Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

Elephant Corridor…ಎಂಬ ಆನೆ ದಾರಿ

-ಪ್ರಸಾದ್ ರಕ್ಷಿದಿ

ಕಾಡಾನೆಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.  ಪ್ರತಿನಿತ್ಯವೆಂಬಂತೆ ಪತ್ರಿಕೆಗಳಲ್ಲಿ ಆನೆಗಳಿಂದ ಗಾಯಗೊಂಡಿರುವವರ, ಸತ್ತುಹೋದವರ ವರದಿಗಳು ಬರುತ್ತಿವೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಅನೇಕ ಪ್ರದೇಶಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಮೂವತ್ತನ್ನು ದಾಟಿದೆ. ಆದರೆ ನಗರ ಪ್ರದೇಶಕ್ಕೆ ಆನೆಗಳು ಬಂದು ದಾಂಧಲೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ವ್ಯಾಪಕ ಪ್ರಚಾರ ಮಾತ್ರ ರೈತರು ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಮಾಮೂಲಿನಂತೆ ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರೂ ಕೂಡಾ ತೇಪೆ ಹಚ್ಚಿದಂತೆ ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸಧ್ಯದ ಮಟ್ಟಿಗೆ ಬಚಾವಾದೆವೆಂದು ಸುಮ್ಮನಾಗುತ್ತಾರೆ.

ಕೇವಲ ಇಪ್ಪತ್ತು ವರ್ಷಗಳ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಆನೆಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದ ಆನೆಗಳು ಮಾಡಿದ ಹಾವಳಿಯೋ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಆನೆಗಳು ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹತ್ತು ವರ್ಷಗಳಿಂದ ಆನೆಗಳ ಉಪಟಳ ಪ್ರಾರಂಭವಾಯಿತು.

ನಮ್ಮ ತಾಲ್ಲೂಕಿನಲ್ಲಿ ಆನೆಗಳಿಂದ ತೊಂದರೆ ಅನುಭವಿಸಿದ ಇಬ್ಬರು ರೈತರ ಮಾತುಗಳೊಂದಿಗೆ ಮುಂದಿನ ವಿಚಾರವನ್ನು ವಿವರಿಸುತ್ತೇನೆ. ಒಬ್ಬರು ಹಿರಿಯ ರೈತರು-ವಿದ್ಯಾವಂತರು, ಒಂದು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದವರು. ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆಬೆಳೆಯನ್ನು ನಾಶಮಾಡಿದ್ದವು, ಕಾಫಿ ತೋಟವೂ ಹಾನಿಗೊಳಗಾಗಿತ್ತು ಯಂತ್ರೋಪಕರಣಗಳು ಜಖಂಗೊಂಡಿದ್ದವು. ಆ ಸಂದರ್ಭದಲ್ಲಿ ನಾನೊಮ್ಮೆ ಅವರನ್ನು ಭೇಟಿಯಾಗಿದ್ದೆ. ಅವರಿಗುಂಟಾದ ನಷ್ಟದ ಬಗ್ಗೆ ಮಾತನಾಡುತ್ತ, ಸರ್ಕಾರದಿಂದ ಏನಾದರೂ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೀರಾ ಎಂದು ಅವರನ್ನು ಕೇಳಿದೆ. ಅದಕ್ಕವರು ಅದೆಲ್ಲ ಸರಿ ಆದರೆ ಏನು ಮಾಡೋದು ಅವರು (ಆನೆಗಳು) ನಮಗಿಂತ ಸಾವಿರಾರು ವರ್ಷ ಮೊದಲೇ ಭೂಮಿಗೆ ಬಂದವರು.  ಅವರ ಜಾಗದಲ್ಲಿ ನಾವು ಬಂದು ಕೂತಿದ್ದೀವಿ, ತಪ್ಪು ನಮ್ಮದೇ ಅನುಭವಿಸಬೇಕು ಎಂದರು.

ಇನ್ನೊಂದು ಘಟನೆ ಇತ್ತೀಚಿನದ್ದು. ಆನೆ ಧಾಳಿಯಿಂದ ರೈತರೊಬ್ಬರು ಮೃತಪಟ್ಟಿದ್ದರು. ಮೃತ ದೇಹದ ಪಕ್ಕದಲ್ಲಿ ಕುಳಿತಿದ್ದ ಅವರ ಮಗ ನಾವು ಗಣಪತೀನ ಇಷ್ಟೊಂದು ಪೂಜೆ ಮಾಡ್ತೀವಿ ಏನನ್ಯಾಯ ಮಾಡ್ದ ಅಂತ ಗಣಪತಿ ನಮ್ಮಪ್ಪನ್ನ ಕರ್ಕೊಂಡು ಹೋದ… ಎಂದು ಬಂದವರೆಲ್ಲರ ಮುಂದೆ ಹೇಳುತ್ತ ರೋಧಿಸುತ್ತಿದ್ದ.

ಮೊದಲನೆಯವರದು ಸಂಪೂರ್ಣ ಅರಿವಿನೊಂದಿಗೆ ಬಂದಂತಹ  ಪ್ರತಿಕ್ರಿಯೆಯಾದರೆ, ಎರಡನೆಯವರದ್ದು ಮುಗ್ಧ ಭಾವುಕ ಅಳಲು. ಆದರೆ ಗಮನಿಸಬೇಕಾದ ಅಂಶವೆಂದರೆ, ಇಷ್ಟೆಲ್ಲ ಅನುಭವಿಸಿದ ಮೇಲೂ ಇಬ್ಬರಲ್ಲೂ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲದಿರುವುದು.

ಇದು ನಮ್ಮ ರೈತರ ಸಾಮಾನ್ಯ ಮನೋಧರ್ಮವನ್ನು ತೋರಿಸುತ್ತದೆ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರಲ್ಲದೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಬಹಳ ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಮತ್ತು ಹಾಗೂ ಕಾನೂನಿನ ಭಯ ಕಾರಣವಾಗಿದೆ. ( ಕಾನೂನಿನ ಭಯವಿದ್ದಾಗಲೂ ಆಹಾರಕ್ಕೆ ಬಳಸುವ ಕಾಡು ಪ್ರಾಣಿಗಳ ಬೇಟೆ ಇಂದಿಗೂ ನಡೆದೇ ಇದೆ) ಆದರೆ ರೈತರು ಆನೆಗಳನ್ನು ಕೊಲ್ಲದಿರಲು ಅದೊಂದೇ ಕಾರಣವಲ್ಲ.

ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧವಾದ ಆನೆಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪಿಗೆ ಸೇರಿದವುಗಳು. ಇವು ಬಯಲು ಸೀಮೆಗೂ ಧಾಳಿ ಮಾಡುತ್ತವೆ. ಹಗಲೆಲ್ಲ ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆಯುತ್ತವೆ. ಇವುಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇವು ಸತತವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಈ ಆನೆಗಳು ತುಂಬಾ ಅಪಾಯಕಾರಿಯಾಗಿವೆ. (ಸಾಮಾನ್ಯವಾಗಿ ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತದೆ), ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆ ನಾಶಮಾಡಿ ತಿಂದು ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ಧಾಳಿಗೊಳಗಾಗಿದ್ದಾರೆ. ಇವುಗಳನ್ನು ಮತ್ತೆ ಕಾಡಿಗೆ ಅಟ್ಟಿದರೂ ಅವು ಹೋಗಲಾರವು. ಆದ್ದರಿಂದ ಈ ಆನೆಗಳನ್ನು ಹಿಡಿದು, ಸಾಧ್ಯವಾದರೆ ಪಳಗಿಸುವುದು-ಇಲ್ಲವೇ ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೆ ವಿಧದ ಆನೆಗಳು ಈ ರೀತಿಯವಲ್ಲ. ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಈ ಆನೆಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ.  ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ. ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ  ರೊಚ್ಚಿಗೆದ್ದು ದಾಳಿ ಮಾಡಿವೆ. ಈ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ  ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಮಲೆನಾಡಿನ ಜನ  ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ.  ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.  ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.

ಆನೆ ನಡೆದದ್ದೇ ದಾರಿ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮಥ್ರ್ಯಗಳನ್ನು ಪರಿಚಯಿಸಲು ಹೇಳುವ ಮಾತು. ಆನೆಗಳು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ಪಶ್ಚಿಮಘಟ್ಟಗಳಲ್ಲಿ ಸಂಚರಿಸುತ್ತಾ ತಾವಾಗಿಯೇ ನಿರ್ಮಿಸಿಕೊಂಡಿರುವ  ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ಬಯಸುತ್ತವೆ. ಇವುಗಳನ್ನೇ ‘ಆನೆದಾರಿ’ಗಳೆನ್ನುವುದು. ಆದರೆ ಮನುಷ್ಯನೇ ಅವುಗಳ ದಾರಿಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ.

ಈ ಎಲ್ಲ ಅನಾಹುತಗಳು ನಡೆಯುತ್ತಿರುವಾಗ ಸುಮ್ಮನಿದ್ದ ಸರ್ಕಾರಗಳು, ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಎಚ್ಚೆತ್ತುಕೊಂಡಂತೆ ಮಾತನಾಡುತ್ತಿವೆ. ಕೇಂದ್ರ-ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಮಾಡುತ್ತ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಕಾಲಹರಣ ಮಾಡಿ ಇದೀಗ ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಡುತ್ತಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ‘ಆನೆದಾರಿ’ಗಳನ್ನು ಮತ್ತೆ ಆನೆಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ  elephant corridor ಗಳನ್ನು ‘ನಿರ್ಮಿಸುವ’ ಮಾತನಾಡುತ್ತಿವೆ. ವಿದ್ಯುತ್ ಕೊರತೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ದೂರಿದರೆ, ಕೇಂದ್ರ ಸಚಿವರೊಬ್ಬರು ರಾಜ್ಯದ ವಿದ್ಯುತ್ ಸಮಸ್ಯೆಗೆ ರಾಜ್ಯ ಸರ್ಕಾರವೇ ಹೊಣೆ, ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅರುವತ್ತು ಕಡತಗಳಿಗೆ ರಾಜ್ಯ ಸಕಾರ ಇನ್ನೂ ಅನುಮತಿ ನೀಡದಿರುವುದರಿಂದ ವಿದ್ಯುತ್ ಉತ್ಪಾದನೆಯ ಪ್ರಗತಿ ಕುಂಠಿತವಾಗಿದೆ ಎನ್ನುತ್ತಾರೆ. ಈಗ ಅನುಮತಿ ಸಿಕ್ಕಿರುವ ಕಂಪೆನಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಘಟ್ಟಪ್ರದೇಶವನ್ನು ಹಾಳುಗೆಡವಿರುವುದರ ಬಗ್ಗೆ, ಮತ್ತು ಆ ಅರುವತ್ತು ಯೋಜನೆಗಳೂ ಮತ್ತದೇ ದಟ್ಟಅರಣ್ಯ ಪ್ರದೇಶದಲ್ಲಿ ಬರುತ್ತದೆಂಬ ವಿಚಾರದ ಬಗ್ಗೆ, ಜಾಣ ಕಿವುಡುತನ ತೋರುತ್ತಾರೆ.

ಕೆಲವು ದಿನಗಳ ಹಿಂದೆ ರಾಜ್ಯದ ಸಚಿವರೊಬ್ಬರು ಆನೆಗಳಿಂದ ತೊಂದರೆಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಾಕಷ್ಟು ವಿವರವಾಗಿಯೇ ಮಾಹಿತಿಗಳನ್ನು ಸಂಗ್ರಹಿಸಿದರು. ಅವರೆದುರಿನಲ್ಲೇ ಆನೆಗಳು ಕೂಲಿಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆಯೂ ನಡೆಯಿತು. ಮತ್ತದೇ ಆನೆದಾರಿ ನಿರ್ಮಾಣ ಭರವಸೆಯನ್ನು ನೀಡಿ ಸಚಿವರು ವಾಪಸ್ಸಾದರು.

