Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಮೋದಿಯ ಸುಳ್ಳುಗಳಿಗೆ ದೇಶದ ಜನತೆ ಮರುಳಾಗದಿರಲಿ

– ಎಮ್.ಸಿ.ಡೋಂಗ್ರೆ

2014 ರ ನಂತರದ ಭಾರತಕ್ಕೆ ಈಗಿನ ಗುಜರಾತಿನ ಮುಖ್ಯಮಂತ್ರಿಯಾಗಿರುವ ಶ್ರೀ ನರೇಂದ್ರ ಮೋದಿಯವರೇ ಸರಿಯಾದ ನಾಯಕನೆಂದೂ, ಹಾಗೂ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತವು ಅತ್ಯುನ್ನತವಾದ ಸರ್ವಾಂಗೀಣ ಏಳಿಗೆಯನ್ನು (ಗುಜರಾತ್ ಮಾದರಿಯಲ್ಲಿ) ಹೊಂದುವುದು ಶತಸ್ಸಿದ್ದ ಎಂದೂ ಬಿಂಬಿಸಲಾಗುತ್ತಿದೆ. ದೇಶದ ನಗರ ಕೇಂದ್ರದ ಯುವಜನರು ಮೋದಿಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುವಲ್ಲಿಯೂ ಸಹ ಸ್ವಲ್ಪ ಮಟ್ಟಿನ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನೂ ಸಹ ನೋಡಬಹುದಾಗಿದೆ. ಮೋದಿಯನ್ನು “ಅಭಿವೃದ್ಧಿಯ ಹರಿಕಾರ”ನೆಂದು ಬಿಂಬಿಸಲಾಗುತ್ತಿದ್ದೆಯೇ ವಿನಹ, ಅವರ ರಾಜಕೀಯ ಹಾಗೂ ವೈಚಾರಿಕ ಹಿನ್ನೆಲೆಯನ್ನು ಮರೆಮಾಚಲಾಗುತ್ತಿದೆ. ಮೋದಿಯ ಹೆಸರಿನ ಮೇಲೆ ಬಿ.ಜೆ.ಪಿ.ಗೆ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತಿದೆಯೇ ವಿನಹ, ಬಿ.ಜೆ.ಪಿ.ಯಿಂದ ಮೋದಿಗೆ ಅಲ್ಲ ಎಂಬುದನ್ನು ಗಮನಿಸಬೇಕು.

ನಗರ ಕೇಂದ್ರದ ಮಧ್ಯಮ ವರ್ಗಕ್ಕೆ ಸೇರಿರುವ ಅನೇಕ ಮಂದಿ ಯುವಕರು, ಶ್ರೀಮಂತ ವರ್ಗದ ಅನೇಕ ಮಂದಿ, Narendra_Modiಮೋದಿಯ ನಾಯಕತ್ವದ ಅಗತ್ಯ ದೇಶಕ್ಕೆ ಬಹಳವಿದೆಯೆಂದು ಹೇಳಲಾರಂಭಿಸಿದ್ದಾರೆ. ಈಗಿನ ನಮ್ಮ ಪ್ರಧಾನಿಯನ್ನು ಒಬ್ಬ “ಜೋಕರ್”ನಂತೆ ಸುಶಿಕ್ಷಿತರ ಮನಸ್ಸಿನಲ್ಲಿ ಮೂಡಿಸುವಲ್ಲಿ ಸಂಘ ಪರಿವಾರ ಸ್ವಲ್ಪ ಸಫಲತೆಯನ್ನು ಕಂಡುಕೊಂಡಿದೆ. ಮೊನ್ನೆಯ ಒಂದು ಸಂದರ್ಶನದಲ್ಲಿ ಬಿ.ಜೆ.ಪಿ.ಯ ನಾಯಕರಲ್ಲೊಬ್ಬರಾಗಿರುವ ಶ್ರೀ ಅರುಣ್ ಶೌರಿಯವರು ಮಾನ್ಯ ಮನಮೋಹನ ಸಿಂಗ್‌ರವರನ್ನು “ಒಬ್ಬ ಬೇಜವಾಬ್ದಾರಿ ಪ್ರಧಾನ ಮಂತ್ರಿ”ಯೆಂದೇ ನೇರವಾಗಿ ಪ್ರತಿಪಾದಿಸಿಯೂ ಆಗಿದೆ.

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಇವೆರಡೂ ಪಕ್ಷಗಳು ಮೋದಿಯನ್ನು ಒಬ್ಬ “ಕೋಮುವಾದಿ” ಎಂದು ಬಿಂಬಿಸುವಲ್ಲಿ ಮಗ್ನವಾಗಿದ್ದಾವೆಯೇ ವಿನಹ, ಮೋದಿಯ ಕುರಿತು “ಅಭಿವೃದ್ಧಿಯ ಹರಿಕಾರ” ಎಂಬ ಇಮೇಜಿನ ಹಿಂದಿರುವ ಸುಳ್ಳುಗಳನ್ನು ಬಯಲಿಗೆಳೆಯುವಲ್ಲಿ ಸೋಲುತ್ತಿವೆ.

ಗುಜರಾತಿನಲ್ಲಿ ಎಂತಹ ಅಭಿವೃದ್ಧಿಗಳಾಗಿವೆ, ಅದರಲ್ಲಿ ಮೋದಿಯ ಪಾತ್ರ ಅಥವಾ ಕಾಣಿಕೆಯಾದರೂ ಎಷ್ಟು ಎಂಬುದರ ಕುರಿತು ನೈಜ ಚಿತ್ರಣವನ್ನು ಎಲ್ಲಿಯವರೆಗೆ ನಾವು ಜನಮನದಲ್ಲಿ ಮನದಟ್ಟು ಮಾಡುವುದಿಲ್ಲವೋ ಅಲ್ಲಿಯವರೆಗೆ ಮೋದಿಯ ಕುರಿತು ಕುತೂಹಲ, ಮತ್ತು ಮೆಚ್ಚುಗೆ ಇದ್ದೇ ಇರುತ್ತದೆ. ಮೋದಿ ಕೋಮುವಾದಿಯೋ ಅಥವಾ ಅಲ್ಲವೋ ಎಂಬುದು ಜನರಿಗೆ ಈಗ ಮುಖ್ಯವಾದ ಅಂಶವೇ ಅಲ್ಲ. ಜನಸಾಮಾನ್ಯರು ತಮ್ಮ ನಾಯಕನಲ್ಲಿ ಚತುರ ಮಾತುಗಾರಿಕೆಯನ್ನು, ಸ್ಪಷ್ಟವಾಗಿ ಬಾಯಿಬಿಟ್ಟು ಹೇಳುವ ವ್ಯಕ್ತಿತ್ವವನ್ನು, ಹಾಗೂ ಆತ್ಮವಿಶ್ವಾಸದ ಲಕ್ಷಣಗಳನ್ನು ನೋಡಬಯಸುತ್ತಾರೆ.

ಹಾಗಿದ್ದಲ್ಲಿ ಮೋದಿಯ ನಾಯಕತ್ವದಲ್ಲಿ ಗುಜರಾತಿನ ಸಾಧನೆಗಳಾದರೂ ಏನು? ಎಂಬುದನ್ನು ಅವಲೋಕಿಸುವುದು ಬಹಳ ಅಗತ್ಯವೆನಿಸುತ್ತದೆ.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-1 : ಬಿ.ಜೆ.ಪಿ.ಯ ಆಳ್ವಿಕೆಯಲ್ಲಿ :

ಗುಜರಾತ್ ರಾಜ್ಯವನ್ನು ಬಿ.ಜೆ.ಪಿ.ಯು 1998-99 ರಿಂದ (ಅಂದರೆ ಸುಮಾರು 15 ವರ್ಷಗಳಿಂದ) ಆಳುತ್ತ ಬಂದಿದೆ. ಇದರಲ್ಲಿ ಮೋದಿಯ ಆಳ್ವಿಕೆ ಆರಂಭವಾದದ್ದು 10, 2001 ರಿಂದ.

19998-99 ರಿಂದ 2001-02 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಬಿ.ಜೆ.ಪಿ.ಯ ಶ್ರೀ ಕೇಶುಭಾಯ್ ಪಟೇಲರಿದ್ದರು. ಆಗ ಗುಜರಾತ್ ರಾಜ್ಯದ ವಾರ್ಷಿಕ ಅಭಿವೃದ್ಧಿ ದರ 7.5% ಇತ್ತು. ಭಾರತದ ಅಭಿವೃದ್ಧಿ ದರ 10.7 % ಇತ್ತು. ಅಂದರೆ ಬಿ.ಜೆ.ಪಿ.ಯು ಅಧಿಕಾರಕ್ಕೆ ಬಂದಾಕ್ಷಣ ಮಹತ್ತರವಾದ ಪವಾಡಗಳೇನೂ ಗುಜರಾತಿನಲ್ಲಿ ನಡೆಯಲಿಲ್ಲ ಎನ್ನುವುದನ್ನು ತಿಳಿಯಬಹುದು.

ಮೋದಿಯ ಆಡಳಿತ ಅವಧಿ ಆರಂಭಗೊಂಡಿದ್ದು 2002-03 ನೇ ಇಸವಿಯಿಂದ. ಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧಿ ದರ gujarath16.25 %. ಭಾರತದ ವಾರ್ಷಿಕ ಅಭಿವೃದ್ಧೀ ದರ 14%. ಭಾರತದ ಈ ಒಟ್ಟು ಅಭಿವೃದ್ಧೀ ದರವನ್ನು ಲೆಖ್ಖ ಹಾಕುವಾಗ ಅದರಲ್ಲಿ ಗುಜರಾತಿನಂತಹ ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯಗಳೂ ಸೇರಿರುತ್ತವೆ ಹಾಗೂ ಕಳಪೆ ಪ್ರದರ್ಶನ ನೀಡುವ ರಾಜ್ಯಗಳೂ ಸೇರಿರುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯವು ಭಾರತಕ್ಕಿಂತ ಅಭಿವೃದ್ಧೀ ದರದಲ್ಲಿ ಕೇವಲ 2..25% ಹೆಚ್ಚಿನ ಅಭಿವೃದ್ದಿ ದರವನ್ನು ತೋರಿಸುತ್ತಿರುವುದು ದೊಡ್ಡ ಮಾತೇನಲ್ಲ.

ಇಲ್ಲಿ ನೀಡಿರುವ ಅಂಕಿ-ಅಂಶಗಳ ಕುರಿತು ಒಂದು ಮಾತು.

  1. ಇಲ್ಲಿಯ ಅಂಕಿ-ಅಂಶಗಳು ಭಾರತದ ರಿಸರ್ವ್ ಬ್ಯಾಂಕ್ ಪ್ರತಿ ವರ್ಷ ಹೊರತರುವ “Handbook of Statistics of Indian Economy”ಎಂಬ ಕಿರುಹೊತ್ತಿಗೆಯ ಆಧರಿಸಿ ನೀಡಲಾಗಿದೆ.
  2. ಅಭಿವೃದ್ಧೀ ದರವನ್ನು ಹೇಳುವಾಗ “ಸಾಮಾನ್ಯ ಸರಾಸರಿ”ಯನ್ನು ತೆಗುಕೊಳ್ಳಲಾಗಿದೆ.
  3. ರಾಜ್ಯದ ಅಭಿವೃದ್ಧಿ ದರವನ್ನು ಹೇಳುವಾಗ “Net State Domestic Product at Factor Cost” ನಲ್ಲಿ ಹೇಳಲಾಗಿದೆ. Factor Cost ನ್ನು ಯಾಕೆ ತೆಗೆದುಕೊಂಡಿದ್ದೇವೆ ಎಂದರೆ ಆಗ ಎಲ್ಲ ಲೆಕ್ಕಾಚಾರದ ಮೇಲೆ ಬೆಲೆ ಏರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವ ಪ್ರಯಾಸದ ಕೆಲಸ ತಪ್ಪುತ್ತದೆ ಎಂಬ ಕಾರಣಕ್ಕೆ. Net State Domestic Product ಅಂದರೆ ಒಂದು ರಾಜ್ಯದ ಒಂದು ವರ್ಷದ ಜಿ.ಡಿ.ಪಿ. ಮೈನಸ್ ಆ ರಾಜ್ಯದ ನಿವೇಶನ, ವಾಹನಗಳು, ಯಂತ್ರೋಪಕರಣಗಳು ಇತ್ಯಾದಿ Capital Goods ಗಳಲ್ಲಿ ಆದ “ಡೆಪ್ರಿಷಿಯೇಷನ್”.

ಗುಜರಾತಿನ ಅಭಿವೃದ್ಧಿ ಒಂದು ಪಕ್ಷಿನೋಟ-2 : ಬಿ.ಜೆ.ಪಿ.ಯೇತರ ಪಕ್ಷಗಳ ಆಳ್ವಿಕೆಯಲ್ಲಿ :

  1. 1998-99 ರ ಮೊದಲು ಗುಜರಾತನ್ನು ಕಾಂಗ್ರೆಸ್ ಸರ್ಕಾರವೇ ಅನೇಕ ವರ್ಷಗಳಿಂದ ಅಭಿವೃದ್ಧಿ ಪಡೆಸುತ್ತ ಬಂದಿದೆ. ಗುಜರಾತಿನ ಈಗಿನ ಆರ್ಥಿಕ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದೇ ಅಲ್ಲಿಯ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೆಂಬುದನ್ನು ನಾವು ಮರೆಯಬಾರದು. (1994-95 ರಿಂದ 1998-99 ರವರೆಗೆ ಗುಜರಾತಿನಲ್ಲಿ ರಾಜಕೀಯ ಅಸ್ಥಿರತೆಯಿತ್ತು. ಅನೇಕ ಮಂದಿ ಮುಖ್ಯಮಂತ್ರಿಗಳು ಈ ಅವಧಿಯಲ್ಲಿ ಆಗಿ ಹೋಗಿದ್ದು, ಈ ಒಂದು ಕಾಲಘಟ್ಟವನ್ನು ನಮ್ಮ ಅಧ್ಯಯನದಿಂದ ಹೊರಗಿಡುತ್ತಿದ್ದೇವೆ.)
  2. 1990-91 ರಿಂದ 1993-94 ರವರೆಗೆ ಗುಜರಾತಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಶ್ರೀ ಚಿಮನ್ ಭಾಯಿ ಪಟೇಲರಿದ್ದರು. Reliance-Gujarathಈ ಅವಧಿಯಲ್ಲಿ ಗುಜರಾತಿನ ವಾರ್ಷಿಕ ಅಭಿವೃದ್ಧೀ ದರ 16.75 % ಇತ್ತು!!. ಅಂದರೆ ಮೋದಿಯ ಕಾಲದಲ್ಲಿರುವ ಅಭಿವೃದ್ಧೀ ದರಕ್ಕಿಂತಲೂ ಹೆಚ್ಚು!!.
  3. 1980-81 ರಿಂದ 1989-90 ರ ಅವಧಿಯಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ಸಿನ ಮಾನ್ಯ ಮಾಧವಸಿಂಗ್ ಸೋಳಂಕಿ. ಇವರ ಆಳ್ವಿಕೆಯಲ್ಲಿ ಗುಜರಾತ್ ವಾರ್ಷಕ್ಕೆ 14.8 % ವೇಗದಲ್ಲಿ ಬೆಳೆಯುತ್ತಿತ್ತ್ತು. ಆರ್ಥಿಕ ಉದಾರೀಕರಣ, ಜಾಗತೀಕರಣಗಳ ಕಲ್ಪನೆಯೇ ಇಲ್ಲದಿದ್ದ ಕಾಲ ಅದಾಗಿತ್ತು. ಆಂತಹ ಕಾಲಘಟ್ಟದಲ್ಲೇ ಶೇಕಡಾ 14.8 ರ ದರದಲ್ಲಿ ಅಭಿವೃದ್ಧಿ ಗುಜರಾತಿನಲ್ಲಿ ಆಗಿತ್ತು ಎಂದಾದಲ್ಲಿ ಮೋದಿಯ ಈಗಿನ 16.25% ಅಭಿವೃದ್ಧಿ ದರ ಬಡಾಯೀ ಕೊಚ್ಚಿಕೊಳ್ಳುವುದಕ್ಕೆ ಯೋಗ್ಯವಲ್ಲ. ಮೋದಿಯವರು ತನ್ನ ಮೊದಲು ಇದ್ದ ಅಭಿವೃದ್ಧೀ ದರವು ಕೆಳಗಿಳಿಯದಿರುವಂತೆ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಮಾತ್ರ ಖಂಡಿತವಾಗಿಯೂ ಎಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ.

