Category Archives: Earth

Documentary

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಕಡೆಯ ಕಂತು

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಆಲ್ಫ್ಸ್ ಪರ್ವತ… ಕೊಲರ್ಯಾಡೊ ನದಿ..

ಈ ಬೆಳವಣಿಗೆಗಳ ನಡುವೆಯೂ ಖಂಡಗಳ ಅಲೆತ-ಘರ್ಷಣೆ ನಿಂತಿರಲಿಲ್ಲ. ಈ ಅಲೆತದ ಜೊತೆಗೆ ಸವಕಳಿ ಭೂಮಿಯ ಮೇಲೆ ವಿಚಿತ್ರವೂ, ವಿಶಿಷ್ಟವೂ ಆದ ಭೂರಚನೆಗೆ ಕಾರಣವಾಯಿತು.

ಸ್ವಿಟ್ಜರ್ಲ್ಯಾಂಡಿನ ಆಲ್ಫ್ಸ್ ಪರ್ವತ ಶ್ರೇಣಿ ರಚನೆಯಾದ ರೀತು ಅಚ್ಚರಿಯಾಗುತ್ತದೆ. ನಾವು ಇಲ್ಲಿಯವರೆಗೆ ನೋಡುತ್ತಾ ಬಂದಂತೆ ಈ ಪರ್ವತ ಜ್ವಾಲಾಮುಖಿ ಪರ್ವತವಲ್ಲ. ಸಮುದ್ರ ಮಟ್ಟದಿಂದ ಸುಮಾರು 3 ಮೈಲಿ ಎತ್ತರಕ್ಕಿದೆ. ಇಷ್ಟು ಎತ್ತರದ ಈ ಪರ್ವತದ ರಚನೆ ಹೇಗಾಯಿತು ಎನ್ನುವುದು ಅಚ್ಚರಿ…

ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಈ ಎತ್ತರಕ್ಕೆ ಖಂಡಗಳೆರಡರ ಘರ್ಷಣೆಯೇ ಕಾರಣ. ಆಪ್ರಿಕಾ ಮತ್ತು ಯೂರೋಪ್ ಖಂಡಗಳೆರಡು ಡಿಕ್ಕಿ ಹೊಡೆದು ಈ ಪರ್ವತ ರಚನೆ ಆಯಿತು ಎನ್ನುತ್ತಾರೆ ವಿಜ್ಞಾನಿಗಳು.

ಈ ಪ್ರತಿಪಾದನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಈ ಪರ್ವತ ಶ್ರೇಣಿಯ ಮ್ಯಾಟ್ ಹಾರ್ನ್ ಪರ್ವತವೇ ಸಾಕು. ಎರಡು ಖಂಡಗಳಿಂದಾದ ಪರ್ವತ ಇದು. ಪರ್ವತದ ತಳಭಾಗವು ಯೂರೋಪಿನದ್ದಾಗಿದ್ದರೆ, ತುದಿ ಆಫ್ರಿಕಾಕ್ಕೆ ಸೇರಿದ್ದು. ಹೇಗೆ?

ಆಫ್ರಿಕಾ ಮತ್ತು ಯೂರೋಪ್ ಖಂಡಗಳು ಚಲಿಸುತ್ತಾ ಒಂದಕ್ಕೊಂದು ಸಮೀಪಿಸಿ ನಂತರ ಒಂದರಮೇಲೊಂದು ಸೇರಿಕೊಂಡವು. ಈ ಚಲನೆ ನಿಲ್ಲುವ ಹೊತ್ತಿಗೆ ಪರ್ವತಾಕಾರ ಪಡೆದಿತ್ತು, ಎನ್ನುವುದು ವಿಜ್ಞಾನಿಗಳ ಮಾತು.

ಹೀಗೆ ಖಂಡಗಳ ಅಲೆತ ಮತ್ತು ಘರ್ಷಣೆ 45 ದಶಲಕ್ಷ ವರ್ಷಗಳ ಕಾಲ ನಡೆಯುತ್ತಲೇ ಇತ್ತು. ಈ ಚಟುವಟಿಕೆಗಳಿಂದ ಪರ್ವತ ಮತ್ತು ಪರ್ವತಶ್ರೇಣಿಗಳು ರಚನೆಯಾಗುತ್ತಲೇ ಇದ್ದವು. ಆದರೆ ಸವಕಳಿ ಈ ಪರ್ವತಗಳು ಎತ್ತರಕ್ಕೆ ಬೆಳೆಯದಂತೆ ತಡೆಯಿತು.

