Category Archives: ಸದಾನಂದ ಲಕ್ಷ್ಮೀಪುರ

ಸ್ವಾತಂತ್ರ್ಯೋತ್ಸವಕ್ಕೆಂದು ಬಂದು ದಾಸ್ಯ ಮೆರೆದವರು

– ಸದಾನಂದ ಲಕ್ಷ್ಮೀಪುರ

“ಇಂದು ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿರುವ ಪರಿಹಾರ ಒಂದೇ. ನಮ್ಮ ಎಲ್ಲಾ ಹಿಂದು ಯುವಕರು ಮನಸ್ಸು ಮಾಡಬೇಕು. ಕನಿಷ್ಟ ಮೂರು ಮಕ್ಕಳನ್ನು ಪಡೆಯಬೇಕು. ಎಲ್ಲಿ ಕೈ ಎತ್ತಿ..ನಿಮ್ಮಲ್ಲಿ ಎಷ್ಟು ಜನ ನನ್ನ ಮಾತಿನಂತೆ ನಡೆದುಕೊಳ್ಳುತ್ತೀರಿ..” ಎಂದು ಕಲ್ಲಡ್ಕ ಪ್ರಭಾಕರ ಭಟ್ ಕೇಳುತ್ತಿದ್ದರೆ, ಧರ್ಮದ ಅಮಲಿನದ್ದ ಅನೇಕರು ಹಾಗೂ ಧರ್ಮದ ಜೊತೆಗೆ ಮದ್ಯದ ಮತ್ತಿನೊಂದಿಗೆ ಅಲ್ಲಿ ಹಾಜರಿದ್ದ ಕೆಲವರು ಕೈ ಎತ್ತಿ, ಓ… ಎಂದು ಕೂಗಿ ಸಮ್ಮತಿ ಸೂಚಿಸಿದರು.

ಆ ಕಾರ್ಯಕ್ರಮ ನಡೆದದ್ದು ಸ್ವಾತಂತ್ರೋತ್ಸವ ಹಿಂದಿನ ದಿನ ಮಧ್ಯರಾತ್ರಿ. ಆ ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಯುವಕರೇ. RSSಕೋಮುವಾದಿ ವ್ಯಕ್ತಿಯೊಬ್ಬನ ಮಾತಿಗೆ ಮಾರುಹೋಗಿ ಕೈ ಎತ್ತುವ ಮುನ್ನ, ಇಂತಹದೊಂದು ಸಂಗತಿಗೆ ತನ್ನ ಸಂಗಾತಿಯ ಸಮ್ಮತಿಯೂ ಅಗತ್ಯ ಎಂಬ ಕನಿಷ್ಟ ಪ್ರಜ್ಞೆ ಇದ್ದಿದ್ದರೆ, ಅಲ್ಲಿ ಕೈ ಎತ್ತಿ ಠೇಂಕರಿಸುತ್ತಿರಲಿಲ್ಲ. Of course, ಆ ಭಾಷಣಕಾರ ಪ್ರತಿನಿಧಿಸುವ ಸಂಸ್ಥೆಗಾಗಲಿ, ಈ ಹುಡುಗರ ತಲೆತುಂಬಿಕೊಂಡಿರುವ ಆಲೋಚನೆಗಳಲ್ಲಾಗಲಿ ಮಹಿಳೆಗೆ ಸ್ವತಂತ್ರ ಆಲೋಚನೆಗಳಿರುತ್ತವೆ, ಕೇಳಿಸಿಕೊಳ್ಳಬೇಕು, ಗೌರವಿಸಬೇಕು ಎಂಬ ತಿಳವಳಿಕೆ ಇದ್ದರೆ ತಾನೆ?

ಬರೋಬ್ಬರಿ ಒಂದು ಗಂಟೆ ಮೇಲೆ ಎಂಟು ನಿಮಿಷ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ತನ್ನ ಭಾಷಣದುದ್ದಕ್ಕೂ ಕೆಂಡಕಾರಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಹಾಗೂ ಮುಸಲ್ಮಾನರ ವಿರುದ್ಧ. ಕಾರ್ಯಕ್ರಮದ ಹೆಸರ ಅಖಂಡ ಭಾರತ ಸಂಕಲ್ಪ ದಿನ. ಆದರೆ ಮಾತನಾಡಿದ್ದು ಮಾತ್ರ ಜನರನ್ನು ಧರ್ಮ, ಮತದ ಆಧಾರದ ಮೇಲೆ ಒಡೆಯುವ ಬಗ್ಗೆ. ಅದನ್ನು ವಿಪರ್ಯಾಸ ಅನ್ನಬೇಕೋ, ಮಾತನಾಡುವವರನ್ನು ಹುಚ್ಚರೆನ್ನಬೇಕೋ..ಗೊತ್ತಾಗುತ್ತಿಲ್ಲ. “ಜಗತ್ತಿನಲ್ಲಿ ಧರ್ಮ ಅಂತ ಇರೋದು ಹಿಂದು ಮಾತ್ರ. ಉಳಿದವೆಲ್ಲಾ ಮತಗಳು. ಜಗತ್ತಿನ ಎಲ್ಲರನ್ನೂ ಒಪ್ಪಿಕೊಳ್ಳುವ ಧರ್ಮ ಹಿಂದೂ ಮಾತ್ರ” ಎಂದು ಮಾತನಾಡುತ್ತಲೇ, ಮುಸ್ಲಿಂರ ವಿರುದ್ಧ, ಕ್ರಿಶ್ಚಿಯನ್ನರ ವಿರುದ್ಧ ಕಿಡಿಕಾರುತ್ತಾರೆ. ಇಡೀ ಭೂಮಿಯೇ ಒಂದು ಕುಟುಂಬ ಎಂದು ಹೇಳುವುದಾದರೆ, ಎದುರುಮನೆ ಹುಡುಗ, ಪಕ್ಕದ ಮನೆಯ ಹುಡುಗಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದರೆ, ಹಿಡಿದು ನಿಲ್ಲಿಸಿ ಹೊಡೆಯುತ್ತಾರೆ. population-explosionಇಂತಹ ಮಹಾನ್ ನಾಯಕರು ಅಂತಹ ನಡವಳಿಕೆಗಳನ್ನು ಸಭೆಯಲ್ಲಿ ನಿಂತು ಸಮರ್ಥಿಸಿಕೊಳ್ಳುತ್ತಾರೆ. ಆದರೂ ಮಾತನಾಡುವಾಗ ವಸುದೈವ ಕುಟುಂಬಕಂ! ಕೇಕೆ ಹಾಕುವರಿಗೆ ಇಂತಹ ಸಣ್ಣಪುಟ್ಟ ವೈರುಧ್ಯಗಳು ಅರ್ಥವಾಗುವುದಿಲ್ಲವೆ?

ಈ ಭಟ್ ಮಹಾಶಯ ಹೇಳಿದ ಇನ್ನೊಂದು ಮಾತು – ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ಮದುವೆಯಾಗಿ ಡಜನ್ ಗಟ್ಟಲೆ ಮಕ್ಕಳು ಮಾಡುವುದೇ ಅವರ ಉದ್ದೇಶ. ಈ ಮಾತನ್ನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೂ ಹೇಳುವುದನ್ನು ಬಿಡೋಲ್ಲ. ಅಷ್ಟೇ ಅಲ್ಲ, ಒಂದು ಮಾತು ಮುಂದೆ ಹೋಗಿ, ‘ನೀವು ಹಾಗೆ ಮಾಡುವುದು ಯಾವಾಗ..?’ ಎಂದು ಹಿಂದೂ ಯುವಕರಿಗೆ ಪ್ರಚೋದನೆ ನೀಡುತ್ತಾರೆ.

