Category Archives: Sudhanshu Karkala

ಯಾರು ರೋಗಿ? ರಾಜ್ಯಪಾಲರೇ, ಆದಷ್ಟು ಬೇಗ ಹೊರಡಿ…

– ಸುಧಾಂಶು ಕಾರ್ಕಳ

“Who is Anantamurthy? He is nobody…. He is sick”… ಘನತೆವೆತ್ತ ರಾಜ್ಯಪಾಲರು ಹೀಗೆ ಮಾತನಾಡಿದ್ದಾರೆ. ದಾವಣಗೆರೆ ವಿ.ವಿಗೆ ಕುಲಪತಿ ನೇಮಕ ಮಾಡುವಾಗ ಆಗಿರಬಹುದಾದ ಅವ್ಯವಹಾರದ ಬಗ್ಗೆ ಎದ್ದಿರುವ ವಿವಾದದ ಮುಂದುವರಿದ ಭಾಗವಿದು.ಹೀಗೆ ಮಾತನಾಡುವ ಮೂಲಕ nudisiri-ananthamurthyರಾಜ್ಯಪಾಲರು ತಮ್ಮ ಕುಲಪತಿ ನೇಮಕಾತಿಯಲ್ಲಿ ತಮಗಿರುವ ಪರಮಾಧಿಕಾರವನ್ನು ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ಪದ ಬಳಕೆಯಿಂದ ತಮ್ಮ ’ಘನತೆ’ಗೆ ಕುಂದು ತಂದುಕೊಂಡಿದ್ದಾರೆ. ರಾಜ್ಯಪಾಲರು ’ಸಿಕ್’ ಎಂಬ ಪದ ಬಳಸಿದ್ದು, ಅನಂತಮೂರ್ತಿಯವರ ದೈಹಿಕ ಅನಾರೋಗ್ಯದ ಬಗ್ಗೆ ಅಲ್ಲ. ಅವರ ಮಾನಸಿಕ ಸ್ತಿಮಿತತೆಯನ್ನು ಪ್ರಶ್ನೆ ಮಾಡಿದ್ದಾರೆ. ಇಲ್ಲವಾದಲ್ಲಿ “I can’t argue with him, he is sick…” – ಎಂದು ಹೇಳುವ ಅಗತ್ಯವೇನಿತ್ತು?

ಒಂದಂತೂ ಸತ್ಯ ಇತ್ತೀಚೆಗೆ ಯಾವ ವಿ.ವಿಗೂ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನೇಮಕವಾಗುತ್ತಿಲ್ಲ. ಕೋಟಿಗಟ್ಟಲೆ ಹಣ ಸಂದಾಯ, ಹಸ್ತಾಂತರ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅನಂತಮೂರ್ತಿಯವರೇ ಈ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿದ್ದಾರೆ. ಒಂದು ಸಮುದಾಯದ ವ್ಯಕ್ತಿಯೊಬ್ಬರು ಕುಲಪತಿಯಾಗುತ್ತಾರೆಂದರೆ, ಆ ಸಮುದಾಯದ ಗುತ್ತಿಗೆದಾರರು, ಉದ್ಯಮಿಗಳು, ಇತರ ಆಸಕ್ತರು ’ಬಂಡವಾಳ’ ಹೂಡುತ್ತಾರಂತೆ. ಬಂಡವಾಳ ಹೂಡಿದ ಮೇಲೆ ಲಾಭ ಮಾಡಲೇಬೇಕಲ್ಲ? ಹಾಗಾಗಿ ಅವರ ವ್ಯಕ್ತಿ ಕುಲಪತಿ ಆದ ನಂತರ ವಿವಿಧ ಕಾಮಗಾರಿಗಳ ಹೆಸರಿನಲ್ಲ, ಕಾಲೇಜುಗಳ ಮಾನ್ಯತೆ ಹೆಸರಿನಲ್ಲಿ, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಲಾಭ ಗಳಿಸುತ್ತಾರೆ.

ಒಂದು ವರ್ಷದ ಹಿಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆದ ನೇಮಕಾತಿಗಳಲ್ಲಿ ಸಾಕಷ್ಟು ಹಣ ಹರಿದ ವರ್ತಮಾನವಿದೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಆಗುವ ಅವ್ಯವಹಾರಗಳ ಬಗ್ಗೆ ಇತ್ತೀಚೆಗೆ ಸಾರ್ವಜನಿಕವಾಗಿ ಚರ್ಚೆಗಳಾಗುತ್ತಿವೆ ಆದರೆ, ವಿಶ್ವವಿದ್ಯಾನಿಲಯಗಳ ನೇಮಕಾತಿ ಬಗ್ಗೆ ಚರ್ಚೆಗಳು ಇನ್ನಷ್ಟೇ ಆಗಬೇಕಿದೆ.

ಹಂಸರಾಜ್ ಭಾರಧ್ವಾಜ್ ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕರಾದ ನಂತರ ಅವರು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಅನೇಕ ’ಶಿಕ್ಷಣ ರತ್ನ’ಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ತಪ್ಪು ಮಾಹಿತಿ ನೀಡಿ ಕುಲಪತಿ ಹುದ್ದೆಗೆ ಅರ್ಹತೆ ದಕ್ಕಿಸಿಕೊಂಡು ನೇಮಕವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಕುಲಪತಿ ಸನ್ಮಾನ್ಯ ರಾಜ್ಯಪಾಲರು ಈ ರಾಜ್ಯಕ್ಕೆ ಕೊಟ್ಟ ಬಳುವಳಿ. Tumkur-VC-Sharma-with-Governorತುಮಕೂರಿನಲ್ಲಿದ್ದುಕೊಂಡು ’ಫಟಾಫಟ್ ಪಿ.ಎಚ್.ಡಿ’ ಯೋಜನೆ ತಂದ ಮಹನೀಯರು ಕೂಡ ಇದೇ ರಾಜ್ಯಪಾಲರ ಆಯ್ಕೆ. ಇನ್ನು ಮೈಸೂರು ವಿ.ವಿ ಕುಲಪತಿಗಳ ಬಗ್ಗೆ, ಅವರ ಸಾಧನೆಗಳ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ! ಇತ್ತೀಚೆಗೆ ಮೈಸೂರು ವಿ.ವಿ ನಡೆಸಿದ ಸ್ಲೆಡ್ (SLET) ಪರೀಕ್ಷೆಗಳಲ್ಲೂ ಅವ್ಯವಹಾರ ನಡೆಯುತ್ತಿದೆಯೆಂದು ಸುದ್ದಿಗಳು ಹರಿದಾಡುತ್ತಿವೆ. ಎರಡರಿಂದ ಮೂರು ಲಕ್ಷ ದುಡ್ಡು ಕೊಟ್ಟವರು ಬೋಧಕ ಹುದ್ದೆಗಳಿಗೆ ಅರ್ಹತೆ ಪಡೆಯುತ್ತಾರೆ. ಸದ್ಯದಲ್ಲೆ ರಾಜ್ಯ ಸರಕಾರ ಪದವಿ ಕಾಲೇಜುಗಳಿಗೆ ನೇಮಕಾತಿ ಆರಂಭಿಸುವ ಸೂಚನೆ ಇರುವುದರಿಂದ ಈ ದಂಧೆಗೆ ಮಹತ್ವ ದೊರಕಿದೆ.