ಮಂಜು, ಗಾಳಿ, ನೀರಿನಿಂದ ಪರ್ವತಗಳ ಸವಕಳಿ ಪ್ರಕ್ರಿಯೆ ನಡೆದೇ ಇತ್ತು. ವರ್ಷಕ್ಕೆ 50 ದಶಲಕ್ಷ ಟನ್‌ನಷ್ಟು ಮಣ್ಣು ಸವೆಯುತ್ತಿತ್ತು. ಖಂಡಗಳ ಚಲನೆಯಿಂದ ಪರ್ವತ ನಿರ್ಮಾಣವಾಗುತ್ತಿದ್ದರೆ ಸವಕಳಿ ಅದರ ಎತ್ತರವನ್ನು ನಿರ್ಧರಿಸುತ್ತಿತ್ತು.

ಖಂಡಗಳ ಚಲನೆ ಕೇವಲ ಪರ್ವತಗಳನ್ನು ಮಾತ್ರ ನಿರ್ಮಿಸಲಿಲ್ಲ ಎನ್ನುವುದು ಗಮನಿಸಬೇಕಾದ ಮತ್ತೊಂದು ಅಂಶ. ಕೆಲವು ಸಂದರ್ಭಗಳಲ್ಲಿ ಈ ಚಟುವಟಿಕೆಗಳು ಗ್ರ್ಯಾಂಡ್ ಕ್ಯಾನ್ಯನ್ಯ್‌ನಂತಹ ರುದ್ರರಮಣೀಯ ಪರಿಸರವನ್ನೂ ಸೃಷ್ಟಿಸಿದವು.

1 ಮೈಲಿ ಆಳ, 10 ಮೈಲಿ ಅಗಲದ ಕ್ಯಾನ್ಯನ್ ಕೊಲರ‍್ಯಾಡೊ ನದಿಯ ಹರಿಯುವಿಕೆ ಮತ್ತು ಭೂಖಂಡದ ಚಲನೆಯಿಂದಾಗಿ ರೂಪುಗೊಂಡಿದ್ದು. ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿ ಹರಿಯುವ ಕೊಲರ‍್ಯಾಡೊ ನದಿ ಸಣ್ಣದಾಗಿ ಹರಿಯುತ್ತಿದ್ದರೂ ಅದರ ವೇಗ ಹೆಚ್ಚು. ಹಾಗಾಗಿ ಖಂಡಗಳ ಚಲನೆಗೆ ಕೈಜೋಡಿಸಿದಂತೆ ಕೊಲರ‍್ಯಾಡೊ ಭೂಮಿಯನ್ನು ಬೇರ್ಪಡಿಸಿ ಕಣಿವೆಯನ್ನೇ ಸೃಷ್ಟಿಸಿದೆ.

20 ಲಕ್ಷ ವರ್ಷಗಳು. ಮನುಷ್ಯನ ಪೂರ್ವಜರು ಆಫ್ರಿಕಾದಿಂದ ಭೂಮಿಯ ವಿವಿಧ ಭಾಗಗಳತ್ತ ಹೆಜ್ಜೆ ಹಾಕಿದರು. ಈ ಹೊತ್ತಿಗೆ ಭೂಮಿಯನ್ನು ಹಿಮ ಆವರಿಸಿಕೊಳ್ಳಲಾರಂಭಿಸಿತ್ತು. ಅಂದರೆ ಐಸ್‍ಏಜ್ ಆರಂಭವಾಗಿತ್ತು. ಭೂಮಿ ಮತ್ತೆ ಹಿಮಗೋಳವಾಗಿತ್ತು.

ಇಂತಹದೊಂದು ಕಾಲಘಟ್ಟವನ್ನು ಭೂಮಿ ಕಂಡಿತ್ತು ಎಂದು ಗೊತ್ತಾಗಿದ್ದು ಸ್ವಿಟ್ಜರ್‌ಲೆಂಡಿನ ವಿಜ್ಞಾನಿ ಲೂಯಿ ಅಗಸಿಸ್‍ರಿಂದ.

ಆಲ್ಫ್ಸ್ ಪರ್ವತಗಳಲ್ಲಿ ಭಿನ್ನರೀತಿಯ ಶಿಲೆಗಳನ್ನು ನೋಡಿದ್ದ ಅಗಸಿಸ್ ಅಂತಹ ಶಿಲೆಗಳ ರಚನೆಗೆ ಕಾರಣ ಹುಡುಕಾಡಿದರು. ಹಿಮದ ಶೇಖರಣೆ, ಸರಿದಾಟ, ಇಂತಹ ಶಿಲೆಗಳನ್ನು ರಚಿಸಿದ್ದು ಎಂಬ ಅಂಶ ತಿಳಿದುಬಂತು. ಇದು ಭೂಮಿಯ ಐಸ್‍ಏಜ್ ಕುರಿತ ಸಿದ್ಧಾಂತಕ್ಕೆ ಕಾರಣವಾಯಿತು.

