Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

`ಪ್ಯಾರ್ಗೆ ಆಗ್ಬುಟ್ಟೈತೆ…’ ಹಾಗೂ ಚಿತ್ರರಂಗದ ಬೌದ್ಧಿಕ ದಾರಿದ್ರ್ಯ

-ಬಿ.ಎಸ್.ಗೋಪಾಲ ಕೃಷ್ಣ

ಕರ್ನಾಟಕ ಸರ್ಕಾರದ ನೆರವು ಯಾಚಿಸುವಾಗ ಕನ್ನಡ ಚಿತ್ರ ನಿರ್ಮಪಕರು, ನಿರ್ದೇಶಕರು ಹಲವು ರೀತಿಯ ವಾದಗಳನ್ನ ಮುಂದಿಡುತ್ತಾರೆ. ಕನ್ನಡ ಭಾಷೆಯ ಅಭಿಮಾನ, ನಾಡು ನುಡಿಯ ಅಭಿವೃದ್ಧಿ, ಸಾಂಸ್ಕೃತಿಕ ವೈಶಿಷ್ಟ್ಯ- ಹೀಗೆ ತಮಗೆ ತಕ್ಕನಾದ ಬಣ್ಣದ ಮಾತುಗಳನ್ನಾಡಿ ಜನರ ತೆರಿಗೆಯ ಹಣದಿಂದ ಧನಸಹಾಯ, ಪ್ರಶಸ್ತಿ ಪುರಸ್ಕಾರ ಪಡೆಯುತ್ತಾರೆ. ಆದರೆ, ಚಿತ್ರ ನಿರ್ಮಾಣದ  ಸಂದರ್ಭದಲ್ಲಿ ಭಾಷೆ, ಸಂಸ್ಕೃತಿಗೆ ಸಬಂಧಿಸಿದ ವಿಚಾರಗಳನ್ನು ಒಂದೋ ನಿರ್ಲಕ್ಷ್ಯ ಮಾಡುತ್ತಾರೆ; ಇಲ್ಲವೇ ನಗೆಪಾಟಲಿನ ಅಂಶವನ್ನಾಗಿ ಚಿತ್ರಿಸಿ ತಮ್ಮ ಚಿಂತನಾ ದಾರಿದ್ರ್ಯವನ್ನು ತೋರ್ಪಡಿಸುತ್ತಾರೆ. ಇದಕ್ಕೆ ಇತ್ತೀಚಿನ ನಿದರ್ಶನ `ಗೋವಿಂದಾಯ ನಮಃ’ ಚಿತ್ರದ `ಪ್ಯಾರ್ಗೆ ಆಗ್ಬುಟ್ಟೈತೆ’ ಎನ್ನುವ ಹಾಡು.

`ಗೋವಿಂದಾಯ ನಮಃ’ ಪವನ್ ಒಡೆಯರ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ. ಕೋಮಲ್ ಚಿತ್ರದ ಹೀರೋ. ಈ ಚಿತ್ರದಲ್ಲಿ ಬರುವ `ಪ್ಯಾರ್ಗೆ ಆಗ್ಬುಟ್ಟೈತೆ’ ಎನ್ನುವ ಹಾಡು ಚಿತ್ರ ಬಿಡುಗಡೆಗೂ ಮುನ್ನವೇ ಜನರ ಕುರೂಹಲ ಕೆರಳಿಸಿ, ಜನಪ್ರಿಯತೆ ಗಳಿಸಿದೆ. ಅಲ್ಪ ಅವಧಿಯಲ್ಲೇ ಯೂ ಟ್ಯೂಬ್ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ನೋಡಿದ್ದಾರೆ ಎಂದೂ, ಧನುಷ್ನ ಕೊಲವೆರಿ ಡಿ ಹಾಡಿನಂತೆ ಇದೂ ಒಂದು ದಾಖಲೆ ಎಂದೂ ಚಾನೆಲ್ಗಳು ಬೊಂಬಡಾ ಬಾರಿಸುತ್ತಿವೆ.

ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಈ ಹಾಡಿನ ಸಾಹಿತ್ಯದಲ್ಲಾಗಲಿ, ಚಿತ್ರಿಸಿರುವ ಶೈಲಿಯಲ್ಲಾಗಲಿ ವಿಶೇಷವಾದದ್ದೇನೂ ಇಲ್ಲ; ಉರ್ದು ಮಿಶ್ರಿತ ಕನ್ನಡದ ಬಳಕೆ, ಕೋಮಲ್ರ ಯಥಾಪ್ರಕಾರದ ಕೋಡಂಗಿ ಚೇಷ್ಟೆ ಹಾಗೂ ಗುರುಕಿರಣ್ರ ಜಾಣ ಕಳ್ಳತನದ ಸಂಗೀತ ಸಂಯೋಜನೆ. ಅಂಬರೀಶ್ ಹಾಗೂ ರಮೇಶ್ ಅರವಿಂದ್ ಅಭಿನಯಿಸಿದ್ದ `ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ’ ಚಿತ್ರದ ಹಾಡೊಂದರ ಜೊತೆ `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡನ್ನು ಹೋಲಿಸಿ ನೋಡಿದ್ರೆ ಇದರ ಸಾಚಾತನ ತಿಳಿಯುತ್ತದೆ. ಆದರೆ, ಈ `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡು ಅಪಾಯಕಾರಿ ಅನ್ನಿಸುವುದು ಈ ಯಾವ ಕಾರಣದಿಂದಲೂ ಅಲ್ಲ; ಗೀತೆಯಲ್ಲಿರೋ ಅಸೂಕ್ಷ್ಮತೆಯಿಂದಾಗಿ ಹಾಗೂ ನಮ್ಮ ಸಾಂಸ್ಕೃತಿಕ ಬಹುರೂಪತೆಯನ್ನು ಅಗ್ಗದ ಮನರಂಜನಾ ಸರಕನ್ನಾಗಿ ಮಾಡಿರುವ ಕಾರಣಕ್ಕಾಗಿ. ಗೀತರಚನೆಕಾರ ಪವನ್, ಅಲ್ಪಸಂಖ್ಯಾತರ ಮಾತಿನ ಶೈಲಿಯನ್ನೇ ಕ್ಷಿಪ್ರವಾಗಿ ಜನರ ಗಮನ ಸೆಳೆಯುವ ತಂತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಆರ್.ಎನ್.ಜಯಗೋಪಾಲ್, ಗೀತಪ್ರಿಯರಂತೆ ಮಧುರ ಹಾಗೂ ಆದ್ರ್ರ ಗೀತೆಗಳನ್ನಾಗಲಿ, ಚಿ.ಉದಯಶಂಕರ್ರಂತೆ ವಸ್ತುವಿನ ವೈವಿಧ್ಯತೆಯಿಂದಾಗಲಿ ಗಮನ ಸೆಳೆಯಲಾಗದ ಇಂದಿನ ಕನ್ನಡದ ಅನೇಕ ಗೀತರಚನೆಕಾರರು, ತಕ್ಷಣ ಜನರ ಸೆಳೆಯುವುದಕ್ಕಾಗಿ ಇಂಥ ಗಿಮಿಕ್ ಮಾಡುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿಬಿಟ್ಟಿದೆ. ಉಪೇಂದ್ರ, ಪ್ರೇಮ್, ಯೋಗರಾಜ್ ಭಟ್ ಎಲ್ಲರೂ ಇದೇ ಪರಂಪರೆಗೆ ಸೇರಿದವರೇ. ವಿಶೇಷವೆಂದರೆ, `ಪ್ಯಾರ್ಗೆ ಆಗ್ಬುಟ್ಟೈತೆ’ ಹಾಡು ಬರೆದಿರುವ ಪವನ್ ಒಡೆಯರ್ ಯೋಗರಾಜ್ ಭಟ್ಟರ ಶಿಷ್ಯ. ಗುರುವಿಗೆ ತಕ್ಕ ಶಿಷ್ಯ ಎನ್ನುವ ಮಾತು ಈ ಹಾಡಿನ ಮಟ್ಟಿಗಂತೂ ನಿಜವಾಗಿದೆ.

