Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಆ ರಾತ್ರಿ ಚಿನು ಎಲ್ಲಿದ್ದಳು ?

– ಬಿ. ಶ್ರೀಪಾದ ಭಟ್

ಎಂಬತ್ತರ ದಶಕದಲ್ಲಿ ದೂರದರ್ಶನ ಪ್ರತಿ ಶುಕ್ರವಾರ ರಾತ್ರಿಯಂದು ಭಾರತೀಯ ಭಾಷೆಗಳ ಕ್ಲಾಸಿಕ್ ಸಿನಿಮಾಗಳನ್ನು ಪ್ರದರ್ಶಿಸುತ್ತಿತ್ತು. ಆಗ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ನೋಡಿದ್ದ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ “ಏಕ್ ದಿನ್ ಪ್ರತಿದಿನ್” ಸಿನಿಮಾ ಕೂಡ ಒಂದು. ನಮಗೆಲ್ಲ ಭಾರತೀಯ ಸಿನಿಮಾರಂಗದ ಹೊಸ ಲೋಕವನ್ನೇ ತೋರಿಸಿದ ದೂರದರ್ಶನವನ್ನು ನಮ್ಮ ತಲೆಮಾರು ಮರೆಯಲು ಸಾಧ್ಯವೇ ಇಲ್ಲ.

“ಏಕ್ ದಿನ್ ಪ್ರತಿದಿನ್” 1979ರಲ್ಲಿ ತೆರೆಕಂಡ, ಮೃಣಾಲ್ ಸೇನ್ ನಿರ್ದೇಶನದ ಬೆಂಗಾಲಿ ಸಿನೆಮಾ. Ek_Din_Pratidin_DVD_coverಬೆಂಗಾಲಿ ಲೇಖಕ ಅಮಲೇಂದು ಚಕ್ರವರ್ತಿ ಅವರ ಸಣ್ಣ ಕತೆಯನ್ನಾಧರಿಸಿ ಮೃಣಾಲ್‌ದ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರ ಕತೆ ಸ್ಥೂಲವಾಗಿ ಹೀಗಿದೆ: ಎಪ್ಪತ್ತರ ದಶಕದಲ್ಲಿ ಕೊಲ್ಕತ್ತ ( ಆಗಿನ ಕಲ್ಕತ್ತ) ದಲ್ಲಿ ವಾಸಿಸುತ್ತಿರುವ ಏಳು ಜನ ಸದಸ್ಯರ ಮಧ್ಯಮವರ್ಗದ ಕುಟುಂಬ. ಇದರಲ್ಲಿ ತಂದೆ, ತಾಯಿ ಮತ್ತು ಐವರು ಹೆಣ್ಣು ಮಕ್ಕಳು ಮತ್ತಿಬ್ಬರು ಗಂಡು ಮಕ್ಕಳು. ಇಡೀ ಕುಟುಂಬದ ಹೊರೆ ಹೊತ್ತುಕೊಂಡಿದ್ದು ಹಿರಿಯಕ್ಕ ಚಿನು (ಮಮತಾ ಶಂಕರ್). ಕಛೇರಿಯೊಂದರಲ್ಲಿ ಕೆಲಸ ಮಾಡುತ್ತ ತನ್ನ ಉಳಿದ ಆರು ಜನರ ಬದುಕನ್ನು ನಿಭಾಯಿಸುತ್ತಿರುತ್ತಾಳೆ ಹಿರಿಯಕ್ಕ ಚಿನು. ಅದರೊಂದು ದಿನ ರಾತ್ರಿಯಾದರೂ ಹಿರಿಯಕ್ಕ ಚಿನು ಮನೆಗೆ ಮರಳುವುದಿಲ್ಲ. ಬಹುಶಃ ಕಛೇರಿಯಲ್ಲಿ ಹೆಚ್ಚಿದ ಕೆಲಸದಿಂದಾಗಿ ತಡವಾಗಬಹುದೆಂದು ಕುಟುಂಬದ ಇತರೆ ಮಂದಿ ಭಾವಿಸಿರುತ್ತಾರೆ. ಕಿರಿಯ ತಂಗಿ ಮಿನು ( ಅದ್ಭುತವಾಗಿ ನಟಿಸಿದ್ದಾಳೆ. ಹೆಸರು ಮರೆತಿದೆ) ಅಕ್ಕನ ಆಫೀಸಿಗೆ ಫೋನ್ ಮಾಡಿದಾಗ ತನ್ನಕ್ಕ ಆಫೀಸಿನಲ್ಲಿ ಇರದಿರುವುದು ಗೊತ್ತಾಗಿ ಕಳವಳಪಡುತ್ತಾಳೆ.

ನಿಶ್ಚಿಂತೆಯಿಂದ ಇದ್ದ ಈ ಕುಟುಂಬವು ಕ್ಷಣ ಮಾತ್ರದಲ್ಲಿ ಆತಂಕಕ್ಕೆ ದೂಡಲ್ಪಡುತ್ತದೆ. ತೀವ್ರ ದುಗುಡದಿಂದ ಅಪ್ಪ ಬಸ್ ಸ್ಟಾಪಿನ ಬಳಿ ಬಂದು ಕಡೆಯ ಬಸ್ ಬರುವವರೆಗೂ ಕಾಯುತ್ತಾನೆ. ಆದರೆ ಮಗಳು ಕಾಣುವುದಿಲ್ಲ. ಇಡೀ ಅಪಾರ್ಟಮೆಂಟಿನಲ್ಲಿ ಚಿನುವಿನ ನಾಪತ್ತೆಯ ಸುದ್ದಿ ಕ್ಷಣ ಮಾತ್ರದಲ್ಲಿ ಹಬ್ಬುತ್ತದೆ. ನೆರೆಹೊರೆಯ ಜನ ತಲೆಗೊಬ್ಬರಂತೆ ಮಾತನಾಡಲಾರಂಬಿಸುತ್ತಾರೆ. ಕೆಲವರು ಸಹಾನುಭೂತಿಯಿಂದ, ಕೆಲವರು ಕುಹುಕದಿಂದ, ಬಹುಪಾಲು ಜನ ವಿಚಿತ್ರವಾದ ಮಾತುಗಳಿಂದ ಇಡೀ ಘಟನೆಯನ್ನು ವಿಶ್ಲೇಷಿಸುತ್ತಾರೆ. ಇದನ್ನು ಮೃಣಾಲ್‌ದ ಅತ್ಯಂತ ಸಂಯಮದಿಂದ ಆದರೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕಡೆಗೆ ಪೋಲೀಸರಿಗೂ ದೂರು ನೀಡಲಾಗುತ್ತದೆ. ನಾಪತ್ತೆಯಾದ ಚಿನುವಿನ ತಮ್ಮ ಮತ್ತವನ ಸ್ನೇಹಿತನೊಂದಿಗೆ ಕಡೆಗೆ ಹತಾಶೆಯಿಂದ ಶವಾಗಾರಕ್ಕೆ ತೆರಳಿ ತನ್ನಕ್ಕ ಶವವನ್ನು ಹುಡುಕುತ್ತಾನೆ. ಮತ್ತೊಂದು ಕಡೆ ಚಿನುವಿನ ಚಹರೆಯನ್ನು ಹೋಲುವ ಮಹಿಳೆಯೊಬ್ಬಳು ಅಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾಳೆಂದು ಸುದ್ದಿ ತಿಳಿದು ಆಕೆಯ ಅಪ್ಪ ಕೂಡಲೆ ಆಸ್ಪತ್ರೆಗೆ ಧಾವಿಸುತ್ತಾನೆ. ekdin-pratidinಆದರೆ ಆಕೆ ತನ್ನ ಮಗಳಲ್ಲವೆಂದು ಖಚಿತವಾದ ನಂತರ ಅರ್ಧ ನಿರಾಸೆ, ಇನ್ನರ್ಧ ನಿರಾಳತೆಯಿಂದ ಮನೆಗೆ ಮರಳುತ್ತಾನೆ. ಚಿನುವಿನ ಕುಟುಂಬವು ಇಡೀ ರಾತ್ರಿಯನ್ನು ಆತಂಕ, ತಲ್ಲಣಗಳಿಂದ ಎದುರಿಸುತ್ತದೆ. ಮರುದಿನದ ಮುಂಜಾನೆಯ ನಸುಕತ್ತಲಿನಲ್ಲಿ ಕುಟುಂಬದ ಕಿರಿಯ ಹೆಣ್ಣುಮಗಳು ಕಾಣೆಯಾಗಿದ್ದ ಚಿನು ನಿಧಾನವಾಗಿ ಮೆಟ್ಟಿಲೇರುತ್ತ ಬರುತ್ತಿರವುದನ್ನು ಗುರುತಿಸಿ ಸಂತೋಷದಿಂದ ಕಿರುಚುತ್ತ ಇಡೀ ಕುಟುಂಬವನ್ನು ಎಚ್ಚರಿಸುತ್ತಾಳೆ. ಮೆಟ್ಟಲೇರಿ ಬರುತ್ತಿದ್ದ ಮಗಳನ್ನು ಕುಟುಂಬದ ಸದಸ್ಯರು ಮಾತನಾಡಿಸದೇ ವಿಲಕ್ಷಣ ಮೌನದಲ್ಲಿ, ಹೇಳಿಕೊಳ್ಳಲಾಗದ ಶಂಕೆಯಲ್ಲಿ, ಹೊಯ್ದಾಟದ ಮನಸ್ಸಿನಲ್ಲಿ ಎದುರುಗೊಳ್ಳುತ್ತಾರೆ. ಹಿಂದಿನ ರಾತ್ರಿ ಎಲ್ಲಿದ್ದೆ ಎಂದು ಕೇಳಲಾಗದೆ ವಿಚಿತ್ರ ತೊಳತಾಟದಲ್ಲಿರುತ್ತದೆ ಚಿನುವಿನ ಕುಟುಂಬ. ಆಗ ಅಪಾರ್ಟಮೆಂಟಿನ ಮಾಲೀಕ ಎಂದಿನಂತೆ ಅಪ್ಪನನ್ನು ದಬಾಯಿಸುತ್ತಾ ಇದು ಮರ್ಯಾದಸ್ಥರು ಇರುವ ಜಾಗವೆಂತಲೂ ಈ ಕೂಡಲೇ ನಿಮ್ಮ ಕುಟುಂಬ ಇಲ್ಲಿಂದ ಜಾಗ ಬದಲಿಸಬೇಕೆಂತಲೂ ತಾಕೀತು ಮಾಡುತ್ತಾನೆ. ಕಡೆಗೆ ಇದಾವುದಕ್ಕೂ ಮೈಟ್ ಮಾಡದ ಚಿನುವಿನ ಹಾಗೂ ಕುಟುಂಬದ ಅಮ್ಮ ಎಂದಿನಂತೆ ತನ್ನ ದಿನನಿತ್ಯದ ಮನೆಗೆಲಸವನ್ನು ಶುರು ಮಾಡುವದರೊಂದಿಗೆ ಈ ಸಿನಿಮಾ ಮುಗಿಯುತ್ತದೆ.

