Category Archives: ಶಿವರಾಮ್ ಕೆಳಗೋಟೆ

ನ್ಯಾ.ಕೃಷ್ಣ ಅಯ್ಯರ್ ನಿಧನ: ಅವರಿಂದ ಕಲಿಯಬೇಕಾದ ಪಾಠಗಳು

– ಶಿವರಾಮ್ ಕೆಳಗೋಟೆ

ಇಂದಿರಾ ಗಾಂಧಿ ಸಂಸತ್ತಿಗೆ ಆಯ್ಕೆಯಾದುದನ್ನು ಅಲಹಾಬಾದ್ ನ್ಯಾಯಾಲಯ ಅನೂರ್ಜಿತಗೊಳಿಸಿದ ನಂತರ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ನಿರೀಕ್ಷೆಯಂತೆ ಇಂದಿರಾ ಗಾಂಧಿ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದರು. ಅವರ ಅರ್ಜಿ ರಜಾ ಕಾಲದ ನ್ಯಾಯಾಧೀಶರಾದ ವಿ.ಆರ್.ಕೃಷ್ಣ ಅಯ್ಯರ್ ಅವರ ಮುಂದೆ ವಿಚಾರಣೆಗೆ ಬರುವುದಿತ್ತು. ಅದನ್ನು ಅರಿತ ಅಂದಿನ ಕಾನೂನು ಮಂತ್ರಿ ಹೆಚ್.ಆರ್.ಗೋಖಲೆ ಅಯ್ಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಾನು ನಿಮ್ಮನ್ನು ಭೇಟಿ ಮಾಡಲು ಬರಬಹುದೇ ಎಂದು ಕೇಳುತ್ತಾರೆ. ಅವರ ಭೇಟಿಯ ಉದ್ದೇಶದ ಬಗ್ಗೆ ಗುಮಾನಿ ಇದ್ದ ಅಯ್ಯರ್ ಅವರು “ನೀವು ಅಲಹಾಬಾದ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿದ್ದರೆ ನೇರವಾಗಿ ಸುಪ್ರಿಂ ಕೋರ್ಟ್ ಗೆ ಹೋಗಿ. ನನ್ನ ಮನೆಗೆ ಬರುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.

ನ್ಯಾಯಾಂಗ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಗೋಖಲೆಯವರೊಂದಿಗೆ ಅಯ್ಯರ್ ಅವರಿಗೆ ಆತ್ಮೀಯತೆ ಇತ್ತು. krishna-iyerಅದೇ ಆತ್ಮೀಯತೆ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದಿರಬಹುದು. ಆದರೆ ಅಯ್ಯರ್ ಅಂತಹ ಪ್ರಯತ್ನಕ್ಕೆ ಸೊಪ್ಪು ಹಾಕಲಿಲ್ಲ. ನಂತರದ ಎರಡು ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬಂತು. ಅಯ್ಯರ್ ಅವರು ನೀಡಿದ ತೀರ್ಪು ಇತಿಹಾಸ ಸೃಷ್ಟಿಸಿತು. ಅದೇ ತೀರ್ಪಿನಿಂದ ಕ್ರುದ್ಧರಾದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಕೈಗೊಂಡರು ಎಂದು ವಿಶ್ಲೇಷಿಸುವವರಿದ್ದಾರೆ.

ನೂರು ವರ್ಷಗಳ ಕಾಲ ಬದುಕಿ ಅಯ್ಯರ್ ನಿನ್ನೆ ಮೌನವಾಗಿದ್ದಾರೆ. ನ್ಯಾಯಾಧೀಶರಾಗಿ ನಿವೃತ್ತಿಯಾದ ನಂತರವೂ ಸಮಕಾಲೀನ ಆಗುಹೋಗುಗಳಿಗೆ, ಅದರಲ್ಲೂ ಮುಖ್ಯವಾಗಿ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದವರು. ಸಾಮಾನ್ಯ ಜನತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಳ್ಳುವಂತಹ ಘಟನೆಗಳು ಆಗಾಗ ನಡೆಯುತ್ತಿರುವ ಈ ಹೊತ್ತಿನಲ್ಲಿ ಅಯ್ಯರ್ ಇನ್ನಿಲ್ಲ. ಬಲಾಢ್ಯರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆ ಕೊಟ್ಟ ದೂರನ್ನು ‘ಮುಚ್ಚಿದ ಲಕೋಟೆಯಲ್ಲಿಡಿ’ ಎಂದು ಆದೇಶಿಸುವ, ಬೆಂಗಳೂರಿನಲ್ಲಿ ದುಬಾರಿ ಬೆಲೆಯ ನಿವೇಶನದ ಆಸೆಗೆ ನ್ಯಾಯ ಬಲಿಕೊಡುವ ನ್ಯಾಯಾಧೀಶರುಗಳು, ಒಮ್ಮೆ ಅಯ್ಯರ್ ಜೀವನಗಾಥೆಯನ್ನು ಓದಬೇಕು. ಆಗಲಾದರೂ ಅವರಿಗೆ ತಾವು ಕುಳಿತಿರುವ ಸ್ಥಾನದ ಮಹತ್ವ ಅರ್ಥವಾದೀತು!

ಕೃಷ್ಣ ಅಯ್ಯರ್ ತಂದೆ ವಕೀಲರು. ಇವರೂ ವಕೀಲಿ ವೃತ್ತಿ ಆರಂಭಿಸಿದರು. ವೃತ್ತಿಯ ಆರಂಭದ ದಿನಗಳಲ್ಲಿಯೇ ಕೂಲಿ ಕಾರ್ಮಿಕರ ಕೇಸುಗಳ ವಕೀಲರಾಗಿ ಜನಪ್ರಿಯರಾದರು. ಬಡವರ ಬಗ್ಗೆ ಕಾಳಜಿ, ಶೋಷಿತರಿಗೆ ನ್ಯಾಯ ಕೊಡಿಸುವ ವೃತ್ತಿ ಪರತೆ ಅವರಿಗೆ ಜನಮನ್ನಣೆ ತಂದು ಕೊಟ್ಟಿತು. ಅದೇ ಕಾರಣಕ್ಕೆ ಅವರು ಜನಪ್ರತಿನಿಧಿಯಾಗಿ ಮದ್ರಾಸ್ ಪ್ರಾಂತ್ಯಕ್ಕೆ ಆಯ್ಕೆಯಾದರು. ನಂತರ ಇ.ಎಂ.ಎಸ್. ನಂಬೂದರಿಪಾದ್ ನೇತೃತ್ವದ ಕಮುನಿಸ್ಟ್ ಪಕ್ಷದ ಸರಕಾರದಲ್ಲಿ ಸಚಿವರಾಗಿ ಪ್ರಮುಖ ಖಾತೆಗಳಾದ ಗೃಹ, ನೀರಾವರಿ ಹಾಗೂ ವಿದ್ಯುತ್ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಪುಟದಲ್ಲಿ ಸಚಿವರಾಗಿ ಭೂಸುಧಾರಣೆ ಕಾಯಿದೆ ತಂದು ಅದನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಇವರ ಶ್ರಮ ದೊಡ್ಡದು. ನಂತರ ನ್ಯಾಯಾಧೀಶರಾದರು. ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಸ್ಮರಣೀಯ ಕೆಲಸ ಮಾಡಿದರು.

ಕಾನೂನು ವಿದ್ಯಾರ್ಥಿಗಳು ತಮ್ಮ ವ್ಯಾಸಾಂಗದ ಕಾಲದಲ್ಲಿ, ಪ್ರಾಕ್ಟೀಸ್ ಕಾಲದಲ್ಲಿ ಆಗಾಗ ನೆನಪಿಸಿಕೊಳ್ಳುವ ಕೆಲವೇ ಕೆಲವು ಪ್ರಮುಖ ನ್ಯಾಯಾಧೀಶರುಗಳಲ್ಲಿ ಅವರು ಪ್ರಮುಖರು. ಅವರ ಜೀವನ ಸಾವಿರಾರು ಯುವ ವಕೀಲರಿಗೆ ಸ್ಪೂರ್ತಿ. ಅವರ ಬದುಕು ಕಲಿಸುವ ಪಾಠದಿಂದ ನೋವುಂಡ ಸಮುದಾಯಗಳಿಗೆ ವಕೀಲ ಸಮುದಾಯ ನ್ಯಾಯ ಕೊಡಿಸುವ ಕೆಲಸ ಮಾಡಿದರೆ ಅವರ ಜೀವನಾವಧಿಯ ಉದ್ದೇಶ ಸಾರ್ಥಕವಾದೀತು.

ಅತ್ಯಾಚಾರ: ಅಕ್ಷರ ಕಾಣದ ಎದೆಗಳ ಅಸ್ತ್ರ

– ಶಿವರಾಮ್ ಕೆಳಗೋಟೆ

ಔಟ್ ಲುಕ್ ಪತ್ರಿಕೆಯ ಇತ್ತೀಚಿನ ಸಂಚಿಕೆ ವಿಶೇಷವಾಗಿದೆ. ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ಕಳೆದ ವರ್ಷ ಕೋಮುಗಲಭೆಗಳ ಸಮಯದಲ್ಲಿ ಅತ್ಯಾಚಾರಕ್ಕೀಡಾದ ಮಹಿಳೆಯರನ್ನು ಕುರಿತ ವರದಿ ಇದೆ. ಕೋಮು ಗಲಭೆಗಳ ನಂತರ ಧೈರ್ಯವಾಗಿ ಅತ್ಯಾಚಾರ ಆದ ಬಗ್ಗೆ ಪೊಲೀಸರಿಗೆ ದೂರು ನೀಡಿ ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತ ಕೋಮಿನ ಹುಡುಗರು ಅಲ್ಪಸಂಖ್ಯಾತರೆಡೆಗೆ ತಮಗಿರುವ ಆಕ್ರೋಷವನ್ನು outlook-coverpage-rapeವ್ಯಕ್ತಪಡಿಸಲು ಅನುಸರಿಸಿದ ಒಂದು ಸಾಧನ ಅತ್ಯಾಚಾರ.