ಕನ್ನಡ ಚಿತ್ರರಂಗದಲ್ಲಿ ಇಂಥ ಅಸೂಕ್ಷ್ಮ ಹಾಗೂ ಅಲ್ಪಸಂಖ್ಯಾತ ವಿರೋಧಿ ಧೋರಣೆ ಹೊಸದೇನಲ್ಲ; ಇಲ್ಲಿ ಮುಸ್ಲಿಮರು, ಶೆಟ್ಟರು, ಮಾರ್ವಾಡಿಗಳು ಮುಂತಾದ ಅಲ್ಪಸಂಖ್ಯಾತರ ಮಾತಿನ ಶೈಲಿ ತಮಾಷೆಯ ವಸ್ತುವಾಗಿಯೇ ಹೆಚ್ಚು ಬಳಕೆಯಾಗುತ್ತಿದೆ. ಮನೆಯಲ್ಲಿ ಉರ್ದು ಮಾತನಾಡುವ ಮುಸ್ಲಿಮರು ಬೀದಿಯಲ್ಲಿ ಆಯಾ ಪ್ರದೇಶದ ಆಡುಭಾಷೆಯಲ್ಲಿ- ಅದರ ಅತ್ಯಂತ ಸಹಜ ಲಯದೊಂದಿಗೆ- ಸಂವಹನ ನಡೆಸುತ್ತಾರೆ ಎನ್ನುವ ತಿಳುವಳಿಕೆಯೇ ಚಿತ್ರರಂಗದ ಗಿಲೀಟು ಜನರಿಗೆ ಇದ್ದಂತಿಲ್ಲ. ಅಲ್ಪಸಂಖ್ಯಾತರ ಮಾತಿನ ಶೈಲಿ ಅಷ್ಟೇ ಅಲ್ಲ.. ಕನ್ನಡದ ಕೆಲವು ಉಪಭಾಷೆಗಳನ್ನು ಕೂಡ (ಉದಾ: ಮಂಗಳೂರು ಕನ್ನಡ, ಉತ್ತರ ಕರ್ನಾಟಕದ ಜವಾರಿ ಕನ್ನಡ) ಚಿತ್ರರಂಗದಲ್ಲಿ ಹಾಸ್ಯದ ಸರಕನ್ನಾಗಿಯೇ ಬಳಸಲಾಗುತ್ತಿದೆ. ದಕ್ಷಿಣ ಕನ್ನಡ ಮೂಲದವರಾದ ಕಾಶೀನಾಥ್ ಹಾಗೂ ಉಪೇಂದ್ರ ಕೂಡ ಇದಕ್ಕೆ ಹೊರತಲ್ಲ. ಅಲ್ಪಸಂಖ್ಯಾತರ ಮಾತಿನ ಶೈಲಿಯನ್ನ ಅನುಕರಿಸಿದ್ರೆ, ತಿರುಚಿದ್ರೆ ಅದು ಹಾಸ್ಯ; ಕನ್ನಡದ ಅನನ್ಯತೆಯ ಕುರುಹಾದ ಉಪಭಾಷೆಗಳನ್ನು ಬಳಸಿದರೆ ಅದು ಕಾಮಿಡಿ- ಇದು ನಮ್ಮ ಚಿತ್ರರಂಗದ ಬೌದ್ಧಿಕ ದಾರಿದ್ರ್ಯದ ಸಂಕೇತ. ವಾಸ್ತವ ಪ್ರಜ್ಞೆ ಹಾಗೂ ಕಲ್ಪನೆಯ ಸೊಗಸಿನಿಂದ, ಕಲಾತ್ಮಕ ಚಿತ್ರಣದಿಂದ ಜನರನ್ನ ಸೆಳೆಯಲಾಗದವರು ತಮ್ಮ ಬೌದ್ಧಿಕ ದಾರಿದ್ರ್ಯವನ್ನೇ ಪ್ರತಿಭೆ ಎಂದು ಬಿಂಬಿಸುತ್ತಿರುವುದು; ಕೆಲವರು ಅದನ್ನೇ ಮನರಂಜನೆ ಎಂದು ಆನಂದಿಸುತ್ತಿರುವುದು ಜನರ ತಾರತಮ್ಯ ಪ್ರಜ್ಷೆಯ ಕೊರತೆಯನ್ನು ತೋರಿಸುತ್ತದೆ.

ಕನ್ನಡ ಸಾಹಿತ್ಯ ತನ್ನ ಅನುಭವ ದ್ರವ್ಯ, ಅಭಿವ್ಯಕ್ತಿ ಕ್ರಮ ಹಾಗೂ ಭಾಷಿಕ ಬಹರೂಪತೆಯಿಂದಾಗಿ ಭಾರತದಲ್ಲಿ ಹಾಗೂ ಭಾರತದಾಚೆಗೂ ಹೆಸರು ಗಳಿಸಿದೆ. ಕನ್ನಡ ಸಾಹಿತ್ಯದ ಅನನ್ಯತೆಗೆ ಕಾರಣ ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ. ಇದು ಹೊಸ ವಿಷಯವೇನಲ್ಲ. ಆದರೆ, ಪರಭಾಷೆಗಳ ತರ್ಕರಹಿತ ರಕ್ತಪಾತ ಹಾಗೂ ನಿರ್ಜೀವ ಆಡಂಬರದ ಚಿತ್ರಗಳನ್ನು ಕದ್ದು ಅಥವಾ ರೀಮೇಕ್ ಮಾಡಿ ಪ್ರೇಕ್ಷಕರ ತಲೆ ಚಿಟ್ಟು ಹಿಡಿಸುವ ಕನ್ನಡ ಚಿತ್ರ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸರಳ ಸತ್ಯದ ಅರಿವಿದ್ದಂತಿಲ್ಲ. ಇನ್ನು ಸಾಮಾಜಿಕ ಜವಾಬ್ದಾರಿ, ವಾಸ್ತವತೆ, ಸಾಂಸ್ಕೃತಿಕ ಮಹತ್ವ ಇವೇ ಮುಂತಾದ ಪದಗಳೆಂದರೆ, ಇವರಿಗೆ ಮಹಾ ಅಲರ್ಜಿ. ಯಾವನೋ ರಾಜಕಾರಣಿಯ ವಶೀಲಿಯಿಂದ ಇಲ್ಲವೇ ಅಧಿಕಾರಶಾಹಿಯ ಮರ್ಜಿ ಕಾಯ್ದು ಸರ್ಕಾರದ ಸಹಾಯಧನ, ಪ್ರಶಸ್ತಿ ಗಿಟ್ಟಿಸುವ ಇವರಿಗೆ ಅವುಗಳನ್ನು ತಿಳಿಯಬೇಕಾದ ಅಗತ್ಯವೇ ಬರುವುದಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕಂತೂ ಸಂವೇದನಾಶೀಲ ನಿರ್ದೇಶಕರ ಕೊರತೆ ಎದ್ದು ಕಾಣುತ್ತಿದೆ. ಕಮರ್ಷಿಯಲ್ ಸಕ್ಸಸ್ಗಾಗಿ ಏನು ಮಾಡಿದರೂ ತಪ್ಪಲ್ಲ ಅನ್ನುವ ಮನೋಧರ್ಮ ಬಲವಾಗುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಬಹುರೂಪತೆಗಳ ಬಗ್ಗೆ ಕನಿಷ್ಠ ತಿಳುವಳಿಕೆ, ಬದ್ಧತೆ ಇಲ್ಲದ ನಿರ್ಮಾಪಕರು, ನಿರ್ದೇಶಕರು ರೂಪಿಸಿದ ಚಿತ್ರಗಳು, ಹಾಡುಗಳು ಹಾಗೂ ಸಂಭಾಷಣೆ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವುದು ಇತ್ತೀಚಿನ ಅಪಾಯಕಾರಿ ಟ್ರೆಂಡ್. ಸಮೂಹ ಮಾಧ್ಯಮಗಳಲ್ಲಿ ಮೀಡಿಯೋಕರ್ ಹಾಗೂ ಸಬ್ ಸ್ಟ್ಯಾಂಡರ್ಡ್ ಮಂದಿ ಹಾಗೂ ವಿಚಾರಗಳು ಹೆಚ್ಚುತ್ತಿರುವುದರ ಫಲ ಇದು. ನಮ್ಮ ಸಂಸ್ಕೃತಿಯ ಹೆಮ್ಮೆಯ ಕುರುಹುಗಳೆಲ್ಲಾ ಮನರಂಜನೆಯ ಸರಕಾಗುತ್ತಿರುವುದು ಕಲಾ ಮಾಧ್ಯಮವೊಂದರ ಅಧಃಪತನವನ್ನೂ ಸೃಷ್ಟಿಶೀಲತೆಯ ಅವನತಿಯನ್ನೂ ಸೂಚಿಸುತ್ತವೆ.

