Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

                                                                                                             – ನವೀನ್ ಸೂರಿಂಜೆ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಈಗ ಚರ್ಚೆಯ ವಿಷಯವಾಗಿದೆ. ಈ ಗಣಪತಿಗೆ ಒಂದು ಇತಿಹಾಸವಿದೆ. ಮಂಗಳೂರಿನ ಚರ್ಚ್ ದಾಳಿಯಲ್ಲಿ ಆಗ ಕದ್ರಿ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿ ಪಾತ್ರವನ್ನು ನಾನು ಕಣ್ಣಾರೆ ಕಂಡಿದ್ದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭಜರಂಗದಳದಿಂದ ಪ್ರಾರಂಭವಾದ ಚರ್ಚ್ ದಾಳಿಯನ್ನು ಪೊಲೀಸ್ ಯೂನಿಫಾರಂ ಮೂಲಕವೇ ಮುನ್ನಡೆಸಿದವರು ಎಂ.ಕೆ ಗಣಪತಿ.

 

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸ್ ಅಧಿಕಾರಿಯೊಬ್ಬನ ಸಾವಿಗೆ ಮರುಕವಿದೆ. ಆದರೆ ಆ ಪೊಲೀಸ್ ಅಧಿಕಾರಿಯನ್ನು ಹೀರೋ ಮಾಡುವ ಮುನ್ನ ಆತನ ಇತಿಹಾಸ ಅರಿಯುವುದು ಮುಖ್ಯ.

 

2008 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಕ್ರಿಶ್ಚಿಯನ್ನರ ಧರ್ಮಶಾಲೆ ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಇದು ಮಂಗಳೂರಿನಲ್ಲಿ ಆ ವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ ಸಮುದಾಯ ಬೀದಿಗಿಳಿಯುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಭಜರಂಗದಳ ನಡೆಸಿದ ದಾಳಿಗೆ ಪೂರಕವಾಗಿ ಪೊಲೀಸರೂ ವರ್ತಿಸತೊಡಗಿದ್ರು.

 

ಅಡೋರೇಷನ್ ಮೊನೆಸ್ಟ್ರಿ ಮೇಲೆ ದಾಳಿ ನಡೆದ ಮಾಹಿತಿ ದೊರೆತ ತಕ್ಷಣ ನಾವು ಪತ್ರಕರ್ತರೂ ಚರ್ಚಗೆ ಭೇಟಿ ನೀಡಲಾರಂಭಿಸಿದೆವು. ನಂತರ ಮಂಗಳೂರಿನಾದ್ಯಂತ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯಲಾರಂಭಿಸಿತು. ದಾಳಿ ಎಲ್ಲೆಲ್ಲಿ ನಡೆಯಿತೋ ಅಲ್ಲೆಲ್ಲಾ ಪತ್ರಕರ್ತರಾದ ನಾವುಗಳೂ ಇರುತ್ತಿದ್ದೆವು. ವಾಸ್ತವವಾಗಿ ಭಜರಂಗಿಗಳು ದಾಳಿ ನಡೆಸಿದ್ದು ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಮಠದ ಮಾಧರಿಯ ಧರ್ಮಶಾಲೆಗೆ ಮಾತ್ರ. ಉಳಿದಂತೆ ಬಿಜೈ ಚರ್ಚ್, ಕುಲಶೇಖರ ಚರ್ಚ್ಗಳಿಗೆ ನಡೆದ ದಾಳಿಯ ವೇಳೆ ಒಂದೇ ಒಂದು ಭಜರಂಗಿಗಳು ಇರಲಿಲ್ಲ. ಆದರೂ ದಾಳಿಯಾಗಿತ್ತು.

 

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಯುವಕರು ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕದ್ರಿ ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ ಕೆ ಗಣಪತಿ ನೇತೃತ್ವದಲ್ಲಿ ಪೊಲೀಸರು ಕುಲಶೇಖರ ಚಚರ್್ಗೆ ಧಾವಿಸಿದ್ರು. ಎಂ ಕೆ ಗಣಪತಿ ಮತ್ತು ತಂಡ ಕುಲಶೇಖರ ಚರ್ಚ್ ಗೆ ಬರುತ್ತಿದ್ದಂತೆಯೇ ನಾನೂ ಕೂಡಾ ಕುಲಶೇಖರ ಚರ್ಚ್ ಆವರಣ ಪ್ರವೇಶಿಸಿದ್ದೆ. ಕುಲಶೇಖರ ಚರ್ಚ್ ಒಳಗೆ ಕ್ರಿಶ್ಚಿಯನ್ನರು ಪ್ರಾರ್ಥನೆ ನಡೆಸುತ್ತಿದ್ದರು. ಪ್ರಾರ್ಥನೆ ಜೋರಾಗಿ ಹೊರಗೆ ಕೇಳಿಸುತ್ತಿತ್ತು.

 

ವಾಹನದಿಂದ ಇಳಿದ ಎಂ ಕೆ ಗಣಪತಿ ಕ್ರಿಶ್ಚಿಯನ್ನರು ಪ್ರಾರ್ಥನೆ ನಿಲ್ಲಿಸಿ ಹೊರಬರುವಂತೆ ಸೂಚಿಸಿದ್ರು. ಪ್ರಾರ್ಥನನಿರತರು ಹೊರಬರಲು ಒಪ್ಪಲಿಲ್ಲ. ಅಷ್ಟರಲ್ಲಿ ಚರ್ಚ್ ಒಳಗೆ ನುಗ್ಗುವಂತೆ ಪೊಲೀಸರಿಗೆ ಎಂ ಕೆ ಗಣಪತಿ ಸೂಚಿಸಿದ್ರು. ಆಗ ಹಿರಿಯ ವಕೀಲರಾದ ಮರಿಯಮ್ಮ ಥಾಮಸ್ ಮತ್ತು ಚರ್ಚ್ ನ ಫಾದರ್ ಒಬ್ಬರು ಮಧ್ಯ ಪ್ರವೇಶಿಸಿದರು. ಕೊನೆಗೆ ಎಂ ಕೆ ಗಣಪತಿ ಸೂಚನೆಯಂತೆ ಚರ್ಚ್ ಒಳಗಿದ್ದ ಮಹಿಳೆಯರು, ಮಕ್ಕಳು, ನನ್ ಗಳನ್ನು ಸರತಿ ಸಾಲಿನಲ್ಲಿ ಹೊರಗೆ ಬರುವಂತೆ ಮಾಡಲಾಯ್ತು. ಶಿಸ್ತುಬದ್ದವಾಗಿ, ಶಾಂತಿಯುತವಾಗಿ ಹೊರಬರುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಧಾರ್ಮಿಕ ಸಮGanapatiವಸ್ತ್ರ ಧರಿಸಿದ್ದ ನನ್ ಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ನನ್ ಗಳ ತೊಡೆ, ಕೈ ಕಾಲುಗಳು ಬಾತು ಹೋಗುವಂತೆ ಬಾರಿಸಲಾಗಿತ್ತು. ಆ ಚರ್ಚಿನಲ್ಲಿ ಪೊಲೀಸರ ಆಗಮನಕ್ಕೂ ಕಾರಣಗಳಿಲ್ಲದೇ ಇರುವ ಸಂಧರ್ಭದಲ್ಲಿ ಆರ್ ಎಸ್ ಎಸ್ ಹಿನ್ನಲೆಯ ಎಂ ಕೆ ಗಣಪತಿ ವಿನಾಕಾರಣ ದಾಳಿ ನಡೆಸಿದ್ದರು.

 

ಇದಾದ ನಂತರ ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯ್ತು. ಮರುದಿನವೇ ರಾಜ್ಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರು ಬೇಟಿ ಮಾಡಿ ಚರ್ಚ್ ದಾಳಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಮೇರಿಕಾದ ಅಧ್ಯಕ್ಷರೂ ಕೂಡಾ ಮಂಗಳೂರು ಚರ್ಚ್ ದಾಳಿ ಬಗ್ಗೆ ಮಾತನಾಡಿದ ನಂತರ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಕೇಂದ್ರ ಗೃಹ ಕಾರ್ಯದರ್ಶಿಯನ್ನು ಮಂಗಳೂರಿಗೆ ಕಳುಹಿಸಿತ್ತು. ಮಂಗಳೂರಿಗೆ ಬಂದ ಕೇಂದ್ರ ಗೃಹ ಕಾರ್ಯದರ್ಶಿ ಕೆಲವು ಚರ್ಚ್ ಗಳ ವಿಸಿಟ್ ಮಾಡಿದ ನಂತರ ಕುಲಶೇಖರ ಚರ್ಚ್ ಗೂ ಬೇಟಿ ನೀಡಿದ್ರು. ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು. ಈ ಸಂಧರ್ಭ ಕೇಂದ್ರ ಗೃಹ ಕಾರ್ಯದರ್ಶಿಯವರ ನಿಯೋಗಕ್ಕೆ ಭದ್ರತೆ ನೀಡಲು ಇದೇ ಎಂ ಕೆ ಗಣಪತಿ ಬಂದಿದ್ದರು.

