊರಟಿದ್ದಾರೆ. ಅವರು ಅಡಗಿರಬಹುದಾದ ಮನೆಯ ಕದ ತಟ್ಟಿದ್ದಾರೆ. ಆವಾಜ್ ಹಾಕಿದ್ದಾರೆ. ಮಕ್ಕಳು, ಮಹಿಳೆಯರು ಭಯದಿಂದ ಮನೆ ಸೇರಿದ್ದಾರೆ.

ಬೆಳಿಗ್ಗೆಯಾದರೆ, ಮಿಲಾದ್ ಮೆರವಣಿಗೆ. ಅಷ್ಟರಲ್ಲಿ ಸುದ್ದಿ ವಾಟ್ಸಪ್, ಮೊಬೈಲ್ ಮೂಲಕ ಹತ್ತೂರು ತಲುಪಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಸ್ವಲ್ಪ ಹೆಚ್ಚೇ ಉತ್ಸಾಹದಲ್ಲಿ ಹಾರಾಡತೊಡಗಿದೆ. ಹತ್ತಿರದ ಊರುಗಳ ಅಪರಿಚಿತ ಯುವಕರೂ ಧರ್ಮ ರಕ್ಷಣೆಗಾಗಿ ತಮ್ಮ ಊರಿನ ಮಿಲಾದ್ ಬಿಟ್ಟು ಕುಳಾಯಿಗೆ ಬಂದಿದ್ದಾರೆ. ಮಸೀದಿಯಿಂದ ನೂರಿನ್ನೂರು ಮೀಟರ್ ದೂರದ ಭಜನಾ ಮಂದಿರದ ಬಳಿಯೂ ಊರಿನ ಹಿಂದೂ ಯುವಕರ ಜೊತೆಗೆ ಅಪರಿಚಿತ ಧರ್ಮ ರಕ್ಷಕರ ದೊಡ್ಡ ದಂಡು ಸೇರಿದೆ. ಇನ್ನೇನು ಧರ್ಮಯುದ್ಧ ನಡೆಯಬೇಕು. ಊರಿಡೀ ಆತಂಕ, ಪೊಲೀಸ್ ಲಾಠಿ ಬೂಟುಗಳ ಕವಾಯತು, ಜೀಪುಗಳ ತಿರುಗಾಟ, Eid-e-Milad-mangaloreಈದ್ ಮಿಲಾದ್ ಮೆರವಣಿಗೆಯ ಸಂಭ್ರಮಕ್ಕಾಗಿ ಕಾದಿದ್ದ ಮುಸ್ಲಿಂ ಪುಟಾಣಿಗಳ ಕಣ್ಣಲ್ಲಿ ಸಣ್ಣ ಭಯ. ಮಿಲಾದ್ ಮೆರವಣಿಗೆ ಸಾಗುವಾಗ ರಸ್ತೆ ಬದಿಯ ತಮ್ಮ ಮನೆಯ ಮುಂದೆ ನಿಂತು ಸಿಹಿತಿಂಡಿ ಪಡೆದು ಶುಭಾಶಯ ಹೇಳುವ ಹಿಂದೂ ಮಕ್ಕಳು, ಮಹಿಳೆಯರು ಈ ಬಾರಿ ಮನೆಯ ಒಳಭಾಗಕ್ಕೆ ಸರಿದಿದ್ದರು. ಅಂತೂ ಪೊಲೀಸರ ಬಿಗಿ ಬಂದೋಬಸ್ತ್, ಮುಸ್ಲಿಂ ಮಸೀದಿ ಕಮಿಟಿಯವರ ಜವಾಬ್ದಾರಿಯುತ ನಡವಳಿಕೆಯಿಂದಾಗಿ ಆಕ್ರೋಶಿತ ಯುವಕರ ಗೊಣಗಾಟಗಳ ಮಧ್ಯೆ ಮುಖಾಮುಖಿ ತಪ್ಪಿದೆ. ಧರ್ಮಯುದ್ದವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ವಾರದ ನಂತರ ಮತ್ತೆ ಕ್ರಿಕೆಟ್ ಆಟ ಶುರುವಾಗುತ್ತದೆ. ಮುಂದೆ ಚುನಾವಣೆ ಬೇರೆ ನಡೆಯಲಿದೆ. ಮೋದಿಯೋ ಮತ್ತೊಬ್ಬನೋ ಪ್ರಧಾನಿ ಆಗಬೇಕಿದೆ. ಮಗದೊಬ್ಬನು ಸಂಸದನಾಗಬೇಕಿದೆ. ಹಾಗಾಗಿ ಧರ್ಮವನ್ನು ರಕ್ಷಿಸಬೇಕಿದೆ.

ಹಬ್ಬಗಳು ಮರಳಿ ಬರುತ್ತವೆ, ಮೆರವಣಿಗೆಗಳೂ ಸಹ. ಆದರೆ ಮಿಲಾದ್ ಸಂಭ್ರಮದಲ್ಲಿ ಅರಳಬೇಕಾಗಿದ್ದ ಆ ಮುಗ್ಧ ಮಕ್ಕಳ ನಗುವನ್ನು, ಸಂತೋಷವನ್ನು ಮರಳಿ ತರುವುದು ಯಾರು? ಇದು ಮಂಗಳೂರಿನ ಪ್ರತಿಯೊಂದು ಗ್ರಾಮದ ಸ್ಥಿತಿ… ಧರ್ಮ ರಕ್ಷಕರಿಂದ ಮಂಗಳೂರನ್ನು ಮುಕ್ತಿಗೊಳಿಸುವುದು ಹೇಗೆ?

ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ


– ಮುನೀರ್ ಕಾಟಿಪಳ್ಳ


 

ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಮತ್ತೆ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ ಶುರುವಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಏಕಾಏಕಿ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿರುವುದು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕೈಗೊಳ್ಳದೆ ಎದುರಾಳಿಗಳಿಗೆ ಆಟ ಬಿಟ್ಟು ಕೊಟ್ಟಿರುವುದು ಅನಿರೀಕ್ಷಿತ. ವಿಧಾನ ಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಪರಿವಾರ ಇಂತಹದ್ದೊಂದು ಆಟಕ್ಕೆ ಸ್ಕೆಚ್ ಹಾಕಿ ಸಮಯ ಕಾಯುತ್ತಾ ಕೂತದ್ದು ಅವರ ನಡೆಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹುಟ್ಟಿಕೊಂಡ ಹೋರಾಟ ಇಲ್ಲಿನ ಕೋಮುಶಕ್ತಿಗಳ ಆಶ್ರಯದಾತರಾಗಿರುವ ಆಗೋಚರ ಸರಕಾರಗಳ ವಿರುದ್ಧದ ಜನ ಚಳುವಳಿಯಾಗಿ ಪರಿವರ್ತನೆಗೊಂಡಿದ್ದು, ಜನ ಚಳುವಳಿಗಳು ಜನಸಾಮಾನ್ಯರ ಮಧ್ಯೆ ಸಕ್ರಿಯಗೊಂಡಿದ್ದು, ನುಡಿಸಿರಿ, ಜನನುಡಿ alva-nudisiri-baraguru-bhairappaಕಾರ್ಯಕ್ರಮಗಳು ಹುಟ್ಟು ಹಾಕಿದ ವೈಚಾರಿಕ ಸಂಘರ್ಷಗಳ ಮಧ್ಯೆ ಏಕಾಏಕಿ ಮತೀಯ ಶಕ್ತಿಗಳಿಗೆ ಪ್ರಬಲವಾಗಿ ಎದ್ದು ನಿಲ್ಲಲು ಸಾಧ್ಯವಾದುದರ ಹಿಂದೆ ಆಳವಾದ ಪಿತೂರಿಯ ವಾಸನೆ ಬಡಿಯುತ್ತದೆ.

ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‌ಗಿರಿ, ಭೂಗತ ಜಗತ್ತು, ಕ್ರಿಮಿನಲ್ ಚಟುವಟಿಕೆ, ಮತೀಯ ಹಿಂಸೆ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಇಲ್ಲಿನ ಜನತೆ ಈ ಕೂಟಗಳ ಅಪವಿತ್ರ ಮೈತ್ರಿಯಿಂದ ಹೈರಾಣಗೊಂಡಿರುವುದರಿಂದ ಪಕ್ಕನೆ ಇವರು ಹಣೆದ ಬಲೆಗೆ ಬೀಳಲಾರರು ಎಂಬ ನಿರೀಕ್ಷೆ ಜಾತ್ಯಾತೀತರದ್ದು. ಕಾಂಗ್ರೆಸ್ ಸರಕಾರವು ಹಳೆಯ ನೆನಪುಗಳಿಂದ ಪಾಠ ಕಲಿತು ಇಂತಹ ಶಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತದೆ ಎಂಬ ನಿರೀಕ್ಷೆಯು ಸಹಜ.