ಅಷ್ಟೇ ಅಲ್ಲ..ಹಿಂದಿನ ಸರಕಾರ ಬೇಕಾಬಿಟ್ಟಿಯಾಗಿ ಖಾಸಗಿ ವಿ.ವಿ ಮಸೂದೆಗಳನ್ನು ಮಂಡಿಸಿ ಕೊಟ್ಟಂತೆ..ರಾಜ್ಯಪಾಲರು ಒಪ್ಪಿ ಸಹಿ ಹಾಕಿದರು. ಘನತೆವೆತ್ತ ರಾಜ್ಯಪಾಲರೇ ರಾಜ್ಯಕ್ಕೆ ನೀವಿತ್ತ ಸೇವೆ ಅತ್ಯಮೂಲ್ಯ. ನಿಮ್ಮ ಅವಧಿಯಲ್ಲಿ ’ಉನ್ನತ ಶೈಕ್ಷಣಿಕ ರಂಗ ಬಾನೆತ್ತರಕೆ ಬೆಳೆದು’ ಪ್ರಾಮಾಣಿಕರ ಕೈಗೆ ಎಟುಕದಂತಾಗಿದೆ. ನಿಮ್ಮ ಸೇವೆ ಪಡೆದ ಈ ರಾಜ್ಯವೇ ಧನ್ಯ. ದಯವಿಟ್ಟು… ತಾವು ಆದಷ್ಟು ಬೇಗ ಹೊರಟುಬಿಡಿ. ಆ ಮೂಲಕ ರಾಜ್ಯವನ್ನು ಕಾಪಾಡಿ.

ಶರಮ್ ನಹೀ ಶರ್ಮ…

– ಸುಧಾಂಶು ಕಾರ್ಕಳ

ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಣ ಮುಖ್ಯ ಪಾತ್ರ ವಹಿಸಿರುವ ಅನುಮಾನಗಳು ದಟ್ಟವಾಗಿವೆ. ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ್ದ ಯು.ಆರ್. ಅನಂತಮೂರ್ತಿಯವರು davanagere-vc-fiascoಸುದ್ದಿ ಮಾಧ್ಯಮಗಳಿಗೆ ಮಾತನಾಡಿ ಈ ಅನುಮಾನಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಅವರ ಅಧ್ಯಕ್ಷತೆಯ ಸಮಿತಿಯಲ್ಲಿದ್ದವರೇ ಭ್ರಷ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಆ ನಂತರ ಸರಕಾರ ಸೂಚಿಸಿದ್ದ ಹೆಸರನ್ನು ರಾಜಭವನ ತಿರಸ್ಕರಿಸಿದೆ ಹಾಗೂ ಸಮಿತಿ ಅಧ್ಯಕ್ಷರ ಹೊರತಾಗಿ ಇತರರು ಸೂಚಿಸಿದ್ದ ಹೆಸರಿಗೆ ಮನ್ನಣೆ ನೀಡಿದೆ. ರಾಜಭವನದಲ್ಲಿ ಇಂತಹ ಕೃತ್ಯಗಳು ನಡೆದಿವೆ ಎನ್ನುವುದನ್ನು ನಂಬಲಿಕ್ಕೆ ಅಸಹನೆ ಪಡಬೇಕಿಲ್ಲ. ರಾಜಭವನದ ಸದ್ಯದ ವಾರಸುದಾರರು ಇಂತಹ ಕೃತ್ಯಗಳಲ್ಲಿ ಸಿದ್ಧಹಸ್ತರು. ಅರ್ಹತೆ ಇಲ್ಲದ ವ್ಯಕ್ತಿಯನ್ನೇ ವಿ.ಸಿ.ಯಾಗಿ ನೇಮಕ ಮಾಡಿದ್ದಲ್ಲದೆ, ಅದೇ ವ್ಯಕ್ತಿಯ ಅವಧಿಯನ್ನೂ ಅವರು ವಿಸ್ತರಿಸಿದವರಲ್ಲವೆ? ಹಿಂದಿನ ವಿ.ವಿಯಲ್ಲಿ ವಿ.ಸಿ.ಯಾಗಿದ್ದಾಗ ನಾನಾ ಆರೋಪಗಳನ್ನು ಹೊತ್ತವರು ಮತ್ತೊಂದು ಪ್ರಮುಖ ವಿ.ವಿ.ಗೆ ಕುಲಪತಿಯಾಗಿ ಅನಾಯಾಸವಾಗಿ ನೇಮಕಗೊಳ್ಳುತ್ತಾರೆ. ಎಷ್ಟು ಕೋಟಿ ರೂಗಳ ವ್ಯವಹಾರ ಇದು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಈ ವಿ.ವಿ.ಗಳ ಅವ್ಯವಹಾರಗಳ ಗಲಾಟೆ ಮಧ್ಯದಲ್ಲಿ ಬಹಳ ಕಾಲದವರೆಗೆ ಮರೆಯಾಗಿ ಉಳಿದದ್ದು Tumkur-VC-Sharma-with-Governorತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಸ್.ಸಿ. ಶರ್ಮಾ ಅವರು ವಿ.ಸಿಯಾಗಿದ್ದಾಗ ನಡೆದ ಭಾನಗಡಿಗಳು. ಅವರು ತುಮಕೂರು ವಿ.ವಿ.ಗೆ ಕುಲಪತಿಯಾಗಿ ಬಂದಾಗಿನಿಂದ ಅವರು ನಡೆದುಕೊಂಡ ರೀತಿಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಮೊದ ಮೊದಲು ಅವರು ಕಾನೂನಿನಲ್ಲಿರುವ ಅಸ್ಪಷ್ಟತೆಗಳ ಲಾಭ ಪಡೆದುಕೊಂಡರು. ನಂತರ ಅಧಿಕಾರದಲ್ಲಿರುವವರ ಸಖ್ಯ ಬಳಸಿಕೊಂಡು ತಮಗೆ ಅನುಕೂಲವಾಗುವ ಕಾನೂನನ್ನೇ ತರಲು ಮುಂದಾದರು!

ಅವರು ಅಧಿಕಾರಕ್ಕೆ ಬರುವಾಗಲೇ ವಿವಾದ ಹುಟ್ಟಿಕೊಂಡಿತು. ವಿ.ಸಿ.ಯಾಗುವವರು ತಮ್ಮ ಹಿಂದಿನ ಸ್ಥಾನದಲ್ಲಿ ಪಡೆಯುತ್ತಿದ್ದ ಸಂಭಾವನೆ/ಸಂಬಳ/ಸವಲತ್ತುಗಳನ್ನು ಮುಂದೆಯೂ ಪಡೆಯುತ್ತಾರೆ ಎಂದು ಕರ್ನಾಟಕದ ಕಾಯಿದೆಯಲ್ಲಿ ಇದ್ದದ್ದನ್ನು ಪತ್ತೆ ಹಚ್ಚಿ ತಾವು ಹಿಂದೆ ಇದ್ದ ಖಾಸಗಿ ಕಾಲೇಜಿನಲ್ಲಿ ಲಕ್ಷಾಂತರ ರೂ ಸಂಬಳ ಬರುತ್ತಿತ್ತು ಎಂದು ತೋರಿಸಿ, ವಿ.ಸಿ. ಆದಮೇಲೂ ಅದನ್ನೇ ಪಡೆದರು. (http://www.deccanherald.com/content/107863/F)Tumkur-VC-Shameless-Sharma ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರದ ಸುದ್ದಿಗಳು ಅಲ್ಲಲ್ಲಿ ಬಂದರೂ, ತನಿಖೆಯಾಗಬೇಕು, ವಿ.ಸಿ. ರಾಜಿನಾಮೆ ನೀಡಬೇಕು ಎಂದು ಕೂಗು ಏಳಲಿಲ್ಲ.