 

ನಿಯೋಗಕ್ಕೆ ಪೊಲೀಸರ ದಾಳಿಯನ್ನು ಜನ ವಿವರಿಸುತ್ತಿರಬೇಕಾದರೆ ಸ್ವಲ್ಪ ಆಚೆ ಬಂದ ಎಂ. ಕೆ. ಗಣಪತಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ಫೋನಾಯಿಸಿದ್ದರು. ನಾನು ಅಲ್ಲೇ ಇರುವುದನ್ನು ಗಮನಿಸದ ಎಂ ಕೆ ಗಣಪತಿ ಹಿಂದೂ ಸಂಘಟನೆಗಳನ್ನು ಗುಂಪು ಸೇರಿಸಲು ಪ್ರಯತ್ನಿಸುತ್ತಿದ್ದರು. “ಕ್ರಿಶ್ಚಿಯನ್ನರು ಅವರ ಮನವಿ ನೀಡ್ತಾ ಇದ್ದಾರೆ. ನೀವೂ ಕೂಡಾ ಬಂದು ಮತಾಂತರ ಮಾಡುತ್ತಿದ್ದನ್ನು ಹೇಳಿ” ಎಂದು ನನ್ನೆದುರಿಗೇ ಹೇಳಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಚರ್ಚ್ ಆವರಣದಿಂದ ಹೊರಬರುತ್ತಿದ್ದಂತೆ ನೂರಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅವರು ದಾಳಿಕೋರ ಸಂಘಟನೆಯವರು ಎಂದು ತಿಳಿದ ಕೇಂದ್ರ ಗೃಹ ಕಾರ್ಯದರ್ಶಿ ಅವರ ಮನವಿಯನ್ನು ಚರ್ಚ್ ಆವರಣ ಸುತ್ತಮುತ್ತ ಸ್ವೀಕರಿಸಲು ನಿರಾಕರಿಸಿದ್ರು. ಹಿಂದೂ ಸಂಘಟನೆಗಳು ಮನವಿ ನೀಡಬೇಕಾದ್ರೆ ಸರ್ಕ್ಯೂಟ್ ಹೌಸ್ ಗೆ ಬರಲಿ ಎಂದರು. ಇದರಿಂದ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇಂದ್ರ ಗೃಹ ಕಾರ್ಯದರ್ಶಿ ಕಾರನ್ನು ತಡೆಯಲು ಮುಂದಾದ್ರು. ಆಗ ಭದ್ರತೆಗೆ ನಿಯೋಜಿತರಾಗಿದ್ದ ಎಂ ಕೆ ಗಣಪತಿ ಸುಮ್ಮನಿದ್ದರು. ಇದು ಬಿಜೆಪಿ ಸರಕಾರವಿದ್ರೂ ಅಧಿಕಾರಿಗಳ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

 

ಚರ್ಚ್ ದಾಳಿಯಲ್ಲಿ ಎಂ ಕೆ ಗಣಪತಿ ಪಾತ್ರ ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಭೀಕರ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ನಾನು ಚರ್ಚ್ ದಾಳಿಗಳ ವಿಚಾರಣಾ ಆಯೋಗದ ನ್ಯಾಯಮೂರ್ತಿಯಾಗಿದ್ದ ಸೋಮಶೇಖರ್ ರವರ ಬಳಿ ಮಾಹಿತಿ ಹಂಚಿಕೊಂಡಿದ್ದೆ.
ನಂತರ ಉರ್ವಸ್ಟೋರ್ ಎಂಬ ಪ್ರದೇಶದಲ್ಲಿ ಸಿಂಗಲ್ ನಂಬರ್ ದಂಧೆ ಹೆಚ್ಚಾದಾಗ ಡಿವೈಎಫ್ಐ ಹೋರಾಟಕ್ಕಿಳಿದಿತ್ತು. ಈ ಸಿಂಗಲ್ ನಂಬರ್ ದಂಧೆಯ ಹಿಂದೆ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಕೈವಾಡವಿತ್ತು. ಪ್ರತಿಭಟನೆ ನಡೆದ್ರೂ ಕೂಡಾ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಸಿಂಗಲ್ ನಂಬರ್ ಅಡ್ಡೆಗಳ ಮೇಲೆ ದಾಳಿ ನಡೆಸಲು ಸಿದ್ದರಿರಲಿಲ್ಲ. ಆಗ ಮಂಗಳೂರಿನಲ್ಲಿ ಐಜಿಪಿಯಾಗಿದ್ದವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಅಶಿತ್ ಮೋಹನ್ ಪ್ರಸಾದ್. ಡಿವೈಎಫ್ ಐ ಐಜಿಪಿ ಅಶಿತ್ ಮೋಹನ್ ಪ್ರಸಾದ್ ಗೆ ದೂರು ನೀಡಿದಾಗ ಅವರೂ ಕೂಡಾ ಇನ್ಸ್ ಸ್ಪೆಕ್ಟರ್ ಗಣಪತಿ ಪಾತ್ರ ಇರುವುದನ್ನು ಮನಗಂಡು ನೇರವಾಗಿ ಸಿಂಗಲ್ ನಂಬರ್ ದಂಧೆಯ ಮೇಲೆ ದಾಳಿ ನಡೆಸಿದ್ದರು.
ನಾನೊಬ್ಬ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವನು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದ ಎಂ ಕೆ ಗಣಪತಿ ಎಡಪಂಥೀಯ ಸಂಘಟನೆಗಳು ಮತ್ತು ಮುಸ್ಲೀಮರ ವಿರೋಧಿ ನಿಲುವನ್ನು ಹೊಂದಿದ್ದರು. ನೀರಿನ ಖಾಸಗೀಕರಣವನ್ನು ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಡಿವೈಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯ ಸ್ಥಳ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯದ್ದು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಇದೇ ಎಂ ಕೆ ಗಣಪತಿ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಆಗುವ ಬಗ್ಗೆ ಖುದ್ದು ಬಂದರು ಠಾಣೆಗೆ ಮಾಹಿತಿ ಇರಲಿಲ್ಲ. ಸೈದ್ದಾಂತಿಕವಾಗಿ ವಿರೋಧಿಸುತ್ತಿದ್ದವರನ್ನು ಹಣಿಯಲು ಎಂ ಕೆ ಗಣಪತಿ ಪೊಲೀಸ್ ಯೂನಿಫಾರಂ ಅನ್ನು ಬಳಸುತ್ತಿದ್ದರು.
ನಕಲಿ ಎನ್ ಕೌಂಟರ್, ಚರ್ಚ್ ದಾಳಿಯ ವೇಳೆ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಇದೀಗ ಸಾವಿನ ನಂತರ ಹೀರೋ ಆಗುತ್ತಿದ್ದಾರೆ.

 

ಅವರ ಸಾವು ನ್ಯಾಯಯುತವಾದುದಲ್ಲ. ಅವರಿಗೆ ಪೊಲೀಸ್ ಉನ್ನತಾಧಿಕಾರಿಗಳು, ಸಚಿವರುಗಳು ಕಿರುಕುಳ ನೀಡಿದ್ದರೆ ಅದು ಶಿಕ್ಷಾರ್ಹ. ಆದರೆ ಎಂ ಕೆ ಗಣಪತಿ ಒಬ್ಬ ದಕ್ಷ, ಕೆಚ್ಚೆದೆಯ ಪ್ರಾಮಾಣಿಕ, ರಿಯಲ್ ಹೀರೋ ಎಂದೆಲ್ಲಾ ಕರೆದರೆ ಅದು ಅಪ್ಪಟ ಸುಳ್ಳಾಗುತ್ತದೆ.

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

Naveen Soorinje


ನವೀನ್ ಸೂರಿಂಜೆ


 

ಅಸಂಖ್ಯ ಹೋರಾಟ, ಚಳುವಳಿಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಪೋಲಿಸರ ಪ್ರತಿಭಟನೆ ದಿನೇದಿನೇ ಸುದ್ದಿಯಾಗುತ್ತಿದೆ. ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ನೇತೃತ್ವದಲ್ಲಿ ಹಲವು ತಳಹಂತದ ಪೋಲಿಸ್ ಸಿಬಂದಿಗಳು ವೇತನ ತಾರತಮ್ಯ, ಸಾಕಷ್ಟು ಸೌಲಭ್ಯಗಳು ಇಲ್ಲದಿರುವುದು, ರಜೆ ನಿರಾಕರಣೆ, ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅನ್ಯಾನ್ಯ ಬೇಡಿಕೆಗಳ ಈಡೇರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾವಿರಾರು ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಲು ನಿರ್ಧರಿಸುವ ಮೂಲಕ ಸಂಘರ್ಷಾತ್ಮಕ ಹೋರಾಟದ ಮಾರ್ಗವನ್ನು ಹಿಡಿದಿದ್ದಾರೆ. ಅನ್ಯ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯ ಮಟ್ಟದಲ್ಲೇ ಮಂಥನಕ್ಕೆ ಒಳಗಾಗಬಹುದಾಗಿದ್ದ, ಇತ್ಯರ್ಥವಾಗಬಹುದಾಗಿದ್ದ ಪೋಲಿಸರ ಪ್ರತಿಭಟನೆ ಮತ್ತು ಅವರ ಹಕ್ಕೊತ್ತಾಯದ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲವಾಗಿರುವ ಯುವ ಕಾರ್ಯಕರ್ತರು ಹಾಗೂ ಲೇಖಕರು ಈ ವಿಚಾರದಲ್ಲಿ ಹೋರಾಟಕ್ಕೆ ಕಟಿಬದ್ಧವಾಗಿರುವ ಪೋಲಿಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ; ಸಹಾನುಭೂತಿ ಹಾಗೂ ಅನುಕಂಪವನ್ನು ಸೂಚಿಸುತ್ತಿದ್ದಾರೆ.

ಪೊಲೀಸರ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗೆ ಇದೀಗ ದೊರಕುತ್ತಿರುವ ಅಭೂತಪೂರ್ವ ಬೆಂಬಲ ಹಲವು ಅನಪೇಕ್ಷಿತ ಪರಿಣಾಮಗಳಿಗೆ ಆಹ್ವಾನ ನೀಡುವ state-logoರೀತಿಯಲ್ಲಿ ಗೋಚರಿಸುತ್ತಿದೆ. ಯಜಮಾನ ಸ್ವರೂಪಿ ಪ್ರಭುತ್ವದ ಮೂರ್ತ ರೂಪವಾಗಿರುವ ಪೊಲೀಸರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುವ ಪ್ರಯತ್ನ ಎಡಪಂಥೀಯ ಹೋರಾಟಗಾರರು ಮತ್ತು ಯುವ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ಪ್ರಭುತ್ವವನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿವೆ. ಯುವ ಕಾರ್ಯಕರ್ತರ ಔದಾರ್ಯದ ಫಲವಾಗಿ ಇಂದು ಸಾಂಪ್ರದಾಯಿಕ ಶೋಷಿತ-ಶೋಷಕ ಸಮೀಕರಣದ ಸ್ವರೂಪವೇ ಒಮ್ಮೆಗೆ ಮಾರ್ಪಾಡಾದಂತೆ ಕಂಡುಬರುತ್ತಿದೆ.

ಅದಿರಲಿ. ಪೊಲೀಸರ ಬೇಡಿಕೆಗಳೇನು ಎಂಬುದರ ಬಗ್ಗೆ ಚರ್ಚಿಸೋಣಾ. ಸಾಮಾಜಿಕ ಜಾಲತಾಣದಲ್ಲಿ “ಪೊಲೀಸರ ಪರಿಸ್ಥಿತಿ ತೀರಾ ಹೀನಾಯವಾಗಿದೆ” ಎಂದು ಥರೇವಾರಿ ಬಿಂಬಿಸಲಾಗುತ್ತಿದೆ. ಅದರಲ್ಲೂ ಯುವ ಸಾಹಿತಿಗಳು ಮತ್ತು ಹೋರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಪೊಲೀಸರೂ ನಮ್ಮಂತೆ ಮನುಷ್ಯರು!” ಎಂದು ಕೂಗಿ ಹೇಳುತ್ತಿದ್ದಾರೆ. ಆ ಮೂಲಕ ವ್ಯವಸ್ಥೆ ಪೊಲೀಸರನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನಂತೂ ಒಪ್ಪಲು ಅಸಾಧ್ಯ.

ಕೆಳ ಹಂತದ ಪೊಲೀಸರಿಗೆ ಸರಕಾರ ತೀರಾ ಕಡಿಮೆ ಸಂಬಳವನ್ನೇನೂ ನೀಡುತ್ತಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಹೊಂದಿದ ಪೊಲೀಸ್ ಸಿಬಂದಿಯೊಬ್ಬ ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯದ ಜೊತೆಗೆ ವೇತನ ಪ್ರಾರಂಭವಾಗುವುದೇ 18 ಸಾವಿರ ರೂಪಾಯಿಗಳಿಂದ. ಸೈನ್ಯ ಹೊರತುಪಡಿಸಿ ಯಾವ ಸರಕಾರಿ ನೌಕರನಿಗೂ ಇಲ್ಲದ ಉಚಿತ ರೇಷನ್ ವ್ಯವಸ್ಥೆ ಪೊಲೀಸರಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪೊಲೀಸ್ ಸಿಬಂದಿಯೊಬ್ಬ ಕರ್ತವ್ಯದಲ್ಲಿ ಇದ್ದಾಗ ಸಾವನ್ನಪ್ಪಿದಲ್ಲಿ ಆತನ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಬೇರೆ ಇಲಾಖೆಗಳಲ್ಲಿ ಇದ್ದರೂ ಅದಕ್ಕಾಗಿ ಅಲೆದಾಡಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಲ್ಲಿಸಿದ ಒಂದೇ ಒಂದೇ ಅರ್ಜಿ ಇತ್ಯರ್ಥವಾಗದೆ ಬಾಕಿಯಾಗಿಲ್ಲ. ಒಂದು ವೇಳೆ ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರ್ವಹಿಸುವ ಸಂದರ್ಭ ಮೃತನಾದಲ್ಲಿ ತಕ್ಷಣವೇ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ 2 ಲಕ್ಷ ರೂಪಾಯಿಗಳನ್ನು ತಕ್ಷಣ ನೀಡಲಾಗುತ್ತದೆ. ಇನ್ನು ಪೊಲೀಸ್ ಸಿಬಂದಿಯೊಬ್ಬ ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಇಷ್ಟು ವ್ಯವಸ್ಥೆಗಳು ಬೇರಾವ ಇಲಾಖೆಯಲ್ಲೂ ಊಹಿಸಲೂ ಅಸಾಧ್ಯ. ಆದುದರಿಂದಲೇ ಈಗೀಗ ನಡೆಯುತ್ತಿರುವ ಪೋಲಿಸ್ ಪೇದೆ ನೇಮಕಾತಿ ಸಂದರ್ಭಗಳಲ್ಲಿ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇದು ಮನುಷ್ಯನೊಬ್ಬನನ್ನು ನಡೆಸಿಕೊಳ್ಳುವ ರೀತಿಯಲ್ಲದೆ ಇನ್ನೇನು ಅನ್ನಬೇಕು?

ಇಷ್ಟೆಲ್ಲಾ ಸೌಲಭ್ಯಗಳು ಇದ್ದರೂ ಪೊಲೀಸರು ಪ್ರತಿಭಟಿಸೋದ್ಯಾಕೆ? ಕೇವಲ ರಜೆಯ ಕಾರಣಕ್ಕಾಗಿಯಂತೂ ಅಲ್ಲ. ಪೊಲೀಸ್ ಅಥವಾ ಸೈನ್ಯKSP Recruitment 2015 ಸೇರುವಾಗಲೇ ಅಲ್ಲಿನ ರಜಾ ಸೌಲಭ್ಯದ ಬಗ್ಗೆ ಅರಿವು ಇರುತ್ತದೆ. ಹಾಗೆಂದು ಸೈನಿಕರ ರೀತಿ ಪೊಲೀಸರಿಗೆ ರಜೆ ನೀಡುವುದೇ ಇಲ್ಲವೆಂದಲ್ಲ. ಕೆಲವೊಂದು ಕಠಿಣ ಮತ್ತು ಸಹಜ ನಿಯಮಗಳು ಇದ್ದೇ ಇರುತ್ತವೆ. ರಜೆಯಲ್ಲಿ ಅನಿಶ್ಚಿತತೆ ವಿಶೇಷವಾಗಿ ಪೋಲಿಸ್ ಮೊದಲಾದ ರಕ್ಷಣಾ ಪಡೆಗಳ, ಸುರಕ್ಷಾ ಸಂಸ್ಥೆಗಳ ಸೇವಾವೃತ್ತಿಯ ಅನಿವಾರ್ಯ ಲಕ್ಷಣ. ಅಷ್ಟಕ್ಕೂ ಪೋಲಿಸರಿಗೆ ರಜೆ ಇರಲೇಬೇಕು ಅನ್ನುವ ಕಾರಣಕ್ಕಾಗಿ ಈಗ ಅವರಿಗೆ ಬೆಂಬಲ ಕೊಡುವ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು ವಾರದ ರಜಾದಿನಗಳಲ್ಲಿಲಿ ಪ್ರತಿಭಟನೆ, ಆಂದೋಲನಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆ ವ್ಯಂಗ್ಯವಾಗಿ ಕಂಡರೂ ಇಲ್ಲಿ ಪ್ರಸ್ತುತ. ಹಾಗೆಂದುಕೊಂಡು ಪೊಲೀಸರು ಪ್ರತಿಭಟಿಸಲೇ ಬಾರದೆಂದಲ್ಲ. ವೇತನ ತಾರತಮ್ಯ ಮತ್ತು ರಜೆಯ ಬಗ್ಗೆ ಈವೆರೆಗೂ ಒಂದೇ ಒಂದು ಮನವಿ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂಬುದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಮನವಿಯನ್ನೂ ಮಾಡದೇ, ಇಲಾಖಾ ಮಟ್ಟದಲ್ಲೇ ಇರತಕ್ಕಂತಹ ಸಾಂಸ್ಥಿಕ ಮಾಧ್ಯಮಗಳನ್ನು ಬಳಸದೇ ಪೊಲೀಸ್ ಮ್ಯಾನುವಲ್ ನಲ್ಲಿ ಅವಕಾಶ ಇಲ್ಲದ, ಸಂವಿಧಾನ ವಿರೋಧಿಯಾಗಿ ಪೊಲೀಸರು ದಿಡೀರನೆ ಪ್ರತಿಭಟನೆ ನಡೆಸುತ್ತಿರೋದ್ಯಾಕೆ ಎಂಬುದರ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಪೊಲೀಸರ ಪ್ರತಿಭಟನೆಗಿಂತಲೂ ಆತಂಕ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ಚಳುವಳಿಗಾರರು ಮತ್ತು ಯುವ ಸಾಹಿತಿಗಳ ಮಾತುಗಳು. “ಪೊಲೀಸರು ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸುವ ಹಲ್ಲೆ ದೌರ್ಜನ್ಯಗಳಿಗೆ ಅವರ ಮೇಲಿರುವ ಒತ್ತಡಗಳೇ ಕಾರಣ….” ಈ ರೀತಿಯ ಅಭಿಪ್ರಾಯಗಳನ್ನು ತೇಲಿಸಲಾಗುತ್ತಿದೆ. ಇಂತಹ ವಾದಗಳು ತಮ್ಮ ಕುಟುಂಬದಿಂದ ದೂರ ಇರುವ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರಗಳನ್ನು ನಡೆಸುವುದು ಸಹಜ ಎಂಬಷ್ಟೇ ಆಪಾಯಕಾರಿ.