ಇವರೆಲ್ಲ ನಿರ್ಮಾಣ ಮಾಡಲು ಬಯಸುವ ಆನೆದಾರಿ  ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಇವರು ಹೇಳುವಂತೆ ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ  ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ಮಾಡಲಿರುವ ಹೊಸ ಆನೆದಾರಿಗಳಿವು. ಆದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟದ್ದಿಲ್ಲ. ಸಾಮಾನ್ಯವಾಗಿ  ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ದಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆ ದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃಧ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಆಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಬೇಧವಿಲ್ಲದೆ) ನೀಡುತ್ತಲೇ ಇರುತ್ತವೆ. ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿಧರ್ಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತ ಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ.  ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ.  ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾನೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.  ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು, (ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ) ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಹಾಗೂ ಐ.ಟಿ.-ಬಿ.ಟಿ ಕಂಪೆನಿಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು ಉದಾಹರಣೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರ. ಇದೀಗ ಆನೆ ದಾರಿ ನಿರ್ಮಾಣಕ್ಕೆಂದು ಇವರು ನೀಡುತ್ತೇವೆಂದು ಹೇಳುತ್ತಿರುವ ಮೊತ್ತವೂ ಅಷ್ಟೇ ಸಣ್ಣದು.

ಇನ್ನು ಇಲ್ಲಿರುವ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಮಕ್ಕಳಿಗೆ ನಾನಾ ಕಾರಣಗಳಿಂದ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವೂ ಇದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಬದಲಿಯಾಗಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದು ವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಆನೆಗಳು ಹೀಗೇ ಉಳಿದರೆ ಪುಂಡಾನೆಗಳಾಗಿ ಪರಿವರ್ತನೆಯಾಗುವ ಅಪಾಯವಂತೂ ಇದ್ದೇ ಇದೆ. ಆದರೆ ಈಗ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು. ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. (ಒತ್ತುವರಿ ಸರಿಯೆಂದು ನನ್ನ ವಾದವಲ್ಲ, ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಯಾವುದೇ ಸರ್ಕಾರದ ಕರ್ತವ್ಯ ಕೂಡಾ) ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ, ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ,  ಕೆಲವೊಮ್ಮೆ ಮೋಟಾರ್ ರ್‍ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಇವೂ ಕೂಡಾ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ.

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾದ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಆನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ನಮ್ಮ ಆಭಿವೃದ್ಧಿ ಕಾರ್ಯಗಳನ್ನೆಲ್ಲ ಪಶ್ಚಿಮ ಘಟ್ಟದ ಅರಣ್ಯ ಪದೇಶದಿಂದ ಶಾಶ್ವತವಾಗಿ ದೂರಮಾಡಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ. ಇದರೊಂದಿಗೆ ಸ್ವಇಚ್ಛೆಯಿಂದ ಅಲ್ಲಿಂದ ತೆರಳಲು ಬಯಸುವವರಿಗೆ (ಅನೇಕ ವರ್ಷಗಳಿಂದ ಅಲ್ಲಿ ನೆಲೆಸಿರುವ ಭೂರಹಿತ ಕೃಷಿಕಾರ್ಮಿಕರೂ ಸೇರಿದಂತೆ) ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಅನುಮಾನ ಕಂಡುಬರುತ್ತಿದೆ. ಇದರಿಂದಾಗಿಯೇ ಕೆಲವು ‘ಅಭಿವೃದ್ಧಿಪರ’ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪೆನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ (ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ). ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನು ಕೂಡಾ ತಜ್ಞರ ಮಾತಿಗೆ ಮಣಿದು ಹಿಂತೆಗೆದುಕೊಂಡು ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸಲು ಮುಂದಾಗಿದೆ.

ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ….. ನಮಗೂ ಇಲ್ಲ-ಆನೆಗಳಿಗೂ ಇಲ್ಲ.

ಫೋಟೋ ಕೃಪೆ: sheldrickwildlifetrust.org

ಸಾವೆಂಬುದು ಬದುಕಿನಲ್ಲಿ ಬರುವ ಏಕೈಕ ಆಮಂತ್ರಣ

ತಂತ್ರಜ್ಙಾನ ರಂಗದಲ್ಲಿ ದಂತ ಕಥೆಯಂತೆ ಬದುಕಿ ಇದೇ 5 ರಂದು ತೀರಿಹೋದ ಸ್ಟೀವ್ ಜಾಬ್ಸ್‌ದು ತನ್ನ ಹೊಸ ಹೊಸ ಅವಿಷ್ಕಾರಗಳ ಮೂಲಕ ಇಂದಿನ ತಲೆಮಾರಿನ ಹೃದಯಗಳಲ್ಲಿ ಶಾಶ್ವತ ನಿಲ್ಲುವಂತಹ ವ್ಯಕ್ತಿತ್ವ. ಸಾವಿನ ತೂಗುಕತ್ತಿಯ ಕೆಳಗೇ ಬದುಕು ದೂಡುತ್ತಾ ಜಗತ್ತಿನ ಮಾಹಿತಿ ರಂಗಕ್ಕೆ ಐಪ್ಯಾಡ್, ಐಪಾಡ್, ಐಪೊನ್ ಗಳನ್ನು ನೀಡಿದ ಅಪ್ರತಿಮ ಸಾಹಸಿ, ಸ್ಟೀವ್. 2005 ರ ಜೂನ್ 12 ರಂದು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿ.ವಿ.ಯ ಘಟಿಕೋತ್ಸವದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳಲು ಸಿದ್ಧವಾಗಿದ್ದ ಯುವ ಜನಾಂಗವನ್ನು ಕುರಿತು ಸ್ಟೀವ್ ಮಾಡಿದ ಭಾಷಣ ಇಂದಿಗೂ ಪ್ರಸಿದ್ಧವಾಗಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ಡಾ.ಎನ್. ಜಗದೀಶ್ ಕೊಪ್ಪ

ನಾನು 17 ನೇ ವಯಸ್ಸಿನಲ್ಲಿ ಓದಿದ ವಾಕ್ಯ ನನಗಿನ್ನೂ ನೆನಪಿದೆ. ಆ ಸಾಲುಗಳು ಹೀಗಿದ್ದವು: “ಈ ದಿನವೇ ನನ್ನ ಕಡೆಯ ದಿನವೆಂದು ನೀನು ಬದುಕಿದರೇ ನಿನ್ನ ನಿರ್ಧಾರ ಸರಿ.”‘ ಕಳೆದ 33 ವರ್ಷಗಳಿಂದಲೂ ನನ್ನನ್ನು ಈ ಸಾಲುಗಳು ಕಾಡುತ್ತಾ ಬದುಕನ್ನ ಮುನ್ನೆಡೆಸಿವೆ. ಪ್ರತಿ ದಿನ ಬೆಳಿಗ್ಗೆ ಕನ್ನಡಿಯ ಮುಂದೆ ನಿಂತು ನಾನು ಕೇಳಿಕೊಳ್ಳುತ್ತೇನೆ, ” ಈದಿನ ನಿನ್ನ ಕೊನೆಯ ದಿನವಿರಬಹುದೆ?” ಆವಾಗ ನನ್ನ ಒಳ ಮನಸ್ಸು ಹೇಳುತ್ತದೆ, “ಇಲ್ಲ ಇನ್ನೂ ಹಲವಾರು ದಿನಗಳು ಸರತಿಯ ಸಾಲಿನಲ್ಲಿ ಕಾಯುತ್ತಿವೆ,” ಎಂದು. ಆಗ ನನಗನಿಸುತ್ತದೆ, ಹೌದು, ನನ್ನಿಂದ ಕೆಲವು ಬದಲಾವಣೆಗಳು ಆಗಬೇಕಾಗಿದೆಯೆಂದು. ನಾನು ಸಧ್ಯದಲ್ಲೇ ಸಾಯುತ್ತೀನಿ ಎಂದು ನಾನು ಬಲ್ಲೆ, ಈ ಕಾರಣಕ್ಕಾಗಿ ಬದುಕಿನಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಬಾಚಿ ತಬ್ಬಿಕೊಳ್ಳುತಿದ್ದೇನೆ. ಏಕೆಂದರೆ, ಸಾವಿನ ಸಮ್ಮುಖದಲ್ಲಿ ಸಂತೋಷ, ಮುಜುಗರ, ವೈಫಲ್ಯ ಇವೆಲ್ಲವೂ ಗೌಣ. ಹಾಗಾಗಿ ಬದುಕಿನ ವಾಸ್ತವ ಸಂಗತಿಗಳ ಬಗ್ಗೆ ಯೋಚಿಸುತ್ತೇನೆ. ಸಾವಿನ ಮೂಲಕ ಬದುಕಿನಲ್ಲಿ ಎದುರಿಸಬೇಕಾದ ಹಲವಾರು ಸಂಗತಿಗಳು ದೂರವಾಗುತ್ತವೆ. ನೀನು ಈಗಾಗಲೇ ಬತ್ತಲೆಯಾಗಿರುವಾಗ ನಿನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನೀನು ನಡೆಯಲೇಬೇಕು ಎಂಬುದು ನನ್ನ ಅಂತರಂಗದ ಧ್ವನಿಯಾಗಿದೆ.

ಒಂದು ವರ್ಷದ ಹಿಂದೆ ಬೆಳಗಿನ ಜಾವ ಆಸ್ಪತ್ರೆಯಲ್ಲಿ ನನ್ನ ದೇಹವನ್ನು ತಪಾಸಣೆಗೆ ಒಳಪಡಿಸಿದಾಗ ನನ್ನ ಮೆದೋಜೀರಕ ಗ್ರಂಥಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ದೃಢಪಟ್ಟಿತು. ನನಗೆ ಮೇದೋಜೀರಕ ಗ್ರಂಥಿ ಅಂದರೆ ಏನೆಂಬುದು ಗೊತ್ತಿರಲಿಲ್ಲ, ವೈದ್ಯರು ಈ ಬಗ್ಗೆ ವಿವರಿಸಿ, ಬಹಳ ದಿನ ಬದುಕುವ ಆಸೆಯನ್ನ ನಾನು ತ್ಯಜಿಸುವಂತೆ ಸೂಚಿಸಿದರು. ಅವರ ಸೂಚನೆ ಸಾವಿಗೆ ಸಿದ್ಧವಾಗಿರು ಎಂಬಂತಿತ್ತು. ಜೊತೆಗೆ ನನ್ನ ಮಕ್ಕಳಿಗೆ, ಪತ್ನಿಗೆ ಮುಂದಿನ ಹತ್ತು ವರ್ಷಗಳಲ್ಲಿ ನಾನು ಏನು ಹೇಳಬೇಕೆಂದಿದ್ದೆ ಅವೆಲ್ಲವನ್ನು ಕೆಲವೇ ತಿಂಗಳಲ್ಲಿ ಹೇಳಿ ಮುಗಿಸು ಎಂಬಂತಿತ್ತು. ಇದರಿಂದ ನನ್ನ ಕುಟುಂಬಕ್ಕೆ ಒಳಿತಾಗಿ ನನ್ನ ಸಾವಿನ ದಾರಿ ಸುಗಮವಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು. ಆ ದಿನ ಸಂಜೆಯವರೆಗೆ ಆಸ್ಪತ್ರೆಯಲ್ಲಿ ನನ್ನನ್ನು ಇರಿಸಿಕೊಂಡು ನನ್ನ ಗಂಟಲಿನ ಹಾಗೂ ಹೊಟ್ಟೆಯ ಒಳ ಭಾಗದ ಮಾಂಸದ ತುಣುಕುಗಳನ್ನು ತೆಗೆದು, ಜೈವಿಕ ಪರೀಕ್ಷೆಗೆ ಒಳಪಡಿಸಲಾಯ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ನನ್ನ ಪತ್ನಿಗೆ ವೈದ್ಯರು ಹೊಸ ಭರವಸೆಯೊಂದನ್ನು ಕೊಟ್ಟರು. ಶಸ್ರಚಿಕಿತ್ಸೆ ಮೂಲಕ ರೋಗಕ್ಕೆ ತುತ್ತಾಗಿರುವ ಭಾಗಗಳನ್ನು ತೆಗೆದು ಇನ್ನಷ್ಟು ಹೊಸ ಜೀವಕೋಶಗಳನ್ನು ಬೆಳೆಸುವುದರ ಮೂಲಕ ಸಾವನ್ನು ಒಂದಷ್ಟು ವರ್ಷಗಳ ಕಾಲ ಮುಂದೂಡಬಹುದೆಂಬುದೇ ವೈದ್ಯರ ಭರವಸೆಯಾಗಿತ್ತು. ನಿರಾಸೆಯ ಕಡಲಲ್ಲಿ ಮುಳುಗಿದ್ದವನಿಗೆ ಅದೊಂದು ಸಣ್ಣ ಭರವಸೆಯ ಬೆಳಕು ನನ್ನ ಪಾಲಿಗೆ.

