Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ರಾಜಕಾರಣ – ರಜೆಕಾಲದಲ್ಲಿ ಹೋಗಿ ಬರುವ ರಮ್ಯ ತಾಣವಲ್ಲ!

-ಭೂಮಿ ಬಾನು

ಚಿತ್ರ ನಟಿ ರಮ್ಯ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ್ದಾರೆ. ಕಾಂಗ್ರೆಸ್ನ ಕೆಲ ನಾಯಕರಿಗೆ ಇದು ಅರಗಿಸಿಕೊಳ್ಳಲಾಗದ ಬೆಳವಣಿಗೆ. ಅವರು ತಮ್ಮ ಅಸಹನೆಯನ್ನು ಅಲ್ಲಲ್ಲಿ ಹೊರಹಾಕಿದ್ದಾರೆ. ಸಂಸದ ಹೆಚ್.ವಿಶ್ವನಾಥ್ ಲಘುವಾಗಿ ಕಮೆಂಟ್ ಪಾಸ್ ಮಾಡಿದರೆ, ಉಗ್ರಪ್ಪ ತುಸು ಗಂಭೀರವಾಗಿಯೇ ಅಸಮಾಧಾನ ತೆರೆದಿಟ್ಟಿದ್ದಾರೆ.

ಅಸಹನೆ, ಅಸಮಾಧಾನಕ್ಕೆ ಮುಖ್ಯ ಕಾರಣ ರಮ್ಯ ಎಲ್ಲಿಂದಲೋ ಬಂದವರು ಎನ್ನುವ ಕಾರಣಕ್ಕೆ. ಸಿನಿಮಾಗಳಿಂದ ಪಡೆದ ಪಾಪುಲಾರಿಟಿಯ ಲಾಭ ಪಡೆದು ತನ್ನ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಮಟ್ಟಿಗೆ ಬಹು ಮುಖ್ಯ ಘಟನೆಯೇನೋ ಎನ್ನುವಂತೆ ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ರಮ್ಯ ಯಶಸ್ವಿಯಾದರು. ಅವರ ಹಿಂದೆ ಟಿವಿ ಸಂದರ್ಶಕಿಯಾದ ತೇಜಸ್ವಿನಿಯನ್ನು ಚುನಾವಣೆಗೆ ನಿಲ್ಲಿಸಿ ದೇವೇಗೌಡರಂತಹ ಪ್ರಬಲ ಸ್ಪರ್ಧಿಯನ್ನು ಸೋಲಿಸಲು ಕಾರಣಕರ್ತರಾಗಿದ್ದ ಡಿ.ಕೆ.ಶಿವಕುಮಾರ್ ಇದ್ದರು ಎನ್ನುವುದೂ ಪಕ್ಷದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣ. ಕಾಲ ಕ್ರಮೇಣ ಚಿತ್ರನಟಿಗೆ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಮಾನಗಳು ಸಿಕ್ಕಬಹುದು. ಹಾಗೆಲ್ಲ ಆದರೆ, ಎಷ್ಟೋ ವರ್ಷಗಳಿಂದ ಊರಿನ ಹಿರಿಯರಿಗೆ ವೃದ್ಧಾಪ್ಯ ವೇತನ ಮಾಡಿಸಿ, ಗಂಗಾ-ಕಲ್ಯಾಣ ಯೋಜನೆ ಅಡಿ ಬೋರ್ ಕೊರೆಸಿ ಕರೆಂಟು ಕೊಡಿಸಲು ಓಡಾಡಿ, ಚುನಾವಣೆ ಬಂದಾಗ ಬ್ಯಾನರ್ ಕಟ್ಟಿ, ಬಾವುಟ ಹಿಡಿದು ಊರೂರು ಅಲೆದವರ ಪಾಡೇನು ಎನ್ನುವುದು ಸಹಜವಾಗಿಯೇ ಏಳುವ ಪ್ರಶ್ನೆ. ಇದೇ ಪ್ರಶ್ನೆ ಅಪ್ಪ, ಅಜ್ಜ ಮಾಡಿದ ಹೆಸರಿನ ಬಲದ ಮೇಲೆ ಪಕ್ಷ ಸೇರಿ, ಟಿಕೆಟ್ ಗಿಟ್ಟಿಸುವ ಸಂಬರ್ಭಗಳು ಬಂದಾಗೆಲ್ಲಾ ಎದುರಾಗಿದೆ.

ಸಾಮಾನ್ಯ ಕಾರ್ಯಕರ್ತರಿಗೆ ಮತ್ತು ಸಿನಿಮಾ ಪಾಪುಲಾರಿಟಿ ಅಥವಾ ನಾಮ ಬಲದಿಂದ ಪಕ್ಷ ರಾಜಕಾರಣದಲ್ಲಿ ಮನ್ನಣೆಗಳಿಸಿದವರಿಗೆ ಇರುವ ವ್ಯತ್ಯಾಸಗಳೆಲ್ಲಾ ಅವರು ಎದುರಿಸುವ ಮೊದಲ ಚುನಾವಣೆ ನಂತರ ಮುರಿದು ಬೀಳುತ್ತವೆ. ಮೊದಲ ಚುನಾವಣೆಯಲ್ಲಿ ಅವರು ಇತರೆ ಸಾಮಾನ್ಯ ಕಾರ್ಯಕರ್ತರಂತೆ ಪರಿಚಯಿಸಿಕೊಳ್ಳುವ ಅಗತ್ಯ ಬೀಳದೆ ಇರಬಹುದು. ಆದರೆ ನಂತರದ ಚುನಾವಣೆಗಳಲ್ಲಿ ಆತ ಅಥವಾ ಆಕೆ ಕೇವಲ ರಾಜಕಾರಣಿ. ಸಿನಿಮಾ ಖ್ಯಾತಿ, ಟಿವಿ ಆಂಕರ್ ಖ್ಯಾತಿ ಯಾವುದೂ ಲಾಭಕ್ಕೆ ಬರುವುದಿಲ್ಲ. ಅಧಿಕಾರಾವಧಿಯಲ್ಲಿ ಅವರ ನಡೆ, ನುಡಿ ಅಷ್ಟೇ ಮುಖ್ಯ.ಪಕ್ಷ ಅಥವಾ ಆಡಳಿತದಲ್ಲಿ ಮೇಲೇರಲು ಕೂಡಾ ಸಿನಿಮಾ ಜಗತ್ತಿನ ಜನಪ್ರಿಯತೆ ಸಹಾಯಕ್ಕೆ ಬರುವುದಿಲ್ಲ. ಉದಾಹರಣೆಗೆ ಅಂಬರೀಷ್ ಅಥವಾ ಸಿ.ಪಿ ಯೋಗೇಶ್ವರ ಮಂತ್ರಿ ಸ್ಥಾನ ಪಡೆದದ್ದು ಅವರು ಚಿತ್ರನಟರೆಂದಲ್ಲ. ಅದಕ್ಕೆ ಅವರ ಸೀನಿಯಾರಿಟಿ (ಅಂಬರೀಷ್) ಮತ್ತು ಪಕ್ಷಾಂತರ (ಯೋಗೇಶ್ವರ) ಕಾರಣಗಳಿದ್ದವು.

ಕರ್ನಾಟಕದಲ್ಲಿ ಚಿತ್ರನಟರು ಆಗಾಗ ರಾಜಕಾರಣ ಪ್ರವೇಶಿಸಿದ್ದುಂಟು. ಆದರೆ ಪಕ್ಕದ ರಾಜ್ಯಗಳಲ್ಲಿ ನಡೆದಿರುವಂತೆ ಯಾರೊಬ್ಬರೂ ಬಹುಕಾಲ ಅಧಿಕಾರದಲ್ಲಿಲ್ಲ. ಹಾಗೆ ಚುನಾವಣೆ ಎದುರಿಸಿ ಅಧಿಕಾರ ಹಿಡಿದವರು ತಮ್ಮ ಕ್ಷೇತ್ರದಲ್ಲಿ, ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತಿನಿಂದ ಪೂರೈಸಿದವರೂ ಅಲ್ಲ. ಉದಾಹರಣೆಗೆ ಅಂಬರೀಷ್. ತಾನು ಹಿರಿಯ, ಜನಪ್ರಿಯ ನಾಯಕ ಆದರೂ ಕೇಂದ್ರದಲ್ಲಿ ಮಂತ್ರಿ ಪಟ್ಟ ಕೊಟ್ಟಿಲ್ಲ ಎಂದು ಅಸಮಾಧಾನ ಪಟ್ಟುಕೊಂಡೇ ಇದ್ದವರು, ಮಂತ್ರಿಯಾದಾಗ ಮಾಡಿದ್ದೇನು – ರಾಜೀನಾಮೆಯ ನಾಟಕ. ಅವರು ಆ ಸಂದರ್ಭದಲ್ಲಿ ತಮ್ಮ ನಡೆ ನಾಟಕ ಅಲ್ಲ ಎಂದು ಎಷ್ಟು ಬಾರಿ ಹೇಳಿದರೂ ಅದು ನಾಟಕವೇ ಆಗಿತ್ತು ಎನ್ನಲು ಕಾರಣವೆಂದರೆ ಅವರು ರಾಜೀನಾಮೆಯನ್ನು ಅಂಗೀಕರಣವಾಗುವಂತೆ ನೋಡಿಕೊಳ್ಳಲೇ ಇಲ್ಲ. ತಾಂತ್ರಿಕವಾಗಿ ಮಂತ್ರಿ ಸ್ಥಾನದಲ್ಲಿ, ಸಂಸದರಾಗಿ ಮುಂದುವರಿದರು. ಯಾರಾದರೂ ಕೇಳಿದರೆ ನಾನಾಗಲೇ ರಾಜೀನಾಮೆ ಕೊಟ್ಟಾಗಿದೆ ಎನ್ನುತ್ತಿದ್ದರು. ಆದರೆ ಅದೇ ಸಂದರ್ಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮತ ಹಾಕಲು ಬಂದರು. ನೀವು ರಾಜೀನಾಮೆ ನೀಡಿದ್ದೀರಲ್ಲ ಎಂದು ಪತ್ರಕರ್ತರು ಕೇಳಿದಾಗ ಒಂದಿಷ್ಟೂ ಭಿಡೆ ಇಲ್ಲದೆ ‘ನಾನಿನ್ನೂ ಸದಸ್ಯ, ಇಲ್ಲಿದೆ ನೋಡಿ ಐಡೆಂಟಿಟಿ ಕಾರ್ಡ್’ ಎಂದು ಕೆಮರಾ ಮುಂದೆ ಕೈ ತೋರಿದರು.