ಐಸ್‍ಏಜ್ ಅನ್ನೋದು ಕಟ್ಟುಕತೆ ಎಂದು ಹಲವರು ಜರೆದರು. ಆದರೆ ಐಸ್‍ಏಜ್ ಸಿದ್ಧಾಂತಕ್ಕೆ ಪೂರಕವಾಗಿ ಜಗತ್ತಿನ ಹಲವೆಡೆ ಪುರಾವೆ ಸಿಕ್ಕವು. ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕ್‍ನಲ್ಲಿರುವ ಬಂಡೆ ಅಂತಹ ಪುರಾವೆಗಳಲ್ಲಿ ಒಂದು. ಹಿಮಯುಗದ (ಐಸ್‍ಏಜ್‍ನ) ಸಮಯದಲ್ಲಿ ಅಮೆರಿಕದ ಈಗಿನ ಅತಿ ಎತ್ತರದ ಕಟ್ಟಡ ಎಂಪೈರ್ ಸ್ಟೇಟ್‍ನ ಎರಡು ಪಟ್ಟು ಎತ್ತರಕ್ಕೆ ಹಿಮ ಈ ನಗರವನ್ನು ಆವರಿಸಿಕೊಂಡಿತ್ತೆಂದು ವಿಜ್ಞಾನಿಗಳು ಪ್ರತಿಪಾದಿಸಿದರು.

ವಾತಾವರಣದಲ್ಲಿ ಆದ ಭಾರೀ ಬದಲಾವಣೆಗಳಿಂದ ಕಾಲಾನಂತರದಲ್ಲಿ ಹಿಮ ಕರಗಿ ಸರೋವರಗಳಾದವು. ಭೂಮಿ ತನ್ನ ವಿಕಾಸದ ಹೆಜ್ಜೆಗಳನ್ನು ಮುಂದುವರೆಸಿತು.

ಮಾನವ ಹೆಜ್ಜೆಗಳು

10000 ವರ್ಷಗಳು. ಇಲ್ಲಿಂದ ಮನುಷ್ಯನ ಇತಿಹಾಸ ಆರಂಭ. ಈ ಅವಧಿಯಲ್ಲಿ ಮನುಷ್ಯನ ವಿಕಾಸದ ಹಾದಿ ಅತಿವೇಗದಲ್ಲಿ ಸಾಗಿ ಅವನು ಬೇರೆಲ್ಲ ಜೀವಿಗಳಿಗಿಂತ ಹೆಚ್ಚು ಪ್ರಾಬಲ್ಯವನ್ನು ಸಾಧಿಸಿದ್ದಾನೆ. ತಾನೇ ಕಂಡುಕೊಂಡ ತಂತ್ರಜ್ಞಾನ ಭೂಮಿಯನ್ನಷ್ಟೇ ಅಲ ಭಾನಿಗೂ ಚಾಚಿಕೊಂಡಿದೆ.

ಆದರೆ ಭೂಮಿಯ 4.5 ಶತಕೋಟಿ ವರ್ಷಗಳ ಅಸಾಧಾರಣ ಪಯಣವನ್ನು ನೋಡಿದರೆ ವಿಜ್ಞಾನಿಗಳು 15000 ವರ್ಷಗಳಲ್ಲಿ ಮತ್ತೊಂದು ಐಸ್‍ಏಜ್ ಬರಬಹುದು. ಮತ್ತೆ ಖಂಡಗಳು ಚಲಿಸಿ ಮುಂದೊಂದು ದಿನ ಈಗ ಇರುವ ಭೂಖಂಡಗಳೇ ಇಲ್ಲವಾಗಬಹುದು. ಇನ್ನು 3 ಶತಕೋಟಿ ವರ್ಷಗಳ ಹೊತ್ತಿಗೆ ಭೂಮಿ ಮಂಗಳನಂತೆ ಬಂಜರಾಗಬಹುದು ಎಂದು ಲೆಕ್ಕ ಹಾಕುತ್ತಾರೆ.