ನಾನು ಯುವಕನಾಗಿದ್ದಾಗ “Whole Earth Catalog” (ಜಗತ್ತಿನ ವಿಷಯಗಳು) ಎಂಬ ಪುಸ್ತಕ ಪ್ರಕಟವಾಗಿತ್ತು. ನನ್ನ ತಲೆಮಾರಿನ ಪಾಲಿಗೆ ಅದೊಂದು ಬೈಬಲ್. ಇದನ್ನು ಸಿದ್ಧಪಡಿಸಿದವರು ಇಲ್ಲೇ ಸಮೀಪದ ಮೆನ್ಲೊ ಪಾರ್ಕ್ ನಲ್ಲಿರುವ ಸ್ಟೀವರ್ಟ್ ಬ್ರಾಂಡ್. ಅವರು ಈ ಪುಸ್ತಕಕ್ಕೆ ಕಾವ್ಯದ ಸ್ಪರ್ಶ ನೀಡಿದ್ದರು. 1960ರ ನಂತರ ನಾವೆಲ್ಲ ಬಲ್ಲಂತೆ ಪರ್ಸನಲ್ ಕಂಪ್ಯೂಟರ್‌ಗಳು ಆವಿಷ್ಕಾರಗೊಂಡು, ಟೈಪ್‌ರೈಟರ್‌ಗಳು, ಪೋಲಾರೈಡ್ ಕ್ಯಾಮೆರಾಗಳು, ಕತ್ತರಿಗಳು ನೇಪಥ್ಯಕ್ಕೆ ಸರಿದವು. ಸ್ಟೀವರ್ಟ್ ಮತ್ತು ಅವನ ತಂಡ ಜಗತ್ತಿನ ವಿಷಯಗಳು ಕುರಿತಾದ ಕೊನೆಯ ಸಂಪುಟವನ್ನು 1970ರಲ್ಲಿ ಹೊರತಂದಿತು. ಅದು ಇವತ್ತಿನ ಗೂಗಲ್‌ನ ಪುಸ್ತಕ ರೂಪ, ಗೂಗಲ್ ಬರುವುದಕ್ಕೆ 35 ವರ್ಷಗಳ ಹಿಂದೆಯೇ, ಎನ್ನಬಹುದು. ಅದೊಂದು ಆದರ್ಶವಾದಿಯಾಗಿತ್ತು. ಹಾಗೆಯೇ ಉಪಯುಕ್ತ ಸಲಕರಣೆಗಳಿಂದ ಮತ್ತು ಉತ್ತಮ ಚಿಂತನೆಗಳಿಂದ ತುಂಬಿತುಳುಕುತ್ತಿತ್ತು. ನನಗೆ ಆ ಕೊನೆಯ ಸಂಪುಟದ ಹಿಂಬದಿಯ ರಕ್ಷಾ ಪುಟದಲ್ಲಿ ಪ್ರಕಟವಾಗಿದ್ದ ಬೆಟ್ಟ ಹತ್ತುತ್ತಿರುವ ಯುವಕರ ಚಿತ್ರಹಾಗೂ ಅದರ ಕೆಳಗೆ ಮುದ್ರಿಸಿದ್ದ “ಸದಾ ಹಸಿವಿನಿಂದಿರು ಮತ್ತು ಸದಾ ಮೂರ್ಖನಂತಿರು” ಎಂಬ ವಾಕ್ಯ ಈಗಲೂ ನೆನಪಿದೆ. ಇಲ್ಲಿ ಹಸಿವೆಂದರೆ ಜ್ಞಾನದ ಹಸಿವು. ಮೂರ್ಖನಂತೆ ಬದುಕುವುದೆಂದರೆ ನಮ್ಮ ಅಹಂಗಳನ್ನು ತ್ಯಜಿಸುವುದು ಎಂದರ್ಥ. ಇಂತಹ ನಾಣ್ಣುಡಿಗಳು ನಿಮ್ಮ ಬದುಕನ್ನು ಮುನ್ನಡೆಸಲಿ ಎಂದು ಹಾರೈಸುತ್ತೇನೆ. ವಂದನೆಗಳು.

(ಚಿತ್ರಕೃಪೆ: ವಿಕಿಪೀಡಿಯ)

“ವರ್ತಮಾನ”ದ ಇಂದಿನ ವರ್ತಮಾನ…

ಸ್ನೇಹಿತರೆ,

“ವರ್ತಮಾನ” ನಾನು ಅಂದುಕೊಂಡಷ್ಟು ವೇಗದಲ್ಲಲ್ಲದಿದ್ದರೂ ಸಮಾಧಾನಕರವಾಗಿ ವಿಕಾಸವಾಗುತ್ತಾ ಹೋಗುತ್ತಿದೆ. ಬಹುಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಈಗಾಗಲೆ ಮೂರು ಸರಣಿ ಲೇಖನಗಳು ಪ್ರಕಟವಾಗುತ್ತಿವೆ. ನಾಲ್ಕನೆಯದು ಈ ವಾರ ಆರಂಭವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಮಾನಮನಸ್ಕರು ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಸುಮಾರು ಹತ್ತು ದಿನಗಳನ್ನು ನಾನು ಕರ್ನಾಟಕದ ಬೇರೆಬೇರೆ ಕಡೆ ಪ್ರವಾಸದಲ್ಲಿಯೇ ಕಳೆದದ್ದರಿಂದಾಗಿ ವೈಯಕ್ತಿಕವಾಗಿ ಏನನ್ನೂ ಬರೆಯಲಾಗಲಿಲ್ಲ. ಆದರೆ, ಹೊಸಹೊಸ ಸ್ನೇಹಿತರು ಮತ್ತು ಸಮಾನಮನಸ್ಕರು, ನಮ್ಮಂತಹುದೇ ಆಶಯವುಳ್ಳವರು ಪರಿಚಯವಾಗುತ್ತಲೇ ಹೋಗುತ್ತಿದ್ದಾರೆ. ಯಾವುದೇ ಹಣಕಾಸಿನ ಅಪೇಕ್ಷೆಯಿಲ್ಲದೆ ವಾರಕ್ಕೆ ನಾಲ್ಕಾರು ಗಂಟೆಗಳನ್ನು ನಾವು ಒಪ್ಪಿಕೊಂಡ ಮೌಲ್ಯ ಮತ್ತು ನೀತಿಗಳಿಗಾಗಿ ನೀಡಲು ಜನ ಜೊತೆಯಾಗುತ್ತಲೇ ಇದ್ದಾರೆ.

ಈ ಮಧ್ಯೆ, ಅನಾಮಿಕರು ನಡೆಸುವ “ಸಂಪಾದಕೀಯ” ಬ್ಲಾಗ್ ವರ್ತಮಾನದ ಬಗ್ಗೆ ಬರೆದು ಒಂದೆರಡು ಮಾತು ಬರೆದು ನಮಗೆ ಬೆಂಬಲ, ಪ್ರೋತ್ಸಾಹ, ಮತ್ತು ಪ್ರಚಾರ ನೀಡಿದೆ. ಅವರಿಗೆ ಧನ್ಯವಾದಗಳು. ಕೆಲವು ತುಡಿತಗಳುಳ್ಳ ಜನರಿಗೆ ಅನಾಮಿಕರಾಗಿ ಅಲ್ಲದೆ ಕೆಲವೊಂದು ವಿಚಾರಗಳನ್ನು ಹೇಳಲಾಗದ ಅನಿವಾರ್ಯತೆ ನಮ್ಮಲ್ಲಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇಲ್ಲದಿದ್ದರೂ, ಅವರ ಅನಿವಾರ್‍ಯತೆ ಮತ್ತು ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅವರ ಅನಿವಾರ್ಯತೆಗಳು ಕ್ರಮೇಣ ಕಳಚಿಕೊಳ್ಳಲಿ ಎಂದು ಹಾರೈಸುತ್ತೇನೆ.

“ಸಂಪಾದಕೀಯ” ಬ್ಲಾಗ್ ಯಾರದು ಎನ್ನುವ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವೂ ಈಗ ಇಲ್ಲ. (ಅದು ಎಂದೂ ಇರಲಿಲ್ಲ ಎಂದು ಹೇಳಲಾರೆ.) ಆದರೆ ಒಂದು ಮಾತಂತೂ ಹೇಳಬೇಕು: ಹಲವಾರು ಸಂದರ್ಭಗಳಲ್ಲಿ “ಸಂಪಾದಕೀಯ” ಬರೆಯುವವರು, ಅನಾಮಿಕವಾಗಿದ್ದರೂ ಸಹ, ಬಹಳ ಸಂಯಮದಿಂದ ಮತ್ತು ಪ್ರಬುದ್ಧತೆಯಿಂದ ಬರೆದಿದ್ದಾರೆ. ತಮ್ಮ ಒಲವು-ನಿಲುವುಗಳನ್ನು ಒಪ್ಪದಿದ್ದವರನ್ನು ವಿಮರ್ಶಿಸುವಾಗಲೂ ಸಹ ಅವರು ಇಂತಹ ಅನಾಮಿಕ ಬ್ಲಾಗ್‌ಗಳಿಗೆ ಹೊರತಾದ ಸಂಯಮ ಸಾಧಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ತಮ್ಮ ಇತರೆ ಮಾಧ್ಯಮ ಸಹೋದ್ಯೋಗಿಗಗಳನ್ನು ವಿಮರ್ಶಿಸುವಾಗ ಮತ್ತು ಮಾಧ್ಯಮಸಂಸ್ಥೆಗಳ ಹಗರಣಗಳನ್ನು ಬರೆಯುವಾಗ ನಮ್ಮ ಪತ್ರಕರ್ತರು ಈ ಮಟ್ಟದ ಸಂಯಮ ತೋರಿಸಿ ಅಂತಹ ವಿಚಾರಗಳನ್ನೂ ಎತ್ತಿಕೊಳ್ಳುವ ಧೈರ್ಯ ತೋರಿಸಿದರೆ, ನಮ್ಮ ಕನ್ನಡ ಮಾಧ್ಯಮರಂಗ ತನ್ನ ಹೊಲಸನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಆದರೆ, ಆ ಆಶಾವಾದ ಈಗ ಸದ್ಯಕ್ಕೆ ಅವಾಸ್ತವವಾದದ್ದು. “ವರ್ತಮಾನ” ಇಂತಹುದನ್ನು ಮಾಡಬೇಕು. ನಮಗೆ ಸರಿಯಾದ ಜನ ಸಿಗಬೇಕು ಅಷ್ಟೆ. ಆಧಾರಸಹಿತವಾಗಿ ಇರುವುದನ್ನು, ಅದು ಯಾರ ವಿರುದ್ಧವೇ ಆಗಲಿ, ಪ್ರಕಟಿಸುವ ಪ್ರಾಮಾಣಿಕತೆ “ವರ್ತಮಾನ” ಎಂದಿಗೂ ಉಳಿಸಿಕೊಳ್ಳುತ್ತದೆ.