ಆದರೆ ಈಗ ನಡೆದಿರುವ ಬೆಳವಣಿಗೆಗಳು ಆತಂಕ ಉಂಟುಮಾಡುವಂತಿದೆ. ಹಿಂದುತ್ವವಾದಿ ಶಕ್ತಿಗಳಿಗೆ ಪರ್‍ಯಾಯ ಎಂಬಂತೆ ಬಿಂಬಿಸಿಕೊಂಡು ಮುಸ್ಲಿಮರ ಮಧ್ಯೆ ನೆಲೆ ಕಂಡುಕೊಂಡಿರುವ ಮತ ತೀವ್ರವಾದಿ ಶಕ್ತಿಗಳು ಈ ಬಾರಿಯ ಆಟದಲ್ಲಿ ನಿರ್ವಹಿಸುತ್ತಿರುವ ಪಾತ್ರ ಸಂಘ ಪರಿವಾರದ ಕೆಲಸವನ್ನು ಸುಲಭಗೊಳಿಸಿದೆ. ಅದರ ಜೊತೆಯಲ್ಲಿ ಮುಸ್ಲಿಂ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಕ್ರಿಮಿನಲ್ ಹುಡುಗರ ಅಮಾನವೀಯ ವಿಕೃತ ಕೃತ್ಯಗಳು ಪರಿವಾರದ ರೊಟ್ಟಿಯನ್ನು ಅನಾಯಾಸವಾಗಿ ತುಪ್ಪಕ್ಕೆ ಜಾರಿಸಿದೆ.

ವಿಟ್ಲದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ವಿ.ಟಿ. ಪ್ರಸಾದ್‌ಗೆ ಪಿಎಫ್‌ಐ ಕಾರ್ಯಕರ್ತರು ಎನ್ನಲಾದ ಗುಂಪು ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ ಕಾರಣಕ್ಕೆ ಮಾಡಿದ ಬರ್ಬರ ಹಲ್ಲೆ, ಬಂಟ್ವಾಳದ ಗಡಿಯಾರ ಎಂಬಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿಸಿದ್ದಕ್ಕೆ ಜಯರಾಮ ಎಂಬ ಲಾರಿ ಚಾಲಕನಿಗೆ ಗುಂಪು ಕಟ್ಟಿಕೊಂಡು ಅನಾಗರಿಕ ರೀತಿಯಲ್ಲಿ ನಡೆಸಿದ ಹಲ್ಲೆ, ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಕೇರಳ ಮೂಲದ ಇಬ್ಬರು ಹಿಂದು ವಿದ್ಯಾರ್ಥಿಗಳಿಗೆ ಅವರ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟದ್ದಕ್ಕೆ ನಡೆಸಿದ ಬಹಿರಂಗ ಹಲ್ಲೆಗಳು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳಿಗೆ ಅಕಾಲದಲ್ಲಿ ಹಬ್ಬ ಆಚರಿಸುವಷ್ಟು ಸಂಭ್ರಮವನ್ನು ಉಂಟುಮಾಡಿದೆ. ಅದರೊಂದಿಗೆ ಹದಿಹರೆಯದ ಮುಸ್ಲಿಂ ಕ್ರಿಮಿನಲ್‌ಗಳ ಗುಂಪೊಂದು ಕೊಣಾಜೆ ಎಂಬಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮತ್ತಾಕೆಯ ಮುಸ್ಲಿಂ ಸಹಪಾಠಿಯನ್ನು ಅಪಹರಿಸಿ ಅವರನ್ನು ಕೂಡಿ ಹಾಕಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರೇಂದ್ರ ನಾಯಕ್ ಮತ್ತವರ ಪ್ರಗತಿಪರ ಬಳಗಕ್ಕೆ ವಿದ್ಯಾರ್ಥಿನಿಯ ಆಪ್ತರಿಂದ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸಿ ಕ್ರಿಮಿನಲ್ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಪೊಲೀಸರ ನಿಷ್ಕೀಯತೆ, ಕಾಂಗ್ರೆಸ್ ಮಂತ್ರಿಗಳ, ಪುಡಿನಾಯಕರ ಸ್ನೇಹದಿಂದಾಗಿ ಇಲ್ಲಿನ ಭೂಗತ ಜಗತ್ತು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಿಗಿತುಕೊಂಡಿದೆ. ದುಬಾಯ್ ಡಾನ್‌ಗಳಿಗೆ, ಅವರ ಒಂದು ಮೊಬೈಲ್ ಕರೆಗೆ ಇಲ್ಲಿನ ಉದ್ಯಮಿಗಳು ದೈವದೇವರುಗಳಿಗಿಂತಲೂ ಜಾಸ್ತಿ ಭಯ ಪಡುತ್ತಾರೆ.

ಕೊಣಾಜೆ ಘಟನೆ ನಡೆದದ್ದೇ ತಡ ಸಂಘ ಪರಿವಾರದ ಗುಂಪುಗಳು ವಿದ್ಯಾರ್ಥಿ ಜೋಡಿಗೆ ನೀಡಿದ ವಿಕೃತ ಹಿಂಸೆಯನ್ನು ಹಿಂದೂ ಧರ್ಮದ ಮೇಲಿನ ಸಂಘಟಿತ ದಾಳಿ ಎಂಬಂತೆಯೂ, ಕರಾವಳಿಯ ಇಡೀ ಬ್ಯಾರಿ ಮುಸ್ಲಿಂ ಸಮುದಾಯ ಇದಕ್ಕೆ ಹೊಣೆಯೆಂಬಂತೆಯೂ ಬೀದಿಗಿಳಿದು ಬಿಟ್ಟಿದೆ. ಇವರು ಆರ್ಭಟಕ್ಕೆ ಪೂರಕ ಎಂಬಂತೆ ಮುಸ್ಲಿಂvt-prasad-PFI-attack ನೈತಿಕ ಪೊಲೀಸರ ಸರಣಿ ದಾಳಿಗಳು ಇದೇ ಸಂದರ್ಭದಲ್ಲಿ ನಡೆದದ್ದು ಪರಿವಾರದ ಧರ್ಮರಕ್ಷಕರಿಗೆ ಆನೆಬಲ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕ್ರಿಯಾಶೀಲ ಆಗಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮೂವರು ಮಂತ್ರಿಗಳ ನಿಧಾನ ಪ್ರತಿಕ್ರಿಯೆ ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ವಿಟ್ಲ, ಗಡಿಯಾರ, ಪಳ್ನೀರ್ ಮುಂತಾದೆಡೆ ದಾಳಿಗಳನ್ನು ಸಂಘಟಿಸಿದ್ದ ಮುಸ್ಲಿಂ ಮತೀಯವಾದಿ ಗುಂಪುಗಳ ಮೇಲೆ ದೃಢವಾದ ಕ್ರಮಗಳನ್ನು ಕೈಗೊಳ್ಳದೇ ಇದ್ದುದಕ್ಕೆ ಕಾಂಗ್ರೆಸ್‌ಪಕ್ಷ ಮಾತ್ರ ಅಲ್ಲ ಜಿಲ್ಲೆಯ ಜನಸಾಮಾನ್ಯರೂ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಜರಂಗದಳ, ಹಿಂದೂ ಜಾಗರಣಾ ವೇದಿಕೆಗಳು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರನ್ನು, ಜಾತ್ಯಾತೀತರನ್ನು ಹೀನಾಯವಾಗಿ ನಿಂದಿಸುತ್ತಿವೆ. ರಕ್ತಪಾತಕ್ಕೆ ಕರೆ ಕೊಡುತ್ತಿವೆ, ಹಿಂದೂ ಯುವಕರನ್ನು ಗಲಭೆಗೆ ಪ್ರಚೋದಿಸುತ್ತಿದೆ. ತಾವು ನೈತಿಕ ಪೊಲೀಸ್‌ಗಿರಿಯ ವಿರೋಧಿಗಳು ಎಂಬಂತೆ ಬಿಂಬಿಸಿಕೊಳ್ಳುವ ದೃಶ್ಯಗಳನ್ನು ಸೃಷ್ಟಿಸುತ್ತಿವೆ.