ಹಿಂದೂ ಹುಡುಗಿಯನ್ನು ಒಬ್ಬ ಮುಸ್ಲಿಂ ಹುಡುಗ ಚುಡಾಯಿಸಿದ ಎಂದು ಸುದ್ದಿ ಹಬ್ಬುತ್ತದೆ. ಹುಡುಗಿಯ ಸಹೋದರರು ಆ ಹುಡುಗನನ್ನು ಹುಡುಕಿ ಕೊಲ್ಲುತ್ತಾರೆ. ಕೊಂದ ಹುಡುಗರನ್ನು ಹತನಾದ ಹುಡುಗನ ಕಡೆಯವರು ಕೊಲ್ಲುತ್ತಾರೆ. ಹಾಗೆ ಹುಟ್ಟಿಕೊಂಡ ಗಲಭೆಗಳು 72 ಜನರ ಪ್ರಾಣ ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲ ಅನೇಕ ಮಹಿಳೆಯರು, ಮುಖ್ಯವಾಗಿ ಅಲ್ಪಸಂಖ್ಯಾತ ಮಹಿಳೆಯರು, ಸಾಮೂಹಿಕ ಅತ್ಯಾಚಾರಕ್ಕೆ ಈಡಾಗುತ್ತಾರೆ. ಅವರಲ್ಲಿ ಕೆಲವೇ ಕೆಲವರು ಪೊಲೀಸ್ ಕೇಸು ದಾಖಲಿಸುವ ಧೈರ್ಯ ಮಾಡಿದ್ದಾರೆ. ಘಟನೆಗಳು ನಡೆದು ಏಳೆಂಟು ತಿಂಗಳಾದರೂ, ಯಾವ ಪ್ರಕರಣದಲ್ಲೂ ಪೊಲೀಸರು ಚಾರ್ಜ್‌ಶೀಟ್ ಹಾಕಿಲ್ಲ ಇದುವರೆಗೂ.

ಹೀಗೆ ಬಯಲಿಗೆ ಬಂದ ಪ್ರಕರಣಗಳಲ್ಲಿ, ಮೂರು ಹೆಣ್ಣು ಮಕ್ಕಳ ಎದುರಿಗೇ ಸಾಮೂಹಿಕ ಅತ್ಯಾಚಾರಕ್ಕೀಡಾದ, ದಾಳಿ ಮಾಡಲು ಬಂದ ಗುಂಪಿನಿಂದ ಓಡಿಹೋಗಿ ತಪ್ಪಿಸಿಕೊಳ್ಳಲಾಗದೆ ಸಿಕ್ಕುಬಿದ್ದು ನೋವುಂಡ ಮಹಿಳೆಯರಿದ್ದಾರೆ. ಐದು ವರ್ಷದ ಮಗನನ್ನು ದಾಳಿಕೋರರಿಂದ ಬಚಾವು ಮಾಡಲು ಗಂಡ ಮಗನೊಂದಿಗೆ ತಾರಸಿಗೆ ಓಡಿಹೋದಾಗ ಹೆಂಡತಿ ದಾಳಿಗೆ ತುತ್ತಾಗುತ್ತಾಳೆ.

ಈ ಘಟನೆಗಳಿಂದ ಆ ಕುಟುಂಬಗಳು ಎದುರಿಸಿದ ಪರಿಣಾಮಗಳು ವಿಷಾದಕರ. ಒಬ್ಬ ಮಹಿಳೆ ಹೇಳುತ್ತಾಳೆ, ಮೊದಲೆಲ್ಲಾ ಗಂಡನೊಂದಿಗೆ ಯಾವುದೇ ವಿಚಾರಕ್ಕೆ ಜಗಳ ಆಡುವಂತಹ ಸಂದರ್ಭ ಬಂದರೆ ನಾನೂ ಜೋರಾಗಿಯೇ ವಾದಕ್ಕಿಳಿಯುತ್ತಿದ್ದೆ. ಆದರೆ ಈಗ ಹಾಗಿಲ್ಲ. ಈ ಘಟನೆ ನನ್ನ ಬಾಯನ್ನು ಕಟ್ಟಿಹಾಕಿದೆ. ಈ ಕಾರಣಕ್ಕಾಗಿಯೇ ನನ್ನ ಗಂಡ ನನ್ನೊಂದಿಗೆ ಮುನಿಸಿಕೊಂಡಿರಬಹುದೇ ಎನ್ನಿಸಿ ಮೌನಿಯಾಗುತ್ತೇನೆ. ಇಷ್ಟೆಲ್ಲದರ ಮೇಲೆ, ಪದೇ ಪದೇ ಆರೋಪಿ ಕಡೆಯ ಜನ ಭೇಟಿ ನೀಡಿ ದೂರು ಹಿಂಪಡೆಯಲು ಒತ್ತಡ ಹಾಕುತ್ತಾರೆ, ಹಣದ ಆಮಿಷ ಒಡ್ಡುತ್ತಾರೆ. ಒಪ್ಪುವುದಿಲ್ಲ ಎಂದರೆ ಮನೆಯಲ್ಲಿನ ಇತರೆ ಹರೆಯ ಹೆಣ್ಣು ಮಕ್ಕಳ ಪಾಡೂ ಇದೇ ಆಗುತ್ತದೆ ಎಂದು ಧಮಕಿ ಹಾಕುತ್ತಾರೆ.

ಕರ್ನಾಟಕದ ಎಷ್ಟೋ ಊರುಗಳಲ್ಲಿ ದಲಿತ ಮಹಿಳೆಯರನ್ನು ಮೇಲ್ವರ್ಗದ ಜನ ಬೆತ್ತಲೆ ಪೆರೇಡ್ ನಡೆಸಿದ್ದಾರೆ. dalit-woman-paraded-nakedಅನೇಕ ಪ್ರಕರಣಗಳಲ್ಲಿ ಹಾಗೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಇಂತಹದೇ ಒಂದು ಪ್ರಕರಣ ಬಯಲಿಗೆ ಬಂದಿತ್ತು. ಆಗ ಮಹಿಳೆ ಕೆಲ ಮಾಧ್ಯಮದವರ ಮುಂದೆ ಮಾತನಾಡುತ್ತಾ ಇಡೀ ಊರ ಜನರ ಮುಂದೆ ಬೆತ್ತಲಾದ ನೋವನ್ನು ಕಣ್ಣೀರಿನೊಂದಿಗೆ ಹಂಚಿಕೊಂಡಿದ್ದಳು. ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಇತ್ತೀಚೆಗೆ ವರದಿಯಾದಂತೆ ಒಬ್ಬ ಮಹಿಳೆಯ ಸೀರೆಯನ್ನು ನಡುಬೀದಿಯಲ್ಲಿ, ಅದೂ ಸಾರ್ವಜನಿಕವಾಗಿ ಶಾಂತಿ ಸಭೆ (ಗಲಭೆ ನಂತರ ಏರ್ಪಟ್ಟಿದ್ದ) ನಡೆಯುವ ಸಂದರ್ಭದಲ್ಲಿ ಎಳೆಯುವ ದುಷ್ಟತನಕ್ಕೆ ಆ ಊರಿನ ಕೆಲವರು ಮುಂದಾಗಿದ್ದರು.