’ಏಕ್ ದಿನ್ ಪ್ರತಿದಿನ್’ ಮೃಣಾಲ್ ಸೇನ್ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಚಿತ್ರಕ್ಕಾಗಿ 1980 ರಲ್ಲಿ ಅತ್ಯುತ್ತಮ ನಿರ್ದೇಶಕನೆಂದು ರಾಷ್ಟ್ರ ಪ್ರಶಸ್ತಿ ಗಳಿಸುತ್ತಾರೆ.

ಅವರ ಈ ಮುಂಚಿನ ಮಹತ್ವದ ಚಿತ್ರಗಳಾದ ಪ್ರತಿನಿಧಿ, ಭುವನ್ ಶೋಮ್, ಏಕ್ ಅಧೂರಿ ಕಹಾನಿ, ಮೃಗಯಾಗಳಿಗೆ ಹೋಲಿಸಿದರೆ ಕಥಾ ಹಂದರದಲ್ಲಿ ಅತ್ಯಂತ ಸರಳವಾದ ಆದರೆ ಸಂವೇದನೆಯ ಮಟ್ಟದಲ್ಲಿ ಇವೆಲ್ಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಸಿನಿಮಾ ಏಕ್ ದಿನ್ ಪ್ರತಿದಿನ್. mrinal-senಇಂಡಿಯಾದ ಬದಲಾಗುತ್ತಿರುವ ನಗರ, ಈ ಬದಲಾವಣೆಯ ಮೂಲಧಾತು ನಗರಗಳ ವಾಣಿಜ್ಯೀಕರಣ ಮತ್ತು ಈ ಅನಿರೀಕ್ಷಿತ ಬದಲಾವಣೆಗಳೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವ ನಗರದ ಎಪ್ಪತ್ತರ ದಶಕದ ಮಧ್ಯಮ ವರ್ಗ, ಇವೆಲ್ಲವನ್ನು ಕೇಂದ್ರವಾಗಿಟ್ಟುಕೊಂಡು ಮೊಟ್ಟ ಮೊದಲಬಾರಿಗೆ ಮೃಣಾಲ್‌ದ ನಿರ್ದೇಶಿಸಿದ ಸಿನಿಮಾ ಇದು. ಕಥಾ ನಾಯಕಿ ಆ ಒಂದು ರಾತ್ರಿ ಎಲ್ಲಿದ್ದಳು ಎಂಬುದನ್ನೇ ಗೌಣವಾಗಿಸಿ ಅದು ಅವಳ ವೈಯುಕ್ತಿಕ ಬದುಕು ಎಂದು ಪರೋಕ್ಷವಾಗಿ ಆದರೆ ಅತ್ಯಂತ ಘನತೆಯಿಂದ ತೋರಿಸುತ್ತಾರೆ ಮೃಣಾಲ್‌ದ. ಇಲ್ಲಿ ಅವರು ಕೇಂದ್ರೀಕರಿಸುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರದ ಮಧ್ಯಮ ವರ್ಗದ ಹಿಪೋಕ್ರೆಸಿ, ಆಧುನಿಕ ಶಿಕ್ಷಣವನ್ನು ಪಡೆದೂ ಜಡಗಟ್ಟಿದ ಮನಸ್ಸನ್ನು ಕಳೆದು ಹಾಕಲು ನಿರಾಕರಿಸುವ ಈ ವರ್ಗಗಳ ಕ್ಷುದ್ರತೆ ಮತ್ತು ತಾನು ಪರಂಪರೆಯನ್ನು ಪಾಲಿಸುತ್ತಿರುವ ಭಾರತೀಯ ನಾರಿಯೋ ಅಥವಾ ಬದಲಾವಣೆಗೆ ತೆತ್ತುಕೊಂಡ ಈ ಶತಮಾನದ ಮಾದರಿ ಹೆಣ್ಣೋ ಎಂಬುದರ ಕುರಿತಾಗಿ ದಿಟ್ಟತೆಯನ್ನು ಪ್ರದರ್ಶಿಸುವ ಮನೋಭೂಮಿಕೆಗಳ ಹುಡುಕಾಟದಲ್ಲಿರುವ ಹೊರಗೆ ದುಡಿದು ಕುಟುಂಬವನ್ನು ಸಾಕುವ ಅವಿವಾಹಿತ ಹೆಣ್ಣುಮಗಳು.

ಚಿತ್ರದ ಕ್ಲೈಮಾಕ್ಸ ಅನ್ನು ನೋಡಿ. ಕಡೆಗೆ ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಹತಾಶೆಯಿಂದ ದೂಷಿಸಿಕೊಳ್ಳುತ್ತಿರುತ್ತಾರೆ. ತಮಗೆಲ್ಲ ದುಡಿದು ಹಾಕುತ್ತಿರುವ ಚಿನುವಿನ ಕುರಿತಾಗಿ ನಾವ್ಯಾರು ಗಮನವೇ ಹರಿಸಿಲ್ಲ, ಅವಳಿಗೇನು ಮಾಡಿದ್ದೇವೆ? ಎಂಬ ಪಾಪ ನಿವೇದನೆಯಲ್ಲಿರುತ್ತಾರೆ. ಆಗ ಕೂಡಲೆ ಹೊರಗಡೆ ಕಾರು ಭರ್ರನೆ ಬಂತು ನಿಂತ ಶಬ್ದ ಕೇಳಿಸುತ್ತದೆ. (ಇದು ದೌರ್ಜ್ಯನ್ಯದ, ಅಧಿಕಾರದ, ದೈಹಿಕ ಹಲ್ಲೆಯ ಸಂಕೇತವೇ??) ಕೂಡಲೆ ಕುಟುಂಬದ ಕಿರಿಯ ಹುಡುಗಿ ಬಾಗಿಲ ಬಳಿ ಧಾವಿಸುತ್ತಾಳೆ. ಮನೆ ಪ್ರವೇಶಿಸುವ ಚಿನು ‘ನೀವೆಲ್ಲ ರಾತ್ರಿಯೆಲ್ಲ ಮಲಗಲಿಲ್ಲವೇ?’ ಎಂದು ನಿರ್ಲಿಪ್ತಳಾಗಿ ಪ್ರಶ್ನಿಸುತ್ತಾಳೆ.

ಆದರೆ ಚಿತ್ರ ಬಿಡುಗಡೆಯ ನಂತರ ಬಹುತೇಕ ಪ್ರೇಕ್ಷಕರು ಮೃಣಾಲ್‌ದ ಅವರನ್ನು ಪ್ರಶ್ನಿಸುವುದು ಚಿನು ಆ ರಾತ್ರಿ ಎಲ್ಲಿದ್ದಳು? ಇದಕ್ಕೆ ಉತ್ತರಿಸುತ್ತಾ ಮೃಣಾಲ್‌ದ ಹೇಳುತ್ತಾರೆ, “ಹಿಂದೆ ವೇಟಿಂಗ್ ಫಾರ್ ಗೋಡೋ ನಾಟಕವನ್ನು ಬರೆದ ನಾಟಕಕಾರ ಬೆಕೆಟ್‌ನನ್ನು ಕೂಡ ಹೀಗೆಯೇ ಪ್ರಶ್ನಿಸಿದ್ದರು, ಯಾರಿಗಾಗಿ ಕಾಯುತ್ತಿರುವುದು? ಯಾರು ಈ ಗೋಡೋ? ಅದಕ್ಕೆ ಬೆಕೆಟ್ ಹೇಳಿದ್ದು ನನಗೆ ಗೊತ್ತಿದ್ದರೆ ನಾನದನ್ನು ನಾಟಕದಲ್ಲಿ ಹೇಳುತ್ತಿರಲಿಲ್ಲವೇ!! ಹಾಗೆಯೇ ಚಿನು ಆ ರಾತ್ರಿ ಎಲ್ಲಿದ್ದಳೆಂದು ನನಗೆ ಗೊತ್ತಿದ್ದರೆ ನಾನು ಹೇಳುತ್ತಿರಲಿಲ್ಲವೇ!!”

ಅದರೆ ಇಡೀ ಚಿತ್ರಕ್ಕೆ ಒಂದು ನಿಜವಾದ ಭಾಷ್ಯೆ ಬರೆವುದು ಮತ್ತು ಇಡೀ ಚಿತ್ರದ ದಿಟ್ಟತೆ ಮತ್ತು ಹೆಣ್ಣಿನ ಆತ್ಮ ಗೌರವವು ತನ್ನ ಮೇರುತನವನ್ನು mrinal-sen2ಮುಟ್ಟುವ ಕ್ಷಣವೆಂದರೆ ಅಲ್ಲಿಯವರೆಗೂ ಅನಾರೋಗ್ಯದಿಂದ ನರಳುತ್ತ ಹಿನ್ನೆಲೆಯಲ್ಲಿ ಉಳಿದುಕೊಳ್ಳುವ ಕುಟುಂಬದ ತಾಯಿ ( ಮೃಣಾಲ್‌ದ ಪತ್ನಿ ಗೀತಾ ಸೇನ್) ಕ್ಲೈಮಾಕ್ಸಿನಲ್ಲಿ ಧಿಡೀರನೆ ಮುನ್ನಲೆಗೆ ಬಂದು ಇದಾವುದು ತನಗೆ ಸಂಬಂಧವಿಲ್ಲವೆಂಬಂತೆ ತನ್ನ ಮುಂಜಾವಿನ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಇದು ನನ್ನ ಬದುಕು ಇದಕ್ಕೆ ನಾನೇ ಯಜಮಾನಿ, ಹಾಗೇಯೇ ಚಿನು ರಾತ್ರಿ ಎಲ್ಲಿದ್ದಳೆಂಬುದು ಅವಳ ವೈಯುಕ್ತಿಕ ಬದುಕು, ಅದಕ್ಕೆ ಅವಳು ಮಾತ್ರ ಯಜಮಾನಿ, ಅದನ್ನು ಪ್ರಶ್ನಿಸಲು ನಮಗಾರಿಗೂ ಹಕ್ಕಿಲ್ಲ ಎಂದು ಮೌನವಾಗಿಯೇ ಒಂದು ಶಬ್ದವನ್ನಾಡದೇ ಇಡೀ ವ್ಯವಸ್ಥೆಗೆ ದಿಟ್ಟ ಉತ್ತರ ನೀಡುತ್ತಾಳೆ. ಇಲ್ಲಿಯೇ “ಏಕ್ ದಿನ್ ಪ್ರತಿದಿನ್” ಗೆಲ್ಲುವುದು. ಇದೇ ಅದರ ಮಾನವೀಯತೆ. ಇದೇ ನಿರ್ದೇಶಕನ ಜೀವಪರ ಮನಸ್ಸು.

