Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಕೀಳರಿಮೆಯಿಂದ ಕನ್ನಡದ ಕಡೆಗಣನೆ ಸಲ್ಲ – ಕ್ಷಮೆ ಕೇಳಬೇಕಿಲ್ಲ…

– ಸೂರ್ಯ ಮುಕುಂದರಾಜ್
ವಕೀಲ, ಬೆಂಗಳೂರು

ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಗನಿಗೆ ಕ್ಷಮಿಸು ಎಂದು (ಪ್ರಜಾವಾಣಿಯ ಸಂಗತದಲ್ಲಿ ಪ್ರಕಟವಾಗಿರುವ ಲೇಖನ) ಕೇಳುತ್ತಿರುವ ಸಹನಾ ಕಾಂತಬೈಲು ಅವರಂತಹ ತಾಯಂದಿರ ಪರಿಸ್ಥಿತಿ ಮತ್ತು ನಮ್ಮಲ್ಲಿರುವ ಭಾಷಾ ಕೀಳರಿಮೆ ಅರ್ಥವಾಗುವಂತಹುದೆ. ಆದರೆ ಭಾಷೆ ಒಂದು ಅಭಿವ್ಯಕ್ತಿ. ಹಾಗಾಗಿ ಸಂವಹನಕ್ಕೆ ಮಾತೇ ಬೇಕಂತಿಲ್ಲ. ಈ ಕಂಪ್ಯೂಟರ್ ಯುಗದಲ್ಲೂ ಕೂಡ ಎಷ್ಟೋ ಜನ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದ ಎಂಟನೇ ತರಗತಿ ಓದಿರುವ ಯಲಹಂಕದ ವಿ.ಆರ್.ಕಾರ್ಪೆಂಟರ್ ಎಂಬ ಕವಿಯವರೆಗೆ ಕಂಪ್ಯೂಟರ್‌ನಲ್ಲೂ ಕನ್ನಡವನ್ನು ಪಸರಿಸುತ್ತಿದ್ದಾರೆ. ಅಷ್ಟೇ ಯಾಕೆ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದ ನನಗೆ ಅಲ್ಲಿನ ಉಸಿರು ಕಟ್ಟುವ ವಾತಾವರಣದಿಂದ ಮುಕ್ತಿ ದೊರಕಿದ್ದು ನನ್ನನ್ನು govt-school-kidsನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದ ಮೇಲೆಯೇ. ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ. ಕನ್ನಡದ ಕವಿಯಾಗಿದ್ದ ನನ್ನ ತಂದೆ ಬೆಂಗಳೂರಿನಲ್ಲಿದ್ದುಕೊಂಡು ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಿದಾಗ ಅವರಿಗೆ ಎಲ್ಲರೂ ’ನಿಮ್ಮ ಮಗನ ಭವಿಷ್ಯವನ್ನ ಹಾಳು ಮಾಡುತ್ತಿದ್ದೀರಿ, ಮೊದಲು ಯಾವುದಾದರೂ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸೇರಿಸಿ’ ಎಂದು ಸಲಹೆ ಕೊಟ್ಟವರೇ ಹೆಚ್ಚು. ಬೆಂಗಳೂರಿನಂತಹ ಹೈಟೆಕ್ ಯುಗಕ್ಕೆ ಕಾಲಿಡುತ್ತಿದ್ದ ಅಂದಿನ ಸಂದರ್ಭದಲ್ಲಿ ಮೇಷ್ಟ್ರ ಮಗನಾಗಿ ಸರ್ಕಾರಿ ಶಾಲೆಗೆ ಹೋಗುವವನೆಂದು ನನ್ನ ಸುತ್ತಲಿನವರು ನನ್ನನ್ನು ಯಾರೋ ಅನ್ಯಗ್ರಹದ ಜೀವಿಯೇನೋ ಎಂದು ನೋಡುತ್ತಿದ್ದರು.

ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣ ಸರ್ಕಾರಿ ಶಾಲೆ. ಸಹನಾ ಕಾಂತಬೈಲುರಂತಹ ತಿಳಿದವರು ಯಾವುದೋ ಮಾಲ್‌ನಲ್ಲಿ ಎಸ್.ಎಸ್.ಎಲ್.ಸಿ ಫೇಲಾದ ಇಂಗ್ಲಿಷ್ ಕಲಿತು ಅಂಗಡಿಯಲ್ಲಿ ಸಂಬಳಕ್ಕಿರುವವನೊಂದಿಗೆ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದಿರುವ ಬಗ್ಗೆ ಪೇಚಾಡುತ್ತಿದ್ದಾರೆಂದರೆ ಕಾರಣ ಕೀಳರಿಮೆ. ನಾನು ಇಂದಿಗೂ ಕೂಡ ಯಾವುದೇ ಮಾಲ್‌ಗೆ ಹೋದರೂ ಕನ್ನಡದಲ್ಲೇ ವ್ಯವಹರಿಸುತ್ತೇನೆ, ಹಣ ಕೊಡುವ ಗ್ರಾಹಕನಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ಮಾಲ್‌ನ ಅಂಗಡಿಗಳ ಮಾಲೀಕರಿಗಿದೆ ಹೊರತು ಇಂಗ್ಲಿಷ್ ಕಲಿತು ಸಾಮಾನು ಕೊಳ್ಳುವ ದರ್ದು ನಮಗಿರಬೇಕಿಲ್ಲ.

