Category Archives: ಮಾಧ್ಯಮ

ಸಮೂಹ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು…

ಪ್ರತಿ ಸವಾಲಿಗೂ ಸಿದ್ಧ ಉತ್ತರ – ಬುದ್ಧ-ಚಾಣಕ್ಯರ ಬಿಹಾರ


– ಶ್ರೀಧರ್ ಪ್ರಭು


ಪರಿಹಾರವೇ ಇಲ್ಲವೇನೋ ಎಂಬಂಥ ಪ್ರಶ್ನೆಗಳನ್ನು ಸವಾಲಾಗಿ ಸ್ವೀಕರಿಸಿ ಇತಿಹಾಸದುದ್ದಕ್ಕೂ ದಿಟ್ಟ ಮತ್ತು ಸರ್ವಕಾಲಿಕ ಪರಿಹಾರ ನೀಡಿದ ನಾಡು ಬಿಹಾರ. ಸಿದ್ಧಾರ್ಥ ಗೌತಮನನ್ನು ಬುದ್ಧನನ್ನಾಗಿ, ಚಂಡ ಅಶೋಕನನ್ನು ದೇವನಾಂಪ್ರಿಯನನ್ನಾಗಿ, ಜಯಪ್ರಕಾಶರನ್ನು ಲೋಕನಾಯಕನನ್ನಾGautama-Buddhaಗಿ ಮಾಡಿ ಸಮಸ್ತ ನಾಡಿಗೆ ಬೆಳಕು ನೀಡಿದ ನಾಡು ಬಿಹಾರ.  ಆರ್ಯಭಟ, ಕೌಟಿಲ್ಯ, ಚಂದ್ರಗುಪ್ತ ಮೌರ್ಯ, ಗುರು ಗೋವಿಂದ ಸಿಂಹ ಹೀಗೆ ಸಾವಿರ ಸಾವಿರ ರತ್ನಗಳ ಖನಿ ಬಿಹಾರ. ನಳಂದದ (ನಳಂದಾ ಎಂದರೆ ಕೊನೆಯಿಲ್ಲದೆ ಮಾಡುವ ದಾನ) ವಿಶ್ವವಿದ್ಯಾಲಯದಿಂದ ಮೊದಲ್ಗೊಂಡು ಶಿಕ್ಷಣದ ಉತ್ತುಂಗವನ್ನು ಸಾಧಿಸಿದವರ, ಬೌದ್ಧ ಧರ್ಮವನ್ನು ಪ್ರಪಂಚಕ್ಕೆ ಮುಟ್ಟಿಸಿದವರ ಬಿಹಾರ ಅತ್ಯಂತ ಜಾಗೃತ ಭೂಮಿ. ನಮ್ಮ ದೇಶದ ಪ್ರತಿ ಹತ್ತು ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಬಿಹಾರದವರು. ಅನೇಕ ಪ್ರತಿಭಾವಂತ ವಿಜ್ಞಾನಿಗಳು, ರಾಜಕೀಯ ವಿಶ್ಲೇಷಕರು, ವಿಜ್ಞಾನಿಗಳನ್ನು ಕೊಡುಗೆ ನೀಡಿದ ಬಿಹಾರ ಇಂದು ತನ್ನ ಮುಂದಿದ್ದ ಬಹುದೊಡ್ಡ ಸವಾಲಿಗೆ ತನ್ನದೇ ಛಾತಿ ಮೆರೆದು ಉತ್ತರಿಸಿದೆ.

ಬಿಹಾರ್ ರಾಜಕಾರಣದ ಹಿನ್ನೋಟ

ಹಲವು ಸಾಮಾಜಿಕ, ರಾಜಕೀಯ ಚಳುವಳಿಗಳಿಗೆ ಮಡಿಲಾಗಿದ್ದ ಬಿಹಾರವನ್ನು ಸ್ವಾತಂತ್ರ್ಯಾ ನಂತರ ನಾನಾ ಕಾರಣಗಳಿಗಾಗಿ ನಿರ್ಲಕ್ಷಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿಗಳು ಬಿಹಾರದವರೇ ಅದರೂ, ರಾಜಕೀಯ ಇಚ್ಛಾ ಶಕ್ತಿ ಮತ್ತು ಒಂದು ನಿರ್ದಿಷ್ಟ ಗೊತ್ತು ಗುರಿಯಿಲ್ಲದ ನೀತಿಗಳಿಂದಾಗಿ ಬಿಹಾರವನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು.

ಹಾಗೆ ನೋಡಿದರೆ ನೆಹರೂ ಸಂಪುಟದಲ್ಲಿ ಬಿಹಾರಕ್ಕ ಎರಡೇ ಸ್ಥಾನ ಸಿಕ್ಕಿದ್ದು. ಒಬ್ಬರು ಸಂಸದೀಯjp-jayaprakash-narayan ವ್ಯವಹಾರಗಳ ಖಾತೆ ಸಚಿವ ಸತ್ಯನಾರಾಯಣ ಸಿನ್ಹಾ ಇನ್ನೊಬ್ಬರು ಕಾರ್ಮಿಕ ಸಚಿವ ಬಾಬು ಜಗಜೀವನ ರಾಮ. ಬೌದ್ಧಿಕ ವಲಯಗಳಲ್ಲಿ ಬಿಹಾರ ಅಪಾರ ಸಾಧನೆ ಮೆರೆದಿತ್ತು. ಜಗಜೀವನ್ ರಾಮ್ ಇನ್ನೊಬ್ಬ ಬಿಹಾರದ ನಾಯಕ ಅನುಗ್ರಹ ನಾರಾಯಣ ಸಿನ್ಹಾ ಜೊತೆಗೆ ೧೯೪೭ ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ ಹೋಗಿ ಉಪನ್ಯಾಸ ನೀಡಿ ಬಂದಿದ್ದರು. ಹೀಗೆ ಬಿಹಾರದ ಪ್ರಭಾವಳಿ ಸಾಕಷ್ಟಿದ್ದರೂ, ಸಾಮಾಜಿಕ ಅಸಮಾನತೆಯ ನಿರ್ಮೂಲನೆಗೆ ಒತ್ತು ಸಿಗದ ಕಾರಣ ಬಿಹಾರದ ದಲಿತ ಮತ್ತು ಹಿಂದುಳಿದವರ ಬದುಕು ಒಂದು ದೊಡ್ಡ ಕಾರಾಗೃಹದಲ್ಲಿ ಬಂಧಿತ ಕೈದಿಗೂ ಕೀಳಾಗಿತ್ತು. ಇಡೀ ಬಿಹಾರವೇ ಒಂದು ಜೀತದ ಮನೆಯಾಗಿತ್ತು. ಬಿ ಪಿ ಮಂಡಲ್ (ಮಂಡಲ ಆಯೋಗದ ಕರ್ತ) ಕೆಲ ಸಮಯ ಮುಖ್ಯ ಮಂತ್ರಿಯಾದದ್ದು ಬಿಟ್ಟರೆ ದಲಿತ ಮತ್ತು ಹಿಂದುಳಿದವರಿಗೆ ಇಲ್ಲಿ ಅಧಿಕಾರವೇ ಸಿಗಲಿಲ್ಲ.

ಆದರೆ ೧೯೭೦ ರಲ್ಲಿ ಮೊದಲ ಬಾರಿಗೆ ಅಂದಿನ ಸಮಾಜವಾದಿ ಪಕ್ಷ  ಅಧಿಕಾರಕ್ಕೆ ಬಂದು ಕರ್ಪೂರಿ ಠಾಕುರ್ ಮುಖ್ಯ ಮಂತ್ರಿಯಾದರು. ಹೆಸರಿಗೆ ಮಾತ್ರ ಠಾಕುರ್ ಆಗಿದ್ದ ಇವರು ನೈಜ ಅರ್ಥದಲ್ಲಿ ಬಿಹಾರದ ತಳಸಮುದಾಯಕ್ಕೆ ನಾಯಕತ್ವ ನೀಡಿದರು. ಲಾಲು ಪ್ರಸಾದ್, ನಿತೀಶ್, ಪಾಸ್ವಾನ್ ಸೇರಿದಂತೆ ಇಂದಿನ ಬಿಹಾರದ ಬಹುತೇಕ ದಲಿತ ಮತ್ತು ಹಿಂದುಳಿದವರ ನಾಯಕರನ್ನು ಬೆಳೆಸಿದರು. ಬಿಹಾರವನ್ನು ಮೇಲ್ಜಾತಿಗಳ ಹಿಡಿತದಿಂದ ಮುಕ್ತಿಗೊಳಿಸಿದ  ಮೊದಲ ಕೀರ್ತಿ ಸಲ್ಲಬೇಕಾದದ್ದು ಜನನಾಯಕರಾದ ಕರ್ಪೂರಿಯವರಿಗೆ.

ಅವರ ಸಮಾಜವಾದಿ ಗರಡಿಯಲ್ಲಿ ಬೆಳೆದ ನಾಯಕತ್ವ ೧೯೭೫ ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು. devegowda-vpsingh-chandrashekar-gujralತುರ್ತು ಪರಿಸ್ಥಿತಿಯ ವಿರೋಧಿಸಿ ಕಟ್ಟಿದ ಚಳುವಳಿಯ ಕಾವಿನಲ್ಲಿ ನೆಂದ ಬಿಹಾರದ ಜನಮಾನಸ ಮತ್ತೆ ಕರ್ಪೂರಿ ಯವರನ್ನು ನಾಯಕನನ್ನಾಗಿ ಆರಿಸಿತು. ಆದರೆ ನಂತರದಲ್ಲಿ ಬಂದ ಕಾಂಗ್ರೆಸ್ ಪಕ್ಷ ೧೯೯೦ ರ ವರೆಗೂ  ಅಧಿಕಾರದಲ್ಲಿತ್ತು. ಜಗನ್ನಾಥ ಮಿಶ್ರಾ ಸರಕಾರದ ಆಡಳಿತದಿಂದ ಬೇಸತ್ತು ಹೋಗಿದ್ದ ಜನತೆ ಅಂದಿನ ಯುವ ನಾಯಕ ಲಾಲೂ ಪ್ರಸಾದರನ್ನು ಸಿಂಹಾಸನದ ಮೇಲೆ ಕೂರಿಸಿತು. ಬಾಬರಿ ಮಸೀದಿ ಕೆಡವುವ ಆಂದೋಲನದಲ್ಲಿ ಮಗ್ನವಾಗಿದ್ದವರು ಕೋಮು ದಳ್ಳುರಿ ಅಂಟಿಸಿ ಬಿಟ್ಟಿದ್ದರೂ ಅದರ ಬೇಗುದಿಯಿಂದ ಬಿಹಾರ ಬಚಾವಾಗಿತ್ತು.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಲಾಲೂ ಪ್ರಸಾದ್ ಇಂದು ಬಿಹಾರದ ಜನತೆಯ ಮಧ್ಯೆ ಮತ್ತೆ ಕಿಂಗ್ ಮೇಕರ್ ಆಗಿ ಪ್ರಸ್ತುತರಾಗಿದ್ದಾರೆ. ಬಿಹಾರದ ಚುನಾವಣಾ ಫಲಿತಾಂಶ ಬಂದ ಮೇಲೆ ನಿತೀಶ್ ಗೆಲುವಿಗೆ ಕಾರಣವಾದ ಅನೇಕಾನೇಕ ಅಂಶಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಕೆಲ ಪ್ರಮುಖ ಮಾಧ್ಯಮಗಳು ಇಡೀ ಚುನಾವಣೆಯ ಯಶಸ್ಸಿಗೆ ಪ್ರಶಾಂತ್ ಕಿಶೋರ್ ಎಂಬ ಮೋದಿಯವರ ಆಪ್ತ ವಲಯದ ಚುನಾವಣಾ ತಂತ್ರ ನಿಪುಣ ಕಾರಣ ಎಂದು ಹೊಗಳಿವೆ. ಕೆಲವರು ಜಾತಿ ಸಮೀಕರಣದ ಕಾರಣ ನೀಡಿ ಇದು ಜಾತಿ ಲೆಕ್ಕಾಚಾರಗಳ ಮೇಲಿನ ಗೆಲುವು ಎಂದಿದ್ದಾರೆ.

ಒಂದು ಚುನಾವಣೆಯ ಯಶಸ್ಸು ಒಬ್ಬ ವ್ಯಕ್ತಿ ಅಥವಾ ಬರಿ ಜಾತಿ ಲೆಕ್ಕಾಚಾರಗಳ ಮೊತ್ತವಾಗಿ  ನೋಡದೇ ಬಿಹಾರದ ಜನಸಾಮಾನ್ಯ ಇಷ್ಟೊಂದು ಸ್ಪಷ್ಟ ಬಹುಮತ ನೀಡಲು ಕಾರಣವಾದ ಬಹು ಮುಖ್ಯ ಆದರೆ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಂಶಗಳನ್ನು ನಾವು ಗಮನಿಸಬೇಕಿದೆ.

ಲಾಲೂ ಎಂಬ ಮಾಂತ್ರಿಕ

ನಮ್ಮ ಚಡ್ಡಿ ಚತುರರು ಇಂಗ್ಲೀಷ್ ಬರದ ಗಾವಂಟಿ ಗಮಾರ ಎಂದು ಬಿಂಬಿಸುವ ಲಾಲೂ ಪ್ರಸಾದ್ ಎಂಬ lalu-sharad-biharಅದ್ಭುತ ಶಕ್ತಿ ಈ ಗೆಲುವಿನ ರೂವಾರಿ ಮೊದಲ ಕಾರಣ. ಲೋಕಸಭಾ ಚುನಾವಣೆಯಲ್ಲಿಯೇ ಪಾಸ್ವಾನ್ ಎಂಬ ದಲಿತ ನಾಯಕ ಬಿಜೆಪಿ ಬುಟ್ಟಿಗೆ ಬಿದ್ದಿದ್ದರು. ನಂತರದಲ್ಲಿ ಮಾಂಝಿಯವರನ್ನು ಓಲೈಸಿ ಮಹದಲಿತರನ್ನು ಸೆಳೆಯುವ ಪ್ರಯತ್ನವಾಯಿತು. ದಲಿತರ ಅಲ್ಪ ಸ್ವಲ್ಪ ಮತ ಪಡೆಯಬಲ್ಲ ಸಮರ್ಥ್ಯವಿದ್ದ ಬಿಎಸ್ಪಿ ಮತ್ತು ಎಡ ಪಕ್ಷಗಳು ಈ ಚುನಾವಣೆಗಳು ಶುರುವಾಗುವ ಮೊದಲೇ ತಾವು ಸ್ವಾತಂತ್ರ್ಯ ವಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಬಿಟ್ಟಿದ್ದವು. ಲಾಲೂ ಅವರ ಸಮೀಪವರ್ತಿ ಪಪ್ಪು ಯಾದವರನ್ನು ಕೂಡ ಬಿಜೆಪಿ ಸೆಳೆದುಬಿಟ್ಟಿತ್ತು. ಹೀಗೆ ದಲಿತ ಮತ್ತು ಯಾದವ ಮತದಾರದ ಮಧ್ಯೆ ಬಿಜೆಪಿ ಬೇರೂರಲು ಸಾಕಷ್ಟು ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಸಫಲವಾಯಿತು. ಇವ್ಯಾವುದನ್ನೂ ಲಕ್ಷಿಸದ ಲಾಲೂ ಬಿಹಾರದ ಅಸಲಿ ಸಂಘಟನಾ ಸಾಮರ್ಥ್ಯ ಮೆರೆದರು. ಬಿಹಾರದ ಹೃದಯವನ್ನು ಬಲ್ಲ ಲಾಲೂ ತಮ್ಮ ಸಂಪೂರ್ಣ ಶಕ್ತಿಯನ್ನು ಪಣಕ್ಕೆ ಒಡ್ಡಿ ಪರಿಹರಿಸಲು ಸಾಧ್ಯವೇ ಇಲ್ಲದ ಸವಾಲುಗಳನ್ನು ಸ್ವೀಕರಿಸಿದರು. ನಿತೀಶ್ ರನ್ನು  ಮುಖ್ಯಮಂತ್ರಿ ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷದ ಸಮರ್ಥನೆಯನ್ನೂ ಪಡೆದರು. ಸೋನಿಯಾ ಮತ್ತು ರಾಹುಲ್ರನ್ನು ಎಷ್ಟು ಬೇಕೋ ಅಷ್ಟೇ ಪ್ರಯೋಗಿಸಿದ ಲಾಲೂ ಸಂಪೂರ್ಣವಾಗಿ ಚುನಾವಣೆಯನ್ನು ಬೇರುಮಟ್ಟದ ಸಂಘಟನೆಯ ಭಾರ ಹೊತ್ತರು. ಅಪ್ರತಿಮ ವಾಗ್ಮಿ ಮತ್ತು ಮನಸೆಳೆಯುವ ಮಾತುಗಳಿಗೆ ಹೆಸರಾದ ಲಾಲೂ ಚುನಾವಣೆಯ ಮೊದಲು ಮತ್ತು ನಂತರದಲ್ಲಿ ನಡೆದ ಯಾವುದೇ ಭಾಷಣ ಮತ್ತು ಪತ್ರಿಕಾಗೋಷ್ಠಿಗಳಲ್ಲಿ  ನಿತೀಶ್ ತಮ್ಮ ಜೊತೆಗಿದ್ದರೆ ಮೊದಲ ಪ್ರಾಶಸ್ತ್ಯ ನಿತೀಶ್ ಗೇ ನೀಡಿದರು. ಸೀಟು ಹೊಂದಾಣಿಕೆಯಲ್ಲಿ ನಿತೀಶ್ ಮತ್ತು ಲಾಲೂ ತಾದಾತ್ಮ್ಯ ಅನುಕರಣೀಯ ವಾಗಿತ್ತು. ಸಣ್ಣ ಪುಟ್ಟ ಸ್ಥಳೀಯ ಗಲಾಟೆಗಳನ್ನು ಸಮರ್ಥವಾಗಿ ಲಾಲೂ ನಿಭಾಯಿಸಿದರು.

ನಿತೀಶ್ ಎಂಬ ಮೌನ ಸಾಧಕ

ಎರಡನೇ ಬಹು ಮುಖ್ಯ ಅಂಶ ನಿತೀಶ್ ಆಡಳಿತಾವಧಿಯಲ್ಲಿನ ಅವರ ಅದ್ಭುತ ಸಾಧನೆ. ಎಲೆಕ್ಟ್ರಿಕಲ್ ಎಂಜಿನೀರಿಂಗ್ ಪದವೀಧರ ನಿತೀಶ್ ಭಾರತೀಯ ತಾಂತ್ರಿಕ ಸೇವೆಯಲಿದ್ದು ನಂತರ ರಾಜಕೀಯಕ್ಕೆ ಹೊರಳಿದವರು. ನಿತೀಶ್ ಅತ್ಯಧ್ಭುತ lalu_nitishಪ್ರತಿಭಾವಂತ ಆಡಳಿತಗಾರ. ೨೦೦೯ ರಲ್ಲಿ ಲೋಕಪಾಲದ ಸುದ್ದಿಯೇ ಇಲ್ಲದಾಗ ಅತ್ಯಂತ ಪುರೋಗಾಮಿ ಬಿಹಾರ ವಿಶೇಷ ನ್ಯಾಯಾಲಯಗಳ ಕಾಯಿದೆ, ೨೦೦೯ ನ್ನು ಜಾರಿಗೆ ತಂದು ಸದ್ದಿಲ್ಲದೇ ಬ್ರಷ್ಟಾಚಾರವನ್ನು ಮಟ್ಟ ಹಾಕಿದರು. ಬ್ರಷ್ಟ ಅಧಿಕಾರಿಗಳ ಮನೆಗಳನ್ನು ಜಪ್ತಿ ಮಾಡಿ ಶಾಲೆ, ಆಸ್ಪತ್ರೆ, ಗ್ರಂಥಾಲಯ ಮತ್ತು ಸಮುದಾಯ ಭವನಗಳನ್ನಾಗಿ ಪರಿವರ್ತಿಸಿಬಿಟ್ಟರು. ಬಿಹಾರ ಅರ್ಥಿಕ ಪ್ರಗತಿಯ ಹೊಸ ಮೈಲುಗಲ್ಲು ಮೀಟಿತು. ನಿತೀಶ್ ಹಳ್ಳಿ ಹಳ್ಳಿ ಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ  ಶಾಲೆ ಮತ್ತು ಉದ್ಯೋಗ ಪಸರಿಸಿದರು. ಹೆಣ್ಣು ಮಕ್ಕಳಿಗೆ ಉಚಿತ ಸಮವಸ್ತ್ರ, ಸೈಕಲ್ ಮತ್ತು ವಿದ್ಯಾರ್ಥಿ ವೇತನ ಜಾರಿ ಮಾಡಿದರು. ಮಧ್ಯಾಹ್ನದ ಊಟ ಯೋಜನೆ ಅತ್ಯಂತ ಸಮರ್ಪಕವಾಗಿ ಜಾರಿ ಮಾಡಿದರು. ಆರು ಗಂಟೆಯ ಮೇಲೆ ಹೆಣ್ಣುಮಕ್ಕಳು ಹೋಗಲಿ ಗಂಡಸರೇ ಮನೆಯಿಂದ ಹೊರಬರುವ ಪ್ರಮೇಯವಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ನಿತೀಶ್ ಈ ಚಿತ್ರಣ ಬದಲಿಸಿಬಿಟ್ಟರು. ಕಾನೂನು ಸುವ್ಯವಸ್ಥೆ ಸ್ಥಾಪನೆಯಾದ ನಂತರದಲ್ಲಿ ಬಿಹಾರದ ಅತ್ಯಂತ ಪ್ರಭಾವಿ ಮತ್ತು ಪ್ರತಿಭಾನ್ವಿತ ವರ್ಗ ಭಾರತದ ಮತ್ತು ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದು ಬಿಹಾರದಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯಾಪಾರ ಕೈಗೊಂಡರು. ೨೦೧೩ ರಲ್ಲಿ ವಾಣಿಜ್ಯ ಸಂಸ್ಥೆ ಬಿಹಾರ ಮತ್ತು ಗುಜರಾತ್ ಮಧ್ಯೆ ಹೋಲಿಕೆ ಮಾಡಿ ಒಂದು ವರದಿ ಮಾಡಿತು. ಈ ವರದಿಯ ಪ್ರಕಾರ ಗುಜರಾತ್ ಖಾಸಗಿ ವಲಯಕ್ಕೆ ಮಣೆ ಹಾಕಿ ಬಂಡವಾಳ ಹೂಡಿಸಿ ಲಾಭ ಮಾಡಿಸಿದ್ದರೆ, ಬಿಹಾರದಲ್ಲಿ ಸರಕಾರವೇ ಅಗತ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಲಾಭ ಜನರಿಗೇ ದಕ್ಕುವಂತೆ ಮಾಡಿತ್ತು. ಬಡವರ ಹೊಟ್ಟೆ ಮೇಲೆ ಹೊಡೆದು ಭೂಮಿ ವಶಪಡಿಸಿಕೊಳ್ಳದೇ, ಯಾವುದೇ ಅಬ್ಬರದ ಪ್ರಚಾರ ವಿಲ್ಲದೆ, ಸೇಡು ದ್ವೇಷದ ರಾಜಕಾರಣ ಮಾಡದೇ ನಿತೀಶ್ ಅತ್ಯಧ್ಭುತವನ್ನು ಸಾಧಿಸಿ ತೋರಿಸಿದ್ದರು. ಲಾಲೂ ಬಗ್ಗೆ ಅಲ್ಲಲ್ಲಿ ಅಸಮಾಧಾನವಿದ್ದ ಮೇಲ್ವರ್ಗ ಕೂಡ ನಿತೀಶ್ ಎಂದರೆ ಗೌರವಿಸುತ್ತಿತ್ತು. ಮೋದಿಯವರು ನಿತೀಶ್ರ ಕುರಿತು ವಯಕ್ತಿಕ ಟೀಕೆ ಮಾಡಿದಾಗ ನಿತೀಶ್ ಆಡಳಿತದ ಸಮಬಾಳ್ವೆಯ ಮಹತಿ ಅರಿತಿದ್ದ ಈ ವರ್ಗ ತನ್ನ ಸೇಡು ತೀರಿಸಿಕೊಂಡಿತು.

ಕೇಂದ್ರದ ಕುರಿತ ಹತಾಶೆ    

ಮೂರನೆಯ ಕಾರಣ,  ಬಿಹಾರದ ಜನತೆಗೆ ಮೋದಿ ಆಡಳಿತದ ಕುರಿತು ಆದ ತೀವ್ರ ಹತಾಶೆ. ಲೋಕಸಭಾ ಚುನಾವಣೆಯಲ್ಲಿ ನಲವತ್ತರಲ್ಲಿ ಮೂವತ್ತೊಂದು ಸ್ಥಾನ ಗೆದ್ದ ಬಿಜೆಪಿಯಿಂದ ಜನತೆಗೆ ಅಪಾರ ನಿರೀಕ್ಷೆಗಳಿದ್ದವು. ಬಿಹಾರ ಆರ್ಯಭಟನ ನಾಡು ಇಲ್ಲಿಯ ಜನಸಾಮಾನ್ಯರೂ ಗಣಿತದಲ್ಲಿ ಮಹಾ ಪ್ರಕಾಂಡರು! ಮೋದಿಯವರ ಲೋಕ ಸಭಾ ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಪ್ಯಾಕೇಜ್ ನ ಒಂದೊಂದು ರೂಪಾಯಿಯ ಲೆಕ್ಕವನ್ನೂ ಬಾಯಲ್ಲೇ ಹೇಳುವಷ್ಟು ಬುದ್ಧಿವಂತರು. ಇವರ ನಿರೀಕ್ಷೆಗಳು ಸಂಪೂರ್ಣ bihar-modi-nitishಸುಳ್ಳಾಗಿ ಜನಜೀವನ ಇನ್ನಷ್ಟು ದುರ್ಭರವಾದಾಗ ಮೋದಿಯವರ ಮೂವತ್ತೈದು ಸಭೆಗಳ ಸೇಡುಭರಿತ ವಯಕ್ತಿಕ ಟೀಕೆಭರಿತ ಭಾಷಣಗಳು ಜನತೆಗೆ ಕರ್ಕಶ ಶಬ್ದದಂತೆ ಕೇಳಿಸಿದವು.

ನಿತೀಶ್ ಲಾಲೂ ಜೋಡಿಯ ಬಿಹಾರದ ಗೆಲುವಿಗೆ ದೀರ್ಘಕಾಲೀನ ಐತಿಹಾಸಿಕ ಕಾರಣಗಳಿವೆ. ಬರಿ ಪ್ರಚಾರ ವೈಖರಿ, ಸೇಡಿನ ಭಾಷಣ, ಒಬ್ಬ ವ್ಯಕ್ತಿಯ ಚಾತುರ್ಯ ಯಾವ ಚುನಾವಣೆಯನ್ನು ಗೆಲ್ಲಿಸಲೂ ಸಾಧ್ಯವಾಗದು.