4.5 ಶತಕೋಟಿ ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ನೋಡುತ್ತಾ ಇದ್ದರೆ ವಿಜ್ಞಾನಿಗಳ ಈ ಲೆಕ್ಕಾಚಾರ ತಪ್ಪಾಗಬಹುದು ಎನ್ನಿಸೋದಿಲ್ಲ. ಆದರೆ ಮನುಷ್ಯನಲ್ಲಿರುವ ತಂತ್ರಜ್ಞಾನ ಮತ್ತೊಂದು ಭೂಮಿ ಹುಡುಕಬಹುದು. ಅಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಇದೆಲ್ಲ ನಡೆಯುವ ಸಹಸ್ರಸಹಸ್ರ ವರ್ಷಗಳ ಕಾಲಕ್ಕೆ ನಾವಿರ್ತೀವಾ?

(ಮುಗಿಯಿತು)


ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ-5

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


40ಕೋಟಿ ವರ್ಷಗಳು. ಇಲ್ಲಿಂದ ಮುಂದಿನ 10 ಕೋಟಿ ವರ್ಷಗಳ ಅವಧಿಯಲ್ಲಿ ಬಂಡೆಗಳು ಒಂದೆಡೆ ಸರಿಯಲು ಆರಂಭಿಸಿದವು. ಇದೇ ಸಂದರ್ಭದಲ್ಲಿ ಸಾಗರಜೀವಿಗಳು ಭೂಮಿಯ ಮೇಲೆ ಕಾಲಿಟ್ಟವು. ಓಜೋನ್ ಪದರ ಭೂಮಿಯನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದ್ದರಿಂದಾಗಿ ಜೀವಿಗಳು ಸಾಗರ ತೊರೆದು ಭೂಮಿಯತ್ತ ಹೆಜ್ಜೆ ಇಟ್ಟವು.

30 ಕೋಟಿ ವರ್ಷಗಳ ಹೊತ್ತಿಗೆ ಭೂಮಿ ಜೌಗು ಪ್ರದೇಶಗಳಿಂದ ಕೂಡಿತ್ತು. 16 ದಶಲಕ್ಷ ವರ್ಷಗಳ ಕಾಲ ಇದೇ ಸ್ಥಿತಿ ಇತ್ತು. ಈ ಪರಿಸರದಿಂದಾಗಿ ಕೊಳೆತ ಸಸ್ಯಕಾಶಿ ಕಲ್ಲಿದ್ದಿಲಾಗಿ, ಸತ್ತ ಸಾಗರ ಜೀವಿಗಳು ತೈಲವಾಗಿ ಪರಿವರ್ತನೆಗೊಂಡವು.

ಈ ಹೊತ್ತಿಗೆ ಭೂಮಿಯ ಮೇಲೆ ಸಹಸ್ರಪದಿ, ಏರೋಪ್ಲೇನ್ ಚಿಟ್ಟೆ, ಸರೀಸೃಪಗಳು ಕಾಣಿಸಿಕೊಂಡಿದ್ದವು. ಜೀವಗೋಳ ರೂಪುಗೊಂಡಿತು ಎನ್ನುವ ಹೊತ್ತಿಗೆ ದೊಡ್ಡದೊಂದು ಸವಾಲು ಎದುರಾಗಿತ್ತು.

ಭೂಮಿ ತನ್ನ ಒಡಲಲ್ಲಿ ಅದೆಷ್ಟು ಬೆಂಕಿಯನ್ನಿಟ್ಟುಕೊಂಡಿತ್ತೊ ಅದು ತನ್ನ ಹುಟ್ಟಿನಿಂದಲೂ ಜ್ವಾಲಾಮುಖಿಗಳನ್ನು ಸಿಡಿಸುತ್ತಲೇ ಬಂದಿತ್ತು. ಭೂಮಿಯ ಮೇಲೆ ಇನ್ನೇನು ಜೀವವಿಕಾಸವಾಗುತ್ತಿದೆ ಎಂಬ ಕಾಲಕ್ಕೆ ಬೆಂಕಿಯುಗುಳಿ ಭೂಮಿಯನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಇದು ಕೂಡ ವಿಕಾಸದ ಒಂದು ಹಂತವೇ ಆಗಿತ್ತು.

10 ಕೋಟಿ ವರ್ಷಗಳ ಕಾಲ ನಿರಾತಂಕವಾಗಿ ಜ್ವಾಲಾಮುಖಿಗಳಿಂದ ಲಾವಾರಸ ಹೊರಬೀಳುತ್ತಲೇ ಇತ್ತು. ಒಂದೆಡೆ ಶಾಖ ಮತ್ತೊಂದೆಡೆ ವಿಷಾನಿಲ ಹರಡಿ ಭೂಮಿಯ ಮೇಲಿದ್ದ ಶೇ.95ರಷ್ಟು ಜೀವಿಗಳು ನಾಶವಾದವು. ಭೂಮಿಯ ಅಲ್ಲಿಯವರೆಗಿನ ಇತಿಹಾಸದಲ್ಲಿ ಇಂಥ ವಿದ್ಯಮಾನ ಜರುಗೇ ಇರಲಿಲ್ಲ.

