Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಕಡಲ ಊರಿನ ಕಣ್ಣೀರ ಕಥೆಗಳು

– ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜು

ಕರಾವಳಿ ಮಹಿಳಾ ಲೋಕ ಕುರಿತಾಗಿ ನಮ್ಮ (ಬೆಂಗಳೂರಿನ “ಬದುಕು ಕಮ್ಯುನಿಟಿ ಕಾಲೇಜು” ವಿದ್ಯಾರ್ಥಿಗಳ) ಸಂಶೋಧನಾ ಪಯಣದಲ್ಲಿ ಒಂದೊಂದು ಹೆಣ್ಣಿನ ಒಡಲಾಳದಲ್ಲೂ ನೋವಿನ ಕಿಚ್ಚು ಬೆಸೆದ ಆಕ್ರೋಶದ ಧ್ವನಿ, ಗುಡುಗು-ಮಿಂಚುಗಳಂತೆ, ನೋವುಂಡವರ ಧ್ವನಿ ಎತ್ತರದ್ದು ಎಂಬುದು ಅರ್ಥವಾಗಿದ್ದು ಮಂಗಳೂರಿನಲ್ಲೇ.

ಕರಾವಳಿಯ ಮಹಿಳೆಯರ ಬಗ್ಗೆ ಒಂದಿಷ್ಟು ಕರುಣೆ ಕುತೂಹಲ ಹೊಂದಿದ್ದ ನಾವು, ಅವರಾಳದ ಬದುಕನ್ನು ಹತ್ತಿರದಿಂದ ನೋಡುವ ತವಕದಿಂದ ಅಲ್ಲಿಗೆ ಹೋಗಿದ್ದೆವು.

ಮೊದಲ ದಿನವೇ ನಾವು ಹೋಗಿದ್ದು “ಜನ ನುಡಿ”ಗೆ. ಅಲ್ಲಿ ಮಹಿಳೆಯರ ಮಾತು, ಅವರ ಧೈರ್‍ಯ, abhimatha-mangalooru-jananudi“ನಾವು ನೋವುಂಡವರು ಎಲ್ಲರಿಗಿಂತ ಶಕ್ತಿವಂತರು” ಎಂದು ನುಡಿದ ಮಾತುಗಳ ಕೇಳಿ ನಮ್ಮಗಳ ಬಗ್ಗೆಯೇ ಮರುಕ ಹುಟ್ಟಿತು. ನಮ್ಮಲ್ಲಿ (ಬಯಲುಸೀಮೆಯಲ್ಲಿ) ಒಂದು ಮಾತನ್ನಾಡಲೂ ಹಿಂದು ಮುಂದು ನೋಡುವ ಮಹಿಳೆಯರನ್ನು ನೋಡಿದ್ದ ನಮಗೆ ಮಂಗಳೂರಿನ ಮಹಿಳೆಯರ ಸವಾಲು ತುಂಬಿದ್ದ ಮಾತುಗಳು ನಮ್ಮ ಜಡ ಆತ್ಮಗಳಿಗೆ ಜೀವ ತುಂಬಿದಂತಾಗಿತು. ಕೋಮುವಾದ, ಜಾಗತೀಕರಣ ಭೂತಕ್ಕೆ ಬಲಿಯಾಗಿರುವ ತುಳುನಾಡ ಸಂಸ್ಕೃತಿಯ ಕುರಿತಾಗಿ ಹಲವಾರು ಮಹಿಳೆಯರನ್ನು, ಶ್ರೇಷ್ಟ ಬರಹಗಾರ್ತಿಯರನ್ನು ಮಾತನಾಡಿಸಿದೆವು. ಕೋಮುವಾದದ ವಿಷಬೀಜದ ಕರಾಳತೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಬೀರಿರುವ ದುಷ್ಪರಿಣಾಮದ ಕುರಿತಾಗಿ ಅನೇಕ ಕಡೆ ಚರ್ಚಿಸಿದೆವು. ಲೇಖಕಿ ಸಾರಾ ಅಬೂಬಕರ್, “ಮಂಗಳೂರಿನಲ್ಲಿ ಕೋಮುವಾದ ಇತ್ತೀಚಿನದು ನಾವು ಇಂದಿಗೂ ಹಿಂದೂ-ಮುಸಲ್ಮಾನರು ಒಟ್ಟಿಗೆ ಬದುಕುತ್ತೇವೆ. ನಮ್ಮ ಹೆಣ್ಣು ಮಕ್ಕಳು ವಿದ್ಯಾವಂತೆಯರು. ಇಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ಇದೆ, ಇದು ಉತ್ತರ ಭಾರತಕ್ಕಿಂತ ಸ್ವಲ್ಪ ಮಟ್ಟಿಗೆ ಮಹಿಳೆಯರಿಗೆ ಹೆಚ್ಚು ಮಾನ್ಯತೆ ನೀಡುವ ಪ್ರದೇಶ. ಆದರೆ ಉತ್ತರ ಪ್ರದೇಶದಲ್ಲಿ ೧೮ ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುತ್ತಾರೆ, ಶಾಲೆಗೆ ಕಳಿಸುವುದಿಲ್ಲ. ನಮ್ಮಲ್ಲಿ ಅಂತ ಪದ್ಧತಿ ಇಲ್ಲ. ಮಹಿಳೆಯರು ಶಿಕ್ಷಿತರು, ಅಧಿಕಾರ ರಂಗದಲ್ಲೂ ಅವರೇ ಸ್ವತಹ ಆಡಳಿತ ನಿರ್ವಹಿಸುವಷ್ಟು ಸಬಲರು. ಅನೇಕ ಕಡೆ, ಸ್ಥಾನ ಹೆಂಡತಿಯದ್ದು ಆದರೆ ಗಂಡ ಅಧಿಕಾರ ನೆಡೆಸುತ್ತಾನೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ,” ಎಂದು ಅವರ ಹಲವಾರು ಅನುಭವಗಳನ್ನು ಹಂಚಿಕೊಂಡರು. ಅಲ್ಲಿನ ವಾತಾವರಣ ಗಮನಿಸಿದ ನನಗೆ ಅದು ಸತ್ಯವೆನಿತು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಮುಟ್ಟಿದ್ದು ಅತ್ರಾಡಿ ಅಮೃತಾ ಶೆಟ್ಟಿಯವರ ನುಡಿಗಳು. “ನಾವು ತುಳುನಾಡಿನವರು, ಸೂಕ್ಷ್ಮ ಮನಸ್ಸಿನವರು, ಧರ್ಮದಿಂದ ಬಂದವರಿಗೆ ನಮ್ಮ ಎದೆಯಲ್ಲಿ ಜಾಗ ಕೊಡುತ್ತೇವೆ. ಅಧರ್ಮದಿಂದ ಬಂದವರಿಗೆ ಕತ್ತಿಯ ಮೊನೆಯಲ್ಲಿ ಉತ್ತರ ನೀಡುತ್ತೇವೆ. ತುಳುನಾಡ ಸಂಸ್ಕೃತಿ ಮಾತೃ ಪ್ರಧಾನವಾದದ್ದು. athradi-amrutha-shettyಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಹೆಣ್ಣುಮಕ್ಕಳಾಗಲಿ ಎಂದು ಹರಕೆ ಹೊರುತ್ತಾರೆ, ಇಲ್ಲಿ ಹೆಣ್ಣು ಭ್ರೂಣ ಹತ್ಯೆಗಳಿರಲಿಲ್ಲ. ಇದು ಮಹಿಳೆಯರನ್ನು ಪೂಜಿಸುವ ನಾಡು. ಇಂತಹ ನಾಡಲ್ಲಿ ಸೌಜನ್ಯ ಕೊಲೆ ಪ್ರಕರಣ, ಒಂದು ಅವಮಾನಕರವಾದ ಪ್ರಕರಣ. ಇದಕ್ಕೆ ನ್ಯಾಯ ದೊರಕುವವರೆಗೂ ಈ ಪ್ರಕರಣವನ್ನು ಜೀವಂತವಾಗಿಡುತ್ತೇವೆ. ಬೇರಾವ ಹೆಣ್ಣು ಮಕ್ಕಳಿಗೂ ಇಂತ ಸಾವು-ನೋವು ಬರದಂತೆ ನೋಡಿಕೊಳ್ಳುತ್ತೇವೆ,” ಎಂದು ಶಪಥ ಮಾಡಿದರು. “ಕರಾವಳಿ ಕೆಲವು ವರ್ಷಗಳ ಹಿಂದೆ ಮಾನಸಿಕವಾಗಿ ಸಮೃದ್ಧವಾಗಿತ್ತು. ಆದರೆ ಇಂದು ಕೋಮುವಾದ, ಬಂಡವಾಳಶಾಹಿ ವ್ಯವಸ್ಥೆ, ಆಧುನಿಕರಣ ಮತ್ತು ರಾಜಕಾರಣದಿಂದ ಕಲುಷಿತವಾಗಿದೆ. ತುಳುನಾಡಿನವರಾದ ನಾವು ಸದಾ ತಲ್ಲಣಗಳೊಂದಿಗೆ, ಮತ್ತು ವೈರುಧ್ಯಗಳೊಂದಿಗೆ ಬದುಕುವವರು. ನಾವು ಗಟ್ಟಿಜನ. ಹೆಣ್ಣನ್ನು ಗೌರವಿಸುವ ಇಂತಹ ಪ್ರದೇಶದಲ್ಲಿ, ಸೌಜನ್ಯಳ ಮೇಲೆ ಆದ ಭೀಕರ ಅತ್ಯಾಚಾರ ಇಡೀ ತುಳುನಾಡಿನ ತಾಯಿ ಮನಸ್ಸುಗಳಿಗೆ ಆದ ಅತ್ಯಾಚಾರ. ಇಂತಹ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ನೇತ್ರಾವತಿ ನದಿಯಲ್ಲಿ ಹರಿಯುವ ನೀರು ಇಲ್ಲಿನ ಹೆಣ್ಣಿನ ರಕ್ತ ಮತ್ತು ಕಣ್ಣೀರು” ಎಂದು ತಿಳಿಸಿದ ಅವರು, “ನಾವು ಸದಾ ತಲ್ಲಣ್ಣಗಳೊಂದಿಗೇ ಬದುಕುವವರು. ಯಾವ ಹೋರಾಟಗಳಿಗೂ ಸಿದ್ಧರಿರುತ್ತೇವೆ,” ಎಂದರು.