ಠಸ್ ಪುಸ್ ಎಂದು ಇಂಗ್ಲಿಷ್ ಮಾತನಾಡುವವರು ಮಾತ್ರ ಬದುಕಲು ಸಾಧ್ಯ ಇಲ್ಲದಿದ್ದೆರೇ ಇಲ್ಲಿ ಜೀವನ ಮಾಡುವುದೇ ದುಸ್ತರ surya-with-govindegowdaಎಂಬ ಸನ್ನಿವೇಶವನ್ನು ನಿಮ್ಮಂತವರು ಏಕೆ ಸೃಷ್ಟಿಸುತ್ತಿದ್ದೀರ ಅನ್ನುವುದು ಅರ್ಥವಾಗುತ್ತಿಲ್ಲ. ಸಣ್ಣ ಪುಟ್ಟ ಮೊಬೈಲ್ ಸಂದೇಶ ಕಳುಹಿಸಲು ನೀವು ಶಬ್ಧಕೋಶದ ಮೊರೆ ಹೋಗುತ್ತೀರೆಂದರೆ ನಿಜಕ್ಕೂ ಅದು ನಿಮ್ಮ ಕಲಿಕೆಯ ಕೊರತೆಯಷ್ಟೇ ಹೊರತು ಕಿರು ಸಂದೇಶಕ್ಕೆ ಶಬ್ದಕೋಶದ ಅವಶ್ಯಕತೆಯಿಲ್ಲ. ಇಂಗ್ಲಿಷ್‌ನಲ್ಲಿ ಬರುವ ಕಿರು ಸಂದೇಶಗಳು ಇಂಗ್ಲಿಷ್ ಶಬ್ಧಗಳನ್ನು ತುಂಡರಿಸಿ ಕಳುಹಿಸುವುದರಿಂದ ನಿಮಗೆ ಹಾಗೆ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಇಂದು ಗೂಗಲ್‌ನಂತಹ ಸಂಸ್ಥೆಗಳು, ನೋಕಿಯಾ, ಸಾಮ್‌ಸ್ಯಾಂಗ್‌ನಂತಹ ದೈತ್ಯ ಮೊಬೈಲ್ ಕಂಪೆನಿಗಳೂ ಕೂಡ ಸ್ಥಳೀಯ ಬಾಷೆಯನ್ನು ಗ್ರಾಹಕರಿಗೆ ದೊರುಕವಂತೆ ಮಾಡಿದ್ದಾರೆ ಎಂಬ ಅರಿವು ತಮಗಿಲ್ಲವೆನ್ನಿಸುತ್ತದೆ.

ನಿಮ್ಮ ಬರಹದಲ್ಲೇ ನೀವು ಸುತ್ತಲಿನ ಮಕ್ಕಳು ಮಾತನಾಡುವ ಇಂಗ್ಲಿಷ್ ನಿಮ್ಮ ಮಗನಿಗೆ ಬರುವುದಿಲ್ಲವೆಂಬ ಕೀಳರಿಮೆ ವ್ಯಕ್ತಪಡಿಸಿದ್ದೀರಿ. 7ನೇ ತರಗತಿವರೆಗೆ ಕನ್ನಡ ಶಾಲೆಯಲ್ಲಿ ಓದಿ 8ನೇ ತರಗತಿಗೆ ಮನೆ ಹತ್ತಿರದಲ್ಲಿ ಯಾವುದೇ ಸರ್ಕಾರಿ ಪ್ರೌಢ ಶಾಲೆಯಿಲ್ಲದೆ ಇದ್ದ ಕಾರಣ ನಾನು ಇಂಗ್ಲಿಷ್ ಮೀಡಿಯಂಗೆ ಸೇರಿದೆ. ಈ ಶಾಲೆಯಲ್ಲಿ ಪ್ರಾರಂಭದಲ್ಲಿ ನನಗೆ ಅನುಕೂಲವಾಗಲಿಯೆಂದು ಇಂಗ್ಲಿಷ್ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಬಿಟ್ಟಿದ್ದರು. ಎರಡೇ ತಿಂಗಳಲ್ಲಿ ನಾನು ಇಂಗ್ಲಿಷ್‌ನಲ್ಲಿ ವಾಕ್ಯ ರಚನೆ ಮಾಡುವುದನ್ನು ಕಲಿತೆ. ಎಲ್.ಕೆ.ಜಿಯಿಂದ ಇಂಗ್ಲಿಷ್ ಮೀಡಿಯಂನಲ್ಲಿ ಓದಿಕೊಂಡು ಬಂದಿದ್ದ ಎಷ್ಟೋ ಜನ ಸಹಪಾಠಿಗಳು ಇಂಗ್ಲಿಷ್‌ನಲ್ಲಿ ಬರೆಯಲು ಸ್ಪೆಲ್ಲಿಂಗ್ ಗೊತ್ತಾಗದೆ ನನ್ನ ಹತ್ತಿರ ಕಾಪಿ ಹೊಡೆಯುತ್ತಿದ್ದರು. ನಾನು ಕೀಳರಿಮೆಯಿಂದ ಬಳಲಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.

