Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಸಂಭ್ರಮದ ಬದಲಿಗೆ, ಅವಮಾನ ಕರುಣಿಸುವ ಜಾತ್ರೆಗಳು

 – ಜೀವಿ
ನಾನಾಗ ಹೈಸ್ಕೂಲ್ ವಿದ್ಯಾರ್ಥಿ, ಹಬ್ಬ-ಜಾತ್ರೆಯಲ್ಲಿ ಅನ್ನ ಮತ್ತು ದೋಸೆ ಕಾಣುತ್ತಿದ್ದ ಕಾರಣ ಊರಿನಲ್ಲಿ ಸಾವಾದರೂ ಮನಸಲ್ಲೆ ಸಂಭ್ರಮಿಸಿ ೧೧ ದಿನ ಏಣಿಸಿದ್ದುಂಟು. ಯಾಕೆಂದರೆ ೧೧ ದಿನಕ್ಕೆ ಸರಿಯಾಗಿ ತಿಥಿ ಕಾರ್ಯ ಏರ್ಪಡಿಸುವ ಗ್ಯಾರಂಟಿ ಇತ್ತು. ಅಂದಾದರೂ ಅನ್ನ ಕಾಣಬಹುದು ಎಂಬುದು ನನ್ನ ಲೆಕ್ಕಾಚಾರ. ಮಳೆ ಮುಗಿಲು ಸೇರಿದ್ದ ಕಾರಣಕ್ಕೆ ಆ ವರ್ಷ ರಾಗಿ ಬೆಳೆ ಕೂಡ ಕೈಗೂಡಿರtimthumbಲಿಲ್ಲ. ಹಾಗಾಗಿ ಅರೆಹೊಟ್ಟೆಯಲ್ಲೆ ಜೀವನ ಮುಂದುವರಿದಿತ್ತು. ‘ಕಾಲಾಡಿ ಹೊರಟರೆ ಕನ್ನೆ ಸೊಪ್ಪಿಗೆ ಬರವೇ?’ ಎಂಬುದು ಅವ್ವ ಆಗಾಗ ಹೇಳುತ್ತಿದ್ದ ಮಾತು. ದಿನವಿಡೀ ಸುತ್ತಾಡಿ ಕನ್ನೆ ಸೊಪ್ಪು ಸೆರಗು ತುಂಬಿಸಿಕೊಂಡು ಬಂದು ಬೇಸಿದರೆ ಬೊಗಸೆ ಸೊಪ್ಪು ಹಿಡಿಯಷ್ಟಾಗುತ್ತಿತ್ತು. ಅದನ್ನೆ ತಿಂದು ನೀರು ಕುಡಿದು ಶಾಲೆಗೆ ಹೋಗುತ್ತಿದ್ದೆ.

ಮಾರ್ಚ್ಗೆ ಮುನ್ನವೇ ಬಿದ್ದ ಮಳೆಯಿಂದ ಅಣ್ಣ ಮತ್ತೊಂದು ಹೊಸ ಕನಸು ಹೊತ್ತು ನೇಗಿಲು ಹಿಡಿದು ಹೊಲಕ್ಕೆ ಹೋಗಿದ್ದ. ಶಾಲೆಗೆ ಹೋಗುವ ದಾರಿಯಲ್ಲಿ ಅವ್ವ ಬೇಸಿಕೊಟ್ಟ ಕನ್ನೆಸೊಪ್ಪಿನಲ್ಲಿ ನನ್ನ ಪಾಲು ಅಲ್ಲೆ ತಿಂದು ಅಣ್ಣನಿಗೆ ತಲುಪಿಸಿ ಹೋಗುತ್ತಿದ್ದೆ. ಮುಂದಿನ ವರ್ಷ ನಾನು ಕಾಲೇಜು ಮೆಟ್ಟಿಲು ಹತ್ತೇ ತೀರುತ್ತೇನೆ ಎಂಬ ಅಚಲ ನಂಬಿಕೆ ಅಣ್ಣನಿಗಿತ್ತು. ಹಾಗಾಗಿ ನನ್ನ ಮೇಲೆ ಇನ್ನಿಲ್ಲದ ಕಾಳಜಿ. ಊರಿನ ಹೊಲಗೇರಿಯಲ್ಲಿ ಕಾಲೇಜು ಮೆಟ್ಟಿಲೇರುವ ಮೊದಲ ವ್ಯಕ್ತಿ ನಾನಾಗಿದ್ದೆ. ಅವ್ವ ಕೊಟ್ಟ ಸೊಪ್ಪಿನಲ್ಲಿ ಒಂದೆರಡು ತುತ್ತು ಮಾತ್ರ ಎತ್ತಿಕೊಳ್ಳುತ್ತಿದ್ದ ಅಣ್ಣ, ಉಳಿದಿದ್ದನ್ನು ನನಗೇ ತಿನ್ನಿಸಿ ಶಾಲೆಗೆ ಕಳುಹಿಸುತ್ತಿದ್ದ. ಹೊಟ್ಟೆ ಹಸಿವಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ. ನೀನು ಕಾಲೇಜು ಮೆಟ್ಟಿಲೇರಿ ಸರ್ಕಾರಿ ನೌಕರಿ ಹಿಡಿದರೆ ಮುಂದೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಬಹುದು ಎಂಬುದು ಅಣ್ಣನ ವಾದ. ಹಾಗೆ ದಿನ ಕಳೆದು ಕಾಲೇಜಿಗೆ ಹೋಗುವ ಕನಸೂ ಕೈಗೂಡಿತು.

ಊರಿನಲ್ಲಿ ಕುಳುವಾಡಿಕೆ ಜೀವಂತವಾಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಊರಿನ ಕೆಲಸ ಮಾಡಲೇಬೇಕಿತ್ತು. ಮೇಲ್ವರ್ಗದ ಆಣತಿ ಮೀರುವಂತಿರಲಿಲ್ಲ. ಹಬ್ಬ-ಜಾತ್ರೆ ನೆನದು ತಿಂಗಳಿಗೆ ಮೊದಲೇ ಸಂಭ್ರಮಿಸುತ್ತಿದ್ದ ನನಗೆ ಆ ವರ್ಷದ ಜಾತ್ರೆ ಅಸಹ್ಯ ಎನಿಸಿತು. ಏಳು ಹಳ್ಳಿ ಸೇರಿ ಮಾಡುವ ಜಾತ್ರೆಗೆ ನನ್ನೂರಿನಿಂದ ಸಿಂಗರಿಸಿದ ಬಂಡಿಯೊಂದಿಗೆ ಹೋಗಿ ಉಡಸಲಮ್ಮನ ಗುಡಿ ಮುಂದಿನ ಕೆಂಡದ ರಾಶಿಯಲ್ಲಿ ಕಾಲಾಡಿ ಬರುವುದು ಹಿಂದಿನಿಂದ ನಡೆದು ಬಂದಿರುವ ಆಚರಣೆ. ಹೊರಡುವ ಮುನ್ನ ಊರ ಮುಂದಿನ ಗುಡಿಯ ಎದುರು ಬಂಡಿಗೆ ಪೂಜೆ-ಪುನಸ್ಕಾರ ಮಾಡಿ ಹೊರಡಲಾಗುತ್ತದೆ. ಆ ಸಂದರ್ಭದಲ್ಲಿ ಬಂಡಿಗೆ ಹೋತವನ್ನು ಬಲಿಕೊಡುವುದು ಸಂಪ್ರದಾಯ. ಪೂಜೆ-ಪುನಸ್ಕಾರವೆಲ್ಲ ಮೇಲ್ವರ್ಗಕ್ಕೆ ಬಿಟ್ಟದ್ದು. ಹೋತವನ್ನು ಕಡಿಯುವ ಕೆಲಸ ದಲಿತದ್ದು. ಜಾತ್ರೆ ಸಂಭ್ರಮದಲ್ಲಿ ಎಲ್ಲರೂ ತೇಲಿದ್ದರು. ಹೋತ ಬಲಿಯಾಗುವುದನ್ನು ನೋಡಲು ಎಲ್ಲರೂ ಸೇರಿದ್ದರು. ಒಂದೇ ಹೊಡೆತಕ್ಕೆ ಹೋತನ ರುಂಡ-ಮುಂಡ ಬೇರೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಮೇಲ್ವರ್ಗದವರ ಕಾಲು ನನ್ನ ದೊಡ್ಡಪ್ಪ-ಚಿಕ್ಕಪ್ಪಂದಿರ ಎದೆಗೆ ಜಾಡಿಸುತ್ತಿದ್ದವು. ಹಾಗಾಗಿ ಹೋತನ ಕಡಿಯಲು ಎಲ್ಲರಿಗೂ ಹಿಂಜರಿಕೆ ಇತ್ತು. ಆದರೆ ಯಾರದರೊಬ್ಬರು ಕಡಿಯಲೇ ಬೇಕಿತ್ತು. ಎಲ್ಲರೂ ಸೇರಿ ಮೇಲ್ನೋಟಕ್ಕೆ ಬಲಶಾಲಿಯಂತೆ ಕಂಡ ಕರಿಯನಿಗೆ ಆ ಕೆಲಸ ನಿಯೋಜಿಸಿದರು. ಒಲ್ಲದ ಮನಸ್ಸಿನಲ್ಲೆ ಕರಿಯ ಒಪ್ಪಿಕೊಂಡ.

ಪೂಜೆ ಪುನಸ್ಕಾರವೆಲ್ಲ ಮುಗಿದು ಹೋತನನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದರು. ಅಲ್ಲೆ ಇದ್ದ ಕಲ್ಲೊಂದಕ್ಕೆ ಕತ್ತಿ ಮಸೆದು ತಂದ ಕರಿಯ, ಹೋತನ ಮುಂದೆ ಬಂದು ನಿಂತ. ಮಾಂಸಹಾರಿಗಳಲ್ಲದ ಮೇಲ್ವರ್ಗದವರು ಪಂಚೆ ಮೇಲೆತ್ತಿ ಕಟ್ಟಿ ನಿಂತರು. ಕರಿಯನ ಬಲದ ಮೇಲೆ ನಂಬಿಕೆ ಇದ್ದರೂ ಕತ್ತಿಯ ಮೊಣಚು ಸರಿಯಾಗಿ ಕುತ್ತಿಗೆ ತುಂಡು ಮಾಡದಿದ್ದರೆ ಅವನಿಗೆ ಆಗಲಿರುವ ಶಾಸ್ತಿಯನ್ನು ಮನದಲ್ಲೆ ನೆನಪಿಸಿಕೊಂಡ ದಲಿತರು ಜೀವ ಬಿಗಿ ಹಿಡಿದು ನಿಂತಿದ್ದರು. ಮನಸಲ್ಲೇ ಹತ್ತಾರು ದೇವರು ನೆನದ ಕರಿಯ ತನ್ನ ಬಲವನ್ನೆಲ್ಲ ಒಂದು ಮಾಡಿಕೊಂಡು ಹೋತದ ಕುತ್ತಿಗೆಯ ಮೇಲೆ ಏಟು ಕೊಟ್ಟೇಬಿಟ್ಟ. ಮುಂದಿನ ಸಾಲಿನಲ್ಲೆ ನಿಂತಿದ್ದ ನಾನು ಕೂಡ ಒಂದೇ ಏಟಿಗೆ ಕುತ್ತಿಗೆ ತುಂಡಾಗಲಿ ಎಂದು ದೇವರಿಗೆ ಕೈಮುಗಿದು ಕಣ್ಮುಚ್ಚಿಕೊಂಡೆ. ಕಣ್ಬಿಟ್ಟು ನೋಡಿದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಒಂದೇ ಏಟಿಗೆ ಹೋತದ ರುಂಡ-ಮುಂಡ ಬೇರೆಯಾಗಲಿಲ್ಲ. ಅದಕ್ಕೆಂದೆ ಕಾದು ನಿಂತಿದ್ದ ಮೇಲ್ವರ್ಗದ ನಾಲ್ಕೈದು ಮಂದಿ ಕರಿಯನ ಎದೆ ಮತ್ತು ಕುಂಡಿಗೆ ಜಾಡಿಸಿ ಒದೆಯುತ್ತಿದ್ದರು. ಒದೆತಕ್ಕೆ ಸಿಲುಕಿ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದ ಕರಿಯ, ಹೋತದ ರಕ್ತದೊಂದಿಗೆ ಬೆರೆತು ಹೋಗಿದ್ದ. ನಾಲ್ಕೈದು ಮಂದಿ ಒದೆಯುತ್ತಿದ್ದರೂ ತುಂಡಾಗದೆ ಉಳಿದಿದ್ದ ಭಾಗವನ್ನು ಬೇರ್ಪಡಿಸಲು ಹರಸಾಹಸ ಮುಂದುವರಿಸಿದ್ದ. ‘ನನ್ನ ಮಕ್ಳಾ, ಮಂಕ್ರಿ ಬಾಡ್ ತಿಂತೀರಿ ಒಂದೇ ಏಟಿbeaten-to-deathಗೆ ಹೋತನ್ ಕತ್ತು ಕತ್ರಸಕ್ಕೆ ಆಗಲ್ವಾ? ಒದಿರ್ಲಾ.. ಹಾಕ್ಲಾ ಹೊಲಿ ನನ್ ಮಗಂಗೆ’ ಎಂದು ಸುತ್ತ ನಿಂತಿದ್ದ ಮೇಲ್ವರ್ಗದವರು ಒದೆಯುತ್ತಿದ್ದವರಿಗೆ ಪ್ರಚೋದನೆ ನೀಡಿದರು. ಹೇಗೋ ಹೋತನ ತಲೆ ಮತ್ತು ದೇಹ ಬೇರಾದವು. ನಂತರ ಒದೆಯುವುದು ನಿಂತಿತು. ಮೇಲೆದ್ದ ಕರಿಯನ ಮುಖದಲ್ಲಿ ರಕ್ತ ಅಂಟಿಕೊಂಡಿತ್ತು. ಒಂದು ತಿಂಗಳ ಹಿಂದಷ್ಟೆ ಕರಿಯ ಪಕ್ಕದೂರಿನ ಹೆಣ್ಣು ತಂದು ಮದುವೆಯಾಗಿದ್ದ. ಆಕೆ ಸೇರಿದಂತೆ ಅವರ ಸಂಬಂಧಿಕರು ಅಲ್ಲೆ ಇದ್ದರು. ತನ್ನ ಗಂಡನಿಗೆ ಆದ ಅವಮಾನ ತಡೆಯಲಾರದೆ ಅಕೆ ಕಣ್ಣೀರಿಟ್ಟು ಮನೆಯತ್ತ ಓಡಿದಳು. ಎಲ್ಲರೂ ಸಂಭ್ರದಿಂದ ಜಾತ್ರೆಯತ್ತ ಹೆಜ್ಜೆ ಹಾಕಿದರೆ, ಕರಿಯ ಅವಮಾನ ಸಹಿಸಲು ಸಾಧ್ಯವಾಗದೆ ಜಾತ್ರೆ ಕಡೆ ಮುಖ ಮಾಡಲಿಲ್ಲ.