ಇದು ಈಗ ಮತ್ತೆ ನೆನಪಾಗಲಿಕ್ಕೆ ಕಾರಣ ಮೊನ್ನೆ ಮುಂಬೈನಲ್ಲಿ ಜರುಗಿದ ಮತ್ತೊಂದು ಅತ್ಯಾಚಾರದ ಪ್ರಕರಣವನ್ನು ಕೇಳಿದಾಗ, ಓದಿದಾಗ. ಇಂತಹ ಹತ್ತಾರು ಅತ್ಯಾಚಾರದ ಪ್ರಕರಣಗಳು ಇಂದು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಹಳ್ಳಿಗಳ, ಪಟ್ಟಣಗಳ ಮಟ್ಟದಲ್ಲಿ ನಡೆಯುವ india-rapeಅತ್ಯಾಚಾರಗಳು ಬೆಳಕಿಗೇ ಬರುತ್ತಿಲ್ಲ. ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಜಡ್ಡುಗಟ್ಟಿದೆಯೆಂದರೆ ಮಾಧ್ಯಮಗಳು ಯಾವುದಾದರೊಂದು ಅತ್ಯಾಚಾರದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು. ಆಗಲೇ ನಾವು ಕೂಡ ಸ್ಪಂದಿಸುವುದು. ಆಗಲೇ ಮೂಲೆ ಸೇರಿದ್ದ ನಮ್ಮ ಮೊಂಬತ್ತಿಗಳು ಬೆಳಕು ಕಾಣುವುದು. ಇಲ್ಲದಿದ್ದರೆ ನಮ್ಮ ಪುಟ ತಿರುವಿ ನೋಡಿ ಮನಸ್ಥಿತಿ ನಿರಂತರವಾಗಿರುತ್ತದೆ. ಮಧ್ಯಮವರ್ಗದ ಈ ಅಮಾನವೀಯ ಹಿಪೋಕ್ರಸಿಯೇ ಇಂದಿಗೂ ನಮ್ಮನ್ನು ಕಾಡುತ್ತಿರುವುದು. ಇಂದು ಪ್ರತಿ ಅತ್ಯಾಚಾರದ ಸಂದರ್ಭದಲ್ಲೂ ಚಿನು ನಮ್ಮನ್ನು ಕಾಡತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಚಿನುವಿನಂತೆಯೇ ಮೌನಕ್ಕೆ ಶರಣಾಗಬೇಕಾಗುತ್ತದೆ. ಅತ್ಯಾಚಾರಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ, ಅದನ್ನು ತಡೆಗಟ್ಟಲು ಮಾರ್ಗೋಪಾಯಗಳ ಕುರಿತಾಗಿ ಆ ಕ್ಷಣಕ್ಕೆ ನೂರಾರು ಚರ್ಚೆಯಾಗುತ್ತದೆ. ಮತ್ತೆ ಕಾನೂನು ವೈಫಲ್ಯ, ವೋಟ್ ಬ್ಯಾಂಕ್ ರಾಜಕಾರಣ, ಲೈಂಗಿಕ ಅನಾಗರಿಕತೆಯನ್ನು ಹುಟ್ಟು ಹಾಕುವ ಸಾಮಾಜಿಕ ಹಾಗೂ ಮಾನಸಿಕ ಸ್ಥಿತಿ ಒಟ್ಟಲ್ಲಿ ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆಯೇ?

ಆದರೆ ನಗರೀಕರಣದ ಅಪಾಯಕಾರಿ ಬದುಕು ಮತ್ತು ಇದಕ್ಕೆ ಮೂಲಭೂತ ಕಾರಣಕರ್ತರಾದ ನಾವು, ಇದರ ಕುರಿತಾಗಿ ಚರ್ಚೆ ಆಗುತ್ತಿಲ್ಲ. stop-rapes-bombayಅತ್ಯಂತ ಸಂಕೀರ್ಣಗೊಳ್ಳುತ್ತಿರುವ, ಮಾನಗೆಡುತ್ತಿರುವ ಇಂದಿನ ಬದುಕನ್ನು ನಾವೇ ಸ್ವತಃ ಕಟ್ಟಿಕೊಂಡಿದ್ದು. ನಾವು ಕಟ್ಟಿದ ಈ ಕೊಳ್ಳುಬಾಕ ಸಂಸ್ಕೃತಿಯಿಂದಲೇ ಅತ್ಯಾಚಾರಿಗಳು ಹುಟ್ಟಿಕೊಳ್ಳುತ್ತಾರೆ. ಸಹಜವಾಗಿಯೇ ಇವರೆಲ್ಲ ಲುಂಪೆನ್ ಗುಂಪಿನಿಂದ ಬಂದವರಾಗಿರುತ್ತಾರೆ. ವ್ಯವಸ್ಥೆಯೊಂದರಲ್ಲಿ ಉಳ್ಳವರು ಮತ್ತು ಮತ್ತು ನಿರ್ಗತಿಕರ ನಡುವಿನ ಕಂದಕ ದೊಡ್ಡದಾದಷ್ಟು ಈ ಲುಂಪೆನ್ ಗುಂಪು ಬೆಳೆಯುತ್ತಾ ಹೋಗುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇತರ ವಸ್ತುಗಳಂತೆಯೇ ಹೆಣ್ಣು ಸಹ ಒಂದು ಕಮಾಡಿಟಿ ಅಷ್ಟೇ. ಹೆಣ್ಣು ಭ್ರೂಣಾವಸ್ಥೆಯಲ್ಲಿದ್ದಾಗ ಹತ್ಯೆ ಮಾಡುವ ನಾಗರಿಕ ಸಮಾಜ ಬೆಳೆದ ನಂತರ ಎಡನೇ ದರ್ಜೆಯ ನಾಗರಿಕಳನ್ನಾಗಿರುಸುತ್ತದೆ. ಆಗಲೇ ಆಕೆಯನ್ನು ಕೇವಲ ಒಂದು ಭೋಗದ ವಸ್ತುವಾಗಿ ನೋಡಲು ಶುರು ಮಾಡುವುದು. ಟಿವಿ, ಫ್ರಿಜ್ ಕೊಂಡಂತೆ, ವರ್ಷಕ್ಕೊಮ್ಮೆ ಬದಲಾಯಿಸುವಂತೆ ಹೆಣ್ಣನ್ನು ಕೊಳ್ಳಲು, ಬದಲಾಯಿಸಲು ಪ್ರಯತ್ನಿಸುತ್ತದೆ ಈ ನಾಗರೀಕತೆ. ಅತ್ಯಾಚಾರದ ದೈಹಿಕ ಕ್ರೌರ್ಯ ಒಂದು ಕಡೆಯಾದರೆ ಮುಂದೇನು? ಮನೆಯ ಮಾಲೀಕ ಇದು ಮರ್ಯಾದಸ್ಥರು ವಾಸಿಸುವ ಸ್ಥಳವೆಂದು ಗೊಣಗಲು ಶುರು ಮಾಡಿದಾಗ ನಮ್ಮ ನೂರಾರು ಚಿನುಗಳು ಮುಂದೇನು ಮಾಡಬೇಕು??

ಕಾವೇರಿ ನದೀ ಕಣಿವೆಯ ಸಾಕ್ಷ್ಯಚಿತ್ರ

ಸ್ನೇಹಿತರೇ,

ನಿಮಗೆ ಕೇಸರಿ ಹರವೂರವರು ಗೊತ್ತೇ ಇರುತ್ತಾರೆ. ಅವರು ನಿರ್ದೇಶಿಸಿದ ಮೊದಲ ಚಲನಚಿತ್ರ “ಭೂಮಿಗೀತ” ಕ್ಕೆ 1998ರಲ್ಲಿ ಪರಿಸರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ತದನಂತರದಲ್ಲಿ ಅವರು ಉತ್ತರ ಕನ್ನಡದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಅಲ್ಲಿಯ ಪರಿಸರಕ್ಕೆ ಹೇಗೆ ಮಾರಕ kesari-haravooಮತ್ತು ಆಘನಾಶಿನಿ ನದಿ ಸಮುದ್ರಕ್ಕೆ ಸೇರುವ ಕೊಲ್ಲಿ ಪ್ರದೇಶದ ಜನಜೀವನ ಹೇಗೆ ದುರ್ಗತಿ ಕಾಣುತ್ತದೆ ಎನ್ನುವುದರ ಕುರಿತು “ಅಘನಾಶಿನಿ ಮತ್ತದರ ಮಕ್ಕಳು” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಅದೇ ರೀತಿ ಸಕಲೇಶಪುರದ ಬಳಿಯ ಶಿರಾಡಿ ಘಟ್ಟ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಗುಂಡ್ಯ ಜಲವಿದ್ಯುತ್ ಸ್ಥಾವರದ ನಿರ್ಮಾಣದಿಂದ ಅಲ್ಲಿಯ ಪರಿಸರಕ್ಕೆ ಮತ್ತು ಜೈವಿಕ ವೈವಿಧ್ಯತೆಗೆ ಹೇಗೆ ಮಾರಕವಾಗುತ್ತದೆ ಎನ್ನುವುದರ ಕುರಿತು “ನಗರ ಮತ್ತು ನದೀಕಣಿವೆ” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಕೇಸರಿಯವರು ಕೇವಲ ಸಿನೆಮಾ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರಲ್ಲ. ಬಾಗೂರು-ನವಿಲೆ ಕಾಲುವೆ ನಿರ್ಮಾಣ ಉಂಟುಮಾಡಿದ್ದ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಸರ ವಿನಾಶದ ಬಗ್ಗೆ ಅಲ್ಲಿಯ ರೈತರೊಡನೆ ಜೊತೆಗೂಡಿ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರೂ ಹೌದು.

ಈಗ ಇವರು ಕಾವೇರಿ ಕಣಿವೆ ಮತ್ತು ನದಿ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಿರ್ಮಾಣಕ್ಕೆ ಸಮಾನಮನಸ್ಕರ ಮತ್ತು ಸಮುದಾಯದ ಬೆಂಬಲ ಬೇಕಿದೆ. ಇಂತಹ ಚಟುವಟಿಕೆಗಳು ಆಗಬೇಕಿರುವುದೇ ಹಾಗೆ. ಒಂದು ಜವಾಬ್ದಾರಿಯುತ ಮತ್ತು ಪ್ರಬುದ್ಧ ಸಮಾಜದಲ್ಲಿ ಇಂತಹ ಯೋಜನೆಗಳಿಗೆ ಬೆಂಬಲ ಹರಿದುಬರಬೇಕು. ಕಾಳಜಿಯುಳ್ಳ ಮತ್ತು ಜಾಗೃತಿ ಮೂಡಿಸುವ ಕೆಲಸಗಳಲ್ಲಿ ನಮ್ಮೆಲ್ಲರ ಪಾಲೂ ಇರಬೇಕು. ಕೇಸರಿ ಹರವೂರವರು ಈ ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಕಾರ್ಯಯೋಜನೆಯಲ್ಲಿ ಅಂತಹ ಅವಕಾಶ ಕಲ್ಪಿಸುತ್ತಿದ್ದಾರೆ. ಅದನ್ನು ಬೆಂಬಲಿಸುವವರಲ್ಲಿ ನಾವೂ ಒಬ್ಬರಾಗಬೇಕು.