ನನ್ನ ಜೊತೆ ಓದಿದ ಕನ್ನಡ ಶಾಲೆಯ ಬಡ ಕುಟುಂಬದ ಮಕ್ಕಳಿಂದ ನಾನು ಒಬ್ಬ ಕಟ್ಟಕಡೆಯ ಮನುಷ್ಯನ ಜೀವನ ಹೇಗಿರುತ್ತದೆಯೆಂದು ಕಂಡೆ. ಬೆಳಿಗ್ಗೆ ಎದ್ದು ಪೇಪರ್ ಹಾಕಿ, ಮನೆ ಕೆಲಸ ಮಾಡಿ, ಸಂಜೆಯಾದರೆ ತಳ್ಳೋಗಾಡಿ ಹೋಟೆಲ್, ಬಾರ್‌ಗಳಲ್ಲಿ ದುಡುದು ಓದುತ್ತಿದ್ದ ಈ ಹುಡುಗರಿಂದ ಕಲಿತ್ತದ್ದು ಅಪಾರ. ಅದೇ ಇಂಗ್ಲಿಷ್ ಮೀಡಿಯಂನ ಈ ಸೊಫಿಸ್ಟಿಕೇಟೆಡ್ ಕುಟುಂಬಗಳಿಂದ ಬಂದು ಕೇವಲ ಮಾತನಾಡುವುದಕ್ಕೆ ಇಂಗ್ಲಿಷ್ ಕಲಿಯಲು ಲಕ್ಷಾಂತರ ಹಣ ಚೆಲ್ಲುವ ತಂದೆ ತಾಯಿರ ದುಡ್ಡಿನಿಂದ ಮಜಾ ಉಡಾಯಿಸುತ್ತಿದ್ದ ಎಷ್ಟೋ ಜನ ಸಹಪಾಠಿಗಳು ಬದುಕಿನಲ್ಲಿ ಸೋತಿರುವುದನ್ನೂ ಕಂಡಿದ್ದೇನೆ. ಕನ್ನಡ ಶಾಲೆಯಲ್ಲಿ ಓದಿ ಕಾನೂನು ಪದವಿಗೆ ಸೇರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪದವಿ ಪಡೆದು ವಕೀಲನಾಗಿದ್ದೇನೆ. ನನ್ನ ಕನ್ನಡದ ಮೇಲಿನ ಹಿಡಿತವೇ ಇಂದು ಇಂಗ್ಲಿಷ್ ಅನ್ನು ಅರಗಿಸಿಕೊಳ್ಳಲು ಶಕ್ತಿ ಕೊಟ್ಟಿರುವುದು. ಇಂದು ಕರ್ನಾಟಕದ chhanumantarayaಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ ಅವರ ಬಳಿ ಕಿರಿಯ ಸಹೋದ್ಯೋಗಿಯಾಗಿರುವ ನನಗೆ ಅವರ ಅನುಭವಗಳೆ ಆಗಾಗ ಹೆಚ್ಚಿನ ಸಾಧನೆ ಮಾಡುವಂತೆ ಹುರಿದುಂಬಿಸುತ್ತಿರುತ್ತದೆ. ಹಳ್ಳಿಯಲ್ಲಿ ಕನ್ನಡ ಕಲಿತು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಪಿ.ಯು.ಸಿಗೆ ಸೇರಿದಾಗ ಅದು ಅವರ ಕಲ್ಪನೆಯ ಇಂಗ್ಲೆಂಡ್‌ನಂತೆ ಎನ್ನಿಸುತ್ತದೆ. ಸೇಂಟ್ ಜೋಸೆಫ್ ಕಾಲೇಜು ಪ್ರಿನ್ಸಿಪಾಲ್‌ರು ಹನುಮಂತರಾಯರನ್ನು ಕೇಳುತ್ತಾರೆ ’ವಾಟ್ ಈಸ್ ಯುವರ್ ಫಾದರ್?’ ಆ ಪ್ರಶ್ನೆಗೆ ಕೂಡಲೇ ಏನು ಹೇಳಬೇಕೆಂದು ತೋಚದೆ ಅವರು ’ಮೈ ಫಾದರ್ ಈಸ್ ಮ್ಯಾನ್’ ಎಂದು ಬಿಡುತ್ತಾರೆ. ಅವರ ಅನುಭವ ಕೇಳಿದಾಗ ಈ ಕೀಳರಿಮೆ ಸರ್ವಕಾಲಿಕ, ಆದರೆ ಅದನ್ನು ಮೆಟ್ಟಿನಿಲ್ಲಬೇಕೆಂಬ ಛಲ ನಮ್ಮಲಿರಬೇಕು ಅಷ್ಟೆ ಎನ್ನಿಸುತ್ತದೆ. ಇಂದು ಅವರ ಕನ್ನಡದ ಮೇಲಿನ ಹಿಡಿತ ಕಮ್ಮಿಯಿಲ್ಲ/ ಹಾಗೆಯೇ ಅವರ ಇಂಗ್ಲಿಷ್‌ನ ಮಾತುಗಳನ್ನು ಕೇಳಿದರೆ ಆ ಭಾಷಾ ಪ್ರೌಡಿಮೆಗೆ ಗೌರವವೂ ಉಂಟಾಗುತ್ತದೆ. ಅದಕ್ಕಿರುವ ಕಾರಣ ಇಂದಿಗೂ ಅವರು ಗಂಟೆಗಟ್ಟಲೇ ಪ್ರಪಂಚವೇ ಮರೆತವರಂತೆ ಡಿಕ್ಷನರಿಯಲ್ಲಿ ಮುಳಿಗಿರುವುದು.

ಮೊದ ಮೊದಲು ನನಗೂ ನನ್ನ ಕಡಿಮೆ ದರ್ಜೆಯ ಇಂಗ್ಲಿಷ್‌ನಿಂದ ನಾನೆಲ್ಲೋ ಕಳೆದು ಹೋಗುತ್ತಿದ್ದೀನಾ ಎಂದೆನಿಸುತ್ತಿತ್ತು. ಆದರೆ, ನನ್ನ ಕನ್ನಡ ಯಾವತ್ತೂ ಕೈ ಕೊಡಲಿಲ್ಲ. ಕನ್ನಡ ಚೆನ್ನಾಗಿ ತಿಳಿದಿದ್ದರಿಂದ ಇಂಗ್ಲಿಷ್ ಕಲಿಯುವುದು ನನಗೆ ಕಷ್ಟವಾಗಲಿಲ್ಲ. ಸರ್ಕಾರಿ ಶಾಲೆಗೆ ನಿಮ್ಮ ಮಗನನ್ನು ಸೇರಿಸಿ ನಿಜಕ್ಕೂ ನೀವು ನಿಮ್ಮ ಮಗನಿಗೆ ಒತ್ತಡವಿಲ್ಲದ ಬಾಲ್ಯ ಕೊಟ್ಟಿದ್ದೀರಾ. ನೀವು ಕ್ಷಮೆಕೋರುವ ಬದಲು ಅವನಿಗೆ ಇಂಗ್ಲಿಷ್ ಅನ್ನು ಓದುವ ಬರೆಯುವ ಮೂಲಕ ಅಭ್ಯಾಸ ಮಾಡಿದರೆ ಖಾಸಗಿ ಶಾಲೆಯವರನ್ನೂ ಮೀರುವ ಜ್ಞಾನ ಸಂಪಾದಿಸುವುದರಲ್ಲಿ ಸಂಶಯವಿಲ್ಲ. ದಿನ ನಿತ್ಯದ ಬದುಕಿನಲ್ಲಿ ವ್ಯವಹರಿಸಲು ಇಂಗ್ಲಿಷ್ ತಿಳಿಯದಿದ್ದರೆ ಬದುಕುವುದು ದುಸ್ತರ ಎಂಬ ಸನ್ನಿಗೆ ಒಳಗಾಗದೆ ಮೊದಲು ಕನ್ನಡದ ಮೇಲೆ ಹಿಡಿತ ಸಾಧಿಸಿಕೊಳ್ಳವುದು ಅವಶ್ಯ ಕನ್ನಡ ಕಲಿತರೆ ಜಗತ್ತಿನ ಯಾವುದೇ ಬಾಷೆಯನ್ನು ಸುಲಭವಾಗಿ ಕಲಿಯಬಹುದು. ನನ್ನ ಓರಗೆಯ ಎಷ್ಟೋ ಜನ ಗೆಳೆಯರಿಗೆ ಕನ್ನಡದ ಪದಗಳ ಅರ್ಥ ತಿಳಿಯದೆ ಪೇಚಾಡುವುದನ್ನು ನೋಡಿದಾಗ ನನ್ನ ಕನ್ನಡ ಜ್ಞಾನದ ಬಗ್ಗೆ ಹೆಮ್ಮೆಯಾಗುತ್ತದೆ.