ಕರ್ನಾಟಕ ಪೊಲೀಸರ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಒಂದೆರಡಲ್ಲ. ಈಗಲೂ ಪ್ರತೀ ಠಾಣೆಯ ಲಾಕಪ್ಪಿನಲ್ಲಿ ನೋಡಿದರೆpolice-brutality ಬರಿಮೈಯ್ಯಲ್ಲಿ, ಕೇವಲ ಚೆಡ್ಡಿ ಹಾಕಿಕೊಂಡು ಕುಳಿತಿರುವ ನ್ಯಾಯಾಂಗದ ಮುಂದೆ ಹಾಜರುಪಡಿಸದ ಆರೋಪಿಗಳು ಕಂಡುಬರುತ್ತಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವ್ಯಾಪ್ತಿ ಮೀರಿ ಮನೆಯ ಯಜಮಾನನ್ನು ಬಂಧಿಸಿ ಆತನ ಮಗನ ಎದುರೇ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಸೂಜಿ ಹಾಕಿಸಿದ್ದು ಯಾವ ಮೇಲಾಧಿಕಾರಿಯಾಗಲೀ, ಐಪಿಎಸ್ ಅಧಿಕಾರಿಯಾಗಲೀ ಅಲ್ಲ. ದನದ ವ್ಯಾಪಾರ ಮಾಡುತ್ತಿದ್ದವರ ಜೊತೆ ಕೆಲಸ ಮಾಡುತ್ತಿದ್ದ ಕಬೀರ್ ನನ್ನು ಗುಂಡು ಹಾಕಿ ಸಾಯಿಸಿದ್ದು ಇದೇ ತಳ ಹಂತದ ಪೊಲೀಸ್ ಸಿಬಂದಿಗಳು. ಮೊನ್ನೆ ಮೊನ್ನೆ ಸಿಎಂ ಮನೆಗೆ ದೂರು ಕೊಡಲು ಬಂದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದು ಕುಮಾರಸ್ವಾಮಿ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅಲ್ಲ; ಯಾವ ಮೇಲಾಧಿಕಾರಿಯ ಅಥವಾ ರಾಜಕಾರಣಿಯ ಕುಮ್ಮಕ್ಕೂ ಇಲ್ಲದ ಪೊಲೀಸ್ ಸಿಬಂದಿಗಳು! ಇಂತಹ ಸಾವಿರ ಸಾವಿರ ಪ್ರಕರಣಗಳು, ನಮ್ಮ ಮನೆಯ, ನೆರೆ ಮನೆಯ ವ್ಯಕ್ತಿಗಳಿಗಾದ ಅನ್ಯಾಯಗಳು ಕೇವಲ ಪೊಲೀಸ್ ಸಿಬಂದಿಗಳ ಅಮಾನವೀಯತೆಯಿಂದ ಕಾನೂನುಬಾಹಿರ ವರ್ತನೆಯಿಂದ ಆಗಿವೆಯೇ ಹೊರತು ಮೇಲಾಧಿಕಾರಿಗಳು ಮತ್ತು ರಾಜಕರಣಿಗಳ ಕುಮ್ಮಕ್ಕಿನಿಂದಲೋ ಅಥವಾ ವೇತನ ತಾರತಮ್ಯ, ರಜಾ ನಿರಾಕರಣೆಯಿಂದ ಅಲ್ಲ ಎಂಬುದಂತೂ ಸತ್ಯ.

ಹಾಗೆಯೇ ಈಗ ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸುವವರು ಎಡಪಂಥೀಯ ಹೋರಾಟಗಾರರು ಹೇಳುತ್ತಿರುವ “ನಾವು ಪ್ರತಿಭಟನೆ ಮಾಡುವ ಸಂದರ್ಭ ನಿಮ್ಮಿಂದ ಎಷ್ಟೇ ಹಲ್ಲೆಗೊಳಗಾದರೂ ನಿಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ” ಎಂಬ ಮಾತುಗಳೇ ಸಿನಿಕತನದ್ದು. ದಲಿತ ಅಥವಾ ಮುಸ್ಲೀಮನೊಬ್ಬ ತನ್ನ ಜಾತಿ ಧರ್ಮದ ಕಾರಣಕ್ಕಾಗಿಯೋ, ಕೇಳುವವರಿಲ್ಲ ಎನ್ನುವ ಕಾರಣಕ್ಕೋ ಲಾಕಪ್ಪಿನಲ್ಲಿ ಚಡ್ಡಿಯಲ್ಲಿ ಕುಳಿತು ಹಲ್ಲೆಗೊಳಗಾಗುವುದಕ್ಕೂ, ದಲಿತ ಮಹಿಳೆಯರು ವಿವಸ್ತ್ರಕ್ಕೊಳಗಾಗುವುದಕ್ಕೂ, ರಾಜಕೀಯ ಉದ್ದೇಶದ ಪ್ರತಿಭಟನೆಯ ಸಂದರ್ಭದ ಲಾಠಿಚಾರ್ಜ್ನ ಹಲ್ಲೆಗೂ ವ್ಯತ್ಯಾಸ ಇದೆ. ಕೇವಲ ಮುಸ್ಲೀಮರೆನ್ನುವ ಕಾರಣಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟು ಹತ್ತು ವರ್ಷ ಜೈಲಿನಲ್ಲಿ ಕೊಳೆತು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂಬತ್ತು ದನಿಯಿಲ್ಲದ ನಿರಪರಾಧಿಗಳ ಜೈಲುವಾಸವೂ ರಾಜಕೀಯ ಪಕ್ಷಗಳು ಸಂಘಸಂಸ್ಥೆಗಳು ನಡೆಸುವ ಜೈಲ್ ಭರೋ ಆಂದೋಲನಗಳು ಏಕರೂಪದ್ದೇ? ಇದು ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನವಲ್ಲವೇ?

ಅಷ್ಟಕ್ಕೂ ಪೊಲೀಸರ ಬೇಡಿಕೆಗಳ ಬಗ್ಗೆ ಯಾವ ಆಕ್ಷೇಪಗಳೂ ಇಲ್ಲ. ಸೌಲಭ್ಯಗಳನ್ನು ಹೊಂದಿರುವವರು ಮತ್ತಷ್ಟೂ ಸೌಲಭ್ಯಗಳು ಬೇಕು ಎನ್ನುವುದಕ್ಕೆ ಯಾರflowers in gun ಆಕ್ಷೇಪವೂ ಇಲ್ಲ. ಪೋಲಿಸರೇ ಖುದ್ದು ತಮಗೆ ಅದು ಬೇಕು ಇದು ಬೇಕು, ನಮ್ಮ ಸೇವಾಸ್ಥಿತಿ ಹಾಗಿರಬೇಕು ಹೀಗಿರಬೇಕು ಅನ್ನಲಿ. ಹಾಗೆಂದು ಜವಾಬ್ಧಾರಿಯುತ ರಾಜಕೀಯ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು “ಪೊಲೀಸರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣಕ್ಕಾಗಿ ಅವರು ದೌರ್ಜನ್ಯ ಎಸಗುತ್ತಾರೆ” ಎಂಬಂತಹ ಮಾತುಗಳನ್ನು ಆಡುವುದು, “ಅವರೂ ಮನುಷ್ಯರೇ” ಎಂದು ಘೋಷಣೆ ಕೂಗುವುದು ಅನುಚಿತ. ಅವರ ಸದ್ಯದ ತುರ್ತು ಪೋಲಿಸ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸುವುದು ಹಾಗು ಅದನ್ನು ಪೂರ್ಣವಾಗಿ ಸಂವಿಧಾನ ಮತ್ತು ನೆಲದ ಕಾನೂನಿನ ಪರಿಧಿಗೆ ತರುವ ಕೆಲಸವಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.

ಮಹಿಳಾ ದಿನ: ಆಚರಿಸಲು ಒಂದಿಷ್ಟು ನೈತಿಕತೆ ಬೇಡವೆ?

– ಪ್ರದೀಪ್ ಇ.

ನಾಳೆ ವಿಶ್ವ ಮಹಿಳಾ ದಿನ. ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡುತ್ತೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುತ್ತಾರೆ. ಅವರೆಲ್ಲರ ಮಾತುಗಳಿಗೆ ಮೊದಲು ಹೇಳಬೇಕಾದ್ದು — For god sake, hold your tongue. ಇಲ್ಲಿ ಸ್ವಲ್ಪ ಕೇಳಿ.

ಈ ಸರಕಾರಕ್ಕೆ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾಡುವ ನೈತಿಕ ಹಕ್ಕಿಲ್ಲ. ಇದು ಲೇಖನದ ಆರಂಭದಲ್ಲಿಯೇ ತೀರ್ಪು ಕೊಟ್ಟಂತೆ ಅನ್ನಿಸಬಹುದು. ಆದರೆ, ಇನ್ನು ಮುಂದೆ ಮಂಡಿಸಲಾಗುವ ಅಂಶಗಳಿಂದ ಈ ಲೇಖನ ಓದುತ್ತಿರುವ ಕೆಲವರಿಗಾದರೂ ಆ ಅಭಿಪ್ರಾಯದ ಬಗ್ಗೆ ಸಹಮತ ಮೂಡಬಹುದು.

ನಿಮಗೆ ಕೆಲವರಿಗೆ ಗೊತ್ತಿರಬಹುದು. ರಾಜ್ಯದ ಕೆಲವೆಡೆ ಹಲವು ವೈದ್ಯರು ಸಾವಿರಾರು ಅನಗತ್ಯ ಹಿಸ್ಟೆರೆಕ್ಟೊಮಿ (hysterectomy-ಗರ್ಭಕೋಶ ತೆಗೆಯುವ ಸರ್ಜರಿ) ಗಳನ್ನು ಮಾಡಿದ್ದಾರೆ. 2014 ರ ಅಂತ್ಯದ ಹೊತ್ತಿಗೆ ಚಿಕ್ಕಮಗPhoto Captionಳೂರ ಜಿಲ್ಲೆ ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಅನಗತ್ಯವಾದ ಸರ್ಜರಿಗಳನ್ನು ಮಾಡಿ, ನೂರಾರು ಮಹಿಳೆಯರಿಂದ ದುಡ್ಡು ವಸೂಲಿ ಮಾಡಿದ್ದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಂತು.

ವೈದ್ಯ ವೃತ್ತಿಯಲ್ಲಿರುವವರು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದರಂತೆ, ಹಿಸ್ಟೆರೆಕ್ಟೊಮಿ ಸರ್ಜರಿಯನ್ನು ತೀರಾ ಅನಿವಾರ್ಯವಾದ ಪ್ರಸಂಗಗಳ ಹೊರತಾಗಿ ಮಾಡಬಾರದು. ಅದರಲ್ಲೂ 35 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹೆಂಗಸರಿಗೆ ಆ ಸರ್ಜರಿಯನ್ನು ಮಾಡುವಾಗ, ಸಾಧ್ಯವಿರುವ ಎಲ್ಲಾ ಪರ್ಯಾಯ ಮಾರ್ಗಗಳನ್ನು ಮೊದಲು ಪರಿಶೀಲಿಸಬೇಕು. ಆ ಸರ್ಜರಿಯನ್ನು ಮಾಡದೇ ಹೋದರೆ ಅವರ ಆರೋಗ್ಯಕ್ಕೆ ತೊಂದರೆ ಆಗಬಹುದು ಎನ್ನುವ ಪರಿಸ್ಥಿತಿ ಇದ್ದಾಗ ಮಾತ್ರ ಮುಂದುವರಿಯಬಹುದು. ಈ ನೀತಿಗೆ ಕಾರಣಗಳಿವೆ. ಗರ್ಭಕೋಶ ತೆಗೆದರೆ ಸ್ತ್ರೀ ದೇಹದ ಹಲವು ಋಣಾತ್ಮಕ ಪ್ರತಿಕ್ರಿಯೆಗಳು ಆಗುತ್ತವೆ. ಆದರೆ, ಗೊತ್ತಿರಲಿ, ಆ ಬೀರೂರಿನ ವೈದ್ಯ ಮೂರು ವರ್ಷದ ಅವಧಿಯಲ್ಲಿ 1,428 ಮಹಿಳೆಯರ ಗರ್ಭಕೋಶ ತೆಗೆದಿದ್ದ. ಆತ ವರ್ಷಪೂರ್ತಿ ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ ಎಂದು ಭಾವಿಸಿದರೂ, ದಿನಕ್ಕೆ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಹಾಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇಕಡ 40 ಕ್ಕೂ ಹೆಚ್ಚು ಮಂದಿ 35 ವರ್ಷಕ್ಕಿಂತ ಚಿಕ್ಕ ಹರೆಯದವರು.

ಈ ಎಲ್ಲಾ ಮಾಹಿತಿಗಳು ಸರಕಾರದ ಆರೋಗ್ಯ ಇಲಾಖೆ ಆದೇಶದ ಮೇಲೆ ತನಿಖೆ ನಡೆಸಿದ ಸಮಿತಿ ಕಲೆಹಾಕಿದ್ದು. ಮಾಧ್ಯಮದಲ್ಲಿ ಸುದ್ದಿ ಬಂದ ನಂತರ ಆರೋಗ್ಯ ಮಂತ್ರಿ ಯು.ಟಿ.ಖಾದರ್ ಸಮಿತಿ ನೇಮಿಸಿದರು. ಅದರಲ್ಲಿ ಇಬ್ಬರು ವೈದ್ಯರು ಮತ್ತೊಬ್ಬರು ವಕೀಲರು. ಆ ವಕೀಲರು ರಾಜ್ಯ ಮಹಿಳಾ ಆಯೋಗದ ಸದಸ್ಯರೂ ಹೌದು. ಆ ಮೂರೂ ಮಂದಿ, ಬೀರೂರಿನ ಆಸ್ಪತ್ರೆಗೆ ಹೋಗಿ ಮೂರು ವರ್ಷಗಳ ಕಾಲ ಆ ವೈದ್ಯ ಹ್ಯಾಂಡಲ್ ಮಾಡಿದ ಎಲ್ಲಾ ಕೇಸ್ ಶೀಟ್ ಗಳನ್ನು ತಡಕಾಡಿ ಮಾಹಿತಿ ಕಲೆ ಹಾಕಿದರು. ಸರ್ಜರಿಗಳಿಗೆ ಸಹಾಯ ಮಾಡಿದ ಸಿಬ್ಬಂದಿ ಹಾಗೂ ಸರ್ಜರಿಗೆ ಒಳಗಾದ ಹಲವಾರು ಮಹಿಳೆಯರನ್ನು ಸಂದರ್ಶಿಸಿ ವರದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಒಂದು ಹಳ್ಳಿಯಲ್ಲಿಯೇ ಅದೆಷ್ಟೋ ಮಹಿಳೆಯರು ಈ ವೈದ್ಯ ಮಹಾಶಯನ ಬಳಿ ಬಂದು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ತನಿಖಾ ವರದಿ ಪ್ರಕಾರ, ಈ ಮಹಿಳೆಯರು ಸಾಕಷ್ಟು ಹಣ ನೀಡಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೆಲವರು 30,000 ರೂಗಳ ವರೆಗೆ ಲಂಚ ನೀಡಿದ್ದಾರೆ. ಒಟ್ಟು ಎಂಟು ಜಿಲ್ಲೆಯ ಮಹಿಳೆಯರು ಇಲ್ಲಿ ಬಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಕೆಲವರಿಗೆ ಮಹಿಳೆಯರು ಇಂತಹ ಸರ್ಜರಿಗೆ ಏಕೆ ಒಳಗಾಗುತ್ತಾರೆ ಎಂದು ತಿಳಿದರೆ ಆಶ್ಚರ್ಯ ಆಗಬಹುದು. ಚಿತ್ರದುರ್ಗ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿರುವ ಗೊಲ್ಲರ ಸಮುದಾಯದಲ್ಲಿ ಕೆಲ ಸಂಪ್ರಾದಯಗಳಿವೆ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಊರ ಹೊರಗೆ ಕಟ್ಟಲಾಗಿರುವ, ಯಾವು ಮೂಲಭೂತ ವ್ಯವಸ್ಥೆಯೂ ಇಲ್ಲದ ಮನೆಯಲ್ಲಿ ಕಾಳ ಕಳೆಯಬೇಕು. ಶುಚಿತ್ವ ಇಲ್ಲದ ಕಾರಣಕ್ಕೋ ಅಥವಾ ಮತ್ತಾವ ಕಾರಣಕ್ಕೋ ಅವರಿಗೆ ವಿಪರೀತ ರಕ್ತಸ್ರಾವ ಆಗಿ, ವೈದ್ಯರ ಬಳಿ ಹೋಗುತ್ತಾರೆ. ಇದನ್ನೇ ವ್ಯಾಪಾರದ ಮೂಲವನ್ನಾKhaderಗಿ ಕಂಡ ವೈದ್ಯರು – ಇದಕ್ಕೆಲ್ಲಾ ಒಂದೇ ಪರಿಹಾರ ಹಿಸ್ಟೆರೆಕ್ಟೊಮಿ ಎನ್ನುತ್ತಾರೆ. ಗರ್ಭಕೋಶ ತೆಗೆದರೆ, ನಿಮಗೆ ಈ ಸಮಸ್ಯೆ ಇರುವುದಿಲ್ಲ, ಹಾಗೂ ನಿಮ್ಮ ಹಳ್ಳಿಯ ಸಂಪ್ರದಾಯದಂತೆ, ಮುಟ್ಟಿನ ಸಂದರ್ಭದಲ್ಲಿ ಊರ ಹೊರಗೆ ಇರಬೇಕಾದ ಪರಿಸ್ಥಿತಿನೂ ಇಲ್ಲ – ಎಂದು ಸಲಹೆ ನೀಡುತ್ತಾರೆ.