ಈ ರೀತಿ ಅವಮಾನ ನನ್ನವರಿಗೆ ಮಾಮೂಲಾಗಿತ್ತು. ಆದರೆ ಅದೇಕೋ ಕರಿಯನ ಎದೆ ಮೇಲೆ ಕಾಲಿಟ್ಟ ಮೇಲ್ವರ್ಗದ ದಾಷ್ಟ್ಯ ನನ್ನ ಮನಸ್ಸನ್ನೂ ತೀವ್ರವಾಗಿ ಘಾಸಿಗೊಳಿಸಿತು. ಮುಂದಿನ ವರ್ಷ ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದೆ. ದಿನ ಕಳೆದು ಜಾತ್ರೆ ದಿನ ಮತ್ತೊಮ್ಮೆ ಬಂದೆ ಬಿಟ್ಟಿತು. ಆ ದಿನ ಹೋತವನ್ನು ಕಡಿಯಲು ಕರಿಯ ಒಪ್ಪಲಿಲ್ಲ. ದಲಿತರಲ್ಲಿ ಹಿರಿಯರೆಲ್ಲ ಸೇರಿ ಒಬ್ಬರನ್ನು ಆ ಕೆಲಸಕ್ಕೆ ನೇಮಿಸಬೇಕಿತ್ತು. ಮನಸಲ್ಲೆ ಒಂದು ನಿರ್ಣಯ ಕೈಗೊಂಡ ನಾನು, ಕತ್ತಿ ಎತ್ತಿಕೊಂಡೆ. ಆದರೆ ಅದಕ್ಕೆ ಅವ್ವ-ಅಪ್ಪ ಸೇರಿ ಯಾರೊಬ್ಬರೂ ಒಪ್ಪಲಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮೇಲ್ವರ್ಗದವರು ಒದೆಯುವುದನ್ನು ನಾವು ನೋಡಲಾರೆವು ಎಂದರು. ಆದರೆ ಇಲ್ಲ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಬೇಡಿಕೊಂಡೆ. ಆಗಲಿ ಎಂದು ಎಲ್ಲರೂ ಒಪ್ಪಿಕೊಂಡರು.

ಕತ್ತಿ ಮಸೆದು ಹೋತನ ಮುಂದೆ ನಿಂತು ಯಾವ ದೇವರನ್ನು ಬೇಡದೆ ಮನದಲ್ಲೆ ಒಂದು ನಿರ್ಧಾರ ಮಾಡಿಕೊಂಡೆ. ಮೇಲ್ವರ್ಗದವರು ನನ್ನ ಪಕ್ಕಕ್ಕೆ ಬಂದು ನಿಂತು ಪಂಚೆ ಮೇಲೆತ್ತಿ ಕಟ್ಟಿಕೊಂಡರು. ಒಂದೇ ಏಟಿಗೆ ಹೋತ ಬಲಿಯಾಗದಿದ್ದರೆ ಕತ್ತಿಯನ್ನು ನನ್ನ ಮೇಲೆ ಕಾಲೆತ್ತಿದವರತ್ತ ತಿರಿಗಿಸಲು ಮನಸನ್ನು ಸಜ್ಜು ಮಾಡಿಕೊಂಡೆ. ನಂತರ ಆಗುವ ಪರಿಣಾಮ ಗೊತ್ತಿದ್ದರೂ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಕತ್ತಿಯನ್ನು ಮೇಲಿತ್ತಿ ಹೋತನ ಕುತ್ತಿಗೆಗೆ ಕೊಟ್ಟೆ. ಅದ್ಯಾವ ದುರಾದೃಷ್ಟವೋ ಒಂದೇ ಏಟಿಗೆ ರುಂಡ-ಮುಂಡ ಬೇರಾತು. ನಾನು ಮನದಲ್ಲಿ ಮಾಡಿಕೊಂಡಿದ್ದ ನಿರ್ಣಯವನ್ನು ನಂತರ ಪ್ರಕಟಿಸಿದೆ. ನಿಮ್ಮ ದರ್ಪದ ಕಾಲುಗಳನ್ನು ನನ್ನವರ ಮೇಲೆತ್ತಿದರೆ ಕತ್ತಿ ಏಟು ಬೀಳಲಿವೆ ಎಂದು ಹೇಳಿದೆ. ಈಗಲೂ ಹೋತವನ್ನು ಕಡಿದು ಬಂಡಿ ಮುನ್ನಡೆಸುವ ಪದ್ದತಿ ಇದೆ. ಆದರೆ ಅಂದಿನಿಂದ ನನ್ನವರ ಮೇಲೆ ಕಾಲೆತ್ತುವ ದುಸ್ಸಾಹಸ ಮಾಡಿಲ್ಲ.

ಲೋಕಾಯುಕ್ತ ಹಗರಣದಲ್ಲಿ ಪತ್ರಕರ್ತರು

– ಮೋಹನ್‌ರಾಜ್

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪಗಳ ತನಿಖೆಯ ಹಾದಿಯಲ್ಲಿ ಒಬ್ಬ ಮಾಜಿ ಪತ್ರಕರ್ತ ಎಂ.ಬಿ. ಶ್ರೀನಿವಾಸಗೌಡ ಸೇರಿದಂತೆ ಮೂರು-ನಾಲ್ಕು ಮಂದಿಯ ಬಂಧನವಾಗಿದೆ. ಸುದ್ದಿವಾಹಿನಿಗಳು, ಪತ್ರಿಕೆಗಳು ಈ ಬಗ್ಗೆ ವಿವರವಾಗಿ ಸುದ್ದಿ ಬಿತ್ತರಿಸುತ್ತಿವೆ. ಇತ್ತೀಚೆಗಷ್ಟೆ ಆರಂಭವಾಗಿರುವ ಪ್ರಜಾ ಟಿವಿ ಗುರುವಾರ ಸಂಜೆ, ಬಂಧಿತರು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಎದುರು ನೀಡಿರುವ ಹೇಳಿಕೆಗಳು ಎಂಬ lokayukta_karnatakaತಲೆಬರಹದಡಿಯಲ್ಲಿ ಕೆಲ ಟಿಪ್ಪಣಿಗಳನ್ನು ಉಲ್ಲೇಖಿಸಿತು. ಶ್ರೀನಿವಾಸಗೌಡನ ಹೇಳಿಕೆ ಎಂದು ತೋರಿಸಿದ ಟಿಪ್ಪಣಿಯಲ್ಲಿ ಒಂದು ವಿಶೇಷವಾದ ಸಾಲಿತ್ತು. “ಕಚೇರಿಯಲ್ಲಿ ನನ್ ಮೇಲಿನವರು ಸೂಚನೆ ಮೇರೆಗೆ ಕೆಲ ಅಕ್ರಮಗಳ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಹಾಕಿದ್ದೆ. ಬಂದ ಉತ್ತರಗಳಲ್ಲಿ ಕೆಲವು ಸುದ್ದಿಯಾದವು, ಮತ್ತೊಂದಿಷ್ಟು ಜಾಹಿರಾತಿನ ರೂಪದಲ್ಲಿ ಕಂಪನಿಗೆ ಲಾಭವಾಯಿತು” (ಚಾನೆಲ್ ತೋರಿಸಿದ ಟಿಪ್ಪಣಿಯನ್ನು ನೆನಪಿನ ಆಧಾರದ ಮೇಲೆ ದಾಖಲಿಸಿದ್ದೇನೆ. ಪದಗಳು ಅಲ್ಲಲ್ಲಿ ಬದಲಾಗಿರಬಹುದು, ಆದರೆ ಅರ್ಥ ಅದೇ). ಶ್ರೀನಿವಾಸಗೌಡ ಮಾಡಿರಬಹುದಾದ (??) ಅಪರಾಧ ಕೃತ್ಯಗಳಲ್ಲಿ ಅವನ ಹಿರಿಯ ಸಹೋದ್ಯೋಗಿಗಳದು ಹಾಗೂ ಅವರನ್ನು ನೇಮಕಮಾಡಿಕೊಂಡಿರುವ ಕಂಪನಿಯದೂ ಪಾತ್ರವಿದೆ ಎಂದು ಈ ಮಾತು ಸ್ಪಷ್ಟವಾಗಿ ಹೇಳುತ್ತದೆ.

ಮಾಧ್ಯಮ ಸಂಸ್ಥೆಗಳು ಪ್ಯಾಕೇಜ್ ಸಂಸ್ಕೃತಿಗೆ ತೆರೆದುಕೊಂಡು ತುಂಬಾ ದಿನಗಳೇ ಆಗಿದ್ದವು. ಸಿನಿಮಾ ಪ್ರಮೋಷನ್, ರಾಜಕೀಯ ಕಾರ್ಯಕ್ರಮಗಳು.. ಇತರೆ ಸುದ್ದಿಗಳು ಪ್ಯಾಕೇಜ್ ರೂಪದಲ್ಲಿ ಬಿತ್ತರಗೊಳ್ಳುವುದು ಗೊತ್ತಿರುವ ಸಂಗತಿ. ಚುನಾವಣೆ ಸಮಯದಲ್ಲಿ ಸಂಸ್ಥೆಗಳೇ ಪೇಯ್ಡ್ ನ್ಯೂಸ್ ಪ್ರಕಟಿಸಿ ದುಡ್ಡು ಮಾಡಿಕೊಳ್ಳುವುದೂ ಗೊತ್ತು. ಇಲ್ಲಿ, ಈ ಪ್ರಸ್ತುತ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋದಂತಿದೆ. ಮೊದ ಮೊದಲು, ಕೆಲ ಪತ್ರಕರ್ತರು ಆರ್.ಟಿ.ಐ ಅಡಿ ದಾಖಲೆ ಪಡೆದು ಬ್ಲಾಕ್ ಮೇಲ್ ಮಾಡಿ ಹಣ ಮಾಡುತ್ತಾರೆelection-paid-news ಎಂಬ ಮಾತು ಕೇಳಿ ಬರುತ್ತಿತ್ತು. ಈ ‘ಅವಕಾಶ’ ವನ್ನು ಪತ್ರಕರ್ತರಿಂದ ಕಸಿದು ಕಂಪನಿಯೇ ಮಾಡುವಂತಾದರೆ, ಆ ಮೂಲಕವೂ ಸಂಸ್ಥೆಗೆ ಆದಾಯ ಬರುತ್ತದೆ ಎಂಬ ಆಲೋಚನೆ ಈ ಸಂಸ್ಥೆಗೆ ಬಹಳ ಹಿಂದೆಯೇ ಬಂದಂತಿದೆ.

ಪೇಯ್ಡ್ ನ್ಯೂಸ್ ಎಂಬ ಭ್ರಷ್ಟ ಚಟುವಟಿಕೆ ಹುಸಿ ಅಧಿಕೃತತೆಯನ್ನು ಪಡೆದದ್ದೂ ಹೀಗೆ. ಪತ್ರಕರ್ತರು ದುಡ್ಡು ಪಡೆದು ಸುದ್ದಿ ಮಾಡ್ತಾರೆ ಎಂಬ ಆರೋಪಗಳು ಇದ್ದ ಕಾಲದಲ್ಲಿ, ಮಾರ್ಕೆಟಿಂಗ್ ವಿಭಾಗದವರಿಗೆ ಬಂದ ಐಡಿಯಾವೇ ಪೇಯ್ಡ್ ನ್ಜೂಸ್. ಈಗ – ಆರ್.ಟಿ.ಐ ಅಡಿ ದಾಖಲೆ ಪಡೆಯಿರಿ, ಹೆದರಿಸಿ, ಬೆದರಿಸಿ ಸುದ್ದಿ ಮಾಡಿ. ಅಂತಹ ಕೆಲಸ ಮಾಡಲೆಂದೇ ಸಿಬ್ಬಂದಿ ನೇಮಿಸಿಕೊಳ್ಳಿ. ಅವರಿಗೆ ಒಳ್ಳೆಯ ಸಂಬಳ ಕೊಡಿ. ಹಾಗೂ, ಹೀಗೂ, ಅವರೇನಾದ್ರೂ ಇಂತಹದೇ ಚಟುವಟಿಕೆಗಳಿಂದ ಸ್ವಂತಕ್ಕೆ ದುಡ್ಡು ಮಾಡಿಕೊಳ್ಳುತ್ತಿದ್ದರೆ, ಕಣ್ಣು ಮುಚ್ಚಿಕೊಂಡು ಸುಮ್ಮನಿರಿ, ಆದರೆ ಕಂಪನಿಗೆ ಸಂದಾಯವಾಗುವುದನ್ನು ಮುಲಾಜಿಲ್ಲದೆ ಪಡೆಯಿರಿ ಎಂಬ ಸಂದೇಶ ಕಂಪನಿ ನಡೆಸುವವರಿಂದಲೂ ಬಂದಿರಬಹುದಲ್ವಾ?