ಕವಿಮನೆಯ ಬಗ್ಗೆ ಡಿ.ಎಸ್. ನಾಗಭೂಷಣ ದಂಪತಿಗಳ ಮಾತು…

-ರವಿ ಕೃಷ್ಣಾರೆಡ್ಡಿ

ಮೂರು ವರ್ಷ ಆಗುತ್ತ ಬಂತು. 2009 ರ ಮಾರ್ಚ್ 29 ರಂದು ಡಿ.ಎಸ್.ನಾಗಭೂಷಣ ದಂಪತಿಗಳು ಮತ್ತು ನಾನು ಉಡುಪಿಯಲ್ಲಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸಾಗುತ್ತ ರಾತ್ರಿ ಕುಪ್ಪಳ್ಳಿಯಲ್ಲಿ ಉಳಿದುಕೊಂಡಿದ್ದೆವು. ಮಾರನೆ ದಿನ ಕವಿಮನೆ, ಕವಿಶೈಲ, ಸಿಬ್ಬಲುಗುಡ್ಡೆ, ಮತ್ತಿತರ ಕೆಲವು ಸ್ಥಳಗಳನ್ನು ಸುತ್ತಾಡಿದ್ದೆವು. ಆಗ ನಾನು ಒಂದಷ್ಟು ವಿಡಿಯೊ ತೆಗೆದಿದ್ದೆ. ಹೀಗೇ ಕಾರಣಾಂತರಗಳಿಂದ ಅವನ್ನು ಸಂಕಲಿಸಿ ಯೂಟ್ಯೂಬ್‌ಗೆ ಹಾಕಲು ಆಗಿರಲಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳಿಗೆ ತೊಡಗಿಕೊಂಡ ಪರಿಣಾಮವಾಗಿ ಈ  ವಿಡಿಯೊ ಸಿದ್ದಪಡಿಸಿದೆ.

ಇನ್ನು ಮುಂದೆ ವಾರಕ್ಕೆ ಒಂದೆರಡಾದರೂ ವಿಡಿಯೋಗಳನ್ನು ವರ್ತಮಾನದ ಮೂಲಕ ಸಿದ್ದಪಡಿಸಿ ಹಾಕಬೇಕಿದೆ. ಬರಹಗಳಷ್ಟೇ ಅಲ್ಲ, ನಾವು ಬಹುಮಾಧ್ಯಮ ಸಾಧ್ಯತೆಗಳಿಗೆ ಹೊರಳಬೇಕಿದೆ. ಈ ವಿಚಾರವಾಗಿ ನಿಮ್ಮ ಸಲಹೆ-ಸೂಚನೆಗಳಿಗೆ ಸ್ವಾಗತ.

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಗೆಳೆಯರೆ,

ಎಲ್ಲರಿಗೂ 2012 – ಹೊಸ ವರ್ಷದ ಶುಭಾಶಯಗಳು. ಹಿಂದೆ ಡಾ. ಜಗದೀಶ್ ಕೊಪ್ಪರವರು ಜಿಮ್ ಕಾರ್ಬೆಟ್ ಬಗೆಗಿನ ತಮ್ಮ ಲೇಖನದಲ್ಲಿ ತಿಳಿಸಿದ್ದಂತೆ, ಇಂದಿನಿಂದ “ಬಿಳಿ ಸಾಹೇಬನ ಭಾರತ” ಲೇಖನ ಮಾಲೆಯನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ಈ ಲೇಖನ ಮಾಲೆ ಪ್ರತಿ ಭಾನುವಾರ ಪ್ರಕಟವಾಗಲಿದೆ. ಇಲ್ಲಿಯವರೆಗೂ ಭಾನುವಾರದಂದು ಪ್ರಕಟವಾಗುತ್ತಿದ್ದ “ಜೀವನದಿಗಳ ಸಾವಿನ ಕಥನ” ಈ ವಾರದಿಂದ ಬುಧವಾರದಂದು ಪ್ರಕಟವಾಗುತ್ತದೆ. ಎಂದಿನಂತೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. -ವರ್ತಮಾನ ಬಳಗ.

ಬಿಳಿ ಸಾಹೇಬನ ಭಾರತ : ಕಾರ್ಬೆಟ್ ಕಥನ – 1

ಡಾ. ಎನ್. ಜಗದೀಶ್ ಕೊಪ್ಪ

ಅದು 1985ರ ಚಳಿಗಾಲದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಪ್ರಾರಂಭದ ಒಂದು ದಿನ. ಜಿಮ್ ಕಾರ್ಬೆಟ್ ಕುರಿತಂತೆ ಸಾಕ್ಷ್ಯ ಚಿತ್ರ ತಯಾರಿಸಲು ಇಂಗ್ಲೆಂಡಿನ ಬಿ.ಬಿ.ಸಿ. ಚಾನಲ್‌ನ ತಂಡ ಕಲದೊಂಗಿಯ ಕಾರ್ಬೆಟ್ ಮನೆಯಲ್ಲಿ ಬೀಡು ಬಿಟ್ಟು ಆತನ ಬಗ್ಗೆ ಚಿತ್ರೀಕರಣ ಮಾಡುತಿತ್ತು.

ಕಾರ್ಬೆಟ್‌ನ ಶಿಖಾರಿ ಅನುಭವ ಹಾಗೂ ಆತನಿಗೆ ಕಾಡಿನ ಶಿಖಾರಿಯ ವೇಳೆ 30ಕ್ಕೂ ಹೆಚ್ಚು ವರ್ಷಗಳ ಕಾಲ ನೆರವಾಗಿದ್ದ ಕುನ್ವರ್ ಸಿಂಗ್ ಪಾತ್ರಗಳನ್ನು ಮರು ಸೃಷ್ಟಿ ಮಾಡಲಾಗಿತ್ತು. ಕಾರ್ಬೆಟ್‌ನ ಪಾತ್ರಕ್ಕಾಗಿ ಆತನನ್ನೇ ಹೋಲುವಂತಹ, ಅದೇ ವಯಸ್ಸಿನ ವ್ಯಕ್ತಿಯನ್ನು ಲಂಡನ್ನಿನ ರಂಗಭೂಮಿಯಿಂದ ಕರೆತರಲಾಗಿತ್ತು. ಈ ಸಾಕ್ಷ್ಯಚಿತ್ರಕ್ಕೆ ಜಿಮ್ ಕಾರ್ಬೆಟ್ ಕುರಿತು “ಕಾರ್ಪೆಟ್ ಸಾಹೇಬ್” ಹೆಸರಿನಲ್ಲಿ ಆತ್ಮ ಕಥನ ಬರೆದಿದ್ದ ಲೇಖಕ ಮಾರ್ಟಿನ್ ಬೂತ್ ಚಿತ್ರಕಥೆ ಬರೆದಿದ್ದರು.