ಧರ್ಮಸ್ಥಳದಲ್ಲಿ ಭಯಭೀತಿ ತೊಲಗಲಿ, ನೆಲದ ಕಾನೂನು ನೆಲೆಗೊಳ್ಳಲಿ…


– ರವಿ ಕೃಷ್ಣಾರೆಡ್ದಿ


ಕಳೆದ ಎರಡು ದಿನ ಮಂಗಳೂರು-ಉಡುಪಿ ಜಿಲ್ಲೆಗಳಲ್ಲಿ ಇದ್ದೆ. ಎರಡು ರಾತ್ರಿ ಮಂಗಳೂರು ಜಿಲ್ಲೆಯಲ್ಲಿ ಉಳಿದುಕೊಂಡಿದ್ದೆ. ನೆನ್ನೆ ಉಡುಪಿ-ಕಾರ್ಕಳ-ಮೂಡುಬಿದ್ರೆಯ ಮೂಲಕ ಬೆಂಗಳೂರಿಗೆ ಹೊರಟಾಗ ಯಾವ ದಾರಿ ಸೂಕ್ತ (ಶಿರಾಡಿ ಘಟ್ಟ ರಸ್ತೆಯೊ, ಚಾರ್ಮಾಡಿ ಘಟ್ಟ ರಸ್ತೆಯೋ) ಎಂದಿದ್ದಕ್ಕೆ ಅಲ್ಲಿಯ ಸೇಹಿತರೊಬ್ಬರು, ’ಬೆಳ್ತಂಗಡಿ ಮತ್ತು ಉಜಿರೆಯಿಂದ ನೇರವಾಗಿ ಚಾರ್ಮಾಡಿ ಘಟ್ಟದ ರಸ್ತೆಯಲ್ಲಿ ಹೋಗಿ. ಹಾಗೆ ಹೋದರೆ ನಿಮಗೆ ಧರ್ಮಸ್ಥಳದ ಮೂಲಕ ಹೋಗುವುದೂ ತಪ್ಪುತ್ತದೆ. ಅಲ್ಲಿ ಗೊತ್ತಲ್ಲ ಏನೇನಾಗುತ್ತಿದೆ ಎಂದು, ಜಾಗ ಸರಿ ಇಲ್ಲ,’ ಎಂದರು. ಆರೋಗ್ಯಕರ ಹಾಸ್ಯಪ್ರವೃತ್ತಿ ಇರುವ ಅವರು ಅದನ್ನು ತಮಾಷೆಯಿಂದ ಹೇಳಿದ್ದು. ಆದರೆ ಹೊರಗಿನವನಾದ ನನಗಿಂತ ಹೆಚ್ಚಿಗೆ ಅವರಿಗೆ ಗೊತ್ತಿತ್ತು, ಅದು ಕೇವಲ ತಮಾಷೆಯಲ್ಲ ಎಂದು.

ಇಲ್ಲಿಯವರೆಗೂ ಕರ್ನಾಟಕದಲ್ಲಿ ಪ್ರಶ್ನಾತೀತ ವ್ಯಕ್ತಿಯಾಗಿದ್ದವರೊಬ್ಬರು ಕೆಲ ತಿಂಗಳುಗಳಿಂದ ಪ್ರಶ್ನಾತೀತರಾಗಿ ಉಳಿದಿಲ್ಲ. ಬಹುಶಃ ನನ್ನ ತಂದೆ-ತಾಯಿಯ ಎರಡೂ ಕಡೆಯ ಪೂರ್ವಿಕರೆಲ್ಲರೂ ಸೇರಿ ಧರ್ಮಸ್ಥಳವನ್ನು ಸಂದರ್ಶಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿಗೆ ಮಂಜುನಾಥನನ್ನು ಸಂದರ್ಶಿಸಿರುವ ಬಯಲುಸೀಮೆಯ Dharmasthala_Templeನನ್ನಂತಹವರಿಗೆ ಧರ್ಮಸ್ಥಳದ ಬಗ್ಗೆ ಒಂದು ಭಯ-ಭಕ್ತಿ ಇದೆ. ಇಲ್ಲಿ ಭಕ್ತಿಗಿಂತಲೂ ಹೆಚ್ಚಾಗಿ ಕೆಲವು ಕಟ್ಟುಕತೆಗಳ ಮೂಲಕ (ವ್ಯವಸ್ಥಿತವಾಗಿ?) ಮೌಢ್ಯ ಮತ್ತು ದೈವಭಯವನ್ನು ಹುಟ್ಟು ಹಾಕಲಾಗಿದೆ.

ಈ ಸಾರಿಯ ನನ್ನ ಪ್ರಯಾಣದಲ್ಲಿ ಕಂಡಹಾಗೆ ಬೆಳ್ತಂಗಡಿ ಮತ್ತು ಸುತ್ತಮುತ್ತಲ ಜನಕ್ಕೆ ನಮಗಿಂತ ಹೆಚ್ಚಿನ ವಾಸ್ತವದ ಪರಿಚಯ ಇದೆ, ಮತ್ತು ಇಲ್ಲಿಯವರೆಗೆ ಬಹುತೇಕ ಎಲ್ಲರೂ ಭಯದಿಂದ ಹಾಗೂ ಏನು ಮಾಡಿದರೂ ಉಪಯೋಗವಿಲ್ಲ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡೇ ಇದ್ದರು. ಈಗ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು, ಕೋಪವನ್ನು ಹೊರಹಾಕಲು ಸೌಜನ್ಯ ಎನ್ನುವ ಆ ಮಣ್ಣಿನ ಒಬ್ಬ ಹೆಣ್ಣುಮಗಳ ಬಲಿ ಮೂಲವಾದದ್ದು ಮಾತ್ರ ದುರಂತ.

ಅಂದ ಹಾಗೆ, ಬೆಳ್ತಂಗಡಿ ಸುತ್ತಮುತ್ತಲ ಅನೇಕ ಪ್ರಜ್ಞಾವಂತರಿಗೆ ಸೌಜನ್ಯಾಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಧಿಗ್ಭ್ರಾಂತಿ ಮೂಡಿಸಿದ ಘಟನೆ ಅಲ್ಲ. ಇಂತಹವು ಅಲ್ಲಿ ಆಗಾಗ್ಗೆ ಬಲಿಷ್ಟರಿಂದ ನಡೆಯುತ್ತಿದ್ದ, ಕಾಲಗರ್ಭದಲ್ಲಿ ಮುಚ್ಚಿಹೋಗುತ್ತಿದ್ದ ಘಟನೆಗಳೆ. ಆದರೆ ಅವರಿಗೆ ನಿಜಕ್ಕೂ ಶಾಕ್ ಆಗಿರುವುದು, ಹೀಗೂ ಆಗಲು ಸಾಧ್ಯವೇ ಎನ್ನಿಸುತ್ತಿರುವುದು, ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮುಚ್ಚಿಹೋಗದೆ “ಖಾವಂದ”ರಿಗೆ ಬೆವರಿಳಿಯುವಂತೆ ಆಗಿರುವುದು.