ಮಹಾತ್ಮ ಗಾಂಧಿ ದೇಶ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕೆಂದು ಬಯಸಿದ್ದರಂತೆ. ಅದು ಆಗಲಿಲ್ಲ. ರಾಮರಾಜ್ಯದ ಬದಲು, ಸಂವಿಧಾನ ಬದ್ಧ ಪ್ರಜಾರಾಜ್ಯ ಬಂದದ್ದು ಇಡೀ ದೇಶದ ಅಭಿವೃದ್ಧಿಗೆ ತೊಡಕಂತೆ. ಇಂತಹ ಜನವಿರೋಧಿ ಮಾತುಗಳಿಗೂ ಚಪ್ಪಾಳೆ ಹಾಕುವವರಿದ್ದಾರಲ್ಲ ಎಂಬುದೇ ಆಘಾತಕಾರಿ. ಯಾವುದೇ ರಾಜ ಆಗಲಿ, ಅಲ್ಲಿ ಅಧಿಕಾರ ತಂದೆಯಿಂದ ಮಕ್ಕಳಿಗೆ ರವಾನೆಯಾಗುತ್ತದೆ. india-flagರಾಮ ಆದರೂ ಅಷ್ಟೆ, ಕೃಷ್ಣ ಆದರೂ ಅಷ್ಟೆ. ಬಡವನಿಗೆ, ನಿರ್ಗತಿಕನಿಗೆ ತನ್ನ ಆಳುವವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲು ಸಾಧ್ಯವೇ? ಹೀಗೆ ಸ್ವಾತಂತ್ರ್ಯದ ಮೂಲ ತತ್ತ್ವಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಚಪ್ಪಾಳೆ ಹಾಕುವುದೆಂದರೆ, ನಮ್ಮ ಅಸ್ಥಿತ್ವವನ್ನು ಕಡೆಗಣಿಸಿದಂತೆ.

ಸ್ವತಂತ್ರ ಆಲೋಚನೆಯಿಂದ ತಪ್ಪು-ಸರಿಗಳ ವ್ಯತ್ಯಾಸ ಅರಿಯಲು ಶಿಕ್ಷಣ ಅಗತ್ಯ. ಆದರೆ ಸೋಕಾಲ್ಡ್ ‘ಶಿಕ್ಷಿತ’ ರೇ ಚಪ್ಪಾಳೆ ಹೊಡೆವರಲ್ಲಿ, ಮೂರು ಮಕ್ಕಳನ್ನು ಮಾಡಿಕೊಳ್ಳಲು ಸಮ್ಮತಿ ಸೂಚಿಸಿದವರಲ್ಲಿ ಅನೇಕರಿದ್ದರು.

“ಕಳ್ಳ” ಪೊಲೀಸರು!

– ಸದಾನಂದ

ಅವರೊಬ್ಬ ಎಸ್.ಪಿ ದರ್ಜೆ ಅಧಿಕಾರಿ. ಒಂದು ಲಕ್ಷದ ಲಂಚ ಬರುವುದಿದೆ ಎಂದಾಕ್ಷಣ ಖುದ್ದು ಅಧಿಕೃತ ಕಾರಿನಲ್ಲಿ, ಯೂನಿಫಾರಂ ನಲ್ಲಿಯೇ ಬಂದು ವ್ಯವಹಾರ ಕುದುರಿಸುತ್ತಾರೆ. ಅವರಿಗೆ ಸಹಚರರಾಗಿ ಇಬ್ಬರು ಪೇದೆಗಳು. ಇದು ಇತ್ತೀಚೆಗೆ ಸುವರ್ಣ ನ್ಯೂಸ್ ವಾಹಿನಿ ಪ್ರಸಾರ ಮಾಡಿದ ಕುಟುಕು ಕಾರ್ಯಾಚರಣೆ. ಪರಿಣಾಮ ಆ policeಮೂರೂ ಮಂದಿ ಅಮಾನತ್ತಾಗಿದ್ದಾರೆ. ಸತ್ಯವೆಂದರೆ, ಅವರು ಕೆಮರಾ ಕಣ್ಣಿಗೆ ಬಿದ್ದು ಅಮಾನತ್ತಾದರು. ಇಂತಹ ದಂಧೆ ಮಾಡುತ್ತಿರುವವರ ಸಂಖ್ಯೆ ಈ ಪೊಲೀಸ್ ಇಲಾಖೆಯಲ್ಲಿ ಬಹಳ ದೊಡ್ಡದೇ ಇದೆ. ಅವರೆಲ್ಲರೂ ಕೆಮರಾದಲ್ಲಿ ಸಿಕ್ಕಿಬಿದ್ದಿಲ್ಲ ಅಷ್ಟೆ.

ಕೆಲ ತಿಂಗಳುಗಳ ಹಿಂದೆ, ಮೈಸೂರಿನ ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರನ್ನು ಇಳಿಸಿ ಬರೋಬ್ಬರಿ 20 ಕೋಟಿ ರೂಗಳನ್ನು ವಶಪಡಿಸಿಕೊಂಡು, ಎರಡು ಕೋಟಿಗಳ ಲೆಕ್ಕ ಕೊಟ್ಟವರು ಇದೇ ಪೊಲೀಸರು. ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಐಜಿಪಿ ದರ್ಜೆ ಅಧಿಕಾರಿಯ ಗನ್ ಮ್ಯಾನ್. ಒಂದು ಮೂಲದ ಪ್ರಕಾರ, ಅಷ್ಟು ದೊಡ್ಡ ಮೊತ್ತದ ಹಣ ಬಸ್ ನಲ್ಲಿ ರವಾನೆಯಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ಆ ಹಿರಿಯ ಅಧಿಕಾರಿಗೆ. ಅವರು ತಮ್ಮ ಸಹಚರರನ್ನು ಕಾರ್ಯಾಚರಣೆಗೆ ನಿಲ್ಲಿಸಿದರು. ಅಪರಾತ್ರಿಯಲ್ಲಿ ಮಲಗಿದ್ದ ಮತ್ತೊಬ್ಬ ಅಧಿಕಾರಿಯನ್ನು ಎಬ್ಬಿಸಿಕೊಂಡು ರಸ್ತೆಗೆ ಹೋಗಿ ನಿಂತು ಬಸ್ ಗೆ ಕೈ ಅಡ್ಡ ಹಾಕಿದರು. ಪ್ರಕರಣದಲ್ಲಿ ಸಣ್ಣವರು ಮಾತ್ರ ಅಮಾನತ್ತಾಗಿದ್ದಾರೆ.

ಇದೇ ಸಂದರ್ಭದಲ್ಲಿ ಇನ್ನೊಂದು ಘಟನೆ ಹೇಳಬೇಕು. ಅದು ಎಲ್ಲಿಯೂ ವರದಿಯಾದಂತಿಲ್ಲ. ಎಸ್.ಪಿ ದರ್ಜೆಯ ಅಧಿಕಾರಿಯೊಬ್ಬರು ತಮ್ಮ ಹಿಂದಿನ ಹುದ್ದೆಯಲ್ಲಿ ಪೆಟ್ರೋಲ್ ಕಳ್ಳರ ಜೊತೆ ವ್ಯವಹಾರ ಹೊಂದಿದ್ದರು ಎಂಬ ಆರೋಪ ಇತ್ತು. ತನಿಖೆಯನ್ನು ಸಿಐಡಿಗೆ ನಡೆಸಿತು. ಅಧಿಕಾರಿಯ ವಿರುದ್ಧ ಸಾಕ್ಷ್ಯಗಳಿದ್ದವು. ನಿವೃತ್ತಿ ಅಂಚಿನಲ್ಲಿರುವ ಅವರನ್ನು ಇದೇ ಸರಕಾರ ರಕ್ಷಿಸಿತು. ಅಧಿಕಾರಿ ಸಂಕಟದಿಂದ ಹೊರಬಂದಿದ್ದು ಒಂದು ವಿಶೇಷ. ಪೆಟ್ರೋಲ್ ಕಂಪನಿಗಾದ ನಷ್ಟ ತುಂಬಿಕೊಟ್ಟರೆ, ಕಂಪನಿಯವರು ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂಬ ಪ್ರಸ್ತಾಪ ಮುಂದಿಟ್ಟರು. ಅಧಿಕಾರಿ ತನ್ನ ಒಡೆತನದಲ್ಲಿದ್ದ ಜಮೀನಲ್ಲಿ ಒಂದಿಷ್ಟನ್ನು ಮಾರಿ, ಕಂಪನಿಗೆ ಕಟ್ಟಿ ಬಚಾವಾದರಂತೆ!! ದುಡ್ಡಿದ್ದವರಿಗೆ ಜೈಲು ವಾಸ ತಪ್ಪಿಸಿಕೊಳ್ಳಲು ನಾpolice-mainನಾ ದಾರಿಗಳಿವೆ.