ಅಂದ ಹಾಗೆ, ಮುಖ್ಯವಾದ ವಿಷಯ ಇದೇನೆ, “ವರ್ತಮಾನ”ದ ಜೊತೆ ಕೈಜೋಡಿಸುವ ಜನ ಈಗ ಹಿಂದೆಂದಿಗಿಂತ ಹೆಚ್ಚಿಗೆ ಬೇಕಾಗಿದ್ದಾರೆ. ನೀವು ಲೇಖಕರೇ ಆಗಬೇಕಿಲ್ಲ. ನಮ್ಮ ಲೇಖಕ ಮಿತ್ರರು ನುಡಿ ಇಲ್ಲವೆ ಬರಹದಲ್ಲಿರುವ ಲೇಖನಗಳನ್ನು ಕಳುಹಿಸುತ್ತಾರೆ. ನಾವು ಅದನ್ನು ಯೂನಿಕೋಡ್‌ಗೆ ಪರಿವರ್ತಿಸಿ ಪ್ರಕಟಿಸಬೇಕಾಗುತ್ತದೆ. ಅದು ಒಮ್ಮೊಮ್ಮೆ ಒಂದಷ್ಟು ಸಮಯ ಬೇಡುತ್ತದೆ. ಒಂದು ಲೇಖನವನ್ನು ಪ್ರಕಟಿಸಲು (ಯೂನಿಕೋಡ್ ಪರಿವರ್ತನೆ, ಕೋಟ್ಸ್‌ಗಳನ್ನು, ಸಂಖ್ಯೆಗಳನ್ನು ಉಳಿಸಿಕೊಳ್ಳುವುದು, ಲೇಖನವನ್ನು ಫಾರ್ಮ್ಯಾಟ್ ಮಾಡುವುದು, ಫೋಟೋಗಳನ್ನು ಸೇರಿಸುವುದು, ಇತ್ಯಾದಿ) ಕನಿಷ್ಟ ಸರಾಸರಿ ಅರ್ಧ ಘಂಟೆಯಾದರೂ ಹಿಡಿಯುತ್ತದೆ. ಇಂತಹ ಕೆಲಸಕ್ಕೆ ನಮಗೆ ಒಂದಿಷ್ಟು ಕಾಯಕದಾನಿಗಳ ಅವಶ್ಯಕತೆ ಇದೆ. ಹಾಗೆಯೆ, ಈಗ ನನ್ನ ಬಳಿ ಸುಮಾರು ಮೂರು ಗಂಟೆಗಳ ವಿಡಿಯೋ ಇದೆ. ಮ್ಯಾಗ್ಸೆಸೇ ಪುರಸ್ಕೃತ ಹರೀಶ್ ಹಂದೆಯವರೊಡನೆ ಮಾತನಾಡಿರುವುದೇ ಸುಮಾರು ಎರಡು ಗಂಟೆಗಳದಿದೆ. ಇದನ್ನು ಹತ್ತು-ಹದಿನೈದು ನಿಮಿಷಗಳ ಸೆಗ್ಮೆಂಟ್‌ಗಳಿಗೆ ಎಡಿಟ್‌ ಮಾಡಿ, ಯೂಟ್ಯೂಬ್‌ಗೆ ಏರಿಸುವ ಕೆಲಸದಲ್ಲಿ ಸಹಾಯ ಬೇಕಿದೆ. ಇದೇನೂ ಹೆಚ್ಚಿನ ತಾಂತ್ರಿಕ ಪರಿಣತಿ ಬೇಡುವುದಿಲ್ಲ. ಇದನ್ನು ವಿಂಡೋಸ್ ಮೂವಿ ಮೇಕರ್ ಬಳಸಿಕೊಂಡು ಮಾಡುವುದು ಹೇಗೆ ಎಂದು ಹತ್ತು-ಹದಿನೈದು ನಿಮಿಷದಲ್ಲಿ ನಾನೇ ಹೇಳಿಕೊಡಬಲ್ಲೆ. ಆಸಕ್ತ ಗೆಳೆಯರು ದಯವಿಟ್ಟು ಸಂಪರ್ಕಿಸಿ. ಬಹಳ ಸಹಾಯವಾಗುತ್ತದೆ. ಇಂತಹ ಕೆಲಸಗಳಿಗೆ ಸ್ನೇಹಿತರು ಕೈಜೋಡಿಸುತ್ತ ಹೋದಂತೆ ಈ ವೆಬ್‌ಸೈಟ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ಸಾಂಘಿಕವಾಗಿ, ಸಮುದಾಯದ ವೇದಿಕೆಯಾಗಿ, ಸ್ವತಂತ್ರವಾಗಿ ಮೂಡಿಬರಲು ಸಾಧ್ಯವಾಗುತ್ತದೆ. ನಿಮಗೆ ಇದು ಸಾಧ್ಯ ಎಂದಾದರೆ, ಈ ವಿನಂತಿಯನ್ನೇ ನಿಮಗೆಂದೇ ಬರೆದ ವೈಯಕ್ತಿಕ ಪತ್ರ ಎಂದುಕೊಳ್ಳಿ. ಸಂಪರ್ಕಿಸಿ.

ಹಾಗೆಯೇ, ಕನ್ನಡದಲ್ಲಿ ಬರೆಯುವ ನಮ್ಮ ಬರಹಗಾರ ಮಿತ್ರರು ತಮ್ಮ ಲೇಖನಗಳನ್ನು ಯೂನಿಕೋಡ್‌ನಲ್ಲಿ ಬರೆದು ಕಳುಹಿಸಿದರೆ, ಮತ್ತೂ ಉಪಕಾರವಾಗುತ್ತದೆ.

ಕಳೆದ ವಾರ ಆಲಮಟ್ಟಿ-ಬಾಗಲಕೋಟೆ-ಮುಧೋಳ-ಜಮಖಂಡಿ-ಬಿಜಾಪುರಗಳ ಪ್ರವಾಸದಲ್ಲಿದ್ದೆ. ಅಲ್ಲಿ ಕಂಡದ್ದು ಮತ್ತು ಕೇಳಿದ್ದರ ಬಗ್ಗೆ ಈಗಾಗಲೆ ಬರೆಯಬೇಕಾಗಿತ್ತು. ಕನಿಷ್ಠ ಪಕ್ಷ ಮುಧೋಳ ತಾಲ್ಲೂಕಿನ ಚಾರಿತ್ರಿಕ ಸ್ಥಳವಾದ ಹಲಗಲಿ ಊರಿನ ಬಗ್ಗೆಯಾದರೂ ಬರೆಯಬೇಕಿತ್ತು. ಕೆಲಸದ ಒತ್ತಡದಿಂದಾಗಿ ಮತ್ತು ಬರವಣಿಗೆಗೆ ಬೇಕಾದ ಮಾನಸಿಕ ಸ್ಥಿತಿಯ ಅಭಾವದಿಂದಾಗಿ ಇನ್ನೂ ಆಗಿಲ್ಲ. ಆದಷ್ಟು ಬೇಗ ಬರೆಯಬೇಕು ಎಂದುಕೊಳ್ಳುತ್ತಿದ್ದೇನೆ. ಹೆಚ್ಚಿನ ಸಮಯ ಮಾತು ಮತ್ತು ಭೇಟಿಯಲ್ಲಿ ಕಳೆಯುತ್ತಿದೆ.

ಈ ಶನಿವಾರ ಮತ್ತೆ ಪ್ರವಾಸ ಹೋಗುತ್ತಿದ್ದೇನೆ. ಈ ಬಾರಿ ಉಡುಪಿ-ಮಂಗಳೂರು, ಮತ್ತು ನಂತರ ಬೇಲೂರು-ಹಳೇಬೀಡು-ಹಾಸನದ ಸುತ್ತಮುತ್ತ. ಭಾನುವಾರ, ಗಾಂಧಿ ಜಯಂತಿಯಂದು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವುದಿದೆ. ಅದಕ್ಕಿಂತ ಮೊದಲು ದಾರಿಯಲ್ಲಿ ಅರವಿಂದ ಚೊಕ್ಕಾಡಿಯವರ ಭೇಟಿ ಆಗಬಹುದು. ಕಾರ್ಕಳದಲ್ಲಿ ಒಂದಿಬ್ಬರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮಂಗಳೂರಿನಲ್ಲೂ ಸ್ನೇಹಿತರ ಭೇಟಿಗೆ ವ್ಯವಸ್ಥೆ ಆಗುತ್ತಿದೆ. ಈ ಬಾರಿ ಕುಟುಂಬದವರೊಂದಿಗೆ ಹೋಗುತ್ತಿರುವುದರಿಂದ ಸಾಕಷ್ಟು ಸಮಯ ಕಳೆಯಲು ಆಗದಿದ್ದರೂ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸಮಯ ಇದ್ದೇ ಇರುತ್ತದೆ.

ಕೊನೆಯದಾಗಿ, ಲೇಖನಗಳನ್ನು ಕಳುಹಿಸುತ್ತೇವೆ ಎಂದ ಮಿತ್ರರಿಗೆ ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ನನ್ನ ಒಂದಷ್ಟು ಒತ್ತಡಗಳು ಕಮ್ಮಿಯಾದರೆ, ಈ ವೆಬ್‌ಸೈಟ್‌ನ ಇತರೆ ಆಡಿಯೊ-ವಿಡಿಯೋ ಸಾಧ್ಯತೆಗಳತ್ತ, ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಸ್ನೇಹಿತರನ್ನು ವರ್ತಮಾನಕ್ಕೆ ಪರಿಚಯಿಸುವುದರತ್ತ, ಮತ್ತು ಕೆಲವೊಂದು ದಾಖಲೆ ಸಮೇತ ಪ್ರಕಟಿಸಬಹುದಾದ ಪ್ರಕಟಣೆಗಳತ್ತ ಒಂದಷ್ಟು ಗಮನ ಹರಿಸಬಹುದು.

ನಮಸ್ಕಾರ,
ರವಿ…

ಇವು ಕಳೆದ ವಾರದ ಪ್ರವಾಸದ ಕೆಲವು ಚಿತ್ರಗಳು:

http://www.facebook.com/media/set/?set=a.193219764084030.49338.100001880229123&l=0af359f1e1&type=1

ನಮ್ಮ ನಿಮ್ಮ ನಡುವೆ ದೆವ್ವಗಳಿವೆ ಹುಷಾರ್!

ಒಂದು ಹಳೆಯ ಪಾಳು ಬಂಗಲೆ.  ನಿರ್ಜನ ಪ್ರದೇಶ. ಹಗಲಲ್ಲೇ  ಹೋಗಲು ಭಯ. ಇನ್ನು ರಾತ್ರಿ ಹೋದರಂತೂ ಮುಗಿದೇ ಹೋಯಿತು. ಅಲ್ಲಿರುವ ದೆವ್ವ ನಮ್ಮನ್ನು ಮೈ ಸೇರಿಕೊಳ್ಳದೇ ಇರುವುದಿಲ್ಲ. ಅಥವಾ ನಮ್ಮನ್ನು ಹೆದರಿಸದೆ ಸುಮ್ಮನಂತೂ ಇರುವುದಿಲ್ಲ. ಇದು ಎಷ್ಟೋ ದೆವ್ವದ ಸಿನಿಮಾಗಳಲ್ಲಿ ನಾವು ಕಾಣುವ ಕಥೆ. ಅಂತಹ ಪಾಳು ಬಂಗಲೆಗಳು ಎಲ್ಲಿಯೂ ಇರಬಹುದು. ನೆನ್ನೆ ದೆವ್ವ ನೋಡ್ದೆ ಸಾರ್ ! ನಾನು ನಿಮ್ಗೆಯಾಕ್ ಸುಳ್ಳು ಹೇಳಲಿ ? ಸುಳ್ಳೇಳಿ ನನ್ಗೇನ್ ಆಗ್ಬೇಕ್?

ಆಸ್ಪತ್ರೆಯ ಶವಾಗಾರದಲ್ಲಿ ನಿನ್ನೆ ದೆವ್ವ ಕಾಣಿಸಿತು ತೋಟವೊಂದರ ಪಾಳು ಬಾವಿಯಲ್ಲಿ ಬಿದ್ದ ಆ ಹೆಂಗಸು ದೆವ್ವವಾಗಿದ್ದಾಳೆ. ಶಾಲೆಯ ಮುಂದಿನ ಮರಕ್ಕೆ ನೇಣು ಹಾಕಿಕೊಂಡ ವ್ಯಕ್ತಿ ದೆವ್ವ ಆಗಿದ್ದಾನೆ. ಅದರ ಚೇಷ್ಟೆಯಿಂದ ಮಕ್ಕಳು ಹೆದರಿ ಶಾಲೆಗೇ ಹೋಗಲ್ಲ ಎನ್ನುತ್ತಾರೆ. ನಮ್ಮ ಹಿಂದಿನ ಓಣಿಯಲ್ಲಿ ದೆವ್ವ ಇರೋದ್ರಿಂದ ಅಲ್ಲಿ ಜನಹೋಗಲು ಭಯಪಡುತ್ತಾರೆ. ದೆವ್ವ ಬಂದೋರು 10 ಕೆಜಿ ಮೆಣಸಿನಕಾಯಿ ತಿನ್ನುತ್ತಾರೆ. ಹೆಂಗಸಿನ ಮೇಲೆ ಬಂದ ದೆವ್ವ ನೂರಾರು ಜನ ಹಿಡಿದ್ರೂ ಬಿಡಿಸಿಕೊಳ್ಳೋಕೆ ಆಗಲ್ಲ. ದೆವ್ವ ಬಂದೋರು ಎಲ್ಲಾ ಭಾಷೆಯಲ್ಲಿ ಮಾತಾಡುತ್ತಾರೆ. ಪಕ್ಕದಮನೆ ಗಂಗೆಗೆ ದೆವ್ವ ಬಂದು ಕೊಟ್ಟದ್ದೆಲ್ಲಾ ತಿನ್ನುತ್ತಾಳೆ. ಆ ಹುಡುಗ, ಹುಡುಗಿ ಲವ್ ಮಾಡ್ತಿದ್ರಂತೆ ಹುಡುಗ ಕೈಕೊಟ್ಟ ಮೇಲೆ ಹುಡುಗಿ ಸತ್ತು ದೆವ್ವವಾಗಿ ಆತನ ಮೇಲೆ ಹಿಡಿದುಕೊಂಡಿದ್ದಾಳೆ.. ಆ ಸಾಬ್ರು ಸಾವಿರಾರು ದೆವ್ವ ಬಿಡ್ಸೆವ್ರಂತೆ ? ನಮ್ಮೂ ವಾಮಾಚಾರಿ ಎಲ್ಲಾ ದೆವ್ವಗಳ್ನ ಸೀಸೆಯಲ್ಲಿ ಹಾಕಿ ಬಂದ್ ಮಾಡವ್ನೆ ? ನಮ್ಮ ದೆವ್ರು ಅದೆಷ್ಟೋ ದೆವ್ವಗಳ ತನ್ನ ಕಾಲಕೆಳಗೆ ಹಾಕ್ಕೊಂಡಿದೆ ಗೊತ್ತಾ ನಿಮ್ಗೆ? .ದಿನ ಬೆಳಗಾದರೆ ಇಂತಹ ಎಷ್ಟೋ ಹೇಳಿಕೆಗಳನ್ನು ನಾವು ಕೇಳುತ್ತಲೇ ಇರುತ್ತೇವೆ.