ಹಣವಂತ, ಬಲಿಷ್ಟ ಸಮುದಾಯದವರು ಕೆಳ ಸ್ತರದವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಳಸುವ ಹಲವು ಅಸ್ತ್ರಗಳಲ್ಲಿ ಅತ್ಯಾಚಾರವೂ ಒಂದು. ಗುಜರಾತಿನಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರು ಎಂಬ ವರದಿಗಳಿವೆ. ಅಲ್ಲಿ ಅಂತಹ ಕೃತ್ಯ ಮಾಡಿರುವವರ ಮನಸ್ಸು ಹೇಗೆ ಯೋಚಿಸುತ್ತದೆ ಎನ್ನುವುದಕ್ಕೆ ಈಗಷ್ಟೆ ಫೇಸ್ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾರಣಕ್ಕೆ ಕೇಸು ಎದುರಿಸುತ್ತಿರುವ ಪುರುಷ ಮಹಾಶಯನ ಉದಾಹರಣೆ ಸಾಕು. ವೈಜ್ಞಾನಿಕ ತಳಹದಿಯ ಮೇಲೆ ಮಂಡಿಸಿದ ವಿಚಾರವನ್ನು ಒಪ್ಪಿಕೊಳ್ಳಲಾಗದ ಪುರೋಹಿತಶಾಹಿ ಮನಸ್ಸು ‘ಇಂತಹವರ ಜುಟ್ಟು ಹಿಡಿದು ರೇಪ್ ಮಾಡಿದರೆ ಸರಿಯಾಗುತ್ತದೆ..’ ಎನ್ನುತ್ತದೆ. ಅವನ ಪ್ರಕಾರ ಎದೆಗೆ ಬಿದ್ದ ಅಕ್ಷರ ಓದಿಕೊಂಡವರಿಗೆಲ್ಲಾ ಇದೇ ಗತಿಯಾಗಬೇಕು! ಅವನ ಮನಸ್ಸಿನಲ್ಲಿ ಕೊಳಕು ಎಷ್ಟಿರಬಹುದು! vr-bhatಬಹುಶಃ ಇಂತಹವರಿಗೆ ಅಕ್ಷರ ಹೇಳಿಕೊಟ್ಟವರು ‘ಅ’ ಎಂದಾಗ ಅರಸ ಅಥವಾ ಅಮ್ಮ ಅಥವಾ ಅಕ್ಕ ಎಂದು ಹೇಳುವ ಬದಲು ‘ಅತ್ಯಾಚಾರ’ ಎಂದು ಹೇಳಿಕೊಟ್ಟಿರಬೇಕು. ನೋ ಡೌಟ್, ಇಂತಹದೇ ಆಲೋಚನೆಯ ವ್ಯಕ್ತಿಗಳು ಗಲಭೆಗಳ ಸಂದರ್ಭದಲ್ಲಿ ಬೀದಿಗಿಳಿದು ಅತ್ಯಾಚಾರದ ಮೂಲಕ ತಮಗಾಗದವರಿಗೆ ‘ಪಾಠ’ ಕಲಿಸುವ ಹುಮ್ಮಸ್ಸು ಪ್ರದರ್ಶಿಸುತ್ತಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಅತ್ಯಾಚಾರ, ಮಹಿಳೆ ಮೇಲಿನ ದೌರ್ಜನ್ಯಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ದಿನಗಟ್ಟಲೆ ಮಾಧ್ಯಮದ ಅಂಗಳದಲ್ಲಿ ಚರ್ಚೆ ನಡೆದವು. ಪೊಲೀಸ್ ಇಲಾಖೆಯವರು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಸಾರ್ವಜನಿಕ ವಲಯಗಳಲ್ಲಿ ಚರ್ಚೆ, ಸಂವಾದಕ್ಕೆ ಕಾರಣವಾಗಿದ್ದು ಅತ್ಯಾಚಾರ ಪ್ರಕರಣಗಳಿಗೆ ಮಾಧ್ಯಮ ನೀಡಿದ ಮಹತ್ವ. ಆದರೆ ಮಾಧ್ಯಮ ಅಂಗಳದಲ್ಲಿ ಚರ್ಚೆಗೆ ವಸ್ತುವಾಗಿದ್ದು ಬೆಂಗಳೂರಿನಲ್ಲಿ ನಡೆದ ಘಟನೆಗಳಷ್ಟೆ. ಇತರ ಊರುಗಳಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಬಗೆಗಿನ ಚರ್ಚೆಗೆ ‘ಮಾರ್ಕೆಟ್’ ಇಲ್ಲ. ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದ ನಂತರ ಬೆಂಗಳೂರಿನಲ್ಲಿರುವ ಮಾಧ್ಯಮ ಕಚೇರಿಗಳ ವರದಿಗಾರರ ಡೆಸ್ಕ್ ನಲ್ಲಿ ಚರ್ಚೆಗೆ ಬರುವ ವಿಚಾರ ‘ಹೈ ಪ್ರೊಫೈಲಾ..?’ ಕ್ರೈಮ್‌ಗೆ ತುತ್ತಾದವರು ಖಾಸಗಿ ಶಾಲೆಯ ವಿದ್ಯಾರ್ಥಿ ಅಥವಾ ಟೆಕ್ಕಿ ಆದರೆ ಅಂತಹ ಪ್ರಕರಣಗಳನ್ನು ‘ಹೈ ಪ್ರೊಫೈಲ್’ ಎಂದು ಪರಿಗಣಿಸುವುದು ರೂಢಿ. ಇಲ್ಲವಾದರೆ, ‘ಸಿಂಗಲ್ ಕಾಲಂ ಸಾಕು!’.

ಜಾತಿಯ ಕಾರಣಕ್ಕೆ, ವಿಭಿನ ಆಲೋಚನೆ ಅಥವಾ ಬದುಕುವ ರೀತಿಯ ಕಾರಣಕ್ಕೆ ಮಹಿಳೆಯರು ಅMuzaffarnagar-riotsತ್ಯಾಚಾರಕ್ಕೀಡಾಗುವ ಅನೇಕ ಪ್ರಕರಣಗಳು ಸಿಂಗಲ್ ಕಾಲಂನಲ್ಲಿ ಸತ್ತು ಹೋಗುತ್ತವೆ. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲವೆಡೆ ಆರೋಪಿ ಕಡೆಯವರು ದೂರುದಾರರನ್ನು ಹೆದರಿಸಿ ಮುಚ್ಚಿಹಾಕಿರುವ ಪ್ರಕರಣಗಳೂ ಇವೆ. ಇದೇ ಊರಿನಲ್ಲಿ ಬಾಳಿ ಬದುಕಬೇಕು. ಮದುವೆ ಆಗೋ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ವಿರುದ್ಧ ಜಗಳ ಕಾಯೋಕೆ ಆಗುತ್ತಾ. ಇವತ್ತು ಕೇಸು ಕೊಟ್ಟರೆ, ನಾಳೆ ಅವರ ಹೊಲಕ್ಕೆ ಕೂಲಿಗೆ ಕರೀತಾರ, ಅಂಗಡೀಲಿ ಸಾಮಾನು ಕೊಡ್ತಾರ..? ಇದು ಯಾರೊ ಒಬ್ಬರ ಮಾತಲ್ಲ. ಅನ್ಯಾಯಕ್ಕೊಳಗಾದ ಅನೇಕ ಕುಟುಂಬಗಳ ಸಂಕಟದ ಅಭಿವ್ಯಕ್ತಿ.

‘ಇದು ಮುಂಗಾರು’ – ‘ಮುಂಗಾರು’ ಅಂದ್ರೆ ಇಷ್ಠೇನಾ?

– ಶಿವರಾಮ್ ಕೆಳಗೋಟೆ

ಈ ಹೊತ್ತಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ ಪಡೆದವರಿಗೆ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಕೇವಲ ಹಿರಿಯರಿಂದ ಕೇಳಿ ಗೊತ್ತು. ಅದರ ಒಂದು ಪ್ರತಿಯನ್ನೂ ಓದದವರಿಗೆ ಆ ಪತ್ರಿಕೆ ಬಗ್ಗೆ ಹಲವು ಕುತೂಹಲಗಳಿವೆ. ಅದು ಜನರ ಒಡೆತನದ ಪತ್ರಿಕೆ, ‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ’ ಉದ್ದೇಶದೊಂದಿಗೆ ಹೊರಬಂದ ಪತ್ರಿಕೆ… ಹೀಗೇ ಅಲ್ಲಲ್ಲಿ ಕೇಳಿ ಬರುತ್ತಿದ್ದ ಮಾತುಗಳು ಅಂತಹದೊಂದು ಪ್ರಯೋಗದ ಬಗ್ಗೆ ನವ ಪತ್ರಕರ್ತರಲ್ಲಿ ಕುತೂಹಲ ಹುಟ್ಟಿಸಲು ಕಾರಣವಾಗಿದ್ದವು.

ಈ ಕುತೂಹಲದಿಂದಾಗಿಯೇ “ಕೆಂಡಸಂಪಿಗೆ”ಯಲ್ಲಿ ಪ್ರಕಟವಾದ ಚಿದಂಬರ ಬೈಕಂಪಾಡಿ ಬರೆದ ಸರಣಿ ಅನೇಕರನ್ನು ಆಕರ್ಷಿಸಿತ್ತು .ಜಿ.ಎನ್ ಮೋಹನ್ ಇದೇ ಸರಣಿಯನ್ನು ಅಂಕಿತ ಪ್ರಕಾಶನದ ‘ಮೀಡಿಯಾ ಮಾಲಿಕೆ’ ಯ ಮೊದಲ ಪುಸ್ತಕವಾಗಿ ಪ್ರಕಟಿಸಿದರು. ಆ ಮೂಲಕ ಮುಂಗಾರು, ಅದರ ಸಂಪಾದಕ ವಡ್ಡರ್ಸೆಯವರು ಮತ್ತು ಚಿದಂಬರ ಬೈಕಂಪಾಡಿಯವರ ವೃತ್ತಿ ಜೀವನ, ವಿಶಾಲ ಓದುಗರಿಗೆ ಪರಿಚಯವಾಗಲು ಸಾಧ್ಯವಾಯಿತು. ಪುಸ್ತಕದ ಹೆಸರು ಹೇಳುವಂತೆ ಇದು ಮುಂಗಾರಿನ ಕತೆ ಅಥವಾ ಚರಿತ್ರೆ.

ಪುಸ್ತಕ ಓದಿದ ನಂತರ ಮನಸ್ಸಿನಲ್ಲಿ ಉಳಿಯುವ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಪ್ರಮುಖವಾಗಿ ಕಾಣುವುದು –ಒಂದು ಆದರ್ಶಕ್ಕಾಗಿ ಪತ್ರಿಕೆ ಹುಟ್ಟು ಹಾಕಿದ ವಡ್ಡರ್ಸೆ, ಅವರೊಂದಿಗೆ ಪ್ರಜಾವಾಣಿಯಂತಹ ಸಂಸ್ಥೆಯನ್ನು ಬಿಟ್ಟು ಬಂದ ಗಟ್ಟಿ ಪತ್ರಕರ್ತರ ತಂಡ, ಅವರೊಟ್ಟಿಗೆ ಸೇರಿಕೊಂಡು ನಂತರ ಅತ್ಯುತ್ತಮ ಪತ್ರಕರ್ತರಾಗಿ ರೂಪುಗೊಂಡ ತರುಣರು, ಚಿದಂಬರ ಬೈಕಂಪಾಡಿಗೆ ಕಡಿಮೆ ಸಂಬಳ ಫಿಕ್ಸ್ ಆಗಿದ್ದು, ನಂತರ ಸಂಪಾದಕರು ಅದನ್ನು ಸರಿಮಾಡಿದ್ದು, ಅವರು ವರದಿಗಾರರಾಗಿ ಬೀದರ್, ಕಾರವಾರಕ್ಕೆ ಭೇಟಿ ನೀಡಿದ್ದು, ಪತ್ರಿಕೆ ಉಳಿವಿಗಾಗಿ ಸಾಲ ಮಾಡಿದ್ದು, ವಡ್ಡರ್ಸೆಯವರ ಕಾರನ್ನು ಹೂಡಿಕೆದಾರರೊಬ್ಬರು ಹಿಂದಕ್ಕೆ ತೆಗೆದುಕೊಂಡದ್ದು.. ಕೊನೆಗೆ ವಡ್ಡರ್ಸೆ ಪತ್ರಿಕೆಗೆ ವಿದಾಯ ಹೇಳಿದ್ದು.

