Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಅಕ್ಕನ ಮದುವೆ ಮಾಡಲು ಜೀತಕ್ಕೆ ಸೇರಿದ ಅಪ್ಪ 5 ರೂ.ಗಾಗಿ ತಡಕಾಡಿದಾಗ…!

                                                                                                                              – ಸೂರಿ

1995ರಲ್ಲಿ ನನ್ನಕ್ಕನ ಮದುವೆ ನಿಶ್ಚಯವಾಯಿತು. ಇದು ಎಲ್ಲರಂತೆ ನಮಗೆ ಸಂಭ್ರಮದ ವಿಷಯ ಆಗಿರಲಿಲ್ಲ. ಏಕೆಂದರೆ ಕೂಲಿಯನ್ನೇ ನಂಬಿ ಇಡೀ ಕುಟುಂಬಕ್ಕೆ ಅಕ್ಕನ ಮದುವೆ ಒಂದು ರೀತಿಯ ಭಾರವಾಗಿತ್ತು.

ಮದುವೆಗೆ ಬೇಕಿದ್ದ ಹಣ ಹೊಂದಿಸುವುದು ನನ್ನಪ್ಪನಿಗೆ ಬಲು ಕಷ್ಟದ ಕೆಲಸವಾಗಿತ್ತು. ಬಂಜರು ಭೂಮಿಯಂತಿರುವ ತುಂಡು ಭೂಮಿಯಲ್ಲಿ ಬೆಳೆ ತೆಗೆಯುವುದು ಸಾಧ್ಯವಿಲ್ಲದ ಮಾತಾಗಿತ್ತು. ಹಾಗಾಗಿ ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಅಪ್ಪ ಒಂದು ಮನೆಗೆ ಕೆಲಸಕ್ಕೆ ಹೋದರೆ, ಅವ್ವ ಮತ್ತು ಅಕ್ಕ ಇನ್ನೊಂದು ಮನೆ ಕೆಲಸಕ್ಕೆ ಹೋಗುತ್ತಿದ್ದರು.

ನಮ್ಮ ಕಷ್ಟ ಏನೇ ಇರಲಿ, ಮಗಳ ಮದುವೆ ನಿಶ್ಚಯವಾಯಿತು ಎಂದು ಅವ್ವ-ಅಪ್ಪ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. 26 ವರ್ಷ ಕಳೆದರೂ ಮದುವೆ ನಿಶ್ಚಯವಾಗಿರಲಿಲ್ಲ. ಮುದಿ ಮೋರೆ ಬಿದ್ದಿದೆ, ಇವಳನ್ನು ಯಾರು ಮದುವೆಯಾಗುತ್ತಾರೆ? ಎಂಬ ಚುಚ್ಚು ಮಾತು ಅವ್ವ ಮತ್ತು ಅಕ್ಕನ ಕಣ್ಣಲ್ಲಿ ಆಗಾಗ ನೀರು ತರಿಸುತ್ತಿದ್ದವು. ಹೆದರಬೇMigrant workers travel atop a truck in Mumbaiಡ ನಾನಿದ್ದೇನೆ ಎಂದು ಅಕ್ಕನಿಗೆ ಸಮಾಧಾನ ಮಾಡಿದ್ದೆ. ಸದ್ಯ ಅದಾದ ಕೆಲವೇ ದಿನಗಳಲ್ಲಿ ಅಕ್ಕನ ಮದುವೆ ದಿನಾಂಕವೂ ನಿಗದಿಯಾಯಿತು.

ಹಳೆಯದಾದ ಹುಲ್ಲು ಮನೆಯಲ್ಲಿ ಜೀವನ ಪಯಣ ಮುಂದುವರಿದಿತ್ತು. ಮದುವೆ ಖರ್ಚಿಗೆ ನಯಾ ಪೈಸೆಯೂ ಇರಲಿಲ್ಲ. ಶಾಲೆ ಮೆಟ್ಟಿಲೇರದ ಅಕ್ಕ, ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಇಳಿದಿದ್ದಳು. ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಓದುತ್ತಿದ್ದ ನಾನು ಮತ್ತು ತಮ್ಮ ರಜೆ ದಿನದಲ್ಲಿ ಕೂಲಿಗೆ ಹೋಗಿ ಬಂದ ಪುಡಿಗಾಸನ್ನೂ ಕೂಡಿ ಹಾಕಿಕೊಂಡು ಓದು ಮುಂದುವರೆಸಿದ್ದೆವು.

ಈ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಅಕ್ಕನ ಮದುವೆಗೆ ಹಣ ಹೊಂದಿಸುವುದು ಸಾಧಿವಿಲ್ಲದ ಮಾತಾಗಿತ್ತು. ಮದುವೆ ಖಚರ್ಿನ ಜೊತೆಗೆ 6 ಸಾವಿರ ರೂ. ವರದಕ್ಷಿಣೆ ಕೂಡ ಕೊಡಬೇಕಿತ್ತು. ಅಕ್ಕನ ಮದುವೆ ಮಾಡಲು ಊರಿನ ಅನೇಕರ ಬಳಿ ಅಪ್ಪ ಸಾಲ ಕೇಳಿದರು. ಆದರೆ ದೊಡ್ಡ ಮೊತ್ತದ ಹಣ ಯಾರಿಂದಲೂ ಸಿಗಲಿಲ್ಲ. ಪರಿಚಯಸ್ಧರೊಬ್ಬರ ಮೂಲಕ ನನ್ನೂರಿಂದ ಸುಮಾರು 18 ಕಿಲೋ ಮೀಟರ್ ದೂರ ಇರುವ ಗ್ರಾಮದ ಮೇಲ್ಜಾತಿಯೊಬ್ಬರ ಮನೆಯಲ್ಲಿ 15 ಸಾವಿರ ರೂ. ಸಾಲ ತಂದರು.
ಸಾಲ ತೀರಿಸಲು ಕುಟುಂಬದಲ್ಲಿ ಯಾರಾದರೊಬ್ಬರು 2 ವರ್ಷ ಜೀತ ಮಾಡಬೇಕಿತ್ತು. 2 ವರ್ಷಕ್ಕೆ 15 ಸಾವಿರ ಸಾಲ ಹಣ ತೀರಿ ಹೋಗುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೀತಕ್ಕೆ ಸೇರಲು ಸಿದ್ದವಾಗಿದ್ದ ಅಪ್ಪ 15 ಸಾವಿರ ಹಣ ತಂದು, ಅಕ್ಕನ ಮದುವೆ ಮಾಡಿ ಮುಗಿಸಿದರು.

ಮನೆಯ ಸ್ಥಿತಿ ಗೊತ್ತಿದ್ದರಿಂದ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಹಿಡಿಯಬೇಕು ಎಂಬ ಛಲ ಮನದೊಳಗೆ ಮನೆ ಮಾಡಿತ್ತು. ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಿದ್ದ ಕಾರಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಗೆ ಸುಲಭವಾಗಿ ಸೀಟು ಸಿಕ್ಕಿತ್ತು.