ಈ ಬಾರಿಯ ಧರ್ಮದಾಟದ ವಿಶೇಷತೆ ಏನೆಂದರೆ ಆಟದಲ್ಲಿ ಕಾಯಿ ಉರುಳಿಸುತ್ತಿರುವುದು ಮುಸ್ಲಿಂ ತೀವ್ರವಾದಿ ಗುಂಪು ಮತ್ತು ಕ್ರಿಮಿನಲ್ ಗುಂಪುಗಳು. ಹಿಂದೆಲ್ಲಾ ಇಂತಹ ಪರಿಸ್ಥಿತಿ ನಿರ್ಮಿಸಲು ಪರಿವಾರದ ಗೇಮ್ ಫ್ಲಾನರ್‌ಗಳು ಕಾಲ್ಪನಿಕ ಸುಳ್ಳಿನ ಕಂತೆಯನ್ನು ಕಟ್ಟಲು ಹರಸಾಹಸ (ಆಗೆಲ್ಲ ಜಿಲ್ಲೆಯ ಕೆಲ ಪತ್ರಿಕೆಗಳು ಅವರ ಕಥೆಗಳಿಗೆ ಜೀವತುಂಬಿದೆ)ಪಡಬೇಕಿತ್ತು. ಈಗ ಮುಸ್ಲಿಮರ ಮಧ್ಯೆ ಇಂತಹ ಘಟನೆಗಳನ್ನು ಸೃಷ್ಟಿಸಲು ಇವರ ದಯಾದಿಗಳು ರಣೋತ್ಸಾಹದಲ್ಲಿ ಮುಂದುವರಿಯುತ್ತಿರುವುದರಿಂದ ಅಷ್ಟರ ಮಟ್ಟಿಗೆ ಸಂಘ ಪರಿವಾರ ನಿರಾಳ.

ಮುಸ್ಲಿಂ ಮತೀಯವಾದಿಗಳು ಮತ್ತು ಹಿಂದುತ್ವವಾದಿಗಳು ಪರಸ್ಪರ ಹೊಂದಾಣಿಕೆಯಿಂದಲೇ (ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಿಗಳು ಸಕಾರಣವಾಗಿಯೇ ಕೇಳಿ ಬಂದಿದ್ದವು) ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಆದರೆ ಎರಡೂ ಕಡೆಯ ಕೋಮುಶಕ್ತಿಗಳು ಕೈ ಹಾಕುತ್ತಿರುವುದು ತಮ್ಮ ಮತ ಬುಟ್ಟಿಗೆ ಎಂಬ ಅರಿವಿನಿಂದಲಾದರೂ ಮತೀಯವಾದಿಗಳ, ಅವರಿಗೆ ಪೂರಕವಾಗಿ ವರ್ತಿಸುತ್ತಿರುವ ಕ್ರಿಮಿನಲ್‌ಗಳನ್ನು ಮಟ್ಟಹಾಕದೆ ನಿರ್ಲಿಪ್ತರಾಗಿ ವರ್ತಿಸುತ್ತಿರುವ ತ್ರಿಮೂರ್ತಿ ಮಂತ್ರಿಗಳಾದ ರೈ, ಖಾದರ್, ಜೈನ್‌ಗಳ ವರ್ತನೆಯ ಬಗ್ಗೆ ಏನನ್ನೋಣ…

ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್


– ರವಿ ಕೃಷ್ಣಾರೆಡ್ಡಿ


 

ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. western-ghats-as-seen-from-BLR-Karwar-trainಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ ರೈಲಿನಲ್ಲಿ ಹೋಗುವ ಕಾರಣಕ್ಕಾಗಿ ನಾನು ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರು ಒಂದು ದಿನ ಮೊದಲೇ ಬೆಂಗಳೂರು ಬಿಟ್ಟಿದ್ದೆವು. ಮೂರು ದಿನದ ನಂತರ ಬೆಂಗಳೂರಿಗೆ ಬಂದಂದಿನಿಂದ ಲೋಕಸತ್ತಾ ಪಕ್ಷದ ಮೂಲಕ ಕೆಪಿಎಸ್‌ಸಿ ಹಗರಣದ ಬಗ್ಗೆ ಹಮ್ಮಿಕೊಂಡ ಚಟುವಟಿಕೆಗಳ ಕಾರಣವಾಗಿ ಏನನ್ನೂ ಬರೆಯಲು ಬಿಡುವಿಲ್ಲದೆ ಹೋಗಿತ್ತು. ಇದೇ ಕಾರಣವಾಗಿ ನೆನ್ನೆ ನಡೆದ ಪ್ರತಿಭಟನೆಯಲ್ಲಿ ಮೊದಲಬಾರಿಗೆ ಬಂಧನಕ್ಕೊಳಪಟ್ಟು ಸಂಜೆ ಆರರ ತನಕ ಆಡುಗೋಡಿಯ ಪೋಲಿಸ್ ಗ್ರೌಂಡ್ಸ್‌ನ ಶೆಡ್‌ನಲ್ಲಿ ಇರಬೇಕಾಯಿತು. ಇದೆಲ್ಲದರ ಮಧ್ಯೆ ಮುಂದಕ್ಕೆ ಹಾಕಲಾಗದ ವೈಯಕ್ತಿಕ ಕಾರ್ಯಕ್ರಮವೊಂದು ಇಂದು.

ಕಳೆದ ಎರಡು-ಮೂರು ದಿನಗಳಿಂದ ಮೂಡಬಿದ್ರೆಯಲ್ಲಿ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ವಿಜೃಂಭಣೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಇರಬಹುದಾದ ಸಂಶಯಗಳು ಮತ್ತು ಆರೋಪಗಳು ಮೊದಲ ಬಾರಿಗೆ ರಾಜ್ಯದ ಜನರ ಗಮನಕ್ಕೆ ವಿಸ್ತೃತವಾಗಿ ಬಂದದ್ದು ಕಳೆದ ವರ್ಷ ನವೀನ್ ಸೂರಿಂಜೆ ನಮ್ಮ ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನ ಬರೆದಾಗ. ಆ ಸಮಯದಲ್ಲಿ ಈ ವೇದಿಕೆಯಲ್ಲಿ nudisiri-ananthamurthyಅದು ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು ಮತ್ತು ಅದಕ್ಕೆ ತಾತ್ವಿಕ ಮಟ್ಟದಲ್ಲಿ ವಿರೋಧ ಮತ್ತು ವಿಮರ್ಶೆ ಆರಂಭವಾಯಿತು. ಧನಂಜಯ ಕುಂಬ್ಳೆ ಎನ್ನುವವರು ಸೂರಿಂಜೆಯವರ ಲೇಖನವನ್ನು ವಿಮರ್ಶಿಸಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಲೇಖನ ಬರೆದರು. ಅದಕ್ಕೆ ಉತ್ತರಿಸಿ ಸೂರಿಂಜೆ “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…” ಎಂಬ ಇನ್ನೊಂದು ಲೇಖನ ಬರೆದರು. ತೇಜ ಸಚಿನ್ ಪೂಜಾರಿ ಎಂಬ ಮಂಗಳೂರಿನ ಯುವಕ ಇದೇ ವಿಷಯದ ಮೇಲೆ ಅದ್ಭುತವೆನ್ನಿಸುವಂತಹ “ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್” ಲೇಖನ ಬರೆದ. (ಅದಾದ ಮೇಲೆ ನಾಲ್ಕೈದು ಲೇಖನಗಳನ್ನು ಬರೆದ ತೇಜ ಸಚಿನ್ ಪೂಜಾರಿ, ಕೆಲಸವೊಂದು ಸಿಕ್ಕಿ ಬೆಂಗಳೂರಿಗೆ ಬಂದ ತಕ್ಷಣ ನಾಪತ್ತೆಯಾಗಿದ್ದಾರೆ. ಸಾಧ್ಯವಾದರೆ ಯಾರಾದರೂ ಹುಡುಕಿಕೊಡಬೇಕಾಗಿ ಮನವಿ!!)