ಬಹಳ ಕಾಲ ರಾಜಕಾರಣದಲ್ಲಿ ಬೇರು ಮಟ್ಟದಿಂದ ಕೆಲಸ ಮಾಡಿದವರಿಗೆ ಇಂತಹ ನಡೆವಳಿಕೆಗಳು ಬೇಸರ ಹುಟ್ಟಿಸುತ್ತವೆ. ಸಿನಿಮಾದವರು ಸೀರಿಯಸ್ಸಾಗಿ ರಾಜಕಾರಣ ಮಾಡುವುದು ಯಾವಾಗ? ಮತ್ತೊಬ್ಬ ನಟ ಶಶಿಕುಮಾರ್ ದೂ ಇದೇ ನಡವಳಿಕೆ. ಒಂದು ಚಿತ್ರದ ಶೂಟಿಂಗ್ ಗೆಂದು ಚಿತ್ರದುರ್ಗದ ಹತ್ತಿರ ಬಂದಿದ್ದ ಸಮಯದಲ್ಲಿಯೇ ಜೆ.ಎಚ್ ಪಟೇಲರು ಫೋನ್ ಮಾಡಿ ನೀನು ಚಿತ್ರದುರ್ಗ ಲೋಕಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸು ಎಂದರು. ಶಶಿಕುಮಾರ್ ನಾಮಪತ್ರ ಸಲ್ಲಿಸದರು. ಗೆದ್ದೂ ಬಿಟ್ಟರು. ಅಲ್ಲಿವರೆಗೆ ಆ ನಟ ಜೆಡಿ(ಯು) ಸೇರಿರಲಿಲ್ಲ. ಚಿತ್ರನಟನೆಂಬ ಖ್ಯಾತಿ ಮತ್ತು ಮೂರು ಬಾರಿ ಒಂದೇ ವ್ಯಕ್ತಿಯನ್ನು ಆರಿಸಿದ್ದ ಮತದಾರರು ಹೊಸಮುಖಕ್ಕೆ ಮಣೆ ಹಾಕಿದರು. ಮೇಲಾಗಿ ಜಾತಿಬೆಂಬಲವೂ ಇತ್ತು. ಆದರೆ ನಂತರದ ದಿನಗಳಲ್ಲಿ ಈ ಚಿತ್ರನಟನಿಗೆ ಅದೇ ಖ್ಯಾತಿ ಉಳಿಯಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋತರು. ಸಂಸದರಾಗಿದ್ದ ವೇಳೆ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಖರ್ಚು ಮಾಡಿ ಅಲ್ಲಲ್ಲಿ ಸಮುದಾಯ ಭವನ ಕಟ್ಟಿಸಿ ಕಮಿಷನ್ ಪಡೆದರು ಎಂಬ ಆರೋಪಗಳಿವೆ. ಆದರೆ ಅವರೆಂದೂ ಚಿತ್ರದುರ್ಗದ ಜನತೆ ಅನುಭವಿಸುತ್ತಿರುವ ನೀರಾವರಿ ಸಮಸ್ಯೆ ಬಗ್ಗೆ ಗಂಭೀರವಾಗಿ ಮಾತನಾಡಲೇ ಇಲ್ಲ.

ಇನ್ನು ಜಗ್ಗೇಶ್. ಕಾಡಿಬೇಡಿ ಕಾಂಗ್ರೆಸ್ ಟಿಕೆಟ್ ಪಡೆದವರು, ಬೇಡಿ-ಕಾಡಿ ಗೆದ್ದರು. ಆದರೆ ಈ ಕಾಮಿಡಿ ನಟನಿಗೆ ಮತದಾರನ ಬಗ್ಗೆ ಗೌರವ ಇರಲಿಲ್ಲ. ಯಡಿಯೂರಪ್ಪ, ಅಶೋಕ್ ತಮ್ಮ ಕ್ಷೇತ್ರ ಉದ್ಧಾರ ಮಾಡ್ತಾರೆ ಅಂದ್ರು ಎನ್ನುವ ಕಾರಣಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಇಂತಹವರಿಂದ ಜನರು ತಾನೇ ಏನು ನಿರೀಕ್ಷಿಸಿಯಾರು? ಈಗ ರಮ್ಯ ರಾಜಕೀಯ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಒಂದು ಪಕ್ಷದ ಕಾರ್ಯಕರ್ತೆ ಎಂದರೆ, ನಾಯಕಿ ಆದರೆ ಅಥವಾ ಜನಪ್ರತಿನಿಧಿ ಯಾದರೆ ದಿನದ ಬಹುಕಾಲ ಜನರ ಮಧ್ಯೆ ಇರಬೇಕು. ಹಿರಿಯ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷ ಸೋತರೆ ಹೊಣೆ ಹೊರಬೇಕು. ಮಗನ ಸ್ಕೂಲ್ ಅಡ್ಮಿಷನ್ ಶಿಫಾರಸ್ಸು ಕೇಳುವವರಿಂದ ಹಿಡಿದು, ರಸ್ತೆ ಮೂಲೆಯಲ್ಲಿ ಕಸದ ಗುಂಡಿ ಕ್ಲೀನ್ ಮಾಡಿಲ್ಲ ಎಂದು ದೂರುವವರನ್ನೂ ತಾಳ್ಮೆಯಿಂದ ಕೇಳಬೇಕು. ಏಕೆಂದರೆ ಡಿ.ಕೆ.ಶಿವಕುಮಾರ್ ಈಗಾಗಲೇ ಸೂಚನೆ ಕೊಟ್ಟಿದ್ದಾರೆ, ಅವರು ರಮ್ಯ ಅವರನ್ನು ಒಕ್ಕಲಿಗ ಡಾಮಿನೆಂಟ್ ಕ್ಷೇತ್ರದಲ್ಲಿ ಲೋಕಸಭೆಗೆ ನಿಲ್ಲಿಸುತ್ತಾರಂತೆ. ಬೆಂಗಳೂರಿನ ಯಾವುದೋ ಒಂದು ಕ್ಷೇತ್ರದಲ್ಲಿ ಮುಂದೆ ನಿಂತರೆ ಅಚ್ಚರಿಯೇನಿಲ್ಲ. (ಅವರು ಸದ್ಯ ಶಾಂತಿನಗರ ಬ್ಲಾಕ್ ಸದಸ್ಯೆ).

ರಾಜಕಾರಣ ರಜೆಕಾಲದಲ್ಲಿ ಹೋಗಿ ಬರುವ ರಮ್ಯತಾಣವಲ್ಲ. ಅದು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅಪೇಕ್ಷಿಸುವ ಕ್ಷೇತ್ರ. ರಮ್ಯ ಅವರಾದರೂ ಗಂಭೀರ ರಾಜಕಾರಣಿಯಾಗಲಿ.

ಪೋಸ್ಕೊ ಕ೦ಪನಿಯ ರಾಜಕಾರಣ – ಹೋರಾಟದ ದಾರಿಯಲ್ಲಿ ಹಲವು ಪ್ರಶ್ನೆಗಳು – ಕೆಲವೇ ಉತ್ತರಗಳು

ಹು.ಬಾ.ವಡ್ಡಟ್ಟಿ

ಪೋಸ್ಕೊ ಸ್ಟೀಲ್ ಕ೦ಪನಿಯ ಸ್ಥಾಪನೆಯು ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೊರಕವಾಗಿರುತ್ತದೆ. ಅಭಿವೃದ್ಧಿಯ ನಕ್ಷೆಯಲ್ಲಿ ಗದಗ ಜಿಲ್ಲೆ ಗುರುತಿಸಲ್ಪಡುತ್ತದೆ. ಅಭಿವೃದ್ದಿ ನಾಗಾಲೋಟವು ಯಾವುದೇ ಅಡೆ-ತಡೆಯಿಲ್ಲದೇ ಸಾಗುತ್ತದೆ ಅನ್ನುವ ಪು೦ಕಾನುಪು೦ಕವಾದ ತಲೆ ಬುಡವಿಲ್ಲದ ವಾದಗಳನ್ನು ಬಿಜೆಪಿ ಪರವಾಗಿರುವ ದಲ್ಲಾಳಿಗಳು ಬಿಡತೊಡಗಿದರು. ಗದಗ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ದೊಡ್ಡ ಗಾತ್ರದ ಕೈಗಾರಿಕೆಗಳು ಸ್ಧಾಪಿಸಲ್ಪಟ್ಟಿರಲಿಲ್ಲ. ಪೋಸ್ಕೊ ಕ೦ಪನಿಯಿ೦ದಾಗಿ ಕೈಗಾರಿಕಾ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಸುಧಾರಿಸುತ್ತದೆ. 2-3 ಚೀಲ ಗೋಧಿ-ಜೋಳ ಬೆಳೆಯುವ ಭೊಮಿಯನ್ನು ಮಾರಿದರೆ ಲಕ್ಷ-ಲಕ್ಷಗಟ್ಟಲೇ ಹಣವನ್ನು ಪಡೆದುಕೊ೦ಡು ಆರಾಮವಾಗಿ ಐಷಾರಾಮಿ ಜೀವನ ಸಾಗಿಸಬಹುದೆ೦ಬ ಕಲ್ಪನೆಯನ್ನು ಬಡ ರೈತರಲ್ಲಿ ಕನಸೆ೦ಬ೦ತೆ ದಲ್ಲಾಳಿಗಳು, ಪುಡಿ ರಾಜಕಾರಣಿಗಳು ಬಿತ್ತ ತೊಡಗಿದರು.