ಇಂತಹ ಪೊಲೀಸರು ಅನೇಕ ಮಂದಿ ಇದ್ದಾರೆ. ಎಲ್ಲರೂ ಹೀಗೆ ಎಂದು ಯಾವ ಕ್ಷೇತ್ರದ ಬಗ್ಗೆಯೂ ಹೇಳಲಾಗುವುದಿಲ್ಲ. ಮೊನ್ನೆ ಮೊನ್ನೆ ಒಂದು ಜಿಲ್ಲೆಯ ಎಸ್.ಪಿ ಒಬ್ಬರು ಒಂದಂಕಿ ಲಾಟರಿ ಅಡ್ಡಾ ಒಂದಕ್ಕೆ ದಾಳಿ ಮಾಡಿದಾಗ, ದಂಧೆ ನಡೆಸುತ್ತಿದ್ದವರು ಪೊಲೀಸರಿಗೆ ಆಫರ್ ಮಾಡಿದ್ದು ಬರೋಬ್ಬರಿ ಒಂದು ಕೋಟಿ ರೂ. ಆ ಅಧಿಕಾರಿ ನಿಯತ್ತಿನವರಾಗಿದ್ದ ಕಾರಣ, ದುಡ್ಡು ಮುಟ್ಟದೆ ಬಂಧಿಸಿ ಕರೆದು ಕೊಂಡು ಬಂದರು.

ಆದರೆ, ಸರಕಾರ, ಗೃಹ ಇಲಾಖೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಏನನ್ನೂ ಮಾಡಿದಂತಿಲ್ಲ. ಅಲೋಕ್ ಕುಮಾರ್, ಡಿಸಿಪಿ ಹನುಮಂತರಾಯಪ್ಪ ಅಮಾನತ್ತಾದರೆ, ಇಲಾಖೆ ಸುಧಾರಿಸುವುದಿಲ್ಲ. ಎಲ್ಲಿಯವರೆಗೆ ಪಿ.ಎಸ್.ಐ, ಸಿ.ಪಿ.ಐ. ಡಿವೈಎಸ್ಪಿ ಹಾಗೂ ಮೇಲಿನ ಹುದ್ದೆಗಳಿಗೆ ರಾಜಕಾರಣಿಗಳು ಲಾಬಿ ಮಾಡುವುದನ್ನು ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ. ಬೇರೆ ಯಾವ ಇಲಾಖೆಯಲ್ಲೂ ಇಲ್ಲದ ಕೆಲ ವಿಚಿತ್ರ ಸಂಪ್ರದಾಯಗಳು ಈ ಇಲಾಖೆಯಲ್ಲಿವೆ. ಮೇಲಿನ ಅಧಿಕಾರಿಯ ಕುಟುಂಬದವರು ಶಾಪಿಂಗ್ ಗೆಂದು ಮಾರ್ಕೆಟ್ ಗೆ ಹೊರಟರೆ, ಆ ಏರಿಯಾದ ಪಿ.ಎಸ್.ಐ ಅಥವಾ ಸಿಪಿಐ ಶಾಪಿಂಗ್ ಬಿಲ್ ಕ್ಲಿಯರ್ ಮಾಡಿದ ಉದಾಹರಣೆಗಳಿವೆ. ಹಿರಿಯ ಅಧಿಕಾರಿಯೊಬ್ಬರು ಖಾಸಗಿ ಭೇಟಿಗೆಂದು ಬಂದು ಪಂಚತಾರಾ ಹೊಟೇಲ್ ನಲ್ಲಿ ಉಳಿದರೆ, ಅದರ ಖರ್ಚು ಸ್ಥಳೀಯ ಅಧಿಕಾರಿಯ ಜವಾಬ್ದಾರಿ. ಇಂತಹ ಕೆಲ ನಡವಳಿಕೆಗಳಿಂದಾಗಿ, ಪೊಲೀಸ್ ಇಲಾಖೆಯಲ್ಲಿ ನಿಯತ್ತಿನಿಂದ ಇರುವುದು ಕೇವಲ ಮಿಥ್ ಎಂಬಂತಾಗಿದೆ.

ಅಲ್ಲಲ್ಲಿ ಜನಸ್ನೇಹಿ ಪೊಲೀಸ್ ಎಂಬ ಬರಹಗಳಿರುವ ಬೋರ್ಡ್ ಗಳನ್ನು ಕಾಣುತ್ತೇವೆ. ಆದರೆ ಜನಸ್ನೇಹಿ ಪೊಲೀಸ್ ಎನ್ನುವುದು ವಾಸ್ತವವಾಗಿ ಎಲ್ಲಿ ಎಂಬುದು ಹುಡುಕಬೇಕಿದೆ. ದೂರು ಕೊಡಲು ಬಂದವರನ್ನು ಸೌಜನ್ಯದಿಂದ ಮಾತನಾಡಿಸುವ ಗುಣವಾಗಲಿ, ಅವರ ದೂರನ್ನು ಮೊದಲು ಕೇಳಿಸಿಕೊಳ್ಳುವ ಸಂಯಮವಾಗಲಿ ಇಲ್ಲ. ಮೈತುಂಬ ಭ್ರಷ್ಟಾಚಾರದ ಆರೋಪ ಹೊತ್ತು ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದವನ ಮೇಲೆ ಲಾಟಿ ಎತ್ತಲು ಅದ್ಹೇಗೆ ಮನಸ್ಸು ಬರುತ್ತೋ..? ಗೃಹ ಸಚಿವರು, ತಮ್ಮ ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ, ಇತ್ತ ಕಡೆ ಗಮನ ಹರಿಸುತ್ತಾರ?

ಕಾಣದಾಗಿದೆ ರೈತಪರ ಕಾಳಜಿ, ಹುಡುಕಿಕೊಡಿ ಪ್ಲೀಜ್

– ಸದಾನಂದ ಲಕ್ಷ್ಮೀಪುರ

ಹಾಸನದಲ್ಲಿ ರೈತಪರ ಹೋರಾಟಗಾರರ ಬಂಧನ:

ಅಡವಿ ಬಂಟೇನಹಳ್ಳಿ ಹಾಸನ ತಾಲೂಕಿನ ಗ್ರಾಮ. ಹೆಸರೇ ಹೇಳುವಂತೆ ಅಡವಿಯೇ ಆ ಊರು. ಹತ್ತಾರು ಊರುಗಳಿಂದ ಐವತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದ ಭೂರಹಿತ ಕೃಷಿ ಕಾರ್ಮಿಕರು ಕಟ್ಟಿಕೊಂಡ ಊರದು. ಸೀಗೆಗುಡ್ಡ ಎಂಬ ಎತ್ತರದ ಪ್ರದೇಶದ ಸುತ್ತಲಲ್ಲಿರುವ ಭೂಮಿಯನ್ನು ಸಮತಟ್ಟು ಮಾಡಿಕೊಂಡು ಬಹಳ ಕಾಲದಿಂದ ಕೃಷಿ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಕರ್ನಾಟಕ ಭೂ ಸುಧಾರಣೆ ಕಾಯಿದೆಯಡಿ ಅದೇ ಭೂಮಿಯ ಮಂಜೂರಿಗಾಗಿ ಅರ್ಜಿ ಹಾಕಿದ್ದಾರೆ.HRN ಬೆರಳೆಣಿಕೆಯಷ್ಟು ಜನರಿಗೆ ಮಂಜೂರೂ ಆಗಿದೆ, ಮತ್ತೆ ಕೆಲವರ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಈಗ್ಗೆ ನಾಲ್ಕು ದಿನಗಳ ಹಿಂದೆ (ದಿನಾಂಕ ಫೆ.12) ಅರಣ್ಯ ಇಲಾಖೆಯ ಸಿಬ್ಬಂದಿ ಆ ಭೂ ಪ್ರದೇಶ ಕಾಯ್ದಿಟ್ಟ ಅರಣ್ಯ ಎಂದು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಒಂದು ದಿನದ ಮಟ್ಟಿಗೆ ಅವರ ಕಾರ್ಯಾಚರಣೆ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಮಾರನೆಯ ದಿನವೂ ಅವರು ಕಾರ್ಯಾಚರಣೆ ಮುಂದುವರಿಸಿದರು. ಆ ಹೊತ್ತಿಗೆ ರೈತರು ಸಂಘಟಿತರಾಗಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಎಚ್.ಆರ್.ನವೀನ್ ಕುಮಾರ್, ಎಂ.ಜಿ. ಪೃಥ್ವಿ, ರಾಘವೇಂದ್ರ ಮತ್ತಿತರರ ನೇತೃತ್ವದಲ್ಲಿ ಸೀಗೆಗುಡ್ಡದ ತಪ್ಪಲಲ್ಲಿ ಧರಣಿ ಕೂತರು. ಅರಣ್ಯಾಧಿಕಾರಿಗಳು ತಮ್ಮ ಕಾರ್ಯ ಮುಂದುವರಿಸಲಾಗದೆ, ಪೊಲೀಸರನ್ನು ಕರೆಸಿದರು. ಪೊಲೀಸ್ ಮೀಸಲು ಪಡೆ ಸ್ಥಳಕ್ಕೆ ಧಾವಿಸಿತು. ರೈತರು ಜೆಸಿಬಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡಿದರು.