ನನಗನ್ನಿಸಿದಂತೆ ಮಂಗಳೂರು ಒಂದು ಬೃಹತ್ ವ್ಯಾಪಾರ ಕ್ಷೇತ್ರ. ವ್ಯಾಪಾರದಲ್ಲಿ ಮೊಗವೀರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ಆರ್ಥಿಕವಾಗಿ ಸ್ವತಂತ್ರಳಾಗಿರುತ್ತಾಳೆ. ಬೀಡಿ ಕಟ್ಟುವುದರ ಮೂಲಕವಾದರೂ ದುಡಿಯುತ್ತಾಳೆ. ಆದ್ದರಿಂದ ಇಲ್ಲಿ ಮಹಿಳೆಯನ್ನು ಕಟ್ಟಿಹಾಕುವ ಹುನ್ನಾರದಲ್ಲಿ ಇಂತಹ ಬೆದರಿಕೆ, ಅತ್ಯಾಚಾರ, ಕೋಮುಗಲಭೆಗಳೂ ಒಂದು ಭಾಗವಾಗಿ ಸದಾ ನೆಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಮಂಗಳೂರು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾರ್ಪಾಡಾಗುತ್ತಿದ್ದು, ಇದರ ಕರಾಳಬಾಹು ಕರಾವಳಿಯ ಮಹಿಳೆಯರ ಮೇಲೆ ಭೀಕರವಾಗಿ ಚಾಚುತ್ತಿದೆ. mangalore-women-protestಬಾಯಲ್ಲಿ ಮಂಗಳೂರು ಮಹಿಳಾ ಪ್ರಾಧಾನ್ಯತೆಯ ನಾಡಾಗಿದ್ದರೂ, ಅದು ಆ ರೀತಿ ಉಳಿದಿಲ್ಲ. ಜೊತೆಗೆ ಆಧುನಿಕತೆಯ ಭೂತ ಕೆಲವು ಸಾಂಸ್ಕೃತಿಕ ಕುಲ-ಕಸುಬುಗಳನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಲಹೀನರನ್ನಾಗಿಸಿ ಬಂಧನದಲ್ಲಿಡುತ್ತಿದೆ.

ನಾವು ಹಲವಾರು ಮಹಿಳೆಯರನ್ನು ಮಾತನಾಡಿಸಿದಾಗಲೂ, ಅವರೆಲ್ಲರ ಅಳಲು ಇದೇ ಆಗಿತ್ತು.

ಕರಾವಳಿಯ ಇಂದಿನ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುತ್ತಾ ಗುಲಾಬಿ ಬಿಳಿಮಲೆಯವರು, “ಇಂದು ಕರಾವಳಿಯಲ್ಲಿಯೂ ಸಹ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಕಾರಣ ಇತ್ತೀಚೆಗೆ ಇಲ್ಲೂ ಹೆಣ್ಣು ಭ್ರೂಣಹತ್ಯೆಗಳು ನೆಡೆಯುತ್ತಿವೆ. ಆದರೆ ವಿದ್ಯಾವಂತರಿರುವುದರಿಂದ ಇದು ಮೇಲ್ಮಟ್ಟಕ್ಕೆ ಕಾಣಿಸುವುದಿಲ್ಲ. ಹಾಗು ಮಂಗಳೂರು ಒಂದು ಕೃಷಿನಾಡು, ಕೃಷಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಬೃಹತ್ ಕೈಗಾರೀಕರಣದಿಂದಾಗಿ ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಕೋಮುವಾದ ನೇರವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಷ್ಟೇ ಆಗುತ್ತಿಲ್ಲ, ಅವರ ಸಾಗಾಣಿಕೆ ಕೂಡ ನಡೆಯುತ್ತಿದೆ. ಇದು ನಮ್ಮ ನಾಡಿಗೆ ತುಂಬ ಅವಮಾನಕರವಾದದ್ದು. ಆದರೆ ಸರ್ಕಾರ ಈಗಲೂ ಸಹ ಇದರ ಕುರಿತು ಸರಿಯಾದ ಕ್ರಮ ಕೈಗೊಂಡಿಲ್ಲ,” ಎಂದು ಹೇಳಿದ್ದು ಕೇವಲ ಅವರ ಅನುಭವ ಮಾತ್ರ ಆಗಿರಲಿಲ್ಲ. ಅದು ಅವರ ಒಡಲಾಳದ ನೋವಾಗಿತ್ತು.

ಕರಾವಳಿ ಮಾತೃಪ್ರಾಧಾನ್ಯತೆಯ ನಾಡಾಗಿದ್ದರೂ, ಅಲ್ಲಿಯೂ ಸಹ ಮಹಿಳೆಯರ ಮೇಲೆ ನೆಡೆಯುವ ಶೋಷಣೆಗೆ ಮಿತಿ ಇಲ್ಲ. ಇಂದು ಮಾತೃಪ್ರಾಧಾನ್ಯತೆ ಎಂಬುದು ಬರಿಯ ಹೆಸರಿಗೆ ಉಳಿದಿರುವುದು ಎಂಬುದು ಅಲ್ಲಿನ ಮಹಿಳಾ ಚಿಂತಕರ ಅಭಿಪ್ರಾಯವಾಗಿದೆ. ಸಾಂಸ್ಕೃತಿಕ ಮತ್ತು ವಿದ್ಯಾವಂತರ ನಾಡು ಎಂದೇ ಪ್ರಖ್ಯಾತವಾಗಿರುವ ತುಳುನಾಡು ಇಂದು ಕೋಮುವಾದ, ಜಾಗತೀಕರಣ, ಮತ್ತು ಬಂಡವಾಳಶಾಹಿಗಳ ವಿಕೃತ ಹಿಡಿತದಿಂದ ನಲುಗುತ್ತಿದೆ ಎಂಬುದು ಸತ್ಯ.