ಊರಿನ ಕಟ್ಟಳೆಗಳಿಂದ ಎಷ್ಟೇ ಬೇಸತ್ತಿದ್ದರೂ, ಅದರ ವಿರುದ್ಧ ದನಿ ಎತ್ತಲಾಗದ ಮಹಿಳೆಯರಿಗೆ ಇದು ಸುಲಭ ಮಾರ್ಗದಂತೆ ಕಾಣುತ್ತದೆ. ಅದಕ್ಕೆ ಸಾಲ ಮಾಡಿ ಹಣ ಹೊಂದಿಸ ವೈದ್ಯರಿಗೆ ನೀಡಿ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದಲ್ಲದೆ, ಬೇರೆ ಬೇರೆ ಸಮುದಾಯದ ಹಲವಾರು ಹೆಂಗಸರು ಈ ವೈದ್ಯರ ಸಂಪರ್ಕಕ್ಕೆ ಬಂದು ಈ ಸರ್ಜರಿ ಮಾಡಿಸಿಕೊಂಸಿದ್ದಾರೆ. ಬೇರೆ ಚಿಕಿತ್ಸೆಯಿಂದ ಹಲವರ ಅನಾರೋಗ್ಯ ಗುಣಪಡಿಸಲು ಸಾಧ್ಯವಿದ್ದರೂ, ಇದೇ ಸರ್ಜರಿ ಮಾಡಿ ದುಡ್ಡು ಪಡೆದಿದ್ದಾರೆ. ಇದೆಲ್ಲವನ್ನೂ ತಜ್ಞರ ವರದಿ ವಿವರವಾಗಿ ನಮೂದಿಸಿ ಸರಕಾರಕ್ಕೆ ವರದಿ ಕೊಟ್ಟು ಒಂದು ವರ್ಷವಾಗಿದೆ. ಈ ಪ್ರಾಥಮಿಕ ಮಾಹಿತಿ ಇಟ್ಟುಕೊಂಡು ಇಡೀ ಪ್ರಕರಣಗಳ ಬಗ್ಗೆ ಒಂದು ಸಿ.ಐ.ಡಿ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಚಾರ್ಜ್ ಶೀಟ್ ಹಾಕಿಸಿ, ಶಿಕ್ಷೆ ಸಿಗುವಂತಾಗಬೇಕು ಎಂದು ವರದಿ ಹೇಳುತ್ತದೆ.

ಆದರೆ…

ಇದುವರೆಗೆ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷೆಯ (??) ಹೆಸರಿನಲ್ಲಿ ಪ್ರಸ್ತುತ ವೈದನನ್ನು ಬೀರೂರಿನಿಂದ ಜಿಲ್ಲಾ ಕೇಂದ್ರವಾದ ದಾವಣಗೆರೆಗೆ ವರ್ಗಾವಣೆ ಮಾಡಿದ್ದಾರೆ. ಸಿಐಡಿ ತನಿಖೆ ಬಗ್ಗೆ ಇದುವರೆಗೆ ತೀರ್ಮಾನ ಇಲ್ಲ. ನೆನಪಿರಲಿ, ವರದಿ ಮಂಡಿಸಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ. ಇದುವರೆಗೆ ಏನೂ ಆಗಿಲ್ಲ. ಇಂತಹದೇ ಅನಗತ್ಯ ಹಿಸ್ಟೆರೆಕ್ಟೊಮಿ ಸರ್ಜರಿ ಮಾಡಿದ ಆರೋಪಗಳು ಗುಲ್ಬರ್ಗಾ ಸೇರಿದಂತೆ, ಹಲವು ಭಾಗಗಳಲ್ಲಿ ಕೇಳಿ ಬಂದಿವೆ. ಅಲ್ಲಿಯೂ ತನಿಖೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಾಸ್ತಿ ಆಗುತ್ತದೆಂದು ಹೇಳಲಾಗದು.

ಈಗ ಹೇಳಿ, ಮಹಿಳೆಯರ ದೇಹದ ಮೇಲೆ ಚಿಕಿತ್ಸೆಯ ಹೆಸರಿನಲ್ಲಿ ದುಡ್ಡು ಮಾಡಿದವರ ಮೇಲೆ ಸೂಕ್ತ ತನಿಖೆ ನಡೆಸಿ ಶಿಕ್ಷೆ ಕೊಡಿಸಲಾಗದ ಸರಕಾರಕ್ಕೆ ಮಹಿಳಾ ದಿನ ಆಚರಿಸುವ ನೈತಿಕತೆ ಇದೆಯೆ?

ಕಟ್ಟಿದ ಗಡಿಯಾರ ಮತ್ತು ಕಳಚಿದ ಮುಖವಾಡ!


-ಸಂತೋಷ್


ಅವು ಅಹಿಂದ ಕಾರ್ಯಕ್ರಮದ ದಿನಗಳು. ರಾಜ್ಯದ ಹಲವೆಡೆ ಅಹಿಂದ ಸಮಾವೇಶಗಳು ನಡೆದವು. ಆಗಿನ್ನೂ ಕಾಂಗ್ರೆಸ್ ಸೇರದ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ಕೆಲ ಕಾಂಗ್ರೆಸ್ ಶಾಸಕರು ಜನರನ್ನು ಒಟ್ಟು ಮಾಡಿ ಸಭೆಗಳಿಗೆ ಕಳುಹಿಸುತ್ತಿದ್ದರು. ಕೆಲವರು ಬಸ್ ವ್ಯವಸ್ಥೆ ಮಾಡಿದ್ದರು. ಹಲವೆಡೆ ಕೆ.ಎಸ್.ಆರ್.ಟಿ.ಸಿಗೆ ಬೃಹತ್ ಮೊತ್ತದ ದುಡ್ಡು ಕಟ್ಟಿ ಬಸ್ ಗಳನ್ನು ಬಾಡಿಗೆಗೆ ತಂದವರು ಸತೀಶ್ ಜಾರಕಿಹೊಳಿ ಬಳಗSiddu-2. ಆಗ ಜಾರಕಿಹೊಳಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡು ದಳ ತೊರೆದಿದ್ದರು. ರಾಜ್ಯದ ನಾನಾ ಕಡೆ ಸಮಾವೇಶಗಳು ಯಶಸ್ವಿಯಾಗಿ ನಡೆಯಲು ನೂರಾರು ಜನರ ಶ್ರಮವಿತ್ತು. ಅವರಲ್ಲಿ ಅನೇಕರಿಗೆ ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಯೋಚನೆ ಇದ್ದಿರಬಹುದು, ಆದರೆ ಅವರು ಅಧಿಕಾರಕ್ಕೆ ಬಂದರೆ, ನಾವೊಂದಿಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದ್ದದ್ದಂತೂ ಕೆಲವೇ ಕೆಲವರಿಗೆ.