ಕಳೆದ 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದೇವೆ. ಹೀಗೆ ಏಕಾಏಕಿ ನುಗ್ಗಿ ಎತ್ತಂಗಡಿ ಮಾಡಿಸುವುದೆಂದರೆ ಹೇಗೆ, ಎನ್ನುವುದು ಅವರ ವಾದ. ಅಷ್ಟಲ್ಲದೆ ತೆಂಗಿನ ತೋಟದ ಮಧ್ಯೆ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ರೈತನ ಆಕ್ರೋಷಕ್ಕೆ ಕಿಡಿ ಹತ್ತಿಸಿದರು.

ಅಧಿಕಾರಿಗಳು ತಮ್ಮ ಕಾರ್ಯಾಚರಣೆಗೂ ಮುನ್ನ ಯಾರಿಗೂ ನೊಟೀಸ್ ನೀಡಿಲ್ಲ. ಕೇಳಿದರೆ, ನೊಟೀಸ್ ನೀಡುವ ಪ್ರಮೇಯವೇ ಸೃಷ್ಟಿಯಾಗುವುದಿಲ್ಲ, ಏಕೆಂದರೆ ಇದು ಅರಣ್ಯ ಭೂಮಿ. 1940 ರಷ್ಟು ಹಿಂದೆಯೇ ಕಾಯ್ದಿಟ್ಟ ಅರಣ್ಯ ಎಂದು ಘೋಷಿಸಿಯಾಗಿದೆ. ಮುಲಾಜಿಲ್ಲದೆ ಎತ್ತಂಗಡಿ ಮಾಡಿಸದೇ ಬೇರೆ ದಾರಿ ಇಲ್ಲ ಎನ್ನುವುದು ಅಧಿಕಾರಿಗಳ ವಾದ. ಆದರೆ ಮಂಜೂರಾದ ಬಗ್ಗೆ ಕೆಲವರ ಬಳಿ ದಾಖಲೆಗಳಿವೆ. ಅವುಗಳನ್ನು ಪರಿಶೀಲಿಸಿ. ಮೇಲಾಗಿ ಸರಕಾರದ ನೇತಾರರು ಆಗಾಗ ಹೇಳುತ್ತಾ ಬಂದಿರುವುದೆಂದರೆ, ಐದು ಎಕರೆಗಿಂತ ಕಡಿಮೆ ಕಂದಾಯ ಭೂಮಿ ಒತ್ತುವರಿ ಮಾಡಿರುವವರನ್ನು ಹಾಗೂ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರನ್ನು ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕೈ ಬಿಡಲಾಗುವುದು. ಇದೇ ಅಭಿಪ್ರಾಯವನ್ನು ಕರ್ನಾಟಕ ಹೈಕೋರ್ಟ್ ಕೂಡ ವ್ಯಕ್ತಪಡಿಸಿದೆ. ಹೀಗಿರುವಾಗ ಒತ್ತುವರಿ ತೆರವು ಮಾಡಬಾರದು ಎನ್ನುವುದು ಪ್ರತಿಭಟನಾಕಾರರ ವಾದ.

ಆರೋಪಗಳು:
ಫೆ.13 ರ ಸಂಜೆ ಹೊತ್ತಿಗೆ ಎಲ್ಲವೂ ಶಾಂತವಾಯ್ತು. ರೈತರ ಬಳಿ ಇರುವ ದಾಖಲೆಯನ್ನು ಪರಿಶೀಲಸಿ ಮುಂದಿನ ಕ್ರಮ ತೆಗೆದುಕೊಳ್ಳುವುದು ಎಂದು ಅಧಿಕಾರಿಗಳು ಹಿಂದೆ ನಡೆದರು. ಕೆಪಿಆರ್‌ಎಸ್ ನೇತಾರರೂ ಹಾಸನಕ್ಕೆ ಹಿಂತಿರುಗಿದರು. ನಗರದ ಸಿಐಟಿಯು ಕಚೇರಿಯಲ್ಲಿ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ನವೀನ್, ಪೃಥ್ವಿ, ರಾಘವೇಂದ್ರ ಇತರರು ಸಭೆ ನಡೆಸುತ್ತಿರುವಾಗ, ಅಂದರೆ ರಾತ್ರಿ 9 ರ ಹೊತ್ತಿಗೆ, ಧಾವಿಸಿದ ಪೊಲೀಸರು ಮೂವರನ್ನೂ ಬಂಧಿಸಿದರು. ಯಾಕೆ…ಏನು? ಎಂದು ವಿಚಾರಿಸಿದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾಗಿ ಬಂಧನ ಆಗಲೇಬೇಕು ಎನ್ನುವುದು ಪೊಲೀಸರ ವಾದ. ಆ ಹೊತ್ತಿಗೆ ವಿರೂಪಾಕ್ಷ ಎನ್ನುವ ಮತ್ತೋರ್ವ ಪ್ರತಿಭಟನಾಕಾರರನ್ನು ಬಂಧಿಸಿಯಾಗಿತ್ತು.

ಬಂಧನವಾಗಿದ್ದು ಶುಕ್ರವಾರ ರಾತ್ರಿ. ನಂತರ ಶನಿವಾರ ರಜೆ (ಎರಡನೇ ಶನಿವಾರ), ಭಾನುವಾರವೂ ರಜೆ. ಸೋಮವಾರ ಒಂದು ದಿನ ಕೋರ್ಟ್-ಕಚೇರಿಗಳು ತೆರೆದಿರುತ್ತವೆ, ಮತ್ತೆ ಮಂಗಳವಾರ ಶಿವರಾತ್ರಿ ರಜೆ. ಚಳವಳಿಯ ಸಂಗಾತಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಲು ಯಾರಿಗೂ ಕನಿಷ್ಟ ಮೂರ್ನಾಲ್ಕು ದಿನಗಳ ಮಟ್ಟಿಗಾದರೂ ಸಾಧ್ಯವಾಗಬಾರದು ಎನ್ನುವುದು ಪೊಲೀಸರ ಸಂಚು! ಇಲ್ಲವಾದರೆ ಶುಕ್ರವಾರ ರಾತ್ರಿ ಬಂಧಿಸಿ, ಅದೇ ದಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ತಳ್ಳುವಂತಹದ್ದೇನಿತ್ತು..? ಮುಖ್ಯವಾಗಿ ಇವರೆಲ್ಲರೂ ಪ್ರತಿದಿನ ಒಂದಲ್ಲ ಒಂದು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವರು. ಹಿಂದಿನ ದಿನದ ತನಕವೂ ಅಂಗನವಾಡಿ ನೌಕರರ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಾಗೂ ಪೊಲೀಸರ ಬಂಧನಕ್ಕೆ ಹೆದರಿ ತಲೆಮರೆಸಿಕೊಳ್ಳಲು ಅವರೇನು ಕಳ್ಳತನವನ್ನೋ, ಸುಲಿಗೆಯನ್ನೋ ಮಾಡಿರಲಿಲ್ಲವಲ್ಲ. ಹಾಗಿದ್ದೂ ಅವರನ್ನು ರಾತ್ರೋರಾತ್ರಿ ಬಂಧಿಸುವ ತರಾತುರಿ ಪ್ರದರ್ಶನ ಯಾಕೆ..? ಹಾಗೂ ಪೊಲೀಸರು ಇವರ ವಿರುದ್ಧ ದಾಖಲಿಸಿಕೊಂಡಿರುವ ದೂರಿನಲ್ಲಿ ನಮೂದಿಸಿರುವ ಆರೋಪಗಳು ಎಂಥವು ಒಮ್ಮೆ ನೋಡಿ. ಅಕ್ರಮ ಕೂಟ (ಐಪಿಸಿ ಸೆ.143 ), ಗಲಭೆ (147), ಮಾರಕಾಸ್ತ್ರಗಳಿಂದ ಗಲಭೆ (147), ಅಕ್ರಮ ಬಂಧನ (341), ಶಾಂತಿ ಭಂಗಕ್ಕೆ ಪ್ರಚೋದನೆ (504) ಹಾಗೂ ಸರಕಾರಿ ನೌಕರರು ತಮ್ಮ ಕರ್ತವ್ಯ ಮಾಡದಂತೆ ತಡೆ (353).IMG-20150213-WA0014