ಹಾಗಾದರೆ ಕನ್ನಡ ಪತ್ರಿಕೋದ್ಯಮದ ವಿಶಿಷ್ಟ ಪ್ರಯತ್ನ ‘ಮುಂಗಾರು’ ಅಂದ್ರೆ ಇಷ್ಟೇನಾ?

ಪತ್ರಕರ್ತ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ತೀವ್ರವಾಗಿ ಆಸಕ್ತಿ ಕೆರಳಿಸುವ ಸಂಗತಿ – ಮುಂಗಾರು ‘ಓದುಗರ ಒಡೆತನದ ಪತ್ರಿಕೆ’ ಎಂಬ ಮಾತು. ಈ ಪುಸ್ತಕ ಈ ಅಂಶವನ್ನು ವಿವರವಾಗಿ ಹೇಳುವುದೇ ಇಲ್ಲ. ಅದ್ಹೇಗೆ ಓದುಗರ ಒಡೆತನದ ಪತ್ರಿಕೆಯಾಗಿತ್ತು? ‘ಸಾರ್ವಜನಿಕರಿಂದ ಶೇರು ಸಂಗ್ರಹಿಸುತ್ತಿದ್ದರು’ (ಪುಟ 21) ಎಂಬ ಮಾತಿದೆ. ಹಾಗಾದರೆ ಸಾರ್ವಜನಿಕರು ಅನ್ನುವುದನ್ನು ‘ಓದುಗರು’ ಎಂದು ಗ್ರಹಿಸಬೇಕೆ? ಶೇರು ಸಂಗ್ರಹಿಸಿದ್ದವರೆಲ್ಲ ಓದುಗರಾಗಿದ್ದರೆ? ಹಾಗಾದರೆ, ಓದುಗರ ಹೂಡಿಕೆ ಕಂಪನಿಯಲ್ಲಿ ಎಷ್ಟಿತ್ತು? ಓದುಗರ ಒಡೆತನ ಎಂದ ಮೇಲೆ, ಪತ್ರಿಕೆಯ ಸಂಪಾದಕೀಯ ಹೂರಣದಲ್ಲಿ ಓದುಗರ ಪಾತ್ರ ಏನಿತ್ತು, ಎಷ್ಟಿತ್ತು?

ಕೆಲ ಹಿರಿಯರಿಂದ ಕೇಳಿರುವ ಹಾಗೆ, ವಡ್ಡರ್ಸೆಯವರು ವಾರಕ್ಕೊಮ್ಮೆ ಓದುಗರ ಪ್ರಶ್ನೆಗಳಿಗೆ ಉತ್ತರಿಸುವ ಅಂಕಣವೊಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಓದುಗರು, ಪತ್ರಿಕೆ, ಅದರ ಸಂಪಾದಕೀಯ ನಿಲುವುಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಸಂಪಾದಕರು ಓದುಗರೊಂದಿಗೆ ಅವರು ಎತ್ತಿದ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ಬೈಕಂಪಾಡಿಯವರ ‘ಇದು ಮುಂಗಾರು’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಕಾಣಲಿಲ್ಲ. ಒಬ್ಬ ಸಂಪಾದಕ ಓದುಗರೊಂದಿಗೆ ಸಂವಾದ ನಡೆಸುವ ಪ್ರಯೋಗವೇ ವಿಶಿಷ್ಟ. ಈ ಬಗ್ಗೆ ಲೇಖಕರು ವಿವರವಾಗಿ ದಾಖಲಿಸಿದ್ದರೆ ಉಪಯೋಗವಾಗುತ್ತಿತ್ತು.

“ಆದರ್ಶ, ಸೇವೆ ಇವೆಲ್ಲವೂ ಶೆಟ್ರ ಭಾಷೆಯಲ್ಲೇ ಹೇಳುವುದಾದರೆ ಮಣ್ಣಂಗಟ್ಟಿ. ಆದ್ದರಿಂದಲೇ ‘ಮುಂಗಾರು’ಮುನ್ನಡೆಯಲಿಲ್ಲ. ರಘುರಾಮ ಶೆಟ್ರು ‘ಮುಂಗಾರು’ ಹುಟ್ಟುಹಾಕಿದ್ದು ಸರಿ, ಅವರ ಧ್ಯೇಯೋದ್ದೇಶಗಳೂ ಸರಿಯಾದವೇ. ಆದರೆ ಅವರ ಸಂಸ್ಥೆ ಇರಬೇಕಿದ್ದ ಸ್ಥಳ ಕರಾವಳಿ ಅಲ್ಲವೇ ಅಲ್ಲ” – ಎಂದು ಲೇಖಕರು ತಮ್ಮ ಆರಂಭಿಕ ಮಾತುಗಳಲ್ಲಿ (ಪುಟ 12) ಹೇಳುತ್ತಾರೆ. ಪತ್ರಿಕೆ ಉದ್ದೇಶಿತ ಗುರಿ ಮತ್ತು ವಿಸ್ತಾರ ತಲುಪದೇ ಇದ್ದಾಗ ವಡ್ಡರ್ಸೆಯವರು ಆಡಿರಬಹುದಾದ ಮಾತನ್ನು ಇಟ್ಟುಕೊಂಡು ಲೇಖಕರು ತಮ್ಮ ಅಭಿಪ್ರಾಯವನ್ನು ಈ ವಾಕ್ಯದಲ್ಲಿ ಹೇಳಿದ್ದಾರೆ.

ಕರಾವಳಿ ಈ ಪ್ರಯೋಗಕ್ಕೆ ಸೂಕ್ತ ಅಲ್ಲ ಎನ್ನುವ ಲೇಖಕರು, ತಮ್ಮ ಪ್ರಕಾರ ‘ಸೂಕ್ತ ಸ್ಥಳ’ ಯಾವುದು ಎಂಬುದನ್ನು ಹೇಳಲಿಲ್ಲ. ಆದರೆ, ಕರಾವಳಿ ಪ್ರದೇಶವನ್ನು ತಮ್ಮ ಕಾರ್ಯಸ್ಥಾನವಾಗಿ ಆಯ್ಕೆ ಮಾಡಿಕೊಳ್ಳುವಲ್ಲಿಯೇ ವಡ್ಡರ್ಸೆಯವರ ಧ್ಯೇಯೋದ್ದೇಶಗಳು ಸ್ಟಷ್ಟವಾಗಿದ್ದವು. ಸಣ್ಣ–ಪುಟ್ಟ ಪ್ರಚೋದನೆಗಳಿಗೆ ಕೋಮು ಭಾವನೆಗಳನ್ನು ಕೆರಳಿಸಿಕೊಂಡು ಶಾಂತಿ ಹಾಳು ಮಾಡಿಕೊಳ್ಳುವ ಪರಿಸರದಲ್ಲಿ ‘ಚಿಂತನೆಯ ಮಳೆ’ ಅಗತ್ಯವಾಗಿತ್ತು ಎನಿಸುವುದಿಲ್ಲವೆ?.

ಈ ಕೃತಿಯಿಂದ ನಿರೀಕ್ಷಿಸಬಹುದಾದ ಪ್ರಮುಖ ಅಂಶ – ‘ಮುಂಗಾರು’ ತನ್ನ ಕಡಿಮೆ ಜೀವಿತಾವಧಿಯಲ್ಲಿ ಓದುಗ ವಲಯದಲ್ಲಿ ಉಂಟುಮಾಡಿದ ಸಂಚಲನೆ ಎಂಥದ್ದು? ಲೇಖಕರು ಅಲ್ಲಲ್ಲಿ ಸಂಪಾದಕರ ‘ಧ್ಯೇಯ, ಸಿದ್ಧಾಂತ,ಕಾಳಜಿ’ಗಳನ್ನು ಕೊಂಡಾಡುತ್ತಾರೆ. ಆದರೆ 2012 ರಲ್ಲಿ ಈಗಷ್ಟೆ ಪತ್ರಿಕೋದ್ಯಮಕ್ಕೆ ಕಣ್ಣು ಬಿಟ್ಟ ಓದುಗ ಮುಂಗಾರು ಬಗ್ಗೆ ಬಂದಿರುವ ಈ ಪುಸ್ತಕ ಹಿಡಿದು ಕೂತಾಗ, ಏಳುವ ಪ್ರಶ್ನೆ – ವಡ್ಡರ್ಸೆಯವರು ಪ್ರತಿನಿಧಿಸಿದ ಧ್ಯೇಯ, ಸಿದ್ಧಾಂತ, ಕಾಳಜಿಗಳು ಯಾವುವು? ಅವರು ಲೋಹಿಯಾರಿಂದ ಪ್ರಭಾವಿತರಾಗಿದ್ದರು. ಶೂದ್ರ ಅಥವಾ ದಲಿತ ನೇತಾರರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದರು. ಶೂದ್ರ ನಾಯಕರು ತಪ್ಪು ಮಾಡಿದಾಗ ಅಂತಹ ಪ್ರಕರಣಗಳನ್ನು ಮೃದುವಾಗಿಯೇ ಹ್ಯಾಂಡಲ್ ಮಾಡಬೇಕು –ಎಂಬರ್ಥದ ಮಾತುಗಳನ್ನು ವಡ್ಡರ್ಸೆ ಆಗಾಗ ಆಡುತ್ತಿದ್ದರು ಎಂದು ಲೇಖಕರು ಉಲ್ಲೇಖಿಸುತ್ತಾರೆ. ಆದರೆ ಒಟ್ಟಾರೆ, ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ, ಮುಂದುವರೆದ ಸಾಮಾಜಿಕ ಅಸಮಾನತೆ ಬಗ್ಗೆ ಒಂದು ವಿಶಿಷ್ಟ ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ತಾಳಿದ್ದ ನಿಲುವುಗಳು ಮತ್ತು ಆ ನಿಲುವುಗಳನ್ನು ತಮ್ಮ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ ಬಗ್ಗೆ ವಿವರಗಳು ಈ ಕೃತಿಯಲ್ಲಿ ವಿರಳ.