ಮೂಡಬಿದ್ರೆಯ “ನುಡಿಸಿರಿ” ಎನ್ನುವುದನ್ನು ಅದರ ಆರಂಭದ ದಿನಗಳಲ್ಲಿ ಕೆಲವು ಮಂಗಳೂರಿನ ಲೇಖಕರು ಮತ್ತು ಪತ್ರಕರ್ತರು “ಕುಡಿಸಿರಿ” ಎಂದು ತಮಾಷೆ ಮಾಡುತ್ತಿದ್ದರು ಎಂದು ಹೊರಗಿನ ಜನರಿಗೆ ಗೊತ್ತಾಗಿದ್ದೇ ವರ್ಷದ ಹಿಂದೆ ಅದು ವರ್ತಮಾನ.ಕಾಮ್‌ನಲ್ಲಿ ಚರ್ಚೆಗೊಳಗಾದಾಗ.

ಅಂದಹಾಗೆ, ನುಡಿಸಿರಿಯ ಬೆಂಬಲಿಗರ ಹೇಳಿಕೊಳ್ಳುವ ಹಾಗೆ “ಆಳ್ವಾಸ್ ನುಡಿಸಿರಿ” ಹುಟ್ಟಿದ್ದೇ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ.alvas-nudisiri-2 ಆಳ್ವಾಸ್‌ನ ಮೋಹನ ಆಳ್ವರು ದಶಕದ ಹಿಂದೆ ಮೂಡಬಿದ್ರೆಯಲ್ಲಿ ನಡೆದ “ಕನ್ನಡ ಸಾಹಿತ್ಯ ಸಮ್ಮೇಳನ”ದ ಸ್ಥಳೀಯ ಉಸ್ತುವಾರಿ ಹೊತ್ತಿದ್ದರು. ಅವರ ಪ್ರಕಾರ ಬಹಳ ಅದ್ಭುತವಾಗಿ ಅದನ್ನು ನಡೆಸಿಕೊಟ್ಟರು. ಆದರೆ ಆ ಅನುಭವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿರುವ ಅಶಿಸ್ತು ಅವರಿಗೆ ಬೇಸರ ಮೂಡಿಸಿತು. ಹಾಗಾಗಿ ಅಂತಹ ಒಂದು ಕಾರ್ಯಕ್ರಮವನ್ನು ಹೇಗೆ “ಅಚ್ಚುಕಟ್ಟಾಗಿ” ಮಾಡುವುದು ಎನ್ನುವುದನ್ನು ತೋರಿಸುವುದಕ್ಕಾಗಿಯೇ “ಆಳ್ವಾಸ್ ನುಡಿಸಿರಿ”ಯನ್ನು ಸಾಹಿತ್ಯ ಪರಿಷತ್ತಿನ ಜನರ “ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ ಆರಂಭಿಸಲಾಯಿತು. ಈ ವಿಚಾರವನ್ನು “ಜನ ನುಡಿ” ಕಾರ್ಯಕ್ರಮ “ನುಡಿ ಸಿರಿ”ಗೆ ಪರ್ಯಾಯ ಎಂಬ ಮಾತು ಬಂದಾಕ್ಷಣ “ಜನ ನುಡಿ”ಯನ್ನು ವಿರೋಧಿಸಲು ಆರಂಭಿಸಿದವರು ಗಮನಿಸಬೇಕು. ತನ್ನೆಲ್ಲಾ ಸಮಯಪ್ರಜ್ಞೆಯ ಅಭಾವ, ಗೊಂದಲ, ಇತ್ಯಾದಿಗಳ ನಡುವೆ ಸಾಹಿತ್ಯ ಪರಿಷತ್ತಿನ “ಕನ್ನಡ ಸಾಹಿತ್ಯ ಸಮ್ಮೇಳನ” ಜನರದ್ದು. ನಾಡಿನ ಎಲ್ಲರಿಗೂ ಸೇರಿದ್ದು. kannada-sahithya-sammelanaಯಾವೊಬ್ಬ ವ್ಯಕ್ತಿಯ ಮೇಲೂ ಅವಲಂಬಿತವಲ್ಲ. ಏಳೆಂಟು ದಶಕಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತನ್ನೆಲ್ಲಾ ಇತಿಮಿತಿಗಳ ನಡುವೆಯೂ ಅದು ನಾಡಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುತ್ತ ಬರುತ್ತಿದೆ.

ಆದರೆ, “ಆಳ್ವಾಸ್ ನುಡಿಸಿರಿ” ಎನ್ನುವುದು ಸಂಪೂರ್ಣವಾಗಿ “one man show”. ಮೋಹನ ಆಳ್ವರ ಅನೇಕ ಹಿಂಬಾಲಕರು ಅವರ ನಾಯಕತ್ವದಲ್ಲಿ ಅದನ್ನು ನಡೆಸಿಕೊಡುತ್ತಾರೆ. ಬಹುಶಃ ಆ ಕಾರ್ಯಕ್ರಮದಲ್ಲಿ “ಮುಂಡಾಸು” ಧರಿಸುವುದು, ಅಧ್ಯಕ್ಷರನ್ನು ಹುಡುಗರ ಹೆಗಲ ಮೇಲೆ “ಅಡ್ಡ ಪಲ್ಲಕ್ಕಿ” ಹೊರೆಸಿ ಮೆರವಣಿಗೆ ಮಾಡುವುದು, ಇತ್ಯಾದಿ ಕೆಲವು ವಿಚಾರಗಳು ಹೇಗೆ “ಪ್ರಜಾಪ್ರಭುತ್ವ ವಿರೋಧಿ ಆಶಯ”ಗಳನ್ನು ಹೊಂದಿದೆ ಎನ್ನುವುದು ಅನೇಕರಿಗೆ ಬಹಳ ಬೇಗ ಹೊಳೆಯುವುದಿಲ್ಲ. ಸ್ಥಳೀಯ ಮೇಲ್ಜಾತಿಗಳ ಕೆಲವು ಪಾಳೇಗಾರಿಕೆ ಮತ್ತು ಪುರೋಹಿತಶಾಹಿ ಅಂಶಗಳು ಇಲ್ಲಿ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಹೇಗೆ ಅಲ್ಲಿಯ ಎಲ್ಲರಿಗೂ ಒಪ್ಪಿತವೆಂಬಂತೆ ಮುನ್ನೆಲೆಗೆ ಬರುತ್ತವೆ ಎನ್ನುವುದನ್ನು ಸ್ಥಳೀಯ ಸೂಕ್ಷ್ಮಜ್ಞರು ಮಾತ್ರವೇ ಹೇಳಬಲ್ಲರು. ಯಾವುದಾದರೂ ಊರಿನಲ್ಲಿಯ ಸ್ಥಳೀಯ ಜನತೆ ಅಲ್ಲಿ ಒಂದು ಸುಂದರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣ ರೂಪಿಸಿಕೊಳ್ಳುವುದರ ಬಗ್ಗೆ ನಾವೆಲ್ಲ ಸಂತಸ ಪಡಬೇಕು ಮತ್ತು ಅದು ಇತರ ಕಡೆಗೂ ಹರಡುವಂತೆ ಆಶಿಸಬೇಕು. ಆದರೆ, alva-veerendra-heggadeಮೂಡಬಿದ್ರೆಯಲ್ಲಿ ಆಗುತ್ತಿರುವ ಕಾರ್ಯಕ್ರಮ ಇನ್ನೊಂದು ಕಡೆ ನಕಲು ಅಥವ ಪುನರಾವರ್ತನೆ ಆಗಲು ಸಾಧ್ಯವಾಗದಂತಹ ಕಾರ್ಯಕ್ರಮ. ಇದು ಒಬ್ಬ ಮನುಷ್ಯನ ದುಡ್ಡು ಮತ್ತು ನಿಲುವು-ಒಲವುಗಳ ಮೇಲೆ ಆಗುವ ಕಾರ್ಯಕ್ರಮವೇ ಹೊರತು ಹಲವಾರು ಜನರ ಅಭೀಪ್ಸೆ ಮತ್ತು ಸಾಮೂಹಿಕ-ಸಾಮುದಾಯಿಕ ಪಾಳ್ಗೊಳ್ಳುವಿಕೆಯಿಂದ ಅಲ್ಲ.