ಕೋಮು ಭಾವನೆಗಳ ತಿರಸ್ಕಾರ

ಇನ್ನೊಂದು ಕಾರಣ ಬಿಹಾರದ ಮತದಾರ MIM ನಂಥಹ ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಬಗ್ಗೆ ಸ್ಪಷ್ಟತೆ ಮೆರೆದದ್ದು. ನಿತೀಶರ ಒಂದು ಕಾಲದ ಬಿಜೆಪಿ ಮೈತ್ರಿಯನ್ನು ಮುಂದಿಟ್ಟು ಮುಸ್ಲಿಮರಿಗೆ ತಮ್ಮದೇ ಜನಾಂಗದ ನಾಯಕತ್ವದ ನೆಲೆ ಬೇಕು ಎಂದು ಪ್ರಚಾರ ಮಾಡಿ ಒಂದು ಒಕ್ಕೂಟದ ಭಾಗವಾಗಿ ಸ್ಪರ್ಧಿಸಿದ ಪಪ್ಪು ಮತ್ತು ಒವೈಸಿಗಳು ಗಾಳಿಯಲ್ಲಿ ತೂರಿಹೊಗಿದ್ದಾರೆ. ಮಹಾರಾಷ್ಟ್ರದಲ್ಲಾದಂತೆ ಮುಸ್ಲಿಂ ಮೂಲಭೂತವಾದಿ ಪಕ್ಷ MIM ಗೆ ಯಾವ ಬೆಂಬಲವೂ ಸಿಕ್ಕಿಲ್ಲ. ‘ಅತಿಂ ಸರ್ವತ್ರ ವರ್ಜಯೇತ್’ bjp-bihar-election-amitshahಎಂಬಂತೆ ಹಿಂದೂ ಮತ್ತು ಮುಸ್ಲಿಂ ಕೋಮುವಾದಕ್ಕೆ ಬಲಿಯಾಗದೇ ಬಿಹಾರದ ಜನತೆ ತಮ್ಮ ಬೌದ್ಧಿಕ ಮತ್ತು ನೈತಿಕ ಬಲ ಪ್ರದರ್ಶಿಸಿದ್ದಾರೆ. ತಮ್ಮ ವೋಟು ಒಡೆಯಲು ಮಾಡಿದ ಸಂಚನ್ನು ಮತದಾರರು ತುಂಬಾ ಸರಿಯಾಗಿ ಗ್ರಹಿಸಿದರು. ಗೋವನ್ನು ಬಳಸಿ ಸಮಾಜವನ್ನು ಕೋಮು ಆಧಾರದ ಮೇಲೆ ಒಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ.

ಶರದ್ ಯಾದವ್ ಎಂಬ ಮುತ್ಸದ್ದಿ

ಇನ್ನೊಂದು ಮುಖ್ಯ ಕಾರಣ ರಾಷ್ಟ್ರ ಮಟ್ಟದಲ್ಲಿ ಮೀಡಿಯಾ ಮತ್ತು ಬುದ್ಧಿಜೀವಿಗಳನ್ನು ತಮ್ಮೊಂದಿಗೆ ಸೆಳೆಯಲು ಸಮರ್ಥರಾದ ಜೆಡಿಯು ಅಧ್ಯಕ್ಷರಾದ ಶರದ್ ಯಾದವ್. ಇವರು ಇಂಜಿನಿಯರಿಂಗ್ ಪದವಿಯಲ್ಲಿ ಸ್ವರ್ಣ ಪದಕ ಪಡೆದ ಪ್ರತಿಭಾವಂತ. ಇವರ ನಿರೀಕ್ಷೆ ಎಷ್ಟು ನಿಖರವಾಗಿತ್ತೆಂದರೆ ಚುನಾವಣಾ ಫಲಿತಾಂಶ ಬರುವ ಕೆಲವೇ ದಿನಗಳ ಮೊದಲು ಶರದ್ ಯಾದವ್ ತಮಗೆ ೧೫೦ ಸ್ಥಾನಗಳು ಖಚಿತ ಎಂದು ನುಡಿದಿದ್ದರು. ನಿತೀಶ ಗಿಂತ ಸಾಕಷ್ಟು ಹಿರಿಯರೂ ಆದ ಇವರು ನಿತೀಶ್ ನೇತೃತ್ವವನ್ನು ಶರತ್ತಿಲ್ಲದೇ ಒಪ್ಪಿ ಒಬ್ಬ ನೈಜ ಮುತ್ಸದ್ದಿಯಂತೆ ಕಾರ್ಯ ನಿರ್ವಹಿಸಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಗೌರವ ತಂದು ಕೊಟ್ಟರು.

ಮಮತೆಯ ಕರೆಯೋಲೆ

ಒಂದು ಚಿಕ್ಕ ಆದರೆ ಕಡೆಗಣಿಸಲು ಆಗದ ಅಂಶವೆಂದರೆ, ಮಮತಾ ಬ್ಯಾನರ್ಜಿ ಬಿಹಾರದ swabhimaan-rally_sonia-nitish-laluಜನತೆಗೆ ಮಹಗಠ ಬಂಧನದ ಪರ ನಿಲ್ಲಲು ಕರೆ ಕೊಟ್ಟರು. ಸೀಮಂಚಲವೆಂದು ಕರೆಯಲ್ಪಡುವ ಪುರ್ನಿಯ, ಕಟಿಹಾರ್, ಕಿಷೆನ್ ಗಂಜ್, ಅರಾರಿಯ, ಮಿಥಿಲ ಪ್ರಾಂತ ಗಳಲ್ಲಿ ಸಾಕಸ್ಟು ಸಂಖ್ಯೆಯಲ್ಲಿರುವ ಬಂಗಾಳಿಗಳು ಲಾಲೂ ನಿತೀಶ್ ಪರ ನಿಂತರು. ಜಾತ್ಯತೀತ ವೋಟಿನ ವಿಭಜನೆಯಾಗದಂತೆ ತಡೆಯುವಲ್ಲಿ  ಕೆಜ್ರಿವಾಲ್ ಮತ್ತು ಮಮತಾ ಬೆಂಬಲ ರಾಷ್ಟ್ರೀಯ ವಾಗಿಯೂ ಮಹತ್ತರವಾಗಿತ್ತು. ಬಿಹಾರದ ಚುನಾವಣಾ ರಂಗ ಸಮಾನ ಮನಸ್ಕರನ್ನು ಒಂದು ಮಾಡಿತು.

ಕಾಂಗ್ರೆಸ್ ಪುನರುಜ್ಜೀವನ

ಕಾಂಗ್ರೆಸ್ ಪ್ರಚಾರವನ್ನು ಸಾಕಷ್ಟು ಕಡಿಮೆ ಗೊಳಿಸಿದ ಬಿಹಾರದ ಸ್ಥಳೀಯ ನಾಯಕತ್ವ ಅನಗತ್ಯ ಗೊಂದಲಗಳನ್ನು ನಿವಾರಿಸಿತು. ರಾಹುಲ್ ಭಾಷಣದ ಟೀಕೆ, ಸೋನಿಯಾರ ಭಾಷೆಯ ಕುರಿತು ಅನಗತ್ಯ ವಿವಾದ ಇತ್ಯಾದಿ ಇಲ್ಲಿ ಕಾಣಸಿಗಲೇ ಇಲ್ಲ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಮರುಜೀವ ಪಡೆದಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ವೋಟು ಸಿಗದೇ ಹೋಗಬಹುದು ಆದರೆ ಕಾಂಗ್ರೆಸ್ಸಗೆ ಅಲ್ಲಿ ಬಹು ದೊಡ್ಡ ಸಂಘಟನೆಯಿದೆ. ಇದರ ಸಂಪೂರ್ಣ ಲಾಭ ಈ ಬಾರಿ ದಕ್ಕಿದೆ.

ಪ್ಯಾಕೇಜ್ ಮರೆಯದಿರಲಿ

ಇನ್ನೊಂದು ಮಾತು. ಜನರು ತಮ್ಮ ನಾಯಕರ ಗುಣಾವಗುಣಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಒಂದು ಕಡೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಒಬ್ಬ ಪ್ರಧಾನ ಮಂತ್ರಿಯವರು ರಾಜಕೀಯ ವಿರೋಧಿಗಳ ಕುಟುಂಬ, ಮಕ್ಕಳು ಇತ್ಯಾದಿಗಳ ಕುರಿತು ಟೀಕೆ ಮಾಡುತ್ತಿದ್ದಾರೆ, ಒಬ್ಬ ನೈಜ ಮುತ್ಸದ್ದಿಯ ಮಾದರಿಯಲ್ಲಿ ಯಾವುದಕ್ಕೂ ತೀಕ್ಷ್ಣವಾಗಿ ಮತ್ತು ವಯಕ್ತಿಕ ಮಟ್ಟಕ್ಕಿಳಿದು ಪ್ರತಿಕ್ರಯಿಸದ ಲಾಲೂ-ನಿತೀಶರನ್ನೂ ಮೌನವಾಗಿ ತುಲನೆ ಮಾಡುತ್ತಿತ್ತು. ಜನತೆಯ ತೀರ್ಮಾನ ಈಗ ದೇಶದ ಮುಂದಿದೆ. ತಮ್ಮ ಒಂದು ಕಾಲದ ಬಲಗೈ modi-in-biharಬಂಟ ಪಪ್ಪು ಯಾದವ್ ಮತ್ತವರ ಹೆಂಡತಿಯ ತಮ್ಮ ಸುಭಾಷ್ ಯಾದವ್ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ‘ಲಾಲು ಸುಮ್ಮನೇ ವೋಟು ಒಡೆಯಲು ಕಣದಲ್ಲಿದ್ದಾರೆ; ಗೆಲವು ಖಂಡಿತಾ ನಮ್ಮದೇ ಎಂದಾಗ’, ಲಾಲೂ ಅವರಿಗೆ ಸೊಪ್ಪು ಕೂಡ ಹಾಕಲಿಲ್ಲ. ಮೋದಿಯವರು ಅತಿಯಾಗಿ ಕೆಣಕಿದಾಗ ಮಾತ್ರ ಲಾಲೂ ಮೋದಿಯವರಿಗೆ ತಾಕತ್ತಿದ್ದರೆ ತಮ್ಮೊಂದಿಗೆ ಇಂಗ್ಲಿಷ್ ಸಂವಾದಕ್ಕೆ ಬರಲಿ ಎಂದು ಸವಾಲು ಹಾಕಿದರು. ಈ ಸವಾಲನ್ನು ಮೋದಿಯವರು ಸ್ವೀಕರಿಸುವ ಔದಾರ್ಯ ತೋರಲಿಲ್ಲವೇಕೋ?

ಬಿಹಾರದ ಗೆಲುವು ಮೈಮರೆಸಬಾರದು. ಜನತೆಯ ಹೆದರಿಕೆ ಬರುವಷ್ಟು ಅಪಾರ ಪ್ರಮಾಣದ ನಿರೀಕ್ಷೆ ನೋಡಿದರೆ ನಿತೀಶ್ ರ ಜವಾಬ್ದಾರಿ ಎಷ್ಟು ದೊಡ್ಡದು ಎಂದು ಗೋಚರವಾಗುತ್ತದೆ.

ಹಾಗೆಯೇ, ನಿತೀಶರನ್ನು ಒಬ್ಬ ವೈರಿಯಂತೆ ಕಾಣದೇ ಈ ದೇಶದ ಪ್ರಧಾನಿಗಳು ತಾವು ಆಶ್ವಾಸನೆ ನೀಡಿದಂತೆ ಬಿಹಾರದ ಜನತೆಗೆ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಕೊಟ್ಟು ಒಬ್ಬ ನೈಜ ಮುತ್ಸದ್ದಿಯಂತೆ ನಡೆದುಕೊಳ್ಳಬೇಕು.

ಲಾಲೂ ಅವರೊಂದಿಗೆ ಇಂಗ್ಲಿಷ್ ಸಂವಾದದ ಸವಾಲು ಮರೆತರೂ ಪರವಾಗಿಲ್ಲ ಮೂವತ್ತೊಂದು ಸಂಸದರನ್ನು ತಮಗೆ ಕೊಟ್ಟ ಬಿಹಾರದ ಅಭಿವೃದ್ಧಿಯ ಪ್ಯಾಕೇಜ್ ಮಾತ್ರ ಮರೆಯಬಾರದು.

ಬುದ್ಧ ನಕ್ಕ ನಾಡು ಬಿಹಾರ ಹೌದಾದರೂ, ಮಾತಿಗೆ ತಪ್ಪಿದರೆ, ಪಾಟಲಿಪುತ್ರದ ಚಾಣಕ್ಯನ ಮಾದರಿ ಸೇಡು ತೀರಿಸದೆ ಸುಮ್ಮನಿರುವ ಜಾಯಮಾನದ್ದಲ್ಲ!

ಶಾಂತಿ ಕದಡುವವರ ಮಧ್ಯೆ ನೆಮ್ಮದಿಯನ್ನು ಕನವರಿಸುತ್ತಾ…

​ಎಸ್. ಸದಾನಂದ

ಕೆಲ ವರ್ಷಗಳ ಹಿಂದೆ ಮಧ್ಯಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ನಡೆದ ಘಟನೆ ಇದು.

ಆಗ ನಿವೃತ್ತಿ ಅಂಚಿನಲ್ಲಿದ್ದ ಶಿಕ್ಷಕರೊಬ್ಬರು ಪ್ರತಿ ದಿನ ವಾಕಿಂಗ್ ನಲ್ಲಿ ಆ ಪತ್ರಿಕೆಯ ವರದಿಗಾರರನ್ನು ಭೇಟಿಯಾಗಿ ವಿಷ್ ವಿನಮಯ ಮಾಡಿಕೊಳ್ಳುತ್ತಿದ್ದರು. ಒಂದು ದಿನ pic 2ವರದಿಗಾರರನ್ನು ತಡೆದು ನಿಲ್ಲಿಸಿ “ದಯವಿಟ್ಟು ನಾಳೆಯಿಂದ ನಿಮ್ಮ ಪತ್ರಿಕೆ ನಮ್ಮ ಮನೆಗೆ ಹಾಕುವುದನ್ನು ನಿಲ್ಲಿಸಬೇಕು. ನಿಮ್ಮ ಪ್ರಸರಣ ವಿಭಾಗದವರಿಗೆ ತಿಳಿಸಲು ಸಾಧ್ಯವೇ” ಎಂದರು. ಮನವಿಯನ್ನು ಸ್ವೀಕರಿಸಿದ ವರದಿಗಾರ ಸಂಬಂಧಪಟ್ಟವರಿಗೆ ಮಾಹಿತಿ ತಲುಪಿಸಿ ಅವರ ಮನೆಗೆ ಪತ್ರಿಕೆ ಹೋಗುವುದು ನಿಂತಿತು.

 

ಮತ್ತೆ ಕೆಲ ದಿನಗಳ ನಂತರ ಅಂತಹದೇ ವಾಕಿಂಗ್ ಸಂದರ್ಭವೊಂದರಲ್ಲಿ ಭೇಟಿಯಾದ ವರದಿಗಾರರನ್ನು ಆ ಶಿಕ್ಷಕರು ಮತ್ತೆ ನಿಲ್ಲಿಸಿದರು. “ನಿಮ್ಮ ಪತ್ರಿಕೆಯನ್ನು ನಿಲ್ಲಿಸಿದ್ದಕ್ಕೆ ನಿಮಗೆ ಬೇಸರ ಆಗಿರಬಹುದು. ಆದರೆ ನಿಮ್ಮೊಂದಿಗೆ ಆ ನನ್ನ ತೀರ್ಮಾನಕ್ಕೆ ಕಾರಣವನ್ನು ತಿಳಿಸಿಬೇಕಿದೆ” ಎಂದು ಮಾತು ಮುಂದುವರಿಸಿದರು… “ನನಗೆ ಕಾಲೇಜು ಓದುವ ಮಗನಿದ್ದಾನೆ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕೆಲ ಅಂಕಣಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ನೆರೆಹೊರೆಯವರನ್ನು ಅನುಮಾನದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಲು ಪ್ರಚೋದನಕಾರಿಯಾಗಿವೆ. ಇನ್ನೂ ಎಳೆಯ ಹರೆಯದಲ್ಲಿರುವ ಮಗ ಅವನ್ನು ಓದಿ, ದಿಕ್ಕು ತಪ್ಪಿ ಮತಾಂಧನಾಗಿ ಯಾವುದೋ ಕೃತ್ಯದಲ್ಲಿ ಭಾಗಿಯಾಗಿ ಜೈಲುಪಾಲಾದರೆ ಏನು ಗತಿ? ನಾನೀಗ ನಿವೃತ್ತಿ ಅಂಚಿನಲ್ಲಿದ್ದೇನೆ. ನಿವೃತ್ತಿ ನಂತರ ನಾನು ನೆಮ್ಮದಿಯಾಗಿ ಮನೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ನೋಡಿಕೊಂಡು ಇರಬೇಕೆಂದು ಬಯಸುತ್ತೇನೆ. ಜೈಲಿಗೆ ಹೋದ ಮಗನಿಗೆ ನಾನು ಬುತ್ತಿ ತೆಗೆದುಕೊಂಡು ಜೈಲಿನ ಬಾಗಿಲು ಕಾಯುವ ಕಾಯಕ ಬೇಡ..ಹಾಗಾಗಿ ನಿಮ್ಮ ಪತ್ರಿಕೆ ನಿಲ್ಲಿಸಿದೆ. ನೀವು ಬೇಸರ ಮಾಡಿಕೊಳ್ಳಬೇಡಿ,” ಎಂದು ಆ ಶಿಕ್ಷಕರು ಮುಂದೆ ಹೋದರು.

 

ಈ ಘಟನೆಯ ಪರಿಚಯ ಇರುವ ಅನೇಕರಿಗೆ ಇದು ಮತ್ತೆ ಮತ್ತೆ ನೆನಪಾಗಿ ಕಾಡುವುದುಂಟು. ಈ ಹೊತ್ತು ಮೂಡಬಿದ್ರೆಯಲ್ಲಿ ಕೊಲೆಯಾದ ಯುವಕ, ಮಂಗಳೂರಿನಲ್ಲಿ ಕೋಮು ಸಂಘಟನೆಗಳ ಪ್ರಚೋದನೆಗೆ ಮರುಳಾಗಿ ವಿವಿಧ ಗಲಭೆಗಳಲ್ಲಿ ಸಿಲುಕಿ ಜೈಲುಪಾಲಾಗಿರುವ ಹತ್ತಾರು ಯುವಕರು, ಯಾರದೋ ಜಯಂತಿ, ಮತ್ತಾರದೋ ಮೆರವಣಿಗೆ ಎಂದಾಕ್ಷಣ ಬೀದಿಗೆ ಬಂದು ಕಲ್ಲು, ಬಾವುಟ ಹಿಡಿದು ನಿಲ್ಲುವ ಮಂದಿಯನ್ನು ನೋಡಿದಾಗಲೆಲ್ಲಾ ಈ ಮೇಲಿನ ಘಟನೆ ನೆನಪಾಗದೆ ಇರದು.

girish-karnad

ಕೊಡಗಿನಲ್ಲಿ ಒಬ್ಬರು ಹತ್ಯೆಯಾದರೆ, (ಅದು ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟವಿಲ್ಲ) ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಅಲ್ಲಿಯ ಶಾಸಕ ಹೇಳಿಕೆ ನೀಡುತ್ತಾರೆ. ಇಡೀ ರಾಜ್ಯದ ನಾಯಕರೆಲ್ಲಾ ಆ ಊರಿಗೆ ಹೋಗಿ ಬಾಯಿಗೆ ಬಂದ ಹಾಗೆ ಮಾತನಾಡಿ ಹಿಂಸೆಯನ್ನು ವ್ಯಾಪಕಗೊಳಿಸುತ್ತಾರೆ. ಏಕೆ ಶಾಂತಿ ಬೇಡ? ಅವರಿಗೆ ಅಶಾಂತಿ ನೆಲೆಸಿದಷ್ಟೂ ಲಾಭವೇ? ಎದುರಿಗಿದ್ದು ನೋಡಿದವರಂತೆ, ಕೆಳಗೆ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಂದರು ಎಂದು ಹೇಳಿಕೆ ನೀಡುತ್ತಾರೆ ಕೆಲವರು. ಇವರಿಗೇಕೆ ಜವಾಬ್ದಾರಿ ಬಾರದು?

ನಮ್ಮಲ್ಲಿರುವ ವೈವಿಧ್ಯತೆಯನ್ನು ಧಿಕ್ಕರಿಸುವ, ಶೋಷಣೆಯನ್ನು ಪೋಷಿಸುವ ಹಾಗೂ ಇನ್ನೊಂದು ಧರ್ಮದವರನ್ನು ಶತ್ರುವಂತೆ ಕಾಣುವ ಮನಸುಗಳ ಮಧ್ಯೆ ಬದುಕಬೇಕಿರುವುದನ್ನು ನನೆಸಿಕೊಂಡರೆ ಆತಂಕವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿರುವ ಕೆಲ ಪೋಷಕರಂತೂ ಮಕ್ಕಳು ಎದುರಿಸಬೇಕಿರುವ ನಾಳೆಗಳ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ. ಹೀಗೆ ಮಾಧ್ಯಮದ ಕೆಮರಾಗಳ ಮುಂದೆ, ಪತ್ರಿಕೆಗಳ ಅಂಕಣಗಳಲ್ಲಿ ಕಿಡಿ ಹಚ್ಚುವವರು ನೆಮ್ಮದಿಯಾಗೇ ಇರುತ್ತಾರೆ. ಸಂದರ್ಭ ಬಂದಾಗ ಪಕ್ಷಾಂತರ ಮಾಡಿ ‘ಕ್ರಾಂತಿಕಾರಿ’ ಪೋಸು ಕೊಟ್ಟು ಮ್ಯಾಗಜೀನ್ ಗಳಿಗೆ ಮುಖಪುಟದ ರೂಪದರ್ಶಿಯಾಗುತ್ತಾರೆ! ಆದರೆ ಬಲಿಪಶುವಾಗುವುದು ಅಮಾಯಕರು. ಬಡವರ ಮಕ್ಕಳು ಹಾಗೂ ಅನಾಥರಾಗುವವರು ವೃದ್ಧ ಪೋಷಕರು.

 

ಬುದ್ಧಿ ಹೇಳಬೇಕಾದ ಜೀವಿಗಳು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಲ್ಲಿ ಮೈಮರೆತು ಭಾಷಣಗಳಿಗೆ ಸೀಮಿತರಾಗಿ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರು ಆಕ್ಟಿವ್. ಇಲ್ಲವಾದಲ್ಲಿ ಯಾವುದೋ ಸಿನಿಮಾದ ವಿಲನ್ ಪಾತ್ರಗಳಲ್ಲಷ್ಟೇ ದರ್ಶನ. ಈ ದೇಶ ಪ್ರಪಂಚದಲ್ಲಿ ನಂಬರ್ 1 ಪಟ್ಟ ಪಡೆದುಕೊಂಡು ಏನೂ ಆBhagawanಗಬೇಕಿಲ್ಲ. ಮನುಷ್ಯನ ಮೆದುಳು ವಿಕಾಸ ಗೊಳ್ಳದೆ, ಅಭಿವೃದ್ಧಿ ಏನಾದರೇನು? ಬಿಹಾರದ ನೆಲದಲ್ಲಿ ನಿಂತು, ನೀವು ನಮಗೆ ಓಟು ಹಾಕಿ ಗೆಲ್ಲಿಸದಿದ್ದರೆ, ಪಾಕಿಸ್ತಾನದಲ್ಲಿ ಪಟಾಕಿ ಹಚ್ಚುತ್ತಾರೆ ಅಂತ ಒಬ್ಬ. ಮತ್ತೊಬ್ಬ ನಿಮ್ಮ ಮೀಸಲಾತಿಯನ್ನು ಅಲ್ಪಸಂಖ್ಯಾತರು ತಿನ್ನುತ್ತಿದ್ದಾರೆ ಎಂದು ಹಲ್ಲು ಮಸೆಯುತ್ತಾನೆ. ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸಿ ಹೀಗೆ ಓಟಿಗಾಗಿ ಸಮಾಜ ಒಡೆಯುವ ಮಾತನಾಡಿದವನ ಹೆಸರು ಪ್ರಧಾನಿ! ಈ ಕಡಿ-ಕೊಲ್ಲು ಮಾತುಗಳಿಗೆ ಸಾಮಾಜಿಕ ತಾಣಗಳಲ್ಲಿ ಜಯಕಾರಗಳು.