ಮೋದಿಯ ಆಗಮನದ ಮೊದಲೇ:

ಗುಜರಾತ್ ಮೊದಲಿನಿಂದಲೂ ನಮ್ಮ ದೇಶದ ಬಹು ದೊಡ್ಡ ವ್ಯಾಪಾರ ಕೇಂದ್ರ. ಹರಪ್ಪ-ಮೊಹೆಂಜೋದಾರೋ ನಾಗರಿಕತೆಯ ಕಾಲದಿಂದಲೂ ಸಹ ಗುಜರಾತ್ ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದೆ. ಸಂಪದ್ಭರಿತ ರಾಜ್ಯಗಳ ತುಲನೆಯಲ್ಲಿ 1985 ರಿಂದಲೇ ಗುಜರಾತ್ 3 ನೇ ಸ್ಥಾನದಲ್ಲಿದೆ.

  1. ಗುಜರಾತಿನಲ್ಲಿ ಒಟ್ಟು 18028 ಹಳ್ಳಿಗಳಿದ್ದು ಅವುಗಳಲ್ಲಿ 17940 ಹಳ್ಳಿಗಳು 1991 ರಲ್ಲೇ ಸಂಪೂರ್ಣವಾಗಿ ವಿದ್ಯುತ್ ಶಕ್ತಿಯನ್ನು ಪಡೆದಿದ್ದವು.
  2. ಗುಜರಾತಿನ ರಸ್ತೆಗಳಲ್ಲಿ 85% ರಸ್ತೆಗಳು ಮೋದಿ ಬರುವುದಕ್ಕಿಂತಲೂ ಮೊದಲೇ ಸಿಮೆಂಟ್ ರಸ್ತೆಗಳಾಗಿದ್ದವು.
  3. ಪ್ರಪಂಚದ ಅತಿ ದೊಡ್ಡ ಹಡಗುಗಳನ್ನು ಒಡೆಯುವ ಯಾರ್ಡ್, ಅಂಬಾನಿಯವರ ಜಾಮ್ ನಗರದ ಕಚ್ಚಾ ತೈಲ ಶುದ್ಧೀಕರಣ ಫ಼ಾಕ್ಟರಿ ಇವೆಲ್ಲ ಮೋದಿ ಬರುವ ಮೊದಲೇ ಗುಜರಾತಿನಲ್ಲಿ ಅಸ್ತಿತ್ವದಲ್ಲಿದ್ದವು.
  4. ಭಾರತಕ್ಕೆ ಬೇಕಾಗಿರುವ ತೈಲೋತ್ಪನ್ನಗಳಲ್ಲಿ 45% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿತ್ತು.
  5. ಭಾರತದ ಹಡಗುಗಳ ಮೂಲಕ ನಡೆಯುವ ಸರಕು-ಸಾಗಣೆಯ 18% ಗುಜರಾತಿನಿಂದ ಮೋದಿ ಬರುವ ಮೊದಲೇ ನಡೆಯುತ್ತಿತ್ತು.
  6. ನಮ್ಮ ದೇಶಕ್ಕೆ ಬೇಕಾದ ಕಚ್ಚಾ ತೈಲದ 23% ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  7. ನಮಗೆ ಬೇಕಾಗಿರುವ ನೈಸರ್ಗಿಕ ಅನಿಲದಲ್ಲಿ 30% ಅನಿಲ ಗುಜರಾತಿನಿಂದ ಮೋದಿ ಬರುವ ಮೊದಲೇ ಸಿಗುತ್ತಿತ್ತು.
  8. ನಮ್ಮ ದೇಶಕ್ಕೆ ಅಗತ್ಯವಾಗಿರುವ ಔಷಧಿಗಳಲ್ಲಿ 26% ಔಷಧಿಗಳೂ, 78% ಉಪ್ಪು ಹಾಗೂ 98% ಸೋಡಾ ಆಷ್ ಗುಜರಾತಿನಲ್ಲಿ ಮೋದಿ ಬರುವ ಮೊದಲೇ ಉತ್ಪತ್ತಿಯಾಗುತ್ತಿದ್ದವು.

ಮೋದಿಯ ಗುಜರಾತ್ v/s ಬೇರೆ ಕೆಲವು ರಾಜ್ಯಗಳು :

2002-03 ರಿಂದ ಮೋದಿಯವರ ಆಡಳಿತ ಗುಜರಾತಿನಲ್ಲಿ ನಡೆಯುತ್ತಿದ್ದು ಗುಜರಾತ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು ದೇಶದ ಬೇರೆ ಯಾವ ರಾಜ್ಯಗಳೂ ಈ ರೀತಿಯ ಅಭಿವೃದ್ಧಿಯನ್ನು ಸಾಧಿಸುತ್ತಿಲ್ಲ ಇದಕ್ಕೆಲ್ಲ ಮಾನ್ಯ ಮೋದಿಯವರ “ಸಮರ್ಥ ನಾಯಕತ್ವ”ವೇ ಕಾರಣ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಗುಜರಾತ್ ರಾಜ್ಯದಷ್ಟೆ ಪ್ರಮಾಣದಲ್ಲಿ(ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು) ಬೇರೆ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವುಗಳ ಕಡೆಗೆ ಒಂದು ಸಲ ನಮ್ಮ ಗಮನವನ್ನು ನೀಡೋಣ.

  1. ಮಹಾರಾಷ್ಟ್ರ ರಾಜ್ಯ: ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 15.5%.
    • ( ಅ) ಮಹಾರಾಷ್ಟ್ರದ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 54 ಪಟ್ಟು ಹೆಚ್ಚಾಗಿದೆ.
    • (ಆ) ಗುಜರಾತಿನ ಈಗಿನ Net State Domestic Product = 1980-81 ರ Net State Domestic Product ಕ್ಕಿಂತ 56 ಪಟ್ಟು ಹೆಚ್ಚಾಗಿದೆ.

    ಇದನ್ನು ಗಮನಿಸಿದಾಗ ಮಹಾರಾಷ್ಟ ರಾಜ್ಯದ ಸಾಧನೆಗಳು ಗುಜರಾತಿನ ಸಾಧನೆಗೆ ಬಹಳ ಸಮೀಪದಲ್ಲೇ ಇದೆ.

  2. ಹರಿಯಾಣಾ ರಾಜ್ಯ : 04/2005 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 18%
  3. ಆಂಧ್ರಪ್ರದೇಶ ರಾಜ್ಯ: 05/2004 ರಿಂದ ಕಾಂಗ್ರೆಸ್ ಆಡಳಿತ. ಸರಾಸರಿ ಅಭಿವೃದ್ಧಿ ದರ 16%
  4. ಇನ್ನು ಜಿ.ಡಿ.ಪಿ.ಯ ಲೆಕ್ಕ ಹಾಕಿದಾಗ ಇಡೀ ದೇಶದಲ್ಲಿ ಗುಜರಾತ್ ಐದನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಮತ್ತು ತಮಿಳುನಾಡಿನ ನಂತರ ಗುಜರಾತ್ ಬರುತ್ತದೆ.
  5. ಪ್ರತಿ ವ್ಯಕ್ತಿಯ ವಾರ್ಷಿಕ ತಲಾ ಆದಾಯವನ್ನು ಲೆಕ್ಕ ಹಾಕಿದರೆ, ಹರ್ಯಾಣಾದಲ್ಲಿ ರೂ. 78781/-, ಮಹಾರಾಷ್ಟ್ರದಲ್ಲಿ ರೂ. 74072/- ಆದರೆ ಗುಜರಾತಿನಲ್ಲಿ ರೂ. 63961/-.

ಮೋದಿಯ ಆಳ್ವಿಕೆಯಲ್ಲಿ ಈಗಿನ ಗುಜರಾತ್ :

ಸುಮಾರು 12 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿಯವರ ಸಾಧನೆಗಳಾದರೂ ಏನು? ಜನಸಾಮಾನ್ಯರಿಗೆ ಉಪಯೋಗವಾಗುವ ಕಾರ್ಯಗಳಾದರೂ ಯಾವುವು? ಎಂಬಿತ್ಯಾದಿಗಳನ್ನು ತಿಳಿಯುವ ಮೊದಲು ಗುಜರಾತಿನ ಈಗಿನ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು.

  1. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಗುಜರಾತ್ 10 ನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಕೇರಳ ರಾಜ್ಯಕ್ಕೆ.
  2. 5 ವರ್ಷಕ್ಕೂ ಕಮ್ಮಿ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ 44.6% ಮಕ್ಕಳು ಸತ್ವಯುತ ಆಹಾರವಿಲ್ಲದೇ ಗುಜರಾತಿನಲ್ಲಿ ನರಳುತ್ತಿದ್ದಾವೆ.
  3. ಗುಜರಾತಿನ ಮಕ್ಕಳಲ್ಲಿ 70% ಮಕ್ಕಳು ಅನಿಮಿಯಾದಿಂದ ಬಳಲುತ್ತಿದ್ದಾರೆ.
  4. ಎನ್.ಆರ್.ಇ.ಜಿ.ಎಸ್. ಸ್ಕೀಂನ ಅಡಿಯಲ್ಲಿ ಬೇರೆ ರಾಜ್ಯದಲ್ಲಿ ಕೊಡುವ ದಿನಗೂಲಿಯ ಅರ್ಧದಷ್ಟು ಮಾತ್ರ ದಿನಗೂಲಿಯನ್ನು ಗುಜರಾತ್ ಸರ್ಕಾರ ಕೊಡುತ್ತಿದೆ.
  5. ಸುಶಿಕ್ಷಿತ ಮಹಿಳೆಯರಲ್ಲಿ ಕೇವಲ 2.04% ಮಹಿಳೆಯರು ಮಾತ್ರ ಸರ್ಕಾರಿ ಹಾಗೂ ಅರೆ ಸರ್ಕಾರೀ ಉದ್ಯೋಗದಲ್ಲಿದ್ದಾರೆ.
  6. ಗುಜರಾತಿನಲ್ಲಿ ಅತೀ ಕಡಿಮೆ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದ್ದು, ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಸಿಗುವ ಸಂಬಳ ಬಹಳ ನಿಕೃಷ್ಟವಾಗಿರುತ್ತದೆ.
  7. ಸಂಘಟಿತ ಕಾರ್ಮಿಕರಲ್ಲಿ ಉದ್ಯೋಗದ ಬೆಳವಣಿಗೆಯ ಪ್ರಮಾಣ ಅತಿ ಕಡಿಮೆಯಾಗಿದೆ. ವರ್ಷಕ್ಕೆ ಸಂಘಟಿತ ಕ್ಷೇತ್ರದಲ್ಲಿ ಕೇವಲ 0.50% ಉದ್ಯೋಗದಲ್ಲಿ ಹೆಚ್ಚಳವನ್ನು ಕಾಣಬಹುದು. ಅಂದರೆ ಈ ವರ್ಷ 1000 ಜನ ಕೆಲಸದಲ್ಲಿದ್ದರೆ, ಮುಂದಿನ ವರ್ಷದಲ್ಲಿ ಅವರ ಸಂಖ್ಯೆ ಕೇವಲ 1005 !
  8. ಮೋದಿಯವರ ಗುಜರಾತಿನಲ್ಲಿ ಬಡವರೆಂದರೆ ಯಾರೂ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೇ ಬೇರೆ!!. ನಗರ ಪ್ರದೇಶದಲ್ಲಿ ಯಾರ ಮಾಸಿಕ ಆದಾಯ 540/- ರೂಪಾಯಿ ದಾಟುವುದಿಲ್ಲವೋ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ modi-GIMಯಾರ ಮಾಸಿಕ ಆದಾಯ ರೂಪಾಯಿ 361/- ದಾಟುವುದಿಲ್ಲವೋ ಅವರು ಮಾತ್ರ ಬಡವರು. ಅವರಿಗೆ ಮಾತ್ರ BPL.ಕಾರ್ಡ್‌ನ್ನು ನೀಡಲಾಗುವುದು!!.
  9. ಪ್ರತಿ ವರ್ಷ ಅಂತಾರಾಷ್ಟ್ರೀಯ ಉದ್ಯಮಪತಿಗಳನ್ನು ಗುಜರಾತಿಗೆ ಕರೆಯಿಸಿ “ಗ್ಲೋಬಲ್ ಮೀಟ್” ಮಾಡಿ, ಅನೇಕ ಉದ್ದಿಮೆಗಳಿಗೆ ಅಲ್ಲಿ ಸಹಿಹಾಕುವ ಕೆಲಸ ಗುಜರಾತಿನಲ್ಲಿ ನಡೆಸುತ್ತ ಬರಲಾಗಿದೆ. ಆದರೆ ಅವುಗಳಲ್ಲಿ ಕೇವಲ 20% ಮಾತ್ರ ಇಲ್ಲಿಯವರೆಗೆ ಅನುಷ್ಠಾನಗೊಂಡಿವೆ.
  10. ನಮ್ಮ ದೇಶಕ್ಕೆ ಇಲ್ಲಿಯವರೆಗೆ ಹರಿದುಬಂದಿರುವ FDI ನಲ್ಲಿ ಕೇವಲ 5% ಮಾತ್ರ ಗುಜರಾತಿಗೆ ತರಿಸುವಲ್ಲಿ ಮೋದೀಯ ಮೋಡಿ ಕೆಲಸಮಾಡಿದೆ. ತಮಿಳುನಾಡು ಮತ್ತು ಕರ್ನಾಟಕವು ಸದ್ದಿಲ್ಲದೆ ತಲಾ 6% ಈ.FDI ನ್ನು ತಮ್ಮದಾಗಿಸಿದ್ದರೆ, ಮಹಾರಾಷ್ಟ್ರಾದವರು 35% ತಮ್ಮೆಡೆಗೆ ಸೆಳೆದಿದ್ದಾರೆ.