ನನಗೆ ದಕ್ಷಿಣ ಕನ್ನಡದಲ್ಲಿ ಹಲವಾರು ಸಜ್ಜನ ಸ್ನೇಹಿತರಿದ್ದಾರೆ. ಕೆಲವು ಬಂಡುಕೋರ, ರಾಜಿಯಿಲ್ಲದ ಯುವ ಸ್ನೇಹಿತರಂತೆ, ಪ್ರಬುದ್ಧ, ಮಿತಭಾಷಿಕ, ಮಧ್ಯವಯಸ್ಕ ಸ್ನೇಹಿತರೂ ಇದ್ದಾರೆ. ಆದರೆ ಈ ಎಲ್ಲಾ ಸ್ನೇಹಿತರಿಗೆ ಧರ್ಮಸ್ಥಳದ ವಿಚಾರಕ್ಕೆ ಬಂದಾಗ ತಕರಾರುಗಳಿವೆ. ಇವರ್‍ಯಾರೂ ವೈಯಕ್ತಿಕ ದ್ವೇಷದಿಂದ ಮಾತನಾಡುವವರಲ್ಲ. ವರ್ತಮಾನ.ಕಾಮ್‌ನಲ್ಲಿ ವಾರದ ಹಿಂದೆ “ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!” ಎನ್ನುವ ಲೇಖನ ಬಂದಾಗ ನಾನದನ್ನು ಫೆಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತ ಆ ಹಿನ್ನೆಲೆಯಲ್ಲಿ ಈ ಟಿಪ್ಫಣಿ ಬರೆದಿದ್ದೆ:

“ನಾನು ನಂಬುವ ಸ್ನೇಹಿತರ ಪ್ರಕಾರ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ ಸಂಶಯ ಮತ್ತು ಭಯ ಹುಟ್ಟಿಸುವಂತಹವು. ಒಂದು ರೀತಿಯಲ್ಲಿ ಪರ್ಯಾಯ ಸರ್ಕಾರವೇ ಅಲ್ಲಿ ಅಸ್ತಿತ್ವದಲ್ಲಿದೆ ಎನ್ನುತ್ತಾರೆ. ನಾಲ್ಕಾರು ಮರಣದಂಡನೆಗಳಿಗಾಗುವಷ್ಟು ತಪ್ಪು ಮಾಡಿರುವವರು ಅಥವ ಅದರ ಪೋಷಕರು ಅಲ್ಲಿ “ದೊಡ್ಡವರ” ವೇಷದಲ್ಲಿ ಇದ್ದಾರೆ ಎಂದು ಜನ ಹೇಳುತ್ತಾರೆ. ಸೌಜನ್ಯ ಎನ್ನುವ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳು ಹೊರಗಿದ್ದಾರೆ, ಅಮಾಯಕ ಮತ್ತು ಮಾನಸಿಕ ಅಸ್ವಸ್ಥನೊಬ್ಬ ಈ ಕೇಸಿನಲ್ಲಿ ಫಿಕ್ಸ್ ಆಗಿ ಬಂದಿಯಾಗಿದ್ದಾನೆ ಎಂದು ವರ್ಷದಿಂದಲೂ ಕೆಲವು ಜನ ಹೇಳುತ್ತಾ, ನ್ಯಾಯಕ್ಕಾಗಿ ಹೋರಾಡುತ್ತ ಬಂದಿದ್ದಾರೆ.

ಜನ ವ್ಯಕ್ತಿಪೂಜೆಯನ್ನು ಬದಿಗಿಟ್ಟು ಸತ್ಯವನ್ನಷ್ಟೇ ನೋಡಲು ಪ್ರಯತ್ನಿಸಬೇಕು ಮತ್ತು ಮತೀಯ ಅಥವ ಆಸ್ತಿಕ ಕಾರಣಗಳಿಗಾಗಿ ಭಾವಾವೇಶಕ್ಕೆ ಒಳಗಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನಿರಾಕರಣೆ ಮಾಡುವಂತಹ ಹಂತಕ್ಕೆ ತಮ್ಮ ಭಕ್ತಿ ಮತ್ತು ಆಸ್ತಿಕತೆಯನ್ನು ಬಲಿಕೊಡಬಾರದು ಎನ್ನುವುದು ನನ್ನ ಮನವಿ. ಗಾಂಧಿ ಹೇಳುತ್ತಾರೆ, “ಎಲ್ಲಾ ಧರ್ಮಗಳೂ ಮನುಷ್ಯ ನಿರ್ಮಿತ; ಹಾಗಾಗಿಯೇ ಅವು ಅಪೂರ್ಣ.” ಹಾಗಾಗಿ ಮತಾಂಧತೆಗೆ ಒಳಗಾಗದೆ, ದೇವರು ಮತ್ತು ನಮ್ಮ ನಡುವೆ ಇರುವ ಪೂಜಾರಿಯನ್ನು ಮನುಷ್ಯನೆಂದೇ ಪರಿಗಣಿಸಿ ಆತನನ್ನೂ ವಿಮರ್ಶಿಸುವ, ಪ್ರಶ್ನಿಸುವ, ಸಾಕ್ಷಿಗಳು ಇರುವಾಗ ಸಂಶಯಿಸುವ, ಅಂತಿಮವಾಗಿ ಅವನನ್ನು ನಿರಾಕರಿಸುವ ಹಕ್ಕನ್ನು ಉಳಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳು ಸೌಜನ್ಯ ಎಂಬ ಈ ನೆಲದ ಹೆಣ್ಣುಮಗಳಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನಡೆಸಲಾಗುತ್ತಿರುವ ಹೋರಾಟವನ್ನು ಮುಚ್ಚಿಡದೆ ಜನರ ಮುಂದೆ ಇಡಬೇಕೆಂದು ವಿನಂತಿಸುತ್ತೇನೆ.”