ದಯವಿಟ್ಟು ಅವರು ಬರೆದಿರುವ ಕೆಳಗಿನ ಈ ಪುಟ್ಟ ಟಿಪ್ಪಣಿಯನ್ನು ಓದಿ, ಅವರ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ನಿಮ್ಮ ಕೈಲಾದಷ್ಟು ದೇಣಿಗೆ ಅಥವ ಪ್ರಾಯೋಜಕತ್ವ ನೀಡಿ. ನಾನು ವೈಯಕ್ತಿಕವಾಗಿ “Supporter : Rs. 5000+ / $100” ದೇಣಿಗೆ ನೀಡಿ ಬೆಂಬಲಿಸಿದ್ದೇನೆ. ನಮ್ಮ ವರ್ತಮಾನದ ಓದುಗ ಬಳಗ ಕನ್ನಡದಲ್ಲಿ ನಡೆಯುತ್ತಿರುವ ಇಂತಹ ಮೊದಲ ಸಮುದಾಯ ಬೆಂಬಲಿತ ಸಾಕ್ಷ್ಯಚಿತ್ರ ಮತ್ತು ಜಾಗೃತಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತದೆ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಆತ್ಮೀಯರೇ,

ಕಾವೇರಿ ಕಣಿವೆ ಮತ್ತು ನದೀ ವ್ಯವಸ್ಥೆಯ ಸಾಮಾಜಿಕತೆ, ಆರ್ಥಿಕತೆ ಹಾಗೂ ಪರಿಸರದ ಪ್ರಸ್ತುತ ವಸ್ತುಸ್ಥಿತಿ ಮತ್ತು ಈ ನದೀ ವ್ಯವಸ್ಥೆಯು ದಿನೇ ದಿನೇ ಹೇಗೆ ಕ್ಷೀಣಿಸುತ್ತಿದೆ ಎನ್ನುವ ವಿಷಯಗಳನ್ನೊಳಗೊಂಡ ಪೂರ್ಣಪ್ರಮಾಣದ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸುವ ಸಲುವಾಗಿ ನಾನು ಈ ಎರಡು-ಮೂರು ವರ್ಷಗಳಿಂದ ತುಸು ಅಧ್ಯಯನ ನಿರತನಾಗಿರುವುದು ತಮಗೆ ತಿಳಿದೇ ಇದೆ. ಇದಕ್ಕಾಗಿ ಒಂದೆರಡು ರಿಸರ್ಚ್ ಸಂಸ್ಥೆಗಳು ಹಾಗೂ ಹಲವು ಅಧ್ಯಯನ ನಿರತರು ನನ್ನ ಬೆನ್ನ ಹಿಂದಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಕಾವೇರೀ ಕಣಿವೆಯ ಉದ್ದಕ್ಕೂ, ಅಲ್ಲದೇ ಕಣಿವೆಯನ್ನು ಅವಲಂಬಿಸಿರುವ ಇತರ ಪ್ರದೇಶಗಳಿಗೂ ಕೊಂಡೊಯ್ದು ಕಡೇಪಕ್ಷ ಐದುನೂರು ಪ್ರದರ್ಶನಗಳನ್ನಾದರೂ ಉಚಿತವಾಗಿ ನಡೆಸಿ, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆನ್ನುವ ಹಂಬಲ, ಯೋಜನೆ ನಮ್ಮದು.

ಈ ಕೆಲಸವು ಸಾಮಾಜಿಕ ದೇಣಿಗೆಯ ಮೂಲಕವೇ ಆಗಬೇಕೆನ್ನುವುದು ನಮ್ಮ ಆಶಯ. ದಕ್ಷಿಣ ಭಾರತದ ಜನ ಈ ಕಾರ್ಯದಲ್ಲಿ ತಮ್ಮ ಪಾಲು, ಜವಾಬ್ದಾರಿಯೂ ಇದೆ ಎಂದು ಮನಗಂಡು ದೇಣಿಗೆ ನೀಡುತ್ತಾರೆಂದು ನಾನು ನಂಬಿರುತ್ತೇನೆ. ಚಿತ್ರ ನಿರ್ಮಾಣ, ಚಿತ್ರದ ವಸ್ತುವಿಸ್ತಾರ, ಸಂಗ್ರಹವಾದ ದೇಣಿಗೆಯ ಹಣ ಮತ್ತು ಅದರ ಸಮರ್ಪಕ ಆಯವ್ಯಯ – ಈ ಮುಂತಾದ ವಿಷಯಗಳನ್ನು ಪರಾಮರ್ಶಿಸುವ ಸಲುವಾಗಿ ಸಾಮಾಜಿಕ ಘನತೆಯುಳ್ಳ ಪ್ರಾಮಾಣಿಕ, ಧೀಮಂತ ವ್ಯಕ್ತಿಗಳ ಒಂದು ಸಮಿತಿಯನ್ನು ರಚಿಸಲಾಗುತ್ತಿದೆ.

ಈ ಯೋಜನೆಗೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ಈ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ. ನೀವು ದಯವಿಟ್ಟು www.kesariharvoo.com ಗೆ ಭೇಟಿ ನೀಡಿ, ಪ್ರೋತ್ಸಾಹಿಸಿ.

ನಿರೀಕ್ಷೆಯಲ್ಲಿ,
ತಮ್ಮ ವಿಶ್ವಾಸಿ,
ಕೇಸರಿ ಹರವೂ

ದುರ್ಬಲ “ಬೇರು”ಗಳ ಸಸಿ ನೆಟ್ಟು ಭರಪೂರ ಫಲ ಬೇಕೆಂದರೆ…

– ರಾಮಸ್ವಾಮಿ 

ಲೇಖಕಿ ಬಾನು ಮುಷ್ತಾಕ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿಯವರು ಭಾನುವಾರ ಹಾಸನಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಅವರು ಉತ್ತಮ ಚಿತ್ರಗಳಿಗೆ ಹಾಗೂ ಉತ್ತಮ ಕೃತಿಗಳಿಗೆ ಪ್ರೇಕ್ಷಕ/ಓದುಗ ವರ್ಗದ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮ ಚಿತ್ರಗಳನ್ನು ನೋಡುವವರು ಹಾಗೂ ಉತ್ತಮ ಪುಸ್ತಕಗಳನ್ನು ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚಿತ್ರನಟಿ ರಮ್ಯ ಬಂದರೆ ಸೇರುವಷ್ಟು ಜನ, ತಾವು ಬಂದರೆ ಸೇರುವುದಿಲ್ಲ, ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನೋಡುವಷ್ಟು ಮಂದಿ ತಮ್ಮ ಚಿತ್ರಗಳನ್ನು ನೋಡುವುದಿಲ್ಲ, ಬಾನು ಮುಷ್ತಾಕ್ ರಂತಹ ಉತ್ತಮ ಲೇಖಕರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೂ ಸಾಕಷ್ಟು ಜನ ಸೇರುವುದಿಲ್ಲ.. ಹೀಗೆಲ್ಲಾ ಬೇಸರ ಹೊರಹಾಕಿದರು.

ಅವರು ಹಾಸನಕ್ಕೆಭೇಟಿ ನೀಡುವ ಒಂದು ದಿನದ ಹಿಂದಷ್ಟೆಸಹಮತ ವೇದಿಕೆ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶೇಷಾದ್ರಿಯವರ ಬಹುಚರ್ಚಿತ, ಪ್ರಶಸ್ತಿ ವಿಜೇತ ಚಿತ್ರ ’ಬೇರು’ ಪ್ರದರ್ಶನ ಏರ್ಪಡಿಸಿತ್ತು. ಮೂವತ್ತರಿಂದ ನಲ್ವತ್ತು ಜನ ಸಿನಿಮಾ ನೋಡಿ, ನಂತರದ ಸಂವಾದದಲ್ಲೂ ಆಸಕ್ತಿಯಿಂದ ಪಾಲ್ಗೊಂಡಿದ್ದರು.

’ಬೇರು’ ಭ್ರಷ್ಟ ವ್ಯವಸ್ಥೆಯ ಆಳವನ್ನು ತೋರಿಸುವ ನಿಟ್ಟಿನಲ್ಲಿ ಸಿದ್ಧಗೊಂಡ ಚಿತ್ರ ಎಂಬ ಮಾತಿದೆ. ಅದು ತಕ್ಕಮಟ್ಟಿಗೆ ನಿಜ. ಸರಕಾರಿ ನೌಕರಿಯಲ್ಲಿರುವವರು ಎಂತೆತಹ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಭ್ರಷ್ಟರಾಗಬೇಕಾಯಿತು ಎಂಬುದನ್ನು ಬಿಂಬಿಸಿದ್ದಾರೆ. ತಾವು ಪ್ರೇಕ್ಷಕರಿಗೆ ತಲುಪಿಸಬೇಕೆನಿಸಿದ್ದನ್ನು ಹೇಳಲು ನಿರ್ದೇಶಕರು – ಮನೆಯನ್ನು ಬೀಳಿಸಲು ಹೊರಟ ಬೇರು, ಗೋಡೆ ಕೊರೆಯುವ ಹೆಗ್ಗಣ, ಅಸಹಾಯಕ ಬಡವ, ಹಿರಿಯ ಅಧಿಕಾರಿ, ಸ್ಟಿರಿಯೋಟಿಪಿಕಲ್ ಹೆಂಡತಿ, ಮೂರು ಹೆಣ್ಣುಮಕ್ಕಳ ತಂದೆಯಾಗಿರುವ ಸರಕಾರಿ ನೌಕರ, ತನ್ನ ಭ್ರಷ್ಟಾಚಾರ ಬಯಲಾದದ್ದಕ್ಕೆ ಹೆದರಿ ಬಾವಿಗೆ ಬಿದ್ದ ನಿವೃತ್ತ ನೌಕರ, ಆತನ ಪತ್ನಿ, ಮಗಳು-ಅಳಿಯರ ಸಂತೋಷಕ್ಕಾಗಿ ತನ್ನ ಪ್ರಭಾವ ಬಳಸುವ ಲೇಖಕ.. ಹೀಗೆ ಕೆಲ ಪಾತ್ರಗಳನ್ನು ಸಾಧನಗಳಾಗಿ ಬಳಸಿದ್ದಾರೆ. ಒಂದೆಡೆ ಗೊರವಯ್ಯ ತನ್ನ ಮನೆ ಉಳಿಸಿಕೊಳ್ಳಲು ಮರ ಕಡಿಯಲು ಅನುಮತಿ ಪಡೆಯಲಾಗದೆ, ಜೋರು ಮಳೆಗೆ ಮನೆ ಮುರಿದುಬಿದ್ದು ಸಾಯುತ್ತಾನೆ. ಅತ್ತ ಪ್ರಾಮಾಣಿಕ ಅಧಿಕಾರಿ ಇಲ್ಲದ ಪ್ರವಾಸಿ ಮಂದಿರ ಹುಡುಕುತ್ತಲೇ ಭ್ರಷ್ಟ ವ್ಯವಸ್ಥೆಯ ಪಾಲುದಾರನಾಗಿ ನೈತಿಕವಾಗಿ ಅಧಃಪತನಗೊಳ್ಳುತ್ತಾನೆ.

ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ತೀವ್ರ ಸ್ವರೂಪಗಳು ಅಚ್ಚರಿ ಮೂಡಿಸುತ್ತವೆ ಎನ್ನುವುದೇನೋ ನಿಜ. ಆದರೆ, ಪ್ರಮುಖ ಇಲಾಖೆಯೊಂದು ಪ್ರವಾಸಿ ಮಂದಿರವನ್ನು ಕಟ್ಟದೇ, ಕಟ್ಟಲಾಗಿದೆ ಎಂದು ದಾಖಲೆ ಸೃಷ್ಟಿಸಿ, ಆಗಾಗ ಅದರ ನವೀಕರಣಕ್ಕೆ ಹಣ ವ್ಯಯಮಾಡಿ, ಅದರ ಉಸ್ತುವಾರಿಗೆ ಮೇಟಿಯನ್ನೂ ನೇಮಿಸಿ ಅವನಿಗೂ ಸಂಬಳ ಕೊಟ್ಟು…- ಹೀಗೆ ವರ್ಷಗಟ್ಟಲೆ ನಡೆಯುತ್ತದೆ ಎನ್ನುವುದೇ ವಾಸ್ತವಕ್ಕೆ ದೂರ. ಭ್ರಷ್ಟಾಚಾರದ ಕರಾಳ ಸುಳಿಗಳನ್ನು ಬಿಚ್ಚಿಡಲು ಹೀಗೊಂದು ಕಟ್ಟುಕತೆ ಅಗತ್ಯವಿರಲಿಲ್ಲ.

ಈ ಚಿತ್ರ ಭ್ರಷ್ಟಾಚಾರವನ್ನು ಟೀಕಿಸುವುದಿಲ್ಲ. ಮೇಟಿಯ ಸಂಬಳವನ್ನೂ ತಾನೇ ಬಳಸಿಕೊಳ್ಳುವ ವೆಂಕಟೇಶಯ್ಯ copy-beruಮೂರು ಹೆಣ್ಣುಮಕ್ಕಳ ತಂದೆ. ಆತನಿಗೆ ಮನೆ ನಡೆಸಲು, ಮದುವೆ ಮಾಡಲು ಅನಿವಾರ್ಯವಿತ್ತು ಎನ್ನುತ್ತದೆ ಚಿತ್ರಕತೆ. ಪ್ರಾಮಾಣಿಕ ಅಧಿಕಾರಿ ರಘುನಂದನ್ ತಾನು ಭ್ರಷ್ಟನಲ್ಲದಿದ್ದರೂ, ಬಡ ವೆಂಕಟೇಶಯ್ಯನನ್ನು ಬಚಾವು ಮಾಡುವ ಒಳ್ಳೆಯ ಉದ್ದೇಶದಿಂದ ಭ್ರಷ್ಟನಾಗಬೇಕಾಗುತ್ತದೆ. ಪಾಪ ಅವನದೇನೂ ತಪ್ಪಿಲ್ಲ. ಮೇಲಧಿಕಾರಿ ತನ್ನ ಮೇಷ್ಟ್ರ ಮೇಲಿನ ಗೌರವಕ್ಕೆ ಕಟ್ಟುಬಿದ್ದು ಅವರ ಅಳಿಯನನ್ನು ಉಳಿಸಲು ತಾನೂ ಇಲ್ಲದ ಪ್ರವಾಸಿ ಮಂದಿರ ಇದೇ ಎಂದೇ ಒಪ್ಪಿಕೊಳ್ಳಲು ಸಿದ್ಧರಾಗುತ್ತಾರೆ. ಈ ಚಿತ್ರದಲ್ಲಿ ಭ್ರಷ್ಟ ಪಾತ್ರಗಳು ತಮ್ಮ ಆಸೆ ಅಥವಾ ದುರಾಸೆಗೆ ಭ್ರಷ್ಟರಾದವರಲ್ಲ, ಬದಲಿಗೆ ಪರಿಸ್ಥಿತಿಗಳು ಅವರನ್ನು ಆ ಕೂಪಕ್ಕೆ ನೂಕಿವೆ ಅಷ್ಟೆ. ಆ ಕಾರಣಕ್ಕೆ ಇದು ಭ್ರಷ್ಟಾಚಾರದ ವಿರೋಧಿ ಚಿತ್ರವಲ್ಲ, ಬದಲಿಗೆ ಭ್ರಷ್ಟರ ಪರ ಅನುಕಂಪ ಮೂಡಿಸುವ ಒಂದು ಪ್ರಯತ್ನ.

ಅಂತ್ಯದಲ್ಲಿ ಬಡ ಗೊರವಯ್ಯನ ಸಾಕು ಮೊಮ್ಮಗಳು ಅಧಿಕಾರಿ ವರ್ಗದತ್ತ ಥೂ ಎಂದು ಉಗಿದು ಮುಂದೆ ಸಾಗುತ್ತಾಳೆ. ಅವಳ ಆಕ್ರೋಶವೇ ಚಿತ್ರದ ಮುಖ್ಯ ಸಂದೇಶವೆಂದು ಸಿನಿಮಾ ನೋಡಿದ ಅನೇಕರು ಅಭಿಪ್ರಾಯಪಟ್ಟರು. ಆ ಹುಡುಗಿಯ ಆಕ್ರೋಷ ಇದ್ದದ್ದು ತನ್ನ ಅಜ್ಜನಿಗೆ ಮರ ಕಡಿಯಲು ಅನುಮತಿ ಕೊಡದೆ, ಕೊನೆಗೆ ಆತ ಸಾಯಲು ಕಾರಣರಾದ ಅಧಿಕಾರಿಗಳ ಬಗ್ಗೆಯೇ ಹೊರತು, ಇಲ್ಲದ ಪ್ರವಾಸಿ ಮಂದಿರವನ್ನು ದಾಖಲೆಯಲ್ಲಿ ಸೃಷ್ಟಿ ಮಾಡಿ ದುಡ್ಡುಹೊಡೆಯುವ ವ್ಯವಸ್ಥೆಗೆ ಅಲ್ಲ. ಚಿತ್ರದ ಯಾವ ದೃಶ್ಯದಲ್ಲೂ ಆ ಬಾಲಕಿ ಈ ಅವ್ಯವಸ್ಥೆಗೆ ಮುಖಾಮುಖಿಯಾಗುವುದೇ ಇಲ್ಲ.

ಅಧಿಕಾರಿಯ ಹೆಂಡತಿಯ ಪಾತ್ರ ತೀರಾ ಸ್ಟಿರಿಯೋಟಿಪಿಕಲ್. ತಾನು ಅಧಿಕಾರಿಯನ್ನು ಮದುವೆಯಾಗಿ ಯಾವುದೋ ಕೊಂಪೆಗೆ ಬಂದು ನೆಲೆಸಬೇಕಾಯಿತು ಅವಳು ಕೊರಗುತ್ತಾಳೆ. ತಾನು ಹಳ್ಳಿಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪದೇ ಪದೇ ವ್ಯಕ್ತಪಡಿಸುತ್ತಾಳೆ. ಆದರೆ ಅಧಿಕಾರಿ ಮಾತ್ರ ಹಳ್ಳಿಯ ಜೀವನವೇ ಸುಂದರ.. ಹೀಗೆ ಆದರ್ಶವಾಗಿ ಮಾತನಾಡುತ್ತಾನೆ. ಭಿನ್ನ ಚಿತ್ರಗಳನ್ನು ಮಾಡುತ್ತೇವೆ ಎನ್ನುವವರು ಈಗಾಗಲೆ ಸವಕಲಾಗಿರುವ ಚೌಕಟ್ಟುಗಳನ್ನು ದಾಟುವುದೇ ಇಲ್ಲ ಎನ್ನುವುದಾದರೆ, ಅವರು ಹೇಗೆ ಭಿನ್ನ? ಪ್ರತಿಮೆ, ರೂಪಕಗಳ ಆಯ್ಕೆಯಲ್ಲೂ ಹೊಸತೇನಿಲ್ಲ.

ಚಿತ್ರದ ನಿರ್ಮಾಣ ಕೂಡ ಸಾಧಾರಣ. ಕಚೇರಿಯ ಸಿಬ್ಬಂದಿಗೆ ನಟನೆಯೇ ಗೊತ್ತಿಲ್ಲ. ಎಲ್ಲಾ ಸಂಭಾಷಣೆಯಲ್ಲೂ ಅವರದು ಅಸಹಜ ನಟನೆ. ಈಗ ತಾನೆ ನಟನೆ ಕಲಿಯುತ್ತಿರುವವರನ್ನು ಇಟ್ಟುಕೊಂಡು ಒಂದು ನಾಟಕದ ರಿಹರ್ಸಲ್ ಮಾಡಿದ ಹಾಗಿದೆ. ಚಿತ್ರ ನಿರ್ದೇಶಕರು ಅದು ಯಾವ ಕಚೇರಿ, ಆತ ಯಾವ ಇಲಾಖೆಯ ಅಧಿಕಾರಿ ಎನ್ನುವುದನ್ನು ಎಲ್ಲಿಯೂ ಸ್ಪಷ್ಟಪಡಿಸುವುದಿಲ್ಲ. ಸಿನಿಮಾ ವೀಕ್ಷಣೆಯ ನಂತರ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಒಂದು ಪಾಳು ಗುಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಪ್ರವಾಸಿ ಮಂದಿರದ ಮೇಟಿ ಹೊರಬಂದಾಗಲೂ ಅವನ ಬಟ್ಟೆಗಳು ಈಗಷ್ಟೇ ಇಸ್ತ್ರಿ ಮಾಡಿ ಧರಿಸಿರುವಷ್ಟು ಶುಭ್ರ. ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರು ಇಂತಹ ಅನೇಕ ಲೋಪಗಳನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಬಹುದು. ಸೂಕ್ಷ್ಮ ಮನಸ್ಸಿನ ನಿರ್ದೇಶಕರಿಗೆ ಇಂತಹ ಸೂಕ್ಷ್ಮಗಳ ಕಡೆ ಗಮನಹರಿಸಬೇಕು ಎನಿಸಲಿಲ್ಲವೇ?

ಶೇಷಾದ್ರಿಯವರು ತಮ್ಮ ಭಾಷಣದಲ್ಲಿ ತಮ್ಮ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೂ ಪ್ರೇಕ್ಷಕರು ಬರಲಿಲ್ಲ ಎಂದು ಅವಲತ್ತುಕೊಂಡರು. ಪ್ರಶಸ್ತಿ ಬಂದಾಕ್ಷಣ ಪ್ರೇಕ್ಷಕರು ಸಿನಿಮಾ ನೋಡೋಕೆ ಬರಬೇಕೆ?

ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ

– ಡಾ. ಎನ್. ಜಗದಿಶ್ ಕೊಪ್ಪ

ಇತ್ತೀಚೆಗಿನ ವರ್ಷಗಳ ಭಾರತೀಯ ಚಲನ ಚಿತ್ರರಂಗ ಜಗತ್ತಿನಲ್ಲಿ ರಾಮ್ ಗೋಪಾಲ್ ವರ್ಮ ಎಂಬ ಹೆಸರು ಸದಾ ಸುದ್ದಿಯಲ್ಲಿರುತ್ತದೆ. ತೆಲಗು ಚಿತ್ರರಂಗದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟು, ನಂತರ ಬಾಲಿವುಡ್ ಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಮ ಗೋಪಾಲ್ ವರ್ಮ ತನ್ನ ಪ್ರತಿಭೆಯಿಂದಾಗಿ ಖ್ಯಾತಿ, ಕುಖ್ಯಾತಿ ಎರಡನ್ನೂ ಒಟ್ಟಿಗೆ ಗಳಿಸಿ, ದಕ್ಕಿಸಿಕೊಂಡ ಅಪರೂಪದ ಪ್ರತಿಭಾವಂತ.

ಇದೀಗ ತನ್ನ ಮಾತೃಬಾಷೆಯಾದ ತೆಲಗು ಭಾಷೆಯಲ್ಲಿ “ನಾ ಇಷ್ಟಂ” ಹೆಸರಿನಲ್ಲಿ ತನ್ನ ಆತ್ಮ ಕಥೆಯನ್ನು ಬರೆದಿರುವ ರಾಮ್ ಗೋಪಾಲ್ ತನ್ನ ಬಿಚ್ಚು ಮನಸ್ಸಿನ ವ್ಯಕ್ತಿತ್ವದಿಂದಾಗಿ ಮತ್ತಷ್ಟು ಇಷ್ಟವಾಗುತ್ತಾನೆ. ಕನ್ನಡದ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿರುವ ಸೃಜನ್ ಈ ಕೃತಿಯನ್ನು “ನನ್ನಿಷ್ಟ” srujan-ramgopalvarmaಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾಗಿರುವ ಈ ಕೃತಿ ಅನುವಾದದ ಕೃತಿ ಎಂದು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹುಮುಖ ಪ್ರತಿಭೆಯ ಸೃಜನ್ ಮೂಲತಃ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತಮ್ಮ ನಿಜ ನಾಮಧೇಯ ಶ್ರೀಕಾಂತ್ ಹೆಸರಿನಲ್ಲಿ ದಕ್ಷಿಣ ಭಾರತದ ವರ್ಣಚಿತ್ರ ಕಲಾವಿದರ ಬಗ್ಗೆ ಪರಿಚಯ ಲೇಖನಗಳನ್ನು ಬರೆದು ಲೇಖಕರಾಗಿಯೂ ಕೂಡ ಪರಿಚಿತರಾಗಿದ್ದರು. ಇದೀಗ ರಾಮ್ ಗೊಪಾಲ್ ವರ್ಮನ ಅತ್ಮ ಕಥನವನ್ನು ಕನ್ನಡಕ್ಕೆ ತರುವುದರ ಮೂಲಕ ಶ್ರೇಷ್ಠ ಅನುವಾದಕರಾಗಿ ಕೂಡ ಹೊರಹೊಮ್ಮಿದ್ದಾರೆ.

ರಾಮ್ ಗೋಪಾಲ್ ವರ್ಮ 1980 ರ ದಶಕದಲ್ಲಿ ಚಿತ್ರರಂಗದ ಯಾವುದೇ ಅನುಭವ ಇಲ್ಲದೆ, “ಶಿವ” ಎಂಬ ಚಿತ್ರವನ್ನು ನಿರ್ದೇಶನ ಮಾಡಿ, ದಾಖಲೆ ನಿರ್ಮಿಸಿ, ತೆಲಗು ಚಿತ್ರರಂಗಕ್ಕೆ ಹೊಸ ಭಾಷ್ಯವನ್ನು ಬರೆದ ಪ್ರತಿಭಾವಂತ. ನನಗಿನ್ನೂ ನೆನಪಿದೆ. 1989 ರ ನವಂಬರ್ ತಿಂಗಳಿನಲ್ಲಿ ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ಶಿವ ಚಿತ್ರವನ್ನು ನೋಡಿ ನಾನು ಬೆರಗಾಗಿದ್ದೆ. ನಾಗಾರ್ಜುನ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ತೆಲಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತ್ತು. ತೆಲಗು ಚಿತ್ರರಂಗದ ನಾಯಕರಾದ ಎನ್.ಟಿ.ಆರ್, ಎ.ನಾಗೇಶ್ವರರಾವ್, ಶೋಬನ್ ಬಾಬು, ಕೃಷ್ಣ ಮುಂತಾದ ನಟರ, ಏಕತಾನತೆಯಿಂದ ಕೂಡಿದ್ದ ಸಾಮಾಜಿಕ ಚಿತ್ರಗಳನ್ನು ನೋಡಿ ಬೇಸತ್ತಿದ್ದ ಜನಕ್ಕೆ, ವಿಜಯವಾಡ ಕಾಲೇಜಿನ ವಿದ್ಯಾರ್ಥಿಯೊಬ್ಬ ಪರಿಸ್ಥಿತಿಯ ಕೈ ಕೂಸಾಗಿ ರೌಡಿಯಾಗಿ ಬದಲಾಗುವ ತಾಜಾ ಅನುಭವವನ್ನು ವರ್ಮಾನ ಸಿನಿಮಾದಲ್ಲಿ ನೋಡಿ ಥ್ರಿಲ್ಲಾಗಿದ್ದರು.

ಅನಿರೀಕ್ಷಿತವಾಗಿ ದೊರೆತ ಯಶಸ್ಸನ್ನು ಅರ್ಥಪೂರ್ಣವಾಗಿ ಬಳಸಿಕೊಂಡ ರಾಮ್ ಗೋಪಾಲ್ ವರ್ಮ, ನಂತರ “ಕ್ಷಣ ಕ್ಷಣಂ” ಎಂಬ ಇನ್ನೊಂದು ಥ್ರಿಲ್ಲರ್ ಸಿನಿಮಾ ತೆಗೆದು ಆಂಧ್ರದಲ್ಲಿ ಯುವ ಪ್ರತಿಭಾವಂತ ನಿರ್ದೇಶಕ ಎಂದು ಹೆಸರುವಾಸಿಯಾದ.

ಈ ಎರಡು ಚಿತ್ರಗಳ ಯಶಸ್ವಿನಿಂದಾಗಿ ಮುಂಬೈನ ಬಾಲಿವುಡ್ ಜಗತ್ತಿಗೆ ಜಿಗಿದ ರಾಮ್ ಗೋಪಾಲ್ , ಅಲ್ಲಿಯೂ ಕೂಡ ರಂಗೀಲಾ ಮತ್ತು ಸತ್ಯ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರತಿಬೆಯ ಮೂಲಕ ಗಮನ ಸೆಳೆದ. ಮುಂಬೈನ ಕೊಳಚೆಗೇರಿಯ ಯುವಕರು ಭೂಗತ ಜಗತ್ತಿಗೆ ಬಲಿಯಾಗು ಕಥೆಯುಳ್ಳ ಸತ್ಯ ಸಿನಿಮಾ ಇಡೀ ಭಾರತದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವನೊಳಗಿದ್ದ ಮಹಾತ್ವಾಂಕ್ಷೆಯ ಹಪಾ ಹಪಿ ಈದಿನ ರಾಮ್ ಗೋಪಾಲ್ ವರ್ಮನನ್ನು ಕೆಟ್ಟ ನಿರ್ದೇಶಕ ಎಂಬ ಸ್ಥಾನಕ್ಕೆ ದೂಡಿದೆ. ಭಾರತ ಚಿತ್ರ ರಂಗದ ಪ್ರತಿಭಾವಂತ ನಿದೇಶಕನಾಗುವ ಎಲ್ಲಾ ಲಕ್ಷಣಗಳಿದ್ದ ವರ್ಮ, ವ್ಯವಹಾರದ ಬೆನ್ನು ಹತ್ತಿದ ಫಲವಾಗಿ ಸಿನಿಮಾ ಎಂದರೇ ಅದೊಂದು ದೃಶ್ಯಕಾವ್ಯ ಎಂಬುದನ್ನು ಮರೆತು, ಬೀದಿ ಬದಿಯಲ್ಲಿ ಆ ಕ್ಷಣಕ್ಕೆ ಕಡಲೆ ಹಿಟ್ಟು ಕಲೆಸಿ ಮಾಡುವ ಬೊಂಡ ಎಂಬಂತೆ ತಿಂಗಳಿಗೊಂದು ಸಿನಿಮಾ ತಯಾರಿಸುತ್ತಿದ್ದಾನೆ. ಈ ಕಾರಣಕ್ಕಾಗಿ ತನ್ನ ನಿರ್ಮಾಣ ಸಮಸ್ಥೆಯ ಹೆಸರನ್ನು ಸಿನಿಮಾ ಪ್ಯಾಕ್ಟರಿ ಎಂದು ಕರೆದುಕೊಂಡಿದ್ದಾನೆ.

ವರ್ಮನ ಕುರಿತಂತೆ ನಮ್ಮ ಅಸಮಾಧಾನಗಳು ಏನೇ ಇರಲಿ, ಈವರೆಗೆ ದಕ್ಷಿಣ ಭಾರತದ ಸುಂದರ ಚೆಲುವೆಯರನ್ನು ಮಾತ್ರ (ಪದ್ಮಿನಿ, ವೈಜಯಂತಿಮಾಲಾ, ಹೇಮಾಮಾಲಿನಿ, ಶ್ರೀದೇವಿ ಇತ್ಯಾದಿ) ನಾಯಕಿರಾಗಿ ಬರಮಾಡಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗ, ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಮುಕ್ತವಾಗಿ ಒಪ್ಪಿಕೊಂಡಿದ್ದು ಕಡಿಮೆ. ಇದರಲ್ಲಿ ವಿ.ಶಾಂತರಾಂ ಮತ್ತು ಗುರುದತ್‌ರವರನ್ನು ಮಾತ್ರ ಹೊರತು ಪಡಿಸಬಹುದು. ನಂತರ ಬಾಲಿವುಡ್ ನಲ್ಲಿ ವರ್ಮಾ ಉಂಟು ಮಾಡಿದ ಸಂಚಲನವನ್ನು ಮರೆಯಲಾಗದು.