 

ಬುದ್ಧಿವಂತ, ವಿಚಾರವಂತ, ಓದಿಕೊಂಡಿರುವವನು, ಸಂಶೋಧಕ, ಪ್ರಗತಿಪರ – ಎನ್ನುವ ಪದಗಳನ್ನು ಅದೆಷ್ಟರ ಮಟ್ಟಿಗೆ ಹೀಯಾಳಿಸಲಾಗಿದೆ ಎಂದರೆ, ಯಾರೂ ತನ್ನನ್ನು ತಾನು ಹಾಗೆ ಪರಿಚಯ ಮಾಡಿಕೊಳ್ಳಲು ಹಿಂಜರಿಯುವಷ್ಟು. (ವಿಚಿತ್ರ ಎಂದರೆ ಇತ್ತೀಚೆಗೆ ಮಾನ್ಯತೆ ಪಡೆಯುತ್ತಿರುವ ಮತ್ತೊಂದು ಡೆಸಿಗ್ನೇಷನ್ – ಸಂಸ್ಕೃತಿ ಚಿಂತಕ!) ಇಂತಹ ಬೆಳವಣಿಗೆ ಅಧ್ಯಯನ ಎನ್ನುವ ಕ್ರಿಯೆ ಬಗ್ಗೆಯೇ ನವ ತರುಣರಲ್ಲಿ ನಿರ್ಲಕ್ಷ್ಯ ಉಂಟು ಮಾಡುವಷ್ಟು. There is no respect for scholarship. ಥ್ಯಾಂಕ್ ಗಾಡ್, ಇಂತಹವರ ಕಾಲದಲ್ಲಿ ಕುವೆಂಪು, ವಿವೇಕಾನಂದ ರಂತಹವರು ಬದುಕಲಿಲ್ಲ. ಇಲ್ಲವಾಗಿದ್ದಲ್ಲಿ ಅವರ ಒಂದೊಂದು ಮಾತು, ಹೇಳಿಕೆಗಳು ಟಿಆರ್ ಪಿ ಹಿಂದೆ ಬಿದ್ದಿರುವವರ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಬುಲೆಟಿನ್ ಗಳಿಗೆ ಸರಕಾಗಿರುತ್ತಿದ್ದವು! ಮಾರನೆಯ ದಿನ ಅವರ ಗಡಿಪಾರಿಗೆ ಒತ್ತಾಯಿಸಿ ಬೀದಿಗಿಳಿಯುತ್ತಿದ್ದರು. ಕೆಲ ಮಾಜಿ ಮಂತ್ರಿ ಮಹಾಶಯರು ಅವರನ್ನು ಸಾರಸಗಟಾಗಿ ‘ಹುಚ್ಚ’ ರೆಂದು ಪ್ರಮಾಣ ಪತ್ರ ಕೊಡುತ್ತಿದ್ದರು.
ಇಂದು ಗಿರೀಶ್ ಕಾರ್ನಾಡ್ ಅವರನ್ನು ಅನೇಕ ರಾಜಕಾರಣಿಗಳು, ಸ್ವಾಮೀಜಿಗಳು ‘ಹುಚ್ಚ’ ಎಂದು ಕರೆದರು. ಆಯ್ತು ಅವರಿಗೆ ಸ್ವಾತಂತ್ರ್ಯ ಇದೆ, ಕರೆಯಲಿ. ಆದರೆ ಕರೆಯುವ ಮುನ್ನ ಒಂದೇ ಒಂದು ಬಾರಿ ಕಾರ್ನಾಡರ ‘ತುಘಲಕ್’ ನಾಟಕವನ್ನು ಓದಿದ್ದರೆ ಚೆನ್ನಾಗಿತ್ತಲ್ಲವೆ. ಆದರೆ, ಈಗ ಅಂತಹ ಮಾತನ್ನೇ ಹೇಳುವಂತಿಲ್ಲ. “ಅವನ್ಯಾವ ಸೀಮೆ ರೈಟರ್ ಅಂತ ಓದಬೇಕು…” ಎಂದು ಜಗಳಕ್ಕೆ ಬರುತ್ತಾರೆ. ಲೇಖಕರೊಬ್ಬರನ್ನು ಸಂದರ್ಶನಕ್ಕೆ ಕರೆದಾಗ, ಅವರ ಲೇಖನಗಳನ್ನು ಓದಿಕೊಂಡಿರಬೇಕಲ್ಲವೇ. ಆದರೆ ‘ಅಧ್ಯಯನದ ಅಗತ್ಯವೇ ಇಲ್ಲ’ ಎನ್ನುವವರ ಧಾಟಿ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ, ಸೃಜನಶೀಲ ಬರೆವಣಿಗೆಯಲ್ಲಿರುವವರ ವಾದವೂ ಹೀಗೇ ಆಗಿತ್ತು. ನಾನು ನನ್ನ ಹಿಂದಿನ ಲೇಖಕರನ್ನು ಓದಿಕೊಳ್ಳುವುದಿಲ್ಲ. ಅದರ ಅಗತ್ಯ ನನಗಿಲ್ಲ ಎನ್ನುವವರು ಭಾರೀ ಆತ್ಮವಿಶ್ವಾಸದಿಂದಲೇ ತಮ್ಮ ವಾದ ಮಂಡಿಸಿದರು.
ಆದರೆ ಈಗ ಸೃಜನೇತರ ಬರವಣಿಗೆ/ಮಾಧ್ಯಮದಲ್ಲಿ ತೊಡಗಿಸಿಕೊಂಡವರೂ ಅದೇ ಧಾಟಿಯಲ್ಲಿ ಮಾತಿಗಿಳಿಯುತ್ತಿದ್ದಾರೆ. ಕೆ.ಎಸ್. ಭಗವಾನ್ ಅವರ ವಿಚಾರದ ಬಗ್ಗೆ ತಕರಾರುಗಳಿರಲಿ. ಆದರೆ, ಆ ಮನುಷ್ಯ ತನ್ನ ವೃತ್ತಿಯ 30ಕ್ಕೂ ಹೆಚ್ಚು ವರ್ಷ ಈ ನೆಲದ ಸಾವಿರಾರು ಹುಡುಗರಿಗೆ ಶೇಕ್ಸ್ ಪಿಯರ್ ಪರಿಚಯಿಸಿದ, ಮನೋಜ್ಞವಾಗಿ ಪಾಠ ಮಾಡಿದವರು ಎನ್ನುವ ಕಾರಣಕ್ಕೆ ಕನಿಷ್ಟ ಗೌರವ ಬೇಡವೆ? ಒಬ್ಬ ‘ಏ ಭಗವಾನ್…’ ಎಂದು ಗದರಿದರೆ, ಮತ್ತೊಬ್ಬ “ನಿಮ್ಮಂ ತಹವರಿಗೇಕೆ ಭಗವಾನ್ ಎಂಬ ಹೆಸರು..” ಎಂದು ಪ್ರಶ್ನಿಸುತ್ತಾನೆ.
download
ಹಿಂಸೆಯಿಲ್ಲದ, ದ್ವೇಷ ಇಲ್ಲದ ನಾಳೆಗಳಿಗಾಗಿ ಈ ಹೊತ್ತಿನ ಯುವಕರಿಗೆ ಜಾತಿ, ವರ್ಣ, ಧರ್ಮದ ಆಚೆಗೆ ನಿಲ್ಲುವ ಒಂದಿಷ್ಟು ಆದರ್ಶ ವ್ಯಕ್ತಿತ್ವಗಳನ್ನು ಅಮೂಲಾಗ್ರವಾಗಿ ಓದಿಕೊಳ್ಳಿ ಎಂದು ಹೇಳುವ ಹಿರಿಯರು ಬೇಕಾಗಿದ್ದಾರೆ. ಟೀವಿ ಸ್ಟುಡಿಯೋಗಳಲ್ಲಿ ಕುಳಿತು ಏರಿದ ದಿನಯಲ್ಲಿ ಮಾತನಾಡುವವರಷ್ಟೇಬುದ್ಧಿವಂತರಲ್ಲ ಎನ್ನುವುದನ್ನು ಎದೆಗೆ ನಾಟುವಂತೆ ಹೇಳುವವರ ಅಗತ್ಯವಿದೆ.

ಆ್ಯಂಕರಿಂಗ್‍ v/s ಪತ್ರಿಕೋದ್ಯಮ!


-ವಿಶ್ವಾಸ್ ಕೆ


ಇದು ಸುದ್ದಿ ಓದುತ್ತಿರುವವರೇ ಸುದ್ದಿಯಾಗುತ್ತಿರುವ ಕಾಲ. ಕನ್ನಡವನ್ನು ಕನ್ನಡದ ರೀತಿಯಲ್ಲೇ ಓದುತ್ತಿದ್ದ, K S Bhagavanಸುದ್ದಿಗಳ ಹಿಂದಿರುವ ಭಾವಗಳನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ, ಕನ್ನಡದ ಸುದ್ದಿ ಮಾಧ್ಯಮಕ್ಕೆ ಒಂದೊಳ್ಳೆಯ ಮಾದರಿಯಾಗಬಲ್ಲ ಸಾಧ್ಯತೆ ಹೊಂದಿದ್ದ ರೆಹಮಾನ್‍ ಹಾಸನ್‍, ಬಿಗ್‍ಬಾಸ್ ಮನೆಪಾಲಾಗಿದ್ದಾರೆ. ಮತ್ತೆಂದೂ ಹಳೆಯ ರೆಹಮಾನ್ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗಲೇ ಈ ವಾರ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಚಿಂತಕ ಭಗವಾನ್ ಸಂದರ್ಶನಗಳು ಪ್ರಸಾರವಾಗಿವೆ. ಭಗವಾನ್ ಮಾತು, ಅವರ ಪ್ರತಿಪಾದನೆಗಳು ಸುದ್ದಿಯಾಗುವ ಜಾಗದಲ್ಲಿ, ಅವರನ್ನು ಸಂದರ್ಶಿಸಿದ ಇಬ್ಬರೂ ಆ್ಯಂಕರ್‍ಗಳು ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪರ ಮತ್ತು ವಿರೋಧದ ದನಿಗಳು ಸದ್ದುಮಾಡುತ್ತಿವೆ. ಫೋನ್ ಕಾಲ್‍ಗಳು ‘ಸೌಂಡ್ ಕ್ಲೌಡ್’ ನಲ್ಲಿ ಬಿಕರಿಗಿಡಲಾಗಿದೆ. ಎರಡೂ ಪ್ರತ್ಯೇಕ ಘಟನೆಗಳಾದರೂ, ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಜತೆಗೆ, ಕನ್ನಡದ ಸುದ್ದಿವಾಹಿನಿಗಳು, ಒಂದು ದಶಕದ ನಂತರವೂ ಎದುರಿಸುತ್ತಿರುವ ವೃತ್ತಿಪರತೆಯ ಕೊರತೆಯನ್ನು ಎತ್ತಿಹಿಡಿಯುತ್ತಿವೆ.

ಅವರು ರಂಗನಾಥ್ ಭಾರಧ್ವಾಜ್. ರಾಮೋಜಿ ಕನಸಿನ ಈ-ಟಿವಿ ಕನ್ನಡದಲ್ಲಿ ವಾರ್ತಾ ನಿರೂಪಕರಾಗಿದ್ದವರು. ನಂತರ ನಾನಾಚಾನಲ್‍ಗಳನ್ನು ನಾನಾರೀತಿಯ ಹುದ್ದೆಗಳನ್ನು ನಿಭಾಯಿಸಿದವರು. ಇದೀಗ ಅಂಬಾನಿ ಎಂಬ ಈ ದೇಶದ ಸಿರಿವಂತನ ಒಡೆತನಕ್ಕೆ ಮಾರಿಸಿಕೊಂಡ ಈ-ಟಿವಿ ಕನ್ನಡ ಸುದ್ದಿವಾಹಿನಿಯ ಎಡಿಟರ್ ಇನ್ ಚೀಫ್. ಇವರು ಒಂದು ತಿಂಗಳಿಂದ ಸಂದರ್ಶನ ನೀಡುವಂತೆ ಭಗವಾನ್ ಅವರಿಗೆ ದುಂಬಾಲುಬಿದ್ದದರು. ಅದಕ್ಕೆ ಅವರ ಹತ್ತಿರದ ಕೆಲವರಿಗೆ ಕರೆಮಾಡಿ, ಭಗವಾನ್ ಜತೆಗೆ ಮಾತುಕತೆಗೆ ಬರಲು ಅಹ್ವಾನಿಸಿದ್ದರು. ಭಗವಾನ್ ಬಂದರುಕೂಡ. ಬಹುಶಃ ರಂಗನಾಥ್ ಅಂತಹ ಅನುಭವಿ ಪತ್ರಕರ್ತ ಈ ಸಮಯದಲ್ಲಿ ಭಗವಾನ್ ಅವರ ಬಗ್ಗೆ ಅಧ್ಯಯನಕ್ಕೆ ಮೀಸಲಿಡಬೇಕಿತ್ತು. ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು. ಅವರ ವಿವಾದಿತ ಮಾತುಗಳನ್ನು ರಿವಿಝಿಟ್‍ ಮಾಡಬೇಕಿತ್ತು. ನಂತರ, ಅವರ ಜತೆಗಿನ ಸಂದರ್ಶನಕ್ಕೆ ಪ್ರಶ್ನೆಗಳನ್ನು ರೆಡಿ ಮಾಡಿಕೊಳ್ಳಬೇಕಿತ್ತು. ಆದ್ರೆ, ರಂಗನಾಥ್‍ ಮಾಡಿದ್ದೇನು? ಬಲಪಂಥೀಯ ಹಿನ್ನೆಲೆಯವರಿಗೆ ಕರೆಮಾಡಿ, “ಲೆಫ್ಟ್-ರೈಟ್” ತಗೊಳ್ಳಿ ಎಂದುಬಿಟ್ಟರು.

ವಾಟರ್ ಗೇಟ್ ಹಗರಣ ಹೊರಬಿದ್ದ ನಂತ್ರ ಅಮೆರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ರಾಜೀನಾಮೆಕೊಟ್ಟರು. ಆದ್ರೆ, ಅವರು ಎಲ್ಲಿಯೂRanganth Bharadhwaj ತಮ್ಮ ತಪ್ಪಿನ ಕುರಿತು ಚಿಕ್ಕ ವಿಷಾದವನ್ನೂ ವ್ಯಕ್ತಪಡಿಸಿರಲಿಲ್ಲ. ಈ ಸಮಯದಲ್ಲಿ ಆಸ್ಟ್ರೇಲಿಯಾದ ಸುದ್ದಿವಾಹಿನಿಗಳಿಗೆ ಸಂದರ್ಶನಗಳನ್ನು ನಡೆಸಿಕೊಡುತ್ತಿದ್ದ ಫ್ರೋಸ್ಟ್ ಎಂಬ ಪತ್ರಕರ್ತ ನಿಕ್ಸನ್ ಇಂಟರ್ವ್ಯೂಗೆ ಮುಂದಾದ. ಅದಕ್ಕೆನಿಕ್ಸನ್ ವಿರೋಧಿಸುತ್ತಿದ್ದ ಒಂದಿಬ್ಬರನ್ನು ಜತೆ ಇಟ್ಟುಕೊಂಡು ಅಧ್ಯಯನ ಶುರುಮಾಡಿದ. ನಿಕ್ಸನ್ ಅವರ ಪ್ರತಿನಡೆಯನ್ನೂ ಅವನು ಪರೀಕ್ಷೆಗೆ ಒಳಪಡಿಸಿದ. ನಂತ್ರವಷ್ಟೆ ನಿಕ್ಸನ್ ಸಂದರ್ಶನವನ್ನು ಶೂಟ್ ಮಾಡಲಾಯಿತು. ಮೊದಲಬಾರಿಗೆ ನಿಕ್ಸನ್ ಕಣ್ಣೀರುಹಾಕಿದರು. ನಾನು ಜನರನ್ನು ತಪ್ಪುಹಾದಿಗೆ ಎಳೆದೆ ಎಂದುಒಪ್ಪಿಕೊಂಡರು. ಆ ಒಂದು ಸಂದರ್ಶನದಿಂದಾಗಿ ಫ್ರೋಸ್ಟ್ ನೇ ಮಾತಾಗಿಹೋದ್ರು. ಬಹುಶಃ ಈ ಕಾರಣಕ್ಕೆ ನಾವಿಲ್ಲಿ, ಸಂದರ್ಶನಗಳ ವಿಚಾರ ಬಂದಾಗ ನಿಕ್ಸನ್ ಮತ್ತು ಫ್ರೋಸ್ಟ್  ನಡುವೆ ನಡೆದ ಈ ಸಂದರ್ಶನವನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ರಂಗನಾಥ್ ಅಂತಹ ಹಿರಿಯ ಪತ್ರಕರ್ತ ಇದನ್ನು ಗಮನಿಸದೇ ಹೋದ ಬಗೆಯೇ ಸೋಜಿಗ ಎನ್ನಿಸುತ್ತದೆ. ಭಗವಾನ್ ಮಾತುಗಳು ತಪ್ಪು, ಅವುಗಳಿಂದ ಸಮಾಜ ಹಾಳಾಗುತ್ತಿದೆ ಎಂದು ಅವರು ನಂಬಿಕೊಂಡಿದ್ದರೆ, ಅದು ಅವರ ನಂಬಿಕೆ. ಅದರ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದೇ ಹೊರತು, ಅದನ್ನು ತಪ್ಪು ಎಂದು ಹೇಳುವುದು ಕಷ್ಟ. ಆದ್ರೆ, ಒಬ್ಬ ಪತ್ರಕರ್ತರಾಗಿ ರಂಗನಾಥ್‍, ತಮ್ಮ ಭಿನ್ನಾಭಿಪ್ರಾಯಗಳನ್ನು ಪ್ರತಿಪಾದನೆ ಮಾಡಲು ಹೊರಡುತ್ತಾರೆ. ಅಲ್ಲಿ ವೃತ್ತಿಪರತೆಯಾಗಲೀ, ಸಿದ್ಧತೆ ಯಾಗಲೀ ಕಾಣುವುದಿಲ್ಲ. ಹಿಂದೆ ಅವರೊಮ್ಮೆ ನಟ ಪ್ರಕಾಶ್ ರಾಜ್ ಅವರ ಸಂದರ್ಶನ ಮಾಡಿದ್ದರು. ಮೊದಲುಪ್ರಕಾರ ಪ್ರಕಾಶ್ ರಾಜ್ ಅವರ ಹೊಗಳಿಕೆಗೆ ಸಂದರ್ಶನದ ಸಮಯವನ್ನು ಮೀಸಲಿಟ್ಟರು. ನಂತ್ರ, ಕಾಲೆಳೆಯಲು ಹೋದರು. ಆದ್ರೆ, ಸಮಚಿತ್ತವನ್ನು ಕಾಯ್ದುಕೊಂಡಿದ್ದ ಪ್ರಕಾಶ್ ರಾಜ್  ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಹುಶಃ ಇದನ್ನು ನಿರೀಕ್ಷಿಸದೇ ಇದ್ದ ರಂಗನಾಥ್, ಕೊನೆ ಕೊನೆಯಲ್ಲಿ ಬುಸುಗುಡಲು ಶುರುಮಾಡಿದರು. ಆಗಲೂ, ಜೀವನಾನುಭವವನ್ನು ಕಂಡಿದ್ದ ನಟ ಫಾರ್ಮ್ ಕಳೆದುಕೊಳ್ಳಲಿಲ್ಲ. ಒಬ್ಬ ಪತ್ರಕರ್ತ ಸಿದ್ಧತೆ ಇಲ್ಲದೆ ಹೇಗೆ ಸಂದರ್ಶನ ನಡೆಸಬಾರದು ಎಂಬುದಕ್ಕೆ ಈ ಸಂದರ್ಶನವೊಂದು ಪಾಠ. ಇದು ನಡೆದ ವರ್ಷದ ನಂತ್ರ ಭಗವಾನ್ ‍ಸಂದರ್ಶನ. ರಂಗನಾಥ್ ಸುಧಾರಿಸಿಕೊಂಡಂತೆ ಕಾಣಿಸುವುದಿಲ್ಲ. ಇದರಿಂದ ವೈಯುಕ್ತಿಕವಾಗಿ ರಂಗನಾಥ್ ಅವರಿಗೆ ಲಾಭನಷ್ಟಗಳಿಗಿಂತ, ಪತ್ರಿಕೋದ್ಯಮದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಯಾಕೆಂದರೆ, ಪತ್ರಿಕೋದ್ಯಮ ವ್ಯಕ್ತಿಗಳನ್ನು ಮೀರಿದ್ದು. ಅದು ಜರ್ನಲಿಸಂ. ಇಸಂ ಅಂದ್ರೆನೇ ಧರ್ಮ!

ಇನ್ನು, ಚಂದನ್ ಶರ್ಮ ಸಂದರ್ಶನದ ಬಗ್ಗೆ. ಚಂದನ್ ವಿದೇಶದಲ್ಲಿ ಓದಿದ್ದು. ಅದಕ್ಕಿಂತ ಹೆಚ್ಚಾಗಿ ಬಳ್ಳಾರಿChandan Sharma ಎಂಬ ಸುಡುನಾಡಿನಲ್ಲಿ ಅಜ್ಜಿ ಪ್ರೀತಿಯೊಂದಿಗೆ ಬೆಳೆದವರು. ಸುದ್ದಿ ಮತ್ತು ಮನೋರಂಜನೆ ಎಂಬ ಎರಡೂ ದೋಣಿಯಲ್ಲಿ ಕಾಲಿಟ್ಟವರು. ಇತ್ತ ಸಂದರ್ಶನದ ನೆಪದಲ್ಲಿ ಸಿನೆಮಾ ನಟರನ್ನು ಮಾತನಾಡಿಸುತ್ತಲೇ, ಅತ್ತ ಟಿವಿ ಸೀರಿಯಲ್‍ಗಾಗಿ ಬಣ್ಣಹಚ್ಚಿದವರು. ಅಂತವರು ಮೊನ್ನೆ ಭಗವಾನ್ ಜತೆಗೆ ಸಂದರ್ಶನದ ಹೆಸರಿನಲ್ಲಿ ಬಾಲಿಶ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಉದಾಹರಣೆಗೆ; ನೀವ್ಯಾಕೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೀರಾ? ನೂರು ಚಿಲ್ಲರೆ ರೂಪಾಯಿ ಕೊಟ್ಟರೆ ಹೆಸರು ಚೇಂಜ್ ಮಾಡಿಸಬಹುದಲ್ಲಾ? ಭಗವಾನ್ ಅಂದ್ರೆ ಬುದ್ಧ ಅಂತೀರಾ? ಬುದ್ಧ ದೇವರಲ್ಲವಾ? ಹೀಗೆ ಅವರ ಪ್ರಶ್ನೆಗಳ ಸರಮಾಲೆಸಾಗಿದೆ. ಬುದ್ಧ ದೇವರಲ್ಲ ಮಗು, ನೀನು ಅಲ್ಪಜ್ಞಾನಿ ಅಂದಿದ್ದಾರೆ ಭಗವಾನ್. ಇದಕ್ಕಿಂತ ಹೆಚ್ಚು ಚಂದನ್ ಬಗ್ಗೆ ಏನೇ ಹೇಳಿದರೂ ಅತೀ ಅನ್ನಿಸುತ್ತದೆ. ಇನ್ನೂ ಮಾಗದ ವಯಸ್ಸು, ಜೀವನಾನುಭವದ ಕೊರತೆ ಮತ್ತು ಜನರ್ನಲಿಸಂ ಎಂಬ ಪವಿತ್ರ ಕೆಲಸಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ, ಇಲ್ಲಿ ರಂಗನಾಥ್ ಮತ್ತು ಭಾರಧ್ವಾಜ್ ಗಳಿಗಿಂತ ಪತ್ರಿಕೋದ್ಯಮದ ಇತಿಹಾಸ ದೊಡ್ಡದು. ಕನ್ನಡದ ಪಾಲಿಗೆ ಸುದ್ದಿವಾಹಿನಿಗಳು ಬಂದು ಒಂದು ದಶಕ ಕಳೆದಿದೆ ಅಷ್ಟೆ. ಇನ್ನೂ ಈ ಕ್ಷೇತ್ರ ತನ್ನ ಬಾಲ್ಯಾವಸ್ಥೆಯಲ್ಲಿದೆ. ಹೊಸ ಪ್ರತಿಭೆಗಳು ಪ್ರವೇಶವಾಗುತ್ತಿದೆ. ಅವರಿಗೆಲ್ಲಾ, ಟಿವಿಚಾನಲ್‍ಗಳಲ್ಲಿ  ಹೇಗೆ  ಸಂದರ್ಶನಗಳನ್ನು ನಡೆಸಬೇಕು ಎಂಬುದಕ್ಕಿಂತ, ಹೇಗೆ ನಡೆಸಬಾರದು ಎಂಬುದನ್ನು ಇವರಿಬ್ಬರು ಅಮೂಲ್ಯ ಪಾಠವೊಂದನ್ನು ನೀಡಿದ್ದಾರೆ.

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ

ಭಾಷಣ: ದಿನೇಶ್ ಅಮೀನ್ ಮಟ್ಟು

ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ

 

(ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಉರ್ದು ರಿಪೋಟರ್ಸ್ ಫೋರಂನ ಸಹಯೋಗದಲ್ಲಿ ರಾಯಚೂರಿನಲ್ಲಿ ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಮಾಧ್ಯಮ ಕಾರ್ಯಾಗಾರ’ ವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಹಿರಿಯ ಪತ್ರಕರ್ತರು, ಚಿಂತಕರಾದ ಶ್ರೀಯುತ ದಿನೇಶ್ಅಮೀನ್ ಮಟ್ಟು ಅವರು ಆಶಯ ಮಾತುಗಳನ್ನಾಡಿದ್ದರು. ಅವರ ಈ ಅರ್ಥಪೂರ್ಣ ಮಾತುಗಳನ್ನು ಇಲ್ಲಿ ದಾಖಲಿಸಲಾಗಿದೆ.)

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಮ್ಮ ಪೊನ್ನಪ್ಪ ಅವರು ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅಕಾಡೆಮಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಒಂದು ರೀತಿಯಲ್ಲಿ ಅಕಾಡೆಮಿ ಪಾಲಿಗೆ ನಾನೂ ಕೂಡಾ ಅಸ್ಪೃಶ್ಯನಾಗಿದ್ದೆ. ಈ ಕಾರ್ಯಾಗಾರದ ವಿಷಯ ಕೂಡಾ ಅದೇ ಆಗಿದೆ. ಅದೇನೇ ಇರಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊನ್ನಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.

ಕೆಲವುವರ್ಷdinesh-aminmattuಗಳ ಹಿಂದೆ ದೆಹಲಿಯಲ್ಲಿದ್ದಾಗ ಕರ್ನಾಟಕದ ಪರಿಚಿತ ಬುದ್ದಿಜೀವಿರಾಜಕಾರಣಿಯೊಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ ಮಾಧ್ಯಮದಲ್ಲಿ ಜಾತೀಯತೆ ಜಾಸ್ತಿಯಾಗಿದೆ ಎಂದು ಅವರು ಬಹಳ ವಿಷಾದದಿಂದ ಹೇಳುತ್ತಿದ್ದರು. “ನನಗೆ ಅರ್ಥ ಆಗಲಿಲ್ಲ” ಎಂದೆ. ಅವರು “ಇಲ್ಲ ಈಗೆಲ್ಲಾ ಮಾಧ್ಯಮಗಳಲ್ಲಿ ಜಾತಿಗೊಂದು ಗುಂಪು ಹುಟ್ಟಿಕೊಂಡಿದೆ” ಅಂದರು. ನಾನು ಅವರ ಮುಖವನ್ನು ನೋಡುತ್ತಿದ್ದೆ, ಅವರು ಯಾವುದೋ ದುರುದ್ದೇಶದಿಂದ ಹೇಳುತ್ತಿದ್ದಾರೆಂದು ನನಗನಿಸಲಿಲ್ಲ. ಅವರು ಬಹಳ ಸಹಜವಾಗಿ ಹೇಳಿದ್ದರು. “ಹಿಂದೆ ಮಾಧ್ಯಮದಲ್ಲಿ ಜಾತಿ ಇರಲಿಲ್ಲವಾ?” ಎಂದು ನಾನು ಅವರನ್ನು ಕೇಳಿದೆ.