ಈ ವಿಚಿತ್ರ ಬೆಳವಣಿಗೆ ನಂತರ ಒಂದು ಮಹಾಖಂಡ ಸೃಷ್ಟಿ ಆಯಿತು. ಅದೇ ಪೆನ್‍ಜಿಯಾ.

24 ಕೋಟಿ ವರ್ಷಗಳು. ಭೂಮಿಯ ವಾತಾವರಣದಲ್ಲಿ ಹಲವು ಮಹತ್ವದ ಬದಲಾವಣೆ ಆಗಲಾರಂಭಿಸಿದ್ದವು. ಆಮ್ಲಜನಕ ಮತ್ತುಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿತು. ಇತ್ತ ಲಾವಾರಸ, ವಿಷಾನಿಲದ ಪರಿಸರದಲ್ಲೂ ಬದುಕುಳಿದ ಕೆಲ ಜೀವಿಗಳು ಭಯಾನಕವಾಗಿ ಬೆಳೆದು ನಿಂತಿದ್ದವು.

ಅವೇ ಡೈನೊಸಾರ್‌ಗಳು.

ಇಂತಹ ಜೀವಿಗಳು ಭೂಮಿಯ ಮೇಲಿದ್ದವು ಎಂಬುದು ತಿಳಿದು ಬಂದಿದ್ದು ಇಂಗ್ಲೆಂಡಿನಲ್ಲಿ ಪತ್ತೆಯಾದ ಪಳೆಯುಳಿಕೆಯಿಂದ. 1822 ರಲ್ಲಿ ಮೇರಿ ಮತ್ತು ಮ್ಯಾಂಟಲ್ ಎಂಬುವವರಿಗೆ ಮೂಳೆಯೊಂದು ಸಿಕ್ಕಿತ್ತು. ಮೊದಮೊದಲು ಅದೇನು? ಯಾವ ಪ್ರಾಣಿಯ ಮೂಳೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಧ್ಯಯನ ಮಾಡುತ್ತ ಹೋದಂತೆ ಅದು ದೈತ್ಯ ಹಲ್ಲಿಯ ಹಲ್ಲು ಎಂದು ಕಂಡುಕೊಂಡರು.

ನಂತರದ ದಿನಗಳಲ್ಲಿ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ದೈತ್ಯಜೀವಿಗಳ ಪಳೆಯುಳಿಕೆಗಳು ಪತ್ತೆಯಾದವು. ನಮ್ಮ ಕಾಲದ ಹಲ್ಲಿಗಳಿಗೆ ಹೋಲಿಸಿ ಇವುಗಳಿಗೆ ಡೈನೊಸಾರ್, ಅಂದರೆ ದೈತ್ಯ ಹಲ್ಲಿಗಳೆಂದು ಕರೆದರು.

18 ಕೋಟಿ ವರ್ಷಗಳಿಂದ – 10 ಕೋಟಿ ವರ್ಷಗಳ ಅವಧಿಯಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪೆನ್‍ಜಿಯಾ ಮಹಾಖಂಡ ಒಡೆದು ಏಳು ಖಂಡಗಳಾಗಿ ಬೇರ್ಪಟ್ಟು ಭೂಮಿಯ ಬೇರೆಬೇರೆ ಭಾಗಗಳತ್ತ ಚಲಿಸಿದವು. ಪ್ರತಿಖಂಡದಲ್ಲೂ ಡೈನೊಸಾರ್‌ಗಳು ಹಂಚಿಹೋದವು. ಜ್ವಾಲಾಮುಖಿಗಳು ಇನ್ನೂ ಕ್ರಿಯಾಶೀಲವಾಗಿದ್ದವು. ಜಾಗತಿಕ ತಾಪಮಾನ ಹೆಚ್ಚಿತು. ಇಂಗಾಲದ ಪ್ರಮಾಣ ಶೇ.500 ರಷ್ಟು ಹೆಚ್ಚಾಗಿ ಹಸಿರುಮನೆ ಪರಿಣಾಮ ಉಂಟಾಯಿತು.ಡೈನೊಸಾರ್‌ಗಳು ಅಷ್ಟು ದೈತ್ಯಾಕಾರವಾಗಿ ಬೆಳೆಯಲು ಕಾರಣ ಅವು ಈಗಿನ ಹಲ್ಲಿಗಳಂತೆ ತಂಪು ರಕ್ತದ ಜೀವಿಗಳಾಗಿರಲಿಲ್ಲ. ಬಿಸಿರಕ್ತದ ಪ್ರಾಣಿಗಳಾಗಿದ್ದವು. ಜೊತೆಗೆ ಯಥೇಚ್ಚವಾಗಿದ್ದ ಆಹಾರ, ಆಮ್ಲಜನಕದಿಂದ ಕೂಡಿದ ವಾತಾವರಣ ಡೈನೊಸಾರ್‌ಗಳು ಗಾತ್ರದಲ್ಲಿ ಅಗಾಧವಾಗಿ ಬೆಳೆಯುವಂತೆ ಮಾಡಿದವು ಎಂಬುದು ಜೀವವಿಜ್ಞಾನಿಗಳ ಅಭಿಪ್ರಾಯ.