ಚಿತ್ರಿಕರಣದ ವೇಳೆ ಸ್ಥಳಿಯರೊಂದಿಗೆ ಮಾತುಕತೆ, ಇನ್ನಿತರೆ ವ್ಯವಹಾರಗಳಿಗೆ ಅನುಕೂಲವಾಗಲೆಂದು ಮುಂಬೈನಿಂದ ತಂತ್ರಜ್ಙರು ಮತ್ತು  ಸಹಾಯಕರನ್ನು ಸಹ ಕರೆಸಲಾಗಿತ್ತು. ಅದೊಂದು ದಿನ  ಚಿತ್ರೀಕರಣ ನಡೆಯುತಿದ್ದ ಬೆಳಿಗ್ಗೆ ವೇಳೆ ಸ್ಥಳೀಯರು ಬಂದು ದೂರದ ಊರಿನಿಂದ ಕಾರ್ಬೆಟ್‌ನನ್ನು ನೋಡಲು ವೃದ್ಧನೊಬ್ಬ ಬಂದಿದ್ದಾನೆ ಎಂದರು. ಚಿತ್ರದ ತಂಡ ಬಹುಷಃ ಕಾರ್ಬೆಟ್‌ನ ಪಾತ್ರಧಾರಿಯನ್ನು ನೋಡಲು ಬಂದಿರಬೇಕು ಎಂದು ಊಹಿಸಿ ಆ ವೃದ್ಧನಿಗೆ ಅವಕಾಶ ಮಾಡಿಕೊ

ಸಮ್ಮೇಳನಗಳು 78 ಆದರೂ, ಸಾಹಿತ್ಯ ಪರಿಷತ್ತು ಸುಧಾರಣೆ ಆಗಿಲ್ಲ

ಭೂಮಿ ಬಾನು

ಗಂಗಾವತಿಯಲ್ಲಿ 78 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನಗಳು 78 ಆದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ, ಸಂಘಟಿಸುವಲ್ಲಿ ಇರುವ ಲೋಪಗಳನ್ನು ಸರಿಪಡಿಸುವ ಗೋಜಿಗೇ ಹೋಗಿಲ್ಲದಿರುವುದು ವಿಪರ್ಯಾಸ.

ಸಾಹಿತ್ಯ ಸಮ್ಮೇಳನದ ಈಗಿನ ಒಟ್ಟಾರೆ ಸ್ವರೂಪವೇ ‘ನಾನು ಬರೆಯಬಲ್ಲೆ’ ಎಂಬ ಏಕೈಕ ಕಾರಣಕ್ಕೆ ಹುಟ್ಟಿಕೊಳ್ಳುವ ಅಹಂ ಅನ್ನು ಪೋಷಿಸುವ ಉದ್ದೇಶದಿಂದ ರೂಪುಗೊಂಡದ್ದು. ಅದು ಸಾಹಿತಿಗಳು, ಬರಹಗಾರರು, ಕವಿಗಳು, ವಿಮರ್ಶಕರು ಎಂದು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಅನೇಕರಿಗೆ ಒಂದು ವೇದಿಕೆ.

ಪರಿಷತ್ತು ‘ಸಾಹಿತ್ಯವನ್ನು’ ಪರಿಭಾವಿಸುವ ರೀತಿಯಲ್ಲಿಯೇ ಲೋಪಗಳಿವೆ. ಇದುವರೆಗೆ ಒಬ್ಬ ಅನಕ್ಷರಸ್ಥ ಕವಿ, ಅರ್ಥಾತ್ ಜನಪದ ಕವಿ ಸಮ್ಮೇಳನ ನೇತೃತ್ವ ವಹಿಸಿದ ಉದಾಹರಣೆ ಇದೆಯೇ? ಬರೆದದ್ದನ್ನೆಲ್ಲ ಪ್ರಿಂಟ್ ಮಾಡಿಸಿ, ಅಲ್ಲಲ್ಲಿ ಪ್ರಶಸ್ತಿ, ಮನ್ನಣೆ ಗಳಿಸಿದವರು ಮಾತ್ರ ಸಾಹಿತಿ. (ಖ್ಯಾತ ಬರಹಗಾರ, ಪತ್ರಕರ್ತ ಖುಷ್ವಂತ್ ಸಿಂಗ್ ಸಂಸತ್ ಸದಸ್ಯರಾಗಿದ್ದಾಗ ಒಮ್ಮೆ ಮಾತನಾಡುತ್ತ ‘ಸರಕಾರ ಸಾಹಿತಿಗಳಿಗೆ ನೀಡುವ ಪ್ರಶಸ್ತಿ, ಪುರಸ್ಕಾರಗಳು ಕಳೆ ಮೇಲೆ ಸಿಂಪಡಿಸುವ ರಸಗೊಬ್ಬರ’ ಎಂದಿದ್ದರು.) ಅಂತಹದೊಂದು ಪಟ್ಟ ಬಂದಾಕ್ಷಣ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಪ್ರತಿಕ್ರಿಯಿಸುವ ಅರ್ಹತೆ ಸಾಹಿತಿಗೆ ತಂತಾನೆ ಬಂದು ಬಿಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಅನೇಕರು ಗಮನಿಸಿರಬಹುದು, ಕಾವೇರಿ ಗಲಾಟೆ, ಅಮೆರಿಕಾದೊಂದಿಗೆ ಅಣು ಒಪ್ಪಂದ, ಬೆಂಗಳೂರಿನ ಅಸ್ತವ್ಯಸ್ತ ರಸ್ತೆ ಸಂಪರ್ಕ… ಹೀಗೆ ಎಲ್ಲವುದರ ಬಗ್ಗೆಯೂ ಅಭಿಪ್ರಾಯ ಹೊಂದಿರುತ್ತಾರೆ. ಅದು ಅಕ್ಷರ ಜ್ಞಾನದೊಂದಿಗೆ ಉಚಿತವಾಗಿ ಒದಗುವ ಅಹಂನ ಕಾರಣ. ಇತ್ತೀಚೆಗೆ ಜನಪ್ರಿಯ ಸಾಹಿತಿ ಎಸ್. ಎಲ್. ಭೈರಪ್ಪ ಭಾರತದ ಸ್ವಾತಂತ್ರೋತ್ತರ ಇತಿಹಾಸದ ಬಗ್ಗೆ ತಮ್ಮ ಸೀಮಿತ ಅರಿವಿನ ಆಧಾರದ ಮೇಲೆಯೇ ತೀರ್ಪು ಹೊರಡಿಸುವ ಧಾಟಿಯಲ್ಲಿ ಅಂಕಣ ಬರೆಯುತ್ತಿರುವುದಕ್ಕೂ ಇಂತಹದೇ ಅಹಂ ಕಾರಣ.

