Category Archives: ಆರ್ಥಿಕ

ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

Sansad_Bhavan

ಸಂಸತ್ತಿನ ಪರಮಾಧಿಕಾರ ಎಂದರೆ ಏನು?

ಅರವಿಂದ ಚೊಕ್ಕಾಡಿ

ಅಣ್ಣಾ ಹಜಾರೆ ಉಪವಾಸ ಮಾಡುವುದು, ಚಿದಂಬರಂ, ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಎಲ್ಲ ಸೇರಿಕೊಂಡು ಸಂಸತ್ತಿನ ಪರಮಾಧಿಕಾರ ಎನ್ನುವುದು ; ಇದೆಲ್ಲ ಒಟ್ಟಾಗಿ ಒಂದು ದಾರಿ ತಪ್ಪಿಸುವ ವ್ಯವಸ್ಥೆ ನಿರ್ಮಾಣ ಆಗಿದೆ.

Sansad_Bhavan

Sansad_Bhavan

ಅಣ್ಣಾ ಹಜಾರೆ ಅವರ ಕಡೆಯಲ್ಲಿ ಒಂದು ಸಮಸ್ಯೆ ಇದೆ. ಇವತ್ತು ಅಣ್ಣಾ ಹಜಾರೆ ಅವರ ಹಿಂದೆ ಇರುವುದು ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿರುವ ಜನರ ಆಕ್ರೋಶದ-ಆವೇಶದ ಬೆಂಬಲ ಹೊರತು ಪ್ರಜ್ಞಾವಂತವಾದ ಭ್ರಷ್ಟಾಚಾರದ ವಿರುದ್ಧದ ಅರಿವಲ್ಲ. ಅಂತಹ ಅರಿವನ್ನು ರಾಷ್ಟ್ರವ್ಯಾಪಿಯಾಗಿ ಉಂಟು ಮಾಡುವ ಪ್ರಯತ್ನವನ್ನು ಅಣ್ಣಾ ಹಜಾರೆಯವರ ತಂಡ ಮಾಡಿಲ್ಲ. ಒಂದು ರೀತಿ ಪೂರ್ವ ಸಿದ್ಧತೆ ಸಾಕಷ್ಟಿಲ್ಲದ ಹೋರಾಟ. ಇದರಿಂದಾಗಿ ಏನಾಗಿದೆಯೆಂದರೆ ಏನು ನಡೆಯುತ್ತಿದೆ, ತಾವು ಪ್ರಜ್ಞಾಪೂರ್ವಕವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುವುದಕ್ಕೂ ಜನರಿಗೆ ಪುರುಸೊತ್ತಿಲ್ಲ. ಯೋಚನೆ ಮಾಡುವುದಕ್ಕೆ ಜನರಿಗೆ ಪುರುಸೊತ್ತು ಕೊಡದೆ ಅಣ್ಣಾ ಅವರ ತಂಡ ತಾನು ಮಾಡುತ್ತಿರುವುದು ಎಲ್ಲವೂ ಸರಿಯಾಗಿಯೇ ಇದೆ; ಜನರು ತಮ್ಮ ನಿಲುವನ್ನು ವಿಮರ್ಶಿಸಬೇಕಾದ ಅಗತ್ಯವೇ ಇಲ್ಲ ಎನ್ನುವ ಧೋರಣೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಹೋರಾಟಗಾರ ತನ್ನ ನಿಲುವಿನ ಬಗ್ಗೆ ಯೋಚನೆ ಮಾಡಲೂ ಜನರಿಗೆ ಪುರುಸೊತ್ತು ಕೊಡದೆ ಜನರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳುವುದು ಸರಿಯಲ್ಲ. ನಿಜವಾಗಿ ಅಣ್ಣಾ ಭ್ರಷ್ಟಾಚಾರದ ವಿರುದ್ಧ ವಿದ್ದಾರೆ ಎಂಬುದನ್ನು ಬಿಟ್ಟರೆ ಅವರ ಖಚಿತವಾದ ಬೇಡಿಕೆ ಏನು, ಅವರ ಯಾವ ಬೇಡಿಕೆಯನ್ನು ಸರಕಾರ ಒಪ್ಪುತ್ತಿಲ್ಲ, ಯಾಕೆ ಒಪ್ಪುತ್ತಿಲ್ಲ, ಸರಕಾರ ಜಾರಿಗೊಳಿಸಲು ಹೊರಟಿರುವ ಲೋಕಪಾಲ ಮಸೂದೆಯು ಹೇಗಿದೆ ಎನ್ನುವ ಬಗ್ಗೆಯೆಲ್ಲ ಬಹಳ ಮಂದಿಗೆ ಗೊತ್ತಿಲ್ಲ. ಭ್ರಷ್ಟಾಚಾರ ವಿರುದ್ಧ ವಿದ್ದಾರೆ ಎಂಬ ಕಾರಣಕ್ಕಾಗಿ ಅಣ್ಣಾ ಅವರನ್ನು ಕಣ್ಣು ಮುಚ್ಚಿ ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರದ ವ್ಯಾಪ್ತಿ ಎಷ್ಟೇ ಎಷ್ಟೇ ಬಲಿಷ್ಠವಿದ್ದರೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಧಿಕಾರದಲ್ಲಿರುವಾಗ ಲೋಕಪಾಲರಿಂದ ಅವರನ್ನು ಹೊರಗಿಡಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಅಗತ್ಯವಾಗಿದೆ. ಪ್ರಧಾನಮಂತ್ರಿಗಿಂತ ಲೋಕಪಾಲರ ಮೇಲೆ ನಮಗೆ ಜಾಸ್ತಿ ವಿಶ್ವಾಸ ಎಂದಾದರೆ ಅಂತಹ ಲೋಕಪಾಲರನ್ನು ನೇಮಿಸಲು ಸರಕಾರಕ್ಕಾಗಲಿ, ಸಂಸತ್ತಿಗಾಗಲಿ ಅಧಿಕಾರವೂ ಇರಬಾರದಲ್ಲವೆ? ಪ್ರಧಾನಿಯ ಮೇಲೆಯೇ ಕನಿಷ್ಠ ಮಟ್ಟದ ವಿಶ್ವಾಸವೂ ಇಲ್ಲದ ರಾಷ್ಟ್ರವು ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲಾರದು. ಇದನ್ನು ಅಣ್ಣಾ ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಮೇಲಾಗಿ ಸರಕಾರ ಈಗಾಗಲೇ ಒಂದು ಲೋಕಪಾಲ ಮಸೂದೆಯನ್ನು ತರಲು ಹೊರಟಿರುವಾಗ ಮೊದಲು ಅದನ್ನು ಜಾರಿಗೆ ಬರಲು ಅವಕಾಶವನ್ನು ಕೊಟ್ಟು ನಂತರ ಅಗತ್ಯವಿರುವ ತಿದ್ದುಪಡಿಗಳಿಗಾಗಿ ಒತ್ತಡವನ್ನು ತರಬಹುದಾಗಿತ್ತು. ಆದರೆ ಅಣ್ಣಾ ಅವರ ತಂಡ ಒತ್ತಡಕ್ಕಿಂತ ಹೆಚ್ಚಾಗಿ ಪ್ರತಿಸರ್ಕಾರದ ಸ್ಟೈಲ್‌ನಲ್ಲಿ ವರ್ತಿಸುತ್ತಿರುವುದು ಸರಿಯಾಗಿಲ್ಲ.