ಇದಾದ ನಂತರವೇ ನಾನು ಮಂಗಳೂರಿಗೆ ಹೋಗಿದ್ದು. ಅಲ್ಲಿ ಮೇಲಿನದಕ್ಕಿಂತ ಹೆಚ್ಚು ಅಸಹ್ಯ ಹುಟ್ಟಿಸುವ, ಗಾಬರಿಯಾಗಿಸುವ ಮಾತುಗಳನ್ನು ಕೇಳಿದೆ. ಸ್ವತಃ ಈಗಿನ ಧರ್ಮಾಧಿಕಾರಿಯವರ ಸಜ್ಜನೆ ತಾಯಿಯವರು ಎರಡು-ಮೂರು ದಶಕಗಳ ಹಿಂದೆ ದುರ್ಮರಣಕ್ಕೀಡಾದ ಘಟನೆ ಅಪಘಾತವೋ ಅಥವ ಆಯೋಜಿತ ಕೊಲೆಯೋ sowjanya-heggadeಎನ್ನುವ ಸಂಶಯಗಳಿಂದ ಹಿಡಿದು. ಧರ್ಮಸ್ಥಳದ ಸಂಸ್ಥೆ ನಡೆಸುವ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಬೇಕಿದ್ದ ಶ್ರೀಮತಿ ಹರಳೆಯವರನ್ನು ಪೆಟ್ರೋಲ್ ಹಾಕಿ ಸುಟ್ಟ ಕೊಲೆಯ ಬಗ್ಗೆಯೂ ಜನ ಬೇಸರ ಖಿನ್ನತೆಯಿಂದ ಮಾತನಾಡುತ್ತಾರೆ. ಉಜಿರೆಯಲ್ಲಿ ಅವರ ಸಂಸ್ಥೆಯಲ್ಲಿ ಓದಿದ ಕೆಲವು ಪ್ರಾಮಾಣಿಕ ಮತ್ತು ಸಂಯಮಿ ಮನಸ್ಸುಗಳು ಸಹ ಹೆಗ್ಗಡೆಯವರ ಕುಟುಂಬದವರು ತಮ್ಮ ಕೆಳಗಿನ ನೌಕರರನ್ನು ನಡೆಸಿಕೊಳ್ಳುವ ದರ್ಪ ದೌರ್ಜನ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಆ ಕುಟುಂಬದ ಕೆಲವು ದುರಂತಗಳನ್ನು ನೆನೆದು ಬಹುಶಃ ಇದು ನಿಸರ್ಗ ನ್ಯಾಯವೇನೋ ಎನ್ನುತ್ತಾರೆ.

ಹಾಗೆಯೇ, ’ಅವರ ಒಡೆತನದಲ್ಲಿರುವ ತನಕ ನಾನು ಆ ದೇವಸ್ಥಾನಕ್ಕೆ ಹೋಗುವುದಿಲ್ಲ. ಸರ್ಕಾರ ಅದನ್ನು ವಹಿಸಿಕೊಂಡ ದಿನ ಮಂಜುನಾಥನ ದರ್ಶನಕ್ಕೆ ಹೋಗುತ್ತೇನೆ,’ ಎಂದು “ಹರಕೆ” ಹೊತ್ತಿರುವ ಆಸ್ತಿಕರೂ ಇದ್ದಾರೆ.

ವಿಷಯ ದಿನದಿಂದ ದಿನಕ್ಕೆ ಗಂಭೀರವಾಗುತ್ತ ಹೋಗುತ್ತಿದೆ. ನಿಸರ್ಗ ನ್ಯಾಯಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಇಲ್ಲದಿದ್ದರೆ ನಾವು ಇಂತಹ ವ್ಯವಸ್ಥೆ ಕಟ್ಟಿಕೊಂಡದ್ದಕ್ಕೆ ಅರ್ಥವಾದರೂ ಏನಿರುತ್ತದೆ? ಸೌಜನ್ಯಾಳ ಕೊಲೆ ಪ್ರಕರಣ ಮಾತ್ರವಲ್ಲ, ಇಲ್ಲಿ ಹತ್ತಾರು ವರ್ಷಗಳಿಂದ ದಾಖಲಾಗುತ್ತ ಬಂದಿದ್ದ ಅನಾಥ ಶವಗಳ ಹಿನ್ನೆಲೆ ಏನು, ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಅಸಹಜ ಸಾವುಗಳು ಘಟಿಸಲು ಕಾರಣವೇನು, ಮತ್ತು ಇದ್ದಕ್ಕಿದ್ದಂತೆ ವರ್ಷದಿಂದೀಚೆಗೆ ಅನಾಥ ಶವಗಳು ಸಿಗದೆ ಹೋಗುತ್ತಿರಲು ಕಾರಣವೇನು ಎನ್ನುವುದರ ತನಿಖೆಯೂ ಆಗಬೇಕು. ರಾಜ್ಯ ಸರ್ಕಾರದ ಸಿಐಡಿ ತನಿಖೆ ಎಂದರೆ ಅದು ಬಹಳಷ್ಟು ಸಲ JusticeForSowjanya(ಪಟ್ಟಭದ್ರರು ಮತ್ತು ಪ್ರಭಾವಿಗಳು ಪಾಲ್ಗೊಂಡಿರುವ ಕೇಸುಗಳಲ್ಲಿ) ಮೊದಲೇ ವರದಿ ಸಿದ್ಧಪಡಿಸಿ ನಂತರ ತನಿಖೆಯ ನಾಟಕ ಆಡುವುದು. ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಹೊರತುಪಡಿಸಿ ರಾಜ್ಯದ ಅನೇಕ ಕಾಂಗ್ರೆಸ್ ನಾಯಕರು ಮಂಡಿಯೂರಿ ಜೈಕಾರ ಹಾಕುತ್ತಿರುವಾಗ ಸಿಬಿಐ ತನಿಖೆಯಿಂದಲಾದರೂ ಸತ್ಯ ಹೊರಬರುತ್ತದೆ ಎನ್ನುವುದು ಸಂದೇಹಾಸ್ಪದ. ಬಹುಶಃ ಕೆಲವು ಸಂಘಸಂಸ್ಥೆಗಳು ಮತ್ತು ಮಾಧ್ಯಮಗಳೇ ಇದನ್ನು ಮಾಡಬೇಕಿದೆ.

ಈಗ ಹೊರಗುತ್ತಿಗೆಯ ಕಾಲ. ಸರ್ಕಾರದ ಕರ್ತವ್ಯವಾಗಿರುವ ಮತ್ತು ಅದು ಮಾಡಲೇಬೇಕಿರುವ ಕೆಲವು ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸಗಳನ್ನು ಕೆಲವು ವ್ಯಕ್ತಿ ಮತ್ತು ಸಂಸ್ಥೆಗಳೇ ಮಾಡಿದಾಕ್ಷಣ ನಾವು ಆ ವ್ಯಕ್ತಿ ಮತ್ತು ಸಂಸ್ಥೆಗಳನ್ನು ವೈಭವೀಕರಿಸಲು ಆರಂಭಿಸಿದರೆ ಸಮಸ್ಯೆ ನಮ್ಮ ತಿಳಿವಳಿಕೆಯದ್ದಾಗುತ್ತದೆ. ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳದ ನಮ್ಮ ಅಯೋಗ್ಯತನದ್ದಾಗುತ್ತದೆ. ಇದೆಲ್ಲವನ್ನೂ ತಿಳಿದುಕೊಳ್ಳದೆ, ನಮ್ಮ ಜವಾಬ್ದಾರಿಗಳನ್ನು ನಿರಾಕರಿಸಿಕೊಂಡು ಕೆಲವು ಸ್ವಾರ್ಥ ಮತ್ತು ಕಪಟಿ ವ್ಯಕ್ತಿಗಳು ಮಾಡುವ ’ಸಮಾಜಮುಖಿ ಕೆಲಸ’ಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅನಗತ್ಯವಾದ ವ್ಯಕ್ತಿನಿಷ್ಟೆ ಮತ್ತು ಆರಾಧನಾ ಮನೋಭಾವ ಬೆಳೆಸಿಕೊಳ್ಳುವುದು ಬೇಡ ಎಂದು ನನ್ನ ಯುವಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಬುದ್ಧ ಮತ್ತು ನೈತಿಕ ಮೂಲದ ವ್ಯವಸ್ಥೆ ನಮ್ಮದಾಗಲಿ.

ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.

ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

– ಶೌರೀಶ್ ಕುದ್ಕುಳಿ

ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು sowjanya-murderedಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.

ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.

ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! JusticeForSowjanyaಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!

ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. Sowjanya-Rape-Murderಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.

ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.

ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!!

– ಸುಧಾಂಶು ಕಾರ್ಕಳ

ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಧರ್ಮಸ್ಥಳ ಪುಣ್ಯಕ್ಷೇತ್ರ. ವರ್ಷಕ್ಕೊಮ್ಮೆ ಮಕ್ಕಳು-ಮರಿ ಕಟ್ಟಿಕೊಂಡು, ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವಾಗ ಹಿಂಸೆ ಅನುಭವಿಸಿಯಾದರೂ, ಅಲ್ಲಿಗೆ ಹೋಗದಿದ್ದರೆ ಅವರಿಗೆ ಸಮಾಧಾನವೇ ಆಗುವುದಿಲ್ಲ. ಅಷ್ಟೇ ಏಕೆ, ಈ ಭಾಗದ ಸಾವಿರಾರು ಮಂದಿ ಬಾಲ್ಯದಲ್ಲಿ ಕೂದಲು ಕೊಡುವ ಶಾಸ್ತ್ರ ಮಾಡಿಸಿಕೊಂಡಿದ್ದು ಇಲ್ಲಿಯೇ. ಬಡ ಬಗ್ಗರ ಮನೆಗಳಲ್ಲಿ ಸರಳ ವಿವಾಹದ ಮಾತು ಬಂದರೆ, dharmasthala-veernedra-heggadeಅವರಿಗೆ ನೆನಪಾಗುವುದು ಧರ್ಮಸ್ಥಳ.

ಪ್ರತಿ ಭಾನುವಾರ ರಾತ್ರಿ ಈ ಭಾಗಗಳ ಕಡೆಯಿಂದ ಧರ್ಮಸ್ಥಳಕ್ಕೆ ಹೊರಡುವ ಎಲ್ಲಾ ಬಸ್ ಗಳು ಭರ್ತಿಯಾಗುವುದಕ್ಕೆ ಇದೇ ‘ಭಕ್ತಿ’ ಕಾರಣ. ಊರಲ್ಲಿ ಯಾರದರು ಒಬ್ಬರು ಧರ್ಮಸ್ಥಳಕ್ಕೆ ಹೋಗುತ್ತಾರೆಂದರೆ ಮನೆಗೊಬ್ಬರು ಮಂಜುನಾಥನಿಗೆ ತಮ್ಮದೂ ಕಾಣಿಕೆ ಇರಲಿ ಎಂದು ತಮ್ಮ ಕೈಲಾದಷ್ಟು ಹಣ ಕೊಟ್ಟು ಕಳುಹಿಸುವುದುಂಟು. ವೀರೇಂದ್ರ ಹೆಗ್ಗಡೆಯವರು ಜನೋಪಕಾರಿ ಕೆಲಸ ಮಾಡಿ ಸಜ್ಜನ, ಸಂಭಾವಿತ, ಮಾತನಾಡುವ ಮಂಜುನಾಥ ಎಂಬೆಲ್ಲಾ ಬಿರುದುಗಳನ್ನು ಗಳಿಸುವುದು ಸಾಧ್ಯವಾಗಿದ್ದು ಇಂತಹ ಲಕ್ಷಾಂತರ ಭಕ್ತರ ಸಾವಿರಾರು ಕೋಟಿಗಳ ದಾನದಿಂದ.