ಚಿದಂಬರ ಬೈಕಂಪಾಡಿ

ಈ ಎಲ್ಲಾ ವಿವರಗಳು ಈ ಕೃತಿಯಲ್ಲಿ ಇರಬೇಕಿತ್ತು ಎಂದು ಬಯಸುವುದಕ್ಕೆ ಕಾರಣ ಈ ಕೃತಿಯ ಶೀರ್ಷಿಕೆ. ಮೀಡಿಯಾ ಮಾಲಿಕೆ ಸಂಪಾದಕರು ಮತ್ತು ಲೇಖಕರು ಕೃತಿಗೆ ಕೊಟ್ಟ ಹೆಸರು – ‘ಇದು ಮುಂಗಾರು’. ದೃಢವಾಗಿ ಮುಂಗಾರು ಎನ್ನುವ ಪತ್ರಿಕೆ ಹೀಗೇ ಇತ್ತು ಎನ್ನುವ ಧೋರಣೆ ಈ ಶೀರ್ಷಿಕೆಯಲ್ಲಿದೆ. ಕೆಲ ಹಿರಿಯ ವರದಿಗಾರರು ಕಿರಿಯರ ಕಾಪಿ ತಿದ್ದುವಾಗ ‘ಇದು ಸುದ್ದಿ’ ಎಂದು ಯಾವ ಅಂಶವನ್ನು ಹೈಲೈಟ್ ಮಾಡಬೇಕಿತ್ತೋ ಅದನ್ನು ತೋರಿಸಿ ಹೇಳುತ್ತಾರೆ. ಅದರರ್ಥ ಕಿರಿಯ ವರದಿಗಾರ ಲೀಡ್ ಆಗಿ ತೆಗೆದುಕೊಂಡ ಅಂಶ ಅಷ್ಟು ಮುಖ್ಯ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಅಂತೆಯೇ ‘ಇದು ಮುಂಗಾರು’ ಎನ್ನುವಾಗ ಈ ಕೃತಿಗೆ ಮಹತ್ವವನ್ನೂ, ಗಾಂಭೀರ್ಯವನ್ನೂ ಜೊತೆಗೆ ಅಧಿಕೃತತೆಯನ್ನು ದಯಪಾಲಿಸುವ ಉದ್ದೇಶವಿದೆ.

‘ಮುಂಗಾರು’ಗೆ ದುಡಿದ ಅನೇಕ ಪ್ರತಿಭೆಗಳು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. (ಅವರಲ್ಲಿ ಕೆಲವರು ಒಂದು ಕಾಲದಲ್ಲಿ ವಡ್ಡರ್ಸೆಯವರ ಪತ್ರಿಕೆಯಲ್ಲಿದ್ದರು ಎಂಬ ವಾಸ್ತವವನ್ನು ಸಂಶಯಿಸುವ ಮಟ್ಟಿಗೆ ಬದಲಾಗಿದ್ದಾರೆ ಅಥವಾ ನಿಜ ರೂಪ ಪ್ರದರ್ಶಿಸಿದ್ದಾರೆ!). ಪತ್ರಿಕೆ ಕಟ್ಟುವಾಗ ವಡ್ಡರ್ಸೆಯವರ ಜೊತೆ ಇದ್ದ ಇಂದೂಧರ ಹೊನ್ನಾಪುರ, ಕೆ. ಪುಟ್ಟಸ್ವಾಮಿ, ಈ ಪತ್ರಿಕೆ ಮೂಲಕ ವೃತ್ತಿ ಪ್ರವೇಶಿಸಿದ ದಿನೇಶ್ ಅಮಿನ್ ಮಟ್ಟು ಮತ್ತಿತರರು ಈ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ವಿವರ ಕೊಡಬಲ್ಲರೇನೋ. ಅವರು ತಮ್ಮ ಅನುಭವ ದಾಖಲಿಸಿದ್ದರೆ ಚೆನ್ನಾಗಿರುತ್ತಿತ್ತು. ಮುಂದೆಯಾದರೂ ಅಂತಹ ಪ್ರಯತ್ನ ಮಾಡಿದರೆ ತರುಣ ಪತ್ರಕರ್ತರಿಗೆ ಅನುಕೂಲವಾಗುತ್ತದೆ.

ಇಲ್ಲವಾದರೆ -ವಡ್ಡರ್ಸೆ ಎಂದರೆ ಹಿರಿಯ ಪೊಲೀಸ್ ಅಧಿಕಾರಿಗಳು ಗೌರವ ಕೊಡುತ್ತಿದ್ದರು, ವಿಧಾನಸೌಧದ ದ್ವಾರದಲ್ಲಿರುವ ಪೊಲೀಸ್ ಪೇದೆ ಅವರ ಬಳಿ ಗುರುತಿನ ಪತ್ರ ಕೇಳದೆ ಸೆಲ್ಯೂಟ್ ಹೊಡೆದು ಒಳಗೆ ಬಿಡುತ್ತಿದ್ದ, ಮಂತ್ರಿಗಳು, ರಾಜಕಾರಣಿಗಳು ಅವರೊಂದಿಗೆ ಚರ್ಚೆ ನಡೆಸಲು ಅವರ ಕಚೇರಿಗೆ ಬರುತ್ತಿದ್ದರು ಅಥವಾ ಗೆಸ್ಟ್ ಹೌಸ್ ಗೆ ಆಹ್ವಾನಿಸುತ್ತಿದ್ದರು, ಬೀದರ್ ನಲ್ಲಿ ಅವರ ಪತ್ರಿಕೆ ವರದಿಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ರಾಜ್ಯ ಸಭೆ ಸದಸ್ಯರು ಮುತುವರ್ಜಿ ವಹಿಸುತ್ತಿದ್ದರು – ಎಂಬಂತಹ ಸಂಗತಿಗಳೇ ಮುಂಗಾರುವಿನ ಚರಿತ್ರೆಯಾಗಿ ಉಳಿದುಬಿಡುವ ಅಪಾಯವಿದೆ.

ಅಂಕಿತ ಪುಸ್ತಕದ ಮೀಡಿಯಾ ಮಾಲಿಕೆ ಉದ್ದೇಶ ಸ್ತುತ್ಯಾರ್ಹ. ಮಾಧ್ಯಮ ಸಂಗತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಹೆಚ್ಚಾಗುತ್ತಿರುವ ಈ ಹೊತ್ತಲ್ಲಿ ಇಂತಹದೊಂದು ಪ್ರಯತ್ನ ಅಗತ್ಯವಿತ್ತು. ಅಷ್ಟೇ ಅಲ್ಲ ಕನ್ನಡ ಪತ್ರಿಕೋದ್ಯಮದ ವಿವಿಧ ಆಸಕ್ತಿಕರ ಆಯಾಮಗಳನ್ನು, ಮಜಲುಗಳನ್ನು ದಾಖಲಿಸುವ ಮೌಲಿಕ ಕೃತಿಗಳು ಹೆಚ್ಚೆಚ್ಚು ಬರಲಿ.

“ಇದು ಮುಂಗಾರು”
ಲೇಖಕ: ಚಿದಂಬರ ಬೈಕಂಪಾಡಿ
ಪ್ರಕಾಶಕರು: ಅಂಕಿತ ಪುಸ್ತಕ
53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ,
ಬಸವನಗುಡಿ, ಬೆಂಗಳೂರು – 04
ಬೆಲೆ: ₹ 70

‘ಪ್ಲಾಂಟರ್ಸ್’ ಗಾಳಕ್ಕೆ ಸಿಕ್ಕಿ ಬೀಳುವ “ಪತ್ರಕರ್ತ” ಮೀನುಗಳು!

– ಶಿವರಾಮ್ ಕೆಳಗೋಟೆ

ಹಲವರಿಗೆ ನೆನಪಿರಬಹುದು, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಜರ್ಮನ್ ನಾಜಿ ಯುದ್ಧ ಆರೋಪಿ ಜೊಹಾನ್ ಬಾಷ್ (88) ಎಂಬಾತ ಗೋವಾ – ಕರ್ನಾಟಕ ಗಡಿ ಪ್ರದೇಶ (ಖಾನಾಪುರ ಕಾಡುಗಳಲ್ಲಿ) ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ನಾಡಿನ ಬಹುತೇಕ ಪತ್ರಿಕೆಗಳು ಆ ಸುದ್ದಿಯನ್ನು ಮುಖಪುಟದಲ್ಲಿ ಅಚ್ಚುಹಾಕಿದವು. ಸುದ್ದಿಗೆ ಪೂರಕವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಯಾಗಳನ್ನು ಪತ್ರಕರ್ತರು ಪಡೆದಿದ್ದರು. ಅಂತಹದೊಂದು ಸುದ್ದಿಯನ್ನು ಈ-ಮೇಲ್ ಮೂಲಕ ಪತ್ರಿಕಾಲಯಗಳಿಗೆ ತಲುಪಿಸಿದ್ದು ಪೆರುಸ್ ನಾರ್ಪ್ (Perus Narkp) ಎಂಬ ಹೆಸರಿನ ತಂಡ. ಆ ಸುದ್ದಿಯನ್ನು ಕಳುಹಿಸಿ, ಮಾರನೆಯ ದಿನ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ನೋಡಿ ಮೊದಲು ಎಂಜಾಯ್ ಮಾಡಿದ್ದು ಅವರೇ. ಹೀಗೊಂದು ಕೀಟಲೆ ಮಾಡಲೆಂದೇ ಆ ಗ್ರೂಪ್ ರೂಪ ಪಡೆದಿತ್ತು. ಅವರ ಹೆಸರಿನಲ್ಲಿಯೇ ಅವರ ಉದ್ದೇಶ ಸ್ಪಷ್ಟವಿತ್ತು – Super Prank (ಸಕ್ಕತ್ ಕೀಟಲೆ). ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಸೇರಿದಂತೆ ಅನೇಕ ಪತ್ರಿಕೆಗಳು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದ್ದವು. ಕನ್ನಡ ಪತ್ರಿಕೆಗಳೂ ಸುದ್ದಿಯನ್ನು ‘ಮಿಸ್’ ಮಾಡಲಿಲ್ಲ.