ಇತ್ತೀಚೆಗೆ ಬಹಿರಂಗವಾಗಿರುವಂತೆ ಅವರ ಅವಧಿಯಲ್ಲಿ ಕೆಲವು ಅದ್ಭುತ ಸಾಧನೆಗಳು ವಿ.ವಿ.ಯಲ್ಲಿ ಆಗಿ ಹೋಗಿವೆ. ಆ ಸಾಧನೆಗಳಿಗೆ ಬಹುಶಹ ಭಾರತರತ್ನವೂ ಕಡಿಮೆಯೆ. ಕೇವಲ ಎಂಟು-ಒಂಭತ್ತು ತಿಂಗಳಿಗೆ ಪಿ.ಎಚ್.ಡಿ ಅಧ್ಯಯನ ಮುಗಿಸಿದ್ದಾರೆ ಇಲ್ಲಿಯ ಸಂಶೋಧಕರು (ಪ್ರಜಾವಾಣಿ ವರದಿ: 49 ದಿನದಲ್ಲಿ ಪಿಎಚ್.ಡಿ). ಜಗತ್ತಿನ ಯಾವ ವಿ.ವಿ.ಯಲ್ಲೂ ಇಂತಹದೊಂದು ಸಾಧನೆ ಆಗಿಲ್ಲ ಎನಿಸುತ್ತೆ. ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಆರು-ಎಂಟು ತಿಂಗಳ ತರಬೇತಿ ಆಯೋಜಿಸುತ್ತಾರೆ. ಆದರೆ ಅಲ್ಲಿ ತರಬೇತಿ ಪಡೆದವರನ್ನು ’ಡಾ’ ಎಂದು ಕರೆಯುವುದಿಲ್ಲ ಅಷ್ಟೆ.

ಗೌರವ ಡಾಕ್ಟರೇಟ್ ಗಳು ಇಲ್ಲಿ ಬೇಕಾಬಿಟ್ಟಿ. ಒಂದೇ ವರ್ಷ 25 ಜನರಿಗೆ ಕೊಟ್ಟಿದ್ದಾರೆ. Tumkur-VC-Sharma-and-doctoratesಯಾಕಿಷ್ಟು ಕೊಟ್ಟೀರಿ ಎಂದು ಕೇಳಿದರೆ, “ದುಡ್ಡು ಜಾಸ್ತಿ ಇದ್ದವರು, ಜಾಸ್ತಿ ದಾನ ಮಾಡ್ತಾರೆ..ಅದರಲ್ಲೇನು ತಪ್ಪು..?” ಎಂದು ಕೇಳುತ್ತಾರೆ (ಪ್ರಜಾವಾಣಿ ವರದಿ). ಹಾಗಾದರೆ ಇವರ ವಿ.ವಿಯಲ್ಲಿ ಗೌರವ ಡಾಕ್ಟರೇಟ್‌ಗಳು ಬೇಕಾದಷ್ಟು ಬಿದ್ದಿದ್ದವು, ಹಾಗಾಗಿ ಇವರು ತಮಗೆ ಬೇಕಾದವರಿಗೆಲ್ಲ ಕೊಟ್ಟರು. ಅವರು ದಾನಶೂರ ಕರ್ಣ… ಅಲ್ಲಲ್ಲ ಶರ್ಮ! ಹೀಗೆ ವಿ.ವಿಯಲ್ಲಿ ಇವರಿಂದ ವಿವಿಧ ಸವಲತ್ತು ಪಡೆದವರು ಅವರದೇ ಜಾತಿಯವರು ಎನ್ನುವುದನ್ನು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೆ ವಿಪರ್ಯಾಸ ನೋಡಿ, ಈ ಭಾನಗಡಿಗಳು ಎಲ್ಲೋ ಒಂದು ಮೂಲೆಯಲ್ಲಿ ಚರ್ಚೆಯಾಗಿ ಮರೆಯಾಗುತ್ತವೆ. ಅವರ ಕೃತ್ಯಗಳಿಗೆ ಅವರು ಕೊಡುವ ಇನ್ನೊಂದು ಸಮರ್ಥನೆ, “ಇಷ್ಟೇ ಜನಕ್ಕೆ ಗೌರವ ಡಾಕ್ಟರೇಟ್ ಕೊಡಬೇಕೆಂದು ನಿಯಮವೇನಿಲ್ಲ.”

ಅವರು ತಮ್ಮ ಕಾಲಾವಧಿ ಮುಗಿಯುವ ವೇಳೆಗೆ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರಾಗಿದ್ದರು. ಆ ಹಂತದಲ್ಲಿ ಅವರಿಗೆ ತಾವು ಹಿಂದೆ ಇದ್ದ ಶಿಕ್ಷಣ ಸಂಸ್ಥೆಗೆ ಹೋಗಿ ಪ್ರಾಂಶುಪಾಲರಾಗಿ ಮುಂದುವರಿಯಬೇಕೆಂಬ ಹಂಬಲ ಹುಟ್ಟಿಕೊಂಡಿತು. ಅದಕ್ಕೆ ಅಲ್ಲಿಯ ಆಡಳಿತ ಒಪ್ಪುತ್ತಿರಲಿಲ್ಲ. ಆಗ ಸರಕಾರ ಜಾರಿಯಲ್ಲಿದ್ದ ಕಾನೂನಿಗೆ ತಿದ್ದುಪಡಿ ತಂದು ಆ ಸವಲತ್ತನ್ನು ಅವರಿಗೆ ಒದಗಿಸಲು ಮುಂದಾಗುತ್ತಾರೆ. ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತಾರೆ. ಆದರೆ, ಆ ಹೊತ್ತಿಗೆ ಈ ಮಸೂದೆ ಹಿಂದಿನ ಮರ್ಮ ಅರಿತ ಕೆಲ ಹಿರಿಯರು, ವಿರೋಧ ಪಕ್ಷದ ಸದಸ್ಯರುಗಳು ವಿರೋಧಿಸಿದಾಗ, Tumkur-VC-Shameless-Sharma-and-minister-CT-Ravi-in-unholy-nexusರವಿ ತನ್ನ ಮಸೂದೆಯನ್ನ ಸಮರ್ಥನೆ ಮಾಡಿಕೊಳ್ಳಲಾಗದೆ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಾರೆ. (http://www.thehindu.com/todays-paper/tp-national/tp-karnataka/government-withdraws-university-amendment-bill-following-protests/article3715111.ece)

ಒಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರು ಈ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ರಾಜಕಾರಣಿಗಳು ಅವರಿಗೆ ಬೆಂಬಲಿಗೆ ಇದ್ದದ್ದು. ರಾಜಭವನವೂ ಅವರಿಗೆ ಸಹಕರಿಸಿತು. ಇಲ್ಲವಾಗಿದ್ದಲ್ಲಿ, ಅವರ ಸಂಬಳದ ವಿಚಾರದಲ್ಲಿಯೇ ತಕ್ಕ ನಿರ್ಧಾರ ತೆಗೆದುಕೊಂಡಿದ್ದರೆ, ಅವರು ಮುಂದುವರಿದು ಈ ಮಟ್ಟಿಗೆ ಅವ್ಯವಹಾರಗಳಿಗೆ ಕೈ ಹಾಕುತ್ತಿರಲಿಲ್ಲ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಕೆ.ಪಿ.ಎಸ್.ಸಿ ಅವ್ಯವಹಾರ: ಪ್ರಮುಖ ಪಕ್ಷಗಳ ಮೌನ

– ಸುಧಾಂಶು ಕಾರ್ಕಳ

ಕೆಲ ದಿನಗಳ ಹಿಂದೆಯಷ್ಟೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೆ.ಪಿ.ಎಸ್.ಸಿ ಅವ್ಯವಹಾರ ಚರ್ಚೆಯಾಗುತ್ತೆ ಎಂದು ಅನೇಕರು ನಿರೀಕ್ಷಿಸಿದ್ದರು. ಕರ್ನಾಟಕ ಆಡಳಿತ ಸೇವೆಗಳು, ಉಪನ್ಯಾಸಕ ವರ್ಗ, ವಿವಿಧ ಇಲಾಖೆಗಳು ಮುಖ್ಯಸ್ಥರು ಸೇರಿದಂತೆ ಬಹುತೇಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸರಕಾರ ಎದುರು ನೋಡುವ ಸಂಸ್ಥೆ ಈ ಕೆ.ಪಿ.ಎಸ್.ಸಿ.