ಹಿಂದೊಮ್ಮೆ ಹಾ.ಮಾ.ನಾಯಕರು ಕನಿಷ್ಟ ಒಂದು ಪುಸ್ತಕವನ್ನಾದರೂ ಪ್ರಕಟಿಸಿದವರು ಮಾತ್ರ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಬೇಕು ಎಂದು ಹೇಳಿದ್ದರು. ಈ ಮಾತು ಅಲ್ಲಲ್ಲಿ ಟೀಕೆಗೆ ಗುರಿಯಾಗಿತ್ತು. ಸಾಹಿತ್ಯ ಪರಿಷತ್ತು ಸೀಮಿತ ಪರಿಧಿಯಾಚೆಗೆ ಸಮ್ಮೇಳನವನ್ನು ರೂಪಿಸುವ ಅಗತ್ಯವಿದೆ. ಒಟ್ಟಾರೆ ಕನ್ನಡ ಸಮ್ಮೇಳನ ಆಗಬೇಕಿದೆ. ಕನ್ನಡ ಕೇವಲ ಭಾಷೆ ಅಲ್ಲ, ಸಮಾಜ ಮತ್ತು ಕನ್ನಡಿಗರ ಬದುಕು. ರೈತರ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಒಂದು ಗೋಷ್ಠಿ ಏರ್ಪಡಿಸಿ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್ ಪುಟ್ಟಣ್ಣಯ್ಯ ನವರು ಮಾತನಾಡಲು ಅವಕಾಶ ಕೊಟ್ಟರೆ ಜವಾಬ್ದಾರಿ ಮುಗಿಯಿತೆ? ಅಥವಾ ರೈತರ ಸಮಸ್ಯೆಗಳ ಬಗ್ಗೆ ಒಂದು ನಿರ್ಣಯ ಮಂಡಿಸಿದರೆ ಸಾಕೆ?

ವಿಮರ್ಶಕ ಚಿದಾನಂದಮೂರ್ತಿಯವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನಿರಾಕರಿಸಿದಾಗ ಅದರ ವಿರುದ್ಧ ಖಂಡನಾ ನಿರ್ಣಯ ಮಂಡಿಸುವ ಸಾಹಿತ್ಯ ಪರಿಷತ್ತು, ಮಂಗಳೂರು, ಉಡುಪಿಗಳಲ್ಲಿ ನಡೆದ ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಉಸಾಬರಿಗೇ ಹೋಗುವುದಿಲ್ಲ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತ, ನಾವು ಸಮ್ಮೇಳನಕ್ಕೆ ಸಾಕಷ್ಟು ಪೊಲೀಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೆಲಸಕ್ಕೆ ನಿಯೋಜಿಸಲಾಗಿರುವ ಪೊಲೀಸರಿಗೆ ಸಮ್ಮೇಳನಕ್ಕೆ ಆಗಮಿಸುವವರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕೆಂಬುದರ ಬಗ್ಗೆಯೂ ತರಬೇತಿ ನೀಡಿದ್ದೇವೆ ಎಂದರು. ಅದು ನಿಜ. ಪೊಲೀಸರಿಗೆ ಅಂತಹ ತರಬೇತಿ ಅಗತ್ಯ. ಆದರೆ ಸಾಹಿತಿಗಳ ಜೊತೆ ವ್ಯವಹರಿಸಲು ಮಾತ್ರ ಅಂತಹ ತರಬೇತಿಯೇ? ರೈತರ ಬಗ್ಗೆ, ಇತರೆ ಕನ್ನಡಪರ ಹೋರಾಟಗಾರರ ಬಗ್ಗೆ, ದಲಿತರ ಹಕ್ಕುಗಳಿಗಾಗಿ ಹೋರಾಡುವವರ ಜೊತೆ ವ್ಯವಹರಿಸುವಾಗ ಸಂಯಮ ಬೇಕಿಲ್ಲವೆ?

ಗಂಗಾವತಿಯಲ್ಲಿ ಮೂರು ಕವಿಗೋಷ್ಟಿಗಳು ನಡೆದವು. ಅದೊಂಥರಾ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ. ಅರ್ಜಿ ಹಾಕಿದವರಿಗೆಲ್ಲ ನೂರು ದಿನಗಳ ಕೆಲಸ ಕೊಡಲೇ ಬೇಕು ಎಂಬಂತೆ, ಇಲ್ಲಿಯೂ ಬೇಡಿಕೆ ಸಲ್ಲಿಸಿದವರಿಗೆಲ್ಲಾ ಕವಿತೆ ಓದುವ ಅವಕಾಶ. ಅಲ್ಲಿ ಅನೇಕರು ‘ಕನ್ನಡ ಮಾತೆಗೆ’ ಜೈಕಾರ ಹಾಕುವವರೇ. ಸಾಹಿತ್ಯ ಸಮ್ಮೇಳನ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸ ಬೇಕಾದ ಪರಿಷತ್ತು ಇಂತಹ ತೀರಾ ಸಾಧಾರಣ ಕವಿತೆಗಳಿಗೆ ಮಣೆ ಹಾಕಿ ಅಭಿರುಚಿಯನ್ನೇ ಕೊಲ್ಲುತ್ತಿದೆ.

ನಮ್ಮ ಮಾಧ್ಯಮಗಳು ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಿಗೆ ಉತ್ತಮ ಪ್ರಚಾರ ಕೊಡುತ್ತವೆ. ಅಲ್ಲಿ ಕೇಳಿಬರುವ ಹೇಳಿಕೆಗಳಿಗೆ ಸುಖಾಸುಮ್ಮನೆ ಮನ್ನಣೆ ದೊರಕಿಬಿಡುತ್ತದೆ. ಆದರೆ ಆ ಸಾಧ್ಯತೆಯ ಲಾಭ ಪಡೆದುಕೊಂಡು ಮೌಢ್ಯದ ಗುಂಡಿಯಲ್ಲಿರುವ ಜನಸಾಮಾನ್ಯರನ್ನು ಮೇಲೆತ್ತುವ ಪ್ರಯತ್ನ ಮಾಡಿದ ಉದಾಹರಣೆಗಳು ಕಡಿಮೆ.

ಜಾತ್ಯತೀತ ನೆಲೆ:
ಸಮ್ಮೇಳವನ್ನು ಜಾತ್ಯತೀತ ನೆಲೆಗಟ್ಟಿನ ಮೇಲೆ ರೂಪಿಸುವಲ್ಲಿ ಆಸಕ್ತಿಯನ್ನೇ ತೋರಿಸಿಲ್ಲ. ಇವತ್ತಿಗೂ ಸಮ್ಮೇಳನ ಅಧ್ಯಕ್ಷರನ್ನು ಆರತಿ ಎತ್ತಿ, ಹಣೆಗೆ ಕುಂಕುಮವಿಟ್ಟು ಸ್ವಾಗತಿಸುತ್ತಾರೆ. ‘ಪೂರ್ಣ ಕುಂಭ’ ಹೊತ್ತ ‘ಮುತ್ತೈದೆಯರು’ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅದಕ್ಕೂ ಮುನ್ನ ಅಡಿಗೆ ಕೋಣೆಯನ್ನು ಅಣಿಗೊಳಿಸಿದ ದಿನ ಸ್ಥಳೀಯ ಪುರೋಹಿತರು ಕಾಯಿ ಒಡೆದು, ಪೂಜೆ ಮಾಡಿ ಒಲೆ ಹೊತ್ತಿಸುತ್ತಾರೆ.

ಅಷ್ಟೇ ಅಲ್ಲ ಕನ್ನಡಾಂಬೆ, ಭುವನೇಶ್ವರಿ ಎಂಬ ಪರಿಕಲ್ಪನೆಯೇ ಜಾತ್ಯತೀತ ನಂಬಿಕೆಗಳಿಗೆ ವಿರುದ್ಧವಾಗಿವೆ. ಆ ನಂಬಿಕೆಗಳನ್ನು ಪ್ರತಿನಿಧಿಸುವ ಸಂಕೇತಗಳು ಸಮುದಾಯವನ್ನು ಒಗ್ಗೂಡಿಸುವುದರ ಬದಲಿಗೆ ವಿಭಜಿಸುವ ಉದ್ದೇಶವನ್ನೇ ಇಟ್ಟುಕೊಂಡಿವೆ. ಸಮಷ್ಟಿಯನ್ನು ಪ್ರತಿನಿಧಿಸುವ ಸಂಕೇತಗಳೊಂದಿಗೆ ಸಮ್ಮೇಳನವನ್ನು ಆಯೋಜಿಸುವ ತುರ್ತನ್ನು ಸಾಹಿತ್ಯ ಪರಿಷತ್ತು ಇದುವರೆಗೂ ಅರ್ಥಮಾಡಿಕೊಳ್ಳದಿರುವುದು, ಅಜ್ಞಾನವೋ, ಹೊಣೆಗೇಡಿತನವೋ.