ದೆವ್ವಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ? 
ಇದು ಇಂದಿನ ಪ್ರಶ್ನೆಯಲ್ಲ. ಶತ ಶತಮಾನಗಳದ್ದು. ನಮ್ಮ ಮನಸ್ಸಿನಲ್ಲಿ ಭಯ ಎನ್ನುವ ಒಂದು ಭಾವನೆ ಎಷ್ಟು ತೀವ್ರವಾಗಿರುತ್ತದೋ ಅಷ್ಟೇ ತೀವ್ರವಾಗಿ ಈ ನಂಬಿಕೆಯೂ ಬೇರೂರಿರುತ್ತದೆ. ದೆವ್ವಗಳ ನಂಬಿಕೆ ಅತ್ಯಂತ ಹಳೆಯದಾದರೂ ಅವುಗಳನ್ನು ವಿಜ್ಞಾನದ ನಿಕಷಕ್ಕೆ ಒಡ್ಡಿ ಅವುಗಳನ್ನು ಅರ್ಥೈಸಿಕೊಳ್ಳುವ ಜ್ಞಾನ ಈ ಸಂದರ್ಭದಲ್ಲಿದೆ. ಅದರ ಹಿನ್ನೆಲೆಯಲ್ಲೇ ನಾವು ದೆವ್ವಗಳನ್ನು ನೋಡಬೇಕು.

ಕಾನೂನು ಏನು ಹೇಳುತ್ತದೆ? 
ಕಾನೂನು ಅಂಧಶ್ರದ್ಧೆಗಳನ್ನು ಎಂದಿಗೂ ಉತ್ತೇಜಿಸುವುದಿಲ್ಲ. ದೆವ್ವ ಇದೆ ಎಂದು ಹೇಳುವುದು ಅಥವಾ ಅದನ್ನು ಬಿಡಿಸುತ್ತೇವೆ ಎಂದು ಬಹಿರಂಗವಾಗಿ ಹೇಳುವುದು ಮಹಾಅಪರಾಧ ಎಂದು ಸರ್ವೋಚ್ಛ ನ್ಯಾಯಾಲಯವೇ ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ.  ದೆವ್ವಗಳ ಅಸ್ತಿತ್ವದ ಬಗ್ಗೆ ನಮ್ಮ ಯಾವುದೇ ಶಾಸನಾಂಗ, ಕಾರ್ಯಾಂಗ ಅಥವಾ ನ್ಯಾಯಾಂಗಗಳು ದೃಢಪಡಿಸಿಲ್ಲ. ಅಂದರೆ ಅದು ವಾಸ್ತವಕ್ಕೆ ವಿರೋಧವಾದುದು ಎಂದು ಸುಸ್ಪಷ್ಟ. ವಾಸ್ತವ ಮೀರಿದ ಜನರ ಮನದಲ್ಲಿ ಅಂತರ್ಗತವಾದ ಭಯವನ್ನೇ ದುರ್ಬಳಕೆ ಮಾಡಿಕೊಂಡು ಜನರನ್ನು ಏಮಾರಿಸುತ್ತಿರುವವರ ವರ್ಗ ಕಾನೂನು ಪ್ರಕಾರ ಅಪರಾಧಿಗಳು. ಯಾರೇ ದೆವ್ವಗಳ ಅಸ್ತಿತ್ವವನ್ನು ಯಾವ ರೀತಿಯಲ್ಲಾದರೂ ದೃಢಪಡಿಸಿ ಅದರ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿಗೆ ಒಪ್ಪಿಸಿ.

ದೆವ್ವದ ಕಲ್ಪನೆ ಹೇಗೆ ಬಂದಿತು? 
ದೆವ್ವಗಳಿವೆ ಎಂದು ಯಾರು ಎಷ್ಟೇ ಹೇಳಿಕೊಳ್ಳಲಿ, ವೈಜ್ಞಾನಿಕ ಶ್ರದ್ಧೆಯಿಂದ ಪರೀಕ್ಷಿಸಿದರೆ ಎಲ್ಲಿಯೂ ಚಲನಚಿತ್ರಗಳಲ್ಲಿ ಕಾಣಿಸಿದಂತೆ ದೆವ್ವಗಳು ಕಾಣುವುದಿಲ್ಲ. ಅವುಗಳ ಅಸ್ತಿತ್ವ ಸಾಬೀತಾಗುವುದೂ ಇಲ್ಲ. ನಾನು ಎಷ್ಟೋ ದೆವ್ವದ ಪ್ರಕರಣಗಳನ್ನು ಬಿಡಿಸಿದ್ದೇನೆ. ಪ್ರಾರಂಭದಲ್ಲಿ ದೆವ್ವವೇ ಎಂದು ಎಲ್ಲರೂ ದೃಢವಾಗಿ ನಂಬಿದ್ದರೂ ಪ್ರಕರಣ ಬಿಡಿಸಿದಾಗ ಅಲ್ಲಿ ಮನುಷ್ಯರ ಕೈವಾಡ ಸ್ಪಷ್ಟವಾಗಿ ಕಾಣುತ್ತದೆ. ಹಳೆಯ ಬಂಗಲೆಗಳಲ್ಲಿ ಕಾನೂನು ವಿರೋಧಿ ಚಟುವಟಿಕೆಗಳು ನಡೆಸುವವರು, ಕತ್ತಲ ಕಾಡುಗಳಲ್ಲಿ ಅನೈತಿಕ ಸಂಗತಿಗಳಲ್ಲಿ ತೊಡಗಿರುವವರು ಈ ದೆವ್ವಗಳನ್ನು ಮುಂದೆ ಮಾಡಿ ತಮ್ಮ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿ ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗಿ ತನ್ನ ಪ್ರಾಮುಖ್ಯತೆಯನ್ನು ಸಾಬೀತುಪಡಿಸಲು ದೆವ್ವದ ವೇಷ ಧರಿಸುವುದನ್ನು ನಾನೇ ಖುದ್ದಾಗಿ ಕಂಡಿದ್ದೇನೆ. ಎಷ್ಟೋ ಹೆಂಗಸರು ತಮ್ಮಲ್ಲಿನ ಆಂತರಿಕ ಬಯಕೆಗಳನ್ನು ತಣಿಸಿಕೊಳ್ಳಲು ಅಥವಾ ತಾವು ಮಾಡುತ್ತಿರುವ ಅನೈತಿಕ ಸಂಗತಿಗಳು ಬಯಲಿಗೆ ಬಾರದಂತಿರಲು ಈ ರೀತಿ ಆಟ ಹೂಡುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಮನಸ್ಸಿನ ನೋವು, ಯಾತನೆ ತೋರಿಸಲು ಆಗದೇ ಇದ್ದಾಗ ಆಗುವ ಉನ್ಮಾದವೂ ದೆವ್ವವೇ.

ದೆವ್ವಗಳು ಸಿನಿಮಾಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿಗಳ ರೂಪ ಧರಿಸುತ್ತವೆ. ಆ ರೀತಿ ದೆವ್ವ ನಿಜವಾಗಿಯೂ ಮನುಷ್ಯನ ರೂಪ ಪಡೆಯಲು ಸಾಧ್ಯವಿಲ್ಲ. ಮನುಷ್ಯನ ದೇಹದ ನಾಲ್ಕನೇ ಮೂರು ಭಾಗ ಅಮೈನೋ ಆಸಿಡ್ನಿಂದ ತುಂಬಿಕೊಂಡಿದೆ. ಅದಿಲ್ಲದೆ ಯಾವ ಜೀವವೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಮಾನವನ ಆತ್ಮ ಅತ್ಯಂತ ಶಕ್ತಿಯತವಾಗಿದ್ದು ಅದು ದೆವ್ವವಾಗುತ್ತದೆ. ಅದೇ ಪುನರ್ ಜನ್ಮ ಕಾಣುತ್ತದೆ ಎಂದು ವಾದಿಸುವವರಿದ್ದಾರೆ. ಈ ಆತ್ಮ ಸ್ವಯಂ ಯೋಚಿಸಬಲ್ಲುದು. ಸ್ವಯಂ ಚಲಿಸಬಲ್ಲುದು. ಸ್ವಯಂ ತೀರ್ಮಾನಗಳನ್ನು ಕೈಗೊಳ್ಳಬಹುದು. ತನ್ನ ಜೀವ ಇದ್ದಾಗ ಇದ್ದ ರಾಗ ದ್ವೇಷಗಳನ್ನೂ ಮರೆಯದೆ ಜೀವಿಸಬಹುದು. ಈ ಆತ್ಮಕ್ಕೆ ಅಗಣಿತ ಶಕ್ತಿ ಇದೆ ಎಂದು ದೆವ್ವಗಳ ಅಸ್ತಿತ್ವದ ಬಗ್ಗೆ ಒಂದು ದೃಢ ವಿಶ್ವಾಸ.

ಇಂತಹ ಅಗಣಿತ ಶಕ್ತಿಯ ಆತ್ಮ ಇರುವ ಮನುಷ್ಯ ಯಕಃಶ್ಚಿತ್ ಮನುಷ್ಯನಿಗಿಂತ ಕೊಂಚವೂ ಹೆಚ್ಚು ಶಕ್ತಿಯನ್ನು ಬದುಕಿನ ಅವಧಿಯಲ್ಲಿ ತೋರಿಸಲು ಸಾಧ್ಯವಿಲ್ಲ ಏಕೆ? ಸಾಯುವ ಮುನ್ನ ದೇಹ ಇರುವಾಗಲೇ  ಈ ಆತ್ಮ ತನ್ನ ಶಕ್ತಿಯನ್ನೇಕೆ ಪ್ರದರ್ಶಿಸುವುದಿಲ್ಲ?

ಮೆದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆ ನಮ್ಮ ಭಾವನೆಗಳ ಏರುಪೇರಿಗೆ ಕಾರಣ. ಅದಿಲ್ಲದೆಯೂ ದೆವ್ವಗಳಿಗೆ ಭಾವನೆಗಳು ಹೇಗೆ ಉಂಟಾಗುತ್ತವೆ? ಅಷ್ಟೇ ಅಲ್ಲ, ದೆವ್ವಗಳು ಒಳ್ಳೆಯವೇನೂ ಅಲ್ಲ. ಅವೆಲ್ಲವೂ ಡಿಸ್ಟ್ರಕ್ಟಿವ್. ಅಂದರೆ ಮನುಷ್ಯನನ್ನು ನಾಶ ಮಾಡಲು ಜನ್ಮ(?) ಪಡೆದಿರುತ್ತವೆ ಎಂಬ ನಂಬಿಕೆ. ಮೆದುಳಿಲ್ಲದೆ ಇಲ್ಲದೆಯೂ ಆತ್ಮ ಕೆಲಸ ಮಾಡಲು ಸಾಧ್ಯವೇ? ಇದು ಗೋಡೆಗಳನ್ನು ದಾಟಿ ಬರಲು ಸಾಧ್ಯವಿದ್ದರೆ ಮತ್ತೇಕೆ ಬದುಕಿರುವಾಗ ಆತ್ಮ ಹೊತ್ತ ದೇಹಕ್ಕೆ ಆ ಶಕ್ತಿ ಇರುವುದಿಲ್ಲ?