ಸುದ್ದಿ ಪ್ರಕಟವಾದ ನಂತರ ಪೆರುಸ್ ನಾರ್ಪ್ ತಂಡ ತಮ್ಮ ‘ಕೀಟಲೆ’ ಯಶಸ್ವಿಯಾದುದರ ಬಗ್ಗೆ ಮತ್ತೊಂದು ಮೇಲ್ ಕಳುಹಿಸಿ ಎಲ್ಲಾ ಸಂಪಾದಕರ, ವರದಿಗಾರರರನ್ನು ಗೇಲಿ ಮಾಡಿತು. ಸುದ್ದಿ ಬಂದಾಕ್ಷಣ ಕ್ರಾಸ್ ಚೆಕ್ ಮಾಡದೆ ಪ್ರಕಟಿಸುವ ಪತ್ರಿಕೆಗಳ ಧೋರಣೆಯನ್ನು ಅವರು ಟೀಕಿಸಿದ್ದರು. ಈ ಪ್ರಕರಣ ಆದದ್ದು 2008 ರ ಜೂನ್ 30 ಮತ್ತು ಜುಲೈ 1 ರ ಹೊತ್ತಿಗೆ.

ಜುಲೈ 1 ಕನ್ನಡಿಗರ ಪಾಲಿಗೆ ‘ಪತ್ರಿಕಾ ದಿನ’. ಪೆರುಸ್ ನಾರ್ಪ್ ಕನ್ನಡ ಪತ್ರಿಕೆಗಳ ಮಟ್ಟಿಗೆ ಒಳ್ಳೆಯ ಪತ್ರಿಕಾ ದಿನಕ್ಕಾಗಿ ಒಳ್ಳೆಯ ‘ಉಡುಗೊರೆ’ಯನ್ನೇ ಕೊಟ್ಟಿತ್ತು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರಬಂದ ನೆನಪಿಗೆ ಆ ದಿನವನ್ನು ಪತ್ರಿಕಾ ದಿನವಾಗಿ ಆಚರಿಸುತ್ತೇವೆ. (ಜಿಲ್ಲೆಗಳಲ್ಲಿರುವ ಅನೇಕ ವೃತ್ತಿನಿರತ ಸಂಘಗಳು ಪತ್ರಿಕಾ ದಿನವನ್ನು ಈ ತಿಂಗಳಲ್ಲಿ ಯಾವಾಗಲಾದರೊಮ್ಮೆ ಆಚರಿಸುತ್ತಾರೆ. ಆ ಕಾರಣಕ್ಕಾಗಿ ವಿವಿಧ ಜನಪ್ರತಿನಿಧಿಗಳಿಂದ, ಸಂಘ ಸಂಸ್ಥೆಗಳಿಂದ ಹಾಗೂ ಅಧಿಕಾರಿಗಳಿಂದ ಚಂದಾ ಎತ್ತುವ ‘ಸಂಸ್ಕೃತಿ’ ಯೂ ಇದೆ.)

ಪೆರುಸ್ ನಾರ್ಪ್ ಪರವಾಗಿಲ್ಲ. ಏಕೆಂದರೆ ತಾವು ಕೊಟ್ಟ ಸುದ್ದಿ ಸಂಪೂರ್ಣ ಕಟ್ಟುಕತೆ ಅಂತ ಮಾರನೆಯ ದಿನವೇ ಹೇಳಿಬಟ್ಟರು. ಆದರೆ ಪ್ರತಿದಿನ ಹೀಗೊಂದು ಕತೆಕಟ್ಟಿ ಬಿತ್ತರಿಸುವ ಅನೇಕರಿದ್ದಾರೆ. ಅದೇ ಕತೆಗೆ ಮಾಧ್ಯಮದವರು ಬಣ್ಣ ತುಂಬಿ, ಬಿತ್ತರಿಸಿದ ನಂತರವೂ, ಅದು ‘ಕಟ್ಟುಕತೆ’ ಎಂದು ಸ್ಪಷ್ಟನೆ ನೀಡುವವರು ಯಾರೂ ಇಲ್ಲ. ಕ್ರಾಸ್ ಚೆಕ್ ಮಾಡದೆ ಸುದ್ದಿ ಬಿತ್ತರಿಸಿದ ನಂತರ, ತಾವು ಬರೆದಿದ್ದೇ ಅಥವಾ ತೋರಿಸಿದ್ದೇ ಸತ್ಯ ಎಂದು ಬೀಗುವ ಮಾಧ್ಯಮ ಮಂದಿಯೇ ನಮ್ಮ ಮಧ್ಯೆ ಹೆಚ್ಚು. ಉದಾಹರಣೆಗೆ ಬೆಂಗಳೂರಿನ ಎಷ್ಟೋ ಆಸ್ಪತ್ರೆಗಳಲ್ಲಿ ಆಗಾಗ ‘ವಿಶ್ವದಲ್ಲಿಯೇ ಮೊದಲ ಬಾರಿಗೆ’ ಅಥವಾ ‘ಏಶಿಯಾದಲ್ಲಿಯೇ ಮೊದಲ ಬಾರಿಗೆ’, ಅಥವಾ ‘ಭಾರತದಲ್ಲಿಯೇ ಮೊದಲ ಬಾರಿಗೆ’ ಎಂಬ ವಿಶೇಷಣ ಹೊತ್ತ ಸರ್ಜರಿಗಳು ನಡೆದ ಬಗ್ಗೆ ವರದಿಗಳು ಆಗಾಗ ಪತ್ರಿಕೆ, ಟಿವಿಗಳಲ್ಲಿ ಕಾಣುತ್ತೇವೆ. ಅನೇಕ ಬಾರಿ ಈ ವಿಶೇಷಣಗಳು ಆಸ್ಪತ್ರೆ ಪಿ.ಆರ್.ಒ.ಗಳ (ಮಾಧ್ಯಮ ಸಂಪರ್ಕಾಧಿಕಾರಿ) ಸೃಷ್ಟಿ.

ಆಧಾರ ರಹಿತ ಸುದ್ದಿಗಳನ್ನು ಬಿತ್ತರಿಸುವವರು ಹೇರಳವಾಗಿ ಇರುವಾಗ, ಅಂಥದೇ ಸುದ್ದಿಯನ್ನು ಮಾಧ್ಯಮ ಸಂಸ್ಥೆಗಳಿಗೆ ಮುಟ್ಟಿಸಿ ತಮ್ಮ ಬೇಳೆ, ತರಕಾರಿಗಳನ್ನು ಬೇಯಿಸಿಕೊಳ್ಳುವವರೂ ಬೇಕಾದಷ್ಟು ಮಂದಿ ಇದ್ದೇ ಇರ್ತಾರೆ. ರಾಜಕೀಯ ಚಟುವಟಿಕೆಗಳ ಕಾಲದಲ್ಲಂತೂ ಈ ಬೇಳೆ-ತರಕಾರಿ-ಚಿಕನ್ ಬೇಯಿಸುವ ಪ್ರಕ್ರಿಯೆ ಭಾರಿ ಜೋರಾಗಿ ನಡೆಯುತ್ತಿರುತ್ತೆ. ಎದುರುಬಣದ ಪ್ರತಿಕ್ರಿಯೆ ಏನಿರಬಹುದು ಎಂದು ಪರೀಕ್ಷಿಸಲು ಎಲ್ಲಾ ಬಣಗಳಲ್ಲಿ ಸುದ್ದಿ ಪ್ಲಾಂಟ್ ಮಾಡುವ ಮಾಧ್ಯಮ ಸ್ನೇಹಿ ‘ಪ್ಲಾಂಟರ್ಸ್’ ಇರುತ್ತಾರೆ. ಆಯಕಟ್ಟಿನ ಸ್ಥಾನದಲ್ಲಿರುವ ಪತ್ರಕರ್ತರನ್ನು ಸಂಪರ್ಕಿಸಿ ತಮಗೆ ಬೇಕಾದ ಸುದ್ದಿಯನ್ನು ‘ಪ್ಲಾಂಟ್’ ಮಾಡಿಸುತ್ತಾರೆ. 2009ರಲ್ಲಿ ಜೆಡಿಎಸ್ ‘ಒಪ್ಪಂದ’ದ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಹೆಚ್.ಡಿ. ಕುಮಾರಸ್ವಾಮಿ ತಂದೆ ದೇವೇಗೌಡರ ಮಾತು ಕೇಳಿ ‘ವಚನದ್ರೋಹ’ ಮಾಡಿದರು ಎಂಬ ಮಾತು ಆಗ ಪ್ರಚಲಿತದಲ್ಲಿತ್ತು.  ಆಗ ಒಂದು ಸುದ್ದಿ ‘ಪ್ಲಾಂಟ್’ ಆಯಿತು – ಕುಮಾರಸ್ವಾಮಿ ಜೆಡಿಎಸ್ ನಿಂದ ಹೊರ ಬಂದು ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸುತ್ತಾರೆ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಈ ಸುದ್ದಿ ಮುಖಪುಟದ ಲೀಡ್ ಆಗಿ ಪ್ರಕಟವಾಯಿತು. ಆ ನಂತರ ಆ ಸುದ್ದಿ ಸತ್ತು ಹೋಯಿತು.

ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳೆಲ್ಲಾ ನಿಜವೇ ಆಗಿದ್ದರೆ, ಈ ಹೊತ್ತಿಗೆ ಡಿ.ವಿ ಸದಾನಂದಗೌಡರ ಸರಕಾರ ಬಿದ್ದು ಎಷ್ಟೋ ದಿನಗಳಾಗಬೇಕಿತ್ತು. ಮುಖ್ಯಮಂತ್ರಿ ವಿರೋಧಿ ಪಾಳೆಯ ಘೋಷಿಸಿದ ಹಲವು ‘ಡೆಡ್ ಲೈನ್’ಗಳು ಆಗಿ ಹೋದವು. ಕೋರ್ಟ್ ಆವರಣದಲ್ಲಿ ನಡೆದ ಗಲಭೆಯಲ್ಲಿ ಒಂದು ಚಾನೆಲ್ ‘ಮೂರು ಮಂದಿ ಪೊಲೀಸರು’ ಹತರಾದರು ಎಂದು ಸುದ್ದಿ ಮಾಡಿತು. ಅದು ‘ಪ್ಲಾಂಟರ್ಸ್’ ಹಾವಳಿ ಪರಿಣಾಮ. ಕೋರ್ಟ್ ಆವರಣಕ್ಕೆ ಕರ್ತವ್ಯದ ಮೇಲೆ ಹೋಗಿದ್ದ ಪೊಲೀಸರ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ.

ಅಷ್ಟೇ ಅಲ್ಲ, ಮಾಧ್ಯಮಗಳು ತಮ್ಮ ವಿವೇಚನೆ ಕಳೆದುಕೊಂಡಾಗ ಅಮಾಯಕರು ಆರೋಪಿಗಳಾಗುತ್ತಾರೆ, ಅಪರಾಧಿಗಳಾಗುತ್ತಾರೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಹನೀಫ್ ಹೀಗೆ ‘ಭಯೋತ್ಪಾದಕ’ ಪಟ್ಟ ಅನುಭವಿಸಬೇಕಾಯಿತು. ಲಂಡನ್ ನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಆರೋಪಿಯಾಗಿದ್ದ ಕಫೀಲ್, ಆಸ್ಟ್ರೇಲಿಯಾ ನ್ಯಾಯಾಂಗ ಹನೀಫ್ ನನ್ನು ‘ನಿರಪರಾಧಿ’ ಎಂದು ಘೋಷಿಸುವವರೆಗೂ ನಮ್ಮ ಮಾಧ್ಯಮದ ಕಣ್ಣಲ್ಲಿ ಹನೀಫ್ ಭಯೋತ್ಪಾದಕನಾಗಿಯೇ ಉಳಿದುಹೋದರು. ಅವರ ಕುಟುಂಬ ಅನುಭವಿಸಿದ ಯಾತನೆಗೆ ಯಾರೂ ಸಮಾಧಾನ ಹೇಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮೋಟರ್ ಬೈಕ್ ಕದ್ದು ಸಿಕ್ಕಿಬಿದ್ದಿದ್ದ ಇಬ್ಬರು ದಾವಣಗೆರೆ ಪೊಲೀಸರ ವಶದಲ್ಲಿದ್ದರು. ಆ ಸುದ್ದಿ ದಿನೇ ದಿನೇ ನಾನಾ ರೂಪ ಪಡೆಯಿತು. ಬೆಂಗಳೂರಿನಿಂದ ದಾವಣಗೆರೆಗೆ ಧಾವಿಸಿದ ವಿಶೇಷ ವರದಿಗಾರರೊಬ್ಬರು ‘ಬಂಧಿತರು ಉಗ್ರರು, ಅವರು ಅಮೆರಿಕಾ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದರು’ ಎಂದು ಬರೆದರು. ಮೊಟಾರ್ ಬೈಕ್ ಕಳ್ಳರು ಅಂತಹದೊಂದು ‘ಕನಸು’ ಕಂಡಿರಬಹುದು, ಆದರೆ ‘ಸಂಚು’ ಹೂಡಿದ್ದರು ಎಂದರೆ?

ಇಂಟರ್ನೆಟ್ ಪ್ರವಾಹದ ಈ ಕಾಲದಲ್ಲಿ ಸುದ್ದಿ ಎಲ್ಲಿಂದ ಬೇಕಾದರೂ ಬರಬಹುದು. ಕೆಲವೊಮ್ಮೆ ಬ್ಲಾಗ್, ಫೇಸ್‌ಬುಕ್, ಟ್ವಿಟರ್‌ಗಳು ಸುದ್ದಿ ಕೊಡಬಹುದು. ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಮುಖ್ಯ. ‘ಪ್ಲಾಂಟರ್ಸ್’ ಗಳ ಗಾಳಕ್ಕೆ ಸಿಕ್ಕಿಬೀಳಬಾರದು ಎಂದು ನೇರವಾಗಿ ಹೇಳಿಬಿಡಬಹುದು. ಆದರೆ ಪ್ಲಾಂಟರ್ಸ್‌ಗಳ  ಉದ್ದೇಶದಲ್ಲಿ ತಮ್ಮ ಹಿತಾಸಕ್ತಿಯನ್ನೂ ನೋಡಿಕೊಳ್ಳುವ ಪತ್ರಕರ್ತರೂ ಇದ್ದಾರಲ್ಲ!

“ಪ್ರಾಮಾಣಿಕ” ಸುರೇಶ್ ಕುಮಾರರೇ, ‘ತನಿಖೆ’ಗೂ, ‘ಕಾನೂನು ಸಲಹೆ’ಗೂ ವ್ಯತ್ಯಾಸವಿಲ್ಲವೆ?

 – ಶಿವರಾಮ್ ಕೆಳಗೋಟೆ

“ಎರಡು ವರ್ಷಕ್ಕೊಮ್ಮೆ ಒಂದು ಜೊತೆ ಚಪ್ಪಲಿ ಖರೀದಿಸುತ್ತಾರಂತೆ, ಅವರು ಮಂತ್ರಿ ಆಗಿದ್ದರೂ ಅವರ ಪತ್ನಿ ಸಾಮಾನ್ಯ ಪತ್ರಕರ್ತೆಯಾಗಿ ಕೆಲಸ ಮಾಡ್ತಾರಂತೆ, ಅವರ ಮಗಳು ಇವತ್ತಿಗೂ ಬಸ್ ನಲ್ಲೇ ಓಡಾಡ್ತರಂತೆ.”

ಇದಪ್ಪ ಸರಳತೆಯ ಹೊಸ ವ್ಯಾಖ್ಯಾನ. ಸದ್ಯ ಅವರ ಬಳಿ ಎಷ್ಟು ಒಳ ಉಡುಪುಗಳಿವೆ, ಎಷ್ಟು ದಿನಕ್ಕೊಮ್ಮೆ ಹೊಸ ಒಳ ಉಡುಪು ಖರೀದಿಸುತ್ತಾರೆ ಅನ್ನೋದನ್ನ ಈ ಸೋಕಾಲ್ಡ್ ಪ್ರಾಮಾಣಿಕ ಸಚಿವರ ಪಟಾಲಂ ಹೇಳಿಲ್ಲ. ಇವರು ವ್ಯಾಖ್ಯಾನಿಸುವ ಸರಳತೆ ಬಗ್ಗೆ ಒಂದು ಸಿಂಪಲ್ ಪ್ರಶ್ನೆ – ನಾಲ್ಕು ಸದಸ್ಯರ ಒಂದು ಕುಟುಂಬಕ್ಕೆ ಮೂರು ನಿವೇಶನ ಪಡೆಯೋದು ಯಾವ ಸರಳತೆ?

ಕೆಲವರು ಅವರ ದುಡ್ಡು, ಅವರ ಹೂಡಿಕೆ, ನೀವ್ಯಾಕೆ ಪ್ರಶ್ನಿಸುತ್ತೀರಿ ಎನ್ನಬಹುದು, ಆದರೆ, ಎರಡು ವರ್ಷಕ್ಕೊಮ್ಮೆ ಹೊಸ ಚಪ್ಪಲಿ ಖರೀದಿಸುತ್ತಾರೆ ಎಂದು ಹೇಳಿ ಅವರನ್ನು ಸರಳ ಜೀವಿ ಎಂದು ಬಿಂಬಿಸುವವರಿಗೆ, ಈ ಆಡಂಬರ ಮತ್ತು ಆ ವ್ಯವಸ್ಥೆಗಾಗಿ ಈ ನೆಲದ ಕಾನೂನನ್ನು ಮರೆಮಾಚುವುದು ಎಷ್ಟು ಸರಿ?

ಮಂತ್ರಿ ಸುರೇಶ್ ಕುಮಾರ್ ತಮ್ಮ ಸಮರ್ಥನೆಯಲ್ಲಿ ಪದೇ ಪದೇ ಹೇಳುತ್ತಿರುವ ಒಂದು ಮಾತು ತಾವು ಬಿಡಿಎಗೆ ಅಫಿಡವಿಟ್ಟು ಸಲ್ಲಿಸುವ ದಿನದಂದು ತಮ್ಮ ಬಳಿ ಬೇರಾವ ಆಸ್ತಿಯೂ ಇರಲಿಲ್ಲ. ನಿಜ. ಒಪ್ಪಿಕೊಳ್ಳೋಣ. ಆದರೆ ಮಂಜೂರಾದ ನಿವೇಶನ ನಿಮ್ಮ ಹೆಸರಿಗೆ ರಿಜಿಸ್ಟರ್ ಆಗುವ ಹೊತ್ತಿಗೆ ನಿಮ್ಮ ಬಳಿ ಮೂರು ನಿವೇಶನಗಳಿದ್ದವು ಅಲ್ಲವೇ, ಸಚಿವರೇ? ನಿಮ್ಮ ಆತ್ಮಸಾಕ್ಷಿಯನ್ನು ಎಲ್ಲಿ ಅಡ ಇಟ್ಟಿದ್ದಿರಿ? ನೀವು ಮೂಲತಃ ನಿವೇಶನ ಕೇಳಿದ್ದು ತಮ್ಮ ತಾಯಿ ಒಡೆತನದ ಮನೆಯನ್ನು ರಸ್ತೆ ಅಗಲೀಕರಣ ಕಾರಣಕ್ಕೆ ಒಡೆಯಬೇಕಿದೆ ಎಂಬ ಕಾರಣಕ್ಕೆ. ಆ ಮನೆ ನಿಮಗೆ ಹಿಂತಿರುಗಿ ಬಂದಾಗ, ನಿಮ್ಮ ಪ್ರಾಮಾಣಿಕತೆ, ಆತ್ಮಸಾಕ್ಷಿ, ಸರಳತೆ.. ಎಲ್ಲವನ್ನೂ ಮಾರಿಕೊಂಡಿದ್ದಿರಾ?