ಮತ್ತೊಂದು, ತಾನು ಎಂಬತ್ತು ಕೋಟಿ ಸಾಲದಲ್ಲಿದ್ದೇನೆ ಎಂದು ಮೋಹನ ಆಳ್ವರು ಅಲವತ್ತುಕೊಂಡಿರುವುದು ಇಂದೂ ಸಹ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಅವರು “ನುಡಿಸಿರಿ” ಕಾರ್ಯಕ್ರಮ ಮಾಡಿ ಈ ಸಾಲ ಹೊತ್ತುಕೊಂಡಿದ್ಡಾರೊ ಅಥವ ತಮ್ಮ ಶಿಕ್ಷಣ ಸಂಸ್ಥೆಯ ಕಾರಣಕ್ಕಾಗಿಯೊ ಗೊತ್ತಾಗಿಲ್ಲ. ಮತ್ತು ಈ ಪರಿ ಸಾಲದಲ್ಲಿರುವಾಗಲೂ ಹತ್ತಿಪ್ಪತ್ತು ಕೋಟಿಗಳ ವೆಚ್ಚದಲ್ಲಿ ನುಡಿಸಿರಿ ನಡೆಸುವುದಾದರೂ ಏಕೆ? ಸಾಲವನ್ನು ಮುಂದಿನ ದಿನಗಳಲ್ಲಿ ಹೇಗೆ ಭರಿಸಲಿದ್ದಾರೆ? ಅವರು ಈ ಸಾಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದರಿಂದ ಒಂದು ಪ್ರಶ್ನೆಯನ್ನು ಸಾರ್ವಜನಿಕರೂ ಅವರಿಗೆ ಕೇಳಬಹುದು ಮತ್ತು ಪ್ರಾಮಾಣಿಕವಾದ ಉತ್ತರವನ್ನು ನಿರೀಕ್ಷಿಸಬಹುದು: “ಈ ವರ್ಷದ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಕ್ಕೆ ಆಗುವ ಖರ್ಚೆಷ್ಟು, ಯಾವ ಬಾಬತ್ತಿಗೆ ಎಷ್ಟೆಷ್ಟು, ಇದಕ್ಕಾಗಿ ಸಂಗ್ರಹಿಸಿದ ಹಣವೆಷ್ಟು, vijaykarnataka-mohan-alva-22122013ಮತ್ತು ಆ ಹಣದ ಮೂಲ ಯಾವುದು?” ತಮ್ಮ ಊರುಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಬೇಕೆಂದು ಬಯಸುವವರಿಗೂ ಈ ಮಾಹಿತಿ ಸ್ವಲ್ಪ ಸಹಾಯ ಮಾಡುತ್ತದೆ.

ಈ ಸಾಲಿನ ಅಧ್ಯಕ್ಷರು ಕರಾವಳಿಯವರೇ ಆದ ವಿವೇಕ ರೈ. ಸಜ್ಜನ ಎಂದು ಹೆಸರು ಗಳಿಸಿದ ವಿದ್ವಾಂಸರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಅಲ್ಲಿಯ ರಾಜಕೀಯ ಮತ್ತು ಭ್ರಷ್ಟತೆಗೆ ರೋಸಿಹೋಗಿ (!?) ದೂರದ ಜರ್ಮನಿಗೆ ವರ್ಷಕ್ಕೆ ಹತ್ತಿಪ್ಪತ್ತು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಂತಹ ಯಾವುದೇ ಅಧಿಕಾರ ಮತ್ತು ಠೇಂಕಾರಗಳಿಲ್ಲದ ಕೆಲಸಕ್ಕೆ ಹೊರಟವರು. ಇಂತಹ ಗುಣದ ವಿವೇಕ ರೈರವರು ಕಳೆದ ವರ್ಷ ನವೀನ್ ಸೂರಿಂಜೆ ಬರೆದ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನವನ್ನು ಬಹುವಾಗಿ ಮೆಚ್ಚಿಕೊಂಡು ಸ್ವತಃ ಜರ್ಮನಿಯಿಂದಲೇ ಸೂರಿಂಜೆಯವರಿಗೆ ಕರೆಮಾಡಿ ಅಭಿನಂದಿಸಿದವರು. ಅಷ್ಟೇ ಸಾಲದೆಂಬಂತೆ ಸೂರಿಂಜೆಯವರ ಫೇಸ್‌ಬುಕ್ ಖಾತೆಗೆ ದೀರ್ಘ ಪತ್ರವನ್ನೂ ಬರೆದಿದ್ದವರು. ಈ ವರ್ಷ ಯಾವೊಂದೂ ಹಿಂಜರಿಕೆ ಇಲ್ಲದೆ ಮತ್ತು ತಾವು ಹಿಂದೆ ಹೊಂದಿದ್ದ ನಿಲುವಿಗೆ ಸ್ಪಷ್ಟೀಕರಣ ನೀಡದೆ “ಆಳ್ವಾಸ್ ನುಡಿಸಿರಿ”ಗೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕನ್ನಡ ಅಂತರ್ಜಾಲದಲ್ಲಿ ರೈರವರು ಸಕ್ರಿಯರೂ ಆಗಿದ್ದಾರೆ. ಅವರಿಗೆ ಬಹುಶಃ ವರ್ತಮಾನ.ಕಾಮ್ ಬಗ್ಗೆಯೂ ತಿಳಿದಿರಬಹುದು. ಹ್ಮೂ, ತಿಳಿದಿರದೇ ಏನು? ಇಲ್ಲಿ ಪ್ರಕಟವಾದ ಸೂರಿಂಜೆಯವರ ಲೇಖನಕ್ಕೇ ಅಲ್ಲವೇ ಅವರು ಆ ಲೇಖಕರೊಂದಿಗೆ ಪ್ರತಿಕ್ರಿಯೆ ಹಂಚಿಕೊಂಡಿದ್ದು. ಹಾಗಾಗಿ ತಾವು ಹಿಂದೆ ಹೇಳಿದ್ದೇನು ಮತ್ತು ತಮ್ಮ ಇಂದಿನ ನಿಲುವೇನು ಎನ್ನುವುದರ ಬಗ್ಗೆ ಅವರು ವರ್ತಮಾನ.ಕಾಮ್‌ಗೆ ಅಥವ ನವೀನ್ ಸೂರಿಂಜೆಯವರಿಗೆ ಒಂದು ಸ್ಪಷ್ಟೀಕರಣ ನೀಡಬೇಕೆಂದು ಬಯಸುವುದು ಅಸೌಜನ್ಯವಲ್ಲ ಎಂದು ನಾನು ಭಾವಿಸುತ್ತೇನೆ.

ಇನ್ನು “ಆಳ್ವಾಸ್ ನುಡಿಸಿರಿ”ಯ ಮೊದಲ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು alva-nudisiri-baraguru-mohan-alva-veerendra-heggade-vivek-raiಈ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಗ್ಗೆ ಖಾರದ (ತುಸು ಹೆಚ್ಚೇ ಖಾರದ) “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಲೇಖನವನ್ನು ಮಂಗಳೂರಿನ ಜೀವನ್ ಎನ್ನುವವರು ಬರೆದಿದ್ದಾರೆ. ಬರಗೂರರು ಈ ವರ್ಷದ ಸಮ್ಮೇಳನದಲ್ಲಿ ಅರ್ಧಕ್ಕೇ ಹಿಂದಿರುಗಿರುವುದೂ ಅದರಲ್ಲಿದೆ.

ಕಳೆದ ಶನಿವಾರ (14-12-13) ಮಂಗಳೂರಿನಲ್ಲಿ “ಜನ ನುಡಿ” ಆರಂಭವಾದ ದಿನದಂದೆ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಅಂಕಣ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಕಣ ಲೇಖನಗಳನ್ನು ಹುಮ್ಮಸ್ಸಿನಿಂದ ಓದದ ನಾನೂ ತಪ್ಪದೇ ಕಣ್ಣಾಡಿಸುವ ಕೆಲವೇ ಅಂಕಣಗಳಲ್ಲಿ ನಾಗತಿಹಳ್ಳಿಯವರದೂ ಒಂದು. ಅದನ್ನು ಈ ಬಾರಿ ಅವರು ಆಳ್ವರ ನುಡಿಸಿರಿ ಬಗ್ಗೆ ಮೀಸಲಿಟ್ಟಿದ್ದು ಮತ್ತು ಹಿಂದೆ ಅವರು ಅಲ್ಲಿ ಮಾಡಿದ್ದ ಭಾಷಣವನ್ನು ಅಚ್ಚುಹಾಕಿದ್ದು ನಿಜಕ್ಕೂ ಚೆನ್ನಾಗಿರಲಿಲ್ಲ. ಅದು ಅವರದಾಗಲಿ, ಅವರ ಅಂಕಣದ್ದಾಗಲಿ, ಘನತೆ ಹೆಚ್ಚಿಸುವ ಲೇಖನವಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಥವ ಅದಕ್ಕಿಂತ ತೀಕ್ಷ್ಣವಾದ ಅಭಿಪ್ರಾಯ ಹಲವು ಗೆಳೆಯರು ಹಂಚಿಕೊಂಡರು.