Anna_Hazare

Anna_Hazare

ಇಷ್ಟೆಲ್ಲ ಆದರೂ ಅಣ್ಣಾ ಅವರ ತಂಡಕ್ಕೆ ಇರಬೇಕಾದ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಭಾರತ ಸರಕಾರಕ್ಕೆ ಇರುತ್ತದೆ. ಜಾಣತಂತ್ರವನ್ನು ಬಳಸಬಹುದು ಎನ್ನುವುದಾದರೆ ಸರಕಾರವು ಅಣ್ಣಾ ಅವರು ಹೇಳಿದ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದಾಗಿತ್ತು. ಆ ಮಸೂದೆ ಲೋಕಸಭೆಯಲ್ಲಾಗಲಿ, ರಾಜ್ಯ ಸಭೆಯಲ್ಲಾಗಲಿ ಸ್ವೀಕೃತವಾಗುತ್ತಲೇ ಇಲ್ಲ. ಆಗ ಕೇಂದ್ರ ಸರಕಾರವು ಸುಲಭವಾಗಿ ತಾನು ಮಾಡುವ ಅಪರಾಧಕ್ಕೆ ಬಿಜೆಪಿಯನ್ನೂ ಎಳೆದುಕೊಂಡೇ ಹೊಂಡಕ್ಕೆ ಬೀಳಬಹುದಾಗಿತ್ತು! ಮಸೂದೆಯನ್ನು ಅನುಮೋದಿಸದಿರುವ ಜವಾಬ್ದಾರಿ ಸಂಸತ್ತಿಗೆ ಬರುತ್ತಿತ್ತು. ಸರಕಾರ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅಥವಾ ಅಣ್ಣಾ ಅವರನ್ನು ಅವರ ಪಾಡಿಗೆ ಸತ್ಯಾಗ್ರಹ ಮಾಡಲು ಬಿಟ್ಟು ತಾನು ತನ್ನ ಪಾಡಿಗೆ ಮಸೂದೆಯನ್ನು ಮಂಡಿಸಿ ತಾನು ಎಷ್ಟನ್ನು ಮಾಡಲು ಸಾಧ್ಯವಾಗುತ್ತಿದೆ ಎನ್ನುವುದನ್ನು ರಾಷ್ಟ್ರಕ್ಕೆ ವಿವರಿಸಬಹುದಾಗಿತ್ತು.