ಈ ಸಂಸ್ಥೆಯ ಮೂಲಕ ನೇಮಕವಾಗಲು ವಿವಿಧ ಹುದ್ದೆಗಳಿಗೆ ಮೂರು-ನಾಲ್ಕು KPSC-bribe-ratesಲಕ್ಷಗಳಿಂದ ಎಪ್ಪತ್ತು-ಎಂಬತ್ತು ಲಕ್ಷಗಳ ವರೆಗೆ ಲಂಚ ಕೊಟ್ಟವರು ಅಧಿಕಾರ ವಹಿಸಿಕೊಂಡ ನಂತರ ನಿಯತ್ತಾಗಿ ಕೆಲಸ ಮಾಡಲಿ ಎಂದು ನಿರೀಕ್ಷಿಸುವುದು ಕಷ್ಟ. ಇತ್ತೀಚೆಗೆ ಕೆ.ಪಿ.ಎಸ್.ಸಿ ಮೂಲಕ ನೇಮಕವಾದ ಪೊಲೀಸ್ ಅಧಿಕಾರಿಯೊಬ್ಬರು ವಿವಿಧ ಪ್ರಕರಣಗಳಲ್ಲಿ ಬೇಕಾದವರನ್ನು ಗುಡ್ಡೆ ಹಾಕಿಕೊಂಡು ಇಂತಿಷ್ಟು ವಸೂಲಿ ಮಾಡಿದರು. ಅವರು ಆರೋಪಿಗಳೊಂದಿಗೆ ವಸೂಲಿ ಬಗ್ಗೆ ಮಾತುಕತೆ ನಡೆಸುವಾಗ ಹೇಳಿದ್ದ ಒಂದು ಮಾತು, ’ನಾವೇನು ಪುಕ್ಸಟೆ ಇಲ್ಲಿಗೆ (ಈ ಹುದ್ದೆಗೆ) ಬಂದಿಲ್ಲ’. ಅದರರ್ಥ ಹೀಗೆ ನೇಮಕ ಆದವರು ಪ್ರಾಮಾಣಿಕತೆಯಿಂದ ದುಡಿಯುವ ಸಾಧ್ಯತೆಗಳು ಕ್ಷೀಣ.

ಲಂಚ ಕೊಟ್ಟು ಉಪನ್ಯಾಸಕರಾದವರು ಮುಂದೆ ಇದೇ ಕೆ.ಪಿ.ಎಸ್.ಸಿ ಸಂಸ್ಥೆಯಿಂದ ನಡೆಸುವ ಪರೀಕ್ಷೆಗಳ ಮೌಲ್ಯಮಾಪಕರಾಗಿ ಅನ್ಯಮಾರ್ಗಗಳಿಂದ ದುಡ್ಡು ಮಾಡುವ ಪ್ರಯತ್ನ ಮಾಡುತ್ತಾರೆ. ಅಷ್ಟೇ ಅಲ್ಲ, ಉಪನ್ಯಾಸದ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಕಾಲೇಜಿಗೆ ಆಗಾಗ ಬಿಡುಗಡೆಯಾಗುವ ಹಣ ದುರುಪಯೋಗ ಮಾಡಿಕೊಳ್ಳಲು ಉತ್ಸುಕರಾಗಿರುತ್ತಾರೆ. ಅಥವಾ, ತಮ್ಮ ವಾರಿಗೆ ಇತರರು ಕಮಾಯಿ ಹೆಚ್ಚು ಇರುವ ಇಲಾಖೆಗಳಲ್ಲಿ ನೇಮಕಗೊಂಡು ದುಡ್ಡು ಮಾಡುತ್ತಿರುವುದನ್ನು ನೋಡಿ ಸಹಿಸಲಾರದೆ, ಇತ್ತ ಮಕ್ಕಳಿಗೆ ನಿಯತ್ತಾಗಿ ಪಾಠವೂ ಮಾಡದೆ ಎಡಬಿಡಂಗಿಗಳಾಗಿ ಉಳಿದು ಬಿಡುತ್ತಾರೆ.

ಇಂತಹವರ ನೇಮಕ ಆಗುವಾಗ ನಡೆದ ಅಕ್ರಮಗಳ ಬಗ್ಗೆ ಸಿ.ಐ.ಡಿ ತನಿಖೆ ನಡೆಸಿ ಸೂಕ್ತ ಸಾಕ್ಷಿ ಆಧಾರಗಳೊಂದಿಗೆ ವರದಿ ಸಲ್ಲಿಸಿದರೂ, ಸರಕಾರಕ್ಕೆ ತಕ್ಕ ತೀರ್ಮಾನ ತೆಗೆದುಕೊಳ್ಳುವ ಮನಸ್ಸಿಲ್ಲ. ಕಾರಣ ಆ ಬಗ್ಗೆ ವಿರೋಧ ಪಕ್ಷಗಳೂ ಒತ್ತಾಯ ಹೇರುತ್ತಿಲ್ಲವಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಅವರ ಅಣ್ಣ ಎಚ್.ಡಿ.ರೇವಣ್ಣ ಆಗಾಗ ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷ gonal-bhimappaಗೋನಾಳ್ ಭೀಮಪ್ಪನವರನ್ನು ಬೆಂಬಲಿಸಿಯೇ ಮಾತನಾಡಿದರು. ’ಪಾಪ ಅವರು ದಲಿತರು ಅನ್ನೋ ಕಾರಣಕ್ಕೆ ಸರಕಾರ ಅವರನ್ನು ಶಿಕ್ಷಿಸಲು ಹವಣಿಸುತ್ತಿದೆ..’ ಎಂದು ರೇವಣ್ಣ ಅನೇಕ ಬಾರಿ ಹೇಳಿದ್ದನ್ನು ಪತ್ರಕರ್ತರು ಕೇಳಿಸಿಕೊಂಡಿದ್ದಾರೆ. ತಮ್ಮ ಊರಲ್ಲಿರುವ ದಲಿತರ ಬಗ್ಗೆ ಎಂದಿಗೂ ಕಾಳಜಿ ತೋರಿಸದ ಇವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ದಲಿತ ಅಧಿಕಾರಿ ಪರ ಮಾತನಾಡುವುದೇಕೆ?

ಕಾರಣ ಇಷ್ಟೆ… ದೇವೇಗೌಡರ ಕುಟುಂಬದ ಕೃಪೆಯಿಂದ ಗೋನಾಳ್ ಭೀಮಪ್ಪ ಅಧ್ಯಕ್ಷರಾದರು. ಆ ನಂತರ ಅಧ್ಯಕ್ಷರು ಆ ಕುಟುಂಬದ ನಿರ್ದೇಶನದಲ್ಲಿ ಹಲವರಿಗೆ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಿದರು ಎಂಬುದು ಅನೇಕರು ದೂರುವ ಸಂಗತಿ. ಹಾಗಾಗಿ ಪ್ರಮುಖ ಪ್ರತಿಪಕ್ಷದ ನೇತಾರರಿಗೆ ತನಿಖೆ ಅಗತ್ಯ ಇರಲಿಲ್ಲ. ಇನ್ನು ಬಿಜೆಪಿಯ ಅನೇಕ ರಾಜಕಾರಣಿಗಳು ತಮ್ಮ ಅವಧಿಯಲ್ಲಿ ನೇಮಕವಾದ ಕೆ.ಪಿ.ಎಸ್.ಸಿ ಸದಸ್ಯರ ಮೂಲಕ ತಮ್ಮ ಹಿತೈಷಿಗಳಿಗೆ ಕೆಲಸ ಕೊಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನವರೂ ಇದಕ್ಕಿಂತ ಬೇರೆಯಲ್ಲ. ಹಾಗಾಗಿ ಯಾರಿಗೂ ತನಿಖೆ ಬೇಡ.