 

ರವಿ ಕೃಷ್ಣಾರೆಡ್ಡಿಯವರ ಲೇಖನ ಓದುವಾಗ ನನಗನ್ನಿಸಿದ್ದು…

– ಶರ್ಮಿಷ್ಠ 

ರವಿ ಕೃಷ್ಣಾರೆಡ್ಡಿಯವರ ಲೇಖನ “ವರ್ತಮಾನ.ಕಾಮ್ ನ 2013 ಭೂತಕಾಲ” ಓದುವಾಗ ನನಗನ್ನಿಸಿದ್ದು…

ದೆಹಲಿಯಲ್ಲಿ ನಡೆದಂತಹ ಪವಾಡಸದೃಶ ಘಟನೆ ನನ್ನ ಪ್ರಕಾರ ನಮಗೆ ಅನಿವಾರ್ಯವಾಗಿ, ಅಗತ್ಯವಾಗಿಯೂ ಬೇಕು. ಆದರೆ ನಮ್ಮಲ್ಲಿ ಮನಸ್ಸುಗಳು ಮುಕ್ತವಾಗಿ ಆಲೋಚಿಸುವುದನ್ನೇ ಕಳೆದುಕೊಂಡಿರುವಾಗ ಇದು ಸಾಧ್ಯನಾ? arvind-kejriwal-delhi-electionsಕರ್ನಾಟಕದಲ್ಲಿ ನೀವು ಒಂದೋ ಎಡ ಅಥವಾ ಬಲ ಪಂಥೀಯರಾಗಿರಲೇ ಬೇಕು. ನೀವು ಗುರುತಿಸಿಕೊಳ್ಳದಿದ್ದರೂ ನಿಮ್ಮ ಸುತ್ತಲಿನ ಜನ ಇದೆರಡರಲ್ಲಿ ಒಂದಕ್ಕೆ ನಿಮ್ಮನ್ನು ಸೇರಿಸಿ, ನಿಮ್ಮನ್ನು ಹಿಗ್ಗಾಮುಗ್ಗಾ ಎಳೆದಾಡುತ್ತಾರೆ. ನಿಮ್ಮ ಒಲವು ಎಡ ವಿಚಾರಗಳ ಕಡೆಗಿದ್ದರೆ ಸಾಕು, ಅನಾವಶ್ಯಕ ನಿಮ್ಮ ಮೇಲೇ ದ್ವೇಷ ಸಾಧಿಸುತ್ತಾರೆ. ಕಾರಣವೇ ಇಲ್ಲದೆ ನಿಮ್ಮ ಬಳಿ ಮಾತು ಬಿಡುತ್ತಾರೆ, ನಿಮ್ಮ ನೆರಳು ಕಂಡರೂ ಸಾಕು ರೇಗುತ್ತಾರೆ. ಒಟ್ಟಿನಲ್ಲಿ ನಿಮ್ಮ ವಿಚಾರಗಳು ಸರಿಯಿಲ್ಲ.

ಬಲಪಂಥೀಯರೆಂದರೆ ವಿಶ್ವಾಸವಿಲ್ಲದ ಯುವಜನತೆ ಎಡಪಂಥೀಯರೆಡೆಗೆ ಹೋಗೋಣ ಎಂದರೆ ಅಲ್ಲಿರುವುದೆಲ್ಲ ಬರಿಯ ಮುಖವಾಡ, ಹಿಪೋಕ್ರಸಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಯಾರನ್ನು ಆದರ್ಶ ಅಂಥ ಹೇಳೋಣ? ಆದರ್ಶ ಎನ್ನುವುದು ಅದು ಆದರ್ಶ ಅನ್ನೋದಕ್ಕೆ ನಮಗೆ ಆದರ್ಶಯುತವಾಗಿರಬೇಕೇ ಹೊರತು, ಬೇರೆಯವರ ಅನುಕರಣೆ ಅಲ್ಲ. ಅವರು ಆದರ್ಶವಾಗಿದ್ದರೆ ಎಷ್ಟು, ಬಿಟ್ಟರೆ ಎಷ್ಟು. ಆದರೂ ಕೆಲವೊಮ್ಮೆ ನಾವು ನಮ್ಮ ಹೋರಾಟದಲ್ಲಿ ಸೋಲು ಅನುಭವಿಸುವಾಗ ಜೀವಚೈತನ್ಯ ನೀಡುವುದಕ್ಕಾದರೂ ಆದರ್ಶಪ್ರಾಯ ವ್ಯಕ್ತಿಯೊಬ್ಬ ಸಂತೈಸಲು ಬೇಕಾಗುತ್ತದೆ. ನಮ್ಮ ನಡೆಗೆ ಜೀವ ತುಂಬಲು…

ಜಿಎಸೆಸ್ ತೀರಿಹೋದಾಗ ನನಗನ್ನಿಸಿತ್ತು, ಆದರ್ಶ ಗುರುಪರಂಪರೆಯ ಕಾಲ ಇನ್ನಿಲ್ಲ… Tumkur-VC-Sharma-with-Governorಹಿಂದಿನ ಗುರುಗಳು ಆದರ್ಶಯುತವಾದ ವಿದ್ಯಾರ್ಥಿವೃಂದವನ್ನು ಬೆಳೆಸಿದಂತೆ ಈಗ ಬೆಳೆಸುವವರು ಯಾರಿದ್ದಾರೆ? ಆ ಗುರುವಿನ ಪಟ್ಟಕ್ಕೆ ನಾವು ಬೆಲೆತೆತ್ತು ಹೋಗುತ್ತಿರುವಾಗ, ವಿಸೀ ಪದವಿ ನಡೆಯುತ್ತಿರುವುದು ಆಯ್ಕೆಯಲ್ಲ, ಅನಧಿಕೃತ “ಬಿಡ್” ಅನ್ನುವುದು ಎಲ್ಲರಿಗೂ ಗೊತ್ತಿರುವಾಗ ಆದರ್ಶಯುತ ವಿದ್ಯಾರ್ಥಿವೃಂದ ಬೆಳೆಸೋದು ಸಾಧ್ಯನಾ? ಕಾಲೇಜುಗಳಲ್ಲೇ ವಿದ್ಯಾರ್ಥಿ ಚುನಾವಣೆ ಮೂಲಕ ರಾಜಕೀಯ ಕಾಲಿಟ್ಟು ವಿದ್ಯಾರ್ಥಿ ಸಮುದಾಯವನ್ನೇ ಒಡೆಯುತ್ತಿದೆ. ಸಮಾರಂಭದಲ್ಲಿ ನಮ್ಮ ಅಧ್ಯಾಪಕರ ಆಯ್ಕೆ ಕಾಲೇಜಿಗೆ ಫಂಡ್ ಕೊಡಬಲ್ಲ ಲಂಚಕೋರ ರಾಜಕಾರಣಿಯೇ ಹೊರತು ಆದರ್ಶ ವ್ಯಕ್ತಿ ಅಲ್ಲ.

ಒಳ್ಳೆಯ ಶಿಷ್ಯ ಪರಂಪರೆಯನ್ನು ಕಟ್ಟಬಲ್ಲ ತಾಕತ್ತಿರುವ ಅಧ್ಯಾಪಕರನ್ನು ನಾವು ನಕ್ಸಲ್ ಬೆಂಬಲಿಗ ಎನ್ನುವ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಿಯಾಗಿದೆ. ಸೆಕ್ಯುಲರ್‌ಗಳು ಎನಿಸಿಕೊಂಡಿರುವವರು ತಪ್ಪು ಯಾರು ಮಾಡಿದರೂ ತಪ್ಪು ಎನ್ನೋ ಧೋರಣೆ ಬಿಟ್ಟು ಯಾವುದೋ ವಾದವನ್ನು ಮುಂದಿಟ್ಟುಕೊಂಡು ಬಲಪಂಥೀಯರನ್ನು ಹೆಚ್ಚು ಹೆಚ್ಚು ತಯಾರು ಮಾಡುತ್ತಿದ್ದಾರೆ. ಅದಕ್ಕೆ ಕರ್ನಾಟಕದ ಯುವಜನತೆ ಮೋದಿಯ ಚುಂಗು ಹಿಡಿದುಕೊಂಡಿದೆ. ಇಲ್ಲಿ ಆಮ್ ಆದ್ಮಿ ಮೋಡಿ ಆಗುತ್ತಿಲ್ಲ.