ಆದರೆ ಕಾಲೇಜಿಗೆ ಹೋಗುವ ಬದಲು ಅಕ್ಕನ ಮದುವೆ ಮಾಡಿ ಜೀತಕ್ಕೆ ಸೇರಿರುವ ಅಪ್ಪನನ್ನು ಆ ಸೆರೆಯಿಂದ ಬಿಡಿಸಿಕೊಂಡು ಬರಬೇಕು ಎಂಬ ಆಲೋಚನೆ ಮೂಡಿತು. ಕಾಲೇಜಿಗೆ ಹೋಗದೆ ಅಪ್ಪನ ಬದಲು ಜೀತಕ್ಕೆ ಸೇರಿಕೊಳ್ಳುವ ಕೈಗೊಂಡಿದ್ದ ತೀರ್ಮಾನವನ್ನು ಅವ್ವನ ಬಳಿ ಹೇಳಿಕೊಂಡೆ. ಅದಕ್ಕೊಪ್ಪದ ಅವ್ವ ನಾವು ಅನುಭವಿಸಿರುವ ಕಷ್ಟವೇ ಸಾಕು ಮಗನೇ, ಓದೊ ಮಗನ್ನ ಜೀತಕ್ಕೆ ಸೇರಿಸೋಕೆ ಒಪ್ಪಲಾರೆ ಎಂದು ಕಣ್ಣೀರಿಟ್ಟಳು.

ಅವ್ವನ ಆಸೆಯಂತೆ ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎಗೆ ಸೇರಿಕೊಂಡು ಹಾಸ್ಟೆಲ್ನಲ್ಲಿ ಜೀವನ ಮುಂದುವರಿಯಿತು. ಅಲ್ಲಿ ಹೊಟ್ಟೆ ತುಂಬ ಊಟ ತಿಂದರೂ ಅಪ್ಪ ಜೀತದಾಳಾಗಿ ದುಡಿಯುತ್ತಿರುವುದನ್ನು ನೆನೆದು ಸುರಿದ ಕಣ್ಣೀರಿಗೆ ಅಳತೆ ಇರಲಿಲ್ಲ. ದಸರಾ ರಜೆ ಸಿಕ್ಕಿ ಊರಿನ ಹಾದಿ ಹಿಡಿದ ನಾನು, ಮರು ದಿನವೇ ಅಪ್ಪ ಜೀತ ಮಾಡುತ್ತಿದ್ದ ಮನೆ ಮುಂದೆ ಹೋಗಿ ನಿಂತೆ. ಅಪ್ಪನ ಕಷ್ಟದಲ್ಲಿ ನನಗೂ ಪಾಲು ಪಡೆಯಬೇಕು ಎಂಬ ಕಾರಣಕ್ಕೆ ರಜೆ ಮುಗಿಯುವ ತನಕ ಜೀತದಾಳಾಗಿ ನಾನೇ ದುಡಿಯುವ ಇಚ್ಛೆ ಪ್ರಕಟಿಸಿದೆ.

ಮೊದಲು ಒಪ್ಪದ ಅಪ್ಪನ ಮನವೊಲಿಸುವಲ್ಲಿ ಯಶಸ್ವಿಯಾಗಿ ಜೀತದಾಳಾಗಿ ಸೇರಿಕೊಂಡೆ. ಕೊಟ್ಟಿಯಲ್ಲಿ ಅಪ್ಪ ಇಟ್ಟುಕೊಂಡಿದ್ದ ಚಾಪೆ, ದಿಂಬಿನೊಂದಿಗೆ ಹೊಸ ಜೀವನ ಆರಂಭವಾಯಿತು. ರಾತ್ರಿ ಎಷ್ಟೊತ್ತಿಗೆ ಮಲಗಿದರೂ ಮುಂಜಾನೆ 4ಕ್ಕೆ ದುಡಿಮೆ ಆರಂಭಿಸಬೇಕಿತ್ತು. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಹೊರತುಪಡಿಸಿದರೆ ಬಿಡುವೇ ಇಲ್ಲದ ದುಡಿಮೆಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಆದರೂ ಅಪ್ಪನ ಕಷ್ಟಕ್ಕೆ ಸ್ವಲ್ಪ ದಿನವಾದರೂ ಹೆಗಲು ಕೊಡಬೇಕೆಂಬ ನಿರ್ಧಾರ ಕೈಗೊಂಡಿದ್ದ ಕಾರಣ ಕೆಲಸದ ಹೊರೆ ಸಹಿಸಿಕೊಂಡೆ.

ರಾತ್ರಿ ವೇಳೆ ಸತ್ತಂತೆ ನಿದ್ರೆ ಬರುತ್ತಿದ್ದವು, ಬೆಳಕಾಗುವುದೇ ಗೊತ್ತಾಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಸಿಗುತ್ತಿರುವ ತೃಪ್ತಿ ಒಂದೆಡೆಯಾದರೆ ನಿದ್ರೆ ವಿಷಯದಲ್ಲಿ ಮಾತ್ರ ಅತೃಪ್ತಿ. ಬೆಳಗ್ಗೆ 4ಕ್ಕೆ ಎದ್ದು ದನ-ಕರುಗಳನ್ನು ಆಚೆಗೆ ಕಟ್ಟಿ ಸಗಣಿ ಬಾಚುವುದರಿಂದ ಕೆಲಸ ಆರಂಭವಾದರೆ, ಅವುಗಳ ಮೈ ತೊಳೆಯುವ ಹೊತ್ತಿಗೆ 6 ಗಂಟೆ ದಾಟುತ್ತಿತ್ತು.

ಮುಖ, ಕೈಕಾಳು ಕಾಲು ತೊಳೆದುಕೊಂBBBB-2ಡು ನಮಗೆ ಖಾಯಂ ಆಗಿ ನೀಡಿದ್ದ ಲೋಟ-ತಟ್ಟೆ ತೊಳೆದುಕೊಂಡು ಬಾಗಿಲಿಂದ ಆಚೆ ಕುಳಿತು ಊಟ ಮಾಡಿ ಗದ್ದೆಗೆ ಇಳಿದರೆ ಸಂಜೆ ತನಕ ಮೈ ಮುರಿಯುವಷ್ಟು ಕೆಲಸ. ಗದ್ದೆ ಉಳುಮೆ ಮಾಡಿ ಎತ್ತುಗಳು ಸುಸ್ತಾದರೆ ಅವುಗಳಿಗೆ ವಿಶ್ರಾಂತಿ ನೀಡುವುದು. ಆ ಸಂದರ್ಭದಲ್ಲಿ ಬದು ಹಾಕುವುದು, ತೆಂಗಿನ ಕಾಯಿ ಕೀತ್ತು ಚೀಲಕಟ್ಟಿ ಗಾಡಿಗೆ ಲೋಡ್ ಮಾಡುವುದು. ಕಬ್ಬಿ ಗದ್ದೆಗೆ ನೀರು ಹಾಯಿಸೋದು ಹೀಗೆ ಒಂದರ ಮೇಲೋಂದು ಬಿಡುವಿಲ್ಲದೆ ಕೆಲಸ.