ಆದರೆ ಸರಕಾರವು ತನ್ನ ನಡವಳಿಕೆಯಿಂದ ತಾನು ಭ್ರಷ್ಟಾಚಾರದ ಪರವಾಗಿದ್ದೇನೆ ಎಂಬ ಕೆಟ್ಟ ವರ್ಚಸ್ಸು ತನಗೆ ಬರುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಅಣ್ಣಾ ಅವರ ಮೇಲೆ ಹರಿಹಾಯಲು ಶುರು ಮಾಡಿತು. ಸರಕಾರದ ಕಡೆಯಿಂದ ಮಾತನಾಡಿದವರೆಲ್ಲ ಸಂಸತ್ತಿನ ಪರಮಾಧಿಕಾರ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಮಾತನಾಡಿದರು. ನಿಜವಾಗಿಯೂ ಸಂಸತ್ತಿಗೆ ಆ ರೀತಿಯ ಪರಮಾಧಿಕಾರ ಇರುವುದಾದರೆ ‘ಪ್ರತಿಭಟನೆಯನ್ನು ಮಾಡತಕ್ಕದ್ದಲ್ಲ’ ಎಂದು ಸಂಸತ್ತು ಒಂದು ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು. ಕನಿಷ್ಠ ಪಕ್ಷ ಕೇಂದ್ರ ಕ್ಯಾಬಿನೆಟ್ ಈ ರೀತಿಯ ನಿರ್ಣಯವನ್ನು ಮಾಡಬೇಕಾಗಿತ್ತು. ಅಥವಾ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಮಾಡಬೇಕಾಗಿತ್ತು. ಆದರೆ ಆ ಮೂರನ್ನೂ ಮಾಡಲು ಆಗುವುದಿಲ್ಲ. ಯಾಕೆಂದರೆ ಆ ರೀತಿ ನಿರ್ಣಯವನ್ನು ಮಾಡಿದರೆ ಅಂತಹ ನಿರ್ಣಯವು ತಾನೇ ತಾನಾಗಿ ಅಸಾಂವಿಧಾನಿಕವೆಂದು ಪರಿಗಣಿಸಲ್ಪಟ್ಟು ಸಂವಿಧಾನದ ಪರಮೋಚ್ಛ ಆದೇಶಾನುಸಾರ ತಾನೇ ತಾನಗಿ ರದ್ದಾಗುತ್ತದೆ. ಆ ಕಾರಣಕ್ಕಾಗಿಯೇ ಸಂಸತ್ತಿನ ಸರ್ವೋಚ್ಛ ಅಧಿಕಾರ ಎಂದು ಚಿದಂಬರಂ ಹೇಳುತ್ತಾರೆ, ಕಪಿಲ್ ಸಿಬಲ್ ಹೇಳುತ್ತಾರೆ, ಮನಮೋಹನ್ ಸಿಂಗ್ ಹೇಳುತ್ತಾರೆ. ನಮಗೂ ಹೇಳಲು ಅಧಿಕಾರವಿರುವುದರಿಂದ ನಾನು, ನೀವು ಎಲ್ಲರೂ ಹೇಳಬಹುದು. ಆದರದು ಹೇಳಿಕೆಯಾಗಿ ‘ಚರ್ಚೆ’ ಆಗುತ್ತದೆಯೆ ಹೊರತು ನಿರ್ಣಯ ಆಗುವುದಿಲ್ಲ.