ಕೆ.ಪಿ.ಶಶಿ ಎಂಬ ಚಿಂತಕರು ಗುಜರಾತಿನ ಅಭಿವೃದ್ಧಿಯ ಕುರಿತು ಒಂದು ಮಾತನ್ನು ಹೇಳಿದ್ದು ಅದು ಬಹಳ ಅರ್ಥಪೂರ್ಣವಾಗಿದೆ. ಅವರ ಪ್ರಕಾರ “ಮೋದಿಯವರ ಅಭಿವೃದ್ಧಿಯ ಮಾಡೆಲ್” ಆರ್.ಎಸ್.ಎಸ್.ನ ಚಡ್ಡಿಯಿದ್ದಂತೆ-ಅದು ಎಂದೂ ನೆಲವನ್ನು ಮುಟ್ಟುವುದೇ ಇಲ್ಲ!!.

ಗುಜರಾತಿನ ಕೃಷಿ :- ಸತ್ಯ ಮತ್ತು ಮಿಥ್ಯ

ನರೇಂದ್ರ ಮೋದಿಯ ಅಭಿಮಾನಿಗಳು ನರೇಂದ್ರಮೋದಿಯವರಿಂದ ಗುಜರಾತಿನ ಕೃಷಿ ಬಹಳವಾಗಿ ಬೆಳೆದಿದೆ. ಕೃಷಿಯಲ್ಲಿ ಭಾರತದ ಅಭಿವೃದ್ಧಿಗಿಂತ ಹೆಚ್ಚಿನದಾಗಿ ಅಭಿವೃದ್ಧಿ ಗುಜರಾತಿನಲ್ಲಿ ನಡೆದಿದೆ. ಇದಕ್ಕೆಲ್ಲ ಮೋದಿಯವರ ಸಮರ್ಥ ನಾಯಕತ್ವ, ಒಳನೋಟ ಇವುಗಳೇ ಕಾರಣ ಎಂದೆಲ್ಲ ಹೊಗಳಲು ಆರಂಭಿಸಿದ್ದಾರೆ.

ಮೋದಿಯೂ ಸಹ ತನ್ನ ವೆಬ್‌ಸೈಟ್‌ನಲ್ಲಿ ಹಾಗೂ ಇತರ ಕಡೆಯಲಿ ಭಾಷಣ ಮಾಡುವಾಗ ಈಗ ಭಾರತದ guj-agricultureಕೃಷಿಕ್ಷೇತ್ರದಲ್ಲಿ ನಾವೇ ನಂಬರ್ 1 ಎಂದೆಲ್ಲ ಸುಳ್ಳುಗಳನ್ನೂ ಹೇಳಿಯಾಗಿದೆ. ಭಾರತದ ಕೃಷಿ ವರ್ಷಕ್ಕೆ 4% ನಂತೆ ವೃದ್ಧಿಯಾಗುತ್ತಿದೆ, ಆದರೆ ಗುಜರಾತಿನಲ್ಲಿ ಅದು 11% ನಂತೆ ಹೆಚ್ಚಾಗುತ್ತಿದೆ ಎಂದು ಬಾಯಿಗೆ ಬಂದ ಅಂಕಿ-ಅಂಶಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸಚಿವಾಲಯವು ಮುದ್ರಿಸಿರುವ ಭಾರತದ ಕೃಷಿಯ ಸ್ಥಿತಿ-ಗತಿ, 2012-13ರ ವರದಿಯ ಪ್ರಕಾರ ಕೃಷಿಯಲ್ಲಿ ಗುಜರಾತಿನ ಸ್ಥಾನ 8ನೇ ಸ್ಥಾನ.

2007-08 ರಿಂದ 2011-12 ರ ಅವಧಿಯಲ್ಲಿ ಗುಜರಾತಿನ ಕೃಷಿ ಅಭಿವೃದ್ಧಿಯು 4.8% ದರದಲ್ಲಿ ಪ್ರತಿವರ್ಷ ವೃದ್ಧಿಯಾಗುತ್ತಿದೆ.

ಗುಜರಾತ್ ಸರ್ಕಾರವು ಪ್ರತಿ ವರ್ಷ ತನ್ನ ಆರ್ಥಿಕ ಸ್ಥಿತಿ-ಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸುತ್ತದೆ. ಈ ರೀತಿ ಪ್ರಕಟಿತ ಮಾಹಿತಿಯ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರಲು ಬಯಸುತ್ತೇವೆ. ಆಗ ಮಾತ್ರ ಎಲ್ಲರಿಗೂ “ಈ ಮೋದಿ ಎನ್ನುವವ ಎಂತಹ ಸುಳ್ಳುಗಾರ” ಎಂಬುದು ಮನದಟ್ಟಾಗುತ್ತದೆ.

ವರ್ಷ ಆಹಾರಧಾನ್ಯಗಳು (ಲಕ್ಷ ಟನ್‌ಗಳಲ್ಲಿ) ಎಣ್ಣೆಕಾಳುಗಳು (ಲಕ್ಷ ಟನ್‌ಗಳಲ್ಲಿ) ಹತ್ತಿ ಬೆಳೆ(ಲಕ್ಷ ಬೇಲ್‌ಗಳಲ್ಲಿ)
1996-97 60.89 38.02 28.18
1997-98 61.13 38.65 34.17
1998-99 60.38 38.81 40.03
1999-2000 44.37 18.26 21.45
2000-01 31.84 17.37 12.82
2001-02 52.54 37.46 16.84
2002-03 43.95 18.77 18.39
2003-04 67.36 58.55 42.79
2004-05 51.53 28.99 55.40
2005-06 61.41 47.34 65.12
2006-07 61.10 28.46 87.87
2007-08 82.06 46.99 78.76
2008-09 63.45 39.32 82.75
2009-10 56.05 30.10 74.01
2010-11 100.71 51.42 98.25
2011-12 92.57 50.53 103.75

1996-97 ರಿಂದ 2004-05 ರವರೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದರ ವಾರ್ಷಿಕ ಸರಾಸರಿ 5.65% ಇತ್ತು, ಅದೀಗ 6.47% ಆಗಿದೆ.

ಗುಜರಾತಿನ ಕೃಷಿಯಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ಕೆಲವು ಕಾರಣಗಳನ್ನು ಪಟ್ಟಿಮಾಡಬಹುದು:

  1. ಸರ್ದಾರ್ ಸರೋವರ ಆಣೆಕಟ್ಟಿನಿಂದ ಗುಜರಾತಿನ ಅನೇಕ ಭಾಗಗಳಿಗೆ 2002 ರಿಂದ ನೀರು ಲಭ್ಯವಾಗಲಾರಂಭಗೊಂಡಿದ್ದು.
  2. Bt ಹತ್ತಿಯನ್ನು ಬೆಳೆಸುತ್ತಿರುವುದು
  3. ಮೈನರ್ ಇರಿಗೇಷನ್‌ಗಳ ಆಳವಡಿಕೆ
  4. ಭೂಮಿಯ ಅಂತರ್ಜಲವನ್ನು ಹೆಚ್ಚಿಸಲು ಸಾವಿರಾರು ಚೆಕ್-ಡ್ಯಾಮ್ ಗಳ ರಚನೆ
  5. ಸಣ್ಣ-ಸಣ್ಣ ಯಾಂತ್ರಿಕ ಉಪಕರಣಗಳ ಬಳಕೆ
  6. ಒಳ್ಳೆಯ ಸಾರಿಗೆ ಸೌಕರ್ಯಗಳು
  7. ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಗೆ 3-ಫೇಸ್ ವಿದ್ಯುತ್ ಸರಬರಾಜು

ಮುಗಿಸುವ ಮೊದಲು:

ಗುಜರಾತಿನಲ್ಲಿ ಮೋದಿ ಆಳ್ವಿಕೆಯಲ್ಲಿ ನಗರದ ಮಧ್ಯಮ ವರ್ಗದ ಜನರು ಅನೇಕ ಸೌಲಭ್ಯಗಳಿಂದ, middleclass-indiaಅಭಿವೃದ್ಧಿಯ ಫಲವನ್ನು ಆನಂದಿಸುತ್ತ ಇದ್ದಾರೆಯೇ ವಿನಹ ಅಲ್ಲಿಯ ಆದಿವಾಸಿಗಳ ಹಾಗೂ ದಲಿತರ ಸ್ಥಿತಿ-ಗತಿ ಬಹಳ ಚಿಂತಾಜನಕವಾಗಿದೆ. ಫಲವತ್ತಾದ ಭೂಮಿಯನ್ನು ಉದ್ಯಮಪತಿಗಳಿಗೆ ನೀಡುತ್ತಿರುವುದರ ವಿರುದ್ಧ ಈಗಾಗಲೇ ಗುಜರಾತಿನ ಗ್ರಾಮ-ಗ್ರಾಮಗಳಲ್ಲಿ ಸಂಘಟಿತ ರೈತರಿಂದ ಪ್ರತಿರೋಧ ಬಲಗೊಳ್ಳುತ್ತಿದೆ. ಭಾರತದ ಉದ್ಯಮಪತಿಗಳಿಗೆ ಈಗ ಮೋದಿ ಬೇಕಾಗಿದ್ದಾರೆ. ಯು.ಪಿ.ಎ. ಸರ್ಕಾರದಿಂದ ನಿರೀಕ್ಷಿತ ಅನುಕೂಲತೆಗಳು ಸುಲಭವಾಗಿ ದೊರೆಯಲಾರದು ಎಂದು ಮನಗಂಡಿರುವ ಬಂಡವಾಳಶಾಹಿಗಳು ಈಗ ಮೋದಿಯನ್ನು “ದೇಶದ ಪ್ರಧಾನಿ”ಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮೋದಿಯ ಸುಳ್ಳುಗಳನ್ನು ಬಯಲು ಮಾಡಬೇಕು, ಮೋದಿಯ ಕೊಳಕು ಕೋಮುವಾದವನ್ನು ಹಿಮ್ಮೆಟ್ಟಿಸುವಲ್ಲಿ ಸಂಘಟಿತ ಹಾಗೂ ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಬೇಕು.

ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು


– ರವಿ ಕೃಷ್ಣಾರೆಡ್ದಿ


 

“It’s easier to fool people than to convince them that they have been fooled.”― Mark Twain

ಇದು ಅಮೆರಿಕ ಅಲ್ಲ ಮತ್ತು ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದೇಶದ ದೊಡ್ಡ ಪಕ್ಷವೊಂದು ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಸುತ್ತಮುತ್ತ ನಡೆದ ಘಟನಾವಳಿಗಳ ಬಗ್ಗೆ ಹೇಳುವುದಾದರೆ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಇರುವುದಿಲ್ಲ ಮತ್ತು ಅಭ್ಯರ್ಥಿಗಳೂ ಇರುವುದಿಲ್ಲ. ಬಹುಮತ ಪಡೆದ ಸಂಸದೀಯ ಗುಂಪು ಆಯ್ಕೆ ಮಾಡಿಕೊಳ್ಳುವ ನಾಯಕತ್ವದ ಸ್ಥಾನ ಅದು. ಇತ್ತೀಚೆಗೆ ಆಗುತ್ತಿರುವುದೆಲ್ಲ ಮೀಡಿಯಾ ಮ್ಯಾನೇಜ್ ಮಾತ್ರವಾಗಿದೆ ಮತ್ತು ನಿತ್ಯಹಸಿವಿನ ಕಾರಣಕ್ಕಾಗಿ ಅದನ್ನು ಮಾಧ್ಯಮಗಳು ಭಕ್ಷಿಸಿ ಜನರಿಗೆ ಉಣಬಡಿಸುತ್ತಿವೆ.

ಗುಜರಾತಿನ ನೆಲದಲ್ಲಿ ಹುಟ್ಟಿಬಂದ ಸಂತ, ರಾಜಕಾರಣಿ, ಶಾಂತಿದೂತ,  ಗಾಂಧೀಜಿ. 200px-MKGandhi[1]ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಕೊನೆಯವರೆಗೂ ಗಾಂಧೀಜಿಯನ್ನು ಗೌರವಿಸುತ್ತ ಉಳಿದವರು ಸರ್ದಾರ್ ಪಟೇಲ್. ದೇಶ ಕಟ್ಟಿದವರು. ಅಂತಹ ನೆಲದಲ್ಲಿ ಯಾವುದೇ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಲವಲೇಶವೂ ಇಲ್ಲದ ಕಳೆಯ ಗಿಡವೊಂದು ಇಂದು ವಿಷಪೂರಿತ ಮುಳ್ಳುಗಳೊಂದಿಗೆ ಆಮ್ಲಜನಕಕ್ಕೆ ಬದಲಾಗಿ ಇಂಗಾಲವನ್ನೇ ಕಕ್ಕುವ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಇತಿಹಾಸ, ಪರಂಪರೆ ಮತ್ತು ಆತ್ಮದ ಪರಿಚಯವೇ ಇಲ್ಲದ ಜನ ಈ ದೇಶವನ್ನು ರೋಬಾಟ್ ಯಂತ್ರಮಾನವರಂತೆಯ ಏಕೋದ್ದೇಶದ ಮನುಷ್ಯರ ಸಂಕುಚಿತ ರಾಷ್ಟ್ರ ಕಟ್ಟುವುದಕ್ಕಾಗಿ, ಈ ದೇಶದಲ್ಲಿ ನಡೆದ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟಗಳ, ನ್ಯಾಯ ಮತ್ತು ಸಮಾನತೆಯ, ಮಾನವನ ಪರಮಾದ್ಭುತ ಜೀವವಿಕಾಸದ ಮತ್ತು ವಲಸೆಯ ಕತೆಯನ್ನೇ ತಿರುಚಿ ಕಗ್ಗತ್ತಲ ಭವಿಷ್ಯ ಬರೆಯಹೊರಟಿದ್ದಾರೆ.

ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಕ್ಷಣ ಮೋದಿಯೇನೂ ಪ್ರಧಾನಿ ಆಗುವುದಿಲ್ಲ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಊಹಿಸಲಾಗದ ರಭಸದ ಮತ್ತು ಅನಿಶ್ಚಿತತೆತ ವರ್ತಮಾನದಲ್ಲಿ ನಾವಿದ್ದೇವೆ. ಈಗಿನ ಪರಿಸ್ಥಿತಿಯನ್ನು ಇಟ್ಟುಕೊಂಡು ಹೇಳುವುದಾದರೆ ಬಿಜೆಪಿ ಮತ್ತದರ ಎರಡೇ ಎರಡು ಮಿತ್ರಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಸರ್ಕಾರ ರಚಿಸುವ ಸ್ಥಿತಿ ಮುಟ್ಟುವುದಿಲ್ಲ. ಆದರೆ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಅಪ್ರಸ್ತುತವಾಗುತ್ತ ಸಾಗಿರುವ ತೆಲುಗುದೇಶಂ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲೊಂದು ಬೋನಸ್ ಪಕ್ಷ ಸಿಗುತ್ತದೆ, ಆದರೆ ಹೆಚ್ಚಿನ ಸೀಟುಗಳೇನೂ ಬರುವ ಹಾಗೆ ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತ ಜೊತೆಯಾಗಬಹುದು. ಮಾಮೂಲಿನಂತೆ ಒಂದೇ ಪಕ್ಷಕ್ಕೆ ಅಪಾರವಾದ ಬಹುಮತ ಕೊಡುವ ತಮಿಳುನಾಡಿನ ನಿಯಮ ಈ ಸಾರಿಯೂ ಪುನರಾವರ್ತನೆ ಆಗಿ ಜಯಲಲಿತರ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದರೆ ಅದು ಮಾತ್ರ ಮೋದಿಗೆ ನಿಜವಾದ ಬೋನಸ್.

ಆದರೂ ಚುನಾವಣೆಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಿಂಗಳ ಹಿಂದೆ ಎರಡು ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಎರಡರಲ್ಲೂ ಸೋಲುತ್ತದೆ ಎಂದುಕೊಂಡ ಅನೇಕರಲ್ಲಿ ನಾನೂ ಒಬ್ಬ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮಾತನಾಡಿಸಿದ ಕೆಲವು ಕಾಂಗ್ರೆಸ್ ನಾಯಕರಿಗೇ ವಿಶ್ವಾಸವಿರಲಿಲ್ಲ. ಹಾಗಾಗಿ, ಅಂಕಗಣಿತ ಏನೇ ಹೇಳಿದರೂ Modiಮೋದಿ ನೇತೃತ್ವದ ಎನ್‌ಡಿಎ‌ ಅಧಿಕಾರ ಸ್ಥಾನದ ಹತ್ತಿರಕ್ಕೆ ಬರುವುದೇ ಇಲ್ಲ ಎಂದು ಹೇಳುವುದು ನಮ್ಮಗಳ ಇಚ್ಚೆ ಆಗುತ್ತದೆಯೇ ಹೊರತು ಕಾಲಜ್ಞಾನವಾಗುವುದಿಲ್ಲ. ಅವಕಾಶವಾದಿ ಮತ್ತು ಸಮಯಸಾಧಕ ರಾಜಕಾರಣಿಗಳೇ ಹೆಚ್ಚಿರುವ ದೇಶ ನಮ್ಮದು. ಅದರ ಜೊತೆಗೆ, ದೇಶದಲ್ಲಿ ಹೆಚ್ಚುತ್ತಿರುವ ನಗರವಾಸಿಗಳು, ನಗರ ಪ್ರದೇಶಗಳಲ್ಲಿಯೇ ಹೆಚ್ಚು ಘಟಿಸುವ ಕೋಮುಗಲಭೆಗಳು ಮತ್ತದು ಮಾಡುವ ಓಟು-ಕ್ರೋಢೀಕರಣ, ತಂತ್ರಜ್ಞಾನವನ್ನು ಬಳಸಿಕೊಂಡು ಭಾವಾವೇಶ ಮತ್ತು ಸಂಕುಚಿತ ಮತಾಂಧತೆಯನ್ನು ಹರಡಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ, ವ್ಯಕ್ತಿಪೂಜೆ, ಇತ್ಯಾದಿಗಳು ಮೋದಿ ಮತ್ತವರ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಅಂಶಗಳು. ಹಾಗೇನಾದರೂ ಆದರೆ, ಭವಿಷ್ಯದ ಇತಿಹಾಸಕಾರರು ಈ ತಲೆಮಾರಿನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ.

ಆದರೆ ಕರ್ನಾಟಕ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನ್ನದು. ದೇಶದಲ್ಲಿಯ ಕೆಲವು ಕಡೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಎದ್ದು ಕುಣಿಯುತ್ತಿರುವ ಕೆಲವು ಪಿತೂರಿಕೋರ ನರಿಗಳಿಗೆ ಬಿಜೆಪಿ ಪಕ್ಷ ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ನಗರದ ಮೂರು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡರೂ ಸಾಧನೆ ಆಗುತ್ತದೆ ಎನ್ನುವುದರ ಅರಿವಿದ್ದಂತಿಲ್ಲ. ರಾಜ್ಯದಲ್ಲಿ ಸದ್ಯದ ವಾಸ್ತವವೇ ಬೇರೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿಯ ಕನಿಷ್ಟ ಮೂರು ಸ್ಥಾನಗಳಲ್ಲಿ (ಹೆಬ್ಬಾಳ, ಜಯನಗರ, ಬಸವನಗುಡಿ) ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಗೆಲ್ಲಲು ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಗಿದ್ದಂತಹ “ಒಳ್ಳೆಯ” ಹೆಸರು ಅಲ್ಲ. ಇಂತಹ ಅನುಚಿತ ಔದಾರ್ಯವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶಿಸದೆ ಸರಿಯಾದ ತಂತ್ರಗಾರಿಕೆ ಮಾಡಿದರೆ, ಎಷ್ಟೇ ಮೋದಿ ಮುಖವಾಡಗಳು ಕುಣಿದಾಡಿದರೂ ಬೆಂಗಳೂರು ನಗರದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಗೆದ್ದು ಬರುವುದು ಕಷ್ಟವಿದೆ. ರಾಜ್ಯದ ಅನೇಕ ಕಡೆಯೂ ಇದೇ ಆಗಲಿದೆ.

ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ, ಅದೇ ರಭಸದಲ್ಲಿ ನಮ್ಮ ರಾಜ್ಯ ಕಂಡ ಪರಮಾತಿಭ್ರಷ್ಟ ಯಡ್ಡಯೂರಪ್ಪನವರ ಜೊತೆಜೊತೆಗೆ ನಿಂತು ನರೇಂದ್ರ ಮೋದಿ ಮತ ಕೇಳಲಿರುವ ಚಿತ್ರ ಮೋದಿಯ ಅಧಿಕಾರದ ಹಪಹಪಿ ಮತ್ತು ನೀತಿಗಳಿಲ್ಲದ ಮನೋಭಾವವನ್ನೂ ಅನಾವರಣಗೊಳಿಸಲಿದೆ. ಇದನ್ನು ಪ್ರಾಮಾಣಿಕತೆ, ಬಲಿಷ್ಟ ದೇಶ, ಗಂಡಸುತನ, ದೇಶಭಕ್ತಿ, ಇತ್ಯಾದಿಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ ಎಗರಾಡುತ್ತಿರುವ ಕರ್ನಾಟಕದ ಕೆಲವು ಮತಾಂಧ ನರಿಗಳು ಹೇಗೆ ಸಮರ್ಥಿಸಿಕೊಳ್ಳಲಿವೆ? ಅವರಿಗೆ ಬೇಕಿರುವುದು ಜನಾಂಗ ನಿರ್ಮೂಲನೆಯೇ ಹೊರತು ಮನುಷ್ಯ ಸಮಾಜವನ್ನು ಕಟ್ಟುವ ಕಾಳಜಿ ಅಲ್ಲ. ಇದನ್ನು ಅರಿಯದ ಮುಗ್ಧರು, ದುಷ್ಟರು ಹಾಕಿದ ಕೋಮುದ್ವೇಷದ ಹೋಮದಲ್ಲಿ ಸಮಿತ್ತುಗಳಾಗಿ ಉರಿದುಹೋಗುತ್ತಿದ್ದಾರೆ. ದೇಶದ ಪ್ರಜ್ಞಾವಂತರೆಲ್ಲ ಈ ದುಷ್ಕೃತ್ಯದ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ.

ಬಹುಶಃ ಈ ಚುನಾವಣೆ ಕಾಂಗ್ರೆಸ್‌ನ rahul_priyanka_soniaಇಂದಿರಾಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಅವಸಾನಕ್ಕೂ ನಾಂದಿ ಹಾಡುತ್ತದೆ ಎನ್ನುವ ವಿಶ್ವಾಸ ನನ್ನದು. ಆ ಮೂಲಕ ದೇಶದಲ್ಲಿ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟುತ್ತವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನಗಳು ಕುಸಿಯುತ್ತ ಹೋಗುತ್ತದೆ. ಆಂತರಿಕ ಪ್ರಜಾಪ್ರಭುತ್ವ ಕಟ್ಟಿಕೊಳ್ಳದೆ, ನೀತಿ ಮತ್ತು ಮೌಲ್ಯಗಳ ವಿಚಾರದಲ್ಲಿ ಪರ್ಯಾಯ ಕಲ್ಪಿಸದೇ ಹೋದರೆ ಕಾಂಗ್ರೆಸ್ ಸರ್ವನಾಶದತ್ತ ಸಾಗಲಿದೆ. ಅವರ ತಾಯಿಯ ಪರ ಕೆಲಸ ಮಾಡಿದ ಅನುಕಂಪ ಮತ್ತು 2004 ರಂತಹ ಚಾರಿತ್ರಿಕ ಅವಕಾಶಗಳು ರಾಹುಲ್ ಗಾಂಧಿಗೆ ಕೂಡಿ ಬರುವುದಿಲ್ಲ. ಅದನ್ನು ಮೀರುವ ಗಟ್ಟಿಯಾದ ವ್ಯಕ್ತಿತ್ವವನ್ನೂ ಅವರು ಬೆಳೆಸಿಕೊಂಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಕುಟುಂಬ ರಾಜಕಾರಣದ ಹಿಡಿತ ಇನ್ನೊಂದೈದತ್ತು ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ.

ಈ ದೇಶದಲ್ಲಿ ಜಾತ್ಯತೀತತೆ, ವೈವಿಧ್ಯತೆ, ಸಹಿಷ್ಣುತೆ, ಪ್ರಜಾಪ್ರಭುತ್ವ, ಸಮಾನತೆ, ನ್ಯಾಯ, ಇತ್ಯಾದಿಯಂತಹ ಸಾರ್ವಕಾಲಿಕ ಮೌಲ್ಯಗಳಲ್ಲಿ ವಿಶ್ವಾಸವಿಟ್ಟಂತಹ ಪಕ್ಷಗಳ ಕೊರತೆ ಇದೆ. ಮೋದಿಯನ್ನು ತೋರಿಸಿ ಕೆಲವು ಪಕ್ಷಗಳು ಜಾತ್ಯತೀತತೆ ಬಗ್ಗೆ ಮಾತನಾಡುತ್ತವೆಯೇ ಹೊರತು ಅವು ನಿಜಕ್ಕೂ ಜಾತ್ಯತೀತವೇನಲ್ಲ. ಮೋದಿಯಂತಹ ವ್ಯಕ್ತಿ ಇಷ್ಟು ಪ್ರಾಮುಖ್ಯತೆ ಗಳಿಸಲು ನಮ್ಮ ಜಾತ್ಯತೀತ ಪಕ್ಷಗಳ ದಿವಾಳಿತನ, ಅಪ್ರಾಮಾಣಿಕತೆ ಮತ್ತು ಮೌಲ್ಯದಾರಿದ್ರ್ಯಗಳು ಕಾರಣವೇ ಹೊರತು ಮೋದಿಯ ಆಡಳಿತ ವೈಖರಿ ಮತ್ತು ಭಾಷಣಗಳಲ್ಲ. ಮನಮೋಹನ ಸಿಂಗರು ಎರಡು-ಮೂರು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಸ್ಥಾನದಿಂದ ಹಿಂದೆಸರಿದು, ಮತ್ತೊಬ್ಬ ಕ್ರಿಯಾಶೀಲ ಮತ್ತು ಪ್ರಾಮಾಣಿಕರನ್ನು ಪ್ರಧಾನಿ ಮಾಡಿದ್ದರೆ ವಾಸ್ತವವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕತ್ವ ಯಾವುದೇ ಸ್ವತಂತ್ರ ಮನೋಭಾವದ ವ್ಯಕ್ತಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದು ಕಾಂಗ್ರೆಸ್‌ಗಾದ ನಷ್ಟ ಮಾತ್ರವಲ್ಲ, ದೇಶದ ವರ್ತಮಾನ ಮತ್ತು ಭವಿಷ್ಯಕ್ಕೂ ಆದ ಅನ್ಯಾಯ.

ಭವಿಷ್ಯ ಆಶಾದಾಯಕವಾಗಿ ಇಲ್ಲದಿದ್ದರೂ, ಈ ನಾಡಿನಲ್ಲಿ ಸೀಮಿತ ಪ್ರಮಾಣದಲ್ಲಾದರೂ ನಡೆಯುತ್ತಿರುವ upward-mobility,garment-factory ಗಾರ್ಮೆಂಟ್ಸ್-ಐಟಿಬಿಟಿ-ಮಾಲ್‌ಗಳ ಕಾರಣಕ್ಕಾಗಿ ಕೆಳಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ್ಯ, ಕುಲಮತ‌ಅಂತಸ್ತುಗಳ ಭೇದವಿಲ್ಲದೆ ಪ್ರೇಮದಲ್ಲಿ ಬೀಳುತ್ತಿರುವ ಯುವಸಮಾಜ, ಹೆಚ್ಚುತ್ತಿರುವ ಅಂತರ್ಜಾತಿ ವಿವಾಹಗಳು, ಇವೆಲ್ಲವೂ ಹೊಸದಾದ ಭಾರತವನ್ನೇ ಸೃಷ್ಟಿಸುತ್ತಿವೆ. ಪೂರ್ವಿಕರ ಕೆಲವು ಪ್ರತಿಗಾಮಿ ಚಿಂತನೆಗಳನ್ನು ತೊಡೆದುಹಾಕಿ, ಈ ನೆಲದಲ್ಲಿ ಹುಟ್ಟಿದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ನಮ್ಮ ಪರಂಪರೆಯಲ್ಲಿಯ ಬಂಡಾಯ, ಅಹಿಂಸಾತ್ಮಕ ಹೋರಾಟ, ಮತ್ತು ಸಹಬಾಳ್ವೆಯ ನಾಗರಿಕತೆಯನ್ನು ಹೊಸಕಾಲಕ್ಕೆ ಅನ್ವಯಿಸಿಕೊಂಡು ರೂಪಿಸಿಕೊಂಡರೆ ಪ್ರಪಂಚವೆಲ್ಲ ಸ್ಫೂರ್ತಿಗಾಗಿ ಇದರತ್ತ ನೋಡುವ ದೇಶವಾಗುತ್ತದೆ ನಮ್ಮದು. ಇಲ್ಲದಿದ್ದರೆ ಹಿಟ್ಳರನ ಜರ್ಮನಿಯ ಬಗ್ಗೆ ಇಂದಿನ ಜರ್ಮನ್ನರೂ ಹೇಗೆ ಅಸಹ್ಯಿಸಿಕೊಳ್ಳುತ್ತಾರೋ, ಅದನ್ನು disown ಮಾಡುತ್ತಾರೋ, ಭಾರತದ ಅಂತಹ ಅವಧಿಗೆ ಕಾರಣರೂ ಸಾಕ್ಷಿಗಳೂ ಆಗಿ ಈ ತಲೆಮಾರು ನಿಲ್ಲುತ್ತದೆ. ನಮ್ಮದೇ ಸಂತತಿ ನಮ್ಮ ಭ್ರಷ್ಟತೆ ಮತ್ತು ದುಷ್ಟತೆಯ ಕಾರಣಕ್ಕೆ ನಮ್ಮನ್ನು ನಿರಾಕರಿಸುವುದಕ್ಕಿಂತ ಹೆಚ್ಚಿನ ತಿರಸ್ಕಾರ ಇನ್ನೊಂದಿಲ್ಲ. ಭವಿಷ್ಯದ ಇತಿಹಾಸದ ಪುಟಗಳಲ್ಲಿ ಇಂದಿನ ವರ್ತಮಾನ ಹೇಗೆ ದಾಖಲಾಗಬೇಕು ಎನ್ನುವ ಎಚ್ಚರವನ್ನು ಇಂದಿನ ಭಾರತ ಪಡೆಯಬೇಕಿದೆ.

ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

ಸ್ನೇಹಿತರೇ,

’ವರ್ತಮಾನ.ಕಾಮ್’ ಮತ್ತು ಹಾಸನದ ’ಸಹಮತ ವೇದಿಕೆ’ಯವರು ಕಳೆದ ಶನಿವಾರ ಹಾಸನದಲ್ಲಿ ಏರ್ಪಡಿಸಿದ್ದ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರಸಂಕಿರಣಕ್ಕೆ ದೊರೆತ ಸ್ಪಂದನೆ ಸಮಾಧಾನಕರವಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಎಲ್.ಹನುಮಂತಯ್ಯ, ರಾಜಾ ನಾಯಕ್, ಮತ್ತು vartamaana-sahamata-invitationಸಿ.ಜಿ.ಶ್ರೀನಿವಾಸನ್‌ರವರು ದಲಿತರು ಉದ್ಯಮಿಗಳಾಗಬೇಕಾದ ಅಗತ್ಯ, ಮತ್ತು ಉದ್ಯಮವಲಯದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವರಿಗಿರುವ ಅವಕಾಶಗಳು, ಮತ್ತಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂತಹ ವಿಷಯಗಳ ಬಗ್ಗೆ ಪೂರಕವಾಗಿ ಸ್ಪಂದಿಸುವ ಹಾಸನದಲ್ಲಿರುವ ಪ್ರಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ದಲಿತರು ಎದುರಿಸಬಹುದಾದ ಸವಾಲುಗಳ ಬಗ್ಗೆ ಮಾತನಾಡಿದರು. ಹಾಸನದ ಪತ್ರಕರ್ತ ನಾಗರಾಜ್ ಹೆತ್ತೂರ್ ಕಾರ್ಯಕ್ರಮ ನಿರೂಪಿಸಿದರು. ಒಂದೂವರೆ ತಾಸಿನಲ್ಲಿ ಮುಗಿಯುತ್ತದೆ ಎಂದುಕೊಂಡ ಕಾರ್ಯಕ್ರಮ ಸಭಿಕರ ಪ್ರಶ್ನೆ, ಸಂವಾದ, ಆಸಕ್ತಿಯ ಕಾರಣವಾಗಿ ಎರಡೂವರೆ ತಾಸಿಗೂ ಹೆಚ್ಚಿಗೆ ನಡೆಯಿತು. ಲೇಖಕಿ ರೂಪ ಹಾಸನ, ಜೆ.ವಿ.ಕಾರ್‍ಲೊ, ಮುಂತಾದ ಹಲವು ಬರಹಗಾರರು ಮತ್ತು ಪ್ರಗತಿಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಟಿಪ್ಪಟಿಯನ್ನು ನಾನು ಈ ಮೊದಲೇ ಇಲ್ಲಿ ಬರೆಯಬೇಕಿತ್ತು. ಆದರೆ ನನ್ನ ಇತರೆ ಕೆಲವು ವೈಯಕ್ತಿಕ ಕೆಲಸಗಳ ಕಾರಣವಾಗಿ ಮಾಡಲಾಗಿರಲಿಲ್ಲ. ಕ್ಷಮೆ ಇರಲಿ. ಈ ಕಾರ್ಯಕ್ರಮದಲ್ಲಿ ಬಹಳ ಸವಿಸ್ತಾರವಾಗಿ ಮಾತನಾಡಿದ ಸಾಹಿತಿ, ರಾಜಕಾರಣಿ, ಮತ್ತು ಚಿಂತಕ ಎಲ್.ಹನುಮಂತಯ್ಯನವರ ಭಾಷಣದ ಧ್ವನಿಮುದ್ರಿಕೆಯನ್ನು ವರ್ತಮಾನ.ಕಾಮ್‌ನಲ್ಲಿ ಪಾಡ್‌ಕ್ಯಾಸ್ಟ್ ರೂಪದಲ್ಲಿ ಪ್ರಕಟಿಸುವ ಆಲೋಚನೆ ಇದೆ. ಒಂದಿಷ್ಟು ತಾಂತ್ರಿಕ ಕೆಲಸಗಳ ಕಾರಣದಿಂದಾಗಿ ಅದು ತಡವಾಗಿದೆ. ಇಷ್ಟರಲ್ಲೇ ಅದನ್ನು ಪ್ರಕಟಿಸುವ ಕೆಲಸ ಮಾಡಲಾಗುವುದು.

ಕಾರ್ಯಕ್ರಮ ಕುರಿತ ವರದಿಗಳು ಪ್ರಜಾವಾಣಿಯ ಸ್ಥಳೀಯ ಆವೃತ್ತಿಯಲ್ಲಿ, ಹಾಸನದ ಜನತಾ ಮಾಧ್ಯಮ ಪತ್ರಿಕೆಯಲ್ಲಿ, ಮತ್ತು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವನ್ನು ಇಲ್ಲಿ ಕೆಳಗೆ ಲಗತ್ತಿಸಲಾಗಿದೆ. ಹಾಗೆಯೇ ಹತ್ತಾರು ಚಿತ್ರಗಳನ್ನು ಹಾಸನದ ಐವಾನ್ ಡಿಸಿಲ್ವರು ತೆಗೆದಿದ್ದು ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ. ಇನ್ನೂ ಹೆಚ್ಚಿನ ಚಿತ್ರಗಳು ಡಿಸಿಲ್ವರ ಫೇಸ್‌ಬುಕ್ ಪೇಜ್‌ನಲ್ಲಿ ಇವೆ.

ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಸಹಮತ ವೇದಿಕೆಯ ಸ್ನೇಹಿತರಿಗೆ ನಾನು ಆಭಾರಿ. ಹಾಗೆಯೇ, ಮೊದಲಿನಿಂದಲೂ ಈ ವಿಷಯದ ಬಗ್ಗೆ ಸ್ಪಂದಿಸುತ್ತ, ಈ ಕಾರ್ಯಕ್ರಮದ ಹಲವಾರು ಜವಾಬ್ದಾರಿಗಳನ್ನು ಹೊತ್ತು, ಬೆಂಗಳೂರಿನಿಂದ ನಮ್ಮೊಡನೆ ಬಂದಿದ್ದ ನಮ್ಮ ಬಳಗದ ಶ್ರೀಪಾದ್ ಭಟ್ಟರಿಗೂ ಸಹ ಧನ್ಯವಾದಗಳು. ಇದೇ ವಿಷಯದ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಹಲವು ಕಡೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಶ್ರೀಪಾದ ಭಟ್ಟರು ಪ್ರಯತ್ನಿಸುತ್ತಿದ್ದಾರೆ. ತಮ್ಮ ಊರು ಅಥವ ನಗರಗಳಲ್ಲಿ ಇದನ್ನು ಆಯೋಜಿಸಲು ಆಸಕ್ತರಾಗಿರುವ ಸ್ನೇಹಿತರು ಅವರನ್ನು ಅಥವ ನನ್ನನ್ನು ಸಂಪರ್ಕಿಸಬಹುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪತ್ರಿಕಾ ವರದಿಗಳು:

ಪ್ರಜಾವಾಣಿ:

prajavani

 

 

ಜನತಾ ಮಾಧ್ಯಮ :

janatha-maadhyama-1

janatha-maadhyama-2

 

 

The Hindu:

the-hindu-report-hassan
ಕೆಲವು ಚಿತ್ರಗಳು:

dalit-entrepreneurship-1
dalit-entrepreneurship-2
dalit-entrepreneurship-3
dalit-entrepreneurship-4
dalit-entrepreneurship-5
dalit-entrepreneurship-6
dalit-entrepreneurship-7
dalit-entrepreneurship-10
dalit-entrepreneurship-8
dalit-entrepreneurship-9
dalit-entrepreneurship-11
dalit-entrepreneurship-12
dalit-entrepreneurship-13
dalit-entrepreneurship-14
dalit-entrepreneurship-15
dalit-entrepreneurship-16

ಶಕ್ತಿ ಕೇಂದ್ರಗಳ ಒಡೆಯುವಿಕೆಯ ಸಂಕ್ರಮಣ ಕಾಲ

– ಬಿ.ಶ್ರೀಪಾದ ಭಟ್

“ನಾವು ಬದುಕುತ್ತಿರುವ ವರ್ತಮಾನದ ಸ್ಥಿತಿಗತಿಗಳ ಬಗೆಗೆ ನಿಮಗೆ ಅರಿವಿಲ್ಲದಿದ್ದರೆ ನೀವು ನನ್ನ ಕತೆಗಳನ್ನು ಓದಬೇಕು. ಈ ನನ್ನ ಕತೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇಂದಿನ ವರ್ತಮಾನವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.” – ಸಾದತ್ ಹಸನ್ ಮಂಟೋ

ಇಂದು ಇಂಡಿಯಾ ದೇಶವು ತನಗರಿವಿಲ್ಲದಂತೆಯೇ ನಿಧಾನವಾಗಿ ಫ್ಯಾಸಿಸಂನ ಸ್ವರೂಪಕ್ಕೆ, ಅರಾಜಕತೆಯ ತೆಕ್ಕೆಗೆ ಜಾರಿಕೊಳ್ಳುತ್ತಿದೆ. ಬೌದ್ಧಿಕವಾಗಿ ದಾರಿದ್ರ್ಯಗೊಂಡಿರುವ ಬಹುಪಾಲು ಮಾಧ್ಯಮಗಳು ಈ ಫ್ಯಾಸಿಸಂನ ಆಳ ಅಗಲಗಳನ್ನು ಅರಿಯದೆಯೇ ಅಭಿವೃದ್ಧಿಯ ನೆಪದಲ್ಲಿ ಕೇವಲ ಸಂಕುಚಿತ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತ ಒಂದು ನಿರ್ದಿಷ್ಟ ಮೇಲ್ವರ್ಗಗಳ, ಮಧ್ಯಮವರ್ಗದ ಜೀವನ ಕ್ರಮವನ್ನೇ, ಅವರ ಏಕರೂಪಿ ಸಂಸ್ಕೃತಿಯನ್ನೇ ಇಂಡಿಯಾದ ಐಡೆಂಟಿಟಿಯೆಂದು ವಾದಿಸುತ್ತಿವೆ. ಆಮ್ ಆದ್ಮಿಯ ಕುರಿತಾಗಿ ಮಾತನಾಡುತ್ತಲೇ ಈ ಉದ್ದಿಮೆದಾರರು ಮತ್ತು ಮಾಧ್ಯಮಗಳು ಒಂದಾಗಿ ದೇಶದ ಬಡವನ ವಿರುದ್ಧ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಅಭಿವೃದ್ಧಿ ವಿರೋಧಿ ಎಂದು ವಾದಿಸುತ್ತಾರೆ.

ಈ ಕೇಂದ್ರೀಕೃತಗೊಂಡ ಕಾರ್ಪೋರೇಟ್ ಗುಂಪು ಯಾವುದೇ ಬಗೆಯ ಜನಪರ ಸಣ್ಣ ಯೋಜನೆಗಳನ್ನು ಉಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ತಮ್ಮ ಸ್ವಹಿತಾಸಕ್ತಿಗಾಗಿ ಸರ್ಕಾರಗಳೊಂದಿಗೆ ಬಹಿರಂಗವಾಗಿಯೇ ಡೀಲ್‌ಗಳನ್ನು ಮಾಡಿಕೊಂಡ ಈ ಕಾರ್ಪೋರೇಟ್ ವಲಯ ಆ ಡೀಲ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಬಹುಪಾಲು ಮಾಧ್ಯಮಗಳನ್ನು ಬಳಸಿಕೊಂಡು ಅವನ್ನು ತನ್ನ ಉಕ್ಕಿನ ಹಿಡಿತದಲ್ಲಿರಿಸಿಕೊಂಡಿತು.

ಕಳೆದ ಕೆಲವು ತಿಂಗಳಿಂದ ಈ ಮಾಧ್ಯಮಗಳ ವರ್ತನೆಗಳನ್ನು ಗಮನಿಸಿದರೆ ಇವರ ಅಮಾನವೀಯ ವರ್ತನೆಗಳಿಗೆ ಉತ್ತರ ಸಿಗುತ್ತದೆ. Food Security Billಅಹಾರ ಭದ್ರತೆ ಮಸೂದೆ ಬೇಡ, ಕೋಮುವಾದ ವಿರೋಧಿ ಮಸೂದೆ ಬೇಡ, ಭೂ ಸ್ವಾಧೀನ ಮಸೂದೆ ರೈತ ವಿರೋಧಿ, ಹೀಗೆ ಎಲ್ಲಾ ಬಗೆಯ ಜನಪರವಾದ ಪ್ರಗತಿಪರ ಯೋಜನೆಗಳ ವಿರುದ್ಧ ವಿಷ ಕಾರುತ್ತಿದ್ದಾರೆ. ಸಂಪೂರ್ಣವಾಗಿ ಕಾರ್ಪೋರೇಟ್‌ಗಳ ಹಿಡಿತದಲ್ಲಿರುವ ಈ ಮಾಧ್ಯಮಗಳ ವರ್ತನೆ ದೇಶದ ವಿಕೇಂದ್ರೀಕರಣದ ವ್ಯವಸ್ಥೆಗೆ, ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಂತ ಮಾರಕವಾದುದು. ಸಮುದಾಯವಾಗಿ, ಸಣ್ಣ ಸಣ್ಣ ವಿಕೇಂದ್ರಿಕೃತ ಯೋಜನೆಗಳ ಮೂಲಕ ದೇಶವನ್ನು ಕಟ್ಟುವುದನ್ನು ಇವರೆಲ್ಲ ಓಬೀರಾಯನ ಕಾಲದ, ಚಾಲ್ತಿಯನ್ನು ಕಳೆದುಕೊಂಡ ಸಮಾಜವಾದಿ ಚಿಂತನೆಗಳೆಂದು ನಿರಾಕರಿಸುತ್ತಿರುವ ರೀತಿ ಅಪಾಯಕಾರಿಯಾದದ್ದು.