ಬಿಜಾಪುರದಲ್ಲಿ ನಡೆಯಲಿರುವ 79 ನೇ ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಅಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಲಿ, ಸಮ್ಮೇಳನ ಸ್ವರೂಪದಲ್ಲಿ ಒಂದಿಷ್ಟು ಸುಧಾರಣೆಗಳಾಗಲಿ.

(ಫೋಟೋ ಕೃಪೆ: ದಿ ಹಿಂದು)

ಬದಲಾಗುತ್ತಿರುವ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ

 -ಶ್ರೀಮತಿ ದೇವಿ

“ಸಂಗೀತ ಎನ್ನುವುದು ಮನುಷ್ಯನ ಪ್ರಜ್ನೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಆ ಕಲಾಕಾರನ ಸೃಜನಶೀಲತೆಯ ಅಭಿವ್ಯಕ್ತಿಗಾಗಿ ಇರುವ ಮಾಧ್ಯಮವೂ ಆಗಿರುತ್ತದೆ. ಇದರಿಂದಾಗಿದೆಯೇ ಕಾಲ ಬದಲಾಗುತ್ತಾ ಮುಂದೆ ಸಾಗಿದಂತೆ, ಹೇಗೆ ಪರಿವರ್ತಿತವಾಗುವ ಸಮಾಜದೊಂದಿಗೆ ಬದುಕುತ್ತಿರುವ ವ್ಯಕ್ತಿಗಳ ಜೀವನವೂ, ಆಲೋಚನಾ ವಿಧಾನವೂ, ವ್ಯಕ್ತಿತ್ವವೂ, ಸಮಾಜದ ಬದಲಾವಣೆಗೆ ಸ್ಪಂದಿಸುವ ರೀತಿಯೂ ಬದಲಾಗುತ್ತದೋ ಹಾಗೆಯೇ ಅದರೊಂದಿಗೆ ಸಮಾನಾಂತರವಾಗಿ ಸಂಗೀತಾದಿ ಕಲೆಗಳು ಬದಲಾಗುತ್ತವೆ, ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ.” ಎಂಬ ಈ ಆಸಕ್ತಿದಾಯಕವಾದ ವಿಚಾರದೆಡೆಗೆ ಇತ್ತೀಚೆಗೆ ನನ್ನ ಗಮನವನ್ನು ಸೆಳೆದು ಆಲೋಚನೆಗೆ ಹಚ್ಚಿದವರು, ಬಹುದೊಡ್ಡ ಸಂಗೀತಗಾರರೂ ನನ್ನ ಗುರುಗಳೂ ಆದ ಪಂ. ನಾರಾಯಣ ಪಂಡಿತರು.

ಪಂಡಿತರು, ದ್ರುಪದ್ ಗಾಯನದ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದ ವರೆಗಿನ ಸಂಗೀತದ ಪ್ರವಾಸವನ್ನು ಸುಂದರವಾಗಿ “ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಪ್ರವಾಸ” ಎಂದು ಕರೆಯುತ್ತಾರೆ.

ದ್ರುಪದ್ ಎಂಬುದು ಇಂದಿನ ಖ್ಯಾಲ್ ಗಾಯನಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗಾಯನಪ್ರಕಾರ. ಬಹಳ ಧೀಮಂತವಾಗಿ, ಗಂಭೀರವಾಗಿ ಸಾಗುವ ಈ ಪಧ್ಧತಿಯಲ್ಲಿ ರಾಜ ಗಾಂಭೀರ್ಯವಿದೆ. ಹಾಗೆಯೇ ಇದು ಎಲ್ಲೂ ಗಮಕ್, ಖಟ್ಗಾ, ಮುರ್ಕಿಗಳು ಎಂಬಂತಹ ಉಪರಸ್ತೆಗಳ ಕಡೆ ತಿರುಗಿಯೂ ನೋಡದೇ ರಾಜಮಾರ್ಗದಲ್ಲಿ ಸಾಗುತ್ತದೆ.

ದೇವರ ವರ್ಣನೆ, ಆಶ್ರಯದಾತನಾದ ರಾಜನ ಹಿರಿಮೆಯನ್ನು ಹೊಗಳುವ ವಿಚಾರಗಳನ್ನುಳ್ಳ ದ್ರುಪದ್ ರಚನೆಯಲ್ಲಿ ಸಾಮಾನ್ಯ ಮಾನವನ ದೈನಂದಿನ ಜೀವನ, ತುಮುಲ, ಆತನ ಭಾವನೆಗಳು ಇವನ್ನೆಲ್ಲಾ ಕಾಣಲು ಸಾಧ್ಯವಿಲ್ಲ. ಇದಕ್ಕೆ ಸಾಥಿಗಾಗಿ ಬಳಸಲಾಗುತ್ತಿದ್ದ ಪಖವಾಜನ್ನು ಗಮನಿಸಿದಾಗಲು ಈ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಪಖವಾಜ್ ನೋಡಲು ಮೃದಂಗದಂತಹ ತಾಳವಾದ್ಯವಾಗಿದ್ದು, ಇದರಲ್ಲಿ ಖುಲ್ಲಾಬಾಜ್ ನ ಬೋಲ್ ಗಳನ್ನು ಬಾರಿಸಲಾಗುತ್ತದೆ. ’ಧಾ, ಧಿಂ, ತಿಟತಕ’ ಮೊದಲಾದ ಪದಗಳನ್ನು ದೊಡ್ಡ ಸ್ವರದೊಂದಿಗೆ ಗಂಭೀರವಾಗಿ ಬಾರಿಸಲಾಗುತ್ತದೆ.

ಕಾಲ ಸರಿದಂತೆ, ದ್ರುಪದ್ ಗಾಯನದಿಂದ ಖ್ಯಾಲ್ ಗಾಯನದೆಡೆಗೆ ಜನರ ಒಲವು ಬೆಳೆದಂತೆ ಸಂಗೀತದಲ್ಲಿ ಬದಲಾವಣೆಯ ಗಾಳಿ ಸಣ್ಣದಾಗಿ ಬೀಸಲು ಆರಂಭವಾಯಿತು. ಇದನ್ನು ಪಂಡಿತರು, “objectivity ಇಂದ subjectivity ಯ ಕಡೆಗೆ” ಎಂದು ಗುರುತಿಸುತ್ತಾರೆ. ಖ್ಯಾಲ್ ರಚನಾಕಾರನು ಇಲ್ಲಿ “ತನಗೇನು ಅನಿಸುತ್ತಿದೆ, ಹೇಗೆ ಕಾಣುತ್ತಿದೆ” ಎಂಬುದನ್ನು ಹೇಳಲೇಬೇಕಾದ ಒತ್ತಡವನ್ನು ಕಂಡುಕೊಂಡ. ಇದರಿಂದಾಗಿಯೇ ಸ್ವಲ್ಪಮಟ್ಟಿಗೆ ಜಾಸ್ತಿಯೇ ಎನ್ನಬಹುವಾದ ಶೃಂಗಾರ, ವಿರಹಮಯವಾದ ರಚನೆಗಳು ಬರಲು ಕಾರಣವಾಯಿತು. ಆದರೆ ಇವುಗಳೊಂದಿಗೆ ಗೆಳೆತನ, ಮಾತೃವಾತ್ಸಲ್ಯ, ಮಗುವಿನ ತುಂಟಾಟ, ಈ ಎಲ್ಲಾ ಭಾವನೆಗಳ ಅಭಿವ್ಯಕ್ತಿಗೂ ಆಸ್ಪದದೊರಕುವಂತಾಯಿತು.