ಯುವಕನಾಗಿದ್ದ ನಾನೇ ಈ ಕೆಲಸ ಮಾಡಲು ತಿಣಕಾಡಬೇಕಿದ್ದೆ. ಆಗಲೇ 60 ದಾಟಿರುವ ಅಪ್ಪನ ಕಷ್ಟ ನೆನದು ಎಷ್ಟೋ ರಾತ್ರಿಗಳು ನಿದ್ರೆಗೂ ಅವಕಾಶ ನೀಡದೆ ಕಣ್ಣೀರು ಸುರಿದಿವೆ. ಒಂದು ತಿಂಗಳು ಮುಗಿದೇ ಹೋಯಿತು. ಜೀತದಿಂದ ಮುಕ್ತಿ ನೀಡಲು ಬಂದ ಅಪ್ಪನೊಂದಿಗೆ ಕೊಟ್ಟಿಗೆಯಲ್ಲೇ ಮಲಗಿ ಇಡೀ ರಾತ್ರಿ ಅತ್ತೆವು. ಅಳೋದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕ ಸ್ಥಿತಿಯೊಳಗೆ ಜೀವನ ಸಿಲುಕಿಕೊಂಡಿತ್ತು.

ಬೆಳಗ್ಗೆ ಕೊಟ್ಟಿಗೆ ಕಸ ಬಾಚಿದ ನಂತರ ಮನೆಯೊಡತಿ ಟೀ ಕೊಟ್ಟಳು. ನಮಗೆ ಮೀಸಲಿಟ್ಟಿದ್ದ ಲೋಟ ಒಂದೇ ಆಗಿದ್ದರಿಂದ ಅಪ್ಪ ಕುಡಿದ ನಂತರ ನಾನು ಕುಡಿದು ತೊಳೆದಿಟ್ಟೆ.

ಬಸ್ ನಿಲ್ದಾಣದ ತನಕ ಕಳಿಸಿಕೊಡಲು ಬಂದ ಅಪ್ಪ ನನ್ನ ಖರ್ಚಿಗೆ ಕೊಡಲು 5 ರೂ. ನೋಟು ತಂದಿದ್ದರು. ಬಸ್ ನಿಲ್ದಾಣದ ಬಳಿ ಆ ಹಣ ಕೊಡಲು ಚೆಡ್ಡಿ ಜೀಬಿಗೆ ಕೈ ಹಾಕಿದರೆ 5 ರೂ. ನೋಟು ಇರಲೇ ಇಲ್ಲ. ಬಂದ ದಾರಿಯಿಂದ ಹಿಡಿದು ಬಸ್ ನಿಲ್ದಾಣದ ಅಕ್ಕ-ಪಕ್ಕ ಇದ್ದ ಗಿಡಗಂಟೆಗಳ ನಡುವೆ ಬಿದ್ದು ಒದ್ದಾಡಿದವರಂತೆ ಅಪ್ಪ ಆ ಹಣಕ್ಕಾಗಿ ಹುಡುಕಾಡಿದ. ಅಲ್ಲಿದ್ದ ಧೂಳೆಲ್ಲೆ ಮೈ ತುಂಬಾ ಆವರಿಸಿಕೊಂಡರೂ ಬಿಡದೆ ತಡಕಾಡಿದ. ಕೊನೆಗೂ 5 ರೂ.ನ ನೋಟು ಸಿಗಲಿಲ್ಲ.

ಮಗನಿಗೆ ಕೊಡಲು ತಂದಿದ್ದ ಹBBBB-3ಣ ಕಳೆದುಕೊಂಡ ಅಪ್ಪ, ಧಾರಾಕಾರವಾಗಿ ಕಣ್ಣೀರು ಸುರಿಸಿದ. ಉಮ್ಮಳಿಸಿ ಬಂದ ದುಃಖ ತಡೆದುಕೊಂಡ ನಾನು ‘ಬಸ್ ಚಾರ್ಜಗೆ ಹಣ ಇದೆ ಬಿಡಪ್ಪ’ ಎಂದು ಸಮಾಧಾನ ಮಾಡಿದೆ. ಬಸ್ ಹತ್ತಿದರೂ ಮರೆಯಾಗುವ ತನಕ ಅಪ್ಪನನ್ನೇ ನೋಡಿ ಅಳುತ್ತಲೆ ಮನೆಗೆ ಬಂದೆ. 5 ರೂಪಾಯಿ ಎಂದರೆ ಪುಡಿಗಾಸು ಎನ್ನುವ ಕಾಲದಲ್ಲಿ 5 ರೂ.ಗಾಗಿ ಅಪ್ಪು ಹುಡುಕಾಡಿದ ಪರಿ ಅದರ ಮಹತ್ವ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ 100, 1000 ರೂ. ಅಷ್ಟೇ ಏಕೆ ಲಕ್ಷ ಲಕ್ಷ ಹಣವೂ ಲೆಕ್ಕಕ್ಕಿಲ್ಲ ಎನ್ನುವವರಿದ್ದಾರೆ. ಆದರೆ ಮೈಮೇಲೆ ಧೂಳೆರಚಿಕೊಂಡು 5 ರೂಪಾಯಿ ಹುಡುಕಿದ ಆ ಸಂದರ್ಭವನ್ನು ನಾನೆಂದೂ ಮರೆಯಲಾರೆ.

ಚಿತ್ರಗಳು: ಸಾಂದರ್ಭಿಕ

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆ ಕಳುಹಿಸಲು ಕೇವಲ ಎರಡು ವಾರ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್


ನಿಮ್ಮ ದುಬಾರಿ ಕಾರು, ಬೈಕಿಗಿಂತ ಜೀವ ಅಮೂಲ್ಯ..