ಮನುಷ್ಯ ಮಾತನಾಡುವುದು ಶಬ್ದದ ಅಲೆಗಳ ಮೂಲಕ ಕಿವಿಗೆ ಕೇಳುತ್ತದೆ. ಆತ್ಮ ಅಥವಾ ದೆವ್ವ ಮನುಷ್ಯರೊಂದಿಗೆ ಸಂವಹನ ಮಾಡಲು ಸಾಧ್ಯ ಎಂದಾದರೆ ಅದು ಮನುಷ್ಯನ ಯಾವುದೋ ಒಂದು ಅಳತೆಗೆ ನಿಲುಕಲೇಬೇಕು. ಅದಾವುದು?

ವಿಜ್ಞಾನ ಮುಂದುವರೆದು ನಾವು ಬದುಕಿನ ಎಲ್ಲ ಬಗೆಯ ಒತ್ತಡಗಳನ್ನು ಸೆನ್ಸರ್, ಕಾಂತ, ವಿದ್ಯುತ್, ಎಕ್ಸ್ ರೇ, ಆಡಿಯೋ ಥರ್ಮಲ್ ಇತ್ಯಾದಿ ಮಾಪಕಗಳಿಂದ ಅಳೆಯಲು ಕಲಿತಿದ್ದೇವೆ. ಈ ವಿದ್ಯೆಗೂ ನಿಲುಕದ ಶಕ್ತಿ ಹೇಗೆ ನಮ್ಮ ಸುತ್ತಲೂ ಅಸ್ತಿತ್ವದಲ್ಲಿರಲು ಸಾಧ್ಯ? ಆತ್ಮ ಎನ್ನುವುದು ನಿಜಕ್ಕೂ ಎಲ್ಲಿರುತ್ತದೆ? ಹೃದಯದಲ್ಲೇ? ಹಾಗಿದ್ದರೆ ಹೃದಯ ಬದಲಿಸುವಾಗ ಅದು ಎಲ್ಲಿ ಹೋಗುತ್ತದೆ? ಹೃದಯ ಶಸ್ತ್ರಚಿಕಿತ್ಸೆ ನಡೆಸುವಾಗ ಏನು ಮಾಡುತ್ತದೆ? ಆತ್ಮ ಮೆದುಳಿನಲ್ಲಿರುತ್ತದೆಯೇ? ಆದರೆ ಮೆದುಳು ಸತ್ತ ಜನರು ವೈದ್ಯಕೀಯ ಭಾಷೆಯಲ್ಲಿ ಜೀವಂತವಾಗೇ ಇರುತ್ತಾರೆ. ಪ್ರಾಣಿಗಳಿಗೂ ಆತ್ಮ ಇರುತ್ತದೆಯೇ? ಗಿಡ ಮರಗಳಲ್ಲೂ ಆತ್ಮ ಇರುತ್ತದೆಯೇ? ದೆವ್ವಗಳಿಗೆ ವಿಶೇಷ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಅವುಗಳು ಎಷ್ಟು ತೂಕವನ್ನಾದರೂ ಎತ್ತಬಲ್ಲವು. ಎಲ್ಲಿಗೆ ಬೇಕಾದರೂ ಹಾರಬಲ್ಲವು. ಅವುಗಳಿಗೆ ಸಾವು ಇಲ್ಲ. ಅವು ಸುಲಭವಾಗಿ ಅತಿಮಾನವ ಶಕ್ತಿಗಳು ಮಾಡುವ ಕೆಲಸವನ್ನು ಮಾಡಬಲ್ಲವು ಎಂದು ನಂಬಲಾಗುತ್ತದೆ. ಮನುಷ್ಯರನ್ನು ನೋಡಿದರೆ ಜಗತ್ತಿನ ಎಲ್ಲ ಮನುಷ್ಯರಿಗೂ ಸರ್ವೇ ಸಾಧಾರಣವಾಗಿರುವ ಶಕ್ತಿಗಳಿವೆಯೇ ಹೊರತು ಯಾರಿಗೂ ಅತಿಮಾನವ ಶಕ್ತಿಗಳಿಲ್ಲ. ದೆವ್ವಗಳು ಮಾತ್ರ ಹೇಗೆ ಕಾರುಗಳನ್ನು ಎತ್ತಿ ಎಸೆಯಲು ಸಾಧ್ಯ? ಅಥವಾ ಮನೆಯೊಳಕ್ಕೆ ಪ್ರವೇಶ ಪಡೆಯಲು ಸಾಧ್ಯ? ಎಷ್ಟೋ ದೆವ್ವಗಳು ಕೆಲವು ಮನೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಮನೆಗಳು ಮಾನವ ನಿರ್ಮಿತ ತಾತ್ಕಾಲಿಕ ರಚನೆಗಳಷ್ಟೇ. ದೆವ್ವಗಳ ಅಪಾರ ಶಕ್ತಿ ಏಕೆ ಒಂದು ಮನೆಗೆ ಮಾತ್ರ ಮೀಸಲಾಗುತ್ತದೆ? ದೆವ್ವದ ಮನೆಯನ್ನು ಕೆಡವಿದರೆ ಏನಾಗುತ್ತದೆ? ಕೆಲವು ದೆವ್ವಗಳು ರಾತ್ರಿಯಲ್ಲಿ ಬರುತ್ತವೆ? ಎಲ್ಲಿಂದ ಬರುತ್ತವೆ? ಅವುಗಳು ಜೀವಿಸುವ ಗುಟ್ಟಿನ ತಾಣಗಳಿವೆಯೇ?  ಅವು ನಮ್ಮೊಂದಿಗೆ ಸಂವಹನ ನಡೆಸಬಲ್ಲ ಶಕ್ತಿ ಹೊಂದಿದ್ದರೆ ಅವುಗಳಿಗೆ ಏಕೆ ಒಂದು ಸ್ಥಾನಮಾನ ನೀಡಬಾರದು?  ಸಾಮಾನ್ಯವಾಗಿ ದೆವ್ವಗಳು ಅಸಂತೃಪ್ತಿಯಿಂದ ಸತ್ತವರದಾಗಿರುತ್ತವೆ. ಆತ್ಮಕ್ಕೆ ಏಕೆ ಕೋಪ ಬರುತ್ತದೆ? ಅವುಗಳಿಗೆ ದೇಹವಿಲ್ಲ, ನಿದ್ದೆಯಿಲ್ಲ, ವಿಶ್ರಾಂತಿ ಅಗತ್ಯವಿಲ್ಲ. ಎಲ್ಲಿ ಬೇಕೆಂದರೂ ಅಲೆದಾಡಬಲ್ಲ ಶಕ್ತಿಯುಳ್ಳ, ಕೆಲಸ ಮಾಡಬೇಕಾದ ಅಗತ್ಯವಿಲ್ಲದ ದೆವ್ವಗಳಿಗೇಕೆ ಕೋಪ ಬರಬೇಕು? ದೆವ್ವಗಳು ಎಲ್ಲ ಭಾಷೆಗಳನ್ನೂ ಹೇಗೆ ಅರ್ಥೈಕೊಳ್ಳಬಲ್ಲವು? ಶತ ಶತಮಾನಗಳಿಂದ ಎಷ್ಟೋ ಕೋಟಿ ಮಂದಿ ಸತ್ತಿದ್ದಾರೆ. ಅವರೆಲ್ಲ ಎಷ್ಟು ಕೋಟಿದೆವ್ವಗಳಾಗಿರಬಹುದು? ಎಲ್ಲಿವೆ? ದೆವ್ವಗಳಿರುವ ತಾಣ. ಹಳೆಯ ಬಂಗಲೆ, ಸ್ಮಶಾನ ಅಥವಾ ಒಂದು ದುರಂತ  ನಡೆದ ಯಾವುದೋ ಒಂಟು ಕಟ್ಟಡ. ಪ್ರತಿ ಮನೆಯಲ್ಲೂ ಸಾವು ಸಂಭವಿಸುತ್ತದೆ. ಪ್ರತಿ ಆಸ್ಪತ್ರೆಯಲ್ಲೂ ನೂರಾರು ಮಂದಿ ಸಾಯುತ್ತಾರೆ. ಇವರೇಕೆ ದೆವ್ವವಾಗಿ ಪರಿವರ್ತನೆಯಾಗುವುದಿಲ್ಲ?

ಪ್ಯಾರಾಸೈಕಾಲಜಿ ಏನು ಹೇಳುತ್ತದೆ? 

ದೆವ್ವ ಎನ್ನುವುದು ನಮ್ಮ ಅತಿಮಾನವ ಅನುಭವದ ಒಂದು ಭಾವನೆ. ಇದು ದೈಹಿಕವಲ್ಲ. ಮೆಂಟಲ್ ಡ್ರಮಟೈಸೇಷನ್ ಎಂದರೆ ಮನಸ್ಸಿನಲ್ಲೇ ಒಂದು ನಾಟಕದ ರೂಪ ಪಡೆಯುವ ಒಂದು ಅನುಭವ.

ದೆವ್ವದ ಅನುಭವ: ಕೆಲವರಿಗೆ ಮನೆಯಲ್ಲಿ ಯಾರೋ ಓಡಾಡಿದ ಅನುಭವವಾಗುತ್ತದೆ. ಕಿವಿಗೆ ಅಸಹಜ ಶಬ್ದ ಕೇಳುತ್ತದೆ. ಅದನ್ನು ದೆವ್ವ ಎಂದು ತೀರ್ಮಾನಿಸುತ್ತಾರೆ.

ಒಂದು ವೈದ್ಯಕೀಯ ಪ್ರಯೋಗಾಲಯದಲ್ಲಿ ಒಬ್ಬಾಕೆ ಅಸಹಜ ಅನುಭವ ಉಂಟಾಗುತ್ತಿದೆ ಎಂದು ಕೆಲಸ ಬಿಟ್ಟಳು. ಅಲ್ಲಿ ದೆವ್ವವಿದೆ ಎನ್ನುವುದು ಆಕೆಯ ದೂರು. ರ್ಯಾಂಡಿ ಎಂಬಾತ ಅದರ ಪ್ರಯೋಗಕ್ಕೆ ಇಳಿದ. ಒಂದು ತೆಳುವಾದ ಕತ್ತಿಯನ್ನು ಒಂದು ಕ್ಲಿಪ್ಗೆ ಸಿಕ್ಕಿಸಿಕೊಂಡು ಇಡೀ ಕೋಣೆಯಲ್ಲಿ ನಡೆದಾಡಿದ. ಆ ಕೋಣೆಯ ಮಧ್ಯಭಾಗಕ್ಕೆ ಬಂದ ಕೂಡಲೇ ಅದು ಯಾರೋ ಒತ್ತಿ ಹಿಡಿದಂತೆ ಪಕ್ಕಕ್ಕೆ ಬಾಗುತ್ತಿತ್ತು. ಗೋಡೆಯ ಪಕ್ಕ ನಡೆದಾಗ ಅದು ನೇರವಾಗಿರುತ್ತಿತ್ತು. ಅದು ಕೊನೆಯ ಮಧ್ಯಭಾಗದಲ್ಲಿ ಹೀಗೆ ಬಾಗುತ್ತಿರಲು ಆತ ಕಂಡು ಹಿಡಿದ ಕಾರಣ ಎಲ್ಲ ದೆವ್ವದ ಅನುಭವಗಳಿಗೂ ಉತ್ತರ ನೀಡುತ್ತದೆ-ಅದು ಇನ್ಫ್ರಾಸೌಂಡ್. 20 ಹರ್ಟ್ಸ್ ಗಿಂತ ಲೂ ಕಡಿಮೆ ಪ್ರಮಾಣದ ಶಬ್ದದ ಅಲೆಗಳು ಮನುಷ್ಯರ ಗ್ರಹಿಕೆಗೆ ಸಿಗುವುದಿಲ್ಲ. ಆದರೆ ಅದರ ಪರಿಣಾಮ ಮಾತ್ರ ಅನುಭವಕ್ಕೆ ಬರುತ್ತದೆ(ಕತ್ತಿ ಬಾಗಿದಂತೆ). ಆದರೆ ಈ ಕಡಿಮೆ ಪ್ರಮಾಣದ ಶಬ್ದದ ಅಲೆಗಳನ್ನೂ ಗ್ರಹಿಸುವ ಸೂಕ್ಷ್ಮ ಮತಿಗಳಿರುತ್ತಾರೆ(ಕೆಲವರಿಗೆ ಮಾತ್ರ ದೆವ್ವಗಳು ಕಾಣುತ್ತವೆ ಅಥವಾ ಅನುಭವಕ್ಕೆ ಬರುವಂತೆ). ಇದೇ ಹಿನ್ನೆಲೆಯಲ್ಲಿ ಆತ ಹಲವಾರು ದೆವ್ವದ ಪ್ರಕರಣಗಳು ಇನ್ಫ್ರಾಸೌಂಡ್ನ ಪ್ರಭಾವವೇ ಎಂದು ಸಾಬೀತುಪಡಿಸಿದ.