ಇದರ ಫಲವಾಗಿ ಎಲ್ಲ ಭೂಖಂಡಗಳಲ್ಲಿ ಕಾಡು ಬೆಳೆದು ನಿಂತಿತು. ಈ ಹಸಿರಿನ ಪೋಷಣೆಯಲ್ಲಿ ಡೈನೊಸಾರ್‌ಗಳ ದೇಹ ಮತ್ತಷ್ಟು ಹಿಗ್ಗಿತು. ಆದರೆ ಈ ಸುಖದ ದಿನಗಳು ಡೈನೊಸಾರ್‌ಗಳ ಪಾಲಿಗೆ ತುಂಬಾ ದಿನಗಳ ಕಾಲ ಇರಲಿಲ್ಲ. ಅಂಥದ್ದೊಂದು ದುರಂತವೊಂದನ್ನು ಡೈನೊಸಾರ್‌ಗಳು ಎದುರಿಸಬೇಕಾಗುವ ಕಾಲ ಸನ್ನಿಹಿತವಾಗಿತ್ತು.

ಜ್ವಾಲಾಮುಖಿ ಕೊಟ್ಟ ಸಂಪತ್ತು

10ಕೋಟಿ ವರ್ಷಗಳಾದಾಗಲೂ ಭೂಮಿಯ ಬಹುತೇಕ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣವಾದ ಜ್ವಾಲಾಮುಖಿಗಳು ತಮ್ಮ ಕಾವು ಕಳೆದುಕೊಳ್ಳದೆ ಇನ್ನೂ ಜೀವಂತವಾಗಿದ್ದವು. ಶಿಲೆಗಳ ರಚನೆಗೆ, ಖಂಡಗಳ ರಚನೆಗೆ ಮತ್ತು ಅವುಗಳ ಅಲೆತಕ್ಕೆ ಕಾರಣವಾದ ಈ ಜ್ವಾಲಾಮುಖಿಗಳೇ ಅಮೂಲ್ಯವಾದ ಖನಿಜಗಳನ್ನು ಭೂಮಿಗೆ ನೀಡಿದವು. ಆ ಪೈಕಿ ಅತ್ಯಮೂಲ್ಯ ಹರಳು ವಜ್ರವೂ ಒಂದು.

ಮನುಷ್ಯ ಬಹಳ ವರ್ಷಗಳ ಕಾಲ ನದಿತಟಗಳಲ್ಲಿ ಸಿಗುತ್ತಿದ್ದ ಬೆಲೆಬಾಳುವ ಕಲ್ಲುಗಳನ್ನು ಸಂಗ್ರಹಿಸಿ ಬಳಸಿಕೊಂಡ. ಆದರೆ ಈ ಕಲ್ಲುಗಳ ಮೂಲವೆಲ್ಲಿ ಎಂಬುದು ತಿಳಿದಿರಲಿಲ್ಲ. 1869ರಲ್ಲಿ ದಕ್ಷಿಣ ಆಫ್ರಿಕಾ ಕಿಂಬರ್ಲಿಯಲ್ಲಿ ಬೃಹತ್ ಗಾತ್ರದ ವಜ್ರದ ಕಲ್ಲು ಸಿಕ್ಕಿತು. ಉದ್ದುದ್ದವಾಗಿದ್ದು ಹಳದಿ ಬಣ್ಣದಿಂದ ಕೂಡಿದ್ದ ಈ ಕಲ್ಲನ್ನು ಹೆನ್ರಿ ಕಾರ್ವಿಲ್ ಲೀವಿಸ್ ಅಧ್ಯಯನ ಮಾಡಿದರು. ಈ ವಿಶಿಷ್ಟ ಬೆಲೆಬಾಳುವ ಕಲ್ಲು ಜ್ವಾಲಾಮುಖಿಯ ಕೊಡುಗೆ ಎಂಬುದು ಆ ಅಧ್ಯಯನದಿಂದ ಸ್ಪಷ್ಟವಾಯಿತು. ಈಗ ವಜ್ರದ ಗಣಿಗಳು ಎಂದು ಕರೆಸಿಕೊಳ್ಳುತ್ತಿರುವ ಜಾಗಗಳು ಕೋಟಿ ವರ್ಷಗಳ ಹಿಂದಿದ್ದ ಪರ್ವತಗಳು ಎಂಬುದು ತಿಳಿಯಿತು.