ಸಂಸತ್ತಿನ ಸರ್ವೋಚ್ಛ ಅಧಿಕಾರವು ಸಂವಿಧಾನದಿಂದ ನಿಯಂತ್ರಿತವಾಗಿದೆ. ಸಂವಿಧಾನದ ಮೂಲ ತತ್ವಗಳನ್ನು ಸಂಸತ್ತು ಕೂಡ ರದ್ದುಪಡಿಸುವ ಹಾಗಿಲ್ಲ. ಸಂಸತ್ತು ಒಂದು ಒಂದು ನಿರ್ಣಯವನ್ನು ಮಾಡಿ ಭಾರತ ಸಂವಿಧಾನವನ್ನು ರದ್ದುಪಡಿಸಿ ಮಿಲಿಟರಿ ಆಡಳಿತವನ್ನು ಜಾರಿಗೆ ತರಲು ಆಗುವುದಿಲ್ಲ. ಭಾರತದ ಭೂ, ಜಲ, ವಾಯು ವ್ಯಾಪ್ತಿಯಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುವ ಯಾವ ಆದೇಶವನ್ನು ಯಾರೇ ಮಾಡಿದರೂ ಅದು ಸಂವಿಧಾನದ ಪರಮೋಚ್ಛ ಆದೇಶಾನುಸಾರ ರದ್ದಾಗುತ್ತದೆ.

ಇಂಥಲ್ಲಿ ‘ಪ್ರಜಾಪ್ರಭುತ್ವ’ ಎನ್ನುವುದು ಸಂವಿಧಾನದ ಮೂಲ ತತ್ವವಾಗಿದೆ. ‘ಪ್ರಜಾಪ್ರಭುತ್ವ’ ಎಂದ ತಕ್ಷಣ ತಾನೇ ತಾನಾಗಿ ಆಡಳಿತವನ್ನು ಪ್ರತಿಭಟಿಸುವ ಹಕ್ಕು ಜನರಿಗೆ ಪ್ರಾಪ್ತವಾಗುತ್ತದೆ. ಸರ್ವೋಚ್ಛ ಅಧಿಕಾರದ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಶಬ್ದ ಪ್ರಾರಂಭವಾಗುವುದೇ ‘We the people of India…’ ಎಂದು. ಸಂವಿಧಾನವು ಆಡಿರುವ ಈ ಶಬ್ದಕ್ಕೆ ಸಂವಿಧಾನದ ಉದ್ದಕ್ಕೂ ವಿವರಣೆಗಳು ಸಿಗುತ್ತವೆ. ಈ ಮಾತಿನ ಮುಖಾಂತರ ಸಂವಿಧಾನವು ರಾಷ್ಟ್ರದ ಸರ್ವೋಚ್ಛ ಅಧಿಕಾರವನ್ನು ರಾಷ್ಟ್ರದ ಜನರದ್ದು ಎಂದು ತಿಳಿಸುತ್ತದೆ. ಜನತಾ ಪರಮಾಧಿಕಾರವನ್ನು ಧಿಕ್ಕರಿಸುವ ಅಧಿಕಾರ ಸಂಸತ್ತಿಗಿಲ್ಲ. ಹಾಗಾದರೆ ಅಣ್ಣಾ ಹಜಾರೆ ರಾಷ್ಟ್ರದ ಜನರ ಸಮಗ್ರ ಪ್ರತಿನಿಧಿಯೇ ಎಂದು ಕೇಳಿದರೆ ‘ಅಲ್ಲ’ ಎನ್ನುವುದೇ ಉತ್ತರವಾಗಿದೆ. ಯಾವ ರಾಷ್ಟ್ರದಲ್ಲಿಯೂ ಒಬ್ಬ ಹೋರಾಟಗಾರ ಎಲ್ಲ ಜನರ ಅಧಿಕೃತ ಪ್ರತಿನಿಧಿಯಾಗಿರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಒಂಟಿಯಾಗಿದ್ದಾಗಲೂ ಕೂಡ ಅವನಿಗಿರುವ ಪರಮಾಧಿಕಾರವನ್ನು ಚಲಾಯಿಸಲು ಹಕ್ಕುಳ್ಳವನೇ ಆಗಿದ್ದಾನೆ. ಅಣ್ಣಾ ಅವರು ಅದನ್ನೇ ಮಾಡುತ್ತಿದ್ದಾರೆ. ಅಣ್ಣಾ ಸಂಸತ್ತಿನ ಅಧಿಕಾರವನ್ನು ನಿರಾಕರಿಸಿಲ್ಲ. ಸಂಸತ್ತು ಇಂಥಾದ್ದನ್ನು ಮಾಡಬೇಕು ಎನ್ನುತ್ತಿದ್ದಾರೆ. ಸಂಸತ್ತನ್ನು ‘ಡಿಕ್ಟೇಟ್’ ಮಾಡುತ್ತಿದ್ದಾರೆ ಎಂದು ಸರಕಾರ ಭಾವಿಸುವುದಾದರೆ ಆ ರೀತಿ ‘ಡಿಕ್ಟೇಟ್’ ಮಾಡುವ ಹಕ್ಕು ಅಣ್ಣಾ ಅವರಿಗೆ ಇದೆ. ಅದನ್ನು ಸ್ವೀಕರಿಸದೆ ಇರುವ ಹಕ್ಕು ಸಂಸತ್ತಿಗೂ ಇದೆ. ಆದರೆ ‘ಡಿಕ್ಟೇಟ್’ ಮಾಡಲು ಅಣ್ಣಾ ಅವರಿಗಿರುವ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗೂ ಇಲ್ಲ. ಇವರಿಗೆ ಸಂಸತ್ತು ಕಲಾಪ ನಡೆಯುವಾಗ ಕಲಾಪದಲ್ಲಿ ಭಾಗವಹಿಸಬೇಕೆಂಬ ಅರಿವು ಇಲ್ಲ. ಬಾಂಗ್ಲಾ ದೇಶದವನು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಭಾರತದ ಲೋಕಸಭೆಗೆ ಆರಿಸಿ ಬಂದರೆ ಸಂಸತ್ತಿನ ಪರಮಾಧಿಕಾರದ ಉಲ್ಲಂಘನೆ ಎನಿಸುವುದಿಲ್ಲ. ರಾಷ್ಟ್ರದ ಸಂಪತ್ತಿನ ಮಹಾನ್ ಸಂರಕ್ಷಕನಾಗಿ ಸಂಸತ್ತು ಕಾರ್ಯನಿರ್ವಹಿಸಬೇಕೆಂದು ಸಂವಿಧಾನವು ನೀಡಿದ ಆದೇಶವನ್ನು ಪಾಲಿಸಲು ಆಗುವುದಿಲ್ಲ. ಪ್ರತಿಭಟನೆ ಮಾಡಿದರೆ ಸಂಸತ್ತಿನ ಪರಮಾಧಿಕಾರದ ಪ್ರಶ್ನೆ ಬರುತ್ತದೆ. ಶೇಮ್, ಶೇಮ್.