ಇತ್ತೀಚೆಗಷ್ಟೆ ಕಣ್ಣು ತೆರೆದಿರುವ ಲೋಕಸತ್ತಾ ಪಾರ್ಟಿ ಈ ವಿಚಾರವನ್ನು ಎತ್ತಿಕೊಂಡು ಪ್ರತಿಭಟನೆಗೆ ಇಳಿದಿದೆ. ಮೊದಲು ತನಿಖಾ ವರದಿಯನ್ನು ಬಹಿರಂಗ ಪಡಿಸಿ ಎಂದು ಸರಕಾರದ ಮೇಲೆ ಒತ್ತಡ ಹೇರಿತು. ಸರಕಾರ ಬಹಿರಂಗ ಮಾಡದೇ ಇದ್ದಾಗ ಪಕ್ಷದ ಮುಖಂಡರೇ ವರದಿಯನ್ನು ಬಿಡುಗಡೆ ಮಾಡಿದರು. ಆ ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ನೇರವಾಗಿ ಕೆಲ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಕ್ಕೆ ಪುರಾವೆಗಳಿವೆ. ಮೌಲ್ಯಮಾಪನದಲ್ಲಿ ಅವ್ಯವಹಾರ ಆಗಿದ್ದಕ್ಕೆ ದಾಖಲೆಗಳಿವೆ. ಇನ್ನಾದರೂ ಸರಕಾರ ಇತ್ತ ಗಮನ ಹರಿಸಲಿ.


ಕೆಪಿಎಸ್‌ಸಿ ಹಗರಣದ ಕುರಿತು ತನಿಖೆ ನಡೆಸಿದ ರಾಜ್ಯ ಗುಪ್ತಚರ ಇಲಾಖೆ (ಸಿಐಡಿ) ಸರ್ಕಾರಕ್ಕೆ ಸಲ್ಲಿಸಿರುವ ಸಂಪೂರ್ಣ ತನಿಖಾ ವರದಿ ಇಲ್ಲಿದೆ.

ವರ್ತಮಾನ.ಕಾಮ್‌ನಲ್ಲಿ ಕೆಪಿಎಸ್‌ಸಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮ, ಅನೈತಿಕತೆಗಳ ಕುರಿತು ಬಂದಿರುವ ಕೆಲವು ಲೇಖನಗಳು:

ಮೋದಿ ಅಂತಃಪುರದಲ್ಲಿ ಬೆಂಗಳೂರು ಯುವತಿ : ಸರ್ವಾಧಿಕಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ಇಲ್ಲ

– ಸುಧಾಂಶು ಕಾರ್ಕಳ

ತನ್ನ ಮಗಳು ಹೊತ್ತಲ್ಲದ ಹೊತ್ತಲ್ಲೂ ಆಸ್ಪತ್ರೆಗೆ ಅಮ್ಮನನ್ನು ಭೇಟಿಯಾಗೋಕೆ ಹೋಗಬೇಕಾಗುತ್ತೆ. ಹಾಗಾಗಿ ಅವಳಿಗೆ ಸೂಕ್ತ ಭದ್ರತೆ ಕೊಡಿ ಅಂತ ತಂದೆಯೊಬ್ಬರು ತನಗೆ ಪರಿಚಿಯ ಇರುವ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅದು ದೇಶದ ಬಹುದೊಡ್ಡ ಸಮಸ್ಯೆ ಏನೋ ಎಂಬಂತೆ, ಮುಖ್ಯಮಂತ್ರಿ ತನ್ನ ಮಂತ್ರಿಮಂಡಲದ ಪ್ರಮುಖ ಮಂತ್ರಿಗೆ ಭದ್ರತೆಯ ಜವಾಬ್ದಾರಿ ವಹಿಸುತ್ತಾರೆ. amit-shahಆ ಮನುಷ್ಯ ತನ್ನ ಇಲಾಖೆಯ ಅಧೀನದಲ್ಲಿರುವ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿಯನ್ನು ಬಳಸಿಕೊಂಡು ಆ ಯುವತಿಗೆ ಭದ್ರತೆ ಕೊಡುತ್ತಾರೆ.

ಅದು ಎಷ್ಟರ ಮಟ್ಟಿಗೆ ಎಂದರೆ… ಸ್ವತಃ ಮಂತ್ರಿಯವರೇ ಪದೇ ಪದೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಹುಡುಗಿ ಎಲ್ಲಿದ್ದಾಳೆ, ಅವಳ ಜೊತೆ ಯಾರಿದ್ದಾರೆ, ಅವಳು ಯಾರಿಗೆ ಫೋನ್ ಮಾಡಿದಳು, ಯಾವ ವಿಮಾನದಲ್ಲಿ ಪ್ರಯಾಣಿಸಿದಳು, ಯಾವ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದಳು, ಜೊತೆಯಲ್ಲಿದ್ದ ಹುಡುಗನ ವಯಸ್ಸೆಷ್ಟು.. ಹೀಗೆ ನಾನಾ ಮಾಹಿತಿ ಕಲೆ ಹಾಕುತ್ತಾರೆ. ಅಷ್ಟೇ ಅಲ್ಲ ಅವಳಿಗೆ ’ಭದ್ರತೆ’ ನೀಡುತ್ತಿರುವ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಿಡಬಹುದು ಅಂತ ಸ್ವತಃ ಮಂತ್ರಿ ಆತಂಕ ವ್ಯಕ್ತಪಡಿಸುತ್ತಾರೆ. ಜೊತೆಗೆ ಅವಳು ಐಎಎಸ್ ಅಧಿಕಾರಿಯನ್ನು ಸಂಪರ್ಕಿಸುತ್ತಾಳಾ ಎಂಬುದನ್ನೂ ಕರ್ತವ್ಯ ನಿರತ ಅಧಿಕಾರಿಗಳು ಪರಿಶೀಲಿಸಬೇಕು. ಆದರೂ ಆ ಪಕ್ಷದವರು ಸರಕಾರದ ’ಭದ್ರತೆ’ ಬಗ್ಗೆ ಆಕೆಗೆ ಗೊತ್ತಿತ್ತು ಎಂದು ಸುಳ್ಳೇ ಹೇಳುತ್ತಾರೆ.

ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಸದ್ಯ ಮುಖ್ಯಮಂತ್ರಿಯಾಗಿರುವ modi_amit_shahಗುಜರಾತ್ ರಾಜ್ಯದಿಂದ ಕೇಳಿ ಬಂದಿರುವ ಕತೆ ಇದು. ’ಭದ್ರತೆ’ಗೆ ಆದೇಶ ಕೊಟ್ಟವರು ಮುಖ್ಯಮಂತ್ರಿ, ಹೊಣೆ ಹೊತ್ತವರು ಅಮಿತ್ ಶಾ ಮತ್ತು ಆದೇಶವನ್ನು ಶಿರಸಾವಹಿಸಿ ಪಾಲಿಸಿದವರು ಪೊಲೀಸ್ ಅಧಿಕಾರಿ ಜಿ.ಎಲ್. ಸಿಂಘಾಲ್.