ಕಾಲ ಉರುಳಿತು. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿನ ಕಣ. ಸಿದ್ದರಾಮಯ್ಯನವರಿಗೆ ಬಹುಶಃ ಇನ್ನೂ ನೆನಪಿರಬಹುದು, ನಾಡಿನ ಮೂಲೆ ಮೂಲೆಯಿಂದ ಅವರ ಬಗ್ಗೆ ಒಲವು, ಅಭಿಮಾನ ಇಟ್ಟುಕೊಂಡಿದ್ದ ನೂರಾರು ಮಂದಿ ತಮ್ಮ ಕೈಲಾದಷ್ಟು ಹಣವನ್ನು ಸ್ನೇಹಿತರ ಮೂಲಕ ಅವರ ಗೆಲುವಿಗೆ ಕಳುಹಿಸಿದರು. ಒಂದು ಸಾವಿರದಿಂದ ಐದು ಸಾವಿರ ರೂಗಳ ವರೆಗೆ ಕೊಟ್ಟವರ ಸಂಖ್ಯೆ ದೊಡ್ಡದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹೊತ್ತಿಗೆ ಅವರಲ್ಲಿ ಕೆಲವರು ಅಸುನೀಗಿರಬಹುದು. ಅವರಲ್ಲಿ ಬಹುಪಾಲು ಮಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದರಿಂದ ವೈಯಕ್ತಿಕವಾಗಿ ಯಾವ ಲಾಭವೂ ಬೇಕಿರಲಿಲ್ಲ. ಅವರಲ್ಲಿ ಬಹುತೇಕರು ಕುರುಬರೇ ಇರಬಹುದು, ಆದರೆ ಜಾತಿ ಒಂದೇ ಕಾರಣಕ್ಕೆ ಅಭಿಮಾನ ಇರಲಿಲ್ಲ. (ಜಾತಿ ಮಾತ್ರ ಕಾರಣಕ್ಕೆ ಅಭಿಮಾನ ಪಡುವುದಾಗಿದ್ದರೆ, ಕೆ.ಎಸ್. ಈಶ್ವರಪ್ಪ ಉಪಮುಖ್ಯಮಂತ್ರಿಯಾದಾಗ ಆ ಸಮುದಾಯ ಸಂಭ್ರಮಿಸಬೇಕಿತ್ತು. ಅಥವಾ ಮತ್ತೊಬ್ಬ ನಾಯಕ ಸಿಕ್ಕ ಎಂದು ಖುಷಿಪಡ ಬಹುದಿತ್ತು. ಹಾಗೇನೂ ಕಾಣಲಿಲ್ಲ). ಸಿದ್ದರಾಮಯ್ಯನವರನ್ನು ಜಾತಿ ಹೊರತಾಗಿ ಇಷ್ಟ ಪಡುವ ಒಂದು ದೊಡ್ಡ ವರ್ಗವಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಮೊದಲ ದಿನಗಳಲ್ಲಿ ಅವರು ಬೆಂಗಳೂರ ಹೊರಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಗ ಅಕ್ಕ ಪಕ್ಕದಲ್ಲಿ ಎಚ್.ಎಂ.ರೇವಣ್ಣ ನಂತಹವರು ಕಾಣುತ್ತಿದ್ದರು. ಸಭೆಯಲ್ಲಿ ಹಾಜರಿದ್ದ ಜನ, ರೇವಣ್ಣನೂ ಅವರದೇ ಜಾತಿಯವರಲ್ಲವೇ, ಅದಕ್ಕೆ ಯಾವಾಗಲೂ ಜೊತೆಯಲ್ಲೇ ಇರ್ತಾರೆ ಎಂದು ಮಾತನಾಡಿಕೊಂಡರು. ಆದರೆ, ಅದೇ ಊರುಗಳಿಗೆ ಕೆಲ ತಿಂಗಳುಗಳ ನಂತರ ಸಿಎಂ ಭೇಟಿ ಕೊಟ್ಟಾಗ, ರೇವಣ್ಣ ಇರುತ್ತಿರಲಿಲ್ಲ. ಆ ಸ್ಥಾನದಲ್ಲಿ ಕಾಣುತ್ತಿದ್ದ ಮುಖ ಭೈರತಿ ಬಸವರಾಜು. ಅವರು ವಿದಾನಸಭೆ ಸದಸ್ಯ. ಅವರ ಸೋದರ ಸಂಬಂಧಿ ಭೈರತಿ ಸುರೇಶ್ ವಿಧಾನ ಪರಿಷತ್ ಸದಸ್ಯ. ಕಾಂಗ್ರೆಸ್ ನ ಕೆಲ ಸದಸ್ಯರು ಪಕ್ಷದ ನಿರ್ದೇಶನದ ವಿರುದ್ಧ ಮತ ನೀಡಿ, ಅರ್ಥಾತ್ ಹಣಕ್ಕೆ ತಮ್ಮ ಮತ ಮಾರಿಕೊಂಡು, ಆತನನ್ನು ಗೆಲ್ಲಿಸಿದ್ದರು. ಹೆಬ್ಬಾಳ್ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಭೈರತಿ ಸುರೇಶ್ ರನ್ನು. ರೇವಣ್ಣ ಬಹಳ ಕಾಲ ಜನರ ಮಧ್ಯೆ ಇದ್ದು ರಾಜಕಾರಣ ಮಾಡಿಕೊಂಡು ಬಂದವರು. ಆದರೆ ಭೈರತಿಯವರ ವ್ಯವಹಾರ ರಿಯಲ್ ಎಸ್ಟೇಟ್. ಹಣವಂತರು ಅಧಿಕಾರಕ್ಕೆ ಹಾತೊರೆದು ರಾಜಕಾರಣಕ್ಕೆ ಬಂದರೆ ಆಗುವ ಅನಾಹುತಗಳು ಅನೇಕ.

ಹೀಗೆ ಹೊಸ ಮುಖಗಳ ಪ್ರವೇಶದ ಪರಿಣಾಮವೇ ಕೈಗೆ ದುಬಾರಿ ಬೆಲೆಯ ವಾಚ್ ಬಂತು. ಕಣ್ಣು ತಂಪಾಗಿಸಲು ಲಕ್ಷಗಟ್ಟಲೆ ಬೆಲೆ ಬಾಳುವ ಗ್ಲಾಸ್ ಬೇಕಾಯ್ತು. (ಪಾಪ ಇವರ ಅಹಿಂದ ಸಮಾವೇಶಗಳಿಗೆ ದುಡ್ಡು ಹೊಂದಿಸಿಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದ ಸತೀಶ್ ಜಾರಕಿಹೊಳಿ, ಬುದ್ಧ ಹಾಗೂ ಅಂಬೇಡ್ಕರ್ ಭಾವಚಿತ್ರಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಗೃತಿ ಪ್ರಯತ್ನಿಸುತ್ತಿದ್ದಾರೆ. ಸ್ಮಶಾನದಲ್ಲಿ ಮಲಗುವ ಮೂಲಕ ಮೂಢನಂಬಿಕೆಗಳನ್ನು ತೊಡೆದು ಹಾಕಲು ತಮ್ಮ ಮಿತಿಯೊಳಗೇ ಪ್ರಯತ್ನಿಸುತ್ತಿದ್ದಾರೆ.) ಕೆಲ ಕಾಲದ ವರೆಗೆ ಇದೆಲ್ಲವೂ ಕೇವಲ ಗಾಳಿಸುದ್ದಿಯಾಗಿಯೇ ಇದ್ದವು. ಆದರೆ, ಜನ ಅಸಹ್ಯ ಪಡುವ ಹಂತಕ್ಕೆ ಹೋಗಲು ಕಾರಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿದ ರೀತಿ, ಮತ್ತು ಹಾಗೆ ಉತ್ತರಿಸುವಾಗ ಹಿಂದೆ ನಿಂತು ಗಹಗಹಿಸಿದರಲ್ಲ ಅವರು ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನು ಖಳನಾಯಕನನ್ನಾಗಿಸಿದರು.