(ಚಿತ್ರ-ಕೃಪೆ : ವಿಕಿಪೀಡಿಯ)

“ವರ್ತಮಾನ”ಕ್ಕೊಂದು ಪೀಠಿಕೆ…

ಸ್ನೇಹಿತರೆ,

ಕರ್ನಾಟಕದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಇಂದು ಒಂದು ವಿಶಿಷ್ಟವಾದ ಚಲನಾವಸ್ಥೆಯಲ್ಲಿರುವುದು ತಮಗೆಲ್ಲ ತಿಳಿದಿರುವ ಸಂಗತಿಯೇ. ಪ್ರಪಂಚದಾದ್ಯಂತ ಅನೇಕ ದೇಶಗಳು ಮತ್ತು ಸಮುದಾಯಗಳು ಆಧುನಿಕತೆಯತ್ತ ಮತ್ತು ಒಂದು ಉತ್ತಮ ಆಡಳಿತ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಯಾರಿಗಾದರೂ ಅನ್ನಿಸಿದರೆ ಅದು ಸಹಜವಾದದ್ದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಘಟನೆಗಳು ನಮ್ಮ ಮಧ್ಯೆ ಪ್ರತಿನಿತ್ಯ ನಡೆಯುತ್ತಿವೆ. ವೈಯಕ್ತಿಕ ನೈತಿಕತೆ ಉಳಿಸಿಕೊಳ್ಳುವುದೇ ಈ ಸಂದರ್ಭದಲ್ಲಿ ಒಂದು ಸವಾಲಾಗಿ ಹೋಗಿದೆ. ಹಾಗೆಯೇ, ಆಶಾವಾದವನ್ನೂ ಸಹ.