ಅಷ್ಟೇ ಅಲ್ಲ, ನೆಲಮಂಗಲ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಮ್ಮ ತಾಯಿ ಮತ್ತು ಮಗಳು ಇಬ್ಬರಿಗೂ ನಿವೇಶನ ಮಂಜೂರಾಗುತ್ತದೆ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತರಿಗೆ ಸಲ್ಲಿಸಿರುವ ತಮ್ಮ ದಾಖಲೆಗಳ ಪ್ರಕಾರ ತಾಯಿ ಮತ್ತು ಮಗಳು ಇಬ್ಬರೂ ನಿಮ್ಮ ‘ಅವಲಂಬಿತರು’, ಅರ್ಥಾತ್ ನಿಮ್ಮ ಕುಟುಂಬ ಸದಸ್ಯರು. ಒಂದು ಹೌಸಿಂಗ್ ಕೋಆಪರೇಟಿವ್ ಸೊಸೈಟಿಯಿಂದ ಒಂದೇ ಕುಟುಂಬದ ಇಬ್ಬರಿಗೆ ನಿವೇಶನ ಮಂಜೂರು ಮಾಡುವಂತಿಲ್ಲ. ಹಾಗಾದರೆ ನಿಮ್ಮ ಪ್ರಭಾವದ ಕಾರಣ ನಿಮ್ಮ ಕುಟುಂಬಕ್ಕೆ ಎರಡು ನಿವೇಶನಗಳು ಮಂಜೂರಾಯಿತೆ? ಕಾನೂನು ಸಚಿವರೆ, ನಿಮ್ಮಂತಹ ಬುದ್ಧಿವಂತ, ಜಾಣ, ಪ್ರಾಮಾಣಿಕ ಮಂತ್ರಿಗೆ ಇವೆಲ್ಲಾ ಸೂಕ್ಷ್ಮಗಳು ಅರ್ಥವಾಗಲಿಲ್ಲವೇ?

ಇಂದು ನೀವು ರಾಜೀನಾಮೆ ಹಿಂಪಡೆಯುವುದು ನಿರೀಕ್ಷಿತ. ನೀವು ಮುಖ್ಯಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸಿ, ತಮ್ಮ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ತನಿಖೆಯಾಗಲಿ, ತನಿಖೆಯಲ್ಲಿ ತಾವು ‘ಮುಗ್ಧರು’ ಎಂದು ಸಾಬೀತಾಗುವವರೆಗೂ ಮಂತ್ರಿ ಪದವಿ ಬೇಡ ಎಂದಿದ್ದೀರಿ. ನಿಮ್ಮ ಮುಖ್ಯಮಂತ್ರಿ ಅಡ್ವೊಕೇಟ್ ಜನರಲ್ ರಿಂದ ‘ಕಾನೂನು ಸಲಹೆ’ ಕೇಳಿ ವರದಿ ತರಿಸಿಕೊಂಡಿದ್ದಾರೆ. ತಲೆಯಲ್ಲಿ ಲದ್ದಿ ತುಂಬಿಕೊಂಡಿರುವ ಅಥವಾ ಪೂರ್ವಗ್ರಹ ಪೀಡಿತ ಕೆಲ ಪತ್ರಕರ್ತರು ಈ ಪ್ರಕ್ರಿಯೆಯನ್ನೇ ‘ನಿಮ್ಮ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆ’ ಎಂದು ಬಿಂಬಿಸುತ್ತಿದ್ದಾರೆ. ಕಾನೂನು ಮಂತ್ರಿ ವಿರುದ್ಧ ಬಂದಿರುವ ಆರೋಪಗಳನ್ನು ತನಿಖೆ ಮಾಡಲು ಅಡ್ವೊಕೇಟ್ ಜನರಲ್ ಗೆ ಯಾವುದೇ ಅರ್ಹತೆ ಇಲ್ಲ ಎಂಬ ಸಣ್ಣ ಮಾಹಿತಿಯೂ ಮಾಧ್ಯಮದ ಕೆಲವರಿಗೆ ಗೊತ್ತಿಲ್ಲ. ಮೇಲಾಗಿ, ಅಡ್ವೊಕೇಟ್ ಜನರಲ್ (ಎಜಿ) ಸರಕಾರದ ಪರವಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ವಕೀಲ ಅಷ್ಟೆ, ಅವರದು ತನಿಖೆ ಸಂಸ್ಥೆಯಲ್ಲ.

ಇದೇ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ನಿಮ್ಮನ್ನು ರಾಜೀನಾಮೆ ವಾಪಾಸ್ ಪಡೆಯಿರಿ ಎಂದು ಮನವಿ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರವಾಗುತ್ತಿದೆ. ನೀವು ಒಪ್ಪಿಕೊಂಡರೆ ನಿಮ್ಮ ಬಗ್ಗೆ ಮತ್ತಷ್ಟು ಸಂಶಯಗಳು ಏಳುತ್ತವೆ. ಕಾರಣ ನೀವು ಬಯಸಿದಂತೆ ‘ಇದು ತನಿಖೆಯಲ್ಲ’. ಆ ಕಾರಣ ನೀವು ಇನ್ನೂ ‘ಮುಗ್ಧರಾಗಿ’ ಹೊರಬಂದಿಲ್ಲ. ಇಡೀ ಪ್ರಕರಣ ಒಂದು ಕಣ್ಣೊರೆಸುವ ತಂತ್ರವೆನ್ನುವುದು ವೇದ್ಯವಾಗುತ್ತದೆ. ಅಡ್ವೊಕೆಟ್ ಜನರಲ್ ನೀಡುವ ವರದಿಗಳೆಲ್ಲಾ ಸತ್ಯ, ನಿಷ್ಟಕ್ಷಪಾತ, ಕಾನೂನು ಆಧಾರಿತ ಆಗಿದ್ದೇ ಆದರೆ, ಸರಕಾರ ನ್ಯಾಯಾಲಯಗಳಲ್ಲಿ ಯಾವ ಪ್ರಕರಣದಲ್ಲೂ ಸೋಲಬಾರದಿತ್ತಲ್ಲ.

ಇದೇ ಎಜಿಗಳು ಹಿಂದೆ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಮುಖ್ಯಮಂತ್ರಿ ಪದವಿಯಲ್ಲಿದ್ದಾಗ ಅವರನ್ನೂ ಸಮರ್ಥಿಸಿಕೊಂಡಿದ್ದಾರೆ. ಸರಕಾರಕ್ಕೆ ಬಹುಮತ ಸಾಬೀತು ಪಡಿಸಲು ಅನುಕೂಲವಾಗುವಂತೆ ಏಕಾಏಕಿ ಸದಸ್ಯರನ್ನು ಅನರ್ಹ ಮಾಡಿದ್ದ ವಿಧಾನಸಭಾ ಅಧ್ಯಕ್ಷರನ್ನೂ ಸಮರ್ಥಿಸಿಕೊಂಡಿದ್ದಾರೆ. ಅದೇ ಮುಖ್ಯಮಂತ್ರಿ ಮುಂದೆ ಪದವಿ ಕಳೆದುಕೊಳ್ಳಬೇಕಾಗಿ ಆರೋಪಿ ಪಟ್ಟ ಹೊರಬೇಕಾಯಿತು. ವಿಧಾನಸಭಾ ಅಧ್ಯಕ್ಷರ ಕ್ರಮವನ್ನು ಸುಪ್ರೀಂಕೋರ್ಟ್ ತೀಕ್ಷ್ಣವಾಗಿ ಟೀಕಿಸಿತು. (ನೀವು ಕಾನೂನು ಮಂತ್ರಿಯಾಗಿ ಇವರಿಬ್ಬರನ್ನೂ ಸಮರ್ಥಿಸಿಕೊಂಡೇ ಬಂದಿರಿ.) ಅಂತಹ ಹುದ್ದೆಯಲ್ಲಿರುವವರಿಂದ ನಿಮಗೆ ಸಮರ್ಥನೆ ಬೇಕಾ?

ನಿಮಗೆ ಮಂತ್ರಿಯಾಗಿ ಮುಂದುವರಿಯಲು ಆಸಕ್ತಿ ಇದ್ದರೆ, ರಾಜೀನಾಮೆ ಹಿಂಪಡೆಯಿರಿ. ಆದರೆ ‘ನಾನು ತನಿಖೆಯಿಂದ ನಿರಪರಾಧಿ ಎಂದು ಸಾಬೀತಾಗಿದ್ದೇನೆ, ಹಾಗಾಗಿ ರಾಜೀನಾಮೆ ಪಡೆಯುತ್ತೇನೆ’ ಎಂದು ಘೋಷಿಸಬೇಡಿ. ಆ ಮೂಲಕ ಜನರನ್ನು ಮತ್ತಷ್ಟು ಮೂರ್ಖರನ್ನಾಗಿಸುವ ಯತ್ನಬೇಡ.