ಒಮ್ಮೆ ಟಿ.ಪಿ. ಅಶೋಕ ಸಮಾರಂಭವೊಂದರಲ್ಲಿ ಹೇಳಿದ್ದರು `ಲೆಟ್ ಅಸ್ ಅಗ್ರೀ ಟು ಡಿಸಗ್ರೀ’. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ.

ಯಾದವ್ ತರದ ಒಳ್ಳೆಯ ಆದರ್ಶ ಪ್ರೋಪೆಸರ್ ಇಲ್ಲಾ ಅಂಥಲ್ಲ ಅಂಥವರನ್ನು ಸರ್ಕಾರದ ಅಧೀನದಲ್ಲಿರುವ ವಿವಿಗಳು ಕೈಕಟ್ಟಿ ಕೂರಿಸಿವೆ. ಅಥವಾ ಸಾಧ್ಯತೆ ಇರುವವರು ಮುಂದೆ ಬರುತ್ತಿಲ್ಲ.

ಒಳ್ಳೆಯ ಪತ್ರಕರ್ತರು ಅಂಥ ಇದ್ದರೆ ಅವರು ಬಹುಶ ಮಾಧ್ಯಮದಲ್ಲಿ ಉಳಿಯುವುದಿಲ್ಲ. ಒಳ್ಳೆಯ ಆದರ್ಶಗಳಿದ್ದರೆ, ನೀವು ಅನ್‌ಫಿಟ್ ಟು ಬಿಕಮ್ ಜರ್ನಲಿಸ್ಟ್.

ಒಳ್ಳೆಯ ಲಾಯರ್ ಅಂಥ ಯಾರಿದ್ದಾರೆ. ಇದ್ದಾರೆ ಒಬ್ಬರು ಮುಕ್ತ, ಮಹಾಪರ್ವದ ಟಿ..ಎನ್. ಸೀತಾರಾಂ ಅಷ್ಟೆ. ಸಂತೋಷ ಹೆಗ್ಡೆಯವರು ಅಷ್ಟು ಕಷ್ಟಪಟ್ಟು ತಯಾರಿಸಿದ ಲೋಕಾಯುಕ್ತ ವರದಿಯನ್ನು ಲೀಕ್ ಮಾಡಿದಾಗ, Santosh_Hegdeಅವರು ಗಳಗಳನೆ ಅತ್ತರಲ್ಲ ಯಾರಿಂದ ಏನು ಮಾಡಲಿಕ್ಕಾಯ್ತು. ಈ ಪ್ರಜಾಪ್ರಭುತ್ವದಲ್ಲಿ ನಮಗೆ ಏನು ಹಕ್ಕಿದೆ? ಒಂದು ಪಿಐಎಲ್‌ಗೆ ಲಕ್ಷಗಟ್ಟಲೆ ಸುರಿಯಬೇಕಾಗಿರುವಾಗ ಯಾರು ತಾನೇ ಮುಂದೆ ಬಂದು ಜನಪರ ಹೋರಾಟಗಳನ್ನು ಮಾಡುತ್ತಾರೆ. ನಮ್ಮಲ್ಲಿ ಪಠ್ಯಪುಸ್ತಕದಲ್ಲಿ ಜಾತಿ ಹೆಸರಲ್ಲಿ‍, ಇನ್ನು ಯಾವುದೋ ಹೆಸರಲ್ಲಿ ಎಷ್ಟೆಷ್ಟೂ ಗಲಾಟೆಗಳಾಗುತ್ತದೆ. ಆದರೆ ಯಾರದರೂ ಕಾನೂನನ್ನು ಗಂಭೀರವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರಾ?

ಕೆಲವೊಮ್ಮೆ ಹೋರಾಟಗಾರರು ತಮ್ಮ ಅಹಿಂದ, ದಲಿತ, ಅಲ್ಪಸಂಖ್ಯಾತ ಧೋರಣೆಯಿಂದ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಬಹುಸಂಖ್ಯಾತರ ಬೆಂಬಲ ಕಳೆದುಕೊಂಡು ಸಮಾಜವನ್ನು ಇನ್ನೂ ಛಿದ್ರ ಛಿದ್ರ ಮಾಡುತ್ತದೆ ಅಷ್ಟೆ.

ಏನು ಬರೆದರೂ ಏನು ಸಾಧ್ಯವಿಲ್ಲ. ಎಲ್ಲ ಅಕ್ಷರ ಕಸ ಎನಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ. sowjanya-heggadeಸೌಜನ್ಯಾ ಪರ ಹೋರಾಟ. ಎಲ್ಲರು ಎಷ್ಟು ದನಿಯೆತ್ತಿದರೂ ಏನೂ ಸಾಧ್ಯವಾಗಲಿಲ್ಲ. ಈ ರೀತಿಯ ಘಟನೆ ಮನಸ್ಸನ್ನು ಮತ್ತೆ ಮತ್ತೆ ಕುಗ್ಗಿಸುತ್ತೆ. ಆ ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲಿಕ್ಕೆ ಆಗಲೇ ಇಲ್ಲ. ಹಿಂದೂ ಸಮಾಜದ ಏಳಿಗೆಗೆ ಬಲಿದಾನ ಅನಿವಾರ್ಯ ಎಂದು ಹಿಂದೂ ಪರ ಸಂಘಟನೆಗಳು ಕೈಕಟ್ಟಿ ಕುಳಿತವು. ಆದರೆ ಅವಳು ನಮ್ಮ ಮನೆ ಮಗಳಾಗಿದ್ದರೆ…

ಇದನ್ನೆಲ್ಲಾ ಯಾರ ಹತ್ತಿರ ಹೇಳಬೇಕು, ಈ ಅಕ್ಷರ ಕಸ ಯಾಕೆ ಬೇಕು… ಐಯಾಮ್ ಫ್ರಸ್ಟ್ರೇಟೆಡ್.

ವರ್ತಮಾನ.ಕಾಮ್‌ನ 2013 ಭೂತಕಾಲ


– ರವಿ ಕೃಷ್ಣಾರೆಡ್ಡಿ


 

2012 ಆರಂಭವಾದಾಗ ನಮ್ಮ ಆಶಾವಾದಗಳು ಆಕಾಶದಲ್ಲಿ ಹಾರುತ್ತಿದ್ದವು. ಆ ವರ್ಷದ ಆರಂಭದಲ್ಲಿ ನಾನು ಬರೆದ “2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ” ಎಂಬ ಲೇಖನದಲ್ಲಿ ಅದಕ್ಕೆ ಕಾರಣಗಳನ್ನು ನೀವು ಗುರುತಿಸಬಹುದು. ಹಾಗೆ ನೋಡಿದರೆ 2012 ರಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಲಿಲ್ಲ. ಆದರೆ ಮುಂದಿನ ವರ್ಷ, ಅಂದರೆ 2013 ರಲ್ಲಿ, ಈ ದೇಶ ಪಡೆದುಕೊಂಡ ತಿರುವುಗಳ ಬೀಜಗಳೆಲ್ಲ 2012 ರಲ್ಲಿ ಬಿತ್ತಲ್ಪಟ್ಟವು ಎನ್ನುವುದನ್ನು ನಾವು ಮರೆಯಬಾರದು.

2013 ಈ ದೇಶವಾಸಿಗಳಲ್ಲಿ ಹೊಸ ಹುಮ್ಮಸ್ಸನ್ನು, ಕನಸನ್ನು, ಧೈರ್ಯವನ್ನು, ನಗುವನ್ನು, (ಬಹುಶಃ ಒಂದಷ್ಟು ಭ್ರಮೆಗಳನ್ನೂ) ತುಂಬಿದೆ. ಆದರೆ ಕರ್ನಾಟಕದ ರಾಜಕೀಯದ ವಿಚಾರಕ್ಕೆ ಹೇಳುವುದಾದರೆ, ramya-siddaramaiahಭ್ರಷ್ಟ ಬಿಜೆಪಿ ವಿರುದ್ಧ ಭ್ರಷ್ಟ ಕಾಂಗ್ರೆಸ್ ಬಂದು ಕುಳಿತಿದೆ. ಒಂದೇ ಸಮಾಧಾನ ಎಂದರೆ ಸಿದ್ಧರಾಮಯ್ಯನವರು ಯಡ್ಡಯೂರಪ್ಪನವರಲ್ಲ ಎನ್ನುವುದು. ಆದರೆ ಸರ್ಕಾರ ಕೇವಲ ಸಿದ್ಧರಾಮಯ್ಯ ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು. 2014 ರ ಮೊದಲನೆಯ ದಿನವೇ ಈ ಸರ್ಕಾರ ಕಳಂಕಿತರನ್ನು, ಭ್ರಷ್ಟರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳ ಹೊರಟಿದೆ. ಭ್ರಷ್ಟ ಯಡ್ಡಯೂರಪ್ಪ ಭ್ರಷ್ಟ ಬಿಜೆಪಿಗೆ ಮರಳಲಿದ್ದಾರೆ. ಜೆಡಿಎಸ್ ಒಡೆಯಲು ಕಾಲ ದೂರವಿಲ್ಲ. (ಇಂತಹುದನ್ನೆಲ ಊಹಿಸಿಯೇ ನಾನು 2013 ರ ಬಗ್ಗೆ ವರ್ಷದ ಹಿಂದೆ “2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…” ಲೇಖನ ಬರೆದದ್ದು.)

ದೆಹಲಿಯ ಜನತೆ ತಿಂಗಳ ಹಿಂದೆ ಮಾಡಿದ ಪವಾಡಸದೃಶ ಮಾದರಿಯ ಕಾರ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತಹುದೇ ಪರ್ಯಾಯವೊಂದನ್ನು 2013 ರ ಮೊದಲಾರ್ಧದಲ್ಲಿ ಇಲ್ಲಿ ಕಟ್ಟಿಕೊಳ್ಳಲು ಸೋತ ಕರ್ನಾಟಕ 2014 ರ ನಂತರವಾದರೂ ಆ ನಿಟ್ಟಿನಲ್ಲಿ ನಡೆಯಲಿದೆಯೇ ಎನ್ನುವುದನ್ನು ನಾವು ನೋಡಬೇಕಿದೆ. ನೋಡುವುದಕ್ಕಿಂತ ಹೆಚ್ಚಾಗಿ ನಾವೇ ಸಾಧ್ಯ ಮಾಡಿಕೊಳ್ಳಬೇಕಿದೆ.

ಇಲ್ಲಿ ಒಂದು ವಿಷಯ ಹೇಳಿ ವರ್ತಮಾನ.ಕಾಮ್‌ನ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಹಿಂದೆ ಅನೇಕ ಅಂಶಗಳು ಮತ್ತು ದೀರ್ಘಕಾಲದ ಹೋರಾಟಗಳಿವೆ. manishsisodia-yogendrayadav-arvindkejriwal-prashantbhushan“ಭ್ರಷ್ಟಾಚಾರದ ವಿರುದ್ಧ ಭಾರತ” ಹೋರಾಟದ ಹಿನ್ನೆಲೆ ಅದರ ನಾಯಕರಿಗಿತ್ತು. ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಕ್ಕೂ ಮಿಗಿಲಾಗಿ “ಪರಿವರ್ತನ್” ಸಂಸ್ಥೆಯನ್ನು ನಡೆಸುತ್ತ, ಆಂದೋಳನಗಳನ್ನು ರೂಪಿಸುತ್ತ, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತ ಬಂದವರು. ಪ್ರಶಾಂತ್ ಭೂಷಣ್ ಸುಪ್ರೀಮ್‌ಕೋರ್ಟ್‌ನ ಹೆಸರಾಂತ ನ್ಯಾಯವಾದಿ ಮತ್ತು ಜನಪರ ಹೋರಾಟಗಾರ. ನಮ್ಮ ರಾಜ್ಯದ ಹಿರೇಮಠರು ನಡೆಸುತ್ತಿರುವ ಅನೇಕ ಮೊಕದ್ದಮೆಗಳನ್ನು ಇವರು ಉಚಿತವಾಗಿ ವಾದಿಸಿ ನಡೆಸಿಕೊಡುತ್ತಿದ್ದಾರೆ. ಯೋಗೇಂದ್ರ ಯಾದವ್ ದೇಶದ ಪ್ರಜ್ಞಾವಂತರ ನಂಬಿಕೆ ಉಳಿಸಿಕೊಂಡಿರುವ ಬದ್ಧತೆಯುಳ್ಳ ಚಿಂತಕ. ಮನೀಷ್ ಸಿಸೋಡಿಯ ಮತ್ತು ಶಜಿಯಾ ಇಲ್ಮಿ ಪತ್ರಕರ್ತರಾಗಿ ಹೆಸರಾದವರು. ಕುಮಾರ್ ವಿಶ್ವಾಸ್ ಹಿಂದಿಯ ಯುವತಲೆಮಾರಿನ ಹೆಸರಾಂತ ಕವಿ. ಇವರೆಲ್ಲರ ಜೊತೆಗೆ ಲಕ್ಷಾಂತರ ಜನರ ನಿಸ್ವಾರ್ಥ ಶ್ರಮ, ಮತ್ತು ದೇಶವಿದೇಶಗಳಲ್ಲಿಯ ಲಕ್ಷಾಂತರ ಜನರ ಧನಸಹಾಯ ದೆಹಲಿಯಲ್ಲಿ ಆ ಪಕ್ಷವನ್ನು ಎರಡನೆ ಅತಿದೊಡ್ಡ ಪಕ್ಷವಾಗಿಸಿತು. ಕರ್ನಾಟಕದಲ್ಲಿ ಆ ತರಹದ ವಾತಾವರಣವಿದೆಯೆ? ಸಂಗಯ್ಯ ಹಿರೇಮಠರು ಖಂಡಿತವಾಗಿ ಕೇಜ್ರಿವಾಲರಿಗಿಂತ ಹಿರಿಯರು ಮತ್ತು ಇತಿಹಾಸ ಹೊಂದಿರುವವರು. sr-hiremathಅವರನ್ನು ಬಿಟ್ಟರೆ ಮೇಲಿನ ಜನಕ್ಕೆ ಹೋಲಿಸಲು ಕರ್ನಾಟಕದಲ್ಲಿ ಯಾರಿದ್ದಾರೆ? ನಮ್ಮ ರಾಜ್ಯದ ಯಾವ ನ್ಯಾಯವಾದಿಯನ್ನು ನಾವು ಪ್ರಶಾಂತ್ ಭೂಷಣರಿಗೆ ಹೋಲಿಸೋಣ? ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಯೋಗೇಂದ್ರ ಯಾದವರಿಗೆ ಹೋಲಿಸೋಣ? ಯಾವ ಪತ್ರಕರ್ತರನ್ನು ಸಿಸೋಡಿಯ ಮತ್ತು ಇಲ್ಮಿಗೆ ಹೋಲಿಸೋಣ? ಯಾವ ಕವಿ-ಸಾಹಿತಿಯಲ್ಲಿ ಕುಮಾರ್ ವಿಶ್ವಾಸನನ್ನು ಕಾಣೋಣ? ಅಂತಹ ವ್ಯಕ್ತಿಗಳು ಇರಬಹುದು ಮತ್ತು ಇದ್ದಾರೆ. ಆದರೆ ಅವರ್‍ಯಾರಿಗೂ ಈ ಹೋರಾಟಗಳು ಬೇಕಿಲ್ಲ. ಜನರೇನೋ ಸಿದ್ಧವಿದ್ದಾರೆ. ಆದರೆ ಜನರ ಮುಂದೆ ಅಗತ್ಯ ವಿಚಾರಗಳನ್ನು ಪ್ರತಿಪಾದಿಸಬಲ್ಲ, ನೆಲದ ಮೇಲೆ ಮಲಗಲು, ದೈಹಿಕ ಶ್ರಮ ಹಾಕಲು, ಹಗಲು-ರಾತ್ರಿ ಹೋರಾಡಲು, ಪೋಲಿಸರಿಂದ ಬಂಧನಕ್ಕೊಳಗಾಗಲು, ಗೆಲುವಿಗಿಂತ ಮೊದಲು ಸೋಲಲು, ಗೌರವ ಪಡೆಯುವುದಕ್ಕಿಂತ ಮೊದಲು ವಿನಾಕಾರಣ ಅವಮಾನಕ್ಕೊಳಗಾಗಲು ಸಿದ್ಧವಿರುವವರು ಕರ್ನಾಟಕದಲ್ಲಿ ಎಲ್ಲಿದ್ದಾರೆ, ಎಷ್ಟಿದ್ದಾರೆ? ಕರ್ನಾಟಕ ಅಂತಹವರನ್ನು ಕಂಡುಕೊಂಡ ದಿನ ಇಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗುತ್ತದೆ. (ಆದರೆ ಅದಕ್ಕಿಂತ ಮೊದಲೇ ಅಧಿಕಾರದ ಹಪಾಹಪಿಯ, ಹಸುವಿನ ವೇಷದಲ್ಲಿರುವ ಹುಲಿಗಳು, ಜನಪರ ಕಾಳಜಿಗಳಿಲ್ಲದಿದ್ದರೂ ಸಹ ಒಳ್ಳೆಯವರು, ಯೋಗ್ಯರು ಎಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಬಲ್ಲ ತಾಕತ್ತಿರುವ ಸ್ವಕೇಂದ್ರಿತ ವ್ಯಕ್ತಿಗಳು ಈಗಾಗಲೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿರುವ ಮಾಹಿತಿ ಇದೆ. ಇದೇನಾದರೂ ಆದರೆ ಕರ್ನಾಟಕ ಆ ಅವಕಾಶವನ್ನೂ ಕಳೆದುಕೊಳ್ಳುತ್ತದೆ.)

