Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್


ಸರಕಾರಿ ದುಡ್ಡಿನ ಸಮುದಾಯ ಭವನಕ್ಕೂ ಜಾತಿ ಹೆಸರು

                                                                                                                           – ಜೀವಿ

ಮುಂಜಾನೆ ಎಳೆ ಬಿಸಿಲು ಏರುತ್ತಿತ್ತು. ಬಿಸಿಲಿಗೆ ಎದುರಾಗಿ ಬೂದಿ ಜವರಪ್ಪ ಕುಳಿತ್ತಿದ್ದ. ಚಡ್ಡಿ ಸಂಟದ ಮೇಲಿರುವ ಬದಲಿಗೆ ಕೈಯಲ್ಲಿತ್ತು. ಚಡ್ಡಿ ಬದಲಿಗೆ ಹರುಕು ಪಂಚೆಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದ. ಕಣ್ಣು ಅಷ್ಟಾಗಿ ಕಾಣಿಸದಿದ್ದರೂ ಚಡ್ಡಿಯಲ್ಲಿ ಏನೋ ಹುಡುಕಾಡುತ್ತಿದ್ದ. ಸತ್ತ ದನಕರುಗಳ ಚರ್ಮ ಸುಲಿದು ಮಾರಾಟ ಮಾಡುವುದು ಬೂದಿ ಜವರಪ್ಪನ ಕೆಲಸ. ಸತ್ತ ದನದಲ್ಲಿ ತನಗೆ ಬೇಕಾದ ಮಾಂಸ ತಂದು ಒಣಗಿಸಿ ಇಟ್ಟುಕೊಳ್ಳುತ್ತಿದ್ದ. ಅವನ ಮನೆಗೆ ಎದುರಿನದ್ದೆ ನನ್ನ ಮನೆಯಾಗಿದ್ದರಿಂದ ಹೆಚ್ಚು ಸಲಿಗೆ ಇತ್ತು. ಆಗೊಮ್ಮೆ ಈಗೊಮ್ಮೆ ಅವನು ಹೇಳಿದ ಸಣ್ಣಪುಟ್ಟ ಕೆಲಸ ಮಾಡಿ ನಾನೂ ಸುಟ್ಟ ಕೊರ ಬಾಡಲ್ಲಿ ಪಾಲು ಪಡೆಯುತ್ತಿದೆ. ಚರ್ಮ ಸುಲಿಯೋದು ಬಾರಿ ಸುಲಭ, ಕಾಲೇಜಿಗೆ ರಜೆ ಇದ್ದಾಗ ನನ್ನ ಜೊತೆ ಬಾsevalal_samudhaya_bhavan ಕಸುಬು ಕಲಿಸಿಕೊಡ್ತಿನಿ ಅನ್ನುತ್ತಿದ್ದ.

ಚರ್ಮ ಸುಲಿದು ಮಾರಾಟ ಮಾಡುತ್ತಿದ್ದರಿಂದ ಚಡ್ಡಿ ಜೇಬಿನಲ್ಲಿ ಪುಡಿಗಾಸು ಇದ್ದೇ ಇರುತ್ತಿತ್ತು. ತೊಳೆಯದೆ ಮಾಸಿ ಹೋಗಿದ್ದ ಚಡ್ಡಿ ಕೈಯಲ್ಲಿ ಹಿಡಿದಿದ್ದ ಬೂದಿ ಜನವರಪ್ಪ ಏನು ಮಾಡುತ್ತಿದ್ದಾನೆ ಎಂಬುದು ದೂರಕ್ಕೆ ಕಾಣಿಸಲಿಲ್ಲ. ಕುತೂಹಲ ತಡೆಯಲಾರದೆ ಹತ್ತಿರಕ್ಕೆ ಹೋದೆ. ‘ಬಡ್ಡಿ ಮಗ್ನವು ಜಾಸ್ತಿ ಆಗಿ, ರಾತ್ರಿಯೆಲ್ಲ ನಿದ್ದೆ ಇಲ್ಲ ಕಣೊ ಹುಡುಗ’ ಎಂದ. ಚಡ್ಡಿಯ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ಕೂರೆಗಳನ್ನು ಹುಡುಕಿ ಕೊಲ್ಲುತ್ತಿರುವುದು ಅರ್ಥವಾಯಿತು. ಕಣ್ಣಿನ ದೃಷ್ಟಿ ಕಡಿಮೆ ಇದ್ದ ಕಾರಣಕ್ಕೆ ಕೂರೆ ಹುಡುಕಿ ಕೊಡು ಎಂದು ನನಗೆ ಹೇಳಿದ. ತೊಳೆದು ತಿಂಗಳಾಗಿರುವ ಚಡ್ಡಿ ಮುಟ್ಟಲು ನಾನು ಒಪ್ಪಲಿಲ್ಲ. ಕೊರ ಬಾಡ ಸುಟ್ಟು ಕೊಡ್ತಿನಿ ಎಂಬ ಆಸೆ ಹುಟ್ಟಿಸಿ ಕೂರೆ ಹುಡುಕುವ ಕೆಲಸ ನನಗೊಪ್ಪಿಸಿದ. ಹೈಸ್ಕೂಲ್ ಹಾಸ್ಟೆಲ್ನಲ್ಲಿದ್ದಾಗ ನನ್ನ ಚಡ್ಡಿಯಲ್ಲೂ ಕೂರೆಗಳು ಜಾಗ ಪಡೆದಿದ್ದ ಕಾರಣ ಕೂರೆಗಳನ್ನು ಕುಕ್ಕುವ ಅಭ್ಯಾಸ ಮೊದಲೇ ರೂಢಿಯಾಗಿತ್ತು. ಕೂರೆ ಹುಡುಕಿ ಕುಕ್ಕುವ ಕೆಲಸ ಮುಂದುವರಿದಿತ್ತು. ಓಡಿ ಬಂದ ಕಾಳಕ್ಕ ದಾಸಪ್ಪನ ಸಾವಿನ ಸುದ್ದಿ ತಿಳಿಸಿದಳು. ಒಂದೆರಡು ತಿಂಗಳಿಂದ ಜೀವ ಬಿಗಿ ಹಿಡಿದು ಮೂಲೆ ಸೇರಿದ್ದ ದಾಸಪ್ಪ ಕೊನೆಯುಸಿರೆಳೆದಿದ್ದ್ದ. ನನ್ನ ಕೈಲಿದ್ದ ಚಡ್ಡಿ ಕಿತ್ಕೊಂಡು ಅಲ್ಲೆ ಹಾಕಿಕೊಂಡ ಬೂದಿ ಜವರಪ್ಪ ಸಾವಿನ ಮನೆಯತ್ತ ತೆರಳಿದ.

ನೆಂಟರಿಷ್ಟರಿಗೆ ಸುದ್ದಿ ಮುಟ್ಟಿಸಿ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿತು. ದಾಸಪ್ಪನಿಗೆ ಇದ್ದ ಮೂರು ಮಕ್ಕಳು ಸೇರಿ ತಿಥಿ ಕಾರ್ಯವನ್ನು ದೊಡ್ಡದಾಗಿ ಮಾಡಲು ತೀಮರ್ಾನಿಸಿದರು. 2001-02ನೇ ಸಾಲಿನಲ್ಲಿ ಸಂಸದರ ನಿಧಿಯ ನೆರವಿನಿಂದ ಸಮುದಾಯ ಭವನವೊಂದು ಊರಿನಲ್ಲಿ ತಲೆ ಎತ್ತಿತು. 10 ಲಕ್ಷ ವೆಚ್ಚದಲ್ಲಿ ಕಟ್ಟಿದ ದೊಡ್ಡ ಸಮುದಾಯ ಭವನ ಅದಾಗಿತ್ತು. ಆ ತನಕ ಬೀದಿ ಅಥವಾ ಮನೆಗಳಲ್ಲಿ ನಡೆಯುತ್ತಿದ್ದ ಮದುವೆ, ತಿಥಿ ಹಾಗೂ ಇನ್ನಿತರ ಸಮಾರಂಭಗಳ ಊಟ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡವು. ಎಲ್ಲರೂ ಸೇರಿ ದಾಸಪ್ಪನ ತಿಥಿ ಕಾರ್ಯವನ್ನು ಸಮುದಾಯ ಭವನದಲ್ಲೆ ಮಾಡಲು ನಿರ್ಧರಿಸಿದರು.

11ನೇ ದಿನಕ್ಕೆ ತಿಥಿ ಕಾರ್ಯದ ಊಟ ಸಮುದಾಯ ಭವನದಲ್ಲಿ ನಡೆಯಿತು. ಊರಿನ ದಲಿತರು ಮತ್ತು ನೆಂಟರಿಷ್ಟರು ಊಟ ಮಾಡಿದರು. ಊರ ಮುಂದೆ ಮೇಲ್ವರ್ಗದ ಮನೆಗಳ ನಡುವೆ ಸಮುದಾಯ ಭವನ ಇರುವ ಕಾರಣ ಜಾತಿಯ ಅರಿವಿಲ್ಲದ ಮೇಲ್ಜಾತಿ ಹತ್ತಾರು ಮಕ್ಕಳು ಊಟ ಮಾಡಿ ಮನೆಗೆ ಹೋದರು. ಊಟ ಮಾಡಿ ಹೋದ ಮಕ್ಕಳನ್ನು ಕಂಡು ಹೆತ್ತವರ ಕೋಪ ನೆತ್ತಿಗೇರಿತು. ಹೊಲೇರ ಮನೆ ಊಟ ಮಾಡಿದ ಮಕ್ಕಲ ಕೈ ಬಾಸುಂಡೆ ಬರುವಂತೆ ಒದೆ ಬಿದ್ದವು. ಮೈಲಿಗೆಯಾಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ದೇವರಿಗೆ ಕೈಮುಗಿಸಿದರು. ಏನೋ ಮಕ್ಕಳು ತಿಳಿಯದೆ ತಪ್ಪು ಮಾಡಿದ್ದಾರೆ. ಕ್ಷಮಿಸಿ ಬಿಡು ದೇವರೆ ಎಂದು ಬೇಡಿಕೊಂಡರು.

ದಲಿತರ ಮನೆ ತಿಥಿ ಊಟವನ್ನು ಮೇಲ್ವರ್ಗದ ಮಕ್ಕಳು ಮಾಡಿರುವ ಸುದ್ದಿ ಊರ ತುಂಬ ಹರಡಿತು. ಪಂಚಾಯ್ತಿ ಸೇರಿ ಮೇಲ್ವರ್ಗ ಮಕ್ಕಳಿಗೆ ಊಟ ಹಾಕಿದ ದಾಸಪ್ಪನ ಮಗ ಸ್ವಾಮಿಯನ್ನೂ ಕರೆಸಿದರು. ಸಮುದಾಯಭವನದಲ್ಲಿ ತಿಥಿ ಕಾರ್ಯ ಮಾಡಲು ಅವಕಾಶ ಕೊಟ್ಟ ತಪ್ಪಿಗೆ ನಿಮ್ಮ ಮನೆ ಊಟನಾ ನಮ್ಮ ಮಕ್ಕಳಿಗೆ ತಿನ್ನಿಸಿದ್ದೀಯಾ? ಎಂದು ರೇಗಿದರು. ಮಕ್ಕಳಿಗೆ ಅರಿವಿಲ್ಲ, ಮಾಂಸದೂಟದ ಆಸೆಗೆ ಬಂದು ಕುಳಿತರೆ ಊಟ ಹಾಕಿ ಜಾತಿ ಕೆಡ್ಸಿದ್ದೀರಲ್ಲ ನೀವು ಹೊಟ್ಟೆಗೇ ಏನು ತಿಂತೀರಿ? ಎಂದು ಪ್ರಶ್ನೆ ಮಾಡಿದರು. ನಾನೇನ್ ಮಾಡ್ಲಿ ಗೌಡ್ರೇ, ಊಟಕ್ಕೆ ಕುಳಿತ ಮಕ್ಕಳನ್ನು ಏಳಿಸಿ ಕಳಿಸೋದು ಹೇಗೆ ಅಂತ ಊಟ ಹಾಕಿದ್ವಿ ಎಂದು ಸ್ವಾಮಿ ಉತ್ತರ ನೀಡಿದ. ನೀವೇನ್ ಮಾಡ್ತಿರಾ? ಊಟ ಹಾಕಿ ಜಾತಿ ಕೆಡಿಸೊ ಕೆಲಸ ಮಾಡಿ ಆಯ್ತಲ್ಲ. ಅದ್ಕೆ ನಿಮ್ಮನ್ನು ಎಲ್ಲಿ ಇಡಬೇಕೋ, ಅಲ್ಲೆ ಇಡಬೇಕಿತ್ತು. ಏನೋ ಹೋಗ್ಲಿ ಅಂತ ಊರ ಮುಂದಿರುವ ಸಮುದಾಯಭವನದಲ್ಲಿ ಅವಕಾಶ ಕೊಟ್ಟರೆ ನಮ್ಮ ಮಕ್ಕಳಿಗೆ ಊಟ ಹಾಕಿ ಊರು-ಹೊಲಗೇರಿ ಒಂದು ಮಾಡಿದ್ದೀರಿ ಎಂದು ಮೇಲ್ವರ್ಗವರು ಸ್ವಾಮಿ ಮೇಲೆ ಎಗರಿದರು. ಹಿಂದೊಮ್ಮೆ ಯುವಕರಿಗೆ ಊಟ ಹಾಕಿದ ತಪ್ಪಿಗೆ ದಂಡ ಕಟ್ಟಿದ್ದನ್ನು ಮರೆತಿದ್ದೀರಿ. ಈಗ ಕಾನೂನು ನಿಮ್ಮ ಪರ ಇದೆ ಅಂತ ಹೀಗೆಲ್ಲಾ ಮಾಡ್ತಾ ಇದ್ದೀರಿ. ಇದು ನಡೆಯೊಲ್ಲ, ಇದೇ ಕೊನೆ ಇನ್ಮುಂದೆ ದಲಿತರ ಕಾರ್ಯಕ್ರಮಗಳಿಗೆ ಸಮುದಾಯಭವನ ನೀಡ ಬಾರದು ಎಂಬ ನಿರ್ಣಯ ಕೈಗೊಂಡರು.

ಸರಕಾರದ ಸಮುದಾಯಭವನದಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರೇ ಯಾವ ನ್ಯಾಯ ಗೌಡ್ರೆ? ನೀವು ತಿನ್ನುವ ಕುರಿ, ಕೋಳಿ, ಹಂದಿ ಮಾಂಸದ ಊಟನೇ ನಾವು ಮಾಡಿದ್ದೀವಿ. ಆಕಸ್ಮಿಕವಾಗಿ ಮಕ್ಕಳು ಬಂದು ಊಟ ಮಾಡಿದ್ದಾರೆ. ನಾವೇನು ನಿಮ್ಮ ಮಕ್ಕಳಿಗೆ ದನದ ಮಾಂಸದ ತಿನ್ನಿದ್ದೀವಾ? ಎಂದು ಸ್ವಾಮಿ ಪ್ರಶ್ನೆ ಮಾಡಿದ.

ಬಿಟ್ರೆ ಅದನ್ನು ತಿನ್ನಸ್ತೀರಿ, ಅದಕ್ಕೆ ಇನ್ಮುಂದೆ ನೀಮ್ಮ ಜಾತಿಯವರ ಕಾರ್ಯಕ್ರಮಗಳನ್ನು ನಿಮ್ಮ ಕೇರಿಯಲ್ಲೇ ಮಾಡಿಕೊಳ್ಳಿ, ಊರು ಮುಂದೆ ಬಂದು ಜಾತಿ ಹಾಳು ಮಾಡಬೇಡಿ ಎಂದು ಮೇಲ್ವರ್ಗದವರು ಆಜ್ಞೆ ಮಾಡಿದರು. ಸಮುದಾಯಭವನ ಸಕರ್ಾರದ ಆಸ್ತಿ. ಅಲ್ಲಿ ಕೆಳಜಾತಿಯವರ ಕಾರ್ಯಕ್ರಮಗಳಿಗೆ ಅವಕಾಶ ಕೊಡದಿದ್ದರೆ ಕಾನೂನಿನ ಮೊರೆ ಹೋಗ್ತೀವಿ ಎಂದು ಸ್ವಾಮಿ ಹೇಳಿದ. ಎಲ್ಲಾದ್ರು ಹೋಗಿ ಹಾಳಾಗಿ, ಸಮುದಾಯಭವನ ಮಾತ್ರ ಕೊಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಇನ್ನು ಇವರ ಬಳಿ ಕೇಳಿ ಪ್ರಯೋಜನ ಇಲ್ಲ ಎಂದುಕೊಂಡು ತಮ್ಮ ಕೇರಿಗೆ ಬಂದ ದಲಿತರು, ಸಮುದಾಯಭವನ ಕಟ್ಟಿಸಿರುವುದು ಸಂಸದರ ನಿಧಿಯ ಹಣದಲ್ಲಿ. ಅವರ ಬಳಿಯೇ ಹೋಗೋಣ ಎಂದು ಮಾತನಾಡಿಕೊಂಡರು. ಅವರನ್ನು ಹಿಡಿಯೋದು ಕಷ್ಟ, ಅವರ ಮಗ ಎಂಎಲ್ಎ ಅಲ್ವಾ? ಅವರದೇ ಎಲ್ಲಾ ಕಾರುಬಾರು. ಅವರ ಹತ್ತಿರವೇ ಹೋಗಿ ನಿವೇದನೆ ಮಾಡಿಕೊಳ್ಳೋಣ. ಎಂಎಲ್ಎ ಹೇಳಿದ್ರೆ ಬಾಗಿಲು ತೆಗೆಯಲೇ ಬೇಕು. ನಾಳೇಯೇ ಹೋಗಿ ಎಂಎಲ್ಎ ಕಾಣೋಣ ಎಂದು ತೀಮರ್ಾನಿಸಿದರು.

ಮರುದಿನ ಬೆಳಗ್ಗೆಯೇ ಬಸ್ ಹತ್ತಿದ್ದ ದಲಿತರು, ಎಂಎಲ್ಎ ಮನೆ ಮುಂದೆ ಹಾಜರಾದರು. ಬೆಳಗ್ಗೆಯೇ ದಲಿತರ ದರ್ಶನ ಮಾಡಿದರೆ ಅಪಶಕುನ ಎಂದು ನಂಬಿರುವ ಶಾಸಕನ ಮುಂದೆ ನಿಂತರು. ಊರು ಕೇರಿ ಪರಿಚಯ ಮಾಡಿಕೊಂಡ ನಂತರ ತಲೆ ಮೇಲೆತ್ತಿ ಅವರ ಮುಖ ನೋಡದ ಶಾಸಕ, ಅದೇ ಸಮುದಾಯಭವನದಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಹಠ ನಿಮಗೇಕೆ? ಹೊಲೇರ ಮನೆ ಕಾರ್ಯದಲ್ಲಿ ಮೇಲ್ಜಾತಿ ಮಕ್ಕಳಿಗೆ ಊಟಕ್ಕೆ ಹಾಕೋದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದ. ‘ನಿಮಗೇ ಪ್ರತ್ಯೇಕವಾಗಿ ಸಣ್ಣದೊಂದು ಸಮುದಾಯಭವನ ಕಟ್ಟಿಸಿಕೊಡ್ತಿನಿ, ಈಗಿರುವ ಭವನಕ್ಕೆ ನೀವು ಕಾಲಿಡುವುದು ಬೇಡ’ ಎಂದು ಆದೇಶ ಮಾಡಿ ನೀವಿನ್ನು ಹೊರಡಿ ಎಂದ. ನ್ಯಾಯ ಅರಸಿ ಬಂದ ದಲಿತರ ಮುಖ ಸಪ್ಪಗಾಯಿತು. ಎಂಎಲ್ಎ ಕಂಡು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಬಂದ ವಿಷಯ ಊರಿನಲ್ಲಿ ಹರಡಿತು. ಎಂಎಲ್ಎ ನಮ್ಮ ಜಾತಿಯವನೇ, ನಮ್ಮನ್ನು ಬಿಟ್ಟುಕೊಡುತ್ತಾನೆಯೇ? ಎಂದು ಮೇಲ್ಜಾತಿಯವರು ಬೀಗಿದರು.

ಮತ್ತೆ ದಲಿತರ ಸಭೆ ಸೇರಿಸಿದ ಸ್ವಾಮಿ, ಎಂಎಲ್ಎ ಬೇಡ ಎಂದರೂ ಬಿಡೋದು ಬೇಡ. ಕಾನೂನಿನ ಮೊರೆ ಹೋಗಿ ಸಮುದಾಯಭವನದಲ್ಲಿ ಅವಕಾಶ ಪಡೆದುಕೊಳ್ಳೋಣ ಎಂದು ಹೇಳಿದ. ಆದರೆ ಸ್ವಾಮಿ ಸೇರಿ ಮೂರ್ನಾಲ್ಕು ಮಂದಿ ಹೊರತಾಗಿ ಬೇರ್ಯಾರು ಅದಕ್ಕೆ ಒಪ್ಪಲಿಲ್ಲ. ನಮ್ಮ ಮತ್ತು ಮೇಲ್ವರ್ಗದ ಸಂಬಂಧ ಇಷ್ಟಕ್ಕೆ ಮುಗಿಯುವುದಿಲ್ಲ. ನಾವು ಕಾನೂನಿ ಹೋರಾಟಕ್ಕೆ ಇಳಿದರೆ ಮೇಲ್ವರ್ಗದವರು ಊರಿಂದ ಬಹಿಷ್ಕಾರ ಹಾಕ್ತಾರೆ. ಮದುವೆ ಆಗಬೇಕಿರುವ ಹೆಣ್ಣು ಮಕ್ಕಳು ಮನೆಗೊಂದು poverty-in-indiaಬೆಳೆದು ನಿಂತಿವೆ. ಹಣ ಬೇಕೆಂದರೆ ಅವರ ಬಳಿಯೇ ಕೈಚಾಚಬೇಕು. ಅವರನ್ನು ವಿರೋಧ ಮಾಡಿಕೊಂಡು ಬದುಕಲು ಸಾಧ್ಯವಿಲ್ಲ. ನಮಗೆ ಪ್ರತ್ಯೇಕ ಸಮುದಾಯಭವನ ಕಟ್ಟಿಕೊಡುವುದಾಗಿ ಎಂಎಲ್ಎ ಹೇಳಿದ್ದಾನೆ. ಮತ್ತೆ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳುವುದು ಸರಿಯಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಹಾಗಾಗಿ ಉಳಿದವರು ಸುಮ್ಮನಾದರು.
ಕೆಲವೇ ದಿನಗಳಲ್ಲಿ ಸಮುದಾಯಭವನ ಎಂದಿದ್ದ ನಾಮಫಲಕ ಒಕ್ಕಲಿಗರ ಸಮುದಾಯಭವನವಾಗಿ ಪರಿವರ್ತನೆಯಾಯಿತು. ಈ ಘಟನೆ ನಡೆದು 13 ವರ್ಷ ಕಳೆದಿದೆ. ದಲಿತರಿಗೆ ಪ್ರತ್ಯೇಕ ಸಮುದಾಯಭವನ ಇಂದಿಗೂ ನಿಮರ್ಾಣ ಆಗಿಲ್ಲ. ಒಕ್ಕಲಿಗರ ಸಮುದಾಯಭವನಕ್ಕೆ ದಲಿತರು ಕಾಲಿಡಲು ಸಾಧ್ಯವಾಗಿಲ್ಲ. ಅದೇ ಎಂಎಲ್ಎ ಇಂದಿಗೂ ಅದೇ ಕ್ಷೇತ್ರದ ಪ್ರತಿನಿಧಿ

ಗ್ರಾಮೀಣ ಮಹಿಳಾ ಜಾಗೃತಿಯಲ್ಲಿಯೇ ಆಕೆಯ ವಿಮೋಚನೆಯಿದೆ


– ಡಾ.ಎಸ್.ಬಿ. ಜೋಗುರ


ಲಿಂಗಾಧರಿತ ಶ್ರಮವಿಭಜನೆ ಮಹಿಳೆಯನ್ನು ತಲೆತಲಾಂತರದಿಂದಲೂ ಶೋಷಣೆ ಮಾಡಿಕೊಂಡು ಬರುವಲ್ಲಿ ಮುಖ್ಯ ಕಾರಣವಾಯಿತು. ಸಾಮರ್ಥ್ಯ ಮತ್ತು ಸತ್ವಗಳನ್ನು ಕಡೆಗಣಿಸಿ ಮಾತನಾಡುವ ಈ ಲಿಂಗ ತಾರತಮ್ಯದ ಧೋರಣೆ ಮಹಿಳೆಯ ಸಬಲೀಕರಣದಲ್ಲಿ ಒಂದು ಬಹು ದೊಡ್ಡ ತೊಡಕಾಗಿ ಕಾಡುವುದು. ಮಹಿಳೆಯ ಜೈವಿಕತೆಯನ್ನು ಆಧರಿಸಿ ಮಾಡಬಹುದಾದ ಎಲ್ಲ ಬಗೆಯ ಶೋಷಣೆಗಳನ್ನು ವಿಶ್ವದ ಬಹುತೇಕ ಸಮುದಾಯಗಳು ಅನುಸರಿಸುವದಿದೆ. ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ನಡೆಯುವ ಫೀಮೇಲ್ ಜೆನಿಟಲ್ ಮ್ಯುಟಿಲೇಶನ್ ಮತ್ತು ಋತುಮತಿಯಾದಾಗ ನಮ್ಮ ಗ್ರಾಮೀಣ ಭಾಗಗಳಲ್ಲಿ ‘ನಮ್ಮ ಹುಡುಗಿ ದೊಡ್ದವಳಾದಳು’ ಅಂತ ಆಚರಿಸುವ ಪರಂಪರೆಗಳಿಗಿಂತಲೂ ತೀರಾ ಭಿನ್ನವಾಗಿಲ್ಲ. Ancient_Womenಒಂದು ಕಡೆ ಹಿಂಸೆ ಮತ್ತು ಕ್ರೌರ್ಯವಿದೆ. ಇನ್ನೊಂದು ಕಡೆ ಆಚರಣೆಯ ಹೆಸರಲ್ಲಿ ನಡೆಯಬಹುದಾದ ಶೋಷಣೆಯಿದೆ. ತೀರಾ ಖಾಸಗಿಯಾಗಿರುವ ಜೈವಿಕ ವಿಷಯವೊಂದನ್ನು ಡಂಗುರ ಸಾರುವ ಮೂಲಕ ಆಕೆ ದೊಡ್ಡವಳಾದಳು ಎಂದು ಊರ ಜನರಿಗೆ ಊಟ ಹಾಕುವ ಪರಿಪಾಠವೇ ಒಂದು ಶೋಷಣೆಯ ಮುಖವಾಗಿದೆ. ಇನ್ನು ಹಾಗೆ ಋತುಮತಿಯಾದಾಗ ಮಹಿಳೆಯನ್ನು ತೀರಾ ನಿಕೃಷ್ಟವಾಗಿ ನಡೆಯಿಸಿಕೊಳ್ಳುವ ಪರಿಪಾಠಗಳು ಇಂದಿಗೂ ಮಡಿವಂತ ಮನಸುಗಳಿರುವ ಮನೆಗಳಲ್ಲಿ ನಿರಾತಂಕವಾಗಿ, ನಿರಂತರವಾಗಿ ಮುಂದುವರೆದಿದೆ. ಆಕೆಯ ಮನೆಯಲ್ಲಿಯೇ ಏನೋ ಒಂದು ಧಾರ್ಮಿಕ ಸಮಾರಂಭ ಇಲ್ಲವೇ ಕಾರ್ಯಕ್ರಮವಿದ್ದರೆ ಈ ಋತುಮತಿಯಾದ ಮಹಿಳೆ ಮಹಾನ್ ಪ್ರಮಾದ್ ಮಾಡಿದವರಂತೆ ದೂರ ಕತ್ತಲು ಕೋಣೆಯಲ್ಲಿ ಅಜ್ಞಾತಳಂತೆ ಉಳಿಯುವ.. ತನ್ನ ತಪ್ಪಿನ ಹುಡುಕಾಟದಲ್ಲಿಯೇ ಮೂರು ದಿನ ಕಳೆಯುವ ಪರಿಪಾಠಕೆ ಒಗ್ಗಿಕೊಂಡು ಬಿಡುವದರಲ್ಲಿಯೇ ಮಹಿಳಾ ಶೋಷಣೆ ಅಡಕವಾಗಿದೆ.

೧೯೬೦ ದಶಕದ ಕೊನೆಯಲ್ಲಿ ಜನಪ್ರಿಯವಾದ ತೀವ್ರಗಾಮಿ ಸ್ತ್ರೀವಾದವು ಮಹಿಳೆಯ ಶೋಷಣೆಯ ವಿವಿಧ ಮುಖಗಳನ್ನು ತೀವ್ರವಾಗಿ ಪ್ರತಿಭಟಿಸಿರುವದಿದೆ. ತೀವ್ರವಾದಿ ಗುಂಪಿನ ವಿಚಾರವಾದಿಗಳಾದ ಶುಲಾ ಮಿತ್, ಕೇತ್ ಮಿಲ್ಲೆಟ್, ಏಡ್ರಿಯನ್ ರಿಚ್ ರವರು ತಾಯ್ತನ ಎನ್ನುವುದು ಮಹಿಳಾ ಶೋಷಣೆಯ ಮೂಲ ಆ ಮೂಲಕ ಅವಳ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವ ಕುಂಟಿತಗೊಳ್ಳುತ್ತದೆ. ಜೈವಿಕ ಸಂತಾನೋತ್ಪತ್ತಿಯ ಬದಲಾಗಿ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಸಂತಾನ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು ಎಂದಿರುವದಿದೆ. ಈ ಚಿಂತಕರು ಹೇಳುವದರಲ್ಲಿ ಅರ್ಥವಿಲ್ಲದಿಲ್ಲ. ಆದರೆ ನೈಸರ್ಗಿಕವಾದ ಕ್ರಿಯೆಯನ್ನು ಯಾಂತ್ರಿಕಗೊಳಿಸುವ ಕ್ರಮ ಮಾತ್ರ ಸಹ್ಯವೆನಿಸುವದಿಲ್ಲ. ಇದರಿಂದ ಮನುಷ್ಯ ಸಂಬಂಧಗಳು ನಿರೀಕ್ಷಿಸಲಾಗದಷ್ಟು ಯಾಂತ್ರಿಕವಾಗಬಹುದಾದ ಅಪಾಯಗಳಿವೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಪಾವಗಡ, ಕೊರಟಗೆರೆ ತಾಲೂಕುಗಳ ಕೆಲ ಕಡೆಗಳಲ್ಲಿ ಗೊಲ್ಲರ ಹಟ್ಟಿಗಳಲ್ಲಿ ಈ ತಾಯ್ತನ ಮತ್ತು ಹೆಣ್ಣು ಋತುಮತಿಯಾಗುವ ಪ್ರಕ್ರಿಯೆಗಳನ್ನು ಅತ್ಯಂತ ಆಘಾತಕಾರಿ ಎನ್ನುವ ಹಾಗೆ ಆಚರಿಸಲಾಗುತ್ತದೆ. ಹಸಿ ಬಾಣಂತಿ ಮತ್ತು ಮಗು ೧೫ ದಿನಗಳಿಂದ ೩ ತಿಂಗಳುಗಳ ಕಾಲ ಊರ ಹೊರಗಿನ ಗುಡಿಸಲುಗಳಲ್ಲಿ muslim-womanವಾಸವಾಗಿರಬೇಕು. ಋತುಮತಿಯಾದ ಮಹಿಳೆಗೂ ಈ ಬಗೆಯ ನಿರ್ಬಂಧಗಳಿವೆ. ಈ ಬಗೆಯ ಅನಿಷ್ಟ ಪದ್ಧತಿಗಳನ್ನು ಬಹಳ ವ್ಯವಸ್ಥಿತವಾಗಿ ಇಲ್ಲಿಯವರೆಗೂ ಅಲ್ಲಿ ಕಾಪಾಡಿಕೊಂಡು ಬರಲಾಗಿದೆ. ಕಳೆದ ಅನೇಕ ವರ್ಷಗಳಿಂದಲೂ ಕೆಲವು ಸಂಘಟನೆಗಳು ಈ ಬಗೆಯ ಅನುಸರಣೆ ಸರಿಯಲ್ಲ, ಅದೊಂದು ಮೌಢ್ಯ ಎನ್ನುವ ತಿಳುವಳಿಕೆ ನೀಡುತ್ತಾ ಬಂದಿರುವ ಪರಿಣಾಮವಾಗಿ ಈಗೀಗ ಅಲ್ಲಿ ಈ ಬಗೆಯ ಆಚರಣೆಗಳು ತಮ್ಮ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ತನ್ನದಲ್ಲದ ತಪ್ಪಿಗೆ, ತಪ್ಪೇ ಅಲ್ಲದ ಜೈವಿಕ ಕ್ರಿಯೆಗಳಿಗೆ ಹೀಗೆ ಬಹಿಷ್ಕೃತ ರೂಪ ಕೊಟ್ಟು ಆಚರಿಸುವ ಕ್ರಮ ಸರಿಯಲ್ಲ. ಈಗೀಗ ಈ ಗೊಲ್ಲರ ಹಟ್ಟಿಗಳಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನು ಈ ಬಗೆಯ ಅನಿಷ್ಟಗಳನ್ನೇ ಶಿಷ್ಟಾಚಾರಗಳನ್ನಾಗಿ ಆಚರಿಸುವ ಅನೇಕ ಜನಸಮುದಾಯಗಳು ನಮ್ಮ ನಡುವೆ ಇವೆ. ಅಲ್ಲಿಯೂ ಕೂಡಾ ಹೀಗೆ ಬದಲಾವಣೆಯ ಗಾಳಿ ಬೀಸಬೇಕು ಇಲ್ಲವೇ ಬೀಸುವಂತೆ ಮಾಡಬೇಕು. ಗೊಲ್ಲರ ಹಟ್ಟಿಯ ಜನರೀಗ ಈ ಬಗೆಯ ಆಚರಣೆಗಳನ್ನು ವಿರೋಧಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಈ ಬಗೆಯ ಬೆಳವಣಿಗೆಗಳು ಮಾತ್ರ ಮಹಿಳಾ ಶೋಷಣೆಯನ್ನು ತಡೆಯಬಲ್ಲವು.

ಯಾವುದೇ ಒಂದು ಅಹಿತಕರವಾದ ಪದ್ಧತಿ ಮತ್ತು ಆಚರಣೆಯ ವಿರುದ್ಧ ಪ್ರತಿಭಟನೆಗಳು ಹೊರಗಿನಿಂದ ನಡೆಯುವ ಬದಲಾಗಿ ಒಳಗಿನಿಂದಲೇ ನಡೆಯಬೇಕು ಅಂದಾಗ ಮಾತ್ರ ಆ ಬಗೆಯ ಆಚರಣೆಗಳನ್ನು ಕೈ ಬಿಡುವುದು ಸಾಧ್ಯ. ಮಹಿಳೆಯನ್ನು ಮತ್ತು ಆಕೆಯ ಸಾಮರ್ಥ್ಯವನ್ನು ಸರಿಯಾಗಿ ಗ್ರಹಿಸುವಲ್ಲಿ ನಮ್ಮ ಸಮಾಜ ಇಂದಿಗೂ ಯಶಸ್ವಿಯಾಗಿಲ್ಲ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಅವಳ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. woman-unchainedಕುಟುಂಬದೊಳಗಿನ ಆಕೆಯ ಕಾರ್ಯವನ್ನು ಅನುತ್ಪಾದಕ ಎಂದು ಪರಿಗಣಿಸುವಲ್ಲಿಯೇ ಒಂದು ಬಹುದೊಡ್ಡ ದೋಷವಿದೆ. ಕೇವಲ ಮಾರುಕಟ್ಟೆ ಮತ್ತು ಆದಾಯವನ್ನು ಗಮನಿಸಿ ಆಕೆಯ ಕಾರ್ಯಚಟುವಟೆಗಳನ್ನು ಗುರುತಿಸುವುದು ಸರಿಯಲ್ಲ. ಗಂಡು-ಹೆಣ್ಣು ಎನ್ನುವ ಎರಡು ಲಿಂಗಗಳು ಜೈವಿಕವಾದ ಪ್ರಬೇಧಗಳೇ ಹೊರತು ಶ್ರೇಷ್ಟ ಮತ್ತು ಕನಿಷ್ಟತೆಯನ್ನು ಸೂಚಿಸಲು ಇರುವ ಪದಗಳಲ್ಲ. ಮಹಿಳೆ ಎಲ್ಲ ಬಗೆಯ ಸಾಮರ್ಥ್ಯಗಳನ್ನು ತೋರಿಯಾದ ಮೇಲೆಯೂ ನಾವು ಆಕೆಯನ್ನು ಸಮಾನತೆಯ ತಳಹದಿಯ ಮೇಲೆ ಗಮನಿಸದಿರುವುದು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿಯ ದೋಷವಲ್ಲದೇ ಮತ್ತೇನು..? ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿಯ ಮಹಿಳೆ ಇಂದಿಗೂ ಕೇವಲ ಯಂತ್ರದಂತೆ ದುಡಿಯುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ಸ್ತ್ರೀಪರ ಹೋರಾಟ ಮತ್ತು ಆಕೆಯ ಶೋಷಣೆಗಳನ್ನು ಕುರಿತು ಮಾತನಾಡುವಷ್ಟು ಜಾಗೃತಳಾಗಿಲ್ಲ. ಆಕೆಯ ಕಣ್ಣೆದುರೇ ಗಂಡಾಳಿಗೊಂದು ಕೂಲಿ, ಹೆಣ್ಣಿಗೊಂದು ಕೂಲಿ ಅಂತ ವಿತರಿಸಿದರೂ ಆಕೆ ನೋಡಿಕೊಂಡು ಅದೇ ಸರಿ ಎನ್ನುವಂತೆ ಸುಮ್ಮನಿದ್ದಾಳೆ. ಪರಿಣಾಮವಾಗಿ ಆಕೆಗೆ ಗ್ರಾಮೀಣ ಭಾಗಗಳಲ್ಲಿ ತನ್ನತನವೇ ಇಲ್ಲದಂತಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಜಾಗೃತರಾಗುವ ಅವಶ್ಯಕತೆ ಎಲ್ಲ ಬಗೆಯ ಮಹಿಳಾ ಹೋರಾಟಗಳಿಗಿಂತಲೂ ಮುಂಚೂಣಿಯದಾಗಬೇಕು. ಅಂದಾಗ ಮಹಿಳಾ ಹೋರಾಟ ಮತ್ತು ವಿಮೋಚನೆ ಎನ್ನುವ ಪದಗಳು ಹೆಚ್ಚೆಚ್ಚು ಅರ್ಥ ಪಡೆಯುತ್ತವೆ.

ಕದಿಯದ ಭತ್ತಕ್ಕೆ ಹರಕೆ ಹೊತ್ತು ಬೆನ್ನು ಚುಚ್ಚಿಸಿಕೊಂಡವರು

ಶೋಷಿತರಿಗೆ ಮೊದಲು, ತಾವು ಶೋಷಣೆಗೆ ಒಳಗಾಗಿದ್ದೇವೆ ಅನ್ನೋದು ಅರ್ಥ ಆಗೋದು ಯಾವಾಗ..

– ಜೀವಿ

ಸುತ್ತ ಏಳು ಹಳ್ಳಿ ಜನ ಸೇರಿ ಆಚರಿಸುವ ಜಾತ್ರೆಯಲ್ಲಿ ಭಾಗವಹಿಸುವುದನ್ನು ಅವ್ವ ತನಗೆ ಬುದ್ದಿ ತಿಳಿದ ದಿನದಿಂದ ಒಮ್ಮೆಯೂ ತಪ್ಪಿಸಿಕೊಂಡಿಲ್ಲ. ತಾತ-ಮುತ್ತಾನ ಕಾಲದಿಂದ ನಡೆದಿರುವ ಉಡಸಲಮ್ಮ ಜಾತ್ರೆ ಎಂದರೆ ಎಲ್ಲಿಲ್ಲದ ಭಕ್ತಿ ಅವ್ವನಲ್ಲಿದೆ. ಈ ವರ್ಷ(2015) ಏಪ್ರಿಲ್ ಮೊದಲ ವಾರದಲ್ಲಿ ನಡೆದ ಜಾತ್ರೆಗೆ ಎಲ್ಲ ಸಿದ್ದತೆಗಳು ನಡೆದಿದ್ದವು. ಎಲ್ಲರೂ ಹೊಸ ಬಟ್ಟೆ ತೊಟ್ಟು ಅತ್ತಿತ್ತ ಅಡ್ಡಾಡುತ್ತಿದ್ದರು. ಆದರೆ ಅವ್ವ ಮಾತ್ರ ಈ ಬಾರಿ ನಾನು ಜಾತ್ರೆಗೆ ಹೋಗSidi-1ಲಾರೆ ಎಂದು ಹಠ ಹಿಡಿದು ಕುಳಿತಿದ್ದಳು. ಹೆಂಡತಿ ಮಕ್ಕಳೊಂದಿಗೆ ಆಗ ತಾನೆ ಮನೆಗೆ ಹೋಗಿದ್ದ ನನ್ನನ್ನು ಕೊಲೆಗಾರನಿಗಿಂತ ಅಪರಾಧಿ ಸ್ಥಾನದಲ್ಲಿ ಕಂಡು ಶಪಿಸಿದಳು. ಮನೆ ಮುರುಕ ಕೆಲಸ ಮಾಡಿದ ನಿನ್ನಂತವನಿಗೆ ಜನ್ಮ ಕೊಟ್ಟಿದ್ದಕ್ಕೂ ಸಾರ್ಥಕವಾಯಿತು ಎಂದು ಕಣ್ಣೀರ ಧಾರೆ ಹರಿಸಿದಳು. ಹೆತ್ತ ಕರುಳಿಗೇ ಅಪರಾಧಿಯಂತೆ ಕಂಡ ನಾನು ಹಾಗೇ ಕಣ್ಣಂಚು ಒದ್ದೆ ಮಾಡಿಕೊಂಡು ಮೂಲೆಗೊರಗಿ ಕುಳಿತೆ. ಅವ್ವನ ಈ ದುಃಖಕ್ಕೆ ಬಲವಾದ ಕಾರಣವೂ ಇತ್ತು.

ಜಾತ್ರೆಯಲ್ಲಿ ಏಳು ಊರಿನ ತಲಾ ಒಂದೊಂದು ಬಂಡಿ ಮತ್ತು ಮೂರು ತೇರನ್ನು ಕೆಂಡದಲ್ಲಿ ಎಳೆದಾಡಿದ ನಂತರ ಅದರಲ್ಲಿ ಒಂದೂರಿನ ದಲಿತರನ್ನು ಸಿಡಿಗೇರಿಸುವ ಪದ್ದತಿ ಇದೆ. ಸಿಡಿಗೆ ಏರುವ ದಲಿತರು ಏಳು ದಿನದಿಂದ ಸಂಸಾರ ತೊರೆದು ಉಪವಾಸ ವ್ರತ ಮಾಡಬೇಕು. ಕೊನೆಯ ದಿನ ಅವರ ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಚುಚ್ಚಲಾಗುತ್ತದೆ. ಮಹಿಳೆಯರು ಬಾಯಿಗೆ ದಬ್ಬಳದಂತ ಸರಳನ್ನು ಚುಚ್ಚಿಕೊಳ್ಳುತ್ತಾರೆ. ಎಲ್ಲರೂ ಜಾತ್ರೆ ದಿನ ದೇವಸ್ಥಾನದ ಮುಂದೆ ಹಾಜರಾಗುತ್ತಾರೆ. ಪುರುಷರು ಸಿಡಿ ಏರಿ ಮೂರು ಸುತ್ತು ಸುತ್ತಿ ಶಿಕ್ಷೆ ರೂಪದಲ್ಲಿ ಹರಕೆ ತೀರಿಸುತ್ತಾರೆ. ತನ್ನ ಪೂರ್ವಜರು ಮಾಡಿರುವ ತಪ್ಪಿಗೆ ಶಿಕ್ಷೆ ಪಡೆಯುತ್ತಿದ್ದೇವೆ ಎಂಬ ಭಾವನೆ ದಲಿತರಲ್ಲಿದೆ.

ಹಿಂದೊಮ್ಮೆ ಹೊಟ್ಟೆಗೆ ಗತಿ ಇಲ್ಲದ ದಲಿತ ಕುಟುಂಬಗಳು ಕಣದಲ್ಲಿ ರಾಶಿ ಹಾಕಿದ್ದ ಭತ್ತವನ್ನು ಕದ್ದು ತಂದಿದ್ದರಂತೆ. ಅದರ ಮಾಲೀಕರು ಪೊಲೀಸರಿಗೆ ದೂರು ನೀಡಿ ಭತ್ತ ಉದುರಿರುವ ಜಾಡು ಹಿಡಿದು ದಲಿತ ಕೇರಿಗೆ ಬಂದಿದ್ದರಂತೆ. ಸಿಕ್ಕಿ ಬೀಳುವ ಆತಂಕದಲ್ಲಿ ಉಡಸಲಮ್ಮನನ್ನು ಮನದಲ್ಲೆ ನೆನದು ಸಂಕಷ್ಟದಿಂದ ಪಾರು ಮಾಡಿದರೆ ಜಾತ್ರೆಯಲ್ಲಿ ಎರಡು ವರ್ಷಕ್ಕೊಮ್ಮೆ ಸಿಡಿ ಏರುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರಂತೆ. ಕೂಡಲೇ ಮನೆಯಲ್ಲಿದ್ದ ಭತ್ತದ ಬಣ್ಣ ಬದಲಾಗಿ ಪೊಲೀಸರು ವಾಪಸ್ ಹೋದರಂತೆ. ಸೆರೆ ಬಿಡಿಸಿಕೊಂಡ ದೇವರಿಗೆ ಶಿಕ್ಷೆ ರೂಪದ ಹರಕೆ ತೀರಿಸುವುದು ನಮ್ಮ ಕರ್ತವ್ಯ ಎಂದು ಇಂದಿಗೂ ದಲಿತರು ನಂಬಿದ್ದಾರೆ. ಬಿಳಿ ಭತ್ತ ಕ್ಷಣಾರ್ಧದಲ್ಲಿ ಕೆಂಭತ್ತವಾಗಿ ಬಣ್ಣ ಬದಲಾಯಿತು. ಈ ಮಾಯ ಮಂತ್ರ ನಡೆಯುತ್ತಿದ್ದ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಇತ್ತು ಎಂಬುದನ್ನೂ ನಂಬಲಾಗುತ್ತಿದೆ. ಈ ಕತೆಯನ್ನು ನನಗೆ ಅವ್ವನೇ ಹತ್ತಾರು ಬಾರಿ ಹೇಳಿದ್ದಳು. ಅವ್ವನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಸಿಡಿ ಏರಿದವರು. ಈಗ ಅಣ್ಣಂದಿರು, ಅವರ ಮಕ್ಕಳು, ಅಕ್ಕನ ಮಕ್ಕಳು ಎಲ್ಲರೂ ಸಿಡಿ ಏರುತ್ತಿದ್ದಾರೆ. ಹಾಗಾಗಿ ಅವ್ವನಿಗೆ ಉಡಸಲಮ್ಮನ ಬಗ್ಗೆ ಅಪಾರ ಭಕ್ತಿ.

ದಲಿತರಿಗೇ ಅರಿವಿಲ್ಲದೆ ಅವರ ಮೇಲೆ ನಡೆಯುತ್ತಿರುವ ಶೋಷಣೆ ಬಗ್ಗೆ ಹಲವು ದಿನಗಳಿಂದ ನನಗೆ ಬೇಸರವಿತ್ತು. ಜಾತ್ರೆ ಹಿಂದಿನ ದಿನ ಆಪ್ತರೊಂದಿಗೆ ನಾಳೆ ನಡೆಯಲಿರುವ ಸಿಡಿ ಹೆಸರಿನ ಶೋಷಣೆ ಬಗ್ಗೆ ವಿವರಿಸಿದ್ದೆ. ಹೇಗಾದರೂ ತಡೆಯಬೇಕಲ್ಲ ಎಂದುಕೊಂಡು ಪತ್ರಿಕೆಗಳಲ್ಲಿ ವರದಿ ಮಾಡಲು ನಿರ್ಧರಿಸಿದೆವು. ತಹಸೀಲ್ದಾರ್ ಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳಿದೆವು. ಅವರು ಈ ವಿಷಯ ನನ್ನ ಗಮನದಲ್ಲಿದ್ದು, ತಡೆಯುವ ಪ್ರಯತ್ನ ಮಾಡುತ್ತೇವೆ ಎಂದರು. ಅಮಾನವೀಯ ಸಿಡಿ ಪದ್ದತಿ ಜೀವಂತ ಇರುವುದು ಮತ್ತು ತಹಸೀಲ್ದಾರ್ ತಡೆಯುವ ಪ್ರಯತ್ನ ಮಾಡುವುದನ್ನು ಪತ್ರಿಕೆಗಳಲ್ಲಿ ವರದಿ ಮಾಡಿದೆವು. ಆಂಗ್ಲ ಪತ್ರಿಕೆ ಸೇರಿ ಮೂರು ಪತ್ರಿಕೆಗಳಲ್ಲಿ ಸುದ್ದಿ ಜಾತ್ರೆ ದಿನವೇ ಪ್ರಕಟವಾಯಿತು.

ತಹಸೀಲ್ದಾರ್ ಕೂಡ ಗ್ರಾಮಕ್ಕೆ ಹೋಗಿ ದಲಿತರಿಗೆ ಕೊಂಡಿ ಚುಚ್ಚುವುದು ಮತ್ತು ಅಮಾನವೀಯವಾಗಿ ಸಿಡಿ ಏರುವ ಪದ್ದತಿಗಳನ್ನು ಮಾಡಕೂಡದು ಎಂದು ತಾಕೀತು ಮಾಡಿ ಬಂದಿದ್ದರು. ಅದಾಗಲೇ ಕೊಂಡಿ ಚುಚ್ಚುವ ಕಾರ್ಯ ಮುಗಿದಿತ್ತು. ಹಾಗಾಗಿ ಈ ವರ್ಷ ಸಿಡಿ ಏರಿಕೊಳ್ಳಿ, ಮುಂದಿನ ದಿನಗಳಲ್ಲಿ ಇದು ನಡೆಯ ಕೂಡದು ಎಂದು ಹೇಳಿ ಹೋಗಿದ್ದರು. ಪೊಲೀಸರೊಂದಿಗೆ ತಹಸೀಲ್ದಾರ್ ಬಂದು ಹೋಗಿರುವುದು ಮತ್ತು ಮುಂದಿನ ದಿನಗಳಲ್ಲಿ ಜಾತ್ರೆ ನಿಲ್ಲಲಿದೆ ಎಂಬ ಗುಲ್ಲು ಸುತ್ತ ಏಳು ಹಳ್ಳಿಯಲ್ಲೂ ಹರಡಿತ್ತು. ಅದು ಅವ್ವನ ಕಿವಿಗೂ ಮುಟ್ಟಿತ್ತು. ಹಿಂದಿನ ದಿನ ವರದಿ ಮಾಡುವಾಗ ಜಾತ್ರೆಯಲ್ಲಿರುವ ಆಚರಣೆಗಳ ಬಗ್ಗೆ ಅವ್ವನ ಬಳಿಯೂ ಕೆಲವು ಸ್ಪಷ್ಟನೆಗಳನ್ನು ಕೇಳಿದ್ದೆ. ಹಾಗಾಗಿ ಓದಲು ಬರದಿದ್ದರೂ ಅವ್ವನಿಗೆ ಇದು ನನ್ನ ಕೆಲಸವೇ ಎಂದು ಗೊತ್ತಾಗಿತ್ತು.

ರಚ್ಚೆ ಹಿಡಿದಂತೆ ಅವ್ವ ಅಳುತ್ತಿದ್ದಳು. ಸಿಡಿ ಏರುವುದನ್ನು ಅಧಿಕಾರಿಗಳು ತಡೆದರೆ ಮುಂದೆ ಉಡಸಲಮ್ಮನ ಶಾಪಕ್ಕೆ ತನ್ನ ತವರು ಮನೆ ಜನ ಹಾಗೂ ನಾನು ತುತ್ತಾಗುತ್ತೇವೆ ಎಂಬುದು ಅವ್ವನ ಆತಂಕ. ಸಿಡಿ ಏರಲಿಲ್ಲ ಎಂಬ ಕಾರಣಕ್ಕೆ ಯಾರನ್ನಾದರೂ ದೇವಿ ಬಲಿ ಪಡೆದರೆ ಅವರ ಕುಟುಂಬಕ್ಕೆ ನೀನು ಹೊಣೆಯಾಗುತ್ತೀಯಾ?, ಜಾತ್ರೆ ನಿಲ್ಲಲು ನೀನೂ ಕಾರಣವಾದೆ ಎಂಬ ಸಿಟ್ಟಿಗೆ ಆಕೆ ನಿನ್ನನ್ನೂ ಬಲಿ ಪಡೆದುಕೊಂಡರೆ ನಾವೇನು ಮಾಡಬೇಕು? ಎಂದು ಪ್ರಶ್ನೆಗಳ ಸುರಿಮಳೆಗೈದಳು. ಮನೆಯಲ್ಲಿದ್ದವರೆಲ್ಲ ಸೇರಿ ಸಮಾಧಾನ ಮಾಡಿದರೂ ಅವ್ವನ ದುಃಖ ಕಡಿಮೆಯಾಗಲಿಲ್ಲ. ಯಾವುದೇ ಕಾರಣಕ್ಕೂ ನಾನು ಜಾತ್ರೆಗೆ ಬರಲಾರೆ ಎಂದು ಪಟ್ಟು ಹಿಡಿದಳು. ಜಾತ್ರೆಯಲ್ಲಿ ಯಾರದರೂ ನಿನ್ನ ಮಗ ಈ ಕೆಲಸ ಮಾಡಿದ್ದಾನೆ, ಸರಿಯೇ? ಎಂದು ಪ್ರಶ್ನೆ ಮಾಡಿದರೆ ಏನು ಹೇಳಲಿ?. ತವರೂರಿನ ಜನರಿಗೆ ಹೇಗೆ ಮೂಖ ತೋರಲಿ? ಎಂದು ಕಣ್ಣೀರಿಟ್ಟಳು.

ಆ ಸಮಯಕ್ಕೆ ಜಾತ್ರೆಗೆಂದು ಬಂದ ಅಕ್ಕ, ಅವ್ವನನ್ನು ಸಮಾಧಾನ ಮಾಡಿದಳು. ಸಿಡಿ ಕಂಬಕ್ಕೆ ದಲಿತರೇ ಏಕೆ ಏರಬೇಕು?, ತಪ್ಪು ಅಥವಾ ಶೋಷಣೆ ಎಂದು ಈವರೆಗೆ ನಮಗೆ ಅನ್ನಿಸಿರಲಿಲ್ಲ. ಈಗ ಅವನು ಪತ್ರಿಕೆಯಲ್ಲಿ ಬರೆದ ನಂತರ ತಪ್ಪಲ್ಲವೇ ಎನ್ನಿಸುತ್ತಿದೆ. ಸಿಡಿಗಂಬದಿಂದ ಕೆಳಗಿರುವ ಕೆಂಡಕ್ಕೆ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡರೆ ಯಾರು ಹೊಣೆ? ದೇವರು ಬಂದು ಕಾಪಾಡಲು ಸಾಧ್ಯವೇ?, ಅವನ ಕೆಲಸ ಅವನು ಮಾಡಿದ್ದಾನೆ, ಅವನಿಗೇನು ತೊಂದರೆ ಆಗಲ್ಲ ಎಂದು ಅಕ್ಕ ಅವ್ವನಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದಳು. ಕೊನೆಗೂ ಹೇಗೋ ಮನವೊಲಿಸಿ ಅವ್ವನನ್ನು ಅಕ್ಕ ಜಾತ್ರೆಗೆ ಕರೆದೊಯ್ದಳು. ಕಣ್ಣೀರಿಡುತ್ತಲೇ ಅವ್ವ ಜಾತ್ರೆಯತ್ತ ನಡೆದಳು. ನಾನು ಮಾತ್ರ ಜಾತ್ರೆ ಕಡೆ ತಲೆ ಹಾಕಬಾರದು ಎಂದು ಆಜ್ಞೆ ಮಾಡಿದಳು.Sidi-2

ಮಡದಿ-ಮಕ್ಕಳೆಲ್ಲ ಜಾತ್ರೆ ಕಳುಹಿಸಿ ಗೆಳೆಯ ರಾಜನೊಂದಿಗೆ ಮನೆಯಲ್ಲೆ ಉಳಿದುಕೊಂಡೆ. ಆಪ್ತಮಿತ್ರ ಮಡಿಕೆ ಸತ್ತ ನಂತರ ನಡೆಯುತ್ತಿದ್ದ ಮೊದಲ ಜಾತ್ರೆಯಾದ್ದರಿಂದ ಉತ್ಸಾಹ ಕೂಡ ಕುಂದಿ ಹೋಗಿತ್ತು. ರಾಜನೊಂದಿಗೆ ಮಹೇಶನ ಸಮಾಧಿ ಸ್ಥಳ ಹಾಗೂ ಅತ್ತಿತ್ತ ಸುತ್ತಾಡಿಕೊಂಡು ಕಾಲ ಕಳೆದೆ. ಜಾತ್ರೆ ಕಡೆಯಿಂದ ಓಡಿ ಬಂದ ಸತೀಶನ ಕೋಪ ನೆತ್ತಿಗೇರಿತ್ತು. ಉಡಸಲಮ್ಮ ಮೈಮೇಲೆ ಬಂದವಳಂತೆ ಕುಣಿಯುತ್ತಿದ್ದ. ನೀವೆಲ್ಲಾ ಎಲ್ಲಿ ಹೋಗಿದ್ದೀರಿ ನಮ್ಮ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಿಟ್ಟಿನಿಂದಲೇ ನನ್ನತ್ತ ಬಂದ. ಸಮಾಧಾನ ಮಾಡಿ ಏನಾಯಿತು ಎಂದು ಕೇಳಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತೀಶ, ಜಾತ್ರೆಗೆಂದು ಬಂದಿದ್ದ. ನಮ್ಮೂರಿನಿಂದ ಹೋಗುವ ತೇರಿನೊಂದಿಗೆ ಜಾತ್ರೆ ಸೇರಿಕೊಂಡಿದ್ದ. ಕೆಂಡದಲ್ಲಿ ಕಾಲಾಡಿ ದೇವಸ್ಥಾನ ಸುತ್ತು ಹಾಕುವ ಸಂದರ್ಭದಲ್ಲಿ ತೇರು ಎಳೆಯಲು ಕೈಜೋಡಿಸಲು ಮುಂದಾಗಿದ್ದಾನೆ. ಎಲ್ಲರ ಜೊತೆ ತೇರು ಮುಟ್ಟಿ ಎಳೆಯಲು ಉತ್ಸಾಹದಲ್ಲಿ ನಿಂತಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದ ಮೇಲ್ಜಾತಿಯವರು ಆತನನ್ನು ಹೊರ ಹೋಗುವಂತೆ ಸೂಚಿಸಿದ್ದಾರೆ. ನಿಮ್ಮವರು ತೇರು ಮುಟ್ಟುವಂತಿಲ್ಲ. ಆದರೂ ಕಳೆದ ವರ್ಷ ನೀವೆಲ್ಲ ತೇರು ಎಳೆದು ಮೈಲಿಗೆ ಮಾಡಿದ್ದೀರಿ. ಪರಿಣಾಮವಾಗಿ ಕಳಸವೇ ಬಿದ್ದು ಹೋಗಿತ್ತು. ಈ ವರ್ಷವೂ ಆ ರೀತಿ ಆಗುವುದು ಬೇಡ ಎಂದು ಉಪದೇಶ ಹೇಳಿದ್ದಾರೆ.

ಆದರೆ ಅದಕ್ಕೊಪ್ಪದ ಸತೀಶ ತೇರು ಎಳದೇ ತೀರುತ್ತೇನೆ, ಆಗಿದ್ದಾಗಲಿ ಎಂದು ನಿಂತಿದ್ದಾನೆ. ಅಷ್ಟರಲ್ಲಿ ಮೇಲ್ಜಾತಿ ಯುವಕರು ಮತ್ತು ಸತೀಶನ ನಡುವೆ ಮಾತಿಗೆ ಮಾತು ಬೆಳೆದಿದೆ. ಗುಂಪು ಸೇರಿಕೊಂಡ ಹಿನ್ನೆಲೆಯಲ್ಲಿ ಸತೀಶನ ತಮ್ಮ ಹರೀಶನೂ ಓಡಿ ಬಂದು ನಾವ್ಯಾಕೆ ತೇರು ಎಳೆಯಬಾರದು ಎಂದು ಕೇಳಿದ್ದಾನೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ಸತೀಶನ ಅಕ್ಕ ವಾಣಿ ಇಬ್ಬರನ್ನು ಸಮಾಧಾನ ಮಾಡಿ ಕರೆದೊಯ್ದಿದ್ದಾಳೆ. ಅವರು ಸಾಕಷ್ಟು ಮಂದಿ ಇದ್ದಾರೆ, ಏನಾದರೂ ಮಾಡಿ ಬಿಡುತ್ತಾರೆ. ತೇರು ಎಳೆದು ನಮಗೇನು ಆಗಬೇಕಿಲ್ಲ, ಬನ್ನಿ ಎಂದು ಎಳೆದೊಯ್ದಿದ್ದಾಳೆ. ಅದೇ ಸಿಟ್ಟಿನಿಲ್ಲಿ ಜಾತ್ರೆ ಬಿಟ್ಟು ಮನೆ ಕಡೆ ಬಂದ ಸತೀಶ ನನ್ನ ಬಳಿ ಸಿಟ್ಟು ತೋಡಿಕೊಂಡ. ನಾನು ಇದ್ದಿದ್ದರೂ ತೇರು ಎಳೆಯಲು ನಿನಗ ಅವಕಾಶ ಕೊಡಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಅಸ್ಪಶ್ಯತೆ ಆಚರಣೆ ವಿರುದ್ಧ ಸ್ಥಳದಲ್ಲೆ ಧರಣಿ ಮಾಡಬಹುದಿತ್ತು ಎಂದೆ. ಈಗಲೂ ಕಾಲ ಮಿಂಚಿಲ್ಲ, ತೇರು ಮುಟ್ಟಲು ಅವಕಾಶ ನೀಡಿದೆ ಅಸ್ಪಶ್ಯತೆ ಆಚರಣೆ ಮಾಡಿ, ಎಲ್ಲರೆದುರು ನಿನ್ನನ್ನು ಅವಮಾನ ಮಾಡಿದ್ದರೆ. ಅವರ ಹೆಸರು ಗೊತ್ತಿದ್ದರೆ ಹೇಳು, ಅಂತವರ ವಿರುದ್ಧ ಠಾಣೆಗೆ ಹೋಗಿ ಮೊಕದ್ದಮೆ ದಾಖಲಿಸೋಣ ಎಂದೆ. ಸ್ನೇಹಿತರು ಮತ್ತು ಕೆಲವು ಅಧಿಕಾರಿಗಳನ್ನು ಸಂಪರ್ಕ ಮಾಡಿ ಹೇಗೆ ಮುಂದುವರಿಯಬೇಕು ಎಂಬ ಸಲಹೆ ಪಡೆದುಕೊಂಡೆ.

ಅದಕ್ಕೂ ಮುನ್ನ ನಿಮ್ಮ ಅಪ್ಪ-ಅಮ್ಮನನ್ನು ಕೇಳಿಕೊಂಡು ಬಾ ಎಂದು ಕಳುಹಿಸಿಕೊಟ್ಟೆ. ಸತೀಶ-ಹರೀಶ ಇಬ್ಬರೂ ಹೋಗಿ ಅವರಪ್ಪನನ್ನು ಕರೆತಂದರು. ನಾವೇ ಠಾಣೆಗೆ ಹೋಗಿ ದೂರು ಕೊಟ್ಟರೆ ಊರಿನವರು ಬೇಸರ ಮಾಡಿಕೊಳ್ಳುತ್ತಾರೆ. ಹಾಗಾಗಿ ದಲಿತ ಕೇರಿಯ ಎಲ್ಲರನ್ನೂ ಒಂದು ಮಾತು ಕೇಳಿಬಿಡೋಣ ಎಂದರು ಅವರಪ್ಪ. ನಾನು ಕೂಡ ಸ್ವಲ್ಪ ತಾಳ್ಮೆ ಉಳಿಸಿಕೊಂಡೆ. ಏನೂ ಕಾಣದ ಮಕ್ಕಳನ್ನು ಕರೆದೊಯ್ದು ಪೊಲೀಸ್, ಕಂಪ್ಲೆಂಟ್, ಕೋರ್ಟ್ ಅಂತ ಅಲೆಸುತ್ತಿದ್ದಾನೆ ಎಂದು ಸತೀಶನ ಅಪ್ಪ-ಅಮ್ಮ ನನಗೆ ಶಾಪ ಹಾಕಬಾರದು ಎಂಬ ಕಾರಣಕ್ಕೆ ಸ್ವಲ್ಪ ಹೊತ್ತು ಕಾದು ನೋಡಿದೆ. ಜೊತೆಯಲ್ಲೆ ಇದ್ದ ರಾಜ ಹೇಳಿದ ’ಇದು ಆಗದೆ ಇರುವ ಕೆಲಸ, ನೀನು ಜಾತ್ರೆಗೆ ಬಂದಿದ್ದೀಯ ಸುಮ್ಮನೆ ಬಾಡೂಟ ಮುಗಿಸಿಕೊಂಡು ಹೋಗು’ ಎಂದು ಸಲಹೆ ನೀಡಿದ.

ಅವನ ಮಾತು ಕೇಳದ ನಾನು ಜಾತ್ರೆ ಮುಗಿಸಿಕೊಂಡು ಆಗಾಗ ಬರುತ್ತಿದ್ದವರನ್ನೆಲ್ಲ ತಡೆದು ಘಟನೆಯನ್ನು ವಿವರಿಸಿದೆ. ಯುವಕರು ಹೌದು ಈಗಲೂ ಅಸ್ಪಶ್ಯತೆ ಆಚರಿಸುತ್ತಿರುವವರಿಗೆ ಬುದ್ದಿ ಕೆಲಸಬೇಕು ಎಂದರು. ಆದರೆ ಹಿರಿಯರಲ್ಲಿ ಬಹುತೇಕರು ನಾವೆಂದೂ ತೇರು ಮುಟ್ಟಿಲ್ಲ. ಕೇರಿಯಲ್ಲಿ ತಮ್ಮಯ್ಯನ ಮಗಳು ಮೈನೆರಿದ್ದಾಳೆ, ಸೂತಕ ಇದ್ದರೂ ತೇರು ಮುಟ್ಟಿರುವುದು ನಿನ್ನದೇ ತಪ್ಪು’ ಎಂದು ಸತೀಶನನ್ನು ಆರೋಪಿ ಮಾಡಿದರು. ‘ನೀನೋ ಹಬ್ಬ-ಜಾತ್ರೆಯಲ್ಲಿ ಊರಿಗೆ ಬಂದು ಹೋಗುತ್ತೀಯ. ನಿನ್ನ ಮಾತು ಕೇಳಿ ಪೊಲೀಸ್ ಠಾಣೆಗೆ ಹೋದರೆ ಮುಂದಾಗುವ ಅನಾಹುತಗಳನ್ನು ನಿತ್ಯೆ ಇಲ್ಲೆ ಇರುವ ನಾವು ಅನುಭವಿಸಬೇಕು. ಮುಂದೆ ಎದುರಾಗುವ ಕಷ್ಟ-ಸುಖದಲ್ಲಿ ಹಣಕ್ಕೆ ಅವರ ಮುಂದೆಯೇ ಕೈ ಚಾಚಬೇಕು. ಆಗಿದ್ದು ಆಗಿ ಹೋಗಿದೆ. ಊರಿನಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡ’ ಎಂದು ನನಗೂ ಚುಚ್ಚಿದರು. ಮೊದಲೇ ಸೂಚನೆ ನೀಡಿದ್ದ ರಾಜ ನನ್ನತ್ತ ನೋಡಿ ‘ನಿನಗಿದು ಬೇಕಿತ್ತೇ, ನಾನು ಮೊದಲೇ ಹೇಳಲಿಲ್ಲವೇ?, ಹೋಗು ಹೆಂಡತಿ-ಮಕ್ಕಳು ಜಾತ್ರೆಯಿಂದ ಬಂದಿದ್ದರೆ ಊಟ ಮಾಡಿ ನಿನ್ನ ಕೆಲಸ ನೋಡಿಕೊ’ ಎಂದು ಗದರಿಸಿದ. ಬೇರೆ ದಾರಿಯಿಲ್ಲದೆ ದುಃಖ ನುಂಗಿಕೊಂಡು ಮನೆಗೆ ಬಂದೆ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