ನನ್ನಿಷ್ಟ ಎನ್ನುವ ಆತ್ಮ ಕಥನದಲ್ಲಿ ಮುಕ್ತವಾಗಿ ಎಲ್ಲವನ್ನೂ ತೆರೆದುಕೊಂಡಿರುವ ರಾಮಗೋಪಾಲ್ ವರ್ಮ, ತಾನು ಸಿನಿಮಾಗಳಿಗಾಗಿ ಯಾವ ಯಾವ ದೃಶ್ಯವನ್ನು, ಮತ್ತು ಪರಿಕಲ್ಪನೆಯನ್ನು ಎಲ್ಲೆಲ್ಲಿ ಕದ್ದೆ ಎಂಬುದನ್ನು ಹೇಳಿಕೊಳ್ಳುವುದರ ಮೂಲಕ ಮತ್ತಷ್ಟು ಆತ್ಮೀಯನಾಗುತ್ತಾನೆ. ಯಾವುದೇ ಕಪಟವಿಲ್ಲದೆ ತನ್ನ ಬದುಕು, ಭಗ್ನಪ್ರೇಮ ಮತ್ತು ತಂದೆ ತಾಯಿ ಮೇಲಿನ ಪ್ರೀತಿ ಹಾಗೂ ತೆಲಗು ಸಿನಿಮಾ ರಂಗದ ಒಡನಾಟ ಎಲ್ಲವನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾನೆ.

ಸೃಜನ್ ಅನುವಾದವಂತೂ ಓದನ್ನು ಮತ್ತಷ್ಟು ಅಪ್ತವಾಗುವಂತೆ ಮಾಡಿದೆ. ಪಲ್ಲವ ವೆಂಕಟೇಶ್ ಇವರ ಪುಸ್ತಕದ ಮೇಲಿನ ಪ್ರೀತಿ, ಈ ಕೃತಿಯ ಚಂದನೆಯ ಮುದ್ರಣದಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ರಾಮ್ ಗೋಪಾಲ್ ವರ್ಮನನ್ನು ಕನ್ನಡಕ್ಕೆ ಪ್ರೀತಿಯಿಂದ ಪರಿಚಯಿಸಿರುವ ಸೃಜನ್ ಮತ್ತು ಪಲ್ಲವ ವೆಂಕಟೇಶ್ ಇವರಿಗೆ ಅಭಿನಂದನೆಗಳು.

ಒಂದು ಸಿನೇಮಾವನ್ನು ವಿರೋಧಿಸುವದೇ ಚಿತ್ರ ಮೀಮಾಂಸೆಯಲ್ಲ..


-ಡಾ.ಎಸ್.ಬಿ. ಜೋಗುರ


 

ಜಾಗತೀಕರಣದ ಸಂದರ್ಭದಲ್ಲಿಯೂ ಮುಕ್ತ ಮಾರುಕಟ್ಟೆಯಲ್ಲಿಯ ಕೊಳ್ಳುಬಾಕುತನದ ಸಂಸ್ಕೃತಿಯ ನಡುವೆಯೂ ಒಂದು ಸಿನೇಮಾ, ಒಂದು ಪೇಂಟಿಂಗ್ ಅನ್ನು ಸೃಜನಶೀಲ ನೆಲೆಯಲ್ಲಿ ನೋಡುವ, ಗ್ರಹಿಸುವ ಗುಣಗಳು ಕಡಿಮೆಯಾಗುತ್ತಿವೆ. ಜಾಗತೀಕರಣದ ಭರಾಟೆ ಇನ್ನೂ ಹೊಸ್ತಿಲಲ್ಲಿರುವಾಗ ಈ ಬಗೆಯ ಧಾವಂತಗಳು ಸ್ವಲ್ಪ ಕಡಿಮೆಯಾಗಿದ್ದವು. ಅದು ನಡುಮನೆಯಿಂದ ಬಚ್ಚಲುಮನೆಗೆ ವಿಸ್ತರಿಸಿದಂತೆಲ್ಲಾ ಜಗತ್ತು ಚಿಕ್ಕದಾಗುತ್ತಾ ಬಂತು ಎಂದುಕೊಳ್ಳುವಾಗಲೇ ಮನುಷ್ಯನ ಎದೆ ಅಗಲಗೊಳ್ಳಲಿಲ್ಲ ಎನ್ನುವ ಸತ್ಯವನ್ನು ಮರೆಯುವದಾದರೂ ಹೇಗೆ..?

ಹಿಂದೆಂದಿಗಿಂತಲೂ ಇಂದು ಜಾತಿ, ಧರ್ಮದ ಭಾವನೆಗಳು ಹೆಚ್ಚೆಚ್ಚು ಹುತ್ತಕಟ್ಟತೊಡಗಿವೆ. ಒಬ್ಬ ಕ್ರಿಯಾಶೀಲ ನಿರ್ದೇಶಕ, ನಟನ ಚಿತ್ರವೊಂದಕ್ಕೆ ವಿರೋಧಿಸುವ ಮೂಲಕವೇ ಚಿತ್ರ ಮೀಮಾಂಸೆ ಮಾಡಬಯಸುವವರ ದೊಡ್ದ ದೊಡ್ಡ ಪಡೆಗಳೇ ಈಗ ತಯಾರಾಗುತ್ತಿವೆ. viswaroopam-tamilಜೊತೆಗೆ ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಇಂಥಾ ಸಮೂಹಗಳ ಬೆನ್ನಿಗೆ ಪ್ರಭುತ್ವಗಳು ಪರೋಕ್ಷವಾಗಿ ನಿಲ್ಲುವ ಪರಿಪಾಠಗಳೂ ಈಗ ಹೊಸ ನೆಲೆಯಲ್ಲಿ ಆರಂಭಗೊಂಡಿವೆ. ಪಶ್ಚಿಮದ ಎಲ್ಲ ಬಗೆಯ ಅಳವಡಿಕೆಗಳನ್ನು ಸಿನೇಮಾದಲ್ಲಿ ಇಷ್ಟಪಡುವ ನಾವು, ಅಲ್ಲಿಯ ಸಿನೇಮಾಗಳ ವೈಚಾರಿಕತೆಯನ್ನು, ಅವು ಬಿಂಬಿಸುವ ಕಠೋರ ಸತ್ಯವನ್ನು ಮಾತ್ರ ನಮಗೆ ಅರಗಿಸಿಕೊಳ್ಳಲಾಗುವದಿಲ್ಲ. ಪಶ್ಚಿಮದ ಭೌತಿಕತೆಯ ಅನುಕರಣೆ ಸಾಧ್ಯವಾದ ಹಾಗೆ ಇವತ್ತಿಗೂ ಪೂರ್ವದ ಬೌದ್ಧಿಕತೆಯಲ್ಲಿ ಆ ಬಗೆಯ ಅನುಕರಣೆ ಸಾಧ್ಯವಾಗದಿದ್ದುದೇ ಪೂರ್ವ ದೇಶಗಳ ಸಾಂಸ್ಕೃತಿಕ ಜಿಗುಟುತನಕ್ಕೆ ಒಂದು ಕಾರಣವೂ ಹೌದು. ಡಿ.ಟಿ.ಎಚ್.ಮೂಲಕ ಸಿನೇಮಾ ಪ್ರದರ್ಶನ ಸಾಧ್ಯವಾಯಿತಾದರೂ ಚಿತ್ರಮಂದಿರಗಳು ಅದೇ ವೇಗದಲ್ಲಿ ಆವಿಷ್ಕಾರಗೊಳ್ಳಲಿಲ್ಲ, ಪ್ರೇಕ್ಷಕ ಮತ್ತೆ ಎಂದಿನಂತೆ ಮುಂದಿನ ಖುರ್ಚಿಯ ಮೇಲೆ ಕಾಲಿಟ್ಟು, ಪಿಚಕ್ ಎಂದು ಉಗಿಯುತ್ತಾ ಸಿನೇಮಾ ನೋಡುವ ರೀತಿಯಲ್ಲಿ ಮಾತ್ರ ಯಾವುದೇ ಬಗೆಯ ಬದಲಾವಣೆಗಳಾಗಲಿಲ್ಲ.

ಈ ಬಗೆಯ ಸಾಂಸ್ಕೃತಿಕ ಹಿಂಬೀಳುವಿಕೆಯ ಅಂತರ ನಮ್ಮಂಥಾ ರಾಷ್ಟ್ರಗಳಲ್ಲಿ ತುಂಬಾ ತೀವ್ರವಾದ ಹಂತದಲ್ಲಿದೆ. ಕೊನ್ರಾಡ್ ಎನ್ನುವ ಚಿಂತಕ ಹೇಳುವ ಹಾಗೆಮ್ “ನಾವು ಪಶ್ಚಿಮದವರು ಅವರಿಗೆ ಮಾತನಾಡುವದನ್ನು, ಚಿಂತಿಸುವದನ್ನು ಕಲಿಸಿದ್ದೇವೆ. ಅವರು ಬಂಡುಕೋರರಾಗಿ ಕಂಡುಬಂದರೂ ನಮಗೆ ಬಾಲಿಶವಾಗಿಯೇ ತೋರುತ್ತಾರೆ.” ಎಂದಿರುವ ಮಾತನ್ನು ನೋಡಿದಾಗ ಪೂರ್ವದ ಚಿಂತನೆ ಪಶ್ಚಿಮದ ಪ್ರಭಾವದಿಂದಲೇ ರೂಪಗೊಂಡಿದೆ ಎನ್ನುವಂತಿದೆ. ಆದರೆ ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟು ಯಾವ ರಾಷ್ಟ್ರವೂ ಪ್ರಭಾವಳಿಗೆ ಸಿಲುಕದು ಎನ್ನುವ ಸತ್ಯವನ್ನೂ ಮರೆಯುವಂತಿಲ್ಲ. ಸಾಂಸ್ಕೃತಿಕ ಅಳವಡಿಕೆಯ ಸಂದರ್ಭದಲ್ಲಿ ಚಿನ್ಮಯಿ ಮತ್ತು ಮೃಣ್ಮಯಿ ಎನ್ನುವ ಎರಡೂ ಸಂಗತಿಗಳು ಸೂಕ್ಷ್ಮವಾಗಿ ಕೆಲಸ ಮಾಡುತ್ತಿರುತ್ತವೆ.