– ಡಾ.ಎಸ್.ಬಿ. ಜೋಗುರ


ನಾನು ಚಿಕ್ಕವನಾಗಿದ್ದಾಗ ಮನೆಯಿಂದ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗಲು ಅಪ್ಪನಿಂದ ಸೈಕಲ್ ಬಾಡಿಗೆಗಾಗಿ ದುಡ್ಡು ಕೇಳುತ್ತಿದ್ದೆ. ಆಗ ಅ ಬಾಡಿಗೆ ಘಂಟೆಗೆ ಎಂಟಾಣೆ. ಕಿಸೆಯಿಂದ ಐವತ್ತು ಪೈಸೆ ತೆಗೆದುಕೊಡುತ್ತಲೇ ಅಪ್ಪ ತುಸು ಸಿಟ್ಟಿನಿಂದ ಸಾವಕಾಶ ಹೋಗು ಅದು ಸೈಕಲ್ ಅಲ್ಲ, ಸಾಯೋಕಾಲ ಅಂತಿದ್ದ. ಅದು ಯಾಕೆ ಹಾಗೆ ಅಂತಿದ್ದ ಅನ್ನೋದು ನಾವು ಬೆಳೀತಾ ಹೋದ ಹಾಗೆ ಗೊತ್ತಾಯಿತು. ಹುಂಬತನದ ಚಾಲನೆ ಎಷ್ಟು ಅಪಾಯಕಾರಿ ಎನ್ನುವುದು ನನ್ನ ಜೊತೆಗಿರುವ ಸ್ನೇಹಿತರುಗಳೇ ಕೈಕಾಲು ಮುರಿದುಕೊಂಡಾಗ, ಜೀವ ಕಳೆದುಕೊಂಡಾಗ ನಮ್ಮಪ್ಪ ಹೇಳುತ್ತಿದ್ದimages ಮಾತು ಅದೆಷ್ಟು ಸತ್ಯವಾಗಿತ್ತು ಎಂದು ಈಗಲೂ ನನಗೆ ಅನಿಸುವದಿದೆ. ನಮ್ಮ ಮಕ್ಕಳಿಗೆ ಅದೇ ಮಾತನ್ನು ನಾವೀಗ ರಿಪೀಟ್ ಮಾಡಿ ಬೈಕ್ ಸ್ಪೀಡ್ ಓಡಿಸಬೇಡಪ್ಪಾ ಟ್ರಾಫಿಕ್ ತುಂಬಾ ಇರುತ್ತದೆ ಎಂದಾಗ ಅವನು ನೆಪಕ್ಕೆ ಹುಂ ಎಂದು ಮತ್ತೆ ತನ್ನದೇ ಗತಿಯಲ್ಲಿ ಅದನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ಜಮಾನಾ ತುಂಬಾ ಸ್ಪೀಡ್ ಆಗಿದೆ. ನನಗೆ ನೌಕರಿ ಬಂದ ಮೇಲೆಯೂ ಆರು ತಿಂಗಳು ನಾನು ಸೈಕಲ್ ಮೇಲೆ ಕಾಲೇಜಿಗೆ ಹೋಗಿರುವದಿದೆ. ಆ ನಂತರ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ನಂತರ ಈಗ ನಾನು ಓಡಿಸುತ್ತಿರುವ ಬೈಕ್ ಕೊಂಡಿರುವದು. ಈಗಿನ ಸಂತಾನ ಹಾಗಲ್ಲ ಇನ್ನೂ ಮೀಸೆ ಮೂಡುವ ಮೂದಲೇ ಎಲ್ಲವನ್ನು ಮಾಡಿ ಮುಗಿಸುವ ಆತುರಗಾರರಾಗಿರುವ ಪರಿಣಾಮವೇ ಹೆಚ್ಚೆಚ್ಚು ಅನಾಹುತಗಳು ಜರುಗುತ್ತಿವೆ. ಈಗಿನ ಯುವಕರು ಇನ್ನೂ ಓದುವ ಅವಧಿಯಲ್ಲಿ ಬೈಕು, ಕಾರು ಹತ್ತಬೆಕೆನ್ನುವವರು. ಕೆಲ ಬಾರಿ ಯುವಕರು ಬೈಕ್ ಓಡಿಸುವದನ್ನು ಕಂಡಾಗ ತುಂಬಾ ಸಿಟ್ಟು ಬರುತ್ತದೆ ಅದರ ಬೆನ್ನಲ್ಲೇ ಕನಿಕರವೂ ಬರುತ್ತದೆ. ಸಿಟ್ಟಿಗೆ ಕಾರಣ ಅವರು ಹಾವು ಹೊರಳಾಡುವಂತೆ ಅದನ್ನು ಯರ್ರಾಬಿರ್ರಿ ಓಡಿಸಿ, ಎಲ್ಲೋ ಒಂದೆಡೆ ಹೊಡೆದು ತಮಗೋ ಇಲ್ಲಾ ಗುದ್ದಿಸಿಕೊಂಡವನಿಗೋ ಭಯಂಕರ ಪ್ರಮಾಣದ ಹಾನಿ ಉಂಟು ಮಾಡಿ, ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುವ ರೀತಿಯ ಬಗ್ಗೆ ನನಗೆ ಅಪಾರವಾದ ಸಿಟ್ಟಿದೆ. ಇನ್ನು ಕನಿಕರ ಯಾಕೆಂದರೆ ಇರೋದೇ ಒಂದೋ ಹೆಚ್ಚೆಂದರೆ ಎರಡು ಮಕ್ಕಳಿರೋ ಕಾಲದಲ್ಲಿ ಸಿನೇಮಾ ಶೂಟಿಂಗಲ್ಲಿ ತೊಡಗಿರುವ ಹಾಗೆ, ಇಲ್ಲವೇ ರೇಸಲ್ಲಿ ಭಾಗವಹಿಸಿರುವವರ ಹಾಗೆ ಬೈಕ್ ಓಡಿಸಿ ಅನಾಹುತ ಮಾಡಿಕೊಂಡು ಹೆತ್ತವರನ್ನು ಜೀವನ ಪರ್ಯಂತ ನರಳಿಸುವದಿದೆಯಲ್ಲ, ಆ ಬಗ್ಗೆ ಕನಿಕರವಿದೆ. ನಗರ ಪ್ರದೇಶಗಳಲ್ಲಿಯೂ ಇವರು ಓಡಿಸುವ ಬೈಕ್ ವೇಗದ ಮಿತಿಗೆ ಒಳಪಟ್ಟ್ತಿರುವದಿಲ್ಲ. ತಲೆಯ ಮೇಲೆ ಹೆಲ್ಮೆಟ್ ಕೂಡಾ ಇರುವದಿಲ್ಲ. ಹಾಗಿರುವಾಗಲೂ ಪೋಲಿಸರ ಎದುರಲ್ಲೇ ಇವರು ರಾಜಾರೋಷವಾಗಿ ಭಂವ್ ಎಂದು ಓಡಿಸಿಕೊಂಡು ಹೋಗುವ ರೀತಿಗೆ ಅನೇಕ ಬಾರಿ ನಾನೇ ಬೆಚ್ಚಿ ಬಿದ್ದಿರುವೆ. ಇನ್ನು ಅತ್ಯಂತ ವಿಕಾರವಾಗಿರುವ ಹಾರ್ನ್ ಹಾಕಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಖಾಸ್ ಆಗಿ ಹುಡುಗಿಯರಿರುವ ಜಾಗೆಯಲ್ಲಿ ಅದನ್ನು ಹಾರ್ನ್ ಮಾಡುತ್ತಾ ಸಾಗುವ ಕ್ರಮವಂತೂ ಇನ್ನಷ್ಟು ವಿಕೃತ. ಇಂಥಾ ಅಸಂಬದ್ಧವಾಗಿರುವ ಹಾರ್ನ್ ಇರುವ ವಾಹನಗಳನ್ನು ಕೂಡಲೇ ಸೀಜ್ ಮಾಡುವಂಥಾ ಕ್ರಮಗಳು ಜರುಗಬೇಕು. ಇನ್ನೊಂದು ಸಂಗತಿ ನಿಮಗೆ ತಿಳಿದಿರಬಹುದು. ನಮ್ಮ ದೇಶದಲ್ಲಿ ಅತೀ ಹೆಚ್ಚು ನಡೆಯುವ ಅಪಘಾತಗಳಲ್ಲಿ ಈ ಬೈಕ್ ಗಳದ್ದೇ ಸಿಂಹಪಾಲು, ಅದರ ನಂತರ ಕಾರುಗಳದ್ದು. ನಾವು ಓಡಿಸುವ ವಾಹನ ಹೇಳೀ ಕೇಳೀ ಒಂದು ಯಂತ್ರ ಅದಕ್ಕೆ ಯಾವುದೇ ಬಗೆಯ ಸೆಟಿಮೆಂಟ್ ಗಳಿರುವದಿಲ್ಲ. ಆದರೆ ಅದನ್ನು ಕೊಡಿಸಿದವರಿಗೆ, ಹೆತ್ತವರಿಗೆ ನಿಮ್ಮ ಬಗ್ಗೆ ಅಪಾರವಾದ ಕಾಳಜಿಗಳಿವೆ, ಕನಸುಗಳಿವೆ, ಭರವಸೆಗಳಿವೆ. ಅವೆಲ್ಲವುಗಳನ್ನು ಥ್ರಿಲ್ ಗಾಗಿ ಬಲಿಕೊಟ್ಟು ನೀವು ಬಲಿಯಾಗಬೇಡಿ. ತಾಳ್ಮೆಯಿರದ ಯಾವುದೇ ಸವಾರಿ ಸುಖಕರವಲ್ಲ. ಒಂದೇ ಒಂದು ನಿಮಿಷದ ನಿಧಾನ ನಿಮ್ಮ ಜೀವವನ್ನು ಕಾಯಿಬಲ್ಲದು ಎನ್ನುವ ಎಚ್ಚರದ ನಡುವೆ ವಾಹನವನ್ನು ಚಲಿಸಬೇಕು.