ಜನಪರ, ರೈತಪರ ಹೋರಾಡುವವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನವಿದು. ಸಿದ್ದರಾಮಯ್ಯನವರೇ, ಕೇಳಿಸಿಕೊಳ್ಳಿ ರಾಜ್ಯದ ರೈತರ ಹಿತ ಕಾಯುತ್ತೇನೆಂದು ಅಧಿಕಾರಕ್ಕೆ ಬಂದ ನೀವು, ಆ ಕೆಲಸ ಮರೆತು ನಿದ್ರೆ ಹೋಗಿರುವಾಗ, ಆ ಬಗ್ಗೆ ಹೋರಾಟಕ್ಕೆ ಇಳಿದವರು ಈ ಚಳವಳಿಗಾರರು. ನೀವು ಸಂವಿಧಾನಬದ್ಧವಾಗಿ ಮಾಡಬೇಕಿದ್ದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಮೂವರಲ್ಲಿ ಯಾರಿಗೂ, ಸೀಗೆಗುಡ್ಡದ ಬುಡದಲ್ಲಿ ಒಂದು ಇಂಚಿನಷ್ಟು ಭೂಮಿಯ ಅಗತ್ಯ ಇಲ್ಲ. ಅಂತಹವರನ್ನು ಬಂಧಿಸಿ, ಜೈಲಿಗಟ್ಟಿ ನೀವು ಸಾಧಿಸುವುದೇನು?

ಅಧಿಕಾರಿಗೆ ‘ಕರುಣೆ’:
ಅಷ್ಟಕ್ಕೂ, ಅರಣ್ಯ ಇಲಾಖೆ ಒತ್ತುವರಿ ತೆರವಿಗೆಂದು ಮುಂದಾದ ಭೂಮಿ ದಾಖಲೆ ಪ್ರಕಾರ ‘ಕಾಯ್ದಿಟ್ಟ ಅರಣ್ಯ’. ಅವರು ಕಾಯ್ದಿಟ್ಟು ದಶಕಗಳೇ ಆಗಿ ಹೋಗಿವೆ. ಆದರೆ ಇದುವರೆಗೂ ಅಲ್ಲಿ ಅರಣ್ಯದ ಯಾವ ಲಕ್ಷಣಗಳೂ ಇಲ್ಲ. ದಾಖಲೆಗಳು, ನ್ಯಾಯಾಲಯದ ತೀರ್ಪುಗಳನ್ನು ಒಂದು ಕ್ಷಣ ಆಚೆಗಿಟ್ಟು ಯೋಚಿಸೋಣ. ಸರಕಾರ ಇದುವರೆಗೂ ಕಾಯ್ದಿಟ್ಟ ಪ್ರದೇಶವನ್ನು ಅರಣ್ಯವನ್ನಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಮೇಲೆ, ರೈತರು ಅದನ್ನು ಸದುಪಯೋಗ ಪಡಿಸಿಕೊಂಡು ದೇಶಕ್ಕೆ ಅಗತ್ಯವಾದ ಕಾಳು-ಕಡಿ ಬೆಳೆದು ರಾಷ್ಟ್ರದ ಉತ್ಪನ್ನಕ್ಕೆ ಕೊಡುಗೆ ನೀಡಿದರೆ ತಪ್ಪೇನು..? ಆ ಭೂಮಿಯನ್ನು ಹಾಗೆ ಪಾಳು ಬಿಟ್ಟು, ದಾಖಲೆಯಲ್ಲಿ ಕಾಯ್ದಿಟ್ಟ ಅರಣ್ಯ ಎಂದು ತೋರಿಸಿದರೆ, ವಾತಾವರಣದಲ್ಲಿ ಆಮ್ಲಜನಕದ ಉತ್ಪಾದನೆ ಹೆಚ್ಚಾಗುತ್ತದೆಯೆ? ಈ ಭೂಮಿಯನ್ನು ಇದುವರೆಗೆ ಕಾಪಾಡಿಕೊಂಡು ಬಂದಿದ್ದಕ್ಕೆ ರೈತರಿಗೆ ಸರಕಾರ ಮೊದಲು ಧನ್ಯವಾದ ಹೇಳಬೇಕು. ಸರಕಾರದ ಅಧಿಕಾರಕ್ಕೆ ಹತ್ತಿರದಲ್ಲಿರುವ ಯಾರಾದರೂ ಆ ಭೂಮಿಯನ್ನು ಲಪಟಾಯಿಸಿ ಕಾಫಿ ಪ್ಲಾಂಟೇಶನ್ನೋ..ರಿಯಲ್ ಎಸ್ಟೇಟ್ ಆಗಿಯೋ ಪರಿವರ್ತಿಸಿಲ್ಲವಲ್ಲ..ಅದಕ್ಕೆ ಖುಷಿಪಡಿ.

ಇತ್ತೀಚಿನ ವರ್ಷಗಳ ವರೆಗೂ ಉನ್ನತ ಅಧಿಕಾರ ಅನುಭವಿಸಿದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಬೇಲೂರು ತಾಲೂಕಿನಲ್ಲಿ 19 ಎಕರೆ 20 ಗುಂಟೆಯಷ್ಟು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಅವರ ಪ್ರಕರಣದಲ್ಲಾದರೆ, ಅರಣ್ಯ ಇಲಾಖೆಯವರು ನೊಟೀಸ್ ನೀಡುತ್ತಾರೆ. ಒಂದು ವಾರದೊಳಗೆ ತೆರವು ಮಾಡಬೇಕು ಎಂದು ಹೇಳಿದ ಮೇಲೂ, ನಿವೃತ್ತ ಅಧಿಕಾರಿ ಸುಮ್ಮನಿರುತ್ತಾರೆ. ತಮ್ಮ ವಕೀಲರ ಮೂಲಕ ನೊಟೀಸ್ ಗೆ ಉತ್ತರ ನೀಡುತ್ತಾರೆ. ಆ ನಂತರ ತಿಂಗಳುಗಳೇ ಉರುಳಿದರೂ, ಅಲ್ಲಿ ತೆರವು ಕಾರ್ಯಾಚರಣೆ ಮಾಡಲು ಈ ಸರಕಾರದ ಅಧಿಕಾರಿಗಳು ಮುಂದಾಗುGVSವುದಿಲ್ಲ. ಆದರೆ ಬಡ ರೈತರ ವಿಚಾರ ಬಂದಾಗ ಆ ‘ಕರುಣೆ’ ಇಲ್ಲ.