ದೆವ್ವದ ಅನುಭವಕ್ಕೆ ಬಂದವರು ಯಾವುದಾದರೊಂದು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಆದ್ದರಿಂದ ಅಂತಹವರನ್ನು ನಾವು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ತಕ್ಕಂತಹ ವಾತಾವರಣ ನಿರ್ಮಿಸಬೇಕು. ಅವರಿಗೆ ಕುಟುಂಬದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಬೇಕು. ದೆವ್ವ ಹಿಡಿದವರು ಅಥವಾ ಅದರ ಅನುಭವ ಹೊಂದುತ್ತಿರುವವರಿಗೆ ಯಾವ ಬಗೆಯ ಸಂಕಷ್ಟ ಇದೆ ಎಂದು ಗಮನಿಸಿ ಅದನ್ನು ಪರಿಹರಿಸಲು ಪ್ರಯತ್ನಪಡಬೇಕು. ಕೆಲವೊಮ್ಮೆ ಅವರಿಗೆ ಹತ್ತಿರದವರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆಗಳಿರುತ್ತವೆ. ಅದಕ್ಕೆ ಮನೋವೈದ್ಯರ ಸಲಹೆ ಪಡೆಯುವುದು ಉತ್ತಮ.

ಸಾಂಪ್ರದಾಯಿಕವಾಗಿ ದೆವ್ವ ಬಿಡಿಸುವ ವಸ್ತು ಅಥವಾ ವ್ಯಕ್ತಿಗಳನ್ನು ನೋಡಿದರೆ ಅವರೂ ಭಯ ಹುಟ್ಟಿಸುವಂತಿರುತ್ತಾರೆ. ಇದು ದೆವ್ವ ಹಿಡಿದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇದು ಕೇವಲ ಮಾನಸಿಕವಾದ ಸಂಗತಿ ಎನ್ನುವುದಕ್ಕೆ ಇದಕ್ಕಿಂತ ಪುರಾವೆಗಳಿರುವುದಿಲ್ಲ. ದೆವ್ವ ಹಿಡಿದವರನ್ನು ಸಾಮಾನ್ಯವಾಗಿ ಅವರ ದೇಹಕ್ಕೆ ಹೊಡೆಯುವ ಅಥವಾ ಹಿಂಸೆ ನೀಡುವ ಮೂಲಕ ದೆವ್ವ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತಾರೆ. ಇದರ ಅರ್ಥ ಆ ವ್ಯಕ್ತಿಗೆ ಹಿಂಸೆಯೇ ಹೊರತು ಅವರಲ್ಲಿರುವ ಯಾವ ಅಂಶಕ್ಕೂ ಅಲ್ಲ ಎನ್ನುವುದನ್ನು ತಿಳಿಯಬೇಕು.

(ದೆವ್ವಗಳಿವೆ ಎಂದು ಸಾಬೀತು ಪಡಿಸುವವರು ಹಾಗೂ ದೆವ್ವಗಳನ್ನು ಬಿಡಿಸುವವರಿಗೆ  ನಾನು ಈ ಮೂಲಕ ಬಹಿರಂಗ ಪಡಿಸುವುದೇನೆಂದರೆ ದೆವ್ವಗಳ ಅಸ್ತಿತ್ವವನ್ನು ವೈಜ್ಞಾನಿಕವಾಗಿ ಪ್ರದರ್ಶಿಸಿದರೆ ಒಂದು ಲಕ್ಷ ರೂ ನೀಡಲು ಸಿದ್ದನಿದ್ದೇನೆ.  ಇಲ್ಲದಿದ್ದರೆ  ಇಲ್ಲದ ದೆವ್ವಗಳ ಹೆಸರನ್ನು ಮುಂದಿಟ್ಟುಕೊಂಡು ಮುಗ್ದಜನರನ್ನು ಮಾನಸಿಕವಾಗಿ ಕೊಲ್ಲುವ ಕಾರ್ಯಕ್ಕೆ ತಿಲಾಂಜಲಿ ನೀಡಲಿ.  ಸಾರ್ವಜನಿಕರಲ್ಲಿ ನನ್ನದೊಂದು ಮನವಿ: ನಿಮ್ಮ ಊರಿನಲ್ಲಿ ಇಂತಹ ಘಟನೆಗಳು ಅಥವಾ ವ್ಯಕ್ತಿಗಳು ಇದ್ದರೆ ನಮಗೆ ತಿಳಿಸಲು ಕೋರಿದೆ.)

– ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
]ಮೊ:9481776616
miraclebuster_nataraj@yahoo.com

Karnataka High Court

ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹೈಕೋರ್ಟನ್ನೂ ಟೀಕಿಸಿಲ್ಲವೆ?

(ಈ ಲೇಖನ ಸುಮಾರು ಮೂರು ತಿಂಗಳಿನ ಹಿಂದೆ (16/05/11) ಬರೆದದ್ದು. ಕಾರಣಾಂತರಗಳಿಂದ ಇದು ಪ್ರಕಟವಾಗಬೇಕಾದ ಕಡೆ ಪ್ರಕಟವಾಗಲಿಲ್ಲ. ನೆನ್ನೆ (18/08/11) ರಾಜ್ಯಸಭೆಯಲ್ಲಿ ಬಂಗಾಳದ ಹೈಕೋರ್ಟ್ ನ್ಯಾಯಾಧೀಶರನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಮೇಲೆ ಚರ್ಚೆ ಮತ್ತು ಮತ ಚಲಾವಣೆ ನಡೆದು ಜಡ್ಜ್ ವಿರುದ್ದ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ಪ್ರಕ್ರಿಯೆ ಲೋಕಸಭೆಯಲ್ಲಿ ಪೂರ್ಣಗೊಂಡಾಗ ಆ ಜಡ್ಜ್ ವಜಾ ಆಗಲಿದ್ದಾರೆ. ಆದರೆ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಮಾತು ಕೇಳಬರುತ್ತಿರುವುದು ಇದೇ ಮೊದಲಲ್ಲ. ಲೊಕಪಾಲ ಮಸೂದೆಯಲ್ಲಿ ನ್ಯಾಯಾಂಗವನ್ನು ಹೊರಗಿಡುವ ಬಗ್ಗೆ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳ ಹಿಂದೆ ಬರೆದ ಈ ಲೇಖನ ಈಗಲೂ ಪ್ರಸ್ತುತ ಇಂದು ಇಲ್ಲಿ ಪ್ರಕಟಿಸುತ್ತಿದ್ದೇನೆ… ರವಿ…)

Karnataka High Courtಕಳೆದ ಶುಕ್ರವಾರ ( ಮೇ 13, 2011 )  ಸುಪ್ರೀಂಕೋರ್ಟ್ ಕರ್ನಾಟಕದ 16 ಶಾಸಕರ ಅನರ್ಹತೆಯನ್ನು ರದ್ದುಪಡಿಸಿ ಆದೇಶ ಹೊರಡಿಸುವುದರ ಜೊತೆಗೆ, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯದ ಮುಖ್ಯಮಂತ್ರಿಯನ್ನು ಕಟುಶಬ್ದಗಳಲ್ಲಿ ಟೀಕಿಸಿತು. ಆದರೆ, ಇದಕ್ಕೂ ಮುಖ್ಯವಾದುದನ್ನು ಸುಪ್ರೀಂಕೋರ್ಟ್ ನೇರವಾಗಿ ಹೇಳಲಿಲ್ಲ. ಅದೇನೆಂದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (11 ಬಿ.ಜೆ.ಪಿ. ಶಾಸಕರ ಅನರ್ಹತೆ ಮತ್ತು ಐವರು ಪಕ್ಷೇತರ ಶಾಸಕರ ಅನರ್ಹತೆ) ಕರ್ನಾಟಕ ರಾಜ್ಯದ ಉಚ್ಚನ್ಯಾಯಾಲಯ ಕೊಟ್ಟಿದ್ದ ತೀರ್ಪಿನಲ್ಲಿ ನ್ಯಾಯ ಇರಲಿಲ್ಲ ಎನ್ನುವುದು.

ಕಳೆದ ಅಕ್ಟೋಬರ್ 11ರ ವಿಶ್ವಾಸಮತ ಯಾಚನೆಯ ಹಿಂದಿನ ರಾತ್ರಿ ತರಾತುರಿಯಲ್ಲಿ ವಿಧಾನಸಭೆಯ ಸ್ಪೀಕರ್ ಮೇಲೆ ಉಲ್ಲೇಖಿಸಿದ 16 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರು. ಅವರು ಹಾಗೆ ಮಾಡಲು ಕಾನೂನು ಮತ್ತು ನ್ಯಾಯಪಾಲನೆಗಿಂತ ಹೆಚ್ಚಾಗಿ ತಮ್ಮ  ಬಿ.ಜೆ.ಪಿ. ಪಕ್ಷದ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಜಯ ಲಭಿಸುವಂತೆ ಮಾಡುವುದೇ ಆಗಿತ್ತು. ಸ್ಪೀಕರ್‌ರ ಈ ಕ್ರಮ ಅನೈತಿಕ ಮತ್ತು ಅಕ್ರಮವಾದದ್ದು ಎಂದು ಎದ್ದು ಕಾಣಿಸುವಷ್ಟು ಲಜ್ಜಾಹೀನವಾಗಿತ್ತು. ಸ್ಪೀಕರ್‌ರ ಈ ಕ್ರಮವನ್ನು ಪ್ರಶ್ನಿಸಿ ಅನರ್ಹಗೊಂಡ ಬಿ.ಜೆ.ಪಿ.ಯ 11 ಬಂಡಾಯ ಶಾಸಕರು, ಮತ್ತು ಐವರು ಪಕ್ಷೇತರ ಶಾಸಕರು ಪ್ರತ್ಯೇಕವಾಗಿ ಹೈಕೋರ್ಟ್‌ಗೆ ದೂರು ನೀಡಿದರು.

ಬಂಡಾಯ ಶಾಸಕರ ಅನರ್ಹತೆಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎನ್. ಕುಮಾರ್ ಸಾಕಷ್ಟು ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ಟೋಬರ್ 18ರಂದು ಪರಸ್ಪರ ಒಮ್ಮತವಿಲ್ಲದ ನ್ಯಾಯತೀರ್ಮಾನಕ್ಕೆ ಬಂದರು. ನ್ಯಾ. ಖೇಹರ್ ಸ್ಪೀಕರ್ ಮಾಡಿದ್ದು ಸರಿ ಎಂದರೆ, ನ್ಯಾ. ಕುಮಾರ್ ಸ್ಪೀಕರ್‌ರ ಕ್ರಮದಲ್ಲಿ ಲೋಪವನ್ನು ಗುರುತಿಸಿದರು. ಹೀಗೆ ಒಮ್ಮತದ ತೀರ್ಪಿಲ್ಲದ ಕಾರಣವಾಗಿ ಈ ಪ್ರಕರಣವನ್ನು ಮೂರನೆ ನ್ಯಾಯಮೂರ್ತಿಯ ಅಭಿಪ್ರಾಯಕ್ಕಾಗಿ ನ್ಯಾ. ಸಭಾಹಿತರಿಗೆ ಕಳುಹಿಸಲಾಯಿತು.

ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿದ ನ್ಯಾ. ಸಭಾಹಿತರು ಅಕ್ಟೋಬರ್ 29ರಂದು ಮುಖ್ಯನ್ಯಾಯಮೂರ್ತಿ ಖೇಹರ್‌ರ ನ್ಯಾಯತೀರ್ಮಾನವನ್ನು ಅನುಮೋದಿಸಿದರು. ಇದರೊಂದಿಗೆ 2:1 ರ ಅನುಪಾತದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ಸ್ಪೀಕರ್‌ರ ಕ್ರಮವನ್ನು ಎತ್ತಿಹಿಡಿದು 11 ಬಂಡಾಯ ಶಾಸಕರ ಅನರ್ಹತೆಯನ್ನು ಮಾನ್ಯಗೊಳಿಸಿತು. ಈ ಇಡೀ ಪ್ರಕರಣದಲ್ಲಿ ನಾವು ಗಮನಿಸಬೇಕಾಗಿರುವ ಅತಿಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಉಚ್ಚನ್ಯಾಯಾಲಯದ ದೃಷ್ಟಿಗೆ ಸ್ಪೀಕರ್ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯಲ್ಲಿ ಯಾವುದೇ ಅನೈತಿಕತೆ ಮತ್ತು ಅಕ್ರಮ ಕಾಣಿಸದೆ ಇದ್ದುದು.

ಅನರ್ಹಗೊಂಡ ಬಂಡಾಯ ಶಾಸಕರ ಜೊತೆಜೊತೆಗೆ ಅನರ್ಹಗೊಂಡ ಐವರು ಪಕ್ಷೇತರ ಶಾಸಕರೂ ಕೂಡ ಕರ್ನಾಟಕದ ಉಚ್ಚನ್ಯಾಯಾಲಯಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾ. ಮೋಹನ್ ಶಾಂತನಗೌಡರ್, ನ್ಯಾ. ಅಬ್ದುಲ್ ನಜೀರ್, ಮತ್ತು ನ್ಯಾ. ಎಸ್. ಬೋಪಣ್ಣನವರ ಪೀಠವು ಸುದೀರ್ಘ ವಿಚಾರಣೆಯನ್ನು ನಡೆಸಿ, ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಪಕ್ಷೇತರ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವುದೇ ದುರುದ್ದೇಶದಿಂದ ನಡೆದುಕೊಂಡಿಲ್ಲ ಮತ್ತು ಅವರ ಕ್ರಮ ಸರಿ ಎಂಬ ತೀರ್ಪನ್ನು ಫೆಬ್ರವರಿ 15ರಂದು ನೀಡಿತು. ಇಲ್ಲಿ ಒತ್ತಿಹೇಳಬೇಕಾದ ಸಂಗತಿಯೆಂದರೆ ಈ ತೀರ್ಪು ಮೂವರು ನ್ಯಾಯಮೂರ್ತಿಗಳ ಒಮ್ಮತದ ನ್ಯಾಯತೀರ್ಮಾನವಾಗಿದ್ದದ್ದು.

ಹೀಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟಿನ ಆರು ನ್ಯಾಯಮೂರ್ತಿಗಳ ಪೈಕಿ ಐವರಿಗೆ ಸ್ಪೀಕರ್‌ರ ಕ್ರಮ ಮತ್ತು ನಡವಳಿಕೆಯಲ್ಲಿ ಯಾವುದೇ ಪಕ್ಷಪಾತ, ದುರುದ್ದೇಶ, ಮತ್ತು ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಕಂಡಿರಲಿಲ್ಲ.

ತಮಗೆ ಸಿಕ್ಕ ನ್ಯಾಯತೀರ್ಮಾನದಿಂದ ತೃಪ್ತರಾಗದ ಎಲ್ಲಾ 16 ಅನರ್ಹ ಶಾಸಕರು ದೆಹಲಿಯ ಸುಪ್ರೀಂಕೋರ್ಟಿಗೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದರು. ಈ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಪರಿಶೀಲಿಸಿದ ಅದೇ ದಾಖಲೆಗಳನ್ನು ಪುನರ್‌ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ. ಕಬೀರ್ ಮತ್ತು ನ್ಯಾ. ಜೋಸೆಫ್ ಹೈಕೋರ್ಟ್ ತೀರ್ಪಿಗೆ ಸಂಪೂರ್ಣ ವ್ಯತಿರಿಕ್ತವಾದ ಅವಳಿ ತೀರ್ಮಾನವನ್ನು ನೀಡಿದರು. ಅಷ್ಟೇ ಅಲ್ಲದೆ, “ನೈಸರ್ಗಿಕ ನ್ಯಾಯ ಮತ್ತು ನ್ಯಾಯಯುತ ನಡವಳಿಕೆಯ ಅವಳಿ ತತ್ವಗಳ ಪರೀಕ್ಷೆಯಲ್ಲಿ ಸ್ಪೀಕರ್ ಬೋಪಯ್ಯನವರ ಆದೇಶ ಪಾಸಾಗುವುದಿಲ್ಲ. ಸಂವಿಧಾನದ 10ನೇ ಷೆಡ್ಯೂಲಿನಲ್ಲಿ ಕಾಣಿಸಲಾಗಿರುವ ಸಾಂವಿಧಾನಿಕ ನಡವಳಿಕೆಗಳು ಮತ್ತು 1986ರ ಅನರ್ಹತೆ ನಿಯಮಗಳನ್ನು ಉಲಂಘಿಸುವುದಷ್ಟೇ ಅಲ್ಲದೆ ನ್ಯಾಯಯುತ ವಿಚಾರಣೆಯ ಮೂಲತತ್ವವನ್ನು ಕೂಡ ಗಾಳಿಗೆ ತೂರಿದ ಸ್ಪೀಕರ್ ಮುಂದಿದ್ದ ಏಕೈಕ ಗುರಿ ಎಂದರೆ ಯಡಿಯೂರಪ್ಪ ಸರ್ಕಾರವನ್ನು ವಿಶ್ವಾಸಮತದ ಸಂಕಟದಿಂದ ಪಾರುಮಾಡುವುದು. ಸ್ಪೀಕರ್ ಮುಂದೆ ಪರಿಶೀಲನೆಗೆ ಇಟ್ಟಿದ್ದ ಪ್ರಕರಣಕ್ಕೆ ನೇರವಾಗಿ ಸಂಬಂಧ ಪಡದೇ ಇರುವಂತಹ ಬಾಹ್ಯ ಪರಿಗಣನೆಗಳು ಸ್ಪೀಕರ್ ಆದೇಶದ ಮೇಲೆ ಎದ್ದು ಕಾಣಿಸುತ್ತಿವೆ. ಇಂತಹ ಆದೇಶವನ್ನು ತಳ್ಳಿ ಹಾಕಲೇಬೇಕು,” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಸ್ಪೀಕರ್ ಕ್ರಮವನ್ನು ತಳ್ಳಿಹಾಕಿದ್ದೇ ಅಲ್ಲದೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಕೂಡ ಅಮಾನ್ಯಗೊಳಿಸಿದರು.

ಇದರೊಂದಿಗೆ ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ಅದರ ನ್ಯಾಯಮೂರ್ತಿಗಳ ಸಂವಿಧಾನವನ್ನು ಅರ್ಥೈಸುವ ಸಾಮರ್ಥ್ಯವನ್ನು ಪರೋಕ್ಷವಾಗಿ ಪ್ರಶ್ನಿಸಿದಂತಾಗಿದೆ ಎನ್ನುವ ಅಭಿಪ್ರಾಯಕ್ಕೆ ಸದ್ಯದ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರು ಬರುವ ಹಾಗೆ ಆಗಿದೆ.

ಕರ್ನಾಟಕದ ಸಮಕಾಲೀನ ರಾಜಕೀಯ ವ್ಯವಸ್ಥೆ ಅತ್ಯಂತ ಭ್ರಷ್ಟವೂ, ಅನೈತಿಕವೂ, ಸ್ವಾರ್ಥಪೂರಿತವೂ ಆಗಿರುವುದನ್ನು ಕಳೆದ ನಾಲ್ಕೈದು ವರ್ಷಗಳ ಇತಿಹಾಸ ಸಾರಿ ಹೇಳುತ್ತಿದೆ. ಈ ಅನೈತಿಕತೆ ಮತ್ತು ಭ್ರಷ್ಟತೆ ರಾಜಕೀಯ ವಲಯಕ್ಕಷ್ಟೆ ಸೀಮಿತವಾಗದೆ ಬೇರೆಲ್ಲ ಸಾರ್ವಜನಿಕ ರಂಗಗಳಿಗೂ ವ್ಯಾಪಿಸುತ್ತ ಬಂದಿದೆ. ಇಂತಹ ನಿರಾಶಾದಾಯಕ ಸಂದರ್ಭದಲ್ಲಿ ಪ್ರಾಮಾಣಿಕರಿಗೆ ಮತ್ತು ದೇಶಪ್ರೇಮಿಗಳಿಗೆ ಉಳಿದಿದ್ದ ಏಕೈಕ ಭರವಸೆ ಎಂದರೆ ಅದು ನಮ್ಮ ಭ್ರಷ್ಟವಾಗಿಲ್ಲದಿದ್ದ ಮತ್ತು ಸಾಮರ್ಥ್ಯದಿಂದ ಕೂಡಿದ್ದ ನ್ಯಾಯಸ್ಥಾನಗಳು. ಈಗ ಮೇಲೆ ಉಲ್ಲೇಖಿಸಿರುವ ಪ್ರಕರಣಗಳಿಂದ ತಾವು ಇಟ್ಟುಕೊಂಡಿದ್ದ ಆ ಒಂದು ಭರವಸೆಯ ಬಗ್ಗೆಯೂ ನಾಗರಿಕರು ಸಂಶಯಾಸ್ಪದಿಂದ ನೋಡುವಂತೆ ಆಗಿದೆ. ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವ ಸಂಶಯ ಇವೆಲ್ಲದರಿಂದ ಗಟ್ಟಿಯಾಗದೆ?

ಸುಪ್ರೀಂಕೋರ್ಟ್ ಕಂಡಂತೆ ಅಕ್ರಮ ಆದೇಶ ಹೊರಡಿಸಿದ್ದ ಸ್ಪೀಕರ್‌ರ ಕ್ರಮ ರಾಜ್ಯದ ಹೈಕೋರ್ಟ್‌ನಲ್ಲಿ ಸಕ್ರಮವಾಗಿ ಮಾನ್ಯತೆ ಪಡೆದಿದ್ದರ ಹಿಂದೆ ಇರುವ ಕಾರಣಗಳಾದರೂ ಏನು? ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿ ಜನರ ಪ್ರಜ್ಞೆಗೂ ಬಂದಿರುವ ನ್ಯಾಯಾಧೀಶರುಗಳ ಭ್ರಷ್ಟಾಚಾರವೆ? ಅಥವ, ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಸಮರ್ಥರೂ ನ್ಯಾಯಮೂರ್ತಿಗಳಾಗಿರುವುದೇ? ಅಥವ, ನ್ಯಾಯಮೂರ್ತಿಗಳ ವೈಯಕ್ತಿಕ ರಾಜಕೀಯ ನಿಲುವುಗಳೂ ಅವರು ಕೊಡುತ್ತಿರುವ ತೀರ್ಪಿನ ಮೇಲೆ ಪ್ರಭಾವ ಬೀರುತ್ತಿರುವುದೆ? ಅಥವ, ಅಧಿಕಾರರೂಢರ ಪರ ಇರುವುದರಿಂದ ತಮ್ಮ ಸವಲತ್ತುಗಳಲ್ಲಿ ಹೆಚ್ಚಳವಾಗುತ್ತದೆಯೆಂಬ ಸ್ವಹಿತಾಸಕ್ತಿಯೆ? ಒಟ್ಟಿನಲ್ಲಿ, ನ್ಯಾಯತೀರ್ಮಾನಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಪಡದ ಇತರೆ ವಿಷಯಗಳು ನ್ಯಾಯಸ್ಥಾನದ ಕರ್ತವ್ಯದ ಮೇಲೆ ಪ್ರಭಾವ ಬೀರುತ್ತಿರುವುದೇ?

ಈ ಪ್ರಶ್ನೆಗಳು ರಾಜ್ಯದಲ್ಲಿ ಈಗ ನಡೆಯುತ್ತಿರುವ ಎಲ್ಲಾ ರಾಜಕೀಯ ಘಟನೆಗಳಿಗಿಂತ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಕೂಡಲೇ ಸರಿಪಡಿಸಬೇಕಾದ ವಿಷಯಗಳಾಗಿವೆ. ನ್ಯಾಯಸ್ಥಾನದ ಬಗ್ಗೆ ನಾಗರಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಂದಿಗೂ ನ್ಯಾಯಮೂರ್ತಿಗಳದ್ದೇ ಆಗಿದೆ. ಅಲ್ಲವೆ?

ರವಿ ಕೃಷ್ಣಾ ರೆಡ್ಡಿ