ಜಿ.ಎಲ್. ಸಿಂಘಾಲ್ ಸಿಐಡಿಗೆ ಸಲ್ಲಿಸಿರುವ ಫೋನ್ ರೆಕಾರ್ಡಿಂಗ್ ದಾಖಲೆಗಳಲ್ಲಿ ಅಮಿತ್ ಶಾ ಮತ್ತು ಆತನ ನಡುವೆ ನಡೆದ ಸಂಭಾಷಣೆಯ ಪೂರ್ಣ ವಿವರಗಳಿವೆ. ಕೋಬ್ರಾಪೋಸ್ಟ್.ಕಾಂ ಆ ಧ್ವನಿ ಮುದ್ರಿಕೆಗಳನ್ನು ಪ್ರಕಟಿಸಿದೆ. ಆ ಮಾತುಗಳನ್ನು ಒಮ್ಮೆ ಕೇಳಿದರೆ, ಗುಜರಾತ್ ಮುಖ್ಯಮಂತ್ರಿಯ ಇದುವರೆಗೆ ಅಷ್ಟಾಗಿ ಹೊರಬಾರದ ಮುಖ ಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರು ಮೂಲದ ಆರ್ಕಿಟೆಕ್ಟ್ ಒಬ್ಬಳು ಭೂಕಂಪದಿಂದ ತತ್ತರಿಸಿದ್ದ ಕಛ್ ಪುನರ್ನಿಮಾಣ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಪ್ರದೀಪ್ ಶರ್ಮ ಅವರ ಸಂಪರ್ಕಕ್ಕೆ ಬರುತ್ತಾಳೆ. ಭುಜ್ ನಗರದ ಗುಡ್ಡ ಪ್ರದೇಶವನ್ನು ಸುಂದರಗಾಣಿಸುವ ಯೋಜನೆಗೆ ಆಕೆ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಟ್ ಆಗಿ ಆಯ್ಕೆ ಆಗಿರುತ್ತಾಳೆ. ಆ ಯೋಜನೆ ಮುಗಿದು ಉದ್ಘಾಟನೆಯಾಗುವ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಗೆ ಪರಿಚಿತಳಾಗುತ್ತಾಳೆ. ಮೊದಲ ಭೇಟಿಯಲ್ಲಿ ಮೋದಿ ತನ್ನ ಖಾಸಗಿ ಇ-ಮೇಲ್ ಅವಳಿಗೆ ನೀಡುತ್ತಾರೆ.

ಸದ್ಯ ವಿವಿಧ ಆರೋಪಗಳನ್ನು ಹೊತ್ತು ಸೇವೆಯಿಂದ ಅಮಾನತ್ತಾಗಿರುವ ಪ್ರದೀಪ್ ಶರ್ಮ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಈ ಎಲ್ಲಾ ಮಾಹಿತಿಗಳಿವೆ. ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಸುಪ್ರಿಂಕೋರ್ಟ್‌ನಲ್ಲಿ ಅವರು ಮನವಿ ಮಾಡಿಕೊಂಡಿದ್ದರೆ. ನರೇಂದ್ರ ಮೋದಿ ಮತ್ತು ಆರ್ಕಿಟೆಕ್ಟ್ ನಡುವಿನ ’ಸಂಬಂಧ’ದ ಬಗ್ಗೆ ತನಗೆ ಖಚಿತ ಮಾಹಿತಿ ಇರುವುದು modi-for-women-powerಕೂಡಾ ತನ್ನ ವಿರುದ್ಧ ’ಸುಳ್ಳು’ ಆರೋಪಗಳನ್ನು ಹೊರಿಸಿ ಬಂಧಿಸಲು ಮತ್ತು ಅಮಾನತ್ತು ಮಾಡಲು ಕಾರಣ ಎನ್ನುವುದು ಅವರ ವಾದ.

ತಮ್ಮ ಅಫಿಡವಿಟ್ಟಿನಲ್ಲಿ ಅವರು ಹೇಳುವಂತೆ, ಆರ್ಕಿಟೆಕ್ಟ್ ಆಗಾಗ ತನ್ನ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದಾಳೆ. ಅವಳು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಹಾಗೆ ಹೇಳುತ್ತಿರಬಹುದು ಎಂದು ಮೊದಮೊದಲು ಸಂಶಯಿಸಿದ್ದ ಪ್ರದೀಪ್ ಶರ್ಮಾಗೆ ಅವಳ ಮಾತು ಸತ್ಯ ಎಂದು ಗೊತ್ತಾಗುವುದು ಸರಕಾರಿ ಕಾರ್ಯಕ್ರಮವೊಂದರಲ್ಲಿ ಮೋದಿ ಮತ್ತು ಆ ಯುವತಿ ಆಪ್ತವಾಗಿ ಖಾಸಗಿ ಸಂಗತಿಯನ್ನು ಹಂಚಿಕೊಂಡದ್ದನ್ನು ಆಕಸ್ಮಿಕವಾಗಿ ಅವರು ಕೇಳಿಸಿಕೊಂಡಾಗ.

2006 ರ ಮಾರ್ಚ್‌ನಲ್ಲಿ ಒಮ್ಮೆ ಬೆಂಗಳೂರಿನಿಂದ ಅಹ್ಮದಾಬಾದ್‌ಗೆ ಬಂದ ಆ ಯುವತಿ ಪ್ರದೀಪ್ ಶರ್ಮಾರನ್ನು ಫೋನ್ ಮೂಲಕ ಸಂಪರ್ಕಿಸಿ ಭುಜ್‌ಗೆ ಭೇಟಿ ನೀಡುವ ಉದ್ದೇಶ ಇದೆ ಎಂದು ಹೇಳುತ್ತಾಳೆ. ಆದರೆ ನಂತರ ಪ್ರದೀಪ್ ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಕಾರಣ ಅವಳ ದೂರವಾಣಿ ಆಫ್ ಆಗಿರುತ್ತದೆ. modi-bangalore-rallyನಂತರ ಭೇಟಿಯಾದಾಗ ಅವಳು ಹೇಳುವುದು ಆ ಎರಡು ದಿನ ಅವಳು ಇದ್ದದ್ದು ಮುಖ್ಯಮಂತ್ರಿಯ ನಿವಾಸದಲ್ಲಿ. ಅವಳನ್ನು ಹಿಂದಿನ ಬಾಗಿಲಿನಿಂದ ಒಳಗೆ ಕರೆದುಕೊಂಡು ಹೋಗಿದ್ದರಂತೆ. ಮುಖ್ಯಮಂತ್ರಿ ಮಲಗುವ ಕೋಣೆ ಸಮೀಪದಲ್ಲಿಯೇ ಅವಳನ್ನು ಉಳಿಸಿದ್ದರಂತೆ. ಅಂದು ಹೋಳಿ. ಮುಖ್ಯಮಂತ್ರಿ ಭೇಟಿ ಮಾಡಲು ಅನೇಕ ಗಣ್ಯರು ಬಂದಿದ್ದರು. ಆದರೂ, ಅವರು ಬೇಗನೆ ಮನೆಗೆ ಹಿಂತಿರುಗಿ ಅವಳೊಂದಿಗೆ ಕಾಲ ಕಳೆಯುತ್ತಾರೆ. ಆಗ ಅವಳಿಗೆ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತೆ. ತಕ್ಷಣ ಒಬ್ಬ ವೈದ್ಯರನ್ನು ಕರೆಸಬಹುದೇ ಎಂದು ಅವಳು ಕೇಳಿದಾಗ, ತನ್ನ ಆ ಹೊತ್ತಿನ ವಿಚಿತ್ರ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುತ್ತಾರಂತೆ ಸದ್ಯ ’ಭಾರತವನ್ನೇ ಉಳಿಸಲು’ ಹೊರಟಿರುವ ಪ್ರಧಾನಿ ಅಭ್ಯರ್ಥಿ!

ಆ ಯುವತಿ ಮೋದಿಯೊಂದಿಗೆ ಸಂಪರ್ಕಿಸಲು ಕರೆ ಮಾಡುತ್ತಿದ್ದ ಮೊಬೈಲ್ ದೂರವಾಣಿ ಸಂಖ್ಯೆಯನ್ನು (99099-23400) ಪ್ರದೀಪ್ ಶರ್ಮಾ ಅವಳಿಂದಲೇ ಪಡೆದು ತನ್ನ ಒಂದು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಅದೊಂದು ದಿನ ಆಕಸ್ಮಿಕವಾಗಿ ಯಾರಿಗೋ ಕರೆ ಮಾಡಲು ಹೋಗಿ, ಆ ನಂಬರ್ ಡಯಲ್ ಆಗಿ ಬಿಡುತ್ತದೆ. ಅತ್ತ ಕಡೆಯಿಂದ ಕರೆ ರಿಸೀವ್ ಮಾಡಿದವರು ಮಾತನಾಡುವುದಿಲ್ಲ. ಪ್ರದೀಪ್ ಶರ್ಮಾರ ಪ್ರಕಾರ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿ ಜೈಲು ಸೇರಲು ಈ ಘಟನೆ ಪ್ರಮುಖ ಕಾರಣ.