ನಮ್ಮ ಬಹುತೇಕ ಸಾಹಿತಿಗಳಿಗೆ ವೇದಿಕೆ-ಭಾಷಣ ಎಂದರೆ ಪ್ರಿಯವೇ. ಅದರಲ್ಲೂ ಕೆಲವರಿಗೆ ಸನ್ಮಾನ ಎಂದರೆ ಇನ್ನೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಫ್ಲೈಟ್‌ನಲ್ಲಿ, ಟ್ರೈನ್‌ನಲ್ಲಿ, ಕಾರಿನಲ್ಲಿ ಕರೆಸಿಕೊಳ್ಳುತ್ತಾರೆ ಎಂದರೆ ಇನ್ನೂ ಪ್ರೀತಿ. ಅಲ್ಲಿ ಎಣ್ಣೆ ಸಿಗುತ್ತದೆ ಎಂದರೆ ಕೇಳಲೇ ಬೇಡಿ. (ಆಳ್ವಾಸ್‌ನ ಕಾರ್ಯಕ್ರಮಕ್ಕೆ ಹೋಗಿದ್ದ ಅತಿಥಿಯೊಬ್ಬರ ಕೊಠಡಿಗೆ ಆಯೋಜಕ ಸಮಿತಿಯಲ್ಲೊಬ್ಬರು ಮದ್ಯದ ಬಾಟಲಿ ಕೊಂಡೊಯ್ದು ಕೊಟ್ಟಿದ್ದರು ಮತ್ತು ಆ ಬಗ್ಗೆ ಅತಿಥಿಗಳು ಬಹಳ ಪ್ರೀತಿಯಿಂದ ತಮ್ಮ ಲೇಖನವೊಂದರಲ್ಲಿ ಸ್ಮರಿಸಿದ್ದರು ಎಂದು ಯಾರೋ ಒಬ್ಬರು ಹೇಳುತ್ತಿದ್ದರು.) ಪಾಪ ಮೋಹನ ಆಳ್ವರು ಸಾಲಸೋಲ ಮಾಡಿ ಈ ಪರಿಯ ಆತಿಥ್ಯ ಕೊಡುವಾಗ ತೆಗೆದುಕೊಳ್ಳುವವರು ಯೋಚಿಸಿ ತೆಗೆದುಕೊಳ್ಳಬೇಕು. ಆದರೆ, ಸನ್ಮಾನ ಮತ್ತು ಬಿರುದಿನ ಪ್ರಶ್ನೆ ಬಂದಾಗ ನಮ್ಮ ಸಾಹಿತಿಗಳಿಗೆ ದೇಶ-ಕಾಲದ ಪರಿವೆ ಇಲ್ಲದಂತಾಗಿಬಿಡುವುದು ಅವರ ತಪ್ಪಲ್ಲ. ಬಹಳಷ್ಟು ಸಲ ಅದು ವಯೋಮಾನದ ತಪ್ಪು. ನವೀನ್ ಸೂರಿಂಜೆಯವರ ಲೇಖನದಲ್ಲಿ ಪ್ರಸ್ತಾಪವಾದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ”. ಸ್ವಹಿತಾಸಕ್ತ ಸಾಹಿತಿಗಳಿಗಂತೂ ತುಸು ಹೆಚ್ಚೇ ಇಷ್ಟ.

ಗಂಭೀರವಾಗಿ ಹೇಳಬಹುದಾದರೆ, ಒಬ್ಬರು ತಮ್ಮ ವೈಯಕ್ತಿಕ ಹಣ ಮತ್ತು ಅಂತಸ್ತಿನಿಂದ ಇಂತಹ ಕಾರ್ಯಕ್ರಮ ಮಾಡಿದರೆ ಅದರಲ್ಲಿ ಭಾಗವಹಿಸುವುದರ ಬಗ್ಗೆ ಎಲ್ಲರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. (ಯಾಕೆ ಎಂದು ವಿವರಿಸಬೇಕು ಎಂದು ಇಲ್ಲಿ ಯಾರಾದರೂ ಓದುಗರು ಬಯಸಿದರೆ ಬಹುಶಃ ಅವರಿಗೆ ವಿವರಿಸಿದರೂ ಅರ್ಥವಾಗದು. ಅದಕ್ಕಾಗಿ ಅದನ್ನು ಅಲ್ಲಿಗೇ ಬಿಡುತ್ತೇನೆ.)

ಈಗ “ಜನ ನುಡಿ” ಕಾರ್ಯಕ್ರಮಕ್ಕೆ ಬರುತ್ತೇನೆ. “ಆಳ್ವಾಸ್ ನುಡಿಸಿರಿ”ಯನ್ನು ಆಳ್ವರ ಆಳದಲ್ಲಿರುವ ಮತೀಯ ತಾತ್ವಿಕತೆ ಮತ್ತು ತುಷ್ಟೀಕರಣವನ್ನು ಹಾಗೂ ಅದನ್ನು ತಮ್ಮ ಶಿಕ್ಷಣ ಸಂಸ್ಥೆಯ ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸುತ್ತಾರೆ abhimata-page1ಎಂದು ಪ್ರಾಮಾಣಿಕವಾಗಿ ನಂಬಿರುವ ಮಂಗಳೂರಿನ ಅನೇಕ ಯುವಮಿತ್ರರು ಕಳೆದ ಒಂದು ವರ್ಷದಲ್ಲಿ ಆದ ಚರ್ಚೆಗಳ ಮೂಲಕ ಗಟ್ಟಿಯಾಗಿ ರೂಪುಗೊಂಡ ಅಭಿಪ್ರಾಯದ ಹಿನ್ನೆಲೆಯಲ್ಲಿ “ಅಭಿಮತ ಮಂಗಳೂರು” ವೇದಿಕೆಯ ಮೂಲಕ “ಜನ ನುಡಿ” ಕಾರ್ಯಕ್ರಮ ಆಯೋಜಿಸಿದ್ದರು. ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಹೊನ್ನಾವರದ ಡಾ.ಎಚ್.ಎಸ್.ಅನುಪಮ ಸೇರಿದಂತೆ ಅನೇಕರ ಶ್ರಮ ಮತ್ತು ಕಾಳಜಿ ಈ ಕಾರ್ಯಕ್ರಮದ ಆಯೋಜನೆಯಲ್ಲಿತ್ತು. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಸುಮಾರು 400-500 ಜನ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನೇಕರ ನೈತಿಕ ಬೆಂಬಲ ಮಾತ್ರವಲ್ಲದೆ ಬಹುಶಃ ನೂರಕ್ಕೂ ಹೆಚ್ಚು ಜನ ಸ್ವಯಂಇಚ್ಛೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಯಾರು ಯಾರಿಗಾಗಿಯೂ ಸಾಲ ಮಾಡಿಕೊಳ್ಳಲಿಲ್ಲ. ಪ್ರತಿಷ್ಟೆ ಮೆರೆಸಲಿಲ್ಲ. ಯಾವುದೇ ರೀತಿಯ ಶುಲ್ಕವಿಲ್ಲದ ಮತ್ತು ಮೊದಲೇ ನೊಂದಾಯಿಸಬೇಕಾದ ಜರೂರತ್ತಿಲ್ಲದ ಈ ಕಾರ್ಯಕ್ರಮಕ್ಕೆ ಹೊರ ಊರುಗಳಿಂದ ಬಂದಿದ್ದವರಿಗೆ ಉಚಿತವಾಗಿ ಯಾವೊಂದೂ ತೊಂದರೆ ಇಲ್ಲದಂತೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಾಟಿಪಳ್ಳ ಮತ್ತು ಗೆಳೆಯರು ಕಲ್ಪಿಸಿದ್ದರು. ಅಲ್ಲಿ ಬಂದು ಮಾತನಾಡಿದ ಬಹುತೇಕರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಪ್ರೀತಿಯಿಂದ ಭಾಷಣ ಮಾಡಿ, ಬೆರೆತು, ಮಾತನಾಡಿ ಹೋದರು. ಅಲ್ಲಿ abhimatha-mangalooru-jananudi-2ಭಯ-ಭಕ್ತಿ ಇರಲಿಲ್ಲ. ಹಾಗೆಯೇ ಪಂಕ್ತಿಭೇದಕ್ಕೆ ಹೆಸರಾದ ಅವಿಭಜಿತ ಮಂಗಳೂರು ಜಿಲ್ಲೆಯಲ್ಲಿಯೇ ಇದು ನಡೆದರೂ, ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮೀನು ಮತ್ತು ಕೋಳಿ ಮಾಂಸದ ಪದಾರ್ಥಗಳಿದ್ದರೂ ಅಲ್ಲಿ ಯಾವುದೇ ಪಂಕ್ತಿಭೇದವಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಊಟಾಹಾರದ ವಿಚಾರದ ಬಗ್ಗೆ ಅಸಹ್ಯ ಪಡಲಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಪ್ರಾಮಾಣಿಕ ವಿಮರ್ಶೆಗಳು ಅಲ್ಲಿದ್ದವು. ಕಾಳಜಿ ಇತ್ತು. ಆಶಾವಾದವಿತ್ತು. ಉತ್ಸಾಹವಿತ್ತು. ನೈತಿಕತೆ ಇತ್ತು. ಒಬ್ಬರನ್ನೊಬ್ಬರು ಬೌದ್ಧಿಕವಾಗಿ ಬೆಳೆಸುವ ವಾತಾವರಣವಿತ್ತು. ಏನಿಲ್ಲದಿದ್ದರೂ “ಜನ ನುಡಿ”ಯಲ್ಲಿ ಪ್ರಜಾಸತ್ತಾತ್ಮಕ ಆಶಯವಿದೆ ಮತ್ತು ಅದರ ಆಯೋಜಕರಿಗೆ ಯಾರೊಬ್ಬರನ್ನೂ ಮೆರೆಸುವ ಅಥವ ಬಳಸಿಕೊಳ್ಳುವ ಉಮೇದಿದ್ದಂತಿಲ್ಲ. ಈಗ ಸಂಘಟಕರ ಮುಂದಿರುವ ದೊಡ್ಡ ಸವಾಲು ಅದನ್ನು ಮುಂದಿನ ವರ್ಷಗಳಲ್ಲಿ ಮುಂದುವರೆಸುವುದು ಮತ್ತು ಇನ್ನೂ ಚೆನ್ನಾಗಿ ಮಾಡುವುದು.