ಆದರೆ ಇವು ಸಾಮಾನ್ಯ ಜ್ವಾಲಾಮುಖಿಗಳಾಗಿರಲಿಲ್ಲ. 100 ಮೈಲು ಆಳದ ವಿಶಿಷ್ಟ ಪರ್ವತಗಳು. ಇಲ್ಲಿ ಲಾವಾರಸ ಗಂಟೆಗೆ 3000 ಮೈಲಿ ವೇಗದಲ್ಲಿ ಹೊರಚಿಮ್ಮುತ್ತಿತ್ತು. ಅತಿಯಾದ ಶಾಖ, ವೇಗ, ಒತ್ತಡದಲ್ಲಿ ಲಾವ ವಜ್ರವಾಗಿ ರೂಪಾಂತರವಾಗಿತ್ತು. ಡೈನೊಸಾರ್‌ಗಳ ಕಾಲದಲ್ಲಿ ಸೃಷ್ಟಿಯಾದ ಈ ವಜ್ರಗಳು ಇಂದಿಗೂ ನಮ್ಮೊಂದಿಗೆ ಇವೆ. ಆದರೆ ಡೈನೊಸಾರ್‌ಗಳಿಗೆ ಅಷ್ಟು ಅದೃಷ್ಟವಿರಲಿಲ್ಲ.

65 ದಶಲಕ್ಷ ವರ್ಷಗಳು. ಹಸಿರು ಹೆಚ್ಚಿದ ಕಾಲ, ಜೀವಿಗಳು ಹಿಂದೆಂದಿಗಿಂತ ಹೆಚ್ಚು ವಿಕಾಸ ಕಂಡ ಕಾಲ. ಆದರೆ ಡೈನೊಸಾರ್‌ಗಳ ಪಾಲಿಗೆ ಕೆಟ್ಟಕಾಲ. ಕೇವಲ ಈ ದೈತ್ಯಜೀವಿಗಳಿಗಷ್ಟೇ ಅಲ್ಲ ಭೂಮಿಯ ಮೇಲಿದ್ದ ಶೇ. 70 ರಷ್ಟು ಜೀವಿಗಳೆಲ್ಲ ಕಣ್ಮರೆಯಾದಂಥ ಕಾಲ. ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಬಹಳ ಕಾಲ ನಿಗೂಢವಾಗಿಯೇ ಇತ್ತು.

ಭೂಮಿ ಎಷ್ಟೊಂದು ವೈಪರೀತ್ಯಗಳ ನಡುವೆ ಒಂದು ಚೆಂದದ ಗ್ರಹವಾಗುತ್ತಿದ್ದ ಕಾಲದಲ್ಲಿ ಭಾರೀ ಅನಾಹುತವೊಂದು ಸಂಭವಿಸಿತು. ಅದೇ ಭೂಮಿಯ ಮೇಲಿದ್ದ ಅಸಂಖ್ಯ ಜೀವರಾಶಿಯನ್ನು ನಾಶಮಾಡಿಬಿಟ್ಟಿತು. ಆದರೆ ಆಪತ್ತು ಹೇಗೆ ಬಂತು? ಎಲ್ಲಿಂದ ಬಂತು? ವಾಸ್ತವವಾಗಿ ಅದು ಏನಾಗಿತ್ತು?