ಬಹಳಷ್ಟುಮಂದಿಗೆ ಇತ್ತೀಚೆಗೆ ಹೀಗೆ ಅನಿಸಲಿಕ್ಕತ್ತಿದೆ. ಎಲ್ಲದರಲ್ಲಿಯೂ ಜಾತಿ ಬಂದಿದೆ, ಮಾಧ್ಯಮದಲ್ಲಿ ಜಾತಿ ಬಂದಿದೆ. ರಾಜಕೀಯದಲ್ಲಿ ಜಾತಿಬಂದಿದೆ. ಎಲ್ಲಾ ಕಡೆ ಜಾತಿ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಜಾತಿ ಇರಲಿಲ್ಲವೇ? ಅದು ಬಹಳ ಮುಖ್ಯವಾದ ಪ್ರಶ್ನೆ. ನಾನು ಆ ರಾಜಕಾರಣಿಯನ್ನು ಮತ್ತೆ ಕೇಳಿದೆ, “ಸುಮ್ಮನೆ ಕಣ್ಮುಚ್ಚಿಕೊಂಡು ನಿಮಗೆ ಪರಿಚಯವಿರುವ ಎಲ್ಲಾ ಪತ್ರಕರ್ತರನ್ನು ನೆನೆಪಿಸಿಕೊಳ್ಳಿ. ಅದರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂಬುದು ಗೊತ್ತಾಗುತ್ತದೆ” ಅಂದೆ. ಆಗ ಅವರಿಗೆ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.

ಈ ದೇಶದ ಪತ್ರಿಕೆಗಳ ಸಂಪಾದಕರ ಜಾತಿಯಾವುದೆಂದು ಲೆಕ್ಕಹಾಕಿ, ಈ ಪತ್ರಿಕೆಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪತ್ರಕರ್ತರು ಯಾರು? ಅವರು ಯಾವ ಯಾವ ಜಾತಿಯವರು ಎಂದು ನೋಡುತ್ತಾ ಹೋದರೆ ಈ ದೇಶದ ಮಾಧ್ಯಮದಲ್ಲಿಯೂ ಎಷ್ಟೋ ವರ್ಷಗಳಿಂದ ಜಾತಿಯತೆ ಇತ್ತು ಎಂಬ ವಾಸ್ತವ ಅರ್ಥವಾಗುತ್ತದೆ. ಬಹಳಷ್ಟು ಮಂದಿ ತೀರಾ ಸಹಜವಾಗಿ ಈ ರಾಜ್ಯದಲ್ಲಿ ದೇವರಾಜಅರಸು ಅವರಿಂದ ಜಾತೀಯತೆ ಬಂತು ಎಂದು ಹೇಳ್ತಾರೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಯಾವಾಗ ಹಾವನೂರು ಆಯೋಗದ ವರದಿ ಅನುಷ್ಠಾನಕ್ಕೆ ಬಂತೋ, ಯಾವಾಗ ಅವಕಾಶ ವಂಚಿತರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಕ್ಕಿತೊ, ರಾಷ್ಟ್ರ ಮಟ್ಟದಲ್ಲಿ ಮಂಡಲ್ ಆಯೋಗದ ವರದಿ ಯಾವಾಗ ಜಾರಿಗೆ ಬಂತೋ, ಆಗ ಅವಕಾಶ ವಂಚಿತರಿಗೂ ಅವಕಾಶಗಳು ಕೆಲವು ಕ್ಷೇತ್ರಗಳಲ್ಲಿ ಸಿಗುವಂತಾಯಿತು. ಅದರ ನಂತರ ರಾಜಕೀಯವಾಗಿ ಕೂಡಾ ಈ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಯಿತು. ಆಗ ಇದ್ದಕ್ಕಿಂತ ಹಾಗೆ ರಾಜಕೀಯದಲ್ಲಿ, ಮಾಧ್ಯಮದಲ್ಲಿ ಎಲ್ಲಾ ಕಡೆ ಜಾತಿ ಬಂದಿದೆ ಎಂಬ ಅಭಿಪ್ರಾಯ ತೇಲಿಬರಲಾರಂಭಿಸಿತು.

1996ರಲ್ಲಿ ದೆಹಲಿಯಲ್ಲಿ ವಾಷಿಂಗ್ಟನ್ ಪೋಷ್ಟ್ ನ ಬ್ಯೂರೋ ಚೀಫ್ ಆಗಿದ್ದ ಆಫ್ರಿಕನ್ ಮೂಲಕ ಅಮೆರಿಕನ್ ಕೆನ್ನತ್ ಕೂಪರ್ ಅವರು ಮೊದಲ ಬಾರಿಗೆ ಭಾರತದ ಮಾಧ್ಯಮ ಲೋಕದಲ್ಲಿರುವ ಜಾತಿಯತೆ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಅವರು ಹುಡುಕುತ್ತಾ ಹೋಗುತ್ತಾರೆ. ಕಣ್ಣಿಗೆ ಬಹಳ ಮಂದಿ ಕಾಣೋದೆ ಇಲ್ಲ! ಉನ್ನತ ಹುದ್ದೆಗಳಲ್ಲಿ ಅವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾಕೆ ಹೀಗೆ ಎಂದು ಅವರು ಲೇಖನ ಬರೆಯುತ್ತಾರೆ. ‘ ಭಾರತದ ಮಾಧ್ಯಮಗಳಲ್ಲಿ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಕೆಳಜಾತಿಗಳ ಪ್ರಾತಿನಿಧ್ಯವೇ ಇಲ್ಲ’ ಎಂದು ಅವರು ಬರೆದಿದ್ದರು.

ಅದರ ನಂತರ ಬಿ.ಎನ್ ಉನಿಯಾಲ್ ಎಂಬ ಪಯೋನಿಯರ್ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಈ ಬಗ್ಗೆ ಲೇಖನದ ಮೂಲಕ ಗಮನಸೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ಪಿ ಮತ್ತು ಪತ್ರಕರ್ತರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎನ್ನುವುದನ್ನು ವರದಿ ಮಾಡಲು ಮಾಹಿತಿ ಸಂಗ್ರಹಕ್ಕಾಗಿ ದಲಿತ ಪತ್ರಕರ್ತರನ್ನು ಹುಡುಕಲು ಹೊರಡುತ್ತಾರೆ. ಅವರಿಗೆ ಯಾವ ದಲಿತ ಪತ್ರಕರ್ತರು ಸಿಗುವುದಿಲ್ಲ. ಇದರಿಂದ ಕಳವಳಗೊಂಡು 30 ವರ್ಷಗಳನ್ನು ಪತ್ರಿಕಾ ವೃತ್ತಿಯಲ್ಲಿ ಕಳೆದಿದ್ದ ಅವರು ಈ ಅವಧಿಯಲ್ಲಿ ತಾನು ಭೇಟಿ ಮಾಡಿದ ದಲಿತ ಪತ್ರಕರ್ತರು ಯಾರಿದ್ದಾರೆ ಎಂದು ನೆನಪುಮಾಡಿಕೊಳ್ಳಲು ಪ್ರಯತ್ತಿಸುತ್ತಾರೆ. ಅವರಿಗೆ ಒಂದೇ ಒಂದು ಹೆಸರು ನೆನಪಿಗೆ ಬರುವುದಿಲ್ಲ. ಇದನ್ನು ಅವರು ಮೊದಲ ಬಾರಿಗೆ ಪಯೋನಿಯರ್ ಪತ್ರಿಕೆಯಲ್ಲಿ ದಾಖಲಿಸುತ್ತಾರೆ.

ಇದರ ನಂತರ ರಾಬಿನ್ ಜೆಫ್ರಿಎಂಬ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಪ್ರಾಧ್ಯಾಪಕ ಇದರ ಬಗ್ಗೆ ಅಧ್ಯಯನ ಮಾಡಿ ಲೇಖನ ಬರೆದಿದ್ದಾರೆ. ‘ಹೆಚ್ಚು ಕಡಿಮೆ ಭಾರತದ ಮಾಧ್ಯಮದಲ್ಲಿ ದಲಿತ ವರದಿಗಾರರು ಮತ್ತು ಉಪ ಸಂಪಾಕದರು ಇಲ್ಲವೇ ಇಲ್ಲ. ದಲಿತರ ಮಾಲಿಕತ್ವದ ಪತ್ರಿಕೆಯಾಗಲಿ, ದಲಿತ ಸಂಪಾದಕರಾಗಲಿ ಇಲ್ಲವೇ ಇಲ್ಲ’ ಎಂದು ರಾಬಿನ್ ಜೆಫ್ರಿ ಬರೆದಿದ್ದರು. ‘ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್ ಗಳು ಏಕಪಕ್ಷೀಯವಾಗಿ ವರದಿ ಮಾಡಲು ಪತ್ರಿಕಾ ಕಚೇರಿಯಲ್ಲಿರುವ ಜಾತೀಯತೆ ಕಾರಣ’ ಎಂದು ಸಿದ್ದಾರ್ಥ ವರದರಾಜನ್ ‘ದಿ ಹಿಂದೂ’ ವಿನಲ್ಲಿ ಬರೆದಿದ್ದರು. ಇದರ ನಂತರ 2006ರಲ್ಲಿ ಸಿಎಸ್ ಡಿಎಸ್ ದೆಹಲಿಯಲ್ಲಿ ಮಾಡಿದ ಸಮೀಕ್ಷೆ ಇನ್ನಷ್ಟು ಕಳವಳಕಾರಿ ಅಂಶಗಳನ್ನು ಬಯಲು ಮಾಡಿತ್ತು. ಸಂಸ್ಥೆ ಸಮೀಕ್ಷೆ ನಡೆಸಿದ ದೆಹಲಿಯ 32 ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳ 315 ನೀತಿ ನಿರ್ಧಾರಕ ಹುದ್ದೆಗಳಲ್ಲಿ, ಹೆಚ್ಚುಕಡಿಮೆ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಶೇಕಡಾ 90 ಮತ್ತು ಟಿವಿ ಚಾನೆಲ್ ಗಳಲ್ಲಿ ಶೇಕಡಾ 79ರಷ್ಟು ಮೇಲ್ಜಾತಿ ಪತ್ರಕರ್ತರೇ ತುಂಬಿದ್ದರು’ ಎಂದು ಆ ಸಮೀಕ್ಷೆ ತಿಳಿಸಿತ್ತು. ಇದು ಇಂದಿನ ಭಾರತದ ಮಾಧ್ಯಮದ ಸ್ಥಿತಿ.

ಮಾಧ್ಯಮಗಳು ಹೀಗೆ ಯಾಕೆ ವರ್ತಿಸುತ್ತಿವೆ ಎಂಬ ಬಗ್ಗೆ ಮಾತನಾಡುವ ಮೊದಲು ದಿನಪತ್ರಿಕಗೆಳ, ಟಿ.ವಿ ಚಾನಲ್ ಗಳ ಮಾಲೀಕರು, ಮುಖ್ಯಸ್ಥರು ಯಾರು, ಅಲ್ಲಿನ ಟಾಪ್ 10 ಹುದ್ದೆಗಳಲ್ಲಿ ಯಾರಿದ್ದಾರೆ ಎಂದು ತಿಳಿದು ಕೊಂಡರೆ ಸಾಕು. ಆಗ ಯಾವ ಸರ್ಕಾರದ ಬಗ್ಗೆ, ಯಾವ ರಾಜಕಾರಣಿ ಬಗ್ಗೆ, ಯಾವ ಅಧಿಕಾರಿ ಬಗ್ಗೆ ಮಾಧ್ಯಮಗಳು ಯಾಕೆ ಹೀಗೆ ವರ್ತಿಸುತ್ತಿವೆ ಎನ್ನುವುದು ಗೊತ್ತಾಗಬಹುದು. ಇದು ಅಪ್ರಿಯವಾದ ಸತ್ಯ.

ಇದಕ್ಕೆಬಹಳಷ್ಟುಕಾರಣಗಳಿವೆ, ಅಧ್ಯಯನಗಳು ಕೂಡಾ ನಡೆದಿವೆ. ಇಂತಹ ಅಧ್ಯಯನ ಕನ್ನಡ ಮಾಧ್ಯಮ ರಂಗದ ಬಗ್ಗೆಯೂ ನಡೆಯಬೇಕಾಗಿದೆ. ದೆಹಲಿಯ ಏಜಾಜ್ ಆಶ್ರಫ್ ಎಂಬ ಪತ್ರಕರ್ತರೊಬ್ಬರು ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದರು. ದೆಹಲಿಯಲ್ಲಿ 1965ರಲ್ಲಿಯೇ ಸ್ಥಾಪನೆಗೊಂಡ ಸರ್ಕಾರಿ ಸ್ವಾಮ್ಯದ ಐಐಎಂಸಿ ಎಂಬ ಪತ್ರಿಕೋದ್ಯಮ ಪಾಠ ಮಾಡುವ ಸಂಸ್ಥೆ ಇದೆ. ಅಲ್ಲಿ ಮೀಸಲಾತಿಯೂ ಇರುವುದರಿಂದ ಒಂದಷ್ಟು ದಲಿತರು ಖಂಡಿತ ಅಲ್ಲಿ ಶಿಕ್ಷಣ ಪಡೆದಿರುತ್ತಾರೆ. ಹೀಗಿದ್ದರೂ ಅವರ್ಯಾರೂ ಪತ್ರಿಕಾ ಕಚೇರಿಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಏಜಾಜ್ ಆಶ್ರಫ್ ಅವರನ್ನು ಕಾಡುತ್ತದೆ. ಸರ್ಕಾರಿ ಕಾಲೇಜುಗಳು ಮತ್ತು ಯೂನಿರ್ವಸಿಟಿಗಳಲ್ಲಿ ಮೀಸಲಾತಿ ಸೌಲಭ್ಯದ ಮೂಲಕ ದಲಿತರು, ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರು ಅಡ್ಮೀಷನ್ ಪಡೆಯುತ್ತಾರೆ. ಆ ನಂತರ ಅವರಲ್ಲಿ ಎಷ್ಟು ಮಂದಿ ಈ ಮಾಧ್ಯಮ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ? ಅವರಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಏಜಾಜ್ ಆಶ್ರಫ್ ದಿ.ಹೂಟ್ (thehoot.org) ಎಂಬ ವೆಬ್ ಸೈಟ್ ನಲ್ಲಿ ಬಹಳ ದೀರ್ಘವಾದ ಲೇಖನ ಬರೆದಿದ್ದಾರೆ.

ಅದರಲ್ಲಿ ಸಂತೋಷ್ ವಾಲ್ಮೀಕಿ ಎಂಬ ದಲಿತ ಪತ್ರಕರ್ತನ ವ್ಯಥೆಯ ಕತೆ ಇದೆ. ಇವರು ಹಿಂದೂಸ್ಥಾನ ಟೈಮ್ಸ್ ನ ಲಕ್ನೋ ಬ್ಯೂರೋ ಚೀಫ್ ಆಗಿದ್ದಾರೆ. ಅವರೊಬ್ಬ ಕುಡುಕ ಚಾಲಕನ ಮಗ, ದೆಹಲಿಯ ಬೀದಿಗಳಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು . ಬಹಳ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾರೆ. ಆಮೇಲೆ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದಾಗ ಇಂಟರ್ ವ್ಯೂನಲ್ಲಿ . ‘ನೀನು ಪ್ರತಿದಿನ ಎಷ್ಟು ಪೇಪರ್ ಗಳನ್ನು ಓದುತ್ತಿ?’ ಎಂದು ಕೇಳಿದ್ದರಂತೆ. ‘ನಾನು ಪ್ರತಿದಿನ ಒಂಭತ್ತು ಪೇಪರ್ ಓದುತ್ತೇನೆ’ ಎಂದು ಅವರು ಉತ್ತರಿಸಿದ್ದರಂತೆ. ಸಂದರ್ಶಕರಿಗೆ ಆಶ್ಚರ್ಯ ಆಗುತ್ತದೆ. ಪತ್ರಿಕೆ ಮಾರುತ್ತಿದ್ದ ನಾನು ಆಸಕ್ತಿಯಿಂದ ಓದುವ ಹವ್ಯಾಸ ಬೆಳೆಸಿಕೊಂಡ ಕಾರಣದಿಂದಾಗಿ ಪತ್ರಕರ್ತನಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.. ಅದರ ನಂತರ ತಾನು ಹೇಗೆ ತಾನು ಪತ್ರಕರ್ತ ಆದೆ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವತ್ತು ಇಲ್ಲಿ ಸೇರಿರುವ ನೀವು ಇದನ್ನು ತಿಳಿದುಕೊಳ್ಳಬೇಕು.

ದೆಹಲಿಯ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ದಲಿತ ಪತ್ರಕರ್ತನನ್ನು ಏಜಾಜ್ ಆಶ್ರಫ್ ಭೇಟಿ ಮಾಡುತ್ತಾರೆ. ಜಾತಿಯಲ್ಲಿ ಕುರುಬನಾಗಿರುವ ಈ ಪತ್ರಕರ್ತ ತಾನು ಹೇಗೆ ಇಂಗ್ಲೀಷ್ ಕಲಿತೆ ಎನ್ನುವುದನ್ನು ಹೇಳುತ್ತಾನೆ. ಈತ ಇಂಗ್ಲೀಷ್ ಪತ್ರಿಕೆಗಳನ್ನು ಓದಿ ಅದರಲ್ಲಿ ತನಗೆ ಅರ್ಥವಾಗದ ಪದಗಳನ್ನು ನೋಟ್ ಮಾಡಿಕೊಂಡು ಅವಗಳಿಗೆ ಶಬ್ದಕೋಶ ನೋಡಿ ಅರ್ಥ ಬರೆದುಕೊಳ್ಳುತ್ತಿದ್ದನಂತೆ. ಇಂಗ್ಲೀಷ್ ವಾಕ್ಯಗಳನ್ನು ಏಕಾಂತದಲ್ಲಿ ಕೂತು ಜೋರಾಗಿ ಉಚ್ಚರಿಸಿ ಓದುತ್ತಿದ್ದನಂತೆ.ಕೊನೆಗೆ ಬಿಪಿಓ ಸೇರಿಕೊಂಡು ಅಲ್ಲಿ ವಾಯ್ಸ್ ಟ್ರೇನಿಂಗ್ ಪ್ರೋಗ್ರಾಮ್ ಮೂಲಕ ಇಂಗ್ಲೀಷ್ ಉಚ್ಚಾರ ಕಲಿತಿದ್ದನಂತೆ.

ಅಂದರೆ ಈ ಭಾರತದ ವ್ಯವಸ್ಥೆ ಹೇಗಿದೆಯೆಂದರೆ ಕೆಲವರು ಲಿಫ್ಟ್ನಲ್ಲಿ ಸರ್ರನೆ ಮೇಲೇರಿ ಹೋಗಿಬಿಡುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗುತ್ತದೆ. ನೀವೆಲ್ಲಾ ಏನಿಲ್ಲಿ ಸೇರಿದ್ದೀರಿ, ನೀವು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಲಿಫ್ಟ್ ಸಿಗೋದಿಲ್ಲ. ಇದು ಭಾರತದ ಇವತ್ತಿನ ಮಾಧ್ಯಮದ ಪರಿಸ್ಥಿತಿ.

ಮಾಧ್ಯಮದಲ್ಲಿಯಾಕೆ ಎಲ್ಲ ಜಾತಿ-ಧರ್ಮಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಯಾರಾದರೂ ಕೇಳಬಹುದು. ನೋಡಿ, ಇತ್ತೀಚೆಗೆ ಮೀಸಲಾತಿಯಾಕೆ ಬೇಕು ಎಂಬ ಬಗ್ಗೆ ದೊಡ್ಡದಾಗಿ ಡಿಬೇಟ್ ನಡೆಯುತ್ತಿದೆ. ಈ ಪ್ರಶ್ನೆಗೆ ಮಾಧ್ಯಮ ರಂಗದಲ್ಲಿ ಉತ್ತರ ಇದೆ. ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಇದೆ. ರಾಜಕೀಯದಲ್ಲಿ ದಲಿತರ ಪ್ರಾತಿನಿಧ್ಯ ಇರುವುದಕ್ಕೆ ಮೀಸಲಾತಿ ಕಾರಣ. ಆದರೆ ಮೀಸಲಾತಿ ಇಲ್ಲದ ಮಾಧ್ಯಮದಲ್ಲಿ, ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ ಇಲ್ಲ. ಅಂದರೆ ಮೀಸಲಾತಿ ಕಾನೂನಿನ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ಸಿಕ್ಕಿದೆ ವಿನಃ ಅದು ಅವರ ಅರ್ಹತೆಯನ್ನು ಗುರುತಿಸಿ ಕೊಟ್ಟದ್ದಲ್ಲ.

ಮನುಷ್ಯ ಪರಿಸರದ ಕೂಸು. ದಲಿತರು, ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಾಡಿನಿಂದ, ಬಡಕುಟುಂಬಗಳಿಂದ ಮತ್ತು ರೈತ ಸಮುದಾಯದಿಮದ ಬಂದವರು. ಅವರಿಗೆ ಹೊರಜಗತ್ತಿನ exposure ಬಹಳ ಕಡಿಮೆ. ನನ್ನ ಮಗಳಿಗೆ ಸಿಕ್ಕ exposure ನನಗೆ ಸಿಕ್ಕಿರಲಿಲ್ಲ. ನಾನು ಕುಗ್ರಾಮದಿಂದ ಬಂದವನು. ದೋಣಿಯಲ್ಲಿ ಹೋಗಿ ಕಾಲೇಜು ಶಿಕ್ಷಣ ಮುಗಿಸಿದವನು. ಮುಂಗಾರು ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದಾಗಲೂ ನಿತ್ಯ ದೋಣಿ ದಾಟಿಕೊಂಡೇ ಮಂಗಳೂರು ಹೋಗುತ್ತಿದ್ದವನು. ನನಗೆ ಲಿಫ್ಟ್ ಸಿಕ್ಕಿರಲಿಲ್ಲ, ಮೆಟ್ಟಿಲು ಹತ್ತಿಕೊಂಡೇ ಬಂದವನು. ನಾನು ಆಗಲೆ ಹೇಳಿದ ಹಾಗೆ ನಾವೆಲ್ಲ ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗಿದೆ. ಪ್ರತಿಭೆ ಹುಟ್ಟಿನಿಂದಲೇ ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಅದು ಅರಳುತ್ತದೆ ಅಷ್ಟೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿಯೂ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಗದೆ ಅವರಲ್ಲಿ ಎಷ್ಟೊ ಪ್ರತಿಭೆಗಳು ಮುದುಡಿಹೋಗುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನನ್ನು ಸುಲಭದಲ್ಲಿ ನಾಶಮಾಡಬಹುದು. ಅದು ಬಹಳ ಸುಲಭ, ಏಕೆಂದರೆ ಅವನಿಗೆ ನೀವು ಹೊಡೆಯಬೇಕಾಗಿಲ್ಲ. ಬಡಿಯಬೇಕಾಗಿಲ್ಲ, ದೈಹಿಕವಾಗಿ ಹಲ್ಲೆ ನಡೆಸಬೇಕಾಗಿಲ್ಲ. ಅವನಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವು ಕೆಲಸ ಬಿಟ್ಟು ಓಡಿ ಹೋಗುತ್ತಾನೆ. ದೆಹಲಿಯಲ್ಲಿ ಸರ್ವೆ ನಡೆದಾಗ ಬಹಳಷ್ಟು ಮಂದಿ ಪತ್ರಿಕೋದ್ಯಮದ ವ್ಯಾಸಂಗ ಪಡೆದು ವೃತ್ತಿಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ಇದೇ ಉತ್ತರ ಕೊಟ್ಟಿದ್ದಾರೆ.

ತಮಿಳುನಾಡಿನ ಒಂದಷ್ಟು ದಲಿತ ಪತ್ರಕರ್ತರು ಕೂಡಾ ಇಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಅವನ್ನು ಓದಿದರೆ ನಿಮಗೆ ಅರ್ಥವಾಗುತ್ತದೆ. ಪತ್ರಿಕಾ ಕಚೇರಿಗಳಲ್ಲಿ ಒಬ್ಬ ದಲಿತನನ್ನು, ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅದರ ವಿವರಗಳಿಗೆ ಹೋಗುವುದಿಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ. ಮಾನಸಿವಾಗಿ ಕಿರುಕುಳ ಕೊಟ್ಟಾಗ ಅವನ ತಲೆ ಓಡುವುದಿಲ್ಲ. ಅವನಿಂದ ತಪ್ಪುಗಳಾಗುತ್ತವೆ. ಹಳ್ಳಿಗಾಡಿನ ಜನ, ದಲಿತರು, ಹಿಂದುಳಿದವರ್ಗಗಳ ಜನ ಮಾತನಾಡುವ ಭಾಷೆ ಒರಟಾಗಿರುತ್ತದೆ. ಇವತ್ತು ಟಿ.ವಿ ಚಾನಲ್ ಗಳಲ್ಲಿ ಗ್ರಾಂಥಿಕವಾದ ಮಂಗಳೂರು ಕನ್ನಡ ಮಾತನಾಡುವವರಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತಿದೆ. ಈ ಕಾರಣದಿಂದಾಗಿಯೇ  ಹೆಚ್ಚಿನ ಆ್ಯಂಕರ್ ಗಳು ಮಂಗಳೂರಿನಿಂದ ಬಂದವರಾಗಿದ್ದಾರೆ. ರಾಯಚೂರು, ಗುಲ್ಬರ್ಗಾ, ಧಾರವಾಡ ಕಡೆಯ ಭಾಷೆ ಅಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಸಿನಿಮಾ, ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತ. ಭಾಷೆಗೂ ಐಡೆಂಟಿಟಿ ಇದೆ ಎನ್ನುವುದನ್ನು ತಿಳಿದುಕೊಂಡು ಅವರ ಅನುಭವಕ್ಕೂ ಒಂದು ಬೆಲೆ ಇದೆ ಎಂದು ಗುರುತಿಸಿ ಅವಕಾಶ ನೀಡುವ ಮಾಧ್ಯಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

 
ನಾನು ಕೆಲಸ ಮಾಡಿದ ಪ್ರHari Kumarಜಾವಾಣಿಯಲ್ಲಿ ನೀವು ಇಲ್ಲಿ ಸೇರಿರುವ ವರ್ಗದಿಂದ ಬಂದವರು ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಪೊನ್ನಪ್ಪ, ಬಿ.ಕೆ ರವಿ ಎಲ್ಲ ಪ್ರಜಾವಾಣಿ ಯಿಂದ ಬಂದವರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಕೂಡಾ ಬಹಳ ಪ್ರಜ್ಞಾ ಪೂರ್ವಕವಾಗಿ ಮಾಡಿದ ಬದಲಾವಣೆ. ಕೆ.ಎನ್.ಹರಿಕುಮಾರ್ ಅವರು ತಮ್ಮ ಅಜ್ಜನಿಂದ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡ ನಂತರ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸೇರಿಸಿಕೊಳ್ಳಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಹಳಷ್ಟು ಜನ ಈ ವರ್ಗಕ್ಕೆ ಸೇರಿದವರಿಗೆ ಅವಕಾಶ ಸಿಗುವಂತಾಯಿತು. ಅವರೆಲ್ಲರೂ ಪ್ರತಿಭಾವಂತ ಪತ್ರಕರ್ತರು. ರಂಜಾನ್ ದರ್ಗಾ ರಿಂದ ಹಿಡಿದು ಇಂದೂಧರ್ ಹೊನ್ನಾಪುರ, ಶಿವಾಜಿ ಗಣೇಶನ್, ಡಿ.ವಿ ರಾಜಶೇಖರ್ ಮೊದಲಾದವರು ಪತ್ರಕರ್ತರಾಗಿದ್ದು ಹೀಗೆ. ಒಬ್ಬ ಸಂಪಾದಕ ಪ್ರಜ್ಞಾ ಪೂರ್ವಕವಾಗಿ ಆ ನಿರ್ಧಾರ ಮಾಡಿದ ಕಾರಣಕ್ಕಾಗಿ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಅವರು ಬೆಳೆಯಲು ಸಾಧ್ಯವಾಯಿತು.

ಇದು ನಮ್ಮ ಇವತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿಲ್ಲ.

ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪ್ರಚಾರ ಸಿಗ್ತಾ ಇಲ್ಲ ಎಂದು ಕೆಲವರು ಬಂದು ನನ್ನ ಹತ್ತಿರ ದು:ಖ ತೋಡಿಕೊಳ್ತಾರೆ. ಪ್ರಚಾರ ಅಂದ್ರೆ ಏನು? ಎಂದು ನನಗೂ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ನೀವು ಮೀಡಿಯಾವನ್ನು ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೊಡುತ್ತಾರೆ. ಇದನ್ನು ನಮ್ಮ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ನನಗೂ ಅದರಲ್ಲಿ ನಂಬಿಕೆ ಇಲ್ಲ.

ಮಾಧ್ಯಮಕ್ಕೊಂದು ಧರ್ಮವಿದೆ. ಆ ಪತ್ರಿಕಾ ಧರ್ಮವನ್ನು ಸಂಪಾದಕ, ಪತ್ರಕರ್ತ ಪಾಲಿಸಿದರೆ ಯಾವುದೇ ಮ್ಯಾನೇಜ್ ಮೆಂಟ್ ಬೇಕಿಲ್ಲ. ಯಾವ ಒತ್ತಡವೂ ಬೇಕಿಲ್ಲ. ಯಾವ ಆಮಿಷಗಳು ಬೇಕಿಲ್ಲ. ಪತ್ರಿಕೆಗಳು, ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಕು. ನಮ್ಮ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ಅವರ ವಿರುದ್ದ ಯಾವುದೇ ವರದಿ ಬಂದರೂ ಇಲ್ಲಿಯವರೆಗೂ ಅವರು ಯಾವ ಮಾಧ್ಯಮ ಪ್ರತಿನಿಧಿಗೂ ಪೋನ್ ಮಾಡಿ ಯಾಕೆ ಇದನ್ನು ಬರೆದಿದ್ದೀಯಾ ಅಂತ ಕೇಳಿಲ್ಲ. ನನ್ನ ಹತ್ತಿರವೂ ‘ನೀನು ಇದನ್ನು ಕೇಳಬೇಕು’ ಎಂದು ಹೇಳಿಲ್ಲ.

ಸರ್ಕಾರದ ಪರವಾಗಿ ಇಲ್ಲಿ ಪ್ರಚಾರಕ್ಕೆ ನಾನು ಬಂದಿಲ್ಲ. ಉದಾಹರಣೆಗಾಗಿ ಹೇಳುತ್ತಿದ್ದೇನೆ. ಅನ್ನಭಾಗ್ಯ ಎಂಬ ಯೋಜನೆಯಿಂದ ರಾಜ್ಯದ ಸುಮಾರು 1 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಅಂತ ತಿಳಿದುಕೊಂಡರೂ 4 ಕೋಟಿ ಜನರಿಗೆ ಇದರ ಪ್ರಯೋಜನ ತಲುಪುತ್ತಿದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಇದರ ಫಲಾನುಭವಿಗಳು. ಇದನ್ನು ಈಗ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಕೂಡ ಮಾಧ್ಯಮ ದಲ್ಲಿ ಅನ್ನ ಭಾಗ್ಯ ದಲ್ಲಿ ಕಲ್ಲು ಹುಡುಕಾಟದ ಪ್ರವೃತ್ತಿ ಇವತ್ತಿಗೂ ನಿಂತಿಲ್ಲ. ಯೋಜನೆಯ ಅನುಷ್ಟಾನದಲ್ಲಿ ಒಂದಷ್ಟು ಲೋಪ-ದೋಷಗಳು ಖಂಡಿತ ಇರಬಹುದು. ಕಳ್ಳ ಸಂತೆ, ದುರುಪಯೋಗ ಇತ್ಯಾದಿ ಆಗುತ್ತಿರಬಹುದು. ಲಾಭದ ಲೆಕ್ಕ ಹಾಕಿದರೆ ದೋಷಗಳು ನಗಣ್ಯವಾದುದು. ಹೀಗಿದ್ದರೂ ಯಾಕೆ ನೆಗೆಟಿವ್ ಪ್ರಚಾರ? ರಾಜ್ಯದ ಜನಸಂಖ್ಯೆಯಲ್ಲಿ ಶೇ. 80 ರಷ್ಟು ಜನ ದಲಿತರು, ಹಿಂದುಳಿದವರ್ಗಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತರು. ಅವರೆಲ್ಲರೂ ಅನ್ನಭಾಗ್ಯದ ಫಲಾನುಭವಿಗಳು. ಈ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಭಾವನೆಗಳನ್ನು ರಿಪ್ಲೆಕ್ಟ್ ಮಾಡುತ್ತಿದೆಯೇ?. ಏಕೆಂದರೆ ಈ ಫಲಾನುಭವಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದಿಲ್ಲ. ಅನ್ನ ಭಾಗ್ಯದಿಂದ ನಮಗೆ ಲಾಭವಾಗಿದೆ ಎಂದು ಬೀದಿಗೆ ಬಂದು ಕೂಗಿ ಹೇಳುವುದಿಲ್ಲ. ಟಿ.ವಿ ಚಾನಲ್ ಗಳ ಸ್ಟುಡಿಯೋಗಳಲ್ಲಿ ಬಂದು ಚರ್ಚೆಯಲ್ಲಿ ಕೂರುವುದಿಲ್ಲ. ಅವರಿಗೆ ಧ್ವನಿ ಇಲ್ಲ. ದನಿ ಇಲ್ಲದವರಿಗೆ ಮಾಧ್ಯಮ ದನಿ ಅಗಬೇಕಲ್ಲವೇ?.

ಶಾದಿ ಭಾಗ್ಯಬಗ್ಗೆ ದೊಡ್ಡ ವಿವಾದ ಆಯ್ತು. ಯಾಕೆ ಆಗಬೇಕು? ಯಾರು ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಒಂದಿಷ್ಟು ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡಿನಿಂದ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವರು ಏನಾದ್ರೂ ಮಾಡ್ಲಿ, ಶಾದಿ ಭಾಗ್ಯನಾದ್ರೂ ಮಾಡ್ಲಿ, ಇನ್ನೂಂದು ಮಾಡ್ಲಿ, ಅದು ಅವರ ಬಜೆಟ್. 1000 ಕೋಟಿ ರೂಪಾಯಿ ಏನು ಕೊಟ್ಟಿದೆ ಅದು ಅವರ ದುಡ್ಡು. ಆದರೆ ಬರೀ ಮುಸ್ಲಿಮರಿಗೆ ಯಾಕೆ ಕೊಟ್ಟಿದ್ದೀರಿ? ಉಳಿದವರಿಗೆ ಯಾಕೆ ಕೊಟ್ಟಿಲ್ಲ ಅಂದ್ರೆ, ಉಳಿದವರಿಗೆ ಬೇರೆ ಸೌಲಭ್ಯಗಳಿವೆ ಅದನ್ನು ಅವರು ತಗೋಳ್ತಾರೆ. ಈ ರೀತಿ ಹೇಳುವಂತಹ ಸಮಚಿತ್ತದ ಬರವಣಿಗೆ ನಮಗೆ ಕಾಣುತ್ತಿಲ್ಲ.

ಇನ್ನು ಮೂಢನಂಬಿಕೆ ನಿಷೇಧ ಮಸೂದೆ. ಇಲ್ಲಿ ಸೇರಿರುವ ನಮಗೆಲ್ಲರಿಗೂ ಸಂಭಂಧಿಸಿದ್ದು ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬಂತಲ್ಲಾ, ಆ ರೀತಿ ವರದಿ ಮಾಡಿದವರಲ್ಲಿ ಕೆಲವರನ್ನು ಮಸೂದೆ ಪೂರ್ಣವಾಗಿ ಓದಿದ್ದೀರಾ ಎಂದು ಕೇಳೀದ್ದೇನೆ. ಬಹಳ ಮಂದಿ ಧೈರ್ಯದಿಂದ ಓದಿದ್ದೇನೆ ಎಂದು ಉತ್ತರಿಸಿಲ್ಲ. ಹೆಚ್ಚಿನವರು ಮಸೂದೆಯಲ್ಲಿನ ಪ್ರಿಯಾಂಬಲ್ ಓದಿ ಭಾವುಕರಾಗಿ ಅತಿರೇಕದ ವರದಿಗಳನ್ನು ಮಾಡಿದ್ದರು. ಮೂಲ ಮಸೂದೆಯಲ್ಲಿ ಅಂತಹ ಯಾವುದೇ ವಿಷಯಗಳಿರಲಿಲ್ಲ. ಆದರೆ ಆ ರೀತಿಯ ಪ್ರಚಾರ, ಒತ್ತಡಗಳಿಂದ ಸರ್ಕಾರವೇ ಹಿಂದೆ ಸರಿಯಬೇಕಾಯಿತು. ಇಂದು ಮೂಢನಂಬಿಕೆ ಕಾಯ್ದೆ ಯಾರಿಗೆ ಬೇಕಾಗಿದೆಯೆಂದರೆ ಅಶಿಕ್ಷಿತರಿಗೆ, ಬಡವರಿಗೆ ಬೇಕು. ದಲಿತ, ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ ಬೇಕು. ಏಕೆಂದರೆ ಶೋಷಣೆಗೀಡಾಗುತ್ತಿರುವವರು ಇದೇ ಸಮುದಾಯದವರು. ಇದೇ ಸಮುದಾಯದ ದನಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದರೆ ಇವತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರುತ್ತಿತ್ತು. ಬಹುಶಃ ಎಂ.ಎಂ ಕಲಬುರ್ಗಿ ಅವರ ಹತ್ಯೆಯೂ ಆಗುತ್ತಿರಲಿಲ್ಲ.

ನಮ್ಮ ಮಾಧ್ಯಮಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಮಾತನಾಡುವಾಗ ಈ ಮಾಧ್ಯಮಗಳಲ್ಲಿರುವ ತಾರತಮ್ಯ, ಪೂರ್ವಗ್ರಹಗಳನ್ನು ಮರೆತು ಮಾತನಾಡುವಂತಿಲ್ಲ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ ಭಾಷಾ ಪತ್ರಿಕೋದ್ಯಮದಲ್ಲಿ, ಕನ್ನಡ ,ಹಿಂದಿ ಗುಜರಾತಿ ಮೊದಲಾದ ಭಾಷೆಗಳ ಪತ್ರಿಕೆಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲಿ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದರೆ ತಾವು ಅನುಭವಿಸುತ್ತಿರುವ ಅವಮಾನ, ಕಿರುಕುಳಗಳ ಕತೆ ಹೇಳಬಹುದು. ಪ್ರತಿಭೆ ಒಂದಿದ್ದರೆ ಸಾಲದು, ವೃತ್ತಿಯಲ್ಲಿ ಎದುರಾಗುವ ಅನ್ಯಾಯ, ಅವಮಾನ, ಪ್ರತಿಕೂಲಗಳನ್ನು ಎದುರಿಸಲೂ ಅವನು ರೆಡಿಯಾಗಬೇಕು. ಮತ್ತೆ ಮತ್ತೆ ನಾನು ಹೇಳುತ್ತೇನೆ ಪ್ರಜಾವಾಣಿಯಲ್ಲಿ ನಾನುprajavani ವಿವೇಕಾನಂದ ಅವರ ಬಗ್ಗೆ ಅಂಕಣ ಬರೆದೆ. ನಾನು ಸುಳ್ಳು ಬರೆದಿಲ್ಲ, ಅವರಿಗೆ ಅವಮಾನ ಮಾಡಿಲ್ಲ, ವಿವೇಕಾನಂದರು ಮಾಂಸ ತಿನ್ನುತಿದ್ದರು ಎನ್ನುವುದನ್ನು ನಾನು ಈಗಲೂ ಹೇಳುತ್ತೇನೆ, ಅದನ್ನು ವಿರೋಧಿಸುವವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಕರೆದರೆ ನಾನು ಸಿದ್ದ. ವಿವೇಕಾನಂದರು ಮಾಂಸಹಾರಿಗಳಲ್ಲ ಎಂದು ಅವರು ಸಾಬೀತು ಮಾಡಿದರೆ ನಾನು ಬರೆಯುವ ಹವ್ಯಾಸದಿಂದಲೇ ನಿವೃತ್ತಿ ಆಗುತ್ತೇನೆ. ಸತ್ಯವನ್ನೇ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.ನಮ್ಮ ಪತ್ರಿಕೆಗೆ,ನನಗೆ ಬೆದರಿಕೆ ಎದುರಾಯಿತು. ನಾನು ಇದರ ಬಗ್ಗ ಉಲ್ಲೇಖ ಮಾಡಲು ಕಾರಣ ಇದೆ. ಅಂತಹದ್ದೊಂದು ಅಂಕಣ ಬರೆದು ನಾನು ಪಾರಾಗಲೂ ಕಾರಣ ಆಗ ನನ್ನ ಸಂಪಾದಕರಾಗಿದ್ದ ಕೆ.ಎನ್ ಶಾಂತಕುಮಾರ್. ಅವರು ನನ್ನ ಪರವಾಗಿ ಕಲ್ಲು ಬಂಡೆಯಂತೆ ನಿಂತಿದ್ದರು. ಆತ ತಪ್ಪು ಬರೆದಿಲ್ಲ, ಅದಕ್ಕಾಗಿ ಅವನಾಗಲಿ, ನಾನಾಗಲಿ ಕ್ಷಮೆ ಕೇಳೋದಿಲ್ಲ ಎಂದು ಅವರು ಗಟ್ಟಿಯಾಗಿ ನಿಂತುಬಿಟ್ಟರು.ಈ ರೀತಿಯ ಸಂಪಾದಕರಿದ್ದರೆ ಮಾತ್ರ ಸಾಮಾಜಿಕ ಕಳಕಳಿಯ ಪತ್ರಿಕೋದ್ಯಮ ನಡೆಸಿಕೊಂಡು ಹೋಗಲು ಸಾಧ್ಯ.

ಮಾಧ್ಯಮ ರಂಗದಲ್ಲಿರುವ ಪೂರ್ವಗ್ರಹಕ್ಕೆ ಇತ್ತೀಚಿನ ಇಬ್ಬರು ಸ್ವಾಮಿಗಳ ಉದಾಹರಣೆ ಸಾಕು. ರಾಘವೇಶ್ವರ ಸಾಮೀಜಿಯ ಪ್ರಕರಣವನ್ನು ಬಹಳಷ್ಟು ಮಂದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿ ಒಬ್ಬ ಹಿಂದುಳಿದ ಜಾತಿಯವ, ರಾಘವೇಶ್ವರ ಸ್ವಾಮೀಜಿ ಬ್ರಾಹ್ಮಣ. ಈ ಹೋಲಿಕೆ ತಪ್ಪು ಅಂತ ನನಗೆ ಅನಿಸುವುದಿಲ್ಲ. ನಿತ್ಯಾನಂದ ಸ್ವಾಮಿಗೆ ಮಾಧ್ಯಮದಲ್ಲಿ ಸಿಕ್ಕ ಟ್ರೀಟ್ ಮೆಂಟ್ ರಾಘವೇಶ್ವರ ಸ್ವಾಮೀಜಿಗೆ ಸಿಗಲಿಲ್ಲ. ನನಗೆ ಒಬ್ಬ ಪತ್ರಕರ್ತ ಹೇಳುತ್ತಿದ್ದ ನಿತ್ಯಾನಂದನ ಆಶ್ರಮದ ಕಾಂಪೌಂಡ್ ಹೊರಗಡೆ ಕಾಂಡೂಮ್ ಗಳನ್ನು ಹಾಕಿ ಅವರೇ ಅದನ್ನು ಶೂಟ್ ಮಾಡಿ ನೋಡಿ ನಿತ್ಯಾನಂದಸ್ವಾಮೀಜಿ ಕಾಂಪೌಂಡ್ ಹೊರಗಡೆ ಕಾಂಡೊಂಮ್ ಸಿಕ್ಕಿದೆ ಅವರು ವ್ಯಭಿಚಾರಿ ಎಂದು ತೋರಿಸಿದ್ದರಂತೆ.
ನೀವು ಖೈರ್ಲಾಂಜಿ ಬಗ್ಗೆ ಕೇಳಿದ್ದೀರಿ. ದಲಿತರ ಇಡೀ ಕುಟುಂಬವನ್ನೆ ಹತ್ಯೆ ಮಾಡಲಾಯಿತು. ಮೊದಲು ಅಲ್ಲಿಯ ಎಲ್ಲಾ ಪತ್ರಿಕೆಗಳು ಇದೊಂದು ಅನೈತಿಕ ಸಂಬಂಧ ಎನ್ನುವ ರೀತಿ ವರದಿ ಮಾಡಿವೆ. ನಂತರ ಬೇರೆ ಕಡೆಗಳಿಂದ ಹೋದ ಪತ್ರಿಕಾ ವರದಿಗಾರರು, ಕೆಲವು ದಲಿತ್ ಆಕ್ಟಿವಿಟಿಸ್ ಗಳು, ಅದರಲ್ಲೂ ಇಂಗ್ಲೀಷ್ ಪತ್ರಿಕೆಗಳು ಗಮನ ಸೆಳೆದಾಗ ನಿಜಸಂಗತಿ ಬಯಲಿಗೆ ಬಂತು. ನೀವು ಕಂಬಾಲಪಲ್ಲಿ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳನ್ನು ನೋಡಿ, ಕೋಮುಗಲಭೆಗಳನ್ನು ನೋಡಿ ನಮಗೆ ಮಾಧ್ಯಮಗಳಲ್ಲಿರುವ ಜಾತಿ ಪೂರ್ವಗ್ರಹ ಗೊತ್ತಾಗುತ್ತದೆ.

ನನಗೆ ವಿಶ್ವದ ಬಹುದೊಡ್ಡ ಬುದ್ದಿಜೀವಿ ನೋಮ್ ಚಾಮ್ ಸ್ಕಿ ಹೇಳಿರುವ ‘ಸಮ್ಮತಿಯ ಉತ್ಪಾದನೆ’ (Manufacturing conseChomskynt) ನೆನಪಾಗುತ್ತದೆ. ಅಂದರೆ ಅಭಿಪ್ರಾಯಗಳನ್ನು ಉತ್ಪಾದನೆ ಮಾಡೋದು. ಉದಾಹರಣೆಗೆ ದಲಿತರ ಮೇಲೆ ಮೇಲ್ಜಾತಿಯ ಜನ ಹಲ್ಲೆ ನಡೆಸಿದಾಗ ನೀವು ಅದನ್ನು ದಲಿತರ ಮೇಲಿನ ಹಲ್ಲೆ ಅಂತಲೂ ರಿಪೋರ್ಟ್ ಮಾಡಬಹುದು, ಇಲ್ಲವೆ ಎರಡು ಗುಂಪುಗಳ ನಡುವಿನ ಘರ್ಷಣೆ ಅಂತಲೂ ರಿಪೋರ್ಟ್ ಮಾಡಬಹುದು. ಆದರೆ ಬಹಳ ಸಾರಿ ವೈಯುಕ್ತಿಕ ಕಾರಣಕ್ಕಾಗಿ ಹಲ್ಲೆ ಯಾಗಿದೆ, ಅನೈತಿಕ ಸಂಬಂಧದ ಕಾರಣಕ್ಕಾಗಿ ಹೆಣ್ಣುಮಗಳನ್ನು ಸಾಯಿಸಿದ್ದಾರೆ ಎಂದೆಲ್ಲ ವರದಿಯಾಗುತ್ತದೆ. ರೈತರ ಪ್ರತಿಭಟನೆ, ಸತ್ಯಾಗ್ರಹಗಳನ್ನು ದೊಂಬಿ ಎಂದು ಬರೆಯುವುದೂ ಉಂಟು.

 

ಕೋಮುಗಲಭೆಗಳ ವರದಿಗಳಲ್ಲಿಯೂ ಇಂತಹ ಲೋಪಗಳನ್ನು ಕಾಣಬಹುದು. ಕೋಮುಗಲಭೆಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರನ್ನು ವಿಲನ್ ಗಳನ್ನಾಗಿ ಮಾಡಲಾಗುತ್ತದೆ. ಮುಸ್ಲಿಮರು ಪ್ರಚೋದಿಸಿದರು, ಅದಕ್ಕಾಗಿ ಹಿಂದೂಗಳು ಸೇಡು ತೀರಿಸಿಕೊಂಡರು ಎನ್ನುವ ವರದಿಗಳು ಸಾಮಾನ್ಯ. ದೆಹಲಿಯ ಪಕ್ಕದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಭೀಫ್ ಇದೆ ಎಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಕೊಂದುಬಿಟ್ಟರು. ಅಲ್ಲಿ ಬೀಫ್ ಇರಲಿಲ್ಲ ಎಂದು ತನಿಖೆ ಹೇಳುತ್ತಿದೆ. ಅರ್ನಾಬ್ ಗೋಸ್ವಾಮಿ ಇದರ ಬಗ್ಗೆ ಎಷ್ಟು ಷೋ ಮಾಡಿದರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಂಬಳಿ ತಗೋಂಡ್ರು, ಚಾಪೆ ತಗೋಂಡ್ರು ಅಂತ 1 ಗಂಟೆ ಬೇಕಾದರೆ ಅವರು ಚರ್ಚೆ ಮಾಡ್ತಾರೆ. ಇಂತಹ ಉದಾಹರಣೆಗಳನ್ನು ಬಹಳಷ್ಟು ಕೊಡುತ್ತಾ ಹೋಗಬಹುದು. ಆದರೆ ಇದಕ್ಕೆ ಪರಿಹಾರವೇನು? ಸುಲಭದ ಪರಿಹಾರ ನೀವೆಲ್ಲರೂ ಲಿಫ್ಟ್ ಗಾಗಿ ಕಾಯದೆ ಮೆಟ್ಟಿಲು ಹತ್ತಿಕೊಂಡು ಹೋಗಲಿಕ್ಕೆ ರೆಡಿಯಾಗಬೇಕು.
ನನ್ನ ತಾಯಿ ಅನಕ್ಷರಸ್ಥೆ, ನನ್ನ ತಂದೆ ಬ್ಯಾಂಕ್ ಜವಾನರಾಗಿದ್ದರು. ಬಿ.ಕಾಂ ಓದಿದ್ದೇ ನಾನು ಬ್ಯಾಂಕ್ ಗೆ ಸೇರಲಿಕ್ಕೆ. ಆದರೆ ಬ್ಯಾಂಕ್ ಸೇರಬೇಕೆಂದು ಅನಿಸಲಿಲ್ಲ. ಪತ್ರಿಕೋದ್ಯಮದ ಹಾದಿ ಸುಗಮವಾಗಿ ಇರಲಿಲ್ಲ. ಮುಂಗಾರು ಪತ್ರಿಕೆ ಯಲ್ಲಿ ತಿಂಗಳ ಸಂಬಳವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಬಹಳ ಕಷ್ಟ ಪಟ್ಟು ಇಲ್ಲಿಯ ವರೆಗೆ ಬಂದಿದ್ದೇನೆ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಬೇಕು ಎಂಬ ಛಲ ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆ. ಪತ್ರಕರ್ತರು ಟ್ರಾನ್ಸ್ ಫರ್ ಎಂದರೆ ಕಂಗಾಲಾಗಿ ಬಿಡುತ್ತಾರೆ. ಎಲ್ಲರಿಗೂ ಬೆಂಗಳೂರು ಬೇಕು, ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಬೇಡ. ಬೆಂಗಳೂರಿನಲ್ಲಿದ್ದ ನನ್ನನ್ನು ಟ್ರಾನ್ಸ್ ಫರ್ ಮಾಡುತ್ತೇನೆ ಎಂದು ಹೇಳಿದಾಗ ‘ಎಲ್ಲಾದ್ರೂ ಮಾಡಿ, ಮರುಭೂಮಿಗಾದ್ರೂ ಮಾಡಿ ಹೋಗ್ತೀನಿ’ ಎಂದು ಹೇಳಿದ್ದೆ. ಮರುಭೂಮಿಯಲ್ಲಿ ಒಳ್ಳೆಯ ವರದಿಗಳನ್ನು ಮಾಡಲು ಅವಕಾಶಗಳಿರುತ್ತವೆ. ಇದರಿಂದಾಗಿಯೇ ನನಗೆ ದೆಹಲಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮಾನಸಿಕವಾಗಿ ಇಂತಹದ್ದೊಂದು ಸಿದ್ಧತೆ ಮಾಡಿಕೊಳ್ಳದಿದ್ದರೆ, ಅಧ್ಯಯನ ಮಾಡದಿದ್ದರೆ, ಸಮಾಜವನ್ನು ಎದುರಿಸುವುದನ್ನು ಕಲಿಯದಿದ್ದರೆ ಪತ್ರಕರ್ತರಾಗಲು ಕಷ್ಟವಾಗಬಹುದು. ನಿಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು, ಜತೆಗೆ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನೂ ಮಾಡಬೇಕು.

ಈ ನಿಟ್ಟಿನಲ್ಲಿ ಸರ್ಕಾರಮತ್ತುವೃತ್ತಿಸಂಬಂಧಿಸಂಸ್ಥೆಗಳುಕೂಡಾ ಒಂದಿಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಒಂದು ಉದಾಹರಣೆ ಕೊ746px-ChicagoDefender.svgಟ್ಟು ಮಾತು ಮುಗಿಸುತ್ತೇನೆ. 1978 ರಲ್ಲಿ ಅಮೆರಿಕನ್ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ (ASNE) ಅಲ್ಲಿನ ಮಾಧ್ಯಮಗಳಲ್ಲಿ ಕಪ್ಪು ಜನಾಂಗದವರ ಪ್ರಾತಿನಿಧ್ಯ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅಲ್ಲಿನ ಜನಸಂಖ್ಯೆಯಲ್ಲಿ ಕರಿಯರು ಶೇ.36 ರಷ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಅವರು ಪ್ರಾತಿನಿಧ್ಯ ಕೇವಲ ಶೇ 4 ರಷ್ಟು ಮಾತ್ರ ಎಂದು ಸಮೀಕ್ಷೆಯಿಂದ ತಿಳಿದುಬಂದಿತ್ತು. 2000 ನೇ ವರ್ಷದಲ್ಲಿ ಅಮೆರಿಕದ ಮಾಧ್ಯಮ ಕ್ಷೇತ್ರದಲ್ಲಿ ಕರಿಯರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇರುವಂತೆ ಮಾಡಬೇಕೆಂದು ASNE ನಿರ್ಧಾರಕ್ಕೆ ಬರುತ್ತದೆ. ಅಲ್ಲಿರುವ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕ್ಯೂಲೇಶನ್ ಇರುವ 1446 ಪತ್ರಿಕೆಗಳಲ್ಲಿ 950 ಪತ್ರಿಕೆಗಳು ಅಸೋಸಿಯೇಷನ್ನಿನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತವೆ. ಅವರೇನೂ ಮೀಸಲಾತಿ ಕೊಡುವುದಿಲ್ಲ. ಅವರಿಗಾಗಿ ಉದ್ಯೋಗ ಮೇಳ ನಡೆಸುತ್ತಾರೆ, ತರಬೇತಿಕೊಡುತ್ತಾರೆ, ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸುತ್ತಾರೆ.ಇದನ್ನು ಮಾಡ್ತಾ, ಮಾಡ್ತಾ 2000 ಇಸವಿಗೆ ಅಲ್ಲಿಯ ಕರಿಯರ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚದೆ ಇದ್ದರೂ ಅದು ಶೇ.13ಕ್ಕೆ ತಲುಪಿತ್ತು. ಇವತ್ತು ಅಮೇರಿಕಾದಲ್ಲಿ ದಲಿತರದ್ದೇ ಆದ ‘ಎಬೋನಿ’ ‘ಚಿಕಾಗೋ ಡಿಫೆಂಡರ್’ ಮೊದಲಾದ ಪತ್ರಿಕೆಗಳಿವೆ.

ಚೆನ್ನೈ ನಲ್ಲಿರುವ ‘ಏಷ್ಯನ್ಸ್ಕೂಲ್ಆಫ್ಜರ್ನಲಿಸಂ’ ದಲಿತರಿಗೆ ಸ್ಕಾಲರ್ಶಿಪ್ ಕೊಡ್ತಾರೆ. ಅದಕ್ಕೆ ಬೇಕಾದ ಅಭ್ಯರ್ಥಿಗಳೇ ಸಿಕ್ತಾ ಇಲ್ಲವಂತೆ. ನಮ್ಮಲ್ಲೂ ಕೂಡ ಕೊರತೆಗಳಿವೆ. ಆ ಮಟ್ಟದ ಎಂಟ್ರೆನ್ಸ್ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿಗಳು ಬೇಕಾಗುತ್ತವೆ. ದಲಿತ ಅಭ್ಯರ್ಥಿಗಳು ಸಿಗದೆ ಇದ್ದಾಗ ಆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇತ್ತೀಚೆಗೆ ಆ ಸಂಸ್ಥೆಯ ಸ್ಕಾಲರ್ ಶಿಫ್ ಪಡೆದು ಹಲವಾರು ದಲಿತರು ಜರ್ನಲಿಸ್ಟ್ ಗಳಾಗಿದ್ದಾರೆ. ಇಂತಹ ಪ್ರಯತ್ನ ಎಲ್ಲಾ ಕಡೆಗಳಿಂದಲೂ ನಡೆಯಬೇಕು. ಇದಕ್ಕೆ ಅಮೇರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಮಾಡಿದ ಕೆಲಸವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಡಬೇಕು, ಪತ್ರಕರ್ತರ ಸಂಘಗಳು ಮಾಡ ಬೇಕು, ಪತ್ರಿಕೆಗಳೂ ಮಾಡಬೇಕು.

ನಮ್ಮ ಪತ್ರಕರ್ತರ ಸಂಘಟನೆಗಳುಲಕ್ಷಾಂತರ ರೂಪಾಯಿಕಲೆಕ್ಟ್ಮಾಡಿ, ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಒಳ್ಳೆಯ ಊಟ ಹಾಕುವುದರಿಂದ ಒಳ್ಳೆಯ ಪತ್ರಕರ್ತರನ್ನು ರೂಪಿಸಲು ಸಾಧ್ಯವಿಲ್ಲ. ನೀವು ಬಸ್ ಪಾಸ್ ತೆಗೊಳ್ಳಿ, ಸೈಟ್ ತಗೊಳ್ಳಿ, ಪರವಾಗಿಲ್ಲ, ಒಬ್ಬರಿಗೆ ಒಂದು ಸೈಟ್ ಇರಬೇಕು. ನಾನು ಅದರ ಪರವಾಗಿ ಇದೀನಿ, ಆದರೆ ಕಸುಬುಗಾರಿಕೆಯನ್ನು ಪ್ರೋಫೆಷನಲಿಸಂ ಬೆಳೆಸಲು ಏನು ಮಾಡಿದಿರಿ ಎಂಬುದನ್ನು ಸರ್ಕಾರದ ನೆರವಿನಿಂದಲೇ ನಡೆ07-asiancollegeofjournalismಯುತ್ತಿರುವ ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಅಮೇರಿಕಾದ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ಡಿ ಮಾಡಿದ ಸಮೀಕ್ಷೆಯನ್ನು ನಾವೇಕೆ ಮಾಡಲಾಗುತ್ತಿಲ್ಲ. ಕನ್ನಡದ ಮಾಧ್ಯಮಗಳಲ್ಲಿ ಅಹಿಂದ ವರ್ಗಕ್ಕೆ ಸೇರಿದವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಸರ್ವೇ ಮಾಡಬಹುದು. ವಿರೋಧ ಎದುರಾಗಬಹುದು. ಇದೊಂದು ಅಹಿಂದ ಸರಕಾರ ಅದಕ್ಕೆ ಈ ಸರ್ವೆ ಎಂಬ ಟೀಕೆಗಳು ಬರಬಹುದು. ನಾನು ನನ್ನ ಬ್ರೀಫ್ ಮೀರಿ ಮಾತನಾಡುತ್ತಿದ್ದೇನೆ.. ಎಂದು ನನಗೂ ಅನ್ನಿಸುತ್ತಿದೆ…ನಿಮಗೂ ಅನ್ನಿಸಬಹುದು. ಆದರೆ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಲಿಕ್ಕೆ ಮಾತನಾಡುತ್ತಿದ್ದೇನೆ.

 

ಕೇವಲ ರಾಜಕೀಯದಲ್ಲಿ ಅಹಿಂದ ಬಂದರೆ ಅದು ಯಶಸ್ವಿಯಾಗುವುದಿಲ್ಲ. ಅದು ಮಾಧ್ಯಮ, ಉದ್ಯಮ,ಶಿಕ್ಷಣ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಬರಬೇಕು. ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದಲ್ಲ. ಎಲ್ಲರಿಗೂ ನ್ಯಾಯವನ್ನು ಕೊಡುವಂತಹುದು. ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಧೀರ್ಘವಾದ ಪರಂಪರೆ ಇದೆ. ಸಾಮಾಜಿಕ ನ್ಯಾಯದ ಮೊದಲ ಚಳುವಳಿಕಾರ ಬಸವಣ್ಣ. ಬಸವಣ್ಣನಿಂದ ಪ್ರಾರಂಭವಾದರೂ ಅದರ ನಂತರ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಆದರೆ ಕೇವಲ ರಾಜಕೀಯದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಅಂತ ನೀವು ತೀರ್ಮಾನಿಸಿಬಿಟ್ಟರೆ, ಸಾಮಾಜಿಕ ನ್ಯಾಯವನ್ನು ಅಲ್ಲಿಯೂ ಅನುಷ್ಠಾನಕ್ಕೆ ಬರಲಿಕ್ಕೆ ಈ ವ್ಯವಸ್ಥೆ ಬಿಡುವುದಿಲ್ಲ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಅಂತ ಹೇಳದೆ ಇದ್ದಿದ್ದರೆ ಇವತ್ತು ಕನ್ನಡ ಸಾಹಿತ್ಯ ಈ ಪ್ರಮಾಣದಲ್ಲಿ, ಆಳ-ಅಗಲಕ್ಕೆ ಬೇರು-ಬಿಳಲು ಬಿಟ್ಟು ಬೆಳೆಯುತ್ತಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಅವರು ಆ ರೀತಿ ಹೇಳಿದಾಗ ಇಡೀ ಕನ್ನಡ ಸಾಹಿತ್ಯಲೋಕದ ಬರಹಗಾರರು ಮತ್ತು ಓದುಗರು ಬೆಚ್ಚಿಬಿದ್ದಿದ್ದರು. ಅಂತಹದ್ದೊಂದು ಶಾಕ್ ‍ಟ್ರೀಟ್ ಮೆಂಟ್ ಮಾಧ್ಯಮ ಕ್ಷೇತ್ರಕ್ಕೂ ಅಗತ್ಯ ಇದೆ. ಮಾಧ್ಯಮದಲ್ಲಿ ಸಮಾಜದ ಪ್ರತಿಬಿಂಬ ಕಾಣಬೇಕು. ಅದರಲ್ಲಿ ಒಡಕಲು ಬಿಂಬ ಕಾಣಬಾರದು. ಪರಿಪೂರ್ಣ ಚಿತ್ರ ಕಾಣಬೇಕು. ಅದು ನಮಗೆ ಕಾಣ್ತಾ ಇದೆಯಾ? ಎಂಬುದು ಇವತ್ತಿನ ಪ್ರಶ್ನೆ. ಏಕೆಂದರೆ ಮಾಧ್ಯಮವಾಗಲಿ, ಸಾಹಿತ್ಯವಾಗಲಿ, ರಾಜಕೀಯವಾಗಲಿ ಅಲ್ಲಿ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಭಾಗವಹಿಸದೇ ಇದ್ದರೆ, ಅದರಲ್ಲಿ ಎಲ್ಲಾ ಲೋಕದ ಅನುಭವಗಳು ಅಭಿವ್ಯಕ್ತಿಗೊಳ್ಳದೆ ಇದ್ದರೆ, ಅದು ಅಪೂರ್ಣವಾಗುತ್ತದೆ. ಅದು ಪಾರ್ಶಿಯಲ್ ಆಗಿರುತ್ತದೆ. ಬಯಾಸ್ಡ್ ಅಗಿರುತ್ತದೆ.

 

ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು. ಅದು ಅಸ್ತವ್ಯಸ್ತವಾದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಮಾಧ್ಯಮ ಕೂಡಾ . ನಮ್ಮ ರಾಜಕೀಯ ಧುರೀಣರು ಪ್ರಜ್ಞಾವಂತರಿದ್ದಾರೆ ಅವರು ಸಾಮಾಜಿಕ ನ್ಯಾಯವನ್ನು ವಿರೋಧಿಸಲಾರರು. ಏಕೆಂದರೆ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಆಶಯ. ನೀವು ಆ ನ್ಯಾಯವನ್ನು ಕೊಡದೆ ಇದ್ದರೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೀರಿ ಎಂದೇ ಅರ್ಥ. ಬಹಳ ಕಷ್ಟ ಇದೆ. ನನ್ನ ಕಿರಿಯ ದಲಿತ ಸ್ನೇಹಿತ ಲಿಂಗರಾಜ್ ಅಂತ ಇಲ್ಲಿದ್ದಾರೆ. ಈತ ಹಟ್ಟಿ ಗೋಲ್ಡ್ ಮೈನ್ ನ ಕಾರ್ಮಿಕರ ಮಗ. ನಾಲ್ಕು ವರ್ಷದ ಹಿಂದೆ ನನ್ನ ಆಫೀಸ್ ಗೆ ಬಂದಿದ್ದ. ಅವನು ಡಿಗ್ರಿ ಮಾಡಿದ್ದ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದ. ಅವನು ಪಿ.ಹೆಚ್.ಡಿ ಮಾಡಲಿಕ್ಕೆ ರಿಜಿಸ್ಟರ್ ಮಾಡಿದ್ರೆ ಅವನಿಗೆ ಗೈಡ್ ಮಾಡಲಿಕ್ಕೆ ಯಾರೂ ಒಪ್ತಾ ಇಲ್ಲ. ಇದು ಅವನೊಬ್ಬನ ಕಥೆಯಲ್ಲ. ಈ ಸಮುದಾಯದ ಅನೇಕ ವಿದ್ಯಾರ್ಥಿಗಳು, ಹುಡುಗರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಹ ಸಂಘಟನೆಗಳ ಬೆಂಬಲ ಅವರಿಗೆ ಬೇಕಾಗಿದೆ.

 

ಸರ್ಕಾರವೇ ಮುಂದೆ ನಿಂತು ಎಲ್ಲವನ್ನೂ ಮಾಡಲಾಗುವುದಿಲ್ಲ. ಇಲ್ಲಿರುವ ಹಿರಿಯರು, ಸಮುದಾಯದಲ್ಲಿರುವ ಪ್ರಜ್ಞಾವಂತರು ಎಲ್ಲಾ ಜಾತಿ, ವರ್ಗದ ಜನ ಇಂತಹವರ ಬೆಂಬಲಕ್ಕೆ ನಿಂತು ಬೆಳೆಸಬೇಕಾಗಿದೆ. ಆ ಕೆಲಸವನ್ನು ಮಾಧ್ಯಮ ಅಕಾಡೆಮಿ ಮತ್ತು ಪತ್ರಕರ್ತರ ಸಂಘಟನೆಗಳು ಮಾಡುತ್ತದೆ. ರಾಜಕೀಯ ಧುರೀಣರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸುತ್ತೇನೆ.

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ

ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು ಮಾತೆವ್ವ ಕುಂತಿದ್ಲು. ಆಕಿ ಸುಮ್ಮನ ಕುಂತಂಗ ಕಂಡ್ರೂ ಆಕಿ ದವಡೆಗಳು ಒಂದು ಸಂವನ ಮೆಲಕ್ಕ ಹಾಕುತಿದ್ವು. ಆಕಿ ಗಂಡ ದರಿಯ ಅಆಅಬ್ ಅಂತ ಡೆರಿಕಿ ಹೊಡಕೋತ ಮುಗಿಲ ಮ್ಯಾಲಿನ ಚಿಕ್ಕಿ ನೊಡಕೋತ ಅಂಗಾತ ಬಿದ್ದಕೊಂಡಿದ್ದ.

ಆಗಷ್ಟೆ ಕಂಬಳಿಯಂಥ ಕರಿ ಮುಗಿಲ ತುಂಬ ಚಿತ್ತಾರ ಮೂಡಿಸಿದ್ದ ಚಿಕ್ಕಿಗೊಳು ಮಿಣುಕುಮಿಣುಕಾಗಿ ಒಂದೊಂದೆ ಮಾಯವಾಗತೊಡಗಿದ್ದವು. ಚಂದಪ್ಪ ಇವನೌನ ಮಳಿ ಬರುವಂಗಾತು ಅನ್ಕೊಂಡು ಗೂಡು ಸೇರಿದ್ದ. ಗುಡುಲ್ ದಡುಲ್ ಎಂಬ ಗುಡುಗು, ಅದರ ಹಿಂದೆಯೇ ಒಮ್ಮೆಲೆ ನೂರು ಸಾವಿರ ಬಲ್ಬು ಬೆಳಗಿದಂಗಳ ಕೋಲ್ಮಿಂಚು…

‘ಆ..ಉ… ಉಉಂ, ಅಯ್ಯಯ್ಯ. ಎವ್ವಾ ಬೇ ಯಾಕೋ ಬೆನ್ನಿನ ನರಾ ಜಗ್ಗಾಕ ಹತ್ಯಾವು..’ ಮಗಳು ಸ್ಟೇಲ್ಲಾಳ ನರಳುವ ದ್ವನಿ ಆ ಮಳೆ ಗಾಳಿಯಲ್ಲಿ ಅಸ್ಪಷ್ಟವಾಗಿ ತೇಲಿ ಹೋಯ್ದಂತಾಯಿತು.

‘ಮಗಳ ಬ್ಯಾನಿ ತಿನ್ನಾಕ ಹತ್ತಿದಂಗ ಕಾಣತೈತಿ. ಏ ಯೇಸು ತಂದೆ, ಇನ್ನು ಸ್ವಲ್ಪ ಹೊತ್ತು ಮಳಿಗಾಳಿ ಶುರು ಮಾಡಬ್ಯಾಡೋ ಎಪ್ಪ’ ಮಾತೆವ್ವ ಮನದೊಳಗ ಬೇಡ್ಕೊಂಡ್ಲು. ‘ಹೋಗು, ಯಾವುದಾದ್ರೂ ಆಟೋ ಕರಕೊಂಡು ಬರೊಗು ದವಾಖಾನಿಗೆ ಹೋಗೂನು’  kt_shivaprasad-art-familyಮಾತೆವ್ವ ಒದರುತ್ತಲೇ ಮಗಳತ್ತ ದಾವಿಸಿದಳು.

ಆಟೋ ಇಲ್ಲವೆಂದು ವಾಪಸ್ ಬಂದ ಗಂಡನಿಗೆ ಶಪಿಸುತ್ತಾ ಗೇಟ್‍ವರೆಗೆ ಮಗಳನ್ನು ನಡೆಸಿಕೊಂಡು ಬಂದ ಮಾತೆವ್ವ ಸಿಕ್ಕ ಬೇಂದ್ರೆ ಬಸ್ ಹತ್ತಿಸಿಕೊಂಡು ಕೆಎಂಸಿ ಆಸ್ಪತ್ರೆಗೆ ಬಂದಿದ್ದಳು. ಮಗಳು ಹೆರಿಗೆ ವಾರ್ಡೊಳಗೆ ಹೋದ ಮೇಲೂ ಎಷ್ಟೋ ಹೊತ್ತಿನ ಮಟಾ ದರಿಯ ಕಾಯ್ದುಕೊಂಡು ಅಲ್ಲೆ ನಿಂತಿದ್ದ. ‘ಯಜ್ಜ ನಿಂದೆನು ಕೆಲಸ ಇಲ್ಲ. ನೀ ಹೊರಗ ಹೋಗು ಎಲ್ಲ ಸರಿ ಆಕೈತಿ’ ಅಂತ ಒಬ್ಬಾಕಿ ನರ್ಸ್ ಹೇಳಿದ್ದರಿಂದ ಮುದುಕಗ ಇರಿಸು ಮುರುಸಾತು. ನಿಧಾನಕ್ಕ ಕಾಲು ಎಳಕೊಂಡು ಆಸ್ಪತ್ರೆ ಗೇಟ್‍ಮಟಾ ಬಂದ. ಅಲ್ಲೊಂದು ಪಟ್ಟಿ ಅಂಗಡಿ ಮುಂದ ಲೈಟ್ ಉರಿತಿತ್ತು. ಅಲ್ಲಿ ಹೊಗಿ ಒಂದು ಬೀಡಿ ತುಗೊಂಡು ಅಲೆಅಲೆಯಗಿ ಹೊಗೆಬಿಟ್ಟ. ಮನಸ್ಸು ದೇಹ ಸ್ವಲ್ಪ ಹಗೂರ ಆದಂಗಾದ್ವು. ಮತ್ತೆ  ದವಾಖಾನಿ ಕಡೆಗೆ ಬರತೊಡಗಿದ. ಅಲ್ಲೊಂದು ಮುಚ್ಚಿದ ಬಾಗಿಲು ಬಿಲ್ಡಿಂಗ್ ಕಾಣಿಸಿತು. ಮಗಳು ಹೆರಿಗೆ ಇನ್ನು ಮೂರ್ನಾಲ್ಕು ತಾಸಾಗಬಹುದು ಅಂದುಕೊಂಡು ಮುಚ್ಚಿದ ಬಾಗಿಲ ಮುಂದೆ ಅಡ್ಡಾದ.

***

ಸರು ಬಿಟ್ಟು ಸರು ಹಣಿಯುವ ಮಳೆಯ ಜಿಟಿ ಜಿಟಿ. ಆಗಾಗ ಮುತ್ತಿಕ್ಕುವ ಸೊಳ್ಳೆಗಳಿಂದಾಗಿ ದರಿಯನಿಗೆ ನಿದ್ದಿ ಸುಳಿಯೊಲ್ಲದು. ಮೇಲಾಗಿ ನೆನಪುಗಳು ಸ್ಪರ್ಧೆಗೆ ಬಿದ್ದವವರಗತೆ ನಾ ಮುಂದು ತಾಮುಂದು ಎಂದು ಮುಕುರಿ ಪಟ ಬಿದ್ದಿದ್ದವು.

ಹಂಗ ನೋಡಿದ್ರ ಅವನ ಜನ್ಮನಾಮ ದೊರೆರಾಜ್. ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡೋ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಎಂದು, ಇನ್ನಷ್ಟು ಮುಂದೆ ಹೋಗಿ ದರಿದ್ರ ದರ್ಯಾ ಎಂದು ಕರೆತಿದ್ರು. ದರಿಯನ ಮೂರ್ನಾಲ್ಕು ತಲೆಮಾರುಗಳ ಹಿಂದಿನ ಪೂರ್ವಿಕರು ಆಂದ್ರ ಪ್ರದೇಶದ ಸುಡುಗಾಡು ಕಾಯುವ ಕಾಪಾಲಿಕ ಎಂಬ ಅದ್ಯಾವದೋ ಹೀನ ಬುಡಕಟ್ಟಿನವರು. ಅಲ್ಲಿ ಅದ್ಯಾವ ಕಾರಣಕ್ಕೋ ನೆಲೆ ಕಳೆದುಕೊಂಡು ಹುಬ್ಬಳ್ಳಿಗೆ ಬಂದು ಇಲ್ಲಿನ ಸುಡುಗಾಡುಗಟ್ಟೆಗಳಲ್ಲಿ ನೆಲೆ ನಿಂತಿದ್ದರು.

ಯಾರಾದ್ರೈ ಸತ್ತರೇ ಮಾತ್ರ ಇವರಿಗೆ ಹೊಟೆ ತುಂಬ ಊಟ. ಒಂದು ಕಡೆ ಹೆಣ ಬೇಯಿಸ್ತಾ ಇದ್ದರೆ ಇನ್ನೊಂದು ಕಡೆ ಹೆಣದ ಮೇಲಿನ ಅಕ್ಕಿಯನ್ನು ತಾಯಿ ಬೇಯಿಸೋದನ್ನೆ ನೋಡಿಕೊಂಡೆ ದರಿಯ ದೊಡ್ಡವನಾಗಿದ್ದ. ಒಮ್ಮೊಮ್ಮೆ ಜಾಸ್ತಿ ಚಿಲ್ಲರೆ ಕಾಸು ಸಿಕ್ಕರೆ ಅವತ್ತು ಅಪ್ಪ ಒಂದೆರಡು ಪಾಕೀಟು ಸೆರೆ ಮತ್ತು ಚಿಕ್ಕನ್ ಪೀಸು ತರ್ತಿದ್ದ.

ಒಂದೊಂದು ಸಲ ಬಾಳ ಇಚಿತ್ರ ಹೆಣ ಬರತಿದ್ವು. ಕಾಲ ಇದ್ದರ ಕೈ ಇರಲ್ಲ. ಎರಡು ಇದ್ದರ ತಲೆ ಇರ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲವೂ ಇದ್ರು ಹೆಣ ಪೂರ್ತಿ ಕೊಳತು ಮುಟ್ಟಿದರ ಹರ್ಕೊಂಡು ಬರುವಂಗ ಇರ್ತಿತ್ತು. ಒಂದೊಂದು ಹೆಣ ಅಂತ್ರೂ ಕಿಂವು ರಕ್ತದಿಂದ ತುಂಬ್ಕೊಂಡು ಅಕರಾಳ ವಿಕರಾಳ ಆಗಿರುತಿದ್ವು. ಒಮ್ಮೊಮ್ಮೆ ಕೆಎಂಸಿಯಿಂದ ಪೊಲೀಸರಿಂದ ಫೋನ್ ಬರೋದು, ಅಲ್ಲಿಂದ ಕೊಯ್ದ ಪಂಚನಾಮೆ ಮಾಡಿದ ಹೆಣ ಸುಡಾಕ ಅಷ್ಟೋ ಇಷ್ಟು ದುಡ್ಡು ಕೊಡ್ತಿದ್ರು. ಎಷ್ಟೋ ಹೆಣಗಳಿಗೆ ವಾರಸುದಾರರೆ ಇರ್ತಿರಲಿಲ್ಲ. ಒಮ್ಮೊಮ್ಮೆ ತಿಂಗಳಾನುಗಟ್ಲೆ ಯಾರೂ ಸಾಯದೆ ಉಪವಾಸ ಇದ್ರ, ಒಮ್ಮೊಮ್ಮೆ ಎಕ್ಸಿಡೆಂಟ್ ಆದೋರು, ವಿಷ ಕುಡ್ದೋರು, ಉರ್ಲು ಹಾಕೊಂಡೋರ ಹತ್ತಾರು ಹೆಣ ಬರ್ತಿದ್ವು. abstract-art-sheepಆಗೆಲ್ಲ ಎಲ್ಲರಿಗೂ ಕೈ ತುಂಬ ಹೆಣ ಸುಡೋ ಕೆಲಸ. ಸುಗ್ಗಿಯೋ ಸುಗ್ಗಿ. ಪಾಪ ಎಷ್ಟೆಷ್ಟು ಸಣ್ಣ ಸಣ್ಣ ಮಕ್ಕಳೆಲ್ಲ ವಿಷ ಕುಡ್ದು ಉರ್ಲು ಹಾಕ್ಕೊಂಡು ಹೆಣ ಆಗಿ ಬಂದ್ರ ಅವುನ್ನ ಸುಡೋದು ಬಾಳ ಕಷ್ಟ ಆಕ್ತಿತ್ತು. ಗೆರೆ ಕೊರ್ದು ಚಿತ್ರ ಬಿಡಿಸಿ ಬಣ್ಣ ತುಂಬಿದ ಗೊಂಬಿಯಂಥೋರ ಮೈಗೆ ಬೆಂಕಿ ಹಾಕೋದಂದ್ರ ಹ್ಯಾಂಗ ಮನಸ್ಸು ಬರ್ತದ. ಆ ಮಕ್ಕಳನ್ನು ಆಡಿಸಿ ಬೆಳಿಸಿ ದೊಡ್ಡವರನ್ನಾಗಿ ಮಾಡಿದ ಹೆತ್ತೊಡಲುಗಳು ಅಳ್ಳೋದು ಕೇಳಿಸಿದ್ರಂತೂ ಕಳ್ಳ ಚುರಕ್ ಅಂತಿತ್ತು.