ಹಾಗೆಂದು ಇಲ್ಲಿ ಕುಂದುಕೊರತೆಗಳೇ ಇರಲಿಲ್ಲ ಎಂತಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎನ್ನುವ ರೀತಿ ಇದ್ದವು. ಗೋಷ್ಟಿಗಳಲ್ಲಿಯ ಬಹುತೇಕ ಎಲ್ಲಾ ಭಾಷಣಗಳೂ ಏಕಮುಖಿಯಾಗಿದ್ದವು. ಪ್ರತಿಕ್ರಿಯೆ ನೀಡುವುದು ಎನ್ನುವುದು ನಾಮಕಾಸ್ತೆಯಾಗಿ ಎಲ್ಲರೂ ವಿಷಯಮಂಡಕರಾಗುವ ವಾತಾವರಣ ಸೃಷ್ಟಿಸಲಾಗಿತ್ತು. abhimatha-mangalooru-jananudiಒಂದೊಂದು ಗೋಷ್ಟಿಯಲ್ಲಿ ಎಂಟೊಂಭ‌ತ್ತು ಭಾಷಣಕಾರರು. (ಮತ್ತು ಕೆಲವು ಭಾಷಣಕಾರರ ಅಗತ್ಯ ಇದ್ದಂತಿರಲಿಲ್ಲ.) ಸಭಿಕರು ಭಾಷಣ ಮಾಡಿದವರೊಂದಿಗೆ ವೇದಿಕೆಯಲ್ಲಿ ಸಂವಾದದಲ್ಲಿ ಪಾಳ್ಗೊಳ್ಳುವ ಅವಕಾಶವೇ ಇರಲಿಲ್ಲ. ಮಾತನಾಡಿದವರು ಬಹುತೇಕ ಒಂದೇ ತರಹದ ಜನ. ಅಂದರೆ, ಬಹುತೇಕರು ಲೇಖಕರು, ಅಧ್ಯಾಪಕರು, ಮತ್ತು ಪತ್ರಕರ್ತರು. ಒಂದೆರಡು ಗೋಷ್ಟಿಗಳಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡವರಿದ್ದರು. ಸಾಹಿತಿ-ಪತ್ರಕರ್ತರನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಮಂದಿ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಇಪ್ಟಾ ಜೊತೆ ಸ್ಥಳೀಯ ಹಾಡುಗಾರರು (ಸೌಜನ್ಯಾ ಘಟನೆ ಕುರಿತು ಹಾಡಿದವರು) ಇದ್ದರು. ಬರಹ – ಪತ್ರಕರ್ತ ಹಾಗೂ ಕೆಲ ಹೋರಾಟಗಾರರಲ್ಲದೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ಪ್ರಶ್ನೆ ಈ ವೇದಿಕೆಗೆ ಸೂಕ್ತವಾಗಬಲ್ಲ – ಸಂವೇದನಾಶೀಲ ನಟ-ನಟಿಯರು, ಧಾರಾವಾಹಿ-ಸಿನೆಮಾ ನಿರ್ದೇಶಕರು, ಮುಖ್ಯವಾಹಿನಿಯ ಟಿ.ವಿ. ಪತ್ರಕರ್ತರು ಇದ್ದಾರಾ? ಬರವಣಿಗೆ ಒಂದೇ ಅಭಿವ್ಯಕ್ತಿಯ ಮಾದರಿ ಅಲ್ಲ ಮತ್ತು ಅದರ ಆಚೆಗೂ ವಿಶಾಲ ಜನಸಮೂಹವನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ಪ್ರಬಲ ಮಾಧ್ಯಮ ವಿಭಾಗಗಳಿವೆ ಎನ್ನುವುದನ್ನು ಆಯೋಜಕರು ಮರೆಯಬಾರದು. ಅಲ್ಲಿಗೆ ಬಂದಿರುವವರು ಇಂತಹ ಬೇರೆಬೇರೆ ಮಾಧ್ಯಮಗಳೊಂದಿಗೆ ಅನುಸಂಧಾನ ಮಾಡುವುದಾಗಲಿ, ಅಲ್ಲಿಗೆ ಹೋಗುವುದರ ಬಗ್ಗೆ ಆಗಲಿ ಕೆಲವು ಮಾತುಕತೆ ಚರ್ಚೆ ಯೋಜನೆಗಳು ಆಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮೂರು-ನಾಲ್ಕು ಗಂಟೆಗಳ ಕಾಲದ ಮುಕ್ತ ಚರ್ಚೆ ಇರಬೇಕಿತ್ತು. ಅಲ್ಲಿ ಮುಂದಿನ ನಡಾವಳಿ ಮತ್ತು ಯೋಜನೆಗಳ ಬಗ್ಗೆ ಅಭಿಪ್ರಾಯಕ್ಕೆ ಬರಬೇಕಿತ್ತು. ಪ್ರತಿಕ್ರಿಯಾತ್ಮಕವಾಗಿಯಷ್ಟೇ ಅಲ್ಲದ ಸೃಜನಶೀಲವಾಗಿ ಕಾರ್ಯಪ್ರವೃತ್ತರಾಗುವ ಮತ್ತು ಒಟ್ಟಾಗಿ ಕೆಲಸ ಮಾಡುವ ಬಗೆಗಳ ಹುಡುಕಾಟ ಇರಬೇಕಿತ್ತು. ಇದು ಮುಂದಿನ ವರ್ಷದಲ್ಲಾದರೂ ಆಗಬೇಕು.