ಶ್ರೀನಿವಾಸಗೌಡ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಈ ಹಿಂದೆ ಹಾಸನ, ಬೆಂಗಳೂರು, ನವದೆಹಲಿಗಳಲ್ಲಿ ಕೆಲಸ ಮಾಡಿದ್ದಾನೆ. ಪತ್ರಿಕೋದ್ಯಮದ ತನ್ನ ಅನುಭವಗಳನ್ನು ಕುರಿತಂತೆ ಮೀಡಿಯಾ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಅನೇಕ ಉತ್ಸಾಹಿ ತರುಣ ಪತ್ರಕರ್ತರಂತೆ, ಭ್ರಷ್ಟರನ್ನು ಕಂಡು ಕ್ರುದ್ಧನಾಗಿದ್ದಾನೆ, ಅವರ ವಿರುದ್ಧ ಸುದ್ದಿ ಮಾಡಿದ್ದಾನೆ. ಅವನ ಪುಸ್ತಕದಲ್ಲಿನ ಕೆಲವು ಬರಹಗಳು ಅವನ ಈ ವ್ಯಕ್ತಿತ್ವವನ್ನು ತೆರೆದಿಡುತ್ತವೆ. ಬಹುಶಹ ಅಂತಹದೇ ಕಾರಣಕ್ಕೆ ಸುದ್ದಿವಾಹಿನಿಯೊಂದು ದೆಹಲಿಯಂತಹ ಊರಿಗೆ ವರ್ಗಮಾಡಿ ಕೆಲಸ ಮಾಡಿಸಿಕೊಳ್ಳುತ್ತೆ. ಆದರೆ ನಂತರ ಅವನ ದಿಕ್ಕು ಬದಲಾದಂತೆ ಕಾಣುತ್ತದೆ. ಮಾಧ್ಯಮವಲಯದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಆತ ಈ ಹಿಂದೆ ಒಬ್ಬ ಮಾಜಿ ಮಂತ್ರಿಯೊಬ್ಬರ ಪಾಲುದಾರಿಕೆಯಲ್ಲಿದ್ದ ಸುದ್ದಿವಾಹಿನಿಯೊಂದಕ್ಕೆ ಕೆಲಕಾಲ ಕೆಲಸ ಮಾಡಿದ. ಮಾಲೀಕರಲ್ಲಿ ಒಬ್ಬರಾದ ಮಂತ್ರಿಯ ಮೇಲೆ ಆರೋಪಗಳು ಕೇಳಿ ಬಂದಾಗ, ಆ ಬಗ್ಗೆ ಸುದ್ದಿ ಮಾಡುತ್ತಿದ್ದ ಪತ್ರಿಕೆಗಳಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ಅವರಿಗೆ ಮಂತ್ರಿಯ ಹೇಳಿಕೆಗಳನ್ನು ತಲುಪಿಸುವ ಕೆಲಸ ಮಾಡಿದ್ದೂ ಉಂಟು. ಒಲ್ಲದ ಮನಸ್ಸಿನಿಂದಲೇ, ಮಾಲೀಕರ ಮಾತಿಗೆ ಮಣೆ ಹಾಕುತ್ತಿದ್ದ. ಆದರೆ ಆ ಹೊತ್ತಿಗಾಗಲೇ ಸುದ್ದಿಯ ಜಾಡು ಹಿಡಿಯಬೇಕಾದ ಪತ್ರಕರ್ತನ ಅಭ್ಯಾಸ ಬಿಟ್ಟವನಂತೆ ಕಾಣುತ್ತಿದ್ದ. ಉತ್ತರ ಪ್ರದೇಶದ ನಾಯಕಿ ಮಾಯಾವತಿಯನ್ನು ಸಂಸತ್ ನಲ್ಲಿ ಪಕ್ಕ ಕೂರಿಸಿಕೊಳ್ಳಲು ಆಕೆ ಬಾಡಿ ಸ್ಪ್ರೇ ಹಾಕುವುದಿಲ್ಲ ಎಂದು ದೂರುತ್ತಿದ್ದ ಮೇಲ್ಜಾತಿಯ ರಾಜಕಾರಣಿಗಳ ಬಗ್ಗೆ ತನ್ನ ಸಿಟ್ಟನ್ನು ದಾಖಲಿಸುತ್ತಿದ್ದ ಶ್ರೀನಿವಾಸಗೌಡ, ತನ್ನ ಬೆವರಿನ ಶ್ರಮದ ಹೊರತಾಗಿ ಗಳಿಸುವುದೆಲ್ಲವೂ ಅಮೇಧ್ಯ ಎಂಬುದನ್ನು ಮರೆಯಲಾರಂಭಿಸಿದ್ದೂ ಆಗಲೇ ಇರಬೇಕು.

ಸುವರ್ಣ ಸುದ್ದಿ ವಾಹಿನಿ ಗುರುವಾರ ‘ಪತ್ರಕರ್ತ ದೊಡ್ಡವನಲ್ಲ’ ಎಂಬ ಹೆಸರಿನಡಿ ಚರ್ಚೆ ನಡೆಸಿತು. ಟಿ.ಕೆ.ತ್ಯಾಗರಾಜ್,kannada-news-channels ಡಿ.ವಿ.ರಾಜಶೇಖರ್, ದಿನೇಶ್ ಅಮಿನ್ ಮಟ್ಟು ಹಾಗೂ ವಾಹಿನಿಯ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಚರ್ಚೆ ನಡೆಸಿದರು. ದಿನೇಶ್ ಒಂದು ಮಾತು ಹೇಳಿದರು, ’ದುಡ್ಡು ಮಾಡುವ ಉದ್ದೇಶ ಇದ್ದರೆ, ಈ ಕ್ಷೇತ್ರಕ್ಕೆ ಬರಬೇಡಿ. ಇಲ್ಲಿ ದುಡ್ಡಿಲ್ಲ. ಬೇಕಾದರೆ ಯಾವುದಾದರೂ ಬುಸಿನೆಸ್ ಮಾಡಿ, ಅಲ್ಲಿ ನಿಮಗೆ ಹೆಚ್ಚು ದುಡ್ಡು ಮಾಡಲು ಸಾಧ್ಯವಾಗಬಹುದು. ಇಲ್ಲಿ, ದುಡ್ಡು ಮಾಡುವುದಿರಲಿ, ಸಂಜೆಗಳೇ ನಿಮ್ಮ ದಿನಚರಿಯಿಂದ ಮಾಯವಾಗಿರುತ್ತವೆ.’ ಬಹುಶಃ ಇಂತಹ ಹಿರಿಯರ ಮಾತು ಕೇಳಿಯೇ ಅನ್ನಿಸುತ್ತೆ, ಶ್ರೀನಿವಾಸಗೌಡ ತನ್ನ ಗೆಳೆಯರ ಜೊತೆ ಸೇರಿ ಬಿರಿಯಾನಿ ಅಡ್ಡಾ ಎಂಬ ಹೋಟೆಲ್ ಮಾಡಿದ್ದು. ರುಚಿಕಟ್ಟಾದ ಬಿರಿಯಾನಿ ಮಾಡಿಕೊಟ್ಟರೆ, ಉಂಡವರು ಕಾಸು ಕೊಡ್ತಾರೆ. ಅದು ಪಕ್ಕಾ ಬ್ಯುಸಿನೆಸ್. ನಿಯತ್ತಾಗಿ ಹಣ ಗಳಿಸಬಹುದು.

ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಟಿವಿ ಮಾಧ್ಯಮಕ್ಕೆ ಹಿಂತಿರುಗಿದ. ಮೇಲಾಗಿ, ಸುದ್ದಿವಾಹಿನಿ ಬಿತ್ತರಿಸಿದ ಹೇಳಿಕೆ ನಿಜವೇ ಆಗಿದ್ದಲ್ಲಿ, ಕೆಲಸ ಕೊಟ್ಟ ಕಂಪನಿ, ಬಾಸ್ ಗಳು ಆರ್.ಟಿ.ಐ ಅಡಿ ಅರ್ಜಿ ಹಾಕಲು ಹೇಳಿದರು! ಒಬ್ಬ ವ್ಯಕ್ತಿ ಭ್ರಷ್ಟನಾಗುತ್ತಾನೆಂದರೆ, ಅವನ ತಪ್ಪುಗಳಲ್ಲಿ ಅವನ ಸುತ್ತಲಿನವರು ಪ್ರಚೋದಿಸದೇ ಇರಬಹುದು. ಆದರೆ ಎಚ್ಚರಿಸದೇ ಇರುವುದೂ ತಪ್ಪಲ್ಲವೇ?

ಇತರೆ ಭ್ರಷ್ಟರು:
ಪತ್ರಕರ್ತರ ಮಧ್ಯೆ ಇರುವ ಭ್ರಷ್ಟರ ಬಗ್ಗೆ ಚರ್ಚೆ ಇದು ಮೊದಲಲ್ಲ. ಕೆಲ ತಿಂಗಳುಗಳ ಹಿಂದಷ್ಟೆ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಮಾಧ್ಯಮದವರ ಮುಂದೆ ಆನ್ ರೆಕಾರ್ಡ್ ಹೇಳಿದ್ದ ಮಾತು ನೆನಪಿಗೆ ಬರುತ್ತೆ. “ಒಬ್ಬ “ಸಂಪಾದಕರು” (ಕುಮಾರಸ್ವಾಮಿ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರು) ನನ್ನ ಬಳಿ ಬಂದು ಮೈನಿಂಗ್ ಮಾಡಲು 500 ಎಕರೆಯಷ್ಟು ಜಮೀನು ಮಾಡಿಕೊಡಿ ಎಂದು ಕೇಳಿದ್ದರು” ಎಂದು ಹೇಳಿದ್ದರು.Deccan Herald - Mining Payments ಆ ಬಗ್ಗೆ ಚರ್ಚೆಯಾಗಲೇ ಇಲ್ಲ. ಎರಡು ಮೂರು ವರ್ಷಗಳ ಹಿಂದೆ ಕಬ್ಬಿಣದ ಅದಿರು ಹಗರಣದ ರೂವಾರಿಗಳಿಂದ ಅನೇಕರಿಗೆ ಹಣ ಸಂದಾಯವಾದ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬಂದಾಗಲೂ, ಕೆಲ ಹೆಸರುಗಳು ಬಹಿರಂಗವಾಗಿದ್ದವು. ಆ ಮಾಹಿತಿ ಕೂಡಾ ಲೋಕಾಯುಕ್ತರ ಕಡತಗಳಲ್ಲಿದೆ. ಅವೆಲ್ಲವೂ ಎಂದೋ ಬಹಿರಂಗವಾಗಬೇಕಿತ್ತು ಮತ್ತು ಚರ್ಚೆಯಾಗಬೇಕಿತ್ತು. ಆದರೆ, ಕೆಲವರು ಅಂತಹವರ ಬಗ್ಗೆ ಹಾಡುಕಟ್ಟಿಕೊಂಡು ಭಜನೆಗೆ ಇಳಿದಿದ್ದಾರೆ. ತಪ್ಪು-ಸರಿಗಳ ವ್ಯತ್ಯಾಸ ಗೊತ್ತಿಲ್ಲದವರಿಂದ ಪತ್ರಿಕೋದ್ಯಮಕ್ಕೆ ಏನೂ ಲಾಭ ಇಲ್ಲ; ನಷ್ಟವೇ ಎಲ್ಲ.

ಅನ್ನ ಹಾಕಿದ ‘ತಪ್ಪಿ’ಗೆ ದಂಡ ಕಟ್ಟಿದವರು!

– ಜೀವಿ

ಅದೊಂದು ಪುಟ್ಟ ಗ್ರಾಮ. 350 ಕುಟುಂಬ ವಾಸವಿರುವ ಹಳ್ಳಿ. ಅದರಲ್ಲಿ 25 ಕುಟುಂಬ ದಲಿತರದ್ದು, ಉಳಿದವರು ಮೇಲ್ಜಾತಿಯವರು. ದಲಿತರಿಗೆ ಊರಿನ ದೇಗುಲ ಮತ್ತು ಮೇಲ್ಜಾತಿಯವರ ಮನೆಗಳಿಗೆ ಪ್ರವೇಶ ನಿಷೇಧ ಇದ್ದೇ ಇತ್ತು. ಪಾತ್ರೆ-ಪಗಡೆ ಮುಟ್ಟುವಂತಿರಲಿಲ್ಲ. ಮೇಲ್ಜಾತಿಯವರು ಬಳಸುತ್ತಿದ್ದ ಬಾವಿ ನೀರು ಕೂಡ ದಲಿತರ ಬಾಯಾರಿಕೆ ನೀಗಿಸುತ್ತಿರಲಿಲ್ಲ. ದಲಿತ ಕೇರಿಯ ದೇವರಾಜ ಎಸ್‌ಎಸ್‌ಎಲ್‌ಸಿಯನ್ನು ಎರಡು-ಮೂರು ಕಂತಿನಲ್ಲಿ ಪಾಸು ಮಾಡಿದ್ದ. ಕೇರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಏರಿದ್ದ ಕೀರ್ತಿ ಅವನದಾಗಿತ್ತು. ಪಟ್ಟಣಕ್ಕೆ ಒಟ್ಟಾಗಿ ಕಾಲೇಜಿಗೆ ಹೋಗುತ್ತಿದ್ದ ಕಾರಣ ಅದೇ dalit_pantherಊರಿನ ಮೇಲ್ವರ್ಗದ ಪುಟ್ಟನಂಜ, ದೊರೆ ಮತ್ತು ಶನೇಶ ಜೊತೆ ಸ್ನೇಹ ಬೆಳೆದಿತ್ತು. ಊರಿನಲ್ಲಿ ಅಸ್ಪಶ್ಯತೆ ಆಚರಣೆ ಇದ್ದರೂ ಅದನ್ನೂ ಮೀರಿ ಈ ಮೂವರ ಸ್ನೇಹ ಬೆಳೆದಿತ್ತು. ಪುಟ್ಟನಂಜ, ದೊರೆ ಮತ್ತು ಶನೇಶ ದಲಿತ ಯುವಕ ದೇವರಾಜನ ಮನೆಗೆ ಆಗಾಗ ಬಂದು ಹೋಗುವುದು ಸಾಮಾನ್ಯವಾಗಿತ್ತು.

ಅದೊಂದು ದಿನ ದಲಿತ ಕೇರಿಯಲ್ಲ್ಲಿ ಸಂಭ್ರಮ ಮನೆ ಮಾಡಿತ್ತು. ಗುಂಡಯ್ಯನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಸಂಭ್ರಮ ದಲಿತ ಕೇರಿಯ 25 ಮನೆಯಲ್ಲೂ ಪಾಲು ಪಡೆದಿತ್ತು. ಮಗು ಹುಟ್ಟಿದ ಜಾತಕ ಫಲ ತಿಳಿದು ಅದಕ್ಕೊಂದು ಹೆಸರಿಡಲು ನಿರ್ಧರಿಸಿದ ಗುಂಡಯ್ಯ, ಮರುದಿನ ಹೊತ್ತು ಮೂಡುವ ಮುನ್ನ ಪಕ್ಕದೂರಿನ ಅಯ್ನರ್ ಮನೆ ಬಾಗಿಲಲ್ಲಿ ಕುಳಿತ. ಮಗು ಹುಟ್ಟಿದ ದಿನ, ಗಳಿಗೆ ಎಲ್ಲವನ್ನು ನೋಡಿದ ಅಯ್ನರು ಶನಿವಾರ ದಿನದಂದು ಮಗುವಿಗೆ ರೂಪ ಅಂತ ಹೆಸರಿಡಲು ಆಜ್ಞೆ ಮಾಡಿದರು.