ಹೆಣ ಸುಡ್ತಾ ಸುಡ್ತಾನೆ ದೊರೆರಾಜ್‍ನ ರಟ್ಟೆ ಬಲ್ತಿದ್ವು. ಅವಂಗ ಹೆಣ್ಣು ನೋಡುವ ಜವಾಬ್ದಾರಿಯನ್ನ ಅಪ್ಪ ಶುರುವಿಟ್ಟುಕೊಂಡಿದ್ದ. ಹೆಣ ಸುಡೋನಿಗೆ ಮತ್ಯಾರು ಹೆಣ್ಣು ಕೊಡಬೇಕು, ಹೆಣ ಸುಡೋರ ಮಕ್ಕಳೆ ಆಗಬೇಕಲ್ವೆ? ಆಗಾಗ ತನ್ನ ಹಳೆಯ ಸಂಬಂಧಿಕರ ಮನೆಗೆ ಹೋದಾಗ ಬೇಕಂತ್ಲೆ ಮಾತಿನ ಮುಂದೆ ಮಗ ವಯಸ್ಸಿಗ ಬಂದ ವಿಷಯವನ್ನು ತರುತ್ತಿದ್ದ. ಅವನಂಗೆ ಹೆಣ ಸುಡೋರು ಹುಬ್ಬಳಿ ದಾರವಾಡ ಸೀಮಿ ಸುಡುಗಾಡದೊಳಗ ಸಿಗೂದಿಲ್ಲ ಅಂತ ಮೀಸಿ ತಿರುತ್ತಿದ್ದ. ಅಪ್ಪನ ಮಾತು ನಂಬಿ ಸುತ್ತಲಿನ ಸಣ್ಣ ಸಣ್ಣ ಪಟ್ಟಣಗಳ ಸುಡುಗಾಡುಗಳಲ್ಲಿ ಬೀಡು ಬಿಟ್ಟಿದ್ದ ಹೆಣ್ಣು ಹೆತ್ತವರು ಬಂದು ಹೋಗಿ ಮಾಡುವುದನ್ನು ಶುರುವಿಟ್ಟುಕೊಂಡಿದ್ದರು.

ರೈತರಿಗೆ ಜಮೀನು ಜಾನುವಾರು ಆಸ್ತಿ ಆದ್ರ, ಇವರಿಗೆ ಸುಡಗಾಡೇ ಆಸ್ತಿ ಇದ್ದಂಗ. ಹೆಣ್ಣು ಕೊಡಲಿಕ್ಕೆ ಬಂದವರೆಲ್ಲ ಸುಡುಗಾಡನ್ನು ಅಡ್ಡಾಡಿ ನೋಡತಿದ್ರು. ಸುಡುಗಾಡಿನ ವಿಸ್ತಾರ, ಸುಡುಗಾಡು ಸುತ್ತಲಿನ ವಾರ್ಡುಗಳ ಜನಸಂಖ್ಯೆ, ಅವರ ಶ್ರೀಮಂತಿಕೆ, ಅವರ ಚಟಾದಿಗಳು, ರೋಗ ರುಜಿನಗಳನ್ನು ಮನದಲ್ಲೆ ಲೆಕ್ಕ ಹಾಕಿಕೊಂಡು ತಮ್ಮ ಮಗಳನ್ನು ಇಲ್ಲಿಗೆ ಸೊಸೆಯಾಗಿ ಕಳಿಸಿದರೆ ಮಗಳು ಸುಖವಾಗಿ ಇರಬಹುದೆ ಎಂಬುದನ್ನು ಅಂದಾಜಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದ್ದರು. ಐದಾರು ಮಾತುಕತೆಗಳು ಮುಂದುವರೆಯಲಿಲ್ಲವಾದರೂ ನಂತರದ ಸಂಬಂಧ ನಿಕ್ಕಿಯಾಗಿ ದೊರೆರಾಜನಿಗೆ ಮಾತೆವ್ವ ಜೊತೆಯಾಗಿ ಬಂದಿದ್ದಳು. ದೊರೆರಾಜ ದರ್ಯಾ ಆದ ಹಾಗೆ ಮೇರಿಮಾತಾ ಹೋಗಿ ಆ ನೆಲದ ನುಡಿಗನುಗುಣವಾಗಿ ಮಾತೆವ್ವ ಆಗಿದ್ದಳು. ವರ್ಷದಲ್ಲಿ ಮಗಳು ಸ್ಟೆಲ್ಲಾ ತೊಡೆ ಏರಿದ್ದಳು.

ಮಗಳು ವಯಸ್ಸಿಗೆ ಬಂದು ಆಕೆಯ ಮದುವೆ ಹ್ಯಾಂಗ ಮಾಡೋದು ಅಂತ ಮಾತೆವ್ವ ಚಿಂತಿಗೆ ಬಿದ್ದು ದರ್ಯಾನ ಜೀವ ತಿನ್ನುವ ಸಮಯದಲ್ಲೆ ಮುನ್ಸಿಪಾಲ್ಟಿಯ ಪೌರ ಕಾರ್ಮಿಕನೊಬ್ಬ ಸುಡುಗಾಡಿನ ಗೇಟಿನ ಮುಂದಿನ ರಸ್ತೆಯಲ್ಲಿ ದಿನಾಲೂ ಕಸ ಹೊಡೆಯಲು ಬಂದು ಇವಳನ್ನು ಬುಟ್ಟಿಗೆ ಹಾಕಿಕೊಂಡಿದ್ದರಿಂದ ಮಗಳ ಮದುವೆಯ ಚಿಂತೆ ದೂರಾಗಿತ್ತು.

***

ಯಾರೋ ಕೋಲಿಂದ ತಿವಿದಂಗಾಗಿ ದರೆಯಪ್ಪ ಗಾಬರಿಯಾಗಿ ಹೊದ್ದ ಲುಂಗಿಯಿಂದ ಮುಖ ಹೊರಗ್ಹಾಕಿ ನೋಡಿದರೆ ಪೊಲೀಸ್. ಸಡನ್ನಾಗಿ ಎದ್ದು ಕುಳಿತ.

‘ಹೆಣದ ಮನಿ ಮುಂದ ಮಲಕ್ಕೊಂಡಿಯಲ್ಲೋ ಹುಚ್ಚಗಿಚ್ಚ ಹಿಡದದನ ನಿನಗ. ವಾಚಮನ್ ಏನಾದ್ರೂ ನಿದ್ದೆಗಣ್ಣಾಗ ಬಂದು ಹೆಣ ಇಲ್ಯಾಕ ಬಾಗಲದಾಗ ಬಿದೈತಿ ಅಂತ ತಗ್ದು ಒಳಗ ಒಗ್ದ ಅಂದ್ರ ಏನು ಮಾಡ್ತಿ, ನಡಿ ನಡಿ ಅಕ್ಕಾಡಿ’ ಅಂದ. ದರ್ಯಾಮುಖ ಕಿವುಚುತ್ತಲೇ ಲುಂಗಿ ಸುಟಗೊಂಡು ಹೆರಿಗೆ ವಾರ್ಡ್ ಮುಂದ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಂಡಿ ಊರಿದ.

ಮತ್ತೆ ಸುಡಿಗಾಡಿನದೆ ನೆನಪುಗಳು, ಇವನೌನ ಇವತ್ತೊಂದಿನ ಸುಡುಗಾಡು ಬಿಟ್ಟು ಬಂದಿನಿ, ಆದ್ರ ಅದು ನನ್ನ ಬಿಡೊಲ್ಲದು ಅಂತ ನಗಿ ಬಂತು. ಸುಡುಗಾಡಿಗೆ ಹೆಣ ತರುವವರೆಲ್ಲ ತಮ್ಮ ಮೃತ ಬಂಧುವನ್ನು ಯಾರನ್ನಾದರೂ ಹುಗಿದಲ್ಲಿ ಹುಗಿಬಾರದು, ಹೊಸ ಜಾಗಾನೇ ಬೇಕು ಎಂದು ಹಟ ಹಿಡಿಯುವವರನ್ನು ಕಂಡು ಅವನಿಗೆ ಸಿಕ್ಕಾಪಟ್ಟಿ ನಗುಬರತಿತ್ತು. ಪರಪಂಚದ ತುಂಬಾ ಜನಾನ ತುಂಬ್ಯಾರ, ಅವರಿಗೆಲ್ಲ ಹೊಸ ಜಾಗ ಹುಡುಕ್ಕೋತ ಹೊಂಟರ ಇಡಿ ಪರಪಂಚನೆ ಗೋರಿಗಳಿಂದ ತುಂಬಿಕೋತೈತಿ. ಇಂಥ ಸಣ್ಣ ವಿಚಾರ ಈ ಜನಕ್ಕ ಹೊಳಿದುಲ್ಲಲಾ ಅಂತ ಅನಕೋತ ’ಈ ಜಾಗ ಪ್ರೆಸ್ ಐತ್ರಿ ಸಾಹೆಬರ,’ ಅಂತ ಸುಳಸುಳ್ಳೆ ಹೇಳಿ ಕೆಲಸ ಶುರು ಮಾಡ್ತಿದ್ದ. ಆದ್ರ ಮಜಕೂರ ಅಂದ್ರ ಅಲ್ಲಿ ಇನ್ನು ಕೊಳಿಲಾರದ ಕೈ ಕಾಲಿನ ಎಲುಬುಗೊಳು ಸಿಕ್ಕು ದರಿಯನನ್ನು ಅಡಕತ್ತರ್ಯಾಗ ಸಿಲುಕಿಸುತ್ತಿದ್ದವು. ಕೆಲವರಂತೂ ತಾವು ಸಾಯುದಕಿಂತ ಮೊದಲ ಪಾಲಿಕೆಗೆ artಒಂದಿಷ್ಟು ದುಡ್ಡು ಕೊಟ್ಟು ನನ್ನ ಇಲ್ಲೆ ಹುಗಿಬೇಕು, ಹುಗಿದ ಮ್ಯಾಲ ಗೋರಿ ಕಟ್ಟಿ ಅದರ ಮೇಲೆ ತಮಗೆ ಬೇಕಾದ ದೇವರ ಚಿತ್ರವನ್ನು ಕೆತ್ತಬೇಕು ಅಂತ ಕಂಡಿಶನ್ ಹಾಕಿದ ಮ್ಯಾಲ ಸಾಯತಿದ್ರು. ಈ ಜಲಮು ಶಾಶ್ವತ ಅಲ್ಲ ಅಂತ ಗೊತ್ತಿದ್ದು ಇರೂಮಟ ಅದು ನಂದು ಇದು ನಂದು ಅಂತ ಬಡಿದಾಡೂ ಜನ, ತಾವು ಸತ್ತ ಮ್ಯಾಲೂ ತಮ್ಮ ಗೋರಿಗಾಗಿ ಬಡಿದಾಡತಾರಂದ್ರ….

ಎಲ್ಲ ಸುಡುಗಾಡದಾಗೂ ಗೋರಿ ಕಟ್ಟಿಸಿಗೋತ ಹೊಂಟಿದ್ದರಿಂದ ಪರಪಂಚದ ಸುಡುಗಾಡಗೊಳೆಲ್ಲ ಗೋರಿಗೊಳಿಂದ ತುಂಬಿ ಬಿಟ್ಟಾವು. ಅದಕ್ಕಂತ ಇತ್ತಿತ್ತಲಾಗ ಹೆಣ ಸುಡಾಕೂ ಒಂದು ಮಷಿನು ಕಂಡು ಹಿಡಿದಾರ.

ಮಷಿನ್ ಅಂದಕೂಡ್ಲೆ ದರ್ಯಾನ ತಲ್ಯಾಗ ಸೊಟ್ರಾಮ ಮತ್ತು ಅವನ ಸುಡುಗಾಡು ನೆನಪಾತು. ಇತ್ತೀಚೆಗಷ್ಟೆ ದರ್ಯಾ ಸೊಟ್ರಾಮನ ಸುಡುಗಾಡು ಹೊಕ್ಕು ಬಂದಿದ್ದ. ಹೋದ ಕೂಡ್ಲೆ ದಂಗಾಗಿ ಬಿಟ್ಟಿದ್ದ. ನಳದ ಮುಂದ ಕೊಡಪಾನ ಪಾಳೆಕ ಇಟ್ಟಂಗ ಐದಾರು ಹೆಣ ದಾರ್ಯಾಗ ಇಟ್ಟಿದ್ದರು. ಅದರಾಗ ಬಾಳಷ್ಟ ಹೆಣ ಮುದುಕುರವೆ ಆಗಿದ್ದರಿಂದ್ಲೋ ಏನೋ, ಆ ಹೆಣಗಳ ಸಂಬಂಧಿಕರು ಅಷ್ಟೆನೂ ದುಖಃ ಪಡದೆ ನಿರಾಳರಾದವರಂತೆ ಅಲ್ಲೆ ಬೆಂಚಿಕಲ್ಲಿಗೆ ಒರಗಿಕೊಂಡು ಅನು ತನು ಮಾತಾಡಕೋತ ಕುಂತಿದ್ರು. ಹೆಣದ ಬಾಯಲ್ಲಿ ನೊಣ ಹೋಗಿ ಬಂದರೂ ಅವರ್ಯಾರಿಗೂ ಖಬರಿರಲಿಲ್ಲ. ಮಧ್ಯಾಹ್ನದ ಮಟಾ ಮಾತ್ರ ರಜೆ ಹಾಕಿ ಸಂಸ್ಕಾರಕ್ಕೆಂದು ಬಂದಿದ್ದ ಹೆಣಗಳ ಕೆಲ ಸಂಬಂಧಿಕರ ಬೇಗ ಮುಗಿದುಬಿಟ್ಟರೆ ಸಾಕು. ಇಲ್ಲಂದ್ರ ರಜೆ ಮುಂದುವರೆಸಬೇಕಾಕೈತೋ ಅಂತ ದಿಗಿಲಿಗೆ ಬಿದ್ದಿದ್ದರು.

ಅಲ್ಲೆ ಇದ್ದ ಸೊಟ್ರಾಮ ಗುಟಕಾ ಜಗಿತಾ ಎತ್ತಲೋ ನೋಡಕೋತ ಕುಂತಿದ್ದ. ‘ಯಾಕೋ ರಾಮ್ಯಾ ಆರಾಮಿಲ್ಲೇನು, ಮುಖ ಒಂಥರಾ ಆಗೈತೆಲ್ಲ. ಯಾಕ ಕೆಲಸ ಶುರು ಹಚ್ಚಗೋಬೇಕಿಲ್ಲ. ಸುಡಗಾಡಕ್ಕ ಇಷ್ಟೊಂದು ಹೆಣ ಬಂದಾವು. ಏಳು ನಾನು ಕೈ ಜೋಡಿಸ್ತಿನಿ’ ಅಂತ ದರ್ಯಾ ಅವನ ಹತ್ತಿರಕ್ಕೆ ಸರಿದ.

ಇಷ್ಟ ಸಾಕಿತ್ತು, ಸೊಟ್ರಾಮನ ಕಣ್ಣು ತೇವಗೊಂಡವು. ‘ಆ ಹೆಣಗಳನ್ನು ದಫನ್ ಮಾಡೋದು ನನ್ನ ಕೆಲಸ ಅಲ್ಲೋ ಕಾಕಾ. ಅಲ್ಲೊಂದು ದೆವ್ವದಂತ ಮಷೀನ್ ಐತಿ, ಅದು ನನ್ನ ಕೆಲಸ ಕಸಕೊಂಡು ಕುಂತೈತಿ. ಹೊಟ್ಟಿ ತುಂಬ ಊಟ ಮಾಡಿ, ಎರಡ್ಮೂರು ತಿಂಗಳಾತೋ ಕಾಕಾ, ಮಷಿನ್ ಯಾವತ್ತೋ ಬಂದೈತೋ ಅವತ್ತಿಂದ ಮೈ ತುಂಬಾ ಕೆಲಸಾನು ಇಲ್ಲ, ಹೊಟ್ಟಿ ತುಂಬ ಊಟಾನೂ ಇಲ್ಲ. ಇಲ್ಲಿಂದ ಎಲ್ಯಾರ ದೂರ ಹೋಗಬೇಕು ಅಂತ ಅನಿಸತೈತಿ. ಆದ್ರ ಎಲ್ಲಿ ಹೋಗಬೇಕು, ಏನು ಮಾಡಬೇಕು ಅನ್ನೊದು ತಿಳಿವಲ್ಲದಂಗ ಆಗೇತಿ’ ಅಂತ ನೆಲಕ್ಕ ದೃಷ್ಟಿ ಚೆಲ್ಲಿದ.

ದರ್ಯಾಗ ಅವತ್ತು ದೊಡ್ಡ ವಿಚಿತ್ರ ನೋಡಿದಂಗಾತು. ‘ಕಲಿಕಾಲ ಬರತೈತಿ, ಹಡಿಯಾಕ ಮಷೀನು, ದಪನ್ ಮಾಡಾಕ ಮಷೀನು ಬರತಾವು. ತೂಗಿ ತಿಂದು ತಿಣುಕಿ ಹೇಲೋ ಕಾಲ ದೂರಿಲ್ಲ’ ಅಂತ ಬುಡಬುಡಿಕ್ಯಾ ಹೋದ ವರ್ಷ ಹೇಳಿದ್ದನ್ನೆ ದೇನಿಸಿಕೊತ ಕುಂತ.

ಅಷ್ಟರೊಳಗ ಕರೆಂಟ್ ಬಂದುವಂಥ ಯಾರೊ ಒಬ್ಬ ಒದರಿದ್ರು. ಹೆಣ ಮಷೀನ್ ಬಾಯಾಗ ಕೋಡೋದನ್ನ ನೋಡಾಕಂತ ದರ್ಯಾ ಎದ್ದು ಬಂದ. ಎಲ್ಲ ಪೂಜಾವಿಧಿ ಮೂಗಿದ ಮ್ಯಾಲ ಅಂಗಡಿ ಬಾಗಿಲದಂಥ ಷಟರ್ ಮ್ಯಾಲ ಎಳದು ಅದರೊಳಗ ಹೆಣ ತುರುಕತಿದ್ರು. ಮತ್ತ ಬಾಗಲು ಹಾಕಿ ಒಂದೈದು ನಿಮಿಷ ಬಿಟ್ಟು ಷೆಟರ್ ತೆಗದು ನೋಡಿದರ ಅಲ್ಲಿ ಹೆಣ ಮಂಗ ಮಾಯ. ಈಗಷ್ಟೆ ಹೆಣ ತಿಂದರೂ ಹಸಿವು ನೀಗದಂತಿದ್ದ ಅಲ್ಲಿನ ನಿಗಿ ನಿಗಿ ಕೆಂಡ ಬಾಯ್ದೆರೆದು ತನ್ನನ್ನೆ ಕರೆದಂತಾಗಿ ದರೆಪ್ಪ ಅಲ್ಲಿಂದ ಕಣ್ ಕಿತ್ತಿದ್ದ.

ಆ ಮಷೀನ್ ಪಕ್ಕವೇ ಪ್ಯಾಂಟು ಶರಟು ಹಾಕಿದ್ದ ಒಬ್ಬ ಹುಡುಗ ಆಪೀಸರ್ ದಿಮಾಕಿನಲ್ಲಿ ಬಟನ್ ಒತ್ತುವುದು ಆರ್ಸೂದು ಮಾಡ್ತಿದ್ದ. ಅಂವನನ್ನು ತೋರಿಸಿದ ಸೊಟ್ರಾಮ ‘ಮಷಿನು ನಡಿಸಾಕಂತ ಅವಂಗ ಸರಕಾರ ಪಂದ್ರ ಸಾವಿರ ಪಗಾರ ಕೊಡೋ ನೌಕರಿ ಕೊಟ್ಟೈತಿ. ಬಟನ್ ಚಾಲೂ ಮಾಡೂದು ಬಂದ್ ಮಾಡೂದು ಅಷ್ಟ ಅಂವನ ಕೆಲಸ. ಇವನೌನ ನಾವಿಲ್ಲಿ ಮೈ ನೂಸುವಂಗ ತೆಗ್ಗ ತೊಡೋದು, ಹೆಣ ಸುಡೊದು ಮಾಡಿದ್ರೂ ನಯ್ಯಾಪೈಸೆ ಕೊಡೂದಿಲ್ಲ.’ ಸೊಟ್ರಾಮ ಸುಡುವ ಬಿಸಲಲ್ಲಿ ಬೆವರಿಳಿಸಿಕೊಂಡು ಕೊತಕೊತ ಕುದಿಯುವ ತನ್ನ ನೋವು ತೋಡಿಕೊಂಡ. ಅವನಿಗೆ ಏನು ಹೇಳಬೇಕಂಬೂದು ಗೊತ್ತಾಗದ ದರ್ಯಾ ಸ್ವಲ್ಪ ಹೊತ್ತಿನ ಮ್ಯಾಲ ತನ್ನ ಸುಡುಗಾಡಿನ ದಾರಿ ಹಿಡಿದಿದ್ದ. ಈ  ಮಾಯಾವಿ ಮಷೀನು ತಮ್ಮ ಮಂದಿಯ ಬದುಕನ್ನೆ ನುಂಗುವುದಾದರೆ ಯಾಕಿದನ್ನು ಕಂಡು ಹಿಡಿದರೋ, ನಾವೇನು ಅನ್ಯಾಯ ಮಾಡಿದ್ದೇವೆಯೋ, ಎಂಥ ಕಾಲ ಬಂತು. ಮುಂದ ತುತ್ತಿಡಾಕೂ ಮಷೀನು, ಹಿಂದ ಕುಂಡಿ ತೊಳಿಯಾಕೂ ಮಷೀನು ಬಂದು ನಮ್ಮಂಥ ಬಡವರು ಬದುಕಾಕ ದಾರಿನೇ ಇಲ್ಲದಂಗಾತೋ ಅಂತ ಸೊಟ್ರಾಮನ ಬಡಬಡಿಕೆ ದರೆಪ್ಪನನ್ನು ಬೆನ್ನು ಬೀಡದೆ ಹಿಂಬಾಲಿಸಿ ಗೋಳು ಹೊಯ್ಕೊಳುತ್ತಿತ್ತು.

ಹಿಂಗ ನೆನಪುಗಳ ಜಾತ್ರೆ ನೆರೆದು ದಗ್ಗುದುಳಿಯುತ್ತಿರುವಾಗಲೇ ದರೆಪ್ಪ ಸುಸ್ತಾಗಿ ನಿದ್ದಿ ಉಡಿಯಾಗ ಬಿದ್ದಿದ್ದ.

***

ಬೆಳಗಿನ ಜಾವ ಯಾವಾಗಲೋ ದರ್ಯಾನನ್ನು ಎಬ್ಬಿಸಿಕೊಂಡು ಸಿಕ್ಕ ಆಟೋ ಹಿಡಿದುಕೊಂಡು ಸುಡುಗಾಡಿಗೆ ಕರೆದುಕೊಂಡು ಬಂದಿದ್ದಳು ಮಾತೆವ್ವ. ಮಳೆ ತಣ್ಣಗೆ ಹಣಿಯುತ್ತಲೆ ಇತ್ತು. ನಾಲ್ಕು ಗೋಡೆಯ ಮೇಲೆ ತಗಡಿನ ಶೀಟು ಹೊದಿಸಿರುವ ಒಂದು ಗೂಡಿನಲ್ಲಿಯೇ ಇವರ ವಂಶದ ಬಳ್ಳಿ ಚಿಗಿತು ಹಬ್ಬತೊಡಗಿ ಈ ಹಂತಕ್ಕೆ ಬಂದಿತ್ತು. ಆ ಗೂಡಿನಲ್ಲೆ ಈಗ ಸ್ಟೇಲ್ಲಾಳ ಬಾಣಂತನವಾಗಬೇಕು.

ಆ ಬೆಳಗ್ಗೆ ಮನೆಗೆ ಬಂದರೆ ಮನೆ ತುಂಬ ತಟ ತಟ, ಯಾವತ್ತೋ ಹೊದೆಸಿದ ತಗಡುಗಳು ಅಲ್ಲಲ್ಲಿ ತೂತು ಬಿದ್ದ ಸೋರುತ್ತಿದ್ದವು. ಬಾಗಿಲುಗಳಿಲ್ಲದ ಕಿಡಕಿಯಿಂದ ರಾಜೋರೋಷವಾಗಿ ಪ್ರವೇಶ ಮಾಡುತ್ತಿದ್ದ ಮಳೆಗಾಳಿಗೆ ಮಾತೆವ್ವ ಉಡಿಯಲ್ಲಿನ ಮಗು ಅವಚಿಕೊಂಡು ದಿಗಿಲಿಗೆ ಬಿದ್ದು ದರ್ಯಾನತ್ತ ನೋಡಿದಳು. ನಿದ್ದೆಯ ಮಂಪರಿನಲ್ಲಿದ್ದ ದರ್ಯಾ ಸಿಕ್ಕ ಹಾಸಿಗೆ ತುಗೊಂಡು ರುದ್ರಮಂಟಪದ ಕಡೆ ಹೊಂಟಬಿಟ್ಟಿದ್ದ.

‘ಎ ಮೂಳಾ, ಹಂಗ ಹೊಂಟೆಲ್ಲ, ಅಟು ಖಬರೈತಿಲ್ಲ ನಿಂಗ, ಮಗಳ ಹಸಿ ಮೈಯ್ಯಾಕಿ ಆದಾಳ ಅನ್ನೂದರ ಗೊತ್ತೈತಿಲ್ಲೋ. ಮನಿ ನೋಡಿದರ ಒಂದ ಸಂವನ ಸೋರತೈತಿ. ಹೋಗು. ಎನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲ ಕಿಡಕಿ ಬಂದ್ ಮಾಡಿ ಬಾ.’ ಅಂತ ಆದೇಶಿಸಿಬಿಟ್ಟಳು.

ಸುರಿಯುವ ಮಳೆಯೊಳಗ ರೇಗಾಡುತ್ತಲೇ ಹೊರಗೆ ಹೋದ ದರಿಯ ಕಿಡಕಿ ಹ್ಯಾಂಗ ಮುಚ್ಚೋದು ಅಂತ ಸ್ವಲ್ಪ ಹೊತ್ತು ವಿಚಾರ ಮಾಡ್ದ. ಏನೇನೋ ದೇನಕಿ ಹಾಕ್ಕೊಂಡು ಹುಡುಕಾಡಿದ. ಏನೂ ಸಿಗಲಿಲ್ಲ. ಅದೆ ಹೊತ್ತಲ್ಲಿ ಬಿದ್ದ ಕೋಲ್ಮಿಂಚಿನ ಬೆಳಕಲ್ಲಿ ಗೋರಿಗಳ ಮೇಲೆ ಹುಗಿಯಲಾಗಿದ್ದ ನಾಮಫಲಕಗಳು ಇವನನ್ನು ಕರದಂಗಾತು. ಜೀವವಿರುವ ಮನುಷ್ಯರಿಗಿಂತ ಸತ್ತ ಮನುಷ್ಯರೆ ಒಳ್ಳೆಯವರು ಎನ್ನುವ ಅವನು ನಂಬಿದ ಏಕೈಕ ತತ್ವ ಈ ಸಮಯದಲ್ಲಿ ಮತ್ತೆ ನೆನಪಿಗೆ ಬಂದು ಮನಸ್ಸು ಅರಳಿತು. ನೂರಾರು ವರ್ಷದ ಹಿಂದ ಗೊರಿಗಳೊಳಗ ಮಲ ಮುಂತಾದ ಸಜ್ಜನರು ‘ಬಾ ದರ್ಯಾ’ ಅಂತ ಕರೆದಂಗಾತು. ಈ ಹಿರಿಕರ ಶತಮಾನದ ಗೋರಿಗಳು ತಮ್ಮ ಮೈಮೇಲಿನ ಗಚ್ಚು ಸಿಮೆಂಟ್ ಉದುರಿ ಹೋಗಿ ಕೇವಲ ಮೂಲೆಗಲ್ಲು, ನಾಮಪಲಕಗಳ ಅಸ್ತಿಪಂಜರವನ್ನು ಮಾತ್ರ ಹೊದ್ದು ನಿಂತಿದ್ದವು. ಕೆಲವು ಗೋರಿಗಳ ನಾಮಪಲಕವೂ ಕಳಚಿ ಬಿದ್ದು, ಯಾವುದೂ ಶಾಶ್ವತವಲ್ಲ ಎಂಬ ಲೋಕ ನೀತಿಗೆ ಸಾಕ್ಷಿಯಾಗಿದ್ದವು.  ದರ್ಯಾ ತನಗೆ ಬೇಕಾದ ಆಕಾರದ ಐದಾರು ನಾಮಫಲಕಗಳನ್ನು ತಂದು ಗಾಳಿ ಮಳೆ ಪ್ರವೇಶಿಸದಂತೆ ಕೋಲಿಯ ಕಿಡಕಿಗಳಿಗೆ ಮುಚ್ಚಿದ.

ಒಳಗೆ ಮಗು ಕಿಲ ಕಿಲ ಅಂತ ನಗುತ್ತಿತ್ತು. ಹೆರಿಗೆ ಸುಸ್ತಿನಲ್ಲಿದ್ದ ಮಗಳು ನಿದ್ದೆ ಹೋಗಿದ್ದಳು. ಮಾತೆವ್ವ ಮಗಳು ಮೊಮ್ಮಗಳಿಗೆ ಮಳೆ ನೀರು ಸಿಡಿಯದಂತೆ ಹಗ್ಗದ ಮಂಚದ ಮೇಲೆ ಪ್ಲ್ಯಾಸ್ಟಿಕ್ ಹಾಳೆಯೊಂದನ್ನು ಕಟ್ಟುತ್ತಿದ್ದಳು. ಒಂದೆರಡು ಗೋಣಿ ಚೀಲಗಳನ್ನು ತೆಗೆದುಕೊಂಡ ದರ್ಯಾ ಮಲಗಲು ರುದ್ರಮಂಟಪದತ್ತ ಹೆಜ್ಜೆ ಹಾಕಿದ. ನಿದ್ರೆ ಕಣ್ತುಂಬುವವರೆಗೆ ನೆನಪುಗಳು ಅವನಿಗೆ ಮತ್ತೆ ಜೊತೆಯಾದವು.

ಮರುದಿನ ಬೆಳಗ್ಗೆ ಮಾತೆವ್ವ ಹಾಸಿಗೆ ಜಗ್ಗಿ ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾದುದು. ‘ಒಂದು ಬದುಕು ಬರೂದೈತಿ. ಒಂದು ಕುಣಿ ರೆಡಿ ಮಾಡಬೇಕು, ಎದ್ದೇಳು.’ ಅಂತ ಹಾಸಿಗೆ ಜಗ್ಗತೊಡಗಿದಳು. ತಮ್ಮೊಡಲಿಗೆ ಅನ್ನ ಹಾಕುವ ಹೆಣಗಳನ್ನೆ ಬದುಕು ಎಂದು ಕರೆಯುವ ಕಾಯಕ ಜೋಡಿಯದು.

‘ಇನ್ನೊಂದು ತಾಸಿನ್ಯಾಗ ತರ್ತಾರಂತ ಜಲ್ದಿ ಎಳು’ ಅನಕೋತ ಅಂವ ಹೊಳ್ಳಿ ಮಕ್ಕೊಂಡು ಗಿಕ್ಕೊಂಡಾನು ಅಂತ ಅಂವನ ಕೌದಿಯನ್ನು ಬಗಲಲ್ಲಿ ಇಟ್ಟುಕೊಂಡೆ ಮಾತೆವ್ವ ಕೋಲಿ ಕಡೆ ನಡೆದಳು. ಅವಳ ಹಿಂದಿಂದ ಆಕಳಿಸಿಕೊತ ಹೊದ ದರಿಯ ಬಿಸಿ ಬಿಸಿ ಚಾ ಕುಡ್ದು ಮೊಮ್ಮಗಳಿಗೆ ಮುಖ ನೋಡಿ ನಿನ್ನ ದರ್ಶನದಿಂದ ಇವತ್ತು ಚಲೋತಂಗ ಚಿಲ್ಲರೆ ಬರಲೆವ್ವ ನಿಮ್ಮವ್ವಗ ಕೋಳಿ ಸಾರು ಮಾಡಿ ಹಾಕ್ತೆನಿ ಅನಕೋತ ಸಲಕಿ ಕೆಬ್ಬಣ ಪುಟ್ಟಿ ತುಗೊಂಡು ಹೊರ ನಡೆದ.

ಒಂದು ಮೂಲೇಲಿ ಜಾಗ ಗುರುತಿಸಿ ಹಡ್ಡಬೇಕಂದವನಿಗೆ ಏನೋ ನೆನಪಾಗಿ ಸುಡುಗಾಡಿನ ಗೇಟ್‍ಕಡೆ ನಡೆದ. ಸುಡುಗಾಡಿನ ತಿರುವಿನಲ್ಲಿದ್ದ ಸರೆ ಅಂಗಡಿಗೆ ಹೋಗಿ ಉದ್ರಿ ಹೇಳಿ ಒಂದು ಬಾಟಲಿ ಹೊಟ್ಟಿಗಿಳಿಸಿ ಬಂದು ಕುಣಿ ತೋಡತೊಡಗಿದ. ಸ್ವಲ್ಪ ಹೊತ್ತಿಗೆ ತನ್ನ ಸೆರಗನ್ನೆ ಸಿಂಬಿಯನ್ನಾಗಿ ಮಾಡಕೋತ ಮನಾತೆವ್ವನೂ ಬಂದೂ ಜೋಡಾದ್ಲು. ಇಂವ ಕ್ಷಣ ಕ್ಷಣಕ್ಕೂ ಕುಣಿಯೊಳಗ ಇಳಿಯುತ್ತಾ ಹೋದಂತೆ ಮಾತೆವ್ವಳೂ ಕುಣಿಯೊಳಗ ಇಳಿದ್ಲು. ಇಂವ ಸಲಕಿಗೆ ತುಂಬೋದು, ಮಾತೆವ್ವ ಬುಟ್ಟಿ ಹೊರಗ ಚೆಲ್ಲೋದು ಸೂರ್ಯ ಹೆಗಲ ಮೇಲೆ ಬರೂವರೆಗೂ….

***

ಕುಣ್ಯಾಗ ಹೆಣ ಇಟ್ಟ ಮಂದಿ ನಿರುಮ್ಮಳಾಗಿ ಮನೆ ಕಡೆ ಹೊರಡುವಾಗಲೇ ಅವರಿಗೆ ಆ ನಾಮಪಲಕಗಳು ಕಣ್ಣಿಗೆ ಬಿದ್ದು ಮುಂದಿನ ವೀಪರೀತಕ್ಕೆ ಕಾರಣವಾಗಿದ್ದವು. ಆ ಗುಂಪಿನಲ್ಲಿದ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ’ ಅಂತ ಚೀರಾಡತೋಡಗಿದ್ದನ್ನು ನೋಡಿದ ಮಾತೆವ್ವ ಭಯದಿಂದ ಥರಗುಟ್ಟಿ ಒಳಗೆ ದನಿವಾರಿಸಿಕೊಳ್ಳುತ್ತಿದ್ದ ಗಂಡನನ್ನು ಕರೆದಳು. ದರ್ಯಾ ತೇಲಗಣ್ಣು ಮೇಲುಗಣ್ಣು ಹಾಕೋತ ಬಂದ ನಿಂತ.

‘ಮಗನ ಇಂವನ್ಯಾಕ ಇಲ್ಲಿ ಇಟಗೊಂಡಿದ್ದಿ, ಸೊಕ್ಕ ಮೈ ಏರಿತೇನ’
‘ಎಪ್ಪ ರಾತ್ರಿ ಮಳಿ ಬರತಿತ್ತ ಅದಕ್ಕ..’
‘ಅದಕ್ಕ ನಮ್ಮ ಹಿರಿಯಾರ ಬೇಕೇನೋ ಮಗನ ನಿನಗ.. ಯಾರನ್ನ ಕೇಳಿ ತೊಗೊಂಡಿ.’
‘ಎಪ್ಪ ಯಾರನ್ನೇನು ಕೇಳೋದು. ಹುಟ್ಟಿದಾಗಿಂದ ಇಲ್ಲಿ ಬದುಕೇನಿ, ಈ ಸುಡಗಾಡ ನನ್ನ ಮನಿ, ಇಲ್ಲಿ ಮಕ್ಕೊಂಡರಲ್ಲಾ, ಈ ಗೋರಿಗಳೊಳಗ, ಅವರು ನಮ್ಮ ದೇವರು.. ನನ್ನ ಮೊಮ್ಮಗಳ ಕಷ್ಟ ನೋಡಲಾರದ ಅವರ ನನಗ ಈ ಪಾಠಿಗಲ್ಲು ತೊಗೊಂಡು ಹೋಗು ಅಂದ್ರು, ಅಂದಕ್ಕ ತಂದ ಇಟಗೊನ್ನಿ.’

ಒಂದಿಷ್ಟು ಜನ ಕೊಳ್ಳೆಂದು ನಕ್ಕರು. ಆದ್ರ ಒಬ್ಬ ‘ಮಗನ್ನ ಸುಳ್ಳು ಹೇಳತಿ’ ಅಂತ ಗುಂಪಿನಲ್ಲಿದ್ದವನೊಬ್ಬ ಜಾಡಿಸಿ ಒದ್ದೆಬಿಟ್ಟ! ಇನ್ನೊಂದಿಷ್ಟು ಜನ ಬಿದ್ದವನ ತುಳಿಯಲು ಮುಂದೆ ಸರಿದರು.
ಗುಂಪಿನಲ್ಲಿದ್ದ ಹಿರಿಯನೊಬ್ಬ ಇದನ್ನೆಲ್ಲ ನೋಡಲಾರದೆ ‘ಏ ಒದಿಬ್ಯಾಡ್ರೋ ಅಟ್ರಾಸಿಟಿ ಕೇಸ್ ಹಾಕಿದ್ರ ಜಡಾ ಆಕೈತಿ’ ಅಂತ ಅವರನ್ನೆಲ್ಲ ಹಿಂದೆ ಸರಿಸಿದ.

ಕಹಿರಸ ಮುಖಂಡ ಇನ್ನು ಬುಸುಗುಡುತ್ತಲೇ ಇದ್ದ. ‘ಕಿರಿಸ್ತಾನ ಮಗನ್ನ ನಮ್ಮ ಸುಡುಗಾಡಿಂದ ಒದ್ದೋಡಿಸುವರೆಗೂ ನಮ್ಮ ಹಿರಿಕರ ಈ ಗೋಳು ತಪ್ಪುವಂಗಿಲ್ಲ. ಮೊದಲು ಇಂವನ ಮ್ಯಾಲೆ ಒಂದು ಕೇಸು ಜಡಿಯೋನು ಬರ್ಯೋ’ ಅಂತ ಒಂದಿಷ್ಟು ಗುಂಪು ಹೊಂಡಿಸಿಗೊಂಡು ಹೊರಟೇ ಬಿಟ್ಟ. ಹೋಗುವ ಮುನ್ನ ಸಾಕ್ಷಿಗಿರಲೆಂದು ತನ್ನ ಮೊಬೈಲ್‍ನಿಂದ ಉಲ್ಟಾ ಪಲ್ಟಾ ಇಟ್ಟಿದ್ದ ನಾಮಫಲಕಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಅವನಿಗೆ ಕ್ರಿಶ್ಚಿಯನ್ ಅನುಯಾಯಿಗಳ ಮೇಲೆ, ಅದರಲ್ಲೂ ಯಾರ ಯಾರದೋ ಮಾತು ಕೇಳಿ ತಮ್ಮ ಧರ್ಮವನ್ನೆ ಮಾರಿಕೊಂಡವರ ಮೇಲೆ ಬಹಳ ಸಿಟ್ಟಿತ್ತು. ಭಾರತ ಹಿಂದೂಗಳ ದೇಶವೆಂದು ಆತ ಬಲವಾಗಿ ನಂಬಿದ್ದ. ಹೇಗಾದರೂ ಮಾಡಿ ಅನ್ಯ ಧರ್ಮದ ಕುನ್ನಿಗಳನ್ನ ಓಡಿಸೋಣ ಎಂದು ಆಗಾಗ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದ. ಆತ ಬಹಳ ದಿನಗಳ ನಂತರ ಮಾತನ್ನು ಕೃತಿಗಿಳಿಸಲು ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಹುಮ್ಮಸ್ಸಿನಲ್ಲಿದ್ದ.

ಮುಸಲರ ಹುಡಗನೊಬ್ಬ ಹಿಂದೂ ಹುಡುಗಿಗೆ ಕಿಚಾಯಿಸಿದ್ದರ ಪ್ರಕರಣವೊಂದರ ಬಗ್ಗೆ ತಲೆಬಿಸಿ ಮಾಡಿಕೊಂಡ ಕುಂತಿದ್ದ ಪಿಎಸ್‍ಐ ಸೂರ್ಯರೆಡ್ಡಿ ಅವರು ಕಹಿರಸ ಸಂಘಟನೆಯವರು ತಂದ ದೂರನ್ನು ಆಲಿಸಿ ಮತ್ತಷ್ಟು ಗರಂ ಆಗಿದ್ದರು. ‘ಕೇವಲ ನಾಮಫಲಕಗಳ ಕಳುವು ಅಂಥ ಕೇಸು ಜಡಿದರೆ ಅದು ಸ್ಟ್ರಾಂಗ್ ಆಗೂದಿಲ್ಲ. ಸುಡಾಗಾಡಿನ್ಯಾಗ ಅಸ್ತಿಪಂಜರ, ಎಲುಬು, ಆಗಷ್ಟೆ ಹುಗಿದ ಹೆಣ ಮಾರ್ತಾನ ಅಂತ ಕೇಸ್ ಜಡಿರಿ. ಒಂದಷ್ಟು ವರ್ಷ ಕಂಬಿ ಎಣಿಸಲಿ ಮಗಾ’ ಅಂತ ತಮಗೆ ತಿಳಿದ ಕೆಲವು ಸೆಕ್ಷೆನ್‍ಗಳ ನಂಬರ್ ಹೇಳಿ ತಮ್ಮ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಿಕೊಂಡರು. ಜೊತೆಗೆ ಕಹಿರಸ ಸಂಘಟನೆ ಮುಖ್ಯಸ್ಥರಿಂದ ಶಹಬ್ಬಾಷಗಿರಿ ಸಿಕ್ಕು ಮತ್ತಷ್ಟು ಖುಷಿಗೊಂಡರು.

ಇಲ್ಲಿ ಕೇಸು ಜಡಿಯಲಾಗುತ್ತಿದ್ದರೆ ಅಲ್ಲಿ ರುದ್ರಮಂಟಪದೊಳಗೆ ನೆಮ್ಮದಿಯ ನಿದ್ದೆಯಲ್ಲಿದ್ದವನನ್ನು ಪೋಲೀಸ್ ಪೆದೆಗಳು ಎಳೆದು ತಂದರು. ಅಷ್ಟೊತ್ತಿಗಾಗಲೇ ಕಹಿರಸ ವೇದಿಕೆಯ ಸಮಾಜಸೇವಕರು ತಮಗೆ ಗೊತ್ತಿದ್ದ ಟಿವಿ ರೀಪೋರ್ಟ್‍ರ್‍ಗಳಿಗೆ ಪೋನಾಯಿಸಿ ಕರೆಸಿಕೊಂಡು ತಮ್ಮ ಸೇವೆಯನ್ನು ಸಾಧ್ಯಂತವಾಗಿ ವಿವರಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲಿಗೆ ಯಾವದೋ ಲೋಕದ ಪ್ರಾಣಿಯಂತೆ ಹಿಡಿದು ತರಲಾದ ದರ್ಯಾನನ್ನು ನೋಡಿದ ಟಿವಿ ವರದಿಗಾರರು ತಮ್ಮ ಕ್ಯಾಮರಾವನ್ನು ದರಿಯನತ್ತ ತಿರುಗಿಸಿದರು. ಕೇಸಿನ ತಳಬುಡವನ್ನು ಅರಿಯದ ದರಿಯ ಎಂದಿನಂತೆ ಹಲ್ಕಿರಿದು ಪೋಜು ಕೊಟ್ಟ. ಅವನನ್ನು ಸ್ಟೇಷನ್ನಿನಲ್ಲೆ ಇದ್ದ ಕಂಬಿಯೊಳಗೆ ನೂಕಿ ಕೀಲಿ ಜಡಿಯಲಾಯಿತು. ಇದ್ಯಾವುದರ ತಳಬುಡವೂ ಅರ್ಥವಾಗದ, ಅರ್ಥೈಸಿಕೊಳ್ಳಲು ಪ್ರಯತ್ನಿಸದ ದರಿಯ ಅಲ್ಲಿಯೆ ಟಾವೆಲ್ಲು ಚೆಲ್ಲಿ ಅಡ್ಡಾಗಿಬಿಟ್ಟ. ಬಹುಶಃ ಕುಡಿದದ್ದು ಇನ್ನು ಇಳಿಯದಿದ್ದುದರಿಂದ ಮತ್ತೆ ನೆನಪುಗಳ ಲೋಕದಲ್ಲಿ ವಿಹರಿಸಿ ನಿದ್ರೆಯ ಪಾತಳಿಗೆ ಬಿದ್ದು ನಿರಮ್ಮಳನಾದ.

ಇತ್ತ ಮಾದ್ಯಮಗಳಲ್ಲಿ ನೋಡಿ ಈ ಪ್ರಕರಣವನ್ನು ಗಂಭೀರವಾಗಿ ಕೆಲವು ದೇಶಭಕ್ತರು ದೇಶದ ರಕ್ಷಣೆಗಾಗಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಒಟ್ಟಾದರು. ತುರ್ತು ಸಭೆಗಳನ್ನು ನಡೆಸಿದರು. ಇದರ ಫಲವಾಗಿ ಮಾರನೆ ದಿನವೇ ಸುಡುಗಾಡಿನ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಹೆಣ, ಅಸ್ತಿಪಂಜರ ಮಾರಾಟ ಮಾಡುವ, ಹಿಂದೂ ಗೋರಿಗಳನ್ನು ದ್ವಂಸಗೊಳಿಸಿ ಸಮಾಜದ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಕ್ರಿಶ್ಚಿಯನ್ ದೊರೆರಾಜ್‍ನ ಕುಟುಂಬವನ್ನು ಕೂಡಲೆ ಸ್ಮಶಾನದಿಂದ ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಮಾತೆವ್ವನ ಮನೆ ಮೇಲೆ ಕಲ್ಲುಗಳು ಬಿದ್ದವು. ಸುದ್ದಿ ತಿಳಿದ ಅಳಿಯ ಮುನ್ಸಿಪಾಲ್ಟಿ ನೌಕರ ಗಂಗರಾಜು ಎಲ್ಲಿದ್ದವನೋ ಓಡೋಡಿ ಬಂದು ತಾಬಡತೋಬಡ ತನ್ನ ಬಾಣಂತಿ ಹೆಂಡತಿ ಮತ್ತು ಅತ್ತೆ ಮಾತೆವ್ವನನ್ನು ತನ್ನ ತಗಡಿನ ಮನೆಗೆ ಸಾಗಿಸಿದ.

ಹೆಣಗಳ್ಳತನ ಘೋರವಾದ ಅಪರಾಧವೇ ಆದ್ದರಿಂದ ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ದರಿಯನಿಗೆ 5 ವರ್ಷ ಸಜೆಯನ್ನು ವಿಧಿಸಿದರು.

***

5 ವರ್ಷಗಳಲ್ಲಿ ಏನೇನೆಲ್ಲ ಬದಲಾಗಿತ್ತು. ಅಳಿಯ ಗಂಗರಾಜು ತನ್ನ ಹೆಂಡತಿ ಮತ್ತು ಮಾತೆವ್ವನನ್ನು ತನ್ನ ಮನೆಯಲ್ಲೆ ಇಟ್ಟುಕೊಂಡು ಬಿಟ್ಟಿದ್ದ. ಸಂಸಾರ ಪೂರ್ತಿ ದರಿಯನೊಂದಿಗೆ ಸಣ್ಣಪುಟ್ಟದಕ್ಕೆಲ್ಲ ಜಗಳಾಡಿಕೊಂಡೆ ಕಳಿದಿದ್ದ ಮಾತೆವ್ವ ಅಳಿಯನ ಮನೆ ಸೇರಿದ ಮೇಲೆ ಯಾರೊಂದಿಗೂ ಮಾತನಾಡುವುದನ್ನು ಬಿಟ್ಟು ಗಂಡನ ನೆನಪಲ್ಲಿ ದಿನವೂ ಕುಸಿಯುತ್ತಾ ಹೋಗಿ ಒಂದಿನ ಮಣ್ಣಲ್ಲಿ ಸೇರಿಹೋದಳು.

ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ದರಿಯನ ಕುಟುಂಬದ ಅರಮನೆಯಂತಿದ್ದ ಮುರುಕಲು ಮನೆಯನ್ನು ಯಾವತ್ತೋ ಬಿಳಿಸಲಾಗಿದೆ. ಒಂದಲ್ಲಾ ಎರಡು ವಿದ್ಯುತ್ ಶವಾಗಾರಗಳನ್ನು ಜೋಡಿಸಲಾಗಿದೆ. ಅವುಗಳನ್ನು ನಡೆಸಲು ಪ್ಯಾಂಟು ಶರಟಿನ ನೌಕರರು ಪಾಳಿಯಲ್ಲಿದ್ದ ಹೆಣಗಳನ್ನು ಕಬ್ಬು ನುರಿಸುವಂತೆ ನುರಿಸುತ್ತಿದ್ದಾರೆ.

ಗೇಟ್ ಒಳಗೆ ನುಸುಳಿದ ಈ ಅಜ್ಜನನ್ನು ಕಂಡು ರಾಂಗಾದ ಕಾವಲುಗಾರ ‘ಏಯ್ ಯಜ್ಜಾ ಯಾಕ ಒಳಗ ಬರ್ತಿ? ಇಲ್ಲಿ ಜೀವ ಇರಾಕಿಲೆ ಒಳಗ ಬರಾಕ ಆಗೂದಿಲ್ಲ ಹೋಗ್ಹೋಗ’ ಅಂದ.

‘ಹಂಗಲ್ಲೊ ತಮ್ಮ ನನ್ನ ಹೆಂಡತಿ ಮಕ್ಕಳು ಇಲ್ಲೆ ಅದಾರ. ನನ್ನ ಮನಿ ಇಲ್ಲೇ ಐತೋ’ ಅಂತ ದರಿಯಜ್ಜ ಏನೇನೊ ಬಡಬಡಿಸತೊಡಗಿದ. ಕಾವಲುಗಾರನಿಗೆ ನಗು ಬಂತು. ಹೀಗೆಂದುಕೊಂಡೆ ಬರುವ ಹುಚ್ಚರನ್ನು ಆತ ಈ ಹಿಂದೆಯೂ ನೋಡಿದ್ದ. ಬಹುಶಃ ಅಜ್ಜನ ಹೆಂಡತಿ ಮಕ್ಕಳು ಯಾವದೋ ದುರಂತದಾಗ ಸತ್ತ ಮ್ಯಾಲ ಅವರನ್ನ ಇಲ್ಲೆ ಮಣ್ಣು ಮಾಡಿರಬೇಕು. ಅವರ ಸಾವು ಅಜ್ಜಗ ಹುಚ್ಚ ಹಿಡಿಸೈತಿ, ಪಾಪ. ಅನ್ಕೊಂಡ ಕಾವಲುಗಾರನಿಗೆ ಆ ಕ್ಷಣದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆಯ ನೆನಪಾದ. ಆದರೂ ಆತ ಅಸಹಾಯಕ. ಅತ್ಲಾಗ ಹೋಗ ಯಜ್ಜಾ, ರಾತ್ರಿ ಬಾಳ ಆಗೇತಿ ಅಂತ ಗೇಟ್ ಹಾಕತೋಡಗಿದ. drought-kelly-stewart-sieckತನ್ನ ಶಕ್ತಿ ಮೀರಿ ಗೇಟ್‍ಒಳಗೆ ನುಸಳಲು ಪ್ರಯತ್ನಿಸಿದ ದರಿಯಜ್ಜ ಕೊನೆಗೂ ಅದು ಸಾಧ್ಯವಾಗದೆ ಗೇಟ್ ಹೊರಗೆ ಉಳಿದು ಮುಸಗುಡತೊಡಗಿದ.

ಇದಾದ 8 ದಿನಗಳವರೆಗೂ ಅಜ್ಜ ಗೇಟ್ ಪಕ್ಕದ ಗಿಡದ ನೆರಳಲ್ಲಿ ತಳ ಊರಿದ್ದ. ಗೇಟ್ ಸಪ್ಪಳವಾದಾಗೊಮ್ಮೆ ಗೇಟ್ ಹತ್ತಿರ ಕಾಲೆಳೆದುಕೊಂಡು ಬರುತ್ತಿದ್ದ. ಒಳಗೆ ನುಸಳಲು ಸಾಧ್ಯವಾಗದೆ ಸೋತು ಗಿಡದ ಬಡ್ಡಿಗೆ ಹಿಂತಿರುಗುತ್ತಿದ್ದ. ಬರಬರುತ್ತ ಗೇಟಿನ ಕಡೆ ಕೇವಲ ಮಲಗಿದಲ್ಲಿಂದಲೇ ದೃಷ್ಟಿ ಹಾಯಿಸುತ್ತಿದ್ದ. 9ನೆ ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೆಯಾದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಇದ್ಯಾವುದರ ಪರಿವೆಯಿಲ್ಲದೆ ಬೈಕು, ಕಾರುಗಳಲ್ಲಿ ಕುಳಿತು ಓಡುತ್ತಲೇ ಇತ್ತು. ಎಲ್ಲಿಗೆ ಮುಟ್ಟುತ್ತೋ?

***