ಪೊಲೀಸರ ದೌರ್ಜನ್ಯ:
ಈ ಘಟನೆಯಲ್ಲಿ ಪೊಲೀಸರು ತೋರಿದ ವರ್ತನೆ ಚಳವಳಿಕಾರರಲ್ಲಿ ಆಕ್ರೋಷ ಹುಟ್ಟಿಸಿದೆ. ಅವರು ಈ ಹೋರಾಟಗಾರರನ್ನು, ಕೊಲೆ ಆರೋಪಿಗಳಂತೆ ನಡೆಸಿಕೊಂಡಿದ್ದಾರೆ. ಇಲ್ಲವಾದಲ್ಲಿ, ರಾತ್ರೋರಾತ್ರಿ ಬಂಧಿಸಿ, ಮೂರ್ನಾಲ್ಕು ದಿನಗಳ ಮಟ್ಟಿಗೆ ಜೈಲಿನಲ್ಲಿಡಬೇಕೆಂಬ ಯೋಚನೆ ಬಂದದ್ದೇಕೆ? ಇದೇ ಹಾಸನದ ಪೊಲೀಸರ ಮುಂದೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಇಡೀ ದಿನ ಇವರ ಮುಂದೆ ಎದೆಯುಬ್ಬಿಸಿಕೊಂಡು ಅಡ್ಡಾಡುತ್ತಿದ್ದರೂ, ಅವರನ್ನು ಬಂಧಿಸುವ ಛಾತಿ ತೋರಿಸದ ಪೊಲೀಸರು, ಚಳವಳಿಕಾರರನ್ನು ಬಂಧಿಸುವ ದಾಷ್ಟ್ಯ ತೋರಿಸಿದ್ದೇಕೆ?

ಹಾಸನದ ಶಾಸಕ ಎಚ್.ಎಸ್. ಪ್ರಕಾಶ್ ಸಹೋದರ ಎಚ್.ಎಸ್.ಅನಿಲ್ ಕುಮಾರ್. ಅವರು ಹಾಸನ ನಗರಸಭೆಯ ಸದಸ್ಯರೂ ಹೌದು. ಅವರ ವಿರುದ್ಧ ನಗರಸಭೆ ಆಯುಕ್ತ ದೂರು ದಾಖಲಿಸಿದ್ದಾರೆ. ನಗರಸಭೆಯ ಇಮೇಲ್ ಅಕೌಂಟನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಮಾಹಿತಿಯನ್ನು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ, ಹಲವರಿಗೆ ರವಾನಿಸಿದ ಆರೋಪ ಇದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಂತಹದೊಂದು ಮೇಲ್ ರವಾನೆಯಾಗಿದ್ದು ಆ ಸದಸ್ಯರಿಗ ಸೇರಿರುವ ಶಿಕ್ಷಣ ಸಂಸ್ಥೆಗೆ ಸೇರಿದ್ದ ಇಂಟರ್ನೆಟ್ ಖಾತೆ (ಐಪಿ ವಿಳಾಸ) ಯಿಂದ ಹೋದದ್ದು ಎಂಬುದು ಗೊತ್ತಾಗಿದೆ. ಆದರೆ, ಇದುವರೆಗೂ ಬಂಧನವಿರಲಿ.., ಸಣ್ಣ ಮಟ್ಟದ ಕ್ರಮ ಕೂಡ ಕೈಗೊಂಡಿಲ್ಲ. ನೆನಪಿಸಿಕೊಳ್ಳುತ್ತಾ ಹೋದರೆ, ಪ್ರಭಾವಿಗಳನ್ನು ಬಚಾವು ಮಾಡುವ, ಮಾಡಿದ ಅನೇಕ ಉದಾಹರಣೆಗಳು ಸಿಗುತ್ತವೆ. ಹಾಗಾದರೆ, ಪೊಲೀಸರು ಇರಬೇಕಾದ್ದು ಯಾರ ಪರ..?

ಸಮ್ಮೇಳನ – ಭೈರಪ್ಪರನ್ನು ಸಭೆಯಲ್ಲಿ ಟೀಕೆ ಮಾಡುತ್ತಿದ್ದರೆ, ಜನ ಚಪ್ಪಾಳೆ ಹೊಡೆದರು!

– ಸದಾನಂದ ಲಕ್ಷ್ಮೀಪುರ

“ಈ ಭೂಮಿಯಲ್ಲಿ ಶೇ.50 ರಷ್ಟಿರುವ ಮಹಿಳೆಯರನ್ನು ತನ್ನಂತೆಯೇ ಮನುಷ್ಯರು ಎಂದು ಕಾಣದ ಭೈರಪ್ಪ, ಬರಹಗಾರ ಇರಲಿ, ಒಬ್ಬ ನಾಗರಿಕ ಎಂದು ನನಗನ್ನಿಸುವುದಿಲ್ಲ.” – ಡಾ.ಎಂ.ಎಸ್.ಆಶಾದೇವಿ.

“ಭೈರಪ್ಪನ ಕಾದಂಬರಿಗಳಲ್ಲಿ ಕೆಳ ಸಮುದಾಯಗಳ ಹೆಣ್ಣು ಮಕ್ಕಳು ನಡತೆಗೆಟ್ಟವರಂತೆ ಚಿತ್ರತರಾಗುತ್ತಾರೆ. ಮೇಲ್ವರ್ಗದ ಹೆಣ್ಣು ಮಕ್ಕಳ ವಿಚಾರದಲ್ಲಿ ಹಾಗಿಲ್ಲ.”- ಕೆ. ಷರೀಫಾ.

“ಹೆಣ್ಣು ಮಕ್ಕಳು ಅತ್ಯಾಚಾರ ಆಗಲಿ ಎಂದು ಬಯಸುತ್ತಾರೆ..ಎಂದು ಭೈರಪ್ಪನ ಮನಸ್ಥಿತಿ ಎಂತಹದು? ಎಲ್ಲಾ ಮಹಿಳೆಯರು ಆತನ ವಿರುದ್ಧ ಕೂಗು ಹಾಕಬೇಕಿದೆ.” – ಕೆ.ಎಸ್. ವಿಮಲಾ.

“ವೃತ್ತಿಯಲ್ಲಿ ಇಂಜಿನಿಯರ್ ಆದ ವ್ಯಕ್ತಿ, ದಿನವಿಡೀ ತನ್ನ ಕೆಲಸದಲ್ಲಿ ಮುಳುಗಿದ್ದಾಗ kannada-sammelana-hassan-kavigoshtiತನ್ನ ಪತ್ನಿಯ ಆಕಾಂಕ್ಷೆಗಳಿಗೆ ಗಮನ ಕೊಡಲು ಆಗಿರುವುದಿಲ್ಲ. ಆಗ ಆ ಪತ್ನಿ ಮತ್ತೊಬ್ಬರ ಸನಿಹ ಬಯಸುತ್ತಾಳೆ. ಇದು ಸಹಜ. ವೃತ್ತಿಯಲ್ಲಿ ತಾನೂ ಒಬ್ಬ ಇಂಜಿನಿಯರ್ ಆಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದು ಅರ್ಥವಾಗುತ್ತದೆ. ಆದರೆ ಭೈರಪ್ಪನಿಗೆ ಇದು ವಿಕೃತಿಯಾಗಿ ಕಾಣುತ್ತದೆ. ಈ ದೇಶಕ್ಕೆ ಅಂಟಿದ ಶಾಪ ಬ್ರಾಹ್ಮಣ್ಯ. ಅದನ್ನು ಪ್ರತಿಪಾದಿಸುವ ಭೈರಪ್ಪನಿಗೆ ರಾಷ್ಟ್ರೀಯ ಪ್ರಾಧ್ಯಾಪಕ ಪುರಸ್ಕಾರ ದಕ್ಕಿದೆ.” – ಗೌರಿ ಲಂಕೇಶ್.

ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನಕ್ಕೆ ಮಹತ್ವ ತಂದುಕೊಟ್ಟವರು ಈ ನಾಲ್ವರು. ತನ್ನ ಬರಹಗಳ ಮೂಲಕ ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಹಾಗೂ ಮಹಿಳೆಯರನ್ನು ತುಚ್ಚವಾಗಿ ಕಾಣುವ ಮನೋಭಾವದ ಕಾರಣಗಳಿಗಾಗಿ ಜನಪ್ರಿಯರಾಗಿರುವ ಭೈರಪ್ಪನವರನ್ನು ಇವರು ಟೀಕಿಸುತ್ತಿದ್ದರೆ, ಸಭೆಯಲ್ಲಿ ಹಾಜರಿದ್ದವರು ಚಪ್ಪಾಳೆಯಿಂದ ಸ್ವಾಗತಿಸಿದರು. ಈ ಕಾರ್ಯಕ್ರಮ ನಡೆದದ್ದು, bhyrappaಭೈರಪ್ಪನವರ ತವರು ತಾಲೂಕಿನಲ್ಲಿ ಎನ್ನುವುದು ವಿಶೇಷ.

ಭೈರಪ್ಪನವರನ್ನು ಹೊಗಳಿ, ತಲೆ ಮೇಲೆ ಹೊತ್ತು ತಿರುಗುವ ಅನೇಕರು ಅವರ ಪರವಾಗಿ ಹೇಳುವ ಮಾತೆಂದರೆ, ಅವರು ಭಾರೀ ಬೇಡಿಕೆಯ ಲೇಖಕ. ಬೇರೆ ಬೇರೆ ಭಾಷೆಗಳಿಗೆ ಅವರ ಕೃತಿಗಳು ಅನುವಾದವಾಗಿವೆ. ಮಹಾರಾಷ್ಟ್ರದಲ್ಲೂ ಅವರ ಅಭಿಮಾನಿಗಳಿದ್ದಾರೆ..ಎಂದೆಲ್ಲಾ ಮಾತನಾಡುತ್ತಾರೆ. ಅವರು ಬರೆದ ಕಾದಂಬರಿಗಳಲ್ಲಿ ಒಂದೆರಡು ಮಹತ್ವದ್ದು ಎಂದು ವಿಮರ್ಶಾ ವಲಯ ಒಪ್ಪಿಕೊಂಡರೂ, ಅವರ ಒಟ್ಟಾರೆ ಕೃತಿಗಳು ಧ್ವನಿಸುವ ಸಿದ್ಧಾಂತದ ಕಾರಣಕ್ಕೆ ಅವರು ಜೀವಪರ ಚಿಂತಕರ ಟೀಕೆಗೆ ಗುರಿಯಾಗಿದ್ದಾರೆ. ಭೈರಪ್ಪ ಜನಪ್ರಿಯ ಇರಬಹುದು, ಜನಪರ ಅಲ್ಲ. ಇತ್ತೀಚೆಗೆ ಪ್ರಕಟವಾದ ’ಆವರಣ’, ’ಕವಲು’, ’ಯಾನ’ ಕೃತಿಗಳು ನಿಜವಾದ ಭೈರಪ್ಪನವರನ್ನು ಇನ್ನಷ್ಟು ಸ್ಪಷ್ಟವಾಗಿ ಅನಾವರಣಗೊಳಿಸಿದವು. ಇದುವೆರೆಗೆ ಅವರನ್ನು ಮೆಚ್ಚಿಕೊಂಡಿದ್ದ ಅನೇಕ ಓದುಗರು, ಮುಖ್ಯವಾಗಿ ಮಹಿಳೆಯರು, bhyrappa-Kavalu’ಕವಲು’ ಓದಿ ಕಂಗಾಲಾದರು. ’ಆವರಣ’ವಂತೂ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಒಡೆಯುವ ಕೃತಿ. ಹೀಗಿರುವಾಗ ಅವರು ಜನಪರ ಹೇಗಾದಾರು?

ಸಮ್ಮೇಳನದಲ್ಲಿ ಭೈರಪ್ಪ ವಿರುದ್ಧ ಮಾತನಾಡಿದ ಲೇಖಕಿಯರ ವಿರುದ್ಧ ಹಲವರು ಅಲ್ಲಲ್ಲಿ ಕೆಂಡಕಾರುತ್ತಿದ್ದಾರೆ. ಅವರಲ್ಲಿ ಕೆಲ ಬೃಹಸ್ಪತಿಗಳು, ಸಮ್ಮೇಳನದಲ್ಲಿ ಅವರಿಗೆ ಕೊಟ್ಟ ವಿಚಾರ ಬೇರೆ, ಆದರೂ ಅವರು ಸುಮ್ಮನೇ ತಮ್ಮ ಬಾಯಿ ಚಪಲಕ್ಕಾಗಿ ಭೈರಪ್ಪನನ್ನು ಎಳೆತಂದು ಟೀಕೆ ಮಾಡಿದರು ಎಂದು ಬರೆಯುತ್ತಿದ್ದಾರೆ. ಸಮ್ಮೇಳನದಲ್ಲಿ ಸಾಹಿತ್ಯ ಕೃತಿ, ಕೃತಿಕಾರನ ಧೋರಣೆಗಳನ್ನು ಮಾತನಾಡದಿದ್ದರೆ, ಇನ್ನೆಲ್ಲಿ ಮಾತನಾಡಬೇಕು? ರೈತರ, ದಮನಿತರ ಪರವಾಗಿ ಮಾತನಾಡಿ ಎಂದು ಜನ ಸಂಸತ್ತಿಗೆ ಕಳುಹಿಸಿದರೆ, ರೈತ ಸಮುದಾಯಕ್ಕೆ ಗಂಡಾಂತರ ಸೃಷ್ಟಿಸಲಿರುವ ತಿದ್ದುಪಡಿಗಳ ಬಗ್ಗೆ ಮಾತನಾಡದೆ, ಭೈರಪ್ಪನವರ ಸಮರ್ಥನೆಗೆ ಕೆಟ್ಟಾ ಕೊಳಕು ಭಾಷೆಯಲ್ಲಿ ಮಾತನಾಡುವರರಿಗೆ ಏನು ಹೇಳಬೇಕು?

ಶಿಕ್ಷಣ ಕ್ಷೇತ್ರದ ಪಂಕ್ತಿಭೇದ ವಿರುದ್ಧದ ಕೂಗು: ಸಮ್ಮೇಳನದ ಯಶಸ್ಸು

– ಸದಾನಂದ ಲಕ್ಷ್ಮೀಪುರ

ಸಮ್ಮೇಳನದ ಸಂಘಟನೆ ಬಗ್ಗೆ, ಖರ್ಚಾದ ಹಣದ ಬಗ್ಗೆ ಏನೇ ಅಸಮಾಧಾನಗಳಿದ್ದರೂ, ಒಂದಂತೂ ಸತ್ಯ. ಇತ್ತೀಚಿನ ವರ್ಷಗಳಲ್ಲಿ ನಡೆದ ಅನೇಕ ಸಮ್ಮೇಳನಗಳ ಪೈಕಿ ಕನ್ನಡ ಪ್ರಜ್ಞೆಗೆ ಕಿಡಿಹೊತ್ತಿಸುವಂತಹ ಕೆಲಸ ಆಗಿದ್ದು ಇಲ್ಲಿಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಕೆಲ ಬೆಳವಣಿಗೆಗಳಿಂದ ಮಾತ್ರ. ಅದು ಆರಂಭವಾಗಿದ್ದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ದೇವನೂರು ಮಹದೇವ ಅವರನ್ನು ಅಧ್ಯಕ್ಷತೆಗೆ ಒಪ್ಪಿಸಲು ಮಾಡಿದ ಪ್ರಯತ್ನದಿಂದ.