ಹೀಗಿರುವಾಗಲೂ, ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಅನೇಕ ಪ್ರಾಮಾಣಿಕ ಜನರು ತಮ್ಮದೇ ನೆಲೆಯಲ್ಲಿ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸುವ ಕೆಲಸಗಳನು ಮಾಡುತ್ತಲೇ ಇದ್ದಾರೆ. ಆದರೆ ಸಮಾಜ ಇಂದು ಅಂತಹ ಕೆಲಸಗಳನ್ನು ಪ್ರಶಂಸಿಸುತ್ತಿದೆಯೇ ಎನ್ನುವುದು ಸಂಶಯಕ್ಕೂ ಆಸ್ಪದವಿಲ್ಲದಷ್ಟು ನಿರಾಶಾದಾಯಕವಾಗಿದೆ. ಸಂಪತ್ತಿನ ಮತ್ತು ದೊಡ್ಡಸ್ತಿಕೆಯ ಹುಡುಕಾಟದಲ್ಲಿ ಇಂದಿನ ಸಮಾಜ ನ್ಯಾಯಾನ್ಯಾಯದ ವಿವೇಚನೆಯಿಲ್ಲದೆ ಸುಲಭಮಾರ್ಗಗಳ ಹುಡುಕಾಟದಲ್ಲಿದೆ. ಭ್ರಷ್ಟಾಚಾರ ಎಲ್ಲಿಯೋ ಕೆಲವರಿಗೆ ಸಂಬಂಧಪಟ್ಟ ವಿಷಯವಾಗಿ, ಬಹುತೇಕ ಜನ ಅದರೊಡನೆ ರಾಜಿ ಮಾಡಿಕೊಂಡುಬಿಟ್ಟಿದ್ದಾರೆ. “ಭ್ರಷ್ಟರು ಯಾರಿಲ್ಲ?” ಎನ್ನುವ ಘೋಷ ವಾಕ್ಯವೇ ಇಂದು ಎಲ್ಲಾ ಜನರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸುತ್ತಿರುವ ವಾದವಾಗಿದೆ. ಹಾಗೆ ಹೇಳುವುದೇ ಒಂದು ನೈತಿಕ ಅಧ:ಪತನ ಎಂದು ಹೇಳುವವರಾಗಲಿ ಮತ್ತು ಅದನ್ನು ಕೇಳಿಸಿಕೊಂಡು ಒಪ್ಪಿಕೊಳ್ಳುವವರಿಗಾಗಲಿ ಅರ್ಥವಾಗುತ್ತಿಲ್ಲ. ಅಥವ ಅವರು ಬೇಕೆಂತಲೇ ಅದನ್ನು ನಿರಾಕರಿಸುತ್ತಿದ್ದಾರೆ. ಇದೆಲ್ಲ ಹೇಗೆ ನಮ್ಮ ಸಮಾಜದಲ್ಲಿ ಸ್ವಾತಂತ್ರ್ಯ, ಪ್ರಗತಿ, ಸಮಾನತೆಯ ಸಾಧನೆಗೆ ಮಹಾಗೋಡೆಯಾಗಿ ನಿಂತಿವೆ ಎಂದು ವಿವರಿಸುವುದೇ ಇಂದಿನ ಬಹುಮುಖ್ಯ ಸವಾಲಾಗಿದೆ.

ಹಾಗೆಯೇ ಹೇಳಿದ ಹಾಗೆ, ನಮ್ಮ ವ್ಯವಸ್ಥೆಯಲ್ಲಿನ ದುಷ್ಟಶಕ್ತಿಗಳ ಜೊತೆ ಇಂದು ನಮ್ಮ ಸಮಾಜ ರಾಜಿ ಮಾಡಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿ ಹೋಗಿದೆ ಎಂದರೆ ಇಂದಿನ ನಮ್ಮ ಬಹುತೇಕ ಸಮೂಹ ಮಾಧ್ಯಮಗಳೂ ಇಂದು ಆ ದುಷ್ಟಶಕ್ತಿಗಳ ಪೋಷಕರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಎಂತಹ ಗಂಭೀರ ವಿಷಯವನ್ನೂ ರಂಜನೀಯ ಮಾಡುವಲ್ಲಿ ಮತ್ತು ತನ್ಮೂಲಕ ತಾವು ಪ್ರಸ್ತುತತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳ ಕೆಲಸ ನಡೆದಿದೆ. ಮತ್ತು ನಮ್ಮ ಸಮಾಜದ ಸಾಕ್ಷಿಪ್ರಜ್ಞೆಯಾಗಬೇಕಿದ್ದ ನಮ್ಮ ಅನೇಕ ಪ್ರಗತಿಪರ ಚಿಂತಕರೂ ಇಂದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ಆದರ್ಶಗಳನ್ನು ಉಳಿಸಿಕೊಳ್ಳಲಾಗದ ಸ್ಥಿತಿ ಮುಟ್ಟಿದ್ದಾರೆ. ಗುಂಪಿನಲ್ಲಿರುವಾಗಲಾದರೂ ನೈತಿಕತೆ ಉಳಿಸಿಕೊಳ್ಳುವ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡುವ ಈ ಜನರೂ ಇಂದು ಕಮ್ಮಿಯಾಗುತ್ತಾ ಹೋಗುತ್ತಿದ್ದಾರೆ. ಇದು ನಮ್ಮ ಸಮಕಾಲೀನ ಸಂದರ್ಭದ ಮಹಾದುರಂತಗಳಲ್ಲೊಂದು.

ಇಂತಹ ಸಂದರ್ಭದಲ್ಲಿ ನಮ್ಮ ವರ್ತಮಾನದ ಆಗುಹೋಗುಗಳನ್ನು ಮತ್ತು ಸವಾಲುಗಳನ್ನು ಗಂಭೀರವಾಗಿ ವಿಶ್ಲೇಷಿಸಿ ಮತ್ತು ವಿಮರ್ಶಿಸಿ, ಹಾಗೆಯೇ ಭವಿಷ್ಯದ ದಿನಗಳು ಮತ್ತು ಕಾರ್ಯಗಳು ಹೇಗಿರಬೇಕು ಎಂದು ಸ್ಪಷ್ಟವಾಗಿ ಹೇಳುವ ತುರ್ತು ಇಂದಿನ ನಮ್ಮ ಸಮಾಜಕ್ಕಿದೆ ಎಂದು ನನಗನ್ನಿಸಿತು. ಆ ನಿಟ್ಟಿನಲ್ಲಿ ಒಂದು ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಯೋಚಿಸುತ್ತಿದ್ದೆ. ಇತ್ತೀಚೆಗೆ ಅದು ಸ್ಪಷ್ಟವಾಯಿತು. ಅದು ಇಂಟರ್ನೆಟ್ ಮಾಧ್ಯಮದಲ್ಲಿ ಹಲವಾರು ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದ ಸಾಧ್ಯ ಎನ್ನಿಸಿತು. ಅದರ ಕಾರ್ಯರೂಪವೇ “ವರ್ತಮಾನ”.

ಯಾರು ಒಪ್ಪಲಿ ಬಿಡಲಿ, ಕಳೆದ ನಾಲ್ಕೈದು ಸಾವಿರ ವರ್ಷಗಳ ತನ್ನ ವಿಕಾಸದ ಹಾದಿಯಲ್ಲಿ ಮನುಷ್ಯ ಕೆಲವೊಂದು ಸಾರ್ವತ್ರಿಕ ಮೌಲ್ಯಗಳನ್ನು ಒಪ್ಪಿಕೊಂಡು ಬಂದಿದ್ದಾನೆ. ವ್ಯಕ್ತಿ ಮತ್ತು ಸಮುದಾಯಗಳ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವ; ಇತ್ಯಾದಿ. ಇಲ್ಲಿ “ವರ್ತಮಾನ”ದಲ್ಲಿಯೂ ಅಂತಹ ಮೌಲ್ಯಗಳನ್ನು ಒಪ್ಪಿಕೊಂಡವರಿಗೆ ಮಾತ್ರ ಸ್ಥಾನವಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ವೈಜ್ಞಾನಿಕ ಮನೋಭಾವ, ವೈಚಾರಿಕ ದೃಷ್ಟಿಕೋನ, ಸಮಾನತೆ ಮತ್ತು ಅದನ್ನು ನಮ್ಮ ಕಾಲಘಟ್ಟದಲ್ಲಿ ಸಾಧಿಸಿಕೊಳ್ಳಲು ಯತ್ನಿಸುವ ಸಾಮಾಜಿಕ ನ್ಯಾಯ; ಇವು ನಾವು ಒಪ್ಪಿಕೊಂಡ ಸಾರ್ವಜನಿಕ ಮೌಲ್ಯಗಳು. ವೈಯಕ್ತಿಕ ಜೀವನದಲ್ಲಿ ಮೌಲ್ಯಗಳಿಗೆ ಬದ್ಧವಾಗಿ ಜೀವನ ಸಾಗಿಸುವುದು ಮತ್ತು ಪ್ರಾಮಾಣಿಕತೆ ಉಳಿಸಿಕೊಳ್ಳುವುದು ನಮ್ಮ ಜೀವನ ಮೌಲ್ಯಗಳಾಗಬೇಕು. ಈ ಒಟ್ಟೂ ನೆಲೆಯಲ್ಲಿ ನಮಗೆ ಬಹುಶಃ ಗಾಂಧಿಗಿಂತ ಮತ್ತೊಬ್ಬ ಆದರ್ಶಪ್ರಾಯರಿಲ್ಲ. ಇಂತಹ ಒಂದು ಸಮಾನಮನಸ್ಕರ ಕ್ರಿಯಾಶೀಲ ಗುಂಪಿನಿಂದ ಏನೂ ಸಾಧ್ಯವಿದೆ ಎನ್ನುವುದು ನನ್ನ ನಂಬಿಕೆ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ, ನಮ್ಮ ವರ್ತಮಾನದ ಸಂದಿಗ್ಧ ಸ್ಥಿತಿಯನ್ನು ನಮ್ಮದೇ ನೆಲೆಯಲ್ಲಿ ಅವಲೋಕಿಸುತ್ತ, ಭವಿಷ್ಯದ ದಿನಗಳು ಹೇಗಿರಬೇಕು ಎಂದು ಪರಿಭಾವಿಸುತ್ತ, ಅದರ ಕಾರ್ಯಸಾಧನೆಗೆ ಕ್ರಿಯಾಶೀಲರಾಗಲು ದಾರಿಗಳನ್ನು ಹುಡುಕುವ ಈ “ವರ್ತಮಾನ”ದ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನಿರಿಕ್ಷಿಸುತ್ತೇವೆ. ಕನ್ನಡ ಮತ್ತು ಕರ್ನಾಟಕದ ನೆಲೆಯಲ್ಲಿ ಪರ್ಯಾಯ ಸಮೂಹ ಮಾಧ್ಯಮವೊಂದರ ಕಾರ್ಯಸಾಧ್ಯತೆಯ ಈ ಪ್ರಯತ್ನದಲ್ಲಿ ನಮ್ಮ ಜೊತೆ ನೀವು ಹಲವಾರು ರೀತಿಯಲ್ಲಿ ತೊಡಗಿಸಿಕೊಳ್ಳಬಹುದು.

  • ಈ “ವರ್ತಮಾನ”ದ ಚೌಕಟ್ಟಿನಲ್ಲಿ ಸೇರುವ ಯಾವುದೇ ವಿಷಯದ ಬಗ್ಗೆ ನಿಮ್ಮ ಲೇಖನ, ಆಡಿಯೋ, ಅಥವ ವಿಡಿಯೋವನ್ನು ನಮಗೆ ಕಳುಹಿಸಬಹುದು.
  • ಇಲ್ಲಿರುವ ಲೇಖನಗಳ ಕುರಿತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
  • ಓದಿ, ನೋಡಿ, ಮೆಚ್ಚಿಗೆಯಾದದ್ದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
  • ತಮಗೆ ಸಾಧ್ಯವಾದಲ್ಲಿ ಕೆಲವೊಂದು ಕಾರ್ಯಗಳಿಗೆ ಅನುಕೂಲವಾಗುವಂತೆ ಹಣದ ಸಹಾಯ ಸಹ ಮಾಡಬಹುದು.

ಲೇಖನಗಳನ್ನು ಕಳುಹಿಸಲು ಅಥವ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮ್ಮನ್ನು ಸಂಪರ್ಕಿಸಬೇಕಾದ ವಿಳಾಸ:

editor@vartamaana.com

ಅಥವ

“ವರ್ತಮಾನ”
ನಂ. ೨೨೨, B4, ತುಂಗಭದ್ರ ಬ್ಲಾಕ್,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ
ಬೆಂಗಳೂರು – ೫೬೦೦೪7

ದೂ: ೯೬೮೬೦೮೦೦೦೫

 

 

ತಮ್ಮ ವಿಶ್ವಾಸಿ,
ರವಿ ಕೃಷ್ಣಾ ರೆಡ್ಡಿ