ಜಿಲ್ಲೆಯಲ್ಲಿಯೇ ದೊಡ್ಡ ಕೈಗಾರಿಕೆಗಳು ಎ೦ದರೆ ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್, ಲಕ್ಷ್ಮೇಶ್ವರದ ನೂಲಿನ ಗಿರಣಿ, ಮತ್ತು ಮು೦ಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್‍ಸ ಸಕ್ಕರೆ ಕಾರ್ಖಾನೆ. ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್ ಮತ್ತು ಲಕ್ಷ್ಮೇಶ್ವರದ ನೂಲಿನ ಗಿರಣಿ ಸಹಕಾರಿ ಸ೦ಘದ್ದು ಆಗಿದ್ದರೆ, ವಿಜಯನಗರ ಶುಗರ್‍ಸ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಪೋಸ್ಕೊ ಸ್ಟೀಲ ಉತ್ಪಾದನಾ ಕ೦ಪನಿಯು ದೊಡ್ಡ ಸ೦ಚಲನವನ್ನು ಉ೦ಟು ಮಾಡುತ್ತದೆ ಅನ್ನುವ ಭ್ರಮೆಗಳು ಯುವ ರೈತರಲ್ಲಿ ಪುಟಿಯ ತೊಡಗಿದವು.

ಆದರೆ ವಾಸ್ತವಾ೦ಶಗಳೇ ಬೇರೆಯಾಗಿರುವದನ್ನು ಕಾಣಬಹುದಾಗಿದೆ . 50 ವರ್ಷಗಳಲ್ಲಿ ಮಾಡದಿರುವ ಅಭಿವೃದ್ದಿಯನ್ನು ಸರಕಾರ ಈಗಲೆ ಕೈಗೆತ್ತಿಕೊ೦ಡಿದ್ದು ಏಕೆ? ಎಂಬ ಸಹಜ ಪ್ರಶ್ನೆಯು ತಾನಾಗಿಯೇ ಬರುತ್ತದೆ. ಹಾಗಾದರೇ, ಅದರ ಹಿನ್ನೆಲೆಯ ಕುರಿತಾಗಿ ನೋಡಬೇಕಿದೆ.

ಮು೦ಡರಗಿ ತಾಲ್ಲೂಕಿನ ಹಳ್ಳಿಗುಡಿ, ಜ೦ತ್ಲಿ-ಶಿರೊರು, ಹರ್ಲಾಪುರ ಗ್ರಾಮಗಳು ಮಳೆಯಾಧಾರಿತ ಫಲವತ್ತಾದ ಕೃಷಿ ಭೂಮಿಯನ್ನು ಹೊ೦ದಿದೆ. ಕಪ್ಪು ಮಣ್ಣಿನ ಫಲವತ್ತಾದ ಈ ನೆಲವು ರೈತರ ಬದುಕಿಗೆ ಸಾವಿರಾರು ವರ್ಷಗಳಿ೦ದ ಅನ್ನ ನೀಡಿ ಸಲಹುತ್ತಾ ಬ೦ದಿದೆ. ಇಲ್ಲಿಯೇ ಪೋಸ್ಕೊ ಸ್ಧಾಪಿಸಲು ಸರಕಾರ ಹೊರಟ್ಟಿದ್ದು ಏಕೆ? ಈ ಪ್ರದೇಶದ ಹಳ್ಳಿಗುಡಿಯನ್ನು ಹೊರತುಪಡಿಸಿದರೆ ಜ೦ತ್ಲಿ-ಶಿರೊರು, ಹರ್ಲಾಪುರ ಪೇಠಾಲೊರು ಮತ್ತು ಮೇವು೦ಡಿ ಶಿ೦ಗಟಾಲೊರು ಏತ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಏತ ನೀರಾವರಿಯ ಕಾಮಗಾರಿಯು ತೀವ್ರಗತಿಯಲ್ಲಿ ಇರುವದರಿ೦ದ ನೀರಾವರಿಗೆ ಪೈಪಲೈನ ಮೂಲಕ ತರುತ್ತಿರುವ ನೀರನ್ನು ಪೋಸ್ಕೊ ಕ೦ಪನಿಗೆ.ಯಾವದೇ ಅಡೆ-ತಡೆಯಿಲ್ಲದೆ ಕೊಡಬಹುದು. ಇದು ನೀರಾವರಿ ಹೆಸರಲ್ಲಿ ಕ೦ಪನಿಗೆ ನೀರು ಕೊಟ್ಟರೆ ಯಾರೂ ಗಮನಿಸುವದಿಲ್ಲಾ, ಹೇಗೊ ನಡೆಯುತ್ತದೆ, ಅನ್ನುವ ಹುನ್ನಾರ ಸರಕಾರದ ಮನ:ಪಟಲದಲ್ಲಿ ಇತ್ತು ಅನಿಸುತ್ತದೆ.

ಅಲ್ಲದೇ. ನೀರಾವರಿಯ ಕಾಮಗಾರಿಯ ತೀವ್ರತೆಯು ರೈತರಿಗೆ ನೀರು ಕೊಡುವ ಕಡೆಗಿ೦ತಲು ಕ೦ಪನಿಗೆ.ನೀರು ನೀಡುವ ಹುನ್ನಾರವನ್ನು ಸರಕಾರವು ನಡೆಸಿತ್ತೆ? ಎಂಬ ಸ೦ಶಯವೂ ಈ ಸಂದರ್ಭದಲ್ಲಿ ಕಾಡದೇ ಇರದು?

ಬರಿ ನೀರಿನ ಪ್ರಶ್ನೆಯೋ? ರೈತನ ಬದುಕಿನ ಪ್ರಶ್ನೆಯೋ?
ಶಿ೦ಗಟಾಲೊರು ಎತ ನೀರಾವರಿಯ ಬ್ಯಾರೇಜನಲ್ಲಿ ನೀರಿನ ಸ೦ಗ್ರಹಣಾ ಸಾಮರ್ಥ್ಯವು 18.5 ಟಿಎ೦ಸಿಯುಷ್ಟು ಇದ್ದು, ಇದರಲ್ಲಿ 2 ಟಿಎ೦ಸಿ ಕುಡಿಯುವ ನೀರಿನ ಬಳಕೆಗೆ ಎ೦ದು ಅ೦ದಾಜು ಮಾಡಲಾಗಿದೆ. ಉಳಿದ 7.5 ಟಿಎ೦ಸಿ ನೀರಿನಲ್ಲಿ ಹೊವಿನಹಡಗಲಿ, ಮು೦ಡರಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿಯ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಮಾಡಲು ಬಳಸಬಹುದಾಗಿದೆ. ಇದರಿ೦ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಗದಗ ಜಿಲ್ಲೆಯ ಮು೦ಡರಗಿ ತಾಲ್ಲೂಕು, ಮತ್ತು ಕೊಪ್ಪಳ ಜಿಲ್ಲೆಯ ರೈತರ ಹೊಲಗಳಿಗೆ 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತದೆ.