ವರ್ತಮಾನ.ಕಾಮ್‌ಗೂ 2013 ಪ್ರಮುಖ ವರ್ಷವೇ. ನಾನು ಚುನಾವಣೆಗೆ ಸ್ಪರ್ಧಿಸಿದ ಕಾರಣವಾಗಿ ಇದು ಒಂದೆರಡು ತಿಂಗಳು ಸೊರಗಿದ್ದು ನಿಜ. ಆದರೆ ನಮ್ಮ ಬಳಗದ ಪ್ರಯತ್ನ ಅದನ್ನು ನಿಲ್ಲಲು ಬಿಡಲಿಲ್ಲ. courtesy-announcementಸಾಮುದಾಯಿಕ ಪ್ರಯತ್ನ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು. ಹಲವರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದದ್ದು ಮುಖ್ಯ ಕಾರಣ. ಇನ್ನು ಕೆಲವರು ಯಾಕೆ ನಿಲ್ಲಿಸಿದರು ಎಂದು ಅವರು ಹೇಳಲಿಲ್ಲ, ನಾನು ಕೇಳಲಿಲ್ಲ. ಆದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸಬರು ಬಂದರು. ಇನ್ನೂ ಹೆಚ್ಚಿನ ಬದ್ದತೆಯಿಂದ ಕೆಲವರು ಬರವಣಿಗೆಯನ್ನು ಹೆಚ್ಚು ಮಾಡಿದರು. ಕಳೆದ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ವರ್ತಮಾನ.ಕಾಮ್ ಪಡೆದುಕೊಂಡಿತು. ಇದರಲ್ಲಿ ನಮ್ಮಲ್ಲಿ ಇಲ್ಲಿಯವರೆಗೆ ಒಂದೇ ಒಂದು ಲೇಖನವನ್ನು ಬರೆದವರಿಂದ ಹಿಡಿದು, ಓದುಗರು, ಪ್ರತಿಕ್ರಿಯಿಸಿದವರು, ಫೇಸ್‌ಬುಕ್‌ನಲ್ಲಿ ಲೈಕ್/ಷೇರ್ ಮಾಡಿದವರು, ಹೀಗೆ ಎಲ್ಲರ ಪಾಲೂ ಇದೆ.

ಹಾಗೆಯೇ ವರ್ತಮಾನ.ಕಾಮ್ ಬಳಗ “ದಲಿತರು ಮತ್ತು ಉದ್ಯಮಶೀಲತೆ” ವಿಚಾರವಾಗಿ dalit-entrepreneurship-16ಹಾಸನದಲ್ಲಿ ಮತ್ತು ತುಮಕೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಈ ಕಾರ್ಯಕ್ರಮಗಳು ಅನೇಕ ಕಡೆ ಹೇಗೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತಿವೆ ಮತ್ತು ಕೆಲವರನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದೆ ಎಂದು ನನಗೆ ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರ ಅರಿವಿಗೆ ಬಂದಿದೆ ಮತ್ತು ಅದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಇದರ ಜೊತೆಗೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಮತ್ತು ಮಂಗಳೂರಿನಲ್ಲಿ ನಡೆದ “ಜನ-ನುಡಿ” ಕಾರ್ಯಕ್ರಮಗಳನ್ನೂ ವರ್ತಮಾನ.ಕಾಮ್ ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ಗೆ ಬೀಳುವ ನನ್ನ ಶ್ರಮದ ಬಗ್ಗೆಯೂ ಒಂದು ಮಾತು. ಈಗ್ಗೆ ಸುಮಾರು ಒಂದು ವರ್ಷದಿಂದ-ಚುನಾವಣೆಯ ಸಂದರ್ಭ ಹೊರತುಪಡಿಸಿ- ನಮ್ಮಲ್ಲಿ ಬರುವ ಎಲ್ಲಾ ಲೇಖನಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ, ವ್ಯಾಕರಣ ಮತ್ತು ಕಾಗುಣಿತಗಳನ್ನು ಪರಿಷ್ಕರಿಸಿ, ಸೂಕ್ತ ಫೋಟೋಗಳನ್ನು ಆಯ್ದು, ಪುಟವಿನ್ಯಾಸ ಮಾಡಿ, ಪೋಸ್ಟ್ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ನನ್ನ ಎಚ್ಚರದ ಸ್ಥಿತಿಯ ಸರಾಸರಿ vartamaana-2-years-smallಶೇ.10-15 ಭಾಗ ವರ್ತಮಾನ.ಕಾಮ್‌ಗೇ ಪ್ರತಿದಿನ ವಿನಿಯೋಗವಾಗುತ್ತಿದೆ. ಇದನ್ನೇ ನಾನು ಪ್ರತಿದಿನವೂ ಮಾಡಲಾಗುವುದಿಲ್ಲ. ಈ ಮೊದಲು ಇದೇ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಂಡಿದ್ದೆ. ವರ್ಷದಿಂದ ಆ ಸಹಾಯವೂ ಇಲ್ಲ. ನಮ್ಮ ಬಳಗದ ಇಬ್ಬರು-ಮೂವರು ಮೊದಲ ವರ್ಷ ಈ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಕೆಲವರಿಗೆ ಈ ಒಂದು ವರ್ಷದಿಂದ ಕೆಲವು ಗಂಭೀರ ವೈಯಕ್ತಿಕ-ತಾಂತ್ರಿಕ-ನೌಕರಿ ಸಂಬಂಧಿತ ಸಮಸ್ಯೆಗಳಿಂದಾಗಿ ಈ ಕೆಲಸವನ್ನು ಹಂಚಿಕೊಳ್ಳಲಾಗುತ್ತಿಲ್ಲ. ನನಗೂ ಸಹ ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಸಮಯವನ್ನು ವಿನಿಯೋಗಿಸಲು ಆಗುವುದಿಲ್ಲ. ಹಾಗೆಂದು ವರ್ತಮಾನ.ಕಾಮ್‌ ಯಾವುದೇ ರೀತಿಯಲ್ಲಿ ನಿಧಾನಗೊಳ್ಳುವ ಪ್ರಮೇಯವೇ ಇಲ್ಲ. ಇಲ್ಲಾ ಸಹಾಯಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲಾಗುವುದು, ಇಲ್ಲದಿದ್ದರೆ ಬಳಗವನ್ನು ವಿಸ್ತರಿಸಲಾಗುವುದು. ಬರಹ/ನುಡಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಗೊತ್ತಿರುವ ಮತ್ತು ಒಂದು ಬ್ಲಾಗ್ ಪೋಸ್ಟ್ ಮಾಡುವುದು ಹೇಗೆಂದು ಗೊತ್ತಿರುವ ಯಾರಾದರೂ ಈ ಕೆಲಸ ಹಂಚಿಕೊಳ್ಳಲು ಅರ್ಹರು. ವಾರಕ್ಕೆ ಒಂದೆರಡು ದಿನ, ಕನಿಷ್ಟ ಒಂದು ಗಂಟೆ ವರ್ತಮಾನ.ಕಾಮ್‌ಗೆ ಕೊಡಬಲ್ಲವರು ಮುಂದೆ ಬಂದರೆ ಸಹಾಯವಾದೀತು. ಸಂಪರ್ಕಿಸುವುದು ಹೇಗೆಂದು ನಿಮಗೆ ಗೊತ್ತು.

ಕೊನೆಯದಾಗಿ, ನಾನು ಎರಡು ವರ್ಷದ ಹಿಂದೆ, 2002 ರ ಆರಂಭದ ಲೇಖನದಲ್ಲಿ ಬರೆದಿದ್ದ ಈ ಕೊನೆಯ ಪ್ಯಾರಾ ಇವತ್ತಿಗೂ ಸೂಕ್ತವಾಗಿದೆ ಎಂದು ಭಾವಿಸಿ ಅದರೊಂದಿಗೆ ಕೊನೆ ಮಾಡುತ್ತೇನೆ.

“ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ‘ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ.’ ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?”

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

ಶರಮ್ ನಹೀ ಶರ್ಮ…

– ಸುಧಾಂಶು ಕಾರ್ಕಳ

ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಣ ಮುಖ್ಯ ಪಾತ್ರ ವಹಿಸಿರುವ ಅನುಮಾನಗಳು ದಟ್ಟವಾಗಿವೆ. ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ್ದ ಯು.ಆರ್. ಅನಂತಮೂರ್ತಿಯವರು davanagere-vc-fiascoಸುದ್ದಿ ಮಾಧ್ಯಮಗಳಿಗೆ ಮಾತನಾಡಿ ಈ ಅನುಮಾನಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಅವರ ಅಧ್ಯಕ್ಷತೆಯ ಸಮಿತಿಯಲ್ಲಿದ್ದವರೇ ಭ್ರಷ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಆ ನಂತರ ಸರಕಾರ ಸೂಚಿಸಿದ್ದ ಹೆಸರನ್ನು ರಾಜಭವನ ತಿರಸ್ಕರಿಸಿದೆ ಹಾಗೂ ಸಮಿತಿ ಅಧ್ಯಕ್ಷರ ಹೊರತಾಗಿ ಇತರರು ಸೂಚಿಸಿದ್ದ ಹೆಸರಿಗೆ ಮನ್ನಣೆ ನೀಡಿದೆ. ರಾಜಭವನದಲ್ಲಿ ಇಂತಹ ಕೃತ್ಯಗಳು ನಡೆದಿವೆ ಎನ್ನುವುದನ್ನು ನಂಬಲಿಕ್ಕೆ ಅಸಹನೆ ಪಡಬೇಕಿಲ್ಲ. ರಾಜಭವನದ ಸದ್ಯದ ವಾರಸುದಾರರು ಇಂತಹ ಕೃತ್ಯಗಳಲ್ಲಿ ಸಿದ್ಧಹಸ್ತರು. ಅರ್ಹತೆ ಇಲ್ಲದ ವ್ಯಕ್ತಿಯನ್ನೇ ವಿ.ಸಿ.ಯಾಗಿ ನೇಮಕ ಮಾಡಿದ್ದಲ್ಲದೆ, ಅದೇ ವ್ಯಕ್ತಿಯ ಅವಧಿಯನ್ನೂ ಅವರು ವಿಸ್ತರಿಸಿದವರಲ್ಲವೆ? ಹಿಂದಿನ ವಿ.ವಿಯಲ್ಲಿ ವಿ.ಸಿ.ಯಾಗಿದ್ದಾಗ ನಾನಾ ಆರೋಪಗಳನ್ನು ಹೊತ್ತವರು ಮತ್ತೊಂದು ಪ್ರಮುಖ ವಿ.ವಿ.ಗೆ ಕುಲಪತಿಯಾಗಿ ಅನಾಯಾಸವಾಗಿ ನೇಮಕಗೊಳ್ಳುತ್ತಾರೆ. ಎಷ್ಟು ಕೋಟಿ ರೂಗಳ ವ್ಯವಹಾರ ಇದು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಈ ವಿ.ವಿ.ಗಳ ಅವ್ಯವಹಾರಗಳ ಗಲಾಟೆ ಮಧ್ಯದಲ್ಲಿ ಬಹಳ ಕಾಲದವರೆಗೆ ಮರೆಯಾಗಿ ಉಳಿದದ್ದು Tumkur-VC-Sharma-with-Governorತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಸ್.ಸಿ. ಶರ್ಮಾ ಅವರು ವಿ.ಸಿಯಾಗಿದ್ದಾಗ ನಡೆದ ಭಾನಗಡಿಗಳು. ಅವರು ತುಮಕೂರು ವಿ.ವಿ.ಗೆ ಕುಲಪತಿಯಾಗಿ ಬಂದಾಗಿನಿಂದ ಅವರು ನಡೆದುಕೊಂಡ ರೀತಿಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಮೊದ ಮೊದಲು ಅವರು ಕಾನೂನಿನಲ್ಲಿರುವ ಅಸ್ಪಷ್ಟತೆಗಳ ಲಾಭ ಪಡೆದುಕೊಂಡರು. ನಂತರ ಅಧಿಕಾರದಲ್ಲಿರುವವರ ಸಖ್ಯ ಬಳಸಿಕೊಂಡು ತಮಗೆ ಅನುಕೂಲವಾಗುವ ಕಾನೂನನ್ನೇ ತರಲು ಮುಂದಾದರು!

ಅವರು ಅಧಿಕಾರಕ್ಕೆ ಬರುವಾಗಲೇ ವಿವಾದ ಹುಟ್ಟಿಕೊಂಡಿತು. ವಿ.ಸಿ.ಯಾಗುವವರು ತಮ್ಮ ಹಿಂದಿನ ಸ್ಥಾನದಲ್ಲಿ ಪಡೆಯುತ್ತಿದ್ದ ಸಂಭಾವನೆ/ಸಂಬಳ/ಸವಲತ್ತುಗಳನ್ನು ಮುಂದೆಯೂ ಪಡೆಯುತ್ತಾರೆ ಎಂದು ಕರ್ನಾಟಕದ ಕಾಯಿದೆಯಲ್ಲಿ ಇದ್ದದ್ದನ್ನು ಪತ್ತೆ ಹಚ್ಚಿ ತಾವು ಹಿಂದೆ ಇದ್ದ ಖಾಸಗಿ ಕಾಲೇಜಿನಲ್ಲಿ ಲಕ್ಷಾಂತರ ರೂ ಸಂಬಳ ಬರುತ್ತಿತ್ತು ಎಂದು ತೋರಿಸಿ, ವಿ.ಸಿ. ಆದಮೇಲೂ ಅದನ್ನೇ ಪಡೆದರು. (http://www.deccanherald.com/content/107863/F)Tumkur-VC-Shameless-Sharma ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರದ ಸುದ್ದಿಗಳು ಅಲ್ಲಲ್ಲಿ ಬಂದರೂ, ತನಿಖೆಯಾಗಬೇಕು, ವಿ.ಸಿ. ರಾಜಿನಾಮೆ ನೀಡಬೇಕು ಎಂದು ಕೂಗು ಏಳಲಿಲ್ಲ.

ಇತ್ತೀಚೆಗೆ ಬಹಿರಂಗವಾಗಿರುವಂತೆ ಅವರ ಅವಧಿಯಲ್ಲಿ ಕೆಲವು ಅದ್ಭುತ ಸಾಧನೆಗಳು ವಿ.ವಿ.ಯಲ್ಲಿ ಆಗಿ ಹೋಗಿವೆ. ಆ ಸಾಧನೆಗಳಿಗೆ ಬಹುಶಹ ಭಾರತರತ್ನವೂ ಕಡಿಮೆಯೆ. ಕೇವಲ ಎಂಟು-ಒಂಭತ್ತು ತಿಂಗಳಿಗೆ ಪಿ.ಎಚ್.ಡಿ ಅಧ್ಯಯನ ಮುಗಿಸಿದ್ದಾರೆ ಇಲ್ಲಿಯ ಸಂಶೋಧಕರು (ಪ್ರಜಾವಾಣಿ ವರದಿ: 49 ದಿನದಲ್ಲಿ ಪಿಎಚ್.ಡಿ). ಜಗತ್ತಿನ ಯಾವ ವಿ.ವಿ.ಯಲ್ಲೂ ಇಂತಹದೊಂದು ಸಾಧನೆ ಆಗಿಲ್ಲ ಎನಿಸುತ್ತೆ. ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಆರು-ಎಂಟು ತಿಂಗಳ ತರಬೇತಿ ಆಯೋಜಿಸುತ್ತಾರೆ. ಆದರೆ ಅಲ್ಲಿ ತರಬೇತಿ ಪಡೆದವರನ್ನು ’ಡಾ’ ಎಂದು ಕರೆಯುವುದಿಲ್ಲ ಅಷ್ಟೆ.

ಗೌರವ ಡಾಕ್ಟರೇಟ್ ಗಳು ಇಲ್ಲಿ ಬೇಕಾಬಿಟ್ಟಿ. ಒಂದೇ ವರ್ಷ 25 ಜನರಿಗೆ ಕೊಟ್ಟಿದ್ದಾರೆ. Tumkur-VC-Sharma-and-doctoratesಯಾಕಿಷ್ಟು ಕೊಟ್ಟೀರಿ ಎಂದು ಕೇಳಿದರೆ, “ದುಡ್ಡು ಜಾಸ್ತಿ ಇದ್ದವರು, ಜಾಸ್ತಿ ದಾನ ಮಾಡ್ತಾರೆ..ಅದರಲ್ಲೇನು ತಪ್ಪು..?” ಎಂದು ಕೇಳುತ್ತಾರೆ (ಪ್ರಜಾವಾಣಿ ವರದಿ). ಹಾಗಾದರೆ ಇವರ ವಿ.ವಿಯಲ್ಲಿ ಗೌರವ ಡಾಕ್ಟರೇಟ್‌ಗಳು ಬೇಕಾದಷ್ಟು ಬಿದ್ದಿದ್ದವು, ಹಾಗಾಗಿ ಇವರು ತಮಗೆ ಬೇಕಾದವರಿಗೆಲ್ಲ ಕೊಟ್ಟರು. ಅವರು ದಾನಶೂರ ಕರ್ಣ… ಅಲ್ಲಲ್ಲ ಶರ್ಮ! ಹೀಗೆ ವಿ.ವಿಯಲ್ಲಿ ಇವರಿಂದ ವಿವಿಧ ಸವಲತ್ತು ಪಡೆದವರು ಅವರದೇ ಜಾತಿಯವರು ಎನ್ನುವುದನ್ನು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೆ ವಿಪರ್ಯಾಸ ನೋಡಿ, ಈ ಭಾನಗಡಿಗಳು ಎಲ್ಲೋ ಒಂದು ಮೂಲೆಯಲ್ಲಿ ಚರ್ಚೆಯಾಗಿ ಮರೆಯಾಗುತ್ತವೆ. ಅವರ ಕೃತ್ಯಗಳಿಗೆ ಅವರು ಕೊಡುವ ಇನ್ನೊಂದು ಸಮರ್ಥನೆ, “ಇಷ್ಟೇ ಜನಕ್ಕೆ ಗೌರವ ಡಾಕ್ಟರೇಟ್ ಕೊಡಬೇಕೆಂದು ನಿಯಮವೇನಿಲ್ಲ.”

ಅವರು ತಮ್ಮ ಕಾಲಾವಧಿ ಮುಗಿಯುವ ವೇಳೆಗೆ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರಾಗಿದ್ದರು. ಆ ಹಂತದಲ್ಲಿ ಅವರಿಗೆ ತಾವು ಹಿಂದೆ ಇದ್ದ ಶಿಕ್ಷಣ ಸಂಸ್ಥೆಗೆ ಹೋಗಿ ಪ್ರಾಂಶುಪಾಲರಾಗಿ ಮುಂದುವರಿಯಬೇಕೆಂಬ ಹಂಬಲ ಹುಟ್ಟಿಕೊಂಡಿತು. ಅದಕ್ಕೆ ಅಲ್ಲಿಯ ಆಡಳಿತ ಒಪ್ಪುತ್ತಿರಲಿಲ್ಲ. ಆಗ ಸರಕಾರ ಜಾರಿಯಲ್ಲಿದ್ದ ಕಾನೂನಿಗೆ ತಿದ್ದುಪಡಿ ತಂದು ಆ ಸವಲತ್ತನ್ನು ಅವರಿಗೆ ಒದಗಿಸಲು ಮುಂದಾಗುತ್ತಾರೆ. ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತಾರೆ. ಆದರೆ, ಆ ಹೊತ್ತಿಗೆ ಈ ಮಸೂದೆ ಹಿಂದಿನ ಮರ್ಮ ಅರಿತ ಕೆಲ ಹಿರಿಯರು, ವಿರೋಧ ಪಕ್ಷದ ಸದಸ್ಯರುಗಳು ವಿರೋಧಿಸಿದಾಗ, Tumkur-VC-Shameless-Sharma-and-minister-CT-Ravi-in-unholy-nexusರವಿ ತನ್ನ ಮಸೂದೆಯನ್ನ ಸಮರ್ಥನೆ ಮಾಡಿಕೊಳ್ಳಲಾಗದೆ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಾರೆ. (http://www.thehindu.com/todays-paper/tp-national/tp-karnataka/government-withdraws-university-amendment-bill-following-protests/article3715111.ece)

ಒಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರು ಈ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ರಾಜಕಾರಣಿಗಳು ಅವರಿಗೆ ಬೆಂಬಲಿಗೆ ಇದ್ದದ್ದು. ರಾಜಭವನವೂ ಅವರಿಗೆ ಸಹಕರಿಸಿತು. ಇಲ್ಲವಾಗಿದ್ದಲ್ಲಿ, ಅವರ ಸಂಬಳದ ವಿಚಾರದಲ್ಲಿಯೇ ತಕ್ಕ ನಿರ್ಧಾರ ತೆಗೆದುಕೊಂಡಿದ್ದರೆ, ಅವರು ಮುಂದುವರಿದು ಈ ಮಟ್ಟಿಗೆ ಅವ್ಯವಹಾರಗಳಿಗೆ ಕೈ ಹಾಕುತ್ತಿರಲಿಲ್ಲ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.