ನಮ್ಮ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳ ಬಗೆಗಿನ ಅಂಕಿ ಅಂಶಗಳನ್ನು ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. 2013 ರ ವರ್ಷ, ಕೇವಲ ಆ ಒಂದೇ ವರ್ಷದಲ್ಲಿ  1,37,000 ಜನ ರಸ್ತೆ ಅಪಘಾತದಲ್ಲಿ ಸತ್ತಿರುವದಿದೆ. ಈ ಪ್ರಮಾಣ ಯಾವುದೇ ಮಾಹಾಯುದ್ಧದಲ್ಲಿ ಮಡಿದವರ ಸಂಖ್ಯೆಗಿಂತಲೂ ಜಾಸ್ತಿಯೆಂಬುದು. ಪ್ರತಿನಿತ್ಯ ಸುಮಾರು 16 ಮಕ್ಕಳು ಈ ರಸ್ತೆ ಅಪಘಾತಕ್ಕೆ ಅಕಾಲಿಕ ಸಾವನ್ನಪ್ಪುತ್ತಾರೆ. ದೆಹಲಿಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಐದು ಸಾವುಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ರಸ್ತೆ ಅಪಘಾತದ ಸಾವು ಸಂಭವಿಸುತ್ತದೆ. ಕುಡಿದು ಗಾಡಿ ಓಡಿಸುವದೇ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತದೆ. ಪ್ರತಿ ಘಂಟೆಗೆ ನಮ್ಮ ದೇಶದಲ್ಲಿ 16 ಜನರು ಈ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದುವದಿದೆ. ಈ ಎಲ್ಲ ಬಗೆಯ ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ 25 ಪ್ರತಿಶತ ಪಾಲಿದೆ. ಪ್ರತಿನಿತ್ಯ 20 ವರ್ಷ ವಯೋಮಿತಿಯ ಒಳಗಿನ 14 ಮಕ್ಕಳು ಈ ರಸ್ತೆ ಅಪಘಾತದಲ್ಲಿ ಅಸುನೀಗುತ್ತವೆ. ದಿನಾಲು ಹೆಚ್ಚೂ ಕಡಿಮೆsklar-accident 1214 ರಷ್ಟು ರಸ್ತೆ ಅಪಘಾತಗಳು ಜರಗುತ್ತವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಜರಗುವ ನಗರಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪ್ರಥಮ ಸ್ಥಾನದಲ್ಲಿ ದೆಹಲಿ ನಗರ ನಂತರ ಚೆನೈ, ಜೈಪುರ, ಬೆಂಗಳೂರು, ಮುಂಬೈ, ಕಾನಪುರ, ಲಖನೌ, ಆಗ್ರಾ, ಹೈದರಾಬಾದ, ಪುಣೆ ಎಂದು ಹತ್ತು ಪ್ರಮುಖ ನಗರಗಳನ್ನು ಪಟ್ಟಿ ಮಾಡಲಾಗಿದೆ. ಎಡಬದಿಯಿಂದ ಓವರ ಟೇಕ್ ಮಾಡುವುದು, ಡಿಮ್- ಡಿಪ್ ಮಾಡದೇ ಗಾಡಿ ಓಡಿಸುವದು, ಹೆಚ್ಚು ಪ್ರತಿಫಲನ ಇರುವ ಬಲ್ಬುಗಳನ್ನು ಕಾನೂನಿನ ನಿಯಮ ಉಲ್ಲಂಘಿಸಿ ಬಳಸುವುದು ಇವುಗಳ ಜೊತೆಯಲ್ಲಿ ವಾಹನ ಚಲಿಸುವಾಗ ಮೊಬೈಲಿನಲ್ಲಿ ಮಾತನಾಡುತ್ತಾ, ಏನನ್ನೋ ತಿನ್ನುತ್ತಾ, ಕುಡಿಯುತ್ತಾ ಓಡಿಸುವದರಿಂದಾಗಿಯೂ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ಜರುಗುತ್ತಿವೆ. ಜೊತೆಗೆ ಯರ್ರಾಬಿರ್ರಿಯಾಗಿ ಬೈಕ್ ಓಡಿಸುವವರ ಪ್ರಮಾಣ ಈಗಂತೂ ಹೆಚ್ಚಾಗಿ ಕಂಡು ಬರುತ್ತದೆ ಅದರ ಜೊತೆಗೆ ಶಾಸನಬದ್ಧವಾಗಿ ಓಡಿಸೋ ವಯಸ್ಸು ಬಾರದಿದ್ದರೂ ಅಪ್ಪನ ಬೈಕ್ ಹತ್ತಿ ಸಿಕ್ಕಾಪಟ್ಟೆ ವೇಗದಿಂದ ಓಡಿಸುವ ವಾಯುಪುತ್ರರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವನ್ನು ಸಂಬಧಿಸಿದವರು ಕಟ್ಟು ನಿಟ್ಟಾಗಿ ನಿಯಂತ್ರಿಸಬೇಕು. ಕಾರುಗಳ ವೇಗವನ್ನು ಕ್ಯಾಮರಾ ಮೂಲಕ ಸೆರೆಹಿಡಿದು ಶಿಕ್ಷೆ ವಿಧಿಸುವಂತೆ, ನಗರ ಪ್ರದೇಶಗಳಲ್ಲಿ ಬೈಕುಗಳ ವೇಗದ ಮಿತಿಮೀರಿದರೆ ಶಿಕ್ಷೆ ಕಡ್ಡಾಯ ಮಾಡುವ ಜರೂರತ್ತಿದೆ. ಈ ಪಡ್ಡೆ ಹುಡುಗರ ಹುಂಬತನದ ಸವಾರಿಯ ನಡುವೆ ವಯಸ್ಸಾದವರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ತಿರುಗಾಡುವಂತಿಲ್ಲ. ಇವರೇನೋ ಗುದ್ದಿ ಹೋಗುತ್ತಾರೆ, ಪಾಪ ತೊಂದರೆ ಅನುಭವಿಸುವವರು ಬೇರೆಯೇ ಆಗಿರುತ್ತಾರೆ. ಈ ಬಗ್ಗೆ ಟ್ರಾಫಿಕ್ ಪೋಲಿಸರು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ. ನಿಮ್ಮದೇ ನಜರಲಿ ತಲೆಯ ಮೇಲೆ ಹೆಲ್ಮೆಟ್ ಇಲ್ಲದೇ ಭಂವ್ ಎಂದು ಸ್ಪೀಡ್ ಲಿಮಿಟ್ ಮೀರಿ ಧಿಮಾಕಿನಿಂದ ಗಾಡಿ ಓಡಿಸಿಕೊಂಡು ಹೋಗುವಂಥಾ ಯುವಕರನ್ನು ನೀವು ತಕ್ಷಣ ಹಿಡಿದು ಶಿಕ್ಷೆ ಕೊಡಿ. ಆಗ ಅವನಂಥಾ ಹತ್ತಾರು ಜನ ಪಾಠ ಕಲಿಯುತ್ತಾರೆ. ಅದು ಯಾವುದೇ ವಾಹನವಿರಲಿ ಡ್ರೈವಿಂಗ್ ಮಾಡುವಾಗ ತುಂಬಾ ಜಗೃತವಾಗಿರಬೇಕು. ಬೇಕಾ ಬಿಟ್ಟಿಯಾಗಿ ಓಡಿಸುವದು, ತೀರಾ ವೇಗವಾಗಿ ಓಡಿಸುವದು, ನಿಯಂತ್ರಣ ಮೀರಿ ಓಡಿಸುವದು ಯಾರಿಗೂ ಹಿತಕರವಲ್ಲ. ನಿಮ್ಮ ಕಾರು, ಬೈಕು ಎಷ್ಟೇ ಬೆಲೆ ಬಾಳುವದಾಗಿರಲಿ ಆದರೆ ನಿಮ್ಮ ಜೀವ ಮಾತ್ರ ಅವೆಲ್ಲವುಗಳಿಗಿಂತಲೂ ಅಮೂಲ್ಯ ಎನ್ನುವ ಸತ್ಯವನ್ನು ಮರೆಯಬೇಡಿ.

ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

Naveen Soorinje


– ನವೀನ್ ಸೂರಿಂಜೆ


 

 

“ಪೊಲೀಸ್ ಠಾಣೆಗಳಲ್ಲಿ ನ್ಯಾಪ್ಕಿನ್ ಪ್ಯಾಡ್ ಒದಗಿಸಿ” ಎಂದು ಭಾರತೀಯ ವಿದ್ಯಾರ್ಥಿAngellica Aribam_1 ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರ ಬಗ್ಗೆ ಚರ್ಚೆಯಾಗುತ್ತಿರುವ ದಿನಗಳಲ್ಲಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಅವಸ್ಥೆ ನೆನಪಿಗೆ ಬಂತು. ಸಾರ್ವಜನಿಕರ ಜೊತೆಗೆ ನಿತ್ಯ ವ್ಯವಹರಿಸುವ ಪೊಲೀಸ್ ಠಾಣೆಗಳಲ್ಲಿ ಇಂತಹ ಪರಿಸ್ಥಿತಿಯಾದರೆ ಹೊರ ಜಗತ್ತಿಗೇ ಸಂಪರ್ಕವಿಲ್ಲದ ಜೈಲುಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಾನು ಮಂಗಳೂರು ಜೈಲಿನಲ್ಲಿ ನಾಲ್ಕುವರೆ ತಿಂಗಳು ಕಳೆಯಲು ಅವಕಾಶ ಸಿಕ್ಕಿದಾಗ ಮಹಿಳಾ ಕೈದಿಗಳು ಪಿರಿಯೆಡ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಸಂಕಟಗಳ ಅರಿವಾಗಿ ದಂಗಾಗಿ ಹೋಗಿದ್ದೇನೆ. ಮಹಿಳೆಯೊಬ್ಬಳು ನನ್ನನ್ನೇ ಕೊಲೆ ಮಾಡಿದರೂ ಕೂಡ ಆಕೆಯನ್ನು ಕರ್ನಾಟಕದ ಜೈಲಿಗೆ ಹಾಕುವಂತಹ ಸ್ಥಿತಿ ಬರಬಾರದು ಎಂದು ಅಂದುಕೊಂಡರೂ ತಪ್ಪಿಲ್ಲ ಅನ್ನಿಸುತ್ತದೆ.

ಜೈಲುಗಳ ಮಹಿಳಾ ಬ್ಯಾರಕುಗಳ ಸ್ಥಿತಿ ಯಾರಿಗೂ ಬೇಡ. ಠಾಣೆಯಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದಾಗ ಎಂಜಲಿಕಾರವರಿಗೆ ನ್ಯಾಪ್ಕಿನ್ ಪ್ಯಾಡ್ ಸಿಗದೇ ಇದ್ದಾಗ ಅವರು ಅನುಭವಿಸಿದ ಸಂಕಟಕ್ಕೆ ಹೋಲಿಕೆನೇ ಮಾಡಲಾಗದಷ್ಟು ನರಕಯಾತನೆಯನ್ನು ಮಹಿಳಾ ಕೈದಿಗಳು ಇಂದು ಅನುಭವಿಸುತ್ತಿದ್ದಾರೆ. ಬೇರೆ ಯಾವ ಕಡೆಯಲ್ಲಾದರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಜೈಲಿನ ಮಹಿಳಾ ಬ್ಯಾರಕುಗಳ ಲೋಕವೇ ನಿಗೂಢವಾಗಿದ್ದು. ಇಲ್ಲಿ ವರ್ಷಗಟ್ಟಲೆ ಕೈದಿಗಳಾಗಿರುವ ಮಹಿಳೆಯರಿದ್ದಾರೆ. ಜೈಲು ಸೇರಿದ ನಂತರ ಒಂದೇ ಒಂದು ಬಾರಿಯೂ ಮನೆಯವರ ಮುಖ ನೋಡದ ಮಹಿಳೆಯರೂ ಇದ್ದಾರೆ. ಅವರ ಸ್ಥಿತಿ ಹೇಗಿರಬೇಡ ?