ಮುಂದಿನ ಶನಿವಾರ ಬಂದೇ ಬಿಟ್ಟಿತು, ಹೊತ್ತು ಇಳಿಯಲು ಆರಂಭಿಸುತ್ತಿದ್ದಂತೆ ಮನೆಯ ಮುಂದೆ ಒಲೆ ಹಾಕಿ ಅಡುಗೆ ತಯಾರಿಯಲ್ಲಿ ಗಂಡಸರು ತೊಡಗಿದರು. ಮಹಿಳೆಯರು ಮಕ್ಕಳು ಗುಂಡಯ್ಯನ ಮನೆ ಸೇರಿದರು. ಸೋಬಾನೆ ಪದಗಳು ಸಾಲು ಕಟ್ಟಿ ಬಂದವು. ಕಂಚಿನ ತಟ್ಟೆಯಲ್ಲಿದ್ದ ಸೇರು ಬೆಣ್ಣೆ ಉಂಡೆ ಮಗುವಿನ ಮೂತಿ ಸೇರುತ್ತಿತ್ತು. ಅದು ಖಾಲಿ ಆಗುವ ಹೊತ್ತಿಗೆ ಮಗುವಿನ ಮುಖದ ರೂಪ ಬದಲಾಗಿತ್ತು. ಆದರೆ ರೂಪ ಎಂಬ ಹೆಸರು ನಾಮಕರಣಗೊಂಡಿತ್ತು. ಕೇರಿಯಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಿದ್ದ ದೇವರಾಜನ ಮನೆಯಲ್ಲಿ ಎಲ್ಲರು ಊಟಕ್ಕೆ ಕುಳಿತರು. ಹೆಂಗಸು-ಮಕ್ಕಳ ಊಟ ಮುಗಿದು ಕೊನೆಯದಾಗಿ ಊರಿನ ಹಿರಿಯರು, ಯುವಕರು ಊಟಕ್ಕೆ ಕುಳಿತರು.

ಅಷ್ಟೊತ್ತಿಗೆ ಅಲ್ಲಿಗೆ ಪುಟ್ಟನಂಜ, ದೊರೆ ಮತ್ತು ಶನೇಶ ಬಂದರು. ಆಗಾಗ ದೇವರಾಜನ ಮನೆಗೆ ಮೂವರು ಸ್ನೇಹಿತರು ಬಂದು ಹೋಗುತ್ತಿದ್ದರಿಂದ ಅದರಲ್ಲಿ ವಿಶೇಷ ಏನು ಇರಲಿಲ್ಲ. ಊಟದ ಸಮಯಕ್ಕೆ ಬಂದ ಕಾರಣಕ್ಕೆ ಬನ್ನಿ ಗೌಡ್ರೆ ಊಟ ಮಾಡಿ ಎಂದು ಸೌಜನ್ಯಕ್ಕೆ ಕೆಲವರು ಯುವಕರು ಕರೆದರು. ಹೊಲೆರ ಮನೆಲಿ ಅವರು ಊಟ ಮಾಡಕಿಲ್ಲ, ಸುಮ್ನೆ ಊಟ ಮಾಡಿ ಎಂದು ಹಿರಿಯರು ಗಧರಿಸಿದರು.

ಮೇಲ್ಜಾತಿಯ ಮೂವರು ಕಾಲೇಜು ಮೆಟ್ಟಿಲೇರಿದ್ದರಿಂದ ಒಂದಿಷ್ಟು ತಿಳುವಳಿಕೆ ಉಳ್ಳವರಂತೆ ಮಾತನಾಡಿ, ಊಟ ಮಾಡಿದರೆ ತಪ್ಪೇನು ಇಲ್ಲ, ನೀವು ಬಡಿಸಿದರೆ ಊಟ ಮಾಡಲು ನಾವು ಸಿದ್ದ ಎಂದರು. ಅವರೇ ಊಟ ಮಾಡ್ತೀವಿ ಅಂದ್ಮೇಲೆ ನಮ್ದೇನು ತಕರಾರು ಎಂದುಕೊಂಡು ಬನ್ನಿ ಸ್ವಾಮಿ ಎಂದು ಕೈನೀರು ಕೊಟ್ಟು ಊಟ ಬಡಿಸೇ ಬಿಟ್ಟರು. ದೇವರಾಜನನ್ನು ನೋಡಲು ಬಂದ ಮೂವರು ಮೇಲ್ಜಾತಿ ದಲಿತ ಕೇರಿಯ ಮನೇಲಿ ಮೊದಲ ಬಾರಿಗೆ ಊಟ ಮಾಡಿ ತಮ್ಮ ಮನೆ ಸೇರಿಕೊಂಡರು. ಈ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ದಲಿತರು ತಮ್ಮಷ್ಟಕ್ಕೆ ತಾವು ಸುಮ್ಮನಾದರು.

ದಲಿತ ಕೇರಿಯ ಲಕ್ಕಜ್ಜನ ಮಗ ಸ್ವಾಮಿಗೆ ಆಗಿನ್ನು ಮೀಸೆ ಚಿಗುರುತ್ತಿದ್ದ ಕಾಲ. ಅಂಗನವಾಡಿಯಲ್ಲೆ ಓದು ನಿಲ್ಲಿಸಿದ್ದ ಸ್ವಾಮಿ, ಗೌಡರ ಮನೆ dalit_panther2ಜೀತಕ್ಕೆ ಸೇರಿ ಸದ್ಯ ಮುಕ್ತಿ ಹೊಂದಿ ಕೂಲಿ ಕೆಲಸ ಮಾಡಿಕೊಂಡಿದ್ದ. ಏತ ನೀರಾವರಿ ಯೋಜನೆಯ ಕಾಲುವೆ ತೆಗೆಯುವ ಕೆಲಸ ಊರಿನ ಜನರ ಕೂಲಿಗೆ ಆಧಾರವಾಗಿತ್ತು. ಕೆಲಸಕ್ಕೆ ರಜೆ ಇದ್ದ ವೇಳೆ ಮೇಲ್ಜಾತಿಯ ಡೊಳ್ಳಪ್ಪನ ಜೊತೆ ಕುರಿ ಮೇಯಿಸಲು ಬೆಟ್ಟಕ್ಕೆ ಹೋಗುತ್ತಿದ್ದ. ನಾಮಕರಣ ಕಾರ್ಯ ಮುಗಿದು ಮೂರ‌್ನಾಲ್ಕು ದಿನ ಕಳೆದಿತ್ತು. ಬೆಟ್ಟದಲ್ಲಿ ಕುರಿಗಳ ಜೊತೆ ಸುತ್ತಾಡಿ ಬಳಲಿದ್ದ ಸ್ವಾಮಿ, ಡೊಳ್ಳಪ್ಪನ ಟಿಫನ್ ಬಾಕ್ಸ್‌ನಲ್ಲಿ ತಂದಿದ್ದ ನೀರು ಕೇಳಿದ.

ಟಿಫನ್ ಬಾಕ್ಸ್‌ನಲ್ಲಿ ಮೊದಲೇ ನೀರು ಕಡಿಮೆ ಇತ್ತು. ಬಾಕ್ಸ್ ಓಪನ್ ಮಾಡಿದ ಡೊಳ್ಳಪ್ಪ ಎರಡೂ ಕೈ ಹಿಡಿ ಎಂದ, ಬಾಕ್ಸ್ ಸ್ವಾಮಿ ದೇಹಕ್ಕೆ ಸೋಕದಂತೆ ಮೇಲಿಂದಲೇ ನೀರನ್ನು ಕೈಗೆ ಹನಿಕಿಸಿದ. ಅದರಲ್ಲಿ ಸ್ವಲ್ಪ ಕೆಳಕ್ಕೆ ಬಿದ್ದು ಒಂದೆರಡು ತೊಟ್ಟನ್ನು ಮಾತ್ರ ಸ್ವಾಮಿ ನಾಲಿಗೆ ಹೀರಿ ಕೊಂಡಿತು. ಬಾಯಾರಿ ಬೆಂಡಾಗಿದ್ದ ಸ್ವಾಮಿ, ನನ್ನ ಕೈಗೆ ಬಾಕ್ಸ್ ಕೊಟ್ಟಿದ್ದರೆ ಒಂದೆರಡು ಗುಟುಕು ನೀರಾದರೂ ಕುಡಿಯುತ್ತಿದ್ದೆ ಎಂದ. ಡೊಳ್ಳಪ್ಪನ ಕೋಪ ನೆತ್ತಿಗೇರಿತು ಓ..ಹೋ.. ನಿಮ್ದು ಜಾಸ್ತಿ ಆಯ್ತು, ಯಾಕೆ,,,? ಮನೆಗೆ ಬಂದ್ಬಿಡು, ಒಳಗ್ ಕರೆದು ಹಿಟ್ ಇಕ್ತೀನಿ. ನನ್ನ ಮಕ್ಳಾ ಜಾಸ್ತಿ ಆಯ್ತು ನಿಮ್ದು ಎಂದು ಸಿಡಿಮಿಡಿಗೊಂಡ.

ಅಯ್ಯ ಶಿವನೆ ನೀರ್ ಕೇಳಿದ್ದಕ್ಕೆ ಇಷ್ಟ್ಯಾಕ್ ಸಿಟ್ಟಾಗ್ತಿ ರಾಜಣ್ಣ, ಬಾಕ್ಸ್ ಮುಟ್ಟಿದ್ರೆ ಏನಾಪ್ಪ ಆಯ್ತದೆ. ಮೊನ್ನ ನಮ್ ಗುಂಡಯ್ಯನ ಮನೆ ನಾಮಕರಣದಲ್ಲಿ ಪುಟ್ನಂಜ, ಶನೇಶ ಊಟನೇ ಮಾಡಿದ್ರು. ಅವರಿಗೇನಾಗಿದೆ? ಚೆನ್ನಾಗೇ ಅವ್ರೆ ಎಂದ ಸ್ವಾಮಿ.

ಎಲ್ಲೋ ಕುರಿಮಂದೆ ಕಡೆ ಗಮನ ಇಟ್ಟಿದ್ದ ಡೊಳ್ಳಪ್ಪ, ಒಮ್ಮೆಲೆ ತಿರುಗಿ ಏನು!? ಪುಟ್ನಂಜ ಗುಂಡನ ಮನೆ ಕಾರ್ಯದಲ್ಲಿ ಊಟ ಮಾಡಿದ್ನಾ? ಎಂದು ಗಂಭೀರವಾಗಿ ಕೇಳಿದ. ಪಿಸುಮಾತಿನಲ್ಲಿ ಸ್ವಾಮಿಯನ್ನು ಹತ್ತಿರಕ್ಕೆ ಕರೆದು ಅಂದು ನಡೆದ ಊಟದ ಪ್ರಸಂಗವನ್ನು ಕೇಳಿಕೊಂಡ. ಇದರಿಂದಾಗುವ ಅನಾಹುತ ಅರಿಯದ ಸ್ವಾಮಿ ಎಲ್ಲವನ್ನು ಕಡ್ಡಿಲಿ ಬರೆದಂತೆ ಹೇಳಿಬಿಟ್ಟ.

ಸಂಜೆ ಕುರಿಗಳನ್ನು ಕೊಟ್ಟಿಗೆಗೆ ಮುಟ್ಟಿಸಿ ಊರ ಮುಂದಿನ ಬಸವಣ್ಣನ ಗುಡಿ ಮುಂದೆ ಡೊಳ್ಳಪ್ಪ ಬಂದು ಕುಳಿತ. ಅಲ್ಲಿ ಕುಳಿತಿದ್ದ ಊರಿನ ಒಂದಿಬ್ಬರು ಹಿರಿಯರ ಕಿವಿಗೆ ಹೊಲೆರ ಮನೆಲಿ ಮೇಲ್ಜಾತಿಯ ಹುಡುಗರು ಊಟ ಮಾಡಿದ ವಿಷಯವನ್ನು ಊದಿದ. ನಾಳೆ ಬೆಳಕು ಹರಿದು ಸೂರ್ಯ ಮುಳುಗುವ ಹೊತ್ತಿಗೆ ಊರಿನ ಎಲ್ಲ ಮೇಲ್ಜಾತಿಯವರ ಕಿವಿಗೂ ವಿಷಯ ಬಿತ್ತು.

ಮರುದಿನ ರಾತ್ರಿ ಬಸವಣ್ಣನ ಗುಡಿ ಮುಂದೆ ಪಂಚಾಯ್ತಿ ಸೇರಿಕೊಂಡಿತು. ಕರೀರ‌್ಲಾ ಹೊಲಿ ನನ್ನ ಮಕ್ಕಳ್ನಾ ಎಂದು ಹುಕ್ಕುಂ ಕೂಡ ಆಯಿತು. ಅಷ್ಟೊತ್ತಿಗಾಗಲೇ ಊಟದ ವಿಷಯ ಎಲ್ಲರಿಗೂ ಗೊತ್ತಾಗಿ ಕೆಂಡ ಕಾರುತ್ತಿರುವ ವಿಷಯ ದಲಿತರಿಗೂ ತಿಳಿದಿತ್ತು. ರಾತ್ರಿ ಪಂಚಾಯ್ತಿ ಇರುವ ವಿಷಯ ತಿಳಿದು ಕೆಲವರು ಊರು ಖಾಲಿ ಮಾಡುವ ಮಾತನಾಡಿದ್ದರು. ಆದರೆ ಎಲ್ಲೇ ಹೋದರೂ ನಾಳೆ ಊರಿಗೆ ಬರಲೇಬೇಕು. ಬಂದ ನಂತರವೂ ಇವರು ಬಿಡುವ ಜನ ಅಲ್ಲ ಎಂದು ಧೈರ್ಯ ಮಾಡಿ ಪಂಚಾಯ್ತಿ ಮುಂದೆ ಹಾಜರಾದರು.

ಪಂಚಾಯ್ತಿ ಹಿರಿಯ ಕರಿಗೌಡ, ರಂಗಪ್ಪಣ್ಣ ಸೇರಿದಂತೆ ಎಲ್ಲರೂ ಜಮಾಯಿಸಿದ್ದರು. ಅಪರಾಧಿ ಸ್ಥಾನದಲ್ಲಿ ದಲಿತರು ಕೂಡ ಕೈಕಟ್ಟಿ ನಿಂತಿದ್ದರು. ಕರೀರ‌್ಲಾ ಆ ಗುಂಡನ್ನ ಎಂದು ಕರೀಗೌಡ ಆಜ್ಞೆ ಮಾಡಿದ. ಎಲ್ಲೋ ಮರೆಯಲ್ಲಿ ನಿಂತಿದ್ದ ಗುಂಡಯ್ಯ ನಿಂತಲ್ಲೇ ಗೌಡ್ರೇ ಇಲ್ಲೇ ಇದ್ದೀನಿ ಎಂದು ಮೆಲು ಧ್ವನಿಯಲ್ಲಿ ಹೇಳಿದ. ಅಲ್ಲೇನ್ಲಾ ಮಾಡ್ತಿದ್ದೀಯಾ ಸಂಪ್ಲಲ್ಲಿ, ಬಾರ‌್ಲಾ ಮುಂದ್ಕೆ ಎಂದು ಕರೀಗೌಡ ಗದರಿಸಿದ ಕೂಡಲೇ ಒಂದು ಹೆಜ್ಜೆ ಮುಂದೆ ಬಂದು ನಿಂತ ಗುಂಡಯ್ಯ, ಹೇಳಿ ಗೌಡ್ರೆ? ಎಂದು ಮತ್ತದೆ ಮೆಲುಧ್ವನಿಯಲ್ಲೇ ಕೇಳಿದ.

ಯಾಕ್ಲಾ ಉಸ್ರು ನಿಂತೋಯ್ತ? ನಮ್ ಹುಡುಗ್ರಗೆ ಊಟ ಇಕ್ಕಾಬೇಕಾದ್ರೆ ಬುದ್ದಿ ಸತ್ತೋಗಿತ್ತಾ?, ಎಂದು ಕೂತಲ್ಲೇ ಕೂಗಾಡಿದ. ಮುಂದೆ ಕುಳಿತಿದ್ದ ಕೆಲ ಮೇಲ್ಜಾತಿ ಯುವಕರು ಹಿಡಿದು ಕಂಬಕ್ಕೆ ಕಟ್ಟಿ ನಾಲ್ಕು ಕೊಟ್ರೆ ಸರಿ ಹೊಯ್ತರೆ, ಬಾಲ ಈಗ್ಲೇ ಕತ್ತರಿಸ್ಬೇಕು, ಇಲ್ದಿದ್ರೆ ಜಾತಿ ಕೆಡಿಸೊ ಕೆಲ್ಸ ಮಾಡ್ತಲೇ ಇರ‌್ತಾರೆ ಎಂದು ಸಲಹೆ ಕೊಟ್ಟರು.

ಮಾಡಬಾರದ ತಪ್ಪು ಮಾಡಿದವರ ರೀತಿಯಲ್ಲಿ ಕೈಕಟ್ಟಿ ತಲೆ ಬಗ್ಗಿಸಿ ನಿಂತಿದ್ದ ದಲಿತರು, ಇಂದು ವಾಪಸ್ ಮನೆಗೆ ಹೋಗುವುದು ಸಾಧ್ಯವಿಲ್ಲ ಎಂದು ಮನದಲ್ಲೇ ಅಂದುಕೊಂಡರು. ಮೇಲ್ಜಾತಿ ಹುಡುಗರನ್ನ ಹೊಲಗೇರಿಗೆ ಕರ‌್ಕೊಂಡ್ ಹೋಗಿದ್ಯಾರು?, ಊಟಕ್ಕೆ ಕರದಿದ್ಯಾರು?, ಎಲೆ ಕೊಟ್ಟಿದ್ಯಾರು? ಕೈನೀರು ಕೊಟ್ಟಿದ್ಯಾರು?, ಮುದ್ದೆ ಇಕ್ಕಿದ್ಯಾರು?, ಸಾರು ಬಿಟ್ಟಿದ್ಯಾರು?, ಎಲೆ ಎತ್ತಿದ್ಯಾರು? ಎಲ್ಲರು ಮುಂದೆ ಬಂದು ನಿಲ್ಲಬೇಕು ಎಂದು ಕರೀಗೌಡ ಆಜ್ಞೆ ಮಾಡಿದ. ಸಾಲಾಗಿ ಬಂದು ನಿಂತ ದಲಿತರು, ಎನ್ ಮಾಡ್ಬೇಕು ಎಂಬುದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಮೇಲ್ಜಾತಿ ಹುಡುಗರ ಸ್ನೇಹ ಮಾಡಿದ್ದ ದೇವರಾಜನ ಮೇಲೆ ಎಲ್ಲರು ಕೆಂಗಣ್ಣು ಬೀರಿದರು.

ನೋಡು ಹೆಂಗ್ ನಿಂತವ್ರೆ, ನಮ್ ಹುಡುಗ್ರಿಗೆ ಉಣ್ಣಕ್ ಇಕ್ಕಿ, ಜಾತಿ ಕೆಡ್ಸಿ, ಈಗ ಏನು ಗೊತ್ತಿಲ್ಲದ ಮಳ್ ನನ್ ಮಕ್ಳು ತರ ನಿಂತವ್ರೆ ಎಂದ ಕರೀಗೌಡ, ಈ ಸಂದರ್ಭದಲ್ಲಿ ’ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತೆ ಇದ್ದವರೆಲ್ಲಾ ಹೀನಾಮಾನವಾಗಿ ನಿಂದಿಸಿದರು.

ದಲಿತರ ಮನೆಯ ಮಹಿಳೆಯರು, ಮಕ್ಕಳು, ಮುದುಕರು-ಮೋಟರು ಎಲ್ಲರೂ ಗುಡಿಯ ಹಿಂಭಾಗದ ಮೂಲೆಯ ಮರೆಯಲ್ಲೇ ಅಸಹಾಯಕರಾಗಿ ನಿಂತಿದ್ದರು. ಮಹಿಳೆಯರು ಸೀರೆ ಸೆರಗು ಬಾಯಿಗೆ ಕೊಟ್ಟು ಗಳಗಳನೆ ಕಣ್ಣೀರು ಸುರಿಸುತ್ತಿದ್ದರು. ನಮ್ಮದು ತಪ್ಪಾಯ್ತು ಗೌಡ್ರೆ, ಇನ್ಮುಂದೆ ಜಲ್ಮ ಕೂಯ್ದ್ರು ಇಂತಾ ಕೆಲಸ ಮಾಡಕಿಲ್ಲ. ಮಾಡಿರೊ ತಪ್ಪಿಗೆ ನೀವ್ ಕೊಟ್ಟಿದ್ ಶಿಕ್ಷೆ ಅನುಭವಿಸ್ತೀವಿ, ಇದೊಂದ್ ಸರಿ ಕ್ಷಮಿಸಿಬಿಡಿ ಗೌಡ್ರೆ ಎಂದು ಗುಂಡಯ್ಯ ಬೇಡಿಕೊಂಡ.

ನಮ್ ಮನೆ ಹುಡುಗ್ರಗೆ ಊಟ ಇಕ್ಕಿ ಊರು-ಹೊಲಗೇರಿ ಒಂದ್ ಮಾಡೋಕ್ ಹೊಂಟವ್ರೆ, ಈ ನನ್ ಮಕ್ಳಾ ಹಿಂಗೆ ಬಿಟ್ರೆ ನಾಳೆ ನಮ್ ಮನೆ ಹೆಣ್ ಕೇಳ್ತರೆ. ದಂಡ ಹಾಕಿ ಊರಿಂದ ಹೊರಿಕಾಕ್ಬೇಕು ಎಂದು ಜನರ ನಡುವಿಂದ ಒಬ್ಬ ಸಲಹೆ ಕೊಟ್ಟ. ದಂಡ ಹಾಕ್ದೆ ಬಿಡಾಕ್ ಆಯ್ತದ್, ಎಂದು ಪಂಚಾಯ್ತಿದಾರರೇ ಗುಟ್ಟಾಗಿ ಮಾತನಾಡಿಕೊಂಡು ತೀರ್ಪು ಪ್ರಕಟಿಸಿದರು. ಜಾತಿ ಕೆಡಿಸುವ ಕೆಲಸ ಮಾಡಿರುವ ಪ್ರತಿಯೊಬ್ಬರೂ ತಲಾ 1000 ದಂಡ ಕಟ್ಟಬೇಕು. ಅದು ನಿಂತ ಸ್ಥಳದಲ್ಲೇ, ಎಂದು ಆದೇಶ ನೀಡಿದರು. ಅಲ್ಲದೇ ಊರಿನ ಯಾವುದೇ ಅಂಗಡಿಯಲ್ಲಿ ಬೀಡಿ-ಬೆಂಕಿಪಟ್ಟಣದ ಆದಿಯಾಗಿ ಏನನ್ನೂ ಕೊಡಬಾರದು ಎಂದು ಫಾರ್ಮಾನು ಹೊರಡಿಸಿದರು.

ದಲಿತರ ಎದೆ ದಸಕ್ ಎಂದಂತಾಯ್ತು. 1000 ರೂ. ದಂಡ ಕಟ್ಟಲು ಭೂಮಾಲೀಕನ ಮನೇಲಿ ಕನಿಷ್ಠ 2 ವರ್ಷ ಜೀತ ಮಾಡ್ಬೇಕು. ಹೊತ್ತಿನ ಊಟಕ್ಕೇ ಗತಿ ಇಲ್ಲದ ಸ್ಥಿತಿಯಲ್ಲಿ ನಿಂತ ಸ್ಥಳದಲ್ಲೆ 1000 ರೂ. ದಂಡ ಪಾವತಿಸುವುದು dalit_panther1ಅಸಾಧ್ಯದ ಮಾತು.

ಅದಗಲೇ ಜೀತಕ್ಕೆ ಸೇರಿಕೊಂಡಿದ್ದ ದಲಿತರ ಮಾಲೀಕರು ಕೂಡ ಅಲ್ಲೇ ಇದ್ದರು. ಅವರ ಕಾಲಿಗೆ ಬಿದ್ದು ನನ್ನನ್ನು ಕಾಪಾಡಿ ಎಂದು ಕೆಲವರು ಬೇಡಿಕೊಂಡರು. ಮತ್ತೆ ಕೆಲವರು ತಮ್ಮ ಮನೆಯ ದನಕರುಗಳನ್ನು ಹಿಡಿದು ತಂದು ಅಲ್ಲೇ ಮೇರ್ಲ್ವದವರಿಗೆ ಒಪ್ಪಿಸಿದರು. ದಲಿತ ಮಹಿಳೆಯರ ಕಿವಿ-ಮೂಗಿನಲ್ಲಿದ್ದ ಒಡವೆಗಳನ್ನು ಬಿಚ್ಚಿಕೊಟ್ಟರು. ಹೀಗೆ ಒಬ್ಬರು ಒಂದೊಂದು ರೀತಿಯಲ್ಲಿ ನಿಂತಲ್ಲೇ ದಂಡ ಕಟ್ಟಿದರು. ದನ-ಕರುಗಳು, ಒಡವೆ ಏನೇನು ಇಲ್ಲದ ಇನ್ನೂ ಕೆಲವರು ನಾನು ಮತ್ತು ನನ್ನ ಮಗ ಜೀತಕ್ಕೆ ಸೇರ‌್ತೀವಿ ಎಂದು ಕೆಲ ಭೂ ಮಾಲೀಕರ ಬಳಿ ಹಲುಬಿದರು. ಆದರೆ ಮೇಲ್ವರ್ಗದ ಯುವಕರಿಗೆ ಊಟ ಹಾಕಿದ ತಪ್ಪಿಗೆ ಊರಿನಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಕಾರಣಕ್ಕೆ ಜೀತಕ್ಕೆ ಸೇರಿಸಿಕೊಳ್ಳಲು ಸಹ ಒಪ್ಪಲಿಲ್ಲ. ಅಪರಾಧಿ ಸ್ಥಾನದಲ್ಲಿ ಇಲ್ಲದ ದಲಿತರು ಕೂಡ ದನಕರುಗಳನ್ನು ಮೇಲ್ವರ್ಗದವರಿಗೆ ಒಪ್ಪಿಸಿ ದಂಡದ ಹಣ ಪಾವತಿ ಮಾಡಿ ಸದ್ಯದ ಸೆರೆ ಬಿಡಿಸಿಕೊಂಡರು.

ದಂಡದ ಹಣದಲ್ಲೇ ದಲಿತ ಕೇರಿಯಲ್ಲಿ ಊಟ ಮಾಡಿ ಜಾತಿ ಕೆಡಿಸಿಕೊಂಡಿದ್ದ ಹುಡುಗರಿಗೆ ಹಣ ಕೊಡಲಾಯಿತು. ಧರ್ಮಸ್ಥಳಕ್ಕೆ ಹೋಗಿ ಹೊಳೇಲಿ ಸ್ನಾನ ಮಾಡಿ ಪೂಜೆ ಮಾಡಿಸಿ ಮೈಲಿಗೆ ತೊಳೆದುಕೊಂಡು ಬನ್ನಿ ಎಂದು ಪಂಚಾಯ್ತಿ ಪ್ರಮುಖರು ಆದೇಶ ನೀಡಿದರು.

ಮೇಲ್ಜಾತಿ ಹುಡುಗರಿಗೆ ಊಟ ಹಾಕಿದ ಹೊಲೇರಿಗೆ ಬುದ್ದಿ ಕಲಿಸಿದ್ವಿ ಎಂದು ಮೇಲ್ವರ್ಗದವರು ಬೀಗಿಕೊಂಡು ಮನೆ ಸೇರಿಕೊಂಡರೆ, ಊಟ ಹಾಕಿದ ತಪ್ಪಿಗೆ ಶಿಕ್ಷೆ ಪಡೆದು ಕಣ್ಣಲ್ಲಿ ನೀರು, ಎದೆಯಲ್ಲಿ ದುಃಖ ತುಂಬಿಕೊಂಡ ದಲಿತರು ತಮ್ಮ ಕೇರಿಯತ್ತ ಹೆಜ್ಜೆ ಹಾಕಿದರು.

(ದಂಡ ಮತ್ತು ಬಹಿಷ್ಕಾರದ ನಂತರ ಏನಾಯಿತು? ಅಂದಿನ ಪ್ರಭಾವಿ ಸಚಿವರು ಮಾಡಿದ್ದೇನು? ಮುಂದಿನ ಭಾಗದಲ್ಲಿ.)

‘ಎದೆಗೆ ಬಿದ್ದ ಅಕ್ಷರ’ : ಪುಸ್ತಕ ವಿಮರ್ಶೆ

– ಸುಭಾಷ್ ರಾಜಮಾನೆ

“ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ: ‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’
‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ ಮಕ್ಕಳಾ?’
‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.
‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’
-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!
ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.”1

ದೇವನೂರ ಮಹಾದೇವ ಅವರು ಹೇಳುವ ವೈನೋದಿಕ ಧಾಟಿಯ ಈ ಪುಟ್ಟ ಕತೆಯು ತಮಾಷೆ ಮತ್ತು ವ್ಯಂಗ್ಯದಿಂದ ಕೂಡಿದ್ದರೂ ಕುತೂಹಲಕರವಾಗಿದೆ. ಸುಮಾರು ಮೂರು ದಶಕಗಳಷ್ಟು ಹಿಂದೆಯೇ ದೇವನೂರ ಅವರು ಕತೆ ಕಾದಂಬರಿಯ ಬರವಣಿಗೆಗೆ ವಿದಾಯ ಹೇಳಿದವರು. ಪತ್ರಿಕೆಗಳ ಸಂಪಾದಕರ ಅಥವಾ ಗೆಳೆಯರ ಒತ್ತಾಯಕ್ಕೆ ಮಣಿದು ಅಪ್ಪಿತಪ್ಪಿ ಕೂಡ ಮತ್ತೇ ಕತೆ-ಕಾದಂಬರಿಯನ್ನು ಬರೆಯಲಿಲ್ಲ. devanur-bookಆದರೆ ತಮಗೆ ಅನಿಸಿದ್ದನ್ನು ಹೇಳುವ ಅಥವಾ ಹೇಳಲಿಚ್ಚಿಸುವ ಅಭಿವ್ಯಕ್ತಿಯ ವಿಧಾನವಾಗಿ ಕಥನ ಮಾದರಿಗೆ ವಿದಾಯ ಹೇಳಿದವರಲ್ಲ. ಆದ್ದರಿಂದ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಬಹುತೇಕ ಲೇಖನಗಳು ದೇವನೂರರ ಸೃಜನಶೀಲ ಕತೆ-ಕಾದಂಬರಿಗಳ ಕಥನದ ವಿಸ್ತರಣೆಯೇ ಆಗಿವೆ. ಸಾಹಿತ್ಯ ಪ್ರಕಾರಗಳು ಸಂಕರಗೊಳ್ಳುತ್ತ, ತಮ್ಮ ಗಡಿಗೆರೆಗಳನ್ನು ಕಲಸಿಕೊಳ್ಳುತ್ತ, ಹೊಸ ಪ್ರಕಾರದ ಹುಟ್ಟಿಗೆ ಕಾರಣವಾಗುತ್ತಿರುವ ಸಂಕ್ರಮಣ ಅವಸ್ಥೆಯನ್ನು ಇದು ಸೂಚಿಸುತ್ತದೆಯೇ? ಪ್ರಸ್ತುತ ಸಮಾಜದಲ್ಲಿ ಜಾತಿ ಮತ ಧರ್ಮ ಲಿಂಗ- ಇವುಗಳ ನೆಲೆಯಲ್ಲಿ ಮನುಷ್ಯರನ್ನು ವಿಂಗಡಿಸುವ ವಿಚಾರಧಾರೆಗಳು ಬಲಗೊಳ್ಳುತ್ತಿರುವ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ಪ್ರಕಾರಗಳನ್ನು ವಿಂಗಡಿಸುವ ಗೆರೆಗಳೇ ಅಳಿಸುತ್ತಿರುವುದು ಒಂದು ಸೋಜಿಗ.2

ದೇವನೂರ ಅವರು ಹೇಳುವ ಈ ಕತೆಯಲ್ಲಿ ತಮಗೇ ಸೂರಿಲ್ಲದ ಪ್ರಾಯಶಃ ದಲಿತ ಜನರು ಮಂಚಮ್ಮಳಿಗೆ ಯಾಕೆ ಗುಡಿಯನ್ನು ಕಟ್ಟುತ್ತಿದ್ದಾರೆ? ದಲಿತರು ಈ ದೇಶದ ನೆಲದ ಮಣ್ಣಿಗೆ ಇಂದಿಗೂ ಅನ್ಯರಂತೆಯೇ ದಾರುಣವಾದ ಸ್ಥಿತಿಯಲ್ಲಿ ಬದುಕುತ್ತಿರುವುದು ವಾಸ್ತವ ಸತ್ಯ. ದೇವನೂರ ಮಹಾದೇವ ಅವರು ಈ ಕತೆಯ ಕೊನೆಯಲ್ಲಿ ಮಾಡುವ ವ್ಯಾಖ್ಯಾನ ಕತೆಯ ಸ್ವರೂಪ ಮತ್ತು ಅದರ ತಾತ್ವಿಕತೆಯನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಛಾವಣಿ ಇಲ್ಲದ ಗುಡಿಯಲ್ಲಿ ಬುದ್ಧನನ್ನು ಇಟ್ಟರೆ ಅದೇ ತಮ್ಮ ದೇವರೆಂದು ದೇವನೂರರು ಹೇಳುತ್ತಿರುವುದು ಸ್ವಾರಸ್ಯಕರ ಸಂಗತಿಯಾಗಿದೆ. ಆದರೆ ಎರಡು ಸಾವಿರದ ಐದುನೂರು ವರ್ಷಗಳ ಹಿಂದೆಯೇ ದೇವರ ಇರುವಿಕೆ ಮತ್ತು ದೇವರ ಕಲ್ಪನೆಯನ್ನೆ ಬುದ್ಧ ಸಂಪೂರ್ಣವಾಗಿ ನಿರಾಕರಿಸಿದ್ದ; ಪುನರ್ ಜನ್ಮ ಹಾಗೂ ಆತ್ಮದ ಕಲ್ಪನೆಯನ್ನೂ ಅಲ್ಲಗಳೆದಿದ್ದ. ದೇವನೂರರಂತಹ ಸಮಾಜವಾದಿ ಚಿಂತಕರು ಇಪ್ಪತ್ತೊಂದನೆಯ ಶತಮಾನದಲ್ಲಿ ಬುದ್ಧನನ್ನು ದೇವರೆಂದು ಒಪ್ಪುವ ಸಾಂಸ್ಕತಿಕ ವೈರುಧ್ಯದ ಸ್ವರೂಪ ಯಾವುದು?

ಭಾರತೀಯ ಸಮಾಜವನ್ನು ವರ್ಣ, ಜಾತಿ, ಅಸ್ಪøಶ್ಯತೆ, ವರ್ಗದ ನೆಲೆಗಳಲ್ಲಿ ಒಡೆದು ಹಾಕಿದ್ದ ಬ್ರಾಹ್ಮಣಶಾಹಿಯನ್ನು ವಿರೋಧಿಸಿದವನು ಬುದ್ಧ. ‘ಮಡದಿ-ಮಗು ಮನೆ-ಮಾರು ರಾಜ್ಯ-ಗೀಜ್ಯ’ಗಳನ್ನೆಲ್ಲ ತೊರೆದು ಮುನ್ನಡೆದ ಬುದ್ಧ, ತನಗೆ ಜ್ಞಾನೋದಯವಾದ ತರುವಾಯ ಹೀಗೆ ಹೇಳುತ್ತಾನೆ: ಎಲ್ಲ ಮನುಷ್ಯರೂ ಸಮಾನರು; ಹುಟ್ಟಿನಿಂದ ಮನುಷ್ಯ ದೊಡ್ಡವನಾಗಲಾರ, ಗುಣದಿಂದ ಆಗುತ್ತಾನೆ; ಹುಟ್ಟಿನ ಆಧಾರದಿಂದ ಶ್ರೇಷ್ಠತೆಯನ್ನು ಅಳೆಯುವುದು ಸರಿಯಲ್ಲ; ಮನುಷ್ಯನಿಗೆ ಉನ್ನತ ಆದರ್ಶಗಳು ಮತ್ತು ತನ್ನ ಸಹಚರರ ಬಗೆಗೆ ಮೈತ್ರಿಯನ್ನು ಹೊಂದುವುದು ಮುಖ್ಯ; ಪ್ರತಿಯೊಬ್ಬನಿಗೂ ಕಲಿಯುವ ಹಕ್ಕಿದೆ; ಜ್ಞಾನವೆನ್ನುವುದು ಉಣ್ಣುವ ಅನ್ನದಷ್ಟೇ ಮುಖ್ಯ; ಆದರೆ ಚಾರಿತ್ರ್ಯಹೀನ ಜ್ಞಾನ ಅಪಾಯಕಾರಿ ಆಗುತ್ತದೆ; ಆಸ್ತಿಯ ಖಾಸಗಿ ಒಡೆತನ ಒಂದು ವರ್ಗಕ್ಕೆ ಶಕ್ತಿಯನ್ನೂ, ಇನ್ನೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ; ನಿಜವಾದ ಧರ್ಮ ಮನುಷ್ಯನ ಹೃದಯದಲ್ಲಿರುತ್ತದೆಯೇ ಹೊರತು ಶಾಸ್ತ್ರಗಳಲ್ಲಲ್ಲ; ಯಾವುದೂ ಅಂತಿಮವಲ್ಲ, ಪ್ರತಿಯೊಂದೂ ಪರಿವರ್ತನಶೀಲಕ್ಕೆ ಒಳಪಡುತ್ತಿರುತ್ತದೆ.3 ಸರ್ವರ ಸಮಾನತೆಯನ್ನು ಬೋಧಿಸಿದ, ಭೂಮಿಯ ಮೇಲಿನ ಸಕಲ ಜೀವಿಗಳ ಒಳಿತನ್ನು ಬಯಸಿದ, ಮನುಷ್ಯನ ಘನತೆ-ಗೌರವಗಳನ್ನು ಎತ್ತಿಹಿಡಿದ, ಸಮಾಜದಲ್ಲಿರುವ ಅಜ್ಞಾನವನ್ನು ವಿರೋಧಿಸಿ ನಗುತ್ತಿರುವ ಬುದ್ಧನನ್ನು ದೇವನೂರರು ಒಪ್ಪಿಕೊಳ್ಳುತ್ತಾರೆ. ವಾಸ್ತವವಾಗಿ ನಮ್ಮ ಸಮಾಜದಲ್ಲಿ ಜಾತಿ, ವರ್ಣ, ಅಸ್ಪøಶ್ಯತೆಗಳು ಮನುಷ್ಯರನ್ನು ಮತ್ತು ಮನಸ್ಸುಗಳನ್ನು ಛಿದ್ರಛಿದ್ರ ಮಾಡಿರುವ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಬುದ್ಧ ಪ್ರತಿಪಾದಿಸಿದ ಸಮಾನತೆಯ ಮೌಲ್ಯದೊಂದಿಗೆ ಆರಂಭವಾಗಿರುವುದು ಧ್ವನಿಪೂರ್ಣವಾಗಿದೆ. ಮೊದಲ ಲೇಖನದ ಪೂರ್ವದಲ್ಲಿ ‘ನಾನು ಚಿತ್ರಿಸಿದಂತೆ ನನ್ನ ದೇವರು’ ಶೀರ್ಷಿಕೆಯ ಅಡಿಯಲ್ಲಿ ಎದೆಯ ಭಾಗದಿಂದ ರೇಖಾಚಿತ್ರದಲ್ಲಿ ಮೂಡಿ ನಿಂತಿರುವ ಬುದ್ಧನ ಚಿತ್ರ ಇನ್ನೂ ಸಾಂಕೇತಿಕವಾಗಿದೆ. ಇಂದಿನ ಭ್ರಷ್ಟ ರಾಜಕಾರಣ ಮತ್ತು ವಿಷಮ ಪರಿಸ್ಥಿತಿಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ತಳ ಸಮುದಾಯಗಳ ನಡೆ ಯಾವ ದಿಶೆಯತ್ತ ಎಂಬುದನ್ನು ಇದು ಸೂಚಿಸುತ್ತಿರಬಹುದೇ?

ಮತ್ತೊಂದು ಮುಖ್ಯ ಸಂಗತಿಯೆಂದರೆ ಅಸ್ಪಶ್ಯರಾಗಿ ಜನಿಸಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬೌದ್ಧರಾಗಿ ನಿಧನರಾದ ಎಂ. ಮರಿಸ್ವಾಮಿ ಅವರ ಬದುಕಿನ ಒಂದು ಕಹಿ ಘಟನೆಯನ್ನು ನಿರೂಪಿಸುವುದರ ಮೂಲಕ ಈ ಕೃತಿಯ ಕೊನೆಯ ಲೇಖನವು ಆರಂಭವಾಗಿ ಅಂಬೇಡ್ಕರ್ ವಿರಚಿತ ಸಂವಿಧಾನದ ನಿಜವಾದ ಆಶಯಗಳ ತಳಪಾಯದ ಮೇಲಿನ ನಾಳಿನ ಭಾರತವನ್ನು ಕಟ್ಟಬೇಕಾಗಿದೆ ಎನ್ನುವ ಆಶಾಭಾವನೆಯೊಂದಿಗೆ ಮುಗಿಯುತ್ತದೆ. ಭಾರತದ ಚರಿತ್ರೆಯ ಪ್ರಾಚೀನ ಘಟ್ಟದಲ್ಲಿ ಬುದ್ಧ ಯಾವುದರ ವಿರುದ್ಧವಾಗಿ ಹೋರಾಟಗಳನ್ನು ನಡೆಸಿದನೋ ಆಧುನಿಕ ಭಾರತದ ಘಟ್ಟದಲ್ಲಿ ಅಂಬೇಡ್ಕರ್ ಅಂತಹ ಎಲ್ಲ ಅಸಮಾನತೆಯ ವಿರುದ್ಧ ಜೀವಮಾನವೆಲ್ಲ ಸಂಘರ್ಷ ನಡೆಸಿದ್ದನ್ನು ನೆನಪಿಸುತ್ತದೆ. ಅಂಬೇಡ್ಕರ್ ಬಾಲ್ಯದಿಂದಲೇ ಬುದ್ಧನ ಜೀವನ ಮತ್ತು ತತ್ವಗಳಿಂದ ತುಂಬ ಪ್ರಭಾವಿತರಾಗಿದ್ದರು. ಅವರು ಬುದ್ಧ ಮತ್ತು ಬೌದ್ಧ ಧರ್ಮವನ್ನು ಕುರಿತು ಆಳವಾದ ಅಧ್ಯಯನ ನಡೆಸಿದವರು; ಹಿಂದೂ ಧರ್ಮದ ಭಾಗವಾಗಿ ಬೆಳೆದು ಬಂದ ಜಾತಿ ವ್ಯವಸ್ಥೆಯ ಅವಮಾನದಿಂದ ಕುಪಿತರಾಗಿ ಬೌದ್ಧ ಧರ್ಮದ ಮೊರೆ ಹೋದವರು.

ಈ ಹಿನ್ನೆಲೆಯಲ್ಲಿ ಬುದ್ಧನ ಕಾಲದಿಂದ ಹಿಡಿದು ಅಂಬೇಡ್ಕರ್‍ವರಗೂ Young_Ambedkarಭಾರತೀಯ ಸಮಾಜ ಮತ್ತು ದುಡಿಯುವ ಸಮುದಾಯಗಳು ಚಾರಿತ್ರಿಕವಾಗಿ ಅನೇಕ ಬಗೆಯ ಬದಲಾವಣೆಗಳಿಗೆ ಸಾಕ್ಷಿಯಾಗಿವೆ. ಬುದ್ಧ ಉಪದೇಶಿಸಿದ ಸಮಾನತೆಯ ತತ್ವಗಳು ಎಷ್ಟೇ ಪ್ರಭಾವಕಾರಿಯಾಗಿದ್ದರೂ ಅವುಗಳಿಗೆ ಕಾನೂನಿನ ಚೌಕಟ್ಟು ಇರಲಿಲ್ಲ. ಈ ಹಂತದಲ್ಲಿ ದುಡಿಯುವ ವರ್ಗಗಳು ಹೆಚ್ಚು ಶೋಷಿತವಾಗಿದ್ದವು; ಜಾತಿಯ ಕಾರಣಕ್ಕಾಗಿಯೇ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಇಡಲ್ಪಟ್ಟ ತಳ ಸಮುದಾಯಗಳು ಕ್ರೌರ್ಯದ ದಳ್ಳುರಿಯಲ್ಲಿ ಬೆಂದು ಹೊಗಿದ್ದವು. ಅಂಬೇಡ್ಕರ್ ಅವರ ದೀರ್ಘಕಾಲಿನ ಸಂಘರ್ಷಗಳ ಫಲವಾಗಿ ಸಂವಿಧಾನದಲ್ಲಿ ಸಮಾನತೆಯ ತತ್ವಗಳು ಸೇರುವಂತಾಗಿ ತಳ ಸಮುದಾಯಗಳು ಸ್ವಾಭಿಮಾನ ಮತ್ತು ಘನತೆಯಿಂದ ಬಾಳುವಂತಾಯಿತು. ಆದರೆ ಸಂವಿಧಾನೋತ್ತರ ಕಾಲಘಟ್ಟದ ಭಾರತದಲ್ಲಿ ದಲಿತ ಸಮುದಾಯಗಳು, ದುಡಿಯುವ ವರ್ಗಗಳು, ಬುಡಕಟ್ಟು ಜನಾಂಗಗಳು, ಅಲೆಮಾರಿಗಳು, ಕೂಲಿಕಾರರು, ಕಾರ್ಮಿಕರರು, ರೈತರು, ಮಹಿಳೆಯರು-ಎಲ್ಲ ಶೋಷಿತ ಸಮುದಾಯಗಳು ವಾಸ್ತವವಾಗಿ ಘನತೆ ಮತ್ತು ಗೌರವಗಳಿಂದ ಬದುಕಲು ಸಾಧ್ಯವಾಗಿದೆಯೇ? ಜಾತಿ ತಾರತಮ್ಯಗಳು, ಮತೀಯ ಶಕ್ತಿಗಳು, ಕಾರ್ಪೋರೇಟ್ ಉದ್ಯಮಗಳು, ಜಾಗತೀಕರಣ-ಇವೆಲ್ಲ ಸೇರಿಕೊಂಡು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಈ ಹಿಂದೆಂದಿಗಿಂತಲೂ ಸಾವಿರಪಟ್ಟು ಹೆಚ್ಚಿಸಿಲ್ಲವೇ? ದೇವನೂರರ ‘ಎದೆಗೆ ಬಿದ್ದ ಅಕ್ಷರ’ ಕೃತಿಯು ಇಂತಹ ಹಲವಾರು ಪ್ರಶ್ನೆಗಳನ್ನು ಮುಖಾಮುಖಿ ಆಗಲು, ಚರ್ಚೆಗೆ ಆಹ್ವಾನಿಸಲು ಪ್ರೇರೆಪಿಸುತ್ತದೆ.

ದೇವನೂರರು ತಮ್ಮ ತಾತ್ವಿಕತೆಯನ್ನು ಬುದ್ಧ, ಗಾಂಧಿ, ಅಂಬೇಡ್ಕರ್ ಮತ್ತು ಲೋಹಿಯಾ-ಈ ನಾಲ್ಕು ವ್ಯಕ್ತಿಗಳ ಚಿಂತನೆಗಳಿಂದ ರೂಪಿಸಿಕೊಂಡರೆಂದು ಅನಿಸುತ್ತದೆ. ಇವರಲ್ಲಿ ಆಧುನಿಕ ಕಾಲದ ಮೂವರು ಭಾರತೀಯ ಸಮಾಜವನ್ನು ವಿಘಟನೆ ಮಾಡಿರುವ ಜಾತಿ ವ್ಯವಸ್ಥೆಯನ್ನು ಭಿನ್ನವಾದ ನೆಲೆಯಲ್ಲಿಯೇ ಅರ್ಥೈಸಿಕೊಂಡವರು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಿಂದ ರೈಲಿನಿಂದ ದಬ್ಬಿಸಿಕೊಂಡು ಹೊರಬಿದ್ದ ಅವಮಾನದ ಸನ್ನಿವೇಶ ಕುರಿತು ದೇವನೂರರು ಹೀಗೆ ಹೇಳುತ್ತಾರೆ: “ಆತನ ಆತ್ಮಕ್ಕೆ ಆಚೆ ಬಿದ್ದಿರುವ ಅಸ್ಪಶ್ಯ ಆತ್ಮಗಳು ಸೇರಿಕೊಂಡು ಅಸ್ಪಶ್ಯತನದ ಬೀಜ ಅವನ ಎದೆಗೆ ಬಿದ್ದಂತಾಗಿ ಮಹಾತ್ಮ ಆಗಲು ಆರಂಭಿಸುತ್ತಾನೆ. ಕೇವಲ ಈ ಒಂದು ಅವಮಾನಕ್ಕೆ ಆ ಮೋಹನದಾಸನು ‘ಮಹಾತ್ಮಾಗಾಂಧಿ’ಯಾಗಿ ಪರಿವರ್ತನೆಗೊಳ್ಳುವುದಾದರೆ ದೇಹವಿಡೀ, ಜೀವನವಿಡೀ ಅವಮಾನದಿಂದಲೇ ಮಾಡಲ್ಪಟ್ಟ ಅಸ್ಪøಶ್ಯ ಬೆಳೆದರೆ ಅದೆಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದು ನನ್ನ ಊಹೆ ಅಳತೆಗಳಿಗೆ ನಿಲುಕದಷ್ಟು ಎತ್ತರದ್ದಾಗಿಬಿಟ್ಟಿತು.”4 ಇದಕ್ಕೆ ಅವಮಾನಿತ ಜಗತ್ತಿನಿಂದ ಬಂದ ಅಂಬೇಡ್ಕರ್ ಬೆಳೆದ ಬಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ. ಗಾಂಧಿ ತನ್ನ ಹೊರಗಿನ ಶತ್ರುಗಳ ವಿರುದ್ಧ ಪ್ರತಿಭಟನೆ ನಡೆಸಿದವರು; ಆದರೆ ಅಂಬೇಡ್ಕರ್ ತಮ್ಮನ್ನು ಅಸ್ಪಶ್ಯನೆಂದು ದೂರೀಕರಿಸಿದ ತನ್ನ ನೆಲದ ಜನರೊಂದಿಗೆ ಸಂಘರ್ಷ ನಡೆಸಬೇಕಾಯಿತು. ಈ ಹಿನ್ನೆಲೆಯಲ್ಲಿ ದೇವನೂರರು ಬುದ್ಧ ಮತ್ತು ಗಾಂಧಿಯಲ್ಲಿನ ಸಂತತನವನ್ನು ಮೆಚ್ಚಿಕೊಳ್ಳುತ್ತಾರೆ. ಇದಕ್ಕೆ ಪೂರಕವಾಗಿ ದೇವನೂರರಲ್ಲಿ ಸಂತನನ್ನು ಹುಡುಕುವ, ಅವರನ್ನು ಸಂತ ಪದವಿಗೇರಿಸುವ ಭಕ್ತಗಣ ಬೆಳೆಯುತ್ತಿದೆ ಎನ್ನುವ ಆಪಾದನೆಗಳು ಕೇಳಿ ಬರುತ್ತಿವೆ.5

ದೇವನೂರರು ಮಹಾತ್ಮ ಗಾಂಧಿ ಅವರ ದಲಿತರನ್ನು ಕುರಿತು ಹೊಂದಿದ್ದ ಧೋರಣೆಗಳ ಮಿತಿಗಳನ್ನು ಗ್ರಹಿಸಿದರೂ ಗಾಂಧಿಯನ್ನು ಸಾರಾಸಗಟಾಗಿ ನಿರಾಕರಿಸುವುದಿಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಅವರ ದಾರಿಗಳು ಭಿನ್ನವಾಗಿದ್ದರೂ ಗುರಿ ಒಂದೇ ಎಂದು ದೇವನೂರರು ಒಪ್ಪುತ್ತಾರೆ. ಇವರಿಬ್ಬರ ಚಿಂತನೆಗಳು ಪರಸ್ಪರ ಪೂರಕವೆಂದು ಕೌಟುಂಬಿಕ ಜಗಳ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಪರಿಭಾವಿಸುತ್ತಾರೆ. ಗಾಂಧಿಯನ್ ಐಡಿಯಾಲಾಜಿಯಲ್ಲಿ ಸಾಮಾಜಿಕವಾಗಿ ಅತ್ಯಂತ ಕೆಳಸ್ತರಕ್ಕೆ ಸೇರಿದವನಿಗೂ ನ್ಯಾಯ ಸಿಗಬೇಕೆಂಬ ನಿಲುವಿದೆ. ಗಾಂಧೀಜಿಯವರ ತತ್ವವು ದಲಿತರನ್ನು ಉದಾರ ಮಾನವತಾವಾದಿ ನೆಲೆಯಲ್ಲಿ, ಅಪಾರ ಸಹಾನುಭೂತಿಯಿಂದ ನೋಡುತ್ತದೆ. ಆದರೆ ಅಂಬೇಡ್ಕರ್ ಅವರು ಜಾತಿ ಪದ್ಧತಿಯ ಆಚರಣೆಯಿಂದ ಉದ್ಭವಿಸುವ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧ ಬಂಡಾಯವೆದ್ದರು; ಜಾತಿ ವಿನಾಶದ ಗುರಿಯನ್ನು ಹೊಂದಿದ್ದರು. ಗಾಂಧಿ ತತ್ವಗಳು ಜಾತಿ, ಅಸ್ಪøಶ್ಯತೆ, ಬಡತನ, ಅವಮಾನದಂತಹ ಸಮಸ್ಯೆಗಳನ್ನು ತೀವ್ರ ಸಹಾನುಭೂತಿಯಿಂದ ಕಂಡು, ದಲಿತರ ಆರ್ಥಿಕ ಮತ್ತು ರಾಜಕೀಯ ಅಭೀಪ್ಸೆಗಳನ್ನು ನಿರ್ಲಕ್ಷ ಮಾಡುತ್ತವೆ. ಇದು ದಲಿತರ ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯಲ್ಲಿ ಯಾವುದೇ ಗುರುತರವಾದ ಬದಲಾವಣೆಗಳನ್ನುಂಟು ಮಾಡಲಿಲ್ಲ. ಆದ್ದರಿಂದ ದಲಿತರ ಮೂಲಭೂತ ಸಮಸ್ಯೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತವೆ. ಇದಕ್ಕೆ ವಿರುದ್ಧವಾಗಿ ಅಂಬೇಡ್ಕರ್ ಅಸ್ಪøಶ್ಯರನ್ನು ಸಂಘಟಿಸುವುದರ ಮೂಲಕ ಅವರನ್ನು ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸಮಾನತೆಯ ಹಕ್ಕುಗಳಿಗಾಗಿ ಸಂಘರ್ಷ ಮತ್ತು ಹೋರಾಟ ನಡೆಸುವಂತೆ ಮಾಡಿದರು. ಹೀಗೆ ಗಾಂಧಿಗೆ ಲೋಹಿಯಾ, ಲೋಹಿಯಾಗೆ ಅಂಬೇಡ್ಕರ್ ಕೂಡಿಕೊಳ್ಳಬೇಕೆಂದು ದೇವನೂರರು ಆಶಿಸುತ್ತಾರೆ. ಇದು ಸಕಲವನ್ನು ಒಳಗೊಳ್ಳುವ ಪರಿಕಲ್ಪನೆಯಾಗಿದೆ.

ಜಾತಿ ಮತ್ತು ಅಸ್ಪಶ್ಯತೆಯ ಇರುವಿಕೆಯನ್ನು ಕುರಿತು ವಿವರಿಸುವ, ವ್ಯಾಖ್ಯಾನಿಸುವ ಸಮಾಜಶಾಸ್ತ್ರೀಯ ಅಧ್ಯಯನಗಳಿಗಿಂತಲೂ devanurದೇವನೂರರ ಲೇಖನಗಳಲ್ಲಿ ವ್ಯಕ್ತವಾಗಿರುವ ದೃಷ್ಟಿ-ಧೋರಣೆಗಳು ಹೆಚ್ಚು ತೀಕ್ಷ್ಣವಾಗಿವೆ. ಅಕಾಡೆಮಿಕ್ ವಲಯದ ಹೆಚ್ಚಿನ ಸಂಶೋಧನೆ, ಅಧ್ಯಯನಗಳಲ್ಲಿರುವ ತಾತ್ವಿಕತೆಯ ಭಾರವಾಗಲಿ ಮತ್ತು ಭಾಷಿಕ ಜಡತೆಯಾಗಲಿ ಇಲ್ಲಿಲ್ಲ. ದೇವನೂರರು ಮುಖ್ಯವಾಗಿ ರೂಪಕ ನೆಲೆಯ ಒಬ್ಬ ಸೃಜನಶೀಲ ಲೇಖಕರಾಗಿ ಅಸಮಾನತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಾಮಾಜಿಕ ವ್ಯವಸ್ಥೆಯ ವಸ್ತುಸ್ಥಿತಿಯನ್ನು ತೋರುಗನ್ನಡಿಯಾಗಿ ಬಿಂಬಿಸಿದ್ದಾರೆ. ಜಾಗತೀಕರಣದ ಈ ಆಧುನಿಕ ಕಾಲದಲ್ಲಿ ಜಾತಿ ವ್ಯವಸ್ಥೆ ಎಲ್ಲಿದೆ ಎಂದು ಕೇಳುವ ಹಾಗೂ ಜಾತಿ ಪದ್ಧತಿಯೇ ಮಾಯವಾಗಿ ಹೋಗಿದೆ ಎಂದು ವಾದಿಸುವವರ ಒಂದು ವರ್ಗವೇ ಸೃಷ್ಟಿಯಾಗಿದೆ. ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲವೆಂದು, ಅದು ವಸಾಹತುಶಾಹಿಯ ಹೊಸ ಸೃಷ್ಟಿಯೆಂದು ವಾದಿಸುವ ಒಂದು ನಿರ್ದಿಷ್ಟ ಬ್ರಾಹ್ಮಣ ವರ್ಗವೂ ಹುಟ್ಟಿಕೊಂಡಿದೆ. ಆದರೆ ಜಾತಿಯತೆ ಅಥವಾ ಜಾತಿ ಶ್ರೇಣೀಕರಣದ ವ್ಯವಸ್ಥೆ ಭಾರತೀಯ ಸಮಾಜದ ಕಟು ವಾಸ್ತವತೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯಜಮಾನಿಕೆಯ ಸ್ಥಾನದಲ್ಲಿರುವ ಮೇಲ್ಜಾತಿಗಳು ಸಣ್ಣಪುಟ್ಟ ಸಂಗತಿಗಳಿಗೂ ದಲಿತರನ್ನು ಬಹಿಷ್ಕರಿಸುತ್ತಿವೆ; ದಲಿತ/ಳು ಎನ್ನುವ ಒಂದೇ ಕಾರಣಕ್ಕಾಗಿ ಅಂತರ್‍ಜಾತಿ ವಿವಾಹಗಳನ್ನು ನಿಷೇಧಿಸಲಾಗುತ್ತಿದೆ; ದಲಿತರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸರ್ಕಾರದಿಂದ ಪಡೆಯುತ್ತಿರುವ ಮೀಸಲಾತಿಯನ್ನು ನಿಲ್ಲಿಸಬೇಕೆಂದು ಸವರ್ಣೀಯ ಜಾತಿಗಳು ಕೂಗುತ್ತಿವೆ; ಈ ಮೀಸಲಾತಿಯಿಂದಾಗಿಯೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಪೋಷಣೆಯಾಗುತ್ತಿದೆ ಎನ್ನುವಂತಹ ಪ್ರತಿಗಾಮಿತನ ನಿಲುವುಗಳು ವ್ಯಕ್ತವಾಗುತ್ತಿವೆ. ಸಾಮಾಜಿಕವಾಗಿ ಜಾತಿ ತಾರತಮ್ಯತೆಗಳು ದೈವಿಕವೆಂದು ಸಾರುವುದರ ಮೂಲಕ ಅಸಮಾನತೆ ಸಹಜವೆಂದು ಸಮರ್ಥಿಸಲಾಗುತ್ತಿದೆ. ಸದ್ಯದ ಸ್ಥತಿಯಲ್ಲಿ ಶಿಕ್ಷಣ, ಸಂಪತ್ತು, ರಾಜಕೀಯ ಅಧಿಕಾರಕ್ಕಾಗಿ ಮೇಲ್ಜಾತಿಗಳು ದೊಡ್ಡ ಪ್ರಮಾಣದಲ್ಲಿ ಸಂಘಟಿತವಾಗುತ್ತಿವೆ. ಆದರೆ ಕೆಳಜಾತಿಗಳು ತಮ್ಮತಮ್ಮ ಆಂತರಿಕ ಕಚ್ಚಾಟಗಳಿಂದಾಗಿ ವಿಘಟಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಎದೆಗೆ ಬಿದ್ದ ಅಕ್ಷರ’ ಜಾತಿ, ಅಸ್ಪಶ್ಯತೆ, ಹಿಂದುತ್ವ, ಕೋಮುವಾದಗಳನ್ನು ಕುರಿತು ವಾದ ವಾಗ್ವಾದಗಳನ್ನು ಹುಟ್ಟು ಹಾಕಿದೆ. ದಲಿತರ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಹಾಗೂ ನ್ಯಾಯಬದ್ದವಾಗಿ ದಕ್ಕಬೇಕಾಗಿರುವ ಹಕ್ಕುಗಳನ್ನು ಮಂಡಿಸಲೆತ್ನಿಸುತ್ತದೆ.

ದೇವನೂರರ ಕೃತಿಯಲ್ಲಿ ಲೋಕವಿಮರ್ಶೆಯ ಗುಣ ಮುಂದೆ ಬಂದಷ್ಟು ಆತ್ಮವಿಮರ್ಶೆಯ ಗುಣ ಮುನ್ನಡೆಗೆ ಬರುವುದಿಲ್ಲ; ಅವರು ತಮ್ಮನ್ನು ಒಂದು ಮನೋಧರ್ಮದ, ಒಂದು ಸಾಮಾಜಿಕ ಸ್ಥಿತಿಯ ಪ್ರತೀಕವಾಗಿಯೇ ಪರಿಭಾವಿಸಿಕೊಂಡು ಬರೆಯುತ್ತಾರೆ. ದೇವನೂರರು ವ್ಯಕ್ತಿಯಾಗಿ ಹೇಗೆ ಕಾಣುತ್ತಾರೆಂಬುದು ಅವರ ವಕ್ತಾರತನದಾಚೆಗೆ ಕುತೂಹಲಕರವಾಗಿಯೇ ಉಳಿಯುತ್ತದೆ. ಗಾಂಧಿ, ಅಂಬೇಡ್ಕರ್‍ರಷ್ಟು ಬುದ್ಧ ಇನ್ನೂ ದೇವನೂರರ ಪ್ರಜ್ಞೆಯ ಭಾಗವಾಗಿಲ್ಲ; ದಲಿತ ಸಮಾಜದ ತಳದಲ್ಲಿರುವವರ ನೋವು-ನಲಿವುಗಳ ನೆಲೆಗಳನ್ನು ಗ್ರಹಿಸುವ ದೇವನೂರರ ಬರವಣಿಗೆ, ಚಿಂತನೆಯ ಕ್ರಮ ಸಮಕಾಲೀನ ದಲಿತ ಮತ್ತು ಭಾರತೀಯ ಸಮಾಜದ ವೈವಿಧ್ಯಮಯ ಪಲ್ಲಟಗಳನ್ನು ಮತ್ತು ಅದರ ಸೂಕ್ಷ್ಮತೆಗಳನ್ನು ಗ್ರಹಿಸುವುದಿಲ್ಲ; ಆದ್ದರಿಂದ ದೇವನೂರರ ಚಿಂತನೆಯ ಮಾದರಿ ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ರೂಪುಗೊಂಡು ಅದೇ ಚೌಕಟ್ಟುಗಳಲ್ಲಿ ಸ್ಥಗಿತಗೊಂಡಿದೆ.6 ಆಪಾದನೆಯ ರೂಪದಲ್ಲಿರುವ ಈ ನಿಲವುಗಳು ದೇವನೂರರ ಚಿಂತನೆಯ ಆಳ-ಅಗಲಗಳನ್ನು ತುಂಬ ಸರಳೀಕರಿಸಿ ನೋಡುತ್ತವೆ. ದೇವನೂರರ ಬದುಕು ಮತ್ತು ಬರಹಗಳು ಅವರು ಪ್ರತಿನಿಧಿಸುವ ದಲಿತ ಸಮುದಾಯದಲ್ಲಿ ಕರಗಿ ಒಂದಾಗಿವೆ ಎನ್ನುವುದಕ್ಕೆ ‘ಎದೆಗೆ ಬಿದ್ದ ಅಕ್ಷರ’ ಕೃತಿಯ ಯಾವ ಪುಟ ತೆರದರೂ ಕುರುಹುಗಳು ಕಣ್ಣಿಗೆ ರಾಚುತ್ತವೆ. ನ್ಯಾಯಬದ್ದವಾಗಿ ತಮಗೆ ದಕ್ಕಬೇಕಾಗಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕತಿಕ ಹಕ್ಕು-ಸವಲತ್ತುಗಳಿಂದ ವಂಚಿತವಾಗಿರುವ ಹಾಗೂ ಪ್ರಸ್ತುತ ಸಂದರ್ಭದಲ್ಲಿ ದನಿಯೆತ್ತಿ ಕೇಳುವ ಬಲವಿಲ್ಲದೆ ಸೊರಗುತ್ತಿರುವ ಎಲ್ಲ ದಮನಿತ ಸಮುದಾಯಗಳ ಸಮಾನತೆಯನ್ನು ಆಶಿಸುವ ದೇವನೂರ ಅವರು ನಿಜವಾದ ಅರ್ಥದಲ್ಲಿ ಸಾಂಸ್ಕತಿಕ ನಾಯಕರಾಗಿದ್ದಾರೆ.

ಚರಿತ್ರೆಯುದ್ದಕ್ಕೂ ದಮನಕ್ಕೆ ಒಳಗಾಗುತ್ತ ಬಂದಿರುವ ಎಲ್ಲ ವರ್ಗಗಳ ಸಮಾನತೆಯ ನೆಲೆಯಲ್ಲಿ ಅವರ ಲೇಖನಗಳು ಮಾತನಾಡುತ್ತವೆ. ಮೇಲ್‍ನೋಟಕ್ಕೆ ಈ ಕೃತಿ ಬಿಡಿಬಿಡಿಯಾದ ಲೇಖನಗಳು ಮತ್ತು ಭಾಷಣಗಳ ಸಂಕಲನದಂತೆ ಕಂಡರೂ ಅದು ಏಕಕಾಲಕ್ಕೆ ನಾಲ್ಕು ದಶಕಗಳ ಕರ್ನಾಟಕದ ಸಾಹಿತ್ಯ, ರಾಜಕೀಯ, ಧಾರ್ಮಿಕ, ಸಾಂಸ್ಕತಿಕ ವಿದ್ಯಮಾನಗಳನ್ನು ದಾಖಲಿಸುವ ಸಂಕಥನವಾಗಿದೆ; ಸದ್ಯದ ಕಾಲಮಾನದಲ್ಲಿ ಜಾತಿ ವ್ಯವಸ್ಥೆಯ ವಿಕಾರಗಳು ದಲಿತರನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ದಲಿತರ ಮೇಲೆ ಸವರ್ಣೀಯರಿಂದ ನಡೆಯುವ ಹಿಂಸೆ, ಅತ್ಯಾಚಾರ, ದಬ್ಬಾಳಿಕೆ, ಕ್ರೌರ್ಯಗಳು ನಿಂತಿಲ್ಲ. ಊಳಿಗಮಾನ್ಯ ಮೌಲ್ಯಗಳ ಪಳೆಯುಳಿಕೆಗಳಂತಿರುವ ಹಳ್ಳಿಗಳಲ್ಲಿ ಕ್ಷುಲ್ಲಕ ಸಂಗತಿಗಳಿಗೂ ದಲಿತ ಜನಾಂಗದವರ ಬಹೀಷ್ಕಾರಗಳು ತೀರ ಸಾಮಾನ್ಯವಾಗಿ ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ದೇವನೂರರ ಲೇಖನಗಳು ಸಾಮಾಜಿಕ ತಲ್ಲಣ ಮತ್ತು ದಲಿತ ಸಮುದಾಯಗಳ ವಸ್ತು ಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾದ ಹಾಗೂ ಸಂಕೀರ್ಣವಾದ ನೆಲೆಯಲ್ಲಿ ವಿಶ್ಲೇಷಿಸುತ್ತವೆ. ಇದರೊಂದಿಗೆ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪಶ್ಯತೆಯ ಆಚರಣೆ, ಕಂದಾಚಾರ-ಇಂಥವುಗಳು ನಿರ್ನಾಮವಾಗಬೇಕು; ಪ್ರಸ್ತುತ ಸಾಂಪ್ರದಾಯಿಕವಾದ ಜಡ ಸಮಾಜವನ್ನು ಪರಿವರ್ತಿಸಬೇಕೆನ್ನುವ ತುಡಿತಗಳೇ ದೇವನೂರರ ಚಿಂತನೆಯಲ್ಲಿ ಅಂತರ್ಗತವಾಗಿವೆ. ಮಾರ್ಕ್ಸ್‌ನ ಸಿದ್ಧಾಂತಗಳು ಈ ಜಗತ್ತನ್ನು ಬದಲಿಸುವ ಕಡೆಗೆ ಹೆಚ್ಚಿನ ಆಸಕ್ತಿಯನ್ನು ತೋರುವಂತೆ ದೇವನೂರರ ವಿಚಾರಧಾರೆಯು ಸ್ಥಾಪಿತ ಮೌಲ್ಯಗಳನ್ನು ಬುಡಮೇಲು ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ನೆಲೆಗಟ್ಟಿನ ಮೇಲೆ ‘ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು’ ಎನ್ನುವ ಸರ್ವಸಮಾನತೆಯ ಸಮಾಜವನ್ನು ನಿರ್ಮಿಸುವ ಇಂಗಿತವನ್ನು ಹೊಂದಿವೆ.

ಕೊನೆಟಿಪ್ಪಣಿಗಳು
1. ದೇವನೂರ ಮಹಾದೇವ, ‘ನನ್ನ ದೇವರು’, ಎದೆಗೆ ಬಿದ್ದ ಅಕ್ಷರ, ಪು. 5, ಅಭಿನವ ಪ್ರಕಾಶನ, 2012
2. ರಹಮತ್ ತರೀಕೆರೆ, ‘ತೇಜಸ್ವಿಯವರ ಮಾಯಾಲೋಕ’, ಕತ್ತಿಯಂಚಿನ ದಾರಿ, ಪು. 53, ಅಭಿನವ ಪ್ರಕಾಶನ, 2006, 2010
3. ಪ್ರಧಾನ ಗುರುದತ್ತ(ಸಂ), ಅಂಬೇಡ್ಕರ್, ‘ಬುದ್ಧ ಅಥವಾ ಕಾರ್ಲ್‍ಮಾಕ್ರ್ಸ್’, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಸಂಪುಟ-3, ಪು. 464, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 1994, 2010
4. ದೇವನೂರ ಮಹಾದೇವ, ಅದೇ, 301
5. ಎಚ್.ಎಸ್. ಅನುಪಮಾ, ‘ಎದೆಯ ಮಾತು ಮತ್ತು ಮೆರವಣಿಗೆ’, ಸಂವಾದ, ಪು. 27, ಏಪ್ರಿಲ್ 2013
6. ಹೆಚ್ಚಿನ ವಿವರಗಳಿಗೆ ನೋಡಿ, ಕೆ. ಸತ್ಯನಾರಾಯಣ, ‘ಎದಗೆ ಬಿದ್ದ ಪ್ರಚಾರ!’, ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ, ಪು. 1 ಮತ್ತು 5, ಮಾರ್ಚ್ 10, 2013