ಪೋಸ್ಕೊ ಕ೦ಪನಿಯ ಸ್ಥಾಪನೆ ಆಗುವ ಸಾಧ್ಯತೆಯಿದ್ದರೆ ಕನಿಷ್ಠ 2 ರಿ೦ದ 3 ಟಿಎ೦ಸಿ ನೀರನ್ನು ಪೋಸ್ಕೊ ಕ೦ಪನಿಯು ಬಳಸುತ್ತಿತ್ತು. ರೈತರ ಭೂಮಿಯ ನೀರಾವರಿ ಸಲುವಾಗಿ ಇರುವ 7.5 ಟಿಎ೦ಸಿ ನೀರಿನಲ್ಲಿ 2 ರಿ೦ದ 3 ಟಿಎ೦ಸಿ ನೀರಿಗೆ ಕನ್ನ ಬಿದ್ದಿದ್ದರೆ ರೈತರ ಭೂಮಿ ನೀರಾವರಿ ಮಾಡಲು ಬರೀ 4.5 ಟಿಎ೦ಸಿಯಷ್ಟೇ ನೀರು ಉಳಿಯುತ್ತಿತ್ತು. ಅಭಿವೃದ್ದಿಯ ಕುರಿತು ಮಾತನಾಡುವವರು ಒ೦ದೆಡೆ ರೈತರ ಸಾವಿರಾರು ಎಕರೆ ಭೂಮಿಯುನ್ನು ಕಸಿದುಕೊಳ್ಳುತ್ತಿದ್ದರೆ ಅದರ ಜೊತೆ-ಜೊತೆಯಲ್ಲಿಯೇ ರೈತರ ಭೂಮಿಗೆ ಬೇಕಿರುವ ನೀರನ್ನೂ ಕಸಿದುಕೊ೦ಡಿದ್ದರೆ ರೈತರ ಬದುಕಿಗೆ ಕ೦ಬ ಮತ್ತು ಕೈಯ ಹೊಡೆತಗಳು ಏಕಕಾಲಕ್ಕೆ ಬೀಳುತ್ತಿತು. ರೈತರ ಬದುಕು ಮತ್ತಷ್ಟು ಹೈರಾಣ ಆಗುವ ದು:ಸ್ಧಿತಿಗೆ ತ೦ದೊಡ್ಡುತ್ತಿತ್ತು. ಇದು ರೈತರನ್ನು ದ್ವಿಮುಖವಾಗಿ ಕೊಳ್ಳೆ ಹೊಡೆಯುವ ತ೦ತ್ರವಾಗಿ ಸರಕಾರವು ಯೋಚಿಸುತ್ತಿರಬಹುದೇ ಅನಿಸದೇ ಇರಲಾರದು. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು “ಪೋಸ್ಕೊಗೆ ನೀರು ಕೊಡುವದಿಲ್ಲ” ಎನ್ನುವ ಹೇಳಿಕೆ, “ಆಲಮಟ್ಟಿ ನೀರು ಕೋಡುತ್ತೇವೆ” ಎಂಬ ಮರುಹೇಳಿಕೆ, “ನೀರೇ ಕೊಡುವದಿಲ್ಲ” ಎನ್ನುವ ಮರುಮರುಹೇಳಿಕೆ ಕ೦ಪನಿಯು ಮಳೆಯನ್ನು ಆಶ್ರಯಿಸಿ ಅ೦ತರ್ಜಲವನ್ನು ಬಳಸಿಕೊಳ್ಳಲಿ ಅನ್ನುವದು ಸರಕಾರದ ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತದೆ.

ಎರಿ ಇದ್ದವ ದೊರೆ.
ಎಷ್ಟೆಲ್ಲಾ ತಾಪಪ್ರಯ, ಮಳೆಯಿಲ್ಲದೆ ಬ೦ದ ಬೆಳೆಯಲ್ಲಿಯೇ ಸ೦ತೃಪ್ತಿ ಕಾಣುವ ರೈತರ ಬದುಕು, ಸಮೃದ್ಧಿಯಿಲ್ಲದೇ ಇದ್ದರೂ ಸಮಾಧಾನದ ಬದುಕು ಸಾಗಿಸಲು ಅಡ್ಡಿಯಿಲ್ಲಾ ಎಂಬ ಭಾವದಲ್ಲಿ ಬದುಕು ಸಾಗಿಸುತ್ತಾರೆ. ಕಪ್ಪು ನೆಲದ ಎರಿ ಮಣ್ಣು ಫಲವತ್ತತ್ತೆಯನ್ನು ಹೊ೦ದಿದ್ದು, ಇದು ಭಾರತದಲ್ಲಿ ಫಲವತ್ತಾದ ಮಣ್ಣು ಎ೦ದು ಕೃಷಿ ತಜ್ಞರು ಗುರುತಿಸುತ್ತಾರೆ. ಜನಪದಗಾರರು ಹಳ್ಳಿಗಾಡಿನ ಸೊಗಡಿನಲ್ಲಿ “ಎರಿ ಇದ್ದಾ೦ದ ದೊರಿ” ಅನ್ನುವ ನುಡಿಗಟ್ಟು ಕಪ್ಪುಮಣ್ಣು ಸುಖ-ಸಮೃದ್ಧಿ ಫಸಲನ್ನು ತರುತ್ತದೆ, ಇದರಿ೦ದ ರಾಜಮಹಾರಾಜರ೦ತೆ ಬಾಳಬಹುದು ಎಂದು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಅದು ನಿಜ ಕೂಡಾ ಆಗಿದೆ.

ಇ೦ತಹ ಸಮೃದ್ದಿಯಾಗಿ ಬೆಳೆ ಬೆಳೆಯಲು ಯೋಗ್ಯವಾದ ಭೂಮಿಗೆ ಕೈಗಾರಿಕಾ ಸಚಿವ ನಿರಾಣಿಯವರ ಹಳ್ಳಿಗುಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡಲಿರುವ ಭೂಮಿಯು ಬ೦ಜರು ಆಗಿದೆ ಎಂಬ ಹೇಳಿಕೆಯು ಅವರ ಕೃಷಿ ಭೂಮಿಯ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಅದು  ಹಾಸ್ಯಾಸ್ಪದ ಕೂಡಾ ಆಗಿದೆ. ಅದಕ್ಕೆ ಉತ್ತರವೆ೦ಬ೦ತೆ ಜಗದ್ಗುರು ಡಾ|| ತೊ೦ಟದ ಸಿದ್ದಲಿ೦ಗ ಮಹಾಸ್ವಾಮಿಗಳು, ಪೋಸ್ಕೊ ಕ೦ಪನಿಯ ಭೂಸ್ವಾಧೀನಕ್ಕೆ ವಶಪಡಿಸಿಕೊಳ್ಳಲಿದ್ದ ಹಳ್ಳಿಗುಡಿ ಭೂಮಿಯಲ್ಲಿ ಅಡ್ಡಾಡಿ, “ಈ ಭೂಮಿ ಬ೦ಜರು ಅಲ್ಲ, ಫಲವತ್ತಾದ ಭೂಮಿಯನ್ನು ಹೊ೦ದಿದೆ, ಸಮೃದ್ಧ ಬೆಳೆ ಬರುತ್ತದೆ,” ಎನ್ನುವದನ್ನು ಮಾಧ್ಯಮದವರ ಎದುರು ತೋರಿಸಿಕೊಟ್ಟರು,

ಆನ೦ತರವೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಭೂಮಿಯ ಬಗೆಗಿನ ಅಜ್ಞಾನದ ಅರಿವು ಉ೦ಟಾಗಿ “ಇಲ್ಲಾ, ಇಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿ೦ದ ಬ೦ಜರು ಎಂಬ ಪದ ಬಳಕೆ ಮಾಡಿದ್ದೇನೆ. ಅದರ ಬದಲು ಅದು ನೀರಾವರಿ ಭೂಮಿ ಅಲ್ಲ,” ಎಂದು ಒತ್ತಿ ಹೇಳ ತೊಡಗಿದರು.

(ಮುಂದುವರೆಯುವುದು…)

ಚಿತ್ರಗಳು : ಲೇಖಕರವು

Gwangyang Steelworks

ಕೂಡ್ಲಿಗಿಗೆ ಪೋಸ್ಕೊ ಬೇಡ, ಗುಡಿಕೈಗಾರಿಕೆಗಳು ಬೇಕು.

ಪ್ರಜಾವಾಣಿ (ವಾಚಕರವಾಣಿ 24.08.2011)ಯ ಬಿ.ಎಂ ಪ್ರಭುದೇವ ಎಂಬುವವರ ಪತ್ರದಲ್ಲಿ ಪೋಸ್ಕೊ ಕೂಡ್ಲಿಗಿಗೆ ಬರಲಿ ಎಂಬ ಆಶಯ ವ್ಯಕ್ತವಾಗಿತ್ತು. ಕೂಡ್ಲಿಗಿಗೆ ಪೋಸ್ಕೋ ಕಂಪನಿ ಬರುತ್ತದೆಯಂತೆ, ಅದಕ್ಕಾಗಿ ಭೂಮಿಯನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆಯಂತೆ ಮುಂತಾದ ಗಾಳಿ ಮಾತುಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಅದೇನೇ ಇರಲಿ, ಈಗ ಪ್ರಶ್ನೆ ಏಳುವುದು ಪೋಸ್ಕೊ ಬಂದಾಕ್ಷಣ ಕೂಡ್ಲಿಗಿಯ ಸಮಗ್ರ ಅಭಿವೃದ್ಧಿಯಾಗುತ್ತದೆಯೆ ಎನ್ನುವುದು. ಹಾಗೆ ಅಂದುಕೊಂಡರೆ ಅದೊಂದು ಭ್ರಮೆ. ಕಾರಣ ಆ ಬೃಹತ್ ಕಂಪನಿ ಸ್ಥಳೀಯ ಉತ್ಪಾದನೆಯನ್ನಾಧರಿಸಿ ನಡೆಯುವುದಿಲ್ಲ. ಬದಲಾಗಿ ಇಲ್ಲಿಯ ಭೂಮಿ, ನೀರು, ವಿದ್ಯುತ್, ಮಾನವ ಸಂಪನ್ಮೂಲ ಬಳಸಿಕೊಂಡು ತನ್ನ ರಾಕ್ಷಸೀ ಹೊಟ್ಟೆಯನ್ನು ತುಂಬಿಸಿಕೊಳ್ಳುವಂತದ್ದು.