ಖ್ಯಾಲ್ ಗಾಯನದಲ್ಲಿ, ದ್ರುಪದ್ ಗಾಯನದಲ್ಲಿ ಇರುವುದಕ್ಕಿಂತ ಹೆಚ್ಚು ಹಾಡುಗಾರನಿಗೆ ಸ್ವಾತಂತ್ರ್ಯವಿರುವುದರಿಂದ ಆತನೂ ಈ ರಚನೆ ” ನನ್ನ ಕಣ್ಣಿಗೆ ಹೇಗೆ ಕಾಣುತ್ತಿದೆ” ಎಂದು ತಿಳಿದು ಹಾಡಲು ಆರಂಭಿಸಿದ. ಪಂಡಿತರು ಹೇಳುವಂತೆ ಈ ರೀತಿಯಾಗಿ ಸಂಗೀತದಲ್ಲಿ “humanizing process” ಆರಂಭವಾಯಿತು. ಪಖವಾಜ್ ಗಿಂತ ಬೇರೆಯಾದ ತಬಲ ಸಾಥ್, ಸೂಕ್ಷ್ಮವಾದ ಬೋಲ್ ಗಳೊಂದಿಗೆ ಸಂಗೀತಕ್ಕೆ ಮತ್ತಷ್ಟು ತರಲತೆಯನ್ನು ನೀಡತೊಡಗಿತು. ಅಭಿವೃದ್ಧಿಯೆಡೆಗೆ ಧಾಪುಗಾಲು ಇಟ್ಟು ಸಾಗುತ್ತಿದ್ದ ಸಮಾಜದಲ್ಲಿ ಮೈಕ್ರೋಫೋನ್ ಇತ್ಯಾದಿಗಳ ಆವಿಷ್ಕಾರದಿಂದ, ಹಾಡಲು ಹಿಂದೆ ಬೇಕಾಗಿದ್ದ ಶಾರೀರಿಕ ಶ್ರಮ ಕಡಿಮೆಯಾಗಿ ಮನಸ್ಸಿನ ಪಿಸುಮಾತುಗಳನ್ನು ಹೇಳಲು ಸಾಧ್ಯವಾಯಿತು. ಇದನ್ನೇ ಪಂಡಿತರು “expressionism in music”ಎನ್ನುತ್ತಾರೆ.

ಗಾಯಕರ ಕೇಳುಗರ ಕಿವಿಗಳು ಸೂಕ್ಷ್ಮವಾಗುತ್ತಾ ಸಾಗಿದಂತೆ, ಒಂದುಕಾಲದಲ್ಲಿ “ಕೋಟೆ ಸಂಗೀತ” ಎಂದು ಮಡಿವಂತರಿಂದ ದೂರ ಇರಿಸಲ್ಪಟ್ಟಿದ್ದ ಠುಮ್ರಿ ಮೊದಲಾದ ಪ್ರಕಾರಗಳು ವೇದಿಕೆಯ ಮೇಲೆ ಸ್ಥಾನ ಪಡೆದುಕೊಳ್ಳತೊಡಗಿದವು. ರಚನೆಯ ಸಾಹಿತ್ಯಕ್ಕೂ ಗಮನ ನೀಡಲಾಯಿತು. ಹಲವು ರೀತಿಯ ಭಾವನೆಗಳಿಗೆ ಅಭಿವ್ಯಕ್ತಿ ನೀಡಲು ರಚನೆಯ ಶಬ್ದಗಳ ನೆರವು ಪಡೆಯಲಾಯಿತು. ಶಾಸ್ತ್ರೀಯ ಸಂಗೀತ ತಿಳಿಯದ ಸಾಮಾನ್ಯರ ಮನಸ್ಸನ್ನು ತಲುಪುವಂತಹ ಈ ರಚನೆಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಅಂತೆಯೇ, ಹಿಂದೊಮ್ಮೆ ದ್ರುಪದ್ ಪ್ರಭಾವದ ಖ್ಯಾಲ್ ಸಂಗೀತವನ್ನು ನೋಡಿದಂತೆ ಇಂದು ಠುಮ್ರಿ ಸಂಗೀತದ ಪ್ರಭಾವದಲ್ಲಿರುವ ಖ್ಯಾಲ್ ಗಾಯನವನ್ನು ನೋಡಬಹುದಾಗಿದೆ. ಠುಮ್ರಿಯಲ್ಲಿ ಹೇಳುವ ಭಾವನೆಗಳನ್ನೇ ಮತ್ತಷ್ಟು ಧ್ರುತ್ ಆಗಿ ಟಪ್ಪಾ ದಲ್ಲಿ ಹೇಳಲಾಗುತ್ತದೆ.

ಒಂದು ರಾಗದ ಚೌಕಟ್ಟಿನ ಒಳಗೇ, ಸ್ವರಗಳ ಚಲನೆ ಹಾಗೂ ಸ್ಪಂದನೆಗಳನ್ನು ನೋಡಬಹುದಾದ ಸೂಕ್ಷ್ಮತೆಯ ಎಡೆಗೆ ಇಂದು ನಾವು ಸಾಗುತ್ತಿದ್ದೇವೆ. ಶಾಸ್ತ್ರದ ಬಿಗಿ ಕಟ್ಟುಪಾಡು ಇಲ್ಲದೆ ಬಹಳ aggressive ಆಗಿ ಮನಸ್ಸಿನ ಭಾವನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊರಹಾಕಲು ಇಲ್ಲಿ ಸಾಧ್ಯವಿದೆ ಹಾಗೂ ಅದು ಕೇಳುಗರನ್ನೂ ತಟ್ಟುತ್ತದೆ ಎಂಬ ಕಾರಣವೂ ಇಂದು ಉಪಶಾಸ್ತ್ರೀಯ ಸಂಗೀತ, fusion ಇತ್ಯಾದಿಗಳ ಜನಪ್ರಿಯತೆಯ ಹಿಂದಿದೆ ಎಂದು ಅನಿಸುತ್ತದೆ.

ನಾರಾಯಣ ಪಂಡಿತರು ಪರಿಭಾವಿಸುವಂತೆ ಸಿನಿಮಾದ ಅಥವಾ ಯಾವುದೇ ಬಹುಜನಪ್ರಿಯವಾದ ಹಾಡಿನ ಧಾಟಿಯನ್ನು ಗಮನಿಸಿದಾಗ ಅದು ಹೆಚ್ಚಾಗಿ ನಮ್ಮ ಮಣ್ಣಿನ folk tune ಇಂದ ಬಂದಿರುತ್ತದೆ. ಶಾಸ್ತ್ರೀಯ ಸಂಗೀತಗಾರರು ತಮ್ಮ ಸಂಗೀತವನ್ನು ಬಹು ಶಿಷ್ಟವಾದದ್ದು ಎಂದು ಪರಿಗಣಿಸುವುದರಿಂದ ಇಂತಹ tune ಕಡೆಗೆ ನಿರ್ಲಕ್ಷ್ಯವನ್ನು ತಾಳಿರುತ್ತಾರೆ. ಈ ಅಂಶವನ್ನು ಗಮನಿಸಿದಾಗ ನಮಗೆ ಅನಾಯಾಸವಾಗಿ ನೆನೆಪಾಗುವುದು ಪಂ. ಕುಮಾರ ಗಂಧರ್ವರು ಮಾಡಿದ ಮಹತ್ಕಾರ್ಯ. ಅವರು ಮಧ್ಯಪ್ರದೇಶದ ಜನಪದ ಗೀತೆಗಳನ್ನು ಅಭ್ಯಸಿಸಿ, ಅವುಗಳಿಂದ ಸುಂದರವಾದ tune ಗಳನ್ನು ಎತ್ತಿಕೊಂಡು ಅವುಗಳನ್ನು ರಾಗಗಳನ್ನಾಗಿ ಮಾಡಿದರು. ಆಧುನಿಕ ಕಾಲದ ಸಂಗೀತದ ಹರಿಕಾರರಾದ ಕುಮಾರ್ ಜೀಯವರು ಸಂಗೀತದ ಸೂಕ್ಷ್ಮತೆಯೆಡೆಗಿನ ಪ್ರವಾಸದ ಬಹುದೊಡ್ಡ ನೇತಾರರು.