ಈ ಬಗ್ಗೆ ಕೇಂದ್ರ deva ಕನ್ನಡ ಸಾಹಿತ್ಯ ಪರಿಷತ್ ಗೆ ಅಷ್ಟಾಗಿ ಉತ್ಸಾಹ ಇದ್ದಂತಿರಲಿಲ್ಲ. ಕಾರಣ, ಈ ಮೊದಲು ಅನೇಕ ಬಾರಿ ಪರಿಷತ್ ಮಹದೇವ ಅವರನ್ನು ಈ ಬಗ್ಗೆ ಸಂಪರ್ಕಿಸಿದ್ದಾಗ ಅವರು ಉತ್ಸಾಹ ತೋರಿಸಿರಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸವೂ ಅವರಿಗಿರಲಿಲ್ಲ. “ಆದರೂ..ನೀವು ಒಮ್ಮೆ ಪ್ರಯತ್ನ ಮಾಡುವುದಾದರೆ, ಮಾಡಿ. ನಮ್ಮ ಅಭ್ಯಂತರವಿಲ್ಲ. ಒಪ್ಪಿದರೆ, ನಮಗೂ ಸಂತೋಷ’ ಎಂಬ ಸಂದೇಶ ಜಿಲ್ಲಾ ಸಾಹಿತ್ಯ ಪರಿಷತ್ ಗೆ ರವಾನೆಯಾಗಿತ್ತು. ಅದರಂತೆ, ಜಿಲ್ಲಾ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ತಮ್ಮ ಗೆಳೆಯರೊಂದಿಗೆ ದೇವನೂರು ಅವರನ್ನು ಭೇಟಿಯಾದರು. ಅದು ಅವರು ಹೇಳುವಂತೆ ಅನೌಪಚಾರಿಕ ಭೇಟಿ.

ಮಹದೇವ ಅವರು ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕನ್ನಡ ಶಾಲೆಗಳು, ಕನ್ನಡ ಕಲಿಕೆ ಹಾಗೂ ಸಮಾನ ಶಿಕ್ಷಣದ ಕೂಗಿಗೆ ಒದಗಿರುವ ದು:ಸ್ಥಿತಿಗೆ ಈ ಸಂದರ್ಭದಲ್ಲಿ ಆಗಬೇಕಿರುವ ಕೆಲಸ ಬೇಕಾದಷ್ಟಿದೆ ಎಂದರು. ಈ ಉದ್ದೇಶಗಳಿಗಾಗಿ ಒಂದು ಪರ್ಯಾಯ ಸಮ್ಮೇಳನ ನಡೆಯುವುದಾದರೆ, ಬರಲು ಸಿದ್ಧ ಎಂದರು. ಹಾಗೂ ಹಿಂದೆ ಇಂತಹದೇ ಕಾರಣಕ್ಕೆ ಪರಿಷತ್ ನೀಡುವ ನೃಪತುಂಗ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದರು. ಆದರೆ ಈ ಭೇಟಿಯ ಸುದ್ದಿ ರಹಸ್ಯವಾಗಿ ಉಳಿಯಲಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ವರದಿಯಾಯಿತು. ಪರಿಷತ್ ಗೆ ಒಂದಿಷ್ಟು ಮುಜುಗರವಾದರೂ, ನಾಡಿನಾದ್ಯಂತ ಮಹದೇವ ಅವರು ಎತ್ತಿರುವ ಪ್ರಶ್ನೆಗಳು ಚರ್ಚೆಯಾದವು. ಹಲವು ಲೇಖನಗಳು ಪ್ರಕಟವಾದವು. ದೇವನೂರು ಅವರು ಇದೇ ವಿಚಾರವಾಗಿ ಸಾಹಿತ್ಯ ಪರಿಷತ್ ಗೆ ಒಂದು ವಿವರವಾದ ಪತ್ರ ಬರೆದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಆ ಪತ್ರವೂ (ವರ್ತಮಾನವೂ ಸೇರಿದಂತೆ) ಹಲವೆಡೆ ಪ್ರಕಟವಾಯಿತು.

ಈ ಎಲ್ಲಾ ಬೆಳವಣಿಗೆಗಳು ಸಾಗುತ್ತಿರುವ ದಿಕ್ಕು ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿ ಭೇದದ ವಿರುದ್ಧದ ಸಮರಕ್ಕೆ. siddalingaiahಈ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗುವುದು ಸಮಾನ ಶಿಕ್ಷಣ ಜಾರಿಯಾದಾಗ. ‘ಮುಖ್ಯಮಂತ್ರಿಯ ಮಗ, ಮಂತ್ರಿಯ ಮಗ, ಜಮೀನ್ದಾರನ ಮಗ, ಕೂಲಿಕಾರ್ಮಿಕನ ಮಗ, ಪೌರಕಾರ್ಮಿಕನ ಮಗ..ಒಂದೆಡೆ ಕೂತು ಶಿಕ್ಷಣ ಪಡೆಯುವಂತಾಗಬೇಕು..” – ಹೀಗೆಂದು ಸಮ್ಮೇಳನದ ಅಧ್ಯಕ್ಷಗಾದಿಯಿಂದ ಸಾರಿದವರು ಕವಿ ಸಿದ್ದಲಿಂಗಯ್ಯ.

ಕರ್ನಾಟಕ ಜನಶಕ್ತಿ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನದಲ್ಲಿ ತೊಡಗಿಸಿಕೊಂಡ karnataka-janashakti-protests-at-sammelanaಪ್ರಗತಿಪರ ಹೋರಾಟಕಾರರು ಸಮ್ಮೇಳನವನ್ನು ತಮ್ಮ ವಿಚಾರಗಳಿಗೆ ವೇದಿಕೆಯನ್ನಾಗಿ ಯಶಸ್ವಿಯಾಗಿ ಬಳಸಿಕೊಂಡರು. ಧಾರವಾಡದ ಜನಸಾಹಿತ್ಯ ಬಳಗದವರು ಇದೇ ಉದ್ದೇಶದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಕರಪತ್ರ ಹಂಚಿದರು. ಸಮ್ಮೇಳನದ ಕೊನೆ ದಿನವಂತೂ ಕೆ.ಆರ್.ಪೇಟೆಯ ಸರಕಾರಿ ಶಾಲೆಯೊಂದರ ಮಕ್ಕಳು ಸ್ಥಳಕ್ಕೆ ಬಂದು ಸಮಾನ ಶಿಕ್ಷಣಕ್ಕಾಗಿ ಘೋಷಣೆ ಕೂಗಿದರು. ಪುಂಡಲೀಕ ಹಾಲಂಬಿಯವರು ಈ ಹೋರಾಟದಲ್ಲಿ ತಮ್ಮದೂ ಪಾತ್ರವಿದೆ ಎಂದು ಅವರೂ ಮಕ್ಕಳ ಜೊತೆ ಸೇರಿ ಘೋಷಣೆ ಹಾಕಿದರು. ಸಂವಿಧಾನ ಮತ್ತು ರಾಜ್ಯಭಾಷೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ.ನಿರಂಜನಾರಾಧ್ಯ ಮತ್ತಿತರರು ತಮ್ಮ ಮಾತುಗಳಲ್ಲಿ ಸಮಾನ ಶಿಕ್ಷಣದ ಅಗತ್ಯತೆಯನ್ನು ಹಾಜರಿದ್ದ ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಸರಕಾರ ಅಂದಾಜು ಮಾಡಿತ್ತು ಎನಿಸುತ್ತದೆ. ಭಾಷೆ ಶಿಕ್ಷಣದ ವಿಚಾರವಾಗಿ ಏನನ್ನಾದರೂ ಮಾಡಬೇಕಾದ ಒತ್ತಡಕ್ಕೆ ಬಿದ್ದ ರಾಜ್ಯ ಸರಕಾರ ತನ್ನ ಇತಿಮಿತಿಯೊಳಗೆ ಕಾಯ್ದೆಗೆ ತಿದ್ದುಪಡಿ ತಂದು, ಮಾತೃಭಾಷೆಯ ವ್ಯಾಖ್ಯಾನವನ್ನು ಬದಲಿಸಲು ತೀರ್ಮಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಪಂಕ್ತಿಭೇದದ ವಿಚಾರವಾಗಿ ಇದುವರೆಗೆ ಗಟ್ಟಿಯಾದ ದನಿ ಸಮ್ಮೇಳನವೊಂದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಇದೇ ಮೊದಲಿರಬೇಕು. ಆ ಕಾರಣಕ್ಕೆ ಇದು ಯಶಸ್ವಿ. ಆದರೆ ಈ ಯಶಸ್ಸಿಗಾಗಿ, ಏಳೆಂಟು ಕೋಟಿ ಖರ್ಚು ಮಾಡುವ ಅಗತ್ಯವಿರಲಿಲ್ಲ.