ಹಾಗಾಗಿ ಕಾರ್ಖಾನೆ ಸ್ಥಾಪನೆಯಾದರೆ, ಸ್ಥಾಪಿತ ಸ್ಥಳದ ಸುತ್ತಮತ್ತ ಒಂದಷ್ಟು ಅಂಗಡಿ ಮುಗ್ಗಟ್ಟುಗಳು, ಕೆಲವು ಜನರಿಗೆ ಗೇಟು ಕಾಯುವ ಕೆಲಸ, ಉGwangyang Steelworksಳಿದಂತೆ ಒಂದಷ್ಟು ಕೆಳದರ್ಜೆಯ ಕೆಲಸಗಳು ಸಿಗುವುದನ್ನು ಬಿಟ್ಟರೆ ಅದರಿಂದ ಕೂಡ್ಲಿಗಿ ತಾಲೂಕಿಗೆ ದೊಡ್ಡ ಉಪಕಾರವಾಗದು. ಆದರೆ ಅದು ಉಂಟು ಮಾಡುವ ದಮನಕಾರಿ ಪರಿಣಾಮಗಳನ್ನು ಮಾತ್ರ ಕೂಡ್ಲಿಗಿ ಜನತೆ ಸಮಾನವಾಗಿ ಅನುಭವಿಸಬೇಕಾಗುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಬಳ್ಳಾರಿ ಜಿಲ್ಲೆ ತೋರಣಗಲ್ಲು ಸಮೀಪದ ಜಿಂದಾಲ್‌ನ ಸುತ್ತಮುತ್ತಲ ಹಳ್ಳಿಗಳು ರೋಗಿಷ್ಟಗಳಾಗಿ ನರಳುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ.

ಈ ಹೊತ್ತು ಕೂಡ್ಲಿಗಿಗೆ ಬೇಕಾಗಿರುವುದು ಪೋಸ್ಕೊದಂತಹ ರಾಕ್ಷಸಿ ಕಂಪನಿಗಳಲ್ಲ, ಬದಲಾಗಿ ಗಾಂಧೀಜಿ ಹೇಳಿದ ಗುಡಿ ಕೈಗಾರಿಕೆಗಳು. ಈ ನೆಲೆಯಲ್ಲಿ ಕೂಡ್ಲಿಗಿಯ ನಿಧಾನಗತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಕೂಡ್ಲಿಗಿ ಹಿಂದುಳಿದ ತಾಲೂಕುಗಳಲ್ಲಿ ಒಂದು. ಇದು ಎರಡೂವರೆ ಲಕ್ಷ ಜನಸಂಖ್ಯೆ, 217 ಹಳ್ಳಿಗಳ, ಬೆರಳೆಣಿಕೆಯ ಪಟ್ಟಣಗಳ ತಾಲೂಕು. ಇಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಈ ಚರ್ಚೆ ಇಂದು ಅಗತ್ಯ.

ತಾಲೂಕಿನ ಹೊಸಹಳ್ಳಿ ಜೋಗಿಹಳ್ಳಿ ಭಾಗದಲ್ಲಿ ಶೇಂಗ ಪ್ರಮುಖ ಬೆಳೆ. ಸರಕಾರ ಎಣ್ಣೆ ಮಿಲ್ಲುಗಳನ್ನು ಸ್ಥಾಪಿಸಿದರೆ ಶೇಂಗ, ಸೂರ್ಯಕಾಂತಿ, ಎಳ್ಳು, ಮುಂತಾದ ಎಣ್ಣೆಕಾಳುಗಳ ಬೆಳೆಗಾರರನ್ನೂ ಒಳಗೊಂಡಂತಾಗುತ್ತದೆ. ಅಂತೆಯೇ ನಿಂಬಳಗೆರೆ ಮುಂತಾದ ಕಡೆ ರೇಶ್ಮೆ ಬೆಳೆ ಹೆಚ್ಚಾಗಿದೆ. ಇಲ್ಲಿ ರೇಶ್ಮೆ ಗೂಡುಗಳನ್ನು ಮಾರಲು ದೂರದ ರಾಮನಗರಕ್ಕೆ ಒಯ್ಯುತ್ತಾರೆ. ಈ ರೇಶ್ಮೆ ಬೆಳೆಗಾರರನ್ನು ಆಶ್ರಯಿಸಿ ರೇಶ್ಮೆ ನೂಲು ತೆಗೆವ, ರೇಶ್ಮೆ ಸೀರೆಗಳನ್ನು ನೇಯುವ ಗುಡಿ ಕೈಗಾರಿಕೆಯನ್ನು ಸ್ಥಾಪಿಸಬೇಕಿದೆ. ಅಂತೆಯೇ ಕೂಡ್ಲಿಗಿಯಲ್ಲಿ ಎಥೇಚ್ಚವಾಗಿ ಹತ್ತಿ ಬೆಳೆಗಾರರಿದ್ದಾರೆ. ಹಾಗಾಗಿ ಸರಕಾರ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಅಗತ್ಯವಿದೆ. ಉಜ್ಜಿನಿ ಮುಂತಾದ ಭಾಗಗಳಲ್ಲಿ ಕುರಿ ಸಾಕಣೆಯೂ, ಕುರಿ ಹುಣ್ಣೆಯಿಂದ ಕಂಬಳಿ ನೇಯ್ಗೆಯೂ ಇದೆ. ಇಲ್ಲಿ ಕಂಬಳಿ ನೇಕಾರರಿಗೆ ಅನುಕೂಲವಾಗುವಂತಹ ಕೈಮಗ್ಗಗಳನ್ನು ಸ್ಥಾಪಿಸಬೇಕಿದೆ. ಅಂತೆಯೇ ಕಂಬಳಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಬೇಕಿದೆ.

ಕೂಡ್ಲಿಗಿ ತಾಲೂಕು ಹುಣಸೆ ವ್ಯಾಪಾರಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಹುಣಸೆ ವ್ಯಾಪಾರದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ. ಗುಡೇಕೋಟೆ ಭಾಗದ ಸೀತಾಫಲ ಹಣ್ಣುಗಳು ದೇಶವಿದೇಶಗಳಿಗೆ ರಪ್ತಾಗುತ್ತಿವೆ. ಈ ಸೀತಾಫಲದ ಬೆಳೆಯ ಅಭಿವೃದ್ದಿಗಾಗಿ ತೋಟಗಾರಿಕೆ ಇಲಾಖೆಯವರು ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಗುಡೇಕೋಟೆಯ ಜೇನು ತುಂಬಾ ಪ್ರಸಿದ್ಧ. ಇದನ್ನು ಆಧರಿಸಿ ಜೇನು ಸಾಕಣೆಕೇಂದ್ರವಾಗಲಿ ಇದಕ್ಕೆ ಪೂರವಾದ ವಾತವರಣವನ್ನು ಸೃಷ್ಟಿಸಬೇಕು. ಈಗ ಮೆಕ್ಕೆಜೋಳದ ಬೆಳೆ ಹೆಚ್ಚಾಗಿದೆ. ಮೆಕ್ಕೆಜೋಳದ ಉಪ ಉತ್ಪನ್ನಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಕೊಟ್ಟೂರಿನ ಮಂಡಕ್ಕಿ (ಪುರಿ) ಹೆಚ್ಚು ಪ್ರಸಿದ್ಧಿ. ಹಾಗಾಗಿ ಸರಕಾರ ಮಂಡಕ್ಕಿ ಭಟ್ಟಿಗಳನ್ನು ಸ್ಥಾಪಿಸಿ, ಪೂರಕವಾದ ಮಾರುಕಟ್ಟೆಯನ್ನು ಸೃಷ್ಠಿಸಬೇಕು.

ಈಗ ಕೂಡ್ಲಿಗಿಯಲ್ಲಿ ಹೈನುಗಾರಿಕೆ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನೆರವಾಗುವಂತಹ ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಿದೆ.  ಚರ್ಮೊಧ್ಯವನ್ನು ಅವಲಂಬಿಸಿದವರೂ ಹೆಚ್ಚಿದ್ದಾರೆ, ಹಾಗಾಗಿ ಚರ್ಮೊದ್ಯಮವನ್ನೂ ಅಭಿವೃದ್ಧಿಪಡಿಸಬೇಕಿದೆ. ಹೀಗೆ ವೃತ್ತಿ ಕಸಬನ್ನು ಆಶ್ರಯಿಸಿದ ನೇಕಾರರು, ಬಡಿಗೇರರು, ಕಂಬಾರರು, ಕಮ್ಮಾರರು, ಬುಟ್ಟಿ ಎಣೆವ ಕೊರವರು, ವಡ್ಡರು (ಬೋವಿಗಳು), ಜೀರರು(ಹೂಮಾರುವವರು), ಮಡಿವಾಳರು ಮುಂತಾದ ವೃತ್ತಿ ಕಸಬಿನವರು ಆಯಾ ಕಸಬನ್ನು ನಂಬಿ ಬದುಕುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಹಾಗಾದಲ್ಲಿ ಕೂಡ್ಲಿಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಧಾನಗತಿಯಲ್ಲಿ ಆಗುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇಲ್ಲಿ ಹೇಳಿದ ಅಭಿವೃದ್ಧಿಯ ಮಾದರಿ ಕೇವಲ ಕೂಡ್ಲಿಗಿ ತಾಲೂಕಿಗೆ ಮಾತ್ರ ಅನ್ವಯವಾಗದೆ, ಎಲ್ಲಾ ತಾಲೂಕುಗಳ ಅಭಿವೃದ್ಧಿಯ ನೆಲೆಯಲ್ಲೂ ಅನ್ವಯಿಸಬಹುದು. ಈ ಬಗೆಯ ಅಭಿವೃದ್ಧಿಯ ಮಾದರಿಯಿಂದ ಜನರು ತಾವು ನಂಬಿದ, ತಮಗೆ ತಿಳಿದ ವೃತ್ತಿ ಕಸಬುಗಳಲ್ಲಿ ಹೊಸ ನಂಬಿಕೆ ಬರುತ್ತದೆ. ಅವರುಗಳಲ್ಲಿ ತಮ್ಮ ಬದುಕಿನ ಕ್ರಮದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ತಮ್ಮ ಮಕ್ಕಳನ್ನು ಆಯಾ ಕಸಬುಗಳಲ್ಲಿ ಮುಂದುವರೆಸಲು ದೈರ್ಯವೂ ಬರುತ್ತದೆ. ಅವರುಗಳಿಗೆ ಅದಕ್ಕಾಗಿ ಪ್ರತ್ಯೇಕ ತರಬೇತಿಗಳ ಅಗತ್ಯವೂ ಇರುವುದಿಲ್ಲ, ಅದು ಅವರ ಬದುಕಿನ ಭಾಗವೇ ಆಗಿರುತ್ತದೆ. ಈ ಬಗೆಯ ಯೋಜನೆಗಳಲ್ಲಿ ಜನರು ಸ್ವತಃ ಪಾಲುದಾರರಾಗುತ್ತಾರೆ. ಕೇವಲ ಗುಡಿಕೈಗಾರಿಕೆಯಲ್ಲಿ ಕೆಲಸ ಮಾಡುವವರಲ್ಲದೆ, ಆ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವವರೂ ಸಹ ಆ ಕೈಗಾರಿಕೆಯ ಫಲಾನುಭವಿಗಳಾಗುತ್ತಾರೆ. ಆಗ ಆಯಾ ಬೆಳೆ, ಆಯಾ ಕಸುಬನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ.