ಇಂತಹ ಸಭೆಗಳಲ್ಲಿ ಮಾತನಾಡುವವರಿಗೆ ಸಲಹೆ ಅಥವ ಕೋರಿಕೆ ಅಂದರೂ ಆದೀತು. ಎಡಪಂಥೀಯ–ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತನೆಗಳ–ಚಿಂತಕ ಮಹಾಶಯರು “ಕೋಮುವಾದ” ಮತ್ತು “ಬಂಡವಾಳಶಾಹಿ” ಎಂಬ ಎರಡು ಪದಗಳ ಬಳಕೆಯನ್ನು ಕಮ್ಮಿ ಮಾಡಿ ವಿಷಯ ಮಂಡಿಸಲು ಪ್ರಯತ್ನಿಸಬೇಕು. ರೇಜಿಗೆ ಹುಟ್ಟಿಸುವಷ್ಟು ಸಲ ಅದನ್ನು ಬಳಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿಯ ನಾಡಿನ ಇತ್ತೀಚಿನ ರಾಜಕೀಯ ವ್ಯಕ್ತಿಯೊಬ್ಬರ ಹೆಸರನ್ನೂ ಸಹ ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಮತ್ತು ವಿಪರೀತವಾಗಿ ಉಲ್ಲೇಖಿಸದ ಹಾಗೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು. ವಿಷಯ ಮತ್ತು ಹೆಸರುಗಳ ಪುನರಾವರ್ತನೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಗುವುದು ಅಸಹನೀಯ. ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ. ಇಲ್ಲದಿದ್ದರೆ ನಮ್ಮ ಭಾಷಣಗಳು ಕೇವಲ ವೈಯಕ್ತಿಕ ರಾಗ-ದ್ವೇಷಗಳ ಅಭಿವ್ಯಕ್ತಿಯಾಗುತ್ತದೆ.

“ಜನ ನುಡಿ”ಗೆ ಮತ್ತು ತಿಂಗಳ ಹಿಂದೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಕಾರ್ಯಕ್ರಮಕ್ಕೆ ಹೋಗಿಬಂದ ನಂತರ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಅಗತ್ಯದ ಬಗ್ಗೆ ನನಗೆ ಯಾವ ಸಂಶಯಗಳೂ ಇಲ್ಲ. New-Logo1-01-022.jpgವರ್ತಮಾನ.ಕಾಮ್ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ. ನಮ್ಮಲ್ಲಿ ಬರೆದಿರುವ ನೂರಾರು ಜನ ಲೇಖಕರು ಸೇರಿ ಕಟ್ಟಿರುವ ವೇದಿಕೆ ಇದು. ಒಬ್ಬಿಬ್ಬರದೇ ಆಗಿದ್ದರೆ ಒಂದು ಬ್ಲಾಗ್ ಸಾಕಿತ್ತು. ಆದರೆ ಇದು ಒಂದು ರೀತಿಯಲ್ಲಿ ಸಾಮೂಹಿಕ ಜವಾಬ್ದಾರಿಯ, ಸಾಮೂಹಿಕ ಪ್ರಯತ್ನದ ಫಲ. ನಾವು ಹಾಕಿಕೊಂಡಿರುವ ಆಶಯಗಳಿಗೆ ತಕ್ಕನಾಗಿ ನಡೆಯುವ ತನಕ ಇದು ಮುಂದುವರೆಯುತ್ತದೆ. ಅದಾಗದ ದಿನ ನಿಲ್ಲುತ್ತದೆ.

ಅಂದಹಾಗೆ, ಇತ್ತೀಚಿನ ದಿನಗಳಲ್ಲಿಯ ನನ್ನ ಕಾರ್ಯದೊತ್ತಡದ ಕಾರಣಕ್ಕಾಗಿ ಇಲ್ಲಿ ಕೆಲವೊಂದು ನಿಯಮಗಳು ನಮಗೆ ಗೊತ್ತಿಲ್ಲದೆ ಮುರಿದಿವೆ. ಬೇರೆ ಕಡೆ, ಅದರಲ್ಲೂ ಬೇರೆ ವೆಬ್‌ಸೈಟ್-ಬ್ಲಾಗುಗಳಲ್ಲಿ ಈಗಾಗಲೆ ಪ್ರಕಟವಾಗಿರುವ ಲೇಖನಗಳನ್ನು courtesy-announcementಇಲ್ಲಿ ಪ್ರಕಟಿಸುವುದಿಲ್ಲ ಎನ್ನುವುದು. ಕೆಲವು ಉತ್ಸಾಹಿ ಲೇಖಕರು ಇತರೆ ಕಡೆಗಳಿಗೂ ಕಳುಹಿಸಿ ನಮಗೂ ಕಳುಹಿಸಿರುವಂತಹ ಸಂದರ್ಭದಲ್ಲಿ ಸರಿಯಾಗಿ ಪರಿಶೀಲಿಸದೆ ಇಲ್ಲಿ ಪ್ರಕಟಿಸಿಬಿಟ್ಟಿದ್ದೇವೆ. ವರ್ತಮಾನ.ಕಾಮ್‌ಗೆ ತನ್ನದೇ ಆದ ಐಡೆಂಟಿಟಿ ಇದೆ. ನಮ್ಮಲ್ಲಿ ಪ್ರಕಟವಾಗುವ ಲೇಖನಗಳನ್ನು ಇಲ್ಲಿ ಓದುವುದಕ್ಕಿಂತ ಹೆಚ್ಚಾಗಿ ರಾಜ್ಯದ ಅನೇಕ ಕಡೆ ಮರುಮುದ್ರಿಸುವ ಸ್ಥಳೀಯ ಪತ್ರಿಕೆಗಳಲ್ಲಿ ಜನ ಓದುತ್ತಾರೆ. ಹಾಗಾಗಿ ನಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಒಂದು ಶಿಸ್ತಿಲ್ಲದೆ ಹೋದರೆ ಕಷ್ಟ. ಲೇಖಕರು ಇದನ್ನು ಗಮನಿಸಿ ಸಹಕರಿಸಬೇಕೆಂದು ಕೋರುತ್ತೇನೆ.

ಹಾಗೆಯೇ, ನಮ್ಮಲ್ಲಿ ಪ್ರಕಟವಾದ ಲೇಖನಗಳನ್ನು ಕನ್ನಡದ ಇತರೆ ಕೆಲವು ವೆಬ್‌ಸೈಟ್ ಮತ್ತು ಬ್ಲಾಗುಗಳವರು ಮರುಪ್ರಕಟಿಸುತ್ತಾರೆ. ನಾವು ಈಗಾಗಲೆ ಹೇಳಿರುವ ಹಾಗೆ ಲೇಖನದ ಹಕ್ಕುಗಳು ಲೇಖಕರದು. ಇತರೆ ಕಡೆ ಪ್ರಕಟಿಸುವವರಲ್ಲಿ ಕೆಲವರು ಕೃಪೆ ವರ್ತಮಾನ.ಕಾಮ್ ಎಂದೋ, ಅಥವ ನೇರವಾಗಿ ಇಲ್ಲಿಯ ಲಿಂಕ್ ಅನ್ನೋ ಕೊಡುತ್ತಾರೆ. ಹಾಗೆ ಮಾಡದವರು ದಯವಿಟ್ಟು ಕೃಪೆ ಎಂದು ಇನ್ನು ಮುಂದಾದರೂ ಸೂಚಿಸಿ ಸ್ಪಷ್ಟವಾಗಿ ಇಂಗ್ಲಿಷಿನಲ್ಲಿ www.vartamaana.com ಎಂದು ಕೊಟ್ಟರೆ ಉತ್ತಮ. ಹೀಗಾದಲ್ಲಿ ಮಾತ್ರ ವರ್ತಮಾನ.ಕಾಮ್‌ನ ಓದುಗರೂ ಹೆಚ್ಚುತ್ತಾರೆ, ಹೆಚ್ಚುಹೆಚ್ಚು ಲೇಖಕರೂ ಬರೆಯುತ್ತಾರೆ, ನಮ್ಮ ಸಮಕಾಲೀನ ಸಂದರ್ಭದ ವಿಷಯಗಳೂ ಸಶಕ್ತವಾಗಿ ಚರ್ಚೆಗೊಳಪಡುತ್ತವೆ, ಮತ್ತು ಅದು ಕ್ರಿಯಾಶೀಲತೆಯೆಡೆಗೆ ನಮ್ಮ ಲೇಖಕರನ್ನು ಮತ್ತು ಓದುಗರನ್ನು ಒಯ್ಯುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ.