Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಜೀವನವೆಂದರೆ ಏನು, ನಡೆದಾಡುವ ನೆರಳು

– ಬಿ.ಶ್ರೀಪಾದ ಭಟ್

Hell is empty and all devils are here – Shakespeare.

ಹಾಲಿವುಡ್ ನಟ ಎಲಿ ವಲಾಚ್ ಮೊನ್ನೆ ತನ್ನ 98ನೇ ವಯಸ್ಸಿನಲ್ಲಿ ತೀರಿಕೊಂಡ. ಈ ಸುದ್ದಿಯನ್ನು ಓದಿಗಾಗ ಕೂಡಲೆ ನೆನಪಾದದ್ದು ಅರವತ್ತರ ದಶಕದಲ್ಲಿ ತೆರೆಕಂಡ ಮೂರು ಕೌಬಾಯ್ ಚಿತ್ರಗಳು. A Fistful of Dollars,  For a Few Dollars More, The Good, The Bad and The Ugly ಎನ್ನುವ ಈ ಮೂರು ಚಿತ್ರಗಳು Dollars Trilogy ಎಂದೇ ಖ್ಯಾತಿ ಹೊಂದಿದ್ದವು. ಈ ಮೂರರಲ್ಲಿಯೂ ಕ್ಲಿಂಟ್ ಈಸ್ಟ್‌ವುಡ್ dollars-trilogyಅಭಿನಯಿಸಿದ್ದರೆ, ಕಡೆಯ ಎರಡು ಚಿತ್ರಗಳಲ್ಲಿ ಲೀ ವಾನ್ ಕ್ಲೀಫ್, ಮತ್ತು The Good The Bad and The Ugly ಸಿನಿಮಾದಲ್ಲಿ ವಲಾಚ್ Ugly ‘ಟುಕೋ’ ಪಾತ್ರದಲ್ಲಿ ಅಭಿನಯಿಸಿದ್ದ. ಈ ಮೂರು ಸಿನಿಮಾಗಳನ್ನು ಸೆರಿಗೋ ಲಿಯಾನ್ ನಿರ್ದೇಶಿಸಿದ್ದ. ಎನ್ನಿಯೋ ಹಿನ್ನೆಲೆ ಸಂಗೀತ ನೀಡಿದ್ದ. ಹೌದು ಮೊದಲೇ ಹೇಳಿಬಿಡಬೇಕು. ಈ ಮೂರು ಸಿನಿಮಾಗಳ ಕ್ರೇಜ್ ಇದ್ದದ್ದು ಅವುಗಳ ಥೀಮ್ ಮ್ಯೂಸಿಕ್‌ನಲ್ಲಿ. ಈ ಥೀಮ್ ಮ್ಯೂಸಿಕ್ ಈ ಸಿನಿಮಾಗಳ ಟ್ರಂಪ್ ಕಾರ್ಡ್. ಇಂದಿಗೂ ಆ ಸಿನಿಮಾಗಳನ್ನು ನೋಡಿದವರು ಗುನುಗುವುದು ಆ ಥೀಮ್ ಮ್ಯೂಸಿಕ್ ಅನ್ನು. ಸಣ್ಣ ತೋಳವೊಂದರ ಊಳಿಡುವ ಸದ್ದನ್ನು ಹೋಲುತ್ತಿದ್ದ ಈ ಥೀಮ್ ಮ್ಯೂಸಿಕ್ The Good, The Bad and The Ugly ಸಿನಿಮಾದಲ್ಲಿ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್‌ಗೆ ಹಿನ್ನೆಲೆಯಲ್ಲಿ ಕೊಳಲನ್ನು ಬಳಸಿದ್ದರೆ,, The Bad ಪಾತ್ರಧಾರಿ ಕ್ಲೀಫ್‌ಗೆ ವಿಚಿತ್ರ ಬಗೆಯ ವಾದ್ಯವನ್ನು (ಹೆಸರು ಗೊತ್ತಿಲ್ಲ) ಬಳಸಿದ್ದರೆ, The Ugly ಟುಕೋ ಪಾತ್ರಧಾರಿ ವಲಾಚ್‌ಗೆ ಊಳಿಡುವ ಮನುಷ್ಯರ ಧ್ವನಿಗಳನ್ನು ಬಳಸಿದ್ದು ವಿಶಿಷ್ಟವಾಗಿತ್ತು. ಈ “ಥೀಮ್ ಮ್ಯೂಸಿಕ್” ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತದೆ. ಥೀಮ್ ಮ್ಯೂಸಿಕ್ ಅನ್ನು ಚಿತ್ರದೊಂದಿಗೆ ಬೇರ್ಪಡಿಸಿ ನೋಡಿದರೆ ಇಡೀ ಸಿನಿಮವೇ ನಿರ್ಜೀವವಾಗುತ್ತದೆ. ಇದು ಇಡೀ ಸಿನಿಮಾಗೆ ಒಂದು ವಿಶಿಷ್ಟ ಐಡೆಂಟಿಟಿಯನ್ನು ತಂದುಕೊಟ್ಟಿದ್ದದನ್ನು ಮರೆಯುವ ಹಾಗೆಯೇ ಇಲ್ಲ. Eastwood_Good_Bad_and_the_UglyFor a Few Dollar More ಸಿನಿಮಾಗಾಗಿ ಬಳಸಿದ ಸೌಂಡ್ ಟ್ರಾಕ್ ಸಹ ಅಷ್ಟೇ ಜನಪ್ರಿಯವಾಗಿತ್ತು. ಕನ್ನಡದ ಬಂಧನ ಸಿನಿಮಾದ ಹಾಡು “ಬಣ್ಣ, ಬಣ್ಣ, ನನ್ನ ಒಲವಿನ ಬಣ್ಣ, ನೀನಕ್ಕರೆ ಹಸಿರು, ಉಲ್ಲಾಸದ ಉಸಿರು” ಸಾಲುಗಳಲ್ಲಿ ಬರುವ ರಾಗ,ಧಾಟಿ,ಏರಿಳಿತ ಮತ್ತು ಬಂದಿಶ್ ಅನ್ನು ಸಂಪೂರ್ಣವಾಗಿ For a Few Dollars More ಸಿನಿಮಾದಿಂದ ನಕಲು ಮಾಡಿದ್ದು.

The Good, The Bad and The Ugly ಸಿನಿಮಾದಲ್ಲಿ ನಿದೇಶಕ ಲಿಯಾನ್ ಶಬ್ದಕ್ಕಿಂತಲೂ ದೃಶ್ಯಗಳನ್ನು ಹೆಚ್ಚಿಗೆ ಬಳಸಿದ್ದ. ಅದನ್ನೇ ನಂಬಿದ್ದ ಮತ್ತು ಯಶಸ್ವಿಯಾಗಿದ್ದ. ಆರಂಭದ ದೃಶ್ಯವಾದ ವಿಶಾಲವಾದ ಪಶ್ಚಿಮದ ಕುರುಚಲು ಬಯಲನ್ನು ತೋರಿಸುತ್ತಾ ಕ್ಯಾಮೆರ ಎಲ್ಲಿಯೂ ಕಟ್ ಆಗದೆ ನಿಧಾನವಾಗಿ ದೈನ್ಯತೆಯ ಮುಖದ ಅಸಹಾಯಕ ವ್ಯಕ್ತಿಯ ಮೇಲೆ ಕೇಂದ್ರೀಕೃತಗೊಳ್ಳುತ್ತದೆ. ಅಷ್ಟೇ ನಿರ್ದೇಶಕ ಮಾಡಿದ್ದು.ಮಿಕ್ಕಿದ್ದೆಲ್ಲಾ ಚಿತ್ರಕತೆ ನಿಭಾಯಿಬಿಟ್ಟಿತು. ಯಾವುದೇ ದೊಡ್ಡ ದೊಡ್ಡ ಆಶಯಗಳನ್ನು ಇಟ್ಟುಕೊಳ್ಳದೆ ಕೇವಲ ಕಾಗಕ್ಕ ಗುಬ್ಬಕ್ಕ ಕತೆಯನ್ನು ಹೇಳುತ್ತಾ ಲಿಯಾನ್ ಇಡೀ ಸಿನಿಮಾದುದ್ದಕ್ಕೂ ಅನೇಕ ಸಂಕೇತಗಳನ್ನು ಪರಿಣಾಮಕಾರಿಯಾಗಿ ಕಟ್ಟುತ್ತಾನೆ. The Ugly ಟುಕೋ ಪಾತ್ರ ಒಂದು ಬಗೆಯ ಬಫೂನ್‌ಗಿರಿ ಕ್ರೌರ್ಯದ ಅಭಿನಯವನ್ನು ಬೇಡುತ್ತಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದು ವಲಾಚ್. ಆತ ಬಫೂನ್‌ಗಿರಿಕ್ರೌರ್ಯದ ಪಾತ್ರವೇ ತಾನಾಗಿದ್ದ. ಇಡೀ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿದ್ದ ವೆಲಾಚ್ ಪ್ರತಿ ಫ್ರೇಮಿನಲ್ಲೂ ಮುಂದೆ ಈತ ಏನೋ ಮಾಡುತ್ತಾನೆ ಎಂದು ಕಾಯುವಂತೆ ಅಭಿನಯಿಸಿದ್ದ. ಒಂದು ದೃಶ್ಯದಲ್ಲಿ ಈತನ ಮೇಲೆ ಸೇಡು ತೀರಿಸಿಕೊಳ್ಳಲು ಎಂಟು ತಿಂಗಳು ಕಾಯುತ್ತಿದ್ದ ಬಾಡಿಗೆ ಕೊಲೆಗಾರನ ಕೈಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ವಲಾಚ್ ಸಿಕ್ಕಿಕೊಳ್ಳುತ್ತಾನೆ. ಆ ಬಾಡಿಗೆ ಕೊಲೆಗಾರ ತಾನು ಹೇಗೆ ವಲಾಚ್‌ನನ್ನು ಕೊಲೆ ಮಾಡಲು ಎಂಟು ತಿಂಗಳುಗಳ ಕಾಲ ಹುಡುಕುತ್ತಿದ್ದೆ ಎಂದು ವಿವರಿಸುತ್ತಿರುವಾಗಲೇ ವಲಾಚ್ ತನ್ನ ಪಿಸ್ತೂಲಿನಿಂದ Eli_Wallach_The_Uglyಬಾಡಿಗೆ ಕೊಲೆಗಾರನನ್ನೇ ಮುಗಿಸಿಬಿಡುತ್ತಾನೆ. ನಂತರ ಬಾತ್ ಟಬ್‌ನಿಂದ ಮೇಲಕ್ಕೇಳುತ್ತಾ ವಲಾಚ್ “If you want to shoot, shoot. Don’t talk” ಎಂದು ಬಫೂನ್‌ಗಿರಿಕ್ರೌರ್ಯದ ಶೈಲಿಯಲ್ಲಿ ಹೇಳುವ ಡೈಲಾಗ್ ಇಡೀ ಚಿತ್ರದ ಭಾಷ್ಯೆಯನ್ನು ಸಂಕೇತಿಸುತ್ತದೆ. ಇದೇ ಭಾಷ್ಯೆಯನ್ನೇ The Good ಬ್ಲಾಂಡೀ ಪಾತ್ರಧಾರಿ ಈಸ್ಟ್‌ವುಡ್ ಇಡೀ ಚಿತ್ರದುದ್ದಕ್ಕೂ ತನ್ನ ನಡುವಳಿಕೆಗಳಿಂದಲೇ ನಿರ್ವಹಿಸುತ್ತಾ ಹೋಗುತ್ತಾನೆ. ಈಸ್ಟ್‌ವುಡ್ ಎಲ್ಲಿಯೂ ಹೆಚ್ಚು ಮಾತನಾಡುವುದಿಲ್ಲ. ತೊಡೆಗೆ, ಕೈತೋಳಿಗೆ ಬೆಂಕಿ ಕಡ್ಡಿಯನ್ನು ಗೀರಿ ಚುಟ್ಟಾವನ್ನು ಹತ್ತಿಸುವ ಈಸ್ಟ್‌ವುಡ್‌ನ ಆ ಸ್ಟಂಟ್ ಆ ಕಾಲಕ್ಕೆ ತುಂಬಾ ಜನಪ್ರಿಯವಾಗಿತ್ತು. ಈಸ್ಟ್‌ವುಡ್ “Cut Throat” ಗುಣವುಳ್ಳ ತಣ್ಣಗಿನ ಕ್ರೌರ್ಯ ಸಹ ಇಡೀ ಚಿತ್ರದ ಗುಣವೂ ಹೌದು. ಅಲ್ಲಿ ಎಲ್ಲರೂ ‘Cut Throat’ ಗುಣವುಳ್ಳವರೇ. ಈ ಸಿನಿಮಾದಲ್ಲಿ ಮಮತೆಗೆ ಸ್ಥಾನವೇ ಇಲ್ಲ. ಮಮತೆಯ ಸಂಕೇತವಾಗಿ ಬರುವ ವಲೇಚ್‌ನ ಅಣ್ಣನ ಪಾತ್ರವೂ ಸಹ ಕೇವಲ ಕೆಲವು ಸೆಕೆಂಡುಗಳಷ್ಟು. ಅದು ಸಿನಿಮಾದ ಕತೆಯಲ್ಲಿ ಬೆರೆಯುವುದೇ ಇಲ್ಲ. ಆದರೂ ತಣ್ಣಗಿನ ಕ್ರೌರ್ಯದ ಬ್ಲಾಂಡೀ ಈಸ್ಟ್‌ವುಡ್ ಸಿನಿಮಾದ ಕೊನೆಯ ಭಾಗದಲ್ಲಿ ಯುದ್ಧದಲ್ಲಿ ಹೋರಾಡುತ್ತ ಮಡಿದ ಸೈನಿಕರನ್ನು ಕಂಡು ಬೇಸರದಿಂದ “ಛೇ ಎಷ್ಟೊಂದು ದೇಹಗಳು ಅನಗತ್ಯವಾಗಿ ಹಾಳಾಗುತ್ತಿವೆ” ಎಂದು ಉದ್ಗರಿಸುತ್ತಾನೆ. ಸಾಯುತ್ತಿರುವ ಸೈನಿಕನೊಬ್ಬನಿಗೆ ಉಪಚರಿಸುವ ದೃಶ್ಯ ಸಹ ಹೃದಯಂಗಮವಾದದ್ದು. ತಣ್ಣಗಿನ ಕ್ರೌರ್ಯದ ಬ್ಲಾಂಡೀ ಹೀಗೆ ಇರಬಾರದೆ ಎಂದೂ ಅನಿಸುತ್ತದೆ. ಆದರೆ ಮತ್ತೆ ತನ್ನ ಕೊಲೆಗಾರನ ವ್ಯಕ್ತಿತ್ವಕ್ಕೆ ಮರಳುವ ಬ್ಲಾಂಡೀ ಸಿನಿಮಾದ ಧೀರ್ಘವಾದ ಕ್ಲೈಮಾಕ್ಸ್ ದೃಶ್ಯಕ್ಕೆ ಮರಳುತ್ತಾನೆ. ಆ ಕ್ಲೈಮಾಕ್ಸ್‌ನಲ್ಲಿ ಸ್ಮಶಾನದಲ್ಲಿ ಅಡಗಿಸಿಟ್ಟ ಬಂಗಾರಕ್ಕಾಗಿ ಅಚಾನಕ್ಕಾಗಿ ಕೂಡಿಕೊಳ್ಳುವ ಮೂವರು ಕೊಲೆಗಾರರ ಕೈ ಪಿಸ್ತೂಲಿನ ಮೇಲಿರುತ್ತದೆ. ಒಬ್ಬನು ಗುಂಡು ಹಾರಿಸಿದರೆ ಮಿಕ್ಕವರೆಲ್ಲರೂ ಗುಂಡು ಹಾರಿಸಿ ಎಲ್ಲರೂ ಸಾಯುತ್ತಾರೆ. ಈ ಕುತೂಹಲವನ್ನು ಎಷ್ಟು ಸೆಕೆಂಡುಗಳ ಕಾಲ ಅಥವಾ ಎಷ್ಟು ನಿಮಿಷಗಳ ಕಾಲ ಹಿಡಿದಿಡಬಹುದು? ಆದರೆ ಇದನ್ನು ನಿರ್ದೇಶಕ ಲಿಯೋನ್ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾನೆ. The Good, The Bad And The Uglyಇದೇ ಹಾದಿಯಲ್ಲಿ ಬಂದ ನೂರಾರು ಸಿನಿಮಾಗಳ ನಂತರ ಇಂದು ಈ ದೃಶ್ಯ ಸಾಮಾನ್ಯವಾಗಿರಬಹುದು. ಆದರೆ ಅದು Trend Setter ಆಗಿದ್ದನ್ನು ಮರೆಯಲು ಸಾಧ್ಯವೇ? ಈ ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ಬಂಗಾರಕ್ಕಾಗಿ ಹತಾಶೆಯಿಂದ ಸ್ಮಶಾನದಲ್ಲಿ ಅಗೆಯುತ್ತಿರುವ ವಲೇಚ್‌ಗೆ ಈಸ್ಟ್‌ವುಡ್ “ಗೆಳೆಯ, ಈ ಜಗತ್ತಿನಲ್ಲಿ ಎರಡು ಬಗೆಯ ವ್ಯಕ್ತಿತ್ವದ ಜನರಿರುತ್ತಾರೆ. ತುಂಬಿದ ಪಿಸ್ತೂಲನ್ನು ಹೊಂದಿದ ಜನ, ಮತ್ತೊಂದು ಸದಾ ಅಗೆಯುತ್ತಿರುವವರು. ನೀನು ಅಗೆಯುತ್ತಿರು” ಎಂದು ಹೇಳುತ್ತಾನೆ. ನಂತರ ವಲೇಚ್‌ನ ತಲೆಯ ಮೇಲೆ ನೇಣು ಕುಣಿಕೆ ನೇತಾಡುತ್ತಿರುತ್ತದೆ. ಇಡೀ ಚಿತ್ರದುದ್ದಕ್ಕೂ ಬರುವ ಈ ನೇಣು ಕುಣಿಕೆಯ ದೃಶ್ಯಗಳು ವ್ಯಕ್ತಿಯೊಬ್ಬನ ಅತ್ಮಹತ್ಯಾತ್ಮಕ ನಡುವಳಿಕೆಗಳನ್ನು ಸಾಂಕೇತಿಕವಾಗಿ ಹೇಳುತ್ತಾ ಹೋಗುತ್ತವೆ.

ಈ ಸಿನಿಮಾದ ನಂತರ ಈಸ್ಟ್‌ವುಡ್ ಖ್ಯಾತ ನಟ ಮತ್ತು ನಿರ್ದೇಶಕನಾಗಿದ್ದು, ವಲೇಚ್ ಖ್ಯಾತ ನಟನಾಗಿದ್ದು ಇಂದು ಇತಿಹಾಸ. ಆರಂಭದ ನಲವತ್ತು ಮತ್ತು ಐವತ್ತರ ದಶಕಗಳಲ್ಲಿ ಖ್ಯಾತ ರಂಗ ನಟರಾಗಿದ್ದ, ಖ್ಯಾತ ನಟಿ ಮರ್‍ಲಿನ್ ಮನ್ರೋಳ ಮೊದಲ ಗೆಳೆಯರಾಗಿದ್ದ (ಗೆಳೆಯ ಮಾತ್ರ ಎಂದು ವಲೇಚ್ ಒತ್ತಿ ಹೇಳುತ್ತಿದ್ದ!) ವಲೇಚ್‌ರನ್ನು ಇಂದು method acting ದಿಗ್ಗಜರಾದ ಮರ್‍ಲಿನ್ ಬಾಂಡ್ರೋ, ಅಲ್ ಪೆಸಿನೋ, ರಾಬರ್ಟ ಡಿ ನೈರೋ ರಂತಹವರ ಸಾಲಿನಲ್ಲಿ ನೆನಯಲಾಗುತ್ತದೆ.

ಅಂದ ಹಾಗೆ, The Good, The Bad and The Ugly (1966) ಚಿತ್ರಕ್ಕಿಂತ ಮೊದಲೇ ಅಕಿರೋ ಕುರುಸಾವಾನ “ಸೆವೆನ್ ಸಮುರಾಯ್ಸ್” ಚಿತ್ರದ ಹಾಲಿವುಡ್ ರಿಮೇಕ್ “The Magnificent Seven” (1960) ಚಿತ್ರದಲ್ಲಿ ಖಳನಾಯಕನಾಗಿ ವಿಜೃಂಭಿಸಿದ್ದು ಸಹ ಇದೇ ಎಲಿ ವಲೇಚ್.

ಕುವೆಂಪು ರಚಿತ ಮಕ್ಕಳ ನಾಟಕಗಳು


– ರೂಪ ಹಾಸನ


 

ಕುವೆಂಪು ಅವರು ಈ ನಾಡು ಕಂಡ ಶ್ರೇಷ್ಠ ಕವಿ ಹಾಗೂ ದಾರ್ಶನಿಕ. ಇಷ್ಟೇ10156079_609745305782339_685038433_n ಆಗಿದ್ದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ತುರ್ತು ಇರುತ್ತಿರಲಿಲ್ಲ. ಅವರು ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ರೀತಿ, ಅವರ ಸಾಮಾಜಿಕ ಕಾಳಜಿ, ಬದುಕಿನ ಹಕ್ಕಿನ ಬಗೆಗೆ ಇದ್ದ ಗೌರವ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನೀಡಿದ ಮಹತ್ವ, ತುರ್ತು ಪರಿಸ್ಥಿತಿಯ ವಿರುದ್ಧ ಅವರು ವ್ಯಕ್ತ ಪಡಿಸಿದ ಆಕ್ರೋಶ….. ಹೀಗೆ ಅವರ ಇಡೀ ಬದುಕೇ ಇತರರಿಗೆ ಮಾದರಿಯಾಗಿರುವಂತದ್ದು. ಕುವೆಂಪು ಅವರ ವೈಚಾರಿಕತೆಗೆ ಇರುವ ಮುಖ್ಯ ಲಕ್ಷಣ ವೈಜ್ಞಾನಿಕ ದೃಷ್ಟಿಕೋನವಾದ್ದರಿಂದಲೇ ಅದು ಸಾರ್ವಕಾಲಿಕತೆಯನ್ನು ಪಡೆದಿದೆ. ಅವರು ಕಥೆ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ, ನಾಟಕ ಅಷ್ಟೇ ಅಲ್ಲದೇ ಮಹಾಕಾವ್ಯವನ್ನು ಬರೆದಷ್ಟೇ ಪ್ರೀತಿಯಿಂದ ಮಕ್ಕಳ ಸಾಹಿತ್ಯ ಕೃಷಿಯನ್ನೂ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ.

ಸಾಮಾನ್ಯವಾಗಿ ಹಿರಿಯರ ಸಾಹಿತ್ಯ-ಚರ್ಚೆ-ಸಂವಾದಗಳಲ್ಲಿ ಮಕ್ಕಳನ್ನು ಮರೆತೇ ಬಿಟ್ಟಿರುತ್ತೇವೆ. ಮಕ್ಕಳ ಸಾಹಿತ್ಯ ಇಂದಿಗೂ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಹಾಗೇ ಮಕ್ಕಳ ಸಾಹಿತಿಯ ಬಗೆಗೂ ಸಮಾಜದಲ್ಲಿ ಒಂದು ಬಗೆಯ ಅವಜ್ಞೆ ಮನೆಮಾಡಿದೆ. ಹಿರಿಯರಿಗಾಗಿ ಸಾಹಿತ್ಯ ರಚಿಸುವ ಹೆಚ್ಚಿನ ಸಾಹಿತಿಗಳು ಮಕ್ಕಳಿಗಾಗಿ ಸಾಹಿತ್ಯ ರಚಿಸುವುದು ಕೀಳೆಂದು ಭಾವಿಸುತ್ತಾರೆ. ಆದರೆ ನವೋದಯ ಕಾಲದ ಹಲವು ಸಾಹಿತಿಗಳು ಹಿರಿಯರಿಗಾಗಿ ಸಾಹಿತ್ಯ ರಚಿಸುವ ಜೊತೆಗೇ ಮಕ್ಕಳ ಮೇಲಿನ ಪ್ರೀತಿಯಿಂದಲೂ ಕೃತಿಗಳನ್ನು ರಚಿಸಿದ್ದು ಮೆಚ್ಚಬೇಕಾದುದು. ಅದರಲ್ಲಿ ಕುವೆಂಪು ಅವರು ಕೂಡ ಒಬ್ಬರು.

ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಗಮನಾರ್ಹವಾದುದೆಂದೇ ಹೇಳಬೇಕು. ಅವರು ರಚಿಸಿದ ಮಕ್ಕಳ ನಾಟಕಗಳು ಎರಡೇ. 1926 ರಲ್ಲಿ ಬರೆದ ‘ಮೋಡಣ್ಣನ ತಮ್ಮ’. ಅದು ಇದುವರೆಗೆ ಆರು ಮುದ್ರಣಗಳನ್ನು ಕಂಡಿದೆ. 1930 ರಲ್ಲಿ ರಚಿಸಿದ ‘ನನ್ನ ಗೋಪಾಲ’ ನಾಟಕ ಏಳು ಮುದ್ರಣಗಳನ್ನು ಕಂಡಿದೆ. ಇದಲ್ಲದೇ ಇಂಗ್ಲೀಷ್ ಕವಿ ರಾಬರ್ಟ್ ಬ್ರೌನಿಂಗ್ ನ ‘ದಿ ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವಿತೆಯ ಪ್ರೇರಣೆಯಿಂದ ರೂಪುಗೊಂಡ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳನ್ನೊಳಗೊಂಡು ರಚಿತವಾದ ಕಥನ ಕಾವ್ಯ ಹಾಗೂ ನೀಳ್ಗಾವ್ಯವಾಗಿದ್ದು, ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕಿರಿಯರ ಕಾಣಿಕೆಯಲ್ಲಿ 1928ರಲ್ಲಿ ಮೊದಲಿಗೆ ಪ್ರಕಟವಾಗಿ, ನಂತರದಲ್ಲಿ ಆರು ಮುದ್ರಣವನ್ನು ಕಂಡಿದೆ. ನನ್ನ ಮನೆ, ಮರಿ ವಿಜ್ಞಾನಿ, ಶಿಶು ಗೀತಾಂಜಲಿ, ಮೇಘಪುರ, ಬೆಳ್ಳಿ ಹಬ್ಬದ ಕಟ್ಟಿದ ಬಳ್ಳಿ ಎಂಬ ಶಿಶುಕಾವ್ಯ ಸಂಕಲನಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿರುವ ಕುವೆಂಪು ಅವರು, ಮೀನಾಕ್ಷಿ ಮನೆ ಮೇಷ್ಟ್ರು, ಒಂದು ಯಶಸ್ವೀ ಕಥೆ, ಸನ್ಯಾಸಿ, ಗುಪ್ತಧನ, ಧನ್ವಂತರಿ ಚಿಕಿತ್ಸೆ, ವೈರಾಗ್ಯದ ಮಹಿಮೆ, ನರಿಗಳಿಗೇಕೆ ಕೋಡಿಲ್ಲ ಎಂಬ ಕಥಾ ಸಂಕಲನಗಳನ್ನೂ ರಚಿಸಿದ್ದಾರೆ.

1926ರಲ್ಲಿ ರಚಿತವಾದ ಕುವೆಂಪು ಅವರ ಮೊದಲ ನಾಟಕ, ಹಾಗೂ ಮಕ್ಕಳ ಗೀತ ನಾಟಕವೂ ಆಗಿರುವ ‘ಮೋಡಣ್ಣನ ತಮ್ಮ’ ಮೋಡದ ಜೊತೆಗೆ modannana-tammaಆಡಲು ಬಯಸುವ ಕಿಟ್ಟು ಎಂಬ ಪುಟ್ಟ ಹುಡುಗನ ಕತೆಯಾಗಿದೆ. ಒಂಟಿಯಾಗಿರುವ ಕಿಟ್ಟುವಿಗೆ ಒಮ್ಮೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಂಟಿಯಾಗಿ ತೇಲುತ್ತಿರುವ ಮೋಡವನ್ನು ನೋಡಿ ತಾನೂ ಅದರ ಜೊತೆಗೆ ಆಕಾಶಕ್ಕೆ ಹಾರಿ ಬಿಡುವ ಮನಸಾಗುತ್ತದೆ. ಅವನು ‘ಓ ಮೋಡಣ್ಣ, ಓ ಮೋಡಣ್ಣ ನಾನೂ ಬರುವೆನು ಕೈ ನೀಡಣ್ಣ’ ಎಂದು ಬೇಡಿಕೊಳ್ಳುತ್ತಾನೆ. ಆದರೆ ಮೋಡಣ್ಣನಿಗೆ ಈ ಹುಡುಗನನ್ನು ತನ್ನೊಂದಿಗೆ ಕರೆದೊಯ್ಯುವ ಮನಸಿಲ್ಲ. ಹೀಗೆಂದೇ ‘ನಿನ್ನ ತಾಯಿ ಬೈಯ್ದಾಳು’ ಎಂಬ ನೆಪವೊಡ್ಡಿ ಹುಡುಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕಿಟ್ಟುವಿಗೆ ಎತ್ತರದಲ್ಲಿ ತೇಲುವ ಮೋಡ, ಅದರ ಆಟ, ಮಿಂಚನ್ನೇ ಬಳೆಯಾಗಿ ಧರಿಸಿರುವ, ಗುಡುಗಿನೊಂದಿಗೆ ಆಡುವ ಎತ್ತರೆತ್ತರದ ಬೆಟ್ಟಗಳನ್ನು ಏರುವ, ದೂರ ದೂರದ ಊರುಗಳನ್ನು ನೋಡುವ ಮೋಡದ ಬದುಕು ವಿಶಿಷ್ಟವಾದುದು ಎನ್ನಿಸಿಬಿಟ್ಟಿದೆ. ಅದಕ್ಕೆ ಮೋಡದೊಡನೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ ಮೋಡ ಒಪ್ಪುತ್ತಿಲ್ಲ. ಹೀಗಾಗಿ ಕಿಟ್ಟು ಬೆಟ್ಟದ ಮೊರೆ ಹೋಗುತ್ತಾನೆ. ಇಡೀ ದಿನ ಬೆಟ್ಟದಲ್ಲೇ ಅಲೆವ ಕಿಟ್ಟುವಿಗೆ ಅದೂ ಒಬ್ಬ ಮಿತ್ರ. ಬೆಟ್ಟ ಕಿಟ್ಟುವಿನ ಪರವಾಗಿ ಮೋಡವನ್ನು ಬೇಡಿಕೊಳ್ಳುತ್ತದೆ. ಇಲ್ಲಿ ಕುವೆಂಪು ಅವರ ಕಲ್ಪನಾ ಶಕ್ತಿಯನ್ನು ಗಮನಿಸಬೇಕು.

ಶರಧಿಯ ನೀರನೆ ಹೊರುವಾ ನಿನಗೆ
ಕಿರಿಯವನಿವನತಿ ಭಾರವೆ, ಅಣ್ಣಾ?
ಸಿಡಿಲನು ಮಿಂಚನು ಆಳುವೆ ನೀನು
ಹುಡುಗನ ಆಳುವುದಸದಳವೇನು
ರೈತರ ನಿಂದೆಯ ಸೈರಿಪ ನೀನು
ತಾಯಿಯ ದೂರನು ಹೊಂದಿದರೇನು?

ಎನ್ನುತ್ತಾರೆ. ಆದರೆ ಮೋಡ ಇದಕ್ಕೂ ಜಗ್ಗುವುದಿಲ್ಲ. ಹತ್ತು ಕಡಲನ್ನ ಹೊತ್ತರೂ ಒಬ್ಬ ಹುಡುಗನನ್ನ ಹೊರಲಾರೆ. ರೈತರ ಗುಂಪೇ ಬೈಯ್ಯಬಹುದು, ಆದರೆ ತಾಯಿಯ ಶಾಪವನ್ನು ಸಹಿಸಲಾರೆ ಎನ್ನುತ್ತದೆ ಮೋಡ. ತಾಯಿಯ ಘನತೆಯನ್ನೂ ಈ ಮೂಲಕ ಕುವೆಂಪು ಅವರು ಸೂಕ್ಷ್ಮದಲ್ಲೇ ಎತ್ತಿ ಹಿಡಿಯುತ್ತಾರೆ. ಮತ್ತೆ ಮತ್ತೆ ಕಿಟ್ಟು ಮೋಡವನ್ನು ಬೇಡಿಕೊಳ್ಳುತ್ತಾನೆ. ಮೋಡದ ಮನೆಯಲ್ಲಿ ಉಳಿಯಲು ಕೊಡೆ, ಕಂಬಳಿ, ಹಾಸಿಗೆ, ಹೊದಿಕೆ ಎಲ್ಲವನ್ನೂ ತರುತ್ತೇನೆ ಒಂದೇ ದಿನ ಉಳಿದು ವಾಪಸ್ ಬಂದು ಬಿಡುತ್ತೇನೆ ಎನ್ನುತ್ತಾನೆ. ಮೋಡದಲ್ಲಿ ಹುಲಿ, ರಾಕ್ಷಸರು, ದೊಡ್ಡ ಊರುಗಳನ್ನು, ಕುರಿಗಳ ಹಿಂಡು, ಹೊಳೆ, ತೊರೆ, ಕಡಲು, ದಟ್ಟಡವಿಗಳನ್ನು ಕಾಣುತ್ತಿದ್ದೇನೆ ಎನ್ನುವ ಕಿಟ್ಟುವಿನ ಕಣ್ಣಿನ ಮೂಲಕ ಕುವೆಂಪು ಅವರು ಮಕ್ಕಳ ಮುಗ್ಧ ಕಾಲ್ಪನಿಕ ಹಾಗೂ ಭಾವುಕ ಜಗತ್ತನ್ನು ಕಟ್ಟಿಕೊಡುತ್ತಾರೆ. ನಂತರ ಕಿಟ್ಟು ಕಾಡನ್ನು ತನ್ನ ಪರವಾಗಿ ಮೋಡದ ಬಳಿ ಬೇಡಿಕೊಳ್ಳಲು ತಿಳಿಸುತ್ತಾನೆ. ಆದರೆ ಕಾಡಿಗೆ ಇಡೀ ಮನುಜ ಕುಲದ ಬಗ್ಗೆಯೇ ಅಸಹನೆ. ಮರಗಳನ್ನು ಕಡಿದು ಕಾಡನ್ನು ನಾಶಪಡಿಸುತ್ತಿರುವ, ಹೊಸ ಕಾಡನ್ನು ರೂಪಿಸಲು ಸಿದ್ಧವಿಲ್ಲದ ಮನುಷ್ಯರ ಸಂತತಿಯ ಕಿಟ್ಟುವನ್ನೂ ನಿನ್ನೊಂದಿಗೆ ಕರೆದೊಯ್ಯ ಬೇಡ ಎಂದು ಹೇಳುವ ಕಾಡಿನ ಮೂಲಕ, ಕಾಡಿನ ಮೂಕ ನೋವುಗಳ ಎಲ್ಲ ಮುಖಗಳನ್ನೂ ಕುವೆಂಪು ಅನಾವರಣಗೊಳಿಸುತ್ತಾ ಮಕ್ಕಳ ಮನಸಿನಲ್ಲಿ ಪ್ರಕೃತಿ ಪ್ರೀತಿಯನ್ನೂ ಮೂಡಿಸುವ ಪ್ರಯತ್ನ ಮಾಡುತ್ತಾರೆ.

ಪುರಾಣದಲ್ಲಿ ಚರ್ಚಿತವಾದ ಮೋಡದ ಕುರಿತ ವಿವರಗಳು, ಲೌಕಿಕ ಜಗತ್ತಿನ ವಿವರಗಳನ್ನು ಒಳಗೊಂಡಂತೆ, ಮೋಡದ ಬಾಯಿಂದ ಮಕ್ಕಳಿಗೆ ನೈತಿಕತೆಯ ಪಾಠವನ್ನು ಹೇಳಿಸುವುದನ್ನೂ ಇಲ್ಲಿ ಕಾಣುತ್ತೇವೆ. ಆದರ್ಶ ಪುರುಷರನ್ನೆಲ್ಲಾ ಕಿಟ್ಟುವಿಗೆ ಹೋಲಿಸಿ ಅವರಂತೆ ನೀನೂ ಆಗಬೇಕೆಂದು ಮೋಡ ಹಾರೈಸುತ್ತದೆ. ಅಷ್ಟರಲ್ಲಿ ಅವನ ತಾಯಿ ಕರೆಯುತ್ತಾಳೆ. ಮೋಡದ ಬಳಿ ಕಿಟ್ಟುವಿನ ಬೇಡಿಕೆಯೂ ಕರಗಿರುತ್ತದೆ. ಅವನು ಸಂತೋಷದಿಂದ ಮೋಡವನ್ನು ಬೀಳ್ಗೊಡುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ನಾಟಕದ ಓದಿಗಿಂತ, ಅಭಿನಯದ ಮೂಲಕ ನಾಟಕ ಹೆಚ್ಚು ಸಮರ್ಥವೂ ಸಾರ್ಥಕವೂ ಆಗುವುದು ನಿಜ. ಅಲ್ಲಲ್ಲಿ ಕೆಲವು ಮುಖ್ಯ ತಿದ್ದುಪಡಿಯೊಂದಿಗೆ ಈ ‘ಮೋಡಣ್ಣನ ತಮ್ಮ’ ನಾಟಕದ ಕೆಲವು ಯಶಸ್ವಿ ರಂಗ ಪ್ರಯೋಗಗಳೂ ಆಗಿವೆ ಎಂದು ಕೇಳಿದ್ದೇನೆ.

ಇನ್ನು ಕುವೆಂಪು ಅವರ ಎರಡನೆಯ ಮಕ್ಕಳ ನಾಟಕ 1930 ರಲ್ಲಿ ರಚಿತವಾದ ‘ನನ್ನ ಗೋಪಾಲ’. nanna-gopalaಇದರಲ್ಲಿ ದೇವರು ಮಗುವಿನ ಮುಗ್ಧತೆಗೆ ಒಲಿಯುತ್ತಾನೆ, ಕರ್ಮಠರಿಗಲ್ಲ ಎಂಬ ಸಂದೇಶವಿದೆ. ಬಡ ವಿಧವೆ ತಾಯಿಯೊಡನೆ ಕಾಡಿನ ಅಂಚಿನಲ್ಲಿ ವಾಸಿಸುವ ಬಾಲಕ ಗೋಪಾಲ, ಶಾಲೆಗೆ ಕಾಡನ್ನು ದಾಟಿ ಹೋಗ ಬೇಕಾದ ಅನಿವಾರ್ಯತೆ ಇದೆ. ಶ್ರೀಮಂತರ ಮನೆಯ ಮಕ್ಕಳಿಗೆ ಕಾಡನ್ನು ದಾಟಿ ಹೋಗಲು ಆಳುಗಳು ಜೊತೆಗಿದ್ದಾರೆ. ಕೃಷ್ಣನಲ್ಲಿ ನಿಷ್ಕಲ್ಮಶ ಭಕ್ತಿ ಇರುವ ಗೋಪಾಲನ ತಾಯಿ ತನ್ನ ಮಗನ ಜವಾಬ್ದಾರಿಯನ್ನು ಅವನಿಗೇ ವಹಿಸಿ ನಿಶ್ಚಿಂತಳಾಗಿದ್ದಾಳೆ. ಕಾಡಿನಲ್ಲಿ ಹೆದರಿಕೆಯಾದಾಗಲೆಲ್ಲ ಬಾಲಕ ಗೋಪಾಲ, ತನ್ನ ಅಣ್ಣನೆಂದು ತಾಯಿ ಹೇಳಿಕೊಟ್ಟ ಕೃಷ್ಣನನ್ನೇ ಕರೆದು ತನ್ನ ಭಯವನ್ನು ಹಂತ ಹಂತವಾಗಿ ಮೀರುತ್ತಲೇ ಕೃಷ್ಣನೊಂದಿಗೆ ಆಪ್ತತೆ ಮೂಡಿಬಿಡುತ್ತದೆ. ತಾಯಿಗೂ ಇದನ್ನು ತಿಳಿದು ಅತ್ಯಂತ ನಿರಾಳತೆ. ಕುವೆಂಪು ಅವರು ಬಾಲ್ಯವನ್ನು ವಿಶೇಷ ದೃಷ್ಟಿಯಿಂದ ಇಲ್ಲಿ ವಿವರಿಸಿದ್ದಾರೆ. ಮಗುವಿನ ಮನಸ್ಸನ್ನು ಹೊಕ್ಕು ಅದರ ಮನಸ್ಸಿನಲ್ಲಿ ಇರುವ ಬಾಲ್ಯ ಸಹಜವಾದ ಕುತೂಹಲ, ತಳಮಳ, ಆತಂಕಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಾಡಿನಲ್ಲಿನ ಕೃಷ್ಣ ಹಾಗು ಗೋಪಾಲರ ಆತ್ಮೀಯ ಮಾತುಕತೆಗಳಲ್ಲಿ ಮಕ್ಕಳ ಮುಗ್ಧ ಲೋಕದ ಅನಾವರಣವಿದೆ. ಗೋಪಾಲನ ಕುತೂಹಲದ ಪ್ರಶ್ನೆಗಳು ಹಾಗೂ ಕೃಷ್ಣನ ಸಮಂಜಸ ಉತ್ತರಗಳಲ್ಲಿ ಲೋಕದ ಎಲ್ಲ ವ್ಯಾಪಾರಗಳೂ ಮಗುವಿನ ನಿರ್ಮಲ ಮನಸ್ಸಿನ ಒಳತೋಟಿಯನ್ನು ಹಿಡಿದೇ ಚಲಿಸುತ್ತವೆ. ಶಾಲೆಯ ಗುರುಗಳು ತಮ್ಮ ಮನೆಯಲ್ಲಿ ವಿಶೇಷ ಮಂಗಳ ಕಾರ್ಯ ನಡೆಯುವುದೆಂದು ಗುರುದಕ್ಷಿಣೆ ನೀಡಬೇಕೆಂದು ಶಿಷ್ಯರಲ್ಲಿ ಕೇಳಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಗೋಪಾಲನ ತಾಯಿ ತನ್ನ ಬಳಿ ಕೊಡಲು ಏನೂ ಇಲ್ಲವೆಂದು ಅಣ್ಣನೆಂದೇ ತಿಳಿದ ಬನದ ಕೃಷ್ಣನಲ್ಲೇ ಕಾಣಿಕೆ ಕೇಳೆಂದು ಹೇಳುತ್ತಾಳೆ. ಕೃಷ್ಣ ಒಂದು ಕುಡಿಕೆಯಲ್ಲಿ ಮೊಸರು ಕೊಟ್ಟು ಕಳಿಸುತ್ತಾನೆ. ಶ್ರೀಮಂತರ ಮನೆಯ ಮಕ್ಕಳೆಲ್ಲ ಬೆಲೆ ಬಾಳುವ ವಸ್ತುಗಳನ್ನು ಕಾಣಿಕೆಯಾಗಿ ತಂದಿದ್ದು, ಅವರೆಲ್ಲ ಗೋಪಾಲನ ಕುಡಿಕೆಯ ಮೊಸರನ್ನು ತಮಾಷೆಯಾಗಿ ಆಡಿಕೊಂಡು ನಗುವ ಚಿತ್ರಣವನ್ನು ಕುವೆಂಪು ಅವರು ಅತ್ಯಂತ ಸಹಜವಾಗಿ ಮಕ್ಕಳ ತುಂಟ ಮನಸಿನಾಳವನ್ನು ಅರಿತವರಂತೆ ಚಿತ್ರಿಸಿದ್ದಾರೆ.

ಕುಡಿಕೆಯ ಮೊಸರು ಪಾತ್ರೆಗೆ ಎಷ್ಟು ಸುರಿದರೂ ಮತ್ತೆ ಮತ್ತೆ ತುಂಬುವ ಕಾಲ್ಪನಿಕತೆಯನ್ನೂ ಮಕ್ಕಳ ಮನೋಲೋಕದ ಪರಿಧಿಗೆ ಹಿಗ್ಗಲಿಸಿ ಕಟ್ಟಿಕೊಡುವ ಕುವೆಂಪು ಅವರು ಗುರುಗಳ ಮೂಲಕ ಗೋಪಾಲನ ತಾಯಿಯ ಹಿರಿಮೆಯನ್ನು ಕುರಿತು ಹೇಳಿಸುತ್ತಾ ಇಡೀ ವಿಶ್ವದ ತಾಯಂದಿರ ಹೃದಯ ವೈಶಾಲ್ಯತೆಯನ್ನೇ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಕೊನೆಯ ಅಂಕದಲ್ಲಿ ಗೋಪಾಲ ಮತ್ತು ಗುರುಗಳೊಂದಿಗೆ ಅ ಅಕ್ಷಯ ಮೊಸರನ್ನು ಕೊಟ್ಟ ಬನದ ಕೃಷ್ಣನನ್ನು ನೋಡಲು ಎಲ್ಲ ಹುಡುಗರೂ ಹೋಗುತ್ತಾರೆ. ಗೋಪಾಲ ಎಷ್ಟು ಕರೆದರೂ ಕೃಷ್ಣ ಕಾಣಿಸದಿದ್ದಾಗ, ಅವನು ದರ್ಶನ ತೋರುವಂತೆ ಕೃಷ್ಣನಲ್ಲಿ ಕಣ್ಣು ತುಂಬಿ ಬೇಡಿಕೊಳ್ಳುತ್ತಾನೆ. ಕೊನೆಗೆ ಅವನ ದನಿಯಷ್ಟೇ ಕೇಳುತ್ತದೆ, ಅವನು ಪ್ರತ್ಯಕ್ಷನಾಗುವುದಿಲ್ಲ. ಈ ಮೂಲಕ ಗೋಪಾಲ ಮತ್ತು ಅವನ ತಾಯಿಯ ಪ್ರಾಮಾಣಿಕ ಭಕ್ತಿ ಮತ್ತು ಪ್ರೀತಿಗಳು ಗೆಲ್ಲುವುದನ್ನು ಕುವೆಂಪು ಅವರು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ. ಹಾಗೇ ಈ ನಾಟಕ ಪುರಾಣ ಪ್ರತಿಮೆಯ ಪುನರ್ ಸೃಷ್ಟಿಯನ್ನು ಮಾಡುತ್ತಾ ಮನಸ್ಸಿನ ಅಂತರ್ ದೃಷ್ಟಿಯ ಕಡೆಗೆ ಒತ್ತು ಕೊಡುವುದನ್ನು ಕಾಣುತ್ತೇವೆ. ಈ ನಾಟಕವೂ ಯಶಸ್ವಿ ರಂಗ ಪ್ರಯೋಗವನ್ನು ಕಂಡು ಮಕ್ಕಳ ಮನಸನ್ನು ಗೆದ್ದಿದೆ.

‘ನನ್ನ ಗೋಪಾಲ’ ನಾಟಕವನ್ನು ಓದಿದ ಶ್ರೀ ಎ. ಆರ್, ಕೃಷ್ಣಶಾಸ್ತ್ರಿಗಳು ಕುವೆಂಪು ಅವರಿಗೆ ಬರೆದ ಪತ್ರದಲ್ಲಿ “ನಿಮ್ಮ ‘ನನ್ನ ಗೋಪಾಲ’ನಾಟಕ ಭಗವದ್ಗೀತೆ ಮತ್ತು ಭಾಗವತ ಎರಡರ ಸಾರಸರ್ವಸ್ವವನ್ನೂ ತನ್ನಲ್ಲಿ ಒಳಗೊಂಡಿರುವ ಒಂದು ಪುಟ್ಟ ಅನಘ್ರ್ಯ ರತ್ನ. ಕಣ್ಣೀರು ತುಂಬಿ ಅದನ್ನು ಓದಿದ್ದೇನೆ.” ಎನ್ನುತ್ತಾರೆ. ಬಹುಶಃ ಇದು ಕುವೆಂಪು ಅವರ ನಾಟಕಕ್ಕೆ ಸಿಕ್ಕ ಬಹು ದೊಡ್ಡ ಮೆಚ್ಚುಗೆ. ಆದರೆ ಈ ಎರಡೂ ಮಕ್ಕಳ ನಾಟಕದಲ್ಲಿ ಇರಲೇಬೇಕಾದ ರಂಜನೆ ಹಿಡಿದಿಡುವಂತಹ ಗುಣಕ್ಕಿಂತಾ ಹೆಚ್ಚಾಗಿ ಉಪದೇಶಾತ್ಮಕ, ಆದರ್ಶಮಯ ನೆಲೆಯಲ್ಲಿ ಚಿತ್ರಿತವಾಗಿದೆ. ಇಂದಿನ ಮಕ್ಕಳಿಗೆ 80-90 ವರ್ಷಗಳ ಹಿಂದೆ ರಚಿತವಾದ ಕುವೆಂಪು ಅವರ ಈ ನಾಟಕಗಳು ಹೇಗೆನ್ನಿಸುತ್ತದೆ ಎಂದು ತಿಳಿದುಕೊಳ್ಳಲೆಂದೇ ಈ ನಾಟಕಗಳನ್ನು ನಮ್ಮ ಮಕ್ಕಳ ಸಂಸ್ಥೆ ಪ್ರೇರಣಾ ವಿಕಾಸ ವೇದಿಕೆಯ ಸಾಹಿತ್ಯಾಸಕ್ತ ಮಕ್ಕಳಿಗೆ ಓದಲು ನೀಡಿದ್ದೆ. ಅವರು ಅದರ ಒಟ್ಟು ಕಥೆಯ ಸಾರಾಂಶವನ್ನು ಇಷ್ಟಪಟ್ಟರೂ ಅದರಲ್ಲಿ ತಮ್ಮನ್ನ ಕಾರ್ಟೂನು ಅಥವಾ ಮಕ್ಕಳ ಇತ್ತೀಚೆಗಿನ ನಾಟಕ ಹಾಗೂ ಮಕ್ಕಳ ಟಿವಿ ಶೋಗಳು ಹಿಡಿದಿಡುವಂತೆ ಹಿಡಿದಿಡಲ್ಲ ಎಂದು ಆರೋಪಿಸಿದರು. ಒಂದಿಷ್ಟು ನೀರಸವಾಗಿದೆ ಎಂಬ ಆಕ್ಷೇಪವನ್ನೂ ಮಾಡಿದರು. ಅದೂ 8 ರಿಂದ 10-12 ವರ್ಷದ ಮಕ್ಕಳಿಗಷ್ಟೇ ಇಂತಹ ಮುಗ್ಧ ಲೋಕದ ಕಥೆಗಳು ಇಷ್ಟವಾಗುತ್ತವೆಯೇ ಹೊರತು ಅದಕ್ಕಿಂತಾ ದೊಡ್ಡ ಮಕ್ಕಳಿಗೆ ಇಂತಹ ಭಾವುಕ ಕಥಾ ಹಂದರ ಹಿಡಿಸುವುದಿಲ್ಲ. ಆದರೆ ‘ಕಿಂದರಿ ಜೋಗಿ’ಯನ್ನು ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಈ ನೀಳ್ಗಾವ್ಯ ಸಶಕ್ತವಾಗಿ ಮಕ್ಕಳ ಮನಸ್ಸನ್ನು ಗೆಲ್ಲಲು ಸಫಲವಾಗಿದೆ ಎಂದೇ ಹೇಳಬೇಕು.

ಅವರ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ಮಕ್ಕಳ ಕಥನಕಾವ್ಯವಾದರೂ ಅದು ತನ್ನ 7325e9bab174325596e65326641444341587343ನಾಟಕೀಯ ಗುಣಗಳಿಂದ ಅದ್ಭುತ ನಾಟಕವಾಗಿ ಮಾರ್ಪಟ್ಟಿದೆ. ಈ ಕಥೆಯ ಭಾಷೆಯ ಲಾಲಿತ್ಯ ಎಂಥಹಾ ಅರಸಿಕ ಮಗುವನ್ನೂ ಹಿಡಿದಿಡುವಷ್ಟು ಸಶಕ್ತವಾಗಿದೆ. ಕಿಂದರಿಜೋಗಿ ಈ ಹೊತ್ತಿಗೂ ಮಕ್ಕಳನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದೆ. ಅದರ ಕಥಾ ಹಂದರ, ಸ್ವಾರಸ್ಯಕರ ನಿರೂಪಣೆ, ತಮಾಷೆಯ ಪ್ರಸಂಗಗಳು ಎಲ್ಲವೂ ಮನವನ್ನು ಸೆಳೆಯುತ್ತವೆ. ಇದು ವಿದೇಶಿ ಕಥೆಯ ರೂಪಾಂತರವಾದರೂ ನಮ್ಮ ಸಾಮಾಜಿಕ ಪರಿಸರದಲ್ಲಿಯೇ ಸಂಭವಿಸಿದಂತೆ, ಕನ್ನಡ ನಾಡಿನ ಮಣ್ಣಿನ ಹದವನ್ನು ತುಂಬಿ ಕುವೆಂಪು ಅವರ ಕಥನ ಸಾಮರ್ಥ್ಯದ ಮೂಲಕ ಪುನರ್ ಸೃಷ್ಟಿಯಾಗಿದೆ. ಇದು ಮೇಲ್ನೋಟಕ್ಕೆ ಮಕ್ಕಳ ನೀತಿ ಕಥೆಯಂತೆ ಕಂಡರೂ ಅದರೊಳಗೆ ಮಕ್ಕಳ ಮನೋಲೋಕವನ್ನು ವಿಸ್ತರಿಸುವ ಕಾಲ್ಪನಿಕ ಜಗತ್ತು ಅದ್ಭುತವಾಗಿ ಹೆಣೆದುಕೊಂಡಿದೆ.

ಕುವೆಂಪು ಅವರು ಈ ಕವಿತೆಯನ್ನು ಮೊದಲಿಗೆ ಶಿವಮೊಗ್ಗದ ಸಭೆಯೊಂದರಲ್ಲಿ ವಾಚಿಸಿದಾಗ ಪ್ರತಿ ನುಡಿಗೂ ದೀರ್ಘ ಕರತಾಡನದ ಪ್ರತಿಕ್ರಿಯೆ ದೊರಕಿತ್ತಂತೆ. ಮಕ್ಕಳಿಗೆ ಇಲಿಗಳ ದೊಡ್ಡ ಬಳಗದ ಕತೆ, ಅವುಗಳ ಅಸಾಧ್ಯ ಚೇಷ್ಟೆ ಖಂಡಿತಾ ರಂಜನೆಯ ಸಂಗತಿಯೇ. ಕಿನ್ನರಿಯ ನಾದಕ್ಕೆ ಇದ್ದಕ್ಕಿದ್ದ ಹಾಗೆ ಎಲ್ಲ ಅವನನ್ನು ಹಿಂಬಾಲಿಸುವುದು, ನೀರಲ್ಲಿ ಮುಳುಗಿ ಹೋಗುವುದು, ಹಾಗೇ ಮಕ್ಕಳೆಲ್ಲಾ ಹಿಂಬಾಲಿಸುವುದು, ಬೆಟ್ಟ ಬಾಯ್ದೆರೆದು ಅವರೆಲ್ಲಾ ಅದರೊಳಗೆ ಹೋಗಿಬಿಡುವುದು, ಅವಾಸ್ತವದ ಸಂಗತಿಗಳಾಗಿಯೂ ಬಾಲ ಮನಸ್ಸಿನ ಕುತೂಹಲವನ್ನು, ಅಚ್ಚರಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗಾಗಿಯೇ ಮಕ್ಕಳಿಗೆ ಇದು ಹಿಡಿಸಿದೆ ಮತ್ತು ಮುದಗೊಳಿಸಿದೆ.

ಬಾಲ್ಯದ ಕುರಿತು, ಕಳೆದುಹೋದ ಆ ಸಮಯದ ಕುರಿತು ಮರಳಿ ಅದನ್ನು ಪ್ರಕೃತಿಯ ಮಡಿಲಲ್ಲಿ ಪಡೆಯುವ ಕುರಿತು ಕುವೆಂಪು ಅವರು ಹಲವು ನಾಟಕಗಳಲ್ಲಿ ಬರೆಯುತ್ತಾ ಬಾಲ್ಯದ ಕುರಿತ ತಮ್ಮ ಅತ್ಯಂತ ಸಂತಸದ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಬಾಲ್ಯ ಒಂದು ಅಪರೂಪದ ಸಮಯ, ಮತ್ತೆಂದೂ ಸಿಗಲಾರದೇ ಹೋಗಿ ಬಿಡುತ್ತದೆ ಎಂಬ ಲಹರಿಯೊಂದಿಗೆ, ಬಾಲ್ಯವನ್ನು ದೈವೀಕವಾಗಿ ಕಾಣುವ ಕಣ್ಣು ನಮಗೆ ಕುವೆಂಪು ಅವರ ಎಲ್ಲ ಮಕ್ಕಳ ಸಾಹಿತ್ಯದಲ್ಲೂ ಸಿಗುತ್ತದೆ. ಬಾಲ್ಯವೆಲ್ಲ ಬದುಕಿನ ತಯಾರಿಗಾಗಿ ಸಿದ್ಧಗೊಳಿಸುವ ಹಂತವಾಗಿ ಕಾಣದೇ ಅದರಲ್ಲಿಯೂ ಒಂದು ಬಗೆಯ ಪರಿಪೂರ್ಣತೆಯನ್ನು ಕಾಣುವ ಬಗೆ ಇಲ್ಲೆಲ್ಲ ಗೋಚರಿಸುತ್ತದೆ.

ತಾಯಿ, ಮಗು ಮತ್ತು ಪ್ರಕೃತಿಯ ನಡುವಿನ ಸಂಬಂಧದ ಗಾಢತೆ ಹಾಗೂ ನಿಗೂಢತೆ ಪ್ರಕೃತಿ ಸಹಜವಾದರೂ ಅಪರೂಪದ ಭಾವಲೋಕಕ್ಕೆ ಕರೆದೊಯ್ಯುವ ಶಕ್ತಿ ಕುವೆಂಪು ಅವರಿಗಿದೆ. ಹೀಗೆಂದೇ ಅವರು ರಚಿಸಿದ ಮಕ್ಕಳ ಕಥೆ, ಕವಿತೆ, ನಾಟಕಗಳಲ್ಲೆಲ್ಲಾ ಈ ಬಗೆಯ ಭಾವ ಲೋಕವನ್ನು ಕಾಣುತ್ತೇವೆ. ಮಕ್ಕಳ ಮನೋರಂಗದ ಸಹಜವಾದ ಹರಿವು ಮತ್ತು ಪರಕಾಯ ಪ್ರವೇಶದ ಸಾಧ್ಯತೆಯನ್ನು ಅವರ ಇಂತಹ ಅಭಿವ್ಯಕ್ತಿಗಳಲ್ಲಿ ಕಾಣಬಹುದಾಗಿದೆ. ನೈಜವಾಗಿ ಎಲ್ಲ ಮಕ್ಕಳಲ್ಲಿ ಕಾಣುವ ಮನೋಲೋಕದ ಭಾವಲಹರಿಗಳು ಈ ಎರಡು ಮಕ್ಕಳ ನಾಟಕಗಳಲ್ಲೂ ಕೆಲಸ ಮಾಡಿದೆ. ಅವರ ಅನೇಕ ಮಕ್ಕಳ ಕಥೆಗಳಲ್ಲೂ ನಾಟಕೀಯ ಗುಣವಿರುವುದರಿಂದ ಅವೂ ಕೂಡ ಯಶಸ್ವಿಯಾಗಿ ನಾಟಕಗಳಾಗಿ ಪರಿವರ್ತನೆ ಹೊಂದಿ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ ಮಕ್ಕಳ ರಂಗ ಸಾಧ್ಯತೆಗಳು ಇಂದಿಗೂ ಕೆಲವು ಪ್ರಮುಖ ಪಟ್ಟಣಗಳಿಗಷ್ಟೇ ಸೀಮಿತವಾಗಿರುವುದರಿಂದ, ಅವುಗಳನ್ನು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕುವೆಂಪು ಅವರ ನಾಟಕಗಳು ಸಾಹಿತ್ಯವಾಗಿಯಷ್ಟೇ ತಲುಪುವುದೂ ಅವರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಲು ಇರುವ ಒಂದು ತೊಡಕು ಎಂದು ನಾನು ಭಾವಿಸುತ್ತೇನೆ.

ಕುವೆಂಪು ಅವರಿಗೆ ಮಕ್ಕಳ ಬಗೆಗಿದ್ದ ಅನನ್ಯ ಪ್ರೀತಿಯ ಹಾಗೂ ಅವನು ದೊಡ್ಡವನಾಗುತ್ತಾ ಹೋದಂತೆ ದುರ್ಗುಣಗಳು ಬೆಳೆಯುತ್ತಾ ಪಶುವಾಗುವ ವಿಪಯರ್ಯಾಸವನ್ನು ಕುರಿತು ರಚಿಸಿದ ಈ ಪುಟ್ಟ ಕವಿತೆಯನ್ನು ಓದಿ,

ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ತೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು.

ಮನುಷ್ಯ ಮಗುವಾದರೆ ಅಥವಾ ಮಗುವಿನ ಮುಗ್ಧತೆ ಉಳಿಸಿಕೊಂಡರೆ ಸಾಕು ಅವನು ದೇವರಿಗೆ ಸಮಾನ ಎಂಬ ಕುವೆಂಪು ಅವರ ಕಲ್ಪನೆ ನಿಜಕ್ಕೂ ಇಂದಿನ ಕ್ಷುದ್ರಗೊಂಡ ಬದುಕಿಗೆ ಅತ್ಯಂತ ಅವಶ್ಯಕ ಎಂದು ಭಾವಿಸುವೆ.

ಜಾಗತೀಕರಣ ಮತ್ತು ಭಾರತದ ಸಿನಿಮಾ ಜಗತ್ತು


– ಡಾ.ಎಸ್.ಬಿ. ಜೋಗುರ


 

ಜಾಗತೀಕರಣವನ್ನು ಪ್ರೊ ಎಮ್. ನಂಜುಂಡಸ್ವಾಮಿಯವರು ವಿಶ್ವ ಮಾರುಕಟ್ಟೆಯ ಕೀಲಿ ಕೈ ಎಂದು ಕರೆದಿದ್ದರು. ಈ ಪ್ರಕ್ರಿಯೆಯ ವೇಗ ವಿಶ್ವದ ಆರ್ಥಿಕ ಚಟುವಟಿಕೆಗಳಿಗೆ ಚುರುಕು ನೀಡುವ ಜೊತೆ ಜೊತೆಯಲ್ಲಿಯೇ, ಸಣ್ಣ ತ್ರಾಣದ ಆರ್ಥಿಕ ಮೂಲಗಳು ಬತ್ತಿಹೋಗುವಂತೆ ಮಾಡಿರುವುದೂ ಇದೆ. ಇದು ಕೇವಲ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದರೆ ಜಾಗತೀಕರಣವನ್ನು ಹೀಗೆ ವಿವಿಧ ನೆಲೆಗಳಲ್ಲಿ ಚರ್ಚಿಸುವ ಅಗತ್ಯವಿರುತ್ತಿರಲಿಲ್ಲ. ಜಾಗತೀಕರಣ ನಮ್ಮ ದೈನಂದಿನ ಬದುಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕೂಡಾ ತುಂಬಾ ಗಾಢವಾಗಿ ತಟ್ಟಿರುವುದರಿಂದಲೇ ಅದರ ಗುಣಾತ್ಮಕವಾದ ಪರಿಣಾಮಗಳನ್ನು ಕುರಿತು ಗಹನವಾಗಿ ಯೋಚಿಸಬೇಕಿದೆ.

ಸಮಾಜದ ಬಹುದೊಡ್ಡ ಸಮುದಾಯವನ್ನು ವ್ಯಾಪಕ ನೆಲೆಯಲ್ಲಿ ಪ್ರಭಾವಿಸುವ ಜನಪ್ರಿಯ ಮಾಧ್ಯಮ ಸಿನಿಮಾ. ಚಲನಚಿತ್ರ Desktopಮಾಧ್ಯಮ ಜನಸಮೂಹದ ಮೈ-ಮನಗಳ ಸುಳಿಯಲ್ಲಿ ಕುಳಿತು ಬದುಕಿನ ವಿಭಿನ್ನ ಸ್ತರಗಳಲ್ಲಿ ಬೇರೆ ಬೇರೆ ರೀತಿಯ ಪ್ರಭಾವವನ್ನು ಬೀರುತ್ತಿರುತ್ತದೆ. 1990 ರ ದಶಕದ ನಂತರ ಜಾಗತೀಕರಣದ ಪ್ರವೇಶದ ಬೆನ್ನಲ್ಲಿಯೇ ವಿಶ್ವದ ಬೇರೆ ಬೇರೆ ಭಾಷೆಯ ಚಲನಚಿತ್ರಗಳು ದೇಶದಲ್ಲಿ ವ್ಯಾಪಕವಾಗಿ ಬಿಡುಗಡೆಯಾದವು. ಅದಕ್ಕೂ ಮೊದಲು ಈ ಮಟ್ಟದ ವಿಸ್ತೃತತೆ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ದೊರೆತದ್ದು ಅಪರೂಪ. 1997 ರ ಸಂದರ್ಭದಲ್ಲಿ ‘ಟೈಟಾನಿಕ್’ ಎನ್ನುವ ಸಿನಿಮಾ 1.8 ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಸಾಧ್ಯವಾದದ್ದು ಈ ಜಾಗತೀಕರಣ ತೆರೆದಿಟ್ಟ ಮುಕ್ತ ಮಾರುಕಟ್ಟೆಯ ಅವಕಾಶಗಳಿಂದಲೇ. 2010 ರಲ್ಲಿ ತೆರೆಗೆ ಬಂದ ‘ಅವತಾರ್’ ಎನ್ನುವ ಇಂಗ್ಲಿಷ್ ಸಿನಿಮಾ 500 ಮಿಲಿಯನ್ ಡಾಲರ್ ವ್ಯವಹಾರ ಮಾಡುವಲ್ಲಿಯೂ ಈ ಜಾಗತೀಕರಣದ ಪಾತ್ರವಿದೆ. ಜಾಗತೀಕರಣ ಕೇವಲ ವ್ಯವಹಾರದಲ್ಲಿ ಗೆಲ್ಲುವ ಸೂತ್ರ ಮಾತ್ರವಾಗಿರದೇ ಸಹನಿರ್ಮಾಣಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದು ಟೈಲರ್ ಎನ್ನುವ ಚಿಂತಕರು ಹೇಳುತ್ತಾರೆ. ಮತ್ತೆ ಕೆಲವು ವಿಶ್ಲೇಷಕರು ಈ ಬಗೆಯ ಸಹ ನಿರ್ಮಾಣದ ನೆಲೆಯಲ್ಲಿ ಮೂಡಿ ಬರುವ ಚಲನಚಿತ್ರಗಳು ವಿಭಿನ್ನ ಸಂಸ್ಕೃತಿಯ ಪ್ರಸರಣಕ್ಕೆ ಕಾರಣವಾಗುವ ಜೊತೆಯಲ್ಲಿ ಹೈಬ್ರಿಡ್ ಸಂಸ್ಕೃತಿಯ ಹರಡುವಿಕೆಗೂ ಕಾರಣವಾಗಿವೆ ಎಂದಿದ್ದಾರೆ. ತೃತೀಯ ಜಗತ್ತಿನ ರಾಷ್ಟ್ರಗಳು ಸಿನಿಮಾ ಜಗತ್ತಿನಲ್ಲಿ ಸಲ್ಲುವಂತಾಗುವಲ್ಲಿಯೂ ಪರೋಕ್ಷವಾಗಿ ಜಾಗತೀಕರಣ ನೆರವಾಗಿದೆ. ಲ್ಯಾಟಿನ್ ಅಮೇರಿಕಾ ಮತ್ತು ಇರಾಕ್ ದಂತಹ ರಾಷ್ಟ್ರಗಳ ಸಿನಿಮಾಗಳ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಪರಿಚಯವಾಗುವಲ್ಲಿ ನೆರವಾದದ್ದು ಮುಕ್ತ ಮಾರುಕಟ್ಟೆಯ ಸೂತ್ರಗಳೇ. ಹೀಗೆ ಹೇಳುವಾಗ ಈ ಸಹನಿರ್ಮಾಣದ ಪರಿಕಲ್ಪನೆಯ ಭರಾಟೆಯಲ್ಲಿ ನಿರ್ದೇಶಕರ ಮೇಲಿನ ಸವಾರಿಯನ್ನೂ ಮರೆಯುವಂತಿಲ್ಲ. ಪರಿಣಾಮವಾಗಿ ಕೆಲ ಬಾರಿ ನಿರ್ದೇಶಕನ ನಿರೀಕ್ಷೆಯಂತೆ ಚಿತ್ರಗಳು ಮೂಡಿಬರದೇ ಸಹನಿರ್ಮಾಪಕರ ಅಣತಿಯಂತೆ ತಯಾರಾಗುತ್ತವೆ. ಹೀಗಾಗಿ ಅನೇಕ ಸಂಧರ್ಭಗಳಲ್ಲಿ ನಿರ್ದೇಶಕ  ಕೇವಲ ನೆಪ ಮಾತ್ರ ಎನ್ನುವಂಥಾ ಸ್ಥಿತಿ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಜಗತ್ತಿನಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವವರ ಸಾಲಲ್ಲಿ ಭಾರತ untitledಮೊದಲ ಸ್ಥಾನದಲ್ಲಿದೆ. ಸುಮಾರು 24 ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಭಾರತೀಯರು ಆಯಾ ಪ್ರಾದೇಶಿಕ ಸಂಸ್ಕೃತಿ ಮತ್ತು ಪರಿಸರವನ್ನು ಆಧರಿಸಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಒಟ್ಟು ನಿರ್ಮಾಣದಲ್ಲಿ ಮೊದಲ ಸ್ಥಾನದಲ್ಲಿ ಹಿಂದಿ, ಎರಡನೆಯ ಸ್ಥಾನದಲ್ಲಿ ತೆಲುಗು, ಮೂರನೆಯ ಸ್ಥಾನದಲ್ಲಿ ತಮಿಳು ಸಿನಿಮಾಗಳಿವೆ. ನಮ್ಮಲ್ಲಿ ಮೊಟ್ಟ ಮೊದಲ ಸಿನಿಮಾ ನಿರ್ಮಾಣವಾಗಿರುವುದು 1913 ರಲ್ಲಿಯೇ. ಯಾವ ಯಾವ ರಾಷ್ಟ್ರಗಳು ಸಿನಿಮಾ ನಿರ್ಮಾಣದಲ್ಲಿ ಯಾವ ರೀತಿಯ ಶ್ರೇಣಿಯನ್ನು ಹೊಂದಿವೆ ಎನ್ನುವುದನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಿಂದ ನಾವು ಗಮನಿಸಬಹುದಾಗಿದೆ. 2009 ರಲ್ಲಿ ಭಾರತದಲ್ಲಿ ಸುಮಾರು 1288 ಸಿನಿಮಾಗಳು ನಿರ್ಮಾಣವಾಗಿ ತೆರೆಗೆ ಬಂದಿವೆ. ಭಾರತವನ್ನು ಹೊರತು ಪಡಿಸಿದರೆ ಸಿನಿಮಾ ನಿರ್ಮಾಣದಲ್ಲಿ ಅಮೆರಿಕೆ ಎರಡನೆಯ ಸ್ಥಾನದಲ್ಲಿದೆ.

ಭಾರತ ಇಷ್ಟೊಂದು ಬೃಹತ್ ಸ್ವರೂಪದಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆಯಾದರೂ ಇಲ್ಲಿ ಹೂಡಲಾಗುವ  ಬಂಡವಾಳದ  ಪ್ರಮಾಣ ಮಾತ್ರ ತೀರಾ ಕಡಿಮೆ. 2010 ರ ಸಂದರ್ಭದಲ್ಲಿ ದೇಶದ ಚಿತ್ರೋದ್ಯಮದಲ್ಲಿ ವಿನಿಯೋಗಿಸಲಾದ ಒಟ್ಟು ಮೊತ್ತ 195 ಮಿಲಿಯನ್ ಡಾಲರ್. ಅಮೆರಿಕಾ ಅದೇ ವರ್ಷ ತೊಡಗಿಸಿದ ಹಣ 13289 ಮಿಲಿಯನ್ ಡಾಲರ್. ಅಂದರೆ ಭಾರತದ ಸಿನಿಮಾ ನಿರ್ಮಾಣದಲ್ಲಿ ಹೂಡಲಾದ ಒಟ್ಟು ಹಣದ ಸುಮಾರು ಐದು ಪಟ್ಟು. ಇದು ಇಂಗ್ಲಿಷ ಸಿನೇಮಾಗಳು ಖರ್ಚು ಮಾಡುವ ರೀತಿ.

1990 ರ ನಂತರ ಮುಕ್ತ ಮಾರುಕಟ್ಟೆಯ ನೆಲೆಯಲ್ಲಿ ಆರಂಭವಾದ ಆರ್ಥಿಕ ವಿದ್ಯಮಾನಗಳು ಸಹ ನಿರ್ಮಾಣ ತತ್ವದ ಅಡಿಯಲ್ಲಿimages ಸಿನಿಮಾಗಳು ನಿರ್ಮಾಣಗೊಳ್ಳಲು ಕಾರಣವಾದವು. ಉದಾಹರಣೆಗೆ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಹೊರಬತ್ತಿರುವ ಸಿನಿಮಾಗಳು. ಅಮೇರಿಕಾದ ‘ವೈಕಾಮ್’ ಮತ್ತು ಭಾರತದ ‘ನೆಟ್ ವರ್ಕ್  18′ ಇವೆರಡರ ಸಹಯೋಗದಲ್ಲಿ ಅನೇಕ ಸಿನಿಮಾಗಳು ನಿರ್ಮಾಣಗೊಂಡಿವೆ. ಆದರೆ ಜಾಗತೀಕರಣದ ಪ್ರವ್ರತ್ತಿಗಳು ಸಿನಿಮಾ ಕ್ಷೇತ್ರದಲ್ಲಿ ಹಲವು ಗಂಭೀರ ಸ್ವರೂಪದ ನೇತ್ಯಾತ್ಮಕ ಪರಿಣಾಮಗಳನ್ನೂ ಕೂಡಾ ಕಾರಣಿಸಿವೆ. ಭಾರತದಲ್ಲಿರುವ ಸಣ್ಣ ಪುಟ್ಟ ಸ್ಟುಡಿಯೋಗಳನ್ನು ಜಾಗತೀಕರಣ ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಡಿಜಿಟಲ್ ಸಿನಿಮಾ ಬಂದ ಮೇಲೆ ಕಿಂಡಿಯಲ್ಲಿ ಮುಖವಿಟ್ಟು ಸಿನೇಮಾ ಮೂಡಿಸುವ ಲಕ್ಷಗಟ್ಟಲೆ ಆಪರೇಟರಗಳು ನಿರುದ್ಯೋಗಿಗಳಾಗಿದ್ದಾರೆ. ಜಾಗತೀಕರಣದ ಫಲವಾಗಿ ಅನೇಕ ಕಲಾವಿದರು, ತಂತ್ರಜ್ಞರು ಜಾಗತಿಕ ಮಟ್ಟದಲ್ಲಿ ಕಾರ್ಯ ಮಾಡುವುದು ಸಾಧ್ಯವಾಗಿದೆಯಾದರೂ ಅದು ಉದ್ಯೋಗದ ನಿರಂತರತೆಯಂತೂ ಅಲ್ಲ. ಜೊತೆಗೆ ಸಣ್ಣ ಸಣ್ಣ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉದ್ಯಮದಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನಗಳೂ ಕೂಡಾ ನಡೆಯುತ್ತಿವೆ.’ಸೋನಿ’ ಯಂಥಾ ಬಹು ಜನಪ್ರಿಯ ವಿದೇಶಿ ಕಂಪೆನಿಯು ಚೆನೈ ಮೂಲದ  ‘ಇಮೇಜ್ ವರ್ಕ್ಸ್’ ಸಂಸ್ಥೆಯನ್ನು ನುಂಗಿ ಹಾಕಿತು. ಸಣ್ಣ ಮೀನುಗಳನ್ನು ತಿಂದು ದೊಡ್ದ ಮೀನುಗಳು ಬೆಳೆಯುವ, ಬದುಕುವ ಕ್ರಮ ವಿಕಾಸವಾದದ ಸೂತ್ರವಲ್ಲವೇ?

ಈಗೀಗ ಅನೇಕ ಅಂತರರಾಷ್ಟ್ರಿಯ ಕಂಪನಿಗಳು ಭಾರತೀಯ ಚಿತ್ರೋದ್ಯಮದಲ್ಲಿ ಹಣ ಹೂಡಲು ಉತ್ಸುಕವಾಗಿವೆ. ಕಾರಣ ಈಗಾಗಲೇ ಹಣ ಹೂಡಿ ಗೆದ್ದ ಹಲವು ಕಂಪನಿಗಳು ಅವರ ಕಣ್ಣೆದುರಲ್ಲಿ ಉದಾಹರಣೆಯಾಗಿ ಉಳಿದಿವೆ. 2007 ರ ಸಂದರ್ಭದಲ್ಲಿ ಸೋನಿ ಕಂಪನಿ ಸಂಜಯ ಲೀಲಾ ಬನ್ಸಾಲಿ ಜೊತೆಗೂಡಿ ‘ಸಾವರಿಯಾ’ ಎನ್ನುವ ಸಿನಿಮಾ ಒಂದನ್ನು ತಯಾರಿಸಿತು. ಚಿತ್ರ ತೋಪಾದರೂ ಹೂಡಿದ ಹಣಕ್ಕೆ ಮಾತ್ರ ತೊಂದರೆಯಾಗಲಿಲ್ಲ. ಆಗಲೇ ವಿದೇಶಿ ಕಂಪನಿಗಳಿಗೆ ಭಾರತದ ಚಿತ್ರೋದ್ಯಮದಲ್ಲಿ ಹಣ ಹೂಡುವ ಹವಣಿಕೆ ಆರಂಭವಾಯಿತು. ಮುಂದೆ ವಾರ್ನರ್ ಬ್ರದರ್ಸ್ ಹಾಗೂ ರಮೇಶ ಸಿಪ್ಪಿ ಜೊತೆಗೂಡಿ ‘ಚಾಂದನಿ ಚೌಕ್ ಟು ಚೈನಾ’ ಎನ್ನುವ ಸಿನಿಮಾ ತಯಾರಿಸಿದರು. ಬರೀ ಅಮೇರಿಕಾ ಒಂದರಲ್ಲಿಯೇ ಆ ಸಿನಿಮಾ 1 ಮಿಲಿಯನ್ ಡಾಲರ್ ಹಣ ಕಮಾಯಿಸಿತು. ಹೀಗೆ ಈ ಜಾಗತೀಕರಣ ವಿಶ್ವದ ಹೆಬ್ಬಾಗಿಲಾಗಿರುವುದರಿಂದ ಚಿತ್ರೋದ್ಯಮ ಈಗ ಎಲ್ಲ ಬಗೆಯಲ್ಲಿ ಕಲಸುಮೇಲೋಗರವಾಗಿಬಿಟ್ಟಿದೆ. ನಿರ್ದೇಶಕ ಭಾರತೀಯನಾಗಿದ್ದರೆ, ಸ್ಟಂಟ್ ಮನ್ ಇಂಗ್ಲೆಂಡ್ ಪ್ರಜೆ, ಮೇಕಪ್ ಮನ್ ಕೆನಡಾದವನು, ಮ್ಯುಜಿಕ್ ರಶ್ಯಾ ದೇಶದವ.  ಹೀಗೆ ಇವತ್ತು ಎಲ್ಲವೂ ಹೈಬ್ರಿಡ್ ಮಯ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರೋದ್ಯಮದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಪ್ರತಿಭೆ ಇರುವವರಿಗೆ ಸೀಮೆಗಳೇ ಇಲ್ಲ. ಅವರನ್ನು ಇಡೀ ಜಗತ್ತೇ ಕರೆಯುವಂತಾಗಿದೆ. ಭಾರತದ ಅನೇಕರು ವಿದೇಶಗಳ ಚಿತ್ರಗಳಲ್ಲಿ ಕೆಲಸ ಮಾಡಿದರೆ ಅಲ್ಲಿಯ ಕೆಲ ತಂತ್ರಜ್ಞರು ಕೂಡಾ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ಯಾನಿ ಫೈಸ್ ಎನ್ನುವ ಕಲಾವಿದ ಋತಿಕ್ ರೋಷನ್ ನಟಿಸಿರುವ ‘ಕೈಟ್’ ಸಿನೇಮಾಕ್ಕೆ ಸಾಹಸ ನಿರ್ದೇಶನ ಮಾಡಿದ. ಆ ಚಿತ್ರದ ನಟಿ ಬಾರ್ಬರಾ ಮೋರಿ ಕೂಡಾ ಈ ನೆಲದವಳಾಗಿರಲಿಲ್ಲ. ಅಕ್ಷಯಕುಮಾರ್ ನಟಿಸಿರುವ ‘ಸಿಂಗ್ ಇಜ್ ಕಿಂಗ್’ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಸ್ನೂಪ್ ಡಾಗ್ ಎಂಬಾತ ಕೆಲಸ ಮಾಡಿದ್ದ. ರಜನಿಕಾಂತ್ ಅವರ ‘ರೋಬೋಟ್’ ಸಿನಿಮಾದ ಕೆಲ ಅದ್ಭುತವಾದ ಆನಿಮೇಶನ್ ದೃಶ್ಯಗಳನ್ನು ಇಂಗ್ಲಂಡನ ಸ್ಟನ್ ವಿನಸ್ಟನ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಯಿತು. ಆ ಸಿನಿಮಾಕ್ಕಾಗಿ ಸುಮಾರು 38 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲಾಗಿತ್ತು. ನಮ್ಮವರೇ ಆದ ಎ.ಆರ್. ರೆಹಮಾನ್ ‘ಸ್ಲಮ್ ಡಾಗ್..’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಪ್ರಶಸ್ತಿ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೈದರಾಬಾದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯಂತೂ ಅನೇಕ ಇಂಗ್ಲೀಷ್ ಸಿನಿಮಾಗಳ ತಯಾರಿಕೆಯಲ್ಲೂ ಹೆಸರು ಮಾಡಿದೆ. ಹೀಗೆ ಅಲ್ಲಿಯ ಪ್ರತಿಭೆಗಳು ಇಲ್ಲಿ, ಇಲ್ಲಿಯ ಪ್ರತಿಭೆಗಳು ಅಲ್ಲಿ ಮಿಂಚುವಲ್ಲಿ ಈ ಜಾಗತೀಕರಣ ಪ್ರಕ್ರಿಯೆ ನೆರವಾಗಿದೆ.

ಮುಂಬರುವ ದಿನಗಳಲ್ಲಿ ಬಹುತೇಕವಾಗಿ ದೊಡ್ದ ಬಜೆಟ್ ನ ಸಿನಿಮಾಗಳು ವಿದೇಶಿ ಕಂಪನಿಗಳ ಸಹಯೋಗದಲ್ಲಿಯೇ ತಯಾರಾಗಿ ಬಿಡುಗಡೆಯಾಗಲಿವೆ. ambani+spielbergಆ ಮೂಲಕ ಹಾಲಿವುಡ್ ಮತ್ತು ಬಾಲಿವುಡ್ ನಡುವಿನ ಅಂತರ ಬಹುತೇಕ ಕಡಿಮೆಯಾಗಲಿವೆ. ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ಇದರ ಸೂಚನೆಗಳು ಕಾಣಸಿಗುತ್ತಿವೆ. ನವಂಬರ್ 2010 ರ ಸಂದರ್ಭದಲ್ಲಿ ಪ್ಯಾರಾಮೌಂಟ್ ಸ್ಟುಡಿಯೋದಲ್ಲಿ ಹಾಲಿವುಡ್-ಬಾಲಿವುಡ್ ನಡುವಿನ ಸಂಬಂಧಗಳ ವಿಸ್ತರಣೆಯ ನೆಲೆಯಲ್ಲಿ ಒಂದು ಹೊಸ ಮನ್ವಂತರ ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಒಪ್ಪಂದ ಒಂದಕ್ಕೆ ಸಹಿ ಹಾಕಲಾಗಿದೆ. ಅನೇಕ ವಿದೇಶಿ ಕಂಪನಿಗಳ ಸಹಯೋಗದೊಂದಿಗೆ ಕೈ ಜೋಡಿಸಲು ಅನಿಲ ಅಂಬಾನಿಯವರು ಮುಂದೆ ಬಂದಿರುವುದು ಹಳೆಯ ಸುದ್ದಿ. ಅದಾಗಲೇ ಡ್ರೀಮ್ ವರ್ಕ್ಸ್ ಜೊತೆ ಸೇರಿ ವರ್ಷಕ್ಕೆ 5-6 ಸಿನಿಮಾಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಅವರು 550 ಮಿಲಿಯನ್ ಡಾಲರ್ ಹಣವನ್ನು ತೊಡಗಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಸಿನಿಮಾ ಕತೆಗಳು ವಿದೇಶಿಯರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಹೊಸೆಯುವಂತಾದರೆ ಅಚ್ಚರಿ ಪಡಬೇಕಿಲ್ಲ. ಹಾಗೆಯೇ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಸಿನಿಮಾಗಳನ್ನು ಬಿಡುಗಡೆಗೊಳಿಸುವ, ಆ ಮೂಲಕ ಹಣ ಕಮಾಯಿಸುವ ಸನ್ನಾಹದಲ್ಲಿವೆ. ಚೈನಾದಂತಹ ರಾಷ್ಟ್ರ  ಒಂದು ವರ್ಷಕ್ಕೆ ಕೇವಲ 20 ರಷ್ಟು ವಿದೇಶಿ ಸಿನಿಮಾಗಳನ್ನು ಮಾತ್ರ ತನ್ನ ನೆಲದಲ್ಲಿ ಬಿಡುಗಡೆ ಮಾಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಆ ಮಿತಿಯೇ ಇಲ್ಲ. ಹಾಗಾಗಿ ನಮ್ಮ ಸಿನಿಮಾಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಪ್ರಸರಣ ಮಾಡುವ ಜೊತೆ ಜೊತೆಯಲ್ಲಿ ‘ಊಂಡೂ ಹೋದ ಕೊಂಡೂ ಹೋದ’ ಎನ್ನುವ ಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ನಾವಿದ್ದೇವೆ. ಇಲ್ಲಿ ನಮ್ಮ ಮುಂದೆ ಆಯ್ಕೆಗಳಿಲ್ಲ. ದಕ್ಕಿದ್ದನ್ನು ಸ್ವೀಕರಿಸುವುದಷ್ಟೇ ನಮಗಿರುವ ದಾರಿ.

’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ – ಆತ್ಮ ವಾತ್ಮ ಮಥನಿಸಿ ಅನುಭಾವ ಹುಟ್ಟಿತಯ್ಯ

– ಬಿ.ಶ್ರೀಪಾದ ಭಟ್

1) Of my land – uniform blue opens skies
Mad-artist pallets of green lands and lily filled lakes that
Mirror all – not peace or tranquil alone he shudders some
Young women near my father’s home,with a drunken husband
Who never changed;she bore his beatings everyday day until one
Stormy night,in fury,she killed him by stomping his seedbags…..
We: their daughters.
We daughters of their soil
We mostly write
2) the pot sees just another noisy child
the glass sees an eager and clumsy hand
but the teacher sees a girl breaking the rule
the school sees a potential embarrassment
– Meena kandaswamy

ಕಳೆದ ಹದಿನೈದು ದಿನಗಳಲ್ಲಿ ’ಹೈವೇ’,’ ಕ್ವೀನ್’, ’ಗುಲಾಬಿ ಗ್ಯಾಂಗ್’ ಎನ್ನುವ ಮೂರು ಪ್ರಮುಖ ಹಿಂದಿ ಚಿತ್ರಗಳು ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದವು. ಸ್ತ್ರೀ ಪ್ರಾಧಾನ್ಯತೆಯೇ ಈ ಮೂರು ಸಿನಿಮಾಗಳ ಮುಖ್ಯ ಕತೆಯಾಗಿತ್ತು. ಚಿತ್ರಕತೆ, ನಿರೂಪಣೆಗಳಲ್ಲಿ ವಿಭಿನ್ನವಾಗಿದ್ದರೂ ಹೈವೇ ಮತ್ತು ಕ್ವೀನ್ ಸಿನಿಮಾಗಳು ನಾಯಕಿಯು ಸ್ವಚ್ಚಂದವಾಗಿ, ಏಕಾಂಗಿಯಾಗಿ, ಬಿಡುಗಡೆಯ ಮನಸ್ಥಿತಿಯಲ್ಲಿ ದೇಶಾದ್ಯಾಂತ ಅಡ್ಡಾಡುವುದನ್ನು ಮೂಲಕತೆಯನ್ನಾಗಿಟ್ಟುಕೊಂಡು ಫೆಮಿನಿಸಂನ ವಿಭಿನ್ನ ಆಯಾಮಗಳನ್ನು ಪ್ರತಿಪಾದಿಸಿದರೆ ಗುಲಾಬ್ ಗ್ಯಾಂಗ್ ಸಿನಿಮಾ ನೈಜ ಕತೆಯ ಎಳೆಯನ್ನು ಆಧಾರವಾಗಿಟ್ಟುಕೊಂಡು ಅಕ್ಟಿವಿಸಂನ ಮೂಲಕ ಸ್ತ್ರೀ ಶಕ್ತಿಯನ್ನು ಎತ್ತಿಹಿಡಿಯುತ್ತದೆ.

ಇಮ್ತಿಯಾಜ್ ಅಲಿ ನಿರ್ದೇಶನದ ’ಹೈವೇ’ ಚಿತ್ರದಲ್ಲಿ ನಾಯಕಿ ಅಲಿಯಾ ಭಟ್ (ವೀರಾ ತ್ರಿಪಾಠಿ) Highway-movieಖ್ಯಾತ ಉದ್ಯಮಪತಿಯೊಬ್ಬನ ಮಗಳು. ರಣದೀಪ್ ಹೂಡಾ (ಮಹಬೀರ್ ಭಾಟಿ) ಎನ್ನುವ ಅಪಹರಣಕಾರರ ಗ್ಯಾಂಗ್‌ನ ಮುಖ್ಯಸ್ಥ ಅಲಿಯಾ ಭಟ್ ತನ್ನ ಫಿಯಾನ್ಸಿಯೊಂದಿಗೆ ವಿಹಾರದಲ್ಲಿದ್ದ ಸಮಯದಲ್ಲಿ ಆಕೆಯನ್ನು ಅಪಹರಿಸುತ್ತಾನೆ. ನಂತರ ಇಡೀ ಸಿನಿಮಾ ರೋಡಿಗಿಳಿಯುತ್ತದೆ. ಉತ್ತರ ಭಾರತದ ವಿವಿಧ ರಾಜ್ಯಗಳ ಮೂಲಕ ಸಂಚರಿಸುವ ಈ ಸಿನಿಮಾ ನಿಧಾನವಾಗಿ ರೋಡಿನಲ್ಲಿ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ತಲ್ಲಣದಲ್ಲಿದ್ದ ನಾಯಕಿ ಅಲಿಯಾ ನಿಧಾನವಾಗಿ ಪ್ರಕೃತಿಯ ಬಾಹುಗಳಲ್ಲಿ ಬಿಡುಗಡೆಯ ನಿಜವಾದ ಅರ್ಥಗಳನ್ನು ಕಂಡುಕೊಳ್ಳತೊಡಗುತ್ತಾಳೆ. ಭಯ, ಆತಂಕಗಳು ಕ್ರಮೇಣ ಉಲ್ಲಾಸ ಮತ್ತು ಉತ್ಸಾಹದ ಗುಣಗಳಾಗಿ ಪರಿವರ್ತನೆಗೊಂಡು ನಾಯಕಿ ಕ್ರಮೇಣ ಅಪಹರಣಕಾರ ಹೂಡನ ವ್ಯಕ್ತಿತ್ವದಲ್ಲಿ ಬೆಸೆದುಕೊಳ್ಳತೊಡಗುತ್ತಾಳೆ (ಸ್ಟಾಕ್ ಹೋಂ ಸಿಂಡ್ರೋಮ್) ಹೀಗೆ ಅಪಹರಣದ ನಾಟಕವು ಸ್ನೇಹಕ್ಕೆ ತಿರುಗುತ್ತಿರುವಂತಹ ಸಂಧರ್ಭದಲ್ಲಿ ನಾಯಕಿ ಅಲಿಯಾ ತನ್ನ ಕ್ರೌರ್ಯದ ಬಾಲ್ಯವನ್ನು ಹೂಡಾನೊಂದಿಗೆ ಹಂಚಿಕೊಳ್ಳುತ್ತಾಳೆ. ಬಾಲ್ಯದಲ್ಲಿ ಆಕೆಯ ಚಿಕ್ಕಪ್ಪ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿರುತ್ತಾನೆ. ಸಂಪೂರ್ಣ ತೊಂದರೆಗೊಳಗಾದ, ಲೈಂಗಿಕವಾಗಿ ಹಲ್ಲೆಗೊಳಗಾದ ಅಂದಿನ ಆ ಗಾಯಕ್ಕೆ ಇಂದು ತನಗೆ ಅಪಹರಣಕಾರನ ಸಂಗದಲ್ಲಿ, ಪ್ರಕೃತಿಯ ಮಡಿಲಲ್ಲಿ ಮಲಾಮು ಸಿಗುತ್ತಿದೆ ಎಂದು ನಾಯಕಿ ಬಿಡುಗಡೆಯ ಸಂಭ್ರಮವನ್ನು ಅನುಭವಿಸುತ್ತಿರುತ್ತಾಳೆ. ನಂತರ ಇದು ನಿಧಾನವಾಗಿ ಪ್ರೇಮಕ್ಕೆ ಹೊರಳಿಕೊಳ್ಳುವಷ್ಟರಲ್ಲಿ ಶೂಟೌಟ್ ನಡೆದು ಅಪಹರಣಕಾರ ಹೂಡ ಹತ್ಯೆಯಾಗುತ್ತಾನೆ. ನಾಯಕಿ ಮರಳಿ ತನ್ನ ಕುಟುಂಬದೊಂದಿಗೆ ಬದುಕಲು ತಿರಸ್ಕರಿಸಿ ಸ್ವತಂತ್ರವಾಗಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಬಿಸುತ್ತಾಳೆ.

ಇಡೀ ಸಿನಿಮಾದ ಶಕ್ತಿ ಮತ್ತು ಮಿತಿಗಳೇನೆ ಇರಲಿ ಇದು ನಿರಂತರವಾಗಿ ಧ್ವನಿಸುವುದು ಹೆಣ್ಣಿನ ಬಿಡುಗಡೆಯ ಹೊಸದಾರಿಗಳನ್ನು. Highway-AliaBhattಅದೂ ಸಹ ದಾರಿಗಳೂ ಜಾಳುಜಾಳಾಗಿ ತೆರೆದುಕೊಳ್ಳದೆ ಅಲಿಯಾಳ ಅಂತರಂಗದ ಪಿಸುಮಾತುಗಳು, ಅವ್ಯಕ್ತ ಆಸೆಗಳು ಪ್ರಕೃತಿಯೊಂದಿಗೆ ಬಹಿರಂಗವಾಗಿ ಸಂಭಾಷಿಸುವುದರ ಮೂಲಕ ಬೆಳಕಾಗತೊಡಗುತ್ತವೆ. ಇಲ್ಲಿಯೇ ಈ ಸಿನಿಮಾದ ಗೆಲುವಿರುವುದು. ತನ್ನ ಎರಡನೇ ಸಿನಿಮಾದಲ್ಲಿಯೇ ತನ್ನ ಅದ್ಭುತವಾದ ಅಭಿನಯದ ಮೂಲಕ ಅಲಿಯಾ ಚಿತ್ರವನ್ನು ನೈತಿಕವಾಗಿ ಗೆಲ್ಲಿಸಿದ್ದಾಳೆ. ಇಲ್ಲಿ ಅಲಿಯಾ ಹುತಾತ್ಮಳಾಗಲು ನಿರಾಕರಿಸುವುದರ ಮೂಲಕ ಗೃಹಿಣಿಯರಿಗೇನಿದೆ ಮೂರು ಬಾಗಿಲು, ನಾಲ್ಕು ಕೋಣೆ ಮಾತ್ರ ಎನ್ನುವ ವ್ಯವಸ್ಥೆಯ ಅಲಿಖಿತ ಕಟ್ಟುಪಾಡನ್ನು ಯಶಸ್ವಿಯಾಗಿ ಮುರಿದು ಹಾಕುತ್ತಾಳೆ. ಅಹಲ್ಯೆಯ ತೊಡೆಯ ಮೇಲಿನ ಗೆರೆಗಳು ಇನ್ನೂ ಅಳಿದಿಲ್ಲ ಎಂದು ಕೊರಗುತ್ತಾ, ವಿಷಾದಿಸುತ್ತಾ ಕೂಡಲು ನಿರಾಕರಿಸುವ ಅಲಿಯಾ ಹುತಾತ್ಮತೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಇವಳ ಬಂಡಾಯ ಆಧುನಿಕ ಜೀವನದ ಹೊಸ ಹಾಡುಗಳು. ಅನೇಕ ಮಿತಿಗಳ ನಡುವೆಯೂ. (ಈ ಸಿನಿಮಾ ನೋಡುತ್ತಿರುವಾಗ ನನ್ನ ಮನದೊಳಗೆ ’ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕದ ತಾಯಿಯ ಪಾತ್ರ ಪದೇ ಪದೇ ಕಾಡುತ್ತಿತ್ತು.)

ವಿಕಾಸ್ ಬೆಹಲ್ ನಿರ್ದೇಶನದ ’ಕ್ವೀನ್’ ಈ ವಾರ ತೆರೆಕಂಡ ಮತ್ತೊಂದು ಸಿನಿಮಾ. ಇದರಲ್ಲಿ ರಾಣಿ ಮೆಹ್ರ Queen-Hindi-Movieಪಾತ್ರದಲ್ಲಿ ನಾಯಕಿಯಾಗಿ ಕಂಗನಾ ರಾವತ್ ಅಭಿನಯಿಸಿದ್ದಾಳೆ. ಈ ಚಿತ್ರದ ಕತೆಯೂ ಅಷ್ಟೇ ಸರಳ. ಆಕೆಯ ದಿನನಿತ್ಯದ ಬದುಕೆಂದರೆ ತನ್ನ ಸಹೋದರನ ಕಣ್ಗಾವಲಿನಲ್ಲಿ over protected ಮಧ್ಯಮವರ್ಗದ ಜೀವನ. ನೆರೆಹೊರೆಯವರ ಕಣ್ಣಿಗೂ ಬೀಳದಷ್ಟು ಕಟ್ಟುಪಾಡಿನ. ಸ್ವಂತ ವ್ಯಕ್ತಿತ್ವವೇ ಇಲ್ಲದ ಬದುಕು. ನಾಯಕಿ ಪರಪುಷನ ಮುಂದೆ ಮೊದಲ ಬಾರಿಗೆ ನಿಲ್ಲುವುದು ತನ್ನ ಫಿಯಾನ್ಸಿ ಎದುರು ಮಾತ್ರ. ಅದೂ ಮದುವೆಗೆ ಎರಡು ದಿನಗಳ ಮೊದಲು. ಆದರೆ ಕಾರಣಾಂತರಗಳಿಂದ ಈ ಮದುವೆ ಮುರಿದುಬೀಳುತ್ತದೆ. ಮದುಮಗ ಮದುವೆಯಾಗಲು ನಿರಾಕರಿಸುತ್ತಾನೆ. ಆ ನಂತರವೇ ರಾಣಿ ಕಂಗನಾಳ ವ್ಯಕ್ತಿತ್ವ ಬಿಚ್ಚಿಕೊಳ್ಳತೊಡಗುತ್ತದೆ. ಮನೆಯವರ ವಿರೋಧದ ನಡುವೆಯೂ ತನ್ನ ಅಜ್ಜಿಯ ಬೆಂಬಲದೊಂದಿಗೆ ಈ ಮೊದಲೇ ಕಾಯ್ದಿರಿಸಿದ್ದ ತನ್ನ ಹನಿಮೂನ್ ತಾಣಗಳಾದ ಪ್ಯಾರಿಸ್ ಮತ್ತು ಅರ್ಮಸ್ಟ್ರಾಡಮ್‌ಗೆ ಒಂಟಿಯಾಗಿ ಪ್ರಯಾಣ ಬೆಳೆಸುತ್ತಾಳೆ. ತನ್ನ ಸ್ವಂತ ಊರಲ್ಲಿ ಆಸ್ತಿತ್ವವೇ ಇಲ್ಲದಂತೆ ಬದುಕಿದ್ದ ಕಂಗನಾ ವಿದೇಶದಲ್ಲಿ ಗೆರೆಬಿಚ್ಚಿದ ಹಕ್ಕಿಯಂತಾಗುತ್ತಾಳೆ. ಯಾವುದೇ ಹುಡುಕಾಟವಿಲ್ಲದೆಯೇ ಹೊಸ ಆಸ್ತಿತ್ವ ಕಣ್ಬಿಡತೊಡಗುತ್ತದೆ. ಅಲ್ಲಿ ಅವಳಿಗೆ ಹೊಸ ಜಗತ್ತೇ ತೆರೆದುಕೊಳ್ಳುತ್ತದೆ. ಅದು bad world. ನಂತರ ಅಲ್ಲಿ ಅವಳು ಪಡೆದುಕೊಳ್ಳುವ ಹೊಸ ಗೆಳೆಯರು (ಡ್ಯಾನ್ಸರ್, ಕಲಾವಿದ, ಸಂಗೀತಗಾರ, ತ್ಸುನಾಮಿ ಸಂತ್ರಸ್ಥ), ಪಡಿಪಾಟಲುಗಳು, ಪ್ರತೀ ಹೆಜ್ಜೆಗೂ ಎಡವುತ್ತಿರುವುದು, ಮೊದಲ ಚುಂಬನ ನಮ್ಮನ್ನು ಇಡೀ ಕತೆಯೊಳಗೆ ಮುಳುಗಿಸಿಬಿಡುತ್ತವೆ. ಇದನ್ನು ಸಾಧ್ಯವಾಗಿಸಿದ್ದು queen-movie-kanganaಫರೂಕ್ ಶೇಕ್ ಮತ್ತು ಚೈತಾಲಿಯವರ ಅತ್ಯುತ್ತಮ ಚಿತ್ರಕತೆ ಮತ್ತು ರಾಣಿಯಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಕಂಗನಾಳ ಅದ್ಭುತ ಅಭಿನಯ. ಕಂಗನಾ ಈ ಮೊದಲು ಇಷ್ಟೊಂದು under rated ನಟಿಯಾಗಿದ್ದಳೇ ಅಥವಾ ನಾವೇ ಅವಳನ್ನು under rated ನಟಿಯಾಗಿಸಿದ್ದೆವಾ ಎಂದು ನಮ್ಮಲ್ಲಿ ಕೀಳರಿಮೆ ಮೂಡಿಸುವಷ್ಟು ಅಕೆಯ ನಟನೆ ಇಡೀ ಚಿತ್ರವನ್ನೇ ತನ್ನ ಹೆಗಲಿಗೇರಿಸಿಕೊಳ್ಳುತ್ತದೆ.ಅದನ್ನು ಕಂಗನಾ ಮಾತ್ರ ಯಶಸ್ವಿಯಾಗಿ ನಿಭಾಯಿಸಿದ್ದಾಳೆ.

ಹೌದು ’ಕ್ವೀನ್’ ಕೂಡ ಅಪ್ಪಟ ಸ್ತ್ರೀವಾದಿ ಸಿನಿಮಾ. ಆದರೆ ಇಲ್ಲಿ ಯಾವುದೇ ಇಸಂಗಳಿಲ್ಲ. ಘೋಷಣೆಗಳಿಲ್ಲ. ಹೈವೇನ ಅಲಿಯಾ ಮತ್ತು ರಾಣಿ ಕಂಗನಾ ನನ್ನ ಬದುಕನ್ನು ನಾನೇ ಕಟ್ಟಿಕೊಳ್ಳುತ್ತಿದ್ದೇನೆ ನೋಡಿ ಬೇಕಾದರೆ ಎನ್ನುವುದರ ಮೂಲಕ ಫೆಮಿನಿಸಂಗೆ ಹೊಸ ಆಯಾಮವನ್ನೇ ತಂದುಕೊಡುತ್ತಾರೆ. ಇವರಿಬ್ಬರೂ ಮಹಿಳೆಯ ಅತಂತ್ರತೆಯನ್ನು ಕೆಡವಿ ಹಾಕುವುದೇ ಫೆಮಿನಿಸಂನ ಗೆಲುವಾಗುತ್ತದೆ. ಮಹಿಳೆಯದು ಎಂದಿಗೂ ಮುಗಿಯದ ಬವಣೆ ಎನ್ನುವ ವಾಸ್ತವಕ್ಕೆ ಹೊಸ ರೂಪ ದಕ್ಕುವುದು ಇಲ್ಲಿನ ಫೆಮಿನಿಸಂನ ವಿಶೇಷ. ಅದು ಧನಾತ್ಮಕ ಸ್ವರೂಪ. ಹೌದು ಅನೇಕ ಮಿತಿಗಳ ನಡುವೆಯೂ ಸಹ.

ಸೌಮಿಕ್ ಸೇನ್ ನಿರ್ದೇಶನದ ಮೂರನೇಯ ಚಿತ್ರ ’ಗುಲಾಬಿ ಗ್ಯಾಂಗ್’ ಉತ್ತರ ಪ್ರದೇಶದ ಸಂಪತ್ ಪಾಲ್ ದೇವಿ ಅವರ ನೈಜ ಬದುಕಿನ ಘಟನೆಗಳ ಎಳೆಯನ್ನಾಧರಿಸಿದ ಸಿನಿಮಾ. ಚಿತ್ರದ ಕತೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಇಡೀ ಸಿನಿಮಾದ ಉಸಿರೇ gulabigang-movieಸ್ತ್ರೀವಾದ ಮತ್ತು ಸ್ತ್ರೀಶಕ್ತಿಯ ಅಭಿವ್ಯಕ್ತಿ.ಆದರೆ ಅದನ್ನು ನಿರ್ವಹಿಸುವಾಗ ನಿರ್ದೇಶಕರು ಸಂಪೂರ್ಣವಾಗಿ ಎಡವಿದ್ದಾರೆ. ಅತ್ಯಂತ ತೆಳುವಾದ, ಸೂಪರ್‌ಫೀಶಿಯಲ್ ಕತೆಗಳನ್ನೊಳಗೊಂಡ ’ಹೈವೇ’ ಮತ್ತು ’ಕ್ವೀನ್’ ಸಿನಿಮಾಗಳು ಯಾವುದೇ ಫೆಮಿನಿಸಂನ ಘೋಷಣೆಗಳಿಲ್ಲದೆ ಇಡೀ ಸ್ತ್ರೀ ವ್ಯಕ್ತಿತ್ವವನ್ನೇ ಧನಾತ್ಮಕವಾಗಿ ಕಟ್ಟಿಕೊಟ್ಟರೆ ’ಗುಲಾಬಿ ಗ್ಯಾಂಗ್’ ಶಕ್ತಿಶಾಲಿಯಾದ, ನೈಜ ಕತೆಯನ್ನೇ ತನ್ನ ಬೆನ್ನಿಗಿಟ್ಟುಕೊಂಡು ಇಡೀ ಚಿತ್ರದುದ್ದಕ್ಕೂ ಸ್ತ್ರೀವಿಮೋಚನೆಯ ಆಶಯಗಳನ್ನೇ ಹೊತ್ತುಕೊಂಡು ಅದನ್ನು ಹಿಡಿದಿಡಲಾಗದೆ ಸೋತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ನಾಯಕಿ ಮಾಧುರಿ ದೀಕ್ಷಿತ್ (ರಜ್ಜೋ) ವಿಮೋಚನೆಗೆ ಮಾರ್ಗವಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅದೂ ಅಸಹಜವಾಗಿ. ಕಡೆಗೆ ಈ ಹಿಂಸಾತ್ಮಕವಾದ ಆದರೆ ನ್ಯಾಯಪರವಾದ, ಜನಪರವಾದ, ಶಕ್ತಿಶಾಲಿಯಾದ ಹೋರಾಟ ಒಂದು ನಿಜವಾದ, ನಂಬುವಂತಹ ಮೆಟಫರ್ ಕೂಡ ಅಗವುದಿಲ್ಲ. ಮೆಟಫರ್ ಕೂಡ ಆಗದಿದ್ದರೆ ಅದು ಪ್ರೇಕ್ಷಕನನ್ನು ಮುಟ್ಟುತ್ತದೆಯೇ? ಕಷ್ಟ. ಇದರ ನೈತಿಕ ಸೋಲಿಗೆ ಮತ್ತೊಂದು ಕಾರಣ ಅದರ ಮುಖ್ಯ ಪಾತ್ರಧಾರಿಗಳಾದ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ತಮ್ಮ ಪಾತ್ರದೊಂದಿಗೆ ತಾದಾತ್ಮತೆಯನ್ನೇ ಸಾಧಿಸದ, ಸಂಪೂರ್ಣ disconnect ಆದ ಕೃತಕ ಅಭಿನಯ. ಪ್ರಸ್ತುತ ವಿದ್ಯಾಮಾನಗಳಿಗೆ ಅನುಗುಣವಾಗಿ ರೂಪುಗೊಳ್ಳಬೇಕಾದ ಚಿತ್ರಕತೆ ಅದಾಗದೆ ಈ ಸೋಲಿಗೆ ತನ್ನ ಪಾಲನ್ನು ದೇಣಿಗೆಯಾಗಿ ನೀಡಿದೆ. ಕೊನೆಗೆ ಆಶಯಗಳು ಮಾತ್ರ ಮುಖ್ಯವಲ್ಲ, ಅದನ್ನು ನಿಭಾಯಿಸುವುದೂ ಅಷ್ಟೇ ಮುಖ್ಯ ಎನ್ನುವ ಅಂದಕಾಲತ್ತಿಲ್ ನುಡಿಕಟ್ಟಿನ ಪ್ರಸ್ತುತತೆ ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಈ ಅಬ್ಬರದ, pompous, ವಾಕರಿಕೆ ಹುಟ್ಟಿಸುವಷ್ಟು ಅಸೂಕ್ಷ್ಮತೆಯ ಹಿಂದಿ ಚಿತ್ರರಂಗ ಅಚ್ಚರಿ ಮೂಡಿಸುವಷ್ಟು ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಮೂರು ಸ್ತ್ರೀ ಪ್ರಧಾನ ಸಿನಿಮಾಗಳನ್ನು ಅದರಲ್ಲೂ ಸೂಕ್ಷ್ಮ, ಸಂವೇದನಾಶೀಲ ಸಿನಿಮಾಗಳನ್ನು ಕೊಟ್ಟಿದ್ದಕ್ಕಾಗಿ ಸದ್ಯಕ್ಕೆ ಅಭಿನಂದಿಸಲೇಬೇಕು.

ಫ್ರೆಂಚ್ ಸಿನಿಮಾದ ಹಣೆಬರಹಗಾರ ಟ್ರೋಫೋ…

– ಶಾಂತರಾಜು ಎಸ್.ಮಳವಳ್ಳಿ

ಅದು ಎರಡನೇ ಮಹಾಯುದ್ಧದ ನಂತರದ ಕಾಲ. ಇಡೀ ಜಗತ್ತಿಗೆ ಮಂಕುಕವಿದಂತಾಗಿತ್ತು. ಯುದ್ಧದಲ್ಲಿ ನೇರವಾಗಿ ಭಾಗವಹಿಸಿ ಗೆದ್ದ ಅಥವಾ ಸೋತ ದೇಶಗಳ ಗೋಳು ಒಂದೇ ತೆರನಾದದ್ದಾಗಿತ್ತು. ದೇಶವೊಂದು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗಾಗಿಯೇ ಆರ್ಥಿಕ ದಿಗ್ಭಂಧನ ಎಂಬ ಅಸಹಕಾರ ಅಸ್ತ್ರಕ್ಕೆ ಯಾವುದೇ ದೇಶಗಳು ಹೆದರುವುದು (ಕ್ಯೂಬಾದಂತಹ ದೇಶಗಳನ್ನೊರೆತುಪಡಿಸಿ). ಜಾಗತಿಕ ಯುದ್ಧದಲ್ಲಿ ಅಮೇರಿಕಾ-ಇಂಗ್ಲೆಂಡ್‌ ಅನ್ನು ಬೆಂಬಲಿಸಿದ ದೇಶಗಳಲ್ಲಿ ಫ್ರಾನ್ಸ್ ಕೂಡ ಒಂದು. ಯುದ್ಧದ ಬರ್ಬರತೆಯನ್ನು ಕಂಡ ದೇಶದ ಜನರು ಬಹಳ ಲೋಲುಪರಾಗಿ ದೈಹಿಕ ವಾಂಛೆಗೆ ಬಲಿಯಾಗುವುದೂ ಸೇರಿದರಂತೆ ನೈತಕ ಅಧಃಪತನ ಹಿಡಿಯುವುದು ಸಾಮಾನ್ಯ ಪ್ರಕ್ರಿಯೆ. ಇಂಥಹ ನಿದರ್ಶನಗಳನ್ನು ಜರ್ಮನ್ ನಾಟಕಕಾರ ಬ್ರೆಕ್ಟ್‌ನ ನಾಟಕಗಳಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾನೆ.

1940 ರಷ್ಟೊತ್ತಿಗಾಗಲೇ ಫ್ರಾನ್ಸ್‌ನ ಸಿನಿಮಾ ಜಗತ್ತಿಗೆ ಇಟಾಲಿಯನ್ ’ನಿಯೋರಿಯಲಿಸ್ಂ’ ಪ್ರಭಾವ ಬೀರಿರುತ್ತದೆ. ’ನಿಯೋರಿಯಲಿಸ್ಂ’ ಅಂದರೆ ಸಿನಿಮಾವನ್ನು ಸಾಧ್ಯವಾದಷ್ಟು ವಸ್ತುನಿಷ್ಠವಾಗಿ ಮಾಡುತ್ತಾ ನೈಜತೆಯನ್ನು ಮೆರೆಸುವುದು. ಅತೀ ವರ್ಣರಂಜಿತ ಕಾಲ್ಪನಿಕ ಕಥಾನಕದ ಬದಲು, ತೀರಾ ಸಾಮಾನ್ಯವಾದ ಕಥೆಯೇ ಆದರೂ ಆ ವಸ್ತುವಿಗೆ ತಕ್ಕಂತೆ ವಾತವರಣ ಸೃಷ್ಠಿಸಿ, ನಾಟಕೀಯತೆಗಿಂತ ನೈಜತೆಯನ್ನು ತುಂಬುವುದು. ಜಗತ್ತಿನೆಲ್ಲೆಡೆ, ಜೀನ್ ರೆನಾಯ್ರ್, ವಿಟ್ಟೊರಿಯಾ ಡಿ ಸಿಕಾರನ್ನು ನಿಯೋರಿಯಲಿಂನ ಪ್ರವರ್ತಕರೆಂದು ಗುರುತಿಸುತ್ತಾರೆ. ಫ್ರಾನ್ಸ್‌ನ ಚಿತ್ರಪ್ರೇಮಿಗಳ ಒಂದು ಗುಂಪು ನಿಯೋರಿಯಲಿಸ್ಂನನ್ನು ಒಪ್ಪಿಕೊಳ್ಳಲಾಗಲಿಲ್ಲ. ಸಿನಿಮಾ ಇರುವುದು ಪ್ರೇಕ್ಷಕನ ನಂಬುಗೆಗಳನ್ನು ಒಡೆದು, ಹೊಸ ಸತ್ಯವನ್ನು ಕಟ್ಟಿಕೊಡಲೇ ಹೊರತು ಕೇವಲ ನೈಜತೆಯನ್ನು ಪ್ರತಿಫಲಿಸಲು ಅಲ್ಲ ಎಂಬುದು ಈ ಗುಂಪಿನ ವಾದ. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ (François Truffaut), ಜೀನ್ ಲೂಕ್ ಗೊದಾರ್‍ಡ್, ಕ್ಲೌಡ್ ಚಾರ್ಬೆಲ್, ಜಾಕ್ವೆಸ್ ರಿವಟ್ಟೆ ಈ ಗುಂಪಿನ ಪ್ರಮುಖ ಸಿನಿಮಾ ನಿರ್ದೇಶಕರು. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋನ The400blows“ದಿ 400 ಬ್ಲೋಸ್” (1959) ನಿಂದ ಆರಂಭವಾದ ಹೊಸ ಚಿಂತನೆಯ, ಪ್ರಯೋಗಾತ್ಮಕ ಸಿನಿಮಾದ ಕಾಲಘಟ್ಟವನ್ನು ’ಹೊಸಅಲೆ’ ಅಥವಾ ’ನ್ಯೂವೇವ್ ಸಿನಿಮಾ’ ಎಂದು ಕರೆಯಲಾಯಿತು. ಈ ಹೊಸ ಅಲೆಯ ನಿರ್ದೇಶಕರ ಸಿನಿಮಾಗಳು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತಾ, ಸಣ್ಣ ಮಗುವಿನಿಂದಿಡಿದು ಕಮ್ಯೂನಿಸ್ಟ್ ಸಿದ್ಧಾಂತ-ಚಳುವಳಿಯ ಭಾಷಣದವರೆಗೆ ಎಲ್ಲಾ ರೀತಿಯ ವಿಭಿನ್ನ ದೃಶ್ಯಗಳನ್ನು-ಕಥನಗಳನ್ನು ಒಳಗೊಳ್ಳುತ್ತವೆ. ನಿಯೋರಿಯಲಿಸ್ಂ ಬಹಳ ಸುಲಭವಾಗಿ ಹಾಲಿವುಡ್ ಸಿನಿಮಾದ ಸರಕಾಗಿಬಿಟ್ಟಿತು. ಆದರೆ ನ್ಯೂ ವೇವ್ ಸಿನಿಮಾಗಳು ಹಾಲಿವುಡ್‌ನ ಅಡ್ಡಾದಿಡ್ಡಿ ಸಿನಿಮಾಕರ್ತರಿಗೆ ಪ್ರತ್ಯುತ್ತರ-ಪಾಠವಾಗಿಬಿಟ್ಟಿತು.

ಜೈಲಿನಲ್ಲಿ ಕೊಳೆಯುತಿದ್ದ ಹದಿಹರೆಯದ ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ, ಪ್ರಪಂಚದ ಅಗ್ರಮಾನ್ಯ ಸಿನಿಮಾಕಾರನಾಗಿ ಬೆಳದದ್ದು ಒಂದು ರೋಚಕ ಕಥೆ. ನಿರ್ದೇಶಕ, ನಟ, ನಿರ್ಮಾಪಕ ಮತ್ತು ಕಥೆಗಾರ ಟ್ರೋಫೋನ ದುರ್ಗಮ ಬಾಲ್ಯವೇ ಆತನ ಅನೇಕ ಸಿನಿಮಾದ ಮುಖ್ಯ ಜೀವಾಳ. ಟ್ರೋಫೋನ ತಾಯಿಯ ಬಸುರಿಯಾಗಿದ್ದಾಗ, ರೋಲ್ಯಾಂಡ್ ಎಂಬವವ ಆಕೆಯ ಎರಡನೇ ಗಂಡನಾಗುತ್ತಾನೆ. ಮಲತಂದೆಯಾದರೂ ಟ್ರೋಫೋನನ್ನ ಆದರದಿಂದ ಕಾಣುತ್ತಾನೆ ರೋಲ್ಯಾಂಡ್. ಬಹುಶಃ ಈ ಕಾರಣಕ್ಕಾಗಿಯೇ ಏನೋ ಟ್ರೋಫೋನ ಅನೇಕ ಸಿನಿಮಾಗಳಲ್ಲಿ ತಾಯಿಯಿಲ್ಲದ ನಾಯಕ ಅಥವಾ ತಾಯಿ ಪ್ರೀತಿಯ ಕನವರಿಕೆಯ ಪಾತ್ರಗಳು ಕಾಣಸಿಗುತ್ತವೆ. ಮನೋವೈಜ್ಞಾನಿಕವಾಗಿ ಇದೊಂದು ಭೂತದಲ್ಲಿ ನರಳುವ ಖಾಯಿಲೆ. ಭೂತದಲ್ಲಿ ಸಿಗದ ಕನವರಿಕೆ ವರ್ತಮಾನದಲ್ಲಿ ಅನೇಕ ರೀತಿ ವ್ಯಕ್ತವಾಗುವುದಂತೆ. ಟ್ರೋಫೋ ’ಸ್ಮಾಲ್ ಚೇಂಜ್ (1976)’ ಸಿನಿಮಾದಲ್ಲಂತೂ ಎಲ್ಲ ರೀತಿಯ ತಾಯಿಯನ್ನು ಬಿಂಬಿಸುತ್ತಾನೆ. ಶಾಲೆಗೆ ಹೋಗುವ ಮಗನನ್ನು ಪ್ರತಿದಿನ ಹೊಡೆದು, ಹೇಗಾದರೂ ಸರಿ ಸಾರಾಯಿ ಸಂಪಾದಿಸಿ ತರುವಂತೆ ಮಾಡುವ ತಾಯಿಯೂ ಕೂಡ ಈ ಸಿನಿಮಾದಲ್ಲಿ ಬರುತ್ತಾಳೆ. ಚಿತ್ರದ ಕೊನೆಯಲ್ಲಿ ಆಕೆ ಜೈಲು ಸೇರಿ, ಕಳ್ಳತನವನ್ನು ರೂಢಿಸಿಕೊಂಡ ಹುಡುಗನನ್ನು ಸಮಾಜ ಕಲ್ಯಾಣ ಇಲಾಖೆ ಓದಿಸುತ್ತದೆ.

ತನ್ನ ಬಾಲ್ಯದ ಕಹಿಯಿಂದ ಪೋಲಿಯಾದ ಟ್ರೋಫೋ, ಮುಂದೆ ಇಷ್ಟವಿಲ್ಲದ ಫ್ರೆಂಚ್ ಸೇನೆಯನ್ನು ಸೇರಿ, ಎರಡು ವರ್ಷಗಳ ಕಾಲ ನಿರಂತರವಾಗಿ ಅಲ್ಲಿಂದ ಕಂಬಿ ಕೀಳುವ ಪ್ರಯತ್ನದಲ್ಲಿದ್ದಾಗ ಜೈಲುವಾಸ ಅನುಭವಿಸಬೇಕಾಗುತ್ತದೆ. ಆಗ, ಆಂದ್ರೆ ಬಾಝಿನ್ ಎಂಬ ಮಹಾನ್ ಸಿನಿಮಾ ವಿಮರ್ಶಕನಿಂದಾಗಿ ಟ್ರೋಫೋ ಕ್ರಿಮಿನಲ್ ಕೇಸ್‌ನಿಂದ ಮುಕ್ತನಾಗುತ್ತಾನೆ. ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಪತ್ರಕರ್ತನಾಗಿ ಕೆಲಸವೊಂದು ದೊರೆಯುತ್ತದೆ. ಬಾಝಿನ್‌ನ ’ಆಯ್ಟ್‌ರ್ ಸಿದ್ಧಾಂತ’ ಸಿನಿಮಾದ ಇತಿಹಾಸದಲ್ಲಿ ಓದಲೇಬೇಕಾದ ಮುಖ್ಯ ಸಿದ್ಧಾಂತ. ಅಕಿರೋ ಕುರುಸೋವಾ ಅಥವಾ ಜೀನ್ ರೇನಾಯ್ರ್‌ರಂಥವರ ಸಿನಿಮಾಗಳು ನಿರ್ದೇಶಕರ ಸಿನಿಮಾವಾಗಿ ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎಂಬ ಅಂಶವನ್ನು ಗಮನಿಸಿದರೆ ’ಆಯ್ಟ್‌ರ್ ಸಿದ್ಧಾಂತ’ ಅರ್ಥವಾಗುತ್ತದೆ. ಸಿನಿಮಾವೆಂಬುದು ನಿರ್ದೇಶಕನ ಮಾಧ್ಯಮ ಎಂಬ ಪ್ರಬಲ ಅಂಶವನ್ನೊಳಗೊಂಡ ಈ ಸಿದ್ಧಾಂತ ಮುಂದೆ François_Truffaut_(1965)ಟ್ರೋಫೋ, ಗೊದಾರ್‍ಡ್ ನಿರ್ದೇಶಕರಿಂದ ಇನ್ನೂ ಶ್ರೀಮಂತವಾಗುತ್ತದೆ. ಬಾಝಿನ್‌ರ ಒಲವಿನಿಂದ ಟ್ರೋಫೋ ಸಿನಿಮಾ ಪತ್ರಿಕೆಯಾದ ’ಕಹೇರ್‍ಸ್ ದು ಸಿನಿಮಾ’ದಲ್ಲಿ ವಿಮರ್ಶಕನಾಗಿ ಮುಂದೆ ಅದೇ ಪತ್ರಿಕೆಯ ಸಂಪಾದಕನೂ ಆಗುತ್ತಾನೆ. ಇದೇ ಪತ್ರಿಕೆ ಹಲವಾರು ’ನ್ಯೂ ವೇವ್’ ಸಿನಿಮಾಕರ್ತರ ಬೌದ್ಧಿಕ ಮೂಲವಾಗುತ್ತದೆ. ವಿಮರ್ಶಕನಾಗಿ ಟ್ರೋಫೋ ಯಾವ ಮಟ್ಟಕ್ಕೆ ಪ್ರಸಿದ್ಧಿಯಾಗುತ್ತಾನೆ ಎಂದರೆ, ಈತನ ಎರಡು ಸಾಲು ವಿಮರ್ಶೆ, ಸಿನಿಮಾವೊಂದರ ಹಣಬರಹವನ್ನೇ ಬದಲಾಯಿಸುವಷ್ಟು ಖ್ಯಾತಿ ಪಡೆಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ವಿರೋಧಿಗಳನ್ನೂ ಸಂಪಾದಿಸುತ್ತಾನೆ.

ಫ್ರಾನ್ಸ್‌ನಲ್ಲೇ ನಡೆಯುವ ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ 1958 ರಲ್ಲಿ ಆಹ್ವಾನಿಸದ ಏಕೈಕ ಪತ್ರಕರ್ತನೆಂದರೆ ಟ್ರೋಫೋ. ಅಷ್ಟೊತ್ತಿಗಾಗಲೇ 30 ರ ಹಾಸುಪಾಸಿನಲ್ಲಿದ್ದ ಟ್ರೋಫೋ, ವಿಮರ್ಶಿಸುತ್ತಲೇ ಸ್ವತಃ ತಾನೇಕೆ ಸಿನಿಮಾದಲ್ಲಿ ಒಂದು ಕೈ ನೋಡಬಾರದು ಎಂದು ತೀರ್ಮಾನಿಸುತ್ತಾನೆ. 1955-57ರ ನಡುವೆ ’ಉನ್ ವಿಸಿಟೆ’ ಮತ್ತು ’ಲೆಸ್ ಮಿಸ್‌ಟೋನ್ಸ್’ ಎಂಬ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾನೆ. ಇದೇ ಸಮಯದಲ್ಲಿ ಕಾಕತಾಳೀಯವಾಗಿ ಫ್ರಾನ್ಸ್‌ನ ಅತೀ ದೊಡ್ಡ ಸಿನಿಮಾ ವಿತರಕನ ಮಗಳಾದ ಲೈನ್ ಮಾರ್ಗೈನ್‌ಸ್ಟರ್‍ನ್‌ಳನ್ನು 1957ರಲ್ಲಿ ವರಿಸುತ್ತಾನೆ. ಹಾಗಾಗಿ 1965 ರ ಸಂಸಾರಿಕ ಜೀವನ ಹದಗೆಡುವ ಹಂತದವರೆಗೆ ಈತನ ಚಿತ್ರಗಳಿಗೆ ನಿರ್ಮಾಣದ ಕೊರತೆ ಇರಲಿಲ್ಲ. ಮುಂದೆ ಆತನ ಬಹುತೇಕ ನಟಿಯರೊಂದಿಗೆ ಕೆಲಕಾಲ ಬದುಕಿದ್ದನ್ನು ಹೊರೆತುಪಡಿಸಿ ಮತ್ತೆ ವಿವಾಹವಾಗಲಿಲ್ಲ. ವಿವಾಹ ಜೀವನ ಮುರಿಯುವಷ್ಟೊತ್ತಿಗೆ 400 ಬ್ಲೋಸ್ (1959), ಶೂಟ್ ದಟ್ ಪಿಯನೋ ಪ್ಲೇಯರ್ (1960), ಜೂಲ್ಸ್ ಅಂಡ್ ಜಿಮ್ (1962), ಫ್ಯಾರನ್‌ಹೀಟ್ 451 (1965) ಚಿತ್ರಗಳ ಮೂಲಕ ಪ್ರಖ್ಯಾತಿ ಗಳಿಸಿರುತ್ತಾನೆ. ಮೊದಲ ಸಿನಿಮಾ 400 ಬ್ಲೋಸ್, ಬಾಲಾಪರಾಧಿಯಾಗುವ ಹುಡುಗನೊಬ್ಬನ ಕಥೆ. ತನ ನಿಜ ಜೀವನದಂತೆ ಚಿತ್ರದಲ್ಲೂ ತಾಯಿಗೆ ಎರಡನೇ ಗಂಡನಿರುತ್ತಾನೆ. ತಾಯಿಗಿಂತ, ಮಲತಂದೆಯೇ ಆತ್ಮೀಯವಾಗಿರುತ್ತಾನೆ. ಶಾಲೆಯಿಂದ ತಪ್ಪಿಸಿಕೊಂಡು ಕಳ್ಳತನ, ವೇಶ್ಯೆಯರ ಓಣಿಯಲ್ಲಿ ಓಡಾಡುವಂತಾಗುತ್ತದೆ. 1976 ರ ’ಸ್ಮಾಲ್ ಚೇಂಜ್’ ಸಿನಿಮಾ ಕೂಡ ಇದರ ಪಡಿಯಚ್ಚಿನಂತೆ ಇದ್ದರೂ, ಇದು ದೊಡ್ಡ ಬಜೆಟ್‌ನಿಂದಗಿ, ಬಣ್ಣದ ಸಿನಿಮಾವಾಗಿ ರೂಪುಗೊಂಡಿದೆ. ಅಪಾರ್ಟ್‌ಮೆಂಟಿನೊಳಗಿನ ಕಾಗೆಗೂಡಿನ ಸಂಸಾರ, ಚಿಕ್ಕವರ ಅವಶ್ಯಕತೆಗಳು-ದೊಡ್ಡವರ ಸಣ್ಣತನಗಳು, ಹದಗೆಟ್ಟ ಶಾಲೆಗಳೂ ಹೀಗೆ ಅನೇಕ ವಸ್ತುಗಳು ಇಣುಕುವ ’ಸ್ಮಾಲ್ ಚೇಂಜ್’ ಮಕ್ಕಳಿಗೆ ಚುನಾವಣಾ ಹಕ್ಕಿರಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಮಕ್ಕಳಿಗೆ ಈ ಹಕ್ಕು ಕೊಟ್ಟರೆ ತಮಗೆ ಬೇಕಾದ ಶಾಲೆ, ಕಾಲೇಜು, ಮೈದಾನ, ಅಧ್ಯಯನದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ದೊರೆಯುತ್ತದೆ ಎನ್ನುತ್ತಾನೆ ಟ್ರೋಫೋ.

1965 ರ ’ಫ್ಯಾರನ್‌ಹೀಟ್ 451’ ಟ್ರೋಫೋನ ಇದರಿಂದಿನ ಮತ್ತು ಮುಂದಿನ ಸಿನಿಮಾಗಳಿಗೆ ಒಂದು ಗೆರೆ ಎಳೆಯುತ್ತದೆ. ಮುಂದಿನ ಬಹುತೇಕ ಸಿನಿಮಾಗಳು ಟ್ರೋಫೋನ ಸಾಂಸಾರಿಕ ಅಂಶಗಳನ್ನು ಒಳಗೊಂಡಿದ್ದರೆ, ಹಿಂದಿನ ಸಿನಿಮಾಗಳು ಬಾಲ್ಯದಿಂದ ಪ್ರೇರಿತವಾಗಿವೆ. ’ಫ್ಯಾರನ್‌ಹೀಟ್ 451’, ಪುಸ್ತಕ ಪ್ರಿಯರ ಮತ್ತು ಪುಸ್ತಕವನ್ನು ನಾಶ ಮಾಡಲು ಸಿದ್ಧಪಡಿಸಿದ ವಿಶೇಷ ತಂಡದ ನಡುವೆ ನಡೆಯುವ ಪ್ರಹಸನದ ಕಾಲ್ಪನಿಕ ಚಿತ್ರ. Fahrenheit451ವ್ಯಕ್ತಿಯ ಆಲೋಚನೆಯನ್ನು ವಿಸ್ತರಿಸುವ ಪುಸ್ತಕಗಳು ಪ್ರಭುತ್ವದ ವಿರೋಧಿ ಎಂದು ಪರಿಗಣಿಸಿ, ಪುಸ್ತಕವನ್ನು ಓದು ಮತ್ತು ಸಂಗ್ರಹಿಸುವುದು ಅಪರಾಧವಾಗಿರುವ ದೇಶದಲ್ಲಿ, ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಕದ್ದು, ಸಂಗ್ರಹಿಸಿ, ಓದಲು ಕೊಡುವ ಗುಂಪೊಂದನ್ನು ಪ್ರಧಾನ ಪಾತ್ರಗಳು ಪ್ರವೇಶಿಸುವುರೊಂದಿಗೆ ಸಿನಿಮಾ ಮುಗಿಯುತ್ತದೆ. ಹಿಟ್ಲ್‌ರ್‌ನ ಅಥವಾ ಮುಸಲೋನಿ ಕಾಲದಲ್ಲಿ ಅಲ್ಲಲ್ಲಿ ಇಂಥಹ ಪ್ರಯತ್ನಗಳು ನಡೆದಿರುಬಹುದಾದ ನೆನಪನ್ನು ಮರುಕಳಿಸುತ್ತವೆ.
ದ ಬ್ರೈಡ್ ವೋರ್ ಬ್ಲಾಕ್ (1968), ದಿ ಸ್ಟೋಲನ್ ಕಿಸೆಸ್ (1968), ಮೆಸಿಸಿಪ್ಪಿ ಮೆರ್‌ಮೇಯ್ಡ್, ಟೂ ಇಂಗ್ಲೀಷ್ ಗರ್ಲ್ಸ್(1971), ಡೇ ಫಾರ್ ನೈಟ್ (1973), ದ ವುಮನ್ ನೆಕ್ಟ್ ಡೋರ್ (1981), ಬೆಡ್ ಅಂಡ್ ಬೋರ್‍ಡ್, ಕಾನ್ಪೀಡೆನ್ಷಿಯಲಿ ಯುವರ್‍ಸ್ ಇನ್ನಿತರ ಚಿತ್ರಗಳು ಟ್ರೋಫೋಗೆ ಆಸ್ಗರ್ ಸೇರಿದಂತೆ ಜಾಗತಿಕವಾದ ಬಹುತೇಕ ಪ್ರಶಸ್ತಿಗಳನ್ನು ತಂದುಕೊಟ್ಟ ಸಿನಿಮಾಗಳು. ಇಲ್ಲಿನ ಬಹುತೇಕ ಚಿತ್ರಗಳು ಮಾನವನ ಪಂಚೇಂದ್ರಿಯಗಳ ಅಳತೆ ಮೀರಿದ ವಿಚಾರಗಳನ್ನು ಗ್ರಹಿಸಲೆತ್ನಿಸುತ್ತವೆ. ಸಿನಿಮಾ ತಯಾರಿಸಲು ಹೋದ ಗುಂಪೊಂದರ ವೈಯಕ್ತಿಕ ಸಮಸ್ಯೆಗಳು (ಡೇ ಫಾರ್ ನೈಟ್), ವೈವಾಹಿಕ ಜೀವನದಾಚೆಗಿನ ಸಂಬಂಧದಿಂದ ತನ್ನ ಜೀವನದಲ್ಲಿ ತಂದೊಡ್ಡುವ ಅನಾಹುತಗಳು… ಹೀಗೆ ಮೇಲಿನ ಚಿತ್ರಗಳ ತಿರುಳು ಭಿನ್ನ ಮತ್ತು ಅಲ್ಲಲ್ಲಿ ಟ್ರೋಫೋನ ವೈಯಕ್ತಿಕ ಜೀವನದ ಮಜಲುಗಳೇನೋ ಎನ್ನುವಂತಿವೆ. ’ದ ವುಮನ್ ನೆಕ್ಟ್ ಡೋರ್’ನಲ್ಲಿ ಕಾಮದ ನೆರಳಲ್ಲಿ ಬೆವರು ಸುರಿಸುವ ಅನ್ಯವಿವಾಹಿತ ಜೋಡಿ ಸಾರ್ವಜನಿಕ ಮುಗ್ಧತೆ ಮತ್ತು ಅಪರಾಧಿ ಮನೋಭಾವದಲ್ಲಿ ನರಳಿ, ಕೊನೆಗೆ ಕಾಮದ ತುತ್ತತುದಿಯಲ್ಲಿರುವ ಘಳಿಗೆಯಲ್ಲಿ ಒಬ್ಬರ ಕೊಲೆ ಮತ್ತೊಬ್ಬರ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುವ ದೃಶ್ಯ ಸರಮಾಲೆಗಳು ಎಂಥವರನ್ನೂ ಅಲುಗಾಡಿಸಿಬಿಡುತ್ತವೆ.

ಟ್ರೋಫೋನ ಹಿಂದಿನ ಸಿನಿಮಾ ’ದಿ ಸಾಫ್ಟ್ ಸ್ಕಿನ್’, ಜನಮೆಚ್ಚುಗೆಯ ಬುದ್ಧಿಜೀವಿಯೊಬ್ಬ ಯುವತಿಯ ಪ್ರೇಮಪಾಶದಲ್ಲಿ ತನ್ನ ಪತ್ನಿಯಿಂದ ದೂರಾಗ ಬಯಸುತ್ತಾನೆ. ಇನ್ನೇನೋ ವಿಚ್ಛೇದನ ತೆಗೆದುಕೊಂಡು ಮದುವೆಯಾಗುವ ಹೊತ್ತಿನಲ್ಲಿ, ಆ ಯುವತಿಗೆ ಈ ಸಂಬಂಧ ಸರಿಹೊಂದುವುದಿಲ್ಲ ಎನಿಸಿ ದೂರಾಗುತ್ತಾಳೆ. ನಾಯಕನಿಗೆ ತನ್ನ ತಪ್ಪಿನ ಅರಿವಾಗಿ ಪರಿತಪಿಸಿ, ಹೆಂಡತಿಯಲ್ಲಿ ಕ್ಷಮೆಯಾಚಿಸಲು ತೀರ್ಮಾನಿಸುತ್ತಾನೆ. ಗಂಡನನ್ನು ತನ್ನ ರಕ್ತದ ಕಣಕಣದಲ್ಲೂ ಪ್ರೀತಿಸಿದ ಆಕೆಗೆ, ಆತ ಇನ್ನೊಂದು ಹೆಣ್ಣಿಗಾಗಿ ತನ್ನನ್ನು ದೂರಮಾಡುತ್ತಿರುವ ವಿಷಯ ಅರಗಿಸಿಕೊಳ್ಳಲಾಗುವುದಿಲ್ಲ. ಮನೆಗೆ ಬಂದು ದೊಡ್ಡದೊಂದು ಗನ್‌ನ್ನು ತನ್ನ ಉದ್ದನೆಯ ಕೋಟ್‌ನೊಳಗೆ ಇರಿಸಿಕೊಂಡು, ಮಗುವನ್ನು ಸ್ನೇಹಿತೆಯ ಮನೆಯಲ್ಲಿ ಬಿಟ್ಟು ಹೊರಡುತ್ತಾಳೆ. ಮತ್ತೆ ಹೆಂಡತಿಗೆ ಮುಖ ತೋರಲು ಅಳುಕುವ ನಾಯಕ, ಅಂಜಿಕೆಯಿಂದಲೇ ಹೋಟೆಲ್‌ವೊಂದರಿಂದ ಹೆಂಡತಿಗೆ ಕರೆಮಾಡಲು ಯತ್ನಿಸಿದರೂ ಆಕೆ ಮಾತಿಗೆ ಸಿಗುವುದಿಲ್ಲ. ಇವನನ್ನೇ ಹುಡುಕಿಕೊಂಡು ಹೋಗಿರುತ್ತಾಳೆ. ಏನೂ ತೋಚದೆ, ಹೋಟೆಲ್‌ವೊಂದರಲ್ಲಿ ಕುಳಿತಿರುವ ಗಂಡನಲ್ಲಿಗೆ ಬಂದು, ಒಂದು ಮಾತಾಡುವ ಮೊದಲೇ ಗನ್ ತೆಗೆದು ಗುಂಡು ಹಾರಿಸಿಬಿಡುತ್ತಾಳೆ. ಅಲ್ಲೇ ನೆಲದ ಮೇಲೆ ನಡುಗುತ್ತಾ ನಿಶ್ಯಬ್ಧವಾಗಿ ಕುಳಿತುಕೊಳ್ಳುತ್ತಾಳೆ. ಅತ್ತ ಪೋಲಿಸ್ ಸೈರನ್ ಸದ್ದು ಮಾಡುತ್ತದೆ. ಪ್ರೀತಿಸುವ ವ್ಯಕ್ತಿ ಕೊಲ್ಲುವ ಹಂತಕ್ಕೆ ಹೋಗುವ ಈ ದೃಶ್ಯ ಎಂಥವರ ಭಾವನೆಗಳನ್ನು ಒಮ್ಮೆ ವಿಮರ್ಶೆಗೆ ಒಳಪಡಿಸುತ್ತದೆ.

ಈ ಮೇಲಿನ ಚಿತ್ರಗಳು ಕೊಂಚ ಆಟೋಬಯೋಗ್ರಾಫಿಕಲ್ ಎನಿಸಿ, ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪಡೆದಿದ್ದ ಗೊದಾರ್‍ಡ್ ಗೆಳೆಯ ಟ್ರೋಫೋನೊಂದಿಗೆ ಜಗಳವಾಡಿಕೊಳ್ಳುತ್ತಾನೆ. ನಿನ್ನ ಸಿನಿಮಾಗಳು ಸಿನಿಮಾವೇ ಅಲ್ಲವೆನ್ನುವ ಮಟ್ಟಕ್ಕೆ ಅಲ್ಲಗೆಳೆಯುತ್ತಾನೆ. ಗೊದಾರ್‍ಡ್‌ನ ಮೊದಲ ಸಿನಿಮಾ ’ಬ್ರೆತ್‌ಲೆಸ್’ನ ಸ್ಕ್ರಿಪ್ಟ್ ಟ್ರೋಫೋನದೇ ಆಗಿದ್ದರೂ ಮುಂದಿನ ಸಿನಿಮಾಗಳಲ್ಲಿ ಇಬ್ಬರೂ ಭಿನ್ನ ಹಾದಿಯನ್ನೇ ಹಿಡಿದರು. ಗೊದಾರ್‍ಡ್ ಪ್ರಯೋಗಗಳು ಹಾಲಿವುಡ್ಡಿನ ತಿಕ್ಕಲುತನಕ್ಕೆ ಪ್ರತ್ಯುತ್ತರವಾದರೂ ಪ್ರಯೋಗತ್ಮಾಕ ಮಟ್ಟದಿಂದ ಮುಂದುವರಿದು ಜನರ ಸಿನಿಮಾ ಆಗಲಿಲ್ಲ. ಗೋದಾರ್‍ಡ್‌ಗೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಿನಿಮಾ ಮಾಡುವುದೇ ಕಷ್ಟವಾಗಿಬಿಟ್ಟಿತು. ಇದೇ ಗೊದಾರ್‍ಡ್ ಅಮೆರಿಕಾದ್ಯಂತ ಸಂಚರಿಸಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಿನಿಮಾದ ಭ್ರಾಮಕತೆ ಬಗ್ಗೆ ಉಪನ್ಯಾಸ ನೀಡಿ ಹಣ ಸಂಗ್ರಹಿಸಿ ಸಿನಿಮಾ ಮಾಡಲೆತ್ನಿಸಿದ. ಆದರೂ ಕ್ರಮೇಣ ಗೊದಾರ್‍ಡ್‌ನ ಸಿನಿಮಾಗಳು ಸೋಲುತ್ತಲೇ ಬಂದು, ಇಂದು ಗೋದಾರ್‍ಡ್ ಬದುಕಿದ್ದಾನಾ ಅಥವಾ ಸತ್ತಿದ್ದಾನಾ? ಎಂಬಷ್ಟು ಅಗೋಚರವಾಗಿಬಿಟ್ಟಿದ್ದಾನೆ. ಆದರೆ ಇದೇ ಗೋದಾರ್‍ಡ್ ತನ್ನ ಇರುವಿಕೆಯನ್ನು ಕಳೆದ ವರ್ಷ ಒಂದು ಸಿನಿಮಾವನ್ನು ತಯಾರಿಸಿ ಬಿಡುಗಡೆ ಮಾಡುವ ಮೂಲಕ ತೋರಿದರೂ, ಅದು ಜನಪ್ರಿಯವಾಗಲಿಲ್ಲ. ಗೊದಾರ್‍ಡ್ ಸಿನಿಮಾ ಆತನೇ ಹೇಳುವಂತೆ ರಾಜಕೀಯ ಪ್ರಬಂಧದಂತೆ. ಆದ್ದರಿಂದ ಪ್ರತೀ ಅಕ್ಷರ, ದೃಶ್ಯವನ್ನೂ ಸೂಕ್ಷ್ಮವಾಗಿ ನೋಡಿದರೇನೇ ಅರ್ಥವಾಗುವುದು.

ಬಹುಶಃ ಟ್ರೋಫೋ ಸಿನಿಮಾದ ಆರ್ಥಿಕ ಕಾರಣಗಳಿಗಾಗಿ ಭಿನ್ನ ಹಾದಿಯನ್ನು ತುಳಿದ ಎನ್ನಿಸುತ್ತದೆ. ಇಲ್ಲದಿದ್ದರೆ ಗೋದಾರ್‍ಡ್‌ನಂತೆಯೇ ಟ್ರೋಫೋನೋ ಆಗಿಬಿಡುತ್ತಿದ್ದನೇನೊ. 52 ವಸಂತಗಳನ್ನು ಕಳೆದು ಮರೆಯಾದ ಟ್ರೋಫೋ 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಇತರರ ಸಿನಿಮಾಗಳಿಗೆ ಬರವಣಿಗೆಯನ್ನೂ ನಿರಂತರವಾಗಿ ಮುಂದುರೆಸಿದ್ದ. ಟ್ರೋಫೊನ ಸಿನಿಮಾಗಳು ಒಮ್ಮೆಮ್ಮೆ ಆತನ ಇತರೆ ಚಿತ್ರಗಳ ಪುನಾರವರ್ತಿ ಎನಿಸಿದರೂ, ನೋಡಲೇಬೇಕಾದ ಸಿನಿಮಾಗಳೆಂದರೆ ತಪ್ಪಿಲ್ಲ. ಎಂಥಹ ಭಾವನೆಗಳನ್ನೂ ನಾಟಕೀಯವಲ್ಲದ ಸ್ಮಿತಪ್ರಜ್ಞೆಯಿಂದ ತೋರಿಬಿಡುವ ಟ್ರೋಫೋನ ಮೊಂಟ್ಯಾಜ್‌ಗಳು ಪ್ರೇಕ್ಷಕನ ಮೇಲೆ ಬೀರುವ ಪ್ರಭಾವ ಅಗಾಧವಾದದ್ದು. ಸಿನಿಮಾ ನೋಡಿದ ಅನೇಕ ದಿನಗಳೂ ಕೂಡ ಕಳೆದರೂ ಆತನ ದೃಶ್ಯ ಜಗತ್ತಿನಿಂದ ಆಚೆ ಬರಲು ಕಷ್ಟವಾಗಿಬಿಡಬಹುದು.