ರಾಗವೆಂದರೆ, ಕೆಲವು ನಿರ್ದಿಷ್ಟ ಸ್ವರಗಳನ್ನೊಳಗೊಂಡ ಆರೋಹ ಅವರೋಹದಿಂದ ಕೂಡಿದ ಅಸ್ಥಿಪಂಜರವಲ್ಲ; ಇದು ರಾಗದ ಚೌಕಟ್ಟಿನ ಒಳಗೆ ಇದ್ದುಕೊಂಡೇ, ಹಲವು ಮಧುರವಾದ ಸಂಚಾರಗಳಿಂದ ಆದ ಭಾವಭಿವ್ಯಕ್ತಿಗಾಗಿ ಇರುವ ಮಾಧ್ಯಮ. ಅಂತೆಯೇ ರಾಗದ ಗುರುತಿಸುವಿಕೆ, ಸ್ವರಗಳ ಆಧಾರದ ಮೇಲಲ್ಲ, ಭಾವದ ಆಧಾರದಲ್ಲಿ ಎಂಬುದು ಪಂಡಿತರ ನಿಲುವು.

ಹಾಗೆಯೇ ಇಂದು ಠುಮ್ರಿ, ಟಪ್ಪಾ, ದಾದ್ರಾ ಗಾಯನಗಳಲ್ಲಿ ರಾಗದ ಒಳಗಿನ ಸ್ವರಗಳ ವಿವಿಧ ರೀತಿಯ ಸಂಯೋಜನೆಯ ಜೊತೆಗೆ ಹಲವು ಅನ್ಯಸ್ವರಗಳ ಬಳಕೆಯೂ ಆಗುತ್ತದೆ. ಉದಾ., ಕಾಫಿ ರಾಗದಲ್ಲಿ ಕೋಮಲ ದೈವತ ಹಾಗೂ ಶುದ್ಧ ನಿಶಾದದ ಬಳಕೆ ಇತ್ಯಾದಿ.

ಪಂಡಿತರು ಗಮನಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಯಾವುದೇ ಒಂದು ರಾಗದಲ್ಲಿ ಬರುವ ರಚನೆ – ಅದರ ಸಾಹಿತ್ಯ – ತಾಳದ ರೂಪ ಬದಲಾದಂತೆ ಆ ರಾಗದ ರೂಪವೂ ಬದಲಾಗುತ್ತದೆ ಎನ್ನುವುದು. ಆ ನಿರ್ದಿಷ್ಟ ರಚನೆಗೆ ನ್ಯಾಯನೀಡಲು ಬೇಕಾದ ರೀತಿಯಲ್ಲಿ ರಾಗವು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ರಚನೆಯಲ್ಲಿ ಬರುವ ಸಾಹಿತ್ಯಕ್ಕೆ ನ್ಯಾಯ ನೀಡಲು ಬೇಕಾದ ರಸವನ್ನು ನೀಡಲು ರಾಗ ಸಮರ್ಥವಾಗುತ್ತದೆ. ಅಂತೆಯೇ ಯಾವ ರಾಗಗಳಿಗೂ ನಿರ್ದಿಷ್ಟ ರಸಗಳು ಎನ್ನುವುದು ಇಲ್ಲ. ಎಲ್ಲಾ ರಾಗಗಳ ಹಿಂದೆ ಸ್ಥಾಯೀ ಆಗಿರುವುದು ಒಂದೇ ರಸ, ಅದೆಂದರೆ ಶಾಂತ ರಸ. ಇದಕ್ಕೆ ಉದಾಹರಣೆಯಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಅತಿ ಗಂಭೀರರಾಗವೆಂದು ಪರಿಗಣಿತವಾದ ದರ್ಬಾರಿ ಕಾನಡದ ’ಅನೋಖಾ ಲಾಡಲಾ ಮಾಯಿ’ ಎಂಬ ಪಾರಂಪರಿಕ ರಚನೆಯನ್ನು ನೀಡುತ್ತಾರೆ. ಇದು ಸಣ್ಣ ಮಕ್ಕಳ ಆಟದ ವರ್ಣನೆ ಇರುವ ರಚನೆಯಾಗಿದೆ.

ಬಹಳ ಹಿಂದಿನ ಸಮಯದಿಂದ ಆರೋಪಿತವಾಗಿರುವ ಇಂತಹ ಕೆಲವು sterotype ವಿಚಾರಗಳನ್ನು ಇಟ್ಟುಕೊಳ್ಳದೆ, ಸಂಗೀತಕ್ಕೆ ಯಾವುದೇ ಚ್ಯುತಿಬಾರದಂತೆ ವಿಚಾರಗಳನ್ನು ಚಿಂತನೆಯ ಒರೆಗೆ ಹಚ್ಚಿ ’ಇದು ನನಗೆ ಹೇಗೆ ಕಾಣುತ್ತಿದೆ’ ಎಂಬುದಕ್ಕೆ ಗಮನಕೊಡುವುದು ಇಂದಿಗೆ ಅಗತ್ಯವಾಗಿದೆ.

ಇವತ್ತು ಹೊಸ ಹೊಸ ಆವಿಷ್ಕಾರಗಳ ಮೂಲಕ ತಂತ್ರಜ್ನಾನ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ಸೂಕ್ಷ್ಮತೆಯೆಡೆಗೆ ಸಾಗುತ್ತಿದ್ದೇವೆ. ನ್ಯಾನೊ ಟೆಕ್ನಾಲಜಿ, ಪಾಮ್ ಟಾಪ್, ಇತ್ಯಾದಿಗಳು ಇನ್ನೂ ಸೂಕ್ಷ್ಮತೆಯತ್ತ ಚಲಿಸುತ್ತಲೇ ಇವೆ. ಆದರೆ ಈ ಸೂಕ್ಷ್ಮತೆ ನಮ್ಮ ಪ್ರಜ್ಞೆಯ ಭಾಗವಾಗಿ ಆಗಬೇಕಾಗಿದೆ. ಕೇವಲ ಬೌದ್ಧಿಕ ಮಟ್ಟದಲ್ಲಿ ಎಲ್ಲವನ್ನು ಸೀಳಿ ಪರೀಕ್ಷಿಸಿ ಒಳಹೊಕ್ಕು ನೋಡಬೇಕು ಎಂಬ ಬರಿಯ ಅಹಂಕಾರದ ಬುಧ್ಧಿವಂತಿಕೆ ಬಿಟ್ಟು ಭಾವನಾತ್ಮಕವಾಗಿ ಅಧ್ಯಾತ್ಮಿಕವಾಗಿ ಸೂಕ್ಷ್ಮತೆಯೆಡೆಗೆ ಸಾಗಿದಾಗ ಮಾತ್ರ ಈ ಬೆಳವಣಿಗೆಗೆ ನಿಜವಾದ ಅರ್ಥ ಬಂದೀತು.