“ನನಗೆ ಈ ವಾಚ್ ಐದು ಲಕ್ಷ ರೂಪಾಯಿ ಕೊಡಿಸಿರಪ್ಪಾ ಸಾಕು…ಈ ಕನ್ನಡಕಕ್ಕೆ 50,000 ರೂ ಕೊಡಿಸಿ ಸಾಕು” – ಅದನ್ನು ಭಾರೀ ಚಾಲಾಕಿನ ಉತ್ತರ ಅಂದುಕೊಂಡಿರಾ ಸಿದ್ದರಾಮಯ್ಯ? ನಿಮ್ಮ ಹಿಂದೆ ನಿಂತವರು ನಿರ್ಲಜ್ಜರಾಗಿ ನಕ್ಕಿರಬಹುದು, ಆದರೆ ಜನರು ನಿಮ್ಮ ಉತ್ತರದ ಧಾಟಿಯನ್ನು ಅದೇ ರೀತಿ ಸ್ವೀಕರಿಸಲಿಲ್ಲ. “ಇವನಿಗ್ಯಾಕೆ ಬೇಕಿತ್ತು ಇಂತಹ ಶೋಕಿ? ಅದೂ 60-70 ಲಕ್ಷ ರೂಪಾಯಿದ್ದಂತೆ..ವಾಚ್..ವಜ್ರದ ಹರಳು ಇದ್ದಾವಂತೆ” – ಇದು ಸಾಮಾನ್ಯ ಜನರು ಇಡೀ ಪ್ರಕರಣವನ್ನು ನೋಡುವ ಬಗೆ. ಜನರ ಭಾವನೆ ಹೇಗಿರಬಹುದು ಎಂದು ಒಂದಿಷ್ಟೂ ಊಹಿಸದೆ, ನೀವು ಹಾಗೆ ಪ್ರತಿಕ್ರಿಯೆ ಕೊಟ್ಟಿರಲ್ಲ, ಅಷ್ಟು ಸಾಕು ನೀವು ಜನ ಸಾಮಾನ್ಯರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿ ಎಷ್ಟೋ ದಿನಗಳಾದವು ಎಂದು ತಿಳಿಯುತ್ತದೆ.

ನೀವು ಹೇಳಿದಂತೆ, ಆ ಗಡಿಯಾರದ ಬೆಲೆ ಐದು ಲಕ್ಷ ರೂಪಾಯಿಗಳೇ ಇರಲಿ. ಆದರೆ, ಜನರು ತಮ್ಮ ಮುಖ್ಯಮಂತ್ರಿ ಸರಳವಾಗಿರಬೇಕೆಂದು ಬಯಸುತ್ತಾರೆ. ತ್ರಿಪುರ ಮುಖ್ಯಮಂತ್ರಿ ಬಗ್ಗೆ ನಮ್ಮ ಜನರಿಗೆ ಗೊತ್ತಿರುವುದು ಅವರ ಸರಳತೆ. ಮೊನ್ನೆ ಮೊನ್ನೆ ತೀರಿಕೊಂಡ ಎ.ಬಿ.ಬರ್ಧನ್ ಜೀವನ ಪೂರ್ತಿ ಸಂಪಾದಿಸಿದ್ದು ಒಂದು ಟ್ರಂಕ್ ಮತ್ತು ಹಾಸಿಗೆ. ಅಂತಹ ಸರಳತೆಯನ್ನು ಜನತೆ ಎಲ್ಲರಿಂದ ನಿರೀಕ್ಷಿಸುವುದಿಲ್ಲ. ನಾಳೆ ದಿನ ಯಾರಾದರೂ ಮೀಡಿಯಾ ಮುಂದೆ ನಿಂತು ಆರ್.ವಿ.ದೇಶಪಾಂಡೆ ಕೈಯಲ್ಲಿರುವ ಉಂಗುರದ ಬೆಲೆ ಒಂದು ಕೋಟಿ ಎಂದರೂ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಥವಾ ಡಿ.ಕೆ.ಶಿವಕುಮಾರ್ ಹತ್ರ ಕೋಟಿ ಬೆಲೆ ಬಾಳುವ ಕಾರು ಇದೆ ಎಂದರೆ, ಯಾರೂ ಮನಸ್ಸಿಗೆ ಬೇಸರ ಮಾಡಿಕೊಳ್ಳಲ್ಲ. ಆದರೆ, ನೀವೀಗ ಎಂತಹ ಮಟ್ಟಕ್ಕೆ ಇಳಿದು ಬಿಟ್ಟೀದಿರೆಂದರೆ, ಯಾವುದೇ ಪತ್ರಿಕೆ ನಿಮ್ಮ ಒಂದು ಜೊತೆ ಶೂ ಬೆಲೆ ಒಂದೂವರೆ ಲಕ್ಷ ರೂಪಾಯಿ ಎಂದರೆ ನಂಬಿ ಬಿಡುತ್ತಾರೆ. “ಓಹ್..ಇರಬಹುದು. ಅಂತಹವು ಮೂರ್ನಾಲ್ಕು ಜೊತೆ ಇರಬಹುದು. ಒಂದೇ ಇಟ್ಟುಕೊಂಡರೆ, ಅದನ್ನೇ ದಿನಾSiddu-1ಲೂ ಹಾಕೋಕೆ ಆಗುತ್ತಾ” ಎಂದು ತೀರ್ಮಾನಕ್ಕೆ ಬರುತ್ತಿದ್ದಾರೆ.

ಅಷ್ಟೇ ಅಲ್ಲ, ಕುಮಾರಸ್ವಾಮಿ ಇದು ಕದ್ದ ವಾಚ್ ಎಂದು ಆರೋಪಿಸಿದಾಗ, ಜನರು “ಹೌದು..ಇರಲೂ ಬಹುದು” ಎಂದು ಸಂಶಯಿಸುತ್ತಿದ್ದಾರೆ. ಏಕೆಂದರೆ, ಅವರು ವಾಚ್ ಬಗ್ಗೆ ಕೊಟ್ಟ ಸಮಜಾಯಿಷಿ ಜನ ಸಾಮಾನ್ಯರಲ್ಲಿ ಸಮಾಧಾನ ತಂದಿಲ್ಲ. ಒಂದಿಷ್ಟು ತಿಂಗಳುಗಳ ಹಿಂದೆ, ಮೈಸೂರು ಬಳಿ ಪೊಲೀಸರೇ ಭಾಗಿಯಾಗಿದ್ದ ಕಳ್ಳತನವನ್ನು ಜನರು ಮರೆತಿಲ್ಲ. ಭಾಗಿಯಾಗಿದ್ದ ಸಣ್ಣ ಪುಟ್ಟ ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ, ಆದರೆ ಹಿರಿಯ ಅಧಿಕಾರಿ ಆರಾಮಾಗಿದ್ದಾರೆ. ಕ್ಷುಲ್ಲಕ ಘಟನೆಯಂತೆ ಆರಂಭವಾದ ಪ್ರಕರಣ ದಿನೇ ದಿನೇ ವಿಸ್ತಾರವಾಗುತ್ತಿದೆ. ಇದಕ್ಕೆಲ್ಲಾ ಕಾರಣ, ಸ್ವತಃ ಮುಖ್ಯಮಂತ್ರಿ ಹಾಗೂ ಅವರ ಸುತ್ತಲಿನವರು. ಮಕ್ಕಳು ದುಶ್ಚಟ ಕಲಿತರೆ ಸಹವಾಸ ದೋಷ ಎನ್ನಬಹುದು ಆದರೆ, ವ್ಯಕ್ತಿ ಭ್ರಷ್ಟನಾಗಲು, ಶೋಕಿಲಾಲನಾಗಲು ಸಹವಾಸ ಕಾರಣ ಅಲ್ಲ, ವಾಂಛೆ ಹಾಗೂ ದುರಾಸೆಗಳು ಕಾರಣ.

ಮುಖ್ಯಮಂತ್ರಿಯ ವಾಚ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಸಿದ್ದರಾಮಯ್ಯನನ್ನು ಇದುವರೆಗೆ ಬೆಂಬಲಿಸಿಕೊಂಡು ಬಂದವರ ದನಿ ಬಂದ್ ಆದಂತಿದೆ. ತಮಗೂ, ಈ ಘಟನೆಗೂ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ. ಹಾಗಂತ, ಅವರಾರಿಗೂ ಈ ಪ್ರಕರಣ ಕಾರಣ ಸಿದ್ದರಾಮಯ್ಯನವರ ಬಗ್ಗೆ ಸಿಟ್ಟು, ಬೇಸರ ಬಂದಿಲ್ಲ ಎಂದಲ್ಲ. ಕೆಲವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಗೋಜಿಗೆ ಹೋಗದಿರಬಹುದು, ಅಥವಾ ಕೆಲ ಆತ್ಮೀಯರು ಖಾಸಗಿಯಾಗಿ ಮುಖ್ಯಮಂತ್ರಿಯೊಂದಿಗೆ ತಮ್ಮ ಸಿಟ್ಟು ವ್ಯಕ್ತಪಡಿಸಿರಬಹುದು. ಆದರೆ, ಅಷ್ಟು ಸಾಲದು. ಮುಂದೊಂದು ದಿನ, ಪಾಪಪ್ರಜ್ಞೆ ಕಾಡದೇ ಇರಲು ಈಗ ಮಾತನಾಡಬೇಕು. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಿದೆ. ಅವರು ಹೆಚ್ಚೆಚ್ಚು ಮಾತನಾಡಬೇಕು.