ಶರ್ಮಾ ಹೇಳುವಂತೆ ತಮ್ಮ ಕರೆಯ ನಂತರ ಮೋದಿ ಆ ನಂಬರ್‌ನ ವಾರಸುದಾರರನ್ನು ಹುಡುಕಿಸಿ ಹಿಂದಿನ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಆ ಮೂಲಕ ಆ ಯುವತಿ ಇವರೊಂದಿಗೆ ಸಂಪರ್ಕದಲ್ಲಿರುವುದನ್ನು ತಿಳಿದುಕೊಂಡರು. ಆ ನಂತರವೇ ಮೋದಿ ಸರಕಾರ ಆ ಯುವತಿಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನಿಸಿದ್ದು. ಆ ಕೆಲಸಕ್ಕೆ ಅಮಿತ್ ಶಾ ನೇಮಿಸಿದ್ದು ಜಿ.ಎಲ್.ಸಿಂಘಾಲ್‌ರನ್ನು. ಅವರು ಎಲ್ಲಾ ಕಾನೂನುಗಳನ್ನು ಸುಟ್ಟು ಹಾಕಿ ಅನೇಕರ ಫೋನ್‌ಗಳನ್ನು ಕದ್ದಾಲಿಸಿದ್ದಾರೆ. ಒಬ್ಬ ಯುವತಿಯನ್ನು ಎಡಬಿಡದಂತೆ ಫಾಲೋ ಮಾಡಿದ್ದಾರೆ. ಅವಳು ಸಂಪರ್ಕಿಸುವ ಎಲ್ಲರ ಹಿನ್ನೆಲೆ ಜಾಲಾಡಿದ್ದಾರೆ. ಇದನ್ನೆಲ್ಲಾ ನಾಗರಿಕ ಸಮಾಜ ಒಪ್ಪಿಕೊಳ್ಳಬೇಕೆ? ಆದರೂ ಆ ಯುವತಿಯ ಅಪ್ಪನ ಮನವಿ ಮೇರೆಗೆ ಸರಕಾರ ರಕ್ಷಣೆ ಕೊಟ್ಟಿತ್ತು ಎಂದು ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಮತ್ತು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಳ್ಳುತ್ತಾರೆಂದರೆ ಅವರನ್ನು ಏನನ್ನಬೇಕು?

ಒಬ್ಬ ಯುವತಿ ತನ್ನ ತಾಯಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಾಗ ಹೋಗುತ್ತಿರುತ್ತಾಳೆ ಎಂಬ ಕಾರಣಕ್ಕೆ ಒಬ್ಬ modi-rakhidayತಂದೆ ಮುಖ್ಯಮಂತ್ರಿಗೆ ಹೇಳಿ ಭದ್ರತೆ ಬೇಡಿದರು ಎಂದು ಬೂಸಿ ಬೀಡುವವರನ್ನು ಮುಂದಿನ ನಗೆಹಬ್ಬಕ್ಕೆ ಆಹ್ವಾನಿಸುವುದು ಸೂಕ್ತ. ನಮ್ಮ ಜನರಿಗೆ ಒಂದಿಷ್ಟು ಮನರಂಜನೆ ಸಿಗುತ್ತೆ. ಭದ್ರತೆ ನೀಡುವವರು ಕಾನೂನು ಉಲ್ಲಂಘಿಸಿ ಎಲ್ಲರ ಫೋನ್ ಕದ್ದು ಆಲಿಸಬಹುದೇ? ಇದನ್ನು ಹೇಗೆ ಒಪ್ಪಿಕೊಳ್ಳೋದು? ಇಷ್ಟೇ ಅಲ್ಲ.. ಹೀಗೆ ಅದೆಷ್ಟು ಜನರಿಗೆ ಈ ಗುಜರಾತ್ ಸರಕಾರ ಇಂತಹ “ವಿಶೇಷ ಭದ್ರತೆ” ನೀಡಿದೆಯೋ? ಎಷ್ಟು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರು ಈ “ಭದ್ರತೆ”ಯಿಂದ ಬಳಲಿದ್ದಾರೋ?

ಅಮಲುಗಣ್ಣುಗಳಿಗೆ ಮಾತ್ರ ಈ ಮೋದಿ ಅಪ್ರತಿಮ ನಾಯಕನಂತೆ ಕಾಣಬಹುದು. ಬೆಂಗಳೂರಿಗೆ ಬಂದಾಗ ಹೆಲಿಪ್ಯಾಡ್‌ನಲ್ಲಿ ಅವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಬಹುದು. ಆದರೆ ಜನಸಾಮಾನ್ಯರು ಇಂತಹವರ ರಾಜ್ಯದಲ್ಲಿ ಎಷ್ಟು ಸುರಕ್ಷಿತ? ಮೋದಿ ಮುಖದಲ್ಲಿ ಒಬ್ಬ ಸರ್ವಾಧಿಕಾರಿ ಕಂಡರೆ ನಿಮ್ಮ ಕಣ್ಣುಗಳು ಆರೋಗ್ಯವಾಗಿದ್ದಾವೆ ಎಂದೇ ಅರ್ಥ.


ಸಿಂಘಾಲ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವರಗಳು

ಆತಂಕ ಸೃಷ್ಟಿಸಿ ವಿ.ವಿ. ತಡೆಯುವ ಹುನ್ನಾರ

– ಸುಧಾಂಶು ಕಾರ್ಕಳ

ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ “ಟಿಪ್ಪು ವಿವಿ: ಮತ್ತೊಂದು ಅಲಿಗಡ ವಿವಿ ಆಗಬಹುದೆ?” ಎಂಬ ತಮ್ಮ ಬರಹದಲ್ಲಿ ಲೇಖಕ ಡಾ.ಜಿ.ಬಿ.ಹರೀಶ್ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವರದಿ ನೀಡಿರುವ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರ ವರದಿಯನ್ನು ಒಪ್ಪಿಕೊಳ್ಳುತ್ತಲೇ ಮುಸ್ಲಿಮರ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವವಿದ್ಯಾನಿಲಯಗಳ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ. ಒಂದೆಡೆ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದಂತಾಗಬಾರದು, ಮತ್ತೊಂದೆಡೆ ವರದಿಯ ಶಿಫಾರಸ್ಸುಗಳು ಜಾರಿಯೂ ಆಗಬಾರದು. ಅದು ಅವರ ಜಾಣತನದ ಅಭಿಪ್ರಾಯ. ಒಟ್ಟಿನಲ್ಲಿ ಅಲ್ಪಸಂಖ್ಯಾತರು ಇದ್ದಲ್ಲೇ ಇರಬೇಕು.

ತಮ್ಮ ವಾದ ಮಂಡಿಸುವ ಧಾಟಿಯಲ್ಲಿ ಅಲಿಗಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೋಮುಗಲಭೆಗಳಲ್ಲಿ Aligarh-muslim-univeristyಭಾಗವಹಿಸಿ ಅಲಿಗಡದ ನಿವಾಸಿಗಳಾದ ಹಿಂದೂಗಳನ್ನು ಆತಂಕಕ್ಕೆ ಒಳಪಡಿಸಿದರು ಎಂದು ಆರೋಪಿಸಿದ್ದಾರೆ. ಅಷ್ಟಕ್ಕೆ ಅವರ ವಾದ ನಿಲ್ಲುವುದಿಲ್ಲ. ಮುಂದೊಂದು ದಿನ ಉದ್ದೇಶಿತ ಟಿಪ್ಪು ವಿ.ವಿ ವಿದ್ಯಾರ್ಥಿಗಳಿಂದ ಅಂತಹದೊಂದು ವಾತಾವರಣ ಸೃಷ್ಟಿಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ಕಾಲೇಜು ಶಿಕ್ಷಣ ಪಡೆದುಬಿಟ್ಟರೆ ಅಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎನ್ನುವ ಆಲೋಚನೆ ತೀರಾ ಸಂಕುಚಿತ ಮನಸ್ಸಿನ ಅಭಿವ್ಯಕ್ತಿ. ಒಂದು ಕೋಮಿನ ಯುವಕರನ್ನು ಹಿಂಸೆ, ಗಲಭೆ, ಭಯೋತ್ಪಾದಕ ಕೃತ್ಯಗಳಿಗೆ ಕಾರಣಕರ್ತರೆಂದು ನೋಡುವ ಜಾಗತಿಕ ದೃಷ್ಟಿಕೋನದ ಭಾಗವಾಗಿ ಹರೀಶ್ ಅವರ ಬರಹ ಕಾಣುತ್ತಿದೆ.

ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಸೋಕಾಲ್ಡ್ ಸಂಸ್ಕೃತಿ ಉಳಿಸುವ ನೆಪದಲ್ಲಿ ಪಬ್ ದಾಳಿ ನಡೆಯಿತು. ಹೋಮ್ ಸ್ಟೇ ದಾಳಿ ನಡೆಯಿತು. ಈ ಪ್ರಕರಣಗಳಲ್ಲಿ ದಾಳಿ ಮಾಡಿ ಹಿಂಸೆಗೆ ಕಾರಣರಾದವರು ಓದಿದ ಶಾಲೆ, ವಿಶ್ವವಿದ್ಯಾನಿಲಯಗಳು ಯಾವುವು? ಅಷ್ಟೇ ಅಲ್ಲ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಅಲ್ಪಸಂಖ್ಯಾತ ಕೋಮುಗಳನ್ನು ಹೀಯಾಳಿಸುವ, ಸಮಾಜ ಸುಧಾರಕರನ್ನು ಅವಮಾನಿಸುವ ಬರಹಗಳನ್ನು ಬರೆದುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಸಣ್ಣ ಮನಸಿನ ವ್ಯಕ್ತಿಗಳು ಓದಿದ್ದು ಯಾವ ಕಾಲೇಜುಗಳಲ್ಲಿ ಎನ್ನುವುದನ್ನೂ ಒಮ್ಮೆ ನೋಡಬೇಕಲ್ಲವೆ?

ಸೂಕ್ಷ್ಮವಾಗಿ ಗಮನಿಸಿದರೆ ವ್ಯಕ್ತಿ ಪೂಜೆ, ಅಂಧ ಶ್ರದ್ಧೆ, ಪಂಕ್ತಿ ಬೇಧಗಳನ್ನು ಅನೂಚಾನವಾಗಿ ಅನುಸರಿಸಿಕೊಂಡು ಬಂದಿರುವ ಅನೇಕ ಮಠ, ದೇವಸ್ಥಾನ, ಆಶ್ರಮಗಳು ನಡೆಸುವ ಶಾಲೆ, ಕಾಲೇಜುಗಳಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಇಂತಹ ಕೋಮು ಭಾವನೆಗಳನ್ನು ಹೊತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಆ ನಂತರವೂ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅದೇ ಚಾಳಿಯನ್ನು ಮುಂದುವರಿಸಿ, ತಮ್ಮ ಸಂಕುಚಿತ ಅಭಿಪ್ರಾಯಗಳನ್ನು ಸಾರ್ವತ್ರಿಕ ಅಭಿಪ್ರಾಯಗಳೇನೋ ಎಂಬಂತೆ ಬಿಂಬಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. bghareesh-tumkur-univeristyಆ ಬಗ್ಗೆಯೂ ಹರೀಶ್ ಅವರು ಒಮ್ಮೆ ಕಣ್ಣು ಹಾಯಿಸಲಿ.

ಹಿಂದೊಮ್ಮೆ ಹರೀಶ್ ಅವರು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ವಿಷಕಾರಕ ಕಾದಂಬರಿ “ಆವರಣ”ವನ್ನು ಬಲವಾಗಿ ಸಮರ್ಥಿಸುತ್ತ ಮಾತನಾಡುವಾಗ ’ಹಿಂದೂಗಳು ಇದುವರೆಗೆ ತಾಳ್ಮೆ, ಸಹನೆ ಕಾಪಾಡಿಕೊಂಡು ಬಂದಿದ್ದೇ ನಮ್ಮ ಇಂದಿನ ಸ್ಥಿತಿಗೆ ಕಾರಣ’ ಎಂದು ತಮ್ಮ ವ್ಯಥೆ ವ್ಯಕ್ತಪಡಿಸಿದ್ದರು. ಆ ಮೂಲಕ ಅವರು ಬಹುಸಂಖ್ಯಾತ ಸಮುದಾಯವನ್ನು ರೊಚ್ಚಿಗೇಳಿಸುವ ಪ್ರಯತ್ನ ಮಾಡಿದ್ದರು ಎಂದೇ ಹೇಳಬೇಕು. ಇವರು ಮುಂದೆ ಕೆಲವು ಕಾಲ ಒಂದು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ಕೇಳಿದ್ದೇನೆ. ಹಾಗಾದರೆ ಒಂದು ಕೋಮಿನ ಬಗ್ಗೆ ದ್ವೇಷದ ಭಾವನೆ ಇಟ್ಟುಕೊಂಡಿರುವ ಮನುಷ್ಯ ತನ್ನ ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಿರಬಹುದು ಎನ್ನುವುದು ನನ್ನ ಆತಂಕ.

ಹರೀಶ್ ಅವರು ಇಂತಹ ಮಾತುಗಳಿಂದ ಅಲ್ಪಸಂಖ್ಯಾತರಿಗೆ avarana-slbವಿ.ವಿ.ಯ ಅಗತ್ಯವಿಲ್ಲ ಮತ್ತು ಆ ಮೂಲಕ ಅವರಿಗೆ ಉನ್ನತ ಶಿಕ್ಷಣ ಬೇಡ ಎನ್ನುವ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೊರಹಾಕಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ವಿ.ವಿ.ಗಳು ಅಲ್ಪಸಂಖ್ಯಾತರನ್ನು ಶಿಕ್ಷಿತರನ್ನಾಗಿ ಮಾಡುವಲ್ಲಿ ಗಣನೀಯವಾಗಿ ಸೋತಿರುವ ಕಾರಣ ಮುಸ್ಲಿಮರಿಗೆ ಹೆಚ್ಚಿನ ಅವಕಾಶ ಇರುವ ವಿಶ್ವವಿದ್ಯಾನಿಲಯದ ಅಗತ್ಯ ಎದ್ದುಕಾಣುತ್ತಿದೆ. ಸಾಚಾರ್ ವರದಿಯ ಅಂಶಗಳನ್ನು ಒಪ್ಪುವ ನೀವು, ಸದ್ಯ ಚಾಲ್ತಿಯಲ್ಲಿರುವ ವಿ.ವಿಗಳು ಅಲ್ಪಸಂಖ್ಯಾತರಿಗೆ ಶಿಕ್ಷಣ ಕೊಡಿಸುವಲ್ಲಿ ಸೋತಿವೆ ಎನ್ನುವುದನ್ನೂ ಒಪ್ಪಲೇಬೇಕಲ್ಲ. ಈಗಲಾದರೂ ಈ ಚಾರಿತ್ರಿಕ ಅನ್ಯಾಯವನ್ನು ಸರಿದೂಗಿಸಲು ವಿಶೇಷ ಪ್ರಯತ್ನ ಅಗತ್ಯ ಎಂಬ ಸಂಗತಿಯನ್ನು ಒಪ್ಪಿಕೊಳ್ಳಲು ಏನಡ್ಡಿ?