ಕಡೆಗೆ ಕೇಂದ್ರ ಸರ್ಕಾರವು ತನ್ನ ಎಲ್ಲಾ ವೈಫಲ್ಯಗಳ ನಡುವೆಯೂ ಆಹಾರ ಭದ್ರತೆ ಮಸೂದೆಯನ್ನು ಜಾರಿಗೆ ತಂದು (ಅನೇಕ ಮಿತಿಗಳ ನಡುವೆಯೂ) ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿಯೊಬ್ಬ ಪ್ರಜೆಗೆ, ಪ್ರತಿ ತಿಂಗಳಿಗೆ ಕನಿಷ್ಟ 5 ಕೆ.ಜಿ.ಧಾನ್ಯ, ಅಕ್ಕಿ, ಬೇಳೆ, ಗರ್ಭಿಣಿ ಮತ್ತು ಬಾಣಂತಿ ಹೆಂಗಸರಿಗೆ ಪ್ರತಿ ತಿಂಗಳು ರೂ. 1000 ಸಹಾಯಧನ (6 ತಿಂಗಳವರೆಗೆ), ಪ್ರತಿಯೊಂದು ಮಗುವಿಗೂ ಮೂರು ವರ್ಷಗಳವೆರೆಗೆ ಪೌಷ್ಟಿಕ ಆಹಾರ, ಹೀಗೆ ಅನೇಕ ಜನಪರ ಆಶಯಗಳನ್ನು ಒಳಗೊಂಡ ಈ ಆಹಾರ ಭದ್ರತೆ ಮಸೂದೆಯ ಮೂಲಕ ದೇಶದ ಸುಮಾರು ಶೇಕಡ 67 ರಷ್ಟು ಜನಸಂಖ್ಯೆಗೆ ಖಾಯಂ ಆಗಿ ಸಬ್ಸಿಡಿ ರೂಪದಲ್ಲಿ ಧಾನ್ಯ ಕಾಳುಗಳು ಮತ್ತು ಅಕ್ಕಿ, ಬೇಳೆ ಸಿಗುವಂತೆ ಮತ್ತು ಅವರ ದಿನಿತ್ಯದ ಹೊಟ್ಟೆ ತುಂಬುವಂತೆ ಕಾನೂನನ್ನು ರೂಪಿಸಬಹುದೆಂದು ಒತ್ತಾಯಿಸುತ್ತಿದ್ದಾರೆ, ಅಲ್ಲದೆ ಇಂಡಿಯಾದಲ್ಲಿ ಆಹಾರ ಉತ್ಪಾದನೆಯ ಕೊರತೆ ಎಂದಿಗೂ ಕಾಡಿಲ್ಲ. ಇಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿಗೆ ಬೆಳೆಯುತಿದ್ದೇವೆ. food-security-wasted-grainsಆದರೆ ಅದನ್ನು ನಿರ್ವಹಿಸಲು, ವಿತರಿಸಲು ಸೋತಿದ್ದೇವೆ. ಬೆಳೆದ ಧಾನ್ಯ, ಅಕ್ಕಿ, ಬೇಳೆಗಳನ್ನು ತಿಂಗಳುಗಟ್ಟಲೆ ಸಂಗ್ರಸಿಡಲು ಸುರಕ್ಷಿತ ವ್ಯವಸ್ಥೆ ನಮ್ಮಲಿಲ್ಲ. ಹೀಗಾಗಿಯೇ ಟನ್‌ಗಟ್ಟಲೆ ಆಹಾರ ಧಾನ್ಯಗಳು ಕೊಳೆತು ಹೋಗುತ್ತವೆ. ಮತ್ತೊಂದು ಕಡೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟತೆ. ಇದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಮುಖ್ಯವಾಗಿ ಸಣ್ಣ ರೈತರು ತಾವು ಬೆಳೆದ ಧಾನ್ಯಕ್ಕೆ ಕನಿಷ್ಟ ಬೆಂಬಲ ಬೆಲೆಗೆ ಧಕ್ಕೆ ಬರದಂತೆ ಎಚ್ಚರವಹಿಸಬೇಕು.

ಈ ಹಿನ್ನೆಲೆಯಲ್ಲಿ ಈ ಆಹಾರ ಭದ್ರತೆ ಮಸೂದೆಯನ್ನು ಭವಿಷ್ಯದ ಹೂಡಿಕೆಯಾಗಿ (Future Investment) ನೋಡಬೇಕೆಂಬ ಕನಿಷ್ಟ ಅರಿವಿಲ್ಲದೆ ಬಹುಪಾಲು ಮಾಧ್ಯಮಗಳು ಮತ್ತು ಮಧ್ಯಮ, ಮೇಲ್ವರ್ಗದ ಜನತೆ ಇದನ್ನು ಒಂದು ಖರ್ಚನ್ನಾಗಿ ನೋಡುತ್ತಿದ್ದಾರೆ. ಇದನ್ನು ಜಾರಿಗೊಳಿಸಲು ದೇಶದ ಎಲ್ಲ ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ವಿರೋಧಿಸುತ್ತಿವೆ. ರೂಪಾಯಿ ಅಪಮೌಲ್ಯದ ಗುಮ್ಮನನ್ನು ಹುಟ್ಟು ಹಾಕಿವೆ. ಇನ್ನೇನು ಭಾರತ ವರ್ಲ್ಡಬ್ಯಾಂಕ್‌ನ ಮುಂದೆ ಮಂಡಿಯೂರಬೇಕಾಗುತ್ತದೆ ಎಂದು ಅಪಪ್ರಚಾರ ನಡೆಸುತ್ತಿವೆ. ಅನಗತ್ಯವಾಗಿ ಭಯದ, ಹತಾಶೆಯ ವಾತಾವರಣವನ್ನು ಫ್ಯಾಬ್ರಿಕೇಟ್ ಮಾಡುತ್ತಿವೆ.

ಈ ಆಹಾರ ಭದ್ರತೆ ಮಸೂದೆಯಿಂದ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ಖರ್ಚಾಗುತ್ತದೆ. ಅಂದರೆ ವಾರ್ಷಿಕ ಜಿಡಿಪಿಯ ಶೇಕಡ 1.2 ರಷ್ಟು ಮಾತ್ರ. ಆದರೆ ಭಾರತದ ಕಾರ್ಪೋರೇಟ್ ವಲಯಗಳು ಸುಮಾರು 12 ಸಾವಿರ ಕೋಟಿಯಷ್ಟು ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳುತ್ತವೆ (ಶ್ ! ಯಾರೂ ಕೇಳಬೇಡಿ), ಈ ಕಾರ್ಪೋರೇಟ್ ವಲಯಗಳಿಗೆ ದೊರಕುವ ಇಂಧನ ವಿನಾಯ್ತಿ ಸುಮಾರು 1 ಲಕ್ಷ ಕೋಟಿ (ಇದನ್ನು ಚರ್ಚಿಸುವ ಹಾಗಿಲ್ಲ, ದೊಡ್ಡವರಿಗೆ ಸಂಬಂಧಿಸಿದ್ದು!!), ಇನ್ನು ವಿಜಯ್ ಮಲ್ಯರಂತಹ ವಂಚಕರು ಸರ್ಕಾರಕ್ಕೆ ಹಾಕುವ ಪಂಗನಾಮ ನೂರಾರು ಕೋಟಿ!! ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಮತ್ತೇನಾದರೂ ವಿನಾಯ್ತಿಗಳಿವೆಯೇ ಎಂದು ಬೇರೆ ಬಕಪಕ್ಷಿಯಂತೆ ಕಾದು ಕುಳಿಯುತ್ತಾರೆ ಈ ವರ್ಗಗಳು. ಇವರ ಈ ಬಗೆಯ ತೆರಿಗೆ ವಿನಾಯ್ತಿಗಳು, ವಂಚನೆಗಳು ಇನ್ನೂ ನೂರಾರಿವೆ. ಇದಲ್ಲದೆ ಈ ಕಾರ್ಪೋರೇಟ್ ವರ್ಗಗಳು ಶಾಸಕಾಂಗ ಮತ್ತು ಕಾರ್ಯಾಂಗಗಳೊಂದಿಗೆ ಮಿಲಕಾಯಿಸಿ ಹುಟ್ಟುಹಾಕಿದ ನೂರಾರು ಹಣಕಾಸು ಅವ್ಯವಹಾರಗಳು, ಹಗರಣಗಳು ಆ ಮೂಲಕ ಸರ್ಕಾರಕ್ಕೆ ಸಾವಿರಾರು ಕೋಟಿಯ ವಂಚನೆಗಳನ್ನು ಮರೆಯಲು ಸಾಧ್ಯವೇ?

ಆದರೆ ಸ್ವತಃ ಈ ಕಾರ್ಪೋರೇಟ್ ವಲಯಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಗಳ ಮೊತ್ತದ ಅಸಲು ಸಾಲವನ್ನು ಮತ್ತು ಅವುಗಳ ಮೇಲಿನ ಬಡ್ಡಿಯನ್ನು ವರ್ಷಗಟ್ಟಲೆ ಪಾವತಿಸದೆ ಆ ಮೂಲಕ ದೇಶದ ಹಣಕಾಸಿನ ಸಮತೋಲನವನ್ನೇ ಹದಗೆಡಿಸಿ ತಮ್ಮ ದುಷ್ಟತನವನ್ನು ತೋರಿಸುತ್ತಿವೆ. ಸರ್ಕಾರಗಳು ಇವರನ್ನು ಪ್ರಶ್ನಿಸಲು ಧೈರ್ಯ ಮಾಡುತ್ತಿಲ್ಲ. ಆದರೆ ಬಡವರಿಗೆ ಸಬ್ಸಿಡಿ ಮಟ್ಟದಲ್ಲಿ ಆಹಾರ ಧಾನ್ಯಗಳು ಹಂಚಿದಾಕ್ಷಣ ಇನ್ನೇನು ಮುಳುಗಿಹೋಯಿತೆಂದು ಅಪಪ್ರಚಾರ ನಡೆಸುತ್ತವೆ ಈ ಭ್ರಷ್ಟ, ಅಮಾನವೀಯ ಗುಂಪು. ಇಂತಹ ಸ್ವಾರ್ಥ, ಹಿಂಸಾತ್ಮಕ ವ್ಯವಸ್ಥೆಯನ್ನು ಬೇರೆಲ್ಲಾದರೂ ಕಾಣಲು ಸಾಧ್ಯವೇ?

ತೊಂಬತ್ತರ ದಶಕದಲ್ಲಿ ಜಾಗತೀಕರಣಕ್ಕೆ ಸಂಪೂರ್ಣವಾಗಿ ಒಡ್ಡಿಕೊಂಡ ಇಂಡಿಯಾ ದೇಶ ಇಪ್ಪತ್ತೆರಡು ವರ್ಷಗಳ ನಂತರ ಇಂದು ತನ್ನ ಅತ್ಯುತ್ತಮ, ಜೀವಪರ ಮೂಲಧಾರೆಗಳು ಮತ್ತು ಸೂಕ್ಷ್ಮವಾದ ಜೀವಸಂಕುಲ ಮತ್ತು ಅವುಗಳ ಸರಪಣಿ, ನದಿಗಳು ಎಲ್ಲವೂ ನಾಶಗೊಂಡು ಇಂದು ಬಂಜರುಗೊಂಡು ನಿಂತಿವೆ. ಗ್ರಾಮೀಣ ಬದುಕು ಸಂಪೂರ್ಣವಾಗಿ ನಿರ್ಜೀವಗೊಂಡು ಶಕ್ತಿಹೀನವಾಗಿದ್ದರೆ, ನಗರಗಳು ಸುಖಲೋಲುಪ್ತತೆಯಲ್ಲಿ ವಿಕಾರಗೊಂಡಿವೆ. starved-peopleಏಕೆಂದರೆ ಅಧಿಕಾರಿ ವರ್ಗ ಮತ್ತು ಪ್ರಭುತ್ವ ಜಾಗತೀಕರಣವನ್ನು ಕೇವಲ ಒಂದು ಉಪಭೋಗ ಪ್ರಕ್ರಿಯೆಯಾಗಿ ಪರಿಗಿಣಿಸಿರುವುದು. 1991 ರಿಂದ ಇಲ್ಲಿಯವರೆಗೂ ಕಳೆದ ಇಪ್ಪತ್ತೆರೆಡು ವರ್ಷಗಳಲ್ಲಿ ಇಂಡಿಯಾದ ಎಲ್ಲಾ ಸರ್ಕಾರಗಳು ಮತ್ತು ಮಧ್ಯಮ ಮತ್ತು ಮೇಲ್ವರ್ಗಗಳು ಈ ಜಾಗತೀರಣವನ್ನು ಸುಖಲೋಲುಪ್ತ, ವಿಲಾಸೀಜೀವನಕ್ಕೆ ತೆರೆದ ಹೆಬ್ಬಾಗಿಲಾಗಿ ಪರಿವರ್ತಿಸಿ ಕೇವಲ ಶೇಕಡ 15 ರಿಂದ 20 ರಷ್ಟಿರುವ ಈ ವರ್ಗಗಳು ಇಂಡಿಯಾ ದೇಶವನ್ನೇ ಕೊಳ್ಳುಬಾಕ ಸಂಸ್ಕೃತಿಗೆ ದೂಡಿಬಿಟ್ಟವು. ಜಾಗತೀಕರಣವಿರಲಿ ಇಲ್ಲದಿರಲಿ, ಮುಕ್ತ ಆರ್ಥಿಕ ನೀತಿ ಇರಲಿ, ಇಲ್ಲದಿರಲಿ ಮೂಲಭೂತವಾಗಿ ಪ್ರಜಾಪ್ರಭುತ್ವದ ದೇಶವೊಂದರ ಆರ್ಥಿಕ ನೀತಿ ವ್ಯವಸಾಯ ಮತ್ತು ಎಲ್ಲ ಬಗೆಯ ಸಣ್ಣ ಕೈಗಾರಿಕ ವಲಯಗಳ ಉತ್ಪಾದನೆಯ ಮೇಲೆ ಮತ್ತು ಅವುಗಳ ವ್ಯಾಪಾರ ಸರಪಣಿಗಳ ಮೇಲೆ ಅವಲಂಬಿತವಾಗಿರಬೇಕೆಂಬ ಮೂಲನೀತಿಯನ್ನೇ ತಿರಸ್ಕರಿಸಿ ಶೇಕಡ 20 ರಷ್ಟು ಜನತೆಯ ಕೊಳ್ಳುವಿಕೆಯನ್ನೇ, ಅವರ ಈ ಕೊಳ್ಳುವಿಕೆಯ ಸಾಮರ್ಥ್ಯವನ್ನೇ ದೇಶದ ಆರ್ಥಿಕ ಪ್ರಗತಿಗೆ ಮಾನದಂಡವಾಗಿ ಬಳಸಿಕೊಂಡಿತು. ಅದನ್ನೇ ಜಿಡಿಪಿ ಎಂದು ಬಿಂಬಿಸಿತು.