ವಾಸ್ತವದಲ್ಲಿಯ ಘಟನೆಯೊಂದನ್ನು ಆಧರಿಸಿ ಸಿನೇಮಾ ಮಾಡಿದಾಗ ಅಲ್ಲಿ ಸ್ವಲ್ಪ ಪ್ರಮಾಣದ ಉಪ್ಪು-ಖಾರ ಸಾಮಾನ್ಯ. ಅದನ್ನು ಯಥಾವತ್ತಾಗಿ ತೆರೆಯ ಮೇಲೆ ತರಲಾಗುವದಿಲ್ಲ. ಇಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ ಎನ್ನುವ ಹೇಳಿಕೆಯನ್ನು ಚಿತ್ರದ ಆರಂಭದಲ್ಲಿಯೇ ತೋರಿಸಿಯಾದ ಮೇಲೂ ಆ ಚಿತ್ರದ ಯಾವುದೋ ಒಂದು ಸಂಭಾಷಣೆ, ಸನ್ನಿವೇಶವನ್ನು ಅಪಾರ್ಥವಾಗಿಸಿಕೊಂಡು ಅರಗಿಸಿಕೊಳ್ಳಲಾಗದೇ ಚಿತ್ರ ನಿರ್ದೇಶಕ, ನಿರ್ಮಾಪಕನ ವಿರುದ್ಧ ಹರಿಹಾಯುವ ಪರಿಪಾಠ ಸರಿಯಲ್ಲ. ಸಿನೇಮಾ ಒಂದನ್ನು ಸಿನೇಮಾ ಆಗಿಯೇ ನೋಡಬೇಕು ಹೊರತು ಒಂದು ಪೂರ್ವಾಗ್ರಹವನ್ನಿಟ್ಟುಕೊಂಡು ಅಲ್ಲ. ಸಿನೇಮಾದಲ್ಲಿ ಪಶ್ಚಿಮದ ಎಲ್ಲ ಬಗೆಯ ತಂತ್ರಗಾರಿಕೆ ಇಷ್ಟವಾಗುವ ಹಾಗೆ ಅಲ್ಲಿಯ ಕತೆ ಮತ್ತು ಆ ಚಿತ್ರದ ಸೃಜನಶೀಲ ಗುಣ ಯಾಕೆ ಇಷ್ಟವಾಗುವದಿಲ್ಲ..? ಒಂದು ಸಿನೇಮಾ ನೋಡುವ ಮುನ್ನವೇ ಅದರ ಬಗ್ಗೆ ನಮ್ಮ ಮೆದುಳಲ್ಲಿ ಒಂದಷ್ಟು ಅಂತೆಕಂತೆಗಳು ತಳಕಂಡಿರುತ್ತವೆ. ಹಾಗಾಗಿ ಬರೀ ನೆಗಿಟಿವ್ ಅದ ಆಲೋಚನೆಗಳಿಗೆ ಆ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಧಾರ್ಮಿಕ, ಜನಾಂಗೀಯ ಸಾಂಸ್ಕೃತಿಕ ಹಿರಿಮೆ ಗರಿಮೆಗಳ ಚಿತ್ರವೊಂದು ಪಶ್ಚಿಮದಲ್ಲೂ ಸಣ್ಣ ಪ್ರಮಾಣದ ಪ್ರತಿರೋಧದ ಧ್ವನಿ ಎಬ್ಬಿಸಬಹುದಾದರೂ ಅದು ಇಡೀ ಚಿತ್ರವನ್ನೇ ನಿಷೇಧಿಸಬೇಕು ಎಂದಿರುವದಿಲ್ಲ.

ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಗಡಿಗಳ ಎಲ್ಲೆಗಳನ್ನು ಮೀರಿ ಸಿನೇಮಾ ನೋಡುವ, ಗ್ರಹಿಸುವ ಗುಣ ಅಂತರ್ಗತವಾಗಬೇಕಿದೆ. ಈ ಬಗೆಯ ಗುಣದ ಕೊರತೆಯಿಂದಾಗಿ ನಮ್ಮಲ್ಲಿ ಆಗಾಗ ಕೆಲ ಸಿನೇಮಾಗಳು ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತವೆ. ಹೀಗೆ ವಿವಾದಕ್ಕೆ ಸಿಲುಕುವ ಸಿನೇಮಗಳ ಸಾಲಲ್ಲಿ ಹೇಳ ಹೆಸರಿಲ್ಲದೇ ಮೂಲೆ ಸೇರಬೇಕಿದ್ದ ಚಲನಚಿತ್ರಗಳು ಕೂಡಾ ಈ ವಿವಾದದಿಂದ ಕೆಲಕಾಲ ಸುದ್ದಿಯಲ್ಲಿರುತ್ತವೆ. ಯಾವುದೋ ಒಂದು ಡೈಲಾಗ್, ಒಂದು ಹಾಡು, ಒಂದು ದೃಶ್ಯ ಈ ಬಗೆಯ ವಿವಾದಗಳಿಗೆ, ಕಿರಿಕಿರಿಗಳಿಗೆ ಕಾರಣವಾಗುವದಿದೆ. ನಟ ಕಮಲ ಹಾಸನನ vishwaroopam“ವಿಶ್ವರೂಪಂ” ಚಿತ್ರ ಈ ಬಗೆಯ ವಿವಾದಕ್ಕೆ ಸಿಲುಕಿತು. ಅದಕ್ಕಿಂತಲೂ ದೊಡ್ದ ಸುದ್ದಿ ಎಂದರೆ ಕಮಲ ಹಾಸನನಂಥ ನಟರಿಗೆ, ಈ ದೇಶದಲ್ಲಿ ಕ್ರಿಯಾಶೀಲರಿಗೆ ನೆಲೆಯೇ ಇಲ್ಲ ಎನ್ನುವ ಭಾವನೆ ಕಾಡಿದ್ದು, ತನ್ನ ಚಿತ್ರ ಪ್ರದರ್ಶನಕ್ಕೆ ಅಡ್ದಿಯಾದರೆ ತಾನು ಇಲ್ಲಿರುವದಿಲ್ಲ ವಿದೇಶಕ್ಕೆ ತೆರಳುತ್ತೇನೆ ಎಂದು ಮಾತನಾಡಿದ್ದು ಮಾತ್ರ ಯಾಕೋ ಸರಿಯಾದುದಲ್ಲ ಎನಿಸುತ್ತದೆ.

“ವಿಶ್ವರೂಪಂ” ಚಿತ್ರ ಮೀಮಾಂಸಕರ ವಲಯದಲ್ಲಿ ಒಳ್ಳೆಯ ಹೆಸರನ್ನು ಪಡೆದಿರುವದಿದೆ. ಕರ್ನಾಟಕವನ್ನೊಳಗೊಂಡು ಉತ್ತರಪ್ರದೇಶ, ಪಂಜಾಬ, ದೆಹಲಿ ಇನ್ನಿತರ ಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶವಾಗುತ್ತಿದೆ. ಹೀಗಿರುವಾಗಲೂ ಕಮಲ ಹಾಸನ್ ದೃತಿಗೆಡುವ ಅವಶ್ಯಕತೆಯಿಲ್ಲ. ಜೊತೆಗೆ ಕಳೆದ ಅನೇಕ ವರ್ಷಗಳಲ್ಲಿ ಕಮಲ ಹಾಸನ್ ಹಿಟ್ ಚಿತ್ರವನ್ನು ಕೊಟ್ಟಿದ್ದು ತೀರಾ ಕಡಿಮೆ. ಅವನ “ದಶಾವತಾರಂ” ಚಿತ್ರ ಬಿಡುಗಡೆಗೂ ಮುನ್ನ ಸುದ್ದಿಯಾದಷ್ಟು ಬಿಡುಗಡೆಯ ನಂತರ ಆಗಲಿಲ್ಲ. ಈಗ ವಿಶ್ವರೂಪಂ ಒಳ್ಳೆಯ ಹೆಸರನ್ನು ವಿಮರ್ಶಕರ ವಲಯದಲ್ಲಿ ಪಡೆಯುತ್ತಿರುವಾಗಲೇ ಕಮಲಹಾಸನ್ ನೊಂದು ಹಾಗೆ ವಿದೇಶಕ್ಕೆ ತೆರಳುತ್ತೇನೆ ಎಂದು ಮಾತನಾಡಿರುವದು ಆತನ ಅನೇಕ ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿರುವದಂತೂ ಹೌದು. ಕೊನೆಗೂ ಚಿತ್ರದ ಕೆಲವು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗವಾಗುವ ಮೂಲಕ ತಮಿಳುನಾಡಿನಲ್ಲೂ ಅದು ಬಿಡುಗಡೆಯಾಯಿತು. ಕಮಲ ಹಾಸನ್ ನಟಿಸಿರುವ ಯಾವುದೇ ಚಿತ್ರವಾಗಿರಲಿ ಅದು ವಿವಾದದ ಮೂಲಕ ಸುದ್ದಿಯಾಗಬೇಕಿಲ್ಲ. ಅದು ಕಮಲ್‌ಗೂ ಬೇಕಿಲ್ಲ. ಹೀಗಿರುವಾಗಲೂ ಕೆಲವರು ಇದನ್ನು ಸುದ್ದಿಗಾಗಿ ಮಾಡಿದ ಗಿಮಿಕ್ ಎಂದರು. ಕಮಲ ಹಾಸನನಂತಹ ಪ್ರತಿಭಾವಂತ ನಟ, ನಿರ್ದೇಶಕನಿಗೆ ಈ ಬಗೆಯ ಗಿಮಿಕ್ ಹಂಗಿಲ್ಲ. ಅದು ಬೇಕಿರುವದು ವಿವಾದದ ಮೂಲಕವೇ ಸುದ್ದಿಯಾಗಬಯಸುವ ನಟ, ನಿರ್ದೇಶಕರಿಗೆ ಮಾತ್ರ.

ಹಿಂದೆ ದೀಪಾ ಮೆಹತಾ “ಫ಼ೈಯರ್” ಮತ್ತು “ವಾಟರ್” ಸಿನೇಮಾ ಬಿಡುಗಡೆಯ ಸಂದರ್ಭದಲ್ಲೂ ಇದೇ ಬಗೆಯ ವಿವಾದವಾಗಿತ್ತು. “ವಾಟರ್” ಸಿನೇಮಾ ಶೂಟಿಂಗಿಗೂ ಅಡೆತಡೆಯೊಡ್ದಿದ ಪುಂಡರು, ಆ ಸಿನೇಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ವಿವಾದವನ್ನು ಹುಟ್ಟು ಹಾಕಿ, ಆರಂಭದ ಹಂತದಿಂದಲೇ ಆ ಚಿತ್ರಕ್ಕೆ ಪುಗ್ಸಟ್ಟೆ ಪಬ್ಲಿಸಿಟಿಯನ್ನು ನೀಡಿರುವದಿತ್ತು. ಆ ಸಂದರ್ಭದಲ್ಲಿ ಪ್ರತಿರೋಧಿಸಿದ ತಂಡ ಬೇರೆ, ಈಗ ವಿಶ್ವರೂಪಂ ಚಿತ್ರವನ್ನು ಪ್ರತಿರೋಧಿಸುತ್ತಿರುವವರು ಬೇರೆ. ಆದರೆ ಮನಸ್ಥಿತಿಗಳು ಮಾತ್ರ ಒಂದೇ. ಒಂದು ಸಿನೇಮಾ, ಪೇಟಿಂಗ್, ಗ್ರಂಥವನ್ನು ಮುಕ್ತವಾಗಿ ಸ್ವಾಗತಿಸುವ ಮನೋಭಾವ ಮೈಗೂಡುವವರೆಗೂ ಸೃಜನಶೀಲ ಚಿತ್ರ ನಿರ್ದೇಶಕ, ಕಲಾಕಾರ, ಲೇಖಕನ ಶ್ರಮಕ್ಕೆ ಸರಿಯಾದ ಸಾರ್ಥಕತೆ ಸಿಗದು.