ಬಂದೆರಗಿದ ಆಪತ್ತು

ಈ ಪ್ರಶ್ನೆ ಹಲವಾರು ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡಿತ್ತು. ಆದರೆ ಉತ್ತರ ಅಮೆರಿಕದ ಕೊಲರ‍್ಯಾಡೋದಲ್ಲಿ ಪತ್ತೆಯಾಯಿತು. ಲೂಯಿಸ್ ಮತ್ತು ವಾಲ್ಟರ್ ಅಲ್ವಾರೆಜ್ ಎಂಬ ತಂದೆ ಮಗನ ಜೋಡಿ 1980ರಲ್ಲಿ ಒಂದು ವಸ್ತುವನ್ನು ಪತ್ತೆ ಮಾಡಿದರು. ಅದರ ಹೆಸರು ಇರಿಡಿಯಂ. ಈ ಅಪೂರ್ವ ವಸ್ತು ಸಾಮಾನ್ಯವಾಗಿ ಕಂಡುಬರುವುದು ಉಲ್ಕೆಗಳಲ್ಲಿ. ಲೂಯಿಸ್ ವಾಲ್ಟರ್ ಅವರ ಅಧ್ಯಯನ ಆಧರಿಸಿ ಡೈನೊಸಾರ್‌ಗಳಿಂದ ತುಂಬಿದ್ದ ಈ ಗ್ರಹಕ್ಕೆ ಸಾವಾಗಿ ಬಂದಿದ್ದು ಉಲ್ಕೆಗಳು ಎಂದು ಪ್ರತಿಪಾದಿಸಿದರು.

ಒಂದು ಸೆಕೆಂಡಿಗೆ ಸುಮಾರು 30 ಮೈಲಿ ವೇಗದಲ್ಲಿ ಬಂದಪ್ಪಳಿಸಿದ ಉಲ್ಕೆಗಳು ಭೂಮಿಯನ್ನು ದೊಡ್ಡದೊಡ್ಡ ಕುಳಿಗಳಿಂದ ಅಗಾಧ ಧೂಳಿನಿಂದ ತುಂಬಿದವು ಎಂದು ಹೇಳಿದರು.

ಹತ್ತು ವರ್ಷಗಳ ಕಾಲ ಈ ಬಗ್ಗೆ ವಾದವಿವಾದಗಳು ನಡೆದವು. 1990ರಲ್ಲಿ 100 ಮೈಲಿ ವಿಶಾಲವಾದ ಕ್ರೇಟರ್ ಪತ್ತೆಯಾಗಿ ಲೂಯಿಸ್-ವಾಲ್ಟರ್ ಸಿದ್ಧಾಂತಕ್ಕೆ ಬಲ ಸಿಕ್ಕಿತು.

ಒಟ್ಟಾರೆ ಉಲ್ಕೆಗಳು, ಜೊತೆಜೊತೆಗೆ ಲಾವಾರಸ ಹಲವು ಸಾವಿರ ಜೀವಿಗಳನ್ನು ಕೊಂದವು.

ಲಾವಾರಸ ಮತ್ತು ಧೂಳಿನ ರಾಶಿಯಿಂದ ಶಿಲಾಪದರಗಳ ರಚನೆಯೂ ಆಯಿತು. ಭಾರತದ ಅಜಂತಾ ಎಲ್ಲೋರ ಸೇರಿದಂತೆ ಇನ್ನು ಕೆಲ ದೇವಸ್ಥಾನಗಳು ಇಂಥ ಶಿಲಾಪದರುಗಳಿರುವಲ್ಲೇ ನಿರ್ಮಾಣವಾಗಿವೆ.

ಹೀಗೆ ಭೂಮಿಯ ಮೇಲಿನ ಲಾವಾರಸ, ಮೇಲಿಂದ ಬಿದ್ದ ಉಲ್ಕೆಗಳು ದೈತ್ಯಜೀವಿಗಳನ್ನು, ಸೂಕ್ಷ್ಮಜೀವಿಗಳನ್ನು ಇಲ್ಲವಾಗಿಸಿದವು. ಆದರೆ ಹೊಸಜಗತ್ತು ಹುಟ್ಟಿಕೊಳ್ಳುತ್ತಿತ್ತು. ಅದೇ ಸಸ್ತನಿಗಳ ಮನುಷ್ಯನ ಜಗತ್ತು…

50 ದಶಲಕ್ಷ ವರ್ಷಗಳು. ಭೂಮಿ ಭಾರೀ ದುರಂತದಿಂದ ಚೇತರಿಸಿಕೊಳ್ಳುತ್ತಿತ್ತು. 4.4 ಶತಕೋಟಿ ವರ್ಷಗಳ ಬಳಿಕ ಸಸ್ತನಿಗಳು, ಮನುಷ್ಯನ ಪೂರ್ವಜರು ವಿಕಾಸ ಹೊಂದುತ್ತಿದ್ದರು.

(ಮುಂದುರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು.

ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು.

ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು.

ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು.

ಮಹಾಖಂಡ

ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ.

100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು.

ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು.  ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು.

ಭೂಮಿ ಹಿಮದ ಗೋಳವಾಯಿತು.

ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು.

ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು.

ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು.

ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು.

ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ.

ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು.

50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು.

ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು.

ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: