Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು

– ಜೀವಿ

ದೋ.. ಎಂದು ಸುರಿಯುತ್ತಿದ್ದ ಮಳೆ, ಮಧ್ಯರಾತ್ರಿ ದಾಟಿದರೂ ಎದ್ದೇಳೋ ಬೂದಿ, ಕಾಳ, ಕರಿಯ, ಕುನಾರಿ ಎಂಬ ಸದ್ದು ಕೇಳಲಿಲ್ಲ. ಮಳೆ ಕಾರಣದಿಂದ ಊಟಕ್ಕೆ ಕರೆಯಲು ಯಾರು ಬರಲಾರರೇನೋ ಎಂದುಕೊಂಡು ಅತ್ತಿತ್ತ ಹೊರಳಾಡಿದೆ. ಮಳೆಯಾದರೂ ನಿಲ್ಲಬಾರದೆ ಎಂದು ಮನದಲ್ಲೆ ಶಪಿಸಿ
hunger04-061ಕೊಂಡು ಕಣ್ಮುಚ್ಚಿದೆ. ಆದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮಳೆ ಕಡಿಮೆಯಾಯಿತು. ಕೊನೆಗೂ ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಲೋ ಬೂದಿ ಎಂಬ ಧ್ವನಿ ಕೇಳಿ ಕತ್ತಲಲ್ಲೆ ಕಣ್ಣರಳಿತು. ಎರಡು ಬಾರಿ ಕೂಗಿದ ನಂತರ ಕೆಮ್ಮುತ್ತಾ ಏನು ಗೌಡ್ರೆ ಎಂದ ನನ್ನ ಎದುರಿನ ಮನೆಯಲ್ಲಿದ್ದ ಬೂದಿ ಜವರಪ್ಪ. ಎದ್ದು ಮಕ್ಕಳ ಕರ್ಕೊಂಡು ಊಟಕ್ಕೆ ಬನ್ರೋ, ಹೆಂಗಸ್ರಿಗೂ ಕುಕ್ಕೆ ತಗೊಂಡ್ ಬರೋಕೆ ಹೇಳು ಎಂದು ಹೇಳಿ ಹೋದ.(ಎಲ್ಲರ ಮನೆಗೆ ಖುದ್ದು ಬಾಗಿಲು ತಟ್ಟಿ ಕರೆಯಬೇಕೆಂದೇನು ಇರಲಿಲ್ಲ. ಕೇರಿಯಲ್ಲಿ ನಿಂತು ಒಂದಿಬ್ಬರಿಗೆ ವಿಷಯ ಮುಟ್ಟಿಸಿದ್ದರೆ ಸಾಕಿತ್ತು.) ಆತ ಹೋಗಿ ಐದಾರು ನಿಮಿಷ ಆದರೂ ನಿಶ್ಯಬ್ಧ ಮುಂದುವರಿಯಿತು. ಬೂದಿ ಜವರಪ್ಪ ಮತ್ತೆ ನಿದ್ರೆಗೆ ಹೋದನೇನೋ, ಎಲ್ಲರು ಮಲಗಿದ್ದಾರೆ, ಯಾರೂ ಊಟಕ್ಕೆ ಹೋಗಲಾರರೇನೋ ಎಂದುಕೊಂಡು ಮಲಗದ್ದಲ್ಲೆ ಚಟಪಟಿಸಿದೆ.

ನಂತರ ಮೂಲೆ ಮನೆಯಿಂದ ಲಕ್ಕಜ್ಜ ಕೈಯಲ್ಲೊಂದು ಊರುಗೋಲು ಹಿಡಿದು ಮಕ್ಕಳೊಂದಿಗೆ ಹೆಜ್ಜೆ ಹಾಕಿದ. ಅವನು ಕೋಲು ಊರಿ ಬರುತ್ತಿದ್ದ ಶಬ್ದ ಕೇಳಿ ಜೀವ ಬಂದಂತಾಯಿತು. 10 ನಿಮಿಷದಲ್ಲಿ ನಿಶ್ಯಬ್ಧ ಮಾಯವಾಯಿತು. ಹೆಂಗಸರು-ಗಂಡಸರು ಮತ್ತು ಮಕ್ಕಳು ಮಾತನಾಡುವ ಸದ್ದು ಹೆಚ್ಚಾಯಿತು. ಒಬ್ಬೊಬ್ಬರಾಗಿ ಎದ್ದು ಚೆಂಬು-ಲೋಟ ಹಿಡಿದು ಮನೆಯಿಂದ ಹೊರ ಬಂದರು. ಆವರೆಗೆ ನೀರವ ಮೌನ ಆವರಿಸಿದ್ದ ಕೇರಿಯಲ್ಲಿ ಮಕ್ಕಳು-ಮಹಿಳೆಯರ ಉತ್ಸಾಹದ ಸದ್ದು ಜೋರಾಯಿತು.

ಅನ್ನದ ಮೇಲಿನ ಆಸೆಗೆ ನನಗೆ ನಿದ್ರೆ ಬಂದಿಲ್ಲ ಎಂಬುದು ನನ್ನವ್ವನಿಗೂ ಗೊತ್ತಿತ್ತು. ದೀಪ ಹಚ್ಚಿ ಊಟಕ್ಕೆ ಹೋಗ್ತಿಯಾ ಮಗನೇ ಎಂದು ಮೆಲು ಧ್ವನಿಯಲ್ಲೆ ಕೇಳಿದಳು. ಹೂಂ ಎಂದವನೆ ಎದ್ದು ಹೊರಟೆ, ಪಕ್ಕದಲ್ಲೆ ಮಲಗಿದ್ದ ನನ್ನಕ್ಕ, ಅಣ್ಣ, ಅಪ್ಪ ಎಲ್ಲರು ಎದ್ದರು. ನಾನೊಬ್ಬನಿಗೆ ಮಾತ್ರ ನಿದ್ರೆ ಬಂದಿಲ್ಲ ಎಂದುಕೊಂಡಿದ್ದ ನನಗೆ ಇಡೀ ಕೇರಿಯ ಜನರಿಗೆ ನಿದ್ರೆ ಬಂದಿಲ್ಲ, ಅನ್ನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಅರ್ಥವಾಯಿತು. ಅವ್ವ ಕೂಡ ಬಿದಿರ ಕುಕ್ಕೆಗೆ ಬಿಳಿ ಪಂಚೆ ಹರುಕು ಹಾಸಿ, ಸಾಂಬಾರಿಗೊಂದು ಪಾತ್ರೆ, ಪಾಯ್ಸಕ್ಕೊಂದು ಪಾತ್ರೆ ಸಿದ್ದ ಮಾಡಿಕೊಂಡಳು. Streetchildrenಗಂಡಸರು ಮತ್ತು ಮಕ್ಕಳು ಮಾತ್ರ ಮೇಲ್ಜಾತಿಯ ಕೇರಿಯಲ್ಲಿ ಅಥವಾ ಕೊಟ್ಟಿಗೆಯಲ್ಲೀ ಊಟ ಮಾಡಲು ಅವಕಾಶ ಇತ್ತು. ಹೆಂಗಸರು ಅಲ್ಲಿ ಊಟ ಮಾಡುವಂತಿರಲಿಲ್ಲ. ಕುಕ್ಕೆಗೆ ಅವರು ಹಾಕಿಕೊಟ್ಟ ಊಟ ತಂದು ಮನೆಯಲ್ಲಿ ತಿನ್ನಬೇಕಿತ್ತು. ಅದಕ್ಕಾಗಿ ಅವ್ವ ಕುಕ್ಕೆ ಸಿದ್ದ ಮಾಡಿಕೊಂಡಳು. ಅದನ್ನು ಹೊತ್ತು ಸಂಭ್ರಮದಿಂದ ಹೊರಟು ಮೇಲ್ಜಾತಿಯ ಕೇರಿ ಸೇರಿದೆವು.

ಮೇಲ್ಜಾತಿಯ ಎಲ್ಲರೂ ಊಟ ಮಾಡಿದ ನಂತರ ಏನಾದರೂ ಉಳಿದರೆ ನಮ್ಮನ್ನು ಕರೆಯುವ ಪರಿಪಾಟಲಿತ್ತು. ಹೋಗಿ ಮದುವೆ ಮನೆಯ ಮುಂದೆ ನಿಂತ ನಮನ್ನು ಎಲ್ಲಿ ಊಟಕ್ಕೆ ಕೂರಿಸಬೇಕು ಎಂಬ ಚರ್ಚೆ ನಡೆಯಿತು. ಮಳೆ ಬಂದಿದ್ದರಿಂದ ಬೀದಿಯಲ್ಲಿ ಕೂತು ಊಟ ಮಾಡುವ ಅವಕಾಶ ಇರಲಿಲ್ಲ. ಸ್ವಜಾತಿಯವರೆಲ್ಲ ಮನೆಯ ಒಳಗೇ ಕೂತು ಊಟ ಮಾಡಿ ಹೋಗಿದ್ದರು. ಎಲ್ಲರ ಮನೆಯ ಕೊಟ್ಟಿಗೆಯಲ್ಲೂ ದನಕರುಗಳಿದ್ದವು. ಮದುವೆ ಮನೆಯವರ ಕೊಟ್ಟಿಗೆಯಲ್ಲಿ ಸಾಮಾನು ಸರಂಜಾಮು ತುಂಬಿದ್ದವು. ಅಕ್ಕ-ಪಕ್ಕದ ಯಾರೂ ದನಕರುಗಳನ್ನು ಆಚೆಗೆ ಕಟ್ಟಿ ಊಟಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿರಲಿಲ್ಲ. ಊಟಕ್ಕೆಂದು ಕಾದು ನಿಂತವರಲ್ಲಿ ಲಕ್ಕಜ್ಜ ಹಾಗೆ ಕೈಗೆ ಕೊಡಿ ಸ್ವಾಮಿ ತಿನ್ಕೊಂಡು ಹೋಗ್ತಿವಿ ಎಂದ. ಅದನ್ನು ಒಪ್ಪದ ಮದುವೆ ಮನೆ ಯಜಮಾನ, ಹೇಗೋ ಮನವೊಲಿಸಿ ಒಂದು ಕೊಟ್ಟಿಗೆ ಖಾಲಿ ಮಾಡಿಸಿದ.

ಕೊಟ್ಟಿಗೆಯಲ್ಲಿ ಹುಲ್ಲು ಹಾಸಿಕೊಂಡು ಊಟಕ್ಕೆ ಕುಳಿತೆವು. ಅಳಿದುಳಿದ ಊಟಕ್ಕೆ ಬಂದಿದ್ದ ನಮಗೆ ಮದುವೆ ಮನೆ ಯಜಮಾನ, ಅನ್ನ-ಪಾಯ್ಸ ಎಲ್ಲಾ ಖಾಲಿ ಆಯ್ತು ಮುದ್ದೆ ಮಾತ್ರ ಇದೆ. ಹೊಟ್ಟೆ ತುಂಬ ಊಟ ಮಾಡಿ ಎಂದ. ನನನ್ನು ಸೇರಿ ಊಟಕ್ಕೆ ಬಂದಿದ್ದ ಮಕ್ಕಳಿಗೆ ಎದೆ ಜಲ್ ಎಂದಂತಾಯಿತು. ಲಕ್ಕಜ್ಜ ಮಕ್ಕಳಿಗಾದರೂ ಸಾಕಾಗುವಷ್ಟು ಇದೆಯಾ ನೋಡಿ ಸ್ವಾಮಿ ಎಂದು ದಯನೀಯವಾಗಿ ಕೇಳಿದ. ಅನ್ನ ಬಸಿದಿದ್ದ ಮಂಕ್ರಿ ಮತ್ತು ಪಾತ್ರೆ ತಳ ಎಲ್ಲವನ್ನು ಕೆರೆದು ಕೊನೆಗೂ ಒಂದಿಷ್ಟು ಅನ್ನ ತಂದ ಯಜಮಾನ. ನನ್ನನ್ನು ಸೇರಿ ಮಕ್ಕಳನ್ನು ಮಾತ್ರ ಗುರುತಿಸಿ ಕೋಸಂಬರಿ ಹಾಕುವಂತೆ ತಟ್ಟೆಗೆ ಅನ್ನ ಉದುರಿಸಿದ. ಕಡಿಮೆಯಾದರೂ ಚಿಂತೆಯಿಲ್ಲ ಅನ್ನದ ರುಚಿ ಅನುಭವಿಸಿದ ಸಮಾಧಾನವಾಯಿತು.

ಹಬ್ಬ-ಹರಿದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಕಾರಣಕ್ಕೆ ಅನ್ನ ಅಂದು ಅಮೃತಕ್ಕೂ ಮಿಗಿಲಾದ ರುಚಿ ಹೊಂದಿತ್ತು. ಸಿಕ್ಕಿದ್ದೆ ಸೀರುಂಡೆ ಎಂದು ಉಂಡ ಎಲೆ ಎತ್ತಿಕೊಂಡು ಹೊರಟೆವು. ಅವ್ವ ಹಿಡಿದಿದ್ದ ಕುಕ್ಕೆಗೆ ಮುದ್ದೆ ಮತ್ತು ಸಾಂಬಾರ್ ಮಾತ್ರ ಗತಿಯಾಯಿತು. ಅದು ಗಂಡಿನ ಮದುವೆ ಆಗಿದ್ದರಿಂದ ರಾತ್ರಿ ಚಪ್ಪರದ ಊಟ ಮಾತ್ರ ಇತ್ತು. ಮದುವೆ ಊಟಕ್ಕೆ ಹೆಣ್ಣಿನ ಮನೆಗೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗುವ ಅವಕಾಶ ಇರಲಿಲ್ಲ.

ನನಗಾಗಿ ಕಾದಿದ್ದಳು ಅವ್ವ:

ಹೀಗೆ ಅನ್ನದೊಂದಿಗೆ ತಳುಕುಹಾಕಿಕೊಂಡಿರುವ ಅನೇಕ ಘಟನೆಗಳು ನನ್ನನ್ನು ಪದೇ ಪದೇ ಕಾಡುವುದುಂಟು. ಮನೆಯಲ್ಲಿ ಅನ್ನದ ಮಡಿಕೆ ಅಥವಾ ಪಾತ್ರೆ ಉಪಯೋಗಕ್ಕೆ ಬರುತ್ತಿದ್ದು ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ. ಹಾಗಾಗಿ ಮೇಲ್ಜಾತಿಯವರ ಕೃಷಿ ಜಮೀನಿಗೆ ಕೂಲಿ ಹೋದರೆ ಅವ್ವ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬರುವಂತೆ ಹೇಳಿ ಹೋಗುವುದನ್ನು ಮರೆಯುತ್ತಿರಲಿಲ್ಲ.

ಅದೊಂದು ದಿನ ಅವ್ವ ಕೂಲಿಗೆ ಹೋಗುವ ಮುನ್ನ ಊರ ಸಮೀಪವೇ ಇರುವ ಗೌಡರ ಮನೆಯ ಹೊಲದ ಅಡ್ರೆಸ್ ಹೇಳಿದ್ದಳು. ಶಾಲೆಯಲ್ಲಿ ಊಟಕ್ಕೆ ಬಿಟ್ಟ ಕೂಡಲೇ ಓಡೋಡಿ ಹೋದೆ ಅಲ್ಲಿ ಅವ್ವ ಹಾಗೂ ಇನ್ನಾರು ಇರಲಿಲ್ಲ. ಆ ಹೊಲದಲ್ಲಿ ಕೆಲಸ ಮುಗಿದು ಊರಿನಿಂದ ಸುಮಾರು 2 ಕಿಮೀಯಷ್ಟು ದೂರವಿರುವ ಇನ್ನೊಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಿತು.

ಅಲ್ಲಿ ಓಡಲು ಆರಂಭಿhunger-2ಸಿ ನಿಂತಿದ್ದು ಅವ್ವನ ಮುಂದೆಯೇ. ಆದಾಗಲೇ ಎಲ್ಲರೂ ಊಟ ಮುಗಿಸುವ ಹಂತಕ್ಕೆ ಬಂದಿದ್ದರು. ಆದರೆ ನನ್ನವ್ವ ಇನ್ನೂ ಮುದ್ದೆ ಮುಗಿಸದೆ ದಾರಿ ನೋಡುತ್ತಿದ್ದಳು. ಕೂಡಲೇ ಕೈ ತೊಳೆಯುವ ಗೋಜಿಗೂ ಹೋಗದೆ ಅವ್ವನ ತಟ್ಟೆಯಲ್ಲೇ ಊಟಕ್ಕೆ ಕುಳಿತೆ. ಊಟ ಮುಗಿದಿಲ್ಲ ಎಂಬ ಸಂತಸ ನನಗಾದರೆ, ಅವ್ವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಅತ್ತ ಗಮನವನ್ನೂ ಹರಿಸದ ನಾನು ಅನ್ನ ಊಟ ಮಾಡುವ ಸಂಭ್ರಮದಲ್ಲಿದ್ದೆ. ಕೂಲಿಗೆ ಕರೆದಿದ್ದ ಮೇಲ್ಜಾತಿಯವರು ಕೂಡ ಅಕ್ಕಿ ಖರೀದಿ ಮಾಡಿ ತಂದು ತಿನ್ನಬೇಕಿತ್ತು. ಹಾಗಾಗಿ ಹೊಟ್ಟೆ ತುಂಬ ಮುದ್ದೆ, ಅದರ ಮೇಲೆ ಸ್ವಲ್ಪ ಅನ್ನ ಬಡಿಸುತ್ತಿದ್ದರು. ಎಲೆಗೆ ಹಾಕಿದ್ದ ಅನ್ನದಲ್ಲಿ ಒಂದು ಅಗುಳನ್ನು ಅವ್ವ ಮುಟ್ಟಲಿಲ್ಲ. ನನಗೆ ಅನ್ನ ಊಟ ಮಾಡಿಸಿದ ತೃಪ್ತಿ ಅವ್ವನಿಗಾಗಿತ್ತು. ಪರಮಾನಂದಿಂದ ಮತ್ತೆ ಶಾಲೆಯತ್ತ ಓಡಿದೆ.

ಸ್ವಾಮಿ ಮಾಸ್ಟರ್ ಕೊಟ್ಟ ಅನ್ನ:

ಸರ್ಕಾರಿ ಶಾಲೆಯಲ್ಲಿ ಈಗಿನಂತೆ ಬಿಸಿಯೂಟವಿರಲಿಲ್ಲ. ಸಮೀಪದ ಪಟ್ಟಣದಿಂದ ಬರುತ್ತಿದ್ದ ಸ್ವಾಮಿ ಮಾಸ್ಟರ್ ಟಿಫನ್ ಬಾಕ್ಸ್ನಲ್ಲಿ ಅನ್ನ ತಂದು ಮಧ್ಯಾಹ್ನದ ಊಟ ಮಾಡುತ್ತಿದ್ದರು. ಓದಿನಲ್ಲಿ ಸ್ವಲ್ಪ ಮುಂದಿರುವ ಹುಡುಗರೆಂದರೆ ಅವರಿಗೆ ಅಚ್ಚುಮೆಚ್ಚು. ನನಗೋ ಅವರ ಅನ್ನದ ಬಾಕ್ಸ್ ಎಂದರೆ ಅಚ್ಚುಮೆಚ್ಚು. ಮಧ್ಯಾಹ್ನ 1ಕ್ಕೆ ಊಟದ ಗಂಟೆ ಬಾರಿಸಿದ ಕೂಡಲೇ ಮನೆಗೋಗಿ ಬೆಳಗ್ಗೆಯೇ ಮಾಡಿಟ್ಟಿದ್ದ ಮುದ್ದೆಯಲ್ಲಿ ಅರ್ಧದಷ್ಟ ತಿಂದು ಹತ್ತೇ ನಿಮಿಷದಲ್ಲಿ ವಾಪಸ್ ಬರುತ್ತಿದೆ. ನಾನು ಬರುವಷ್ಟರಲ್ಲಿ ಸ್ವಾಮಿ ಮಾಸ್ಟರ್ ಬಾಕ್ಸ್ ಖಾಲಿಯಾಗದಿರಲಿ ಎಂದು ಊರ ದೇವರು ಬಸವಣ್ಣನಿಗೊಂದು ಕೈಮುಗಿದು ಹೋಗುತ್ತಿದ್ದೆ. ನನ್ನಂತೆ ಮೂರ್ನಾಲ್ಕು ಮಂದಿಗೆ ಆ ಬಾಕ್ಸ್ ಮೇಲೆ ಕಣ್ಣಿತ್ತು. ಅವರು ಊಟ ಮಾಡಿದ ಬಾಕ್ಸ್ ತೊಳೆದಿಡುವ ಪುಣ್ಯ ನಮ್ಮದಾದರೆ ಸಾಕು ಎಂದುಕೊಳ್ಳುತ್ತಿದ್ದೆವು. ಅವರು ಕೂಡ ಕೆಳ ಜಾತಿಯವರೇ ಆಗಿದ್ದರಿಂದ ಮೇಲ್ಜಾತಿ ಮಕ್ಕಳಿಗೆ ಅವರು ತಂದಿದ್ದ ಅನ್ನ ಕೊಡುವ ಸಾಹಸವನ್ನು ಅವರು ಮಾಡುತ್ತಿರಲಿಲ್ಲ. ಹಾಗಾಗಿ ಮೂರ್ನಾಲ್ಕು ಮಂದಿಗೆ ಅದರ ಅವಕಾಶ ಸಿಗುತ್ತಿತ್ತು.

ಮನೆಯಿಂದ ಬೇಗ ಬಂದವನೇ ಕೊಠಡಿಯೊಂದರಲ್ಲಿ ಊಟ ಮಾಡುತ್ತಿದ್ದ ಸ್ವಾಮಿ ಮಾಸ್ಟರ್ಗೆ ಕಾಣಿಸುವಂತೆ ಕಿಟಕಿಯ ಸಮೀಪ ಓಡಾಡುತ್ತಿದೆ. ಕಣ್ಣಿಗೆ ಕಂಡ ಕೂಡಲೇ ಒಳ ಕರೆದು ಬಾಕ್ಸ್ನಲ್ಲಿ ಸ್ವಲ್ಪ ಮಿಗಿಸಿದ್ದ ಅನ್ನ ಊಟ ಮಾಡಲು ಹೇಳುತ್ತಿದ್ದರು. ಊಟ ಮಾಡಿ ಬಾಕ್ಸ್ ತೊಳೆದಿಡುವುದು ಸಂತಸದ ಕ್ಷಣವಾಗುತ್ತಿತ್ತು. ಕೆಲವೊಮ್ಮೆ ನಾನು ಬರುವಷ್ಟರಲ್ಲಿ ಅವರ ಊಟ ಮುಗಿದು ಬೇರಾರೋ ಬಾಕ್ಸ್ ತೊಳೆಯುತ್ತಿದ್ದರು. ಅಂದು ನಿರಾಸೆಯೇ ಗತಿಯಾಗುತ್ತಿತ್ತು.

ಮೂರು ಮಡಿಕೆ:

‘ನಾಗಾ…. ಅವ್ವಾರ ಮನೇಲಿ ಮೂರು ಮಡಿಕೆ ಬಾರೋ…’ ಎಂದು ಊರಿಗೆಲ್ಲ ಕೇಳುವಂತೆ ಕೂಗುತ್ತಿದ್ದ ನನ್ನ ಗೆಳೆಯ ಮಹೇಶ. ಅವನ ತಮ್ಮ ನಾಗರಾಜನೋ ಎದ್ದು ಬಿದ್ದ ಓಡಿ ಹೋಗುತ್ತಿದ್ದ. ಆಗಾಗ ಹೀಗೆ ಕೂಗುತ್ತಿದ್ದ ಕಾರಣಕ್ಕೆ ಈವರೆಗೆ ಅವನಿಗೆ ‘ಮಡಿಕೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿದೆ. ಮಹೇಶನ ಮೂರು ಮಡಿಕೆ ಸೂತ್ರದಲ್ಲಿ ದೊಡ್ಡದೊಂದು ಅನ್ನದ ಕಥೆಯಿದೆ. ಹಬ್ಬ-ಜಾತ್ರೆಯಲ್ಲಿ ಅನ್ನ ಕಾಣುತ್ತಿದ್ದ ಕಾಲದಲ್ಲಿ ಮನೆಯಲ್ಲಿ ಮೂರು ಮಡಿಕೆ ಬಿಸಿಯಾಗಿದ್ದರೆ ಅದು ನಮಗೆ ಸಂಭ್ರಮದ ದಿನ.

ಪ್ರತಿನಿತ್ಯ ಒಂದು ಮುದ್ದೆ ಮತ್ತೊಂದು ಸಾಂಬಾರ್ ಸೇರಿ ಎರಡು ಮಡಿಕೆ ಬಿಸಿಯಾಗುವುದು ಸಾಮಾನ್ಯ. ಆದರೆ ಮೂರನೇ ಮಡಿಕೆ ಬಿಸಿಯಾಗಿದ್ದರೆ ಅದು ಅನ್ನವೇ ಎಂಬುದು ಖಾತ್ರಿಯಾಗುತ್ತಿತ್ತು. ಮಡಿಕೆಗಳ ಮುಚ್ಚಳ ತೆಗೆದು ನೋಡುವುದು ತಡವಾಗುತ್ತದೆಂದು ಮಡಿಕೆಗಳನ್ನು ಹೊರಗಿನಿಂದಲೇ ಮುಟ್ಟಿ ಮನೆಯಲ್ಲಿ ಅನ್ನ ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದ ಮಹೇಶ.

ನಮ್ಮ ಮನೆಯ ಎಡ ಭಾಗಕ್ಕೆ ಅವನ ಮನೆಯಾದರೆ, ಬಲಭಾಗಕ್ಕೆ ಅವರ ಅಜ್ಜಿಯ ಮನೆ ಇತ್ತು. india-poverty-hungerಎರಡು ಮನೆಯ ಮಧ್ಯದಲ್ಲಿ ನಮ್ಮ ಮನೆಯಿತ್ತು. ಸಾಮಾನ್ಯವಾಗಿ ಅಜ್ಜಿ ಮನೆಯಲ್ಲಿ ಹೆಚ್ಚು ಬಾರಿ ಮೂರು ಮಡಿಕೆ ಬಿಸಿಯಾಗಿರುತ್ತಿದ್ದವು. ಎಲ್ಲೋ ಆಟವಾಡುತ್ತಿದ್ದಾಗ ಊಟಕ್ಕೆ ಕರೆದರೆ ಕೂಡಲೇ ಓಡಿ ಬಂದು ಮಡಿಕೆಗಳನ್ನು ಮುಟ್ಟಿ ನೋಡುತ್ತಿದ್ದ. ಮೂರು ಮಡಿಕೆ ಬಿಸಿಯಾಗಿವೆ ಎಂಬುದು ಗೊತ್ತಾದ ಕೂಡಲೇ ಊರಿಗೆಲ್ಲ ಕೇಳುವಂತೆ ತಮ್ಮ ನಾಗರಾಜನನ್ನು ’ನಾಗಾ… ಅವ್ವಾರ ಮನೇಲಿ ಮೂರು ಮಡಿಕೆ ಬಾರೋ….’ ಎಂದು ಕೂಗುತ್ತಿದ್ದ. ನಾಗನೋ ಓಡಿ ಹೋಗಿ ಊಟಕ್ಕೆ ಕೂರುತ್ತಿದ್ದ. ಅದು ನನಗೆ ಅಜ್ಜಿ ಮನೆ ಅಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ಸ್ನೇಹಿತನೊಂದಿಗೆ ಅನ್ನ ಊಟ ಮಾಡುವ ಅವಕಾಶ ಸಿಗುತ್ತಿತ್ತು. ಈ ಕಾರಣಕ್ಕೆ ಮಹೇಶ ಇಂದಿಗೂ ‘ಮಡಿಕೆ’. ಇಂದಿಗೂ ಅವನ ಮೊಬೈಲ್ ನಂಬ ರ್ ನನ್ನ ಮೊಬೈಲ್ನಲ್ಲಿ ಮಡಿಕೆ ಎಂದೇ ಸೇವ್ ಆಗಿದೆ(ಆದರೆ ಇತ್ತೀಚೆಗಷ್ಟೆ ನಮ್ಮಿಂದ ದೂರವಾದ). ಅವನನ್ನು ಛೇಡಿಸಲು ಅಡ್ಡ ಹೆಸರಿಂದ ಕರೆಯುತ್ತಿದ್ದರೂ ಆ ಮೂರು ಮಡಿಕೆ ಸೂತ್ರದಲ್ಲಿ ಅನ್ನ ಮತ್ತು ಹಸಿವಿಗೆ ಇರುವ ಬೆಲೆ ಅರ್ಥವಾಗುತ್ತದೆ.

ಹಸಿವನ್ನೇ ಕಾಣದವರಿಗೆ, ಹುಟ್ಟಿನಿಂದಲೇ ಮನೆಯಲ್ಲಿ ನಿತ್ಯ ಮೂರು ಮಡಿಕೆ ಬಿಸಿ ಮಾಡಿಕೊಂಡು ಉಂಡವರಿಗೆ ಅನ್ನದ ಮಹತ್ವ ಅರ್ಥವಾಗುವುದು ಕಷ್ಟ. ವಾರಾನ್ನ ಉಂಡವರಿಗೆ ತಿಂಗಳುಗಟ್ಟಲೆ ಅನ್ನವನ್ನೇ ಕಾಣದವರ ನೋವು ಗೊತ್ತಾಗುವುದಿಲ್ಲ. ಇಲ್ಲಿಯ ನಾನು ಅನುಭವಿಸಿದ ಘಟನೆಗಳು ಕೇವಲ ಹತ್ತು-ಹದಿನೈದು ವರ್ಷ ಹಿಂದಿನವು. ಇಂದಿಗೂ ಬಡತನ ನಮ್ಮ ಊರಲ್ಲಿ ಹೆಚ್ಚು-ಕಮ್ಮಿ ಅಷ್ಟೇ ಇದೆ.

ಭೈರಪ್ಪ ಮತ್ತು ಅನ್ನಭಾಗ್ಯ : ಒಂದು ಹಿಡಿ ಅಕ್ಕಿಯ ಕಥೆ


– ಶ್ರೀಧರ್ ಪ್ರಭು


ಕಲ್ಕತ್ತೆಯ ಬೇಲೂರು ಮಠದ ನಿರ್ಮಾಣ ಕೊನೆಯ ಹಂತದಲ್ಲಿತ್ತು. ಅಲ್ಲಿ ಹೆಚ್ಚಿನ ಕಟ್ಟಡ ಕಾರ್ಮಿಕರೆಲ್ಲರೂ ಬಂಗಾಳ ಬಿಹಾರ ಗಡಿ ಭಾಗದ ಸಂಥಾಲ್ ಆದಿವಾಸಿಗಳು. ಎರಡು ತುತ್ತು ಅನ್ನ ಕೊಟ್ಟರೆ ಸಾಕು ಬಂಗಾಳದ ಹಳ್ಳಿಗಳಲ್ಲಿ ಕೃಷಿ ಕೂಲಿ ಕೆಲಸ ಮತ್ತು ನಗರ ಭಾಗಗಳಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಸೇರಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ ಈ ಕಷ್ಟ ಜೀವಿಗಳ ಮಧ್ಯೆ ತುಂಬು ಆತ್ಮೀಯತೆಯಿಂದ ಬೆರೆತು ಹೋಗುತ್ತಿದ್ದ ವಿವೇಕಾನಂದರಿಗೆ ಬಹು ಬೇಗ ಕ್ಷೀಣಿಸುತ್ತಿದ್ದ ತಮ್ಮ ಅರೋಗ್ಯದ ಪರಿವೆ ಎಲ್ಲವೂ ಮರೆಯುತ್ತಿತ್ತು. ಒಂದು ದಿನ ವಿವೇಕಾನಂದರು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬ ಶಿಷ್ಯರಿಗೆ ಹೇಳುತ್ತಾರೆ ” ನನ್ನ ಕೊನೆಯ ಆಸೆ ಏನು ಗೊತ್ತೇ? Vivekanandaಯುರೋಪ್ ಮತ್ತು ಅಮೇರಿಕೆಯಲ್ಲಿ ಜರುಗುವ ನಮ್ಮ ವೇದಾಂತ ಕಾರ್ಯಕ್ರಮಗಳ ಸಂಪಾದನೆಯನ್ನು ಸಂಪೂರ್ಣವಾಗಿ ವ್ಯಯಿಸಿದರೂ ಚಿಂತೆಯಿಲ್ಲ, ಈ ನನ್ನ ಜನಕ್ಕೆ ದಿನವೂ ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಎಷ್ಟೊಂದು ಅನ್ನ ಗೊತ್ತೇ? ಈ ಅನ್ನಕ್ಕೆ ಬೇಕಿರುವ ಅಕ್ಕಿಯನ್ನು ಬಸಿದು ಚೆಲ್ಲಿದ ನೀರಿನಿಂದ ಗಂಗೆಯ ಮಡಿಲೆಲ್ಲವೂ ಬೆಳ್ಳಗಾಗಿ ಬಿಡಬೇಕು!”

ಇದೆಲ್ಲ ಕಳೆದು ಸುಮಾರು ನೂರಾ ಹದಿನೈದು ವರ್ಷಗಳು ಸಂದರೂ ಗಂಗೆ, ಯಮುನೆ, ತುಂಗೆ, ಭಾಗೀರತಿಗಳ ನೀರು ಇನ್ನೂ ಬೆಳ್ಳಗಾಗಿಲ್ಲ.

ಮೇ ೨೦೧೫ ರಲ್ಲಿ ವಿಶ್ವ ಸಂಸ್ಥೆಯ “ಆಹಾರ ಮತ್ತು ಕೃಷಿ ಸಂಘಟನೆ” (FAO) ಪ್ರಕಟಿಸಿದ “ವಿಶ್ವ ಆಹಾರ ಸುರಕ್ಷತಾ “ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ೧೯೪.೬ ಮಿಲಿಯನ್ (ಹತ್ತೊಂಬತ್ತುವರೆ ಕೋಟಿ) ಜನ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲೂ ಸಾಕಷ್ಟಿದೆ.

೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿನ “ವಿಮೋಚನಾ” ಸಂಘಟನೆಯ ಅಧ್ಯಕ್ಷರು ಅಂದಿನ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಕರ್ನಾಟಕದಲ್ಲಿ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳ ಬಗ್ಗೆ india-poverty-hungerಒಂದು ಸವಿಸ್ತಾರವಾದ ಪತ್ರ ಬರೆದು ಕರ್ನಾಟಕದ ನ್ಯಾಯಾಂಗ ಈ ಬಗ್ಗೆ ಗಮನ ಹರಿಸಲು ಕೋರುತ್ತಾರೆ. ಮಾನ್ಯ ಉಚ್ಚ ನ್ಯಾಯಾಲಯವು ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಮುಕದ್ದಮೆಯೆಂದು (W. P. No. 381571 / 2011) ದಾಖಲಿಸಿಕೊಂಡು, ಅಕ್ಟೋಬರ್ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಒಂದು ವಿವರವಾದ ವರದಿ ನೀಡಲು ನಿರ್ದೇಶನ ನೀಡುತ್ತಾರೆ. ಆಗಸ್ಟ್ ೨೦೧೨ ರಲ್ಲಿ ಸೇವಾ ಪ್ರಾಧಿಕಾರ, ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಎನ್. ಕೆ. ಪಾಟೀಲ್ ನೇತೃತ್ವದ ಸಮಿತಿ ರಚಿಸಿ ತನ್ನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಯಲ್ಲಿನ ಕೆಲವು ವಿವರಗಳನ್ನು ಗಮನಿಸಿ:

  1. ಪ್ರತಿ ಸಾವಿರ ಶಿಶುಗಳಲ್ಲಿ ಕರ್ನಾಟಕದಲ್ಲಿ ಆಹಾರ ಕೊರತೆಯಿಂದಾಗಿ ಒಂದು ವರ್ಷಕ್ಕೂ ಮಿಕ್ಕದ ೪೩ ಶಿಶುಗಳು ಅಸು ನೀಗುತ್ತವೆ.
  2. ಐದು ವರ್ಷಗಳ ಒಳಗಿನ ಪ್ರತಿ ಸಾವಿರ ಶಿಶುಗಳಲ್ಲಿ ಸುಮಾರು ೫೫ ಶಿಶುಗಳು ಆಹಾರ ಕೊರತೆಯಿಂದ ಸಾವನ್ನಪ್ಪುತ್ತವೆ.
  3. ೨೦೧೨ ರ ಅಂಕಿ ಅಂಶ ಗಳ ಪ್ರಕಾರ ICDS ಯೋಜನೆಯಲ್ಲಿ ಕರ್ನಾಟಕದಲ್ಲಿ ದಾಖಲಾದ ೩೫,೯೯, ೪೮೪ ಮಕ್ಕಳಲ್ಲಿ ಸುಮಾರು ೧೧,೩೯,೪೫೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ, ಸುಮಾರು ೬೩,೨೭೩ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.
  4. ೨೦೧೨ ರಲ್ಲಿ ಸುಮಾರು ೧೬,೧೨,೧೬೩ ಮಕ್ಕಳಿಗೆ ICDS ಯೋಜನೆಯ ಲಾಭವೇ ದಕ್ಕುತ್ತಿಲ್ಲ. ಇವರಲ್ಲಿ ೨,೧೭,೮೮೯ ಮಕ್ಕಳು ಆಹಾರ ಕೊರತೆಯಿಂದ ಬಳಲುತ್ತಿದ್ದರೆ, ೨೧,೧೫೧ ಮಕ್ಕಳು ಅತ್ಯಂತ ಭೀಕರ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ.

ಇದೆಲ್ಲ ನಾಲ್ಕು ವರ್ಷಗಳ ಹಿಂದಿನ ಕಥೆ. ಮತ್ತು ಇವೆಲ್ಲವೂ ಸರಕಾರಿ ಅಂಕಿ ಅಂಶಗಳಲ್ಲಿ ಹಿಡಿದಿಟ್ಟ ವಿವರಗಳು; ಇನ್ನು ಇಂದಿನ ಸತ್ಯಾಂಶ ಇನ್ನೆಷ್ಟು ಭೀಕರವೋ?

ನಮ್ಮ ಸಂವಿಧಾನದ ೩೯ (ಎಫ್ ) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಂತರಾಗಿ ಬದುಕಲು ಬೇಕಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರಭುತ್ವಕ್ಕಿದೆ. ವಿಪರ್ಯಾಸವೆಂದರೆ, ನಲವತ್ತೇಳರ ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಏಳು ದಶಕಗಳು ಸಂದ ನಂತರ ಸ್ವತಂತ್ರ ಭಾರತದಲ್ಲಿ ಜನಿಸಿದ ಒಂದು ಶಿಶುವಿಗೆ ಕನಿಷ್ಠ ಬದುಕಲು ಬೇಕಿರುವಷ್ಟು ಆಹಾರ ಕೊಡದಷ್ಟು ದಾರಿದ್ರ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ೨೦೦೫ ಮತ್ತು ೨೦೧೩ ರ ಮಧ್ಯೆ FCI ಗೋದಾಮುಗಳಲ್ಲಿ ಸುಮಾರು 1.94 ಲಕ್ಷ ಮೆಟ್ರಿಕ್ ಟನ್ ಗಳಷ್ಟು (೧೯೪೦೦೦೦೦೦೦೦೦೦೦ ಕಿಲೊ) ಆಹಾರ ಸಾಮಗ್ರಿ ಮಣ್ಣು ಪಾಲಾಗಿದೆ. ಇದರ ಸಾವಿರದ ಒಂದು ಅಂಶ ಆಹಾರ ಶಿಶುಗಳ ಹಸಿದ ಹೊಟ್ಟೆ ಸೇರಿದ್ದರೆ ಎಷ್ಟು ಲಕ್ಷ ಮಕ್ಕಳನ್ನು ಬದುಕಿಸಬಹುದಿತ್ತೋ?

ಪ್ರಸಕ್ತದಲ್ಲಿ ಅನ್ನವನ್ನು ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಡವರಿಗೆ ಅಕ್ಕಿಕೊಡುವದರಿಂದ ಮೊದಲ್ಗೊಂಡು, Siddaramaiah-annyabhagyaಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವದನ್ನು ಕೂಡ ವಿರೋಧಿಸಲಾಗುತ್ತಿದೆ. ಒಂದು ಕಡೆ, ಭಾರತವನ್ನೇ ತಮ್ಮ ಮನೆ ಮಾಡಿಕೊಂಡು ಬಡವರ ಮಧ್ಯೆ ಗುಡಿಸಲು ಕಟ್ಟಿಕೊಂಡು ಬಡಜನರನ್ನು ಸಂಘಟಿಸುತ್ತಿರುವ ವಿಶ್ವ ಮಾನ್ಯ ಅರ್ಥ ಶಾಸ್ತ್ರಜ್ಞ್ಯ ಜೀನ್ ಡ್ರೀಜ್ ರಂಥವರು ಬಡವರ ಆಹಾರದ ಹಕ್ಕಿನ ಪರ ಧ್ವನಿ ಎತ್ತಿದ್ದಾರೆ. ಆದರೆ ಭಾರತವನ್ನು ‘ಮಾತೃಭೂಮಿ’ ಎನ್ನುವ “ಬುದ್ಧಿವಂತ” ಜಾತಿಗಳ ಸಾಹಿತಿಗಳು ಇದನ್ನು ವಿರೋಧಿಸಿದ್ದಾರೆ. ಮಾತು ಮಾತಿಗೆ ವೇದ ಉಪನಿಷತ್ತು ಉಲ್ಲೇಖಿಸಿ ಮಾತನಾಡುವವರು “ಅನ್ನಂ ಬ್ರಹ್ಮೇತಿ ವ್ಯಜಾನತ್” ಎಂಬ ತೈತ್ತಿರೀಯ ಉಪನಿಷತ್ತಿನ ವಾಕ್ಯವನ್ನು ಕೇವಲ ತಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸಿಕೊಳ್ಳದೆ ಭಾವಕೋಶದಲ್ಲಿಳಿಸಿಕೊಂಡು ನೋಡಿದರೆ ಹಸಿವಿನ ಭೀಕರತೆ ಕಾಣಿಸೀತು. ಶಾಸ್ತ್ರಗಳನ್ನೇ ಶಸ್ತ್ರ ಮಾಡಿಕೊಂಡು ಸಮಾಜದ ಬಹುಜನರನ್ನು ಅಕ್ಷರದಿಂದ ವಂಚಿಸಿದ ಶಕ್ತಿಗಳೇ ಇಂದು ಬಡವರಿಗೆ ಅನ್ನದಿಂದ ವಂಚಿಸುವ ಹುನ್ನಾರದಲ್ಲಿ ಒಂದಾಗಿದ್ದಾರೆ.

ಮಧ್ಯಮವರ್ಗಕ್ಕೂ ಸಾಕಷ್ಟು ಗೊಂದಲಗಳಿವೆ. ಇಂದು ಸರಕಾರ ಸಬ್ಸಿಡಿ ಹಣ ನೀಡದಿದ್ದರೆ ಇಂದು ಪ್ರತಿ ಮನೆಗೂ ಒಂದೂವರೆ ಪಟ್ಟು ವಿದ್ಯುತ್ ಮತ್ತು ಅಡುಗೆ ಗ್ಯಾಸ್ ದರ ತೆರಬೇಕು. ಒಂದೇ ಒಂದು ವರ್ಷ ಸಬ್ಸಿಡಿ ನೀಡದಿದ್ದರೆ ದೇಶದ ಅರವತ್ತು ಶೇಕಡಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸತ್ತು ಹೋಗುತ್ತವೆ. IITಯ ವಿವೇಕಾನಂದ ಅಧ್ಯಯನ ಕೇಂದ್ರದಲ್ಲಿ ದೇಶಭಕ್ತಿ ಪ್ರದರ್ಶಿಸಿ ಬೇಜಾರಾದ ನಂತರ ನಂತರ ಅಮೇರಿಕ ಕೈ ಬೀಸಿ ಕರೆಯುತ್ತದೆ. ಮಧ್ಯಮ ವರ್ಗಕ್ಕೆ ಇವೆಲ್ಲವೂ ಪ್ರಕೃತಿ ಸಹಜ; ಆದರೆ ಬಡವರಿಗೆ ಅಕ್ಕಿ ಕೊಟ್ಟರೆ ಅದು ದೇಶ ದ್ರೋಹ!

ಹತ್ತಾರು ಸಾವಿರ ಕೋಟಿ ಕೈಗಾರಿಗಾ ಸಹಾಯ ಧನ ಮತ್ತು ಪುಗಸಟ್ಟೆ ಸರಕಾರಿ ಜಮೀನು ಪಡೆದು ಕೊಂಡು ಹತ್ತೂವರೆ ಸಾವಿರ ಕಾರ್ಮಿಕರನ್ನು ದುಡಿಸಿಕೊಂಡು ಕೇವಲ ಎರಡೂವರೆ ದಶಕಗಳಲ್ಲಿ ಹದಿನೇಳು ಸಾವಿರದ ಐನೂರು ಬಿಲಿಯನ್ ಡಾಲರ್ (ರೂಪಾಯಿ ಅಲ್ಲ ಅಮೆರಿಕನ್ ಡಾಲರ್, ಗಮನಿಸಿ) ಸಂಪತ್ತು ಸಂಗ್ರಹಿಸಿರುವ ಗೌತಮ್ ಅದಾನಿಯವರಿಗೇ ಸುಸ್ತಾಗಿಲ್ಲ, ಇನ್ನು ಸಾಕು ಎನಿಸಿಲ್ಲ; ಇನ್ನು ತಿಂಗಳಿಗೆ ಹತ್ತು-ಹದಿನೈದು ಕೆಜಿ ಅಕ್ಕಿ ಪಡೆದುಕೊಂಡ ಬಡವನಿಗೆ ಸೋಮಾರಿತನ ಬರುತ್ತದೆಯೇ?

ಇಂದು ಬಡವರ ಜೀವನಕ್ಕೆ ಅಕ್ಕಿ ಬಂದು ಅವರ ಪ್ರಾಥಮಿಕ ಅಗತ್ಯತೆಗಳಿಗೆ ಹರಸಾಹಸ ಮಾಡುವ ಪ್ರಮೇಯ ಕೊಂಚ ಮಟ್ಟಿಗೆ ತಗ್ಗಿದೆ. ಎರಡು ಮುಷ್ಟಿ ಅಕ್ಕಿಗೆ ಜೀತದಂತೆ ದುಡಿಸಿಕೊಳ್ಳುವವರ ಸೊಲ್ಲು ಸ್ವಲ್ಪ ಅಡಗಿದೆ. ಮನೆ ಕೆಲಸದವರಿಂದ ಮೊದಲ್ಗೊಂಡು ಕಟ್ಟಡ ಕಾರ್ಮಿಕರ ತನಕ ಅಸಂಖ್ಯ ಅಸಂಘಟಿತರಿಗೆ ಮಾನವ ಘನತೆಗೆ ಸಲ್ಲಬೇಕಾದ ವೇತನ ಕೊಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಲದಲ್ಲಿ ದುಡಿಯುವ ಕೃಷಿ ಕಾರ್ಮಿಕ, ನಮ್ಮ ಕೊಳೆ ತೊಳೆಯುವ ಪೌರ ಕಾರ್ಮಿಕರಿಗೆ ಚಿಲ್ಲರೆ ಕಾಸು ಕೊಟ್ಟು ದುಡಿಸಿಕೊಳ್ಳುವ ಕಾಲ ಮರೆಯಾಗುತ್ತಿದೆ.

ಇಂದು ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬುದ್ಧಿಶಕ್ತಿಯಿಂದ ಮತ್ತು ಶ್ರಮಶಕ್ತಿಯಿಂದ ಕೆಲಸ ಮಾಡುವ ಕಾರ್ಮಿಕರ ವೇತನಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದು ಇರಲೂ ಕೂಡದು. ನಿಜವಾಗಿ ನೋಡಿದರೆ ಶ್ರಮ ಶಕ್ತಿಯ ಕಾರ್ಮಿಕರಿಗೆ ಹೆಚ್ಚಿನ ಆಹಾರ ಮತ್ತು ಅರ್ಥಿಕ ಸುರಕ್ಷತೆಯ ಅಗತ್ಯವಿದೆ.

ನಿಮಗೆ ಗೊತ್ತಿರಲಿ, ಸಬ್ಸಿಡಿಯನ್ನು ಹಿಗ್ಗಾ ಮುಗ್ಗಾ ವಿರೋಧಿಸುವ ಅಮೇರಿಕ ವರ್ಷವೊಂದಕ್ಕೆ ತನ್ನ ಕೃಷಿ ಕ್ಷೇತ್ರಕ್ಕೆ ೨೦ ಬಿಲಿಯನ್ ಡಾಲರ್ ಗಳಷ್ಟು “ಸಹಾಯ ಧನ” ನೀಡುತ್ತದೆ. ಯೋಚಿಸಿ ನೋಡಿ, ಎಲ್ಲವನ್ನು ಮಾರುಕಟ್ಟೆಯೇ ನಿರ್ಧರಿಸಲಿ ಎಂದು ಬಗ್ಗೆ ಜಗತ್ತಿಗೆಲ್ಲ ಪಾಠ ಹೇಳುವ ಅಮೇರಿಕ ಯಾಕೆ ಸಹಾಯ ಧನ ಕೊಡಬೇಕು? ಯಾಕೆಂದರೆ ಜಾಗತಿಕ ಕೃಷಿ ಬಿಕ್ಕಟ್ಟು ಎಷ್ಟು ಭೀಕರವಾಗಿದೆಯೆಂದು ಎಲ್ಲರಿಗಿಂತ ಚೆನ್ನಾಗಿ ಅಮೆರಿಕೆಗೇ ಗೊತ್ತಿದೆ. ಬಂಡವಾಳ ಆಕರ್ಷಿಸುವ ನೆಪದಲ್ಲಿ ಇದ್ದ ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಸಿಯುತ್ತಿರುವ ಸರಕಾರಗಳು ಕೃಷಿಯನ್ನು ಅಷ್ಟಿಷ್ಟು ಕೂಡ ಪೋಷಿಸದಿದ್ದರೆ ಇನ್ನು ಒಂದೆರಡು ದಶಕಗಳಲ್ಲೇ ಹೊಟ್ಟೆಗೆ ಸಿಮೆಂಟ್ ತಿನ್ನುವ ಪ್ರಮೇಯ ಬಂದೀತು. ಅಕ್ಕಿ ದವಸ ಧಾನ್ಯಗಳನ್ನು ವಿತರಿಸುವ ಅನಿವಾರ್ಯತೆ ಇದ್ದ ಕಡೆ ಅವುಗಳನ್ನು ಖರೀದಿಸುವ ಅನಿವಾರ್ಯತೆ ಕೂಡ ಇರುತ್ತದೆ. ಹಾಗೆಂದೇ, ರೈತರ ಬೆಳೆಗಳಿಗೆ ತಕ್ಕ ಬೆಲೆಯೂ ದಕ್ಕುತ್ತದೆ.

ಕಾಲೇಜ್ ಮತ್ತು ವಿಶ್ವ ವಿದ್ಯಾಲಯ ಪ್ರಾಧ್ಯಾಪಕರೂ ಸೇರಿದಂತೆ, ಇಂದು ಸಂಘಟಿತವಲಯದಲ್ಲಿರುವ ಕಾರ್ಮಿಕ ವರ್ಗ (ಮಧ್ಯಮ ವರ್ಗ), ಬ್ಯಾಂಕ್, ಸರಕಾರಿ ವಲಯ, ವಿಮಾ ನೌಕರರು ಇತ್ಯಾದಿ ESI, PF, PPF, ಪೆನ್ಷನ್ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. india-middle-classಆದಾಯ ತೆರಿಗೆ ಕಟ್ಟುವ ಈ ದೇಶದ ತೆರಿಗೆದಾರ ಈ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಯಾಕೆ ಹಣ ಕೊಡಬೇಕು? ಈ ಹಣವನ್ನು ಬಂಡವಾಳವಾಗಿ ವಿನಿಯೋಗಿಸಿದರೆ ಇನ್ನಷ್ಟು ಲಾಭ ಬರುವದಿಲ್ಲವೆ? ಈ ಪ್ರಶ್ನೆಗೆ ಮಧ್ಯಮ ವರ್ಗ ಉತ್ತರಿಸುವುದೇ?

ಅದು ಹೋಗಲಿ, ನಮ್ಮ ಖಾತೆಯ ಮಂತ್ರಿಗಳಿಗೆ ವಯಸ್ಸು ಜಾಸ್ತಿಯಾಯಿತು, ಅವರು ಸೂಟು ಬೂಟು ಧರಿಸಿ ಇಂಗ್ಲೀಷ್ ಮಾತಾಡುವುದಿಲ್ಲ ಹಾಗಾಗಿ ಅವರನ್ನು ಬದಲಾಯಿಸಿ ಎಂದು ಪಟ್ಟು ಹಿಡಿದ IT, ITES, BT, BPO ವಲಯ, ಸರಕಾರದ ಸಹಾಯಧನ ಪಡೆದು ಸಾಮಾನ್ಯ ವಾಣಿಜ್ಯ ಬಳಕೆಯ ವಿದ್ಯುತ್ ದರಕ್ಕಿಂತ ಶೇಕಡಾ ೨೫ ರಷ್ಟು ಕಡಿಮೆ ವಿದ್ಯುತ್ ದರ ಪಾವತಿ ಮಾಡುತ್ತಿದೆ ಎಂಬುದು ಎಷ್ಟು ಜನಕ್ಕೆ ಗೊತ್ತಿದೆ? ಈ ವಿನಾಯತಿ ಸುಮಾರು ಹದಿನೈದು ವರ್ಷಗಳಿಂದ ಜಾರಿಯಲ್ಲಿದೆ. ಈ ವಿನಾಯತಿ ಹಣವನ್ನು ವಿನಿಯೋಗಿಸಿದ್ದರೆ ಇಂದು ಕರ್ನಾಟಕದಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತಿರಲಿಲ್ಲವೇ? ಇದು ಪರವಾಗಿಲ್ಲ; ಆದರೆ ಅಕ್ಕಿ ಕೊಟ್ಟರೆ ಅದು ಅರ್ಥಿಕ ವಿಕೃತಿ? ಅಲ್ಲವೇ?

ಅನ್ನಭಾಗ್ಯವನ್ನು ವಿರೋಧಿಸುವವರಲ್ಲಿ ಬಹುತೇಕರು ಹೇಳುವುದು ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದು. ಇಂದು ಕೈಗಾರಿಕಾ ಶೆಡ್ ಗಳು, ಸರಕಾರೀ ಬಂಗಲೆಗಳು, BDA ನಿವೇಶನಗಳು, ಬಿಟ್ಟರೆ, ಪ್ರಶಸ್ತಿ, ಬಿರುದು ಬಾವಲಿಗಳನ್ನೂ ಮಾರಿಕೊಂಡವರಿದ್ದಾರೆ. ಸರಕಾರಿ ಉದ್ಯೋಗದಲ್ಲಿದ್ದು ಕೊಂಡೇ ಖಾಸಗಿ ಕೆಲಸ ಮಾಡುವ ವೈದ್ಯರು, ಶಿಕ್ಷಕರು, ಯಾವುದಕ್ಕೂ ಬರವಿಲ್ಲ. ಅಸಮತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಅಂತಹ ವಿಕೃತಿಗಳು ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗ ವಿಭಾಗಗಳಲ್ಲೂ ಸಹಜವಾಗಿ ನುಸುಳಿವೆ. ಈ ವಿಕೃತಿಗಳನ್ನು ಖಂಡಿತ ತಡೆಯಬೇಕು; ಅಂತೆಯೇ, ಮೇಲಿನ ಸ್ಥರದಿಂದ ಮೊದಲ್ಗೊಂಡು ಈ ಪ್ರಯತ್ನವಾಗಬೇಕೇ ವಿನಃ ನಿರ್ಗತಿಕರಿಂದ ಅನ್ನ ಕಸಿಯುವ ಮೂಲಕ ಅಲ್ಲ. ಸರಕಾರೀ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪತ್ರೆಯನ್ನೇ ಮುಚ್ಚುವುದು ಹೇಗೆ ಮದ್ದಲ್ಲವೋ ಹಾಗೆಯೇ ಅನ್ನಭಾಗ್ಯದ ದುರುಪಯೋಗಕ್ಕೆ ಅನ್ನವನ್ನೇ ಕಸಿಯುವುದೂ ಮದ್ದಲ್ಲ.

ಇಂದು ಎಲ್ಲೆಂದರಲ್ಲಿ ತಲೆ ಎತ್ತಿರುವ ವಿಶೇಷ ವಿತ್ತ ವಲಯಗಳನ್ನು (SEZ) ನೋಡಿ. ಈ ವಲಯಗಳಿಗೆ ಭಾರತದ ಯಾವ ಕಾನೂನು ಕೂಡ ಅನ್ವಯಿಸುವುದಿಲ್ಲ. ನಿಜವಾಗಿ ನೋಡಿದರೆ ಕಾನೂನಿನ ಪ್ರಕಾರ SEZಗಳು ಭಾರತದ ಸ್ವಾಧೀನತೆಗೆ ಒಳಪಡುವುದಿಲ್ಲ. ಕರ್ನಾಟಕ ಒಂದರಲ್ಲೇ ಸುಮಾರು ಒಂದು ನೂರರಷ್ಟು SEZ ಗಳು ತಲೆ ಎತ್ತಿವೆ. ಇಂದು ಒಬ್ಬ ಸಾಮಾನ್ಯ ವಲಯದ ದೊಡ್ಡ ಕೈಗಾರಿಕೊದ್ಯಮಿಗೆ ಕನಸಲ್ಲೂ ದಕ್ಕದ ಸವಲತ್ತುಗಳು SEZ ವಲಯಕ್ಕೆ ದಕ್ಕಿವೆ. ತೆರಿಗೆ ವಿನಾಯತಿ, ಸ್ಟ್ಯಾಂಪ್ ಮೊತ್ತದ ವಿನಾಯತಿ, ವಿದ್ಯುತ್ ದರದಲ್ಲಿ ಕಡಿತ ಇತ್ಯಾದಿ ಸವಲತ್ತುಗಳು ದೊರೆಯುವ ಈ SEZ ಗಳ Streetchildrenಬಗ್ಗೆ ಯಾವ ಕೈಗಾರಿಕಾ ದಿಗ್ಗಜನೂ ಸೊಲ್ಲೆತ್ತುವುದಿಲ್ಲ. ಅವರ ಸಿಟ್ಟು ಏನಿದ್ದರೂ ಅಕ್ಕಿಯ ಮೇಲೆ.

ಅದು ಹೋಗಲಿ ನಿಮ್ಮ ಮನೆಯಲ್ಲಿ ಮೇಲೆ ಸೌರ ಶಕ್ತಿ ಚಾಲಿತ ಹೀಟರ್ ಅಳವಡಿಸಿದರೆ ಒಂದು ವಿದ್ಯುತ್ ಯೂನಿಟ್ ಗೆ ಐವತ್ತು ಪೈಸೆ ವಿನಾಯತಿಯಿದೆ. ಇದಕ್ಕೆ ಕೊಡುವ ಸಮರ್ಥನೆ ಏನು ಗೊತ್ತೇ ಅಷ್ಟರ ಮಟ್ಟಿಗೆ ಉಷ್ಣ ಸ್ಥಾವರದ ಕಲ್ಲಿದ್ದಲು ಉಳಿತಾಯ ಮತ್ತು ಇದು ಪರಸರ ಸ್ನೇಹಿ. ಅದೇ ಒಬ್ಬ ಬಡವ ತನ್ನ ಮನೆಯ ಭೂಸ ಇಲ್ಲವೇ ಸೆಗಣಿ ಶೇಖರಿಸಿ ನೀರು ಬಿಸಿ ಮಾಡಿದರೆ, ಇಲ್ಲಾ ತಣ್ಣೀರು ಸ್ನಾನ ಮಾಡಿದರೆ ಯಾವ ವಿದ್ಯುತ್ ವಿನಾಯತಿ ಇದೆ?

ಸಮಾಜದ ಹೆಚ್ಚಿನ ಸವಲತ್ತು ಸಹಾಯ ಧನಗಳು ಯಾವತ್ತೂ ಅಪಾತ್ರರಿಗೇ ಮೀಸಲು. ತಳವರ್ಗ ಸ್ವಲ್ಪ ಮಟ್ಟಿನ ತುಂಡು ತುಣುಕು ಏನಾದರೂ ಕೇಳಲು ಬಂದರೆ ಗದರಿ ಕಳಿಸುವ ವ್ಯವಸ್ಥೆ ನಮ್ಮದು.

ಒಂದು ಹಿಡಿ ಅಕ್ಕಿ, ಒಂದು ಮೊಟ್ಟೆ ತಿಂದು ಯಾವ ಬಡವನೂ ಕೈಗಾರಿಕಾ ಸಾಮ್ರಾಜ್ಯ ಕಟ್ಟುವುದಿಲ್ಲ. ಹಾಗೆಯೇ, ಸರಕಾರದ ಸೌಕರ್ಯ, ವಿನಾಯತಿ, ಸವಲತ್ತು ಪಡೆದು ನಡೆಸುವ ಯಾವ ಕೈಗಾರಿಕೆಗಳೂ ಬಡವರು ಒಂದು ಹೊತ್ತಿನ ಅನ್ನ ತಿಂದ ಮಾತ್ರಕ್ಕೆ ಸತ್ತು ಹೋಗುವುದಿಲ್ಲ. ಯಾರಿಗೆ ಏನೇ ಆಗಲಿ, ಯಾವ (ರಾಷ್ಟ್ರೀಯ) ಪ್ರಾಧ್ಯಾಪಕರ ಸಂಬಳ ಸವಲತ್ತಿಗೂ ಬಡವನ ಅಕ್ಕಿಯಿಂದ ಕತ್ತರಿ ಬೀಳುವುದಿಲ್ಲ.

ಒಂದು ಕೊನೆಯ ಮಾತು. ಕೈಗಾರಿಕೆಗಳು, ಉದ್ದಿಮೆದಾರರು, ರಾಜಕಾರಣಿಗಳು, ಅರ್ಥ ಶಾಸ್ತ್ರಜ್ಞರು ವ್ಯಕ್ತಪಡಿಸುತ್ತಿರುವ ವಿರೋಧವನ್ನು ಅರ್ಥೈಸಿಕೊಳ್ಳಬಹುದು. ಆದರೆ ಜೀವನದ ದಯನೀಯ ಮಜಲುಗಳನ್ನು ಕಂಡಿರುವ ಒಬ್ಬ ಸಾಹಿತಿBhyrappa ಅನ್ನ ವಿರೋಧಿಯಾದರೆ ತುಂಬಾ ಸಂಕಟವೆನಿಸುತ್ತದೆ. ಭೈರಪ್ಪನವರನ್ನು ಸೈದ್ಧಾಂತಿಕ ಕಾರಣಗಳಿಗಾಗಿ ವಿರೋಧಿಸುವವರೂ ಕೂಡ ಅವರ ಸಂಘರ್ಷಮಯ ಜೀವನವನ್ನು ಗೌರವಿಸುತ್ತಿದ್ದರು. ಆದರೆ ವಿಪರ್ಯಾಸವೆಂದರೆ, ಹಸಿವಿನ ಸಂಕಟವನ್ನು ಇನ್ನಿಲ್ಲದಂತೆ ಅನುಭವಿಸಿ, ಅವಿರ್ಭಾವಿಸಿ ಪಕ್ವವಾಗಬೇಕಿದ್ದ, ಹಸಿವಿನ ಕುರಿತು ಜಾಗೃತಿ ಮೂಡಿಸಿ ಹೋರಾಟ ನಿರೂಪಿಸುವದರಲ್ಲಿ ಮುಂಚೂಣಿಯಲ್ಲಿರ ಬೇಕಿದ್ದ ನಾಡಿನ ಹಿರಿಯ ಜೀವವೊಂದು ಅನ್ನವನ್ನು ವಿರೋಧಿಸುತ್ತಿರುವುದು ಅತ್ಯಂತ ಕ್ರೂರ ವಿಪರ್ಯಾಸ.

ಮಾರುಕಟ್ಟೆಯ ಮಂತ್ರವಾದಿಗಳ ಅಕ್ಷಮ್ಯ ಅನಾಚಾರಗಳ ಬಗ್ಗೆ ಸೊಲ್ಲೇ ಎತ್ತದ ಭೈರಪ್ಪನವರು, ತಮ್ಮ ಎಲ್ಲ ಬಾಣ ಬಿರುಸು ಗಳನ್ನೂ ಒಂದು ತುತ್ತು ಅನ್ನದ ಮೇಲೆ ಹೂಡುತ್ತಿದ್ದಾರೆ. ಶಾಸಕರ ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಗಣಿ ಅಟ್ಟಹಾಸಗಳಿಂದ ತುಂಬಿದ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಕರ್ನಾಟಕದ ಜನ ಸಮುದಾಯ ಒಟ್ಟು ಗೂಡಿ ತಿರಸ್ಕರಿಸಿದಾಗ ಜನ ಸಮುದಾಯಕ್ಕೆ ನೇತೃತ್ವ ಕೊಡಲು ಬಾರದ ಈ ಜಾಗೃತಿ ಅನ್ನವನ್ನು ಹಂಚಲು ಹೊರಟಾಗ ಹೇಗೆ ಜಾಗೃತವಾಯಿತೋ ಅವರೇ ಹೇಳಬೇಕು.

‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡಲು ನಿರಾಕರಿಸುತ್ತಿರುವ ಸಂಗೀತಪ್ರೇಮಿ ಹಾಡುಗಾರನ ಅಳಲು

ನಾನೇಕೆ ‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡುತ್ತಿಲ್ಲ…

 – ಟಿ.ಎಂ.ಕೃಷ್ಣ
ಕನ್ನಡಕ್ಕೆ: ಶ್ರೀಮತೀ ದೇವಿ.ಪಿ

ಮದರಾಸಿನ ಸಂಗೀತ ಸೀಸನ್

ಇದು ಮದರಾಸಿನಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ನಡೆಯುವ ಸಂಗೀತ ಹಬ್ಬ. ಸುಮಾರು ಆರು ವಾರಗಳ ಕಾಲ ನಡೆಯುವ ಇದರಲ್ಲಿ ಹಾಡುವುದು, ನುಡಿಸುವುದು ಸಂಗೀತಗಾರರಿಗೆ ಪ್ರತಿಷ್ಠೆಯ ವಿಷಯ. ದೇಶವಿದೇಶಗಳ ಸಂಗೀತ ಪ್ರೇಮಿಗಳು ತಮ್ಮ ನೆಚ್ಚಿನ ಸಂಗೀತಗಾರರ ಸಂಗೀತ ಕೇಳಲು ಮುಗಿಬಿದ್ದರೆ ಈಗ ತಾನೇ ತಲೆಯೆತ್ತುತ್ತಿರುವ ಕಲಾವಿದರು ಹಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಚೆನ್ನೈನ ವಿವಿಧ ಸಭಾಗಳು ಪೈಪೋಟಿಯ ಮೇಲೆ ಸ್ಟಾರ್ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವಕಾಶಕ್ಕಾಗಿ ಲಾಬಿ, ಸ್ಟಾರ್ ಸಂಗೀತಗಾರರ ಮೇಲಾಟ, ಜನಪ್ರಿಯತೆಯೇ ಮುನ್ನೆಲೆಗೆ ಬರುತ್ತಿರುವುದು, ಭಿನ್ನ ಸಮುದಾಯಗಳನ್ನು ಒಳಗೊಳ್ಳದಿರುವುದು ಹೀಗೆ ಈ ಸಂಗೀತ ಹಬ್ಬ ಸಂಗೀತೇತರ ಕಾರಣಗಳಿಗೂ ಚರ್ಚೆಗೆ ಒಳಗಾಗುತ್ತಿರುವುದು chennai-music-seasonಅಲ್ಲಲ್ಲಿ ನಡೆದೇ ಇದ್ದರೂ ಈ ಬಗ್ಗೆ ದೊಡ್ಡದನಿ ಎತ್ತುವ ಕೆಲಸ ನಡೆದಿರಲಿಲ್ಲ. ಟಿ.ಎಂ.ಕೃಷ್ಣ ತಾವು ಇನ್ನು ಮುಂದೆ ಸೀಸನ್ನಲ್ಲಿ ಹಾಡುವುದಿಲ್ಲ ಎನ್ನುವುದರ ಮೂಲಕ ಕಲಾವಿದರು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳನ್ನು ಎತ್ತುತ್ತಾ ವಾಗ್ವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಚೆನ್ನೈಯ ಮ್ಯೂಸಿಕ್ ಸೀಸನ್ (ಡಿಸೆಂಬರ್) ನಲ್ಲಿ ಇನ್ನು ಮುಂದೆ ನಾನು ಹಾಡುವುದಿಲ್ಲ ಎಂಬ ನನ್ನ ತೀರ್ಮಾನ, ಏಕಾಏಕಿಯಾದದ್ದಲ್ಲ ಹಾಗೂ ಯಾವುದೇ ಒಂದು ನಿರ್ದಿಷ್ಟ ಘಟನೆಯಿಂದ ಹುಟ್ಟಿದ್ದಲ್ಲ. ಕಳೆದ ೪-೫ ವರ್ಷಗಳಿಂದ ನಾನು ಈ ಬಗ್ಗೆ ತುಂಬಾ ಆಲೋಚಿಸಿದ್ದೇನೆ. ಮ್ಯೂಸಿಕ್ ಸೀಸನ್‌ನೊಂದಿಗಿನ ನನ್ನ ಸಂಬಂಧವೇನು, ಇದರ ಮೂಲಕ ಸಂಗೀತಕ್ಕೆ ನಾವೇನನ್ನು ಕೊಡಲು ಹೊರಟಿದ್ದೇವೆ, ಹಾಗೂ ಈಗ ಈ ಸೀಸನ್ ಎಂಬುದು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳನ್ನು ನನಗೆ ನಾನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದಲೂ ನಾನು, ಈ ಮ್ಯೂಸಿಕ್ ಸೀಸನ್ನಿನ ಕಛೇರಿಗಳನ್ನು ಕೇಳುತ್ತಾ ಬೆಳೆದಿದ್ದೇನೆ ಹಾಗೂ ಇವುಗಳಿಂದ ತುಂಬಾ ಕಲಿತಿದ್ದೇನೆ. ಸಂಗೀತ ಕ್ಷೇತ್ರದಲ್ಲಿನ ನನ್ನ ಪ್ರಗತಿಯೂ ಈ ’ಸಂಗೀತ ಹಬ್ಬ’ದೊಂದಿಗೇ ನಡೆದಿದೆ. ಆದ್ದರಿಂದ ಕಲಾತ್ಮಕವಾಗಿಯೂ, ವ್ಯವಸಾಯದಲ್ಲೂ ನನ್ನ ಬೆಳವಣಿಗೆಗೆ ಕಾರಣವಾದ ಸಂಗೀತ ಸೀಸನ್‌ಗೆ ಕೃತಜ್ನತೆ ಸಲ್ಲಿಸಲು ಮರೆತರೆ ಅದು ದೊಡ್ಡ ತಪ್ಪಾಗುತ್ತದೆ. ಆದರೆ, ಇತ್ತೀಚಿಗಿನ ಸಂಗೀತ ಸೀಸನ್, ಸಂಗೀತದಿಂದಲೇ ದೂರ ಹೋಗುತ್ತಿರುವಂತೆ ನನಗೆ ಕಾಣುತ್ತಿದೆ. ಇಲ್ಲಿ ಸಂಗೀತದ ಒಳಗಿನ ಹಾಗೂ ಸಂಗೀತದ ಆಚೆಗಿನ ಗಲಾಟೆ(ಶಬ್ದ) ನೋಡಿದರೆ, ಸಂಗೀತವೇ ಇಲ್ಲಿಂದ ಓಡಿ ಹೋಗುತ್ತಿದೆಯೆಂದು ಹೇಳುವುದೇ ಸೂಕ್ತವೇನೋ…

ಕಳೆದ ಎರಡು ದಶಕಗಳಿಂದ, ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಸಂಗೀತ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಸ್ಪರ್ಧಾತ್ಮಕವಾದ ಸಂಗೀತ ಆಯೋಜಕರು ಇರುವುದನ್ನು ನೋಡುತ್ತಿದ್ದೇವೆ. ಇಲ್ಲಿನ ಕಛೇರಿಗಳಲ್ಲೂ ವೈರುಧ್ಯವಿದೆ. ಇವುಗಳು ಎರಡು ವಿರುದ್ಧ ಧ್ರುವಕ್ಕೆ ಸೇರಿದಂಥವು. ಒಂದು ಕಡೆ ಇಲ್ಲಿ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸಂಗೀತ ಕೇಳಲು ಸೇರಿದ್ದರೆ, ಇನ್ನೊಂದೆಡೆ ’ಸೂಪರ್ ಸ್ಟಾರ್’ಗ:ಅ ಕಛೇರಿಗೆ ತಡೆಯಲಾಗದಷ್ಟು ಜನ ಸಂದಣಿ. tm-krishna-singerಇದು ಇವತ್ತು ಬಹುದೊಡ್ಡ ಸಮಸ್ಯೆ ಎನಿಸುವವರೆಗೆ ಸಾಗಿದೆ. ಜನರು ’ಸ್ಟಾರ್’ ಸಂಗೀತಗಾರರ ಸಂಗೀತ ಕೇಳಲು ಮುಗಿಬೀಳುವುದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇಲ್ಲ ಎಂಬುದು ನನಗೆ ತಿಳಿದಿದ್ದರೂ, ಎಲ್ಲೋ ಒಂದು ಕಡೆ ಇಡೀ ಜನಸಮೂಹವೇ ಈ ’ಜನಪ್ರಿಯತೆ’ಯ ಕಡೆ ವಾಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಇದು ನಮ್ಮಲ್ಲಿನ ಒಂದು ’ಕಲಾತ್ಮಕತೆಯ ಸಮಸ್ಯೆ’ಯೇ ಎಂದು ನನಗನಿಸುತ್ತದೆ. ಹಾಗೂ ಇದೇ ಸಮಸ್ಯೆಯನ್ನು ನಾವು ಮ್ಯೂಸಿಕ್ ಸೀಸನ್ ನಲ್ಲಿ ಕಾಣುತ್ತಿರುವುದು. ಈ ಭ್ರಮೆಯಿಂದಾಗಿ ನಮ್ಮಲ್ಲಿನ ಎಷ್ಟೋ ಅದ್ಭುತವಾದ ಸಂಗೀತಗಾರರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಯಾವುದೇ ಕಲಾಪ್ರಕಾರ ತನ್ನೊಳಗಿರುವ ಕಲೆಯ ವೈವಿಧ್ಯತೆಯನ್ನು ಅರಿತುಕೊಂಡು, ಪ್ರಸಿದ್ಧರಾದ ಕೆಲವು ಗಾಯಕರು ಈ ವೈವಿಧ್ಯತೆಯೆ ’ಮುಖ’ ಹಾಗೂ ಉಳಿದೆಲ್ಲಾ ಕಲಾವಿದರು ಈ ಕಲೆಯ ಶ್ರೀಮಂತಿಕೆಗೆ ಕಾರಣರಾದ ದಾನಿಗಳು, ಪೋಷಕರು ಎಂದು ಗುರುತಿಸಲ್ಪಡುವ ವ್ಯವಸ್ಥೆ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆದರೆ, ಇವತ್ತು ನಮ್ಮಲ್ಲಿ ಈ ಉಳಿದ ಸಂಗೀತಗಾರರು ಗಣನೆಗೇ ಇಲ್ಲದವರಾಗಿದ್ದಾರೆ. ಈ ಪರಿಸ್ಥಿಗೆ ನಾನೂ ಒಬ್ಬ ಕಾರಣಕರ್ತನಾಗಿರುವುದರಿಂದ ಈ ವಿಚಾರ ನನ್ನನ್ನು ತುಂಬಾ ಕಾಡುತ್ತದೆ.

ಕನಸುಗಳನ್ನು ಹೊತ್ತ ಯುವ ಸಂಗೀತಗಾರರಿಗಂತೂ ನಿರಾಶಾದಾಯಕವಾದ ಸನ್ನಿವೇಶವೇ ಇಲ್ಲಿದೆ. ಒಂದು ಕಡೆ ಕಛೇರಿ ಪಡೆಯಲು ’ಹಣ’ ಡೊನೇಷನ್ ಹೆಸರಿನಲ್ಲಿ ಓಡಾಡುತ್ತಿದ್ದರೆ ಇನ್ನೊಂದೆಡೆ ಮಧ್ಯವರ್ತಿಗಳ ಕಸರತ್ತು. ’ಡಾಲರ್’ನ ಮಹಾತ್ಮೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆಯೂ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಲ್ಪಟ್ಟ ಯುವಮಿತ್ರರ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಆದರೆ, ಈ ಎಲ್ಲಾ ’ಆಟ’ ಗಳನ್ನು ಮಾಡಲಾಗದೇ ಇರುವ, ಅವಕಾಶ ವಂಚಿತರಾಗಿ ಹಿಂದೆ ಉಳಿದ ಅನೇಕ ಸಂಗೀತಗಾರರು ಇನ್ನೂ ನಮ್ಮಲ್ಲಿದ್ದಾರೆ. ೯೦ರ ದಶಕದ ಆರಂಭದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನನಗನಿಸುವುದಿಲ್ಲ.

ಚೆನ್ನೈನ ಮ್ಯೂಸಿಕ್ ಸೀಸನ್ ಎಂಬುದು ಹೆಚ್ಚು ಕಡಿಮೆ ’NRI ಕೃಪಾಪೋಷಿತ’ ಸೀಸನ್ ಆಗಿಬಿಟ್ಟಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅನೇಕ ಸಂಗೀತ ವಿದ್ಯಾರ್ಥಿಗಳು ಡೆಸೆಂಬರ್‌ನಲ್ಲಿ ಅಲ್ಲಿಂದ ಇಲ್ಲಿ ಬಂದು ಕಛೇರಿ ಮಾಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಸ್ವಲ್ಪ ಸಮಯದ ಹಿಂದೆ ಇದು ಸೀಸನ್ನಿನ ಒಂದು ಭಾಗ ಮಾತ್ರವಾಗಿದ್ದರೆ ಇವತ್ತು ಹೆಚ್ಚಿನ ಎಲ್ಲಾ ಜೂನಿಯರ್ ಸ್ಲಾಟ್‌ಗಳು NRI ಯುವಕರ ಪಾಲಾಗುತ್ತಿದೆ. ಅಲ್ಲೂ-ಇಲ್ಲೂ ಹೆಸರಾದ ದೊಡ್ಡ ಕಲಾವಿದರುಗಳೇ ತಮ್ಮ NRI ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಸಿ ಕೊಡುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದಾರೆ. ‘ಹಣ’ದ ಕೆಲಸ ಇಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ಇವರ ಬಗ್ಗೆ ಲೇಖನಗಳನ್ನು ಬರೆಯಿಸಲಾಗುತ್ತದೆ. ಸಂಗೀತಗಾರರನ್ನು ‘ತಯಾರು’ ಮಾಡಲಾಗುತ್ತದೆ. ಇವೆಲ್ಲವೂ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಕೆಲಸವಾದದ್ದರಿಂದ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ಇದರಿಂದಾಗಿ ನಮ್ಮಲ್ಲಿನ ಕಲಾವಿದರಿಗೆ ಮೋಸವಾಗುತ್ತಿರುವುದು ಮಾತ್ರವಲ್ಲದೇ, ನಿಜವಾಗಿ ಸತ್ವವುಳ್ಳ NRI ಕಲಾವಿದನಿಗೆ ತಾನು ಅಂಥವನಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕರ್ನಾಟಕ ಸಂಗೀತವೆಂಬ ಪುಟ್ಟ ಪ್ರಪಂಚಕ್ಕೆ ಸೇರಿದ ಹಾಗೂ ಸಂಗೀತ ಸೀಸನ್ನಿನ ಭಾಗಿಗಳಾದ ನಾವು ಈ ಸಣ್ಣ ಪ್ರಪಂಚದಿಂದ tm-krishna-singer2ಆಚೆಗೆ ಸಂಗೀತಕ್ಕೆ ಸಂಬಂಧಿಸಿದ ಕೆಲಸವನ್ನೇನಾದರೂ ಮಾಡಿದ್ದೇವೆಯೇ? ಸೀಸನ್‌ನಲ್ಲಿ ಪಾಲ್ಗೊಳ್ಳಲು, ಸಂಗೀತ ಕೇಳಲು ಸಮಾಜದಲ್ಲಿನ ಬೇರೆ ಕೇಳುಗರನ್ನೇನಾದರೂ ಬರುವಂತೆ ಮಾಡಿದ್ದೇವೆಯೇ? ಆ ಬಗ್ಗೆ ಎನಾದರೂ ಪ್ರಯತ್ನ ಮಾಡಿದ್ದೇವೆಯೇ ಅಥವಾ ನಮ್ಮ ಸಂಗೀತವನ್ನು ಒಯ್ದು ಸಮಾಜದ ಉಳಿದ ಸ್ಥರಗಳಿಗೆ ಪರಿಚಯಿಸುವ ಬಗ್ಗೆ ಚಿಂತಿಸಿದ್ದೇವೆಯೇ? ಎಲ್ಲೋ ಒಂದಿಬ್ಬರ ವೈಯಕ್ತಿಕ ಪ್ರಯತ್ನಗಳನ್ನು ಕಾಣಬಹುದಷ್ಟೇ. ಉಳಿದಂತೆ ನಮಗೆ ಸಮಾಜದ ಇತರರ ಬಗ್ಗೆ ಗಮನವೇ ಇಲ್ಲ. ಹಾಗೂ ಬಹು ಮುಖವಾಗಿ ನಮಗೆ ನಮ್ಮ ಸಂಗೀತವನ್ನು ಡೆಮೊಕ್ರಟೈಸ್ (ಎಲ್ಲರಿಗೂ ದೊರಕುವಂತೆ) ಮಾಡಬೇಕೆಂಬ ಯಾವ ಇಚ್ಛೆಯೂ ಇಲ್ಲ.

ಈ ರೀತಿಯಾಗಿ ಪ್ರತ್ಯೇಕ ವರ್ಗವನ್ನು ನಿರ್ಮಿಸಿಕೊಂಡು ಒಂದು ದ್ವೀಪದಂತೆ ಇರುವ ಕರ್ನಾಟಕಿ ಸಂಗೀತ, ತನ್ನ ನಾಳೆಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆ ಎಂಬುದು ನನ್ನ ಬಲವಾದ ಅಭಿಪ್ರಾಯ. ಸಂಕುಚಿತತೆ, ಮಡಿವಂತಿಕೆಗಳನ್ನು ಬಿಟ್ಟು ’ಮುಕ್ತ’ವಾಗುವ ಅವಶ್ಯಕತೆ ಇಂದು ಕರ್ನಾಟಕಿ ಸಂಗೀತಕ್ಕಿದೆ.

ನನ್ನಂಥಹ ’ಪವರ್‌ಫುಲ್’ ಸಂಗೀತಗಾರರು ತಮ್ಮ-ತಮ್ಮ ವೈಯಕ್ತಿಕ ಲಾಭವನ್ನು ಬಿಟ್ಟು ಈ ಕಾರ್ಯಕ್ಕಾಗಿ ಜೊತೆಗೆ ಕೈ ಜೋಡಿಸಲು ಮುಂದೆ ಬರುತ್ತಿಲ್ಲ. ನಮ್ಮ ಜೊತೆಗೇ ವೇದಿಕೆಯೇರುವ ಮೃದಂಗ, ವಯೋಲಿನ್, ಘಟ ವಾದಕರಿಗೆ ಕೊಡಲಾಗುವ ಸಂಭಾವನೆಯ ಬಗ್ಗೆ ಮಾತನಾಡಲೂ ನಾವು ಅಸಮರ್ಥರಾಗಿದ್ದೇವೆ.

ಈಗ ಈ ’ಸಂಗೀತ ಸೀಸನ್ನಿನ ಹುಚ್ಚುತನ’ ಎಂಬುದು ತಂತ್ರಜ್ಞಾನದ ಮಾಯಾಲೋಕದೊಂದಿಗೆ ಸೇರಿಬಿಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಹಾಗೂ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನ್ನದೇ ಅಸಮರ್ಥತತೆಯೇನೋ….

ಈ ಎಲ್ಲಾ ಕಾರಣಗಳಿಂದ ಹಾಡದೇ ಇರುವುದೇ ಉತ್ತಮ ಎಂದು ನನಗನಿಸಿದೆ. ಕಳೆದ ೫ ವರ್ಷಗಳಲ್ಲಿ ಈ ಸೀಸನ್ನಿನ ಒಳಗಿದ್ದುಕೊಂಡೇ ಈ ಬಗ್ಗೆ ಏನಾದರೂ ಮಾಡಬೇಕೆಂದು ಟಿಕೆಟ್ ಇಲ್ಲದೆ ಕಛೇರಿ ಮಾಡುವುದು ಮುಂತಾದ ಹಲವು ರೀತಿಗಳಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಇಡೀ ವಾತಾವರಣವೇ ಎಷ್ಟು ವ್ಯವಹಾರಾತ್ಮಕವಾಗಿದೆಯೆಂದರೆ, ಸಂಗೀತವನ್ನು ಕೇಳುವುದು ಎಂಬುದೇ ಇಲ್ಲವಾದಂತಾಗಿದೆ.

ಚೆನ್ನೈನ ಕರ್ನಾಟಕಿ ಸಂಗೀತವೆಂಬುದು ’ಸಂಗೀತ’ಕ್ಕಿಂತ ಹೆಚ್ಚಾಗಿ ’ಸೀಸನ್’ ಮಾತ್ರವೇ ಆಗಿಬಿಟ್ಟಿದೆ. ಇದು ಕಲೆಗೆ ಮಾರಕವಾದದ್ದು. ಇಲ್ಲಿ ನಾವು ಕಲೆ, ಅದರ ಸ್ವರೂಪ, ಕಲೆಯ ದೊರಕುವಿಕೆ ಹಾಗೂ ಅದರ ಒಟ್ಟಂದದ ಕಡೆಗಿನ ಆತ್ಮಾವಲೋಕನದ ಕೊರತೆಯನ್ನು ಕಾಣುತ್ತಿದ್ದೇವೆ. ಆದರೆ ಇವೆಲ್ಲದರ ನಡುವೆಯೂ ತಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಕೆಲವು ವ್ಯಕ್ತಿಗಳು, ಕೆಲವು ಆಯೋಜಕರು, ಸಂಗೀತಗಾರರು ಹಾಗೂ ಬೆರಳೆಣಿಕೆಯಷ್ಟು ಶೋತೃಗಳು ಇರುವುದನ್ನು ನಾವು ಮರೆಯುವಂತಿಲ್ಲ.

ಹಳೆಯದೆಲ್ಲವೂ ಚೆನ್ನಾಗಿತ್ತು ಎಂದೇನು ನಾನು ಹೇಳ ಹೊರಟಿಲ್ಲ. ಆದರೆ, ಇಂದಿನ ಚೆನ್ನೈನ ಸಂಗೀತ ಸೀಸನ್ ಮಾತ್ರ ’ರಸಹೀನವಾದ ಬಹು ದೊಡ್ಡ ಬದಲಾವಣೆಗೆ ಈಡಾದ ಘಟ್ಟ’ವೊಂದನ್ನು ತಲುಪಿದೆ ಎಂದು ನನಗೆ ಖೇದವಾಗುತ್ತದೆ. ಅಥವಾ ಇದು ಮೊದಲಿನಿಂದಲೂ ಹೀಗೆಯೇ ಇದ್ದು, ನನಗೆ ಕಾಣಿಸಿದ್ದು ಮಾತ್ರ ಈಗವೇ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಈಗ ಎಲ್ಲಾ ತಿಳಿದ ಮೇಲೂ ಇದರ ’ಕೇವಲ ಪಾಲುದಾರ’ನಾಗಲು ನನಗೆ ಸಾಧ್ಯವಾಗುತ್ತಿಲ್ಲ.

ಪುಸ್ತಕ ವಿಮರ್ಶೆ: “ಭಾರತ ಭಾಗ್ಯವಿಧಾತ”

– ಸುಭಾಷ್ ರಾಜಮಾನೆ

’ಭಾರತ ಭಾಗ್ಯವಿಧಾತ’ ಮಹಾಂತೇಶ ನವಲಕಲ್ ಅವರ ಎರಡನೆಯ ಕಥಾ ಸಂಕಲನ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನವರಾದ ಮಹಾಂತೇಶ ಅವರು ತಮ್ಮ ಮೊದಲನೆಯ ಸಂಕಲನ ’ನೀರಿನ ನೆರಳು’ ಮೂಲಕವೇ ತಾನೊಬ್ಬ ಸೂಕ್ಷ್ಮ ಪ್ರಜ್ಞೆಯ ಕತೆಗಾರರೆಂದು ಗುರುತಿಸಿಕೊಂಡಿದ್ದಾರೆ. ಸಣ್ಣಕತೆಯ ಪ್ರಭೇದದ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಿರುವ ಹೊಸ ತಲೆಮಾರಿನ ಕತೆಗಾರರಲ್ಲಿ ನವಲಕಲ್ ಮುಖ್ಯರಾಗಿದ್ದಾರೆ. ಸಣ್ಣಕತೆಯ ಪ್ರಭೇದಕ್ಕೆ ಪ್ರಧಾನವಾಗಿ ಬೇಕಿರುವ ಖಚಿತವಾದ ತಾತ್ವಿಕತೆ, ಚುರುಕಾದ ಭಾಷೆ, ಪಾತ್ರ ಪೋಷಣೆ, ನಾಟಕೀಯತೆ, ಅನಿರೀಕ್ಷಿತ ತಿರುವು- ಎಲ್ಲ ಗುಣಲಕ್ಷಣಗಳು ಅವರ ಕತೆಗಳಲ್ಲಿವೆ.

ನಮ್ಮ ಸಮಾಜವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳೇ ಇಲ್ಲಿಯ ಕತೆಗಳ ವಸ್ತುಗಳಾಗಿವೆ. bharata Bhagyavidhata Mukaputaಅದರಲ್ಲೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅನಾವರಣ ಮಾಡುತ್ತವೆ. ಬಹುತೇಕ ಕತೆಗಳು ಬದಲಾಗುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಸೆರೆಹಿಡಿಯುತ್ತವೆ. ಜಾಗತೀಕರಣದ ಆಕ್ರಮಣದಿಂದ ಗ್ರಾಮೀಣ ಸಮುದಾಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಶೋಧಿಸುವುದೇ ಕೆಲವು ಕತೆಗಳ ಕೇಂದ್ರ ಕಾಳಜಿಯಾಗಿದೆ ಎಂದು ಹೇಳಬಹುದು.

’ನಾನು ಚಂದ್ರಗುಪ್ತನೆಂಬ ಮೌರ್ಯ’ ಸಂಕಲನದ ಪ್ರಾತಿನಿಧಿಕ ಮತ್ತು ಒಂದು ಅತ್ಯುತ್ತಮ ಕತೆಯಾಗಿದೆ. ಚರಿತ್ರೆಯಲ್ಲಿ ಸಾಮಾಜಿಕ ಅಸಮಾನತೆಯ ಮೂಲಗಳು ಹೇಗೆ ಸಾಂಸ್ಥಿಕ ರೂಪವನ್ನು ಪಡೆದುಕೊಂಡಿವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಹಲವು ರೀತಿಯ ಆಕರಗಳನ್ನು ಬಳಸಿಕೊಂಡಿರುವ ಕತೆಗಾರರು ಚಂದ್ರಗುಪ್ತನ ಮೂಲಕ ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೂ ಕನ್ನಡಿ ಹಿಡಿಯುತ್ತಾರೆ. ನವ್ಯ ಕಾಲಘಟ್ಟದ ಕತೆ-ಕಾದಂಬರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಪ್ರಜ್ಞಾಪ್ರವಾಹ ತಂತ್ರವನ್ನು ನವಲಕಲ್ ಅವರು ಸದರಿ ಕತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳಲ್ಲಿ ಜಾತಿ, ಅಸ್ಪೃಶ್ಯತೆ, ಧರ್ಮ, ದೇವರು, ಅಧಿಕಾರ, ವ್ಯವಸ್ಥೆ, ಮಾನವೀಯತೆಗಳ ಕುರಿತು ತೀವ್ರವಾಗಿ ಪರಿತಪಿಸುವ ಹಾಗೂ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳುವಂತೆ ಮಾಡಲಾಗಿದೆ. ಕತೆಯ ಈ ತಂತ್ರವೇ ಭಾರತದ ಪ್ರಾಚೀನ ಚರಿತ್ರೆಯನ್ನು ಏಕರೂಪಾತ್ಮಕ ನೆಲೆಯಲ್ಲಿಯೇ ನೋಡುವ ವಿಧಾನವನ್ನು ಭಂಜನ ಮಾಡುತ್ತದೆ; ಚಾರಿತ್ರಿಕ ಘಟನೆಗಳನ್ನು ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತದೆ; ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಪುನಾರಚಿಸಲು ಯತ್ನಿಸುತ್ತದೆ; ಭೂತ-ವರ್ತಮಾನ-ಭವಿಷತ್‌ಗಳನ್ನು ಏಕತ್ರಗೊಳಿಸಿ ನೋಡುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು ಅಗೋಚರವಾಗಿಯೇ ಗ್ರಾಮೀಣ ಪ್ರದೇಶದ ಬಡ ರೈತರನ್ನು ದಿವಾಳಿಯಾಗಿಸಿವೆ. ರೈತರು ತಮ್ಮ ಜೀವನಾಧಾರದ ನೆಲೆಯಾಗಿರುವ ಭೂಮಿಯನ್ನೆ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿರುವುದನ್ನು ’ಭಾರತ ಭಾಗ್ಯವಿಧಾತ’ ಕತೆ ನವಿರಾಗಿ ತೆರೆದಿಡುತ್ತದೆ. ಆದರೆ ವೈರುಧ್ಯದ ಸಂಗತಿಯೆಂದರೆ ತನ್ನ ಅಪ್ಪನನ್ನು ಬಲಿ ತೆಗೆದುಕೊಂಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲೇ ರಮೇಶ ಉದ್ಯೋಗ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಾರ್ಪೊರೇಟ್ ಜಗತ್ತು ಪರೋಕ್ಷವಾಗಿ ರೈತರ ವಿನಾಶಕ್ಕೆ ಮಾತ್ರ ಕಾರಣವಾಗಿಲ್ಲ; ಅದು ಶಿಕ್ಷಣ ಪಡೆದ ನಿರುದ್ಯೋಗಿ ತರುಣ ಪೀಳಿಗೆಯನ್ನು ತನ್ನ ಸೇವೆಗಾಗಿ ಅವಲಂಬಿಸುವಂತೆ ಮಾಡುವುದರಲ್ಲಿ ಸಫಲವಾಗಿದೆ ಎಂಬುದನ್ನು ಕತೆ ಮಾರ್ಮಿಕವಾಗಿ ವಿವರಿಸುತ್ತದೆ. ಆದ್ದರಿಂದ ರಮೇಶನಂತಹ ನವ ತರುಣರ ಪ್ರತಿರೋಧದ ಶಕ್ತಿಯನ್ನು ಕಾರ್ಪೊರೇಟ್ ಜಗತ್ತು ದಮನ ಮಾಡಿದೆ. ಇದರಿಂದ ನವ ವಸಾಹತುಶಾಹಿ ವ್ಯವಸ್ಥೆಯು ಭದ್ರವಾಗಿ ಕಾಲೂರಿ ತನ್ನ ಯಜಮಾನಿಕೆಯನ್ನು ನಿರಾಯಾಸವಾಗಿ ನಡೆಸುತ್ತಿದೆ.

ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುದಾನ ಪಡೆಯುವ ಸರ್ಕಾರೇತರ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ’ಎಲುಬಿನ ವ್ಯಾಪಾರ’ ಕತೆಯು ಶಿವಕುಮಾರ್‌ನೆಂಬ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಅಧಿಕಾರಶಾಹಿ ವರ್ಗದವರ ಅಮಾನವೀಯ ನಡತೆ ಮತ್ತು ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವಿಕೆಯು ಶಿವಕುಮಾರ್‌ನನ್ನು ದಿಗ್ಭ್ರಾಂತನನ್ನಾಗಿಸುತ್ತದೆ. ಶಿವಕುಮಾರನಿಗೆ ಬೀಳುವ ಕನಸುಗಳು ತನ್ನ ಸುತ್ತಲಿನ ಜನರ ಅಮಾನುಷತೆಯನ್ನು ಕಂಡು ಕಂಗಾಲಾಗಿರುವುದನ್ನೇ ಧ್ವನಿಸುತ್ತವೆ. ಶಿವಕುಮಾರ್ ಮತ್ತು ’ಭಾರತ ಭಾಗ್ಯವಿಧಾತ’ ಕತೆಯ ರಮೇಶನಿಗೂ ಅನೇಕ ಬಗೆಗಳಲ್ಲಿ ಸಾಮ್ಯತೆಗಳಿವೆ. ಇಬ್ಬರು ಸಹ ಬುದ್ಧಿ ಮತ್ತು ಹೃದಯಗಳ ನಡುವಿನ ಸಂಘರ್ಷದಲ್ಲಿ ಹೃದಯವಂತಿಕೆಯ ದಾರಿಯಲ್ಲೆ ನಡೆದವರು. ಆದರೆ ಕತೆಯಲ್ಲಿನ ಒಳಿತು ಮತ್ತು ಕೇಡಿನ ಮಧ್ಯೆ ನಡೆಯುವ ಘರ್ಷಣೆಯಲ್ಲಿ ಕೇಡುಗಳ ಅಟ್ಟಹಾಸವೇ ವಿಜೃಂಭಿಸುವಂತಿದೆ. ಶಿವಕುಮಾರ್ ಮತ್ತು ರಮೇಶ- ಅನ್ಯಾಯ ಹಾಗೂ ಅವ್ಯವಸ್ಥೆಗೆ ಎಷ್ಟೇ ಪ್ರತಿರೋಧ ತೋರಿದರೂ ಕೊನೆಯಲ್ಲಿ ಅಸಹಾಯಕರಾಗಿಯೇ ಉಳಿಯುತ್ತಾರೆ.

ಹಿಂದೂ ಕರ್ಮ ಸಿದ್ಧಾಂತದ ವಿಡಂಬನಾತ್ಮಕ ಕತೆಯಾಗಿ ’ಶ್ವಾನ ಪರಿಣಯ ಪ್ರಸಂಗ’ ಗಮನಾರ್ಹವಾಗಿದೆ. ನಿರುದ್ವಿಗ್ನವಾದ ನಿರೂಪಣೆಯ ಧಾಟಿಯೇ ಓದುಗರನ್ನು ಸೆಳೆಯುತ್ತದೆ. ಶಾಂಭವಿ ಎನ್ನುವ ಮಹಿಳೆ ತನ್ನ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಳೆಂದು ಗಾಢವಾಗಿ ನಂಬುವುದು ಮತ್ತು ಅದರ ಪ್ರಾಯಶ್ಚಿತ್ತ ನಿವಾರಣೆಗಾಗಿ ನಡೆಯುವ ಅವಾಂತರಗಳು ತಮಾಷೆಯಾಗಿವೆ. ಈ ತಮಾಷೆ ಮತ್ತು ವೈನೋದಿಕ ದೃಷ್ಟಿಯ ಹಿಂದೆ ಸಾಮಾಜಿಕ ಮೌಢ್ಯತೆಗಳು ದುರ್ಬಲ ಮನಸ್ಸನ್ನು ಆಕ್ರಮಿಸಿಕೊಂಡಿರುವ ಸ್ವರೂಪವನ್ನು ತೋರಿಸುತ್ತವೆ. ನಾಯಿಗಳ ಮದುವೆಯ ಸನ್ನಿವೇಶವು ವೈದಿಕ ಮೌಲ್ಯಗಳನ್ನು ಒಂದು ಅತಿರೇಕಕ್ಕೆ ಒಯ್ದು ನೋಡುವ ವಿನ್ಯಾಸವನ್ನು ಹೊಂದಿದೆ.

ಸರ್ಕಾರದ ಅಭಿವೃದ್ಧಿಯ ಯೋಜನೆಗಳು ನೂರಾರು ವರ್ಷಗಳಿಂದ ಕಾಡುಗಳಲ್ಲಿ ವಾಸಿಸುತ್ತ ಬಂದಿರುವ ಒಂದು ನಿರ್ದಿಷ್ಟ ಸಮುದಾಯದ ಬದುಕನ್ನು ಹೇಗೆಲ್ಲ ಅಸ್ತವ್ಯಸ್ತಗೊಳಿಸಿವೆ ಎಂಬುದನ್ನು ’ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಕತೆ ನಿರೂಪಿಸುತ್ತದೆ. ಆದರೆ ಕತೆಯ ವಸ್ತು ಮತ್ತು ಧೋರಣೆಗೆ ತಕ್ಕ ಭಾಷಾ ಶೈಲಿ ಇಲ್ಲದಿರುವುದರಿಂದ ಅದರ ಬಂಧವೂ ಸಡಿಲವಾಗಿರುವಂತೆ ಕಾಣುತ್ತದೆ.

ಪ್ರಗತಿಶೀಲ ಲೇಖಕರು ತಮ್ಮ ಕತೆ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಮಠದ ಸ್ವಾಮಿಗಳ ಅನಾಚಾರ, ಢಾಂಬಿಕತೆ, ಹಾದರ, ಭ್ರಷ್ಟತೆಗಳನ್ನು ರೊಚ್ಚಿನಿಂದ ಬರೆದವರು. ’ಬೇರಿಲ್ಲದ ಬೇವಿನ ಮರದ ಮೇಲೆ ರೆಕ್ಕೆ ಇಲ್ಲದ ಹಕ್ಕಿ’ ಕತೆಯಲ್ಲಿ ಪ್ರಗತಿಶೀಲ ಲೇಖಕರು ಬಳಸುವ ಆವೇಷದ ಧಾಟಿಯಿಲ್ಲ. ಕತೆಯಲ್ಲಿ ಬರುವ ಮಠದ ಸ್ವಾಮಿಗಳು ಆಗಾಗ ಉಸುರುವ ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಳರ ವಚನಗಳ ತಾತ್ವಿಕತೆಯು ಅನ್ಯರ ಉಪದೇಶಕ್ಕೆ ಸೀಮಿತವಾಗದೆ ಅವರು ತಮ್ಮ ಅಂತರಂಗವನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡಿವೆ. ಇಂತಹ ಸ್ವವಿಮರ್ಶೆಯ ವಿಧಾನವು ಪಾತ್ರದ ಮಾನಸಿಕ ಪಾತಳಿಯನ್ನು ತೆರೆದು ತೋರುವಂತೆ ಮಾಡುವಲ್ಲಿ ಸಫಲವಾಗುತ್ತದೆ. ಆಶಯದ ದೃಷ್ಟಿಯಿಂದ ಗ್ರಹಿಸುವುದಾದರೆ ಕತೆಯು ಜಾತಿ ಹಾಗೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಉದಾರವಾದಿ ನೆಲೆಯಲ್ಲಿಯೇ ನೋಡುತ್ತದೆ.

ನವಲಕಲ್ ಅವರ ಬಹುತೇಕ ಕತೆಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳ ಗೈರುಹಾಜರಿ ಎದ್ದು ಕಾಣುತ್ತದೆ. ಇಲ್ಲಿಯ ಕತೆಗಳಲ್ಲಿ ಪುರುಷ ಪಾತ್ರಗಳೇ ಕತೆಯ ತುಂಬ ಆವರಿಸಿಕೊಂಡು ಪ್ರಭಾವಿಯಾಗಿವೆ. ಇದರಿಂದ ಸ್ತ್ರೀ ಪಾತ್ರಗಳಿಗೆ ಸಿಗಬೇಕಾದಷ್ಟು ಸ್ಪೇಸ್ ಸಿಗುವುದಿಲ್ಲ. ಆದ್ದರಿಂದ ಪುರುಷ ಪಾತ್ರಗಳಂತೆ ಸ್ತ್ರೀ ಪಾತ್ರಗಳ ಮನೋಜಗತ್ತು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುವುದಿಲ್ಲವೆನೋ ಅನ್ನಿಸುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಪಾತ್ರಗಳು ತುಂಬ ಸಂಪ್ರದಾಯಸ್ಥವಾದ ಮನೋಧರ್ಮವನ್ನು ಹೊಂದಿವೆ ಹಾಗೂ ಅಷ್ಟೇ ದುರ್ಬಲವಾಗಿವೆ; ಇಂತಹ ಕೆಲವು ಮಿತಿಗಳ ನಡುವೆಯೂ ನವಲಕಲ್ ಅವರ ಕತೆಗಳು ನಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ಮುಖಾಮುಖಿ ಮಾಡುವುದರಿಂದ ಓದಲು ಪ್ರೇರಿಸುತ್ತವೆ.

“ಭಾರತ ಭಾಗ್ಯವಿಧಾತ”
ಲೇ: ಮಹಾಂತೇಶ್ ನವಲಕಲ್
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ
ಪುಟ: ೧೨೪, ಬೆಲೆ: ೧೦೦/-

ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…