ಇದರ ಫಲವಾಗಿ ದೇಶದ ಕೇವಲ ಶೇಕಡ 15 ರಿಂದ 20 ರಷ್ಟು ಜನಸಂಖ್ಯೆಯ ಬಳಿ ಮಾತ್ರ ಈ ಕೊಳ್ಳುವಿಕೆಯ ಸಾಮರ್ಥ್ಯ ಕೇಂದ್ರೀಕೃತಗೊಂಡಿತು. ಅದರ ಫಲವೇ ಈ ಕೊಳ್ಳುಬಾಕುತನದ ವಿಷವೃತ್ತಕ್ಕೆ ಸಿಲುಕಿಕೊಂಡ ಈ ವರ್ಗಗಳು ಬಕಾಸುರನಂತೆ ಬದುಕತೊಡಗಿದರೆ ಅವರ ಈ ಹೊಟ್ಟೆಬಾಕುತನವನ್ನು ತಣಿಸಲು ಕೇಂದ್ರ ಸರ್ಕಾರವು ಆಮದಿನ ಮೇಲಿನ ಹಿಡಿತವನ್ನು, ಕರಗಳನ್ನು ಸಡಿಲಿಸಿ ಮುಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಿತು. ಇದರ ಫಲವಾಗಿ ದೇಸಿ ಸರಕಿನ ಉತ್ಪಾದನೆಯ ಪ್ರಮಾಣ ಕ್ರಮೇಣವಾಗಿ ಕುಂಠಿತಗೊಂಡು ಆಮದು ವಸ್ತುಗಳು ನಮ್ಮ ಮನೆ ಬಾಗಿಲ ಬಳಿಗೆ ಬಂದು ಬೀಳತೊಡಗಿದವು. ಜಾಗತೀಕರಣದ ಆರಂಭದಲ್ಲಿ ದೇಸಿ ಸರಕುಗಳ ರಫ್ತನ್ನು ಅಭೂತಪೂರ್ವವಾಗಿದೆ ಎಂದು ಉತ್ಪ್ರೇಕ್ಷಿತಗೋಳಿಸಿ, ಸ್ವತಃ ಸರ್ಕಾರಗಳೇ ಇದನ್ನು ಪುಷ್ಟೀಕರಿಸಲು ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ತೋರಿಸಿದವು. ನೋಡಿ ಈ ದೇಸಿ ರಫ್ತು ನೀತಿ ಇದೇ ವೇಗದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇದು ಆಮದಿನ ಪ್ರಮಾಣವನ್ನು ಮೀರಿ ದೇಶಕ್ಕೆ ವಿದೇಶಿ ವಿನಿಮಯದ ಮೂಲಕ ಹಣಕಾಸು ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಬೂಸಿ ಬಿಟ್ಟಿತು. ಆದರೆ ಇದೇ ಸರ್ಕಾರ ಮತ್ತೊಂದು ಕಡೆ ದೇಸಿ ಉತ್ಪಾದನೆಗೆ ಪೂರಕವಾಗುವಂತಹ, expensive-wedding-banquetsದೇಸಿ ಸರಕುಗಳು ದೇಶದಲ್ಲಿಯೇ ಮಾರಾಟಗೊಳ್ಳುವಂತಹ ವಿಕೇಂದ್ರಿಕೃತ ಸಣ್ಣ ಕೈಗಾರಿಕ ಯೋಜನೆಗಳನ್ನು ನಿಷ್ಕ್ರಿಯೆಗೊಳಿಸಿ ಭಾರಿ ಕೈಗಾರಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಿ ಇಡೀ ಸಂಪತ್ತಿನ ವಹಿವಾಟು ಮರಳಿ ಕೆಲವೇ ಪ್ರತಿಷ್ಟಿತ, ಶ್ರೀಮಂತ ಮನೆತನಗಳಿಗೆ, ಕಂಪನಿಗಳಿಗೆ ಸೀಮಿತವಾಗುವಂತೆ ಆರ್ಥಿಕ ನೀತಿಯನ್ನು ಜಾರಿಗೊಳಿಸಿತು. ಇದರಿಂದಾಗಿ ಸಣ್ಣ ಕೈಗಾರಿಕೆಗಳು ತಮ್ಮದೇ ಬ್ರಾಂಡಿನ ಸರಕನ್ನು ಉತ್ಪಾದಿಸಿ ಅದನ್ನು ಮಾರುಕಟ್ಟೆ ಮಾಡುವ, ರಫ್ತು ಮಾಡುವ ಸಾಧ್ಯತೆಗಳೇ ನಾಶಗೊಂಡು ದೇಶದ ಸಣ್ಣ ಕೈಗಾರಿಕ ವಲಯ ಕೇವಲ ಜಾಬ್ ವರ್ಕಗಳ ಮಟ್ಟಕ್ಕೆ ಸೀಮಿತಗೊಂಡು ಕ್ರಮೇಣ ನಾಶಗೊಂಡಿತು.

ಉದಾಹರಣೆಗೆ ತೊಂಬತ್ತರ ದಶಕದಲ್ಲಿ ಮತ್ತು ಕಳೆದ ದಶಕದಲ್ಲಿ ಉಚ್ಷ್ರಾಯ ಸ್ಥಿತಿಯಲ್ಲಿದ್ದ ಗಾರ್ಮೆಂಟ್ ವಲಯವನ್ನು ಗಮನಿಸಿ. ಇಲ್ಲಿನ ಕಂಪನಿಗಳು ಆಧುನಿಕ ರೆಡಿಮೇಡ್ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದವು. ಆದರೆ ಅವನ್ನು ತಮ್ಮ ಬ್ರಾಂಡ್‌ನಲ್ಲಿ ಮಾರಲಿಕ್ಕಲ್ಲ. ಬದಲಾಗಿ ವಿದೇಶಿ ಕಂಪನಿಗಳಿಗೆ ಜಾಬ್ ವರ್ಕ ರೂಪದಲ್ಲಿ ಮಾರಲಿಕ್ಕೆ. ಇದನ್ನು ಕೈಗಾರಿಕೆಯ ಭಾಷೆಯಲ್ಲಿ ಹೊರಗುತ್ತಿಗೆ (Out Sourcing) ಎಂದು ಕರೆಯುತ್ತಾರೆ. ನಮ್ಮಲ್ಲಿಂದ ಅತ್ಯಂತ ಕನಿಷ್ಟ ಬೆಲೆಯಲ್ಲಿ ಈ ಬಟ್ಟೆಗಳನ್ನು ಕೊಂಡುಕೊಂಡ ಈ ವಿದೇಶಿ ಕಂಪನಿಗಳು ನಂತರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ, ತಮ್ಮ ಬ್ರಾಂಡ್‌ನ ಹೆಸರಿನಲ್ಲಿ ಮರಳಿ ನಮಗೇ ಮಾರಾಟ ಮಾಡುತ್ತವೆ. ಇದರ ಫವಾಗಿ ನಮ್ಮ ದೇಸಿ ಕಂಪನಿಗಳು ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ರಫ್ತು ಮಾಡಿದರೆ ಮರಳಿ ನಮ್ಮ ವ್ಯವಸ್ಥೆಯೇ ಈ ವಿದೇಶಿ ಕಂಪನಿಗಳಿಂದ ಅದರ ಹತ್ತರಷ್ಟು ಹೆಚ್ಚಿನ ಬೆಲೆಯಲ್ಲಿ ಆಮದು ಮಾಡಿಕೊಳ್ಳುತ್ತವೆ. ಇದು ನಮ್ಮ ವಿದೇಶಿ ವಿನಿಮಯದ ನೀತಿ!

ಇಲ್ಲಿ ಕೇವಲ ಹಣಕಾಸಿನ ಲಾಭನಷ್ಟದ ಅಂಶ ಮಾತ್ರವಿಲ್ಲ. ಮಹಿಳಾ ಕಾರ್ಮಿಕರ ಶೋಷಣೆಯಿದೆ. ಅವರ ಘನತೆಯನ್ನೇ ನಾಶಮಾಡಲಾಗಿದೆ. ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆ ಕೆಲಸದ ಭದ್ರತೆಯಿಲ್ಲ. ಅದೇ ರೀತಿಯಾಗಿ ಯಾವುದೇ ಕಾರುಗಳ, autopartsದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಕರು ಹೊರಗುತ್ತಿಗೆದಾರರೆಂದೇ (Sub contractors) ಪರಿಗಣಿಸಲ್ಪಡುತ್ತಾರೆ. ಅವರಿಗೆ ತಾವು ತಯಾರಿಸುವ ವಾಹನದ ಬಿಡಿಭಾಗಗಳ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಅದೆಲ್ಲ ಕೇವಲ ಜಾಬ್ ವರ್ಕ ಮಾತ್ರ!! ಒಮ್ಮೆ ಮಾರುಕಟ್ಟೆ ಕುಸಿದರೆ ಈ ಎಲ್ಲ ಕಂಪನಿಗಳು ಮುಚ್ಚಬೇಕಾಗುತ್ತವೆ. ಏಕೆಂದರೆ ಸಾಮರ್ಥ್ಯವಿದ್ದರೂ ತಮ್ಮದೇ ಬ್ರಾಂಡಿನ ಹೆಸರಿನಲ್ಲಿ ಬಿಡಿಭಾಗಗಳನ್ನು ತಯಾರಿಸಿ ಮಾರಲು ನಮ್ಮಲ್ಲಿನ ಕಂಪನಿಗಳಿಗೆ ಅಧಿಕಾರವಿರುವುದಿಲ್ಲ. ಏಕೆಂದರೆ ಅವುಗಳ ತಂತ್ರಜ್ಞಾನವನ್ನು, ಡಿಸೈನ್‌ನನ್ನು ಪೇಟೆಂಟ್ ಮಾಡಿಕೊಂಡಿರುತ್ತವೆ ವಿದೇಶಿ ಕಂಪನಿಗಳು.

ಇದು ಕೇವಲ ಉದಾಹರಣೆಯಷ್ಟೆ. ಇಂತಹ ಸಾವಿರಾರು ದುರಂತಗಳಿವೆ. ಇಂತಹ ಹಳಿ ತಪ್ಪಿದ ಆರ್ಥಿಕ ನೀತಿಗಳಿಂದ ಜಾಗತೀಕರಣದಿಂದ ಪುನಶ್ಚೇತನಗೊಳ್ಳಬಹುದಾದಂತಹ ಸಣ್ಣ ಕೈಗಾರಿಕೆಗಳ ಬೆನ್ನೆಲುಬನ್ನೇ ಮುರಿದು ಹಾಕಿದೆ ನಮ್ಮ ಸರ್ಕಾರ. ಕಡೆಗೆ ಈ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಭದ್ರತೆಯು ಅನಗತ್ಯವಾಗಿ ಸೆನ್ಸೆಕ್ಸ್‌ಗೆ ತಳುಕು ಹಾಕಿಕೊಂಡು ಅದರ ಏರಿಳಿತಗಳೇ ದೇಶದ ಆರ್ಥಿಕ ಭದ್ರತೆಯ ನಾಡಿಮಿಡಿತವೆಂಬಂತೆ ಇಡೀ ಹುಸಿ ವ್ಯವಸ್ಥೆಯೇ ರೂಪುಗೊಂಡಿದ್ದು ನಮ್ಮ ದೇಶದ ದುರಂತ ಅಧ್ಯಾಯವೇ ಸರಿ. ಇದರ ಫಲವಾಗಿ ಸ್ವಾವಲಂಬನೆಯ ಮೂಲಭೂತ ಸ್ವರೂಪವೇ ಕುರೂಪಗೊಂಡು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಡೀ ಸಣ್ಣ ಕೈಗಾರಿಕ ವಲಯವೇ ನಾಶಗೊಂಡಿದೆ. ಇನ್ನು ಇಲ್ಲಿನ ವ್ಯವಸಾಯ ವೃತ್ತಿಯನ್ನು ನಾಶಗೊಳಿಸಿರುವುದರ ಕುರಿತಾಗಿ ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇದರ ಫಲವೇ ಇಂದಿನ ಆರ್ಥಿಕ ಸ್ಥಿತಿ.

ಈ ಆರ್ಥಿಕ ನೀತಿಯ ಹಿಪೋಕ್ರೆಸಿಯನ್ನು ಗಮನಿಸಿ. ಒಂದು ಕಡೆ ಮಧ್ಯಮ ವರ್ಗಕ್ಕೆ ಸರಕುಗಳನ್ನು ಕೊಳ್ಳಲು, ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಸರ್ಕಾರವು ಅನೇಕ ಆಮಿಷಗಳನ್ನು ರೂಪಿಸುತ್ತದೆ. ಈ ಕೊಳ್ಳುಬಾಕುತನಕ್ಕೆ ಬಲಿಬಿದ್ದ ಈ ವರ್ಗಗಳು ನಿರಂತರವಾಗಿ ಕೊಳ್ಳುತ್ತಲೇ ಇರುತ್ತಾರೆ. ಅದಕ್ಕೆ ಕೊನೆಯೇ ಇಲ್ಲ. ಈ ಕೊಳ್ಳುವಿಕೆಯನ್ನು ಸರಿತೂಗಿಸಲು ಸರ್ಕಾರವು ಅಮದು ನೀತಿಯನ್ನು ಹುರಿದುಂಬಿಸುತ್ತದೆ. ಅನೇಕ ವೇಳೆ ಸ್ವತಃ ದುಪ್ಪಟ್ಟು ಬೆಲೆ ತೆತ್ತು ಆಮದು ಮಾಡಿಕೊಳ್ಳುತ್ತದೆ. ಉದಾಹರಣೆಗೆ ತೈಲದ ಆಮದು. ಅದರ ಖರ್ಚು ಮತ್ತು ಬಂಗಾರದ ಆಮದಿನ ಖರ್ಚು ಇಂದಿನ ರುಪಾಯಿಯ ಕುಸಿತಕ್ಕೆ ಮೂಲಭೂತ ಕಾರಣಗಳು.

ಮತ್ತೊಂದು ಕಡೆ ಮುಖ್ಯವಾಗಿ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿರುವುದಕ್ಕೆ ಆತಂಕಪಡಬೇಕಾಗದ ಅಗತ್ಯವೇ ಇಲ್ಲ. Rupee-vs-dollarಅದರ ಬದಲಾಗಿ ಇಂದಿನ ಡಾಲರ್‌ನ ಎದುರು ರೂಪಾಯಿಯ ಕುಸಿತದಿಂದಾಗಿ ವಿದೇಶಿ ಸರಕುಗಳ ಆಮದು ಕಡಿಮೆಯಾಗಿ ನಮ್ಮಲ್ಲಿನ ದೇಸಿ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಹಾಗಾಗುವಂತೆ ಅಂದರೆ ನಮ್ಮಲ್ಲಿನ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗುವಂತೆ ಆ ಮೂಲಕ ಉತ್ಪಾದನೆಗೊಂಡ ದೇಸಿ ಸರಕುಗಳು ಹೆಚ್ಚು ಮಾರಲ್ಪಡುವಂತೆ ಸರ್ಕಾರವು ಸ್ಪಷ್ಟ ಆರ್ಥಿಕ ನೀತಿಯನ್ನು ರೂಪಿಸಬೇಕು. ಆ ಮೂಲಕ ದೇಸಿ ಸರಕುಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚುವರಿ ವಸ್ತುಗಳನ್ನು ರಫ್ತು ಮಾಡಬಹುದು.ಈ ಮೂಲಕ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬಹುದು. ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಬಹುದು. ಆ ಮೂಲಕ ಸಮಾಜದ ಎಲ್ಲ ಸ್ಥರದ ವರ್ಗಗಳಿಗೂ ಉದ್ಯಮಪತಿಗಳಾಗುವ ಅವಕಾಶ ದೊರಕಿಸಿ ಇಡೀ ಉದ್ಯಮವನ್ನೇ ವಿಕೇಂದ್ರಿಕರಣಗೊಳಿಸಬಹುದು. ಇದೇ ಸಂದರ್ಭವನ್ನು ಬಳಸಿಕೊಂಡು ಮೊಟ್ಟಮೊದಲು ಮಧ್ಯಮವರ್ಗಗಳ ಕೊಳ್ಳುಬಾಕತನಕ್ಕೆ ಕಡಿವಾಣ ಹಾಕಬಹುದು. ಆ ಮೂಲಕ ಸಂಪನ್ಮೂಲದ ಹಂಚಿಕೆಯನ್ನು ಸಮಾನ ಮಟ್ಟದಲ್ಲಿ ಅಂದರೆ ಸರ್ವರಿಗೂ ಸಮಬಾಳು ನೀತಿಯ ಹತ್ತಿರಕ್ಕೆ ಕೊಂಡೊಯ್ಯಬಹುದು. ಇದು ಇಂದಿನ ಸಂದರ್ಭದಲ್ಲಿ ಯಾವುದೇ ಸರ್ಕಾರವು ಕೈಗೊಳ್ಳಬಹುದಾದ ತೀರಾ ಸರಳೀಕೃತ ಗ್ರಹಿಕೆಯ ಸಮಾಜವಾದದ ಆರ್ಥಿಕ ನೀತಿ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಖಂಡಿತ ಅಗತ್ಯ. ಆದರೆ ಇದಾಗುತ್ತಿಲ್ಲ. ಕೇವಲ ಹುಸಿ ಆರ್ಥಿಕ ಅರಾಜಕತೆಯನ್ನು ಹುಟ್ಟು ಹಾಕುತ್ತಿದ್ದಾರೆ.

ದೇಶದ ಶೇಕಡ 10 ರಷ್ಟಿರುವ ಉಳ್ಳವರ ಈ ವರ್ಗಗಳು ಈ ಸಾಮಾಜಿಕ ನ್ಯಾಯದ, ಸಮಾನತೆಯ ನೀತಿಗಳಗನ್ನು ಹತ್ತಿಕ್ಕಲು ತಮ್ಮಲ್ಲಿ ವಿಟೋ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಪರಸ್ಪರ ಅನುಮೋದನೆಯೊಂದಿಗೆ ಸಮಾಜವನ್ನು ಕಟ್ಟಬೇಕು ಮತ್ತು ಅದನ್ನು ಸಮರ್ಥಿಸಿಕೊಳ್ಳುವಂತಹ ನ್ಯಾಯವಂತಿಕೆಯೂ ಜೊತೆಗೂಡಬೇಕೆಂಬ ಸಮತಾವಾದದ ಆಶಯಗಳ ಹಿನ್ನೆಲೆಯಲ್ಲಿ ನಿಮ್ಮ “ವೆಲ್‌ಫೇರ್ ಸ್ಟೇಟ್” ಅರ್ಥಾತ್ “ಕಲ್ಯಾಣ ರಾಜ್ಯ”ದಲ್ಲಿ ನಮ್ಮ ವೆಲ್‌ಫೇರ್‌ನ ಪ್ರಮಾಣ ಎಷ್ಟಿದೆ ಎಂದು ದೇಶದ ಬಡವರು, ತಳ ಸಮುದಾಯಗಳು, ಆದಿವಾಸಿಗಳು ಪ್ರಶ್ನಿಸಿದರೆ ಈ ಉಳ್ಳವರು ಅದನ್ನು ನೀನು ದುಡಿದು ತಿನ್ನಯ್ಯಾ ಎಂದು ವಿವೇಚನೆಯಿಲ್ಲದೆ ಅಮಾನವೀಯತೆಯಿಂದ ಮಾತನಾಡುವಷ್ಟರ ಮಟ್ಟಿಗೆ ದೇಶದ ಕಾನ್ಸಿಯಸ್ ಅತ್ಮವಿನಾಶಕವಾಗಿದೆ. ಸಂಕುಚಿತಗೊಳ್ಳುತ್ತಿದೆ. SEZಆರ್ಥಿಕ ಪುನಶ್ಚೇತನದ ಸೋಗಿನಲ್ಲಿ ಯಾವುದೇ ಪೂರ್ವ ಯೋಜನೆ, ವಿವೇಚನೆ, ಸಾಮಾಜಿಕ ಬದ್ಧತೆಗಳಿಲ್ಲದೆ ನಮ್ಮ ಸರ್ಕಾರವು ವಿಶೇಷ ಆರ್ಥಿಕ ವಲಯವನ್ನು (SEZ) ರೂಪಿಸಿ ಬಡವರ ಜಮೀನನ್ನು ಕಿತ್ತುಕೊಂಡು ಉದ್ದಿಮೆದಾರರಿಗೆ ಅತ್ಯಂತ ಕನಿಷ್ಟ ಬೆಲೆಯಲ್ಲಿ ಮಾರಲು ಹೊರಟಾಗ ಯಾವ ಮಾನವಿಲ್ಲದೇ ಅದನ್ನು ಕಬಳಿಸಲು ಹೊರಟ ಈ ಕಾರ್ಪೋರೇಟ್ ವರ್ಗಗಳಿಗೆ ತಾವು ಬಡಜನರ ದುಡಿದು ತಿನ್ನುವ ಅವಕಾಶವನ್ನು ಸಹ ಕಿತ್ತುಕೊಳ್ಳುತಿದ್ದೇವೆ ಎಂಬಂತಹ ಕನಿಷ್ಟ ನ್ಯಾಯ ಪ್ರಜ್ಞೆಯಿಲ್ಲದೆ, ಉಲ್ಟಾ ಬಡವರಿಗೆ ದುಡಿದು ಬದುಕಲಿಕ್ಕೆ ಹೇಳುತ್ತಿದ್ದಾರೆ. ಆದರೆ ತಮ್ಮ ಈ ದುರಹಂಕಾರಕ್ಕೆ ನಂದಿಗ್ರಾಮ್, ರಾಯಗಡ್, ದಾದ್ರಿ, ಮುಂಡರಿಗಿಗಳಲ್ಲಿ ತಕ್ಕ ಶಾಸ್ತಿ ಅನುಭವಿಸಿದ್ದಾರೆ. ಅಲ್ಲೆಲ್ಲಾ ಬಡವರ ಜಮೀನು ಕಬಲಿಸಲು ಹೋಗಿ ಸರಿಯಾಗಿಯೇ ಹೊಡೆತ ತಿಂದಿದ್ದಾರೆ. ಈ ಶಕ್ತಿ ಕೇಂದ್ರಗಳನ್ನು ಒಡೆಯಲು ಇದು ಸಕಾಲ. ಇದು ನಿರಂತರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ.

ದಲಿತರು ಮತ್ತು ಉದ್ಯಮಶೀಲತೆ : ಈ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿ

– ಎನ್.ರವಿಕುಮಾರ್, ಶಿವಮೊಗ್ಗ

“ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕೀರ್ಣ-ಸಂವಾದ ನಿಜಕ್ಕೂ ಇಂದಿನ ಅಗತ್ಯವಾಗಿದೆ. ದಲಿತರಿಗೆ ಶಿಕ್ಷಣದ ಜೊತೆಗೆ ಜಾಗತಿಕ ಮತ್ತು ಆರ್ಥಿಕ ಪ್ರಪಂಚದ ಅರಿವನ್ನು ಮೂಡಿಸುವ ಅಗತ್ಯತೆ ಇದ್ದೇ ಇದೆ. ಜಾತಿಯ ತಾರತಮ್ಯ ಔದ್ಯೋಗಿಕ ಜಗತ್ತಿನಲ್ಲಿ ಯಥಾ ರೀತಿ ಭಿನ್ನ ಸ್ವರೂಪಗಳಲ್ಲಿ ದೊಡ್ಡ ಪಿಡುಗಾಗಿ ದಲಿತ ಉದ್ಯಮಿಗಳನ್ನು ಕಾಡುತ್ತಿವೆ. ಆರ್ಥಿಕ ಸಂಪನ್ಮೂಲ ನೆರವು ನೀಡುವ ಆರ್ಥಿಕ ಸಂಸ್ಥೆಗಳು (ಬ್ಯಾಂಕ್‌ಗಳು) ಯಾರ ಕೈಯಲ್ಲಿವೆ ಎಂಬುದನ್ನು ನಾವು ಯೋಚಿಸಬೇಕಾಗಿದೆ.

ಆರ್ಥಿಕ ಶಕ್ತಿಯ ಕ್ರೋಢೀಕರಣ ಕೂಡ ಜಾತಿಯ ನೆಲೆಯಲ್ಲಿಯೆ ಆರಂಭವಾದದ್ದು ಎಂಬುದನ್ನು ಚರಿತ್ರೆ ಸ್ಪಷ್ಟ ಪಡಿಸುತ್ತದೆ. 1987 ರ ಅವಧಿಯಲ್ಲಿ ಅಂದಿನ ಕೇಂದ್ರದ ಹಣಕಾಸು ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ದಲಿತರು, ಹಿಂದುಳಿದ ವರ್ಗಗಳಿಗೆ ಮೈಕ್ರೊ ಸಾಲ (ಪೂಜಾರಿ ಸಾಲ) ಯೋಜನೆ ರೂಪಿಸುವ ಮೂಲಕ vartamaana-sahamata-invitationಈ ಸಮುದಾಯಗಳನ್ನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗಳ ಮೆಟ್ಟಿಲು ಹತ್ತಿಸಿದರು. ಇಂದು ಪರಿಸ್ಥಿತಿ ಬದಲಾಗಿದೆ ನಿಜ, ಆದರೆ ಭೂಮಿ, ಬಂಡವಾಳದ ಸಮಸ್ಯೆಗಳು ದಲಿತರು, ಹಿಂದುಳಿದ ವರ್ಗಗಳಲ್ಲಿನ ಉದ್ಯಮಶೀಲತೆಯನ್ನು ಹತ್ತಿಕ್ಕುತ್ತಿವೆ. ಇನ್ನೂ ಮಾರುಕಟ್ಟೆಯನ್ನು ಆವರಿಸಿಕೊಂಡಿರವ ಸಂತತಿಗಳು ಒಬ್ಬ ಯಶಸ್ವಿ ಉದ್ಯಮಶೀಲನಾಗುವಲ್ಲಿ ದಲಿತನನ್ನು ಹೈರಾಣಗೊಳಿಸುವ ಸಾಧ್ಯತೆಗಳು ಜಾತಿ ಜಿದ್ದಿನ ಮತ್ತೊಂದು ಸ್ವರೂಪವೆ ಆಗಿರುತ್ತದೆ.

ದಲಿತರು ಕಾರ್ಮಿಕರಾಗಿರುವುದನ್ನೆ ಬಯಸುವ ಔದ್ಯೋಗಿಕ ಕ್ಷೇತ್ರದ ಬಹುಸಂಖ್ಯಾತ ಕುಳಗಳು ಮಾಲೀಕನಾಗುವ ಹಾದಿಗೆ ಅಡ್ಡಗೋಡೆಗಳನ್ನು ಕಟ್ಟುತ್ತಲೆ ಇರುತ್ತವೆ. ಇಂದು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ವಿರೋಧಿಸುವ ಶಕ್ತಿಗಳೆ ದಲಿತರಲ್ಲಿನ ಉದ್ಯಮಶೀಲತೆಯನ್ನೂ ಸಹಿಸುವುದಿಲ್ಲ. ಸರ್ಕಾರಗಳು ದಲಿತರು, ಹಿಂದುಳಿದವರ್ಗಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ದಕ್ಕಿಸಿಕೊಳ್ಳುವುದು ದುಸ್ತಃರವಾಗಿದೆ. ಇಂದು ಮಾಧಮ ಕ್ಷೇತ್ರ ಕೂಡ ಉದ್ಯಮವಾಗಿ ಬೆಳೆಯತೊಡಗಿದ್ದು ಸಾಮಾಜಿಕ ಹೊಣೆಗಾರಿಕೆಗಿಂತ ವ್ಯಾಪಾರಿ ಮನೋಭಾವ ಹೆಚ್ಚು ಆಕ್ರಮಿಸಿಕೊಳ್ಳತೊಡಗಿರುವುದು ಅಪಾಯಕಾರಿ ಎನಿಸುತ್ತದೆ. ಈ ಕ್ಷೇತ್ರದಲ್ಲೂ ದಲಿತರು ಉದ್ಯಮಿಯಾಗಿ ಪೈಪೋಟಿ ನಡೆಸುವುದು ಕಷ್ಟಕರ.

ಇಂದು ದಲಿತರಲ್ಲೂ ಔದ್ಯೋಗಿಕ ಜ್ಞಾನದ ಕೊರತೆ ಇಲ್ಲ, ಬೇಕಿರುವುದು ಬಂಡವಾಳ, ಭೂಮಿ ಮತ್ತು ಜಾತಿ ಮುಕ್ತ ಮಾರುಕಟ್ಟೆ ಮಾತ್ರ. ಈ ನಿಟ್ಟಿನಲ್ಲಿ ಸರ್ಕಾರಗಳು ದಲಿತರಲ್ಲಿನ ಉದ್ಯಮಶೀಲತೆಯನ್ನು ಜಾಗತಿಕ ಮಟ್ಟದಲ್ಲಿ ಕಾಯುವ ಕೆಲಸವನ್ನು ಕರ್ತವ್ಯದಂತೆ ಮಾಡಬೇಕಿದೆ. ಈ ಸಂಗತಿಗಳ ಬಗ್ಗೆ ಯೂ ಸೆ. 7 ರಂದು ಹಾಸನದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮಂಥನ ನಡೆಯಲಿದೆ ಎಂಬ ಭರವಸೆ ನನಗಿದೆ.