ಇದೇ ಭಾನುವಾರ (ಅ.13) ರಂದು ನೂರಾರು ಮಂದಿ ವಿವಿಧ ವಾಹನಗಳಲ್ಲಿ ಧರ್ಮಸ್ಥಳಕ್ಕೆ ಧಾವಿಸಿ ಹೆಗ್ಗಡೆಯವರ ವಿರುದ್ಧ ಪ್ರತಿಭಟನೆ ನಡೆಸಿದರು ಎಂಬ ಸುದ್ದಿ ಟಿವಿಯಲ್ಲಿ ನೋಡಿದಾಗ ಇಂತಹದೊಂದು ಸನ್ನಿವೇಶ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲಿರಬೇಕಲ್ಲವೇ ಎನಿಸಿತು. ಖಾವಂದರಿಗೆ ಬಿಸಿ ಮುಟ್ಟಿದೆ. ಮಾತನಾಡುವ ಮಂಜುನಾಥನ ಬಗ್ಗೆ ನೇರಾ ನೇರಾ ಮಾತನಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿದ್ದು ಆಶಾದಾಯಕ ಬೆಳವಣಿಗೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಒಂದು ವರ್ಷದಿಂದ ಸತತವಾಗಿ ಅಬ್ಬರವಿಲ್ಲದೆ ಪ್ರತಿಭಟನೆ ನಡೆಯುತ್ತಲೇ ಇತ್ತು.JusticeForSowjanya ಫೇಸ್‌ಬುಕ್ ನಲ್ಲಿ ಈ ಪ್ರತಿಭಟನೆಗೆ ಅನೇಕರು ಬೆಂಬಲ ಸೂಚಿಸುತ್ತಲೇ ಬಂದಿದ್ದರು. ಬೆಳ್ತಂಗಡಿ, ಮಂಗಳೂರು ಭಾಗಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರಕರಣ ಆಗಿ ಒಂದು ವರ್ಷದ ನಂತರ ಟಿ.ವಿ9 ಸ್ಟುಡಿಯೋದಲ್ಲಿ ಸೌಜನ್ಯ ಪೋಷಕರು ಏನನ್ನು ಇದುವರೆಗೆ ಮುಚ್ಚಿಡಲಾಗಿತ್ತೋ..ಅದನ್ನು ಹೊರಹಾಕಿದರು.

ಆ ಮೂಲಕ ಸೌಜನ್ಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ಬಾರಿ ಪ್ರಕರಣದ ತನಿಖೆಯಾದರೂ, ನಿಜ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿಲ್ಲ. ಮಾನಸಿಕ ಅಸ್ವಸ್ಥನೊಬ್ಬನ ತಲೆಗೆ ಈ ಪ್ರಕರಣವನ್ನು ಕಟ್ಟಿ ತನಿಖೆಯ ಶಾಸ್ತ್ರವನ್ನು ಮುಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಆರೋಪ. ಇನ್ನೂ ಗಂಭೀರವಾದ ವಿಚಾರವೆಂದರೆ ಇಂತಹ ಅದೆಷ್ಟೊ ಪ್ರಕರಣಗಳು ಧರ್ಮಸ್ಥಳ ಸುತ್ತ-ಮುತ್ತ ಆಗಿಹೋಗಿವೆ ಎಂಬ ಸುದ್ದಿ. ಸೌಜನ್ಯಳ ತಾಯಿ ಟಿ.ವಿ ಸ್ಟುಡಿಯೋದಲ್ಲಿ ಕೇಳಿದರು.. ನೇತ್ರಾವತಿ ನದಿಯಲ್ಲಿ ಆಗಾಗ ತೇಲಿ ಬರುತ್ತಿದ್ದ ಅನಾಥ ಹೆಣಗಳು ಸೌಜನ್ಯ ಪ್ರಕರಣದ ನಂತರ ನಿಂತಿದ್ದಾದರೂ ಹೇಗೆ?

ಹಾಗಾದರೆ ಈ ಮೊದಲು ನೇತ್ರಾವತಿ ನದಿಯಲ್ಲಿ ಹೇರಳವಾಗಿ ಹೆಣಗಳು ತೇಲಿಬರುತ್ತಿದ್ದವೆ? ಇದುವರೆಗೆ ಯಾಕೆ ಸುದ್ದಿಯಾಗಲಿಲ್ಲ? ಆಯುರ್ವೇದ, ಯೋಗ, ಸ್ವ ಉದ್ಯೋಗ ತರಬೇತಿ, ಪ್ರಕೃತಿ ಚಿಕಿತ್ಸೆ, ಶಿಕ್ಷಣ ಸಂಸ್ಥೆಗಳು, ಪಾಳುಬಿದ್ದ ದೇವಸ್ಥಾನಗಳ ಪುನರುತ್ಥಾನ – ಹೀಗೆ ನಾನಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ದೊಡ್ಡ ಸಾಮ್ರಾಜ್ಯದ ಮೇಲೆ ಈಗ ಅನೇಕ ಪ್ರಶ್ನೆಗಳಿವೆ.

ಸೌಜನ್ಯ ಹತ್ಯೆ ಅಷ್ಟೇ ಅಲ್ಲ..ಇದುವರೆಗೆ ಆಗಿ ಹೋಗಿರುವ ನಾನಾ ಪ್ರಕರಣಗಳ ಬಗ್ಗೆಯೂ ತಕ್ಕ ತನಿಖೆ ನಡೆಯಬೇಕು. sowjanya-rape-murderಪಾಪಕ್ಷೇತ್ರ, ಪುಣ್ಯಕ್ಷೇತ್ರ ಎಂದು ಯಾವ ಸ್ಥಳವೂ ಇರುವುದಿಲ್ಲ. ಆದರೆ ಅಲ್ಲಿ ನೆಲೆಸಿರುವವರು ಆ ಸ್ಥಳಕ್ಕೆ ಒಂದು ಘನತೆ ತರಲು ಸಾಧ್ಯ. ತಮ್ಮ ಮಗಳ ಹತ್ಯೆಗೆ ಸೂಕ್ತ ತನಿಖೆ ಕೋರಲು ಪ್ರತಿಭಟನೆ ನಡೆಸುವುದನ್ನೂ ಬೇಡ ಎಂದು ಫರ್ಮಾನು ಹೊರಡಿಸುವವರಿಂದ ಯಾವ ಕ್ಷೇತ್ರಕ್ಕಾಗಲಿ ಯಾವ ಘನತೆ ದಕ್ಕೀತು? ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲರೂ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಅವರ ದೇಣಿಗೆ ಹಣ ವಿನಿಯೋಗ ಆಗುತ್ತಿರುವುದು ಹೇಗೆ ಎನ್ನುವುದನನ್ನು ಕೇಳಲೇಬೇಕಲ್ಲವೆ.

ಸರಕಾರ ಸೂಕ್ತ ತನಿಖೆ ಆದೇಶಿಸುವ ಮೂಲಕ ಮುಚ್ಚಿ ಹೋಗಿರಬಹುದಾದ ಸತ್ಯಗಳನ್ನು ಹೊರತರಲೇಬೇಕು. ಅವ್ಯವಹಾರ, ಅನಾಚಾರಗಳು ಬಯಲಾದರೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನವನ್ನು ತನ್ನ ವಶಕ್ಕೆ ಅಂದರೆ ಜನತೆಯ ಆಡಳಿತಕ್ಕೆ ತೆಗೆದುಕೊಳ್ಳಬೇಕು.