ಜೈಲಿನಲ್ಲಿದ್ದ ನನಗೆ ಅದೊಂದು ದಿನ ಜೈಲರ್ರಿಂದ ಕರೆ ಬಂದಿತ್ತು.Angellica Aribam ಜೈಲರನ್ನು ಭೇಟಿಯಾದಾಗ “ಮಹಿಳಾ ಕೈದಿಯೊಬ್ಬರು ನಿಮ್ಮನ್ನು ಭೇಟಿಯಾಗಬೇಕಂತೆ” ಎಂದರು. ಮಹಿಳಾ ಕೈದಿಗಳ ಭೇಟಿಗೆ ಅವಕಾಶವಿರುವ ಕೊಠಡಿಯಲ್ಲಿ ಆ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಆಕೆ ಸೇರಿದಂತೆ ಆಗ ಜೈಲಿನಲ್ಲಿದ್ದ 15 ಕ್ಕೂ ಅಧಿಕ ಮಹಿಳಾ ಕೈದಿಗಳ ತಮ್ಮ ದುಸ್ಥಿತಿಯನ್ನು ತೋಡಿಕೊಂಡರು. ಸೀಮಿತವಾಗಿರುವ ಬಟ್ಟೆಬರೆಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬಳು ಬದುಕುವುದೇ ದುಸ್ಥರವಾಗಿರುವಾಗ ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಇಲ್ಲವೆಂದರೆ ಹೇಗೆ? ಜೈಲಿಗೆ ನ್ಯಾಪ್ಕಿನ್ ಒದಗಿಸಲೆಂದೇ ಪ್ರತ್ಯೇಕ ಹಣದ ವ್ಯವಸ್ಥೆ ಇದೆ. ಆದರೆ, ಅದು ಅಧಿಕಾರಿಗಳ ಕಿಸೆ ಸೇರುತ್ತದೆ. ಪಿರಿಯೆಡ್ಸ್ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯಲ್ಲೂ ಏರುಪೇರಾಗುತ್ತದೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯ ಸ್ವಚ್ಚವಾಗಿರುವ ಶೌಚಾಲಯ ಬಳಸಬೇಕು. ಇಲ್ಲದೇ ಇದ್ದಲ್ಲಿ ಆಕೆ ಹಲವು ರೋಗಗಳಿಗೆ ಈಡಾಗುತ್ತಾಳೆ. ಆದರೆ ಯಾವ ಮಹಿಳಾ ಬ್ಯಾರಕಿನಲ್ಲೂ ಯಾವುದೇ ಶೌಚಾಲಯಗಳು ಸ್ವಚ್ಚವಾಗಿಲ್ಲ.

ವಿಚಿತ್ರವೆಂದರೆ ಜೈಲಿನೊಳಗಿನ ಈ ಪರಿಪಾಟಲನ್ನು ಮಹಿಳಾ ಜೈಲರ್ ಗಳಿಗೆ ಹೇಳಿದರೂ ಪ್ರಯೋಜನವಾಗುವುದಿಲ್ಲ. ಒಂದು ಉಪ-ಕಾರಾಗೃಹದಲ್ಲಿ ಸಾಮಾನ್ಯವಾಗಿ ಒಂದು ಪುರುಷ ಜೈಲರ್, ಒಂದು ಮಹಿಳಾ ಜೈಲರ್ ಮತ್ತು ಒಬ್ಬ ಜೈಲ್ ಸೂಪರಿಂಡೆಂಟ್ ಇರುತ್ತಾರೆ. ಮಹಿಳಾ ಜೈಲರ್ ಎಂಬುದು ಮಹಿಳಾ ಬ್ಯಾರಕಿಗಷ್ಟೇ ಸೀಮಿತ ಆಗಿರೋದ್ರಿಂದ ಅವರ ಅಧಿಕಾರ ಅಷ್ಟಕ್ಕಷ್ಟೆ. ನೂರಾರು ಕೈದಿಗಳನ್ನು ಸಂಭಾಳಿಸುವ ಪುರುಷ ಜೈಲರುಗಳದ್ದೇ ಜೈಲುಗಳಲ್ಲಿ ಕಾರುಬಾರು ಇರುತ್ತದೆ. ಮಹಿಳಾ ಜೈಲರುಗಳು ನ್ಯಾಪ್ಕಿನ್ ಬಗ್ಗೆ ಪ್ರಸ್ತಾಪಿಸಿದ್ರೂ ಸುಪರಿಂಡೆಂಟ್ ಎದುರು ಸ್ವತಃ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ನನ್ನ ಬ್ಯಾರಕಿನಲ್ಲೇ ನಕ್ಸಲ್ ಆರೋಪ Women Jail inmatesಹೊತ್ತು ವಿಚಾರಣಾಧೀನ ಬಂಧನದಲ್ಲಿದ್ದ ಕೈದಿಯೊಬ್ಬರಿದ್ದರು. ಮಹಿಳಾ ಬ್ಯಾರಕಿನಲ್ಲಿ ನ್ಯಾಪ್ಕಿನ್ ಇಲ್ಲದಿರುವ ಬಗ್ಗೆ ನಾವಿಬ್ಬರೂ ಒಮ್ಮೆ ಜೈಲರನ್ನು ಭೇಟಿಯಾಗಿ ಕೇಳಿದ್ದೆವು. ಆತ ನಕ್ಕ ಶೈಲಿ ಇದೆಯಲ್ಲಾ, ಅದನ್ನು ನೆನೆಪಿಸಿಕೊಂಡಾಗ ಈಗಲೂ ಮೈ ಉರಿಯುತ್ತೆ. ನಂತರ ಜೈಲಿನೊಳಗೆ ವಿಚಾರಣಾಧೀನ ಮುಸ್ಲಿಂ ಬಂಧಿತರಿಗೆ ತೊಂದರೆಯಾದಾಗ ಜೈಲಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ಬೇಡಿಕೆ ಈಡೇರಿಕೆಯ ಬಗ್ಗೆ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದಾಗ, ನ್ಯಾಪ್ಕಿನ್ ವಿಚಾರವನ್ನು ಬೇಡಿಕೆಯ ಪಟ್ಟಿಯಲ್ಲಿ ಹಾಕಿದ್ದೆವು. ಸ್ವಲ್ಪ ದಿನ ನ್ಯಾಪ್ಕಿನ್ ಪೂರೈಕೆಯೂ ಆಯಿತು. ನಂತರ ನಿಂತು ಹೋಗಿದೆ.