ಮುಖ್ಯವಾಗಿ ಇಲ್ಲಿ ಹೇಳಿದ್ದನ್ನು ಸರಕಾರ ಮಾಡಲು ಕಾನೂನು ರೀತ್ಯವಾಗಿಯೇ ಹಲವಾರು ಅವಕಾಶಗಳಿವೆ.  ಅಂತೆಯೇ ಇದಕ್ಕಾಗಿ ಕೆಲವು ಹೊಸ ಕಾನೂನು ಕಾಯ್ದೆಗಳನ್ನೂ ಮಾರ್ಪಡಿಸುವ ಅಗತ್ಯವೂ ಇದೆ. ಹೀಗೆ ಹೇಳಿದ ಎಲ್ಲಾ ಬಗೆಯ ಗುಡಿ ಕೈಗಾರಿಕೆಗಳು ಇದ್ದಾಗಲೂ ಅವುಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಜನರೊಂದಿಗೆ ಬೆರೆಯುವ, ಜನರ ಶ್ರಮಸಂಸ್ಕೃತಿಯನ್ನು ಗೌರವಿಸುವ ಮತ್ತು ಆ ಮೂಲಕ ಕ್ರಿಯಾಶೀಲವಾಗಿ ದುಡಿವ ಮನಸ್ಸು ಇಲ್ಲದಿದ್ದರೆ ಅವೂ ಸಹ ಜಿಡ್ಡುಗಟ್ಟುತ್ತವೆ.

ಕೂಡ್ಲಿಗಿಯಲ್ಲಿ ಯಾವುದೇ ಗುಡಿ ಕೈಗಾರಿಕೆಗಳು ಇಲ್ಲವೆಂತಲ್ಲ. ಇದ್ದರೂ ಇಲ್ಲದಂತಿರುವುದು ಇಂದಿನ ಸಮಸ್ಯೆ. ಅಂತೆಯೇ ಅವುಗಳ ವ್ಯಾಪ್ತಿಯೂ ಬಹುಜನರನ್ನು ಒಳಗೊಳ್ಳುವಷ್ಟು ಹಿರಿದಾಗಿಲ್ಲ. ಅದರಲ್ಲೂ ಇದ್ದ ಕೆಲವಾದರೂ ಎಣ್ಣೆ ಗಿರಣಿ, ಹತ್ತಿ ಗರಣಿಗಳು ಖಾಸಗಿ ಧಣಿಗಳ ಕೈವಶದಲ್ಲಿವೆ. ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಿನ ಅರಣ್ಯ ಭೂಮಿಯಿದೆ, ಅದನ್ನು ಪುಡಾರಿ ನಾಯಕರುಗಳು ರೈತರ ಹೆಸರಲ್ಲಿ ಸಾಗುವಳಿ ಭೂಮಿಯನ್ನಾಗಿ ಸೃಷ್ಟಿಸಿ ಕೊಳ್ಳೆಹೊಡೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಕುರುಚಲು ಕಾಡಿನಂತಿರುವ ಅರಣ್ಯ ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಬೆಳೆಸಬೇಕಿದೆ. ನೀರು ತಡೆಯ ಗೋಕಟ್ಟೆಗಳನ್ನು ಹೆಚ್ಚಾಗಿ ನಿರ್ಮಿಸಿ, ಆ ಮೂಲಕ ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ.

ಈ ಮಾತುಗಳನ್ನು ತಾಲೂಕಿನ ಶಾಸಕರಾದ ಬಿ.ನಾಗೇಂದ್ರ ಅವರು, ತಹಶೀಲ್ದಾರರು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಸದಸ್ಯರುಗಳು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಿವಿಯಲ್ಲಿ ಹಾಕಿಕೊಂಡು ಕ್ರಿಯಾಶೀಲವಾಗಬೇಕೆನ್ನುವುದು ನನ್ನ ಆಶಯ. ಹೀಗೆ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಮಾತ್ರ ಕೂಡ್ಲಿಗಿ ತಾಲೂಕು ಭವಿಷ್ಯದಲ್ಲಿ ಅಭಿವೃದ್ಧಿಯಾಗಲು ಸಾದ್ಯವಿದೆ. ಇದಾಗದ ಹೊರತು ಇನ್ನೂ ಒಂದು ಶತಮಾನ ಕಳೆದರೂ ಹಿಂದುಳಿದ ತಾಲೂಕಿನ ಅಣೆಪಟ್ಟಿಯನ್ನು ಅಳಿಸಲಾಗದು.

-ಅರುಣ್ ಜೋಳದಕೂಡ್ಲಿಗಿ.
ಸಂಪರ್ಕ: ಜೋಳದಕೂಡ್ಲಿಗಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಪಿನ್-583134 ಮೊ:9901445702

ಚಿತ್ರಕೃಪೆ : ವಿಕಿಪೀಡಿಯ

ಜೀವನದಿಗಳ ಸಾವಿನ ಕಥನ – 2

ಡಾ.ಎನ್. ಜಗದೀಶ್ ಕೊಪ್ಪ

ಪರಿಸರ ಕುರಿತಂತೆ ಅಪಾರ ಕಾಳಜಿ ಹೊಂದಿದ್ದ, ದುಡಿಯುವ ವರ್ಗದ ಆರಾಧ್ಯ ದೈವವಾಗಿದ್ದ ಚಿಂತಕ, ದಾರ್ಶನಿಕ ಕಾರ್ಲ್‌ಮಾರ್ಕ್ಸ್ ತನ್ನ “ಎಕನಾಮಿಕ್ ಅಂಡ್ ಪಿಲಾಸಫಿಕ್ ಮಾನ್ಯುಸ್ಕ್ರಿಪ್ಟ್” ಕೃತಿಯಲ್ಲಿ “ಮಾನವ ಪ್ರಕೃತಿಯೊಡನೆ ಜೀವಿಸುತ್ತಾನೆ. ಪ್ರಕೃತಿಯೆಂಬುದು ಅವನಲ್ಲಿ ಅಂತರ್ಗತವಾಗಿದೆ. ಅವನು ಈ ಭೂಮಿಯ ಮೇಲೆ ಬದುಕುಳಿಯಬೇಕಾದರೆ ಪ್ರಕೃತಿಯೊಡನೆ ನಿರಂತರವಾಗಿ ಸಂವಾದದಲ್ಲಿ ಇರಬೇಕು”, ಎಂದಿದ್ದ. ಮಾರ್ಕ್ಸ್‌ನ ಸಂಗಾತಿ ಏಂಗಲ್ಸ್ ಕೂಡ “ನಮ್ಮ ಬದುಕಿನ ಮೂಲಭೂತ ಅಗತ್ಯವಾದ ಭೂಮಿಯನ್ನು, ಅದರ ಕೊಡುಗೆಗಳನ್ನು ವ್ಯಾಪಾರದ ಸರಕನ್ನಾಗಿ ಮಾಡಿದ್ದೇ ಆದರೆ ಅಂದೇ ಮನುಕುಲದ ಅವನತಿ ಪ್ರಾರಂಭ” ಎಂದು ಎಚ್ಚರಿಸಿದ್ದ. ವಿಷಾದದ ಸಂಗತಿ ಎಂದರೆ ಈ ಮಹಾನ್ ದಾರ್ಶನಿಕರು ಎಚ್ಚರಿಸುವ ಮೊದಲೇ ಅವನತಿಯ ಅಧ್ಯಾಯ ಆರಂಭವಾಗಿತ್ತು.