ಜೈಲು ವ್ಯವಸ್ಥೆಯಲ್ಲೇ ತಪ್ಪುಗಳಿವೆ. ಇಲ್ಲಿ ಪುರುಷ ಕೈದಿಗಳು ಮತ್ತು ಮಹಿಳಾ ಕೈದಿಗಳ ಮಧ್ಯೆ ಆವರಣ ಗೋಡೆ ಹೊರತುಪಡಿಸಿದರೆ ಬೇರಾವ ಸರಕಾರಿ ಸೌಲಭ್ಯಗಳಲ್ಲೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜೈಲಿಗೆ ಎಂದು ಬರುವ ಎಲ್ಲಾ ಅನುದಾನಗಳ ಪ್ರಯೋಜನಗಳು ಪುರುಷರ ಬ್ಯಾರಕಿಗೆ ಸಲ್ಲಿಕೆಯಾಗುತ್ತದೆ. ಗ್ರಂಥಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಯೋಜನೆಗಳು ದೊಡ್ಡದಾಗಿ ಕಾಣುವ ಪುರುಷರ ಬ್ಯಾರಕುಗಳಿರುವ ಬ್ಲಾಕಿಗೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂಧರ್ಭದಲ್ಲೂ ಕೇವಲ ಪುರುಷರ ಬ್ಯಾರಕುಗಳನ್ನಷ್ಟೇ ಪರಿಶೀಲನೆ ಮಾಡುತ್ತಾರೆ. ಯಾವತ್ತೋ ಒಮ್ಮೆ ಭೇಟಿ ನೀಡೋ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇಲ್ಲಿಯವರೆಗೂ ಮಹಿಳಾ ಬ್ಯಾರಕಿಗೆ ಭೇಟಿ ನೀಡಿದ್ದು ನನಗಂತೂ ಗೊತ್ತಿಲ್ಲ. ಉನ್ನತ ಅಧಿಕಾರಿಗಳು ಪರಿಶೀಲನೆಯ ವೇಳೆ ಗೋಡೆ, ಕಿಟಕಿ, ಬಾಗಿಲು, ಬೀಗ ಸರಿಯಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆಯೇ ಹೊರತು ಮನುಷ್ಯ ಬದುಕಲು ಯೋಗ್ಯವಾದ ವಾತಾವರಣ ಇದೆಯೇ ಎಂಬ ಕಡೆ ಗಮನ ಕೊಡುವುದಿಲ್ಲ. ಇಂತಹ ಪರಿಸರದಲ್ಲಿ ಪಿರಿಯೆಡ್ಸ್ ಟೈಮಲ್ಲಿ ಮಹಿಳೆಯರ ಸ್ಥಿತಿ ಹೇಗಿರಬೇಡ ?

ಪುರುಷ ಬ್ಯಾರಕ್ ಇರೋ ಜೈಲು ಆವರಣದ ಒಳಗೆ ಜೈಲಿನ ಊಟ ಸಿದ್ದವಾಗುತ್ತದೆ. ಪುರುಷ ಕೈದಿಗಳಿಗೆJail ಹಂಚಿದ ನಂತರ ಮಹಿಳಾ ಕೈದಿಗಳಿಗೆ ಊಟ ನೀಡಲಾಗುತ್ತದೆ. ಊಟ ಕಳುಹಿಸುವುದರಿಂದ ಹಿಡಿದು ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಕೊಡೋದ್ರ ತನಕ ಮಹಿಳಾ ಕೈದಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಜೈಲುಗಳಲ್ಲಿ ಹಾಸಿಗೆ ತಲೆದಿಂಬು ಬಳಸುವಂತಿಲ್ಲ. ನೆಲದ ಮೇಲೆ, ಚಾಪೆ ಅಥವಾ ಬೆಡ್ ಶೀಟ್ ಹಾಸಿ ಮಲಗಬೇಕು. ಹಾಸಿಗೆ ದಿಂಬು ಜೈಲಿನಲ್ಲಿ ಬಳಸಲು ಒಂದೋ ನ್ಯಾಯಾಲಯದ ಅನುಮತಿ ಬೇಕು ಅಥವಾ ಪ್ರಭಾವಶಾಲಿಯಾಗಿರಬೇಕು. ಜೈಲಿನಲ್ಲಿ ದಿನಗಟ್ಟಲೆ, ವರ್ಷಗಟ್ಟಲೆ ಇದ್ದಾಗ ಪಿರಿಯೆಡ್ಸ್ ಟೈಮಲ್ಲಿ ಕೇವಲ ನ್ಯಾಪ್ಕಿನ್ ಅಲಭ್ಯತೆ ಮಾತ್ರ ಸಮಸ್ಯೆ ಅಲ್ಲ. ಪಿರಿಯೆಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ತಲೆಯನ್ನು ಗೋಡೆಗೆ ಚಚ್ಚಬೇಕು ಅನ್ನುವಷ್ಟು ತಲೆ ಸಿಡಿತವಾಗುತ್ತದೆ. ಆಗ ಒರಗಿಕೊಳ್ಳಲು ದಿಂಬಿಲ್ಲದೆ ಗೋಡೆಗೆ ತಲೆ ಇಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆ ಸಂಧರ್ಭದಲ್ಲೂ ನೆಲದ ಮೇಲೆಯೇ ಮಲಗಬೇಕು ಎನ್ನುವುದು ಅದ್ಯಾವ ಶಿಕ್ಷೆ? ಮನೆಯಲ್ಲಿ ಅಕ್ಕನೋ, ತಂಗಿಯೋ, ಹೆಂಡತಿಯೋ ಬೇಕಾದ ಸೌಲಭ್ಯಗಳು ಕೈಗೆಟುಕುವಂತಿದ್ದರೂ ಪಿರಿಯೆಡ್ಸ್ ಟೈಮಲ್ಲಿ ಅವರ ಕಷ್ಟ ನಮಗೆ ನೋಡೋಕಾಗಲ್ಲ. ಅಂತಹುದರಲ್ಲಿ ನಾಲ್ಕು ಗೋಡೆಗಳ ಮಧ್ಯೆ ತಮ್ಮವರ್ಯಾರು ಇಲ್ಲದೆ, ಕನಿಷ್ಠ ಶುಚಿಯಾದ ಶೌಚಾಲಯವೂ ಇಲ್ಲದೆ, ನ್ಯಾಪ್ಕಿನ್ ಬಿಡಿ ಕನಿಷ್ಠ ಬಳಸೋಕೆ ಬಟ್ಟೆಯೂ ಇಲ್ಲದೆ ಪಿರಿಯೆಡ್ಸ್ ಟೈಮಲ್ಲಿ ಬದುಕುವ ಮಹಿಳಾ ಕೈದಿಗಳ ಪಾಡು ಹೇಗಿರಬೇಕು ಎಂದು ನೆನೆಯುವಾಗ ಮೈ ಜುಂ ಎನಿಸುತ್ತದೆ.

ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರದ ವಿಚಾರ ಚರ್ಚೆಯ ಹೊತ್ತಿನಲ್ಲಿ ಇದೆಲ್ಲ ನೆನಪಿಗೆ ಬಂತು.