ಕಳೆದ 50 ವರ್ಷಗಳ ಅವಧಿಯಲ್ಲಿ ಈ ಭೂಮಿಯ ಮೇಲಿನ ಅನೇಕ ಅಪರೂಪದ ಜೈವಿಕ ಸಂತತಿಗಳು ನಾಶವಾಗಿವೆ. ಸಾವಿರಾರು ಪ್ರಭೇಧಗಳು ವಿನಾಶದ ಅಂಚಿನಲ್ಲಿವೆ. ನಮ್ಮ ನದಿ, ಬೆಟ್ಟ, ಸರೋವರ ಇವೆಲ್ಲವೂ ತಮ್ಮ ನೈಜ ಸ್ವರೂಪವನ್ನು ಕಳೆದುಕೊಂಡು ವಿರೂಪಗೊಂಡಿವೆ. ಆಧುನಿಕ ಜಗತ್ತಿನ ಮೂಲ ಮಂತ್ರವಾದ “ಅಭಿವೃದ್ಧಿ” ಎಂಬ ರಕ್ಕಸನ ಬಾಯಿಗೆ ದಿನ ನಿತ್ಯದ ಆಹಾರವಾಗತೊಡಗಿವೆ.

ಅಷ್ಟೇ ಏಕೆ 40 ವರ್ಷಗಳ ಹಿಂದೆ ನನ್ನ ತಲೆಮಾರು ಬಾಲ್ಯದಲ್ಲಿ ಕಂಡ ತುಂಬೆ, ತುಳಸಿ, ಸಂಪಿಗೆ, ಜಾಜಿಮಲ್ಲಿಗೆ, ತಾವರೆ, ಬಣ್ಣ ಬಣ್ಣದ ಚಿಟ್ಟೆ – ಪತಂಗ, ದೇಸಿ ಸಂತತಿಯ ಹಸು, ಕರು, ಎಮ್ಮೆ, ನಮ್ಮ ನಾಟಿ ತಳಿಗಳ ಬಿತ್ತನೆ ಬೀಜಗಳು, ನಮ್ಮ ಹಬ್ಬ, ಹಸೆ, ಹಾಡು, ಇವೆಲ್ಲವೂ ಮರೆಯಾಗಿ ನಮ್ಮ ಸ್ಮೃತಿಯೆಂಬ ಕಪಾಟಿನೊಳಗೆ ಜೀವಂತವಿರುವ ಕನವರಿಕೆಗಳು ಮಾತ್ರವಾಗಿವೆ.

20 ಮತ್ತು 21 ನೇ ಶತಮಾನವೆಂದರೆ ಮನುಕುಲವೆಂಬುದು ಉನ್ಮಾದದಿಂದ ಪ್ರಕೃತಿಯ ಮೇಲೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಮತ್ತು ವಿಫಲತೆಗಳ ಯುಗ ಎಂಬಂತಾಗಿದೆ. ಇದಕ್ಕೆ ಇತ್ತೀಚಿನ ಸಾಕ್ಷಿ ಎಂದರೆ ಜಪಾನ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪ ಮತ್ತು ಸುನಾಮಿ.

ಪ್ರಕೃತಿಯಲ್ಲಿನ ಜೀವಜಾಲವೆಂಬುದು ಮಾನವನ ಪ್ರತಿಸ್ಪರ್ಧಿಯಲ್ಲ. ಅದರಲ್ಲಿ ಅವನೂ ಒಂದು ಭಾಗ ಎಂಬ ಈ ನೆಲದ ಮೂಲ ಸಂಸ್ಕೃತಿಯನ್ನು, ಕಾಳಜಿಯನ್ನು ಮರೆತ ಆಧುನಿಕ ಜಗತ್ತಿನ ನಾಗರೀಕತೆಗೆ ಕಬಳಿಕೆಯೊಂದೇ ಗುರಿಯಾಗಿದೆ. ಬದಲಾದ ನಮ್ಮ ಬದುಕಿನ ಕ್ರಮ ಹಾಗೂ ಚಿಂತನಾ ಲಹರಿಗಳಿಂದ ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿದ್ದ “ಅವಿಭಕ್ತ ಕುಟುಂಬ” ಪದ್ಧತಿ ಸಧ್ಯ ಛಿದ್ರಗೊಂಡಿದ್ದು, ಹೆಚ್ಚಿದ ಉಪಭೋಗ ಪ್ರಕೃತಿ ಮೇಲಿನ ದಾಳಿಗೆ ಪರೋಕ್ಷ ಕಾರಣವಾಗಿದೆ.

ಕೇವಲ ಅರ್ಧ ಶತಮಾನದ ಹಿಂದಿನ ಸಮಾಜದ ಕುಟುಂಬಗಳಲ್ಲಿ ಮೂಲಭೂತ ಬೇಡಿಕೆಗಳಾದ ಆಹಾರ, ನೀರು, ವಿದ್ಯುತ್, ಉರುವಲು ಮುಂತಾದ ಅಗತ್ಯತೆಗಳು ಮಿತಿಯಲ್ಲಿದ್ದವು. ಪ್ರಕೃತಿಯಿಂದ ಒಂದನ್ನು ಪಡೆದರೆ, ಅದೇ ಪ್ರಕೃತಿಗೆ ಹಿಂತಿರುಗಿ ಎರಡನ್ನು ನೀಡುವ ಪದ್ಧತಿ ನಮ್ಮ ಜನಪದರಲ್ಲಿ ಚಾಲ್ತಿಯಲ್ಲಿತ್ತು.

ಏಕ ಕುಟುಂಬ ಪದ್ಧತಿ ಜೊತೆಗೆ ಅಮೆರಿಕಾ ದೇಶ ಜಗತ್ತಿಗೆ ಕಲಿಸಿದ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಮನುಕುಲದ ಬೇಡಿಕೆಗಳಿಗೆ ಇತಿ-ಮಿತಿ ಇಲ್ಲದಂತಾಗಿದೆ.

ಜಗತ್ತಿನ ಜನ ಸಂಖ್ಯೆಯಲ್ಲಿ ಶೇ.4ರಷ್ಟು ಇರುವ ಅಮೆರಿಕಾದ ಜನತೆ, ನೈಸರ್ಗಿಕ ಕೊಡುಗೆಗಳಲ್ಲಿ ಶೇ.40ರಷ್ಟು ಪಾಲನ್ನು ಕಬಳಿಸುತ್ತಿದ್ದಾರೆ. ವಾತಾವರಣ ಕಲುಷಿತಗೊಳಿಸುವುದರಲ್ಲಿ ಅವರ ಪಾಲು ಶೇ.27ರಷ್ಟು. ಇಂತಹ ನಾಗರೀಕತೆಯ ಅತಿಲಾಲಸೆ, ವ್ಯಾಪಾರೀಕರಣಗೊಂಡ ಜಗತ್ತು, ಭೋಗ ಸಂಸ್ಕೃತಿ ಇವುಗಳಿಂದ ಪಕೃತಿ ನಲುಗಿ ಹೋಗಿದೆ.

ವರ್ತಮಾನದ ಜಗತ್ತಿನಲ್ಲಿ ದೊರೆಯುತ್ತಿರುವ 1.4 ಬಿಲಿಯನ್ ಕ್ಯೂಬಿಕ್ ಮೀಟರ್ ನೀರಿನಲ್ಲಿ ಶೇ 3ರಷ್ಟು ಮಾತ್ರ ಶುದ್ಧ ನೀರಾಗಿದೆ. ಶೇ.3ರಷ್ಟು ಪಾಲಿನ ಈ ನೀರಿನಲ್ಲಿ ಶೇ.77.2ರಷ್ಟು ಮಂಜುಗೆಡ್ಡೆರೂಪದಲ್ಲಿ, ಶೇ.0.35ರಷ್ಟು ಸರೋವರಗಳಲ್ಲಿ, ಶೇ.0.1ರಷ್ಟು ನದಿ-ಕೊಳ್ಳಗಳಲ್ಲಿ ನಮಗೆ ಲಭ್ಯವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಅಭಾವ ಕಾಣಿಸಿಕೊಂಡದ್ದು 1980ರ ದಶಕದಲ್ಲಿ. ಕುಡಿಯುವ ನೀರಿನ ಮೂಲಗಳಾಗಿದ್ದ ನಮ್ಮ ನದಿಗಳು, ಜಲಾಶಯಗಳು ಅರಣ್ಯ ನಾಶ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಲುಷಿತಗೊಂಡವು.

ನಮ್ಮ ಪೂರ್ವಿಕರು ಸಾಮಾನ್ಯವಾಗಿ ದೇಗುಲಗಳನ್ನು ನದಿತೀರಗಳಲ್ಲಿ ನಿರ್ಮಿಸಿ, ನದಿಗಳಿಗೆ ಅರ್ಪಿಸಿರುವುದನ್ನು ನಾವು ದೇಶದ ಎಲ್ಲೆಡೆ ಕಾಣಬಹುದು. ನಮ್ಮ ಪೂರ್ವಜರು ನದಿ ನೀರಿನ ಬಳಕೆ ಕುರಿತಂತೆ ನಿರ್ಮಿಸಿದ ದೇಸಿ ತಂತ್ರಜ್ಞಾನ ಇಂದಿನ ನೀರಾವರಿ ತಂತ್ರಜ್ಞಾನಕ್ಕೆ ಮೂಲವಾಗಿದೆ ಎಂದು ನೀರಾವರಿ ತಜ್ಞ ಅರ್ಥರ್ ಕಾಟನ್ 1874ರಲ್ಲಿ ದಾಖಲಿಸಿದ್ದಾನೆ. ನಮ್ಮ ದಕ್ಷಿಣ ಭಾರತದ ಕೃಷ್ಣ, ಕಾವೇರಿ ನದಿ ಪಾತ್ರಗಳಲ್ಲಿ ನಿರ್ಮಿಸಿದ ಕಿರು ಜಲಾಶಯ, ಅಣೆಕಟ್ಟುಗಳು ಪರಿಸರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪೂರಕವಾಗಿವೆ. ದೆಹಲಿ ಮೂಲದ “ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್” ಸಂಸ್ಥೆಯ ಸ್ಥಾಪಕ ದ.ಅನಿಲ್ ಅಗರ್‌ವಾಲ್ 90ರ ದಶಕದಲ್ಲಿ ಭಾರತದ ಪರಿಸರ ಕುರಿತಂತೆ “ಸಿಟಿಜನ್ ರಿಪೋರ್ಟ್ಸ್” ಸಮೀಕ್ಷಾ ವರದಿಗಳನ್ನು ಪ್ರಕಟಿಸಿದ್ದು ಇದೇ ಸಂದರ್ಭದಲ್ಲಿ “ಡೈಯಿಂಗ್ ವಿಸಡಮ್” ಹೆಸರಿನ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನೀರಾವರಿ ಪದ್ಧತಿ, ಕೆರೆ-ಕಟ್ಟೆ, ಕಾಲುವೆಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಇದ್ದು ಓದುಗರಲ್ಲಿ ವಿಸ್ಮಯ ಮೂಡಿಸುತ್ತದೆ. ಅಂದಿನ ವಿಜಯನಗರದ ಸಾಮಂತರು, ತಮಿಳುನಾಡಿನ ಚೋಳರು, ಪಾಂಡ್ಯರು ಮುಂತಾದವರ ಆಳ್ವಿಕೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಬಳಸುವ ನೀರು ಇವುಗಳ ಕುರಿತಂತೆ ಅಳವಡಿಸಿಕೊಂಡಿದ್ದ ದೇಸಿ ತಂತ್ರಜ್ಞಾನ ಇಂದಿಗೂ ಮಾದರಿಯಾಗಿದೆ.

ಆಧುನಿಕ ಯುಗದ ನದಿಗಳೆಂದರೆ ನಮ್ಮೆಲ್ಲರ ಮಲ-ಮೂತ್ರಗಳನ್ನು, ನಗರ, ಪಟ್ಟಣಗಳಿಂದ ಹೊರಹಾಕುವ ತ್ಯಾಜ್ಯ ವಸ್ತುಗಳನ್ನು ಸಮುದ್ರಕ್ಕೆ ಸಾಗಿಸುವ ವಾಹಕಗಳು ಎಂಬಂತಾಗಿವೆ. ನದಿಯೆಂದರೆ ಅದು ಕೇವಲ ನೀರಿನ ಹರಿವಲ್ಲ. ಅದಕ್ಕೆ ಅದರದೇ ಆದ ಮಾತೃತ್ವ ಗುಣವಿದೆ. ನದಿನೀರಿಗೆ ವಿಷವನ್ನಾದರೂ ಬೆರೆಸಿ, ಅಮೃತವನ್ನಾದರೂ ಬೆರೆಸಿ ಅದೆಲ್ಲವನ್ನೂ ತನ್ನದಗಿಸಿಕೊಳ್ಳುವ ಗುಣ ನದಿಯ ಒಡಲೊಳಗೆ ಅಂತರ್ಗತವಾಗಿದೆ. ನದಿಯ ನೀರಿನ ಮೇಲೆ ಹಣತೆ ಹಚ್ಚಿಟ್ಟು ತೇಲಿ ಬಿಟ್ಟಾಗ ನದಿ ಸಂಭ್ರಮಿಸುವುದಿಲ್ಲ. ಅದೇ ರೀತಿ ಉರಿವ ಕೊಳ್ಳಿಯ ಜೊತೆ ಅರೆಬೆಂದ ಶವಗಳನ್ನು ನದಿಗೆ ಎಸೆದಾಗ ಅದು ಬೇಸರಗೊಳ್ಳುವುದಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು “ನದಿಗೆ ನೆನಪಿನ ಹಂಗಿಲ್ಲ” ಎಂದಿದ್ದರು. ನದಿಗಳು ಮನುಕುಲದೊಂದಿಗೆ ಥಳಕು ಹಾಕಿಕೊಂಡು ಮನುಷ್ಯನ ಜೊತೆ ಅವಿನಾಭಾವ ಸಂಬಂಧ ಇರುವುದರಿಂದಲೇ ಮಾನವ ಜನಾಂಗಕ್ಕೆ ನದಿಯೆಂದರೆ ಅದು ಮಾತೃ ಸ್ವರೂಪಿಣಿ ಎಂಬ ಪರಿಕಲ್ಪನೆ ಮೂಡಿತು.

ಜಗತ್ತಿನ ಯಾವುದೇ ಪುರಾಣವಿರಲಿ, ಮಹಾಕಾವ್ಯವಿರಲಿ ಅಲ್ಲಿ ನದಿಗಳ ಪಾತ್ರ ಇದ್ದೇ ಇರುತ್ತದೆ. ಡೋನಾಲ್ಡ್ ವರ್ನರ್ ಎಂಬ ಲೇಖಕ ತನ್ನ “ರಿವರ್‍ಸ್ ಆಫ್ ಎಂಪೈರ್” ಕೃತಿಯಲ್ಲಿ ನದಿ ಅಥವಾ ನೀರಿನ ಇತಿಹಾಸವಿಲ್ಲದೆ ಯಾವುದೇ ಮನುಕುಲದ ಇತಿಹಾಸ ಪೂರ್ಣವಾಗಲಾರದು ಎಂದಿದ್ದಾನೆ.

ಜಗತ್ತಿನ ಪ್ರ-ಪ್ರಥಮ ಮಹಾಕಾವ್ಯ ಎನಿಸಿಕೊಂಡ ಮೆಸಪೊಟೋಮಿಯಾ ನಾಗರೀಕತೆಯಲ್ಲಿ ಸೃಷ್ಟಿಯಾಗಿ ಹಲವಾರು ಶತಮಾನಗಳ ಕಾಲ ಮಣ್ಣಿನ ಹಲಗೆಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಬಂದ “ಗಿಲ್ಗಮೇಶನ ಮಹಾಕಾವ್ಯ” ದಲ್ಲಿ ನದಿಗಳ ಪ್ರವಾಹ ಪ್ರಧಾನ ಅಂಶವಾಗಿ ಮೂಡಿಬಂದಿದೆ. ಭಾರತದ ಗಂಗಾನದಿ, ಈಜಿಪ್ಟ್‌ನ ನೈಲ್‌ನದಿ, ರಷ್ಯಾದ ಓಲ್ಗಾ, ದಕ್ಷಿಣ ಅಮೆರಿಕಾದ ಅಮೆಜಾನ್, ಚೀನಾದ ಹಳದಿನದಿ, ಇಥಿಯೋಪಿಯಾದ ಐನಾಸ್ ಹೀಗೆ ನದಿ ಪಾತ್ರಗಳಲ್ಲಿನ ಜನಜೀವನ, ಸಂಸ್ಕೃತಿ, ಸಾಮ್ರಾಜ್ಯಗಳ ಉದಯ-ಪತನ, ಐತಿಹ್ಯ ಪುರಾಣ, ಸಾಂಸ್ಕೃತಿಕ ಆಚರಣೆ ಎಲ್ಲವುಗಳೂ ನದಿಗಳ ಇತಿಹಾಸದ ಜೊತೆ ಮಿಳಿತಗೊಂಡಿವೆ.

20ನೇ ಶತಮಾನದ ಆದಿಯಿಂದ ಬೃಹತ್ ಅಣೆಕಟ್ಟುಗಳ ನೆಪದಲ್ಲಿ ನದಿಗಳನ್ನು ಮಣಿಸಿ, ಅವುಗಳ ಸಹಜ ಹರಿವಿಗೆ ತಡೆಯೊಡ್ಡಿ ಸಾವಿಗೆ ಕಾರಣೀಭೂತನಾದ ಆಧುನಿಕ ಯುಗದ ನವ ನಾಗರೀಕನಿಗೆ ನಮ್ಮ ಪೂರ್ವಿಕರ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಗಮನಿಸುವ ತಾಳ್ಮೆ ಮತ್ತು ವಿವೇಚನೆ ಇಲ್ಲ. ಅವನ ಪಾಲಿಗೆ ಇದು ಅರ್ಥಹೀನ ಸಂಗತಿ. ಒಬ್ಬನ ಹಿತಕ್ಕೆ ಹತ್ತು ಜನರ ಹಿತವನ್ನು ಬಲಿಕೊಡುವ ಇಂದಿನ ವ್ಯವಸ್ಥೆಯಲ್ಲಿ ಇತಿಹಾಸ ಕುರಿತ ಕಾಳಜಿ, ಪರಿಸರದ ಬಗೆಗಿನ ಪ್ರೀತಿ ಯಾರಿಗೂ ಬೇಡವಾದ ಸಂಗತಿಗಳು.

(ಮುಂದುವರಿಯುವುದು)

(ಚಿತ್ರಕೃಪೆ : ವಿಕಿಪೀಡಿಯ)

Two State ದೊಂಗಲು !? ಇಮ್ಮಡಿ ಕೃಷ್ಣದೇವರಾಯ ?

What most of our Kannada print and television media missed:

CBI ಮಾಹಿತಿ ಕಲೆ ಹಾಕಿದ್ದು ಹೇಗೆ?


ದೊರುಲ, ರಾಯುಲ ಪ್ರಭುತ್ವಂ… ನಾವಿರುವುದು ಇಪ್ಪತ್ತೊಂದನೇ ಶತಮಾನದಲ್ಲಿಯೇ?


ರುಕ್ಮಿಣಿ – ಚಲಿಸುವ ರಾಜಭವನ…